ಪುಟಗಳು

ಬುಧವಾರ, ಫೆಬ್ರವರಿ 26, 2020

ಆತ್ಮಾಹುತಿ.....ಆತ್ಮಾರ್ಪಣೆ!

ಆತ್ಮಾಹುತಿ.....ಆತ್ಮಾರ್ಪಣೆ!

             "ಸಾವು" ಎಂದಾಕ್ಷಣ ಮನುಷ್ಯನೊಮ್ಮೆ ಬೆಚ್ಚಿ ಬೀಳುತ್ತಾನೆ. ಪ್ರತಿಯೊಂದು ಜೀವಿಗೂ ಸಾವಿನ ಭಯವಿದ್ದೇ ಇದೆ. ಸಾವು ಇದೆ ಎನ್ನುವುದನ್ನು ಮರೆಯಲೋಸುಗವೇ ಬಹುಷಃ ಜೀವಿ ಇಂದ್ರಿಯ ಸುಖಗಳನ್ನು ಪೂರೈಸುವುದರಲ್ಲಿ ಗಮನವೀಯುತ್ತದೆ. ಅಥವಾ ಇಂದ್ರಿಯ ಸುಖಗಳೇ ಸಾವನ್ನು ಮರೆಸುತ್ತವೆ. ಅದನ್ನು ಮರೆತು ಜೀವಿ ತಾನು ಶಾಶ್ವತನೆನ್ನುವಂತೆ ಬೀಗುತ್ತದೆ. ಆದರೂ ಸಾವು ಅದಕ್ಕೆ ಭಯಗೊಳಿಸುವ ವಿಚಾರವೇ ಆಗಿರುತ್ತದೆ. ಅದು ಇಂದ್ರಿಯ ಮಟ್ಟದಲ್ಲಷ್ಟೇ ಸಾವನ್ನು ಎದುರಿಸಲು ತೊಡಗುವುದೇ ಅದಕ್ಕೆ ಕಾರಣವಿರಬಹುದು. ಆದರೆ ಸಾವಿನ ಬಗೆಗಿನ ಚಿಂತನ-ಮಂಥನಗಳೇ ಅನೇಕ ತತ್ತ್ವಚಿಂತನೆಗಳಾಗಿ ಹೊರಹೊಮ್ಮಿ ಬಹು ಎತ್ತರದಲ್ಲಿ ನಿಂತವು. ಸಾವಿನ ಪ್ರಶ್ನೆಯೇ ಭಾರತೀಯ ತತ್ತ್ವದರ್ಶನಗಳ ಮೂಲ ಬಿಂದುವಾಗಿತ್ತು. ನಚಿಕೇತ ಸಾವಿನ ಬಗ್ಗೆ ಯಮನನ್ನೇ ಪ್ರಶ್ನಿಸಿ ಉತ್ತರ ದೊರಕಿಸಿಕೊಂಡ. ಇಹ-ಪರಗಳ, ಹುಟ್ಟು-ಸಾವುಗಳ ಕುರಿತ ಜಿಜ್ಞಾಸೆಯಿಂದಲೇ ಉಪನಿಷತ್ತುಗಳು ಹುಟ್ಟಿದವು. ದುಃಖದ ಮೂಲವನ್ನು ಕಂಡು ಹಿಡಿಯಲು ಬುದ್ಧನನ್ನು ಪ್ರಚೋದಿಸಿದ ವೃದ್ಧ,ರೋಗಿ ಹಾಗೂ ಶವಗಳು ಸಾವಿನ ಮುಖಗಳೇ.

             ಸಾವನ್ನು ಗೆದ್ದು ಶಾಶ್ವತವಾಗೇನೂ ಉಳಿಯಲಾಗದು. ಆದರೆ ಸಾವನ್ನು ಗೆಲ್ಲಬಹುದು. ಅದು ಹೇಗೆ? ಸಾವಿನ ಭಯವನ್ನು ಗೆಲ್ಲುವ ಮೂಲಕ. ನಿರ್ಲಿಪ್ತತೆಯಿಂದ ಸಾವಿನ ಬಳಿ ಸಾಗುವ ಮೂಲಕ. ಇನ್ನೇನು ನಾನು ಇಲ್ಲಿ ಮಾಡಬಹುದಾದದ್ದೆಲ್ಲಾ ಮುಗಿಯಿತು; ಇನ್ನಿಲ್ಲಿರುವುದರಲ್ಲಿ ಅರ್ಥವಿಲ್ಲ, ನನ್ನ ಗಮ್ಯವನ್ನು ಸೇರಿಕೊಳ್ಳುವೆ ಎಂದು ಅತ್ತ ಹೊರಡಲು ತಯಾರಾಗುವ ಮೂಲಕ. ಅದು ಆತ್ಮಾರ್ಪಣೆ. ಭಾರತೀಯ ಪರಂಪರೆಯಲ್ಲಿ ಎಂತೆಂತಹ ಮಹನೀಯರು ಆತ್ಮಾರ್ಪಣೆ ಮಾಡಿಕೊಂಡರು! ಸಾವರ್ಕರ್...ಅಲ್ಲಲ್ಲಾ ವೀರ ಸಾವರ್ಕರ್! ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ "ಸ್ವಾತಂತ್ರ್ಯ ವೀರ" ಎಂದು ಕರೆಸಿಕೊಂಡ ಏಕೈಕ ವ್ಯಕ್ತಿ. ಎಂತಹಾ ಅಪ್ರತಿಮ ವ್ಯಕ್ತಿತ್ವ. ತಾನು, ತನ್ನ ಪರಿವಾರ, ತನ್ನ ಬಂಧುಬಳಗ, ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸ್ವಾತಂತ್ರ್ಯ ಯಜ್ಞದಲ್ಲಿ ಆಜ್ಯವನ್ನಾಗಿಸಿದ ಅಪ್ರತಿಮ ದೇಶಭಕ್ತ. ದೇಶದ ಸ್ವಾತಂತ್ರ್ಯಕ್ಕಾಗಿ ಹಡಗಿನ ಶೌಚಕೋಣೆಯ ಪುಟ್ಟ ಕಿಟಕಿಯಲ್ಲಿ ಯೋಗಬಲದಿಂದ ದೇಹ ತೂರಿ ಜಿಗಿದು ಸಾಗರ ಈಜಿದ ಶೂರ. ಎರಡೆರಡು ಕರಿನೀರ ಶಿಕ್ಷೆಯನ್ನು ಪಡೆದು, ಅಂಡಮಾನಿನ ಕತ್ತಲ ಕೋಣೆಯಲ್ಲಿ ಗಾಣವೆಳೆದು, ಬರಿಗೈಯಲ್ಲಿ ತೆಂಗಿನ ನಾರು ಸುಲಿದು, ಹುಳುಹುಪ್ಪಟೆಗಳಿಂದ ಕೂಡಿದ ಅನ್ನ ತಿಂದೂ ದೇಶಕ್ಕಾಗಿ ತನ್ನ ಜೀವ ಉಳಿಸಿ ಜೀವನ ಸವೆಸಿದ ಮಹಾವ್ಯಕ್ತಿ! ಯಾವ ದೇಶೀಯರ ಸ್ವಾತಂತ್ರ್ಯಕ್ಕಾಗಿ ಜೀವನವನ್ನೆಲ್ಲಾ ಸವೆಸಿದರೋ ಅಂತಹ ದೇಶವಾಸಿಗಳಿಂದಲೇ ವಿನಾ ಕಾರಣ ಕಲ್ಲು ಹೊಡೆಸಿಕೊಂಡು, ಜೈಲಿಗೆ ಅಟ್ಟಿಸಿಕೊಂಡೂ ತನ್ನ ಕರ್ತವ್ಯ ಬಿಡದ, ಮರೆಯದ ಸ್ಥಿತಪ್ರಜ್ಞ! ಆಗಲೂ ಅವರು ಸಾವಿಗೆ ಶರಣಾಗಲಿಲ್ಲ. ಅಂತಹ ಸಾವರ್ಕರ್ 1964ರಲ್ಲಿ ಹಾಸಿಗೆ ಹಿಡಿಯಬೇಕಾಗಿ ಬಂದಾಗ ತನ್ನ ಆತ್ಮಾರ್ಪಣೆಯ ನಿರ್ಧಾರವನ್ನು ಸಮರ್ಥಿಸುತ್ತಾ ತನ್ನ ಕೊನೆಯ ಲೇಖನವನ್ನು ಬರೆದರು. ಬರೆದಂತೆ ಬದುಕಿದವರು ಬರೆದ ರೀತಿಯೇ ಅಳಿದರು ಕೂಡಾ. ದಿನೇ ದಿನೇ ಅನ್ನ, ಪಾನೀಯ, ಔಷಧಿಗಳನ್ನು ತ್ಯಜಿಸುತ್ತಾ ನಿರಾಹಾರಿಯಾಗಿದ್ದು ದೇಹ ತ್ಯಜಿಸಿದ ಅವರು ಕೊನೆಗೂ ಮೃತ್ಯುವನ್ನು ಗೆದ್ದು ತಮ್ಮ ದೇಶೀಯರಿಟ್ಟ ಮೃತ್ಯುಂಜಯ ಹೆಸರನ್ನು ಸಾರ್ಥಕವಾಗಿಸಿಕೊಂಡರು.

              ದೇಶವನ್ನು ಸೈನಿಕೀಕರಣಗೊಳಿಸುವ ಸಲಹೆಯನ್ನು ಸಾವರ್ಕರ್ ಸ್ವಾತಂತ್ರ್ಯಪೂರ್ವದಿಂದಲೇ ಕೊಡುತ್ತಾ ಬಂದಿದ್ದರು. ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. ಮಾತ್ರವಲ್ಲ 1954ರಲ್ಲಿ ಟಿಬೇಟನ್ನು ಚೀನಾದ ತೆಕ್ಕೆಗೆ ಬಿಡುವ ಒಪ್ಪಂದಕ್ಕೂ ಸಹಿ ಹಾಕಿದರು. ಚೀನಾ ಅಷ್ಟರಲ್ಲಾಗಲೇ ಭಾರತದ ಗಡಿ ಭಾಗಗಳನ್ನು ನುಂಗಲು ಶುರುಮಾಡಿತ್ತು. 1960ರ ವೇಳೆಗೆ ನೇಪಾಳ, ಅಪ್ಘಾನಿಸ್ಥಾನ, ಪಾಕಿಸ್ತಾನ, ಬರ್ಮಾ ಇಂಡೋನೇಷಿಯಾಗಳನ್ನು ತನ್ನ ಜೊತೆಗೂಡಿಸಿಕೊಂಡು ಭಾರತವನ್ನು ಒಂಟಿಯಾಗಿಸಿತು. ನೆಹರೂ ಸಹಿತ ಕಾಂಗ್ರೆಸ್ ನೇತಾರರೆಲ್ಲರೂ ಚೀನಾ ಯುದ್ಧ ಮಾಡುವುದಿಲ್ಲ ಎನ್ನುತ್ತಾ ಚೀನಾದ ಪರವಾಗಿ ವಾದ ಮಂಡಿಸಲು ಆರಂಭಿಸಿದ್ದಲ್ಲದೇ ನಾವಾಗಿಯೇ ನಿಶ್ಶಸ್ತ್ರೀಕರಣ ನೀತಿ ಸ್ವೀಕರಿಸಿ ಶಸ್ತ್ರಗಳನ್ನು ವಿಸರ್ಜಿಸಬೇಕು ಎಂಬ ಮೊಂಡುವಾದವನ್ನು ಆರಂಭಿಸಿದರು. ಅಷ್ಟು ಹೊತ್ತಿಗೆ ಚೀನಾ ಲಢಾಕ್ ಹಾಗೂ ನೀಫಾಕ್ಕೆ ನುಗ್ಗಿತ್ತು. ಸಹಸ್ರಾರು ವೀರ ಯೋಧರು ಸರಿಯಾದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿಲ್ಲದೆ ಕೊಲ್ಲಲ್ಪಟ್ಟರು. ಪಂಚಶೀಲದ ಸ್ಥಂಭಗಳು ಡ್ರಾಗನ್ನಿನ ಆರ್ಭಟಕ್ಕೆ ಬಿದ್ದು ಹೋದವು. ಈ ವಿಪತ್ತನ್ನು ನೋಡಿ ಸಾವರ್ಕರರಿಗೆ ದುಃಖ ತಡೆಯಲಾಗದೆ ತನ್ನ ಚಿಕಿತ್ಸೆಗೆಂದು ಬರುತ್ತಿದ್ದ ವೈದ್ಯರಲ್ಲಿ "ದಯವಿಟ್ಟು ನನ್ನ ಜೀವನವನ್ನು ಕೊನೆಗೊಳಿಸಿಬಿಡಿ. ನನಗಿನ್ನು ಬದುಕುವ ಆಸೆಯಿಲ್ಲ. ದೇಶದ ಈ ದುಃಸ್ಥಿತಿಯನ್ನು ನಾನು ನೋಡಲಾರೆ" ಎಂದು ಗೋಗರೆದರು.

              1963ರ ಡಿಸೆಂಬರಿನಲ್ಲಿ ತಮ್ಮ ಆರೋಗ್ಯ ವಿಚಾರಿಸಲು ಬಂದ ಆಚಾರ್ಯ ಪಿ.ಕೆ.ಅತ್ರೆಯವರ ಬಳಿ "ಶಂಕರಾಚಾರ್ಯ, ಜ್ಞಾನೇಶ್ವರ, ರಾಮದಾಸ, ತುಕಾರಾಮ ಮುಂತಾದರೆಲ್ಲಾ ತಮ್ಮ ಜೀವನೋದ್ದೇಶ ಪೂರೈಸಿದ ಮೇಲೆ ದೇಹತ್ಯಾಗ ಮಾಡಿ ತಮ್ಮ ಇಹಜೀವನ ಯಾತ್ರೆಯನ್ನು ಪೂರೈಸಿದರು. ಈ ಕುರಿತಾಗಿ ನಾನೊಂದು ಲೇಖನ ಬರೆಯಬೇಕೆಂದಿರುವೆ" ಎಂದು ಆತ್ಮಾರ್ಪಣೆ ಮಾಡುವ ತಮ್ಮ ಮನಸ್ಸನ್ನು ಬಿಟ್ಟುಕೊಡದೇ ಹೇಳಿದ್ದರು ಸಾವರ್ಕರ್. ಹಾಗೆ ಯಾರಿಗೂ ತಿಳಿಯದಂತೆ ಲೇಖನವನ್ನೂ ಬರೆದಿಟ್ಟರು. ಅಲ್ಲಿ ಆತ್ಮಹತ್ಯೆಗೂ ಆತ್ಮಾರ್ಪಣೆಗೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಸಾವರ್ಕರ್. ರೋಗ, ಅಪಘಾತ ಇಲ್ಲವೇ ಇನ್ನಾವ ಅಪರಿಹಾರ್ಯ ರೀತಿಯಲ್ಲಿ ಸಾವು ಬಾರದೇ ಇದ್ದು, ಯಾವುದೋ ಕಾರಣಕ್ಕಾಗಿ ಬದುಕು ಬೇಡ ಎಂದೆನಿಸಿದಾಗ ಸಾವನ್ನು ತಾವೇ ಬರಮಾಡಿಕೊಂಡರೆ ಅದು ಆತ್ಮಹತ್ಯೆ ಎನ್ನಿಸಿಕೊಳ್ಳುತ್ತದೆ. ಆದರೆ ಜಗತ್ತಿನಲ್ಲಿ ತಾನು ಮಾಡಬಹುದಾದ ಎಲ್ಲವೂ ಮುಗಿಯಿತು ಎಂದು ಭಾಸವಾಗಿ ಸಂತೃಪ್ತನಾಗಿ ನಿರ್ಲಿಪ್ತ ಭಾವದಿಂದ ತನ್ನ ದೇಹವನ್ನು ಬಿಟ್ಟು ಹೋಗುವುದನ್ನು ಆತ್ಮಾರ್ಪಣೆ, ಆತ್ಮವಿಸರ್ಜನೆ ಎಂದು ಪ್ರಾಚೀನ ಕಾಲದಿಂದಲೇ ಗೌರವಿಸಿಕೊಂಡು ಬರಲಾಗಿದೆ. ಅಂತಹಾ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸದೆ ಪುಣ್ಯಕಾರ್ಯವೆಂದು ಭಾವಿಸಲಾಗಿದೆ. ಈ ಲೇಖನದಲ್ಲಿ ತಾನು ಕೊಡುವ ದೃಷ್ಟಾಂತಗಳನ್ನು ತನ್ನ ವೃದ್ಧಾಪ್ಯದ ಕಾರಣ ಅಧಿಕೃತ ಗ್ರಂಥಗಳನ್ನು ಓದಿ ಕೊಡಲು ಸಾಧ್ಯವಿಲ್ಲದೆ ಕೇವಲ ತನ್ನ ಜ್ಞಾಪಕ ಶಕ್ತಿಯಿಂದ ಕೊಟ್ಟಿರುವುದಾಗಿಯೂ, ಹಾಗಾಗಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಅದು ತನ್ನ ಅಂತಿಮ ನಿರ್ಧಾರವನ್ನು ಅಪಕರ್ಷಿಸಲಾರವು ಎಂದಿದ್ದಾರೆ ಸಾವರ್ಕರ್.

             ಪ್ರಖ್ಯಾತ ಮೀಮಾಂಸಕರಾಗಿದ್ದ ಕುಮಾರಿಲಭಟ್ಟರು ತಮ್ಮ ಕಾರ್ಯ ಮುಗಿದೊಡನೆ ತಮ್ಮ ಕೈಗಳಿಂದ ತಾವೇ ಬೆಂಕಿ ಹಚ್ಚಿಕೊಂಡು ಬೂದಿಯಾದರು. ಬೌದ್ಧ ವಿದ್ವಾಂಸರನ್ನು ಅವರದ್ದೇ ಮತವನ್ನು ಮುಂದಿಟ್ಟು ಸೋಲಿಸುವ ಉದ್ದೇಶದಿಂದ, ಛದ್ಮವೇಶಧಾರಿಯಾಗಿ ಬೌದ್ಧರ ನಡುವೆಯೇ ಇದ್ದು ಬೌದ್ಧ ಮತವನ್ನು ಅಭ್ಯಸಿಸಿದ ಆತ ಬಳಿಕ ಕದ್ದು ವಿದ್ಯೆ ಪಡೆದ ಗುರು ದ್ರೋಹದ ಪಾಪ ಪ್ರಾಯಶ್ಚಿತ್ತಕ್ಕಾಗಿ ತುಷಾಗ್ನಿಯೊಳಗೆ ಹೊಕ್ಕರು. ಅದನ್ನು ನಮ್ಮ ಪರಂಪರೆ ಅಗ್ನಿದಿವ್ಯ ಅಥವಾ ಆತ್ಮಾರ್ಪಣೆ ಎಂದಿದೆಯೇ ವಿನಹಾ ಆತ್ಮಹತ್ಯೆಯೆಂದಲ್ಲ. ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಅದ್ವೈತವೆಂಬ ಸೂತ್ರದಿಂದ  ಭಾರತವನ್ನು ಏಕತ್ರಗೊಳಿಸಿ ಹಿಂದೂ ಧರ್ಮದ ಪುನರುತ್ಥಾನಗೈದವರು ಷಣ್ಮತಸ್ಥಾಪನಾಚಾರ್ಯ, ಸ್ವತಃ ಬ್ರಹ್ಮವೇ ಆದ ಆದಿಶಂಕರರು. "ಯದಹರೇವ ವಿರಜ್ಯೇತ್| ತದಹರೇವ ಪ್ರವಜೇತ್ | ಗೃಹಾತ್ ವಾ ವನಾತ್ ವಾ" ಎಂದ ಅವರು ತನ್ನ ಕಾರ್ಯ ಮುಗಿದಾಕ್ಷಣ ಬದರಿಯಲ್ಲಿ ಗುಹೆಯೊಂದನ್ನು ಹೊಕ್ಕು ಯೋಗ ಮಾರ್ಗದಿಂದ ದೇಹತ್ಯಾಗ ಮಾಡಿದರು. ಹೀಗೆ ಶಂಕರರು ಸಹಿತವಾಗಿ ಅನೇಕ ಯೋಗಿಗಳು ಈ ರೀತಿ ತಮ್ಮ ದೇಹತ್ಯಾಗ ಮಾಡಿದ್ದನ್ನು ಪೂಜ್ಯಭಾವನೆಯಿಂದಲೇ ನಮ್ಮ ಪರಂಪರೆ ನೋಡಿದೆಯೇ ಹೊರತು ಅಪರಾಧವೆಂಬಂತೆ ಅಲ್ಲ. ಇಡಿಯ ಬಂಗಾಳವನ್ನು ಭಕ್ತಿರಸದಿಂದ ತೋಯಿಸಿ ಹಿಂದೂ ಸಮಾಜ ಚೈತನ್ಯದಿಂದ ಪುಟಿದೇಳುವಂತೆ ಮಾಡಿದವರು ಚೈತನ್ಯ ಮಹಾಪ್ರಭುಗಳು. ಪುರಿಯ ದಾರಿಯಲ್ಲಿ ಅಮೋಘ ಕೃಷ್ಣ ಜಲಸಾಗರವು ಕೃಷ್ಣನೇ ತಮ್ಮನ್ನು ಕರೆಯುವಂತೆ ಕಂಡು ಜೈ ಶ್ರೀಕೃಷ್ಣ ಎನ್ನುತ್ತಾ ಸಮುದ್ರವನ್ನು ಹೊಕ್ಕು ಜಲಸಮಾಧಿಯಾದರು ಆತ. ತತ್ತ್ವಜ್ಞಾನದ ಸುವರ್ಣ ಕಲಶಗಳೆರಡಾದ ಜ್ಞಾನೇಶ್ವರಿ ಮತ್ತು ಅಮೃತಾನುಭವವನ್ನು ರಚಿಸಿದ ಮೇಲೆ ಗುರು ನಿವೃತ್ತನಾಥರ ಒಪ್ಪಿಗೆಯೊಂದಿಗೆ ಜ್ಞಾನೇಶ್ವರರು ಭೂಗರ್ಭದಲ್ಲಿ ತಾವೇ ರಚಿಸಿದ ಸಮಾಧಿಯೊಳಗೆ ಸೇರಿಹೋದರು.

              ಸನಾತನ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿ ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದವರು ಸಮರ್ಥ ರಾಮದಾಸರು. ಶಿವಾಜಿ ತೀರಿಕೊಂಡ ಬಳಿಕ ಆತನ ಮಗ ಸಂಭಾಜಿ ಶಿವಾಜಿಯ ನಿಷ್ಠಾವಂತ ಸರದಾರರನ್ನು ಸೆರೆಮನೆಗೆ ತಳ್ಳಿದ್ದ. ಆತ ಸಮರ್ಥ ರಾಮದಾಸರನ್ನು ಕಾಣಲೆಂದು ಸಜ್ಜನಗಢದ ಬುಡದಲ್ಲಿ ನಿಂತು ಪ್ರಾರ್ಥಿಸಿದಾಗ ಆತನಿಂದ ತಮಗೆದುರಾಗಬಹುದಾದ ಅಪಾಯವನ್ನು ಮನಗಂಡು ಸಮರ್ಥರು ತನ್ನ ಆರೋಗ್ಯ ಕ್ಷೀಣವಾಗಿದ್ದು ಕೆಳಗಿಳಿದು ಬರಲು ಅಸಹಾಯಕನಾಗಿರುವುದಾಗಿ ಹೇಳಿ ಅನುಗ್ರಹಿಸುವ ಪತ್ರವನ್ನು ಬರೆದರು. ಅದರಲ್ಲಿ ಶಿವಾಜಿಯ ವ್ಯಕ್ತಿತ್ವ, ಶೌರ್ಯ, ಸೂಕ್ಷ್ಮಗ್ರಹಣಶಕ್ತಿಗಳನ್ನು ನೆನಪಿಸಿಕೊಂಡು ಮ್ಲೇಚ್ಛರನ್ನು ಹೊಡೆದೋಡಿಸಿ, ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು. ಬಳಿಕ ಔರಂಗಜೇಬ ಮರಾಠರ ಮೇಲೆ ಆಕ್ರಮಣ ಮಾಡಲು ಸನ್ನದ್ಧನಾಗಿರುವನೆಂಬ ವಿಷಯ ತಿಳಿದೊಡನೆ ತೀರಾ ದುಃಖಿತರಾದ ಅವರು ತನ್ನ ಕೆಲಸವಿನ್ನಿಲ್ಲಿ ಮುಗಿಯಿತು ಎಂದು ಬಗೆದು ಅನ್ನ ನೀರುಗಳನ್ನು ತ್ಯಜಿಸಿದರು. ಅಚಲಾಸನದಲ್ಲಿ ಮಂಡಿಸಿ ರಾಮಧುನ್ ಹಾಡುತ್ತಾ ಹಾಡುತ್ತಾ ತಮ್ಮ ಪ್ರಾಣವನ್ನು ಪ್ರಭು ಶ್ರೀರಾಮನ ಪದಕಮಲಗಳಿಗೆ ಅರ್ಪಿಸಿದರು. ಇಂದಿಗೂ ಸಮರ್ಥರಾಮದಾಸರು ಆತ್ಮಹತ್ಯೆ ಮಾಡಿಕೊಂಡರು ಎಂದು ಯಾರೂ ಹೇಳುವುದಿಲ್ಲ. ಅದೇ ರೀತಿ ಸಂತ ಏಕನಾಥ ಹಾಗೂ ತುಕಾರಾಮರು ತಮ್ಮ ಐಹಿಕ ಜೀವನ ಕೃತಕೃತ್ಯವಾಯಿತು ಎಂದು ತಿಳಿದೊಡನೆ ಸಂತೃಪ್ತಿಯಿಂದ ಇಹಜೀವನವನ್ನು ತೊರೆದು ಪರಂಧಾಮವನ್ನೈದಿದರು.

            ಇವಾವುದನ್ನೂ ನಾವು ಆತ್ಮಹತ್ಯೆ ಎಂದಿಲ್ಲ. ತಮ್ಮ ಜೀವಿತೋದ್ದೇಶ ಸಫಲವಾಗಿದೆ, ಇನ್ನು ತಾನಿರುವುದೆಂದರೆ ಬರಿಯ ಭೂಭಾರ ಎಂದರಿತ ರಿಕ್ತಕಾಮ ಅಥವಾ ಪೂರ್ಣಕಾಮರಾದ ಪ್ರತಿಯೊಬ್ಬ ಧನ್ಯಪುರುಷರು ಸ್ವಪ್ರೇರಣೆಯಿಂದ ತಮ್ಮ ಪ್ರಾಣ ವಿಸರ್ಜಿಸುತ್ತಾರೆ. ತಮ್ಮ ನಶ್ವರ ಜೀವನವನ್ನು ತೊರೆದು ವಿಶ್ವದ ಚಿರಂತನ ಜೀವನದಲ್ಲಿ ಒಂದಾಗುತ್ತಾರೆ. ಇದನ್ನೇ ಯೋಗವಾಸಿಷ್ಠ "ಅಂತರಿಕ್ತೋ ಬಹಿರಿಕ್ತೋ ರಿಕ್ತ ಕುಂಭ ಇವಾಂಬರೇ| ಅಂತಃಪೂರ್ಣೋ ಬಹಿಃಪೂರ್ಣೋ ಪೂರ್ಣಕುಂಭ ಇವಾರ್ಣವೇ ||" ಎಂದಿದೆ. ತಮ್ಮ ಜೀವನದ ಉದ್ದೇಶವು ಸಾಪೇಕ್ಷತಃ ಪೂರ್ಣವಾಯಿತು ಎಂಬ ಆತ್ಮಸಂತುಷ್ಠಿ ಬಂದ ನಂತರ, ತಮ್ಮ ದೇಹವು ಮುಪ್ಪು, ರೋಗಗಳ ಗೂಡಾಗಿ ಸ್ವಂತಕ್ಕೋ, ಪರಿವಾರಕ್ಕೋ ಅಥವಾ ಸಮಾಜಕ್ಕೋ ಹೊರೆಯಾಗಿ ಉಳಿಯುವಂತಾದಾಗ ಅಗ್ನಿಪ್ರವೇಶವೋ, ಗುಹಾಪ್ರವೇಶವೋ, ಪ್ರಾಯೋಪವೇಶವೋ, ಜಲಸಮಾಧಿಯೋ ಅಥವಾ ಯೋಗ ಸಮಾಧಿಯೋ ಹೀಗೆ ಒಂದಿಲ್ಲೊಂದು ಮಾರ್ಗದಿಂದ ದೇಹವನ್ನು ವಿಸರ್ಜಿಸುವುದು ಆತ್ಮಸಮರ್ಪಣೆಯೇ ಸರಿ ಎನ್ನುತ್ತಾ ಸಾವರ್ಕರ್ ಅವಧೂತ ಉಪನಿಷತ್ ಮತ್ತು ಪಂಚದಶಿಯ ಶ್ಲೋಕವನ್ನು ಉದ್ಧರಿಸುತ್ತಾರೆ:-
"ಧನ್ಯೋಹಮ್ | ಧನ್ಯೋಹಮ್
ಕರ್ತವ್ಯಂ ಮೇ ನ ವಿಧ್ಯತೇ ಕಿಂಚಿತ್ |
ಧನ್ಯೋಹಮ್ | ಧನ್ಯೋಹಮ್
ಪ್ರಾಪ್ತವ್ಯಂ ಸರ್ವಮಧ್ಯ ಸಂಪನ್ನಮ್ ||
-ಮಾಡಬೇಕಾದುದು ಏನೂ ಉಳಿದಿಲ್ಲ. ಗಳಿಸಬೇಕಾದುದೆಲ್ಲವೂ ಸಿಕ್ಕಿದೆ. ನಾನು ಧನ್ಯ, ನಾನು ಧನ್ಯ!"

                    ಆತ್ಮಾರ್ಪಣೆಯ ಬಗೆಗಿನ ಲೇಖನ ಬರೆದ ಮೇಲೆ ಸಾವರ್ಕರ್ ಒಂದೆರಡು ಬಾರಿ ಜಲಸಮಾಧಿಯ ಪ್ರಯತ್ನವನ್ನೂ ಮಾಡಿದರು. ಆದರೆ ಆಪ್ತ ಕಾರ್ಯದರ್ಶಿ ಬಾಳಾರಾವ್ ಅವರ ಇಂತಹಾ ಪ್ರಯತ್ನಗಳನ್ನು ವಿಫಲಗೊಳಿಸಿಬಿಟ್ಟರು. ಬಳಿಕ ತಮ್ಮ ಚಿಕಿತ್ಸೆಗೆ ಮತ್ತು ತಮ್ಮನ್ನು ಕಾಣಲೆಂದು ಬರುತ್ತಿದ್ದ ವೈದ್ಯರೆಲ್ಲರಿಗೂ ಸುಖಸಾವು ಬರುವಂತಹಾ ಔಷಧಿ ಕೊಟ್ಟುಬಿಡಿ ಎಂದರೂ ಅವರ್ಯಾರೂ ನೆರವಾಗಲಿಲ್ಲ. ಮುಂದೆ 1966ರ ಫೆಬ್ರವರಿ 3ರಂದು ಪ್ರಾಯೋಪವೇಶಕ್ಕೆ ಆರಂಭಿಸಿದ ಅವರು ಆಹಾರ, ಚಹಾ, ನೀರು ಹೀಗೆ ಒಂದೊಂದನ್ನೇ ತ್ಯಜಿಸುತ್ತಾ ಕೊನೆಗೆ ವೈದ್ಯರನ್ನೂ ಹತ್ತಿರ ಬರಗೊಡದೆ, "ನಾವು ನಮ್ಮ ಊರಿಗೆ ಹೊರಟಿದ್ದೇವೆ, ನಮ್ಮ ನಮಸ್ಕಾರ ಸ್ವೀಕರಿಸಿ. ಕೊಡುವುದು, ತೆಗೆದುಕೊಳ್ಳುವುದು ಇನ್ನೆಲ್ಲಿ?  ಮಾತು ಮುಗಿಯಿತಿನ್ನು" ಎಂಬ ಸಂತ ತುಕಾರಾಮರ ಪದ್ಯವನ್ನುಚ್ಛರಿಸುತ್ತಾ ಫೆಬ್ರವರಿ 26ರಂದು ಮೂಲನೆಲೆಗೆ ಗೆಳೆಯ ಮೃತ್ಯುವಿನ ಕೈಹಿಡಿದು ನಡೆದೇ ಬಿಟ್ಟರು! ಅದು ಆತ್ಮಾರ್ಪಣೆ.

              ಕಟುಕ ಬ್ರಿಟಿಷರ ಕೆಂಗಣ್ಣಿಗೆ ಬಿದ್ದಾಗ, ಸಾಗರ ಈಜಿದಾಗ, ಅಂಡಮಾನಿನಲ್ಲಿ ಕರಿನೀರ ಶಿಕ್ಷೆಯಲ್ಲಿ ನರಳಿದಾಗ, ವೃದ್ಧಾಪ್ಯದ ಅಶಕ್ತತೆ, ಕಾಯಿಲೆಗಳಿಗೆ ತುತ್ತಾದಾಗ..... ಹೀಗೆ ಪ್ರತೀ ಬಾರಿಯೂ ಅವರು ಮೃತ್ಯುವನ್ನು ಗೆದ್ದರು. ಕೊನೆಗೆ ಮೃತ್ಯುವನ್ನು ಪರಮ ಮಿತ್ರನಂತೆ ಆಲಿಂಗಿಸಿಕೊಂಡು ಮೃತ್ಯುಂಜಯ ಎನ್ನಿಸಿಕೊಂಡರು. ಆದರೆ...ಆದರೆ ಯಾವ ದೇಶಕ್ಕಾಗಿ ತನ್ನದೆಲ್ಲವನ್ನು ಅರ್ಪಿಸಿದ್ದರೋ ಅದೇ ದೇಶ ಅವರಿಗೆ ಬಾರಿ ಬಾರಿಗೂ ಅವಮಾನದ ಸಾವನ್ನು ಕೊಟ್ಟಿತು. ಗಾಂಧಿ ಹತ್ಯೆಯ ಕಳಂಕವನ್ನು ಅವರ ತಲೆಗೆ ಕಟ್ಟಲು ಯತ್ನಿಸಿತು. ಅಹಿಂಸಾವಾದಿಗಳು ಅವರತ್ತ ಕಲ್ಲೆಸೆದರು. ಪಾಕಿಸ್ತಾನದ ಪ್ರಧಾನಿ ಬರುವಾಗಲೂ ಅವರನ್ನು ಬಂಧಿಸಿತು. ದೇಶ ಸ್ವತಂತ್ರಗೊಂಡ ಬಳಿಕವೂ ಒಂದು ರೀತಿಯ ಗೃಹಬಂಧನದಲ್ಲಿ ಇರಿಸಿ ಅವರ ಸುತ್ತ ಗೂಢಚಾರರನ್ನು ಬಿಟ್ಟಿತು. ಯುದ್ಧಪಿಪಾಸು, ಹಿಂದೂ ಉಗ್ರವಾದಿ ಎಂದೆಲ್ಲಾ ಜರೆಯಿತು. ಅವರು ಆತ್ಮಾರ್ಪಣೆ ಮಾಡಿಕೊಂಡ ಬಳಿಕವೂ ಈ ಅವಮಾನದ ಸಾವು ನಿಲ್ಲಲಿಲ್ಲ. ಅಧಿಕೃತ ದಾಖಲೆ ಇಲ್ಲದಿದ್ದರೂ ಅವರ ಕ್ಷಮಾಪಣೆಯೆಂಬ ನಾಟಕವನ್ನೇ ಗುರಿ ಮಾಡಿಕೊಂಡು ಹೇಡಿ ಎಂಬಂತೆ ಜರೆಯಿತು. ಈ ಅವಮಾನವೆಂಬ ಕೊಲೆ ಇವತ್ತಿಗೂ ಮುಂದುವರೆದಿದೆ. ಆದರೆ ಅವರು ಇದಕ್ಕಾಗಿ ಯಾವುದೇ ಪ್ರತೀಕಾರ ಬಯಸಲಿಲ್ಲ. ಬಯಸಿದ್ದರೆ ಅವರು ಇದೆಲ್ಲಕ್ಕೂ ನ್ಯಾಯಾಲಯದಲ್ಲಿ ಮಂಗಳ ಹಾಡಬಹುದಿತ್ತು. ಬಯಸಿದ್ದರೆ ಪ್ರಧಾನಿಯೂ ಆಗಬಹುದಿತ್ತು. ಆದರೆ ಆತ, ಅವರೆಲ್ಲಾ ತನ್ನ ದೇಶವಾಸಿಗಳು ಎಂಬ ಔದಾರ್ಯ ತೋರಿ ಕ್ಷಮಿಸಿಬಿಟ್ಟರು. ಅದು ಅವರ ದೊಡ್ಡಗುಣ, ಅದು ನಿಜವಾದ ಅಹಿಂಸಾಪಾಲನೆ. ಆತ ಎಂತಹಾ ಕಾಲಘಟ್ಟದಲ್ಲೂ, ಎಂತಹಾ ಕ್ಲಿಷ್ಟ ಸನ್ನಿವೇಶದಲ್ಲೂ ತನ್ನ ಸಿದ್ಧಾಂತಪಥದಿಂದ ಬದಿಗೆ ಸರಿಯಲಿಲ್ಲ. ಯಾಕೆಂದರೆ ಅವರು ನಿಜವಾದ ಸ್ವಾತಂತ್ರ್ಯ ವೀರರಾಗಿದ್ದರು. ದೇಶಕ್ಕಾಗಿ ಅವರು ಎಂದೋ ಆತ್ಮಾಹುತಿಗೈದಾಗಿತ್ತು!

ಮಂಗಳವಾರ, ಫೆಬ್ರವರಿ 4, 2020

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

ಸೂಫಿಗಳು ಸಂತರೆಂಬ ಭ್ರಾಂತಿ! ಮರೆಯಾಯ್ತೇ ಹಿಂದೂ ವಿಚಾರಮತಿ?

                  ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಗೌರವ, ಭಕ್ತಿ ಭಾವನೆಗಳಿವೆ. ತಮ್ಮನ್ನು ತಾವು ಜಾತ್ಯಾತೀತ, ಬುದ್ಧಿಜೀವಿ ಎಂದು ಹೇಳಿಕೊಳ್ಳುವ ಅಥವಾ ಕರೆಸಿಕೊಳ್ಳುವವರಿಗಂತೂ ಈ ಸೂಫಿಗಳು ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರದ ಭಾವನೆಗಳಿವೆ. ಅವರು ಮುಲ್ಲಾಗಳಂತಲ್ಲ; ಹಿಂದೂಗಳನ್ನು ಇಷ್ಟಪಡುತ್ತಾರೆ; ಹಿಂದೂ ಧಾರ್ಮಿಕ ಸಾಹಿತ್ಯವನ್ನು ಇಷ್ಟಪಡುತ್ತಾರೆ; ಅಧ್ಯಾತ್ಮದ ಶೋಧದಲ್ಲಿರುವವರು ಎಂದೆಲ್ಲಾ! ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಮತ್ತು ಭಾರತಕ್ಕೆ ಬಂದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಉತ್ತರಪ್ರದೇಶ, ಬಂಗಾಳ, ಪಂಜಾಬ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ.

ಭಾರತದ ಇತಿಹಾಸದ ಗತಿಯನ್ನು ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದವ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನಿಗೆ ಸಹಾಯಕನಾಗಿ ಬಂದವ ಈ ಸೂಫಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಭೋಳೇ ಹಿಂದೂಗಳ ಸ್ನೇಹವನ್ನೂ ಸಂಪಾದಿಸಿದ. ಒಂದಷ್ಟು ಅನುಯಾಯಿಗಳನ್ನು ಪಡೇದುಕೊಂಡ. ರಾಜ್ಯದ ಸಂರಚನೆ, ಇಲ್ಲಿನ ರಾಜರುಗಳ ಯುದ್ಧನೀತಿ, ಅರಸೊತ್ತಿಗೆ ಬದಲಾದರೂ ತನ್ನ ಪಾಡಿಗೆ ತಾನಿರುವ ಸಭ್ಯ ಸಮಾಜವನ್ನೂ ಅರ್ಥೈಸಿಕೊಂಡ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲು ಎಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ ಘೋರಿ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ತರೈನಿನಲ್ಲಿ ತಮ್ಮ ಅರಸ ಕಾಫಿರರನ್ನು ಹೇಗೆ ವಂಚಿಸಿ ಸಾಯಬಡಿದ ಎಂದು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ.  ಮುಂದುವರೆದ ಘೋರಿ ಅಜ್ಮೀರದ ದೇವಾಲಯಗಳನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಈ ದೇವಾಲಯಗಳನ್ನು ನಾಶಪಡಿಸಿದ್ದಕ್ಕಾಗಿ ಚಿಸ್ತಿ ಅಲ್ಲಾನಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾನೆ. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು!

13ನೇ ಶತಮಾನದ ಮೊದಲ ದಶಕದಲ್ಲಿ ದೆಹಲಿಯಲ್ಲಿ ಮೊದಲ ಮುಸ್ಲಿಂ ರಾಜ್ಯದ ಸ್ಥಾಪನೆಯಾಗುತ್ತಲೇ ಅಂದಿನ ಮುಸ್ಲಿಂ ಜಗತ್ತಿನ ಎಲ್ಲೆಡೆಯಿಂದ ಸೂಫಿಗಳು ಭಾರತಕ್ಕೆ ಬರಲಾರಂಭಿಸಿದರು. ಇಸ್ಲಾಮೀ ಆಕ್ರಮಣದ ವಿರುದ್ಧ ದಂಗೆಯೆದ್ದ ಮಂಗೋಲರು ಅವರದ್ದೇ ಭಾಷೆಯಲ್ಲಿ ತಿರುಗಿ ಉತ್ತರ ಹೇಳಲಾರಂಭಿಸಿದ ಬಳಿಕವಂತೂ ಇರಾನ್, ಇರಾಕ್, ಟ್ರಾನ್ಸೋಕ್ಸಿಯಾನ್, ಖುರಾಸಾನ್ ಪ್ರಾಂತ್ಯಗಳಿಂದ ಸೂಫಿಗಳು, ಮುಲ್ಲಾಗಳು ಜೀವ ಉಳಿಸಿಕೊಳ್ಳಲು ಭಾರತಕ್ಕೆ ಓಡಿ ಬಂದರು. ಆದರೆ ವಿಚಿತ್ರವೆಂದರೆ ಮಂಗೋಲರ ದೌರ್ಜನ್ಯವನ್ನು ತಮ್ಮ ದುಷ್ಕರ್ಮಗಳಿಗೆ ಸಿಕ್ಕ ಫಲ ಎಂದು ವ್ಯಾಖ್ಯಾನಿಸುವ ಬದಲು "ಇಸ್ಲಾಮಿನ ಭಕ್ತಿಯಿಂದ ದೂರ ಸರಿದ ಕಾರಣ ಅಲ್ಲಾ ತಮ್ಮ ಮೇಲೆ ಸಿಟ್ಟುಗೊಂಡಿದ್ದಾನೆ" ಎಂದು ವ್ಯಾಖ್ಯಾನಿಸಿದ ಅವರ ಮತಾಂಧತೆಯ ಕ್ರೌರ್ಯವನ್ನು ಅನುಭವಿಸಿದ್ದು ಆಶ್ರಯಕೊಟ್ಟ ಹಿಂದೂಗಳು! ಮುಂದಿನೆರಡು ಶತಮಾನಗಳಲ್ಲಿ ಮಧ್ಯೋತ್ತರ ಭಾರತದ ದೇವಾಲಯ ಹಾಗೂ ಚೈತ್ಯಾಲಯಗಳ ಅವಶೇಷಗಳ ಮೇಲೆ ಮಸೀದಿ, ಮದ್ರಸಾ, ಖಾಂಕಾಗಳು ಎದ್ದು ನಿಂತವು!

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು, ಪಾಶುಪತ ಮಠವನ್ನೂ ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

             ಅಹ್ಮದ್ ಸಿರ್ಹಿಂದಿ(1564-1624) ಓರ್ವ ಸೂಫಿ. "ಖಡ್ಗದ ಮೂಲಕ ಷರೀಯತ್ತಿನ ಪ್ರಸಾರ ಸಾಧ್ಯ" ಎಂದು ಘೋಷಿಸುತ್ತಿದ್ದ. ಇದನ್ನು S.A.A. ರಿಜ್ವಿ 1965ರಲ್ಲಿ ಬರೆದ "ಮುಸ್ಲಿಮ್ ರಿವೈವಲಿಸ್ಟ್ ಮೂವ್ ಮೆಂಟ್ ಇನ್ ನಾರ್ಥರ್ನ್ ಇಂಡಿಯಾ ಇನ್ ದಿ 16th & 17 th ಸೆಂಚುರಿ" ಪುಸ್ತಕದಲ್ಲಿ ಓದಬಹುದು. ಈತ ಆ ಕಾಲದಲ್ಲಿ ಬಲಶಾಲಿಯಾಗಿದ್ದ ಹಲವು ದೇಶಗಳಿಗೆ ಪತ್ರಗಳನ್ನು ಬರೆಯುತ್ತಿದ್ದ. ಕೆಲ ಪತ್ರಗಳ ಮಾದರಿಗಳನ್ನು ನೋಡಿ... "ಕುಫ್ರ್ ಮತ್ತು ಕಾಫಿರರನ್ನು ಅವಮಾನಿಸುವುದರಲ್ಲೇ ಇಸ್ಲಾಮಿನ ಗೌರವವಿದೆ. ಕಾಫಿರರನ್ನು ಗೌರವಿಸುವವನು ಮುಸ್ಲಿಮರನ್ನು ಅವಮಾನಿಸಿದಂತೆ. ಅವರ ಮೇಲೆ ಜೆಜಿಯಾವನ್ನು ಹೇರುವುದರ ಉದ್ದೇಶ ಅವರಿಗೆ ಚೆನ್ನಾಗಿ ಬಟ್ಟೆ ಧರಿಸಲು ಮತ್ತು ಅದ್ದೂರಿಯಾಗಿ ಬದುಕಲು ಸಾಧ್ಯವಾಗದಂತೆ ಮಾಡುವುದೇ ಆಗಿದೆ. ಅವರು ಯಾವಾಗಲೂ ಭಯಗ್ರಸ್ತರಾಗಿ ನಡುಗುತ್ತಲೇ ಇರಬೇಕು. ಅವರನ್ನು ತಿರಸ್ಕಾರದಿಂದ ನೋಡಬೇಕು. ಇಸ್ಲಾಮಿನ ಗೌರವ ಸಾಮರ್ಥ್ಯಗಳನ್ನು ಎತ್ತಿ ಹಿಡಿಯುವುದೇ ಇದರ ಉದ್ದೇಶ."
"ಭಾರತದಲ್ಲಿ ಗೋವಧೆ ಅತ್ಯಂತ ಶ್ರೇಷ್ಠವಾದ ಮುಸ್ಲಿಂ ಆಚರಣೆಯಾಗಿದೆ. ಕಾಫಿರರು ಜೆಜಿಯಾವನ್ನಾದರೂ ಪಾವತಿಸಿಯಾರು; ಆದರೆ ಗೋವಧೆಗೆ ಎಂದೂ ಒಪ್ಪಲಾರರು". "ಹಿಂದೂಗಳು ಪೂಜಿಸುವ ರಾಮಕೃಷ್ಣ ಕ್ಷುದ್ರ ಜಂತುಗಳು. ಅವರ ತಂದೆ ತಾಯಿಗಳಿಗೆ ಮಾಮೂಲಾಗಿ ಹುಟ್ಟಿದವರು. ರಾಮನಿಗೆ ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಹೀಗಿರುವಾಗ ಬೇರೆಯವರನ್ನು ಅವನು ಹೇಗೆ ರಕ್ಷಿಸಿಯಾನು? ರಾಮ ಮತ್ತು ರಹಮಾನರು ಸಮಾನರೆಂದು ತಿಳಿಯುವುದು ನಾಚಿಕೆಗೇಡು. ಸೃಷ್ಟಿಕರ್ತ ಹಾಗೂ ಒಂದು ಜಂತು ಸಮಾನರಾಗುವುದು ಅಸಂಭವ" "ಕಾಫಿರರಿಗೆ ಹೃದಯದಿಂದ ಶಪಿಸುವುದರ ಜೊತೆಗೆ ದೈಹಿಕವಾಗಿಯೂ ಹಲ್ಲೆ ನಡೆಸಬೇಕು" ಈತನಿಗೂ ಈಗಿನ ಮತಭ್ರಾಂತ ಭಯೋತ್ಪಾದಕ ಝಕೀರ್ ನಾಯಕ್'ನಿಗೂ ಏನು ವ್ಯತ್ಯಾಸವಿದೆ? ಜಹಾಂಗೀರನು ಗುರು ಅರ್ಜುನ ದೇವರನ್ನು ಚಿತ್ರಹಿಂಸೆ ಕೊಟ್ಟು ಕೊಂದ ಬಳಿಕ "ಶಾಪಗ್ರಸ್ಥ ಕಾಫಿರನಾದ ಗೋಬಿಂದವಲ್ ನನ್ನು ವಧಿಸಿದ್ದೊಂದು ಪ್ರಮುಖ ಸಾಧನೆಯಾಗಿದ್ದು, ಹಿಂದೂಗಳ ಮಹತ್ವದ ಸೋಲಿಗೆ ಅದೇ ಕಾರಣ" ಎಂದು ಈತ ಅವನನ್ನು ಪ್ರಶಂಸಿಸಿದ್ದ. 1620ರಲ್ಲಿ ಜಹಾಂಗೀರ್ ಕಾಂಗ್ರಾ ಕೋಟೆಗಳನ್ನು ಗೆದ್ದು ಅಲ್ಲಿನ ದೇವಾಲಯಗಳನ್ನು ನೆಲಸಮ ಮಾಡಿ ಗೋವಧೆಗೈದು, ಮಸೀದಿ ಕಟ್ಟಿಸುವ ಮೂಲಕ ವಿಜಯೋತ್ಸವ ಆಚರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿ ಬರೆದ ಪತ್ರದಲ್ಲಿ "...ಸ್ವತಃ ಬಂದು ಆ ಕಲ್ಲುಗಳನ್ನು ತುಂಡರಿಸಬೇಕೆಂದು ನನಗೆ ಆಶೆಯಿತ್ತು. ಆದರೆ ನನ್ನ ವೃದ್ಧ್ಯಾಪ್ಯದಿಂದಾಗಿ ಬರಲಾಗಿಲ್ಲ" ಎಂದಿದ್ದ! ಸೆಕ್ಯುಲರ್ಗಳು ಶಾಂತಿಯುತ ಎಂದು ಸದಾ ಹೊಗಳುವ ಮುಸ್ಲಿಮ್ ಸಮಾಜದಲ್ಲಿ ಈತನನ್ನು ಶಾ ವಲಿಯುಲ್ಲಾನಿಗೆ ಸಮನಾದ ಅತ್ಯುಚ್ಛ ಸೂಫಿ ಹಾಗೂ ಇಸ್ಲಾಮಿನ ಮತಪಂಡಿತ ಎಂದು ಪರಿಗಣಿಸಲಾಗುತ್ತಿದೆ! ಮೌಲಾನ ಅಬುಲ್ ಕಲಾಮ್ ಆಜಾದ್ ತನ್ನ "ತಾಝ್ ಕಿರಾ"ದಲ್ಲಿ ಸಿರ್ಹಿಂದಿಯ ಬಗೆಗೆ "ಈ ಪತ್ರಗಳನ್ನು ಬರೆಯದಿದ್ದರೆ ಮುಸ್ಲಿಂ ಅಮೀರರು ಇಸ್ಲಾಂನಿಂದ ದೂರ ಸರಿಯಬಹುದಿತ್ತು. ಭಾರತದಲ್ಲಿ ಇಸ್ಲಾಮ್ ಬದಿಗೆ ಸರಿಯುವ ಅಪಾಯವಿತ್ತು" ಎಂದು ಬರೆದಿದ್ದಾನೆ. ಮಾತ್ರವಲ್ಲ ಈ ಪತ್ರಗಳು ಹಾಗೂ ಇಂತಹಾ ಹಲವಾರು ಸೂಫಿಗಳ, ಇಸ್ಲಾಮ್ ಮುಲ್ಲಾಗಳ ಪತ್ರಗಳ ಸಂಗ್ರಹವನ್ನು ಪ್ರಕಟಿಸಿದ ಕೆ.ಎ ನಿಜಾಮಿ ಅದನ್ನು ಮೌಲಾನ ಅಬುಲ್ ಕಲಾಮ್ ಆಜಾದ್ಗೆ ಅರ್ಪಿಸಿದ್ದಾನೆ. ಆಜಾದ್ ಅದಕ್ಕೆ ಉತ್ತರಿಸಿದ್ದು ಹೀಗೆ:-"ಈ ಪತ್ರಗಳನ್ನು ಪ್ರಕಟಿಸುವ ಅರ್ಹತೆ ನಿಮಗೆ ಪ್ರಾಪ್ತವಾದುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ. ಇಂತಹದ್ದೇ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸುವ ಸಾಮರ್ಥ್ಯವನ್ನು ಅಲ್ಲಾ ನಿಮಗೆ ದಯಪಾಲಿಸಲಿ ಎಂದು ಹೃದಯಂತರಾಳದಿಂದ ಪ್ರಾರ್ಥಿಸುತ್ತೇನೆ". ವಿಪರ್ಯಾಸ ಏನೆಂದರೆ ಈತ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವ! ಕಾಂಗ್ರೆಸ್ಸಿನಲ್ಲಿ ಎಂತಹಾ "ಕಟ್ಟಾ ರಾಷ್ಟ್ರವಾದಿಗಳು" ಇದ್ದರೆಂಬುದಕ್ಕೆ ಇದು ನಿದರ್ಶನ!

ಮುಸ್ಲಿಮರು ಅತ್ಯಂತ ಗೌರವದಿಂದ ಕಾಣುವ ಷಾಹ್ ವಲಿಯುಲ್ಲಾನ ಕಾಲದಲ್ಲಿ ಭಾರತದಲ್ಲಿ ಇಸ್ಲಾಮ್ ಸಾಮ್ರಾಜ್ಯವನ್ನು ಮರಾಠಾ ಕೇಸರಿ ಪಡೆ ಒಂದು ದಿಕ್ಕಿನಿಂದ ಹಾಗೂ ವೀರ ಜಾಟ್ ಪಡೆ ಇನ್ನೊಂದು ದಿಕ್ಕಿನಿಂದ ಕುಕ್ಕಿ ಕುಕ್ಕಿ ತಿನ್ನುತ್ತಿದ್ದ ಕಾರಣ ಅದು ದುರ್ಬಲಗೊಂಡು ಅವಸಾನದ ಅಂಚಿಗೆ ತಲುಪಿತ್ತು. ಈ ಬಗೆಗಿನ ವ್ಯಥೆಯಿಂದ ಆತ ಹೊರದೇಶಗಳ ಮುಸ್ಲಿಂ ರಾಜರಿಗೆ ಭಾರತವನ್ನು ಆಕ್ರಮಿಸುವಂತೆ ಪತ್ರಗಳನ್ನು ಬರೆದ. "...ಹಿಂದೂಸ್ಥಾನ ಮುಸ್ಲಿಮೇತರರ ಕೈವಶವಾಗಿದೆ. ಅಧಿಕಾರಿ ಹುದ್ದೆಗಳಲ್ಲಿ ಹಿಂದೂಗಳೇ ತುಂಬಿದ್ದಾರೆ. ಮರಾಠರು ಹಾಗೂ ಜಾಟರು ಹಲಾವಾರು ಕೋಟೆಗಳನ್ನು ವಶಪಡಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಲಾಢ್ಯರಾಗಿದ್ದಾರೆ. ಈ ಕಾಲದಲ್ಲಿ ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಈ ಹಿಂದೂ ರಾಜರನ್ನು ಸೋಲಿಸಿ ನೆಲಕಚ್ಚಿರುವ ಮುಸ್ಲಿಮರಿಗೆ ಮರು ಅಧಿಕಾರ ವಹಿಸಿಕೊಡುವುದು ತಮ್ಮಿಂದಲ್ಲದೇ ಬೇರಾರಿಂದಲೂ ಅಸಾಧ್ಯ. ಮತ್ತದು ತಮ್ಮ ಕರ್ತವ್ಯ(ಫರ್ಜ್-ಇ-ಐನ್)ವಾಗಿದೆ. ಕಾಫಿರರ ಬಲ ಇದೇ ರೀತಿ ಮುಂದುವರೆದರೆ ಮುಸ್ಲಿಮರು ಇಸ್ಲಾಮನ್ನು ತ್ಯಜಿಸಬಹುದು. ನೀವು ಶತ್ರುಗಳ ಮೇಲೆ ದಂಡೆತ್ತಿ ಬರುವುದರಿಂದ ನಿಮ್ಮ ಹೆಸರು ಮುಜಾಹಿದೀನ್ ಫಿ ಸಬಿಲಲ್ಲಾ (ಅಲ್ಲಾನ ಸೇವಕರಾದ ಯೋಧರು)ಗಳ ಪಟ್ಟಿಗೆ ಸೇರುತ್ತದೆ..." ಎನ್ನುವ ವಿಸ್ತಾರವಾದ ಪತ್ರವನ್ನು ಅಪ್ಘಾನಿಸ್ತಾನದ ಅಹಮದ್ ಶಾ ಅಬ್ದಾಲಿಗೆ ಬರೆದು ಭಾರತವನ್ನು ಆಕ್ರಮಿಸುವಂತೆ ಆಹ್ವಾನಿಸಿದ. ಅಲ್ಲದೆ ಅಬ್ದಾಲಿಯ ಭಾರತೀಯ ಸ್ನೇಹಿತರಾದ ನಜೀಬುದ್ದೌಲ, ಶೇಖ್ ಮೊಹಮ್ಮದ್ ಅಶೀಕ್, ಷಾಹ್ ಮೊಹಮ್ಮದ್ ಪಹಲ್ತಿ, ಮೊಹಮ್ಮದ್ ಖಾನ್ ಬಲೂಚ್ ಮೊದಲಾದವರಿಗೂ ಯಾವ ರೀತಿ ಈ ಜಿಹಾದಿನಲ್ಲಿ ನೆರವೀಯಬೇಕೆಂದು ಹಲವಾರು ಪತ್ರಗಳನ್ನು ಬರೆದ. ಇವನ ಒತ್ತಾಸೆಯಿಂದಲೇ ಅಬ್ದಾಲಿ ಭಾರತಕ್ಕೆ ಬಂದು ಮರಾಠರನ್ನು ಮೂರನೇ ಪಾಣಿಪತ್ ಯುದ್ಧದಲ್ಲಿ(1761) ಸೋಲಿಸಿದ್ದು. ಈತನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ!

ದರೋಡೆಕೋರನಾಗಿದ್ದು ಕೆಲಸ ಮಾಡಿ ತಿನ್ನಲು ಸೋಮಾರಿತನ ಆವರಿಸಿ ಖಲೀಫಾನೆಂದು ಉದ್ಘೋಷಿಸಿಕೊಂಡು ಮುಜಾಹಿದೀನ್ಗಳನ್ನು ಬೆಳೆಸಿ ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟು ಬಾಲಾಕೋಟ್ ಎಂಬ ಭಯೋತ್ಪಾದಕರ ಸ್ವರ್ಗ ಕಟ್ಟಿ ಇಂದಿನ ಭಯೋತ್ಪಾದಕರಿಗೆ ಮಾತ್ರವಲ್ಲ ಎಲ್ಲಾ ಮುಸ್ಲಿಮರಿಗೆ ಆದರ್ಶನೆನಿಸಿಕೊಂಡ ಬರೈಲಿಯ ಸಯ್ಯದ್ ಅಹ್ಮದ್ ಬರೇಲ್ವಿ ಈ ಅಜೀಜನ ಶಿಷ್ಯ. ತನ್ನ ಹೋರಾಟ ಬ್ರಿಟಿಷರ ವಿರುದ್ಧ ಎನ್ನುತ್ತಾ ಹಿಂದೂ ರಾಜರುಗಳಿಂದ ಹಣವನ್ನೂ ಪಡೆದುಕೊಂಡು, ಹಿಂದೂಗಳ ವಿರುದ್ಧವೇ ಜಿಹಾದ್ ಘೋಷಿಸಿದ ಈತ ಬಲೂಚಿಸ್ತಾನ, ಅಫ್ಘಾನಿಸ್ತಾನಗಳಲ್ಲಿ ಹಿಂಬಾಲಕರನ್ನು ಗಿಟ್ಟಿಸಿಕೊಂಡು ರಾಜಾ ರಣಜಿತ್ ಸಿಂಗನ ವಿರುದ್ಧ ಜಿಹಾದೀ ದಂಗೆಯೆಬ್ಬಿಸಿದ ಈತ. ರಣಜಿತ್ ಸಿಂಹನನ್ನು ಸೋಲಿಸಲಾಗದ ಬ್ರಿಟಿಷರು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಚಯನ ಮಾಡುತ್ತಿದ್ದ ಈತನಿಗೆ ಭದ್ರತೆಯನ್ನೂ ಒದಗಿಸಿದರು. ಅಂತಿಮವಾಗಿ ರಣಜಿತ್ ಸಿಂಹನ ಸೇನಾಧಿಪತಿ ಶೇರ್ ಸಿಂಗನ ಖಡ್ಗಕ್ಕೆ ಬಲಿಯಾದ ಈತನ ಹೆಸರಲ್ಲಿ ಸೂಫಿ ಶಾಖೆಯೇ ಬೆಳೆದಿದೆ. ಮೊನ್ನೆ ಮೊನ್ನೆ ಭಾರತದಿಂದ ಸರ್ಜಿಕಲ್ ಸ್ಟ್ರೈಕ್-2 ಗೊಳಗಾದ ಬಾಲಾಕೋಟ್ ಇವತ್ತಿಗೂ ಜಿಹಾದೀಗಳಿಗೆ ಪೂಜನೀಯ ಹಾಗೂ ಆಶ್ರಯ ತಾಣ!

ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ. ಸೋಮನಾಥವನ್ನು ನಾಶಪಡಿಸಲು ಮೊಹಮ್ಮದ್ ಘಜ್ನಿಯ ಮನವೊಲಿಸಿದ್ದು ಆತನ ಸೋದರಳಿಯನಾಗಿದ್ದ ಶಾಹಿದ್ ಸಲಾರ್ ಮಸೂದ್ ಘಾಜಿ ಎನ್ನುವ ಸೂಫಿ. ಆತ ತನ್ನ ತಂದೆಯ ಜೊತೆಗೂಡಿ ಭಾರತದ ಅನೇಕ ಕಡೆ ಸಂಚರಿಸಿ ದೇವಾಲಯಗಳನ್ನು ಕೆಡಹಿ ಅಲ್ಲಿ ಮಸೀದಿಗಳನ್ನೂ, ಹಿಂದೂಗಳ ವಿರುದ್ಧ ಹೋರಾಡಿ ಸತ್ತವರಿಗೆ ಸಮಾಧಿಗಳನ್ನೂ ನಿರ್ಮಿಸಿದ. ಅವುಗಳಲ್ಲಿ ಕೆಲವನ್ನು ಇಂದಿಗೂ ಪವಿತ್ರ ಸ್ಥಳಗಳೆಂಬಂತೆ ಹಿಂದೂಗಳೂ ಪೂಜಿಸುತ್ತಿದ್ದಾರೆ! ಮುಸ್ಲಿಮ್ ಆಕ್ರಮಣಕಾರರ ತುಕಡಿಯೊಟ್ಟಿಗೆ ಬಂದು ದೆಹಲಿಯಲ್ಲಿ ಹಲವು ಜನರನ್ನು ಮತಾಂತರಿಸಿದ ಹಜರತ್ ಖ್ವಾಜಾ ನಿಜಾಮುದ್ದೀನ್ ಔಲಿಯಾನಿಗೆ ದೆಹಲಿಯಲ್ಲಿ ದರ್ಗಾವೇ ಇದೆ. ದೆಹಲಿಯ ರೈಲು ನಿಲ್ದಾಣಕ್ಕೆ ಆ ಮತಾಂತರಿ, ಆಕ್ರಮಣಕಾರಿಯ ಹೆಸರಿನ್ನಿಡಲಾಗಿದೆ!

              ಪ್ರಸಿದ್ಧ ಸೂಫಿ ಅಮೀರ್ ಖುಸ್ರು "ಹಿಂದೂ ರಾಜರು ಸೋತಾಗ ಅವರನ್ನು ಆನೆಗಳ ಕಾಲ್ತುಳಿತಕ್ಕೆ ಒಳಪಡಿಸಲಾಯಿತು" ಎಂದು ಸಂತೋಷದಿಂದ ಬರೆಯುತ್ತಾನೆ. ಚಿತ್ತೋರಿನ ವಿಜಯದ ಬಳಿಕ 30ಸಾವಿರ ಹಿಂದೂಗಳನ್ನು ಹತ್ಯೆಗೈಯಲು ಖಿಜ್ರ್ ಖಾನ್ ನೀಡಿದ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ ಆತ "ಇದು ಅಲ್ಲಾನ ಸ್ತುತಿ" ಎಂದೂ, ಮಲ್ಲಿಕಾಫರನು ದಕ್ಷಿಣದ ದೇಗುಲಗಳನ್ನು ನಾಶಪಡಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾ "ಬ್ರಾಹ್ಮಣರು ಮತ್ತು ವಿಗ್ರಹಾರಾಧಕರ ರುಂಡಗಳು ಕುತ್ತಿಗೆಯಿಂದ ನರ್ತಿಸಿ ಕೆಳಕ್ಕೆ ಬಿದ್ದು ರಕ್ತದ ಕಾಲುವೆಯೇ ಹರಿಯಿತು, ಇದು ಇಸ್ಲಾಮಿನ ವಿಜಯ" ಎಂದೂ ಬರೆದ. ಭಾರತದಲ್ಲಿ ಇಸ್ಲಾಮಿನ ವಿಜಯವನ್ನು ಆತ ವರ್ಣಿಸಿದ್ದು ಹೀಗೆ:- "ಇಡೀ ದೇಶ, ನಮ್ಮ ಪವಿತ್ರ ಯೋಧರ ಕತ್ತಿಯ ಮೂಲಕ, ಅದರ ಮುಳ್ಳುಗಳನ್ನು ಬೆಂಕಿಯಿಂದ ನಿರಾಕರಿಸಿದ ಕಾಡಿನಂತೆ ಮಾರ್ಪಟ್ಟಿದೆ. ಇಸ್ಲಾಂ ವಿಜಯಶಾಲಿಯಾಗಿದೆ, ವಿಗ್ರಹಾರಾಧನೆಯು ಅಧೀನವಾಗಿದೆ. ಕಾನೂನು , ಜೆಜಿಯಾ ಪಾವತಿಸುವ ಮೂಲಕ ಸಾವಿನಿಂದ ವಿನಾಯಿತಿ ನೀಡದಿದ್ದರೆ, ಹಿಂದೂಸ್ಥಾನವೆಂಬ ಹೆಸರು, ಅದರ ಮೂಲ ಮತ್ತು ಶಾಖೆಗಳನ್ನು ನಂದಿಸಬಹುದಿತ್ತು."

               ಅಲ್ಲಾವುದ್ದೀನ್ ಖಿಲ್ಜಿಯ ಸೈನ್ಯದ ಜೊತೆ ದಕ್ಷಿಣಕ್ಕೆ ಬಂದ ಮಾಬರಿ ಖಂಡಾಯತ್ ದಖ್ಖನ್ನಿನಲ್ಲಿ(1305) ಹಲವಾರು ಹಿಂದೂ ಸೈನಿಕರನ್ನು ಸ್ವತಃ ಕೊಂದನಲ್ಲದೆ ಬಹು ಸಂಖ್ಯೆಯ ಹಿಂದೂಗಳನ್ನು ಹಾಗೂ ಜೈನರನ್ನು ಮತಾಂತರ ಮಾಡಿದ. ಈತ ಬಿಜಾಪುರದಲ್ಲಿದ್ದ ಬ್ರಾಹ್ಮಣರನ್ನು ಓಡಿಸಿ ಉಳಿದವರ ಮತಾಂತರಕ್ಕೆ ತೊಡಗಿದ. ಸದಾ ಒಂದು ಕಬ್ಬಿಣದ ರಾಡ್ ಹಿಡಿದು ಕಾಫಿರರ ತಲೆ ಒಡೆದ, ಮತಾಂತರ ಮಾಡಿದ ಈತನಿಗೆ ಅದೇ ಕಾರಣಕ್ಕೆ ಖಂಡಾಯತ್ (ಅಂದರೆ ಮೊಂಡಾದ ರಾಡ್) ಎಂಬ ಹೆಸರು ಸೇರಿಕೊಂಡು ಪೀರ್ ಮಾಬರಿ ಖಂಡಾಯತ್ ಎಂದೇ ಕುಖ್ಯಾತನಾದ. ದಕ್ಷಿಣ ಪಂಜಾಬಿನಲ್ಲಿ ನಡೆದ ಮತಾಂತರದ ಹಿಂದೆ ಮುಲ್ತಾನಿನ ಬನ ಅಲ್ ಹಕ್ ಹಾಗೂ ಬಾಬಾ ಫರೀದ ಎಂಬಿಬ್ಬರು ಸೂಫಿಗಳ ಕೈವಾಡವಿತ್ತು. ಝಾಂಗ್ ಜಿಲ್ಲೆಯಲ್ಲಿ ಶೇಖ್ ಫರೀದ್, ಕಛ್ ಪ್ರಾಂತ್ಯದಲ್ಲಿ ಸೈಯದ್ ಅಬ್ದುಲ್ ಖಾದಿರ್ ಗಿಲಾನಿ ಹಾಗೂ ಆತನ ಶಿಷ್ಯ ಸೈಯದ್ ಯೂಸುದ್ದೀನ್, ಬಾಂಬೆ ಪ್ರೆಸಿಡೆನ್ಸಿಯ ನೇಕಾರರ ಮತಾಂತರದ ಹಿಂದೆ ಸೈಯದ್ ಮುಹಮ್ಮದ್ ಗೆಸು ದರಾಜ್, ಉ.ಪ್ರ.ದ ಬುದೌನ್ ಜಿಲ್ಲೆಯಲ್ಲಿ ಗೌಳಿಗರ ಮತಾಂತರ ಹಿಂದೆ ಶೇಖ್ ಜಲಾಲುದ್ದೀನ್ ತಬ್ರಿಜಿ ಎಂಬ ಸೂಫಿಗಳಿದ್ದರು. ಇನ್ನು ಕೆಲವು ಸೂಫಿಗಳು ಇಸ್ಲಾಂನಿಂದಲೇ ದೂರ ಸರಿದು ಬೋಧಿಸಲು ಪ್ರಾರಂಭಿಸಿದಾಗ ಅಥವಾ ತಾನು ದೇವರ ಪ್ರವಾದಿ ಎಂದು ಹೇಳಿಕೊಂಡಾಗ ಅಂತಹಾ ಸೂಫಿಗಳು ಮುಸ್ಲಿಮರಿಂದಲೇ ಕೊಲ್ಲಲ್ಪಟ್ಟರು. ಸೂಫಿ ಶೇಖ್ ರುಕ್ನುದ್ದೀನ್, ಇಮಾಮ್ ಗಜ್ಜಾಲಿಯಂಥವರು ಇದಕ್ಕೆ ಉದಾಹರಣೆ.

            ಇವು ಕೆಲವು ಸೂಫಿಗಳ ಕೃತ್ಯದ ಕೆಲವು ತುಣುಕುಗಳಷ್ಟೇ. ಇಂತಹಾ ಹಲವಿವೆ. ಇವರೆಲ್ಲರ ಕುಕೃತ್ಯಗಳನ್ನು ಅವರೇ ಸ್ವತಃ ಬರೆದಿಟ್ಟರೂ, ಅಥವಾ ಆಗಿನ ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದರೂ ಅಂತಹವುಗಳನ್ನು ಮರೆಮಾಚಿ ಸೂಫಿಗಳೆಂದರೆ ದೇವಮಾನವರು, ಮಹಾನ್ ತಾಂತ್ರಿಕರು ಎಂದು ಆಧುನಿಕ ಇತಿಹಾಸ ಪುಸ್ತಕಗಳಲ್ಲಿ ಬರೆದು ಪೀಳಿಗೆಗಳಿಗೇ ಉರು ಹೊಡೆಸಲಾಗಿದೆ. ಅದಕ್ಕೆ ಸೆಕ್ಯುಲರ್ ಸರಕಾರಗಳ ಅಭಯ"ಹಸ್ತ" ಬೇರೆ! ರಿಚರ್ಡ್ ಮ್ಯಾಕ್ಸ್ ವೆಲ್ ಬರೆದ(1978, ಪ್ರಿನ್ಸ್ ಟನ್) "ಸೂಫಿಸ್ ಆಫ್ ಬಿಜಾಪುರ್:1300-1700" ಅಂತೂ ಇಲ್ಲಿನ "ಸೆಕ್ಯುಲರ್" ಸರಕಾರದಿಂದ ನಿಷೇಧಿಸಲ್ಪಟ್ಟಿತ್ತು! ಸೀತಾರಾಂ ಗೋಯಲರು ಹಲವು ಸೂಫಿಗಳ ನಿಜ ಇತಿಹಾಸವನ್ನು ಅನಾವರಣ ಮಾಡಿದ್ದಾರೆ. ಸೂಫಿ ಸಂತರು ಇಸ್ಲಾಮೀ ಸಾಮ್ರಾಜ್ಯಶಾಹಿಯ ಬೇಹುಗಾರರಾಗಿ ಕೆಲಸ ಮಾಡಿದರು. ಜೊತೆಗೆ ಹಿಂದೂಗಳಿಗೆ ದ್ರೋಹವನ್ನೂ ಬಗೆದರು ಎಂದು ಸೀತಾರಾಮ್ ಗೋಯಲರು ಬರೆದಿದ್ದಾರೆ.  ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!

ಆ ಯುದ್ಧಕ್ಕೆ 350 ವರ್ಷಗಳು! ಅದು ಕೇಸರಿ ಪಡೆಯ ಸರ್ಜಿಕಲ್ ಸ್ಟ್ರೈಕ್!


           ಧ್ಯಾನಾಸಕ್ತಳಾಗಿದ್ದ ಜೀಜಾ ಮಾತೆಗೆ ಕಂಡಿತು ಬೋಳಾಗಿ ನಿಂತಿದ್ದ ದುರ್ಗಮ ಕೊಂಡಾಣ. ತಕ್ಷಣವೇ ಮಗ ಶಿವಾಜಿಗೆ ತನ್ನನ್ನು ಕೂಡಲೇ ಕಾಣಬೇಕೆಂದು ಹೇಳಿಕಳುಹಿದಳು. ತಾಯಿ ಮಗನಿಗೆ ರಾಜಕಾರ್ಯದಲ್ಲಿ ಸಲಹೆ ಸೂಚನೆ ನೀಡುತ್ತಿದ್ದಳು. ಹಾಗಾಗಿ ಏನೋ ರಾಜಕಾರ್ಯವಿರಬೇಕೆಂದು ಶಿವಾಜಿ ರಾಯಗಢದಿಂದ ಓಡೋಡಿ ಬಂದ. ಬಂದವನೇ "ಕೊಂಡಾಣದಲ್ಲಿ ಮುಗಿಲೆತ್ತರಕ್ಕೆ ಭಗವಾಧ್ವಜ ಹಾರಬೇಕು" ಎಂದ ತಾಯಿಯ ಮಾತಿಗೆ ಒಮ್ಮೆಗೆ ಬೆಚ್ಚಿಬಿದ್ದ. ಅದಕ್ಕೆ ಹಲವು ಕಾರಣಗಳಿದ್ದವು.

           ಕೊಂಡಾಣ, ಸಹ್ಯಾದ್ರಿಯ ಶ್ರೇಣಿಯ ಪೂರ್ವ ಭಾಗದಲ್ಲಿ ಸ್ಥಿತವಾಗಿದ್ದ ದುರ್ಗಮ ಕೋಟೆ. ಅದರ ಸುತ್ತಲೂ ಎರಡು ಮೈಲುಗಳಷ್ಟು ದೂರ ಕರಿಗಲ್ಲಿನ ನೈಸರ್ಗಿಕ ರಚನೆ! "ಕತ್ತಲೂ ಕಗ್ಗತ್ತಲೂ| ಸಿಂಹಗಡದ ಕೋಟೆಯ ಸುತ್ತಲು| ಎತ್ತಲೂ ಎತ್ತೆತ್ತಲೂ” ಎಂದು ಕವಿವರ್ಯನೊಬ್ಬ ಕೊಂಡಾಣವನ್ನು ವರ್ಣಿಸಿದ್ದಾನೆ. ಅದಕ್ಕೆ ಹೋಗಲಿದ್ದುದು ಒಂದೇ ದಾರಿ. ಅದು ನೇರವಾಗಿ ದುರ್ಗಕ್ಕಿದ್ದ ಏಕ, ಮುಖ್ಯದ್ವಾರವನ್ನು ಸೇರುತ್ತಿತ್ತು. ಬಹು ಎತ್ತರದಲ್ಲೂ ಇದ್ದುದರಿಂದ ಸುತ್ತಮುತ್ತಲ ಪ್ರದೇಶಗಳನ್ನು, ಬಹಳ ದೂರದವರೆಗಿನ ಚಲನವಲನಗಳನ್ನು ಅಲ್ಲಿದ್ದುಕೊಂಡೇ ವೀಕ್ಷಿಸಬಹುದಿತ್ತು. ಕಡಿದಾದ ಬೆಟ್ಟ, ಕಿರಿದಾದ, ಕೊರಕಲಾದ ದುರ್ಗಮ ದಾರಿ, ಕೋಟೆಯ ಎತ್ತರ ಹಾಗೂ ಅದನ್ನು ಹತ್ತಲು ಅಸಾಧ್ಯವಾದಂತಹಾ ರಚನೆ ಆ ಕೋಟೆಗೆ ವಿಶೇಷ ರಕ್ಷಣೆಯನ್ನು ನೀಡಿತ್ತು. ಅದರ ಜೊತೆಗೆ ಕೋಟೆಯ ಉಸ್ತುವಾರಿಯನ್ನು ಮೊಘಲರ ಪರವಾಗಿ ವಹಿಸಿದ್ದಾತ ಹಲವು ಯುದ್ಧಗಳನ್ನು ಗೆದ್ದ ಅನುಭವವಿದ್ದ ರಜಪೂತ ಸೇನಾನಿ ವೀರ ಉದಯಭಾನು. ಕೋಟೆಯೊಳಗೆ ಅಪಾರ ಪ್ರಮಾಣದ ಆಹಾರ ದಾಸ್ತಾನು, ಶಸ್ತ್ರಾಸ್ತ್ರಗಳೂ ಇದ್ದವು. ಇಂತಹಾ ದುರ್ಗಮ ಕೋಟೆಯನ್ನು ಗೆಲ್ಲುವುದೆಂದರೆ ಅದ್ಭುತವಾದ ಪರಾಕ್ರಮವನ್ನೇ ಮೆರೆಯುವುದರ ಮೊದಲು ಜೀವ ಸಹಿತ ಕೋಟೆಯವರೆಗೆ ತಲುಪುವುದೂ ಹಾಗು ಕೋಟೆ ಏರುವುದೇ ಮಹತ್ಸಾಧನೆಯೆನಿಸುತ್ತಿತ್ತು. ಇದು ಶಿವಾಜಿಗಿದ್ದ ಒಂದು ಚಿಂತೆಯಾಗಿತ್ತು. ಆ ದುರ್ಗಮ ಕೋಟೆ ಗೆಲ್ಲುವ ಸಾಮರ್ಥ್ಯ ಶಿವಾಜಿ ಪಾಳಯದಲ್ಲಿ ಇದ್ದಿದ್ದು ತಾನಾಜಿಗೆ ಮಾತ್ರ. ಕರೆಸೋಣ ಅಂದರೆ ತಾನಾಜಿಯ ೧೩ ವರ್ಷದ ಮಗ ರಾಯಬಾನ ಮದುವೆ. ಮದುವೆಯ ಸಂಭ್ರಮದಲ್ಲಿರುವವನನ್ನು ಯುದ್ಧಕ್ಕೆ ಹೋಗು ಅನ್ನುವುದಾದರೂ ಹೇಗೆ? ಇತ್ತ ತಾಯಿಯ ಆಜ್ಞೆ ಅತ್ತ ರಾಯಬಾನ ಮದುವೆ ಎಂಬ ಉಭಯಸಂಕಟಕ್ಕೆ ಒಳಗಾದ ಶಿವಾಜಿ.  ಅದರ ಜೊತೆಗೆ ತಾಯಿಯ ಜೊತೆ ಮಾತುಕತೆಗಾಗಿ ಬಂದಾಗ ಆಡಿದ ಚದುರಂಗದಾಟದಲ್ಲಿ ಸೋತದ್ದು ಅಪಶಕುನವೇನೋ ಎಂಬ ಖಿನ್ನತೆಯೂ ಶಿವಾಜಿಯನ್ನಾವರಿಸಿತು.

            ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ತಾನಾಜಿಗೆ ಕರೆ ಕಳುಹಿದ ಶಿವಾಜಿ. ಶಿವಾಜಿಯ ಕರೆ ಬಂದೊಡನೆ ಎಪ್ಪತ್ತು ವರ್ಷ ಪ್ರಾಯದ ತಾನಾಜಿಯ ಭುಜ ಕುಣಿಯಿತು. ಉತ್ಸಾಹದ ಬುಗ್ಗೆಯಾದ ಆತ ತನ್ನ ಮಾವಳಿ ಸಂಗಡಿಗರೊಡನೆ ಬಂದು ಅಪ್ಪಣೆ ಕೇಳಿದ. ಶಿವಾಜಿಯೂ, ಜೀಜಾ ಮಾತೆಯು "ಮಗನ ಮದುವೆ ಮುಗಿಯಲಿ" ಎಂದಾಗಲೂ ಕೇಳದೆ "ತಾಯಿ ಮೊದಲು ಕೊಡಾಣದ ಮದುವೆ. ನಂತರ ನನ್ನ ಮಗನ ಮದುವೆ ಆದರಾಯಿತು. ರಾಯಬಾ ಮಹಾರಾಜ ಶಿವಾಜಿಗೂ ಮಗನ ಸಮಾನ ತಾನೇ. ಹಾಗಾಗಿ ನನ್ನ ಮಗನ ಮದುವೆ ಅವನೇ ಮಾಡಲಿ. ಕೊಂಡಾಣದ ಮದುವೆ ನಾನು ಮಾಡುವೆ" ಎನ್ನುತ್ತಾ ರಣವೀಳ್ಯ ಪಡೆದೇ ಬಿಟ್ಟ.

              ಮಾಘ ಮಾಸದ ಅಮವಾಸ್ಯೆಯ ದಿನ. ಕಗ್ಗತ್ತಲ ರಾತ್ರಿ, ಅಸಾಧ್ಯವಾದ ಚಳಿ, ತೋಳಗಳ ಅರಚಾಟ, ನರಿ-ನಾಯಿಗಳು ಊಳಿಡುತ್ತಿದ್ದವು. ಮರಾಠ ಸಿಂಹಗಳು ಒಂದೊಂದಾಗಿ ಕಡಿದಾದ ಬೆಟ್ಟ ಏರುತ್ತಿದ್ದವು. ಬೆಟ್ಟವನ್ನೇನೋ ಏರಿದ್ದಾಯಿತು. ಕೋಟೆಯೇರುವುದು ಹೇಗೆ? ತಾನಾಜಿ ತಾನು ಸಾಕಿದ್ದ ಉಡ ಯಶವಂತಿಯನ್ನೂ ತನ್ನೊಂದಿಗೆ ಕರೆತಂದಿದ್ದ. ಗೂಡಿನಿಂದ ಅದನ್ನು ಹೊರಬಿಟ್ಟು, ಹಣೆಗೆ ಕುಂಕುಮ ಹಚ್ಚಿ "ಅತ್ಯುತ್ಸಾಹದಿಂದ ಮಹಾರಾಜರು ತಡೆ ಎಂದರೂ ಹಠಬಿಡದೆ ರಣವೀಳ್ಯ ಪಡೆದು ಬಂದಿದ್ದೇನೆ. ಇಷ್ಟರವರೆಗೆ ಮಹಾರಾಜರು ನನ್ನ ಮೇಲಿಟ್ಟಿರುವ ಭರವಸೆ ಮುಕ್ಕಾಗದಂತೆ ಸೆಣಸಿದ್ದೇನೆ. ಇಂದಿನ ನನ್ನ ಗೆಲುವು ನಿನ್ನ ಗೆಲುವನ್ನು ಅವಲಂಬಿಸಿದೆ. ಏರು ಯಶವಂತಿ, ಕೋಟೆಯೇರುವಲ್ಲಿ ಯಶಸ್ವಿಯಾಗು ಎಂದು ನಮಸ್ಕರಿಸಿ ಪ್ರಾರ್ಥಿಸಿ, ಉಡದ ಉದರಕ್ಕೆ ಹಗ್ಗ ಕಟ್ಟಿ ಕೋಟೆ ಏರುವಂತೆ ಸಂಜ್ಞೆ ಮಾಡಿದ. ಯಶವಂತಿ ಕೋಟೆಯನ್ನು ಸರಸರನೆ ಏರಿದಳು. ಕಡಿಮೆ ತೂಕವುಳ್ಳ ಮರಾಠಾ ವೀರನೊಬ್ಬ ಆ ಹಗ್ಗ ಹಿಡಿದು ಮೇಲೇರಿದ. ಬಳಿಕ ಇಳಿಬಿಟ್ಟ ಹಗ್ಗ ಹಿಡಿದು ಮುನ್ನೂರು ಶಿವಸೈನಿಕರು ಕೋಟೆಯ ತುದಿ ತಲುಪಿಯೇ ಬಿಟ್ಟರು.

              ಅಷ್ಟರಲ್ಲಿ ಎಚ್ಚರಗೊಂಡ ಕಾವಲುಗಾರರಿಗೆ ಕೋಟೆಯ ಮೇಲೆ ಮರಾಠ ವೀರರನ್ನು ಕಂಡು ಗಲಿಬಿಲಿಗೊಂಡರು. ಸಾವರಿಸಿಕೊಂಡು ಅಪಾಯದ ಗಂಟೆ ಬಾರಿಸಿದರು. ಕೋಟೆಯೊಳಗೆ ರಜಪೂತರು, ಪಠಾಣರು, ಅಪ್ಘನ್, ಅರಬ್ ಸೈನಿಕರು ಸುಮಾರು ಸಾವಿರಕ್ಕಿಂತಲೂ ಅಧಿಕವಿದ್ದರು. ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಬೇರೆ. ಆದರೆ ದಿಢೀರ್ ದಾಳಿಯಿಂದ ಅವರು ಕಂಗೆಟ್ಟಿದ್ದರು. ಜೊತೆಗೆ ಗೋದಾಮಿಗೂ ಬೆಂಕಿ ಬಿತ್ತು. ತಾನಾಜಿ ಮಾಲಸುರೆಯೆಂಬ ವೀರ ಕೇಸರಿಯ ಆಕ್ರಮಣಕ್ಕೆ ಕೊಂಡಾಣ ಅಕ್ಷರಶಃ ನಡುಗಿತ್ತು. ಮಾವಳಿ ವೀರರ ಖಡ್ಗಕ್ಕೆ ಪಠಾಣರು ಆಹುತಿಯಾದರೆ ಒಟ್ಟಾಗಿ ತಾನಾಜಿಯ ಮೇಲೆ ಮುಗಿಬಿದ್ದ ಉದಯಭಾನುವಿನ ದ್ವಾದಶ ಪುತ್ರರ ರಕ್ತದ ರುಚಿಯನ್ನು ತಾನಾಜಿಯ ಖಡ್ಗ ಸವಿದಿತ್ತು. ಅವರೆಲ್ಲರೂ ಸತ್ತು ಬಿದ್ದಾಗ ಕೋಟೆಯ ಪೂರ್ವಭಾಗವೂ ಮರಾಠ ಕೇಸರಿಗಳ ವಶವಾದೊಡನೆ ರಾಯಗಢದಿಂದ ಬಂದಿದ್ದ ಮತ್ತಷ್ಟು ಯೋಧರು ತಾನಾಜಿಯನ್ನು ಕೂಡಿಕೊಂಡರು. ಉದಯಭಾನು ಸ್ವತಃ ತನ್ನ ಮದ್ದಾನೆ ಅಮರಾವತಿಯನ್ನು ತಾನಾಜಿಗೆದುರಾಗಿ ನುಗ್ಗಿಸಿದಾಗ ತಾನಾಜಿ ಆನೆಯ ಬೆನ್ನ ಮೇಲೆ ಜಿಗಿದು ಅದರ ಸೊಂಡಿಲು ಕತ್ತರಿಸಿದ. ರಕ್ತವು ಛಿಲ್ಲೆಂದು ಹಾರುತ್ತಿರುಂತೆ ಆನೆ ಕುಸಿದು ಬಿದ್ದು ಮಣ್ಣ ಮುದ್ದೆಯಾಯಿತು. ಹೀಗೆ ಅಭಿಮನ್ಯುವಿನ ತೆರದಿ ತಾನಾಜಿ ಮೊಘಲ್ ಸೈನ್ಯವನ್ನು ನುಚ್ಚುನೂರು ಮಾಡುತ್ತಿದ್ದಾಗ ತಾನಾಜಿಯ ಮೇಲೆ ಅನಿರೀಕ್ಷಿತವಾಗಿ ಕತ್ತಿ ಏಟೊಂದು ಬಿತ್ತು. ಅವನ ಕೈ ಕತ್ತರಿಸಲ್ಪಟ್ಟಿತು. ಗುರಾಣಿಯೂ ಕಳೆದು ಹೋಯಿತು. ಆ ಕೈಗೆ ಬಟ್ಟೆ ಸುತ್ತಿ ರಣಭಯಂಕರವಾಗಿ ಕಾದು ಉದಯಭಾನುವನ್ನು ನಿತ್ರಾಣನನ್ನಾಗಿಸಿದ ಆತ. ಆದರೆ ಗುರಾಣಿಯಿಲ್ಲದೆ ಹೆಚ್ಚಿನ ಕತ್ತಿಯೇಟುಗಳು ಆತನ ದೇಹಕ್ಕೇ ಬೀಳುತ್ತಿದ್ದುದರಿಂದ ಆ ಗಾಯಗಳಿಂದ ಬಹಳಷ್ಟು ರಕ್ತ ಹೊರ ಹೋಗಿ ತಾನಾಜಿಯ ದೇಹ ನೆಲಕ್ಕುರುಳಿತು. ಅವನ ಜೊತೆಗೆ ಇನ್ನಷ್ಟು ಮರಾಠ ವೀರರು ಬಲಿಯಾಗಿ ಇನ್ನೇನು ಉದಯಭಾನುವಿನ ಕೈಮೇಲಾಗುತ್ತದೆ ಅನ್ನಿಸಿದಾಗ ತಾನಾಜಿಯ ಸೋದರನ ಖಡ್ಗ ಉದಯಭಾನುವಿನ ಉದರವನ್ನು ಬಗಿದು ಹೊರಬಂತು. (ಕೆಲವು ಇತಿಹಾಸಕಾರರ ಪ್ರಕಾರ ತಾನಾಜಿಯೇ ಉದಯಭಾನುವನ್ನು ಸಂಹರಿಸಿದ; ಹಾಗೆಯೇ ತಾನಾಜಿಯ ಸೋದರನ ಹೆಸರಿನ ಬಗೆಗೂ ಭಿನ್ನಾಭಿಪ್ರಾಯಗಳಿವೆ). ಕೊಂಡಾಣ ಹಿಂದೂ ಕೇಸರಿಗಳ ವಶವಾಯಿತು.

           ಶಿವಾಜಿ ಮಹಾರಾಜರಿಗೆ ಕೊಂಡಾಣವನ್ನು ಗೆದ್ದ ಶುಭ ಸುದ್ದಿ ತಲುಪಿತು. ಜೊತೆಗೇ ತಾನಾಜಿ ಹುತಾತ್ಮನಾದ ಸುದ್ದಿಯೂ. ತಾನಾಜಿಯ ಹೌತಾತ್ಮ್ಯಕ್ಕೆ ಮಮ್ಮಲ ಮರುಗಿದ ಶಿವಾಜಿ ತಾನಾಜಿಯ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು “ಗಢ್ ಆಲಾ, ಪಣ್ ಸಿಂಹ ಗೇಲಾ” (ಕೋಟೆಯೇನೋ ಬಂತು ಆದರೆ ಸಿಂಹವೇ ಹೊರಟುಹೋಯಿತು) ಎ೦ದು ಉದ್ಗರಿಸಿ ಬಿಕ್ಕಿ ಬಿಕ್ಕಿ ಅತ್ತ. ಕೋಟೆ ಗೆದ್ದ ಸ೦ತೊಷವನ್ನು ತಾನಾಜಿಯ ಸಾವು ನು೦ಗಿ ಹಾಕಿತ್ತು. ತಾನಾಜಿಯ ಮನೆಯವರಿಗೆ ಹೇಗೆ ಸಮಧಾನಿಸಲಿ ಎನ್ನುವಿನ್ನೊಂದು ಚಿಂತೆ ಶಿವಾಜಿ ಮಹಾರಾಜರ ಎದೆಯನ್ನು ಇರಿಯುತ್ತಿತ್ತು. ಹೇಗಿತ್ತು ತಾನಾಜಿಯ ಮನೆಯ ಸ್ಥಿತಿ ಆಗ? ಅದನ್ನು ದಿವಂಗತ ವಿದ್ಯಾನಂದ ಶೆಣೈಯವರು ವಿವರಿಸುವಾಗ ಕಣ್ಣಾಲಿಗಳು ತುಂಬಿ ಬರುತ್ತವೆ.
"ಮನೆಯಲ್ಲಿ ಮಂಗಲ ಕಾರ್ಯ, ತಂದೆಯ ಸ್ಮಶಾನ ಯಾತ್ರೆ!
ಮಗ ಹಸೆಮಣೆ ಏರಿದ, ತಂದೆ ಚಿತೆ ಏರಿದ!
ಸೊಸೆ ತಾಳಿ ಕಟ್ಟಿಕೊಂಡಳು, ಅತ್ತೆ ಮಾಂಗಲ್ಯ ಬಿಚ್ಚಿಟ್ಟಳು!
ಒಂದೇ ಮನೆಯಲ್ಲಿ!"

            ಆದರೆ ತಾನಾಜಿಯ ದೇಹವನ್ನು ಅವನ ಮನೆಗೆ ತೆಗೆದುಕೊ೦ಡು ಹೋದ ಶಿವಾಜಿಗೆ ತಾನಾಜಿಯ ತಾಯಿ ಹೇಳುತ್ತಾಳೆ... "ಮಹಾರಾಜಾ ಆ ಮಗನಿಗಾಗಿ ನಾನು ಅಳುವುದಿಲ್ಲ. ನನ್ನ ಮಗ ಹಿಂದೂ ಸಾಮ್ರಾಜ್ಯಕ್ಕಾಗಿ ದುಡಿದು ಕೋಟೆಯನ್ನು ಗೆದ್ದು ನಿನಗೆ ಒಪ್ಪಿಸಿ ವೀರಸ್ವರ್ಗ ಪಡೆದ. ಅದಕ್ಕಾಗಿ ನನಗೆ ಗರ್ವವಿದೆ, ಹೆಮ್ಮೆಯಿದೆ. ಒ೦ದು ಸಿ೦ಹ ಹೋದರೇನು? ಇನ್ನೆರಡು ಸಿಂಹಗಳು ಅವನ ಸ್ಥಾನ ತುಂಬು ತ್ತವೆ" ಎಂದು ಕಿರಿಮಗ ಸೂರ್ಯಾಜಿ ಹಾಗೂ ಆಗಷ್ಟೇ ಮದುವೆಯಾಗಿದ್ದ ಮೊಮ್ಮಗ ರಾಯಬಾರ ಕೈಗಳನ್ನು ಶಿವಾಜಿಯ ಕೈಮೇಲೆ ಇಡುತ್ತಾಳೆ. ಉಘೇ ಉಘೇ ವೀರಮಾತೆಗೆ, ವೀರಭೂಮಿಗೆ! ಆ ತಾಯಿಗೆ ತಲೆಬಾಗಿ ನಮಸ್ಕರಿಸಿದ ಶಿವಾಜಿ. ತಾನಾಜಿಗೆ ಕೊಂಡಾಣದಲ್ಲಿಯೇ ಸಮಾಧಿ ಮಾಡಿ ಅದಕ್ಕೆ ಅವನ ನೆನಪಿಗಾಗಿ ಸಿಂಹಗಢ ಎಂದು ಹೆಸರಿಟ್ಟ ಶಿವಾಜಿ. ಅದಿಂದು ನಮ್ಮ ತೀರ್ಥಕ್ಷೇತ್ರ. ಹೌದು ಅದೊಂದು ಸರ್ಜಿಕಲ್ ಸ್ಟ್ರೈಕ್. ದುರ್ಗಮವಾದ, ಎಂಥವರಿಗೂ ಅಸಾಧ್ಯವಾಗಿದ್ದ ಶತ್ರುವಿನ ಗುಹೆಯೊಳಕ್ಕೆ ಹೊಗ್ಗಿ ಆತನನ್ನು ಹೊಡೆದದ್ದು ಮಾತ್ರವಲ್ಲ ಆ ನೆಲೆಯನ್ನೇ ಶಾಶ್ವತವಾಗಿ ತನ್ನದಾಗಿಸಿಕೊಂಡದ್ದು. ಅದು ಮೊಘಲ್ ಸಾಮ್ರಾಜ್ಯದ ಜಂಘಾಬಲವನ್ನೇ ಉಡುಗಿಸಿತು. ತಾನಾಜಿಯ ವೀರಗಾಥೆ, ಬಲಿದಾನ ಮರಾಠರ ಲಾವಣಿಗಳಲ್ಲಿ ನಲಿಯಿತು(ಬಲ್ಲಾಡ್ ಆಫ್ ಸಿಂಹಗಢ್). ಪುರಂದರ ಒಪ್ಪಂದದಲ್ಲಿ ಕಳೆದುಕೊಂಡಿದ್ದ ಕೋಟೆಗಳನ್ನೆಲ್ಲಾ ಮುಂದಿನ ಕೆಲವೇ ತಿಂಗಳುಗಳಲ್ಲಿ ಶಿವಾಜಿ ಗೆದ್ದುಕೊಳ್ಳುವಂತೆ ಮಾಡಿತು.. ಮುಂದಿನ ನಾಲ್ಕು ವರ್ಷಗಳಲ್ಲಿ ಶಿವಾಜಿಯನ್ನು ಛತ್ರಪತಿಯನ್ನಾಗಿಸಿ ವಿಶಾಲ ಹಿಂದೂ ಸಾಮ್ರಾಜ್ಯಕ್ಕೆ ಮುನ್ನುಡಿ ಬರೆಯಿತು. ಔರಂಗಜೇಬನ ಮದಾಂಧತೆ, ಮತಾಂಧತೆ, ಮತಾಂತರಗಳ ವಿರುದ್ಧ ಹಿಂದೂ ಸ್ವಾಭಿಮಾನವನ್ನು ಎತ್ತಿ ಹಿಡಿದು ನಿಲ್ಲಿಸಿತು. ಭಾರತಕ್ಕೆ ಭಾರತವೇ ಮೀಸೆ ಬೋಳಿಸಿಕೊಳ್ಳದಂತೆ ಪರಾಕ್ರಮ ಮೆರೆಯಲು ಪ್ರೇರಣೆಯಾಯಿತು.

            ಸ್ವಾತಂತ್ರ್ಯ ವೀರ ಸಾವರ್ಕರ್ "ಬಾಜೀಪ್ರಭು" ಎನ್ನುವ ಗೀತೆಯೊಂದನ್ನು ರಚಿಸಿ ತಾನಾಜಿಯನ್ನು ಕೀರ್ತಿಸಿದ್ದಾರೆ. ಮತ್ತದು ಬ್ರಿಟಿಷರಿಂದ ನಿಷೇಧಕ್ಕೊಳಪಟ್ಟಿತ್ತು! ಈಗ ತಾನಾಜಿ ಬಗೆಗಿನ ಚಲನಚಿತ್ರವೊಂದು ಬಂದಿದೆ. ತನ್ನ ಮಿತಿಯಲ್ಲಿ ಅದು ತಾನಾಜಿಯ ವೀರಗಾಥೆಯನ್ನು ವರ್ಣಿಸಿದೆ. ಇದು ದೇಶ ಬದಲಾಗುತ್ತಿರುವ ಲಕ್ಷಣ. ಭಗವಾ ಸಿಂಹಗಢದಲ್ಲಿ ಮಾತ್ರವಲ್ಲ, ಹಿಂದಿನಂತೆ ಭಾರತಾದ್ಯಂತ ಹಾರಾಡುವ ಕಾಲ ಬರಲಿರುವ ಮುನ್ಸೂಚನೆ.