ಪುಟಗಳು

ಮಂಗಳವಾರ, ಮಾರ್ಚ್ 31, 2015

ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ

ಮತಾಂಧರಿಗೆ ಮರ್ಮಾಘಾತ ನೀಡಿದ ಆ ಬಲಿದಾನ

                      ಆನಂದ ಪುರ. ತೇಜಸ್ವೀ ಸಿಖ್ ಗುರುವೊಬ್ಬನ ಮುಂದೆ ಕಾಶ್ಮೀರದಿಂದ ಬಂದ ಹಿಂದೂ ಪ್ರಮುಖರ ಗುಂಪೊಂದು ಗೋಳೋ ಎಂದಳುತ್ತಾ ತಮ್ಮ ಬವಣೆಗಳನ್ನರುಹುತ್ತಿದೆ. "ಯುದ್ಧ ವಿದ್ಯೆ ಕಲಿಯುವಂತಿಲ್ಲ, ಆಯುಧಪಾಣಿಯಾಗುವಂತಿಲ್ಲ, ಪಲ್ಲಕಿ ಹತ್ತುವಂತಿಲ್ಲ, ಕುದುರೆಗಳನ್ನು ಬಳಸುವಂತಿಲ್ಲ, ದೇವರ ಪೂಜೆ ಮಾಡುವಂತಿಲ್ಲ. ವಿಶ್ವನಾಥನ ಮಂದಿರವನ್ನು ಮುರಿದರು, ಮರು ನಿರ್ಮಿಸಿದ ಸೋಮನಾಥವನ್ನೂ ಕೆಡವಿದರು. ಮಥುರಾದ ಅರ್ಧ ಮಸೀದಿಯಾಗಿದೆ. ಸಾವಿರ ಸಾವಿರ ಸಂಖ್ಯೆಯ ದೇವಾಲಯಗಳು, ವಿದ್ಯಾಸಂಸ್ಥೆಗಳ ಸರ್ವನಾಶವಾಗಿದೆ. ಹಿಂದೂಗಳಾಗಿ ಬದುಕಬೇಕಿದ್ದರೆ ಜಿಜಿಯಾ ತಲೆಗಂದಾಯ ಕಟ್ಟಲೇಬೇಕು. ಕಾಶ್ಮೀರವೊಂದರಲ್ಲೇ ಮಣಭಾರದ ಜನಿವಾರ ತುಂಡರಿಸಿ ಬೀಳುತ್ತಿದೆ. ಹಣೆಯ ತಿಲಕದ ಜಾಗದಲ್ಲಿ ರಕ್ತ ಒಸರುತ್ತಿದೆ. ನೀವೇ ನಮ್ಮನ್ನು ಕಾಪಾಡಬೇಕು" ಆಲಿಸಿದ ಗುರು ದೀರ್ಘಾಲೋಚನೆಯಲ್ಲಿ ಮುಳುಗಿದರು. ಆಗ......ಆಗ ಒಂಬತ್ತು ವರ್ಷದ ಅವರ ಮಗ ತನ್ನ ಗೆಳೆಯರೊಡನೆ ಅಲ್ಲಿಗೆ ಬಂದ. ತಂದೆಯ ಗಂಭೀರ ಮುಖಭಾವವನ್ನು ಕಂಡು ಏನಪ್ಪಾ...ಏನಷ್ಟು ತೀವ್ರವಾಗಿ ಯೋಚಿಸುತ್ತಿದ್ದೀರಿ ಎಂದು ಪ್ರಶ್ನಿಸಿದ. "ಭೂಮಿಗೆ ಪಾಪಭಾರ ಹೆಚ್ಚಾಗಿದೆ. ಎಲ್ಲಾ ರೀತಿಯಿಂದಲೂ ಯೋಗ್ಯನಾದವನೊಬ್ಬ ಮುಂದೆ ಬಂದು ಬಲಿಯಾಗದ ಹೊರತು ಈ ಕ್ಲೇಶ ತಗ್ಗುವುದಿಲ್ಲ" ಎಂದರು ಗುರುಗಳು. "ಅಂತಹ ಬಲಿದಾನಕ್ಕೆ ನಿಮಗಿಂತಲೂ ಯೋಗ್ಯರಾರಿದ್ದಾರೆ?" ತಟ್ಟನೆ ನುಡಿದ ಆ ಬಾಲಕ. ಗುರುಗಳ ಮುಖ ವಿಕಸಿತವಾಯಿತು. ತನ್ನ ಸಂಕಲ್ಪವನ್ನು ದೈವವೇ ಮಗನ ಬಾಯಲ್ಲಿ ನುಡಿಸಿದಂತಾಯಿತು. "ನನ್ನ ಮತ ಪರಿವರ್ತನೆ ಮಾಡಿದರೆ ನೀವೂ ಕೂಡಾ ಇಸ್ಲಾಮನ್ನು ಸ್ವೀಕರಿಸುವುದಾಗಿ ಚಕ್ರವರ್ತಿಗೆ ತಿಳಿಸಿ. ಗುರುನಾನಕರ ಅನುಗ್ರಹ ನಿಮ್ಮ ಮೇಲಿದೆ" ಎಂದು ಹಿಂದೂಗಳನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟರು. ಆ ತೇಜಸ್ವೀ ಗುರುವರ್ಯನೇ ತೇಜ್ ಬಹಾದ್ದೂರ್. ಒಂಬತ್ತು ವರ್ಷದ ಆ ಮಗು ಗುರು ಗೋವಿಂದ ಸಿಂಗ್!

           ತೇಗ್ ಬಹಾದ್ದೂರ್ ಗುರು ಹರ್ ಗೋವಿಂದ್ ಹಾಗೂ ಬೀಬಿ ನಾನ್ಕಿಯವರ ಕಿರಿಯಪುತ್ರನಾಗಿ 1621 ಏಪ್ರಿಲ್ 1ರಂದು ಜನ್ಮತಳೆದರು. ಅವರ ಮೂಲ ಹೆಸರು ತ್ಯಾಗ್ ಮಾಲಾ. ಬಾಬಾ ಬುದ್ಧ ಹಾಗೂ ಭಾಯಿ ಗುರುದಾಸರಿಂದ ಕತ್ತಿವರಸೆ ಹಾಗೂ ಕುದುರೆ ಸವಾರಿಯ ಜೊತೆಗೆ ಧಾರ್ಮಿಕ ಶಿಕ್ಷಣ ಪಡೆದ ತೇಗ್ ಬಹಾದ್ದೂರರಿಗೆ ಹನ್ನೆರಡರ ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಲಾಯಿತು. ಹದಿಮೂರನೇ ವಯಸ್ಸಿನಲ್ಲಿ ತಂದೆಯೊಡನೆ ಸರಿಸಾಟಿಯಾಗಿ ನಿಂತು ಮೊಘಲ ಸರ್ದಾರರೊಡನೆ ಕಾದು ಜಯಶಾಲಿಯಾದಾಗ(ಕರ್ತಾರ್ ಪುರ್ ಕದನ) ಅನುಯಾಯಿಗಳು ಅವರಿಗೆ ತೇಜ್ ಬಹಾದೂರ್ ಎಂಬ ಬಿರುದನ್ನಿತ್ತರು. ಮುಂದೆ ಧ್ಯಾನದಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ ತೇಜ್ ಬಹಾದೂರ್ ತನ್ನ ಪರಂಪರೆಯ ಹಿಂದಿನ ಗುರುಗಳ ಎಲ್ಲಾ ಲಕ್ಷಣಗಳನ್ನು ತೋರ್ಪಡಿಸಿದರಾದರೂ ತಂದೆ ಹರ್ ಗೋವಿಂದ್ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡದೆ ಆಗಷ್ಟೇ ಅಕಾಲಿಕ ಮರಣ ಹೊಂದಿದ ತನ್ನ ಹಿರಿಯ ಮಗ ಭಾಯಿ ಗುರುದತ್ತನ ಪುತ್ರ ಹರ್ ರಾಯನನ್ನು ಪೀಠದಲ್ಲಿ ಕುಳ್ಳಿರಿಸಿದರು. ಇದರಿಂದ ಅಸಮಧಾನಗೊಂಡ ಪತ್ನಿಗೆ ಆತ "ನಿನ್ನ ಮಗನೇ ಮುಂದೊಂದು ದಿನ ಉತ್ತರಾಧಿಕಾರಿಯಾಗುತ್ತಾನೆ. ಅದಕ್ಕಿನ್ನೂ ಕಾಲ ಕೂಡಿ ಬಂದಿಲ್ಲ. ಒಂದು ಪರ್ವಕಾಲದಲ್ಲಿ ಆತ ಪೀಠವನ್ನಲಂಕರಿಸುವುದು ಮಾತ್ರವಲ್ಲ, ತಾನು-ತನ್ನ ಸಂತತಿಯನ್ನೇ ಮಾತೃಭೂಮಿಗೆ ಅರ್ಪಿಸುವ ಮೂಲಕ ಜಗತ್ಪ್ರಸಿದ್ಧರಾಗಿ ವಂಶದ ಕೀರ್ತಿಯನ್ನು ಬೆಳಗುತ್ತಾರೆ" ಎಂದು ಸಮಾಧಾನಿಸುತ್ತಾರೆ. ತಂದೆಯ ವೃದ್ದಾಪ್ಯದ ಕಾಲದಲ್ಲಿ 9 ವರ್ಷಗಳನ್ನು ಅವರ ಸೇವೆಯಲ್ಲಿ ಕಳೆದು ಅವರ ಮರಣಾನಂತರ ತೇಜ್ ಬಹಾದೂರ್ ಬಾಕಲಾದ ಗುಹೆಯೊಂದರಲ್ಲಿ ಧ್ಯಾನಸ್ಥರಾಗುತ್ತಾರೆ. ಇತ್ತ ಹರ್ ರಾಯ್ ತನ್ನ ಉತ್ತರಾಧಿಕಾರಿಯನ್ನಾಗಿ ತನ್ನದೇ ಕಿರಿಯ ಪುತ್ರ ಹರ್ ಕಿಶನ್ ನನ್ನು ನೇಮಿಸುತ್ತಾರೆ. 1664ರಲ್ಲಿ ಅಸ್ವಸ್ಥನಾದ ಹರ್ ಕಿಶನ್ ತನ್ನ ನಂತರದ ಗುರು ಬಾಕಲಾದಲ್ಲಿರುವುದಾಗಿ ಹೇಳಿ ಮರಣವನ್ನಪ್ಪುತ್ತಾರೆ. ಹುಡುಕುತ್ತಾ ಬಂದ ಭಕ್ತರು ಸೋಧಿ ವಂಶದ 22 ಜನ ತಾವೇ ಗುರುಗಳೆಂದು ಹೇಳಿಕೊಂಡಾಗ ಗೊಂದಲಕ್ಕೊಳಗಾಗುತ್ತಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಸಾಮಾನ್ಯ ಘಟನೆಯೊಂದು ಜರಗುತ್ತದೆ. ಮಖಾನ್ ಶಾ ಎನ್ನುವ ಶ್ರೀಮಂತ ವ್ಯಾಪಾರಿ ತನ್ನ ಹಡಗು ಬಿರುಗಾಳಿಗೆ ಸಿಲುಕಿದಾಗ “ತನ್ನನ್ನು ರಕ್ಷಿಸು; 500 ಬಂಗಾರದ ನಾಣ್ಯಗಳನ್ನು ನಿನಗೆ ಅರ್ಪಿಸುತ್ತೇನೆ ಗುರುವರ್ಯ” ಎಂದು ಮೊರೆಯಿಡುತ್ತಾನೆ. ಆತ ಸುರಕ್ಷಿತವಾಗಿ ದಡ ತಲುಪಿದವನೇ ನೇರವಾಗಿ ದೆಹಲಿಗೆ ಗುರು ಹರ್ ಕಿಶನನನ್ನು ಕಾಣಲೆಂದು ಬರುತ್ತಾನೆ. ಹರ್ ಕಿಶನ್ ಮೃತನಾದನೆಂದೂ, ಮುಂದಿನ ಗುರು ಬಾಕಲಾದಲ್ಲಿರುವರೆಂದೂ ಸುದ್ದಿ ತಿಳಿದ ಆತ ನೇರವಾಗಿ ಬಾಕಲಾಕ್ಕೆ ಬರುತ್ತಾನೆ. ಆದರೆ ಅಲ್ಲಿ ಉಳಿದ ಭಕ್ತರಂತೆ ಅವನಿಗೂ ಸಂಧಿಗ್ಧತೆ ಕಾಡುತ್ತದೆ. ಆತ ಅದಕ್ಕಾಗಿ ಪ್ರತಿಯೊಬ್ಬರಿಗೂ ಎರಡೆರಡು ನಾಣ್ಯವನ್ನು ಕೊಟ್ಟು ಗುರುವಾಗಿ ಸ್ವೀಕರಿಸಿ ಇನ್ನೇನು ತೆರಳಬೇಕು ಎನ್ನುವಷ್ಟರಲ್ಲಿ ಒಬ್ಬ ಹುಡುಗ ಗುಹೆಯಲ್ಲಿ ತೇಜ್ ಬಹಾದೂರನೆಂಬ ಯೋಗಿಯಿದ್ದಾನೆ ಎಂದು ಹೇಳಿದುದನ್ನು ಕೇಳಿ ಆತನಿಗೂ ಎರಡು ನಾಣ್ಯವನ್ನು ಅರ್ಪಿಸಲು ಅಲ್ಲಿಗೆ ತೆರಳುತ್ತಾನೆ. ಧ್ಯಾನಸ್ಥರಾಗಿದ್ದ ತೇಜ್ ಬಹಾದೂರ್ ಸಹಜಾವಸ್ಥೆಗೆ ಮರಳುವವರೆಗೆ ಗಂಟೆಗಟ್ಟಲೆಕಾದ ಆತ ಎರಡು ನಾಣ್ಯಗಳನ್ನು ತೇಜ್ ಬಹಾದೂರ್ ಮುಂದೆ ಇರಿಸುತ್ತಾನೆ. ಆಗ ತೇಜ್ ಬಹಾದೂರ್ ನಗುತ್ತಾ "ಯಾಕೆ ನಿನ್ನ ಹರಕೆಗೆ ಭಂಗ ತರುತ್ತಿದ್ದಿ. 500 ನಾಣ್ಯಗಳ ಬದಲು ಕೇವಲ ಎರಡು ನಾಣ್ಯಗಳನ್ನಷ್ಟೇ ನೀಡುತ್ತಿದ್ದೀಯಲ್ಲಾ" ಎನ್ನಲು ಆಶ್ಚರ್ಯಚಕಿತನಾಗಿ ಸಂಭ್ರಮೋಲ್ಲಾಸದಿಂದ 500 ನಾಣ್ಯಗಳನ್ನು ಅರ್ಪಿಸಿದುದಲ್ಲದೆ ತನಗೆ ಗುರು ಸಿಕ್ಕಿದರೆಂದು ಜೋರಾಗಿ ಕಿರುಚುತ್ತಾನೆ. ಭಕ್ತವೃಂದ ಕೂಡಲೇ ಅತ್ತ ಬಂದು ತೇಜ್ ಬಹಾದೂರರನ್ನು ಗುರುವಾಗಿ ಸ್ವೀಕರಿಸುತ್ತದೆ. ಆದರೆ ಅವರಿಗೆ ಆಗ ಸೋಧಿ ಸರದಾರರ ಒಡೆತನದಲ್ಲಿದ್ದ ಅಮೃತಸರದ ಚಿನ್ನದ ಮಂದಿರಕ್ಕೆ ಪ್ರವೇಶ ನಿರಾಕರಿಸಲಾಗುತ್ತದೆ. ಅಲ್ಲದೆ ಹರ್ ಗೋವಿಂದನ ಇನ್ನೊಬ್ಬ ಮೊಮ್ಮಗ ಧೀರ್ ಮಲ್ ನಿಂದ ಪ್ರಾಣಾಪಾಯವೂ ಎದುರಾಗುತ್ತದೆ. ಅವರೆಲ್ಲರನ್ನೂ ಕ್ಷಮಿಸಿದ ಗುರು ಭಾರತ ಪರ್ಯಟನೆ ಮಾಡಿ ಪೂರ್ವಾಂಛಲದವರೆಗೂ ತನ್ನ ತತ್ವಗಳನ್ನು ಪ್ರಸರಿಸಿ ಆನಂದಪುರಕ್ಕೆ ಬಂದು ನೆಲೆನಿಲ್ಲುತ್ತಾರೆ.

                    ಇಷ್ಟರಾಗಲೇ ದೆಹಲಿಯ ಆ ದೊರೆ ಯಾರೆಂದು ನೀವು ಊಹಿಸಿರಬಹುದು. ಔರಂಗಜೇಬ್! ತನಗೆ ಭಯ ಬಿದ್ದು ಆಗ್ರಾ ಕೋಟೆಯಲ್ಲಿ ಬಾಗಿಲು ಮುಚ್ಚಿಕೊಂಡು ಕೂತಿದ್ದ ತನ್ನ ಮುದಿ ತಂದೆಯನ್ನು ಮಣಿಸಲು ನೀರು ಸರಬರಾಜನ್ನೇ ನಿಲ್ಲಿಸಿ ಬಾಯಾರಿಕೆಯಿಂದ ವಿಲವಿಲನೆ ಒದ್ದಾಡುವಂತೆ ಮಾಡಿದ ಸುಪುತ್ರನಾತ! ಸಿಂಹಾಸನಕ್ಕಾಗಿ ತಂದೆಯನ್ನು ಹಿಂಸಿಸಿ ಅವನ ಪ್ರೀತಿಪಾತ್ರನಾಗಿದ್ದ ತನ್ನ ಅಣ್ಣನ ತಲೆಯನ್ನೇ ಕತ್ತರಿಸಿ ಸುಂದರವಾಗಿ ಪ್ಯಾಕ್ ಮಾಡಿ ತಂದೆಗೆ ಗಿಫ್ಟ್ ಕಳುಹಿಸಿದ ಪುತ್ರ ಶ್ರೇಷ್ಠ! ಮಕ್ಕಳು ತಿರುಗಿ ಬಿದ್ದ ತಪ್ಪಿಗೆ ಎರಡನೆಯ ಹೆಂಡತಿ ನವಾಬ್ ಬಾಯಿಯನ್ನು, ಸಂಗೀತ ಕಲಿತ ತಪ್ಪಿಗೆ ಮಗಳು ಜೇಬುನ್ನೀಸಾಳನ್ನು ಸೆರೆಗೆ ಅಟ್ಟಿದ ಮಹಾಪುರುಷ! ಚಕ್ರವರ್ತಿಯಾದ ಶಿಷ್ಯನನ್ನು ಭೇಟಿಯಾಗಲು ಬಂದ ಗುರುವನ್ನೇ ಅವಮಾನಿಸಿ ಕಳುಹಿಸಿದ ಶಿಷ್ಯರತ್ನ! ತನ್ನವರನ್ನೇ ಬಿಡದ ಅವನು ಕಾಫಿರರನ್ನು ಬಿಟ್ಟಾನೆಯೇ? ಕೇವಲ ತನ್ನ ಸ್ವಾರ್ಥಕ್ಕಾಗಿ ತನ್ನ ಸೋದರರಾದ ದಾರಾ, ಶೂಜಾ, ಮುರಾದ್ ರನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಿಸಿ, ತಂದೆ ಶಹಜಹಾನನನ್ನು ಆಜೀವ ಕಾರಾಗೃಹದಲ್ಲಿಡಿಸಿ, ತನ್ನ ಸೋದರಿಯರಾದ ರೋಶನಾರಾ, ಜಹನಾರಾ ಮತ್ತು ಗೌಹಾರಾರನ್ನು ಚಿತ್ರವಿಚಿತ್ರವಾಗಿ ಕೊಲ್ಲಿಸಿ ಲಕ್ಷ ಲಕ್ಷ ಹಿಂದೂಗಳನ್ನು ಕೊಲ್ಲಿಸಿ, ಹತ್ತಾರು ಸಾವಿರ ದೇವಸ್ಥಾನಗಳನ್ನು ಕೆಡವಿದ ಔರಂಗಜೇಬ್ 1679 ಏಪ್ರಿಲ್ 2ರಂದು ಕಾಫಿರರ ದೇಶವಾಗಿದ್ದ ಭಾರತವನ್ನು ಇಸ್ಲಾಮಿಕ್ ರಾಜ್ಯವನ್ನಾಗಿಸಲು ಹಿಂದೂಗಳ ಮೇಲೆ ಬಹಿರಂಗ ಜಿಹಾದ್ ಘೋಷಿಸಿದ. ದೀಪಾವಳಿ ಮುಂತಾದ ಹಬ್ಬಗಳು, ಜಾತ್ರೆಗಳನ್ನಾಚರಿಸದಂತೆ ಹಿಂದೂಗಳ ಮೇಲೆ ನಿಯಂತ್ರಣ ಹೇರಿದುದಲ್ಲದೆ ಹಿಂದೂಗಳು ಭೂಮಿಯನ್ನು ಕೊಳ್ಳದಂತೆ ಕಾನೂನು ಮಾಡಿದ. ಸರ್ಕಾರೀ ಕೆಲಸಗಳಿಂದ ಹಿಂದೂಗಳನ್ನು ಕಿತ್ತೆಸೆದ. ಜಿಜಿಯಾ ತೆರಿಗೆಯನ್ನು ಹಿಂದೂಗಳ ಮೇಲೆ ಹಾಕಿ ಅವರನ್ನು ಇಸ್ಲಾಮಿಕ್ ಆಡಳಿತದಲ್ಲಿ ಬದುಕಲು ಅವಕಾಶ ಕೊಟ್ಟುದಕ್ಕಾಗಿ ಸುಂಕವನ್ನು ಸಲ್ಲಿಸಬೇಕಾದ ದುರವಸ್ಥೆಗೀಡು ಮಾಡಿದ. ಆ ದಿವಸದಿಂದ ತನ್ನ ಅಧಿಕಾರ, ಧನ, ಸೈನಿಕ ಬಲವನ್ನು ಹಿಂದೂಗಳನ್ನು ಹಿಂಸಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವುದಕ್ಕಾಗಿಯೇ ವಿನಿಯೋಗಿಸಿದ.

                ಅನ್ಯಾಯದ ಜಿಜಿಯಾ ತೆರಿಗೆಯನ್ನು ಮತ್ತೆ ಹೊರಿಸಿದ ಸುದ್ದಿ ಕೇಳಿದ ಕೂಡಲೇ ದೇಶ ಕುತ ಕುತ ಕುದಿಯಿತು. ಅದನ್ನು ತೆಗೆದುಹಾಕೆಂದು ಚಕ್ರವರ್ತಿಗೆ ಮೊರೆಯಿಡಲು ದಿಲ್ಲಿಯಲ್ಲಿ ಸಾವಿರಾರು ಪ್ರಜೆಗಳು ನೆರೆದರು. ಯಮುನೆಯ ತೀರದ ರಾಜಮಹಲಿನಲ್ಲಿ ನಿಂತು ಹೊಸ ತೆರಿಗೆಯನ್ನು ತೆಗೆದು ಹಾಕಬೇಕೆಂದು ಗೋಳಿಟ್ಟರು. ಚಕ್ರವರ್ತಿ ಕೇಳಿಸಿಕೊಳ್ಳಲೇ ಇಲ್ಲ. ಒಂದು ದಿನ ಔರಂಗಜೇಬ್ ಮಸೀದಿಗೆ ಪ್ರಾರ್ಥನೆ ಸಲ್ಲಿಸಲೆಂದು ಹೋಗುತ್ತಿದ್ದಾಗ ರಾಜಮಹಲಿನಿಂದ ಮಸೀದಿಯವರೆಗಿನ ರಾಜಮಾರ್ಗದುದ್ದಕ್ಕೂ ಕಿಕ್ಕಿರಿದು ನೆರೆದ ಹಿಂದುಗಳು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರಾರ್ಥಿಸಿಕೊಂಡರು. ಆ ಅಪಾರ ಜನಸಮೂಹವನ್ನು ದಾಟಿ ಹೋಗುವುದು ಅವನಿಗೆ ಅಸಾಧ್ಯವಾಯಿತು. ಪ್ರಾರ್ಥನೆಗೆ  ತಟ್ಟನೆ ಆ ದಯಾಮಯ ಪ್ರಭುವಿಗೆ ಒಂದು ಉಪಾಯ ಹೊಳೆಯಿತು. ಕೂಡಲೇ ಗಜಶಾಲೆಯಲ್ಲಿನ ಆನೆಗಳನ್ನು ಆ ಜನಸಮೂಹದ ಮೇಲೆ ಬಿಡಲು ಆಜ್ಞಾಪಿಸಿದ. ಆನೆಗಳು ಅಮಾಯಕ ಜನರ ಮೇಲೆ ಅರಿಭಯಂಕರವಾಗಿ ಮುನ್ನುಗ್ಗಿದವು. ಸಹಸ್ರಾರು ಜನ ಸತ್ತರು. ಹಲವು ಸಾವಿರ ಮಂದಿ ಗಾಯಗೊಂಡರು. ದಾರಿಯುದ್ದಕ್ಕೂ ಹೆಣಗಳ ಸಾಲು. ರಸ್ತೆ ಖಾಲಿ ಆಯಿತು. ಚಕ್ರವರ್ತಿ ಠೀವಿಯಿಂದ ದೇವರ ಪ್ರಾರ್ಥನೆಗೆ ಮಸೀದಿಗೆ ಹೊರಟ. ಆದರೇನು ದಿಲ್ಲಿಯ ಬೀದಿಗಳಲ್ಲಿ ಭುಗಿಲೆದ್ದ ಅಶಾಂತಿ ಕರಿಗಳ ಕಾಲ್ಗೆಳಗೆ ನುಚ್ಚುನೂರಾಗಲಿಲ್ಲ. ಅದು ದಾವಾನೆಲವಾಗಿ ಮಾರ್ಪಟ್ಟಿತು.

              ಅಂತಹ ವಿಷಮ ಪರಿಸ್ಥಿತಿಯಲ್ಲೇ ಹಿಂದೂ ಪ್ರಮುಖರು ಗುರು ತೇಜ್ ಬಹಾದ್ದೂರರಲ್ಲಿ ಮೊರೆ ಇಟ್ಟಿದುದು. ಗುರುಗಳು 1675 ಜುಲೈ 8 ರಂದು ಸಿಖ್ ಸಂಗತ್ ಅನ್ನು ಸಮಾವೇಶಗೊಳಿಸಿ ತನ್ನ ಚಿಕ್ಕಮಗ ಗೋವಿಂದನನ್ನು ಉತ್ತರಾಧಿಕಾರಿಯಾಗಿ ಸಕಲ ಗೌರವ, ಲಾಂಛನಗಳೊಡನೆ ಕೂರಿಸಿದರು. ಆಯ್ದ ಮೂವರು ಶಿಷ್ಯರನ್ನು ಕರೆದುಕೊಂಡು ಕುಟುಂಬ, ಬಂಧು-ಮಿತ್ರ, ಶಿಷ್ಯವರ್ಗದಿಂದ ಬೀಳ್ಗೊಂಡು ಭಕ್ತಾದಿಗಳು ದುಃಖ ತಪ್ತರಾಗಿ ರೋದಿಸುತ್ತಿರಲು ದೆಹಲಿಗೆ ಪಯಣ ಬೆಳೆಸಿದರು. ಇತ್ತ ಸಮಾಚಾರ ತಿಳಿದ ಔರಂಗಜೇಬನಿಗೆ ತೇಜ್ ಬಹಾದೂರ್ ಹೆಸರು ಕೇಳಿದೊಡನೆ ಮೈಯೆಲ್ಲಾ ಧಗಧಗ ಉರಿಯತೊಡಗಿತು. ಕೆಂಡಾಮಂಡಲನಾಗಿ ತೇಜ್ ಬಹಾದೂರರನ್ನು ಹಿಡಿದು ತನ್ನಿರೆಂದು ಆಜ್ಞಾಪಿಸಿದ. ತೇಜ್ ಬಹಾದೂರ್ ಹಾಗವರ ಶಿಷ್ಯರನ್ನು ಬಂಧಿಸಿ ಸಿರ್ ಹಿಂದ್ ನಲ್ಲಿ ಮೂರು ತಿಂಗಳ ಕಾಲ ಸೆರೆಯಲ್ಲಿರಿಸಲಾಯಿತು. ಆನಂತರ ಕಬ್ಬಿಣದ ಪಂಜರದಲ್ಲಿ ಕೂಡಿ ಹಾಕಿ ದೆಹಲಿಗೆ ಒಯ್ದರು. ಇಸ್ಲಾಮಿಗೆ ಮತಾಂತರಗೊಳ್ಳುವೆನೆಂದು ಹೇಳು ಎನ್ನುವಂತೆ ಪೀಡಿಸಿದರು. ಸರಪಳಿಯಿಂದ ಬಿಗಿದು ಅಮಾನುಷವಾಗಿ ಹಿಂಸಿಸಿದರು. ಕ್ಷುಲ್ಲಕ ಆರೋಪಗಳನ್ನು ಮಾಡಿದರು. ಒಮ್ಮೆಯಂತೂ ರಾಣೀವಾಸದ ಕೋಣೆಗಳೆಡೆ ನೋಡುತ್ತಿದ್ದರೆಂಬ ಆರೋಪ. ಔರಂಗಜೇಬ್ ಪ್ರಶ್ನಿಸಿದಾಗ ಆ ಮಹಾಯೋಗಿ "ಸೆರೆಮನೆಯ ಮೇಲಂತಸ್ತಿನಿಂದ ನಾನು ನೋಡಿದ್ದು ನಿನ್ನಂತಃಪುರವನ್ನೋ, ರಾಣಿಯರ ಖಾಸಗಿ ಕೋಣೆಯನ್ನೋ ಅಲ್ಲ. ನಾನು ನೋಡುತ್ತಿದ್ದುದು ನಿನ್ನ ಪರದೆಗಳನ್ನು ಹರಿದೆಸೆದು ನಿನ್ನ ಸಾಮ್ರಾಜ್ಯವನ್ನು ಧ್ವಂಸ ಮಾಡಲು ಸಮುದ್ರ ದಾಟಿಕೊಂಡು ಬರುತ್ತಿರುವ ಯೂರೋಪಿಯನ್ನರತ್ತ" ಎಂದರು.
ಎಷ್ಟು ಆರೋಪಗಳನ್ನು ಮಾಡಿ, ಎಷ್ಟು ಆಸೆ - ಆಮಿಷ, ಯಮ ಯಾತನೆಯನ್ನೊಡ್ಡಿದರೂ ತೇಜ್ ಬಹಾದ್ದೂರ್ ಮಣಿಯಲಿಲ್ಲ. ನಿನಗೇನಾದರೂ ದಿವ್ಯತ್ವವಿದ್ದರೆ ಮಹಿಮೆಯನ್ನೇನಾದರೂ ಮಾಡಿ ತೋರಿಸೆಂದು ಔರಂಗಜೇಬ್ ಕೇಳಿದ. ದೈವ ಸಂಕಲ್ಪಕ್ಕೆ ವಿರುದ್ಧವಾಗಿ ನಡೆಯಬಾರದೆಂದು ಹೇಳಿ ಅವರು ಅದನ್ನು ನಿರಾಕರಿಸಿದರು. ಅದೇ ನೆಪವಾಗಿ ಕಾಫಿರರನ್ನು ಇಸ್ಲಾಂ ಮತಾಚಾರದ ಪ್ರಕಾಋಅ ಶಿಕ್ಷಿಸಲು ಔರಂಗಜೇಬ್ ಚಿತ್ರವಧೆಗೆ ಆಜ್ಞಾಪಿಸಿದ. ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ದೇಹವನ್ನು ಇಬ್ಬಾಗ ಮಾಡಿದರು. ಭಾಯಿ ದಯಾಳನನ್ನು ಕೊತಕೊತ ಕುದಿಯುತ್ತಿದ್ದ ನೀರಿನ ಹಂಡೆಗೆ ಹಾಕಿದರು. ಭಾಯಿ ಸತೀದಾಸನನ್ನು ಹತ್ತಿಯ ರಾಶಿಯಲ್ಲಿ ಹಾಕಿ ಬೆಂಕಿ ಕೊಟ್ಟರು. ಈ ಪೈಶಾಚಿಕ ಕೃತ್ಯಗಳೆಲ್ಲಾ ಕಣ್ಣ ಮುಂದೆಯೇ ಜರುಗಿದರೂ ತೇಜ್ ಬಹಾದ್ದೂರ್ ವಿಚಲಿತರಾಗಲಿಲ್ಲ. ಗುರುಗಳ ಕಣ್ಣುಗಳನ್ನು ಕೀಳಿಸಿದ. ಏನು ಮಾಡಿದರೂ ಮಣಿಯದಿದ್ದಾಗ 1675 ನವೆಂಬರ್ 11ರಂದು ಹಾಡಹಗಲೇ ಎಲ್ಲರೂ ನೋಡುತ್ತಿದ್ದಂತೆಯೇ ಚಾಂದನೀ ಚೌಕದಲ್ಲಿ ಪವಿತ್ರ ಗುರುದೇವರ ತಲೆಯನ್ನು ಕತ್ತರಿಸಿ ಚೆಲ್ಲಿದರು. ಕತ್ತಿಯ ಏಟು ಬೀಳುತ್ತಿರುವಾಗಲೂ ಪ್ರಶಾಂತವದನರಾಗಿ ನಿಶ್ಚಿಂತೆಯಿಂದಿದ್ದ ಅವರ ಪರಿಯನ್ನು ಕಂಡು ಕಟುಕನೂ ಬೆರಗಾದ.

                ಜನತೆ ತಲ್ಲಣಿಸಿತು. ಭಯದಿಂದ ಯಾರೂ ಬಿದ್ದ ದೇಹದ ಬಳಿ ಹೋಗಲಿಲ್ಲ. ಆ ಘೋರವನ್ನು ಕಂಡು ಪ್ರಕೃತಿಯೇ ಅತ್ತಿತು. ಅಂದು ರಾತ್ರಿ ಧಾರಾಕಾರ ಮಳೆ ಸುರಿಯಿತು. ಆ ಜಡಿ ಮಳೆಯಲ್ಲಿ ಕೆಲ ಶಿಷ್ಯರು ರಹಸ್ಯವಾಗಿ ಗುರುಗಳ ಶಿರಸ್ಸನ್ನು ಆನಂದಪುರಕ್ಕೆ ಸಾಗಿಸಿದರು. ಶಿಷ್ಯ ಲಖೀದಾಸ ಮುಂಡವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ಬಹಿರಂಗವಾಗಿ ಅಂತ್ಯಕ್ರಿಯೆ ಮಾಡುವ ಅವಕಾಶವಿಲ್ಲದ್ದರಿಂದ ತನ್ನ ಗುಡಿಸಲಲ್ಲಿ ಗುರುಗಳ ದೇಹವಿರಿಸಿ ತನ್ನ ಗುಡಿಸಲಿಗೆ ತಾನೇ ಬೆಂಕಿ ಹಚ್ಚಿ ಬೆಳಗಾಗುವ ಮೊದಲೇ ಗುರುವಿನ ಅಂತ್ಯಕ್ರಿಯೆ ಮುಗಿಸಿದ. ತನ್ನ ತಂದೆಯ ಶಿರಸ್ಸಿಗೆ ಭಕ್ತಿ ಶೃದ್ಧೆಗಳಿಂದ ಯಥಾ ವಿಧಿ ಸಂಸ್ಕಾರ ಪೂರೈಸಿ ವಿಲಪಿಸುತ್ತಿದ್ದ ಭಕ್ತ ಜನರಿಗೆ ಧೈರ್ಯ ತುಂಬಿದ ಪುತ್ರ ಗುರು ಗೋವಿಂದ ಸಿಂಗ್ ಅಚಂದ್ರಾರ್ಕವಾಗಿ ತನ್ನ ತಂದೆಯ ಬಲಿದಾನವನ್ನು ಲೋಕ ಸ್ಮರಿಸುತ್ತದೆಯೆಂದ. ಆದರೆ ನಮ್ಮ ಸೆಕ್ಯುಲರ್ ಚರಿತ್ರೆಕಾರರು ಆ ಅಪ್ರತಿಮ ವೀರ-ಯೋಗಿ-ಬಲಿದಾನಿಯನ್ನು ಸೂರ್ಯ-ಚಂದ್ರರಿನ್ನೂ ಪ್ರಕಾಶಿಸುತ್ತಿರುವಾಗಲೇ ದರೋಡೆಕೋರನನ್ನಾಗಿಸಿದರು. ಯಾರೇನೇ ಒದರಲಿ ಆ ಯೋಗಿಯ ಬಲಿದಾನ ವ್ಯರ್ಥವಾಗಲಿಲ್ಲ. ಅದು ದೀನ-ಹೀನ-ಜೀವಚ್ಛವಗಳಂತೆ ಬದುಕು ಸಾಗಿಸುತ್ತಿದ್ದ ಜನರಿಗೆ ಸಂಜೀವಿನಿಯಾಗಿ ಅವರಲ್ಲಿ ಸ್ಪೂರ್ತಿ ತುಂಬಿತು. ಒಂಬತ್ತು ವರ್ಷ ಪ್ರಾಯದ ಬಾಲ ಗುರು ಗೋವಿಂದ ಸಿಂಗನ ನೇತೃತ್ವದಲ್ಲಿ ಅದು ಹೆದ್ದೆರೆಯಾಗಿ ಮೊಘಲ್ ಸಾಮ್ರಾಜ್ಯಕ್ಕೆ ಅಪ್ಪಳಿಸಿತು. ಆಟ-ಪಾಠಗಳಲ್ಲಿ ತಲ್ಲೀನವಾಗಬೇಕಿದ್ದ ವಯಸ್ಸಿನಲ್ಲಿ ಬಂದ ಗುರುತರ ಜವಾಬ್ದಾರಿಯೊಂದನ್ನು ಆತ ಅದ್ಭುತವಾಗಿ ನಿರ್ವಹಿಸಿದ. "ನರಿಗಳನ್ನು ಹುಲಿಗಳನ್ನಾಗಿ, ಗುಬ್ಬಚ್ಚಿಗಳನ್ನು ಗಿಡುಗಳನ್ನಾಗಿ ಮಾಡಬಲ್ಲ" ಎನ್ನುವ ತನ್ನ ಮೇಲಿನ ಭವಿಷ್ಯವಾಣಿಯನ್ನು ನಿಜಗೊಳಿಸಿದ.



ಭಾನುವಾರ, ಮಾರ್ಚ್ 22, 2015

ರವಿಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ



ರವಿಗೆ ಉಗುಳಹೊರಟರೆ ಬಂದು ಬೀಳುವುದು ನಿಮ್ಮ ಮೊಗಕ್ಕೇ
ಕತ್ತಿಗೆ ಸುತ್ತಿಕೊಂಡಿದ್ದ ವಸ್ತ್ರ ಬಿಗಿಯಾಗದೇ ಅಗಲವಾಗಿ ಬಿಡಿಸಿಕೊಂಡತಿಂತ್ತು. ನಾಲಿಗೆ ಹೊರಚಾಚಿರಲಿಲ್ಲ. ಕಣ್ಣುಗಳು ಹೊರಬರದೆ ನಿದ್ರಿಸಿರುವ ರೀತಿಯಲ್ಲಿದ್ದವು. ದೇಹದ ಭಾರಕ್ಕೆ ಫ್ಯಾನ್ ಜಖಂ ಆಗಿರಲಿಲ್ಲ. ಮೈ ಮೇಲೆ ಗಾಯವಿತ್ತು. ಶರೀರದ ಬಣ್ಣ ಬದಲಾಗಿತ್ತು. ಮೀಡಿಯಾಗಳಿಗಿಂತಲೂ ಮುಂಚೆಯೇ ಹೋದರು ಗೃಹ ಸಚಿವರು! ಪೋಸ್ಟ್ ಮಾರ್ಟಮ್ ಮುನ್ನವೇ ಕಮೀಷನರ್ ಸಾಹೇಬರು ಆತ್ಮಹತ್ಯೆ ಎಂದು ಘೋಷಿಸಿಯೇ ಬಿಟ್ಟರು. ಗೃಹ ಸಚಿವ ಮೀಸೆಯಡಿ ನಗುತ್ತಾ ನಾಚಿಕೆಯಿಲ್ಲದೆ ಅದನ್ನೇ ಹೇಳಿಬಿಟ್ಟರು. ಸಾಂತ್ವನ ಹೇಳುವ ಬದಲು ಶವಪರೀಕ್ಷೆ ನಡೆಯುವ ಸ್ಥಳಕ್ಕೆ ಹೋದ ಮುಖ್ಯಮಂತ್ರಿ ಅದನ್ನೇ ಅನುಮೋದಿಸಿಬಿಟ್ಟರು. ನಿದಿರೆಯ ಕಣ್ಣೋ? ಮದಿರೆಯ ಅಮಲೋ? ಭಯದ ಕರಿನೆರಳೋ? ಜನರಿಗೆ ನಂಬುಗೆ ಬರಲಿಲ್ಲ. ಸಿಬಿಐ ತನಿಖೆಗೆ ಪಟ್ಟು ಹಿಡಿದರು. ಕೆಲವು ಜೀವಗಳು ಬಲಿಯಾದವು. ಒಂದಷ್ಟು ಜನ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟದ್ದಾಯಿತು. ಕೆಲ ಐಎಎಸ್ ಅಧಿಕಾರಿಗಳು ಪ್ರಧಾನಿಗಳಿಗೆ ಪತ್ರ ಬರೆದರು. ಮುಖ್ಯಮಂತ್ರಿ ಬಗ್ಗಲೇ ಇಲ್ಲ.
ಜಗವ ಬೆಳಗುತ ತನ್ನ ಕಾರ್ಯವನ್ನು ಚ್ಯುತಿಯಿಲ್ಲದೆ ಮಾಡುವ ಕರ್ಮಸಾಕ್ಷಿ ರವಿ! ರವಿಯೂ  ತಾನಿದ್ದ ಸ್ಥಳವನ್ನು ತನ್ನ ಕರ್ತವ್ಯ ನಿಷ್ಠೆ, ಖಡಕ್ ನಿರ್ಧಾರ, ಪ್ರಾಮಾಣಿಕತೆ, ಸೇವಾ ಮನೋಭಾವದಿಂದ ಬೆಳಗಿದಾತ. ಕಡುಬಡತನಕ್ಕೇ ಸವಾಲೊಡ್ಡಿ ಕೆಎಎಸ್ ಬರೆದು ಸಂದರ್ಶನವನ್ನೂ ನೀಡುವಲ್ಲಿವರೆಗೂ ಮುನ್ನುಗ್ಗಿದ ಪರಿಶ್ರಮಿ. ಐಎಎಸ್ ಪರೀಕ್ಷೆ ಬರೆಯಲು ಅಧ್ಯಯನಕ್ಕೆ ಕೇಳಿದ ರಜೆ ಸಿಗದಿದ್ದಾಗ ಮೇಲಾಧಿಕಾರಿಗಳ ಕೊಂಕು, ಅಹಮಿಕೆಗೆ ಬಗ್ಗದೆ ಸರ್ಕಾರೀ ನೌಕರಿಗೆ ರಾಜೀನಾಮೆಯಿತ್ತು ಐಎಎಸ್ ಬರೆದ ಛಲ ಬಿಡದ ತ್ರಿವಿಕ್ರಮ. ಕೋಲಾರದ ಜಿಲ್ಲಾಧಿಕಾರಿಯಾಗಿ ಭ್ರಷ್ಟರಿಗೆ ನೀರಿಳಿಸಿದ್ದರು. ಅವರ ಖಡಕ್ ನಿರ್ಧಾರಗಳು ಕೋಲಾರದ ಕೆಲವು ಶಾಸಕರ ಬುಡವನ್ನೇ ಅಲುಗಾಡಿಸಿದ್ದವು. ಇದಕ್ಕೆ ಪೂರಕವೆಂಬಂತೆ ವರ್ತೂರ್ ಪ್ರಕಾಶ್ ಅಧಿಕಾರಿಯೊಬ್ಬನಿಗೆ ಕರೆ ಮಾಡಿ " ಡಿಸಿ ರವಿಯನ್ನು ವರ್ಗಾವಣೆ ಮಾಡುತ್ತೇನೆ. ದೂರನ್ನು ವಾಪಸು ತೆಗೋ" ಎಂದು ಅಧಿಕಾರಿಯೊಬ್ಬನಿಗೆ ಬೆದರಿಸಿದ ಅಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಹರಿದಾಡುತ್ತಿದೆ. ಬಡವರೊಬ್ಬರ ಬಳಿ ತಮ್ಮ ಕೆಳಗಿನ ಅಧಿಕಾರಿಯೊಬ್ಬ ಲಂಚ ತೆಗೆದುಕೊಂಡಿದ್ದ ಸುದ್ದಿ ಕೇಳಿದೊಡನೆ ವ್ಯಗ್ರರಾಗಿ ಅಧಿಕಾರಿಗೆ ಛೀಮಾರಿ ಹಾಕಿದ್ದರು. ರವಿಯ ಮಾವ ಹನುಮಂತರಾಯಪ್ಪ, "ರವಿ  ರಿಯಲ್ ಎಸ್ಟೇಟ್ ಸಂಸ್ಥೆ ಕಾನ್ಫಿಡೆಂಟ್ ಗ್ರೂಪಿನ ಅಕ್ರಮಗಳಿಗೆ ಕಡಿವಾಣ ಹಾಕಲೆತ್ನಿಸಿದಾಗ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಕಾನ್ಫಿಡೆಂಟ್ ಗ್ರೂಪಿನ ಪರವಾಗಿ ನಿಂತು ರವಿಯನ್ನು ಬೆದರಿಸಿದ್ದರು. ಕಾರಣವಾಗಿ ರವಿಯನ್ನು ಬೆಂಗಳೂರಿಗೆ ವರ್ಗಾಯಿಸಿ ಎಂದು ನಾನು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ" ಎಂದಿರುವುದು ರವಿಯ ಹತ್ಯೆಯ ಹಿಂದಿನ ಭೃಷ್ಟ ವ್ಯವಸ್ಥೆಯ ಕಡೆಗೆ ಬೊಟ್ಟು ಮಾಡುತ್ತಿದೆ. ರವಿಯ ವರ್ಗಾವಣೆಯ ಹಿಂದೆ ಮುಖ್ಯಮಂತ್ರಿಗಳ ಆಪ್ತವರ್ಗವಿದ್ದದ್ದಂತೂ ಸೂರ್ಯ ಸತ್ಯ!
ಬೆಂಗಳೂರಿಗೆ ವರ್ಗಾವಣೆಯಾದ ಮೇಲೆ  ತಿಮಿಂಗಿಲಗಳಿಗೇ ಬಲೆ ಬೀಸಿದ್ದರು. ಒಂದೇ ತಿಂಗಳಲ್ಲಿ 67 ಭ್ರಷ್ಟರನ್ನು ಹಿಡಿದುಹಾಕಿ ಸರಕಾರಕ್ಕೆ ಬರಬೇಕಿದ್ದ 130 ಕೋಟಿ ತೆರಿಗೆ ವಸೂಲು ಮಾಡಿದ್ದರು. ಇನ್ನೂ ಒಂದಷ್ಟು ಭೃಷ್ಟರನ್ನು ಹಿಡಿಯುವುದಿದೆ ಎಂದು ನಿರ್ಭೀತಿಯಿಂದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಗೃಹ ಸಚಿವರ ಒಡೆತನದಲ್ಲಿದ್ದ ಕಂಪೆನಿಯ ಅಕ್ರಮಕ್ಕೆ ಕಡಿವಾಣ ಹಾಕುವ ಸಲುವಾಗಿ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ರವಿ. ಹೀಗೆ ಯೋಜನೆ ರೂಪಿಸಿದ್ದ ಕೆಲದಿನಗಳಲ್ಲೇ ಕೊಲೆಯಾಗಿ ಹೋದರು ರವಿ. ಕೊಲೆಗೀಡಾಗುವ ಮುನ್ನ ತನಗೆ ಬಂದ ಕರೆಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ ರವಿ ಕೋಪದಿಂದ ಕೂಗಾಡಿದ್ದರು ಎನ್ನುವ ಅಂಶವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಕರೆಯ ಜಾಡು ಹಿಡಿದು ಹೊರಟರೆ ಕೊಲೆಯ ಹಿಂದಿನ ಕಾಣದ "ಕೈ"ಗಳು ಪತ್ತೆಯಾಗುವುದು ಸ್ಪಷ್ಟ. ವಿರೋಧ ಪಕ್ಷಗಳು ಮಾತ್ರವಲ್ಲ, ಇಡೀ ರಾಜ್ಯದ ಜನತೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದಾಗಲೂ ಬಗ್ಗಲಿಲ್ಲ ಸಿದ್ದರಾಮಯ್ಯ. ಸಿಬಿಐಗೆ ಬೇಡ, ಸಿಐಡಿಗೆ ಇದರ ತನಿಖೆ ಕೊಡೋಣ ಎನ್ನುತ್ತ ಅಲ್ಲಿನ ದಕ್ಷ ಅಧಿಕಾರಿ ಪ್ರಣಬ್ ಮೋಹಾಂತಿಯವರನ್ನು ಎತ್ತಂಗಡಿ ಮಾಡಿಬಿಟ್ಟರು. ಜನರ ಟೀಕೆಗೆ ಬೆದರಿ ವರ್ಗಾವಣೆ ರದ್ದು ಮಾಡಿದರು. ಐದು ದಿನದಿಂದ ಅನ್ನನೀರು ಬಿಟ್ಟಿದ್ದ ಅವರ ಸೋದರತ್ತೆಯ ಜೀವವೂ ಹೋಯಿತು. ಜನರ ಮಾತಿಗೆ ಬಗ್ಗದೆ ತಮ್ಮ ಅಧಿನಾಯಕಿ ಆಜ್ಞೆ ಮಾಡಿದಾಗ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಿದ್ಧರಾದರೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿರುವುದು ಕರ್ನಾಟಕಕ್ಕೋ ಅಲ್ಲಾ ಕಾಂಗ್ರೆಸಿಗೋ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಸರ್ಕಾರದ ಎಲ್ಲಾ ನಡೆಗಳು, ಸರಕಾರವನ್ನು ಬೆಂಬಲಿಸಿದವರು ಕೊಟ್ಟ ಹೇಳಿಕೆಗಳೆಲ್ಲಾ ರವಿಯವರನ್ನು ಕೊಲೆ ಮಾಡಲಾಗಿದೆ ಎನ್ನುವ ಅಂಶಕ್ಕೆ ಮತ್ತಷ್ಟು ಪುಷ್ಠಿ ಒದಗಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿಗರ ಹಾಗೂ ಅವರ ಚೇಲಾಗಳ ಮಾನಗೆಟ್ಟ ಕಾರ್ಯವೆಂದರೆ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಸಲುವಾಗಿ ರವಿಯ ಚಾರಿತ್ರ್ಯವಧೆ ಮಾಡಲಾರಂಭಿಸಿದ್ದು. ಅವರದೇ ಬ್ಯಾಚಿನ ಅವರ ಸ್ನೇಹಿತೆಯ ಜೊತೆ ಅಫೇರ್ ಇತ್ತು, ಸಾಯುವ ಮುನ್ನ ಆಕೆಗೆ ಸಂದೇಶ ಕಳುಹಿಸಿದ್ದರು ಎನ್ನುವ ಕಪೋಲಕಲ್ಪಿತ ಕಥೆಗಳನ್ನು ಹರಿಯಬಿಟ್ಟದ್ದು. ರವಿ ತಮ್ಮ ಹೆಂಡತಿಯ ಜೊತೆ ನಿಂತಿರುವ ಚಿತ್ರವನ್ನೇ ಅಪ್ಲೋಡ್ ಮಾಡಿ ಆಕೆ ರವಿಯ ಸ್ನೇಹಿತೆ ಎಂದು ಅರಚಾಡಿದ್ದು. ಇದರಲ್ಲೊಂದು ವ್ಯವಸ್ಥಿತ ಪಿತೂರಿಯೇ ಇದೆ. ವ್ಯಂಗ್ಯವೆಂದರೆ ತಾವು ಮಹಿಳಾ ಮತ್ತು ಮಾನವ ಹಕ್ಕುಗಳ ಪರ ಎಂದು ಪೋಸುಕೊಡುವ ಬುದ್ದು ಜೀವಿಗಳೆಲ್ಲಾ ರವಿಯ ಕೊಲೆಯ ಸಮಯದಲ್ಲಿ ಕಾಣೆಯಾಗಿದ್ದು ಈಗ ತಮ್ಮ ಅನ್ನದಾತ ಸರಕಾರ-ಮಂತ್ರಿಗಳನ್ನು ರಕ್ಷಿಸಿಕೊಳ್ಳಲು ತಮ್ಮ ಹೊಟ್ಟೆ ಹೊರೆಯುವ ಸಲುವಾಗಿ ಇಬ್ಬರು ಹೆಣ್ಣುಮಕ್ಕಳ ಮೇಲೆ ಅನ್ಯಾಯವೆಸಗುತ್ತಿರೋದು! ನಾಚಿಕೆಯಾಗಬೇಕು "ರಾವಣ" ಸಂತತಿಗೆ. ತಮ್ಮ ದಾಹ ತೀರಿಸಿಕೊಳ್ಳಲು ಇನ್ನೊಬ್ಬರ ಪ್ರಾಣ ಮಾನ ಕಳೆಯಲೂ ಹೇಸದ ಇಂತಹವರಿಂದ ರಾಜ್ಯ ಆಳಲ್ಪಡುತ್ತಿದೆಯಲ್ಲ. ಜನತೆ ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡುತ್ತಿದೆ. ಹಾಂ... ಸೂರ್ಯನಿಗೇ ಉಗುಳಹೊರಟವರ ಪಾಡು ಏನಾಗುತ್ತದೆಂದು ತಿಳಿದಿರಲಿ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆದಿದ್ದ ನೂರಾರು ಕೋಟಿ ಅವ್ಯವಹಾರವನ್ನು ಬಯಲಿಗೆಳೆದ ದಿಟ್ಟ ಐಎಎಸ್ ಅಧಿಕಾರಿ ವಿ.ರಶ್ಮಿ ಮಹೇಶ್ ಅವರನ್ನು ಸರಕಾರ ನಡೆಸಿಕೊಂಡ ರೀತಿ, ಮುಖ್ಯಮಂತ್ರಿಗಳ ತವರು ಜಿಲ್ಲೆಯ ಉಪನೋಂದಣಾಧಿಕಾರಿಯಾಗಿದ್ದ ಎಚ್.ಎಸ್ ಚಲುವರಾಜು ಭ್ರಷ್ಟ ವ್ಯವಸ್ಥೆಗೆ ಬೇಸತ್ತು ರಾಜೀನಾಮೆ ನೀಡಿದ್ದು, ಸಚಿವರೊಬ್ಬರ ಸಹೋದರನ ಅಕ್ರಮ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿ,ವಿಚಾರಣೆಯನ್ನೂ ಮಾಡಿ ಸತ್ಯದ ಪರ ತೀರ್ಪು ನೀಡಿ, ಸಚಿವರು ವ್ಯತಿರಿಕ್ತ ತೀರ್ಪು ನೀಡುವಂತೆ ಒತ್ತಡ ಹೇರಿದ್ದನ್ನು ದಾಖಲಿಸಿದ್ದ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿಯವರ ಹಿಂಬಡ್ತಿ ಮತ್ತು ವರ್ಗಾವಣೆ,  ಕರ್ನಾಟಕ ಭವನದ ಕಚೇರಿ ಅಧೀಕ್ಷಕ ವೆಂಕಟೇಶ ಮೂರ್ತಿಯವರ ಎತ್ತಂಗಡಿ, ಬಿಬಿಎಂಪಿ ಕಡತ ಹಗರಣವನ್ನು ಬಯಲಿಗೆಳೆದ ಪ್ರಾಮಾಣಿಕ ಲೋಕಾಯುಕ್ತ ಅಧಿಕಾರಿ ಮಹೇಶ್ ಅವರ ವರ್ಗಾವಣೆ. ಹೀಗೆ ಪ್ರಾಮಾಣಿಕ-ದಕ್ಷ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ನೀಡುವ ಇಂತಹ ಸರ್ಕಾರದಿಂದ ಡಿ.ಕೆ ರವಿಯವರ ಅಸಹಜ ಸಾವಿನ ಸತ್ಯ ಹೊರ ಬಂದೀತೆ?
ಒಟ್ಟಾರೆ ಸರ್ಕಾರಕ್ಕೆ ಪ್ರಕರಣದ ತನಿಖೆ ನಡೆದು ಸತ್ಯ ಹೊರಬರಬೇಕೆನ್ನುವ ಇರಾದೆ ಖಂಡಿತಾ ಇಲ್ಲ. ತಮ್ಮದೇ ಸರಕಾರದ ಸಚಿವರ ಹಸ್ತಕ್ಷೇಪ ಜನತೆಗೆ ತಿಳಿಯುತ್ತಲ್ಲಾ! ಅದಕ್ಕಾಗಿಯೇ ಜನ ಅಷ್ಟು ಕೂಗಾಡಿದರೂ ಸಿಬಿಐಗೆ ಒಪ್ಪಿಸದೇ ಇದ್ದುದು. ಸಿಐಡಿಯಾದರೆ ತಮ್ಮ ಅಧೀನದಲ್ಲಿರುತ್ತದೆ, ತಮಗೆ ಬೇಕಾದ ವರದಿ ತರಿಸಿಕೊಳ್ಳಬಹುದಲ್ಲವೇ. ಅದೇ ಸಿಬಿಐಗೆ ಕೊಟ್ಟರೇ ಸರಕಾರವೇ ಉರುಳಬಹುದು. ಸೋಮವಾರ ಸಿಬಿಐಗೆ ಕೊಡುವುದೆಂದು ನಿರ್ಧರಿಸಿದ್ದರೂ ಸಾಕ್ಷ್ಯ ನಾಶ ಮಾಡಲು ಬೇಕಾದಷ್ಟು ದಿನಗಳು ಅಪರಾಧಿಗಳಿಗೆ ಲಭಿಸಿವೆ. ಒಟ್ಟಾರೆ ದಕ್ಷತೆ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆಗಳಿಗೆ ಬೆಲೆ ಇಲ್ಲವೆಂದು ಅಂದು ಸದನದಲ್ಲಿ ತೋಳು ತಟ್ಟಿದ್ದ ಅದೇ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಜನತೆ ಹಾಕಿದ ಮತಕ್ಕೂ! ರವಿ ಸಾವು ಇಡೀ ದೇಶದಲ್ಲಿ ಸಂಚಲನ ಎಬ್ಬಿಸಿದೆ. ಅವರನ್ನು ದೇವರಂತೆ ಪೂಜಿಸುವ ಅನೇಕ ಜನರಿದ್ದಾರೆ. ಹುಟ್ಟೂರಿನಲ್ಲಿ ಅವರ ಶವಸಂಸ್ಕಾರ ನಡೆದಾಗ ಒಟ್ಟಾದವರು ಹತ್ತುಸಾವಿರ ಮಂದಿ! ಜನ ರೊಚ್ಚಿಗೆದ್ದಿದ್ದಾರೆ. ಇಟ್ಟಿಗೆ, ಕಲ್ಲುಗಳನ್ನು ತೆಗೆದುಕೊಂಡು ಭೃಷ್ಟರ ಅಡ್ಡೆಗಳ ಮೇಲೆ ದಾಳಿ ಮಾಡಿದ್ದಾರೆ. ರವಿಯ ಸಮಾಧಿ ಬಳಿ ತೆರಳುತ್ತಿದ್ದ ಪರಮೇಶ್ವರ್ ಕಾರು ಜಖಂಗೊಂಡಿದೆಯೆಂದಾದರೆ ಜನರ ಆಕ್ರೋಶ ಎಷ್ಟಿರಬಹುದು ಊಹಿಸಿ.
ರಾಜ್ಯದ ಜನತೆ ದುಃಖದ ಮಡುವಿನಲ್ಲಿದೆ. ಯುಗಾದಿಯ ಸಂಭ್ರಮವೂ ಇಲ್ಲ. ರವಿ ಸಾಕಿದ ಮೂಕ ಪ್ರಾಣಿಯೊಂದು ಮನುಷ್ಯನ ದುರಾಚಾರವನ್ನು ಕಂಡು ಮೂಕವಾಗಿ ರೋದಿಸುತ್ತಿದೆ.


ಭಾನುವಾರ, ಮಾರ್ಚ್ 15, 2015

ಈ ಜಗತ್ತಿನಲ್ಲಿ ಕೇಜ್ರೀವಾಲ್ ಮಾತ್ರ "ಪ್ರಾಮಾಣಿಕ"!



             ನಿರೀಕ್ಷಿಸಿದಂತೆಯೇ ಆಗಿದೆ. ಸಂಘಟನೆಯೊಂದನ್ನು ಸೃಷ್ಟಿಸಿ ತದನಂತರದಲ್ಲಿ ತತ್ವಗಳನ್ನು ಹುಡುಕಿಕೊಂಡು ಹೋದರೆ ಸಂಘಟನೆಯ ಪರಿಸ್ಥಿತಿ ಏನಾಗಬಹುದು ಎನ್ನುವುದರ ಸ್ಪಷ್ಟ ಚಿತ್ರಣಕ್ಕೆ ತಾನೊಬ್ಬನೇ ಪ್ರಾಮಾಣಿಕ ಎಂದು ಬೀಗುತ್ತಿದ್ದ ಆಮ್ ಆದ್ಮಿ ಪಕ್ಷ ಅಲ್ಲಲ್ಲಾ ಕೇಜ್ರಿವಾಲ್ ಪಕ್ಷ ಸಾಕ್ಷಿಯಾಗಿದೆ. 49 ದಿನಗಳ ಹುಚ್ಚಾಟದ ನಂತರವೂ ದೆಹಲಿಯ ಜನತೆ ಭರವಸೆ ಇಟ್ಟು ಕೊಟ್ಟ ಬಹುಮತಕ್ಕೆ ಕೊಳ್ಳಿ ಇಟ್ಟಿದೆ ಆಪ್! ದಿಲ್ಲಿಯಲ್ಲಿ ನಂಬಲಸಾಧ್ಯ ಚುನಾವಣಾ ಫಲಿತಾಂಶದೊಂದಿಗೆ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ಪದೇಪದೇ ಋಣಾತ್ಮಕ ಕಾರಣಗಳಿಗಾಗಿ ಸುದ್ದಿಯ ಕೇಂದ್ರ ಬಿಂದುವಾಗುತ್ತಿದೆ. ಆಪ್ ಒಳಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುತ್ತಿದೆ. ಆಮ್ ಆದ್ಮಿ ಪಕ್ಷವನ್ನು ಕಾಡುತ್ತಿರುವ ಸಿದ್ಧಾಂತದ ಮರೆವು, ಪಕ್ಷದೊಳಗೆ ನಿಯಂತ್ರಣಕ್ಕಾಗಿ ಮೇಲಾಟ, ವಿಶ್ವಾಸಾರ್ಹತೆಯ ಕೊರತೆಯಂತಹ ಕಾಯಿಲೆಗಳು ಅತ್ಯಂತ ಉಲ್ಬಣಾವಸ್ಥೆಗೆ ತಲುಪಿವೆ. ಅತ್ಯಂತ ಅಶಿಸ್ತನ್ನು ಪ್ರದರ್ಶಿಸುತ್ತಿರುವ ಆಪ್ ನಾಯಕರು ತಾವು ಈಗ ಚಳವಳಿಗಾರರಲ್ಲ; ಆಡಳಿತ ನಡೆಸಬೇಕಾದ ಜನಪ್ರತಿನಿಧಿಗಳು ಎಂಬುದನ್ನೇ ಮರೆತಿದ್ದಾರೆ. ದಿಲ್ಲಿಯ ಜನರು ಆಪ್ ಸರಕಾರವನ್ನು ಬಯಸಿದ್ದು ಇದಕ್ಕಾಗಿಯೇ?

                  ಕಾಂಗ್ರೆಸ್ ವಿರುದ್ದ ಪ್ರಚಾರ ಮಾಡಿ, ಕಾಂಗ್ರೆಸನ್ನು ಸಂಪೂರ್ಣವಾಗಿ ಕಿತ್ತೆಸೆಯುತ್ತೇವೆಂದು ಡಂಗುರ ಸಾರಿ, ಎಂತಹ ಪರಿಸ್ಥಿತಿಯಲ್ಲಿಯೂ ಯಾವುದೇ ಪಕ್ಷದ ಬೆಂಬಲ ಪಡೆಯುವುದಿಲ್ಲವೆಂದು ಹೇಳಿದ್ದ ಆಮ್ ಆದ್ಮಿ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಸರಕಾರ ರಚಿಸಲು ಕಾಂಗ್ರೆಸ್ ಕೈ ಹಿಡಿದಾಗಲೇ ದೆಹಲಿಯ ಜನತೆ ಎಚ್ಚೆತ್ತುಕೊಳ್ಳಬೇಕಿತ್ತು! ಶೀಲಾ ದೀಕ್ಷಿತ್ ವಿರುದ್ದ 300 ಪುಟಗಳ ಪುರಾವೆ ಇದೆ, ಅಧಿಕಾರಕ್ಕೆ ಬಂದ ಹದಿನೈದು ದಿನಗಳೊಳಗೆ ಶೀಲಾರನ್ನು ಜೈಲಿಗಟ್ಟುತ್ತೇನೆಂದ ಅರವಿಂದ ಅಧಿಕಾರಕ್ಕೆ ಬಂದ ಮೇಲೆ ಭಾಜಪಾಕ್ಕೆ ಸಾಕ್ಷ್ಯಾಧಾರ ಒದಗಿಸಲು ಕೇಳಿದ್ದು ಆಮ್ ಆದ್ಮಿಯ ಬಣ್ಣ ಬಯಲು ಮಾಡಿದ ಮುಖ್ಯ ಅಂಶ! ರಾಜಕೀಯ ಪ್ರವೇಶಿಸುವುದಿಲ್ಲವೆಂದು ಹೇಳುತ್ತಲೇ ಪಕ್ಷ ಕಟ್ಟಿದರು. ಯಾವುದೇ ಪಕ್ಷವನ್ನು ಬೆಂಬಲಿಸಲಾರೆ ಎಂದು ಬಡಬಡಿಸಿ "ಕೈ" ಹಿಡಿದರು. ಚುನಾವಣೆ ಮೊದಲು ನೀಡಿದ ಭರವಸೆಗಳಲ್ಲಿ ಯಾವೊಂದನ್ನೂ ಪೂರೈಸದೇ ಸ್ವಪಕ್ಷೀಯರಿಂದಲೇ ನಿಂದನೆಗೊಳಗಾದರು. ಕಾರಿನಲ್ಲಿ ಸಂಪುಟ ಸಭೆ ನಡೆಸುವುದು, ಬೀದಿಯಲ್ಲಿ ಕಡತ ವಿಲೇವಾರಿ ಮಾಡುವುದು ಪಾರದರ್ಶಕ ಆಡಳಿತವೇ? ನ್ಯಾಯಾಧೀಶರ ಅದಿಕಾರವನ್ನು ಮೊಟಕುಗೊಳಿಸಬೇಕು ಎನ್ನುವುದು, ನ್ಯಾಯಾಂಗ ಕಾರ್ಯಾಂಗದಡಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಆಗ್ರಹಿಸುವುದು, ಪ್ರತ್ಯೇಕತವಾದಿಗಳನ್ನು ಪ್ರೋತ್ಸಾಹಿಸುವುದು, ಸಲಿಂಗ ಕಾಮವನ್ನು ಪ್ರೋತ್ಸಾಹಿಸುವುದು, ದೂರವಾಣಿ ಸಂದೇಶದ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ ಸರ್ಕಾರ ರಚಿಸುವುದು, ನಿತ್ಯ ಬೀದಿಯಲ್ಲಿ ನಿಂತು ಕೂಗಾಡುವುದು, ಸದಾ ಮಾಧ್ಯಮದ ಮುಂದೆ ಬಡಬಡಿಸುವುದು ಒಟ್ಟಾರೆ ಒಂದು ದಿನವೂ ಆಡಳಿತವನ್ನು ನಡೆಸಲೇ ಇಲ್ಲ. ಸೋಮನಾಥ್ ಭರ್ತಿ ನಡುರಾತ್ರಿಯಲ್ಲಿ ಆಫ್ರಿಕಾ ಮಹಿಳೆಯರ ಮನೆಗೆ ನುಗ್ಗಿದ ಪರಿಣಾಮ 22 ಆಫ್ರಿಕನ್ ದೇಶಗಳಿಗೆ ಸಮಜಾಯಿಷಿ ನೀಡಬೇಕಾಗಿ ಬಂತು! ಲೋಕಪಾಲ ವಿಧೇಯಕವನ್ನು ನಿಯಮಾವಳಿಗಳಿಗನುಸಾರವಾಗಿ ಸಲ್ಲಿಸದೇ ಭಾಜಪಾ, ಕಾಂಗ್ರೆಸ್ ಶಾಸಕರು ಬೆಂಬಲಿಸಲಿಲ್ಲವೆಂದು ಕೂಗಾಡಿದರು. ದೇಶ ಮೊದಲು ಜಾತಿ, ಮತವಲ್ಲ ಎಂದವರು ಭಯೋತ್ಪಾದಕಿ ಇಶ್ರತ್ ಜಹಾನ್'ಳದ್ದು ನಕಲಿ ಎನ್ ಕೌಂಟರ್ ಎಂದರು. ಹಿಂದೂಗಳ ಮೇಲೆ ದೌರ್ಜನ್ಯವೆಸಗಿ 32 ಪ್ರಕರಣಗಳನ್ನು ಎದುರಿಸುತ್ತಿರುವ ರಜಾರನ್ನು ಭೇಟಿಯಾಗಿ ಬೆಂಬಲ ಕೋರಿದರು. ತಸ್ಲಿಮಾ ನಸ್ರೀನ್ ವಿರುದ್ದ ಫತ್ವಾ ಹೊರಡಿಸಿದ್ದ ಮೌಲಾನಾ ತೌಕೀರ್ ಹೆಣ್ಣುಮಕ್ಕಳ ಮೇಲೆ ಫತ್ವಾವನ್ನೇ ಹೊರಡಿಸಿಲ್ಲ ಎಂದರು! ಇಷ್ಟೆಲ್ಲಾ ಘನ ಕಾರ್ಯ ಮಾಡಿದರೂ ಜನ ಮತ್ತೊಮ್ಮೆ ಆಶೀರ್ವದಿಸಿದರು. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಸಮೀಕ್ಷೆಗಳು, ನಿರೀಕ್ಷೆಗಳನ್ನೆಲ್ಲ ಬುಡಮೇಲು ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ನಂತಹ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಹಾಕಿತ್ತು. ಆದರೆ, ಆಪ್ ಸರಕಾರದ ಮಧುಚಂದ್ರ ಅವಧಿ ಮುಗಿಯುವ ಮುನ್ನವೇ ಒಳಜಗಳ ಸ್ಫೋಟಗೊಂಡು ಈಗ ತಾರಕಕ್ಕೇರಿದೆ. ದಿನಕ್ಕೊಂದು ವಿವಾದಗಳು, ಹಗರಣಗಳು, ಆರೋಪ- ಪ್ರತ್ಯಾರೋಪಗಳ ಭರಾಟೆಯಲ್ಲಿ ಆಡಳಿತ ಮೂಲೆಗುಂಪಾಗಿದೆ.

             ಆಪ್ನಲ್ಲಿ ಈಗ ನಡೆಯುತ್ತಿರುವ ಒಳಜಗಳಗಳ ಛಾಯೆ ಚುನಾವಣೆಗೂ ಮುನ್ನವೇ ಕಾಣಿಸಿಕೊಂಡಿತ್ತು. ಕಿರಣ್ ಬೇಡಿ ಆಪ್ ತ್ಯಜಿಸಿ ಬಿಜೆಪಿ ಸೇರಿದ್ದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದರ ಸೂಚನೆಯಾಗಿತ್ತು ಎಂದರೆ ತಪ್ಪಾಗದು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವೂ ಏಕಪಕ್ಷಿಯವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಪ್ರಶಾಂತ್ ಭೂಷಣ್ ಮತ್ತು ಯಾದವ್  ಅವರು ಆಮ್ ಆದ್ಮಿ ಪಕ್ಷದ ಕಾರ್ಯದರ್ಶಿಗೆ ಬರೆದ ಪತ್ರಗಳು ಬಹಿರಂಗವಾಗುತ್ತಿದ್ದಂತೆ ಆಮ್ ಆದ್ಮೀಯಲ್ಲಿನ ಭಿನ್ನಮತ-ಒಳಜಗಳ ಬೀದಿಗೆ ಬಂದಿತು.  ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್, ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಕಳೆದ ಚುನಾವಣೆಯಲ್ಲಿ ಆಮ್ ಆದ್ಮೀ ವಿರುದ್ಧ ಕೆಲಸ ಮಾಡಿದ್ದರು ಎಂಬ ಆರೋಪ ಮಾಡಿದರು. ಬಳಿಕ ಈ ನಾಯಕರ ಉಚ್ಚಾಟನೆಯೂ ನಡೆಯಿತು. ಈಗ ಅರವಿಂದ ಕೇಜ್ರಿವಾಲ್ - ಮನೀಶ್ ಸಿಸೋದಿಯಾ ನಡುವಣ ಶಾಸಕರ ಕುದುರೆ ವ್ಯಾಪಾರದ ರಹಸ್ಯ ಸಂಭಾಷಣೆಯ ಟೇಪ್ ಬಹಿರಂಗವಾಗಿ ಭಾರೀ ಗದ್ದಲಕ್ಕೆ ಕಾರಣವಾಗಿದೆ. ಆಪ್ ಪರಮೋಚ್ಚ ನಾಯಕ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಕ್ಷವನ್ನು ಉಕ್ಕಿನ ಹಿಡಿತದಲ್ಲಿ ಇರಿಸಿಕೊಂಡಿದ್ದಾರೆ ಎನ್ನುವುದು ಒಂದು ಆರೋಪವಾದರೆ ಅವರು ಶಾಸಕರ ಕುದುರೆ ವ್ಯಾಪಾರದಲ್ಲಿ ತೊಡಗಿರುವ ಬಗ್ಗೆ ರಾಜೇಶ್ ಗರ್ಗ್ ಬಹಿರಂಗಪಡಿಸಿರುವ ಟೇಪ್ ಪುಷ್ಟಿಯೊದಗಿಸಿದೆ. ಟೇಪ್ ಸಂಭಾಷಣೆ ಪಕ್ಷದ ಸಿದ್ಧಾಂತಕ್ಕೆ ಬಿಟ್ಟ ತಿಲಾಂಜಲಿಯೇ ಸರಿ. ತತ್ಪರಿಣಾಮ ಗಾರ್ಗ್'ಗೆ ಅಂತಾರಾಷ್ಟ್ರೀಯ ಸಂಖ್ಯೆಯೊಂದರಿಂದ ಜೀವ ಬೆದರಿಕೆ ಕರೆಯೂ ಬಂತು. ಕುದುರೆ ವ್ಯಾಪಾರ ಪ್ರಯತ್ನದ ಸುದ್ದಿ ಹೊರಬೀಳುತ್ತಲೇ ಅಸಮಧಾನಗೊಂಡ ಮಹಾರಾಷ್ಟ್ರದ ಹಿರಿಯ ನಾಯಕಿ ಅಂಜಲಿ ದಮಾನಿಯಾ ಆಪ್ ಗೆ ರಾಜೀನಾಮೆ ನೀಡಿದ್ದೂ ಆಯಿತು. ಅಲ್ಲಿಂದ ಮುಂದೆ ಆಮ್ ಆದ್ಮಿಯಿಂದ ಒಬ್ಬೊಬ್ಬರೇ ಹೊರಬರಲಾರಂಭಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಖರೀದಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಮುಸ್ಲಿಮರಿಗೆ ಆಪ್ ಪಕ್ಷವೊಂದೇ ಪರ್ಯಾಯ ದಾರಿ ಎಂದು ಕೇಜ್ರಿವಾಲ್ ಹೇಳಿರುವ ಆಡಿಯೋ ಟೇಪ್ ಬಿಡುಗಡೆಯಾಗಿದೆ.ಇದರಲ್ಲಿ “ನರೇಂದ್ರ ಮೋದಿ ಅಲೆಯನ್ನು ತಡೆಗಟ್ಟಲು ಮುಸ್ಲಿಮರಿಗೆ ಇರುವ ಪರ್ಯಾಯ ಮಾರ್ಗವೆಂದರೆ ಅದು ಆಮ್ ಆದ್ಮಿ ಪಕ್ಷವೊಂದೇ. ಆಮ್ ಆದ್ಮಿ ಪಕ್ಷದಿಂದ ಮುಸ್ಲಿಂ ಸಮುದಾಯದವರು ಸ್ಪರ್ಧಿಸದಿದ್ದರೂ, ನರೇಂದ್ರ ಮೋದಿ ಅವರನ್ನು ಆಪ್ ಸೋಲಿಸಬೇಕೆಂಬ ಮನಸ್ಥಿತಿ ಮುಸ್ಲಿಮರಲ್ಲಿದೆ” ಎಂದು ಕೇಜ್ರಿವಾಲ್ ಹೇಳಿದ್ದರು.   ಪಕ್ಷದೊಳಗೆ ಇಷ್ಟೆಲ್ಲ ಬೆಳವಣಿಗೆಗಳಾಗುತ್ತಿದ್ದರೂ ಬೆಂಗಳೂರಿನಲ್ಲಿ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಕೇಜ್ರಿವಾಲ್ ತುಟಿಪಿಟಿಕ್ಕೆಂದಿಲ್ಲ.

                 ನಿಷ್ಕಳಂಕರಿಗೆ ಟಿಕೆಟ್ ಕೊಡುತ್ತೇವೆಂದ ಕೇಜ್ರಿವಾಲ್ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್, ಭಾಜಪಾದಲ್ಲಿ ಬಂಡಾಯವೆದ್ದು ಹೊರಬಂದವರಿಗೆ! ಕಳೆದ ಬಾರಿ ಆಮ್ ಆದ್ಮಿ ಪಕ್ಷದ 28ಶಾಸಕರ ಪೈಕಿ 12ಶಾಸಕರು ಕೊಟ್ಯಾಧಿಪತಿಗಳು! ಈ ಬಾರಿ 44 ಮಂದಿ ಕೋಟ್ಯಾಧಿಪತಿಗಳಾದರೆ 23 ಶಾಸಕರ ಮೇಲೆ ಕ್ರಿಮಿನಲ್ ಕೇಸುಗಳಿವೆ. ಒಟ್ಟಾರೆ ಆಮ್ ಆದ್ಮೀ ಪಕ್ಷದಲ್ಲಿರುವವರು ಆಮ್ ಆದ್ಮೀಗಳೇನಲ್ಲ. ಆದರೆ ಅವರು ತಾವು ಆಮ್ ಆದ್ಮೀಗಳೆಂದೇ ಬಿಂಬಿಸಿಕೊಳ್ಳುತ್ತಾರೆ. "ಆಮ್ ಆದ್ಮಿ ಪಕ್ಷವೂ ಇತರ ಪಕ್ಷಗಳಂತೆಯೇ ಕಾರ್ಯನಿರ್ವಹಿಸುತ್ತಿದೆ. ಇದು ಇನ್ನೊಂದು ಕಾಂಗ್ರೆಸ್. ಭ್ರಷ್ಟಾಚಾರವನ್ನು  ನಿರ್ಮೂಲನೆ ಮಾಡುತ್ತೇವೆ ಎಂಬ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದ ಪಕ್ಷ ಇಂದು ಭ್ರಷ್ಟಾಚಾರದಲ್ಲೇ ಮುಳುಗಿ ಏಳುತ್ತಿದೆ. ಪಕ್ಷದ ಮೂಲ ಸಿದ್ಧಾಂತವನ್ನೇ ಗಾಳಿಗೆ ತೂರಿದ್ದಾರೆ. ದೆಹಲಿ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಭ್ರಷ್ಟರು. ಪಕ್ಷ ಅಸ್ತಿತ್ವಕ್ಕೆ ಬಂದಾಗ ಜನರಿಗೆ ನೀಡಿದ ಮಾತನ್ನು ಪ್ರಸ್ತುತ ಪಕ್ಷ ಉಳಿಸಿಕೊಂಡಿಲ್ಲ. ಮೂಲಭೂತ ಸೌಕರ್ಯಗಳನ್ನು ಉಚಿತವಾಗಿ ನೀಡುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ. ಇದಕ್ಕೆಲ್ಲ ಹಣವನ್ನು ಎಲ್ಲಿಂದ ತರುತ್ತಾರೆ?" ಎಂದು ಹೊರಗಿನವರಲ್ಲ, ಸ್ವತಃ ಆಮ್ ಆದ್ಮಿ ಪಕ್ಷದ ವಿವಿಧ ರಾಜ್ಯ-ಜಿಲ್ಲೆಗಳ ಸ್ಥಾಪಕಾಧ್ಯಕ್ಷರುಗಳು, ಸದಸ್ಯರೇ ಹೇಳುತ್ತಿದ್ದಾರೆಂದರೆ ಪಕ್ಷದ ಪರಿಸ್ಥಿತಿ ಅರ್ಥವಾದೀತು.

               ಭ್ರಷ್ಟಾಚಾರ ವಿರುದ್ಧ ಹೋರಾಟ, ವಿಭಿನ್ನ ಮಾದರಿಯ ಆಡಳಿತ, ಗಲ್ಲಿ ಸಭೆಗಳು ಹೀಗೆ ಭಿನ್ನ ದಾರಿ ಹಿಡಿಯುವ ನಿರೀಕ್ಷೆ ಹುಟ್ಟಿಸಿದ್ದ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಒಂದೂ ಒಳ್ಳೆಯ ಸುದ್ದಿಗಳಿಲ್ಲದೆ ಋಣಾತ್ಮಕ ಸುದ್ದಿಗಳನ್ನೇ ಹೊರ ಹಾಕುತ್ತಿದೆ. ಆಪ್ ಒಳಜಗಳಕ್ಕೆ ಕಾರಣವಾಗಿರುವ ಕಾಯಿಲೆಗಳು ಎಲ್ಲ ರಾಜಕೀಯ ಪಕ್ಷಗಳನ್ನೂ ಕಾಲಕಾಲಕ್ಕೆ ಭಾದಿಸಿರುವ ಹಳೆಯ ರೋಗಗಳು. ಆಪ್ನಂತಹ "ವಿಭಿನ್ನ”, "ಪ್ರಾಮಾಣಿಕ" ರಾಜಕೀಯ ಪಕ್ಷವನ್ನೂ ಅವೇ ಹಳೆಯ ರೋಗಗಳು ಕಾಡುತ್ತಿವೆ. ಅರೇ ಸಿದ್ಧಾಂತ ಬಿಟ್ಟಿದ್ದಾರೆ ಎನ್ನಲೂ ಆ ಪಕ್ಷಕ್ಕೆ ಸಿದ್ಧಾಂತವಾದರೂ ಎಲ್ಲಿತ್ತು? ಎಲ್ಲವನ್ನೂ ಉಚಿತವಾಗಿ ಕೊಡುತ್ತೇನೆಂದು ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದ ಕೇಜ್ರೀವಾಲ್ ಪಕ್ಷ ಎಂದಿನಂತೆ ತನ್ನ ಪ್ರಹಸನಗಳನ್ನು ಉಚಿತವಾಗಿ ಕೊಡುತ್ತಿದೆ. ಮಾಧ್ಯಮಗಳಿಗೆ ಟಿ.ಆರ್.ಪಿ ಯೂ, ದೇಶದ ಜನರಿಗೆ ಮನರಂಜನೆಯೂ ಸಿಕ್ಕಿದರೆ ದೆಹಲಿಯ ಮೂರ್ಖ ಮತದಾರ ಕೈ ಕೈ ಹಿಸಿದುಕೊಳ್ಳುತ್ತಿದ್ದಾನೆ ಪ್ರಾಮಾಣಿಕ ಪಕ್ಷದಲ್ಲಿನ "ಬಹುತ್ ಪ್ರಾಮಾಣಿಕ್"ರನ್ನು ಕಂಡು!ಅರೇ ಪ್ರಾಮಾಣಿಕ ಪದದ ಅರ್ಥವೇ ಬದಲಾಗಿ ಹೋಯಿತೇ?

ಗೂಗ್ಲಿ: ಒಂದು ಸಲ ತಪ್ಪು ಮಾಡಿದರೆ "ಸರಿ"! ಬಿಟ್ಟು ಬಿಡಬಹುದು!...ಬಾರಿ ಬಾರಿ ತಪ್ಪು ಮಾಡಿದರೆ...?( ಕೇಜ್ರಿವಾಲ್ ಬಗೆಗೆ ಹೇಳಿದ್ದಲ್ಲ...ದೆಹಲಿಯ ಜನತೆಗೆ!)

ಮೋಪ್ಲಾಗಳ ಅತ್ಯಾಚಾರವೂ ಮಹಾತ್ಮನ ಅನಾಚಾರವೂ

                                ಮೋಪ್ಲಾಗಳ ಅತ್ಯಾಚಾರವೂ ಮಹಾತ್ಮನ ಅನಾಚಾರವೂ

                     ಕಲ್ಲಿಕೋಟೆಯ ಮುದುಮಣೆಯಿಲ್ಲಂ ದೇವಾಲಯದ ಗರ್ಭಗೃಹದಲ್ಲಿ ಮೋಪ್ಲಾ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರ ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ ಮೋಪ್ಲಾಗಳು ೨೭ ಮಂದಿ ಸ್ಥಳೀಯರ ತಲೆಗಳನ್ನು ಗರಗಸದಿಂದ ಕತ್ತರಿಸಿ ಎಸೆದರು. ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು. ನಂತರ ಎಲ್ಲರ ಎದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.

                ಯಾವುದೋ ಮೊಘಲರ ಆಳ್ವಿಕೆ ಅಥವಾ ಮತಾಂಧ ಟಿಪ್ಪುವಿನ ಸಮಯದಲ್ಲಿ ನಡೆದ ಘಟನೆಯಲ್ಲ ಇದು. ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ ಖಿಲಾಫತ್ ಎಂಬ ಹೆಸರಿನಲ್ಲಿ ಅಸಹಕಾರದ ಚಳುವಳಿಯ ಸಹಯೋಗದಲ್ಲಿ ಗಾಂಧಿ ಮಹಾತ್ಮನ ಸಹಕಾರದಲ್ಲಿ ನಡೆದ ಘನ ಘೋರ ಭಯೋತ್ಪಾದಕ ಕೃತ್ಯವಿದು. ಬಾಗ್ದಾದಿನಲ್ಲಿ ಖಲೀಫನ ಸುಲ್ತಾನಿಕೆ ಪುನಃ ನೆಲೆಗೊಳಿಸಬೇಕೆಂಬ ಉದ್ದೇಶದಿಂದ ಶುರುವಾದದ್ದೇ ಖಿಲಾಫತ್ ಆಂದೋಲನ! ಮೊದಲ ಮಹಾಯುದ್ಧ ಮುಗಿದ ತರುವಾಯ ಬ್ರಿಟಿಷ್ ಸಾಮ್ರಾಜ್ಯ ನಿಸ್ಸತ್ವಗೊಂಡುದುದರಿಂದ ತುರ್ಕಿಯ ಪ್ರಭುತ್ವವನ್ನು ಮರುಸ್ಥಾಪಿಸಬಹುದೆಂಬ ಭ್ರಮೆಯಲ್ಲಿ ಶುರುವಾದ ಈ ಖಿಲಾಫತ್ ಆಂದೋಲನದ ಮುಖ್ಯ ಉದ್ದೇಶಗಳು ಖಲೀಫನ ಸಾಮ್ರಾಜ್ಯದ ಮರುಸ್ಥಾಪನೆ ಹಾಗೂ ಆಟೋಮನ್ ಸಾಮ್ರಾಜ್ಯದ ಅಖಂಡತೆಯನ್ನು ಸಾಧಿಸುವುದು. 1912ರಲ್ಲಿ ಬಾಲ್ಕನ್ ರಾಜ್ಯಗಳಿಂದ ಟರ್ಕಿ ಸೋತು ಸುಣ್ಣವಾದ ಮೇಲೆ ಯೂರೋಪಿನ ಜನ ಇಸ್ಲಾಂನ್ನು ತಿರಸ್ಕರಿಸಲಾರಂಭಿಸಿದ್ದರು. ಆದರೆ ಭಾರತದೊಳಗಿನ ಮತಭ್ರಾಂತರನ್ನು ಹುಚ್ಚೆಬ್ಬಿಸಲು ನಾಮಾವಶೇಷವಾಗಿದ್ದ ಖಲೀಫನ ಪ್ರಭುತ್ವವನ್ನು ಪುನರುಜ್ಜೀವಿಸುವ ಈ ಪ್ರಯತ್ನ ಸಾಕಾಯಿತು. ಆದರೆ ಮಹಾತ್ಮ ಎಂದು ತನ್ನ ಸ್ತುತಿಪಾಠಕರಿಂದ ಕರೆಸಿಕೊಂಡ ಗಾಂಧಿಯ ಈ ಖಿಲಾಫತ್ ಪರ ಆವೇಶಕ್ಕೆ ಬೆಲೆ ತೆತ್ತವರು ಮಲಬಾರಿನ ಹಿಂದೂಗಳು.

                     ಖಿಲಾಫತ್ ಚಳವಳಿ ಘೋಷಿತವಾದೊಡನೆ ಗಾಂಧಿಯ ಸೂಚನೆಯಂತೆ ದೇಶದಾದ್ಯಂತ ಖಿಲಾಫತ್ ದಿನವನ್ನು ಕಾಂಗ್ರೆಸ್ ಘಟಕಗಳ ಮೂಲಕ ಆಚರಿಸಲಾಯಿತು. ಅಲಹಾಬಾದ್, ಕರಾಚಿಗಳಲ್ಲಿ ಖಿಲಾಫತ್ ಸಮ್ಮೇಳನಗಳೂ ನಡೆದವು. ಗಾಂಧಿ, ಮಹಮದ್ ಆಲಿ ಜೊತೆ ಸೇರಿ ಖಿಲಾಫತ್ ಪರ ಯಾತ್ರೆಯನ್ನೂ ನಡೆಸಿದರು. ಮಾತ್ರವಲ್ಲ ಖಿಲಾಫತಿಗಾಗಿ ಹಣಸಂಗ್ರಹ ಅಭಿಯಾನ ಕೂಡಾ ಆರಂಭವಾಯಿತು. ಕೆಲವು ಕಡೆ ಅದ್ದೂರಿ ಪ್ರಚಾರ ನಡೆಸಿದಾಗ್ಯೂ ಜನ ಸೇರದೇ ಇದ್ದುದರಿಂದ ಮಸೀದಿಗಳಲ್ಲಿಯೇ ಸಭೆಯ ಶಾಸ್ತ್ರ ಮುಗಿಸಿದರು. ಕಾಂಗ್ರೆಸ್ಸಿನ ಅಧಿಕೃತ ಅನುಮೋದನೆ ಪಡೆಯದೇ ಗಾಂಧಿ ಖಿಲಾಫತ್ ಆಂದೋಲನ ಘೋಷಿಸಿಯೇ ಬಿಟ್ಟಿದ್ದರು. ಆದರೆ ಖಿಲಾಫತ್ ಪರ ನಿರ್ಣಯಕ್ಕೆ ಮತ ಹಾಕಲು ಕಲ್ಕತ್ತಾದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ(8-9-1920) ಕಾಂಗ್ರೆಸ್ ದಳಗಳು ಟ್ಯಾಕ್ಸಿ ಡ್ರೈವರ್ ಗಳನ್ನೂ ಹಣಕೊಟ್ಟು ಕರೆತರಬೇಕಾಯಿತು! ಬಹುತೇಕರಿಗೆ ಖಿಲಾಫತ್ ಆಂದೋಲನ ಒಪ್ಪಿತವಿಲ್ಲದಿದ್ದರೂ ಗಾಂಧಿಯನ್ನು ವಿರೋಧಿಸುವವರೇ ಇರಲಿಲ್ಲ! ಇದಕ್ಕೆ ಪ್ರತಿಯಾಗಿ ಖಿಲಾಫತ್ ಖಂಡಿಸಲು ಒಟ್ಟಾಪಳಂನಲ್ಲಿ ನಡೆದ ಆನಿಬೆಸೆಂಟ್ ಉಪನ್ಯಾಸದಲ್ಲಿ ಜನ ಕಿಕ್ಕಿರಿದು ಸೇರಿದ್ದರು." ಗಾಂಧಿಯವರು ಕೈಗೊಂಡ ಖಿಲಾಫತ್ ಆಂದೋಲನ ಮತೀಯ ಆಂದೋಲನವಾಗಲಿದೆ. ಇದರಿಂದ ದೇಶಕ್ಕೆ ಭಾರೀ ಅಪಾಯವಿದೆ" ಎಂದು ಡಾ|| ಹೆಡಗೆವಾರರು ಎಚ್ಚರಿಸಿದ್ದರು. ಆದಾಗ್ಯೂ  ಖಿಲಾಫತಿಗಾಗಿ ಸ್ವಾತಂತ್ರ್ಯಕ್ಕಾಗಿನ ಚಳುವಳಿಯನ್ನು ಮುಂದೂಡಲೂ ನಾನು ಸಿದ್ಧ ಎಂದು ಬಿಟ್ಟರು ಗಾಂಧಿ.


                          ಪುಕ್ಕಟ್ಟೂರು ಭಾಗದ ಎಲ್ಲಾ ಹಿಂದೂಗಳನ್ನು 1921ರ ಆಗಸ್ಟ್ ನಲ್ಲಿ ಮತಾಂತರಿಸಲಾಯಿತು. ಕಾರಾಗೃಹದ ಅಪರಾಧಿಗಳನ್ನು ಮುಕ್ತಗೊಳಿಸಿದ ಖಿಲಾಫತಿಗರು ಅವರನ್ನು ಕೊಲೆ ಲೂಟಿಗಳಿಗೆ ಬಳಸಿಕೊಂಡರು. ಹಿಂದೆ ಹಿರಿಯರೆಂದು ತಾವೇ ಗೌರವಿಸಿದ್ದ ಕೋಮು ಮೆನನ್ ಪರಿವಾರವನ್ನೂ ಲೂಟಿಗೈದು ಮತಾಂತರಿಸಿದರು.(ಮುಂದೆ ಕೋಮು ಮೆನನ್ ಪರಿವಾರ ಮಾತೃಧರ್ಮಕ್ಕೆ ಮರಳಿತು) ಕೇರಳದೆಲ್ಲೆಡೆ ಕಾಂಗ್ರೆಸ್ ಕಾರ್ಯಾಲಯಗಳ ಮೇಲೆ ಖಿಲಾಫತ್ ಬಾವುಟಗಳು ಕಾಂಗ್ರೆಸ್ ಬಾವುಟಗಳ ಜೊತೆ ರಾರಾಜಿಸತೊಡಗಿದವು. ಕಾಂಗ್ರೆಸ್ ಕಾರ್ಯಕರ್ತರು ಖಿಲಾಫತ್ ವಾಲಂಟಿಯರ್ ಗಳಾದರು. ಯಾವ ಕಡೆ ನೋಡಿದರೂ ಖಿಲಾಫತ್ ಧ್ವಜಗಳ ವಿಜೃಂಭಣೆ, ಖಿಲಾಫತ್ ಪರ ಘೋಷಣೆ, ಖಿಲಾಫತ್ ರಾಜ್ಯಕ್ಕೆ ಜೈಕಾರ ಹಾಗೂ ಟರ್ಕಿಷ್ ಟೋಪಿ ಧರಿಸಿದ ಕಾಂಗ್ರೆಸ್ಸಿಗರು....ಹೀಗೆ ಕಾಂಗ್ರೆಸ್ ಪೂರ್ತಿ ಬಣ್ಣಗೆಟ್ಟಿತ್ತು! ಅದರಲ್ಲೂ ಗಾಂಧಿ ಬೆಂಬಲದಿಂದ ಉತ್ತೇಜಿತರಾದ ಮಾಪಿಳ್ಳೆಗಳು ಕತ್ತಿ, ಗುರಾಣಿ ಮುಂತಾದ ಕೈಗೆ ಸಿಕ್ಕ ಆಯುಧಗಳನ್ನು ಹಿಡಿದು ಮದೋನ್ಮತ್ತರಂತೆ ವರ್ತಿಸಲಾರಂಭಿಸಿದ್ದರು.  ಜನರ ಮೇಲಿನ ಅತ್ಯಾಚಾರವನ್ನು ನಿವಾರಿಸಲು ಬಂದ ಪೊಲೀಸರನ್ನು ಕೊಚ್ಚಿ ಹಾಕುತ್ತಿದ್ದರು. " ಇಸ್ಲಾಮಿಗೆ ಮತಾಂತರಗೊಳ್ಳಿ ಇಲ್ಲವೇ ಸಾಯಲು ಸಿದ್ಧರಾಗಿ" ಎನ್ನುತ್ತಾ ಬಲಾತ್ಕಾರದ ಮತಾಂತರ, ಮಹಿಳೆಯರ ಅತ್ಯಾಚಾರ, ಹಿಂದೂಗಳ ಚರ್ಮ ಸುಲಿಯುವುದು, ಆಸ್ತಿಪಾಸ್ತಿ ಲೂಟಿ, ಕೊಲೆ,ಹಗಲು ದರೋಡೆ, ಸರಕಾರೀ ಖಜಾನೆಗಳ ದರೋಡೆ ಎಗ್ಗಿಲ್ಲದೆ ನಡೆದವು. ಮರಗಳ ಛೇದನ, ಸೇತುವೆಗಳ ಧ್ವಂಸ ಈ ಎಲ್ಲಾ ತಂತ್ರಗಳನ್ನು ಖಿಲಾಫತಿಗರು ಬಳಸಿದರು. ದೇವಾಲಯಗಳ ಲೂಟಿ, ವಿಗ್ರಹ ಭಂಜನೆಗಳು ಅಗಾಧ ಪ್ರಮಾಣದಲ್ಲಿ ನಡೆದವು. ದಂಗೆಕೋರರಿಗೆ ಅಹಿಂಸೆ ಭೋಧಿಸಹೊರಟ ಮಂಜೇರಿಯ ಕೆ. ಮಾಧವನ್ ನಾಯರ್, ಎರ್ನಾಡಿನ ಎಂ.ಪಿ. ನಾರಾಯಣ ಮೆನನ್ ಮೊದಲಾದವರ ಪ್ರಯತ್ನಗಳು ವಿಫಲಗೊಂಡವು. "ನಾವೇನು ಮಾಡುತ್ತಿದ್ದೇವೆಂದು ನಮಗೆ ಗೊತ್ತು. ನಿಮ್ಮ ಉಪದೇಶ ನಮಗೆ ಬೇಕಾಗಿಲ್ಲ" ಎಂದರು ಮೋಪ್ಲಾಗಳು.

               ಪೊಣ್ಣನಿಯ ಸರಕಾರೀ ಕಾಲೇಜಿನ ಆಸುಪಾಸಿನಲ್ಲಿಯೇ ಖಿಲಾಫತಿಗರು ಲೂಟಿ ದಾಂಧಲೆ ನಡೆಸಿದರು. ಇಲ್ಲಿ 67 ಪೊಲೀಸರು ಕೊಲೆಯಾದರು, 155 ಮಂದಿ ಮಾರಣಾಂತಿಕವಾಗಿ ಗಾಯಗೊಂಡರು. ಮಂಜೇರಿ, ತಿರುರಂಗಾಡಿಗಳಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದರು. ಉಗ್ರ ಮತಪ್ರವರ್ತಕರಾಗಿದ್ದ ಮುಸ್ಲಿಂ ಭಯೋತ್ಪಾದಕರಿಗಂತೂ ಖಿಲಾಫತ್ ಆಂದೋಲನ ಸುಸಂಧಿಯಾಗಿ ಒದಗಿ ಬಂತು. ಇಂತಹವರೆಲ್ಲರೂ ಏಕಾಏಕಿ ಗಾಂಧಿ ಅನುಯಾಯಿಗಳಾಗಿ ತಮ್ಮ ಮತಾಂತರ, ಲೂಟಿ, ಮಾನಭಂಗವನ್ನು ಮತ್ತಷ್ಟು ನಿರ್ಭಿಡೆಯಿಂದ ಮಾಡತೊಡಗಿದರು. ಅಲೀ ಮುಸಲಿಯಾರ್ ಎಂಬ ಮೌಲ್ವಿ ಏರ್ನಾಡ್, ತಿರುರಂಗಾಡಿಗಳಲ್ಲಿ ತಾನೇ ರಾಜನೆಂದು ಘೋಷಿಸಿಕೊಂಡು ಕಪ್ಪ ವಸೂಲು ಮಾಡತೊಡಗಿದ. ಉಗ್ರ ಮತಾಂತರ ಮಾಡುತ್ತಿದ್ದ ಈ ಕ್ರೂರ ಅತ್ಯಾಚಾರಿಯನ್ನು ಹಾಗೂ ಅವನ ಸಂಗಡಿಗರನ್ನು ಹಿಡಿದ ಪೊಲೀಸರು ಅವನಿಗೆ ಮರಣದಂಡನೆಯಾಗುವಂತೆ ಮಾಡಿ ಹಿಂದೂಗಳ ತುಸು ನೆಮ್ಮದಿಗೆ ಕಾರಣವಾದರು. ನೀಲಂಬೂರಿನಲ್ಲಿ ವಿ. ಕೆ. ಹಾಜಿ ಎಂಬಾತನ ಕ್ರೌರ್ಯ ಹೇಗಿತ್ತೆಂದರೆ ಅವನ ಹೆಸರು ಹೇಳಲೂ ಜನ ಹೆದರುತ್ತಿದ್ದರು. ಅಪಾರ ಶಸ್ತ್ರ ಸಂಗ್ರಹ ಮಾಡಿದ್ದ ಅವನು ತನ್ನ ಕೊಲೆ, ಲೂಟಿ, ಮಾನಭಂಗಗಳ ಸುದ್ದಿ ಮಂಜೇರಿ, ನೀಲಂಬೂರುಗಳಿಂದಾಚೆಗೆ ಹೋಗದಂತೆ ಎಚ್ಚರ ವಹಿಸಿದ್ದ. ಅವನನ್ನು ಬಂಧಿಸಿ ಮರಣದಂಡನೆ ವಿಧಿಸಲು ವಿಶೇಷ ಪೊಲೀಸ್ ಪಡೆಯನ್ನೇ ರಚಿಸ ಬೇಕಾಯಿತು. ಪಂದಲೂರಿನ ಹೆಡ್ ಕಾನ್ ಸ್ಟೇಬಲ್ ಹೈಡ್ರಾಸನನ್ನು ಅವನ ಪತ್ನಿ, ಮಕ್ಕಳ ಎದುರೇ ಕೊಚ್ಚಿ ಹಾಕಿದರು.


                     1891ರಲ್ಲಿ ಎರ್ನಾಡ್, ವಳ್ಳುವನಾಡ್, ಪೊಣ್ಣನಿ ಈ ಮೂರು ತಾಲೂಕುಗಳಲ್ಲಿ ನೂರರಲ್ಲಿ ಎಪ್ಪತ್ತರಷ್ಟಿದ್ದ ಮಾಪಿಳ್ಳೆಗಳ ಸಂಖ್ಯೆ ಮೂರೇ ದಶಕಗಳಲ್ಲಿ ೮೫ ಪ್ರತಿಶತವನ್ನೂ ದಾಟಿತು. ಹಿಂದೂಗಳ ಸಂಖ್ಯೆ ೫೨೦೧೭ ಇದ್ದರೆ ಮಾಪ್ಪಿಳ್ಳೆಗಳ ಸಂಖ್ಯೆ ೧,೫೦,೫೩೨ ಆಗಿತ್ತು.  "ಶಸ್ತ್ರಾಸ್ತ್ರಗಳು, ಸರಂಜಾಮುಗಳು ಹಾಗೂ ಸೈನಿಕರನ್ನು ಹೊತ್ತ ಹಡಗುಗಳು ಭಾರತದತ್ತ ಹೊರಟಿವೆ. ಅವು ತಲುಪಿದೊದನೆ ಹಿಂದೂಗಳ ಮಾರಣ ಹೋಮ ಆದಂತೆ" ಎಂದು ಹೆದರಿಸಿ ಮತಾಂತರವನ್ನು ಮತ್ತಷ್ಟು ಹೆಚ್ಚಿಸಲಾಯಿತು. " ಇನ್ನು ಮುಂದೆ ನೀವು ಮಾಪಿಳ್ಳೆಗಳ ಹೆಸರುಗಳನ್ನು ಹೊಂದಬೇಕಾಗುತ್ತೆ" ಎಂದು ನಾಯರ್ ಮಹಿಳೆಯರಿಗೆ ಹೇಳಿ ಆ ಹೊಸ ಹೆಸರುಗಳನ್ನು ಲೆಡ್ಜರುಗಳಲ್ಲಿ ಬರೆದಿಡಲಾಗುತ್ತಿತ್ತು. ಹಿಂದೂಗಳ ಮೇಲೆ ಆಕ್ರಮಣ ನಡೆಸುವ ಪ್ರವೃತ್ತಿ ಕೇರಳದ ಮುಸ್ಲಿಮರಲ್ಲಿ ದೀರ್ಘಕಾಲ ಮನೆ ಮಾಡಿದ್ದುದರಿಂದ ಗಾಂಧಿ ಹೊತ್ತಿಸಿದ ಕಿಡಿ ಉರಿದೆದ್ದು ನಂದಿಸದ ಜ್ವಾಲೆಯಾಗಿ ಅಸಂಘಟಿತ ಹಿಂದೂಗಳ ಮಾರಣ ಹೋಮ ಪ್ರಾರಂಭವಾಯಿತು. ಶೌರ್ಯಕ್ಕೆ ಹೆಸರಾಗಿದ್ದ ನಾಯರ್ ಸಮುದಾಯವನ್ನು ನಿಶ್ಯಸ್ತ್ರಗೊಳಿಸಿದ್ದ ಬ್ರಿಟಿಷರ ಕ್ರಮ ಮಾಪ್ಪಿಳ್ಳೆಗಳಿಗೆ ಲಾಭದಾಯಕವಾಯಿತು.

           ಅದೇ ಸಮಯದಲ್ಲಿ ಕರ್ಣಾವತಿ(ಅಹ್ಮದಾಬಾದ್)ಯಲ್ಲಿ ನಡೆದ ಮುಸ್ಲಿಮ್ ಲೀಗ್ ಅಧಿವೇಶನದ ಅಧ್ಯಕ್ಷ ಭಾಷಣದಲ್ಲಿ ಹಸರತ್ ಮೊಹಾನಿ ಮೋಪ್ಳಾ ದಂಗೆಯನ್ನು ಸಮರ್ಥಿಸುತ್ತಾ "ಹಿಂದೂಗಳು ಜಿಹಾದನ್ನು ಸ್ವೀಕರಿಸಿಲ್ಲ ಎಂದ ಮೇಲೆ ಅವರು ನಮ್ಮ ಶತ್ರುಗಳೇ. ಹಾಗಾಗಿ ಅವರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರ ದೋಷವೆನಿಸುವುದಿಲ್ಲ" ಎಂದು ಬೊಬ್ಬಿರಿದ. ವಿಪರ್ಯಾಸವೆಂದರೆ ಖಿಲಾಫತಿಗೆ ಹೆಗಲು ಕೊಟ್ಟ ಮಹಾತ್ಮ(!) ಅದೇ ಸಭೆಯಲ್ಲಿದ್ದರೂ ತುಟಿ ಬಿಚ್ಚಲಿಲ್ಲ. ವ್ಯತಿರಿಕ್ತವಾಗಿ ಆನಿಬೆಸೆಂಟ್ ಮೋಪ್ಳಾ ದಂಗೆಯನ್ನು ಖಂಡಿಸುತ್ತಾ "ಮುಸ್ಲಿಮರ ಸ್ವಭಾವಗತ ಹಿಂಸಾ ಪ್ರವೃತ್ತಿಯೇ ಈ ದೌರ್ಜನ್ಯಗಳಿಗೆ ಕಾರಣ" ಎಂದು ಹಿಂದೂಗಳನ್ನು ಎಚ್ಚರಿಸಿದರು. ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ ಸಮಾವೇಶ ಈ ಎಲ್ಲಾ ಕೃತ್ಯಗಳನ್ನು ವಿವರವಾಗಿ ದಾಖಲೆ ಮಾಡಿತು. ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್, 1921ರ ಸೆಪ್ಟೆಂಬರ್ 7 ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಬರೆದ ಪತ್ರ,...ಹೀಗೆ ಹತ್ತು ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು ವರದಿ ಮಾಡಿದವು. ಆದಾಗ್ಯೂ ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂತೆಗೆಯಲೇ ಇಲ್ಲ. ಈ ಸಂದರ್ಭದಲ್ಲಿ ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.

              ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದರು. ಆಗ್ರಹಿಸಿ ಪ್ರಶ್ನಿಸಿದಾಗ " ಮೋಪ್ಲಾಗಳು ತಮ್ಮ ಧಾರ್ಮಿಕ ಆದೇಶದಂತೆ ವರ್ತಿಸಿದ್ದಾರೆ. ಹಿಂದೂಗಳು ಹಿಂದೆ ಮಾಡಿದ ಪಾಪವೇ ಈ ಘಟನೆಗಳಿಗೆ ಕಾರಣವಿರಬಹುದು" ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದರು.  ಅಲ್ಲದೆ ತಮ್ಮ "ಯಂಗ್ ಇಂಡಿಯಾ" ದಲ್ಲಿ “ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ ಒಂದೇ ಒಂದು ಪ್ರಕರಣ ನಡೆದಿದೆ. " ಎಂದು ಬರೆದರು. "ಇಂಥಾ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ" ಎಂದು ಗಾಂಧಿಗೆ ಹೇಳಿದ ತಪ್ಪಿಗೆ ಕೆ.ಪಿ. ಕೇಶವ ಮೆನನರ(ಕಲ್ಲಿ ಕೋಟೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್ ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು ಸಾವಿರ ಮತಾಂತರ ಪ್ರಕರಣಗಳ ಅಧಿಕೃತ ವರದಿಗಳು ಇದ್ದಾಗ್ಯೂ ಗಾಂಧಿ ಈ ವರೆಗೆ ಅಂತಹ ಕೇವಲ ೩ ಪ್ರಕರಣಗಳು ನಡೆದಿವೆ ಎಂದರು (1922 ಜನವರಿ). ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.
                 ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ ಮೋಪ್ಲಾಗಳಿಂದ 1000 ಹಿಂದೂಗಳ ಕಗ್ಗೊಲೆ, 20,000 ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ 3 ಕೋಟಿಗೂ ಮಿಕ್ಕಿದ ಹಣದ ಲೂಟಿ ಆಗಿತ್ತು. ಎಡಬಿಡಂಗಿ ಕಮ್ಯೂನಿಷ್ಟರು "ಮೋಪ್ಲಾಗಳು 1100 ದೇವಾಲಯಗಳ ಪೈಕಿ 100 ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು. 500 ಮಂದಿ ಮಾತ್ರ ಕೊಲೆಯಾದರು. 2500 ಮಂದಿ ಮಾತ್ರ ಮತಾಂತರಗೊಂಡರು" ಎಂಬ ತನ್ನ ಎಂದಿನ ಹಿಂದೂ ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯಾರು ಮಾಡಿದರು. ಈ ದಂಗೆಗಳನ್ನು ತಹಬಂದಿಗೆ ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಈ ಹಂತದಲ್ಲಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು ನಿಯಂತ್ರಿಸಲು ಒಂದು ವಿಶೇಷ ಅನುಭವಿ ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಈ ಪಡೆ ದಂಗೆಯನ್ನು ನಿಯಂತ್ರಿಸಿತು.

               ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಎ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ 26,000ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ? ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ 2 ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಜನಕವಾಗಿದೆ.
" ಈ ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಆ ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ."
                 ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು -"ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ೫ ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ". ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ--"...A pregnant woman carrying 7 months was cut through the abdomen by a rebel and she was seen lying dead on the way with the dead child projecting out....Another baby of 6 months was snatched away from the breast of mother and cut into two pieces...."

                ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್ ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್ ಸನ್ ವರದಿ ಮಾಡಿದ್ದ. 'ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ 'ತೈಯಬ್ಜಿ' ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು "ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು" ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹೇಳಿದ್ದೇನು ಗೊತ್ತೇ? " Hindus will have to learn to die in the face of hewrest odds in order to convert musalman full into a respecting friend." ಗಾಂಧಿಯವರ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ "ಪರಿಹಾರ ನಿಧಿ" ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು 10ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ...ಎಂದು ದಾಖಲೆ ಮಾಡುತ್ತಾ ಹೋಗಿದ್ದು!

ಆರ್ಯಸಮಾಜ ಹಿಂದೂಗಳಿಗೆ ರಕ್ಷಣೆ ನೀಡಿದ್ದಲ್ಲದೆ ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಪ್ರಯತ್ನ ನಡೆಸಿತು. ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದವು. ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತವನ್ನೂ ಚಾಚಿದರು. ಭಾರತೀಯ ಚರಿತ್ರಕಾರರು ಇತಿಹಾಸದ ಪುಟಗಳಿಂದ ಮೋಪ್ಲಾ ದಂಗೆಯನ್ನು ಕಿತ್ತೆಸೆದರೂ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ವ್ಯಕ್ತಿಗಳು ಬರೆದ ಕೆಲವು ಪುಸ್ತಕಗಳು ಹಾಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಕಾದಂಬರಿ ರೂಪದಲ್ಲಿ ಬರೆದ "ಮೋಪ್ಳಾ ದಂಗೆ" ಈ ಘೋರ ದುರಂತವನ್ನು ಜಗತ್ತಿಗೇ ತೆರೆದಿಟ್ಟಿವೆ. ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ 13,500. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ 1776.

                 ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. 1924ರಲ್ಲಿ ಕೊಹಟ್, 1925ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, 1926ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, 1927ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. 1930-31ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. 1922-27ರ 5 ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ 35 ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅಂದು ಕೇರಳವನ್ನು ಸುಟ್ಟ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ರೇಪ್ ಜಿಹಾದ್, ಕಾರ್ಪೋರೇಟ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ.