ಪುಟಗಳು

ಬುಧವಾರ, ಮೇ 29, 2013

ಗರುಡ ಪಾತಾಳ

ಮೊನ್ನೆ ಊರಿಗೆ ಹೋದ ದಿವಸವೇ ವರುಣನ ಆಗಮನವಾಗಿತ್ತು. ಅದೇ ಸಮಯಕ್ಕೆ ತನ್ನೊಡಲಿನ ಸುಮಗಳನ್ನರಳಿಸುತ್ತಾ ನಸು ನಗುತ್ತಾ ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದವಳಿವಳು. ಇದೇನು ಮಹಾ ಅಂತ ಹುಬ್ಬೆರಿಸದಿರಿ. ಅಂತಿಂಥವಳಲ್ಲ. ಹೆಸರು "ಗರುಡ ಪಾತಾಳ". ಇದರೊಂದಿಗೆ "ಈಶ್ವರ ಬೇರು" ಎಂಬ ಗಿಡದ ಬೇರು ಬಳಸಿ ಚೂರ್ಣ ತಯಾರಿಸಿ ವಿಷ ಜಂತು ಕಚ್ಚಿದಾಗ ವಿಷ ಹೊರತೆಗೆಯಲು ಬಳಸುತ್ತಿದ್ದರು. ಈಗಲೂ ಮಲೆನಾಡಿನ ಕೆಲವು ಕಡೆ ಇದರ ಬಳಕೆ ಇದೆ. ಅಂತಹ ಅಪರೂಪದ ಗಿಡದ ಬಗ್ಗೆ ಇಂದಿನವರಿಗೆ ಎಷ್ಟು ಗೊತ್ತು?

ಸೋಮವಾರ, ಮೇ 27, 2013

ಆಜ್ಯ...ಹವಿಸ್ಸು...ಆತ್ಮಾಹುತಿ!!!


ಆಜ್ಯ...ಹವಿಸ್ಸು...ಆತ್ಮಾಹುತಿ!!!


            ಎಳವೆಯಲ್ಲಿ ಪಠ್ಯ ಪುಸ್ತಕಗಳಲ್ಲಿ ಇರುತ್ತಿದ್ದ ಕಥೆ, ಹಳೆಗನ್ನಡದ ಕಾವ್ಯ, ಇತಿಹಾಸದ ಯಾವುದೇ ಘಟನೆ ಇರಲಿ ಅದನ್ನು ಮೊದಲೇ ಓದದಿದ್ದರೆ ಸಮಧಾನ ಇರುತ್ತಿರಲಿಲ್ಲ. ಮೂರನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಓದುತ್ತಾ ಹೋಗುತ್ತಿದ್ದಂತೆ ಅಚಾನಕ್ಕಾಗಿ ಕೆಲವು ಹೆಸರುಗಳ ಉಲ್ಲೇಖ ಕಂಡು ಬಂತು. "ವಿ. ದಾ. ಸಾವರ್ಕರ್, ಆಜಾದ್, ಭಗತ್ ಸಿಂಗ್ ಕ್ರಾಂತಿಕಾರಿಗಳಾಗಿದ್ದರು. ಸಶಸ್ತ್ರ ಹೋರಾಟದಲ್ಲಿ ನಂಬಿಕೆ ಇರಿಸಿದ್ದ ಅವರು ಯುವಕರನ್ನು ಕ್ರಾಂತಿ ಸಂಘಟನೆಗೆ ಸೆಳೆದು ಕೊಳ್ಳುತ್ತಿದ್ದರು. ಆದರೆ ಕ್ರಾಂತಿಕಾರಿಗಳ ಹೋರಾಟ ಯಶಸ್ಸು ಕಾಣದೇ ಸಂಘಟನೆ ಮುರುಟಿ ಹೋಯಿತು."
ಇಷ್ಟೇ!
                 ಆಗಲೇ ನನ್ನ ಮನದೊಳಗೇ ಒಂದು ಅನುಮಾನದ ಹುತ್ತ ಮೊಳಕೆಯೊಡೆದಿತ್ತು. ಕ್ರಾಂತಿಕಾರಿಗಳೆಂದೆನಿಸಿಕೊಂಡವರು ಸಂಘಟನೆ ಮಾಡಿ ಹೋರಾಟ ನಡೆಸಿದ್ದು ಇತಿಹಾಸದ ಪುಟದಲ್ಲಿ ಒಂದೆರಡು ವಾಕ್ಯಗಳಿಗೆ ಸೀಮಿತಗೊಳ್ಳಲು ಕಾರಣವೇನು? ಅವರಿಗೆ ಯಶ ಸಿಗಲಿಲ್ಲ ಹಾಗೂ ಸಂಘಟನೆ ಮುರುಟಿ ಹೋಯಿತು ಎಂಬುದು ಎಷ್ಟು ಸತ್ಯ? ಕೇವಲ ಒಂದು ದಿವಸ ಉಪವಾಸ ಕೂತು ಆರಾಮವಾಗಿ ಜೈಲಿನಲ್ಲಿ ಶಿಕ್ಷೆ(?!) ಅನುಭವಿಸಿದ್ದನ್ನು ಪುಟಗಟ್ಟಲೇ ವರ್ಣಿಸಿದುದರ ಹಿಂದಿನ ಮರ್ಮವೇನು?
                ಅದಕ್ಕಿಂತಲೂ ಹೆಚ್ಚಾಗಿ ನನ್ನನ್ನು ಸೆಳೆದದ್ದು ಮೊದಲ ಹೆಸರು...ವಿ. ದಾ. ಸಾವರ್ಕರ್...ಯಾರವರು? ಅವರ ಪೂರ್ಣ ನಾಮಧೇಯವೇನು? ಅವರ ತತ್ವಗಳೇನು? ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರವಲ್ಲ ಇತಿಹಾಸಕ್ಕೆ ಅವರ ಕೊಡುಗೆ ಏನು?
ಉತ್ತರ ಸಿಗುವುದು ಅಷ್ಟು ಸುಲಭವಿರಲಿಲ್ಲ. ಯಾಕೆಂದರೆ ನನ್ನ ಸುತ್ತಮುತ್ತಲಿನವರಿಗೆ ಅದರ ಅರಿವಿರಲಿಲ್ಲ. ಪಠ್ಯದಲ್ಲೇ ಅವರ ಹೆಸರುಗಳನ್ನು ಉಲ್ಲೇಖಿಸಲು ಹಿಂದೆ ಮುಂದೆ ನೋಡುವ ಆಳುವ ಜನ ಪ್ರತಿನಿಧಿ(!)ಗಳು ಅವರ ಚರಿತ್ರೆಯನ್ನು ಪ್ರಕಟಿಸಲು ಅನುಕೂಲ ಮಾಡಿ ಕೊಟ್ಟಾರೇ?
                   ಆಗ ಸಿಕ್ಕಿದ್ದೇ ಆತ್ಮಾಹುತಿ! ಪೊಳ್ಳು ಇತಿಹಾಸದ ಸುಳಿಯಿಂದ ತಪ್ಪಿಸಿಕೊಂಡು ಬರಲು ಒದ್ದಾಡುತ್ತಿದ್ದ ನನಗೆ ದೊರಕಿದ ಆಸರೆ ಅದು! ಹೌದು
ಯಾವ ಹೆಸರು ನನ್ನನ್ನು ನೈಜ ಇತಿಹಾಸದ ಅಧ್ಯಯನಕ್ಕೆ ತೆರೆದುಕೊಳ್ಳುವಂತೆ ಕರೆದು ಹೇಳಿತ್ತೋ ಅದೇ ಹೆಸರು ಪುಸ್ತಕ ಓದಿ ಮುಗಿಸುವುದರೊಳಗೆ ನನ್ನ ಆದರ್ಶ ದೈವವಾಗಿಬಿಟ್ಟಿತ್ತು!

ವೀರ ಸಾವರ್ಕರ್!
                 ಹೆಸರು ಕೇಳಿದೊಡನೆ ಶಕ್ತಿಯ ಒಂದು ಪ್ರವಾಹವೇ ದೇಹವಿಡೀ ಸಂಚರಿಸಿದಂತಾಗುತ್ತದೆ. ಭಾವತೀವ್ರತೆಯಿಂದ ಮನಸ್ಸು ಮಹಾಪುರುಷನನ್ನು ಪ್ರತ್ಯಕ್ಷ ನೋಡಲು ಹಪಹಪಿಸುತ್ತದೆ. ಅಬ್ಬಾ ಎಂತಹ ವ್ಯಕ್ತಿತ್ವ ಅದು! ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿ. ನಿರಂತರ ಅಂತಃಪ್ರವಾಹವಾಗಿ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಸ್ವಾತಂತ್ರ್ಯ ವೀರ ನೀನೆನಗೆ ಧಣಿ. ಹುಲು ಮಾನವ ನೀನವಗೆ ಮಣಿ. ಅದು ಭವ್ಯ ಭಾರತದ ಮುಕುಟಮಣಿ!

    ಅನೇಕ ಬಾರಿ ನಾನು ಯೋಚನೆಗೆ ಬಿದ್ದದ್ದಿದೆ, ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಸಾಧಿಸಲು ಸಾಧ್ಯವೇ? ಒಂದೊಂದು ಘಟನೆ ನೆನಪಿಸಿಕೊಳ್ಳಿ.

. ಇನ್ನೂ ಬುದ್ದಿ ಬೆಳೆಯದ ವಯಸ್ಸಿಗೆ " ಅಮ್ಮಾ ಭವಾನಿ, ಅಮ್ಮನನ್ಯಾಕೆ ಬಲಿ ತೊಗೊಂಡೆ. ಅಮ್ಮನ ಬದಲು ನನ್ನನ್ನು ಬಲಿ ತೆಗೆದುಕೋ" ಎಂದು ಅರ್ಧ ರಾತ್ರಿಯಲ್ಲಿ ಕಾಳಿಯ ವಿಗ್ರಹದ ಬಳಿ ಕುಳಿತು ಪ್ರಾರ್ಥಿಸಿತು ಹಾಲುಗಲ್ಲದ ಮಗು!
. ಎಲ್ಲರೂ ಛಾಪೇಕರ್ ಸಹೋದರರು ಕೊಲೆಗಡುಕರು ಎಂದು ಜರೆಯುತ್ತಿದ್ದಾಗ "ಇಲ್ಲ, ಅವರು ಅಪ್ರತಿಮ ದೇಶಭಕ್ತರು. ಅವರು ಮಾಡಿದ್ದು Rand ಕೊಲೆಯಲ್ಲ. ಅದು ವಧೆ, ಸಂಹಾರ" ಎಂದ ಹುಡುಗ.
.ನಟ್ಟ ನಡು ರಾತ್ರಿ ತಾಯಿ ಭವತಾರಿಣಿಯಿಂದ ದೇಶಸೇವೆಯ ಆತ್ಮಾಹುತಿಯ ದೀಕ್ಷೆ ದೊರಕಿಸಿಕೊಂಡ ೧೩ ವರ್ಷದ ಹುಡುಗ.
. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ೧೫ ವರ್ಷದ ಪೋರ.
. ಮಿತ್ರಮೇಳ ಎಂಬ ಸಂಘಟನೆ ಸ್ಥಾಪಿಸಿ ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದ ಗಂಡುಗಲಿ.

. ದಾಸ್ಯವೇ ಶ್ರೇಷ್ಠ, ಇಂಗ್ಲೀಷರೇ ದೇವರು, ಮನವಿಗಳೇ ಪೂಜೆ, ಅವರು ಕೊಡೋ ಶಿಕ್ಷೆಯೇ ಪ್ರಸಾದ ಎಂದು ಜನರೆಲ್ಲಾ ತಮ್ಮ ಕ್ಷಾತ್ರತೇಜ ಕಳೆದುಕೊಂಡಿದ್ದಾಗ ಸ್ವಾತಂತ್ರ್ಯವೇ ಶ್ರೇಷ್ಠ, ಭಾರತಿಯೇ ತಾಯಿ, ಕ್ರಾಂತಿಯೇ ಪೂಜೆ, ಆತ್ಮಾಹುತಿಯೇ ಪ್ರಸಾದ ಎಂದು "ಅಭಿನವ ಭಾರತ" ಎಂಬ ನವಪೀಳಿಗೆಯನ್ನು ಸಂಘಟಿಸಿದ ವೀರ.
. ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ.
. ಭಾರತದಲ್ಲಿ ವಿದೇಶೀ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟ ಮೊದಲ ಸ್ವದೇಶಾಭಿಮಾನಿ.
. ಸ್ವರಾಜ್ಯ ಎಂದುಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ " ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ" ಎಂದು ಘೋಷಿಸಿದ ಮೊಟ್ಟ ಮೊದಲ ರಾಜಕೀಯ ಮುಂದಾಳು.
೧೦. ದಾಸ್ಯರಕ್ಕಸನ ಎದೆಮೆಟ್ಟಲು ಪ್ರಯತ್ನ ಪಟ್ಟುದ್ದಕ್ಕಾಗಿ ತಾನು ಗಳಿಸಿದ ಬಿಎ ಪದವಿಯನ್ನು ಕಳೆದುಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ.

೧೧. ಕ್ರಾಂತಿಕಾರಿ ಚಟುವಟಿಕೆಗಳನ್ನು ನದೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್.
೧೨. ಹಿಂದೂಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ಪರರಾಷ್ಟ್ರಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಮೊಟ್ಟಮೊದಲ ಭಾರತೀಯ ತರುಣ.
೧೩. ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಮೊಟ್ಟ ಮೊದಲ ಲೇಖಕ.
೧೪. ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಪ್ರಪ್ರಥಮ ರಾಜಕೀಯ ಆರೋಪಿ.
೧೫. ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟ ಮೊದಲ ರಾಜಕೀಯ ಕೈದಿ.

೧೬. ವಿಶ್ವದ ರಾಜಕೀಯ ಚರಿತ್ರೆಯಲ್ಲೇ ೫೦ ವರ್ಷಗಳ, ಎರಡೆರಡು ಕರಿನೀರ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು.
೧೭. ಅತೀ ಸಣ್ನ ಕಿಂಡಿಯ ಮುಖಾಂತರ ತನ್ನ ಯೋಗಾಭ್ಯಾಸದ ಬಲದಿಂದ ಶರೀರವನ್ನು ಸಂಕುಚಿಸಿ ಹಡಗಿನಿಂದ ಜಿಗಿದು ಸಮುದ್ರ ಈಜಿದ ಸಾಹಸಿ.



೧೮. ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ ಇಲ್ಲದಿದ್ದರೂ, ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳ ಕಾವ್ಯ ರಚಿಸಿ ಬಾಯಿ ಪಾಠ ಮಾಡಿ ೧೪ ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ!
೧೯. ಅದು ದಂಗೆ ಅಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಎಂದು ಸಾರಿ ಅದರ ಬಗ್ಗೆ ಸಾಕ್ಷ್ಯಾಧಾರಿತ ಗ್ರಂಥ ಬರೆದ ಪ್ರಪ್ರಥಮ ವ್ಯಕ್ತಿ.
೨೦. ತಾನು ಮಾತ್ರವಲ್ಲದೆ ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದ ಅಧ್ವರ್ಯು.

೨೧. ಸಿಂಹದ ಗುಹೆಯೊಳಗೆ ನುಗ್ಗಿ ಅದರ ಕೇಸರ ಹಿಡಿದು ಬಡಿದ ನರಸಿಂಹ.
೨೨. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಸಾಗರ ಈಜಿದ ಶೂರ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕ.
೨೩. ನಿಮಗೆ ಅಚ್ಚರಿಯಾಗಬಹುದು. ಸಾವರ್ಕರ್ ನೀವೀಗ ಬಳಸುವಂತಹ ಅನೇಕ ಪದಗಳನ್ನು ಸೃಷ್ಟಿ ಮಾಡಿದರು. ಕೆಲವು ರೂಢಿರಹಿತ ಪದಗಳನ್ನು ಕೂಡಾ ಬಳಕೆಗೆ ತಂದರು. ಅಂತಹ ಕೆಲವು ಪದಗಳು:
ಮಹಾವಿದ್ಯಾಲಯ, ಪ್ರಾಚಾರ್ಯ, ಪ್ರಾದ್ಯಾಪಕ, ಪ್ರಭೋಧಿಕ, ವಾಯುದಳ, ದೂರಧ್ವನಿ, ದ್ವನಿಕ್ಷೇಪಕ, ವಿಧಿಮಂಡಲ, ಅರ್ಥ ಸಂಕಲ್ಪ, ಚಿತಪಠ, ನೇಪಥ್ಯ, ಛಾಯಾಚಿತ್ರ, ದಿಗ್ದರ್ಶಕ, ಕ್ರಮಾಂಕ, ದಿನಾಂಕ, ವಾಚನಾಲಯ, ಉಪಸ್ಥಿತ, ಮಹಾಪೌರ, ವ್ಯಂಗ್ಯಚಿತ್ರ, ವಿಶೇಷಾಂಕ, ಲಾಭಾಂಶ, ಭಾಗಾಂಶ, ಸಂಸತ್ತು, ಲೋಕಸಭಾ, ನಗರಪಾಲಿಕಾ, ಮಹಾಪಾಲಿಕಾ, ಹುತಾತ್ಮ, ಉಚ್ಛಾಂಕ, ನಭೋವಾಣಿ, ಸಚಿವಾಲಯ, ಸ್ಥಾನಕ, ರುಗ್ಣಾಲಯ, ಪ್ರಮಾಣಪತ್ರ,....ಇತ್ಯಾದಿ
೨೪. ವಿಗ್ರಹಗಳನ್ನು ಒಡೆಯುತ್ತಾ ಹೋರಾಟ ನಡೆಸುತ್ತಿದ್ದ ಸುಭಾಷರನ್ನು ಕರೆದು ಹೊರದೇಶಗಳಿಗೆ ತೆರಳಿ ಸೈನ್ಯ ಕಟ್ಟಿ ಹೋರಾಟ ನಡೆಸುವಂತೆಯೂ ಅಲ್ಲಿ ತಮಗೆ ರಾಸ್ ಬಿಹಾರಿ ಬೋಸ್, ಲಾಲಾ ಹರದಯಾಳ್ ಸಹಾಯ ಮಾಡುತ್ತಾರೆಂದು ತಿಳಿಸಿ ಸುಭಾಷರಮ್ ಅಂತಿಮ ಹೋರಾಟಕ್ಕೆ ಶಿಲಾನ್ಯಾಸ ಮಾಡಿದರು.
೨೫. ಸಾವರ್ಕರ್ ಬರೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಗ್ರಂಥ ಕ್ರಾಂತಿಸಂಘಟನೆಗಳಿಗೆ ಭಗವದ್ಗೀತೆಯಾಯಿತು.

೨೬. ನಾಥೂರಾಮ ಗೋಡ್ಸೆಯಂತಹ ಅನೇಕ ಅಪ್ಪಟ ಭಾರತ ಭಕ್ತರಿಗೆ ಗುರುವಾದರು.
೨೭. ಹಿಂದೂ ಮಹಾಸಭಾವನ್ನು ಕಟ್ಟಿ ಬೆಳೆಸಿದರು. ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತರು.
೨೮. ಅಸ್ಪೃಷ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಎಲ್ಲರ ವಿರೋಧದ ನಡುವೆ " ಪತಿತ ಪಾವನ " ಮಂದಿರ ನಿರ್ಮಿಸಿ ಅಲ್ಲಿ ಎಲ್ಲ ಹಿಂದೂಗಳಿಗೂ ಮುಕ್ತಪ್ರವೇಶ ದೊರಕಿಸಿಕೊಟ್ಟರು.
೨೯. ಚಳುವಳಿ ಎಂಬುದನ್ನು ಮೊದಲು ಹುಟ್ಟು ಹಾಕಿದ್ದೇ ಸಾವರ್ಕರ್. ಅಂಡಮಾನಿನಲ್ಲಿ ಗಾಣ ಎಳೆಯುತ್ತಾ ಕರಿನೀರ ಶಿಕ್ಷೆ ಅನುಭವಿಸುತ್ತಿದ್ದ ಕಾಲಕ್ಕೆ ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ದಿ ಚಳವಳಿ ನಡೆಸಿದರು.


        ಹೇಳುತ್ತಾ ಹೋದಂತೆ ಮುಗಿಯದ ಕಥನವಿದು...ಸಾವರ್ಕರ್ ಎಂದರೆ ಹಾಗೆಯೇ ಅವರು ಯಾವ ಕ್ಷೇತ್ರವನ್ನು ಪ್ರವೇಶಿಸಿದರೂ ಅಲ್ಲೊಂದು ಕ್ರಾಂತಿಯಾಗುತ್ತಿತ್ತು. ಅದು ಮುಕ್ತ ಸಮಾಜವಿರಲಿ, ಅಮುಕ್ತ ಕಾರಾಗೃಹವಿರಲಿ...ಎಲ್ಲೆಡೆಯೂ ಕ್ರಾಂತಿ...ಆಜ್ಯ...ಹವಿಸ್ಸು...ತರ್ಪಣ...ಆತ್ಮಾಹುತಿ
ಶಿವಾಜಿಯ ಅಪರಾವತಾರವದು!
ಇಂದವರ ೧೩೦ನೇ ಜನ್ಮದಿನದಂದು ನೆನಪಿಸಿಕೊಳ್ಳುವ ಸಣ್ಣ ಪ್ರಯತ್ನ.
ವಂದೇ ಮಾತರಂ...ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ...


 ಪೂರ್ಣಾಹುತಿ:     ಇಂದಿರಾ ಗಾಂಧಿ ಜೈಲಿನಲ್ಲಿದ್ದ ತನ್ನ ತಂದೆಯನ್ನು ನೋಡಿ ಬಂದು ಬರೆಯುತ್ತಾಳೆ ಅಲ್ಲಿದ್ದದ್ದು ಒಂದೇ ಒಂದು ಮಂಚ, ನಾಲ್ಕೇ ನಾಲ್ಕು ಕುರ್ಚಿ, ಒಂದು ಮೇಜು!
ಇದೆಂತಹಾ ಜೈಲು ಶಿಕ್ಷೆ ಸ್ವಾಮಿ? ಅಂಡಮಾನಿನ ಕರಿನೀರ ಶಿಕ್ಷೆಯೆಲ್ಲಿ ಇದೆಲ್ಲಿ? ಗಾಣ ಎಳೆಯುತ್ತಾ, ಹುಳು ಹುಪ್ಪಟೆಗಳು ಬೆರಕೆಯಾಗಿರೋ ಆಹಾರ ತಿನ್ನುತ್ತಾ ಕೈಯಲ್ಲಿ ತೆಂಗಿನ ನಾರು ತೆಗೆದು ಗೋಣಿಚೀಲ ಹೊಲಿಯುತ್ತಾ ಪಟ್ಟ ಕಷ್ಟ ಕೋಟಲೆಯನ್ನು ಯಾವ ಪಠ್ಯ ಪುಸ್ತಕದಲ್ಲಿ ಪ್ರಕಟಿಸುತ್ತಾರೆ?

ಮಂಗಳವಾರ, ಮೇ 21, 2013

ಹವಿಸ್ಸು

ವೀರ ಸಾವರ್ಕರ್ ಅಂದಾಕ್ಷಣ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುತ್ತದೆ. ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿತ್ವ. ನಿರಂತರ ಅಂತರ್ಗಂಗೆಯಂತೆ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ!

ಸೋಮವಾರ, ಮೇ 20, 2013

ಅವನು ಬರುತ್ತಲೇ ಇದ್ದಾನೆ

ಅವನು ಬರುತ್ತಲೇ ಇದ್ದಾನೆ

ಮೇಘ ಮಾಲೆ
ಘೋರ ಮೇಘ ಕದನ
ಅವನಿಗವನೇ ಮದನ
ಅರಳಿತವಳ ವದನ
--ಅವನು ಬರುತ್ತಲೇ ಇದ್ದಾನೆ||

ಮೇಘ ಪ್ರಳಯ
ಬಾನು ಕ್ರೋಧ ತಳೆಯೆ
ಅವನು ಹರುಷದೊಳಿಳಿಯೆ
ಅವಳ ಬೇಸರ ಕಳೆದ
--ಅವನು ಬರುತ್ತಲೇ ಇದ್ದಾನೆ||

ತರಣಿ ಮರೆಯಾಗೆ
ಮೇಘ ಗುಂಪಾಗೆ
ಅವನು ಸೊಂಪಾಗೆ
ಧರಣಿ ತಂಪಾಗೆ
ಅರಳಿತು ಮಮ ಸದನ
--ಅವನು ಬರುತ್ತಲೇ ಇದ್ದಾನೆ||

ಶನಿವಾರ, ಮೇ 18, 2013

ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-೧



ಸ್ವಾತಂತ್ರ್ಯದ ದಿವ್ಯಾಗ್ನಿ: ಹವಿಸ್ಸು-:

ಏಡನ್!
ಅಲ್ಲಿ ಫಡಕೆ(ವಾಸುದೇವ ಬಲವಂತ ಫಡಕೆ) ಕಿಡಿ ಆರಿತು.

ಭಗೂರು!
ಇಲ್ಲಿ ಅದೇ ಕಿಡಿ ಜ್ವಾಲೆಯಾಗಿ ಸ್ವಾತಂತ್ರ್ಯ ವೀರನಾಗಿ ಸ್ವಾತಂತ್ರ್ಯದ ದಿವ್ಯಾಗ್ನಿ ಮೊರೆಯಿತು.


            ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಭವತಾರಿಣಿಯ ಭವ್ಯ ವಿಗ್ರಹ. ಮಂದಾಸನದಲ್ಲಿ ಮಂಡಿಸಿ ಮಂದಹಾಸ ಬೀರುತ್ತಿದ್ದಾಳೆ ಮಹಾತಾಯಿ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಹುಡುಗನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ಣಿಸುತ್ತಿದ್ದಾನೆ...

   "ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ?
   
                  ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ ಹಾಗೂ ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆ ಮನೆಯನ್ನೇ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸರ್ವರ ಹಿತಕ್ಕಾಗಿ ಅಂದರೆ ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ರಾಮ ರಾವಣನನ್ನು ವಧಿಸಿದ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.

                 ಅಮ್ಮಾ ಫಡಕೆ ಆರಂಭಿಸಿದ ದೀಕ್ಷೆ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ನಾನು ಪ್ರತಿಜ್ಞೆ ಮಾಡುತ್ತಿದ್ದೇನೆ. ಇನ್ನು ಮುಂದೆ ನನ್ನೀ ಜೀವನ ನಿನ್ನನ್ನು ದಾಸ್ಯದಿಂದ ಬಿಡುಗಡೆ ಮಾಡಲು ಮುಡಿಪಾಗಿಡುವೆ. ಕೇವಲ ನಾನು ಮಾತ್ರವಲ್ಲ ನನ್ನ ಪರಿವಾರ, ಬಂಧು-ಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ನನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಎಲ್ಲವನ್ನೂ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸಾಗಿ ಅರ್ಪಿಸುತ್ತೇನೆ. ವಂದೇ ಮಾತರಂ...
ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ..."

                ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಅಂತಃಕರಣವನ್ನು ಪುಳಕಿತಗೊಳಿಸಿತು. ಅದು ಕೋಲ್ಮಿಂಚು! ಅದು ಮಾತೆಯ ಅನುಗ್ರಹ!

ಯಾರೀ ಹುಡುಗ???!!!!!

                    ಅವನ ಓರಗೆಯ ಹುಡುಗರು ಆಡಿಕೊಂದಿರಬಹುದಾದ ವಯಸ್ಸಿಗೇ ಪ್ರತಿಜ್ಞೆ ಮಾಡುತ್ತಿದ್ದಾನಲ್ಲ! ತಾಯಿಯ ಬಗ್ಗೆ, ದೇಶದ ಬಗ್ಗೆ, ತತ್ವಗಳ ಬಗ್ಗೆ, ಮೌಲ್ಯಗಳ ಬಗ್ಗೆ, ಧರ್ಮದ ಬಗ್ಗೆ, ರಾಜತಾಂತ್ರಿಕತೆಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ  ಮಾತಾಡುತ್ತಿದ್ದಾನಲ್ಲ!

"ಸ್ವಜನಳಾತೇ ಐಕುನಿ ಹೋತಿ ತಪ್ತ ತರುಣ ತೇ ಅರುಣ ಜಣೇ
ದೇಶ ಸಾಠೀ ಪ್ರಾಣಾ ದೇತಿ ಧನ್ಯ ಧನ್ಯ ತ್ಯಾ ಕಾ ನ್ಹ ಮಣೇ? ||
ಶತಾವಧೀ ತೇ ಜನ್ಮಾಯೇತಿ ಮರೋನಿ ಜಾತೀ ಗಣತೀ
ದೇಶಸಾಠೀ ಮರತೀ ತ್ಯಾಂಸೀ ದೇಶಪಿತೇ ಕಿ ಬುಧ ಮ್ಹಣತೀ||"

ಎಂದು ನಡು ರಾತ್ರಿಯಲ್ಲಿ ಸ್ವಾತಂತ್ರ್ಯ ಕಾವ್ಯ ಸೃಷ್ಠಿ ಮಾಡುತ್ತಿದ್ದಾನಲ್ಲ!

"ಕಾರ್ಯ ಸೋಡುನಿ ಅಪುರೇ ಪಡತಾ ಝಂಜತ?ಖಂತಿ ನಕೋ| ಫುಢೇ
ಕಾರ್ಯ ಚಾಲವೂ ಗಿರವಿತ ತುಮಚ್ಯಾ ಪರಾಕ್ರಮಾಚೇ ಆಮ್ಹೀ ಧಡೇ||"

ಎಂದು ಛಾಪೇಕರ್ ಸಹೋದರರಿಗೆ ವಚನ ಕೊಡುತ್ತಿದ್ದಾನಲ್ಲ!
ಯಾರವನು?

ಮತ್ಯಾರಿರಲು ಸಾಧ್ಯ? ಎಳವೆಯಲ್ಲೇ ಅಂಥಾ ಚಿಂತನೆ ಮತ್ಯಾರಿಗೆ ಬರಲು ಸಾಧ್ಯ?
ತಾತ್ಯಾ!
ಇತಿಹಾಸದಲ್ಲಿ ಸ್ವಾತಂತ್ರ್ಯ ವೀರನೆಂದೇ ಕರೆಸಿಕೊಂಡ ಏಕೈಕ ವ್ಯಕ್ತಿ....ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್!

                  ಹೌದು. ಮಹಾರಾಷ್ಟ್ರದಾದ್ಯಂತ ಘೋರ ಕ್ಷಾಮ ತಲೆದೋರಿತ್ತು. ಆಗಲೇ ಕಾಲಿಟ್ಟಿತ್ತು ಪ್ಲೇಗ್. ನಾಸಿಕದ ಕಲೆಕ್ಟರ್ Rand ಎಂಬ ದುರುಳ ಪ್ಲೇಗಿಗಿಂತಲೂ ಹೆಮ್ಮಾರಿಯಂತೆ ವರ್ತಿಸುತ್ತಿದ್ದ. ಒಂದು ಮನೆಯಲ್ಲಿ ಯಾರಿಗಾದರೂ ರೋಗ ಕಾಣಿಸಿಕೊಂಡರೆ ಮನೆಯವರಿಗೆಲ್ಲರಿಗೂ ಬಹಿಷ್ಕಾರ ಹಾಕಿ ಊರ ಹೊರಗೆ ಹಾಕಲಾಗುತ್ತಿತ್ತು. ರೋಗದಿಂದ ಸತ್ತವರ ಜೊತೆ ಆರೋಗ್ಯವಂತರನ್ನೂ ಜೀವಂತ ಸುಡಲಾಗುತ್ತಿತ್ತು. ಸ್ತ್ರೀಯರ ಮಾನಭಂಗ, ಆಸ್ತಿ ಪಾಸ್ತಿ ಲೂಟಿ, ಮನೆ ಮನೆಗೇ ಬೆಂಕಿ ಹಚ್ಚುವ ಕಾರ್ಯ ಯಥೇಚ್ಛವಾಗಿ ನಡೆಯಿತು. ಸಿಡಿದೆದ ಛಾಪೇಕರ್ ಸಹೋದರರು( ದಾಮೋದರ ಹಾಗೂ ಬಾಲಕೃಷ್ಣ ) ಕುದಿದು ಛಾಪೇಕರ್ ಕ್ಲಬ್ ಸ್ಥಾಪಿಸಿ ಶಸ್ತ್ರಾಸ್ತ್ರ ಸಂಗ್ರಹಿಸಿ Rand ಸಂಹಾರ ಮಾಡಿದರು. ಮಾಹಿತಿ ಕೊಟ್ಟ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿಗೆ ಛಾಪೇಕರ್ ಪಾಳಯದ ಮರಿಸಿಂಹ ವಾಸುದೇವ ಛಾಪೇಕರ್ ತಕ್ಕ ಶಿಕ್ಷೆ ವಿಧಿಸಿತು. ಮೂವರೂ ಸಂತೋಷದಿಂದ ನೇಣುಗಂಬಕ್ಕೆ ಕೊರಳೊಡ್ಡಿದರು. ಆದರೆ ಜನ ತಮ್ಮ ರಕ್ಷಣೆಗಾಗಿ ಮಡಿದ ವೀರರನ್ನೇ ಕೊಲೆಗಡುಕರೆಂದು ಕರೆದು ಅವಮಾನಿಸಿದರು.

ಅಂತಹ ಸಂದರ್ಭದಲ್ಲೇ ಬಾಲ ತಾಯಿಯ ಪದತಲದಲ್ಲಿ ಪ್ರತಿಜ್ಞೆ ಮಾಡಿದ್ದು. ಅದೂ ನಟ್ಟ ನಡು ರಾತ್ರಿ!

ಮುಂದುವರಿಯುವುದು...