ಪುಟಗಳು

ಮಂಗಳವಾರ, ನವೆಂಬರ್ 29, 2016

ಯಾರು ಮಹಾತ್ಮ? ಭಾಗ-೨೬

ಯಾರು ಮಹಾತ್ಮ?
ಭಾಗ-೨೬


          ಬಸವಳಿದಿತ್ತು ಬ್ರಿಟನ್. ಎರಡನೇ ವಿಶ್ವಯುದ್ಧದಲ್ಲಿ ಅದು ಗೆಲುವನ್ನೇನೋ ಪಡೆದಿತ್ತು. ಆದರೆ ಯುದ್ಧಕ್ಕೆ ಮುನ್ನ ಸೂರ್ಯ ಮುಳುಗದ ನಾಡಾಗಿದ್ದ ಬ್ರಿಟನ್ನಿನಲ್ಲಿ ಯುದ್ಧದ ತರುವಾಯ ಅಕ್ಷರಶಃ ಕತ್ತಲು ಆವರಿಸಿತ್ತು. ಕಲ್ಲಿದ್ದಲು ಉತ್ಪಾದನೆ ದಶಕಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು. ಹಾಗಾಗಿ ಬ್ರಿಟನ್ನಿನ ಹಲವು ಭಾಗಗಳಲ್ಲಿ ದಿನದ ಬಹುತೇಕ ಸಮಯ ವಿದ್ಯುತ್ತೇ ಇರುತ್ತಿರಲಿಲ್ಲ. ವಿಜಯವೇನೋ ಸಿಕ್ಕಿತ್ತು. ಆದರೆ ಆ ವಿಜಯಕ್ಕಾಗಿ ಬ್ರಿಟನ್ ತೆತ್ತ ಬೆಲೆ ಅಪಾರ! ಲಂಡನ್ನಿನ ಬೀದಿಗಳು ಗಬ್ಬು ನಾರುತ್ತಿದ್ದವು. ಕೈಗಾರಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಬೊಕ್ಕಸ ಬರಿದಾಗಿತ್ತು. ಸಾಲ ತುಂಬಲೂ ಹಣ ಇಲ್ಲದಂತಾಗಿತ್ತು. ಇಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದರು. ಬೀದಿಗಳು ಬಿಕೋ ಅನ್ನುತ್ತಿದ್ದವು. ಜನರು ಕಳಾಹೀನರಾಗಿದ್ದರು. ಜನರ ಅಶನ ವಸನಾದಿಗಳು ಎಂಟು ವರ್ಷಗಳ ಯುದ್ಧದ ಪರಿಣಾಮವನ್ನು ಸಾರಿ ಹೇಳುತ್ತಿದ್ದವು.

          ಸತತ ಎಂಟನೇ ವರ್ಷವೂ ಸರಕಾರ ಕೊಡಮಾಡುವ ಪಡಿತರದಲ್ಲೇ ಬದುಕಬೇಕಾದ ಅನಿವಾರ್ಯ ಅಸಹಾಯಕ ಸ್ಥಿತಿಯಲ್ಲಿ ಲಂಡನ್ನಿಗರಿದ್ದರು. ಆಹಾರ, ಇಂಧನ, ಪಾನೀಯ, ವಿದ್ಯುತ್, ಶೂ ಹಾಗೂ ಬಟ್ಟೆಗಳಿಗಾಗಿ ಜನ ಪಡಿತರವನ್ನೇ ಆಶ್ರಯಿಸಿದ್ದರು. ಆಟಿಕೆಗಳ ಮೇಲೆ ಸರಕಾರ ನೂರು ಶೇಖಡಾ ಖರೀದಿ ತೆರಿಗೆ ವಿಧಿಸಿತ್ತು. ಲಂಡನ್ನಿನ ಯಾವ ಅಂಗಡಿಯನ್ನು ನೋಡಿದರೂ "ಇಲ್ಲ" ಎನ್ನುವ ಒಕ್ಕಣೆಯುಳ್ಳ ಬೋರ್ಡುಗಳೇ ರಾರಾಜಿಸುತ್ತಿದ್ದವು. ಆಲೂಗಡ್ಡೆ, ಮಾಂಸ, ಸಿಗರೇಟಿಗೂ ತತ್ವಾರ ಉಂಟಾಗಿತ್ತು. ಬ್ರಿಟನ್ ಅರ್ಥಶಾಸ್ತ್ರಜ್ಞ ಜಾನ್ ಮೇಯ್ನಾರ್ಡ್ 1946ರಲ್ಲಿ ಹೇಳಿದ್ದ "ನಮ್ಮದು ಬಡ ದೇಶ. ಅದರಂತೆ ಬದುಕುವುದನ್ನು ಕಲಿಯಬೇಕಾಗಿದೆ" ಎನ್ನುವ ಮಾತುಗಳೇ ಸದಾ ಬ್ರಿಟಿಷರ ತಲೆಯಲ್ಲಿ ಗುಂಯ್ಗುಡುತ್ತಿದ್ದವು. 1947ರ ಹೊಸವರ್ಷದ ಬೆಳಗನ್ನು ಚಹಾ ಹೀರುವ ಮೂಲಕ ಸ್ವಾಗತಿಸೋಣವೆಂದರೆ ಒಂದು ಲೋಟ ಬಿಸಿ ನೀರಿಗೂ ಇಂಗ್ಲೆಂಡಿಗರಿಗೆ ತತ್ವಾರವಾಗಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)

          ಮಹಾಯುದ್ಧದ ಸಂದರ್ಭವನ್ನು ವೀರ ಸಾವರ್ಕರ್ ಸಲಹೆಯಂತೆ ಸದುಪಯೋಗಪಡಿಸಿಕೊಂಡು ರಾಸ್ ಬಿಹಾರಿ ಬೋಸರಿಂದ ಸೇನಾಧಿಪತ್ಯ ಪಡೆದು ಸುಭಾಷ್ ಬ್ರಿಟಿಷರನ್ನು ಒದ್ದೋಡಿಸಲು ಭಾರತದತ್ತ ಮುನ್ನುಗ್ಗುತ್ತಿದ್ದರು. ಶತಮಾನಗಳಿಂದಲೂ ಮತ್ತೆ ಮತ್ತೆ ಎದ್ದು ಬರುತ್ತಿದ್ದ ಕ್ರಾಂತಿಯ ಕಿಡಿ, ಸುಭಾಷ್ ಹಾಗೂ ಐ.ಎನ್.ಎ.ಯ ಭಯ ಹಾಗೂ ಅದರಿಂದ ಭಾರತೀಯ ಸೇನೆಯಲ್ಲಿ ಎದ್ದ ಕಿಚ್ಚು, ಮಹಾಯುದ್ಧದಿಂದ ಇಂಗ್ಲೆಂಡಿನಲ್ಲಿ ಉಂಟಾಗಿದ್ದ ದುರ್ಭರ ಸನ್ನಿವೇಶ ಬ್ರಿಟಿಷರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದವು. "ಸಶಸ್ತ್ರ ಕ್ರಾಂತಿ ಮತ್ತು ಇತಿಹಾಸದ ಶಕ್ತಿಗಳಿಂದ ಹೊರದಬ್ಬಿಸಿಕೊಳ್ಳುವ ಬದಲು ಭಾರತವನ್ನು ತ್ಯಜಿಸುವುದೇ ಮೇಲು" ಎನ್ನುವ ನಿರ್ಣಯಕ್ಕೆ ಅನಿವಾರ್ಯವಾಗಿ ಬರಲೇಬೇಕಾಯಿತು. ಇದು ವಾಸ್ತವ. ವಿಪರ್ಯಾಸವೆಂದರೆ ಅಸಂಗತ, ಅಸಮರ್ಪಕ, ಅರೆಬೆಂದ ವಿಚಾರಧಾರೆಯ, ನಿರ್ದಿಷ್ಟ ಗುರಿಯಿಲ್ಲದ, ನಿರ್ಣಾಯಕವೂ ಅಲ್ಲದ ಗಾಂಧಿಯ ಚಳವಳಿಗಳೇ ಸ್ವಾತಂತ್ರ್ಯಕ್ಕೆ ಕಾರಣ ಎನ್ನುವ ಇತಿಹಾಸದ ವಿರೂಪವೇ ಎಲ್ಲೆಡೆ ನರ್ತಿಸುತ್ತಿದೆ.

             ಸುಭಾಷರ ಸಾಹಸ ಹಾಗೂ ಬಳಿಕದ ಐ.ಎನ್.ಎ ಸೈನಿಕರ ವಿಚಾರಣೆ ಭಾರತೀಯ ಸೈನಿಕರಲ್ಲಿ ಕ್ರಾಂತಿಯ ಕಿಡಿ ಹಚ್ಚಿತ್ತು. ದೇಶವಾಸಿಗಳು ಸಿಡಿದೆದ್ದಿದ್ದರು. ಐ.ಎನ್.ಎ ವಿಚಾರಣೆ ಖಂಡಿಸಿ 1946ರಲ್ಲಿ ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತಿತರ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ವೈಸ್ ರಾಯ್ ನಿರ್ಣಯದಂತೆ ಐ.ಎನ್.ಎ ಯ ಸೈನಿಕರ ಗಡೀಪಾರು ಶಿಕ್ಷೆಯನ್ನು ರದ್ದುಮಾಡಿ ಕ್ಷಮಾದಾನ ನೀಡಲಾಯಿತು. ಅದೇ ಸಂದರ್ಭದಲ್ಲಿ ರಾಯಲ್ ನೇವಿಯ 3000 ಸೈನಿಕರು ಬಂಡೆದ್ದರು. ಬಾಂಬೆ ಸಿಗ್ನಲ್ ಶಾಲೆಯ ಸೈನಿಕರು ಬ್ರಿಟಿಷ್ ಕಮಾಂಡರುಗಳು ಭಾರತದ-ರಾಷ್ಟ್ರೀಯತೆಯ ವಿರುದ್ಧ ಮಾಡುತ್ತಿದ್ದ ಅವಹೇಳನಕರವಾದ ತಾತ್ಸಾರದ ನುಡಿಗಳು, ವೇತನ, ಅಸಮರ್ಪಕ ಆಹಾರ ಹಾಗೂ ಜನಾಂಗೀಯ ಪಕ್ಷಪಾತದ ವಿರುದ್ಧ 1945 ಆಗಸ್ಟಿನಲ್ಲಿ ಉಪವಾಸ ಶುರು ಮಾಡಿದರು. ಆ ಸಂದರ್ಭದಲ್ಲಿ ಕಮಾಂಡರ್ ಕಿಂಗ್ ಎನ್ನುವ ಉಸ್ತುವಾರಿ ಅಧಿಕಾರಿಯೊಬ್ಬ ಸೈನಿಕರನ್ನು ಉದ್ದೇಶಿಸಿ ಅವರ ಬಗ್ಗೆ, ಅವರ ಹೆತ್ತವರ ಬಗ್ಗೆ ಅಸಭ್ಯ ಭಾಷೆಯಲ್ಲಿ ಮಾತಾಡಿದ. ಮುಷ್ಕರ ಎಪ್ಪತ್ನಾಲ್ಕು ಹಡಗುಗಳಿಗೆ, ಇಪ್ಪತ್ತು ಸಾಗರ ನೆಲೆಗಳಿಗೆ ಹಬ್ಬಿತು. ಮೂರೇ ದಿನಗಳಲ್ಲಿ ಬ್ರಿಟಿಷ್ ಆಡಳಿತ ಭಾರತೀಯ ಸೇನೆಯ ಮೇಲಿನ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು. ನೌಕಾದಳದ ಸೈನಿಕರು ಇಪ್ಪತ್ತು ಹಡಗುಗಳ ಮೇಲೆ ನಿಯಂತ್ರಣ ಸಾಧಿಸಿದರು. ಸೇನಾ ಕಾವಲುಗಾರರ ಮೇಲೆ ಗುಂಡು ಹಾರಿಸಲು ಸಿದ್ಧರಾದರು. ಗನ್ ಹಾಗೂ ವಿಮಾನಗಳನ್ನು ವಶಪಡಿಸಿಕೊಳ್ಳಲಾಯಿತು. ಅಡ್ಮಿರಲ್ ಗಾಡ್ ಫ್ರೇಯ ಮನವೊಲಿಸುವ ಮಾತುಗಳೂ ವಿಫಲವಾದವು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮಾತನ್ನು ಲೆಕ್ಕಿಸದೆ ಪ್ರತಿಭಟನೆ ಆರಂಭವಾಯಿತು. ಜನ ಬ್ಯಾಂಕ್, ಅಂಚೆಕಛೇರಿ, ಪೊಲೀಸ್ ಠಾಣೆ, ಸರಕಾರೀ ಕಛೇರಿಗಳ ಲೂಟಿಗೆ ತೊಡಗಿದರು. ಪೊಲೀಸರಿಂದ ಪರಿಸ್ಥಿತಿಯ ನಿಯಂತ್ರಣ ಸಾಧ್ಯವಾಗದೆ ಸೈನ್ಯವನ್ನು ಕರೆಸಲಾಯಿತು. "ಕಂಡಲ್ಲಿ ಗುಂಡು ಹಾರಿಸಿ" ಎನ್ನುವ ನಿರ್ದೇಶನದಿಂದ ಇನ್ನೂರಕ್ಕೂ ಹೆಚ್ಚು ಜನರ ಆಹುತಿಯಾಯಿತು. ಈ ಮುಷ್ಕರಕ್ಕೆ ಬೆಂಬಲ ನೀಡಿ ರೈಲ್ವೇ ಸಿಬ್ಬಂದಿ ತಮ್ಮ ಕಾರ್ಯ ಸ್ಥಗಿತಗೊಳಿಸಿದರು.(ದಿ ಟ್ರಾನ್ಸ್ ಫರ್ ಆಫ್ ಪವರ್ - ವಿ.ಪಿ. ಮೆನನ್)(ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

           ಅಂಬಾಲಾ, ಕರಾಚಿ, ಮದ್ರಾಸ್, ಕಲ್ಕತ್ತಾ ಹಾಗೂ ರಂಗೂನ್'ಗಳಲ್ಲೂ ಮುಂಬಯಿ ಪ್ರತಿಭಟನೆ ಪ್ರತಿಧ್ವನಿಸಿತು. ಇದು ಭೂ ಸೇನೆ ಹಾಗೂ ವಾಯುದಳದ ಮೇಲೂ ಪರಿಣಾಮ ಬೀರಿತು. ವಾಯುದಳದ ಸೈನಿಕರು ದಂಗೆಯೆದ್ದರು. ನೌಕಾದಳದ ಸಿಬ್ಬಂದಿ ಕೆಲಸ ನಿಲ್ಲಿಸಿದರು. ಪೊಲೀಸರಲ್ಲೂ ದೇಶಭಕ್ತರ ಅನೇಕ ಭೂಗತ ಜಾಲಗಳಿದ್ದವು. ಬಿಹಾರ ಕಾನ್ ಸ್ಟೇಬಲ್ ರಮಾನಂದ ತಿವಾರಿ ಅಂತಹ ದೇಶಭಕ್ತ ಪೊಲೀಸರ ಬಹುದೊಡ್ಡ ಜಾಲವನ್ನು ಹೆಣೆದಿದ್ದ ಪ್ರಮುಖರಲ್ಲೊಬ್ಬ. ಅನೇಕ ಕಡೆ ಪೊಲೀಸರ ಬಂಡಾಯವೂ ಆರಂಭವಾಯಿತು. ನೌಕಾದಳದ ಮುಷ್ಕರವನ್ನು ಕಮಾಂಡರ್-ಇನ್-ಚೀಫ್ ಖಂಡಿಸಿದಾಗ ಇಂಡಿಯನ್ ಸಿಗ್ನಲ್ ಕಾರ್ಪ್ಸ್'ನ 200 ಸಿಬ್ಬಂದಿ ಜಬಲ್ಪುರದಲ್ಲಿ ಮಿಂಚಿನ ಮುಷ್ಕರ ನಡೆಸಿದರು. ಸರ್ಕಾರ ವಿಜಯ ದಿನ ಆಚರಿಸಲು ಮುಂದಾದಾಗ ದೆಹಲಿಯಲ್ಲಿ ಭಾರೀ ಗಲಭೆಗಳು ನಡೆದವು. ಹೀಗೆ 1946ರಲ್ಲಿ ಇಡೀ ಭಾರತ ಕ್ರಾಂತಿಯ ವಾತಾವರಣದಿಂದ ಕೂಡಿತ್ತು. ಪೊಲೀಸ್ ಹಾಗೂ ಸೈನ್ಯದಲ್ಲಿ ಬಂಡಾಯಗಳು ನಡೆದವು. 1946ರ ಫೆಬ್ರವರಿಯಲ್ಲಿ ಮುಂಬೈಯ ಹನ್ನೊಂದು ನೌಕಾನೆಲೆಗಳ ಇಪ್ಪತ್ತು ಸಾವಿರ ರೇಟಿಂಗ್ ಹಾಗೂ ಎಲ್ಲಾ ಬಂದರುಗಳಲ್ಲಿದ್ದ ಯೂನಿಯನ್ ಜಾಕ್ ಧ್ವಜವನ್ನು ಕೆಳಗಿಳಿಸಲಾಯಿತು. ದೇಶದಲ್ಲಿ ಎದ್ದ ಕ್ರಾಂತಿಯ ಜ್ವಾಲೆಗೆ ಬ್ರಿಟಿಷರ ನಾಲಗೆಯ ಪಸೆ ಆರತೊಡಗಿತು.(ದಿ ಟ್ರ್ಯಾಜಿಕ್ ಸ್ಟೋರಿ ಆಫ್ ಪಾರ್ಟಿಷನ್ - ಹೊ.ವೆ. ಶೇಷಾದ್ರಿ; ದಿ ನೆಹರೂಸ್ ಆಂಡ್ ಗಾಂಧೀಸ್ - ತಾರೀಖ್ ಅಲಿ).

            ಸೈನ್ಯವನ್ನು, ಪೊಲೀಸ್ ಪಡೆಯನ್ನು ನಂಬುವಂತಿಲ್ಲವಾದ್ದರಿಂದ ನೇರವಾಗಿ ದಂಗೆಯನ್ನು ದಮನಿಸಹೊರಟರೆ ತಮಗೆ ಕ್ರಾಂತಿ ಜ್ವಾಲೆ ತಮ್ಮನ್ನೇ ಆಪೋಶನ ತೆಗೆದುಕೊಳ್ಳಬಹುದೆಂದು ಅರಿತ ಸರ್ಕಾರ ಬಂಡಾಯಕ್ಕೆ ಕೊನೆಹಾಡುವಂತೆ ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗಿಗೆ ಮನವಿ ಮಾಡಿತು. ಅದರಂತೆ ಜಿನ್ನಾ ಹಾಗೂ ಗಾಂಧಿ ದಂಗೆಯಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ, ದಂಗೆಯಲ್ಲಿ ಭಾಗವಹಿಸಿದ್ದವರು ಶರಣಾಗುವಂತೆ ಕರೆ ನೀಡಿದರು. ತಮ್ಮನ್ನು ಜನತೆಯಿಂದ ಪ್ರತ್ಯೇಕಿಸಿದ ತಥಾಕಥಿತ ನಾಯಕರ ಕುತಂತ್ರದಿಂದ ಬೇಸತ್ತ ನೌಕಾಪಡೆ ಮುಷ್ಕರ ನಿಲ್ಲಿಸುವಂತೆ ಕರೆ ನೀಡಿತು. ತಮಗೆ ವಿಶ್ವಾಸದ್ರೋಹ ಎಸಗಲಾಯಿತು ಎಂಬ ಭಾವನೆ ಅವರಲ್ಲುಂಟಾಯಿತು. ತಿದಿಯೂದಿ ಬೆಂಕಿಯ ಝಳಕ್ಕೆ ನಡುಗುವ, ಕ್ರಾಂತಿಯ ಬಿರುಗಾಳಿಗೆ ಆಶ್ರಯ ಹುಡುಕುವ, ತಮ್ಮ ಆಸೆಗಳಿಗಾಗಿ ದೇಶೀಯರನ್ನು ಬಲಿಕೊಟ್ಟು ಪರದೇಶಿಗಳ ಕಾಲ್ನೆಕ್ಕುವ ನಾಯಕರ ಬಗ್ಗೆ ಅವರಿಗೆ ಅಸಹ್ಯ ಉಂಟಾಯಿತು. ಹೀಗೆ ಸ್ವಾತಂತ್ರ್ಯದ ಮಹತ್ವದ ಘಟ್ಟವಾದ ಸೇನಾ ಬಂಡಾಯಕ್ಕೂ ಹಿಂದಿನಿಂದ ಇರಿದ ಹಿರಿಮೆ ಗಾಂಧಿಯದ್ದು!


           ಬ್ರಿಟಿಷ್ ಸರಕಾರ ಮೂವರು ಸಂಪುಟ ಸಚಿವರ(ಲಾರೆನ್ಸ್, ಕ್ರಿಪ್ಸ್, ಅಲೆಗ್ಸಾಂಡರ್) ನಿಯೋಗವನ್ನು ಭಾರತಕ್ಕೆ ಕಳುಹಿತು. ಈ ಆಯೊಗದ ಸಮೀಕ್ಷೆಯನ್ನು ಆಧಾರವಾಗಿರಿಸಿ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ "ಭಾರತದ ಇತಿಹಾಸದಲ್ಲಿ 1946 ಮಹತ್ವದ ವರ್ಷವಾಗಲಿದೆ. ಮುಂದಿನ ಕೆಲ ತಿಂಗಳಲ್ಲಿ ನಾವು ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು ಮುಂದೆ ಹೆಜ್ಜೆ ಹಾಕಲಿದ್ದೇವೆ. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಲಿದೆ" ಎಂದು ಘೋಷಿಸಿದ. ಭಾರತವನ್ನು ತ್ಯಜಿಸುವ ಬಗ್ಗೆ ಬ್ರಿಟಿಷರು ತಯಾರಾಗಿದ್ದರು ಎನ್ನುವುದನ್ನು ಈ ಮಾತು ಪ್ರತಿಧ್ವನಿಸಿತ್ತು. ಹಾಗೆಯೇ "ಭಾರತವನ್ನು ಹೊಸ ಪರಿಸ್ಥಿತಿಯಲ್ಲಿ ಬಿಟ್ಟು..." ಎನ್ನುವ ವಾಕ್ಯ ವಿಭಜನೆಯ ಮುನ್ಸೂಚನೆಯನ್ನೂ ಕೊಟ್ಟಿತ್ತು! ಆದರೆ ವಿಭಜನೆಗೆ ಮಹಾತ್ಮ ಎಂದು ಕರೆಸಿಕೊಂಡಾತನೇ ಬೆಂಬಲ ಕೊಟ್ಟದ್ದು ಮಾತ್ರ ಚೋದ್ಯ! ಅತ್ತ ಆಟ್ಲಿ "ಭಾರತದಲ್ಲಿ ರಾಷ್ಟ್ರೀಯತೆಯ ಗಾಳಿ ಜೋರಾಗಿ ಬೀಸುತ್ತಿದೆ. ಸ್ಪಷ್ಟ ಹಾಗೂ ನಿರ್ದಿಷ್ಟ ಕ್ರಮ ಕೈಗೊಳ್ಳಲು ಇದು ಸಕಾಲ" ಎಂದು ಹೌಸ್ ಆಫ್ ಕಾಮನ್ಸಿನಲ್ಲಿ ಹೇಳಿಕೆ ನೀಡಿದ. ಹೀಗೆ ನಾವು ಮೆಟ್ಟಿದವರೇ ನಮ್ಮನ್ನು ತಟ್ಟಿ-ಮೆಟ್ಟಿ-ಹೊರಗಟ್ಟುವ ಮೊದಲೇ ಜಾಗ ಖಾಲಿ ಮಾಡುವುದೊಳ್ಳೆಯದು ಎಂಬ ನಿರ್ಧಾರಕ್ಕೆ ಸೂರ್ಯ ಮುಳುಗದ ನಾಡಿನ ನಾಯಕರುಗಳು ಬಂದಿದ್ದರು!

        ಇಷ್ಟೆಲ್ಲಾ ಇತಿಹಾಸದ ಕಟು ವಾಸ್ತವಗಳಿದ್ದರೂ ಇಂದಿಗೂ ಗಾಂಧಿ ಬಂದ ನಂತರ(1914-15) ಸ್ವಾತಂತ್ರ್ಯ ಹೋರಾಟ ಶುರುವಾಯಿತು . ಗಾಂಧಿಯ ನೇತೃತ್ವದ ಹೋರಾಟದಿಂದಾಗಿಯೇ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಈ ಜಗತ್ತಿನ ಬಹು ದೊಡ್ಡ ವರ್ಗ ಭಾವಿಸುತ್ತದೆ. ತಿರುಚಿದ ಭಾರತದ ಪ್ರಾಚೀನ ಇತಿಹಾಸದಂತೆ ಭಾರತದ ಆಧುನಿಕ ಇತಿಹಾಸವೂ ಕುತಂತ್ರದಿಂದಲೇ ಹೆಣೆಯಲ್ಪಟ್ಟಿದೆ. ಅದೇ ನಮ್ಮ ಶೈಕ್ಷಣಿಕ ಪಠ್ಯಗಳಲ್ಲಿ ಶೇಖರಣೆಗೊಂಡು ಪ್ರತಿಯೊಂದು ಪೀಳಿಗೆ ಅದನ್ನೇ ಉರು ಹೊಡೆದು ಅದೇ ಸತ್ಯವೆಂದು ಭ್ರಮಿಸಿ ಹೊರಳಾಡುತ್ತಿದೆ. ತಾಯಿ ಭಾರತಿಯ ಮೈಗೆ ಹಲವು ಗಾಯಗಳನ್ನು ಮಾಡಿ ರಕ್ತ ಸೋರುವಂತೆ ಮಾಡಿದ ರಾಜಕಾರಣಿಯೊಬ್ಬನನ್ನು ಮಹಾತ್ಮ ಪಟ್ಟಕ್ಕೆ ಏರಿಸಿದ ಇತಿಹಾಸದ ವಿರೂಪದಲ್ಲಿ ಅಸಂಖ್ಯ ಹಿಂದೂಗಳ ಆಕ್ರಂದನ ಮರೆಯಾಗಿ ಹೋಗಿದೆ. ಆಗಸ್ಟ್ ಹದಿನೈದು ಅಂದರೆ ಸಾಕು ಲಕ್ಷಾಂತರ ಭಗಿನಿಯರ ಕರುಳು ಕಿತ್ತು ಬರುವ ಆಕ್ರಂದನ ಕೇಳಿಸುತ್ತದೆ. ತನ್ನ ಕಣ್ಣೆದುರಲ್ಲೇ ಅತ್ಯಾಚಾರಕ್ಕೊಳಗಾದ ತಾಯಿಯ-ಮಗಳ-ಪತ್ನಿಯ-ಸಂಬಂಧಿಯ ಕಂಡು ಅಸಹಾಯಕನಾದ ಹಿಂದೂವಿನ ಮೂಕ ವೇದನೆ ಕಣ್ಣ ಮುಂದೆ ಬರುತ್ತದೆ. ಧರ್ಮದ ಉಳಿವಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಬಲಿದಾನಿಯ ಭಾವ ಸ್ಪುರಿಸುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ 1857ರ ಸಂಗ್ರಾಮ ಯಶಸ್ವಿಯಾಗುತ್ತಿದ್ದರೆ...? ಸ್ವಾತಂತ್ರ್ಯ ವೀರ ಸಾವರ್ಕರ್ ಅಂಡಮಾನ್ ಕರಿನೀರ ಕತ್ತಲ ಕೂಪದೊಳಗೆ ಬೀಳದಿರುತ್ತಿದ್ದರೆ...? ಸುಭಾಷರು ಕಣ್ಮರೆಯಾಗಿರದಿರುತ್ತಿದ್ದರೆ...? ಭಾರತದ ಇತಿಹಾಸವೇ ಬದಲಾಗುತ್ತಿತ್ತು ಅಲ್ಲವೇ? ಮಹತ್ವದ ಘಟ್ಟದಲ್ಲಿ ಅದ್ವಿತೀಯನಾದ, ಪರಾಕ್ರಮಿಯಾದ, ಧರ್ಮ-ನೀತಿ:ಬ್ರಾಹ್ಮ-ಕ್ಷಾತ್ರ ಭೀರು ನಾಯಕನ ಕೊರತೆ ಭಾರತಕ್ಕೆ ಎಂದೆಂದೂ ಕಾಡುತ್ತಿರುವುದೇಕೆ?

ಬುಧವಾರ, ನವೆಂಬರ್ 23, 2016

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...

            ನಮ್ಮ ಚರಿತ್ರೆಯ ಗ್ರಂಥಗಳಲ್ಲಿ ಆಕ್ರಮಣಕಾರರನ್ನೇ ವೈಭವೀಕರಿಸಲಾಗಿದೆ. ನಮ್ಮ ಅರಸರು ಅಸಮರ್ಥರೂ, ಭೋಗಲಾಲಸಿಗಳೂ ಆಗಿದ್ದು ತಮ್ಮ ಸುತ್ತ ನಡೆಯುತ್ತಿದ್ದ ಹುನ್ನಾರವನ್ನು, ಶತ್ರುಗಳ ಆಕ್ರಮಣವನ್ನು ಅಂದಾಜಿಸದೆ, ಶತ್ರುಗಳಿಗೆ ಪ್ರತ್ಯುತ್ತರ ನೀಡಲು ಸಿದ್ಧರಾಗದೆ ಉಪೇಕ್ಷಿಸಿ ತಮ್ಮ ಹಾಗೂ ಪ್ರಜೆಗಳ ವಿನಾಶಕ್ಕೆ ಕಾರಣೀಭೂತರಾದರು ಎನ್ನುವ ಅಭಿಪ್ರಾಯವನ್ನೇ ಸಾಮಾನ್ಯ ಜನತೆಯಲ್ಲಿ ರೂಪಿಸುವ ರೀತಿಯಲ್ಲೇ ನಮ್ಮ ಇತಿಹಾಸದ ಪಠ್ಯಗಳು ಬರೆಯಲ್ಪಟ್ಟಿವೆ. ಆದರೆ ವಾಸ್ತವ ಆ ರೀತಿ ಇತ್ತೇ ಎಂದು ಕೇಳಿದರೆ ಇತಿಹಾಸಕಾರರ ಕುತಂತ್ರಗಳು ಒಂದೊಂದೇ ಬಯಲಾಗುತ್ತವೆ. ಈ ಇತಿಹಾಸಕಾರರು ಆಕ್ರಮಕರ ಮತಾಂಧತೆ, ದಬ್ಬಾಳಿಕೆ, ಮತಾಂತರ, ಲಂಪಟತೆ, ಕ್ರೌರ್ಯ ಹಾಗೂ ಪ್ರಾಯೋಜಿತ ನರಮೇಧವನ್ನು ಮುಚ್ಚಿಡುವುದರ ಜೊತೆಜೊತೆಗೆ ನಮ್ಮ ರಾಜರ ಶೌರ್ಯ, ಪ್ರತಾಪ, ಸಂಘಟಿತ ಪ್ರಯತ್ನಗಳನ್ನೂ ಮುಚ್ಚಿಟ್ಟರು. ತಮ್ಮದೇ ಸ್ವಾರ್ಥ, ಅಧಿಕಾರ ದಾಹ ಹಾಗೂ ಅಂತಃಕಲಹಗಳಲ್ಲಿ ಮುಳುಗಿದ್ದ ಕೆಲ ರಾಜರೂ ಇದ್ದರು. ಅದರ ಜೊತೆಯಲ್ಲೇ ವಿದೇಶಿಯರ ದಾಳಿಯನ್ನು ಧೀರೋದಾತ್ತವಾಗಿ ಎದುರಿಸಿ ದೇಶದ ರಕ್ಷಣೆಗೆ ಪ್ರಾಣವನ್ನೇ ಅರ್ಪಿಸಿದವರೂ ಅನೇಕರಿದ್ದರು ಎನ್ನುವ ಸತ್ಯ ಮರೆಯಾಯಿತು.

            ಕ್ರಿ.ಶ. ಹತ್ತನೇ ಶತಮಾನದವರೆಗೂ ಕಾಬೂಲಿನವರೆಗೆ ಭಾರತ ಹಿಂದೂಗಳ ಆಳ್ವಿಕೆಗೇ ಒಳಪಟ್ಟಿತ್ತು. ಆಗ ಕಾಬೂಲಿ(ಕುಭ)ನ ರಾಜನಾಗಿದ್ದವನು ಜಯಪಾಲ. ಹಿಂದೂಕುಶ್ ಪರ್ವತ ಶ್ರೇಣಿಯಲ್ಲಿದ್ದ ಕಪಿಲ, ಪೂರ್ವ ಪಂಜಾಬುಗಳವರೆಗೆ ಅವನ ರಾಜ್ಯ ಹಬ್ಬಿತ್ತು. ಆಗ ಹರಿ-ರುದ್ರರ ಹೆಸರಿನಿಂದ ನಿರ್ಮಾಣವಾಗಿದ್ದ ಹರ್ತ್(ಪಶ್ಚಿಮ ಅಪ್ಘಾನಿಸ್ಥಾನ), ಗಾಂಧಾರ(ಕಂದಹಾರ್) ಹಾಗೂ ಗಜನಿಗಳನ್ನು ಸೇರಿಸಿದ ಪ್ರಾಂತ್ಯವನ್ನು ಆಳುತ್ತಿದ್ದವ ಸಬಕ್ತಜಿನ್ ಎಂಬ ಮುಸ್ಲಿಮ್ ಗುಲಾಮ ರಾಜ. ಷಾಹಿಗಳ ಗಡಿ ಪ್ರದೇಶಗಳು ಹಾಗೂ ಪರ್ವತ ಶಿಖರಗಳಲ್ಲಿದ್ದ ಕೋಟೆಗಳ ಮೇಲೆ ದಾಳಿ ಮಾಡಿ ಸಬಕ್ತಜಿನ್ ಲೂಟಿಮಾಡತೊಡಗಿದಾಗ ಕಿಡಿಕಿಡಿಯಾದ ಷಾಹಿ ಜಯಪಾಲ ತನ್ನ ಪ್ರಬಲ ಗಜಬಲದೊಂದಿಗೆ ಪ್ರತ್ಯಾಕ್ರಮಣ ಮಾಡಿದ. ಸೋಲು ಖಚಿತಗೊಂಡಾಗ ಸಬಕ್ತಜಿನ್ ಅಧರ್ಮದ ದಾರಿ ಹಿಡಿದ. ಜಯಪಾಲನ ಸೈನ್ಯ ಬೀಡುಬಿಟ್ಟ ಸ್ಥಳ ಪರ್ವತವೊಂದರ ತಪ್ಪಲಾಗಿತ್ತು. ಆ ಪರ್ವತಾಗ್ರದಿಂದ ಸ್ವಚ್ಛ ಶುಭ್ರ ಜಲಧಾರೆಯೊಂದು ಹರಿದು ಬರುತ್ತಿತ್ತು.ಆ ಜಲಧಾರೆಗೆ ಯಾರಾದರೂ ಕಶ್ಮಲಗಳನ್ನು ಹಾಕಿದರೆ ಕೂಡಲೇ ಕತ್ತಲು ಕವಿದು ಸುಂಟರಗಾಳಿ ಬೀಸುವುದು, ಬೆಟ್ಟದ ಬಂಡೆಗಳು ಒಡೆದು ಬೀಳುವುದು, ಧಾರಾಕಾರ ಮಳೆ ಸುರಿಯುವಂತಹ ಅವಘಡಗಳುಂಟಾಗುತ್ತಿದವು. ಇದನ್ನು ಅರಿತ ಸಬಕ್ತಜಿನ್ ಅಶುದ್ಧ ವಸ್ತುಗಳನ್ನು ಆ ನೀರಿನಲ್ಲಿ ಹಾಕಿಸಿದ. ಕೂಡಲೇ ಪ್ರಳಯಕಾಲದಲ್ಲಿ ಉಂಟಾಗುವಂತೆ ಉತ್ಪಾತಗಳು ಉಂಟಾದವು. ಕುಂಭದ್ರೋಣ ಮಳೆ, ಉರುಳಿ ಬರುತ್ತಿರುವ ಬಂಡೆ, ಅಚಾನಕ್ಕಾಗಿ ಭಾರೀ ಶಬ್ಧದಿಂದ ಬೀಳುತ್ತಿರುವ ವೃಕ್ಷಗಳು, ದಟ್ಟವಾಗಿ ಹಬ್ಬಿದ್ದ ಕಪ್ಪು ಧೂಮದಿಂದ ಜಯಪಾಲನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಹಲವು ಸೈನಿಕರು ಸತ್ತು, ತಂದಿದ್ದ ಆಹಾರ ಪದಾರ್ಥಗಳು ನಷ್ಟವಾಗಿ ಯುದ್ಧ ಮುಂದುವರಿಸುವುದು ಅಸಾಧ್ಯವಾದಾಗ ಜಯಪಾಲ ಸಂಧಿಗಾಗಿ ರಾಯಭಾರಿಯನ್ನು ಕಳುಹಿದ. ಐವತ್ತು ಆನೆಗಳು, ಕೆಲವು ಕೋಟೆಗಳನ್ನು ವಶಕ್ಕೊಪ್ಪಿಸುವುದರ ಕರಾರಿನ ಮೇಲೆ ಸಬಕ್ತಜಿನ್ ಸಂಧಿಗೆ ಒಪ್ಪಿಕೊಂಡ. ಒಂದು ಚಿಕ್ಕ ಕೋಟೆಯನ್ನು ಕೊಡಲು ಜಯಪಾಲ ನಿರಾಕರಿಸಿದಾಗ ಸಿಟ್ಟಿಗೆದ್ದ ಸಬಕ್ತಜಿನ್ ಸೈನ್ಯ ತೆಗೆದುಕೊಂಡು ದಂಡೆತ್ತಿ ಬಂದು ಯುದ್ಧದಲ್ಲಿ ಜಯಪಾಲನನ್ನು ಸೋಲಿಸಿ ಲಂಘೂನ್ ನಗರದವರೆಗೆ ಜಯಪಾಲನ ರಾಜ್ಯವನ್ನು ಆಕ್ರಮಿಸಿಕೊಂಡ. ಇದು ಮಹಮ್ಮದೀಯ ಚರಿತ್ರೆಕಾರ ಆಲ್ ಉತ್ಖಿ ತನ್ನ "ತಾರೀಖ್ ಯಾಮಿನಿ"ಯಲ್ಲಿ ಬರೆದ ಕಥೆ!

               ಆದರೆ ಈ ಸೋಲಿನಿಂದ ಜಯಪಾಲನೇನೂ ಹತಾಷನಾಗಲಿಲ್ಲ. ಸಬಕ್ತಜಿನ್'ಗೆ ಶರಣಾಗಲೂ ಇಲ್ಲ. ತನ್ನ ಸೈನ್ಯವನ್ನು ಬಲಪಡಿಸಿದ. ಸುತ್ತಲ ಹಿಂದೂ ರಾಜರು ಅವನ ಸಹಾಯಕ್ಕಾಗಿ ತಮ್ಮ ಸೈನ್ಯವನ್ನು ಕಳುಹಿದರು. ಇಸ್ಲಾಂ ದುರಾಕ್ರಮಣವನ್ನು ತಡೆಯಲು ಹಿಂದೂ ರಾಜರು ಐಕ್ಯಮತ್ಯವನ್ನು, ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿರುವುದು ಈ ರಾಷ್ಟ್ರದ ಹೆಮ್ಮೆಯ ಚರಿತ್ರೆಯಲ್ಲವೇ? ಆದರೆ ನಮ್ಮ ಇತಿಹಾಸಕಾರರಿಗೆ ಒಂದಿಬ್ಬರು ಸ್ವಾರ್ಥಿ ರಾಜರ ಮೋಸವೇ ಚರಿತ್ರೆಯಾಗಿ ಕಂಡಿದುದು ಮಾತ್ರ ವಿಪರ್ಯಾಸ. ಆದರೆ ನಮ್ಮ ಇತಿಹಾಸಕಾರರಿಗೆ ಜಯಪಾಲನಿಗೆ ಹಿಂದೂ ರಾಜರು ಸಹಾಯ ಮಾಡಿರುವ ಬಗ್ಗೆ ಅನುಮಾನವೆದ್ದುಬಿಟ್ಟಿತು. ಶತ್ರುಪಕ್ಷದ ಇತಿಹಾಸಕಾರನೇ(ಫಿರಿಸ್ತಾ) ಬರೆದಿರುವುದು ಸತ್ಯಕ್ಕೆ ದೂರ ಎಂದು ನಿರ್ಧರಿಸಿಬಿಟ್ಟರು. ಸಹಾಯ ಮಾಡಿರುವ ರಾಜರುಗಳು ಬಗ್ಗೆ ಫಿರಿಸ್ತಾ ಕೊಟ್ಟಿರುವ ಅಲ್ಪ ಉಲ್ಲೇಖಗಳಿಂದ ಇದನ್ನು ರುಜುವಾತು ಮಾಡಲು ಸಾಧ್ಯವಿಲ್ಲ, ಸಾಕ್ಷ್ಯಾಧಾರಗಳು ಸಾಕಾಗುವುದಿಲ್ಲ ಎಂದು ಒಂದೇ ಏಟಿಗೆ ಈ ಅಂಶವನ್ನು ತೊಡೆದು ಹಾಕಿಬಿಟ್ಟರು. ಕಟ್ಟುವುದಕ್ಕಿಂತ ಕೆಡಹುವುದು ಸುಲಭವಲ್ಲವೇ! ಆಲ್ ಉತ್ಖಿ ಹೇಳಿದ ಆಲಿಕಲ್ಲು ಸಹಿತದ ಕುಂಭದ್ರೋಣ ಮಳೆಯ, ಪ್ರಕೃತಿ ವೈಪರೀತ್ಯದ ಕಥೆಯನ್ನು ನಂಬಿದವರಿಗೆ ಫಿರಿಸ್ತಾ ಹೇಳಿದ ಓರಗೆಯ ಹಿಂದೂರಾಜರು ಸಹಾಯ ಮಾಡಿದರು ಎನ್ನುವ ಸಾಲುಗಳು ಅನುಮಾನಕ್ಕೆ ಕಾರಣವಾದದ್ದು ಚೋದ್ಯವೇ ಸರಿ. ಸಬಕ್ತಜಿನನ ಮಾಯದಾಟಕ್ಕೆ ಬೆದರಿ ಕಂಗಾಲಾಗಿ ಶರಣು ಬಂದು ಸಂಧಿ ಮಾಡಿಕೊಂಡು ಷರತ್ತುಗಳಿಗೆ ಒಪ್ಪಿದಂತೆ ನಟಿಸಿ ಹಿಂತಿರುಗಿ ಹೋಗಿ ಕೊಟ್ಟ ಮಾತಿಗೆ ತಪ್ಪಿದನೆಂದೂ, ಪರಿಣಾಮ ಕ್ರುದ್ಧನಾದ ಸಬಕ್ತಜಿನ್ ದಂಡೆತ್ತಿ ಬರಲು ಸೋತು ವಿಶಾಲ ಭೂಪ್ರದೇಶವನ್ನು ಕಳೆದುಕೊಂಡನೆಂಬ ಕಥೆಯನ್ನು ಯಾವುದೇ ಅನ್ಯ ಸಾಕ್ಷ್ಯ ಕೇಳದೆ ನಂಬಿದವರಿಗೆ ಹಿಂದೂಗಳು ಒಗ್ಗಟ್ಟಾಗಿ ಹೋರಾಡಿದ ಘಟನೆಗೆ ಮಾತ್ರ ಸಾಕ್ಷ್ಯ ಕಡಿಮೆಯಾಯಿತು. ಶತ್ರು ಪಕ್ಷದ ಇತಿಹಾಸಕಾರ ರಾಜರ ಹೆಸರು ಹೇಳಿದರೆ ಸಾಲದೆ? ಅವನು ಅವರ ವಂಶವೃಕ್ಷವನ್ನೇ ಬರೆಯಬೇಕೇ? ಓರಗೆಯ ಹಿಂದೂ ರಾಜರು ಸಹಾಯ ಮಾಡಿದರೂ, ಧೀರೋದಾತ್ತವಾಗಿ ಸೆಣಸಿದರೂ ಸಬಕ್ತಜಿನನ ಕುತಂತ್ರಗಳೆದುರು ಷಾಹಿ ಜಯಪಾಲನ ಧರ್ಮಯುದ್ಧ ನಡೆಯಲಿಲ್ಲ. ಪೇಷಾವರದವರೆಗಿನ ಭೂಮಿ ಸಬಕ್ತಜಿನನ ವಶವಾಯಿತು. ಜಯಪಾಲ ಪಂಜಾಬಿಗೆ ಸೀಮಿತಗೊಳ್ಳಬೇಕಾಯಿತು.

           ಸಬಕ್ತಜಿನನ ಬಳಿಕ ಬಂದ ಗಜನಿ ಮಹಮ್ಮದ್ ಭಾರತದ ಮೇಲೆ ಸಾಲುಸಾಲು ದಂಡಯಾತ್ರೆಯನ್ನೇ ಕೈಗೊಂಡ. ಹದಿನೇಳು ಸಾವಿರ ಅಶ್ವಾರೋಹಿಗಳೊಡನೆ ಬಂದು ಜಯಪಾಲನನ್ನೂ, ಅವನ ಪುತ್ರ-ಪೌತ್ರರನ್ನು ಸೆರೆಯಲ್ಲಿರಿಸಿದ. ಎರಡೂವರೆ ಲಕ್ಷ ದಿನಾರುಗಳನ್ನು, 25 ಆನೆಗಳನ್ನು ತನಗೊಪ್ಪಿಸಿದರೆ ಜಯಪಾಲನನ್ನು ಬಿಡುಗಡೆ ಮಾಡುವುದಾಗಿ ಷರತ್ತು ಹಾಕಿದಾಗ ಜಯಪಾಲನ ಮಗ ಆನಂದಪಾಲ ಆ ಮೊತ್ತವನ್ನು ಕೊಟ್ಟು ತಂದೆ ಹಾಗೂ ಬಂಧುಗಳನ್ನು ಬಿಡಿಸಿಕೊಂಡ. ಸಾಲು ಸಾಲು ಸೋಲುಗಳಿಂದ ಅವಮಾನಿತನಾದ ಜಯಪಾಲ ಅದನ್ನು ಸಹಿಸಲಾರದೆ ಚಿತೆಯನ್ನು ಸಿದ್ಧಪಡಿಸಿ ತನ್ನ ಕೈಯಿಂದಲೇ ಬೆಂಕಿ ಹಚ್ಚಿಕೊಂಡು ಸಜೀವವಾಗಿ ದಹನವಾದ. ಅವನ ನಂತರ ಪಟ್ಟವೇರಿದ ಆನಂದಪಾಲನಿಗೂ ಗಜನಿಯ ಕೈಯಲ್ಲಿ ಸೋಲುಗಳೇ ಆದವಂತೆ. ಇದು ನಮ್ಮ ಎಲ್ಲಾ ಚರಿತ್ರೆಯ ಗ್ರಂಥಗಳಲ್ಲಿ ಕಂಡುಬರುವ ಆಲ್ ಉತ್ಖಿಯ ಗ್ರಂಥದಿಂದ ಉತ್ಖನನ ಮಾಡಿರುವ ಕಥೆಗಳು. ಇದನ್ನೂ ನಂಬಿ ಬಿಟ್ಟ ಬಗೆಯಂತೂ ವಿಚಿತ್ರ. ಮೊದಲೆರಡು ಬಾರಿ ಸಬಕ್ತಜಿನನ ಎದುರು ಸೋತು ಸೆರೆ ಸಿಕ್ಕು ಷರತ್ತುಗಳಿಗೆ ಬಗ್ಗಿದರೂ ಅವಮಾನವಾಗದ ಜಯಪಾಲನಿಗೆ ಅವನ ಮಗನ ಎದುರುಂಟಾದ ಸೋಲು ಅಪಮಾನಕರವಾಗಿ ಕಂಡಿತೇ? ಆಲ್ ಉತ್ಖಿಯೇ ಹೇಳಿದ ಹಾಗೆ ಮೊದಲು ಕೊಟ್ಟ ಮಾತಿಗೆ ತಪ್ಪಿ ನಡೆದ ವಚನಭೃಷ್ಟನಾಗಿದ್ದ ಪಕ್ಷದಲ್ಲಿ ಇನ್ನೊಮ್ಮೆ ಅಂತಹುದೇ ಪರಿಸ್ಥಿತಿಯಲ್ಲಿ ಅದೇ ರೀತಿಯ ಚಾಣಾಕ್ಷತೆಯನ್ನು ಯಾಕೆ ತೋರಿಸಲಿಲ್ಲ? ಒಂದೋ ಮೊದಲಿನದ್ದು ಸುಳ್ಳಾಗಿರಬೇಕು ಅಥವಾ ಎರಡನೆಯದ್ದು! ಮೊದಲನೆಯದ್ದು ಸುಳ್ಳಾಗಿದ್ದರೆ ಜಯಪಾಲ ಮೊದಲ ಬಾರಿಗೆ ಸೋತದ್ದರ ಮೇಲೂ ಸಂದೇಹ ಬರುತ್ತದಲ್ವೇ? ಎರಡನೆಯ ಬಾರಿ ಸೋತು ಚಿತೆಯೇರುವ ಹೊತ್ತಲ್ಲಿ ಅವನ ಓರಗೆಯ ರಾಜರು ಹೆಚ್ಚೇಕೆ ಅವನ ಸ್ವಂತ ಮಗ ಅಂತಹ ದೇಶ-ಧರ್ಮಕ್ಕಾಗಿ ಹೋರಾಡಿದ ಅಂತಹ ಪರಾಕ್ರಮಶಾಲಿಯನ್ನು ಈ ಕಾರ್ಯದಿಂದ ತಡೆಯಲಿಲ್ಲವೇಕೇ? ಶತ್ರು ಪಕ್ಷದ ಚರಿತ್ರೆಕಾರರ ಕಥೆಗಳನ್ನೆಲ್ಲಾ ಒಪ್ಪಿದವರಿಗೆ ನೈಜದಂತೆ ಮೇಲ್ನೋಟಕ್ಕೆ ಕಾಣುವ ಘಟನೆಗಳನ್ನು ಒಪ್ಪಲು ಕಷ್ಟವಾಗುವುದೇಕೆ?

            ಜಯಪಾಲನ ಮಗ ಆನಂದಪಾಲ ಮಹಾಶೂರನೂ, ವಿದ್ಯಾವಂತನೂ, ಕಲೋಪಾಸಕನೂ ಆಗಿದ್ದ. ಪಾಣಿನಿಯ ಅಷ್ಟಾಧ್ಯಾಯಿಗೆ ಸಮನಾದ "ಶಿಷ್ಯ-ಹಿತ-ವೃತ್ತಿ" ಎನ್ನುವ ವ್ಯಾಕರಣ ಗ್ರಂಥ ರಚಿಸಿದ ಉಗ್ರಭೂತಿಯ ಆಶ್ರಮದಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದ್ದ ಛಲಗಾರನಾತ. ಉಗ್ರಭೂತಿಯ ವ್ಯಾಕರಣ ಗ್ರಂಥವನ್ನು ತನ್ನ ರಾಜ್ಯದಲ್ಲಿ ಪ್ರಚುರಪಡಿಸಿದ ಗುರು ಸೇವಕನೀತ. ಎಲ್ಲಾ ಚರಿತ್ರೆಕಾರರು ಉಲ್ಲೇಖಿಸಿರುವ ಇನ್ನೊಂದು ಅಂಶವೆಂದರೆ ಜಯಪಾಲನ ಪುತ್ರ ಆನಂದಪಾಲನೂ ಗಜನಿಯ ಕೈಯಲ್ಲಿ ಸೋತು ಹೋದ ಎನ್ನುವುದು. ದಿಟವೇ. ಆದರೆ ಸಂಪೂರ್ಣವಲ್ಲ. ಒಂದು ವೇಳೆ ಆನಂದಪಾಲನಿಗೂ ಗಜನಿಯ ಎದುರು ಸಾಲುಸಾಲು ಅಪಜಯಗಳು ಪ್ರಾಪ್ತಿಯಾಗಿದ್ದರೆ ಅದೇ ಆನಂದಪಾಲ ಗಜನಿಗೆ "ನಿನ್ನ ರಾಜ್ಯದ ಮೇಲೆ ತುರ್ಕರು ದಂಡೆತ್ತಿ ಬಂದಿದ್ದಾರೆಂದೂ, ಖುರಾಸಾನ್ ಪ್ರಾಂತ್ಯವನ್ನು ಆಕ್ರಮಿಸಿದ್ದಾರೆಂದೂ ಕೇಳಿದ್ದೇನೆ. ನೀನು ಬಯಸಿದರೆ 5000 ಅಶ್ವದಳ, ಹತ್ತು ಸಾವಿರ ಪದಾತಿ, ಶತಗಜಗಳೊಡನೆ ನಾನೇ ನಿನ್ನ ಸಹಾಯಕ್ಕೆ ಬರುತ್ತೇನೆ. ಇಲ್ಲವೇ ಇದರ ಎರಡರಷ್ಟು ಬಲದೊಡನೆ ಮಗನನ್ನು ಕಳುಹುತ್ತೇನೆ. ನಾನು ಈ ಸಹಾಯ ಮಾಡುವುದು ನಿನ್ನ ಅನುಗ್ರಹಕ್ಕಾಗಿ ಅಲ್ಲ. ನಿನ್ನನ್ನು ಸಂಪೂರ್ಣವಾಗಿ ಸೋಲಿಸಿದ ಗೌರವ ನನಗಲ್ಲದೆ ಬೇರಾರಿಗೂ ದಕ್ಕಕೂಡದು ಎನ್ನುವ ನನ್ನ ಆಶಯಕ್ಕಾಗಿ!" ಎಂದು ಯಾಕೆ ಪತ್ರ ಬರೆಯುತ್ತಿದ್ದ? ಈ ಪತ್ರದ ಉಲ್ಲೇಖವಿರುವುದು ಮಹಮದ್ ಗಜನಿಯ ಆಪ್ತ ಆಲ್-ಬೆರೂನಿಯ ತಾರಿಖ್-ಉಲ್-ಹಿಂದ್'ನಲ್ಲಿ. ಇದರರ್ಥ ಆನಂದಪಾಲ ಹಿಂದೆ ಗಜನಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾನೆ ಎಂದಲ್ಲವೇ? ಈ ವಿಷಯದಲ್ಲಿ ಆಲ್ಬೆರೂನಿ ಸುಳ್ಳು ಹೇಳಲೂ ಆಸ್ಪದವಿಲ್ಲ. ಆ ರೀತಿ ಮಾಡಿದ್ದರೆ ಅವನ ತಲೆ ಉಳಿಯುತ್ತಿರಲಿಲ್ಲ. ಗಜನಿ ಅಷ್ಟು ದಯನೀಯವಾಗಿ ಸೋತು ಹೋತದ್ದು ಯಾವ ಯುದ್ಧದಲ್ಲಿ? ಗಜನಿಯ ಹದಿನೇಳು ದಂಡಯಾತ್ರೆಗಳಲ್ಲಿ ಅದು ಎಷ್ಟನೆಯದ್ದು? ನಮ್ಮ ಚರಿತ್ರೆಕಾರರು ಮುಚ್ಚಿಟ್ಟದ್ದು ಎಂತಹಾ ಭವ್ಯ ಇತಿಹಾಸವನ್ನು! ಮಹಮ್ಮದ್ ತನ್ನ ಪುಟ್ಟ ಸೈನ್ಯದ ಬಲದಿಂದ ಕಾಫಿರರ ಎಂತಹಾ ಬಲಾಢ್ಯ ಸೈನ್ಯವನ್ನಾದರೂ ಅಲ್ಲಾನ ಕೃಪೆಯಿಂದ ಗೆದ್ದನೆಂಬ ಮುಸ್ಲಿಂ ಆಸ್ಥಾನ ಬರಹಗಾರರ ಕಥೆಗಳನ್ನು ಚರಿತ್ರೆಯ ಗ್ರಂಥಗಳಿಗೆ ಯಥಾವತ್ ಭಟ್ಟಿ ಇಳಿಸಿದ ನಮ್ಮ ಸೆಕ್ಯುಲರ್ ಇತಿಹಾಸಕಾರರು ಮಾಡಿದ್ದು ಐತಿಹಾಸಿಕ ದ್ರೋಹವಲ್ಲವೇ?

           ಇದು ನಮ್ಮ ಇತಿಹಾಸಕಾರರ ದ್ರೋಹದ ಕಥೆಯಾಯಿತು. ಈ ಆನಂದಪಾಲನ ಭೋಳೇತನಕ್ಕೆ ಏನು ಹೇಳೋಣ? ತನ್ನ ತಂದೆಯ ಆತ್ಮಾಹುತಿಗೆ ಕಾರಣನೆನ್ನಲಾದ, ಯುದ್ಧದಲ್ಲಿ ಕುತಂತ್ರವನ್ನೇ ಉಪಯೋಗಿಸುತ್ತಿದ್ದ ಮತಾಂಧ ಮದಾಂಧನನ್ನು ಕೈಗೆ ಸಿಕ್ಕಿದರೂ ಕೊಲ್ಲದೇ ಬಿಟ್ಟ ಆನಂದಪಾಲನ ಕ್ರಮ ಹುಚ್ಚುತನವಲ್ಲದೆ ಇನ್ನೇನು? ತಾನೊಬ್ಬನೇ ಗಜನಿಯನ್ನು ಗೆದ್ದೆನೆಂಬ ಗೌರವ ಶಾಶ್ವತವಾಗಿ ಉಳಿಯಬೇಕೆಂಬ ಕಾರಣಕ್ಕೆ ಇನ್ನಾರಾದರೂ ಯುದ್ಧಕ್ಕೆ ಬಂದರೆ ಗಜನಿ ಸೋಲಬಾರದೆನ್ನುವ ಕಾರಣಕ್ಕೆ ಅವನಿಗೆ ಒತ್ತಾಸೆಯಾಗಿ ನಿಲ್ಲುವ ಅವನ ಅಹಂ ಅವನಿಗೇ ಮುಳುವಾಯಿತು. ತನಗೆ ಸಹಾಯ ಮಾಡಬಂದ ಆನಂದಪಾಲನನ್ನು ಗಜನಿ ನಡೆಸಿಕೊಂಡದ್ದಾದರೂ ಹೇಗೆ? ಮುಲ್ತಾನನ್ನು ಆಳುತ್ತಿದ್ದ ದಾವೂದನ ಮೇಲೆ ದಾಳಿ ಮಾಡಲು ನನ್ನ ಸೈನ್ಯವನ್ನು ನಿನ್ನ ರಾಜ್ಯದ ಮೂಲಕ ಕೊಂಡು ಹೋಗಲು ಅನುಮತಿ ಕೊಡು ಎಂದು ಮಹಮ್ಮದ್ ಕೇಳಿದಾಗ ದಾವೂದನೊಂದಿಗೆ ಮೊದಲಿನಿಂದಲೂ ತನಗಿದ್ದ ಸ್ನೇಹ ಸಂಬಂಧದ ಕಾರಣ ಆನಂದಪಾಲ ಅನುಮತಿ ನಿರಾಕರಿಸಿದ. ಒಂದು ವೇಳೆ ಆನಂದಪಾಲ ಹಿಂದೆ ಗೆದ್ದಿಲ್ಲವೆಂದಿದ್ದರೆ ಈ ಅನುಮತಿ ಕೇಳುವ ಪ್ರಸಂಗವೂ ಬರುತ್ತಿರಲಿಲ್ಲ ಅಲ್ಲವೇ? ಕೆರಳಿದ ಗಜನಿ ಸಕಲ ಸೈನ್ಯದೊಂದಿಗೆ ದಂಡೆತ್ತಿ ಬಂದ. ಅಪಾಯವನ್ನು ಗ್ರಹಿಸಿದ ಉಜ್ಜಯಿನಿ, ಗ್ವಾಲಿಯರ್, ಕನೋಜ್, ಕಲಿಂಜರ್, ಅಜ್ಮೀರಗಳ ದೊರೆಗಳು ಆನಂದ ಪಾಲನಿಗೆ ಬೆಂಬಲವಾಗಿ ದೊಡ್ಡ ಪ್ರಮಾಣದ ಸೈನ್ಯವನ್ನು ಕಳುಹಿಕೊಟ್ಟರು. ನಲವತ್ತು ದಿನಗಳ ಕಾಲ ಎರಡೂ ಪಕ್ಷಗಳು ಶಿಬಿರದಲ್ಲೇ ಉಳಿದವು. ಈ ಸಂದರ್ಭದಲ್ಲಿ ದೇಶದ ವಿವಿಧ ಪ್ರಾಂತ್ಯಗಳ ಸ್ತ್ರೀಯರು, ಪುರುಷರು ತಂತಮ್ಮ ಬೆಳ್ಳಿ,ಬಂಗಾರದ ಒಡವೆಗಳನ್ನು ಮಾರಿ, ಆಭರಣಗಳನ್ನು ಕರಗಿಸಿ ಶತ್ರುಗಳನ್ನು ಎದುರಿಸಲು ಯಥಾಶಕ್ತಿ ನಿಧಿಯನ್ನು ಒಟ್ಟುಗೂಡಿಸಿಕೊಟ್ಟರು. ಇಂತಹ ಅಭೂತಪೂರ್ವ ರಾಷ್ಟ್ರಪ್ರೇಮ, ಐಕ್ಯತೆ ವಿಜೃಂಭಿಸಿದ್ದರೂ, ಸ್ವತಃ ಮಹಾಶೂರನಾಗಿದ್ದ ಆನಂದಪಾಲನೇ ಮಹಾ ಸೇನೆಯ ನೇತೃತ್ವ ವಹಿಸಿದ್ದಾಗ್ಯೂ ವಿಧಿ ಬೇರೊಂದು ಬಗೆಯಿತು. ಮಹಮ್ಮದ್ ತ್ವರಿತವಾಗಿ ದಾಳಿ ಮಾಡುವ ತನ್ನ ನುರಿತ ಬಿಲ್ಲುಗಾರರನ್ನು ಒಮ್ಮೆಲೇ ದಾಳಿ ಮಾಡುವಂತೆ ಪ್ರೇರೇಪಿಸಿದ. ಅವರೆಲ್ಲಾ ಕ್ಷಣಾರ್ಧದಲ್ಲಿ ಸತ್ತು ಬಿದ್ದರು. ಹೊತ್ತು ಕಳೆಯುತ್ತಿದ್ದಂತೆ ಮಹಮ್ಮದನ ಕಡೆಯ ಅತಿರಥ ಮಹಾರಥರೆಲ್ಲಾ ನೆಲಕ್ಕೊರಗಿದರು. ಇನ್ನೇನು ಸೋತು ನೆಲಕ್ಕಚ್ಚಿ ತನ್ನ ಪಾಡು ನಾಯಿಪಾಡಾಗುತ್ತದೆ ಎನ್ನುವಾಗ ಮಹಮ್ಮದ ತನ್ನ ಕಡೆಯ ಆಯ್ದ ಸೈನಿಕರಿಗೆ ನೇರವಾಗಿ ಆನಂದಪಾಲ ಕುಳಿತ ಆನೆಯ ಮೇಲೆ ದಾಳಿ ಮಾಡುವಂತೆ ಕಳುಹಿದ. ಶತ್ರು ಸೈನಿಕರ ಈಟಿಗೆ ಆನಂದಪಾಲ ಕುಳಿತಿದ್ದ ಆನೆ ಗಾಯಗೊಂಡು ಓಡಲಾರಂಭಿಸಿದಾಗ ರಾಜನೇ ಪಲಾಯನ ಮಾಡುತ್ತಿದ್ದಾನೆಂದು ಅರಿತ ಅವನ ಸೈನ್ಯ ಕಕ್ಕಾಬಿಕ್ಕಿಯಾಯಿತು. ಮೊದಲೇ ಧೂರ್ತನಾಗಿದ್ದ ಗಜನಿ ಈ ಗೊಂದಲದ ಪರಿಸ್ಥಿತಿಯನ್ನು ತನಗೆ ಅನುಕೂಲಕರವಾಗುವಂತೆ ಬಳಸಿ ಯುದ್ಧದಲ್ಲಿ ಜಯಶಾಲಿಯಾದ. ಪರಾಭವಗೊಂಡ ಸೈನ್ಯವನ್ನು ಹಿಂದೂ ರಾಜರಂತೆ ಕ್ಷಮಿಸಿ ಬಿಟ್ಟುಬಿಡದೆ ಅವರ ಬೆನ್ನ ಹಿಂದೆ ಬಿದ್ದು ಬೇಟೆಯಾಡಿ ಇಪ್ಪತ್ತು ಸಾವಿರ ಸೈನಿಕರ ಮಾರಣಹೋಮ ಮಾಡಿದ. ಹೀಗೆ ತಾನು ಸೋಲಿಸಿದೆ ಎಂದು ಗರ್ವಪಟ್ಟ ಶತ್ರುವಿನ ಕೈಯಲ್ಲೇ ಆನಂದಪಾಲ ಸೋಲಲ್ಪಟ್ಟ. ಐವತ್ತು ಗಜ ಹಾಗೂ ಪ್ರತಿವರ್ಷ ಸುಲ್ತಾನನ ಸೇವೆ ಮಾಡಲು ಎರಡು ಸಾವಿರ ಜನರನ್ನು ಸರಬರಾಜು ಮಾಡುವ ಸಂಧಿಯೊಂದಿಗೆ ಸಾಮಂತನಾಗಿಬಿಟ್ಟ. ಮುಂದಿನ ಭಾರತವೀರರು ಈ ಘಟನೆಯಿಂದ ಪಾಠ ಕಲಿಯಬೇಕಿತ್ತು. ಹೀಗೆ ಗಜನಿಗೆ ಮಣ್ಣುಮುಕ್ಕಿಸಿದವನೊಬ್ಬನಿದ್ದ...ಆದರೆ ಇತಿಹಾಸಕಾರರ ತಿರುಚುವಿಕೆಗೆ ಸಿಲುಕಿ ಮಣ್ಣಾಗಿ ಹೋದ!

             ಈ ಸೋಲಿನ ನಂತರ ಷಾಹಿಗಳು ತಮ್ಮ ರಾಜಧಾನಿಯನ್ನು ನಂದನಕ್ಕೆ ಬದಲಿಸಿಕೊಂಡರಾದರೂ ಗಜನಿಗೆ ಅಡಿಗಡಿಗೆ ತಡೆಯಾಗಿ ನಿಂತರು. ಆನಂದಪಾಲನ ಮಗ ತ್ರೀಲೋಚನಪಾಲ ಕ್ರಿ.ಶ 1013ರಲ್ಲಿ ಕಾಶ್ಮೀರದ ಪ್ರಧಾನಿಯ ಸಹಾಯ ಪಡೆದು ಗಜನಿಯನ್ನು ದಿಟ್ಟವಾಗಿ ಎದುರಿಸಿದ. ಹಲವು ದಿನಗಳವರೆಗೆ ಯುದ್ಧ ನಡೆಯಿತು. ಇಲ್ಲೂ ಮೋಸದಿಂದ ಗಜನಿ ಜಯಶಾಲಿಯಾದ. ಆತನ ಮಗ ಭೀಮಪಾಲ ಲೋಹರ ಅಥವಾ ಲೋಹಕೋಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳುತ್ತಿದ್ದ ವೇಳೆಯಲ್ಲಿ(ಕ್ರಿ.ಶ.1015) ಗಜನಿ ಹರಸಾಹಸ ಪಟ್ಟರು ಆತನ ಕೂದಲು ಕೊಂಕಿಸಲಾಗಲಿಲ್ಲ. ಹೇಗೋ ಬಚಾವಾದ ಗಜನಿ ನಿರಾಶನಾಗಿ ತನ್ನ ಊರು ಸೇರಿಬಿಟ್ಟ. ಷಾಹಿಗಳು ಲೋಹರಾದಿಂದ ಆಚೆಗೆ ಗಜನಿಯನ್ನು ಹೋಗಗೊಡಲೇ ಇಲ್ಲ. ಅತ್ತ ಗಜನಿಗೂ ಅವರನ್ನು ಲೋಹರಾದಿಂದ ನಿರ್ಮೂಲನೆಗೊಳಿಸಲಾಗಲಿಲ್ಲ. ಆದರೆ ಸತತ ಯುದ್ಧಗಳ ಬಳಿಕ 1021ರಲ್ಲಿ ತ್ರಿಲೋಚನಪಾಲ ಹಾಗೂ 1026ರಲ್ಲಿ ಭೀಮಪಾಲನನ್ನು ಕೊಲೆಗೈದ ಗಜನಿ ಕಾಶ್ಮೀರದ ಬಾಗಿಲಿಗೆ ಬಂದು ಮುಟ್ಟಿದ. ವರ್ಷಗಳ ಬಳಿಕ ಆಲ್ಬೆರೂನಿ ಬರೆಯುತ್ತಾನೆ- "ಷಾಹಿಗಳ ರಾಜವಂಶ ಈಗ ನಿರ್ನಾಮವಾಗಿದೆ. ಆದರೆ ತಾವಿದ್ದಷ್ಟು ದಿನ ಪರಮ ವೈಭವದಿಂದ ಪರಾಕ್ರಮದಿಂದ ಬದುಕಿದ ಷಾಹಿಗಳು ಉದಾತ್ತ ಮನೋಭಾವವನ್ನು, ಉದಾತ್ತ ಗುಣಧರ್ಮವನ್ನೂ ಹೊಂದಿದ್ದ ಮಹಾಪುರುಷರಾಗಿದ್ದರು." ಸುಮಾರು ಐವತ್ತು ವರ್ಷಗಳಿಗೂ ಅಧಿಕ ಕಾಲ ಸತತವಾದ ವಿದೇಶೀ ಆಕ್ರಮಣಕ್ಕೆ ತಡೆಯೊಡ್ಡಿದ ಷಾಹಿ ರಾಜವಂಶ ಮಾತೃಭೂಮಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಸಮರ್ಪಿಸಿತು. ಭಾರತೀಯ ಅರಸರು ವಿದೇಶೀ ಆಕ್ರಮಣದ ವಿರುದ್ಧ ಸೆಟೆದು ನಿಲ್ಲಲಿಲ್ಲ ಎಂದು ಹೇಳಿದ ಮೂರ್ಖರಿಗೆ ಇದು ಅರ್ಥವಾದೀತೇ?

ಯಾರು ಮಹಾತ್ಮ? ಭಾಗ-೨೫

ಯಾರು ಮಹಾತ್ಮ?

ಭಾಗ-೨೫

 
                  ಬೇಡುವುದು ಹಾಗೂ ಬ್ರಿಟಿಷರನ್ನು ಸಂತೋಷಗೊಳಿಸುವ ಕ್ರಮದ ಮೂಲಕ ಕಾಂಗ್ರೆಸ್ ಭಿಕ್ಷುಕರ ಪಕ್ಷವಾಗುವ ಮಟ್ಟಕ್ಕೆ ಇಳಿಯುವುದನ್ನು  ತಿಲಕರು ಎಂದೂ ಬಯಸುತ್ತಿರಲಿಲ್ಲ(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ತಿಲಕರ ಬಳಿಕ ಕಾಂಗ್ರೆಸ್ ಬ್ರಿಟಿಷರ ಮುಂದೆ ಮಂಡಿಯೂರಿತು.  1939ರಲ್ಲಿ ಬೋಸ್ ಗಾಂಧಿಯ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷಗಿರಿಗೆ ನಡೆದ ಚುನಾವಣೆಯಲ್ಲಿ ಗೆದ್ದರು. "ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಕೂಡಲೇ ಹೋರಾಟ ಕೈಗೆತ್ತಿಕೊಳ್ಳಬೇಕು. ಭಾರತವನ್ನು ತೊರೆಯಲು ಬ್ರಿಟಿಷರಿಗೆ ಅಂತಿಮ ಗಡುವು ನೀಡಬೇಕು" ಎಂದು ಅವರು ಘೋಷಿಸಿದರು. ಅಲ್ಲದೆ ಕೆಲವು ಕಾಂಗ್ರೆಸ್ ನಾಯಕರು ಬ್ರಿಟಿಷ್ ಸಾಮ್ರಾಜ್ಯಶಾಹಿ ಜೊತೆ ಶಾಮೀಲಾಗಿದ್ದಾರೆ ಎಂದೂ ಆಪಾದಿಸಿದರು. ಈ ಮಾತು ಗಾಂಧಿಯನ್ನು ಕುರಿತೇ ಹೇಳಿದುದಾಗಿತ್ತು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರೀಖ್ ಅಲಿ). ಬ್ರಿಟಿಷರ ಜೊತೆ ಹೊಂದಾಣಿಕೆಗೆ ಕಾಂಗ್ರೆಸ್ ಪಕ್ಷ ಸಿದ್ಧವಿತ್ತು. "ಗೌರವಯುತ ಒಪ್ಪಂದ ಸಾಧ್ಯವಾಗುವುದಾದರೆ ಬ್ರಿಟಿಷರ ಜೊತೆ ರಾಜಿಗೆ ನಾವು ಸಿದ್ಧ" ಎನ್ನುವುದು ಗಾಂಧಿಯ ನಿಲುವಾಗಿತ್ತು(ಲೈಫ್ ಹಿಸ್ಟರಿ ಆಫ್ ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ).

               ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಭೂತಪೂರ್ವ ಕಾಣಿಕೆ ನೀಡಿದ ಸಶಸ್ತ್ರ ಹೋರಾಟವನ್ನು ಗಾಂಧಿ ಟೀಕಿಸಿದರು. ಅದನ್ನು ವ್ಯರ್ಥಗೊಳಿಸಲು ತಮ್ಮಿಂದಾದ ಪ್ರಯತ್ನ ಮಾಡಿದರು. "ಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸುವುದಕ್ಕಿಂತ ಸಾವಿರ ವರ್ಷವಾದರೂ ಸರಿ, ಅಹಿಂಸಾ ವಿಧಾನದಿಂದ ಸ್ವಾತಂತ್ರ್ಯ ಗಳಿಸುವುದೇ ಮೇಲು" ಎನ್ನುತ್ತಿದ್ದರವರು. ದೇಶೀಯರನ್ನು ದಾಸ್ಯದಿಂದ ಬಿಡುಗಡೆ ಮಾಡುವುದಕ್ಕಿಂತ ತಮ್ಮ ತಥಾಕಥಿತ ಅಹಿಂಸಾ ಸಿದ್ಧಾಂತವೇ ಅವರಿಗೆ ಮುಖ್ಯವಾಯಿತು. ಕ್ರಾಂತಿಕಾರಿಗಳನ್ನು ತಮಗೆ ಸಿಕ್ಕ ವೇದಿಕೆ ಹಾಗೂ ಮಾಧ್ಯಮಗಳ ಮೂಲಕ ಖಂಡಿಸುತ್ತಾ ದೂಷಿಸುತ್ತಿದ್ದರು ಗಾಂಧಿ. ಈ ಕದನ ಕಲಿಗಳಿಗೆ ದೇಶೀಯರ ಹೃದಯದಲ್ಲಿ ಅಗಾಧ ಬೆಂಬಲ ಇದ್ದಾಗ್ಯೂ ಗಾಂಧಿ ಕ್ರಾಂತಿಕಾರಿಗಳಿಗೆ ಪ್ರೇರಣಾ ಸ್ತ್ರೋತರಾದ ಶಿವಾಜಿ, ರಾಣಾ ಪ್ರತಾಪ, ಗುರು ಗೋವಿಂದ ಸಿಂಗರಂತಹ ಮಹಾಪುರುಷರನ್ನು ಟೀಕಿಸಲು ಆರಂಭಿಸಿದರು. ಅವರನ್ನು "ಹಾದಿ ತಪ್ಪಿದ ದೇಶಭಕ್ತರು" ಎಂದೂ ಜರೆದರು. ಸರಕಾರ ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸತೊಡಗಿದಾಗ ಪ್ರತಿರೋಧ ಬಿಡಿ, ಕನಿಷ್ಟ ಸಂತಾಪವನ್ನೂ ವ್ಯಕ್ತಪಡಿಸಲಿಲ್ಲ.

               ಕಾಂಗ್ರೆಸ್ಸಿನ ಮಂದಗಾಮಿ ನಡೆಯನ್ನು ಬೋಸ್ ಯಾವಾಗಲೂ ಉದಾಸೀನ ಭಾವ ಎನ್ನುವಂತೆ ಲೇವಡಿ ಮಾಡುತ್ತಿದ್ದರು. ಬ್ರಿಟಿಷರ ವಿರುದ್ಧ ಕೆಂಡಕಾರುವ ಹೇಳಿಕೆ ನೀಡುತ್ತಿದ್ದ ಅವರನ್ನು ಕಂಡರೆ ಸಹಜವಾಗಿಯೇ "ತನ್ನದೇ ನಡೆಯಬೇಕು" ಎನ್ನುವ ಭಾವದ ಗಾಂಧಿ ಹಾಗೂ ಅವರ ಅನುಯಾಯಿಗಳಿಗೆ ಸದಾ ಇರಿಸುಮುರಿಸು ಉಂಟಾಗುತ್ತಿತ್ತು. ಬೋಸ್ ಗಾಂಧಿ ನೇತೃತ್ವದ ಅಭ್ಯರ್ಥಿಯ ವಿರುದ್ಧ ಭಾರೀ ಅಂತರದಿಂದ ಗೆದ್ದು ಎರಡನೇ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದರೊಂದಿಗೆ ಈ ವಿರಸ ತಾರಕಕ್ಕೇರಿತು. ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು  ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಬೋಸ್ ತಾವಾಗಿ ಹೊರ ಹೋದ ಮೇಲೂ ಗಾಂಧಿಗೆ ಅವರ ಮೇಲಿನ ದ್ವೇಷ ಕಡಿಮೆಯಾಗಲಿಲ್ಲ. ಬೋಸ್'ರನ್ನು ಕಾಂಗ್ರೆಸ್ಸಿನಿಂದ ಉಚ್ಛಾಟಿಸಲಾಯಿತು. ಮೂರು ವರ್ಷಗಳವರೆಗೆ ಅವರು ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೆ ಆಯ್ಕೆಯಾಗುವ ಹಕ್ಕನ್ನು ಕಸಿದುಕೊಳ್ಳಲಾಯಿತು. (ಇಂಡಿಯನ್ ಪೊಲಿಟಿಕಲ್ ಟ್ರಡಿಷನ್ಸ್ - ಎಚ್.ಎಚ್. ದಾಸ್ & ಪಿ.ಎಸ್.ಎನ್. ಪಾತ್ರೋ)(ನೇತಾಜಿ ಸುಭಾಷ್ ಚಂದ್ರ ಬೋಸ್ - ತಾತ್ಸೋ ಹಯಾಶಿದಾ)

               ಗಾಂಧಿಯ ನೇತೃತ್ವದಲ್ಲಿ 1942ರಲ್ಲಿ ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿತು. ಆಂದೋಲನಕ್ಕೆ ಚಾಲನೆ ಸಿಗುವ ಮುನ್ನವೇ ಸರ್ಕಾರ ಕಾಂಗ್ರೆಸ್ಸಿನ ಬಹುತೇಕ ನಾಯಕರನ್ನು ಬಂಧಿಸಿತು. ಕಾಂಗ್ರೆಸ್ಸಿನ ಇನ್ನೊಂದು ವರ್ಗ ಭೂಗತವಾಯಿತು. ಗಾಂಧಿಯ ಕಾರ್ಯತಂತ್ರವನ್ನು ಅನುಸರಿಸಿ ಜೈಲಿಗೆ ಹೋಗುವ ಬದಲು ಸಂಪರ್ಕ ಹಾಳುಗೆಡಹುವುದು, ಬೆಂಕಿ ಹಚ್ಚುವುದು, ಲೂಟಿ, ಕೊಲೆಗಳ ಮೂಲಕ ಸರ್ಕಾರಕ್ಕೆ ಗರಿಷ್ಟ ಹಾನಿಯನ್ನುಂಟು ಮಾಡುವುದು ಅವರ ಉದ್ದೇಶವಾಗಿತ್ತು. ಬಿಹಾರ ಹಾಗೂ ಆಸುಪಾಸಿನಲ್ಲಿ ಸುಮಾರು 900 ರೈಲ್ವೇ ನಿಲ್ದಾಣಗಳಿಗೆ ಬೆಂಕಿ ಹಚ್ಚಲಾಯಿತು. ಅನೇಕ ಸಮಯದವರೆಗೆ ಆಡಳಿತಯಂತ್ರ ಸ್ಥಬ್ಧಗೊಂಡಿತ್ತು. ಇವೆಲ್ಲವೂ ಗಾಂಧಿಯ ಅಹಿಂಸಾ ವಿಧಾನಕ್ಕೆ ಸಂಪೂರ್ಣ ವಿರುದ್ಧವಾಗಿದ್ದವು. ಗಾಂಧಿ ಇವನ್ನು ಸಮರ್ಥಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ವಿರೋಧಿಸಿದರೆ ದೇಶೀಯರ ತಾತ್ಸಾರಕ್ಕೆ, ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತಿತ್ತು. ಸಮರ್ಥಿಸಿದರೆ ಅವರ ಅಹಿಂಸಾವಾದದ ಪೊಳ್ಳುತನ ಬಯಲಾಗುತ್ತಿತ್ತು. ಗಾಂಧಿ 'ಮಾಡು ಇಲ್ಲವೇ ಮಡಿ' ಕರೆ ನೀಡಿದ್ದನ್ನು ಜನ ಹಿಂಸಾತ್ಮಕ್ಕೆ ಹೋರಾಟಕ್ಕೆ ನಡೆದ ಅನುಮತಿ ಎಂದೇ ತಿಳಿದುಕೊಂಡರು. ಹಾಗೂ ಎಲ್ಲಾ ರೀತಿಯ ಹಿಂಸಾ ಚಟುವಟಿಕೆಗೆ ಮುಂದಾದರು. ಹೀಗೆ ಆಂದೋಲನ ಆರಂಭವಾದ ಕೆಲವೇ ವಾರಗಳಲ್ಲಿ ಗಾಂಧಿಯ ಅಹಿಂಸಾ ಸಿದ್ಧಾಂತ ಮಣ್ಣುಗೂಡಿತು. 1943ರಲ್ಲಿ ಲಾರ್ಡ್ ಲಿಲಿನ್ತೋ ಗಾಂಧಿಗೆ ಬರೆದ ಪತ್ರದಲ್ಲಿ "ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಗಾಂಧಿಯ ಬೆಂಬಲಿಗರು ನಡೆಸಿದ ಹಿಂಸಾಚಾರಗಳನ್ನು ಒಪ್ಪಿಕೊಳ್ಳುವಂತೆ ಅಥವಾ ನಿರಾಕರಿಸುವಂತೆ" ಸವಾಲು ಹಾಕಿದ. ಆಗ ಗಾಂಧಿ ಬಲವಂತವಾಗಿ ಹಿಂಸೆಯನ್ನು ಖಂಡಿಸಬೇಕಾಯಿತು. ಅಂದರೆ ತಮ್ಮ ಗೊಡ್ಡು ವಿಚಾರಗಳ ಗೆಲುವಿಗಾಗಿ ಸ್ವಾತಂತ್ರ್ಯ ಹೋರಾಟವನ್ನೂ ವಿರೋಧಿಸುವ ನಿಲುವಿಗೂ ಗಾಂಧಿ ಬಂದಿದ್ದರು! ತಮ್ಮದೇ ಅಹಿಂಸಾ ಮಾದರಿಯ ಹೋರಾಟಗಳು ಒಂದರ ಹಿಂದೆ ಒಂದು ವಿಫಲವಾಗುತ್ತಿದ್ದರೂ, ಅಹಿಂಸೆಯ ಹೋರಾಟವೇ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಹಿಂಸಾತ್ಮಕವಾಗಿ ಬದಲಾಗಿದ್ದರೂ ಗಾಂಧಿ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ಪ್ರೋತ್ಸಾಹಿಸಲೇ ಇಲ್ಲ.

                     ಅತ್ತ ಸುಭಾಷ್, ರಾಸ್ ಬಿಹಾರಿ ಬೋಸರಿಂದ ಇಂಡಿಯನ್ ಇಂಡಿಪೆಂಡೆನ್ಸ್ ಲೀಗಿನ ನೇತೃತ್ವವನ್ನು ವಹಿಸಿಕೊಂಡು ಐ.ಎನ್.ಎ ಕಟ್ಟಿ ಭಾರತದತ್ತ ದಾಳಿಗೆ ಮುಂದುವರಿಯುತ್ತಿರುವುದನ್ನು ಗಾಂಧಿ ಹಾಗೂ ಅವರ ಶಿಷ್ಯ ನೆಹರೂ ವಿರೋಧಿಸಿದರು. ಸುಭಾಷರು ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಅವರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಉತ್ತರ ಕುಮಾರ ನೆಹರೂ "ನಿಮ್ಮ ಯುದ್ಧಾಪರಾಧಿ ಸುಭಾಷ್ ಬೋಸ್'ಗೆ ರಷ್ಯಾ ಆಶ್ರಯ ನೀಡಿದೆ. ವಿಚಾರಿಸಿಕೊಳ್ಳಿ" ಎಂದು ಪತ್ರವನ್ನೂ ಬರೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ತನ್ನದೇ ದೇಶೀಯನನ್ನು ಯುದ್ಧಾಪರಾಧಿ ಎಂದು ಕರೆದು, ಆತನ ವಿರುದ್ಧ ಕತ್ತಿ ಮಸೆದದ್ದು ಮಾತ್ರವಲ್ಲ, ಆತನಿಗೆ ಇಂತಹವರು ಆಶ್ರಯ ಕೊಟ್ಟಿದ್ದಾರೆ, ವಿಚಾರಿಸಿಕೊಳ್ಳಿ ಎಂದಾತ ಈ ದೇಶದ ಮೊದಲ ಪ್ರಧಾನಿಯಾದ! "ಬೋಸ್ ಶೂರತನ ವೈಭವೀಕರಿಸುವ ಪ್ರಚಾರ ಮತ್ತಷ್ಟು ನಡೆದಲ್ಲಿ, ಹೂವಿನ ಗುಚ್ಛ ನೀಡಿದಂತೆ ದೇಶದ ನಾಯಕತ್ವವನ್ನು ಅವರಿಗೆ ನೀಡಲು ದಾರಿ ಮಾಡಿದಂತೆ" ಎಂದು ಗಾಂಧಿಗೆ ಮೌಂಟ್ ಬ್ಯಾಟನ್ ಎಚ್ಚರಿಕೆ ನೀಡಿದ್ದ.(ನೇತಾಜಿ ಸುಭಾಷ್ ಚಂದ್ರ ಬೋಸ್ - ಪಿ. ಗೋಪಿ ರೆಡ್ಡಿ)

                   ಅಲ್ಲಾ, ಮೌಂಟ್ ಬ್ಯಾಟನ್ ಗಾಂಧಿಗೆ ಯಾಕೆ ಎಚ್ಚರಿಕೆ ಕೊಡಬೇಕು? ಮೌಂಟ್ ಬ್ಯಾಟನ್ ಸುಭಾಷರಿಗೂ ಗಾಂಧಿಗೂ ಸಮಾನ ವೈರಿಯಲ್ಲವೇ? ಹಾಗಿದ್ದಲ್ಲಿ ಆತ ಗಾಂಧಿಗೆ ಯಾಕೆ ಈ ರೀತಿ ಎಚ್ಚರಿಕೆ ಕೊಡುತ್ತಾನೆ? ಆತ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದ ಎನ್ನೋಣವೇ? ನಾಯಕರ ಮಧ್ಯೆ ಅದರಲ್ಲೂ ಸುಭಾಷರು ಹಾಗೂ ಗಾಂಧಿಯ ನಡುವೆ ಒಡಕು ತರುವುದರಿಂದ ಆತನಿಗೇನೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಗಾಂಧಿ - ಸುಭಾಷರ ನಡುವಿನ ಒಡಕು ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಅಲ್ಲದೆ ಸುಭಾಷರನ್ನು ಹತ್ತಿಕ್ಕಲು ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರು ಗಾಂಧಿ. ಸುಭಾಷರ ಸ್ವಾತಂತ್ರ್ಯ ಹೋರಾಟಕ್ಕೇ ಇತಿಶ್ರೀ ಹಾಡಲೂ ಗಾಂಧಿ ಪ್ರಯತ್ನಿಸಿದ್ದರು. ಈ ಎಲ್ಲಾ ಬಿಂದುಗಳನ್ನು ರೇಖೆಗಳೊದಿಗೆ ಜೋಡಿಸಿದಾಗ ಅದು ಕೊನೆಗೆ ಹೋಗಿ ನಿಲ್ಲುವುದು ಸ್ವಾರ್ಥ-ಅಧಿಕಾರ ದಾಹ-ಪ್ರಸಿದ್ಧಿಯ ಹುಚ್ಚು ಎನ್ನುವ ಮೂರು ಅಂಶಗಳ ವ್ಯಕ್ತಿತ್ವಕ್ಕೆ! ಅಂದರೆ ಗಾಂಧಿ ಅಧಿಕಾರಕ್ಕೋಸ್ಕರ ಬ್ರಿಟಿಷರ ಜೊತೆ ಕೈ ಮಿಲಾಯಿಸಿದ್ದರು, ತಮಗೆ ಅಥವಾ ತಮಗೆ ಬೇಕಾದವರಿಗೆ ಅಧಿಕಾರವನ್ನು ಹಸ್ತಾಂತರಿಸಲು ನಾಟಕವಾಡುತ್ತಿದ್ದರು ಎನ್ನುವ ಅರ್ಥ ಇದರಿಂದ ಹೊರಹೊಮ್ಮುತ್ತದಲ್ಲವೇ?


ಗುರುವಾರ, ನವೆಂಬರ್ 17, 2016

ಯಾರು ಮಹಾತ್ಮ? ಭಾಗ- ೨೪

ಯಾರು ಮಹಾತ್ಮ?
ಭಾಗ- ೨೪


          1947 ಕಾಂಗ್ರೆಸ್ 12ರಂದು ಕಾಂಗ್ರೆಸ್ ಧುರೀಣರು ಹರಿದ್ವಾರಕ್ಕೆ ಭೇಟಿ ನೀಡಿದಾಗ ಹಿಂದೂ ನಿರಾಶ್ರಿತರ ದೊಡ್ಡ ಗುಂಪೊಂದು ಎದುರಾಯಿತು. ಮುಸ್ಲಿಮ್ ಲೀಗಿನ ನೇರ ಕಾರ್ಯಾಚರಣೆಯಿಂದ ಮನೆ, ಆಸ್ತಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಅವರಿಗೆ ಸಹಜವಾಗಿಯೇ ಗಾಂಧಿಯ ಮೇಲೆ ಸಿಟ್ಟಿತ್ತು. ಗಾಂಧಿಯನ್ನು ಕಂಡಕೂಡಲೇ ಅವರಿಂದ "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆ ಅವರಿಂದ ಹೊರಹೊಮ್ಮಿತು. ಇದೇ ಪರಿಸ್ಥಿತಿ ಗಾಂಧಿ ಪಂಜಾಬ್-ಸಿಂಧ್ ಪ್ರವಾಸದಲ್ಲಿರುವಾಗಲೂ ಎದುರಾಯಿತು. ಅಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿ ಯಾವುದೇ ಭಾಷಣ ಮಾಡದೆ ಗಾಂಧಿ ದೆಹಲಿಗೆ ವಾಪಸಾಗಬೇಕಾಯಿತು.


             ಆಚಾರ್ಯ ಕೃಪಲಾನಿ 1947ರ ಜೂನ್ 14ರಂದು ನಡೆದ ಎಐಸಿಸಿ ಅಧಿವೇಶನದಲ್ಲಿ ವಿಭಜನೆಯ ಬಗೆಗಿನ ಗಾಂಧಿ ದೃಷ್ಟಿಕೋನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ದೇಶ ವಿಭಜನೆ ಕುರಿತ ಗಾಂಧಿ ನಿಲುವು ಅಪ್ರಾಯೋಗಿಕ. ಕಳೆದ ಮೂವತ್ತು ವರ್ಷಗಳಿಂದ ಗಾಂಧಿಯ ಮೇಲೆ ರಾಜಕೀಯ ನಿಷ್ಠೆ ಹೊಂದಿದ್ದರೂ ಇಂದು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಸಮಸ್ಯೆಗಳನ್ನು ಸಾಮೂಹಿಕ ಆಧಾರದ ಮೇಲೆ ಬಗೆಹರಿಸುವ ದಾರಿ ಗಾಂಧಿಗೆ ತಿಳಿದಿಲ್ಲ. ಅವರು ನಮಗೆ ತೋರಿದ ಅಹಿಂಸೆ, ಅಸಹಕಾರಗಳನ್ನು ಯಾಂತ್ರಿಕವಾಗಿಯಾದರೂ ಅನುಸರಿಸುತ್ತಿದ್ದರು. ಇಂದು ಅವರೇ ಸ್ವತಃ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಪಂಜಾಬಿನ ಹಿಂಸೆಯನ್ನು ಶಮನಗೊಳಿಸಲು ಅವರ ಅಹಿಂಸೆ-ಅಸಹಕಾರಗಳಿಗೆ ಸಾಧ್ಯವಾಗಲಿಲ್ಲ. ಇಡೀ ಭಾರತದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆಯನ್ನು ಸಾಧಿಸುವ ಸಲುವಾಗಿ ತಾವು ಬಿಹಾರದಲ್ಲಿ ಪ್ರಯತ್ನಿಸುವುದಾಗಿ ಗಾಂಧಿ ಹೇಳುತ್ತಾರೆ. ಇದು ಹೇಗೆ ಸಾಧ್ಯ? ಸಾಮಾನ್ಯನಿಗೂ ಗೊತ್ತು ಇದು ಅಪ್ರಾಯೋಗಿಕ ಎಂದು. ಉದ್ದೇಶಿತ ಗುರಿ ಸಾಧಿಸಲು ಗಾಂಧಿಯಲ್ಲಿ ಖಚಿತ ಹೆಜ್ಜೆಗಳೇ ಇಲ್ಲ. ಅವರು ನೀತಿಗಳನ್ನು ರೂಪಿಸುತ್ತಾರೆ. ಆದರೆ ಅವು ಬೇರೆಯವರಿಂದ ಜಾರಿಯಾಗಬೇಕೆಂದು ಬಯಸುತ್ತಾರೆ." "ಹೃದಯದ ಏಕತೆ ಸಾಧಿಸುವ ಮೂಲಕ ವಿಭಜನೆಯ ಪರಿಣಾಮಗಳನ್ನು ತಟಸ್ಥಗೊಳಿಸಿ. ಕೆಲಸಕಾರ್ಯಗಳ ಮುಖಾಂತರ ಎರಡು ದೇಶ ಸಿದ್ಧಾಂತವನ್ನು ಖಂಡಿಸಿ" ಎಂದು ಬಿಟ್ಟಿ ಸಲಹೆ ನೀಡಿದಾಗ ವಿಭಜನೆಯ ಪ್ರಸ್ತಾಪ ವಿರೋಧಿಸಿದ ಜನ ತಿರುಗಿ ಬೀಳದೆ ಇರುತ್ತಾರೆಯೇ? ಮೇಲಿಂದ ಮೇಲೆ ವಿರೋಧ ಎದುರಿಸಿದಾಗ ತಮ್ಮ ದಾರಿ ಸರಿಯಾಗಿಯೇ ಇದೆ ಎಂದು ಗಾಂಧಿ ಭಾವಿಸಿದರು. ಮತ್ತೆ ತಮ್ಮ ದಾರಿಯಲ್ಲೇ ಸಾಗಿದರು(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                 ವಿಭಜನೆಯ ನಿರ್ಣಯವನ್ನು ಕೊನೆಗಾಣಿಸುವವರೆಗೆ ಗಾಂಧಿಯ ಮನೆಯ ಎದುರು ಉಪವಾಸ ಕೂರಲು ಯುವ ಜೋಡಿಯೊಂದು ನಿರ್ಧರಿಸಿತು. ಆಗ ಗಾಂಧಿ "ಇದು ಸರಿಯಾದ ವಿಧಾನವಲ್ಲ. ಭೌತಿಕ ವಿಭಜನೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಪಾಕಿಸ್ತಾನ ರಚನೆಯಾಗದಂತೆ ತಡೆಯುವ ಏಕೈಕ ಮಾರ್ಗವೆಂದರೆ ಹಿಂದೂಗಳು ಮುಸ್ಲಿಮ್ ಸಹೋದರರಿಂದ ಬೇರೆಯಾಗದೇ ಇರುವುದು. ಹಿಂದೂಗಳ ಹೃದಯ ಗಟ್ಟಿಯಾಗಿ ಇದ್ದರೆ ಭೌತಿಕ ವಿಭಜನೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ." ಎಂದು ಸಮಾಧಾನಿಸಲು ಯತ್ನಿಸಿದರು ಗಾಂಧಿ. ಇಲ್ಲಿ ಗಾಂಧಿಯ ಕಪಟತ್ವ ಬೆಳಕಿಗೆ ಬರುತ್ತಿದೆ. ವಿಭಜನೆಯಾದರೆ ನನ್ನ ದೇಹದ ಮೇಲೆ ಎಂದಾತ ಈಗ ಅದು ಕೇವಲ ಭೌತಿಕ ವಿಭಜನೆಯಷ್ಟೇ ಎಮ್ದು ತಿಪ್ಪೆ ಸಾರಿಸುತ್ತಿದ್ದಾರೆ. ಅಲ್ಲದೆ ಆ ವಿಭಜನೆಯಿಂದ ಭಾರತಕ್ಕೇನೂ ಹಾನಿಯಿಲ್ಲ ಎನ್ನುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರೇನೇ ಹಾನಿ ಮಾಡಿದರೂ ಹಿಂದೂಗಳು ಮುಸ್ಲಿಮರ ಜೊತೆಯಾಗಿ ಇರಬೇಕಂತೆ! ಗಾಂಧಿಗೆ ದೇಶಕ್ಕಿಂತ ಹಿಂದೂ-ಮುಸ್ಲಿಮ್ ಏಕತೆಯ ಹುಚ್ಚೇ ತೀವ್ರವಾಗಿತ್ತು ಎನ್ನುವುದರ ದ್ಯೋತಕ ಇದು. ರಾಜತಾಂತ್ರಿಕವಾಗಿ ಕಾರ್ಯ ನಿರ್ವಹಿಸಬೇಕಾದ ಹೊತ್ತಿನಲ್ಲಿ ಎಲ್ಲಾ ಬಿಟ್ಟವರಂತೆ ಮಾತನಾಡುತ್ತಿದ್ದಾರೆ ಗಾಂಧಿ. ಕ್ಷಾತ್ರವನ್ನು ಪ್ರದರ್ಶಿಸಬೇಕಾದ ಸಮಯದಲ್ಲಿ ವೇದಾಂತ ಹೇಳುತ್ತಿದ್ದಾರೆ. ಇದು ಗಾಂಧಿಯ ನಾಯಕತ್ವದ ವೈಫಲ್ಯದ ಲಕ್ಷಣ. ಆ ಯುವ ಜೋಡಿ ತಾವು ತಮ್ಮ ಆತ್ಮಸಾಕ್ಷಿ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ಗಾಂಧಿಯ ಮಂತ್ರವನ್ನೇ ತಿರುಗಿ ಉಪಯೋಗಿಸಿದಾಗ ಗಾಂಧಿಯ ಮುಖ ಪೆಚ್ಚಾಗದೇ ಇದ್ದೀತೇ? (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                ದೇಶ ವಿಭಜನೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದ ಗಾಂಧಿ ವಿಭಜನೆಯನ್ನು ಒಪ್ಪುವ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅಂಗೀಕರಿಸುವಂತೆ ಜನರನ್ನು ಒತ್ತಾಯಪಡಿಸಿದರು. ವಿಭಜನೆಯ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಮರುಮಾತಿಲ್ಲದೆ ಒಪ್ಪಿದ ಗಾಂಧಿ ದೇಶದ ಜನರ ಮತಭೇದವಿಲ್ಲದ ನಿರ್ಧಾರವನ್ನು ಪರಿಗಣಿಸಿ ಧ್ವಜ ಸಮಿತಿ ಶಿಫಾರಸ್ಸು ಮಾಡಿದ ಕೇಸರಿ ಬಣ್ಣದ ಧ್ವಜವನ್ನು ಯಾಕೆ ಒಪ್ಪಲಿಲ್ಲ? ಅಲ್ಲದೆ ಅದನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದೇಕೆ? ಆ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು, ಸಮಿತಿಯ ನಿರ್ಣಯವನ್ನು ತಿರಸ್ಕರಿಸಿದ ಗಾಂಧಿಗೆ ಈಗೇಕೆ ಸಾಧ್ಯವಾಗಲಿಲ್ಲ? ಗಾಂಧಿಗೆ ಕಾಂಗ್ರೆಸ್ಸಿನ ಮೇಲಿನ ಹಿಡಿತ ತಪ್ಪಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಐವತ್ತೈದು ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತು ತಮ್ಮ ನಿರ್ಧಾರವನ್ನು ಸಾಧಿಸಿಕೊಂಡ ಛಲಗಾರನಿಗೆ ದೇಶ ವಿಭಜನೆಯಂತಹ ಜೀವನ್ಮರಣದ ಪ್ರಶ್ನೆಯ ವಿಚಾರ ಬಂದ ತಕ್ಷಣ ಹಿಡಿತ ತಪ್ಪಿ ಹೋಯಿತೇ? ವಿಭಜನೆಯಾದ ಕೂಡಲೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿತ್ತು. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಬಾಕಿ ಹಣ ಕೊಡುವುದಿಲ್ಲ ಎಂದು ಭಾರತ ಸರಕಾರ ದೃಢ ನಿರ್ಧಾರ ತಾಳಿತ್ತು. ಅಂತಹ ಸಮಯದಲ್ಲಿ ಬಾಕಿ 55 ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತರು ಗಾಂಧಿ. ಗಾಂಧಿಯ ಹಠಮಾರಿ ಧೋರಣೆಗೆ ತಲೆಬಾಗಿತು ಸರಕಾರ! ಪಾಕಿಸ್ತಾನಕ್ಕೆ ಸಹಾಯಕವಾಗುವುದಾದರೆ ಮಾತ್ರ ಉಪವಾಸದ ಅಸ್ತ್ರ , ಹಿಂದೂಗಳಿಗೆ, ಹಿಂದೂಸ್ಥಾನದ ಭವಿಷ್ಯಕ್ಕಾಗುವಾಗ ಉಪವಾಸ, ಅಸಹಕಾರದ ಅಸ್ತ್ರಗಳು ಇಲ್ಲ ಎಂದರೆ ಏನರ್ಥ? ಅನುಯಾಯಿಗಳು ನೆನಪಿಸಿದರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲವೇಕೆ? ಕಾಂಗ್ರೆಸ್ ಮೇಲೆ ಹಿಡಿತವಿಲ್ಲವೆಂದಾದರೆ ಜನರನ್ನೇಕೆ ವಿಭಜನೆಗೆ ಒಪ್ಪುವಂತೆ ಒತ್ತಾಯಪಡಿಸಬೇಕಿತ್ತು? ದೇಶದ ಜನತೆ ತಮ್ಮ ಬೆಂಬಲಕ್ಕೆ ನಿಲ್ಲುತ್ತೇವೆಂದು, ಕಾರ್ಯಕರ್ತರನ್ನು ಒದಗಿಸುತ್ತೇವೆಂದು, ಧನ ಸಹಾಯವನ್ನೂ ಮಾಡುತ್ತೇವೆಂದು ಬಗೆಬಗೆಯಲ್ಲಿ ಧೈರ್ಯ ತುಂಬಿದರೂ ಗಾಂಧಿ ನಿಷ್ಕ್ರಿಯರಾದದ್ದೇಕೆ?


                    ಗಾಂಧಿ ಕೇವಲ ನಿಷ್ಕ್ರಿಯರಾದದ್ದು ಮಾತ್ರವಲ್ಲ ಜನರಲ್ಲಿ ಪಾಕಿಸ್ತಾನದ ರಚನೆಯ ಕುರಿತು ಪ್ರಚಾರ ಕಾರ್ಯವನ್ನೂ ಕೈಗೊಂಡರು. ತನಗಿಷ್ಟವಿಲ್ಲದಿದ್ದಾಗ, ತನ್ನಿಂದ ವಿಭಜನೆಯನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಾಗ ಸುಮ್ಮನೆ ಉಳಿಯಬೇಕಿತ್ತು. ಅದು ಬಿಟ್ಟು ವಿಭಜನೆಯನ್ನು ಒಪ್ಪಿಕೊಳ್ಳಿ ಎಂದು ಜನರಿಗೆ ದುಂಬಾಲು ಬಿದ್ದರು ಗಾಂಧಿ. ಅವರ ಈ ನಿಲುವು ಆಶ್ಚರ್ಯ ತರುವಂತಹದ್ದೇನಲ್ಲ. ಅಡಿಗಡಿಗೆ ಮತಾಂಧ ಮುಸ್ಲಿಮರ ಸಹಾಯಕ್ಕೆ ನಿಂತು ಹಿಂದೂಗಳನ್ನೂ, ರಾಷ್ಟ್ರೀಯವಾದಿ ಮುಸಲ್ಮಾನರನ್ನು ಕಡೆಗಣಿಸಿದ ವ್ಯಕ್ತಿಯ ಈ ನಿಲುವು ಅಸಹಜವೂ ಅಲ್ಲ. ಇಡೀ ಭಾರತ ಬೇಕಾದರೆ ಪಾಕಿಸ್ತಾನವಾಗಲಿ ಎಂದು ಹೇಳಿದ್ದ, ಭಾರತದ ಆಳ್ವಿಕೆಯನ್ನು ಹಿಂದೂಗಳಿಗೆ ಮಾರಣಾಂತಕವಾದ ಮುಸ್ಲಿಮ್ ಲೀಗಿಗೆ ವಹಿಸಿ ಜಿನ್ನಾನನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸುವಂತೆ ವೈಸ್ ರಾಯ್ ಮೌಂಟ್ ಬ್ಯಾಟನ್'ಗೆ ಸಲಹೆ ಮಾಡಿದ್ದ ಗಾಂಧಿಗೆ ದೇಶವಿಭಜನೆಯೆಂದರೆ ಮಕ್ಕಳಾಟದಂತೆ ಕಂಡಿದ್ದಿರಬಹುದು. ಹಿಂದೂಗಳನ್ನು ಸಲಾಮ್ ಮಾಡಿ, ಅಲ್ಲಾ ಹೋ ಅಕ್ಬರ್ ಎಂದು ಹೇಳಿ, ಉರ್ದು ಕಲಿಯಿರಿ, ವಂದೇ ಮಾತರಂ, ಶಿವಬಾವನಿ ಹಾಡಬೇಡಿ, ವಿಭಜನೆಯ ಮೂಲ ಬೀಜ ಇಕ್ಬಾಲನ ಕವಿತೆ ಹಾಡಿ ಎಂದ ಗಾಂಧಿಗೆ ಪಾಕಿಸ್ತಾನವೇ ಪ್ರಿಯವಾಗಿದ್ದಿರಬಹುದು. ಖಿಲಾಫತ್ ಚಳುವಳಿಯನ್ನು ಹಿಂದೂಗಳ ಮೇಲೆ ಹೇರಿ, ಕೊಲೆಗಾರ ಮೋಪ್ಲಾಗಳನ್ನು ಸೋದರರೆಂದು ಕರೆದ ವ್ಯಕ್ತಿಗೆ ಮುಸ್ಲಿಂ ಲೀಗ್ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ಏನಾಶ್ಚರ್ಯವಿದೆ? ಕಲ್ಕತ್ತಾದಲ್ಲಿ ಹಿಂದೂಗಳ ನರಮೇಧಕ್ಕೆ ಕಾರಣನಾದ ಸುಹ್ರಾವರ್ದಿಯನ್ನು ತನ್ನ ಪ್ರೀತಿಯ ಸೈನಿಕ ಎಂದ, ಶೃದ್ಧಾನಂದರ ಕೊಲೆಗಾರ ರಶೀದನನ್ನು ಸಹೋದರ ಎಂದ, ಶೌಕತ್, ಮಹಮ್ಮದ್ ಅಲಿಗೆ ಶರಣು ಬಂದ ಗಾಂಧಿಗೆ ಕೋಮುವಾದಿಯಾಗಿ ಬದಲಾದ ಜಿನ್ನಾ ಪ್ರಿಯನಾಗದೆ ಇದ್ದಾನೇ? ಬ್ರಿಟಿಷರ ಒಡೆದು ಆಳುವ ನೀತಿಗೆ ಗಾಂಧಿಯ ದಾರಿ ಸಹಾಯಕವಾಯಿತು. ವಿಚಿತ್ರವೆಂದರೆ ತನ್ನ ಪುಕ್ಕಲುತನ, ತಿಕ್ಕಲುತನ, ಅಸಹಾಯಕತನ, ಗೊಂದಲಗಳಿಂದಾಗಿ ಸಾಲು ಸಾಲು ವೈಫಲ್ಯ ಕಂಡು ಕೊನೆಗೆ ವಿಭಜನೆಯ ಶಿಲ್ಪಿಯಂತೆ ಕೆಲಸ ಮಾಡಿ ಪರೋಕ್ಷವಾಗಿ ಪಾಕಿಸ್ತಾನದ ಜನಕನಾದ ವ್ಯಕ್ತಿಯನ್ನು ರಾಷ್ಟ್ರಪಿತ ಎಂದು ಸತ್ಕರಿಸಿದ ಈ ದೇಶದ ಬೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು?

ಗುರುವಾರ, ನವೆಂಬರ್ 10, 2016

ಯಾರು ಮಹಾತ್ಮ? ಭಾಗ- ೨೩

ಯಾರು ಮಹಾತ್ಮ?
ಭಾಗ- ೨೩


          ವಿಭಜನೆಯ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಹೊತ್ತಲ್ಲೇ ವಿಭಜನೆ ವಿರುದ್ಧ ಹೋರಾಟ ಆರಂಭಿಸುವಂತೆ ಆಗ್ರಹಿಸುವಂತಹ ಅನೇಕ ಪತ್ರಗಳು ಗಾಂಧಿಗೆ ಬರತೊಡಗಿದವು. ಬ್ರಿಟಿಷರು ತಾವು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವಾಗ ಸೃಷ್ಟಿಸಿದ್ದ ಸ್ಥಿತಿಯನ್ನೇ ಈಗ ಮರುಸೃಷ್ಟಿಸಿದ್ದಾರೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ಜಗಳ ನಡೆಸುವಂತೆ ಮಾಡಿ ತಾವು ತೆರಳುತ್ತಿದ್ದಾರೆ. ನೀವು ವಿಭಜನೆ ವಿರುದ್ಧ ಹೋರಾಟವನ್ನು ಪ್ರಾರಂಭಿಸುವುದಾದಲ್ಲಿ ನಾನು ಗೌರವಯುತವಾಗಿ ಒಂದು ಲಕ್ಷ ಶಿಸ್ತುಬದ್ಧ ಕಾರ್ಯಕರ್ತರನ್ನು ಒದಗಿಸಬಲ್ಲೆ. ಅವರು ಅಹಿಂಸೆಯ ದೀಕ್ಷೆ ತೊಟ್ಟವರಲ್ಲದಿದ್ದರೂ ನಿಮ್ಮ ಸೂಚನೆಗಳನ್ನು ತಮ್ಮದೇ ನೀತಿ ಸಂಹಿತೆಯಂತೆ ವಿಶ್ವಾಸದಿಂದ ಪಾಲಿಸುತ್ತಾರೆ ಎನ್ನುವುದು ಒಂದು ಪತ್ರದ ಒಕ್ಕಣೆಯಾಗಿತ್ತು. ಆದರೆ ಇಅದಕ್ಕೆ ಗಾಂಧಿ "ವಿಭಜನೆಯಂದ ನನ್ನಷ್ಟು ದುಃಖಕ್ಕೀಡಾಗುವವರು ಬೇರೆ ಯಾರೂ ಇಲ್ಲ. ಆದರೆ ಇದರ ವಿರುದ್ಧ ಹೋರಾಟ ನಡೆಸುವ ಯಾವುದೇ ಇರಾದೆ ನನಗಿಲ್ಲ. ಕಾಂಗ್ರೆಸ್ ಯಾವಾಗ ವಿಭಜನೆಯನ್ನು ತನಗಿಷ್ಟವಿಲ್ಲದಿದ್ದರೂ ಕಾಂಗ್ರೆಸ್ ಅಂಗೀಕರಿಸಿತೋ ಅಂತಹ ಕಾಂಗ್ರೆಸ್ ವಿರುದ್ಧವೂ ನಾನ್ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಂತಹ ಹೆಜ್ಜೆಯೂ ಕಲ್ಪನಾತೀತ. ಬ್ರಿಟಿಷರು ವಿಭಜನೆಯನ್ನು ಪ್ರೋತ್ಸಾಹಿಸಿಲ್ಲ. ಹಾಗಾಗಿ ಅವರ ವಿರುದ್ಧ ನಿಮ್ಮ ದಾಳಿಯನ್ನೂ ನಾನು ಒಪ್ಪುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಹಾಗಾದರೆ ಗಾಂಧಿಯ ಪ್ರಕಾರ ದೇಶ ವಿಭಜನೆಗೆ ಜವಾಬ್ದಾರರು ಯಾರು? ಇದು ನುಣುಚಿಕೊಳ್ಳುವ ಕುತಂತ್ರ ಬುದ್ಧಿಯಲ್ಲವೇ? ಅತ್ತ ಕಾಂಗ್ರೆಸ್ ಕಾರ್ಯಕಾರಿಣಿಯ ತೀರ್ಮಾನದ ವಿರುದ್ಧವೂ ಹೋರಾಟ ಮಾಡುವುದಿಲ್ಲ. ಇತ್ತ ಬ್ರಿಟಿಷರ ವಿರುದ್ಧವೂ! ಕಾಂಗ್ರೆಸ್ ವಿರುದ್ಧ ಹೋರಾಟ ಕಲ್ಪನಾತೀತ. ಲಕ್ಷಾಂತರ ಜನರ ಬೆಂಬಲವಿದ್ದು, ಅಸಂಖ್ಯ ಪತ್ರಗಳು ಹೋರಾಟ ಕೈಗೊಳ್ಳುವಂತೆ ಗೋಗರೆದಾಗಲೂ ಗಾಂಧಿಗೆ ವಿಭಜನೆ ವಿರುದ್ಧ ಹೋರಾಡುವ ಮನಸ್ಸಿಲ್ಲವೆಂದಾದರೆ ಗಾಂಧಿಗೆ ವಿಭಜನೆಗೆ ಪೂರ್ಣಸಹಮತವಿತ್ತು ಎಂದೇ ಅರ್ಥವಲ್ಲವೇ? ಜನ ಪಾಕಿಸ್ತಾನ ರಚನೆ ವಿರುದ್ಧ ಹೋರಾಡಬೇಕೆಂದು ನೇರವಾಗಿ ಹೇಳಿದ್ದರು. ಗಮನಿಸಿ, ಬಹುಷಃ ಇದೇ ಕಾರಣಕ್ಕಾಗಿ ಗಾಂಧಿ ಮುಸ್ಲಿಮ್ ಲೀಗ್ ಹೆಸರನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಿಲ್ಲ.

        "ಕಾರ್ಯಕಾರಿ ಸಮಿತಿಯ ದೇಶ ವಿಭಜನೆಯ ನಿರ್ಣಯವನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಕೆಡುಕಿನ ಸಲಹೆ ಬರಬಹುದು. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ಇದನ್ನು ಮಾಡುವ ಅಧಿಕಾರವಿದೆ. ಆದರೆ ಅವರ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡಿದೆ ಮತ್ತು ಆ ನಿರ್ಣಯದ ಪರವಾಗಿ ನಿಲ್ಲುವದು ತಮ್ಮ ಕರ್ತವ್ಯ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು" "ನಿರ್ಣಯಕ್ಕೆ ಸಂಬಂಧಿಸಿ ಕಾರ್ಯಕಾರಿ ಸಮಿತಿ ಹೊರತುಪಡಿಸಿ ಇನ್ನೆರಡು ಪಕ್ಷಗಳಿವೆ - ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮ್ ಲೀಗ್. ಆ ಹಂತದಲ್ಲಿ ಎಐಸಿಸಿ ನಿರ್ಣಯವನ್ನು ವಿರೋಧಿಸಿದರೆ ಜಗತ್ತು ಏನೆಂದು ತಿಳಿದುಕೊಳ್ಳುತ್ತದೆ? ಎಲ್ಲಾ ಪಕ್ಷಗಳು ವಿಭಜನೆಯ ಯೋಜನೆಯನ್ನು ಒಪ್ಪಿಕೊಂಡಿವೆ. ಕಾಂಗ್ರೆಸ್ ತನ್ನ ಮಾತಿನಿಂದ ಹಿಂದೆ ಸರಿಯುವುದು ಸೂಕ್ತವಾಗಲಾರದು."(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮ್ ಲೀಗ್ ಹಾಗೂ ಬ್ರಿಟಿಷರು ಒಪ್ಪಿಕೊಂಡ ಮಾತ್ರಕ್ಕೆ ಕಾಂಗ್ರೆಸ್ ಹಾಗೂ ದೇಶದ ಜನತೆ ವಿಭಜನೆಯನ್ನು ಒಪ್ಪಿಕೊಳ್ಳಬೇಕೇ? ಜಗತ್ತಿನಲ್ಲಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎನ್ನುವ ಉದ್ದೇಶಕ್ಕಾಗಿ ಭಾರತವನ್ನು ಹಾಳುಗೆಡವಬೇಕೇ? ಗಾಂಧಿಯನ್ನು ಮಹಾತ್ಮ ಎಂದು ಪೂಜಿಸುವ ಯಾರೂ ಗಾಂಧಿಯ ಇಂತಹ ಕುಟಿಲ ನೀತಿಗಳನ್ನು ತಿಳಿದಿರುವುದಿಲ್ಲ. ತಿಳಿದಿದ್ದರೂ ಹೇಳುವುದಿಲ್ಲ. ಸಾರ್ವಜನಿಕವಾಗಿ ಒಪ್ಪುವುದೂ ಇಲ್ಲ. ಅವಕಾಶವಾದ!

          "ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್ ತಿರಸ್ಕರಿಸಿದರೆ ಆಗ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಮೇಲೆ ಅವಿಶ್ವಾಸ ಸೂಚಿಸುತ್ತದೆ. ಇದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗೂ ಹೊಸನಾಯಕರನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹೊಸ ನಾಯಕ ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಣಯವನ್ನು ವಿರೋಧಿಸುವವರು ಅಂಥ ನಾಯಕಗಣವನ್ನು ಹುಡುಕಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮತ್ತು ಬಹುಮತ ಸದಸ್ಯರು ಇದೇ ದೃಷ್ಟಿಕೋನ ಹೊಂದಿದ್ದರೆ ಎಐಸಿಸಿ ನಿರ್ಣಯವನ್ನು ತಿರಸ್ಕರಿಸಬಹುದು"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಗಾಂಧಿಯ ದೃಷ್ಟಿಯಲ್ಲಿ ಈಗಿರುವ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವೇ? ಅಪ್ರತಿಮ ಕ್ಷತ್ರಿಯರನ್ನು ಕಂಡ ಈ ನಾಡಿನಲ್ಲಿ ನಾಯಕರಿಗೆ ಬರಗಾಲವೇ? ಇದು ಜನರನ್ನು ವಿಭಜನೆಗೆ ಒಪ್ಪಿಸುವ ಕುಟಿಲತೆಯಷ್ಟೇ! ಇಲ್ಲೇ ಒಂದು ಒಳಸುಳಿಯಿದೆ! ಪರೋಕ್ಷವಾಗಿ ತಮ್ಮ ಶಿಷ್ಯ ನೆಹರೂವಿಗಿಂತ ಉತ್ತಮ ನಾಯಕರಿಲ್ಲ ಅಥವಾ ನೆಹರೂಗಲ್ಲದೆ ಬೇರ್ಯಾರಿಗೂ ಅಧಿಕಾರ ಸಿಗಬಾರದು ಎನ್ನುವ ಭಾವವನ್ನು ಗಾಂಧಿ ಪ್ರಕಟಿಸುತ್ತಿದ್ದಾರೆಯೇ? ಮುಂದೆ ನಡೆದ ಎಲ್ಲಾ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.

        "ಭಾರತ ವಿಭಜನೆಯನ್ನು ಅದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು  ಐರ್ಲೆಂಡಿನಲ್ಲಿರುವ ಭಾರತೀಯರು ಬಲವಾಗಿ ವಿರೋಧಿಸುತ್ತಾರೆ. ಬ್ರಿಟಿಷರು ಐರ್ಲೆಂಡನ್ನು ತ್ಯಜಿಸುವಾಗ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದರ ಪರಿಣಾಮವಾಗಿ ಈಗ ಉತ್ತರ ಹಾಗೂ ದಕ್ಷಿಣ ಐರ್ಲೆಂಡಿನ ಜನರು ದೇವಾಲೆರಾ ನೇತೃತ್ವದಲ್ಲಿ ವಿಭಜನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೂ ಇದೇ ಗತಿ. ನಿಮ್ಮ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನ ಪಡೆದಿರುವ ಭಾರತ ವಿಭಜನೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ಆತ್ಮಹತ್ಯೆಗೆಳಸುವುದಿಲ್ಲ ಎಂದು ಇಲ್ಲಿನ ಎಲ್ಲಾ ಹಿಂದೂಗಳು ಹಾಗೂ ಮುಸ್ಲಿಮರು ನಂಬಿದ್ದೇವೆ" ಎನ್ನುವ ವಿಚಾರವುಳ್ಳ ಪತ್ರವೊಂದನ್ನು ಡಬ್ಲಿನ್ನಿನ ಗಾಂಧಿಯ ಸ್ನೇಹಿತರೊಬ್ಬರು ಬರೆದರು. ಪ್ರತಿಕ್ರಿಯೆಯಾಗಿ ಗಾಂಧಿ "ನನ್ನಲ್ಲಿ ಅಸಹಾಯಕ ಭಾವವುಂಟಾಗುತ್ತಿದೆ. ಭಾರತ ಮತ್ತು ಐರ್ಲೆಂಡ್ ಮಧ್ಯೆ ಸಮಾನಾಂತರ ರೇಖೆ ಎಳೆಯಬಹುದೇ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಪ್ಪಂದಕ್ಕೆ ಬಂದಿವೆ. ನೈಜ ಸ್ಥಿತಿ ಹೀಗಿರುವಾಗ ಅದನ್ನೇ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಉತ್ತರಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿ ಮಾತು ಮತ್ತು ಕೃತಿಗೆ ಎಷ್ಟು ಅಜಗಜಾಂತರ. ಅವರ ಬೋಧನೆಗಳಲ್ಲಿ ಬಂದ ಉನ್ನತಾದರ್ಶಗಳ್ಯಾವುವೂ ಕ್ರಿಯೆಯಲ್ಲಿ ಕಾಣಲೇ ಇಲ್ಲ.

         ಗಾಂಧಿ ತಮ್ಮ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಹಾಗಾಗಿ ಕಾರ್ಯಕಾರಿ ಸಮಿತಿಯ ನಿರ್ಣಯದ ವಿರುದ್ಧ ದನಿಯೆತ್ತಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ತಾವು ಸಮಿತಿಯ ನಿರ್ಣಯದ ಬಗ್ಗೆ ಅಭಿಪ್ರಾಯಭೇದ ಹೊಂದಬಹುದು ಎಂದೂ ಹೇಳಿದರು. ಆದರೆ ಮುಂದಿನ ಎಐಸಿಸಿ ಸಭೆಯಲ್ಲೇ ವಿಭಜನೆಯ ಪರವಾಗಿ ನಿಂತರು.  "ಕೆಲವೊಮ್ಮೆ ಮನಸ್ಸಿಗೆ ಹಿಡಿಸದಿದ್ದರೂ ಕೆಲವು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ಹಂತದಲ್ಲಿ ದೇಶದ ಶಾಂತಿ ಮುಖ್ಯ ಎನ್ನುವುದನ್ನು ಸದಸ್ಯರು ಮರೆಯಬಾರದು. ದೇಶದಲ್ಲಿ ಕ್ಷಿಪ್ರ ಕ್ರಾಂತಿ ಅಥವಾ ಉತ್ಕ್ರಾಂತಿಯ ಮಾತಾಡುವವರು ಈ ನಿರ್ಣಯವನ್ನು ಆಚೆಗೆಸೆಯುವ ಮೂಲಕ ಇದನ್ನು ಸ್ಥಾಪಿಸಲು ಶಕ್ತರಿರಬಹುದು. ಆದರೆ ಅವರಿಗೆ ದೇಶದ ಹಾಗೂ ಕಾಂಗ್ರೆಸ್ಸಿನ ಅಧಿಕಾರ ಕೈಗೆ ತೆಗೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ ಎನ್ನುವುದು ಸಂಶಯ. ನನಗೇನಾದರೂ ಶಕ್ತಿಯಿದ್ದಲ್ಲಿ ಏಕಾಕಿಯಾಗಿ ಬಂಡಾಯ ಘೋಷಿಸುತ್ತಿದ್ದೆ. ನಾನು ಕಾರ್ಯಕಾರಿ ಸಮಿತಿಯ ಪರವಾಗಿ ಬೇಡುತ್ತಿಲ್ಲ. ಎಐಸಿಸಿಯು ನಿರ್ಣಯದ ಸಾಧಕಬಾಧಕಗಳನ್ನು ಅಳೆದುನೋಡಬೇಕು. ನಿರ್ಣಯದ ಲಾಭದ ಮನವರಿಕೆಯಾಗದಿದ್ದರೆ ಅದನ್ನು ಒಪ್ಪಬಾರದು. ಇಂತಹ ನಿರ್ಣಯ ದೇಶದಲ್ಲಿ ಗಲಭೆಗೆ ಕಾರಣವಾಗುತ್ತದೆಂದಾದರೆ ಅದನ್ನು ತಿರಸ್ಕರಿಸಬಹುದು. ಆದರೆ ಕಾರ್ಯಕಾರಿ ಸಮಿತಿಯ ಸದಸ್ಯರು 'ಹೆಮ್ಮೆಯ ದಾಖಲೆ ಹೊಂದಿದ, ದೇಶದ ಹಳೆಯ ಮತ್ತು ಅನುಭವಿ ಸೇವಕರು, ಕಾಂಗ್ರೆಸ್ಸಿನ ಬೆನ್ನುಲುಬಾಗಿದ್ದವರು' ಎಂದೂ ಮರೆಯಬಾರದು. ಈ ಹಂತದಲ್ಲಿ ಅವರ ಬದಲು ಬೇರೆಯವರನ್ನು ತರುವುದು ಸಾಧ್ಯವಾಗದಿದ್ದಲ್ಲಿ ಅದು ಅತಿ ಅವಿವೇಕದ ಕೆಲಸವಾಗುತ್ತದೆ. ಯಾವುದನ್ನು ಅಂಗೀಕರಿಸಲಾಗಿದೆಯೋ ಅದು ಉತ್ತಮವೇನಲ್ಲ. ಆದರೆ ಮುಂದೆ ಅದರಿಂದ ಒಳ್ಳೆಯದಾಗಬಹುದು. ಕೆಲವೊಮ್ಮೆ ತಪ್ಪಿನಿಂದಲೂ ಒಳ್ಳೆಯದಾಗುತ್ತದೆ. ತಂದೆಯ ತಪ್ಪಿನಿಂದಾಗಿ ರಾಮ ವನವಾಸಕ್ಕೆ ಹೋದರೂ ರಾವಣನ ಅಂತ್ಯಕ್ಕೆ ಅದು ಕಾರಣವಾಯಿತಲ್ಲವೇ. ಹಾಗೆಯೇ ದೋಷಪೂರಿತ ಯೋಜನೆಯಿಂದ ಒಳ್ಲೆಯದನ್ನು ಹೊರತೆಗೆಯಲು ಎಐಸಿಸಿ ಸಮರ್ಥವಾಗಿದೆ. ಬಂಗಾರವನ್ನು ಕೂಡಾ ಹೊಲಸಿನಿಂದಲೇ ಆಯ್ದು ತೆಗೆಯಲಾಗುತ್ತದೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ವ್ಹಾವ್...ಗಾಂಧಿ ವಿಭಜನೆಯನ್ನು ರಾಮಾಯಣಕ್ಕೆ ಹೋಲಿಸುತ್ತಿದ್ದಾರೆ! ಎಐಸಿಸಿಯನ್ನು ರಾಮನಿಗೆ! ರಾಮ ದೇವಾಂಶ ಸಂಭೂತ. ವಿಭಜನೆಯ ಪರಿಣಾಮವನ್ನು ಒಳ್ಳೆಯ ಕ್ರಿಯೆಯಾಗಿಸಲು ಕಾಂಗ್ರೆಸ್ ಅಥವಾ ಗಾಂಧಿಯೇನು ದೇವರೇ? ಕಾರ್ಯಕಾರಿ ಸಮಿತಿಯ ಸದಸ್ಯರು ಕಾಂಗ್ರೆಸ್ಸಿನ ಬೆನ್ನುಲುಬಾದ ಮಾತ್ರಕ್ಕೆ ಅವರು ಶ್ರೇಷ್ಠರೇ? ಅವರು ಹೇಳಿದ್ದು ವೇದವಾಕ್ಯವೇ? ಅನುಭವಿ ಸೇವಕರಿಂದೇನು ತಪ್ಪು ಘಟಿಸದೇ? ಉತ್ಕ್ರಾಂತಿಯ ಮಾತಾಡುವವರ ಸಾಮರ್ಥ್ಯವನ್ನು ಪ್ರಶ್ನಿಸುವ ಗಾಂಧಿಗೆ ತನ್ನ ಅನುಭವಿ ಸೇವಕರ ಮೇಲೆ ಅಗಾಧ ವಿಶ್ವಾಸ! ವಿಭಜನೆಯನ್ನು ವಿರೋಧಿಸುತ್ತಲೇ ಅದನ್ನು ಸಮರ್ಥಿಸುತ್ತಾ ಜನರ ಮೇಲೆ ಹೇರುವ ಈ ವೃದ್ಧನಿಗೆ ಇಂದಿನ ರಾಜಕಾರಣಿಗಳು ಕಾಲಿಗಡ್ಡಬಿದ್ದರೆ ಆಶ್ಚರ್ಯವೇನಿಲ್ಲ

ಬುಧವಾರ, ನವೆಂಬರ್ 9, 2016

ಯಾರು ಮಹಾತ್ಮ? ಭಾಗ- ೨೨

ಯಾರು ಮಹಾತ್ಮ?

ಭಾಗ- ೨೨

        ಮುಸ್ಲಿಂ ಲೀಗಿನ ವಿಭಜನೆಯ ಬೇಡಿಕೆಗೆ ಗಾಂಧಿ ವಿರೋಧ ವ್ಯಕ್ತಪಡಿಸುತ್ತಾ ತೀವ್ರವಾಗಿ ಪ್ರತಿಕ್ರಿಯಿಸಿದರು. "ಐತಿಹಾಸಿಕವಾಗಿ ವಿಭಜನೆ ಎನ್ನುವುದು ಸುಳ್ಳು ಹಾಗೂ ಸೈದ್ಧಾಂತಿಕವಾಗಿಯೂ ವಿಕಾರವಾದದ್ದು. ದೇವರು ಒಂದಾಗಿ ಸೃಷ್ಟಿಸಿದ ಈ ದೇಶವನ್ನು ವಿಭಜಿಸುವುದು ಮಾನವರಿಂದ ಸಾಧ್ಯವಿಲ್ಲ." "ಒಂದು ವೇಳೆ ಮುಸ್ಲಿಮರು ವಿಭಜನೆಯ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಖಡ್ಗದ ಮೊನೆಯಿಂದ ಬೆದರಿಸಿದರೂ ನಾನು ವಿಭಜನೆಗೆ ಒಪ್ಪಲಾರೆ. ದೇಶವನ್ನು ತುಂಡು ಮಾಡುವ ಮುನ್ನ ಅವರು ನನ್ನ ದೇಹವನ್ನು ತುಂಡುಮಾಡಬೇಕಾಗುತ್ತದೆ. ನಾವೆಲ್ಲರೂ ಇದೇ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ." "ವಿಭಜನೆ ಎನ್ನುವುದು ಮಿಥ್ಯೆ. ನನ್ನ ಇಡೀ ಆತ್ಮ ಈ ಕಲ್ಪನೆ ವಿರುದ್ಧ ಸಿಡಿದೇಳುತ್ತದೆ. ವಿಭಜನೆಗೆ ಒಪ್ಪುವುದೆಂದರೆ ನಾನು ದೇವರನ್ನೇ ನಿರಾಕರಿಸಿದಂತೆ. ಇದನ್ನು ತಡೆಯಲು ಅಹಿಂಸೆಯ ಎಲ್ಲಾ ಮಾರ್ಗಗಳನ್ನೂ ನಾನು ಉಪಯೋಗಿಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ಒಂದು ದೇಶವಾಗಿ ಬಾಳಲು ಶತಮಾನಗಳ ಕಾಲ ಮಾಡಿದ ಕಾರ್ಯವನ್ನು ನಾಶಗೊಳಿಸಿದಂತೆಯೇ" "ಭಾರತವನ್ನು ಎರಡಾಗಿಸುವುದು ಅರಾಜಕ ಸ್ಥಿತಿಗಿಂತ ಹೇಯವಾದುದು. ಭಾರತವನ್ನು ಎರಡು ಶತಮಾನಗಳಿಗಿಂತಲೂ ಅಧಿಕ ಕಾಲವಾಳಿದ ಮೊಘಲರೂ ಸಹ ಮಾಡದ್ದನ್ನು ನೀವು ಮಾಡಲಾಗದು." "ಇದರಲ್ಲಿ ಕಚ್ಚಾಟದ ಮತ್ತಷ್ಟು ಸಾಧ್ಯತೆ ವಿನಾ ಮತ್ತೇನೂ ನನಗೆ ಕಾಣಿಸುತ್ತಿಲ್ಲ." "ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ ಒಂದಿಂಚು ಪಾಕಿಸ್ತಾನಕ್ಕೂ ನಾವು ಒಪ್ಪುವುದಿಲ್ಲ" ಹೀಗೆಲ್ಲಾ ಅಣಿಮುತ್ತು ಉದುರಿಸಿ ಭಾರತದ ವಿಭಜನೆಯನ್ನು ಸ್ಪಷ್ಟ, ಕಟು ಶಬ್ಧಗಳಲ್ಲಿ ವಿರೋಧಿಸಿದ್ದ ಗಾಂಧಿ ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ಬದಲಿಸಿಕೊಂಡದ್ದು ಮಾತ್ರ ವಿಪರ್ಯಾಸ.('ಹರಿಜನ'ದ ವಿವಿಧ ಸಂಚಿಕೆಗಳು; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್)

          ದೇಶವಿಭಜನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದ ಗಾಂಧಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. "ದೇಶ ವಿಭಜನೆ ಕುರಿತು ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯವನ್ನು ಅಂಗೀಕರಿಸಲು ನಾನು ಶಿಫಾರಸು ಮಾಡುತ್ತೇನೆ. ಸಂವಿಧಾನದ ಪ್ರಕಾರ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿದೆ. ಕಾರ್ಯಕಾರಿ ಸಮಿತಿ ಎಐಸಿಸಿ ಪರವಾಗಿ ಪ್ರಾಮಿಸರಿ ನೋಟಿನ ಮೇಲೆ ಸಹಿ ಮಾಡಿದರೂ ಎಐಸಿಸಿ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಾರ್ಯಕಾರಿ ಸಮಿತಿ ಈಗಾಗಲೇ ತೆಗೆದುಕೊಂಡ ನಿರ್ಧಾರವನ್ನು ಎಐಸಿಸಿ ಬದಲಾಯಿಸಲು ಸಾಧ್ಯವಿಲ್ಲ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಅರೇ ಕಾಂಗ್ರೆಸ್ ಏನು ಇಡೀ ಭಾರತವೇ? ಸಂವಿಧಾನವಿದ್ದರೆ ಅದು ಕಾಂಗ್ರೆಸ್ಸಿಗಾಯಿತು. ಆ ಸಂವಿಧಾನವನ್ನು ಇಡೀ ಭಾರತಕ್ಕೇಕೆ ಅನ್ವಯಿಸಬೇಕು? ಕಾರ್ಯಕಾರಿ ಸಮಿತಿ ನೇಮಿಸುವ ಮುನ್ನ ಕಾಂಗ್ರೆಸ್ಸ್ ದೇಶೀಯರ ಅನುಮತಿ ಪಡೆದುಕೊಂಡಿದೆಯೇ? ಕೆಲವೇ ಕೆಲವು ಸಾವಿರ ಸದಸ್ಯರನ್ನೊಳಗೊಂಡ ಪಕ್ಷವೊಂದು ಮೂವತ್ತಮೂರು ಕೋಟಿ ಜನತೆಯ ಭವಿಷ್ಯವನ್ನು ನಿರ್ಧರಿಸಬೇಕೆ? ಅಷ್ಟು ಜನರ ಮಾನ, ಪ್ರಾಣ, ಧನಗಳನ್ನು ಕಾಂಗ್ರೆಸ್ ಮರಳಿಸುತ್ತದೆಯೇ? ಅಷ್ಟು ಜನರ ಭಾವನೆಗೂ ಬೆಲೆ ಕೊಡದ ಪಕ್ಷ ಹೇಳಿದ ಮಾತಿಗೆ ಹೂಂಗುಟ್ಟಿದ ಈ ದೇಶದ ಕ್ಷಾತ್ರವಿಹೀನತೆಯ ಪರಮಾವಧಿಯೇ!

          "ನಾನು ಅಸಹಾಯಕ. ನಾನು ಮುಸ್ಲಿಮ್ ಲೀಗ್ ಅಧ್ಯಕ್ಷನಾಗಿದ್ದರೆ ಪಾಕಿಸ್ತಾನವನ್ನು ಪರದೆ ಮೇಲೆ ಮೂಡಿಸಿ ಅದರ ಸರಿಹೋಲಿಕೆಯಿಲ್ಲದ ಸೌಂದರ್ಯವನ್ನು ಆಕರ್ಷಕಗೊಳಿಸಿ ವರ್ಣಿಸುತ್ತಿದ್ದೆ. ಈವರೆಗಿನ ಬೆಳವಣಿಗೆಯಂತೆ ಭಾರತದ ವಿಭಜನೆ ನಿಶ್ಚಿತ. ಜನರು ಇದರ ಬಗ್ಗೆ ದುಃಖಿಸುವುದು ಬೇಡ. ಪಾಕಿಸ್ತಾನ ರಚನೆಗೆ ಕಾಂಗ್ರೆಸ್ಸಿನ ವಿರೋಧವಿತ್ತು. ನನ್ನದೂ. ಹೀಗಿದ್ದರೂ ವಿಭಜನೆಯ ನಿರ್ಣಯವನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಲು ನಿಮ್ಮ ಮುಂದೆ ನಿಂತಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಆಶ್ವಾಸನೆ ಕೊಟ್ಟು ಏನನ್ನೂ ಮಾಡದೆ ಆಮೇಲೆ ಅದು ಹಾಗೆಯೇ ಆಗಬೇಕು ಬೇರೆ ದಾರಿ ಇಲ್ಲ ಎನ್ನುವ ಇಂದಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಗಾಂಧಿಯದ್ದೇ ಅಂತ ಅನ್ನಿಸುವುದಿಲ್ಲವೇ? ತನ್ನಿಂದಾಗದಿದ್ದ ಮೇಲೆ ಮೊದಲು ಹೇಳಿಕೆ ಯಾಕೆ ಕೊಡಬೇಕಿತ್ತು? ಆಡಿಯೂ ಮಾಡದವ...! ಅದರಲ್ಲೂ ಸಮಜಾಯಿಷಿ ಕೊಡುವಾಗ ಪಾಕಿಸ್ತಾನವನ್ನು ಹೊಗಳುವ ಪರಿ ಕೇಳಿ ಅದರಿಂದಾಗಿಯೇ ಪ್ರಾಣ-ಮಾನ ಕಳಕೊಂಡ ಹಿಂದೂವಿಗೆ ಉರಿಯದಿರುತ್ತದೆಯೇ?

           ಹೇಗೂ ಭಾರತದ ವಿಭಜನೆಯ ವಿರುದ್ಧ ನೀವಿದ್ದೀರಿ. ಹಾಗಾಗಿ ವಿಭಜನೆ ತಪ್ಪಿಸಲು ನೀವೇಕೆ ಆಮರಣಾಂತ ಉಪವಾಸ ಕೂರಬಾರದು ಎನ್ನುವ ಒಕ್ಕಣೆಯುಳ್ಳ ಟೆಲಿಗ್ರಾಂಗಳು, ಪತ್ರಗಳು ಗಾಂಧಿಗೆ ಬರತೊಡಗಿದವು. ಆಗ ಗಾಂಧಿ "ಇಂತಹ ವಿಷಯಗಳನ್ನು ಹಗುರವಾಗಿ ಅಥವಾ ಯಾರದೋ ಸೂಚನೆಯಂತೆ ಅಥವಾ ದುಡುಕಿನ ಅಲ್ಲದೆ ಕೋಪದಿಂದ ತೆಗೆದುಕೊಳ್ಳಬಾರದು. ಕಾಂಗ್ರೆಸ್ ನನ್ನ ದೃಷ್ಟಿಕೋನದ ಜೊತೆ ಭಿನ್ನಾಭಿಪ್ರಾಯ ಹೊಂದಿತ್ತು ಎನ್ನುವ ಕಾರಣಕ್ಕೆ ಉಪವಾಸ ಮಾಡಬೇಕೇ?" ಎಂದು ಪ್ರಶ್ನಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್).  ಭಳಿರೇ ಮುದುಕ! ಅಂದರೆ ಗಾಂಧಿ ಹಗುರವಾದ ವಿಚಾರಗಳಿಗಷ್ಟೇ ಉಪವಾಸ ಕೂರುವವರೇ? ಮುಸ್ಲಿಮರ ಸಣ್ಣ ತೊಂದರೆಯಾದರೂ ಉಪವಾಸ ಕೂರುತ್ತಿದ್ದಾತನಿಗೆ ವಿಭಜನೆಯನ್ನು ವಿರೋಧಿಸಿ ಉಪವಾಸ ಕೂರಬೇಕು ಅನ್ನಿಸಲಿಲ್ಲ. ಜನರು ಹೇಳಿದಾಗಲೂ ಆ ಬಯಕೆ ಮೂಡಲಿಲ್ಲ. ಅಂದರೆ ಹಿಂದೂಗಳಿಗೆ ಅನ್ಯಾಯವಾಗುವ ವಿಚಾರವನ್ನು ವಿರೋಧಿಸಿ ಉಪವಾಸ ಕೂರಲು ಗಾಂಧಿಗೆ ಮನಸ್ಸಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಎಂತಹ ಬೂಟಾಟಿಕೆ! ಅಂದು ಸುಭಾಷರು ತನ್ನ ಅಭ್ಯರ್ಥಿ ಪಟ್ಟಾಭಿಯೆದುರು ಬಹುಮತದಿಂದ ಗೆದ್ದಾಗ ತನಗಿಷ್ಟವಾಗದೆ ಅದು ತನ್ನ ಸೋಲು ಎಂದು ಬಹಿರಂಗವಾಗಿ ಹೇಳಿ ತನ್ನ ಅಭಿಪ್ರಾಯ-ವ್ಯಕ್ತಿ-ಕ್ರಿಯೆಯನ್ನು ಹೇರಹೊರಟ ಗಾಂಧಿಗೆ ಇಂದು ದೇಶ ಇಬ್ಬಾಗವಾಗಲು ಕಾಂಗ್ರೆಸ್ ಕೊಟ್ಟ ಒಪ್ಪಿಗೆ ತನ್ನ ಸೋಲು ಅಂತ ಅನ್ನಿಸಲಿಲ್ಲ. ಈವತ್ತು ಆತ ಕಾಂಗ್ರೆಸ್ ಮೇಲೆ ತನ್ನ ಅಭಿಪ್ರಾಯ ಹೇರಲು ಅನುವಾಗಲಿಲ್ಲ. ಎಂತಹ ಸ್ವಾರ್ಥ! ಗಾಂಧಿಯ ಈ ಇಬ್ಬಂದಿತನವೇ ವಿಭಜನೆಗೆ ಅವರ ಒಪ್ಪಿಗೆಯಿತ್ತು, ಅದಕ್ಕಾಗಿ ಶತಾಯಗತಾಯ ಪ್ರಯತ್ನಿಸಿದರು ಎನ್ನುವ ಅನುಮಾನ ಬರಲು ಕಾರಣ!

           "ಆತುರದಿಂದ ನಾನು ಉಪವಾಸ ಮಾಡುವುದಾದರೆ ಅದಕ್ಕೆ ಕಾರಣಗಳು ಬೇಕಾಗುತ್ತವೆ. ಆಮರಣಾಂತ ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ನನ್ನ ಸುತ್ತಲೂ ಬೆಂಕಿಯ ಧಗೆ ಇರುವುದರಿಂದ ತಾಳ್ಮೆ ಹಾಗೂ ದೃಢಚಿತ್ತದಿಂದ ಇದ್ದು ಸತ್ಯದ ಆತ್ಯಂತಿಕ ಗೆಲುವಿನ ಬಗ್ಗೆ ನನಗಿರುವ ಅಚಲ ನಂಬಿಕೆಯನ್ನು ಸಾಬೀತು ಮಾಡಬೇಕೆಂದು ಮನಗಂಡಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಹಾಗಾದರೆ ಉಪವಾಸ ಮಾಡಲು ದೇಶವಿಭಜನೆ ಕಾರಣ ಆಗುವುದಿಲ್ಲವೆ? ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕು ಎಂದರೆ ಯಾರನ್ನು ತನ್ನ ಶಿಷ್ಯ ನೆಹರೂವನ್ನೋ? ಅಥವಾ ಪ್ರತ್ಯೇಕ ದೇಶ ಕೇಳಿದ ಮುಸ್ಲಿಮರನ್ನೋ? ವಿಭಜನೆಯೆಂಬ ಬೆಂಕಿಯ ಧಗೆ, ಹಿಂದೂಗಳ ಚಿತೆಯ ಉರಿ ಇನ್ನೂ ಇರುವಾಗ ಮಾತ್ರ ಗಾಂಧಿ ತಾಳ್ಮೆ ಮತ್ತು ದೃಢಚಿತ್ತದಿಂದ ಇರಬಲ್ಲರು! ಈ ಸತ್ಯ ಯಾವುದು? ಮುಸ್ಲಿಮರಿಗೆ ಹಾಗೂ ನೆಹರೂವಿಗೆ ಅಧಿಕಾರ ಹಸ್ತಾಂತರಿಸುವುದೇ? ಅದರ ಗೆಲುವೆಂದರೆ ವಿಭಜನೆ ಆಗಬೇಕೆಂಬುದೇ? ಈಗಿನ ಎಡಪಂಥೀಯರ ರೀತಿಯ ಯಾರಿಗೂ(ಅವರಿಗೂ) ಅರ್ಥವಾಗದ ಮಾತುಗಳನ್ನಾಡಿ ಗಾಂಧಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ!

           ದೇಶವನ್ನು ತುಂಡರಿಸುವ ಮೊದಲು ನನ್ನ ದೇಹ ತುಂಡರಿಸಿ ಎನ್ನುವ ಮಾತನ್ನು ನೀವು ಈ ಮೊದಲು ಹೇಳಿದ್ದೀರಲ್ಲವೆ ಎಂದೊಬ್ಬ ಪತ್ರಿಕಾ ಪ್ರತಿನಿಧಿ ನೆನಪಿಸಿದಾಗ "ಈ ಆರೋಪವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಹೇಳಿಕೆ ನೀಡುವಾಗ ಸಾರ್ವಜನಿಕ ಅಭಿಪ್ರಾಯವನ್ನೇ ಧ್ವನಿಸುತ್ತಿದ್ದೇನೆ ಎಂದು ನಂಬಿದ್ದೆ. ಆದರೆ ಸಾರ್ವಜನಿಕ ಅಭಿಪ್ರಾಯವೇ ನನ್ನ ವಿರುದ್ಧವಾಗಿರುವಾಗ ನಾನದನ್ನು ನಿರ್ಬಂಧಿಸಬೇಕೆ?" ಎಂದು ಕೀಟಲೆಯ ಧ್ವನಿಯಲ್ಲಿ ಹೇಳಿದರು. ಅರೇ ಗಾಂಧಿಯ ಸ್ವಂತ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾದದ್ದು ಹೇಗೆ? ಕೋಟ್ಯಾಂತರ ದೇಶೀಯರ ಅಭಿಪ್ರಾಯ ವಿಭಜನೆ ಆಗಬಾರದೆಂದಿರುವಾಗ ಸಾರ್ವಜನಿಕ ಅಭಿಪ್ರಾಯ ಗಾಂಧಿಗೆ ವಿರುದ್ಧವಾಗಿರುವುದು ಹೇಗೆ? ಅಂದರೆ ಗಾಂಧಿಯ ಅಭಿಪ್ರಾಯ ಹಿಂದೆಯೂ ವಿಭಜನೆ ಆಗಬೇಕೆಂಬುದೇ ಆಗಿತ್ತೇ? ಅಲ್ಲಾ ಗಾಂಧಿಯ ದೃಷ್ಟಿಯಲ್ಲಿ ಸಾರ್ವಜನಿಕರೆಂದರೆ ಕಾಂಗ್ರೆಸ್ಸೇ? ಅಥವಾ ಕಾಂಗ್ರೆಸ್ ನೇಮಿಸಿದ ಕಾರ್ಯಕಾರಿ ಸಮಿತಿಯೇ? ಅಥವಾ ಪ್ರತ್ಯೇಕತೆಯ ಬೀಜ ಬಿತ್ತಿದ ಮುಸ್ಲಿಂ ಲೀಗೇ? ಆಗ ವಿಭಜನೆಗೆ ಒಪ್ಪಿದ್ದವರು ಅಧಿಕಾರದಾಹಿ ಕಾಂಗ್ರೆಸ್ಸಿಗರು ಹಾಗೂ ಪ್ರತ್ಯೇಕತವಾದಿ ಮುಸ್ಲಿಮರು ಹಾಗೂ ಗಾಂಧಿ ಮಾತ್ರ! ಹೀಗೆ ಗಾಂಧಿಯ ಈ ಹೇಳಿಕೆಯನ್ನು ಆ ಕಾಲದ ಸನ್ನಿವೇಶದೊಂದಿಗೆ ಸಮೀಕರಿಸಿ ನೋಡಿದಾಗ ಬಹುಸಂಖ್ಯೆಯ ಜನರ ಅಭಿಪ್ರಾಯವನ್ನು ಬದಿಗೆ ತಳ್ಳಿ ತಮ್ಮ ತಮ್ಮ ಸ್ವಾರ್ಥಸಾಧನೆಗೆ ದೇಶವನ್ನು ಛಿದ್ರಗೊಳಿಸಲು ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತನ್ನ ಅನುಯಾಯಿಗಳೊಂದಿಗೆ ತಯಾರಾಗಿದ್ದ ಎಂದೇ ಭಾಸವಾಗುತ್ತದೆ.

ಮಂಗಳವಾರ, ನವೆಂಬರ್ 8, 2016

ಯಾರು ಮಹಾತ್ಮ? ಭಾಗ- ೨೧

ಯಾರು ಮಹಾತ್ಮ?
ಭಾಗ- ೨೧


            ಒಂದು ಕಾಲದಲ್ಲಿ ಗಾಂಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಭೇಟಿ ಕೊಟ್ಟಿದ್ದರು. ಜಾತಿಯ ಲವಲೇಶವೂ ಇಲ್ಲದ ಶಾಖೆಯ ಸ್ವಯಂಸೇವಕರನ್ನು ಕಂಡು ಆಶ್ಚರ್ಯಚಕಿತರಾಗಿ ಸಂಘದ ಶಿಸ್ತು, ಸೇವೆ, ಸಮಾನತೆಯ ಗುಣಗಳನ್ನು ಹಾಡಿ ಹೊಗಳಿದ್ದರು. ವಿಭಜನೆಯ ಬಳಿಕ ಗಾಂಧಿ ನಿರಾಶ್ರಿತರ ಶಿಬಿರವೊಂದಕ್ಕೆ ಭೇಟಿ ನೀಡಿದಾಗ ಗಾಂಧಿಯ ತಂಡದ ಸದಸ್ಯರೊಬ್ಬರು "ನಿರಾಶ್ರಿತರ ಶಿಬಿರದಲ್ಲಿ ರಾ.ಸ್ವ.ಸಂ.ದ ಕಾರ್ಯಕರ್ತರು ಉತ್ತಮ ಸೇವೆ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ, ಶಿಸ್ತು, ಧೈರ್ಯ ಹಾಗೂ  ಸಾಮರ್ಥ್ಯಗಳು ಶ್ಲಾಘನೀಯ" ಎಂದು ಬಾಯಿ ತುಂಬಾ ಹೊಗಳಿದರು. ಆಗ ಗಾಂಧಿ "ಹಿಟ್ಲರನ ನಾಝಿಗಳು ಹಾಗೂ ಮುಸೊಲಿನಿಯ ಬೆಂಬಲಿಗ ಫ್ಯಾಸಿಸ್ಟ್'ಗಳು ಕೂಡಾ ಹೀಗೆ ಮಾಡಿದ್ದಾರೆ ಎನ್ನುವುದನ್ನು ಮರೆಯಬೇಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಹೀಗೆ ಸಂಘದ ಸೇವಾಕಾರ್ಯವನ್ನು ಗಮನಿಸದೆ ಅದನ್ನು ಕೋಮುವಾದಿ ಎಂದು ಜರೆಯುವ, ಫ್ಯಾಸಿಸ್ಟ್ ಎಂದು ಕೂಗಾಡುವ, ಸಂಘಿಗಳನ್ನು ನಾಝಿಗಳಿಗೆ ಹೋಲಿಸುವ ಇಂದಿನ ಸೆಕ್ಯುಲರುಗಳ ಪಾಲಿಗೆ ಗಾಂಧಿ ಪಿತಾಮಹ ಎನ್ನಬಹುದು.

                      ಕಾಂಗ್ರೆಸ್ ಅಧಿಕಾರಕ್ಕಾಗಿ ಬ್ರಿಟಿಷರ ಜೊತೆ ಹೊಂದಾಣಿಕೆಗೆ ಸಿದ್ಧವಾದಾಗ ಅಂದರೆ ವಿಭಜನೆಗೆ ಕಾಂಗ್ರೆಸ್ ಒಪ್ಪಿಕೊಂಡಾಗ ಶರತ್ ಚಂದ್ರ ಬೋಸ್ ಕಾಂಗ್ರೆಸ್ ಕಾರ್ಯಕಾರಿಣಿಗೆ ರಾಜೀನಾಮೆ ನೀಡಿದರು. ಮುಂದೆ ಸೆಪ್ಟೆಂಬರಿನಲ್ಲಿ ಶರತ್ ಬಾಬು ತಮ್ಮನ್ನು ಭೇಟಿಯಾದಾಗ ಗಾಂಧಿ "ರಾಜಾಜಿ ಸೂತ್ರಗಳ ಜೊತೆ ನಾನು ಮುಂದಿಟ್ಟ ಸೂತ್ರಗಳನ್ನು ಕೇವಲ ಜಿನ್ನಾ ಒಬ್ಬರು ಒಪ್ಪಿಕೊಳ್ಳುತ್ತಿದ್ದರೂ ಇವನ್ನೆಲ್ಲಾ ತಪ್ಪಿಸಬಹುದಿತ್ತು. ಬ್ರಿಟಿಷರು ಬಿಟ್ಟು ಹೋದ ಬಳಿಕ ಸಾಮೂಹಿಕ ನಾಯಕತ್ವ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ ನಾನು ಮುಸ್ಲಿಮ್ ಲೀಗಿಗೆ ಸರ್ಕಾರ ರಚಿಸಲು ಆಹ್ವಾನಿಸುತ್ತಿದ್ದೆ. ನಾನು ಸೂಚಿಸಿದರೆ ಕಾಂಗ್ರೆಸ್ ಮಂತ್ರಿಗಳು ಮುಸ್ಲಿಮ್ ಲೀಗಿಗೆ ಅವಕಾಶ ಬಿಟ್ಟು ಕೊಡಲೇಬೇಕು. ನಾನು ನೇತೃತ್ವ ವಹಿಸಿದರೆ ನನ್ನ ಆದೇಶಗಳನ್ನು ಪಾಲಿಸಲು ಸಿದ್ಧರಿರುವುದಾಗಿ ನೆಹರೂ ಹಾಗೂ ಪಟೇಲರು ಹೇಳಿದ್ದಾರೆ." ಎಂದು ಅವರನ್ನು ಸಮಾಧಾನಿಸಲು ಯತ್ನಿಸಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ವಾಸ್ತವದಲ್ಲಿ ಅವರ ಮಾತನ್ನು ಅವಲೋಕಿಸಿದರೆ ಗಾಂಧಿ ಸಂಪೂರ್ಣ ಭಾರತವನ್ನು ಮುಸ್ಲಿಂ ಲೀಗಿಗೆ ಮಾರುವ ಸಂಚು ಹೂಡಿದ್ದರೆಂಬುದು ಸ್ಪಷ್ಟ. ಇಲ್ಲದಿದ್ದಲ್ಲಿ ದೇಶ ಎನ್ನುವ ಭಾವನೆ ಇರದಿದ್ದವರಿಗೆ, ಪ್ರತ್ಯೇಕವಾದಿ, ಮತಭ್ರಾಂತ, ಗೂಂಡಾ ಹಾಗೂ ಕಳ್ಳರಿಗೆ ಅಧಿಕಾರ ಕೊಡುವ ಮಾತನ್ನಾಡುತ್ತಿದ್ದರೇ? ಒಟ್ಟಾರೆಯಾಗಿ ಗಾಂಧಿಗೆ ಹಿಂದೂಗಳು ಶಾಂತಿ-ಸಮಧಾನದಿಂದ ಬದುಕುವುದು ಇಷ್ಟವಿರಲಿಲ್ಲವೆಂದೇ ಅನ್ನಿಸುತ್ತದೆ. ಅತ್ತ ವಿಭಜನೆಗೆ ಒಪ್ಪಿಕೊಡುವುದಿಲ್ಲ ಎಂದು ಹೇಳಿ ಲಕ್ಷಾಂತರ ಹಿಂದೂಗಳ ಪ್ರಾಣ-ಮಾನ ಹರಣವಾಗುವಾಗ ಸುಮ್ಮನಿದ್ದು ಎಲ್ಲಾ ಮುಗಿದ ಮೇಲೆ ವಿಭಜನೆಗೆ ಒಪ್ಪಿಕೊಂಡರು. ಇತ್ತ ವಿಭಜನೆಯಾಗದಿದ್ದಲ್ಲಿ ಮುಸ್ಲಿಮರಿಗೇ ಆಳಲು ಅವಕಾಶ ಮಾಡಿಕೊಡುವ ಮಾತನ್ನಾಡುತ್ತಿದ್ದಾರೆ. ಗಾಂಧಿಯ ದೇಶಭಕ್ತಿಯ ಮೇಲೂ ಸಂಶಯ ಮೂಡುತ್ತಿದೆ. ಅಸಲಿಗೆ ಗಾಂಧಿ ದೇಶ, ರಾಷ್ಟ್ರವೆಂದರೆ ಏನೆಂದು ತಿಳಿದುಕೊಂಡಿದ್ದಾರೆ?

                  1947 ಆಗಸ್ಟ್ 13ರಂದು ಗಾಂಧಿ ಕಲ್ಕತ್ತಾದ ಬೇಲಿಯ ಘಟ್ಟದ ಕೊಳಕು ಪ್ರದೇಶದಲ್ಲಿದ್ದ ಹೈದರಿ ಮ್ಯಾನ್ಶನ್ ಎನ್ನುವ ಮುಸ್ಲಿಮ್ ಮನೆಗೆ ಹೊರಟರು. ಗಾಂಧಿಯ ಇರುವಿಕೆಗಾಗಿ ಅದನ್ನು ಸ್ವಚ್ಛಗೊಳಿಸಲಾಯಿತು. ಈ ಸುದ್ದಿ ಕೇಳಿದ ಉದ್ರಿಕ್ತ ಗುಂಪೊಂದು ಗಾಂಧಿಗೆ ಘೇರಾವ್ ಹಾಕಿತು. "ನೀವೇಕೆ ಇಲ್ಲಿ ಬಂದಿರಿ? ನಾವು ತೊಂದರೆಯಲ್ಲಿದ್ದಾಗ ಬರಲಿಲ್ಲ. ಈಗ ಮುಸ್ಲಿಮರು ಹೇಳಿದ ಮಾತ್ರಕ್ಕೆ ಇಷ್ಟೆಲ್ಲಾ ಗದ್ದಲ ಮಾಡಲಾಗುತ್ತಿದೆ. ಹಿಂದೂಗಳು ತೊರೆದು ಹೋದ ಪ್ರದೇಶಕ್ಕೆ ನೀವೇಕೆ ಭೇಟಿ ಕೊಡಲಿಲ್ಲ?" ಎಂದು ಆ ಯುವಕರು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಸ್ವಲ್ಪ ಹೊತ್ತಿನಲ್ಲಿ ಸುಹ್ರಾವರ್ದಿಯ ಕಾರು ಅಲ್ಲಿಗೆ ಬಂತು. ಪರಿಸ್ಥಿತಿ ಗಂಭೀರವಾಯಿತು. ಸುಹ್ರಾವರ್ದಿಯನ್ನು ರಕ್ಷಿಸಲು ಗಾಂಧಿ ತಮ್ಮನ್ನು ಭೇಟಿಯಾಗಲು ಗುಂಪಿನ ಪ್ರತಿನಿಧಿಗಳನ್ನು ಕಳುಹಿಸಲು ಒಪ್ಪಿಸುವಂತೆ ತಮ್ಮ ಬೆಂಬಲಿಗರನ್ನು ಅಟ್ಟಿದರು. ಜನ ಶಾಂತರಾಗಿ ಸುಹ್ರಾವರ್ದಿಯನ್ನು ಹೋಗಗೊಟ್ಟರು. ಪ್ರತಿಭಟನೆ ಮುಂದುವರಿದಿತ್ತು. "ಗಾಂಧಿ ಗೋ ಬ್ಯಾಕ್" ಘೋಷಣೆ ಮುಗಿಲು ಮುಟ್ಟಿತ್ತು. ಪ್ರತಿನಿಧಿಗಳು "ಕಳೆದ ವರ್ಷ ಇದೇ ಸಮಯಕ್ಕೆ ನೇರ ಕಾರ್ಯಾಚರಣೆ ಘೋಷಿಸಿದ ಸಂದರ್ಭದಲ್ಲಿ ನೀವು ನಮ್ಮ ರಕ್ಷಣೆಗೆ ಬರಲಿಲ್ಲ. ಈಗ ಮುಸ್ಲಿಮರಿಗೆ ಏನೋ ಸಣ್ಣ ತೊಂದರೆ ಆದ ಕೂಡಲೇ ಅವರ ರಕ್ಷಣೆಗೆ ಧಾವಿಸಿ ಬಂದಿರಿ. ನೀವಿಲ್ಲಿ ಬರುವುದು ನಮಗೆ ಬೇಕಿಲ್ಲ. ಹಿಂತಿರುಗಿ ಹೋಗಿ" ಎಂದು ಏರುಧ್ವನಿಯಲ್ಲಿ ಗಾಂಧಿಗೆ ಹೇಳಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಮುಸ್ಲಿಮರಿಗೆ ಸಣ್ಣ ಗಾಯವಾದರೂ ತಕ್ಷಣ ಓಡುವ ಹಿಂದೂಗಳ ಕಗ್ಗೊಲೆಯಾದರೂ ನಿರ್ಲಕ್ಷಿಸುವ ಇಂದಿನ ರಾಜಕಾರಣಿಗಳಿಗೆ ಗಾಂಧಿಯೇ ಪಿತಾಮಹ ಎಂದರೆ ತಪ್ಪೇ?

                    ಗಾಂಧಿ ತಮಗೆ ಬಂದ ಕೊಡುಗೆಗಳನ್ನು ಸ್ವತಃ ಹರಾಜಿಗೆ ಹಾಕುತ್ತಿದ್ದರು. ಅವರಿಗೆ ಹಣ ತುಂಬಿದ ಪರ್ಸ್ ಕಾಣಿಕೆಯಾಗಿ ಬರುವುದು ಮಾಮೂಲಾಗಿತ್ತು. ಕೆಲವು ಸಲ ಬೆಳ್ಳಿ ಪೆಟ್ಟಿಗೆಯಲ್ಲಿ ಉಡುಗೊರೆಗಳೂ ದೊರೆಯುತ್ತಿದ್ದವು. ಕೆಲವೊಮ್ಮೆ ತಮಗೆ ಕಾಣಿಕೆ ನೀಡಿದವರಿಗೇ ಆ ವಸ್ತುಗಳನ್ನು ಮಾರುತ್ತಿದ್ದರು. ತಮ್ಮ ಕೊರಳಿಗೆ ಹಾಕುವ ಹೂಮಾಲೆಗಳನ್ನೂ ಅವರು ಹರಾಜಿಗೆ ಹಾಕುತ್ತಿದ್ದರು. ಗಾಂಧಿ ಸ್ನೇಹಿತರು ಆತನನ್ನು ಬನಿಯಾ ಎಂದೇ ಚುಡಾಯಿಸುತ್ತಿದ್ದರು. ಮಹಿಳೆಯರು ಧರಿಸುವ ಆಭರಣಗಳನ್ನು ತೆಗೆದುಕೊಡುವಂತೆ ಮುಲಾಜಿಲ್ಲದೆ ಅವರ ಎದುರಿಗೇ ಅಂದುಬಿಡುತ್ತಿದ್ದರು. "ನನ್ನ ಸ್ವೀಟ್ ಹಾರ್ಟ್'ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಸುಮಾರು ಹತ್ತು ವರ್ಷದ ಬಾಲೆ ರಾಣಿಬಾಲಾ. ಆಕೆಯ ವಯಸ್ಸು ಕೇಳುವ ಧೈರ್ಯ ನಾನು ಮಾಡಿಲ್ಲ. ನಾನು ಆಕೆ ಜೊತೆಗೆ ಎಂದಿನಂತೆ ಆಟವಾಡುತ್ತಿದ್ದೆ. ಅವಳ ಕೈಲಿದ್ದ ಆರು ಬಂಗಾರದ ಬಳೆಗಳತ್ತ ಕದ್ದುಮುಚ್ಚಿ ನೋಡುತ್ತಿದ್ದೆ. ಅವಳ ಕೋಮಲ ಕರಗಳಿಗೆ ಅವು ಭಾರೀ ಹೊರೆ. ಅವಳ ಚೆಂದದ ಕೈಗಳು ಇಳಿದು ಹೋಗುತ್ತವೆ ಎಂದು ಅವಳಿಗೆ ವಿವರಿಸಿದೆ." ಎಂದು ತಮ್ಮ ಪ್ರವಾಸವೊಂದರ ಸಂದರ್ಭದಲ್ಲಿ ಉದ್ಗರಿಸಿದ್ದರು. ಬಿಹಾರದ ಕರಗ್ದೆಯಲ್ಲಿ ಮಹಿಳಾ ಸಭೆಯಲ್ಲಿ "ನನ್ನ ಸಭೆಯ ಕೆಲವು ಸುಂದರ ಪ್ರೇಕ್ಷಕರು ಭಾರಿ ಆಭರಣಗಳನ್ನು ಅಲಂಕರಿಸಿಕೊಳ್ಳುವುದನ್ನು ನೋಡಿ ನನಗೆ ಸಹಿಸಲಾಗುತ್ತಿಲ್ಲ. ಇದರಿಂದ ಸೌಂದರ್ಯ ಹೆಚ್ಚುವುದಿಲ್ಲ. ಬದಲಾಗಿ ಅಸ್ವಸ್ಥತೆಯನ್ನೇ ಉಂಟು ಮಾಡುತ್ತದೆ" ಎಂದು ಹೇಳಿದ್ದೇ ತಡ ರಾಶಿರಾಶಿ ಒಡವೆ ಅವರ ಕಾಲ ಬಳಿ ಬಂದು ಬಿತ್ತು. ಲೂಯಿ ಫಿಶರ್ ತನ್ನ ಸ್ನೇಹಿತನ ವಿನಂತಿಯಂತೆ ಗಾಂಧಿಯ ಸಹಿ ಇರುವ ಭಾವಚಿತ್ರ ತರುವ ಸಲುವಾಗಿ ಗಾಂಧಿಯಲ್ಲಿ ಸಹಿಗಾಗಿ ವಿನಂತಿಸಿದಾಗ ನೀವು ಹರಿಜನ ನಿಧಿಗೆ ಇಪ್ಪತ್ತು ರೂಪಾಯಿ ಕೊಟ್ಟರೆ ಮಾತ್ರ ಎಂದರು ಗಾಂಧಿ. ಫಿಶರ್ ಹತ್ತು ರೂಪಾಯಿಯಷ್ಟೇ ಕೊಡುತ್ತೇನೆಂದಾಗ ಒಪ್ಪಿಕೊಂಡರು. ಫಿಶರ್ ಈ ಪ್ರಸಂಗವನ್ನು ಗಾಂಧಿಯ ಮಗ ದೇವದಾಸರಿಗೆ ಹೇಳಿದಾಗ "ಬಾಪು ಐದು ರೂಪಾಯಿಗೂ ಸಹಿ ಮಾಡುತ್ತಿದ್ದರು" ಎಂದಾತ ಪ್ರತಿಕ್ರಿಯಿಸಿದರು(ದಿ ಲೈಫ್ ಆಫ್ ಮಹಾತ್ಮ ಗಾಂಧಿ: ಲೂಯಿಸ್ ಫಿಶರ್)

                     ಮದ್ರಾಸಿನಲ್ಲಿ ಬೆಳಗ್ಗೆ ಬಂಗಲೆಯೊಂದರಿಂದ ಹೊರಬಂದ ಗಾಂಧಿ ಕಾರನ್ನೇರಿ ಹೊರಟಾಗ ಯುವಕನೊಬ್ಬ ತಡೆದು ಸಹಿ ಮಾಡುವಂತೆ ವಿನಂತಿಸಿದ. ಗಾಂಧಿ ನೂರು ರೂಪಾಯಿ ಕೊಡುವಂತೆ ಹೇಳಿದರು. ಆ ವಿದ್ಯಾರ್ಥಿ ತನ್ನಲ್ಲಿ ಐದೇ ರೂಪಾಯಿ ಇರುವುದಾಗಿ ಹೇಳಿದ. ಗಾಂಧಿ ಅದನ್ನೂ ಎಡಗೈಯಲ್ಲಿ ಪಡೆದು ಸಹಿ ಹಾಕಿ "ನನ್ನಿಂದ ಐದು ರೂಪಾಯಿಗೆ ಸಹಿ ಪಡೆದ ಮೊದಲ ವ್ಯಕ್ತಿ ನೀನು. ಇಷ್ಟರವರೆಗೆ ನೂರು ರೂಪಾಯಿಗಂತ ಕಡಿಮೆಗೆ ನಾನು ಸಹಿ ಹಾಕಿಲ್ಲ. ನೀನು ಅದೃಷ್ಟವಂತ" ಎಂದು ನಾಚಿಕೆಯಿಲ್ಲದೆ ಹೇಳಿದರು. ಇಲ್ಲೊಂದು ವಿಚಾರ ಗಮನಿಸಿ ಸರಳತೆಯ ಮೂರ್ತಿ ಬಂಗಲೆಯಲ್ಲಿ ಉಳಿದುಕೊಳ್ಳುತ್ತಿತ್ತು, ಕಾರನ್ನೆರಿ ಸಂಚಾರ ಮಾಡುತ್ತಿತ್ತು! ರಾಜ ಮಹೇಂದ್ರಿ ರೈಲ್ವೇ ನಿಲ್ದಾಣದಲ್ಲಿ ಗಾಂಧಿ ರೈಲ್ವೇ ಕಂಪಾರ್ಟ್ ಮೆಂಟಿನಿಂದ ಹೊರಗೆ ಕೈ ಚಾಚಿದಾಗ ವ್ಯಕ್ತಿಯೊಬ್ಬ ಕಿತ್ತಳೆ ಹಣ್ಣನ್ನಿರಿಸಿದ. ಗಾಂಧಿ "ಪೈಸಾ ಕಿ ಬಾತ್ ಹೈ, ಔರ್ ದೂಸ್ರಾ ನಹಿ" ಎಂದರು. ಸಮರ್ಲಕೋಟದಲ್ಲಿ ಮಹಿಳೆಯೊಬ್ಬಳು ಗಾಂಧಿ ಕೊರಳಿಗೆ ಮಾಲೆ ಹಾಕಿದಾಗ ಅವಳ ಕೈಯಲ್ಲಿದ್ದ ಬಂಗಾರದ ಬಳೆಗಳನ್ನು ಕೊಡುವಂತೆ ಆಗ್ರಹಿಸಿದರು. ಅಂಕಲಪಲ್ಲಿಯಲ್ಲಿ ವೈಷ್ಣವ ಜನತೋ ಹಾಡಿದ ಬಾಲಕಿಗೆ ನಿನ್ನ ಕೈಯಲ್ಲಿರುವ ಆಭರಣಗಳನ್ನು ಕೊಟ್ಟರೆ ಹಾಡು ಕೇಳಿದ್ದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ ಎಂದು ಕಸಿದುಕೊಂಡರು. ವಿಶಾಖಪಟ್ಟಣಂನಲ್ಲಿ ತನಗೆ ಮಾಲಾರ್ಪಣೆ ಮಾಡಿದ ಹುಡುಗಿಯಲ್ಲೂ ಬಳೆಗಳನ್ನು ಕೊಡಲು ಒತ್ತಾಯಿಸಿದರು. ಹುಡುಗಿಯ ತಂದೆ ಒಂಭತ್ತು ಬಳೆಗಳನ್ನು ತಂದು ಆಯ್ದುಕೊಳ್ಳಿ ಎಂದಾಗ ಅಷ್ಟೂ ನನ್ನವೇ ಎಂದರು. ಆತ ಎಲ್ಲವೂ ಅಲ್ಲ, ಒಂದು ಮಾತ್ರ ಎಂದು ಪ್ರತಿಕ್ರಿಯಿಸಿದ. ಅಜ್ಜಿಯೊಬ್ಬಳು ಎರಡು ಚಿನ್ನದ ಬಳೆ ನೀಡಿ ಸಂದೇಶ ಕೊಡುವಂತೆ ಕೇಳಿಕೊಂಡಾಗ ಸಂದೇಶ ಕೊಡಬೇಕೆಂದಾದರೆ ಹಣ ನೀಡೆಂದರು ಗಾಂಧಿ. ಆಕೆ ತನ್ನಲ್ಲಿದ್ದ ಚಿನ್ನದ ಸರ ತೆಗೆದು ಕೊಟ್ಟಳು. ಅದು ಗಾಂಧಿಯ ಕತ್ತು ಸೇರಿತು. 1947ರಲ್ಲಿ ಗಾಂಧಿ ಜನ್ಮದಿನದಂದು ಗುಜರಾತಿಗರು ಅವರಿಗೆ ತಾವು ಸಂಗ್ರಹಿಸಿದ ಪರ್ಸ್ ಕೊಡಲು ಕಾರ್ಯಕ್ರಮ ಏರ್ಪಡಿಸಿದಾಗ ಗಾಂಧಿ ಫ್ಲೂದಿಂದ ಬಳಲುತ್ತಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸರ್ದಾರ್ ಪಟೇಲ್ "ನಿಮ್ಮ ಅತಿ ಆಸೆಗೆ ಕೊನೆಯೇ ಇಲ್ಲ. ಒಂದು ಪರ್ಸನ್ನು ತೆಗೆದುಕೊಳ್ಳಲು ಮೃತ್ಯುಶಯ್ಯೆಯಿಂದಲೂ ಎದ್ದು ಹೋಗಲು ನೀವು ತಯಾರು" ಎಂದು ಗೇಲಿ ಮಾಡಿದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್; ಗಾಂಧೀಜಿ ಇನ್ ಆಂಧ್ರಪ್ರದೇಶ - ತೆಲುಗು ಅಕಾಡೆಮಿ). ಇವೆಲ್ಲಾ ಕೆಲವು ನಿದರ್ಶನಗಳು. ಗಾಂಧಿ ಜನರಿಂದ ಒತ್ತಾಯ ಪೂರ್ವಕವಾಗಿ ಅವರ ಆರ್ಥಿಕ ಸಾಮರ್ಥ್ಯ ನೋಡದೆ ಹಣ ಮತ್ತು ಒಡವೆಗಳನ್ನು ಸ್ವೀಕರಿಸಿದರು. ಅವು ಎಲ್ಲಿ ಬಳಕೆಯಾದವು? ಹರಿಜನರೋದ್ಧಾರಕ್ಕೋ, ಖಾದಿಗೋ ಅಥವಾ ಇನ್ನಾವುದಕ್ಕೋ ಎನ್ನುವ ವಿಷಯವಿಲ್ಲಿ ಪ್ರಧಾನವಲ್ಲ. ಗಾಂಧಿಯ ಈ ನಡವಳಿಕೆ ತಥಾಕಥಿತ ರಾಷ್ಟ್ರೀಯ ನಾಯಕನೊಬ್ಬನಿಗೆ ಶೋಭೆ ತರುವಂತಹದ್ದಲ್ಲ. ಅದರಲ್ಲೂ ಮಹಾತ್ಮ ಎಂದು ಕರೆಸಿಕೊಂಡಾತನಿಗೆ!

ಸೋಮವಾರ, ನವೆಂಬರ್ 7, 2016

ಯಾರು ಮಹಾತ್ಮ? ಭಾಗ- ೨೦

ಯಾರು ಮಹಾತ್ಮ?
ಭಾಗ- ೨೦

            ಗಾಂಧಿಯ ಪರಮ ಶಿಷ್ಯ ನೆಹರೂ 1955ರಲ್ಲಿ ತಮ್ಮ ಜೊತೆ ನಡೆದ ಖಾಸಗಿ ಮಾತುಕತೆಯಲ್ಲಿ ಗಾಂಧಿಯನ್ನು ಮುದಿ ಆಷಾಢಭೂತಿ ಎಂದು ಜರೆದಿದ್ದರು ಎಂದು ಆಗಿನ ಕೆನಡಾದ ವಿದೇಶಾಂಗ ಸಚಿವ ಲೆಸ್ಟರ್ ಪಿಯರ್ಸನ್ ತಮ್ಮ "ಮೆಮರಿಸ್" ನಲ್ಲಿ ಬರೆದಿದ್ದಾರೆ. ಜಿನ್ನಾ ಪಾಲಿಗೆ ಗಾಂಧಿ ಗುಳ್ಳೆ ನರಿಯಂತೆ ಕಂಡರು. ಮುಸ್ಲಿಮರ ಓಲೈಕೆ ಮಾಡಿಯೂ ಅವರು ಮುಸ್ಲಿಮರಿಗೆ "ಚರಿತ್ರಹೀನ ಮುಸ್ಲಿಮನಿಗಿಂತಲೂ ಕೀಳಾಗಿ" ಕಂಡರು. 1915ರಲ್ಲೇ ಅನಿಬೆಸೆಂಟ್ "ದೇಶದ ಈಗಿನ ಪರಿಸ್ಥಿತಿಯಲ್ಲಿ ಅಹಿಂಸಾ ಆಯುಧ ಪ್ರಯೋಜನಕ್ಕೆ ಬರದು. ಗಾಂಧಿಯ ಪ್ರತಿಭಟನಾ ಪದ್ದತಿಯನ್ನು ದೇಶೀಯರು ಅನುಸರಿಸುವುದಿಲ್ಲ" ಎಂದು ನೇರವಾಗಿ ನುಡಿದಿದ್ದರು(ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ). 1937ರಲ್ಲಿ ಆಂಧ್ರದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಕುರಿತ ಸಭೆಯೊಂದರಲ್ಲಿ ಮದ್ದೂರಿ ಅನ್ನಪೂರ್ಣಯ್ಯ "ಗಾಂಧಿ ಯಾವಾಗಲೂ ಶರಣಾಗಿದ್ದೇ ಬಿಟ್ಟರೆ ಯಶಸ್ಸು ಗಳಿಸಿದ್ದೇ ಇಲ್ಲ. ಸ್ವಾತಂತ್ರ್ಯ ಧ್ವಜವನ್ನೇ ಕೆಳಗಿಳಿಸಿರುವ ಅವರ ನಿಷ್ಪ್ರಯೋಜಕ ಹೋರಾಟಕ್ಕೆ ನಾವು ಬೆಂಬಲ ಕೊಡುವುದಿಲ್ಲ. ಗಾಂಧಿ ಕಾಂಗ್ರೆಸ್ಸಿಗಿಂತ ದೊಡ್ದವರೇನಲ್ಲ" ಎಂದು ಗಾಂಧಿ ನಾಯಕತ್ವವನ್ನು ಕಟು ಶಬ್ಧದಲ್ಲಿ ಟೀಕಿಸಿದ್ದರು. (ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ)

             "ದೇಶದ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಗಾಂಧಿ ಅಳವಡಿಸಿಕೊಂಡ ಕಾರ್ಯಕ್ರಮಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಅವು ಉತ್ತಮ ಪದ್ದತಿಗಳು ಎಂದು ನನಗನಿಸಲಿಲ್ಲ. ಹೇಗೆ ಮತ್ತು ಯಾವಾಗ ತಮ್ಮ ಹೋರಾಟ ಮಾರ್ಪಾಡಾಗಿ ನೈಜ ಗುರಿಯತ್ತ ಸಾಗುತ್ತದೆ ಎಂದು ಸ್ವತಃ ಗಾಂಧಿಗೇ ಅರಿವಿಲ್ಲ" ಎಂದಿದ್ದರು ಸುಭಾಷ್(ಇಂಡಿಯನ್ ಸ್ಟ್ರಗಲ್, ಸುಭಾಷ್ ಚಂದ್ರ ಬೋಸ್). 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡನೇ ಬಾರಿಗೆ ಗಾಂಧಿಯ ವಿರೋಧದ ನಡುವೆಯೂ ಚುನಾಯಿತರಾದಾಗ ತಮ್ಮ ಭಾಷಣದಲ್ಲಿ "ಅನೇಕ ಕಾಂಗ್ರೆಸ್ ನಾಯಕರು ವಸಾಹತುಶಾಹಿ ಜೊತೆ ಕೈಮಿಲಾಯಿಸಿದ್ದಾರೆ" ಎಂದು ನೇರವಾಗಿ ಆರೋಪಿಸಿದ್ದರು ಸುಭಾಷ್.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ).

            ಸರೋಜಿನಿ ನಾಯ್ಡು ಗಾಂಧಿಯನ್ನು ಪ್ರೀತಿ ಹಾಗೂ ವ್ಯಂಗ್ಯ ಮಿಶ್ರಿತವಾಗಿ "ಮಿಕ್ಕಿ ಮೌಸ್" ಎನ್ನುತ್ತಿದ್ದರು. ಗಾಂಧಿ ಬುದ್ಧನೂ ಅಲ್ಲ ಏಸುವೂ ಅಲ್ಲ ಎನ್ನುತ್ತಿದ್ದ ಆಕೆ ಗಾಂಧಿಯನ್ನು ಸಂತ ಎಂದು ಒಪ್ಪುತ್ತಿರಲಿಲ್ಲ. "ಗಾಂಧಿಯನ್ನು ಬಡತನದಲ್ಲಿಡಲು ನಮಗೆ ಬಹಳ ಖರ್ಚಾಗುತ್ತಿದೆ. ಈ ವೃದ್ಧನನ್ನು ಬಡತನದಲ್ಲಿಡಲು ಎಷ್ಟು ಖರ್ಚಾಗುತ್ತಿದೆ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ" ಎಂದು ಗಾಂಧಿಯ ಮುಂದೆಯೇ ಕಾಂಗ್ರೆಸ್ಸಿನ ಸಭೆಯಲ್ಲಿ ಹೇಳಿದ್ದರಾಕೆ. (ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ; ರೆಮಿನಿಸೆನ್ಸಸ್ ಆಫ್ ದಿ ನೆಹರೂ ಏಜ್-ಎಂ.ಓ. ಮಥಾಯ್). ಗಾಂಧಿಗೆ ಅತ್ಯಂತ ನಿಕಟವರ್ತಿಯಾಗಿದ್ದ ಸರೋಜಿನಿ ನಾಯ್ಡು ಅವರಿಂದಲೇ ಈ ಮಾತು ಬಂದಿರುವುದರಿಂದ ಇದನ್ನು ಅಲ್ಲಗೆಳೆಯಲಾಗದು. ಆ ದುರ್ಭೀಕ್ಷ ಕಾಲದಲ್ಲಿ ದುಬಾರಿಯಾಗಿದ್ದ ಶೇಂಗಾ ಹಾಗೂ ಆಡಿನ ಹಾಲನ್ನೇ ಗಾಂಧಿ ಪ್ರತಿನಿತ್ಯ ಉಪಯೋಗಿಸುತ್ತಿದ್ದರು. ಹೀಗೆ ಬಡತನದಲ್ಲಿ ಕಾಣಿಸಿಕೊಳ್ಳಲು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದಾತನನ್ನು ಸರಳತೆಯ ಮಹಾಮೂರ್ತಿ ಎಂದು ಕರೆದುದು ಎಷ್ಟು ಹಾಸ್ಯಾಸ್ಪದ! ತನ್ನ ಸರಳ ಜೀವನಕ್ಕೆ ವಿಪರೀತ ಖರ್ಚಾಗುತ್ತಿದ್ದರೂ ಉಳಿದವರಿಗೆ ಸರಳತೆಯ ಆದರ್ಶ ಬೋಧಿಸಿದರು ಗಾಂಧಿ. ಮೌಂಟ್ ಬ್ಯಾಟನ್ನಿಗೂ ಸರಳತೆ ಬೋಧಿಸ ಹೊರಟರು. ತುಂಡುಬಟ್ಟೆ ತೊಟ್ಟ ಮಾತ್ರಕ್ಕೆ ಸರಳತೆಯ ಮೂರ್ತಿ ಎಂದು ನಮ್ಮವರು ನಂಬಿ ಬಿಟ್ಟರಲ್ಲಾ? ಈ ಕುರುಡಾಗಿ ನಂಬುವ ನಮ್ಮವರ ಮನೋಭಾವವೇ ದೇಶವನ್ನು ಅಂದೂ ಇಂದೂ ದುಃಸ್ಥಿತಿಗೆ ದೂಡಿದ್ದು.

              ದೇಶವಿಭಜನೆಯ ಸಮಯದಲ್ಲಿ ನಡೆದ ಗಲಭೆಗಳ ಹಿಂದೆ ಸುಭಾಷರ "ಫಾರ್ವಾರ್ಡ್ ಬ್ಲಾಕ್" ಸದಸ್ಯರ ಕೈವಾಡವಿದೆ ಎಂದು ಸುಭಾಷರ ಅಣ್ಣ ಶರತ್ ಬೋಸರ ಬಳಿ ನೇರವಾಗಿ ಆಪಾದಿಸಿದರು ಗಾಂಧಿ. ಇಸ್ಲಾಮ್ ಬಗ್ಗೆ ಆಕರ್ಷಣೆಯೇ ಇರದಿದ್ದ, ನಮಾಜ್ ಮಾಡದೆ, ದಿನಾಲೂ ಗಡ್ದ ಬೋಳಿಸುತ್ತಿದ್ದ, ಕುರಾನ್-ಅಲ್ಲಾ-ಮುಲ್ಲಾಗಳನ್ನು ದ್ವೇಷಿಸುತ್ತಿದ್ದ, ನಿತ್ಯ ಕುಡಿಯುತ್ತಾ ಹಂದಿ ಮಾಂಸ ತಿನ್ನುತ್ತಿದ್ದ ವ್ಯಕ್ತಿ ಜಿನ್ನಾ. ತಿಲಕರ ಶಿಷ್ಯನಾಗಿ ಅಪ್ಪಟ ರಾಷ್ಟ್ರೀಯವಾದಿಯಾಗಿದ್ದ ಆತ ಮುಸ್ಲಿಮರಿಗೆ ಪ್ರತ್ಯೇಕ ಕೋಮುವಾರು ಪ್ರಾಂತ್ಯಗಳನ್ನು ನೀಡುವುದನ್ನೂ ವಿರೋಧಿಸಿದ್ದ. ಆದರೆ ಗಾಂಧಿಯ ವಿಧಾನಗಳೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣದಿಂದ ಆತನಿಗೆ ಕಾಂಗ್ರೆಸ್ಸಿನಲ್ಲಿ ಯಾವುದೇ ಮನ್ನಣೆ ಸಿಗಲಿಲ್ಲ. ಪ್ರತ್ಯೇಕತಾವಾದಿ, ಉನ್ಮತ್ತ, ಮತಾಂಧ ಮುಸ್ಲಿಮರನ್ನೇ ಆ ಸಮುದಾಯದ ನಾಯಕರು ಎಂದು ಗಾಂಧಿ ನೇತೃತ್ವದ ಕಾಂಗ್ರೆಸ್ ಬಿಂಬಿಸುತ್ತಾ ಜಿನ್ನಾರಂತಹ ರಾಷ್ಟ್ರೀಯವಾದಿ ಮುಸ್ಲಿಮ್ ನಾಯಕರನ್ನು ಮೂಲೆಗೆ ತಳ್ಳಿತು. ಇದರಿಂದ ಬೇಸತ್ತ ಜಿನ್ನಾ ಕೆಲ ಕಾಲ ಅಜ್ಞಾತವಾಸಿಯಾದರು. ಈ ಸಮಯವನ್ನು ಸದುಪಯೋಗಪಡಿಸಿಕೊಂಡ "ಸಾರೇ ಜಹಾಂಸೆ ಅಚ್ಛಾ" ಕರ್ತೃ ಮಹಮ್ಮದ್ ಇಕ್ಬಾಲ್ ಪತ್ರಗಳ ಸುರಿಮಳೆಯನ್ನೇ ಬರೆದು  ಜಿನ್ನಾರನ್ನು ಕೋಮುವಾದಿಯಾಗಿ ಬದಲಾಯಿಸಿ, ಮುಸ್ಲಿಂ ಲೀಗ್ ನೇತೃತ್ವ ವಹಿಸಿಕೊಂಡು ಪಾಕಿಸ್ತಾನದ ಜನಕನಾಗುವಂತೆ ಮಾಡಿದ. ಹೀಗೆ ದೇಶ ವಿಭಜನೆಯ ಹಿಂದೆ ಪ್ರತ್ಯಕ್ಷವಾಗಿ ಮಾತ್ರವಲ್ಲ, ಪರೋಕ್ಷವಾಗಿಯೂ ಗಾಂಧಿ ಕಾರಣರಾದರು.

    ತೆಲುಗು ಕವಿ ವೆಂಕಟ ಕವುಲು ತಮ್ಮ ಕಾಮೇಶ್ವರಿ ಶತಕಮ್ ನಲ್ಲಿ "ಗಾಂಧಿ ಸ್ವಭಾವ ಸಿದ್ಧಾಂತಗಳಿಗೆ ಸರಿ ಹೊಂದುವುದಿಲ್ಲ. ಅವರನ್ನು ನಂಬಿ ಹಿಂದೂಗಳು ಪೂರ್ತಿಯಾಗಿ ಹಾಳಾಗಿದ್ದಾರೆ. ನೂರು ಅಂಧರು ಒಬ್ಬ ಅಂಧನನ್ನು ಹಿಂಬಾಲಿಸುವಂತಾಗಿದೆ ದೇಶದ ಪರಿಸ್ಥಿತಿ" ಎಂದು ಟೀಕಿಸಿರುವುದು ಆಗಿನ ಪರಿಸ್ಥಿತಿಯ ಚಿತ್ರಣವನ್ನು ಕಟ್ಟಿಕೊಡುತ್ತದೆ.

    1947 ಸೆಪ್ಟೆಂಬರಿನಲ್ಲಿ ಗಾಂಧಿ ಮುಸ್ಲಿಮರ ಪರವಾಗಿ ಉಪವಾಸ ಕೂತಾಗ ಪ್ರಫುಲ್ಲ ಘೋಷ್ "ಮಂತ್ರಿಮಂಡಲವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಉಪವಾಸಕ್ಕೆ ಮುಂದಾದ ನೀವು ಬಹಳ ಅನ್ಯಾಯ ಮಾಡಿದ್ದೀರಿ" ಎಂದು ಆಕ್ಷೇಪಿಸಿದರು. ಸುಮಾರು ಹೊತ್ತು ನಡೆದ ಈ ಚರ್ಚೆಯ ಕೊನೆಗೆ ಘೋಷ್ "ಮುಸ್ಲಿಮರು ತಮ್ಮ ಮತದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿರುವಾಗ ಹಿಂದೂಗಳಿಗೆ ನೀವು ಅಹಿಂಸೆಯನ್ನು ಪಾಲಿಸಲು ಹೇಳುತ್ತಿದ್ದೀರಿ. ಹಾಗಾಗಿಯೇ ಹಿಂದೂಗಳು ನಿಮ್ಮನ್ನು ಶತ್ರುವೆಂದು ಪರಿಗಣಿಸಿದ್ದಾರೆ" ಎಂದು ಕುಪಿತರಾಗಿ ನುಡಿದರು. ಆಗ ಗಾಂಧಿ "ನನ್ನ ಉಪವಾಸ ಎರಡೂ ಸಮುದಾಯದವರಿಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ. ಬೇರೆ ಯಾವುದೇ ರೀತಿಯಲ್ಲಿ ನನ್ನನ್ನು ಗೆಲುವಿನಿಂದ ಇಡಲಾಗದೆಂದು ಹಿಂದೂಗಳಿಗೆ ಅನ್ನಿಸಿದಾಕ್ಷಣ ಕಲ್ಕತ್ತಾದಲ್ಲಿ ಶಾಂತಿ ನೆಲೆಸುತ್ತದೆ" ಎಂದು ಒರೆದರು.(ಮಹಾತ್ಮ ಗಾಂಧಿ - ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮರು ಹಿಂಸೆ ನಿಲ್ಲಿಸಬೇಕೆಂದೇನು ಇಲ್ಲ. ಹಿಂದೂಗಳು ಪ್ರತಿಕ್ರಿಯೆ ತೋರಬಾರದು ಎನ್ನುವುದಷ್ಟೇ ಗಾಂಧಿಯ ಉದ್ಡೇಶವಾಗಿತ್ತು. ಫ್ರಾನ್ಸ್ ಲೇಖಕರಾದ ಕಾಲಿನ್ಸ್ ಹಾಗೂ ಲ್ಯಾಪಿಯೆರ್ ತಮ್ಮ "ಫ್ರೀಡಮ್ ಅಟ್ ಮಿಡ್ ನೈಟ್" ನಲ್ಲಿ ನಿಶ್ಯಸ್ತ್ರ ಹಾಗೂ ಅಸಹಾಯಕರ ಆಯುಧವೆನಿಸಿದ ಉಪವಾಸ ಆ ಮೋಸಗಾರ ವ್ಯಕ್ತಿಯ ಕೈಯಲ್ಲಿ ಪ್ರಬಲ ಅಸ್ತ್ರವಾಯಿತು ಎಂದಿದ್ದಾರೆ.

           ಗಾಂಧಿ 1948 ಜನವರಿಯಲ್ಲಿ ಮುಸ್ಲಿಮರ ಪರವಾಗಿ ಅವರೇ ಹೇಳಿದಂತೆ ಹಿಂದೂಗಳ ವಿರುದ್ಧವಾಗಿ ಉಪವಾಸ ಆರಂಭಿಸಿದಾಗ ನೆಹರೂ ಇದರಿಂದ ಗಾಂಧಿ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂದು ಹೆದರಿದರು. ಆಗ ಪಟೇಲ್ "ಗಾಂಧಿ ಸಾವಿನಿಂದ ಯಾರಿಗೂ ಪ್ರಯೋಜನವಾಗದು. ಇಡೀ ಜಗತ್ತಿನ ಎದುರು ಗಾಂಧಿ ಹಿಂದೂಗಳಿಗೆ ಮಸಿ ಹಚ್ಚಲು ನಿರ್ಧರಿಸಿದಂತಿದೆ. ಅದೇ ಅವರ ಉದ್ದೇಶವಾಗಿದ್ದರೆ ಇಲ್ಲಿ ನಾನು ಮಾಡುವಂಥದ್ದೇನೂ ಇಲ್ಲ" ಎಂದಿದ್ದರು.(ದಿ ನೆಹರೂಸ್ ಆಂಡ್ ಗಾಂಧೀಸ್-ತಾರಿಖ್ ಅಲಿ).


             "ನೀವು ಉಪವಾಸ ಮಾಡುವಾಗ ನಿಮ್ಮ ಪ್ರಾಣಕ್ಕೇನಾದರೂ ಅಪಾಯವಾದರೆ ಇಡೀ ದೇಶ ಹೊತ್ತಿ ಉರಿಯುವುದಿಲ್ಲವೇ?" ಎಂದು ಯಾರೋ ಕೇಳಿದರು. ಆಗ ಗಾಂಧಿ " ಆ ಸಾಧ್ಯತೆಯಿದೆ. ಆದರೆ ಆ ರೀತಿ ಆಗುವ ಮೊದಲೇ ನಾನು ಭಗವಂತನ ಸಮ್ಮುಖದಲ್ಲಿ ಇರುತ್ತೇನೆ" ಎಂದುತ್ತರಿಸಿದರು. ಒಬ್ಬ ನಾಯಕನಾಡುವ ಮಾತೇ ಇದು? ಪೂರ್ವಾಪರ, ಪರಿಣಾಮಗಳನ್ಯಾವುದನ್ನೂ ಯೋಚಿಸದೆ ಗಾಂಧಿ ಮುನ್ನುಗ್ಗುತ್ತಿದ್ದರು ಎನ್ನುವುದಕ್ಕೆ ನಿದರ್ಶನವಿದು.

                1947ರ ಜನವರಿಯಲ್ಲಿ ಪ್ರಾರ್ಥನಾ ಸಭೆಯೊಂದರಲ್ಲಿ "ಕಾಂಗ್ರೆಸ್ ಸಹೋದ್ಯೋಗಿಗಳ ಮೇಲಿದ್ದ ಹಿಡಿತವನ್ನು ನಾನು ಕಳೆದುಕೊಂಡಿದ್ದೇನೆ. ಆತ್ಮದ ಪರಿಪೂರ್ಣ ಶ್ರೇಷ್ಠತೆ ವಿಚಾರದಲ್ಲಿ ನನ್ನ ಮಾತುಗಳು ಶಕ್ತಿ ಕಳೆದುಕೊಂಡಿವೆ. ನನಗೆ ತಪಶ್ಚರ್ಯದ ಕೊರತೆಯಿದೆ. ನನ್ನನ್ನು ಆವರಿಸಿರುವ ವಿಶ್ವಾಸವನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡಲು ತಪಸ್ಸಿನ ಅವಶ್ಯಕತೆಯಿದೆ" ಎಂದು ಹಲುಬಿದರು(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿಗೆ ಅರ್ಥವಾಗುವಾಗ ಬಹಳಷ್ಟು ತಡವಾಯಿತು! ಗಾಂಧಿಯನ್ನು ಆಧ್ಯಾತ್ಮಿಕ ವ್ಯಕ್ತಿ ಎಂದವರೂ ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಬೇಕು. ತನ್ನನ್ನೇ ನಿಯಂತ್ರಿಸಿಕೊಳ್ಳಲಾಗದವನು ಸಮಾಜವನ್ನು ನಿಯಂತ್ರಿಸಲು ಹೊರಟಿದ್ದಾನೆ! ತನ್ನ ಹಿಂಬಾಲಕರನ್ನೇ ಅಂಕೆಯಲ್ಲಿಟ್ಟುಕೊಳ್ಳಲಾಗದವನನ್ನು ನಾಯಕ ಎಂದು ಕರೆಯಲಾಗುತ್ತದೆ! ವಿಪರ್ಯಾಸ! ಗಾಂಧಿ ತಮಗೆ ಆವರಿಸಿರುವುದು ಪರಮಶ್ರೇಷ್ಠ ಎಂದು ತಿಳಿದು ಅದನ್ನು ಇತರರ ಮೇಲೆ ಹೇರ ಹೊರಟಿದ್ದಾರೆ! ಅದು ಸತ್ಯವೇ? ಪ್ರಸಕ್ತ ಸಮಾಜಕ್ಕೆ ಸಾಧುವೇ? ಅದರಿಂದ ದೇಶಕ್ಕೇನಾದರೂ ಹಾನಿಯಾಗಬಲ್ಲುದೇ? ಒಳ್ಳೆಯದಾಗುವುದಾದರೆ ಏನಾದೀತು? ಹಾಳಾಗುವುದಿದ್ದರೆ ಏನು? ಇಂತಹ ಯಾವುದೇ ನಿಷ್ಕರ್ಷೆ ಮಾಡದೆ ಮನಸ್ಸಿಗೆ ಬಂದುದನ್ನೆಲ್ಲಾ ಸಮಾಜದ ಮೇಲೆ ಹೇರ ಹೊರಟರೆ ಮತ್ತೇನಾಗುತ್ತದೆ? ಈ ತಲೆಕೆಟ್ಟ ವಿಚಾರಗಳನ್ನೆಲ್ಲಾ ಕುರುಡಾಗಿ ಈ ಸಮಾಜ ಒಪ್ಪಿಕೊಳ್ಳುತ್ತದಲ್ಲಾ ಅದಕ್ಕೇನನ್ನಬೇಕು? ತನ್ನಿಂದಾಗದಿದ್ದಾಗ ತಪಶ್ಚರ್ಯೆಯ ಕೊರತೆಯಂತೆ! ಇಷ್ಟರವರೆಗೆ ಕ್ರೈಸ್ತರ ರೀತಿ ಪ್ರಾರ್ಥನೆ ಮಾಡುತ್ತಿದ್ದ ವ್ಯಕ್ತಿಗೆ ಈಗ ತಪಸ್ಸಿನ ನೆನಪಾಗಿದೆ!

ಗುರುವಾರ, ನವೆಂಬರ್ 3, 2016

ಯಾರು ಮಹಾತ್ಮ? ಭಾಗ- ೧೯

ಯಾರು ಮಹಾತ್ಮ?
ಭಾಗ- ೧೯

               ಭಾರತದಲ್ಲಿ ಖಿಲಾಫತ್ತಿನ ರಕ್ತದಾಟಕ್ಕೆ ಬೀಜಾರೋಪ ಮಾಡಿದ್ದ ಮತಾಂಧ ಮಹಮ್ಮದ್ ಅಲಿ "ಒಬ್ಬ ಚರಿತ್ರಹೀನ ಮುಸ್ಲಿಮ್ ಕೂಡಾ ಗಾಂಧಿಗಿಂತ ಉತ್ತಮ" ಎಂದಿದ್ದ. ಇಂತಹ ಮಹಮ್ಮದ್ ಅಲಿ ಹಾಗೂ ಅತನ ಸಹೋದರ ಶೌಕತ್ ಅಲಿಯೇ ಕಳೆದ ಶತಮಾನದ ಭಾರೀ ನರಮೇಧವಾದ ಮೋಪ್ಲಾ ದಂಗೆಗೆ ಮೂಲ ಕಾರಣರು. ಸೈಯ್ಯದ್ ಅಹಮದ್ ಖಾನನ "ಮೊಹಮ್ಮದನ್ ಆಂಗ್ಲೋ ವಿವಿ"ಯನ್ನು ಅಲಿಘಡ ವಿವಿಯಾಗಿ, ಪ್ರತ್ಯೇಕತೆಯ ವಿಷಬೀಜಬಿತ್ತಿ ದೇಶವಿಭಜನೆಗೆ ಕಾರಣವಾಗುವ ವಿವಿಯಾಗಿ ಬದಲಾಯಿಸಿದ್ದು ಇದೇ ಅಲಿ ಸಹೋದರರು. ಮುಸ್ಲಿಂ ಲೀಗಿನ ಜನ್ಮದಾತರಿವರು. ಇಂತಹ ಧೂರ್ತರು ದೇಶವಿರೋಧಿ ಚಟುವಟಿಕೆಗಾಗಿ ಬಂಧಿತರಾದಾಗ ಅವರ ಬಿಡುಗಡೆಗೆ ಬ್ರಿಟಿಷ್ ಸರ್ಕಾರದ ಜೊತೆ ಪತ್ರವ್ಯವಹಾರ ಆರಂಭಿಸಿದರು ಗಾಂಧಿ. ನಾನು ಮುಸ್ಲಿಮರ ನಿಜ ಗೆಳೆಯನಾಗಬೇಕೆಂದರೆ ಅಲಿ ಸಹೋದರರ ಬಿಡುಗಡೆಗೆ, ಖಿಲಾಫತ್ ಪ್ರಶ್ನೆಯನ್ನು ಬಗೆಹರಿಸಲು ಎಲ್ಲಾ ಸಹಾಯ ಮಾಡಬೇಕೆಂಬುದು ನನ್ನ ಭಾವನೆ ಎಂದರು ಗಾಂಧಿ.

                  ಇಸ್ಲಾಮ್ ಇತಿಹಾಸದ ಬಗ್ಗೆ ಕರಪತ್ರ ಹೊರಡಿಸಿದ್ದ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆ ಕಲಂ 195 ಪ್ರಕಾರ ನಾಥುರ್ ಮಲ್ ಶರ್ಮಾಗೆ ಶಿಕ್ಷೆ ವಿಧಿಸಲಾಗಿತ್ತು. ಅಬ್ಬ ಈ ದೇಶದಲ್ಲಿ ಸತ್ಯ ಹೇಳುವುದೂ ಅಪರಾಧ! ಇದರ ಮೇಲ್ಮನವಿಯ ವಿಚಾರಣೆ ನಡೆಯುತ್ತಿದ್ದಾಗ ಅಬ್ದುಲ್ ಕಯೂಮ್ ಎಂಬಾತ ಅವರನ್ನು ನ್ಯಾಯಾಲಯದಲ್ಲೇ ಗುಂಡಿಕ್ಕಿ ಕೊಂದ. ಮುಸ್ಲಿಮರು ಇದನ್ನು ಖಂಡಿಸಲಿಲ್ಲ. ಬದಲಾಗಿ ಕಯೂಮ್ ಪರ ನಿಂತರು. ಅವನನ್ನು ಕ್ಷಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯೂ ನಡೆಯಿತು. ಬರ್ಕತ್ ಅಲಿ ಕಯೂಮ್ ಪರ ವಾದಿಸಿದ. ಕುರಾನ್ ಪ್ರಕಾರ ಕಯೂಮ್ ಕ್ರಮ ಸಮರ್ಥನೀಯ ಅಂದ. ಇಂತಹ ಅನೇಕ ಘಟನೆಗಳು ನಡೆದವು. ಅನೇಕ ಹಿಂದೂ ನಾಯಕರನ್ನು ಮುಸ್ಲಿಮರು ಸಾಯಿಸಿದರು. ಮುಸ್ಲಿಮ್ ಜನಾಂಗ ಕೊಲೆಗಾರರ ಬೆನ್ನಿಗೆ ನಿಂತಿತು. ಹಿಂದೂಗಳಿಗೆ ಅಹಿಂಸೆ ಬೋಧಿಸುತ್ತಿದ್ದ ಗಾಂಧಿ ಇಂತಹ ಹಿಂಸಾ ನಡವಳಿಕೆಗಳನ್ನು ಖಂಡಿಸಲೂ ಇಲ್ಲ. ಉಪವಾಸ ಕೂರಲೂ ಇಲ್ಲ. ಬದಲಾಗಿ ರಶೀದನನ್ನು ಸೋದರ ಎಂದೂ, ಸುಹ್ರಾವರ್ದಿಯನ್ನು ಹುತಾತ್ಮ ಎಂದೂ ಕರೆದರು! ಈ ಎಲ್ಲಾ ಘಟನಾವಳಿಗಳನ್ನು ನೋಡುವಾಗ ಗಾಂಧಿಯೊಳಗೆ ಇದ್ದದ್ದು ಮುಸ್ಲಿಮನೇನೋ ಎನ್ನುವ ಸಂಶಯ ಕಾಡಲಾರಂಭಿಸುತ್ತದೆ. ಹಿಂದೂ ಮುಸ್ಲಿಮ್ ಐಕ್ಯತೆ ಸಾಧಿಸುವತ್ತ ತೀವ್ರಾಸಕ್ತರಾಗಿದ್ದ ಗಾಂಧಿ ಹಿಂದೂಗಳ ಬಲಿದಾನದಿಂದಲೇ ಅದು ಸಾಧ್ಯ ಎಂದು ಪರಿಗಣಿಸಿ ಹಿಂದೂಗಳ ಹತ್ಯೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ(ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ. ಆರ್ ಅಂಬೇಡ್ಕರ್). ಇವತ್ತಿನ ರಾಜಕೀಯ ನಾಯಕರುಗಳಿಗೂ ಗಾಂಧಿಗೂ ಏನು ವ್ಯತ್ಯಾಸವಿದೆ?

             ಮುಸ್ಲಿಮರಿಗೆ ಪ್ರತ್ಯೇಕ ಮತದಾರ ಕ್ಷೇತ್ರ ಕೊಡುವುದನ್ನು ದುಂಡುಮೇಜಿನ ಪರಿಷತ್ತಿನಲ್ಲಿ ಗಾಂಧಿ ವಿರೋಧಿಸಿದರು. ಆದರೆ ಅದನ್ನು ಮತಕ್ಕೆ ಹಾಕಿದಾಗ ಪರ-ವಿರೋಧ ಯಾವುದನ್ನೂ ತಾಳದೆ ವಿಚಿತ್ರ ನಿಲುವು ಪ್ರದರ್ಶಿಸಿದರು. ಇದು ಗಾಂಧಿಯ ಹಿಂದೂ ಮುಸ್ಲಿಮರ ನಡುವೆ ಏಕತೆ ತರಲು ಮಾಡಿದ ಪ್ರಯತ್ನದ ಕಥೆ. ಇದರಿಂದ ಎಂತಹ ಹಾನಿಯಾಯಿತೆಂದು ಇತಿಹಾಸವೇ ಹೇಳುತ್ತದೆ(ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ. ಆರ್ ಅಂಬೇಡ್ಕರ್).

        1946ರಲ್ಲಿ ನೌಕಾಲಿ ಹಾಗೂ ತಿಪ್ರೇಹ್'ಗಳಲ್ಲಿ ಭೀಕರ ಅತ್ಯಾಚಾರಗಳು ನಡೆದ ಬಳಿಕ ಅಲ್ಲಿಗೆ ಹೋದ ಗಾಂಧಿ ಉಳಿದುಕೊಂಡಿದ್ದ ಮನೆಯ ಮೇಲೆ ತ್ರಿವರ್ಣ ಧ್ವಜ ಇರುವುದನ್ನು ಕಂಡ ಮುಸ್ಲಿಮನೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. ಗಾಂಧಿ ತಕ್ಷಣ ಧ್ವಜ ತೆಗೆಯುವಂತೆ ಸೂಚಿಸಿದರು. ಒಬ್ಬ ಮತಾಂಧ ಆಕ್ಷೇಪ ವ್ಯಕ್ತಪಡಿಸಿದನೆಂಬ ಕಾರಣಕ್ಕೆ ರಾಷ್ಟ್ರಧ್ವಜವನ್ನೇ ಕಿತ್ತೆಸೆದ ವ್ಯಕ್ತಿಗೆ ದೇಶದ ಬಗ್ಗೆ ಎಂತಹ ಭಾವನೆಯಿದ್ದೀತು? ಇಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿ, ರಾಷ್ಟ್ರಪಿತನನ್ನಾಗಿ ಮಾಡಿತಲ್ಲ ಈ ದೇಶ! ಈ ದೇಶದ ಬೌದ್ಧಿಕ ದಾರಿದ್ರ್ಯ, ಹ್ರಾಸಗೊಂಡ ಕ್ಷಾತ್ರದ ಪ್ರತೀಕವಲ್ಲವೇ ಇದು?

           ಕಾಶ್ಮೀರದಲ್ಲಿ ಮುಸ್ಲಿಮ್ ಬಾಹುಳ್ಯವಿರುವ ಕಾರಣ ಮಹಾರಾಜ ಅಧಿಕಾರವನ್ನು ಶೇಖ್ ಅಬ್ದುಲ್ಲಾಗೆ ಹಸ್ತಾಂತರಿಸಿ ಕಾಶಿಗೆ ಹೋಗಬೇಕೆಂದು ಪದೇ ಪದೇ ಹೇಳುತ್ತಿದ್ದರು ಗಾಂಧಿ. ಆದರೆ ಹೈದರಾಬಾದಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿಯಿದ್ದಾಗ್ಯೂ ನಿಜಾಮ ಮೆಕ್ಕಾಗೆ ಹೋಗಬೇಕೆಂಬ ಅಣಿಮುತ್ತು ಗಾಂಧಿಯ ಬಾಯಿಯಿಂದ ಉದುರಲಿಲ್ಲ. ಹೈದರಾಬಾದ್ ಸಮಸ್ಯೆಯೇನೋ ಉಕ್ಕಿನ ಮನುಷ್ಯನ ಉಕ್ಕಿನ ನಿರ್ಧಾರದಿಂದ ಪರಿಹಾರವಾಗಿ ಅದು ಭಾರತಕ್ಕೆ ಸೇರಿತು. ಆದರೆ ಕಾಶ್ಮೀರವನ್ನು ನೆಹರೂ ಮಹಾಶಯ ಮಧ್ಯ ಪ್ರವೇಶಿಸಿ ವಿಚಾರವನ್ನು ವಿಶ್ವಸಂಸ್ಥೆಗೊಯ್ದು ತನ್ನ ಗೆಳೆಯನಿಗೆ ನೆರವಾದರು. ಕಾಶ್ಮೀರದ ಸಮಸ್ಯೆಯಲ್ಲಿ ನೆಹರೂ ಪಾತ್ರ ಎಷ್ಟಿದೆಯೋ ಗಾಂಧಿಯ ಪಾತ್ರವೂ ಅಷ್ಟೇ ಇದೆ. ಗಾಂಧಿ ಬಾಯಲ್ಲಿ ಹೇಳಿದರು; ಅವರ ಶಿಷ್ಯ ಅದನ್ನು ಮಾಡಿ ತೋರಿಸಿದ ಅಷ್ಟೇ! ಚಿಕ್ಕಪುಟ್ಟ ವಿಷಯಕ್ಕೆಲ್ಲಾ ಉಪವಾಸ ಕೂರುತ್ತಿದ್ದ ಆ ಮಹಾನುಭಾವ ಕಾಶ್ಮೀರದ ವಿಚಾರದಲ್ಲೇಕೆ ಉಪವಾಸ ಕೂರಲಿಲ್ಲ? ಅಖಂಡ ಭಾರತವನ್ನು ಛಿದ್ರಗೊಳಿಸುವ ಹುನ್ನಾರವೇ ಅದು?

           ವಿಭಜನೆಯಾದ ಸಂದರ್ಭದಲ್ಲಿ ಅವಿಭಜಿತ ಭಾರತದಲ್ಲಿ ಉಳಿದಿದ್ದ ಹಣದ ಪಾಲಿನ ವಿಷಯದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಸರಣಿ ಚರ್ಚೆಗಳು ನಡೆದು ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡುವುದೆಂದು ನಿಶ್ಚಯಿಸಲಾಯಿತು. ಆ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ದಾಳಿಕೋರರನ್ನು ಕಾಶ್ಮೀರಕ್ಕೆ ಛೂ ಬಿಟ್ಟು ದಾಂಧಲೆ ಎಬ್ಬಿಸಲು ಆರಂಭಿಸಿತು. ಹಾಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಈ ಹಣ ಕೊಟ್ಟರೆ ತನ್ನ ವಿರುದ್ಧ ಸಮರ ಸಾರಲು ಅದನ್ನು ಉಪಯೋಗಿಸಿಕೊಳ್ಳಬಹುದೆಂಬ ಶಂಕೆಯಿಂದ ಹಣ ಕೊಡಲು ನಿರಾಕರಿಸಿತು. ಈ ಸಂದರ್ಭದಲ್ಲಿ ಗಾಂಧಿ ಪಾಕಿಸ್ತಾನಕ್ಕೆ ಹಣ ಕೊಡಬೇಕೆಂದು ಆಮರಣಾಂತ ಉಪವಾಸ ಕೂತರು. ಉಪವಾಸ ಕೂರುವ ಮುನ್ನ ಮೌಂಟ್ ಬ್ಯಾಟನ್ ಜೊತೆ ಚರ್ಚಿಸಿದ್ದ ಗಾಂಧಿ " ನಾನು ಆಮರಣಾಂತ ಉಪವಾಸ ಆರಂಭಿಸುತ್ತಿರುವುದು ಎರಡು ಷರತ್ತುಗಳಿಗಾಗಿ. ಒಂದು ದೆಹಲಿಯಲ್ಲಿ ಶಾಂತಿ ನೆಲೆಸಬೇಕೆಂದು. ಎರಡನೆಯದ್ದು ಪಾಕಿಸ್ತಾನಕ್ಕೆ 55ಕೋಟಿ ರೂಪಾಯಿ ಕೊಡಬೇಕೆಂದು. ನಾನು ಉಪವಾಸ ಕೂತರೆ ಅವರು ನನ್ನನ್ನು ತಿರಸ್ಕರಿಸಲು ಸಾಧ್ಯವಿಲ್ಲ" ಎಂದು ಕಿರುನಗು ಸೂಸುತ್ತಾ ನುಡಿದರು(ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್). ಎರಡೂ ಸಂಭವಿಸಿತು. ಗಾಂಧಿಯ ದೃಷ್ಟಿಯ ಶಾಂತಿ - ಅಂದರೆ ಹಿಂದೂಗಳು ತಮ್ಮ ಪ್ರತೀಕಾರವನ್ನು ನಿಲ್ಲಿಸಿದರು. ಆದರೆ ಮುಸ್ಲಿಮರಿಂದ ದಾಂಧಲೆ, ಕೊಲೆ, ಅತ್ಯಾಚಾರಗಳು ನಿಲ್ಲಲಿಲ್ಲ; ಗಾಂಧಿಯ ದೃಷ್ಟಿಯ ಶಾಂತಿ ಎಂದರೆ ಅದೇ. ಏಕೆಂದರೆ ಗಾಂಧಿ ಉಪವಾಸ ಆರಂಭಿಸಿದ್ದು ಹಿಂದೂಗಳು ತಿರುಗಿಬಿದ್ದಾಗಲೇ. ಮುಸ್ಲಿಮರಿಂದ ಹಿಂದೂಗಳ ಕಗ್ಗೊಲೆಯಾಗುತ್ತಿದ್ದಾಗ ಈ ಮಹಾತ್ಮ ಅವರಿಗೆ ಅಹಿಂಸೆಯ ವೀರರೆಂಬ ಶಹಬಾಸ್ ಗಿರಿ ಕೊಡುತ್ತಿದ್ದರು. ಇತ್ತ ಗಾಂಧಿಯ ಉಪವಾಸಕ್ಕೆ ಬೆದರಿದ ಸರ್ಕಾರ 55 ಕೋಟಿ ರೂಪಾಯಿ ಕೊಡಲೊಪ್ಪಿತು.

               ವಿಭಜನೆಯಾದದ್ದು ಮತದ ಆಧಾರದ ಮೇಲೆ. ಅಲ್ಲಿನ ಹಿಂದೂಗಳೆಲ್ಲಾ ಇಲ್ಲಿಗೆ ಬರಬೇಕು. ಇಲ್ಲಿರುವ ಮುಸ್ಲಿಮರೆಲ್ಲಾ ಅತ್ತ ಹೋಗಬೇಕು ಎನ್ನುವುದೂ ವಿಭಜನೆಯ ಷರತ್ತುಗಳಲ್ಲೊಂದು. ಅಲ್ಲಿರುವ ಹಿಂದೂಗಳು ಇತ್ತ ಬಂದರು. ಬರದಿದ್ದವರನ್ನು ಓಡಿಸಲಾಯಿತು. ಸಿಕ್ಕಿದವರನ್ನು ಹುರಿದು ಮುಕ್ಕಲಾಯಿತು. ಇಲ್ಲಿನವರು ಅಲ್ಲಿ ಹೋಗಬೇಕೆಂದಾಗ ಈ ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತಡೆದರು. ಇಲ್ಲಿನ ಹಿಂದೂಗಳು ತಮ್ಮವರ ಮೇಲಿನ ಅತ್ಯಾಚಾರದ ಸುದ್ದಿ ಕೇಳಿ ಕೆರಳಿ ಮುಸ್ಲಿಮರನ್ನು ಒದ್ದು ಹೊರಹಾಕಲು ಸಿದ್ಧರಾದಾಗ ಉಪವಾಸ ಕೂತುಬಿಟ್ಟರು! ಭಳಿರೇ ಮಹಮ್ಮದ್ ಕರೀ ಗಾಂಧಿ! (ಈ ಉಲ್ಲೇಖದಿಂದಲೇ ಗಾಂಧಿಗೆ ಅನೇಕ ಪತ್ರಗಳು ಬರುತ್ತಿದ್ದವು!)

ಬುಧವಾರ, ನವೆಂಬರ್ 2, 2016

ಯಾರು ಮಹಾತ್ಮ? ಭಾಗ- ೧೮

ಯಾರು ಮಹಾತ್ಮ?
ಭಾಗ- ೧೮

    ದೇಶವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹಿಂದೂಗಳು ಹತ್ಯೆಗೀಡಾದರು. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಹದಂತೆ ಹಿಂದೂಗಳು ಆಶ್ರಯ ಬಯಸಿ ಬಂದರು. ತಮ್ಮವರ ಭಯಾನಕ ಕಥೆಗಳನ್ನು ಕೇಳಿದ ಹಿಂದೂಗಳು ಸಹಜವಾಗಿಯೇ ಆಕ್ರೋಶಗೊಂಡು ಪ್ರತೀಕಾರಕ್ಕೆ ಮುಂದಾದರು. ಮುಸ್ಲಿಮರನ್ನು ರಕ್ಷಿಸುವ ಸಲುವಾಗಿ ಗಾಂಧಿ ಆಮರಣಾಂತ ಉಪವಾಸ ಕೂತರು. ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಅತ್ಯಾಚಾರಗಳಾಗುತ್ತಿದ್ದಾಗ ನೆನಪಾಗದ ಉಪವಾಸ ಗಾಂಧಿಗೆ ಹಿಂದೂಗಳು ಮುಸ್ಲಿಮರ ವಿರುದ್ಧ ತಿರುಗಿಬಿದ್ದಾಗ ನೆನಪಾಯಿತು! ಒಂದು ದಿನ ರಾವಲ್ಪಿಂಡಿಯಿಂದ ಹೊರಟ ಒಂದು ಸಾವಿರ ಜನರಲ್ಲಿ ಅದು ಹೇಗೋ ಜೀವ ಉಳಿಸಿಕೊಳ್ಳಲು ಯಶಸ್ವಿಯಾದ ಕೇವಲ ಹದಿನಾರು ಜನರ ಗುಂಪೊಂದು ಬಂತು. ಅ ಗುಂಪು ಗಾಂಧಿಯವರಿಗೆ " ಪಂಜಾಬಿನಲ್ಲಿ ಹಿಂದೂಗಳನ್ನು ಕಂಡಕಂದಲ್ಲಿ ಮುಸ್ಲಿಮರು ಕೊಲ್ಲುತ್ತಿದ್ದಾರೆ. ನೀವೋ ಶಸ್ತ್ರ ತ್ಯಜಿಸಿ ಎಂದು ಕರೆಕೊಡುತ್ತಿದ್ದೀರಿ. ನಾವು ಕುರಿಗಳಂತೆ ವಧಿಸಲ್ಪಡಬೇಕೆಂದು ನಿಮ್ಮ ಇಚ್ಛೆಯೇ?" ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಗೈದರು.
ಗಾಂಧಿಯ ಪ್ರತಿಕ್ರಿಯೆ ವಿಲಕ್ಷಣ ಹಾಗೂ ವಿಚಿತ್ರವಾಗಿತ್ತು. "ಪಂಜಾಬಿನಲ್ಲಿ ಎಲ್ಲರೂ ಕೊಲೆಗೀಡಾಗಿ ಒಬ್ಬನೇ ಒಬ್ಬ ಉಳಿದರೂ ಪಂಜಾಬ್ ಅಮರವಾಗುತ್ತದೆ. ಆದರೆ ನೀವು ಆಯುಧ ಕೈಗೆತ್ತಿಕೊಂಡಿರಿ ಮತ್ತು ಪರಿಸ್ಥಿತಿ ಹದಗೆಟ್ಟಾಗ ನನ್ನ ಬಳಿ ಬಂದಿರಿ. ಇಲ್ಲಿಂದ ಬೇಕಾದರೂ ನಾನು ಪಂಜಾಬಿನಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲೆ. ಒಂದು ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ನಿಜ. ಆದರೆ ವೀರರಂತಲ್ಲ. ಅಹಿಂಸೆಯ ಮಾರ್ಗದಿಂದ, ಬಲಿದಾನದ ಸಂಕಲ್ಪದಿಂದ ಅವರು ಎದುರಿಸುತ್ತಿದ್ದರೆ ಎಂಥ ಬದಲಾವಣೆ ಆಗುತ್ತಿತ್ತು. ಅಹಿಂಸೆ ಮೂಲಕ ಪ್ರತಿಭಟಿಸಿ" ಎಂದರು ಗಾಂಧಿ. (ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್; ಫ್ರೀಡಮ್ ಅಟ್ ಮಿಡ್ ನೈಟ್-ಕಾಲಿನ್ಸ್ & ಲ್ಯಾಪಿಯೆರ್). ಅಂದರೆ ಹಿಂದೂಗಳೆಲ್ಲಾ ಸುಮ್ಮನೆ ಸಾಯಬೇಕು ಎನ್ನುವುದು ಗಾಂಧಿಯ ಉದ್ದೇಶವಾಗಿತ್ತೇ? ಹಿಂದೂಗಳು ತಮ್ಮ ರಕ್ಷಣೆಗೆ ಆಯುಧಪಾಣಿಗಳಾದ ಕಾರಣ ಗಾಂಧಿ ಹಿಂದೂಗಳಿಗೆ ಸಹಾಯ ಮಾಡುತ್ತಿಲ್ಲ ಎನ್ನುವುದು ಅವರ ಮಾತಿನರ್ಥವೇ? ದೆಹಲಿಯಲ್ಲಿದ್ದುಕೊಂಡೇ ಪಂಜಾಬಿನಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲೆ ಎಂದು ಬಡಾಯಿಕೊಚ್ಚಿಕೊಳ್ಳುವ ಗಾಂಧಿ ಅದನ್ನೇಕೆ ಪ್ರಯತ್ನಿಸಲಿಲ್ಲ. ಸತ್ತರೆ ಸಾಯಲಿ, ಹಿಂದೂಗಳಲ್ಲವೇ ಎನ್ನುವುದು ಅವರ ಅಭಿಪ್ರಾಯವೇ? ಹಿಂದೂಗಳಿಗಾದರೆ ಅಹಿಂಸೆ, ಮುಸ್ಲಿಮರು ಏನು ಮಾಡಿದರೂ ಸರಿ ಎನ್ನುವ ಭಾವ! ಒಟ್ಟಾರೆ ಇಂದಿನ ದಗಲ್ಬಾಜಿ ರಾಜಕಾರಣಕ್ಕೆ ಎಲ್ಲಾ ರೀತಿಯಿಂದಲೂ ಗಾಂಧಿಯೇ ಪಿತಾಮಹ ಎನ್ನುವುದು ಅವರ ಪ್ರತಿಯೊಂದು ನಡೆ, ಮಾತಿನಲ್ಲಿಯೂ ಬಿಂಬಿತವಾಗುತ್ತದೆ.

        ಗಾಂಧಿ ಕೇವಲ ಮುಸ್ಲಿಮರ ಬಗ್ಗೆ ಮಾತ್ರ ಸಹಾನುಭೂತಿ ಹೊಂದಿದ್ದಾರೆ, ಅದಕ್ಕಾಗಿಯೇ ಮುಸ್ಲಿಮರ ಪರವಾಗಿ ಅವರು ಉಪವಾಸ ಕೈಗೊಂಡಿದ್ದಾರೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದಾಗ ಗಾಂಧಿ, "ನನ್ನ ಇಡೀ ಬದುಕಿನಲ್ಲಿ ಪ್ರತಿಯೊಬ್ಬರೂ ಮಾಡುವಂತೆ ಅಲ್ಪಸಂಖ್ಯಾತರ ಅಥವಾ ಯಾರಿಗೆ ಅಗತ್ಯವಿದೆಯೋ ಅವರ ಪರವಾಗಿ ನಿಂತಿದ್ದೇನೆ. ಹೌದು ನನ್ನ ಉಪವಾಸ ಮುಸ್ಲಿಮರ ಪರವಾಗಿಯೇ ಕೈಗೊಂಡಿದ್ದು. ಆದಕಾರಣ ಈ ಉಪವಾಸ ಹಿಂದೂಗಳು ಹಾಗೂ ಸಿಖ್ಖರ ವಿರುದ್ಧ ಆಗಬೇಕಾದ್ದು ಅನಿವಾರ್ಯ" ಎಂದುತ್ತರಿಸಿದರು.(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಗಾಂಧಿಯ ಈ ಒಂದು ಮಾತು-ನಡೆ ಸಾಕು, ಅವರ ಹಿಂದೂ ವಿರೋಧಿ ಮನಸ್ಥಿತಿ ಯಾವ ಮಟ್ಟದಲ್ಲಿತ್ತು ಎಂದು ತಿಳಿಯಲು. ಒಂದು ಸಮುದಾಯ ಅದು ಅನ್ಯಾಯ ಮಾಡುತ್ತಿದ್ದರೂ, ಅದರ ಪರವಾಗಿ ನಿಲ್ಲುವ ಇಂತಹ ವ್ಯಕ್ತಿಯನ್ನು ಮಹಾತ್ಮ ಎಂದು ಈ ಜಗತ್ತು ಪೂಜಿಸುತ್ತಿದೆಯಲ್ಲ! ವಿಪರ್ಯಾಸ!

     ಇತ್ತ ಗಾಂಧಿ ಮುಸ್ಲಿಮರ ಪರವಾಗಿ ಉಪವಾಸ ಕೂತ ಹಿಂದಿನ ದಿನವೇ(1948 ಜನವರಿ 13) ಪಂಜಾಬಿನಿಂದ ಬರುತ್ತಿದ್ದ ರೈಲಿನಲ್ಲಿದ್ದ ಬಹುಸಂಖ್ಯೆಯ ಹಿಂದೂ ನಿರಾಶ್ರಿತರನ್ನು ಮುಸ್ಲಿಮರು ಸಾಮೂಹಿಕ ಹತ್ಯೆಗೈದರು. ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಗೈಯ್ಯಲಾಯಿತು. ಗಾಂಧಿಯವರ ಆಪ್ತ, ಕಾರ್ಯದರ್ಶಿ ಪ್ಯಾರೇಲಾಲ್ ಈ ಭಯಾನಕ ಘಟನೆಯನ್ನು ಗಾಂಧಿಯ ಗಮನಕ್ಕೆ  ತಂದಾಗ ಯಾವುದೇ ಪ್ರತಿಭಟನೆಯಿಲ್ಲದೆ ಹಿಂದೂಗಳು ಮುಸ್ಲಿಮರ ಕೈಯಿಂದ ಹತರಾದುದನ್ನು ಕೇಳಿ ಗಾಂಧಿ ಸಂತೋಷ ವ್ಯಕ್ತಪಡಿಸುತ್ತಾ ಹೇಳಿದ್ದೇನು ಗೊತ್ತೇ? "ಅಹಿಂಸೆಯನ್ನು ಆಚರಿಸುವವರು ವೀರ ಯೋಧರು ಎಂದು ನಾನು ಯಾವಾಗಲೂ ಹೇಳುತ್ತಿರಲಿಲ್ಲವೇ?" ಎಂದು.(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಯಾವುದು ಅಹಿಂಸೆ? ವೃದ್ದಾಪ್ಯದ ಅರಳು-ಮರಳಿನ ಪ್ರತೀಕವಿದಲ್ಲದೆ ಮತ್ತಿನ್ನೇನು? ಅಷ್ಟು ಸಂಖ್ಯೆಯ ಜನ ಸಾಮೂಹಿಕವಾಗಿ ಹತ್ಯೆಗೀಡಾದಾಗ ಗಾಂಧಿಗೇಕೆ ಖುಷಿಯಾಗಬೇಕು? ಬಲಿಪಶುಗಳನ್ನು ಅಹಿಂಸೆಯ ಯೋಧರು ಎಂದು ಕರೆಯುವಷ್ಟು ನಿರ್ದಯಿಯೇ ಗಾಂಧಿ? ಅಹಿಂಸೆಯ ಹೆಸರಲ್ಲಿ ಹಿಂದೂಗಳನ್ನು ಬಲಿಪಶುಗಳನ್ನಾಗಿಸುವ ಆಷಾಢಭೂತಿತನವಿದಲ್ಲವೇ? ಜಿನ್ನಾ ಹಾಗಾತನ ಮುಸ್ಲಿಂ ಲೀಗಿಗೆ ಸರ್ಕಾರ ರಚಿಸುವಂತೆ ಹೇಳಿ, ಆ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವಂತೆ ಕಾಂಗ್ರೆಸ್ಸಿಗೆ ಆದೇಶ ನೀಡಿ ತನ್ಮೂಲಕ ಮೂವತ್ತು ಕೋಟಿ ಹಿಂದೂಗಳನ್ನು ಮತಾಂಧರ ಕೈಕೆಳಗೆ ನರಳಿಸುವ ಹುನ್ನಾರ ನಡೆಸಿದ(ಫ್ರೀಡಮ್ ಅಟ್ ಮಿಡ್ ನೈಟ್-ಪುಟ-93) ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವೇನಲ್ಲ ಬಿಡಿ!

       ಆರಂಭದಲ್ಲಿ ಪಾಕಿಸ್ತಾನ ರಚನೆಗೆ ವಿರೋಧ ವ್ಯಕ್ತಪಡಿಸಿದ್ದ ಗಾಂಧಿ ಆ ಬಳಿಕ ತಮ್ಮ ನಿಲುವು ಬದಲಾಯಿಸಿಕೊಂಡರು. ಒಂದು ಹಂತದಲ್ಲಂತೂ ವಿಚಿತ್ರ ಸಲಹೆಯೊಂದು ಗಾಂಧಿಯಿಂದ ಬಂತು. "ಇಡೀ ಭಾರತ ಪಾಕಿಸ್ತಾನವಾಗಲಿ. ಪಾಕಿಸ್ತಾನ ಹೆಸರೇ ಹೇಳುವಂತೆ ಅದು ಪರಿಶುದ್ಧತೆಯ ಸ್ಥಾನವಾಗುವುದಾದಲ್ಲಿ" (ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಪಾಕಿಸ್ತಾನ ಎನ್ನುವ ಹೆಸರು ಹೇಗೆ ಮತ್ತು ಯಾಕೆ ರೂಪುಗೊಂಡಿತು ಎನ್ನುವ ಮೂಲಭೂತ ತಿಳುವಳಿಕೆಯೂ ಗಾಂಧಿಗೆ ಇರಲಿಲ್ಲ ಎನ್ನುವುದು ಇನ್ನೊಂದು ಸೋಜಿಗ. ಒಂದು ಹೋರಾಟದ ನಾಯಕನಾದವ ಆ ಹೋರಾಟಕ್ಕೆ ವಿರೋಧಿಗಳಾಗಿ ತಮ್ಮಲ್ಲೇ ಇರುವವರನ್ನು ಅರಿಯದಾದದ್ದು ಕೂಡಾ ನಾಯಕನ ವೈಫಲ್ಯವೇ. ತೆರೆಯ ಹಿಂದಿನ ಅವರ ಚಟುವಟಿಕೆ ಗಾಂಧಿಯ ಅರಿವಿಗೇ ಬರಲಿಲ್ಲ ಎನ್ನುವುದೂ ವಿಚಿತ್ರವೇ. ಅಥವಾ ಅರಿವಿಗೆ ಬಂದಿದ್ದರೂ ಸುಮ್ಮನಾಗುಳಿದಿದ್ದರೆ ಅದಕ್ಕಿಂತ ದೊಡ್ದ ದೇಶದ್ರೋಹಿತನ ಮತ್ತೊಂದಿಲ್ಲ. ಹಾಗೆಯೇ ಅಂತಹ ವಿರೋಧಿಗಳನ್ನೇ ಓಲೈಸಿದ್ದು ಇನ್ನೊಂದು ಪ್ರಮಾದ! ಬಾದಶಾ ಖಾನ್ ಜೊತೆ "ಪಾಕಿಸ್ತಾನ ಅಸ್ತಿತ್ವಕ್ಕೆ ಬರುವುದೇ ಆದರೆ ನನ್ನ ಜಾಗ ಪಾಕಿಸ್ತಾನದಲ್ಲಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗಡಿಪ್ರದೇಶಕ್ಕೆ ಹೋಗಬೇಕೆನ್ನುವುದು ನನ್ನ ಉದ್ದೇಶ. ನಾನು ಪಾಸ್ ಪೋರ್ಟ್ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ವಿಭಜನೆಯಲ್ಲಿ ನನಗೆ ನಂಬಿಕೆಯಿಲ್ಲ." ಎಂದರು ಗಾಂಧಿ(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಅಬ್ಬಾ ಈ ಮುದುಕನ ಕಿಲಾಡಿತನವೇ! ದೇಶವಿಭಜನೆ ಆಗುವುದಿದ್ದರೆ ನನ್ನ ದೇಹವನ್ನು ವಿಭಜಿಸಬೇಕಾಗುತ್ತದೆ ಎಂದಿದ್ದ ಈ ಮಹಾತ್ಮ ಈಗ ಪಾಕಿಸ್ತಾನಕ್ಕೆ ಹೋಗಲೂ ತಯಾರಾಗಿದ್ದಾರೆ! ಪಾಸ್ ಪೋರ್ಟ್ ಎಂಬ ಶಬ್ಧದಲ್ಲೆ ವಿಭಜನೆಗೆ ಒಪ್ಪಿಗೆ ಎನ್ನುವ ಧ್ವನಿಯೂ ಇದ್ದಂತೆ ಅಲ್ಲವೇ. ಪಾಸ್ ಪೋರ್ಟ್ ಇದೆಯಂತೆ. ಆದರೆ ಅದು ಗಾಂಧಿಗೆ ಬೇಡ. ಯಾಕೆಂದರೆ ಅವರಿಗೆ ವಿಭಜನೆಯಲ್ಲಿ ನಂಬಿಕೆಯಿಲ್ಲವಂತೆ. ಅಂದರೆ ವಿಭಜನೆಗೆ ಗಾಂಧಿ ಸಿದ್ಧರಿದ್ದಾರೆ, ವಿಭಜಿತ ಪ್ರದೇಶಕ್ಕೆ ಹೋಗಲೂ ತುದಿಗಾಲಲ್ಲಿ ನಿಂತಿದ್ದಾರೆ, ಆದರೆ ವಿಭಜನೆಯಲ್ಲಿ ನಂಬಿಕೆಯಿಲ್ಲ! ಎಂತಹಾ ಇಬ್ಬಂದಿತನ, ದ್ವಂದ್ವಾರ್ಥದ, ಬೇಜವಾಬ್ದಾರಿತನದ ಹೇಳಿಕೆ!

      "ಒಂದೇ ಒಂದು ಮಾತು ಎದುರಾಡದೆ ಮುಸ್ಲಿಮರ ಆಕಾಂಕ್ಷೆ ಮತ್ತು ಭಾವನೆಗಳಿಗೆ ಸಮ್ಮತಿಸುತ್ತೇನೆ ಎಂದು ವಿನೀತನಾಗಿ ಒಪ್ಪಿಕೊಳ್ಳುತ್ತೇನೆ. ಅಸಮರ್ಥನೀಯ ಹಾಗೂ ಅಸಮಂಜಸವಾಗಿದ್ದರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ(ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ). ಸ್ವಾತಂತ್ರ್ಯಗಳಿಸುವುದಕ್ಕಿಂತಲೂ ಮುಸ್ಲಿಮರ ಓಲೈಕೆಯೇ ಮುಖ್ಯವಾಯಿತು ಗಾಂಧಿಗೆ!

 ದೇಶದ ಹಲವು ಭಾಗಗಳಲ್ಲಿ ಮುಸ್ಲಿಂ ಲೀಗಿನಿಂದ ನೇರ ಕಾರ್ಯಾಚರಣೆ ಆರಂಭವಾಗಿತ್ತು. ಕಲ್ಕತ್ತಾದಲ್ಲಂತೂ ಮೂರು ದಿನ ಹಿಂದೂಗಳ ಸಾಮೂಹಿಕ ಹತ್ಯೆ ಅಬಾಧಿತವಾಗಿ ನಡೆಯಿತು. ಬಂಗಾಳದಲ್ಲಿದ್ದ ಸುಹ್ರಾವರ್ದಿ ಸರಕಾರದ ಸುಪರ್ದಿಯಲ್ಲೇ ಈ ನರಮೇಧ ನಡೆಯಿತು. ಅಸಂಖ್ಯ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು. ಲೆಖ್ಖವಿಲ್ಲದಷ್ಟು ಮತಾಂತರ ನಡೆಯಿತು. ಕಲ್ಕತ್ತಾ ಪೊಲೀಸರು ಕೈಕಟ್ಟಿ ಕುಳಿತುಕೊಂಡಿದ್ದರು. ಕಾನೂನು ಪಾಲನೆ ಹೊಣೆಹೊತ್ತವರ ಕಣ್ಣೆದುರಲ್ಲೇ ಈ ಭೀಭತ್ಸ ಘಟನೆಗಳು ನಡೆದವು. ಎರಡು ತಿಂಗಳಲ್ಲಿ ಮೂವತ್ತು ಸಾವಿರ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಮೂರು ಲಕ್ಷಕ್ಕೂ ಹಿಂದೂಗಳ ಕಗ್ಗೊಲೆಯಾಯಿತು. ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಯಿತು. ಇದೆಲ್ಲಾ ಸುಹ್ರಾವರ್ದಿಯ ನೆರವಿನಿಂದಲೇ ನಡೆಯಿತು. ಇಂತಹ ಕುಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ ಕೊಟ್ಟ ಸುಹ್ರಾವರ್ದಿಯನ್ನು ಗಾಂಧಿ "ಹುತಾತ್ಮ" ಎಂದು ಬಣ್ಣಿಸಿದರು. ಗಾಂಧಿ ನವಖಾಲಿ ಜಿಲ್ಲೆಯ ಪ್ರವಾಸ ಕೈಗೊಂಡಾಗ ಅವರಿಗೆ ರಕ್ಷಣೆ ನೀಡಿದ್ದು ಈ ಸುಹ್ರಾವರ್ದಿಯೇ. ಉಪ್ಪಿನ ಋಣವಿರಬೇಕು! ಗಾಂಧಿಗೆ ಅಹಿಂಸೆ ನೆನಪಾಗಲಿಲ್ಲ! ಹಿಂದೂಗಳ ರಕ್ತ ಕಣ್ಣೀರು ಮನಕರಗಿಸಲಿಲ್ಲ. ಲಕ್ಷಾಂತರ ಮಾನಿನಿಯರ ಮೇಲೆ ಅತ್ಯಾಚಾರವಾಗುತ್ತಿದ್ದಾಗ ಗಾಂಧಿ ಮಹಾತ್ಮ ಕೊಲೆಗಡುಗ ಸುಹ್ರಾವರ್ದಿಯ ತೊಡೆ ನೇವರಿಸುತ್ತಾ ಕುಳಿತಿದ್ದರು!