ಪುಟಗಳು

ಗುರುವಾರ, ಸೆಪ್ಟೆಂಬರ್ 17, 2020

ಭರತ ಭೂಮಿಯ ಪುನರ್ವೈಭವದ ಸಂಕಲ್ಪ ಹೊತ್ತು ಭುವಿಗಿಳಿದ "ವಜ್ರ" ಶಕ್ತಿ

 ಭರತ ಭೂಮಿಯ ಪುನರ್ವೈಭವದ ಸಂಕಲ್ಪ ಹೊತ್ತು ಭುವಿಗಿಳಿದ "ವಜ್ರ" ಶಕ್ತಿ


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂ ಚೌ ಚರತಃ ಸಹ |

ತಂ ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ ||


ಯಾವ ರಾಷ್ಟ್ರದಲ್ಲಿ ಅಧ್ಯಾತ್ಮ ವಿದ್ಯೆಯ ಉಪಾಸಕನೂ ಕ್ಷತ್ರಿಯನೂ ಉತ್ತಮ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಾ ಇರುತ್ತಾರೋ ಹಾಗೂ ಯಾವ ರಾಷ್ಟ್ರದಲ್ಲಿ ದೇವತೆಗಳು ಯಜ್ಞಾಗ್ನಿಯ ಜೊತೆ ವಿರಾಜಿಸುತ್ತಿರುತ್ತಾರೋ ಆ ರಾಷ್ಟ್ರವು ಪುಣ್ಯಪ್ರದವಾದ ನಾಡು ಎನ್ನುತ್ತದೆ ವಾಜಸನೇಯ ಸಂಹಿತೆ. ಆಳುವ ಅರಸನೇ ಅಧ್ಯಾತ್ಮ ವಿದ್ಯೆಯ ಉಪಾಸಕನೋ ಅಥವಾ ಅಧ್ಯಾತ್ಮದ ಒಲವುಳ್ಳವನೋ ಆಗಿದ್ದರೆ? ಅದಕ್ಕಿಂತ ಬೇರೆ ದೊಡ್ಡ ಭಾಗ್ಯವೇನಿದೆ ಆ ನಾಡಿಗೆ? ಅಂತಹಾ ಭಾಗ್ಯವನ್ನು ಈ ನಾಡು ಅದೆಷ್ಟು ಕಂಡಿಲ್ಲ? ಜನಕನಂತೂ ರಾಜರ್ಷಿಯ ಪಟ್ಟವನ್ನೇ ತನ್ನದಾಗಿಸಿಕೊಂಡ. ಸೂರ್ಯ-ಚಂದ್ರ ವಂಶಗಳ ಅರಸುಗಳನೇಕರು ಇದೇ ಪರಂಪರೆಯ ಮೂಲಕ ಈ ರಾಷ್ಟ್ರವನ್ನು ಬೆಳಗಿದರು. ಕಲಿಯುಗದ ಆದಿಯ ಪರೀಕ್ಷಿತನಿಂದ ಹಿಡಿದು ಶುಂಗ, ಗುಪ್ತಾದಿಯಾಗಿ ಶಿವಾಜಿ, ಬಾಜೀರಾಯನವರೆಗೆ ಈ ಪರಂಪರೆ ಮರಳುಗಾಡಿನ ಮತಾಂಧರ ಬರ್ಬರತೆಯ ನಡುವೆಯೂ ಉಳಿದು ಬೆಳೆದು ಬಂತು. ಸ್ವಾತಂತ್ರ್ಯ ಹೋರಾಟದ ಕಿಚ್ಚಿನಲ್ಲೂ ಅಧ್ಯಾತ್ಮವೇ ಜನರನ್ನು ಒಟ್ಟುಗೂಡಿಸಿತು; ವಂದೇ ಮಾತರಂ ಮಂತ್ರದ ಮೂಲಕ ಮನಸ್ಸುಗಳನ್ನು ಬೆಸೆದು ಕ್ರಾಂತಿಯ ಕಿಡಿ ದಾವಾನಲವಾಗುವಂತೆ ಮಾಡಿತು. ಅಧ್ಯಾತ್ಮದ ಸಂಪರ್ಕ, ಅಂಕೆಯಿಲ್ಲದ ಯಾವ ತತ್ತ್ವ, ಸಂಘಟನೆಯೂ ಇಲ್ಲಿ ಬಾಳಲಿಲ್ಲ; ರಾಷ್ಟ್ರದ ಅಭಿವೃದ್ದಿಯಲ್ಲಿ ಪಾಲುದಾರನೂ ಆಗಲಿಲ್ಲ.


ಆದರೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಈ ಪರಂಪರೆ ಉಳಿಯಲಿಲ್ಲ. ನಕಲಿ ಜಾತ್ಯಾತೀತವಾದ, ಅಲ್ಪಸಂಖ್ಯಾತರ ಓಲೈಕೆ, ರಾಷ್ಟ್ರತತ್ತ್ವಕ್ಕಿಂತಲೂ ಸ್ವತತ್ತ್ವದ ಮೇಲಿನ ದುರಭಿಮಾನ ಅಲ್ಲಿ ಮೇರೆ ಮೀರಿತು. ಪ್ರಸಿದ್ಧ ಸೋಮನಾಥ ದೇವಾಲಯದ ಜೀರ್ಣೋದ್ಧಾರದ ಸಮಯದಲ್ಲಿ ಈ ದೇಶದ ಪ್ರಧಾನಿ ನೆಹರೂ ನಡೆದುಕೊಂಡ ರೀತಿಯೇ ಅದಕ್ಕೆ ನಿದರ್ಶನ. ಸೋಮನಾಥದ ಜೀರ್ಣೋದ್ಧಾರದ ವಿಚಾರವನ್ನು ಉಕ್ಕಿನ ಮನುಷ್ಯ ಪಟೇಲರು ಪ್ರಧಾನಿ ನೆಹರೂ ಬಳಿ ಪ್ರಸ್ತಾಪಿಸಿದಾಗ, ಸರ್ಕಾರ ಒಂದೇ ಒಂದು ಪೈಸೆಯನ್ನೂ ಕೊಡುವುದಿಲ್ಲ ಎಂದು ಆತ ಕಡ್ಡಿಮುರಿದಂತೆ ನುಡಿದರು. ಪಟೇಲರು ಗಾಂಧಿಯ ಬಳಿ ಈ ವಿಚಾರವನ್ನು ಚರ್ಚಿಸಿದಾಗ ಗಾಂಧಿ "ದೇವಸ್ಥಾನದ ನಿರ್ಮಾಣಕ್ಕೆ ಹಣ ಜನರಿಂದ ಬರಬೇಕೇ ಹೊರತು ಸರಕಾರದಿಂದಲ್ಲ" ಎಂದು ನೆಹರೂವನ್ನು ಬೆಂಬಲಿಸಿ ನುಡಿದರು. ಛಲದಂಕ ಮಲ್ಲ ಪಟೇಲ್, ಕೆ.ಎಂ ಮುನ್ಷಿಯವರ ಜೊತೆ ಸೇರಿ ಸೋಮನಾಥದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿಯೇ ಬಿಟ್ಟರು. ಪಟೇಲರು ದಿವಂಗತರಾದ ಬಳಿಕ ದೇವಾಲಯ ನಿರ್ಮಾಣದ ಹೊಣೆ ಹೊತ್ತಿದ್ದ ಕೆ.ಎಂ ಮುನ್ಷಿಯವರನ್ನು ನೆಹರೂ ಅಡಿಗಡಿಗೆ ಅವಮಾನಿಸಿದರು. ದೇವಸ್ಥಾನ ಸಿದ್ಧಗೊಂಡ ಬಳಿಕ ಲೋಕಾರ್ಪಣೆಗೂ ಬರಲೊಲ್ಲೆನೆಂದರು. ರಾಷ್ಟ್ರಪತಿ ರಾಜೇಂದ್ರ ಪ್ರಸಾದರನ್ನೂ ಲೋಕಾರ್ಪಣೆಗೆ ಹೋಗದಂತೆ ತಡೆಯಲು ಬಹುಪ್ರಯತ್ನ ಮಾಡಿದರು. ತನ್ನ ಪ್ರಯತ್ನಗಳೆಲ್ಲಾ ವಿಫಲವಾದಾಗ, ರಾಜೇಂದ್ರ ಪ್ರಸಾದರು 11 ಮೇ 1951ರಂದು ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾಡಿದ ಭಾಷಣವೂ ಪೂರ್ತಿ ಪ್ರಸಾರವಾಗದಂತೆ ಅಡ್ಡಗಾಲಿಕ್ಕಿದರು ನೆಹರೂ!


ಎಪ್ಪತ್ತು ವರ್ಷಗಳಲ್ಲಿ ಇಂದ್ರಪ್ರಸ್ಥವೆಂಬ ಇವತ್ತಿನ ದೆಹಲಿ ಹಲವು ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಯಮುನೆಯ ಕಲುಷಿತ ನೀರಿನಂತೆ ಜಾತ್ಯಾತೀತವೆಂಬ ಪೊಳ್ಳು ತತ್ವದ ಮೇಲೆ ನಿಂತಿದ್ದ ರಾಜಕಾರಣದ ಅಡಿಪಾಯ ಕುಸಿಯಲು ಆರಂಭವಾಗಿದ್ದು ಅದೇ ಪುನರುತ್ಥಾನಗೊಂಡ ಸೋಮನಾಥದ ನಾಡಿನಿಂದ ಎದ್ದು ಬಂದ ಬೆಳಕಿನ ಕಿರಣದಿಂದ. ಆ ಕಿರಣ ದೀಪವಾಗಿ, ರಾಷ್ಟ್ರಜ್ಯೋತಿಯಾಗಿ ದೇಶದ ಮೂಲೆಮೂಲೆಗೂ ಹಬ್ಬಿತು. ಈ ದೇಶವನ್ನು ಉಳಿಸಿ ಬೆಳೆಸಿದ್ದ ಅಧ್ಯಾತ್ಮ ಪರಂಪರೆಯನ್ನು ಹೃದಯದಲ್ಲಿಟ್ಟು ಪೋಷಿಸಿಕೊಂಡು ಬಂದುದೇ ಆ ದೀಪ ಈ ದೇಶದ ಜನರ ಮನೆ-ಮನಗಳಲ್ಲಿ ಬೆಳಗಲು ಕಾರಣವಾಯಿತು. ಭಾರತದ ಅಧ್ಯಾತ್ಮ ಕ್ಷಾತ್ರವನ್ನು ಜಗತ್ತಿಗೆ ಪರಿಚಯಿಸಿ ಮೆರೆದಿದ್ದ ವೀರ ಸಂತ ಆ ನರೇಂದ್ರನಂತೆ ರಾಜಕಾರಣದಲ್ಲೂ ಅಧ್ಯಾತ್ಮದ ಅಂಕೆಯೂ, ಫಲವೂ ಇದ್ದರೆ ಜಗತ್ತಿನೆದುರು ಈ ದೇಶ ಹೇಗೆ ಮೆರೆಯಬಹುದು ಎನ್ನುವುದನ್ನು ಈ ರಾಜಕೀಯ ಸಂತ ನರೇಂದ್ರನೂ ತೋರಿಸಿಕೊಟ್ಟ. ಆ ಫಲಗಳನ್ನೆಲ್ಲಾ ವಿವಿಧ ರೂಪದಲ್ಲಿ ದೇಶದ ಜನತೆ ಕಳೆದ ಆರು ವರ್ಷಗಳಲ್ಲಿ ಕಣ್ಣಾರೆ ಕಂಡಿದೆ.



ಅವೆಲ್ಲಕ್ಕೂ ಕಲಶಪ್ರಾಯದಂತೆ ನಡೆಯಿತು ಈ ದೇಶದ ರಾಷ್ಟ್ರೀಯ ಅಸ್ಮಿತೆ ಶ್ರೀರಾಮಮಂದಿರದ ಭೂಮಿ ಪೂಜನಾ. ಸ್ವತಃ ಪ್ರಧಾನಿ ಮೋದಿ ತನ್ನ ಮಹತ್ವದ ಕೆಲಸಗಳನ್ನೆಲ್ಲಾ ಬದಿಗಿಟ್ಟು ಯಜಮಾನನಾಗಿ, ಅರ್ಧದಿನ ರಾಮಜನ್ಮಭೂಮಿಯಲ್ಲೇ ನಿಂತು  ನಡೆಸಿದ ಈ ಪವಿತ್ರ ಕಾರ್ಯವನ್ನು ದೇಶದ ಮೂಲೆಮೂಲೆಯಿಂದ ಮಾತ್ರವಲ್ಲದೆ ಜಗತ್ತಿನ ಹಲವೆಡೆಯ ಜನತೆ ವೀಕ್ಷಿಸಿತು. ಅದು ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬನ ಕನಸು. ಕೇವಲ ರಾಮಮಂದಿರ ಮಾತ್ರ  ಭಾರತೀಯನ ಕನಸಲ್ಲ. ತನ್ನ ಪ್ರಧಾನಿ ಈ ದೇಶದ ಯಜಮಾನನಾಗಿ ಈ ರಾಷ್ಟ್ರದ ಸಂಸ್ಕೃತಿಯಂತೆ ತನ್ನ ಕರ್ತವ್ಯವನ್ನು ಯಾವುದೇ ಅಳುಕಿಲ್ಲದೆ, ಹಿಂಜರಿಕೆಯಿಲ್ಲದೆ, ತೋರಿಕೆಗಾಗಿಯಲ್ಲದೆ ಮಾಡಬೇಕು ಎಂಬ ಕನಸು. ಆ ಕನಸು ನನಸಾಗಲು ಎಪ್ಪತ್ತು ವರ್ಷ ಭಾರತೀಯ ಕಾಯಬೇಕಾಯಿತು. ಯಾವ ದೇಶದ ಪ್ರಧಾನಿಯೊಬ್ಬ ಹಿಂದೊಮ್ಮೆ ಈ ದೇಶದ ಅಸ್ಮಿತೆ ಸೋಮನಾಥವೆಂಬ ಭವ್ಯ ದೇಗುಲದ ಉದ್ಘಾಟನಾ ಸಮಾರಂಭಕ್ಕೆ ಹೋಗಲು ನಾಚಿಕೆಪಟ್ಟಿದ್ದನೋ, ಎಪ್ಪತ್ತು ವರುಷಗಳ ಬಳಿಕ ಅದೇ ದೇಶದ ಪ್ರಧಾನಿಯಾದವನು ಯಾವುದೇ ಅಳುಕು, ಹಿಂಜರಿಕೆಯಿಲ್ಲದೆ, ಹೆಮ್ಮೆ, ಸಂಭ್ರಮಗಳ ಸಮ್ಮಿಳಿತದಿಂದ ತುಂಬಿದ ಭಾವದೊಂದಿಗೆ ಈ ದೇಶದ ಇನ್ನೊಂದು ಅಸ್ಮಿತೆಯ ಮಂದಿರಕ್ಕೆ ಶಿಲಾನ್ಯಾಸಗೈದ. ಕ್ಷಾತ್ರದೊಂದಿಗೆ ಅಧ್ಯಾತ್ಮ ಮಿಳಿತವಾದರೆ ಮಾತ್ರ ಇದು ಸಾಧ್ಯ. ಅಂದು ನೆಹರೂ ತಮ್ಮ ಪೊಳ್ಳು ಜಾತ್ಯಾತೀತ ತತ್ವದ ಉಳಿವಿಗಾಗಿ, ಈ ದೇಶದ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲದಿರುವ ತನ್ನ ಮನಃಸ್ಥಿತಿಯಿಂದಾಗಿ, ಅಲ್ಪಸಂಖ್ಯಾತರ ಮತವನ್ನು ಕಳೆದುಕೊಳ್ಳುವ ಹೆದರಿಕೆಯಿಂದಾಗಿ ದೇವಾಲಯ ಕಟ್ಟಲು ಅಡ್ಡಗಾಲಿಟ್ಟು, ಕೊನೆಗೆ ಉದ್ಘಾಟನೆಗೂ ಹೋಗಲಿಲ್ಲ. ಆದರೆ ಮೋದಿಯವರು ರಾಜರ್ಷಿಯಂತೆ, ಯಾವುದೇ ಸೆಕ್ಯುಲರ್, ಮತಭ್ರಾಂತ, ಮತಾಂಧ, ದೇಶದ ಕಡೆಗೆ ಕಮ್ಮಿನಿಷ್ಠೆಯಿರುವವರ ಬೆದರಿಕೆ, ಬೊಬ್ಬಾಟ, ಅರಚಾಟಗಳಿಗೆ ಕಿವಿಗೊಡದೆ ಗಜಗಾಂಭೀರ್ಯದಿಂದ ಈ ದೇಶದ ನಿಜವಾದ ಪ್ರಜೆಯೊಬ್ಬ ಬಯಸಿದಂತೆ ನಡೆದುಕೊಂಡುದುದು ಈ ನೆಲದ, ನೆಲದ ಜನರ ಹಲವು ಸಾವಿರ ವರ್ಷಗಳ ತಪದ ಪುಣ್ಯಫಲವೇ ಇರಬೇಕು. 




ಹಿಂದಿನ ಸರ್ಕಾರಗಳಲ್ಲಿ ವಿದೇಶೀ ಗಣ್ಯರು ಭಾರತಕ್ಕೆ ಆಗಮಿಸಿದಾಗ ಪ್ರಮುಖವಾಗಿ ಅವರಿಗೆ  ಭಾರತೀಯ ಸಂಸ್ಕೃತಿಯ ಕುರುಹೇ ಇಲ್ಲದ ತಾಜ್‌ಮಹಲಿನಂತಹಾ ಕಟ್ಟಡಗಳನ್ನು ತೋರಿಸಲಾಗುತ್ತಿತ್ತು. ಆದರೆ ಮೋದಿಯವರು ಪ್ರಧಾನಿಯಾದ ಈ ಸಂಪ್ರದಾಯ ಬದಲಾಯಿತು. ಜಪಾನ್ ಪ್ರಧಾನಿ ಶಿಂಜೋ ಅಬೆಯವರನ್ನು ವಾರಾಣಸಿಯಲ್ಲಿ ಬರಮಾಡಿಕೊಂಡ ಪ್ರಧಾನಿ ಮೋದಿಯವರು ಭಾರತೀಯ ಸಂಪ್ರದಾಯದಂತೆ ಅವರಿಂದ ವೇದ-ಘೋಷಗಳೊಂದಿಗೆ ಗಂಗಾ ಆರತಿಯನ್ನು ಮಾಡಿಸುವ ಮೂಲಕ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಯುಎಇ ಯ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಬಿನ್‌ಜಯೇದ್, ದಕ್ಷಿಣಕೊರಿಯಾದ ಅಧ್ಯಕ್ಷ ಮೂನ್-ಜೆ-ಇನ್, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್ಬುಲ್ ಬಂದಾಗ ಭಾರತಕ್ಕೆ ಬಂದಾಗ ಅಕ್ಷರಧಾಮ ದೇವಾಲಯಕ್ಕೆ ಭೇಟಿ ಮಾಡಿಸಲಾಯಿತು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅಯೋಧ್ಯೆಯ ರಾಜಕುಮಾರಿ ಸುರಿರತ್ನ ಕೊರಿಯಾಕ್ಕೆ ತೆರಳಿ ಅಲ್ಲಿನ ರಾಜನಾದ ಕಿಮ್‌ಸುರೋರನ್ನು ವರಿಸಿದ್ದ ಹಿನ್ನೆಲೆಯಲ್ಲಿ ಸೀತಾ ಉತ್ಸವಕ್ಕೆ ದಕ್ಷಿಣಕೊರಿಯಾದ ರಾಣಿಯವರನ್ನೇ ಆಹ್ವಾನಿಸಿ ಅವರಿಂದ ಪೂಜೆಮಾಡಿಸಲಾಯಿತು. 2019ರಲ್ಲಿ ಚೀನಾದ ಅಧ್ಯಕ್ಷನ ಜೊತೆ ಅನೌಪಚಾರಿಕ ಮಾತುಕತೆಯನ್ನು ಮೋದಿಯವರು ಏರ್ಪಡಿಸಿದ್ದು ತಮಿಳುನಾಡಿನ ಮಹಾಬಲಿಪುರಂನಲ್ಲಿ. ಬಲಿಚಕ್ರವರ್ತಿಯ ಹೆಸರಿನಿಂದ ಮಹಾಬಲಿಪುರಂ ಎಂದು ಹೆಸರು ಪಡೆದಿದ್ದ ಈ ಪ್ರಾಚೀನ ನಗರ ಪಲ್ಲವ ನರಸಿಂಹವರ್ಮನೆಂಬ "ಮಹಾಮಲ್ಲ"ನನ್ನು ತನ್ನೊಡನೆ ತಳುಕುಹಾಕಿಕೊಂಡು ಮಾಮಲ್ಲಪುರಮ್ ಎಂದಾಯಿತು. ತನ್ನ ತಂದೆಯನ್ನು ಸೋಲಿಸಿದ್ದ ಇಮ್ಮಡಿ ಪುಲಿಕೇಶಿಯನ್ನು ಗೆದ್ದು ವಾತಾಪಿಕೊಂಡ ಬಿರುದು ಪಡೆದಿದ್ದ ಈ ಮಹಾಸಾಹಸಿ ತನ್ನ ತಂದೆಯ ಮಹಾಬಲಿಪುರವೆಂಬ ಸುಂದರ ಕನಸನ್ನು ನನಸಾಗಿಸಿದ. ಪಲ್ಲವರ ಕಾಲದಲ್ಲಿ ಈ ನಗರ ಚೀನಾ, ರೋಮ್'ಗಳ ಜೊತೆ ವ್ಯಾಪಾರ ಸಂಪರ್ಕವನ್ನು ಹೊಂದಿತ್ತಾದರೂ ಚೀನೀ ಅಧ್ಯಕ್ಷನನ್ನು ದೆಹಲಿಯೋ, ಚೆನ್ನೈಯಂತಹಾ ಆಧುನಿಕ ನಗರಗಳನ್ನು ಬಿಟ್ಟು ಈ ಪ್ರಾಚೀನ ದೇಗುಲಗಳ ಬೀಡಿಗೆ ಕರೆದೊಯ್ದುದಕ್ಕೆ ಅದೊಂದೇ ಕಾರಣವಾಗಿರಲಿಲ್ಲ. ಇನ್ನೊಂದು ಮುಖ್ಯ ನಂಟು ಅಲ್ಲಿತ್ತು. ಅದು ಬೌದ್ಧರ ಝೆನ್ ಶಾಖೆ ಹಾಗೂ ಚೀನಾ ಸಮರಕಲೆ ಶಾವೊಲಿನ್ ಜನಕ ಬೋಧಿಧರ್ಮ ಇಲ್ಲಿನವನೇ ಎಂಬ ಪ್ರತೀತಿ. ಜೊತೆಗೆ ಪಲ್ಲವರು ತಮ್ಮ ರಕ್ತ ಬಸಿದು ಕಟ್ಟಿದ ಸುಂದರ ನಗರದಲ್ಲಿ ಶಿಲ್ಪಕಲೆಗಳಿಂದ ಬೆಳಗಿದ ದೇಗುಲ ಸಮೂಹ. ಅಲ್ಲದೇ ನರಸಿಂಹ ವರ್ಮನ ಸೇನಾನಿಯಾಗಿದ್ದು ಬಳಿಕ 63 ನಾಯನ್ಮಾರ್ ಸಂತರುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ(ಸಿರುತೊಂಡರ್) ಪರಂಜೋತಿಯ ಅಧ್ಯಾತ್ಮಿಕ ಶಕ್ತಿ!



ಇವೆಲ್ಲವೂ ಮೋದಿ ರಾಜಕೀಯ ಉದ್ದೇಶಕ್ಕಾಗಿ ಮಾಡಿದ್ದು ಎನ್ನುವ ಆರೋಪಗಳನ್ನು ಕ್ಸುತಿತ ಮನಸ್ಥಿತಿಯವರು ಮಾಡಬಹುದು. ಆದರೆ ಮೋದಿ ರಾಜಕೀಯ ಉದ್ಡೇಶವಷ್ಟೇ ಇಟ್ಟು ಇವನ್ನೆಲ್ಲಾ ಮಾಡುತ್ತಿದ್ದರೆ ಅಷ್ಟೆಲ್ಲಾ ದೇವಾಲಯ ಸುತ್ತುವ ಅವಶ್ಯಕತೆ ಇರಲಿಲ್ಲ. ಅಥವಾ ಕಾಟಾಚಾರಕ್ಕೆ ಎಂಬಂತೆ ಭೇಟಿಕೊಡಬಹುದಿತ್ತು. ಆದರೆ ಅವರ ಪ್ರತಿಯೊಂದು ಕಾರ್ಯದಲ್ಲೂ ಈ ನೆಲದ ಸಂಸ್ಕೃತಿಯೆಡೆಗಿನ ಶ್ರದ್ಧೆ, ಗೌರವಗಳು ಎದ್ದು ಕಾಣುತ್ತವೆ. ಪ್ರಧಾನಿಯಾದ ಬಳಿಕ ನೇಪಾಳದ ಪಶುಪತಿನಾಥಕ್ಕೆ ತೆರಳಿದ್ದರು ಮೋದಿ. 2017ರಲ್ಲಿ ಕೇದಾರನಾಥಕ್ಕೆ ತೆರಳಿ ಅಲ್ಲಿನ ದೇವಾಲಯದ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದರು. 2018ರಲ್ಲಿ ಕೇದಾರನಾಥದಲ್ಲೇ ದೀಪಾವಳಿಯನ್ನೂ ಆಚರಿಸಿದರು. 2017ರಲ್ಲಿ ಕಾಶ್ಮೀರದಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸಿದ್ದೂ ಅಲ್ಲಿಯವರೆಗೆ ಯಾವೊಬ್ಬ ಪ್ರಧಾನಿಯೂ ಮಾಡದ ಸಂಭ್ರಮಾಚರಣೆಯೇ. ಕಾಶಿಯ ವಿಶ್ವನಾಥನ ಅನುಗ್ರಹ ಪಡೆದು ಸತತ ಚುನಾವಣೆ ಗೆದ್ದ ಮೋದಿ ಕಾಶಿ ಕಾರಿಡಾರ್ ಮೂಲಕ ಅಸ್ತವ್ಯಸ್ತಗೊಂಡಿದ್ದ ಕಾಶಿಯನ್ನು ಸುಂದರಗೊಳಿಸುತ್ತಿದ್ದಾರೆ. ಅಲ್ಲಿ ಅಕ್ರಮವಾಗಿ ದೇವಾಲಯಗಳನ್ನೇ ಆಕ್ರಮಿಸಿ ಕೂತಿದ್ದವರ ಕಥೆಗಳು ಜೆಸಿಬಿಯು ಒಂದೊಂದೇ ಕಟ್ಟಡಗಳನ್ನು ಕೆಡವಿದಾಗ ಹೊರಬೀಳುತ್ತಿವೆ. ಸೋಮನಾಥ, ಬದರೀನಾಥ, ತಿರುಪತಿ, ಗುರುವಾಯೂರು, ನೇಪಾಳದ ಮುಕ್ತಿಕಾಂತ್ ದೇವಾಲಯ, ಗುಜರಾತಿನ ಮೊಧೇರಾ ದೇವಾಲಯ, ವಾರಾಣಸಿಯ ದುರ್ಗಾಮಾತಾ, ತುಳಸಿ ಮಾತಾ ಮಂದಿರಗಳಿಗೆ ಭೇಟಿ, ಬಹ್ರೈನಿನ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಚಾಲನೆ, ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ, ಚಾರ್ ಧಾಮ್ ಯಾತ್ರೆಗೆ ರಸ್ತೆ ಅಭಿವೃದ್ಧಿ, ರಾಮಾಯಣ ಸರ್ಕ್ಯೂಟ್, 84 ಕೋಸಿ ಪರಿಕ್ರಮ ಮಾರ್ಗದ ಅಭಿವೃದ್ಧಿ, ರಾಮಾಯಣ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ, ಅಮೂಲ್ಯ ವಿಗ್ರಹಗಳ ಘರ್‌ವಾಪಸಿ, ಹತ್ತು ಕೋಟಿಗೂ ಹೆಚ್ಚು ಭಕ್ತರು ಭಾಗವಹಿಸುವ ಕುಂಭಮೇಳದ ಅಚ್ಚುಕಟ್ಟಾದ ಆಯೋಜನೆ, ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡುವ ಪೌರತ್ವ ಕಾಯ್ದೆ, ನಮಾಮಿ ಗಂಗೆ, ಜೊತೆಗೆ ತನಗೆ ಬಂದ ಉಡುಗೊರೆಗಳ ಹರಾಜಿನ ಹಣ, ಪ್ರಶಸ್ತಿಗಳ ಹಣವನ್ನೂ ಈ ಯೋಜನೆಗೆ ಅರ್ಪಣೆ, ವೈಷ್ಣೋದೇವಿಯಿರುವ ಕಟ್ರಾ ನಗರಕ್ಕೆ ರೈಲು ಮಾರ್ಗ, ಮತಾಂತರಕ್ಕೆ ಹಣ ಸುರಿಯುತ್ತಿದ್ದ ಎನ್ಜಿಓಗಳ ಬಾಗಿಲು ಮುಚ್ಚಿಸಿದ್ದು ಹೀಗೆ ಹತ್ತು ಹಲವು. ಇವೆಲ್ಲಾ ಜಾತ್ಯಾತೀತತೆಯ ಸೋಗಿನಡಿಯಲ್ಲಿ ಮುಚ್ಚಿಹೋಗಿದ್ದ ಹಿಂದು ಸಂಸ್ಕೃತಿಯ ಪುನರುತ್ಥಾನವಲ್ಲದೆ ಮತ್ತೇನು?ಇವುಗಳೆಲ್ಲಾ ಬರೇ ರಾಜಕೀಯಕ್ಕಾಗಿ ಮಾಡಿದ್ದು ಅಂತ ಮೂರ್ಖರು ಮಾತ್ರ ಹೇಳಬಲ್ಲರು. ಗಂಗಾ ನದಿಯಲ್ಲಿ ನರೇಂದ್ರ ಮೋದಿಯೂ ಮಿಂದೆದ್ದಿದ್ದರು, ಕೇಜ್ರೀವಾಲರೂ ಮಿಂದೆದ್ದಿದ್ದರು. ಯಾವುದು ಭಾವ, ಭಕ್ತಿ ಯಾವುದು ಬೂಟಾಟಿಕೆ ಎನ್ನುವುದನ್ನು ಭಾರತೀಯ ನಿರ್ಧರಿಸಿದ್ದ. 2019ರಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಮುಗಿದ ಮರುದಿನ ಸುಮಾರು ಹದಿನೇಳು ಘಂಟೆಗಳ ಕಾಲ ಕೇದಾರದ ಗುಹೆಯೊಂದರಲ್ಲಿ ಮೋದಿ ಮಾಡಿದ ಧ್ಯಾನದ ಹಿಂದೆ ಯಾವ ರಾಜಕೀಯವಿತ್ತು?



ದೇವಸ್ಥಾನಕ್ಕೆ ಭೇಟಿಕೊಡುವುದನ್ನೂ ರಾಜಕೀಯ ದೃಷ್ಟಿಯಿಂದಲೇ ಮಾಡುವವರಿಗೆ ಉಳಿದವರೂ ತನ್ನಂತೆಯೇ ಎಂದು ಭಾಸವಾಗುವುದು ಸಹಜ. ವೀರ ಸಾವರ್ಕರ್ 1959ರಲ್ಲಿ ಹೇಳಿದ್ದ "ಒಂದು ದಿನ ಬರುತ್ತದೆ. ಕಾಂಗ್ರೆಸ್ಸಿಗರು ಮತಬೇಟೆಗಾಗಿ ಕೋಟಿನ ಮೇಲೆಯೇ ಜನಿವಾರ ಹಾಕುತ್ತಾರೆ" ಎನ್ನುವ ಮಾತು ಸತ್ಯವಾಗುತ್ತಿದೆ. ಮತ ಬೇಟೆಗಾಗಿ ದೇವಾಲಯ ಭೇಟಿಗೆ ಕಾಂಗ್ರೆಸ್ಸಿಗರೂ ಆರಂಭಿಸಿದ್ದಾರೆ. ಅದಕ್ಕಾಗಿ ತಾವು ಕೌಲ ಗೋತ್ರದ ಬ್ರಾಹ್ಮಣ ಎಂದು ಹುಸಿ ಪ್ರಚಾರವನ್ನೂ ಮಾಡುತ್ತಾರೆ. ತನ್ನ ಮುತ್ತಜ್ಜ ಯಾವ ದೇವಾಲಯದ ಜೀರ್ಣೋದ್ಧಾರಕ್ಕೆ ಅಡ್ಡಗಾಲಿಕ್ಕಿದ್ದನೋ ಅದೇ ದೇವಾಲಯ ಸೋಮನಾಥಕ್ಕೆ ಇಂದು ಕೌಲ ಗೋತ್ರಜನಾಗಿ ಮರಿಮಗ ಹಿಂದೂಗಳ ಮತದ ಬೇಟೆಗಾಗಿ ಭೇಟಿಕೊಡುತ್ತಿದ್ದಾನೆ. ಹಿಂದೆ ರಾಮಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ಸಿಗರು ಹಿಂದೂಗಳ ಮತ ತಪ್ಪಿ ಹೋದೀತು ಎಂಬ ಹೆದರಿಕೆಯಿಂದ ರಾಮಮಂದಿರದ ನಿರ್ಮಾಣದ ಪರವಾಗಿ ಘೋಷಣೆ ಕೂಗಲು ಆರಂಭಿಸಿದ್ದಾರೆ. ಎಲ್ಲದರಲ್ಲೂ ರಾಜಕೀಯವನ್ನೇ ಕಾಣುವವರಿಗೆ, ಮಾಡುವವರಿಗೆ ಮೋದಿಯ ಕಾರ್ಯದಲ್ಲೂ ರಾಜಕೀಯವೇ ಕಾಣುತ್ತದೆ!



ಹಿಂದೆ ಪ್ರಧಾನಿಯಾದವರು ಯಾಕೆ ಹೀಗಿರಲಿಲ್ಲ? ಯಾಕೆ ಬಹಿರಂಗವಾಗಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಿಕೊಳ್ಳಲಿಲ್ಲ? ಕೆಲವರಿಗೆ ಎಲ್ಲಿ ಅಲ್ಪಸಂಖ್ಯಾತರು ತಮ್ಮ ಮೇಲೆ ಮುರಕೊಂಡು ಬಿಡ್ತಾರೋ ಅನ್ನುವ ಭಯ. ಕೆಲವರಿಗೆ ನಂಬಿಕೆಯೇ ಇರಲಿಲ್ಲ. ಕೆಲವರು ಸೆಕ್ಯುಲರ್ ಸೋಗಿನಲ್ಲಿದ್ದರು. ಹಲವರು ತಮ್ಮ ಜೋಳಿಗೆ ತುಂಬಿಸುವುದರಲ್ಲೇ ವ್ಯಸ್ತರಾಗಿದ್ದರು. ಒಬ್ಬ ಪ್ರಧಾನಿಯಂತೂ ದೇಶದ ಸಂಪನ್ಮೂಲಗಳ ಪ್ರಥಮ ಹಕ್ಕು ಇರುವುದು ಮುಸಲ್ಮಾನರಿಗೆ ಎಂದು ದೊಡ್ಡ ದನಿಯಲ್ಲಿ ಹೇಳಿದ್ದರು. ಅವರ ಪಿತಾಮಹರುಗಳು ಸಾರಿದ್ದು, ಮಾಡಿದ್ದೂ ಅದನ್ನೇ. ಕೆಲವು ಪ್ರಧಾನಿಗಳು ಒಂದೆರಡು ಕೋಮಿಗೋಸ್ಕರ ಸಂವಿಧಾನವನ್ನೇ ಬದಲಾಯಿಸಿದ್ದರು. ಆದರೆ ಮೋದಿ ಯಾವುದೇ ರಾಗದ್ವೇಷಗಳಿಲ್ಲದೆ ಸಮಸ್ತ ಭಾರತೀಯರನ್ನೂ ಒಂದೇ ತೆರನಾಗಿ ನೋಡುತ್ತೇನೆ ಎಂದು ಪ್ರಮಾಣ ಮಾಡಿ ಅದರಂತೆ ನಡೆದರು. ಯಾವುದು ಇಲ್ಲಿನ ಜೀವಂತಿಕೆಯೋ, ಯಾವುದು ಈ ಮಣ್ಣಿನ ಸತ್ವವೋ, ಯಾವುದು ಈ ರಾಷ್ಟ್ರೀಯರ ಸ್ವತ್ವವೋ ಅದನ್ನು ಜೀವಂತವಾಗಿರಿಸಲು, ತನ್ಮೂಲಕ ನಮ್ಮ ನಿಜವಾದ ಸಂಸ್ಕೃತಿ ಹೀಗಿದೆ ಎಂದು ಜಗತ್ತಿಗೆ ತೋರಿಸಲು ಮೋದಿ ಪ್ರಯತ್ನಿಸಿದರು. ಅದಕ್ಕಾಗಿ ಅವರು ಯಾವ ವಿರೋಧ, ವಿಕಾರತೆಗಳಿಗೂ ತಲೆಕೆಡಿಸಿಕೊಳ್ಳಲಿಲ್ಲ. ಸಾಮಾನ್ಯ ಹಿಂದೂವೊಬ್ಬ ಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತಾನೋ, ಹೇಗೆ ತನ್ನ ಸಂಸ್ಕೃತಿ, ಸಂಪ್ರದಾಯಗಳನ್ನು ಆಚರಿಸುತ್ತಾನೋ ಹಾಗೆಯೇ ಮೋದಿಯೂ ನಡೆದರು. ಹಾಗಾಗಲು ಯೌವನದ ದಿನಗಳಲ್ಲಿ ಮೋದಿಯ ಅಂತಃಸತ್ವವನ್ನು ವೃದ್ಧಿಗೊಳಿಸಿದ ಅಧ್ಯಾತ್ಮಶಿಖರ ಹಿಮಾಲಯದ ಕೊಡುಗೆಯಿದೆ. ಅದಕ್ಕೆ ಸ್ವಾಮಿ ಆತ್ಮಸ್ಥಾನಂದರು ಅಂದು ಉಪದೇಶಿಸಿದ ಜೀವನಧ್ಯೇಯ ಕಾರಣವಾಯ್ತು. ವ್ಯಕ್ತಿತ್ವವನ್ನು ರೂಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಸಂಸ್ಕಾರ ಕಾರಣವಾಯ್ತು. ಕಳೆದ ಶತಮಾನದ ಸರಿ ಮಧ್ಯಭಾಗದಲ್ಲಿ ಸೆಪ್ಟೆಂಬರ್ ಹದಿನೇಳರಂದು ಈ ಪುಣ್ಯಭೂಮಿಗೆ ಈ ಪುಣ್ಯಾತ್ಮನನ್ನು ಒದಗಿಸಿಕೊಟ್ಟ ಆ ಮಹಾಮಾತೆಯ "ವಜ್ರ" ಸಂಕಲ್ಪ, ಆಕೆ ಕೊಟ್ಟ ಸಂಸ್ಕಾರ ಕಾರಣವಾಯ್ತು! ಭಾರತದ ವ್ಯವಸ್ಥೆಯ ಪ್ರತಿಯೊಂದು ಹಂತದಲ್ಲಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಅಧ್ಯಾತ್ಮದ ಲೇಪ ಬೇಕು. ಅಧ್ಯಾತ್ಮದ ಆಸ್ವಾದವೇ ಭಾರತದ ವರ್ತಮಾನ ಮತ್ತು ಭವಿಷ್ಯತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದಿದ್ದರು ಮಹರ್ಷಿ ಅರವಿಂದರು. ಹೌದು ಈಗ ಬೇಕಾಗಿರುವುದೂ ಅದೇ. ಪ್ರತಿಯೊಂದು ಕ್ಷೇತ್ರದ ಪ್ರತಿಯೊಂದು ಹಂತದಲ್ಲೂ ಮೋದಿಯಂತಹಾ ವ್ಯಕ್ತಿ ಬೇಕು. 



ಮಂಗಳವಾರ, ಆಗಸ್ಟ್ 4, 2020

ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯು ಎದ್ದು ನಿಲ್ಲುತಿದೆ...

ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯು ಎದ್ದು ನಿಲ್ಲುತಿದೆ...


ಪಂಚ ಶತಮಾನಗಳ ಕಾಯುವಿಕೆಗೆ ಮೋಕ್ಷ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಮತಾಂಧ-ಸೆಕ್ಯುಲರ್ ಪಾಳಯವೆಂಬ ಕೈಕೆ ವಿಧಿಸಿದ್ದ ಐತಿಹಾಸಿಕ ವನವಾಸ ಮುಗಿದು ಅವನ ಮನೆಯ ಮರುನಿರ್ಮಾಣದ ಶಿಲಾನ್ಯಾಸಕ್ಕೆ ಮುಹೂರ್ತ ಸಿದ್ಧವಾಗಿದೆ. ಸಪ್ತಮೋಕ್ಷದಾಯಕ ನಗರಗಳಲ್ಲಿ ಒಂದಾದ ಅಯೋಧ್ಯೆ ಮತ್ತೊಮ್ಮೆ ರಾಮಭದ್ರ ಜನಿಸಿದನೇನೋ ಎಂಬಂಥಾ ಸಡಗರದಲ್ಲಿ ಮಿಂದೇಳುತ್ತಿದೆ. ಈ ಮೋಕ್ಷಕ್ಕೂ ಈ ಹೊಸ ಸೃಷ್ಟಿಗೂ ಕಾರಣವಾದುದು ರಾಮನಾಮವೇ! ಭಾರತದ ರಾಷ್ಟ್ರೀಯ ಅಸ್ಮಿತೆಯ ಕುರುಹು ಎದ್ದು ನಿಲ್ಲುವ ಈ ಕ್ಷಣ ಭರತ ಭೂಮಿಯನ್ನು ಪೂಜಿಸುವ ಪ್ರತಿಯೊಬ್ಬನೂ ಧನ್ಯನಾಗುವ ಕ್ಷಣ. ಆದರ್ಶ ಪುರುಷನನ್ನು ಮರು ಪ್ರತಿಷ್ಠಾಪಿಸಲು ನಡೆದ ಅದಷ್ಟೂ ಹೋರಾಟಗಳೂ ಸಾರ್ಥಕಗೊಂಡ ಕ್ಷಣ. ಧರ್ಮದ ಹಾದಿಯಲ್ಲೇ ನಡೆದು ದೇವನಾದವನ ಮೂರ್ತಿಯನ್ನು ಮರುಸ್ಥಾಪಿಸಲು ಭಕ್ತರು ಆ ದೇವ ಪಥದಲ್ಲೇ ನಡೆಸಿದ ಹೋರಾಟಕ್ಕೆ ಸಿಕ್ಕ ಪೂರ್ಣಫಲದ ಭಾವುಕ ಕ್ಷಣ. ಪರಮ ಪುರುಷನ ಆಯನವನ್ನೇ ಸಂಶಯಿಸಿ ಸುಳ್ಳು - ಪೊಳ್ಳುಗಳನ್ನು ಹೆಣೆದವರ ಹಣಾಹಣಿ ನಿಂತು ಧರ್ಮದ ಹಣತೆ ಬೆಳಗುವ ದಿವ್ಯ ಕ್ಷಣ.



ಮನು ನಿರ್ಮಿತ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ ವಿಶ್ವಜಿತ್ ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ಯುದ್ಧದ ಕಲ್ಪನೆಯನ್ನೂ ಮಾಡದ ಈ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ ಪಾವನವಾದುದು ರಾಮಭದ್ರನ ಜನನದಿಂದ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು. 
ರಾಮನಿಗಾಗಿ ಯಾರು ಕಾಯಲಿಲ್ಲ ಹೇಳಿ? ಪುತ್ರಕಾಮೇಷ್ಠಿ ನಡೆಸಿ ಕ್ಷಣವನ್ನೂ ಯುಗದಂತೆ ಭ್ರಮಿಸಿ ಕಾಲವನ್ನು ನೂಕುತ್ತಾ ದಶರಥ ಚಕ್ರವರ್ತಿಯೇ ರಾಮನಿಗಾಗಿ ಕಾದಿದ್ದ. ಗರ್ಭದಲ್ಲಿ ಅಂಕುರಗೊಂಡ ರಾಮಭದ್ರನ ಕಿಲಕಿಲ ನಗುವಿಗೆ ಮಾತೆ ಕೌಸಲ್ಯೆ ಕಾದಿದ್ದಳು. ರಾಜನ ಕೊರಗು ರಾಜ್ಯದ ಕೊರಗಾಗಿತ್ತು. ರಾಜ ಪರಿವಾರ, ಪ್ರಜಾವರ್ಗ ಪರಮ ಪುರುಷೋತ್ತಮನಿಗಾಗಿ ಕಾದಿತ್ತು. ಜಗತ್ತಿಗೇ ಮಿತ್ರನನ್ನಾಗಿ ತಯಾರು ಮಾಡಲೋಸುಗ ವಿಶ್ವಾಮಿತ್ರನೇ ಬಾಲ ರಾಮ ಬೆಳೆಯುವುದನ್ನು ಕಾಯುತ್ತಿದ್ದ. ಭೂಮಿಯನ್ನು ಉಳುವಾಗ ಸಿಕ್ಕ ಭೂಜಾತೆಯನ್ನು ಭಗವಂತನಿಗೇ ಒಪ್ಪಿಸಲು ಉಪನಿಷತ್ತುಗಳನ್ನು ಅರೆದು ಕುಡಿದ ರಾಜರ್ಷಿ ಕಾದಿದ್ದ. ತನ್ನ ಉಸ್ತುವಾರಿಯನ್ನು ದಾಟಿಸಲು ಕೊಡಲಿ ರಾಮ ಕಾದಿದ್ದ. ಅಹಲ್ಯೆ ಕಲ್ಲಾಗಿ ಕಾದಳು. ತಮ್ಮ ಭರತ ಪಾದುಕೆ ಹೊತ್ತು ಕಾದ. ಹಣ್ಣಾಗಿ ಪಕ್ವವಾಗಿದ್ದ ಶಬರಿ ಹಣ್ಣುಹಣ್ಣು ಮುದುಕಿಯಾಗಿ ಬಾಗಿ ಕಾದಳು. ಪಂಚವಟಿ, ದಂಡಕಾರಣ್ಯದ ಋಷಿಗಳು ರಕ್ಕಸರ ಉಪಟಳವನ್ನು ಅಳಿಸುವವನನ್ನು ಕಾದರು. ರಾವಣನ ಕುತಂತ್ರಕ್ಕೆ ಸಿಲುಕಿ ರೆಕ್ಕೆ ಕತ್ತರಿಸಲ್ಪಟ್ಟು ಬಿದ್ದ ಜಟಾಯು ಕುಟುಕು ಜೀವ ಉಳಿಸಿಕೊಂಡು ಕಾದ. ತನ್ನೊಳಗಿರುವ, ತಾನೇ ಅವನಾಗಿರುವ ಭಗವಾನನಿಗಾಗಿ ಭಕುತ ಹನುಮ ಕಾದ. ರಾಮನಂಥ ಶಕ್ತಿವಂತ ಮಿತ್ರನಿಗಾಗಿ ವಾನರೇಂದ್ರ ಸುಗ್ರೀವ ಕಾದ. ಸೇತುವಿಗಾಗಿ ಸಮುದ್ರ ಕಾದಿತ್ತು. ಸೇವೆಗಾಗಿ ಅಳಿಲು ಕಾದಿತ್ತು. ಕಪಿಗಡಣ ಮಾನವೇಂದ್ರನ ಸಹಾಯಕ್ಕಾಗಿ ಶಿಸ್ತಿನಿಂದ ಕಾದಿತ್ತು. ಅಣ್ಣನ ಅಧರ್ಮದ ಅಂಕುಶದಿಂದ ಪಾರಾಗಿ ಧರ್ಮವನ್ನು ಅಪ್ಪಿಕೊಳ್ಳಲು ಶರಣ ಶ್ರೇಷ್ಠ ಕಾದಿದ್ದ. ರಾಮ ಬಾಣ ತಾಗಿ ಮೋಕ್ಷ ಪಡೆಯಲು ದುರುಳರೂ, ರಕ್ಕಸರೂ ಕಾದಿದ್ದರು. ಮಾತೆ ಸೀತೆ ತನ್ನಿನಿಯ ಬಂದು ಕಾಯ್ವನೆಂದು ಅಶೋಕ ವನದಲ್ಲಿ ಶೋಕತಪ್ತಳಾಗಿ ಕಾದಿದ್ದಳು. ವನವಾಸ ಮುಗಿಸಿ ಮರಳಿ ಬಂದು ಪಟ್ಟವೇರಿ ರಾಮರಾಜ್ಯವನ್ನಾಗಿಸಬೇಕೆಂದು ಅಯೋಧ್ಯೆಗೆ ಅಯೋಧ್ಯೆಯೇ ಕಾದು ಕುಳಿತಿತ್ತು. ಅಂತಹಾ ಪರಮ ಪುರುಷನ ಮಂದಿರವನ್ನು ಮರು ನಿರ್ಮಿಸಲು ಕೋಟಿ ಕೋಟಿ ಭಕ್ತಗಣ 492 ವರ್ಷ ರಾಮ ಮಂತ್ರ ಜಪಿಸುತ್ತಾ, ಕಾದುತ್ತಲೇ ಕಾದು ಕುಳಿತಿತ್ತು! ಕಾಯುವಿಕೆಗಿಂತ ಅನ್ಯ ತಪವೇನಿದೆ?

"ವ್ಯಸನೇಷು ಮನುಷ್ಯಾಣಾಂ ಭೃಷಂಭವತಿ ದುಃಖಿತಃ":- ಇನ್ನೊಬ್ಬನ ಸಂಕಟವನ್ನು ಕಂಡಾಗ ತೀವ್ರವಾದ ದುಃಖಕ್ಕೆ ಒಳಗಾಗುವವನು" ಎಂದು ರಾಮನನ್ನು ವರ್ಣಿಸಿದ್ದಾನೆ ಮಹರ್ಷಿ ವಾಲ್ಮೀಕಿ. ಅದಕ್ಕೇ ದುಃಖಿತರೆಲ್ಲರೂ ರಾಮನಿಗಾಗಿ ಕಾದದ್ದಿರಬೇಕು. ರಾಮ "ದೂರ್ವಾದಲ ಶ್ಯಾಮ". ದೂರ್ವೆ ಎಂಬ ಮಂಗಲ ಸಸ್ಯ ಒಂಟಿಯಾಗಿ ಬೆಳೆಯುವುದೇ ಇಲ್ಲ. ಅದು ಗುಂಪು ಗುಂಪಾಗಿಯೇ ಬೆಳೆಯುವುದು. ಮಂಗಲಪುರುಷ  ಶ್ರೀರಾಮನೂ ಹಾಗೆಯೇ. ಸಮಷ್ಠಿಯ ಹಿತವನ್ನಾತ ಬಯಸುತ್ತಿದ್ದ. ಆದುದರಿಂದಲೇ ರಾಮ ನಡೆದ ಹಾದಿಯಲ್ಲಿದ್ದು ಪುನೀತವಾದ ಕಲ್ಲುಗಳು, ಬೀಸುವ ಗಾಳಿ, ಅವನಿಗಾಗಿ ಬಾಗುವ ತರುಲತೆಗಳೂ ರಾಮನ ಕಥೆಯನ್ನು ಸಾರಿ ಹೇಳಿವೆ. ವಾನರರು ಸಮುದ್ರಕ್ಕೆ ಒಗೆದಿದ್ದ ಸೇತುವಿನ ಕಲ್ಲೂ ತಾನು ರಾಮನ ಕಾಲದವನೆಂದು ಸಾರಿ ಹೇಳುತ್ತಿದೆ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಬ್ರಹ್ಮರ್ಷಿ ವಿಶ್ವಾಮಿತ್ರ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ. ಆ ಮಾಧ್ಯಮ ಇಲ್ಲಿನ ಜನರನ್ನು ಜೀವನ ಪ್ರವಾಹದಲ್ಲಿ ಏಕತ್ರಗೊಳಿಸಿ ಹಿಡಿದಿಟ್ಟು ಈ ರಾಷ್ಟ್ರವನ್ನು ನಿರ್ಮಿಸಿದೆ ಎಂಬ ಸೂಕ್ಷ್ಮ ಬರ್ಬರನಾದ ಬಾಬರನಿಗೆ, ಅವನಿಗೆ ಸೂಚನೆ ಕೊಟ್ಟ ಪಾಪಿ ಸೂಫಿಗೆ ಗೊತ್ತಾಗಿತ್ತು. ಈ ನೆಲದಿಂದ ಬೇರ್ಪಡಿಸಲಾಗದ ಯುಗಯುಗದ ಅಸ್ಮಿತೆಯ ಮಂದಿರ ಧರೆಗುರುಳಿತ್ತು. ಆದರೆ ಆ ಅಸ್ಮಿತೆಯ ಮೇಲಿನ ಶ್ರದ್ಧೆ ಕೆಳಗುರುಳಲಿಲ್ಲ.

ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..."ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ! ರಾಮಭಕ್ತರೂ ರಾಮಮಂದಿರವನ್ನು ರಾಮನ ಜನ್ಮಸ್ಥಾನದಲ್ಲೇ ಮರು ನಿರ್ಮಿಸುವ ತಮ್ಮ ಪ್ರತಿಜ್ಞೆಯಿಂದ ಒಂದಿನಿತೂ ಕದಲದೇ ಮಂದಿರಕ್ಕೆ ತಳಪಾಯ ಹಾಕಿಯೇ ಬಿಟ್ಟರು. ಅದೆಷ್ಟು ಕಾಲ, ಅದೆಷ್ಟು ಹೋರಾಟಗಳು! ಒಂದು ಲಕ್ಷದ ಎಪ್ಪತ್ತು ಸಾವಿರ ಯೋಧರು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆಗೆ, ಮೀರ್ ಬಾಕಿಯ ತೋಪಿಗೆ ಎದುರಾಗಿ ಹದಿನೈದು ದಿವಸಗಳ ಕಾಲ ರಾಮಚಂದಿರನ ಮಂದಿರವನ್ನು ಉಳಿಸಲು ಘನಘೋರವಾಗಿ ಕಾದಿದರು. ಆ ಬಳಿಕ ಎಪ್ಪತ್ತೈದು ಯುದ್ಧಗಳು, ಸಾಧುಸಂತರ, ರಾಮಭಕ್ತರ ಸತ್ಯಾಗ್ರಹ, ಉಪವಾಸ, ಪಾದಯಾತ್ರೆ, ರಾಮಜ್ಯೋತಿ ರಥಯಾತ್ರೆ, ರಾಮಪಾದುಕಾಯಾತ್ರೆ, ಕರಸೇವೆ, ಕರಸೇವಕರ ಬಲಿದಾನ; ಅದೆಷ್ಟು ಸಂತರು ರಾಮಮಂದಿರಕ್ಕಾಗಿ ಅಗ್ನಿಗುಂಡಕ್ಕೆ ಹಾರಿಯೋ, ಶೂಲಕ್ಕೇರಿಯೋ, ಉಪವಾಸಗೈದೋ ಬಲಿದಾನಗೈದರು! ಒಂದು ಬಾರಿಯಂತೂ 3500 ಮಾತಾಭಗಿನಿಯರು ಶಸ್ತ್ರ ಹಿರಿದು ಕಾದಿದರು. ಈ ಹೋರಾಟಗಳೆಲ್ಲವೂ ಕೇವಲ ಒಂದು ಮಂದಿರದ ಮರುನಿರ್ಮಾಣಕ್ಕಾಗಿ ನಡೆದ ಹೋರಾಟವಲ್ಲ; ಅದು ಒಂದು ಬದುಕಿನ ಉಳಿವಿಗಾಗಿ, ಒಂದು ಸಂಸ್ಕೃತಿಯ ರಕ್ಷಣೆಗಾಗಿ ನಡೆದ ಹೋರಾಟ. ಮನಸ್ಸು ಮಾಡಿದ್ದರೆ ನ್ಯಾಯಾಲಯದ ಪ್ರಕ್ರಿಯೆಯನ್ನು ವಿಳಂಬಪಡಿಸುವ ಗುಂಪುಗಳು, ಅವುಗಳ ಮಾನಸಿಕತೆ, ರಾಜಕೀಯ ಷಡ್ಯಂತ್ರ ಇವೆಲ್ಲವುಗಳನ್ನೂ ರಾಮಭಕ್ತರು ಒಂದೇ ಏಟಿಗೆ ಕೊನೆಗೊಳಿಸಬಹುದಿತ್ತು. ಆದರೆ ರಾಮಭಕ್ತರು ಈ ನೆಲದ ಕಾನೂನಿಗೆ ಗೌರವ ಕೊಟ್ಟು ರಾಮ ನಡೆದ ಹಾದಿಯಲ್ಲಿ ಸಾಗಿದರು, ಕಾದರು. ಆ ಕಾಯುವಿಕೆಯೆಂಬ ತಪಸ್ಸಿನ ಪುಣ್ಯಫಲವೇ ಶಿಲಾನ್ಯಾಸ. ಕೋಟಿ ಕೋಟಿ ಮನಸ್ಸುಗಳ ಐನೂರು ವರ್ಷಗಳ ಸಂಕಲ್ಪ ಇಂದು ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಶಿಲಾನ್ಯಾಸಗೊಳ್ಳುತ್ತಿದೆ.



ಶಿಲೆಯನ್ನು ಅಹಲ್ಯೆಯಾಗಿಸಿದವನ ಮಂದಿರಕ್ಕೆ ಶಿಲಾನ್ಯಾಸ. ಪರಮ ಪುರುಷೋತ್ತಮನಿಗೆ ಮಂದಿರ ನಿರ್ಮಿಸಲು ಶಿಲಾನ್ಯಾಸ. ೫೦೦ ವರ್ಷಗಳ ಪರ್ಯಂತ ಭಕ್ತರ ಹೃದಯದಲ್ಲೇ ಪುತ್ಥಳಿಯಾಗಿದ್ದವನ ವಿಗ್ರಹ ಪ್ರತಿಷ್ಠಾಪನೆಗೆ ಶಿಲಾನ್ಯಾಸ. "ರಾಮೋ ವಿಗ್ರಹವಾನ್ ಧರ್ಮಃ"; ಧರ್ಮವೇ ವಿಗ್ರಹವಾಗಿದ್ದವನ ಮೂರ್ತಿಗೆ ಶಿಲಾನ್ಯಾಸ. ಅದು ಬರಿಯ ಕಲ್ಲು ಗುಡಿಯಲ್ಲ; ಅದು ಈ ದೇಶದ ಅಸ್ಮಿತೆಯ ಪ್ರತೀಕ. ಭಕ್ತರ ಹೃದಯದಲ್ಲಿ ಕುಳಿತಿರುವ ಮೂರ್ತಿ ರಾಷ್ಟ್ರೀಯ ಅಸ್ಮಿತೆಯ ಜೀವಂತ ಪುತ್ಥಳಿಯಾಗಿ ಎದ್ದು ನಿಲ್ಲುತ್ತದೆ. ಅಲ್ಲಿ ರಾಮನ ಪದಸ್ಪರ್ಶದಿಂದ ಪುನೀತವಾದ ಈ ಮಣ್ಣಿನ ಕಣಕಣಗಳು ಹೇಳುವ ರಾಮಾಯಣದ ಮೂರ್ತ ರೂಪವಿದೆ. ಅಸಂಖ್ಯ ಯುದ್ಧಗಳಲ್ಲಿ ಮಂದಿರಕ್ಕಾಗಿ ರಕ್ತವನ್ನೇ ಬಸಿಬಸಿದು ಕೊಟ್ಟವರ ಪೌರುಷದ ಪ್ರತೀಕವಿದೆ. ಜಾತಿಯ, ಭಾಷೆಯ ದುರಭಿಮಾನಗಳಿಲ್ಲದೆ, ಗಡಿಗುಂಟಗಳ ಹಂಗಿಲ್ಲದೆ, ಆ ಧರ್ಮದೇವತೆಯನ್ನು ಪೂಜಿಸಿದ, ಪೂಜಿಸುವ ಮನಸ್ಸುಗಳ ಭಾವವಿದೆ. ಮಂದಿರದ ಉಳಿವಿಗಾಗಿ, ಮರುನಿರ್ಮಿತಿಗಾಗಿ ಹಣಿದು ಅಳಿದವರ ಪರಿವಾರಗಳ ರೋಷ, ಆಕ್ರೋಷ, ದುಃಖ, ಭಕ್ತಿ-ಭಾವಗಳ ಮೇಳೈಸುವಿಕೆಯಿದೆ. ತಮ್ಮ ಮನೆಯಲ್ಲೂ ರಾಮ ಹುಟ್ಟಬೇಕು, ಅವನ ಮಂದಿರದ ಮರು ನಿರ್ಮಾಣವಾಗಬೇಕು ಎಂದವರ ಹಪಹಪಿಕೆಯಿದೆ. ವಿದ್ವಜ್ಜನರ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ, ಕಾವ್ಯ, ಪದ್ಯ, ಗದ್ಯ, ನಾಟ್ಯ, ನಟನೆಗಳಲ್ಲಿ; ಜನಪದರ ಹಾಡುಗಬ್ಬಗಳಲ್ಲಿ, ಋತ್ವಿಜರ ಹೋಮ-ಹವನಗಳಲ್ಲಿ; ಪೂಜಕರ ಆರಾಧನೆಯಲ್ಲಿ, ಕ್ಷತ್ರಿಯರ ತೋಳ್ಬಲಗಳಲ್ಲಿ, ದಾನಿಗಳ ದಾನಗಳಲ್ಲಿ, ಶ್ರಮಿಕರ ಕೆಲಸಗಳಲ್ಲಿ; ಈ ನೆಲದ ಕಾನೂನಿನಂತೆಯೇ ಹೋರಾಡಿದ ಬಗೆಬಗೆಯ ಹೋರಾಟ-ಬುದ್ಧಿಮತ್ತೆಗಳಲ್ಲಿ ಕಂಡಂತಹಾ ಧರ್ಮದ ಮೂರ್ತ ರೂಪಕ್ಕೆ ಅಲ್ಲಿ ಶಿಲಾನ್ಯಾಸವಾಗುತ್ತಿದೆ. ಆಸೇತುಹಿಮಾಚಲಾದ್ಯಂತ ರಾಮ ನಡೆದ ಮಣ್ಣಿನ ಕಣಕಣಗಳ, ಪಾದ ತೊಳೆದ ಹಳ್ಳ-ಕೊಳ್ಳ, ನದಿ, ಸಮುದ್ರಗಳ, ಅಹಲ್ಯೆಯಾಗಿಸಿದ ಕಲ್ಲುಗಳ, ಉದ್ಧರಿಸಲ್ಪಟ್ಟ ಶಬರಿಯರ, ಪುನೀತರಾದ ಋಷಿಮುನಿಗಳ, ಭಕ್ತರಾದ ಹನುಮರ, ಛೇದನಗೊಂಡ ಸಾಲವೃಕ್ಷಗಳ, ಪಂಚವಟಿ-ದಂಡಕಾರಣ್ಯಗಳ, ಅವನಿಗಾಗಿ ಕಾದಿದ ಜಟಾಯು, ಕಪಿ ವೀರರ, ನೇವರಿಸಿಕೊಂಡ ಅಳಿಲುಗಳ, ಶರಣು ಬಂದ ವಿಭೀಷಣರ, ಮೋಕ್ಷ ಪಡೆದ ವಾಲಿ-ರಾವಣಾಖ್ಯರ, ತಪಸ್ವಿಗಳಂತೇ ಕಾದು ಕುಳಿತ ಮಾತೆ, ಅನಾಥ, ಪಾಮರ, ಭಕ್ತ, ಪ್ರಜಾಜನರ ರಾಮನಾಮ ಸ್ಮರಣೆಯ ಶಕ್ತಿ ಅಲ್ಲಿ ಸಂಚಯನವಾಗುತ್ತಿದೆ.


ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ಜನ್ಮಸ್ಥಾನದ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 492 ವರ್ಷಗಳ ಬಳಿಕ ರಾಷ್ಟ್ರೀಯ ಅಸ್ಮಿತೆಯ ಪುತ್ಥಳಿ ಎದ್ದು ನಿಲ್ಲುತ್ತಿದೆ. ಈ ಹೋರಾಟ, ಈ ಶಿಲಾನ್ಯಾಸ, ಈ ಮಂದಿರ, ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯುವಂತಾಗಲಿ.


ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ

ಬಂಗಾಳಿ ಹಿಂದೂಗಳ ಜೀವ ಉಳಿಸಿದ ಗೋಪಾಲ


ಆಗಸ್ಟ್ 18 ಕೋಲ್ಕತ್ತಾಕ್ಕೆ ಮಹತ್ವದ ದಿನ. 1946ರ ಆಗಸ್ಟ್ 16ರಿಂದ ನಗರವನ್ನು ಹುರಿದು ಮುಕ್ಕಿದ ಘೋರ ಘಟನೆಗಳಿಗೆ ಮಹತ್ವದ ತಿರುವು ನೀಡಿದ ದಿನ. ಆ ಬಳಿಕ ಜರುಗಿದ ನಾಟಕೀಯ ತಿರುವಿನ ಘಟನೆಗಳು ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ರಕ್ಷಿಸಿದವು. ಹಿಂದೂಗಳ ವಿರುದ್ಧದ ಮುಸ್ಲಿಂ ಲೀಗಿನ ಷಡ್ಯಂತ್ರವನ್ನು ವಿಫಲಗೊಳಿಸಿ, ಸಂದರ್ಭದ ಅಲೆಯನ್ನು ಮುಸ್ಲಿಂ ಲೀಗಿನ ವಿರುದ್ಧ ತಿರುಗಿಸಿ, ಹತ್ತಾರು ಸಾವಿರ ಹಿಂದೂಗಳನ್ನು ಸರ್ವನಾಶವಾಗುವುದರಿಂದ ಉಳಿಸಿದ
ಗೋಪಾಲ್ ಚಂದ್ರ ಮುಖೋಪಾಧ್ಯಾಯರೆಂಬ ವೀರ ಕಲಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಆತ ಮತ್ತು ಅವರ ದೇಶಭಕ್ತ ಅನುಯಾಯಿಗಳಿಲ್ಲದಿರುತ್ತಿದ್ದರೆ ಕಲ್ಕತ್ತಾ ಮತ್ತು ಅದರ ನೆರೆಯ ಹಿಂದೂ-ಬಹುಸಂಖ್ಯಾತ ಜಿಲ್ಲೆಗಳು ಹಿಂದೂಗಳಿಂದ ಬರಿದಾಗಲ್ಪಟ್ಟು ಪೂರ್ವ ಪಾಕಿಸ್ತಾನದ ಭಾಗಗಳಾಗುತ್ತಿದ್ದವು.

ವಿಭಜನೆಯ ಪೂರ್ವದಲ್ಲಿ ಬಂಗಾಲ ಮುಸ್ಲಿಮ್ ಲೀಗ್ ನಾಯಕ ಸುಹ್ರಾವರ್ದಿಯ ಆಡಳಿತದಲ್ಲಿತ್ತು. 1940ರಲ್ಲಿ ಕಲ್ಕತ್ತಾದಲ್ಲಿ ಕೋಮುಗಲಭೆ ಸೃಷ್ಟಿಸಿ ಹಿಂದೂಗಳನ್ನು ಸರ್ವನಾಶ ಮಾಡಲು ಸುಹ್ರಾವರ್ದಿ ಸಂಚು ರೂಪಿಸಿದ್ದ. ಆದರೆ ಸುಹ್ರಾವರ್ದಿಯ ಕುಟುಂಬದ ಹೆಣ್ಣುಮಕ್ಕಳಿಗೆ ಸಂಗೀತ ಕಲಿಸುತ್ತಿದ್ದ ಹರೇನ್‍ ಘೋಷನಿಗೆ ಈ ಸಂಚು ತಿಳಿದು ಆತ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ ಕಾರಣ ಈ ಸಂಚು ವಿಫಲವಾಯಿತು. ವಿಷಯ ತಿಳಿದ ಸುಹ್ರಾವರ್ದಿ ಹರೇನ್‍ ಘೋಷನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು, ಅವನ  ದೇಹವನ್ನು ತುಂಡು ತುಂಡು ಮಾಡಿ ಪೆಟ್ಟಿಗೆಯೊಂದರಲ್ಲಿ ಹಾಕಿ ಕಲ್ಕತ್ತಾದ ಬೀದಿಯೊಂದರಲ್ಲಿ ಬಿಸಾಕಿದ. 1942ರಲ್ಲಿ ಬಂಗಾಲ ಭೀಕರ ಕ್ಷಾಮಕ್ಕೆ ತುತ್ತಾಗಿತ್ತು. ಆಗ ಕಲ್ಕತ್ತಾದಲ್ಲಿ ಹಂಚಲು ತಂದಿದ್ದ ಪಡಿತರವನ್ನು ಸುಹ್ರಾವರ್ದಿ ತನ್ನ ವಶಕ್ಕೆ ಪಡೆದುಕೊಂಡು ಕಾಳಸಂತೆಯಲ್ಲಿ ಮಾರಿ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ. ಮುಖರ್ಜಿಯವರ ಆಪ್ತ ಶಿಷ್ಯರೂ, ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಾಜಾ ರಾಮಮೋಹನ್ ರಾಯ್ ಮಹಾವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ವಿಭಾಗದ ಮಾಜಿ ಮುಖ್ಯಸ್ಥರೂ ಆಗಿದ್ದ  ಅಮಲೇಂದು ಪ್ರಸಾದ್ ಮುಖೋಪಾಧ್ಯಾಯರು ಬಂಗಾಳದ ಪೂರ್ವ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ಸುಹ್ರಾವರ್ದಿಯ ಆಡಳಿತದಲ್ಲಿ ಹಿಂದೂಗಳ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳು, ಶಂಖ ಊದುವುದು, ಸಿಂಧೂರವನ್ನು ಬಳಸುವುದು, ಮನೆಯ ಅಂಗಳದಲ್ಲಿ ತುಳಸಿ ಪೂಜೆಯನ್ನು ನಿಷೇಧಿಸಿ, ಶರಿಯತ್ ನಿಯಮಗಳನ್ನು ಜಾರಿಗೊಳಿಸಿದುದರ ಬಗೆಗೆ ಬರೆದಿದ್ದಾರೆ.  1946ರಲ್ಲಿ ಜಿನ್ನಾ "ನೇರ ಕಾರ್ಯಾಚರಣೆ" ಹೆಸರಿನಲ್ಲಿ ಗಲಭೆಗಳಿಗೆ ಕರೆ ನೀಡಿದಾಗ, ಕಲ್ಕತ್ತಾದಲ್ಲಿ ಮಾರಣಹೋಮಕ್ಕೆ ವೇದಿಕೆ ಕಲ್ಪಿಸಿದವನು ಸುಹ್ರಾವರ್ದಿಯೇ.

1946ರ ಆಗಸ್ಟ್ 16 - ರಂಜಾನ್‌ನ ಹದಿನೆಂಟನೇ ದಿನ, ಪ್ರವಾದಿ ಮುಹಮ್ಮದ್ ಬದ್ರ್ ಕದನ (ಮೆಕ್ಕಾದ ರಕ್ತಸಿಕ್ತ ವಿಜಯಕ್ಕೆ ದಾರಿ ಮಾಡಿಕೊಟ್ಟ ಅನ್ಯಜನಾಂಗಗಳ ವಿರುದ್ಧದ ಮೊದಲ ನಿರ್ಣಾಯಕ ವಿಜಯ)ವನ್ನು ಗೆದ್ದ ದಿನ. ಅದನ್ನೇ ಉದ್ದೇಶಪೂರ್ವಕವಾಗಿ ಆರಿಸಿಕೊಂಡು ತಮ್ಮ ಸಮುದಾಯದವರನ್ನು ಪ್ರಚೋದಿಸಲು ಮುಸ್ಲಿಂ ನಾಯಕರು ಸಿದ್ಧತೆ ಮಾಡಿದ್ದರು. ಜಿನ್ನಾ ಖಡ್ಗವನ್ನು ಹಿರಿದು ನಿಂತ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಕೋಲ್ಕತ್ತಾದಲ್ಲಿ ವಿತರಿಸಲಾಯಿತು. ಮುಸ್ಲಿಂ ಲೀಗ್ ಮುಖವಾಣಿ "ದಿ ಸ್ಟಾರ್ ಆಫ್ ಇಂಡಿಯಾ" ಮತ್ತು ಇತರ ಮುಸ್ಲಿಂ ಪ್ರಕಟಣೆಗಳು ತಮ್ಮ ಸಮುದಾಯಕ್ಕೆ ಆ ದಿನದ ಮಹತ್ವವನ್ನು ನೆನಪಿಸುವ ಲೇಖನಗಳನ್ನು ಬರೆದು ಪ್ರವಾದಿಯ ಹಾದಿಯಲ್ಲಿ ನಡೆದು ಕಾಫಿರರನ್ನು ನಾಶ ಮಾಡಿ ಬಂಗಾಳವನ್ನು "ಶುದ್ಧ ಭೂಮಿ"(ಪಾಕಿಸ್ತಾನ)ಯನ್ನಾಗಿ ಮಾಡುವಂತೆ ಕರೆಕೊಟ್ಟರು. ಕಲ್ಕತ್ತಾದ ಮೇಯರ್ ಆಗಿದ್ದ ಸೈಯದ್ ಮುಹಮ್ಮದ್ ಉಸ್ಮಾನ್ ಬಿಡುಗಡೆಗೊಳಿಸಿದ, "ಕಾಫಿರರೇ, ನಿಮ್ಮ ಅಂತ್ಯವು ದೂರವಿಲ್ಲ! ನಿಮ್ಮನ್ನು ಹತ್ಯೆಗೈಯಲಾಗುವುದು" ಎಂಬ ಒಕ್ಕಣೆಯುಳ್ಳ ಕರಪತ್ರವನ್ನು ವ್ಯಾಪಕವಾಗಿ ಹಂಚಲಾಗಿತ್ತು.

ವಿಪರ್ಯಾಸವೆಂದರೆ ಆಗಸ್ಟ್ 16 ಶುಕ್ರವಾರ ಕೂಡಾ ಆಗಿತ್ತು! ಮಸೀದಿಗಳಲ್ಲಿ ಉಗ್ರ ಭಾಷಣಗಳನ್ನು ಮಾಡಿ ಮುಸ್ಲಿಂರನ್ನು ಪ್ರಚೋದಿಸುವಂತೆ ಮುಸ್ಲಿಂ ಲೀಗ್ ನಾಯಕರಿಂದ ಅಪ್ಪಣೆಯೂ ದೊರಕಿತ್ತು. ಅವರು ಯಥಾ ಪ್ರಕಾರಕ್ಕಿಂತಲೂ ಹೆಚ್ಚು ಉಗ್ರವಾಗಿ ಕಾಫಿರರನ್ನು ಶುದ್ದೀಕರಿಸುವಂತೆ ತಮ್ಮವರನ್ನು ಉತ್ತೇಜಿಸಿದರು. ಕಳ್ಳುಕುಡಿದ ಮಂಗನಿಗೆ ಚೇಳು ಕುಟುಕಿದಂತಾಯಿತು! ಮುಸ್ಲಿಮರು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಹಿಂದೂಗಳ ವ್ಯಾಪಾರ ಮಳಿಗೆಗಳು ಹಾಗೂ ಕಟ್ಟಡಗಳ ಮೇಲೆ ದಾಳಿಗೆ ಶುರುವಿಟ್ಟುಕೊಂಡರು. ನಮಾಜಿನ ಬಳಿಕ ಸುಹ್ರಾವರ್ದಿ ಮತ್ತಿತರ ಮುಸ್ಲಿಂ ಲೀಗ್ ನಾಯಕರ ಭಾಷಣ ಕೇಳಲು ಮುಸ್ಲಿಮರ ಪ್ರವಾಹವೇ ಆಕ್ಟರ್ಲೋನಿ ಸ್ಮಾರಕಕ್ಕೆ (ಈಗ ಶಾಹಿದ್ ಮಿನಾರ್) ಹರಿದು ಬಂತು. ಹಿಂದೂಗಳನ್ನು ಕೋಲ್ಕತ್ತಾದಿಂದ ಓಡಿಸಿ ಜಿನ್ನಾನ ಪಾಕಿಸ್ತಾನದ ಕನಸು ನನಸು ಮಾಡುವಂತೆ ಒತ್ತಾಯಿಸುವ ಉಗ್ರತೆ ಆ ನಾಯಕರ ಭಾಷಣಗಳಲ್ಲಿತ್ತು. ಸುಹ್ರಾವರ್ದಿ ತನ್ನ ಭಾಷಣದಲ್ಲಿ ಸೈನ್ಯ ಹಾಗೂ ಪೋಲೀಸರನ್ನು ಸುಮ್ಮನಿರಿಸುವುದಾಗಿ ಭರವಸೆ ನೀಡಿದ. ಇದರಿಂದ ಹಿಂದೂಗಳ ಮೇಲೆ ದಾಳಿ ಮಾಡಲು ಮತ್ತು ಕೊಲ್ಲಲು ಮುಸ್ಲಿಮರಿಗೆ ನೇರ ಪ್ರೋತ್ಸಾಹ ದೊರೆತಂತಾಯಿತು. ಈಗ ಅದೇ ಕಳ್ಳುಕುಡಿದ, ಚೇಳು ಕುಟುಕಿದ ಮಂಗನ ದೇಹದಲ್ಲಿ ಪ್ರೇತ ಸಂಚಾರವಾದಂತಾಯಿತು! 

ಭಾಷಣ ಕೇಳಿ ತೆರಳಿದ ಹತ್ತಾರು ಸಾವಿರ ಮುಸ್ಲಿಮರು ನಗರದ ವಿವಿಧ ಭಾಗಗಳಲ್ಲಿ ಕಬ್ಬಿಣದ ಸರಳುಗಳು, ಕತ್ತಿಗಳು ಮತ್ತಿತರ ಮಾರಕ ಆಯುಧಗಳಿಂದ ಶಸ್ತ್ರಸಜ್ಜಿತರಾದರು. ಎಸ್ಪ್ಲನೇಡ್ನಲ್ಲಿ (ಮುಸ್ಲಿಂ ಲೀಗ್ ರ್‍ಯಾಲಿ ನಡೆದ ಸಮೀಪದ ಸ್ಥಳ)ಹಿಂದೂಗಳು ಮೊದಲು ಆಹುತಿಯಾದರು. ಮನೆ, ಅಂಗಡಿಗಳ ಮೇಲೆ ದಾಳಿ ಮಾಡಿ ಪುರುಷರ, ಹುಡುಗರ ಕತ್ತುಕೊಯ್ಯಲಾಯಿತು, ಕೈಕಾಲುಗಳನ್ನು ಕತ್ತರಿಸಿ ಚಿತ್ರಹಿಂಸೆ ಕೊಡಲಾಯಿತು. ಮಹಿಳೆಯರನ್ನು ಅತ್ಯಾಚಾರಗೈದು ಕೊಲ್ಲಲಾಯಿತು. ಕೆಲವರನ್ನು ಲೈಂಗಿಕ ಗುಲಾಮಗಿರಿಗೆ ಒಯ್ಯಲಾಯಿತು. ಮುಸ್ಲಿಂ ಪ್ರಾಬಲ್ಯದ ಮೆಟಿಯಾಬ್ರೂಜ್ ಪ್ರದೇಶದ ಲಿಚುಬಾಗನ್‌ನ ಕೇಸರರಮ್ ಕಾಟನ್ ಮಿಲ್ಸ್‌ನಲ್ಲಿ ಅತ್ಯಂತ ಭೀಕರ ಹತ್ಯಾಕಾಂಡ ನಡೆಯಿತು. ಅಲ್ಲಿ ಮುಸ್ಲಿಂ ಲೀಗ್ ನಾಯಕ ಸೈಯದ್ ಅಬ್ದುಲ್ಲಾ ಫಾರೂಕಿ ನೇತೃತ್ವದಲ್ಲಿ ಮುಸ್ಲಿಮರು ಮಿಲ್ಲಿನೊಳಗಿದ್ದ 600ಕ್ಕೂ ಹೆಚ್ಚು ಹಿಂದೂ ಕಾರ್ಮಿಕರ(ಹೆಚ್ಚಿನವರು ಒರಿಸ್ಸಾದವರು) ಶಿರಚ್ಛೇದ ಮಾಡಿದರು. ಮುಸ್ಲಿಮ್ ಕ್ರೂರತೆಯ ಕಥೆ ಹೇಳಲು, ಕೈಗಳು ಕತ್ತರಿಸಲ್ಪಟ್ಟಿದ್ದ ಇಬ್ಬರು ಹೇಗೋ ಬದುಕುಳಿದರು.

ಸುಹ್ರಾವರ್ದಿ ಮೊದಲೇ ಊಹಿಸಿದಂತೆ ಮೊದಲ ಎರಡು ದಿನಗಳಲ್ಲಿ ಹಿಂದೂಗಳು ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಲಿಲ್ಲ. ಮುಸ್ಲಿಮರು ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹಾ, ಶತಮಾನಗಳಿಂದ ಮುಸ್ಲಿಮರ ಅಧೀನಕ್ಕೆ ಒಳಪಟ್ಟಿದ್ದ ಹಿಂದೂಗಳು ಮುಸ್ಲಿಮರಿಗೆ ಯಾವುದೇ ಪ್ರತಿರೋಧವನ್ನು ತೋರಿಸುವ ಧೈರ್ಯವನ್ನು ಹೊಂದಿಲ್ಲ ಎಂದು ಆತ ತನ್ನ ಸಹಚಾರಿಗಳಿಗೆ ತಿಳಿಸಿದ್ದ. 1946ರಲ್ಲಿ ಕಲ್ಕತ್ತಾದಲ್ಲಿ 64 ಶೇಕಡಾದಷ್ಟು ಹಿಂದೂಗಳು ಮತ್ತು 33 ಶೇಕಡಾ ಮುಸ್ಲಿಮರು ಇದ್ದರು ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅಲ್ಲದೇ ಕಲ್ಕತ್ತಾದ ನೆರೆಯ ಜಿಲ್ಲೆಗಳಾದ ಹೌರಾ ಮತ್ತು ಹೂಗ್ಲಿಗಳು ಹಿಂದೂ ಬಹುಸಂಖ್ಯಾತವಾಗಿದ್ದವು. "ಶತಮಾನಗಳ ಪರ್ಯಂತ ಮುಸ್ಲಿಮರ ಕೈಯಿಂದ ಆಳಿಸಿಕೊಂಡಿರುವ ಹಿಂದೂಗಳ ವಂಶವಾಹಿಯಲ್ಲಿ ಮುಸ್ಲಿಮರನ್ನು ವಿರೋಧಿಸುವ ಕೆಚ್ಚು ಇಲ್ಲ. ಹಿಂದೂಗಳು ತಾವು ದುರ್ಬಲರು ಮತ್ತು ಮುಸ್ಲಿಮರು ಬಲಶಾಲಿಗಳು ಹಾಗೂ ಉಗ್ರರು ಎಂಬ ನಂಬಿಕೆಗೆ ಪಕ್ಕಾಗಿದ್ದಾರೆ" ಎಂದು ಸುಹ್ರಾವರ್ದಿ ತನ್ನ ಮುಸ್ಲಿಂ ಲೀಗ್ ಸಹಚಾರಿಗಳಿಗೆ ಹೇಳಿದ್ದ.

ಲಾಲ್‌ಬಜಾರ್‌ನಲ್ಲಿರುವ ಕಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಹೋಗಿ ಕೂತ ಸುಹ್ರಾವರ್ದಿ ಮುಸ್ಲಿಮರು ಹಿಂದೂಗಳ ಮೇಲೆ ಯಶಸ್ವಿಯಾಗಿ ಆಕ್ರಮಣ ಮಾಡುತ್ತಿರುವ ಪ್ರದೇಶಗಳಿಗೆ ಪಡೆಗಳನ್ನು ನಿಯೋಜಿಸದಂತೆ ಬ್ರಿಟಿಷ್ ಮತ್ತು ಆಂಗ್ಲೋ-ಇಂಡಿಯನ್ ಪೊಲೀಸ್ ಅಧಿಕಾರಿಗಳನ್ನು ತಡೆದ. ಇದಕ್ಕೂ ಮೊದಲೇ ಆತ ಬಿಹಾರಿ ಹಿಂದೂಗಳನ್ನು ಬದಲಾಯಿಸಿ ಅಲ್ಲಿ ಸಂಯುಕ್ತ ಪ್ರಾಂತ್ಯಗಳಲ್ಲಿದ್ದ ಪಠಾಣರು ಹಾಗೂ ಮತ್ತಿತರ ಮುಸ್ಲಿಂರನ್ನು ನೇಮಿಸಿ ನಗರ ಪೊಲೀಸ್ ಸಂಯೋಜನೆಯನ್ನೇ ಬದಲಾಯಿಸಿದ್ದ. ಆ ಪೊಲೀಸರು ಹಿಂದೂಗಳನ್ನು ಕೊಲ್ಲುವಲ್ಲಿ ಹಾಗೂ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗೈಯುವಲ್ಲಿ ಮುಸ್ಲಿಮರಿಗೆ ನೆರವಾದರು. ನಗರದ ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮೊದಲ ಎರಡು ದಿನಗಳಲ್ಲಿ(ಆಗಸ್ಟ್ 16, 17) ಕೆಲವು ಸಾವಿರ ಹಿಂದೂಗಳು ಕೊಲ್ಲಲ್ಪಟ್ಟರು. ವಿವಿಧ ವರದಿಗಳು ಈ ಸಂಖ್ಯೆಯನ್ನು 4000-20000ದ ನಡುವೆ ಕೊಡುತ್ತವೆ. ಸುಮಾರು 3,500 ಹಿಂದೂಗಳ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ ಬ್ರಿಟಿಷ್ ಹಾಗೂ ಭಾರತೀಯ ಸಮಕಾಲೀನ ಇತಿಹಾಸಕಾರರು ಆ ಸಂಖ್ಯೆಯನ್ನು ಭೂಗತ ಚರಂಡಿಗಳಲ್ಲಿ ತುಂಬಿಸಲಾಯಿತು ಹಾಗೂ ಗಂಗಾ ಮತ್ತು ನಗರದ ವಿವಿಧ ಕಾಲುವೆಗಳಲ್ಲಿ ಸುರಿಯಲಾಯಿತೆಂದು ಬರೆದಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಂದಾಜಿನ ಪ್ರಕಾರ ಕೊಲ್ಲಲ್ಪಟ್ಟ ಅಥವಾ ಕಾಣೆಯಾದ ಹಿಂದೂಗಳ ಸಂಖ್ಯೆ 7,000 ಕ್ಕಿಂತ ಹೆಚ್ಚಾಗುತ್ತದೆ.

ಈ ಭೀಬತ್ಸ ಆಕ್ರಮಣದಿಂದ ಭೀತರಾದ ಹಿಂದೂಗಳು ಕೋಲ್ಕತ್ತಾವನ್ನು ತೊರೆಯಲಾರಂಭಿಸಿದರು. ಹೌರಾ ರೈಲು ನಿಲ್ದಾಣ, ಕಲ್ಕತ್ತಾ ತೊರೆದು ಗುಳೇ ಹೊರಟಿದ್ದ ಹಿಂದೂಗಳಿಂದ ತುಂಬಿಹೋಗಿತ್ತು. ನೂರಾರು ಹಿಂದೂಗಳು ಹೂಗ್ಲಿಯನ್ನು ದಾಟುತ್ತಿದ್ದಾಗ ಮುಸ್ಲಿಮರು ಅವರನ್ನು ಮುಳುಗಿಸಿ ಸಾಯಿಸಿದರು. ಸುಹ್ರಾವರ್ದಿ ಯೋಜಿಸಿದ್ದು ಇದನ್ನೇ. ಹಿಂದೂಗಳನ್ನು ಚಿತ್ರಹಿಂಸೆ ಕೊಟ್ಟು ಕೊಂದು ಭೀತಿಯನ್ನು ಸೃಷ್ಟಿಸಿದರೆ ಹಿಂದೂಗಳು ಕೋಲ್ಕತ್ತಾವನ್ನು ತೊರೆಯುತ್ತಾರೆ. ಆಗ ಅದು ಮುಸ್ಲಿಂ ಬಾಹುಳ್ಯದ ನಗರವಾಗುತ್ತದೆ. ಕೋಲ್ಕತ್ತಾವನ್ನು ಪಾಕಿಸ್ತಾನಕ್ಕೆ ಸೇರಿಸುವ ಮುಸ್ಲಿಂ ಲೀಗ್ ಬೇಡಿಕೆಯನ್ನು ಅದು ಹೆಚ್ಚಿಸುತ್ತದೆ! ಹಿಂದೂಗಳನ್ನು ಕಲ್ಕತ್ತಾದಿಂದ ಓಡಿಸಿದ ನಂತರ, ಹಿಂದೂ ಬಹುಸಂಖ್ಯಾತ ಜಿಲ್ಲೆಗಳಾದ ಹೌರಾ, ಹೂಗ್ಲಿ ಹಾಗೂ ಕೈಗಾರಿಕೀಕರಣಗೊಂಡ ಮತ್ತು ಬಂಗಾಳದ ಆರ್ಥಿಕತೆಯ ಚಾಲನಾ ಶಕ್ತಿ 24ಪರಗಣಗಳತ್ತ ತನ್ನ ಗಮನವನ್ನು ಹರಿಸುವುದಾಗಿ ಸುಹ್ರಾವರ್ದಿ ಯೋಜಿಸಿದ್ದ. ಈ ಜಿಲ್ಲೆಗಳಿಲ್ಲದಿದ್ದರೆ, ಪೂರ್ವ ಪಾಕಿಸ್ತಾನವು ಆರ್ಥಿಕವಾಗಿ ಪ್ರಬಲವಾಗುವುದಿಲ್ಲ ಎಂದು ಆತ ಅರಿತಿದ್ದ. ಆದ್ದರಿಂದ ಪಾಕಿಸ್ತಾನದಲ್ಲಿ ಈ ಜಿಲ್ಲೆಗಳನ್ನು ಸೇರ್ಪಡೆಗೊಳಿಸುವ ಲೀಗ್‌ನ ಬೇಡಿಕೆಯನ್ನು ಅವರು ವಿರೋಧಿಸದಂತೆ ತಡೆಯಲು ಹಿಂದೂಗಳನ್ನು ಈ ಜಿಲ್ಲೆಗಳಿಂದ ಓಡಿಸುವುದು ಅಥವಾ ಅವರನ್ನು ಭೀತಗೊಳಿಸಿ ಬಲವಂತವಾಗಿ ಒಪ್ಪುವಂತೆ ಮಾಡುವುದು ಅಗತ್ಯವಾಗಿತ್ತು. 

ಇಂತಹಾ ಘನಘೋರ ಪರಿಸ್ಥಿತಿಯಲ್ಲಿ ಪುಟ್ಟ ಹಣತೆಯೊಂದು ಬೆಳಗಿತು. ಅದು ಉಳಿದ ಹಣತೆಗಳನ್ನೂ ಬೆಳಗುತ್ತಾ ಹಿಂದೂಗಳ ಮನೆಯ ದೀಪಗಳನ್ನು ಉಳಿಸಿತು, ಬೆಳಗಿಸಿತು. ಆ ಹಣತೆಯೇ ರಾಷ್ಟ್ರೀಯವಾದಿಗಳ ಪರಿವಾರದಲ್ಲಿ ಉದಿಸಿದ್ದ, ಆಗ 33 ಹರೆಯದವರಾಗಿದ್ದ ಗೋಪಾಲ್ ಚಂದ್ರ ಮುಖೋಪಾಧ್ಯಾಯ. ನೇತಾಜಿ ಸುಭಾಸ್ ಚಂದ್ರ ಬೋಸರ ಪರಮ ಅನುಯಾಯಿಯಾಗಿದ್ದ ಆತ ಗಾಂಧಿಯ ಅಹಿಂಸಾ ಪದ್ದತಿಗೆ ತೀವ್ರ ಅಸಹ್ಯಪಟ್ಟಿದ್ದರು. ಆತ 1964 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಅಲಹಾಬಾದ್ ವಿಶ್ವವಿದ್ಯಾಲಯದ ರಾಷ್ಟ್ರೀಯವಾದಿ ಚಿಂತಕ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕ ಅನುಕೂಲ್ ಚಂದ್ರ ಮುಖೋಪಾಧ್ಯಾಯರ ಸೋದರಳಿಯ. ಮಾಂಸದ ವ್ಯಾಪಾರ ಮಾಡುತ್ತಿದ್ದ ಆತ ಗೋಪಾಲ್ ಪಾಥಾ(ಹೋತ) ಎಂದೇ ಕರೆಯಲ್ಪಡುತ್ತಿದ್ದರು. ಮಾಂಸದ ವ್ಯಾಪಾರ ಮಾಡುತ್ತಿದ್ದ ಕಾರಣ ಮುಸ್ಲಿಂ ವ್ಯಾಪಾರಿಗಳು, ಹಾಗೂ ಆಡುಗಳನ್ನು ಸಾಕುತ್ತಿದ್ದ ಮುಸ್ಲಿಮರೊಡನೆ ನಿಕಟ ಸಂಪರ್ಕವನ್ನು ಆತ ಹೊಂದಿದ್ದರು. ಸಂಕಷ್ಟಗೊಂಡಿರುವ ಜನರಿಗೆ ಸಹಾಯ ಮಾಡುವ ಸ್ವಭಾವ ಚಿಕ್ಕಂದಿನಿಂದಲೇ ಅವರಲ್ಲಿ ಬೆಳೆದು ಬಂದಿತ್ತು. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮತ್ತು ವಿಪತ್ತುಗಳ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಯುವಕರನ್ನು ಒಳಗೊಂಡ ರಾಷ್ಟ್ರೀಯತಾವಾದಿ ಸಂಘಟನೆ "ಭಾರತ್ ಜತಿಯಾ ವಾಹಿನಿ"ಯನ್ನು ಗೋಪಾಲ್ ಅದಾಗಲೇ ಬೆಳೆಸಿದ್ದರು. ವಾಹಿನಿಯ ಬಹಳಷ್ಟು ಸದಸ್ಯರು ಕುಸ್ತಿಪಟುಗಳು.



ಆಗಸ್ಟ್ 17 ರ ರಾತ್ರಿ, ದೊಡ್ಡ ಪ್ರಮಾಣದ ಹಿಂದೂಗಳ ಹತ್ಯಾಕಾಂಡ ಮತ್ತು ಹಿಂದೂ ಮಹಿಳೆಯರ ಮೇಲಿನ ಅತ್ಯಾಚಾರದ ದುಃಖಕರ ವರದಿಗಳು ಗೋಪಾಲ್ ಕಿವಿಗೆ ಬಿದ್ದಾಗ, ಅವರು ಮುಸ್ಲಿಮರ ದಾಳಿಯನ್ನು ವಿರೋಧಿಸಲು ಹಿಂದೂ ಯುವಕರು ಹಾಗೂ ಅವರ ಭಾರತ್ ಜತಿಯಾ ವಾಹಿನಿ ಸದಸ್ಯರನ್ನು ಒಟ್ಟುಗೂಡಿಸಿದರು. ರಾತ್ರಿಯಿಡೀ, ಗೋಪಾಲ್ ಮತ್ತು ಅವರ ತಂಡ ಹಿಂದೂಗಳ ಮೇಲಿನ ಮುಸ್ಲಿಂ ದಾಳಿಯನ್ನು ತಡೆಯುವ ವಿವರವಾದ ಕ್ರಿಯಾ ಯೋಜನೆಗಳನ್ನು ರೂಪಿಸುವಲ್ಲಿ ವ್ಯಸ್ತವಾಯಿತು. ಗೋಪಾಲ್ ಅವರಿಂದ ಸ್ವರಕ್ಷಣಾ ಕಾರ್ಯತಂತ್ರವನ್ನು ಕೇಳಿದ ಅನೇಕ ಬಂಗಾಳಿಯೇತರ ಹಿಂದೂಗಳೂ ಅವರಿಗೆ ಸಹಾಯ ಮಾಡಲು ಮುಂದಾದರು. ಮುಸ್ಲಿಂ ದಾಳಿಯ ಭೀತಿಯನ್ನು ಸಹಿಸಿಕೊಂಡಿದ್ದ ಬುರ್ರಬಜಾರ್‌ನ ಮಾರ್ವಾರಿ ವ್ಯಾಪಾರಿಗಳು ಆರ್ಥಿಕ ಸಹಾಯವನ್ನು ನೀಡಿದರು. ಹಿಂದೂ ಕಮ್ಮಾರರು ತಮ್ಮ ಕಾರ್ಯಾಗಾರಗಳಲ್ಲಿ ರಾತ್ರಿಯಿಡೀ ಸಾವಿರಾರು ಕತ್ತಿಗಳು, ಈಟಿಗಳು ಮತ್ತು ಇತರ ಆಯುಧಗಳನ್ನು ತಯಾರಿಸಿದರು. ಆಗಸ್ಟ್ 18ರ ಮುಂಜಾನೆಗಾಗುವಾಗ, ಹಿಂದೂ ಯುವಕರ ಸಣ್ಣ ಸೇನೆಗಳು ಹಿಂದೂ ಪ್ರದೇಶಗಳಲ್ಲಿ ಮುಸ್ಲಿಂ ದಾಳಿಕೋರರನ್ನು ತಡೆಯಲು ಸಿದ್ಧವಾಗಿದ್ದವು. ಇದರ ಬಗ್ಗೆ ನಿರೀಕ್ಷೆಯೇ ಇರದ ಸುಹ್ರಾವರ್ದಿ ಹಾಗೂ ಮುಸ್ಲಿಂ ಲೀಗ್ ತಮ್ಮ ಅನುಚರರನ್ನು ಹಿಂದೂಗಳ ಕಡೆ ದಾಂಗುಡಿಯಿಡಲು ನಿರ್ದೇಶಿಸುವುದರಲ್ಲೇ ವ್ಯಸ್ತವಾಗಿತ್ತು. ಹತ್ಯೆಗಳ ಸುದ್ದಿ ದೆಹಲಿಗೆ ತಲುಪುತ್ತಿದ್ದು, ಅಲ್ಲಿಂದ ಇದನ್ನು ತಡೆಯುವಂತೆ ಒತ್ತಡ ಬರುತ್ತಿರುವುದರಿಂದ ಕಲ್ಕತ್ತಾವನ್ನು ಶುದ್ಧೀಕರಿಸಲು ಇನ್ನೆರಡು ದಿನಗಳು ಮಾತ್ರ ಉಳಿದಿವೆಯೆಂದು ಸುಹ್ರಾವರ್ದಿ ತನ್ನ ಬೆಂಬಲಿಗರಲ್ಲಿ ಆತುರ ವ್ಯಕ್ತಪಡಿಸುತ್ತಿದ್ದ. ವೈಸ್ರಾಯನ ಹಸ್ತಕ್ಷೇಪವನ್ನು ತಡೆದ ಸುಹ್ರಾವರ್ದಿಯ ಉದ್ದೇಶ ಎರಡು ದಿನಗೊಳಗಾಗಿ ಕೋಲ್ಕತ್ತಾ ಹಾಗೂ ಉಳಿದೆರಡು ಜಿಲ್ಲೆಗಳಿಂದ ಹಿಂದೂಗಳನ್ನು ನಿರ್ನಾಮ ಮಾಡುವುದಾಗಿತ್ತು.

ದಾಳಿಗೆ ಬಂದ ಮುಸಲರಿಗೆ ಹಿಂದೂ ಪ್ರತಿರೋಧದ ಬಿಸಿ ತಾಗಿತು. ಅವರು ಕಾಲಿಗೆ ಬುದ್ಧಿ ಹೇಳಬೇಕಾಯಿತು. "ಮುಸ್ಲಿಂ ದಾಳಿಕೋರರಿಗೆ ಎಲ್ಲೆಡೆ ಪ್ರತಿರೋಧ ಎದುರಾಯಿತು. ಹಿಂದೂಗಳ ಉಗ್ರ ಪ್ರತಿದಾಳಿಗೆ ಬೆದರಿ ಮುಸ್ಲಿಂ ಉಗ್ರರು ಪಲಾಯನ ಮಾಡಬೇಕಾಯಿತು. ಹಿಂದೂಗಳು ಈ ಹೋರಾಟವನ್ನು ಮುಸ್ಲಿಂ ಬಾಹುಳ್ಯವುಳ್ಳ ಪ್ರವೇಶಗಳಿಗೂ ಒಯ್ದರು. ಆದಾಗ್ಯೂ ಅವರು ಮುಸ್ಲಿಂ ಮಹಿಳೆ, ಮಕ್ಕಳು ಸಹಿತ ದುರ್ಬಲರ ಹಾಗೂ ಅಮಾಯಕರ ಕೂದಲನ್ನೂ ಕೊಂಕಿಸಲಿಲ್ಲ. ಗೋಪಾಲ್ ಎಂದಿಗೂ ಕೋಮುವಾದಿಯಾಗಿರಲಿಲ್ಲ. ಇಸ್ಲಾಮಿಸ್ಟ್ ಆಕ್ರಮಣಶೀಲತೆಯನ್ನು ಎದುರಿಸಲು ಹಿಂದೂ ಯುವಕರನ್ನು ಸಂಘಟಿಸುವ ಮೂಲಕ ಅವರು ಹಿಂದೂಗಳ ಆತ್ಮರಕ್ಷಣೆಯನ್ನು ಸಂಘಟಿಸಿದರು. ಅವರು ಮನೆಯಿಲ್ಲದವರಿಗೆ ಮತ್ತು ವಿಧವೆಯರಿಗೆ ಆಶ್ರಯ ನೀಡಿದರು ಮತ್ತು ಅವರನ್ನು ಕೊಲ್ಲುವುದು ಅಥವಾ ಬಲವಂತವಾಗಿ ಮತಾಂತರಗೊಳ್ಳುವುದನ್ನು ತಡೆದರು" ಎಂದು ಗೋಪಾಲ್ ಮುಖೋಪಾಧ್ಯಾಯರನ್ನು ವ್ಯಾಪಕವಾಗಿ ಸಂಶೋಧಿಸಿದ ಇತಿಹಾಸಕಾರ ಸಂದೀಪ್ ಬಂದೋಪಾಧ್ಯಾಯ ಬರೆಯುತ್ತಾರೆ.

ಮುಂದಿನ ಮೂರು ದಿನಗಳು(ಆಗಸ್ಟ್ 18-20) ಮುಸ್ಲಿಂ ಗೂಂಡಾಗಳಿಗೆ ಅವರದೇ ಭಾಷೆಯಲ್ಲಿ ಉತ್ತರಿಸಲಾಯಿತು. ಹಿಂದೂಗಳ ಮೇಲೆ ಹಲ್ಲೆ ನಡೆಸಲು ಜನಸಮೂಹವನ್ನು ಮುನ್ನಡೆಸಿದ ಎಲ್ಲಾ ಮುಸ್ಲಿಂ ಲೀಗ್ ಗೂಂಡಾಗಳು ಮತ್ತು ಹಿಂದೂಗಳ ವಿರುದ್ಧದ ಹತ್ಯಾಕಾಂಡದಲ್ಲಿ ಭಾಗವಹಿಸಿದವರನ್ನು ಗುರುತಿಸಿ, ಬೇಟೆಯಾಡಿ ಕೊಲ್ಲಲಾಯಿತು. ಮುಸ್ಲಿಮರಲ್ಲಿ ಭೀತಿ ಹರಡಿತು, ಕಲ್ಕತ್ತಾ ಇನ್ನು ಮುಂದೆ ತಮ್ಮ ಗೂಂಡಾಗಿರಿಗೆ ಸುರಕ್ಷಿತವಾಗಿಲ್ಲ ಎಂದು ಅವರಿಗೆ ಮನದಟ್ಟಾಯಿತು. ಹೀಗೆ ಆಗಸ್ಟ್ 18ರ ಬಳಿಕ ಅಲೆ ಹಿಂದೂಗಳ ಪರವಾಗಿ ತಿರುಗಿತು. ಈಗ ಮುಸ್ಲಿಮರು ಪಡೆದುಕೊಳ್ಳುವ ಹಂತಕ್ಕೆ ಮುಟ್ಟಿದ್ದರು. ಸುಹ್ರಾವರ್ದಿಯ ಜನರಿಗಾಗಲೀ ಅಥವಾ ಮುಸ್ಲಿಂ ಪರವಾದ ಪೊಲೀಸರು ಮತ್ತು ಅಧಿಕಾರಿಗಳಿಗಾಗಲೀ ಈ ಪ್ರತಿರೋಧವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಿಂದೂ ಹೋರಾಟದ ನೇತೃತ್ವವನ್ನು ಗೋಪಾಲ್ ಮುಖೋಪಾಧ್ಯಾಯ ಮತ್ತು ಬೀಡಾನ್ ಸ್ಟ್ರೀಟ್‌ನ ಪ್ರಸಿದ್ಧ ಕುಸ್ತಿಪಟು ಬಸಂತಾ ಮುಂತಾದ ಕೆಲವರು ವಹಿಸಿದ್ದರು. ಆದರೆ ಈ ಹೋರಾಟಕ್ಕೆ ಬೇಕಾದ ಸ್ನಾಯುಬಲವನ್ನು ಒದಗಿಸಿದವರು ಬಿಹಾರ ಮತ್ತು ಸಂಯುಕ್ತ ಪ್ರಾಂತ್ಯದ ಉಪೇಕ್ಷಿತ ಬಂಧುಗಳು ಹಾಗೂ ಬಂಗಾಳಿಯೇತರ ಹಿಂದೂಗಳು. ಮಾರ್ವಾರಿ ವ್ಯಾಪಾರಿಗಳಿಂದ ಹಣಕಾಸು ಸಹಾಯವೂ ಒದಗಿಸಲ್ಪಟ್ಟು, ಹಿಂದೂಗಳ ಮೇಲಿನ ಆಕ್ರಮಣವನ್ನು ಅವರು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಮುಸ್ಲಿಂ ಗೂಂಡಾಗಳ ಮೇಲೆ ಪ್ರತಿದಾಳಿ ನಡೆಸುವ ಮೂಲಕ, ಹಿಂದೂಗಳು ಹೇಡಿಗಳು ಎಂಬ ಭ್ರಮೆಯನ್ನು ಮುಸ್ಲಿಮರು ತೊರೆಯುವಂತೆ ಮಾಡಿದರಲ್ಲದೆ, ಹಿಂದೂಗಳನ್ನು ಸರ್ವನಾಶ ಮಾಡುವ ವಿಶ್ವಾಸದಲ್ಲಿದ್ದ ಮುಸಲ್ಮಾನರೆದೆಯೊಳಗೆ ಭೀತಿಯನ್ನು ಸೃಷ್ಟಿಸಿದರು.

ಹಿಂದೂಗಳು ತಮಗೆ ಸುಲಭ ತುತ್ತಾಗುತ್ತಾರೆ ಎಂದು ಬಗೆದಿದ್ದ ಸುಹ್ರಾವರ್ದಿಗೆ ಹಿಂದೂಗಳ ಪ್ರತಿದಾಳಿ ಆಘಾತವನ್ನುಂಟುಮಾಡಿತ್ತು. ಆತ ತಲೆ ಮೇಲೆ ಕೈ ಹೊತ್ತು ಕೂತಿದ್ದ. ಹಿಂದೂಗಳನ್ನು ನಾಶ ಮಾಡಿ ಕೋಲ್ಕತ್ತಾ ಸಹಿತ ನೆರೆಯ ಜಿಲ್ಲೆಗಳನ್ನು ಪಾಕಿಸ್ತಾನಕ್ಕೆ ಸೇರಿಸುವ ಸುಹ್ರಾವರ್ದಿ ಕನಸು ನುಚ್ಚುನೂರಾಗಿತ್ತು. ಇದಕ್ಕೆ ಕಾರಣಕರ್ತರಾದ ಗೋಪಾಲ್ ಮುಖೋಪಾಧ್ಯಾಯರಿಗೆ ವಂದನೆಗಳನ್ನು ಸಲ್ಲಿಸಬೇಕು. ಆಗಸ್ಟ್ 21ಕ್ಕೆ ಬಂಗಾಳದಲ್ಲಿ ವೈಸ್ರಾಯ್ ಆಡಳಿತವನ್ನು ಹೇರಿದಾಗ, ಸುಹ್ರಾವರ್ದಿಯನ್ನು ವಜಾಗೊಳಿಸಲಾಯಿತು. ಬ್ರಿಟಿಷ್ ಮತ್ತು ಗೂರ್ಖಾ ಸೇನಾ ಪಡೆಗಳು ಕೋಲ್ಕತ್ತಾದ್ಯಂತ ನಿಯೋಜನೆಗೊಂಡು ಅಳಿದುಳಿದ ಮುಸಲ್ಮಾನ ಗೂಂಡಾಗಳೂ ಹತರಾಗಿ ಪರಿಸ್ಥಿತಿ ಹತೋಟಿಗೆ ಬಂತು. ತನ್ನ ಖುರ್ಚಿಯನ್ನು ಉಳಿಸಿಕೊಳ್ಳಲು ಮತ್ತು ಅಳಿದುಳಿದ ತನ್ನ ಅನುಚರರನ್ನು ಬದುಕಿಸಿಕೊಳ್ಳಲು ಸುಹ್ರಾವರ್ದಿ, ಮುಸ್ಲಿಂ ಲೀಗ್ ವಿದ್ಯಾರ್ಥಿ ವಿಭಾಗ ಮತ್ತು ಮುಸ್ಲಿಂ ನ್ಯಾಷನಲ್ ಗಾರ್ಡ್ ಸದಸ್ಯರಾಗಿದ್ದ ಜಿ ಜಿ ಅಜ್ಮೆರಿ ಮತ್ತು ಮುಜಿಬುರ್ ರಹಮಾನ್ (ಬಾಂಗ್ಲಾದೇಶದ ಸೃಷ್ಟಿಕರ್ತ) ಜೊತೆ ಸೇರಿ ಗೋಪಾಲ್ ಮುಖೋಪಾಧ್ಯಾಯರ ಬಳಿ ಬಂದು ಪ್ರತಿದಾಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ. ಮುಸ್ಲಿಂ ಲೀಗ್ ತನ್ನ ಸದಸ್ಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕು ಹಾಗೂ ಹಿಂದೂಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಎನ್ನುವ ಷರತ್ತಿನೊಂದಿಗೆ ಗೋಪಾಲ್ ಸಂಧಾನಕ್ಕೆ ಒಪ್ಪಿದರು. ಸುಹ್ರಾವರ್ದಿ ಮರುಮಾತಿಲ್ಲದೆ ಅದನ್ನು ಪಾಲಿಸಿದ. 

ಒಂದು ವೇಳೆ ಗೋಪಾಲ್ ಮುಖೋಪಾಧ್ಯಾರು ಇಲ್ಲದಿರುತ್ತಿದ್ದರೆ ...? ಆ ಸಮಯದಲ್ಲಿ ಕಲ್ಕತ್ತಾದ ಜನಸಂಖ್ಯೆಯು ಸುಮಾರು 20 ಲಕ್ಷವಾಗಿತ್ತು. ಅವರಲ್ಲಿ 12.8 ಲಕ್ಷ ಹಿಂದೂಗಳು ಮತ್ತು 6.6 ಲಕ್ಷ ಮುಸ್ಲಿಮರಿದ್ದರು. 12.8 ಲಕ್ಷ ಹಿಂದೂಗಳಲ್ಲಿ, ಸುಮಾರು 30 ಪ್ರತಿಶತದಷ್ಟು (ಅಥವಾ ಸುಮಾರು 3.84 ಲಕ್ಷ) ಬಂಗಾಳಿಯೇತರರಾಗಿದ್ದು, ಪೂರ್ವ ಪಾಕಿಸ್ತಾನಕ್ಕೆ ಕೋಲ್ಕತ್ತಾವನ್ನು ಸೇರ್ಪಡೆಗೊಳಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದ್ದರೆ ಅವರ ದನಿಗೆ ಹಾಗೂ ಅಭಿಪ್ರಾಯಕ್ಕೆ ಮನ್ನಣೆಯಿರುತ್ತಿರಲಿಲ್ಲ. ಆಗಸ್ಟ್ 17ರ ರಾತ್ರಿಯ ಹೊತ್ತಿಗೆ, ಅಂದಾಜು 7,000 ಹಿಂದೂಗಳನ್ನು ಮುಸ್ಲಿಮರು ಕೊಲೆಗೈದಿದ್ದರು. ಇದರಿಂದ ಬೆದರಿದ ಹಿಂದೂಗಳು ಬಂಗಾಳ ಬಿಟ್ಟು ತೆರಳಲು ಶುರುವಿಟ್ಟುಕೊಂಡಿದ್ದರು. ಮುಂದಿನ ಎರಡು ದಿನಗಳವರೆಗೆ ಈ ಹತ್ಯೆಗಳು ಮುಂದುವರಿದಿದ್ದರೆ, ಹೆಚ್ಚಿನ ಹಿಂದೂಗಳು ಸಾಯುತ್ತಿದ್ದರು ಮತ್ತು ನಗರದ ಹಿಂದೂ ಜನಸಂಖ್ಯೆ - ಹತ್ಯೆಗಳು ಮತ್ತು ನಿರ್ಗಮನಗಳು ಸೇರಿ - ಅಂದಾಜು 7.8 ಲಕ್ಷಕ್ಕೆ ಇಳಿಯಬಹುದಿತ್ತು. ನರಮೇಧ, ಜನಾಂಗೀಯ ಹತ್ಯೆಗಳು ಹಾಗೂ ದಾಳಿಗೊಳಗಾದ ಸಮುದಾಯದ ವಲಸೆಯನ್ನು ಅಧ್ಯಯನ ಮಾಡಿದ ಸಂಶೋಧಕರು ಪ್ರತಿ 100 ಜನರ ಹತ್ಯೆಯು ಕನಿಷ್ಠ 4,000 ಜನರ ವಲಸೆಯನ್ನು ಪ್ರಚೋದಿಸುತ್ತದೆ ಎನ್ನುತ್ತಾರೆ. ಹೀಗಾಗಿ 12,000 ಹಿಂದೂಗಳ ಹತ್ಯೆಗಳು (ಈಗಾಗಲೇ 7,000 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಇನ್ನೂ ಎರಡು ದಿನಗಳ ಕಾಲ ಹತ್ಯಾಕಾಂಡ ಮುಂದುವರೆದಿದ್ದರೆ ಇನ್ನೂ ಕನಿಷ್ಟ 5,000 ಜನರು ಕೊಲ್ಲಲ್ಪಡುತ್ತಿದ್ದರು) ಕಲ್ಕತ್ತಾದಿಂದ ಸುಮಾರು ಐದು ಲಕ್ಷ ಹಿಂದೂಗಳ ವಲಸೆಯನ್ನು ಪ್ರಚೋದಿಸುತ್ತಿತ್ತು. ಅದು ಕಲ್ಕತ್ತಾದ ಹಿಂದೂಗಳ ಜನಸಂಖ್ಯೆಯನ್ನು ಸುಮಾರು 7.8 ಲಕ್ಷಕ್ಕೆ ಇಳಿಸುತ್ತಿತ್ತು. ಇದು ಆಗಿನ ಮುಸ್ಲಿಂ ಜನಸಂಖ್ಯೆಗಿಂತ ಸ್ವಲ್ಪ ಮಾತ್ರ ಹೆಚ್ಚು! ಅಲ್ಲದೆ ಬಂಗಾಳದ ಬೇರೆ ಭಾಗಗಳಿಂದ ಮುಸ್ಲಿಮರನ್ನು ಕರೆತಂದು ಕೊಲ್ಲಲ್ಪಟ್ಟ ಹಾಗೂ ಓಡಿಹೋದ ಹಿಂದೂಗಳ ಆಸ್ತಿಯನ್ನು ಹಂಚಲು ಸುಹ್ರಾವರ್ದಿ ಮತ್ತು ಮುಸ್ಲಿಂ ಲೀಗ್ ಯೋಜಿಸಿತ್ತು. ಕಲ್ಕತ್ತಾದಲ್ಲಿ ಹಾಗೂ ನೆರೆಯ ಕೈಗಾರಿಕಾ ಮತ್ತು ಆರ್ಥಿಕವಾಗಿ ಮುಂದುವರಿದ ಜಿಲ್ಲೆಗಳಲ್ಲಿ ನೆಲೆಸಲು ಮುಸ್ಲಿಂ ಬಹುಸಂಖ್ಯಾತ ಮತ್ತು ಜನನಿಬಿಡ ಬಂಗಾಳದ ಪೂರ್ವ ಭಾಗದಿಂದ ಕನಿಷ್ಠ ನಾಲ್ಕು ಲಕ್ಷ ಮುಸ್ಲಿಮರನ್ನು ಕರೆತರುವ ಯೋಜನೆಯನ್ನು ಆತ ಮಾಡಿದ್ದ. ಹೀಗೆ ಅವೆಲ್ಲವೂ ಮುಸ್ಲಿಂ ಬಹುಸಂಖ್ಯಾತ ಜಿಲ್ಲೆಗಳಾಗುತ್ತಿದ್ದವು. ಆಗ ಪಾಕಿಸ್ತಾನಕ್ಕೆ ಅವನ್ನು ಸೇರಿಸುವ ಆತನ ಯೋಜನೆ ಫಲಪ್ರದವಾಗುತ್ತಿತ್ತು. ಅಳಿದುಳಿದ ಹಿಂದೂಗಳ ಜೀವನ ನರಕಸದೃಶವಾಗುತ್ತಿತ್ತು.

ಬಂಗಾಳಿ ಹಿಂದೂಗಳು ಇಂದು ಕೋಲ್ಕತ್ತಾದಲ್ಲಿ ಜೀವಂತ ಉಳಿದಿದ್ದರೆ, ಮತ್ತು ಪಶ್ಚಿಮ ಬಂಗಾಳವು ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಕಾರಣರು ಗೋಪಾಲ್ ಮುಖೋಪಾಧ್ಯಾಯ, ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಮುಂತಾದವರು. ಅಂದು ಅವರು ಇರುತ್ತಿಲ್ಲದಿದ್ದರೆ, ಕಲ್ಕತ್ತಾ ಮತ್ತು ಇಂದಿನ ಬಂಗಾಳದ ಪ್ರಮುಖ ಭಾಗಗಳು ಪೂರ್ವ ಪಾಕಿಸ್ತಾನ ಬಳಿಕ ಬಾಂಗ್ಲಾದೇಶದ ಭಾಗವಾಗಿಬಿಡುತ್ತಿದ್ದವು. ಅಲ್ಲಿನ ಹಿಂದೂಗಳು ಮುಸಲರ ದೌರ್ಜನ್ಯದಿಂದ ಎರಡನೇ ದರ್ಜೆಯ ನಾಗರಿಕರಂತೆ ಶೋಚನೀಯವಾಗಿ ಬದುಕುತ್ತಿರುವ ಸ್ಥಿತಿ ಇವರಿಗೂ ಒದಗುತ್ತಿತ್ತು. ದುರದೃಷ್ಟವಶಾತ್, ಬಂಗಾಳಿ ಹಿಂದೂಗಳು ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಕಾರಣರಾದ ವೀರರಿಗೆ ಋಣಿಯಾಗಿರಬೇಕು ಎಂಬುದನ್ನು ಮರೆತಿದ್ದಾರೆ. ಇತಿಹಾಸವನ್ನು ಮರೆತ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ ವಿಭಜನಾ ಹಾಗೂ ವಿಧ್ವಂಸಕ ಮನಸ್ಥಿತಿಯ ಶಕ್ತಿಗಳು ರಾಜ್ಯದ ರಾಜಕೀಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಆಶಾದಾಯಕ ಬೆಳವಣಿಗೆಯೆಂದರೆ ಕಳೆದ ಹಲವಾರು ವರ್ಷಗಳಿಂದ "ಹಿಂದೂ ಸಂಹತಿ" ಆಗಸ್ಟ್ 16 ರಂದು ಗೋಪಾಲ್ ಮುಖೋಪಾಧ್ಯಾಯರ ಜೀವನ, ಬಂಗಾಳದ ಹಿಂದೂಗಳನ್ನು ಮತ್ತು ಕೋಲ್ಕತ್ತಾ ನಗರವನ್ನು ಪಾಕಿಸ್ತಾನದ ಭಾಗವಾಗದಂತೆ ಉಳಿಸುವಲ್ಲಿ ಅವರು ಮಾಡಿದ ಪ್ರಯತ್ನಗಳ ನೆನಪಿಗಾಗಿ ಬೃಹತ್ ರ್‍ಯಾಲಿಯನ್ನು ಆಯೋಜಿಸುತ್ತಿದೆ. ಕೆಲವು ಹಿಂದೂಗಳಾದರೂ ಇತಿಹಾಸವನ್ನು ನೆನಪಿಸಿಕೊಂಡು ಅದರಿಂದ ಪಾಠ ಕಲಿಯುತ್ತಿದ್ದಾರೆ.

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ

ಇಂದಿರಾರ ಸ್ವಯಂ ವೈಭವೀಕರಣದ ಕಾಲಪಾತ್ರ


ಪ್ರಪಂಚವೇ ವಿಚಿತ್ರ. ಯಾವುದೂ ಶಾಶ್ವತವಲ್ಲ ಎಂಬ ಅರಿವಿದ್ದೂ ಅಶಾಶ್ವತವಾದುದರ ಹಿಂದೆ ಬಿದ್ದೇ ಜೀವಿಸುವುದು ಜೀವಿಯ ಸಹಜ ಗುಣವಾಗಿ ಬಿಟ್ಟಿದೆ. ಒಂದಷ್ಟು ಹಣ ಮಾಡುವುದು, ಬಳಿಕ ಅಧಿಕಾರಕ್ಕಾಗಿ ಹಪಹಪಿಸುವುದು, ಅಧಿಕಾರವನ್ನು ಉಳಿಸಿಕೊಳ್ಳಲು ಒಂದಷ್ಟು ಜನರಿಗೆ ಹಣ ಹಂಚಿ ತನ್ನವರನ್ನಾಗಿಸಿಕೊಳ್ಳುವುದು, ಮತ್ತೆ ಹಣ ಮಾಡುವುದು, ಪ್ರಸಿದ್ಧಿಗಾಗಿ ಹಪಹಪಿಸುವುದು; ಇಷ್ಟು ಹೇಳಿದ ತಕ್ಷಣ ನೆನಪಾಗುವುದು ರಾಜಕಾರಣಿಗಳು. ಆದರೆ ಇದನ್ನೂ ಮೀರಿಸಿದ ದಾಹವುಳ್ಳ ಕುಟುಂಬವೊಂದು ಈ ದೇಶದ ಆಡಳಿತವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಆಡಿದ ಆಟಗಳು ಎಂತಹವನಿಗಾದರೂ ಹೇಸಿಗೆ ಹುಟ್ಟಿಸುವಂತಹವು. ಅದು ಅಧಿಕಾರಕ್ಕಾಗಿ, ಹಣಕ್ಕಾಗಿ, ಹೆಸರಿಗಾಗಿ ಆಡದ ಆಟವಿಲ್ಲ, ಹೂಡದ ಹೂಟವಿಲ್ಲ. ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದು ಜೀವಂತವಿರುವಾಗಲೇ ತಮ್ಮ ಪ್ರತಿಮೆಗಳ ಸ್ಥಾಪನೆ, ವಿವಿಧ ವಿಶ್ವವಿದ್ಯಾಲಯಗಳು, ಸರಕಾರಿ ಯೋಜನೆಗಳು, ವಿಜ್ಞಾನ-ಕೈಗಾರಿಕ ಸಂಸ್ಥೆಗಳು, ವಿಮಾನ ನಿಲ್ದಾಣ, ಕ್ರೀಡಾಂಗಣ, ಪ್ರಶಸ್ತಿಗಳಿಗೆಲ್ಲಾ ತಮ್ಮ ಹೆಸರು ಇರಿಸಿ, ತಮಗೆ ತಾವೇ ಭಾರತ ರತ್ನದಂತಹಾ ಅತ್ಯುನ್ನತ ಪ್ರಶಸ್ತಿಗಳನ್ನೂ ಕೊಡಿಸಿಕೊಂಡ ಅದ್ಭುತ ಸಾಧನೆ ಆ ಕುಟುಂಬದ್ದು! 

  ಕೇಂದ್ರ ಸರಕಾರದ 12 ಯೋಜನೆಗಳು; ರಾಜ್ಯ ಸರಕಾರಗಳ 52 ಯೋಜನೆಗಳು; 98 ವಿಶ್ವವಿದ್ಯಾಲಯಗಳು; 6 ಬಂದರು & ವಿಮಾನ ನಿಲ್ದಾಣಗಳು; 66 ಪ್ರಶಸ್ತಿ ಮತ್ತು ವಿದ್ಯಾರ್ಥಿ ವೇತನಗಳು, 47 ವಿವಿಧ ಕ್ರೀಡೆ, ಕ್ರೀಡಾಂಗಣ, ಕ್ರೀಡಾ ಪುರಸ್ಕಾರಗಳು; 15 ವಿವಿಧ ಉದ್ಯಾನ, ಪಕ್ಷಿಧಾಮ, ಅಭಯಾರಣ್ಯಗಳು; 39 ಆಸ್ಪತ್ರೆಗಳು ಹಾಗೂ ವೈದ್ಯಕೀಯ ವಿದ್ಯಾಲಯಗಳು, 37 ಸಂಶೋಧನಾ ಸಂಸ್ಥೆಗಳು & ಸಮ್ಮೇಳನಗಳು, 74 ರಸ್ತೆ, ಭವನ, ಜಾಗಗಳಿಗೆ ಅದೇ ಕುಟುಂಬದ ಮೂವರ(ನೆಹರೂ, ಇಂದಿರಾ, ರಾಜೀವ್) ಹೆಸರು ಇಡಲಾಗಿದೆ. ಇವೆಲ್ಲವೂ ಸಾರ್ವಜನಿಕ ನಿಧಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಕ್ಷೇತ್ರಗಳು! ಹಣ ಜನರದ್ದು, ಹೆಸರು ಆ ಕುಟುಂಬದ್ದು! 2004-2014ರ ನಡುವೆಯಂತೂ ಈ ಹೆಸರಿಡುವ ಪ್ರಕ್ರಿಯೆಯಂತೂ ಸಭ್ಯತೆಯ ಗಡಿಯನ್ನೂ ಮೀರಿತು. ಇವೆಲ್ಲವನ್ನೂ ಮೀರಿಸಿದ, ಈಗಿನ ಪೀಳಿಗೆಗೆ ತಿಳಿದಿರದ ಅಸಭ್ಯವೂ, ದುರಾಚಾರವೂ ಆದಂತಹ ಪ್ರಕರಣವೊಂದು ಇಂದಿರಾ ಅವಧಿಯಲ್ಲಿ ನಡೆದಿತ್ತು. ಅದು ಇಂದಿರಾ ಗಾಂಧಿಯ "ಟೈಮ್ ಕ್ಯಾಪ್ಸೂಲ್" ಅಥವಾ ಸಮಯ ಸಂಪುಟ!

ಏನಿದು ಟೈಮ್ ಕ್ಯಾಪ್ಸೂಲ್? ಸಮಯ ಸಂಪುಟ ಅಂದರೆ ಮಿಶ್ರಲೋಹ, ಪಾಲಿಮರ್ ಹಾಗೂ ಪೈರೆಕ್ಸ್ ಗಳಿಂದ ಮಾಡಲ್ಪಟ್ಟ ನಿರ್ವಾತ ಕರಂಡಕ ಅಥವಾ ಸಂಪುಟ. ಯಾವುದೇ ಬಗೆಯ ಹವಾಮಾನ ಪರಿಸ್ಥಿತಿ ಅಥವಾ ವೈಪರೀತ್ಯಗಳನ್ನು ಇದು ತಾಳಿಕೊಳ್ಳಬಲ್ಲುದು. ಭೂಮಿಯ ಕೆಳಗೆ ಇದನ್ನು ಹೂತು ಹಾಕಿದರೂ ಸಾವಿರಾರು ವರ್ಷಗಳವರೆಗೆ ಹಾನಿಗೊಳಗಾಗದೇ ಉಳಿಸಿಕೊಳ್ಳಬಹುದಾದಂತಹ ಮುಚ್ಚಿದ ಪಾತ್ರೆ ಇದು. ಅಂದರೆ ಮುಂದಿನ ಜನಾಂಗಗಳಿಗೆ ಉಪಯೋಗವಾಗಬಲ್ಲಂತಹಾ ಅಥವಾ ಸಾರ್ವಕಾಲಿಕವಾಗಿಯೂ ಉಪಯೋಗಿಸಲ್ಪಡುವಂತಹಾ ಮಾಹಿತಿಯನ್ನೋ, ಸೂತ್ರವನ್ನೋ ಈ ಸಂಪುಟದಲ್ಲಿರಿಸಿ ಭೂಮಿಯಾಳದಲ್ಲಿ ಹುಗಿಯಬಹುದು. ಆ ಜನಾಂಗ ಇದನ್ನು ಗಿಟ್ಟಿಸಿಕೊಳ್ಳುವಲ್ಲಿ ತಜ್ಞವಾಗಿದ್ದರೆ ಉತ್ಖನನ ಮಾಡಿ ಈ ಮಾಹಿತಿಯನ್ನು ತನ್ನದಾಗಿಸಿಕೊಳ್ಳಬಹುದು. ಹೀಗೆ ಈ ಪಾತ್ರೆ ಒಂದು ಸಮಯದ ಚೌಕಟ್ಟಿನಿಂದ ಇನ್ನೊಂದಕ್ಕೆ ಮಾಹಿತಿಯನ್ನು ಸಾಗಿಸುವ ಸಂಪುಟದಂತೆ ಕಾರ್ಯ ನಿರ್ವಹಿಸುವ ಕಾರಣ ಅದಕ್ಕೆ ಟೈಮ್ ಕ್ಯಾಪ್ಸುಲ್ ಎಂದು ಹೆಸರು. 

ಮಾಹಿತಿಯನ್ನು ಹುದುಗಿಸಿಡುವುದೇನೂ ಹೊಸದಾದ ವಿಚಾರವಲ್ಲ. ಅದು ಪುರಾತನ ಭಾರತೀಯ ಪದ್ದತಿ. ಯಜ್ಞದ ಬಗೆಗಿನ ಮಾಹಿತಿಯನ್ನು ಯಜ್ಞಕುಂಡದಲ್ಲಿ ಹುದುಕಿಸಿಡುವುದು ಅದನ್ನು ಸಮರ್ಥನಾದವ ತೆಗೆಯುವುದು ತಂತ್ರವಿದ್ಯೆ. ವೈದ್ಯವಿದ್ಯೆ, ಜೀವ, ಭೌತ, ಖಗೋಳ.....ಬದುಕಿನ ವಿದ್ಯೆ, ಬ್ರಹ್ಮವಿದ್ಯೆಯಾದಿಯಾಗಿ ಎಲ್ಲಾ ವಿದ್ಯೆಗಳನ್ನು ಹುದುಗಿಸಿಟ್ಟ ವೇದಗಳು;  ಗಣಿತೀಯ ಸಮಸ್ಯೆಗಳನ್ನು ಬಿಡಿಸುವ ಸೂತ್ರವನ್ನು ಕಾವ್ಯಗಳಲ್ಲಿ ಕಟ್ಟಿಡುವುದು; ರಹಸ್ಯ ವಿಚಾರಗಳನ್ನು ಗೂಢವಾಗಿಸಿ ಸಂರಕ್ಷಿಸಿಡುವ ಎನ್ ಕ್ರಿಪ್ಶನ್; ಖಗೋಳ ವಿಸ್ಮಯಗಳನ್ನು, ಇತಿಹಾಸವನ್ನು ಪೌರಾಣಿಕ ಕಥೆಗಳ ಮೂಲಕ ಕಟ್ಟಿಕೊಟ್ಟು ಸಮರ್ಥನೂ ಸಂಯಮಿಯೂ ಮಾತ್ರ ತಿಳಿಯುವಂತೆ ಮಾಡಿದ ಕ್ರಮಗಳಿಗೆ ಹೋಲಿಸಿದರೆ ಈ ಪ್ರಕ್ರಿಯೆಯೇನೂ ಅಂತಹಾ ಮಹತ್ತಾದುದೇನಲ್ಲ. ಆದರೂ ಲೌಕಿಕ ಜಗತ್ತಿಗೆ ಸಹಾಯ ಮಾಡುವಂತಹಾ ತಂತ್ರವಂತೂ ಹೌದು.ಪ್ರಸಕ್ತ ಕಾಲದ ಮಹತ್ವದ ಘಟನೆಗಳು, ವ್ಯಕ್ತಿಯೊಬ್ಬನ ಸಾಧನೆಗಳು, ಇತಿಹಾಸದ ಬಗೆಗಿನ ಮಾಹಿತಿ, ಬಗೆಬಗೆಯ ಜ್ಞಾನ-ತಂತ್ರಜ್ಞಾನದ ಮಾಹಿತಿಗಳು ಹೀಗೆ ಯಾವುದೇ ಪ್ರಮುಖ ವಿಚಾರಗಳನ್ನು ಇದರಲ್ಲಿ ಸಂಗ್ರಹ ಮಾಡಿ ಹುದುಗಿಸಿಡಬಹುದು. ಹುದುಗಿಸಿಟ್ಟ ಮಾಹಿತಿಯು ಸತ್ಯವಾಗಿದ್ದರೆ ಮುಂದೆ ಉತ್ಖನನ ಮಾಡಿದವರಿಗೆ ಅದರ ಪ್ರಯೋಜನವಾಗಬಹುದು. ಆದರೆ ಸುಳ್ಳಾದರೆ...? ತಂತ್ರಜ್ಞಾನವೋ, ಸಂಶೋಧನಾತ್ಮಕ ವಿವರಗಳೋ ಸುಳ್ಳಾದರೆ ಅಷ್ಟೇನೂ ಹಾನಿಯಾಗಲಿಕ್ಕಿಲ್ಲ. ಸರಿಯಾದ ಪಥವನ್ನು, ಜ್ಞಾನವನ್ನು ಆ ಜನಾಂಗದ ಬುದ್ಧಿವಂತರು ಕಂಡುಕೊಂಡು ಅದರ ಪೊಳ್ಳುತನವನ್ನು ಬಯಲು ಮಾಡಬಹುದು. ಆದರೆ ಇತಿಹಾಸದ ಕುರಿತಾದ ಮಾಹಿತಿಯು ಸುಳ್ಳಾಗಿದ್ದರೆ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಸಾಧ್ಯತೆಯೇ ಇಲ್ಲ ಎನ್ನಬಹುದು. ಇಂದಿರಾಗಾಂಧಿ ಮಾಡಿದ್ದೂ ಅದನ್ನೇ. ಸ್ವಯಂ ವೈಭವೀಕರಣದ ಸುಳ್ಳು ಇತಿಹಾಸವನ್ನು ಇದರೊಳಗೆ ಅಡಗಿಸಿಟ್ಟದ್ದು. ಒಂದು ಒಳ್ಳೆಯ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡದ್ದು.

ಟೈಮ್ ಕ್ಯಾಪ್ಸೂಲು ಭಾರತಕ್ಕೇನೂ ಹೊಸದಲ್ಲ. ಇತ್ತೀಚೆಗೆ ಜನವರಿ 4, 2019ರಂದು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಧಿವೇಶನದ ಎರಡನೇ ದಿನದಂದು ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿವಿಯ ಆವರಣದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಟೈಮ್ ಕ್ಯಾಪ್ಸೂಲ್ ಒಂದನ್ನು ನೆಲದಾಳದಲ್ಲಿ ಹುದುಗಿಸಲಾಯಿತು. ಹಲವು ನೋಬೆಲ್ ಪ್ರಶಸ್ತಿ ವಿಜೇತರೂ, ಪ್ರಸಿದ್ಧ ವಿಜ್ಞಾನಿಗಳೂ ಭಾಗವಹಿಸಿದ್ದ ಸಮಾರಂಭವದು. ಸ್ಮಾರ್ಟ್ ಫೋನ್, ಸ್ಥಿರ ದೂರವಾಣಿ, ವಿಸಿಆರ್, ಸ್ಟಿರಿಯೊ ಪ್ಲೇಯರ್, ಸ್ಟಾಪ್ ವಾಚ್, ಹಾರ್ಡ್ ಡಿಸ್ಕ್, ಮೌಸ್, ಲ್ಯಾಪ್‌ಟಾಪ್, ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್, ಮದರ್ ಬೋರ್ಡ್, ಸಾಕ್ಷ್ಯಚಿತ್ರಗಳು, ಕ್ಯಾಮೆರಾ, ವಿಜ್ಞಾನ-ಪಠ್ಯ ಪುಸ್ತಕಗಳು, ರಿಯೊಸ್ಟಾಟ್, ರಿಫ್ರೆಕ್ಟರೋಸ್ಕೋಪ್ ಮತ್ತು ಡಬಲ್ ಮೈಕ್ರೋಸ್ಕೋಪ್ನಂತಹ ಉಪಕರಣಗಳು, ಮಂಗಳಯಾನ್, ಬ್ರಹ್ಮೋಸ್ ಕ್ಷಿಪಣಿ, ತೇಜಸ್ ಫೈಟರ್ ಜೆಟ್ ಗಳ ಪ್ರತಿಕೃತಿಗಳು, ವರ್ಚುವಲ್ ರಿಯಾಲಿಟಿ ಗ್ಲಾಸ್, ಇಂಡಕ್ಷನ್ ಕುಕ್‌ಟಾಪ್ ಮುಂತಾದುವುಗಳನ್ನು ಏರ್ ಪ್ಯೂರಿಫೈಯರ್ ಜೊತೆಗೆ ಇದರೊಳಗೆ ಇಡಲಾಗಿದೆ.

ಎಪ್ಪತ್ತರ ದಶಕದಲ್ಲಿ ಭೂಸುಧಾರಣೆ, ಬ್ಯಾಂಕುಗಳ ರಾಷ್ಟ್ರೀಕರಣ, ರಾಜರ ಸ್ವಂತ ವೆಚ್ಚಕ್ಕೆ ಸರಕಾರದ ಬೊಕ್ಕಸದಿಂದ ಕೊಡುವ ಹಣವನ್ನು ನಿಲ್ಲಿಸಿದ್ದು, ಅದಕ್ಕಿಂತಲೂ ಪ್ರಮುಖವಾಗಿ 1971ರ ಯುದ್ಧದಲ್ಲಿ ಪಾಕಿಸ್ತಾನ್ದ ವಿರುದ್ಧದ ಭರ್ಜರಿ ಗೆಲುವು ಜನಸಾಮಾನ್ಯರ ನಡುವೆ ಇಂದಿರಾ ಗಾಂಧಿಯ ಪ್ರಭೆಯನ್ನು ಎತ್ತರಕ್ಕೆ ಒಯ್ದಿತ್ತು. ಕಾಂಗ್ರೆಸ್ಸಿನ ಗುಲಾಮರಂತೂ ಹೋದಲ್ಲಿ ಬಂದಲ್ಲಿ "ಇಂಡಿಯಾ ಈಸ್ ಇಂದಿರಾ, ಇಂದಿರಾ ಈಸ್ ಇಂಡಿಯಾ" ಎನ್ನುವ ಘೋಷಣೆಯನ್ನು ಹಾಕಲು ಶುರುವಿಟ್ಟುಕೊಂಡಿದ್ದರು. ಸ್ವಪಕ್ಷೀಯರಲ್ಲದೆ ವಿರೋಧ ಪಕ್ಷದವರೂ ಇಂದಿರಾರ ಗತ್ತು ಗೈರತ್ತಿಗೆ ಭಯಭೀತರಾಗಿದ್ದರು. ಇಂತಹಾ ಸಮಯವನ್ನೇ "ಇಂದಿರಾ ಗಾಂಧಿ ಟೈಮ್ ಕ್ಯಾಪ್ಸುಲ್"ನ ಮೂಲಕ ತನ್ನ ಇತಿಹಾಸವನ್ನು ಪರಿಶುದ್ಧ ಮಾಡಿಡುವ ಕೆಲಸಕ್ಕೆ ಇಂದಿರಾ ಆಯ್ಕೆ ಮಾಡಿಕೊಂಡರು.

ಈ ಕಾರ್ಯಕ್ಕೆ ಭಾರತ ಸ್ವಾತಂತ್ರ್ಯಗೊಂಡ 25ನೇ ವರ್ಷಾಚರಣೆ ಇಂದಿರಾ ಗಾಂಧಿಗೆ ವರವಾಗಿ ಪರಿಣಮಿಸಿತು. 1973ರಲ್ಲಿ ದೇಶದ ಸ್ವಾತಂತ್ರ್ಯದ 25ನೇ ವರ್ಷಾಚರಣೆಯನ್ನು ಗುರುತಿಸಲು “ಸ್ವಾತಂತ್ರ್ಯಾ ನಂತರದ ಭಾರತ” ಎಂಬ ವಿಷಯದ ಕುರಿತು 10,000 ಪದಗಳ ಪ್ರಬಂಧವನ್ನು ಬರೆಯಲು ಕಾಂಗ್ರೆಸ್ ನಿಷ್ಠಾವಂತರ ಒಂದು ಸಣ್ಣ ಗುಂಪನ್ನು ನಿಯೋಜಿಸಿದರು ಇಂದಿರಾ. ಈ ಪ್ರಬಂಧವನ್ನು ಮೈಕ್ರೊ-ಫಿಲ್ಮ್‌ಗಳು ಮತ್ತು ಇತರ ದಾಖಲೆಗಳ ಜೊತೆಗೆ ಪೈರೆಕ್ಸ್ ಗಾಜಿನ ನಿರ್ವಾತ ಕೊಳವೆಯೊಳಗೆ ಹಾಕಿ ಮುಚ್ಚಲಾಯಿತು. ಬಳಿಕ ಅದನ್ನು ಭದ್ರವಾಗಿ ತಾಮ್ರದ ಕೊಳವೆಯೊಳಗೆ ಹಾಕಿ, ಮತ್ತೆ ಆ ತಾಮ್ರದ ಕೊಳವೆಯನ್ನು ಸ್ಟೈನ್ ಲೆಸ್ ಸ್ಟೀಲ್ ಕೊಳವೆಯೊಳಗೆ ಹಾಕಲಾಯಿತು. ಪರಿಣಾಮವಾಗಿ ಸುಮಾರು 5000 ವರ್ಷಗಳವರೆಗೆ ಹಾನಿಯಾಗದೆ ಉಳಿಯುವ ಕ್ಷಮತೆ ಅದಕ್ಕೆ ಬಂತು. ಇದನ್ನು ದೆಹಲಿಯ ಕೆಂಪು ಕೋಟೆಯ ಮುಂದೆ 1973 ರ ಆಗಸ್ಟ್ 15 ರಂದು ಬಹಳ ಆಡಂಬರದಿಂದ ಭೂಮಿಯಾಳಕ್ಕೆ ಹೂಳಲಾಯಿತು.



ಈ ಉಪಕ್ರಮವು ಶ್ಲಾಘನೀಯವೇ ಆದರೂ ಪ್ರಬಂಧದಲ್ಲಿದ್ದ ವಿಚಾರಗಳು ಹಾಗೂ ಸರಕಾರ ನಡೆದುಕೊಂಡ ರೀತಿ ಶ್ಲಾಘನೆಗೆ ಅರ್ಹವಾದುದಾಗಿರಲಿಲ್ಲ. ಅಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಪದೇ ಪದೇ ವಿನಂತಿಸಿದರೂ ಪ್ರಬಂಧದಲ್ಲಿನ ವಿವರಗಳನ್ನು ಇಂದಿರಾ ಗಾಂಧಿ ಸರಕಾರ ಸಾರ್ವಜನಿಕರಿಗೆ ಬಹಿರಂಗಪಡಿಸಲಿಲ್ಲ. ಮುಂದಿನ ಪೀಳಿಗೆಗೆ ರವಾನಿಸಲಾಗುವ ಈ ವಿಚಾರಗಳನ್ನು ನಿಜವಾದ ಇತಿಹಾಸಕಾರರಿಂದ ಬರೆಯಿಸದೆ ಇಂದಿರಾಗೆ ನಿಷ್ಠರಾಗಿದ್ದ ಗುಂಪಿನಿಂದಲೇ ಏಕೆ ಬರೆಯಿಸಿದಿರಿ ಎಂಬ ಪ್ರಶ್ನೆಗೆ ಸರಕಾರದಿಂದ ಸಮರ್ಪಕ ಉತ್ತರವೇ ದೊರಕಲಿಲ್ಲ. ಇಂದಿರಾರ ವರ್ಚಸ್ಸನ್ನು ತಗ್ಗಿಸುವ ವಿಚಾರ ಸಿಗದೇ ಕುಗ್ಗಿ ಹೋಗಿದ್ದ ಪ್ರತಿಪಕ್ಷಗಳು ಇದನ್ನು ಸದನದೊಳಗೂ, ಜನಸಮುದಾಯದ ನಡುವೆಯೂ ಚರ್ಚೆಗೆ ತಂದು, ವಿವಿಧ ವೇದಿಕೆಗಳು ಹಾಗೂ ಬುದ್ಧಿ ಜೀವಿಗಳ ಮೂಲಕ ಪ್ರಶ್ನಿಸಿ ಬಗೆಬಗೆಯಲ್ಲಿ ಯತ್ನಿಸಿದರೂ ಇಂದಿರಾ ತನ್ನ ನಿಲುವಿನಿಂದ ಒಂದಿನಿತೂ ಜಗ್ಗಲಿಲ್ಲ. ಈ ವಿಷಯ ಲೋಕಸಭೆಯಲ್ಲಿ ಚರ್ಚೆಗೂ ಬಂತು. ದಿವಂಗತ ಶ್ರೀ ವಾಜಪೇಯಿ, ಶ್ಯಾಮನಂದನ್ ಮಿಶ್ರಾ ಸೇರಿದಂತೆ ಪ್ರತಿಪಕ್ಷ ನಾಯಕರು ವಿಷಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸರ್ಕಾರವನ್ನು ಕೋರಿದರು. 5000 ವರ್ಷಗಳ ಕಾಲ ಸಂರಕ್ಷಿಸಲ್ಪಟ್ಟು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸಲ್ಪಡುವ ವಿಚಾರಗಳನ್ನು ರಹಸ್ಯವಾಗಿ ಇಡುವುದೇಕೆ ಎಂದು ಪ್ರಶ್ನಿಸಿದರು.  ಆದರೆ ಸರಕಾರ ಅದನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿ ನುಣುಚಿಕೊಂಡಿತು. 

ಆದರೆ 1973ರ ಡಿಸೆಂಬರ್ ವೇಳೆಗೆ ಕೆಲವು ಅಧಿಕಾರಿಗಳು ಅನಧಿಕೃತವಾಗಿ ಈ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡುವುದರೊಂದಿಗೆ ಇಂದಿರಾಳ ಪ್ರಯತ್ನ ವ್ಯರ್ಥವಾಗಲು ಶುರುವಿಟ್ಟುಕೊಂಡಿತು. ಈ ಟೈಮ್ ಕ್ಯಾಪ್ಸೂಲಿಗೆ "ಕಾಲ ಪಾತ್ರ" ಎಂದು ಹೆಸರಿಡಲಾಗಿತ್ತು. ಪ್ರಬಂಧವನ್ನು ಸಿದ್ಧಪಡಿಸಿದವರು ಐ.ಸಿ.ಎಚ್.ಆರ್. ನಲ್ಲಿದ್ದ ಇಂದಿರಾ ಚೇಲಾಗಳು. ಹಸ್ತಪ್ರತಿಯನ್ನು ಸಿದ್ಧಪಡಿಸುವ ಹೊಣೆಗಾರಿಕೆಯಿದ್ದುದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಇತಿಹಾಸದ ಪ್ರಾಧ್ಯಾಪಕ ಎಸ್.ಕೃಷ್ಣಸ್ವಾಮಿ ಅವರಿಗೆ. ಅದರ ಚೌಕಟ್ಟು, ವಿಷಯಗಳು ಹೇಗಿರಬೇಕೆಂದು ಸೂಚಿಸಿದ್ದು ಭಾರತೀಯ ಇತಿಹಾಸವನ್ನು ತಿರುಚಿದವರಲ್ಲಿ ಅಗ್ರಗಣ್ಯರಾದ, ಮಾರ್ಕ್ಸ್ ವಾದಿ, ಐಸಿಎಚ್‌ಆರ್‌ನ ಸ್ಥಾಪಕ ಅಧ್ಯಕ್ಷ ಪ್ರೊ.ರಾಮ್ ಸರನ್ ಶರ್ಮಾ ಮತ್ತು ಐಸಿಎಚ್‌ಆರ್ ಸದಸ್ಯ, ನೆಹರೂ ಜೀವನಚರಿತ್ರೆಕಾರ ಡಾ.ಸರ್ವಪಲ್ಲಿ ಗೋಪಾಲ್! ಇದಲ್ಲದೆ ಹಲವಾರು ಇಂದಿರಾ ಚೇಲಾಗಳು ಇದರಲ್ಲಿ ಭಾಗಿಯಾಗಿದ್ದು ಅಂತಿಮ ನಿರೂಪಣೆಯು ಐಸಿಎಚ್ಆರ್ ನದಾಗಿತ್ತು. ವಿ.ಕೆ.ರಾಮಚಂದ್ರನ್ ಅವರ 1974 ರ "ಸಾಮಾಜಿಕ ವಿಜ್ಞಾನಿ" ಎಂಬ ಪ್ರಬಂಧ ಟೈಮ್ ಕ್ಯಾಪ್ಸೂಲಿನೊಳಗಿದ್ದ ರಹಸ್ಯ ಮಾಹಿತಿ ಹೇಗೆ ಸಾರ್ವಜನಿಕವಾಯಿತೆಂದು ವಿವರಿಸುತ್ತದೆ. ಕೆಂಪು ಕೋಟೆಯಲ್ಲಿ ನಡೆದ ಸಮಾರಂಭದ ಬಳಿಕ, ಕೃಷ್ಣಸ್ವಾಮಿ ಸಿದ್ಧಪಡಿಸಿದ ಪ್ರಬಂಧವನ್ನು ಸಾರ್ವಜನಿಕ ಸಂಗ್ರಹಾಗಾರ(ಆರ್ಕೈವ್ಸ್)ದ ಆಯುಕ್ತರೂ, ಪ್ರಸಿದ್ಧ ಇತಿಹಾಸಕಾರರೂ ಆಗಿದ್ದ ಟಿ.ಬದ್ರಿನಾಥ್ ಅವರ ಅಭಿಪ್ರಾಯ ಕೇಳಲು ಕಳುಹಿಸಿದ್ದರು. ಆತ ಇದು ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ನಿರೂಪಿಸಿದೆ ಎಂದು ಬಹಿರಂಗವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಬದ್ರಿನಾಥ್ ನಿಜ ಇತಿಹಾಸದಿಂದ ಸುಳ್ಳು ಇತಿಹಾಸದೆಡೆಗಿನ ಪಯಣ ಚಿಕ್ಕದಾಗಿರುತ್ತದೆ. ಅಲಂಕಾರಿಕವೂ ಆಗಿರುತ್ತದೆ. ಆದರದು ಸುಳ್ಳಿನ ಕಂತೆಯಾಗಿರುತ್ತದೆ ಎನ್ನುತ್ತಾ ಕಾವ್ಯಾತ್ಮಕವಾಗಿ ಇಂದಿರಾ ಟೈಮ್ ಕ್ಯಾಪ್ಸೂಲಿನ ವಿವರಗಳನ್ನು ಬಹಿರಂಗಪಡಿಸುತ್ತಾ ಸಾಗಿದರು. ಅಧಿಕೃತ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೃಷ್ಣಸ್ವಾಮಿಯನ್ನು ಎಳೆದೊಯ್ಯಲಾಯಿತಾದರೂ ಈ ವಿಚಾರ ಸಾರ್ವಜನಿಕ ಚರ್ಚೆಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. 1974 ರ ಅಕ್ಟೋಬರ್‌ನಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪಾಲಿಟ್‌ಬ್ಯುರೊ ಸದಸ್ಯ ಪಿ.ರಾಮಮೂರ್ತಿ ಆ ಸುರುಳಿಯ ಪಠ್ಯದ ಪ್ರತಿಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವಾಗ, "ಇದನ್ನು ಓದುವಾಗ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯ ವರದಿಯಂತೆ ಭಾಸವಾಗುತ್ತಿದೆ. ಇದು ಭಾರತೀಯರಿಗೆ ಮಾಡಿದ ಅವಮಾನ" ಎಂದಿದ್ದರು. ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಆ ಗುಂಪನ್ನು ಹೊರತುಪಡಿಸಿ ಬೇರೆ ಯಾರಿಗೂ ಸಿಗದ ಪಠ್ಯ ಮಾರ್ಕ್ಸ್ ವಾದಿಯೊಬ್ಬನಿಗೆ ಹೇಗೆ ಸಿಕ್ಕಿತು? ಆ ಗುಂಪಿನಲ್ಲಿ ಮಾರ್ಕ್ಸ್ ವಾದಿ ರಾಮ್ ಸರನ್ ಶರ್ಮಾ ಕೂಡಾ ಇದ್ದರು. ಅವರಿಂದಲೇ ಸಿಕ್ಕಿತೆಂದೇ ಊಹಿಸೋಣ. ಹಾಗಿದ್ದರೆ ಅಲ್ಲಿ ಮಾರ್ಕ್ಸ್ ವಾದಿಗಳಿಗೆ ಅಪ್ರಿಯವಾದದ್ದೇನೋ ಇರಬೇಕು. ಭಾರತದ ಇತಿಹಾಸವನ್ನು ತಿರುಚುವಲ್ಲಿ ಯಾವಾಗಲೂ ಕಾಂಗ್ರೆಸ್ಸಿನ ಜೊತೆಯಾಗಿರುವ ಮಾರ್ಕ್ಸ್ ವಾದಿಗಳಿಗೆ ಈ ಬಾರಿ ತಮಗೇನೂ ದಕ್ಕಿಲ್ಲ ಎಂಬ ಸಿಟ್ಟಿರಬೇಕು! ಅಥವಾ ಕಾಂಗ್ರೆಸ್-ಮಾರ್ಕ್ಸ್ ವಾದಿಗಳಿಬ್ಬರೂ ಜನರನ್ನು ಮೂರ್ಖರನ್ನಾಗಿಸಲು ಮಾಡಿದ ಕಸರತ್ತು ಈ ಪತ್ರಿಕಾಗೋಷ್ಠಿಯಾಗಿರಬಹುದು.  ಸ್ವಾತಂತ್ರ್ಯಾನಂತರದ ಭಾರತದ ಪಯಣಕ್ಕಿಂತಲೂ ನೆಹರೂ, ಇಂದಿರಾರ ಸಾಧನೆಗಳ ಸ್ವಯಂವೈಭವೀಕರಣದ ಪಠ್ಯಗಳನ್ನು ಆ ಪ್ರಬಂಧ ಹೊಂದಿದ್ದ ಮಾಹಿತಿ ಹೊರಬೀಳುತ್ತಿದ್ದಂತೆ ಅದು ಜನಸಾಮಾನ್ಯರನ್ನು ಕೆರಳಿಸಿತು.

ಮುಂದಿನ ವರ್ಷಗಳಲ್ಲಿ, ಇಂದಿರಾ ಗಾಂಧಿ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇಂತಹ ಹಲವಾರು ಟೈಮ್  ಕ್ಯಾಪ್ಸುಲ್‌ಗಳನ್ನು ಭೂಮಿಯೊಳಕ್ಕೆ ಹುಗಿದರು. ತುರ್ತುಪರಿಸ್ಥಿತಿಯ ಸಮಯದಲ್ಲಂತೂ ಪ್ರತೀವಾರ ಒಂದೊಂದು ಟೈಮ್  ಕ್ಯಾಪ್ಸುಲ್ ನ್ನು ದೇಶದ ವಿವಿಧ ಕಡೆ ಹೂಳಲಾಯಿತು. ಅವೆಲ್ಲದರಲ್ಲಿ ಭವಿಷ್ಯದ ಇತಿಹಾಸಕಾರರನ್ನು ದಾರಿ ತಪ್ಪಿಸುವ, ನೆಹರೂ ಕುಟುಂಬವನ್ನು ವೈಭವೀಕರಿಸಿದ ವಿಚಾರಗಳೇ ತುಂಬಿದ್ದವು.

ಇಂದಿರಾ ಹೂತು ಹಾಕಿದ್ದ ವಿಕೃತಿಗೊಂಡ ಇತಿಹಾಸವನ್ನು ಪತ್ತೆಹಚ್ಚಿ ಮರುಮೌಲ್ಯಮಾಪನ ಮಾಡುವ ಭರವಸೆಯನ್ನು ಜನರಿಗಿತ್ತು ತುರ್ತು ಪರಿಸ್ಥಿತಿಯ ಬಳಿಕ ಅಧಿಕಾರಕ್ಕೆ ಬಂದ ಜನತಾ ಸರಕಾರ ಈ ಟೈಮ್ ಕ್ಯಾಪ್ಸೂಲುಗಳನ್ನು ತೆಗೆದು ಸಂಪೂರ್ಣ ನಾಶ ಮಾಡುವ ಅಥವಾ ಅವುಗಳಲ್ಲಿ ನಿಜವಾದ ಮಾಹಿತಿಯನ್ನು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು. ಡಿಸೆಂಬರ್ 1977ರಂದು ಕೆಂಪುಕೋಟೆಯ ಮುಂದೆ ಮೂವತ್ತೆರಡು ಅಡಿ ಆಳದಲ್ಲಿ ಹೂತು ಹಾಕಿದ್ದ ಈ ತಿರುಚಿದ ಇತಿಹಾಸವುಳ್ಳ ಟೈಮ್ ಕ್ಯಾಪ್ಸೂಲನ್ನು ಜನತಾ ಸರಕಾರ ಹೊರತೆಗೆಯಿತು.

ಆದರೆ ಬಳಿಕ ಆ ಕ್ಯಾಪ್ಸೂಲ್ ಏನಾಯಿತೆಂದು ಯಾರಿಗೂ ತಿಳಿದಿಲ್ಲ. ಹೊರತೆಗೆದ ಕ್ಯಾಪ್ಸೂಲಿನಲ್ಲಿದ್ದ ವಿವರಗಳನ್ನು ಜನತಾ ಸರಕಾರವೂ ಬಿಚ್ಚಿಡಲಿಲ್ಲ. ಆ ಕ್ಯಾಪ್ಸೂಲ್ ಏನಾಯಿತೆಂದೂ ತಿಳಿಯಲಿಲ್ಲ. ಜನತಾ ಸರಕಾರ ಕೆಲವೇ ಸಮಯದಲ್ಲಿ ಬಿದ್ದು ಹೋದ ಕಾರಣ ಎಲ್ಲಾ ಟೈಮ್ ಕ್ಯಾಪ್ಸೂಲುಗಳನ್ನು ತೆಗೆಯಲೂ ಅದರಿಂದ ಸಾಧ್ಯವಾಗಲಿಲ್ಲ. ದಶಕಗಳಿಂದ ಹಲವಾರು ಕಾರ್ಯಕರ್ತರು ಮತ್ತು ಇತಿಹಾಸಕಾರರು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನಗಳೆಲ್ಲವೂ ವಿಫಲವಾಗಿದೆ. 2012ರಲ್ಲಿ    ಮನುಷಿ ಪತ್ರಿಕೆಯ ಮಧುಕೀಶ್ವರ್ ಅವರು ಪ್ರಧಾನ ಮಂತ್ರಿಗಳ ಕಚೇರಿಯಿಂದ ಇಂದಿರಾ ಗಾಂಧಿ ಟೈಮ್ಸ್ ಕ್ಯಾಪ್ಸೂಲ್ ಅನ್ನು ಹೂತು ಹಾಕಿದ ನಿಖರವಾದ ದಿನಾಂಕ ಮತ್ತು ಸ್ಥಳದ ಮಾಹಿತಿ ಕೋರಿದಾಗ, ಪಿಎಂಒ ತನ್ನ ಬಳಿ ಯಾವುದೇ ವಿವರಗಳಿಲ್ಲ ಎಂದಿತು. ಆಕೆ ಕೇಂದ್ರ ಮಾಹಿತಿ ಆಯೋಗದ ಮೊರೆ ಹೊಕ್ಕಾಗ ಅದು  "ಪಿಎಂಒ ಅಥವಾ ಸರ್ಕಾರದ ಬೇರೆ ಇಲಾಖೆಗಳಲ್ಲಿ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದು ನಿಜಕ್ಕೂ ಬಹಳ ವಿಚಿತ್ರ. ಟೈಮ್ ಕ್ಯಾಪ್ಸೂಲ್ ಬಗೆಗಿನ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡುವುದನ್ನು ಸಂಪೂರ್ಣವಾಗಿ ನಿರಾಕರಿಸುವುದನ್ನು ಒಪ್ಪಲಿಕ್ಕಾಗದು. ಪ್ರಧಾನಿ ಕಛೇರಿಯು ಈ ಬಗ್ಗೆ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿ ಪತ್ತೆ ಹಚ್ಚಬೇಕು" ಎಂದು ಮಧುಕೀಶ್ವರ್ ಪರವಾಗಿ ತೀರ್ಪು ನೀಡಿತು. ಪತ್ತೆ ಹಚ್ಚಲು ಏನು ಇರಲಿಲ್ಲವೆಂದಲ್ಲ. ಸರಕಾರಕ್ಕೆ ಹಳೆಯ ಚರ್ಚೆಯನ್ನು ಪುನರುಜ್ಜೀವನಗೊಳಿಸಿ ತನ್ನ ಕಾಲ ಮೇಲೆ ಚಪ್ಪಡಿ ಹಾಕಿಕೊಳ್ಳುವುದು ಬೇಕಿರಲಿಲ್ಲ. ಹೀಗೆ ಈ ಚರ್ಚೆ ಈಗ ನಿಂತಿದೆ. ಹಲವು ಶತಮಾನಗಳ ಬಳಿಕ ಯಾವುದೋ ಒಂದು ಜನಾಂಗ ಆ ಕ್ಯಾಪ್ಸೂಲುಗಳನ್ನು ಹೊರತೆಗೆಯಬಹುದು. ಆಗ ನಾವಿರುವುದಿಲ್ಲ. ಆದರೆ ನೆಹರೂ-ಇಂದಿರಾರ ಪೊಳ್ಳು ವೈಭವಗಳು ಶಾಶ್ವತವಾಗಿ ಜೀವಿಸುತ್ತವೆ!

ಗುರುವಾರ, ಏಪ್ರಿಲ್ 30, 2020

ವಿಠೋಬನ ಇಚ್ಛೆ

ವಿಠೋಬನ ಇಚ್ಛೆ


                ನಾಮದೇವರಿಗೆ ಪರಮಾರ್ಥ ಸತ್ಯದ ಜ್ಞಾನವಾಗಿರಲಿಲ್ಲ. ವಿಠೋಬ ತನ್ನ ಪರಮ ಭಕ್ತನಿಗೆ ಅದನ್ನು ಅನುಗ್ರಹಿಸಬೇಕೆಂದು ಇಚ್ಛಿಸಿದ. ಜ್ಞಾನೇಶ್ವರರೂ ಹಾಗೂ ನಾಮದೇವರೂ ಆಗಷ್ಟೇ ಯಾತ್ರೆಯೊಂದರಿಂದ ಹಿಂದಿರುಗಿದ್ದರು. ಗೋರ ಕುಂಬಾರ ಸಾಧು ಸಂತರಿಗೆಲ್ಲಾ ವಿಶೇಷವಾದ ಹಬ್ಬದೂಟವನ್ನು ಏರ್ಪಡಿಸಿದ್ದ. ಸಾಧು ಸಂತರುಗಳಲ್ಲಿ ಜ್ಞಾನೇಶ್ವರರೂ, ನಾಮದೇವರೂ ಇದ್ದರು. ಎಲ್ಲರೂ ಅಲ್ಲಿ ಸೇರಿದ್ದಾಗ ಜ್ಞಾನೇಶ್ವರರು ಗೋರ ಕುಂಬಾರನಲ್ಲಿ ಎಲ್ಲರೆದುರಲ್ಲಿ "ಗೋರ ನೀನು ವೃತ್ತಿಯಲ್ಲಿ ಕುಂಬಾರ. ಪ್ರತಿದಿನವೂ ಮಡಕೆಗಳನ್ನು ಮಾಡುತ್ತಿರುವಾಗ ಅವು ಸರಿಯಾಗಿ ಬೆಂದಿದೆಯೇ ಇಲ್ಲವೇ ಎಂದು ಪರೀಕ್ಷಿಸುತ್ತೀಯಲ್ಲವೇ? ಈ ಮಡಕೆಗಳು ಬ್ರಹ್ಮನ ಮಡಕೆಗಳು. ಇವುಗಳಲ್ಲಿ ಯಾವುದು ಸರಿಯಾಗಿ ಬೆಂದಿದೆ ಎಂದು ಪರೀಕ್ಷಿಸು" ಎಂದು ನುಡಿದರು. ಅದನ್ನು ಕೇಳಿ ಗೋರ, ಸರಿ ಸ್ವಾಮಿ ಹಾಗೆಯೇ ಮಾಡುತ್ತೇನೆ ಎಂದು ಮಡಕೆಗಳು ಸರಿಯಾಗಿ ಸುಟ್ಟಿವೆಯೇ ಎಂದು ತಟ್ಟಿ ನೋಡುತ್ತಿದ್ದ ಕೋಲನ್ನು ತೆಗೆದುಕೊಂಡು ಬಂದು ಒಬ್ಬೊಬ್ಬರ ತಲೆಗೆ ಕುಟ್ಟುತ್ತಾ ಬಂದನು. ಪ್ರತಿಯೊಬ್ಬ ಅತಿಥಿಯೂ ತಟ್ಟಿಸಿಕೊಳ್ಳಲು ನಮ್ರತೆಯಿಂದ ತಲೆ ಬಾಗಿಸಿದರು. ಆದರೆ ಗೋರನು ನಾಮದೇವರ ಬಳಿ ಬಂದಾಗ ಆತ ಸಿಟ್ಟಿಗೆದ್ದು "ಏ ಕುಂಬಾರ, ಆ ಕೋಲಿನಿಂದ ನನ್ನ ತಲೆಯನ್ನು ತಟ್ಟಲು ನಿನ್ನನ್ನು ನೀನು ಯಾರೆಂದುಕೊಂಡಿರುವೆ?" ಎಂದು ಕೂಗಿದರು. ಆಗ ಗೋರನು ಜ್ಞಾನೇಶ್ವರರಿಗೆ "ಸ್ವಾಮಿ ಇದೊಂದನ್ನು ಬಿಟ್ಟು ಉಳಿದೆಲ್ಲಾ ಮಡಕೆಗಳು ಸರಿಯಾಗಿ ಸುಟ್ಟಿವೆ" ಎಂದನು. ಅಲ್ಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು.

                    ಇದರಿಂದ ಅವಮಾನಗೊಂದ ನಾಮದೇವರು ತಾನು ಪೂಜಿಸುವ ವಿಠಲನ ಬಳಿ ಓಡಿ ಹೋದರು. ತನಗಾದ ಅವಮಾನವನ್ನು ಹೇಳಿ ಮೊರೆಯಿಟ್ಟರು. ಆಗ ವಿಠಲ ಅನುತಾಪ ತೋರುವವನಂತೆ ನಟಿಸಿ "ನೀನ್ಯಾಕೆ ಉಳಿದವರಂತೆ ಶಾಂತವಾಗಿದ್ದು ತಟ್ಟಿಸಿಕೊಂಡು ಬರಲಿಲ್ಲ. ನೀನು ಹಾಗೆ ಮಾಡದಿದ್ದುದರಿಂದಲೇ ಇಷ್ಟೆಲ್ಲಾ ತೊಂದರೆಗಳಾಯಿತು" ಎಂದನು. ಆಗ ನಾಮದೇವರು ಇನ್ನಷ್ಟು ಜೋರಾಗಿ ಅಳುತ್ತಾ "ನೀನೂ ಅವರ ಜೊತೆ ಸೇರಿ ನನ್ನನ್ನು ಅವಮಾನಿಸುತ್ತಿದ್ದೀಯಾ. ನಾನು ಯಾಕೆ ಬೇರೆಯವರಂತೆ ತಲೆತಗ್ಗಿಸಬೇಕು. ನಾನು ನಿನ್ನ ಪ್ರಿಯ ಸಖನಲ್ಲವೇ? ನಿನ್ನ ಮಗುವಲ್ಲವೇ?" ಎಂದರು. ಆಗ ವಿಠಲ "ನೀನು ಇನ್ನೂ ಸರಿಯಾಗಿ ಸತ್ಯವನ್ನು ಅರಿತುಕೊಂಡಿಲ್ಲ. ನಾನು ಹೇಳಿದರೂ ತಿಳಿದುಕೊಳ್ಳುವುದಿಲ್ಲ. ಆ ಕಾಡಿನಲ್ಲಿರುವ ಪಾಳು ಬಿದ್ದ ದೇಗುಲದಲ್ಲಿ ಸಾಧುವೊಬ್ಬನಿದ್ದಾನೆ. ಆತ ನಿನಗೆ ಜ್ಞಾನವನ್ನು ಅನುಗ್ರಹಿಸುವನು." ಎಂದು ವಿಶೋಪಕೇಶರ್ ಎನ್ನುವ ವೃದ್ಧನಿರುವ ಕಡೆಗೆ ಕಳುಹಿಸಿದನು.

                  ನಾಮದೇವರು ಆ ದೇವಸ್ಥಾನಕ್ಕೆ ಹೋಗಲಾಗಿ ವಯಸ್ಸಾದ ವ್ಯಕ್ತಿಯೊಬ್ಬರು ಶಿವಲಿಂಗದ ಮೇಲೆ ಕಾಲನ್ನಿಟ್ಟು ನಿದ್ರಿಸುತ್ತಿರುವುದನ್ನು ಕಂಡರು. ವಿಠಲನ ಸ್ನೇಹಿತನಾದ ನಾನು ಈ ಮೂರ್ಖನಿಂದ ಜ್ಞಾನವನ್ನು ಪಡೆದುಕೊಳ್ಳಬೇಕೇ ಎಂದುಕೊಂಡರಾದರೂ ಅಲ್ಲಿ ಯಾರೂ ಇಲ್ಲದಿದ್ದುದರಿಂದ ಆ ವೃದ್ಧರನ್ನು ಕೈತಟ್ಟಿ ಎಚ್ಚರಗೊಳಿಸಿದರು. ಆ ವೃದ್ಧರು ಎಚ್ಚರಗೊಂಡು ನಾಮದೇವನನ್ನು ಕಂಡು "ಓ ಆ ವಿಠಲ ಕಳುಹಿದ ನಾಮದೇವ ಅಂದರೆ ನೀನೇ ಏನೋ, ಬಾ" ಎಂದರು. ಆಗ ನಾಮದೇವರು ಇವರಾರೋ ಮಹಾಪುರುಷರಿರಬೇಕು ಎಂದೆಣಿಸಿದರಾದರೂ, ಶಿವಲಿಂಗದ ಮೇಲೆ ಕಾಲಿರಿಸಿದ್ದು ಮಹಾಪಾಪ ಎಂದು ಯೋಚಿಸುತ್ತಾ "ನೀವ್ಯಾರೋ ಮಹಾಪುರುಷರಂದದಿ ತೋರುವಿರಿ. ಆದರೂ ಶಿವಲಿಂಗದ ಮೇಲೆ ಕಾಲಿರಿಸಿದ್ದು ಸರಿಯೇ?" ಎಂದರು. ಆಗ ವೃದ್ಧರು "ಎಲಾ ಎಲಾ ನನ್ನ ಕಾಲು ಶಿವಲಿಂಗದ ಮೇಲಿರುವುದೇ? ಅದು ಎಲ್ಲಿದೆ? ನನಗೆ ನನ್ನ ಕಾಲುಗಳನ್ನು ಸರಿಸಲಾಗುತ್ತಿಲ್ಲ. ದಯವಿಟ್ಟು ನನ್ನ ಕಾಲ್ಗಳನ್ನು ಬೇರೆಲ್ಲಾದರೂ ಎತ್ತಿಡುತ್ತೀಯಾ" ಎಂದರು. ಅದರಂತೆ ನಾಮದೇವರು ಕಾಲುಗಳನ್ನು ಎತ್ತಿಟ್ಟಾಗ ಅಲ್ಲೊಂದು ಶಿವಲಿಂಗ ಎದ್ದು ನಿಂತಿತ್ತು! ಮತ್ತೊಂದೆಡೆ ಎತ್ತಿಟ್ಟಾಗ ಅಲ್ಲೊಂದು, ಹೀಗೆ ಎಲ್ಲಿಟ್ಟರೂ ಶಿವಲಿಂಗವೇ! ಕೊನೆಗೆ ಬೇರೆ ದಾರಿ ಕಾಣದೆ ನಾಮದೇವರು ಆ ವೃದ್ಧರ ಕಾಲುಗಳನ್ನು ತನ್ನ ಮಡಿಲಲ್ಲೇ ಇಟ್ಟುಕೊಂಡರು. ತಕ್ಷಣವೇ ಅವರೂ ಶಿವಲಿಂಗವಾದರು. ಹೀಗೆ ಅವರಿಗೆ ಜ್ಞಾನೋದಯವಾಯಿತು. ಆ ವೃದ್ಧರು "ಇನ್ನು ನೀನು ಹೋಗಬಹುದು" ಎಂದರು.

                   ಹೀಗೆ ಶರಣಾಗಿ ಗುರುವಿನ ಪಾದಗಳನ್ನು ಮುಟ್ಟಿದೊಡನೆ ಅವರಿಗೆ ಜ್ಞಾನ ಪ್ರಾಪ್ತಿಯಾಯಿತು. ಜ್ಞಾನೋದಯವಾದ ಮೇಲೆ ಮನೆಗೆ ಹೋದ ನಾಮದೇವರು ಬಳಿಕ ದೇವಸ್ಥಾನಕ್ಕೆ ಹೋಗಲೇ ಇಲ್ಲ. ಆಗ ವಿಠಲನೇ ನಾಮದೇವರ ಮನೆಗೆ ಹೋದನಂತೆ. ಏನೂ ತಿಳಿಯದವನಂತೆ "ನನ್ನನ್ನು ನೋಡಲು ಬರುವುದನ್ನು ಮರೆತೇ ಬಿಟ್ಟಿರುವೆಯಲ್ಲಾ" ಎಂದು ಕೇಳಲು ನಾಮದೇವರು "ಇನ್ನು ಮೇಲೆ ನೀನು ನನ್ನನ್ನು ಮೋಸಗೊಳಿಸುವಂತೆ ಇಲ್ಲ. ನನಗೀಗ ತಿಳಿದಿದೆ. ನೀನಿಲ್ಲದ ಸ್ಥಳವಾವುದು? ನಿನ್ನನ್ನು ಬಿಟ್ಟು ನಾನು ಬೇರೆಯಾಗಿರುವೆನೇ?" ಎಂದರು. ಆಗ ವಿಠಲನು ನಸುನಗುತ್ತಾ " ಓ ನಿನಗೀಗ ಸತ್ಯದ ಅರಿವಾಗಿದೆ. ಅದಕ್ಕಾಗಿಯೇ ನಿನ್ನನ್ನು ಅಂತಿಮ ಪಾಠಕ್ಕಾಗಿ ಕಳಿಸಬೇಕಾಯಿತು" ಎಂದನು.

(ಭಗವಾನ್ ರಮಣ ಮಹರ್ಷಿಗಳು ಭಕ್ತರಿಗೆ ದೈವೀನಾಮ ಮಹಿಮೆಯ ತತ್ತ್ವವನ್ನು ವಿವರಿಸುತ್ತಾ ಹೇಳಿದ ಘಟನೆ)


ಶನಿವಾರ, ಏಪ್ರಿಲ್ 25, 2020

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!

ತಬ್ಲೀಘಿ ಜಮಾತ್: ಭಯೋತ್ಪಾದಕರ ಕೊರೋನಾಸ್ತ್ರ!


           ದೇಶವಿಡೀ ಲಾಕ್ ಡೌನ್ ಇದ್ದಾಗಲೂ ದೇಶವಿದೇಶಗಳ ಸಾವಿರಾರು ಜನರನ್ನು ಸೇರಿಸಿಕೊಂಡು ಕೊರೋನಾ ಇದ್ದಂತಹಾ ವ್ಯಕ್ತಿಗಳನ್ನು ನಡುನಡುವೆ ಉದ್ದೇಶಪೂರ್ವಕವಾಗಿಯೇ ಕುಳ್ಳಿರಿಸಿ ಮತೀಯ ಸಭೆ ನಡೆಸಿದರು. ಆ ಸಭೆಗಳಲ್ಲೆಲ್ಲಾ ಕೊರೋನಾ ಅಲ್ಲಾನ ಶಾಪ, ಎಲ್ಲರೂ ಒಟ್ಟಾಗಿ ಆಲಿಂಗಿಸಿ, ಅಲ್ಲಾನನ್ನು ಪ್ರಾರ್ಥಿಸುತ್ತಾ ಮಸೀದಿಗಳಲ್ಲಿ ಪ್ರಾಣಬಿಟ್ಟರೆ ಅದಕ್ಕಿಂತ ದೊಡ್ಡ ಪುಣ್ಯವಿಲ್ಲ ಎಂಬ ಭ್ರಮೆಯನ್ನೆಲ್ಲಾ ತಮ್ಮದೇ ಮತೀಯರಲ್ಲಿ ತುಂಬಿದರು. ಆ ಸಭೆಗಳಲ್ಲೆಲ್ಲಾ ಸೇರಿ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ತಮ್ಮ ಊರಿಗೆ ತೆರಳಿ ಜನಸಾಮಾನ್ಯರಿಗೂ ಕೊರೋನಾ ಹರಡುವಂತೆ ಮಾಡಿದರು. ಮಾತ್ರವಲ್ಲ ವಿದೇಶಗಳಿಂದ ಬಂದಂತಹಾ ತಮ್ಮ ಸಹವರ್ತಿಗಳನ್ನೂ ಮಸೀದಿಗಳಲ್ಲಿ ಅಡಗಿಸಿಟ್ಟರು. ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದರೆ ನಮಗೆ ಕೊರೋನಾ ಇಲ್ಲ, ಬೇಕಾದರೆ ಮೋದಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಪ್ರಧಾನಿಯನ್ನು ಜರೆದರು. ಲಾಕ್ ಡೌನ್ ಕೊರೋನಾ ನಿಯಂತ್ರಣಕ್ಕಾಗಿ ಮಾಡಿದ್ದಲ್ಲ, ಸಿಎಎಯ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಮೋದಿ ಮತ್ತು ಶಾ ಸೇರಿ ಮಾಡಿದ ಷಡ್ಯಂತ್ರ ಎಂದು ಬೊಬ್ಬಿರಿದರು. ಗುಂಪು ಗುಂಪಾಗಿ ನಮಾಜ್ ಮಾಡಿ ಮತ್ತಷ್ಟು ಜನರಿಗೆ ಕೊರೋನಾ ಹಬ್ಬಿಸಿದರು. ಪೊಲೀಸರಿಗೆ ಕಲ್ಲು ಹೊಡೆದರು. ವೈದ್ಯರ ಮೇಲೆ, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡಿದರು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿದವರ ಮೇಲೆ ಮೇಲಿಂದ ಮೇಲೆ ಕರೆ ಮಾಡಿ ಬೆದರಿಕೆ ಒಡ್ಡಿದರು. ನೋಟಿಗೆ ಸಿಂಬಳ ಅಂಟಿಸಿ ಕೊಟ್ಟ ಒಬ್ಬ. ಹಿಂದೂಗಳ ಮನೆ ಬಾಗಿಲಿಗೆ ಉಗುಳಿದನೊಬ್ಬ. ತರಕಾರಿಗೆ ಎಂಜಲು ಹಚ್ಚಿ ಮಾರಾಟ ಮಾಡಿದ ಮತ್ತೊಬ್ಬ. ನೋಟಿಗೆ ಎಂಜಲು ಹಚ್ಚಿ ಹರಡಿದವ ಮಗದೊಬ್ಬ. ಇದನ್ನು ಜಿಹಾದ್ ಎನ್ನದೆ ಮತ್ತೇನು ಹೇಳಬೇಕು?

           ರೋಗವನ್ನು ಹರಡಲೆಂದೇ ಎಲ್ಲೆಂದರಲ್ಲಿ ಉಗುಳುವುದು ಮುಸ್ಲಿಮರಿಗೆ ಹೊಸತಲ್ಲ. 1817-1831ರ ನಡುವೆ ಕಾಲರಾದಿಂದ ಭಾರತ ತತ್ತರಿಸಿದ್ದಾಗ ಸಯ್ಯದ್ ಅಹ್ಮದ್ ಬರೇಲ್ವಿಯನ್ನು ಅನುಸರಿಸುತ್ತಿದ್ದ ವಹಾಬೀಗಳು ಹಿಂದೂಗಳ ಮೇಲೆ, ಬ್ರಿಟಿಷರ ಮೇಲೆ ಮಾತ್ರವಲ್ಲ ಸಿಕ್ಕಸಿಕ್ಕಲ್ಲಿ ಬೇಕೆಂದೇ ಉಗುಳಿ ರೋಗ ಹರಡಿಸಲು ಯತ್ನಿಸಿದ್ದನ್ನು ಬ್ರಿಟಿಷರು ಬರೆದಿಟ್ಟಿದ್ದಾರೆ. ಮಾತ್ರವಲ್ಲ ಆಗಲೂ ಈ ರೋಗ ಕಾಫಿರರನ್ನು ನಾಶಗೊಳಿಸಲೆಂದು ಅಲ್ಲಾ ನೀಡಿದ ಶಿಕ್ಷೆ ಎಂದೇ ಆ ಮೂರ್ಖರು ನಂಬಿದ್ದರು, ನಂಬಿಸಿದ್ದರು. ನಿಜಾಮನ ಆಡಳಿತದಲ್ಲಿ ರಜಾಕರರು ಹಿಂದೂಗಳ ಆಹಾರ, ಧಾನ್ಯಗಳಿಗೆ ಉಗುಳುತ್ತಿದ್ದರು. ಅಲ್ಲಾಹನ ಸಂದೇಶವಾಹಕನು ಉಗುಳಿದ ಆಹಾರವೇ ಶ್ರೇಷ್ಠವೆಂದು ಅವರ ಹದೀತ್'ಗಳೇ ಹೇಳುವಾಗ, ಹಾಗೂ ಅವರ ಹಬ್ಬಗಳಲ್ಲಿ ಅವರು ಅದನ್ನೇ ಅನುಸರಿಸುವಾಗ, 'ಕಾಫಿರ'ರನ್ನು ಕಾಲಕಸಕ್ಕಿಂತ ನೋಡುವ ಅವರು ಈ ರೀತಿ ಮಾಡುವುದು ವಿಚಿತ್ರವೆಂದೇನೂ ಅನ್ನಿಸುವುದಿಲ್ಲ.

         ಏನಿದು ತಬ್ಲೀಘಿ? ಹೊಸದಾಗಿ ಕೇಳಿದಂತಿದೆಯಲ್ಲಾ ಎಂದರೆ ಅದರ ಕಾರ್ಯಚಟುವಟಿಕೆ ಇದ್ದುದೇ ಹಾಗೆ. ಅದೇನು ಒಂದು ಮಸೀದಿಯೋ ಅಥವಾ ದೆಹಲಿಗೆ ಸೀಮಿತವಾದ ಸಂಘಟನೆಯೂ ಅಲ್ಲ. ಅಥವಾ ಅದು ನೇರ ಯುದ್ಧ ಮಾಡುವ ಭಯೋತ್ಪಾದಕ ಗುಂಪೂ ಅಲ್ಲ. ಮಾಧ್ಯಮಗಳನ್ನು ಹೊಕ್ಕು ತನ್ನದೇ ಅಭಿಪ್ರಾಯವನ್ನು ಹೇರಿದ ವೈಚಾರಿಕ ಜಿಹಾದ್ ಕೂಡಾ ಅಲ್ಲ. ಆದರೆ ಈ ಎರಡೂ ಪಂಗಡಗಳಿಗೂ ಪ್ರಭಾವ ಬೀರಿದ ಮತ್ತು ಅವುಗಳ ಬೆಂಬಲವನ್ನೂ ಪಡೆದ ತೋರಿಕೆಗೆ ಮೂಲ ಇಸ್ಲಾಮನ್ನು ತಾನನುಸರಿಸುವುದೆಂದು ಹೇಳುತ್ತಾ ಗುಪ್ತವಾಗಿ ಸ್ಲೀಪರ್ ಸೆಲ್ ನಂತೆ ವಿಶ್ವಾದ್ಯಂತ ಕಾರ್ಯಾಚರಿಸುವ ಒಂದು ಸಮುದಾಯ. ಹಾಗಾಗಿ ಕಾನೂನಿನ ಕುಣಿಕೆಗೆ ಭಯೋತ್ಪಾದಕ ಸಂಘಟನೆಯಾಗಿ ಇದು ಸಿಗಲಾರದು. ಆದರೆ ಇದರ ಕೃತ್ಯವೆಲ್ಲಾ ಭಯೋತ್ಪಾದನೆಯ ಪೋಷಣೆಯೇ. ಒಂದು ಕಡೆ ಸಾಮಾಜಿಕ ಸಂಘಟನೆಯಂತೆ, ಮತ್ತೊಂದು ಕಡೆ ಧಾರ್ಮಿಕ ಸಂಸ್ಥೆಯಂತೆ ಕಾರ್ಯಾಚರಿಸುತ್ತಾ ಸಮಯ ಸಮಯಕ್ಕೆ ದೊಡ್ಡ ದೊಡ್ಡ ಸಮ್ಮೇಳನಗಳನ್ನು ವಿಶ್ವದ ಹಲವೆಡೆಗಳಲ್ಲಿ ತಿಂಗಳುಗಟ್ಟಲೆ ನಡೆಸುತ್ತಾ ಯುವಕರ ಮೆದುಳನ್ನು ಕಿತ್ತು ಅಲ್ಲಿ ಕೊರೋನಾಗಿಂತ ಅಪಾಯಕಾರಿಯಾದ ಕುರಾನ್ ಎಂಬ ವೈರಸ್ಸನ್ನಿಟ್ಟು ಅದರಲ್ಲಿ ಸಮರ್ಥರೆಂದು ಕಂಡವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುವ ಕೆಲಸ ಇದರದ್ದು. ಅಂದರೆ ಇದು ಒಂದು ತರಹಾ ಕಂಪೆನಿಗಳಿಗೆ ಪದವೀಧರರನ್ನು ಪೂರೈಸುವ ಮಧ್ಯವರ್ತಿ ಕಂಪೆನಿಯಂತೆ, ಅದಕ್ಕಿಂತಲೂ ಹೆಚ್ಚು ವೃತ್ತಿಪರನಂತೆ ಕೆಲಸ ಮಾಡುತ್ತದೆ.

           ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ಮರುವರ್ಷದಲ್ಲೇ ಮೌಲಾನಾ ಮಹಮ್ಮದ್ ಇಲ್ಯಾಸ್ ಖಂಡಾಲವಿ ರಾಜಕೀಯವಿಲ್ಲದ ಕೇವಲ ಮತಪ್ರಚಾರವೇ ತನ್ನ ಉದ್ದೇಶವೆನ್ನುತ್ತ ಹದೀಸ್, ಸುನ್ನಾಹ್ಗಳನ್ನೇ ಬೋಧಿಸಲೆಂದು ದಾರ್ ಉಲ್ ಉಲೂಮ್ ದೇವಬಂದಿನ ಶಾಖೆಯಾಗಿ  ಆರಂಭಿಸಿದ ಸಂಸ್ಥೆಯೇ ತಬ್ಲೀಘಿ ಜಮಾತ್. ಅಂದರೆ ಇದರ ಮೂಲ ಉದ್ದೇಶವೇ ಮತಾಂತರ. ರಾಜಕೀಯೇತರ ಸಂಘಟನೆಯೆಂದು ಬ್ರಿಟಿಷರಿಂದಲೂ ಬೆಂಬಲಗಿಟ್ಟಿಸಿಕೊಂಡ ಇದು ತನ್ನದೇ ರೀತಿ-ರಿವಾಜುಗಳನ್ನು ಅಳವಡಿಸಿಕೊಂಡಿತು. ಪ್ರವಾದಿಯ ಕಾಲದಲ್ಲಿ ಇಸ್ಲಾಮ್ ಹೇಗಿತ್ತೋ ಅದನ್ನೇ ಈಗ ಯಥಾವತ್ ಅನುಸರಿಸಬೇಕೆಂದು ದಾರಿ ತಪ್ಪಿದ ಮುಸಲ್ಮಾನರನ್ನು "ಸರಿ"ದಾರಿಗೆ ತರಲು ಹುಟ್ಟಿದ ಸಂಘಟನೆಯಿದು ಎಂದು ಸ್ವತಃ ಅದರ ಸಂಸ್ಥಾಪಕನೇ ನುಡಿದಿದ್ದ. ಪ್ರವಾದಿ ಬೋಧಿಸಿದುದು ಸರಿಯಿತ್ತು, ಅನುಸರಿಸಿದವರು ತಿರುಚಿದರು ಎನ್ನುವವರು ಇದನ್ನು ಗಮನಿಸಬೇಕು. ಪ್ರವಾದಿಯ ಇಸ್ಲಾಂ ಎಷ್ಟು ಕಟ್ಟರ್ ಇತ್ತು ಎನ್ನುವುದನ್ನು ಅರಿಯಬೇಕು. ಮಾತ್ರವಲ್ಲ ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವುದೆಂದರೇನು? ಸೌಮ್ಯವಾಗಿದ್ದವರನ್ನು ಮತ್ತೆ ಕಟ್ಟರ್ ವಾದಕ್ಕೆ ಮರಳಿಸುವುದೆಂದಲ್ಲವೇ? ಮಾನವ ಜನಾಂಗದ ಮಾತ್ರವಲ್ಲ, ಪ್ರಾಣಿ, ಪಕ್ಷಿ, ಸಸ್ಯಸಂಕುಲಗಳೆಲ್ಲದರ ದುರದೃಷ್ಟವೆಂದರೆ ತಬ್ಲೀಘಿ ಅದೇ ದಾರಿಯಲ್ಲಿ ಮುನ್ನಡೆಯಿತು. ಸೆಕ್ಯುಲರ್ ಕನ್ನಡಕ ಅಥವಾ ಭೀತಿಯ ದೃಷ್ಟಿಯಲ್ಲಿ ನೋಡದೆ ಇತಿಹಾಸವನ್ನು ಇದ್ದಂತೆ ಕಾಣುವ, ಸ್ವೀಕರಿಸುವ ಪ್ರತಿಯೊಬ್ಬನ ದೃಷ್ಟಿಗೂ ಇದು ಸ್ಪಷ್ಟವಾಗಿ ಗೋಚರಿಸೀತು.

           ಅಲ್ಪ ಕಾಲದಲ್ಲೇ ದೇಶದಾದ್ಯಂತ ಹರಡಿದ ತಬ್ಲೀಘಿ ಜಮಾತ್ ತನ್ನ ಮತ ಪ್ರಚಾರದ ಉದ್ದೇಶಕ್ಕೆಂದೇ ಮುಹಮ್ಮದ್ ಝಕಾರಿಯಾ ಖಂಡಾಲವಿ ಬರೆದ "ತಬ್ಲೀಘಿ ನಿಸಾಬ್" ಎಂಬ ಪುಸ್ತಕವನ್ನು ಪವಿತ್ರ ಗ್ರಂಥದಂತೆ ಉಪಯೋಗಿಸಲು ಆರಂಬಿಸಿತು. ಮುಂದೆ ಇದೇ ಪರಿಷ್ಕರಣೆಗೊಳಗಾಗಿ ಇಸ್ಲಾಮಿನ ಮೂಲ ಬೋಧನೆಗಳಷ್ಟನ್ನೇ ಉಳಿಸಿ "ಸಹೀಹ್ ಫಝಯ್ಲ್ ಎ ಅಮಾಲ್" ಎಂದು ಬದಲಾಯಿತು. ಹಾಗಂತ ಇಸ್ಲಾಮಿಗೆ ಇದೊಂದು ಹೊಸತಾದ ಕಟ್ಟರ್ ಪಂಥವಾಗಿರಲಿಲ್ಲ. ಮರಾಠರು, ಜಾಟರು, ಸಿಖ್ಖರು ಪ್ರಬಲರಾಗಿ ದೆಹಲಿಯ ಗದ್ದುಗೆ ಮೊಘಲರ ಕೈತಪ್ಪಿದ ಬಳಿಕ ಮುಸ್ಲಿಮರಲ್ಲಿ ಅಸಂತುಷ್ಟಿ ತಾಂಡವವಾಡುತ್ತಿತ್ತು. ಅಂತಹಾ ಸಮಯದಲ್ಲಿ ಷಾಹ್ ವಲಿಯುಲ್ಲಾ ಅಹ್ಮದ್ ಶಾ ಅಬ್ದಾಲಿಯೆಂಬ ರಕ್ಕಸನನ್ನು ದೆಹಲಿಯ ಗದ್ದುಗೆಯೇರುವಂತೆ ಆಹ್ವಾನಿಸಿದ. ಆದರೆ ಅಬ್ದಾಲಿ ಬಾರಿ ಬಾರಿ ಬಂದರೂ ದೆಹಲಿಯ ಗದ್ದುಗೆ ಏರಲಾರದೆ ಹೋದ. ವಲಿಯುಲ್ಲಾನ ಮಗ ಅಬ್ದುಲ್ ಅಜೀಜ್ ಹಿಂದೂಗಳ ಮೇಲಿನ ಜಿಹಾದ್ ಅನ್ನು ಹಿಂದೂ ಮತ್ತು ಫರಂಗಿಗಳ ಮೇಲಿನ ಜಿಹಾದ್ ಆಗಿ ಪರಿವರ್ತಿಸಿ ಫತ್ವಾವೊಂದನ್ನು ಹೊರಡಿಸಿದ! ಬ್ರಿಟಿಷರಿಂದ ಶಸ್ತ್ರಾಸ್ತ್ರ ಸಂಗ್ರಹಿಸಿ, ರಕ್ಷಣೆಯನ್ನೂ ಪಡೆದುಕಂಡು ಜಿಹಾದಿಗೆ ಆಧುನಿಕ ಸ್ವರೂಪ ಕೊಟ್ಟ ಸಯ್ಯದ್ ಅಹ್ಮದ್ ಬರೇಲ್ವಿ ಎಂಬ ಅಜೀಜನ ಶಿಷ್ಯನನ್ನು ರಣಜಿತ್ ಸಿಂಗನ ಸೈನಿಕರು ಅಟ್ಟಾಡಿಸಿ ಬಡಿದರು. ಈ ಬರೇಲ್ವಿಯ ಬೆಂಬಲಿಗರಾದ ವಹಾಬಿಗಳು ಮಾತ್ರ ಇಡೀ ಭಾರತದಲ್ಲಿ ಹರಡಿಕೊಂಡು ಬಿಟ್ಟರು. 1857ರ ಸ್ವಾತಂತ್ರ್ಯ ಸಂಗ್ರಾಮದ ಬಳಿಕದ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಯ್ಯದ್ ಅಹ್ಮದ್ ಖಾನ್ ಬ್ರಿಟಿಷರೊಡನೆ ಹೊಂದಾಣಿಕೆ ಮಾಡಿಕೊಂಡು ಆಂಗ್ಲೋ-ಮೊಹಮ್ಮದನ್ (ಹೆಸರು ಗಮನಿಸಿ) ಶಾಲೆಯೊಂದನ್ನು ಸ್ಥಾಪಿಸಿ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಮುನ್ನುಡಿ ಬರೆದ. ಇದೇ ಮುಂದೆ ಅಲಿಘರ್ ಆಗಿ, ಅಲ್ಲೇ ಮುಸ್ಲಿಂ ಲೀಗ್ ಮೊಳಕೆಯೊಡೆಯಿತು. ಈ ರಾಜಕೀಯ ಪಕ್ಷಕ್ಕೆ ಸಹಾಯಕವಾಗಿ ಹುಟ್ಟಿದ್ದೇ ತಬ್ಲೀಘಿ ಜಮಾತ್. ಅದೇ ಹೊತ್ತಿಗೆ ಸ್ವಾಮಿ ದಯಾನಂದ ಸರಸ್ವತಿಗಳು ಹಾಗೂ ಅವರ ಶಿಷ್ಯ ಸ್ವಾಮೀ ಶ್ರದ್ಧಾನಂದರ "ಶುದ್ಧೀಕರಣ" ಪ್ರಕ್ರಿಯೆಗೆ ಒಳಗಾಗಿ ಹಿಂದೆ ರಜಪೂತರಾಗಿದ್ದು ಮೊಘಲರ ಸಮಯದಲ್ಲಿ ಮತಾಂತರಗೊಂಡಿದ್ದ ಮೇವಾರಿ ಭಾಷಿಕ ಮಿಯೋ ಮುಸ್ಲಿಮರು ಮಾತೃಧರ್ಮಕ್ಕೆ ಮರಳುತ್ತಿದ್ದುದೂ ತಬ್ಲೀಘಿಗಳ ಕೆಂಗಣ್ಣಿಗೆ ಗುರಿಯಾಯ್ತು. ಹಾಗಾಗಿ ಹುಟ್ಟಿದ ಕೆಲವೇ ದಿನಗಳಲ್ಲಿ ತಬ್ಲೀಘಿಗಳ ಮತಾಂಧತೆಗೆ ಸ್ವಾಮಿ ಶ್ರದ್ಧಾನಂದರ ಜೀವ ಬಲಿಯಾಯಿತು. ಇಂದಿನ ರೀತಿಯೇ ಅಂದು ಸೆಕ್ಯುಲರ್ ಎನಿಸಿಕೊಂಡವರಿಗೆಲ್ಲಾ ಸ್ವಾಮೀಜಿಯ ಕೊಲೆಗಾರ ತಬ್ಲೀಘಿ ಅಬ್ದುಲ್ ರಶೀದ ಅಮಾಯಕನಾಗಿಯೇ ಕಂಡ. ಅಹಿಂಸೆಯ ಗುರಿಕಾರನಂತೂ ಆತನನ್ನು ಸಹೋದರ ಎನ್ನುತ್ತಾ ಅಪ್ಪಿಕೊಂಡುಬಿಟ್ಟರು! ಇಂದಿಗೂ ಬದಲಾಗಿಲ್ಲ ಹಿಂದೂಗಳ ಈ ಮಾನಸಿಕತೆ!

           ತಬ್ಲೀಘಿ ಜಮಾತ್ 1946-47ರಲ್ಲಿ ರಾಜಾಸ್ಥಾನವನ್ನು ಮಿಯೋಸ್ಥಾನ್ ಎನ್ನುವ ಇಸ್ಲಾಮಿಕ್ ದೇಶವನ್ನಾಗಿ ಬದಲಾಯಿಸಲು ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಬೀದಿಗಿಳಿದಿತ್ತು. ಈ ದಂಗೆಯಲ್ಲಿ ಅದರ ಜೊತೆಯಾದದ್ದು ವಿಭಜನಕಾರಿ ಮುಸ್ಲಿಮ್ ಲೀಗ್! 1941ರಲ್ಲಿ ಮೌಲಾನಾ ಇಲ್ಯಾಸ್ ದೆಹಲಿಯ ನಿಜಾಮುದ್ದೀನ್ ನಲ್ಲಿ ಹಲವು ಸಾವಿರ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿದ. ವಿಭಜನೆಗೆ ಪೂರಕವಾಗಿ ಕೆಲಸ ಮಾಡಿದ ತಬ್ಲೀಘಿಯ ಕೆಲ ಸದಸ್ಯರು ವಿಭಜನೆಯ ಬಳಿಕ ಪಾಕಿಸ್ತಾನದಲ್ಲೂ ತಬ್ಲೀಘಿಯ ಸಂಘಟನೆಯೊಂದನ್ನು ಆರಂಭಿಸಿದರು. ಅದಕ್ಕೆ ಸ್ವತಃ ಪಾಕ್ ಸರಕಾರ ಬೆಂಬಲ ನೀಡಿತ್ತು. ಇಲ್ಯಾಸನ ಮಗ ಮೌಲಾನಾ ಮೊಹಮ್ಮದ್ ಯೂಸುಫ್ ಮತ್ತು ಆತನ ಉತ್ತರಾಧಿಕಾರಿ ಮೌಲಾನಾ ಇನಾಮುಲ್ ಹಸನ್ ಅವಧಿಯಲ್ಲಿ ತಬ್ಲೀಘಿ ಜಮಾತ್ಗೆ ಭಾರೀ ಹಣಕಾಸಿನ ನೆರವೂ ದೊರೆತು ಅದು ಪಶ್ಚಿಮ ಯೂರೋಪು ಹಾಗೂ ಉತ್ತರ ಅಮೇರಿಕಾದಲ್ಲಿ ತನ್ನ ಬೆಳೆ ಬಿತ್ತಿತು. ವಹಾಬೀ ಗುರು ಶೇಖ್ ಅಬ್ದ್ ಅಲ್ ಇಬ್ನ್ ಬಾಜ್ ತಬ್ಲೀಘಿಗೆ ತನ್ನ ಪೂರ್ಣ ಬೆಂಬಲ ಘೋಷಿಸಿದನಲ್ಲದೆ ವಹಾಬೀ ಪ್ರಚಾರಕರನ್ನೂ ತಬ್ಲೀಘಿಗಳೊಂದಿಗೆ ಜಗತ್ತಿನಾದ್ಯಂತ ಕಳುಹಿಸಿದ. ಹೀಗೆ ಅತ್ತ ವಹಾಬೀ ಜಾಲವೂ ಬೆಳೆಯಿತು. ಸೌದಿಯ ಹಣದಿಂದ "ವರ್ಲ್ಡ್ ಮುಸ್ಲಿಂ ಲೀಗ್"ನ ಪೋಷಕತ್ವದೊಂದಿಗೆ ತಬ್ಲೀಘಿಯೂ ಬೃಹತ್ತಾಗಿ ಬೆಳೆಯಿತು. 1978ರಲ್ಲಿ ಇಂಗ್ಲೆಂಡಿನ ಡ್ರ್ಯುಸ್ ಬರಿಯಲ್ಲಿ ದೊಡ್ಡ ಕಟ್ಟಡವೊಂದನ್ನು ತನ್ನ ಮುಖ್ಯ ಕಛೇರಿಯನ್ನಾಗಿ ಮಾಡಿಕೊಂಡು ಯೂರೋಪಿನ ಮೂಲೆಮೂಲೆಗೂ ಹಬ್ಬಿತು.

           ಅಪ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು 1980ರಲ್ಲಿ ತಬ್ಲೀಘಿಗಳ ನೇತೃತ್ವದಲ್ಲಿ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮ್ ಎಂಬ ಭಯೋತ್ಪಾದಕ ಸಂಘಟನೆ ಪಾಕಿಸ್ತಾನದಲ್ಲಿ ಹುಟ್ಟಿತು. ಬಳಿಕ 1980ರಲ್ಲಿ ಪಾಕಿಸ್ತಾನದ ತಬ್ಲೀಘಿಗಳ ಮುಖ್ಯ ಕಛೇರಿಯಿರುವ ರಾಯ್ ವಿಂಡ್ ನಲ್ಲಿ ಹರ್ಕತ್ ಉಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯನ್ನು ಇದೇ ತಬ್ಲೀಘಿಗಳು ಹುಟ್ಟು ಹಾಕಿದರು. 1998ರಲ್ಲಿ ಏರ್ ಇಂಡಿಯಾ ವಿಮಾನವನ್ನು ಅಪಹರಿಸಿ ಮೌಲಾನಾ ಮಸೂದ್ ಅಝರ್ ಮತ್ತವನ ಸಂಗಡಿಗರನ್ನು ಭಾರತದ ಸೆರೆಯಿಂದ ಬಿಡಿಸಿಕೊಂಡವರು ಹರ್ಕತ್ ಉಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿದ್ದ ತಬ್ಲೀಘಿ ಜಮಾತ್ಗಳೇ. 2002ರಲ್ಲಿ ಪಾಕಿಸ್ತಾನಕ್ಕೆ ಸಬ್ ಮೆರಿನ್ ತಯಾರಿಸಲೆಂದು ಬಂದು ಕೆಲಸ ಮಾಡುತ್ತಿದ್ದ ಫ್ರೆಂಚ್ ಇಂಜಿನಿಯರುಗಳಿದ್ದ ವಾಹನ ಸ್ಫೋಟಿಸಿದ್ದೂ ಅವರೇ. ರಾಯ್ ವಿಂಡ್ ನಲ್ಲಿನ ತಬ್ಲೀಘಿ ಜಮಾತ್ ಕಛೇರಿ ಉಗ್ರ ಸಂಘಟನೆಗಳಿಗೆ ವಿದ್ಯಾರ್ಥಿಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿತ್ತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಇವರು 6000ಕ್ಕೂ ಹೆಚ್ಚು ಉಗ್ರರನ್ನು ತರಬೇತುಗೊಳಿಸಿದರು. ಇದೇ ಉಗ್ರರು ಬಳಿಕ ತಾಲಿಬಾನ್, ಆಲ್ಖೈದಾ ಸಂಘಟನೆಗಳಿಗೆ ಸೇರಿದರು. ಇವರೇ ಹುಟ್ಟುಹಾಕಿದ ಇನ್ನೊಂದು ಉಗ್ರ ಸಂಘಟನೆ ಹರ್ಕತ್ ಉಲ್ ಜಿಹಾದ್ ಇ ಇಸ್ಲಾಮಿ 2006ರಲ್ಲಿ ಸಂಕಟ ಮೋಚನ ಮಂದಿರಕ್ಕೆ ಬಾಂಬಿಟ್ಟಿತು. 2011ರಲ್ಲಿ ದೆಹಲಿಯಲ್ಲಿ ಬಾಂಬಿಟ್ಟು ಹದಿನಾಲ್ಕು ಜನರನ್ನು ಸಾಯಿಸಿತು. ಗೋಧ್ರಾದಲ್ಲಿ ಕರಸೇವಕರನ್ನು ಜೀವಂತ ಸುಟ್ಟ ಪ್ರಕರಣದಲ್ಲಿ ಪಾತ್ರವಹಿಸಿದ ಮೌಲಾನಾ ಉಮರ್ ತಬ್ಲೀಘೀ ಜಮಾತಿನ ಸದಸ್ಯ. 1994ರಲ್ಲಿ ಪ್ಯಾರಿಸ್ ಹಾಗೂ ಮೊರಾಕ್ಕೋದಲ್ಲಿ , 2003ರಲ್ಲಿ ಕ್ಯಾಸಬ್ಲ್ಯಾಂಕ ದಲ್ಲಿ ನಡೆದ ಯಹೂದಿ ಚರ್ಚ್ ಮೇಲೆ ಬಾಂಬು ದಾಳಿ ಮಾಡಿದ್ದೂ ತಬ್ಲೀಘಿಗಳೇ!

           ಫಿಲಿಫೈನ್ಸ್ ನಲ್ಲಿ ತಬ್ಲೀಘಿಗಳು ಹನ್ನೊಂದು ಸಾವಿರ ಸದಸ್ಯರನ್ನು ಒಟ್ಟುಗೂಡಿಸಿದ್ದಾರೆ. ಸೌದಿಯ ದುಡ್ಡು ಬಳಸಿಕೊಂಡು ತಬ್ಲೀಘಿಗಳು ಮೂಲಭೂತವಾದವನ್ನು ಹರಡುತ್ತಿದ್ದಾರೆ. ಮಾತ್ರವಲ್ಲ ಪಾಕಿಸ್ತಾನ ಮೂಲದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಫಿಲಿಪೀನ್ಸ್ ಸರಕಾರ ಕಿಡಿಕಾರಿದೆ. ಪಾಕಿಸ್ತಾನ ಮತ್ತು ಅಲ್ಜೀರಿಯಾದಿಂದ ಪ್ರತೀ ವರ್ಷವೂ ಅಂದಾಜು 900 ಜನರನ್ನು ಉಗ್ರತರಬೇತಿಗೆ ತಬ್ಲೀಘಿ ಜಮಾತ್ ಕಳುಹಿಸುತ್ತಿದೆ. 1999ರಲ್ಲಿ ತನ್ನ ದೇಶದ 400ಕ್ಕೂ ಹೆಚ್ಚು ಯುವಕರನ್ನು ತಬ್ಲೀಘಿ ಜಮಾತ್ ಉಗ್ರತರಭೇತಿಗೆ ಕಳಿಸಿತ್ತು ಅಂತ ಉಜ್ಬೇಕಿಸ್ತಾನ್ ಆಪಾದನೆ ಮಾಡಿತ್ತು. 1998-99ರಲ್ಲಿ ಇಂಗ್ಲೆಂಡು, ಫ್ರಾನ್ಸ್ ಗಳಿಂದ ಸಾವಿರಾರು ಯುವಕರನ್ನು ತಬ್ಲೀಘಿ ಉಗ್ರತರಬೇತಿಗೆ ಕಳುಹಿಸಿತ್ತು. ಅಮೇರಿಕಾದಲ್ಲಿ ವಲಸಿಗರನ್ನು ಬಳಸಿಕೊಂಡು ಬೆಳೆದ ಜಮಾತ್ ಕನಿಷ್ಟ ಎರಡು ಸಾವಿರ ಅಮೇರಿಕರನ್ನರನ್ನು ಪಾಕಿಸ್ತಾನದಲ್ಲಿ ತರಬೇತುಗೊಳಿಸಿ ತಾಲಿಬಾನ್, ಆಲ್ಖೈದಾಗಳಿಗೆ ಸೇರಿಸಿತ್ತು. ನ್ಯೂಯಾರ್ಕ್ ನ ಕ್ವೀನ್ಸ್ನಲ್ಲಿರುವ ಅಲ್ ಫಲಾಹ್ ಮಸೀದಿ ಸದ್ಯಕ್ಕೆ ತಬ್ಲೀಘಿ ಜಮಾತ್ ನ ಕೇಂದ್ರ ಕಛೇರಿ. ಸೌದಿಯಿಂದ ನಿಯಂತ್ರಿಸಲ್ಪಡುವ ವರ್ಲ್ಡ್ ಮುಸ್ಲಿಂ ಲೀಗ್, ವರ್ಲ್ಡ್ ಅಸ್ಸೆಂಬ್ಲೀ ಆಫ್ ಮುಸ್ಲಿಂ ಯೂಥ್, ಇಂಟರ್ನ್ಯಾಷನಲ್ ಇಸ್ಲಾಮಿಕ್ ರಿಲೀಫ್ ಫಂಡ್ ಮುಂತಾದ ಸಂಘಟನೆಗಳುಮೂಲ ಅಮೇರಿಕರನ್ನರನ್ನು ವ್ಯವಸ್ಥಿತವಾಗಿ ಮತಾಂತರಿಸುವ ತಬ್ಲೀಘಿಗಳ ಕಾರ್ಯಕ್ಕೆ ಹಣ ಸಹಾಯ ಮಾಡುತ್ತಿವೆ. ವಿಶ್ವದಲ್ಲಿ ಅತೀ ಹೆಚ್ಚು ಕೊರೋನಾ ರೋಗಿಗಳಿರುವ ದೇಶ ಅಮೇರಿಕಾ. ಇದನ್ನು ಹರಡುವಲ್ಲಿ ತಬ್ಲೀಘಿಗಳ ಪಾತ್ರವನ್ನು ಅಲ್ಲಗೆಳೆಯಲಾಗದು. ದೆಹಲಿಯಲ್ಲಿ ತಬ್ಲೀಘಿಗಳ ಬೃಹತ್ ಸಭೆ ನಡೆದಂತೆ ಅದೇ ಸಮಯದಲ್ಲಿ ಪಾಕಿಸ್ತಾನದ ರಾಯ್ವಿಂಡಿನಲ್ಲಿ ಸುಮಾರು ಎರಡೂವರೆ ಲಕ್ಷ ಜನರನ್ನು ಸೇರಿಸಿ ತಬ್ಲೀಘಿಗಳ ಬೃಹತ್ ಸಮಾವೇಶ ನಡೆದಿತ್ತು. ಸಭೆಯ ಬಳಿಕ ಅವರೆಲ್ಲಾ ಪಾಕಿಸ್ತಾನದ ಹಳ್ಳಿ ಹಳ್ಳಿಗೂ ಹೋಗಿ ಕೊರೋನಾವನ್ನು ಹರಡಿದರು. ಒಂದು ಮೂಲದ ಪ್ರಕಾರ 15ಸಾವಿರ ಪಾಕ್ ಯೋಧರಿಗೆ ಕೋರೋನಾ ರೋಗವಿದೆ. ಅಲ್ಲಿ ಪರೀಕ್ಷಾ ಸಾಮಗ್ರಿಗಳಿಲ್ಲದ ಕಾರಣ ನಿಜವಾದ ಸಂಖ್ಯೆ ಎಷ್ಟೆಂದು ದೊರಕುತ್ತಿಲ್ಲವಷ್ಟೇ! ಪಾಕಿಸ್ತಾನ ಕೊರೋನ ಬಂದವರನ್ನು, ಕೊರೋನಾದಿಂದ ಸತ್ತವರ ಹೆಣಗಳನ್ನು ತಂದು ಭಾರತದ ಗಡಿಗಳಲ್ಲಿ ಗುಡ್ಡೆ ಹಾಕುತ್ತಿದೆ. ಕೊರೋನಾ ಬರಿಸಿಕೊಂಡ ಉಗ್ರರಿಗೆ ಭಾರತದ ಒಳಗೆ ನುಸುಳಲು ಸಹಾಯ ಮಾಡುತ್ತಿದೆ.

            ಭಾರತದ ರಾಷ್ಟ್ರಪತಿಯಾಗಿದ್ದ ಝಾಕೀರ್ ಹುಸ್ಸೈನ್ ತಬ್ಲೀಘಿ ಜಮಾತ್ ಸಹವರ್ತಿಯಾಗಿದ್ದ. ಪಾಪ್ ಸಿಂಗರ್ ಜುನೈದ್ ತಬ್ಲೀಘಿಗಳೊಡನೆ ಸಂಪರ್ಕವಿರಿಸಿಕೊಂಡಿದ್ದ. ಕ್ರಿಕೆಟರುಗಳಾಗಿದ್ದ ಶಾಹಿದ್ ಅಫ್ರಿದಿ, ಹಿಂದೆ ಕ್ರೈಸ್ತನಾಗಿದ್ದು ಇಸ್ಲಾಮಿಗೆ ಮತಾಂತರ ಹೊಂದಿದ್ದ ಮಹಮ್ಮದ್ ಯೂಸುಫ್, ಸಕ್ಲೈನ್ ಮುಷ್ತಾಕ್, ಇಂಜಮಾಮುಲ್ ಹಕ್, ಸಯೀದ್ ಅನ್ವರ್ ಇವರೆಲ್ಲಾ ತಬ್ಲೀಘಿ ಜಮಾತಿನ ಸಕ್ರಿಯ ಸದಸ್ಯರು! ಜಿಯಾ ಉಲ್ ಹಕ್, ನವಾಜ್ ಷರೀಫ್ ನ ಅಪ್ಪ ಮುಹಮ್ಮದ್ ಷರೀಫ್ ತಬ್ಲೀಘಿಗಳ ಅನ್ನದಾತರೂ, ಹಣಕಾಸು ಸೌಲಭ್ಯ ಒದಗಿಸುವವರೂ ಆಗಿದ್ದರು. ಪಾಕಿಸ್ತಾನದ ರಾಷ್ಟ್ರಪತಿಯಾಗಿದ್ದ ಮುಹಮ್ಮದ್ ರಫೀಕ್ ತರಾರ್ ಮತ್ತು ಐ ಎಸ್ ಐ ಮುಖ್ಯಸ್ಥ ಜಾವೇದ್ ನಾಸಿರ್ ತಬ್ಲೀಘಿ ಜಮಾತ್ ನ ಸದಸ್ಯರಾಗಿದ್ದವರೇ. ಬೆನಜಿರ್ ಭುಟ್ಟೋ ಸರಕಾರವನ್ನು ಕಿತ್ತೊಗೆಯಲು ಸಂಚು ಹೂಡಿದ್ದೂ ಈ ತಬ್ಲೀಘಿಗಳೇ. ತನ್ನ ಮತ ಪ್ರಚಾರಕ್ಕಷ್ಟೇ ಇರುವ ಸಂಘಟನೆ ಎನ್ನುವ ಹಣೆಪಟ್ಟಿಯನ್ನು ಬಳಸಿಕೊಂಡು ಹಲವು ಭಯೋತ್ಪಾದನಾ ಕೃತ್ಯಗಳಿಗೆ ತಬ್ಲೀಘಿ ಜಮಾತ್ ಸಹಾಯ ಮಾಡಿದೆ. ಮೊರಾಕೋದ ಅಲ್ ಸಲಫಿಯಾಹ್ ಅಲ್ ಜಿಹಾದಿಯಾ ಎಂಬ ಉಗ್ರ ಸಂಘಟನೆ ತನ್ನ ಕರಪತ್ರದಲ್ಲಿ ತನ್ನ ಸದಸ್ಯರಿಗೆ ತಬ್ಲೀಘಿ ಜಮಾತ್ ನ ಸದಸ್ಯರಾಗುವಂತೆ ಕೇಳಿಕೊಂಡಿತ್ತು.

         ತಮ್ಮದೇ ಮಸೀದಿಗಳನ್ನು ನಡೆಸುವ ತಬ್ಲೀಘಿಗಳು ತಾವು ತೆರಳಿದ ಊರಿನ ಮಸೀದಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿ ತಮ್ಮ ಮತಾಂತರ ಕಾರ್ಯಕ್ರಮವಾದ “ದಾವಾ”ಗಳಲ್ಲಿ ಭಾಗವಹಿಸುವಂತೆ ಆ ಊರಿನ ಯುವಕರನ್ನು  ಪ್ರೇರೇಪಿಸುತ್ತಾರೆ. ಮನಸ್ಸು ಕೆರಳಿಸುವ ಮತೀಯ ಭಾಷಣಗಳನ್ನು ತೋರಿಸಿ ಅವರನ್ನು ಮೂಲಭೂತವಾದಕ್ಕೆ ವಾಲುವಂತೆ ಮಾಡುತ್ತಾರೆ. ಬಳಿಕ ನಿಧಾನವಾಗಿ ಇಸ್ಲಾಮಿನ ಉನ್ನತ ಶಿಕ್ಷಣದ ಆಮಿಷವೊಡ್ಡಿ ತಮ್ಮ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಿಕೊಡುತ್ತಾರೆ. ಅಲ್ಲಿಂದ ಕಟ್ಟರ್ ಮೂಲಭೂತವಾದಿ ಎಂದು ಗುರುತಿಸಿದವರನ್ನು ರಾಯ್ ವಿಂಡಿಗೆ ಕಳುಹಿಸಿ ಭಯೋತ್ಪಾದನಾ ತರಬೇತಿ ಕೊಡಿಸುತ್ತಾರೆ. ಕೊರೋನಾ ಪರೀಕ್ಷೆ ಮಾಡಿಸದೆ ಅಂಡಲೆಯುವ, ಆಸ್ಪತ್ರೆಗೆ ಕರೆದೊಯ್ಯುವಾಗ ಬಸ್ಸಿಂದ ಸಿಕ್ಕಸಿಕ್ಕವರ ಮೇಲೆ ಉಗುಳುವ, ಕ್ವಾರಂಟೈನ್ಗೆ ಒಳಪಡಿಸಿದಾಗ ತಾವು ಕೇಳಿದ್ದೆಲ್ಲಾ ಕೊಡಬೇಕೆಂದು ಜಬರ್ದಸ್ತು ಮಾಡುವ, ಆಸ್ಪತ್ರೆಯಲ್ಲೇ ಜತೆಜತೆಯಾಗಿ ಕೂತು ನಮಾಜ್ ಮಾಡುವ, ದಾದಿಯರ ಮುಂದೆ ನಗ್ನರಾಗಿ ತಿರುಗುವ, ಅಶ್ಲೀಲ ಹಾಡುಗಳನ್ನು ಜೋರುದನಿಯಲ್ಲಿ ಹಾಡುವ, ಸಿಗರೇಟಿಗಾಗಿ ಪೀಡಿಸುವ, ಮೂತ್ರವನ್ನು ನೀರಿನ ಬಾಟಲಿಯಲ್ಲಿ ಸಂಗ್ರಹಿಸಿಡುವ, ಎಲ್ಲರೆದುರೇ ಮಲವಿಸರ್ಜನೆ ಮಾಡುವ, ಸಾಯುವ ಮುನ್ನ ಊರಿಗೇ ರೋಗ ಹಬ್ಬಿಸಿ ಸಾಯುತ್ತೇವೆ ಎನ್ನುವ, ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆಯೇ ಕಲ್ಲೆಸೆಯುವ, ತಮ್ಮ ವಿರುದ್ಧ ಬರೆದವರಿಗೆ ಜೀವ ಬೆದರಿಕೆಯೊಡ್ಡುವ, ತಮ್ಮ ವಿರುದ್ಧ ಬರೆದವನನ್ನು ಗುಂಡಿಟ್ಟು ಕೊಲ್ಲುವ ಈ ತಬ್ಲೀಘಿಗಳದ್ದೂ ವ್ಯವಸ್ಥಿತ ಸಂಚು ಎಂದು ಬುದ್ಧಿಯಿದ್ದ ಯಾರಿಗಾದರೂ ಅನ್ನಿಸುವುದಿಲ್ಲವೇ? ಅನ್ನಿಸದೇ ಇದ್ದರೆ ಆತ ತನ್ನತನವನ್ನು ಮಾರಿಕೊಂಡಿದ್ದಾನೆ, ಮುಸ್ಲಿಂ ಮತಬೇಟೆಗೆ ಹಪಹಪಿಸುತ್ತಿದ್ದಾನೆ ಎಂದೇ ಅರ್ಥ!

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ

ಗೆದ್ದರೂ ಗೆಲುವಿಲ್ಲದ ಅಬ್ದಾಲಿಯ ದಂಡಯಾತ್ರೆ


               ಅಹಮದ್ ಶಾ ಅಬ್ದಾಲಿ. 1761ರ ಪಾಣಿಪತ್ ಯುದ್ಧದ ಮೂಲಕ ಚರಿತ್ರೆಯಲ್ಲಿ ದಾಖಲಾದ ಹೆಸರು. ಅಪ್ಘಾನಿಸ್ತಾನ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿದ್ದರೂ ಅಹಮದ್ ಶಾ ಅಬ್ದಾಲಿಯನ್ನು ತಮ್ಮ ರಾಷ್ಟ್ರಪಿತ ಎಂದೇ ಆಧುನಿಕ ಅಪ್ಘನ್ನರು ಭಾವಿಸಿದ್ದಾರೆ. 1762ರಲ್ಲಿ ಸಿಖ್ಖರ ಘಲ್ಲುಘಾರವನ್ನೇ (ಜನಾಂಗೀಯ ಹತ್ಯೆ) ಹಮ್ಮಿಕೊಂಡ ಈತ ಅಮೃತಸರದ ಹರ್ ಮಂದಿರ ಸಾಹಿಬವನ್ನೇ ಅಪವಿತ್ರಗೊಳಿಸಿದ. ಹಲವು ಮಂದಿರಗಳನ್ನು ನಾಶಗೊಳಿಸಿದ ಈತನ ರಕ್ತದಾಹಕ್ಕೆ ಮಥುರೆಯಲ್ಲಿ ಯಮುನೆ ಏಳು ದಿನಗಳ ಕಾಲ ಕೆಂಪಾಗಿ ಹರಿದಳಂತೆ. ಎಲ್ಲೆಂದರಲ್ಲಿ ರಕ್ತಸಿಕ್ತವಾದ ಹೆಣಗಳು! ಅಬ್ದಾಲಿಯನ್ನು ಮಹಾವೀರನೆಂದೂ, ಭಾರತವನ್ನು ಗೆದ್ದನೆಂದು ವೈಭವೀಕರಿಸಲಾಗುತ್ತದೆ. ಆದರೆ ಅದು ನಿಜವೇ ಎನ್ನುವುದನ್ನು ಹಾಗೂ ಅಬ್ದಾಲಿ ಭಾರತದ ಮೇಲೆ ದಂಡೆತ್ತಿ ಬರಲು ಕಾರಣವೇನು ಎನ್ನುವುದನ್ನು ಸ್ವಲ್ಪ ವಿಶ್ಲೇಷಿಸೋಣ.

         ಮರಾಠಾ ಕೇಸರಿ ಪಡೆ ಭಾರತವನ್ನಿಡೀ ಆವರಿಸುತ್ತಾ ಸಾಗಿತ್ತು. ದಿಲ್ಲಿಯ ಗದ್ದುಗೆಯಲ್ಲಿದ್ದ ಮೊಘಲರು ಮರಾಠಾ ವೀರರೆದುರು ಹಲ್ಲು ಕಿತ್ತ ಹಾವಿನಂತಾಗಿದ್ದರು. ದಿಲ್ಲಿಯ ಗದ್ದುಗೆಯಿಂದ ಮೊಘಲರನ್ನು ಇಳಿಸಿ ತನ್ನ ಮಗನಾದ ವಿಶ್ವಾಸ್ ರಾವ್ ನನ್ನು ಕೂರಿಸುವ ಎಲ್ಲಾ ಸಿದ್ದತೆಗಳನ್ನು ಬಾಲಾಜಿ ರಾವ್ ಪೇಶ್ವೆ ಮಾಡಿದ್ದ. ಆದರೆ ಅಷ್ಟರಲ್ಲೇ ಅಫ್ಘಾನಿನ ದೊರೆ ಅಹಮದ್ ಶಾಹ್ ದುರಾನಿ (ಅಬ್ದಾಲಿ) ಭಾರತದ ಮೇಲೆ ದಂಡೆತ್ತಿ ಬಂದ. ಭಾರತದೊಂದಿಗೆ ರಾಜಕೀಯ ಸಂಬಂಧವೇ ಇರದಿದ್ದ ಅಬ್ದಾಲಿ ಭಾರತದ ಮೇಲೆ ದಾಳಿಗೆ ಬರಲು ಕಾರಣವೇನು ಎನ್ನುವುದನ್ನು ಹೊ.ವೆ. ಶೇಶಾದ್ರಿ, ಸೀತಾರಾಮ್ ಗೋಯಲರನ್ನು ಬಿಟ್ಟರೆ ಬೇರಾವ ಇತಿಹಾಸಕಾರರೂ ಗಮನಿಸಿದಂತೆ, ವಿಮರ್ಶಿಸಿದಂತೆ ಕಂಡಿಲ್ಲ. ಭಾರತವನ್ನು ಆಕ್ರಮಿಸುವಂತೆ ಅಬ್ದಾಲಿಗೆ ಆಹ್ವಾನವಿತ್ತವ ಷಾಹ್ ವಲಿಯುಲ್ಲಾ ಎಂಬ ಸೂಫಿ ಸಂತ.

          ಸೂಫಿಯೊಬ್ಬ ಔರಂಗಜೇಬನ ಫತ್ವಾ-ಐ-ಆಲಂಗೀರಿಯನ್ನು ಬರೆದನಲ್ಲಾ; ಆ ಸೂಫಿ ಷಾಹ್ ಅಬ್ದುಲ್ ರಹೀಮನ ಮಗ ಷಾಹ್ ವಲಿಯುಲ್ಲಾ. ಸೂಫಿ ಪಂಥದ ಬಗೆಗೆ ಇನ್ನೂ ಒಳ್ಳೆಯ ಅಭಿಪ್ರಾಯ ಇರುವವರೆಲ್ಲಾ ಸೂಫಿ ಮನಸ್ಸಿನ ಈ ಬೃಹತ್ ಕೃತಿಯನ್ನು ಓದಬೇಕು! ವಲಿಯುಲ್ಲಾನೂ ಸೂಫಿಯೇ. ಅವನಿಗೆ ಆದರ್ಶ ಯಾವ ಸಂತನೂ ಅಲ್ಲ; ಘಜನಿ ಮೊಹಮ್ಮದನೇ ಆತನ ನಾಯಕ! ಆತನ ಪ್ರಕಾರ ಇಸ್ಲಾಮೀ ಇತಿಹಾಸದಲ್ಲಿ ನಾಲ್ವರು ಖಲೀಫರ ಬಳಿಕದ ಸರ್ವಶ್ರೇಷ್ಠ ವ್ಯಕ್ತಿಯೆಂದರೆ ಘಜನಿ! ಪ್ರವಾದಿ ಮಹಮ್ಮದರ ಜಾತಕದಂತೆಯೇ ಘಜನಿಯ ಜಾತಕವೂ ಇತ್ತು; ಪ್ರವಾದಿಯವರಷ್ಟೇ ಸಂಖ್ಯೆಯ ಮತ್ತು ಮಹತ್ತಿನ ಜಿಹಾದ್'ಗಳಲ್ಲಿ ಘಜನಿ ಜಯಗಳಿಸಿದ್ದ ಎಂದು ಕೊಂಡಾಡುತ್ತಾನೆ ವಲಿಯುಲ್ಲಾ. ಮೆಕ್ಕಾ, ಮದೀನಾಗಳಿಗೆ ಯಾತ್ರೆ ಕೈಗೊಂಡ ಹಾಗೂ ಹಲವು ಸೂಫಿ, ಮೌಲ್ವಿಗಳ ಬಳಿ ಅಭ್ಯಾಸ ಮಾಡಿದ ಬಳಿಕವಂತೂ ಈತ ಮತ್ತಷ್ಟು ಭಯಾನಕವಾಗಿದ್ದ. 1732-62ರ ಅವಧಿಯಲ್ಲಿ ಆತ ಬರೆದಿದ್ದ 43 ಗ್ರಂಥಗಳಲ್ಲಿದ್ದ ಜಿಹಾದಿಗೂ ದೇಶದ ಮೂಲೆಯ ಹಳ್ಳಿಯೊಂದರ ಮಸೀದಿಯಲ್ಲಿ ಬೊಬ್ಬೆ ಹೊಡೆವ ಮುಲ್ಲಾನ ಜಿಹಾದಿಗೂ ಏನೂ ವ್ಯತ್ಯಾಸವಿರಲಿಲ್ಲ! ವಾಸ್ತವವಾಗಿ ಅದರಲ್ಲಿದ್ದುದು ಹಾಗೂ ವಲಿಯುಲ್ಲಾ ನಡೆಸಿದ್ದು ಹಿಂದೂಗಳ ವಿರುದ್ಧ ನಡೆದು ಬಂದಿದ್ದ ಹಳೆಯ ಇಸ್ಲಾಮೀ ಮತೀಯ ಯುದ್ಧದ ಮುಂದುವರಿಕೆಯನ್ನೇ! ಭಾರತದ ಮೇಲೆ ದಾಳಿ ಮಾಡೆಂದು ಸತತ ಪತ್ರಗಳನ್ನು ಬರೆದು ಅಬ್ದಾಲಿಯನ್ನು ಆಹ್ವಾನಿಸಿದವ ಈ ವಲಿಯುಲ್ಲಾನೇ.

           ವಲಿಯುಲ್ಲಾನ ಕಾಲದಲ್ಲಿ ಹಿಂದೂ ಕೇಸರಗಳ ಘರ್ಜನೆಗೆ ಮತಾಂಧ ಮುಸ್ಲಿಂ ಸಾಮ್ರಾಜ್ಯಶಾಹಿ ನಲುಗಿ ನಡುಗುತ್ತಿತ್ತು. ಭಾರತದ ಮೇಲೆ ಆಕ್ರಮಣಗೈದು ಈ ಪರಿಸ್ಥಿತಿಯನ್ನು ಬದಲಿಸುವಂತೆ ಆತ ಅಬ್ದಾಲಿಗೆ ಪತ್ರ ಬರೆದ. ಅದಕ್ಕಾಗಿ ಹಿಂದಣ ಮುಸ್ಲಿಮ್ ಆಕ್ರಮಕಕಾರರು ಅನುಸರಿಸಿದ ರೀತಿ ನೀತಿಗಳನ್ನೆಲ್ಲಾ ವಿವರಿಸಿದ. ಭಾರತವನ್ನು ವಿದೇಶೀ ನೆಲವೆನ್ನುವ, ಹಿಂದೂಸ್ಥಾನದಲ್ಲಿ ಇಸ್ಲಾಮೀ ದೊರೆಗಳಿರುವುದು ಅಲ್ಲಾನ ಅನುಗ್ರಹವೆನ್ನುವ, ಹಿಂದೂಗಳನ್ನು ಕಾಫಿರರೆಂದು ಕರೆದು ಅವರನ್ನು ಕೊಚ್ಚಿ ಹಾಕಬೇಕೆನ್ನುವ ಅವನ ಮಾತುಗಳಲ್ಲಿ ಇಸ್ಲಾಮ್ ವಿಷ ನಖಶಿಖಾಂತ ತುಂಬಿರುವುದನ್ನು ಕಾಣಬಹುದು. ಹೇಗೆ ಕೃಷಿಕರಾಗಿದ್ದ ಜಾಟರು ಶಸ್ತ್ರಾಸ್ತ್ರಗಳ ಪ್ರಯೋಗವನ್ನು ಕಲಿತು, ಪ್ರಬಲರಾಗಿ ಕೋಟೆಗಳನ್ನು ನಿರ್ಮಿಸಿ ಸೂರಜ್ ಮಲ್'ನ ನೇತೃತ್ವದಲ್ಲಿ 700 ವರ್ಷಗಳ ಕಾಲ ಮುಸ್ಲಿಮರ ಆಳ್ವಿಕೆಯಲ್ಲಿದ್ದ ಬಯಾನಾ ನಗರವನ್ನು ವಶಪಡಿಸಿಕೊಂಡು ಹಿಂದುತ್ವದ ರಕ್ಷಕರಾಗಿದ್ದಾರೆ ಎನ್ನುವುದನ್ನು ವಿವರಿಸಿದ. ಮರಾಠರು ತಮ್ಮ ಪ್ರಭಾವೀ ನಾಯಕನ ಆಜ್ಞೆಯನ್ನು ಶಿರಸಾವಹಿಸಿ ಇಡೀ ಹಿಂದೂಸ್ಥಾನದಲ್ಲಿ ಪ್ರಭಾವಶಾಲಿಯಾದ ಬಗೆಯನ್ನೂ ಬರೆದ. ಹಿಂದೂಸ್ಥಾನದಲ್ಲಿ ಮುಸ್ಲಿಮರು ತಮ್ಮೆಲ್ಲಾ ಅಧಿಕಾರವನ್ನು ಕಳೆದುಕೊಂಡು ದಟ್ಟ ದಾರಿದ್ರ್ಯದಿಂದ ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುತ್ತಿದ್ದಾರೆ ಎನ್ನುವ ಕಪೋಲಕಲ್ಪಿತ ಕರುಣಾಜನಕ ಕಥೆಯನ್ನೂ ಬರೆದ. ಹಿಂದೂಸ್ಥಾನದ ಮೇಲೆ ದಾಳಿ ನಡೆಸಿ ಮರಾಠ, ಜಾಟರನ್ನು ಮುರಿದು ಮುಸ್ಲಿಮರಿಗೆ ಮತ್ತೆ ಅಧಿಕಾರ ಒದಗಿಸಿಕೊಡುವುದು ತಮ್ಮ ಕರ್ತವ್ಯವಾಗಿದ್ದು ನಿಮ್ಮ ಹೆಸರು ಮುಜಾಹಿದೀನ್ ಫಿ ಸಬೀಲಲ್ಲಾ(ಅಲ್ಲಾನ ಸೇವಕ ಯೋಧ)ರ ಪಟ್ಟಿಗೆ ಸೇರುತ್ತದೆ. ಅಪಾರ ಸಂಪತ್ತು ತಮ್ಮದಾಗುತ್ತದೆ ಎಂದು ಗೋಗರೆದ. ಮಾತ್ರವಲ್ಲ ಆಕ್ರಮಣ ಮಾಡುವ ವೇಳೆಗೆ ಮುಸಲರು ಹಾಗೂ ಮುಸ್ಲಿಮೇತರರು ಒಟ್ಟಾಗಿ ವಾಸಿಸುವ ಪ್ರದೇಶಗಳಲ್ಲಿ ಯಾವುದೇ ಮುಸಲ್ಮಾನರ ಆಸ್ತಿ, ಗೌರವಕ್ಕೆ ಚ್ಯುತಿಯಾಗದಂತೆ ವರ್ತಿಸಬೇಕು ಎಂದೂ ಬರೆದ. ಬಳಿಕ ಹಲವು ಮುಸ್ಲಿಮ್ ಸರದಾರರುಗಳಿಗೆ ಪತ್ರ ಬರೆದು ಅಬ್ದಾಲಿಗೆ ಸಹಾಯಕರಾಗುವಂತೆ ವಿನಂತಿಸಿದ.

          ಹಾಗೆ ದಂಡೆತ್ತಿ ಬಂದ ಅಬ್ದಾಲಿಗೂ ಮರಾಠಾ ಕೇಸರಿಗಳಿಗೂ ನಿರ್ಣಾಯಕ ಕದನ ನಡೆದದ್ದು ಪಾಣಿಪತ್ತಿನಲ್ಲಿ. ಅದು ಆಧುನಿಕ ಇತಿಹಾಸದಲ್ಲಿ ದಾಖಲಾದ ಪಾಣಿಪತ್ತಿನಲ್ಲಿ ನಡೆದ ಮೂರನೆಯ ಮಹಾಯುದ್ಧ. ಮೊದಲ ಪಾಣಿಪತ್ ಯುದ್ಧ ಮೊಘಲರಿಗೆ ದೆಹಲಿಯ ಗದ್ದುಗೆಯೊದಗಿಸಿದರೆ, ಎರಡನೇಯ ಪಾಣಿಪತ್ ಯುದ್ಧದಲ್ಲಿ ಅಭಿನವ ವಿಕ್ರಮಾದಿತ್ಯ, ಅಜೇಯ ಸಾಹಸಿ ವೀರ ಹೇಮಚಂದ್ರ ಕೂದಲೆಳೆಯ ಅಂತರದಿಂದ ಸೋತ ಕಾರಣ ದೆಹಲಿ ಮತ್ತೆ ಹಿಂದೂ ಸಿಂಹಾಸನವಾಗುವುದನ್ನು ತಪ್ಪಿಸಿತು. ಅದ ಹೇಮುವಿನ ಸೋಲಲ್ಲ, ಬದಲಾಗಿ ವಿಧಿ ಕೈಕೊಟ್ಟಿತು ಎನ್ನಬಹುದು. ಮೂರನೆಯ ಪಾಣಿಪತ್ ಕದನವೂ ಹಿಂದೂಗಳು ದೆಹಲಿಯ ಗದ್ದುಗೆಯೇರುವುದನ್ನು ತಪ್ಪಿಸಿತು. ಕರ್ನಾಲ್ ಮತ್ತು ಕುಂಜಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಪ್ಘನ್ ಸೈನ್ಯಕ್ಕೂ ಯುದ್ಧಗಳಾಗಿ ಎರಡು ತಿಂಗಳು ಮರಾಠಾ ಪಡೆ ಸರಿಯಾದ ಆಹಾರ ಸಾಮಗ್ರಿಗಳೂ ದೊರಕದೆ ದಿಗ್ಬಂಧನಕ್ಕೊಳಗಾದರೂ ಛಲದಂಕಮಲ್ಲ ಸದಾಶಿವರಾವ್ ಭಾವೂನ ನೇತೃತ್ವದಲ್ಲಿ ಅದ್ಭುತವಾಗಿ ಹೋರಾಡಿತು. ಭಾರತದಲ್ಲಿ ಮುಸ್ಲಿಂ ಆಡಳಿತದ ಅಳಿವು ಉಳಿವನ್ನು ನಿರ್ಧರಿಸಲಿದ್ದ ಈ ಯುದ್ಧದಲ್ಲಿ ಅವಧದ ನವಾಬ ಶುಜಾದ್ದೌಲಾ ಮತ್ತು ರೋಹಿಲಾಖಂಡದ ನಜೀಬುದ್ದೌಲಾ ಸೇರಿದಂತೆ ಹಲವು ಮುಸ್ಲಿಂ ದೊರೆಗಳು, ಸರದಾರರು ಅಬ್ದಾಲಿಯ ಜೊತೆ ಸೇರಿದ್ದರು. ಶುಜಾ-ಉದ್-ದೌಲಾ ಅಪ್ಘನ್ ಸೈನ್ಯಕ್ಕೆ ಬೇಕಾದ ಧನ ಸಹಾಯವನ್ನೂ ಮಾಡಿದ. ಎಷ್ಟೆಂದರೂ ಮಾತೃಭೂಮಿಯ ಕಲ್ಪನೆಯೇ ಇರದ ಅವರಿಗೆ ತಮ್ಮ ಮತಬಾಂಧವರೇ ಮುಖ್ಯರಾಗಿರುವಾಗ ಇದೇನೂ ಅಚ್ಚರಿಯ ಸಂಗತಿಯೇನಲ್ಲ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಹಿಂದೂ ಪದೇ ಪದೇ ಮೋಸಕ್ಕೊಳಗಾಗುತ್ತಿರುವುದು ಮಾತ್ರ ವಿಚಿತ್ರ! ಕುಂಜಪುರದಲ್ಲಿ ನಡೆದ ಮೊದಲ ಕಾಳಗದಲ್ಲಿ ಮರಾಠಾ ಪಡೆ ಹದಿನೈದು ಸಾವಿರ ಅಪ್ಘನ್ನರನ್ನು ಕೊಚ್ಚಿ ಹಾಕಿತು. ಅಪ್ಘನ್ನರ ಇನ್ನೊಂದು ಪಡೆ ಅಬ್ದಾಲಿಯ ಜೊತೆ ಯಮುನೆಯ ಇನ್ನೊಂದು ದಡದಲ್ಲಿ ಮುಂದುವರೆಯುತ್ತಿತ್ತು. ಉಕ್ಕಿ ಹರಿಯುತ್ತಿದ್ದ ಯಮುನೆ ಶಾಂತಳಾಗುತ್ತಿದ್ದಂತೆ ಯಮುನೆಯನ್ನು ದಾಟಿದ ಅಬ್ದಾಲಿ. ಅಷ್ಟರವರೆಗೆ ಈರ್ವರೂ ಪರಸ್ಪರರ ಧಾನ್ಯಸರಬರಾಜನ್ನು ನಿಲ್ಲಿಸಲು ತಂತ್ರ ಹೂಡುತ್ತಿದ್ದರು. ಅದರಲ್ಲಿ ಅಪ್ಘನ್ ಪಡೆ ಬಹುತೇಕ ಸಫಲವಾಗಿತ್ತು. ಮುಂದಿನ ಎರಡೂ ತಿಂಗಳು ಕಣ್ಣುಮುಚ್ಚಾಲೆಯಾಟದೊಂದಿಗೆ ಮರಾಠರಿಗೆ ಸರಬರಾಜಾಗುತ್ತಿದ್ದ ಆಹಾರ ಸಾಮಗ್ರಿಗಳನ್ನು ತಪ್ಪಿಸಿತು ಅಬ್ದಾಲಿ ಪಡೆ. ಇದರಿಂದ ಡಿಸೆಂಬರ್ ಅಂತ್ಯಕ್ಕಾಗುವಾಗ ಮರಾಠಾ ಪಾಳಯದಲ್ಲಿ ಆಹಾರ ಸಾಮಗ್ರಿ ಖಾಲಿಯಾಗಿತ್ತು. ಹಸಿವಿನಿಂದ ಸಾಯುವ ಬದಲು ಯುದ್ಧಮಾಡಿ ಸಾಯುತ್ತೇವೆಂದು ಸೈನಿಕರು ಗೋಗರೆದಾಗ ಸದಾಶಿವ ಭಾವೂ ಅನುಮತಿ ನೀಡಿದ. ಹಸಿವು ನೀರಡಿಕೆಗಳನ್ನೂ ಲೆಕ್ಕಿಸದೇ ರಣಭಯಂಕರವಾಗಿ ಹೋರಾಡಿತು ಕೇಸರಿ ಪಡೆ. ಇರಲಿ ಪಾಣಿಪತ್ -3 ಯುದ್ಧ ಹಿಂದೂಗಳಿಗೆ ದೆಹಲಿಯ ಗದ್ದುಗೆಯನ್ನು ತಪ್ಪಿಸಿರಬಹುದು. ಆದರೆ ಅದು ಅಬ್ದಾಲಿಯ ವಿಜಯವೇನೂ ಆಗಿರಲಿಲ್ಲ. ಸದಾಶಿವ ಭಾವೂ ವೀರಮರಣವನ್ನಪ್ಪುವ ಮೊದಲು ಅಬ್ದಾಲಿಯ ಸೈನ್ಯವನ್ನು ನುಚ್ಚುನೂರು ಮಾಡಿದ. ಮರಾಠಾ ಕೇಸರಗಳ ಘರ್ಜನೆಗೆ ಅಬ್ದಾಲಿಯ ಸೈನ್ಯ ದಿಕ್ಕುಗೆಟ್ಟಿತ್ತು. ಎರಡೂ ಕಡೆ ಅಪಾರವಾದ ಸಾವುನೋವುಗಳು ಉಂಟಾದವು. ಅಬ್ದಾಲಿ ಜೀವ ಸಹಿತ ಉಳಿದರೂ ದೆಹಲಿಯ ಸಿಂಹಾಸನದ ಕಡೆ ಮುಖ ಮಾಡದೆ ಪೇರಿ ಕಿತ್ತ. ಇದು ಅಬ್ದಾಲಿಗಾದ ಮುಖಭಂಗವೇ ಸರಿ! ಹೆಚ್ಚಿನ ಇತಿಹಾಸಕಾರರು ಇದನ್ನು ಗುರುತಿಸಿದ್ದಾರೆ. ಸೀತಾರಾಮ ಗೋಯಲರಂತೂ ಮರಾಠರು ಹಾಗೂ ಜಾಠರನ್ನು ಅಳಿಸಿ ಹಾಕಲೆಂದು ವಲಿಯುಲ್ಲಾನಿಂದ ನೇಮಿಸಲ್ಪಟ್ಟ ಅಹ್ಮದ್ ಶಾ ಅಬ್ದಾಲಿ ಅದರಲ್ಲಿ ವಿಫಲನಾದ ಎಂದೇ ಬರೆದಿದ್ದಾರೆ.

              ಪಾಣಿಪತ್ ಕದನದ ಬಳಿಕ ಅಪ್ಘಾನಿಸ್ತಾನಕ್ಕೆ ಹಿಂದಿರುಗಿದ ಅಬ್ದಾಲಿಗೆ ಪೆಟ್ಟು ಬಿದ್ದದ್ದು ಸಿಖ್ಖರಿಂದ. ಪಂಜಾಬ್ ಪ್ರಾಂತ್ಯದಲ್ಲಿ ತಮ್ಮ ಬಲವನ್ನು ವಿಸ್ತರಿಸಿಕೊಂಡ ಸಿಖ್ಖರು ಅಬ್ದಾಲಿಯ ಸರ್ದಾರ ನೂರುದ್ದೀನ್ ಬಮಜೈನ್ನು ಸೋಲಿಸಿ ಜಸ್ಸಾ ಸಿಂಗ್ ಅಹ್ಲುವಾಲಿಯಾನನ್ನು ಲಾಹೋರಿನ ಅರಸನನ್ನಾಗಿ ಘೋಷಿಸಿದರು. ಕಂದಾಹಾರದಿಂದ ಹೊರಟ ಅಬ್ದಾಲಿ ಸಟ್ಲೇಜ್ ನದಿಯನ್ನು ದಾಟಿ ಮಾಳವದ ಕಡೆಗೆ ಹೋಗುತ್ತಿದ್ದ ಸಿಖ್ ಸಮುದಾಯ ಮೇಲೆ ಆಕ್ರಮಣ ಮಾಡಿದ. ಸಿಖ್ ಸಮೂಹ ವೃದ್ಧರು, ಹೆಂಗಳೆಯರು, ಮಕ್ಕಳನ್ನೂ ಒಳಗೊಂಡಿತ್ತು. ಅನಿರೀಕ್ಷಿತ ಆಕ್ರಮಣದಿಂದ ಅಚ್ಚರಿಗೊಂಡ ಸಿಖ್ ಪಡೆ ಅಶಕ್ತರನ್ನು ಸುತ್ತುವರೆದು ನಿಂತು ಅಬ್ದಾಲಿಯನ್ನು ಎದುರಿಸಿತು. ಕೊನೆಗೂ ಅಬ್ದಾಲಿ ಆ ಚಕ್ರವ್ಯೂಹವನ್ನು ಭೇದಿಸಿ ಕಸಾಯಿಖಾನೆಯಲ್ಲಿ ಕೊಚ್ಚುವಂತೆ ಸಿಖ್ಖರನ್ನು ತರಿದು ಹಾಕಿದ. ಫೆಬ್ರವರಿ 5, 1762ರ ಒಂದೇ ದಿನ 25ಸಾವಿರ ಸಿಖ್ಖರ ಖೂನಿಯಾಯಿತು. ಆದರೆ ಅದು ಸಿಖ್ಖರನ್ನು ಧೃತಿಗೆಡಿಸುವ ಬದಲು ಮತ್ತಷ್ಟು ಗಟ್ಟಿ ಮಾಡಿತು. ಏಪ್ರಿಲ್ 1762ರಲ್ಲಿ ಆತ ಗನ್ ಪೌಡರ್ನಿಂದ ಅಮೃತಸರದ ಹರಿಮಂದಿರ ಸಾಹಿಬಾವನ್ನು ಸ್ಫೋಟಿಸಿದಾಗ ಕ್ರುದ್ಧರಾದ ಸಿಖ್ಖರು ಅಕ್ಟೋಬರಿನವರೆಗೂ ಸತತವಾಗಿ ವೀರಾವೇಶದಿಂದ ಹೋರಾಡಿ ಅವನನ್ನು ಹಿಮ್ಮೆಟ್ಟಿಸಿಬಿಟ್ಟರು!

                 1764ರಲ್ಲಿ ಅಬ್ದಾಲಿ ಬಲೂಚಿನ ಅಮೀರ್ ನಾಸಿರ್ ಖಾನನನ್ನು ಜೊತೆಯಾಗಿಸಿಕೊಂಡು ಅಮೃತಸರದ ಮೇಲೆ ದಾಳಿ ಮಾಡಿದ. ಈ ಬಾರಿ ಕೇವಲ ಮೂವತ್ತು ಜನ ಸಿಖ್ಖರ ಗುಂಪು ಅವನ ಸೈನ್ಯವನ್ನು ಹಣ್ಣುಗಾಯಿ ನೀರುಗಾಯಿ ಮಾಡಿ, ಸಿರ್ಹಿಂದ್ ಪ್ರದೇಶದಿಂದ ಮುಂದುವರೆಯದಂತೆ ತಡೆದು ಬಲಿದಾನಗೈದಿತು. ಜಸ್ಸಾ ಸಿಂಗ್ ಅಹ್ಲುವಾಲಿಯಾನ ನೇತೃತ್ವದಲ್ಲಿ ಸಿಖ್ ಸರ್ದಾರರು  ಸತತವಾಗಿ ಗೆರಿಲ್ಲಾ ದಾಳಿ ಮಾಡಿ ಅವನ ಸಂಪತ್ತನ್ನೆಲ್ಲಾ ಮರುವಶಪಡಿಸಿಕೊಂಡರು. ಇದರ ಜೊತೆಗೆ ಚೀನಾಬ್ ನದಿಯ ಪ್ರವಾಹಕ್ಕೆ ಅವನ ಸೈನಿಕರನೇಕರು ಕೊಚ್ಚಿ ಹೋದರು. ಇದು ಅಬ್ದಾಲಿಯನ್ನು ಅಕ್ಷರಶಃ ನಡುಗಿಸಿತು. 1766ರಲ್ಲಿ ಮತ್ತೆ ಸಿಖ್ಖರ ಮಟ್ಟ ಹಾಕಲೆಂದು ಬಂದನಾದರೂ ಅವನ 6000 ಸೈನಿಕರು ಕೊಲ್ಲಲ್ಪಟ್ಟರು. ಲಾಹೋರಿನ ಆಡಳಿತವನ್ನು ಲಹಿನಾ ಸಿಂಗ್ ಭಾಂಗಿಗೆ ಕೊಡುವ ಪ್ರಲೋಭನೆಯೊಡ್ಡಿ ಸಿಖ್ಖರನ್ನು ಒಡೆಯಲು ನೋಡಿದ ಅವನ ಆಟವೂ ನಡೆಯಲಿಲ್ಲ. ಜಸ್ಸಾ ಸಿಂಗ್ 30ಸಾವಿರ ಸಿಖ್ ಯೋಧರೊಡನೆ ತನ್ನ ಸೈನ್ಯ ಬೀಡುಬಿಟ್ಟ ಸ್ಥಳಕ್ಕೆ ಧಾವಿಸಿ ಬರುತ್ತಿರುವ ಸುದ್ದಿ ಕೇಳಿದ ಮೇಲೆ ಹಾಗೂ ಆತನ ಸೈನಿಕರು ಪಂಜಾಬಿನ ರಣಬಿಸಿಲಿಗೆ ಬಸವಳಿದುದನ್ನು ನೋಡಿ ಭಯಭೀತನಾದ ಆತ ಅಪ್ಘಾನಿಸ್ಥಾನಕ್ಕೆ ಓಟಕ್ಕಿತ್ತ!

               1748-65ರ ನಡುವೆ ಅಹಮದ್ ಶಾ ಅಬ್ದಾಲಿ ಭಾರತದ ಮೇಲೆ 9 ಬಾರಿ ಆಕ್ರಮಣ ಮಾಡಿದ. ಅವನ ಈ ದಾಳಿಯ ವಿರುದ್ಧ ಸಂಘಟಿತರಾದ ಸಿಖ್ಖರು ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತ್ತು ನಟ್ಟಿರುಳಲ್ಲಿ ಆಕ್ರಮಣಕಾರರ ಮೇಲೆ ಗೆರಿಲ್ಲಾ ದಾಳಿ ನಡೆಸಿ ಅವರು ಸೂರೆಗೈದಿದ್ದ ಸಂಪತ್ತು ಹಾಗೂ ಭಾರತೀಯರನ್ನು ಬಿಡಿಸಿ ತರುತ್ತಿದ್ದರು. ಹೆಂಗಳೆಯರನ್ನು ಅವರ ಮನೆಗಳಿಗೆ ಗೌರವಪೂರ್ವಕವಾಗಿ ಕಳುಹುತ್ತಿದ್ದರು. ಸಣ್ಣ ಸಣ್ಣ ಗುಂಪುಗಳಲ್ಲಿ ಬಂದು ದಾಳಿಯೆಸಗುವ ಸಿಖ್ಖರ ಈ ಯುದ್ಧ ವೈಖರಿ ಅಪ್ಘನ್ನರನ್ನು ಅಕ್ಷರಶಃ ನಡುಗಿಸಿಬಿಟ್ಟಿತ್ತು. ಸಿಖ್ಖರು ಹನ್ನೆರಡು ಗಂಟೆಗೆ ಸರಿಯಾಗಿ ಆವೇಶಗೊಳ್ಳುತ್ತಿದ್ದ ಈ ಘಟನೆಯೇ ಇಂದಿಗೂ ಸಿಖ್ಖರನ್ನು ತಮಾಷೆ ಮಾಡುವ "ಸರ್ದಾರ್ ಜೀ ಕಾ ಬಾರಹ್ ಬಜ್ ಗಯಾ" ಎಂಬ ಮಾತಿಗೆ ಮೂಲವಾಗಿದೆ.

      ಉಜ್ಜಯಿನಿಯಲ್ಲಿ ದ್ವಾರಕಾಧೀಶ ಎಂದು ಕರೆಯಲ್ಪಡುವ ಒಂದು ಗೋಪಾಲ ಮಂದಿರವಿದೆ. ಈ ದೇವಾಲಯದ ಗರ್ಭಗುಡಿಯ ಬಾಗಿಲುಗಳಿಗೆ ಬೆಳ್ಳಿಯ ಲೇಪನವಿತ್ತು. ಅಹಮದ್ ಶಾ ಅಬ್ದಾಲಿ ಈ ಮಂದಿರದ ಮೇಲೆ ಆಕ್ರಮಣ ಮಾಡಿ ಆ ಬಾಗಿಲುಗಳನ್ನು ಒಯ್ದಿದ್ದ. ಹಿಂದೂಗಳು ತಿರುಗಿ ಬಿದ್ದು ದೊಡ್ಡದಾದ ಹೋರಾಟ ಮಾಡಿ ಈ ಬಾಗಿಲುಗಳನ್ನು ಮರಳಿ ಪಡೆದರು ಎಂಬ ಒಂದು ಕಥೆಯಿದೆ. ಈಗಿರುವ ದೇವಾಲಯ ಮಹಾರಾಜಾ ದೌಲತ್ ರಾವ್ ಸಿಂಧ್ಯಾನ ಪತ್ನಿ ಬಯಾಜಿ ಬಾಯಿ ಜೀರ್ಣೋದ್ಧಾರ ಮಾಡಿದ್ದು. ಅಮೃತಶಿಲೆಯ ಮೇಲೆ ಎರಡಡಿ ಎತ್ತರದ ಬೆಳ್ಳಿಯ ಕೃಷ್ಣನ ವಿಗ್ರಹ ಇಲ್ಲಿದೆ.

             ಕ್ರೂರಿ ಅಬ್ದಾಲಿಗೆ ಬುದ್ಧಿ ಕಲಿಸಿದ ಇನ್ನೊಂದು ಘಟನೆ ನಡೆದಿತ್ತು. ಹಾಗೆ ಬುದ್ಧಿ ಕಲಿಸಿದವರು ಸಾಧುಗಳು! ಹೌದು, 1757ರಲ್ಲಿ ನಡೆದ ಈ ಕದನದ ರೂವಾರಿಗಳು ನಾಗಾ ಸಾಧುಗಳು. ಅಬ್ದಾಲಿ ನಲವತ್ತು ಸಾವಿರ ಅಪ್ಘನ್ನರೊಂದಿಗೆ ಗೋಕುಲದ ಮೇಲೆ ದಾಳಿ ಮಾಡಿದ. ಗೋಕುಲನಾಥನ ದೇವಾಲಯವನ್ನು ನಾಶ ಮಾಡುವುದೇ ಆತನ ಉದ್ದೇಶವಾಗಿತ್ತು. ಈ ಸುದ್ದಿ ತಿಳಿದ ನಾಲ್ಕು ಸಾವಿರದಷ್ಟು ನಾಗಾ ಸಾಧುಗಳು ಧೀರತನದಿಂದ ದಾಳಿಗೆ ಎದೆಯೊಡ್ಡಿ ನಗರದ ರಕ್ಷಣೆ ಮಾಡಿದರು. ಸಂಖ್ಯಾತ್ಮಕವಾಗಿ ಹೆಚ್ಚಿದ್ದರೂ, ಉನ್ನತ ಯುದ್ಧ ನೈಪುಣ್ಯವನ್ನು ಹೊಂದಿದ್ದರೂ ಅಪ್ಘನ್ನರಿಗೆ ಈ ರಕ್ಷಣಾವ್ಯೂಹವನ್ನು ಭೇದಿಸಲಾಗಲಿಲ್ಲ. 2000 ನಾಗಾ ಸಾಧುಗಳು ಮಾತೃಭೂಮಿಗಾಗಿ ಬಲಿದಾನ ನೀಡಬೇಕಾಗಿ ಬಂದರೂ ಅಬ್ದಾಲಿಗೆ ದೇವಾಲಯದ, ಅಲ್ಲಿದ್ದ ಮಠಗಳ ಕೂದಲೂ ಕೊಂಕಿಸಲಾಗದೆ ಹಿಂದಿರುಗಬೇಕಾಯಿತು. ಸಾಲುಸಾಲಿಗೂ ವಿಜಯ, ಅಸಂಖ್ಯರನ್ನು ಗುಲಾಮಗಿರಿಗೆ ತಳ್ಳಿದುದು, ಸಾಮೂಹಿಕ ಕೊಲೆಗಳಿಂದ ಗುರುತಿಸಲ್ಪಟ್ಟ ಅಬ್ದಾಲಿಗೆ ಇದು ಅಪರೂಪದ ಹಿನ್ನಡೆ!

               ಹೀಗೆ ಸತತವಾಗಿ ಭಾರತದ ಮೇಲೆ ದಂಡೆತ್ತಿ ಬಂದರೂ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಬ್ದಾಲಿಯಿಂದಾಗಲಿಲ್ಲ. ಮರಾಠಾ ಹಾಗೂ ಸಿಖ್ ಕೇಸರಗಳು ಬಾರಿ ಬಾರಿಗೂ ಆತನ ಮೇಲೆ ಮುಗಿಬಿದ್ದು, ಎದೆಯೊಡ್ಡಿ ಅವನ ದಂಡಯಾತ್ರೆಗೆ ತಡೆಯೊಡ್ಡಿದವು. ಮರಾಠಾ ಹಾಗೂ ಸಿಖ್ ಸೇನೆ ಸೋಲಲು ಇಲ್ಲಿನ ಮುಸ್ಲಿಮ್ ರಾಜರು, ಸರದಾರರು ತಮ್ಮದೇ ಮತೀಯನೆಂಬ ಏಕೈಕ ಕಾರಣಕ್ಕೆ ಅಬ್ದಾಲಿಯನ್ನು ಅಪ್ಪಿಕೊಂಡುದುದು, ಅಧರ್ಮ ಯುದ್ಧ ಹಾಗೂ ಪ್ರಕೃತಿಯ ವೈಪರೀತ್ಯಗಳು ಕಾರಣವಾದವೇ ಹೊರತು ಅಬ್ದಾಲಿಯ ಪರಾಕ್ರಮವೇನಲ್ಲ. ಅಬ್ದಾಲಿ ಗೆದ್ದಂತೆ ಗೋಚರಿಸಿದರೂ ಅದು ಅಪಾರ ಸಾವುನೋವು, ಸಂಪತ್ತು ನಷ್ಟಗಳನ್ನು ಬದಿಗಿಟ್ಟು ನೋಡಿದರೆ ಮಾತ್ರ. ಆದರೆ ಆತನ ವೈಭವೀಕರಣವೇನೂ ನಿಂತಿಲ್ಲ. ಈಗಿನ ಪಾಕಿಸ್ತಾನದ ಪ್ರಾಂತ್ಯದಲ್ಲಿದ್ದ ಮುಸ್ಲಿಮ್ ಅರಸರನ್ನೂ ಅಬ್ದಾಲಿ ಬಿಟ್ಟಿರಲಿಲ್ಲ. ಆದರೆ ಪಾಕಿಸ್ತಾನಕ್ಕೆ ಅಬ್ದಾಲಿಯೇ ಆದರ್ಶ. ಅದಕ್ಕೆ ಕಾರಣವೊಂದೇ, ಭಾರತ ವಿರೋಧ! ತನ್ನ ಕ್ಷಿಪಣಿಯೊಂದಕ್ಕೆ ಪಾಕಿಸ್ತಾನ ಅಬ್ದಾಲಿಯ ಹೆಸರಿಟ್ಟಿದೆ. ಭಾರತ ವಿರೋಧಕ್ಕಾಗಿ ತನ್ನ ಪೂರ್ವಜರನ್ನು ಕೊಂದವನಾದರೂ ಪರವಾಗಿಲ್ಲ; ಅದು ಅಪ್ಪಿಕೊಳ್ಳುತ್ತದೆ.

ಶನಿವಾರ, ಏಪ್ರಿಲ್ 18, 2020

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?

ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?


ಗೂಡಿನಂತಹಾ ಕಗ್ಗತ್ತಲ ಕೊಠಡಿ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಕೈಗಳಿಗೆ ಬೇಡಿ ಹಾಕುತ್ತಿದ್ದರು. ಸೊಂಟದ ಸುತ್ತ ಬಿಗಿದು ಬರುವ ಎರಡು ಎಳೆಗಳನ್ನು ಪಾದಗಳೆರಡಕ್ಕೂ ಬಿಗಿದು ಹಾಕುವ ಕಂಬಿ ಬೇಡಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಕಾಲನ್ನು ಕಿಂಚಿತ್ತೂ ಮಡಿಸದೆ ತಿಂಗಳುಗಟ್ಟಲೆ ಇರಬೇಕಿತ್ತು! ಕೈಗಳನ್ನು ಹಿಂದಕ್ಕೆ ಸರಿಸಿ ಬೇಡಿ ಹಾಕುವುದು ಇನ್ನೊಂದು. ಮಗದೊಂದು ಅಡ್ಡಕಂಬಿ ಬೇಡಿ - ಎರಡೂ ಕಾಲುಗಳನ್ನು ಒಂದಡಿಗಿಂತಲೂ ಹೆಚ್ಚು ದೂರದಲ್ಲಿರಿಸಿ ಹಾಕಲಾಗುತ್ತಿತ್ತು. ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಊಟ, ನಿದ್ರೆ, ವಿಸರ್ಜನೆ, ಓಡಾಟ, ಕೆಲಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಬೇಕು. ಕೇಳಿದರೆ ಮೈಜುಮ್ಮೆನಿಸುವ ಶಿಕ್ಷೆ. ಇದು ಯಾವ ಗಾಂಧಿ, ನೆಹರೂವೂ ಕಾಣದ, ಅನುಭವಿಸದ ಶಿಕ್ಷೆ. ಇದು ಅಂಡಮಾನಿನಲ್ಲಿ ಹನ್ನೊಂದು ವರ್ಷ ವೀರ ಸಾವರ್ಕರ್ ಅನುಭವಿಸಿದ, ನರಕಯಾತನೆ ಪಟ್ಟ ಕರಿನೀರ ಶಿಕ್ಷೆ!

ಮಾರ್ಸೆಲ್ಸಿನಲ್ಲಿ ಮೊರಿಯಾ ಹಡಗಿನ ಶೌಚ ಕೊಠಡಿಯ ಕಿರು ಗವಾಕ್ಷದಿಂದ ಯೋಗಶಕ್ತಿಯಿಂದ ದೇಹವನ್ನು ಸಂಕುಚಿಸಿ ಸಮುದ್ರಕ್ಕೆ ಹಾರಿ ಈಜಿದಂತೆ ಅಂಡಮಾನಿಗೆ ಹೊರಟ ಮಹಾರಾಜ ಹಡಗಿನಿಂದ ತಪ್ಪಿಸಿಕೊಳ್ಳಲು ವೀರ ಸಾವರ್ಕರರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಕೈಕಾಲುಗಳೆಲ್ಲದಕ್ಕೂ ಬೇಡಿ ಹಾಕಲಾಗಿತ್ತು. ಮಾತ್ರವಲ್ಲ ತಪ್ಪಿಸಿಕೊಂಡರೂ ಪ್ರಯೋಜನವಿರಲಿಲ್ಲ. ಅಂತಾರಾಷ್ಟ್ರೀಯ ನ್ಯಾಯಾಲಯವನ್ನೇ ಬ್ರಿಟಿಷರು ಹಣದ ಬೇಡಿ ಹಾಕಿ ಬಂಧಿಸಿದ್ದರು. ಸೆಲ್ಯುಲರ್ ಜೈಲೆಂಬ ಯಮಪುರಿಯನ್ನು ಹೊಕ್ಕ ನಂತರವಂತೂ ತಪ್ಪಿಸಿಕೊಳ್ಳುವ ಯಾ ಬಿಡುಗಡೆಯಾಗುವ ಆಸೆಯನ್ನು ಬಿಡಿ, ಬದುಕುವ ಭರವಸೆಯೂ ಇರಲಿಲ್ಲ. ರಾಕ್ಷಸ ಸ್ವರೂಪಿಯಾಗಿದ್ದ ಅಲ್ಲಿನ ಅಧಿಕಾರಿ ಬಾರಿ ಸಾಹೇಬನಂತೂ ಸಾಕ್ಷಾತ್ ಯಮಸ್ವರೂಪಿಯೇ ಆಗಿದ್ದ. ಮೂರನೇ ಮಹಡಿಯ ಏಳನೇ ನಂಬರಿನ ಕೋಣೆಯಲ್ಲಿ ಸಾವರ್ಕರರನ್ನು ಬಂಧಿಸಿಡಲಾಯಿತು. ಆ ಸಾಲಿನ ಎಲ್ಲಾ ಕೊಠಡಿಗಳನ್ನು ಮೊದಲೇ ಖಾಲಿ ಮಾಡಲಾಗಿತ್ತು. ಅಂದರೆ ಸುಮಾರು 150 ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಸರಕಾರದ ಕಣ್ಣಿನಲ್ಲಿ ಬಲು ಯೋಗ್ಯರೆಂದು ಗುರುತಿಸಿಕೊಂಡಿದ್ದ ಆದರೆ ಕೈದಿಗಳ ದೃಷ್ಟಿಯಲ್ಲಿ ದ್ರೋಹಿಗಳು, ಚಾಡಿಕೋರರು, ಧೂರ್ತರೆಂದು ಕುಪ್ರಸಿದ್ಧರಾಗಿದ್ದ ಮೂವರು ಮುಸಲ್ಮಾನರು ಸಾವರ್ಕರರ ಪಹರೆಗೆ ನೇಮಕಗೊಂಡಿದ್ದರು.

ಬೇಕಾಬಿಟ್ಟಿ ಸ್ನಾನ ಮಾಡುವಂತಿರಲಿಲ್ಲ. ಜಮಾದಾರ "ಲೇವ ಪಾಣಿ" ಎನ್ನುತ್ತಲೇ ಒಂದು ಬಟ್ಟಲು ನೀರು ತೆಗೆದುಕೊಳ್ಳಬೇಕಿತ್ತು. ಆಮೇಲೆ ಆತ ಮೈಉಜ್ಜಲು ಹೇಳಿದೊಡನೆ ಮೈ ಉಜ್ಜಿಕೊಳ್ಳಬೇಕು. "ಜಾರಲೇವ ಪಾಣೀ" ಎಂದಾಗ ಮತ್ತೊಂದು ಬಟ್ಟಲು ನೀರು ತೆಗೆದುಕೊಳ್ಳಬೇಕು. ಹೀಗೆ ಮೂರು ಬಟ್ಟಲು ನೀರು, ಮೂರೇ ಬಟ್ಟಲು ನೀರಿನಲ್ಲಿ ಸ್ನಾನ ಮುಗಿಸಬೇಕಿತ್ತು! ಅದರಲ್ಲೂ ಸ್ನಾನಕ್ಕಿದ್ದದ್ದು ಉಪ್ಪು ನೀರು. ಹಿಂದಿನ ದಿನ ಏಟು ತಿಂದು ಉರಿಯುತ್ತಿರುವ ಚರ್ಮ ಈ ಉಪ್ಪು ನೀರು ಬಿದ್ದೊಡನೆ ಬೆಂಕಿಗೆ ಬಿದ್ದಂತಾಗುತ್ತಿತ್ತು. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ. ಒಳಗೆ ಹೋದವರನ್ನು ಪಹರೆದಾರ ಸಮಯ ಮುಗಿದೊಡನೆ ಅವರು ಯಾವ ಸ್ಥಿತಿಯಲ್ಲಿದ್ದಾರೋ ಅದೇ ಸ್ಥಿತಿಯಲ್ಲಿ ಅವರನ್ನು ಹೊರಗೆಳೆದು ತರುತ್ತಿದ್ದ. ಬೇರೆ ಸಮಯದಲ್ಲೇನಾದರೂ ವಿಸರ್ಜನೆಯಾದರೆ ಅದಕ್ಕೂ ಶಿಕ್ಷೆ!

ಹಸಿಯಾದ ತೆಂಗಿನಕಾಯಿಗಳ ತೊಗಟೆಗಳನ್ನು ಒಣಗಿಸಿ, ಕುಟ್ಟಿ ಅದರಿಂದ ತೆಂಗಿನ ನಾರನ್ನು ಬೇರ್ಪಡಿಸುವ ಕೆಲಸ. ಇದನ್ನು ಕೈಯಿಂದಲೇ ಮಾಡಬೇಕಿತ್ತು. ಯಾವುದೇ ಯಂತ್ರಗಳಿರಲಿಲ್ಲ. ಎಣ್ಣೆಯ ಗಾಣಕ್ಕೆ ಅವರನ್ನು ಹೂಡಲಾಗುತ್ತಿತ್ತು. ಬೆಳಗೆ ಎದ್ದ ಕೂಡಲೆ ಕೌಪೀನ ತೊಟ್ಟು ಗಾಣದ ಕೋಣೆಗೆ ಹೋಗಬೇಕಿತ್ತು. ಗಾಣ ತಿರುಗಿಸುವಾಗ ನೀರು ಕೇಳಿದರೆ ಅದೂ ಸಿಗುತ್ತಿರಲಿಲ್ಲ. ಹತ್ತು ಗಂಟೆಗೆ ಉಳಿದೆಲ್ಲಾ ಕೆಲಸಗಳು ಮುಂದಿನ ಎರಡು ಘಂಟೆಗಳ ಕಾಲ ನಿಂತರೂ ಗಾಣ ತಿರುಗಿಸುವುದನ್ನು ನಿಲ್ಲಿಸುವಂತಿರಲಿಲ್ಲ. ಅಲ್ಲಿಗೆ ಊಟ ಬರುತ್ತಿತ್ತು. ಆದರೆ ಕೈ ತೊಳೆಯಲೂ ನೀರು ಸಿಗುತ್ತಿರಲಿಲ್ಲ. ಅದೇ ಕೈಗಳಿಂದ ತಿನ್ನಬೇಕು. ಗಬಗಬ ತಿಂದು ಮತ್ತೆ ಗಾಣ ಎಳೆಯಬೇಕು. ಬೆವರು ಒರೆಸಲು ಅರೆಕ್ಷಣ ನಿಂತರೂ ಜಮಾದಾರನಿಂದ ಏಟು ಬೀಳುತ್ತಿತ್ತು. ಗಾಣ ತಿರುಗಿಸಿ ಉಸಿರಾಟ ಭಾರವಾಗುತ್ತಿತ್ತು. ಎದೆಯಲ್ಲಿ ಉರಿ, ತಲೆ ಸುತ್ತಿ ಬಂದು ಪ್ರಜ್ಞಾಶೂನ್ಯರಾಗಿ ಬಿದ್ದರೂ ಯಾರೂ ಎಬ್ಬಿಸುತ್ತಿರಲಿಲ್ಲ. ಎಚ್ಚರವಾದಾಗ ಮತ್ತೆ ಗಾಣ ತಿರುಗಿಸಬೇಕಿತ್ತು. ಯಾಕೆಂದರೆ ನಿಗದಿಪಡಿಸಿದ ಮೂವತ್ತು ಪೌಂಡ್ ಎಣ್ಣೆ ದಿವಸಕ್ಕೆ ತೆಗೆಯಬೇಕಿತ್ತು. ಕಡಿಮೆಯಾದರೆ ಹೊಡೆತ, ಬಡಿತ, ಸೊಂಟದ ಕೆಳಗೆ ಒದೆತ ತಪ್ಪಿದ್ದಲ್ಲ.

ಧಾರಾಕಾರ ಮಳೆಯಿರಲಿ, ಉರಿಬಿಸಿಲಿರಲಿ ಅದರಲ್ಲೇ ಊಟಕ್ಕೆ ನಿಲ್ಲಬೇಕಿತ್ತು. ಅಕ್ಕಪಕ್ಕದವರ ಬಳಿ ಮಾತಾಡುವಂತಿಲ್ಲ. ಸದ್ದು ಬಂದರೆ ಗುದ್ದು ಬೀಳುತ್ತಿತ್ತು. ಆಹಾರವೋ ಅರೆಬೆಂದದ್ದು. ಮಣ್ಣು, ಕಲ್ಲು, ಬೆವರು ಮಿಶ್ರಿತ ಸುವಾಸಿತ ಅಡುಗೆ! ಅನ್ನದಲ್ಲಿ ಹುಳುಹುಪ್ಪಟೆಗೆಳು, ಗೆದ್ದಲು ಹುಳುಗಳು, ಸತ್ತ ಹಾವಿನ ಚೂರುಗಳು ಸಿಗದಿದ್ದ ದಿನವೇ ವಿಶೇಷ! ಜೊತೆಗೆ ರಾತ್ರಿ ದೀಪಕ್ಕೆ ಹಾಕಿದ್ದ ಎಣ್ಣೆಯೂ ಅದರಲ್ಲಿ ಬಿದ್ದಿದ್ದರಂತೂ ವಾಕರಿಕೆ ಬರುವಂತಾಗುತ್ತಿತ್ತು. ಆದರೆ ಚೆಲ್ಲುವಂತಿರಲಿಲ್ಲ. ಚೆಲ್ಲಿದರೆ ಅದನ್ನು ಹೆಕ್ಕಿ ತಿನ್ನುವವರೆಗೆ ಏಟು ಬೀಳುತ್ತಿತ್ತು. ಚೆಲ್ಲಿದರೆ ಬೇರೆ ಆಹಾರವೂ ಸಿಗುತ್ತಿರಲಿಲ್ಲ. ಆಹಾರ ಕಡಿಮೆಯಾದರೂ ಕೇಳುವಂತಿರಲಿಲ್ಲ. ಹೆಚ್ಚಾದರೆ ಚೆಲ್ಲುವಂತಿರಲಿಲ್ಲ. ಊಟ ಎಷ್ಟು ಹೊತ್ತು ಮಾಡಬೇಕು ಎನ್ನುವುದನ್ನು ಪಹರೆಕಾರ ನಿರ್ಧರಿಸುತ್ತಿದ್ದ! ಕುಡಿಯಲು ಗಬ್ಬುನಾತವುಳ್ಳ ನೀರು. ಗಾಣ ಎಳೆಯುವಾಗ ವಿಪರೀತ ಬಾಯಾರಿಕೆಯಾಗುತ್ತಿತ್ತು. ಆದರೆ ನೀರು ಸಿಗಬೇಕಾದರೆ ನೀರು ಕೊಡುವವನಿಗೆ ಹೊಗೆಸೊಪ್ಪು ಹೇಗಾದರೂ ಸಂಪಾದಿಸಿ ಬಚ್ಚಿಟ್ಟುಕೊಂಡು ಕೊಡಬೇಕಾಗುತ್ತಿದ್ದಿತು. ನೀರು ಕುಡಿಯಲೂ ಲಂಚ ಕೊಡಬೇಕಾದ ದುಃಸ್ಥಿತಿ! ಅಷ್ಟು ಕೊಟ್ಟ ಮೇಲೂ ಸಿಗುತ್ತಿದ್ದುದು ಎರಡು ಬಟ್ಟಲು ನೀರು ಮಾತ್ರ!

ಸಂಜೆ ಐದು ಘಂಟೆಯೊಳಗೇ ಪೂರ್ತಿ ಎಣ್ಣೆ ತೆಗೆಯಬೇಕೆಂದು ಬಾರಿ ಸಾಹೇಬ ಆಜ್ಞೆ ಮಾಡುತ್ತಿದ್ದ. ಆಗದಿದ್ದರೆ ರಾತ್ರಿಯ ಊಟವಿಲ್ಲ. ಊಟವನ್ನು ತಪ್ಪಿಸಲೆಂದೇ ರಾತ್ರಿಯ ಊಟವನ್ನು ಐದು ಘಂಟೆಗೇನೆ ಕೊಡಲಾಗುತ್ತಿತ್ತು.  ಆರು ಗಂಟೆಯಾಗುತ್ತಲೇ ಬಾರಿ ಸಾಹೇಬ ಕೆಲಸಗಳೆಲ್ಲಾ ಮುಗಿದವೆಂದು ಕೊಠಡಿಗಳಿಗೆ ಬೀಗ ಜಡಿಸುತ್ತಿದ್ದ. ಗಾಣದ ಕೊಠಡಿಗೂ! ಪಹರೆಯವರು ಅವುಗಳೆದುರು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ನಿಗದಿಪಡಿಸಿದಷ್ಟು ಎಣ್ಣೆ ತೆಗೆಯಲಾಗದೆ ಇದ್ದವರು ಆಗಲೂ ಗಾಣ ಎಳೆಯುತ್ತಲೇ ಇರಬೇಕಿತ್ತು. ಇರುಳಲ್ಲಿ ಗಂಟೆಗಳು ಉರುಳುತ್ತಿದ್ದರೂ ಸೆರೆಮನೆಯಿಡೀ ನಿದ್ರಿಸುತ್ತಿದ್ದರೂ ಗಾಣದ ರಥ ತಿರುಗುತ್ತಲೇ ಇರುತ್ತಿತ್ತು!

ಸಾಮಾನ್ಯ ಜ್ವರವೆಲ್ಲಾ ಅಲ್ಲಿ ಕಾಯಿಲೆಯೇ ಅಲ್ಲ. ಅದಕ್ಕೆ ಚಿಕಿತ್ಸೆಯೂ ಸಿಗುತ್ತಿರಲಿಲ್ಲ. ಕೆಲಸವೂ ತಪ್ಪುತ್ತಿರಲಿಲ್ಲ. ಜ್ವರ ಎಷ್ಟೇ ಏರಿದರೂ ವೈದ್ಯನ ಉಷ್ಟತಾಮಾಪಕದ ಪಾದರಸ ಮೇಲೇರುತ್ತಲೇ ಇರಲಿಲ್ಲ. ತಲೆನೋವು, ತಲೆಶೂಲೆ, ಹೃದಯವಿಕಾರಗಳಿಂದ ಜರ್ಝರಿತರಾದವರನ್ನು ಕೆಲಸಗಳ್ಳರು ಎಂದು ಬಡಿದು ಕೆಲಸಕ್ಕೆ ಅಟ್ಟಲಾಗುತ್ತಿತ್ತು. ವಾಂತಿ, ಭೇದಿ, ರಕ್ತಕಾರುವಿಕೆ, ರಕ್ತಭೇದಿಯೆಲ್ಲಾ ಶುರುವಾದರೆ ದೇವರೇ ಗತಿ. ಜಮಾದಾರ ಅಥವಾ ಬಾರಿ ಸಾಹೇಬ ಮನಸ್ಸು ಮಾಡಿದರೆ ಚಿಕಿತ್ಸೆ ಸಿಗುತ್ತಿತ್ತು. ಆದರೆ ಅವರ ಮನಸ್ಸೆಂಬುದೇ ಸತ್ತು ಹೋಗಿತ್ತು. ಅನಿವಾರ್ಯವಾಗಿ ಕೊಣೆಯೊಳಗೇ ವಿಸರ್ಜನೆ ಮಾಡಿದರೆ ಮರುದಿನದಿಂದ ನಾಲ್ಕುದಿನದವರೆಗೆ ದಿನವಿಡೀ ಮರದ ದಿಮ್ಮಿಗಳನ್ನು ಹೊತ್ತು ನಿಲ್ಲುವ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು.

ಬಂಧು ಮಿತ್ರರನ್ನು ಭೇಟಿಯಾಗುವ ಅವಕಾಶವೇ ಇರಲಿಲ್ಲ. ಅದೆಲ್ಲಾ ಬಿಡಿ ಅದೇ ಮರಣ ಬಾವಿಯಲ್ಲಿ ಬಂಧಿಯಾಗಿದ್ದ ಸ್ವಂತ ಅಣ್ಣನನ್ನೇ ಭೇಟಿಯಾಗುವಂತಿರಲಿಲ್ಲ. ಅದರಲ್ಲೂ ಸಾವರ್ಕರ್ ಕುತ್ತಿಗೆಯಲ್ಲಿ ನೇತುಹಾಕಿದ್ದ ಭಿಲ್ಲೆಯಲ್ಲಿ "D" ಎಂಬ ಅಕ್ಷರ ಜೊತೆಯಾಗಿತ್ತು. ಅಂದರೆ "ಡೇಂಜರಸ್" ಎಂದು! ಹಾಗಾಗಿ ಯಾವನೇ ಕೈದಿಯೂ ಅವರ ಜೊತೆ ಮಾತಾಡುವಂತಿರಲಿಲ್ಲ. ಯಾವುದೇ ರೀತಿಯ ವ್ಯವಹಾರ ಮಾಡುವಂತಿರಲಿಲ್ಲ. ಮಾಡಿದ್ದೂ ಗೊತ್ತಾದರೆ ಚಾವಟಿ ಏಟು ತಿನ್ನಲು ಸಿದ್ಧನಾಗಿರಬೇಕಿತ್ತು. ಕಾನೂನಲ್ಲಿದ್ದ ವರ್ಷಕ್ಕೆ ಒಂದು ಸಲ ಪತ್ರ ಬರೆಯಬಹುದಾದ ಅವಕಾಶವೂ ಯಾವುದಾದರೂ ತಪ್ಪಿನ ಸುಳ್ಳು ನೆವ ಹೂಡಿ ನಿರಾಕರಿಸಲ್ಪಡುತ್ತಿತ್ತು. ಇನ್ನು ಓದುವುದು ಬರೆಯುವುದಂತೂ ಗಗನಕುಸುಮವೇ ಸರಿ. ಎದೆಗುಂದದ ಸಾವರ್ಕರ್ ಕಲ್ಲಿನಗೋಡೆಗಳ ಮೇಲೆ ಕಲ್ಲಿನ ಮೊಳೆಯಿಂದ "ಕಮಲಾ" ಎನ್ನುವ ಹತ್ತು ಸಾವಿರ ಸಾಲಿನ ಬೃಹತ್ ಕಾವ್ಯವನ್ನೇ ಕೆತ್ತಿದರು.

ವೀರ ಸಾವರ್ಕರ್, ಅವರ ಅಣ್ಣ ಬಾಬಾ ಸಾವರಕರ್ ಆದಿಯಾಗಿ ಹಲವಾರು ಕ್ರಾಂತಿಕಾರಿಗಳು ಈ ಕರಿನೀರ ಶಿಕ್ಷೆಯನ್ನು ಅನುಭವಿಸಿದರು. ಬರೋಬ್ಬರಿ ಹನ್ನೊಂದು ವರ್ಷ ಈ ಮೃತ್ಯುಕೂಪದಲ್ಲಿದ್ದರೂ ಸಾವರ್ಕರ್ ತಮ್ಮ ತತ್ತ್ವ, ಚಿಂತನೆ, ಕಾರ್ಯಗಳಾವುದನ್ನೂ ಬದಲಾಯಿಸಲಿಲ್ಲ. ಯಾರ್ಯಾರನ್ನೋ ಮಹಾತ್ಮ ಎನ್ನಲಾಗುತ್ತದೆ. ಕಾಯಾ, ವಾಚಾ, ಮನಸಾ ಒಂದೇ ಆಗಿದ್ದವರನ್ನು ಮಾತ್ರ ಮಹಾತ್ಮ ಎನ್ನಬೇಕಾದದ್ದು. ಆ ಮಹಾತ್ಮ ಸಾವರ್ಕರ್. ಸಾವರ್ಕರರನ್ನು ಬಂಧಿಸಿದ್ದರು; ಹಾಗಾಗಿ ಅವರು ಅನುಭವಿಸಲೇ ಬೇಕಿತ್ತು ಅನ್ನುತ್ತೀರಾ? ಸಾವರ್ಕರ್ ಅಂತಹಾ ಶಿಕ್ಷೆಯನ್ನು ಅನುಭವಿಸಿದ್ದು ತನಗಾಗಿ ಅಲ್ಲ; ದೇಶಕ್ಕಾಗಿ. ತನ್ನ ಸರ್ವಸ್ವವನ್ನೂ ದೇಶಕ್ಕೆ ಧಾರೆಯೆರೆದವರು ಅವರು. ನಾವು ದೇಶಕ್ಕಾಗಿ ಕನಿಷ್ಠ ನಮ್ಮ ಮನೆಯೊಳಗಿರಬಾರದೇ? ಇದರಿಂದ ನಾವೂ ಸುರಕ್ಷಿತವಾಗಿರುತ್ತೇವೆ; ದೇಶವೂ.

ಒಂದಷ್ಟು ದಿನಗಳ ಲಾಕ್ ಡೌನ್ ಅನ್ನು ಅನುಭವಿಸಲು ಒದ್ದಾಡುವ ಮನಸ್ಸುಗಳು ಒಮ್ಮೆ ಕರಿನೀರ ಶಿಕ್ಷೆಯನ್ನು ಕಣ್ತುಂಬಿಕೊಳ್ಳಬೇಕು. ಮನೆಯಲ್ಲಿ ನಮಗೆ ಪ್ರೀತಿಪಾತ್ರರಾದವರ ಜೊತೆಯಲ್ಲಿ ನಗು, ಹರಟೆಯಲ್ಲಿ ಕಾಲ ಕಳೆಯಬಹುದಾದ, ನಮಗಿಷ್ಟವಾದದ್ದನ್ನು ಮಾಡಿಕೊಂಡು ತಿನ್ನಬಹುದಾದ, ಪುಸ್ತಕ, ಟಿವಿ, ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು, ತರಹೇವಾರಿ ಮೊಬೈಲ್ ಯಾ ಕಂಪ್ಯೂಟರ್ ಗೇಮ್ಸ್ ಹೀಗೆ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರತೆಯನ್ನು ಕಾಯ್ದುಕೊಂಡು ಸಮಯ ಕಳೆಯಬಹುದಾದ, ವಿಧವಿಧದ ಹವ್ಯಾಸಗಳನ್ನು ಬೆಳೆಸಿಕೊಳ್ಳುವ, ಹೊಸತನ್ನು ಕಲಿಯುವ ಅವಕಾಶ ಒದಗಿಸಿದ ನಮ್ಮ ಸೌಭಾಗ್ಯವನ್ನು ಅದರ ಜೊತೆ ತುಲನೆ ಮಾಡಿಕೊಳ್ಳಬೇಕು. ನಿತ್ಯ ಜೀವನದಲ್ಲಿ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳುವ, ಪಕ್ಷಿಗಳ ಕಲರವವನ್ನು ಆಲಿಸುವ, ಧ್ಯಾನ, ಪ್ರಾಣಾಯಾಮ, ಯೋಗಾಸನಗಳನ್ನು ಕಲಿತು ರೂಢಿಸಿಕೊಳ್ಳುವುದಕ್ಕೆ ಸಿಕ್ಕ ಈ ಅಪೂರ್ವ ಅವಕಾಶವನ್ನು ಒಮ್ಮೆ ನೀವು ಆ ಕಗ್ಗತ್ತಲ ಕೋಣೆಯಲ್ಲಿ ಆ ಸ್ಥಿತಿಯಲ್ಲಿ ಕರಿನೀರ ರೌರವದಲ್ಲಿರುವಂತೆ ಭಾವಿಸಿ ಊಹಿಸಿಕೊಳ್ಳಿ. ಆಗ ತಿಳಿಯುತ್ತದೆ ನಾವು ಲಾಕ್ ಡೌನ್ ಆದದ್ದಲ್ಲ; ನಮ್ಮ ನಿಜವಾದ ಸ್ವಾತಂತ್ರ್ಯವನ್ನು ಪಡೆದುಕೊಂಡದ್ದು ಎಂದು!



ಬುಧವಾರ, ಫೆಬ್ರವರಿ 26, 2020

ಆತ್ಮಾಹುತಿ.....ಆತ್ಮಾರ್ಪಣೆ!

ಆತ್ಮಾಹುತಿ.....ಆತ್ಮಾರ್ಪಣೆ!

             "ಸಾವು" ಎಂದಾಕ್ಷಣ ಮನುಷ್ಯನೊಮ್ಮೆ ಬೆಚ್ಚಿ ಬೀಳುತ್ತಾನೆ. ಪ್ರತಿಯೊಂದು ಜೀವಿಗೂ ಸಾವಿನ ಭಯವಿದ್ದೇ ಇದೆ. ಸಾವು ಇದೆ ಎನ್ನುವುದನ್ನು ಮರೆಯಲೋಸುಗವೇ ಬಹುಷಃ ಜೀವಿ ಇಂದ್ರಿಯ ಸುಖಗಳನ್ನು ಪೂರೈಸುವುದರಲ್ಲಿ ಗಮನವೀಯುತ್ತದೆ. ಅಥವಾ ಇಂದ್ರಿಯ ಸುಖಗಳೇ ಸಾವನ್ನು ಮರೆಸುತ್ತವೆ. ಅದನ್ನು ಮರೆತು ಜೀವಿ ತಾನು ಶಾಶ್ವತನೆನ್ನುವಂತೆ ಬೀಗುತ್ತದೆ. ಆದರೂ ಸಾವು ಅದಕ್ಕೆ ಭಯಗೊಳಿಸುವ ವಿಚಾರವೇ ಆಗಿರುತ್ತದೆ. ಅದು ಇಂದ್ರಿಯ ಮಟ್ಟದಲ್ಲಷ್ಟೇ ಸಾವನ್ನು ಎದುರಿಸಲು ತೊಡಗುವುದೇ ಅದಕ್ಕೆ ಕಾರಣವಿರಬಹುದು. ಆದರೆ ಸಾವಿನ ಬಗೆಗಿನ ಚಿಂತನ-ಮಂಥನಗಳೇ ಅನೇಕ ತತ್ತ್ವಚಿಂತನೆಗಳಾಗಿ ಹೊರಹೊಮ್ಮಿ ಬಹು ಎತ್ತರದಲ್ಲಿ ನಿಂತವು. ಸಾವಿನ ಪ್ರಶ್ನೆಯೇ ಭಾರತೀಯ ತತ್ತ್ವದರ್ಶನಗಳ ಮೂಲ ಬಿಂದುವಾಗಿತ್ತು. ನಚಿಕೇತ ಸಾವಿನ ಬಗ್ಗೆ ಯಮನನ್ನೇ ಪ್ರಶ್ನಿಸಿ ಉತ್ತರ ದೊರಕಿಸಿಕೊಂಡ. ಇಹ-ಪರಗಳ, ಹುಟ್ಟು-ಸಾವುಗಳ ಕುರಿತ ಜಿಜ್ಞಾಸೆಯಿಂದಲೇ ಉಪನಿಷತ್ತುಗಳು ಹುಟ್ಟಿದವು. ದುಃಖದ ಮೂಲವನ್ನು ಕಂಡು ಹಿಡಿಯಲು ಬುದ್ಧನನ್ನು ಪ್ರಚೋದಿಸಿದ ವೃದ್ಧ,ರೋಗಿ ಹಾಗೂ ಶವಗಳು ಸಾವಿನ ಮುಖಗಳೇ.

             ಸಾವನ್ನು ಗೆದ್ದು ಶಾಶ್ವತವಾಗೇನೂ ಉಳಿಯಲಾಗದು. ಆದರೆ ಸಾವನ್ನು ಗೆಲ್ಲಬಹುದು. ಅದು ಹೇಗೆ? ಸಾವಿನ ಭಯವನ್ನು ಗೆಲ್ಲುವ ಮೂಲಕ. ನಿರ್ಲಿಪ್ತತೆಯಿಂದ ಸಾವಿನ ಬಳಿ ಸಾಗುವ ಮೂಲಕ. ಇನ್ನೇನು ನಾನು ಇಲ್ಲಿ ಮಾಡಬಹುದಾದದ್ದೆಲ್ಲಾ ಮುಗಿಯಿತು; ಇನ್ನಿಲ್ಲಿರುವುದರಲ್ಲಿ ಅರ್ಥವಿಲ್ಲ, ನನ್ನ ಗಮ್ಯವನ್ನು ಸೇರಿಕೊಳ್ಳುವೆ ಎಂದು ಅತ್ತ ಹೊರಡಲು ತಯಾರಾಗುವ ಮೂಲಕ. ಅದು ಆತ್ಮಾರ್ಪಣೆ. ಭಾರತೀಯ ಪರಂಪರೆಯಲ್ಲಿ ಎಂತೆಂತಹ ಮಹನೀಯರು ಆತ್ಮಾರ್ಪಣೆ ಮಾಡಿಕೊಂಡರು! ಸಾವರ್ಕರ್...ಅಲ್ಲಲ್ಲಾ ವೀರ ಸಾವರ್ಕರ್! ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ "ಸ್ವಾತಂತ್ರ್ಯ ವೀರ" ಎಂದು ಕರೆಸಿಕೊಂಡ ಏಕೈಕ ವ್ಯಕ್ತಿ. ಎಂತಹಾ ಅಪ್ರತಿಮ ವ್ಯಕ್ತಿತ್ವ. ತಾನು, ತನ್ನ ಪರಿವಾರ, ತನ್ನ ಬಂಧುಬಳಗ, ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸ್ವಾತಂತ್ರ್ಯ ಯಜ್ಞದಲ್ಲಿ ಆಜ್ಯವನ್ನಾಗಿಸಿದ ಅಪ್ರತಿಮ ದೇಶಭಕ್ತ. ದೇಶದ ಸ್ವಾತಂತ್ರ್ಯಕ್ಕಾಗಿ ಹಡಗಿನ ಶೌಚಕೋಣೆಯ ಪುಟ್ಟ ಕಿಟಕಿಯಲ್ಲಿ ಯೋಗಬಲದಿಂದ ದೇಹ ತೂರಿ ಜಿಗಿದು ಸಾಗರ ಈಜಿದ ಶೂರ. ಎರಡೆರಡು ಕರಿನೀರ ಶಿಕ್ಷೆಯನ್ನು ಪಡೆದು, ಅಂಡಮಾನಿನ ಕತ್ತಲ ಕೋಣೆಯಲ್ಲಿ ಗಾಣವೆಳೆದು, ಬರಿಗೈಯಲ್ಲಿ ತೆಂಗಿನ ನಾರು ಸುಲಿದು, ಹುಳುಹುಪ್ಪಟೆಗಳಿಂದ ಕೂಡಿದ ಅನ್ನ ತಿಂದೂ ದೇಶಕ್ಕಾಗಿ ತನ್ನ ಜೀವ ಉಳಿಸಿ ಜೀವನ ಸವೆಸಿದ ಮಹಾವ್ಯಕ್ತಿ! ಯಾವ ದೇಶೀಯರ ಸ್ವಾತಂತ್ರ್ಯಕ್ಕಾಗಿ ಜೀವನವನ್ನೆಲ್ಲಾ ಸವೆಸಿದರೋ ಅಂತಹ ದೇಶವಾಸಿಗಳಿಂದಲೇ ವಿನಾ ಕಾರಣ ಕಲ್ಲು ಹೊಡೆಸಿಕೊಂಡು, ಜೈಲಿಗೆ ಅಟ್ಟಿಸಿಕೊಂಡೂ ತನ್ನ ಕರ್ತವ್ಯ ಬಿಡದ, ಮರೆಯದ ಸ್ಥಿತಪ್ರಜ್ಞ! ಆಗಲೂ ಅವರು ಸಾವಿಗೆ ಶರಣಾಗಲಿಲ್ಲ. ಅಂತಹ ಸಾವರ್ಕರ್ 1964ರಲ್ಲಿ ಹಾಸಿಗೆ ಹಿಡಿಯಬೇಕಾಗಿ ಬಂದಾಗ ತನ್ನ ಆತ್ಮಾರ್ಪಣೆಯ ನಿರ್ಧಾರವನ್ನು ಸಮರ್ಥಿಸುತ್ತಾ ತನ್ನ ಕೊನೆಯ ಲೇಖನವನ್ನು ಬರೆದರು. ಬರೆದಂತೆ ಬದುಕಿದವರು ಬರೆದ ರೀತಿಯೇ ಅಳಿದರು ಕೂಡಾ. ದಿನೇ ದಿನೇ ಅನ್ನ, ಪಾನೀಯ, ಔಷಧಿಗಳನ್ನು ತ್ಯಜಿಸುತ್ತಾ ನಿರಾಹಾರಿಯಾಗಿದ್ದು ದೇಹ ತ್ಯಜಿಸಿದ ಅವರು ಕೊನೆಗೂ ಮೃತ್ಯುವನ್ನು ಗೆದ್ದು ತಮ್ಮ ದೇಶೀಯರಿಟ್ಟ ಮೃತ್ಯುಂಜಯ ಹೆಸರನ್ನು ಸಾರ್ಥಕವಾಗಿಸಿಕೊಂಡರು.

              ದೇಶವನ್ನು ಸೈನಿಕೀಕರಣಗೊಳಿಸುವ ಸಲಹೆಯನ್ನು ಸಾವರ್ಕರ್ ಸ್ವಾತಂತ್ರ್ಯಪೂರ್ವದಿಂದಲೇ ಕೊಡುತ್ತಾ ಬಂದಿದ್ದರು. ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. ಮಾತ್ರವಲ್ಲ 1954ರಲ್ಲಿ ಟಿಬೇಟನ್ನು ಚೀನಾದ ತೆಕ್ಕೆಗೆ ಬಿಡುವ ಒಪ್ಪಂದಕ್ಕೂ ಸಹಿ ಹಾಕಿದರು. ಚೀನಾ ಅಷ್ಟರಲ್ಲಾಗಲೇ ಭಾರತದ ಗಡಿ ಭಾಗಗಳನ್ನು ನುಂಗಲು ಶುರುಮಾಡಿತ್ತು. 1960ರ ವೇಳೆಗೆ ನೇಪಾಳ, ಅಪ್ಘಾನಿಸ್ಥಾನ, ಪಾಕಿಸ್ತಾನ, ಬರ್ಮಾ ಇಂಡೋನೇಷಿಯಾಗಳನ್ನು ತನ್ನ ಜೊತೆಗೂಡಿಸಿಕೊಂಡು ಭಾರತವನ್ನು ಒಂಟಿಯಾಗಿಸಿತು. ನೆಹರೂ ಸಹಿತ ಕಾಂಗ್ರೆಸ್ ನೇತಾರರೆಲ್ಲರೂ ಚೀನಾ ಯುದ್ಧ ಮಾಡುವುದಿಲ್ಲ ಎನ್ನುತ್ತಾ ಚೀನಾದ ಪರವಾಗಿ ವಾದ ಮಂಡಿಸಲು ಆರಂಭಿಸಿದ್ದಲ್ಲದೇ ನಾವಾಗಿಯೇ ನಿಶ್ಶಸ್ತ್ರೀಕರಣ ನೀತಿ ಸ್ವೀಕರಿಸಿ ಶಸ್ತ್ರಗಳನ್ನು ವಿಸರ್ಜಿಸಬೇಕು ಎಂಬ ಮೊಂಡುವಾದವನ್ನು ಆರಂಭಿಸಿದರು. ಅಷ್ಟು ಹೊತ್ತಿಗೆ ಚೀನಾ ಲಢಾಕ್ ಹಾಗೂ ನೀಫಾಕ್ಕೆ ನುಗ್ಗಿತ್ತು. ಸಹಸ್ರಾರು ವೀರ ಯೋಧರು ಸರಿಯಾದ ಶಸ್ತ್ರಾಸ್ತ್ರ, ಮದ್ದುಗುಂಡುಗಳಿಲ್ಲದೆ ಕೊಲ್ಲಲ್ಪಟ್ಟರು. ಪಂಚಶೀಲದ ಸ್ಥಂಭಗಳು ಡ್ರಾಗನ್ನಿನ ಆರ್ಭಟಕ್ಕೆ ಬಿದ್ದು ಹೋದವು. ಈ ವಿಪತ್ತನ್ನು ನೋಡಿ ಸಾವರ್ಕರರಿಗೆ ದುಃಖ ತಡೆಯಲಾಗದೆ ತನ್ನ ಚಿಕಿತ್ಸೆಗೆಂದು ಬರುತ್ತಿದ್ದ ವೈದ್ಯರಲ್ಲಿ "ದಯವಿಟ್ಟು ನನ್ನ ಜೀವನವನ್ನು ಕೊನೆಗೊಳಿಸಿಬಿಡಿ. ನನಗಿನ್ನು ಬದುಕುವ ಆಸೆಯಿಲ್ಲ. ದೇಶದ ಈ ದುಃಸ್ಥಿತಿಯನ್ನು ನಾನು ನೋಡಲಾರೆ" ಎಂದು ಗೋಗರೆದರು.

              1963ರ ಡಿಸೆಂಬರಿನಲ್ಲಿ ತಮ್ಮ ಆರೋಗ್ಯ ವಿಚಾರಿಸಲು ಬಂದ ಆಚಾರ್ಯ ಪಿ.ಕೆ.ಅತ್ರೆಯವರ ಬಳಿ "ಶಂಕರಾಚಾರ್ಯ, ಜ್ಞಾನೇಶ್ವರ, ರಾಮದಾಸ, ತುಕಾರಾಮ ಮುಂತಾದರೆಲ್ಲಾ ತಮ್ಮ ಜೀವನೋದ್ದೇಶ ಪೂರೈಸಿದ ಮೇಲೆ ದೇಹತ್ಯಾಗ ಮಾಡಿ ತಮ್ಮ ಇಹಜೀವನ ಯಾತ್ರೆಯನ್ನು ಪೂರೈಸಿದರು. ಈ ಕುರಿತಾಗಿ ನಾನೊಂದು ಲೇಖನ ಬರೆಯಬೇಕೆಂದಿರುವೆ" ಎಂದು ಆತ್ಮಾರ್ಪಣೆ ಮಾಡುವ ತಮ್ಮ ಮನಸ್ಸನ್ನು ಬಿಟ್ಟುಕೊಡದೇ ಹೇಳಿದ್ದರು ಸಾವರ್ಕರ್. ಹಾಗೆ ಯಾರಿಗೂ ತಿಳಿಯದಂತೆ ಲೇಖನವನ್ನೂ ಬರೆದಿಟ್ಟರು. ಅಲ್ಲಿ ಆತ್ಮಹತ್ಯೆಗೂ ಆತ್ಮಾರ್ಪಣೆಗೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಸಾವರ್ಕರ್. ರೋಗ, ಅಪಘಾತ ಇಲ್ಲವೇ ಇನ್ನಾವ ಅಪರಿಹಾರ್ಯ ರೀತಿಯಲ್ಲಿ ಸಾವು ಬಾರದೇ ಇದ್ದು, ಯಾವುದೋ ಕಾರಣಕ್ಕಾಗಿ ಬದುಕು ಬೇಡ ಎಂದೆನಿಸಿದಾಗ ಸಾವನ್ನು ತಾವೇ ಬರಮಾಡಿಕೊಂಡರೆ ಅದು ಆತ್ಮಹತ್ಯೆ ಎನ್ನಿಸಿಕೊಳ್ಳುತ್ತದೆ. ಆದರೆ ಜಗತ್ತಿನಲ್ಲಿ ತಾನು ಮಾಡಬಹುದಾದ ಎಲ್ಲವೂ ಮುಗಿಯಿತು ಎಂದು ಭಾಸವಾಗಿ ಸಂತೃಪ್ತನಾಗಿ ನಿರ್ಲಿಪ್ತ ಭಾವದಿಂದ ತನ್ನ ದೇಹವನ್ನು ಬಿಟ್ಟು ಹೋಗುವುದನ್ನು ಆತ್ಮಾರ್ಪಣೆ, ಆತ್ಮವಿಸರ್ಜನೆ ಎಂದು ಪ್ರಾಚೀನ ಕಾಲದಿಂದಲೇ ಗೌರವಿಸಿಕೊಂಡು ಬರಲಾಗಿದೆ. ಅಂತಹಾ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸದೆ ಪುಣ್ಯಕಾರ್ಯವೆಂದು ಭಾವಿಸಲಾಗಿದೆ. ಈ ಲೇಖನದಲ್ಲಿ ತಾನು ಕೊಡುವ ದೃಷ್ಟಾಂತಗಳನ್ನು ತನ್ನ ವೃದ್ಧಾಪ್ಯದ ಕಾರಣ ಅಧಿಕೃತ ಗ್ರಂಥಗಳನ್ನು ಓದಿ ಕೊಡಲು ಸಾಧ್ಯವಿಲ್ಲದೆ ಕೇವಲ ತನ್ನ ಜ್ಞಾಪಕ ಶಕ್ತಿಯಿಂದ ಕೊಟ್ಟಿರುವುದಾಗಿಯೂ, ಹಾಗಾಗಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ ಅದು ತನ್ನ ಅಂತಿಮ ನಿರ್ಧಾರವನ್ನು ಅಪಕರ್ಷಿಸಲಾರವು ಎಂದಿದ್ದಾರೆ ಸಾವರ್ಕರ್.

             ಪ್ರಖ್ಯಾತ ಮೀಮಾಂಸಕರಾಗಿದ್ದ ಕುಮಾರಿಲಭಟ್ಟರು ತಮ್ಮ ಕಾರ್ಯ ಮುಗಿದೊಡನೆ ತಮ್ಮ ಕೈಗಳಿಂದ ತಾವೇ ಬೆಂಕಿ ಹಚ್ಚಿಕೊಂಡು ಬೂದಿಯಾದರು. ಬೌದ್ಧ ವಿದ್ವಾಂಸರನ್ನು ಅವರದ್ದೇ ಮತವನ್ನು ಮುಂದಿಟ್ಟು ಸೋಲಿಸುವ ಉದ್ದೇಶದಿಂದ, ಛದ್ಮವೇಶಧಾರಿಯಾಗಿ ಬೌದ್ಧರ ನಡುವೆಯೇ ಇದ್ದು ಬೌದ್ಧ ಮತವನ್ನು ಅಭ್ಯಸಿಸಿದ ಆತ ಬಳಿಕ ಕದ್ದು ವಿದ್ಯೆ ಪಡೆದ ಗುರು ದ್ರೋಹದ ಪಾಪ ಪ್ರಾಯಶ್ಚಿತ್ತಕ್ಕಾಗಿ ತುಷಾಗ್ನಿಯೊಳಗೆ ಹೊಕ್ಕರು. ಅದನ್ನು ನಮ್ಮ ಪರಂಪರೆ ಅಗ್ನಿದಿವ್ಯ ಅಥವಾ ಆತ್ಮಾರ್ಪಣೆ ಎಂದಿದೆಯೇ ವಿನಹಾ ಆತ್ಮಹತ್ಯೆಯೆಂದಲ್ಲ. ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಅದ್ವೈತವೆಂಬ ಸೂತ್ರದಿಂದ  ಭಾರತವನ್ನು ಏಕತ್ರಗೊಳಿಸಿ ಹಿಂದೂ ಧರ್ಮದ ಪುನರುತ್ಥಾನಗೈದವರು ಷಣ್ಮತಸ್ಥಾಪನಾಚಾರ್ಯ, ಸ್ವತಃ ಬ್ರಹ್ಮವೇ ಆದ ಆದಿಶಂಕರರು. "ಯದಹರೇವ ವಿರಜ್ಯೇತ್| ತದಹರೇವ ಪ್ರವಜೇತ್ | ಗೃಹಾತ್ ವಾ ವನಾತ್ ವಾ" ಎಂದ ಅವರು ತನ್ನ ಕಾರ್ಯ ಮುಗಿದಾಕ್ಷಣ ಬದರಿಯಲ್ಲಿ ಗುಹೆಯೊಂದನ್ನು ಹೊಕ್ಕು ಯೋಗ ಮಾರ್ಗದಿಂದ ದೇಹತ್ಯಾಗ ಮಾಡಿದರು. ಹೀಗೆ ಶಂಕರರು ಸಹಿತವಾಗಿ ಅನೇಕ ಯೋಗಿಗಳು ಈ ರೀತಿ ತಮ್ಮ ದೇಹತ್ಯಾಗ ಮಾಡಿದ್ದನ್ನು ಪೂಜ್ಯಭಾವನೆಯಿಂದಲೇ ನಮ್ಮ ಪರಂಪರೆ ನೋಡಿದೆಯೇ ಹೊರತು ಅಪರಾಧವೆಂಬಂತೆ ಅಲ್ಲ. ಇಡಿಯ ಬಂಗಾಳವನ್ನು ಭಕ್ತಿರಸದಿಂದ ತೋಯಿಸಿ ಹಿಂದೂ ಸಮಾಜ ಚೈತನ್ಯದಿಂದ ಪುಟಿದೇಳುವಂತೆ ಮಾಡಿದವರು ಚೈತನ್ಯ ಮಹಾಪ್ರಭುಗಳು. ಪುರಿಯ ದಾರಿಯಲ್ಲಿ ಅಮೋಘ ಕೃಷ್ಣ ಜಲಸಾಗರವು ಕೃಷ್ಣನೇ ತಮ್ಮನ್ನು ಕರೆಯುವಂತೆ ಕಂಡು ಜೈ ಶ್ರೀಕೃಷ್ಣ ಎನ್ನುತ್ತಾ ಸಮುದ್ರವನ್ನು ಹೊಕ್ಕು ಜಲಸಮಾಧಿಯಾದರು ಆತ. ತತ್ತ್ವಜ್ಞಾನದ ಸುವರ್ಣ ಕಲಶಗಳೆರಡಾದ ಜ್ಞಾನೇಶ್ವರಿ ಮತ್ತು ಅಮೃತಾನುಭವವನ್ನು ರಚಿಸಿದ ಮೇಲೆ ಗುರು ನಿವೃತ್ತನಾಥರ ಒಪ್ಪಿಗೆಯೊಂದಿಗೆ ಜ್ಞಾನೇಶ್ವರರು ಭೂಗರ್ಭದಲ್ಲಿ ತಾವೇ ರಚಿಸಿದ ಸಮಾಧಿಯೊಳಗೆ ಸೇರಿಹೋದರು.

              ಸನಾತನ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿ ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದವರು ಸಮರ್ಥ ರಾಮದಾಸರು. ಶಿವಾಜಿ ತೀರಿಕೊಂಡ ಬಳಿಕ ಆತನ ಮಗ ಸಂಭಾಜಿ ಶಿವಾಜಿಯ ನಿಷ್ಠಾವಂತ ಸರದಾರರನ್ನು ಸೆರೆಮನೆಗೆ ತಳ್ಳಿದ್ದ. ಆತ ಸಮರ್ಥ ರಾಮದಾಸರನ್ನು ಕಾಣಲೆಂದು ಸಜ್ಜನಗಢದ ಬುಡದಲ್ಲಿ ನಿಂತು ಪ್ರಾರ್ಥಿಸಿದಾಗ ಆತನಿಂದ ತಮಗೆದುರಾಗಬಹುದಾದ ಅಪಾಯವನ್ನು ಮನಗಂಡು ಸಮರ್ಥರು ತನ್ನ ಆರೋಗ್ಯ ಕ್ಷೀಣವಾಗಿದ್ದು ಕೆಳಗಿಳಿದು ಬರಲು ಅಸಹಾಯಕನಾಗಿರುವುದಾಗಿ ಹೇಳಿ ಅನುಗ್ರಹಿಸುವ ಪತ್ರವನ್ನು ಬರೆದರು. ಅದರಲ್ಲಿ ಶಿವಾಜಿಯ ವ್ಯಕ್ತಿತ್ವ, ಶೌರ್ಯ, ಸೂಕ್ಷ್ಮಗ್ರಹಣಶಕ್ತಿಗಳನ್ನು ನೆನಪಿಸಿಕೊಂಡು ಮ್ಲೇಚ್ಛರನ್ನು ಹೊಡೆದೋಡಿಸಿ, ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿದರು. ಬಳಿಕ ಔರಂಗಜೇಬ ಮರಾಠರ ಮೇಲೆ ಆಕ್ರಮಣ ಮಾಡಲು ಸನ್ನದ್ಧನಾಗಿರುವನೆಂಬ ವಿಷಯ ತಿಳಿದೊಡನೆ ತೀರಾ ದುಃಖಿತರಾದ ಅವರು ತನ್ನ ಕೆಲಸವಿನ್ನಿಲ್ಲಿ ಮುಗಿಯಿತು ಎಂದು ಬಗೆದು ಅನ್ನ ನೀರುಗಳನ್ನು ತ್ಯಜಿಸಿದರು. ಅಚಲಾಸನದಲ್ಲಿ ಮಂಡಿಸಿ ರಾಮಧುನ್ ಹಾಡುತ್ತಾ ಹಾಡುತ್ತಾ ತಮ್ಮ ಪ್ರಾಣವನ್ನು ಪ್ರಭು ಶ್ರೀರಾಮನ ಪದಕಮಲಗಳಿಗೆ ಅರ್ಪಿಸಿದರು. ಇಂದಿಗೂ ಸಮರ್ಥರಾಮದಾಸರು ಆತ್ಮಹತ್ಯೆ ಮಾಡಿಕೊಂಡರು ಎಂದು ಯಾರೂ ಹೇಳುವುದಿಲ್ಲ. ಅದೇ ರೀತಿ ಸಂತ ಏಕನಾಥ ಹಾಗೂ ತುಕಾರಾಮರು ತಮ್ಮ ಐಹಿಕ ಜೀವನ ಕೃತಕೃತ್ಯವಾಯಿತು ಎಂದು ತಿಳಿದೊಡನೆ ಸಂತೃಪ್ತಿಯಿಂದ ಇಹಜೀವನವನ್ನು ತೊರೆದು ಪರಂಧಾಮವನ್ನೈದಿದರು.

            ಇವಾವುದನ್ನೂ ನಾವು ಆತ್ಮಹತ್ಯೆ ಎಂದಿಲ್ಲ. ತಮ್ಮ ಜೀವಿತೋದ್ದೇಶ ಸಫಲವಾಗಿದೆ, ಇನ್ನು ತಾನಿರುವುದೆಂದರೆ ಬರಿಯ ಭೂಭಾರ ಎಂದರಿತ ರಿಕ್ತಕಾಮ ಅಥವಾ ಪೂರ್ಣಕಾಮರಾದ ಪ್ರತಿಯೊಬ್ಬ ಧನ್ಯಪುರುಷರು ಸ್ವಪ್ರೇರಣೆಯಿಂದ ತಮ್ಮ ಪ್ರಾಣ ವಿಸರ್ಜಿಸುತ್ತಾರೆ. ತಮ್ಮ ನಶ್ವರ ಜೀವನವನ್ನು ತೊರೆದು ವಿಶ್ವದ ಚಿರಂತನ ಜೀವನದಲ್ಲಿ ಒಂದಾಗುತ್ತಾರೆ. ಇದನ್ನೇ ಯೋಗವಾಸಿಷ್ಠ "ಅಂತರಿಕ್ತೋ ಬಹಿರಿಕ್ತೋ ರಿಕ್ತ ಕುಂಭ ಇವಾಂಬರೇ| ಅಂತಃಪೂರ್ಣೋ ಬಹಿಃಪೂರ್ಣೋ ಪೂರ್ಣಕುಂಭ ಇವಾರ್ಣವೇ ||" ಎಂದಿದೆ. ತಮ್ಮ ಜೀವನದ ಉದ್ದೇಶವು ಸಾಪೇಕ್ಷತಃ ಪೂರ್ಣವಾಯಿತು ಎಂಬ ಆತ್ಮಸಂತುಷ್ಠಿ ಬಂದ ನಂತರ, ತಮ್ಮ ದೇಹವು ಮುಪ್ಪು, ರೋಗಗಳ ಗೂಡಾಗಿ ಸ್ವಂತಕ್ಕೋ, ಪರಿವಾರಕ್ಕೋ ಅಥವಾ ಸಮಾಜಕ್ಕೋ ಹೊರೆಯಾಗಿ ಉಳಿಯುವಂತಾದಾಗ ಅಗ್ನಿಪ್ರವೇಶವೋ, ಗುಹಾಪ್ರವೇಶವೋ, ಪ್ರಾಯೋಪವೇಶವೋ, ಜಲಸಮಾಧಿಯೋ ಅಥವಾ ಯೋಗ ಸಮಾಧಿಯೋ ಹೀಗೆ ಒಂದಿಲ್ಲೊಂದು ಮಾರ್ಗದಿಂದ ದೇಹವನ್ನು ವಿಸರ್ಜಿಸುವುದು ಆತ್ಮಸಮರ್ಪಣೆಯೇ ಸರಿ ಎನ್ನುತ್ತಾ ಸಾವರ್ಕರ್ ಅವಧೂತ ಉಪನಿಷತ್ ಮತ್ತು ಪಂಚದಶಿಯ ಶ್ಲೋಕವನ್ನು ಉದ್ಧರಿಸುತ್ತಾರೆ:-
"ಧನ್ಯೋಹಮ್ | ಧನ್ಯೋಹಮ್
ಕರ್ತವ್ಯಂ ಮೇ ನ ವಿಧ್ಯತೇ ಕಿಂಚಿತ್ |
ಧನ್ಯೋಹಮ್ | ಧನ್ಯೋಹಮ್
ಪ್ರಾಪ್ತವ್ಯಂ ಸರ್ವಮಧ್ಯ ಸಂಪನ್ನಮ್ ||
-ಮಾಡಬೇಕಾದುದು ಏನೂ ಉಳಿದಿಲ್ಲ. ಗಳಿಸಬೇಕಾದುದೆಲ್ಲವೂ ಸಿಕ್ಕಿದೆ. ನಾನು ಧನ್ಯ, ನಾನು ಧನ್ಯ!"

                    ಆತ್ಮಾರ್ಪಣೆಯ ಬಗೆಗಿನ ಲೇಖನ ಬರೆದ ಮೇಲೆ ಸಾವರ್ಕರ್ ಒಂದೆರಡು ಬಾರಿ ಜಲಸಮಾಧಿಯ ಪ್ರಯತ್ನವನ್ನೂ ಮಾಡಿದರು. ಆದರೆ ಆಪ್ತ ಕಾರ್ಯದರ್ಶಿ ಬಾಳಾರಾವ್ ಅವರ ಇಂತಹಾ ಪ್ರಯತ್ನಗಳನ್ನು ವಿಫಲಗೊಳಿಸಿಬಿಟ್ಟರು. ಬಳಿಕ ತಮ್ಮ ಚಿಕಿತ್ಸೆಗೆ ಮತ್ತು ತಮ್ಮನ್ನು ಕಾಣಲೆಂದು ಬರುತ್ತಿದ್ದ ವೈದ್ಯರೆಲ್ಲರಿಗೂ ಸುಖಸಾವು ಬರುವಂತಹಾ ಔಷಧಿ ಕೊಟ್ಟುಬಿಡಿ ಎಂದರೂ ಅವರ್ಯಾರೂ ನೆರವಾಗಲಿಲ್ಲ. ಮುಂದೆ 1966ರ ಫೆಬ್ರವರಿ 3ರಂದು ಪ್ರಾಯೋಪವೇಶಕ್ಕೆ ಆರಂಭಿಸಿದ ಅವರು ಆಹಾರ, ಚಹಾ, ನೀರು ಹೀಗೆ ಒಂದೊಂದನ್ನೇ ತ್ಯಜಿಸುತ್ತಾ ಕೊನೆಗೆ ವೈದ್ಯರನ್ನೂ ಹತ್ತಿರ ಬರಗೊಡದೆ, "ನಾವು ನಮ್ಮ ಊರಿಗೆ ಹೊರಟಿದ್ದೇವೆ, ನಮ್ಮ ನಮಸ್ಕಾರ ಸ್ವೀಕರಿಸಿ. ಕೊಡುವುದು, ತೆಗೆದುಕೊಳ್ಳುವುದು ಇನ್ನೆಲ್ಲಿ?  ಮಾತು ಮುಗಿಯಿತಿನ್ನು" ಎಂಬ ಸಂತ ತುಕಾರಾಮರ ಪದ್ಯವನ್ನುಚ್ಛರಿಸುತ್ತಾ ಫೆಬ್ರವರಿ 26ರಂದು ಮೂಲನೆಲೆಗೆ ಗೆಳೆಯ ಮೃತ್ಯುವಿನ ಕೈಹಿಡಿದು ನಡೆದೇ ಬಿಟ್ಟರು! ಅದು ಆತ್ಮಾರ್ಪಣೆ.

              ಕಟುಕ ಬ್ರಿಟಿಷರ ಕೆಂಗಣ್ಣಿಗೆ ಬಿದ್ದಾಗ, ಸಾಗರ ಈಜಿದಾಗ, ಅಂಡಮಾನಿನಲ್ಲಿ ಕರಿನೀರ ಶಿಕ್ಷೆಯಲ್ಲಿ ನರಳಿದಾಗ, ವೃದ್ಧಾಪ್ಯದ ಅಶಕ್ತತೆ, ಕಾಯಿಲೆಗಳಿಗೆ ತುತ್ತಾದಾಗ..... ಹೀಗೆ ಪ್ರತೀ ಬಾರಿಯೂ ಅವರು ಮೃತ್ಯುವನ್ನು ಗೆದ್ದರು. ಕೊನೆಗೆ ಮೃತ್ಯುವನ್ನು ಪರಮ ಮಿತ್ರನಂತೆ ಆಲಿಂಗಿಸಿಕೊಂಡು ಮೃತ್ಯುಂಜಯ ಎನ್ನಿಸಿಕೊಂಡರು. ಆದರೆ...ಆದರೆ ಯಾವ ದೇಶಕ್ಕಾಗಿ ತನ್ನದೆಲ್ಲವನ್ನು ಅರ್ಪಿಸಿದ್ದರೋ ಅದೇ ದೇಶ ಅವರಿಗೆ ಬಾರಿ ಬಾರಿಗೂ ಅವಮಾನದ ಸಾವನ್ನು ಕೊಟ್ಟಿತು. ಗಾಂಧಿ ಹತ್ಯೆಯ ಕಳಂಕವನ್ನು ಅವರ ತಲೆಗೆ ಕಟ್ಟಲು ಯತ್ನಿಸಿತು. ಅಹಿಂಸಾವಾದಿಗಳು ಅವರತ್ತ ಕಲ್ಲೆಸೆದರು. ಪಾಕಿಸ್ತಾನದ ಪ್ರಧಾನಿ ಬರುವಾಗಲೂ ಅವರನ್ನು ಬಂಧಿಸಿತು. ದೇಶ ಸ್ವತಂತ್ರಗೊಂಡ ಬಳಿಕವೂ ಒಂದು ರೀತಿಯ ಗೃಹಬಂಧನದಲ್ಲಿ ಇರಿಸಿ ಅವರ ಸುತ್ತ ಗೂಢಚಾರರನ್ನು ಬಿಟ್ಟಿತು. ಯುದ್ಧಪಿಪಾಸು, ಹಿಂದೂ ಉಗ್ರವಾದಿ ಎಂದೆಲ್ಲಾ ಜರೆಯಿತು. ಅವರು ಆತ್ಮಾರ್ಪಣೆ ಮಾಡಿಕೊಂಡ ಬಳಿಕವೂ ಈ ಅವಮಾನದ ಸಾವು ನಿಲ್ಲಲಿಲ್ಲ. ಅಧಿಕೃತ ದಾಖಲೆ ಇಲ್ಲದಿದ್ದರೂ ಅವರ ಕ್ಷಮಾಪಣೆಯೆಂಬ ನಾಟಕವನ್ನೇ ಗುರಿ ಮಾಡಿಕೊಂಡು ಹೇಡಿ ಎಂಬಂತೆ ಜರೆಯಿತು. ಈ ಅವಮಾನವೆಂಬ ಕೊಲೆ ಇವತ್ತಿಗೂ ಮುಂದುವರೆದಿದೆ. ಆದರೆ ಅವರು ಇದಕ್ಕಾಗಿ ಯಾವುದೇ ಪ್ರತೀಕಾರ ಬಯಸಲಿಲ್ಲ. ಬಯಸಿದ್ದರೆ ಅವರು ಇದೆಲ್ಲಕ್ಕೂ ನ್ಯಾಯಾಲಯದಲ್ಲಿ ಮಂಗಳ ಹಾಡಬಹುದಿತ್ತು. ಬಯಸಿದ್ದರೆ ಪ್ರಧಾನಿಯೂ ಆಗಬಹುದಿತ್ತು. ಆದರೆ ಆತ, ಅವರೆಲ್ಲಾ ತನ್ನ ದೇಶವಾಸಿಗಳು ಎಂಬ ಔದಾರ್ಯ ತೋರಿ ಕ್ಷಮಿಸಿಬಿಟ್ಟರು. ಅದು ಅವರ ದೊಡ್ಡಗುಣ, ಅದು ನಿಜವಾದ ಅಹಿಂಸಾಪಾಲನೆ. ಆತ ಎಂತಹಾ ಕಾಲಘಟ್ಟದಲ್ಲೂ, ಎಂತಹಾ ಕ್ಲಿಷ್ಟ ಸನ್ನಿವೇಶದಲ್ಲೂ ತನ್ನ ಸಿದ್ಧಾಂತಪಥದಿಂದ ಬದಿಗೆ ಸರಿಯಲಿಲ್ಲ. ಯಾಕೆಂದರೆ ಅವರು ನಿಜವಾದ ಸ್ವಾತಂತ್ರ್ಯ ವೀರರಾಗಿದ್ದರು. ದೇಶಕ್ಕಾಗಿ ಅವರು ಎಂದೋ ಆತ್ಮಾಹುತಿಗೈದಾಗಿತ್ತು!