ಪುಟಗಳು

ಗುರುವಾರ, ಮೇ 18, 2023

ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ

 


ಜ್ಞಾನದ ಮರು ಪಯಣವೀ ಶಾರದಾ ಯಾತ್ರೆ



"ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |


ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |


ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |


ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ ||"


ಉತ್ತರದ ಎತ್ತರದಿಂದ ಬಂದು, ವಿಂಧ್ಯನ ಎತ್ತರ ಬೆಳೆಯುವ ಉದ್ಧಟತೆಯನ್ನು ದಕ್ಷಿಣದಲ್ಲೇ ನೆಲೆನಿಂತು ಸಾಮದಿಂದಲೇ ಬಗ್ಗಿಸಿ ಕಾವೇರಿಯ ಉಗಮಕ್ಕೂ, ತಮಿಳಿನ ಉತ್ಕರ್ಷಕ್ಕೂ ಕಾರಣರಾಗಿ, ಸಮುದ್ರದ ನೀರನ್ನೆಲ್ಲಾ ಆಪೋಶನಗೈದು, ವಾತಾಪಿ-ಇಲ್ವಲರೆಂಬ ದುರುಳರ ಮಟ್ಟ ಹಾಕಿ, ಮಳೆಗಾಲ ಆರಂಭವಾಗುವವರೆಗೆ ಶುಭ್ರವಾದ ದಕ್ಷಿಣಾಗಸದಲ್ಲಿ ಉತ್ತರಕ್ಕೆ ಬರಲಾರೆ ಎನ್ನುತ್ತಾ ನಕ್ಷತ್ರವಾಗಿ ಹೊಳೆವ ಋಷಿ ಅಗಸ್ತ್ಯರು ಶಾರದೆಯನ್ನು ಸ್ತುತಿಸಿದ್ದು ಹೀಗೆ. ಬ್ರಹ್ಮಸರವೆಂಬ ಹಿಮಪರ್ವತಗಳ ನಡುವಿನ ಸರಸಿರೆಯಿಂದ ಜಲತರಂಗಿಣಿಯಾಗಿ, ಸನಾತನಿಗಳ ನಾಲಿಗೆಯಲ್ಲಿ ನಲಿವ ವೇದಮಾತೆಯಾಗಿ, ಹಿಂದೂಗಳ ಜೀವನಾಡಿಯಾಗಿ ಸಪ್ತಪವಿತ್ರ ನದಿಗಳಲ್ಲೊಬ್ಬಾಕೆಯಾಗಿ ಹರಿದ ಜ್ಞಾನದಾಯಿನಿ ಸರಸ್ವತಿಗೆ ಅವಳದೇ ಜನ್ಮಭೂಮಿಯ ಕುಂದ(ಮಲ್ಲಿಗೆ) ತುಷಾರ(ಶುಭ್ರಸ್ಫಟಿಕ ಹಿಮರಾಶಿ) ಧವಳ ರಾಶಿಯ ನಡುವೆ ಅವಳಿಗೊಂದು ಪೀಠ ನಿರ್ಮಾಣ ಮಾಡಿ ಮೂರ್ತರೂಪದಲ್ಲಿ ಪ್ರತಿಷ್ಠಾಪಿಸಿ ಅದು ಜ್ಞಾನದ ಉತ್ತುಂಗ ಪೀಠವಾಗುವಂತೆ ಮಾಡಿದ್ದು ಉಪನಿಷತ್ಕಾರ ಋಷಿ ಶಾಂಡಿಲ್ಯ.


ಕಶ್ಯಪ ಬ್ರಹ್ಮನ ಮೊಮ್ಮಗ ಶಾಂಡಿಲ್ಯ ಬಾಲ್ಯದಲ್ಲಿ ಉಪನಯನ ದೀಕ್ಷೆಯಿಂದ ವಂಚಿತನಾದಾಗ ತಂದೆಯ ಆದೇಶದಂತೆ ಶಾರದೆಯ ಕುರಿತು ತಪಸ್ಸಿಗೆ ತೊಡಗಿದ. ಆತ ಕೃಷ್ಣನಾಗ ನದಿಯಲ್ಲಿ ಮಿಂದಾಗ ಆತನ ಅರ್ಧ ದೇಹವೇ ಬಂಗಾರಮಯವಾಗಿ ಶಾರದೆಯ ಸಾಕ್ಷಾತ್ಕಾರದ ಕವಾಟ ತೆರೆವ ಸಂಕೇತವಾಯಿತು. ಮುಂದೆ ಪರ್ವತಗಳ ಹಾದಿಯಲ್ಲಿ ಮುನ್ನಡೆದಾಗ ರಂಗವಾಟಿಕಾ ವನದ ಕಣಿಯಲ್ಲಿ ತಾಯಿ ಶಾರದೆ ನರ್ತಿಸುತ್ತಿದ್ದುದನ್ನು ಕಂಡು ಪುಳಕಗೊಂಡು "ಶಾರದಾ ವರದಾ ದೇವಿ ಮೋಕ್ಷದಾತಾ ಸರಸ್ವತೀ" ಎಂದು ಸ್ತುತಿಸಿದ. ತಾಯಿ ಶಾರದೆಯ ಸೂಚನೆಯಂತೆ ಉತ್ತರಾಭಿಮುಖವಾಗಿ ನಡೆದು ಫಲಪುಷ್ಫಸಮೃದ್ಧವಾಗಿದ್ದ ಶಾರದಾವನದಲ್ಲಿ ಆಕೆಯ ಪೂರ್ಣಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡ. ಹೀಗೆ ಶಾರದೆಯು ಭವ್ಯ ಕುಂಡದಲ್ಲಿ ಪ್ರತ್ಯಕ್ಷವಾದ ಪೀಠವೇ ಶಾರದಾ ಪೀಠವಾಯಿತು. ಅಲ್ಲಿ ಏಳಡಿ ಎತ್ತರದ ದಿವ್ಯವಿಗ್ರಹವು ಭವ್ಯವಾದ ಶಿಲಾಪೀಠದಲ್ಲಿ ಪ್ರತಿಷ್ಠೆಯಾಯಿತು. ಶಾಂಡಿಲ್ಯನ ಪಿತೃಗಳು ಶ್ರಾದ್ಧಕರ್ಮವನ್ನು ನೆರವೇರಿಸಿ ಮೋಕ್ಷ ದೊರಕಿಸಲು ಕೇಳಿಕೊಂಡಾಗ ಆತ ಮಧುಸಿಂಧು(ಕಿಶನ್ ಗಂಗಾ) ನದಿಯಲ್ಲಿ ತರ್ಪಣ ಕೊಟ್ಟ. ಆಗ ಅರ್ಧನದಿಯೇ ಜೇನಾಗಿ ಹರಿದು ಸರ್ವಪಾಪ ನಿವಾರಿಣಿಯೂ ಮೋಕ್ಷದಾತೆಯೂ ಆಗಿ ಪಿತೃ ತರ್ಪಣ ಕೊಡುವ ಪುಣ್ಯ ಮಧುಮತಿಯಾಯಿತು. ಇವೆಲ್ಲವೂ ಶಾಂಡಿಲ್ಯ ರಚಿತ ಶಾರದ ಮಾಹತ್ಮ್ಯಮ್ ಎಂಬ ಕೃತಿಯಲ್ಲಿದೆ. ಶಾಂಡಿಲ್ಯನ ಜೊತೆ ಶಾರದೆಯೂ ಕ್ರಮಿಸಿದ ಜಾಗವೆಲ್ಲಾ ಶಾರದಾ ಭೂಮಿಯಾಗಿ ಆಕೆಯ ಆರಾಧನೆ ಬೆಳೆದು ಬಂತು.


ಕಶ್ಯಪ ಮೇರು ಕೇವಲ ಪ್ರಾಕೃತಿಕ ಭೂಭಾಗವಾಗಿ ಮಾತ್ರ ಮೇರುವಲ್ಲ; ವಿದ್ಯೆಯ ನೆಲೆಯಾಗಿಯೂ ಮೇರುಪರ್ವತವೇ. ಅನೇಕ ಋಷಿಮುನಿಗಳ ತಪಸ್ಸಿಗೆ, ಜ್ಞಾನದಾಹಿಗಳಿಗೆ, ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ ಆಶ್ರಯತಾಣ. ಅಂತಹಾ ವಿದ್ಯಾತಾಣಕ್ಕೆ ವಿದ್ಯಾಧಿದೇವತೆ ಶಾರದೆಯೇ ಅಧಿಪತಿಯಲ್ಲದೆ ಇನ್ನಾರು? ಹಾಗಾಗಿಯೇ 

" ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ |

ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||" ಎಂಬ ಸ್ತುತಿಯೂ ಹುಟ್ಟಿತು. ಅಖಂಡ ಭರತಖಂಡದಲ್ಲಿ ವಿದ್ಯೆಗೆ ಪರಮೋಚ್ಛ ಪರೀಕ್ಷೆಯಿದ್ದ ತಾಣವದು. ಬ್ರಹ್ಮಾಂಡದ ವಿದ್ಯೆಯಿಲ್ಲ ಶಾರದಾ ಎಂಬ ಮೂರಕ್ಷರದಲ್ಲಿ ಅಲ್ಲಿ ನತಮಸ್ತಕವಾಗಿತ್ತು. ಅಲ್ಲಿ ನಡೆಯುತ್ತಿದ್ದ ವಿದ್ವಜ್ಜನರ ವಿದ್ಯೆಯ ಸಂಭ್ರಮದ ನಡೆಯೆಲ್ಲವೂ ಶಾರದೋತ್ಸವವೇ. ಅಲ್ಲಿನ ಲಿಪಿಯೂ ಶಾರದಾ. ಅದು ಶಾರದಾ ದೇಶವೆಂದೇ ಕರೆಯಲ್ಪಟ್ಟಿತು. ಹಾಗೆಂದೇ ಮುತ್ತುಸ್ವಾಮಿ ದೀಕ್ಷಿತರು "ಕಾಶ್ಮೀರ ವಿಹಾರ ವರ ಶಾರದಾ" ಎಂದು ಸ್ತುತಿಸಿದ್ದಾರೆ. ಭರತಮುನಿ, ಆನಂದವರ್ಧನ, ಅಭಿನವಗುಪ್ತ, ಚರಕ, ಕಲ್ಹಣ, ಬಿಲ್ಹಣ, ವಸುಗುಪ್ತ, ಕ್ಷೇಮೇಂದ್ರ,...ಎಂತೆಂಥಾ ಜ್ಞಾನಿಗಳು ಅಲ್ಲಿ ಆಗಿ ಹೋದರು. ಶಾರದಾಪೀಠದಿಂದ ಕೇಸರಪರ್ವತದವರೆಗೂ 50 ಯೋಜನ ಹಬ್ಬಿತ್ತು ಶಾರದಾ ವಿದ್ಯಾವಾಹಿನಿ. ಕಾಶ್ಮೀರೀ ಪಂಡಿತರ ಇಷ್ಟದೈವವಾಗಿ ಶಕ್ತಿಸ್ವರೂಪಿಣಿಯಾಗಿ ಶೈವಸಂಪ್ರದಾಯದಂತೆ ಪೂಜಿಸಲ್ಪಡುತ್ತಿದ್ದ ಶಾರದಾಪೀಠ ಹದಿನೆಂಟು ಮಹಾಶಕ್ತಿ ಪೀಠಗಳಲ್ಲಿ ಒಂದಾಗಿತ್ತು. ಪಂಡಿತರು ತಮ್ಮ ಕೃತಿಗಳನ್ನು ಭೂರ್ಜಪತ್ರದಲ್ಲಿ ಬರೆದು ದೇವಿಯ ಮುಂದೆ ಇಟ್ಟರೆ ಬೆಳಗಿನವರೆಗೆ ಅವು ಕಿಂಚಿತ್ತೂ ಲೋಪಗೊಳ್ಳದೇ ಉಳಿದರೆ ಅವು ಸರ್ವಮಾನ್ಯವಾಗಿಬಿಡುತ್ತಿದ್ದವು. ವಿದ್ಯೆಗೆ, ವಿದ್ವತ್ತಿಗೆ ಮಾತ್ರ ಅಲ್ಲಿ ನೆಲೆ,ಬೆಲೆ. ಆ ಜ್ಞಾನಸಾಮ್ರಾಜ್ಯವನ್ನು ಗೆದ್ದು ಸರ್ವಜ್ಞಪೀಠ ಏರಲು ತವಕಪಡುತ್ತಿದ್ದ ವಿದ್ವಾಂಸರು ಅದೆಷ್ಟು? ಅಂತಹಾ ಶಾರದಾಯತನದಲ್ಲಿ ಸೇರಿಕೊಳ್ಳಲು ದೇಶದ ಮೂಲೆಮೂಲೆಗಳಿಂದ ಶಾರದಾಯಾತ್ರೆಯೇ ನಡೆಯುತ್ತಿತ್ತು.


ಪಾಕಿಸ್ತಾನದ ವಶವಾದ ಮೇಲೂ ಶಾರದಾಪೀಠವಿರುವ ಗ್ರಾಮಕ್ಕೆ ಶಾರದಾ ಅಂತಲೇ ಹೆಸರು ಉಳಿದಿದೆ! ಶಾರದೀ ಮತ್ತು ನಾರದೀ ಎಂಬ ಬೆಟ್ಟಗಳ ನಡುವೆ ಎಲ್.ಓ.ಸಿ.ಯಿಂದ ಕೆಲವೇ ಕಿ.ಮೀಗಳ ದೂರದಲ್ಲಿ ಈ ಊರು ಇದೆ. ಅಲ್ಲಿನ ಕೆಲವು ಮನೆತನಗಳ ಹೆಸರೂ ಶಾರದಾ! ಈ ಮಂದಿರದ ವಾಯುವ್ಯ ದಿಕ್ಕಿನಲ್ಲಿ ಕಿಶನ್ ಗಂಗಾ ಹಾಗೂ ಮಧುಮತಿಗಳು ಸಂಗಮಿಸಿ ವಿತಸ್ತಾ ನದಿಯನ್ನು ಸೇರುತ್ತವೆ. ಶಾರದಾ ಪೀಠದ ಈಗಿನ ಭಗ್ನ ಮಂದಿರವೇ ಸಾಮಾನ್ಯಶಕ 724ಕ್ಕೆ ಸೇರಿದೆ. ಶಾರದಾಪೀಠ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ, ಸಾಹಿತ್ಯ, ಸಂಗೀತ, ಭಾಷೆ, ಕಾನೂನು ಅಲ್ಲದೆ ಖಗೋಳ, ವೈದ್ಯ, ಜ್ಯೋತಿಷ, ಶಿಲ್ಪಕಲಾದಿ ವಿಜ್ಞಾನ ವಿಭಾಗಗಳು ಇದ್ದವು. ದೇಶ ವಿದೇಶಗಳ ವಿದ್ವಾಂಸರು ಇಲ್ಲಿನ ಆಚಾರ್ಯರುಗಳನ್ನು, ಗ್ರಂಥಾಲಯವನ್ನು ಆಶ್ರಯಿಸಿದ್ದರು. ಚೀನಾದ ಬೌದ್ಧಯಾತ್ರಿಕ ಯುವಾನ್ಜಾಂಗ್ ಸಾ.ಶ. 632ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ. ವಿನಾಯಕಭಟ್ಟನ ಸಾಂಖ್ಯಾಯಾನ ಭಾಷ್ಯದಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಶಾರದಾ ವಿದ್ಯಾಲಯಕ್ಕೆ ಬರುತ್ತಿದ್ದರೆಂಬ ಉಲ್ಲೇಖವಿದೆ.  ಹನ್ನೊಂದನೇ ಶತಮಾನದಲ್ಲಿ ಸಿದ್ಧಹೇಮಖಂಡವೆಂಬ ವ್ಯಾಕರಣ ಗ್ರಂಥ ರಚಿಸಿದ ಹೇಮಚಂದ್ರ ಸೂರಿಯ ಗ್ರಂಥ ರಚನೆಯ ನೆರವಿಗೆಂದು ರಾಜಾ ಜಯಸಿಂಗ ಎಂಟು ವ್ಯಾಕರಣ ಗ್ರಂಥಗಳನ್ನು ಹಾಗೂ 70ಸಾವಿರ ತಾಳೆಗರಿ ಗ್ರಂಥಗಳನ್ನು ಶಾರದಾಮಂದಿರದ ಗ್ರಂಥಾಲಯದಿಂದ ತರಿಸಿಕೊಟ್ಟಿದ್ದನೆಂದರೆ ಇಲ್ಲಿ ಬೃಹತ್ತಾದ ವಿಶ್ವವಿದ್ಯಾಲಯವಿದ್ದಿರಲೇಬೇಕು. ಕವಿಗಳು ಹಾಡಿ ಹೊಗಳುವ ಮಧುಮತೀ ತಟದ ಶಾರದೆಯ ರೂಪವನ್ನು ಕಣ್ತುಂಬಿಕೊಳ್ಳಲು ಭಾರತದ ಮೂಲೆಮೂಲೆಯಿಂದ ಯಾತ್ರಿಕರು ನೆರೆಯುತ್ತಿದ್ದರೆಂದು ಕಲ್ಹಣ ವರ್ಣಿಸಿದ್ದಾನೆ. ಬಿಲ್ಹಣನಂತೂ ತನ್ನೆಲ್ಲಾ ಕೃತಿಗಳು ನದಿಯ ಬಂಗಾರದ ಕಣಗಳಿಂದ ನಿರ್ಮಿತವಾಗಿರುವ ಮಕುಟ ಧರಿಸಿರುವ ಶಾರದೆಗೆ ಸಮರ್ಪಿಸಿದ್ದಾನೆ. ಅಶೋಕನ ಕಾಲದಲ್ಲಿ ಇಲ್ಲಿಗೆ ಸನಿಹದಲ್ಲಿ ವಿಶ್ವವಿದ್ಯಾಲಯವೊಂದು ಇತ್ತಂತೆ. ಮಂದಿರದ ಸುತ್ತ ನಡೆದ ಪುರಾತತ್ತ್ವ ಕ್ಷೇತ್ರ ಕಾರ್ಯ ಹಾಗೂ ಉತ್ಖನನದಿಂದ ಅಲ್ಲಿ ಪ್ರಾಚೀನ ಅಧ್ಯಯನ ಪೀಠ, ನಾಲ್ಕು ದಿಕ್ಕುಗಳಲ್ಲೂ ದ್ವಾರವಿರುವ ವಿಶಾಲ ಸಭಾಂಗಣ, ಪ್ರಾಂಗಣ, ವಸತಿ ಶಾಲೆ, ಗ್ರಂಥಾಲಯ, ಗೋಶಾಲೆ, ವಿಪುಲ ಜನವಸತಿ ಇದ್ದುದು ತಿಳಿದುಬಂದಿದೆ. ಶಾರದಾಪೀಠವು ಹಿಂದೂಗಳಿಗೆ ಸೋಮನಾಥ, ಮೂಲಸ್ಥಾನದ ಸೂರ್ಯದೇವಾಲಯಗಳಷ್ಟೇ ಪವಿತ್ರ ಎಂದಿದ್ದಾನೆ ಅಲ್ಬೆರುನಿ. ಶಾರದೆಯ ಕಾಷ್ಠವಿಗ್ರಹ ಪೂಜಿಸಲ್ಪಡುತ್ತಿತ್ತು; ಅದಲ್ಲಿ ಬೆವರು, ಅಂಗಕಂಪನ ಉಂಟಾಗುತ್ತಿತ್ತು ಎಂದು ಆತ ಬರೆದಿದ್ದಾನೆ. "ಮಧುಮತಿ ಎಂಬ ಬಂಗಾರದ ಕಣಗಳುಳ್ಳ ನದಿಯ ದಂಡೆಯ ಮೇಲಿರುವ ಶಾರದೆಯ ಶಿಲಾಮಂದಿರದಲ್ಲಿ ಶುಕ್ಲಪಕ್ಷದ ಅಷ್ಟಮಿಯಂದು ಪವಾಡಗಳು ಜರುಗುತ್ತವೆ. ಇದನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನರು ಬಂದು ಸೇರುತ್ತಾರೆ ಎಂದು ಅಬುಲ್ ಫಜಲ್ ತನ್ನ ಐನೆ-ಇ-ಅಕ್ಬರಿಯಲ್ಲಿ ಉಲ್ಲೇಖಿಸಿದ್ದಾನೆ. 


ಇಂತಹಾ ಶಾರದಾಯಾತ್ರೆಗೆ ಮೆರುಗು ಬಂದುದು ಜಗದ್ಗುರು ಆದಿ ಶಂಕರಾಚಾರ್ಯರಿಂದ. ದಕ್ಷಿಣದ ದೇಶದ ಯಾರೊಬ್ಬರೂ ಆವರೆಗೆ ಸರ್ವಜ್ಞಪೀಠವನ್ನು ಏರಿರದ ಕಾರಣ ಅದರ ದಕ್ಷಿಣದ್ವಾರವೇ ತೆರೆದಿರಲಿಲ್ಲ. ದೇಶಾದ್ಯಂತ ಸಂಚರಿಸಿ ವಿವಿಧ ಪಂಥಗಳ ವಿದ್ವಾಂಸರನ್ನು ವಾದದಲ್ಲಿ ಗೆಲ್ಲುತ್ತಾ ದಿಗ್ವಿಜಯ ಸಾಧಿಸುತ್ತಾ ಹೊರಟಿದ್ದ ಶಂಕರರಿಗೆ ಒಂದು ದಿನ ಗಂಗೆಯತಟದಲ್ಲಿ ನಿತ್ಯಾನುಷ್ಠಾನನಿರತರಾಗಿದ್ದಾಗ ಈ ವಿಷಯ ಕಿವಿಗೆ  ಬಿತ್ತು. ಶಂಕರರು ಕಾಶ್ಮೀರ ಪಂಡಿತಮಂಡಲವನ್ನು ಮಣಿಸಿ ಶಾರದಾಪೀಠದ ದಕ್ಷಿಣದ್ವಾರವನ್ನು ತೆರೆಯಿಸಿ ಸರ್ವಜ್ಞಪೀಠವನ್ನು ಏರಿಯೇ ಬಿಟ್ಟರು. ಶಂಕರರು ಸರ್ವಜ್ಞಪೀಠಾರೋಹಣಕ್ಕೆ ಅಣಿಯಾಗುತ್ತಿದ್ದಂತೆ ಶಾರದೆಯೇ ಸ್ವತಃ ಪರೀಕ್ಷೆಯೊಡ್ಡಿದಳಂತೆ. ಶಂಕರರು ಅವೆಲ್ಲಕ್ಕೂ ಸಮಾಧಾನ ನೀಡಿ ಸೌಂದರ್ಯಲಹರಿ ಸಹಿತ ಅನೇಕ ದೇವಿಸ್ತೋತ್ರಗಳಿಂದ ದೇವಿಯನ್ನು ಸ್ತುತಿಸಿ ಅದ್ವೈತ ಸಿದ್ಧಾಂತ ದಶದಿಕ್ಕುಗಳಲ್ಲೂ ಮೊಳಗುವಂತೆ ಮಾಡಿದರು. ಶ್ರೀಚಕ್ರಾಂಕಿತವಾಗಿ ಪೂಜೆ ಸಲ್ಲಿಸಿ ಅಲ್ಲಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಿದರು.


ಶಾರದಾಪೀಠಕ್ಕೆ ಮೊದಲ ಹೊಡೆತ ಬಿದ್ದದ್ದು 13-14ನೇ ಶತಮಾನದಲ್ಲಿ. ಕಾಶ್ಮೀರದ ಕಸಾಯಿ ಎಂದ ಕುಖ್ಯಾತಿ ಪಡೆದಿದ್ದ ಸಿಕಂದರ್ ಬುಟ್ಶಿಕಾನ್ ಎನ್ನುವ ಮತಾಂಧ ಈ ಸುಂದರ ದೇವಾಲಯವನ್ನು ಹದಿನೈದನೇ ಶತಮಾನದಲ್ಲಿ ಧ್ವಂಸ ಮಾಡಿಬಿಟ್ಟ. ಬಳಿಕ ಶಾರದಾಪೀಠ ಮೂರು ಶತಮಾನ ಪರ್ಯಂತ ಮೊಘಲರು,ಪಠಾಣರ ದಾಳಿಗೆ ಸಿಕ್ಕು ನಲುಗಿತು. ನಿಧಿಯ ಶೋಧನೆಗೆಂದು ಬಂದ ಮಂಝೂರ್ ಖಾನ್ ದೇವಾಲಯವನ್ನು ಮತ್ತಷ್ಟು ಭಗ್ನಗೊಳಿಸಿದ್ದ ಎಂದಿದ್ದಾನೆ ಸಿ.ಇ.ಬೇಟ್ಸ್. ಗಾಯಕ್ಕೆ ಉಪ್ಪು ಸವರಿದಂತೆ 1947 ರಲ್ಲಿ ಈ ಪ್ರದೇಶ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವಾಗಿ ಹೋಯಿತು.1867ರಲ್ಲಿ ಡೋಗ್ರಾ ದೊರೆ ಗುಲಾಬ್  ಸಿಂಗ್ ಈ ದೇವಾಲಯಕ್ಕೆ ಮೇಲ್ಛಾವಣಿ ಹೊದೆಸಿ ನವೀಕರಿಸಿದ್ದ. ಡೋಗ್ರಾ ದೊರೆಗಳು ಪಕ್ಕದಲ್ಲೇ ಒಂದು ಕೋಟೆ ಕಟ್ಟಿ 60 ಜನ ಯೋಧರನ್ನು ಮಂದಿರದ ರಕ್ಷಣೆಗೆ ನೇಮಿಸಿದ್ದರು. 2005ರಲ್ಲಿ ನಡೆದ ಭೂಕಂಪನವು ಮಂದಿರವನ್ನು ಮತ್ತಷ್ಟು ಜರ್ಝರಿತಗೊಳಿಸಿತು. ಗುಡಿಯ ಪ್ರವೇಶಕ್ಕೆ 9 ಅಡಿ ಅಗಲದ 63 ಮೆಟ್ಟಿಲುಗಳು; ಗರ್ಭಗುಡಿಯಲ್ಲಿ ಏಳಡಿ ಉದ್ದ ಅರ್ಧ ಅಡಿ ದಪ್ಪದಬೃಹತ್ ಛಪ್ಪಡಿಗಲ್ಲು; 142 ಅಡಿ ಉದ್ದ, 95 ಅಡಿ ಅಗಲದ ಷಟ್ಕೋನಾಕೃತಿಯ ಕಾಶ್ಮೀರೀ ವಾಸ್ತುಶಿಲ್ಪದನ್ವಯದ ದೇಗುಲ, ಗರ್ಭಗುಡಿಯಲ್ಲಿ ಎರಡು ಶಿವಲಿಂಗಗಳು, ಮಾರ್ತಾಂಡ ದೇಗುಲದ ವಾಸ್ತುಶಿಲ್ಪ ವಿನ್ಯಾಸವನ್ನು ಹೋಲುವ ಕಂಬಗಳು….ಮುಂತಾದುವನ್ನು ಆಗಲೇ ಭಗ್ನಗೊಂಡಿದ್ದ ಶಾರದಾ ದೇಗುಲಕ್ಕೇ 1892ರಲ್ಲಿ ಭೇಟಿಕೊಟ್ಟ ಇತಿಹಾಸಕಾರ ಡಾ. ಸ್ಟೈನ್ ತನ್ನ ಬರಹಗಳಲ್ಲಿ ದಾಖಲಿಸಿದ್ದಾನೆ.


ಒಂದು ಕಾಲದಲ್ಲಿ ಶಾರದಾಪೀಠಕ್ಕೆ ಜ್ಞಾನಸತ್ರವೇ ಯಾತ್ರೆಯಾಗಿತ್ತು. ಆಗ ಜ್ಞಾನಾರ್ಜನೆಗೆಂದೇ ಅಲ್ಲಿಗೆ ತೆರಳುತ್ತಿದ್ದ ಪರಿವ್ರಾಜಕರು ಅದೆಷ್ಟೋ. ಮತಾಂಧರ ದಾಳಿಯಿಂದ ಅವೆಲ್ಲವೂ ನಿರ್ನಾಮಗೊಂಡರೂ ಭಕ್ತಿಯ ಯಾತ್ರೆ ಉಳಿದಿತ್ತು.ಮತಾಂಧರ ಆಳ್ವಿಕೆ ಕೊನೆಗೊಂಡ ನಂತರ ಡೋಗ್ರಾ ರಾಜರು ಯಾತ್ರಾರ್ಥಿಗಳಿಗೆ ಅನ್ನ, ಪಾನ, ಆಶ್ರಯಗಳನ್ನಿತ್ತು ಶಾರದಾ ಯಾತ್ರೆ ಸಂಪನ್ನವಾಗುವಂತೆ ನೋಡಿಕೊಂಡಿದ್ದರು. ಕಾಲ್ನಡಿಗೆಯ ಮೂಲಕ ನಡೆಯುತ್ತಿದ್ದ ಈ ಯಾತ್ರೆಯಲ್ಲಿ ಶಾಂಡಿಲ್ಯ ಋಷಿ ತಂಗಿದ ಸ್ಥಳಗಳಲ್ಲೆಲ್ಲಾ ತಂಗಿ ಭಾದ್ರಪದ ಶುಕ್ಲ ಪಕ್ಷದ ಅಷ್ಟಮಿಯಂದು ಶಾರದಾ ಸಂಗಮದಲ್ಲಿ ತೀರ್ಥಸ್ನಾನ ಮಾಡಿ, ಪಿತೃಗಳಿಗೆ ತರ್ಪಣ ಕೊಟ್ಟು ವೈಭವದ ಉತ್ಸವದಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದರು. ಪಹಾಡೀಗಳೂ ತಾವು ಬೆಳೆದ ಧಾನ್ಯಗಳನ್ನು, ಹಾಲು ಹಣ್ಣುಗಳನ್ನು ಶಾರದೆಗೆ ಅರ್ಪಿಸಿ ಕೃತಾರ್ಥರಾಗುತ್ತಿದ್ದರಂತೆ. ಸಂತ ನಂದಾಲಾಲ್ ಜೀಯವರ ನೇತೃತ್ವದಲ್ಲಿ 1947ರಲ್ಲಿ ನಡೆದ ಯಾತ್ರೆಯೇ ಕೊನೆಯದು. ವಿಭಜನೆಯ ಸುದ್ದಿ ತಿಳಿಯುತ್ತಿದ್ದಂತೆ ಮಂದಿರದಲ್ಲಿದ್ದ ವಿಗ್ರಹಗಳನ್ನು ಕುದುರೆಯ ಮೇಲೆ ಹೇರಿಕೊಂಡು ಕುಪ್ವಾರದ ಟಿಕ್ಕರ್ ಪ್ರಾಂತ್ಯಕ್ಕೆ ಆತ ಸಾಗಿಸಿದರು. ಆ ಪೈಕಿ ಕೆಲವು ವಿಗ್ರಹಗಳು ವರಾಹಮೂಲ(ಬಾರಾಮುಲ್ಲಾ)ದ ದೇವೀಬಾಲ್'ನಲ್ಲಿವೆ. ಈಗ ಶಾರದಾಷ್ಟಮಿಯ ದಿನದಂದು ಕಣಿವೆಯ ಸನಿಹದ ಐದು ಪವಿತ್ರ ಸ್ಥಳಗಳಲ್ಲಿ ಪಿತೃತರ್ಪಣ, ಹೋಮಗಳು ನಡೆಯುತ್ತವೆ. 2018ರಲ್ಲಿ ಡಾ.ರಮೇಶ್ ವಂಕ್ವಾನಿ ನೇತೃತ್ವದ ಐವರು ಸದಸ್ಯರ ನಿಯೋಗ ಪಾಕಿಸ್ತಾನ ಹಿಂದೂ ಪರಿಷತ್ತಿನ (ಪಿಎಚ್‌ಸಿ) ಸಹಾಯದಿಂದ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಇತ್ತೀಚೆಗೆ ಪಿಒಕೆ ಸುಪ್ರೀಂ ಕೋರ್ಟ್ ಪಂಡಿತ ಸಮುದಾಯದ ಅರ್ಜಿಯನ್ನು ಪರಿಗಣಿಸಿ ದೇವಾಲಯವನ್ನು ರಕ್ಷಿಸುವಂತೆ ತನ್ನ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.


ಶಾರದಾ ಪೀಠ ಯಾತ್ರೆ ನಡೆಯುತ್ತಿದ್ದ ಕಾಲದಲ್ಲಿ ಭಕ್ತರು ಕುಪ್ವಾರ ಜಿಲ್ಲೆಯ ಕೃಷ್ಣಗಂಗಾ ನದಿ ತೀರದ ತೀತ್ವಾಲ್ ಹಳ್ಳಿಯ ಧರ್ಮಶಾಲೆಯಲ್ಲಿ ಒಂದೆರಡು ದಿನ ಉಳಿದುಕೊಂಡು, ಪ್ರಯಾಣದ ದಣಿವಾರಿಸಿಕೊಂಡು ಮುಂದೆ ಶಾರದಾ ಪೀಠಕ್ಕೆ ಸಾಗುತ್ತಿದ್ದರಂತೆ. ಅಲ್ಲೊಂದು ಚಿಕ್ಕ ಶಾರದಾಲಯವಿತ್ತು. ಆ ಮರದ ಮಂದಿರ ಮುಂದೆ ಮತಾಂಧರಿಂದ ದಹಿಸಲ್ಪಟ್ಟಿತು. ಗಡಿ ನಿಯಂತ್ರಣ ರೇಖೆಗೆ ಅತಿ ಸಮೀಪದಲ್ಲಿರುವ ಈ ಪ್ರದೇಶದಲ್ಲೇ ಈಗ "ಸೇವ್ ಶಾರದಾ ಕಮಿಟಿ (SSC)" ಶೃಂಗೇರಿ ಶಂಕರ ಪೀಠದ ನೆರವಿನಿಂದ ಶಾರದಾ ಪೀಠದ ಮಾದರಿಯಲ್ಲಿಯೇ ಶಿಲಾಮಯ ಶಾರದಾ ಮಂದಿರವನ್ನು ನಿರ್ಮಿಸಿದೆ. ಪಂಚಲೋಹದ ಶಾರದೆಯ ವಿಗ್ರಹವನ್ನು ಉಭಯ ಜಗದ್ಗುರುಗಳೂ ಪೂಜಿಸಿ ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರ ಯಾತ್ರೆ ಶೃಂಗೇರಿಯಿಂದ ಹೊರಟು ಕಾಶ್ಮೀರ ತಲುಪಿದೆ. ಈ ಹಿಂದಿನ ಶಾರದೆಯ ಕಾಷ್ಠ ಮೂರ್ತಿಯನ್ನು ದಾಳಿಕೋರರಿಂದ ರಕ್ಷಿಸಿ ಕಾಶ್ಮೀರಿ ಪಂಡಿತರು ಶೃಂಗೇರಿಗೆ ತಂದು ಒಪ್ಪಿಸಿದ್ದರು. ಅದೇ ಮಂದಿರದಲ್ಲಿದ್ದ ರಣವೀರ ವಿರಚಿತ 'ಸಂಕ್ರಾಂತಿ ಕಥಾ'ಎಂಬ ಗ್ರಂಥ ಸಹ ಅಮ್ಮನವರೊಂದಿಗೇ ಶೃಂಗೇರಿಗೆ ಬಂದಿತ್ತು. ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದೇ ಈ ಮಂದಿರದ ಪುನರ್ ನಿರ್ಮಾಣವನ್ನು ಆರಂಭಿಸಲಾಗಿದೆ. ಅದರ ಕಾರ್ಯ ಪ್ರಗತಿಯನ್ನು ವೀಕ್ಷಿಸಲು ಮಠದ ಆಡಳಿತಾಧಿಕಾರಿಯವರನ್ನ ಜಗದ್ಗುರುಗಳು ತೀತ್ವಾಲ್ ಗೆ ಕಳಿಸಿಕೊಟ್ಟಿದ್ದರು. ದೇವಸ್ಥಾನದ ಕುಂಭಾಭಿಶೇಕವನ್ನು ಶೃಂಗೇರಿಯ ಜಗದ್ಗುರುಗಳೇ ನೆರವೇರಿಸಬೇಕೆಂಬ ಕೋರಿಕೆಯನ್ನು ಸಮಸ್ತ ಕಾಶ್ಮೀರದ ಪಂಡಿತರ ಪರವಾಗಿ ಸಲ್ಲಿಸಲಾಗಿದೆ. ಶಾರದಾ ಯಾತ್ರೆಯನ್ನು ಕಿಶನ್‌ಗಂಗಾ ನದಿಯ ಮೂಲಕ ಪುನಃ ತೆರೆಯುವ ಪ್ರಯತ್ನದಲ್ಲಿ ರವೀಂದ್ರ ಪಂಡಿತರು ಹಲವಾರು ಅಡೆತಡೆಗಳನ್ನು ಎದುರಿಸಬೇಕಾಯಿತು. ಬಳಿಕ ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ಈ ಪ್ರಯತ್ನ ಕ್ಷಿಪ್ರವಾಗಿ ಯಶಸ್ಸಿನತ್ತ ಸಾಗಿತು. 1965ರಲ್ಲಿ ಶ್ರೀಮದ್ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ಹಾಗೂ 1994ರಲ್ಲಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥರು ಶಾರದಾ ಯಾತ್ರೆಯ ಪುನಾರಾರಂಭದ ಬಗ್ಗೆ ಪ್ರಯತ್ನಿಸಿದ್ದರು. ಮೂಲ ಶಾರದೆಯ ಭವ್ಯ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ಕಾಶ್ಮೀರದ ಜ್ಞಾನಪರಂಪರೆಯ ವೈಭವನ್ನು ಮರುಸ್ಥಾಪಿಸಲು ಈ ದೇವಾಲಯವು ಒಂದು ಪ್ರಾರ್ಥನಾ ಬಿಂದುವಾಗಿ ಕಾರ್ಯನಿರ್ವಹಿಸಲಿದೆ. ಶಾರದಾ ಯಾತ್ರೆಯನ್ನು ಕೊನೆಯ ಬಾರಿಗೆ ನಿರ್ವಹಿಸಿದ್ದ ಸಂತ ನಂದಾಲಾಲರ ವಿಗ್ರಹವೂ ಇಲ್ಲಿ ಪೂಜೆಗೊಳ್ಳಲಿದೆ. ಅಂದು ಶಂಕರರ ಕೋರಿಕೆಯ ಮೇರೆಗೆ ಅವರ ಹಿಂದೆ ನಡೆದುಬಂದ ಶಾರದೆ ಶೃಂಗೇರಿಯಲ್ಲಿ ನೆಲೆ ನಿಂತಳು. ಶೃಂಗೇರಿಗೆ ತಾಯಿ ಶಾರದೆಯ ಶ್ರೀಗಂಧದ ಮೂಲ ವಿಗ್ರಹವನ್ನು ಇದೇ ಶಾರದಾ ಪೀಠದಿಂದಲೇ ಜಗದ್ಗುರು ಆದಿ ಶಂಕರಾಚಾರ್ಯರು ತೆಗೆದುಕೊಂಡು ಬಂದಿದ್ದರು. ಇಂದು ರವೀಂದ್ರ ಪಂಡಿತರ ನೇತೃತ್ವದಲ್ಲಿ ಶಂಕರ ಹಾಗೂ ಶಾರದೆಯ ಭಕ್ತರು ಶೃಂಗೇರಿಯಿಂದ ಶಾರದೆಯ ಮೂಲನೆಲೆಗೆ ಒಯ್ಯುತ್ತಿದ್ದಾರೆ. ಶಾರದಾಂಬೆಯ(ಜ್ಞಾನದ) ಈ ಮರು ಪಯಣವು ಸನಾತನ ನಾಗರಿಕತೆಯ ಅನಂತ ಭರವಸೆಯ ಸಂಕೇತವಾಗಿದೆ. ಮಾಧ್ಯಮಗಳು, ಸ್ಥಾಪಿತ ಹಿತಾಸಕ್ತಿಗಳು ಅದನ್ನು ಈ ದೇಶೀಯರಿಗೆ ತಿಳಿಯದಂತೆ ಪ್ರಸಾರ ಮಾಡದಿದ್ದರೇನಂತೆ; ಜ್ಞಾನಯಾತ್ರೆಯಾದ ಈ ಶಾರದಾ ಯಾತ್ರೆಯನ್ನು ಸಂಭ್ರಮಿಸುವುದು ನಮ್ಮ ಕರ್ತವ್ಯ.







ಖಲಿಸ್ತಾನ ಕಲಿಗಳದ್ದಲ್ಲ; ಬುದ್ಧಿಗೇಡಿಗಳದ್ದು

 ಖಲಿಸ್ತಾನ ಕಲಿಗಳದ್ದಲ್ಲ; ಬುದ್ಧಿಗೇಡಿಗಳದ್ದು



ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.


ಅಲ್ಲಿಂದಾಚೆಗೆ ಪಂಜಾಬ್ ಶ್ರೀಮಂತ ಕೃಷಿ, ಉದ್ಯಮ ಹಾಗೂ ಹಣದ ಹರಿವಿನಿಂದ ಶಾಂತಿ ಹಾಗೂ ಸಂಪದ್ಭರಿತ ರಾಜ್ಯಗಳಲ್ಲೊಂದಾಗಿಬಿಟ್ಟಿತ್ತು. ಆದರೆ ಖಲಿಸ್ತಾನದ ಬೇಡಿಕೆ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಆಗಲೂ ಇತ್ತು. ಅಮೇರಿಕಾ, ಯೂರೋಪ್, ಕೆನಡಾಗಳ ರಾಜಕಾರಣ ಈ ದೇಶಗಳಲ್ಲಿರುವ ಸಿಖ್ಖರಲ್ಲಿ ಪ್ರತ್ಯೇಕತಾ ಭಾವನೆಯನ್ನು ಪೋಷಿಸಿಕೊಂಡು ಬರುವಲ್ಲಿ ಸಹಾಯಕವಾಗಿತ್ತು. ಅದರಲ್ಲೂ ದಲ್ ಖಲ್ಸಾ ಮತ್ತು ದುಮ್ದಾಮಿ ತಕ್ಸಲ್ ಮೊದಲಾದ ಸಿಖ್ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ರಹಸ್ಯ ಪೋಷಣೆಯೊಂದಿಗೆ ಖಾಲಿಸ್ತಾನ್ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡಿದ್ದವು. ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ ಭಿಂದ್ರನ್ ವಾಲೆ ಹಾಗೂ ಸಂಗಡಿಗರಿಗೆ ಸ್ಮಾರಕವನ್ನೂ ನಿರ್ಮಿಸಲು ಇವು ಯಶಸ್ವಿಯಾಗಿದ್ದವು. ಖಲಿಸ್ತಾನಿ ಉಗ್ರರು ಯುಎಇನಲ್ಲಿ ಇತ್ತೀಚೆಗಷ್ಟೇ ಕೇಂದ್ರೀಯ ನೆಲೆಯೊಂದನ್ನು ಸ್ಥಾಪಿಸಿದ್ದರು. ಭಾರತದ ಬಗ್ಗೆ ಜಾಗತಿಕವಾಗಿ ಕೆಟ್ಟ ಭಾವನೆ ಬಿತ್ತುವುದರ ಜೊತೆಗೆ ಪಂಜಾಬ್ನಲ್ಲಿ ಭಯೋತ್ಪಾದನೆಗೆ ಕಾಯಕಲ್ಪ ನೀಡಿ, ಹಿಂಸಾಚಾರ ಭುಗಿಲೇಳುವಂತೆ ಮಾಡಲು ಯುಎಇಯ ಪ್ರತಿಷ್ಠಿತ ಶೂಟಿಂಗ್ ಕ್ಲಬ್ನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಪಂಜಾಬ್ನ ಕುಖ್ಯಾತ ಅಪರಾಧಿಗಳನ್ನು ಸಂರ್ಪಸಿ ಅವರಿಗೆ ಹಣ ನೀಡಿ ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆಗೈಯುವ ಮೂಲಕ ಪಂಜಾಬ್ನಲ್ಲಿ ಕೋಮುಗಲಭೆ ಸೃಷ್ಟಿಸುವುದು ಉಗ್ರರ ಹುನ್ನಾರವಾಗಿತ್ತು. ಅಪರೇಷನ್ ಬ್ಲೂಸ್ಟಾರ್ ನೇತೃತ್ವ ವಹಿಸಿದ್ದ ನಿವೃತ ಲೆ.ಜ. ಕುಲದೀಪ್ ಸಿಂಗ್ ಬ್ರಾರ್ ಮೇಲೆ 2013ರಲ್ಲಿ ಲಂಡನ್ನಿನಲ್ಲಾದ ದಾಳಿ, ಸೆರೆಮನೆಗೆ ದಾಳಿ ಮಾಡಿ ಮಿಂಟೂ ಸಹಿತ ಐವರನ್ನು ಬಿಡಿಸಿಕೊಂಡ ಘಟನೆ, ಕಾರಿನಲ್ಲಿ ಭಾರಿ ಸ್ಫೋಟಕಗಳನ್ನಿರಿಸಿಕೊಂಡು ದೆಹಲಿಯ ಮೇಲೆ ದಾಳಿಗೆ ಬಂದು ಸಿಕ್ಕಿಬಿದ್ದ ಪ್ರಕರಣ, ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ದಿನ ಸ್ವರ್ಣಮಂದಿರದ ಎದುರು ಖಡ್ಗ ಹಿಡಿದು ಖಲಿಸ್ತಾನ್ ಪರ ಘೋಷಣೆ ಕೂಗಿದ್ದು, ನಿರಂಕಾರಿ ಭವನದ ಮೇಲಾದ ದಾಳಿ ಇವೆಲ್ಲಾ ಇದರ ಭಾಗಗಳೇ. ಅವರ ನೆಲೆಗಳೀಗ ಇಟಲಿ, ಆಸ್ಟ್ರೇಲಿಯಾ, ಜರ್ಮನಿ, ಬ್ರಿಟನ್, ಕೆನಡಾ, ಯುಎಇ ಸಹಿತ ಹಲವು ದೇಶಗಳಲ್ಲಿವೆ. ಕೆನಡಾದಲ್ಲಂತೂ ಜನಸಂಖ್ಯೆ, ಉದ್ಯಮ ಹಾಗೂ ರಾಜಕೀಯದಲ್ಲಿ ಪ್ರಭಾವಿಗಳಾಗಿರುವ ಸಿಖ್ಖರು ಕೆನಡಾ ಸರಕಾರ ಸಿಖ್ ಪ್ರತ್ಯೇಕತಾವಾದಿಗಳ ಬಗ್ಗೆ ಮೃಧು ಧೋರಣೆ ತಳೆಯುವಂತೆ ಮಾಡಲು ಸಫಲರಾಗಿದ್ದಾರೆ.


ಮೋದಿಯವರು ಪ್ರಧಾನಿಯಾದ ಬಳಿಕ ಕಾಶ್ಮೀರ ಗಡಿಯಲ್ಲಿ ಸತತ ಮುಖಭಂಗಕ್ಕೊಳಗಾದ ಪಾಕಿಸ್ತಾನ ಮತ್ತೆ ಸಿಖ್ ಪ್ರತ್ಯೇಕತಾವಾದಿಗಳನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿತು. ಪ್ರತ್ಯೇಕತಾವಾದಿಗಳಿಗೆ ಶಸ್ತ್ರಾಸ್ತ್ರ ಹಾಗೂ ಧನ ಸಹಾಯವನ್ನು ಒದಗಿಸಿತು. ಸಿಖ್ಖರ ಪವಿತ್ರ ಗ್ರಂಥವನ್ನು ಅಪಚಾರ ಗೈದು ಪರಾರಿಯಾಗುವ ಛದ್ಮವೇಶಧಾರಿಗಳನ್ನೂ ಅದು ನೇಮಿಸಿತು. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಿಖ್ ಯುವಕರನ್ನು ಕೆರಳಿಸಿತು. ಹಿಂದುತ್ವದ ವಿರುದ್ಧದ ನಿರೂಪಣೆಯನ್ನು ಸಿಖ್ ಹಿಂಸಾಚಾರದ ನಿರೂಪಣೆಗೆ ಸರಿ ಹೊಂದುವಂತೆ ರಾಷ್ಟ್ರಮಟ್ಟದಲ್ಲಿ ಕಥೆ ಸೃಷ್ಟಿಸುವ ಬರಹಗಾರರನ್ನು ಬಿಸ್ಕತ್ ಹಾಕಿ ಬಳಸಿತು. ಜಗದೀಶ್ ಕುಮಾರ್ ಕೊಲೆ ಪ್ರಕರಣ ತನಿಖೆ ವೇಳೆ ರಾ.ಸ್ವ.ಸಂ., ಶಿವಸೇನೆ, ಹಿಂದೂ ತಖ್ತ್ ಸಂಘಟನೆಗಳ ಮುಖಂಡರ (ಒಟ್ಟು 6) ಕೊಲೆಗಳಲ್ಲಿ ಐಎಸ್ಐ ಕೈವಾಡ ಬೆಳಕಿಗೆ ಬಂತು. ಖಲಿಸ್ತಾನ್ ಬೆಂಬಲಿಗರಿಂದ ರಾ.ಸ್ವ.ಸಂ.ದ ಕಾರ್ಯಕರ್ತರ, ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಐಎಸ್ಐ ಉದ್ದೇಶವಾಗಿತ್ತು.  ಪಾಕಿಸ್ತಾನದ ಸೈನ್ಯದಲ್ಲಿ ಚೌಧರಿ ಸಾಹಿಬ್ ಎಂದೇ ಪ್ರಸಿದ್ಧನಾದ ಲೆ. ಕ. ಶಾಹಿದ್ ಮಹಮೂದ್ ಮಾಲ್ಹಿ ನೇತೃತ್ವದಲ್ಲಿ "ರೆಫರೆಂಡಮ್ 2020" ಸಿದ್ಧಗೊಳಿಸಿ ಸಿಖ್ ಪ್ರತ್ಯೇಕವಾದಿಗಳಿಗೆ ಹಂಚಿತು. ಪಂಜಾಬನ್ನು 2020ರೊಳಗೆ ಸ್ವತಂತ್ರಗೊಳಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಹಾಗೂ ವಿಶ್ವಸಂಸ್ಥೆಯ ಮಧ್ಯಪ್ರದೇಶದೊಂದಿಗೆ ಪಂಜಾಬಿನಲ್ಲಿ ಜನಮತ ಸಂಗ್ರಹಣೆ ಮಾಡುವ ಬಗ್ಗೆ ಈ ದಸ್ತಾವೇಜಿನಲ್ಲಿ ವಿವರಿಸಲಾಗಿತ್ತು. ಭಾರತ ಸರಕಾರದ ವಿರೋಧದ ನಡುವೆಯೂ ರೆಫರೆಂಡಮ್ 2020ಯನ್ನು ಉದ್ಘೋಷಿಸುವ ಲಂಡನ್ ಘೋಷಣೆ ಕಾರ್ಯಕ್ರಮಕ್ಕೆ ಬ್ರಿಟನ್ ಸರಕಾರ ಅನುಮತಿ ಕೊಟ್ಟಿತ್ತು. ಜೊತೆಗೆ ವಿವಿಧ ಸಂದರ್ಭಗಳಲ್ಲಿ ಅಮೇರಿಕಾ ಹಾಗೂ ಕೆನಡಾಗಳಲ್ಲಿ ಭಾರತೀಯ ರಾಜತಾಂತ್ರಿಕ ವರ್ಗಕ್ಕೆ ಗುರುದ್ವಾರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಐಎಸ್ಐ, ಸಿಖ್ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ, ಕಾಶ್ಮೀರದ ಗಡಿಯಲ್ಲಿ ಕಾರ್ಯಾಚರಿಸುವ ಭಯೋತ್ಪಾದಕ ಸಂಘಟನೆಗಳೊಂದಿಗೆ ಬೆಸೆಯಲು ಯತ್ನಿಸುತ್ತಿದೆ. ಭಯೋತ್ಪಾದಕ ಝಾಕೀರ್ ಮೂಸಾ ಇದರ ರೂವಾರಿಯಾಗಿದ್ದ. ಭಯೋತ್ಪಾದಕ ಬುರ್ಹಾನ್ ವಾನಿಯ ಆಪ್ತನಾಗಿದ್ದ ಆತನನ್ನು ನಮ್ಮ ದೇವದುರ್ಲಭ ಯೋಧ ಪಡೆ ಬುರ್ಹಾನ್ ವಾನಿಯನ್ನು ಕಳಿಸಿದ ಜಾಗಕ್ಕೇ ಅಟ್ಟಿತು.  ಕಾಶ್ಮೀರದ ವಿದ್ಯಾರ್ಥಿಗಳು ಕೆಲವರು ಉದ್ದೇಶಪೂರ್ವಕವಾಗಿ ಪಂಜಾಬಿನ ವಿದ್ಯಾಲಯಗಳಲ್ಲಿ ನೇಮಕಾತಿ ಪಡೆದು ಈ ಎರಡೂ ಭಯೋತ್ಪಾದಕ ಗುಂಪುಗಳ ನಡುವೆ ಕೊಂಡಿಯಾಗಿ ಕಾರ್ಯವೆಸಗುತ್ತಿದ್ದಾರೆ! ಇದರ ಜೊತೆಗೆ ಹಿಂದೂ ರಾಷ್ಟ್ರವಾದಿಗಳು ಹಾಗೂ ಭಾರತ ಸರಕಾರ ಸಿಖ್ಖರನ್ನು ತುಳಿಯುತ್ತಿದ್ದಾರೆ ಎನ್ನುವ ಭಾವನೆಯನ್ನು ಸಿಖ್ ಯುವಕರ ತಲೆಯಲ್ಲಿ ಇಂದಿಗೂ ತುಂಬಿಸಲಾಗುತ್ತಿದೆ. ಭಾರತದ ಸಂಸ್ಕೃತಿ, ಮತ ಸಾಮರಸ್ಯ ಹಾಗೂ ವೈವಿಧ್ಯತೆಗಳ ಅರಿವಿಲ್ಲದ ನವ ಸಿಖ್ ಪೀಳಿಗೆ ಸುಲಭವಾಗಿ ಈ ಮತಾಂಧರ ಕೈವಶವಾಗುತ್ತಿದೆ.


ಖಲಿಸ್ತಾನೀಗಳ ಗುರಿ ಯಾವತ್ತಿಗೂ ಹಿಂದೂಗಳೇ.1989ರ ಯುವೋತ್ಸವದಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ದಾಳಿ ಮಾಡಿದ್ದರು. ಆಗ 19 ಹಿಂದೂ ವಿದ್ಯಾರ್ಥಿಗಳು ಜೀವಕಳೆದುಕೊಂಡಿದ್ದರೆ ಹಲವರು ಗಾಯಗೊಂಡಿದ್ದರು. ಆಗ ಬಳಕೆಯಾದ ಎಕೆ-47 ಚೀನಾದಲ್ಲಿ ತಯಾರಾದದ್ದು! ಅದೇ ವರ್ಷ ಜೂನ್ ನಲ್ಲಿ ಸಂಘದ ಸ್ವಯಂಸೇವಕರ ಮೇಲೆ ದಾಳಿ ಮಾಡಿ 25 ಸ್ವಯಂಸೇವಕರನ್ನು ಕೊಂದು 35ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಮಾರಣಾಂತಿಕ ಗಾಯಗಳನ್ನುಂಟು ಮಾಡಿದ್ದರು. ಅದು ಮೋಗಾ ಹತ್ಯಾಕಾಂಡವೆಂದೇ ಪ್ರಸಿದ್ಧ. 45 ಜನರನ್ನು ಬಲಿತೆಗೆದುಕೊಂಡ ಮಾರ್ಚ್ 1990ರ ಅಬೋಹರ್ ಹತ್ಯಾಕಾಂಡವಂತೂ ಘನಘೋರ. ಈವರೆಗೆ ಸುಮಾರು 35,000 ಹಿಂದೂಗಳು ಖಲಿಸ್ತಾನೀ ಉಗ್ರರಿಗೆ ಬಲಿಯಾಗಿದ್ದಾರೆ. ಈಗ ಖಲಿಸ್ತಾನಿಗಳು ವಿಶ್ವಾದ್ಯಂತ ಇರುವ ಹಿಂದೂಗಳನ್ನು, ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಕೂಡಾ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವಕ್ಕೆಲ್ಲಾ ಆಯಾ ಸ್ಥಳೀಯ ಭಾರತ ದ್ವೇಷಿ ಆಡಳಿತ ವರ್ಗಗಳ ಪರೋಕ್ಷ ಬೆಂಬಲವಿದೆ. 


ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕಾ ಇಲ್ಲೆಲ್ಲಾ ಖಲಿಸ್ತಾನೀ ಉಗ್ರರು ಬೀಡುಬಿಟ್ಟಿದ್ದು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಿಖ್ ತರುಣರಲ್ಲಿ ಮೂಲಭೂತವಾದವನ್ನು ಬಿತ್ತಿ ಪೋಷಿಸುತ್ತಿವೆ. ಅವಕ್ಕೆ ಸ್ಥಳೀಯ ರಾಜಕಾರಣಿ, ಪಕ್ಷ, ಅಧಿಕಾರೀ ವರ್ಗಗಳ ಬೆಂಬಲವೂ ಇದೆ. ಇಲ್ಲೆಲ್ಲಾ ತಾವೇ ಶ್ರೇಷ್ಠರೆಂಬ ಬಿಳೀ ಜಿರಳೆಗಳಾದ ಮೂಲಭೂತವಾದೀ ಕ್ರೈಸ್ತರು, ಖಲಿಸ್ತಾನೀ ಮತಾಂಧರು ಹಾಗೂ ಮುಸ್ಲಿಂ ಮತೀಯವಾದಿಗಳ ನಡುವೆ ಭಾರತೀಯರು ಹೈರಾಣಾಗುತ್ತಿದ್ದಾರೆ. ಕೆನಡಾ ಸರಕಾರ 2021ರಲ್ಲಿ ಹೊರಡಿಸಿದ ಅಂಕಿಅಂಶಗಳ ಪ್ರಕಾರವೇ 2019-21ರ ನಡುವೆ ಹಿಂದೂಗಳ ಮೇಲಿನ ದಾಳಿ 72 ಪ್ರತಿಶತ ಹೆಚ್ಚಾಗಿದೆ. ಖಲಿಸ್ತಾನೀ ಪ್ರತ್ಯೇಕವಾದಿಗಳಿಂದ ಇತ್ತೀಚೆಗೆ ಟೊರೊಂಟೋದ ಸ್ವಾಮಿ ನಾರಾಯಣ ಮಂದಿರದ ಮೇಲೆ ನಡೆದ ದಾಳಿ, ನ್ಯೂಯಾರ್ಕಿನ ಹಿಂದೂ ದೇವಾಲಯದ ಮೇಲಿನ ದಾಳಿ, ಬ್ರಿಟನ್ನಿನ ಲೀಸೆಸ್ಟರ್ನಲ್ಲಾದ ಗಲಭೆಗಳ ಹಿಂದಿನ ಮೂಲ ಉದ್ದೇಶ ಹಿಂದೂ ವಿರೋಧಿ ಭಾವನೆಗಳಿಗೆ ಉತ್ತೇಜನ ಕೊಡುವುದೇ ಆಗಿತ್ತು. ಈ ಎಲ್ಲಾ ಖಲಿಸ್ತಾನೀ ಉಗ್ರ ಗುಂಪುಗಳು ಮುಸ್ಲಿಂ ಉಗ್ರರ ಜೊತೆಗೂಡಿ ಹಿಂಸಾತ್ಮಕ ಕಾರ್ಯವೆಸಗುತ್ತಾ ಹಿಂದೂಗಳಿಗೆ ಸದಾ ಬೆದರಿಕೆಯೊಡ್ಡುತ್ತವೆ. ಹಿಂದೂ ಉತ್ಸವಗಳಲ್ಲಿ, ಸ್ವಾತಂತ್ರ್ಯ ಅಥವಾ ಗಣರಾಜ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಹಿಂದೂಗಳನ್ನು ಬೆದರಿಸುವುದು ಅವರ ವಾಡಿಕೆಯೇ ಆಗಿದೆ. ಕಳೆದ ಆಗಸ್ಟ್ ಹದಿನೈದರಂದು ಹಿಂದೂಗಳನ್ನು ಉಗ್ರವಾಗಿ ವಿರೋಧಿಸಿ ಅವರನ್ನು ಬ್ರಿಟನ್ನಿನ ಸ್ಲೋ ನಗರದಿಂದ ಹೊರದಬ್ಬಿದ ಬಗ್ಗೆ ಖಲಿಸ್ತಾನೀ ಉಗ್ರ ಗುಂಪು ಹೆಮ್ಮೆಯಿಂದ ಹೇಳಿಕೊಂಡಿತ್ತು. ಐಸಿಸ್ ಮತ್ತಿತರ ಜಿಹಾದೀ ಗುಂಪುಗಳಿಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುವ ನೆಲವಾಗಿರುವ ಜೊತೆಜೊತೆಗೆ ಬ್ರಿಟನ್ ಯಶಸ್ವೀ ಹಿಂದೂ ಜನಾಂಗದ ಮೇಲೆ ಗುರಿಯಿಟ್ಟು ದಾಳಿ ಮಾಡುವ ಖಲೀಸ್ತಾನೀ, ಇಸ್ಲಾಮೀ, ಮೂಲಭೂತವಾದೀ ಕ್ರೈಸ್ತರ ಪ್ರಮುಖ ಅಡ್ಡೆಯಾಗಿದೆ. ಬಹುಸಂಸ್ಕೃತಿ, ತುಷ್ಟೀಕರಣದ ಹೆಸರಲ್ಲಿ ಇಲ್ಲಿನ ರಾಜಕೀಯ ವ್ಯವಸ್ಥೆಯೇ ಈ ಕ್ರೌರ್ಯಕ್ಕೆ ಪೂರಕವಾಗಿದೆ. ಇಲ್ಲಿ 2017-18ರಲ್ಲಿ 58 ಪ್ರತಿಶತ ಏರಿಕೆಯಾಗಿದ್ದ ಹಿಂದೂಗಳ ಮೇಲಿನ ದಾಳಿ 2020-21ರಲ್ಲಿ 166 ಪ್ರತಿಶತ ಏರಿಕೆಯಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ 200 ಪ್ರತಿಶತ ಏರಿಕೆಯಾಗಿದೆ! ಇಲ್ಲಿ ಹಿಂದೂಗಳ ಆಸ್ತಿ-ಪಾಸ್ತಿಗಳ ಮೇಲೆ, ಹಿಂದೂ ದೇವಾಲಯಗಳ ಮೇಲಿನ ದಾಳಿ ಮಾಮೂಲು ಎಂಬಂತಾಗಿದೆ. ಸಿಎಎ ಹಾಗೂ ಕೃಷಿಸುಧಾರಣಾ ಕಾಯಿದೆಗಳ ಬಳಿಕವಂತೂ ಹಿಂದೂಗಳ ಮೇಲಿನ ದಾಳಿ ಮತ್ತಷ್ಟು ಹೆಚ್ಚಿದೆ. ಆಸ್ಟ್ರೇಲಿಯಾದಲ್ಲಿ ದಿನನಿತ್ಯದ ಜನಾಂಗೀಯ ದಾಳಿಗಳ ಜೊತೆಜೊತೆಗೆ ಖಲಿಸ್ತಾನೀ ಪ್ರೇರಿತ ದಾಳಿಗಳನ್ನೂ ಹಿಂದೂಗಳು ಸಹಿಸಬೇಕಾಗಿದೆ. ಇತ್ತೀಚೆಗೆ ಶಿವವಿಷ್ಣು ಮಂದಿರ, ಸ್ವಾಮೀನಾರಾಯಣ ಮಂದಿರಗಳ ಮೇಲೆ ನಡೆದ ದಾಳಿಗಳು, ಭಾರತ ವಿರೋಧೀ ಪ್ರತಿಭಟನೆಗಳು, ಅವುಗಳ ನೆಪದಲ್ಲಿ ಹಿಂದೂಗಳ ಮೇಲೆ ಮತ್ತೆ ದಾಳಿ ಇವೆಲ್ಲವಕ್ಕೂ ನಿಷ್ಕ್ರಿಯರಾಗಿರುವ ಆಸ್ಟ್ರೇಲಿಯಾ ಅಧಿಕಾರೀ ವರ್ಗವೇ ಅನುವು ಮಾಡಿಕೊಟ್ಟಂತಾಗಿದೆ. ಈ ಖಲಿಸ್ತಾನೀ ಹಾಗೂ ಇಸ್ಲಾಮೀ ಮತಾಂಧರ ಜೊತೆ ಪಶ್ಚಿಮದ ಪ್ರಗತಿಪರ(?)ರೂ ಕೈಜೋಡಿಸಿದ್ದಾರೆ. ಹಿಂದೂಗಳೇ ದಾಳಿಗಳಿಗೆ ಒಳಗಾಗುತ್ತಿದ್ದರೂ ಹಿಂದೂಫೋಬಿಯಾವನ್ನೇ ಸದಾ ಬೊಬ್ಬಿರಿವ ಈ ಮತಿಹೀನ ವರ್ಗ ಹಿಂದೂಗಳನ್ನೇ ಆಕ್ರಮಣಕಾರಿಗಳಂತೆ ಬಿಂಬಿಸಿ, ಅದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ, ಭಾಜಪಾ ಸರಕಾರವನ್ನೂ, ರಾ.ಸ್ವ.ಸಂ.ವನ್ನೂ ತಳುಕು ಹಾಕಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆದು ಆ ಮತಾಂಧರ ಕೃತ್ಯಗಳನ್ನು ಮುಚ್ಚಿಹಾಕಲು ಯತ್ನಿಸುತ್ತವೆ.


ಇತ್ತೀಚೆಗೆ ಕೃಷಿಸುಧಾರಣಾ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ನಡೆದ ರೈತ ಚಳವಳಿಯ ಸೂತ್ರಧಾರರು ಖಲಿಸ್ಥಾನಿಗಳೇ. ಪಾಪದ ಸಾಮಾನ್ಯ ಸಿಖ್ ರೈತರನ್ನು ಬಳಸಿಕೊಂಡು ಇಡೀ ದೇಶಕ್ಕೆ ಈ ಭಯೋತ್ಪಾದಕರು ಬೆಂಕಿ ಹಚ್ಚಲು ನೋಡಿದಾಗ ಭಾಜಪಾ ವಿರೋಧೀ ಪಕ್ಷಗಳು, ದೇಶವಿರೋಧೀ ಎಡಪಂಥೀಯ, ನಡುಪಂಥೀಯರೆಲ್ಲಾ ಅವರಿಗೆ ಬೆಂಬಲ ಕೊಟ್ಟರು. ಆ ಭಯೋತ್ಪಾದಕರು ಟ್ರಾಫಿಕ್ ಜಾಮ್ ಮಾಡಿ ಪ್ರಧಾನಿಯವರನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದಾಗ ಇವರೆಲ್ಲಾ ಪ್ರಧಾನಿಗಳ ಕುರಿತು ಕುಹಕವಾಡಿದರೇ ಹೊರತು ದೇಶದ ಭದ್ರತೆಯ ಬಗ್ಗೆ ಯೋಚಿಸಲಿಲ್ಲ. ಇದನ್ನೇ ಉಪಯೋಗಿಸಿ, ಖಲಿಸ್ಥಾನೀಗಳ ಬೆಂಬಲ ಪಡೆದು ಆಪ್ ಪಕ್ಷ ಪಂಜಾಬ್ ಚುನಾವಣೆಯನ್ನೂ ಜಯಿಸಿತು. ಆದರೇನು ಬಗಲಲ್ಲಿ ಕೆಂಡವನ್ನಿಟ್ಟುಕೊಂಡು ಎಷ್ಟು ದಿನ ಜೀವಿಸಬಹುದು? ಭಿಂದ್ರನ್ ವಾಲೆಯಂತೆಯೇ ವೇಷಭೂಷಣ ಧರಿಸಿಕೊಂಡು ದೀಪ್ ಸಿಧುವಿನ ಬಳಿಕ "ವಾರಿಸ್ ಪಂಜಾಬ್ ದೇ" ಎಂಬ ಖಲಿಸ್ಥಾನೀ ಪ್ರತ್ಯೇಕವಾದಿ ಸಂಘಟನೆಯ ನೇತೃತ್ವ ವಹಿಸಿಕೊಂಡು ಈಗ ಪೊಲೀಸರ ಕಣ್ತಪ್ಪಿಸಿ ಓಡುತ್ತಿರುವ ಅಮೃತ್ ಪಾಲ್ ಸಿಂಗ್ ಕೇಂದ್ರ ಗೃಹ ಸಚಿವರಿಗೆ, ಪಂಜಾಬ್ ಮುಖ್ಯಮಂತ್ರಿಗೆ "ಇಂದಿರಾ ಗಾಂಧಿಗಾದ ಗತಿಯೇ ಬರಲಿದೆ" ಎಂದು ಬೆದರಿಕೆಯೊಡ್ಡಿದ್ದ. ಆತನ ಆಪ್ತ ಸಹಾಯಕನನ್ನು ಬಂಧಿಸಿ ಇರಿಸಿದ್ದ ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ಖಡ್ಗ, ಬಂದೂಕು ಹಿಡಿದು ನುಗ್ಗಿದ ಸಿಂಗ್ ಮತ್ತು ಆತನ ಬೆಂಬಲಿಗರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ದೇಶದಾದ್ಯಂತ ಗಲಭೆ ಸೃಷ್ಟಿಸಲು ಯತ್ನಿಸಿದ್ದರು. ಈ ವಿಷಯ ಪತ್ತೆ ಹಚ್ಚಿದ ಗುಪ್ತಚರ ಇಲಾಖೆ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಪ್ರಯತ್ನವನ್ನು ನಿಷ್ಫಲಗೊಳಿಸಿತು. ಪೊಲೀಸರು ಸಿಂಗ್ ಹಾಗೂ ಅವನ ಸಹಚರರನ್ನು ಬಂಧಿಸಿದರಾದರೂ ಅಮೃತ್ ಪಾಲ್ ತಪ್ಪಿಸಿಕೊಂಡುಬಿಟ್ಟ. ಈ ಅಮೃತ್ ಪಾಲ್ ಸಿಂಗನಿಗೆ ಐ.ಎಸ್.ಐ ಸಹಾಯ ಮಾಡುತ್ತಿದೆ. ಐ.ಎಸ್.ಐ.ಯೇ ಆತನಿಗೆ ಜಾರ್ಜಿಯಾದಲ್ಲಿ ತರಬೇತಿ ಕೊಟ್ಟಿದೆ. ಅಸ್ಸಾಂ ಮುಖ್ಯಮಂತ್ರಿ ಬಿಯಾಂತ್ ಸಿಂಗರನ್ನು ಕೊಲೆ ಮಾಡಿದ್ದ ಭಯೋತ್ಪಾದಕ ಜಗತಾರ್ ಸಿಂಗ್, ಶಸ್ತ್ರಾಸ್ತ್ರ ಹಾಗೂ ಮಾದಕದ್ರವ್ಯಸಾಗಣೆ ಯಲ್ಲಿ ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಂಡು ಓಡಿರುವ ಅಂತಾರಾಷ್ಟ್ರೀಯ ಸಿಖ್ ಯೂತ್ ಫೆಡರೇಷನ್ ಅಧ್ಯಕ್ಷ ಲಕ್ಭೀರ್ ಸಿಂಗ್, ಬ್ರಿಟನ್ನಿನಲ್ಲಿರುವ ಖಲಿಸ್ಥಾನೀ ಉಗ್ರ ಅವತಾರ್ ಸಿಂಗ್ ಮುಂತಾದವರಿಗೆಲ್ಲಾ ಅತ್ಯಾಪ್ತನೀತ. ನಮ್ಮೊಳಗಿನವರೇ ಮತಾಂಧರಾಗಿ, ನಾವು ಕುರುಡಾಗಿ ಕೂತರೇ ಏನಾಗಬಹುದೋ ಅದೇ ಖಲಿಸ್ಥಾನೀಗಳಿಂದ ಆಗುತ್ತಿದೆ. ಪ್ರಧಾನಿ ಮೋದಿಯವರ ತಂತ್ರಗಳಿಂದ ಹಲ್ಲು ಕಿತ್ತ ಹಾವಿನಂತೆ ಆಗಿರುವ ಪಾಪಿ ಪಾಕಿಸ್ತಾನಕ್ಕೆ ಕೊನೆಯ ಅಸ್ತ್ರ ಸಿಕ್ಕಿದ್ದು ಇದು ಮಾತ್ರ. ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ 6.2% ಸಿಖ್ಖರಿದ್ದರು. ಈಗ ಉಳಿದಿರುವುದು 0.01% ಮಾತ್ರ. ಐ.ಎಸ್.ಐನಿಂದ ಬೆಂಬಲ ಪಡೆಯುವ ಖಲೀಸ್ಥಾನೀ ಪ್ರತ್ಯೇಕವಾದಿಗಳು ಇದನ್ನು ಯೋಚಿಸಬೇಕಲ್ಲವೇ?



ಇತ್ತೀಚೆಗೆ ಪಂಜಾಬಿನ ನಿಹಾಂಗ್(ನೀಲಿ ನಿಲುವಂಗಿಯ, ಖಡ್ಗ, ಈಟಿ ಹಿಡಿದ, ಪೇಟ ಧರಿಸಿದ ಸಿಖ್ ಪಡೆ)ಗಳು ಸಿಂಧಿ ಟಿಕಾನೋ, ಮನೆಗಳಿಗೆ ನುಗ್ಗಿ ಸಿಖ್ಖರ "ರಿಹತ್ ಮರ್ಯಾದಾ"(ಸಿಖ್‍ ಜೀವನಪದ್ದತಿಯ ನಿಯಮ & ಸಂಪ್ರದಾಯಗಳು)ಕ್ಕೆ ವಿರುದ್ಧವಾಗಿ "ಗುರುಗ್ರಂಥ ಸಾಹಿಬ್" ಅನ್ನು ಇಡುವುದರ ಕುರಿತು ಗದ್ದಲವೆಬ್ಬಿಸಿದರು. ಈ ಘಟನೆಯಿಂದ ನೊಂದ ಸಿಂಧಿಗಳು ಸಂತ ಸಮಾಜದ ನಿರ್ದೇಶನದೊಂದಿಗೆ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಲು ತಮ್ಮೊಳಗೇ ನಿರ್ಧರಿಸಿದರು. ಜೊತೆಗೆ ಶ್ರೀಮದ್ಭಗವದ್ಗೀತೆ ಹಾಗೂ ರಾಮಾಯಣದ ಪ್ರತಿಗಳನ್ನು ತಮ್ಮ ಮಂದಿರಗಳಲ್ಲಿ ಇಡಬೇಕೆಂದು ನಿರ್ಧರಿಸಿದರು. ಸಿಂಧಿಗಳ ಈ ನಿರ್ಧಾರ ಕೇವಲ ಒಂದು ವಾರದಿಂದ ನಿಹಾಂಗ್'ಗಳು ಎಬ್ಬಿಸಿದ ಗದ್ದಲದಿಂದ ಉಂಟಾದುದಲ್ಲ. ಕೆಲವು ಸಿಖ್ ಮತಾಂಧರು ನಿಯಮಿತವಾಗಿ ಸಿಂಧಿ ದೇವಾಲಯಗಳಿಗೆ ಪ್ರವೇಶಿಸಿ ಅವರ ಸಂಪ್ರದಾಯಗಳನ್ನು ನಿಂದಿಸುತ್ತಾ, ಕತ್ತಿಗಳನ್ನು ಝಳಪಿಸುತ್ತಾ ಅವರನ್ನು 'ಪಾಖಂಡಿ'ಗಳೆಂದು ಕರೆಯುತ್ತಿದ್ದುದನ್ನು ಕಂಡು ಸಿಂಧಿ ಸಮುದಾಯ ರೋಸಿ ಹೋಗಿತ್ತು. ಅದರಲ್ಲೂ ಕಿರುಕುಳ ನೀಡಿದ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ನಿಹಾಂಗ್'ಗಳ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮಕೈಗೊಳ್ಳಲಿಲ್ಲ. ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಈಗ ಎಸ್.ಜಿ.ಪಿ.ಸಿಯಂತಹಾ ಸಂಸ್ಥೆಗಳಿಂದಾಗಿ ಸಾಮಾನ್ಯ ಸಿಖ್ಖರಲ್ಲೂ ಈ ಮತಾಂಧತೆ ಬೆಳೆಯುವಂತಾಗಿದೆ.



ಹೇಗೆ ಬ್ರಿಟಿಷರು ಹಿಂದೂಗಳನ್ನು ಒಡೆದಾಳಿದರೋ ಅದೇ ಕೆಲಸವನ್ನು ಇಂದಿನ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಮಾಡುತ್ತಿದ್ದಾರೆ. ಆದರೆ ಅದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಯಾದ ರಾಷ್ಟ್ರ ವಿಭಜನೆ ಅವರ ಗಮನಕ್ಕೆ ಬರುತ್ತಿಲ್ಲ. 1984ರ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡವನ್ನು ಹಿಂದೂಗಳು ತಮ್ಮ ಮೇಲೆ ನಡೆಸಿದ ಅನ್ಯಾಯ ಎಂಬಂತೆ ಖಲಿಸ್ತಾನಿಗಳಿಂದ ತಿರುಚಲ್ಪಟ್ಟಿದೆ. ಆದರೆ ಅದು ಪಕ್ಷವೊಂದರ ಗುಲಾಮರು ನಡೆಸಿದ ದಾಂಧಲೆ ಹೊರತು ಹಿಂದೂಗಳ ಪ್ರತೀಕಾರವಲ್ಲ ಎನ್ನುವುದನ್ನು ಸಿಖ್ಖರು ನೆನಪಿಡಬೇಕಾಗಿದೆ. ಸಿಖ್ ಮತವು ಹಿಂದೂಗಳಲ್ಲಿ ಕ್ಷಯವಾಗುತ್ತಿದ್ದ ಶೌರ್ಯವನ್ನು ಮತ್ತೆ ಎಬ್ಬಿಸಲು ಶುರುವಾದ ಒಂದು ಧಾರೆ. ಸಿಖ್ ಸಮುದಾಯವು ಹಿಂದೂಗಳಿಂದ ಬೇರೆಯಾದುದೆಂದು ಹಿಂದೂಗಳಿಗೆ ಇಷ್ಟರವರೆಗೆ ಅನಿಸಿಲ್ಲ. ಹಾಗಾಗಿಯೇ ಉದಾಸಿಗಳು, ಸಿಂಧಿಗಳ ಸಹಿತ ಅನೇಕರು ಗುರುಗ್ರಂಥಸಾಹಿಬವನ್ನು ತಮ್ಮ ಮನೆಗಳಲ್ಲಿ, ದೇಗುಲಗಳಲ್ಲಿರಿಸಿ ಪೂಜಿಸಿದ್ದು. ಔರಂಗಜೇಬ ಆರು ವರ್ಷ ಪ್ರಾಯದ ಸಿಖ್ ಗುರು ಹರ್ ಕಿಶನ್'ಗೆ ಕಿರುಕುಳ ಕೊಟ್ಟಾಗ ಹಿಂದೂ ರಾಜ ಜಯ್ ಸಿಂಗ್ ತನ್ನ ಬಾಂಗ್ಲಾ(ಅರಮನೆ)ದಲ್ಲಿ ಆತನನ್ನು ಇರಿಸಿ ರಕ್ಷಿಸಿದ. ಬಳಿಕ ಆರಮನೆಯನ್ನು ಗುರುವಿಗೇ ದಾನ ಕೊಟ್ಟ. ಇವತ್ತು ದೆಹಲಿಯಲ್ಲಿರುವ ಬಾಂಗ್ಲಾ ಸಾಹಿಬ್ ಗುರುದ್ವಾರ ಅದೇ ಅರಮನೆ. ಗುರು ಹರಗೋವಿಂದರ ಮೇಲೆ ಮೊಘಲರು ದಾಳಿ ಮಾಡಿದಾಗ ರಾಜಾ ತಾರಾಚಂದ್ ಅವರಿಗೆ ರಕ್ಷಣೆ ಕೊಟ್ಟಿದ್ದ. ಆತ ದಾನ ಮಾಡಿದ ಭೂಮಿಯಲ್ಲೇ ಕಿರಾತ್ಪುರ ಗುರುದ್ವಾರ ಕಟ್ಟಲ್ಪಟ್ಟಿತು. ಗುರು ತೇಗಬಹದ್ದೂರರನ್ನು ಹಿಂದೂ ರಾಜಾ ರಾಮ್ ಸಿಂಗ್ ಔರಂಗಜೇಬನ ಕತ್ತಿಯಿಂದ ರಕ್ಷಿಸಿದ್ದ. ಭಾಯಿ ಸಿಂಘ ಪುರೋಹಿತ್ ಎಂಬ ಬ್ರಾಹ್ಮಣ ಗುರು ಹರಗೋವಿಂದರ ಮಗಳು ಬೀಬಿ ವೀರೋಳನ್ನು ತನ್ನ ಪ್ರಾಣತ್ಯಾಗ ಮಾಡಿ ಮೊಘಲರಿಂದ ರಕ್ಷಿಸಿದ್ದ. ಹಿಂದೂಗಳು ಔರಂಗಜೇಬನ ಉಪಟಳದಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಂಡಾಗ ಔರಂಗಜೇಬನಿಂದ ಬಗೆಬಗೆಯ ಚಿತ್ರಹಿಂಸೆಗೊಳಗಾಗಿ ಹಿಂದೂಗಳಿಗೋಸ್ಕರ ಬಲಿದಾನ ನೀಡಿದ ಗುರು ತೇಜ್ ಬಹಾದ್ದೂರರನ್ನು, ಅವರ ಶಿಷ್ಯರಾದ ಭಾಯಿ ಮತಿದಾಸ, ಭಾಯಿ ದಯಾಳರನ್ನು ಯಾವ ಹಿಂದೂ ಮರೆತಾನು? ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು "ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು" ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಭಗತ್ ಸಿಂಗನ ಅಜ್ಜ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ್ದ. ಸಿಖ್ ಪಂಥದಿಂದ ಹಿಂದೂ ಅಂಶಗಳನ್ನು ಎತ್ತಿ ಒಗೆದಾಗ ಅಲ್ಲೊಂದು ಇಸ್ಲಾಮ್ ಅಥವಾ ಕ್ರೈಸ್ತದ ಪಡಿಯಚ್ಚು ಉಳಿಯಬಹುದಷ್ಟೇ.

ಮೌಲ್ಯಗಳ ಅವಸಾನ ಮತಾಂಧತೆಗೆ ಸೋಪಾನ

 


ಮೌಲ್ಯಗಳ ಅವಸಾನ ಮತಾಂಧತೆಗೆ ಸೋಪಾನ


ಜನವರಿ ಮಧ್ಯಭಾಗದಲ್ಲಿ ಮಧ್ಯಪ್ರದೇಶವು ಅನಿರೀಕ್ಷಿತ ಮತೀಯ ಘರ್ಷಣೆಗೆ ಸಾಕ್ಷಿಯಾಯಿತು. ಪಂಜಾಬಿನ ನಿಹಾಂಗ್(ನೀಲಿ ನಿಲುವಂಗಿಯ, ಖಡ್ಗ, ಈಟಿ ಹಿಡಿದ, ಪೇಟ ಧರಿಸಿದ ಸಿಖ್ ಪಡೆ)ಗಳು ಸಿಂಧಿ ಟಿಕಾನೋ, ಮನೆಗಳಿಗೆ ನುಗ್ಗಿ ಸಿಖ್ಖರ "ರಿಹತ್ ಮರ್ಯಾದಾ"(ಸಿಖ್‍ ಜೀವನಪದ್ದತಿಯ ನಿಯಮ & ಸಂಪ್ರದಾಯಗಳು)ಕ್ಕೆ ವಿರುದ್ಧವಾಗಿ "ಗುರುಗ್ರಂಥ ಸಾಹಿಬ್" ಅನ್ನು ಇಡುವುದರ ಕುರಿತು ಗದ್ದಲವೆಬ್ಬಿಸಿದರು. ಸಮಸ್ಯೆಯ ಪರಿಹಾರಕ್ಕಾಗಿ ಇಂದೋರ್ ಸಿಂಗ್ ಸಭಾ ಮಧ್ಯಪ್ರವೇಶಿಕೆಯ ಪ್ರಯತ್ನವೂ ವಿಫಲವಾಯಿತು. ಈ ಘಟನೆಯಿಂದ ನೊಂದ ಸಿಂಧಿಗಳು ಸಂತ ಸಮಾಜದ ನಿರ್ದೇಶನದೊಂದಿಗೆ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಲು ತಮ್ಮೊಳಗೇ ನಿರ್ಧರಿಸಿದರು. ಜೊತೆಗೆ ಶ್ರೀಮದ್ಭಗವದ್ಗೀತೆ ಹಾಗೂ ರಾಮಾಯಣದ ಪ್ರತಿಗಳನ್ನು ಇಂದೋರ್‌ನಲ್ಲಿರುವ ಟಿಕಾನೋದಲ್ಲಿ ಇಡಬೇಕೆಂದು ನಿರ್ಧರಿಸಿದರು. ಅಕಾಲ್ ತಖ್ತ್ ಮತ್ತು ಸಿಂಧಿ ಸಮುದಾಯದ ಪ್ರತಿನಿಧಿಗಳ ನಡುವೆ ಈ ವಿಷಯದ ಬಗ್ಗೆ ಸಭೆ ನಡೆಯಿತಾದರೂ ಅಜ್ಮೀರ್, ರಾಜಸ್ಥಾನಗಳಲ್ಲಿನ ಸಿಂಧಿಗಳೂ ಕೂಡಾ ಇದಕ್ಕೆ ದನಿಗೂಡಿಸಿ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಿದರು. 


ಸಿಂಧಿಗಳ ಈ ನಿರ್ಧಾರ ಕೇವಲ ಒಂದು ವಾರದಿಂದ ನಿಹಾಂಗ್'ಗಳು ಎಬ್ಬಿಸಿದ ಗದ್ದಲದಿಂದ ಉಂಟಾದುದಲ್ಲ. ಕೆಲವು ಸಿಖ್ ಮತಾಂಧರು ನಿಯಮಿತವಾಗಿ ಸಿಂಧಿ ದೇವಾಲಯಗಳಿಗೆ ಪ್ರವೇಶಿಸಿ ಅವರ ಸಂಪ್ರದಾಯಗಳನ್ನು ನಿಂದಿಸುತ್ತಾ, ಕತ್ತಿಗಳನ್ನು ಝಳಪಿಸುತ್ತಾ ಅವರನ್ನು 'ಪಾಖಂಡಿ'ಗಳೆಂದು ಕರೆಯುತ್ತಿದ್ದುದನ್ನು ಕಂಡು ಸಿಂಧಿ ಸಮುದಾಯ ರೋಸಿ ಹೋಗಿತ್ತು. ಅದರಲ್ಲೂ ಕಿರುಕುಳ ನೀಡಿದ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ನಿಹಾಂಗ್'ಗಳ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮಕೈಗೊಳ್ಳಲಿಲ್ಲ. ಯಾರ ಬೆಂಬಲದಿಂದ ಸಿಂಧಿ ಸಮಾಜಕ್ಕೆ ಸಹಾಯವಾಗಬಹುದಿತ್ತೋ, ಅಂತಹಾ ಸಿಂಧಿ ಸಮುದಾಯಕ್ಕೆ ಸೇರಿದ ಇಂದೋರ್‌ನ ಸಂಸದ ಶಂಕರ್ ಲಾಲ್ವಾನಿಯ ಪತ್ತೆಯೇ ಇರಲಿಲ್ಲ!


ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(SGPC)ಯಂತೂ ನಿಹಾಂಗ್'ಗಳ ಮತಾಂಧ ಕೃತ್ಯವನ್ನು ಬೆಂಬಲಿಸುವುದಿಲ್ಲವೆಂಬ ಹೇಳಿಕೆ ನೀಡುತ್ತಲೇ ತನ್ನ ಕಾರ್ಯಸೂಚಿಯನ್ನು ಸಾಧಿಸಲು ಯತ್ನಿಸುತ್ತಲೇ ಇದೆ. ಇಲ್ಲವಾದಲ್ಲಿ ಹಿಂದೂ ಸಂಪ್ರದಾಯವನ್ನು ಅನುಸರಿಸುವ ಸಿಂಧಿಗಳನ್ನು "ಸೆಹಜ್‌ಧಾರಿ ಸಿಖ್‌ಗಳು" ಎಂದದು ಕರೆಯುತ್ತಿರಲಿಲ್ಲ. ಎಸ್.ಜಿ.ಪಿ.ಸಿಯ ಆಶಯದಂತೆ ಜುಲೇಲಾಲ್ ಜಿ ಮತ್ತು ಇತರ ದೇವತೆಗಳ ವಿಗ್ರಹಗಳನ್ನು ತೆಗೆದುಹಾಕಿ ತಮ್ಮ ದೇವಾಲಯಗಳನ್ನು ಗುರುದ್ವಾರಗಳಾಗಿ "ಪರಿವರ್ತಿಸಲು" ಭಾರತಾದ್ಯಂತ ಸಿಂಧಿಗಳು ನಿರಾಕರಿಸಿದ್ದಂತೂ ಎಸ್.ಜಿ.ಪಿ.ಸಿಗೆ ಮತ್ತಷ್ಟು ಮುಜುಗರವನ್ನು ಉಂಟುಮಾಡಿತು. ಅದರ ಇತ್ತೀಚಿನ ಹೇಳಿಕೆಯಲ್ಲಿ, ಎಸ್.ಜಿ.ಪಿ.ಸಿಯ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ, ನಿಹಾಂಗ್ ಗುಂಪುಗಳ ಕ್ರಮಗಳಿಂದ ತಮ್ಮ ಸಮಿತಿಯನ್ನು ದೂರವಿರಿಸಿಕೊಂಡರು. ಆದರೆ ರೆಹತ್ ಮರ್ಯಾದಾ ಅತ್ಯಗತ್ಯವಾಗಿದ್ದರೂ, "ಸೆಹಜ್‌ಧಾರಿ" ಸಿಖ್ಖರನ್ನು ಒಗ್ಗೂಡಿಸಬೇಕಾಗಿದೆ ಮತ್ತು ಸಿಖ್ ನಂಬಿಕೆಯಿಂದ ಅವರನ್ನು ದೂರ ತಳ್ಳಬಾರದು ಎನ್ನುತ್ತಾ ಬೆಣ್ಣೆಯಲ್ಲಿ ಕೂದಲೆಳೆದಂತೆ ತಮ್ಮ ಉದ್ದೇಶವನ್ನೂ ಸ್ಪಷ್ಟಪಡಿಸಿದರು!


ಸಿಂಧಿಗಳು ಮೂಲತಃ ಉದಾಸೀ ಹಿಂದೂಗಳ ಸಂಪ್ರದಾಯಗಳನ್ನು ಪಾಲಿಸುವ ಹಿಂದೂ ಪಂಗಡ. ಉದಾಸೀ ಎಂಬುದು ಉತ್ತರ ಭಾರತದ ಕಡೆ ಕಂಡುಬರುತ್ತಿದ್ದ ಹಿಂದೂ ಸಾಧುಗಳ ಒಂದು ಗುಂಪು. ಹದಿನೆಂಟನೇ ಶತಮಾನದ ವೇಳೆಗೆ ಉದಾಸೀಗಳು ಸಿಖ್ ಪವಿತ್ರಸ್ಥಳಗಳ ಮೇಲ್ವಿಚಾರಣೆಗಳನ್ನು ನೋಡಿಕೊಳ್ಳುತ್ತಾ ಸಿಖ್ ತತ್ವಗಳನ್ನು ನಿರ್ಧರಿಸುವ ಹಾಗೂ ಪ್ರಚಾರ ಮಾಡುವ ಮಹತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಆದಾಗ್ಯೂ ಅವರ ಮೂಲಸಂಪ್ರದಾಯ ಸಮುದಾಯದಲ್ಲಿ ಉಳಿದು ಬಂತು. ಅದೇ ಸಂಪ್ರದಾಯವನ್ನು ಅನುಸರಿಸುವ ಸಿಂಧಿಗಳ ಮೂಲವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಂದಿಗೂ ನೋಡಬಹುದು. ಶಿಕಾರ್ಪುರದ ಖತ್ವಾರಿ ದರ್ಬಾರ್ ಹಾಗೂ ಸುಕ್ಕೂರಿನಲ್ಲಿ ಸಿಂಧೂ ನದಿಯ ಮಧ್ಯದಲ್ಲಿರುವ ಸಾದ್ ಬೆಲೋ ನದಿ ದ್ವೀಪದಲ್ಲಿ ಈ ಸಂಪ್ರದಾಯವನ್ನು ವಿಶೇಷವಾಗಿ ಕಾಣಬಹುದು. ಹೀಗಿದ್ದಾಗ್ಯೂ ಎಸ್.ಜಿ.ಪಿ.ಸಿ ಇವರನ್ನು 'ಸೆಹಜ್‌ಧಾರಿ ಸಿಖ್‌ಗಳು' ಎಂದು ಕರೆಯಲು ಏನು ಕಾರಣ? ಇದು ಅರ್ಥವಾಗಬೇಕಾದರೆ ನಾವು ಎಸ್.ಜಿ.ಪಿ.ಸಿಯ ರಚನೆಯ ಹಿಂದಿನ ಉದ್ದೇಶವನ್ನು ಅರಿಯಬೇಕು.


ಸಿಖ್ ಮತವನ್ನು ಹಿಂದೂ ಧರ್ಮದ ಯಾವುದೇ 'ಕುರುಹುಗಳಿಂದ' ಬೇರ್ಪಡಿಸುವ ದಶಕಗಳ ಪ್ರಯತ್ನದ ಫಲಿತಾಂಶವೇ ಎಸ್.ಜಿ.ಪಿ.ಸಿಯ ರಚನೆ! ವ್ಯಕ್ತಿಯೊಬ್ಬ ಮತವೊಂದನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸೆಹಜ್ದಾರಿ ಸಿಖ್ಖರ ವ್ಯಾಖ್ಯಾನವನ್ನು ಮೊದಲ ಬಾರಿಗೆ ಮೂಲ ಕಾಯಿದೆ(1925ರ ಕಾಯಿದೆ)ಗೆ ಸೇರಿಸಿದ್ದು 1944 ರಲ್ಲಿ, ಬ್ರಿಟಿಷ್ ಆಳ್ವಿಕೆಯಲ್ಲಿ. ಸಿಖ್  ಕುಟುಂಬಕ್ಕೆ ಸೇರದ, ಸಿಖ್ ಚಿಹ್ನೆಗಳನ್ನು ಧರಿಸದ ಆದರೆ ಗುರು ಗ್ರಂಥ ಸಾಹಿಬ್ ಹಾಗೂ ಸಿಖ್ ಗುರುಗಳಲ್ಲಿ ನಂಬಿಕೆ ಇರುವ ವ್ಯಕ್ತಿಯನ್ನು ಸೆಹಜ್ದಾರಿ ಎಂದು ಪರಿಚಯಿಸಿದ ಈ ಕಾಯಿದೆ ಸಿಖ್ ಆಡಳಿತ ಮಂಡಳಿಗಳ ಚುನಾವಣೆಗಳಲ್ಲಿ ಮತದಾನಕ್ಕೆ ಆತನಿಗೆ ಅವಕಾಶ ಕಲ್ಪಿಸಿತ್ತು. ಆದರೆ 2016ರಲ್ಲಿ ಕೇಂದ್ರ ಸರ್ಕಾರವು ಸಿಖ್ ಗುರುದ್ವಾರಗಳ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು ಸಿಂಧಿಗಳಿಗೆ ದುರಂತವಾಗಿ ಪರಿಣಮಿಸಿತು. ಇದರಿಂದಾಗಿ ಕಾಯಿದೆಯ ಅನ್ವಯದ ಪ್ರದೇಶಗಳಲ್ಲಿ(ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಚಂಡೀಗಢ) ಗುರುದ್ವಾರ ಆಡಳಿತ ಸಮಿತಿಯ ಚುನಾವಣೆಗಳಲ್ಲಿ ಸೆಹಜ್ಧಾರಿ ಸಿಖ್ಖರು ಮತ ಚಲಾಯಿಸುವಂತಿಲ್ಲ. ಈ ತಿದ್ದುಪಡಿಯು ಸುಮಾರು 70 ಲಕ್ಷ ಸದಸ್ಯರನ್ನು ಮತ ಚಲಾಯಿಸದಂತೆ ತಡೆಯಿತು.


ಎಸ್.ಜಿ.ಪಿ.ಸಿಯು ಸಿಖ್ ಯಾರು ಎಂಬುದನ್ನು ವ್ಯಾಖ್ಯಾನಿಸಲು, ಸಿಖ್ ರೆಹತ್ ಮರ್ಯಾದಾದಲ್ಲಿನ ಮಾರ್ಗಸೂಚಿಗಳನ್ನೇ ಅನುಸರಿಸುತ್ತದೆ. ಅದರ ಪ್ರಕಾರ ಯಾವುದೇ ವ್ಯಕ್ತಿ ಈ ಕೆಳಗಿನವುಗಳಲ್ಲಿ ನಂಬಿಕೆಯಿಟ್ಟಿದ್ದರೆ ಆತ ಸಿಖ್.


1. ಒಂದು ಅಮರ ಜೀವಿ.


2. ಗುರು ನಾನಕರಿಂದ ಗುರು ಗೋವಿಂದ ಸಿಂಗ್‌ವರೆಗಿನ ಹತ್ತು ಗುರುಗಳು.


3. ಗುರುಗ್ರಂಥ ಸಾಹಿಬ್.


4. ಹತ್ತು ಗುರುಗಳ ವಚನ ಹಾಗೂ ಬೋಧನೆಗಳು.


5. ಹತ್ತನೇ ಗುರುವಿನಿಂದ ನೀಡಲ್ಪಟ್ಟ ದೀಕ್ಷಾ ನಿಯಮಗಳು, ಮತ್ತು ಬೇರೆ ಯಾವುದೇ ಮತಕ್ಕೆ ನಿಷ್ಠೆ ಹೊಂದಿಲ್ಲದದಿರುವುದು.


"ಸೆಹಜ್ ಧಾರಿ" ಪದದ ಆರಂಭಿಕ ಉಲ್ಲೇಖ ಸಿಗುವುದು ಖಾಲ್ಸಾ ದಿವಾನ್‌ನ ಆದೇಶದ ಮೇರೆಗೆ 1907ರಲ್ಲಿ ಅಂಗೀಕರಿಸಿದ ಆನಂದ್ ವಿವಾಹ ಕಾಯಿದೆ(ಸಿಖ್ ವಿವಾಹ ಕಾಯಿದೆ)ಯಲ್ಲಿ. ಈ ಮಸೂದೆಯ ಮೇಲಿನ ಚರ್ಚೆಯ ಸಮಯದಲ್ಲಿ ಪಂಜಾಬ್ ಶಾಸನ ಸಭೆಯಲ್ಲಿ ವಿಶೇಷವಾಗಿ 'ಸಿಖ್' ವ್ಯಾಖ್ಯಾನದ ಮೇಲೆ ಬಲವಾದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಸೆಹಜ್‌ಧಾರಿಗಳು, ಕೇಶಧಾರಿಗಳು ಮತ್ತು ಯಾರೆಲ್ಲಾ ಶ್ರೀ ಗುರುಗ್ರಂಥ ಸಾಹಿಬ್‌ನ ಬೋಧನೆಗಳನ್ನು ನಂಬುತ್ತಾರೋ ಅವರೆಲ್ಲರನ್ನೂ ಸಿಖ್ ಮತದಲ್ಲಿ ಈ ಮಸೂದೆಯು ಸೇರಿಸುತ್ತದೆ ಎಂದು ಸರ್ಕಾರವು ಬಲವಂತವಾಗಿ ಸದನದಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕಾಯಿತು. ಈ ಕಾಯಿದೆಯ ಅನುಷ್ಠಾನಕ್ಕೆ ನಿಜವಾಗಿ ಸಿಖ್ ಹಾಗೂ ಬ್ರಿಟಿಷರ ನಡುವಿನ ಸಂಬಂಧವೇ ಮುಖ್ಯವಾಗಿತ್ತು. ಬ್ರಿಟಿಷರಿಗೆ ಎರಡು ಕಾರಣಕ್ಕೆ ಇದರ ಅಗತ್ಯವಿತ್ತು. ಒಂದು ತನ್ನ ಸಮರ ಜನಾಂಗದ ಸಿದ್ಧಾಂತವನ್ನು ಶಾಶ್ವತಗೊಳಿಸಲು ಮತ್ತು ಸಿಖ್ಖರ ನಿರ್ದಿಷ್ಟ ಜಾತಿಗಳಿಂದಷ್ಟೇ ಸೈನ್ಯಕ್ಕೆ ನೇಮಕಗೊಳಿಸಿಕೊಳ್ಳಲು; ಇನ್ನೊಂದು ಸುಧಾರಣೆಯ ರೂಪದಲ್ಲಿ ಸಿಖ್ಖರಿಗೆ ಚುನಾವಣೆಗಳಲ್ಲಿ ಕೋಮು ಆಧಾರಿತ ಪ್ರಾತಿನಿಧ್ಯ ಕೊಡುವ ರೂಪದಲ್ಲಿ ಮಹಾಯುದ್ಧದ ಬಳಿಕವಷ್ಟೇ ಬೆಳಕಿಗೆ ಬಂತು; ಇದನ್ನು ಮುನ್ನಡೆಸಿದ್ದು ಖಾಲ್ಸಾ ದಿವಾನ್ ಮತ್ತು ಎಸ್.ಜಿ.ಪಿ.ಸಿ. ಹೀಗೆ ತಮ್ಮ ಒಡೆದಾಳುವ ಕುಟಿಲ ಬಾಣದ ಮೂಲಕ ಬ್ರಿಟಿಷರು ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆದಿದ್ದರು.


ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.


ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಈಗ ಎಸ್.ಜಿ.ಪಿ.ಸಿಯಂತಹಾ ಸಂಸ್ಥೆಗಳಿಂದಾಗಿ ಸಾಮಾನ್ಯ ಸಿಖ್ಖರಲ್ಲೂ ಈ ಮತಾಂಧತೆ ಬೆಳೆಯುವಂತಾಗಿದೆ.


ಆದಾಗ್ಯೂ ಎಸ್.ಜಿ.ಪಿ.ಸಿಯ ರಚನೆಯಲ್ಲಿ ಅಕಾಲಿದಳ ಯಶಸ್ವಿಯಾದ ಬಳಿಕ "ನಿಜವಾದ ಸಿಖ್ಖರು" ಮಾತ್ರ ಸಿಖ್ಖರನ್ನು ನಿಯಂತ್ರಿಸಬೇಕೆಂಬ ಭಾವನೆ ಮೊಳೆದು ಸಮುದಾಯ ವಿಭಜನೆಯತ್ತ ಹೊರಳಿತು. 2003ರಲ್ಲಿ ಶಿರೋಮಣಿ ಅಕಾಲಿದಳ ಕೇಂದ್ರ ಗೃಹ ಸಚಿವಾಲಯದ ಮೇಲೆ ಪ್ರಭಾವ ಬೀರಿ ಸೆಹಜ್ ಧಾರಿಗಳನ್ನು ಹೊರಗಿಡಲು ಯತ್ನಿಸಿತಾದರೂ ನ್ಯಾಯಾಲಯದಲ್ಲಿ ಅದರ ಆಟ ನಡೆಯಲಿಲ್ಲ. ಇದೇ ಎಸ್.ಜಿ.ಪಿ.ಸಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಉತ್ಕರ್ಷದ ಅವಧಿಯಲ್ಲಿ ನಿರಂಕಾರಿ ಸಂತ ಮಿಷನ್ ಅನುಯಾಯಿಗಳು ಸಿಖ್ಖರಲ್ಲ ಎಂದು ಘೋಷಿಸಿತ್ತು! ನಾಮಧಾರಿಗಳ ಪದ್ದತಿಯನ್ನು ಉಗ್ರಗಾಮಿಗಳು ಆಗಾಗ್ಗೆ ಕೆಣಕುವುದರಿಂದ ಎಸ್.ಜಿ.ಪಿ.ಸಿ ವ್ಯವಹಾರಗಳು ಸದಾ ಗೊಂದಲಮಯವೇ. ಆದರೆ 2016ರ ಕಾಯಿದೆಯ ತಿದ್ದುಪಡಿಯ ಬಳಿಕ ಅಕಾಲಿದಳ ಎಸ್.ಜಿ.ಪಿ.ಸಿಯ ಮೇಲಿನ ತನ್ನ ನಿಯಂತ್ರಣವನ್ನು ಭದ್ರಪಡಿಸಲು ಯತ್ನಿಸಿ ಯಶಸ್ವಿಯೂ ಆಯಿತು.

2011ರ ಜನಗಣತಿಯು ಪಂಜಾಬ್‌ನಲ್ಲಿ 14 ಮಿಲಿಯನ್ ಸಿಖ್ಖರ ಅಂಕಿಅಂಶವನ್ನು ನೀಡಿದರೆ, ಎಸ್.ಜಿ.ಪಿ.ಸಿ ಕೇವಲ 5.5 ಮಿಲಿಯನ್ ಜನರು ಕೇಶಧಾರಿ ಅಥವಾ "ನೈಜ" ಸಿಖ್ಖರು ಎಂದಿತು. ಈ ವಿಷಯದಲ್ಲಿ ಈಗಿನ ಎಸ್.ಜಿ.ಪಿ.ಸಿಯ ಅಧ್ಯಕ್ಷ ಇನ್ನೂ ಮುಂದಕ್ಕೆ ಹೋಗಿ "ಎಸ್.ಜಿ.ಪಿ.ಸಿ ತನ್ನ ಚುನಾವಣೆಗಳಿಂದ ಸೆಹಜ್‌ಧಾರಿ ಮತ್ತು ಪತಿತ ಸಿಖ್ಖರನ್ನು ಹೊರಗಿಟ್ಟರೂ, ಅವರಿಂದ ದೇಣಿಗೆಯನ್ನು ಪಡೆಯಲು ತುಂಬಾ ಸಂತೋಷವಾಗುತ್ತದೆ" ಎಂದಿದ್ದರು. ಅದೇ ಎಸ್.ಜಿ.ಪಿ.ಸಿ ಇಂದು ಸೆಹಜಧಾರಿಗಳ ನಂಬಿಕೆಗಳನ್ನು ಗೌರವಿಸುವಂತೆ ಕೇಳುತ್ತಿದೆ. ಆದರೆ ಅದನ್ನು ಮೊದಲು ಎಸ್.ಜಿ.ಪಿ.ಸಿಯೇ ಮಾಡಬೇಕಲ್ಲವೇ?


ಹೇಗೆ ಬ್ರಿಟಿಷರು ಹಿಂದೂಗಳನ್ನು ಒಡೆದಾಳಿದರೋ ಅದೇ ಕೆಲಸವನ್ನು ಇಂದಿನ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಮಾಡುತ್ತಿದ್ದಾರೆ. ಆದರೆ ಅದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಯಾದ ರಾಷ್ಟ್ರ ವಿಭಜನೆ ಅವರ ಗಮನಕ್ಕೆ ಬರುತ್ತಿಲ್ಲ. ಪ್ರಸ್ತುತ ವಿವಾದದಲ್ಲೇ ಎರಡು ಸಮಸ್ಯೆಗಳಿವೆ. ಒಂದು ಕೆಲವೇ ಕೆಲವು ಮತಾಂಧ ಸಿಖ್ಖರ ಮತೀಯವಾದದಿಂದಾಗಿ ಸಿಖ್ ಪರಂಪರೆಯನ್ನು ಗೌರವಿಸುತ್ತಿದ್ದ ಸಿಂಧಿ ಸಮುದಾಯ ಅವರಿಂದ ದೂರ ಸರಿಯುತ್ತಿರುವುದು. ಇನ್ನೊಂದು, ಸಿಖ್ ಪರಂಪರೆ, ವರ್ತಮಾನಗಳಿಂದ ಹಿಂದೂವಾಗಿರುವುದೆಲ್ಲವನ್ನೂ ತ್ಯಜಿಸುವ ಕಾರಣದಿಂದ ಸಿಖ್ ಸಮುದಾಯವೊಂದು ಸೆಮೆಟಿಕ್ ಮತಗಳಂತೆ ಆಗಿ ರಾಷ್ಟ್ರಘಾತುಕವಾಗುವುದು.


ಸಿಖ್ ಮತವು ಹಿಂದೂಗಳಲ್ಲಿ ಕ್ಷಯವಾಗುತ್ತಿದ್ದ ಶೌರ್ಯವನ್ನು ಮತ್ತೆ ಎಬ್ಬಿಸಲು ಶುರುವಾದ ಒಂದು ಧಾರೆ. ಸಿಖ್ ಸಮುದಾಯವು ಹಿಂದೂಗಳಿಂದ ಬೇರೆಯಾದುದೆಂದು ಹಿಂದೂಗಳಿಗೆ ಇಷ್ಟರವರೆಗೆ ಅನಿಸಿಲ್ಲ. ಹಾಗಾಗಿಯೇ ಉದಾಸಿಗಳು, ಸಿಂಧಿಗಳ ಸಹಿತ ಅನೇಕರು ಗುರುಗ್ರಂಥಸಾಹಿಬವನ್ನು ತಮ್ಮ ಮನೆಗಳಲ್ಲಿ, ದೇಗುಲಗಳಲ್ಲಿರಿಸಿ ಪೂಜಿಸಿದ್ದು. ಹಿಂದೂಗಳು ಔರಂಗಜೇಬನ ಉಪಟಳದಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಂಡಾಗ ಔರಂಗಜೇಬನಿಂದ ಬಗೆಬಗೆಯ ಚಿತ್ರಹಿಂಸೆಗೊಳಗಾಗಿ ಹಿಂದೂಗಳಿಗೋಸ್ಕರ ಬಲಿದಾನ ನೀಡಿದ ಗುರು ತೇಜ್ ಬಹಾದ್ದೂರರನ್ನು, ಅವರ ಶಿಷ್ಯರಾದ ಭಾಯಿ ಮತಿದಾಸ, ಭಾಯಿ ದಯಾಳರನ್ನು ಯಾವ ಹಿಂದೂ ಮರೆತಾನು? ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು "ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು" ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಭಗತ್ ಸಿಂಗನ ಅಜ್ಜ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ್ದ. ಸಿಖ್ ಪಂಥದಿಂದ ಹಿಂದೂ ಅಂಶಗಳನ್ನು ಎತ್ತಿ ಒಗೆದಾಗ ಅಲ್ಲೊಂದು ಇಸ್ಲಾಮ್ ಅಥವಾ ಕ್ರೈಸ್ತದ ಪಡಿಯಚ್ಚು ಉಳಿಯಬಹುದಷ್ಟೇ.


ಭಾನುವಾರ, ಜನವರಿ 15, 2023

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ

ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ 


         ಆಗಷ್ಟೇ ನಾನು ಪ್ರೌಢಶಾಲೆಯಿಂದ ಹೊರಬಂದಿದ್ದೆ. ಪರೀಕ್ಷೆಗಳೂ ಮುಗಿದಿದ್ದವು. ರೈಲ್ವೇ ಪ್ಯಾಕೇಜ್ ಟಿಕೇಟಿನಲ್ಲಿ ದಕ್ಷಿಣ ಭಾರತವನ್ನು ಸುತ್ತುತ್ತಿದ್ದೆ. ಒಂದು ದಿನ ರೈಲು ಹಳ್ಳಿಯೊಂದರ ಹತ್ತಿರ ಇನ್ನೇನು ನಿಲ್ಲುತ್ತದೆ ಎನ್ನುವ ವೇಗದಲ್ಲಿ ಚಲಿಸುತ್ತಿದ್ದಾಗ ನಾನಿದ್ದ ಬೋಗಿಯ ಹೆಚ್ಚಿನ ಜನರು ಅತೀವ ಭಕ್ತಿ ಭಾವಗಳಿಂದ ರೈಲಿನ ಕಿಟಕಿಯ ಹೊರಗೆ ಮುಖ ಮಾಡಿ ತಲೆಬಾಗಿ ನಮಸ್ಕರಿಸತೊಡಗಿದರು. ಅಲ್ಲೊಂದು ಭವ್ಯವಾದ ಆಲಯವಿತ್ತು. ಜನರ ನಡುವಿನ ಸಂಭಾಷಣೆಯಿಂದ ಅದು ತಿರುವಣ್ಣಾಮಲೈನ ಅರುಣಾಚಲೇಶ್ವರ ದೇವಾಲಯವೆಂದು ತಿಳಿಯಿತು. 

         ಅಲ್ಲಿಂದ ಮುಂದೆ ನನ್ನ ಸಹಪ್ರಯಾಣಿಕರ ಮಾತು ರಮಣ ಮಹರ್ಷಿಗಳತ್ತ ತಿರುಗಿತು. "ಮಹರ್ಷಿ" ಎನ್ನುವ ಪದ ನನ್ನ ಮನಸ್ಸನ್ನು ಹಿಡಿದಿಟ್ಟು ಪ್ರಾಚೀನ ಕಾಲದಲ್ಲಿ ಅರಣ್ಯವಾಸಿಗಳಾಗಿ ತಪೋನಿರತರಾಗಿ ಅನೇಕ ಅಲೌಕಿಕ ಸಾಧನೆಗೈದ ದೈವೀಸ್ವರೂಪೀ ಋಷಿ ಮುನಿಗಳನ್ನು ನೆನಪಿಸಿತು. ಅಲ್ಲದೇ ಮನಸ್ಸಿನ ಆ ಚಿಂತನಾ ಲಹರಿಯು ಆ ಸಮಯದಲ್ಲಿ ನಾಸ್ತಿಕನಾಗಿದ್ದರೂ ನನ್ನನ್ನು ಮಹರ್ಷಿಗಳ ಆಶ್ರಮದತ್ತ ಎಳೆದೊಯ್ಯಿತು. 
    
         ಆಶ್ರಮ ತಲುಪಿದಾಗ ಮಹರ್ಷಿಗಳು ಚಾವಡಿಯಲ್ಲಿರುವರೆಂದೂ ಯಾರು ಬೇಕಾದರೂ ಅವರನ್ನು ಭೇಟಿಯಾಗಲು ಮುಕ್ತರು ಎನ್ನುವ ಮಾಹಿತಿ ಸಿಕ್ಕಿತು. ನಾನು ಒಳಹೊಕ್ಕುತ್ತಿದ್ದಂತೆ ಕಂಡಿದ್ದು ಸೊಂಟಕ್ಕೊಂದು ವಸ್ತ್ರ ಸುತ್ತಿಕೊಂಡು ದಿಂಬಿಗೆ ಒರಗಿ ಕೂತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು. ನಾನು ಅಲ್ಲೇ ಮಂಚದ ಕೆಳಗೆ ಅವರ ಸನಿಹಕ್ಕೆ ಕೂತೆ. ಮಹರ್ಷಿಗಳು ತಕ್ಷಣ ಕಣ್ಣು ತೆರೆದು ನನ್ನ ಕಣ್ಣುಗಳನ್ನು ನೇರವಾಗಿ ದಿಟ್ಟಿಸಿದರು. ನಾನು ಅವರ ಕಣ್ಣುಗಳನ್ನು ದಿಟ್ಟಿಸಿದೆ. ಮಹರ್ಷಿಗಳು ಆ ಕ್ಷಣದಲ್ಲಿ ನನ್ನ "ಒಳಗಿನ" ಎಲ್ಲವನ್ನೂ :- ನನ್ನ ಗಾಢವಿಲ್ಲದ ಚಿಂತನೆಗಳು, ಗೊಂದಲಗಳು, ಅಪನಂಬಿಕೆಗಳು, ಅಪೂರ್ಣತೆ ಹಾಗೂ ಭಯ ಎಲ್ಲವನ್ನೂ ಬಗೆದು ನೋಡಿದರೆಂಬ ಭಾವನೆ ನನಗುಂಟಾಯಿತು. ಆ ಕ್ಷಣದಲ್ಲಿ ನನಗೆ ಏನಾಯಿತು ಎನ್ನುವುದನ್ನು ವರ್ಣಿಸಲು ನಾನು ಅಸಮರ್ಥ. ನಾನು ತೆರೆದಿಟ್ಟಂತೆ, ಪವಿತ್ರಗೊಂಡಂತೆ, ಸ್ವಸ್ಥನಾದಂತೆ, ಖಾಲಿಯಾದಂತೆ ನನಗನಿಸಿತು. ಸುಂಟರಗಾಳಿಯಂತಹಾ ಸಂದೇಹಗಳು, ನನ್ನ ನಾಸ್ತಿಕತೆ ಕರಗಿ ಹೋದಂತೆ, ನನ್ನ ಸಂದೇಹವಾದವು ಪ್ರಶ್ನೆಗಳು, ಅಚ್ಚರಿ ಹಾಗೂ ಹುಡುಕಾಟದ ಪ್ರವಾಹವಾಗಿ ಬದಲಾಯಿತು. ನನ್ನದೇ ಕಾರಣಗಳು ನನಗೆ ಧೈರ್ಯವನ್ನು ಕೊಟ್ಟವು ಹಾಗೂ ನಾನು ನನಗೇ ಹೇಳಿಕೊಂಡೆ - "ಇವೆಲ್ಲವೂ ಆಕರ್ಷಣೆ ಹಾಗೂ ನನ್ನದೇ ಮೂರ್ಖತನ". ಹೀಗೆ ಹೇಳುತ್ತಾ ನಾನು ಅಲ್ಲಿಂದ ಎದ್ದು ಹೊರಟೆ. 

         ಆದರೆ ಹೀಗೆ ಮಹರ್ಷಿಗಳಿದ್ದ ಚಾವಡಿಯಿಂದ ಎದ್ದು ಹೋದ ಹುಡುಗ ಹತ್ತು ನಿಮಿಷದ ಹಿಂದೆ ಚಾವಡಿಗೆ ಪ್ರವೇಶವಾಗುವ ತನಕ ಇದ್ದ ಹುಡುಗಂತಿರಲಿಲ್ಲ. ನನ್ನ ಕಾಲೇಜು ದಿನಗಳ ಬಳಿಕ, ನನ್ನ ರಾಜಕಾರಣದ ಕೆಲಸಗಳ ಬಳಿಕ ಹಾಗೂ ಉತ್ತರಕಾಶಿಯಲ್ಲಿ ನನ್ನ ಗುರುಗಳ ಪಾದದಡಿಯಲ್ಲಿ ತಪೋವನದಲ್ಲಿ ಹಲವು ವರ್ಷಗಳು ಕಳೆದ ಬಳಿಕ ನನಗೆ ಅರಿವಾದದ್ದೇನೆಂದರೆ ಗಂಗೆಯ ತಟದಲ್ಲಿ ನಾನು ಗಳಿಸಿದ್ದು ಹಲವು ವರ್ಷಗಳ ಹಿಂದೆ ನನಗೆ ಆ ಬಿರುಬೇಸಗೆಯ ದಿನದಂದು ತಿರುವಣ್ಣಾಮಲೈಯ ಆ ಮುನಿಪೋತ್ತಮ ಕರುಣಿಸಿದ್ದೇ ಆಗಿತ್ತು ಎಂಬುದು. ಶ್ರೀರಮಣರು ತರ್ಕದ ವಿಚಾರವಲ್ಲ; ಅವರೊಂದು ಅನುಭವ; ಅವರೊಂದು ಮೇರು ಪ್ರಜ್ಞೆ. ಅವರು ಆತ್ಯಂತಿಕ ಸತ್ಯ ಮತ್ತು ಜಗತ್ತಿನ ಎಲ್ಲಾ ಆಧ್ಯಾತ್ಮಿಕ ಗ್ರಂಥಗಳ ಸಾರ. ಭವಬಂಧನವನ್ನು ಪರಿಪೂರ್ಣವಾಗಿ ಕಳಕೊಂಡ ಓರ್ವ ಗುರು ಹೇಗಿರುತ್ತಾನೆ ಎಂಬುದರ ಪ್ರತ್ಯಕ್ಷ ದ್ಯೋತಕ ಅವರು. ಬಂಧನಗಳನ್ನು ಕಳೆದುಕೊಂಡ ಸ್ಥಿತಿಯಲ್ಲೂ ಅವರು ಜೀವಿಸಿದ್ದು ಅನಂತದ ಸೌಂದರ್ಯ ಮತ್ತು ಪಾವಿತ್ರ್ಯತೆಯಂತೆ. - ಇದು ಚಿನ್ಮಯ ಮಿಷನ್ನಿನ ಅಧ್ವರ್ಯು ಸ್ವಾಮಿ ಚಿನ್ಮಯಾನಂದರು ವರ್ಣಿಸಿದ ಅವರ ಅನುಭವ. 

         ಈ ಅನುಭವ ಇಂದು ನಿನ್ನೆಯದಲ್ಲ; ಚಿನ್ಮಯಾನಂದರದ್ದು ಮಾತ್ರವಲ್ಲ. ಸನಕ ಸನಂದಾದಿಗಳು ದಕ್ಷಿಣಾಮೂರ್ತಿಯ ಪದಕಮಲದಡಿಯಲ್ಲಿ ಪಡೆದುದು ಇದೇ ಅನುಭವ. ಯುಗಯುಗಗಳ ಬ್ರಹ್ಮರ್ಷಿಗಳ ಸಾನಿಧ್ಯದಲ್ಲಿ ಭಕ್ತರು ಪಡೆದದ್ದೂ ಇದೇ ಅನುಭವ. ಜಗದ್ಗುರು ಆದಿಶಂಕರಾಚಾರ್ಯರು ಅಖಂಡ ಭಾರತಕ್ಕೆ ಕೊಟ್ಟುದುದು ಇದೇ ಅನುಭವ. ಸ್ವಾಮಿ ಅಣ್ಣಪ್ಪಯ್ಯರು, ಶ್ರೀ ಸದಾಶಿವ ಬ್ರಹ್ಮೇಂದ್ರರು, ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು, ಶ್ರೀಧರ ಸ್ವಾಮಿಗಳಾದಿಯಾಗಿ ಎಲ್ಲಾ ಅವಧೂತರು ಪಾಮರರಿಗೆ ಕರುಣಿಸಿದ್ದು ಇದೇ ಅನುಭವ. ಮತ್ತದು ಇಂದಿಗೂ ಪ್ರವಹಿಸುತ್ತಿರುವುದು. ಮತ್ತು ಈ ಅನುಭವವನ್ನು ಪಡೆದುಕೊಳ್ಳಲು ಇರುವ ಸರಿಯಾದ ಮಾರ್ಗವೇ ಸನಾತನ ಧರ್ಮದ ಪಾಲನೆ. ಹಾಗೂ ಅಂತಹಾ ಸನಾತನ ಧರ್ಮವನ್ನು ಅನುಸರಿಸುವಾತನೇ ಹಿಂದೂ. ಹಾಗೆ ಅನುಸರಿಸುವ ಕಾರಣಕ್ಕೇ ಇಲ್ಲಿ ವೇದಗಳೆಂಬ ಅತ್ಯುನ್ನತ ಸಾಹಿತ್ಯ ಸ್ಫುರಿಸಿತು. ಉಪನಿಷತ್ತುಗಳ ಧಾರೆಗಳು ಧುಮ್ಮಿಕ್ಕಿದವು. 

         ಇವತ್ತು ಹಿಂದೂ ಶಬ್ಧ ಹಿಂದೆ ಇರಲಿಲ್ಲ; ಪರ್ಷಿಯನ್ನರ ಕೊಡುಗೆ; ಅರಬ್ಬರ ಕೊಡುಗೆ; ಅವಾಚ್ಯ ಶಬ್ಧ ಎಂದೆಲ್ಲಾ ಊಳಿಡುವವರು ಇದನ್ನು ಗಮನಿಸಬೇಕು. ಬರಿಯ ಶಬ್ಧಾರ್ಥಗಳು, ಶಬ್ಧೋತ್ಪತ್ತಿಗಳು ಯಾವುದೇ ಜನಾಂಗವನ್ನು ವರ್ಣಿಸಲಾರವು. ಜನಾಂಗವೊಂದನ್ನು ವರ್ಣಿಸುವುದು ಅದು ಪಾಲಿಸುವ ಧರ್ಮವನ್ನು ಆಧರಿಸಿ. ಇಲ್ಲಿ ಧರ್ಮವೆಂದರೆ ಮತವಲ್ಲ.
 
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ | 
 ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ || 
ಋಗ್ವೇದ ೧-೧೬೪-೨೭ || 

 ಈ ಮಂತ್ರದ ಸಾರಾಂಶ ರೂಪೀ ಸೂತ್ರವೇ ಆದ್ಯಕ್ಷರ ಸಂಯೋಗದಿಂದ ಉಂಟಾಗುವ “ಹಿಂದು” ಎಂಬ ಶಬ್ದ. ಮೂಲ ಪ್ರಕೃತಿಯನ್ನು ಆಧರಿಸಿದ, ಆದರಿಸಿದ ಜೀವನಕ್ರಮವನ್ನು ಅಳವಡಿಸಿಕೊಂಡು, ಉತ್ತಮ ವಿಚಾರಧಾರೆಯೊಂದಿಗೆ ನಿತ್ಯ ನಿರಂತರ ವರ್ಧಿಸುತ್ತಾ ಮಾತೄ ಸ್ವರೂಪವೆಲ್ಲವನ್ನೂ ಗೌರವಿಸುತ್ತಾ ವೇದ ಹೇಳಿದ ಅನಂತತೆಯೆಡೆಗೆ ಸಾಗುವವನೇ ಹಿಂದೂ. ಬಳಿಕ ಹಿಂದೂ ಪದಕ್ಕೆ ಪುರಾಣಗಳು ವ್ಯಕ್ತಿಗಳು ಆಧ್ಯಾತ್ಮಿಕವಾಗಿ, ಭೌಗೋಳಿಕವಾಗಿ, ಕಾಲದ ದೃಷ್ಟಿಯಿಂದ, ಜನಾಂಗದ ಉಳಿವಿನ ದೃಷ್ಟಿಯಿಂದ ತಮ್ಮದೇ ವ್ಯಾಖ್ಯೆಯನ್ನು ನೀಡುತ್ತಾ ಬಂದರು. ದಾಶರಾಜ್ಞ ಯುದ್ಧದ ಬಳಿಕ ಇಲ್ಲಿಂದ ವಲಸೆ ಹೋದವರ ಬಾಯಲ್ಲಿ ಸಿಂಧೂ ಎಂಬುದು ಅಪಭ್ರಂಶವಾಗಿ ಹಿಂದೂ ಆಯಿತು. ಸಪ್ತಸಿಂಧುವೆನಿಸಿದ ಈ ರಾಷ್ಟ್ರ ಜರತೂಷ್ಟ್ರರ ಪವಿತ್ರಗ್ರಂಥ ಜೆಂದ್ ಅವೆಸ್ಥಾದಲ್ಲಿ ಹಪ್ತಹಿಂದೂ ಆಯಿತು. ಮತ್ತದೇ ಸಾರ್ವತ್ರಿಕವಾಯಿತು. ಆ ರೀತಿಯಲ್ಲೂ ಮೂಲ ಹೆಸರೇ ಉಳಿಯಿತು. ಪರ್ಷಿಯನ್ನರು, ಗ್ರೀಕರು, ಅರ್ಮೇನಿಯರ ಗ್ರಂಥಗಳಲ್ಲಿ ಹಿಂದೂ ಪದ ಕಾಣಸಿಗುತ್ತದೆ. 

     ಹಿಮಾಲಯ ಸಮಾರಭ್ಯಂ ಯಾವದಿಂದು ಸರೋವರಂ 
ತಮ್ ದೇವನಿರ್ಮಿತಂ ದೇಶಂ ಹಿಂದೂಸ್ಥಾನಂ ಪ್ರಚಕ್ಷತೇ|| 

 ಹಿಮಾಲಯದಿಂದ ಆರಂಭಿಸಿ ಸಾಗರದವರೆಗೆ ವಿಶಾಲವಾಗಿ ಹರಡಿಕೊಂಡಿರುವ ಭೂಭಾಗವನ್ನೇ ಹಿಂದೂಸ್ಥಾನವೆಂತಲೂ, ಇಲ್ಲಿರುವ ಜನರೇ ಹಿಂದೂಗಳೆಂತಲೂ ನಾವು ಪುರಾಣ ಕಾಲದಲ್ಲಿ ಒಪ್ಪಿಕೊಂಡಿದ್ದೆವು. ಅಷ್ಟೇ ಅಲ್ಲ, ಹಿಂದೂ ಪದಕ್ಕೆ ಲಕ್ಷಣವನ್ನು ವಿವರಿಸುತ್ತಾ, 
ಓಂಕಾರ ಮೂಲಮಂತ್ರಾಢ್ಯಃ ಪುನರ್ಜನ್ಮ ದೃಢಾಶ್ರಯಃ 
ಗೋಭಕ್ತಃ ಭಾರತ ಗುರುಃ ಹಿಂದುಃ ಹಿಂಸ ನ ದೂಷಕಃ|| 
ಎಂದು ಹೇಳಲಾಗಿದೆ. ಓಂಕಾರವನ್ನು ಮೂಲಮಂತ್ರವೆಂದು ಭಾವಿಸುವವನೂ, ಪುನರ್ಜನ್ಮವನ್ನು ದೃಢವಾಗಿ ನಂಬುವವನೂ, ಭಾರತವನ್ನು ಗುರುವೆಂದು ಒಪ್ಪಿಕೊಂಡವನೂ, ಗೋಭಕ್ತನೂ ಆದ ಅಹಿಂಸಾ ನಿಷ್ಠನೇ ಹಿಂದೂ ಎಂದಿದೆ. ಮೇರುತಂತ್ರವು, 
ಹೀನಂ ಚ ದೂಷಯಂತ್ಯೇವ ಹಿಂದುರಿತ್ಯುಚ್ಚತೇ 
- ದುಷ್ಟರನ್ನು ಶಿಕ್ಷಿಸುವವ ಹಿಂದೂ ಎಂದಿದೆ. ಇದೆಲ್ಲವನ್ನು ಗಮನಿಸಿ‌ಯೇ ವೀರ ಸಾವರ್ಕರ್ 
ಆಸಿಂಧು ಸಿಂಧು ಪರ್ಯಂತಾ ಯಸ್ಯ ಭಾರತ ಭೂಮಿಕಾ 
ಪಿತೃಭೂಃ ಪುಣ್ಯಭೂಶ್ಚೈವ ಸವೈ ಹಿಂದೂರಿತಿ ಸ್ಮೃತಃ|| 
- ಭಾರತವನ್ನು ತನ್ನ ಪಿತೃಭೂಮಿಯೆಂದು ಪುಣ್ಯಭೂಮಿಯೆಂದು ಭಾವಿಸುವ ಸಿಂಧೂವಿನಿಂದ ರತ್ನಾಕರದವರೆಗೆ ಹರಡಿರುವಾತನೇ ಹಿಂದೂ ಎಂಬ ವ್ಯಾಖ್ಯೆ ನೀಡಿದರು.

ಅರವಿಂದ ಅರಳಿದಾಗ ಕಂಡ ಭಾರತದ ಮರುಹುಟ್ಟು

ಅರವಿಂದ ಅರಳಿದಾಗ ಕಂಡ ಭಾರತದ ಮರುಹುಟ್ಟು


    "ರಾಷ್ಟ್ರವೆಂದರೆ ಭೂಮಿಯ ತುಣುಕಲ್ಲ; ಭಾಷಾಲಂಕಾರವಲ್ಲ; ಮನಸ್ಸಿನ ಕಲ್ಪನೆಯೂ ಅಲ್ಲ. ಅದೊಂದು ಪ್ರಬಲ ಶಕ್ತಿ. ಅದು ಕೋಟ್ಯಾಂತರ ದೇವತೆಗಳು ಒಂದು ಶಕ್ತಿ ಸಮೂಹವಾಗಿ ಏಕತ್ರವಾಗಿ ಭವಾನಿಯು ಎದ್ದು ಬಂದಂತೆ! ತಾಯಿ ಭಾರತಿಯು ಇಲ್ಲಿನ ಕೋಟ್ಯಾಂತರ ಜನಶಕ್ತಿಯ ಜೀವಂತ ಐಕ್ಯ ಸ್ವರೂಪಿಣಿ. ಆದರೆ ಆಕೆ ತನ್ನ ಮಕ್ಕಳ ತಮಸ್ಸು, ಜಡತೆಯ ವರ್ತುಲದಲ್ಲಿ ಬಂಧಿತಳಾಗಿ ನಿಷ್ಕ್ರಿಯಳಾಗಿದ್ದಾಳೆ. ಇದರರ್ಥ ಭಾರತ ಮುಂದೆಂದೂ ಚೇತರಿಸಿಕೊಳ್ಳಲಾಗದಷ್ಟು ದುರ್ಬಲವಾಗಿದೆಯೆಂದಲ್ಲ. ಸ್ವ ಇಚ್ಛೆಯಿಂದ ಅಳಿವನ್ನು ಒಪ್ಪಿಕೊಳ್ಳದೆ ಯಾವುದೇ ವ್ಯಕ್ತಿ ಅಥವಾ ರಾಷ್ಟ್ರ ನಾಶವಾಗದು. ನಮ್ಮದು ಯುಗಯುಗಾಂತರಗಳ ನಾಡು. ತಾಯಿ ಭಾರತಿ ಜಗತ್ತಿಗೆ ಕೊಡಬೇಕಾದುದು ಇನ್ನೂ ಇದೆ. ಆಕೆಯಿನ್ನೂ ತನ್ನ ಅಂತಿಮ ಸೃಜನಾತ್ಮಕ ಮಂತ್ರವನ್ನು ಜಗತ್ತಿಗೆ ಕೊಡಬೇಕಷ್ಟೆ. ನಾವು ಈಗ ಜಾಗೃತಗೊಳಿಸಬೇಕಾದುದು ಆಂಗ್ಲೀಕರಣಕ್ಕೊಳಗಾದ ಪಶ್ಚಿಮದ ಯಶಸ್ಸು-ವೈಫಲ್ಯಗಳನ್ನು ಪುನರಾವರ್ತಿಸುವ ದೌರ್ಭಾಗ್ಯಕ್ಕೆ ಗುರಿಯಾದ ಪಶ್ಚಿಮದ ವಿಧೇಯ ಅನುಯಾಯಿಗಳನ್ನಲ್ಲ. ಬದಲಾಗಿ ತನ್ನ ಆತ್ಮವನ್ನು ಪುನಃ ಪಡೆಯಲು ಉದ್ಯುಕ್ತವಾಗಿ ಬ್ರಾಹ್ಮ-ಕ್ಷಾತ್ರಗಳ ಪರಮೋಚ್ಛತೆಯೆಡೆಗೆ ಸಾಗುತ್ತಾ ತನ್ನ ಧರ್ಮದ ಸಂಪೂರ್ಣ ಅರ್ಥ ಹಾಗೂ ಅದರ ವಿಸ್ತೃತ ರೂಪದ ಶೋಧಕ್ಕಾಗಿ ಸನ್ನದ್ಧವಾಗಿರುವ ಅವಿಸ್ಮರಣೀಯ ಶಕ್ತಿಯನ್ನು!" ಕೃಷ್ಣನ ಜೀವನ ದೃಷ್ಠಿ ಮರುಕಳಿಸಿತೇ? ಚಾಣಕ್ಯನ ಕಾರ್ಯತಂತ್ರ ಗೋಚರಿಸಿತೇ? 

    ಸ್ವಾತಂತ್ರ್ಯ ಹೋರಾಟವೆನ್ನುವುದು ಮುಸ್ಲಿಮರ ಓಲೈಕೆಯ - ಸ್ವಾರ್ಥದ ರಾಜಕಾರಣವಾಗಿ, ಕಮ್ಯೂನಿಷ್ಟ್ ಗೊಂದಲಗಳ ಆಡುಂಬೋಲವಾಗಿ ಬದಲಾಗುತ್ತಿದ್ದಾಗ ಅದಕ್ಕೆ ಪ್ರಾಚೀನ ಭಾರತದ ಪರಂಪರೆಯ-ಸಂಸ್ಕೃತಿಯ ಸ್ಪರ್ಷ ಕೊಟ್ಟು ಕ್ರಾಂತಿಕಾರಿಗಳ ಗುರುವಾಗಿ, ಭವಾನಿ ಮಂದಿರದ ಅಧ್ವರ್ಯುವಾಗಿ ತಕ್ಷಣದ ರಾಜಕೀಯ ಸ್ವಾತಂತ್ರ್ಯಕ್ಕಿಂತ ಪ್ರಾಚೀನ ಭಾರತಕ್ಕೆ ಭವ್ಯತೆಯನ್ನು ಒದಗಿಸಿಕೊಟ್ಟ ಆಧ್ಯಾತ್ಮ ದೀವಿಗೆಯನ್ನು ನಂದಾದೀಪವನ್ನಾಗಿರಿಸುವುದೇ ಭಾರತದ ಮರುಹುಟ್ಟಿಗೆ ಬೇಕಾದ ನಿಜವಾದ ಬೀಜರೂಪವೆಂದು ಗುರುತಿಸಿ ಆ ನಿಟ್ಟಿನಲ್ಲಿ ಸಾಗಿ ಮಹರ್ಷಿಯೆಂದೆನಿಸಿಕೊಂಡ, ಗುರುದೇವ ರವೀಂದ್ರರಿಂದ "ಭಾರತೀಯ ಚೇತನದ ಮುಕ್ತ, ಮೂರ್ತಿಮಂತ ವಾಣಿ" ಎಂದು ಗೌರವಿಸಲ್ಪಟ್ಟ ಅರವಿಂದರಿಗೆ ಕೃಷ್ಣ-ಚಾಣಕ್ಯರು ಸ್ಪೂರ್ತಿಯಾಗಿದ್ದಲ್ಲಿ ಆಶ್ಚರ್ಯವೇನಿದೆ?

     ಅರವಿಂದರು ಭಾರತಕ್ಕೆ ಮರುಹುಟ್ಟು ಇದೆ ಎಂದು ಖಡಾಖಂಡಿತವಾಗಿ ಪ್ರತಿಪಾದಿಸಿದವರು. ಅದರ ಸೂಚನೆಯೇನೋ ಅನ್ನುವಂತೆ ಭಾರತಕ್ಕೆ ಸ್ವಾತಂತ್ರ್ಯವೂ ಅರವಿಂದರ ಜನ್ಮದಿನದಂದೇ ದೊರಕಿತು. ಆಂಗ್ಲ ಕಾಲಗಣನೆ ವೈಜ್ಞಾನಿಕವಲ್ಲ ಎನ್ನುವುದು ನಿಜವಾಗಿದ್ದರೂ ಅರವಿಂದರ ಹೆಸರು, ವಿಚಾರಗಳು ಇದರೊಂದಿಗೆ ತಳುಕು ಹಾಕಿರುವುದು ಕಾಕತಾಳೀಯವಾಗಿರಲಿಕ್ಕಿಲ್ಲ. ದೇಶದ ಜನತೆಗೆ ಈಗ ಅರವಿಂದರು ನೆನಪಾಗದಿದ್ದರೂ ಕಾಲ ಅವರನ್ನು ಸರಿಯಾದ ಸಮಯಕ್ಕೆ ನೆನಪಿಸಬಹುದು. ಅವರು ಜನಿಸಿ ಇಂದಿಗೆ ನೂರೈವತ್ತು ವರ್ಷಗಳಾದವು. 1872ರಲ್ಲಿ ಕಲ್ಕತ್ತಾದಲ್ಲಿ ಜನಿಸಿದ ಅರವಿಂದರು ಬಾಲ್ಯಕಳೆದದ್ದು ಈಗ ಬಾಂಗ್ಲಾದಲ್ಲಿರುವ ರಂಗಪುರದಲ್ಲಿ. ಐದನೇ ವರ್ಷದಲ್ಲಿ ಅವರನ್ನು ಕಾನ್ವೆಂಟಿಗೆ ಸೇರಿಸಿದ ಹೆತ್ತವರು ಎಂಟನೆಯ ವಯಸ್ಸಿಗೆ ತಮ್ಮೊಂದಿಗೆ ಇಂಗ್ಲೆಂಡಿಗೆ ಕರೆದೊಯ್ದರು. ಇಪ್ಪತ್ತನೇ ವರ್ಷದಲ್ಲೇ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರವಿಂದರು ಮರು ವರ್ಷವೇ ಭಾರತಕ್ಕೆ ಮರಳಿದರು. ಅದೇ ಸಮಯಕ್ಕೆ ಇಂದುಪ್ರಕಾಶ ಎನ್ನುವ ಮರಾಠಿ-ಇಂಗ್ಲೀಷ್ ಪತ್ರಿಕೆಗೆ "ನ್ಯೂ ಲ್ಯಾಂಪ್ಸ್ ಫಾರ್ ದಿ ಓಲ್ಡ್" ಎನ್ನುವ ಹೆಸರಲ್ಲಿ ಸರಣಿ ಲೇಖನಗಳನ್ನು ಬರೆದರು. ಆಂಗ್ಲ ಸರಕಾರದ ಮುಂದೆ ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ಸಿನ ನೀತಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದ ಈ ಲೇಖನಸರಣಿ ಸಂಪಾದಕರ ಮೇಲೆ ಬಂದ ಧಮಕಿಯಿಂದ ನಿಂತು ಹೋಯಿತು. 

     ತಮ್ಮ ಸೋದರ ಬಾರೀಂದ್ರ ಹಾಗೂ ಜತೀಂದ್ರರ ಸಹಾಯದಿಂದ ಕ್ರಾಂತಿಸಂಘಟನೆಗಳನ್ನು ಸಂಪರ್ಕಿಸಿ ಅವುಗಳ ಕಾರ್ಯವನ್ನು ಸಂಯೋಜಿಸಲು ಪ್ರಯತ್ನಿಸಿದರು ಅರವಿಂದರು. ಅದಕ್ಕಾಗಿ ಚಿತ್ತರಂಜನ್ ದಾಸ್, ಮಿತ್ರ, ಸೋದರಿ ನಿವೇದಿತಾ ಹಾಗೂ ಸುರೇಂದ್ರರೊಡಗೂಡಿ ರಹಸ್ಯ ಪರಿಷತ್ತನ್ನೂ ಸ್ಥಾಪಿಸಿದರು. ದೇಶವನ್ನು ಕ್ರಾಂತಿ ಹೋರಾಟಕ್ಕೆ ಸಜ್ಜುಗೊಳಿಸಲು ಭವಾನಿಮಂದಿರ ಎಂಬ ಕರಪತ್ರವನ್ನೂ ಹಂಚಿ ಅದರ ಸಿದ್ಧತೆಗೂ ತೊಡಗಿದರು. ಲಾಲ್, ಬಾಲ್, ಪಾಲ್ ರೊಡನೆ ಸೇರಿ ಸ್ವಾತಂತ್ರ್ಯ ಹೋರಾಟದ ಅಧ್ವರ್ಯುವಾದರು. ಅವರ ಸಂಪಾದಕತ್ವದಲ್ಲಿ "ವಂದೇಮಾತರಂ"ನ ಪ್ರಚಾರ-ಪ್ರಸಾರ-ಪ್ರಭಾವಗಳಿಂದ, ಬಂಗಾಳದ ರಾಷ್ಟ್ರೀಯ ವಿದ್ಯಾಲಯವನ್ನು ಸಹಯೋಗಿ ಸುಭೋದ್ ಮಲ್ಲಿಕನ ಸಹಾಯದಿಂದ ಸ್ಥಾಪಿಸಿ ವ್ಯಾಪಿಸಿದ ರಾಷ್ಟ್ರೀಯತೆಯ ದೀಕ್ಷೆಗಳಿಂದ ಬೆಚ್ಚಿದ ಆಂಗ್ಲ ಸರಕಾರ ಅವರನ್ನು ಬಂಧಿಸಿತು. ಸೂರತ್ತಿನ ಅಧಿವೇಶನದಲ್ಲಿ ಕಾಂಗ್ರೆಸ್ಸಿನ ಮಂದ ನಿಲುವಿನಿಂದ ರೋಸಿ ಹೋಗಿ ಅರವಿಂದರಿದ್ದ ರಾಷ್ಟ್ರೀಯತಾವಾದಿ ಪಕ್ಷ ಕಾಂಗ್ರೆಸ್ಸಿನಿಂದ ಬೇರೆಯಾಯಿತು. 

    ಬರೋಡಾದಲ್ಲಿ ವಿಷ್ಣು ಭಾಸ್ಕರ ಲೇಲೆ ಎನ್ನುವ ಮಹಾರಾಷ್ಟ್ರೀಯ ಯೋಗಿಯ ಭೇಟಿಯ ಸಮಯದಲ್ಲಿ ಬ್ರಹ್ಮಪ್ರಜ್ಞೆಯ ಮೊದಲ ಅನುಭೂತಿ ಅವರಿಗುಂಟಾಯಿತು. ಆಲೀಪುರ ಬಾಂಬು ಪ್ರಕರಣದಲ್ಲಿ ಮತ್ತೆ ಸರಕಾರ ಅರವಿಂದರನ್ನು ಬಂಧಿಸಿತು. ಒಂದು ವರ್ಷದಲ್ಲಿ ಬಿಡುಗಡೆಯಾದ ಬಳಿಕ "ಕರ್ಮಯೋಗಿ" ಎನ್ನುವ ಆಂಗ್ಲ ಸಾಪ್ತಾಹಿಕ ಹಾಗೂ "ಧರ್ಮ" ಎನ್ನುವ ಬಂಗಾಳಿ ಸಾಪ್ತಾಹಿಕವನ್ನು ಅವರು ಆರಂಬಿಸಿದರು. ಅದೇ ಸಂದರ್ಭದಲ್ಲಿ ಭಾರತದ ಭವಿಷ್ಯಕ್ಕೆ ಬೇಕಾದ ಆಧ್ಯಾತ್ಮಿಕ ಶಕ್ತಿಯನ್ನು ಮನಗಂಡು ಆತ್ಮಶಕ್ತಿಯ ಉದ್ದೀಪನೆಗೆ ಪಾಂಡಿಚೇರಿಗೆ ಬಂದು ನೆಲೆಸಿದರು. 

     ತಮ್ಮ ಧರ್ಮಪತ್ನಿ ಮೃಣಾಲಿನಿ ದೇವಿಗೆ ಬರೆದ ಪತ್ರದಲ್ಲಿ "ಭಾರತವೆಂದರೆ ಹೊಲ-ಗದ್ದೆ,ಬೆಟ್ಟ-ಗುಡ್ಡಗಳಿಂದ ಕೂಡಿದ ಜಡವಸ್ತುವಲ್ಲ. ಆಕೆ ನನ್ನ ತಾಯಿ.ರಕ್ಕಸನೊಬ್ಬ ನನ್ನ ತಾಯಿಯ ಎದೆಯ ಮೇಲೆ ಕುಳಿತು ರಕ್ತ ಹೀರಲು ಮುಂದಾದರೆ ಮಗನಾದ ನಾನು ಸುಮ್ಮನಿರಬೇಕೇನು" ಎಂದು ಬರೆಯುತ್ತಾರೆ. ಯುಗಯುಗಗಳಿಂದ ಬೆಳಗಿ ಬಂದ ತಾಯಿ ಭಾರತಿಯ ಶಕ್ತಿಯಿನ್ನೂ ಉಡುಗಿಲ್ಲ. ಆಕೆಯಿನ್ನೂ ಅಂತಿಮ ಸೃಜನಾತ್ಮಕ ಮಂತ್ರವನ್ನು ನೀಡುವುದಕ್ಕಿದೆ. ನಮ್ಮ ನಮ್ಮ ಸ್ವಭಾವಗಳನ್ನು ಬದಲಾಯಿಸಿಕೊಂಡು ಪಶ್ಚಿಮದ ಭೋಗಗಳ, ಅಲ್ಲಿನ ಯಶಸ್ಸಿನ ಮಂತ್ರಗಳ ದಾಸರಾಗದೇ ನಮ್ಮ ಪ್ರಾಚೀನ ಅವಿಸ್ಮರಣೀಯ ಶಕ್ತಿಯನ್ನು ಮರು ಸೃಷ್ಟಿಸಿಕೊಂಡರೆ ಅದು ಸ್ರೋತವಾಗಿ ಹರಿದು ಭಾರತಾಂಬೆಯೆಂಬ ಶಕ್ತಿ ಮಾತೆ ಮರುಹುಟ್ಟು ಪಡೆದು ಜಗವ ಬೆಳಗುತ್ತಾಳೆ ಎಂದ ದಾರ್ಶನಿಕ ಅವರು. ಅದನ್ನೇ ತಮ್ಮ ಮಹಾಕಾವ್ಯ ಸಾವಿತ್ರಿಯಲ್ಲಿ ಅನುಭಾವಿಸಿದ್ದು ಹೀಗೆ...(ಅನುವಾದ ಬೇದ್ರೆಯವರದ್ದು) ಬುವಿಯೊಡಲಿನಲ್ಲಿ ಘನಸಮಾಧಿಯಾ ಆ ಸ್ಥೂಲ-ಮೂಲಗಳಿಗೆ| ಋತದ ಜ್ಯೊತಿ ತಾ ಹಿತದ ಸ್ಪರ್ಶದಲಿ ವಿಕಸನಕೆ ಶುಭದ ಘಳಿಗೆ|| ಕಾಲಸರ್ಪವದು –ದೀರ್ಘನಿದ್ರೆಯಲಿ ಬಲಹೀನವಾಗಿ ನಿಂದ| ಅಚಿತಿಯಾಳದಲಿ ವಾಕ್-ಸ್ತಂಭಗೊಂಡ ಆತ್ಮಕ್ಕೆ ನೀಡಿ ಸ್ಪಂದ|| 

     ಪ್ರಾಚೀನ ಭಾರತದ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರವಿಂದರ ಪ್ರತಿಪಾದನೆ ಬಹುಷಃ ಆ ಕಾಲದಲ್ಲಿನ ಯಾವ ಇತಿಹಾಸಕಾರನೂ ಯೋಚಿಸಿರದ ದಿಕ್ಕಿನಲ್ಲಿ ಸಾಗಿತ್ತು. ಅದೇ ಈಗ ಸೂರ್ಯ ಸತ್ಯದಂತೆ ನಮ್ಮ ಕಣ್ಣಮುಂದೆ ದಾಖಲೆ ಸಮೇತ ಧರ್ಮಪಾಲರ ಬರಹಗಳಲ್ಲಿ ದರ್ಶನವಿತ್ತಿದೆ. ಪ್ರಾಚೀನ ಭಾರತದ ಸಮಾಜ ಧರ್ಮದ ತಳಹದಿಯಲ್ಲಿ ನಿರ್ಮಾಣವಾಗಿತ್ತು ಎಂದರು ಅರವಿಂದರು. ಇಲ್ಲಿ ಧರ್ಮವೆಂದರೆ ಸಂಕುಚಿತ ಮತಾಚರಣೆಯಲ್ಲ. ನಮ್ಮ ಅಸ್ತಿತ್ವದ ಅತ್ಯುನ್ನತ ನಿಯಮವಾದ ಧರ್ಮ. ಅಲ್ಲಿದ್ದುದು ಸಮುದಾಯ ಸ್ವಾತಂತ್ರ್ಯ. ಪ್ರತಿಯೊಂದು ಸಮುದಾಯ ತನ್ನದೇ ಆದ ಧರ್ಮವನ್ನು ರೂಪಿಸಿಕೊಳ್ಳಲು ಸ್ವಾತಂತ್ರ್ಯವಿತ್ತು. ತನ್ನೊಳಗೇ ಅದು ಸ್ವತಂತ್ರವಾಗಿತ್ತು. ಯಾವ ಹಾದಿ ಹಿಡಿಯಬೇಕೆಂಬುದು ವ್ಯಕ್ತಿಗೆ ಮುಕ್ತ ಆಯ್ಕೆಯ ವಿಷಯವಾಗಿತ್ತು. ಪ್ರತಿ ಗ್ರಾಮ - ನಗರಗಳೂ ರಾಜಕೀಯ ನಿಯಂತ್ರಣದಿಂದ ಮುಕ್ತವಾದ ತಮ್ಮದೇ ವ್ಯವಸ್ಥೆಯನ್ನು ಹೊಂದಿದ್ದವು. ಅದರೊಳಗಿನ ಪ್ರತಿಯೊಬ್ಬ ವ್ಯಕ್ತಿ ತನ್ನ ಅಭಿವೃದ್ಧಿಗೆ ಒಂದು ಪಥವನ್ನು ಬಿಟ್ಟು ಇನ್ನೊಂದನ್ನು ಆಯ್ದುಕೊಳ್ಳಲು ಸ್ವತಂತ್ರನಿದ್ದ. ರಾಜನು ಸಮುದಾಯದ ಹಕ್ಕನ್ನು ಉಲ್ಲಂಘಿಸುವಂತಿರಲಿಲ್ಲ. ಉಲ್ಲಂಘಿಸಿದರೆ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತಿತ್ತು. ನಮ್ಮ ಜನಾಂಗದ ಪ್ರತಿಭೆಯು ವಿಕಾಸಗೊಂಡ ರೂಪವದು. ಪ್ರತಿ ಸಮುದಾಯವೂ ತನ್ನ ಸ್ವಂತ ಹಿತಾಸಕ್ತಿಗೆ ಹೋರಾಡುತ್ತಿರಲಿಲ್ಲ. ರಾಷ್ಟ್ರೀಯ ಜೀವನವನ್ನು ಕೇಂದ್ರೀಕರಿಸಿದ ಧರ್ಮದ ಪರಿಕಲ್ಪನೆಯಿತ್ತು. ಅಲ್ಲಿ ಈಗಿನಂತೆ ಜಾತೀಯ ಸಂಸ್ಥೆಗಳಿರಲಿಲ್ಲ. ಸಮುದಾಯ ಜೀವನಕ್ಕೆ ಸಂಘಟಿತವಾದ ವೃತ್ತಿಪರ ಶ್ರೇಣಿಗಳಿದ್ದವು. ಆಡಳಿತ ಯಂತ್ರವು ಯಾಂತ್ರಿಕವಾಗಿರದೆ ನಮ್ಯಶೀಲವಾಗಿತ್ತು. ಮಹಮ್ಮದೀಯರು ಇದನ್ನೇ ಅನುಸರಿಸಿದರಾದರೂ ರಾಜನೇ ನಿರಂಕುಶ ಪ್ರಭುವೆಂಬ ಮಧ್ಯ ಏಷ್ಯಾದ ತಮ್ಮ ಕಲ್ಪನೆಯನ್ನೇ ಇಲ್ಲಿ ತಂದು ತುರುಕಿದರು. ಬ್ರಿಟಿಷರು ಈ ವ್ಯವಸ್ಥೆಯನ್ನು ಹೊಸಕಿ ಹಾಕಿದರು. 

    ಭಾರತದಲ್ಲಿ ರಾಜಕೀಯ "ರಾಷ್ಟ್ರ"ದ ಕಲ್ಪನೆ ಇಲ್ಲದಿದ್ದಿರಬಹುದು. ಆದರೆ ಇಲ್ಲಿ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ "ರಾಷ್ಟ್ರ" ಕಲ್ಪನೆಯಿತ್ತು. ಅದೇ ಭಾರತವನ್ನು ಆಸೇತುಹಿಮಾಚಲ ಬೆಸೆದಿತ್ತು. ಸಂಸದೀಯ ವ್ಯವಸ್ಥೆ ನಮ್ಮ ಜನತೆಗೆ ಸರಿ ಹೊಂದುವುದಿಲ್ಲ ಎನ್ನುವುದು ಅರವಿಂದರ ವಾದವಾಗಿತ್ತು. ಬರೋಡಾದಲ್ಲಿ ಬ್ರಹ್ಮ ಸಾಕ್ಷಾತ್ಕಾರದ ಮೊಟ್ಟ ಮೊದಲ ಅನುಭವವಾದ ಬಳಿಕ ಮಾಡಿದ ಅನೇಕ ಭಾಷಣಗಳಲ್ಲಿ ರಾಷ್ಟ್ರೀಯ ಶಿಕ್ಷಣದ ಅವಶ್ಯಕತೆಯನ್ನು ಒತ್ತಿ ಹೇಳಿದ್ದರು. ಗತಕಾಲದಿಂದ ಆರಂಭವಾಗಿ ವರ್ತಮಾನದ ಸಂಪೂರ್ಣ ಉಪಯೋಗ ಪಡೆದು ಶಕ್ತಿಶಾಲಿ ರಾಷ್ಟ್ರವೊಂದನ್ನು ನಿರ್ಮಿಸುವ ಅಗತ್ಯತೆಯನ್ನು ಅವರು ಸಾರಿ ಹೇಳಿದರು. ಭಾರತ ಅನಾದಿಯಿಂದ ಹೊಂದಿರುವ ಜ್ಞಾನ, ಚಾರಿತ್ರ್ಯ, ಉದಾತ್ತ ತತ್ತ್ವಗಳ ಭಂಡಾರವನ್ನು ಭಾರತಕ್ಕಾಗಿ ಉಳಿಸಿ ಯಂತ್ರ ನಿರ್ಮಾಣ ಮಾಡದೆ ವ್ಯಕ್ತಿ ನಿರ್ಮಾಣದ ಕಡೆಗೆ ಕರೆ ಕೊಟ್ಟರು. ನಮ್ಮ ಮಕ್ಕಳ ಮನಸ್ಸನ್ನು ರಾಷ್ಟ್ರಭಾವನೆಯಿಂದ ಉದ್ದೀಪನಗೊಳಿಸಬೇಕು. ಪ್ರತೀ ಹಂತದಲ್ಲೂ ಅದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ದೇಶಭಕ್ತ ನಾಗರಿಕರನ್ನಾಗಿಸುವಂತಹ ಸದ್ಗುಣಗಳ ಅಭ್ಯಾಸಕ್ಕೆ ಅಣಿಗೊಳಿಸಬೇಕು. ಇಂತಹ ಪ್ರಯತ್ನವಿಲ್ಲದಿದ್ದರೆ "ರಾಷ್ಟ್ರ"ವೆನ್ನುವುದು ನಿರ್ಮಾಣವಾಗದು. ಶಿಸ್ತಿಲ್ಲದ ರಾಷ್ಟ್ರೀಯತೆ, ದೇಶಭಕ್ತಿ, ಪುನರ್ನಿರ್ಮಾಣ ಇವು ರಾಷ್ಟ್ರಚೇತನದ ಭಾಗಗಳಾಗದೆ ಕೇವಲ ಶುಷ್ಕಪದಗಳಾಗಿ, ವಿಚಾರಗಳಾಗಿ ಬಿಡುತ್ತವೆ. ಕೇವಲ ಪಠ್ಯಪುಸ್ತಕಗಳು ಬೋಧಿಸುವ ದೇಶಭಕ್ತಿಯಿಂದ ಯಾವ ಉಪಯೋಗವೂ ಇಲ್ಲ. ಶಿಕ್ಷಣವೆಂದರೆ ಜ್ಞಾನಗಳಿಕೆ ಅಷ್ಟೇ ಅಲ್ಲ. ಗಳಿಸಿದ್ದನ್ನು ಉತ್ತಮ ರೀತಿಯಲ್ಲಿ ಬಳಸುವುದೂ ಮುಖ್ಯ. ಐರೋಪ್ಯ ಶಿಕ್ಷಣವು ನಮ್ಮ ಬುದ್ಧಿ, ಚಾರಿತ್ರ್ಯ ಹಾಗೂ ಅಭಿರುಚಿಗಳನ್ನು ಭೃಷ್ಟಗೊಳಿಸಿದೆ. ನಮ್ಮ ಪರಂಪರೆಯಿಂದ ಬೌದ್ಧಿಕ ಹಾಗೂ ಆಧ್ಯಾತ್ಮಿಕವಾಗಿ ದೂರ ಸರಿಯುವಂತೆ ಮಾಡಿದ ಈಗಿನ ಶಾಲೆಗಳು ಸ್ವಂತಿಕೆಯನ್ನು ತರಬಲ್ಲ ಅಭಿಲಾಶೆ-ಚೈತನ್ಯವನ್ನೇ ಉಡುಗಿಸಿವೆ. ಸಂಕುಚಿತವೂ ಭಾವಹೀನವೂ ಆದ ಇಂತಹ ಶಿಕ್ಷಣವನ್ನು ಪಡೆದ ವ್ಯಕ್ತಿ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸಿ ಪಂಚಭೂತಗಳನ್ನು ತನ್ನ ಸೇವೆಗೆ ಇಳಿಸಿಕೊಂಡ ಆದರೆ ಚೇತನವನ್ನು ವಿಕಸಿತಗೊಳಿಸದ ಪಶುಸ್ವಭಾವದ ರಕ್ಕಸನಾಗಿಬಿಡುತ್ತಾನೆ. ಪರಂಪರೆಯನ್ನು ಜೀವಂತವಾಗಿರಿಸುವ ಋಜುತ್ವ, ಕಾಣ್ಕೆಯ ಸ್ಪೂರ್ತಿ, ಭಾರತೀಯ ದೃಷ್ಟಿಯ ಅಂತರ್ನೋಟಗಳ ಶಿಕ್ಷಣ ನಮ್ಮನ್ನು ಮತ್ತೆ ಔನ್ನತ್ಯಕ್ಕೆ ಏರಿಸಬಲ್ಲುದು ಎಂದು ಶಿಕ್ಷಣದ ಸ್ವರೂಪ ಸಿದ್ಧವಾಗಬೇಕಾದ ಬಗೆಗೆ ಸಲಹೆ ಮಾಡಿದ್ದರು. 

     ಅರವಿಂದರ ಜೊತೆಯಲ್ಲಿದ್ದ ಕ್ರಾಂತಿಸಂನ್ಯಾಸಿ ಭಾರತೀ ಕೃಷ್ಣರು ಮುಂದೆ ಪುರಿ ಹಾಗೂ ದ್ವಾರಕೆಗಳಿಗೆ ಶಂಕರ ಪೀಠಾಧಿಪತಿಯಾದರು. ವರ್ತಮಾನದಲ್ಲಿನ ಆಧ್ಯಾತ್ಮಿಕ ಶಕ್ತಿಯು ಭವಿಷ್ಯದಲ್ಲಿ ಭೌತಿಕ ಶಕ್ತಿಯನ್ನು ಸೃಷ್ಟಿಸುತ್ತದೆ. ವರ್ತಮಾನದಲ್ಲಿ ಭೌತಿಕ ಶಕ್ತಿಯ ಮೇಲುಗೈಯಾದರೆ ಆಧ್ಯಾತ್ಮಿಕ ಶಕ್ತಿಯು ಭವಿಷ್ಯವನ್ನು ರೂಪಿಸಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದರಿತ ಅರವಿಂದರು ಸಕ್ರಿಯ ರಾಜಕಾರಣದಿಂದ ದೂರವಾಗಿ ಆತ್ಮಶಕ್ತಿಯ ಜಾಗೃತಿಗಾಗಿ ಆಧ್ಯಾತ್ಮಿಕ ಪಥ ತುಳಿದರು. ಆ ನಂತರವೂ ಅವರು ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಗಳ ಬಗ್ಗೆ ತಮ್ಮ ಸಲಹೆ ಕೇಳಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ "ಸೀಕ್ರೆಟ್ ಆಫ್ ವೇದ" ಗ್ರಂಥದಲ್ಲಿ ಅರವಿಂದರು ವೇದಾರ್ಥವನ್ನು ಸಾಂಕೇತಿಕವಾಗಿ ವಿವರಿಸುವ ಮೂಲಕ "ಆರ್ಯ ಆಕ್ರಮಣ ಸಿದ್ಧಾಂತ"ವನ್ನು ಖಂಡಿಸಿದರು. ಅವರು ಆರ್ಯನೆಂದರೆ ಯಾವುದಕ್ಕೂ ಹೆದರದೆ, ಹಿಂಜರಿಯದೆ, ದೌರ್ಬಲ್ಯಕ್ಕೊಳಗಾಗದೆ ದೈವಿಕತೆಯ ಶಿಖರವನ್ನು ಹಂತಹಂತವಾಗಿ ಏರಲಿಚ್ಛಿಸುವ ಅಂತರಂಗ ಹಾಗೂ ಬಾಹ್ಯದಲ್ಲಿ ಆದರ್ಶದ ಔನ್ನತ್ಯದ ಆತ್ಮಸಂಸ್ಕಾರವುಳ್ಳವ ಎಂದು ವ್ಯಾಖ್ಯಾನಿಸಿದರು.

     ಆ ಸಮಯದ ರಾಜಕೀಯ-ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅರವಿಂದ ಘೋಷ್ ಅಭಿಪ್ರಾಯಗಳು ಅವರು ಬರೆದ ಪತ್ರಗಳ ಮೂಲಕ ಸಿಗುತ್ತವೆ. ಮುಸ್ಲಿಮ್ ಪುಂಡುತನ ಹಾಗೂ ಕಾಂಗ್ರೆಸ್ಸಿನ ಓಲೈಕೆಯ ನೀತಿಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದರು ಅರವಿಂದರು. "ಪರರನ್ನು ಪೀಡಿಸುವವನು ಶೂರನೂ ಅಲ್ಲ, ಶಕ್ತಿವಂತನೂ ಅಲ್ಲ. ಹಿಂದೂವಿನ ಆತ್ಮನಿಯಂತ್ರಣ ಗುಣ ಅವನ ರಾಷ್ಟ್ರೀಯ ಸ್ವಭಾವದ ಲಕ್ಷಣ ಎನ್ನುವುದು ಅವನ ಹೇಡಿತನ ಎಂದು ಪರಿಗಣಿಸಿದರೆ ಅದು ಮೂರ್ಖತನ. ಮುಸ್ಲಿಂ ಅಧ್ಯಕ್ಷನನ್ನು ಆರಿಸುವುದರಿಂದ ಕಾಂಗ್ರೆಸ್ ವಿರೋಧಿ ಮುಸಲ್ಮಾನರ ಮನಸ್ಸನ್ನು ಓಲೈಸಬಹುದೆಂಬ ಕಾಂಗ್ರೆಸ್ಸಿನ ವಿಚಾರಧಾರೆ ಮೂರ್ಖತನದ್ದು. "ನಾನು ನಿನ್ನನ್ನು ಸಹಿಸಲಾರೆ" ಎನ್ನುವ ತತ್ವವಿರುವ ಮತದ ಜೊತೆ ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಅವರು ನಮ್ಮನ್ನು ಮತಾಂತರಗೊಳಿಸುತ್ತಲೇ ಸಾಗುತ್ತಾರೆ. ನಾವು ಅಹಿಂಸೆ ಎಂದು ಹೇಳುತ್ತಾ ಯಾವ ಮುಸಲ್ಮಾನನನ್ನೂ ಶುದ್ಧೀಕರಣಗೊಳಿಸದಿದ್ದರೆ ಐಕ್ಯತೆ ಬಿಡಿ, ನಾವೇ ಉಳಿಯಲಾರೆವು. ತಮ್ಮ ಪರವಾಗಿ ಹಾಗೂ ತಮ್ಮ ಹೆಸರಿನಲ್ಲಿ ಏನನ್ನು ಹೇಳಬೇಕು ಅಥವಾ ಹೇಳಬಾರದು, ಮಾಡಬೇಕು ಅಥವಾ ಮಾಡಬಾರದು ಎನ್ನುವುದನ್ನು ನಿರ್ಧರಿಸುವ ಸಾರ್ವಜನಿಕರ ಹಕ್ಕನ್ನು ಕಾಂಗ್ರೆಸ್ ಹುಟ್ಟಿದಂದಿನಿಂದ ಈ ರಾಷ್ಟ್ರೀಯ ಚಳುವಳಿಯ ನೇತಾರರು ನಿರಾಕರಿಸುತ್ತಲೇ ಬಂದಿದ್ದಾರೆ. ಆರೇಳು ಜನ ಗುಪ್ತ ಸಭೆ ನಡೆಸಿ ತೆಗೆದುಕೊಳ್ಳುವ ನಿರ್ಣಯವನ್ನು ದೇಶದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಸುಮ್ಮನೆ ಅನುಮೋದಿಸುವುದು ಕಾಂಗ್ರೆಸ್ಸಿನ ವೈಖರಿಯಾಗಿಬಿಟ್ಟಿದೆ. ಸರ್ವಾಧಿಕಾರಿಗಳಂತಾಗದೆ ಸೇವಕರಂತೆ ವರ್ತಿಸಿದಲ್ಲಿ ಮಾತ್ರ ನಾಯಕರು ಗೌರವಕ್ಕೆ ಅರ್ಹರಾಗುತ್ತಾರೆ. ರಾಜಕಾರಣ ಕ್ಷತ್ರಿಯನ ಕೆಲಸ. ತೋಳ್ಬಲವಿಲ್ಲದ ಮೆದುಳು ನಿರ್ವೀರ್ಯವಾದದ್ದು. ಸ್ವಾತಂತ್ರ್ಯಕ್ಕೆ ನೈತಿಕ ಅರ್ಹತೆ ಪಡೆಯಬೇಕಾದರೆ ನಾವು ಕ್ಷಾತ್ರ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಾಸ್ತವಾಂಶವನ್ನು ಎತ್ತಿ ಹಿಡಿಯಲು ಹೆದರುವ ಅತಿಯಾದ ಸಜ್ಜನಿಕೆ, ಚಕ್ಷು ಲಜ್ಜೆಯಿಂದ ಯಾವ ಉಪಯೋಗವೂ ಇಲ್ಲ! ಜನತೆಯ ನಡುವಿನ ಪ್ರತಿಯೊಂದು ಘಟಕವನ್ನು -ಪಂಡಿತ, ಕಾರ್ಮಿಕ, ರೈತ - ಸಂಘಟಿಸಿ ಯಾರು ಮುನ್ನಡೆಸುವನೋ ಅವನಿಗೇ ರಾಜಕೀಯದಲ್ಲಿ ಗೆಲುವೇ ಹೊರತು ವಾಗ್ಝರಿ ಹರಿಸುವ ಮಾತಿನ ಚತುರರಿಗಲ್ಲ. ಆದರೆ ಕಾಂಗ್ರೆಸ್ ಜನರಿಂದ ದೂರವಿದ್ದು ಬ್ರಿಟಿಷ್ ಸರಕಾರದೆಡೆ ಗಮನ ಹರಿಸಿ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ಸಿನ ಸ್ವಾರ್ಥದಾಟವನ್ನು ಅಂದೇ ಬಯಲಿಗೆಳೆದಿದ್ದರು. 

     ಗಾಂಧಿಯವರ ಖಿಲಾಫತ್ ಅತಿರೇಕದಿಂದ ದೇಶಾದ್ಯಂತ ಹಿಂದೂಗಳು ಅಪಾರ ಹಾನಿಗೆ ತುತ್ತಾದಾಗ ಅರವಿಂದರು "ಹಿಂದೂ ಮುಸ್ಲಿಂ ಐಕ್ಯತೆಯೆಂದರೆ ಹಿಂದೂಗಳು ಅಧೀನರಾಗುವುದಲ್ಲ. ಹಿಂದೂಗಳ ಮೃದು ಗುಣ ಮುಸ್ಲಿಂ ದೌರ್ಜನ್ಯಕ್ಕೆ ಎಡೆಮಾಡಿದೆ. ಹಿಂದೂಗಳು ಸಂಘಟಿತರಾಗುವುದೇ ಇದಕ್ಕೆ ಪರಿಹಾರ. ಆಗ ಐಕ್ಯತೆ ತಾನಾಗಿಯೇ ಸಾಧಿತವಾಗುವುದು. ಮುಂದೊಂದು ದಿನ ಮುಸ್ಲಿಮರು ನಮ್ಮ ಮೇಲೆ ದಾಳಿಗೆ ಬಂದಾಗಲೂ ಇದು ನೆರವಾಗುವುದು" ಎಂದು ಸ್ಪಷ್ಟ ಶಬ್ಧಗಳಲ್ಲಿ ಹಿಂದೂಗಳು ಸಂಘಟಿತರಾಗಬೇಕಾದ ಅಗತ್ಯತೆಯನ್ನು ಹೇಳಿದ್ದರು. ಬಹುತೇಕ ನಾಯಕರು ಕುರಿಗಳಂತೆ ಗಾಂಧಿಯವರನ್ನು ಹಿಂಬಾಲಿಸಿದಾಗ ಕೆಲವೇ ಕೆಲವರು ಅವರ ಚಳುವಳಿಯ ಅನಿಶ್ಚಿತತೆಯನ್ನು, ಅದರಿಂದ ದೇಶೀಯರಲ್ಲುಂಟಾಗಬಹುದಾದ ಗೊಂದಲವನ್ನು, ಭಾರತಕ್ಕಾಗಬಹುದಾದ ಹಾನಿಯನ್ನು ಮನಗಂಡು ದೇಶದ ಜನತೆಯನ್ನು ಎಚ್ಚರಿಸಿದ್ದರು. ಅಂತಹವರಲ್ಲಿ “ಕಾಂಗ್ರೆಸ್ ತನ್ನ ಉದ್ದೇಶಗಳನ್ನು ಸಾಧಿಸುವಲ್ಲಿ ತೋರುವ ಉತ್ಸಾಹ ಹೃದಯಪೂರ್ವಕವಾದುದಲ್ಲ. ನಿಷ್ಕಪಟವಾದುದೂ ಅಲ್ಲ. ಅದರ ನಾಯಕರುಗಳು ನಾಯಕರಾಗುವುದಕ್ಕೆ ಯೋಗ್ಯತೆಯನ್ನೇ ಹೊಂದಿಲ್ಲ” ಎಂದು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲೇ ನಿರ್ಭೀತವಾಗಿ ಹೇಳಿದ್ದ ಅರವಿಂದರೂ ಒಬ್ಬರು. 

    ಗಾಂಧಿಯವರ ಅಹಿಂಸಾ ಹೋರಾಟದ ಅನರ್ಥವನ್ನು ತಮ್ಮ ಶಿಷ್ಯರಿಗೆ ಅವರು ಈ ರೀತಿ ವಿವರಿಸಿದ್ದಾರೆ - ಮನುಷ್ಯ ಅಹಿಂಸೆಯನ್ನು ಕೈಗೊಂಡಾಗ ಶುದ್ಧಗೊಳ್ಳುತ್ತಾನೆ ಎಂದು ಗಾಂಧಿ ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಸ್ವ ಇಚ್ಛೆಯಿಂದ ಯಾತನೆ ಅನುಭವಿಸಿದಾಗ ಪ್ರಾಣಕೋಶಗಳು ಬಲಗೊಳ್ಳುತ್ತವೆ. ಹಾಗಾಗಿ ಗಾಂಧಿಯವರ ಈ ಅಹಿಂಸಾ ಚಳುವಳಿ ಪ್ರಾಣಕೋಶಗಳನ್ನಷ್ಟೇ ಬಾಧಿಸುತ್ತದೆ. ದಬ್ಬಾಳಿಕೆ ನಡೆಸುವ ಶಕ್ತಿಯನ್ನು ಎದುರಿಸುವ ಸಾಮರ್ಥ್ಯವಿಲ್ಲದಿದ್ದಾಗ ಅದನ್ನು ಸಹಿಸಿ ಬವಣೆ ಅನುಭವಿಸುವುದರಿಂದ ಯಾವ ಪ್ರಯೋಜನವಿದೆ? ಯಾತನೆಯನ್ನುಂಡ ಮನುಷ್ಯ ಅಧಿಕಾರ ದೊರೆತಾಗ ಹೀನ ಶೋಷಕನಾಗುತ್ತಾನೆ. ನಾವು ಹಿಂಸಾ ಪ್ರವೃತ್ತಿಯನ್ನಷ್ಟೇ ಪರಿವರ್ತಿಸಬಹುದು. ಆದರೆ ಸತ್ಯಾಗ್ರಹದ ಮಾರ್ಗದಿಂದ ಅದು ಸಾಧ್ಯವಿಲ್ಲ. ಹಿಂಸಾ ಪ್ರವೃತ್ತಿಯ ಶುದ್ಧೀಕರಣಕ್ಕೆ ಪ್ರಾಚೀನ ಕ್ಷಾತ್ರ ಪ್ರವೃತ್ತಿಯೇ ಬೇಕು. ಅದು ಯಾವ ದಬ್ಬಾಳಿಕೆಯನ್ನೂ ಸಹಿಸದೆ ಹೋರಾಡುತ್ತಿತ್ತು. ಅದರ ಉನ್ನತ ಗುರಿ ಆಧ್ಯಾತ್ಮೀಕರಣವಾಗಿತ್ತು. ಸತ್ಯಾಗ್ರಹಿಯು ತಾನು ಇತರರ ಮೇಲೆ ತರುವ ಒತ್ತಡದ ಬಗ್ಗೆ ತನಗೆ ಕಾಳಜಿಯಿಲ್ಲ ಎನ್ನುವುದು ಕೂಡಾ ಹಿಂಸೆಯೇ! ನಿಜವಾದ ಅಹಿಂಸೆ ಬಾಹ್ಯ ಕ್ರಿಯೆಯಲ್ಲಿ/ಕ್ರಿಯೆಯಿಂದ ತಪ್ಪಿಸಿಕೊಳ್ಳುವಲ್ಲಿ ಇರದ ಒಂದು ಮನಸ್ಥಿತಿ. ಆಂತರಿಕ ಅಸ್ತಿತ್ವದಲ್ಲಿ ಯಾವುದೇ ಒತ್ತಡವೂ ಅಹಿಂಸೆಯ ಉಲ್ಲಂಘನೆಯೇ! ಗಾಂಧಿಯವರು ಆಫ್ರಿಕಾದಿಂದ ಹಿಂದಿರುಗಿದ ನಂತರ ಅವರು ಪಡೆದ ರಿಯಾಯಿತಿಗಳೆಲ್ಲಾ ಏನಾದವು? ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತೇಕೆ? ಒಂದು ವೇಳೆ ಅಫ್ಘನ್ನರು ಭಾರತವನ್ನು ಆಕ್ರಮಿಸಿದರೆ ಅಹಿಂಸೆಯಿಂದ ಅವರನ್ನು ಎದುರಿಸಲು ಸಾಧ್ಯವೆ? ಗಾಂಧಿಯವರು ತಮ್ಮ ಗೀತೆಯ ವ್ಯಾಖ್ಯೆಯನ್ನು ಪ್ರಶ್ನಿಸಿದವರಿಗೆ ಹಾರಿಕೆಯ ಉತ್ತರ ನೀಡಿದರು. ಮಹರ್ಷಿ ದಯಾನಂದರು ವಿಗ್ರಹಾರಾಧನೆಯನ್ನು ರದ್ದು ಪಡಿಸಿ ವೇದಗಳ ಮೂರ್ತಿಪೂಜೆಯನ್ನು ಸೃಷ್ಟಿಸಿದ್ದಾರೆಂದು ಹೇಳುವ ಗಾಂಧಿಯವರು ತಾವು ಚರಕ-ಖಾದಿ-ಅಹಿಂಸೆಗಳ ಮೂಲಕ ಸೃಷ್ಟಿಸಿದ್ದೂ ಅದನ್ನೇ ಎನ್ನುವುದನ್ನು ಮರೆತಿದ್ದಾರೆ. ಭಾರತೀಯ ಸಂಸ್ಕೃತಿಗೆ ನೈತಿಕತೆಯ ಮೌಲ್ಯವೂ ಗೊತ್ತಿತ್ತು. ಅದರ ಮಿತಿಗಳೂ! ಗಾಂಧಿಯವರು ನೈತಿಕತೆ ಮತ್ತು ಆಧ್ಯಾತ್ಮಿಕತೆಯನ್ನು ಒಂದೇ ಎಂದು ಪರಿಗಣಿಸಿದ್ದಾರೆ. ಗಾಂಧಿಯವರ ಉಪವಾಸವೆನ್ನುವುದು ಪಾಪಮಾರ್ಜನೆಗಾಗಿ ಇರುವ ಕ್ರೈಸ್ತರ ಕಲ್ಪನೆ. ಆತ ಬೋಧಿಸಿರುವುದೆಲ್ಲವೂ ಕ್ರೈಸ್ತ ಮತದಿಂದ ಎರವಲು ಪಡೆದದ್ದು. ಅವರ ರೂಪ ಭಾರತೀಯ. ಆದರೆ ಅಂತಃಸತ್ತ್ವ ಕ್ರೈಸ್ತಮತದ್ದು. ಅವರ ವ್ಯಕ್ತಿತ್ವವಂತೂ ನೀರಸ, ಅದು ಅವರು ತಮ್ಮ ಸಿದ್ಧಾಂತಗಳನ್ನು ಎರವಲು ಪಡೆದ ರಷ್ಯನ್ ಕ್ರೈಸ್ತರಿಗಿಂತಲೂ ನೀರಸ ಹಾಗೂ ಅವರ ಮನಸ್ಸು ಚಂಚಲ. ಟಾಲ್ ಸ್ಟಾಯ್, ಬೈಬಲುಗಳಿಂದ ಪ್ರಭಾವಿತರಾದ ಅವರ ಉಪದೇಶಗಳಲ್ಲಿ ಕೆಲ ಮಟ್ಟಿಗೆ ಜೈನ ಮತದ ಛಾಯೆಯಿದೆ. ಗಾಂಧಿಯವರ ಚಳುವಳಿ ಅಭಾಸಕ್ಕೂ, ಗೊಂದಲಕ್ಕೂ ಕಾರಣವಾಗುತ್ತದೆ. ಭಾರತದ ರಾಜಕಾರಣಿಗಳು ವಿಚಾರಹೀನರಾಗಿ ಗಾಂಧಿಯ ಖಿಲಾಫತ್ತಿಗೆ ಬೆಂಬಲ ಸೂಚಿಸಿದರು. ವಾಸ್ತವತೆಯನ್ನು ನೇರವಾಗಿ ಎದುರಿಸುವ ಬದಲು ತಮ್ಮ ಮಾನಸಿಕ ವಿಚಾರಗಳ ಬಲದಿಂದ ಮುಸಲರ ದೌರ್ಷ್ಟ್ಯವನ್ನು ಎದುರಿಸುವ ಅರ್ಥಹೀನ ಪ್ರಯತ್ನ ಮಾಡಿದರು. ಅಸಹಕಾರ ಚಳುವಳಿ ಅಸತ್ಯದ ಮೇಲೆ ನಿಂತಿದೆ. ಸ್ವರಾಜ್ಯಗಳಿಕೆ ನೂಲುವುದರಿಂದ ಸಾಧ್ಯವೇ? ಗ್ರಾಮಸಂಘಟನೆಗಳ ಮಾತಾಡುವ ಗಾಂಧಿಯವರು ಮೊದಲು ಹಳ್ಳಿಗಳಿಗೆ ಜೀವ ತರಲಿ. ಆಗ ಅವು ತಾವಾಗಿ ಸಂಘಟನೆಗೊಳ್ಳುತ್ತವೆ. ಗಾಂಧಿಯವರು ಗೋಪ್ಯತೆಯನ್ನು ಪಾಪ ಎಂದಿದ್ದಾರೆ. ಆದರೆ ಅದು ಅವರ ಅತಿರೇಕಗಳಲ್ಲೊಂದು ಅಷ್ಟೇ! 

     ಆಧುನಿಕ ವೃತ್ತ ಪತ್ರಿಕೆಗಳು ಕಪೋಲಕಲ್ಪಿತ ವರದಿಯನ್ನು ಪ್ರಕಟಿಸುತ್ತವೆ. ಜನಸಾಮಾನ್ಯರ ರಂಜನೆಗೆ ಅವು ಇಳಿಯುವ ಕಾರಣ ಸಮಾಜದ ಅಧಃಪತನಕ್ಕೆ ಕಾರಣವಾಗುತ್ತವೆ ಎಂದಿದ್ದರು ಅರವಿಂದರು. 

    1950ರಲ್ಲಿ ಅರವಿಂದರು ಚೀನಾ ನೈಋತ್ಯ ಏಷ್ಯಾ ಹಾಗೂ ಟಿಬೆಟುಗಳನ್ನು ನುಂಗಿ ನೊಣೆದು ಭಾರತದ ಭದ್ರತೆಗೆ ಬೆದರಿಕೆಯೊಡ್ಡಬಹುದು ಎಂದು ಎಚ್ಚರಿಸಿದ್ದರು. ಅವರು ಹೇಳಿದ ಆರುತಿಂಗಳಲ್ಲೇ ಚೀನಾ ಟಿಬೆಟನ್ನು ಆಕ್ರಮಿಸಿತು. 1962 ರಲ್ಲಿ ಭಾರತದ ಮೇಲೂ ದಾಳಿಯೆಸಗಿತು. 

     ಮಹಾಭಾರತ ಅರಣ್ಯಪರ್ವದ ಸಾವಿತ್ರಿ ಉಪಾಖ್ಯಾನವನ್ನು ಹಿಡಿದು ಹಿರಿದಾಗಿಸಿ ಎತ್ತರಕ್ಕೇರಿಸಿದ ಅವರ ಕೃತಿಯೇ ಸಾವಿತ್ರಿ. ಧೀರ ಗಂಭೀರ ರಮಣೀಯ ಪ್ರೌಢ ಕಾವ್ಯಭಾಷೆ ಅದರದ್ದು. ಜಗತ್ತಿನಲ್ಲಿ ಆಂಗ್ಲ ಭಾಷೆಯಲ್ಲಿ ರಚಿತವಾದ ಕೃತಿಗಳಲ್ಲೇ ಅತ್ಯಂತ ದೊಡ್ಡ ಕಾವ್ಯ ಇದು. ಮೇರು ಕವಿ ಬೇಂದ್ರೆಯವರು ಮಹರ್ಷಿ ಅರವಿಂದರ ಅನುಯಾಯಿ. ಅರವಿಂದರ ಅನುಭಾವ ಚಿಂತನೆಯನ್ನು ಕನ್ನಡಕ್ಕೆ ತಂದ ಅಕ್ಷರ ಯೋಗಿ ಅಂಬಿಕಾತನಯದತ್ತ. ಅರವಿಂದರ ಸಾವಿತ್ರಿಯ ಚರಣವೊಂದನ್ನು ಬೇಂದ್ರೆಯವರು ಅನುವಾದಗೊಳಿಸಿದ್ದು ಹೀಗೆ... ಆ ಪರಮಪುರುಷ | ಪಾತಾಳ ನಿಶೆಯ | ಪರದೆಯನು ತೆಗೆಯುವತ್ತ | ಜೊತೆಜೊತೆಗೆ | ದೈವ ಪ್ರತ್ಯೂಷ ಸರಣಿ | ತಮವನು ಕರಗಿಸುತ್ತ | | ಪ್ರಕೃತಿ ತಾನಾಗ | ಅನಂತತೆಯಲಿ ವಿಶ್ವವನು | ವ್ಯಾಪಿಸುತ್ತ |ಅದಕಾಗಿ ಖಚಿತ | ಅವನ ಜೊತೆಯವಳು ಅದ್ವೈತವಾಗುವತ್ತ | | 

     ಮನಸ್ಸಿನ ಮೂಲಕ ಸುಪ್ರಮಾನಸ ಹಂತದವರೆಗೆ ಆಧ್ಯಾತ್ಮಿಕ ಆರೋಹಣಗೈಯಲು ಮೂರು ರೀತಿಯ ರೂಪಾಂತರ ಅಗತ್ಯ ಇದೆ ಎಂದು ಅರವಿಂದರು ತಮ್ಮ ಕೃತಿ `ದಿ ಲೈಫ್ ಡಿವೈನ್’ನಲ್ಲಿ ಹೇಳುತ್ತಾರೆ. ಪ್ರಪ್ರಥಮವಾಗಿ, ನಮ್ಮಲ್ಲಿರುವ ಚೈತ್ಯಪುರುಷನು ಜಾಗೃತನಾಗಬೇಕು. ಎರಡನೆಯದು ಆಧ್ಯಾತ್ಮಿಕ ಪರಿವರ್ತನೆ. ಇದರಿಂದ ಮಹತ್ತರ ಜ್ಯೋತಿ, ಶಕ್ತಿ , ಜ್ಞಾನ, ಆನಂದ, ನೈರ್ಮಲ್ಯಗಳು ಅವತರಿಸಿ, ಚೇತನದ ಗರ್ಭಕ್ಕೂ ಇಳಿದು ಅಲ್ಲಿಯೂ ಪರಿವರ್ತನೆಯಾಗಬೇಕು. ಚೇತನವು ಸುಪ್ರಮಾನಸದಲ್ಲಿ ನೆಲೆಸುವುದೇ ಮೂರನೆಯ ಪರಿವರ್ತನೆ. ಈ ಮೂರು ರೀತಿಯ ರೂಪಾಂತರಗಳಿಂದ ಚಿನ್ಮಯ ಸಿದ್ಧಿ. 

     1950ರ ಡಿಸೆಂಬರ್ 5ರಂದು ಅರವಿಂದರು ತಮ್ಮ ಕಾಯ ತ್ಯಜಿಸಿದರು. ಜೀವಿತದ ಮೊದಲ ಇಪ್ಪತ್ತು ವರ್ಷಗಳನ್ನು ಪಾಶ್ಚಾತ್ಯ ಸಂಸ್ಕೃತಿಯ ಪರಿಧಿಯೊಳಗೆ ಬೆಳೆದ ಅರವಿಂದರನ್ನು ತಾಯಿನಾಡು ಕೂಗಿ ಕರೆಯಿತು. ಮುಂದಿನ ಎಂಟು ವರುಷಗಳಲ್ಲಿ ತಮ್ಮ ಸಿದ್ಧಾಂತವನ್ನು ಪಕ್ವಗೊಳಿಸುವ ಪ್ರಕ್ರಿಯೆ ಮೊದಲಾಯಿತು. 1900 ಸುಮಾರಿಗೆ ಬಂಗಾಳ ಹಾಗೂ ಮಹಾರಾಷ್ಟ್ರಗಳ ಕ್ರಾಂತಿಸಂಘಟನೆಗಳ ಸಂಪರ್ಕವುಂಟಾಯಿತು. ಕ್ರಾಂತಿ ದೀಕ್ಷಿತರಾದರು. ಮುಂದಿನ ಹತ್ತು ವರುಷಗಳು ಮಾತೃಭೂಮಿಯನ್ನು ವಿದೇಶೀ ಆಡಲಿತದ ಕಪಿಮುಷ್ಠಿಯಿಂದ ಬಿಡಿಸುವ ಪ್ರಯತ್ನ ಮಾಡಿದರು. ಅವರಿಗೆ ಭಾರತಿ ತಾಯಿಯ ರೂಪದಲ್ಲಿ ಕಂಡಳು. ಅದರ ಫಲವೇ "ಭವಾನಿಮಂದಿರ!". 1908ರ ಸುಮಾರಿಗೆ ಉಂಟಾದ ಬ್ರಹ್ಮಪ್ರಜ್ಞೆಯ ಅನುಭೂತಿ ಎರಡು ವರುಷಗಳಲ್ಲಿ ಅವರನ್ನು ಪಾಂಡಿಚೇರಿಗೆ ಒಯ್ಯಿತು. ವೇದಗಳ ಮೇಲೆ ನಡೆಸಿದ ಆಳವಾದ ಅಧ್ಯಯನ ಬ್ರಹ್ಮಸತ್ಯದ ಸಾರ ಹಾಗೂ ಪ್ರಾದುರ್ಭಾವದ ಸತ್ಯವನ್ನು ಅರಸುವತ್ತ ಅವರನ್ನು ಪ್ರೇರೇಪಿಸಿತು. ಆಗ ಅವರಿಗಾದ "ದರ್ಶನ" ಭೂಮಿಯನ್ನು ಮೃತಪಾಯವಾಗಿರುವ ಯುಗದಿಂದ ಬಿಡಿಸುವ ಕಾರ್ಯದಲ್ಲಿ ಅನುವಾಗುವಂತೆ ಮಾಡಿತು. ಕಾಲಗರ್ಭದಲ್ಲಿ ತುಕ್ಕು ಹಿಡಿದಿರುವ ಮಾನವ ಜನಾಂಗದ ಭವಿಷ್ಯದ ಕೀಲಿಕೈ ಭಾರತದಲ್ಲಿದೆ. ನಿದ್ರಾವಸ್ಥೆಯಲ್ಲಿರುವ ಅದನ್ನು ಎಚ್ಚರಿಸಲು ಆಧ್ಯಾತ್ಮಿಕ ಶಕ್ತಿಸಂಚಯನವೇ ಅಗತ್ಯವೆಂದು ಮನಗಂಡು ಮುಂದಿನ ನಲವತ್ತು ವರುಷಗಳ ಕಾಲ ಅಂತರ್ಮುಖಿಯಾದ ಆ ಯೋಗಿ!