ಪುಟಗಳು

ಭಾನುವಾರ, ಮೇ 18, 2014

ಹಿಂತಿರುಗಿ ನೋಡಿದಾಗ

 
                 ಜಾತ್ಯಾತೀತತೆಯ ಸೋಗಿನಲ್ಲಿ ದೇಶವನ್ನು ಜಾತಿಯ ಆಧಾರದಲ್ಲಿ ಒಡೆದು ವಿನಾಶದತ್ತ ತಳ್ಳಿದ ವಿಚ್ಛಿದ್ರಕಾರಿ ಶಕ್ತಿಗಳ ಅವಸಾನವಾಗಿದೆ. ದೇಶವಿಡೀ ನಮೋ ಎಂದಿದೆ. ಕಾಶಿ ವಿಶ್ವನಾಥ ಸತ್ಯವಂತರನ್ನು ಕೈಬಿಡುವುದಿಲ್ಲ ಎಂಬುದನ್ನು ಮತ್ತೆ ಮತ್ತೆ ನಿರೂಪಿಸುತ್ತಲೇ ಇದ್ದಾನೆ. ಸಂಘ ಕಡೆದ ಪುತ್ಥಳಿಯ ಪ್ರತಿಷ್ಠಾಪನೆಗೆ ದೇಶಭಕ್ತಗಢಣ ಕಾತರದಿಂದ ಕಾಯುತ್ತಿದೆ. ದೇಶದ ಜನತೆ ಮೊತ್ತ ಮೊದಲ ಬಾರಿಗೆ ನಿಜವಾದ ಸ್ವಾತಂತ್ರ್ಯದ ಮಧುರ ಸ್ಪರ್ಶವನ್ನು ಅನುಭವಿಸುತ್ತಿದ್ದಾರೆ. ಹಲವು ಶತಮಾನಗಳಿಂದ ದಾಸ್ಯಕ್ಕೊಳಗಾಗಿ ದಾಸ್ಯವನ್ನೇ ಮನೋವೃತ್ತಿಯಾಗಿ ಸ್ವೀಕರಿಸಿದ್ದ ಹಿಂದೂ ತನ್ನ ಅಸ್ಮಿತೆಯನ್ನು ಪುನಃ ಪ್ರತಿಷ್ಠಾಪಿಸುವತ್ತ ದಾಪುಗಾಲು ಹಾಕತೊಡಗಿದ್ದಾನೆ. ತಾಯಿ ಭಾರತಿಯಂತೂ ಶತಶತಮಾನಗಳಿಂದ ಕಾಯುತ್ತಿದ್ದ ಕ್ಷಣ ಕಡೆಗೂ ಒಲಿದು ಆಕೆಯ ಕಣ್ಣಲ್ಲಿ ಕಣ್ಣೀರ ಬದಲು ಆನಂದಭಾಷ್ಪ ಸುರಿಯತೊಡಗಿದೆ. ಇಂತಹ ಒಂದು ದೇಶವನ್ನುಳಿಸುವ ಸಂಗ್ರಾಮದಲ್ಲಿ ಭಾಗಿಯಾಗಿ ನನ್ನದಾದ ಅಳಿಲ ಸೇವೆಯನ್ನು ನೀಡಿದ ಬಗ್ಗೆ ನನಗೆ ಹೆಮ್ಮೆಯಿದೆ.
            ಹೌದು, ಅಂದು ಮೊತ್ತಮೊದಲ ಬಾರಿ ದಕ್ಷಿಣ ಭಾರತದಲ್ಲಿ ಕಮಲವರಳಿದಾಗ ನಮ್ಮ ಮನಸ್ಸು ಕಮಲದಂತೆಯೇ ಅರಳಿತ್ತು. ಆದರೆ ದುರದೃಷ್ಟವೋ ಅದೃಷ್ಟವೋ ಅದನ್ನು ಉಳಿಸಿಕೊಳ್ಳುವ ಭಾಗ್ಯ ನಮ್ಮ ಪಾಲಿಗಿರಲಿಲ್ಲ. ಮತ್ತೆ ಕಮಲವರಳದಿದ್ದದ್ದು ನಮ್ಮ ದುರದೃಷ್ಟವಾದರೂ, ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಯಾವತ್ತೂ ರಾಜಕೀಯದತ್ತ ಮುಖ ಮಾಡದಿದ್ದ ಯುವಜನತೆಯನ್ನು ಮೊದಲ ಬಾರಿಗೆ ದೇಶದ ಬಗ್ಗೆ ಚಿಂತಿಸುವಂತೆ ಮಾಡಿದ್ದು ಅದೃಷ್ಟವೇ ಎಂದು ನಾನು ಭಾವಿಸುತ್ತಾನೆ. ಹುಲಿ ಯಾವಾಗಲೂ ತನ್ನ ಬೇಟೆಯ ಮೇಲೆ ಎರಗಿ ಗುರಿ ಸಾಧಿಸುವ ಮುನ್ನ ಒಂದು ಹೆಜ್ಜೆ ಹಿಂದಿಡುತ್ತದೆ. ಅಂತಹ ವಿಷಮ ಪರಿಸ್ಥಿತಿಯಲ್ಲಿ ನಮಗೆ ಹೊಳೆದದ್ದು ನಮೋ ಸೈನ್ಯ ಕಟ್ಟುವ ಯೋಚನೆ. ಅದು ಖಡ್ಗದ ಅಲಗಿನ ಮೇಲೆ ನಡೆಯುವ ರೀತಿ ಎಂಬುದು ನಮಗೆ ತಿಳಿದಿತ್ತು. ಹಾಗಂತಾ ನಾವು ಅದನ್ನು ಕುರುಡಾಗಿ ಸ್ವೀಕರಿಸಿರಲಿಲ್ಲ. ನರೇಂದ್ರ ಮೋದಿ ಗುಜರಾತಿನಲ್ಲಿ ನಡೆಸಿದ ಅಭಿವೃದ್ಧಿಗಾಥೆಯ ಅಧ್ಯಯನ ಮಾಡಿ, ಈ ದೇಶವನ್ನು ಉಳಿಸಿ ನಮ್ಮ ಕನಸಿನಂತೆ ಮತ್ತೊಮ್ಮೆ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಲು ಸಮರ್ಥ ವ್ಯಕ್ತಿ ಈ ನರೇಂದ್ರ ಎಂಬುದಾಗಿ ಮನಗಂಡೇ ನಾವು ಈ ದುಸ್ಸಾಹಸಕ್ಕೆ ಕೈ ಹಾಕಿದ್ದೆವು. ಹಾಗಂತ ಆಗಿನ ಪರಿಸ್ಥಿತಿಯನ್ನು ನೀವು ಅವಲೋಕಿಸಬೇಕು. ನರೇಂದ್ರ ಮೋದಿ ಪ್ರಧಾನಿ ಅಭರ್ಥಿಯೆಂದು ಇನ್ನೂ ಘೋಷಣೆಯಾಗಿರಲಿಲ್ಲ(ಪಕ್ಷದಿಂದ ಮಾತ್ರವಲ್ಲ, ಸಂಘದಿಂದ ಕೂಡಾ). ಕನ್ನಡದ ಬರಹಗಾರರಲ್ಲಿ ಪ್ರತಾಪ್ ಸಿಂಹ ಒಬ್ಬ ಬಿಟ್ಟರೆ ಉಳಿದವರ್ಯಾರು ನರೇಂದ್ರ ಮೋದಿಯ ಬಗ್ಗೆ ಸತ್ಯಕಥನವನ್ನು ಬರೆದಿರಲಿಲ್ಲ(ಅಂಕಣಗಳು ಬಂದಿದ್ದವು, ಅದು ಬೇರೆ ಮಾತು). ಕೇವಲ ರಾಜಕೀಯ ವಿದ್ಯಮಾನಗಳನ್ನು ಪ್ರತಿನಿಮಿಷ ವೀಕ್ಷಿಸುವ ನಮ್ಮಂಥ ಬಲಪಂಥೀಯ ಮಂದಿಗಷ್ಟೇ ನರೇಂದ್ರ ಮೋದಿಯ ಬಗ್ಗೆ ತಿಳಿದಿತ್ತು. ದೇಶದ ಮಾಧ್ಯಮಗಳು, ತಥಾಕಥಿತ ಬುದ್ಧಿಜೀವಿಗಳು ಸದಾ ನರೇಂದ್ರ ಮೋದಿಯ ಮೇಲೆ ಮುಗಿಬೀಳುತ್ತಲೇ ಇದ್ದರು. ಹಾಗಾಗಿ ಈ ದೇಶದ ಪ್ರಜೆಗಳಿಗೂ ಅದೇ ಮಾನಸಿಕತೆ ಆವರಿಸಿತ್ತು. ಅಂತಹ ಸಂದರ್ಭದಲ್ಲಿ ನಾವು ನಮೋ ಬ್ರಿಗೇಡ್ ಆರಂಭಿಸಿದ್ದೆವು. ಅಂತರ್ಜಾಲದಲ್ಲಷ್ಟೇ ಪ್ರಚಾರ ಮಾಡುತ್ತಿದ್ದವರನ್ನು ಸಮರದ ನೈಜ ಅಂಕಣಕ್ಕಿಳಿಸುವುದು ನಮ್ಮ ಗುರಿಯಾಗಿತ್ತು. ಮೊದಲು ಬೆಂಗಳೂರಿನಲ್ಲಷ್ಟೇ ಆರಂಭಿಸುವುದು ಎಂದು ಯೋಜಿಸಿದ್ದ ನಮಗೆ ಮಂಗಳೂರಿನಲ್ಲಿ ನಮ್ಮದೇ ಉದ್ದೇಶದೊಂದಿಗೆ ಕಾರ್ಯಕ್ಕಿಳಿದಿದ್ದ ನರೇಶ ಶೆಣೈಯವರ ಸಂಪರ್ಕ ದೊರೆತ ಮೇಲೆ ಎಲ್ಲರೂ ಒಂದಾಗಿ ಇಡೀ ಕರ್ನಾಟಕದಲ್ಲಿ ರಣಕಹಳೆ ಮೊಳಗಿಸಲು ಸಿದ್ಧರಾದೆವು. ಜಾಗೋ ಭಾರತ್ ಖ್ಯಾತಿಯ ಚಕ್ರವರ್ತಿ ಜನತೆಯನ್ನು ನಿದ್ದೆಯಿಂದೆಬ್ಬಿಸಲು ನಮ್ಮ ಕೋರಿಕೆಯನ್ನು ಮನ್ನಿಸಿ ನಮ್ಮ ಜೊತೆಯಾದರು. ಗಮನಿಸಿ ಆಗ ಕರ್ನಾಟಕದಲ್ಲಿ ಭಾಜಪಾ ಆರು ಸ್ಥಾನ ಗಳಿಸುವುದು ಸಂಶಯವಿತ್ತು.
                  ನಾವು ನಮೋ ಬ್ರಿಗೇಡ್ ಉದ್ಘಾಟಿಸುವ ಸಮಯದಲ್ಲಿ ನಮ್ಮ ಬೆಂಗಾವಲಿಗೆ ನಿಂತ ಹಿರಿಯರಿಗೆ, ಹಿತೈಷಿಗಳಿಗೆ, ಪತ್ರಕರ್ತರಿಗೆ ಹಾಗೂ ಜನ ಸಾಮಾನ್ಯರಿಗೆ ಕೃತಜ್ಞತೆ ಹೇಳಲೇಬೇಕು. ಇಂದಿನ ವಿಜಯ ಅವರ ಆಶೀರ್ವಾದದ ಫಲ, ನಮೋ ಮಂತ್ರದ ಬಲ! ಕೆಲವೇ ತಿಂಗಳುಗಳಲ್ಲಿ ನಮೋ ಬ್ರಿಗೇಡ್ ಕರ್ನಾಟಕದಾದ್ಯಂತವಲ್ಲದೆ, ಭಾರತದ ಉಳಿದ ರಾಜ್ಯಗಳಿಗೂ, ವಿದೇಶಗಳಿಗೂ ಪಸರಿಸಿತು. ಜನರು ಸ್ವಯಂಸ್ಪೂರ್ತಿಯಿಂದ ನಮ್ಮ ಜೊತೆಯಾದರು. ನಾವು ಯಾರಲ್ಲೂ ಹಣ ಬೇಡಲಿಲ್ಲ, ಮತ ಬೇಡಿದೆವು. ಕಾರ್ಯಕರ್ತರು ತಮ್ಮ ಜೇಬಿನಿಂದಲೇ ಹಣತೆತ್ತರು. ನಮ್ಮ ತಂಡದಲ್ಲಿದ್ದವರೆಲ್ಲಾ ಸಂಘಪರಿವಾರದಿಂದಲೇ ಬಂದವರು ಅಂತ ನೀವು ತಿಳಿದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ನಮ್ಮ ಜೊತೆಯಾದವರಲ್ಲಿ ಸಂಘದ ಬಗ್ಗೆ ಏನೂ ತಿಳಿಯದವರೂ ಇದ್ದರು. ಇಷ್ಟರವರೆಗೆ ಭಾಜಪಾಕ್ಕೆ ಮತ ಹಾಕದವರೂ ಇದ್ದರು. ಒಂದು ಕಾಲದಲ್ಲಿ ಕಾಂಗ್ರೆಸ್ಸಿಗೆ ಕೆಲಸ ಮಾಡಿ ತಾಯ್ನಾಡಿನ ಋಣ ತೀರಿಸಲು ನಮೋ ಬೆಂಬಲಿಸಿದವರೂ ಇದ್ದರು. ಮೊದಲ ಬಾರಿಗೆ ಮತಹಾಕುವವರೂ, ದಾಖಲೆಯ ಬಾರಿ ಮತ ಹಾಕಿದವರೂ ಇದ್ದರು. ಭಾಜಪಾವನ್ನು ದ್ವೇಷಿಸುತ್ತಾ ಕೇವಲ ಮೋದಿಗಾಗಿ ನಮೋ ಎಂದವರೂ ನಮ್ಮ ಜೊತೆಗಿದ್ದರು!
                ಜನ ಸಂಪರ್ಕಕ್ಕಾಗಿ ನಮೋಬ್ರಿಗೇಡ್ ಕರಪತ್ರಗಳ ಜೊತೆ ಜೊತೆಗೆ ಮನ ಬಂದಾಗ ಮೋದಿ ಮಾತು ಕೇಳಬಹುದಾದ 'ನಮೋ ಸುನೋ' , 'ನಮೋ ವಾಣಿ' ಪತ್ರಿಕೆ, ರೇಡಿಯೋ 20-20, 'ನಮೋ ಭಾರತ್' ಗೀತ ಕಥನ, 'ನಮೋ ಸಂಚಾರ್', 'ನಮ್ಮ ಮನೆ ನಮೋ ಮನೆ' ಅಭಿಯಾನ, ನಮೋ ಕಾರ್ಡು ಅಬಿಯಾನ, ರಾಜ್ಯದಾದ್ಯಂತ ಸಂಚರಿಸಿದ 'ನಮೋರಥ', ಸಿಎಜಿ ಜೊತೆ ಸೇರಿ ಮಾಡಿದ 'ಚಾಯ್ ಪೆ ಚರ್ಚಾ ವಿಥ್ ನಮೋ' ಅಭಿಯಾನ, ಹೀಗೆ ಹತ್ತು ಹಲವು ವಿಧಾನಗಳ ಮೂಲಕ ನಮೋ ಬ್ರಿಗೇಡ್ ಜನರ ಬಳಿ ತಲುಪಿತು. ನಮೋ ಬ್ರಿಗೇಡಿಗೆ ಪ್ರಶಂಸೆಯ ಜೊತೆಗೆ ಆರೋಪಗಳೂ ಬಂದವು. ಆ ಆರೋಪಗಳ ಶಿಲೆಗಳನ್ನೇ ಒಟ್ಟಾಗಿಸಿ ನಾವು ನಮೋ ಬ್ರಿಗೇಡಿನ ಬೃಹತ್ ಭವನ ಕಟ್ಟಿದೆವು. ನಮೋ ಬ್ರಿಗೇಡಿಯರುಗಳಲ್ಲಿ ಶಿಸ್ತಿಲ್ಲ ಎನ್ನುವವರು ಒಂದು ಅಂಶ ಗಮನಿಸಬೇಕು, ನಮೋ ಬ್ರಿಗೇಡಿನಲ್ಲಿದ್ದವರೆಲ್ಲಾ ಸಂಘದ ಸ್ವಯಂಸೇವಕರಾಗಿರಲಿಲ್ಲ! ಸಂಘದ ಶಿಸ್ತಿಲ್ಲದೆ ಇದ್ದಿರಬಹುದು ಆದರೆ ನಾವೆಂದಿಗೂ ಉಳಿದ ಪಕ್ಷಗಳ ಕಾರ್ಯಕರ್ತರಂತೆ ಗೂಂಡಾಗಿರಿ ಮಾಡಲಿಲ್ಲ. ನಮ್ಮ ಬ್ಯಾನರುಗಳನ್ನು ಅಲ್ಲಲ್ಲಿ ಹರಿದು ಹಾಕಿದರೂ ಸುಮ್ಮನಿದ್ದೆವು. ನಮೋ ಅಭಿಮಾನಿಗಳು ಆಕ್ರಮಣಕಾರಿ ಮನೋಭಾವದವರು ಎನ್ನುವುದನ್ನು ನಾನು ವಿರೋಧಿಸುವುದಿಲ್ಲ. ಯಾಕೆಂದರೆ ನಾವು ನಮೋ ಬಗ್ಗೆ ಸುಳ್ಳು ಸುದ್ದಿಹಬ್ಬಿಸುವುದನ್ನು, ಇಲ್ಲಸಲ್ಲದ ಆರೋಪ ಮಾಡುವುದನ್ನು ಯಾವಾಗಲೂ ವಿರೋಧಿಸುತ್ತೇವೆ. ನಾವು ಸತ್ಯದ ಪರವಾಗಿರುವುದರಿಂದಲೇ ಆಕ್ರಮಣಕಾರಿ ಮನೋಭಾವ ತನ್ನಿಂದ ತಾನೇ ಬರುತ್ತದೆ.
              ಪ್ರಚಾರದ ಸಂದರ್ಭದಲ್ಲಿ ಕಂಡುಬಂದ ಕೆಲವು ಅಂಶಗಳನ್ನು ಪ್ರಸ್ಥಾಪಿಸಲೇಬೇಕು. ಒಂದು ಮುಖ್ಯ ಅಂಶ ಭಾರತೀಯರಲ್ಲಿ ಕಂಡುಬರುವುದೆಂದರೆ ಇತಿಹಾಸ ಜ್ಞಾನದ ಕೊರತೆ, ವಿವೇಚನೆಯ ಕೊರತೆ ಹಾಗೂ ಸಮಕಾಲೀನ ವಿಷಯಗಳ ಒಳಹೊಕ್ಕು ಚಿಂತಿಸಿ ನಿರ್ಧಾರಕ್ಕೆ ಬರುವ ಬುದ್ಧಿಯ ಕೊರತೆ. ಇತಿಹಾಸ ಜ್ಞಾನದ ಕೊರತೆಗೆ ತಿರುಚಿದ ಇತಿಹಾಸವನ್ನು ನಮ್ಮ ಶಿಕ್ಷಣದಲ್ಲಿ ಅಳವಡಿಸಿರುವುದು ಕಾರಣವಾದರೆ, ಮಾಧ್ಯಮಗಳು ಹೇಳುವ ಸಾವಿರ ಸುಳ್ಳನ್ನೇ ಸತ್ಯವೆಂದು ಪರಿಗಣಿಸಿ ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿರುವುದು ಸಮಕಾಲೀನ ವಿಷಯಗಳ ಬಗ್ಗೆ ಅವರ ಜ್ಞಾನವನ್ನೇ ಬರಿದುಗೊಳಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ನಮೋ ಬ್ರಿಗೇಡ್ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿ ಜನರನ್ನು ಎಚ್ಚರಗೊಳಿಸಿತು. ಪ್ರಚಾರದ ಸಂದರ್ಭದಲ್ಲಿ ತಾವಾಗಿಯೇ ಮುಂದೆ ಬಂದು ನಮ್ಮನ್ನು ಹುರಿದುಂಬಿಸಿದವರೂ ಇದ್ದರು, ನಾವಾಗಿ ಮಾತನಾಡಿಸಿದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದವರೂ ಇದ್ದರು, ದೇಶ ಮುಳುಗುತ್ತಿರುವ ವೇಳೆಯಲ್ಲೂ ರಾಜಕೀಯ-ಚುನಾವಣೆಯಿಂದ ದೂರ ಸರಿದವರೂ ಇದ್ದರು, ನಿಮಗೆಲ್ಲ ತಲೆ ಸರಿಯಿಲ್ಲ; ಒಂದು ದಿವಸಕ್ಕೆ ಎಷ್ಟು ಹಣ ಕೊಡುತ್ತಾರೆ?; ನೀವೆಲ್ಲಾ ಚಿಕ್ಕವರು, ರಾಜಕೀಯದ ಬಗ್ಗೆ ಅನುಭವವಿಲ್ಲ; ಹೀಗೆಲ್ಲಾ ಹೇಳಿದವರೂ ಇದ್ದರು, ನಾನು ಇಂತಿಷ್ಟು ಮತ ಹಾಕಿಸಿಕೊಡುತ್ತೇನೆ;ನನಗಿಷ್ಟು ಕೊಡಬೇಕು ಎಂದು ಡೀಲು ಮಾಡಿಕೊಳ್ಳುವವರೂ ಇದ್ದರು! ನಮೋ ಬ್ರಿಗೇಡ್ ತನ್ನ ತತ್ವಕ್ಕೆ ಬದ್ಧವಾಗಿ ಮುನ್ನಡೆಯಿತು;ಜನ ಬೆಂಬಲಿಸಿದರು.
                  ಫಲಿತಾಂಶ ನಿಮ್ಮ ಮುಂದಿದೆ. ಆರು ಸ್ಥಾನಗಳನ್ನು ಗೆಲ್ಲುವುದು ಸಂಶಯವಿದ್ದ ಕರ್ನಾಟಕದಲ್ಲಿ ಭಾಜಪಾ ಹದಿನೇಳು ಸ್ಥಾನ ಗೆದ್ದಿದೆ. ಮೂರು ಸ್ಥಾನಗಳಲ್ಲಿ ಹತ್ತುಸಾವಿರಕ್ಕಿಂತಲೂ ಕಡಿಮೆ ಅಂತರದಿಂದ ಸೋತಿದೆ. ಈ ಯಶಸ್ಸಿಗೆ ನಾವೇ ಕಾರಣ ಅಂತ ನಾವು ಹೇಳೋದಿಲ್ಲ. ನಮ್ಮ ಜೊತೆಯಾಗಿ ಕಾರ್ಯಾಚರಿಸಿದ ನಮೋ ಹೆಸರಿನ ಹತ್ತು ಹಲವು ಸಂಘಟನೆಗಳು, ಪ್ರಥಮ ಬಾರಿಗೆ ಬಹಿರಂಗ ಪ್ರಚಾರಕ್ಕಿಳಿದ ಸಂಘದ ಸ್ವಯಂಸೇವಕರು, ಭಜರಂಗದಳ, ವಿಹಿಂಪ ಸೇರಿದಂತೆ ಸಂಘದ ಇತರ ಅಂಗಸಂಸ್ಥೆಗಳು, ಭಾಜಪಾದ ಎಲ್ಲ ಮಿತ್ರವೃಂದಗಳು, ಜನರಲ್ಲಿ ಮತದಾನದ ಜಾಗೃತಿ ಮೂಡಿಸಿ ಚುನಾವಣಾ ಗುರುತು ಚೀಟಿಗೆ ನೋಂದಣಿ ಮಾಡಿಸಿದ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಹಾಗೂ ಇತರ ಸಂಘಸಂಸ್ಥೆಗಳೂ ಈ ಯಶಸ್ಸಿನ ಪಾಲುದಾರರೂ. ಆದರೆ ಇದರಲ್ಲಿ ನಮೋ ಬ್ರಿಗೇಡ್ ಪಾಲು ಹೆಚ್ಚು ಎಂಬುದನ್ನು ಯಾರೂ ಅಲ್ಲಗೆಳೆಯಲಾರರು. ಎಲ್ಲಕ್ಕಿಂತ ಹೆಚ್ಚಾಗಿ "ನಮೋ" ಎಂಬ ಮಂತ್ರವೇ ಈ ಯಶಸ್ಸಿನ ಮೂಲ ಎಂಬುದನ್ನು ಯಾರೂ ಮರೆಯಲಾರರು, ಮರೆಯಬಾರದು.
ನಮ್ಮ ಕನಸು ಸಾಕಾರಗೊಳ್ಳಲು ನಮ್ಮ ಜೊತೆಯಾದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಬಂಧುಗಳಿಗೂ, ಹಿತೈಷಿಗಳಿಗೂ ಕೃತಜ್ಞತೆಗಳು. ನಮ್ಮ ಕನಸು ನನಸಾಗಿದೆ. ಆದರೆ ಮಾಡಬೇಕಾದ ಕೆಲಸ ಬಾಕಿ ಇದೆ. ಭಾರತವನ್ನು ಜಗದ್ಗುರು ಪಟ್ಟದಲ್ಲಿ ಪುನರ್ ಪ್ರತಿಷ್ಠಾಪಿಸಲು ನಮೋಗೆ ನಮ್ಮ ಸಹಕಾರದ ಅವಶ್ಯಕತೆ ಇದೆ. ಅದಕ್ಕಾಗಿ ಮತ್ತೊಮ್ಮೆ ಮಗದೊಮ್ಮೆ ನಮೋ ಎನ್ನುತ್ತಾ ಇರೋಣವೆ?

ಶನಿವಾರ, ಮೇ 17, 2014

ನಮೋ ಎನ್ನುತ ಮತದಾರ

ಏನೂ ಮಾಡಲು ತೋಚುತ್ತಿಲ್ಲ, ಪದಗಳೂ ಹೊರಡುತ್ತಿಲ್ಲ. ಅದಕ್ಕಾಗಿಯೇ ಈ ಕವನವೂ ಬಡವಾಗಿದೆ. ಏನು ಮಾಡಲಿ ಮೋದಿ ಮಾಡಿದ ಮೋಡಿಯ ನೋಡಿ ಮಾತೇ ಹೊರಡುತ್ತಿಲ್ಲ. ಆದರೂ ಹಾಕುತ್ತಿದ್ದೇನೆ. ಇದು "ನಮೋ ಭಾರತ" ಎಂದು ಜಗವೇ ಕೊಂಡಾಡಲು ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ(ನಮೋ ಬ್ರಿಗೇಡ್, ರಾಸ್ವಸಂ, ವಿಹಿಂಪ, ಭಜರಂಗದಳ, ನಮೋ ಗ್ರೂಪ್, ನಮೋ ಬ್ರದರ್ಸ್,....ಅಲ್ಲದೇ ಸ್ವತಂತ್ರವಾಗಿಯೂ ಕೆಲಸ ಮಾಡಿದ) ಅರ್ಪಣೆ.
-------------------------------------------------------------------------------------------------------------------------
ಮತ್ತೆ ಅರಳಿಹುದು ಎಮ್ಮ ಕಮಲ ಪುಷ್ಪ
ತಾಯಿ ಭಾರತಿಯ ಕಂಗಳಲಿ ಆನಂದ ಭಾಷ್ಪ

ಕರವ ಮುಗಿದೆವು ಭಾರತೀಯರೇ
ನಮೋ ಎನ್ನಿರಿ ತಾಯ ಉಳಿಸಿರಿ
ನಮ್ಮ ಜಯವೇ ನಿಮ್ಮ ಜಯವು
ಭವ್ಯ ಭಾರತದ ಭವಿಷ್ಯದ ವಿಜಯವು

ಪ್ರೀತಿ ಮಾತಲಿ ಮನವ ಗೆದ್ದೆವು
ಸೋತು ಬಂದರು ನಮ್ಮ ಜೊತೆಯಲಿ
ಎಸೆದ ಶಿಲೆಯಲಿ ಕಲೆಯು ಅರಳಿತು
ನಮೋ ಮಂತ್ರವು ಮೋಡಿ ಮಾಡಿತು

ನಮೋ ಎನುತಲಿ ಹೃದಯ ಬೆಸೆಯಲು
ಬಿಂದು ಬಿಂದುವು ಸಿಂಧುವಾಯಿತು
ಮನವಿ ಸ್ವೀಕಾರ ಕನಸು ಸಾಕಾರ
ನಮೋ ಎನ್ನುತ ಮತದಾರ

ನಿರೀಕ್ಷೆ ಮೀರಿದ ವಿಜಯ ದೊರಕಲು
ಮಾತು ಹೊರಡದು ಮೌನ ಉಳಿಯದು
ರೋಮಾಂಚನ ಹೃದಯ ತುಂಬಿದೆ
ಏನ ಮಾಡಲಿ ಏನೂ ತೋಚದು

ಬುಧವಾರ, ಮೇ 7, 2014

ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ಮರಳಿ ಪಡೆದೀತೇ?

ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ಮರಳಿ ಪಡೆದೀತೇ?
                         "ಅಮೇರಿಕಾದಲ್ಲಿ ನಾವು ಆಶ್ರಯ ಪಡೆದಿದ್ದರೆ ನನ್ನ ಸಂಗಾತಿಗಳೂ ಅಮೇರಿಕರನ್ನರಾಗಿ ನಮ್ಮಲ್ಲೂ ಟಿಬೆಟ್ ತನ ಮಾಯವಾಗುತ್ತಿತ್ತು. ಭಾರತದ ಸಹಿಷ್ಣುತೆಯೇ ಜಗತ್ತಿನಲ್ಲಿ ನಾವು ನಮ್ಮತನವನ್ನು ಉಳಿಸಿಕೊಂಡಿದ್ದೇವೆ"-ದಲಾಯಿ ಲಾಮಹಿಂದೂಗಳ ಸಹಿಷ್ಣುತೆಯ ಮನೋಭಾವನೆಯನ್ನು ವಿಶ್ವವೇ ಕೊಂಡಾಡುತ್ತದೆ. ಆದರೆ ಸಹಿಷ್ಣುಗಳಾಗುವ ಭರದಲ್ಲಿ ನಮ್ಮ ಭದ್ರತೆಗೆ ನಾವೇ ಕೊಳ್ಳಿ ಇಟ್ಟುಕೊಂಡಿರುವುದು ಅಷ್ಟೇ ಸತ್ಯ! ಬಂದವರಿಗೆಲ್ಲರಿಗೂ ಆಶ್ರಯ ಕೊಟ್ಟೆವು. ಕೆಲವರು ನಮ್ಮೊಂದಿಗೆ ಕಲೆತರು, ಕಲಿತರು. ಇನ್ನು ಕೆಲವರು ನಮ್ಮ ಬುಡಕ್ಕೇ ಕೊಳ್ಳಿ ಇಟ್ಟರು, ಇಡುತ್ತಲೇ ಇದ್ದಾರೆ! ಆಶ್ರಯ ಬೇಡಿ ಬಂದ ದಲಾಯಿ ಲಾಮರಿಗೇನೋ ಆಶ್ರಯ ಕೊಟ್ಟೆವು. ಆದರೆ ಭಾರತದ ರತ್ನ ಖಚಿತ ಕಿರೀಟವನ್ನೇ(ಟಿಬೆಟ್) ಕಳೆದುಕೊಂಡು ಬಿಟ್ಟೆವು!
                  ಸಹಸ್ರಾರು ವರ್ಷಗಳ ಕಾಲ ಭಾರತದ ಭಾಗವಾಗಿದ್ದು ಕೈಲಾಸ ಮಾನಸ ಸರೋವರಗಳನ್ನೊಳಗೊಂಡ ಟಿಬೆಟ್ ಮಂಗೋಲಿಯಾ, ಚೀನಾದ ರಾಜರುಗಳು ಹಾಗೂ ಬ್ರಿಟಿಷರ ಆಕ್ರಮಣಗಳಿಗೆ ತುತ್ತಾಗಿದ್ದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿತ್ತು. ಆದರೆ 1950ರಲ್ಲಿ ಟಿಬೆಟನ್ನು ಚೀನಾ ಆಕ್ರಮಣ ಮಾಡಿದ ನಂತರ ಟಿಬೆಟಿಯನ್ನರು ತಮ್ಮ ಸ್ವಾತಂತ್ರ್ಯ ಸಾರ್ವಭೌಮತೆಗಳನ್ನು ಕಳೆದುಕೊಂಡುಬಿಟ್ಟರು. ಎರಡನೇ ವಿಶ್ವಯುದ್ಧದ ಕಾಲದಲ್ಲಿ ತನಗೆ ಸಮುದ್ರ ತೀರಗಳಿಲ್ಲದ ಹಿನ್ನೆಲೆಯಲ್ಲಿ ಜಪಾನ್ ಒಡ್ಡಿದ ಸವಾಲಿಗೆ ಮುಖಾಮುಖಿಯಾಗಿ ನಿಲ್ಲುವ ಸಂದರ್ಭದಲ್ಲಿ ಭಾರತದಿಂದ ಅವಶ್ಯಕ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಟಿಬೆಟ್ ಮಾರ್ಗದ ಅನುಮತಿ ಕೇಳಿದಾಗ ಚೀನಾದ ವಿಸ್ತರಣಾವಾದಿ ನೀತಿ ಹಾಗೂ ಗೋಮುಖವ್ಯಾಘ್ರತನವನ್ನು ಅರಿತಿದ್ದ ಟಿಬೆಟ್ ಅನುಮತಿ ನಿರಾಕರಿಸಿತ್ತು.
               ಕಳೆದ ಶತಮಾನದ ಆರಂಭದಲ್ಲಿ ಸುಮಾರು 65ಲಕ್ಷದಷ್ಟು ಜನಸಂಖ್ಯೆ ಟಿಬೆಟಿನಲ್ಲಿತ್ತು. ಆದರೆ ಟಿಬೆಟನ್ನು ಆಕ್ರಮಿಸಿದ ಚೀನಾ 15ಲಕ್ಷದಷ್ಟು ಜನರ ಮಾರಣಹೋಮ ನಡೆಸಿತು. ಚೀನಾದ ಪಾಶವೀಯತೆ ಯಾವ ಪರಿ ಇತ್ತೆಂದರೆ ಲಿಥಾಂಗ್ ವಿಹಾರದ ಮೇಲೆ ಬಾಂಬು ಹಾಕಿದಾಗ ವಿಹಾರದೊಳಗಿದ್ದ 6500 ಜನರ ಪೈಕಿ 4500ಕ್ಕೂ ಹೆಚ್ಚು ಜನರು ಹೆಣವಾಗಿ ಬಿದ್ದರು. 1959ರಲ್ಲಿ ದಲಾಯಿ ಲಾಮ ಸ್ವಯಂ ಗಡಿಪಾರಾಗಿ ಭಾರತದ ಆಶ್ರಯ ಪಡೆದರು. ಆದರೆ ಟಿಬೆಟಿಯನ್ನರ ಪರಿಸ್ಥಿತಿ ಮತ್ತಷ್ಟು ಶೋಚನೀಯವಾಯಿತು. ಟಿಬೆಟನ್ನರು ದಲಾಯಿ ಲಾಮ ಭಾವಚಿತ್ರ ಇಟ್ಟುಕೊಳ್ಳುವುದು, ಬೌದ್ಧವಿಹಾರಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಇವೆಲ್ಲಾ ಚೀನಾ ಆಕ್ರಮಿತ ಟಿಬೆಟಿನಲ್ಲಿ ಅಪರಾಧಗಳಾಗಿವೆ. ಟಿಬೆಟಿನಲ್ಲೇ ಇರುವ ಮಾನಸ ಸರೋವರ ಕೈಲಾಸಗ ಪರ್ವತಗಳಿಗೆ ಹೋಗಬೇಕಾದರೂ ಟಿಬೆಟಿಯನ್ನರು ಚೀನಾ ಸರಕಾರದ ಅನುಮತಿ ಪಡೆಯಬೇಕು. TAR ಮಾನ್ಯ ಮಾಡಿರುವ ಧಾರ್ಮಿಕ ಉತ್ಸವಗಳನ್ನು ಮಾತ್ರ ಟಿಬೆಟನ್ನರು ಆಚರಿಸಬೇಕು. ಬೌದ್ಧ ಸನ್ಯಾಸಿಗಳು ಇತರ ವಿಹಾರಗಳಿಗೆ ಭೇಟಿ ನೀಡುವಂತಿಲ್ಲ. ಚೀನಾ ಸರಕಾರ ನಿಗದಿಪಡಿಸಿರುವಷ್ಟೇ ಸಂಖ್ಯೆಯ ಸನ್ಯಾಸಿಗಳು ವಿಹಾರಗಳಲ್ಲಿರಬೇಕು. ಅಲ್ಲದೆ ಅವುಗಳಲ್ಲಿ ಕಡ್ಡಾಯವಾಗಿ 'ದೇಶಭಕ್ತಿ ಶಿಕ್ಷಣದ' ತರಗತಿ, ಚೀನಾದ ಆಡಳಿತ ಸಾಧನೆ ಕಂಠಪಾಠ ಮಾಡುವ ತರಗತಿಗಳಿಗೆ ಹಾಜರಾಗುವುದು, "ವಿಶಾಲ ತಾಯ್ನಾಡಿಗೆ" ಗೌರವ ಅರ್ಪಿಸುವ ಪ್ರಮಾಣ ಮಾಡುವುದು ಕಡ್ಡಾಯ. ಪ್ರವಾಸಿಗರು ಸ್ಥಳೀಯ ಟಿಬೆಟನ್ನರೊಂದಿಗೆ ಮಾತಾಡುವುದಾಗಲೀ, ಟಿಬೆಟ್ ಕಾಲೊನಿಗಳಿಗೆ ಹೋಗುವುದಾಗಲೀ ನಿಷಿದ್ದ! ಚೀನಾ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಅವರ ಕುಟುಂಬದವರೇ ಸಾರ್ವಜನಿಕವಾಗಿ ಕಲ್ಲೆಸೆಯುವಂತಹ ಶಿಕ್ಷೆ ನೀಡಲಾಗುತ್ತದೆ. ಅಲ್ಲದೆ ಅಣ್ವಸ್ತ್ರ ಪರೀಕ್ಷೆಗೂ ಟಿಬೆಟ್ ನೆಲವನ್ನು ಬಳಸಲಾಗುತ್ತಿದೆ.
ಭಾರತದ ಐತಿಹಾಸಿಕ ಮಹಾತಪ್ಪುಗಳು:
ತನ್ನದೇ ಭಾಗವನ್ನು ಕಳೆದುಕೊಂಡ ಭಾರತ ಮತ್ತೆ ಅದನ್ನು ಪಡೆಯುವ ಅವಕಾಶವಿದ್ದಾಗ್ಯೂ ಕಳೆದುಕೊಳ್ಳುತ್ತಾ ಸಾಗಿತು.
1. 1940ರಲ್ಲಿ ಯಾತುಂಗ್ ಮತ್ತು ಸಿಯಾಂತ್ಸೆಗಳಲ್ಲಿರುವ ಸೇನಾನೆಲೆಗಳನ್ನು ರದ್ದುಪಡಿಸಿ ಎಂದು ಕೇಳಿಕೊಂಡಾಗ ಬ್ರಿಟಿಷ್ ಭಾರತ ಸಮ್ಮತಿಸಿತು. ಅಲ್ಲದೆ ಟಿಬೆಟ್ ನೆಲದಲ್ಲಿದ್ದ ತನ್ನ ಅಂಚೆ-ತಂತಿ, ದೂರವಾಣಿ ವ್ಯವಸ್ಥೆ, ವಿಶ್ರಾಂತಿ ಗೃಹಗಳನ್ನು, ಕಛೇರಿಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು.
2. ಸ್ವಾತಂತ್ರ್ಯ ಬಂದಾಗ ಟಿಬೆಟ್ ಮೇಲಿನ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದು ಭಾರತ ಮಾಡಿದ ದೊಡ್ಡ ತಪ್ಪು!
3. 1950ರಲ್ಲಿ ಚೀನಾ ಆಕ್ರಮಣದ ಸಮಯದಲ್ಲಿ ಟಿಬೆಟ್ ಭಾರತದ ಸಹಾಯ ಯಾಚಿಸಿದಾಗ "ಟಿಬೆಟಿಗೆ ಸೇನಾ ನೆರವು ನೀಡಲು ಸಾಧ್ಯವಿಲ್ಲ. ಚೀನಾ ಆಕ್ರಮಣ ಮಾಡಿದಾಗ ಸಶಸ್ತ್ರ ಪ್ರತಿರೋಧ ಒಡ್ಡುವುದು ತರವಲ್ಲ" ಎಂಬ ಹುಂಬ ಸಲಹೆಯನ್ನು ನೆಹರೂ ಸರಕಾರ ನೀಡಿತು.
4. 1951ರಲ್ಲಿ ಚೀನಾ-ಟಿಬೆಟ್ ಒಪ್ಪಂದ ನಡೆದಾಗ ಮಧ್ಯಪ್ರವೇಶ ಮಾಡದೆ ಇದ್ದುದು ಇನ್ನೊಂದು ದೊಡ್ಡ ತಪ್ಪು.
5. 1954ರಲ್ಲಿ ಟಿಬೆಟ್ ಜೊತೆಗಿನ ವ್ಯಾಪಾರ ಸಂಬಂಧವನ್ನು ಏಕಪಕ್ಷೀಯವಾಗಿ ಕಡಿದುಕೊಂಡು ನಂಬಿದವರಿಗೆ ದ್ರೋಹ ಬಗೆದದ್ದು ನೆಹರೂ ಸರಕಾರದ ಮಗದೊಂದು ತಪ್ಪು.
6. ಕೊರಿಯಾ ಚೀನಾ ಬಿಕ್ಕಟ್ಟಿನಲ್ಲಿ ಚೀನಾದ ಪರವಾಗಿ ನಿಂತಿತು ಭಾರತ.
7. 1954ರಲ್ಲಿ ಸಿನೋ ಇಂಡಿಯನ್ ಒಪ್ಪಂದದಲ್ಲಿ ಟಿಬೆಟ್ ವಿಷಯದಲ್ಲಿ ಮೌನ ತಳೆಯಿತು ಭಾರತ.
8. 1959ರಲ್ಲಿ ಚೀನಾದ ದೌರ್ಜನ್ಯ ಮಿತಿಮೀರಿದಾಗ ಸೈನ್ಯ ಸಹಾಯ ಬೇಡಿದ ಟಿಬೆಟಿಗೆ ಸಹಾಯ ನಿರಾಕರಿಸಿದ್ದು ಬಹು ದೊಡ್ಡ ತಪ್ಪು!
9. 1959ರಲ್ಲಿ ಹಾಗೂ 1961ರಲ್ಲಿ ಟಿಬೆಟಿಯನ್ನರ ಹಕ್ಕುಗಳನ್ನು ಚೀನಾ ಮಾನ್ಯ ಮಾಡಬೇಕೆಂದೂ ಅವರ ಧರ್ಮ-ಸಂಸ್ಕೃತಿಗಳಿಗೆ ಯಾವ ಧಕ್ಕೆಯನ್ನುಂಟು ಮಾಡಬಾರದೆಂದೂ ವಿಶ್ವಸಂಸ್ಥೆ ಗೊತ್ತುವಳಿಯನ್ನು ಸ್ವೀಕರಿಸಿತು. ಆದರೆ ಇದನ್ನು ಬೆಂಬಲಿಸಬೇಕಿದ್ದ ಭಾರತ ತಟಸ್ಥ ನಿಲುವು ತಾಳಿತ್ತು. ಕಾರಣ ಆಗ ನಮ್ಮ ಪ್ರಧಾನಿಯಾಗಿದ್ದದ್ದು ಕಮ್ಯೂನಿಷ್ಟ್ ಮಾನಸಿಕತೆಯ ನೆಹರೂ! (1965ರಲ್ಲಿ ಮತ್ತೆ ಸಭೆ ನಡೆದಾಗ ಭಾರತ ಗೊತ್ತುವಳಿಯನ್ನು ಬೆಂಬಲಿಸಿತು. ಯಾಕೆಂದರೆ ಆಗ ಪ್ರಧಾನಿಯಾಗಿದ್ದವರು ಅಪ್ಪಟ ಭಾರತೀಯ ಲಾಲ್ ಬಹಾದೂರ್ ಶಾಸ್ತ್ರಿ!)
              ಬಂಡುಂಗ್ ಸಮ್ಮೇಳನದಲ್ಲಿ ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳು ಚೀನಾಕ್ಕೆ ಮಾನ್ಯತೆ ನೀಡಬೇಕೆಂದು ಆಗ್ರಹಿಸಿತು ಭಾರತ. ವಿಶ್ವಸಂಸ್ಥೆಯಲ್ಲಿ ಚೀನಾಕ್ಕೆ ಸದಸ್ಯತ್ವ ಸಿಗಲೂ ಭಾರತದ ಒತ್ತಾಸೆಯೇ ಕಾರಣ. ಹೀಗೆ ಅಪಾತ್ರ ದೇಶಕ್ಕೆ ಔದಾರ್ಯ ತೋರಿದ ನೆಹರೂ ಈ ದೇಶ 1962ರಲ್ಲಿ ಚೀನಾ ಎದುರು ಸೋಲಲು ಅಡಿಗಲ್ಲು ಹಾಕಿಟ್ಟರು. ಟಿಬೆಟನ್ನು ಆಕ್ರಮಿಸಿ ಮಾರಣಹೋಮ ನಡೆಸಿದ ಚೀನಾ ದಲಾಯಿ ಲಾಮ ಭಾರತಕ್ಕೆ ಬಂದ ಮೂರೇ ವರ್ಷಗಳಲ್ಲಿ ಭಾರತದ ಮೇಲೂ ಆಕ್ರಮಣ ನಡೆಸಿತು. ಹಿಂದಿ-ಚೀನೀ ಭಾಯಿ ಭಾಯಿ ಎಂಬ ಮರೀಚಿಕೆಯ ಬೆನ್ನು ಹತ್ತಿದ್ದ ಮೂರ್ಖ ಸರಕಾರದ ಕಾರಣದಿಂದಾಗಿ ನಮ್ಮ ಅದೆಷ್ಟೋ ವೀರ ಸೈನಿಕರು ಶಸ್ತ್ರಾಸ್ತ್ರ ಹೊಂದಿದ್ದರೂ ಪ್ರಯೋಗಿಸುವ ಅನುಮತಿ ಇಲ್ಲದೆ ಹತರಾದರು. ಒಬ್ಬ ವೀರನಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೇನಿದೆ? ಚೀನಾ ಅಕ್ಸಾಯ್ ಚಿನ್, ಸೋಂಗ್ಡಾ, ಲಿಂಗ್ಜಿತಾಂಗ್, ಚಾಂಗ್ ಚೆನ್ಮೋ, ಡೆಪ್ಸಾಂಗ್, ಪೂರ್ವ ಲಾನಕ್ ಲಾ, ಉತ್ತರ ದುಂಜೊರುಲಾಗಳನ್ನು ವಶಪಡಿಸಿಕೊಂಡಿತು. ಮಾತ್ರವಲ್ಲ ಪದೇ ಪದೇ ಸಿಕ್ಕಿಂ, ಅರುಣಾಚಲಪ್ರದೇಶಗಳನ್ನು ತನ್ನದೆನ್ನುತ್ತಿದೆ. ಮೊನ್ನೆ ಮೊನ್ನೆ ಘನ ಮನಮೋಹನರ ಸರಕಾರ ಮೂಕವಾಗಿ ನೋಡುತ್ತಿರುವಂತೆಯೇ ಹತ್ತೊಂಬತ್ತು ಕಿ.ಮೀಗಳಷ್ಟು ಒಳಗೆ ಬಂತು! ಪಾಕಿಗೆ ನಮ್ಮ ಗಿಲ್ಗಿಟ್-ಬಾಲ್ಟಿಸ್ತಾನದ(ಪಾಕ್ ಆಕ್ರಮಿತ ಕಾಶ್ಮೀರ) ಮೂಲಕ ಈಗಾಗಲೇ ಹೆದ್ದಾರಿಯಿದ್ದು ಇದು ಸಮರ ಸರಂಜಾಮು ಸಾಗಣೆಗಾಗಿಯೇ ನಿರ್ಮಿತವಾಗಿದೆ. ಚೀನಾ ಭಾರತದ ಎಲ್ಲಾ ನೆರೆಯ ದೇಶಗಳನ್ನು ಮಿತ್ರರಾಗಿಯೋ ಇಲ್ಲ ಬಲಾತ್ಕಾರವಾಗಿಯೋ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ರೀತಿ ಬದಲಾಯಿಸಿಕೊಂಡಿದೆ.

            ಭಾರತ ವಿಜಯನಾಮ ಸಂವತ್ಸರದ ಶುಭಘಳಿಗೆಯಲ್ಲಿ ನವ ಸೂರ್ಯನ ಸ್ವಾಗತಕ್ಕೆ ಸಿದ್ಧವಾಗುತ್ತಿದೆ. ಭರವಸೆಯ ಭಾವೀ ಪ್ರಧಾನಿಯ ಮೇಲೆ ಮಹತ್ತರವಾದ ಜವಾಬ್ದಾರಿಗಳಿವೆ. ಕೇವಲ ಚೀನಾದ ಆರ್ಭಟವನ್ನು ತಡೆಯುವುದು ಮಾತ್ರವಲ್ಲ, ಇತಿಹಾಸದಲ್ಲಾದ ತಪ್ಪುಗಳನ್ನು ಸರಿಪಡಿಸುವ ಅವಕಾಶ ಭಾರತಕ್ಕೆ ಈಗ ಒದಗಿದೆ. ತನ್ನದೇ ಗಡಿ ಭದ್ರತೆ, ಸಾರ್ವಭೌಮತೆಯ ರಕ್ಷಣೆಯ ದೃಷ್ಟಿಯಿಂದ ಭಾರತವು ಟಿಬೆಟಿಗೆ ನೆರವಾಗಲೇಬೇಕು. "ಒಟ್ಟಿಗೆ ಬಾಳಲು ಜನರು ತಾಳುವ ಇಚ್ಛಾಶಕ್ತಿ ರಾಷ್ಟ್ರವೊಂದನ್ನು ರೂಪಿಸುತ್ತದೆ" ಎಂಬ ಅಂಬೇಡ್ಕರ್ ಮಾತು ಇಲ್ಲಿ ಉಲ್ಲೇಖನೀಯ. ಯಾಕೆಂದರೆ ಟಿಬೆಟನ್ನರು ನಮ್ಮೊಂದಿಗೆ, ನಾವು ಅವರೊಂದಿಗೆ ಬೆರೆತು ಬಾಳಬಲ್ಲೆವು. ಅಮಾನವೀಯ ಆಕ್ರಮಣಕ್ಕೆ ತುತ್ತಾದ ಸೋದರ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಹೊಣೆ. ಭಾರತದಲ್ಲಿರುವ ಟಿಬೆಟಿಯನ್ನರನ್ನು ಮತಬ್ಯಾಂಕ್ ಆಗಿ ಉಪಯೋಗಿಸುವ ಹುನ್ನಾರವೂ ನಡೆಯುತ್ತಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಕೈಲಾಸ ಪರ್ವತ, ಮಾನಸ ಸರೋವರಗಳಿಗೆ ಯಾವುದೇ ಪಾಸ್ ಪೋರ್ಟಿನ ಹಂಗಿಲ್ಲದೆ ಹೋಗಿ ಬರುವ ಮುಕ್ತತೆಯನ್ನು ಒದಗಿಸುವ ಅವಕಾಶ ಭರವಸೆಯ ಭಾವೀ ನಾಯಕನಿಗಿದೆ. ಟಿಬೆಟಿಗೆ ಸ್ವಾತಂತ್ರ್ಯ ದೊರಕಿಸಿಕೊಡುವ ಸಾಮರ್ಥ್ಯ ಭಾರತದ ಭಾವೀ ನಾಯಕನಲ್ಲಿ ಖಂಡಿತಾ ಇದೆ. ತನ್ನದೇ ಮನಸ್ಸು(ಮಾನಸ), ಶಿರ(ಕೈಲಾಸ)ವನ್ನು ಹೊಂದಿರುವ ತನ್ನ ಮಗುವನ್ನು ಭಾರತ ರಕ್ಷಿಸೀತೇ? ಇದು ಅಖಂಡ ಭಾರತದ ಕನಸಿಗೆ ಅಡಿಗಲ್ಲಾದೀತೇ?