ಪುಟಗಳು

ಗುರುವಾರ, ಜೂನ್ 8, 2017

ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ

ಬ್ರಿಟಿಷರ ನಿದ್ದೆಗೆಡಿಸಿದ ಪೈಕಾ ಕ್ರಾಂತಿಯೆಂಬ ಪುರಿಯ ಉರಿ

               ಇಂದಿಗೆ ಸರಿಯಾಗಿ ಇನ್ನೂರು ವರ್ಷಗಳ ಹಿಂದೆ ಪುರಿಯ ರಥಬೀದಿ ಅಕ್ಷರಶಃ ಸ್ಮಶಾನವಾಗಿತ್ತು. ಜಗನ್ನಾಥ ಮಂದಿರದ ಐವತ್ತಕ್ಕೂ ಹೆಚ್ಚು ಅರ್ಚಕರ ಶವಗಳು ದೇಗುಲದ ಎದುರಿನ ಬೀದಿಯಲ್ಲಿ ಬೇಸಗೆಯ ಬಿರು ಬಿಸಿಲಿಗೆ ಒಣಗುತ್ತಿದ್ದವು. ಪೈಕ ಸರದಾರರ ಶವಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿತ್ತು. ಪೈಕ ಯೋಧರ ಮಕ್ಕಳ ಶವಗಳೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೈಕಾಗಳನ್ನು ಒಡಿಶಾದಿಂದ ಬಹಿಷ್ಕರಿಸಲಾಗಿತ್ತು. ಹಲವಾರು ಜನರನ್ನು ಬ್ರಿಟನ್ನಿನ ತೋಟಗಳಿಗೆ ಗುಲಾಮರಂತೆ ದುಡಿಸಲು ರವಾನಿಸಲಾಗಿತ್ತು. ಇಡಿಯ ಒಡಿಶಾದ ಮನೆಮನೆಗಳಲ್ಲಿ ದುಃಖ ಮಡುಗಟ್ಟಿತ್ತು. ಒಂದೊಂದು ಮನೆಯಲ್ಲೂ ಒಂದೋ ಮನೆಯ ಸದಸ್ಯರೊಬ್ಬರು ಕೊಲೆಯಾಗಿದ್ದರು ಅಥವಾ ದೇಶಭೃಷ್ಟರಾಗಿದ್ದರು. ಪುರಿಯ ಜಗನ್ನಾಥ ಅಸಹಾಯಕನಾಗಿ ದೇಗುಲದೊಳಗೆ ಬಂಧಿಯಾಗಿದ್ದ! ಬ್ರಿಟಿಷರು ಭಾರತದಲ್ಲಿ ಯಾವುದೇ ಕ್ರೌರ್ಯ ತೋರಲಿಲ್ಲ ಎನ್ನುವವರಿಗೆ ಇತಿಹಾಸದ ಈ ತಿಂಗಳು, ಒಡಿಶಾದ ಬೀದಿಬೀದಿಗಳು ಕ್ರೌರ್ಯದ ಪರಾಕಾಷ್ಠೆಯ ಸಾಕ್ಷಿಯಾಗಿ ನಿಂತಿದ್ದವು.

               ಭಾರತದ ಇತಿಹಾಸದ ಘಟನೆಗಳು ಉದ್ದೇಶಪೂರ್ವಕವಾಗಿಯೇ ಮುಚ್ಚಲ್ಪಟ್ಟಿವೆ. ಬ್ರಿಟಿಷರು ತಮ್ಮ ಸ್ವಂತ ಲಾಭಕ್ಕೆಂದೇ ಆರಂಭಿಸಿದ ರೈಲ್ವೇ, ಅಂಚೆ-ತಂತಿ, ಉದ್ಯಮ, ಕೆಲ ಸುಧಾರಣೆಗಳನ್ನೇ ಘನವಾಗಿ ಪ್ರತಿಪಾದಿಸುವ ಆಷಾಢಭೂತಿ ಇತಿಹಾಸಕಾರರಿಗೆ ಭಾರತೀಯರ ಸ್ವಾತಂತ್ರ್ಯದ ಉತ್ಕಟೇಚ್ಛೆ, ಅದಕ್ಕಾಗಿನ ಹೋರಾಟ, ಬ್ರಿಟಿಷರ ಕ್ರೌರ್ಯವನ್ನು ವರ್ಣಿಸುವಾಗ ಕಣ್ಣಿಗಡ್ಡವಾಗಿ ಪೊರೆ ಬಂದು ಕೂತಿತು. ಸ್ವಾತಂತ್ರ್ಯ ವೀರ ಸಾವರ್ಕರ್ 1857ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಬರೆಯುವ ಸಾಹಸ ಮಾಡದಿರುತ್ತಿದ್ದರೆ, ಭಾರತದ ಸ್ವಾತಂತ್ರ್ಯ ಹೋರಾಟ ಗಾಂಧಿಯಿಂದಲೇ ಶುರುವಾಯಿತೆಂಬ ಕಾಂಗ್ರೆಸ್ಸಿಗರ ಅಪಲಾಪದ ಮೋಡಿಗೆ ಪ್ರತಿಯೊಂದು ಭಾರತದ ಪೀಳಿಗೆ ಒಳಗಾಗುತ್ತಿತ್ತೇನೋ. 1857ಕ್ಕೂ ಮುನ್ನ ನಡೆದ ಹಲವಾರು ಕ್ರಾಂತಿ ಹೋರಾಟಗಳು 1857ರ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರತಳಹದಿಯೊದಗಿಸಿದವು ಎನ್ನಲಡ್ಡಿಯಿಲ್ಲ. ಇದರೊಂದಿಗೆ ಭಾರತೀಯರಲ್ಲಿ ಐಕ್ಯಮತವಿರಲಿಲ್ಲ, ಹೋರಾಡದೆ ದಾಸ್ಯದ ಬಾವಿಗೆ ಬೀಳುವಂತಾಯಿತು ಎನ್ನುವ ಪೊಳ್ಳು ವಾದಗಳೆಲ್ಲ ಕಾಲಕಾಲಕ್ಕೂ ಇಲ್ಲಿ ನಡೆದ ಸಂಘರ್ಷಗಳ ಬೆಳಕಿನಲ್ಲಿ ಕರಗಿ ಹೋಗುತ್ತವೆ. ಭಾರತೀಯರ ಸ್ವಾತಂತ್ರ್ಯ ಪ್ರಾಪ್ತಿಯ ತುಡಿತದ ಅಂತಹ ಒಂದು ಕಥೆಯೇ ಪೈಕಾ ಕ್ರಾಂತಿ!

               ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ. ಕಾಲ ಬದಲಾದರೂ ಪೈಕಾಗಳ ವೀರತ್ವಕ್ಕೆ ಕುಂದು ಬಂದಿರಲಿಲ್ಲ. ಯುದ್ಧದ ಸಮಯದಲ್ಲಿ ರಾಜನ ಸೈನ್ಯದಲ್ಲಿ ಮುಂದಾಳುಗಳಾಗಿ, ಉಳಿದ ಸಮಯದಲ್ಲಿ ಕೋತ್ವಾಲ, ಆರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಧೀರರು ಪೈಕಾಗಳು. ಇವರ ಸೇವಾ ಮನೋಭಾವನೆಯಿಂದ ಸಂತೃಪ್ತರಾದ ರಾಜರು ಕಾಲಕಾಲಕ್ಕೆ ಪೈಕಾಗಳಿಗೆ ಭೂಮಿಯನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಕತ್ತಿವರಸೆಯಲ್ಲಿ ನಿಷ್ಣಾತರಾದ ಪ್ರಹರಿಗಳು, ಧನುರ್ವಿದ್ಯಾ ಪ್ರವೀಣ ಧೇಂಕಿಯಾಗಳು, ಕೋವಿಯ ಕೋವಿದರಾದ ಬನುವಾಗಳೆಂಬ ಮೂರು ವರ್ಗಗಳು ಈ ಪೈಕಾಗಳಲ್ಲಿವೆ.

              1803ರಲ್ಲಿ ಮರಾಠರಿಂದ ಒಡಿಷಾವನ್ನು ಕಿತ್ತುಕೊಂಡ ಆಂಗ್ಲರು ಅಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಹೊರಟಾಗ ಅದು ಸಹಜವಾಗಿ ಸಾಮಂತ ಖೋರ್ಡಾ ದೊರೆ ಎರಡನೇ ಮುಕುಂದ ದೇವನ ಕಣ್ಣು ಕೆಂಪಗಾಗಿಸಿತು. ಅತ ಪೈಕಾಗಳನ್ನು ಜೊತೆಗೂಡಿಸಿಕೊಂಡು ಹೋರಾಡಲು ಅಣಿಯಾಗುತ್ತಿರುವಂತೆಯೇ ಬ್ರಿಟಿಷರು ಸುತ್ತುವರಿದು ಆತನನ್ನು ಖೋರ್ಡಾದಿಂದ ಹೊರದಬ್ಬಿದರು. ಆತನ ಅರಮನೆ, ರಾಜ್ಯ ಬ್ರಿಟಿಷರ ವಶವಾಯಿತು. ಪೈಕಾಗಳ ಭೂಮಿಯನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಕಿತ್ತುಕೊಂಡಿತು. ಹೀಗೆ ಇನ್ನೂರು ವರ್ಷಗಳಿಂದ ರಾಜಧಾನಿಯಾಗಿ ಮೆರೆದಿದ್ದ ಖೋರ್ಡಾದ ಶುಕ್ರದೆಸೆ ಅಂತ್ಯವಾಗುವ ಸೂಚನೆ ದೊರಕಿತು. ಪರಂಪಾರಗತವಾಗಿ ತಮಗೆ ದೊರೆತಿದ್ದ ಉಂಬಳಿಯನ್ನು ಕಿತ್ತುಕೊಂಡು ಸುಲಿಗೆ, ದಬ್ಬಾಳಿಕೆಯನ್ನು ಆರಂಭಿಸಿದ ಕಂಪೆನಿಯ ಮೇಲೆ ಪೈಕಾಗಳು ಸಹಜವಾಗಿಯೇ ಆಕ್ರೋಶಿತಗೊಂಡರು. ಪ್ರಚಲಿತವಿದ್ದ ಕೌರಿ ಕರೆನ್ಸಿ ವ್ಯವಸ್ಥೆಯನ್ನು ಬದಲಾಯಿಸಿತು ಕಂಪೆನಿ ಸರಕಾರ. ವಹಿವಾಟುಗಳೆಲ್ಲಾ ಬೆಳ್ಳಿಯ ನಾಣ್ಯಗಳಲ್ಲೇ ನಡೆಯಬೇಕೆಂದು ತಾಕೀತು ಮಾಡಿತು. ಬೆಳ್ಳಿಯ ನಾಣ್ಯಗಳ ಪೂರೈಕೆ ಕಡಿಮೆಯಿದ್ದ ಕಾರಣ ಜನತೆ ತೆರಿಗೆ ಸಲ್ಲಿಸಲು ವಿಫಲವಾದಾಗ ನಿರ್ದಾಕ್ಷಿಣ್ಯವಾಗಿ ಅವರ ಭೂಮಿಯನ್ನು ಸೆಳೆದುಕೊಂಡಿತು. ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದನ್ನೂ ನಿಷೇಧಿಸಿತು. ಇದು ಪೈಕಾಗಳನ್ನು ಮತ್ತಷ್ಟು ಕೆರಳಿಸಿತು. ಬ್ರಿಟಿಷರ ದುರ್ನೀತಿಯಿಂದ ಕ್ರೋಧಗೊಂಡ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಮಸೆದು ನಿಲ್ಲಲು ಪೈಕಾಗಳನ್ನು ಹುರಿದುಂಬಿಸಿತು.

              ಆಗ ಮುಕುಂದ ದೇವನ ಸೇನಾಧಿಪತಿಯಾಗಿದ್ದವನು ಜಗಬಂಧು ವಿದ್ಯಾಧರ ಬಕ್ಷಿ. ಬಕ್ಷಿ ಎನ್ನುವುದು ಒರಿಸ್ಸಾದಲ್ಲಿ ಸೇನಾ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಉಪಾಧಿ. ದೇಶಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತಾಪೂರ್ವಕವಾಗಿ ರಾಜವಂಶದಿಂದ ವಂಶದ ಪೂರ್ವಜರಿಗೆ ಬಂದ ಜಹಗೀರು ಜಮೀನು ಜಗಬಂಧುವಿನ ಕೈಯಲ್ಲಿ ಝಗಮಗಿಸುತ್ತಿತ್ತು. ಆ ಜಮೀನನ್ನು ಮೋಸದಿಂದ ಪುರಿಯ ಜಿಲ್ಲಾಧಿಕಾರಿ ವಶಪಡಿಸಿಕೊಂಡ. ತನಗಾದ ಮೋಸ ಜೊತೆಗೆ ತನ್ನ ಒಡೆಯನಿಗಾದ ಅನ್ಯಾಯ, ರೈತಾಪಿ ವರ್ಗದ ಮೇಲೆ ಬ್ರಿಟಿಷರು ಎರಗುತ್ತಿದ್ದ ವೈಖರಿಯನ್ನು ನೋಡಿ ಜಗಬಂಧು ರೋಸಿಹೋದ. ಆತ ರೈತಾಪಿ, ಬುಡಕಟ್ಟು ವರ್ಗ ಹಾಗೂ ತನ್ನ ಪೈಕ ಜನಾಂಗವನ್ನು ಸಂಘಟಿಸಿದ. ಮಾರ್ಚ್ 1817ರಲ್ಲಿ 400 ಜನರಿದ್ದ ಖೋಂಡ್ ಎಂಬ ಬುಡಕಟ್ಟು ವರ್ಗ ಖೋರ್ಡಾ ಹಾಗೂ ಘೂಮುಸರ್ಗಳನ್ನು ಬ್ರಿಟಿಷ್ ಅಧಿಪತ್ಯದಿಂದ ಬಿಡುಗಡೆಗೊಳಿಸಲು ಧಾವಿಸಿ ಬಂತು. ಜಗಬಂಧು ತನ್ನ ಪೈಕ ಯೋಧರು ಹಾಗೂ ರಾಜಾ ಮುಕುಂದ ದೇವನೊಡನೆ ಈ ಯೋಧ ಪಡೆಯನ್ನು ಸೇರಿಕೊಂಡು ಅದರ ನೇತೃತ್ವ ವಹಿಸಿದ. ಈ ಕ್ರಾಂತಿ ಸೈನ್ಯ ಕೈಗೆ ಸಿಕ್ಕ ಬ್ರಿಟಿಷ್ ಅಧಿಕಾರಿಗಳನ್ನು ಸದೆಬಡಿದು ಅವರನ್ನು ಓಡಿಸಿ ಎರಡೂ ನಗರಗಳನ್ನೂ ಸ್ವತಂತ್ರಗೊಳಿಸಿತು. ಮಾರ್ಗ ಮಧ್ಯದಲ್ಲಿ ಜಮೀಂದಾರರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಬೆಂಬಲ ಈ ಸೇನೆಗೆ ದೊರಕಿತು. ಕನಿಕಾ, ಕುಜಾಂಗ್, ನಯಾಘರ್, ಘೂಮುಸರ್ಗಳ ಅರಸರು, ಕರಿಪುರ, ಮಿರ್ಚ್ ಪುರ, ಗೋಲ್ರಾ, ಬಲರಾಮಪುರ, ರೂಪಾಸಾ ಮೊದಲಾದ ಸ್ಥಳಗಳ ಜಮೀಂದಾರರು ಈ ಕ್ರಾಂತಿ ಸೇನೆಗೆ ಸಹಕಾರಿಯಾಗಿ ನಿಂತರು. ಈ ಕ್ರಾಂತಿ ಕ್ಷಣಮಾತ್ರದಲ್ಲಿ ಪುರಿ, ಪಿಪ್ಲಿ ಹಾಗೂ ಕಟಕ್'ಗಳಿಗೂ ಹಬ್ಬಿತು. ಪುರಿಯ ಮಂದಿರದ ಮೇಲೆ ಕೇಸರಿ ವಿಜಯ ಧ್ವಜ ಹಾರಿಸುತ್ತಾ ಜಗನ್ನಾಥನ ಎದುರು ಈ ಕ್ರಾಂತಿ ಸೈನ್ಯ ಹಾಜರಾಯಿತು.

              ತಕ್ಷಣ ಎಚ್ಚೆತ್ತ ಬ್ರಿಟಿಷರು ಲೆಫ್ಟಿನೆಂಟ್ ಪ್ರಿಡ್ಯೂರ್ ಹಾಗೂ ಲೆಫ್ಟಿನೆಂಟ್ ಫರೀಸ್ ನೇತೃತ್ವದ ಎರಡು ಪಡೆಗಳನ್ನು ಕ್ರಮವಾಗಿ ಖುರ್ದಾ ಹಾಗೂ ಪಿಪ್ಲಿಗಳಿಗೆ ಕಳುಹಿಸಿಕೊಟ್ಟರು. ಆದರೆ ಕ್ರಾಂತಿ ಸೈನ್ಯ ಫರೀಸನನ್ನು ಯಮಸದನಕ್ಕಟ್ಟಿತು. ಒಂದು ಪಡೆಯ ನೇತೃತ್ವ ವಹಿಸಿ ಬಂದ ಕಟಕ್'ನ ಬ್ರಿಟಿಷ್ ಆಡಳಿತಾಧಿಕಾರಿ ಸ್ವಲ್ಪದರಲ್ಲೇ ಜೀವವುಳಿಸಿಕೊಂಡ. ಆದರೆ ಪುರಿಯಲ್ಲಿದ್ದ ಕ್ರಾಂತಿ ಸೈನ್ಯಕ್ಕೆ ಕ್ಯಾಪ್ಟನ್ ವೆಲ್ಲಿಂಗ್ಟನ್ನಿನಿಂದ ಸೋಲಾಯಿತು. ತಕ್ಷಣ ಅಲ್ಲಿಗೆ ಧಾವಿಸಿದ ಜಗಬಂಧು ಪುರಿಯನ್ನು ಮರುವಶಪಡಿಸಿಕೊಂಡ. ಜಗನ್ನಾಥ ಮಂದಿರದ ಅರ್ಚಕರು ಮುಕುಂದ ದೇವನನ್ನು ಕಳಿಂಗದ ರಾಜನೆಂದು ಘೋಷಿಸಿ "ಗಜಪತಿ" ಎನ್ನುವ ಬಿರುದನ್ನಿತ್ತರು.

               ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಸೇನೆಯನ್ನು ಕಳಿಸಿದ ಬ್ರಿಟಿಷ್ ಸರಕಾರ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡು ರಾಜಾ ಮುಕುಂದ ದೇವನನ್ನು ಸೆರೆಯಲ್ಲಿಟ್ಟಿತು. ಕೇವಲ ಖಡ್ಗ, ಕೋವಿ ಹಾಗೂ ಬಿಲ್ಲು ಬಾಣಗಳಿಂದ ಯುದ್ಧ ಮಾಡಿದ ಶಕ್ತಿಶಾಲಿ ಸೈನ್ಯವೊಂದು ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೆ ಸೋಲನ್ನಪ್ಪಬೇಕಾಯಿತೆಂಬುದು ದಿಟ! ಮೇ ಅಂತ್ಯದ ವೇಳೆಗೆ ಎಲ್ಲಾ ಕ್ರಾಂತಿಯನ್ನು ಅಡಗಿಸಿದ ಬ್ರಿಟಿಷ್ ಸೈನ್ಯ ಒಡಿಷಾದಲ್ಲಿ ಸೈನ್ಯಾಡಳಿತವನ್ನೇ ಹೇರಿತು. ಆ ನಂತರ ನಡೆದದ್ದೇ ಈ ನರಮೇಧ! ಆದರೆ ಪೈಕಾ ಯೋಧರು ಸುಮ್ಮನುಳಿಯಲಿಲ್ಲ. ಬ್ರಿಟಿಷರ ಆಧುನಿಕ ಆಯುಧಗಳೆದುರು ತಮ್ಮ ಕೈಸಾಗದೆಂದು ಅರಿವಾದೊಡನೆ ಅವರು ಗೆರಿಲ್ಲಾ ಸಮರಕ್ಕಿಳಿದರು. 1818ರಲ್ಲಿ ಪೈಕಾಗಳನ್ನು ಬೇರುಸಹಿತ ಕಿತ್ತೊಗೆಯಲು ವಿಶೇಷ ಪಡೆಯೊಂದನ್ನು ರಚಿಸಿತು ಕಂಪೆನಿ ಸರಕಾರ. ಹಲವು ಪೈಕಾ ಯೋಧರು ಪರಿವಾರ ಸಹಿತ ಬಲಿಯಾದರೂ ಪೈಕಾಗಳ ಸಂಘರ್ಷ 1825ರಲ್ಲಿ ಜಗಬಂಧು ಸೆರೆಸಿಕ್ಕುವವರೆಗೆ ನಡೆದೇ ಇತ್ತು. ಜಗಬಂಧು ಸೆರೆಯಾದೊಡನೆ ಪೈಕಾ ಕ್ರಾಂತಿಯೂ ಕೊನೆಯುಸಿರೆಳೆಯಿತಾದರೂ ಅದು ಮುಂಬರುವ ಕ್ರಾಂತಿಗಳಿಗೆ ದಾರಿದೀಪವಾಯಿತು.

               ಈ ಕ್ರಾಂತಿಗೆ ಕಾರಣಗಳನ್ನು ಹುಡುಕಲು ನೇಮಿಸಿದ ಸಮಿತಿಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯಾ ಹಿರಿಯ ಅಧಿಕಾರಿ ವಾಲ್ಟರ್ ಎವರ್ "ಪೈಕಾಗಳು ಅಪಾಯಕಾರಿಗಳು. ಅವರೊಂದಿಗೆ ಅದರಂತೆಯೇ ವ್ಯವಹರಿಸಬೇಕು. ಈಗಲೂ ಉಳಿದಿರುವ ಪೈಕಾಗಳಲ್ಲೂ ಹಿಂದಿನ ಆಕ್ರಮಣಕಾರಿ ಪ್ರವೃತ್ತಿ ಅಂತೆಯೇ ಉಳಿದಿದೆ. ಅವರ ವಿಷಪೂರಿತ ಹಲ್ಲುಗಳನ್ನುದುರಿಸಲು ಬ್ರಿಟಿಷ್ ಪೊಲೀಸರು ಸದಾ ಅವರ ಮೇಲೆ ತಮ್ಮ ಕಣ್ಗಾವಲಿರಿಸಿ ದೀರ್ಘಕಾಲದವರೆಗೆ ಅವರನ್ನು ನಿಯಂತ್ರಣದಲ್ಲಿರಿಸಿಕೊಳ್ಳಬೇಕು. ಪೈಕಾ ಸಮುದಾಯ ನಾಶವಾಗದೆ ಬ್ರಿಟಿಷರು ನಿರಾಯಾಸವಾಗಿ ಆಡಳಿತ ನಡೆಸಲು ಸಾಧ್ಯವಿಲ್ಲ" ಎಂದು ಬರೆದಿದ್ದಾನೆಂದರೆ ಈ ದಂಗೆ ಬ್ರಿಟಿಷರನ್ನು ಗದಗುಟ್ಟಿಸಿದ ಪರಿ, ಪೈಕಾಗಳ ಪರಾಕ್ರಮವನ್ನು ಊಹಿಸಬಹುದು. ಒಂದೊಮ್ಮೆ ಯಶಸ್ವಿಯಾಗುತ್ತಿದ್ದರೆ ಉಪಖಂಡದ ಇತಿಹಾಸವನ್ನೇ ಬದಲಿಸಿಬಿಡುತ್ತಿದ್ದ ಪೈಕಾ ಕ್ರಾಂತಿ "ಒಂದು ದಿನದ ಉಪವಾಸ, ನಾಲ್ಕು ದಿನದ ಅರಮನೆಯೊಳಗೆ ಕೂಡಿ ಹಾಕಿದ ಶಿಕ್ಷೆ"ಯನ್ನೇ ಸ್ವಾತಂತ್ರ್ಯ ಹೋರಾಟ ಎನ್ನುವ ಇತಿಹಾಸಕಾರರಿಗೆ ಮಹತ್ವದ್ದಾಗಿ ಕಾಣದಿದ್ದುದು ಅಚ್ಚರಿಯೇನಲ್ಲ. ಆದರೆ ಭಾರತದ ದೀರ್ಘಕಾಲೀನ ಸ್ವಾತಂತ್ರ್ಯ ಹೋರಾಟವನ್ನು ಸೀಮಿತ ಅವಧಿಗೆ ಹಾಗೂ ಕೆಲವೇ ವ್ಯಕ್ತಿಗಳಿಗೆ ಸೀಮಿತಗೊಳಿಸಿದ ಇತಿಹಾಸಕಾರರ ದ್ರೋಹ ಕಡಿಮೆಯದೇನು? ಎಪ್ಪತ್ತು ವರ್ಷಗಳ ಕಾಲ ಈ ದೇಶವನ್ನಾಳಿದ ಯಾವ ಸರಕಾರಗಳಿಗೂ ಪೈಕಾಗಳ ನೆನಪಾಗಲಿಲ್ಲ. ಮೊನ್ನೆ ಏಪ್ರಿಲ್ ಹದಿನಾರರಂದು ಪ್ರಧಾನಿ ನರೇಂದ್ರ ಮೋದಿ ಜಗಬಂಧುವಿನ ವಂಶಸ್ಥರು ಹಾಗೂ ಇನ್ನಿತರ ಕೆಲ ಪೈಕಾಗಳನ್ನು ಭೇಟಿಯಾಗಿ ಪೈಕಾ ವಂಶಸ್ಥರನ್ನು ಗೌರವಿಸಿದರು. ಈ ದೇಶದ ವೀರ ಪರಂಪರೆಯನ್ನು ನೆನಪಿಸಿ ಗೌರವಿಸಲೂ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕಾಯಿತು!

ಶೇಷನಿಂದಿಳಿದು ವಿಶೇಷನಾದ ಮಹಾವೈಷ್ಣವ

ಶೇಷನಿಂದಿಳಿದು ವಿಶೇಷನಾದ ಮಹಾವೈಷ್ಣವ

ತುಂಬು ಹರೆಯದ ತರುಣ ಬಿರಬಿರನೇ ನಡೆಯುತ್ತಿದ್ದಾನೆ. ಶಿಖೆ, ಯಜ್ಞೋಪವೀತ ಕಾಂಚಿಪುರದ ಆ ತರುಣನ ಮೊಗದ ತೇಜಸ್ಸನ್ನೇನೋ ವೃದ್ಧಿಸಿದೆ. ಆದರೂ ಮುಖದಲ್ಲೇನೋ ದುಗುಡ ಕಾಣಿಸುತ್ತಿದೆ. ಶ್ರೀರಂಗಂ ಪಂಡಿತರ ಬಳಿ ಶಿಷ್ಯವೃತ್ತಿ ಕೈಗೊಳ್ಳಲು ಹಾತೊರೆಯುತ್ತಿರುವ ಮನಸ್ಸಿನ ಮೂಲೆಯಲ್ಲಿ ಕಳವಳವು ಮಳೆಯ ಭೋರ್ಗರೆತದ ಬಳಿಕ ಮರದಿಂದ ತೊಟ್ಟಿಕ್ಕುವ ಹನಿಯಂತೆ ಮತ್ತೆ ಮತ್ತೆ ಕಾಣಿಸುತ್ತಿದೆ. ಮನೆಯ ಬಾಗಿಲಲ್ಲಿ ಬಂದೊಡನೆ ಸೂತಕದ ವಾಸನೆ. ಗುರುಗಳ ಪ್ರಾಣಪಕ್ಷಿ ಹಾರಿದೆ. ಅರೇ ಇದೇನಚ್ಚರಿ...ಶವದ ಬಲಗೈಯ ಮೂರು ಬೆರಳು ಮಡಚಿಯೇ ಇದೆ. ಎಂದಿಗೂ ಗುರುಗಳ ಕೈಬೆರಳುಗಳು ಆ ರೀತಿ ಮಡಚಿಯೇ ಇಲ್ಲವೆನ್ನುವುದು ಶಿಷ್ಯರ ಅಂಬೋಣ. ಆ ಬೆರಳುಗಳೇನು ನೇರವಾಗುತ್ಯೇ? ಆಗ ಆ ತರುಣನಿಂದ ಮೂರು ಮಾತು ಪ್ರತಿಜ್ಞೆಯ ರೂಪದಲ್ಲಿ ಹೊರಬೀಳುತ್ತದೆ... "ನಾನು ತಮಿಳು ವೇದ(ತಿರುವಾಯ್ ಮೊಳ್)ಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತೇನೆ, ಬ್ರಹ್ಮಸೂತ್ರಕ್ಕೆ ಭಾಷ್ಯವನ್ನು ಬರೆಯುತ್ತೇನೆ ಮತ್ತು ಅಪಾರ ಸಾಧನೆಯನ್ನು ಮಾಡಿದ ಯೋಗ್ಯನಾದ ವೈಷ್ಣವನಿಗೆ ನಾನು ‘ಪರಾಶರ’ನೆಂದು ನಾಮಕರಣ ಮಾಡುತ್ತೇನೆ". ಪವಾಡ ಸಂಭವಿಸಿಯೇ ಬಿಟ್ಟಿತು. ತರುಣನ ಒಂದೊಂದೇ ಮಾತು ಮುಗಿಯುತ್ತಿದ್ದಂತೆಯೇ ಪಂಡಿತರ ಮುಚ್ಚಿದ ಬೆರಳುಗಳು ಒಂದೊಂದಾಗಿಯೇ ಸಡಿಲವಾಗುತ್ತಾ, ನೇರವಾಗುತ್ತಾ ಹೋಗುತ್ತವೆ. ಆ ಪಂಡಿತರೇ ಆಳ್ವಂದಾರ್ ಮತ್ತು ಆ ತರುಣನೇ ರಾಮಾನುಜ. ಈ ಘಟನೆಯ ಸತ್ಯಾಸತ್ಯತೆ ಏನೇ ಇರಲಿ ಆ ತರುಣ ರಾಮಾನುಜ ತನ್ನ ಮಾತಿನಂತೆಯೇ ನಡೆದುಕೊಂಡ ಎನ್ನುವುದು ಗಮನಿಸಬೇಕಾದ ಅಂಶ.

ಭಾರತ ಮತಾಂಧ ಮುಸಲರ ದಾಳಿಗೆ ತುತ್ತಾಗಿ ಹೈರಾಣಾಗಿತ್ತು. ಘಜನಿಯ ಸಾಲುಸಾಲು ದಂಡಯಾತ್ರೆ, ಸೋಮನಾಥ ಸಹಿತ ಸಾವಿರಾರು ದೇಗುಲಗಳ ನಾಶದಿಂದ ಹಿಂದೂ ಸಮಾಜ ತತ್ತರಿಸಿತ್ತು. ಅಲ್ಲದೆ ಸಮಾಜವು ಜಾತಿ-ಮತ, ಸ್ಪೃಶ್ಯ-ಅಸ್ಪೃಶ್ಯ ಭೇದಭಾವಗಳಿಂದ ಛಿದ್ರಗೊಂಡಿತ್ತು. ಅಂತಹ ಸಮಯದಲ್ಲಿ ತಮಿಳುನಾಡಿನ ಪೆರಂಬದೂರು ಎಂಬ ಸಣ್ಣ ಊರಿನಲ್ಲಿ ಸನಾತನ ಧರ್ಮಜ್ಯೋತಿಯೊಂದು ಬೆಳಗಿತು. ಕೇಶವಸೋಮಯಾಜಿ ದೀಕ್ಷಿತ ಮತ್ತು ಕಾಂತಿಮತಿಯ ಮಗನಾಗಿ 1017ರ ಆರ್ದ್ರಾ ನಕ್ಷತ್ರದಲ್ಲಿ ಹುಟ್ಟಿಕೊಂಡ ಈ ಹಣತೆ ಮುಂದೆ 'ವಿಶಿಷ್ಟಾದ್ವೈತ’ ಸಿದ್ಧಾಂತವೆಂಬ ದಿವ್ಯ ದೀವಿಗೆಯಿಂದ ಜಗವನ್ನೇ ಬೆಳಗಿತು. ಶೇಷನೇ ರಾಮಾನುಜನಾಗಿ ಅವತರಿಸಿದ ಎಂದು ಶ್ರೀವೈಷ್ಣವರ ನಂಬುಗೆ. ಹದಿನಾರನೆಯ ವಯಸ್ಸಿನಲ್ಲಿಯೇ ಮದುವೆಯಾದ ರಾಮಾನುಜರು ಬಳಿಕ ಕೆಲ ಸಮಯದಲ್ಲೇ ಸಂಸಾರ ತೊರೆದು ಸಂನ್ಯಾಸ ಸ್ವೀಕಾರ ಮಾಡಿದರು. ಮದುವೆಯಾದ ಹೊಸತರಲ್ಲೇ ತಂದೆ ತೀರಿಕೊಂಡಾಗ ಮಡದಿ ಮತ್ತು ತಾಯಿಯೊಡನೆ ಕಾಂಚೀಪುರಂ ಬಂದು ನೆಲೆಸಿದರು. ಇದಕ್ಕೆ ಬಹುಮುಖ್ಯವಾದ ಕಾರಣವೂ ಇತ್ತು. ಆ ಕಾಲಕ್ಕೆ ಪ್ರಕಾಂಡ ಪಂಡಿತರೆಂದೇ ಪ್ರಖ್ಯಾತರಾದವರು ಯಾದವಪ್ರಕಾಶರು. ಅವರಿದ್ದದ್ದು ಕಾಂಚೀಪುರಂನಲ್ಲಿಯೇ. ರಾಮಾನುಜಾಚಾರ್ಯರು ಯಾದವಪ್ರಕಾಶರ ಶಿಷ್ಯರಾಗಿ ಅಧ್ಯಯನಕ್ಕೆ ತೊಡಗಿದರು. ಯಾದವ ಪ್ರಕಾಶರು ಅದ್ವೈತಿಗಳೆಂದೂ ರಾಮಾನುಜರಿಗೆ ಪರಮಹಿಂಸೆಯನ್ನು ಕೊಟ್ಟರೆಂದು ಕೆಲವರು ಬರೆದಿದ್ದಾರೆ. ಇದಕ್ಕೆ ಯಾವ ಐತಿಹಾಸಿಕ ಆಧಾರಗಳಿಲ್ಲ. ಅಲ್ಲದೆ ಯಾದವ ಪ್ರಕಾಶರು ಅದ್ವೈತಿಗಳಲ್ಲ. ಇದಕ್ಕೆ ಅವರು ಬ್ರಹ್ಮಸೂತ್ರಕ್ಕೆ ಬರೆದ ಭಾಷ್ಯವೇ ಸಾಕ್ಷಿ. ಅವರದ್ದು ಭೇದಾಭೇದಾ ಮತ. ಅದು ಹೆಚ್ಚುಕಡಮೆ ರಾಮಾನುಜ ಮತಕ್ಕೆ ಹತ್ತಿರ(ಭಾರತೀಯ ಕ್ಷಾತ್ರಪರಂಪರೆ:ಶತಾವಧಾನಿ ರಾ. ಗಣೇಶ್). ಹೀಗೆ ರಾಮಾನುಜರು ಶ್ರೀರಂಗಂಗೆ ತೆರಳಿದ್ದು ಆಳ್ವಂದಾರರ ಕೋರಿಕೆಯ ಮೇರೆಗೆ ಹೊರತು ಯಾದವಪ್ರಕಾಶರೊಂದಿಗಿನ ಭಿನ್ನಾಭಿಪ್ರಾಯ ಅಥವಾ ಅವರಿಂದ ಬಂದೊದಗಿತು ಎನ್ನಲಾದ ಹಿಂಸೆಯಿಂದಲ್ಲ.

              ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತದ ಮೂಲ ಸ್ಥಾಪಕರೇನಲ್ಲ. ಬೋಧಾಯನರೇ ವಿಶಿಷ್ಟಾದ್ವೈತ ಸಿದ್ಧಾಂತದ ಮೂಲಪುರುಷ ಎನ್ನುವುದು ಪ್ರತೀತಿ. ರಾಮಾನುಜರಿಗಿಂತ ಮುಂಚೆ ತಮಿಳುನಾಡಿನಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತವನ್ನೇ ಮೈವೆತ್ತುಕೊಂಡಿದ್ದ ಆಳ್ವಾರ್ ಗಳೆಂಬ ಅಸಾಮಾನ್ಯ ಭಕ್ತಿಪರಂಪರೆಯ ಪ್ರವರ್ತಕರು ಆಗಿ ಹೋಗಿದ್ದರು. ವಿಶೇಷವೆಂದರೆ ಎಲ್ಲಾ ಆಳ್ವಾರರುಗಳೂ ಬ್ರಾಹ್ಮಣರಲ್ಲ. ರಾಮಾನುಜರಿಗೆ ಸ್ಪೂರ್ತಿ ನೀಡಿದ್ದು "ನಾಲಾಯಿರಂ" ಎಂದು ಕರೆಯಲ್ಪಡುತ್ತಿದ್ದ ತಮಿಳುನಾಡಿನಲ್ಲಿ ಭಕ್ತಿ ಸಾಹಿತ್ಯ ಸ್ತೋತ್ರವನ್ನೇ ಹರಿಸಿದ ಈ ಆಳ್ವಾರರ ಪ್ರಬಂಧಗಳು. ಹನ್ನೆರಡು ಜನ ಆಳ್ವಾರರಿಂದ ದೊರೆತ ಈ ಶ್ರೇಷ್ಠ ಭಕ್ತಿ ಸಾಹಿತ್ಯಗಳು "ತಮಿಳು ವೇದ"ಗಳೆಂದೇ ಪ್ರಖ್ಯಾತಿ ಪಡೆದಿವೆ. ರಾಮಾನುಜರು ಈ ಸಿದ್ಧಾಂತವನ್ನು ಮತ್ತಷ್ಟು ಸಮಾಜಮುಖಿಯಾಗಿ ಹೊರತಂದರು.  ಇತ್ತ ವೇದಾಂತವನ್ನೂ ಅತ್ತ ತಮಿಳು ದಿವ್ಯ ಪ್ರಬಂಧಗಳನ್ನೂ ಸಮನ್ವಯಗೊಳಿಸಿದ ಆಚಾರ್ಯರು "ಉಭಯ ವೇದಾಂತ ಪ್ರವರ್ತಕ"ನೆನಿಸಿಕೊಂಡರು. ರಾಮಾನುಜರನ್ನು ಪ್ರಭಾವಿಸಿದ ಭಕ್ತಿಪಂಥ ಹಾಗೆಯೇ ರಾಮಾನುಜರು ಪ್ರತಿಪಾದಿಸಿದ ವಿಶಿಷ್ಟಾದ್ವೈತ ಉತ್ತರಭಾರತದಲ್ಲಿ ಭಕ್ತಿ ಚಳವಳಿಯನ್ನೇ ಹುಟ್ಟು ಹಾಕಿತು. ಸಂತ ರಾಮಾನಂದ, ವಲ್ಲಭಾಚಾರ್ಯ, ಚೈತನ್ಯ ಮಹಾಪ್ರಭು, ನಾಮದೇವ, ಏಕನಾಥ, ತುಕಾರಾಮ, ಸಮರ್ಥ ರಾಮದಾಸರು, ತುಳಸೀದಾಸ, ಸೂರದಾಸ, ಅಣ್ಣಮಾಚಾರ್ಯ, ಮೀರಾ, ಪೋತನ, ಪುರಂದರ, ಕನಕ, ಯೋಗಿ ನಾರೇಯಣ ತಾತಯ್ಯ ಇವರೆಲ್ಲಾ ಭಕ್ತಿ ಪಂಥದ ಪ್ರವರ್ತಕರಾದರು.

             ರಾಮಾನುಜರ ಜೀವನದ ಮಹತ್ವದ ಪ್ರಸಂಗ ಜಾತಿಭೇದವನ್ನು ತೊರೆದು ಎಲ್ಲರಿಗೂ ತಿರುಮಂತ್ರವನ್ನು ಉಪದೇಶಿಸಿದ ಅಪೂರ್ವ ಘಟನೆ! ತಿರುಕ್ಕೋಳೂರಿನಲ್ಲಿದ್ದ ಅಪೂರ್ವ ಜ್ಞಾನಿ ಗೋಷ್ಠಿ ಪೂರ್ಣರ ಬಳಿ ಅಧ್ಯಯನಕ್ಕಾಗಿ ಹೋಗಿದ್ದರು ರಾಮಾನುಜರು. ರಾಮಾನುಜರ ಶೃದ್ಧೆ, ಭಕ್ತಿಗಳನ್ನು ನಾನಾ ರೀತಿಯಲ್ಲಿ ಪರೀಕ್ಷಿಸಿದ ಗೋಷ್ಠಿಪೂರ್ಣರು ಅವರಿಗೆ "ಓಂ ನಮೋ ನಾರಾಯಣಾಯ" ಎಂಬ ತಿರುಮಂತ್ರವನ್ನು ಉಪದೇಶಿಸಿದರು. ಶೃದ್ಧಾಭಕ್ತಿಗಳಿಂದ ಅದನ್ನು ಜಪಿಸುವುದರಿಂದ ಮೋಕ್ಷ ಪ್ರಾಪ್ತಿ ಎಂದೂ, ಅಪಾತ್ರರಿಗೆ ಅದನ್ನು ಬೋಧಿಸಕೂಡದೆಂದೂ ತಿಳಿಸಿದರು. ರಾಮಾನುಜರು ಶಿಷ್ಯರೊಡನೆ ನಡೆದು ಹೋಗುತ್ತಿರುವಾಗ ದಾರಿಯಲ್ಲಿ ಸಿಕ್ಕ ಜನರನ್ನು ಕಂಡು ಅವರ ಮನಸ್ಸು ಖೇದಗೊಂಡಿತು. "ತಿರುನಾಮದ ಮಂತ್ರದ ಅರಿವಿಲ್ಲದೆ ಇವರೆಲ್ಲಾ ಅಂಧಕಾರದಲ್ಲಿ ಮುಳುಗಿದ್ದಾರಲ್ಲಾ. ಈ ತಿರುಮಂತ್ರವನ್ನು ಇವರಿಗೆಲ್ಲಾ ಉಪದೇಶಿಸುವುದರಿಂದ ಅವರೆಲ್ಲರಿಗೂ ಮೋಕ್ಷಪ್ರಾಪ್ತಿಯಾಗುತ್ತದೆಯಲ್ಲವೇ?" ಎಂದು ಅವರ ಮನಸ್ಸು ಚಿಂತಿಸತೊಡಗಿತು. ಕ್ಷಣಮಾತ್ರದಲ್ಲಿ ಎಲ್ಲರನ್ನೂ ತಮ್ಮ ಬಳಿಗೆ ಕರೆದು ದೇವಾಲಯದ ಬಳಿಯ ಎತ್ತರದ ಜಾಗವನ್ನು ಹತ್ತಿ ಯಾವುದನ್ನು ಗೋಷ್ಠಿಪೂರ್ಣರು ಪರಮ ರಹಸ್ಯವೆಂದು ಹೇಳಿದ್ದರೋ ಅದನ್ನು ಉಚ್ಛಸ್ಥಾಯೀ ಸ್ವರದಲ್ಲಿ ನೆರೆದವರೆಲ್ಲರಿಗೂ ಉಪದೇಶಿಸಿದರು. "ಓಂ ಓಂ ನಮೋ ನಾರಾಯಣಾಯ" ಎಂಬ ಮಂತ್ರ ತಿರುಕ್ಕೋಳೂರಿನಾದ್ಯಂತ ಅನುರಣಿಸಿತು. ಶ್ರೀರಂಗದ ಶ್ರೀವೈಷ್ಣವ ಮಠದ ಪೀಠಾಧಿಪತಿಗಳ ಈ ಕ್ರಾಂತಿಕಾರಕ ನಡೆಯನ್ನು ಕಂಡು ಸಮಾಜ ಚಕಿತಗೊಂಡಿತು. ವಿಷಯ ಅರಿತ ಗೋಷ್ಠಿಪೂರ್ಣರು ಕೆಂಡಾಮಂಡಲರಾಗಿ ಗುರುದ್ರೋಹ ಮಾಡಿದೆಯೆಂದು ಜರೆದು ಅಪಾತ್ರನಾದ ನಿನಗೆ ಮಂತ್ರದೀಕ್ಷೆ ಕೊಟ್ಟು ನಾನು ರೌರವ ನರಕವನ್ನು ಅನುಭವಿಸುವಂತಾಯಿತು ಎಂದು ಗೋಳಾಡಿದಾಗ " ಗುರುಗಳೇ, ಈ ತಿರುಮಂತ್ರದ ಉಪದೇಶ ಪಡೆದ ಲಕ್ಷಾಂತರ ಜನ ಮೋಕ್ಷಪಥದತ್ತ ಸಾಗುವುದಾದರೆ, ಅದನ್ನು ಉಪದೇಶಿಸಿದ ನಾನು ನರಕಕ್ಕೆ ಹೋಗುವುದೇ ಸರಿಯೆಂದೂ, ಕೋಟ್ಯಾಂತರ ಜೀವಿಗಳಿಗೆ ಮೋಕ್ಷದ ದಾರಿಯನ್ನು ತೋರುವುದೇ ಪುಣ್ಯಕಾರ್ಯವೆಂದೂ ನನಗನಿಸಿತು" ಎಂದು ಸಮಾಧಾನಿಸಿದರು. ರಾಮಾನುಜರ ತರ್ಕಪೂರ್ಣ ವಾದವನ್ನು ಕೇಳಿ ಸಮಾಧಾನ ತಾಳಿದ ಗೋಷ್ಠಿಪೂರ್ಣರು ತಮಗೆ ತಿಳಿದಿದ್ದ ಎಲ್ಲಾ ವಿದ್ಯೆಯನ್ನು ಅವರಿಗೆ ಧಾರೆ ಎರೆದು "ಎಂಬೇರುಮನ್ನಾರ್" ಎಂದು ಅವರನ್ನು ಹರಸಿದರು.

            ರಾಮಾನುಜರ ಸಿದ್ಧಾಂತ ಹಾಗೂ ನೇರನಡೆನುಡಿಗಳೇ ಅವರಿಗೆ ಮುಳುವಾಗಿ ಶ್ರೀ ರಂಗಂನ ಪ್ರಧಾನ ಅರ್ಚಕರಿಂದ ನಡೆದ ಕೊಲೆ ಪ್ರಯತ್ನ ಸಾಧ್ವಿಯಾದ ಆತನ ಪತ್ನಿಯಿಂದಲೇ ವಿಫಲವಾಯಿತು. ರಾಮಾನುಜರನ್ನು ಕ್ರಿಮಿಕಂಠ ಚೋಳನೆಂಬ ಕರಿಕಾಲಚೋಳನು ಕೊಲ್ಲಲು ಯತ್ನಿಸಿದನೆಂದು ಕೆಲವರು ಹೇಳುತ್ತಾರೆ. ಆದರೆ ಆ ಚೋಳ ರಾಜನ ಹೆಸರೇ ಇತಿಹಾಸದಲ್ಲೆಲ್ಲಿಯೂ ಕಾಣ ಸಿಗುವುದಿಲ್ಲ. ಹಾಗೆಯೇ ಚೋಳರ ಮತಾಂಧತೆಗೆ ಯಾವುದೇ ವಿಶ್ವಸನೀಯ ನಿದರ್ಶನಗಳು ದೊರಕುವುದಿಲ್ಲ. ರಾಮಾನುಜಾಚಾರ್ಯರನ್ನು ಚೋಳರು ಹಿಂಸಿಸಿದರೆಂದೂ, ಅವರು ಪ್ರಾಣಭೀತಿಯಿಂದ ಹೊಯ್ಸಳ ನಾಡಿಗೆ ಬಂದರೆಂಬುದೂ ಕಟ್ಟುಕಥೆ. ಚಿದಂಬರದ ಗೋವಿಂದರಾಜನ ಮೂರ್ತಿಯನ್ನು ಕಡಲಿಗೆಸೆದರೆಂಬುದೂ ಸುಳ್ಳೆಂದು ಈಚಿನ ಸಂಶೋಧನೆಗಳು ವಿವೇಚಿಸಿವೆ ಎಂದು ತಮ್ಮ "ಭಾರತೀಯ ಕ್ಷಾತ್ರ ಪರಂಪರೆ"ಯಲ್ಲಿ ದಾಖಲಿಸಿದ್ದಾರೆ ಶತಾವಧಾನಿ ರಾ. ಗಣೇಶ್.

ರಾಮಾನುಜರು ಲಕ್ಷ್ಮಣನ ಅವತಾರವೆಂದೇ ವೈಷ್ಣವರ ನಂಬಿಕೆ. ಶ್ರೀರಂಗನಿಂದ ಹೊರಟು ರಾಮಾನುಜಾಚಾರ್ಯರು ಹೊಯ್ಸಳರ ರಾಜ್ಯದ ಸೀಮೆಯಲ್ಲಿದ್ದ ಮೇಲುಕೋಟೆಯಲ್ಲಿ ಬಂದು ನೆಲೆಸಿದರು. ಸಹೋದರನ ಅಕಾಲ ಮರಣದಿಂದ ಧೃತಿಗೆಟ್ಟಿದ್ದ ರಾಜಾ ಬಿಟ್ಟಿದೇವನಿಗೆ ಆಚಾರ್ಯರ ಮಾರ್ಗದರ್ಶನ ಶಾಂತಿಯನ್ನು ಕೊಟ್ಟಿತು. ಆಚಾರ್ಯರು ಬಿಟ್ಟಿದೇವನ ಮನೋಬಲ ತುಂಬಿ ಅವನ ಉತ್ಸಾಹದ ಚಿಲುಮೆಯನ್ನಾಗಿಸಿ ಶ್ರೀವೈಷ್ಣವ ದೀಕ್ಷೆಯನ್ನು ಕೊಟ್ಟು ವಿಷ್ಣುವರ್ಧನನೆಂದು ನಾಮಕರಣ ಮಾಡಿದುದು ಈಗ ಐತಿಹ್ಯ. ಒಟ್ಟು ಹದಿನಾಲ್ಕು ವರ್ಷಗಳ ಕಾಲ ಮೇಲುಕೋಟೆಯಲ್ಲಿ ತಂಗಿದ್ದರು ಆಚಾರ್ಯರು. ಅಲ್ಲಿದ್ದಾಗ ತುಳಸೀವನದೊಳಗಿನ ಹುತ್ತದ ಬಳಿ ಅನಾಥವಾಗಿ ಬಿದ್ದಿದ್ದ ಹಳೆಯ ವಿಗ್ರಹವೊಂದು ರಾಮಾನುಜರ ದೃಷ್ಟಿಗೆ ಬೀಳುತ್ತದೆ. ಅದರ ಬಗ್ಗೆ ವಿಚಾರಿಸಿದಾಗ ದೆಹಲಿಯ ಸುಲ್ತಾನನ ವಿಗ್ರಹಭಂಜಕ ದಾಳಿಯ ಸಮಯದಲ್ಲಿ ಅರ್ಚಕರು ಮೂಲ ವಿಗ್ರಹವನ್ನು ಸ್ಥಳಾಂತರಿಸಿ ರಕ್ಷಿಸಿದ ವಿಚಾರ ಬಯಲಿಗೆ ಬಂತು. ಆ ವಿಗ್ರಹವೇ ಇದೆಂದು ಮನಗಂಡ ಆಚಾರ್ಯರು ಅಲ್ಲಿ ದೇವಾಲಯವನ್ನೂ, ರಕ್ಷಣೆಗಾಗಿ ಎತ್ತರದ ಸುತ್ತು ಪೌಳಿಯನ್ನೂ ನಿರ್ಮಿಸಿದರು.

 ಯಾದವಾದ್ರಿ ದೇಗುಲದ ಉತ್ಸವ ಮೂರ್ತಿಯನ್ನು ದೆಹಲಿಯ ಸುಲ್ತಾನ ತನ್ನ ಅರಮನೆಗೆ ಹೊತ್ತೊಯ್ದಿದ್ದ. ಸುಲ್ತಾನನ ಮಗಳು ಆ ವಿಗ್ರಹದ ಸೌಂದರ್ಯಕ್ಕೆ ಮನಸೋತು ಅದನ್ನು ಆರಾಧಿಸತೊಡಗಿದಳು. ಈ ವಿಚಾರ ತಿಳಿದ ತಕ್ಷಣ ರಾಮಾನುಜರು ದೆಹಲಿಯ ಸುಲ್ತಾನನ್ನು ಭೇಟಿಯಾಗಿ ವಿಗ್ರಹಕ್ಕಾಗಿ ಬೇಡಿಕೆ ಸಲ್ಲಿಸಿ ಅದನ್ನು ತಿರುನಾರಾಯಣಪುರ(ಮೇಲುಕೋಟೆ)ಕ್ಕೆ ತಂದು ಶೆಲ್ವಪಿಳ್ಳೈ ಎಂದು ಕರೆದು ಪೂಜಿಸತೊಡಗಿದರು. ತನ್ನ ಇಷ್ಟ ಮೂರ್ತಿ ಮರೆಯಾಗಿರುವುದನ್ನು ಕಂಡು ವಿಚಾರ ತಿಳಿದ ಸುಲ್ತಾನನ ಮಗಳು ಬೀಬಿ ತಿರುನಾರಾಯಣಪುರಕ್ಕೆ ಬಂದು ರಾಮಾನುಜರನ್ನು ಕಂಡು ವಿಗ್ರಹವನ್ನು ಹಿಂದಕ್ಕೆ ಕೊಡಬೇಕೆಂದು ಆಗ್ರಹಿಸಿದಳು. ಆಗ ಆಚಾರ್ಯರು ಅದು ಹಿಂದೂ ವಿಗ್ರಹವೆಂದೂ, ಅದನ್ನು ವೇದ ಮಂತ್ರಗಳಿಂದ ಅರ್ಚಿಸಬೇಕೆಂದೂ, ಗೃಹಯೋಗ್ಯವಲ್ಲವೆಂದೂ ಬುದ್ಧಿಮಾತನ್ನು ಹೇಳಿದಾಗ ಕೊನೇ ಪಕ್ಷ ತನಗೆ ಇಲ್ಲಿಯಾದರೂ ಮೂರ್ತಿಯನ್ನು ಆರಾಧಿಸುವ ಅವಕಾಶ ಕೊಡಬೇಕೆಂದು ಪ್ರಾರ್ಥಿಸಿದಳು. ಆಕೆಯ ನಿರ್ಮಲ ಮನಸ್ಸಿನ ಉತ್ಕಟ ಭಕ್ತಿಯನ್ನು ಕಂಡ ರಾಮಾನುಜರು ಆಕೆಗೆ ದೇಗುಲ ಪ್ರವೇಶಕ್ಕೆ ಅನುಮತಿ ಕಲ್ಪಿಸಿದರು. ಯಾವ ಯಾದವಾದ್ರಿಯ ಪೂಜಾಸ್ಥಳವನ್ನು ಮತಾಂಧನೊಬ್ಬ ಧ್ವಂಸ ಮಾಡಿದ್ದನೋ ಅದೇ ಯಾದವಾದ್ರಿ ಆ ವಿಗ್ರಹ ಭಂಜಕನ ಮಗಳ ಪಾಲಿಗೆ ಭೂಸ್ವರ್ಗವಾಗಿಬಿಟ್ಟಿತು. ಸಂಕುಚಿತ ದೇವರ ಬದಲು ಸರ್ವವ್ಯಾಪಿ(ವಿಷ್ಣು ಪದದ ಅರ್ಥ) ದೇವರನ್ನು ಪೂಜಿಸಲಾರಂಭಿಸಿದ ಬೀಬಿ ಅಲ್ಲಿಯೇ ಕೊನೆಯುಸಿರೆಳೆದಳು. ಅವಳ ಹೆಸರಿನ ಬೀಬಿ ನಾಚಿಯಾರ್ ಮೂರ್ತಿ ಈ ಪ್ರಸಂಗಕ್ಕೆ ಸಾಕ್ಷಿಯಾಗಿ ನಿಂತಿದೆ.

            ರಾಮಾನುಜರು ಬಾಲ್ಯಾವಸ್ಥೆಯಲ್ಲಿದ್ದಾಗ ಭಾರತವಿಡೀ ಮುಸಲರ ದೇವಾಲಯಧ್ವಂಸಕ್ಕೆ ತುತ್ತಾಗಿತ್ತು. ಬಲವಂತದ ಮತಾಂತರ ವ್ಯಾಪಕವಾಗಿತ್ತು. ಅವರು ಮೇಲುಕೋಟೆಯಲ್ಲಿದ್ದಾಗ ಘಜನಿಯ ಎರಡನೇ ಮಗ ಉತ್ತರಭಾರತದಲ್ಲಿ ದೇಗುಲನಾಶ, ವಿಗ್ರಹಭಂಜನೆಯ ಕಾರ್ಯಕ್ಕೆ ತನ್ನಪ್ಪನಿಂದ ದುರವೀಳ್ಯ ಪಡೆದಿದ್ದ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜವನ್ನು ಸಾಮಾನ್ಯನ ದೃಷ್ಟಿಯಲ್ಲಿ ಕಂಡು ಅದಕ್ಕೆ ಬೇಕಾದ ಚಿಕಿತ್ಸೆಯ ಬಗ್ಗೆ ಒಲವು ತೋರಿದವರು ಆಚಾರ್ಯರು. ಸಮಾಜವು ಸನ್ಮಾರ್ಗದಲ್ಲಿ ಸಾಗಲು ದೇವಾಲಯಗಳನ್ನು ಪುನರುದ್ಧಾರಗೊಳಿಸುವುದೇ ಸೂಕ್ತ ಎಂದು ಮನಗಂಡರು ಆಚಾರ್ಯರು. ದೇವಾಲಯಗಳು ಕೇವಲ ಪೂಜಾಸ್ಥಾನಗಳಾಗದೆ ಸಾಂಸ್ಕೃತಿಕ ಕೇಂದ್ರಗಳೂ ಆಗುವಂತೆ ಮಾಡಲು ದೇವಾಲಯಗಳ ನಿರ್ವಹಣೆಗೆ ಒಂದು ವ್ಯವಸ್ಥಿತ ಪದ್ದತಿಯನ್ನೇ ಹುಟ್ಟುಹಾಕಿದರು. ದೇವಾಲಯಗಳ ಸಿಬ್ಬಂದಿಗಳ ಹೊಣೆಗಾರಿಕೆಯನ್ನು ವಿಂಗಡಿಸಿ ವಿತರಿಸಿ ಪೂಜಾ ಕೈಂಕರ್ಯದಿಂದ ಹಿಡಿದು ಹಣಕಾಸಿನ ವ್ಯವಹಾರದವರೆಗೆ ನಿಯಮಾವಳಿಗಳನ್ನು ರಚಿಸಿ ದೇವಾಲಯ ಸಂಸ್ಕೃತಿಗೆ ಭದ್ರ ಬುನಾದಿಯನ್ನೇ ಹಾಕಿದರು.

             ರಾಮಾನುಜಾಚಾರ್ಯರನ್ನು ದಕ್ಷಿಣ ಭಾರತದ ಬ್ರಾಹ್ಮಣ ಪಂಗಡವೊಂದರ ಗುರುವೆಂದಷ್ಟೇ ಪರಿಗಣಿಸಲಾ ಗುತ್ತಿರುವುದು ವಿಷಾದನೀಯ. ಅವರು ವಿಶಿಷ್ಟಾದ್ವೈತದ ಪ್ರವರ್ತಕ ಮಾತ್ರವಲ್ಲ, ಕ್ರಾಂತಿಕಾರಿ ಕೂಡ. ಜಾತಿಭೇದ ಮತ್ತು ಲಿಂಗತಾರತಮ್ಯವನ್ನು ಹೋಗಲಾಡಿಸಲು ರಾಮಾನುಜರು ಕೊಡುಗೆ ಅಪಾರ. ಆ ಕಾಲದಲ್ಲೇ ಅವರು ಸಮಾಜದ ಅತ್ಯಂತ ಕೆಳವರ್ಗದ ಜನರ ಉತ್ಕರ್ಷಕ್ಕಾಗಿ ಶ್ರಮಿಸಿದವರು; ಅವರಿಗೆ ದೇವಾಲಯಗಳ ಪ್ರವೇಶಾವಕಾಶ ಕಲ್ಪಿಸಿದವರು. ಅವರ ಅನುಯಾಯಿಗಳು ಹಾಗೂ ಮಠಗಳನ್ನು ಇಂದು ರಾಷ್ಟ್ರದ ಎಲ್ಲೆಡೆಗಳಲ್ಲಿ, ನೇಪಾಳದಲ್ಲೂ ಕೂಡ ಕಾಣಬಹುದು. ಅವರು ತಮ್ಮ ಕಾಲದಲ್ಲಿ 74 ಅಧಿಪತಿಗಳನ್ನು ನೇಮಿಸಿದರು. ಅದರಲ್ಲಿ ಸಾಕಷ್ಟು ಜನ ಬ್ರಾಹ್ಮಣೇತರರು ಮತ್ತು 5 ಮಹಿಳೆಯರು ಇದ್ದರು ಎನ್ನುವುದು ಗಮನಾರ್ಹ ಅಂಶ. ರಾಮಾನುಜರು ಅವರನ್ನು "ತಿರುಕ್ಕುವಳತ್ತಾರ್' ಅಥವಾ ಅತ್ಯಂತ ಶ್ರೇಷ್ಠ ವರ್ಗದ ಜನ ಎಂದರು. ಹೀಗಿದ್ದರೂ ಹೆಚ್ಚಿನ ದಲಿತ ನಾಯಕರು ಹಾಗೂ ಬುದ್ಧಿಜೀವಿಗಳು ರಾಮಾನುಜರ ದಲಿತೋದ್ಧಾರ ಪ್ರಯತ್ನಗಳನ್ನು ಮರೆತುಬಿಟ್ಟಿದ್ದಾರೆ.  ಚೆಲುವ ನಾರಾಯಣ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ದಲಿತರಿಗೆ ಅನುವು ಮಾಡಿಕೊಟ್ಟ ರಾಮಾನುಜರು ಅವರ ಹಣೆಗಳ ಮೇಲೆ ತಿರುನಾಮವನ್ನೂ ಇರಿಸಿದರು. ಬಿಳಿಗಿರಿ ರಂಗನ ಬೆಟ್ಟದ ನಿವಾಸಿಗಳಾಗಿದ್ದ ಸೋಲಿಗರು ರಂಗನಾಥ ಸ್ವಾಮಿಯ ಒಕ್ಕಲೆನಿಸಿಕೊಂಡರು. ದಾಸಯ್ಯಗಳ ವರ್ಗವನ್ನು ಅಸ್ತಿತ್ವಕ್ಕೆ ತಂದವರು ಕೂಡ ರಾಮಾನುಜರೇ. ರಾಮಾನುಜರು ಹಿಂದೂ ಧರ್ಮ ಕಕ್ಷೆಯೊಳಗೇ ಇದ್ದುಕೊಂಡು ಅದರ ಸುಧಾರಣೆಗಾಗಿ ತಮ್ಮ ಶಕ್ತಿಯನ್ನು ಧಾರೆಯೆರೆದರು, ಅವರು ಹಿಂದೂ ಧರ್ಮದಿಂದ ಪ್ರತ್ಯೇಕವಾಗಲಿಲ್ಲ. ಇನ್ನೊಂದು ಹೊಸ ಮತವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿರಲಿಲ್ಲ.

ಹಲವಾರು ವೇದಪಂಡಿತರಲ್ಲಿ ಕಲಿತ ರಾಮಾನುಜರು ತಮ್ಮ ಸಂಬಂಧಿಯಾದ ಶ್ರೀಶೈಲಪೂರ್ಣನಿಂದ ತಿರುಮಲದಲ್ಲಿ ರಾಮಾಯಣವನ್ನು ಅಭ್ಯಸಿಸಿದರು. ಗೋವಿಂದರಾಜನ ಮೂರ್ತಿಯನ್ನು ಗೋವಿಂದರಾಜಪುರ (ತಿರುಪತಿ)ದಲ್ಲಿ ಸ್ಥಾಪಿಸಿದರು. ತಿರುಪತಿಯಲ್ಲಿ ಅಪರೂಪವಾಗಿದ್ದ ಪೂಜಾಕ್ರಮಗಳಿಗೆ ಮೆರಗುಕೊಟ್ಟವರೇ ರಾಮಾನುಜರು. ಅವುಗಳಲ್ಲಿ ಮೊದಲನೆಯದು ತಿರುಮಲದ ವೆಂಕಟರಮಣ ಮತ್ತು ಆದಿವರಾಹಗಳ ಪೂಜೆ. ಪೂಜೆಗಳನ್ನು ಹಬ್ಬಗಳಂತೆ, ಉತ್ಸವಗಳಂತೆ ಆಚರಿಸಿ, ದೈವಿಕ ಅನುಭೂತಿಯನ್ನು ಪಡೆಯಬೇಕೆಂಬ ಉದ್ದೇಶದಿಂದ ಆರಂಭಿಸಿದ್ದೇ ಭಾಗಸವಾರಿ ಉತ್ಸವ, ತಣ್ಣೀರ ಮಧು ಉತ್ಸವ.  ಭೂವರಾಹಸ್ವಾಮಿಗೆ ಪ್ರಥಮಪೂಜೆ, ಪ್ರಥಮ ನೈವೇದ್ಯ ಮತ್ತು ಪ್ರಥಮ ದರ್ಶನದಂಥ ಸಂಪ್ರದಾಯವನ್ನು ಆರಂಭಿಸಿದ್ದೂ ಇವರೇ. ವೆಂಕಟರಮಣ, ಸಾಲಿಗ್ರಾಮದ ರೂಪದಲ್ಲಿ ಶಿಲೆಯಾಗಿ ತಿರುಪತಿಯಲ್ಲಿ ಕುಳಿತಾದ ಮೇಲೆ ವಿಖಾನಸ ಮಹರ್ಷಿಯ ರೂಪದಲ್ಲಿ ಮಾನವನಾಗಿ ಜನಿಸಿದ್ದಾನೆಂಬುದು ರಾಮಾನುಜರ ನಂಬಿಕೆಯಾಗಿತ್ತು. ಆದ್ದರಿಂದ ತಿರುಮಲದಲ್ಲಿ ವೆಂಕಟರಮಣನ ಪೂಜೆ ವೈಖಾನಸ ಸಂಪ್ರದಾಯದ ಪ್ರಕಾರವೇ ನಡೆಯಬೇಕೆಂದು ತೀರ್ಮಾನಿಸಿದರು.

ಹಬ್ಬ ಮತ್ತು ಉತ್ಸವಗಳಲ್ಲಿ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ, ತಿಮ್ಮಪ್ಪನ ಜೊತೆಗೆ ರಾಮಾನುಜರಿಗೂ ಪೂಜೆ ಸಲ್ಲಿಸಲಾಗುತ್ತದೆ. ರಾಮಾನುಜಾಚಾರ್ಯರ ಸಹಸ್ರ ಜನ್ಮ ಮಹೋತ್ಸವದ ನಿಮಿತ್ತ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಇಡೀ ವರ್ಷ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ವಿಶೇಷ ಕಾರ್ಯಕ್ರಮಗಳಲ್ಲಿ ‘ರಾಮಾನುಜ ಸಂಚಾರಂ’ ತುಂಬಾ ಪ್ರಮುಖವಾದುದು. ಮಲಯಪ್ಪಸ್ವಾಮಿ, ಶ್ರೀದೇವಿ, ಭೂದೇವಿ ಮತ್ತು ರಾಮಾನುಜಾಚಾರ್ಯರ ಉತ್ಸವ ಮೂರ್ತಿಗಳನ್ನು ಹೊತ್ತ ವಿಶೇಷವಾಗಿ ಅಲಂಕೃತಗೊಂಡ ತೇರು ಈ ವರ್ಷ ದೇಶದ 106 ವೈಷ್ಣವ ದಿವ್ಯದೇಸಂಗಳಲ್ಲಿ ಸಂಚರಿಸುತ್ತದೆ.