ಪುಟಗಳು

ಬುಧವಾರ, ಅಕ್ಟೋಬರ್ 31, 2012

ಭಾರತ ದರ್ಶನ-೧೬


ಭಾರತ ದರ್ಶನ-೧೬:

      ನಮ್ಮ ಹಿರಿಯರು ಈ ನೆಲದೊಂದಿಗೆ ತಾಯಿ ಮಗನ ಸಂಬಂಧವನ್ನು ಕಂಡುಕೊಂಡರು. ಅಥರ್ವವೇದದ ಭೂಮಿಸೂಕ್ತವನ್ನು ಈ ದೇಶದ ಮೊದಲ ರಾಷ್ಟ್ರಗೀತೆ ಅಂತ ಹೇಳಿದ್ದಾರೆ. ಆ ವೇದದ ಒಂದು ಮಾತು, ಆಂಗೀರಸ ಅನ್ನುವ ಋಷಿ ಹೇಳಿದ ಆ ಮಾತು...
"ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ"
ಅಂದರೆ ಭೂಮಿ ನನ್ನ ತಾಯಿ ನಾನವಳ ಮಗು.
       ಈ ಮಾತು ಜಗತ್ತಿನ ಚಿಂತನಾ ವಿಧಾನವನ್ನೇ ಬದಲಾಯಿಸಿತು. ಭೂಮಿಯನ್ನು ಜಡವಸ್ತು ಅಂತ ಭಾವಿಸಿದ್ದ ಜಗತ್ತಿನ ಕಣ್ಣು ತೆರೆಸಲಾಯಿತು. ಅವರೆಲ್ಲಾ ತಮ್ಮ ತಮ್ಮ ದೇಶವನ್ನು ತಾಯಿಯಂತೆ ಕಾಣಲು ಪ್ರಾರಂಭಿಸಿದರು. ಇಂಗ್ಲೆಂಡಿನ ಶಾಲಾ ಮಕ್ಕಳು ಪ್ರಾರ್ಥನೆ ಆದ ನಂತರ " oh mother England, with all the faults I love the" ಎನ್ನಲು ಪ್ರಾರಂಭಿಸಿದ್ದು ಭಾರತೀಯ ಸಂಸ್ಕೃತಿಯ ಪ್ರಭಾವವಲ್ಲದೆ ಮತ್ತೇನು?

      ತಾಯಿ ಮಗುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ನಮ್ಮಲ್ಲಿ ಮಾತ್ರವಲ್ಲ ಇಡೀ ಸೃಷ್ಠಿಯಲ್ಲಿ ಮಾತೃತ್ವದ ಭಾವ ಇದೆ. ಪಕ್ಷಿಗಳು ಆಹಾರ ಸಿಕ್ಕಾಗ ತಾವು ತಿನ್ನದೆ ಮರಿಗಳಿಗೆ ತಂದುಣಿಸುತ್ತವೆ. ಬೆಕ್ಕು ತನ್ನ ಮರಿಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳ ಹುಡುಕುತ್ತಾ ಹುಡುಕುತ್ತಾ ಹನ್ನೆರಡು ಕಡೆ ಸ್ಥಾನಾಂತರ ಮಾಡುತ್ತಂತೆ. ಮಂಗ ಮರದಿಂದ ಮರಕ್ಕೆ ಹಾರುವಾಗ ಒಂದು ಕೈಯಲ್ಲಿ ಮರಿಯನ್ನು ಭದ್ರಪಡಿಸಿಕೊಳ್ಳುತ್ತಾ ಅಪಾಯವನ್ನು ತನ್ನ ಮೈಮೇಲೆಳೆದುಕೊಂಡು ಇನ್ನೊಂದು ಕೈಯನ್ನು ಚಾಚುತ್ತಾ ಚಾಚುತ್ತಾ ನೆಗೆಯುತ್ತೆ. ಸಿಂಹಿಣಿಯ ಹಲ್ಲು ಮತ್ತು ಉಗುರು ನಮಗೆ ಶೂಲ.ಆದರೆ ಅದರ ಮರಿಗಳಿಗದು ಕುಸುಮಕೋಮಲ. ಹಸು ಮತ್ತು ಕರುವಿನ ಸಂವಾದವನ್ನು "ವಾತ್ಸಲ್ಯದ ಮಹಾಕಾವ್ಯ" ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಕರುವಿನ ಹಗ್ಗ ಬಿಚ್ಚಿ, ಎರಡೇ ನೆಗೆತಕ್ಕೆ ತಾಯಿ ಬಳಿ ತಲುಪುತ್ತೆ. ಹಸು ಬಳಿ ಬಂದ ಕರುವಿನ ಮೈಯನ್ನು ನೆಕ್ಕುತ್ತೆ. ಮನೆಯಲ್ಲಿಯೂ  ಅಂಗಳದಲ್ಲಿ ಆಟವಾಡಿ ದಣಿದು, ಬಳಲಿ, ಬಾಯಾರಿ ಬಂದ ಮಗುವನ್ನು ತಾಯಿ ಬರಸೆಳೆದು ಹಣೆಗೆ ಮುತ್ತನ್ನೀಯುತ್ತಾಳೆ.

       ಕರು ಹಾಲು ಕುಡಿಯುವುದನ್ನು ನೋಡಿದ್ದೀರಾ? ಸುಮ್ಮನೇ ನಿಂತು ಹಾಲು ಕುಡಿಯಲ್ಲ.  ಹಾಲು ಕುಡಿಯುವಾಗ ನೆಗೆಯುತ್ತೆ, ಕುಣಿಯುತ್ತೆ, ಕೆನೆಯುತ್ತೆ, ಕೆಚ್ಚಲಿಗೆ ತನ್ನ ನೆತ್ತಿಯನ್ನು ಚುಚ್ಚುತ್ತಾ ಚುಚ್ಚುತ್ತಾ ಹಾಲು ಕುಡಿಯುತ್ತೆ. ಮಗುವಿನ ಲೀಲೆ ಅದು. ಮಗು ಹಾಲು ಕುಡಿಯುವಾಗ ಅಮ್ಮನಿಗೆ ಒದೆಯುತ್ತೆ. ತಾಯಿ ಮಗುವಿನ ಪಾದವನ್ನು ದೇವರ ಪಾದ ಅಂತ ಚುಂಬಿಸಿ ಕಣ್ಣಿಗೊತ್ತಿಕೊಳ್ಳುತ್ತಾಳೆ. ತನಗೆ ಒದ್ದು ಅದಕ್ಕೆಲ್ಲಿ ನೋವಾಯ್ತೋ ಅಂತ ಪಾದವನ್ನು ನೀವುತ್ತಾಳೆ. ಆದರೆ ಪಶು ಪಕ್ಷಿಗಳು ಮತ್ತು ಮನುಷ್ಯರ ತಾಯಿ ಮಗುವಿನ ಸಂಬಂಧದಲ್ಲಿ ಒಂದು ವ್ಯತ್ಯಾಸ ಇದೆ.
      ಪಶು ಪಕ್ಷಿಗಳಲ್ಲಿ ಈ ಸಂಬಂಧ ಹೆಚ್ಚು ಕಾಲ ಉಳಿಯಲ್ಲ. ಮರಿ ಬೆಳೆಯುತ್ತೆ, ರೆಕ್ಕೆ ಬಲಿಯುತ್ತೆ, ನೀಲಾಕಾಶ ನೋಡುತ್ತೆ, ಮೈ ಜುಮ್ಮೆನ್ನುತ್ತೆ, ರೆಕ್ಕೆ ಬಡಿದು ಬಾನಿಗೇರುತ್ತೆ, ಸ್ವಾವಲಂಬಿ ಆಗುತ್ತೆ, ತಾಯಿಯನ್ನು ಮರೆಯುತ್ತೆ.ಇದೇ ರೀತಿ ಪ್ರಾಣಿ ಸಂಕುಲ ತನ್ನ ಆಹಾರ ಅರಸಲು ಶುರು ಮಾಡಿದೊಡನೆ ಸ್ವಾವಲಂಬಿ ಆಗುತ್ತೆ. ಆದರೆ ಮನುಷ್ಯ ಸ್ವಾವಲಂಬಿ ಆದ ಮೇಲೆ ಅಪ್ಪ ಅಮ್ಮನನ್ನು ಮರೆಯೋಲ್ಲ.
" ತಾಯಿ ತಂದೆಯರ ಸೇವೆಯ ಯೋಗ
ಬರಬಾರದೆ ಬಾಳಿನಲಿ ಬೇಗ"
ಅನ್ನೋದೆ ನಮ್ಮ ಬಾಳಿನ ಪಲ್ಲವಿ.

      ಕಣ್ಣೇ ಇಲ್ಲದ ಅಪ್ಪ ಅಮ್ಮನನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರ ನಮಗೆ ಆದರ್ಶ.
ತಂದೆಯ ಮಾತ ಉಳಿಸಲೋಸುಗ ಚಿಕ್ಕಮ್ಮನ ಸಂತೋಷಕ್ಕಾಗಿ ತಮ್ಮನಿಗೆ ರಾಜ್ಯದಧಿಕಾರಬಿಟ್ಟು ಅಡವಿಗೆ ತೆರಳಿದ ಪೊಡವಿಪತಿ ಶ್ರೀರಾಮಚಂದ್ರ ಈ ದೇಶದ ಆದರ್ಶ. ಆದರೆ ಇಂದು.....?

       ನಮ್ಮ ಅಕ್ಕ ತಂಗಿಯರಿಗೆ ವೇದ, ಶೃತಿ, ಗೀತಾ ಮುಂತಾದ ಹೆಸರಿಡುತ್ತೇವೆ. ನಮ್ಮನ್ನು ಭಗವಂತ( ಜ್ಞಾನ ) ನೆಡೆಗೆ ಒಯ್ಯುವ ಎಲ್ಲವನ್ನೂ ತಾಯಿ ಅಂತ ಗೌರವಿಸುತ್ತೇವೆ. ನಮಗೆ ಉಪಕರಿಸುವ ಎಲ್ಲದಕ್ಕೂ ಕೃತಜ್ಞರಾಗಿರಬೇಕು ಎಂಬುದರ ಅಭಿವ್ಯಕ್ತಿ ಅದು. ಹಾಗಾಗಿಯೇ ನಾವು ವೇದ, ಉಪನಿಷತ್, ನೆಲ, ಜಲ, ಹಸು, ಪ್ರಕೃತಿ,.....ಹೀಗೆ ಎಲ್ಲವನ್ನೂ ತಾಯಿ ರೂಪದಲ್ಲಿ ಕಾಣುತ್ತೇವೆ.

||ವಂದೇ ಮಾತರಂ||

ಶನಿವಾರ, ಅಕ್ಟೋಬರ್ 27, 2012

ಭಾರತ ದರ್ಶನ-೧೫

ಭಾರತ ದರ್ಶನ-೧೫:

ಉತ್ತರದಲ್ಲಿ ಉತ್ತುಂಗ ಹಿಮವಂತ, ದಕ್ಷಿಣದ ತುದಿಯಲ್ಲಿ ಅಗಾಧ ಶರಧಿ. ಮೇಲೆ ಕಿರೀಟ ಪ್ರಾಯದ ಹಿಮವರ್ಷ. ಕೆಳಗೆ ತಾಯಿಯ ಚರಣಕ್ಕೆ ನೀಲಸಿಂಧು ಜಲಸ್ಪರ್ಷ. ತನ್ಮಧ್ಯೆ ಭಾರತ ವರ್ಷ.

ಭಾರತ ಪ್ರಶಂಸೆ:

"ಪೃಥಿವ್ಯಾಂ ಭಾರತಂ ವರ್ಷಂ ಕರ್ಮಭೂಮಿರುದಾಹೃತಾ||" - ಬ್ರಹ್ಮಾಂಡ ಪುರಾಣ
(ಜಗತ್ತಿನಲ್ಲಿ ಭಾರತವೇ ಕರ್ಮಭೂಮಿ ಎಂದು ತಿಳಿಯಲ್ಪಡುತ್ತದೆ.)

"ಜಾಂಬವೇ ಭಾರತಂ ವರ್ಷಂ ತೀರ್ಥಂ ತ್ರೈಲೋಕ್ಯ ವಿಶ್ರುತಂ|
ಕರ್ಮ ಭೂಮಿರ್ಯತಃ ಪುತ್ರ ತಸ್ಮಾತ್ ತೀರ್ಥಂ ತದುಚ್ಯತೇ||" -ಬ್ರಹ್ಮಾಂಡ ಪುರಾಣ
(ತ್ರಿಲೋಕಗಳಲ್ಲೇ ಜಂಬೂದ್ವೀಪದ ಭಾರತ ವರ್ಷವು ಜಗತ್ಪ್ರ್ಸಿದ್ಧ ತೀರ್ಥವಾಗಿದೆ. ಅದು ಕರ್ಮಭೂಮಿಯಾಗಿರುವುದರಿಂದಲೇ ತೀರ್ಥ ಎನಿಸಿದೆ.)

"ದೇವನಾಮಪಿ ವಿಪ್ರರ್ಷೇ ಸದಾಹ್ಯೇಷ ಮನೋರಥಃ |
ಅಪಿ ಮಾನುಷ್ಯಮಾಪ್ಸ್ಯಾಮೋ ದೇವತ್ವಾತ್ ಪ್ರಚ್ಯುತಾಃ ಕ್ಷಿತೌ ||
ಮನುಷ್ಯಃ ಕುರುತೇ ತತ್ತು ಯನ್ನ ಶಕ್ಯಂ ಸುರಾಸುರೈಃ || "-ಮಾರ್ಕಂಡೇಯ ಪುರಾಣ
(ಹೇ ವಿಪ್ರರ್ಷೇ ! ದೈವತ್ವದಿಂದ ಚ್ಯುತರಾದ ಬಳಿಕ ಭಾರತದಲ್ಲಿ ಮನುಷ್ಯತ್ವ ಪ್ರಾಪ್ತವಾಗಲೆಂದು ದೇವತೆಗಳೂ ಮನೋರಥ ಹೊಂದಿರುತ್ತಾರೆ. ಯಾವುದು ಸುರಾಸುರರಿಗೆ ಸಾಧ್ಯವಾಗದೋ ಅದನ್ನು ಮನುಷ್ಯ ಮಾಡಬಲ್ಲನು.)

"ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ ಮಹಾಮುನೇ |
ಯತೋ ಹಿ ಕರ್ಮ ಭೂರೇಷಾ ಯತ್ಯೋ ಭೋಗಭೂಮಯಃ ||
ಅತ್ರ ಜನ್ಮ ಸಹಸ್ರಾಣಾಂ ಸಹಸ್ರೈರಪಿ ಸತ್ತಮ |
ಕದಾಚಿಲ್ಲಭತೇ ಜಂತುರ್ಮಾನುಷ್ಯಂ ಪುಣ್ಯ ಸಂಚಯಾತ್ ||" -ಮಹಾಭಾರತ
(ಜಂಬೂದ್ವೀಪವೆಂಬ ಜಗತ್ತಿನ ಭಾಗದಲ್ಲಿ ಭಾರತವು ಶ್ರೇಷ್ಠವಾದ ದೇಶವು. ಏಕೆಂದರೆ ಇದು ಕರ್ಮಭೂಮಿಯು. ಇತರ ದೇಶಗಳು ಬರಿಯ ಭೋಗ ಭೂಮಿಗಳು. ಸಾವಿರಾರು ಜನ್ಮಗಳ ಪುಣ್ಯ ಸಂಚಯನದಿಂದ ಮಾತ್ರ ಭಾರತದಲ್ಲಿ ಜೀವಿಯು ಮನುಷ್ಯ ಜನ್ಮ ಪಡೆಯುತ್ತಾನೆ.)

"ಸ್ವರ್ಗದಲ್ಲಿ ಹತ್ತಾರು ಯುಗಗಳ ಕಾಲ ಬಾಳುವುದಕ್ಕಿಂತ ಭಾರತದಲ್ಲಿ ಕೆಲವು ಕ್ಷಣಗಳು ಜೀವಿಸುವುದು ಮೇಲು" -ಶ್ರೀ ಮದ್ಭಾಗವತ 
"ಅನ್ಯಸ್ಥಾನೇ ವೃಥಾ ಜನ್ಮ ನಿಷ್ಫಲಂ ಚ ಗತಾಗತಮ್ |
ಭಾರತೀ ಚ ಕ್ಷಣಂ ಜನ್ಮ ಸಾರ್ಥಕಂ ಶುಭಂ ಕರ್ಮದಮ್ ||"
(ಇತರ ಭಾಗಗಳಲ್ಲಿ ಹುಟ್ಟುವುದು ವ್ಯರ್ಥವೇ ಸರಿ. ಅದರಿಂದ ಮಹತ್ವದ ಫಲವಿಲ್ಲ. ಭಾರತದಲ್ಲಿನ ಹುಟ್ಟು ಕ್ಷಣಕಾಲವಾದರೂ ಫಲಕಾರಿಯೇ.)
ಓರ್ವ ಮಹಾನುಭಾವ ಹೇಳುತ್ತಾನೆ 
"ಪ್ರತಿ ಜನ್ಮನಿ ಮೇ ಚಿತ್ತಂ ವಿತ್ತಂ ದೇಹಶ್ಚ ಸಂತಿ
ತತ್ ಸೇವಾ ನಿರತು ಭೂಯುರ್ಮಾತಾ ತ್ವಂ ಕರುಣಾಮಯಿ|"
(ಹೇ ತಾಯೇ ನೀನು ಅತ್ಯಂತ ಕರುಣಾಳು. ನನಗೆ ನಿನ್ನಲ್ಲಿಯೇ ಜನ್ಮ ದೊರೆಯಲಿ. ಪ್ರತಿ ಜನ್ಮದಲ್ಲಿಯೂ ನನ್ನ ಮನಸ್ಸು, ಸಂಪತ್ತು, ಶರೀರ ಮತ್ತು ಸಂತತಿಯೂ ಅರ್ಥಾತ್ ನನ್ನದೆಂಬುದೆಲ್ಲವೂ ನಿನ್ನ ಸೇವೆಗೆ ಮುಡಿಪಾಗಿರಲಿ)

ಭಾರತ ಭಕ್ತನೊಬ್ಬ ಹೇಳುತ್ತಾನೆ,
"ನಮೇ ವಾಂಛಾಸ್ತಿ ಯಶಸಿ ವಿದ್ವತ್ತ್ವೇನ ಚ ವಾ ಸುಖೇ|
ಪ್ರಭುತ್ವೇ ನೈವ ವಾ ಸ್ವರ್ಗೇ ಮೋಕ್ಶೇಪ್ಯಾನಂದದಾಯಕೇ||
ಪರಂತು ಭಾರತೇ ಜನ್ಮ ಮಾನವಸ್ಯ ಚ ವಾ ಪಶೋಃ |
ವಿಹಂಗಸ್ಯ ಚ ವಾ ಜಂತೋರ್ವೃಕ್ಷ ಪಾಷಾಣಯೋರಪಿ ||"
(ನನಗೆ ಕೀರ್ತಿಯ ಆಸೆಯಿಲ್ಲ ವಿದ್ವಾಂಸನಾಗಿ ಮೆರೆಯಬೇಕೆಂಬ ಇಚ್ಛೆಯೂ ಇಲ್ಲ. ನನಗೆ ಯಾವುದೇ ವಿಧದ ಸುಖವೂ ಬೇಡ. ನಾನೊಬ್ಬ ದೊರೆಯಾಗಿ ಆಳಬೇಕೆಂದು ಬಯಸುವುದಿಲ್ಲ. ಸಕಲ ಸುಖದ ಆಗರವಾದ ಸ್ವರ್ಗವಾಗಲಿ, ಪರಮಾನಂದದ ಮೋಕ್ಷವಾಗಲಿ ನನಗೆ ಬೇಡ. ನನಗಿರುವುದೊಂದೇ ಆಸೆ. ಅದೆಂದರೆ ಭಾರತದಲ್ಲಿ ಜನಿಸಬೇಕು. ಮನುಷ್ಯ, ಪಶು-ಪಕ್ಷಿ, ಇಲ್ಲವೇ ಹುಳುವಾಗಿಯಾದರೂ ಇಲ್ಲೇ ಹುಟ್ಟಲು ಅವಕಾಶ ಕೊಡು ಭಗವಾನ್. ಅದು ಸಾಧ್ಯವಿಲ್ಲವೆಂದಾದರೆ ಕೊನೆ ಪಕ್ಷ ಗಿಡ ಮರದ ರೂಪದಲ್ಲಾದರೂ ಅಥವಾ ಕಲ್ಲು ಬಂಡೆಯಾಗಿಯಾದರೂ ನನಗೆ ಭಾರತದಲ್ಲಿ ಜನ್ಮ ಕೊಡು)

ಆದರೆ ಇಂದು.....?

ಗುರುವಾರ, ಅಕ್ಟೋಬರ್ 25, 2012

ಹಿಂದೂಮಹಾಸಾಗರ!

                               ಹಿಂದೂಮಹಾಸಾಗರ!

ಒಂದು ಭಾವ.....ಒಂದು ಬಿಂದು.....

ದೇಶ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ ಮತಾಂಧ ಹಾಗೂ ಕಮ್ಮಿನಿಷ್ಟ ಉಗ್ರರಿಗೆ ಬಲಿಯಾಗಿ, ತಾಯ ಪಾದಕ್ಕೆ ಕುಸುಮಗಳಾಗಿ ಅರ್ಪಿತವಾದ ಅಸಂಖ್ಯಾತ ಬಿಂದು ಬಿಂದುಗಳಿಗೆ ಅರ್ಪಣೆ....


ಮನದ ಬೇಗುದಿ ಸುಪ್ತ ಜ್ವಾಲೆ
ಹೃದಯ ಮಿಡಿದಿದೆ ಧೈನ್ಯ ಸ್ಥಿತಿಯು
ಕರುಳ ಹಿಂಡುವ ತಾಯ ಶೋಕ
ಕ್ರಾಂತಿಯ ಶಬ್ಧ! ಮಾತಿನ ಮೋಡಿ!

ಎದೆಯ ನಡುಗಿಪ ಸಿಡಿಲ ಠೇಂಕಾರ
ಬೆಳಕ ನಾಚಿಸೋ ಮಿಂಚಿನ ಲಾಸ್ಯ
ಬಲಾಹಕನ ಕಬಂಧ ಹಸ್ತವ ಕಿತ್ತೆಸೆಯೋ ತವಕ
ಕ್ರಾಂತಿಯ ಬಿಂದು! ವರ್ಷಧಾರೆ!

ಅಗ್ನಿಕುಂಡ ಉರಿಯುತಿಹುದು
ಯಜ್ಞ ಧೂಮ ಹಬ್ಬುತಿಹುದು
ಅಗ್ನಿ ಹವಿಸ್ಸ ಬೇಡುತಿಹನು
ಕ್ರಾಂತಿಯ ಕಿಡಿಯು! ಅಗ್ನಿ ಜ್ವಾಲೆ!

ಧರ್ಮ ಸಂಸ್ಕೃತಿ ದೇಶದಾತ್ಮ ತುಳಿಯುತಿರಲು ರಕ್ಕಸ
ದೇಶ ರಕ್ಶಣೆ ಶೃದ್ಧಾ ಕಾರ್ಯ ವಿಮುಖನೇಕೆ ಸೋದರ
ಕುಗ್ಗಲೇತಕೆ ನುಗ್ಗು ಮುಂದಕೆ ಮಾತೃ ರಕ್ಷಣೆ ಪೀಠಿಕೆ
ಗುಂಡಿನ ಮೊರೆತ! ರುಧಿರ ಸಿಂಚನ!

ಜನ್ಮವಾಗಲಿ ಮನೆಮನದೊಳು ಹಿಂದೂ ಕೇಸರ ಶಿವಾಜಿಯ
ಬಂಧು ಭಗಿನಿಯರೆ ಎದ್ದು ನಿಲ್ಲಿರಿ ದೇಶ ನಿಮ್ಮದು ಮರೆತಿರಾ
ಬಿಂದು ಬಿಂದುವು ಬಂದು ಸೇರುತ ಸಿಂಧು ಸುಧೆಯು ಹರಿಯಲಿ
ಕ್ರಾಂತಿಯ ಸಿಂಧು! ಹಿಂದೂ ಮಹಾಸಾಗರ !

ಸೋಮವಾರ, ಅಕ್ಟೋಬರ್ 22, 2012

ಭಾರತ ದರ್ಶನ-೧೨

ಭಾರತ ದರ್ಶನ-೧೨:

ಮಾತೃಭೂಮಿಯ ಅಖಂಡತೆಯಲ್ಲಿ ಭಕ್ತಿ ಮತ್ತು ನಂಬಿಕೆ ವೈದಿಕ ಯುಗದಿಂದಲೂ ನಮ್ಮ ಹೃದಯದಲ್ಲಿ ಹರಿಯುತ್ತಿದೆ. ಪಶ್ಚಿಮದ ಆರ್ಯನ್(ಇರಾನ್) ಮತ್ತು ಪೂರ್ವದ ಶೃಂಗಪುರಗಳೊಂದಿಗೆ ಎರಡೂ ಸಮುದ್ರಗಳಲ್ಲಿ ತನ್ನೆರಡು ಬಾಹುಗಳನ್ನದ್ದುತ್ತಾ ತನ್ನ ಪವಿತ್ರ ಚರಣಗಳಲ್ಲಿ ದಕ್ಷಿಣ ಸಮುದ್ರ ಅರ್ಪಿಸಿದ ಪದ್ಮದಳದಂತಹ ಲಂಕೆಯನ್ನು ಒಳಗೊಂಡ ಮಾತೃಭೂಮಿಯ ದಿವ್ಯ ಸ್ವರೂಪವೇ ಸಾವಿರಾರು ವರ್ಷಗಳಿಂದ ನಮ್ಮ ಸಮಾಜದ ಕಣ್ಮುಂದೆ ಬೆಳಗುತ್ತಿದೆ!

ನಮ್ಮ ಜನತೆಯ ಶೀಲ ಮತ್ತು ಸಂಸ್ಕೃತಿಗಳ ಮೇಲೆ ಅಚ್ಚಳಿಯದ ನಿಚ್ಚಳ ಮುದ್ರೆಯನ್ನೊತ್ತಿದವ ರಾಷ್ಟ್ರಪುರುಷ ಪ್ರಭು ಶ್ರೀರಾಮಚಂದ್ರ. "ಸಮುದ್ರ ಇವ ಗಾಂಭೀರ್ಯೇ,ಸ್ಥೈರ್ಯೇಣ ಹಿಮವಾನ್ ಇವ" ಅಂದರೆ ಗಾಂಭೀರ್ಯದಲ್ಲಿ ಸಮುದ್ರದಂತೆ, ಧೈರ್ಯದಲ್ಲಿ ಹಿಮಾಲಯದಂತೆ ಎಂದು ವಾಲ್ಮೀಕಿ ಮಹರ್ಷಿಗಳು ಹಾಡಿ ಹೊಗಳಿದ ಮರ್ಯಾದಾ ಪುರುಷೋತ್ತಮ ಆತ.

ಪ್ರಾಚೀನ ಕಾಲದಿಂದಲೂ ನಮ್ಮ ಶಿಕ್ಷಣ ಪದ್ದತಿಯಲ್ಲಿ ಏಕಸೂತ್ರತೆ ಕಂಡುಬರುತ್ತದೆ. ವೇದಶಾಸ್ತ್ರಗಳ ಅಧ್ಯಯನ-ಅಧ್ಯಾಪನದಲ್ಲಿ ಗುರು ಶಿಷ್ಯ ಪರಂಪರೆ ಇಡೀ ದೇಶದಲ್ಲಿ ಒಂದೇ ರೀತಿಯಲ್ಲಿತ್ತು. ಒಂದೇ ರೀತಿಯ ಪಠ್ಯಕ್ರಮ ರಾಷ್ಟ್ರದಾದ್ಯಂತ ಜಾರಿಯಲ್ಲಿತ್ತು. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಕರಣದ ಮುಖ್ಯ ಗ್ರಂಥಗಳಾಗಿದ್ದವು. ಪಂಚಮಹಾಕಾವ್ಯಗಳು ಮತ್ತು ಪಂಚತಂತ್ರ ಮೊದಲಾದುವು ಎಲ್ಲೆಡೇ ಕಲಿಸಲ್ಪಡುತ್ತಿದ್ದವು. ಕಾಶಿ, ತಕ್ಷಶಿಲೆ, ಮಥುರಾ, ನವದ್ವೀಪ, ಕಂಚಿ, ಉಜ್ಜಯಿನಿ, ನಲಂದಾ, ಉದಂತಪುರಿ, ವಿಕ್ರಮಶೀಲ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ದೇಶದ ನಾನಾ ಭಾಗಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈ ವಿದ್ಯಾರ್ಥಿಗಳು ಅಧ್ಯಯನದ ಬಳಿಕ ಜ್ಞಾನ, ಸಂಸ್ಕೃತಿಯ ಪ್ರವಾಹವನ್ನು ತಮ್ಮ ತಮ್ಮ ಪ್ರದೇಶಗಳಿಗೆ ಒಯ್ಯುತ್ತಿದ್ದರು.

ಏಕಾತ್ಮತೆಯ ಈ ಸೂತ್ರ ಕಲೆ ಮತ್ತು ಶಿಲ್ಪಗಳಲ್ಲೂ ಗೋಚರವಾಯಿತು. ಮೂರ್ತಿ ನಿರ್ಮಾಣದಲ್ಲಿ ಎಲ್ಲ ಪ್ರಮುಖ ದೇವತೆಗಳ ಆಕಾರ ಇಡೀ ದೇಶದಲ್ಲಿ ಒಂದೇ ರೀತಿ ಮೂಡಿತು. ಶಿವ, ದುರ್ಗಾ, ವಿಷ್ಣು, ಸೂರ್ಯ, ತೀರ್ಥಂಕರ, ಬುದ್ಥ, ಕಾರ್ತಿಕೇಯ, ಗಣಪತಿ,... ಮೊದಲಾದ ಪ್ರತಿಮೆಗಳನ್ನು ಕಂಡಾಗ ಯಾವುದೋ ಅಖಿಲ ಭಾರತ ಸಂಸ್ಥೆಯೇ ಈ ಶಿಲ್ಪಗಳ ವ್ಯವಸ್ಥೆ ಮಾಡಿದೆಯೇನೋ ಎಂದು ಅನಿಸದಿರದು. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ!

ವಂದೇ ಮಾತರಂ
-ಮುಂದುವರಿಯುವುದು

ಭಾರತ ದರ್ಶನ-೧೩

ಭಾರತ ದರ್ಶನ-೧೩:

ಬೆಳಗೆದ್ದೊಡನೇ ಎರಡು ಕರಗಳನ್ನು ನೋಡುತ್ತಾ
"ಕರಾಗ್ರೇ ವಸತೇ ಲಕ್ಷ್ಮೀ ಕರ ಮಧ್ಯೇ ಸರಸ್ವತೀ।
ಕರ ಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ॥
ಎಂದು ಪ್ರಾರ್ಥಿಸುತ್ತಿದ್ದ ಮನಸ್ಸುಗಳ ಕರ ಮೂಲದಲ್ಲಿ ಇಂದು ಮೊಬೈಲ್, ರಿಮೋಟ್ ಕಂಟ್ರೋಲರ್, ಟ್ಯಾಬ್ ಬಂದು ಕೂತದ್ದು ಎಂಥಾ ವಿಪರ್ಯಾಸ!

ಹಿರಿಯರು ಚಾಪೆಯಿಂದ ನೆಲಕ್ಕೆ ಕಾಲು ಸ್ಪರ್ಶಿಸುವ ಮುಂಚೆಯೇ
"ಸಮುದ್ರ ವಸನೇ ದೇವಿ ಪರ್ವತಸ್ತನ ಮಂಡಲೇ।
ವಿಷ್ಣುಪತ್ನೀ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ॥"
ಎಂದು ಕಾಲುಗಳಿಂದ ಭೂಮಿತಾಯಿಯನ್ನು ಮೆಟ್ಟುವ ಸಲುವಾಗಿ ಕ್ಷಮಾಪಣೆ ಕೇಳುವ ಪರಿಪಾಠ ತಾಯಿಯ ಉದರವನ್ನೇ ಬಗೆದು ಹಣ ಮಾಡುವ ನಮಗೆ ಹೇಗೆ ಬರಬೇಕು?

ಹೌದು ನಮ್ಮ ದೇಶವನ್ನು ನಾವು ಕಂಡದ್ದೇ ಹಾಗೇ!

ಜಗತ್ತಿನ ಇತರರಿಗೆ ಕೇವಲ H2O ಆಗಿ ಕಾಣುವ ನೀರು ನಮಗೆ ತಾಯಿ, ತೀರ್ಥ! ಎಲ್ಲ ನದಿಗಳ ಹೆಸರನ್ನು ಅಕ್ಕತಂಗಿಯರಿಗಿಟ್ಟು ಗೌರವಿಸಿದವರು ನಾವು. ಸ್ನಾನ ಮಾಡುವಾಗ, ಕಲಷ ಪೂಜೆ ಮಾಡುವಾಗ ಎಲ್ಲ ನದಿಗಳನ್ನು ಆವಾಹನೆ ಮಾಡುತ್ತಾ
"ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ।
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು॥" ಎನ್ನುತ್ತಾ ನದಿಗಳನ್ನು ಸ್ಮರಿಸುತ್ತೇವೆ.

ದೇಶದಾದ್ಯಂತ ನಿಂತಿರುವ ಪುಣ್ಯ ಕ್ಷೇತ್ರಗಳಂತೂ ಭಾರತದ ಮೌಲಿಕ ಏಕತೆಯ ಸಜೀವ ಸಾಕ್ಷಿಗಳಾಗಿವೆ.
"ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ।
ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಯಿಕಾಃ॥"
ಎಂದು ಸಪ್ತ ಮೋಕ್ಷದಾಯಕ ನಗರಗಳನ್ನು ಸ್ಮರಿಸುವುದು ನಮ್ಮ ದಿನಚರಿಯ ಭಾಗವೇ ಆಗಿತ್ತು.(ಮಾಯಾ-ಹರಿದ್ವಾರ, ಅವಂತಿಕಾ-ಉಜ್ಜಯಿನಿ)

ಜಗದ ಜನರಿಗೆ ಜಡವಾಗಿ ಕಾಣುವ ಪರ್ವತಗಳು ನಮಗೆ ದೈವಾಂಶ ಸ್ವರೂಪವೇ. ಅದಕ್ಕಾಗಿಯೇ
"ಮಹೇಂದ್ರೋ ಮಲಯಃ ಸಹ್ಯೋ ದೇವತಾತ್ಮಾ ಹಿಮಾಲಯಃ।
ಧ್ಯೇಯೋ ರೈವತಕೋ ವಿಂಧ್ಯೋ ಗಿರಿಶ್ಚಾರಾವಲಿಸ್ತಥಾ॥"

ಶಿವಭಕ್ತನಾದರೆ ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ನಿಂತಿರುವುದನ್ನು ನೋಡೂತ್ತಾನೆ! ಶಿವನ ಅಡಿ ರಾಮೇಶ್ವರದಲ್ಲಾದರೆ ಮುಡಿ ಕೈಲಾಸದಲ್ಲಿ. ಕಾಶಿ ಕಂಚಿಗಳು ಶಿವನ ಎರಡು ಕಣ್ಣುಗಳು ಎಂದವನ ನಂಬಿಕೆ.
ವೈಷ್ಣವನಾದಲ್ಲಿ ಕಂಚಿ, ಗುರುವಾಯೂರುಗಳಿಂದ ಬದರಿಯವರೆಗೆ(108 ವೈಷ್ಣವ ಸ್ಥಾನಗಳು) ಸಾಗುತ್ತಾನೆ.
ಅದ್ವೈತಿಯಾದರೆ ಪ್ರಹರಿಗಳಂತೆ ನಿಂತ ನಾಲ್ಕು ಶಂಕರಾಚಾರ್ಯ ಪೀಠಗಳು ಆತನನ್ನು ದೇಶದ ನಾಲ್ಕು ಮೂಲೆಗೆ ಕರೆದೊಯ್ಯುತ್ತವೆ.
ಶಕ್ತಿಯ ಆರಾಧಕನಾದರೆ ಬಲೂಚಿಸ್ತಾನದ ಹಿಂಗುಲಾತದಿಂದ ಅಸ್ಸಾಮಿನ ಕಾಮಾಕ್ಷಿಯವರೆಗೆ, ಹೈಮಾಚಲದ ಜ್ವಾಲಾಮುಖಿಯಿಂದ ದಕ್ಷಿಣದ ಕುಮಾರಿ ಕ್ಷೇತ್ರದವರೆಗೆ 51 ಶಕ್ತಿಪೀಠಗಳಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ಸಮಾಜದ ಬಂಧುಗಳಲ್ಲಿ ಭಾರತದ ಏಕಾತ್ಮತೆ ಈ ತೀರ್ಥಗಳ ರೂಪದಲ್ಲಿ ದೃಢವಾಗಿ ಪ್ರಕಟಗೊಂಡಿದೆ.

॥ವಂದೇ ಮಾತರಂ॥

ಭಾರತ ದರ್ಶನ-೧೪

ಭಾರತ ದರ್ಶನ-೧೪:

ಭಾರತ ಒಂದು ರಾಷ್ಟ್ರವಾಗಿತ್ತೇ?

       ರಾಷ್ಟ್ರೀಯತೆ ನಮಗೆ ಬ್ರಿಟಿಷರು ಕೊಟ್ಟ ಕೊಡುಗೆ ಎಂದು ನಂಬಿರುವ ಹಲವು "ಪಂಡಿತರು" ನಮ್ಮಲ್ಲಿದ್ದಾರೆ. ಸತ್ಯವೆಂದರೆ ಚರಿತ್ರೆ ಕಣ್ಣು ಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು. ಪಾಶ್ಚಾತ್ಯರು ಮಾನವಂತರಾಗುವ ಮೊದಲೇ ನಾವು ಒಂದು ಅಖಂಡ ಮಾತೃಭೂಮಿಯಲ್ಲಿ ನೆಲೆಸಿದ ರಾಷ್ಟ್ರವಾಗಿದ್ದೆವು.

       " ಪೃಥಿವ್ಯಾ ಸಮುದ್ರಾ ಪರ್ಯಂತಾಯಾ ಏಕರಾಟ್ " (ಸಮುದ್ರದವರೆಗಿನ ಇಡೀ ಭೂಮಿ ಒಂದು ರಾಷ್ಟ್ರ.) ಎಂಬುದು ವೇದಗಳ ಕಹಳೆಯ ಮೊಳಗು. ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಪರಾಕ್ರಮಿ ಪೂರ್ವಜರು ನಾಡಿನ ನಾಲ್ಕು ಸೀಮೆಗಳನ್ನು ತಿಳಿಸುವ ಈ ಮಾತು ಹೇಳಿದರು:
"ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಶಿಣಮ್ |
ವರ್ಷಂ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿಃ ||" -ವಿಷ್ಣುಪುರಾಣ
(ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಶಿಣಕ್ಕೆ ಇರುವ ಭೂಮಿ ಭರತ ವರ್ಷ. ಭಾರತೀಯರು ಇದರ ಮಕ್ಕಳು)

        ವಾಯುಪುರಾಣ ಇದೇ ಮಾತಿಗೆ ಮನ್ನಣೆ ಕೊಡುತ್ತಾ
" ಆಯತೋ ಹ್ಯಾಕುಮಾರಿಕ್ಯಾದಾಗಂಗಪ್ರಭಾವಶ್ಚವೈ ||" (ಕನ್ಯಾಕುಮಾರಿಯಿಂದ ಗಂಗೆಯ ಉಗಮ ಸ್ರೋತದವರೆಗೆ ಹಬ್ಬಿದ ಈ ಭೂಮಿ ಭಾರತ) ಎಂದಿದೆ.
" ಹಿಮಾಲಯಾತ್ ಸಮಾರಭ್ಯ ಯಾವದಿಂದುಸರೋವರಂ |
ತಂ ದೇವ ನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ ||"
                                       - ಬಾರ್ಹಸ್ಪತ್ಯಶಾಸ್ತ್ರ
(ಹಿಮಾಲಯದಿಂದ ಇಂದು ಸರೋವರ(ಹಿಂದೂಮಹಾಸಾಗರ)ದವರೆಗೆ ವ್ಯಾಪಿಸಿರುವ ದೇಶವೇ ಹಿಂದೂಸ್ಥಾನವೆಂದು ಪ್ರಸಿದ್ಧವಾಗಿದೆ.)

        
           ವೇದಗಳಲ್ಲೂ ನಾಡನ್ನು ಕುರಿತು ಮಾತೃಭಾವ ವ್ಯಕ್ತವಾಗಿದೆ.ಭೂಮಿಸೂಕ್ತವನ್ನು ಭಾರತದ ರಾಷ್ಟ್ರಗೀತೆ ಎಂದರೂ ತಪ್ಪಾಗಲಾರದು. ಈ ಸೂಕ್ತದಲ್ಲಿ ಬರುವ ೬೩ ಮಂತ್ರಗಳೂ ದೇಶಭಕ್ತಿಯ ಭಾವನೆಯನ್ನೇ ಹೊರಸೂಸುತ್ತವೆ. ರಾಮಾಯಣದಲ್ಲಿ
" ಇಕ್ವಾಕೂಣಾಮಿಯಂ ಭೂಮಿಃ ಸಶೈಲವನಕಾನನಾ |
  ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ || "
( ಪರ್ವತ, ಉದ್ಯಾನ, ಕಾಡುಗಳಿಂದ ತುಂಬಿದ ಈ ಭೂಮಿ ಇಕ್ವಾಕು ವಂಶದವರಿಗೆ ಸೇರಿದ್ದು, ಇದರಲ್ಲಿ ಮೃಗ, ಪಕ್ಷಿ, ಮನುಷ್ಯರಿಗೆ ನಿಗ್ರಹ, ಅನುಗ್ರಹ ನೀಡುವುದೆಲ್ಲವೂ ಅವರ ಪಾಲಿಗೇ ಸೇರಿದ್ದು.)

       "ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ |
       ಪೂರ್ವಾಪರೌ ತೋಯನಿಧೀ ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ || "
                                -ಕುಮಾರಸಂಭವದಲ್ಲಿ ಕಾಳಿದಾಸ
(ಉತ್ತರ ದಿಕ್ಕಿನಲ್ಲಿ ದೇವತೆಗಳ ಆತ್ಮದಂತಿರುವ ಪರ್ವತ ರಾಜ ಹಿಮಾಲಯವಿದೆ. ಪೂರ್ವ ಪಶ್ಚಿಮಗಳಲ್ಲಿ ಸಮುದ್ರವನ್ನಾಲಂಗಿಸುತ್ತಾ ಭೂಮಿಯ ಮಾನದಂಡದಂತೆ ಅದು ಸ್ಥಿರವಾಗಿ ನಿಂತಿದೆ. )

      "ಹಿಮವತ್ಸಮುದ್ರಾಂತರಮುದೀಚೀನಂ ಯೋಜನಸಹಸ್ರಪರಿಮಾಣಂ - ಆಚಾರ್ಯ ಚಾಣಕ್ಯ
    (ಸಾಗರಗಳ ಉತ್ತರಕ್ಕೆ ಹಿಮಾಲಯದವರೆಗೆ ದೇಶದ ಉದ್ದ ಸಾವಿರ ಯೋಜನಗಳು)


         ಇವುಗಳ ಜೊತೆಯಲ್ಲೇ ಆಸೇತು ಹಿಮಾಚಲ, ಕನ್ಯಾಕುಮಾರಿಯಿಂದ ಕೈಲಾಸ, ಕಾಶಿ ರಾಮೇಶ್ವರ, ಕಛ್ ನಿಂದ ಕಾಮರೂಪ, ಅಟಕ್ ನಿಂದ ಕಟಕ್... ಮುಂತಾದ ನುಡಿಗಟ್ಟುಗಳ ಮೂಲಕ ನಮ್ಮ ಸಮಾಜವು ಭಾರತದ ಉದ್ದ ಅಗಲ, ವ್ಯಾಪ್ತಿಯನ್ನು ಸ್ಪಷ್ಟಪಡಿಸಿದೆ.

      ಅಂದರೆ ವಿಶ್ವದ ಉಳಿದೆಲ್ಲೆಡೆ ಕತ್ತಲು ಕವಿದಿದ್ದಾಗ , "ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಃ ಎಂಬ ಕರೆ ನೀಡಿ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಜಗದ್ಗುರು ಭಾರತ. ಬದುಕಿನ ಜಂಜಡತೆಯ ಕತ್ತಲಿನಿಂದ ಭವಬಂಧನದ ಮೃತ್ಯುವಿನಿಂದ ಪರಮ ಸತ್ಯದ ಸಾಕ್ಷಾತ್ಕಾರದ ಬೆಳಕಿನೆಡೆಗೆ ಅಮೃತತ್ವದೆಡೆಗೆ ಸಾಗಿದ ಅತೀವ ಸುಭಗರ ನಾಡು "ಭಾರತ".


ವಂದೇ ಮಾತರಂ...
 

ಸೋಮವಾರ, ಅಕ್ಟೋಬರ್ 15, 2012

ಭಾರತ ದರ್ಶನ-೮


    ಕನ್ನಡದ ಕವಿವಾಣಿಯೇನು.....?
 " ಹಲವು ಭಾಷೆ ನುಡಿ ಲಿಪಿಗಳ ತೋಟ|
 ವಿವಿಧ ಮತ ಪಂಥಗಳ ರಸದೂಟ||
 ಕಾಣಲು ಕಾಮನ ಬಿಲ್ಲಿನ ನೋಟ|
 ನಮ್ಮೀ ತಾಯ್ನೆಲವು|| "
    ಈ ಚಿಂತನೆ ಇರೋದ್ರಿಂದಲೇ ಭಾರತದಲ್ಲೊಂದು ಅದ್ಭುತ ಸಮನ್ವಯದ ಭಾವ ಕಂಡುಬರುತ್ತೆ. ಮತ ಬೇರೆ ಅಥವಾ ದೇವರ ಹೆಸರು ಬೇರೆ ಅನ್ನೋ ಕಾರಣಕ್ಕೆ ನಾವು ಯಾರನ್ನೂ ದ್ವೇಷ ಮಾಡ್ಲಿಲ್ಲ.ಅಥವಾ ಎಲ್ಲರೂ ನಮ್ಮ ಮತಕ್ಕೇ ಸೇರ್ಬೇಕು, ನಮ್ಮ ದೇವರನ್ನೇ ಪೂಜೆ ಮಾಡ್ಬೇಕು ಅಂತ ಹಠ ಹಿಡಿದು ಮತಾಂತರ ಮಾಡಲಿಲ್ಲ! ಹಿಂದುತ್ವದಲ್ಲಿ ಉದಾತ್ತತೆ ಇದೆ, ಉದಾರತೆ ಇದೆ.
     ಅಸಹಿಷ್ಣು ಮತಾಂಧ ಬಲಾತ್ಕಾರದ ಮತಾಂತರಗಳಲ್ಲಿ ತೊಡಗಿರುವಂತಹ ಆಕ್ರಮಕ ಮತೀಯರನ್ನು ಭಾರತೀಯ ಪರಂಪರೆಯಂತೆ ಬದುಕಲು ಕಲಿಯಿರಿ, ಎಲ್ಲರನ್ನು ಗೌರವಿಸಿ ಅಂತ ಹೇಳೋದು ಬಿಟ್ಟು ನಮ್ಮ ಬುದ್ಧಿಜೀವಿಗಳು ಸಹಿಷ್ಣುತೆಯ ಪಾಠವನ್ನು ಹಿಂದೂಗಳಿಗೇ ಹೇಳೋದು ಎಂಥಾ ವಿಡಂಬನೆ?
    ಹಿಂದೂ ಕೋಮುವಾದಿಯಾಗಲು ಸಾಧ್ಯವೇ ಇಲ್ಲ! ಹತ್ತು ಸಾವಿರ ವರ್ಷಗಳ ಹಿಂದೆ ದೀರ್ಘತಮಸ್ ಅನ್ನೋ ಋಷಿ ಹೇಳಿದ "ಏಕಂ ಸತ್ ವಿಪ್ರಾ: ಬಹುದಾ ವದಂತಿ " ಅನ್ನೋದನ್ನ ಅಕ್ಷರಷ: ಇಂದಿಗೂ ಪಾಲಿಸುತ್ತಿರುವ ಹಿಂದೂವಿಗೆ ಸಹಿಷ್ಣುತೆಯ ಪಾಠದ ಅಗತ್ಯವೇ ಇಲ್ಲ|| ಬಂಧುಗಳೇ ಹಿಂದೂ ಸಂಸ್ಕಾರದ ಬಲದಿಂದ ನಾನು ಹೆಮ್ಮೆಯಿಂದ ಹೇಳಬಲ್ಲೆ " ಅಕಸ್ಮಾತ್ ಏಸುಕ್ರಿಸ್ತ ಭಾರತದಲ್ಲಿ ಹುಟ್ಟಿರುತ್ತಿದ್ದರೆ ಆತನಿಗೆ ಅಂತ ಕ್ರೂರ ಸಾವು ಖಂಡಿತ ಬರುತ್ತಿರಲಿಲ್ಲ. ನಾನು ದೇವರ ಮಗ ಎಂದ ಆತನನ್ನು ಪಾಪಿಗಳು ಮೊಳೆ ಹೊಡೆದು ಸಾಯಿಸಿದರು!"
     ಆದರೆ ನಮ್ಮಲ್ಲೊಬ್ಬ ಇದ್ದ. ಅವನು ದೇವರೇ ಇಲ್ಲ ಅಂದ! ದೇವರಿಲ್ಲ, ಧರ್ಮವಿಲ್ಲ, ಸ್ವರ್ಗ,ನರಕ,ಪಾಪ,ಪುಣ್ಯಗಳಾವುವೂ ಇಲ್ಲ. ಎಲ್ಲಾ ಸುಳ್ಳು. ಎಷ್ಟು ದಿನ ಇರ್ತೀವಿ, ಸತ್ತ ಮೇಲೆ ಏನಾಗ್ತೀವೋ ಅನ್ನೋದೂ ಗೊತ್ತಿಲ್ಲ. ಇದ್ದಷ್ಟು ದಿನ ಚೆನ್ನಾಗಿರಿ ಎಂದ. ಅವನನ್ನು ಚಾರ್ವಾಕ ಅಂತ ಈ ದೇಶ ಗೌರವಿಸಿತು. ಅವನು ಹೇಳಿದ್ದೇನು?
     "ಯಾವಜ್ಜೀವಿ ಸುಖಂ ಜೀವಿ ಭಸ್ಮೀ ಭೂತಸ್ಯ ದೇಹಸ್ಯ ಆಗಮನಂ ಕೃತ: |
      ತಸ್ಮಾತ್ ಇರಣಂ ಕೃತ್ವಾ ಘೃತಂ ಪಿಭೇತ್ ||"
     ಸತ್ತ ಮೇಲೆ ದೇಹವನ್ನು ಸುಡ್ತಾರೆ ಅಥವಾ ಮಣ್ಣು ಮಾಡುತ್ತಾರೆ. ಆಮೇಲೆ ವಾಪಾಸು ಬರಲು ಹೇಗೆ ಸಾಧ್ಯ? ಅದಕ್ಕೋಸ್ಕರ ಚೆನ್ನಾಗಿ ಬದುಕುವುದನ್ನು ಕಲಿಯಿರಿ. ಹಣ ಇಲ್ಲದಿದ್ದರೆ ಸಾಲ ಮಾಡಿಯಾದರೂ ತುಪ್ಪ ತಿನ್ನಿ! ಇದ್ದಷ್ಟು ದಿನ ಚೆನ್ನಾಗಿರಿ ಎಂದ ಚಾರ್ವಾಕನನ್ನು ನಾವು ಕಲ್ಲು ಹೊಡೆದು ಸಾಯಿಸಲಿಲ್ಲ, ಋಷಿ, ಧೃಷ್ಥಾರ ಅಂತ ಗೌರವಿಸಿದೆವು!
      ಗೆಲಿಲಿಯೋ ಐದು ಶತಮಾನಗಳ ಹಿಂದೆ ಸ್ಥಿರ ಸೂರ್ಯನ ಸುತ್ತ ಭೂಮಿ ಸುತ್ತುತ್ತೆ ಅಂತ ವೈಜ್ಞಾನಿಕ ಸತ್ಯ ಹೇಳಿದ. ಚರ್ಚು ಜೈಲಿಗೆ ತಳ್ಳಿತು! ಅದಕ್ಕೂ ಸಾವಿರ ವರ್ಷಗಳ ಹಿಂದೆಯೇ ಆರ್ಯಭಟ ಇದೇ ಸತ್ಯವನ್ನು ಈ ನೆಲದಲ್ಲಿ ಹೇಳಿದ್ದ. ಸ್ಥಿರ ಸೂರ್ಯನ ಸುತ್ತ ಭೂಮಿ ಪ್ರದಕ್ಶಿಣೆ ಹಾಕುತ್ತಾ ಅಕ್ಷದ ಮೇಲೆ ಒಂದು ಸುತ್ತು ಹಾಕಿದಾಗ ಒಂದು ದಿನ ಆಗುತ್ತೆ. ಸುತ್ತುವಾಗ ಜರಗುತ್ತೆ. ಜರಗುತ್ತಾ, ಜರಗುತ್ತಾ ಸೂರ್ಯನಿಗೆ ಪ್ರದಕ್ಶಿಣೆ ಬರೋವಾಗ ಒಂದು ಸಂವತ್ಸರ ಆಗುತ್ತೆ ಎಂದಿದ್ದ. ಒಂದು ಪ್ರದಕ್ಶಿಣೆ ಹಾಕಲು ಅದು ತೆಗೆದು ಕೊಳ್ಳುವ ಸಮಯ ಎಷ್ಟು? ೩೬೫.೨೫೮೭೭೫೬೪೮೪ ಸೆಕೆಂಡುಗಳು ಅಂತ ಖಗೋಳ ವಿಜ್ಞಾನಿ ಸ್ಮಾರ್ಟ್ ಗಿಂತ ಮೊದಲೇ ಭಾಸ್ಕರಾಚಾರ್ಯ ಹೇಳಿದ್ದ. ಆರ್ಯಭಟ ಹಾಗೂ ಭಾಸ್ಕರಾಚಾರ್ಯರನ್ನು ಈ ಸಮಾಜ ಶಿಕ್ಷೆಗೆ ಗುರಿ ಪಡಿಸಲಿಲ್ಲ.ವಿಜ್ಞಾನಿಗಳು ಅಂತ ಗೌರವಿಸಿತು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಹಿಂದೂ ಸಮಾಜದ ವಿಶ್ಲೇಷಣೆ ಮಾಡಬೇಕಾಗಿದೆ.
      ಬಂಧುಗಳೇ, ತಾಯಿ ಭಾರತಿ ದಕ್ಶಿಣದಲ್ಲಿ ಕನ್ಯಾಕುಮಾರಿಯಾಗಿ ಉತ್ತರಕ್ಕೆ ಹೊರಟು ಕೃಷ್ಣೆ, ಗೋದೆಯರಲಿ ಮಿಂದು, ವಿಂಧ್ಯನನು ಹತ್ತಿಳಿದು ಗಂಗೆ, ಯಮುನೆಯರನು ಕೊರಳಲ್ಲಿ ಬಳಸಿ, ಕೈಲಾಸವಾಸಿ ಶಂಕರನನ್ನು ಸೇರಿ ಅನ್ನಪೂರ್ಣೆಯಾಗಿ ನಮ್ಮನ್ನು ಒಳಗೊಂಡಂತೆ ಮನುಕುಲವನ್ನು ಸಲಹುತ್ತಿರುವಂತಹ ದಿವ್ಯ ಮಂಗಲ ದೃಶ್ಯವನ್ನು ಹೃದಯದಲ್ಲಿ ಧಾರಣೆ ಮಾಡಿಕೊಳ್ಳೋಣ........ವಂದೇ ಮಾತರಂ

ಭಾರತ ದರ್ಶನ-೯


ಚರಿತ್ರೆ ಕಣ್ಣುಬಿಡುವ ಮೊದಲೇ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!
ಹಿಂದೂಸ್ಥಾನದ ಹಿರಿಮೆ ಏನು?
೧. ಕಳೆದ ಹತ್ತುಸಾವಿರ ವರ್ಷಗಳ ತಮ್ಮ ಇತಿಹಾಸದಲ್ಲಿ ಹಿಂದೂಗಳು ಯಾವುದೇ ಅನ್ಯದೇಶಗಳನ್ನು ರಾಜನೈತಿಕ ವಿಜಯ ಸಾಧಿಸಿ ತಮ್ಮ ವಸಾಹತುವನ್ನಾಗಿ ಮಾಡಿಕೊಂಡಿಲ್ಲ.

೨. ಸಂಖ್ಯಾನುಕ್ರಮಣಿಕೆಯನ್ನು, ದಶಮಾಂಶ ಪದ್ದತಿಯನ್ನೂ, ಶೂನ್ಯದ ಬಳಕೆಯನ್ನೂ ಜಗತ್ತಿಗೆ ಪರಿಚಯಿಸಿದವರು ಹಿಂದುಗಳು.

೩. "ಪೈ"ನ ಬೆಲೆಯನ್ನು ಕಂಡುಹಿಡಿದವನು ಬೋಧಾಯನ. ಪೈಥಾಗೋರಸ್ ಪ್ರಮೇಯ ಎಂದು ಹೇಳಲಾಗುವ ಪ್ರಮೇಯವನ್ನೂ ಇವನೇ ಕಂಡು ಹಿಡಿದನು.(ಕ್ರಿ.ಪೂ. ೬ನೇ ಶತಮಾನ)

೪. ಬೀಜಗಣಿತ, ತ್ರಿಕೋಣಮಿತಿ, ಕ್ಯಾಲ್ಕುಲಸ್ - ಇವುಗಳು ಪ್ರಪಂಚಕ್ಕೆ ಭಾರತ ನೀಡಿದ ಕೊಡುಗೆಗಳು. 11 ಶತಮಾನದಲ್ಲಿ ಶ್ರೀಧರಾಚಾರ್ಯನು ವರ್ಗ ಸಮೀಕರಣ(quadratic equation)ವನ್ನು ಕಂಡುಹಿಡಿದನು.

೫. ಗ್ರೀಕರು, ರೋಮನ್ನರು ಉಪಯೋಗಿಸಿದ್ದ ಅತೀ ದೊಡ್ಡ ಸಂಖ್ಯೆ ಎಂದರೆ 10ರ ಘಾತ 6. ಆದರೆ ವೇದಕಾಲದಲ್ಲಿ ಹಿಂದೂಗಳು 10ರ ಘಾತ 53(10 to the power 53)ನ್ನು ನಿಶ್ಚಿತ ಹೆಸರಿನೊಡನೆ ಬಳಸುತ್ತಿದ್ದರು. ನಾವು ಈಗಲಾದರೂ ಅಷ್ಟು ದೊಡ್ಡ ಸಂಖ್ಯೆಯನ್ನು ಬಳಸುತ್ತಿಲ್ಲ!

೬. ಕೊಲಂಬಸ್ಗಿಂತ ಮೊದಲೇ ಹಿಂದೂಗಳು ಅಮೇರಿಕಾಕ್ಕೆ ತಲುಪಿದ್ದರು ಎನ್ನುವುದಕ್ಕೆ ಅಜ್ತೀಸರ ದೇವಾಲಯದಲ್ಲಿ ದೊರೆತಿರುವ ಭಾರತೀಯ ಕಲೆಗಳ ನಮೂನೆಗಳು ಸಾಕ್ಷಿ.

೭. ವಾಸ್ಕೋಡಗಾಮನ ಹಡಗನ್ನು ನಾವಿಕನೊಬ್ಬ ಆಫ್ರಿಕಾದಿಂದ ದಕ್ಷಿಣ ಭಾರತಕ್ಕೆ ಕರೆ ತಂದನು. ಭಾರತೀಯ ಹಡಗು ಅವನ ಹಡಗಿಗಿಂತ ಹಲವು ಪಟ್ಟು ದೊಡ್ಡದಿತ್ತು.

೮. ಬೈನರಿ ಸಂಖ್ಯೆಗಳ(0 ಮತ್ತು 1) ಉಲ್ಲೇಖ ಮತ್ತು ಬಳಕೆ ವೇದಕಾಲದಲ್ಲೇ ಇತ್ತು.

೯. ವೇದಗಣಿತ ಎಂಥಾ ಕ್ಲಿಷ್ಟ ಸಮಸ್ಯೆಯನ್ನೂ ಕ್ಷಣಮಾತ್ರದಲ್ಲಿ, ಒಂದೆರಡು ಸಾಲುಗಳಲ್ಲಿ ಪರಿಹರಿಸಬಲ್ಲ ಪ್ರಾಚೀನ ಹಿಂದೂ ಗಣಿತ ಯಂತ್ರ.

೧೦. ಖಗೋಳ ವಿಜ್ಞಾನಿ ಸ್ಮಾರ್ಟಗಿಂತ ಮೊದಲೇ ಭೂಮಿ ಸೂರ್ಯನನ್ನು ಸುತ್ತಲು 365.2587756484 ಎಂದು 5ನೇ ಶತಮಾನದಲ್ಲೇ ಭಾಸ್ಕರಾಚಾರ್ಯ ಲೆಕ್ಕಹಾಕಿದ್ದನು.
-ಇನ್ನೂ ಇದೆ!

ಭಾರತ ದರ್ಶನ-೧೦



"ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ।
ಬ್ರಹ್ಮರಾಜರ್ಷಿ ರತ್ನಾಢ್ಯಾಂ ವಂದೇ ಭಾರತ ಮಾತರಂ॥"

೧. ಮಾನವನಿಗೆ ತಿಳಿದಿದ್ದ ಪ್ರಪ್ರಥಮ ಚಿಕಿತ್ಸಾಪದ್ದತಿ ಆಯುರ್ವೇದ. ಇದರ ಜನಕ ಚರಕ, ಗ್ರಂಥ ಚರಕಸಂಹಿತಾ.

೨. ಜಗತ್ತಿನ ಪ್ರಪ್ರಥಮ ವಿಶ್ವವಿದ್ಯಾಲಯ ಕ್ರಿ.ಪೂ. ೭೦೦ರಲ್ಲಿ ತಕ್ಷಶಿಲೆಯಲ್ಲಿ ಸ್ಥಾಪಿಸಲಾಯಿತು. ಪ್ರಪಂಚದ ವಿವಿದೆಡೆಯಿಂದ ೧೦,೫೦೦ ವಿಧ್ಯಾರ್ಥಿಗಳು, ೬೦ಕ್ಕೂ ಹೆಚ್ಚು ವಿಷಯಗಳನ್ನು ಕಲಿಯುತ್ತಿದ್ದರು.

೩. ನೌಕಾಯಾನದ ಕಲೆ ವೇದಕಾಲದಲ್ಲೇ ಪ್ರಚಲಿತದಲ್ಲಿತ್ತು.(ವಿವರಣೆ ಮುಂದಿನ ಭಾಗದಲ್ಲಿ) ನ್ಯಾವಿಗೇಷನ್ ಪದ ಸಂಸ್ಕೃತದ 'ನವಗತಿ' ಪದದಿಂದ ಉತ್ಪತ್ತಿಯಾಗಿದೆ. ಅಂತೆಯೇ ನೇವಿ ಪದ ಸಂಸ್ಕೃತದ 'ನೌ' ಶಬ್ಧದಿಂದ ಹುಟ್ಟಿದೆ.

೪. 1896ನೇ ಇಸವಿಯವರೆಗೇ ಭಾರತ ರತ್ನಗಳ ಏಕಮಾತ್ರ ಆಗರವಾಗಿತ್ತು.

೫. ವೈರ್ ಲೆಸ್ ತಂತ್ರಜ್ಞಾನವನ್ನು ಕಂಡುಹಿಡಿದವರು ಜಗದೀಶ ಚಂದ್ರ ಬೋಸರೇ ಹೊರತು ಮಾರ್ಕೋನಿಯಲ್ಲ ಎಂದು IEEE ಧೃಢಪಡಿಸಿದೆ.

೬. ಶಸ್ತ್ರಚಿಕಿತ್ಸೆಯ ಜನಕ ಸುಶ್ರುತ. ಆಗಿನ ಕಾಲದಲ್ಲಿಯೇ ಸಿಜೇರಿಯನ್, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕೃತಕ ಅಂಗಜೋಡಣೆ, ಮೂಳೆ ಮುರಿತ, ಮೂತ್ರಕೋಶದ ಕಲ್ಲುಗಳು, ಪ್ಲಾಸ್ಟಿಕ್ ಸರ್ಜರಿ, ಮೆದುಳಿನ ಶಸ್ತ್ರಚಿಕಿತ್ಸೆಗಳನ್ನೂ ಮಾಡುತ್ತಿದ್ದರು. ಅನಸ್ತೇಶಿಯಾ, 125ಕ್ಕೂ ಹೆಚ್ಚು ಶಲ್ಯಚಿಕಿತ್ಸೆಯ ಶಸ್ತ್ರಗಳನ್ನು ಅವರು ಉಪಯೋಗಿಸುತ್ತಿದ್ದರು. ಶರೀರಶಾಸ್ತ್ರ, ಜಂತು-ವನಸ್ಪತಿ,....ಗಳಿಗೆ ಸಂಬಧಿಸಿದ ಅನೇಕ ಉಲ್ಲೇಖಗಳೂ, ಗ್ರಂಥಗಳೂ ಇವೆ.

೭. ವ್ಯವಸಾಯಕ್ಕಾಗಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಪ್ರಥಮ ಬಾರಿಗೆ ಆದದ್ದು ಸೌರಾಷ್ಟ್ರದಲ್ಲಿ.

೮. ಕ್ರಿ.ಪೂ. 150ರಲ್ಲಿದ್ದ ಶಕರ ದೊರೆ ಪ್ರಥಮ ರುದ್ರಮಾನನ ಪ್ರಕಾರ ರೈವತಕ ಪರ್ವತದಲ್ಲಿ 'ಸುದರ್ಶನ' ಎಂಬ ಕೊಳವನ್ನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಕಟ್ಟಲಾಗಿತ್ತು.

೯. ಚದುರಂಗ( ಚೆಸ್, ಶತರಂಜ್, ಅಷ್ಟಪಾದ)ದ ಮೂಲಸ್ಥಾನ ಭಾರತ.

೧೦. ವಿಮಾನಶಾಸ್ತ್ರದ ಜನಕ ಮಹರ್ಷಿ ಭಾರಧ್ವಾಜ. ಇದರಲ್ಲಿ ವಿಮಾನಕ್ಕಾಗಿ ಉಪಯೋಗಿಸಬಹುದಾದ ವಿವಿಧ ಇಂಧನಗಳು, ಅವುಗಳನ್ನು ತಯಾರಿಸುವ ವಿಧಾನ, ವಿವಿಧ ಗಾತ್ರದ, ವೇಗದ, ಇಂಧನ ಕ್ಷಮತೆಯ ವಿಮಾನಗಳ ತಯಾರಿಕಾ ವಿಧಾನಗಳು ಇವೆ. ಇದೇ ಗ್ರಂಥದ ಆಧಾರದಲ್ಲಿ ಆನೇಕಲ್ ಸುಬ್ರಾಯಭಟ್ಟರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ತಲ್ಪಾಡೆ ದಂಪತಿಗಳು 1896ರಲ್ಲಿ ವಿಮಾನ ರಚಿಸಿ ಯಶಸ್ವಿ ವಿಮಾನ ಹಾರಾಟ ನಡೆಸಿದ್ದರು. ಇದಕ್ಕೆ ಮಹಾದೇವ ಗೋವಿಂದ ರಾನಡೆ ಹಾಗೂ ಗಾಯಕ್ವಾಡಿನ ಮಹಾರಾಜ ಸಾಕ್ಷಿಯಾಗಿದ್ದರು. ಆದರೆ ಪತ್ನಿಯ ಸಾವಿನ ನಂತರ ತಲ್ಪಾಡೆ ತಮ್ಮ ಸಂಶೋಧನೆಯಿಂದ ವಿಮುಖರಾದಾಗ ಈ ತಂತ್ರಜ್ಞಾನ ಬ್ರಿಟಿಷರ ಕುತಂತ್ರದಿಂದ ರೈಟ್ ಬ್ರದರ್ಸ್ ಗೆ ಸೇರಿ 1922ರಲ್ಲಿ ಅವರು ಈ ಸಂಶೋಧನೆಯ ಒಡೆಯರೆನಿಸಿಕೊಂಡರು.
-ಇನ್ನೂ ಇದೆ!

ಭಾರತ ದರ್ಶನ-೧೧



ಇಂದಿಗೂ ಕೆಲವರು ಬ್ರಿಟಿಷರಿಂದ ನಮಗೆ ಶೈಕ್ಷಣಿಕವಾಗಿ, ಸಂಚಾರ ವ್ಯವಸ್ಥೆಯಿಂದಾಗಿ ಲಾಭ ಆಗಿದೆ ಎಂದೇ ಭಾವಿಸುತ್ತಾರೆ! ಆದರೆ ವಾಸ್ತವವಾಗಿ ಬ್ರಿಟಿಷರು ಮಾಡಿದ್ದು ಭಾರತದ ಅಂತಃಸತ್ವದ ಲೂಟಿಯೇ ಹೊರತು ನಮ್ಮ ಉತ್ಕರ್ಷವಲ್ಲ.
ನೀವೇ ಯೋಚಿಸಿ ಹುಬ್ಬಳ್ಳಿಯಿಂದ ಅಂದಿನ ಬ್ರಹನ್ನಗರಗಳಾದ ಪುಣೆ ಮೀರಜ್ ಗಳಿಗೆ ಹೋಗಬೇಕಾಗಿದ್ದ ರೈಲು ಮಾರ್ಗ ಅಳ್ನಾವರ, ಲೋಂಡಾಗಳತ್ತ ಯಾಕೆ ತಿರುಗಿ ಬಿಡುತ್ತೆ? ಪಶ್ಚಿಮ ಘಟ್ಟಕ್ಕೆ ತಾಗಿ ಅಲ್ಲಿಂದ ಮತ್ತೆ ಉತ್ತರಕ್ಕೆ ತಿರುಗಿ ಬೆಳಗಾವಿಯತ್ತ ಸಾಗುತ್ತದೆ. ಅಂದರೆ ಬ್ರಿಟಿಷರಿಗೆ ಜನರ ಪ್ರಯಾಣಕ್ಕಿಂತ ಅರಣ್ಯೋತ್ಪನ್ನ ಸಾಗಾಣಿಕೆಯೇ ಪ್ರಮುಖವಾಗಿತ್ತು ಎಂದಾಯಿತಲ್ವೇ?
"ನಮ್ಮ ಶಿಕ್ಷಣ ಯೋಜನೆಗಳನ್ನು ಮುಂದುವರಿಸಿದರೆ ಮೂವತ್ತು ವರ್ಷ ಕಳೆದ ಬಳಿಕ ಒಬ್ಬನೇ ಒಬ್ಬ ವಿಗ್ರಹಾರಾಧಕನೂ ಉಳಿದಿರುವುದಿಲ್ಲ."-ಮೆಕಾಲೆ(1836)
ಅಂದರೆ ಅಲೌಕಿಕ ಮತ್ತು ಲೌಕಿಕ ಜ್ಞಾನವೆರಡನ್ನೂ ಬೋಧಿಸುತ್ತಿದ್ದ ಭಾರತೀಯ ಶಿಕ್ಷಣ ಮೂಲೆಗೆ ಸರಿಯಿತು. ಜನರನ್ನು ನಿಶ್ಯಕ್ತ, ನಿರ್ವೀರ್ಯ, ವಿಚಾರಶೂನ್ಯರನ್ನಾಗಿಸುವ ಮೆಕಾಲೆ ಶಿಕ್ಷಣ ಆ ಜಾಗವನ್ನು ಆಕ್ರಮಿಸಿತು!
(ಹದಿಹರೆಯದ ಹುಡುಗರನ್ನು ಮಾತಾಡಿಸಿ ನೋಡಿ, ಹೆಚ್ಚಿನವರಿಗೆ ಚಲನಚಿತ್ರ, ಕಂಪ್ಯೂಟರ್, ವೀಡಿಯೋ ಗೇಮ್ಸ್ ಬಿಟ್ಟರೆ ಏನೂ ತಿಳಿದಿರುವುದಿಲ್ಲ!)

ಋಗ್ವೇದದ ಕಾಲದಲ್ಲೇ ಸಾರಿಗೆ ಸಂಪರ್ಕ ಅತ್ಯುನ್ನತ ಮಟ್ಟದಲ್ಲಿತ್ತು. ಋಗ್ವೇದದಲ್ಲಿ 'ಜಲಯಾನ'- ನೀರು ಮತ್ತು ಗಾಳಿಯಲ್ಲಿ ನಡೆಸಬಹುದಾದ ವಾಹನ; 'ಕಾರಾ'- ನೆಲ ಮತ್ತು ನೀರಿನಲ್ಲಿ ನಡೆಸಬಹುದಾದ ವಾಹನ;ತ್ರಿತಳ, ತ್ರಿಚಕ್ರರತ್ನ, ವಾಯುರತ್ನ ಇವುಗಳ ಉಲ್ಲೇಖವಿದೆ.

ಆಗಸ್ತ್ಯ ಸಂಹಿತೆಯಲ್ಲಿ ಎರಡು ರೀತಿಯ ವಿಮಾನಗಳ ಉಲ್ಲೇಖವಿದೆ. 'ಛತ್ರ' ಯಾ ಅಗ್ನಿಯಾನ: ಶತ್ರುಗಳು ಬೆಂಕಿ ಹಚ್ಚಿದರೆ ಅಥವಾ ನೈಸರ್ಗಿಕ ಕಾಡ್ಗಿಚ್ಚು ಸಂಭವಿಸಿದರೆ ಪಾರಾಗಲು ಇದನ್ನು ಬಳಸುತ್ತಿದ್ದರು. 'ವಿಮಾನ ದ್ವಿಗುಣಂ' ಎಂಬ ವಾಯುಯಾನ ಈಗಿನ ಪ್ಯಾರಾಚೂಟ್ಗಳಂತೆ ಬಳಕೆಯಲ್ಲಿತ್ತು.

ಭರಧ್ವಾಜನ ಯಾತ್ರಾ ಸರ್ವಸ್ವ ಅಥವಾ ಬ್ರಹದ್ವಿಮಾನ ಶಾಸ್ತ್ರದಲ್ಲಿ ವಿಮಾನ ತಯಾರಿಸುವ ಮತ್ತು ಹಾರಿಸುವ ತಂತ್ರಜ್ಞಾನದ ವಿವರಗಳಿವೆ. ವಿಮಾನ ತಯಾರಿಕೆಗೆ ಬೇಕಾದ ಲೋಹ, ಮಿಶ್ರಲೋಹಗಳು, ಬಳಸಬಹುದಾದ ಇಂಧನ ಮತ್ತು ಅದನ್ನು ತಯಾರಿಸುವ ವಿಧಾನಗಳ ವಿವರಣೆ ಇದೆ. ಎಂಥ ಹೊಡೆತ ಬಿದ್ದರು ತುಂಡಾಗದ 'ಅಭೇದ್ಯ', ಬೆಂಕಿ ತಗುಲಿದರು ಸುಡದ 'ಅದಾಹ್ಯ', ಬೇರ್ಪಡಿಸಲಾಗದ 'ಅಛೇದ್ಯ' ಎಂಬ ಮೂರು ರೀತಿಯ ವಿಮಾನಗಳನ್ನು ತಯಾರಿಸುವ ಮಾಹಿತಿ ಇದೆ!
ಭಾರಧ್ವಾಜನ ಇದೇ ಗ್ರಂಥದಲ್ಲಿ ದೂರದಿಂದಲೇ ವಿವಿಧ ತಂತ್ರಜ್ಞಾನ ಬಳಸಿ ಶತ್ರು ವಿಮಾನ ನಾಶ ಮಾಡುವ, ಪಕ್ಕದ ವಿಮಾನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಲ್ಲ 'ಶಬ್ಧಗ್ರಾಹಿ' ಯಂತ್ರದ, ಪೈಲಟ್ ಮತ್ತು ಪ್ರಯಾಣಿಕರು ಧರಿಸಬೇಕಾದ ಬಟ್ಟೆ, ತಿನ್ನಬಹುದಾದ ಆಹಾರ ಮತ್ತಿತರ ವಿಚಾರಗಳಿವೆ.

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಹರಿಶ್ಚಂದ್ರನ ಕಾಲದಲ್ಲಿದ್ದ ವೈಮಾನಿಕ ನಗರ 'ಸೌಭ ದೇಶ', ಆಕಾಶದಲ್ಲಿ ಯುದ್ಧ ಮಾಡುವ ತರಬೇತಿ ಪಡೆದ ಸೈನಿಕರ(ಆಕಾಶ ಯೋಧಿನ: ) ಉಲ್ಲೇಖವಿದೆ. ಅಂದರೆ ಆ ಕಾಲದಲ್ಲೇ ವಾಯುಯುದ್ಧಗಳು ಸಂಭವಿಸುತ್ತಿದ್ದವು ಎಂದಾಯಿತಲ್ಲವೇ?
ಕ್ರಿ. ಪೂ. 240ರ ಸುಮಾರಿಗೆ ಸಾಮ್ರಾಟ ಅಶೋಕನ ಕಾಲದಲ್ಲಿ ಆಕಾಶಯಾನಕ್ಕೆ ಬಳಸುವ ರಥಗಳಿದ್ದವು.

1896ರಲ್ಲಿ ಆನೇಕಲ್ ಸುಬ್ರಾಯ ಭಟ್ಟರ ಮಾರ್ಗದರ್ಶನದಲ್ಲಿ ಶಿವಕರ್ ಬಾಪೂಜಿ ತಲ್ಪಾಡೆ ಮತ್ತವರ ಪತ್ನಿ ವಿಮಾನ ರಚಿಸಿದ್ದು ಭಾರಧ್ವಾಜನ ವಿಮಾನ ಶಾಸ್ತ್ರ ಆಧರಿಸಿಯೇ! ಆಗ ಅವರು ಸೂರ್ಯಕಿರಣ, ಪಾದರಸ, ನಕ್ಷರಸಗಳನ್ನು ಇಂಧನವಾಗಿ ಬಳಸಿದ್ದರು. 1500 ಅಡಿ ಎತ್ತರಕ್ಕೆ ಹಾರಿ ಯಶಸ್ವಿಯಾಗಿ ಕೆಳಗಿಳಿದ ಈ ವಿಮಾನ ಪರೀಕ್ಷೆಯ ಬಗ್ಗೆ ಅಂದಿನ ಪ್ರಸಿದ್ಧ ಮರಾಠಿ ಪತ್ರಿಕೆ 'ದಿ ಕೇಸರಿ' ವರದಿ ಪ್ರಕಟಿಸಿತ್ತು. ಈ ಪರೀಕ್ಷೆಗೆ ಅಂದಿನ ಬರೋಡಾ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡ್ ಮತ್ತು ಜಸ್ಟೀಸ್ ಗೋವಿಂದ ರಾನಡೆ ಸಾಕ್ಷಿಯಾಗಿದ್ದರು. ಪತ್ನಿಯ ನಿಧನದ ನಂತರ ತಲ್ಪಾಡೆ ಇದರ ಬಗ್ಗೆ ಆಸಕ್ತಿ ಕಳಕೊಂಡರು. ಅವರ ನಿಧನಾನಂತರ ಅವರ ಸಂಬಂಧಿಕರು ಈ ತಂತ್ರಜ್ಞಾನವನ್ನು ರೈಟ್ ಸಹೋದರರಿಗೆ ಮಾರಿದರು!

ವಿಶ್ವದ ಬಹುತೇಕ ರಾಷ್ಟ್ರಗಳು ಹುಟ್ಟುವ ಮೊದಲೇ ಭಾರತ ವೈಜ್ಞಾನಿಕತೆಯ ತುತ್ತತುದಿಯಲ್ಲಿತ್ತು ಎಂಬುದಕ್ಕೆ ವಿಮಾನ ಶಾಸ್ತ್ರ ಒಂದು ಸಣ್ಣ ಉದಾಹರಣೆ. ನಮ್ಮ ಕಲ್ಪನೆಗೂ ನಿಲುಕದ ಹಲವು ಸಂಶೋಧನೆಗಳು ಆಗಿಹೋಗಿವೆ. ಅವುಗಳ ದಾಖಲೀಕರಣ ಆಗಿಲ್ಲ. ಅಥವಾ ಅಳಿದು ಹೋಗಿವೆ. ಅಥವಾ ಅಳಿಸಲಾಗಿದೆ!
ಬಂಧುಗಳೇ," ಭಾರತವನ್ನು, ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಕಣ್ಣಿಂದ ನೋಡುವುದನ್ನು ಬಿಡಿ. ದೇಶದ ಹಲವೆಡೇ ಅಜ್ಞಾತವಾಗಿ ವೇದಗಳ ಸಂಶೋಧನೆಯಲ್ಲಿ ತೊಡಗಿಹ ಸಂಸ್ಥೆಗಳಿಗೆ ನಿಮ್ಮದಾದ ಸಹಾಯ ಮಾಡಿ."
"ವಂದೇ ಮಾತರಂ"
-ಇನ್ನೂ ಇದೆ

ಶನಿವಾರ, ಅಕ್ಟೋಬರ್ 6, 2012

ಭಾರತದರ್ಶನ-೭

               ಯೌವನವತಿ ವಿಧವೆಯೊಬ್ಬಳು ತನ್ನತ್ತ ಆಕರ್ಷಿತಳಾಗಿ ತನುಸುಖಕ್ಕಾಗಿ ಪೀಡಿಸಿದಾಗ ತಾನಿದ್ದ ಮೂರನೇ ಮಹಡಿಯಿಂದ ಹಾರಿ ತನ್ನ ಬ್ರಹ್ಮಚರ್ಯತ್ವವನ್ನು ಉಳಿಸಿಕೊಂಡ ಧ್ಯೆಯನಿಷ್ಠ ದೇಶಭಕ್ತ ಚಂದ್ರಶೇಖರ ಆಜಾದ್!
ಬ್ರಹ್ಮಚರ್ಯವೆಂದರೆ ಸ್ತ್ರೀಯರೊಡನೆ ಬೆತ್ತಲೆ ಮಲಗುವುದಲ್ಲ ಅಂತ ಯಾವ ಮೂಢನಿಗಾದರೂ ತಿಳಿದ ವಿಷಯ. ಆದರೂ ಅಂತಹ ಕೃತ್ಯ ಮಾಡಿದವ ಮಹಾತ್ಮ ಅಂತ ಕರೆಸಿಕೊಂಡ! ಆದರೆ ಚಂದ್ರಶೇಖರ ಆಜಾದನಂತಹ ಅಪ್ರತಿಮ ದೇಶಭಕ್ತನನ್ನು ಜನಮಾನಸದಿಂದಲೇ ಮರೆಸುವ ಪ್ರಯತ್ನ ನಡೆಯಿತು, ನಡೆ

ಯುತ್ತಿದೆ.
                ಸ್ತ್ರೀಯ ಸ್ಥಾನವನ್ನು ನಮ್ಮ ಹಿರಿಯರು ಹೇಗೆ ಗುರುತಿಸಿದ್ದರು? ಅದನ್ನು ವಿದ್ಯಾನಂದರ ಬಾಯಿಂದಲೇ ಕೇಳೋಣ.
ತ್ಯಾಗದ ಸಂಕೇತವಾದ ಕುಂಕುಮ ನಮ್ಮ ತಾಯಂದಿರ ಹಣೆಯಲ್ಲಿರುತ್ತೆ. ಸ್ತ್ರೀಯೊಬ್ಬಳು ನಮ್ಮ ಕಣ್ಮುಂದೆ ಬಂದಾಗ ಅವಳು ಯಾರ ತಾಯಿ ಅಥವಾ ಯಾರ ಮಗಳು ಅಂತ ನಾವು ಗುರುತಿಸುತ್ತೇವೆಯೇ ಹೊರತು ಯಾರ ಹೆಂಡತಿ ಅಂತಲ್ಲ. ಉದಾಹರಣೆಗೆ ಜೀಜಾಮಾತೆ ಯಾರು ಅಂತ ದೇಶದ ಯಾವುದೇ ಮೂಲೆಯಲ್ಲಿ ಕೇಳಿ ನೋಡಿ. ನಿಮಗೆ ಸಿಗೋ ಉತ್ತರ ವೀರ ಶಿವಾಜಿಯ ತಾಯಿ! ಷಾಹಜಿಯ ಹೆಂಡತಿ ಅಂತ ಯಾರೂ ಹೇಳಲ್ಲ. ಭುವನೇಶ್ವರಿ ದೇವಿ ಯಾರು? ವೀರ ಸನ್ಯಾಸಿ ವಿವೇಕಾನಂದರ ತಾಯಿ ಅನ್ನುತ್ತೇವೆಯೇ ವಿನಾ ಕಲ್ಕತ್ತಾದ ವಕೀಲ ವಿಶ್ವನಾಥ ದತ್ತರ ಹೆಂಡತಿ ಅಂತ ಯಾರೂ ಹೇಳಲ್ಲ. ಕೌಸಲ್ಯ ಯಾರು? ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ತಾಯಿ ಅಂತೇವೆಯೇ ಹೊರತು ಶ್ರೀಮತಿ ದಶರಥ ಅಂತ ಯಾರೂ ಅನ್ನಲ್ಲ! ಕುಂತಿದೇವಿಯನ್ನು ಯಾರಾದರೂ ಮಿಸೆಸ್ ಪಾಂಡು ಅಂತ ಹೇಳಿದರೆ ಎಷ್ಟು ಸಂಕೋಚ ಆಗಬಹುದು ನಮಗೆ! ಅಕೆ ಪಾಂಡವರ ತಾಯಿ, ಕುಂತಿಭೋಜನ ಸಾಕುಮಗಳು ಎಂದಾಗಲೇ ನಮಗೆ ಸಮಾಧಾನ ಆಗುತ್ತೆ. ಹಾಗೆ ನಮ್ಮ ತಾಯಿ ಭಾರತಿ.
           ಭಾರತ ಎಂದರೆ ಜೋಡ್ಸೋದು, ಸಮನ್ವಯ ಎಂದರ್ಥ. ಭಾವ ರಾಗ ತಾಳಗಳ ಸಮನ್ವಯವೇ ಸಂಗೀತ.
ಅಂದರೆ ಸ್ವರಗಳಲ್ಲಿ ಸಾಮರಸ್ಯ ಉಂಟಾದರೆ ಸಂಗೀತ, ಜನರ ಹೃದಯದಲ್ಲಿ ಸಾಮರಸ್ಯ ಉಂಟಾದರೆ ಭಾರತ!
ಅಂದರೆ ವಿವಿಧತೆಯಲ್ಲಿ ಏಕತೆ ಕಾಣುವಂತಹ ಸಂದೇಶ ಅದು.
-ಮುಂದುವರಿಯುವುದು

ಭಾರತ ದರ್ಶನ-೬

                    ತಾನು ಮಾತ್ರವಲ್ಲ, ತನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನು ಸ್ವಾತಂತ್ರ್ಯ ಯಜ್ಞದ ಅಗ್ನಿಕಣಗಳನ್ನಾಗಿಸಿದವರು ವೀರ ಸಾವರ್ಕರ್!
ಇಲ್ಲದಿದ್ದರೆ ಬೀದಿ ಬದಿಯಲ್ಲಿ ಪುಂಡರೊಡನೆ ಚೇಷ್ಟೆಯಲ್ಲಿ ಕಾಲ ಕಳೆಯುತ್ತಿದ್ದ ಹೆಳವ ಆಬಾ ಪಾಂಗಳೆಯ ಬಾಯಿಂದ ತಾಯಿಯ ಗುಣಗಾನ ಕಾವ್ಯರಸಧಾರೆಯಾಗಿ ಹರಿಯಲು ಸಾಧ್ಯವೇ? ಇಂಜಿನಿಯರಿಂಗ್ ಮಾಡಲು ಹೋಗಿ ಮೋಜು-ಮಸ್ತಿ ಮಾಡುತ್ತಾ ಹುಡುಗಿಯರನ್ನು ಚುಡಾಯಿಸುತ್ತಿದ್ದ ಧಿಂಗ್ರಾನಿಂದ ಕರ್ಜನ್ ವಾಯ್ಲಿಯ ಸಂಹಾರ ಸಾಧ್ಯವಿತ್ತೆ? ಇವೆರಡು ಉದಾಹರಣೆ ಅಷ್ಟೇ. ಆದ

ರೆ ಅಂತಹ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರ್ಕರರನ್ನು ನಾವು ನಡೆಸಿಕೊಂಡ ರೀತಿ ಎಂತಹ ಹೀನ ವ್ಯಕ್ತಿಯಲ್ಲಿಯಾದರೂ ರೋಷ ಉಕ್ಕಿಸುವಂತಹದ್ದು ಅಲ್ಲವೇ? ತಾತ್ಯಾಟೋಪೆಯ ಕಥನ ಬರೆದ ನಂತರ ಸಾವರ್ಕರ್ ಕಣ್ಣೀರ್ಗರೆಯುತ್ತಾ ಹೇಳಿದ್ದರು, "ತಾತ್ಯಾ ನೀ ಇಂತಹ ಹತಭಾಗ್ಯ ದೇಶದಲ್ಲಿ ಯಾಕೆ ಹುಟ್ಟಿದೆ? ಬೇರಾವ ದೇಶದಲ್ಲಾದರು ಹುಟ್ಟಿದ್ದರೆ ನಿನ್ನ ವಿಗ್ರಹವನ್ನು ಮನೆಮನೆಯಲ್ಲಿಟ್ಟು ಪೂಜಿಸುತ್ತಿದ್ದರು!" ವಾಸ್ತವದಲ್ಲಿ ಅವರಿದನ್ನು ತಾತ್ಯಾಟೋಪೆಗೆ ಹೇಳಿದ್ದರೂ ನಾವು ತಾತ್ಯಾರಾವ್ ಸಾವರ್ಕರರಿಗೆ ಇದೇ ಪರಿಸ್ಥಿತಿ ತಂದೆವಲ್ಲ! ಭಾರತದ ಹತಭಾಗ್ಯ ಪರಿಸ್ಥಿತಿಗೆ ಕಾರಣ ನಾವೇ ಅಲ್ಲವೇ? ಇತಿಹಾಸವನ್ನು ಮರೆತ ದೇಶ ಅವನತಿಗೆ ಸಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕೆ?
ಹಾಗಾದರೆ ಹೇಗಿತ್ತು ಭಾರತ?ಕೇಳಿ ವಿದ್ಯಾನಂದರ ಧ್ವನಿಯಲ್ಲಿ-
                       "ವಿಶ್ವಸಂತತಿಯೆಲ್ಲಾ ನಿನ್ನ ಪುಣ್ಯೋದರದ ಹಸುಗೂಸುಗಳೆಂದು ಹಾಲುಣಿಸಿದೆ. ಒಂದೇ ತೊಟ್ಟಿಲೊಳಿಟ್ಟು ತೂಗಿ ಶೋಭನವಾಗಿ ಪ್ರೇಮ ಸಂಗೀತದಲಿ ಮೈಮರೆಸಿದೆ" ಎಂಬ ಕವಿವಾಣಿ ಎಷ್ಟು ಚೆನ್ನ. ಮಗು ಭರತನಿಂದಾಗಿ ದೇಶ ಭಾರತವೆನಿಸಿತು ಎಂದು ಎಲ್ಲರಿಗೂ ತಿಳಿದಿದೆ. ಇದರ ಹಿಂದಿರುವ ಒಂದು ಸಾಂಸ್ಕೃತಿಕ ಮೌಲ್ಯ ಗಮನಿಸಿ. ನಮ್ಮ ತಾಯಿಯನ್ನ ಗುರುತಿಸಿದ್ದು ಆಕೆಯ ಮಗನ ಮೂಲಕ! ಹೆಣ್ಣು ಮಕ್ಕಳನ್ನು ಮಾತೃಸ್ವರೂಪದಲ್ಲಿ ಕಾಣೋದು ನಮ್ಮ ಸಂಸ್ಕೃತಿ. ಕಣ್ಣಿಗೆ ಕಾಣುವ ಸಕಲ ಸ್ತ್ರೀ ಅಂಶವನ್ನು ಜಗಜ್ಜನನಿ ಪಾರ್ವತಿ ಸ್ವರೂಪದಲ್ಲಿ ನೋಡುವ ಸಂಸ್ಕೃತಿ ನಮ್ಮದು. ಇದು ಬರೀ ತತ್ವಜ್ಞಾನ ಅಲ್ಲ ವ್ಯವಹಾರದಲ್ಲಿದೆ!
                     ಮನೆಯಲ್ಲಿ ನೋಡಿ, ತಂದೆ ತನ್ನ ಮಗಳನ್ನ ಅಮ್ಮಾ ಅಂತ ಕರೀತಾನೆ. ಮನೆಗೆ ಬಂದವರು ಆಗಷ್ಟೇ ಅಂಬೆಗಾಲಿಕ್ಕುವ ಬೊಚ್ಚು ಬಾಯೊಳು ಕಿಲಕಿಲ ನಗುವ ಮಗುವನ್ನು ಮುತ್ತಕ್ಕೀ ಏನಮ್ಮಾ ಅಂತ ಅನ್ನಲ್ವಾ? ತನ್ನ ಮಗಳನ್ನ ತಾಯಿ ರೂಪದಲ್ಲಿ ಕಾಣೋ ವ್ಯಕ್ತಿಗೆ ಕೈ ಹಿಡಿದ ಹೆಂಡತಿಯನ್ನು ತಾಯಿ ರೂಪದಲ್ಲಿ ಕಾಣೋದು ಕಷ್ಟವಾಗಲ್ಲ. ಧರ್ಮಪತ್ನಿಯನ್ನ ದೇವಿರೂಪದಲ್ಲಿ ಕಂಡು ಪರಮಹಂಸರು ಆರಾಧನೆ ಮಾಡಿದ್ರಲ್ಲ!
ಮನೆಯಲ್ಲಿನ ಸಂವಾದ ಸ್ವಲ್ಪ ಗಮನಿಸಿ. ಮನೇಲಿ ಹೆಂಡ್ತೀನಾ ಕರೆಯುವಾಗ ಗಂಡ ನೇರವಾಗಿ ಕರೆಯೋಲ್ಲ. ಮಗುವನ್ನು ಕರೆದು ಅಮ್ಮ ಎಲ್ಲಿದ್ದಾಳೆ ಅಮ್ಮನ್ನ ಕರಿ ಎನ್ನುತ್ತಾನೆಯೇ ಹೊರತು ನನ್ನ ಹೆಂಡ್ತೀನಾ ಕರಿ ಎನ್ನಲ್ಲ. ಹಾಗೆಯೇ ಹೆಂಡ್ತೀ ಗಂಡನನ್ನು ಕರೆಯುವಾಗ ಮಗು ಅಪ್ಪ ಎಲ್ಲಿದ್ದಾರೆ ನೋಡು. ಸ್ವಲ್ಪ ಕರಿ ಎನ್ನುತ್ತಾಳೆಯೇ ಹೊರತು ನನ್ನ ಹಸ್ಬೆಂಡನ ಕರಿ ಎನ್ನಲ್ಲ. ಶಬ್ಧಗಳೇನೋ ಸರಿ. ನಮಗದು ಹಿಡಿಸಲ್ಲ. ಅದರಲ್ಲಿ ನಮ್ಮ ಸಂಸ್ಕೃತಿಯ ಪ್ರವಾಹ ಇಲ್ಲ!
ಇಲ್ಲೆಲ್ಲಾ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡ ನಾವು ಇನ್ನೊಬ್ಬರಿಗೆ ತನ್ನ ಹೆಂಡತಿಯನ್ನು ಪರಿಚಯಿಸುವಾಗ ಇವಳು ನನ್ನ ಮಿಸ್ಸೆಸ್ಸು ನಾನವಳ ಹಸ್ಬೆಂಡ್ ಹೀಗೆಲ್ಲಾ ಹೇಳ್ತಾರೆ. ನಮ್ಮ ಹಿರಿಯರು ಹೀಗೆ ಹೇಳ್ತಾ ಇರಲಿಲ್ಲ. ಅವರು "ಈಕೆ ನನ್ನ ಕುಟುಂಬ. ನನ್ನ ಮಗುವಿನ ತಾಯಿ" ಎಂದು ಪರಿಚಯಿಸುತ್ತಿದ್ದರು. ಎಷ್ಟು ಸುಂದರವಾದ ಪದ್ದತಿ! ಹೆಂಡತಿ ಎಂಬ ಶಬ್ಧ ಗೌಣ. ಯಾಕೆಂದರೆ ಹೆಂಡತಿ ಅನ್ನೋ ಶಬ್ಧದಲ್ಲಿ ಭೋಗದ ವಾಸನೆ ಇದೆ. ತಾಯಿ ಅನ್ನುವ ಶಬ್ಧದಲ್ಲಿ ತ್ಯಾಗದ ಸುಗಂಧ ಇದೆ!
(ಮುಂದಿನ ಭಾಗ ಮೇಲಿನ ವಿಷಯದ ಪೂರಕ ಮಾಹಿತಿಗಳೊಂದಿಗೆ)
-ಮುಂದುವರಿಯುವುದು

ಸೋಮವಾರ, ಅಕ್ಟೋಬರ್ 1, 2012

ಭಾರತ ದರ್ಶನ-೫

ವಾಸುದೇವ ಬಲವಂತ ಫಡಕೆ!
ಮಹಾರಾಷ್ಟ್ರದಲ್ಲಿ ರಾಮೋಶಿಗಳ ಪಡೆ ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಡಿದ ಈ ವೀರ ದೂರದ ಮರಳುಗಾಡು ಏಡನ್ ನಗರದಲ್ಲಿ ಬಂಧನದಲ್ಲಿ ವೀರಸ್ವರ್ಗ ಪಡೆಯುವಾಗ ಭರತ ಭೂಮಿಯ ಪವಿತ್ರ ಮೃತ್ತಿಕೆ(ಮಣ್ಣು) ಆ ಯೋಧನ ಮುಷ್ಠಿಯಲ್ಲಿ ಭದ್ರವಾಗಿತ್ತು!
ಆತನ ಈ ಅಚಲ ನಿಷ್ಟೆ ಆತನಿಂದಾಗಿ ಪಡೆದ ಸ್ವಾತಂತ್ರ್ಯವನ್ನು ಅನುಭವಿಸುತ್ತಿರೋ ನಮಗೆ ಇದೆಯೇ? ನಾವು ನಮ್ಮತನವನ್ನೇ ಮರೆತಿದ್ದೇವೆ ಎಂದೆನಿಸುತ್ತಿಲ್ಲವೆ?
ಯಾಕೀ ಮಾತು?
ಕೇಳಿ ವಿದ್ಯಾನಂದರ ಅಮೃತವಾಣಿ.
ನಮ್ಮ ದೇಶದ ಇಕ್ಕೆಲಗಳಲ್ಲಿರುವ ಸಮುದ್ರಗಳೆರಡರ ಹೆಸರುಗಳ ಬಗ್ಗೆ ಯೋಚಿಸಿದ್ದೀರಾ? ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ! ನಮ್ಮ ಸಮುದ್ರಕ್ಕೆ ನಮ್ಮ ಮೇಲೆ ಆಕ್ರಮಣ ಮಾಡಿದ ಅರಬ್ಬರ ಹೆಸರೇಕೆ? ನಮ್ಮ ಹಿರಿಯರು ಪಶ್ಚಿಮ ಸಮುದ್ರಕ್ಕೆ ರತ್ನಾಕರ ಪೂರ್ವ ಸಮುದ್ರಕ್ಕೆ ಮಹೋದಧಿ ಅಂತ ಹೆಸರಿಟ್ಟಿದ್ದರು. ಸ್ವಾತಂತ್ರ್ಯ ವೀರ ಸಾವರ್ಕರ್ ದಾಸ್ಯದ ಹೆಸರುಗಳನ್ನು ಬದಲಾಯಿಸೋಕೆ ಕರೆ ಕೊಟ್ಟರು. ಪಶ್ಚಿಮ ಸಮುದ್ರಕ್ಕೆ ಸಿಂಧೂ ಬಂದು ಸೇರುತ್ತೆ, ಪೂರ್ವ ಸಮುದ್ರಕ್ಕೆ ಗಂಗೆ ಬಂದು ಸೇರ್ಕೊತ್ತಾಳೆ. ಹಾಗಾಗಿ ದಾಸ್ಯದ ಹೆಸರುಗಳನ್ನು ಬಿಟ್ಟು ಕನಿಷ್ಟ ಆ ನದಿಗಳ ಹೆಸರಿಂದ ಅಂದರೆ ಸಿಂಧೂ ಸಾಗರ ಮತ್ತು ಗಂಗಾ ಸಾಗರ ಅಂತ ಕರೆಯೋಣ ಅಂತ ಹೇಳಿದರು. ನಮ್ಮ ರಾಜಕಾರಣಿಗಳು,ನಾವೂ ಕಿವಿಗೊಡಲೇ ಇಲ್ಲ!
ನಮ್ಮಹೆಸರುಗಳ ಮೇಲೆ ಆಕ್ರಮಣ ನಡೆಯಿತು ಎನ್ನುವುದಕ್ಕೆ ಇದೆರಡು ಉದಾಹರಣೆ ಅಷ್ಟೆ! ಇಂತದೆಷ್ಟಿರಬಹುದು? ದೇಶದ ಉದ್ದಗಲಕ್ಕೆ ಒಮ್ಮೆ ಕಣ್ಣು ಹಾಯಿಸಿ.
ಜಗತ್ತಿನ ಅತೀ ಎತ್ತರದ ಶಿಖರ ಅದು ನಮ್ಮ ತೀರ್ಥ. ಅದರ ಹೆಸರು ಗೊತ್ತಾ ಮಗು ಎಂದು ನಮ್ಮ ದೇಶದ ಯಾವುದಾದರೂ ಮಗುವನ್ನು ಕೇಳಿ ನೋಡಿ. ಮೌಂಟ್ ಎವರೆಷ್ಟ್ ಅಲ್ವಾ ಅಂಕಲ್ ಎನ್ನುತ್ತದೆ ಆ ಮಗು. ಈ ಅಂಕಲ್, ಮೌಂಟ್, ಎವರೆಷ್ಟ್ ಯಾವುವೂ ನಮ್ಮದಲ್ಲ. ನಮ್ಮ ಋಷಿಗಳ ಕಾಲದಲ್ಲಿ ಇಂಗ್ಲೀಷ್ ಹುಟ್ಟಿಯೇ ಇರಲಿಲ್ಲ. ಜಗತ್ತಿನ ಅತ್ಯುನ್ನತ ಶಿಖರಕ್ಕೆ ನಮ್ಮ ಪೂರ್ವಜರು ಸಾಗರಮಾಥಾ ಅಂತ ಹೆಸರಿಟ್ಟಿದ್ದರು. ಅಂದರೆ ಶಿವನ ನೆತ್ತಿ ಅಂತ ಅರ್ಥ. ಗೌರಿ ಶಂಕರ ಎಂದಾಗ ನಮ್ಮ ಹೃದಯ ಅರಳುತ್ತೆ, ಎವರೆಷ್ಟ್ ಎಂದಾಗ ಭಾವನೆಗಳು ನಿರ್ಮಾಣ ಆಗೋದೇ ಇಲ್ಲ! ಕೆಲವೊಂದನ್ನು ಅವರಿಗೆ ಉಚ್ಚಾರ ಮಾಡಲಿಕ್ಕೆ ಆಗಲೇ ಇಲ್ಲ. ಉದಾಹರಣೆಗೆ ಈಶಾನ್ಯ ಭಾರತದ ಒಂದು ಉತ್ತುಂಗ ಶಿಖರ ಕಾಂಚನ ಗಂಗಾ. ಹಿಮಾಲಯದಲ್ಲಿ ಎತ್ತರಕ್ಕೆ ಅದಕ್ಕೆ ಮೂರನೇ ಸ್ಥಾನ. ಮುಂಜಾನೆ ಮುಂಜಾನೆ ಅರುಣನ ಚಿನ್ನದ ಕಿರಣ ಈ ಮುಗಿಲು ಚುಂಬಿಸೋ ಬೆಳ್ಳಿ ಬೆಟ್ಟದ ಮೇಲೆ ಬಿದ್ದಾಗ ಇಡೀ ಬೆಟ್ಟವೇ ಚಿನ್ನದ ಗಟ್ಟಿಯಂತೆ ಹೊಳೆಯುತ್ತೆ. ಪ್ರಕೃತಿಯ ಈ ಪವಾಡದಿಂದ ಮುದಗೊಂಡ ನಮ್ಮ ಹಿರಿಯರು ಈ ಬೆಟ್ಟಕ್ಕೆ ಕಾಂಚನ ಗಂಗಾ ಎಂದು ಕರೆದರು. ಬ್ರಿಟಿಷರ ಬಾಯಲ್ಲಿ ಅದು ಕಿಂಚನ್ ಚುಂಗಾ ಆಗಿದೆ! ಹಾಗೆಯೇ ಶಕ್ತಿ ಪೀಠ ಕಾಳೀ ಘಾಟ್ ಇವತ್ತು ಕೋಲ್ಕತ್ತಾ ಆಗಿದೆ. ಬಂಗಾಳದ ಇನ್ನೊಂದು ಶಿವಕ್ಷೇತ್ರ ದುರ್ಜಯಲಿಂಗ. ತಪಸ್ಸು ಕೆಡಿಸಲು ಬಂದ ಮನ್ಮಥನನ್ನು ಹಣೆಗಣ್ಣಿನ ಕಿಡಿನೋಟದಿಂದ ಹಿಡಿಬೂದಿ ಮಾಡಿದ ಆ ತ್ರಿಪುರಾರಿ ಲಿಂಗ ರೂಪದಲ್ಲಿ ನೆಲೆನಿಂತ ಕ್ಷೇತ್ರ ಅದು. ಅವನು ಅಜೇಯ, ಅದಕ್ಕೇ ಅದು ದುರ್ಜಯ ಲಿಂಗ. ಬ್ರಿಟಿಷರ ಬಾಯಲ್ಲಿ ಅದು ಡಾರ್ಜ್ ಲಿಂಗ್ ಆಯ್ತು, ಈಗಲೂ ಉಳಿದುಕೊಂಡಿದೆ! ಕನ್ನಡ ಕೆನರಾ ಆಯ್ತು. ಕೊಡಗು ಕೂರ್ಗ್, ಮಡಿಕೇರಿ ಮರ್ಕೆರಾ!
ಹಿಮಾಲಯದ ತಪ್ಪಲಲ್ಲಿರೋ ದ್ರೋಣಧಾರಾ ಡೆಹರಾಡೂನ್ ಆಯ್ತು, ಮಹಾರಾಷ್ಟ್ರದ ಧಾರಾಶಿವ ಉಸ್ಮನಾಬಾದ್ ಆಗಿದೆ! ಆಂದ್ರದ ಪಾಲಾಮೂರ್ ಮೆಹಬೂಬ್ ನಗರ ಆಗಿದೆ, ಸಕಲೇಶಪುರಕ್ಕೆ ಟಿಪ್ಪು ಮಾಂಜರಾಬಾದ್ ಅಂತ ಹೆಸರಿಟ್ಟಿದ್ದ!
ಬೀದರನ ಜಯಸಿಂಹಪುರ ಹುಮನಾಬಾದ್ ಆಗಿದೆ! ಆಂಧ್ರದ ರಾಜಧಾನಿ ಭಾಗ್ಯನಗರ ಹೈದರಾಬಾದ್ ಆಗಿದೆ! ಯಾದವರ ದೇವಗಿರಿ ದೌಲತಾಬಾದ್, ಉತ್ತರಪ್ರದೇಶದ ರಾಮಘರ್ ಈಗ ಅಲಿಘರ್! ಕೃಷ್ಣನ ಸಹಪಾಠಿ ಗೆಳೆಯ ಸುಧಾಮನ ಊರು ಸುಧಾಮ ಪುರಿ ಪೋರಬಂದರ್ ಆಗಿ ಡರ್ ಪೋಕ್ ದೇಶದ್ರೋಹಿಗಳಿಗೆ ಜನ್ಮವೆತ್ತಿದೆ!
ಪ್ರಜಾಪತಿ ಬ್ರಹ್ಮ ಯಾಗ ಮಾಡಿದ ತ್ರಿವೇಣಿ ಸಂಗಮ ಅಕ್ಷಯ ವಟವೃಕ್ಷ ಇರೋ ತೀರ್ಥರಾಜ ಪ್ರಯಾಗ, ಅದನ್ನು ಅಕ್ಬರ್ ಅಲಹಬಾದ್ ಅಂತ ಬದಲಾಯಿಸಿದ್ದಾನೆ! ಕಾಶಿಯನ್ನ ಔರಂಗಜೇಬ್ ಮಹಮ್ಮದಾಬಾದ್ ಅಂತ ಮಾಡಿದ್ದ! ಅಯೋಧ್ಯೆ ಫೈಜಾಬಾದ್ ಆಯ್ತು, ಭವಾನಿಪುರ ಢಾಕಾ ಆಯ್ತು. ಶ್ರೀರಾಮನ ಕಿರಿಯ ಮಗ ಮಹಾರಾಜ ಲವನ ರಾಜಧಾನಿ ಲವಪುರ ಲಾಹೋರ್ ಆಗಿ ಪಾಕಿಸ್ತಾನಕ್ಕೆ ಸೇರಿತು! ಗಾಂಧಾರ ಅಪ್ಘಾನಿಸ್ಥಾನ ಆಗಿದೆ. ಪ್ರಹ್ಲಾದನಿಗೆ ಜನ್ಮವಿತ್ತ ಪ್ರಹ್ಲಾದ ಪುರಿ ಯಾ ಹಿರಣ್ಯಾಕ್ಷ ನಗರಿ ಮುಲ್ತಾನ್ ಆಗಿ ಪಾಕಿಸ್ತಾನದಲ್ಲಿ ನಾರುತ್ತಿದೆ! ಕೃಷ್ಣ ಇಟ್ಟ ಹೆಸರು ಇಂದ್ರಪ್ರಸ್ಥ ಇವತ್ತು ದಿಲ್ಲಿ ಆಗಿದೆ!
ಹೆಸರಿನ ಮೇಲಿನ ಆಕ್ರಮಣ ಅಲ್ಲಿಗೆ ನಿಲ್ಲಲಿಲ್ಲ. ಮನೆ ಮನ ಪ್ರವೇಶ ಮಾಡಿತು. ಅಮ್ಮ ಮಮ್ಮಿ ಆದಳು. ಅಪ್ಪ ಡ್ಯಾಡಿ ಆದ. ಗಂಡಸರೆಲ್ಲಾ ಅಂಕಲ್ಸ್, ಹೆಂಗಸರೆಲ್ಲಾ ಆಂಟಿಗಳು. ಭಾರತ ಇಂಡಿಯಾ!
ಬಂಧುಗಳೇ ಒಳ್ಳೇ ಸಂಗತಿಗಳನ್ನು ಜಗತ್ತಿನ ಎಲ್ಲಾ ಕಡೆಯಿಂದ ಸ್ವೀಕಾರ ಮಾಡಿದವರು ನಾವು! ಆದರೆ ತೆಗೆದು ಕೊಳ್ಳುವಾಗ ಯೋಚನೆ ಮಾಡ್ಬೇಕು. ಅದರಿಂದ ನಮ್ಮ ಸಂಸ್ಕೃತಿಗೆ ಒಳ್ಳೆಯದಾಗುತ್ತಾ ಅಂತ ಯೋಚಿಸಬೇಕು!
ಮಮ್ಮಿ ಅನ್ನೋ ಶಬ್ಧಕ್ಕೆ ಹೆಣ ಅನ್ನೋ ಅರ್ಥ ಇದೆಯಲ್ಲಾ! ನೈಲ್ ನದಿ ಕಣಿವೆಯ ಈಜಿಪ್ಷಿಯನ್ ಜನ ಶವಗಳನ್ನು ಬಿಳಿ ಬಟ್ಟೆಗಳಲ್ಲಿ ಸುತ್ತಿ ಪಿರಮಿಡ್ಗಳಲ್ಲಿ ಇರಿಸ್ತಾ ಇದ್ದರು! ಜನ್ಮ ಕೊಟ್ಟ ಭಾಗ್ಯದಾತೆನಾ ಹೆಣ ಅಂತಾ ಅರ್ಥ ಬರೋ ಶಬ್ಧದಲ್ಲಿ ಕರೆಯೋದು ಸರೀನಾ? ತಾಯಿನಾ ಗುರುತಿಸೋಕೆ ನಮ್ಮಲ್ಲೇನು ಶಬ್ಧದ ದಾರಿದ್ರ್ಯ ಇದೆಯಾ? ಅಮ್ಮಾ, ತಾಯಿ, ಆಯಿ, ಮಾತೆ, ಅವ್ವೆ, ಅಬ್ಬೆ... ಎಷ್ಟೊಂದು ಶಬ್ಧಗಳು! ಶಬ್ಧದ ಜೊತೆಗೆ ಸಂಸ್ಕೃತಿ ಹರಿಯುತ್ತೆ. ಹಾಗಾಗಿ ಮಕ್ಕಳಿಗೆ ಶಬ್ಧಗಳನ್ನು ಕಲಿಸುವಾಗ ಎಚ್ಚರವಹಿಸಬೇಕು! ಭಾರತ( ಅರ್ಥಕ್ಕೆ ಭಾರತ ದರ್ಶನ-೨ ನೋಡಿ) ಇಂಡಿಯಾ ಆದದ್ದು ಹೇಗೆ? ಆ ಪದಕ್ಕೆ ಅರ್ಥವೇ ಇಲ್ಲ. ವಾಯುವ್ಯ ಭಾರತವನ್ನು ಅತಿಕ್ರಮಿಸಿದ ಅಲೆಗ್ಸಾಂಡರ್ ಸಿಂಧೂ ನದಿಯನ್ನು ನೋಡಿದ.(ಸಿಂಧೂ ಎಂದರೆ ಪವಿತ್ರ ಅಥವಾ ಮಂಗಲ ಎಂದರ್ಥ) ಅಲೆಗ್ಸಾಂಡರ್ ಬಾಯಲ್ಲಿ ಅದು ಇಂಡೋಸ್ ಆಯ್ತು. ಇಂಡೋಸ್ ನಿಂದ ಇಂಡಿಕಾ, ಇಂಡಿಯಾ ಶಬ್ಧಗಳು ಬಂದವು. ಹೀಗಾಗಿ ಇಂಡಿಯಾ ಎಂದಾಗ ನಮ್ಮ ತಾಯಿಯ ಮುಡಿಗೆ ಕೈ ಹಾಕಿದ ಅಲೆಗ್ಸಾಂಡರ್ ನೆನಪಾಗುತ್ತೆ!