ಪುಟಗಳು

ಗುರುವಾರ, ಜೂನ್ 30, 2016

ಅಶೋಕನ ಅತಿರೇಕದ ಅಹಿಂಸೆಯಿಂದ ಕುಸಿದು ಬಿದ್ದ ಕ್ಷಾತ್ರ

ಅಶೋಕನ ಅತಿರೇಕದ ಅಹಿಂಸೆಯಿಂದ ಕುಸಿದು ಬಿದ್ದ ಕ್ಷಾತ್ರ 


ಜಗತ್ತಿನ ಎಲ್ಲಾ ಇತಿಹಾಸಜ್ಞರೂ ಅಶೋಕನನ್ನು ಆದರ್ಶ ರಾಜನೆಂದೇ ಹಾಡಿ ಹೊಗಳಿದ್ದಾರೆ. ಪ್ರಾಚೀನ ರಾಜರುಗಳಲ್ಲಿ ಯಾರೂ ಯಾವ ದೇಶದಲ್ಲಿಯೂ ಅಶೋಕನಂತೆ ಧರ್ಮಶಾಸನ ಮಾಡಿರಲಿಲ್ಲ. ಇಂದಿಗೆ ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಕೆಳಗೆ ಈ ಮಟ್ಟದಲ್ಲಿ, ಈ ವ್ಯಾಪ್ತಿಯಲ್ಲಿ, ಈ ತೆರನಾಗಿ ರಾಜ್ಯಭಾರ ಮಾಡಿರಲಿಲ್ಲ. ಇಷ್ಟು ತೀವ್ರವಾದ ಆತ್ಮವಿಮರ್ಶನೆ ಮತ್ತು ಆತ್ಮನಿವೇದನೆಯ ದಾಖಲೆಗಳನ್ನು ಯಾರೂ ಮಾಡಿರಲಿಲ್ಲ. ಆದರೆ ಇದೇ "ಅತಿ ಸರ್ವತ್ರವರ್ಜಯೇತ್" ಎನ್ನುವಂತಾದದ್ದೂ ಅಷ್ಟೇ ಸತ್ಯ! ಅತಿರಂಜಿತ ಬೌದ್ಧ ಗ್ರಂಥಗಳ ಪ್ರಕಾರ ತನ್ನ ನೂರು ಮಂದಿ ಸೋದರರನ್ನು ಮಂತ್ರಿ ರಾಧಾಗುಪ್ತನ(ಈತನನ್ನು ಚಾಣಕ್ಯನ ಮೊಮ್ಮಗ, ಮಹಾನೀಚ ಬ್ರಾಹ್ಮಣನೆನ್ನುತ್ತವೆ ಬೌದ್ಧಗ್ರಂಥಗಳು) ದುರಾಲೋಚನೆಯಂತೆ ಸ್ವಮತಾಗ್ರಹದಿಂದ ತರಿದು ಪಟ್ಟವೇರಿದ್ದ ಅಶೋಕ, ಆದರೆ ಇತ್ತೀಚಿನ ಸಂಶೋಧನೆಗಳು ಇವನ್ನೆಲ್ಲಾ ಕಟ್ಟುಕಥೆ ಎಂದಿವೆ. ವಿಶೇಷತಃ ನೆಹರೂ ಯುಗದ ರಾಜಕೀಯ ದುರುದ್ದೇಶಗಳಿಗಾಗಿ ಅಶೋಕನನ್ನು ಎತ್ತಿ ಹಿಡಿಯುವ ಪೃಥೆ ಮೊದಲಾಯಿತು.  ತನ್ನ ತಂದೆ-ತಾತಂದಿರು ಕೊಟ್ಟ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತಾರ ಮಾಡಿಕೊಂಡಿದ್ದ ಅಶೋಕನ ಕಣ್ಣು ಆಗ್ನೇಯದಲ್ಲಿದ್ದ ಕಳಿಂಗದ ಮೇಲೆ ಬಿತ್ತು. ಘನಘೋರ ಕದನ. ಆ ಯುದ್ಧದಲ್ಲಿ ಅಶೋಕ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೆರೆ ಹಿಡಿಯಬೇಕಾಯಿತು. ಒಂದು ಲಕ್ಷಕ್ಕೂ ಅಧಿಕ ಜನರನ್ನು ಕೊಲ್ಲಬೇಕಾಯಿತು.

ತಾನೆಸಗಿದ ಉಗ್ರ ಹಿಂಸೆಗೆ ಪಶ್ಚಾತ್ತಾಪಪಟ್ಟು ಅಶೋಕ ಬೌದ್ಧನಾದನೆನ್ನುತ್ತಾರೆ. ಆದರೆ ಈ ಸಂಗತಿ ಇತಿಹಾಸದಲ್ಲೆಲ್ಲೂ ಸ್ಪಷ್ಟವಾಗಿಲ್ಲ. ಏಕೆಂದರೆ ತಾನು ಬೌದ್ಧನಾದೆನೆಂದು ಸ್ವಯಂ ಎಲ್ಲೂ ಹೇಳಿಕೊಳ್ಳುವುದಿಲ್ಲ. ಅವನ ಅಸಂಖ್ಯ ಧರ್ಮಶಾಸನಗಳಲ್ಲೆಲ್ಲೂ ಇದು ಉಲ್ಲೇಖಗೊಂಡಿಲ್ಲ. ಅವನು ಶ್ರಮಣರನ್ನೂ, ಬ್ರಾಹ್ಮಣರನ್ನೂ ನಿರ್ವಿಶೇಷವಾಗಿ ಗೌರವಿಸಬೇಕೆನ್ನುತ್ತಾನೆ. ಶ್ರಮಣ, ತೀರ್ಥಕ, ತೀರ್ಥಂಕರ, ಅರ್ಹಂತ, ಉಪಾಸಕ ಮೊದಲಾದ ಮೇಲ್ನೋಟಕ್ಕೆ ಜೈನ-ಬೌದ್ಧಗಳೆಂಬಂತೆ ತೋರುವ ಪದಗಳು ವೇದಮೂಲೀಯವೇ; ಇವೆಲ್ಲಾ ಮೂಲತಃ ಸನಾತನ ಧರ್ಮದ್ದೇ ಎಂದು ಆನಂದ ಕುಮಾರ ಸ್ವಾಮಿ, ಬಲದೇವ ಉಪಾಧ್ಯಾಯ, ಗೋವಿಂದ ಚಂದ್ರ ಪಾಂಡೆಯಂತಹ ವಿದ್ವಾಂಸರು ನಿರೂಪಿಸಿದ್ದಾರೆ. ಹೀಗಾಗಿ ಅಶೋಕನು ಹೆಸರಿಸುವ ಶ್ರಮಣರು ವೈದಿಕ ಸನ್ಯಾಸಿಗಳೂ ಆಗಬಹುದಷ್ಟೇ!ಕೆಲವು ಕಡೆ ಶ್ರಮಣರೆಂದು ಹೆಸರಿಸುವಾಗ ಜೈನರನ್ನೂ ಗೌರವಿಸುವ ವಿಚಾರ ತಿಳಿಯುತ್ತದೆ. ಆತ ಆತ್ಮವಿಮರ್ಶನೆ ಮಾಡಿಕೊಂಡದ್ದು ನಿಜ. ಕಳಿಂಗ ಯುದ್ಧವಾದ ಬಳಿಕ ಅವನ್ಯಾವ ಯುದ್ಧವನ್ನೂ ಮಾಡಲಿಲ್ಲ. ಹಾಗೆಂದೂ ಕಳಿಂಗರಿಗೆ ಸ್ವಾತಂತ್ರ್ಯವನ್ನೂ ಕೊಡಲಿಲ್ಲ. ಅವರ ಕ್ಷಮೆಯನ್ನೂ ಬೇಡಲಿಲ್ಲ! ಹಾಗಾಗಿ ಅವನ ವೈರಾಗ್ಯವೆನ್ನುವುದು ಕ್ಷಾತ್ರವನ್ನು ಸರಿಯಾಗಿ ನಿರ್ವಹಿಸದ ಅತ್ತಿತ್ತ ಹೊಯ್ದಾಟದ ಸಂಧಿಗ್ಧ ಸ್ಥಿತಿ! ಅರ್ಜುನನಿಗಾದರೋ ಕೃಷ್ಣನಿದ್ದ. ಅಶೋಕನಿಗೆ ಕೃಷ್ಣನ ಬೆಳಕೂ ಸಿಕ್ಕಲಿಲ್ಲ. ಬುದ್ಧನ ದಿಟವಾದ ಬದುಕೂ ದಕ್ಕಲಿಲ್ಲ. ದೇಶದ ರಾಜನಾದವ ನಾನು ಇನ್ನು ಮುಂದೆ ಯುದ್ಧವನ್ನೇ ಮಾಡುವುದಿಲ್ಲ ಎಂದರೆ ದೇಶದ ಗತಿ ಏನು? ರಾಜಸೂಯಧ್ವರದ ಬಳಿಕ ಯಾರೇನು ಹೇಳಿದರೂ ವಿರೋಧಿಸುವುದಿಲ್ಲ. ಏನನ್ನೂ ನಿರಾಕರಿಸುವುದಿಲ್ಲ ಎಂದು ಯುದ್ಧಿಷ್ಟಿರ ಮಾಡಿದ ಪ್ರತಿಜ್ಞೆಯಿಂದ ಎಷ್ಟೆಲ್ಲಾ ಅನಾಹುತವಾಯಿತು. ಜೂಜಿಗೆ ಕರೆದಾಗಲೂ ಹೋಗಬೇಕಾಯಿತು. ಹೆಂಡತಿಯನ್ನು ಪಣಕ್ಕೊಡ್ಡು, ಅವಳನ್ನು ಸಭೆಗೆ ಎಳೆಸು ಅಂದದ್ದಕ್ಕೂ ಅಸ್ತು ಎನ್ನಬೇಕಾಯಿತು. ತಂತ್ರಕ್ಕೆ ಪ್ರತಿತಂತ್ರ ಹೂಡುವುದು, ಕಚ್ಚದಿದ್ದರೂ ಬುಸುಗುಡುತ್ತಾ ಇರುವುದು ಕ್ಷಾತ್ರ ನೀತಿ. ಆದರೆ ಬುದ್ಧನನ್ನು ಪೂಜಿಸಿದ ಅಶೋಕನಿಗೆ ಬುದ್ಧನ ತತ್ವಗಳೇ ಸರಿಯಾಗಿ ಅರ್ಥವಾಗಲಿಲ್ಲ.

ಬುದ್ಧ ಅಶೋಕನಿಗಿಂತಲೂ ಮುನ್ನೂರು ವರುಷ ಮೊದಲಿದ್ದವ. ಅವನಿಗೆ ಗಣತಂತ್ರವ್ಯವಸ್ಥೆಯ ಪರಿಚಯವಿತ್ತು. ಅವುಗಳ ಲೋಪದೋಶಗಳೂ ತಿಳಿದಿದ್ದವು. ಆದರೂ ಸ್ವಾತಂತ್ರ್ಯಪ್ರೀತಿಯಿಂದ ಹೋರಾಡುವುದನ್ನು ಬೆಂಬಲಿಸಿದ್ದ. ಬುದ್ಧನನ್ನು ಹೇಡಿತನದ-ಹುಸಿ ಸೆಕ್ಯುಲರಿಸಮ್ಮಿನ ಲಾಂಛನವನ್ನಾಗಿಸಿದ್ದಾರೆ. ಆದರೆ ಅವನಿಗೆ ಕ್ಷಾತ್ರ ತೇಜದ ಬಗ್ಗೆ ತಿಳಿದಿತ್ತು. ಆತ ಅತ್ಯಂತ ಪ್ರಾಮಾಣಿಕವಾಘಿ ವೈದಿಕ ಮೌಲ್ಯವನ್ನು ಎತ್ತಿ ಹಿಡಿದಿದ್ದ. ಕಮ್ಯೂನಿಷ್ಟರಿಂದ ರಾಜವಿರೋಧಿ ಎಂದು ಚಿತ್ರಿತನಾದ ಬುದ್ಧ ಉಳಿಯುತ್ತಿದ್ದುದು ರಾಜರ ಅರಮನೆಯ ಆಸುಪಾಸಿನಲ್ಲಿಯೇ. ಅನೇಕ ಅರಸರು ಅವನ ಭಕ್ತರಾಗಿದ್ದರು. ಅವನಿಗೆ ಜ್ಞಾನೋದಯವಾಗುವುದಕ್ಕಿಂತ ಮುಂಚೆಯೇ ಬೇರೆ ಬೇರೆ ರಾಜರ ಪರಿಚಯವಿದ್ದಿತು. ಜ್ಞಾನೋದಯವಾದ ಬಳಿಕವೂ ಬಿಂಬಸಾರ ತನ್ನ ಮಗ ಅಜಾತಶತ್ರು ಪ್ರಸೇನಜಿತ್ ಮೊದಲಾದ ಅರಸರೊಡನೆ ಆತ್ಮೀಯನಾಗಿದ್ದ. ಉದಯನ ವತ್ಸರಾಜನ ರಾಜಧಾನಿ ಕೌಶಾಂಬಿಯಲ್ಲಿ ಚಾತುರ್ಮಾಸ್ಯವನ್ನೂ ಕಳೆದಿದ್ದ. ಕಾಶಿಯ ಬ್ರಹ್ಮದತ್ತ, ಕ್ಷಾತ್ರಗಣಗಳಾದ ಮಲ್ಲ, ಮದ್ರ, ಶಾಕ್ಯ, ಕೋಲೀಯ, ವಜ್ಜಿಗಳ ಜೊತೆ ಅವನ ಒಡನಾಟವಿತ್ತು. ಸುದತ್ತ, ಅನಾಥಪಿಂಡದ ಮೊದಲಾದ ದ್ವೀಪಾಂತರ ವ್ಯಾಪಾರವಿದ್ದ ಶ್ರೀಮಂತ ವೈಣಿಕರೊಡನೆಯೂ ಚೆನ್ನಾಗಿ ವ್ಯವಹರಿಸುತ್ತಿದ್ದ. ರಾಜರು, ಆಢ್ಯರು ತನಗಾಗಿ ಸ್ಥಾಪಿಸಿದ ವಿಹಾರಗಳಲ್ಲಿ ತಂಗುತ್ತಿದ್ದ. ಅವರಲ್ಲಿ ಭಿಕ್ಷಾ ಸ್ವೀಕಾರಕ್ಕೂ ಹೋಗುತ್ತಿದ್ದ. ಇವಿಷ್ಟೂ ಬುದ್ಧನ ಸಮದರ್ಶಿತೆಯ ಸಂಕೇತ. ಲಿಚ್ಛವಿ ಗಣ ಸಂಜಾತ, "ಜ್ಞಾತೃಪುತ್ರ" ವರ್ಧಮಾನ ಮಹಾವೀರ ಬುದ್ಧನನ್ನು ಅಕ್ರಿಯಾವಾದಿ(ಕ್ರಿಯೆ-ಕ್ಷಾತ್ರವನ್ನು ಉಜ್ಜೀವಿಸದೇ ಇರುವವನು) ಎಂದು ಕರೆದಾಗ ಲಿಚ್ಛವಿಗಳ ನಾಯಕ ಸಿಂಹ ಸೇನಾಪತಿ ಬುದ್ಧನನ್ನು "ಮಹಾವೀರರು ಹೇಳುವಂತೆ ನೀವು ಅಕ್ರಿಯಾವಾದಿಗಳು ಹೌದೇ" ಎಂದು ಪ್ರಶ್ನಿಸಿದಾಗ ಬುದ್ಧ  "ನಾನು ಕರ್ಮಯೋಗವನ್ನಾಗಲಿ ದಂಡವನ್ನಾಗಲಿ ವ್ಯಕ್ತಿಯ ಇಚ್ಛಾಸ್ವಾತಂತ್ರ್ಯವನ್ನಾಗಲಿ ಕರ್ತವ್ಯವನ್ನಾಗಲಿ ಎಂದಿಗೂ ವಿಸ್ಮರಣೆ ಮಾಡುತ್ತಿಲ್ಲ. ಯಾವುದು ಅತಿರೇಕಕ್ಕೆ ಹೋಗಬಾರದು ಎಂದಷ್ಟೇ ಹೇಳುತ್ತೇನೆ. ನಾನು ಕ್ರಿಯಾವಾದಿಯೇ" ಎನ್ನುತ್ತಾನೆ. ಇದು ಮಧ್ಯಮಮಾರ್ಗ. ಇದು ಸನಾತನ ಧರ್ಮದ ಮುಖ್ಯಲಕ್ಷಣವೂ ಹೌದು.

ಲಿಚ್ಛವಿಗಳು "ಮಾಗಧರು ನಮ್ಮ ಮೇಲೆ ನಿರಂತರ ಯುದ್ಧ ಮಾಡುತ್ತಾರೆ. ನಮ್ಮ ಸ್ವಾತಂತ್ರ್ಯ-ಸಾರ್ವಭೌಮತ್ವದ ಉತ್ಕರ್ಷವನ್ನು ಕಾಪಾಡಿಕೊಳ್ಳುವುದು ಹೇಗೆ" ಎಂದು ಪ್ರಶ್ನಿಸಿದಾಗ ಬುದ್ಧನು ಸಪ್ತಶೀಲ(ಏಳು ಅಂಶ)ಗಳನ್ನು ಕೊಡುತ್ತಾನೆ. ಇದರ ಬಗ್ಗೆ ಸೀತಾರಾಮ್ ಗೋಯಲರು "ಸಪ್ತಶೀಲ್" ಕಾದಂಬರಿ(ಮೀಠೀ ಬೋಲೀ ಹಿಂದಿಯಲ್ಲಿದೆ)ಯನ್ನೇ ಬರೆದರು. ಬುದ್ಧ ಹೇಳುತ್ತಾನೆ..." ಎಲ್ಲಿಯವರೆಗೂ ನೀವೆಲ್ಲರೂ ಐಕ್ಯಮತ್ಯದಿಂದ ಇರುತ್ತೀರೋ ಅಲ್ಲಿಯವರೆಗೆ ನಿಮಗೆ ಸ್ವಾತಂತ್ರ್ಯವಿರುತ್ತದೆ. ಒಳಜಗಳಗಳನ್ನು ಬಿಟ್ಟು ಗಣತಂತ್ರದ ಕೇಂದ್ರಕ್ಕೆ ಎಲ್ಲರೂ ಬಂದು ಪಾಲ್ಗೊಳ್ಳುವವರೆಗೆ ಹಾಗೂ ರಣದುಂಧುಬಿ ಮೊಳಗಿದಾಕ್ಷಣ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ರಣರಂಗಕ್ಕೆ ಧುಮುಕುವವರೆಗೆ ನಿಮ್ಮ ಸ್ವಾತಂತ್ರ್ಯ ಉಳಿಯುತ್ತದೆ." ಅಹಿಂಸೆಯ ಮೂರ್ತಿ ಎಂದು ಖ್ಯಾತಿವೆತ್ತಾತನೂ ಹೇಳಿದ್ದು ಸನಾತನ ಧರ್ಮದ ವ್ಯಾಖ್ಯೆಯನ್ನೇ! ರಾಷ್ಟ್ರರಕ್ಷಕರು ಸದಾ ಆಯುಧಪಾಣಿಗಳಾಗಿ ಮೌಲ್ಯಯುತ ಜೀವನ ನಡೆಸಬೇಕೆಂದು ಹೇಳಿದ ಬುದ್ಧ ವಿನಯಪಿಟಿಕದಲ್ಲಿ ಭಿಕ್ಷುಗಳಿಗೂ ಯುದ್ಧತಂತ್ರ ಮತ್ತು ಆತ್ಮರಕ್ಷಣೆಯ ಮಾರ್ಗಗಳು ಗೊತ್ತಿರಬೇಕೆಂದು ಹೇಳಿದ್ದಾನೆ. ಬೌದ್ಧ ಮತ ನಮ್ಮ ದೇಶದಿಂದ ಹೊರಹೋದಾಗ ಅಲ್ಲಿನವರು ಭಿಕ್ಷುಗಳ ಯುದ್ಧಕೌಶಲಗಳನ್ನು ಸಮರ್ಥವಾಗಿ ಬಳಸಿಕಂಡರು. ನಮ್ಮಲ್ಲಿ ಮರೆತೇ ಬಿಟ್ಟರು. ನಾಲಂದಾ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಹಾಗೂ ಸಮರಕಲೆ(ಮಾರ್ಷಲ್ ಆರ್ಟ್ಸ್) ಪ್ರತಿಯೊಬ್ಬ ವಿದ್ಯಾರ್ಥಿಯೂ ಸನ್ಯಾಸಿಯೂ ಕಲಿಯಲೇಬೇಕಾದ ವಿಷಯಗಳಾಗಿದ್ದವು. ಅಶೋಕನಿಗೇಕೆ ಇದು ತಿಳಿಯಲಿಲ್ಲ? ಅಶೋಕನ ಹೊತ್ತಿಗೆ ಬೌದ್ಧ ಮತದ ಅವನತಿ ಆರಂಭವಾಗಿತ್ತು. ಅಶೋಕ ತನ್ನ ಮಟ್ಟಿಗೆ ತಾನು ಹಿಂಸೆಗೆ ಪಶ್ಚಾತ್ತಾಪ ಪಟ್ಟುದೇನೋ ಸರಿ. ಅನ್ಯಾಯವಾಗಿ ಅದನ್ನು ದೇಶದ ಕ್ಷಾತ್ರ ನೀತಿಯ ಮೇಲೇಕೇ ಹೇರಬೇಕಿತ್ತು? ವ್ಯಕ್ತಿಯಾಗಿ ಅಶೋಕ ದೊಡ್ಡವನಿರಬಹುದು. ಆದರೆ ಸಮಷ್ಟಿ ಹಿತದಲ್ಲಿ ಆತನದ್ದು ದೌರ್ಬಲ್ಯವೇ ಸರಿ. ಆತನ ಈ ನೀತಿಯಿಂದಾಗಿಯೇ ಮತ್ತೆ ಗ್ರೀಕರು ಪ್ರಬಲರಾದರು. ಸತ್ರಪರ ಆಳ್ವಿಕೆ ಪ್ರಾರಂಭವಾಯಿತು. ಮಧ್ಯಭಾರತದ ಉಜ್ಜಯಿನಿಯವರೆಗೆ ಅವರು ಬರುವಂತಾಯಿತು. ಆದರೆ ಬಲಿಷ್ಟವಾದ ಸನಾತನ ಧರ್ಮದ ಸಾಮಾಜಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ರಚನೆಯ ಕಾರಣ ಅದು ಗ್ರೀಕರನ್ನೂ ತನ್ನಲ್ಲಿ ಜೀರ್ಣಿಸಿಕೊಂಡಿತು. ಸನಾತನ ಧರ್ಮೀಯರಿಗಿಂತ ಹೆಚ್ಚಿನ ಸನಾತನ ಧರ್ಮೀಯರಂತೆ ಸಂಸ್ಕೃತವನ್ನು ಕಲಿತರು. ವೇದೇತಿಹಾಸಗಳನ್ನು ಅಭ್ಯಾಸ ಮಾಡಿದರು. ಇಲ್ಲಿನ ಸಾಂಸ್ಕೃತಿಕ ಜಗತ್ತಿನೊಂದಿಗೆ ಒಂದಾಗುವುದಕ್ಕೆ ಹಾರ್ದಿಕವಾಗಿ ತೊಡಗಿದರು. ಗ್ರೀಕರು, ಶಕರು, ಹೂಣರ ಮತಗಳು ಮತಾಂಧ ಇಸ್ಲಾಂ-ಕ್ರೈಸ್ತಗಳಂತಲ್ಲದ ಕಾರಣ ಈ ಸಮನ್ವಯವು ಸಾಧ್ಯವಾಯಿತು.

ಅಶೋಕನು ಸಂನ್ಯಾಸಿಯಾಗಿದ್ದ, ಬೌದ್ಧ ಭಿಕ್ಷುವಾಗಿದ್ದ ಎಂದು ಇತ್ಸಿಂಗನೇ ಮೊದಲಾದ ಒಬ್ಬಿಬ್ಬರು ಚೈನೀಯಾತ್ರಿಕರು ಉಲ್ಲೇಖಿಸಿದ್ಡಾರೆ. ಆ ರೀತಿಯಾದ ಒಂದು ವಿಗ್ರಹವನ್ನೂ ನೋಡಿದ್ದೇವೆ ಎನ್ನುತ್ತಾರೆ. ಬೌದ್ಧರಲ್ಲಿ ಒಂದು ವ್ಯವಸ್ಥೆಯಿದೆ. ಯಾರು ಬೇಕಾದರೂ ಸಂನ್ಯಾಸಿಯಾಗಬಹುದು, ಅಲ್ಲಿಂದ ಹಿಂದಕ್ಕೆ ಬಂದು ಗೃಹಸ್ಥನಾಗಬಹುದು, ಬೇರೊಂದು ಆಶ್ರಮಕ್ಕೆ ಹೋಗಬಹುದು. ಮೊದಲಾಗಿ ಇವರೆಲ್ಲಾ ಚೀನಾದಿಂದ ಭಾರತಕ್ಕೆ ಬಂದ ಬೌದ್ಧ ಯಾತ್ರಿಕರು. ಅಲ್ಲದೆ ಇವರೆಲ್ಲಾ ಸ್ವಮತಾಭಿಮಾನದಿಂದ ಸ್ತ್ಯದೂರವಾದ ಮಾತುಗಳನ್ನಾಡಿದ್ದೂ ಇದೆ. ಅಶೋಕನು ಭಿಕ್ಷುವೇಶದಲ್ಲಿರುವ ವಿಗ್ರಹವನ್ನು ತಾನು ನೋಡಿದ್ದೇನೆನ್ನುವ ಅವನ ಮಾತನ್ನು ನೆಚ್ಚಿದರೆ ಅಶೋಕನು ತನ್ನಧಿಕಾರವನ್ನು ಪಕ್ಕಕ್ಕಿಟ್ಟೇ ಧರ್ಮಶಾಸನಗಳನ್ನು ಮಾಡಿದ್ದಿರಬೇಕೆನಿಸುತ್ತದೆ. ಹೀಗಾಗಿಯೇ ಅಷ್ಟು ವಿರಕ್ತಿಯ, ಶಾಂತಿ-ಅಹಿಂಸೆಯ ಮಾತುಗಳನ್ನಾಡಿರಬೇಕು. ಅಹಿಂಸಾ ಪರಮೋ ಧರ್ಮ ಎನ್ನುವಂತೆ ಅದರ ಉತ್ತರಾರ್ಧ ಧರ್ಮ ಹಿಂಸಾ ತಥೈವಚ ಎನ್ನುವುದು ಮಹಾಭಾರತದ ನೀತಿ. ಧರ್ಮಬದ್ಧವಾದ ಹಿಂಸೆಗೆ ಅಹಿಂಸೆಯಷ್ಟೇ ಬೆಲೆಯಿದೆ. ಅಲ್ಲದೆ ಅಹಿಂಸೆ, ಅದ್ವೇಷ, ವಿಶ್ವಮೈತ್ರಿಗಳನ್ನೂ ಕ್ಷಮೆ, ಔದಾರ್ಯ, ಕಾರುಣ್ಯಗಳನ್ನು ಇವುಗಳ ಪರಿಪೂರ್ಣಸ್ತರದಲ್ಲಿ ಕೇವಲ ಕೆಲವೇ ಮಂದಿ ತ್ರಿಕರಣಶುದ್ಧರಾದ ಯತಿಗಳು ಆಚರಿಸಬಹುದಲ್ಲದೆ ಬಹುಜನಸಾಮಾನ್ಯರಲ್ಲ. ಕ್ಷತ್ರಿಯರಿಗಂತೂ ಇದು ಅಸಾಧ್ಯ. ಅಸಾಧು ಕೂಡಾ!

            ನಿರಂತರ ಜಾಗರೂಕವಾದ ಸೈನ್ಯವಿಲ್ಲದಿದ್ದರೆ, ಸರ್ವನಿರ್ಣಯಸಮರ್ಥನಾದ ಒಡೆಯನಿಲ್ಲದಿದ್ದರೆ ಸುಸಂಸ್ಕೃತವೂ ಸಮೃದ್ಧವೂ ಆದ ರಾಷ್ಟ್ರ ಉಳಿಯಲಾರದು. ಅಹಿಂಸೆ ಅಹಿಂಸೆ ಎಂದು ಹೇಳುತ್ತಾ ಬೌದ್ಧ ಮತ ಪ್ರಸಾರಕ್ಕೆ ರಾಜ್ಯಾಂಗದಲ್ಲಿ ಪ್ರತ್ಯೇಕ ವಿಭಾಗವನ್ನೇ  ಮಾಡಿ ಅದಕ್ಕಾಗಿಯೇ ಅಧಿಕಾರಿಗಳನ್ನು ನಿಯೋಜಿಸಿದ್ದರೂ ಈ ವ್ಯವಸ್ಥೆಯೂ ಕುಸಿದು ಬಿತ್ತಲ್ಲವೇ? ಇದು ಕ್ಷಾತ್ರ ಕಡಿಮೆಯಾದುದರಿಂದಲೇ ಅಲ್ಲವೆ? ಅಲ್ಲದೆ ಇಂತಹ ಹುರುಡುಗಟ್ಟಿದ ಮತಪ್ರಚಾರದ ಆವೇಶವು ಯಾವುದೇ ಸಹಜವೂ ಜನಮಾನಸನಿಷ್ಟವೂ ಆದ ಸಾಂಸ್ಕೃತಿಕ ಸಂವೇದನೆಗಳ ಆಳ ಸೂಕ್ಷ್ಮತೆಯಿಲ್ಲದ ಕಾರಣ ಹಲವು ಬಗೆಯಲ್ಲಿ ಅನರ್ಥವಾಯಿತು. ಇಂಥ ಪ್ರಕಲ್ಪಗಳು ಎಂದೂ ಅಯುಕ್ತವೆಂಬ ಅಂಶವೂ ಸಾಬೀತಾಯಿತು. ಅಶೋಕನ ಬುಡದಲ್ಲೇ ದೊಡ್ಡ ಕ್ರಾಂತಿ ಉಂಟಾಯಿತೆಂದರೆ ಅಶೋಕ ಎಡವಿದ್ದೆಲ್ಲಿ ಎಂದು ತಿಳಿಯುತ್ತದೆ. ಅಶೋಕ ಸಾಧನೆ ಬಹುಮುಖಿಯಾದದ್ದು, ಕೌಶಲ ಬಗೆಬಗೆಯದ್ದು. ಆದರೆ ತಾನು ಸಮರ್ಥನಿದ್ದೂ, ದಕ್ಷ ಆಡಳಿತ ನೀಡಿಯೂ ಆತ ಯೋಗ್ಯರಾದ ಉತ್ತರಾಧಿಕಾರಿಗಳನ್ನು ತಯಾರು ಮಾಡಲಿಲ್ಲ.

          ಅಶೋಕನ ಕಾಲದಿಂದ ಈಚೆಗೆ ಬಂದ ಅಹಿಂಸೆಯ ಅತಿರೇಕವು ಅನೇಕ ರೀತಿಯ ದೌರ್ಬಲ್ಯಗಳಿಗೂ ತನ್ಮೂಲಕ ಅವಸಾನಕ್ಕೂ ಕಾರಣವಾಯಿತು. ಆದರೆ ಭಗವಾನ್ ಬುದ್ಧ ಎಂದೂ ಈ ರೀತಿಯ ನಿಷ್ಕ್ರಿಯತೆಯನ್ನು ಪ್ರತಿಪಾದಿಸಿರಲಿಲ್ಲ. ವರ್ಧಮಾನ ತೀರ್ಥಂಕರಾದಿಯಾಗಿ ಯಾರೂ ಇಂತಹ ಅತಿರೇಕಕ್ಕೆ ಹೋಗಿರಲಿಲ್ಲ. ಭಾರತವನ್ನಾಳಿದ ಯಾವ ಜೈನ ರಾಜನೂ ಅಹಿಂಸೆ ಎಂದು ಕೈಕಟ್ಟಿ ಕೂತು ಯುದ್ಧದಿಂದ ವಿಮುಖನಾಗಲಿಲ್ಲ. ಹಾಗೆ ನೋಡಿದರೆ ಜೈನ ಮತದಲ್ಲಿ ತೀವ್ರವಾಗಿರುವಷ್ಟು ಅಹಿಂಸಾತೀವ್ರತೆ ಬೌದ್ಧದಲ್ಲಿ ಇಲ್ಲ. ಬೌದ್ಧರಿಗೆ ಪಿಂಡಪಾತದ ವೇಳೆಯಲ್ಲಿ ತಾನಾಗಿ ಬಂದ ಮಾಂಸಾಹಾರ ಭಕ್ಷಣಕ್ಕೆ ನಿಷೇಧವೇನೂ ಇರಲಿಲ್ಲ. ಕೇವಲ ಬೌದ್ಧ, ಜೈನರಲ್ಲಿ ಅಹಿಂಸೆಯ ಬಗ್ಗೆ ಹೇಳಿಲ್ಲ. ಸನಾತನ ಧರ್ಮದಲ್ಲಿಯೂ ಅಹಿಂಸೆಗೆ ಮಹತ್ವವಿದೆ. ಸಂನ್ಯಾಸ ಧರ್ಮದಲ್ಲಿ ಸರ್ವರಿಗೂ ಅಭಯವನ್ನು ಕೊಡಬೇಕು, ಸಂನ್ಯಾಸಿ ಅಗ್ನಿಯನ್ನು ಇಟ್ಟುಕೊಂಡಿರಬಾರದು, ಅಗ್ನಿಯಿಂದ ಲೋಕ ಹಿಂಸೆಯಾಗುತ್ತದೆ, ಮರ ಕಡಿಯಬೇಕಾಗುತ್ತದೆ, ಅಗ್ನಿಗೆ ಆಹುತಿ ನೀಡಬೇಕಾಗುತ್ತದೆ, ಸಂಸಾರವನ್ನು ಆಶ್ರಯಿಸಬೇಕಾಗುತ್ತದೆ. ಹೇಚ್ಚೇನು ಸಂನ್ಯಾಸಿಯ ಅಂತ್ಯಕ್ರಿಯೆಯನ್ನು ಅಗ್ನಿಸಂಸ್ಕಾರದಿಂದ ಮಾಡುವುದಿಲ್ಲ. ಭೂಮಿಯಲ್ಲಿ ಹೂಳುವುದು, ನೀರಿನಲ್ಲಿ ಎಸೆಯುವುದು ಅಥವಾ ಗಾಳಿಯಲ್ಲಿ ಬಿಸುಡುವುದು-ಹೀಗೆ ಅಹಿಂಸಾತ್ಮಕವಾದ ಅಂತ್ಯ ಕ್ರಿಯೆ. ನಮ್ಮಲ್ಲಿ ಪ್ರತಿಯೊಂದು ಆಶ್ರಮಕ್ಕೂ ಅಹಿಂಸೆಯ ತೀವ್ರತೆಯನ್ನು ಪ್ರತ್ಯೇಕವಾಗಿ ಹೇಳಿದ್ದಾರೆ. ಆದರೆ ಅಶೋಕನು ವಿವೇಕದಿಂದ ಅರ್ಥೈಸಿಕೊಳ್ಳಲಿಲ್ಲ. ಕೆಲವು ಇತಿಹಾಸಕಾರರು ಚಂದ್ರಗುಪ್ತ ಮೌರ್ಯನೇ ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಕೈಗೊಂಡ ಎಂದು ಬರೆದಿದ್ದಾರೆ. ಆದರೆ ಆತ ಚಂದ್ರಗುಪ್ತ ಮೌರ್ಯನಲ್ಲ. ಆತ ಸಂಪ್ರತಿ ಚಂದ್ರಗುಪ್ತ. ಅಶೋಕನ ಮೊಮ್ಮಗ. ಕ್ಷಾತ್ರಧರ್ಮ ಚ್ಯುತನಾಗಿದ್ದ ಆತ ಜೈನದೀಕ್ಷೆ ಸ್ವೀಕರಿಸಿ ಶ್ರವಣಬೆಳಗೊಳದ ಚಂದ್ರಗಿರಿ ಎಂದು ಹೆಸರಾದ ಬೆಟ್ಟದಲ್ಲಿ ಭದ್ರಬಾಹುಮುನಿಗಳ ಜೊತೆ ಬಂದು ಸಲ್ಲೇಖನವನ್ನು ಮಾಡಿದ. ಈತನ ಮಗನೇ ಬೃಹದ್ರಥ. ಇವನ ಕಾಲಕ್ಕೆ ಯವನರು ಮಗಧಕ್ಕೆ ನುಗ್ಗಿದರು. ವಿದಿಶಾ-ವಿದರ್ಭಗಳವರೆಗೆ ಆಕ್ರಮಿಸಿಕೊಳ್ಳುತ್ತಾರೆ. ಹೀಗೆ ಅಶೋಕನ ಸಾಮ್ರಾಜ್ಯ ತರಗೆಲೆಗಳು ಉದುರುವಂತೆ ಕುಸಿದು ಬಿತ್ತು.

ಆಧಾರ: ಶತಾವಧಾನಿ ಡಾ|| ಆರ್. ಗಣೇಶರ "ಭಾರತೀಯ ಕ್ಷಾತ್ರ ಪರಂಪರೆ"

ರಣರಾಗಿಣಿ ಧೀರೆ ದುರ್ಗಾವತಿ

ರಣರಾಗಿಣಿ ಧೀರೆ ದುರ್ಗಾವತಿ


              ಅಂಬಾರಿಯ ಮೇಲೆ ಕುಳಿತು ತನ್ನ ಸೈನ್ಯದೊಡನೆ ರಾಣಿ ನರ್ಮದೆಯನ್ನು ದಾಟುತ್ತಿದ್ದಳು. ಮಾವುತನ ಮಗು ಆಯತಪ್ಪಿ ನರ್ಮದೆಗುರುಳಿತು. ತಕ್ಷಣವೇ ನದಿಗೆ ಧುಮುಕಿದ ರಾಣಿ ಮಗುವನ್ನು ಎತ್ತಿ ತಂದು ಜೀವವುಳಿಸಿದಳು. ರಾಣಿಯೇ ಸೇವಕನ ಮಗುವನ್ನು ರಕ್ಷಿಸಿ ಹೊತ್ತು ತರುವುದೆಂದರೇನು? ಅದೂ ಸಹಾ ತನ್ನ ಪ್ರಾಣವನ್ನೇ ಪಣವಾಗಿಟ್ಟು ನೀರಿಗೆ ಧುಮುಕಿ ಮರಳಿ ಮಗುವನ್ನು ಹೊತ್ತು ತಂದು ಮರಳಿ ಅಂಬಾರಿಗೆ ನೆಗೆಯುವುದೆಂದರೆ ಸಾಮಾನ್ಯವೇ? ಕಲ್ಪನೆಗೂ ಮೀರಿದ ಇಂತಹ ಘಟನೆಯೊಂದು ನಡೆದಿರಬಹುದೇ, ನಡೆದಿದ್ದರೆ ಎಲ್ಲಿ ಎನ್ನುವ ಅನುಮಾನಗಳು ಸಹಜ. ಎಲ್ಲೋ ಕೃತ-ತ್ರೇತೆ-ದ್ವಾಪರಗಳ ಘಟನೆಯಿರಬಹುದೆಂದರೆ ನಿಮ್ಮ ಊಹೆ ತಪ್ಪು. ಇಂತಹ ಘಟನೆ ನಡೆದಿರಬಹುದಾದ ದೇಶವೊಂದಿದ್ದರೆ ಅದು ಭಾರತ ಮಾತ್ರ. ಹೌದು ಆಕೆ ಚಂದೇಲರ ರಾಣಿ, ರಣರಾಗಿಣಿ ದುರ್ಗಾವತಿ. ಗೊಂಡ್ವಾಲದ ರಾಜ ಕೀರ್ತಿಸಿಂಹನ ಏಕಮೇವ ಪುತ್ರಿ ಈ ವೀರವತಾರೆ! ಮನಿಯಾಗಢದ ಮನಿಯಾದೇವಿಯ ಅನುಗ್ರಹದಿಂದ 1524 ಅಕ್ಟೋಬರ್ ಐದರಂದು ಜನಿಸಿದ ಸುರಸುಂದರಿ ಸುಶೀಲೆ.

               ಶೂದ್ರರಾಗಿದ್ದರೂ ತಮ್ಮ ವಿಕ್ರಮದಿಂದಲೇ ಕ್ಷತ್ರಿಯರಾದವರು ಚಂದೇಲರು. "ಬ್ರಾಹ್ಮಣಃ ಶೂದ್ರತಾಂ ಯಾತಿ, ಶೂದ್ರೋ ಯಾತಿ ಚ ವಿಪ್ರತಾಂ" ಎನ್ನುವ ಮನುವಾಕ್ಯಕ್ಕೆ ಜ್ವಲಂತ ನಿದರ್ಶನವಿದು. ಬುಂದೇಲಖಂಡದ ಕಾಲಂಜರವನ್ನು ಕೇಂದ್ರವಾಗಿರಿಸಿಕೊಂಡು ಬೆಳೆದ ಚಂದೇಲರು ಯಶೋವರ್ಮ,ಸಬಕ್ತಗೀನ್ ಹಾಗವನ ಮಗ ಮಹಮ್ಮದ್ ಗಜನಿಯರನ್ನು ಬಗ್ಗುಬಡಿದಿದ್ದ ಧಂಗ, ಕುತುಬುದ್ದೀನನ ಸೊಕ್ಕು ಮುರಿದ ತ್ರೈಲೋಕ್ಯಮಲ್ಲನಂತಹ ವೀರರನ್ನು ಕೊಟ್ಟ ರಾಜವಂಶ. ಈಗ ಖಜುರಾಹೋ ಎಂದು ಕರೆಯಲ್ಪಡುವ ಖರ್ಜೂರವಾಹದ ದೇವಾಲಯ ಸಮುಚ್ಚಯಗಳು ಇವರದೇ ಕೊಡುಗೆ. ಇಂತಹ ರಾಜವಂಶದಲ್ಲಿ ಹುಟ್ಟಿದ ವೀರೆ ದುರ್ಗಾವತಿ ಅರಸು ಕುವರರಂತೆ ಬೆಳೆದಳು. ಚಿಕ್ಕವಯಸ್ಸಿಗೇ ಶಸ್ತ್ರ-ಶಾಸ್ತ್ರಗಳಲ್ಲಿ ಕೋವಿದೆಯಾದಳು. ಎಂತಹ ನರಭಕ್ಷಕ ಹುಲಿಯನ್ನಾದರೂ ಲೀಲಾಜಾಲವಾಗಿ ಬೇಟೆಯಾಡಿ ರೈತರಿಗೆ ನೆಮ್ಮದಿ ಕೊಡುತ್ತಿದ್ದ ದುರ್ಗಾವತಿ ತಂದೆಯ ಜೊತೆಗೂಡಿ ಬೇಟೆಯಾಡಲು ಹೋಗುತ್ತಿದ್ದುದು ಮಾತ್ರವಲ್ಲ ರಾಜಶಾಸನದಲ್ಲೂ ನೆರವಾಗುವಷ್ಟರ ಮಟ್ಟಕ್ಕೆ ಬೆಳೆದಳು.

               ಕತ್ತಿವರಸೆಯ ಸ್ಪರ್ದೆ ನಡೆದಿತ್ತು. ದುರ್ಗಾವತಿಯೆದುರು ನಿಲ್ಲಲಾಗದೆ ವೀರರೆಲ್ಲಾ ಕೈಚೆಲ್ಲಿದ್ದರು. ಮನಿಯಾಗಢದ ರಾಜಗೌಂಡ ಸಂಗ್ರಾಮಸಿಂಹನ ಮಗ ದಳಪತಿ ಸಿಂಹ ಅವಳಿಗೆದುರಾಗಿ ಬಂದ. ಅವಳ ಪರಾಕ್ರಮಕ್ಕೆ ಮೆಚ್ಚಿ ರತ್ನ ಖಚಿತ ಕಠಾರಿ "ಭವಾನಿ"ಯನ್ನು ಕೊಟ್ಟ. ಅವರಿಬ್ಬರ ನಡುವೆ ಆದ ಪ್ರೇಮಾಂಕುರ ವಿವಾಹ ಪ್ರಹಸನಕ್ಕೆ ತಿರುಗಿ ದಾಂಪತ್ಯದ ಕುರುಹಾಗಿ ವೀರನಾರಾಯಣನೆಂಬ ಕುವರ ಹುಟ್ಟಿದ. ಚಂದೇಲರ ಕುಮಾರಿಯನ್ನು ಗೊಂಡರವನೊಬ್ಬನಿಗೆ ಕೊಟ್ಟುದುದು ಅದೇ ಮೊದಲು. ಇದರಿಂದ ಎರಡೂ ಸಮುದಾಯಗಳೂ ಹತ್ತಿರವಾಗಿ ಒಟ್ಟಾಗಿ ಶೇರ್ ಷಹಾನ ಆಕ್ರಮಣವನ್ನು ಎದುರಿಸಲು ಮೊದಲ್ಗೊಳ್ಳುವಂತಾಯಿತು. ವಿವಾಹವಾದ ಐದೇ ವರ್ಷದಲ್ಲಿ ಪತಿಯೂ, ಶತ್ರುಗಳ ಕುತಂತ್ರಕ್ಕೆ ಪಿತ ಹಾಗೂ ಮಾವ ಬಲಿಯಾದರು. ದುರ್ಗಾವತಿ ಆಡಳಿತವನ್ನು ತನ್ನ ಕೈಗೆತ್ತಿಕೊಂಡಳು. ಆಕ್ರಮಕ ಶೇರ್ ಷಹಾನ ಸೊಕ್ಕು ಮುರಿದಳು.

           ಎಪ್ಪತ್ತು ಸಾವಿರ ಯೋಧರು, ಇಪ್ಪತ್ತು ಸಾವಿರ ಅಶ್ವಗಳು, ಒಂದು ಸಾವಿರ ಆನೆಗಳುಳ್ಳ ಬಲಿಷ್ಟ ಸೇನೆಯನ್ನು ಕಟ್ಟಿದಳು. ಹದಿನಾರು ವರ್ಷಗಳ ಅವಧಿಯಲ್ಲಿ 51 ಯುದ್ಧಗಳನ್ನು ಮಾಡಿದಳು. ಪ್ರತಿ ಬಾರಿಯೂ ಅವಳದೇ ದಿಗ್ವಿಜಯ. ತನ್ನ ಪ್ರೀತಿಯ ಕರಿಯ ಹತ್ತಿ ಯುದ್ಧರಂಗದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಬಗೆಬಗೆಯ ಆಯುಧಗಳನ್ನು ಚಾಕಚಾಕ್ಯತೆಯಿಂದ ಪ್ರಯೋಗಿಸುತ್ತ ಅರಿಗಳ ಶಿರಗಳನ್ನು ತರಿದು ಹಾಕುತ್ತ ಸಾಕ್ಷಾತ್ ದುರ್ಗೆಯಂತೆ ಕಂಗೊಳಿಸುತ್ತಿದ್ದಳು. ಸೆರೆಸಿಕ್ಕ ಶತ್ರುಗಳನ್ನು ಕ್ಷಮಿಸಿ, ಉಡುಗೊರೆಗಳೊಂದಿಗೆ ಗೌರವಪೂರ್ವಕವಾಗಿ ಬೀಳ್ಕೊಡುತ್ತಿದ್ದ ಆಕೆಯ ಸೌಜನ್ಯವನ್ನು ಶತ್ರುಗಳೂ ಕೊಂಡಾಡುತ್ತಿದ್ದರು.  ಸಾಮ್ರಾಜ್ಯ ವಿಸ್ತರಣೆ ಮಾಡಿದ್ದಲ್ಲದೆ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಳು. ಅವಳ ಅವಧಿಯಲ್ಲಿ ಗೊಂಡ್ವಾನದ ವ್ಯಾಪಾರ ವೃದ್ಧಿಯಾಯಿತು. ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದ ದುರ್ಗಾವತಿ ಸುವ್ಯವಸ್ಥಿತ ಸಮಾಜಕ್ಕಾಗಿ ಕಟ್ಟುನಿಟ್ಟಾದ ಕಾನೂಗಳನ್ನು ಜಾರಿ ಮಾಡಿದ್ದಳು. ತನ್ನ ರಾಜ್ಯದ 23 ಸಾವಿರ ಹಳ್ಳಿ-ಗ್ರಾಮಗಳ ಪ್ರತಿಯೊಬ್ಬ ಊರ ಹಿರಿಯನನ್ನು ಆಕೆ ಹೆಸರು ಹಿಡಿದು ಕರೆಯುತ್ತಿದ್ದಳು. ಪ್ರಜೆಗಳ ದುಃಖ ದುಮ್ಮಾನಗಳನ್ನಾಲಿಸಿ ಅವರ ಸಮಸ್ಯೆಗಳನ್ನೂ ಪರಿಹರಿಸುತ್ತಿದ್ದಳು. ಅಂತಹ ವಾತ್ಸಲ್ಯಮೂರ್ತಿ ಆಕೆ. ಅಬುಲ್ ಫಜಲ್ ತನ್ನ ಅಕ್ಬರ್ ನಾಮಾದಲ್ಲಿ "ತನ್ನ ರಾಜ್ಯದಲ್ಲಿ ನರಭಕ್ಷಕ ಹುಲಿಯೇನಾದರೂ ಕಂಡು ಬಂದರೆ ಅದನ್ನು ಬೇಟೆಯಾಡುವವರೆಗೆ ಆಕೆ ಒಂದು ತೊಟ್ಟು ನೀರೂ ಕುಡಿಯುತ್ತಿರಲಿಲ್ಲ" ಎಂದು ಪ್ರಶಂಸಿಸಿದ್ದಾನೆ. ಮಠ, ಮಂದಿರ, ಬಾವಿ, ಕೆರೆ, ಧರ್ಮಶಾಲೆಗಳನ್ನು ಕಟ್ಟಿಸಿದಳು. ಸಮರ್ಥ ಪರಿಪಾಲನೆಯಿಂದ ರಾಜ್ಯವನ್ನು ಸುಭಿಕ್ಷಗೊಳಿಸಿ ಹಿಂದುಳಿದಿದ್ದ ಗೊಂಡಾಗಳ ಪಾಲಿಗೆ ಬೆಳಕಾದಳು.  ಮಳೆ ಕಡಿಮೆಯಾಗಿ ಭೂಮಿ ಫಲವತ್ತಾಗಿರದ ಕಾರಣ ಹಲವು ಸರೋವರಗಳನ್ನು ಕಟ್ಟಿಸಿದಳು. ತನ್ನ ಹೆಸರಲ್ಲಿ “ರಾಣಿತಾಲ್”, ಅವರತಾಲ್, ದಾಸಿಯ ಹೆಸರಲ್ಲಿ  “ಚರಿತಾಲ್”, ತನ್ನ ವಿಶ್ವಸನೀಯ ಮಂತ್ರಿ ಆಧಾರಸಿಂಹನ ಹೆಸರಲ್ಲಿ "ಆಧಾರ್ ತಾಲ್" ಹೀಗೆ ದುರ್ಗಾವತಿ ನಿರ್ಮಿಸಿದ ಹಲವು ಸರೋವರಗಳು  ಇಂದಿಗೂ ಜನರ ಜೀವನಾಡಿಯಾಗುಳಿದಿವೆ. ಅವಳ ರಾಜ್ಯ ಪರಿಪಾಲನೆಯ ರೀತಿಗೆ ಮಾರು ಹೋದ ಗೊಂಡ್ವಾನ ಪ್ರಜೆಗಳು ಆಕೆಯನ್ನು ಮನೆ ದೇವರಂತೆ ಪೂಜೆ ಮಾಡುತ್ತಿದ್ದರೆಂದರೆ ಆಕೆಯ ಆಡಳಿತ ಹೇಗಿದ್ದೀತು?

                  ಬಾಜ್ ಬಹದ್ದೂರ್ ಹಾಗೂ ಫತೇಖಾನರ ಸೊಲ್ಲಡಗಿಸಿದಳು ದುರ್ಗಾವತಿ. ಯಾರ ತಂಟೆಗೂ ಹೋಗದೆ, ತನ್ನ ಮೇಲೆ ಆಕ್ರಮಣ ಎಸಗಿದವರನ್ನು ಬಿಡದೇ ರಾಜ್ಯವನ್ನು ಸಮರ್ಥವಾಗಿ ಆಳುತ್ತಿದ್ದ ವೇಳೆ ಇಂತಹ ಸಮೃದ್ಧ ದೇಶದ ಮೇಲೆ ಮತಾಂಧ ಅಕ್ಬರನ ಕಣ್ಣು ಬಿತ್ತು. "ಅಕ್ಬರನ ದಾಳಿ ಪಕ್ಕಾ ದುರಾಕ್ರಮಣ. ಅದಕ್ಕೆ ಯಾವ ಪ್ರಚೋದನೆಯೂ ಇರಲಿಲ್ಲ. ದೋಚಬೇಕೆಂಬ ದುರಾಸೆಯನ್ನು ಬಿಟ್ಟರೆ ಅದಕ್ಕೆ ಬೇರಾವ ಸಮರ್ಥನೆಯೂ ಇಲ್ಲ" ಎಂದಿದ್ದಾನೆ ಇತಿಹಾಸಕಾರ ವಿನ್ಸೆಂಟ್ ಸ್ಮಿತ್! ತನ್ನ ಸುಬೇದಾರ ಮಜೀದ್ ಖಾನನನ್ನು ದುರ್ಗಾವತಿಯ ಮೇಲೆ ಆಕ್ರಮಣಕ್ಕೆ ಕಳುಹಿಸಿದಾಗ ದುರ್ಗಾವತಿ ಗೌರ್ ಹಾಗೂ ನರ್ಮದೆಗಳ ನಡುವಲ್ಲಿದ್ದ ನರ್ರೈ ಪರ್ವತ ಶ್ರೇಣಿಯಲ್ಲಿ ಅವನನ್ನು ಎದುರಿಸಿದಳು. ದಳಪತಿ ಅರ್ಜುನ್ ದಸ್ವಾಸ್ ವೀರಮರಣವನ್ನಪ್ಪಿದರೂ, ಮೊಘಲರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೂ ಅವರ ಸೊಕ್ಕು ಮುರಿದ ರಾಣಿ ಅವರನ್ನು ಅಟ್ಟಾಡಿಸಿ ಬಡಿದಳು. ಮತ್ತೆ ತನ್ನ ಮೇಲೆ ಯುದ್ಧಕ್ಕೆ ಬಂದ ಅಕ್ಬರನ ಸರದಾರ ಅಸಫ್ ಖಾನನನ್ನು ಓಡಿಸಿದಳು. ಎರಡು ವರುಷಗಳು ಕಳೆದ ಬಳಿಕ(ಜೂನ್ 24, 1564) ಅಸಫ್ ಖಾನ್ ಮತ್ತೆ ದಾಳಿ ಮಾಡಿದ. ಶತ್ರುಗಳನ್ನು ಹಿಮ್ಮೆಟ್ಟಿಸಿದ ರಾಣಿ ಅವರ ಸರ್ವನಾಶಗೊಳಿಸಲೆಂದು ಬೆನ್ನತ್ತಿ ಹೋದಾಗ ಸಂಗಡಿಗರೇ ತಡೆದರು. ರಾತ್ರಿಯಲ್ಲಿ ಶತ್ರುವಿನ ಬೆನ್ನಟ್ಟುವುದು ಸೂಕ್ತವಲ್ಲ. ಅಲ್ಲದೆ ಸೇನೆಯೂ ಬಳಲಿದ ಕಾರಣ ವಿಶ್ರಾಂತಿ ಪಡೆಯುವುದೇ ಸೂಕ್ತ ಎನ್ನುವ ಸಲಹೆ ಮಾಡಿದರು. ಇದೇ ದುರ್ಗಾವತಿಗೆ ಮುಳುವಾಯಿತು. ರಾತ್ರೋರಾತ್ರಿ ಪಲಾಯನಗೈದಿದ್ದ ಶತ್ರು ಸೇನೆ ದುರ್ಗಾವತಿಯ ಮೇಲೆ ಅದೇ ರಾತ್ರಿ ಮರುದಾಳಿ ಮಾಡಿತು. ಮಿಡತೆಯ ಹಿಂಡಿನಂತೆ ಭಾರೀ ಪಡೆಗಳೊಂದಿಗೆ ಬಂದು ಚೌರಾಗಢ್ ಕೋಟೆಯನ್ನು ಸುತ್ತುವರಿಯಿತು. ಗೊಂಡಾಗಳು ವಿಶ್ರಾಂತಿಯಲ್ಲಿದ್ದರು. ಅನಿರೀಕ್ಷಿತವಾಗಿ ಬಂದ ಆಪತ್ತನ್ನು ಕಂಡ ರಾಣಿ ಈ ಮೋಸದ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲು ಸಿದ್ಧಳಾದಳು. ಆತ್ಮಗೌರವಕ್ಕಾಗಿ ಹೋರಾಡಬೇಕೆಂದು ರಾಣಿ ನೀಡಿದ ಕರೆಗೆ ಗೋಂಡಾಗಳನ್ನು ಬಡಿದೆದ್ದು ನಿಲ್ಲಿಸಿತು. ಇಡೀ ಗೊಂಡ್ವಾನವೇ ಸ್ಪೂರ್ತಿಯಿಂದ ಆತ್ಮರಕ್ಷಣೆಗೆ ಎದ್ದು ನಿಂತಿತು. ರಾಣಿಯ ರಭಸಕ್ಕೆ ಮೊಘಲ್ ಸೇನೆ ಕಕ್ಕಾಬಿಕ್ಕಿಯಾಯಿತು. ರಾಜಕುವರ ವೀರನಾರಾಯಣ್ ವೀರಾವೇಶದಿಂದ ಹೋರಾಡಿ ಗಾಯಗೊಂಡಾಗ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಆಜ್ಞೆ ಮಾಡಿ ದ್ವಿಗುಣ ಪರಾಕ್ರಮದಿಂದ ಹೋರಾಡಿದಳು. ಆದರೆ ರಾಜನ ಬೆಂಬಲಕ್ಕೆ ಕೆಲವು ಯೋಧರು ಹೋಗಬೇಕಾಗಿ ಬಂದ ಕಾರಣ ಸೇನೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು. ಅದೇ ಸಮಯಕ್ಕೆ ಬಾಣವೊಂದು ರಾಣಿ ದುರ್ಗಾವತಿಯ ಕಣ್ತಲೆಗೆ ಬಡಿಯಿತು. ಅದನ್ನು ಕಿತ್ತು ಹಾಕಲು ಯತ್ನಿಸುತ್ತಿದ್ದಾಗ ಇನ್ನೊಂದು ಬಾಣ ಆಕೆಯ ಕುತ್ತಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ತನ್ನ ಕಥೆ ಮುಗಿಯಿತೆಂದು ರಾಣಿಗೆ ಅನ್ನಿಸಿತು. ಮತಾಂಧ ಮೊಘಲರ ಕೈಗೆ ಸಿಕ್ಕಿಬಿದ್ದು ಅಪಮಾನ ಅನುಭವಿಸುವುದಕ್ಕಿಂತ ಆತ್ಮಾರ್ಪಣೆಯೇ ಲೇಸೆಂದು ಆಕೆ ನಿರ್ಧರಿಸಿದಳು. ತನ್ನ ಪ್ರೀತಿಯ ಆನೆಗೆ ಹಾಗೂ ಮಾವುತನಿಗೆ ಸತ್ಕಾರ ಮಾಡಿ, ಉಡುಗೊರೆ ಕೊಟ್ಟು ತನ್ನ ಗಂಡನೇ ಕೊಟ್ಟಿದ್ದ ಸದಾ ಕಾಲದ ಸಂಗಾತಿಯಾಗಿದ್ದ ಖಡ್ಗ "ಭವಾನಿ"ಯಿಂದ ತನ್ನ ರುಂಡವನ್ನು ಮಾತೃಭೂಮಿಗೆ ಅರ್ಪಣೆ ಮಾಡಿದಳು.

            ಗಾಯಗೊಂಡಿದ್ದ ವೀರನಾರಾಯಣ್ ಸುಧಾರಿಸಿಕೊಂಡು ಪ್ರಚಂಡವಾಗಿ ಹೋರಾಡಿದರೂ ಗೆಲುವು ದಕ್ಕಲಿಲ್ಲ. ರಾಜನೂ ಅಸುನೀಗಿದ ಮೇಲೆ ಮೊಘಲ್ ರಕ್ಕಸರು ಊರನ್ನು ಪ್ರವೇಶಿಸುವ ಮೊದಲೇ ಪೌರ ಜನರೆಲ್ಲಾ ಮೊದಲೇ ಸಿದ್ಧ ಮಾಡಿಟ್ಟುಕೊಂಡಿದ್ದ ಸೌದೆ, ಒಣಹುಲ್ಲು, ಹತ್ತಿ, ತುಪ್ಪದಂತಹ ಶೀಘ್ರ ದಫನವಾಗುವ ವಸ್ತುಗಳಿದ್ದ ಆವರಣದೊಳಗೆ ಬಂದು ಕೈಯಾರೆ ಅಗ್ನಿಸ್ಪರ್ಷ ಮಾಡಿಕೊಂಡರು.  ಕೋಟೆಯೊಳಗೆ ಬಂದ ಮೊಘಲ್ ಸೇನೆಗೆ ಬೂದಿಯ ರಾಶಿಯ ಕೊರಡುಗಳ ಕೆಳಗೆ ಜೀವಂತವಾಗಿದ್ದ ರಾಜಕುವರಿಯರಿಬ್ಬರು ಕಂಡರು. ಮೊಘಲರ ಕಾಮುಕತೆಗೆ ಬಲಿಯಾಗುವ ಬದಲು ಅಗ್ನಿಗಾಹುತಿಯೇ ಶ್ರೇಯಸ್ಕರವೆಂದು ಬಗೆದಿದ್ದ ಅವರನ್ನು ಸಾವೂ ವಂಚಿಸಿತ್ತು. ಅವರಿಬ್ಬರು ದೊಡ್ಡಿಯಂತಿದ್ದ ಅಕ್ಬರನ ಜನಾನಕ್ಕೆ ಸಾಗಿಸಲ್ಪಟ್ಟು ನಿತ್ಯಸಾವಿಗೆ ತುತ್ತಾಗಬೇಕಾಯಿತು.

            ಅಕ್ಬರನನ್ನು ಮೂರು ಬಾರಿ ಸೋಲಿಸಿದುದು ಮಾತ್ರವಲ್ಲದೆ 51 ಯುದ್ಧಗಳನ್ನು ಗೆದ್ದ ವೀರ ವನಿತೆ ದಕ್ಷ ಆಡಳಿತದಿಂದ ಗೊಂಡಾಗಳ ಮನೆದೇವತೆಯಾದುದು ಮಾತ್ರವಲ್ಲ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತನ್ನ ಹೆಸರನ್ನು ಬರೆದು ಭಾರತೀಯರಿಗೆ ಸ್ಪೂರ್ತಿದಾಯಕಳಾದಳು. ಈ ವೀರಾಗ್ರಣಿ ರಣ ರಾಗಿಣಿಯ ನೆನಪಿಗಾಗಿ 1988ರಲ್ಲಿ ಅವಳ ಭಾವಚಿತ್ರವಿರುವ ಅಂಚೆಚೀಟಿಯೊಂದನ್ನು ಬಿಡುಗಡೆ ಮಾಡಲಾಗಿದೆ.  ಜಬಲ್ಪುರದಲ್ಲಿ ದುರ್ಗಾವತಿಯ ಹೆಸರಿನ ವಿಶ್ವವಿದ್ಯಾಲಯ(1983) ಹಾಗೂ ಮ್ಯೂಸಿಯಂಗಳನ್ನು ಸ್ಥಾಪಿಸಲಾಗಿದೆ.



ಸೋಮವಾರ, ಜೂನ್ 27, 2016

ವಂದೇ ಮಾತರಂ ದರ್ಶನ! ರಾಷ್ಟ್ರಪ್ರೇಮದ ಭಾವ ಮೀಟಿದ ಬಂಕಿಮ!

ವಂದೇ ಮಾತರಂ ದರ್ಶನ! ರಾಷ್ಟ್ರಪ್ರೇಮದ ಭಾವ ಮೀಟಿದ ಬಂಕಿಮ!


            ಬಿರಿದ ಮಲ್ಲಿಗೆಯಂತೆ ಸುರಿದಿತ್ತು ಶಶಿಯ ಶುಭ್ರ ರಶ್ಮಿ. ಬಿರಬಿರನೆ ಹೆಜ್ಜೆಹಾಕುತ್ತಿದ್ದ ಬ್ರಹ್ಮಚಾರಿ ಭವಾನಂದನ ಹೆಜ್ಜೆ ಸದ್ದಿಗೆ ತರುಲತೆಗಳ ಪಿಸುಮಾತು ಮೌನವಾಗಿತ್ತು. ವ್ಯಾಕುಲಚಿತ್ತನಾಗಿ ಅವನೊಡನೆ ಸಾಗುತ್ತಿದ್ದ ಮಹೇಂದ್ರನಿಗೆ ಕಾವಿ ಧರಿಸಿದ ಆ ಮೊಗದ ರವಿತೇಜ, ಶಶಾಂಕನನ್ನೂ ಮೀರಿಸಿದ ಪ್ರಶಾಂತತೆ, ರುದ್ರ ರಣೋತ್ಸಾಹ ಚಕಿತಗೊಳಿಸಿತ್ತು. ಗಿರಿಯ ಮೇಲೆ ಬೆಳಗುವ ತುಷಾರದಂತಿರುವ ಹಿಮಕರನ ಕಿರಣ, ಲಲನೆಯ ನಾಚಿಸುವ ಸರಸಿರೆಯ ಲಾಸ್ಯ, ಜಲದ ನಾದಕ್ಕೆ ಮೈದೂಗುತ್ತಿದ್ದ ವೃಕ್ಷರಾಜಿ ಭವಾನಂದನ ಮೊಗದಿಂದ ಮಾತ ಸ್ಪುರಿಸಿತ್ತು. ಗಾಂಢೀವದ ಠೇಂಕಾರಕೆ ಬೆದರಿ ಹೊರ ಬಿದ್ದ ಶರಗಳಂತೆ ಬರುತ್ತಿರುವ ನಿರರ್ಗಳ ಮಾತುಗಳು ಮಹೇಂದ್ರನ ಬಿಗುಮಾನವನ್ನು ಸಡಿಲಿಸಿರಲಿಲ್ಲ. ಸ್ಪುರಣೆಗೆ ದೈವ ಪ್ರೇರಣೆಯಲ್ಲದೆ ಇನ್ನೇನು? ಭವಾನಂದನ ಮೊಗದಿಂದ ದೈವಲಿಖಿತ ಗೀತವೊಂದು ಸುಶ್ರಾವ್ಯವಾಗಿ ಜಲಧಿಯ ಜುಳು ಜುಳು ನಾದಕೆ ಜೊತೆಯಾಯಿತು.
"ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ...
...ಸುಖದಾಂ ವರದಾಂ ಮಾತರಂ"
ವಿಸ್ಮಿತನಾದ ಮಹೇಂದ್ರನ ಬಾಯಿಯಿಂದ "ನೀವು ವರ್ಣಿಸುತ್ತಿರುವುದು ದೇಶವನ್ನು. ಆದರೆ ದೇಶ ತಾಯಿಯಾಗಲು ಹೇಗೆ ಸಾಧ್ಯ?" ಎನ್ನುವ ಉದ್ಗಾರವೊಂದು ಹೊರಬಿತ್ತು. ಒಡನೆಯೇ ಕೇಳಿತು ಸಿಂಹಘರ್ಜನೆ - ನಮಗ್ಯಾವ ಮಾತಾಪಿತ, ಬಂಧುಬಳಗಗಳಿಲ್ಲ. ನಮಗಿರುವುದೀ ಸಸ್ಯಶ್ಯಾಮಲೆ ಮಾತ್ರ. ಅವಳೇ ನಮ್ಮ ತಾಯಿ...ಹಾಡು ಭೋರ್ಗರೆಯಿತು!

"ತ್ವಂ ಹೀ ದುರ್ಗಾ ದಶಪ್ರಹರಣಧಾರಿಣೀ... ಎನ್ನುತ್ತಿದ್ದಂತೆ ಸಂಗಮರವರಿ ಕಲ್ಲುಗಳಿಂದ ನಿರ್ಮಿಸಿದ ಮಂದಿರದೊಳಗೆ ಹೊರಗಡೆ ಹಕ್ಕಿಗಳ ಚಿಲಿಪಿಲಿ ನಾದ ಒಳಗಡೆ ನಂದಾದೀಪದ ಬೆಳಕಿನ ಸ್ವಾದದ ನಡುವೆ ಕನಕಲಂಕೃತೆಯಾಗಿ ದಶಭುಜೆಯಾಗಿ ಶೋಬಿಸುತ್ತಿದ್ದ ದುರ್ಗೆಯ ಅಡಿದಾವರೆಗಳಲ್ಲಿ ನತಮಸ್ತಕರಾಗಿದ್ದರು ಸತ್ಯಾನಂದ ಹಾಗೂ ಮಹೇಂದ್ರ...
ವಂದೇ ಮಾತರಂ ಮಂತ್ರ ಸ್ಪುರಿಸಲು ಇದಕ್ಕಿಂತ ಇನ್ನಾವ ಪರಿಸರ ಚೆನ್ನಾಗಿದ್ದೀತು?

                1760-70ರ ದಶಕಗಳಲ್ಲಿ ವಂಗ ಭೀಕರ ಕ್ಷಾಮದಿಂದ ತತ್ತರಿಸಿತ್ತು. ಜನರಲ್ಲಿದ್ದ ದವಸ-ಧಾನ್ಯಗಳನ್ನೆಲ್ಲಾ ಬಿತ್ತನೆಯ ಬೀಜವನ್ನೂ ಬಿಡದೆ ದೋಚಿತ್ತು ಮ್ಲೇಚ್ಛ ಸರಕಾರ. ಎಲ್ಲೆಲ್ಲೂ ಹನಿ ನೀರಿಗೂ ಹಾಹಾಕಾರ. ಅರಾಜಕತೆ ತಾಂಡವವಾಡಿತ್ತು. ಬ್ರಿಟಿಷರ ಹಾಗೂ ಮುಸ್ಲಿಂ ಅರಸರ ಕಚ್ಚಾಟಕ್ಕೆ ಜನತೆ ನಲುಗಿತ್ತು. ಮ್ಲೇಚ್ಛರ ಶೋಷಣೆಯ ವಿರುದ್ಧ ಸಿಡಿದೆದ್ದರು ಸಂತಾನ ಸನ್ಯಾಸಿಗಳು. ಢಾಕಾ, ರಾಂಪುರ್ ಬಲಿಯಾ ಕಾರ್ಖಾನೆಗಳನ್ನು ವಶಪಡಿಸಿಕೊಂಡು 1972ರ ಹೊತ್ತಿಗೆ ರಾಜಶಾಹಿ, ಪೂರ್ಣೀ, ರಂಗಪುರ, ದೀನಜ್ ಪುರ, ಢಾಕಾಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು ಸನ್ಯಾಸಿಗಳ ಪಡೆ. ಈ ಪ್ರದೇಶಗಳನ್ನು ಹತೋಟಿಗೆ ಪಡೆಯಲು ವಾರನ್ ಹೇಸ್ಟಿಂಗ್ಸ್ ಎರಡು ವರ್ಷ ಪರದಾಡಬೇಕಾಯಿತು. ಅದರ ಬಳಿಕವೂ ಹದಿನೈದು ವರ್ಷಗಳ ಕಾಲ ಈ ಕ್ರಾಂತಿ ಸಂಘರ್ಷ ಮುಂದರಿಯಿತು. ಈ ಘಟನಾವಳಿಗೆ "ಆನಂದ ಮಠ"ದ ರೂಪ ಕೊಟ್ಟರು ಬಂಕಿಮರು. ಅಲ್ಲಿ ಸೇರಿದ್ದೇ "ವಂದೇ ಮಾತರಂ" ಎಂಬ ದಿವ್ಯ ಮಂತ್ರ.

              ಈಶ್ವರಚಂದ್ರ ಗುಪ್ತಾ 1866ರಲ್ಲಿ ರಚಿಸಿದ "ಜನನೀ ಭಾರತ ಭೂಮಿ, ಆರ ಕೇನ ಥಾಕ ತುಮಿ..." ಎನ್ನುವ ಕವನ ಬಂಕಿಮರನ್ನು ಆವರಿಸಿತ್ತು. 1875ರ ನವೆಂಬರ್ 7ರಂದು ಇದ್ದಕ್ಕಿದ್ದಂತೆ ಭಾವಾವೇಶದ ದಿವ್ಯ ಸ್ಥಿತಿಗೊಳಗಾದ ಬಂಕಿಮರಿಂದ ಅಪ್ರಯತ್ನವಾಗಿ ಪದ್ಯಪಂಕ್ತಿಗಳು ಕಾಗದದ ಮೇಲೆ ಮೂಡಿದವು. ಯಾವುದೋ ದಿವ್ಯ ಶಕ್ತಿಯೊಂದು ಅವರನ್ನು ನಿಯಂತ್ರಿಸುತ್ತಿರುವಂತೆ ಭಾಸವಾಯಿತು. ಮಾತೆಯ ದರ್ಶನದ ಫಲವಾಗಿ "ವಂದೇ ಮಾತರಂ" ಮಂತ್ರದರ್ಶನವಾಯಿತು. "ಬಂಗದರ್ಶನ"ದ ನಿರ್ವಾಹಕ ರಾಮಚಂದ್ರ ಬಂದೋಪಾಧ್ಯಾಯ ಒಂದು ದಿನ ಪತ್ರಿಕೆಯ ಖಾಲಿ ಜಾಗವನ್ನು ತುಂಬಲು ಯಾವುದಾದರೊಂದು ಸಾಮಗ್ರಿ ಕೊಡಿ ಎಂದು ಸಂಪಾದಕ ಬಂಕಿಮರನ್ನು ಕೇಳಿದಾಗ ಅವರು ಕೊಟ್ಟಿದ್ದು ಇದೇ ಮಂತ್ರವನ್ನು. ಇದೇನು ಅರ್ಧ ಸಂಸ್ಕೃತ, ಅರ್ಧ ಬಂಗಾಳಿಯಲ್ಲಿದೆಯಲ್ಲಾ ಎಂದು ಅವರು ಕೇಳಿದಾಗ ಬಂಕಿಮರು ಇನ್ನೊಂದಿಪ್ಪತ್ತೈದು ವರ್ಷದಲ್ಲಿ ಇಡೀ ಬಂಗಾಳವನ್ನೇ ಈ ಗೀತೆ ಹುಚ್ಚೆಬ್ಬಿಸುತ್ತದೆ ಎಂದಿದ್ದರು! ಮೊಟ್ಟಮೊದಲಿಗೆ 1886ರಲ್ಲಿ ಹೇಮಚಂದ್ರ ಬಂದೋಪಾಧ್ಯಾಯರು ಕೋಲ್ಕತಾ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದರು. ಹತ್ತು ವರುಷಗಳ ತರುವಾಯ ರವೀಂದ್ರ ನಾಥ ಟಾಗೋರ್ ಸ್ವತಃ ಸ್ವರ ಸಂಯೋಜನೆ ಮಾಡಿ ಹಾಡಿ "ನನ್ನ ದೇಹವಿಡೀ ವಿದ್ಯುತ್ ಸಂಚಾರವಾದಂತಾಯಿತು. ಇದು ಹಾಡಲ್ಲ ಜ್ವಾಲಾಮುಖಿ ಎನಿಸಿತು. ಹಾಡಿನೊಂದೊಂದು ಶಬ್ಧವೂ ಶ್ರೋತೃಗಳಲ್ಲಿ ರೋಮಾಂಚನ ತಂದಿತು" ಎಂದು ವರ್ಣಿಸಿದರು.

            ಧಮನಿ ಧಮನಿಗಳಲ್ಲಿ ಸನಾತನತೆಯ ಪ್ರವಾಹವೇ ತುಂಬಿದ್ದ ಬಂಕಿಮರ ಆರಂಭದ ಬದುಕು ಭಾರತೀಯವಾಗಿರಲಿಲ್ಲ. ಜೂನ್ 26, 1838ರಂದು ಬಂಗಾಳದ ಇಪ್ಪತ್ನಾಲ್ಕು ಪರಗಣದ ಕಾಂಟಲಪಾಡದಲ್ಲಿ ಜನಿಸಿದ ಬಂಕಿಮರದ್ದು ಶ್ರೀಮಂತ ಕುಟುಂಬ. ತಂದೆ ಯಾದವಚಂದ್ರರು ಡೆಪ್ಯುಟಿ ಕಲೆಕ್ಟರ್ ಆಗಿದ್ದವರು. ಸಹಜವಾಗಿಯೇ ಬಂಕಿಮರು ಹಾಗವರ ಸಹೋದರರಿಗೆ ಸರ್ಕಾರದ ಉನ್ನತ ಹುದ್ದೆಗಳು ಪ್ರಾಪ್ತವಾದವು. ಕೋಲ್ಕತಾ ವಿವಿಯ ಮೊದಲ ಪದವೀಧರರು ಅವರು. ಬಾಲ್ಯಕಾಲದಲ್ಲಿ ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾಗಲೂ ಆಗಿನ ಬಂಗಾಳದ ಸನ್ನಿವೇಶವೇ ಕಾರಣವಾಗಿದ್ದಿರಬಹುದು. ಪಾಶ್ಚಾತ್ಯಮೂಲದ ಆಚರಣೆ-ಜ್ಞಾನಗಳೇ ಶ್ರೇಷ್ಠವೆಂದೂ, ಭಾರತೀಯ ಮೂಲವಾದುದೆಲ್ಲಾ ನಿಕೃಷ್ಟವೆಂಬ ಭಾವನೆಯೇ ಭಾರತೀಯರ ಮಾನಸಿಕತೆಯಲ್ಲಿ ಬಲವಾಗಿ ಬೇರೂರಿದ್ದ ಕಾಲವದು. ಮೆಕಾಲೆಯ ಆಂಗ್ಲ ಶಿಕ್ಷಣ ಫಲ ಕೊಡಲಾರಂಭಿಸಿದ್ದ ವೇಳೆಯದು. ಇಂತಹ ಪರಿಸರದಲ್ಲಿ ಬೆಳೆದ ಬಂಕಿಮರು ಆಂಗ್ಲಶಾಸನವೇ ಲಾಭಕಾರಿ ಎಂದು ಪ್ರತಿಪಾದಿಸುತ್ತಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ಅಂತಹ ಪರಿವಾರದಲ್ಲಿ ಬೆಳೆದಿದ್ದರೂ ಬಂಕಿಮರಿಗೆ ಹನ್ನೊಂದನೆಯ ವಯಸ್ಸಿಗೆ ಐದು ವರ್ಷದ ಬಾಲೆಯೊಡನೆ ಮದುವೆಯಾಗಿತ್ತು. ಇದು ಹೊರಗಿನಿಂದ ಯಾವುದನ್ನು ಪಡೆಯಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ತಿಳಿಯದೆ ಅಂಧಾನುಕರಣೆ ಮಾಡುವ ಇವತ್ತಿನ ಭಾರತೀಯ ಮಾನಸಿಕತೆಗೂ ಕನ್ನಡಿ ಹಿಡಿವ ಘಟನೆಯೇ ಸರಿ. ಆಂಗ್ಲದಲ್ಲಿ ಬರೆಯುವುದೇ ಪರಮ ಶ್ರೇಷ್ಠವೆಂದು ಬಗೆದಿದ್ದ ಆ ಕಾಲದಲ್ಲಿ ಸಹಜವಾಗಿಯೇ ಬಂಕಿಮರ ಮೊದಲ ಕಾದಂಬರಿ ಆಂಗ್ಲ ಭಾಷೆಯಲ್ಲಿಯೇ ಹೊರಬಂತು(ರಾಜ್ ಮೋಹನ್ಸ್ ವೈಫ್:1864). ಆದರೆ ಸ್ವಚಿಂತನೆ ಉದ್ದೀಪನವಾದಂತೆ ಅವರಲ್ಲಿ ಸ್ವಧರ್ಮ-ಸ್ವರಾಷ್ಟ್ರ ಚಿಂತನೆ-ಭಕ್ತಿ ಪ್ರಖರವಾಗುತ್ತಾ ಸಾಗಿತು. ಇದರ ಮೊದಲ ಕುರುಹೇ 1865ರಲ್ಲಿ ಪ್ರಕಟವಾದ "ದುರ್ಗೇಶ ನಂದಿನೀ".

               ಸೌಮ್ಯ ಸ್ವಭಾವದ ಬಂಕಿಮರು ವೃತ್ತಿಜೀವನದಲ್ಲಿ ದಕ್ಷತೆಗೆ ಹೆಸರಾದವರು. ಪ್ರಾಣದ ಹಂಗು ತೊರೆದು ದಿಟ್ಟ ಕ್ರಮಗಳಿಂದ ಖುಲ್ನಾದಲ್ಲಿ ನಡೆಯುತ್ತಿದ್ದ ಲೂಟಿ-ದರೋಡೆಗಳನ್ನು ಹತ್ತಿಕ್ಕಿದರು. ಕಮೀಷನರ್ ಮನ್ರೋನೊಡನೆ ಸಮಾನಸ್ಕಂಧರಂತೆ ವರ್ತಿಸಿದ ಕಾರಣ ಆತನ ಕ್ರೋಧಕ್ಕೂ ತುತ್ತಾದರು. ಕೂಲಿಯಾಳುಗಳನ್ನು ಶೋಷಿಸುತ್ತಿದ್ದ ಜಮೀಂದಾರರ ದರ್ಪವನ್ನೂ ಮುರಿದರು. ಕ್ರೌರ್ಯಕ್ಕೆ ಹೆಸರಾದ ಹೌರಾ ನ್ಯಾಯಾಧೀಶನ ರೀತಿ-ನೀತಿಗಳನ್ನು ವಿರೋಧಿಸಿದ ಕಾರಣ ಅವನ ಕೆಂಗಣ್ಣಿಗೂ ತುತ್ತಾಗಬೇಕಾಯಿತು. ವೃತ್ತಿಯಲ್ಲಿನ ಘನತೆ, ಸ್ವಾಭಿಮಾನ, ಪ್ರಾಮಾಣಿಕತೆ, ದಕ್ಷತೆಯ ಕಾರಣದಿಂದ ರಾಯ್ ಬಹಾದೂರ್ ಗೌರವಕ್ಕೂ ಪಾತ್ರರಾದರು. ಆದರೂ ಬಂಧನದಲ್ಲಿದ್ದ ಹಕ್ಕಿ ಸ್ವಾತಂತ್ರ್ಯವನ್ನೇ ಬಯಸಿತ್ತು. ಸ್ವ ಇಚ್ಛೆಯಿಂದ ನಿವೃತ್ತರಾದಾಗ ಮಹಾ ದೌರ್ಭಾಗ್ಯವೊಂದು ಅಳಿಯಿತೆಂದು ಉದ್ಗರಿಸಿದರು.

               ರಾಜ್ ಮೋಹನ್ಸ್ ವೈಫ್, ವಿಷವೃಕ್ಷ, ಕೃಷ್ಣಕಾಂತನ ಉಯಿಲು, ರಜನೀ, ಇಂದಿರಾ, ರಾಧಾರಾಣೀ, ಯುಗಳಾಂಗುರೀಯ ಇವು ಬಂಕಿಮರ ಸಾಮಾಜಿಕ ಕಾದಂಬರಿಗಳಾದರೆ ದುರ್ಗೇಶನಂದಿನೀ, ಮೃಣಾಲಿನೀ, ಚಂದ್ರಶೇಖರ, ರಾಜಸಿಂಹ, ಆನಂದ ಮಠ, ದೇವೀ ಚೌಧುರಾಣೀ, ಸೀತಾರಾಮ ಐತಿಹಾಸಿಕ ಕಾದಂಬರಿಗಳು. ಪಾಶ್ಚಾತ್ಯಾ ಕಾದಂಬರಿಗಳಿಂದ ಕೊಂಚ ಪ್ರೇರಣೆ ಪಡೆದಿದ್ದರೂ ಅವರಿಗಿಂತ ಹೆಚ್ಚಿನ ನೀತಿ ಪರಿಜ್ಞಾನ, ಸೂಕ್ಷ್ಮತೆ ಬಂಕಿಮರದ್ದು. ಪಾತ್ರಗಳು ಯಾವುದೇ ರೀತಿಯಾಗಿರಲಿ ಅವುಗಳನ್ನು ಸಹಾನುಭೂತಿಯಿಂದ ಕಾಣುವುದು, ಸ್ವಯಂ ಪಾತ್ರಗಳೇ ಕಥೆಯನ್ನು ಮುಂದಕ್ಕೊಯ್ಯುವ ತಂತ್ರ, ವಾಸ್ತವ ನೆಲೆಗಟ್ಟಿನಲ್ಲಿಯೇ ಬೆಳೆಯುವ ಕಥೆ, ವಿಚಾರದ ಘನಿಷ್ಠತೆ, ಮಾಧ್ಯಮದ ಕಲಾವಂತಿಕೆ ಇವು ಅವರ ಓದುಗರ ಬಳಗವನ್ನು ವಿಸ್ತರಿಸಿದವು. ಆರಂಭಿಕ ಕಾದಂಬರಿಗಳಲ್ಲಿ ಕಥೆಯ ರೋಚಕತೆಗೆ ಪ್ರಾಧಾನ್ಯತೆ ದೊರಕಿದರೆ ಆಮೇಲಿನವುಗಳಲ್ಲಿ ವೈಚಾರಿಕತೆ-ಮೌಲ್ಯಗಳೇ ಪ್ರಧಾನವಾದವು. ಅವರ ಕೊನೆಯ ಕಾದಂಬರಿ ಸೀತಾರಾನದಲ್ಲಿ ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಮೌಲ್ಯಗಳ ವಾಚ್ಯರೀತಿಯ ವ್ಯಾಖ್ಯೆಗಳೇ ಕಾದಂಬರಿಯನ್ನು ಶೃಂಗಾರಗೊಳಿಸಿವೆ. "ಕಪಾಲಕುಂಡಲಾ" ಒಂದು ಪ್ರಣಯ ಕಥೆ! ಕಾಪಾಲಿಕನೊಬ್ಬನ ಸಾಹಚರ್ಯದಲ್ಲಿ ಬೆಳೆದ ಬಾಲೆಯೋರ್ವಳು ಶಿಥಿಲನಡೆಯ ನವಕುಮಾರನನ್ನು ವಿವಾಹವಾಗುವ ಕಥೆಯದು. ಶಾಕ್ತರು ಬಹುವಾಗುಳ್ಳ ಬಂಗಾಳದಲ್ಲಿ ಈ ಕಾದಂಬರಿ ಬಹು ಪ್ರಸಿದ್ಧಿ ಪಡೆಯಿತು. ಮೃಣಾಲಿನೀ ಕಾದಂಬರಿ, ಅತ್ಯಲ್ಪ ಸೇನೆಯನ್ನುಪಯೋಗಿಸಿಕೊಂಡು ಕುತಂತ್ರದಿಂದ ಬಖ್ತಿಯಾರ್ ಖಿಲ್ಜಿ ಬಂಗಾಳವನ್ನು ವಶ ಮಾಡಿಕೊಂಡ ದುರಂತ ಘಟನೆಯನ್ನಾಧರಿಸಿದ್ದು. ಈ ಕಾದಂಬರಿಗಳಲ್ಲಿ ಹೊರಹೊಮ್ಮಿದ ಅವರ ರಾಷ್ಟ್ರವಾದ ಹಾಗೂ ಸನಾತನತೆಯ ಬಗೆಗಿನ ಪ್ರೀತಿ 1870ರ ದಶಕದ ಅವರ ಬರವಣಿಗೆಯಲ್ಲಿ ಭೋರ್ಗರೆಯಿತು. 1880ರಲ್ಲಿ "ಆನಂದ ಮಠ"ದಲ್ಲಿ ಅದು ಪರಾಕಾಷ್ಠತೆಗೆ ತಲುಪಿತ್ತು. ಇದಕ್ಕೆ ಮೂಲ ಸಂತಾನ ಸನ್ಯಾಸಿಗಳ ಹೋರಾಟವಾದರೂ ಅವರು ತಾರುಣ್ಯದಲ್ಲಿ ಕಂಡ 1857ರ ಸ್ವಾತಂತ್ರ್ಯ ಸಂಗ್ರಾಮ ಅವರನ್ನು ಬಹುವಾಗಿ ಪ್ರೇರೇಪಿಸಿದ್ದಿರಬೇಕು. ಶಾಂತಿಯ ಪಾತ್ರದಲ್ಲಿ ಝಾನ್ಸಿ ಲಕ್ಷೀಬಾಯಿಯ ಪರಕಾಯ ಪ್ರವೇಶವಾದದ್ದೇ ಇದಕ್ಕೆ ಸಾಕ್ಷಿ! 1918ರ ರೌಲಟ್ ಸಮಿತಿಯ ವರದಿ ದೇಶದಲ್ಲಿ ಕ್ರಾಂತಿಕಾರಿ ಪ್ರವೃತ್ತಿ ಹರಡಲು "ಆನಂದ ಮಠ"ವೂ ಒಂದು ಕಾರಣ ಎಂದಿತ್ತು.

               ಕಾದಂಬರಿಗಳು ಮಾತ್ರವಲ್ಲದೆ ಕವನಗಳು, "ಕಮಲಾಕಾಂತ" ಎನ್ನುವ ವಿಡಂಬನೆ, ವೈಚಾರಿಕಾ ಪ್ರಬಂಧಗಳು, ಭಾಷಾ ಪಠ್ಯಗಳನ್ನು ಅವರು ರಚಿಸಿದರು. ಭಗವಾನ್ ಕೃಷ್ಣನನ್ನು ಮನುಷ್ಯನನ್ನಾಗಿಯೇ ಕಂಡು ಆತ ಮಾಡಿದ ಸಾಧನೆ ಯಾರೂ ಸಾಧಿಸಲಾಗದ ಅದ್ಭುತ ಎಂದು ದೈವತ್ವಕ್ಕೇರಿಸಿದ "ಶ್ರೀಕೃಷ್ಣ ಚರಿತ್ರ"; ಮಾನವನ ಗುಣ-ಸ್ವಭಾವಗಳು, ಜ್ಞಾನ-ನೀತಿ-ಭಕ್ತಿಗಳನ್ನು ಶೋಧನೆಗೊಳಪಡಿಸಿದ "ಧರ್ಮತತ್ವ"; ಧರ್ಮ-ಕರ್ಮ-ಬ್ರಹ್ಮಗಳನ್ನು ವಿಶ್ಲೇಷಿಸಿ ಭಾರತೀಯರನ್ನೂ-ಪಾಶ್ಚಾತ್ಯರನ್ನೂ ಪರೀಕ್ಷೆಗೊಳಪಡಿಸಿದ "ಶ್ರೀಮದ್ಭಗವದ್ಗೀತಾ" ಅವರ ಜಿಜ್ಞಾಸಾ ಗ್ರಂಥಗಳು. ಆಂಗ್ಲದಿಂದ ಬಂಗಾಳಿಗೆ ಪಲ್ಲಟಗೊಂಡ ಬಂಕಿಮರು ಜೊತೆಯವರನ್ನೂ ಬಂಗಾಳಿಯಲ್ಲಿ ಸಾಹಿತ್ಯ ಸೃಷ್ಟಿಸುವಂತೆ ಪ್ರೇರೇಪಿಸಿದರು. ಅವರ ಪ್ರೇರಣೆಯಿಂದಲೇ ರಮೇಶಚಂದ್ರದತ್ತರು "ವಂಗವಿಜೇತ" ವೆಂಬ ಐತಿಹಾಸಿಕ ಕಾದಂಬರಿಯನ್ನು ಬರೆದರು. "ಬಂಕಿಮರಿಗಿಂತ ಹಿಂದೆ ಬಂಗಾಳಿಯನ್ಯಾರೂ ಲಕ್ಷ್ಯವೇ ಮಾಡುತ್ತಿರಲಿಲ್ಲ. ಬಂಕಿಮರು ಉನ್ನತ ಶಿಕ್ಷಣ ಪಡೆದಿದ್ದರೂ ತಮ್ಮ ಜ್ಞಾನ-ಪ್ರತಿಭೆಯನ್ನು ಗ್ರಾಮ್ಯ-ಅಪ್ರಬುದ್ಧ-ಪ್ರಾಕೃತ ಭಾಷೆಯೊಂದನ್ನು ಸಾರ್ವತ್ರಿಕಗೊಳಿಸಲು ಮೀಸಲಿಟ್ಟರು. ಏಕತಾರೀ ತಂಬೂರಿಯಾಗಿ ಭಜನೆ ಮಾಡಲಷ್ಟೇ ಉಪಯುಕ್ತವಾಗಿದ್ದ ಭಾಷೆಯೊಂದನ್ನು ಕಲಾವತೀ ರಾಗವನ್ನು ಆಲಾಪನೆ ಮಾಡುವ ಶ್ರೇಷ್ಠ ವೀಣೆಯನ್ನಾಗಿ ಪರಿವರ್ತಿಸಿದರು" ಎಂದಿದ್ದಾರೆ ರವೀಂದ್ರನಾಥ ಟಾಗೋರರು. "ಮುಂದಿನ ಪೀಳಿಗೆ ನವಭಾರತದ ನಿರ್ಮಾತೃಗಳನ್ನು ಶ್ಲಾಘಿಸುವಾಗ ಅವಕಾಶವಾದಿ ರಾಜಕಾರಣಿಗಳನ್ನಾಗಲೀ ಪ್ರಚಾರಪ್ರಿಯ ಸುಧಾರಕರನ್ನಾಗಲೀ ಆರಾಧಿಸುವುದಿಲ್ಲ. ಅದು ಯಾರು ತನಗಾಗಿ ಯಾವ ಸ್ಥಾನಮಾನವನ್ನೂ ಕೋರದೆ ಮೌನವಾಗಿ, ತನ್ನ ಪ್ರತಿಭೆಯನ್ನಷ್ಟೂ ತೊಡಗಿಸಿಕೊಂಡು ಕರ್ಮಣ್ಯೇ ವಾಧಿಕಾರಸ್ಥೇ...ಎಂದು ಒಂದು ಭಾಷೆಯನ್ನೂ ಸಾಹಿತ್ಯವನ್ನೂ ರಾಷ್ಟ್ರವನ್ನೂ ಕಟ್ಟಿ ಬೆಳೆಸಿದರೋ ಅಂತಹ ಸರಳ, ಗಂಭೀರ, ವಂದೇಮಾತರಂ ಮಂತ್ರ ದೃಷ್ಟಾರ ಋಷಿ ಸದೃಷ ವ್ಯಕ್ತಿಗೆ ಪ್ರಶಂಸೆಯ ವರ್ಷಧಾರೆಯನ್ನು ಎರೆಯುತ್ತದೆ" ಎಂದು ಮಹರ್ಷಿ ಅರವಿಂದರೇ ಹೇಳಿರುವರೆಂದರೆ ಬಂಗಾಳ ಭಾಷೆ-ಸಾಹಿತ್ಯವನ್ನುಳಿಸಲು, ದೇಶದ ಸ್ವಾತಂತ್ರ್ಯದ ಹೋರಾಟಕ್ಕೊಂದು ಮೂಲಸ್ತ್ರೋತವನ್ನು ಕೊಟ್ಟು ಭಾವದೀಪ್ತಿಯನ್ನು ಉದ್ದೀಪಿಸಲು ಬಂಕಿಮರ ಕೊಡುಗೆ ಎಷ್ಟು ಎಂದು ಅರಿವಾದೀತು.

           ಬಂಕಿಮರು ಮರಣಶಯ್ಯೆಯಲ್ಲಿದ್ದಾಗ ವೈದ್ಯ ಮಹೇಂದ್ರ ಸರ್ಕಾರ್ ಔಷಧಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು. ನಿರಾಕರಿಸಿದ ಬಂಕಿಮರಿಗೆ ಔಷಧಿ ತೆಗೆದುಕೊಳ್ಳದೇ ಇರುವುದು ಆತ್ಮಹತ್ಯೆಗೆ ಸಮನೆಂದು ಸರ್ಕಾರ್ ಟೀಕಿಸಿದಾಗ "ನಾನು ಔಷಧ ತೆಗೆದುಕೊಳ್ಳುತ್ತಿದ್ದೇನಲ್ಲಾ" ಎಂದರು. ಯಾವ ಔಷಧವೆಂದು ಸರ್ಕಾರರು ಪ್ರಶ್ನಿಸಿದಾಗ ಬಂಕಿಮರ ಕೈ ಪಕ್ಕದಲ್ಲಿದ್ದ ಭಗವದ್ಗೀತೆಯತ್ತ ಬೊಟ್ಟು ಮಾಡಿತ್ತು. ಹಿರಿಯ ಮಗಳ ಬಳಿ ಮಾತನಾಡುವಾಗೊಮ್ಮೆ ವಂದೇಮಾತರಂ ದರ್ಶನವಾದ ಬಗೆಯನ್ನು ಅವರು ವರ್ಣಿಸಿದ ರೀತಿ ಹೀಗಿದೆ - ಹದಿನೆಂಟು ವರುಷಗಳ ಹಿಂದೆ ಆ ಸ್ಮರಣೀಯ ಮುಂಜಾವಿನಲ್ಲಿ ಮೇಜಿನ ಮುಂದೆ ಕುಳಿತಿದ್ದಾಗ ನನ್ನ ಮನಃಚಕ್ಷುವಿನ ಮುಂದೆ ದೇವಿಯೇ ಪ್ರತ್ಯಕ್ಷವಾದಂತೆನಿಸಿತು. ನನಗರಿವಿಲ್ಲದಂತೆ ನನ್ನ ಲೇಖನಿಯಿಂದ ಆ ಮಂತ್ರ ಸಾಲುಗಳು ಹಾಳೆಯ ಮೇಲೆ ಮೂಡಿದವು. ನಾನ್ಯಾವುದೋ ದಿವ್ಯ ಶಕ್ತಿಯ ಪ್ರಭಾವದಲ್ಲಿದ್ದಂತನಿಸುತ್ತಿತ್ತು.

              ದೇಶವೇ ತಾಯಿ ಎನ್ನುವ ಕಲ್ಪನೆ ಭಾರತೀಯರಿಗೇನೂ ಹೊಸದಾಗಿರಲಿಲ್ಲ. ಆದರೆ ಆ ಜ್ಞಾನಕ್ಕೆ ಭಾವವನ್ನು ಮೀಟುವ ಕೆಲಸವಾಗಬೇಕಿತ್ತು. ಅದು ಭಾಷೆಯನ್ನೂ ಮೀರಿ ಸಾಮಾನ್ಯನನ್ನೂ ತಲುಪಬೇಕಾಗಿತ್ತು. ದೇವಿ ಎನ್ನುವುದಕ್ಕಿಂತಲೂ ಅಮ್ಮಾ ಎನ್ನುವ ಶಬ್ಧ ಎಷ್ಟು ಆಪ್ಯಾಯಮಾನವೋ ಅಂತಹ ಭಾವೋದ್ದೀಪನ ಆಗಬೇಕಿತ್ತು. ಪರಂಪರೆಯ ಸೊಬಗಿಗೆ ಆಧುನಿಕತೆಯ ಸ್ಪರ್ಷ ಬೇಕಿತ್ತು. ಪಾಶ್ಚಾತ್ಯಂಧಾನುಕರಣೆಯ ಸುಳಿಯಿಂದ ಜನತೆಯನ್ನು ತಪ್ಪಿಸಿ ರಾಷ್ಟ್ರವೆಂಬ ಭಾವಸಾಗರದಲ್ಲಿ ಈಜಲು ಅನುವು ಮಾಡಿಕೊಡಬೇಕಿತ್ತು. ಸರಿಯಾದ ಸಮಯದಲ್ಲಿ ಪ್ರಕೃತಿ ಬಂಕಿಮರ ಚಿತ್ತಭಿತ್ತಿಯಲ್ಲಿ ಪ್ರತ್ಯಕ್ಷಳಾಗಿ ಅವರ ಭಾವದಲ್ಲಿ ಹೊನಲಾಗಿ ಕವನವಾಗಿ ಹರಿದಳು. ರಾಷ್ಟ್ರಧರ್ಮವೇ ಪರಮೋಧರ್ಮ ಎನ್ನುವುದು ಬುದ್ಧಿಗಿಂತಲೂ ಭಾವವಾಗಿ ಹರಿದುದರಿಂದ ಅದು ಬಂಕಿಮರ ಮಾತಿನಂತೆ ಕೆಲವೇ ವರ್ಷಗಳಲ್ಲಿ ಬಂಗಾಳವೇಕೆ ಇಡಿಯ ಭಾರತವನ್ನೇ ಹುಚ್ಚೆಬ್ಬಿಸಿತು. ರವೀಂದ್ರರಿಗೆ ಜ್ವಾಲಾಮುಖಿಯೆನಿಸಿತು. ಋಷಿಕಲ್ಪ ಅರವಿಂದರಿಗೆ ದರ್ಶನವೆನಿಸಿತು. ಕ್ರಾಂತಿ ಸಂಘಟನೆಗೆ ಪ್ರೇರೇಪಿಸಿತು. ಸ್ವಾಭಿಮಾನವನ್ನು ಉದ್ದೀಪಿಸಿತು. ರಾಷ್ಟ್ರಧ್ವಜದ ಪರಿಕಲ್ಪನೆಗೂ ಸೇರಿತು. ಪತ್ರಿಕೆ, ಸಂಘಟನೆಗಳಿಗೆ ಬೀಜರೂಪವಾಯಿತು. ಹಲವು ಭಾಷೆಗಳಲ್ಲಿ ಹಲವು ಕವಲುಗಳಾಗಿ ಹರಿಯಿತು.  ಆತ್ಮಹತ್ಯೆ ಮತ್ತು ಆತ್ಮಾಹುತಿಯ ನಡುವಿನ ವ್ಯತ್ಯಾಸವನ್ನು ತಿಳಿಯಪಡಿಸಿ ಸ್ವಾತಂತ್ರ್ಯ ಪ್ರಾಪ್ತಿಗೂ ಕಾರಣವಾಯಿತು. ಇಂದಿಗೂ ಅದು ಸತ್ತಂತಿಹರನು ಬಡಿದೆಚ್ಚರಿಸುತ್ತಲೇ ಇದೆ. ಅದಕ್ಕಾಗಿ ನಾವು ದೃಷ್ಟಾರ ಬಂಕಿಮರಿಗೆ ಋಣಿಯಾಗಿರಲೇಬೇಕು.