ಪುಟಗಳು

ಶುಕ್ರವಾರ, ನವೆಂಬರ್ 26, 2021

ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ

 ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ


ಇದ್ದಕ್ಕಿದ್ದಂತೆ ಸುಲ್ತಾನ ತಾನು "ಹಿಂದೂ" ಎಂದು ಉದ್ಘೋಷಿಸಿಕೊಂಡ. ತನ್ನ ಶ್ರದ್ಧೆ ಇನ್ನು ಹಿಂದೂ ಧರ್ಮದಲ್ಲಿ ಎಂದು ಘೋಷಿಸಿ ಅದನ್ನು ಕಾರ್ಯಗತಗೊಳಿಸಿದ. ಹಿಂದೂಗಳ ಮುಖಕ್ಕೆ ಉಗುಳುತ್ತಿದ್ದ ಮುಸಲರು ಬಗ್ಗಿ ನಮಸ್ಕಾರ ಮಾಡಲು ಆರಂಭಿಸಿದರು.  ಅರಮನೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡವು. ವೇದ ಮಂತ್ರ ಘೋಷ ಉಚ್ಚಕಂಠದಲ್ಲಿ ಮೊಳಗಿತು. ಭಾಂಗಿನ ಬದಲು ಘಂಟಾನಾದ, ಶಂಖಾನಾದ ಕೇಳಲಾರಂಭಿಸಿತು. ಮಹೋನ್ನತ ಆರತಿಗಳ ದಿವ್ಯ ಬೆಳಕಿನಲ್ಲಿ ದೇವತೆಗಳ ವಿಗ್ರಹಗಳ ಭವ್ಯ ಸ್ವರೂಪ ಕಣ್ಣುಕೋರೈಸಲಾರಂಭಿಸಿತು. ಕುರಾನಿನ ಅಯಾತ್'ಗಳ ಜಾಗದಲ್ಲಿ ಪೂಜೆ, ಭಜನೆಗಳು ನಡೆಯತೊಡಗಿದವು. ಜಿಜಿಯಾ ತಲೆಗಂದಾಯದ ಹೊರೆ ಇಳಿಯಿತು. ತೀರ್ಥಸ್ನಾನಗಳ ನಿಷೇಧವೂ ಅಳಿಯಿತು. ಹಲವು ವರ್ಷಗಳ ಬಳಿಕ ಸ್ವಾತಂತ್ರ್ಯದ, ಸಮಾನತೆಯ ಸವಿಯನ್ನುಂಡ ಹಿಂದೂಗಳ ಸಂಭ್ರಮ ಮೇರೆ ಮೀರಿತು. 



ಇದೇನು ಮುಸಲ್ಮಾನ ರಾಜನೊಬ್ಬ ಸ್ವ ಇಚ್ಛೆಯಿಂದ ಹಿಂದೂವಾಗುವುದು? ಸಾಧ್ಯವೇ ಇಲ್ಲ;  ಕಾಗಕ್ಕ-ಗುಬ್ಬಕ್ಕ ಕಥೆ ಇರಬೇಕು ಎಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಭಾರತದ ಇತಿಹಾಸದಲ್ಲಿ ಇಂತಹಾ ಒಂದು ಘಟನೆ ಮುಸಲರು ಪ್ರಬಲರಾಗಿದ್ದ ಕಾಲದಲ್ಲೇ ನಡೆದಿತ್ತು. ಆದರೆ ಹಿಂದೂ ಪ್ರಜ್ಞೆ ಉದ್ದೀಪನಗೊಂಡು ಪ್ರಜ್ವಲಿಸಿದ್ದನ್ನು ನಮ್ಮ ಇತಿಹಾಸಕಾರರು ಎಂದಾದರೂ ಬರೆದದ್ದಿದೆಯೇ? ಅಲ್ಲಾವುದ್ದೀನ್ ಖಿಲ್ಜಿ 1298ರಲ್ಲಿ ಗುಜರಾತಿಗೆ ದಾಳಿ ಮಾಡಿದಾಗ ಸೆರೆ ಸಿಕ್ಕಿದ ಓರ್ವ ಸುಂದರ ಬಾಲಕನನ್ನು ತನ್ನ ಸೇವಕನನ್ನಾಗಿಸಿಕೊಂಡ. ಮಲಿಕ್-ಕಾಫರನ ವೃತ್ತಾಂತದಂತೆಯೇ ಈತನ ಕಥೆಯೂ ಇದೆ. ಮಲಿಕ್-ಕಾಫರ್ ಹಿಂದೂಧರ್ಮಕ್ಕೆ ಕಂಟಕನಾಗಿ ಬಳಿಕ ಖಿಲ್ಜಿಯನ್ನೇ ಕೊಂದು ಸಿಂಹಾಸನವೇರಿ ಒಂದೇ ತಿಂಗಳಲ್ಲಿ ಕೊಲೆಯಾಗಿ ಹೋದರೆ ಈ ಚಾಣಾಕ್ಷ ಸಮಯ ಕಾದು ಕೆಲಸ ಸಾಧಿಸಿ ಹಿಂದುತ್ವವನ್ನು ಎತ್ತಿ ಹಿಡಿದ. ಈ ಹುಡುಗನನ್ನು ಮತಾಂತರಿಸಿ ಹಸನ್ ಎಂದು ಹೆಸರಿಟ್ಟು ಸುಲ್ತಾನ ಹಾಗೂ ಅವನ ಆಸ್ಥಾನಿಕರು ತಮ್ಮ ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳಲಾರಂಭಿಸಿದರು. ಶೀಘ್ರದಲ್ಲೇ ಯುದ್ಧ ವಿದ್ಯೆ ಕಲಿತ, ಅಪಾರ ಚಾಣಾಕ್ಷಮತಿಯೂ ಆಗಿದ್ದ ಇವನ ಹೆಸರನ್ನು ಖುಸ್ರುಖಾನ್ ಎಂದು ಬದಲಾಯಿಸಿ ಸೇನಾನಾಯಕನನ್ನಾಗಿಸಿ ಯುದ್ಧಕ್ಕೆ ಕಳುಹಿಸಲಾರಂಭಿಸಿದ ಅಲ್ಲಾವುದ್ದೀನ. ಮಲಿಕ್-ಕಾಫರನ ಬಳಿಕ ಅಲ್ಲಾವುದ್ದೀನನ ಮಗ ಮುಬಾರಿಕ್'ಗೆ ದೆಹಲಿಯ ಪಟ್ಟ ಸಿಕ್ಕಿತು. ಮುಬಾರಿಕ್ ನೊಡನೆ ವಿಶೇಷ ಸ್ನೇಹದಿಂದ ಇದ್ದ ಖುಸ್ರುಖಾನ್ ಮುಬಾರಿಕ್ ಪಟ್ಟ ಏರಲು ವಿಶೇಷ ಸಹಾಯವನ್ನೂ ಮಾಡಿದ. ಮಾತ್ರವಲ್ಲ ಆಡಳಿತ ಸೂತ್ರಗಳೆಲ್ಲವೂ ಬುದ್ಧಿವಂತನಾದ ಈತನ ಕೈಗೇ ಬಂತು. ಜೊತೆಗೆ ಮುಬಾರಿಕ್ನ ಅಂತಃಪುರದ ಲೈಂಗಿಕ ವ್ಯವಹಾರಗಳ ಮೇಲ್ವಿಚಾರಣೆಯೂ! ಅಲ್ಲಿ...ಅಲ್ಲಿ ಅವನಿಗೆ ಆಕೆಯ ಪರಿಚಯವಾಯಿತು.


ದೇವಲ ದೇವಿ. ಆಕೆಯದ್ದು ಆ ಕಾಲದ ಬಹುತೇಕ ಹಿಂದೂ ರಾಣಿಯರಂತೆ ದುರಂತ ಅಧ್ಯಾಯ. ಅಲ್ಲಾವುದ್ದೀನ್ ಗುಜರಾತನ್ನು ಆಕ್ರಮಿಸಿ ಅಲ್ಲಿನ ರಾಜನನ್ನು ಸೋಲಿಸಿ ಆತನ ರಾಣಿ ಕಮಲಾದೇವಿಯನ್ನು ಹೊತ್ತು ತಂದ. ತನ್ನ ಮಗಳು ದೇವಲದೇವಿಯೊಂದಿಗೆ ಮುಸಲ್ಮಾನ ರಕ್ಕಸರ ಕಣ್ಣುತಪ್ಪಿಸಿ ಕಾಡುಮೇಡು ಅಲೆದ ರಾಜ. ರಕ್ಷಣೆಗಾಗಿ ದೇವಗಿರಿಯ ಶಂಕರದೇವನೊಂದಿಗೆ ಆಕೆಯ ವಿವಾಹವೇನೋ ಆಯಿತು. ಆದರೆ ಅಲ್ಲಾವುದ್ದೀನ್ ಎಂಬ ರಕ್ಕಸನ ಜನಾನಾ ಸೇರಿದ್ದ ಆಕೆಯ ತಾಯಿ ಕಮಲಾದೇವಿ ಮಗಳನ್ನು ಹುಡುಕಿಸಿ ತಂದು ಇಸ್ಲಾಮಿಗೆ ಸೇರಿಸಬೇಕೆಂಬ ಆಸೆ ವ್ಯಕ್ತಪಡಿಸಿದಳಂತೆ! ಆ ಸಮಯದಲ್ಲೇ ದೇವಗಿರಿಯನ್ನು ಮತ್ತೆ  ಮುತ್ತಿದ ಮಲಿಕ್-ಕಾಫರ್ ದೇವಲ ದೇವಿಯನ್ನು ಸೆರೆ ಹಿಡಿದು ದೆಹಲಿಗೆ ರವಾನಿಸಿದ. ಅಲ್ಲಿ ಅಲ್ಲಾವುದ್ದೀನನ ಹಿರಿ ಮಗ ಖಿಜ್ರಾಖಾನ್ ಜೊತೆ ಆಕೆಗೆ ಮದುವೆ ಮಾಡಿಸಲಾಯಿತು. ಅಲ್ಲಾವುದ್ದೀನ ಸತ್ತಾಗ ಖಿಜ್ರಾಖಾನನನ್ನು ಬಂಧಿಸಿ ಆತನ ಕಣ್ಣುಕಿತ್ತು ಸಾಯಿಸಿದ ಮುಬಾರಿಕ್ ದೇವಲ ದೇವಿಯನ್ನು ತಾನು ವಿವಾಹವಾದ. ಹೀಗೆ ನರಕಮಯವಾದ ಜೀವನವನ್ನು ಆಕೆ ಸವೆಯುವಂತಾದರೂ ಆಕೆ ಹಿಂದೂವಾಗಿಯೇ ಉಳಿದಿದ್ದಳು. ಅಲ್ಲಿಯವರೆಗೆ ಮಡುಗಟ್ಟಿದ್ದ ಆಕ್ರೋಶಕ್ಕೆ ತಂಪೆರೆಯುವಂತೆ ತನ್ನಂತೆಯೇ ದೌರ್ಜನ್ಯಕ್ಕೆ ಗುರಿಯಾಗಿ ಎದೆಯಲ್ಲಿ ಅಪಾರ ಸೇಡು-ವಿದ್ವೇಷಗಳನ್ನು ಹೊತ್ತಿದ್ದ ಖುಸ್ರುಖಾನ್'ನ ಸಂಪರ್ಕವಾಯಿತು. ಆ ಕ್ಷೀಣ ಅವಕಾಶದ ಬೆಳಕೇ ಸತತ ಅತ್ಯಾಚಾರಕ್ಕೀಡಾಗುತ್ತಿದ್ದರೂ ಆಕೆಯ ಮನಸ್ಸನ್ನು ಪ್ರಫುಲ್ಲಗೊಳಿಸಿ ರಾಣಿಯಾಗಿ ತನ್ನ ಅಧಿಕಾರವನ್ನು ಚಲಾಯಿಸುವ ಹುಮ್ಮಸ್ಸನ್ನೂ ಆಕೆಯಲ್ಲಿ ಹುಟ್ಟಿಸಿತು. 


ಮುಬಾರಿಕ್ ಲಂಪಟನಾಗಿದ್ದ. ಹೆಂಗಸರಂತೆ ವೇಶ ಹಾಕಿ ತನ್ನ ಹುಡುಗಿಯರ ದಂಡಿನೊಡನೆ ಕುಣಿಯುತ್ತಿದ್ದ. ಆಡಳಿತದಲ್ಲಂತೂ ತನ್ನ ಗುಲಾಮ ಖುಸ್ರುಖಾನನ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದ. ಆ ಸಮಯದಲ್ಲಿ ಖುಸ್ರುಖಾನನಿಗೆ ತನ್ನ ಪೂರ್ವದ ಅಸ್ಮಿತೆಯ ಅರಿವು ತಾನಾಗಿ ಮೇಲೆದ್ದಿತು. ದೇವಲದೇವಿಯ ಸಂಪರ್ಕ ಸಿಕ್ಕಿದ ನಂತರವಂತೂ ಈ ಇಬ್ಬರೂ ಗುಜರಾತಿಗರೂ ಒಂದಾಗಿ ಕತ್ತಿ ಮಸೆಯಲು ಶುರುವಿಟ್ಟರು. ಹಿಂದೂಗಳ ಗೌರವವನ್ನು ಪುನರ್ ಸ್ಥಾಪಿಸಲು ಈರ್ವರೂ ಜೊತೆಯಾಗಿ ತಂತ್ರಗಳನ್ನು ಹೆಣೆಯತೊಡಗಿದರು. ಖುಸ್ರು ತನ್ನ ಅಣ್ಣನನ್ನು ಗುಜರಾತಿನ ರಾಜ್ಯವ್ಯಾಪಾರಿಯನ್ನಾಗಿಸಿದ. ತನ್ನ ಅಂಗರಕ್ಷಕರನ್ನಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಸೇನಾವೀರರನ್ನು ನಿಯುಕ್ತಿಗೊಳಿಸಿದ. ಅವನೇ ಸೇನಾಧಿಪತಿಯೂ ರಾಜನ ಆಪ್ತನಾಗಿ ರಾಜ್ಯವ್ಯವಹಾರಗಳನ್ನು ನೋಡಿಕೊಳ್ಳುವವನೂ ಆಗಿದ್ದ ಕಾರಣ ಪ್ರಶ್ನಿಸಲು ಯಾರಿಗೂ ಹಕ್ಕಿರಲಿಲ್ಲ. ತನ್ನ ನಡೆಗಳನ್ನು ಕಂಡು ರಾಜನಿಗೆ ದೂರು ನೀಡುತ್ತಿದ್ದ ಸುಲ್ತಾನನ ಒಡ್ಡೊಲಗದ ಹಿರಿತಲೆಗಳನ್ನು ಮುಗುಮ್ಮಾಗುಳಿಸಲು ಅರಸನನ್ನೇ ಪ್ರೇರೇಪಿಸಿ ಅವನನ್ನೇ ಮುಂದಿಟ್ಟುಕೊಂಡು ದಕ್ಷಿಣದ ಕಡೆ ದಂಡಯಾತ್ರೆ ನಡೆಸಿ ಹಿಂದೂರಾಜರನ್ನು ಸೋಲಿಸಿ ಖಜಾನೆಯನ್ನು ತುಂಬಿಸಿದ. ಸ್ವಲ್ಪಕಾಲದ ಬಳಿಕ ತಾನೊಬ್ಬನೇ ದಕ್ಷಿಣಕ್ಕೆ ದಂಡಯಾತ್ರೆ ನಡೆಸಿ ಮಲಬಾರಿನ ರಾಜನನ್ನು ಸೋಲಿಸಿದ. ಆದರೆ ಈ ಅವಧಿಯಲ್ಲಿ ದಕ್ಷಿಣದಲ್ಲಿ ಅಲ್ಲಲ್ಲಿ ಹಿಂದೂ ರಾಜರು ಸುಲ್ತಾನನ ವಿರುದ್ಧ ದಂಗೆಯೆದ್ದರು. ಇದರ ಸೂತ್ರಧಾರ ಖುಸ್ರುಖಾನ್ ಎಂದು ಅವನ ಶತ್ರುಗಳು ಸುಲ್ತಾನನಿಗೆ ದೂರುಕೊಟ್ಟರು. ದೆಹಲಿಯಲ್ಲಂತೂ "ಹಿಂದೂ ಅರಸರು, ಸರದಾರರು, ಸೇನೆಗಳು ಸುಲ್ತಾನನ ಮೇಲೆ ಯೋಜಿಸುತ್ತಿರುವ ಕ್ರಾಂತಿಗೆ ರೂಪುರೇಷೆ ಹಾಕಿದವ ಖುಸ್ರುಖಾನನೇ. ಗುಜರಾತಲ್ಲಿ ಖುಸ್ರುಖಾನನ ಸೋದರನೇ ಆಡಳಿತ ಸೂತ್ರ ಹಿಡಿದು, ರಜಪೂತರೆಲ್ಲಾ ರಾಣಾ ಹಮ್ಮೀರನ ನೇತೃತ್ವದಲ್ಲಿ ದೆಹಲಿಯಿಂದ ಮುಸಲರನ್ನು ಕಿತ್ತೆಸೆಯುತ್ತಾರೆ. ರಾಣಿ ದೇವಲದೇವಿಯ ಆದೇಶದ ಮೇರೆಗೆ ಖುಸ್ರುಖಾನ್ ಕಾರ್ಯಾಚರಿಸುತ್ತಿದ್ದಾನೆ" ಎಂದು ಮುಂತಾದ ಗುಲ್ಲೆಬ್ಬಿತು. ಆದರೆ ಸುಲ್ತಾನನಿಗೆ ಯಾವುದೇ ಗುಮಾನಿ ಬರದಂತೆ ಯುದ್ಧದಲ್ಲಿ ಗೆದ್ದ ಸಂಪತ್ತನ್ನೆಲ್ಲಾ ಅವನ ಪದತಲಕ್ಕೆ ಅರ್ಪಿಸಿ ಖುಸ್ರುಖಾನನೂ, ತನ್ನ ಹೃದಯದ ಭಾವನೆ ಹೊರಗೆ ಬಾರದಂತೆ ವರ್ತಿಸುತ್ತಿದ್ದ ದೇವಲದೇವಿಯೂ ತಮ್ಮಂಥ ಇಸ್ಲಾಮ್ ನಿಷ್ಠರು ಇನ್ನೊಬ್ಬರಿಲ್ಲ ಎಂಬ ಭಾವನೆ ಬಿತ್ತುತ್ತಿದ್ದುದರಿಂದ ಹಿಂದೂ ವಿರೋಧಿಗಳಿಗೆ ಕೈಕೈ ಹಿಸುಕಿಕೊಳ್ಳುವುದಲ್ಲದೆ ಬೇರೆ ದಾರಿಯಿರಲಿಲ್ಲ. ಖುಸ್ರುಖಾನ್ ತಂದ ಸಂಪತ್ತಿನ ರಾಶಿಯನ್ನು ಕಂಡು ಮುಬಾರಿಕ್ ಆತನನ್ನು ಬಂಧಿಸುವ ಬದಲು ಉಳಿದೆಲ್ಲಾ ಆಡಳಿತ ವಲಯಗಳನ್ನೂ ಅವನ ಸುಪರ್ದಿಗೆ ಒಪ್ಪಿಸಿಬಿಟ್ಟ! 


ಆಡಳಿತಾಧಿಕಾರಿಯಾದದ್ದೇ ತಡ, ಖುಸ್ರು ಖಾನ್ ಹಿಂದಕ್ಕೆ ಅಲ್ಲಾವುದ್ದೀನ ಹಿಂದೂಗಳ ಮೇಲೆ ವಿಧಿಸಿದ್ದ ಅತಿಯಾದ ನಿಷೇಧಗಳನ್ನೆಲ್ಲಾ ಒಂದೊಂದಾಗಿ ತೆರವುಗೊಳಿಸುತ್ತಾ ಬಂದ. ಹಿಂದೂಗಳಿಗೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿದ. ಮುಸಲ್ಮಾನರ ಉಗ್ರದಂಡನೆಗಳಿಂದ ಹೈರಾಣಾಗಿದ್ದ ಹಿಂದೂಗಳಲ್ಲಿ ಸಂತೋಷ ಸಮಾಧಾನಗಳು ತುಂಬಿ ಖುಸ್ರುಖಾನ ತಮ್ಮ ರಕ್ಷಕನೆಂದೇ ಅವರು ಭಾವಿಸತೊಡಗಿದರು. ಹಿಂದೂಗಳು ಮಾತ್ರವಲ್ಲದೆ ಮುಸಲ್ಮಾನ ರೈತರ ಮೇಲೆ ಹಾಕಿದ ಕರಭಾರವನ್ನು ಇಳಿಸಿದ. ರಣರಂಗದಲ್ಲಿ ಅವನ ಶೌರ್ಯ, ಸಮಾನ ದೃಷ್ಟಿ, ಆಡಳಿತ ನೈಪುಣ್ಯ ಹಾಗೂ ಕಟ್ಟುನಿಟ್ಟನ್ನು ಕಂಡ ಪ್ರತಿಷ್ಠಿತ ಮುಸಲ್ಮಾನರಲ್ಲಿ ಹಲವರು ದುರ್ನಡತೆಯ ಮುಬಾರಕನಿಗಿಂತ ಇವನೇ ಉತ್ತಮ ಎಂಬ ಭಾವನೆ ಉದಿಸಿ ಅವನ ಪರ ವಾಲಿದರು. ಇಂತಹಾ ಪೂರಕ ವಾತಾವರಣವನ್ನು ಸೃಷ್ಟಿಸಿದ ಬಳಿಕ ಖುಸ್ರುಖಾನ ಹಾಗೂ ದೇವಲದೇವಿ ಜೋಡಿ ತಮ್ಮ ಮಹತ್ವಾಕಾಂಕ್ಷೆಯ ಕ್ರಾಂತಿಯನ್ನು ಉದ್ಘೋಷಿಸಲು ಕಾಲ ಪಕ್ವವಾಗಿದೆಯೆಂದು ತಿಳಿದು ಅದಕ್ಕೆ ಸನ್ನದ್ಧರಾದರು.


ಒಂದು ದಿನ ಸುಲ್ತಾನ ಮುಬಾರಿಕ್ ಬಳಿ ಖುಸ್ರು "ನನ್ನ ಮಾತಿಗೆ ಓಗೊಟ್ಟು ಸಾವಿರಾರು ಮಂದಿ ಹಿಂದೂಗಳು ಇಸ್ಲಾಂ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಆದರೆ ಸರ್ವರ ಸಮ್ಮುಖದಲ್ಲಿ ಮತಾಂತರಗೊಳ್ಲಲು ಅವರಿಗೆ ಸಂಕೋಚವಿದೆ. ಅದಕ್ಕಾಗಿ ನಾನು ಕೆಲವು ಆಯ್ದ ಪ್ರಮುಖರನ್ನು ಅರಮನೆಗೆ ಕರೆತರುತ್ತೇನೆ. ಅವರಿಗೆ ಇಸ್ಲಾಂ ದೀಕ್ಷೆ ನೀಡಬೇಕು" ಎಂದು ಭಿನ್ನವಿಸಿಕೊಂಡ. ಅರಸನ ಒಪ್ಪಿಗೆಯನ್ನು ಗಿಟ್ಟಿಸಿಕೊಂಡು ಈ ನೆಪದಲ್ಲಿ ತನ್ನ ನಂಬುಗೆಯವರನ್ನು ಅರಮನೆಯೊಳಗೆ ಕರೆಸಿಕೊಂಡು ಆಯಕಟ್ಟಿನ ಸ್ಥಾನಗಳಲ್ಲಿ ನೇಮಿಸಿದ. ಆತನ ಸೋದರ ಗುಜರಾತಿನಲ್ಲಿ ಮುಸ್ಲಿಮರ ಆಳ್ವಿಕೆಯನ್ನು ಕೊನೆಗಾಣಿಸಲು ದಂಗೆಯನ್ನು ಆರಂಭಿಸಿ 25ಸಾವಿರ ಹಿಂದೂ ಸೈನಿಕರನ್ನು ಖುಸ್ರುಖಾನನ ಸಹಾಯಕ್ಕೆ ಕಳುಹಿಸಿದ. ಕೆಲವೇ ದಿನಗಳಲ್ಲಿ ರಾತ್ರೋರಾತ್ರಿ ಸುಲ್ತಾನ್ ಮುಬಾರಿಕ್ ನ ಕೊಲೆಯಾಗಿ ಹೋಯಿತು. ಮುಸ್ಲಿಮರ ಆಳ್ವಿಕೆಯಲ್ಲಿ ದೆಹಲಿಯ ಅರಮನೆಗಳಲ್ಲಿ ಸುಲ್ತಾನನ ಕೊಲೆ, ರಕ್ತಪಾತಗಳೇನು ಹೊಸವಿಷಯಗಳಲ್ಲ. ಅಲ್ಲಾವುದ್ದೀನನನ್ನು ಮಲಿಕ್-ಕಾಫರ್ ಕೊಂದಿದ್ದ; ಆತನನ್ನು ಮುಬಾರಿಕ್ ಕೊಂದಿದ್ದ. ಇದಾದ ಕೆಲವೇ ದಿನಗಳಲ್ಲಿ ಖುಸ್ರುಖಾನನ ಕಡೆಯವರೇ ಮುಬಾರಿಕನನ್ನು ಮಸಣಕ್ಕಟ್ಟಿದರೆಂದೂ ಸುದ್ದಿಯೂ, ಖುಸ್ರುಖಾನನೇ ಇನ್ನು ಮುಂದೆ ಸುಲ್ತಾನನೆಂದು ರಾಜಾದೇಶವೂ ಒಟ್ಟೊಟ್ಟಿಗೆ ಜನರ ಕಿವಿಗೆ ಬಿದ್ದು ಮುಸ್ಲಿಮರ ಜಂಘಾಬಲವೇ ಉಡುಗಿ ಹೋಯಿತು. ಜೊತೆಗೆ ಖುಸ್ರುಖಾನ್ ದೇವಲದೇವಿಯನ್ನು ವಿವಾಹವೂ ಆದ. ಇದಿಷ್ಟೇ ಆಗಿದ್ದರೆ ಬರೇ ಎಂದಿನ ರಾಜಕೀಯ ಕ್ರಾಂತಿಯೆಂದು ಜನ ಸುಮ್ಮನಾಗುತ್ತಿದ್ದರು. ಖುಸ್ರುಖಾನ ದೇವಲದೇವಿಯರು ಜೊತೆಗೂಡಿ ಮಾಡಿದ ಘೋಷಣೆಯೊಂದು ಮುಸ್ಲಿಮರ ಪಾದದಡಿಯ ಭೂಮಿ ಕಂಪಿಸುವಂತೆ ಮಾಡಿತು. ಅವರಿಬ್ಬರೂ ಜೊತೆಗೂಡಿ ಧಾರ್ಮಿಕ ಕ್ರಾಂತಿಗೂ ನಾಂದಿ ಹಾಡಿದ್ದರು. 1320ರ ಏಪ್ರಿಲ್ 15ರಂದು "ಹಿಂದೂವಾಗಿದ್ದ ನನ್ನನ್ನು ಇಸ್ಲಾಂಗೆ ಪರಿವರ್ತಿಸಿ ನನ್ನ ಜೀವನವನ್ನು ನರಕಮಯಗೊಳಿಸಲಾಗಿತ್ತು. ಇವತ್ತು ಈ ಹೇಯ ಮುಸಲ ಬದುಕನ್ನು ಕೊನೆಗೊಳಿಸಿ ಮತ್ತೆ ಹಿಂದೂಧರ್ಮವನ್ನು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ನರನಾಡಿಗಳಲ್ಲಿ ಹಿಂದೂ ರಕ್ತವೇ ಹರಿಯುತ್ತಿದೆ. ಹಿಂದೂಧರ್ಮವೇ ನನ್ನ ಜೀವಾಳ. ನಾನೊಬ್ಬ ಹಿಂದೂ ಎಂದು ಘಂಟಾಘೋಷವಾಗಿ ಸಾರುತ್ತಿದ್ದೇನೆ. ನಾನೀಗ ಅಖಂಡ ಭಾರತದ ಹಿಂದೂ ಚಕ್ರವರ್ತಿ. ಅಸಹಾಯಕಳಾಗಿ ಇಷ್ಟವಿಲ್ಲದ ಮದುವೆಗಳಿಂದ ಬೇಸತ್ತು ಇಸ್ಲಾಂನಡಿ ಬದುಕಿ ಈಗ ನನ್ನ ಧರ್ಮಪತ್ನಿಯಾಗಿರುವ ದೇವಲದೇವಿಯೂ ಇಸ್ಲಾಂನ್ನು ಧಿಕ್ಕರಿಸಿ ಹಿಂದೂ ಸಾಮ್ರಾಜ್ಞಿಯಾಗಿ ಬದುಕುತ್ತಾಳೆ. ಇಸ್ಲಾಂ ಮತೀಯರಾಗಿದ್ದರಿಂದ ತಟ್ಟಿದ್ದ ಪಾಪವನ್ನು ನಮ್ಮ ಈ ಪವಿತ್ರ ಪ್ರಜ್ಞೆ ತೊಡೆದು ಹಾಕಲಿ" ಎಂದು ಖುಸ್ರುಖಾನ್ ಘೋಷಣೆ ಮಾಡಿದ.


ವಿಚಿತ್ರವೆಂದರೆ ಹಿಂದೂವಾದರೂ ಅರಸ ತನ್ನ ಹೆಸರನ್ನು ನಾಸಿರ್-ಉದ್-ದೀನ್ ಎಂದು ಇಟ್ಟುಕೊಂಡ. ಅಪಾರವಾದ ಇಸ್ಲಾಂನ ಹಿಂಸೆಯನ್ನುಂಡು ಅವನ ಮೂಲ ಹೆಸರೇ ಅವನಿಗೆ ಮರೆತು ಹೋಗಿರಬೇಕು. ಆದರೆ ಅವನ ಮುಂದಿನ ಕಾರ್ಯದಲ್ಲಿ ಮಾತ್ರ ಹಿಂದೂ ಶ್ರದ್ಧೆಯೇ ಅಡಗಿತ್ತು. ಅಸಲಿಗೆ ನಾಸಿರ್-ಉದ್-ದೀನ್ ಎನ್ನುವುದರ ಅರ್ಥ ಧರ್ಮಶ್ರದ್ಧೆಯನ್ನು ಉಳಿಸಿಕೊಳ್ಳುವಾತ ಎಂದೇ. ತನ್ನ ಶ್ರದ್ಧೆ ಇನ್ನು ಮುಂದೆ ಹಿಂದೂ ಧರ್ಮದಲ್ಲಿ ಎಂದು ಅವನ ಉದ್ಘೋಷ ಸ್ಪಷ್ಟಪಡಿಸಿತ್ತು. ಹೀಗೆ ಘೋಷಣೆಯಾದ ಮರುಕ್ಷಣವೇ ಹಿಂದೂರಾಜ್ಯಗಳನ್ನು ಲೂಟಿಗೈದು ಸಂಗ್ರಹಿಸಿದ್ದ ಅಪಾರ ಸಂಪತ್ತನ್ನು ಹಿಂದೂ ಸೇನಾನಿ, ಸಾಮಾನ್ಯ ಹಿಂದೂ ಸೈನಿಕರಿಗೆಲ್ಲಾ ಹಂಚಿದ. ಸೈನಿಕರ ವೇತನಗಳೂ ಹೆಚ್ಚಳಗೊಂಡವು. ರೈತಾಪಿ ವರ್ಗದ ಮೇಲಿನ ತೆರಿಗೆಗಳೂ ಕಡಿತಗೊಂಡವು. ಧರ್ಮದ ಕಾರಣಕ್ಕಾಗಿ ಸೆರೆಯಲ್ಲಿದ್ದ ಹಿಂದೂಗಳನ್ನು, ಸುಲ್ತಾನನಿಗೆ ವಿರೋಧ ವ್ಯಕ್ತಪಡಿಸಿದ ಸಣ್ಣಪುಟ್ಟ ಕಾರಣಗಳಿಗೆ ಸೆರೆಯಾಗಿದ್ದ ಮುಸ್ಲಿಮರನ್ನೂ ಬಂಧನದಿಂದ ಮುಕ್ತಗೊಳಿಸಿದ. ಆಡಳಿತದಲ್ಲಿ ಸಮಾನದೃಷ್ಟಿಯನ್ನು ಇಟ್ಟುಕೊಂಡ ಕಾರಣ ಅವನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. 



ಹಿಂದೂಗಳನ್ನು ಬಸವಳಿಯುವಂತೆ ಮಾಡಿದ್ದ ಜಿಜಿಯಾ ತಲೆಗಂದಾಯವನ್ನು ತೆಗೆದು ಹಾಕಿ ಹಿಂದೂಗಳ ನೆಮ್ಮದಿಗೆ ಕಾರಣನಾದ. ತೀರ್ಥಯಾತ್ರೆ, ತೀರ್ಥಸ್ನಾನಗಳ ಮೇಲಿದ್ದ ನಿಷೇಧವನ್ನು ತೊಡೆದುಹಾಕಿದ. ಹಿಂದೂಗಳನ್ನು ನಿಕೃಷ್ಟವಾಗಿ ನೋಡುತ್ತಿದ್ದ ಮುಸ್ಲಿಮರೂ, ಮುಸ್ಲಿಮ್ ಸೈನಿಕ, ಸೇನಾನಿಗಳೂ ಈಗ ಬಗ್ಗಿ ನಮಸ್ಕರಿಸಲು ಆರಂಭಿಸಿದರು. ಅರಮನೆಗಳಲ್ಲಿ ಈಗ ಹಿಂದೂ ದೇವರುಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡು ನಿತ್ಯಪೂಜೆ ನಡೆಯುವಂತಾಯಿತು. ಕುರಾನ್ ಅಯಾತ್ ಗಳ ಬದಲು ವೇದಘೋಷ ಅನುರಣನಿಸಿತು. ಬಾಂಗ್ ಕೇಳುವ ಜಾಗದಲ್ಲಿ ಘಂಟಾನಾದ, ಶಂಖನಾದ ಮೊಳಗಿತು. ಉಗುಳಿಕೊಡುವ ಹೀನ ಆಹಾರದ ಜಾಗದಲ್ಲಿ ಪ್ರಸಾದ ವಿತರಣೆ ಆರಂಭವಾಯಿತು. ಅರಸನೂ ಅರಮನೆಯಲ್ಲಿ ಬೀಡುಬಿಟ್ಟ ಹಿಂದೂಗಳು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಬಹು ಶ್ರದ್ಧೆ, ಆಸ್ಥೆಗಳಿಂದ ನಡೆಸಿದರು. ಹಿಂದೂ ಪ್ರಜೆಗಳ, ಹಿಂದೂ ಸೈನಿಕರ ಸಂತೋಷ, ಉತ್ಸಾಹ, ಸಂಭ್ರಮಾಚರಣೆಗಳು ಮೇರೆ ಮೀರಿದವು. ಮುಸ್ಲಿಮರು ಗೆದ್ದಾಗ ಹಿಂದೂ ದೇವಾಲಯಗಳನ್ನು ಕೆಡವಿ ಮೂರ್ತಿಗಳನ್ನು ಭಗ್ನಗೊಳಿಸಿ ಮಸೀದಿಯನ್ನಾಗಿ ಪರಿವರ್ತಿಸುತ್ತಿದ್ದರು. ಈಗ ಹಿಂದೂಗಳು ದೇವಾಲಯಗಳನ್ನು ಕೆಡವಿ ಕಟ್ಟಿದ್ದ ಮಸೀದಿಗಳನ್ನು ಉರುಳಿಸಿ ದೇವಾಲಯಗಳನ್ನು ಮರು ಸ್ಥಾಪಿಸಿ ಅಲ್ಲಿ ಹಿಂದೂ ಧಾರ್ಮಿಕ ದೀಪ ಬೆಳಗುವಂತೆ, ವೇದಘೋಷ ಮೊಳಗುವಂತೆ ಮಾಡಿದರು. ಅಷ್ಟಕ್ಕೇ ಸುಮ್ಮನಾಗದ ಹಿಂದೂ ಚಕ್ರವರ್ತಿ ಬಲಾತ್ಕಾರವಾಗಿ ಜನಾನಾಕ್ಕೆ ದೂಡಲ್ಪಟ್ಟವರನ್ನು ಅವರಿಚ್ಛೆಯಂತೆ ಮತ್ತೆ ಹಿಂದೂಗಳನ್ನಾಗಿಸಿ ಹಿಂದೂ ಸೈನಿಕರಿಗೆ, ಹಿಂದೂ ಅಧಿಕಾರಿಗಳಿಗೆ ಮದುವೆ ಮಾಡಿಸಿದ. ವ್ಯಾವಹಾರಿಕವಾಗಿಯೂ ಅರಸ ಜಾಣ್ಮೆಯಿಂದ ವರ್ತಿಸಿದ. ದೆಹಲಿಯಲ್ಲಿ ಒಮ್ಮೆಗೇ ಎಲ್ಲವನ್ನೂ ಬದಲಾಯಿಸಿದರೆ ಬಹು ಅಪಾಯವಾಗುವ ಸಾಧ್ಯೆತೆ ಹೆಚ್ಚಿತ್ತು. ಅದಕ್ಕಾಗಿ ಯಾವೆಲ್ಲಾ ಮುಸಲ್ಮಾನ ಅದಿಕಾರಿಗಳು, ಮುಲ್ಲಾ-ಮೌಲ್ವಿಗಳು ಹಿಂದೂ ಸಾಮ್ರಾಜ್ಯ ಉರುಳಿಸಲು ಪಿತೂರಿ ಮಾಡಬಹುದೆಂಬ ಗುಮಾನಿಯಿತ್ತೋ ಅಂಥವರ ಬಳಿ ನಯನಾಜೂಕಿನಿಂದ ಮಾತಾಡಿ, ಉಪಾಹಾರ - ಉಡುಗೊರೆಗಳನ್ನು ಕೊಟ್ಟು ತನ್ನ ದಾಕ್ಷಿಣ್ಯಕ್ಕೆ ಕಟ್ಟುಬೀಳುವಂತೆ ಮಾಡಿದ. ಮುಸ್ಲಿಂ ರೈತರಿಗೂ, ಮುಸ್ಲಿಂ ಯೋಧರಿಗೂ ಹಿಂದೂಗಳಿಗೆ ಸಮಾನವಾದ ನಾಗರಿಕ ಹಕ್ಕನ್ನು ನೀಡಿ ತೆರಿಗೆಯಿಂದ ವಿನಾಯಿತಿ ನೀಡಿದ್ದ. ತನ್ನ ಬಲ ಸೇನೆಯಲ್ಲಿ ಎಂದು ನಂಬಿದ್ದ ಆತ ಆಯಕಟ್ಟಿನ ಜಾಗದಲ್ಲಿ ತನ್ನ ನಂಬಿಕಸ್ಥರಾದ ಹಿಂದೂಗಳನ್ನೇ ನೇಮಿಸಿದ್ದ. ಅವನ ಸುವ್ಯವಸ್ಥಿತ ಆಳ್ವಿಕೆಯ ಫಲವಾಗಿ ತೆರಿಗೆ, ಕಪ್ಪಗಳೆಲ್ಲವೂ ಸರಿಯಾದ ಕಾಲಕ್ಕೆ ಸಂಗ್ರಹವಾಗಿ ಖಜಾನೆಯೂ ತುಂಬಿ ತುಳುಕಿತು; ದೇಶದಲ್ಲಿ ಸಮೃದ್ಧತೆ-ಸಮಾಧಾನವೂ ತುಂಬಿತು. ದೆಹಲಿಗೆ ಕಪ್ಪವನ್ನೊಪ್ಪಿಸುತ್ತಿದ್ದ ಹಿಂದೂ ರಾಜರನ್ನು ಸ್ವತಂತ್ರರಾಗಲೂ ಆತ ಅವಕಾಶ ಕೊಟ್ಟ.


ಇಂತಹಾ ಮಹಾ ಹಿಂದೂ ಕ್ರಾಂತಿಯಾಗಿ ಒಂದು ವರ್ಷ ತುಂಬುವಷ್ಟರಲ್ಲಿ ಕೆಲವು ಮುಸಲ್ಮಾನ್ ಅಧಿಕಾರಿಗಳು ಹಿಂದೂ ರಾಜನನ್ನು ಪದಚ್ಯುತಗೊಳಿಸಲು ಪಿತೂರಿ ನಡೆಸಿದರು. ಪಂಜಾಬ್  ಪ್ರಾಂತ್ಯದ ಆಡಳಿತಗಾರ ಘಿಯಾಸುದ್ದೀನ್ ಇದರ ನೇತೃತ್ವ ವಹಿಸಿ ಅರಸನ ಕೈಕೆಳಗಿನ ಮುಸ್ಲಿಂ ಅಧಿಕಾರಿಗಳಿಗೆಲ್ಲಾ ಪತ್ರ ರವಾನಿಸಿದ. ಅವರು ಇದನ್ನೆಲ್ಲಾ ಅರಸನ ಕೈಗೇ ಇತ್ತರು. ಕೂಡಲೇ ಕಾರ್ಯ ಪ್ರವೃತ್ತನಾದ ರಾಜ ಎಳವೆಯಲ್ಲೇ ಈ ಪಿತೂರಿಯನ್ನು ಮುರುಟಿಸಬೇಕೆಂದು ತಾನೇ ಯುದ್ಧಕ್ಕೆ ಮುಂದಾಗಿ ಘಿಯಾಸುದ್ದೀನನ ಮೇಲೆ ಏರಿ ಹೋದ. ಮೊದಲ ದಿನ ಜಯ ಲಭಿಸಿತು. ಅಷ್ಟರಲ್ಲಿ ಹಿಂದೂ ಸೇನೆಯಲ್ಲಿದ್ದ ಮುಸ್ಲಿಂ ಸೇನಾಧಿಕಾರಿಗಳು ಸೈನಿಕರು ಗುಟ್ಟಾಗಿ ಘಿಯಾಸುದ್ದೀನನಿಗೆ ಬೆಂಬಲ ಕೊಡುವ ಪ್ರಸ್ತಾಪವೊಡ್ಡಿ ಹಿಂದೂ ಸೇನೆ ಸೋಲುವಂತೆ ಮಾಡಿದರು. ಯಥಾಪ್ರಕಾರ ಹಿಂದೂ ಅರಸನ ಕತ್ತು ಕೊಯ್ಯಲಾಯಿತು. ವಿಪರ್ಯಾಸವೆಂದರೆ ಯಾವೆಲ್ಲಾ ಹಿಂದೂ ಅರಸರಿಗೆ ಈ ಹಿಂದೂ ಚಕ್ರವರ್ತಿ ಬೆಂಬಲ ಕೊಟ್ಟು ಅವರನ್ನು ಸ್ವತಂತ್ರಗೊಳಿಸಿದ್ದನೋ ಅವರೆಲ್ಲಾ ನಿರ್ಣಾಯಕವಾಗಿ ಕೇಂದ್ರದಲ್ಲಿ ಹಿಂದೂ ಅಧಿಕಾರ ಸ್ಥಾಪನೆಗೆ ಸಹಕಾರವನ್ನೇ ಕೊಡಲಿಲ್ಲ. ಹಾಗಾಗಿ ಮತ್ತೆ ಎದ್ದಿದ್ದ ಹಿಂದೂ ವೀರ ಅಸ್ಮಿತೆಯ ಪ್ರಜ್ಞೆಗೆ ಕೆಂದ್ರದ ಅಧಿಕಾರ ಒಂದೇ ವರ್ಷಕ್ಕೆ ಸೀಮಿತವಾಯಿತು. ಆದರೂ ಧೀರ ಪೃಥ್ವೀರಾಜನ ಬಳಿಕ ದೆಹಲಿಯ ಗದ್ದುಗೆಯನ್ನೇರಿದ ಚಕ್ರವರ್ತಿಯೆಂದು ಆ ಹಿಂದೂ ವೀರನ ಕೀರ್ತಿ ಚಿರಸ್ಥಾಯಿಯಾಯಿತು. ಈ ವೀರನ ಜೊತೆ ನಿಂತ ಅವನ ಸೋದರ ಹಾಗೂ ದೇವಲದೇವಿಗೂ ಹಿಂದೂಗಳಿಂದ ಗೌರವಾರ್ಪಣೆಯಾಗಬೇಕು. ನತದೃಷ್ಟ ಹಿಂದೂಗಳು ಅಪಾರವಾದ ಮುಸ್ಲಿಂ ದೌರ್ಜನ್ಯದ ನಡುವೆ ಕೆಲ ಸಮಯಕ್ಕಾದರೂ ಹಿಂದೂ ಚಕ್ರವರ್ತಿಯೊಬ್ಬನ ಸುಂದರ ಸಮಾನ ದೃಷ್ಟಿಯ ಆಳ್ವಿಕೆಯಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಅದಕ್ಕಿಂತಲೂ ಮುಖ್ಯವಾದುದು ಇನ್ನೊಂದು; ಕೆಳವರ್ಗದಲ್ಲಿ ಜನಿಸಿ ಮುಸಲ್ಮಾನನಾಗಿ, ಮುಸ್ಲಿಮರ ಲೈಂಗಿಕ ದಾಹಕ್ಕೆ ಆಹಾರವಾಗಿ ತನ್ನ ಕಾರ್ಯದಕ್ಷತೆ, ರಣಚಾತುರ್ಯ, ರಾಜಕೀಯ ತಂತ್ರಜ್ಞತೆ, ಧೈರ್ಯ-ಚಾಣಾಕ್ಷತೆಯಿಂದ ಬೆಳೆದು ತನ್ನ ಧ್ಯೇಯವನ್ನು ಸಮಯ ಬಂದಾಗ ಸಾಧಿಸಿ ಮತ್ತೆ ಹಿಂದೂವಾಗಿ, ಹಿಂದೂ ಚಕ್ರವರ್ತಿಯಾಗಿ ಕೆಲಕಾಲವಾದರೂ ಹಿಂದೂಗಳಿಗೊಂದು ನೆಮ್ಮದಿಯ ಬಾಳುಕೊಟ್ಟದ್ದು ಕಡಿಮೆ ಸಾಧನೆಯೇನಲ್ಲ; ಅದೂ ಮತಾಂಧ ಮುಸ್ಲಿಮರ ನಡುವೆ!

ವಂಗ ಭಂಗ; ಹಿಂದೂವಿನ ಮರಣಮೃದಂಗ

ವಂಗ ಭಂಗ; ಹಿಂದೂವಿನ ಮರಣಮೃದಂಗ


ತಾವೇ ಏನಾದರೂ ಅನಾಚಾರ ಮಾಡಿ ತಮ್ಮವರನ್ನು ಎತ್ತಿಕಟ್ಟುವುದು. ಇದು ಜಿಹಾದಿನ ಒಂದು ಬಗೆ. ಬಾಂಗ್ಲಾದಲ್ಲಿ ಈಗ ಆಗುತ್ತಿರುವುದೂ ಅದೇ. ದುರ್ಗಾ ಪೆಂಡಾಲಿನಲ್ಲಿ ದೇವಿಯ ಮೂರ್ತಿಯ ಪಾದದ ಬಳಿ ಕುರಾನ್ ಪ್ರತಿ ಇಟ್ಟ ಜಮಾತ್-ಇ-ಇಸ್ಲಾಮ್ ಬಳಿಕ ಅದರ ಫೋಟೋ ತೆಗೆದು ಜಾಲತಾಣಗಳಲ್ಲಿ ಹಾಕಿ ಇಸ್ಲಾಂನ ನಿಂದನೆಯೆಂಬಂತೆ ಬಿಂಬಿಸಿ ತನ್ನವರನ್ನು ಎತ್ತಿಕಟ್ಟಿತು. ಇದನ್ನೇ ನೆಪವಾಗಿಟ್ಟುಕೊಂಡು ಬೀದಿಗಿಳಿದ ಮತಾಂಧರು ಹಲವು ದೇವಾಲಯಗಳನ್ನು ಧ್ವಂಸಗೊಳಿಸಿದರು. 150ಕ್ಕೂ ಹೆಚ್ಚು ಹಿಂದೂ ಪರಿವಾರಗಳ ಮೇಲೆ ದಾಳಿ ನಡೆಸಿದರು. ಮೂರು ಜನ ಹಿಂದೂಗಳನ್ನು ಕೊಂದರು. ಹಿಂದೂಗಳನ್ನು ಗುರಿಯಾಗಿಸಿಕೊಂಡ ಈ ದಾಳಿ 22 ಜಿಲ್ಲೆಗಳಲ್ಲಿ ವ್ಯಾಪಿಸಿತು. ಈ ಬೆಂಕಿ ಇನ್ನೂ ಆರಿಲ್ಲ. ಕೆಲವು ತಿಂಗಳುಗಳ ಹಿಂದಷ್ಟೇ ಗಡಿಯ ಈಚೆಗಿನ ಬಂಗಾಳೀ ಹಿಂದೂಗಳು ಅನುಭವಿಸಿದ ಹಿಂಸೆಯನ್ನು ಈಗ ಗಡಿಯಾಚೆಗಿನ ಬಂಗಾಳಿಗಳು ಅನುಭವಿಸುತ್ತಿದ್ದಾರೆ. ವಂಗಭಂಗ ಎಂದೋ ಆಗಿದೆ. ಆದರೆ ಅದರ ಕಿಡಿ ಇನ್ನೂ ಉರಿಯುತ್ತಲೇ ಇದೆ. ಜಿಹಾದ್ ರೂಪದಲ್ಲಿ!

50ವರ್ಷಗಳ ಹಿಂದೆಯೂ ಇದೇ ರೀತಿ ಆಗಿತ್ತು. ಹಿಂದೂಗಳು ಪ್ರಾಣ, ಮಾನ ರಕ್ಷಣೆಗಾಗಿ ಭಾರತಕ್ಕೆ ಓಡಿ ಬಂದಿದ್ದರು. ಈಗದರ ಸುವರ್ಣ ಸಂಭ್ರಮಕ್ಕೆ ಆ ರಕ್ಕಸರು ಹೊರಟಂತಿದೆ. ಕಳೆದ ಜೂನ್ ನಿಂದಲೇ ಈ ಜಿಹಾದ್ ಶುರುವಾಗಿದೆ. ಖಿಲಾಫತ್ ಹುಚ್ಚಿನಲ್ಲಿ ಶತಮಾನಗಳ ಹಿಂದೆಯೂ ಇಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು. ಸುಹ್ರಾವರ್ಧಿ ಎಂಬ ಗಾಂಧಿಯ ಮಾನಸಪುತ್ರನ ನೇತೃತ್ವದಲ್ಲಿ ನರಕ ಸೃಷ್ಟಿಯಾಗಿತ್ತು. ನಿತ್ಯದ ಕಿರುಕುಳ, ದಾಳಿಯಂತೂ ಇದ್ದೇ ಇದೆ. ಎಂದಿನಂತೆ ಮಾನವ ಹಕ್ಕುಗಳ ಹೋರಾಟಗಾರರು, ಹಿಂದೂಗಳ, ಹಿಂದೂ ಸಂಸ್ಕೃತಿಯ ವಿರುದ್ಧ ಸದಾ ಊಳಿಡುವ ಜಾತ್ಯಾತೀತವಾದಿಗಳು, ಸತ್ಯವನ್ನು ಮಾರಿಕೊಂಡು ಬೆತ್ತಲಾಗಿರುವ ಬುದ್ಧಿಗೇಡಿ ಪತ್ರಿಕೆಗಳು ತಮ್ಮ ತುಟಿಗಳನ್ನು ಹೊಲಿದುಕೊಂಡಿವೆ. ಹಿಂದೂಗಳೆಂದರೆ ಎಲ್ಲರಿಗೂ ಅಸಡ್ಡೆ, ಹಿಂದೂಗಳಿಗೂ! 200ಕ್ಕೂ ಹೆಚ್ಚು ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಾಧ್ಯಮಗಳು ಈ ಸುದ್ದಿಯನ್ನು ಮುಚ್ಚಿಟ್ಟಿವೆ. ಹಿಂದೂ ಪರವಾದ ದನಿಗಳನ್ನು ದಮನಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಹಿಂದೂ ಹತ್ಯಾಕಾಂಡದ ವಿವರ ಹಾಕುವ ಅಕೌಂಟುಗಳನ್ನು ಕಿತ್ತೆಸೆಯುತ್ತಿವೆ. ಹಿಂದೂವಿನ ಮೇಲಿನ ದೌರ್ಜನ್ಯದ ವಿಷಯ ಬಂದಾಗ ಎಲ್ಲರದ್ದೂ ನೀರವ ಮೌನದ, ಹಿಂದೂವಿನ ದನಿಯನ್ನು ನಿಲ್ಲಿಸುವ ಒಗ್ಗಟ್ಟು. ಹಿಂದೂ ಪ್ರತಿರೋಧಿಸಿದನೆಂದರೆ ಲಿಂಚಿಂಗ್, ಕೇಸರಿ ಭಯೋತ್ಪಾದನೆ ಎಂದು ಬೊಬ್ಬಿರಿದು ಬಿಂಬಿಸುವ ಒಗ್ಗಟ್ಟು!

1946ರಲ್ಲಿ ಬಂಗಾಳದಲ್ಲಿದ್ದ ಸುಹ್ರಾವರ್ದಿ ಸರಕಾರದ ಸುಪರ್ದಿಯಲ್ಲೇ ಹಿಂದೂಗಳ ನರಮೇಧ ನಡೆಯಿತು. ಕಲ್ಕತ್ತಾದಲ್ಲಂತೂ ಮೂರು ದಿನಗಳ ಕಾಲ ಹಿಂದೂಗಳ ಸಾಮೂಹಿಕ ಹತ್ಯೆ ಅಬಾಧಿತವಾಗಿ ನಡೆಯಿತು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಅಸಂಖ್ಯ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು. ಹಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು.  ಲೆಖ್ಖವಿಲ್ಲದಷ್ಟು ಮತಾಂತರ ನಡೆಯಿತು. ಕಲ್ಕತ್ತಾ ಪೊಲೀಸರು ಕೈಕಟ್ಟಿ ಕುಳಿತುಕೊಂಡಿದ್ದರು. ಕಾನೂನು ಪಾಲನೆ ಹೊಣೆಹೊತ್ತವರ ಕಣ್ಣೆದುರಲ್ಲೇ ಈ ಭೀಭತ್ಸ ಘಟನೆಗಳು ನಡೆದವು. ಎರಡು ತಿಂಗಳಲ್ಲಿ ಮೂವತ್ತು ಸಾವಿರ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಮೂರು ಲಕ್ಷಕ್ಕೂ ಹಿಂದೂಗಳ ಕಗ್ಗೊಲೆಯಾಯಿತು. ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಯಿತು. ಅದೇ ನವಖಾಲಿ, ಅದೇ ವಂಗ ಇಂದು ಮತ್ತೆ ಮತ್ತೆ ಹೊತ್ತಿ ಉರಿಯುತ್ತಿದೆ.

1970ರ ಚುನಾವಣೆಯಲ್ಲಿ(ಪಾಕಿಸ್ತಾನ ರಚನೆಯಾದ ಬಳಿಕದ ಮೊದಲ ಚುನಾವಣೆ) ಬಂಗಾಳಿ ಶೇಕ್ ಮುಜೀಬುರ್ ರಹಮಾನನ ಪಕ್ಷ ಪೂರ್ವ ಪಾಕಿಸ್ತಾನದಲ್ಲಿ ಬಹುಮತ ಗಳಿಸಿದ್ದು ಪಶ್ಚಿಮ ಪಾಕಿಸ್ತಾನಿಗಳ ಕಣ್ಣು ಕೆಂಪಗಾಗಿಸಿತ್ತು. ಪಾಕ್ ಅಧ್ಯಕ್ಷ ಯಾಹ್ಯಾಖಾನ್ ಸರಕಾರ ರಚಿಸಲು ಬಿಡದೆ ಸೈನ್ಯಾಡಳಿತವನ್ನು ನಿರ್ದೇಶಿಸಿದ. ಜನರಲ್ ಟಿಕ್ಕಾ ಖಾನ್ ರಜಾಕಾರರನ್ನು ಸೈನ್ಯದಲ್ಲಿ ಸೇರ್ಪಡೆಗೊಳಿಸಿದ. "ಶಾಂತಿ ಸಮಿತಿ" ಎಂಬ ಹೆಸರಿನ ಈ ಅರೆಸೈನ್ಯಕ್ಕೆ ಮತಾಂಧ ಮುಸ್ಲಿಮರನ್ನೇ ಸೇರ್ಪಡೆಗೊಳಿಸಲಾಯಿತು. ಅಲ್ ಬದ್ರ್ ಮತ್ತು ಅಲ್ ಶಮ್ಸ್ ಬ್ರಿಗೇಡ್ ಹೆಸರಿನಲ್ಲಿ ರಜಾಕಾರರ ಎರಡು ಪಡೆಗಳು ತಯಾರಾದವು. ಪಾಕಿಸ್ತಾನಿ ಸೈನ್ಯ ರಮಣ ಕಾಳಿ ಮಂದಿರವನ್ನು ನಾಶ ಮಾಡಿ 85 ಹಿಂದೂಗಳನ್ನು ಕೊಂದು ಹಾಕಿತು.  1971ರ ಫೆಬ್ರವರಿ 22ರಂದು ಯಾಹ್ಯಾಖಾನ್  "ಮೂವತ್ತು ಲಕ್ಷ ಜನರನ್ನು ಕೊಂದು ಹಾಕಿ" ಎಂದು ಬಹಿರಂಗವಾಗಿ ನಿರ್ದೇಶನ ಕೊಟ್ಟ. ಪಾಕಿಸ್ತಾನದ ಸೈನ್ಯದ ಆಪರೇಷನ್ ಸರ್ಚ್ ಲೈಟ್ ಜೊತೆಜೊತೆಗೆ ಈ ರಜಾಕಾರರ ಅನಧಿಕೃತ ಸೈನಿಕಪಡೆಯ ಭಯಾನಕ ಹಿಂಸಾಚಾರ ಯಾವುದೇ ಎಗ್ಗಿಲ್ಲದೆ ನಡೆಯಿತು.

ಮಾರ್ಚ್ 25, 1971ರಂದು ಪಾಕಿಸ್ತಾನ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಂಗಾಳೀ ಅಸ್ಮಿತೆಯನ್ನು ನಾಶಗೈಯ್ಯುವ ಹತ್ತು ತಿಂಗಳ ಅವಧಿಯ ಕುಕೃತ್ಯಕ್ಕೆ ಮುನ್ನುಡಿ ಬರೆಯಿತು. ಇಲ್ಲಿ ಬಂಗಾಳೀ ಅಸ್ಮಿತೆ ಅಂದರೆ ಏನು? ಅದು ಶತಪ್ರತಿಶತ ಹಿಂದೂ ಅಸ್ಮಿತೆಯೇ. ಯಾವುದೇ ಸೆಮೆಟಿಕ್ ಮತಗಳಿಂದ ಒಂದು ಪ್ರಾಂತ್ಯದ ಅಸ್ಮಿತೆ ಸೃಷ್ಟಿಯಾಗಲು, ಬೆಳೆಯಲು, ಉಳಿಯಲು ಸಾಧ್ಯವೇ? ಇದು ಮುಂದೆ ಭಾರತದ ಪಾದದಡಿಯಲ್ಲಿ ಪಾಕಿಸ್ತಾನ ಮಂಡಿಯೂರುವುದರೊಂದಿಗೆ ಪರ್ಯಾವಸಾನವಾಯಿತಾದರೂ ಆ ಅವಧಿಯಲ್ಲಿ ಹಿಂದೂಗಳಿಗಾದ ನಷ್ಟ ಅಗಾಧ. ಏಳೇ ದಿವಸದಲ್ಲಿ ಹದಿನೈದು ಲಕ್ಷದಷ್ಟು ಬಂಗಾಳಿಗಳು ತಮ್ಮ ನೆಲೆ ಬಿಟ್ಟು ಓಡಿ ಹೋಗಬೇಕಾಯಿತು. ನವೆಂಬರ್ ಅಂತ್ಯದ ವೇಳೆಗೆ ಒಂದು ಕೋಟಿಯಷ್ಟು ಹಿಂದೂಗಳು ಭಾರತಕ್ಕೆ ಓಡಿ ಬಂದರು. ಭಾರತದ ವಿದೇಶಾಂಗ ಇಲಾಖೆ ಹೊರಗೆಡಹಿದ ಮಾಹಿತಿಯ ಪ್ರಕಾರವೇ 1971ರ ಮಾರ್ಚ್ ಹಾಗೂ ಆಗಸ್ಟ್ ನಡುವೆ ನಿರಾಶ್ರಿತರೆಂದು ನೋಂದಾಯಿಸಿಕೊಂಡ ಬಾಂಗ್ಲಾ ಹಿಂದೂಗಳ ಸಂಖ್ಯೆ 69,71,000 ! ಇದು ಈ ಶತಮಾನದ ಉತ್ತರಾರ್ಧದ ಅತೀ ದೊಡ್ಡ ವಲಸೆ ಎಂದು ಅಮೆರಿಕಾ ಅಭಿಪ್ರಾಯಪಟ್ಟಿತು. ಹತ್ತಿರ ಹತ್ತಿರ ಮೂರು ಮಿಲಿಯನ್ ಜನರ ಕಗ್ಗೊಲೆ ನಡೆಯಿತು. ಎರಡು ಲಕ್ಷದಷ್ಟು ಮಾನಿನಿಯರ ಮೇಲೆ ಅತ್ಯಾಚಾರ ನಡೆಯಿತು. ಅಂದಿನ ಬಾಂಗ್ಲಾದ ಒಟ್ಟು ಜನಸಂಖ್ಯೆಯ ಶೇ. ನಾಲ್ಕರಷ್ಟು ಜನರ ಹತ್ಯೆಯಾಯಿತು. ಬಾಂಗ್ಲಾದ ಮಹಿಳೆಯರ ಮೇಲಿನ ಅತ್ಯಾಚಾರವನ್ನು ಅಲ್ಲಿನ ಪಾಕಿಸ್ತಾನೀ ಬೆಂಬಲಿತ ಮುಸ್ಲಿಂ ಮೌಲ್ವಿಗಳು ಬಹಿರಂಗವಾಗಿಯೇ ಬೆಂಬಲಿಸಿ, "ಅವರನ್ನು ನಾವು ಯುದ್ಧದಲ್ಲಿ ಗೆದ್ದುಕೊಂಡಿದ್ದೇವೆ. ಬಂಗಾಳೀ ಮಹಿಳೆಯರೆಲ್ಲಾ ಹಿಂದೂಗಳು. ಕುರಾನಿನ ಪ್ರಕಾರ ಆ ಮಹಿಳೆಯರನ್ನು ಹೇಗೆ ಬೇಕಾದರೂ ಉಪಯೋಗಿಸುವ ಹಕ್ಕು ಯುದ್ಧದಲ್ಲಿ ಗೆದ್ದವರಿಗೆ ಇದೆ " ಎನ್ನುತ್ತಾ  ಇನ್ನಷ್ಟು ಅತ್ಯಾಚಾರವೆಸಗುವಂತೆ ಕರೆಕೊಟ್ಟರು. ಕೆಲವು ವರದಿಗಳ ಪ್ರಕಾರ ನಾಲ್ಕು ಲಕ್ಷದಷ್ಟು ಮಾನಿನಿಯರು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಶಿಬಿರಗಳಲ್ಲಿ ಬಂಧಿಗಳಾಗಿ ಸತತ ಅತ್ಯಾಚಾರಕ್ಕೂ ಬಲಿಯಾದರು ಎಂಬುದಾಗಿ ಬಾಂಗ್ಲಾದೇಶೀ ಪತ್ರಕರ್ತ ಅನುಶಯ್ ಹುಸೈನ್ ವಿಷಾದ ವ್ಯಕ್ತಪಡಿಸಿದ್ದಾನೆ. "ಪಾಕಿಸ್ತಾನದ ಸೈನ್ಯ ಮಾರ್ಚ್ 25ರ ರಾತ್ರಿ ಆರಂಭಿಸಿದ ನರಮೇಧದ ಪರಿಣಾಮ ಲೆಕ್ಖವಿಲ್ಲದಷ್ಟು ಹಿಂದೂಗಳನ್ನು ವ್ಯವಸ್ಥಿತವಾಗಿ ಹತ್ಯೆಗೈಯ್ಯಲಾಯಿತು. ಹಿಂದೂಗಳ ಭೂಮಿ, ಅಂಗಡಿಗಳನ್ನು ಲೂಟಿ ಮಾಡಲಾಯಿತು. ಇದೊಂದು ವ್ಯವಸ್ಥಿತ ಹತ್ಯಾಕಾಂಡ" ಎಂದು ಸೆನೆಟರ್ ಎಡ್ವರ್ಡ್ ಎಂ ಕೆನಡಿ ನವೆಂಬರಿನಲ್ಲಿ ಹೇಳುತ್ತಾನೆ. ಬಂಧಿಸಲ್ಪಟ್ಟ ಪುರುಷರು ಸುನ್ನತ್ ಮಾಡಿಸಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಿ ಪುರುಷರ ಮೇಲೂ ಪಾಕ್ ಸೈನಿಕರು ಅತ್ಯಾಚಾರ ಎಸಗಿದ್ದನ್ನು ನೆದರ್ಲ್ಯಾಂಡಿನ ಜೆನ್ನೆಕೆರ್ ಆರೆನ್ಸ್ ದಾಖಲಿಸಿದ್ದಾರೆ. ಜಗತ್ತಿನ ಅತ್ಯಂತ ಭಯಾನಕ ನರಮೇಧ ಪ್ರಕರಣಗಳಲ್ಲಿ ಇದಕ್ಕೆ ಹನ್ನೆರಡನೆಯ ಸ್ಥಾನ.

1971ರಿಂದೀಚೆಗೆ ಅಲ್ಲಿ ಶತ್ರುವಿನ ಆಸ್ತಿ ಸ್ವಾಮ್ಯ ಕಾಯಿದೆ ಜಾರಿಯಲ್ಲಿದೆ. ಯಾರು ಶತ್ರು? ಅಲ್ಲೇ ವಾಸವಾಗಿದ್ದ ಹಿಂದೂಗಳು ಶತ್ರುಗಳು! ಯಾವ ಪುರುಷಾರ್ಥಕ್ಕೆ ಭಾರತ ಪ್ರತ್ಯೇಕ ದೇಶವನ್ನು ನಿರ್ಮಿಸಿತು? ಈ ಕಾಯಿದೆಯ ಪ್ರಕಾರ, ಹಿಂದೂವಿನ ಆಸ್ತಿಯನ್ನು ವಶಪಡಿಸಿಕೊಂಡ ಮುಸ್ಲಿಂನನ್ನು ಪ್ರಶ್ನಿಸುವಂತೆಯೇ ಇಲ್ಲ. ಹಿಂದೂಗಳ ಆಸ್ತಿಯನ್ನೆಲ್ಲ ಬಲಾತ್ಕಾರವಾಗಿ ಮುಸ್ಲಿಮರು ವಶಪಡಿಸಿಕೊಂಡರೆ ಅದನ್ನು ಮರಳಿ ಪಡೆಯಲು ಅವಕಾಶವೂ ಇಲ್ಲ. ಮುಸ್ಲಿಮರ ಸಂಖ್ಯೆ ಕಡಿಮೆ ಇರುವ ದೇಶಗಳಲ್ಲೇ ಅವರ ವಿರುದ್ಧ ತುಟಿಬಿಚ್ಚದ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದಲ್ಲಿ ಅಸ್ತಿತ್ವದಲ್ಲಿರುವುದೇ ಅನುಮಾನ. 1991ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಬಾಂಗ್ಲಾದಲ್ಲಿ ಹುಟ್ಟಿಕೊಂಡ ಪ್ರತೀಕಾರದ ಕಾಳ್ಗಿಚ್ಚಿನಲ್ಲಿ ಸುಮಾರು 200 ದೇವಾಲಯಗಳು ಧ್ವಂಸವಾದವು. ಹಿಂದೂಗಳನ್ನು ಕಂಡಲ್ಲಿ ಕತ್ತರಿಸಿ ಹಾಕಲಾಯಿತು. 2017ರಲ್ಲಿ 108 ಹಿಂದೂಗಳನ್ನು ಬಲಿಪಡೆಯಲಾಗಿದೆ; 235 ದೇವಾಲಯಗಳನ್ನು ಮತಾಂಧರು ಧ್ವಂಸ ಮಾಡಿದ್ದಾರೆ. ಆ ವರ್ಷ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ಸಂಖ್ಯೆ 6474!

ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಹತ್ಯಾಕಾಂಡ ನಡೆದಿದ್ದರೂ ಜನ ಸಂಘದ ನಾಯಕರ ಆಕ್ರೋಶವನ್ನು ತಪ್ಪಿಸಲು ಆಗಿನ ಕಾಂಗ್ರೆಸ್ ಸರಕಾರ ಈ ದಂಗೆ ಬಾಂಗ್ಲಾದೇಶದ ಬಂಗಾಳಿ ಸಮುದಾಯದ ವಿರುದ್ಧದ ನರಮೇಧ ಎಂದು ತೇಪೆ ಹಾಕಲು ಯತ್ನಿಸಿತು ಎಂದು ತನ್ನ 'ದಿ ಬ್ಲಡ್ ಟೆಲಿಗ್ರಾಮ್: ನಿಕ್ಸನ್, ಕಿಸ್ಸಿಂಜರ್ ಅಂಡ್ ಎ ಫಾರ್ಗಾಟನ್ ಜೆನೊಸೈಡ್' ಪುಸ್ತಕ(2013)ದಲ್ಲಿ ಗ್ಯಾರಿ ಜೆ ಬಾಸ್ ನಮೂದಿಸಿದ್ದಾನೆ. "ಹೌದು, ಅದು ಹಿಂದೂಗಳನ್ನು ಗುರಿಯಾಗಿಸಿ ಮಾಡಿದ ದೌರ್ಜನ್ಯ ಎನ್ನುವುದನ್ನು ಭಾರತದಲ್ಲಿ ಪ್ರಚುರವಾಗದಂತೆ ಮುಚ್ಚಿ ಹಾಕಲು ಪ್ರಯತ್ನಿಸಿದೆವು" ಎಂದು ಸ್ವರನ್ ಸಿಂಗ್ (ಅಂದಿನ ವಿದೇಶಾಂಗ ಸಚಿವ) ಲಂಡನ್‌ನಲ್ಲಿ ಭಾರತೀಯ ರಾಜತಾಂತ್ರಿಕರ ಸಭೆಯಲ್ಲಿ ಬಹಿರಂಗವಾಗಿ ಹೇಳಿದ್ದ. ಭಾರತದಲ್ಲಿನ ಅಂದಿನ ಯುಎಸ್ ರಾಯಭಾರಿ, ಓವಲ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಮ್ಮ ಮಿತ್ರ 'ಪಾಕಿಸ್ತಾನ' ನರಮೇಧವನ್ನು ಮಾಡುತ್ತಿದೆ ಎಂದು ಹೇಳಿದಾಗ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮುಗುಮ್ಮಾಗಿ ಉಳಿದಿದ್ದ. ಅಂದರೆ ಹಿಂದೂಗಳ ರಕ್ಷಣೆಯ ವಿಷಯಕ್ಕೆ ಬಂದಾಗ ಬಂಗಾಳೀ ಮುಸಲ್ಮಾನನೂ ಮೌನವಾಗಿದ್ದ. ಜಗತ್ತಿನ ಅಂದಿನ ದೊಡ್ಡಣ್ಣ ಅಮೆರಿಕಾವೂ ಮೌನವಾಗಿತ್ತು. ಅಷ್ಟೇಕೆ, ಹಿಂದೂಗಳೇ ಬಹುಸಂಖ್ಯಾತವಾಗಿರುವ ಭಾರತವೇ ಮೌನವಾಗಿತ್ತು. ಮುಂದೆ ಭಾರತ ಯುದ್ಧ ಮಾಡಿ ಪಾಕಿಸ್ತಾನವನ್ನು ಸೋಲಿಸಿತು ಸರಿ. ಆದರೆ ಹಿಂದೂಗಳಿಗೆ ಶಾಶ್ವತವಾದ ಭದ್ರತೆಯನ್ನು ಗಿಟ್ಟಿಸಿಕೊಡುವಲ್ಲಿ ವಿಫಲವಾಯಿತು. ಭಾರತವೇ ಸೃಷ್ಟಿಸಿದ ಬಾಂಗ್ಲಾದೇಶ ಮೊದಲಿಗೆ ಸೆಕ್ಯುಲರ್ ಸಂವಿಧಾನವನ್ನು ಅಳವಡಿಸಿಕೊಂಡರೂ ಶೀಘ್ರವಾಗಿ "ಇಸ್ಲಾಮಿಕ್ ಒಗ್ಗಟ್ಟಿನ ಆಧಾರದ ಮೇಲೆ ಮುಸ್ಲಿಂ ರಾಷ್ಟ್ರಗಳ ನಡುವೆ ಸಹೋದರ ಸಂಬಂಧಗಳನ್ನು ಬಲಪಡಿಸಲು ಮತ್ತು  ಸಂರಕ್ಷಿಸಲು" ಎಂಬ ಹೊಸ ಷರತ್ತನ್ನು ಸೇರಿಸಿತು. ಜೂನ್ 9, 1988 ರಂದು ಇಸ್ಲಾಂ ಅನ್ನು ಬಾಂಗ್ಲಾದೇಶದ ಅಧಿಕೃತ ರಾಜ್ಯ ಧರ್ಮವನ್ನಾಗಿ ಮಾಡಲಾಯಿತು. ಇದಂತೂ ಮೊದಲೇ ಉನ್ಮತ್ತರಾದ ಮುಸ್ಲಿಮರಿಗೆ ಹಿಂದೂಗಳ ಮೇಲೆ ಸವಾರಿ ನಡೆಸಲು ಅವಕಾಶ ಕಲ್ಪಿಸಿತು. 

ಬಂಗಾಳದಲ್ಲಿ ಈ ಹತ್ಯಾಕಾಂಡ ಖಿಲಾಫತ್ ಸಮಯದಿಂದ ಶುರುವಾದದ್ದಲ್ಲ. ಖಿಲ್ಜಿಗಳು ಬಂಗಾಳವನ್ನು ಆಕ್ರಮಿಸಿದಾಗಲೇ ಅಲ್ಲಿಗೆ ಬೆಂಕಿ ಹಚ್ಚಿಟ್ಟಿದ್ದಾರೆ. ಖಿಲ್ಜಿಯೋ, ಖಿಲಾಫತ್ತೋ ಹೆಸರು ಮಾತ್ರ. ತನ್ನದಲ್ಲದ ಯಾವುದನ್ನೂ ಸಹಿಸದ, ಪುಸ್ತಕವೊಂದರಲ್ಲಿ ಕೊರೆದ ವಾಕ್ಯಗಳೇ ಪವಿತ್ರ ಎನ್ನುವ ಮೂರ್ಖರ ಮತಾಂಧತೆಯ ಫಲ ಇದು. ಅವರು ಹೊಕ್ಕ ತಾಣಗಳಲ್ಲಿ ಅವರಿಗಾಗದ ಸಂಸ್ಕೃತಿಗಳು ಈ ರೀತಿ ಬೆಂಕಿಗೆ ಆಹುತಿಯಾಗುತ್ತಲೇ ಇರುತ್ತವೆ. ಅದನ್ನು ಅರ್ಥ ಮಾಡಿಕೊಳ್ಳದವರು ಸೋಲುತ್ತಿದ್ದಾರೆ, ಸಾಯುತ್ತಿದ್ದಾರೆ. ಎಂದಿಗೆ ಮೊಘಲರು, ಬ್ರಿಟಿಷರು ಹಿಂದೂಗಳನ್ನು ನಿಶ್ಶಸ್ತ್ರೀಕರಣಗೊಳಿಸಿದರೋ ಅಂದಿನಿಂದ ಹಿಂದೂವಿನ ಮೇಲಿನ ದೌರ್ಜನ್ಯಕ್ಕೆ ಪ್ರತಿರೋಧ ಕಡಿಮೆಯಾಯಿತು. ಅಪ್ರಾಯೋಗಿಕ, ಸರಿಯಾಗಿ ಅರ್ಥವಿಸಿಕೊಳ್ಳದ ಅಹಿಂಸೆಯ ಬೆನ್ನು ಬಿದ್ದು ಕ್ಷಾತ್ರತ್ವ ಹ್ರಾಸವಾಯಿತು. ತಮ್ಮ ಸಂಖ್ಯೆ ಹೆಚ್ಚಿರುವಾಗ ರಾಜಕಾರಣಿಗಳ ಸೆಕ್ಯುಲರ್ ಉನ್ಮಾದಕ್ಕೆ ಬಲಿಯಾಗಿ ಹಿಂದೂಗಳು ಪ್ರಾಣ ಕಳೆದುಕೊಂಡರೆ, ಸಂಖ್ಯೆ ಕಡಿಮೆಯಾದ ಕಡೆ ರಕ್ಷಣೆಗೆ ಯಾರೂ ಇಲ್ಲದೆ ಬಲಿಯಾಗುತ್ತಿದ್ದಾರೆ. ಅಂದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ಸಲುವಾಗಿ ಹಿಂದೂಗಳು ಸರ್ವತ್ರ ಸನ್ನದ್ಧರಾಗಬೇಕು. ಪಲಾಯನ ಮಾಡಿ ಸಾಯುವ ಬದಲು, ಎದುರಿಸಿ ಗೆಲ್ಲುವ ತಮ್ಮ ಹಿಂದಿನ ಕ್ಷಾತ್ರವನ್ನು ಮೈಗೂಡಿಸಿಕೊಳ್ಳಬೇಕು. ಯಾವ ಸರಕಾರವೂ, ಯಾವ ಆರಕ್ಷಕ ಪಡೆಯೂ, ಯಾವ ಅನ್ಯಶಕ್ತಿಯೂ ಹಿಂದೂಗಳನ್ನು ರಕ್ಷಿಸಲಾರದು. ತನ್ನ ರಕ್ಷಣೆಗೆ ತಾನೇ ಸನ್ನದ್ಧನಾಗಬೇಕು. ಅತಿಯಾದ ಸೆಕ್ಯುಲರ್ ಬುದ್ಧಿ ಪ್ರದರ್ಶಿಸುತ್ತಾ ಹಾವಿಗೆ ಹಾಲೆರೆಯುವುದನ್ನು, ತಮ್ಮೊಳಗೆ ಕಚ್ಚಾಡುವುದನ್ನು ಬಿಟ್ಟು ತಾವಿರುವ ದೇಶಗಳಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಪ್ರಬಲರಾಗಬೇಕು. ಕ್ಷಾತ್ರಬಲವನ್ನೂ ಹೆಚ್ಚಿಸಿಕೊಳ್ಳಬೇಕು. ಪೊಳ್ಳು ಅಹಿಂಸೆ, ಪೊಳ್ಳು ಜಾತ್ಯಾತೀತವಾದಕ್ಕೆ ಬಲಿಯಾಗದ ಭವಿಷ್ಯದ ಹಿಂದೂ ಜನಾಂಗವನ್ನು ಬೆಳೆಸಬೇಕು. ತಮ್ಮೊಳಗೆ ಬರಲು ಇಚ್ಛೆ ಉಳ್ಳವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ ಧರ್ಮದೀಕ್ಷೆ ನೀಡಬೇಕು. ಅದೇ ಅಸ್ತಿತ್ವ ಉಳಿಸಿ, ಬೆಳೆಸಲು ಇರುವ ದಾರಿ.

ಬುಧವಾರ, ಅಕ್ಟೋಬರ್ 20, 2021

ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ

 ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ


             ಸಿಂಹದ ಮರಿಯೊಂದಕ್ಕೆ ತನ್ನ ಶೌರ್ಯಕ್ಕೆ ಪ್ರತಿಫಲ ಸಿಗದೇ ಅಪಮಾನ ಆದಾಗ ವಸ್ತುಸ್ಥಿತಿಯ ಅರಿವಾಗಿತ್ತು. ತನ್ನ ಸಹೋದರರ ಒತ್ತಡಕ್ಕೊಳಗಾಗಿ ತಾನು ಮಾಡುತ್ತಿರುವುದು ತನ್ನ ಮನಸ್ಸಿಗೆ ಒಪ್ಪುವ ಕಾರ್ಯವಲ್ಲ ಎಂದು ಮನದಟ್ಟಾಗಿತ್ತು. ತಾನು ದಾಸ್ಯಕ್ಕೆ ಒಳಗಾದುದರ ಅರಿವಾಗಿ ಸ್ವಾಭಿಮಾನ ಭುಗಿಲೆದ್ದಿತ್ತು. ಸಹ್ಯಾದ್ರಿಯ ಘನಘೋರ ಕಾನನಗಳಲ್ಲಿ ಮೊರೆಯುತ್ತಿರುವ ಮಹಾ ಕೇಸರಿಯ ಘರ್ಜನೆ ಈ ಮರಿಸಿಂಹಕ್ಕೆ ಆ ಹೊತ್ತಿಗಾಗಲೇ ಕೇಳತೊಡಗಿತ್ತು. ಅದು ತನ್ನ ಮುಂದಿನ ದಾರಿಯನ್ನು ನಿಶ್ಚಯಮಾಡಿಕೊಂಡಿತು. ಆಪ್ತ ಪರಿವಾರದೊಡನೆ ಕಾಡಿನ ದಾರಿಯಲ್ಲೇ ಸಾಗಿ ಭೋರ್ಗರೆಯುತ್ತಿದ್ದ ಭಯಂಕರ ಭೀಮೆಯನ್ನು ತೆಪ್ಪದಲ್ಲಿ ದಾಟಿ ಮಹಾಕೇಸರಿಯ ಮುಂದೆ ಬಂದು ನಿಂತು ತಲೆಬಾಗಿತು. ಛತ್ರಪತಿಯೆಂಬ ಮಹಾಕೇಸರಿಯನ್ನು ಛತ್ರಸಾಲನೆಂಬ ಸ್ವಾಭಿಮಾನಿ ಮಹಾವೀರ ಭೇಟಿ ಆದುದು ಹೀಗೆ. ಈ ಭೇಟಿಗಿದ್ದ ಅಡತಡೆಗಳನ್ನು, ಈ ಸಂಗಮಕ್ಕಿದ್ದ ಮಹತ್ವವನ್ನು, ಈ ಸಂಗಮದಿಂದಾದ ಫಲಶ್ರುತಿಯನ್ನು ಕೇವಲ ಈ ಕಥೆಯಿಂದ ಕಟ್ಟಿಕೊಡಲಾಗದು.



             ಯಮುನಾ ನದಿಯಿಂದ ನರ್ಮದೆವರೆಗೆ ಹಾಗೂ ಚಂಬಲ್ ನದಿಯಿಂದ ಟೋಂಸ್ ನದಿಯವರೆಗೆ ಬಹುವಿಸ್ತಾರವಾದ, ಮಹಾಭಾರತದ ಸಮಯದಲ್ಲಿ ಶಿಶುಪಾಲನು ಆಳುತ್ತಿದ್ದ ಚೇದಿ ಎಂದು ಕರೆಯಲ್ಪಡುತ್ತಿದ್ದ ಭೂಮಿ ಬುಂದೇಲ್ ಖಂಡ. ಶಕಪುರುಷ ರಾಜಾವಿಕ್ರಮನು ಇದನ್ನು ಮಧ್ಯ ಭಾರತದ ಕೇಂದ್ರವಾಗಿ ಮಾಡಿದ್ದ. ಅಲ್ಲಿಯ ರಾಜ ವೀರಭದ್ರ ತನ್ನ ಪಂಚಮ ಪುತ್ರ ಪಂಚಮನಿಗೆ ತನ್ನೆಲ್ಲಾ ರಾಜ್ಯವನ್ನು ಕೊಟ್ಟಾಗ, ಆತನ ಸಹೋದರರು ದಾಳಿ ಮಾಡಿ ಆತನಿಂದ ಎಲ್ಲವನ್ನೂ ಕಿತ್ತುಕೊಂಡರು. ತಂದೆ ತೀರಿಕೊಂಡ ದುಃಖ, ಅಣ್ಣಂದಿರೆಲ್ಲ ಶತ್ರುವಾದರೆಂಬ ದುಃಖ, ರಾಜ್ಯವನ್ನು ಕಳಕೊಂಡ ದುಃಖ ಈ ಎಲ್ಲವೂ ಪಂಚಮನನ್ನು ಘಾಸಿಗೊಳಿಸಿತು. ಆಗ ಪಂಚಮ ಗಂಗಾತೀರದ ವಿಂಧ್ಯವಾಸಿನೀ ದೇವಿಯೆದುರು ಪ್ರಾಣಾರ್ಪಣೆಗೆ ಮುಂದಾದ. ಪ್ರತ್ಯಕ್ಷಳಾಗಿ ದೇವಿ ತಡೆದಾಗ ಕೈಗೆ ಖಡ್ಗ ತಗುಲಿ ರಕ್ತದ ಬಿಂದುಗಳು ಇಳೆಗೆ ಬಿತ್ತು. ಹೀಗೆ ಬೂಂದ್-ಇಲ ಮುಂದೆ ಬುಂದೇಲವಾಯಿತು ಎನ್ನುವ ಪ್ರತೀತಿ. ನಾಗವಂಶ, ಕಛವಾಹವಂಶ, ಪರಿಹಾರವಂಶ, ಗಹರವಾರವಂಶ ಹೀಗೆ ಅನೇಕ ವಂಶದವರು ಇಲ್ಲಿ ರಾಜ್ಯವಾಳಿದ್ದರು. ಪಂಚಮನು ಗಹರವಾರ ವಂಶದವನು.


           ಬುಂದೇಲರ ರಾಜಾ ಪ್ರತಾಪರುದ್ರ ಹೆಸರಿಗೆ ಅನ್ವರ್ಥವಾಗುವಂತೆ ಮಹಾ ಪ್ರತಾಪಿ. ಬಂದೇಲ ಸಾಮ್ರಾಜ್ಯವನ್ನು ಬಹುವಾಗಿ ವಿಸ್ತರಿಸದವನೀತ. ಇಬ್ರಾಹಿಂ ಲೋದಿಯನ್ನು ಹೆಡೆಮುರಿಗಟ್ಟಿದ ಈತ ಬಾಬರನನ್ನು ಹೊಡೆದೋಡಿಸಿದ್ದ. ಓರ್ಛಾ ಮಹಾನಗರಕ್ಕೆ ಅಡಿಪಾಯ ಹಾಕಿದ ಈತ ಹುಲಿಯ ಬಾಯಿಯಿಂದ ದನವನ್ನು ರಕ್ಷಿಸಿದ ಸಂದರ್ಭದಲ್ಲಿ ಉಂಟಾದ ಗಂಭೀರ ಗಾಯಗಳಿಂದಾಗಿ ಮೃತನಾದ. ಆತನ ಮಗ ಭಾರತೀಚಂದ್ರ ಪಟ್ಟವೇರಿದ ತಕ್ಷಣ ಷೇರಶಾಹನೆಂಬ ಸರದಾರನ ನೇತೃತ್ವದಲ್ಲಿ ದಾಳಿ ಮಾಡಿದ ಮೊಘಲರು ಸೋತು ಓಡಿ ಹೋದರು. ಇಂತಹಾ ಮಹಾನ್ ಸಾಮ್ರಾಜ್ಯಕ್ಕೆ ಜಝಾರಸಿಂಹನ ಕಾಲದಲ್ಲಿ ವಿಪತ್ತು ಬಂದೆರಗಿತು. ಜಝಾರಸಿಂಹನು ಮಹಾವೀರನಾಗಿದ್ದರೂ ಮಹಾಸಂಶಯಿಯೂ ಆಗಿದ್ದ. ಮಲ್ಲಯುದ್ಧ ಪ್ರವೀಣನೂ, ಖಡ್ಗ ಯುದ್ಧ ಚತುರನೂ ಆಗಿದ್ದ ತಮ್ಮ ಹರದೇವನ ಮೇಲೆಯೇ ಸಂಶಯಪಟ್ಟು ವಿಷ ಕೊಟ್ಟು ಸಾಯಿಸಿದ. ಇದೇ ಸುಸಮಯ ಎಂದು ತಿಳಿದ ಷಾಜಹಾನ್ ತನ್ನ ಬಹುದೊಡ್ಡ ಸೈನ್ಯವನ್ನು ಬುಂದೇಲ್ ಖಂಡವನ್ನು ಆಕ್ರಮಿಸಲು ಅಟ್ಟಿದ. ಆಗ ಮಹೇವಾದಲ್ಲಿದ್ದ ವೀರ ಚಂಪತರಾಯ ತನ್ನ ದಾಯಾದಿಯ ಸಹಾಯಕ್ಕೆ ಧಾವಿಸಿದ. ಮೊಘಲರು ಮತ್ತೆ ಸೋತು ಓಡಬೇಕಾಯಿತು. ಆದರೆ ಮತ್ತೊಮ್ಮೆ ಹಠಾತ್ತನೆ ದಾಳಿ ಮಾಡಿದ ಮೊಘಲರು ಚಂಪಕರಾಯನ ಸಹಾಯಬರುವುದಕ್ಕಿಂತ ಮೊದಲೇ ಜಝಾರಸಿಂಹನನ್ನು ಅವನ ಮಕ್ಕಳಸಹಿತ ಕೊಂದರು. ಸುದ್ದಿ ತಿಳಿದು ರಕ್ತ ಕುದ್ದು ಚಂಪಕರಾಯ ಬಂದವನೇ ಮೊಘಲರನ್ನು ಸಂಹರಿಸತೊಡಗಿದ. ಷಾಜಹಾನ್ ಕಳುಹಿದ ಬಾಕಿಖಾನನ ಸೈನ್ಯವೂ ಚಂಪಕರಾಯನ ಖಡ್ಗಕ್ಕೆ ಆಹುತಿಯಾಯಿತು. ಆಗ ಬಾಕಿಖಾನನಿಗೆ ಚಂಪತರಾಯನ ಮಗ ಸಾರವಾಹನನು ಸಹವರ್ತಿಗಳೊಂದಿಗೆ ನದಿಯಲ್ಲಿ ಈಜುತ್ತಿರುವುದು ತಿಳಿದು ಆ ಬಾಲಕನನ್ನು ಕೊಲ್ಲಲು ತನ್ನ ಸೈನ್ಯವನ್ನು ಕಳುಹಿದ. ಆದರೆ ಆ ಸೈನ್ಯವನ್ನು ಆ ಚಿಣ್ಣರು ಪೊದೆ, ಮರಗಳ ಮರೆಯಲ್ಲಿ ನಿಂತು ತಮ್ಮ ಬಾಣಗಳಿಂದ ಸಂಹರಿಸಿಬಿಟ್ಟರು. ಕ್ರುದ್ಧನಾದ ಬಾಕಿಖಾನ ದೊಡ್ಡ ಸೈನ್ಯವನ್ನು ಕಳುಹಿಸಿದ. ಬಾಲಕನೇನೋ ವೀರ ಅಭಿಮನ್ಯುವಿನಂತೆ ಹೋರಾಡಿದ. ಅಷ್ಟು ಹೊತ್ತಿಗೆ ಚಂಪತರಾಯನ ಸೈನಿಕರೂ ಅಲ್ಲಿಗೆ ತಲುಪಿ ಮೊಘಲರನ್ನು ಬಡಿದಟ್ಟಿದರು. ಮೈತುಂಬಾ ಗಾಯಗೊಂಡಿದ್ದ ಬಾಲಕ ವೀರಮರಣವನ್ನಪ್ಪಿದ. ಮುಂದಿನ ವರ್ಷವೇ ಅವನಿಗೆ ಮತ್ತೊಂದು ಪುತ್ರರತ್ನ ಉದಿಸಿತು. ಅದೇ ಬುಂದೇಲಖಂಡವನ್ನು ಸೂರ್ಯನಂತೆ ಬೆಳಗಿದ ಛತ್ರಸಾಲ.


            ಮುಂದೆ ಚಂಪತರಾಯನನ್ನು ಮೊಘಲರು ಎಡೆಬಿಡದೆ ಕಾಡಿದರು. ಮೊಘಲರ ಆಮಿಶಕ್ಕೆ ಒಳಗಾಗಿ ಚಂಪತರಾಯನ ನೆಂಟ ಪಹಾಡಸಿಂಹನೇ ಚಂಪತರಾಯನಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ. ಸ್ವಾಮಿನಿಷ್ಠ ಭೀಮಸಿಂಹ ಅನುಮಾನಗೊಂಡು ಸ್ವತಃ ತಿಂದು ಸ್ವಾಮಿಯನ್ನುಳಿಸಿದ. ಮತ್ತೊಮ್ಮೆ ಕಳುಹಿಸಿದ ಕಟುಕನನ್ನು ಸ್ವತಃ ಚಂಪತರಾಯನೇ ಕೊಂದ. ಷಹಜಹಾನ್‌ ತನ್ನ ಮಗನನ್ನೆ ದಂಡನಾಯಕನನ್ನಾಗಿ ಮಾಡಿ ಭಾರಿ ಸೈನ್ಯವನ್ನು ಕಳುಹಿಸಿದರೂ ಚಂಪತರಾಯನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಮೊಘಲ್ ಸಿಂಹಾಸನಕ್ಕೆ ಸಹೋದರರಲ್ಲಿ ಜಗಳವಾದಾಗ ಔರಂಗಜೇಬ್‌, ಚಂಪತರಾಯನ ಸಹಾಯವನ್ನು ಬೇಡಿದ. ತಾನು ಔರಂಗಜೇಬನಿಗೆ ನೆರವಾಗಿ ಅವನು ಚಕ್ರವರ್ತಿಯಾದರೆ ಮೊಘಲರ ಜೊತೆಗೆ ತನ್ನ ನಿರಂತರ ಯುದ್ಧ ನಿಲ್ಲುತ್ತದೆ, ತನ್ನ ನೆರವನ್ನು ಪಡೆದ ಔರಂಗಜೇಬ ಹಿಂದೂಗಳಿಗೆ ಅನ್ಯಾಯ ಮಾಡಲಾರ ಎಂದು ಯೋಚಿಸಿದ ಚಂಪತರಾಯ ಹಿಂದೂ ರಾಜರ ಎಂದಿನ ಭೋಳೇ ಸ್ವಭಾವಕ್ಕೆ ತುತ್ತಾದ. ಔರಂಜೇಬ ತನ್ನ ಮುಸ್ಲಿಮ್ ಬುದ್ಧಿಯನ್ನೇ ತೋರಿಸಿದ. ಚಕ್ರವರ್ತಿಯಾದನಂತರ ಚಂಪತರಾಯನಿಗೆ ಅಪಮಾನ ಮಾಡಿದ. ಚಂಪತರಾಯ ಅವನಿಂದ ದೂರವಾದ. ಔರಂಗಜೇಬನ ಉಪಟಳದಿಂದ ಊರಿಂದೂರು ಅಲೆಯಬೇಕಾಯಿತು. ನಂಬಿದ ಭಟರೇ ಮೋಸಮಾಡಿದಾಗ ಚಂಪತರಾಯನೂ ಆತನ ಪತ್ನಿಯೂ ಭರ್ಜಿಯಿಂದ ತಮ್ಮನ್ನೇ ತಾವು ತಿವಿದುಕೊಂಡು ಆತ್ಮಹತ್ಯೆಗೈದರು. ಮರಿಕೇಸರಿಯು ಅನಾಥವಾಯ್ತು. ಆಗ ಛತ್ರಸಾಲನಿಗೆ ಹದಿನಾಲ್ಕು ವರ್ಷ ವಯಸ್ಸು. ಔರಂಗಜೇಬನ ಭೀತಿಯಿಂದ ಅವನಿಗೆ ಆಶ್ರಯ ಕೊಡುವವರೇ ಇರಲಿಲ್ಲ. ಹೇಗೋ ತಪ್ಪಿಸಿಕೊಂಡು ದೇವಗಢದಲ್ಲಿದ್ದ ಅಣ್ಣ ಅಂಗದರಾಯನನ್ನು ಸೇರಿಕೊಂಡ.


           ಔರಂಗಜೇಬನು ದಕ್ಷಿಣದ ರಾಜ್ಯಗಳ ಮೇಲೆ ಯುದ್ಧಕ್ಕಾಗಿ ಜಯಸಿಂಹನಿಗೆ ನೇತೃತ್ವ ವಹಿಸಿದಾಗ ತನ್ನ ಅಣ್ಣ ಅಂಗದರಾಯನ ಜೊತೆ ಅವನ ಒತ್ತಾಯದಿಂದಾಗಿ ಛತ್ರಸಾಲ, ಜಯಸಿಂಹನ ಸೈನ್ಯವನ್ನು ಸೇರಿಕೊಂಡ. ದೇವಗಢವನ್ನು ಜಯಿಸಲು ಜಯಸಿಂಹನಿಗೆ ಸಹಾಯಕನಾಗಿ ಬಹಾದುರ ಖಾನನನ್ನು ದೊಡ್ಡ ಸೈನ್ಯದೊಡನೆ ಔರಂಗಜೇಬ  ಕಳುಹಿಸಿದಾಗ ತನ್ನ ಸಾಹಸವನ್ನು ತೋರಿಸಲು ಸರಿಯಾದ ಸಮಯವೆಂದು ಛತ್ರಸಾಲನು ಮುನ್ನುಗ್ಗಿ ಹೋರಾಡಿದ. ದೇವಗಢ ವಶವಾಯಿತು. ಆದರೆ ಆ ಸಾಹಸಕ್ಕೆ ತಕ್ಕ ಪ್ರತಿಫಲ ಛತ್ರಸಾಲನಿಗೆ ಸಿಗಲಿಲ್ಲ. ಜೊತೆಗೆ ಮುಸ್ಲಿಮರು ಹಿಂದೂಗಳನ್ನು ತುಚ್ಛವಾಗಿ ನೋಡುತ್ತಿದ್ದುದನ್ನು, ಅವರ ಪಕ್ಷಪಾತ ಧೋರಣೆಗಳನ್ನು ನೋಡಿ ಅವನ ಸ್ವಾಭಿಮಾನ ಸಿಡಿದೆದ್ದಿತು. ಒಂದು ರಾಜ್ಯವನ್ನು ಆಳಬಲ್ಲ ತಾನು ಜಯಸಿಂಹನ ಬಳಿಯಲ್ಲಿ ಸಂಬಳಕ್ಕಾಗಿ ಔರಂಗಜೇಬನ ದಾಸ್ಯದಲ್ಲಿ ಬದುಕಲು ಅವನ ಮನವು ಒಡಂಬಡಲಿಲ್ಲ. ಆ ವೇಳೆಗಾಗಲೇ ಶಿವಾಜಿ ಆಗ್ರಾದ ಸೆರೆಮನೆಯಿಂದ ತಪ್ಪಿಸಿಕೊಂಡು ರಾಯಘಡಕ್ಕೆ ಪರಾರಿಯಾದ ಅಪ್ರತಿಮ ಸಾಹಸ ಅವನ ಕಿವಿಗೆ ಬಿದ್ದಿತು. ಅದರಿಂದ ಸ್ಫೂರ್ತಿಗೊಂಡ ಛತ್ರಸಾಲ, ಶಿವಛತ್ರಪತಿಯನ್ನು ಕೂಡಿಕೊಳ್ಳುವುದಕ್ಕಾಗಿ ಹವಣಿಸಿದ.

 "ಪಿತಾ ಹಮಾರೆ ಸೂಬಾ ಡಾಂಡೆ| ತುರಕನ ಪರ ಅಜಮಾಯೇ ಖಾಂಡೆ||

ತಿನ ಚಂಪತಿ ಕೆ ನಂದ ಹಮ್| ಸಸಿ ನವಾವೈ ಕಾಹಿ||

ಹಮ್ ಭೂಲೆ ಸೇಯೌ ವೃಥಾ| ಹಿತು ಜಾನಿ ಕೈ ವಾಹಿ||

ಏಡ ಏಕ ಸಿವರಾಜ ನಿಬಾಹಿ| ಕರೌ ಅಪನೆ ಚಿತಕಿ ಚಾಹಿ||

ಆಠ ಪಾತಶಾಹಿ ಝುಕ ಝೋರೆ| ಸುಬನಿ ಬಾಂಧೀ ಡಾಡ ಲೈ ಛೌರೇ||

ಐಸೇ ಗುಣ ಶಿವರಾಜ ಕೇ| ಬಸೇ ಚಿತ್ರ ಮೇ ಆಯಿ||

ಮಿಲಿವೋಯಿ ಮನ ಮೇ ಧನ್ಯೋ| ಮನಸಿ ಮತ ಜ್ಯೋ ಬನಾಯಿ||

"ನನ್ನ ತಂದೆ ತನ್ನ ತಾಯ್ನಾಡಿಗಾಗಿ ಮೊಘಲರ ವಿರುದ್ಧ ಕರದಲ್ಲಿ ಖಡುಗ ಹಿರಿದು ಹೋರಾಡಿದ. ಅಂಥವನ ಮಗನಾದ ನಾನು ಇಂದು ಅದೇ ಮೊಘಲರ ಮುಂದೆ ತಲೆತಗ್ಗಿಸಿ ಅವರ ಸೇವೆ ಮಾಡುತ್ತಿದ್ದೇನೆ. ಅದೇ ಶಿವರಾಜನನ್ನು ನೋಡಿ. ಆ ಮಹಾತ್ಮ ಮೊಘಲ ದೊರೆಯ ವಿರುದ್ಧ ಅಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಹೋರಾಡುತ್ತಿದ್ದಾನೆ. ಎಂಟು ಸುಲ್ತಾನರು ಅವನ ಕೈಯಲ್ಲಿ ಪೆಟ್ಟು ತಿಂದು ಓಡಿದರು. ನನಗೆ ಅಂತಹ ಮಹಾನ್ ದೊರೆಯ ದರ್ಶನ ಭಾಗ್ಯ ಲಭಿಸಿದರೆ ನಾನು ಧನ್ಯ". ಮೊಘಲರ ಬಿಗು ಪಹರೆ, ಗೂಢಚಾರರಿಂದ ತಪ್ಪಿಸಿಕೊಳ್ಳಲು ಬೇಡರ ಗುಂಪಿನ ಜೊತೆ ಅವರಂತೆ ವೇಶ ಧರಿಸಿ ಕಾಡುಮೇಡುಗಳಲ್ಲಿ ಅಲೆದು, ಭಯಂಕರ ಭೀಮೆಯನ್ನು ತೆಪ್ಪಗಳಲ್ಲಿ ದಾಟಿ ಶಿವಾಜಿಯ ಆಸ್ಥಾನಕ್ಕೆ ಪ್ರವೇಶಿಸಿದ. ಒಬ್ಬ ಸಮರ್ಥ ನಾಯಕನ ಹಿರಿತನ-ಗುರುತನಗಳನ್ನು ಇನ್ನೊಬ್ಬ ನಾಯಕನೇ ಗುರುತಿಸಬಲ್ಲನೆಂದರೆ ಶಿವಾಜಿಯ ಸಾಮರ್ಥ್ಯವನ್ನು ಊಹಿಸಬೇಕು.


            ಛತ್ರಸಾಲನನ್ನು ಕಂಡು ಶಿವಾಜಿಯ ಸಂತೋಷಕ್ಕೂ, ಆಶ್ಚರ್ಯಕ್ಕೂ ಪಾರವೇ ಇರಲಿಲ್ಲ. ಶಿವಾಜಿ "ಏನು ಬೇಕು?" ಎಂದು ಕೇಳಿದಾಗ "ನಿನ್ನ ಪರಿವಾರದೊಡನೆ ಸೇರಿ ಮುಘಲರ ವಿರುದ್ಧ ಯುದ್ಧ ಮಾಡಬೇಕು" ಎನ್ನುವುದು ಛತ್ರಸಾಲನ ಉತ್ತರವಾಗಿತ್ತು. ಆಗ ಶಿವಾಜಿಯು "ನಿನ್ನಂತಹಾ ವೀರಾಗ್ರೇಸರ ನನ್ನ ಸೇನೆಯಲ್ಲಿರುವುದರ ಬದಲು ಸ್ವತಂತ್ರವಾಗಿ ಹೋರಾಡಬೇಕು. ನಾನು ದಕ್ಷಿಣದಲ್ಲಿದ್ದೇನೆ. ನೀನು ಉತ್ತರದಲ್ಲಿ. ನೀನು ನಿನ್ನ ನೆಲದಲ್ಲಿ ಸ್ವತಂತ್ರನಾಗಿ, ಹತ್ತಿರದ ಹಿಂದೂಗಳನ್ನು ಒಟ್ಟು ಸೇರಿಸಿ ಅತ್ತಲಿಂದ ಮುಘಲರನ್ನು ಅಟಕಾಯಿಸು. ಸಂಘಶಕ್ತಿಯಲ್ಲಿ ಬಲವಿದೆ, ಗೆಲುವಿದೆ" ಎಂದು ಹುರಿದುಂಬಿಸಿದ. ಶಿವಾಜಿಯ ದೂರದೃಷ್ಟಿಯನ್ನು ಛತ್ರಸಾಲನೂ ಒಪ್ಪಿದ. ಶಿವಾಜಿ ವಿಶೇಷವಾದ ಖಡ್ಗವೊಂದನ್ನು ಛತ್ರಸಾಲನ ಸೊಂಟಕ್ಕೆ ಕಟ್ಟಿದ. ಈ ಸಂಗಮ ವಿಶೇಷವಾದದ್ದು. ಇಲ್ಲಿ ಶಿವಾಜಿಯ ದೂರದೃಷ್ಟಿ, ಸಮಗ್ರ ಹಿಂದೂಸ್ಥಾನದ ದೃಷ್ಟಿ, ಹಿಂದೂಗಳನ್ನು ಸಂಘಟಿಸುವ ಶಕ್ತಿ, ರಾಜಕೀಯ ಚಾಣಾಕ್ಷತೆಯ ಜೊತೆಗೆ ಶಿವಾಜಿಯ ನಾಯಕತ್ವದ ಆ ಅಸಾಮಾನ್ಯ ಸಾಮರ್ಥ್ಯವನ್ನು ಗುರುತಿಸಿದ ಛತ್ರಸಾಲನ ಯೋಗ್ಯತೆಯ ಅರಿವಾಗುತ್ತದೆ.


            ಛತ್ರಸಾಲನು ಬುಂದೇಲಖಂಡಕ್ಕೆ ಹಿಂದಿರುಗಿದ. ಔರಂಗಜೇಬನಿಂದ ಮಾಸಿಕ ವೇತನ ಕೊಡಿಸುವ ಸೂಬಾ ಶುಭಕರಣನ ಆಮಿಶವನ್ನು ತಿರಸ್ಕರಿಸಿದ. ತನ್ನ ತಂದೆಯೊಂದಿಗೆ ಹಗೆತನ ಸಾಧಿಸಿ, ಅಡಿಗಡಿಗೆ ಅಡ್ಡಿಯುಂಟುಮಾಡಿದ್ದವನ ವಂಶದೊಟ್ಟಿಗೆ ದ್ವೇಷವನ್ನು ಮರೆತು ಆ ವಂಶದ ಕುಡಿ ಸುಜಾನಸಿಂಹನನ್ನು ತನ್ನ ಪರವಾಗಿ ಸೆಳೆದುಕೊಂಡ. ಹತ್ತಿರದ ರಾಜರನ್ನು ಒಟ್ಟು ಸೇರಿಸಿದ. ಔರಂಗಾಬಾದಿನ ವೀರ ಬಲದೇವನನ್ನೂ ಸಂಧಿಸಿ ಯುದ್ಧಕ್ಕೆ ಹುರಿದುಂಬಿಸಿದ. ಸೈನ್ಯವನ್ನು ಕಟ್ಟಲು ದೇಶದ ತಾಯಂದಿರು ತಮ್ಮ ಬಂಗಾರದ ಒಡವೆಗಳನ್ನು ಕೊಟ್ಟರು. ಮುನ್ನೂರು ಬುಂದೇಲ ಸೈನಿಕರು ಒಟ್ಟು ಸೇರಿದರು. ಛತ್ರಸಾಲ ದಂಭೇರವನ್ನು ಗೆದ್ದ. ರತ್ನಾಗರ, ಸಿರೋಜ್ ಗಿಲ್ ನಗರ, ಗೌನಾ, ಪಿರಾಹಟ್, ಘೋರಾಸಾಗರ, ಹನೂಟಕ್, ಲಕ್ಕೋರಿ, ಬಡಿಹಾರಗಳನ್ನು ಜಯಸಿ ರಾಜ್ಯವನ್ನು ವಿಸ್ತರಿಸಿದ. ಔರಂಗಜೇಬನ ಪರಮನೀಚವಾದ ಕಾನೂನುಗಳನ್ನೆಲ್ಲಾ ಧಿಕ್ಕರಿಸಿದ. ಛತ್ರಸಾಲನು ಐವರು ಸಂಘಡಿಗರೊಡನೆ ಬೇಟೆಗಾಗಿ ಅರಣ್ಯಕ್ಕೆ ಹೋಗಿದ್ದಾಗ ಔರಂಗಜೇಬನ ಸೇನಾಧಿಪತಿ ಸೈಯದ್‌ಬಹಾದೂರನು ಸೈನ್ಯದೊಂದಿಗೆ ಅರಣ್ಯದೊಳಗೇ ನುಗ್ಗಿದ. ಕೆರಳಿದ ಛತ್ರಸಾಲನು ಮೊಗಲರನ್ನು ಕತ್ತರಿಸಿ ಚೆಲ್ಲಿದ. ಆ ಆರೇ ಜನರು ಬಹಾದ್ದೂರನ ಸೇನೆಯನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಹಾಕಿದರು. ಬಳಿಕ ವರಾವಾ, ಘೂಮಘಾಟ್‌, ಗೋಪಾಚಲ, ಸೈದಮನೋವರ್, ಗ್ವಾಲಿಯರುಗಳನ್ನು ಗೆದ್ದ. ಗೆದ್ದಲ್ಲೆಲ್ಲಾ ಕಂದಾಯ ವಸೂಲಿಗೆ ಆರಂಭಿಸಿದ. ಛತ್ರಸಾಲನ ಕೀರ್ತಿ ದಶದಿಕ್ಕುಗಳಲ್ಲಿ ಹಬ್ಬಿತು. ಹಿಂದೊಮ್ಮೆ ವಿರೋಧಿಸಿದ್ದ ರತ್ನಷಾಹ ಮತ್ತು ಇಂದ್ರಮಣಿ ಮುಂತಾದ ನಾಯಕರುಗಳೂ ಛತ್ರಸಾಲನ ಬೆನ್ನಿಗೆ ನಿಂತರು. ಛತ್ರಸಾಲನ ರಾಜಛತ್ರದಡಿಯಲ್ಲಿ ಮಠಮಂದಿರಗಳಲ್ಲಿ ಘಂಟೆ, ಶಂಖಗಳು ಧ್ವನಿಸಿದವು. ಅಲ್ಲೆಲ್ಲಾ ಭಗವಾಧ್ವಜ ನಿರ್ಭಯದಿಂದ ಹಾರಾಡತೊಡಗಿತು. ಹಿಂದೂಗಳ ಮಾನ, ಸಮ್ಮಾನಗಳು ಮರಳಿ ಬಂದವು.


             ಛತ್ರಸಾಲನನ್ನು ಮಣಿಸಲು ಔರಂಗಜೇಬ ರಣದುಲ್ಲಾಖಾನನನ್ನು ಮೂವತ್ತು ಸಾವಿರ ಸೈನ್ಯದೊಂದಿಗೆ ಕಳುಹಿಸಿದ. ಘನಘೋರ ಯುದ್ಧದಲ್ಲಿ ರಣಭಯಂಕರ ಛತ್ರಸಾಲನೊಡನೆ ಕೈಸಾಗದೆ ರಣದುಲ್ಲಾ ಸೋತು ಸುಣ್ಣವಾಗಿ ಓಡಿಹೋದ. ಬಳಿಕ ಹಲವು ನೂರು ಗಾಡಿಗಳಲ್ಲಿ ದಿಲ್ಲಿಗೆ ಸಾಗುತ್ತಿದ್ದ ಹೇರಳ ದ್ರವ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಛತ್ರಸಾಲ ಕಾರ್ಯದ ಸುದ್ದಿ ಕೇಳಿ ರೊಚ್ಚಿಗೆದ್ದ ಔರಂಗಜೇಬ ರೂಮಿ ಎಂಬ ಸೇನಾಧಿಪತಿಯನ್ನು ಭಾರೀ ಸೈನ್ಯದೊಂದಿಗೆ ಕಳುಹಿಸಿದನು. ಈ ರೂಮಿ ಸಹಿತ ಬಳಿಕ ಬಂದ ದಲೈರ್ ಖಾನ್, ಅಬ್ದುಲ್ ಸಮದ್, ಬಹಲೋರ್ ಖಾನ್, ಸುತರ್ ದೀನ್, ತಹವರ ಖಾನ್, ಸೈಯದ್ ಲತೀಫ್‌ ಮುಂತಾದ ಹತ್ತಾರು ಸರದಾರರಿಗೆ ಛತ್ರಸಾಲನ ಪೆಟ್ಟುಗಳನ್ನು ತಾಳಿಕೊಳ್ಳಲಾಗಲಿಲ್ಲ. ಒಂದು ಕಡೆ ಶಿವಾಜಿ, ಇನ್ನೊಂದೆಡೆ ಛತ್ರಸಾಲರ ಪಟ್ಟುಗಳನ್ನೂ, ಪೆಟ್ಟುಗಳನ್ನೂ ತಾಳಿಕೊಳ್ಳಲಾಗದೆ ಔರಂಗಜೇಬ ಕಂಗೆಟ್ಟ. ಆತ ಕೊನೆಗೆ ಸುತರದೀನ ಈರಾನಿ ಎಂಬ ಮಹಾದುಷ್ಟನೂ, ಕ್ರೂರಿಯೂ ಆದ ಸೇನಾನಿಯೊಬ್ಬನನ್ನು ಛತ್ರಸಾಲನನ್ನು ಕೊಲ್ಲಲು ಕಳುಹಿಸಿದ. ಆತ ಛತ್ರಸಾಲನಿಗೆ ಸುಮ್ಮನೇ ಪ್ರಾಣಹಾನಿಮಾಡಿಕೊಳ್ಳದೆ ಸಂಧಿ ಮಾಡಿಕೊಳ್ಳುವಂತೆ ಕರೆಕಳುಹಿಸಿದ. "ನಾವು ಕ್ಷತ್ರಿಯರು; ಯುದ್ಧಕ್ಕೆ ಹೆದರುವವರಲ್ಲ. ಸುತರದೀನನಿಗೆ ನಿಜವಾಗಿಯೂ ಸಂಧಿ ಮಾಡಿಕೊಳ್ಳಬೇಕೆಂದಿದ್ದರೆ ಕಂದಾಯವನ್ನು ತಂದು ನಮಗೇ ಒಪ್ಪಿಸಲಿ” ಎಂಬ ಕ್ಷತ್ರಿಯೋಚಿತ ಉತ್ತರ ಛತ್ರಸಾಲನಿಂದ ಬಂತು. ಬುಂದೇಲರ ಖಡ್ಗಗಳಾಘಾತಕ್ಕೆ ಮೊಘಲರ ಸೈನ್ಯ ತತ್ತರಿಸಿ ರಕ್ತದ ಕೋಡಿಯೇ ಹರಿಯಿತು. ವಿಂಧ್ಯವಾಸಿನಿಯ ಪಡೆ ಜಗದ್ವಂದ್ಯವಾಯಿತು.



               ಅನ್ಯ ಹಿಂದೂ ರಾಜರಂತೆ ಯುದ್ಧರಂಗದಲ್ಲಿ ಹೋರಾಡಿ ವೀರಸ್ವರ್ಗ ಪಡೆಯುವುದು ಛತ್ರಸಾಲನ ಉದ್ದೇಶವಾಗಿರಲಿಲ್ಲ. ಅವನಲ್ಲಿ ದೂರದೃಷ್ಟಿಯಿತ್ತು. ಮೊಘಲರ ಅಟ್ಟಹಾಸವನ್ನು ಕೊನೆಗಾಣಿಸುವ ಸಿಟ್ಟಿತ್ತು. ಶಕ್ತಿಯ ಜೊತೆ ಯುಕ್ತಿಯೂ ಬೆರೆತಿತ್ತು. ತಮ್ಮವರ ಸಂಖ್ಯೆ ಕಡಿಮೆ ಇದ್ದಾಗ, ವ್ಯರ್ಥವಾಗಿ ಯಾರನ್ನೂ ಕಳೆದುಕೊಳ್ಳದೆ, ಸೈನ್ಯ ಸಮೇತ ಅವನು ಯುದ್ಧರಂಗದಿಂದಲೇ ಮರೆಯಾಗುತ್ತಿದ್ದನು. ಎದುರಾಳಿ ಸೈನ್ಯ ವಿಜಯೋನ್ಮಾದದಲ್ಲಿ ಮೈಮರೆತಿದ್ದಾಗ ಮಿಂಚಿನ ದಾಳಿ ನಡೆಸುತ್ತಿದ್ದ. ವಿಜಯಿಯಾದ ಮೇಲೂ ಆತನೆಂದೂ ಮೈಮರೆಯುತ್ತಿರಲಿಲ್ಲ. ತಹವರಖಾನನು ದಂಡೆತ್ತಿ ಬಂದಾಗ ಛತ್ರಸಾಲನ ವಿವಾಹ ನಡೆಯುತ್ತಿತ್ತು. ಕ್ಷಣಮಾತ್ರವೂ ತಡಮಾಡದೇ ರಣರಂಗಕ್ಕಿಳಿದು ತಹವರಖಾನನ ಸೊಕ್ಕಡಗಿಸಿದನು. ಪರಸ್ಪರ ಕಾದಾಡುತ್ತಿದ್ದ ಹಿಂದೂ ರಾಜರಿಗೆ ಬುದ್ಧಿವಾದ ಹೇಳಿ ಅವರನ್ನೆಲ್ಲ ಸಂಘಟಿಸಿ ತನ್ನ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದ. ಯಾರು ಸಾಮಕ್ಕೆ ಬಗ್ಗುತ್ತಿರಲಿಲ್ಲವೋ ಅವರಲ್ಲಿ ಅವನ ಖಡ್ಗ ಮಾತಾಡುತ್ತಿತ್ತು. ಅವನೆಂದೂ ಭೋಗಲಾಲಸೆಗೆ ಎಳೆಸಲಿಲ್ಲ. ಪ್ರಾಣನಾಥರ ಆಶೀರ್ವಾದದಿಂದ ಧರ್ಮದ ಹಾದಿಯಲ್ಲಿ ಅವನ ಅಧಿಕಾರ ಎಂದೆಂದಿಗೂ ಚಲಿಸುತ್ತಿತ್ತು. ಅವನ ಆಡಳಿತ ಕ್ರಮದಿಂದ ರಾಜ್ಯದಲ್ಲಿ ಶಾಂತಿ, ಸಮೃದ್ಧಿಗಳು ನೆಲೆಸಿದ್ದವು.


             ಔರಂಗಜೇಬನ ಬಳಿಕ ದಿಲ್ಲಿಯ ಸಿಂಹಾಸನ ಏರಿದ ದುರ್ಬಲ ಬಹಾದ್ದೂರ್ ಷಾಹ ಛತ್ರಸಾಲನನ್ನು ಆಸ್ಥಾನಕ್ಕೆ ಆಹ್ವಾನಿಸಿದ್ದ. ಆದರೆ ಅದು ಮಿತೃತ್ವವೂ ಅಲ್ಲದೇ, ಸಮಾನ ಗೌರವವೂ ಅಲ್ಲದೆ ಸಂಬಳಕ್ಕಾಗಿ ಕೆಲಸ ಮಾಡುವ ಆಹ್ವಾನ ಎಂಬುದನ್ನು ಅರಿತ ಕೂಡಲೇ ಅದನ್ನು ತಿರಸ್ಕರಿಸಿದ. ಬಹಾದೂರ್ ಶಾಹನು ಮಹಮದ್ ಖಾನ್ ಎಂಬ ಸೇನಾಧಿಪತಿಯನ್ನು ಎಂಬತ್ತು ಸಾವಿರ ಯೋಧರ ಸೈನ್ಯದೊಂದಿಗೆ ಛತ್ರಸಾಲನೊಡನೆ ಯುದ್ಧಕ್ಕೆ ಕಳುಹಿಸಿದ. ಛತ್ರಸಾಲನು ಬಾಜೀರಾವ್ ಪೇಶ್ವೆಯ ಸಹಾಯ ಪಡೆದು ಆ ಸೈನ್ಯವನ್ನು ಧೂಳೀಪಟ ಮಾಡಿದ. ಮಹಮ್ಮದ್ ಖಾನ್ ಜೈಪುರದ ಕೋಟೆಗೆ ಓಡಿ ಹೋಗಿ ಅವಿತುಕೊಂಡಾಗ ಅದಕ್ಕೂ ಮುತ್ತಿಗೆ ಹಾಕಿದ. ಆರು ತಿಂಗಳ ಬಳಿಕ ಮೊಹಮ್ಮದನ ಪುತ್ರ ಶರಣಾದ ಬಳಿಕ ಅವನಿಗೆ ಜೀವದಾನ ಸಿಕ್ಕಿತು.


           ಎಂಬತ್ನಾಲ್ಕು ವರ್ಷದ ತುಂಬು ಜೀವನ ನಡೆಸಿ ಪುತ್ರಪೌತ್ರಾದಿಗಳನ್ನು ಹೊಂದಿ ನೆಮ್ಮದಿಯಲ್ಲಿ ಪ್ರಾಣ ತೊರೆದ ಛತ್ರಸಾಲ, ಔರಂಗಜೇಬನಂತಹಾ ದುಷ್ಟ ಮತಾಂಧನಿಗೆ ಮಣಿಯದೆ ಅವನ ಅವಸಾನವನ್ನೂ ನೋಡಿದ ಪುಣ್ಯಪುರುಷ. ಬದುಕಿದ ಎಂಬತ್ನಾಲ್ಕು ವರ್ಷಗಳಲ್ಲಿ ಮೊದಲ ಹದಿನಾಲ್ಕು ವರ್ಷಗಳನ್ನು ಬಿಟ್ಟು ಉಳಿದ ಎಪ್ಪತ್ತು ವರ್ಷಗಳನ್ನು ಯುದ್ಧದಲ್ಲಿಯೇ ಕಳೆದ ವೀರ ಅವನು. ಚಿಕ್ಕಪ್ರಾಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥನಾಗಿ, ದಾಯಾದಿಗಳ ಆಶ್ರಯದಲ್ಲಿ ಬೆಳೆದು, ದುಷ್ಟ ಔರಂಗಜೇಬನಿಗೆ ಎಲ್ಲರೂ ಹೆದರುತ್ತಿದ್ದ ಕಾಲದಲ್ಲಿ, ಔರಂಗಜೇಬನ ದಾಸ್ಯದಿಂದ ಹೇಸಿ, ಆತ್ಮಾಭಿಮಾನ ಜಾಗೃತವಾಗಿ, ಶಿವಾಜಿಯಿಂದ ಸ್ಫೂರ್ತಿ ಪಡೆದು ಏಕಛತ್ರನಾಗಿ ಬುಂದೇಲವನ್ನು ಒಂದಾಗಿಸಿ ಆಳಿ, ಸನಾತನ ಸಂಸ್ಕೃತಿಯನ್ನು ರಕ್ಷಿಸಿದ ಛತ್ರಸಾಲನ ಬದುಕು ಎಂದೆಂದಿಗೂ ಸ್ಫೂರ್ತಿಯುತವಾದದ್ದು. ತನ್ನ ರಾಜ್ಯವನ್ನು ಇಬ್ಬರು ಮಕ್ಕಳಿಗೂ, ಪೇಶ್ವೆಗೂ ಹಂಚಿಕೊಟ್ಟ, ದೇಶದ ಭವಿಷ್ಯದ ಬಗೆಗಿನ ಅವನ ದೂರದೃಷ್ಟಿ ಅಂತ್ಯಕಾಲದಲ್ಲೂ ಸ್ಥಿರವಾಗಿತ್ತು.





ಬುಧವಾರ, ಸೆಪ್ಟೆಂಬರ್ 29, 2021

ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ

 ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ



ಭವಿಷ್ಯತ್ಪುರಾಣದ ಶ್ಲೋಕವೊಂದು ಇಂತೆನ್ನುತ್ತದೆ:-


ವಿಂಶದ್ಭಿಃ ಕರ್ಮಯೋಗಂ ಚ ಸಮಾರಾಧ್ಯ ಶಿವೋsಭವತ್

ಪೂರ್ಣೇ ತ್ರಿಂಶಚ್ಛತೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ 

ಶಕಾನಾಂಚ ವಿನಾಶಾರ್ಥಮ್ ಆರ್ಯಧರ್ಮ ವಿವೃದ್ಧಯೇ 

ಜಾತಶ್ಶಿವಾಜ್ಞಯಾಸೋsಪಿ ಕೈಲಾಸಾತ್ ಗುಹ್ಯಕಾಲಯಾತ್


ಹಿಂದಿನ ಕಾಲದಲ್ಲಿ ಶಿವದೃಷ್ಟಿಯೆಂಬೊಬ್ಬ ಬ್ರಾಹ್ಮಣನು ತನ್ನ ಅನೇಕ ಶಿಷ್ಯರೊಂದಿಗೆ ವನಕ್ಕೆ ತೆರಳಿದನು. ಅಲ್ಲಿ ಇಪ್ಪತ್ತು ವರ್ಷಗಳ ಕಾಲ ಕರ್ಮಯೋಗಮಾರ್ಗದಿಂದ ಶಿವನನ್ನು ಆರಾಧಿಸಿ ಶಿವನೇ ಆಗಿ ಹೋದನು.  ಮೂರುಸಾವಿರ ವರ್ಷಗಳ ತರುವಾಯ ಭಯಂಕರ ಕಲಿಯುಗವು ಪ್ರಾಪ್ತವಾಯಿತು. ಆಗ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಉಜ್ಜೀವನಗೊಳಿಸಲು ಶಿವನ ಆಜ್ಞೆಯಂತೆ ಶಿವದೃಷ್ಟಿಯು ಕೈಲಾಸದಿಂದ ಇಳಿದು ಧರೆಯಲ್ಲಿ ಅವತರಿಸಿದನು.  ಪ್ರಮರ ರಾಜನ ವಂಶದಲ್ಲಿ ಜನಿಸಿದ ಇವನಿಗೆ ತಂದೆಯಾದ ಗಂಧರ್ವಸೇನನು ವಿಕ್ರಮಾದಿತ್ಯನೆಂಬ ಹೆಸರನ್ನಿರಿಸಿದ. ಮಹಾಬುದ್ಧಿಶಾಲಿಯಾದ ವಿಕ್ರಮನು ಐದು ವರ್ಷ ತುಂಬುತ್ತಿದ್ದಂತೆ ವನಕ್ಕೆ ತೆರಳಿ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ಸಫಲಮನೋರಥನಾಗಿ ಸಂಪತ್ತಿನಿಂದ ಕೂಡಿ, ದಿವ್ಯವಾಗಿ ಶೋಭಿಸುತ್ತಿದ್ದ ಅಂಬಾವತೀ ನಗರಕ್ಕೆ ಬಂದು ಅಲ್ಲಿ ಪರಮೇಶ್ವರನು ತನಗಾಗಿ ಕಳುಹಿಸಿದ ಮೂವತ್ತೆರಡು ಪುತ್ಥಳಿಯುಕ್ತವಾದ ದೇವಲೋಕದ ಸಿಂಹಾಸನವನ್ನು ಏರಿ ರಾಜ್ಯಪಾಲನೆಯನ್ನು ಮಾಡುತ್ತಿದ್ದ. ಅವನ ಮೈಗಾವಲಿಗಾಗಿ ಪಾರ್ವತೀ ದೇವಿಯು ಬೇತಾಳನನ್ನು ಕಳುಹಿಸಿದಳು. ಆ ಮಹಾರಾಜನು ಮಹಾಕಾಲೇಶ್ವರನ ಸನ್ನಿಧಿಗೆ ತೆರಳಿ ಪರಶಿವನನ್ನು ಆರಾಧಿಸುತ್ತಿದ್ದನು. ಒಂದು ವ್ಯೂಹ ವಿಸ್ತಾರವುಳ್ಳ, ನಾನಾವರ್ಣದ ಧಾತುಗಳ ಸ್ತಂಭಗಳಿಂದ ಕೂಡಿ, ನಾನಾ ಮಣಿರತ್ನಗಳಿಂದ ಅಲಂಕೃತವು, ನಾನಾ ವೃಕ್ಷಲತೆಗಳಿಂದ ಕೂಡಿದ ಸಭಾಭವನವನ್ನು ನಿರ್ಮಿಸಿ ಅಲ್ಲಿ ಸಿಂಹಾಸನದಲ್ಲಿ ವಿರಾಜಿತನಾದನು. ವೇದ ವೇದಾಂಗ ಪಾರಂಗತರನ್ನೂ ಯಥೋಚಿತವಾಗಿ ಶಾಸ್ತ್ರೋಕ್ತ ವಿಧಾನದಿಂದ ಸತ್ಕರಿಸಿ ಧರ್ಮಶ್ರವಣ ಮಾಡಿದನು ಎಂದು ಮುಂತಾಗಿ  ಅಲ್ಲದೆ ಈಶ್ವರಾಜ್ಞೆಯಂತೆ ಬಂದ ಬೇತಾಳನು ಕಥೆಗಳನ್ನು ಹೇಳಿ, ತೊಡಕಾದ ಪ್ರಶ್ನೆಗಳನ್ನು ಕೇಳಿ ವಿಕ್ರಮಾರ್ಕನನ್ನು ಪರೀಕ್ಷಿಸುವ ಕಥೆಯನ್ನು ಭವಿಷ್ಯತ್ಪುರಾಣದ ಮುಂದಿನ ಶ್ಲೋಕಗಳು ಹೇಳುತ್ತವೆ. 


ವಿಕ್ರಮಾದಿತ್ಯ ಮತ್ತು ಬೇತಾಳ ಕಥೆಗಳು ಭಾರತೀಯ ಜನಮಾನಸಕ್ಕೆ ಚಿರಪರಿಚಿತ. ವಿಕ್ರಮ ಶಕೆ, ವೇತಾಲ ಪಂಚವಿಂಶತಿ ಕಥಾ, ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನನ್ನು ಭಾರತದಲ್ಲಿ ಜೀವಂತವಾಗಿಟ್ಟವು. ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಗ ಇಂದಿಗೂ ವಿಕ್ರಮ ಶಕೆಯನ್ನೇ ಅವಲಂಬಿಸಿದೆ. ಪುರಾಣಗಳು ರಾಜರನ್ನು ದೈವತ್ವಕ್ಕೇರಿಸಿ ಆಧುನಿಕ ಶಿಕ್ಷಣವನ್ನು ಪಡೆದ ಮನಸ್ಸು ನಂಬಲು ಕಷ್ಟವಾಗುವಂತೆ ಭಾರತದ ಇತಿಹಾಸವನ್ನು ವಿವರಿಸಿದ ಮಾತ್ರಕ್ಕೆ ಪುರಾಣಗಳೆಲ್ಲಾ ಕಪೋಲಕಲ್ಪಿತಗಳೆಂದು ಅಲ್ಲಗೆಳೆಯುವುದು ನಿಜೇತಿಹಾಸವನ್ನು ಹುಡುಕುವವರಿಗೆ ಭೂಷಣವಲ್ಲ. ಅದು ಇತಿಹಾಸವನ್ನು ಸಾಮಾನ್ಯ ಜನಮನಕ್ಕೆ ತಲುಪಿಸುವ ಅಂದಿನ ರೀತಿ. ಪುರಾಣಗಳ ಕಥೆಗಳೊಳಗಿಂದ ನಮ್ಮ ಇತಿಹಾಸವನ್ನು ನಾವೇ ಹೊರತೆಗೆದು ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಕಟ್ಟಿಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಬ್ರಿಟಿಷರು ಬರೆದ ಪೊಳ್ಳು ಇತಿಹಾಸವನ್ನು ನಂಬಿ ಯಾಮಾರಿದ ಹಾಗೆ ಮುಂದಿನ ಪೀಳಿಗೆಯೂ ಬೆಳೆದು ನಿಜ ಇತಿಹಾಸವೇ ಮರೆಯಾಗಿ ಬಿಡುವ ಅಪಾಯವಿದೆ. ಭವಿಷ್ಯತ್ ಪುರಾಣದ ಈ ಶ್ಲೋಕಗಳಿಂದ ದೈವತ್ವಕ್ಕೇರಿಸಿದ ವಿಚಾರವನ್ನು ಬದಿಗಿಟ್ಟು ವಾಸ್ತವಿಕ ದೃಷ್ಟಿಯಿಂದ ಅಥವಾ ಇಂದಿನ ಕಾಲಕ್ಕೆ ಹೋಲಿಸಿ ಘಟನೆಯನ್ನು ಹೆಕ್ಕಿ ತೆಗೆದರೂ ಪ್ರಮರ ವಂಶದ ಗಂಧರ್ವಸೇನನಿಗೆ ವಿಕ್ರಮಾದಿತ್ಯನೆಂಬ ಅಪೂರ್ವ ಶಿಶುವು ಶಿವಕೃಪೆಯಿಂದ ಜನಿಸಿತು. ಬುದ್ಧಿವಂತನಾದ ವಿಕ್ರಮಾದಿತ್ಯ ಐದನೇ ವರ್ಷಕ್ಕೆ ಅಧ್ಯಯನ, ತಪಸ್ಸು, ಸಾಧನೆಯಿಂದ ಅಪಾರ ಸಂಪತ್ತನ್ನು ಗಳಿಸಿ ಚಕ್ರವರ್ತಿಯಾಗಿ ಸ್ವರ್ಣಸಿಂಹಾಸನವನ್ನೇರಿ ವಿದ್ವಜನರನ್ನು ಪೋಷಿಸಿ, ಜನರನ್ನು ಪಾಲಿಸಿ, ಸನಾತನ ಧರ್ಮವನ್ನು ಉಜ್ಜೀವಿಸಿ ಓರ್ವ ಶಕಕರ್ತನಾಗಿ ಮೆರೆದ ಎನ್ನುವುದನ್ನು ಒಪ್ಪಬಹುದಷ್ಟೇ. ಒಪ್ಪಲೇಬೇಕಾಗುತ್ತದೆ; ಇಲ್ಲದಿದ್ದರೆ ಆತನ ಹೆಸರಿನ ಶಕೆಯೊಂದು ಇಲ್ಲಿಯವರೆಗೆ ಉಳಿದು ಬೆಳೆದು ಬರುತ್ತಿತ್ತೇ? ಅವನಿಲ್ಲ ಎಂದಾಗಿದ್ದರೆ ಇಂದಿಗೂ ನಮ್ಮ ಸಂಸ್ಕೃತಿಯ ಮಾತ್ರವಲ್ಲ ಜಗತ್ತಿನ ಮಹಾಕಾವ್ಯ, ಮಹಾಗ್ರಂಥಗಳಾಗಿ ಮನ್ನಣೆ ಪಡೆದ ಕೃತಿಗಳನ್ನು ರಚಿಸಿದ ಮಹಾನ್ ವಿದ್ವಾಂಸರುಗಳಾದ ಆ ನವರತ್ನಗಳನ್ನು ಪೋಷಿಸಿದವರಾದರೂ ಯಾರು? ಮಾತ್ರವಲ್ಲ ವಿಕ್ರಮಾದಿತ್ಯನೆಂಬ ಚಕ್ರವರ್ತಿ ಕಾಲ್ಪನಿಕ ಎಂದಾಗಿದ್ದರೆ ಇವತ್ತು ಕುತುಬುದ್ದೀನ್ ಐಬಕ್'ನಿಂದ ನಿರ್ಮಿತವಾದದ್ದು ಎಂದು ನಾವು ನೀವೆಲ್ಲ ತಪ್ಪು ತಿಳಿದಿರುವ ಕುತುಬ್ ಮಿನಾರ್ ಕೂಡಾ ಕಾಲ್ಪನಿಕವೇ ಆಗಿರಬೇಕಿತ್ತು!


ಸಾಮಾನ್ಯ ಯುಗಕ್ಕಿಂದ ಮೊದಲಿನ 3138ಕ್ಕೆ ಮಹಾಭಾರತ ಯುದ್ಧ ಮುಗಿಯಿತು. ಮುಂದಿನ ಮೂವತ್ತಾರನೇ ವರ್ಷಕ್ಕೆ ಭಗವಾನ್ ಶ್ರೀಕೃಷ್ಣನ ನಿರ್ವಾಣದ ಜೊತೆಗೆ ಕಲಿಯ ಪ್ರವೇಶವೂ ಆಯಿತು. ಕಲಿಯುಗದ 3000ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಯಿತು. ಅಂದರೆ ಸಾಮಾನ್ಯ ಯುಗಕ್ಕಿಂತ 101ವರ್ಷ ಮೊದಲು. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ವಿಕ್ರಮಾದಿತ್ಯ ಎನ್ನುವುದು ತಂದೆ ಗಂಧರ್ವಸೇನ ಹುಟ್ಟಿದಾಗ ಇಟ್ಟ ಹೆಸರೇ ಹೊರತು ಬಿರುದಲ್ಲ. ಸಾಮಾನ್ಯ ಯುಗಕ್ಕಿಂತ ಮೊದಲಿನ 82ರಲ್ಲಿ ಆತ ಪಟ್ಟವೇರಿದ. ಪ್ರಮರ ವಂಶದ ಮೂವತ್ತೆರಡು ರಾಜರ ಉಲ್ಲೇಖ ಸಿಗುತ್ತದೆ. ಈ ರಾಜವಂಶದ ಎಂಟನೇ ರಾಜನೇ ವಿಕ್ರಮಾದಿತ್ಯ. ಐದನೇ ವರ್ಷಕ್ಕೆ ತಪಸ್ಸಿಗೆ ತೆರಳಿದ ಬಾಲಕ ವಿಕ್ರಮ ಹನ್ನೆರಡು ವರ್ಷಗಳ ಸಾಧನೆಯ ಬಳಿಕ  ಅಂಬಾವತಿ(ಉಜ್ಜೈನಿ)ಗೆ ಮರಳಿ ತನ್ನ ಇಪ್ಪತ್ತನೇ ವರ್ಷದಲ್ಲಿ 32 ಪುತ್ಥಳಿಗಳಿದ್ದ ಸ್ವರ್ಣಸಿಂಹಾಸನವನ್ನೇರಿದ. ಮುಂದಿನ ಇಪ್ಪತ್ತನಾಲ್ಕು ವರ್ಷಗಳ ದಂಡಯಾತ್ರೆಯಲ್ಲಿ ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ, ಅಖಂಡ ಭಾರತ ಭೂಮಂಡಲವನ್ನು ಗೆದ್ದು ಸಾಮಾನ್ಯ ಯುಗ ಪೂರ್ವದ 57ರಲ್ಲಿ ವಿಕ್ರಮಶಕೆಯನ್ನು ಸ್ಥಾಪಿಸಿ ದಕ್ಷಿಣದ ಸಾಗರದಿಂದ ಹಿಮಾಲಯದವರೆಗೂ ಆಳ್ವಿಕೆ ನಡೆಸಿ ಚಕ್ರವರ್ತಿಯಾಗಿ ಮೆರೆದ. ಮುಂದಿನ ಎಪ್ಪತ್ತು ವರ್ಷಗಳ ಕಾಲ ಉಜ್ಜೈಯಿನಿಯಲ್ಲಿ ವಿದ್ವಾಂಸರ ಮಧ್ಯೆ ಕಳೆದು ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ. ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಸಾಮಾನ್ಯ ಯುಗ 14ರಲ್ಲಿ ತೀರಿಕೊಂಡಾಗ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಬೆದರಿ ಕಾಶ್ಮೀರ ರಾಜ ಪ್ರಮುಖರು ವಿಕ್ರಮನಲ್ಲಿ ಮೊರೆಯಿಟ್ಟರು. ಆಗ ತನ್ನ ಮಂತ್ರಿ ಮಾತೃಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಗತಿಸಿದನೆಂದು ಕಲ್ಹಣನ ರಾಜತರಂಗಿಣಿಯಲ್ಲಿಯೂ ಸಹ ಉಲ್ಲೇಖವಿದೆ. 


ವಿಕ್ರಮಾದಿತ್ಯನ ಐತಿಹಾಸಿಕತೆಗೆ ಮತ್ತಷ್ಟು ಮಹತ್ವದ ಸಾಕ್ಷಿ ಒದಗಿಸಿರುವುದು ಅವನ ಆಸ್ಥಾನದಲ್ಲಿದ್ದ ನವರತ್ನಗಳಲ್ಲೊಬ್ಬನಾಗಿದ್ದ ಕವಿಕುಲಗುರು ಕಾಳಿದಾಸ. ಕಾಳಿದಾಸ ತನ್ನ ಕೃತಿಯಾದ "ಜ್ಯೋತಿರ್ವಿದಾಭರಣ"ದಲ್ಲಿ ಕಲಿಯುಗದ ಶಕೆಗಳು ಹಾಗೂ ಶಕಕರ್ತರ ಬಗ್ಗೆ ಹೀಗೆ ಬರೆದಿದ್ದಾನೆ.


ಯುಧಿಷ್ಟಿರೋ ವಿಕ್ರಮಶಾಲಿವಾಹನೌ 

ನರಾಧಿನಾಥೋ ವಿಜಯಾಭಿನಂದನಃ | 

ಇಮೇನ ನಾಗಾರ್ಜುನಮೇದಿನೀವಿಭು 

ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||

ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | 

ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ || 

ಶಾಲೇಯಧಾರಾಭೃತಿ ಶಾಲಿವಾಹನಃ | 

ಸುಚಿತ್ರಕೂಟೇ ವಿಜಯಾಭಿನಂದನಃ || 

ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | 

ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||


ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ ಈ ಆರು ಜನ ಕಲಿಯುಗದ ಶಕಕಕರ್ತರುಗಳು. ಸಾಮಾನ್ಯ ಯುಗ ಪೂರ್ವದ 3138ರಲ್ಲಿ ಆರಂಭವಾದ ಯುಧಿಷ್ಟಿರ ಶಕೆಯ ಒಟ್ಟು ಅವಧಿ 3080 ವರ್ಷಗಳು. ಸಾಮಾನ್ಯ ಯುಗ ಪೂರ್ವದ 57ರಿಂದ ಸಾಮಾನ್ಯ ಯುಗದ 78ರವರೆಗೆ 135 ವರ್ಷಗಳು ವಿಕ್ರಮಶಕೆಯ ಕಾಲ. ಮುಂದಿನ ಹದಿನೆಂಟು ಸಾವಿರ ವರ್ಷಗಳು ಶಾಲಿವಾಹನ ಶಕೆ, ಹತ್ತು ಸಾವಿರ ವರ್ಷ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಸೇರಿ ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತವೆ. ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ವಿಕ್ರಮನ ರಾಜಧಾನಿ ಉಜ್ಜಯಿನಿ, ಶಾಲಿವಾಹನನ ರಾಜಧಾನಿ ಧಾರಾನಗರ, ಚಿತ್ರಕೂಟ ವಿಜಯಾಭಿನಂದನನದ್ದು, ನಾಗಾರ್ಜುನನ ಆಳ್ವಿಕೆ ರೋಹಿತಕದಿಂದ, ಬಲಿಯದ್ದು ಭೃಗುಕಚ್ಛದಿಂದ. 


ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ | 

ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು || 

ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ | 

ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ | 

ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||


 ಕವಿಗಳ ಪ್ರತಿಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಹದಿನಾಲ್ಕು ಶಾಸನಗಳು ಕವಿಗಳಿಗೆ ಬಹುಮಾನವಾಗಿ ಸಿಗುತ್ತಿದ್ದವು. ನಾಲ್ಕು ಶ್ಲೋಕಗಳನ್ನು ಹಿಡಿದುಕೊಂಡು ವಿಕ್ರಮನ ಆಸ್ಥಾನಕ್ಕೆ ಹೋದವರ್ಯಾರೂ ಬರಿಗೈಯಲ್ಲಿ ಬಂದವರಿಲ್ಲ. ಅಂತಹಾ ವಿದ್ಯಾಪೋಷಕ, ವಿದ್ವಜ್ಜನ ಪೋಷಕ ವಿಕ್ರಮಾದಿತ್ಯ. "ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕರಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಆದರೆ ಅದು ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದೆಂದಿಗೂ ಸಿಗಲಾರದು" ಎಂದು ವಿಕ್ರಮಾದಿತ್ಯನನ್ನು ಕಾಳಿದಾಸ ಹೊಗಳಿದ್ದಾನೆ. 


ಇದೇ ಶ್ಲೋಕಗಳು ಭೋಜಪ್ರಬಂಧದಲ್ಲಿಯೂ ಇವೆ. ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರನ್ನೆಲ್ಲಾ ಭೋಜನ ಆಸ್ಥಾನದಲ್ಲಿದ್ದರು ಎಂಬಂತೆ ಇದರಲ್ಲಿ ವರ್ಣಿಸಲಾಗಿದೆ. ಭೋಜರಾಜ ಏಳನೇ ಶತಮಾನದಲ್ಲಿದ್ದವ. ಭೋಜ ಪ್ರಬಂಧ ಹದಿನೈದನೇ ಶತಮಾನದ್ದು! ಅದರಲ್ಲೂ ಭೋಜಪ್ರಬಂಧದ ಬಹುತೇಕ ಕಥೆ ಹದಿಮೂರನೇ ಶತಮಾನದ  ಸಿಂಹಳದ "ಪೂಜಾವಳಿ" ಎಂಬ ಕುಮಾರದಾಸನನ್ನು ವರ್ಣಿಸಿದ ಕೃತಿಯಿಂದ ಆಯ್ದುಕೊಂಡದ್ದು. ಕಾಳಿದಾಸನನ್ನು ಕುರಿಕಾಯುವ ಪೆದ್ದನನ್ನಾಗಿಸಿದ್ದು ಇದೇ ಕೃತಿ! ಇದರಿಂದಲೇ ಭೋಜಪ್ರಬಂಧದ ಕಾಲ್ಪನಿಕತೆಯನ್ನು ಊಹಿಸಬಹುದು. ವಿಕ್ರಮಾದಿತ್ಯನನ್ನು ಚರಿತ್ರೆಯಿಂದ ಬದಿಗೆ ಸರಿಸುವ ಸಲುವಾಗಿ ಇದೇ ಕಥೆಯನ್ನು ಆಧರಿಸಿ ಕಾಳಿದಾಸನನ್ನು ಸಾಮಾನ್ಯ ಯುಗಕ್ಕೆ, ಭೋಜರಾಜನ ಆಸ್ಥಾನಕ್ಕೆ ತಂದು ನಿಲ್ಲಿಸಿದ ಭಾರತ ವಿರೋಧೀ ಇತಿಹಾಸಕಾರರಿದ್ದಾರೆ!


ಸಾಲು ಸಾಲು ದಾಖಲೆಗಳಿದ್ದರೂ ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯ ಎಂದರೆ ಹೆಚ್ಚಿನವರಿಗೆ ಗುಪ್ತರ ಎರಡನೇ ಚಂದ್ರಗುಪ್ತನೇ ವಿಕ್ರಮಾದಿತ್ಯ. ಮತ್ತುಳಿದವರಿಗೆ ಆತನೊಬ್ಬ ಕಾಲ್ಪನಿಕ ವ್ಯಕ್ತಿ. ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ ಕೂಡಾ "ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯನ ಕಾಲವೇ ಸ್ಪಷ್ಟವಿಲ್ಲ. ಆ ಹೆಸರಿನ ವ್ಯಕ್ತಿಯಿದ್ದದ್ದೇ ಸಂಶಯ. ಉಜ್ಜೈನಿಯ ಕೆಲ ಜ್ಯೋತಿಷಿಗಳು ಈ ಶಕೆಯನ್ನು ಆರಂಭಿಸಿರಬಹುದು. ವಿಕ್ರಮಾದಿತ್ಯನೆಂಬ ಯಾವುದೋ ಒಬ್ಬ  ರಾಜ ಮಾಳವ ಶಕೆಗೇ ತನ್ನ ಹೆಸರಿಟ್ಟುಕೊಂಡಿರಬಹುದು. ಆ ವಿಕ್ರಮಾದಿತ್ಯ ಬಹುಷಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನು ಆಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು" ಎಂದು ಬರೆದಿದ್ದಾನೆಂದರೆ ಈ ಇತಿಹಾಸಕಾರರು ಸ್ಪಷ್ಟವಾಗಿ ಗೋಚರವಿದ್ದ ಸತ್ಯವನ್ನು ಸುಳ್ಳಾಗಿಸಲು ಎಷ್ಟು ಹೆಣಗಾಡಿದ್ದರು ಎನ್ನುವುದರ ಅರಿವಾಗುತ್ತದೆ. ಸಾಮಾನ್ಯ ಯುಗ ಪೂರ್ವದ 4004ಕ್ಕೆ ಭೂಮಿಯ ಮೇಲೆ ಮೊದಲ ಸೃಷ್ಟಿಯಾಯಿತೆಂದು ಬೈಬಲ್ ಹೇಳಿದ್ದನ್ನು ಯಥಾವತ್ತಾಗಿ ನಂಬಿರುವ ಇದೇ ಇತಿಹಾಸಕಾರರಿಗಲ್ಲವೆ ಆ ಸಮಯದಲ್ಲಿ ಭಾರತದಲ್ಲಿ ಅತ್ಯುಚ್ಛ ನಾಗರೀಕತೆಯೊಂದು ಬೆಳೆದು ಉಚ್ಛ್ರಾಯ ಸ್ಥಿತಿ ತಲುಪಿ ತನ್ನ ಪ್ರಕಾಶವನ್ನು ಸರ್ವತ್ರ ಬೀಸಿತ್ತು ಎನ್ನುವ ತಥ್ಯವನ್ನು ಒಪ್ಪಲಿಕ್ಕಾಗದೇ ಒಡಲು ಉರಿದದ್ದು. ಸರಸ್ವತೀ ನಾಗರೀಕತೆಯನ್ನು ಸಾಮಾನ್ಯ ಯುಗ ಪೂರ್ವದ 2000ಕ್ಕೂ ಈಚೆಗೆ ಅವರು ಎಳೆದು ತಂದದ್ದು ಇದೇ ಕಾರಣಕ್ಕಾಗಿಯಲ್ಲವೇ. ಚಂದ್ರಗುಪ್ತ ಮೌರ್ಯನನ್ನು ಅಲೆಗ್ಸಾಂಡರನ ಕಾಲದ ಜೊತೆ ತಳುಕು ಹಾಕಲು ಹೋಗಿ ಅಗ್ನಿವಂಶವನ್ನೇ ಅಗ್ನಿಗೆ ಅರ್ಪಿಸಿದ್ದು ಈ ಬೈಬಲ್ ಇತಿಹಾಸಕಾರರೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ ಆಳುವಂತೆ ಮಾಡಿ ಅಲ್ಲೋಲಕಲ್ಲೋಲಗೊಳಿಸಿದವರೂ ಅವರೇ! ಹೀಗೆ ಈ ಇತಿಹಾಸಕಾರರಿಂದ ಕಣ್ವ ವಂಶ, ಪ್ರಮರ ವಂಶಗಳು ಸಮಾಧಿಗೆ ಸೇರಿಸಲ್ಪಟ್ಟವು. ವಿಕ್ರಮಾದಿತ್ಯ ಹಾಗೂ ಶಾಲಿವಾಹನರನ್ನು ಅವರು ಕಾಲ್ಪನಿಕ ವ್ಯಕ್ತಿಗಳನ್ನಾಗಿಸಿದರು.


ಪುರಾಣಗಳಲ್ಲಿ ಪ್ರಮರ ವಂಶದ 32 ರಾಜರುಗಳ ಉಲ್ಲೇಖವಿದೆ. ಇದರಲ್ಲಿ ಎಂಟನೆಯವನೇ ವಿಕ್ರಮಾದಿತ್ಯ. ವಿಕ್ರಮನ ಆಸ್ಥಾನ ಜ್ಯೋತಿಷಿಯಾಗಿದ್ದ ಶ್ರೀಕೃಷ್ಣಮಿಶ್ರ ತನ್ನ "ಜ್ಯೋತಿಷ್ಯಫಲರತ್ನಮಾಲಾ"ದಲ್ಲಿ, 


ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ || 

ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ || 


- ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸಿದ್ದಾನೆ. "ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದ" ಎಂದು ಕಲ್ಹಣ ಹೊಗಳಿದ್ದಾನೆ. ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.


ಮಾಂತ್ರಿಕನೊಬ್ಬ ಸಾಧುವಿನ ಸೋಗು ಹಾಕಿ ರಾಜಾ ವಿಕ್ರಮನ ಬಳಿ ಬಂದು ಮರದಲ್ಲಿ ನೇತಾಡುತ್ತಿದ್ದ ಪಿಶಾಚಿಯನ್ನು ಮೌನವಾಗಿ ತನ್ನ ಬಳಿಗೆ ಕರೆತರಲು ಬಿನ್ನವಿಸುತ್ತಾನೆ. ತುಟಿಬಿಚ್ಚಿದಲ್ಲಿ ಪಿಶಾಚಿಯು ಹಾರಿ ಹೋಗುತ್ತದೆ. ಅದರಂತೆ ವಿಕ್ರಮಾದಿತ್ಯ ಪಿಶಾಚಿಯನ್ನು ಕರೆತರಲು ಬೆನ್ನ ಮೇಲೆ ಏರಿಸಿಕೊಂಡಾಗ ಅದು ದಾರಿಯ ಬೇಸರ ಕಳೆಯಲು ತಾನು ಕಥೆ ಹೇಳುವೆನೆಂದು, ಕೊನೆಗೆ ಕೇಳುವ ಪ್ರಶ್ನೆಗೆ ರಾಜ ಉತ್ತರ ಹೇಳಬೇಕೆಂದು, ಉತ್ತರ ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕೆಂದು, ಗೊತ್ತಿದ್ದೂ ಉತ್ತರ ಹೇಳದಿದ್ದರೆ ರಾಜನ ತಲೆ ಸಾವಿರ ಹೋಳಾಗುತ್ತದೆಂದು ಒಪ್ಪಂದ ಮಾಡಿಕೊಳ್ಳುತ್ತದೆ. ವಿಕ್ರಮನಿಗೆ ಪ್ರತಿಯೊಂದು ಪ್ರಶ್ನೆಗೆ ಉತ್ತರ ಗೊತ್ತಿರುತ್ತದೆ, ಮತ್ತು ಮೌನವನ್ನು ಭೇದಿಸಿದ ಕಾರಣ ಬೇತಾಳ ಮತ್ತೆ ಮರದ ಕೊಂಬೆಯನ್ನು ಸೇರಿಕೊಳ್ಳುತ್ತಾನೆ. ಹೀಗೆ ಇಪ್ಪತ್ನಾಲ್ಕು ಬಾರಿ ನಡೆದು ಪಿಶಾಚಿಯನ್ನು ಕರೆತರುವ ವಿಕ್ರಮನ ಪ್ರಯತ್ನ ವಿಫಲವಾಗುತ್ತದೆ. ಇಪ್ಪತ್ತೈದನೆಯ ಕಥೆಯ ಪ್ರಶ್ನೆಗೆ ಮಾತ್ರ ರಾಜನಿಗೆ ಉತ್ತರ ತಿಳಿಯದಾಯಿತು. ಈ ಇಪ್ಪತ್ತೈದು ಕಥೆಗಳೇ "ವೇತಾಲ ಪಂಚವಿಂಶತಿ"ಯಾದದ್ದು. ಇದರ ಕರ್ತೃ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಒಬ್ಬನಾಗಿದ್ದ, "ನೀತಿ ಪ್ರದೀಪ"ವನ್ನು ರಚಿಸಿದ ವೇತಾಲಭಟ್ಟನೆಯೋ ತಿಳಿಯದು. 


ಇಪ್ಪತ್ತೈದನೆಯ ಕಥೆ ಹೀಗಿದೆ. ಆಗತಾನೆ ಯುದ್ಧ ಮುಗಿದಿತ್ತು. ರಣಭೂಮಿಗೆ ಓರ್ವ ವಯಸ್ಕನೂ ಅವನ ಮಗನೂ ಬಂದಾಗ ಆ ರಾಜ್ಯದ ರಾಣಿಯೂ ಆಕೆಯ ಮಗಳೂ ಜೀವದಿಂದಿರುತ್ತಾರೆ. ತಮ್ಮೊಳಗೇ ಮಾತನಾಡಿಕೊಂಡು ಅಪ್ಪ ರಾಜಕುಮಾರಿಯನ್ನೂ ಮತ್ತು ಮಗ ರಾಣಿಯನ್ನೂ ಕೈಹಿಡಿದು ತಮ್ಮ ಮನೆಗೆ ಕರೆತಂದು ಮದುವೆಯಾಗುತ್ತಾರೆ. ಮಗ-ರಾಣಿಯರ ದಾಂಪತ್ಯದಿಂದ ರಾಣಿ ಗಂಡುಮಗುವೊಂದನ್ನು ಹಡೆದರೆ, ಅಪ್ಪ-ರಾಜಕುಮಾರಿಯರ ದಾಂಪತ್ಯದಿಂದ ಮಗಳು ಜನಿಸುತ್ತಾಳೆ. ನವಜಾತ ಶಿಶುಗಳ ನಡುವಿನ ಸಂಬಂಧವೇನು ಎಂದು ಬೇತಾಳ ಪ್ರಶ್ನೆ ಕೇಳುತ್ತಾನೆ. ವಿಕ್ರಮನಿಗೆ ಉತ್ತರ ತಿಳಿಯದೆ ಮೌನವಾಂತು ನಡೆದ. ಬೇತಾಳ ಅವನ ಹೆಗಲೇರಿ ಬಂತು. ತನ್ನ ಜನ್ಮವೃತ್ತಾಂತವನ್ನೂ ಮಾಂತ್ರಿಕನ ಮೋಸವನ್ನೂ ಅದರಿಂದ ಪಾರಾಗುವ ಉಪಾಯವನ್ನೂ ಅದು ವಿಕ್ರಮನಿಗೆ ಅರುಹಿತು. ಬೇತಾಳನ ಪಾಲಕರಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನ ಆಶೀರ್ವಾದದಿಂದ ಪಡೆದ ಮಕ್ಕಳಲ್ಲಿ ಓರ್ವನೇ ಬೇತಾಳ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನಲ್ಲೇ ಬಿಡುವಂತೆ ಮಾಂತ್ರಿಕ ತಾಕೀತು ಮಾಡಿದ. ಬೇತಾಳನಿಗೆ ತನಗೆ ಗೊತ್ತಿದ್ದ ವಿದ್ಯೆಗಳನ್ನೆಲ್ಲಾ ಧಾರೆಯೆರೆದ ಮಾಂತ್ರಿಕ, ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಬೇತಾಳನ ಸಹೋದರನಿಗೆ ಕಡಿಮೆ ವಿದ್ಯೆಗಳನ್ನು ಕಲಿಸಿಕೊಟ್ಟು ಆತನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಸಹೋದರನನ್ನು ಪಾಲಕರಿಗೆ ಮರಳಿಸಿ,ಬೇತಾಳನನ್ನು ಕಾಳಿಗೆ ಬಲಿಕೊಡಬೇಕೆಂದು ಮಾಂತ್ರಿಕ ಉಪಾಯ ಹೂಡಿದ್ದ. "ರಾಜನ್, ಮಾಂತ್ರಿಕನ ಕುಟೀರದೊಳಕ್ಕೆ ಹೋದಾಗ ನಿನ್ನ ತಲೆಯನ್ನು ತಗ್ಗಿಸುವಂತೆ ಆತ ಹೇಳುತ್ತಾನೆ. ತಲೆಬಗ್ಗಿಸಿದ ಕೂಡಲೇ ನಿನ್ನನ್ನು ಬಲಿಹಾಕುತ್ತಾನೆ. ನೀನು ಅದಕ್ಕಾಗಿ ಹೇಗೆ ತಲೆತಗ್ಗಿಸಬೇಕೆಂದು ತೋರಿಸಲು ಹೇಳು. ಹಾಗೆ ಆತ ತಲೆ ಬಗ್ಗಿಸಿದಾಗ ಅವನ ತಲೆಯನ್ನು ತರಿದು ಕಾಳಿಗೆ ಅರ್ಪಿಸು " ಎಂದು ಬೇತಾಳವು ಮಾಂತ್ರಿಕನಿಂದ ರಕ್ಷಿಸಿಕೊಳ್ಳಲು ರಾಜನಿಗೆ ಉಪಾಯವನ್ನು ಸೂಚಿಸುತ್ತದೆ. ಬೇತಾಳದ ಆದೇಶದಂತೆ ನಡೆದುಕೊಂಡ ವಿಕ್ರಮ ಮಾಂತ್ರಿಕನ ಶಿರವನ್ನು ತರಿದು ಕಾಳಿಗೆ ಅರ್ಪಿಸಿದ. ಕಾಳಿ ಪ್ರತ್ಯಕ್ಷಳಾಗಿ ಆಶೀರ್ವದಿಸುತ್ತಾಳೆ. ಖುಷಿಗೊಂಡ ಬೇತಾಳ ವರವನ್ನು ಕೇಳು ಎಂದಾಗ ಮಾಂತ್ರಿಕನ ಮನಸ್ಸನ್ನು ಶುದ್ಧೀಕರಿಸಿ ಆತನಿಗೆ ಜೀವದಾನ ನೀಡುವಂತೆ ಕೇಳಿಕೊಳ್ಳುತ್ತಾನೆ ವಿಕ್ರಮಾದಿತ್ಯ. ರಾಜನ ದಯಾಪರತೆಯನ್ನು ಮೆಚ್ಚಿದ ಬೇತಾಳ ನೆನೆದಾಗ ಬಂದು ಸಹಾಯ ಮಾಡುವೆ ಎಂದು ರಾಜನಿಗೆ ವಾಗ್ದಾನ ಮಾಡಿ ಮಾಂತ್ರಿಕನಿಗೆ ಮರು ಜೀವ ನೀಡುತ್ತದೆ. ಇದು ವೇತಾಲ ಪಂಚವಿಂಶತಿಯ ಕಥೆಯಾದರೂ ಭವಿಷ್ಯತ್ಪುರಾಣದಲ್ಲಿ ವಿಕ್ರಮನ ಕಾವಲಿಗಾಗಿ ಬೇತಾಳನನ್ನು ಪಾರ್ವತಿ ಕಳುಹಿದ ಉಲ್ಲೇಖವನ್ನು ನೋಡುವಾಗ ಇದು ಕಾಲ್ಪನಿಕವಲ್ಲ ಎಂದೇ ಅನ್ನಿಸುತ್ತದೆ. ಭವಿಷ್ಯತ್ಪುರಾಣದಲ್ಲಿ ಬೇತಾಳನು ಬ್ರಾಹ್ಮಣ ರೂಪಿನಿಂದ ಬಂದು "ಇತಿಹಾಸ ಸಮುಚ್ಚಯ"ವೆಂಬ ಕಥೆಯನ್ನು ಹೇಳುವ, ಪ್ರತಿಯೊಂದು ಕಥೆಯ ಬಳಿಕ ಪ್ರಶ್ನೆಯನ್ನು ಕೇಳಿ ವಿಕ್ರಮನಿಂದ ಉತ್ತರವನ್ನು ಹೊರಡಿಸುವ ಪ್ರಸಂಗವಿದೆ. ವಿಕ್ರಮಾದಿತ್ಯನಿಂದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಪಡೆದು ಹರ್ಷಿತವಾದ ಬೇತಾಳನು ದುರ್ಗೆಯನ್ನು ಪೂಜಿಸುವಂತೆ ವಿಕ್ರಮಾದಿತ್ಯನಿಗೆ ಸೂಚಿಸಿ, ತಾನು ಈಶ್ವರಾಜ್ಞೆಯಂತೆ ನಿನ್ನ ಸಹಾಯಕ್ಕೆ ಬಂದಿದ್ದು, ನಿನ್ನ ಭುಜದಲ್ಲಿ ನೆಲೆಸುತ್ತೇನೆ. ನೀನು ಶತ್ರುಗಳನ್ನೆಲ್ಲಾ ಧ್ವಂಸ ಮಾಡಿ ಆರ್ಯಧರ್ಮವನ್ನು ನೆಲೆಗೊಳಿಸು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಬಹುಷಃ ವಿಕ್ರಮನ ಮಿತ್ರನಾಗಿ, ರಕ್ಷಕನಾಗಿ ಬೇತಾಳ ಸದಾ ಇದ್ದಿರಬೇಕು. ಅದು ವೇತಾಲಭಟ್ಟನೋ ಅಥವಾ ಇನ್ನೋರ್ವನೋ ಎಂಬುದನ್ನು ಇತಿಹಾಸಕಾರರು ನಿರ್ಧರಿಸಬೇಕು. ವಿಕ್ರಮಾದಿತ್ಯನ ಜೊತೆ ಅವನ ಮಲತಮ್ಮನಾದ ಭಟ್ಟಿಯೂ ಇರುತ್ತಿದ್ದ ಎಂಬ ವಿವರ ಬಹಳ ಸಿಗುತ್ತವೆ. ಇವನೇ ಬೇತಾಳನೋ, ಅಥವಾ ಇವನೇ ವೇತಾಳಭಟ್ಟನೋ ಎನ್ನುವುದು ಕೂಡಾ ಇತಿಹಾಸಕಾರರ ವಿವೇಚನೆಗೆ ಬಿಟ್ಟದ್ದು. 


ಧನ್ವಂತರೀ ಕ್ಷಪಣಕೋಮರಸಿಂಹ ಶಂಕು ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |

ಖ್ಯಾತೋ ವರಾಹ ಮಿಹಿರೋ ನೃಪತೇ ಸ್ಸಭಾಯಾಂ ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ||


- ಮಹಾಕವಿಗಳಾದ ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರರುಚಿ ಮತ್ತು ವರಾಹಮಿಹಿರ ಎಂಬ "ನವರತ್ನಗಳು" ವಿಕ್ರಮನ  ಆಸ್ಥಾನ ಕವಿಗಳಾಗಿದ್ದರು. ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. ಆಸಕ್ತರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸದ್ಯೋಜಾತಭಟ್ಟರ "ಮಿಹಿರಕುಲಿ"ಯನ್ನು ಓದಬಹುದು.


ರಾಜಾ ವಿಕ್ರಮಾದಿತ್ಯನೇ ಸೋಮನಾಥ ದೇವಾಲಯವನ್ನು ನಿರ್ಮಿಸಿದ ಎನ್ನುವ ವಾದವಿದೆ. ಪಿ. ಎನ್ ಓಕ್ ಅವರು ತಮ್ಮ ಗ್ರಂಥದಲ್ಲಿ ಕಾಬಾ ಕೂಡ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುತ್ತಾರೆ. ಇದಕ್ಕೆ ಪೂರಕವಾಗಿ ಭವಿಷ್ಯತ್ಪುರಾಣದಲ್ಲಿ ರಾಜಾಭೋಜನು ಮ್ಲೇಚ್ಛರಿಂದ ಆವರಿಸಲ್ಪಟ್ಟ ಮರುಭೂಮಿಯಲ್ಲಿ ನೆಲೆಸಿರುವ ಮಹಾದೇವನನ್ನು ಪೂಜಿಸಿದ ಪ್ರಸಂಗವಿದೆ. ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನ ಸಿಂಹಾಸನಕ್ಕೆ ಸಂಬಂಧಪಟ್ಟವು. ಶಕಪುರುಷ ವಿಕ್ರಮಾದಿತ್ಯನ ಕಳೆದು ಹೋಗಿದ್ದ ಸಿಂಹಾಸನವನ್ನು ಧಾರಾನಗರದ ರಾಜಾ ಭೋಜನು ಪತ್ತೆಹಚ್ಚಿದನಂತೆ. ಅವನು ಈ  ಸಿಂಹಾಸನವನ್ನೇರಲು ಪ್ರಯತ್ನಿಸಿದಾಗ ಅದರಲ್ಲಿದ್ದ 32 ಹೆಣ್ಣು ಪುತ್ಥಳಿಗಳು ಮಾತಾಡಲು ಆರಂಭಿಸಿ, ತಾವು ಹೇಳುವ ಕಥೆಗಳಲ್ಲಿ ಬರುವ ರಾಜಾ ವಿಕ್ರಮಾದಿತ್ಯನಷ್ಟು ಉದಾತ್ತನಾದವನು ನೀನಾಗಿದ್ದರೆ ಮಾತ್ರ ಸಿಂಹಾಸನವೇರಬಹುದೆಂದು ಸವಾಲನ್ನು ಒಡ್ದುತ್ತವೆ. 32 ಬಾರಿಯೂ ಭೋಜ ತನ್ನ ನಿಕೃಷ್ಟತೆಯನ್ನು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ ರಾಜಾ ಭೋಜನ ವಿನಯತೆಯಿಂದ ಸಂತಸಗೊಂಡ ಪುತ್ಥಳಿಗಳು ಅವನಿಗೆ ಸಿಂಹಾಸನವನ್ನೇರಲು ಅವಕಾಶ ಕೊಡುತ್ತವೆ.


ವಿಕ್ರಮನು ಕಾಲವಾದ ಬಳಿಕ ಭಾರತವು ಹದಿನೆಂಟು ಭಾಗಗಳಾಗಿ ಒಡೆದು ಹೋಯಿತು. ಸನಾತನ ಧರ್ಮವು ಹ್ರಾಸವಾಗುತ್ತಾ ಬಂದಿತು. ಇದೇ ಸುಸಂದರ್ಭವೆಂದು ಶಕರು, ಹೂಣರು ಮತ್ತೊಮ್ಮೆ ದಂಡೆತ್ತಿ ಬಂದು ಆರ್ಯ ರಾಜರನ್ನು ಬಡಿದಟ್ಟಿ, ರಾಜ್ಯಗಳನ್ನು ಸೂರೆಗೈದು ಮಾನಿನಿಯರ ಮೇಲೆ ಅತ್ಯಾಚರಗೈದರು. ಆ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನು ದೇಶದಿಂದಾಚೆಗೆ ಓಡಿಸಿದವನೇ ವಿಕ್ರಮನ ಮರಿಮೊಮ್ಮಗ ಶಾಲಿವಾಹನ. ಅವನು ಪ್ರಮರ ವಂಶದ 11ನೇ ದೊರೆ. ಅಜ್ಜನನ್ನೇ ಇಲ್ಲವಾಗಿಸಿದವರಿಗೆ ಮೊಮ್ಮಗನನ್ನು ಇಲ್ಲವಾಗಿಸುವುದು ಕಷ್ಟದ ಕೆಲಸವಲ್ಲ. "ವಾಹನ" ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು "ಶಾತವಾಹನ"ನನ್ನಾಗಿಸಿ ಅವನಿಗಿಂತ ನಾಲ್ಕ್ನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಕೇವಲ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಶಾಲಿವಾಹನನು ವಿಕ್ರಮನ ಮರಣಾನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ಪ್ರತಿನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಸಾ.ಯು. 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದಿಗೂ ನಮ್ಮ ರಾಷ್ಟ್ರೀಯ ಶಕೆಯಾಗಿದೆ.


ಶಾಲಿವಾಹನನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಅದರ ಪ್ರಕಾರ ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು. ರಾಜ್ಯಭ್ರಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಅಂದರೆ ಶಾಲಿವಾಹನನ ಸೈನ್ಯ ಅಷ್ಟು ಸಮೃದ್ಧವಾಗಿತ್ತು ಎಂದರ್ಥ. ಪುರಾಣಗಳಲ್ಲೂ, ಜಾನಪದರ ಕಣ್ಣಲ್ಲೂ ನಾಯಕರಾಗಿ ಶಕಪುರುಷರಾಗಿ ಜನಮಾನಸದಲ್ಲಿ ಇಂದಿನವರೆಗೂ ಇರುವ ಈ ನೆಲದ ಸ್ವಾತಂತ್ರ್ಯ ವೀರರನ್ನೇ ಇತಿಹಾಸದ ಪುಸ್ತಕಗಳಿಂದ ಅಳಿಸಿದ ಮಾತ್ರಕ್ಕೆ ಅವರ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಆರ್ಯರ ಚಿತ್ತಭಿತ್ತಿಯಿಂದಿಳಿಸಲೂ ಸಾಧ್ಯವಿಲ್ಲ. ಅವರನ್ನು ಅಳಿಸಲು ಪ್ರಯತ್ನ ಮಾಡಿದಷ್ಟು ಸಲ ಶಾಲಿವಾಹನನ ಮಣ್ಣಗೊಂಬೆಗಳಂತೆ ಅವರು ಮತ್ತೆ ಜೀವತಳೆದು ಎದ್ದು ನಿಲ್ಲುತ್ತಾರೆ. ಇದು ವೀರಭೋಗ್ಯಾ ವಸುಂಧರಾ.


ಮಂಗಳವಾರ, ಜೂನ್ 15, 2021

ಶಂಕರರು = ರಮಣರು = ಅದ್ವೈತ

ಶಂಕರರು = ರಮಣರು = ಅದ್ವೈತ





ಸೃಷ್ಟಿಕರ್ತ ಬ್ರಹ್ಮನು ತನ್ನ ಮನಸ್ಸಿನಿಂದ ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತ ಎಂಬ ಹೆಸರಿನ ನಾಲ್ಕು ಮಕ್ಕಳನ್ನು ಸೃಷ್ಟಿಸಿದ. ತಮ್ಮ ಸೃಷ್ಟಿಯ ಉದ್ದೇಶವನ್ನು ಅವರು ಬ್ರಹ್ಮನಲ್ಲಿ ವಿಚಾರಿಸಿದರು. ಆಗ ಆತ "ನಾನು ಪ್ರಪಂಚವನ್ನು ಸೃಷ್ಟಿಸಬೇಕಾಗಿದೆ. ಆದರೆ ಆತ್ಮಸಾಕ್ಷಾತ್ಕಾರಕ್ಕಾಗಿ ನಾನು ತಪಸ್ಸಿಗೆ ತೆರಳುತ್ತೇನೆ. ಆದುದರಿಂದ ಪ್ರಪಂಚ ಸೃಷ್ಟಿಗೆಂದೇ ನಿಮ್ಮನ್ನು ಪಡೆದಿದ್ದೇನೆ. ನಿಮ್ಮನ್ನು ಬಹುವಾಗಿಸಿಕೊಳ್ಳುವುದರಿಂದ ಇದು ಸಾಧ್ಯ" ಎಂದು ಉತ್ತರಿಸಿದ. ಈ ಅಭಿಪ್ರಾಯ ಅವರಿಗೆ ಒಪ್ಪಿಗೆಯಾಗಲಿಲ್ಲ. ಇಷ್ಟೆಲ್ಲಾ ಫಜೀತಿಪಡುವುದಕ್ಕಿಂತ ಎಲ್ಲದರ ಮೂಲವನ್ನು ಹುಡುಕಿ ಆನಂದಾನುಭವಕ್ಕೆ ಅವರು ಬಯಸಿ ಬ್ರಹ್ಮನ ಅಪ್ಪಣೆಯನ್ನು ನೆರವೇರಿಸದೆ ಅವನನ್ನು ತೊರೆದು ತಮಗೆ ಮಾರ್ಗದರ್ಶನ ನೀಡುವ ಗುರುವನ್ನು ಹುಡುಕಿಕೊಂಡು ಹೊರಟರು. ಆತ್ಮಸಾಕ್ಷಾತ್ಕಾರಕ್ಕೆ ಪೂರ್ಣ ಅರ್ಹತೆ ಅವರಿಗಿತ್ತು. ಅತ್ಯುತ್ತಮ ಗುರುವಿನಿಂದಲೇ ಮಾರ್ಗದರ್ಶನ ಬೇಕಿತ್ತು. ಶಿವನಲ್ಲದೆ ಅಂತಹಾ ಗುರು ಮತ್ತಾರು? ಅವನು ಯೋಗಿರಾಜ. ಆಲದ ವೃಕ್ಷದ ನೆರಳಿನಲ್ಲಿ ಕುಳಿತ ಶಿವನು ಅವರಿಗೆ ಗೋಚರನಾದನು. ಕುಳಿತಂತೆಯೇ ಆತ ಸಮಾಧಿಯಲ್ಲಿ ಮುಳುಗಿದ್ದ. ಪೂರ್ಣ ಶಾಂತನಾಗಿದ್ದ. ಮೌನವೇ ಅವನಲ್ಲಿ ತುಂಬಿತ್ತು. ಅಂತಹಾ ಶಿವನನ್ನು ಕುಮಾರರು ಕಂಡರು. ಕೂಡಲೇ ಅವರು ಸಮಾಧಿಸ್ಥರಾದರು. ಅವರ ಸಂದೇಹಗಳೆಲ್ಲಾ ಛಿನ್ನವಾದವು.


ಮೌನವೇ ನಿಜವಾದ ಉಪದೇಶ. ಅದು ಪೂರ್ಣ ಉಪದೇಶ. ಸಾಧನೆಯಲ್ಲಿ ತುಂಬಾ ಮುಂದುವರೆದವನಿಗೆ ಮಾತ್ರ ಮೌನೋಪದೇಶ ಸಿದ್ಧಿಸುತ್ತದೆ. ಉಳಿದವರು ಮೌನದಿಂದ ಪೂರ್ಣ ಪ್ರಭಾವವನ್ನು ಗಳಿಸಲಾರರು. ಸತ್ಯದ ವಿವರಣೆಗಾಗಿ ಅಂಥವರಿಗೆ ಮಾತು ಬೇಕು. ಆದರೆ ಸತ್ಯವೋ ವಾಕ್ಕಿಗೆ ಆತೀತ. ಅದಕ್ಕೆ ಯಾವ ವಿವರಣೆಯೂ ಸಲ್ಲದು. ಅದನ್ನು ಕೇವಲ ಸೂಚಿಸಬಹುದು ಅಷ್ಟೇ. ಮನುಷ್ಯನಿಗಿರುವ ಭ್ರಮೆ ಹೇಗೆ ಮಿಥ್ಯೆ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದರಿಂದ ಬಿಡಿಸಿಕೊಳ್ಳಲು ಅವರು ಯತ್ನಿಸುತ್ತಾರೆ. ಆತ್ಮಶೋಧನೆಗೆ ತೊಡಗುತ್ತಾರೆ. ಆತ್ಮವಾಗಿಯೇ ಇರುವುದರಲ್ಲಿ ಅದು ಪರಿಣಮಿಸುತ್ತದೆ. ಶಿವನ ಅವತಾರವೇ ಆದ ಶ್ರೀಶಂಕರರಿಗೆ ಪತಿತ ಜೀವಿಗಳ ಬಗೆಗೆ ತುಂಬಾ ಅನುಕಂಪ. ಪ್ರತಿಯೊಬ್ಬರೂ ಆತ್ಮಾನಂದವನ್ನು ಪಡೆಯಬೇಕೆಂಬುದೇ ಅವರ ಹಂಬಲ. ಮೌನದಿಂದ ಎಲ್ಲರ ಹೃದಯವನ್ನು ಪರಿವರ್ತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದುದರಿಂದಲೇ ಜನರು ಓದಿ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲಿ ಎಂದು ಶ್ರೀಶಂಕರರು ದಕ್ಷಿಣಾಮೂರ್ತಿ ಶ್ಲೋಕವನ್ನು ರಚಿಸಿದರು. ಮಾಯೆಯ ಮೂಲಭೂತ ಅಂಶಗಳಾದ ಜೀವ, ಪ್ರಪಂಚ ಹಾಗೂ ಈಶ್ವರ ಇವ್ಯಾವುವೂ ಆತ್ಮನಿಗೆ ಅತೀತವಲ್ಲ ಎಂದು ತಿಳಿದಾಗ ಮಾಯೆ ಇಲ್ಲವಾಗುತ್ತದೆ. ಗುರು ಹಾಗೂ ಶಿಷ್ಯನ ಆತ್ಮಗಳಿಂದ ಜಗತ್ತು ಬೇರೆಯಲ್ಲ ಎಂದು ಜಗತ್ತನ್ನು ಕುರಿತು ಮೊದಲ ನಾಲ್ಕು ಶ್ಲೋಕ ಹೇಳಿದರೆ, ಎರಡನೆಯ ನಾಲ್ಕು ಶ್ಲೋಕಗಳು ಶರಣಾಗತನಾದ ಶಿಷ್ಯನು ಗುರುವಿನ ಆತ್ಮನೇ ಆಗಿದ್ದಾನೆ ಎಂದು ಜೀವವನ್ನು, ಒಂಬತ್ತನೆಯ ಶ್ಲೋಕ ಈಶ್ವರನನ್ನು ಹಾಗೂ ಹತ್ತನೆಯ ಶ್ಲೋಕ ಸಾಕ್ಷಾತ್ಕಾರವನ್ನು ಕುರಿತು ಹೇಳುತ್ತವೆ. ಇದು ಶ್ರೀಶಂಕರರ ದಕ್ಷಿಣಾಮೂರ್ತಿ ಸ್ತ್ರೋತ್ರಕ್ಕೆ ಶ್ರೀರಮಣರು ರಚಿಸಿದ ವ್ಯಾಖ್ಯಾನದ ಸಂಕ್ಷಿಪ್ತ ಪಾಠ. 


ಎಸ್. ಕೃಷ್ಣನ್ ಅವರಿಂದ ಅನುವಾದಿತವಾದ ಶ್ರೀಶಂಕರರ "ವಿವೇಕ ಚೂಡಾಮಣಿ"ಗೆ ರಮಣ ಮಹರ್ಷಿಗಳು ಮುನ್ನುಡಿ ಬರೆದಿದ್ದಾರೆ. ಅಲ್ಲಿ ಶಂಕರರ ಅವತಾರದ ಉದ್ದೇಶವನ್ನು ಬಹು ಚೆನ್ನಾಗಿ ವರ್ಣಿಸಿದ್ದಾರೆ. ಮೌನವಾಗಿ ಆತ್ಮಜ್ಞಾನದ ಉಪದೇಶ ಕೊಡುವ ದಕ್ಷಿಣಾಮೂರ್ತಿಯ ಅವತಾರಿಯ ಮಾತುಗಳೂ ಅದ್ಭುತವೇ. "ಜಗತ್ತಿನ ಪ್ರತಿಯೊಂದು ಜೀವಿಯೂ ದುಃಖ ಸ್ಪರ್ಶವೇ ಇಲ್ಲದ ಸುಖವನ್ನು ಹೊಂದಲು ಬಯಸುತ್ತದೆ. ಅಲ್ಲದೆ ಪ್ರತಿಯೊಬ್ಬನೂ ತನ್ನನ್ನು ತಾನು ತುಂಬಾ ಪ್ರೀತಿಸುತ್ತಾನೆ. ಸುಖದ ಅಭಾವದಲ್ಲಿ ಈ ಪ್ರೀತಿ ಸಾಧ್ಯವಿಲ್ಲ. ನಿದ್ರೆಯಲ್ಲಿ ಎಲ್ಲವೂ ಮಾಯವಾಗಿದ್ದರೂ ಸುಖದ ಅನುಭವ ಮಾತ್ರ ಇರುತ್ತದೆ. ಆದರೂ ತನ್ನ ಸಹಜ ಸ್ವಭಾವದ ಬಗೆಗೆ ಅಜ್ಞಾನದಿಂದ, ಜನರು ಲೌಕಿಕ ಜಗತ್ತಿನಲ್ಲಿ ಸುಖದ ಅನ್ವೇಷನೆಯಲ್ಲಿ ತೇಲುತ್ತಾರೆ; ಸುಖದ ನೇರ ಮಾರ್ಗವನ್ನು ಮರೆಯುತ್ತಾರೆ; ತಪ್ಪು ತಿಳುವಳಿಕೆಯಿಂದ ಇಹಲೋಕ ಮತ್ತು ಪರಲೋಕದ ಸುಖಗಳಲ್ಲಿ ಆನಂದ ಅಡಗಿದೆ ಎಂದು ಭ್ರಮಿಸುತ್ತಾರೆ. ಆದರೆ ದುಃಖ ಲೇಪವಿಲ್ಲದೆ ಸುಖ ಆತನಿಗೆ ದೊರಕುವುದೇ ಇಲ್ಲ. ಸುಖಕ್ಕೆ ನೇರ ಹಾದಿಯನ್ನು ತೋರಿಸಿ ಕೊಡುವುದಕ್ಕೆಂದೇ ಈಶ್ವರನು ಶ್ರೀ ಶಂಕರರ ರೂಪದಲ್ಲಿ ಅವತರಿಸಿದ; ವೇದಾಂತದ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ರಚಿಸಿದ. ಅವೆಲ್ಲವೂ ಆನಂದದ ಔನ್ನತ್ಯವನ್ನು ಎತ್ತಿ ತೋರುತ್ತದೆ. ಅಲ್ಲದೆ ಶ್ರೀಶಂಕರರೂಪೀ ಶಿವನು ತನ್ನ ಇಹಲೋಕದ ಜೀವನ ವಿಧಾನದ ಮೂಲಕ ಅದನ್ನು ಪ್ರಮಾಣಿಸಿ ತೋರಿದ. ಆದರೆ ಮೋಕ್ಷದ ಆನಂದಕ್ಕಾಗಿ ಆತುರರಾದರೂ ಅಗತ್ಯ ಪಾಂಡಿತ್ಯವಿಲ್ಲದ ಸಾಧಕರಿಂದ ಈ ಭಾಷ್ಯಗಳಿಗೆ ಅಷ್ಟಾಗಿ ಪ್ರಯೋಜನವಿಲ್ಲ. ಅಂಥ ಸಾಧಕರ ಪ್ರಯೋಜನಕ್ಕಾಗಿಯೇ ಶ್ರೀಶಂಕರರು ಭಾಷ್ಯಗಳ ಸಾರವನ್ನೇ "ವಿವೇಕ ಚೂಡಾಮಣಿ"ಯಾಗಿ ಬರೆದರು. ಮೋಕ್ಷವನ್ನು ಹುಡುಕುವ ಸಾಧಕರಿಗೆ ಅಗತ್ಯ ವಿವರಗಳನ್ನು ತಿಳಿಸುವ ಮೂಲಕ ಅದು ಅವರನ್ನು ನೇರವಾದ ಹಾದಿಯಲ್ಲಿ ನಡೆಸುತ್ತದೆ. 



ಮಾನವ ಜನ್ಮವನ್ನು ಗಳಿಸುವುದೇ ಬಹು ಕಷ್ಟ. ಹಾಗೆ ಪಡೆದಿರುವಾಗ ತನ್ನ ಸಹಜ ಸ್ವರೂಪವಾದ ಆನಂದಕ್ಕಾಗಿ ಮಾನವನು ಯತ್ನಿಸಬೇಕು. ಜ್ಞಾನದಿಂದ ಮಾತ್ರ ಈ ಆನಂದಾನುಭವ ಸಾಧ್ಯ, ಸತತ ವಿಚಾರದಿಂದಲೇ ಜ್ಞಾನ ಸಾಧನೆ. ಈ ವಿಚಾರ ಮಾರ್ಗವನ್ನು ಅರಿಯುವುದಕ್ಕಾಗಿ ಗುರುವಿನ ಕೃಪೆಯನ್ನು ಸಾಧಕನು ಪಡೆಯಬೇಕು; ಎಂದು ತಿಳಿಸಿ ಮುಂದೆ ಗುರು ಹಾಗೂ ಶಿಷ್ಯನ ಅರ್ಹತೆಗಳನ್ನು ಶ್ರೀ ಶಂಕರರು ವಿವರಿಸುತ್ತಾರೆ. ಶಿಷ್ಯನು ಹೇಗೆ ಗುರುವನ್ನು ಹೊಂದಿ ಅವನನ್ನು ಸೇವಿಸಬೇಕು, ಮೋಕ್ಷದ ಆನಂದವನ್ನು ಪಡೆಯಲು ಗುರೂಪದೇಶದ ಶ್ರವಣ, ಮನನ, ನಿಧಿಧ್ಯಾಸನಗಳ ಸಾಧನೆ ಅಗತ್ಯ ಎಂದು ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ದೇಹಗಳು ಅನಾತ್ಮ ವಸ್ತುಗಳು. ಅನಿತ್ಯವಾದ ಇವುಗಳನ್ನು ತಾನೆಂದು ಭ್ರಮಿಸುವುದು ಅವಿದ್ಯೆಯ ಕಾರಣದಿಂದ. ಇದೇ ಬಂಧನ. ಈ ಅಜ್ಞಾನವನ್ನು ನಿವಾರಿಸಿಕೊಂಡರೆ ಮುಕ್ತಿ ದೊರಕುತ್ತದೆ. ಇದನ್ನು ಗುರೂಪದೇಶದ ಮೂಲಕ ತಿಳಿಯುವುದು ಶ್ರವಣ. ದರ್ಭೆಯ ಅಗ್ರವನ್ನು ಅದರ ಬೇರಿನಿಂದ ಕಿತ್ತುಕೊಳ್ಳುವಂತೆ, ಅನ್ನಮಯಾದಿ ಪಂಚಕೋಶಗಳಿಂದ ಕೂಡಿದ ಈ ಮೂರು ದೇಹಗಳನ್ನೂ ನೇತಿ ನೇತಿ ಎಂದು ತಿರಸ್ಕರಿಸಿ, ಸೂಕ್ಷ್ಮ ವಿಚಾರದಿಂದ ಹೃದಯ ಕುಹರದಲ್ಲಿ ಅಹಂ-ಅಹಂ ಎಂಬ ರೂಪದಲ್ಲಿ ಹಾಗೂ ಸಮಷ್ಟಿಯಲ್ಲಿ ಪ್ರಕಾಶಿಸುವ ಅದನ್ನು ಗುರುತಿಸಿ, ತತ್ತ್ವಮಸಿ ಮಹಾವಾಕ್ಯದಲ್ಲಿನ ತತ್ ಸ್ವರೂಪನಾಗಿ ಅದನ್ನು ತಿಳಿದು ಚಿಂತಿಸುವುದೇ ಮನನ.


ದಿವ್ಯ ಆನಂದ: ನಾಮರೂಪಗಳಿಂದಾದ ಜಗತ್ ಸತ್ ಅಥವಾ ಬ್ರಹ್ಮನ ಅಧೀನವೇ ಆಗಿದೆ, ಬ್ರಹ್ಮನಿಂದ ಅದು ಬೇರೆಯಲ್ಲ. ಆದುದರಿಂದ ಬ್ರಹ್ಮವೊಂದೇ ಸತ್ಯ. ಜೀವ-ಬ್ರಹ್ಮೈಕ್ಯವನ್ನು ತತ್ತ್ವಮಸಿ ಮಹಾವಾಕ್ಯದ ರಹಸ್ಯವಾಗಿ ಗುರುವಿನಿಂದ ತಿಳಿಯುವುದು ಉಪದೇಶ. ಆಗ ಶಿಷ್ಯನು ಅಹಂ ಬ್ರಹ್ಮಾಸ್ಮಿ ಎನ್ನುವ ಸ್ಥಿತಿಯನ್ನು ಅನುಭವಿಸುತ್ತಾನೆ. ಆದರೆ ಅತ್ಯಂತ ಗಾಢವೂ ಬಲಿಷ್ಟವೂ ಆದ ಪೂರ್ವ ವಾಸನೆಗಳು ಉದ್ಬುದ್ಧವಾಗಿ ಆತ್ಮಾನುಭವಕ್ಕೆ ತಡೆಯೊಡ್ಡುತ್ತವೆ. ಮೂರು ಬಗೆಯ ಈ ವಾಸನೆಗಳಿಗೆ ಅಹಂಕಾರವೇ ಮೂಲ. ಅದು ಬಹಿರ್ಜಗತ್ತಿನಲ್ಲಿ ವಿವಿಧ ಸ್ವರೂಪಗಳಲ್ಲಿ ವರ್ಧಿಸುವಂತೆ ಮಾಡುವುದೇ ವಿಕ್ಷೇಪ. ಅದು ರಜೋಗುಣದ ಪರಿಣಾಮವಾದ ಆವರಣ. ಈ ವಾಸನೆಗಳೆಲ್ಲಾ ನಾಶವಾಗುವವರೆಗೂ ಮನಸ್ಸನ್ನು ದೃಢವಾಗಿ ಇರಿಸುವುದು, ಸತತ ಎಚ್ಚರದಿಂದ ಜಾಗೃತವಾಗುವುದು, ತನ್ನ ಸಹಜ ಸ್ವರೂಪವನ್ನು ಅನುಭವಿಸುವುದು - ಇದನ್ನೇ ಅಹಂ ಬ್ರಹ್ಮಾಸ್ಮಿ, ಬ್ರಹ್ಮೈವಾಹಂ ಎನ್ನಲಾಗಿದೆ. ಈ ಅನುಭವವೇ ನಿದಿಧ್ಯಾಸನ ಅಥವಾ ಆತ್ಮಾನುಸಂಧಾನ. ಈ ಪ್ರಕ್ರಿಯೆ ಮೊಸರನ್ನು ಕಡೆದು ಬೆಣ್ಣೆ ತೆಗೆಯುವ ಹಾಗೆ, ತೈಲಧಾರೆಯಂತೆ ಸತತವಾಗಿ ಹರಿಯುವ ಸಾಧನೆಯಿಂದ ನಿರ್ವಿಕಲ್ಪ ಸಮಾಧಿಯ ಸಹಜ ಶಾಶ್ವತ ಸ್ಥಿತಿ ಉಂಟಾಗುತ್ತದೆ. ಅದರಿಂದ ನೇರವಾದ, ತಕ್ಷಣದ , ತಡೆಯಿಲ್ಲದ ಬ್ರಹ್ಮನ ಅನುಭವ ಉಂಟಾಗುತ್ತದೆ. ಅದು ಏಕ ಕಾಲದಲ್ಲಿ ಜ್ಞಾನವೂ ಹೌದು, ಅನುಭವವೂ ಹೌದು. ಅದು ಕಾಲ-ದೇಶಾತೀತ. 


ಅಖಂಡ ಆನಂದ: ಅಜ್ಞಾನದ ಭ್ರಮೆ, ಮನೋ ಪ್ರವೃತ್ತಿಗಳ ವಿಷವೃತ್ತ ನಾಶವಾಗಿ ಸಂದೇಹಗಳು ಅಳಿದು ಸಂಚಿತ, ಆಗಾಮೀ, ಪ್ರಾರಬ್ಧ ಕರ್ಮಬಂಧನಗಳು ಕಳಚಿ ಹೃದಯಗ್ರಂಥಿ ಕತ್ತರಿಸಲ್ಪಡುವ ಇದೇ ಆತ್ಮಸಾಕ್ಷಾತ್ಕಾರ. ಈ ದ್ವಂದ್ವಾತೀತವಾದ ಸ್ಥಿತಿಯನ್ನು ಅನುಭವಿಸುವುದೇ ಜೀವನದ ಪರಮಪುರುಷಾರ್ಥ. ಅದನ್ನು ಸಾಧಿಸಿದವನೇ ಜೀವನ್ಮುಕ್ತ. ಅವನು ತನ್ನ ಇಚ್ಛೆಯಂತೆ ವರ್ತಿಸಲು ಸ್ವತಂತ್ರ. ಈ ಭೌತಿಕ ದೇಹವನ್ನು ತ್ಯಜಿಸಿದಾಗ ಮುಕ್ತನಾಗುತ್ತಾನೆ - ಮರಣವೇ ಆಗಿರುವ ಜನ್ಮವನ್ನು ಮತ್ತೆ ಪಡೆಯುವುದಿಲ್ಲ. ಅದು ಅಂತಿಮ ಮೋಕ್ಷ. ವಿದೇಹ ಮುಕ್ತಿ.



"ಇಂಡಿಯನ್ ಫಿಲಾಸಫಿ ಕೃತಿಯಲ್ಲಿ ಪ್ರೊಫೆಸರ್ ರಾಧಾಕೃಷ್ಣನ್ ಶ್ರೀ ಶಂಕರ ಹಾಗೂ ಗೌಡಪಾದರ ಸಿದ್ಧಾಂತಗಳಲ್ಲಿ ವ್ಯತ್ಯಾಸವನ್ನು ಸೂಚಿಸಿದ್ದಾರೆ. ಪರಮ ಸತ್ಯದ ದೃಷ್ಟಿಯಿಂದ ಸ್ವಪ್ನ ಹಾಗೂ ಜಾಗೃತ್ ಸ್ಥಿತಿಗಳಲ್ಲಿ ವ್ಯತ್ಯಾಸವಿಲ್ಲವೆಂದು ಗೌಡಪಾದರು ತಮ್ಮ ಮಾಂಡೂಕ್ಯ ಕಾರಿಕೆಯಲ್ಲಿ ಸೂಚಿಸಿದರೆ ಶಂಕರರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಈ ಎರಡೂ ಅವಸ್ಥೆಗಳ ನಡುವೆ ವ್ಯತ್ಯಾಸವನ್ನು ಸೂಚಿಸಿದ್ದಾರೆ ಎಂದು ರಾಧಾಕೃಷ್ಣನ್ ಅವರ ಅಭಿಪ್ರಾಯ. ಆದರೆ ಇವರೀರ್ವರ ಸಿದ್ಧಾಂತಗಳಲ್ಲಿ ವ್ಯತ್ಯಾಸವಿರುವುದು ಹೌದೇ?" ಎಂದು ಬಂಗಾಳಿ ಇಂಜಿನಿಯರ್ ಬೋಸ್ ಎಂಬಾತ ಪ್ರಶ್ನಿಸುತ್ತಾರೆ. ಆಗ ಮಹರ್ಷಿಗಳು ಕೊಡುವ ಉತ್ತರ ಹೀಗಿದೆ. " ವ್ಯತ್ಯಾಸ ಇರುವುದು ನಮ್ಮ ಕಲ್ಪನೆಯಲ್ಲಿ ಮಾತ್ರ. ತಾನು ಎಚ್ಚೆತ್ತಿದ್ದೇನೆ ಎಂದು ಹೇಳುವವನಿಗೆ ಮಾತ್ರ ಸ್ವಪ್ನದ ಅನುಭವ. ನಿಜವಾಗಿ ನೋಡಿದರೆ ಈ ಎಚ್ಚರ ಹಾಗೂ ಕನಸು ಎರಡೂ ಮಿಥ್ಯೆಯೇ. ಆದರೆ ಮಿಥ್ಯೆಯ ಪ್ರಮಾಣವೇನು? ಜಗತ್ತು ಬರಿಯ ಶಬ್ದವಲ್ಲ, ಅದೊಂದು ವಸ್ತುಸ್ಥಿತಿ. ಬ್ರಹ್ಮವೇ ಆರೋಪಿಸಿಕೊಂಡ ಸ್ಥಿತಿ - ನಸುಕು ಬೆಳಕಿನಲ್ಲಿ ಹಗ್ಗವು ಹಾವಾಗಿ ತೋರುವಂತೆ. ಅಲ್ಲಿಯಾದರೋ ಹಾವಲ್ಲವೆಂದು ತಿಳಿದಾಗ ಮಿಥ್ಯಾ ಸಂಬಂಧ ನಶಿಸಿ ಹೋಗುತ್ತದೆ. ಆದರೆ ಇಲ್ಲಿ ಜಗತ್ತು ಬಳಿಕವೂ ಇರುತ್ತದೆ; ಹೇಗೆಂದರೆ ಮರೀಚಿಕೆ ಎಂಬ ಜ್ಞಾನ ಉಂಟಾದ ಮೇಲೂ ನೀರಿರುವುದೆಂಬ ಭ್ರಮೆ ತೋರುವ ಹಾಗೆ. ಆದರೆ ಮರೀಚಿಕೆಯಲ್ಲಿ ನೀರಿಲ್ಲವೆಂದು ತಿಳಿದ ಬಳಿಕ ಮನುಷ್ಯ ಅದರ ಬೆನ್ನು ಹತ್ತುವುದನ್ನು ಬಿಡುತ್ತಾನೆ. ಅಂದರೆ ಈ ಎಲ್ಲಾ ಉದಾಹರಣೆಗಳನ್ನು ಪ್ರತ್ಯೇಕ ಹೇಳಿಕೆಯಾಗಿ ಪರಿಗಣಿಸದೆ ಅದರ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕು. ಸಾಧಕನನ್ನು ಈ ಎಲ್ಲಕ್ಕೂ ಆಧಾರಭೂತವಾದ ಅಂತಿಮ ಸತ್ಯದ ಕಡೆ ಸೆಳೆಯುವುದೇ ಸರಪಳಿಯ ಕೊಂಡಿಯಂತಿರುವ ಈ ಉದಾಹರಣೆಗಳ ಉದ್ದೇಶವಾಗಿರುತ್ತದೆ.


ಅದಕ್ಕಾಗಿಯೇ ಪ್ರಾತಿಭಾಸಿಕ, ವ್ಯಾವಹಾರಿಕ ಹಾಗೂ ಪಾರಮಾರ್ಥಿಕ ಸತ್ಯಗಳೆಂದು ಮೂರು ಬಗೆಗಳಾಗುತ್ತವೆ. ವ್ಯಾವಹಾರಿಕದಲ್ಲಿ ಮಾನವ ಜಗತ್ತನ್ನು ಅದರ ಎಲ್ಲಾ ವೈವಿಧ್ಯಗಳೊಂದಿಗೆ ನೋಡುತ್ತಾನೆ. ಇದರ ಕರ್ತೃವೊಬ್ಬನನ್ನು ಊಹಿಸುತ್ತಾನೆ. ಜಗತ್ತನ್ನು ತಾನು ಅನುಭವಿಸುತ್ತಿದ್ದೇನೆ ಎಂದು ನಂಬುತ್ತಾನೆ. ಈ ಮೂರು ಮೂಲಭೂತ ತತ್ತ್ವಗಳೇ ಜಗತ್ತು, ಜೀವ ಮತ್ತು ಈಶ್ವರ. ಅವನು ಸೃಷ್ಟಿಕರ್ತನ ಬಗ್ಗೆ ವಿಚಾರ ಮಾಡಿ ತಿಳಿಯುತ್ತಾನೆ. ಅಮೃತತ್ವದ ಹಂಬಲದಿಂದ ಅವನನ್ನು ಸೇರಲು ಯತ್ನಿಸುತ್ತಾನೆ. ಒಬ್ಬನು ಹೀಗೆ ಬಂಧನದಿಂದ ಮುಕ್ತನಾದರೆ ಉಳಿದವರೂ ಹೀಗೆಯೇ ತಮ್ಮ ತಮ್ಮ ಮುಕ್ತಿಯನ್ನು ಸಾಧಿಸಬೇಕು. ಈ ಎಲ್ಲಾ ದೃಶ್ಯಗಳ ಹಿಂದಿನ ಸತ್ಯವಸ್ತುವನ್ನು ಅವನು ಒಂದು ರೀತಿಯಲ್ಲಿ ಒಪ್ಪುತ್ತಾನೆ. ಮಾಯೆಯೇ ವೈವಿಧ್ಯಕ್ಕೆ ಕಾರಣ. ಅದು ಈಶ್ವರನ ಶಕ್ತಿ ಅಥವಾ ಬ್ರಹ್ಮದ ಕ್ರಿಯೆ. ಹೀಗಾಗಿ ಹಲವು ಜೀವಿಗಳ ಇರವು, ವಸ್ತುಗಳ ಅಸ್ತಿತ್ವ ಮುಂತಾದ ಕಲ್ಪನೆಗಳಿಂದಲೂ ಅದ್ವೈತಕ್ಕೆ ಬಾಧೆಯಿಲ್ಲ. ಅವುಗಳೊಂದಿಗೆ ಅದ್ವೈತದ ಸಂಘರ್ಷವಿಲ್ಲ. ಪ್ರಾತಿಭಾಸಿಕದಲ್ಲಿ ಜಗತ್ತು, ಜೀವ ಹಾಗೂ ಈಶ್ವರ ಇವು ನೋಟಕನ ದೃಷ್ಟಿಯಿಂದ ಮಾತ್ರ. ಅವನಿಂದ ಸ್ವತಂತ್ರವಾಗಿ ಅವು ಇರಲಾರವು. ಇರುವುದು ಒಂದೇ ಜೀವ ಅದು ಈಶ್ವರನೇ. ಉಳಿದೆಲ್ಲ ಮಿಥ್ಯೆ. ಪಾರಮಾರ್ಥಿಕ ಎಂದರೆ ಎರಡನೆಯದನ್ನು ಒಪ್ಪದ ಅಜಾತವಾದ. ತ್ರಿಕಾಲಾಬಾಧಿತವಾದ ಸತ್ಯ. ಸತ್ಯ ಇರುವುದು ಅಥವಾ ಇಲ್ಲದಿರುವುದು, ಹುಡುಕುವುದು  ಪಡೆಯುವುದು ಎಂದಿಲ್ಲ. ಬಂಧ ಮೋಕ್ಷ ಮುಂತಾದುವೂ ಇಲ್ಲ.


ಸತ್ಯ ಹಾಗೂ ಕಲ್ಪನೆಯ ವಿಚಾರವನ್ನು ಭಗವಾನ್ ರಮಣ ಮಹರ್ಷಿಗಳು ವಿಮರ್ಶಿಸಿದ್ದು ಹೀಗೆ. ಸರಿಯಾಗಿ ಅರ್ಥಮಾಡಿಕೊಳ್ಳದೆ ತಾಂತ್ರಿಕರು ಮೊದಲಾದವರು ಶ್ರೀಶಂಕರರ ಸಿದ್ಧಾಂತವನ್ನು  ಮಾಯಾವಾದ ಎಂದು ತಿರಸ್ಕರಿಸುತ್ತಾರೆ. ಅವರು ಹೇಳುವುದೇನು? ಶಂಕರರ ಪ್ರಕಾರ ಬ್ರಹ್ಮವೊಂದೇ ಸತ್ಯ; ಜಗತ್ತು ಮಿಥ್ಯೆ; ಬ್ರಹ್ಮವೇ ಜಗತ್ತು. ಎರಡನೆಯ ಸಿದ್ಧಾಂತದಲ್ಲಿ ಅವರು ನಿಲ್ಲುವುದಿಲ್ಲ. ಮೂರನೆಯದರಿಂದ ಅದನ್ನು ಸಮರ್ಥಿಸುತ್ತಾರೆ. ಇದರ ಮಹತ್ವವೇನು? ವಿಶ್ವವು ಬ್ರಹ್ಮನಿಂದ ಬೇರೆ ಎಂದು ಕಲ್ಪಿಸಿಕೊಳ್ಳಲಾಗಿದೆ - ಇದು ತಪ್ಪು. ರಜ್ಜು-ಸರ್ಪದ ದೃಷ್ಟಾಂತವನ್ನು ಅವರ ವಿರೋಧಿಗಳು ಎತ್ತಿ ತೋರಿಸುತ್ತಾರೆ. ಇದು ಷರತ್ತು ರಹಿತ ಆರೋಪಣೆ. ಹಗ್ಗದ ಸತ್ಯವನ್ನು ತಿಳಿಯುತ್ತಿದ್ದಂತೆಯೇ, ಹಾವಿನ ಭ್ರಾಂತಿ ಕೂಡಲೇ ತನಗೆ ತಾನೇ ಅಳಿದು ಹೋಗುತ್ತದೆ. ಇದರ ಜೊತೆಗೆ ಮರು ಮರೀಚಿಕಾ, ಮೃಗತೃಷ್ಣಾ ಮುಂತಾದ ಆರೋಪಿತ ಸಂಗತಿಗಳನ್ನೂ ಗಣನೆಗೆ ತಂದುಕೊಳ್ಳಬೇಕು. ಮಿಥ್ಯೆ ಎಂದು ತಿಳಿದ ಮೇಲೂ ಭ್ರಾಂತಿ ಮಾಯವಾಗದು. ಅದರ ನೋಟ ಇದ್ದೇ ಇದೆ. ಆದರೆ ಮನುಷ್ಯನು ಅದರ ಬೆನ್ನು ಹತ್ತಿ ಹೋಗುವುದಿಲ್ಲ. ಈ ಎರಡು ಉದಾಹರಣೆಗಳ ಬೆಳಕಿನಲ್ಲೂ ಶ್ರೀ ಶಂಕರರನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತು ಮಿಥ್ಯೆ. ಅದು ತಿಳಿದ ಮೇಲೂ ಜಗತ್ತಿನ ತೋರಿಕೆ ಮುಂದುವರೆಯುತ್ತದೆ. ಆದರೆ ಜಗತ್ತು ಬ್ರಹ್ಮನಿಂದ ಬೇರೆಯಲ್ಲ ಎಂದು ಚೆನ್ನಾಗಿ ಅರಿಯಬೇಕು. ಪ್ರಪಂಚವು ತೋರಿ ಬರುತ್ತದೆ ಎಂದರೆ - ಅದು ಯಾರಿಗೆ? ಅವರು ಕೇಳುತ್ತಾರೆ. ನಿಮ್ಮ ಉತ್ತರ ಏನು? ಆತ್ಮನಿಗೆ ಎಂದೇ ಹೇಳಬೇಕು. ಆದುದರಿಂದ ಆತ್ಮವೊಂದೇ ಸತ್ಯ. ಇದು ಶ್ರೀ ಶಂಕರರ ತೀರ್ಮಾನ. ಆತ್ಮವೆಂದೇ ಭಾವಿಸಿದಾಗ ಜಗತ್ತು ಸತ್ಯ. ಆತ್ಮನಿಂದ ಬೇರೆ ಎಂದು ತಿಳಿದಾಗ ಮಿಥ್ಯೆ. ಈಗ ತಾಂತ್ರಿಕರು ಮೊದಲಾದವರು ಹೇಳುವುದೇನು? ಸತ್ಯ ವಸ್ತುವಿನ ಭಾಗವೇ ಆಗಿರುವುದರಿಂದ ಈ ತೋರಿಕೆಗಳೂ ಈ ತೋರಿಕೆಗಳೂ ಸತ್ಯ ಎಂದು ಅವರೆನ್ನುತ್ತಾರೆ. ಇವೆರಡೂ ಹೇಳಿಕೆಗಳೂ ಒಂದೇ ಅಲ್ಲವೇ? ಸತ್ಯ - ಅಸತ್ಯಗಳು ಒಂದೇ ಎಂದು ಹೇಳಿದಾಗ ನನ್ನ ಅಭಿಪ್ರಾಯ ಇದೇ ಆಗಿತ್ತು.


ವಿರೋಧಿಗಳು ಮುಂದುವರೆದು ಹೇಳುತ್ತಾರೆ: ನಿರ್ಬಂಧಿತ - ನಿರ್ಬಂಧರಹಿತ ಭ್ರಮೆಗಳನ್ನು ಪರಿಶೀಲಿಸಿದಾಗ ಮರೀಚಿಕೆಯಲ್ಲಿನ ನೀರು ಪೂರ್ಣವಾಗಿ ಮಿಥ್ಯೆ. ಏಕೆಂದರೆ ಆ ನೀರನ್ನು ಯಾವುದಕ್ಕೂ ಬಳಸಲಾಗುವುದಿಲ್ಲ. ಆದರೆ ಜಗತ್ತಿನ ತೋರಿಕೆ ಬೇರೆ ಬಗೆಯದು. ಅದರಿಂದ ಪ್ರಯೋಜನ ಉಂಟು. ಅದಕ್ಕೆ ಉದ್ದೇಶ ಉಂಟು. ಎಂದ ಮೇಲೆ ಅವೆರಡೂ ಉದಾಹರಣೆಗಳು ಎಷ್ಟರಮಟ್ಟಿಗೆ ಸರಿ ಹೊಂದುತ್ತವೆ? ಯಾವುದೋ ಉದ್ದೇಶ ಅಥವಾ ಉದ್ದೇಶಗಳನ್ನು ಸಾಧಿಸುತ್ತದೆ ಎಂಬ ಕಾರಣದಿಂದ ಮಾತ್ರ ತೋರಿಕೆಯು ಸತ್ಯವಾಗಲು ಸಾಧ್ಯವಿಲ್ಲ. ಸ್ವಪ್ನದ ಉದಾಹರಣೆಯನ್ನು ತೆಗೆದುಕೊಳ್ಳಿ. ಸ್ವಪ್ನದ ಸೃಷ್ಟಿಗಳಿಗೂ ಉದ್ದೇಶವುಂಟು. ಕನಸಿನ ಉದ್ದೇಶಗಳನ್ನು ಅವು ಪೂರೈಸುತ್ತವೆ. ಕನಸಿನ ತೃಷ್ಣೆಯನ್ನು ಕನಸಿನ ನೀರು ತೃಪ್ತಿಗೊಳಿಸುತ್ತದೆ. ಆದರೆ ಜಾಗೃತ ಸ್ಥಿತಿಯಲ್ಲಿ ಈ ಸ್ವಪ್ನಸೃಷ್ಟಿ ಒಂದು ಮಿಥ್ಯೆಯೇ. ಯಾವುದು ಸತತವಾಗಿ ಇಲ್ಲವೋ ಅದು ಸತ್ಯವಲ್ಲ. ಸತ್ಯವಸ್ತು ಯಾವಾಗಲೂ ಸತ್ಯವಾಗಿರಬೇಕು - ಒಂದು ಕಾಲದಲ್ಲಿ ಸತ್ಯ ಮತ್ತೊಂದರಲ್ಲಿ ಅಲ್ಲ ಎಂಬಂತೆ ಇರಬಾರದು. ಯಕ್ಷಿಣಿಗಾರನ ಸೃಷ್ಟಿಯೂ ಹೀಗೆಯೇ. ಸತ್ಯವೆಂದು ತೋರುತ್ತದೆ. ಆದರೆ ಕೇವಲ ಭ್ರಮೆ. ಹೀಗೆಯೇ ಪ್ರಪಂಚವೂ ತನಗೆ ತಾನೇ ಸತ್ಯವಾಗಿರಲಾರದು. ಎಂದರೆ ಸತ್ಯ ವಸ್ತುವಿನಿಂದ ಸ್ವತಂತ್ರವಾಗಿ ಬೇರೆಯಾಗಿ ಇರದು. ಸಿನಿಮಾ ತೆರೆಯ ಮೇಲೆ ಬೆಂಕಿಯ ದೃಶ್ಯವಿದೆ. ಅದು ತೆರೆಯನ್ನು ಸುಟ್ಟು ಹಾಕುತ್ತದೆಯೇ? ನೀರಿನ ಪ್ರವಾಹವಿದೆ, ಅದು ತೆರೆಯನ್ನು ತೋಯಿಸುತ್ತದೆಯೇ? ಆಯುಧಗಳು-ಉಪಕರಣಗಳು ಇವೆ. ಅವು ತೆರೆಯನ್ನು ಹರಿದು ಹಾಕಬಲ್ಲವೇ? ಅಚ್ಛೇದ್ಯೋಯಂ, ಅದಹ್ಯೋಯಂ, ಅಕ್ಲೇದ್ಯೋಯಂ, ಮುಂತಾಗಿ ಹೇಳಿರುವುದು ಈ ಅರ್ಥದಲ್ಲಿಯೇ. ಬೆಂಕಿ, ನೀರು ಮುಂತಾದುವೆಲ್ಲಾ ಬ್ರಹ್ಮ ಅಂದರೆ ಆತ್ಮವೆಂಬ ತೆರೆಯ ಮೇಲಿನ ತೋರಿಕೆಗಳು: ಅದನ್ನು ಅವು ಬಾಧಿಸುವುದಿಲ್ಲ.


ಆಲಿವರ್ ಲಕೋಂಬಿ ಎನ್ನುವ ಫ್ರೆಂಚ್ ವ್ಯಕ್ತಿ 1936ರಲ್ಲಿ ಶ್ರೀರಮಣ ಮಹರ್ಷಿಗಳ ದರ್ಶನಕ್ಕಾಗಿ ಬರುತ್ತಾನೆ. ಆತ ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಅವುಗಳ ಮೇಲಿನ ಶಾಂಕರ ಭಾಷ್ಯ, ರಾಮಾನುಜ ಭಾಷ್ಯಗಳನ್ನು ಸಂಸ್ಕೃತ ಮೂಲದಲ್ಲೇ ಓದಿಕೊಂಡಿದ್ದ. ಆತ ರಮಣರನ್ನು ಭೇಟಿಯಾದ ಸಮಯದಲ್ಲಿ ಮಹರ್ಷಿಗಳ ಬೋಧನೆ ಶಂಕರ ಸಿದ್ಧಾಂತಕ್ಕೆ ಅನುಗುಣವಾಗಿದೆಯೇ ಎಂದು ಕೇಳುತ್ತಾನೆ. ಆಗ ರಮಣ ಮಹರ್ಷಿಗಳು "ಮಹರ್ಷಿಯ ಬೋಧನೆ ಅನುಭವ ಹಾಗೂ ಸಾಕ್ಷಾತ್ಕಾರಗಳಿಗೆ ಅನುಗುಣವಾಗಿದೆ. ಶ್ರೀಶಂಕರರ ಸಿದ್ಧಾಂತದೊಡನೆ ಸಾಮ್ಯತೆಯನ್ನು ಅಲ್ಲಿ ಇತರರು ಕಾಣುತ್ತಾರೆ" ಎಂದು ಉತ್ತರಿಸುತ್ತಾರೆ. "ಲೋಕವ್ಯವಹಾರದಲ್ಲಿ ದಲ್ಲಾಳಿಗಳಿರಬಹುದು. ಲೋಕಾತೀತದೊಳಗೆ ದಲ್ಲಾಳಿಗಳಿಗೆ ಅವಕಾಶವಿಲ್ಲ. ದಲ್ಲಾಳಿಗಳಿಲ್ಲದ ಏಕೈಕ ದರ್ಶನ ಅದ್ವೈತ. ಉಳಿದೆಲ್ಲಾ ಮತ ಪ್ರವರ್ತಕರಲ್ಲಿ ನಾನು ಹೇಳಿದ್ದೇನೆ ನೀನು ಒಪ್ಪಿಕೋ ಎನ್ನುವ ಭಾವವಿದ್ದರೆ, ಇಲ್ಲಿ ನಿನ್ನ ಬದುಕಿನಿಂದಲೇ ನೀನು ಹುಡುಕಿಕೋ ಎನ್ನುವ ಸತ್ಯಪಥದ ದಿಗ್ದರ್ಶನವಿದೆ." ಎಂದು ಶ್ರೀಶಂಕರರ ಬಗ್ಗೆ ಉಪನ್ಯಾಸ ಮಾಡುವಾಗ ಒಂದು ಕಡೆ ಶತಾವಧಾನಿಗಳು ಹೇಳುತ್ತಾರೆ. ಆದಿಯೋಗಿಯ ಅಪರಾವತಾರರಾದ ದಕ್ಷಿಣಾಮೂರ್ತಿ, ಶ್ರೀಶಂಕರ ಹಾಗೂ ಶ್ರೀರಮಣರಂತಹಾ ಅವಧೂತ ಪರಂಪರೆಯ ಜೀವನ ಇದಕ್ಕೆ ನಿದರ್ಶನವಾಗಿ ನಿಂತಿವೆ.

ದಂಗಾ ದೀದಿಯ ಸೆಕ್ಯುಲರ್ ಉನ್ಮಾದ; ಬಸವಳಿಯಿತು ವಂಗ!

 ದಂಗಾ ದೀದಿಯ ಸೆಕ್ಯುಲರ್ ಉನ್ಮಾದ; ಬಸವಳಿಯಿತು ವಂಗ!


ಮನೆ, ಕಛೇರಿಗಳಿಗೆ ಬೆಂಕಿ ಹಚ್ಚಲಾಯಿತು. ಮನೆಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹೇಗೆಂದರೆ ಮರು ದಿವಸಕ್ಕೆ ಅಡುಗೆ ಮಾಡಲು ಅಕ್ಕಿ, ದವಸಧಾನ್ಯ, ಗ್ಯಾಸ್ ಯಾವುದೂ ಉಳಿಯದಂತೆ! ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹಸುಳೆ ಮಕ್ಕಳ ಅಪ್ಪಂದಿರ ಎರಡೂ ಕಾಲುಗಳನ್ನು ಕತ್ತರಿಸಲಾಯಿತು. ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಯುವಕರನ್ನು ಅಟ್ಟಾಡಿಸಿ ಬಡಿಯಲಾಯಿತು. ಪ್ರಾಯದ ಮುದುಕ ಮುದುಕಿಯರಿಗೂ ತದುಕಲಾಯಿತು. ಒಬ್ಬನೇ ಒಬ್ಬ ಪತ್ರಕರ್ತ ಅಲ್ಲಿಗೆ ಧಾವಿಸಿ ಘಟನೆಗಳನ್ನು ವರದಿ ಮಾಡಲಿಲ್ಲ. ತಮ್ಮ ಬಳಿ ಬಂದ ಮಾಹಿತಿಯನ್ನೂ ಪ್ರಕಟಿಸಲಿಲ್ಲ. ಪೊಲೀಸರು ಯಾವುದೇ ಕೇಸು ದಾಖಲಿಸಲಿಲ್ಲ. ಸರಕಾರ ಪ್ರಜೆಗಳ ಸಹಾಯಕ್ಕೆ ನಿಲ್ಲಲಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಂಗಾಳದ ಕಣ್ಣೀರಿನ ಕಥೆಗಳನ್ನು, ದಂಗೆಯ ಭೀಕರತೆಯನ್ನು ರಾಜ್ಯವಿಡೀ ಸುತ್ತಾಡಿ ಕಂಡ ರಾಜ್ಯಪಾಲರು ಪತ್ರಿಕಾ ಘೋಷ್ಠಿಯಲ್ಲಿ ಪ್ರಕಟಿಸಿದ ಪರಿ ಇದು. ಪರಿಶೀಲನೆಗೆಂದು ಹೋದ ರಾಜ್ಯಪಾಲರ ವಾಹನವನ್ನೇ ತಡೆದು ನಿಲ್ಲಿಸಲಾಯಿತು. ಅದರ ವಿರುದ್ಧ ಕೇಸು ದಾಖಲು ಮಾಡಲು ಐದು ದಿವಸ ಹಿಡಿಯಿತು. ಅದೂ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಕಾರ್ಯದರ್ಶಿ, ಪೊಲೀಸ್ ಕಮೀಷನರ್ ಮತ್ತಿತರ ಉನ್ನತ ಅಧಿಕಾರಿಗಳನ್ನು ಒಟ್ಟುಗೂಡಿಸಿ ವಿಡೀಯೋ ಕಾನ್ಪರೆನ್ಸ್ ಮಾಡಿದ ಬಳಿಕ. ಇನ್ನು ಜನಸಾಮಾನ್ಯರ ಪಾಡೇನು? "ಜನ ಸಾವಿರಾರು ಸಂಖ್ಯೆಯಲ್ಲಿ ತಮ್ಮ ವಾಸಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತಾರೆಂದರೆ ಇನ್ನು ನಮ್ಮನ್ಯಾವ ಸರಕಾರ, ಆರಕ್ಷಕ ಪಡೆ ರಕ್ಷಿಸಲಾರದು ಎಂಬ ಭೀತಿಯಿಂದ ಪ್ರಾಣ ಉಳಿಸಿಕೊಳ್ಳಲಲ್ಲದೆ ಮತ್ತೇನು? ಸಂತ್ರಸ್ತರು ಯಾರು, ದಂಧೆಕೋರರು ಯಾರು ಎನ್ನುವುದು ರಹಸ್ಯವೇನಲ್ಲವಲ್ಲ? ನಾವು ಸಂವಿಧಾನದ ಕಗ್ಗೊಲೆಯನ್ನು ಕಣ್ಣಾರೆ ಕಂಡು ಸುಮ್ಮನಿದ್ದೇವೆ ಎಂದರೆ ಶಿಕ್ಷೆಯಾಗಬೇಕಾದ್ದು ನಮಗೆ ಅಲ್ಲವೇ? ಇದೇ ದಿಕ್ಕಿನಲ್ಲಿ ಮುಂದುವರೆದರೆ ಬಂಗಾಳವನ್ನು ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ" ಇದು ರಾಜ್ಯಪಾಲರ ಬಾಯಿಯಿಂದ ಉದುರಿದ ರಾಜಕೀಯ ಭಾಷಣವಲ್ಲ. ಇದು ಬಂಗಾಳೀ ಹಿಂದೂಗಳು ರಾಜ್ಯಪಾಲರನ್ನು ಕಂಡು ಕಾಲು ಹಿಡಿದು ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡುದದರ ಸಂಕ್ಷಿಪ್ತ ರೂಪ.


ದೇಶದ ಉಳಿದೆಡೆಯ ಹಿಂದೂಗಳಿಗೆ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗೆಗೆ ಒಂದು ಸಣ್ಣ ಕಲ್ಪನೆಯೂ ಇಲ್ಲ. ಅಷ್ಟು ವ್ಯವಸ್ಥಿತವಾಗಿ ಮಾಧ್ಯಮಮಾಫಿಯಾ ದಂಗೆಯ ಸುದ್ದಿಗಳನ್ನು ಮುಚ್ಚಿಟ್ಟಿದೆ. ಪ್ರತ್ಯಕ್ಷದರ್ಶಿಗಳು ಮಾಡಿರುವ ವಿಡೀಯೋಗಳನ್ನು ತಮ್ಮದೇ "ಫ್ಯಾಕ್ಟ್ ಚೆಕ್ ಸ್ಟಾಂಡರ್ಡ್"ಗೆ ಒಗೆದು ಅವುಗಳೆಲ್ಲಾ ನಕಲಿ ಎನ್ನುತ್ತಾ ದಂಗೆಯ ಸುದ್ಧಿಗಳನ್ನು ಹಂಚಿದವರ ನೈತಿಕ ಸ್ಥೈರ್ಯವನ್ನೂ ಉಡುಗಿಸಿದ ಈ ವ್ಯವಸ್ಥೆ ಮಾಫಿಯಾವಲ್ಲದೇ ಮತ್ತೇನು? ದೂರದ ಪ್ಯಾಲೆಸ್ಟೈನಿನ ರಕ್ತಕಾರುವಂತೆ ಬಣ್ಣ ಹಚ್ಚಿಕೊಂಡ ವಿಡೀಯೋಗಳಿಗೆಲ್ಲಾ ಅಸಲಿ ಪ್ರಮಾಣಪತ್ರ ಕೊಟ್ಟು ಹಿಂದೂಗಳ ವಿರುದ್ಧದ ದೌರ್ಜನ್ಯವನ್ನು ಮಾತ್ರ ನಕಲಿ ಎನ್ನುವವರ ಕಣ್ಣುಗಳಲ್ಲಿರುವುದು ಹಿಂದೂವಿರೋಧದ ದಾಹ ಮಾತ್ರ. ದೂರದ ಪ್ಯಾಲೆಸ್ಟೈನಿಗೆ ಮಿಡಿದ ಪಠಾಣನ ಮಾನವೀಯತೆಯು ಹತ್ತಿರದ ಹಿಂದೂಗಳಿಗೆ ಮಿಡಿಯಲೇ ಇಲ್ಲ. ಯಾವ ಮಾಧ್ಯಮಗಳು ಸರಿಯಾದ ವರದಿ ಮಾಡುತ್ತವೆಯೋ ಅವುಗಳನ್ನು ಹತ್ತಿಕ್ಕಲಾಗುತ್ತದೆ. ಫೇಕ್ ನ್ಯೂಸ್ ಫ್ಯಾಕ್ಟರಿಗಳು ಹಿಂದೂಗಳ ತಲೆಯಲ್ಲಿ ಸುದ್ದಿಮಲವನ್ನು ತುಂಬಿಸುತ್ತಿವೆ. ನಮ್ಮ ಸಂಘ ಬಂಧುಗಳಿಂದಾಗಿ, ತಮ್ಮ ತವರು ನೆಲದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಬಂಗಾಳೀ ಹಿಂದೂ ಸ್ನೇಹಿತರಿಂದ ಈ ವಿಚಾರ ಕೆಲವಷ್ಟು ಜನರಿಗಾದರೂ ತಿಳಿದಿದೆ ಎಂಬುದೇ ಸಮಾಧಾನದ ಸಂಗತಿ.


ಹಾಗಾದರೆ ಬಂಗಾಳದಲ್ಲಿ ನಡೆದದ್ದು ನಕಲಿ ದಂಗೆಯೇ? ಸೆಕ್ಯುಲರುಗಳ ದೃಷ್ಟಿಯಲ್ಲಿ ಹೌದು. ಆದರೆ ಬಂಗಾಳೀ ಸ್ನೇಹಿತರ ಮ್ಲಾನವದನ, ಭೀತಿ, ಕಣ್ಣೀರುಗಳನ್ನು ನೋಡುವ ಮಾನವೀಯತೆಯಿರುವ ಯಾವ ವ್ಯಕ್ತಿಗಾದರೂ ಅಲ್ಲಿ ನಡೆದ ದೌರ್ಜನ್ಯವನ್ನು ಊಹಿಸಬಹುದು. ಅದೇ ಅನುಭವ ಬಂಗಾಳದ ರಾಜ್ಯಪಾಲರಿಗಾದದ್ದು. ಸೆಕ್ಯುಲರು ಉನ್ಮಾದದ ಆಡಳಿತ ಅರಾಜಕತೆಗಿಂತಲೂ ಎಷ್ಟು ಭಯಂಕರ ಎನ್ನುವುದು ಗೋಚರಕ್ಕೆ ಸಿಕ್ಕಿದ್ದು. ಅಲ್ಲಿ ನಡೆದದ್ದು ಮತ್ತೊಂದು ನವಖಾಲೀ ಹತ್ಯಾಕಾಂಡ. ಕಲ್ಕತ್ತಾದ ಮುಸ್ಲಿಂ ಬಾಹುಳ್ಯವಿರುವ ಸ್ಥಳಗಳಿಂದ ಜಿಹಾದೀಗಳನ್ನು ಬಂಗಾಳದ ಮೂಲೆಮೂಲೆಗೂ ಅಟ್ಟಿ ಹಿಂದೂಗಳಿಗೆ ತಿರುಗಿ ಬೀಳಲೂ ಕಿಂಚಿತ್ತೂ ಕ್ಷಣವೂ ಸಿಗದಂತೆ ನಡೆಸಿದ ವ್ಯವಸ್ಥಿತ ದಂಗೆ. ಬಂಗಾಳೀ ಸ್ನೇಹಿತನೊಬ್ಬ ಹೇಳುತ್ತಿದ್ದ. ಆತನ ಅಕ್ಕನ ಮನೆಗೆ ನುಗ್ಗಿದ ಜಿಹಾದೀಗಳು ಮನೆಗೆ ಬೆಂಕಿ ಕೊಟ್ಟದ್ದಲ್ಲದೆ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದರು. ಕಣ್ಣಿನ ಕೆಳ ಭಾಗಕ್ಕೆ ಬಿದ್ದ ಏಟು ಒಂದೂವರೆ ದಿವಸ ಆಕೆ ಏನನ್ನೂ ತಿನ್ನಲಾಗದ, ಕುಡಿಯಲಾಗದ ಸ್ಥಿತಿಗೆ ತಂದೊಡ್ಡಿತು. ದೌರ್ಜನ್ಯಕ್ಕೆ ಕಾರಣ ಒಂದೇ ಆಕೆ ಭಾಜಪವನ್ನು ಬೆಂಬಲಿಸಿದುದು. ಇದೊಂದು ಉದಾಹರಣೆ ಮಾತ್ರ. ಇಂತಹಾ ಹಲವು ದೌರ್ಜನ್ಯದ ಘಟನೆಗಳನ್ನು ಬಂಗಾಳದ ಸ್ನೇಹಿತರಿಂದ ಕೇಳಿದ್ದೇನೆ.  ಇಂತಹಾ ಹಲವು ದೌರ್ಜನ್ಯಗಳು ನಡೆದವು, ಭಾಜಪಾದ ಕಾರ್ಯಾಲಯಗಳನ್ನು ಸುಟ್ಟು ಹಾಕಲಾಯಿತು. ಭಾಜಪಾ ಬೆಂಬಲಿತರ ಮನೆಗಳು ಬೆಂಕಿಗೆ ಆಹುತಿಯಾದವು. ಅವರ ಮೇಲೆ ಹಲ್ಲೆ, ಅತ್ಯಾಚಾರ ನಡೆಯಿತು. ಜಿಹಾದೀಗಳ ಉನ್ಮತ್ತತೆ ಯಾವ ಪ್ರಮಾಣದಲ್ಲಿತ್ತೆಂದರೆ ಸಾವಿರಾರು ಹಿಂದೂಗಳು ಮಾನ, ಪ್ರಾಣ ರಕ್ಷಣೆಗೆ ಅಸ್ಸಾಂಗೆ ತೆರಳಬೇಕಾಯಿತು!


ಬಂಗಾಳೀ ಹಿಂದೂಗಳಿಗೆ ಈಗಲಾದ್ರೂ ಬುದ್ಧಿ ಬರಬಹುದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉಢಾಫೆಯ ಮಾತಾಡುತ್ತ ತೌಡು ಕುಟ್ಟುತ್ತಾರೆ. ಆದರೆ ಅಲ್ಲಿನ ವಸ್ತುಸ್ಥಿತಿಯನ್ನು ಇವರು ಅರಿತಿಲ್ಲ. ಬಂಗಾಳೀ ಹಿಂದೂ ಈ ಬಾರಿ ಭಾಜಪಾವನ್ನು ಗೆಲ್ಲಿಸಲೆಂದೇ ತುದಿಗಾಲಲ್ಲಿ ನಿಂತಿದ್ದ. ಭಾಜಪಾ ಅಧಿಕಾರಕ್ಕೆ ಬರುತ್ತದೆ, ತನ್ನ ಮೇಲಿನ ದೌರ್ಜನ್ಯಗಳಿಗೆಲ್ಲಾ ಮಂಗಳ ಹಾಡುತ್ತದೆ ಎಂದು ಭಾವಿಸಿದ್ದ. ಆದರೆ ಬಂಗಾಳದ ಬಾಬೂಗಳನ್ನು ತನ್ನ ಹಣದ ಥೈಲಿಯ ರುಚಿ ತೋರಿಸಿ ಅಂಗೈಯಲ್ಲಿಟ್ಟುಕೊಂಡಿರುವ ದೀದಿಯ ಷಡ್ಯಂತ್ರದಿಂದ ಭಾಜಪ ಅಧಿಕಾರದ ಹತ್ತಿರವೂ ಸುಳಿಯಲಿಕ್ಕಾಗಲಿಲ್ಲ. ದಂಗಾ ದೀದಿ ಗೆದ್ದದ್ದು ಇವಿಎಮ್ ಯಂತ್ರಗಳನ್ನೇ ಬದಲಾಯಿಸಿ ಎಂದು ಬಂಗಾಳಿಗಳೇ ಹೇಳುತ್ತಾರೆ. ಈ ಆರೋಪಕ್ಕೆ ಮತ ಎಣಿಕೆ ಮುಗಿದ ನಂತರ ಟಿ.ಎಂ.ಸಿ ಕಾರ್ಯಾಲಯ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕ ಇವಿಎಮ್ ಯಂತ್ರಗಳೇ ಸಾಕ್ಷಿ. ಆದರೆ ಈ ತನಿಖೆ ದೀದಿ ಅಧಿಕಾರ ವಹಿಸಿಕೊಂಡ ಕೂಡಲೇ ಹಳ್ಳ ಹಿಡಿಯಿತು. ಸೋತ ಬಳಿಕ ದೀದಿಯ ಮೇಲೆ ಗೂಬೆ ಕೂರಿಸುವುದು ಅಂತ ನಿಮಗನ್ನಿಸಿದರೆ ಒಂದು ಬೂತ್ ಲೆವೆಲಿನ ಉದಾಹರಣೆ ಕೊಡುತ್ತೇನೆ. ನನ್ನೋರ್ವ ಬಂಗಾಳೀ ಸ್ನೇಹಿತನ ಬೂತ್ ನಲ್ಲಿ ಭಾಜಪಾ ಮೇಲುಗೈ ಖಚಿತವಾಗಿತ್ತು. ಆದರೆ ಮತ ಎಣಿಕೆಯ ದಿನ ದೀದಿಯ ಪಕ್ಷಕ್ಕೆ 770 ಮತ, ಭಾಜಪಾಕ್ಕೆ 10 ಮತ, ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಮತ ಸಿಕ್ಕಿತ್ತು. ಇಂತಹಾ ದೊಡ್ಡ ಅಂತರ ಅದರಲ್ಲೂ ಭಾಜಪಾಕ್ಕೆ ಕೇವಲ ಹತ್ತೇ ಮತ ಹೇಗೆ ಸಾಧ್ಯ? ಅದೂ ಭಾಜಪ ಪ್ರಬಲವಾಗಿದ್ದ ಬೂತ್'ನಲ್ಲಿ? ಬೂತ್ನಲ್ಲಿ ಸಿಗುವ ಮತದ ಲೆಖ್ಖ ಯಾವಾಗಲೂ ಬಹುತೇಕ ಖಚಿತವಾದದ್ದು ಎನ್ನುವುದು ಬೂತ್ ಮಟ್ಟದ ಚುನಾವಣಾ ಕಾರ್ಯತಂತ್ರದ ಜ್ಞಾನವುಳ್ಳ ಎಂತಹವರಿಗಾದರೂ ತಿಳಿದಿರುತ್ತದೆ. ಬಂಗಾಳದ ಚುನಾವಣೆಯಲ್ಲಿ ಬಾಂಗ್ಲಾದೇಶದವರೆಷ್ಟು ಮಂದಿ ಮತ ಹಾಕಿದ್ದಾರೋ ದೇವರಿಗೇ ಗೊತ್ತು! ಬಾಂಗ್ಲಾದೇಶಿಗಳಿಗೆ ಹಣಕೊಟ್ಟು ಓಟು ಹಾಕಿಸಲು ಯತ್ನಿಸಿ ಸಿಕ್ಕಿ ಬಿದ್ದ ಪ್ರಕರಣವೂ ನಿಮಗೆ ನೆನಪಿರಬಹುದು. ಗೆದ್ದವರಲ್ಲಿ 29 ಶಾಸಕರು ರೋಹಿಂಗ್ಯಾಗಳು!


ಬಂಗಾಳದಿಂದ ಹೊರಗಿರುವ ನನ್ನ ಬಂಗಾಳೀ ಮಿತ್ರರು ಅದೆಷ್ಟು ಕುಸಿದಿದ್ದರೆಂದರೆ ಕೆಲ ದಿವಸ ಸರಿಯಾಗಿ ಕೆಲಸ ಮಾಡುವ ಮನಸ್ಥಿತಿಯಲ್ಲೂ ಇರಲಿಲ್ಲ. ಕೆಲವರು ವಿಜಯಿಯಾಗಿದ್ದ ಭಾಜಪಾ ಶಾಸಕರು ಜನರ ರಕ್ಷಣೆಗೆ ನಿಲ್ಲಬೇಕಿತ್ತು ಎಂದು ಭಾಜಪಾವನ್ನು ಆಕ್ಷೇಪಿಸುತ್ತಾರೆ. ಆದರೆ ಅವರೇನಾದ್ರೂ ಆವತ್ತು ಮನೆಯಿಂದ ಹೊರಬೀಳುತ್ತಿದ್ದರೂ ಹೆಣವಾಗುತ್ತಿದ್ದರು. ಇದಕ್ಕೆ ದಂಗೆಕೋರರು ಹಲವು ಭಾಜಪಾ ನಾಯಕರ ಮನೆಯ ಸುತ್ತ ಠಳಾಯಿಸಿ ಮನೆಯನ್ನೇ ಧ್ವಂಸಗೊಳಿಸಲು ಆರಂಭಿಸಿದ್ದು, ಬಳಿಕ ಅವರನ್ನು ಅಲ್ಲಿಂದ ಚದುರಿಸಲು ಕೇಂದ್ರ ಸೈನಿಕಪಡೆಯನ್ನು ಕಳುಹಿಸಬೇಕಾಗಿಬಂದದ್ದೇ ಸಾಕ್ಷಿ. ಇನ್ನು ಕೆಲವರು ಕೇಂದ್ರ ಸರಕಾರ ತಕ್ಷಣ ಸೈನಿಕರನ್ನು ನಿಯೋಜಿಸಬೇಕಿತ್ತು ಅನ್ನುತ್ತಾರೆ. ಸಹಜವಾದದ್ದೇ. ಆದರೆ ಒಂದು ವ್ಯವಸ್ಥಿತ ದಂಗೆಯನ್ನು ಹತ್ತಿಕ್ಕಲು ಕೇಂದ್ರ ಸೈನಿಕ ಪಡೆಯನ್ನು ಎಷ್ಟೂಂತಾ, ಎಲ್ಲೀಂತಾ ಕಳುಹಿಸಬಹುದು. ಸೇನೆಯನ್ನು ಕಳುಹಿಸಿದ ಬಳಿಕವೂ ಸಂಪೂರ್ಣ ದಂಗೆಯನ್ನು ಹತ್ತಿಕ್ಕಲು ಕೆಲದಿನಗಳಾದರೂ ಬೇಕು. ಇದು ಕೇಂದ್ರದ ಸಮರ್ಥನೆಯಲ್ಲ. ವಸ್ತುಸ್ಥಿತಿ. ಕೇಂದ್ರ ಇದನ್ನೆಲ್ಲಾ ಮುಂಚೆಯೇ ಅರಿವಿಗೆ ತಂದುಕೊಂಡು ವ್ಯವಸ್ಥೆ ಮಾಡಬೇಕಿತ್ತು ಎನ್ನುವುದು ಸ್ವಲ್ಪಮಟ್ಟಿಗೆ ಸರಿ ಅನ್ನಿಸುತ್ತದೆ. ಜನರ ರಕ್ಷಣೆಗೆ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ದೀದಿ ಮೋಸ ಮಾಡುತ್ತಾಳೆ ಎಂಬ ಗುಮಾನಿಯೂ ಕೇಂದ್ರ ಸರಕಾರಕ್ಕೆ ಬರಲಿಲ್ಲ ಎಂದರೆ ವಿಚಿತ್ರ & ವಿಪರ್ಯಾಸವೇ ಸರಿ.


ಪ್ರತಿಪಕ್ಷಗಳು ಮೋದಿಯವರನ್ನು ಹಿಟ್ಲರ್, ಡಿಕ್ಟೇಟರ್ ಎಂದು ಬಿಂಬಿಸಲು ಪ್ರಯತ್ನಿಸಿದವು. ಮೋದಿಯವರ ಕೂದಲೂ ಕೊಂಕಿಸಲೂ ಸಾಧ್ಯವಾಗಲಿಲ್ಲ. ಆಗ ಅವರ ಕಣ್ಣಿಗೆ ಬಿದ್ದುದು ಬಡಪಾಯಿ ಹಿಂದೂಗಳು. ಅದರ ಪ್ರತ್ಯಕ್ಷ ಸಾಕ್ಷಿ ಬಂಗಾಳದಲ್ಲಿದೆ. ತಾನು ಗೆದ್ದುದೇ ತಡ, ತನ್ನ ಗೂಂಡಾಗಳಿಗೆ ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಕೊಟ್ಟಳು ಆಕೆ. ಹೀಗೆ ಕಾಯುತ್ತಿರುವ ಅದೆಷ್ಟು ನಾಯಕರುಗಳಿದ್ದಾರೋ? ದೆಹಲಿಯಲ್ಲಿ, ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಆದದ್ದು ನೆನಪಿದೆಯಲ್ಲಾ! ಇದೆಲ್ಲಾ ಉದ್ದೇಶಪೂರ್ವಕವಾಗಿಯೇ, ವ್ಯವಸ್ಥಿತವಾಗಿಯೇ ನಡೆಯಿತು ಎನ್ನುವುದಕ್ಕೆ ಸಾಕ್ಷಿಗಾಗಿ ನಾವು ಚುನಾವಣಾ ಪೂರ್ವದ ಸಮಯಕ್ಕೆ ಧಾವಿಸಬೇಕು. ತೃಣಮೂಲ ಶಾಸಕ ಹಮೀದುಲ್ ರಹಮಾನ್ ತಮಗೆ ಮತ ಹಾಕದವರನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದ.ಶೇಖ್ ಅಲಾಮ್ ಎನ್ನುವವ ಭಾರತದ ಮೂವತ್ತು ಪ್ರತಿಶತ ಮುಸ್ಲಿಮರು ಒಂದಾದರೆ ನಾವು ನಾಲ್ಕು ಪಾಕಿಸ್ತಾನಗಳನ್ನು ನಿರ್ಮಿಸಬಹುದು ಎಂದಿದ್ದ. ಇವರೆಲ್ಲಾ ಬಿಡಿ ಸ್ವತಃ ದಂಗಾ ದೀದಿಯೇ "ಕೇಂದ್ರ ಪಡೆಗಳು ತೆರಳಿದ ಬಳಿಕ ಅವರನ್ನು ಯಾರು ರಕ್ಷಿಸುತ್ತಾರೆ?" ಎಂದು ಚುನಾವಣಾ ರ್ಯಾಲಿಯಲ್ಲಿ ಬೆದರಿಕೆ ಹಾಕಿದ್ದಳು. ಕೇಂದ್ರ ಸರಕಾರ ನೇತಾಜಿಯವರ 125ನೇ ಜಯಂತಿಯನ್ನು "ಪರಾಕ್ರಮ್ ದಿವಸ್" ಎಂದು ವಿಶಿಷ್ಟವಾಗಿ ಆಚರಿಸಲು ತೊಡಗಿದಾಗ ದೀದಿ ಅದಕ್ಕೂ ಅಡ್ಡಗಾಲು ಹಾಕಿದಳು. ಜನರು ಜೈಶ್ರೀರಾಮ್ ಘೋಷಣೆ ಹಾಕಿದ್ದೂ ಅವಳ ಪಿತ್ಥವನ್ನು ನೆತ್ತಿಗೇರಿಸಿತು. ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೋಷಣೆ ಎಂದುಬಿಟ್ಟಳು. ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದಳು. ಮುಸಲ್ಮಾನರ ಹಬ್ಬವೂ ದುರ್ಗಾಪೂಜೆಯ ಸಮಯದಲ್ಲೇ ಬಂದುದಕ್ಕಾಗಿ ದುರ್ಗಾಪೂಜೆಯ ಮೆರವಣಿಗೆಯಯನ್ನೇ ನಿಲ್ಲಿಸಿದಳು. ಎಲ್ಲಾ ದೇಶ ವಿರೋಧಿಗಳು ಒಟ್ಟಾಗಿದ್ದರು. ನಕಲಿ ಪರಿಸರ ಹೋರಾಟಗಾರ್ತಿ ಗ್ರೇಟಾನ ಟೂಲ್ ಕಿಟ್ ನೋಡಿದರೆ ಅದರಲ್ಲಿ ದಂಗೆಯ ಬಗೆಗಿನ ಯೋಜನೆಯ ಹೊಳಹುಗಳು ಕಾಣಿಸುತ್ತವೆ.  


ಕೆಲ ವರ್ಷಗಳ ಹಿಂದೆ ಮಾಲ್ಡಾದಲ್ಲಿ ಎದ್ದ ದಂಗೆಯ ಉರಿಯೇ ಇಂದು ಬಂಗಾಳದಾದ್ಯಂತ ಹಬ್ಬಿದೆ. ಅಂದು ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮುಸಲರು ಮಾರಕಾಯುಧ, ದೊಡ್ಡ ದೊಡ್ಡ ಹಸಿರು ಬಾವುಟಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ 34ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಕಿರುಚಾಡುತ್ತಿದ್ದರು. ಗಡಿ ಭದ್ರತಾ ಪಡೆಯ ವಾಹನವೂ ಸೇರಿ ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಮತಾಂಧತೆಯ ಕಿಚ್ಚಿಗೆ ಆಹುತಿಯಾಗಿದ್ದವು. ಅಂಗಡಿ-ಮನೆ, ಪೊಲೀಸ್ ಸ್ಟೇಷನ್ನಿಗೂ ಬೆಂಕಿಬಿದ್ದಿತ್ತು. ಆಸ್ತಿ ಪಾಸ್ತಿಯ ಲೂಟಿಯೂ ನಡೆದಿತ್ತು. ಹತ್ತಾರು ಹಿಂದೂ ದೇವಾಲಯಗಳನ್ನು ಸುಡಲಾಯಿತು. ಇಪ್ಪತ್ತೈದಕ್ಕು ಹೆಚ್ಚು ಹಿಂದೂಗಳ ಮನೆ, ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು. ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಕಡತಗಳನ್ನೆಲ್ಲಾ ಸುಟ್ಟು ಹಾಕಲಾಗಿತ್ತು. ಇದೆಲ್ಲವೂ ಒಂದೇ ದಿನ ಕೆಲವೇ ಕ್ಷಣಗಳಲ್ಲಿ ನಡೆದು ಹೋಗಿತ್ತು.


ಲವ್ ಜಿಹಾದ್ ಮತಾಂಧರ ಕೈಯಲ್ಲಿರುವ ಬಹು ಮುಖ್ಯ ಅಸ್ತ್ರ. ಇದರ ದುಷ್ಪರಿಣಾಮಗಳು ಒಂದೆರಡಲ್ಲ. 2014ರಲ್ಲಿ ಪಶ್ಚಿಮ ಬಂಗಾಳದ ಆರಾಮ್ ಭಾಗ್ ಕ್ಷೇತ್ರದಿಂದ ಗೆದ್ದಾಕೆ ಆಫ್ರಿನ್ ಅಲಿ. ಅದು ಎಸ್.ಸಿ ಮೀಸಲು ಕ್ಷೇತ್ರ! ಆಕೆ ಹುಟ್ಟಿದ್ದು ಹಿಂದೂವಾಗಿ(ಅಪರೂಪಾ ಪೊದ್ದರ್) ಮದುವೆಯಾಗಿ ಮತಾಂತರವೂ ಆದಳು. ಭಾಜಪಾ ಆಕೆಯ ಮೇಲೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದಾಗ ತಾನು ಹೆಸರು ಮಾತ್ರ ಬದಲಾಯಿಸಿದ್ದೇನೆ,ಮತವನ್ನಲ್ಲ ಎಂದಳು! ಮೀಸಲಾತಿ ಕಾನೂನಿನ ದುರುಪಯೋಗ! ಸಂಸ್ಕೃತ ಪದವಿ ವಿದ್ಯಾರ್ಥಿನಿ ಪ್ರಜ್ಞಾ ದೇಬನಾಥಳ ಬಳಿ ಪ್ರೀತಿಯ ನಾಟಕ ಮಾಡಿ, ಮತಾಂತರಿಸಿ ಮದುವೆಯಾದ ಮತಾಂಧನೊಬ್ಬ ಅವಳ ತಲೆಯಲ್ಲಿ "ಕ್ರೈಮ್ ರಿಪೋರ್ಟ"ನ್ನು ತುಂಬಿಸಿದ. ಬಳಿಕ ಅವಳನ್ನು ಬಾಂಗ್ಲಾದೇಶದ ಭಯೋತ್ಪಾದಕರ ಗುಂಪಿಗೆ ಪರಿಚಯಿಸಿದ. ಆಯೇಷಾ ಎಂಬ ಹೊಸ ಹೆಸರು ಸಿಕ್ಕಿದ ಬಳಿಕ ಆಕೆ  ಬಾಂಗ್ಲಾದೇಶದ ಮದರಸಾಗಳಲ್ಲಿ ಪುಟ್ಟ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯಾದಳು. ಜೊತೆಗೆ ಜಾಲತಾಣಗಳಲ್ಲಿ ತನ್ನ ಸಂಪರ್ಕಕ್ಕೆ ಬಂದ ತರುಣ-ತರುಣಿಯರನ್ನು ಹಿಂದೂಧರ್ಮದ ವಿರುದ್ಧ ಎತ್ತಿಕಟ್ಟುವ, ಭಯೋತ್ಪಾದನೆಗೆ ಸಜ್ಜುಗೊಳಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ಐಸಿಸ್ ಬೆಂಬಲಿತ ಜಮಾತ್-ಉಲ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥೆಯೂ ಆದಳು. ಅವಳಿಗೆ ಬಲೆ ಬೀಸಿದ ಬಾಂಗ್ಲಾದೇಶ ಉಗ್ರನಿಗ್ರಹ ಪಡೆ ಢಾಕಾದಲ್ಲಿ ಆಕೆಯನ್ನು ಬಂಧಿಸಿತು. ವಿಚಾರಣೆ ವೇಳೆಗೆ ಆಕೆ ತಾನು ಹೇಗೆ ಗಡಿಯಲ್ಲಿ ಲೀಲಾಜಾಲವಾಗಿ ಎರಡೂ ಕಡೆ ಸಂಚರಿಸುತ್ತಿದ್ದೆ, ಪಶ್ಚಿಮ ಬಂಗಾಳದ ಹಳ್ಳಿ-ಹಳ್ಳಿಗಳೂ ಹೇಗೆ ಮತಾಂತರಗೊಳ್ಳುತ್ತಿವೆ ಎನ್ನುವುದನ್ನು ವಿವರವಾಗಿ ಬಿಚ್ಚಿಟ್ಟಳು. ಈ ಎಲ್ಲಾ ಪ್ರಕರಣ ಬೆಳಕಿಗೆ ಬಂದದ್ದು ಬಂಗಾಳದ ಬಸಿರ್ ಹಾತ್ ನಲ್ಲಿದ್ದ  ಐಸಿಸ್ ಏಜೆಂಟ್ ತಾನಿಯಾ ಫವ್ರೀನಳನ್ನು ಎನ್ಐಎ ಬಂಧಿಸಿದ ಮೇಲೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಶತಪ್ರಯತ್ನ ನಡೆಸಿದ್ದರು!



ಕಾಂಗ್ರೆಸ್, ಕಮ್ಯೂನಿಸ್ಟ್ ಆಳ್ವಿಕೆಯಲ್ಲಿ ಬೆಳೆದ ಕೈಗಾರಿಕೆಗಳೂ ನೆಲಕಚ್ಚಿದ್ದವು. ನಂದಿಗ್ರಾಮದಲ್ಲಿ ನಡೆದ ಪ್ರಹಸನವನ್ನು ನೋಡಿದವರಿಗೆ ಅದಕ್ಕಿರುವ ಕಾರಣಗಳನ್ನು ಊಹಿಸಲು ಸಾಧ್ಯವಾಗಬಹುದು. ದೀದಿ ಈ ಕ್ಷೇತ್ರಕ್ಕೆ ಅವೆರಡೂ ಪಕ್ಷಗಳನ್ನೂ ನಾಚಿಸುವಂತೆ ಘಾತಕವಾಗೆರಗಿದಳು. ದಿನನಿತ್ಯದ ಮುಷ್ಕರ, ದಂಗೆ, ಭ್ರಷ್ಟಾಚಾರಗಳಿಗೆ ಬೇಸತ್ತ ಸಂಸ್ಥೆಗಳು ಒಂದೊಂದಾಗಿ ಬಂಗಾಳದಿಂದ ಕಾಲ್ತೆಗೆದವು. ಒಂದು ಕಾಲದಲ್ಲಿ ಎಂಬತ್ತರಿಂದ ತೊಂಬತ್ತು ಪ್ರತಿಶತ ಕ್ಯಾಂಪಸ್ ಸೆಲೆಕ್ಷನ್ ಆಗುತ್ತಿದ್ದ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬರುವ ಪ್ರಯತ್ನದಲ್ಲಿದ್ದ ತಾಂತ್ರಿಕ ವಿದ್ಯಾಲಯಗಳಲ್ಲಿ ಈಗ ಕ್ಯಾಂಪಸ್ ಸೆಲೆಕ್ಷನ್ ಎಂಬ ಪದವೇ ಅಪರಿಚಿತವಾಗಿದೆ. ಅವುಗಳಲ್ಲಿ ಶಿಕ್ಷಣ ಶುಲ್ಕ ಏರುತ್ತಲೇ ಇದೆ. ಶಿಕ್ಷಕರ ಸಂಬಳ ಇಳಿಮುಖವಾಗುತ್ತಿದೆ. ತತ್ಪರಿಣಾಮ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದು ಕೇವಲ ತಾಂತ್ರಿಕ ವಿದ್ಯಾಲಯಗಳ ಕಥೆ ಮಾತ್ರವಲ್ಲ. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಇದು ದಂಗಾ ದೀದಿಯ ಆಡಳಿತದ ನೇರ ಪರಿಣಾಮ.



ಹೇಗಿತ್ತು ಬಂಗಾಳ? ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಫ್ರೆಂಚ್ ಪ್ರವಾಸಿ ಫ್ರಾಂಸ್ವಾ ಬರ್ನಿಯರ್ ಬಂಗಾಳದ ಕುರಿತು ಇಂತೆಂದಿದ್ದಾನೆ..."ಈಜಿಪ್ಟ್ ಅನ್ನು ವಿಶ್ವದ ಅತೀ ಹೆಚ್ಚು ಸಮೃದ್ಧಭರಿತ ಮತ್ತು ಪ್ರಕೃತಿವರಪ್ರಸಾದಿತವಾದ ಸುಭಿಕ್ಷ ನಾಡು ಎನ್ನುತ್ತಾರೆ. ಆದರೆ, ಬಂಗಾಳಕ್ಕೆ ಎರಡು ಬಾರಿ ಭೇಟಿ ನೀಡಿದ ನನ್ನ ಅನುಭವದಲ್ಲಿ ಈ ಗೌರವ ಬಂಗಾಳಕ್ಕೇ ಸಲ್ಲಬೇಕಿದೆ. ಬಂಗಾಳದಲ್ಲಿ ಬೆಳೆದ ಭತ್ತ ದೇಶ ವಿದೇಶಗಳಿಗೂ ಸರಬರಾಜಾಗುತ್ತದೆ. ಗಂಗಾ ನದಿಯ ಮೂಲಕ ಪಾಟ್ನಾಕ್ಕೂ ಸಮುದ್ರ ಮಾರ್ಗದ ಮೂಲಕ ದೇಶದ ವಿವಿದೆಡೆಗಳಿಗೆ ಹಾಗೂ ವಿದೇಶಗಳಿಗೂ ರಫ್ತಾಗುತ್ತದೆ. ಇಲ್ಲಿ ಉತ್ಪಾದನೆಯಾದ ಸಕ್ಕರೆ ಗೋಲ್ಕೊಂಡಾ ಮತ್ತು ಕರ್ನಾಟಕ ಪ್ರಾಂತಗಳಿಗೂ ಸರಬರಾಜಾಗುತ್ತದೆ. ಇಲ್ಲಿನ ಸಾಮಾನ್ಯರೂ ದಿನನಿತ್ಯದ ಊಟದಲ್ಲಿ ಯಥೇಚ್ಛವಾಗಿ ಉಪಯೋಗಿಸುವ ಬೇರೆ ಕಡೆ ದುಬಾರಿ ಅನಿಸುವ ವಸ್ತುಗಳು ಇಲ್ಲಿನ ಆಹಾರ ಸಮೃದ್ಧಿಗೆ ಸಾಕ್ಷಿಯಾಗಿದೆ. ಅದು ಹತ್ತಿ-ರೇಷ್ಮೆಗಳ ಸಮೃದ್ಧ ತಾಣ. ಇದು ಕೇವಲ ಭಾರತದ ಮುಖ್ಯ ಪ್ರಾಂತವಲ್ಲ, ಇಡೀ ಯೂರೋಪಿಗೆ ರಾಜಧಾನಿ  ಎಂದರೂ ಉತ್ಪ್ರೇಕ್ಷೆಯಿಲ್ಲ." ತಾಂತ್ರಿಕರ, ರಾಮಕೃಷ್ಣ, ಅರವಿಂದ, ವಿವೇಕಾನಂದರ ಆಧ್ಯಾತ್ಮ ಲೋಕ; ರವೀಂದ್ರ, ಶರತ್ ಚಂದ್ರ, ಬಂಕಿಮ, ವಿಭೂತಿಭೂಷಣರ ಸಾಹಿತ್ಯ ಲೋಕ; ರತ್ನಾಕರನ ತೆರೆಗಳನ್ನೇ ನಿಯಂತ್ರಿಸುತ್ತಿದ್ದ ಸಂಗೀತೋತ್ಸವ; ಇಡೀ ಬಂಗಾಳವನ್ನು ಒಂದಾಗಿಸುತ್ತಿದ್ದ ದುರ್ಗಾಪೂಜೆಯ ವೈಭವ ಎಲ್ಲಿ ಹೋದವು? ವಂಗಭಂಗದ ವಿರುದ್ಧ ಬಂಗಾಳ ಹೇಗೆ ಸಿಡಿದೆದ್ದಿತ್ತೆಂದರೆ ಅದನ್ನು ವಿರೋಧಿಸದ ಬಂಗಾಳಿಯೇ ಇರಲಿಲ್ಲ. ಪ್ರತೀ ಬಂಗಾಳಿ ತನ್ನನ್ನು ತಾನು ಕ್ರಾಂತಿಗೆ ಸಮರ್ಪಿಸಿಕೊಂಡಿದ್ದ. ಆ ದೇಶ ನಿಷ್ಠೆ ಎಲ್ಲಿ ಹೋಯಿತು? ಇಂದು ಬಂಗಾಳ ಯೋಚಿಸಿದ್ದನ್ನು ನಾಳೆ ಭಾರತ ಯೋಚಿಸುತ್ತದೆ ಎಂಬ ಮಾತ್ಯಾಕೆ ಸವಕಲಾಗಿ ಹೋಯಿತು?


ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ! 17-18ನೇ ಶತಮಾನದ ವೇಳೆಗೆ ಬಂಗಾಳದ ಬಟ್ಟೆ ಈಜಿಪ್ಟ್, ಪರ್ಷಿಯಾ, ಜಾವಾ, ಜಪಾನ್, ಚೀನಾಗಳಿಗೆ ರಫ್ತಾಗುತ್ತಿದ್ದವು. ಬಂಗಾಳವೊಂದೇ ಪ್ರತಿವರ್ಷ ಒಂದೂವರೆ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿತ್ತು. ಬಂಗಾಳದ ರೇಷ್ಮೆ ಉತ್ಪಾದನೆ ಜಗತ್ತಿನ ಶೇಕಡಾ 33ರಷ್ಟಿತ್ತು. ಬ್ರಿಟಿಷರ ಆಕ್ರಮಣದ ಬಳಿಕ ಎಲ್ಲವೂ ಬದಲಾಯಿತು.  ವಿದೇಶಕ್ಕೆ ರಫ್ತು ಮಾಡುವುದಕ್ಕೂ ಪ್ರತಿಬಂಧ ಹಾಕಲಾಯಿತು.  ಬ್ರಿಟಿಷರ ಒಡೆದಾಳುವ ಹಾಗೂ ಬ್ರಿಟಿಷ್ ಶಿಕ್ಷಣ ನೀತಿ ಬಂಗಾಳವನ್ನು ಭಾರತದ ಉಳಿದ ಪ್ರಾಂತ್ಯಗಳಿಗಿಂತಲೂ ಹೆಚ್ಚಾಗಿ ಜರ್ಝರಿತವನ್ನಾಗಿ ಮಾಡಿತು. ಅದರ ಜೊತೆಗೆ ಮುಸ್ಲಿಂ ಮತಾಂಧತೆಯ ಕ್ರೌರ್ಯ ಬಂಗಾಳವನ್ನು ಸುಡಲಾರಂಭಿಸಿತು. ಪ್ರತ್ಯೇಕ ರಾಷ್ಟ್ರಕ್ಕಾಗಿ ಹಪಹಪಿಸುತ್ತಿದ್ದ ಮುಸ್ಲಿಮ್ ಲೀಗ್, ತನ್ನ ಕಾರ್ಯ ಸಾಧನೆಗಾಗಿ 1946ರ ಆಗಸ್ಟ್ 16ರಂದು “ನೇರ ಕಾರ್ಯಾಚರಣೆ ದಿನ” ಹೆಸರಲ್ಲಿ ಬಂಗಾಳದಲ್ಲಿ ರಕ್ತದ ಹೊಳೆ ಹರಿಸಿತು. ಅದು ಬಂಗಾಳದ ಮಂತ್ರಿಯಾಗಿದ್ದ ಸುಹ್ರಾವರ್ದಿ ಎಂಬ ನರರಾಕ್ಷಸ ನಡೆಸಿದ ಸರಕಾರೀ ಪ್ರಾಯೋಜಿತ ದಂಗೆ. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂ ಹೆಂಗಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ಅಬಾಲವೃದ್ಧರಾದಿಯಾಗಿ ಹಿಂದೂಗಳನ್ನು ಕತ್ತರಿಸಿ ಬೀದಿ ಬೀದಿಗಳಲ್ಲಿ ಚೆಲ್ಲಲಾಯಿತು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು. ಬಂಗಾಳದ ನದಿ, ಕಾಲುವೆಗಳು ರಕ್ತದಿಂದ ಕೆಂಪಾದವು. ಮೂರು ದಿನಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಹಿಂದೂಗಳು ಕೊಲೆಯಾಗಿ ಹೋದರು. ಲಕ್ಷಕ್ಕೂ ಹೆಚ್ಚುಮಂದಿ ಪ್ರಾಣ-ಮಾನ ಭಯದಿಂದ ಕೋಲ್ಕತ್ತಾವನ್ನು ಬಿಟ್ಟು ತೆರೆಳಬೇಕಾಯಿತು. ಒಬ್ಬ ಗೋಪಾಲ್ ಮುಖ್ಯೋಪಾಧ್ಯಾಯರು ಇಲ್ಲದಿರುತ್ತಿದ್ದರೆ  ಕೋಲ್ಕತ್ತಾ, ಹೂಗ್ಲಿ ಸೇರಿದಂತೆ ಬಂಗಾಳದ ಬಹುಭಾಗ ಇಸ್ಲಾಮ್ ಮಯವಾಗಿ ಪಾಕಿಸ್ತಾನದ ಭಾಗವಾಗಿ ಬಿಡುತ್ತಿದ್ದವು!


ಬ್ರಿಟಿಷರ ನೀತಿಯನ್ನೇ ತಮ್ಮದಾಗಿಸಿಕೊಂಡ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ದಂಗಾ ದೀದಿ ಉಳಿದ ಬಂಗಾಳವನ್ನೂ ವಿಭಜಿಸುತ್ತಾ ಸಾಗಿದರು. ಮೇರೆ ಮೀರಿದ ತುಷ್ಟೀಕರಣ ಬಂಗಾಳವನ್ನು ಇಸ್ಲಾಂಮಯವಾಗಿಸುತ್ತಾ ಸಾಗಿತು. ತಮ್ಮ ದೇವನ ಕ್ರೈಮ್ ರಿಪೋರ್ಟ್ ಅನ್ನೇ ಪವಿತ್ರ ಗ್ರಂಥವೆನ್ನುವ ಮತಾಂಧತೆ ಒಮ್ಮೆ ಹೊಕ್ಕರೆ ಅಲ್ಲಿ ದಂಗೆಯಲ್ಲದೆ ಇನ್ನೇನು ಉಳಿದೀತು? ಬಂಗಾಳದ ಅತ್ಯದ್ಭುತವಾದ  ಭಾರತೀಯ ಸಾಂಸ್ಕೃತಿಕ ಪರಂಪರೆ, ಶಾಂತಿ-ಸುವ್ಯವಸ್ಥೆ-ಆತ್ಮಗೌರವಗಳ ಜೀವನ ವ್ಯವಸ್ಥೆಯ ನಾಮಾವಶೇಷವಾಗುತ್ತಿರುವುದರ ಹಿಂದಿನ ಕಾರಣ ಇದೇ. ಸೀಸ್ತಾನ್'ನಿಂದ ಬ್ರಾಹ್ಮಣಬಾರಿಯವರೆಗೆ ಜೀವರುಗಳನ್ನು, ಪ್ರಾಣಪ್ರತಿಷ್ಠೆಯಾದ ದೇವರುಗಳ ವಿಗ್ರಹಗಳನ್ನು ಚೆಲ್ಲಾಡಿ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದ ಮತಾಂಧತೆಯ ಕಾರಣದಿಂದಲೇ ಈಗ ನಮ್ಮ ಕಣ್ಣೆದುರಿಗೇ "ಸ್ವರ್ಣಸದೃಶ ಬಂಗಾಳ" ನಶಿಸಿಹೋಗುತ್ತಿದೆ. ಈ ವಿನಾಶಕ್ಕೆ ಕಾಂಗ್ರೆಸ್ - ಕಮ್ಯೂನಿಸ್ಟ್ ಹಾಗೂ ಅವರ ಗಂಜಿಯನ್ನೇ ನಂಬಿಕೊಂಡುಬಂದಿರುವ ಬೂಸಾ ಸಾಹಿತ್ಯ, ಸಿನೇಮಾ ಮಾಫಿಯಾ ಪಡೆಯ ಕೊಡುಗೆಯೂ ಬಹಳವೇ ಇದೆ.


ಬಂಗಾಳದ ಪುನರ್ನಿರ್ಮಿತಿ ಸುಲಭವಲ್ಲ. ಸುಟ್ಟುಹಾಕಿದ್ದನ್ನು ಪುನರ್ ನಿರ್ಮಿಸುವುದು ಸುಲಭದ ಮಾತೇನು? ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಮುದಾಯ ಉಳಿದರೆ ತಾನೇ ಪುನರ್ ನಿರ್ಮಾಣ ಸಾಧ್ಯ! ಬಂಗಾಳದಲ್ಲಿ ನಡೆಯುವ ದಂಗೆಗಳು ದೀದಿಯ ನಿರ್ದೇಶನದಲ್ಲೇ ನಡೆಯುತ್ತವೆ. "ಮಾಡಬೇಕಾದ ಕೆಲಸಗಳು ತುಂಬಾ ಇವೆ" ಎಂದು ಆಕೆ ಮುಲ್ಲಾಗಳ ಗುಂಪಲ್ಲಿ ಮಾತಾಡಿರುವ ವಿಡೀಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಯಲ್ಲೇ ಬಾಂಬು ತಯಾರಿಸುವ, ಭಯೋತ್ಪಾದಕರಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ, ನುಸುಳುಕೋರರಿಗೆ, ಕಳ್ಳಸಾಗಣಿಕೆಗಾರರಿಕೆ, ನಕಲಿನೋಟುಜಾಲಕ್ಕೆ ಸುವ್ಯವಸ್ಥೆ ಒದಗಿಸಿಕೊಡುವ, ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣುವ ಸಂಸದ, ಶಾಸಕರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಒಂದು ದೊಡ್ಡ ಭಯೋತ್ಪಾದಕ ಸಂಘಟನೆ. ಅಂತಹಾ ಸಂಘಟನೆಯನ್ನು ನಿಷೇಧಿಸಿ, ಜನರಿಗೆ ರಕ್ಷಣೆ ಕೊಡದ ಭಯೋತ್ಪಾದಕ ಸರಕಾರವನ್ನು ಕಿತ್ತೊಗೆದು ಅಲ್ಲಿ ರಾಷ್ಟ್ರಪತಿ ಆಡಳಿತ ನಡೆಸುವುದೇ ಬಂಗಾಳವನ್ನು ಉಳಿಸುವ ಏಕೈಕ ದಾರಿ.

ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ

 ಕಾವ್ಯಕಂಠ ಮಹಾತಪಸ್ವಿ ದಕ್ಷಿಣಾಪಥದ ಗಣಪತಿ



ನವದ್ವೀಪ; ತಕ್ಷಶಿಲೆ, ನಳಂದಾ, ಉಜ್ಜಯಿನಿಗಳಂತೆ ವಿದ್ಯೆಗೆ ಅಧಿರಾಜನಾಗಿ ಮೆರೆದ ಸ್ಥಳ. ಉಳಿದೆಲ್ಲವೂ ಪರಕೀಯರ ದಾಳಿಗೆ ತುತ್ತಾಗಿ ನಾಶವಾಗಿ ಹೋದರೆ ಬಂಗಾಳದ ನವದ್ವೀಪ ಮಾತ್ರ ಅಂತಹಾ ದಾಳಿಗಳಿಗೆ ತುತ್ತಾಗಿಯೂ ತನ್ನ ಕನಿಷ್ಟ ವೈಭವನ್ನಾದರೂ ಹೊತ್ತುಕೊಂಡು ಉಳಿಯಿತು. ತೀರಾ ಇತ್ತೀಚಿನವರೆಗೂ ಅಲ್ಲಿ ವಿದ್ವತ್ ಸಮ್ಮೇಳನಗಳು ನಡೆಯುತ್ತಿದ್ದವು. ಅವುಗಳಲ್ಲಿ ದೇಶದ ವಿವಿಧ ಪ್ರದೇಶಗಳ ವಿದ್ವಾಂಸರುಗಳು ಭಾಗವಹಿಸುತ್ತಿದ್ದರು. ಆದರೆ ದಕ್ಷಿಣದಿಂದ ಭಾಗವಹಿಸುವವರ ಸಂಖ್ಯೆ ಇಳಿಮುಖವಾಗಿ ಕೊನೆಗೆ ಶೂನ್ಯವಾಗಿತ್ತು. ಅಲ್ಲಿ ಸ್ಪರ್ದಿಗಳನ್ನು ವಿವಿಧ ರೀತಿಯಲ್ಲಿ ಪರೀಕ್ಷಿಸಲಾಗುತ್ತಿತ್ತು. ಚರ್ಚಾಕೂಟಗಳನ್ನು ನಡೆಸಲಾಗುತ್ತಿತ್ತು. ವಿಜೇತರಾದವರಿಗೆ ಸರಸ್ವತಿಯು ಸ್ಥಿತವಾದ ನವದ್ವೀಪ ವಿದ್ಯಾಪೀಠದಿಂದ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿತ್ತು. ಹಾಗಂತ ಎಲ್ಲರಿಗೂ ಅಲ್ಲಿ ಅವಕಾಶ ಸುಲಭವಾಗಿ ಸಿಗುತ್ತಿರಲಿಲ್ಲ. ಹೆಸರಾಂತ ವಿದ್ವಾಂಸರಿಗಷ್ಟೇ ಅಲ್ಲಿ ಸ್ಪರ್ದೆಗೆ ಅವಕಾಶ ದೊರಕುತ್ತಿತ್ತು. ಕ್ರಮೇಣ ಅದು ಈಗಾಗಲೇ ಪ್ರಶಸ್ತಿ ಪಡೆದಿರುವ, ಪ್ರಸಿದ್ಧರೂ, ಹಿರಿಯರೂ ಆದವರಿಗಷ್ಟೇ ಪ್ರವೇಶ ಸಿಗುವ ಹಂತಕ್ಕೆ ತಲುಪಿತು. ಆದಾಗ್ಯೂ ಕಲಾರಸಿಕರಿಗೆ, ಸಾಮಾನ್ಯರಿಗೆ ವೀಕ್ಷಣೆಗೆ ಅವಕಾಶ ಅಲ್ಲಿ ಇದ್ದೇ ಇರುತ್ತಿತ್ತು.


ವಿದ್ವಾಂಸರ ವಿದ್ವತ್ತಿನ ಪರೀಕ್ಷೆಯ "ಹರಿ ಸಭಾ" ಪ್ರಸಿದ್ಧ ಆಶುಕವಿ ಅಂಬಿಕಾದತ್ತರು ವೇದಘೋಷದೊಂದಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಆರಂಭವಾಯಿತು. ಘನ ಅಧ್ಯಕ್ಷರ ಉಪಸ್ಥಿತಿಯಿಂದಾಗಿ ಮೌನವಾಗಿದ್ದ ಆ ಸಭೆಯಲ್ಲಿ ಸಿತಿಕಂಠ ವಾಚಸ್ಪತಿಗಳೊಂದಿಗೆ ಬಂದಿದ್ದ ಯುವಕನೋರ್ವ ಅವರ ಬಳಿ ಅಧ್ಯಕ್ಷರನ್ನು ಕುರಿತು "ಈ ಮಹನೀಯರು ಯಾರು?" ಎಂದು ಕೇಳಿದ್ದು ಮೌನವಾಗಿದ್ದ ಸಭೆಯಲ್ಲಿ ಸ್ಪಷ್ಟವಾಗಿ ಎಲ್ಲರಿಗೂ ಕೇಳಿತು. ಅಧ್ಯಕ್ಷರು ಅದನ್ನು ಹಾಸ್ಯಾಸ್ಪದವಾಗಿ ಕಂಡು "ಸತ್ವರ ಕವಿತಾ ಸವಿತಾ ಗೌಡೋಹಂ ಕಶ್ಚಿದಂಬಿಕಾದತ್ತಃ - ನಾನು ಗೌಡ ದೇಶದ ಅಂಬಿಕಾದತ್ತ, ಆಶುಕವಿಗಳಲ್ಲಿ ಸೂರ್ಯ ಸಮಾನನು" ಎಂದು ಪದ್ಯವನ್ನು ಸಂಪೂರ್ಣ ಮಾಡದೆ ಉತ್ತರಿಸಿದರು. ತಕ್ಷಣ ಆ ಯುವಕ "ಗಣಪತಿರಿತಿ ಕವಿಕುಲಪತಿರಿತಿ ದಕ್ಷೋ ದಾಕ್ಷಿಣೋತ್ಯೋಹಮ್ - ನಾನು ಕವಿಕುಲಕ್ಕೆ ನಾಯಕನು, ಕಾವ್ಯರಚನೆಯಲ್ಲಿ ದಕ್ಷನು. ನಾನು ದಕ್ಷಿಣಾಪಥದ ಗಣಪತಿ" ಎಂದು ಉತ್ತರಿಸಿದನು. ಮಾತ್ರವಲ್ಲ "ಭವಾನ್ ದತ್ತಃ ಅಹಂತ್ವೌರಸಃ- ತಾವು ಅಂಬಿಕೆಯ ಮಾನಸಪುತ್ರರು, ನಾನಾದರೋ ಔರಸಪುತ್ರನು" ಎಂದು ಆ ಚಿಕ್ಕ ವಯಸ್ಸಿನ ಯುವಕನು ಉತ್ತರಿಸಲಾಗಿ ಸಭೆಯು ದಿಘ್ಭ್ರಮೆಗೊಂಡಿತಲ್ಲದೆ, ಕೆಲವರಂತೂ ಈ ಹುಡುಗನದ್ದು ಉದ್ಧಟತನವೆಂದೇ ಬಗೆದರು. ಯುವಕನ ದೈರ್ಯ ಪ್ರತಿಭೆಯ ಅರಿವಾಗಿ ಅಧ್ಯಕ್ಷರು ಆತನನ್ನೇ ಪರೀಕ್ಷಿಸಲು ತೊಡಗಿದರು.  ಕ್ಲಿಷ್ಟಕರ ಸಮಸ್ಯೆಗಳೆಲ್ಲವನ್ನೂ ತನ್ನ ಚತುರತೆಯಿಂದ ಬಿಡಿಸಿದ, ರಘುವಂಶ, ಕಾವ್ಯಪ್ರಕಾಶಗಳಲ್ಲಿನ ಶ್ಲೋಕಗಳಿಗೆ ಅರ್ಥ, ವಿರುದ್ಧಾರ್ಥ ಹಾಗೂ ಸಮನ್ವಯತೆಗಳನ್ನು ಸಾಧಿಸಿದ, ಅಂಬಿಕಾದತ್ತರಂಥ ಮಹಾನ್ ವಿದ್ವಾಂಸರ ಕಾವ್ಯಗಳಲ್ಲಿನ ತಪ್ಪುಗಳನ್ನು ಗುರುತಿಸಿ ಧೈರ್ಯದಿಂದ ಎತ್ತಿಹಿಡಿದ, ಅಪಿ, ಹಿ, ಚ ಪದಗಳನ್ನು ಬಳಸದೇ ಮಹಾಭಾರತದ ಪ್ರತಿಯೊಂದು ಅಧ್ಯಾಯಕ್ಕೂ ಒಂದೊಂದು ಶ್ಲೋಕಗಳನ್ನು ರಚಿಸುವ ಪರೀಕ್ಷೆಯಲ್ಲೂ ತೇರ್ಗಡೆಯಾದ ಆ ಯುವಕನಿಗೆ ವಿದ್ವಾಂಸರೆಲ್ಲರೂ ಸೇರಿ ಕಾವ್ಯಕಂಠ ಎಂಬ ಬಿರುದು ನೀಡಿ ಗೌರವಿಸಿದರು. ಅಂದಿನಿಂದ ಸೂರ್ಯಗಣಪತಿಯ ಹೆಸರು ಕಾವ್ಯಕಂಠ ಗಣಪತಿಮುನಿಯೆಂದೇ ಪ್ರಸಿದ್ಧವಾಯಿತು. ಈ ಪ್ರಕರಣವೇ ಒಂದು ದೀರ್ಘ ಕಥನವೋ, ಚಿತ್ರಕಥೆಯನ್ನು ಬರೆಯುವಷ್ಟು ಸ್ವಾರಸ್ಯವಾಗಿರುವುದು ಸಂಸ್ಕೃತ ಕಾವ್ಯಗಳ ಹಿರಿಮೆಯನ್ನೂ, ಕವಿಗಳ ಫ್ರೌಢಿಮೆಯನ್ನು, ಕಾವ್ಯಕಂಠ ಹೆಸರಿನ ಗರಿಮೆಯನ್ನು ಶ್ರುತಪಡಿಸುತ್ತದೆ.


ನೃಸಿಂಹ ಶಾಸ್ತ್ರಿಗಳು ಕಾಶಿ ವಿಶ್ವೇಶ್ವರನ ಮಂದಿರದ ಬಳಿ ದುಮ್ಟಿ ಗಣಪತಿ ಮೂರ್ತಿಯನ್ನೇ ತದೇಕಚಿತ್ತರಾಗಿ ನೋಡುತ್ತಾ ನವಾಕ್ಷರ ಗಣಪತಿ ಮಂತ್ರವನ್ನು ಜಪಿಸುತ್ತಿದ್ದಾಗ ವಿಗ್ರಹದಿಂದ ಮಗುವೊಂದು ಅಂಬೆಗಾಲಿಕ್ಕಿ ಅವರ ತೊಡೆಯೇರಿ ಕುಳಿತಂತೆ ಭಾಸವಾದ ಸಮಯಕ್ಕೇ ಸರಿಯಾಗಿ ಅತ್ತ ಆಂಧ್ರದ ಕಲುವರೈನಲ್ಲಿ ಅವರ ಪತ್ನಿಯು ದಿವ್ಯ ಶಿಶುವೊಂದಕ್ಕೆ ಜನ್ಮವಿತ್ತರು. ಅರಸವಲ್ಲಿ ಸೂರ್ಯ ನಾರಾಯಣ ಹಾಗೂ ಗಣಪತಿಯ ಅನುಗ್ರಹದಿಂದ ಜನಿಸಿದ ಶಿಶುವಿಗೆ ಸೂರ್ಯಗಣಪತಿ ಎಂದೇ ನಾಮಕರಣ ಮಾಡಲಾಯಿತು. ಆರು ವರ್ಷಗಳವರೆಗೂ ಅಮ್ಮಾ ಎಂದೂ ಕರೆಯದ,ಆಟ-ಪಾಠ, ಆಹಾರಗಳ ಕಡೆಗೆ ಆಸಕ್ತಿ ಇರದ ಆ ಮಗು ಸದಾ ಒಂದೆಡೆ ಕಣ್ಮುಚ್ಚಿ ಕುಳಿತಿರುತ್ತಿತ್ತು. ಕಾರಣವಿಲ್ಲದೆಯೇ ಶರೀರ ಬಿಸಿಯೇರುತ್ತಿತ್ತು, ಪ್ರಜ್ಞೆ ತಪ್ಪುತ್ತಿತ್ತು. ಯಾವ ರೋಗ ಲಕ್ಷಣಗಳೂ ಇರದ ಕಾರಣ ನರಶುದ್ಧೀಕರಣ ಚಿಕಿತ್ಸೆ ಮಾಡಲು ಆಲೋಚಿಸಿದರು. ಒಂದು ಅರಶಿನ ಕೊಂಬನ್ನು ಚೆನ್ನಾಗಿ ಕಾಯಿಸಿ ಅಮೃತನಾಡಿಯ ಜಾಗದಲ್ಲಿ ಇಟ್ಟರು. ಮೊದಲ ಬಾರಿಗೆ ಮಗುವು ಅಮ್ಮಾ ಎಂದು ಚೀರಿತು. ಬಳಿಕ ಸುಂದರವಾದ ಕಾವ್ಯಾತ್ಮಕ ಮಾತುಗಳು ಮಗುವಿನ ಬಾಯಿಂದ ಬರಲು ಆರಂಭವಾಯಿತು. ಗಣಪತಿಯ ನಾಲಗೆಯಲ್ಲಿ ಸರಸ್ವತಿಯು ನಾಟ್ಯವಾಡತೊಡಗಿದಳು. ಉಳಿದವರು ಹೇಳಿದಂತೆ ಮಗುವಿಗೆ ಮೂರ್ಛೆ ರೋಗವಾಗಿದ್ದಲ್ಲಿ ತನ್ನ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲ ಎಂದು ಶಾಸ್ತ್ರಿಗಳು ಭಾವಿಸಿದರು. ಆದರೆ ಉತ್ತರೋತ್ತರ ಭಗವಾನ್ ರಮಣ ಮಹರ್ಷಿಗಳ ದರ್ಶನ ಪಡೆದ ಬಳಿಕ ತನ್ನ ಚಿಕಿತ್ಸೆಯು ತಪ್ಪು ಹಾಗೂ ಅಪಾಯಕಾರಿಯಾಗಿತ್ತೆಂಬುದು ಅವರಿಗೆ ಅರಿವಾಯಿತು. ವಾಸ್ತವದಲ್ಲಿ ಯೋಗಸ್ಥಿತಿಯಲ್ಲಿ ಮುಂದುವರೆಯುತ್ತಿದ್ದ ತನ್ನ ಮಗನಿಗೆ ಅವರು ಅಡ್ಡಿಪಡಿಸಿದ್ದರು!


ಎಂಟನೇ ವರ್ಷದಲ್ಲೇ ಅಮರಕೋಶ, ಬಾಲರಾಮಾಯಣ, ಶಿವಸಹಸ್ರಗಳನ್ನು ಕರತಲಾಮಲಕ ಮಾಡಿಕೊಂಡ ಗಣಪತಿ ಒಂಬತ್ತನೇ ವಯಸ್ಸಿಗೆ ತಂದೆಯಿಂದ ಜ್ಯೋತಿಷ್ಯವನ್ನು ಕಲಿತು ವಿಶೇಷ ಪಂಚಾಂಗವನ್ನೂ ತಯಾರಿಸಿದ. ಭವಿಷ್ಯವನ್ನು ಕರಾರುವಕ್ಕಾಗಿ ಹೇಳುತ್ತಿದ್ದ ಕಾರಣ ಆತನ ಖ್ಯಾತಿ ಎಲ್ಲೆಡೆ ಹಬ್ಬಿತು. ಇಸ್ಪೀಟು, ಚದುರಂಗ, ಈಜುವುದರಲ್ಲಿ ಎಲ್ಲರನ್ನೂ ಬಾಲಕ ಮೀರಿಸಿದ್ದ. ಇಸ್ಪೀಟಿನ ಎಲೆಗಳನ್ನೆಲ್ಲಾ ರಹಸ್ಯವಾಗಿ ಹಂಚಿದ ನಂತರ ಬೇರೆ ಆಟಗಾರರ ಬಳಿ ಯಾವ ಎಲೆಗಳಿವೆ ಎನ್ನುವುದನ್ನು ನಿಖರವಾಗಿ ಹೇಳುತ್ತಿದ್ದ. ಹತ್ತು ವರ್ಷಗಳಾಗುವುದರೊಳಗೇ ವ್ಯಾಕರಣ, ತರ್ಕ, ನ್ಯಾಯಶಾಸ್ತ್ರಗಳಲ್ಲಿ ಪರಿಣತನಾಗಿ ಸಂಸ್ಕೃತದಲ್ಲಿ ಪದ್ಯರಚನೆಗೂ ತೊಡಗಿದ. ಗುರುಗಳು ಸವಾಲು ಹಾಕಿದಾಗ ಮೂವತ್ತನಾಲ್ಕೇ ನಿಮಿಷಗಳಲ್ಲಿ ಕೌರವ-ಪಾಂಡವ ಜನನ ವೃತ್ತಾಂತವನ್ನು ಮೂವತ್ತನಾಲ್ಕು ಸಂಸ್ಕೃತ ಶ್ಲೋಕಗಳಲ್ಲಿ ರಚಿಸಿದ. ಸುಕನ್ಯಾ ಚರಿತಮ್ ಎಂಬ ಖಂಡಕಾವ್ಯವನ್ನು ತಂದೆಯ ಪ್ರೀತ್ಯರ್ಥವಾಗಿ ರಚಿಸಿದ. ಗರ್ಭಿಣಿಯಾಗಿದ್ದ ತಾಯಿ ತನ್ನ ಅತಿಯಾದ ಸುಸ್ತು, ನಿಶ್ಶಕ್ತಿಯಿಂದ ಬೆದರಿ, ಗಣಪತಿಯನ್ನು ಕರೆದು ಈ ದಿನ ಹೆರಿಗೆಗೆ ಪ್ರಶಸ್ತವೇ ಎಂದು ಕೇಳಿದಾಗ ತಾಯಿಯ ಆತಂಕವನ್ನು ಅರಿಯದ ಗಣಪತಿ "ಈ ದಿನ ಹೆರಿಗೆಯಾದರೆ ಅವಳಿ ಮಕ್ಕಳಾಗುವುದು ಹಾಗೂ ತಾಯಿ ಮತ್ತು ಮಕ್ಕಳು ಉಳಿಯುವುದಿಲ್ಲ" ಎಂದುಬಿಟ್ಟ. ಮನೆಯವರು ಬೈದರು. ಅದರಂತೆಯೇ ಆದಾಗ ಬಂದವರೆಲ್ಲಾ ಬೈದುಬಿಟ್ಟರು. ಗಣಪತಿಯಾದರೋ ಅವಾವುದರ ಪರಿವೆಯಿಲ್ಲದೆ ತನ್ನ ತಾಯಿಯ ಶರೀರದಿಂದ ಹೊರಹೋದ ವಸ್ತು ಯಾವುದು? ನಶ್ವರವಾದ ಈ ಜೀವನದ ಉದ್ದೇಶವೇನು" ಎನ್ನುವುದರ ಹುಡುಕಾಟದಲ್ಲಿ ತೊಡಗಿದ್ದ.


ಹಾಡುತ್ತಿದ್ದ ಕೋಗಿಲೆ ಮೂಕವಾಗಿತ್ತು. ತಂದೆ, ಗುರುಗಳು ಯಾರೇ ಮಾತಾಡಿದರೂ ಮೌನವೇ ಅವರ ಉತ್ತರವಾಗಿತ್ತು. ತಂದೆಯು ಕೆಲವು ವರುಷಗಳ ಬಳಿಕ ಅನುನಯಿಸಿ ಕೇಳಿದಾಗಲೂ ತಂದೆಯ ಸಂಕಟ ಅರ್ಥವಾದರೂ ಮೌನವನ್ನು ಮುರಿಯಲು ಅವರು ಇಚ್ಛೆ ಪಡಲಿಲ್ಲ. ತಂದೆಯು ಕಟುವಾಗಿ "ಮೌನವು ಋಷಿಗಳ ಚರ್ಯೆ. ಅವರು ಅನುಸರಿಸುವ ಮೌನವು ತಪಸ್ಸು. ನೀನು ಅವರಂತಲ್ಲ. ಪ್ರಾಪಂಚಿಕ ಜೀವನದಲ್ಲಿದ್ದು ಈ ರೀತಿ ವರ್ತಿಸುವುದು ಬುದ್ಧಿವಂತರ ಲಕ್ಷಣವಲ್ಲ" ಎಂದಾಗ ತಪಸ್ಸು ಎಂಬ ಪದವು ಅವರ ಹೃದಯದೊಳಗಿಳಿಯಿತು. ಸತ್ಯವನ್ನರಸಲು ಇದೇ ಮಾರ್ಗವೆಂದು ಅರಿತು ಕೂಡಲೇ "ತಂದೆಯೇ, ನಾನು ತಪಸ್ಸನ್ನಾಚರಿಸಬೇಕು, ಆಶೀರ್ವದಿಸಿ" ಎಂದರು. ಮಗನ ತುಮುಲವನ್ನು ಅರ್ಥವಿಸಿಕೊಂಡ ಶಾಸ್ತ್ರಿಗಳು ಮೊದಲು ವಿದ್ಯೆಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಿ ಬಳಿಕ ತಪಸ್ಸನ್ನಾಚರಿಸಲು ತಿಳಿ ಹೇಳಿದರು. ಗಣಪತಿ ಮುನಿಗಳ ಈ ಬಯಕೆಗೆ ಕಾರಣವು ಅವರ ಉಮಾಸಹಸ್ರದ ಒಂದು ಶ್ಲೋಕದಲ್ಲಿ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ ಅವರು ಉಮೆಯಲ್ಲಿ ಹೇಳುತ್ತಾರೆ..."ಮಾಹೇಶ್ವರಿ, ಮೊದಲು ನನಗೆ ಹೃದಯ ವಿದ್ಯೆ ತಿಳಿದಿತ್ತು. ಮನಸ್ಸಿನಲ್ಲಿ ಅದ್ಭುತ ಶಕ್ತಿಯಿತ್ತು. ಮಾತಿನಲ್ಲಿ ಮಹತ್ತರ ಭಾಗ್ಯವಿತ್ತು. ನಾನು ಭುವಿಗಿಳಿದಂತೆ ಅವೆಲ್ಲವೂ ನನ್ನಿಂದ ಜಾರಿ ಹೋಯಿತು!"


ಹದಿನೈದನೇ ವರ್ಷಕ್ಕೇ ಸಂಸ್ಕೃತದ ಐದು ಮಹಾಕಾವ್ಯಗಳ ಅಧ್ಯಯನವನ್ನು ಮುಗಿಸಿದ ಗಣಪತಿ ಚಂಪೂ ರಾಮಾಯಣ, ಕುವಲಯಾನಂದ, ಪ್ರತಾಪ ರುದ್ರೀಯಮ್ ಅಂತಹಾ ಕಾವ್ಯಗಳನ್ನೂ ಅಭ್ಯಸಿಸಿದರು. ರಾಷ್ಟ್ರೀಯ ಕಾಂಗ್ರೆಸ್ಸಿನ ಸಮ್ಮೇಳನವೊಂದರಲ್ಲಿ ಗಾಂಧಿಯವರನ್ನು ಭೇಟಿಯಾಗಿ ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ಅದು ರಾಷ್ಟ್ರದ ಐಕ್ಯತೆಗೆ ಅಪಾರ ಶಕ್ತಿಯನ್ನು ತುಂಬುವುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಗಾಂಧಿ ಕೆಲವೇ ಕೆಲವು ಜನಗಳಿಗೆ ಸಂಸ್ಕೃತ ಜ್ಞಾನವಿರುವುದೆಂದು ಆ ಸಲಹೆಯನ್ನು ತಳ್ಳಿ ಹಾಕಿದರು. ಛಲ ಬಿಡದ ಗಣಪತಿ ಸಂಸ್ಕೃತವನ್ನು ಸುಲಭವಾಗಿ ಕಲಿಯುವ, ಕಲಿಸುವ ಸಲುವಾಗಿ "ಲಾಲಿ ಭಾಷಾ"  ಎಂಬ ಪುಸ್ತಕವನ್ನು ಮಾಡಿ ಕಾಂಗ್ರೆಸ್ ವರಿಷ್ಠರ ಮುಂದೆ ಇಟ್ಟರು. ಯಥಾ ಪ್ರಕಾರ ಅದಕ್ಕೂ ನಿರ್ಲಕ್ಷ್ಯವೇ ಗತಿಯಾಯಿತು.


ಛಿನ್ನಾಂ ಭಿನ್ನಾಂ ಸುತರಾಂ ಸನ್ನಾಮನ್ನಾಭಾವಾದಭಿತಃ ಖಿನ್ನಾಂ |

ಏತಾಂ ಪಾತುಂ ಭರತಕ್ಷೋಣೀಂ ಜಾಯೇ ಜಿಷ್ನೋಃ ಕುರು ಮಾಂ ಶಕ್ತಃ ||

ಬ್ರಿಟಿಷರ ಒಡೆದಾಳುವ ನೀತಿಯಿಂದಾಗಿ ಛಿನ್ನವೂ, ಭಿನ್ನವೂ ಆಗಿ ದೈಹಿಕ, ಮಾನಸಿಕ ಶಕ್ತಿ, ಕುಶಾಗ್ರಮತಿತ್ವಗಳಿಲ್ಲದೆ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿಯನ್ನು ನೀಡು. ಕಾವ್ಯಕಂಠ ಗಣಪತಿ ಮುನಿಗಳ "ಉಮಾಸಹಸ್ರಮ್"ನಲ್ಲಿರುವ ಒಂದು ಶ್ಲೋಕ ಇದು. ಮಾತೃಭೂಮಿಯ ಬಗ್ಗೆ ಅಪಾರವಾದ ಭಕ್ತಿ, ಕಾಳಜಿ ಮತ್ತು ಹೆಮ್ಮೆಯನ್ನಿರಿಸಿಕೊಂಡ ಆಧುನಿಕ ಕಾಲದ ತಪಸ್ವಿಯೊಬ್ಬನಿಂದ ಹೊರಹೊಮ್ಮಿದ ಭಾವಾವೇಶ ಇದು. ಕೇವಲ ವಾಕ್ಯಾರ್ಥವನ್ನು ಗಮನಿಸಿದರೆ ಛಿನ್ನಭಿನ್ನವಾಗಿ ಆಹಾರದ ಕೊರತೆಯಿಂದ ಬಳಲುತ್ತಿರುವ ಭರತ ಭೂಮಿಯನ್ನುಳಿಸಲು ನನಗೆ ಶಕ್ತಿ ನೀಡು ಎನ್ನುವ ಅರ್ಥವನ್ನು ಇದು ಹೊರಹೊಮ್ಮಿಸುತ್ತದೆ. ಉಮೆಗೂ ತನ್ನ ಭಕ್ತನನ್ನು ಕೀಟಲೆ ಮಾಡುವ ಮನಸ್ಸಾಗಿರಬೇಕು. ಈ ಶ್ಲೋಕವನ್ನು ರಮಣ ಮಹರ್ಷಿಗಳ ಮುಂದೆ ಪ್ರಸ್ತುತ ಪಡಿಸುತ್ತಿರುವಂತೆಯೇ ಗಣಪತಿ ಮುನಿಗಳಿಗೆ ತೀವ್ರ ಹಸಿವುಂಟಾಯಿತು. ಆದರೆ ಎಚ್ಚಮ್ಮಾಳ್ ಆಗಷ್ಟೇ ಅಕ್ಕಿ ಬೇಳೆ ಬೇಯಲು ಹಾಕಿ ಒಲೆ ಹೊತ್ತಿಸಿದ್ದಳು. ಆಗ ಅವಳಲ್ಲಿಗೆ ಬಂದ ಅಪರಿಚಿತ ಮಹಿಳೆಯೊಬ್ಬಳು ಗಣಪತಿ ಮುನಿಗಳಿಗೆ ತೀವ್ರ ಹಸಿವೆಯಾಗಿದೆಯೆಂದು ಕೂಡಲೇ ಊಟ ನೀಡಬೇಕೆಂದು ಸೂಚಿಸಿದಳು. ಎಚ್ಚಮ್ಮಾಳ್ ಬೇಯಲು ಇನ್ನೂ ಸಮಯವಿದೆಯೆಂದು ಹೇಳಿದರೆ ಆ ಮಹಿಳೆ ಪಾತ್ರೆಯ ಮುಚ್ಚಳವನ್ನು ತೆರೆದು ನೋಡುವಂತೆ ಹೇಳಿದಳು. ನೋಡಿದರೆ ಎಚ್ಚಮ್ಮಾಳಿಗೆ ಆಶ್ಚರ್ಯ ಕಾದಿತ್ತು. ಆಹಾರ ಆಗಲೇ ಬೆಂದಿತ್ತು. ನಡೆದ ಘಟನೆಯನ್ನು ಎಚ್ಚಮ್ಮಾಳ್ ಗಣಪತಿ ಮುನಿಗಳಿಗೆ ವಿವರಿಸಿದಾಗ ಉಮೆಯ ಅನುಗ್ರಹದ ಪ್ರಾಪ್ತಿಗೆ ಆತ ಬಹು ಸಂತಸಭರಿತರಾದರು. ಇಂತಹಾ ಹಲವು ಪವಾಡಗಳು ಗಣಪತಿ ಮುನಿಗಳ ಬದುಕಿನಲ್ಲಿ ಈಗಾಗಲೇ ನಡೆದುದ್ದರಿಂದ ಅವರಿಗೆ ಅದರಿಂದ ಆಶ್ಚರ್ಯವೇನೂ ಆಗದಿದ್ದರೂ ತಾಯಿಯ ಕರುಣೆಯಿಂದಾಗಿ ಅವರ ಕೊರಳ ಸೆರೆ ಉಬ್ಬಿತು.


ಉ ಎಂದರೆ ಶಿವ. ಮ ಎಂದರೆ ಶಿವನ ಸೀಮಿತ ಶಕ್ತಿ. ದೇವಿಯು ಪ್ರಪಂಚವನ್ನೇ ಸೃಷ್ಟಿಸುವ ಶಿವನ ಸೀಮಿತ ಶಕ್ತಿ. ಇದು ಉಮಾ ಪದಕ್ಕೆ ಮುನಿಗಳ ವಿವರಣೆ. ಇಪ್ಪತ್ತು ದಿನಗಳಲ್ಲೇ ಉಮಾ ಸಹಸ್ರಮ್ ಅನ್ನು ಪೂರ್ತಿಗೊಳಿಸಲು ಗಣಪತಿ ಮುನಿಗಳು ಸಂಕಲ್ಪಿಸಿದ್ದರು. ಶಿವನಿಗೂ, ಸುಬ್ರಹ್ಮಣ್ಯನಿಗೂ ಪ್ರಿಯವಾದ ಕಾರ್ತಿಕ ಮಾಸದ ಷಷ್ಠಿ ತಿಥಿಯಂದು ಗುಹಾವತಾರಿ ಭಗವಾನ್ ರಮಣ ಮಹರ್ಷಿಗಳ ಸಮ್ಮುಖದಲ್ಲಿ ಅವರು ಕೃತಿ ರಚನೆಯನ್ನು ಆರಂಭಿಸಿದ್ದರು. ಹತ್ತು ದಿನ ಸತತವಾಗಿ ಬರೆದ ಪರಿಣಾಮ ಅವರ ಹೆಬ್ಬೆಟ್ಟು ಊದಿಕೊಂಡಿತು. ಹತ್ತೊಂಬನೇ ದಿನಕ್ಕೆ ಹೆಬ್ಬೆಟ್ಟು ಅತಿಯಾಗಿ ಊದಿಕೊಂಡು ಬರೆಯುವುದೇ ದುಸ್ತರವಾಯಿತು. ಅಲ್ಲದೇ ಮುನ್ನೂರು ಶ್ಲೋಕಗಳು ಇನ್ನೂ ಬಾಕಿ ಉಳಿದಿದ್ದವು. ಆ ರಾತ್ರಿ ತಿರುವಣ್ಣಾಮಲೈನ ವೈದ್ಯ ಪುಣ್ಯಕೋಟಿಯ ಕನಸ್ಸಿನಲ್ಲಿ ಬ್ರಾಹ್ಮಣನೊಬ್ಬ ಕಾಣಿಸಿಕೊಂಡು "ಅರುಣಗಿರಿಯಲ್ಲಿರುವ ಮುನೀಶ್ವರನೊಬ್ಬನಿಗೆ ಹೆಬ್ಬೆಟ್ಟು ಊದಿಕೊಂಡಿದೆ. ಆತನಿಗೆ ಅಲ್ಲಿ ಹೋಗಿ ಚಿಕಿತ್ಸೆ ನೀಡು" ಎಂದಂತಾಯಿತು. ಬೆಳಗಿನ ಝಾವವೇ ಆತ ಗಣಪತಿ ಮುನಿಗಳಿಗೆ ಚಿಕಿತ್ಸೆ ಮಾಡಿದ. ಆದರೂ ಬರೆಯುವುದು ಅಸಾಧ್ಯವಾದ್ದರಿಂದ, ಮುನಿಗಳು ಸಂಪೂರ್ಣ ನಿಃಶಕ್ತರಾಗಿದ್ದುದರಿಂದ ತಮ್ಮ ಐದು ಮಂದಿ ಶಿಷ್ಯರಿಗೆ ಕ್ರಮವಾಗಿ ವಿವಿಧ ಛಂದಸ್ಸಿನಿಂದ ಕೂಡಿದ ಬೇರೆ ಬೇರೆ ಶ್ಲೋಕಗಳನ್ನು ಹೇಳುತ್ತಾ ಬರೆಯಿಸಿದರು. ಭಗವಾನ್ ರಮಣರು ಸಮಾಧಿ ಸ್ಥಿತಿಯಲ್ಲಿದ್ದರು. ಅವರ ಪಾದದಡಿಯಲ್ಲಿ ಕಾವ್ಯಕಂಠ ಗಣಪತಿ ಮುನಿಗಳು ಕುಳಿತು ಶಿಷ್ಯರಿಗೆ ಉಮಾಸಹಸ್ರಮ್ ನ ಕಡೆಯ ಮುನ್ನೂರು ಶ್ಲೋಕಗಳನ್ನು ಹೇಳಿ ಬರೆಯಿಸುತ್ತಿದ್ದರು. ಆಹಾ... ಈ ದೃಶ್ಯವನ್ನೊಮ್ಮೆ ಕಣ್ಣ ಮುಂದೆ ಬರಿಸಿಕೊಳ್ಳಬೇಕು. ವಿವಿಧ ಛಂದಸ್ಸಿನ ಐದು ಶ್ಲೋಕಗಳು ಏಕಕಾಲದಲ್ಲಿ ಹೊರಬರುತ್ತಿದ್ದವು. ಎಲ್ಲಾ ಶ್ಲೋಕಗಳನ್ನು ಬರೆದು ಮುಗಿಸಿದ ತಕ್ಷಣ ಶಿಷ್ಯರು ದೀರ್ಘ ನಿಟ್ಟುಸಿರನ್ನು ಬಿಟ್ಟು ಗಣಪತಿ ಮುನಿಗಳತ್ತ ನೋಡಿದರೆ ಆತ ಅರೆ ಎಚ್ಚರ ಸ್ಥಿತಿಯಲ್ಲಿದ್ದರು. ಐದು ನಿಮಿಷದ ಬಳಿಕ ಸಮಾಧಿ ಸ್ಥಿತಿಯಿಂದ ಹೊರಬಂದ ಭಗವಾನ್ ರಮಣ ಮಹರ್ಷಿಗಳು "ನಾಯನಾ, ನಾನು ಹೇಳಿದ್ದೆಲ್ಲವನ್ನೂ ಬರೆದುಕೊಂಡೆಯಾ?" ಎಂದರು. ಎಚ್ಚೆತ್ತ ಗಣಪತಿ ಮುನಿಗಳು ಭಾವಗದ್ಗಿತರಾಗಿ ತಮ್ಮೆರಡೂ ಕೈಗಳಿಂದ ಭಗವಾನರ ಪಾದಗಳನ್ನು ಮುಟ್ಟಿ "ಹೌದು ಭಗವನ್, ನೀವು ಹೇಳಿದ್ದೆಲ್ಲವನ್ನೂ ಪಡೆದುಕೊಂಡೆ" ಎಂದರು! ಹೌದು, ಈ ಘಟನೆಗೆ ಪೂರಕವಾಗಿ ತಾವು ಉಮಾಸಹಸ್ರಮ್ ಅನ್ನು ಹೇಗೆ ರಚಿಸಿದೆ ಎಂದು ವಿವರಿಸುವಾಗ ಗಣಪತಿ ಮುನಿಗಳು, ರಮಣ ಮಹರ್ಷಿಗಳು ನೀಡಿದ ಸಂಕ್ಷಿಪ್ತ ಪದಗಳ ಸಹಾಯದಿಂದ ರಚಿಸಿರುವೆ ಎಂದಿದ್ದಾರೆ. ಗುರುವಿನ, ಮೌನದ ಉಪದೇಶದ, ತಪಸ್ಸಿನ, ತೀವ್ರತರವಾದ ಭಕ್ತಿ, ಉದ್ದೇಶ ಹಾಗೂ ಶ್ರದ್ಧೆಯ ಮಹತ್ವ ಇದು. 


ಒಮ್ಮೆ ತಿರುವತ್ತಿಯೂರಿನ ತ್ರಿಪುರಸುಂದರಿ ದೇವಾಲಯದ ಪ್ರಾಂಗಣದ ಮೂಲೆಯಲ್ಲಿದ್ದ ಗಣಪತಿಯ  ಸಣ್ಣ ದೇಗುಲದ ಮಾನಸೋಲ್ಲಾಸ ವಾತಾವರಣವನ್ನು ನೋಡಿದ ಗಣಪತಿ ಮುನಿಗಳು ಆ ದೇಗುಲದೊಳಗೆ ಪ್ರವೇಶಿಸಿದರು. ಪ್ರವೇಶಿಸಿದಂತೆಯೇ ಅಂತರ್ಮುಖಿಗಳಾದರು.  ಅಲ್ಲಿ ಬಾಹ್ಯ ಪ್ರಪಂಚದ ಅರಿವೇ ಇಲ್ಲದಂತೆ ಅವರು ಧ್ಯಾನದಲ್ಲಿ ಮುಳುಗಿದ್ದು ಬರೋಬ್ಬರಿ ಹದಿನಾರು ದಿನ! ಶಕ್ತಿ ಸ್ರೋತ ಮೇಲ್ಮುಖವಾಗಿ ಹರಿಯುತ್ತಿತ್ತು. ಇದ್ದಕ್ಕಿದ್ದಂತೆ ಯಾವುದೋ ತಡೆಯುಂಟಾಗಿ ಅವರ ಬೆನ್ನಿನಲ್ಲಿ ವಿಪರೀತ ನೋವು ಕಾಣಿಸಿಕೊಂಡು ಅಂಗಾತ ಮಲಗಬೇಕಾಯಿತು. "ಸ್ಕಂದಾಗ್ರಜನೇ, ಮೂಲಾಧಾರದಲ್ಲಿನ ನಿನ್ನ ನಾಟ್ಯವನ್ನು ಸ್ವಲ್ಪ ನಿಧಾನಿಸು" ಎಂದು ಪ್ರಾರ್ಥಿಸಿದರು. ಕೂಡಲೇ ಯಾರೋ ಅವರನ್ನು ಸ್ಪರ್ಶಿಸಿದಂತಾಗಿ ಬೆನ್ನು ನೋವು ಮಾಯವಾಯಿತು. ನಾಯನರು ಕಣ್ತೆರೆದು ನೋಡಿದರೆ ಅಲ್ಲಿ ಭಗವಾನ್ ರಮಣ ಮಹರ್ಷಿಗಳು ನಿಂತಿದ್ದರು. ಗಣಪತಿ ಮುನಿಗಳು ಆನಂದಭಾಷ್ಪಭರಿತರಾಗಿ ಭಗವಾನರ ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದರು. ಅರುಣಾಚಲವನ್ನು ಬಿಟ್ಟು ತೆರಳದ ವಿರೂಪಾಕ್ಷ ಗುಹೆಯಲ್ಲಿ ಸದಾ ಆತ್ಮಾನಂದದಲ್ಲಿ ಮುಳುಗಿದ್ದ ರಮಣರು ತಿರುವತ್ತಿಯೂರಿನಲ್ಲಿ ಕಂಡದ್ದು ಹೇಗೆ? ಮುಂದೆ ಅಕ್ಟೋಬರ್ 17, 1929ರಂದು ನಾಯನರು ಅರುಣಾಚಲಕ್ಕೆ ಬಂದಾಗ ರಮಣರ ಬಳಿ ಈ ವಿಷಯವನ್ನು ಪ್ರಸ್ಥಾಪಿಸಿದಾಗ "ತಾನು ಸಿದ್ಧರ ರೀತಿ ಗಣಪತಿ ಮಂದಿರಕ್ಕೆ ಪಯಣಿಸಿದ" ಆ ಘಟನೆಯನ್ನು ಖಚಿತಪಡಿಸಿದರು!


"ವಿದ್ಯಾ ಸಂಸ್ಥೆಗಳು ಜ್ಞಾನಪ್ರಸಾರದ ಕೇಂದ್ರವಾಗಿರಬೇಕೆ ಹೊರತು ಮತ ಪ್ರಸಾರದ ಕೇಂದ್ರಗಳಲ್ಲ" ಎನ್ನುತ್ತಾ ಮತಾಂತರಿಗಳ ವಿರುದ್ಧ ತೊಡೆತಟ್ಟಿದ ಗಣಪತಿ ಮುನಿಗಳು ಸನಾತನ ಸಂಸ್ಕೃತಿ ಹಾಗೂ ವೇದಗಳ ಬಗೆಗೆ ಭಾಷಣಗಳನ್ನು ಆರಂಭಿಸಿದರು. ವೆಲ್ಲೂರಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ತಮಗೆ ನೀಡಿದ್ದ ಗೌರವಯುತ ತೆಲುಗು ಪಂಡಿತ ಹುದ್ದೆಯು ಅವರನ್ನು ಈ ನಿಟ್ಟಿನಲ್ಲಿ ಮತ್ತಷ್ಟು ಗಟ್ಟಿಗೊಳಿಸಿತು. ತಮ್ಮನ್ನು ಮತಾಂತರಗೊಳಿಸಬಂದವರಿಗೆ "ನಮ್ಮದು ಋಷಿಮುನಿಗಳಿಂದ ಪ್ರಣೀತವಾದ ಜ್ಞಾನದ ಭಂಡಾರವೇ ಉಳ್ಳ ಅದ್ಭುತ ಸಂಸ್ಕೃತಿ. ಈ ದೇಶಕ್ಕೆ ಬಂದ ನೀವು ನಿಮ್ಮದಕ್ಕಿಂತಲೂ ವಿಕಸಿತವಾದ ಈ ಸಂಸ್ಕೃತಿಯನ್ನು ಯಾಕೆ ಸ್ವೀಕರಿಸಬಾರದು?" ಎಂದು ಸವಾಲೆಸೆದರು. ಭಾರತೀಯತೆಯ ಪ್ರಸಾರಕ್ಕಾಗಿ ಇಂದ್ರಸೇನಾ ಎನ್ನುವ ಲಿಂಗ, ಜಾತಿ, ವರ್ಣ ಭೇದವಿಲ್ಲದ, ನಿಃಸ್ವಾರ್ಥ ಸೇವೆಯೇ ಪ್ರಮುಖವಾಗುಳ್ಳ ಸಂಘಟನೆಯನ್ನು ಆರಂಭಿಸಿದರು. "ಇಂದ್ರೋ ವಿಶ್ವಸ್ಯ ರಾಜತಿ" ಎನ್ನುವುದು ಅದರ ಶಪಥ ಮಂತ್ರವಾಗಿತ್ತು. "ಉಮಾಮ್ ವಂದೇ ಮಾತರಂ" ಎಂಬುದು ಅವರ ಘೋಷವಾಕ್ಯವಾಗಿತ್ತು. ದೈವೀ ಸಹಾಯವಿಲ್ಲದೆ, ಆಧ್ಯಾತ್ಮಿಕ ಸ್ವಾತಂತ್ರ್ಯ ಹೊಂದದೇ ಬರಿಯ ರಾಜಕೀಯ ಸ್ವಾತಂತ್ರ್ಯ ಗಳಿಸಿದಲ್ಲಿ ಅದು ಅಸ್ಥಿರ ಸ್ವಾತಂತ್ರ್ಯವೆಂದು ಗಣಪತಿ ಮುನಿಗಳು ಪದೇಪದೇ ಹೇಳುತ್ತಿದ್ದರು. ಮದ್ರಾಸ್, ಚಿತ್ತೂರು ಪ್ರಾಂತ್ಯಗಳಲ್ಲಿ ಈ ಸಂಘಟನೆಯ ಅನೇಕ ಶಾಖೆಗಳು ಹುಟ್ಟಿಕೊಂಡವು. ಸಹಜವಾಗಿ ಬ್ರಿಟಿಷರ ಕಣ್ಣು ಕೆಂಪಾಗತೊಡಗಿತು.


ಕುಂಡಲಿನಿಯು ಜಾಗೃತವಾಗಿ ಮೇಲ್ಮುಖವಾಗಿ ಶಕ್ತಿಯು ಹರಿಯುವುದಕ್ಕೆ ರೇಣುಕ ಎನ್ನಲಾಗುತ್ತದೆ. ಕಾರ್ತವೀರ್ಯನ ಸಂಹಾರ ಎಂದರೆ ಅಹಂಗೆ ಕಾರಣವಾದ ಮನಸ್ಸಿನ ಸಂಹಾರ. ರೇಣುಕೆಯ ಶಿರಚ್ಛೇದನವೇ ನಾಡೀಭೇದನ. ರೇಣುಕೆಯ ತಲೆಯನ್ನು ಕತ್ತರಿಸುವಾಗ ಅವಳಿಂದ ಬೋಧನಾರೂಪವಾಗಿ ಹೊರಬಂದ ಮಂತ್ರದಲ್ಲಿದ್ದದ್ದು  20 ಅಕ್ಷರಗಳು.  ( ರಾಯಸ್ಕಾಮೋ ವಜ್ರಹಸ್ತಂ ಸುದಕ್ಷಿಣಂ ಪುತ್ರೋ ನ ಪಿತರಂ ಹುವೇ । -  ಋ 7; ಸೂ- 32) . ರೇಣುಕೆಯು 20  ಬಾರಿ ತನ್ನ ಎದೆಯನ್ನು ಹೊಡೆದುಕೊಂಡಳೆಂಬ ಪುರಾಣ ಕಥೆಗೆ ಮೂಲ ಇದು. ಈ ಮಂತ್ರವನ್ನು ಸ್ವೀಕರಿಸಿದವ ಪರಶುರಾಮ. ಆತ 20 ಬಾರಿ ಪ್ರಪಂಚ ಗೆದ್ದ ಕಥೆಗೂ ಮೂಲ ಇದು. ಉಪನಿಷತ್ತಿನಲ್ಲಿ ಜ್ಯೋತಿರವಿದ್ಯಾಪದ್ದತಿ ಎಂದು ಉಲ್ಲೇಖಿಸಲ್ಪಟ್ಟಿರುವ ಈ ವಿದ್ಯೆಯನ್ನು ಕಾವ್ಯಕಂಠ_ಗಣಪತಿ_ಮುನಿ ಗಳು ಸ್ವತಃ ಅನುಭವಕ್ಕೆ ತಂದುಕೊಂಡಿದ್ದರು. ನಾಯನರ "ಸಾಂಗ್ ಆಫ್ ರೇಣುಕಾ" ಇಂದ್ರಸೇನಾನಿಗಳ ರಕ್ಷಣಾಮಂತ್ರವಾಯಿತು. ದೇಶವನ್ನು ಪರಕೀಯರ ಆಳ್ವಿಕೆಯಿಂದ ಮುಕ್ತಗೊಳಿಸುವಂತೆ ರಚಿಸಿದ್ದ ಶ್ಲೋಕಗಳಿಂದ ತುಂಬಿದ್ದ ಉಮಾಸಹಸ್ರಮ್ ಇಂದ್ರಸೇನಾದ ಸದಸ್ಯರಿಗೆ ನಿತ್ಯಸ್ತೋತ್ರವಾಯಿತು. ಬ್ರಿಟಿಷರ ಪರವಾಗಿದ್ದವರು ಸರಕಾರಕ್ಕೆ ಗಣಪತಿ ಮುನಿಗಳ ಸಂಘಟನಾತ್ಮಕ ಹೋರಾಟದ ಬಗ್ಗೆ ಕಿವಿಚುಚ್ಚತೊಡಗಿದರು. ಸರಕಾರವು ನಾಯನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರಿಕೆಗಳಲ್ಲಿ ಪ್ರಕಟಿಸಿತು. ಗವರ್ನರ್ ಉಮಾಸಹಸ್ರಮ್ ಅನ್ನು ಮುಟ್ಟುಗೋಲು ಹಾಕಿ ಪುಸ್ತಕ ಸಮೇತ ನಾಯನರನ್ನು ಬಂಧಿಸುವಂತೆ ಫರ್ಮಾನು ಹೊರಡಿಸಿದರು. ಆದರೆ ಉಮೆಯ ಕೃಪೆಯಿಂದ ನಾಯನರ ಎದುರೇ ಇದ್ದ ದಪ್ಪಕ್ಷರಗಳ ಪುಸ್ತಕ ಪೊಲೀಸರು ಶೋಧನೆಗೆ ಬಂದಾಗ ಅವರ ಕಣ್ಣಿಗೆ ಬೀಳಲಿಲ್ಲ! ಪೊಲೀಸರು ಸಂಧಿಗ್ಧರಾಗಿ ಪುಸ್ತಕವಿಲ್ಲದೆ ಬಂಧಿಸಲು ಹೆದರಿ ಮತ್ತೊಮ್ಮೆ ಬರುವುದಾಗಿ ತಿಳಿಸಿ ತೆರಳಿದರು. ನಾಯನರ ಶಿಷ್ಯರು ಬ್ರಿಟಿಷರ ಕಿರಿಕಿರಿ ತಪ್ಪಿಸಲು ಪುಸ್ತಕವನ್ನು ಪಂಬದಿಚ್ಚನ್ ಪರೈ ಬೆಟ್ಟದ ತಳದಲ್ಲಿನ ಕುಂಡಲಿನಿ ನದಿಯ ತಟದಲ್ಲಿ ಹೂತು ಹಾಕಿದರು. ಆ ರಾತ್ರಿಯೇ ಧಾರಾಕಾರ ಮಳೆ ಸುರಿದು ಕುಂಡಲಿನಿಯು ಉಕ್ಕಿ ಹರಿದು ಪುಸ್ತಕವು ಕೊಚ್ಚಿ ಹೋಯಿತು. ಅಲ್ಲಲ್ಲಾ ಅದು ದೇಶೀಯರೊಂದಿಗೆ ಐಕ್ಯವಾಗಿ ಸ್ವಾತಂತ್ರ್ಯದ ಕಹಳೆಯನ್ನೂದಲು ಶಕ್ತಿಸ್ತ್ರೋತವಾಯಿತು.


ನಾಯನರು ಮಹಾನ್ ತಪಸ್ವಿಗಳು. ಒಮ್ಮೆ ತಪಸ್ಸಿಗೆ ಕುಳಿತರೆಂದರೆ ಹದಿನೈದು-ಇಪ್ಪತ್ತು ದಿನಕ್ಕಿಂತಲೂ ಹೆಚ್ಚು ಅದು ಮುಂದುವರಿಯುತ್ತಿತ್ತು. ವಿರೂಪಾಕ್ಷ ಗುಹೆಯಲ್ಲಿದ್ದಾಗ ಛಿನ್ನಮಸ್ತ ಶಕ್ತಿಯಿಂದ ಕಪಾಲಭೇದನವಾಗಿ ಬಳಿಕ ರಮಣಮಹರ್ಷಿಗಳು ಅವರ ತಲೆಗೆ ಹರಳೆಣ್ಣೆ ತಿಕ್ಕಿ ತಂಪಾಗಿಸಿ, ಮರದ ಚಪ್ಪಲಿಯನ್ನು ಕೊಟ್ಟು ಸದಾ ಧರಿಸುವಂತೆ ಸೂಚಿಸಬೇಕಾಯಿತು. ಅವರ ಶಿಷ್ಯರಲ್ಲೂ ಈ ತಪಃ ಪ್ರವೃತ್ತಿ ಮಂದುವರೆಯಿತು. ಗೋಕರ್ಣದಲ್ಲಿ ನಾಯನರ ಶಿಷ್ಯನಾಗಿ ಗುರು ಸೇವೆ ಮಾಡಿದ ಗಣೇಶಭಟ್ಟನು ಮುಂದೆ ವೇದ ದ್ರಷ್ಟಾರನಾಗಿ, ಗುರು ನಾಯನರಿಂದಲೇ ಬ್ರಹ್ಮರ್ಷಿ ಎಂದು ಕರೆಯಿಸಿಕೊಂಡು ದೈವರಾತನಾಗಿ ಪ್ರಸಿದ್ಧನಾದನು. ಪಾದೈವೀಡುವಿನಲ್ಲಿ ಈ ಗುರುಶಿಷ್ಯರಿಬ್ಬರೂ ತಪವನ್ನಾಚರಿಸುತ್ತಿದ್ದಾಗ ದೈವರಾತನು ಸಮಾಧಿಸ್ಥಿತಿಯನ್ನು ತಲುಪಿ ಅಸ್ಪಷ್ಟವಾಗಿ ಏನೋ ಹೇಳಲಾರಂಭಿಸಿದನು. ಮೊದಲ ದಿನ ನಾಯನರು ಅದನ್ನು ನಿರ್ಲಕ್ಷಿಸಿದರು. ಎರಡನೇ ದಿನ ಅವರು ಆ ಶಬ್ಧಗಳನ್ನು ಕೇಳಿ ಆಶ್ಚರ್ಯಚಕಿತರಾದರು. ಅವು ವೇದ ಮಂತ್ರಗಳಾಗಿದ್ದವು. ಅಪ್ರಯತ್ನವಾಗಿ ದೈವರಾತನಿಂದ ಹೊರಬರುತ್ತಿದ್ದವು. ನಾಯನರು ಅವುಗಳನ್ನು ಬರೆದಿಟ್ಟುಕೊಂಡು ಛಂದೋದರ್ಶನಮ್ ಎನ್ನುವ ಹೆಸರಿಟ್ಟರು. ಉಮಾ ಸಹಸ್ರಮ್, ಶ್ರೀರಮಣಚತ್ವಾರಿಂಶತ್, ಶ್ರೀ ರಮಣ ಗೀತ, ಋಗ್ವೇದ ಭಾಷ್ಯ, ಇಂದ್ರಾಣಿಸಪ್ತಶತಿ, ಸದ್ದರ್ಶನಮ್ ಸಹಿತ ನೂರ ಹದಿನೈದಕ್ಕೂ ಹೆಚ್ಚು ಕೃತಿಕಾವ್ಯಗಳ ಬರವಣಿಗೆ ಕಾವ್ಯಕಂಠರದ್ದು. ಇಂತಹಾ ಮಹಾನ್ ಚೇತನ ತಪಗೈಯುತ್ತಲೇ ಮರೆಯಾಯಿತು. ಅವರು ಆತ್ಮಸಾಕ್ಷಾತ್ಕಾರ ಸಾಧಿಸಿಕೊಂಡರೇ ಎಂದು ಭಕ್ತರೊಬ್ಬರು ಪ್ರಶ್ನಿಸಿದಾಗ ಭಗವಾನ್ ರಮಣರು "ಅದು ಅವರಿಗೆ ಹೇಗೆ ಸಾಧ್ಯ? ಅವರ ಸಂಕಲ್ಪಗಳು ಬಹಳ ಪ್ರಬಲವಾಗಿದ್ದವು. ಅಂತಹಾ ಮತ್ತೊಬ್ಬ ವ್ಯಕ್ತಿಯು ಎಂದು ಬರುವನು?" ಎಂದು ಉದ್ಘರಿಸಿದರು. ವಾಸಿಷ್ಠ ಕುಲದಲ್ಲಿ ಉದ್ಭವರಾಗಿ ಕಾವ್ಯಕಂಠರಾಗಿ, ಗಣಪತಿಯಾಗಿ, ಮಹಾಮುನಿಯಾಗಿ ಮರೆಯಾದ ಈ ಮಹಾತಪಸ್ವಿಯ ಬಗೆಗಿನ ಪುಸ್ತಕವೊಂದು ಅದೇ ಹೆಸರಲ್ಲಿ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡಿರುವುದು ಕನ್ನಡಿಗರ ಭಾಗ್ಯ.