ಧೀ ಶಕ್ತಿ...!!!
ಭಾನುವಾರ, ಜನವರಿ 15, 2023
ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ
ಅರವಿಂದ ಅರಳಿದಾಗ ಕಂಡ ಭಾರತದ ಮರುಹುಟ್ಟು
ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ
ಶೃಂಗೇರಿ ಮಠದ ಮೇಲೆ ಮರಾಠರ ದಾಳಿ: ಒಂದು ವಿವೇಚನೆ
ಜಗತ್ತು ಕಂಡ ಕ್ರೂರ ಮತಾಂಧರಲ್ಲಿ ಒಬ್ಬ ಟಿಪ್ಪು. ಅವನೇ ಬರೆದ ಪತ್ರಗಳು, ಸಾಲು ಸಾಲು ದಾಖಲೆಗಳು, ಇಂದಿಗೂ ಉಳಿದಿರುವ ನಾಶದ, ಅತಿಕ್ರಮದ ಅವಶೇಷಗಳು ಅವನು ನಡೆಸಿದ ಹಿಂದೂಗಳ ಮಾರಣಾಧ್ವರ, ಮತಾಂತರ, ಅತ್ಯಾಚಾರ; ದೇಗುಲ, ಮನೆ, ಆಸ್ತಿ-ಪಾಸ್ತಿ, ಅರ್ಥ ವ್ಯವಸ್ಥೆಗಳ ನಾಶ; ಭಾಷೆಯ ಕಗ್ಗೊಲೆಗಳು ಅವನ ಮತಾಂಧತೆ, ಬರ್ಬರತೆ, ಕ್ರೌರ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಒಂದು ಸಮುದಾಯಕ್ಕೆ ದೀಪಾವಳಿಯನ್ನೇ ನರಕಸದೃಶವನ್ನಾಗಿಸಿ ಪ್ರತೀ ವರ್ಷ ಆ ಸಮಯಕ್ಕೆ ಶ್ರಾದ್ಧ ಆಚರಿಸುವಂತೆ ಮಾಡಿ ಆ ಸಮುದಾಯದ ಅನವರತ ದೀಪಾವಳಿಯ ಸಂಭ್ರಮವನ್ನೇ ಕಿತ್ತುಕೊಂಡಾತನ ನೆನಪೂ ಈ ದೀಪಾವಳಿಯ ಸಮಯದಲ್ಲಿ ಮಾಡಬಾರದು. ಆದರೆ ಕೆಲವರಿಗೆ ಆತ ತನ್ನ ಕೊನೆಗಾಲದಲ್ಲಿ ಕೆಲ ದೇವಾಲಯಗಳಿಗೆ ನೀಡಿದ ದಾನ, ಮರಾಠರದ್ದು ಎನ್ನಲಾದ ದಾಳಿಯ ಸಮಯದಲ್ಲಿ ಶೃಂಗೇರಿಗೆ ನೀಡಿದ ಸಹಾಯ ಇವೆಲ್ಲಾ ಆತ ಮತಾಂಧನಾಗಿಯೇ ಸದಾಕಾಲ ಇದ್ದದ್ದು ಹೌದೇ ಎನ್ನುವ ಸಂಶಯ ಮೂಡಲೂ ಕಾರಣವಾಗಿದೆ. ಅದಕ್ಕಾಗಿ ಒಂದಷ್ಟು ಇತಿಹಾಸದ ಕೆದಕುವಿಕೆ ಅನಿವಾರ್ಯವಾಗಿದೆ. ಟಿಪ್ಪುವನ್ನು ಆತ ಮುಸ್ಲಿಂ ಎನ್ನುವ ಕಾರಣಕ್ಕೆ ವೈಭವೀಕರಿಸುವ ಹಾಗೂ ಅವನು ಕೊನೆಗಾಲದಲ್ಲಿ ತನ್ನ ಹಾಗೂ ತನ್ನ ಮಕ್ಕಳ ಜೀವ ಉಳಿಸಿಕೊಳ್ಳುವ ಸಲುವಾಗಿ ಮಾಡಿದ ಕೆಲವೇ ಕೆಲವು ಪುಣ್ಯಕಾರ್ಯಗಳನ್ನು ಬಳಸಿ ಅವನ ಕ್ರೌರ್ಯವನ್ನು ಮುಚ್ಚಿಡಲು ಪ್ರಯತ್ನಿಸುವ ಮುಸ್ಲಿಮರ ಹಾಗೂ ಜಾತ್ಯಾತೀತವಾದಿಗಳ ಕಣ್ಣು ತೆರೆಸಲು ಸಾಧ್ಯವೇ ಇಲ್ಲ. ನಿಜೇತಿಹಾಸವನ್ನು ಒಪ್ಪುವ ಸಹೃದಯಿಗಳ ಸಂಶಯವನ್ನು ನಿವಾರಿಸುವುದಂತೂ ಸರ್ವಮಾನ್ಯ.
ನಿಜಕ್ಕೂ 1791ರ ಏಪ್ರಿಲ್ನ ಆ ದಿನಗಳಲ್ಲಿ ಶೃಂಗೇರಿಯಲ್ಲಿ ಏನು ನಡೆಯಿತು? ಇದಕ್ಕಾಗಿ ಸ್ವಲ್ಪ ಆಗಿನ ರಾಜಕೀಯ ಸನ್ನಿವೇಶವನ್ನೂ ಅವಲೋಕಿಸಬೇಕಾಗುತ್ತದೆ. ನಾನಾ ಫಡ್ನವೀಸನು ಮಹದಾಜಿ ಸಿಂಧಿಯಾಗೆ 1784ರ ಸೆಪ್ಟೆಂಬರ್ 5ರಂದು ಬರೆದ ಪತ್ರ ಹಾಗೂ ಅದರ ಬಳಿಕ ನಡೆದ ಘಟನೆಗಳು ಆಗಿನ ಬದಲಾದ ರಾಜಕೀಯ ಸನ್ನಿವೇಶವನ್ನು ಹೊರಗೆಡಹುತ್ತದೆ. ಅದರಲ್ಲಿರುವ ಒಕ್ಕಣೆ ಹೀಗಿದೆ :- "ಟಿಪ್ಪುವಿನ ನಡೆಗಳು ಸರಿಯಾಗಿಲ್ಲ. ಅವನು ಅಹಂಕಾರದಿಂದ ವರ್ತಿಸುತ್ತಿದ್ದಾನೆ. ಇತ್ತೀಚೆಗೆ ನೂರ್ ಮುಹಮ್ಮದನಿಗೆ ಬರೆದ ಪತ್ರದಲ್ಲಿ ಟಿಪ್ಪು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50,000 ಹಿಂದೂಗಳನ್ನು ತಾನು ಇಸ್ಲಾಂಗೆ ಮತಾಂತರಿಸಿದ ಘನಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ, ಈ ಹಿಂದೆ ಯಾವುದೇ ಪದಿಶಾಹ್ ಅಥವಾ ವಜೀರ್ ಮಾಡಲಾಗದ ಕಾರ್ಯ ತನ್ನಿಂದ ಅಲ್ಲಾಹನ ಕೃಪೆಯಿಂದ ಸಾಧ್ಯವಾಗಿದೆ, ಇಡೀ ಹಳ್ಳಿಗಳನ್ನೇ ತಾನು ಮತಾಂತರಿಸಿದೆ ಎಂದು ಬೀಗಿದ್ದಾನೆ."
ಈ ಪತ್ರ ಮರಾಠರು ಹಿಂದೂ ವಿರೋಧಿ ಮತಾಂಧ ಟಿಪ್ಪುವಿನಿಂದ ದೂರ ಸರಿಯುತ್ತಿರುವುದರ ದ್ಯೋತಕವಾಗಿದೆ. ದಶಕದ ಹಿಂದೆ ಹೈದರನ ಜೊತೆ ಮೈತ್ರಿ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದ್ದ ಮರಾಠರು ಹಿಂದೂಗಳ ಮೇಲೆ ಟಿಪ್ಪು ನಡೆಸಿದ ದೌರ್ಜನ್ಯಗಳಿಂದ ಕ್ರೋಧಗೊಂಡು ಟಿಪ್ಪುವಿನಿಂದ ದೂರ ಸರಿದರು. ಅಂತಹಾ ಮರಾಠರು ಸನಾತನ ಸಂಸ್ಕೃತಿಯನ್ನು ಉಳಿಸಲು ಧರೆಗವತರಿಸಿದ್ದ ದಿವ್ಯತೇಜ ಶಂಕರರು ಸ್ಥಾಪಿಸಿದ್ದ, ಶಂಕರರ ತತ್ತ್ವವನ್ನು ಅನವರತ ಪಾಲಿಸುತ್ತಿದ್ದ ಪೀಠವೊಂದರ ಮೇಲೆ ಆಕ್ರಮಣ ಮಾಡಲು, ದೇವರ ವಿಗ್ರಹ ಚಲನೆ ಮಾಡಲು ಸಾಧ್ಯವೇ? ಅದರಲ್ಲೂ ಮತಾಂಧ ಆಕ್ರಮಣಕಾರ ದುಶ್ಶಕ್ತಿಗಳ ದುರಾಡಳಿತದ ನಡುವಿನಿಂದ ಜೈ ಭವಾನಿ ಎಂದು ಘರ್ಜಿಸಿ ಎದ್ದು ಸುತ್ತಲಿದ್ದ ಮತಾಂಧ ಶಕ್ತಿಗಳ ಎದೆಗೆ ಒದ್ದು ಗೆದ್ದು ಸ್ಥಾಪಿಸಿದ್ದ ಶಿವಛತ್ರಪತಿಯ ಹಿಂದೂಪದಶಾಹಿ ತಾನು ಜಗದ್ಗುರು ಪೀಠವೆಂದು ಪೂಜಿಸುತ್ತಿದ್ದ ಹಿಂದೂಧರ್ಮಪೀಠವೊಂದಕ್ಕೆ ಅನ್ಯಾಯ ಮಾಡಲು ಸಾಧ್ಯವೇ? ಟಿಪ್ಪುವಿನ ಹಿಂದೂ ವಿರೋಧಿ ನೀತಿ ಟಿಪ್ಪುವನ್ನು ಸದೆಬಡಿಯುವ ಸಲುವಾಗಿ ಮರಾಠರು ಬ್ರಿಟಿಷರ ಜೊತೆಗೂ ಸೇರುವಂತೆ ಮಾಡಿತು. ಈ ಮೈತ್ರಿಯನ್ನು ರೂಪಿಸುವಲ್ಲಿ ಪುಣೆಯ ಇಂಗ್ಲಿಷ್ ನಿವಾಸಿ ಚಾರ್ಲ್ಸ್ ಡಬ್ಲ್ಯೂ ಮಾಲೆಟ್ ನ ಪಾತ್ರ ಪ್ರಮುಖವಾದದ್ದು. ಶನಿವಾರ ವಾಡಾ ದರ್ಬಾರ್ನ ಪ್ರಸಿದ್ಧ ಥಾಮಸ್ ಡೇನಿಯಲ್-ಜೇಮ್ಸ್ ವೇಲ್ಸ್ ವರ್ಣಚಿತ್ರವು ಮಾಲೆಟ್ ಮರಾಠರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ತೋರಿಸುತ್ತದೆ. ಆದರೆ ಈ ಪ್ರಕರಣವನ್ನಿಟ್ಟುಕೊಂಡು ಮರಾಠರು ಬ್ರಿಟಿಷರ ಪರ ಎನ್ನಲಾಗದು. ಅದು ಹಿಂದೂ ವಿರೋಧಿ ಮತಾಂಧ ಟಿಪ್ಪುವನ್ನು ಕೊನೆಗಾಣಿಸಲು ಮರಾಠರು ಮಾಡಿಕೊಂಡ ತಾತ್ಕಾಲಿಕ ಸಂಧಿಯಷ್ಟೇ. ಶತ್ರುವನ್ನು ನಿವಾರಿಸಲು ಅವನ ಶತ್ರುವಿನೊಡನೆ ಮಿತ್ರನಾಗುವ ಕೂಟ ನೀತಿ.
1790-1792ರ ಟಿಪ್ಪು ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ, ಮರಾಠಾ ಮುಖ್ಯಸ್ಥ ರಘುನಾಥ ರಾವ್ ‘ದಾದಾ’ ಕುರುಂದವಾಡಕರ್ ಅವರ ಸೈನ್ಯಕ್ಕೆ ಸೇರಿದ ತಂಡವೊಂದು ಶೃಂಗೇರಿ ಮಠದ ಮೇಲೆ ದಾಳಿ ಮಾಡಿ ಲೂಟಿಗೈದು ಅಪವಿತ್ರಗೊಳಿಸಿತು. ಈ ದಾಳಿಯ ಕಳಂಕವು ಇಂದಿಗೂ ಉಳಿದುಕೊಂಡಿದೆ ಮತ್ತು ಮರಾಠರು ಹಾಗೂ ದಾಳಿ ಮಾಡಿದ ತಂಡದ ನಾಯಕತ್ವವನ್ನು ಹೊಂದಿದ್ದ ಪರಶುರಾಮ್ ಭಾವು ಪಟವರ್ಧನ್ ಅವರನ್ನು ಈ ದಾಳಿಗೆ ಹೊಣೆಗಾರರನ್ನಾಗಿ ಮಾಡಲಾಗಿದೆ. ಆದರೆ 1791ರ ಮರಾಠಾ ಪತ್ರಗಳು ಭಾಷೆಯ ಪರಿಚಯವಿಲ್ಲದ ಅನೇಕ ವ್ಯಾಖ್ಯಾನಕಾರರನ್ನು ದಾರಿ ತಪ್ಪಿಸಿವೆ ಮತ್ತು ಈ ಅಸಹ್ಯಕರ ಪ್ರಸಂಗದ ಮೇಲೆ ವಿಭಿನ್ನ ಬೆಳಕನ್ನು ಚೆಲ್ಲುತ್ತವೆ.
1774ರಿಂದ, ಆಂಗ್ಲರೊಂದಿಗಿನ ಒಂಬತ್ತು ವರ್ಷಗಳ ಯುದ್ಧದಲ್ಲಿ ಮತ್ತು ನಂತರ, ಮರಾಠರ ವಶದಲ್ಲಿದ್ದ ಕೃಷ್ಣ ಹಾಗೂ ತುಂಗಭದ್ರಾ ನದಿಗಳ ನಡುವಿನ ಪ್ರದೇಶ ಹೈದರ್ ಅಲಿ ಮತ್ತು ಟಿಪ್ಪುವಿನ ಪಾಲಾಯಿತು. ಟಿಪ್ಪು ಮರಾಠರೊಂದಿಗೆ ಮಾತುಕತೆಯಲ್ಲಿ ತೊಡಗಿರುವಾಗಲೇ ಮರಾಠಾ ಪ್ರಾಂತ್ಯಗಳ ಮೇಲೆ ದಾಳಿ ಮಾಡಿದ. ಮಾತ್ರವಲ್ಲ 1784-85ರಲ್ಲಿ ನರಗುಂದದ ಮುಖ್ಯಸ್ಥ ವ್ಯಂಕಟ್ ರಾವ್ ಭಾವೆ ಮತ್ತು ಅವರ ದಿವಾನ ಕಲೋಪಂತ್ ಪೇಠೆ ಅವರನ್ನು ಬಂಧಿಸಿ ಸರಪಳಿಯಲ್ಲಿ ಬಿಗಿದು ಮೆರವಣಿಗೆ ಮಾಡಿದ. ಪೇಠೆ ಟಿಪ್ಪುವಿನ ಸೆರೆಮನೆಯಲ್ಲಿ ಸಾವನ್ನಪ್ಪಿದರು. ಅದೇ ವರ್ಷ ತನ್ನ ಏಜೆಂಟ್ ನೂರ್ ಮುಹಮ್ಮದನಿಗೆ "ಕೇವಲ ಒಂದೇ ದಿನದಲ್ಲಿ ಮಹಿಳೆಯರು ಸೇರಿದಂತೆ ಐವತ್ತು ಸಾವಿರ ಹಿಂದೂಗಳನ್ನು ಇಸ್ಲಾಂಗೆ ಮತಾಂತರಿಸಿದ್ದೇನೆ. ಧಾರವಾಡ ವಶವಾಯಿತು. ಅನೇಕ ಸುಂದರ ಮಹಿಳೆಯರನ್ನು ಮುಸ್ಲಿಂ ಜನಾನಗಳಿಗೆ ಕರೆದೊಯ್ಯಲಾಯಿತು." ಎಂದು ಹೆಮ್ಮೆಯಿಂದ ಪತ್ರ ಬರೆಯುತ್ತಾನೆ.
ಟಿಪ್ಪುವಿನ ಆಕ್ರಮಣದ ಸುದ್ದಿ ಕೇಳಿ ಪುಣೆಯಲ್ಲಿ ಅಸಮಧಾನ ಭುಗಿಲೆದ್ದಿತು. ಕೆರಳಿದ ನಾನಾ ಫಡ್ನವೀಸ, ಪರಶುರಾಮ್ ಭಾವು ಜೊತೆಗೆ ಸೇರುವಂತೆ ಹೋಳ್ಕರರನ್ನು ವಿನಂತಿಸಿ 1786ರಲ್ಲಿ ಟಿಪ್ಪು ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿ ಬಾದಾಮಿ ಕೋಟೆಯನ್ನು ವಶಪಡಿಸಿಕೊಂಡರು. ನಾನಾ ಪುಣೆಗೆ ಹಿಂದಿರುಗಿದ ನಂತರ, ತುಕೋಜಿ ಹೋಳ್ಕರ್ ಮತ್ತು ಪರಶುರಾಮ್ ಭಾವು ಒಪ್ಪಂದವೊಂದಕ್ಕೆ ಟಿಪ್ಪುವಿನ ಸಹಿ ಹಾಕಿಸಿಕೊಂಡರು. ಅದರಂತೆ ಟಿಪ್ಪು 48 ಲಕ್ಷ ರೂಪಾಯಿಗಳ ಗೌರವಧನವನ್ನು ನೀಡಬೇಕಾಯಿತು. ಜೊತೆಗೆ ಕೈದಿಗಳನ್ನೂ ವಿನಿಮಯ ಮಾಡಿಕೊಳ್ಳಬೇಕಾಯಿತು.
1786ರಲ್ಲಿ ಸಹಾಯಕ್ಕಾಗಿ ನಾನಾ ಮಾಡಿದ ಕೋರಿಕೆಯನ್ನು ಇಂಗ್ಲೀಷರು ಸ್ವೀಕರಿಸಲಿಲ್ಲವಾದರೂ, 1790ರಲ್ಲಿ ಟಿಪ್ಪು ವಿರುದ್ಧ ಮರಾಠರ ಸಹಾಯವನ್ನು ಪಡೆಯಲು ತಾವೇ ಆಸಕ್ತಿ ವಹಿಸಿದರು. ಆ ಸಮಯದಲ್ಲಿ ಒಂದು ಸಂಘಟಿತ ಕಾರ್ಯತಂತ್ರವನ್ನು ಜಾರಿಗೆ ತರಲಾಯಿತು. ಲಾರ್ಡ್ ಕಾರ್ನ್ವಾಲಿಸ್ ಟಿಪ್ಪುವಿನ ವಿರುದ್ಧ ಕಣಕ್ಕಿಳಿದು ಚೆನ್ನೈ ತಲುಪಿದ. ಮರಾಠರು ಹರಿ ಪಂತ್ ಫಡ್ಕೆ ಅವರ ನೇತೃತ್ವದಲ್ಲಿ ಪುಣೆಯನ್ನು ತೊರೆದರು. ನಂತರ ಪಟವರ್ಧನ್ ಸಹೋದರರ(ಪರಶುರಾಮ ಭಾವು ಮತ್ತು ರಘುನಾಥ ರಾವ್ ‘ದಾದಾ’) ನೇತೃತ್ವದಲ್ಲಿ ಮತ್ತೊಂದು ಸೈನ್ಯವು ಬಂದಿತು. ಪಟವರ್ಧನರು ಟಿಪ್ಪುವಿನ ಆಕ್ರಮಣವನ್ನು ಎದುರಿಸುತ್ತಾ ಈ ಯುದ್ಧಗಳಲ್ಲಿ ತಮ್ಮ ಕುಟುಂಬದ ಅನೇಕರನ್ನು ಕಳೆದುಕೊಂಡರು. ಶ್ರೀರಂಗಪಟ್ಟಣದ ಕಡೆಗೆ ಮುಖ ಮಾಡಿದ್ದ ಕಾರ್ನ್ವಾಲಿಸನ ಜೊತೆ ಸೇರುವುದಾಗಿ ಈ ಹಿಂದೆಯೇ ಭರವಸೆ ನೀಡಿದ್ದ ಪರಶುರಾಮ್ ಭಾವು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ತಾವು ಹಿಂದಿನ ದಶಕದಲ್ಲಿ ಕಳೆದುಕೊಂಡ ಪ್ರದೇಶವನ್ನು ಮರಳಿ ಗೆಲ್ಲಲು ಹೆಚ್ಚಿನ ಆದ್ಯತೆನೀಡುವುದು ಸರಿಯೆಂದು ಆತನಿಗೆ ಅನ್ನಿಸಿತು. ಅದರಂತೆಯೇ ಮುಂದುವರಿದ ಆತ ತಿಂಗಳುಗಳ ಮುತ್ತಿಗೆಯ ಬಳಿಕ 1791ರ ಏಪ್ರಿಲ್ 6 ರಂದು ಧಾರವಾಡದ ಕೋಟೆಯನ್ನು ವಶಪಡಿಸಿಕೊಂಡು ತುಂಗಭದ್ರಾವನ್ನು ದಾಟಿ ಹರಿಹರದಲ್ಲಿ ರಘುನಾಥ ರಾವ್ ಅವರನ್ನು ಸೇರಿದ. ರಘುನಾಥ ರಾವ್ ನಂತರ ದಕ್ಷಿಣಕ್ಕೆ ಮಾಯಕೊಂಡ ಮತ್ತು ಚೆಂಗಿರಿ ಕೋಟೆಯನ್ನು ವಶಪಡಿಸಿಕೊಂಡರು.
ಈ ಸಮಯದಲ್ಲಿ ನೀಲಕಂಠ ಅಪ್ಪಾ (ರಘುನಾಥ ರಾವ್ ದಾದಾ ಅವರ ತಂದೆ) ಮೀರಜ್ನಲ್ಲಿರುವ ಬಾಳಾಸಾಹೇಬರಿಗೆ ಬರೆದ ಪತ್ರವು ಶೃಂಗೇರಿ ಮಠದ ಮೇಲೆ ನಡೆದ ದಾಳಿಯ ಮೊದಲ ಸೂಚನೆಯನ್ನು ನೀಡುತ್ತದೆ. ಪತ್ರದಲ್ಲಿ ಹೀಗಿದೆ - "ದಾದಾಸಾಹೇಬರ ಸೈನ್ಯದ ಲಮಾಣರು ಮತ್ತು ಪಿಂಡಾರಿಗಳು ಹೋಗಿ ಶೃಂಗೇರಿ ಮಠದಿಂದ ಆನೆ ಸೇರಿದಂತೆ ಲಕ್ಷಗಟ್ಟಲೆ ಧನವನ್ನು ಲೂಟಿ ಮಾಡಿದರು. ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದಾದಾಗೆ ನಾನು ಪತ್ರ ಬರೆದಿದ್ದೇನೆ." ಇದರ ನಂತರ ಏಪ್ರಿಲ್ ಮಧ್ಯಭಾಗದಲ್ಲಿ ಬರೆದ ಮತ್ತೊಂದು ಪತ್ರವು ಈ ರೀತಿಯಿದೆ; "ಲೂಟಿಕೋರರನ್ನು ಬಂಧಿಸಿ ಮಠಕ್ಕೆ ಸೇರಿದ ಜಂಬೂರಾ(?) ಮತ್ತು ಆನೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಹತ್ತು ಅಥವಾ ಇಪ್ಪತ್ತು ಅಪರಾಧಿಗಳನ್ನು ಬಂಧಿಸಲಾಯಿತು. ಆಗ ದಾದಾಸಾಹೇಬರು ತಮ್ಮ ಆಳುಗಳಾದ್ದರಿಂದ ಅವರ ವಿರುದ್ಧ ತಾನು ಕ್ರಮ ಕೈಗೊಳ್ಳುವುದಾಗಿ ಬರೆದರು. ಬಳಿಕ ಅಪರಾಧಿಗಳನ್ನು ಮತ್ತು ಆನೆಯನ್ನು ಅವರ ಬಳಿಗೆ ಕಳುಹಿಸಲಾಯಿತು. ಮೇ 14 ರಂದು, ರಘುನಾಥ ರಾವ್ ಅವರ ಮಗ ತ್ರಯಂಬಕ್ ರಾವ್ ಅವರು ಮೀರಜ್ನಲ್ಲಿರುವ ತಮ್ಮ ಚಿಕ್ಕಪ್ಪನಿಗೆ ಹೀಗೆ ಬರೆದರು, "ಸೇನೆ ತುಂಗಾ ನದಿಯನ್ನು ದಾಟುವ ಮೊದಲೇ, ಲಮಾಣಿ ಮತ್ತು ಪಿಂಡಾರಿಗಳು ಶಿವಮೊಗ್ಗವನ್ನು ತಲುಪಿದ್ದರು. ಅವರು ಹೋಗಿ ಶೃಂಗೇರಿಯಲ್ಲಿದ್ದ ಸ್ವಾಮಿಗಳ ಮಠವನ್ನು ಲೂಟಿ ಮಾಡಿದರು. ಸ್ವಾಮಿಗಳ ದಂಡ, ಕಮಂಡಲಗಳನ್ನು ಕೂಡಾ ದೋಚಿದರು. ಏನೂ ಉಳಿಯಲಿಲ್ಲ. ಮಹಿಳೆಯರ ಮೇಲೆ ಹಲ್ಲೆ (ಮತ್ತು ಅತ್ಯಾಚಾರ) ಮಾಡಲಾಯಿತು. ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಮಿಗಳ ವಿಗ್ರಹ, ಲಿಂಗ ಇತ್ಯಾದಿಗಳನ್ನು ಲೂಟಿ ಮಾಡಲಾಗಿದೆ. ಆನೆಯ ಲಾಯವನ್ನು ಲಮಾಣಿಗಳು ಖಾಲಿ ಮಾಡಿ ತಂದರು. ಸ್ವಾಮಿಗಳು ಧ್ಯಾನದಲ್ಲಿದ್ದು ಐದು ದಿನಗಳಿಂದಲೂ ಉಪವಾಸದಿಂದಿದ್ದು ಪ್ರಾಣತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆ."
ವಸ್ತುಶಃ ಕೊನೆಯಲ್ಲಿ ಸ್ವಾಮಿಗಳು ಪ್ರಾಣ ತ್ಯಾಗ ಮಾಡುವ ಮನಸ್ಥಿತಿಯಲ್ಲಿದ್ದಾರೆಂದು ಹೇಳಿದುದು ಸತ್ಯವಾಗಿರಲಿಲ್ಲ. ಪತ್ರವು ಹೀಗೆ ಮುಂದುವರೆಯುತ್ತದೆ, "ತಂದೆಯವರಿಗೆ ಈ ಲೂಟಿಯ ಬಗ್ಗೆ ತಿಳಿದಾಗ, ಅವರು ಲಮಾಣರನ್ನು ಬಂಧಿಸಲು ಅಶ್ವಸೈನ್ಯವನ್ನು ಕಳುಹಿಸಿದರು. ಆನೆಯನ್ನು ವಶಕ್ಕೆ ಪಡೆಯಲಾಯಿತು. ಕಳವು ಮಾಡಿದ ಉಳಿದ ವಸ್ತುಗಳು ಪತ್ತೆಯಾಗಿಲ್ಲ." ಈ ವಿಷಯವು ಉಲ್ಬಣಗೊಳ್ಳುತ್ತಲೇ ಹೋಯಿತು. ಪುಣೆಯಲ್ಲಿರುವ ನಾನಾ ಫಡ್ನವೀಸ್ ಅವರ ಕಿವಿಗೂ ತಲುಪಿತು. ಡಿಸೆಂಬರ್ 1791ರಲ್ಲಿ ಅವರ ಗುಮಾಸ್ತರಿಂದ ಒಂದು ಪತ್ರವು ರಘುನಾಥ ರಾವ್ ಅವರಿಗೆ ತಲುಪಿತು. ಪತ್ರದಲ್ಲಿ ಹೀಗಿದೆ :- ಲಮಾಣರು ಮತ್ತು ಲೂಟಿಕೋರರು ಶೃಂಗೇರಿ ಮಠವನ್ನು ಲೂಟಿ ಮಾಡಿದ ಸುದ್ದಿ ನ್ಯಾಯಾಲಯಕ್ಕೆ ತಲುಪಿದೆ. ಎಲ್ಲಾ ವಿವರಗಳನ್ನು ಕಲೆಹಾಕಬೇಕು. "ಲೂಟಿಕೋರರು ನಾಲ್ಕೂ ದಿಕ್ಕಿನಿಂದ ಬಂದವರು. ನೀವು ಕ್ರಮ ಕೈಗೊಂಡಿದ್ದೀರಿ ಮತ್ತು ಇತರರೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು" ಎಂದು ಬರೆದಿದ್ದೀರಿ. "ಸ್ವಾಮಿಗಳ ಮಠ ಲೂಟಿಯಾಗಿದೆ, ಹೀಗಾಗಿ ಸ್ವಾಮಿಗಳು ಉಪವಾಸ ಮಾಡುತ್ತಿದ್ದಾರೆ. ಸ್ವಾಮಿಗಳ ಅಸಮಾಧಾನ ಒಳ್ಳೆಯದಲ್ಲ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸ್ವಾಮಿಗಳಿಗೆ ಪರಿಹಾರ ನೀಡಬೇಕು ಮತ್ತು ಅವರ ತೃಪ್ತಿ, ಸಂತೋಷವನ್ನು ಕೋರಬೇಕು" ಎಂದು ನಾನಾ ಉತ್ತರಿಸಿದ್ದಾರೆ.
ಮರಾಠಾ ಸೇನೆಯಲ್ಲಿನ ಪಿಂಡಾರಿಗಳು ಮತ್ತು ಟಿಪ್ಪುವಿನ ಸೇನೆಯಲ್ಲಿನ ಬೇಯ್ಡ್(Bayed) ಪಡೆಗಳು ಅನಿಯಮಿತ, ಅರೆಕಾಲಿಕ ಪಡೆಗಳು. ಯುದ್ಧದ ಬಳಿಕದ ಮಾಪಿಂಗ್ ಅಪ್ ಕಾರ್ಯಾಚರಣೆಗಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಅವರಿಗೆ ಸಂಬಳವಿರಲಿಲ್ಲ. ಯುದ್ಧದ ಬಳಿಕ ಲೂಟಿಯಿಂದ ಸಿಕ್ಕಿದ್ದಷ್ಟೇ ಅವರ ಪಾಲಿಗೆ. ಗವರ್ನರ್ ಜನರಲ್, 24 ಏಪ್ರಿಲ್ 1792 ರಂದು ಲಾರ್ಡ್ ಕಾರ್ನ್ವಾಲಿಸ್ ಪರವಾಗಿ ಬರೆದ ಪತ್ರದಲ್ಲಿ-
"ಟಿಪ್ಪುವಿನ ಬೇಯ್ಡ್ ಪಡೆ ಮತ್ತು ಮರಾಠ ಸೈನ್ಯದ ಪಿಂಡಾರಿ ಪಡೆಗಳನ್ನು ಯಾವುದೇ ತಪಾಸಣೆ ಅಥವಾ ನಿಯಂತ್ರಣವಿಲ್ಲದೆ ಬಳಸಿಕೊಳ್ಳಲಾಗಿದ್ದ ಅನಿಯಮಿತ ಮತ್ತು ಘೋರ ವ್ಯವಸ್ಥೆಯ ಕಡೆಗೆ ಆತ ಗಮನ ಹರಿಸಲಿಲ್ಲ. ಆ ಪಡೆಗಳ ಸ್ವಭಾವದಿಂದಲಾಗಿ ಯಾವುದೇ ರಾಜ್ಯದಲ್ಲಿ ಸೈನ್ಯವು ಸಾಗಿದಾಗ ಅಲ್ಲಿನ ಅಧಿಕಾರಿಗಳಿಗೆ ವಿವರಣೆ ನೀಡಬೇಕಾದ ಸಂದರ್ಭ ಒದಗುತ್ತಿತ್ತು. ಇವೆಲ್ಲಾ ತಾತ್ಕಾಲಿಕವಾದ ಅನಾನುಕೂಲತೆಗಳೆಂದು ಪರಿಗಣಿಸಲಾಗುತ್ತದೆ ಎನ್ನುವ ವಿಶ್ವಾಸವನ್ನು ಆತ ಹೊಂದಿದ್ದ."
ಪಿಂಡಾರಿಗಳು 17ರಿಂದ 19ನೇ ಶತಮಾನದ ಪೂರ್ವಾರ್ಧದಲ್ಲಿ ಭಾರತೀಯ ಉಪಖಂಡದಲ್ಲಿದ್ದ ಮುಸ್ಲಿಮ್ ಮತಾವಲಂಬಿಗಳಾದ ಅಕ್ರಮ ಸೇನಾ ಲೂಟಿಕೋರರು ಮತ್ತು ಅನ್ವೇಷಕರು. ಪಿಂಡ ಎನ್ನುವ ಮದ್ಯವನ್ನು ಸೇವಿಸುತ್ತಿದ್ದ ಇವರು ಆರಂಭದಲ್ಲಿ ಮೊಘಲ್ ಸೇನೆಯ ಜೊತೆಗಿದ್ದರು. ಬಳಿಕ ಮರಾಠಾ ಸೇನೆಗೆ ಸಹಾಯಕರಾಗಿದ್ದರು. ಅಂತಿಮವಾಗಿ ಸ್ವತಂತ್ರವಾಗಿದ್ದ ಇವರು ೧೮೧೭-೧೮ರ ಪಿಂಡಾರಿ ಯುದ್ಧದಲ್ಲಿ ನಾಶವಾದರು. ಪಿಂಡಾರಿಗಳು ವೇತನರಹಿತರಾಗಿದ್ದರು ಮತ್ತು ಯುದ್ಧದಲ್ಲಿ ಲೂಟಿಮಾಡಿದ ವಸ್ತುಗಳೇ ಅವರ ಸಂಪೂರ್ಣ ವೇತನವಾಗಿತ್ತು. ಇವರು ಕುದುರೆ ಸವಾರರು, ಪದಾತಿ ದಳಗಳಾಗಿದ್ದು, ಭಾಗಶಃ ಶಸ್ತ್ರಸಜ್ಜಿತರಾಗಿರುತ್ತಿದ್ದರು. ತಾವು ಜೊತೆಗೂಡಿದ್ದ ಸೇನೆಗೆ ಲಾಭವಾಗಲು ಅವ್ಯವಸ್ಥೆ ಸೃಷ್ಟಿಸುವುದು ಮತ್ತು ಶತ್ರು ಸ್ಥಾನಗಳ ಬಗ್ಗೆ ಸುದ್ದಿ ಒದಗಿಸುವ ಕೆಲಸ ಇವರದಾಗಿತ್ತು. ಆದರೆ ತಮಗಿದ್ದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಮಿತ್ರಸೇನೆಗಳಿಗೆ ಹಾನಿ, ಅವಮಾನ ಮಾಡಿದ್ದೂ ಉಂಟು. ಶೃಂಗೇರಿ ಪ್ರಕರಣವೂ ಅದರಲ್ಲೊಂದು.
1791ರಲ್ಲಿ, ಮೂರು ಮಿತ್ರಪಕ್ಷಗಳು ಶ್ರೀರಂಗಪಟ್ಟಣದತ್ತ ಧಾವಿಸಿದಾಗ, ಟಿಪ್ಪುವಿನ ವಕೀಲ ಅಪಾಜಿ ರಾಮ್ ಮರಾಠರನ್ನು ತೃಪ್ತಿಗೊಳಿಸಲು ಬಯಸಿದ. "ಟಿಪ್ಪು ಕಂಚಿಯಲ್ಲಿದ್ದಾನೆ ಮತ್ತು ಅವಮಾನಕರವಾದ ಮಾತುಕತೆಗಳು ನಡೆಯುತ್ತಿದೆ. ಆತ ಪ್ರಜೆಗಳಿಗೆ ಕಿರುಕುಳ ನೀಡುತ್ತಿಲ್ಲ. ಕಾರ್ನ್ವಾಲಿಸ್ ಚೆನ್ನೈನಲ್ಲಿದ್ದಾನೆ ಮತ್ತು ಎರಡೂ ಕಡೆಯಿಂದ ಯುದ್ಧದ ಸಿದ್ಧತೆಗಳು ನಡೆಯುತ್ತಿವೆ. ಹೈದರ್ ಅಲಿ ತನ್ನ ಆಳ್ವಿಕೆಯು ಶುರುವಾದಾಗ ಆರಂಭಿಸಿದ್ದ ಕಂಚಿ ದೇವಾಲಯದ ಗೋಪುರದ ಕೆಲಸವನ್ನು ಪೂರ್ಣಗೊಳಿಸಲು ಟಿಪ್ಪು ಈಗ ಆದೇಶಿಸಿದ್ದಾನೆ. ತಾನೇ ನಿಲ್ಲಿಸಿದ್ದ ರಥೋತ್ಸವಕ್ಕೂ ಅನುಮತಿ ನೀಡಿದ್ದಾನೆ. ಕಂಚಿಯಲ್ಲಿ ವಾರ್ಷಿಕ ಉತ್ಸವದ ಸುಡುಮದ್ದು ಪ್ರದರ್ಶನದಲ್ಲೂ ಭಾಗವಹಿಸಿದ್ದಾನೆ" ಎಂದು ಮರಾಠ ಗುಪ್ತಚರರು ವರದಿ ಮಾಡಿದರು. ಹಿಂದೂ ದೇವತೆಗಳನ್ನು ತೃಪ್ತಿಪಡಿಸಲು ಪ್ರಾಯಶ್ಚಿತ್ತ ಪೂಜೆಗಳನ್ನು ಶ್ರೀರಂಗಪಟ್ಟಣಂನಲ್ಲಿ ಮಾಡಲು ಟಿಪ್ಪು ಬ್ರಾಹ್ಮಣರಿಗೆ ಆಜ್ಞಾಪಿಸಿದ. ಅದೇ ಸಮಯದಲ್ಲಿ ಹರಿಪಂತ್ ಫಡ್ಕೆ "ಟಿಪ್ಪುವಿನ ಆದೇಶದ ಮೇರೆಗೆ ರಂಗಸ್ವಾಮಿ ಮತ್ತು ಶಿವಾಲಯಗಳಲ್ಲಿ ಬ್ರಾಹ್ಮಣರು ಪ್ರಾಯಶ್ಚಿತ್ತಾದಿ ಪೂಜಾಕಾರ್ಯಕ್ರಮಗಳನ್ನು ಕೈಗೊಂಡರು. ಒಬ್ಬರು ನೀರಿನಲ್ಲಿ ಕುಳಿತು, ನಲವತ್ತು ಬ್ರಾಹ್ಮಣರು ಇನ್ನೊಂದು ರೀತಿಯ ಜಪವನ್ನು ಮಾಡುತ್ತಿದ್ದಾರೆ. ಆತ ಶೃಂಗೇರಿ ಸ್ವಾಮಿಗಳನ್ನು ಅಲ್ಲಿಗೆ ಕರೆದೊಯ್ದಿದ್ದಾನೆ. ಶ್ರೀಗಳು ಉಪವಾಸದಲ್ಲಿದ್ದಾರೆ. ತಾನು ಎಲ್ಲವನ್ನೂ ಸರಿಪಡಿಸುತ್ತೇನೆ, ನೀವು ನಿಶ್ಚಿಂತರಾಗಿರಿ ಎಂದು ಅವರನ್ನು ಟಿಪ್ಪು ವಿನಂತಿಸುತ್ತಿದ್ದಾನೆ. ಗುರುಗಳಿಗೆ ಚಿನ್ನದ ವಿಗ್ರಹಗಳನ್ನೂ ಮತ್ತು ಬ್ರಾಹ್ಮಣಾರ್ಥಕ್ಕಾಗಿ ನಲವತ್ತು ಸಾವಿರ ರೂಪಾಯಿಗಳನ್ನು ಆತ ಕೊಟ್ಟಿದ್ದಾನೆ" ಎಂದು ಪತ್ರ ಬರೆದ. ಮತ್ತೊಂದು ಪತ್ರ, ‘ಅಪಾಜಿ ರಾಮ್ ಒಪ್ಪಂದಕ್ಕಾಗಿ ಮನವಿ ಮಾಡುತ್ತಿದ್ದಾರೆ’ ಎಂದು ಹೇಳುತ್ತದೆ. ಮಿತ್ರಪಡೆಗಳು ಅಂತಿಮವಾಗಿ ಫೆಬ್ರವರಿ 1792ರಲ್ಲಿ ಶ್ರೀರಂಗಪಟ್ಟಣವನ್ನು ಸುತ್ತುವರೆದವು. ಕಾರ್ನ್ವಾಲಿಸ್ ಟಿಪ್ಪುವಿನ ಬಲವನ್ನೆಲ್ಲಾ ನಾಶಮಾಡಲು ಉತ್ಸುಕನಾಗಿದ್ದ. ಆದರೆ ನಿಜಾಮ ಮತ್ತು ಮರಾಠಾ ಕಮಾಂಡರ್ ಹರಿ ಪಂತ್ ಟಿಪ್ಪುವನ್ನು ಬಂಧಿಯಾಗಿಸಲು ಮಾತ್ರ ಬಯಸಿದ್ದರು. ಆದಾಗ್ಯೂ ಟಿಪ್ಪು ಉಗ್ರವಾಗಿ ಹೋರಾಡಿದ. ಅಂತಹ ಯುದ್ಧಕ್ಕಾಗಿ ಹರಿ ಪಂತ್ ಆಂಗ್ಲರು ಮತ್ತು ಟಿಪ್ಪು ಇಬ್ಬರನ್ನೂ ಹೊಗಳಿದ್
ಶೃಂಗೇರಿಯ ಪ್ರಸಂಗ ಮರಾಠರ ಪಾಲಿಗೆ ರಾಜನೀತಿಯೂ ಆಗಿರಲಿಲ್ಲ, ಯುದ್ಧ ಯೋಜನೆಯೂ ಆಗಿರಲಿಲ್ಲ. ನಿಜವಾದ ಯುದ್ಧದಲ್ಲಿ ಭಾಗವಹಿಸದ ಪರಭಕ್ಷಕ ಪಡೆಗಳಾದ ಪಿಂಡಾರಿಗಳು ಮತ್ತು ಲಮಾಣರಿಂದ ಇದು ನಡೆದುಹೋಯಿತು. ಮರಾಠರು ಹಿಂದೂಗಳಾಗಿದ್ದು ಬ್ರಾಹ್ಮಣ ನಾಯಕರ ನೇತೃತ್ವವಿದ್ದ ಕಾರಣ ಅವರು ಹಾನಿಮಾಡುವ ಭಯವಿಲ್ಲದಿದ್ದುದರಿಂದ ಶೃಂಗೇರಿ ಮಠವು ಈ ಪ್ರದೇಶದ ಎಲ್ಲಾ ಶ್ರೀಮಂತರಿಗೆ ಸುರಕ್ಷಿತ ಭಂಡಾರವಾಗಿ ಕಾಣುತ್ತಿತ್ತು ಎಂದು ಬೃಹತ್ ಸಂಖ್ಯೆಯಲ್ಲಿ ಐತಿಹಾಸಿಕ ಪತ್ರಗಳನ್ನು ಸಂಗ್ರಹಿಸಿರುವ ಇತಿಹಾಸಕಾರ ವಿವಿ ಖರೆ ಬರೆಯುತ್ತಾರೆ. ಮರಾಠರ ನಿಯಮಿತ ಸ್ಥಾಯೀ ಪಡೆಗಳು ಮಠದ ಮೇಲೆ ದಾಳಿ ಮಾಡದಿದ್ದರೂ, 'ಯಾವುದೇ ತಪಾಸಣೆ ಅಥವಾ ನಿಯಂತ್ರಣ'ದೊಂದಿಗೆ ಕಾರ್ಯನಿರ್ವಹಿಸದ ಪಿಂಡಾರಿಗಳು ಮಠದ ಮೇಲೆ ದಾಳಿ ಮಾಡಿದರು. ಮರಾಠಾ ಆಡಳಿತವು ಈ ಕೃತ್ಯದ ಬಗ್ಗೆ ದುಃಖಿತವಾಗಿತ್ತು ಮತ್ತು ಸುಮಾರು ಒಂದು ವರ್ಷದ ಬಳಿಕವೂ ಸ್ವಾಮಿಗಳಿಗೆ ಪರಿಹಾರ ಒದಗಿಸಿ ಸಮಾಧಾನಪಡಿಸಲು ಪ್ರಯತ್ನಗಳು ನಡೆಯುತ್ತಿದ್ದವು. ಇಂದಿಗೂ ಪೇಶ್ವೆಗಳ ಮನೆತನ ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಈ ತಪ್ಪಿನ ಪ್ರಾಯಶ್ಚಿತ್ತಾದಿ ಕ್ರಮಗಳನ್ನು ಮಾಡಿಸುತ್ತಿದೆ ಎಂಬ ಮಾಹಿತಿ ಇದೆ(ಅಧಿಕೃತವಲ್ಲ). 1791 ರಲ್ಲಿ, ಸುತ್ತಲಿಂದ ದಾಳಿ ಆರಂಭವಾಗಿ ತಾನು ಇನ್ನೇನು ಜೀವ ಕಳೆದುಕೊಳ್ಳುತ್ತೇನೆ ಎನ್ನುವ ಭಯ ಹುಟ್ಟಿದಾಗ ಟಿಪ್ಪು, ದೇವಾಲಯಗಳು ಹಾಗೂ ಬ್ರಾಹ್ಮಣರ ಕಡೆಗಿನ ತನ್ನ ನಿಲುವನ್ನು ಬದಲಾಯಿಸಿದ. ಮರಾಠಾ ಪತ್ರ ಬರೆದವರು ಟಿಪ್ಪುವಿನ ಹೊಸ ನೀತಿಗಳ ಬಗೆಗೂ ಟೀಕೆ ಮಾಡಿದ್ದಾರೆ, ಏಕೆಂದರೆ ಅವುಗಳು ಅವನ ಲಕ್ಷಣವಾಗಿರಲೇ ಇಲ್ಲ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬೆದರಿ ಆತ ಇಂದಿನ ರಾಜಕಾರಣಿಗಳಂತೆ ದೇವಾಲಯ ಸುತ್ತುವ ಕೆಲಸಕ್ಕಿಳಿದಿದ್ದ. ಕಂಚಿ ಮತ್ತು ಶೃಂಗೇರಿ ಪ್ರಕರಣಗಳು ಅದರದ್ದೇ ಅಧ್ಯಾಯಗಳಷ್ಟೆ. ಹಾಗಾಗಿ ಈ ಪ್ರಕರಣಗಳನ್ನಿಟ್ಟುಕೊಂಡು ಟಿಪ್ಪುವನ್ನು ಹಿಂದೂ ಹಿತರಕ್ಷಕ ಅನ್ನುವಂತೆಯೂ ಇಲ್ಲ; ಅವು ಆತ ಹಿಂದೆ ಹಿಂದೂಗಳ, ಹಿಂದೂ ದೇವಾಲಯಗಳ ಮೇಲೆ ಎಸಗಿದ್ದ ಘನಘೋರ ಅತ್ಯಾಚಾರವನ್ನು ಮರೆಸುವುದೂ ಇಲ್ಲ. ಜೊತೆಗೆ ಈ ಪ್ರಕರಣವನ್ನಿಟ್ಟುಕೊಂಡು ಮರಾಠರನ್ನು ಖಂಡಿಸಲೂ ಸಾಧ್ಯವಿಲ್ಲ.
ಶನಿವಾರ, ಆಗಸ್ಟ್ 20, 2022
ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು
ಪ್ರಾಚೀನ ಭಾರತದ ಖಗೋಳ ವೀಕ್ಷಣಾಲಯಗಳು
ಖಗೋಳ ಶಾಸ್ತ್ರಕ್ಕೆ ಪ್ರಾಚೀನ ಭಾರತದ ಕೊಡುಗೆ ಅಪಾರ. ಪ್ರಸಕ್ತ ಲಭ್ಯವಿರುವ ಐತಿಹಾಸಿಕ ದಾಖಲೆಗಳನ್ನು ಗಮನಿಸಿದರೆ ಪ್ರಾಚೀನ ಭಾರತದಲ್ಲಿ ಮೂರು ಮಹತ್ತಾದ ಖಗೋಳ ವೀಕ್ಷಣಾಲಯಗಳಿದ್ದವು. ಮೆಹರೂಲಿ, ಉಜ್ಜಯಿನಿ ಹಾಗೂ ಮಹೋದಯಪುರಂಗಳಲ್ಲಿ ಈ ವೀಕ್ಷಣಾಲಯಗಳು ಸ್ಥಿತವಾಗಿದ್ದವು. ಮೆಹರೂಲಿಯಲ್ಲಿ ವರಾಹಮಿಹಿರ ವಿನ್ಯಾಸಗೊಳಿಸಿದ, ಶಕಪುರುಷ ರಾಜಾ ವಿಕ್ರಮಾದಿತ್ಯ ನಿರ್ಮಿಸಿದ ವೀಕ್ಷಣಾಲಯವಿತ್ತು. ಉಜ್ಜಯಿನಿಯ ವೀಕ್ಷಣಾಲಯವೂ ಬಹುಷಃ ವಿಕ್ರಮಾದಿತ್ಯನಿಂದಲೇ ನಿರ್ಮಿಸಲ್ಪಟ್ಟಿತ್ತು. ಉಜ್ಜಯಿನಿಯಲ್ಲಿ ಹಲವು ಬುದ್ಧಿವಂತ ತಲೆಗಳು ಒಟ್ಟುಗೂಡಿದ್ದವು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ ೧ & ೨, ವಟೇಶ್ವರ ಮುಂತಾದ ಘಟಾನುಘಟಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಮಹೋದಯಪುರಂನಲ್ಲಿನ ವೀಕ್ಷಣಾಲಯವನ್ನು ಶಂಕರನಾರಾಯಣ ಎನ್ನುವ ವಿದ್ವಾಂಸ (~ ಸಾ.ಶ. 860) ವಿನ್ಯಾಸಗೊಳಿಸಿದ. ಹಲವು ಪರಿಚಿತ ವೀಕ್ಷಣಾ ಉಪಕರಣಗಳು ಇಲ್ಲಿದ್ದವು. ಆದರೆ ಈ ವೀಕ್ಷಣಾಲಯದ ಒಂದು ಇಟ್ಟಿಗೆಯೂ ಈಗ ಉಳಿದಿಲ್ಲ.
ಜ್ಯೋತಿಷ್ಯ ಮತ್ತು ಕಾಲಗಣನೆಗೆ ಅವಂತಿಯ ಕೊಡುಗೆ ಅನನ್ಯ. ಶಕಕರ್ತ ವಿಕ್ರಮಾದಿತ್ಯನ ಆಡಳಿತಕ್ಕೂ ಇದು ಒಳಪಟ್ಟಿತ್ತು. ಪ್ರಾಚೀನ ಮಾಲವವೇ ಅವಂತೀ. ಅದರ ಒಂದು ಭಾಗ ಉಜ್ಜಯಿನಿಯಾದರೆ ಇನ್ನೊಂದು ಮಾಹಿಷ್ಮತಿಯಾಗಿತ್ತು.ಜಗದ್ಗುರು ಶ್ರೀ ಶಂಕರಾಚಾರ್ಯರ ವೇದಾಂತ ಸಂವಾದ ನಡೆದುದು ಈ ಮಾಲವದಲ್ಲೇ. ಮಾಲವ ಜ್ಯೋತಿಷಿ ಹಾಗೂ ಖಗೋಳ ವಿಜ್ಣಾನಿಗಳ ಅಚ್ಚುಮೆಚ್ಚಿನ ಕ್ಷೇತ್ರವಾಗಿತ್ತು. ಉಜ್ಜಯಿನಿಯಲ್ಲಿದ್ದ ಖಗೋಳ ವೀಕ್ಷಣಾಲಯವೂ ಅದಕ್ಕೆ ಕಾರಣ. ಬಹುಷಃ ವಿಕ್ರಮಾದಿತ್ಯನೇ ಇದನ್ನು ಸ್ಥಾಪಿಸಿರಬಹುದು. ಸೂರ್ಯಕೇಂದ್ರಿತ ಅವಧಿಗಳಿಗೆ ತ್ರಿಕೋನಮಿತಿಯ ಕೋಷ್ಟಕಗಳಿಂದ ಹಿಡಿದು ಅಕ್ಷಾಂಶ ಮತ್ತು ರೇಖಾಂಶ ನಿರ್ಣಯದ ತತ್ವಗಳವರೆಗೆ ಎಲ್ಲವೂ ಇಲ್ಲಿಂದ ಬಂದವು. ಶೂನ್ಯ ಡಿಗ್ರಿ ಮಧ್ಯರೇಖೆ ಹಾದು ಹೋಗುವುದೇ ಇಲ್ಲಿ. ಉಜ್ಜಯಿನಿ ಮಹಾಕಾಲನ ನೆಲೆ ಆಗಲೂ ಕಾರಣವೇ ಅದು. ಸೃಷ್ಟಿಯ ಆರಂಭದಲ್ಲೇ ಈ ನಗರವಿತ್ತು (ಸ್ಕಂದಪುರಾಣ ಉಜ್ಜಯಿನಿಯನ್ನು ಪ್ರತಿಕಲ್ಪ ಎಂಬುದಾಗಿ ಹೆಸರಿಸಿದೆ.) ಎನ್ನುವ ಪ್ರತೀತಿಗೂ ಅದೇ ಕಾರಣ. ಅಂತಹಾ ಮಧ್ಯಬಿಂದುವಿನಲ್ಲಿ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದ್ದೂ ಪ್ರಾಚೀನ ಭಾರತೀಯರ ಅಪ್ರತಿಮ ಖಗೋಳ ಜ್ಣಾನಕ್ಕೆ ಸಾಕ್ಷಿ.
ಉಜ್ಜಯಿನಿಯ ವಿಕ್ಷಣಾಲಯದಿಂದ ಹೊರಬಿದ್ದ ಅದ್ವಿತೀಯ ಸಂಶೋಧನೆಗಳಿಂದ ಭಾರತೀಯ ಕೃಷಿ ಮತ್ತು ವ್ಯಾಪಾರಗಳು ನಿಖರವಾದ ಸಂಚರಣೆ ಹಾಗೂ ದಿನಸೂಚಿಯನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಿದವು. ಅರಬ್ಬರು ಹಾಗೂ ಯೂರೋಪಿಯನ್ನರು ಇಲ್ಲಿಂದಲೇ ಖಗೋಳ ವಿಜ್ಞಾನದ ತಂತ್ರಗಳನ್ನು ಪಡೆದರು. ಭೋಜರಾಜನ ತರುವಾಯ ಉಜ್ಜಯಿನಿ ದುರ್ಬಲವಾಯಿತು. ದೆಹಲಿಯನ್ನು ಆಳುತ್ತಿದ್ದ ಇಲ್ತಮಿಶ್ ಉಜ್ಜಯಿನಿಯ ಮೇಲೆ ದಾಳಿ ಮಾಡಿ ಮಹಾಕಾಲನ ಮಂದಿರವನ್ನೂ , ಖಗೋಳ ವೀಕ್ಷಣಾಲಯವನ್ನೂ ನಾಶ ಮಾಡಿ ಚಿನ್ನದ ಮಹಾಕಾಲನ ಮೂರ್ತಿಯನ್ನು ದೆಹಲಿಗೆ ಹೊತ್ತೊಯ್ಯುತ್ತಾನೆ. ಉಜ್ಜಯಿನಿಯನ್ನು ಲೂಟಿಗೈದು ಮಹಾಕಾಲನ ದೇವಾಲಯದ ಸ್ಥಳದಲ್ಲೇ ಮಸೀದಿಯನ್ನೂ ನಿರ್ಮಿಸುತ್ತಾನೆ. ಶಕಪುರುಷ ವಿಕ್ರಮನ ದೊಡ್ಡದಾದ ಕಂಚಿನ ಪ್ರತಿಮೆಯೊಂದನ್ನು ಈ ವೀಕ್ಷಣಾಲಯದಲ್ಲಿ ಖಗೋಳ ಶಾಸ್ತ್ರಜ್ಞರು ಬಳಸಿದ್ದರು. ಇಲ್ತಮಿಶ್ ಅವಮಾನಿಸಲೆಂದೇ ಅದನ್ನು ದೆಹಲಿಗೆ ಕೊಂಡೊಯ್ದು ಒಡೆದು ಹಾಕಿದ. ಅಬು ಉಮ್ರ್ನ ತಬ್ಕತ್-ಇ-ನಾಸಿರಿ ಇಲ್ತುಮಿಶ್ನಿಂದ ಉಜ್ಜಯಿನಿಯ ನಾಶವನ್ನು ದಾಖಲಿಸಿದೆ. ಜಲಾಲುದ್ದೀನ್ ಫಿರೋಜ್ ಶಾ ಖಿಲ್ಜಿ ಎರಡೆರಡು ಬಾರಿ ದಾಳಿ ಮಾಡಿ ಅಳಿದುಳಿದ ದೇವಾಲಯಗಳನ್ನು ನಾಶಮಾಡಿ ನಗರವನ್ನು ನರಕ ಸದೃಶಗೊಳಿಸುತ್ತಾನೆ. ಬಳಿಕ ಹಲವು ಮುಸ್ಲಿಮ್ ರಾಜರುಗಳ ಆಡಳಿತವನ್ನು ಕಂಡ ಉಜ್ಜಯಿನಿ ನಲುಗಿ ಹೋಯಿತು.
ಮುಂದೆ 1725ರಲ್ಲಿ ರಾಜಾ ಜಯಸಿಂಹ ಇಲ್ಲಿನ ಖಗೋಳ ವೀಕ್ಷಾಣಾಲಯವನ್ನು ಪುನರುಜ್ಜೀವನಗೊಳಿಸಿದ. ಖಗೋಳ ಶಾಸ್ತ್ರಕ್ಕೆ ಈತನ ಕೊಡುಗೆ ಅನನ್ಯ. ಖಗೋಲಶಾಸ್ತ್ರದಲ್ಲಿ ನಿಷ್ಣಾತನಾಗಿದ್ದ ಜಯಸಿಂಹ ಪಂಚಾಂಗ ಪರಿಷ್ಕರಣೆ, ಗ್ರಹಗಳ ಚಲನಾಧ್ಯಯನ, ಆಕಾಶಕಾಯಗಳ ವೀಕ್ಷಣೆಯನ್ನು ಚೆನ್ನಾಗಿ ಬಲ್ಲವನಾಗಿದ್ದುದು ಮಾತ್ರವಲ್ಲದೆ ಅವುಗಳ ಕಲಿಕೆಗೆ ಪ್ರೋತ್ಸಾಹವನ್ನೂ ಕೊಟ್ಟಿದ್ದ. ಯೂಕ್ಲಿಡ್ನ ಜ್ಯಾಮಿತಿಯ ಗ್ರಂಥ, ಟಾಲೆಮಿಯ ರಸಶಾಸ್ತ್ರಗ್ರಂಥ, ಜಾನ್ ನೇಪಿಯರ್ನ ಕೃತಿಗಳನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಗ್ರಹನಕ್ಷತ್ರಗಳನ್ನು ನೋಡುವುದು, ಅವುಗಳ ಚಲನೆಯನ್ನು ಲೆಕ್ಕ ಹಾಕುವುದು ಅವನಿಗೆ ಪ್ರಿಯವಾದ ಹವ್ಯಾಸಗಳಾಗಿದ್ದವು. ಅವುಗಳ ವೀಕ್ಷಣೆಗಾಗಿ ಯಂತ್ರೋಪಕರಣಗಳನ್ನು ತಾನೇ ಸ್ವತಃ ತಯಾರಿಸುತ್ತಿದ್ದ. ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ, ಜಂತರ್ ಮಂತರ್ ಬಯಲು ಖಗೋಳವೀಕ್ಷಣಾಲಯದಲ್ಲಿರುವ ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ ಸೂರ್ಯಯಂತ್ರವನ್ನು ನಿರ್ಮಿಸಿದವ ಜಯಸಿಂಹನೇ. ಕಲ್ಲು, ಇಟ್ಟಿಗೆ ಸುಣ್ಣಗಾರೆ, ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆ ಎಂಥವರನ್ನೂ ಬೆರಗಾಗಿಸುತ್ತದೆ. ದೆಹಲಿಯ ಜಂತರ್ ಮಂತರ್, ಮಥುರಾ, ಉಜ್ಜಯಿನಿ, ವಾರಾಣಸಿಗಳಲ್ಲಿ ಖಗೋಲ ವೀಕ್ಷಣಾಲಯಗಳನ್ನು ತಾನೇ ರೂಪಿಸಿ ನಿರ್ಮಿಸಿದ. ಖಗೋಳ ವಿಜ್ಞಾನದಲ್ಲಿ ಆಸಕ್ತಿಯಿದ್ದ ಯಾರೇ ವಿದ್ವಾಂಸರೂ ಯಾವುದೇ ಸಮಯದಲ್ಲಿ ಹೋಗಿ ಈ ಯಂತ್ರಗಳನ್ನು ಬಳಸಿ ಗ್ರಹಗಳ ಕುರಿತು ಅಧ್ಯಯನ ನಡೆಸಬಹುದಿತ್ತು. ದೇಶ-ವಿದೇಶಗಳ ವಿದ್ವಾಂಸರನ್ನು ಕರೆಸಿ ಗೋಷ್ಠಿ ನಡೆಸುತ್ತಿದ್ದ. ಮಧ್ಯ ಏಷ್ಯಾ ಮತ್ತು ಯೂರೋಪುಗಳಲ್ಲಿ ಬಳಕೆಯಲ್ಲಿದ್ದ ಗ್ರಂಥಗಳನ್ನು, ಯಂತ್ರೋಪಕರಣಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದ. ಅನೇಕ ಪಾಶ್ಚಾತ್ಯ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದುದಲ್ಲದೆ ಯಂತ್ರ ರಾಜ ಮತ್ತು ಯಂತ್ರ ರಾಜ ರಚನಾ ಪ್ರಕಾರ ಎಂಬುದಾಗಿ ಖಗೋಳ ವಿಜ್ಞಾನದಲ್ಲಿ ಬಳಸುವ ಯಂತ್ರಗಳ ಮೇಲೆ ಎರಡು ಗ್ರಂಥಗಳನ್ನು ರಚಿಸಿದ. ಅರಬ್ ಹಾಗೂ ಐರೋಪ್ಯ ಖಗೋಲಶಾಸ್ತ್ರಾಧ್ಯಯನಕ್ಕೆ ಭಾರತೀಯ ಜ್ಯೋತಿರ್ವಿದ್ಯೆಯನ್ನು ಬೆಸೆದುದು ಅವನ ಬಹುದೊಡ್ಡ ಸಾಧನೆ. ಅವನ ಬಳಿ ಕೆಲಸ ಮಾಡುತ್ತಿದ್ದ ಗುಜರಾತಿನ ಕೇವಲರಾಮ ಖಗೋಳ ವಿಜ್ಞಾನದ ಮೇಲೆ ಎಂಟು ಗ್ರಂಥಗಳನ್ನು ರಚಿಸಿದ. ಜನಸಾಮಾನ್ಯರಿಗೆಂದೇ ನಕ್ಷತ್ರಗಳ ಸ್ಥಿತಿಗತಿಗಳು ಹಾಗೂ ಗ್ರಹಗಳು ಉದಯವಾಗುವ ಹಾಗೂ ಅಸ್ತವಾಗುವ ಕಾಲಗಳಿಗೆ ಸಂಬಂಧಪಟ್ಟ ಅಂಕಿ-ಅಂಶಗಳನ್ನು ಕಲೆಹಾಕಿ ಕೋಷ್ಟಕಗಳನ್ನು ತಯಾರಿಸಿದ. ಅವನು ರಚಿಸಿದ ಲೋಹಯಂತ್ರಗಳನ್ನು ನಾವು ಇಂದಿಗೂ ಜಯಪುರದ ವಸ್ತು ಸಂಗ್ರಹಾಲಯದಲ್ಲಿ ಕಾಣಬಹುದು.
ಜಂತರ್ ಎಂದರೆ ಯಂತ್ರ, ಮಂತರ್ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜಯಪ್ರಕಾಶ ಯಂತ್ರ, ರಾಮಯಂತ್ರ, ನಾರೀ ವಲಯ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್ ಯಂತ್ರ, ಧ್ರುವದರ್ಶಿಕೆ ಪಟ್ಟಿಕೆ, ಷಷ್ಠಾಂಶ ಯಂತ್ರ, ಛಾಯಾಯಂತ್ರ, ದಕ್ಷಿಣಾವೃತ್ತಿ ಯಂತ್ರ ಮುಂತಾಗಿ ಹಲವು ವಿವಿಧ ಉಪಕರಣಗಳು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲಿದ್ದವು. ಜಯಪ್ರಕಾಶ ಯಂತ್ರದಲ್ಲಿ ನಿಮ್ನ ಅರ್ಧವೃತ್ತಾಕಾರದ ಭಾಗಗಳೆರಡು ಸರದಿಯಲ್ಲಿ ಗಂಟೆಗೊಂದರಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದ ಸ್ಥಳೀಯ ಕಾಲವನ್ನು, ಸೂರ್ಯನ ಸ್ಥಾನ, ಸಂಕ್ರಾಂತಿ ವೃತ್ತ ಮತ್ತು ಇಲ್ಲಿ ಗುರುತು ಹಾಕಿರುವ ರಾಶಿಯ ಮೇಲೆ ಬೀಳುವ ಸೂರ್ಯನ ಬೆಳಕಿನ ಸಹಾಯದಿಂದ ಮಧ್ಯಾಹ್ನ ರೇಖೆಯ ಮೇಲೆ ಯಾವ ರಾಶಿ ಇದೆ ಎನ್ನುವುದನ್ನು ತಿಳಿಯಬಹುದು. ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್ 22 ಹಾಗೂ ಜೂನ್ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ ನೇರವಾಗಿ ಬೀಳುವ ಹಾಗೂ ಮಾರ್ಚ್ 21 ಮತ್ತು ಸೆಪ್ಟೆಂಬರ್ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವ ಕಾಲಗಣನೆಯನ್ನು ತೋರಿಸುತ್ತದೆ. ನಿಯತ ಚಕ್ರ, ಚಿಕ್ಕ ಸಾಮ್ರಾಟಯಂತ್ರ, ದಕ್ಷಿಣ ವೃತ್ತ ಯಂತ್ರ ಹಾಗೂ ಕರ್ಕಾಟಕ ರಾಶಿವಲಯವೆಂಬ ನಾಲ್ಕು ಬೇರೆ ಬೇರೆ ಯಂತ್ರಗಳಿಂದ ಕೂಡಿದುದೇ ಮಿಶ್ರಯಂತ್ರ. ವಿರಾಟ್ ಸಾಮ್ರಾಟ್ ಯಂತ್ರ ದೃಕ್ಸಿದ್ಧಿ ಕಾಲವನ್ನು ಸೂಚಿಸುತ್ತದೆ. ಇದು ಕೇವಲ ಎರಡು ಸೆಕೆಂಡ್ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲವನ್ನು ತೋರಿಸುತ್ತದೆ. ಇದರಲ್ಲಿರುವ ಷಷ್ಠಾಂಶವೆಂಬ ವೃತ್ತಖಂಡಾಕೃತಿಯ ಮೇಲೆ ಸೂರ್ಯ ನೆತ್ತಿಯ ಮೇಲೆ ಹಾದು ಹೋಗುವಾಗ ಬೆಳಕು ಒಂದು ಕಿಂಡಿಯ ಮೂಲಕ ಬಿದ್ದು ಮಧ್ಯಾಹ್ನ ರೇಖೆಯ ಎತ್ತರ ಎಷ್ಟೆಂದು ಸೂಚಿಸುತ್ತದೆ. ದುಂಡನೆಯ ಕಂಬವೊಂದು ದಿಗಂಶವನ್ನು, ಛಾಯಾ ಯಂತ್ರ ಕಾಲವನ್ನೂ ತೋರಿಸುತ್ತವೆ. ಈ ಯಂತ್ರದಿಂದ ಸೂರ್ಯನ ಘಂಟಾವೃತ್ತಾಂಶವನ್ನು ತಿಳಿಯಬಹುದು. ಧ್ರುವ ನಕ್ಷತ್ರವನ್ನು ನೋಡಲು ಇರುವ ಧ್ರುವದರ್ಶಿಕೆ ಪಟ್ಟಿಕೆಯಿಂದ ಹನ್ನೆರಡು ರಾಶಿಗಳ ಸ್ಥಾನ ಹಾಗೂ ಸಮಭಾಜಕ ವೃತ್ತದಿಂದ ಸೂರ್ಯ ಯಾವ ದಿಕ್ಕಿನಲ್ಲಿ, ಯಾವ ಕೋನದಲ್ಲಿರುವನೆಂದೂ ತಿಳಿಯಬಹುದು. ರಾಮಯಂತ್ರ ಔನ್ನತ್ಯ ಮತ್ತು ಕ್ಷಿತಿಜಾಂಶಗಳನ್ನು ಸೂಚಿಸುತ್ತದೆ. ಉಜ್ಜಯಿನಿ ಮೊದಲಿನಿಂದಲೂ ಖಗೋಳಶಾಸ್ತ್ರ ಕೇಂದ್ರವಾಗಿಯೇ ಇತಿಹಾಸ ಪ್ರಸಿದ್ಧ. ಅಲ್ಲಿ ಜಯಸಿಂಹ ನಿರ್ಮಿಸಿದ್ದ ವೀಕ್ಷಣಾಲಯ ಬಹುತೇಕ ಶಿಥಿಲವಾಗಿದೆ. ಕಾಶಿಯಲ್ಲಿ ರಾಜಾ ಮಾನಸಿಂಗ್ ನಿರ್ಮಿಸಿದ್ದ ಮಾನಮಂದಿರದ ಮಹಡಿಯ ಮೇಲೆ ಜಯಸಿಂಹ ವೀಕ್ಷಣಾಲಯವನ್ನು ನಿರ್ಮಿಸಿದ. ಮಥುರೆಯ ಕೋಟೆಯ ಮೇಲೆ ಅವನು ಕಟ್ಟಿಸಿದ್ದ ವೀಕ್ಷಣಾಲಯವೂ ಈಗ ಸಂಪೂರ್ಣವಾಗಿ ನಾಶವಾಗಿದೆ.
ಭಾಸ್ಕರ ಉಜ್ಜಯಿನಿಯ ವೀಕ್ಷಣಾಲಯದ ಮುಖ್ಯಸ್ಥನಾಗಿದ್ದ. ಆತ ಕಾಲವಾದದ್ದು ಸಾ.ಶ. 1185ರಲ್ಲಿ. ಸಾ.ಶ. 1233ರಲ್ಲಿ ತುರ್ಕರು ಉಜ್ಜಯಿನಿಯನ್ನು ನಾಶಪಡಿಸಿದರು. ನಮ್ಮ ಅದೃಷ್ಟಕ್ಕೆ ಭಾಸ್ಕರ ಆ ಮೊದಲೇ ಇದ್ದ ಕಾರಣ ಆತ ಹಾಕಿದ ತಳಪಾಯದಿಂದ ಮಾಧವ ಕಲನಶಾಸ್ತ್ರ(ಕ್ಯಾಲ್ಕುಲಸ್)ವನ್ನು ಅಭಿವೃದ್ಧಿಪಡಿಸುವಂತಾಯಿತು. ಆರ್ಯಭಟೀಯ ಗಣಿತೀಯ ಶಾಲೆಯು ತ್ರಿಕೋನಮಿತಿಯ ಕೋಷ್ಟಕಗಳನ್ನು ಬಳಸುತ್ತಿತ್ತು. ಆರ್ಯಭಟನ ಸೈನ್-ವ್ಯತ್ಯಾಸ ಕೋಷ್ಟಕವು 1 ನೇ ನಿಮಿಷದವರೆಗೆ ನಿಖರವಾಗಿತ್ತು. ವಟೇಶ್ವರ (ಸಾ.ಶ. 904) ಇದರ ನಿಖರತೆಯನ್ನು 2ನೇ ನಿಮಿಷಕ್ಕೆ ತಳ್ಳಿದ. ಬಳಿಕ ಇದು ಮುಂದುವರೆದದ್ದು ಕೇರಳದಲ್ಲಿ. ಆರ್ಯಭಟನ ಅತ್ಯಂತ ಉತ್ಕಟ ಅನುಯಾಯಿಗಳು ಕೇರಳದಲ್ಲಿದ್ದರು. ಅಲ್ಲಿ ಅನೇಕ ವ್ಯಾಖ್ಯಾನಗಳನ್ನು ರಚಿಸಲಾಯಿತು. ಆದರೆ ಹೆಚ್ಚಿನ ಆರಂಭಿಕ ಕೇರಳದ ಗಣಿತಜ್ಞರ ಕೃತಿಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಳೆದುಹೋಗಿವೆ.
ಹರಿದತ್ತ (ಸಾ.ಶ.683), ಗೋವಿಂದಸ್ವಾಮಿ (ಸಾ.ಶ.830CE), ಶಂಕರನಾರಾಯಣ (ಸಾ.ಶ.869CE), ಜಯದೇವ (ಸಾ.ಶ.950CE), ಉದಯದಿವಾಕರ (ಸಾ.ಶ.1073CE) ಇವರಲ್ಲಿ ಪ್ರಮುಖರು. ಮಹೋದಯಪುರಂನಿಂದ ಆಳುತ್ತಿದ್ದ ಕೇರಳದ ಚೇರ ಚಕ್ರವರ್ತಿಯಾದ ಸ್ಥಾಣು ರವಿ ಕುಲಶೇಖರ (ಸಾ.ಶ.844-883)ನಿಗೆ ಸೇವೆ ಸಲ್ಲಿಸುತ್ತಿದ್ದ ಗೋವಿಂದಸ್ವಾಮಿ 3ನೇ ನಿಮಿಷಕ್ಕೆ ಸೈನ್-ವ್ಯತ್ಯಾಸ ಕೋಷ್ಟಕವನ್ನು ಸುಧಾರಿಸಲು ಪ್ರಯತ್ನಿಸಿದ. ಆತನ ದೂರದ ಉತ್ತರಾಧಿಕಾರಿ ಮಾಧವ ಇದನ್ನು ಸಾಧಿಸಿದ. ಆತ ಇಂದು ನ್ಯೂಟನ್-ಗಾಸ್ ಇಂಟರ್ಪೋಲೇಷನ್ (2 ನೇ ಕ್ರಮ) ಎಂದು ಕರೆಯಲ್ಪಡುವುದನ್ನು ಕಂಡುಹಿಡಿದ. ಗೋವಿಂದಸ್ವಾಮಿಯ ಶಿಷ್ಯನೇ ಶಂಕರನಾರಾಯಣ. ಈ ದಾರ್ಶನಿಕ ವ್ಯಕ್ತಿ ಮಹೋದಯಪುರಂನಲ್ಲಿ ದಕ್ಷಿಣ ಭಾರತದ ಮೊದಲ ಭವ್ಯವಾದ ವೀಕ್ಷಣಾಲಯವನ್ನು ನಿರ್ಮಿಸಿದ. 'ರವಿವರ್ಮ ಯಂತ್ರ ವಲಯ' ಎಂದು ಕರೆಯಲ್ಪಡುವ ಇದು ಅದ್ಭುತವಾಗಿತ್ತು, ಅತ್ಯುತ್ತಮವಾದ ಉಪಕರಣಗಳೊಂದಿಗೆ (ರಾಶಿ ಚಕ್ರ, ಜಲೇಸ ಸೂತ್ರ, ಗೋಲಯಂತ್ರ ಇತ್ಯಾದಿ) ಸಂಪೂರ್ಣವಾಗಿ ಸುಸಜ್ಜಿತವಾಗಿತ್ತು. ಶಂಕರನಾರಾಯಣ ಸಮಯ ಪಾಲನೆ/ಸೂಚನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ. ಯಂತ್ರವಲಯದಿಂದ ಸೂಚಿಸಿದಂತೆ ಪ್ರತಿ ಘಟಿಕ (24 ನಿಮಿಷಗಳು) ಅಥವಾ ಅರ್ಧ ಮುಹೂರ್ತವನ್ನು ಹಾದುಹೋಗುವಾಗ, ಸರಿಯಾದ ಸಮಯವನ್ನು ಸಾರ್ವಜನಿಕರಿಗೆ ತಿಳಿಸಲು ಮಹೋದಯಪುರಂನಾದ್ಯಂತ ಗಂಟೆಗಳನ್ನು(ಕೂಟು) ಬಾರಿಸಲು ಸೈನಿಕರಿಗೆ ತರಬೇತಿ ನೀಡಲಾಗಿತ್ತು.
ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ.
ದೇವಾಲಯಗಳ ಸಮುಚ್ಚಯದ ಮಧ್ಯದಲ್ಲಿ ಈ ವೀಕ್ಷಣಾ ಗೋಪುರವನ್ನು ನಿರ್ಮಾಣ ಮಾಡಲಾಗಿತ್ತು. ಸೂರ್ಯನು ಭೂಮಧ್ಯರೇಖೆಯಲ್ಲಿ ಬರುವ ದಿನ ಹಗಲು ಮತ್ತು ರಾತ್ರಿ ಸಮಾನವಾಗಿರುತ್ತವೆ. ಆ ದಿನ ಮಧ್ಯಾಹ್ನ ೧೨ ಗಂಟೆ ೨೫ ನಿಮಿಷಕ್ಕೆ ಕರಾರುವಕ್ಕಾಗಿ ಈ ಸ್ತಂಭದ ನೆರಳು ಭೂಮಿಯ ಮೇಲೆ ಬಿದ್ದಾಗ ಸ್ತಂಭದ ೧೦೮ ಅಡಿ ಉದ್ದದ ನೆರಳು ಬೀಳುತ್ತದೆ. ಜ್ಯೋತಿಷ್ಯದಲ್ಲಿ ಹನ್ನೆರಡು ರಾಶಿಗಳು ಹಾಗೂ ೨೭ ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರಕ್ಕೆ ನಾಲ್ಕು ಪಾದಗಳಿದ್ದು, ಒಂದೊಂದು ರಾಶಿಚಕ್ರದಲ್ಲಿ ಎರಡೂ ಕಾಲು ನಕ್ಷತ್ರಗಳಿರುವಂತೆ ವಿಭಾಗಿಸಲಾಗಿದೆ. ಅಂದರೆ ೨೭X೪=೧೦೮ ನಕ್ಷತ್ರ ಪಾದಗಳು. ಮೆಹರೂಲಿಯ ಮೇರು ಸ್ತಂಭದಲ್ಲಿ ೨೭ ದೀಪಸ್ತಂಭಗಳಿವೆ. ಸ್ತಂಭಗಳ ಸುತ್ತಲೂ ನಕ್ಷತ್ರ ವೀಕ್ಷಣೆಗಾಗಿ ೨೭ ಭವನಗಳಿದ್ದವು. ಇವುಗಳನ್ನು ತಾನೇ ಸ್ವತಃ ನಾಶಮಾಡಿದುದಾಗಿ ಕುತುಬುದ್ದೀನ್ ಐಬಕ್ ಕುವ್ವತ್-ಉಲ್-ಇಸ್ಲಾಮ್ ಮಸೀದಿಯ ಪೂರ್ವ ದ್ವಾರದ ಶಿಲಾಶಾಸನದಲ್ಲಿ ಹೇಳಿಕೊಂಡಿದ್ದಾನೆ. ಈ ಮನಾರ್'ಗೆ ಹನ್ನೆರಡು ಮುಖಗಳಿವೆ. ಅವು ಹನ್ನೆರಡು ರಾಶಿ ಚಕ್ರಗಳನ್ನು ಪ್ರತಿನಿಧಿಸುತ್ತವೆ. ಅದರಲ್ಲಿರುವ ಏಳು ಮಹಡಿಗಳು ಏಳು ವಿಧದ ಸ್ವರ್ಗಗಳನ್ನು ಸೂಚಿಸುತ್ತವೆ. ಮನಾರ್ ತನ್ನ ಹಿಂದಿರುವ ನೀರಿನಲ್ಲಿ ನಕ್ಷತ್ರಗಳ ಆಧಾರದಲ್ಲಿ ನೆರಳನ್ನು ಬೀಳಿಸುತ್ತಿತ್ತು. ಆಗಸವನ್ನು ನಿರಂತರ ನೋಡುತ್ತಾ ಕಣ್ಣುಗಳಿಗೆ ಹಾನಿಯಾಗದಿರಲೆಂದು ಸುತ್ತಲೂ ಈ ಕೊಳಗಳ ನಿರ್ಮಾಣವಾಗಿತ್ತು. ಅಂದರೆ 27 ಮಂದಿರಗಳ ಮೇಲೆ ನಕ್ಷತ್ರಗಳ ಆಧಾರದಲ್ಲಿ ಕಿರಣಗಳು ಹಾದು ಹೋಗುತ್ತಿದ್ದವು.
ಗುರುವಾರ, ಮಾರ್ಚ್ 17, 2022
ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ
ಕಾಶ್ಮೀರದ ಕಣ್ಣೀರ ಕಥೆಯ ಮೊದಲ ಕಡತ
ಕಾಶ್ಮೀರದ ಕಣ್ಣೀರ ಕಥೆಯ ಒಂದು ಕಡತ ಬಹು ಜನ ವೀಕ್ಷಿಸುವ ಮಾಧ್ಯಮದ ಮೂಲಕ ಪ್ರಕಟವಾಗಿದೆ. ಕಾಶ್ಮೀರದ ಕಣ್ಣೀರಿನ ಕಥೆಗಳ ಬಗೆಗೆ ಹಲವು ಲೇಖನಗಳು, ಪುಸ್ತಕಗಳು, ಭಾಷಣಗಳು, ಡಾಕ್ಯುಮೆಂಟರಿಗಳು ಇದ್ದರೂ ಅವು ತಲುಪದ ಜನಸಮೂಹವನ್ನು ಕೂಡಾ ತಲುಪುವ ಶಕ್ತಿ ಇರುವ ಮಾಧ್ಯಮ ಚಲನಚಿತ್ರ. ಹಾಗಾಗಿ ಈ ಬಾರಿ ದೇಶದ್ರೋಹಿ ಶಕ್ತಿಗಳ ಸಕಲ ವಿರೋಧ, ಷಡ್ಯಂತ್ರಗಳ ನಡುವೆಯೂ ಕಾಶ್ಮೀರದ ಹಿಂದೂಗಳ, ಪರಿಸರದ ಮೇಲಿನ ದೌರ್ಜನ್ಯದ ಇತಿಹಾಸದ ಒಂದು ತುಣುಕಾದರೂ ರಾಷ್ಟ್ರೀಯವಾದಿ ಸರಕಾರದ ಅಭಯ ಹಸ್ತದ ನೆರಳಲ್ಲಿ ಚಲನಚಿತ್ರ ಮಾಧ್ಯಮದ ಮೂಲಕ ಬಹು ಸಂಖ್ಯೆಯ ಜನ ಮಾನಸಕ್ಕೆ ತಲುಪುವಂತಾಯಿತು. ಈ ಪ್ರಯತ್ನಕ್ಕಾಗಿ ದುಡಿದವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಜೊತೆಗೆ ಕ್ರೌರ್ಯವೇ ತುಂಬಿರುವ ಘಟನೆಯನ್ನು ಎಲ್ಲರೂ ನೋಡುವಂತೆ ನಿರೂಪಿಸಿದ ಪರಿಗೂ ಅಭಿನಂದನೆ ಸಲ್ಲಬೇಕು. ಈ ಚಿತ್ರವನ್ನು ನೋಡುವುದು, ಇನ್ನೊಬ್ಬರು ನೋಡುವಂತೆ ಪ್ರೇರೇಪಿಸುವುದು ತನ್ಮೂಲಕ ಹಿಂದೂಗಳಲ್ಲಿ ಜಾಗೃತಿಯನ್ನು ಮೂಡಿಸಿ ಮುಂದೆ ಅಂತಹಾ ಪರಿಸ್ಥಿತಿ ಒದಗದಂತೆ ಪ್ರಯತ್ನಿಸುವುದೇ ನಿಜವಾಗಿ ನಾವು ಸಲ್ಲಿಸಬಹುದಾದ ಅಭಿನಂದನೆ.
ಕಾಶ್ಮೀರದ ಕಣ್ಣೀರಿನ ಕಥೆ ಕಳೆದ ಶತಮಾನದ 90ರ ದಶಕದಲ್ಲಾಗಲೀ ಅಥವಾ 40ರ ದಶಕದಲ್ಲಾಗಲೀ ಪ್ರಾರಂಭವಾದದ್ದಲ್ಲ. ಅದಕ್ಕೆ ಐನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಅಂದರೆ "ಕಾಶ್ಮೀರ್ ಫೈಲ್ಸ್" ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಾವಿರದಲ್ಲೊಂದು ಭಾಗವಷ್ಟೇ. ಈ ದೌರ್ಜನ್ಯಗಳಿಗೆಲ್ಲಾ ಮೂಲ ಪುರುಷನೊಬ್ಬನಿದ್ದಾನೆ. ಅವನು ಅದೇ "ಕಾಶ್ಮೀರ್ ಫೈಲ್ಸ್" ಚಿತ್ರದಲ್ಲಿ ನಾಯಕ ನಟ ತನ್ನ ಭಾಷಣದಲ್ಲಿ ಉಲ್ಲೇಖಿಸಿದ ಶಂಸುದ್ದೀನ್ ಅರಾಖಿ. ಕಾಶ್ಮೀರಿಗಳ ಮೇಲಿನ ದೌರ್ಜನ್ಯದ ಕಡತ ಆರಂಭವಾದುದು ಅವನಿಂದ. ಇಸ್ಲಾಂ ಮತದಲ್ಲಿರುವ ಶಾಂತಿದೂತರು, ಜಾತ್ಯಾತೀತರು, ಹಿಂದೂ-ಮುಸ್ಲಿಂ ಸಮನ್ವಯತೆಗೆ ಕಾರಣವಾದವರು, ಸಂತರು ಎಂದು ಭಾರತೀಯರಿಗೆಲ್ಲಾ ಭ್ರಾಂತಿ ಇರುವ, ಸೂಫಿ ವರ್ಗಕ್ಕೆ ಸೇರಿದ ಪೈಶಾಚಿಕ ಪ್ರವೃತ್ತಿಯ ವ್ಯಕ್ತಿ. ಇಸ್ಲಾಂ ಮತ್ತು ಶಾಂತಿ, ಇಸ್ಲಾಂ ಮತ್ತು ಜಾತ್ಯಾತೀತತೆ, ಇಸ್ಲಾಂ ಮತ್ತು ಸಂತ, ಎಂದಾದರೂ ಒಂದಾಗಲು ಸಾಧ್ಯವೇ? ಭಾರತೀಯರ ಭ್ರಮೆ ಕಳಚುವುದೆಂದು? ಅಂದರೆ ಈ ದೌರ್ಜನ್ಯಗಳಿಗೆಲ್ಲಾ ಕಾರಣ ಯಾವುದು? ಅದೇ...ಅದೇ ಪುಸ್ತಕ...ಯಾವುದು ಮತಭ್ರಾಂತತೆಯನ್ನು ಚಿಕ್ಕಪ್ರಾಯದಿಂದಲೂ ಚೊಕ್ಕವಾಗಿ ಮಸ್ತಕಕ್ಕೆ ತುಂಬಿಸಿತೋ ಅದೇ ಗ್ರಂಥ! ಅಸಲಿಗೆ ಗ್ರಂಥ ಎಂದು ಹೇಳಿಸಿಕೊಳ್ಳುವ ಯೋಗ್ಯತೆಯೂ ಅದಕ್ಕಿಲ್ಲ.
ಯಾರು ಈ ಶಂಸುದ್ದೀನ್ ಅರಾಖಿ? ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.
ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).
ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.
ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!
ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.
ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.
ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.