ಪುಟಗಳು

ಬುಧವಾರ, ಫೆಬ್ರವರಿ 27, 2013

ಅವನನ್ನೆಂತು ಮರೆಯಲಿ?

ಅವನನ್ನೆಂತು ಮರೆಯಲಿ?

                 ಉಳಿದ ಮಕ್ಕಳು ದೇಶ ಅಂದರೆ ಏನೆಂದು ಕೋಶದಲ್ಲಿ ಓದುತ್ತಾ ಆಡೋ ವಯಸ್ಸಿಗೆ ಅವನು "ನಾನು ಸ್ವತಂತ್ರ, ಸ್ವತಂತ್ರನಾಗಿಯೇ ಉಳಿಯುತ್ತೇನೆ, ಸ್ವತಂತ್ರನಾಗಿಯೇ ಅಳಿಯುತ್ತೇನೆ" ಎಂಬ ಭೀಷಣ ಪ್ರತಿಜ್ಞೆಯನ್ನೇ ಮಾಡಿಬಿಟ್ಟ.
ಅದೆಷ್ಟೋ ಕಷ್ಟನಷ್ಟಗಳು ಬಂದಾಗಲೂ ತನ್ನ ಪ್ರತಿಜ್ಞೆ ಮರೆಯದ ಭೀಷ್ಮ!

                ಪಂಡಿತ ರಾಮಪ್ರಸಾದ ಬಿಸ್ಮಿಲರ ಪ್ರೀತಿಯ ಶಿಷ್ಯನಾಗಿ, ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂತಾದವರಿಗೆ ನಾಯಕನಾಗಿ ತನ್ನೊಂದಿಗಿದ್ದವರೆಲ್ಲ ವೀರ ಸ್ವರ್ಗವನ್ನಪ್ಪಿದ ನಂತರವೂ ತಾತ್ಯಾಟೋಪೆಯಂತೆ ಏಕಾಂಗಿಯಾಗಿ ಹೋರಾಡಿದ ಮಹಾಪ್ರತಾಪಿ!

                  ತಂದೆ ತಾಯಿಯ ಆರೋಗ್ಯ ಕೆಟ್ಟಿರಲು ಶುಶ್ರೂಷೆಗೆ ಹಣ ಸಹಾಯ ಮಾಡಲು ಬಂದ ಗುರುಗಳಿಗೆ ತನ್ನಲ್ಲಿಯೇ ಕ್ರಾಂತಿಕಾರ್ಯಕ್ಕೆಂದು ಕೂಡಿಟ್ಟಿದ್ದ ಹಣ ತೋರಿಸಿ "ಇದನ್ನುಪಯೋಗಿಸಿ ನನ್ನ ಹೆತ್ತವರ ಆರೈಕೆ ಮಾಡಬಹುದು. ಆದರೆ ಅಂತಹ ಸ್ಥಿತಿ ಬಂದಾಗ ನನ್ನ ಪಿಸ್ತೂಲಿನ ಎರಡು ಗಂಡುಗಳು ಸಾಕು ಅವರ ಸೇವೆ ಮಾಡಲು" ಎಂದನಲ್ಲ. ಅವನ ದೇಶಪ್ರೇಮಕ್ಕೆ ಏನೆಂದು ಹೇಳಲಿ?

                       ವೇಶ್ಯೆಯೊಬ್ಬಳು ಮಹಡಿಯೊಂದರಲ್ಲಿ ಬಂಧಿಸಿ ಕಾಮಿಸಬಯಸಿದಾಗ ಆ ಮೂರನೇ ಮಹಡಿಯ ಕಿಟಕಿಯಿಂದ ಹಾರಿ ಹೋದ ಅಖಂಡ ಬ್ರಹ್ಮಚಾರಿ. ಶಿಸ್ತು ಅಂದರೆ ಅವನಿಂದ ಕಲಿಯಬೇಕಲ್ಲವೇ?

                  ಸಹವಾಸಿಗಳಿಗೆ ಪ್ರೀತಿಯ ಪಂಡಿತನಾಗಿ, ಆಶ್ರಯ ನೀಡಿದ ಪ್ರತಿಯೊಂದು ಮನೆಯವರ ಪ್ರೀತಿಯ ಮಗನಾಗಿ, ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಲು ವಿವಿಧ ವೇಶಧಾರಿಯಾಗಿ ಕೇವಲ ದೇಶಕ್ಕಾಗಿ ತನ್ನ ಜೀವನ ಸವೆಸಿದನಲ್ಲ. ಅವನಿಗಾಗಿ ಒಂದು ಕಣ್ಣ ಹನಿ ಕೆಳಗುರುಳದಿದ್ದರೆ ಹೇಗೆ?

          ಅಂತಿಮ ಘಳಿಗೆಯಲ್ಲಿ ಅವನ ಅಸಾದೃಶ ಶಕ್ತಿಯ ಪರಿಚಯ ಲೋಕಕ್ಕಾಗಿತ್ತು. ಮೂವತ್ತೆರಡು ನಿಮಿಷಗಳ ಆ ಹೋರಾಟದಲ್ಲಿ ಏಕಾಂಗಿಯಾಗಿ ಚಕ್ರವ್ಯೂಹ ರಚಿಸಿದ್ದ ಖೂಳ ಆಂಗ್ಲರ ವಿರುದ್ಧ ಹೋರಾಡಿದ ಪರಿ ಅನನ್ಯ. ಪ್ರತಿಯೊಂದು ಗುಂಡಿನ ಲೆಕ್ಕ ಇಟ್ಟು ಕೊನೆಯ ಗುಂಡನ್ನು ತನಗೆ ಹೊಡೆದುಕೊಂಡು ತಾಯಿಗೆ ರುಧಿರಾಭಿಷೇಕ ಮಾಡಿದ.
ಸಾವಿನಲ್ಲೂ ಪ್ರತಿಜ್ಞೆ ಉಳಿಸಿಕೊಂಡ ಪ್ರಳಯರುದ್ರ!

ಆದರೇನು...?
ತನ್ನ ದೇಶವಾಸಿಗಳಿಂದಲೇ ಅನಾದರಣೆಗೊಳಗಾಗಿ ಮರೆತು ಹೋದ ಮಹಾವೀರ!

ಭಾನುವಾರ, ಫೆಬ್ರವರಿ 24, 2013

ಭಾರತ ದರ್ಶನ - ೨೭



ಭಾರತ ದರ್ಶನ - ೨೭:

              ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದು ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂತಹ ಶಾಂತಿಪ್ರಿಯರ ನಗರವದಾಗಬೇಕು ಎಂಬ ಭಾವನೆಯಿಂದ ಅಯೋಧ್ಯೆಯೆಂದು ಅದನ್ನು ಕರೆಯಲಾಯಿತು.
" ಮನುನಾ ಮಾನವೇಂದ್ರೇಣ  ಸಾಪುರೀ ನಿರ್ಮಿತಾಸ್ವಯಂ"  ಅಂದರೆ ಮಾನವೇಂದ್ರನಾದ ಮನುವಿನಿಂದ ಸ್ವಯಂ ನಿರ್ಮಾಣಗೊಂಡ ನಗರವದೆಂದು ರಾಮಾಯಣದಲ್ಲಿ ವಾಲ್ಮೀಕಿಗಳು ತಿಳಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿ "ವಿಶ್ವಜಿತ್" ಎಂಬ ಯಜ್ಞ ನಡೆಸಿದ ತಾಣ. ಇಕ್ಷ್ವಾಕು ವಂಶವನ್ನು ರಘುವಂಶವನ್ನಾಗಿಸಿದ ರಾಜಾ ರಘುವಿನ ರಾಜಧಾನಿ. ಬ್ರಹ್ಮರ್ಷಿ ವಸಿಷ್ಠರ ಸಲಹೆಯಂತೆ ದಶರಥ ಚಕ್ರವರ್ತಿ ಋಷ್ಯಶೃಂಗರ ನೇತೃತ್ವದಲ್ಲಿ "ಪುತ್ರಕಾಮೇಷ್ಟಿ" ಯಾಗ ನಡೆಸಿದ ಸ್ಥಳ. ಸ್ವತಃ ಭಗವಂತನೇ ದಶರಥ ಸುತನಾಗಿ ಬಂದು, ರಾಜನಾಗಿ ನಿಂದು ತನ್ನ ಪುರುಷೋತ್ತಮತ್ವವನ್ನು ಪ್ರಕಟಿಸಿದ ಸಾಕೇತಪುರದ ದರ್ಶನದಿಂದ ಪುಳಕಗೊಳ್ಳದವರ್ಯಾರು?
             ಅಯೋಧ್ಯೆಯಲ್ಲಿ ಕಾಲಿರಿಸುತ್ತಿದ್ದಂತೆ ಮನಸ್ಸು ಯುಗಾಂತರಕ್ಕೆ ಧಾವಿಸುತ್ತದೆ. ಅಜ-ಇಂದುಮತಿಯರ ವಿವಾಹವಾದ ತಾಣ ಯಾವುದು? ದಶರಥ ಕುವರಿ ಶಾಂತಾಳನ್ನು ಋಷ್ಯಶೃಂಗರು ವರಿಸಿದ ಸ್ಥಳ ಎಲ್ಲಿದೆ? ಭೂಜಾತೆ ಸೀತೆ ಹೇಮದುಪ್ಪರಿಗೆಯಲ್ಲಿ ಅತ್ತೆಯರೊಂದಿಗೂ ಅರಮನೆಯ ಪರಿಜನರೊಂದಿಗೆ ಸಂಭ್ರಮ, ಸಡಗರದಿಂದಿರುತ್ತಿದ್ದ ಅಂತಃಪುರ ಎಲ್ಲಿತ್ತೋ? ಭಕ್ತಾಗ್ರಣಿ ಮಾರುತಿಯು ರಾಘವನ ಚರಣವನ್ನು ಎಲ್ಲಿ ಸೇವಿಸುತ್ತಿದ್ದನೋ? ಎಲ್ಲವನ್ನೂ ನೋಡುವ ಆಸೆ.
            ಅಯೋಧ್ಯೆ ಸರಯೂ ತೀರದಲ್ಲಿದೆ. ಸರಯೂ ಬಹಳ ಧನ್ಯೆ. ಶ್ರೀರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಬಸಿರಲ್ಲೇ ಅಡಗಿಸಿಕೊಂಡ ಪಾವನೆ. ಗಂಗಾ, ಯಮುನಾ, ಸರಸ್ವತಿಯರೊಂದಿಗೆ ಋಗ್ವೇದದಲ್ಲಿ ಸ್ಮರಿಸಲಾಗಿರುವ ಸರಯೂ ಮಾನಸದಲ್ಲಿ ಜನಿಸಿ ಅಯೋಧ್ಯೆಯನ್ನು ಆಲಂಗಿಸಿ ಹರಿದಿದ್ದಾಳೆ. ಗಂಗೆ ಹರಿ ಪಾದದಿಂದ ಹೊರಟರೆ, ಸರಯೂ ಅವನ ಕಣ್ಗಳಿಂದ ಹೊರಟಳು. ಆದ್ದರಿಂದಲೇ ಅವಳನ್ನು ನೇತ್ರಾ ಅಂತಲೂ ಕರೆದರು. ರಾಮ ಸೇವೆಯಿಂದ ರಾಮಗಂಗಾ ಎಂದೂ, ವಸಿಷ್ಟರ ಪಾದ ಪೂಜೆಯಿಂದ ವಾಸಿಷ್ಠೀ ಎಂದೂ ಉಲ್ಲೇಖಿತಳಾಗಿದ್ದಾಳೆ. ರಾಮನವಮಿಯಂದು ತೀರ್ಥರಾಜ ಪ್ರಯಾಗ ಸ್ವತಃ ಅಯೋಧ್ಯೆಗೆ ಬಂದು ಸರಯೂ ನದಿಯಲ್ಲಿ ಸ್ನಾನ ಮಾಡುತ್ತದೆ ಎಂಬುದು ಭಾವುಕರ ನಂಬಿಕೆ.
             ಮನುವಿನ ಬಳಿಕ ಅಯೋಧ್ಯೆಯನ್ನು ಕ್ರಮವಾಗಿ ಇಕ್ಷ್ವಾಕು, ವಿಕುಕ್ಷಿ,...ಮುಂತಾದವರು ಆಳಿದರು. ಮನುವಿನಿಂದ ೨೦ ತಲೆಮಾರುಗಳ ಬಳಿಕ ಯುವನಾಶ್ವನ ಮಗನಾದ ಮಾಂಧಾತನು ಅಯೋಧ್ಯೆಯ ಪ್ರತಿಷ್ಟೆಯನ್ನು ಹೆಚ್ಚಿಸಿದನು. ಸತ್ಯಕ್ಕೆ ಹೆಸರಾದ ರಾಜ ಹರಿಶ್ಚಂದ್ರ ಮಾಂಧಾತನ ನಂತರ ಬಂದವರಲ್ಲಿ ಪ್ರಸಿದ್ಧನು. ವಿಶ್ವಾಮಿತ್ರರ ಪರೀಕ್ಷೆಗೆ ಗುರಿಯಾದ ಆತ ಸತ್ಯಕ್ಕಾಗಿ ಸಕಲವನ್ನೂ ತೊರೆದು ಸ್ಮಶಾನವಾಸಿಯಾದ. ಸುಂಕ ಕೊಡದ ಕಾರಣಕ್ಕಾಗಿ ಮಗನ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದ ಅವನು ವಿಶ್ವಾಮಿತ್ರರ ಪರೀಕ್ಷೆಯಲ್ಲಿ ಗೆದ್ದು ಶಿವನನ್ನೂ ಪ್ರತ್ಯಕ್ಷೀಕರಿಸಿಕೊಂಡು ಅಯೋಧ್ಯೆಯ ಸಿಂಹಾಸನವನ್ನು ಪುನಃ ಅಲಂಕರಿಸಿದ. ಮುಂದೆ ಸಮುದ್ರವನ್ನು ಸಾಗರವನ್ನಾಗಿಸಿದ ಸಗರ ಮತ್ತವನ ಮಕ್ಕಳು, ಅಂಶುಮಂತ, ದಿಲೀಪ, ಭಗೀರಥ, ರಘು, ಅಜ, ದಶರಥ ಮುಂತಾದ ರಾಜರ್ಷಿಗಳು ಅಯೋಧ್ಯೆಯನ್ನಾಳಿದರು. ಮಾಲಿಕೆಯಲ್ಲಿ ೬೫ನೆಯ ಪ್ರಭು ಶ್ರೀರಾಮಚಂದ್ರ. ಹೀಗೆ ಸೂರ್ಯವಂಶೀಯರ ಭವ್ಯ ಆಡಳಿತಕ್ಕೆ ಒಳಪಟ್ಟಿತು ಅಯೋಧ್ಯೆ. ಮಹಾಭಾರತದ ಯುದ್ಧದ ಸಮಯದಲ್ಲಿ ಬೃಹದ್ಬಾಹು ಅಯೋಧ್ಯೆಯ ರಾಜನಾಗಿದ್ದ. ಯುದ್ಧದಲ್ಲಿ ಅಭಿಮನ್ಯುವಿನ ಬಾಣಕ್ಕೆ ತುತ್ತಾದ. ಜೈನರ ೨೪ ತೀರ್ಥಂಕರರಲ್ಲಿ ೨೨ ಮಂದಿ ಸೂರ್ಯವಂಶದವರು. ಪ್ರಥಮ ತೀರ್ಥಂಕರನಾದ ಋಷಭದೇವ ಅಥವಾ ಆದಿನಾಥ ಅಯೋಧ್ಯೆಯ ರಾಜನಾದ ನಾಭಿಯ ಮಗ. ಅಜಿತ, ಅಭಿನಂದನ, ಸುಮತಿ, ಅನಂತ, ಅಚಲ ಎಂಬ ತೀರ್ಥಂಕರರು ಜನಿಸಿದ್ದು ಅಯೋಧ್ಯೆಯಲ್ಲಿಯೇ. ಆದಿನಾಥನಿಗೆ ಜ್ಞಾನೋದಯವಾದದ್ದು ಅಯೋಧ್ಯೆಯ ಬಳಿಯಲ್ಲೇ.
            ಬೌದ್ಧ ಧರ್ಮಕ್ಕೆ ಪೋಷಣೆ ಸಿಕ್ಕಿದ್ದು ಕೋಸಲದ ರಾಜರಾದ ಪ್ರಸೇನಜಿತ ಮತ್ತು ವಿಶಾಖರಿಂದ. ಬುದ್ಧ ತನ್ನ ೧೬ ಚಾತುರ್ಮಾಸ್ಯ ವ್ರತಗಳನ್ನು ಅಯೋಧ್ಯೆಯಲ್ಲೇ ನಡೆಸಿದ್ದ. ಬೌದ್ಧ ಭಿಕ್ಷುಗಳ ಬದುಕಿಗೆ ಸಂಬಂಧಿಸಿದ ವಿಧಿ-ನಿಷೇಧಗಳ ರಚನೆಯಾದದ್ದು ಅಯೋಧ್ಯೆಯಲ್ಲೇ. ಫಾಹಿಯಾನ್ ಮತ್ತು ಹ್ಯೂಯೆನ್ ತ್ಸಾಂಗ್ ಎಂಬ ಚೀನೀ ಯಾತ್ರಿಕರು ಅಯೋಧ್ಯೆಯನ್ನು ಸಂದರ್ಶಿಸಿದ್ದಾರೆ. ಹ್ಯುಯೆನ್ ತ್ಸಾಂಗನ ಕಾಲದಲ್ಲಿ ಅಯೋಧ್ಯೆಯಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳಿಗೆ ಸೇರಿದ ೩೦೦೦ ವಿದ್ಯಾರ್ಥಿಗಳು ಅಸಂಗ ಮತ್ತು ವಸುಬಂಧು ಎಂಬ ವಿದ್ವಾಂಸರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸುತ್ತಿದ್ದರು. ಅಯೋಧ್ಯೆಯ ಮಣಿಪ್ರಭಾತ ಎಂಬಲ್ಲಿ ಕುಳಿತು ಬುದ್ಧ ಪ್ರವಚನ ಮಾಡುತ್ತಿದ್ದ. ಅಲ್ಲಿ ಅಶೋಕನ ಕಾಲದ ಒಂದು ಸ್ತೂಪವಿದೆ. "ಬುದ್ಧ ಚರಿತ" ಮತ್ತು "ಸೌಂದರನಂದ" ಎಂಬ ಎರಡು ಮಹಾಕಾವ್ಯ ರಚಿಸಿದ ಸಂಸ್ಕೃತದ ಪ್ರಸಿದ್ಧ ಕವಿ, ನಾಟಕಕಾರ ಮತ್ತು ದಾರ್ಶನಿಕನಾದ ಅಶ್ವಘೋಷ ಅಯೋಧ್ಯೆಯ ನಿವಾಸಿ. ಅವನು ಹಾಡುವಾಗ ಕುದುರೆಗಳು ಮೇಯುವುದನ್ನು ನಿಲ್ಲಿಸಿ ಗಾಯನವನ್ನಾಲಿಸುತ್ತಿದ್ದವಂತೆ. ಅದಕ್ಕಾಗಿಯೇ ಅವನು ಬೌದ್ಧದೀಕ್ಷೆ ಪಡೆದಾಗ ಅವನಿಗೆ ಅಶ್ವಘೋಷ ಎಂದು ಹೆಸರಿಡಲಾಯಿತು. ಬೌದ್ಧಧರ್ಮದ ಜ್ಞಾನಕೋಶ ಎಂದೇ ಪರಿಗಣಿತವಾಗಿರುವ "ಅಭಿಧರ್ಮಕೋಶ" ಅಯೋಧ್ಯೆಯಲ್ಲೇ ರಚಿಸಲ್ಪಟ್ಟಿತು.

              ಗುರುನಾನಕರಿಗೆ ಅಯೋಧ್ಯೆಯಲ್ಲಿರುವಾಗಲೇ ದೈವಸಾಕ್ಷಾತ್ಕಾರವಾಯಿತು. ಅವರಿಗೆ ಬ್ರಹ್ಮಸಾಕ್ಷಾತ್ಕಾರವಾದ ಸ್ಥಳದಲ್ಲಿ ಬ್ರಹ್ಮಕುಂಡವಿದ್ದು ಅಲ್ಲಿ ಒಂದು ಗುರುದ್ವಾರವನ್ನು ಕಟ್ಟಿಸಲಾಗಿದೆ. ಭಗವಾನ್ ವಿಷ್ಣುವಿನ ಶೀರ್ಷಸ್ಥಾನದಂತಿರುವ ಅಯೋಧ್ಯೆ ಮತ್ಸ್ಯಾಕಾರದಲ್ಲಿದೆ ಎಂದು ಸ್ಕಾಂದಪುರಾಣದಲ್ಲಿದೆ. ಶ್ರೀರಾಮನ ಕಾಲದಲ್ಲಿ ಅಯೋಧ್ಯೆ ೧೨ ಯೋಜನ ಉದ್ಧ ಮತ್ತು ಮೂರು ಯೋಜನ ಅಗಲದ ಒಂದು ಮಹಾನಗರವಾಗಿತ್ತು. ವ್ಯವಸ್ಥಿತವಾದ ಮಾರುಕಟ್ಟೆ, ಗಗನಚುಂಬಿ ಕಟ್ಟಡಗಳು, ವಿಶಾಲವಾದ ರಾಜಬೀದಿಗಳು, ಬಲಿಷ್ಟವಾದ ಶಸ್ತ್ರಸಜ್ಜಿತ ಸೇನೆ, ಕೊರತೆಯಿಲ್ಲದ ಅರ್ಥವ್ಯವಸ್ಥೆ, ದುಃಖದೈನ್ಯಗಳಿಂದ ಮುಕ್ತವಾದ ದೇಶಭಕ್ತ ಪ್ರಜಾಕೋಟಿ. ಒಟ್ಟಿನಲ್ಲಿ ದೇವ ದುರ್ಲಭ ನಗರ. ತುಳಸೀದಾಸರಂತೂ " ವೇದ ಪುರಾಣಗಳಲ್ಲಿ ವೈಕುಂಠದ ವರ್ಣನೆ ಮಾಡಿದ್ದರೂ ಅಯೋಧ್ಯೆಗಿಂತ ಹೆಚ್ಚಿನ ಆನಂದ ನನಗೆಲ್ಲೂ ಸಿಗದು" ಎಂದಿದ್ದಾರೆ.

               ರಾಜಾ ವಿಕ್ರಮಾದಿತ್ಯ ಅಯೋಧ್ಯೆಯನ್ನು ಜೀರ್ಣೋದ್ಧಾರ ಮಾಡಿದ. ಗುಪ್ತರ ಕಾಲದಲ್ಲೂ ಅಯೋಧ್ಯೆಗೆ ರಾಜಧಾನಿಯ ಗೌರವವಿತ್ತು.  ೧೧೯೩ರಲ್ಲಿ ಶಹಾಬುದ್ದೀನ್ ಘೋರಿ ಅಯೋಧ್ಯೆಯನ್ನು ಆಕ್ರಮಣ ಮಾಡಿದ. ಮುಂದೆ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದವು. ೧೫೨೬ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಬಾಬರ್ ೧೫೨೮ರಲ್ಲಿ ಅಯೋಧ್ಯೆಯ ಮೇಲೆ ಆಕ್ರಮಣ ನಡೆಸಿದ. ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆಗೋಸ್ಕರ ತನ್ನ ಸೇನಾನಿ ಮೀರ್ ಬಾಕಿ ತಾಶ್ಕಂದಿ ಎಂಬಾತನನ್ನು ಬಾಬರ್ ಅಯೋಧ್ಯೆಯ ಶ್ರೀರಾಮ ಜನ್ಮ ಸ್ಥಾನ ಮಂದಿರವನ್ನು ಕೆಡವಿ ಅಲ್ಲಿ ಮಸೀದಿ ಕಟ್ಟಲು ನೇಮಿಸಿದ. ಆಕ್ರಮಣದ ಸುದ್ದಿ ತಿಳಿದಾಗ ಸುತ್ತಲಿಂದ ಸಶಸ್ತ್ರ ಹಿಂದೂ ಸೈನಿಕರು ಬಂದರು. ಮೀರ್ ಬಾಕಿಯ ಬಳಿ ತೋಪಿತ್ತು. ಹದಿನೈದು ದಿನಗಳವರೆಗೆ ಘನಘೋರ ಯುದ್ಧ ನಡೆಯಿತು. ಭಯಂಕರ ಯುದ್ಧದಲ್ಲಿ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರ ಸಾವಿನ ಬಳಿಕ ಮೀರ್ ಬಾಕಿ ಮಂದಿರವನ್ನು ನಾಶಗೊಳಿಸಿದ. ಸಂದರ್ಭದಲ್ಲಿ ಭಿತಿ ಸಂಸ್ಥಾನದ ದೊರೆ ಮೆಹತಾವ ಸಿಂಹ ತೀರ್ಥಯಾತ್ರೆಗೆಂದು ಅಯೋಧ್ಯೆಗೆ ಬಂದಿದ್ದ. ಶೃದ್ಧಾಕೇಂದ್ರದ ಮೇಲಿನ ಆಕ್ರಮಣದಿಂದ ಕ್ರುದ್ಧನಾಗಿ ರಣರಂಗ ಸೇರಿ ಹೋರಾಡಿ ವೀರಮರಣವನ್ನಪ್ಪಿದ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ ಮಾತ್ರ. ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್,  ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್, ಮುಂತಾದ ಅನೇಕ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಹಿಂದೂ ವೀರರ ಬಲಿದಾನ ಅಂದಾಯಿತು. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಇತಿಹಾಸಕಾರ ಬಾರಾಬಂಕಿ ತನ್ನ "ಗೆಜೆಟಿಯರ್"ನಲ್ಲಿ ಬಾಬರ್ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ ಅಂತ ಬರೆದಿದ್ದಾನೆ.
ಹಿಂದೂಗಳು ಸುಮ್ಮನುಳಿದರೆ?
                ಇಲ್ಲ. ಪಾವನ ತೀರ್ಥಕ್ಷೇತ್ರದ ಮುಕ್ತಿಗಾಗಿ ಬಾಬರನ ಕಾಲದಿಂದ ಸುಮಾರು ಎಪ್ಪತ್ತಾರು ಬಾರಿ ಹೋರಾಟ ನಡೆದಿದೆ. ಬಾಬರನ ಆಳ್ವಿಕೆಯಲ್ಲಿ ಯುದ್ಧಗಳು, ಹುಮಾಯೂನನ ಕಾಲದಲ್ಲಿ ೧೦ ಯುದ್ಧಗಳು, ಅಕ್ಬರನ ಕಾಲದಲ್ಲಿ ೨೦ ಯುದ್ಧಗಳು, ಔರಂಗಜೇಬನ ಕಾಲದಲ್ಲಿ ೩೦ ಯುದ್ಧಗಳು, ಷಹದತ್ ಆಲಿಯ ಕಾಲದಲ್ಲಿ , ನಾಸಿರುದ್ದೀನ್ ಹೈದನ ಕಾಲದಲ್ಲಿ , ವಾಜಿದ್ ಆಲಿಯ ಕಾಲದಲ್ಲಿ , ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ನಡೆದವು. ಪಾವನ ಕ್ಷೇತ್ರದಲ್ಲಿ ೧೯೪೦ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. ೨೨-೧೨-೧೯೪೯ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ ೧೯೮೬ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧಿತವಾಗಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. ೧೯೮೦ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ ೧೯೮೬ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು.
              ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕಾರಸೇವೆಗಳು ನಡೆದವು. ೧೯೯೨ರ ಡಿಸೆಂಬರ್ ೬ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು. ಆದರೆ ಭವ್ಯ ಮಂದಿರದ ಕನಸು ನನಸಾಗಲಿಲ್ಲ.

             ಅಯೋಧ್ಯೆಯ ಬಗ್ಗೆ ರಾಮನಿಗೆ ಎಷ್ಟು ಮಮತೆಯಿತ್ತೆಂದರೆ ವಿಭೀಷಣ ಸಂತಸದಿಂದ ಕೊಡಮಾಡಿದ ಸ್ವರ್ಣ ಲಂಕೆಯನ್ನೂ ತಿರಸ್ಕರಿಸಿ "ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಎಂದು ಅನುಜ ಲಕ್ಷ್ಮಣನಿಗೆಂದ. ರಾಮನಾಮೋಚ್ಚಾರದಿಂದ ದರೋಡೆಕೋರ ರತ್ನಾಕರ ವಾಲ್ಮೀಕಿಯಾಗಿ ಬದಲಾದ. ರಾಮಕತೆ ತುಳಸಿ, ಕಂಬ, ಕುವೆಂಪು, ಡಿವಿಜಿ ಮುಂತಾದ ಕವಿಪುಂಗವರನ್ನು ಭಾರತಕ್ಕೆ ನೀಡಿತು. ರಾಷ್ಟ್ರ ಪುರುಷ ದೈವೀಪುರುಷನ ಹೆಮ್ಮೆಯನಗರ ಮನುಕುಲದ ಮೊದಲ ರಾಜಧಾನಿಯಾದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗದೇ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಅರ್ಥ ಬರದು.

ಶನಿವಾರ, ಫೆಬ್ರವರಿ 23, 2013

ರುಧಿರ ತರ್ಪಣ-ಮಾತೃ ಪೂಜನ: ಭಾಗ-೧

ರುಧಿರ ತರ್ಪಣ-ಮಾತೃ ಪೂಜನ: ಭಾಗ-೧

       ಬೃಂದಾವನದ ರಾಜಮಾರ್ಗ. ಎಲ್ಲೆಲ್ಲೂ ತಲೆ ಬೋಳಿಸಿಕೊಂಡು, ಗಂಧದ ನಾಮ ಧರಿಸಿ, ಬಿಳಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಾ ಓಡಾಡುತ್ತಿರುವ ಅನಾಥ ವಿಧವೆಯರು, ಊರು ತುಂಬಾ ಓಡಾಡುತ್ತಿರುವ ಕಾವಿಧಾರಿಗಳು( ಸಾಧುಗಳೆಷ್ಟೋ, ಕಪಟಿಗಳ್ಯಾರೋ ಶಿವನೇ ಬಲ್ಲ!)...ಈ ದೃಶ್ಯಗಳನ್ನು ನೋಡುತ್ತಾ ಮನದಲ್ಲಿ ಕೃಷ್ಣ ಭಗವಾನನ ಪ್ರೇಮ, ತಂತ್ರ-ಪ್ರತಿತಂತ್ರ, ಧೈರ್ಯ, ಕುಶಲಮತಿ ರಾಜಕಾರಣ, ತ್ಯಾಗದ ಗುಣಗಳನ್ನು ಮೆಲುಕು ಹಾಕುತ್ತಾ ಬಿರಬಿರನೇ ನಡೆದು ಬರುತ್ತಿದ್ದಾನೆ ಜತೀನ್.....ಬಾಘಾ ಜತೀನ್....ಅರ್ಥಾತ್ ಜತೀನ್ ಮುಖರ್ಜಿ. ಅವನೇ ಒಂದು ವಿಶೇಷ, ಅವನ ಹೆಸರು ಇನ್ನೊಂದು ವಿಶೇಷ...ಕಡುಗತ್ತಲಿನಲ್ಲಿ ಬರಿಗೈಯಿಂದ ಹುಲಿಯನ್ನು ಕೊಂದ ಧೀರ ಅವನು...ಅದಕ್ಕಾಗಿಯೇ ಅವನು "ಬಾಘಾ" ಜತೀನ್! ಕಟ್ಟು ಮಸ್ತಿನ ಹುರಿಯಾಳು, ಯೋಗದಿಂದ ಸುದೃಢವಾದ ದೇಹ, ಸೇನಾಧಿಪತಿ ಪಟ್ಟಕ್ಕೆ ಯೋಗ್ಯ. ಹಾಗೆಂದು ಮಹರ್ಷಿ ಅರವಿಂದರಿಂದಲೇ ಆಶೀರ್ವದಿಸಲ್ಪಟ್ಟು ರಣವೀಳ್ಯ ಪಡೆದವನು. ಬಂಗಾಳಿ ಕ್ರಾಂತಿಪಾಳಯಕ್ಕೆ ನಾಯಕನೀಗ! ಅಂತಹವನಿಗೆ ಇಲ್ಲೇನು ಕೆಲಸ? ಅದೂ ಪ್ರೇಮದುದ್ಯಾನದಲ್ಲಿ!

           ಬಂದವನೇ ನಿಂತಿದ್ದು ಒಂದು ಆಶ್ರಮದ ಮುಂದೆ. ಅವನ ಸ್ವಾಗತಕ್ಕೆಂದೇ ಎದ್ದು ಬಂದಿದ್ದರು ಸ್ವಾಮಿ ನಿರಾಲಂಬರು. ಅವರಿಗೆ ಪಾದಾಭಿವಂದನ ಮಾಡಿದ ಜತೀನ್. ಕುಶಲೋಪರಿಗಳು ನಡೆದವು. ಮಾತಾಡುತ್ತಿದ್ದಂತೆಯೇ ಧ್ಯಾನಸ್ಥರಾದರು ನಿರಾಲಂಬರು. ನಿರಾಲಂಬರ ಪೂರ್ವಾಶ್ರಮದ ಹೆಸರು ಜತೀಂದ್ರನಾಥ ಬ್ಯಾನರ್ಜಿ. ಅತ್ತ ಅರವಿಂದರು ಬಂಗಾಳದಲ್ಲಿ ಕ್ರಾಂತಿ ನೇತೃತ್ವ ವಹಿಸಿದ್ದರೆ ಇತ್ತ ಪಂಜಾಬಿನಲ್ಲಿ ಜತೀಂದ್ರಬ್ಯಾನರ್ಜಿ ವಹಿಸಿದ್ದರು. ಅರವಿಂದರು ತಪಶ್ಚರ್ಯೆಗೆ ತೆರಳಿದರೆ ಇತ್ತ  ಕೆಲವು ನಾಯಕರ ಭಿನ್ನಾಭಿಪ್ರಾಯಗಳಿಂದ ಬೇಸತ್ತು ಸನ್ಯಾಸ ಸ್ವೀಕರಿಸಿದ್ದರು ಜತೀಂದ್ರನಾಥ ಬ್ಯಾನರ್ಜಿ. ಆದರೆ ಕ್ರಾಂತಿಕಾರಿಗಳ ಒಡನಾಟ, ಸಂಘಟನೆ, ಮಾರ್ಗದರ್ಶನ ನಡೆದೇ ಇತ್ತು. ಅಂತೆಯೇ ಜತೀನ್ ಅವರನ್ನು ಭೇಟಿಯಾಗಲು ಬಂದಿದ್ದು. ಅಂದರೆ ಈಗಿನ ಜತೀಂದ್ರ ಪೂರ್ವದ ಜತೀಂದ್ರರ ಮಾರ್ಗದರ್ಶನ ಪಡೆಯಲು ಬಂದಿದ್ದ. ಕೇವಲ ಮಾರ್ಗದರ್ಶನವೇ?...ಅಲ್ಲ. ಅಲ್ಲಿ ೧೮೫೭ರ ಕ್ರಾಂತಿಯ ಪುನಾರವರ್ತನೆಗೆ ಕೆಸರುಗಲ್ಲು ಹಾಕುವುದಿತ್ತು. ಅಲ್ಲಿ ಮತ್ತೊಬ್ಬ ಬರುವವನಿದ್ದ. ಮುಂದೆ ಸೈನಿಕ ಕ್ರಾಂತಿಗೆ ಮೂಲಕಿಡಿಯಾದ ಉತ್ತರಭಾರತದಾದ್ಯಂತ ಪಸರಿಸಿದ ಒಂದು ಮಹಾಕ್ರಾಂತಿಗೆ ಭದ್ರ ಬುನಾದಿ ಅಲ್ಲಿ ಆಗುವುದರಲ್ಲಿತ್ತು. ಆಗಲೇ ಧ್ಯಾನಾವಸ್ಥೆಯಿಂದ ಸಹಜತೆಗೆ ಬಂದ ನಿರಾಲಂಬರು ಅವನು ಬರಲು ಒಂದು ವಾರ ಆಗುವುದೆಂದು ಅಲ್ಲಿಯ ತನಕ ಜತೀನ ಸಾಧನೆಯಲ್ಲಿ ಕಳೆಯಬೇಕೆಂದು ತಿಳಿಸಿ ಮತ್ತೆ ಧ್ಯಾನಸ್ಥರಾದರು. ಮರು ಪ್ರಶ್ಣೆಯಿಲ್ಲ.
ಯಾರು  ಆ ವ್ಯಕ್ತಿ?

      ಜತೀನನ ಸಮಯ ಧ್ಯಾನ, ಯೋಗದಲ್ಲೇ ಕಳೆಯುತ್ತಿದೆ. ಈಗವನು ಮಿತಾಹಾರಿ. ಅವನ ದೇಹದಲ್ಲೊಂದು ಹೊಸ ಶಕ್ತಿ ಸಂಚಯನವಾಗುತ್ತಿದೆ. ಮುಖದ ತೇಜಸ್ಸು ಹೆಚ್ಚುತ್ತಿದೆ. ಅವನಲ್ಲಿಗೆ ಬಂದು ಆರು ದಿವಸಗಳು ಗತಿಸಿವೆ. ಏಳನೆಯ ದಿನ ಯೋಗ, ಅಂಗಸಾಧನೆ ಮುಗಿಸಿ ಇನ್ನೇನು ಸ್ನಾನ-ಧ್ಯಾನಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ನಿರಾಲಂಬರ ಧ್ವನಿ ಕೇಳಿಸಿತು.
"ಅಗೋ ಬಂದ". ಜತೀನನ ದೃಷ್ಟಿ ಕ್ಷಣ ಮಾತ್ರದಲ್ಲಿ ದ್ವಾರದ ಕಡೆ ಸರಿಯಿತು. ಬಂಗಾಳಿ ದಿರಿಸು, ಆಳೆತ್ತರ, ತನಗಿಂತ ತುಸು ಚಿಕ್ಕ ಪ್ರಾಯ, ತೇಜಃಪೂರ್ಣ ಮುಖ. ಹಿಂದೊಮ್ಮೆ ನೋಡಿದ ನೆನಪು. ಆ ವ್ಯಕ್ತಿ ನಿರಾಲಂಬರಿಗೆ ಸಾಷ್ಟಾಂಗವೆರಗಿದಾಗ ಆಶೀರ್ವದಿಸಿದ ನಿರಾಲಂಬರು ಜತೀನನ ಕಡೆ ಕೈತೋರಿಸಿ " ಈತನಾರು ಗೊತ್ತೇ?" ಎಂದು ಕೇಳಿದರು. ಅರೆಕ್ಷಣ ಜತೀನನನ್ನು ನೋಡಿದ ಆತ "ಗೊತ್ತಿಲ್ಲದೆ ಏನು" ಎಂದು ಜತೀನನ್ನು ಗಾಢವಾಗಿ ಆಲಂಗಿಸಿದ. ಬೆಂಕಿ, ಗಾಳಿಗಳು ಒಂದಾದಂತಾಯಿತು!
ಯಾರಾತ...?
ರಾಸ್ ಬಿಹಾರಿ ಬೋಸ್...!  ಎಲ್ಲರ ಮೆಚ್ಚಿನ ರಾಸುದಾ...!

ಯಾರೀತ ರಾಸುದಾ...?
            ತಂದೆ ವಿನೋದ ಬಿಹಾರಿ ಬೋಸ್. ತಾಯಿ ಬಂಗಾಳಿ ಕುಲೀನ ಮನೆತನದ ಸರಳತೆಯ ಪತಿಭಕ್ತಿ ಪರಾಯಣೆ. ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ(೧೮೮೬).  ೩ ವರುಷವಾದಾಗ ತಾಯಿ ಸ್ವರ್ಗವಾಸಿಯಾದರು. ತಾತ ಕಾಳಿಚರಣ ಬೋಸ್. ಬರ್ದ್ವಾನಿನ ಸುಬಲ್ದಹ ಗ್ರಾಮದಲ್ಲಿದ್ದ ಆತ ರಾಮಕೃಷ್ಣ ಪರಮಹಂಸರ ಪರಮ ಭಕ್ತರು. ಅವರಿಂದ ಭರತಖಂಡದ ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು. ಚಿಕ್ಕಂದಿನಲ್ಲಂತೂ ಬಲು ತುಂಟ. ಜಗಳಗಂಟ. ಆದರೆ ಸಾಹಿತ್ಯ ಪ್ರೇಮಿ. ಭಾರತವನ್ನು ವಂದೇಮಾತರಂನಿಂದ ವಶೀಕರಿಸಿದ ಬಂಕಿ ಬಾಬುಗಳ ಅಭಿಮಾನಿ.

          ಒಂದು ದಿನ ಚಂದನ್ ನಗರದ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲೀಷರ ಬಗ್ಗೆ ಘನ ಅಭಿಪ್ರಾಯ ಹೊಂದಿದ್ದ ಇತಿಹಾಸದ ಪ್ರಾದ್ಯಾಪಕರೊಬ್ಬರು ಪಾಠ ಮಾಡುತ್ತಾ " ಭಾರತೀಯರು ಹೇಡಿಗಳು. ಆದ್ದರಿಂದಲೇ ೧೭ ಮಂದಿ ಕುದುರೆ ಸವಾರರೊಂದಿಗೆ ಬಂದ ಬಖ್ತಿಯಾರ್ ಖಿಲ್ಜಿ ಯಾವ ಅಡೆತಡೆಯಿಲ್ಲದೆ ನಮ್ಮ ದೇಶವನ್ನು ಲೂಟಿ ಮಾಡಿದ. ಗೋರಿ, ಘಜ್ನಿಗಳು ಕೊಳ್ಳೆ ಹೊಡೆದರು. ಆಂಗ್ಲರೇನಾದರೂ ಇರುತ್ತಿದ್ದರೆ ಅವರ ಅವಸಾನವಾಗುತ್ತಿತ್ತು....."  ಎಂದು ಕೊರೆಯಲಾರಂಭಿಸಿದರು. ಇದನ್ನು ಅಲ್ಲಗಳೆದ ರಾಸುದಾ " ನೀವು ಹೇಳುವುದು ಅಪ್ಪಟ ಸುಳ್ಳು. ಯಾರೋ ಕೆಲವರನ್ನು ಹೆಸರಿಸಿ ನಮ್ಮಿಡೀ ಜನಾಂಗವನ್ನು ಹಳಿಯುವುದು ಎಷ್ಟು ಸರಿ? ಪೃಥ್ವಿರಾಜ ಚೌಹಾಣ್ ಹೇಡಿಯೇ? ಪುರೂರವ ಹೇಡಿಯೇ? ಚಂದ್ರಗುಪ್ತ, ಸಮುದ್ರಗುಪ್ತ, ರಾಣಾ ಸಂಗ, ಸಂಗ್ರಾಮ ಸಿಂಹ, ಮಹಾರಾಣಾ ಪ್ರತಾಪ್, ಛತ್ರಪತಿ ಶಿವಾಜಿಯರು ಪುಕ್ಕಲರೇ? ನಮ್ಮವರ ಸದ್ಗುಣಗಳೇ ನಮಗೇ ಮುಳುವಾಯಿತಲ್ಲದೇ ಬೇರೇನಲ್ಲ. ಕೇವಲ ಒಳ್ಳೆಯವರಾಗಿದ್ದರೆ ಪ್ರಯೋಜನವಿಲ್ಲ. ತಂತ್ರಕ್ಕೆ ಪ್ರತಿತಂತ್ರ, ವ್ಯೂಹಕ್ಕೆ ಚಕ್ರವ್ಯೂಹ ರಚಿಸಿ ಕೃಷ್ಣ, ಚಾಣಕ್ಯ, ಶಿವಾಜಿಯರಂತೆ ಸಮರ ನೀತಿ ಅನುಸರಿಸಿದರೇನೇ ನಮಗೆ ಉಳಿಗಾಲ. ಎದುರಾಳಿ ಯುದ್ಧಧರ್ಮ ಪಾಲಿಸಿದಾಗ ಮಾತ್ರ ನಾವು ಧರ್ಮವನ್ನು ಯುದ್ಧದಲ್ಲಿ ಪಾಲಿಸಬೇಕು. ಕಪಟಿಗಳನ್ನು ಕಪಟದಿಂದಲೇ ಒದ್ದೋಡಿಸಬೇಕು. ಆದ್ದರಿಂದ ನಿಮ್ಮ ಮಾತನ್ನು ವಾಪಾಸು ತೆಗೆದುಕೊಳ್ಳಿ" ಎಂದ. ಕುಪಿತಗೊಂಡ ಆ ಆಂಗ್ಲ ಚೇಲಾ "ನಿಲ್ಲಿಸೋ ನಿನ್ನ ವಿತಂಡವಾದ. ಯಾರಲ್ಲಿ ಮಾತನಾಡುತ್ತಿದ್ದೀಯಾ ನೆನಪಿರಲಿ" ಎಂದು ಭುಸುಗುಡುತ್ತಾ ಹೇಳಿದರು. ಹುಡುಗ ಸುಮ್ಮನುಳಿದಾನೇ..ನನ್ನದು ವಿತಂಡವಾದವಲ್ಲ. ವಾಸ್ತವವಾದ. ನಿಮ್ಮದು ಅಭಿಮಾನ ಶೂನ್ಯರ ಮಾತೆಂದು ಅಬ್ಬರಿಸಿದ. ತರಗತಿಯ ಹುಡುಗರಿಂದ ಚಪ್ಪಾಳೆಗಳ ಸುರಿಮಳೆ!
ಆಂಗ್ಲ ಚೇಲಾನಿಗೆ ಮುಖಭಂಗ. ತತ್ಪರಿಣಾಮ ರಾಸುದಾಗೆ ಶಾಲೆಯಿಂದಲೇ ಅರ್ಧಚಂದ್ರ!

           ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು. ವಿವೇಕಾನಂದರ ಸಮಗ್ರ ಕೃತಿಗಳು, ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು. ಜೋಗೇಂದ್ರನಾಥ ವಿದ್ಯಾಭೂಷಣರ "ಮ್ಯಾಝಿನಿ ಚರಿತೆ" ಸೈನ್ಯ ಕಟ್ಟಿ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸುವ ಕನಸಿಗೆ ಹವಿಸ್ಸೊದಗಿಸಿತು. ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ. ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಛಲ ನೂರ್ಮಡಿಯಾಯಿತು. ಯೋಗ, ಅಂಗಸಾಧನೆಯಿಂದ ದೇಹ ಬಲಿಷ್ಟವಾಯಿತು. ಯುದ್ಧಕ್ಕೆ ಬೇಕಾದ ಆತ್ಮವಿಶ್ವಾಸ ಹೆಚ್ಚಿಸಿದ ದೈಹಿಕ ಚಿಂತನೆ ಅದು.

 -ಮುಂದುವರಿಯುವುದು

ಮಂಗಳವಾರ, ಫೆಬ್ರವರಿ 19, 2013

ಯುಗಪುರುಷ

ಯುಗಪುರುಷ

                    ಹೌದು ಆತ ಕೆಲವರ ಪಾಲಿಗೆ ದಾರಿ ತಪ್ಪಿದ ದೇಶಭಕ್ತ. ಆದರೆ...ಆದರೆ ನಮ್ಮ ಪಾಲಿಗೆ ಹಿಂದೂ ಅಂದರೆ ಹೇಗಿರಬೇಕು ಅಂತ ತಿಳಿಸಿಕೊಟ್ಟ ಆರಾಧ್ಯ ದೈವ. ಆತನಲ್ಲಿ ಪರಶಿವನ ಪರಾಕ್ರಮ ಮತ್ತು ಕರುಣೆ, ರಾಮನ ಆದರ್ಶ, ಕೃಷ್ಣನ ತಂತ್ರ, ಚಾಣಕ್ಯನ ನೀತಿ...ಹೀಗೆ... ಹೀಗೆ ಎಲ್ಲವೂ ಮೇಳೈಸಿದ್ದವು. ಪರಕೀಯರ ಆಕ್ರಮಣಗಳಿಂದ ಜರ್ಝರಿತವಾಗಿ, ಬಾಡಿ ಬಸವಳಿದಿದ್ದ ಹಿಂದೂವಿಗೆ ನವ ಚೈತನ್ಯ ತುಂಬಿದವನಾತ.

                     ಆದರೆ ಆತನ ಬಗ್ಗೆ ನಮಗೆಷ್ಟು ತಿಳಿದಿರಬಹುದು. ಪಠ್ಯ ಪುಸ್ತಕದಲ್ಲೆಲ್ಲೋ ಅರ್ಧ ಪುಟ( ಈಗಂತೂ ಅದೂ ಕಾಣೆಯಾಗಿದೆ).

                    ಹೌದು..ನನಗೂ ಗೊತ್ತಿದ್ದದ್ದು ಅಷ್ಟೆ. ಆದರೆ.....ಆದರೆ ಯಾವಾಗ ದೃಷ್ಟಾರ ದಿ|| ವಿದ್ಯಾನಂದ ಶೆಣೈಜೀಯವರ ಆ ವಾಗ್ವೈಭವ ಕಿವಿಗೆ ಬಿತ್ತೋ ಆಗ ನಾನು ಆ ಭೋರ್ಗರೆತಕ್ಕೆ ಕೊಚ್ಚಿ ಹೋದೆ. ಹೊ. ವೆ. ಶೇಷಾದ್ರಿಜೀಯವರ "ಯುಗಪುರುಷ" ನನ್ನ ಭಾವವನ್ನು ಮೀಟಿ ಆ ಮಹಾಪುರುಷನ ಅನ್ವೇಷಣೆಗೆ ನಾಂದಿ ಹಾಡಿತು. ಹಾಗಾಗಿಯೇ ಕನಿಷ್ಟ ಆತನ ಜನ್ಮದಿನದಂದಾದರೂ ಅವನನ್ನು ನೆನಪಿಸಿಕೊಳ್ಳಬೇಡವೆ. ಇದನ್ನು ಬರೆಯುವಾಗ, ಓದುವಾಗ ನನಗಾದಂತೆ ನಿಮ್ಮ ಮನಸ್ಸು ಅವನಿಗಾಗಿ ಹಾತೊರೆದರೆ ನಾ ಧನ್ಯ...ಆ ಭಾರತಿ ಧನ್ಯಳು....ಮುಂದೆ ವಿದ್ಯಾನಂದ ಶೆಣೈಯವರ ಮಾತಿನ ಓಘಕ್ಕೆ ಸಾಟಿಯಾಗುತ್ತೀರಲ್ಲ...ಭಾರತ ದರ್ಶನದ ಆಯ್ದ ಭಾಗ...

                 ಸಹ್ಯಾದ್ರಿಯ ಇನ್ನೊಂದು ವಿಶೇಷ ಎಂದರೆ, ಯಾವಾತನ ಹೆಸರು ಕರ್ಣಪಟಲಕ್ಕೆ ಬಿದ್ದೊಡನೆ ಪ್ರತಿಯೊಬ್ಬ ಹಿಂದೂವಿನ ಹೃದಯ ಅರಳಿ ಕ್ಷಾತ್ರ ತೇಜ ಪುಟಿದು ನಿಲ್ಲುತ್ತೋ ಅಂತಹ ಹಿಂದೂ ಹೃದಯ ಸಾಮ್ರಾಟನಿಗೆ ಜನ್ಮ ನೀಡೋ ಭಾಗ್ಯ ದೊರೆತುದು. ಹೌದು ಶಿವಾಜಿಯ ಹೆಸರು ಕೇಳಿದೊಡನೆ ಹಿಂದೂವಿನ ಕಂಗಳ ಕಾಂತಿ ಪ್ರಜ್ವಲಿಸತೊಡಗುತ್ತೆ. ಒಂದು ವೇಳೆ ಹಾಗಾಗಾದೇ ಇದ್ದರೆ ಅವ ಹಿಂದುವಾಗಿದ್ದೇನು ಪ್ರಯೋಜನ?

                    ಹೌದು, ಇಂದಿನ ಪೀಳಿಗೆಗೆ ಶಿವಾಜಿಯ ಬಗ್ಗೆ ಗೊತ್ತಿಲ್ಲ. ಗೊತ್ತುಪಡಿಸಿಕೊಳ್ಳುವ ಮನಸ್ಥಿತಿಯೂ ಇಲ್ಲ. ಕಾರಣ ಅವೆರಡನ್ನು ನಾವು ಹೇಳಿಕೊಟ್ಟಿಲ್ಲ! ನಮ್ಮ ಪಠ್ಯ ಪುಸ್ತಕಗಳಲ್ಲಿ ಶಿವಾಜಿಗೆ ಕಲ್ಪಿಸಿರೋದು ಕೇವಲ ಒಂದೇ ಪುಟದ ವ್ಯಾಖ್ಯೆ! ಅದರಲ್ಲಿ ಅರ್ಧ ಪುಟ ಅವನ ಭಾವಚಿತ್ರಕ್ಕೆ ಹೋದರೆ ಉಳಿದರ್ಧದಲ್ಲಿ ಅವನನ್ನು ವರ್ಣಿಸುವುದು ಹೇಗೆ ಸಾಧ್ಯ? ಈಗಂತು ಆ ಒಂದು ಪುಟವೂ ಉಳಿದಿಲ್ಲ. ಬ್ರಿಟಿಷ್ ಇತಿಹಾಸಕಾರರು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿದ ಇತಿಹಾಸ ಕಥನವನ್ನು ನಮ್ಮವರೂ ಸರಿಪಡಿಸಲಿಲ್ಲ. 'ಮಹಾತ್ಮ' ಅಂತ ಕರೆಯಿಸಿಕೊಂಡ ಕೆಲವು ದೇಶದ್ರೋಹಿಗಳಿಗೆ ಈ ಹಿಂದೂ ಹೃದಯ ಸಾಮ್ರಾಟ ದಾರಿ ತಪ್ಪಿದ ದೇಶಭಕ್ತರಲ್ಲೊಬ್ಬನಾಗಿಬಿಟ್ಟ. ಅವನ ಭಟ್ಟಂಗಿಗಳು ಈ ಛತ್ರಪತಿಯನ್ನು ಇತಿಹಾಸದ ಪುಟಗಳಿಂದಲೇ ತೆಗೆದು ಹಾಕುವ ಪ್ರಯತ್ನ ಮಾಡಿದರು, ಮಾಡುತ್ತಲೇ ಇದ್ದಾರೆ!

                  ಶಿವಾಜಿಯ ಮಹತ್ವ ನಮಗೆ ಅರಿವಾಗೋದು ಯಾವಾಗ?
ಅಕಸ್ಮಾತ್ ಆತ ಹುಟ್ಟದೇ ಇರುತ್ತಿದ್ದರೆ ಏನಾಗುತ್ತಿತ್ತು?
ಉತ್ತರದಲ್ಲಿ ಮೊಘಲ್ ಶಾಹಿ, ದಕ್ಷಿಣದಲ್ಲಿ ಆದಿಲ್ ಶಾಹಿ, ಅದರ ಆಚೆ ಈಚೆ ಇಮಾಮ್ ಶಾಹಿ, ಕುತುಬ್ ಶಾಹಿ, ನಿಜಾಮ್ ಶಾಹಿ, ಬರೀದ್ ಶಾಹಿ, ಅಯೋಧ್ಯೆಯಲ್ಲಿ ನವಾಬ, ಬಂಗಾಳದಲ್ಲಿ ನವಾಬ, ತಮಿಳುನಾಡಿನಲ್ಲಿ ಫ್ರೆಂಚರು, ಗೋವಾದಲ್ಲಿ ಪೋರ್ಚುಗೀಸರು, ಸೂರತ್ನಲ್ಲಿ ಬ್ರಿಟಿಷರು, ಪಕ್ಕದಲ್ಲೇ ಡಚ್ಚರು! ಆಧುನಿಕ ಯೂರೋಪ್ನ ತೋಪುಗಳು ತಾಯಿ ಭಾರತಿಯ ಮಾಂಗಲ್ಯವನ್ನು ಭಗ್ನ ಮಾಡಲು ಸಜ್ಜಾಗಿ ನಿಂತಿದ್ದವು! ಧರ್ಮ ಶೃದ್ಧೆ ಮರೆಯಾಗಿದ್ದ, ಕ್ಷಾತ್ರ ತೇಜ ಕಡಿಮೆಯಾಗಿದ್ದ, ಸಂಸ್ಕೃತಿ ನಶಿಸುತ್ತಿದ್ದ ಅಂತಹ ಸಂದರ್ಭದಲ್ಲಿ ಶಿವಾಜಿ ಎದ್ದು ಬಂದ!

ಬಾಲ ಶಿವಾಜಿ ಹೇಳಿದ್ದೇನು?
" ಹಿಂದೂ ಧರ್ಮ ಪ್ರತಿಷ್ಠಾಯೈ ಸಿದ್ಧಖಡ್ಗ ಸದಾವಯಮ್|"

                 ನಮ್ಮ ಸ್ಥಿತಿ ಹೇಗಿತ್ತು ಆವಾಗ?

ಭೂಷಣ ಅನ್ನೋ ಕವಿ ಹೇಳುತ್ತಾನೆ,

"ಕಾಶಿಜೀ ಕೀ ಕಳಾ ಜಾತೀ
ಮಥುರಾ ಮಸ್ಜಿದ್ ಹೋತಿ|
ಯದಿ ಶಿವಾಜಿ ನ ಹೋತಾ
ಸುನ್ನತ್ ಹೋತಿ ಸಬ್ ಕೀ||"

ಅಂದರೇನು?
ಕಾಶಿ ಕಳಾಹೀನವಾಗ್ತಾ ಇತ್ತು, ಮಥುರಾ ಮಸೀದಿಯಾಗಿ ಬದಲಾಗ್ತಾ ಇತ್ತು. ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಇಡೀ ದೇಶ ಇಸ್ಲಾಂ ಸಂಸ್ಕಾರ(!) ಪಡೆಯುತ್ತಿತ್ತು!

                 ನಮ್ಮ ರಾಷ್ಟ್ರ, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿಗಳು ವಿನಾಶದ ಅಂಚನ್ನು ತಲುಪಿದ್ದಾಗ ಅದರ ಸಂರಕ್ಷಣೆಗಾಗಿ ಎದ್ದು ಬಂದ ಶಿವಾಂಶ ಆತ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ! ನಮ್ಮ ಕಾವ್ಯ ಪುರಾಣಗಳಲ್ಲಿ ವರ್ಣನೆಗೆ ಸಿಲುಕಿರುವ ಅಭಿಜಾತ ನಾಯಕನ ಸಕಲ ಸದ್ಗುಣಗಳ ಸಾಕಾರ ಮೂರ್ತಿ ಶಿವಾಜಿ!

                   ಸ್ವರಾಜ್ಯದ ರಕ್ಷಣೆಗಾಗಿ ಜನರನ್ನು ಜೋಡಿಸಲು ಯತ್ನಿಸಿದ. ನಾಡಿನಲ್ಲಿ ಅವನಿಗೆ ಸಹಕಾರ ಸಿಗಲಿಲ್ಲ. ನಮ್ಮ ಪರಂಪರೆಯೇ ಹಾಗೆ! ಗೆಲುವು ಖಚಿತವಾಗುವವರೆಗೆ ನಾವು ಯಾರಿಗೂ ಸಹಾಯ ಮಾಡೋಲ್ಲ. ಇದು ಇಂದು ನಿನ್ನೆಯ ಮಾತಲ್ಲ. ರಾಮ ರಾವಣರ ಯುದ್ಧ ನಡೆದಾಗ ದೇವತೆಗಳು ಜೈಕಾರ ಹಾಕುತ್ತಿದ್ದರು. ಯಾರಿಗೆ ಅಂತ ಗೊತ್ತಿಲ್ಲ. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ! ಶ್ರೀರಾಮ ಭುವಿಗಿಳಿದ ಭಗವಂತ ಅವನು ಗೆಲ್ಲಲೇಬೇಕು ಆದರೆ ನಂಬೋದು ಹ್ಯಾಗೆ? ಯಾಕೆಂದರೆ ರಾಮ ಸೈನ್ಯ ಸಮೇತ ಅಯೋಧ್ಯೆಯಿಂದ ಬಂದವನಲ್ಲ. ಅವನ ಸೈನ್ಯವೋ ಕಪಿಗಳ ಹಿಂಡು. ಒಂದು ಹೇಳಿದರೆ ಹತ್ತು ಮಾಡುವಂತಹವು. ಹೀಗಿರುವಾಗ ಅವನು ಗೆಲ್ಲಬಹುದು ಅಂತ ನಂಬಿ ಜೈಕಾರ ಹಾಕೋದು ಹೇಗೆ? ಅಕಸ್ಮಾತ್ ರಾವಣ ಗೆದ್ದರೆ ಸುಮ್ಮನೇ ಬಿಟ್ಟಾನೆಯೇ? ಹಾಗಂತ ರಾವಣನಿಗೆ ಜೈಕಾರ ಹಾಕಿ ರಾಮ ಗೆದ್ದರೆ ರಾಮನಿಗೆ ಮುಖ ತೋರ್ಸೋದು ಹೇಗೆ? ಅದಕ್ಕೆ ರಗಳೆಯೇ ಬೇಡ. ಸುಮ್ಮನೇ ಜೈ ಅಂದು ಬಿಡೋದು! ೮೦ ದಿವಸದ ಯುದ್ಧ ಮುಗಿಯಿತು. ರಾವಣನ ಪಕ್ಷದ ಪ್ರಮುಖರೆಲ್ಲ ನೆಲಕಚ್ಚಿದರು. ೮೧ನೇ ದಿವಸ. ಆಗಸ್ಥ್ಯರು ಬಂದು ರಾಮನಿಗೆ ಆದಿತ್ಯ ಹೃದಯ ಮಂತ್ರ ಉಪದೇಶಿಸಿದರು. ಇನ್ನು ರಾಮ ಗೆಲ್ಲೋದು ಖಚಿತ ಎಂದಾದಾಗ ಇಂದ್ರ ರಾಮನಿಗೆ ಸಾರಥಿ ಮಾತಲಿ ಸಹಿತವಾಗಿ ತನ್ನ ರಥ ಕಳುಹಿಸಿಕೊಟ್ಟ. ಅಲ್ಲಿಯ ತನಕ ರಥಿಕ ರಾವಣ, ವಿರಥಿ ರಾಮ! ಅಂದರೆ ಗೆಲ್ಲುವವರ ಪರ ನಿಂತರೆ ಲಾಭಕರ ಎಂಬ ಚಿಂತನೆ!

                ಶಿವಾಜಿಗೂ ಹಾಗೆ. ನಗರದಲ್ಲಾರು ಬೆಂಬಲಿಸಲಿಲ್ಲ. ಹಳ್ಳಿಗಳಿಗೆ ಹೋದ. ರೈತಾಪಿ ಮಕ್ಕಳನ್ನು,ಮಾವಳಿಗಳನ್ನು ಸಂಘಟಿಸಿದ. ಉಡಲು ಬಟ್ಟೆ, ಹೊಟ್ಟೆಗೆ ಹಿಟ್ಟು ಇಲ್ಲದ ಬಡ ಮಕ್ಕಳನ್ನು ಗೆಳೆತನ ಮಾಡಿದ. ಅವರಲ್ಲಿ ರಾಷ್ಟ್ರ ಭಕ್ತಿ ತುಂಬೋದು ಹೇಗೆ? ಭಾಷಣ ಮಾಡಲಿಲ್ಲ. ಎರಡು ಗುಂಪು ಮಾಡಿದ. ಒಂದು ಗುಂಪಿಗೆ ಮೊಘಲರು, ಇನ್ನೊಂದಕ್ಕೆ ಮರಾಠರು ಅಂತ ಹೆಸರಿಟ್ಟ. ಯುದ್ಧದ ಆಟ. ಆದರೊಂದು ಷರತ್ತು! ಆಟ ಮುಗಿಯುವ ವೇಳೆಗೆ ಮೊಘಲರ ಗುಂಪು ಸೋತು ಮಕಾಡೆ ಮಲಗಿಬಿಡಬೇಕು. ಪರಿಣಾಮ ಏನು? ಮಕ್ಕಳಿಗೆ ಆಡುತ್ತಾ ಆಡುತ್ತಾ ಮೊಘಲರು ಅಂದರೆ ಸೋಲುವವರು, ಮರಾಠರು ಎಂದೆಂದಿಗೂ ಗೆಲ್ಲುವವರು ಅಂತ ಮನಸ್ಸಿನಲ್ಲಿ ಅಛ್ಛಳಿಯದೆ ಉಳಿದು ಬಿಟ್ಟಿತು.

                   "ಮಂತ್ರ್ ಛೋಟಾ, ತಂತ್ರ ಸೋಭೇ, ಪರೇಶಿರ್ ಠರಲೇತೆ" ಚಿಕ್ಕ ಮಂತ್ರ, ಚೊಕ್ಕ ತಂತ್ರ, ಹೇಗೆ ಯಶಸ್ವಿಯಾಯಿತು ನೋಡಿ! ಈ ತಂತ್ರ ಬಳಸಿ ಎಂಥಾ ವ್ಯಕ್ತಿತ್ವ ನಿರ್ಮಾಣ ಮಾಡುತ್ತಾನೆ ಶಿವಾಜಿ! ತಾನಾಜಿ ಮಾಲಸುರೆ, ನೇತಾಜಿ ಫಾಲಕರ್, ಮಾಮಾ ಬಲೇಕರ್, ಏಸಾಜಿ, ಕಂಕಾಜಿ..... ಒಬ್ಬೊಬ್ಬರೂ ನರಸಿಂಹಗಳು, ನರವ್ಯಾಘ್ರಗಳು.

ನೆನಪು ಮಾಡಿಕೊಳ್ಳಿ,
                   ಒಂದು ದಿನ ಜೀಜಾ ಮಾತೆ ಕೊಂಡಾಣದತ್ತ ಕೈ ತೋರಿಸಿ ಅಲ್ಲಿ ಭಗವಾಧ್ವಜ ಹಾರಬೇಕು ಅಂತ ಹೇಳುತ್ತಾಳೆ. ಮಾತೆಯ ಮಾತೆಂದರೆ ಅದು ಆಜ್ಞೆ ಅಲ್ವಾ? ಆದರೆ ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ಅವನ ಮಗನ ಮದುವೆ. ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮನೆಯಲ್ಲಿ ಮದುವೆ ಇರೋವಾಗ ಯಾರಾದರೂ ಯುದ್ಧಕ್ಕೆ ಹೊರಡೋಕಾಗುತ್ತಾ? ಆದರೆ ತಾನಾಜಿಗೆ ಜೀಜಾ ಮಾತೆಯ ಮನದಿಚ್ಛೆ ತಿಳಿಯಿತು. ಜೀಜಾ ಮಾತೆಯ ಬಳಿ ಬಂದು " ತಾಯಿ ನಿಮ್ಮಾಸೆ ಎನಗಾಜ್ಞೆ" ಎನ್ನುತ್ತಾನೆ. ಆಗ ಜೀಜಾ ಮಾತೆ ಮಗೂ ನಿನ್ನ ಮಗನ ಮದುವೆ ಮುಗಿಯಲಿ ಎಂದಾಗ ಅವ ಹೇಳೊ ಮಾತು ಕೇಳಿ, " ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ಶಿವಾಜಿ ರಾಜ. ನನ್ನ ಮಗ ಅವನಿಗೂ ಮಗನಂತೆಯೇ ತಾನೇ? ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡ್ತೇನೆ." ಹೀಗೆ ರಣವೀಳ್ಯ ಪಡೆದೇ ಬಿಟ್ಟ.

                ಶಿವಾಜಿಯ ಸೈನ್ಯ ಕೊಂಡಾಣವನ್ನು ಗೆದ್ದಿತು. ಆದರೆ ತಾನಾಜಿಯ ಬಲಿದಾನವಾಯಿತು. ಸುದ್ದಿ ತಿಳಿದ ಶಿವಾಜಿಯ ಬಾಯಿಂದ  ಅಶ್ರುಧಾರೆಯೊಂದಿಗೆ ಹೊರಬಂದ ಮಾತು " ಗಢ್ ಆಲಾ, ಪಣ್ ಸಿಂಹ ಗೇಲಾ"- ಕೋಟೆ ಬಂತು ಆದರೆ ಸಿಂಹ ಹೊರಟು ಹೋಯಿತು. ತಾನಾಜಿಗೆ ಆ ಕೋಟೆಯಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಸಿಂಹಗಢ ಅಂತ ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ.

                   ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ?
ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!

೧೩ ವರ್ಷದ ರಾಯಬಾ ಮದುವೆಯಾಗ್ತಿದ್ದ ಹಾಗೆ ತಂದೆಯನ್ನು ಕಳೆದುಕೊಂಡ. ತಂದೆಯ ೧೨ನೇ ದಿವಸದ ಕೆಲಸ ಮುಗಿಸಿ ೧೮ನೇ ದಿವಸ ಅಪ್ಪನ ಖಡ್ಗ ಹಿಡಿದು ರಣಾಂಗಣಕ್ಕೆ ಧುಮುಕುತ್ತಾನೆ. ತಂದೆಯ ಕೆಲಸ ಪೂರೈಸಲು!

ಯಾವ ಶಾಲಾ ಕಾಲೇಜುಗಳಲ್ಲಿ ಈ ರೀತಿಯ ದೇಶಭಕ್ತಿಯ ಶಿಕ್ಷಣ ಕೊಡಲಾಗುತ್ತೆ? ಅದಕ್ಕಾಗಿಯೇ ಸಹ್ಯಾದ್ರಿಯ ಬಳಿ ಬಂದಾಗ ಶಿವಾಜಿ ಕಣ್ಮುಂದೆ ಬರೋದು!

                         ಹೀಗೆ ತನ್ನ ಪರಾಕ್ರಮ, ಬುದ್ಧಿಶಕ್ತಿಯಿಂದ ಆದಿಲ್ ಶಾಹಿ, ಮೊಘಲ್ ಶಾಹಿಗಳ ಎದೆ ಬಿರಿದು, ತೋರಣ, ಪನ್ನಾಳ, ಚಾಕಣ, ಪುರಂದರ, ವಿಶಾಲಗಢ, ರಾಯಗಢ, ಪ್ರತಾಪಗಢ ಮುಂತಾದ ಅಭೇದ್ಯ ಕೋಟೆಗಳನ್ನು ಶಿವಾಜಿ ಮಹಾರಾಜರು ಸ್ವರಾಜ್ಯಕ್ಕೆ ಜೋಡಿಸಿದರು. ತಂಜಾವೂರಿನಿಂದ ಸೂರತ್ನವರೆಗೆ ಮಿಂಚಿನಂತೆ ಸಂಚರಿಸಿದರು. ಪ್ರತ್ಯಕ್ಷ ಔರಂಗಜೇಬನ ಅರಮನೆ ಹೊಕ್ಕು, ಆ ವಿಷಸರ್ಪದ ಹೆಡೆ ಮೆಟ್ಟಿ, ಬಾಲ ತಿರುವಿ, ಸೆರೆಮನೆ ಸೇರಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿ ಬರುತ್ತಾರೆ! ತನ್ನ ಕೊಲ್ಲ ಬಂದ ಬಿಜಾಪುರದ ಸೊಕ್ಕಿನ ದೈತ್ಯ ಸರದಾರ ಅಫಜಲ ಖಾನನನ್ನು ಹೆಡೆಮುರಿ ಕಟ್ಟಿದರು. ಕೊನೆಗೊಮ್ಮೆ ೧೬೭೪ರ ಆನಂದ ನಾಮ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿಯ ದಿನ ರಾಯಗಢದಲ್ಲಿ ಸಿಂಹಾಸನವೇರಿ ಛತ್ರಪತಿಯಾಗಿ ನಮ್ಮ ಸಮಾಜದ ಶೃದ್ಧಾಕೇಂದ್ರವಾದರು. ಶಿವಾಜಿಯನ್ನನುಸರಿಸಿ ಹೋದ ಮರಾಠ ಕುದುರೆಗಳು ಮೊಘಲರನ್ನು ಮೆಟ್ಟಿ, ಕಾಬೂಲ್ ನದಿಯ ನೀರನ್ನು ಕುಡಿದು ತಮ್ಮ ಸ್ವರಾಜ್ಯ ದಾಹ ತಣಿಸಿಕೊಳ್ಳುತ್ತವೆ. ಎಂತಹ ರೋಮ ಹರ್ಷಕ ಇತಿಹಾಸವಿದು!