ಪುಟಗಳು

ಮಂಗಳವಾರ, ಮಾರ್ಚ್ 27, 2018

ಅಂಬಾ ಎಂಬ ದನಿಯ ನಡುವೆ ರುದ್ರ ನ್ಯಾಸದ ಚಮಕ್

ಅಂಬಾ ಎಂಬ ದನಿಯ ನಡುವೆ ರುದ್ರ ನ್ಯಾಸದ ಚಮಕ್

              "ಪ್ರಜನನೇ ಬ್ರಹ್ಮಾ ತಿಷ್ಠತು | ಪಾದಯೋರ್-ವಿಷ್ಣುಸ್ತಿಷ್ಠತು | ಹಸ್ತಯೋರ್-ಹರಸ್ತಿಷ್ಠತು | ಬಾಹ್ವೋರಿಂದ್ರಸ್ತಿಷ್ಟತು | ಜಠರೇஉಅಗ್ನಿಸ್ತಿಷ್ಠತು | ಹೃದ’ಯೇ ಶಿವಸ್ತಿಷ್ಠತು |....." ಅರುಣ ಕಿರಣ ಇಬ್ಬನಿಯ ಚುಂಬಿಸುವುದಕ್ಕೆ ಮುನ್ನವಲ್ಲಿ ರುದ್ರ ಲಘು ನ್ಯಾಸ ಮೊರೆತ. ಮತ್ತೆ ಹವನದ ಘಮಲು. ಸ್ವಲ್ಪ ಹೊತ್ತಲ್ಲೆ ವಿವಿಧ ಆಸನಗಳ ಯೋಗಾಭ್ಯಾಸದ ಝಲಕ್. ಮತ್ತೆ ದಂಡ ಹಿಡಿದು ಸ್ವರಕ್ಷಣೆಯ ಶಿಕ್ಷಣ. ದಿನವಿಡೀ ಜೀವನ ರೂಪಿಸಲು ಅವಶ್ಯಕವಾದ ವಸ್ತು-ವಿಧಾನ-ವಿಚಾರಗಳ ಪಾಠ. ನಡುವೆ ಸಂಗೀತ, ನಾಟ್ಯಾಭ್ಯಾಸ. ಇವೆಲ್ಲವೂ ಗೋಶಾಲೆಯ ನಡುವಲ್ಲಿ, ಗೋವಿನೆಡೆಯಲ್ಲಿ, ಗೋಸೇವೆ ಮಾಡುತ್ತಾ ನಡೆದರೆ ಅದೆಷ್ಟು ಚೆನ್ನ? ಹೌದು ಇಂತಹಾ ಸಾಧ್ಯತೆಯೊಂದನ್ನು ಸಾಧ್ಯವಾಗಿಸಿದೆ ಗೋತೀರ್ಥ ವಿದ್ಯಾಲಯ.

                ಗೋತೀರ್ಥ ವಿದ್ಯಾಪೀಠ. ಗುಜರಾತಿನ ವಾಣಿಜ್ಯ ರಾಜಧಾನಿ ಅಹ್ಮದಾಬಾದಿನ ಸರ್ಖೇಜ್'ನಲ್ಲಿರುವ ದೇಗುಲ. ಹದಿನೆಂಟು ಗಿರ್ ತಳಿಯ ಗೋತ್ರದ ಗೋವುಗಳ ಸಹಿತ 800ಕ್ಕೂ ಹೆಚ್ಚು ಗೋವುಗಳನ್ನು ಹೊಂದಿರುವ "ಬಂಸೀ ಗಿರ್" ಗೋಶಾಲೆ ಅಲ್ಲಿನ ಗರ್ಭಗುಡಿ. ಗೋ ಸೇವಕ ಗೋಪಾಲ ಸುತರಿಯಾ ಎಂಬವರೇ ಈ ದೇಗುಲದ ಪ್ರೇರಣಾ ಸ್ತ್ರೋತ. ವರ್ತಮಾನಕ್ಕೆ ಅಗತ್ಯವಾದ ಶಿಕ್ಷಣವನ್ನು ಪ್ರಾಚೀನ ಗುರುಕುಲ ಪದ್ದತಿಯಲ್ಲಿ ಗೋಸೇವೆಯ ಜೊತೆ ಜೊತೆಗೆ ನೀಡುವ ವಿದ್ಯಾ ಮಂದಿರವದು. ಶುದ್ಧ ಚಾರಿತ್ರ್ಯ ಹೊಂದಲು ಬೇಕಾದ ಉತ್ತಮ ಸಂಸ್ಕಾರ, ದೇಹ-ಬುದ್ಧಿಗಳೆರಡರ ಬೆಳವಣಿಗೆಗೆ ಬೇಕಾದ ಶಿಕ್ಷಣ, ಆತ್ಮ ಶುದ್ಧೀಕರಣದ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಬೇಕಾದ ಜ್ಞಾನಧಾರೆ ಇಲ್ಲಿ ನಿರತ ಪ್ರವಹಿಸುತ್ತಿದೆ. ಗೋ ಆಧಾರಿತ ಶಿಕ್ಷಣ, ಗೋಸೇವೆಯ ಜೊತೆಜೊತೆಗೆ ಅದರಿಂದ ಸಿಗಬಹುದಾದ ಅಮೃತಸಮಾನ ಆಹಾರ, ಆರೋಗ್ಯ ಎರಡೂ ಎಳೆಯರ ಬೆಳವಣಿಗೆಗೆ ಪೂರಕವಾಗಿದೆ. ವೇದಗಣಿತ, ನಾಡಿ ವಿಜ್ಞಾನ, ಪಂಚಗವ್ಯ ಚಿಕಿತ್ಸೆ, ಜ್ಞಾನ ಚಿಕಿತ್ಸೆ, ಗೋ ಆಧಾರಿತ ವ್ಯವಸಾಯ, ಪಂಚಕರ್ಮ ಚಿಕಿತ್ಸೆ ಹಾಗೂ ಔಷಧಿ ತಯಾರಿಕೆ, ಭಾರತದ ನೈಜ ಇತಿಹಾಸ, ವಿಜ್ಞಾನ ಎಲ್ಲವೂ ನುರಿತ ಶಿಕ್ಷಕರಿಂದ ಕಲಿಸಲಾಗುತ್ತಿದೆ. ಎಳೆಯರನ್ನು ಜೊತೆಗೂಡಿಸಿಕೊಂಡು ಗೋಮೂತ್ರ ಹಾಗೂ ಇತರ ಗೋ ಉತ್ಪನ್ನಗಳನ್ನು ಬಳಸಿಕೊಂಡು ವೇದ ಆಧಾರಿತ ಕೃಷಿ ಪದ್ದತಿಯಿಂದ ಕೃಷಿ ವಿಶ್ವವಿದ್ಯಾಲಯಗಳೇ ಮೆಚ್ಚುವಂತೆ/ಬೆಚ್ಚುವಂತೆ ಅಧಿಕ ಇಳುವರಿ ಪಡೆಯುವ ಪ್ರಯೋಗವೂ ನಡೆಯುತ್ತಿದೆ.

             ಕಳರಿ ವಿದ್ಯೆಯ ತರಬೇತಿ, ಧ್ಯಾನ, ಹವನ, ಯೋಗಾಸನ, ಮಲ್ಲಕಂಬಗಳ ತರಬೇತಿ, ಹಗ್ಗದ ಮೂಲಕ ಮೇಲೇರಿ ಹಗ್ಗದಲ್ಲೇ ವಿವಿಧ ಆಸನಗಳ ಕಲಿಕೆ ಎಲ್ಲವೂ ಇಲ್ಲಿ ಲಭ್ಯ. ಅರ್ಥವಾಗದ ವಿದ್ಯಾರ್ಥಿಗಳಿಗೆ ಮಣ್ಣು, ನೀರು ಹೀಗೆ ಪ್ರಾಕೃತಿಕ ವಸ್ತುಗಳನ್ನು ಬಳಸಿಕೊಂಡು ಕಲಿಸುವ ವಿಧಾನ ಮಂದಮತಿಯನ್ನೂ ಮುಂಚೂಣಿಯಲ್ಲಿರಿಸುತ್ತದೆ. ಸಂಗೀತ-ನಾಟ್ಯಶಿಕ್ಷಣವೂ ಜೊತೆಜೊತೆಗೆ ನಡೆಯುತ್ತಿದೆ. ಒಟ್ಟಾರೆ ಗೋ ಸೇವೆ ಮಾಡುತ್ತಾ, ವೇದ ಮಂತ್ರ ಪಠಣದೊಡನೆ, ಹವನ ಧೂಮವನ್ನಾಘ್ರಾಣಿಸುತ್ತಾ ಸ್ವಸ್ಥ ಶರೀರದೊಂದಿಗೆ ನಡೆಯುತ್ತಿದೆ ಶ್ರವಣ, ಸಂಭಾಷಣ, ಪಠಣ; ಪರೀಕ್ಷೆಯಿಲ್ಲದ ನಿರ್ಭಯ ಶಿಕ್ಷಣ! ಇಂತಹ ಸೌಭಾಗ್ಯ ಬೇಕೆಂದರೂ ಸಿಗದು!

         ಸಂ ತೇ ಗಾವಃ ತಮ ಆವರ್ತಯಂತಿ | ಜ್ಯೋತಿಃ ಯಚ್ಛಂತಿ || ಗೋಕುಲವು ತಮಸ್ಸನ್ನು ಹೋಗಲಾಡಿಸುವ ಜ್ಞಾನದೀಪ ಎಂದಿದೆ ಋಗ್ವೇದ. ಗೋ ಪರವಾದ ಅನೇಕ ಸೂಕ್ತಗಳು ವೇದಗಳಲ್ಲಿವೆ.
" ಆ ಗಾವೋ ಅಗ್ಮನುತ ಭದ್ರಮಕ್ರಂತ್ಸೀದಂತು ಗೋಷ್ಠೇ ರಣಯಂತ್ವಸ್ಮೇ |
ಪ್ರಜಾವತೀಃ ಪುರುರೂಪಾ ಇಹಸ್ಯುರಿಂದ್ರಾಯ ಪೂರ್ವಿರುಷಸೋ ದುಹಾನಾಃ || " - ಸದಾ ಮಂಗಳವನ್ನುಂಟುಮಾಡುವ ಹಸುಗಳು ಬರಲಿ. ಕೊಟ್ಟಿಗೆಯಲ್ಲಿ ಕಲೆತು ನಮ್ಮ ಜತೆಗೆ ಉದ್ಗರಿಸಲಿ. ಇಲ್ಲೇ ತಮ್ಮ ಸಂತತಿಯನ್ನು ಮುಂದುವರೆಸಲಿ - ಎನ್ನುತ್ತಾ ಗೈಯುವ ಪ್ರಾರ್ಥನೆಯೊಂದೆಡೆಯಾದರೆ,
" ಶಿವೋ ವೋ ಗೋಷ್ಟೋ ಭವತು ಶಾರಿಶಾಕೇವ ಪುಷ್ಯತ |
ಇಹ್ಯವೋತ ಪ್ರಜಾಯಧ್ವಂ ಮಯಾ ವಃ ಸೃಜಾಮಸಿ || " - ನಿಮ್ಮ ಕೊಟ್ಟಿಗೆಯು ಮಂಗಲಕರವಾಗಿರಲಿ. ನಿಮಗೆ ಹಿತಕರವಾಗಿರಲಿ. ಜೇನ್ನೊಣಗಳಂತೆ ಅಭಿವೃದ್ಧಿ ಹೊಂದಿರಿ. ಇಲ್ಲಿಯೆ ನಿಮ್ಮ ಸಂತತಿಯನ್ನು ಉತ್ಪಾದಿಸಿರಿ. ನನ್ನೊಡನೆ ನಿಮ್ಮನ್ನು ಹುಲ್ಲುಗಾವಲಿಗೆ ಕೊಂಡೊಯ್ಯುತ್ತೇನೆ - ಎನ್ನುತ್ತಾ ಭಾವಸಲ್ಲಾಪ ಮಾಡುವವರೆಗೆ ವೇದಗಳಲ್ಲಿ ಸೂಕ್ತಗಳು ಹರಡಿವೆ. “ಗೋವುಗಳ ಹಾಲು ಎ೦ತಹಾ ದುರ್ಬಲರನ್ನೂ ಸುಪುಷ್ಟಗೊಳಿಸುತ್ತದೆ. ಕುರೂಪಿಯನ್ನೂ ಸುಂದರಗೊಳಿಸುತ್ತದೆ. ಮನೆಗೆ ಶೋಭೆ ತರುತ್ತದೆ. ಗೋವು ಸರ್ವರಿಗೂ ಸಂಪತ್ತಾಗಿದೆ. ಅದನ್ನು ರಕ್ಷಿಸುವವರು ಬಾಗ್ಯಶಾಲಿಗಳೇ ಸರಿ” ಎಂದು ಗೋವುಗಳನ್ನು ಕೊಂಡಾಡಿದೆ ವೇದ. ವೇದಗಳಲ್ಲಿ ದೇವಮಾತೆ ಎಂದು ಕರೆದದ್ದು ಗೋವನ್ನು ಮಾತ್ರ. ಅಂತಹಾ, ಗೋವುಗಳನ್ನೇ ಕೊಂಡಾಡಿರುವ ವೇದಗಳ ಪಠಣ ಗೋವುಗಳ ಸಮ್ಮುಖದಲ್ಲಿ, ಗೋವುಗಳ ಸೇವೆ ಮಾಡುತ್ತಾ ನಡೆದರೆ...? ಎಂತಹಾ ಭಾವಪೂರ್ಣ ಸನ್ನಿವೇಶವದಾಗಿರಬಹುದು?

               ಆದರೆ ನಮ್ಮಲ್ಲಿನ ಮಂದಮತಿಗಳು ವೇದಕಾಲೀನ ಜನರು ಗೋವನ್ನು ತಿನ್ನುತ್ತಿದ್ದರು, ಗೋಮಾಂಸ ಭಕ್ಷಣೆ ಮಾಡಬಾರದು ಎನ್ನುವುದು ಇಂದಿನ ಬ್ರಾಹ್ಮಣರ ಹೇರಿಕೆ ಎಂದೆಲ್ಲಾ ಬಡಬಡಿಸುತ್ತಾರೆ. ಆದರೆ ವೇದಗಳಲ್ಲೇ ಗೋವನ್ನು ಕೊಲ್ಲಬಾರದೆಂದು ನಿರ್ದೇಶಿಸಿರುವುದನ್ನು ಈ ಪ್ರಭೃತಿಗಳು ಮರೆಯುತ್ತಾರೆ.ಋಗ್ವೇದದ ಎಂಟನೆಯ ಮಂಡಲ,
"ಮಾತಾ ರುದ್ರಾಣಾಂ ದು ಹಿತಾ ವಸೂನಾಂ ಸ್ವಸಾದಿತ್ಯಾನಾಮಮೃತಸ್ಯ ನಾಭಿಃ |
ಪ್ರಮವೋಚಂಚಿಕಿತುಷೇ ಜನಾಯ ಗಾಮನಾಗಾಂ ಅದಿತಿಂ ವಧಿಷ್ಟ (ಸೂಕ್ತ- 101; 15)"
- ರುದ್ರರಿಗೆ ತಾಯಿಯೂ, ವಸುಗಳಿಗೆ ಮಗಳೂ, ಅಮೃತದ ಉತ್ಪತ್ತಿ ಸ್ಥಾನವೂ, ಪಾಪರಹಿತಳೂ, ಪೂಜ್ಯಳೂ ಆದ ದೇವಮಾತೆಯನ್ನು ಕೊಲ್ಲಬೇಡಿರಿ - ಎನ್ನುತ್ತದೆ.
"ವಚೋವಿದಂ ವಾಚಮುದೀರಯಂತೀಂ ವಿಶ್ವಾಭಿರ್ದೀ ಭಿರುಪತಿಷ್ಠ ಮಾನಾಮ್|
ದೇವೀಂ ದೇವೇಭ್ಯಃ ಪರ್ಯೇಯುಷೀಂ ಗಾಮ್ ಆಮಾ ವೃತ್ತ ಮರ್ತ್ಯೋ ದಭ್ರಚೇತಾಃ || ( ಋಗ್ವೇದ-೮ನೇ ಮಂಡಲ, ಸೂಕ್ತ-೧೦೧; ೧೬)
- ಮಾತನ್ನು ಅರಿತುಕೊಳ್ಳುವವಳು, ಮಾತನ್ನು ತಾನೇ ಉಚ್ಚರಿಸುವವಳೂ, ಎಲ್ಲಾ ಬುದ್ಧಿವಂತರಿಂದ ಆಶ್ರಯಿಸಲ್ಪಡುವವಳೂ, ದೇವಿ ಸ್ವರೂಪಳೂ, ದೇವತೆಗಳ ಪೂಜೆಗೆ ಸಹಾಯ ನೀಡುವವಳೂ ಆದ ಗೋವನ್ನು ಹೀನ ಮನಸ್ಸಿನವನು ಮಾತ್ರ ದೂರ ಮಾಡುತ್ತಾನೆ. ವಾಜಸನೇಯ ಸಂಹಿತೆ, "ಗಾಂ ಮಾ ಹಿಂಸೀರದಿತಿಂ ವಿರಾಜಮ್" ಸರ್ವರ ತಾಯಿ ಗೋವನ್ನು ಹಿಂಸಿಸಬೇಡ ಎನ್ನುತ್ತದೆ. ಋಗ್ವೇದದ ೧, ೪, ೫, ೮ ಹಾಗೂ ಹತ್ತನೇ ಮಂಡಲಗಳಲ್ಲಿ ಗೋವನ್ನು ಕೊಲ್ಲಬಾರದ್ದು (ಅಘ್ನ್ಯ) ಎಂದಿದೆ. ಅಥರ್ವ ವೇದದ ಐದನೇ ಕಾಂಡದಲ್ಲಿ ಹಸುವನ್ನು ಕೊಂದು ತಿನ್ನುವವರು ತಮ್ಮ ಪಿತೃಗಳಿಗೆ ಪಾಪವನ್ನು ತಂದು ಕೊಡುತ್ತಾರೆ ಎಂದಿದೆ. ಹನ್ನೆರಡನೇ ಕಾಂಡ ಹಸುವನ್ನು ತಿನ್ನುವವನ ಮಕ್ಕಳು ಮೊಮ್ಮಕ್ಕಳನ್ನು ಬೃಹಸ್ಪತಿ ಸಾಯಿಸುತ್ತಾನೆ ಎಂದಿದೆ. ಋಕ್ಸಂಹಿತೆಯ ಸೂಕ್ತವೊಂದು,
"ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ ಯೋ ಅಶ್ವ್ಯೇನ ಪಶುನಾ ಯಾತುಧಾನಃ |
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||" - ಎನ್ನುತ್ತದೆ. ಯಾವ ರಾಕ್ಷಸನು ಪುರುಷಸಂಬಂಧಿ ಮಾಂಸದಿಂದಲೂ, ಕುದುರೆ ಮೊದಲಾದ ಪ್ರಾಣಿಗಳ ಮಾಂಸದಿಂದಲೂ, ವಧಿಸಲ್ಪಡಬಾರದ ಗೋವಿನ ಮಾಂಸದಿಂದಲೂ ಹೊಟ್ಟೆಯನ್ನು ತುಂಬಿಸಿಕೊಳ್ಳುವನೋ, ಗೋಕ್ಷೀರವನ್ನು ಅಪಹರಿಸುವನೋ ಅಂಥವರ ತಲೆಗಳನ್ನು ಹೇ ಅಗ್ನಿದೇವ! ನಿನ್ನ ಜ್ವಾಲೆಗಳಿಂದ ಸುಟ್ಟು ನಾಶಮಾಡು ಎಂದರ್ಥ.



ಕ್ರೌಂಚದ ಶೋಕವೇ ಶ್ಲೋಕವಾಯಿತು...! ರಾಮ ಎನುವ ಪರಬ್ರಹ್ಮದ ಹೆಸರಾಯಿತು!

ಕ್ರೌಂಚದ ಶೋಕವೇ ಶ್ಲೋಕವಾಯಿತು...! ರಾಮ ಎನುವ ಪರಬ್ರಹ್ಮದ ಹೆಸರಾಯಿತು!


                     ಜಗತ್ತಿನಲ್ಲಿ ಎಷ್ಟು ಬಾರಿ ಕ್ರೌಂಚ ಪಕ್ಷಿಗಳನ್ನು ಕೊಲ್ಲಲಿಲ್ಲ? ಆದರೆ ಒಂದೇ ಒಂದು ಬಾರಿ ರಾಮಾಯಣ ಹುಟ್ಟಿತು. ನಾಗಚಂದ್ರ ಹೇಳುತ್ತಾನೆ,"ಬರೆದರೆ ರಾಘವನನ್ನು ನಾಯಕನನ್ನಾಗಿಸಿ ಬರೆಯಬೇಕು. ಆಗ ಕಥೆ ಉದಾತ್ತವಾದೀತು" ರಾಮಾಯಣ-ಭಾರತಗಳು ಸರಸ್ವತಿಯ ಎರಡು ಕಿವಿಯೋಲೆಗಳು. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮೋ ವಿಗ್ರಹವಾನ್ ಧರ್ಮಃ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವಧೂತ ಸದಾಶಿವ ಬ್ರಹ್ಮೇಂದ್ರರಿಗಂತೂ ಅವನು ಬ್ರಹ್ಮವಾಗಿಯೇ ಕಂಡು ಅವರ ಅದೆಷ್ಟೋ ಸಂಗೀತ ಕೃತಿಗಳಿಗೆ ನಾಯಕನಾದ.

              ಸೀತಾ ರಾಮರ ಪರಿಣಯ ಆಗಷ್ಟೇ ಮುಗಿದಿತ್ತು. ರಾಮನ ಯುವರಾಜ ಪಟ್ಟಾಭಿಷೇಕಕ್ಕೆ ಅಯೋಧ್ಯೆ ಅಣಿಯಾಗುತ್ತಿತ್ತು. ಎಲ್ಲಿದ್ದಳೋ ಆ ಮಂಥರೆ. ದಶರಥನ ಮೆಚ್ಚಿನ ಮಡದಿ ಕೈಕೆಯ ಕಿವಿಯೂದಿದಳು. ಕೈಕೆಯನ್ನು ಕೈಯಲ್ಲಿ ಹಿಡಿದಾಡಿಸಿದವಳು ಆಕೆ. ದಶರಥ ಹಿಂದೆ ವಾಗ್ದಾನ ಮಾಡಿದ್ದ ವರಗಳನ್ನು ಉಪಯೋಗಿಸುವಂತೆ ಕೈಕೆಯ ಮನವೊಲಿಸಿದಳು. ಕೈಕೆ ಶೋಕಾಗಾರವನ್ನು ಹೊಕ್ಕಳು. ಪ್ರಿಯ ಪತ್ನಿಯ ಹಠಕ್ಕೆ ಕರಗಿ ಹೋಗಿ ಕಾರಣ ಕೇಳಿದ ದಶರಥನ ಎದೆ ಬಿರಿಯಿತು. ಒಂದೆಡೆ ಪ್ರಿಯ ಪತ್ನಿಗೆ ಕೊಟ್ಟ ಮಾತನ್ನು ಉಳಿಸಬೇಕಾದ ಕರ್ತವ್ಯ. ಇನ್ನೊಂದೆಡೆ ಪ್ರಿಯ ಪುತ್ರನ ವಿಯೋಗದ ದುಃಖ.  ತಂದೆ ತಾಯಂದಿರ ವಾತ್ಸಲ್ಯದ ಪುತ್ರನಾಗಿ, ಸದಾ ತನ್ನ ನೆರಳಾಗಿರುವ ಅನುಜರಿಗೆ ಹಿರಿಯಣ್ಣನಾಗಿ, ಗೆಳೆಯರಿಗೆ ನಲ್ಮೆಯ ಸಖನಾಗಿ, ಮಡದಿ ಸೀತೆಯ ಪ್ರೇಮದ ಪತಿಯಾಗಿ, ಗುರು ಹಿರಿಯರಿಗೆ ವಿಧೇಯನಾಗಿ, ಹಿರಿಕಿರಿಯ ಬಡವ-ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಗೌರವ ತೋರುತ್ತಾ ಎಲ್ಲರೊಂದಿಗೂ ಒಡನಾಡುತ್ತಾ ಎಲ್ಲರ ಮನೆಯ ಮಗನಂತೆ ಬೆಳೆದ ರಾಮಚಂದ್ರನ ಅಗಲುವಿಕೆಯೆಂದರೆ…….ಪುತ್ರ ವಾತ್ಸಲ್ಯ ಆತನನ್ನು "ನನ್ನನ್ನು ಕೊಂದು ಪಟ್ಟವೇರು" ಎನ್ನುವ ಹತಾಶೆಗೆ ಮುಟ್ಟಿಸಿತು! ಮನಸ್ಸು ಮಾಡಿದ್ದರೆ ರಾಮ ಅನಾಯಾಸವಾಗಿ ಪಟ್ಟವೇರಬಹುದಿತ್ತು. ಉಳಿದವರಿಗಾದರೋ ಸ್ವತಃ ತಂದೆಯೇ ತನ್ನನ್ನು ಕೊಂದು ಪಟ್ಟವೇರು ಎನ್ನಬೇಕಿರಲಿಲ್ಲ. ಮಾತು ಮುಗಿಯುವುದರೊಳಗೆ ತಂದೆಯ ಶಿರ ಬೇರೆಯಾಗುತ್ತಿತ್ತೋ ಏನೋ. ಕನಲಿದ್ದ ಲಕ್ಷ್ಮಣನಿಗೆ ರಾಮನ ಒಂದು ನಿಟ್ಟುಸಿರಿನ "ಹೂಂಕಾರ" ಸಾಕಾಗುತ್ತಿತ್ತು. ವಸಿಷ್ಠರು ರಾಮನ ಒಂದು ಒಪ್ಪಿಗೆಗೆ ತುದಿಗಾಲಲ್ಲಿ ನಿಂತಿದ್ದರು. ತಾಯಂದಿರ ಪುತ್ರವಾತ್ಸಲ್ಯ, ಬಂಧುಗಳ ಪ್ರೇಮ, ಮಂತ್ರಿ ಮಾಗಧರ ಗೌರವ ರಾಮನನ್ನು ಅನಾಯಾಸವಾಗಿ ಪಟ್ಟದಲ್ಲಿ ಕೂರಿಸುತ್ತಿತ್ತು. ಪ್ರಜೆಗಳ ಅನುರಾಗ ರಾಮನ ದ್ವೇಷಾಸೂಯೆಗಳಿಲ್ಲದ ಸರ್ವಜನ ಹಿತದ ಆಡಳಿತಕ್ಕೆ ಹಾತೊರೆಯುತ್ತಿತ್ತು. ಎಲ್ಲರೂ ರಾಮನ ಪರವಾಗಿದ್ದರು. ಆದರೆ ರಾಮ ಮಾತ್ರ ಕೈಕೆ ಪರವಾಗಿ ನಿಂತ! ಇಲ್ಲ, ರಾಮ ಧರ್ಮದ ಪರವಾಗಿ ನಿಂತ. ವಂಶದ ಗೌರವ ಉಳಿಸಲೋಸುಗ ತನ್ನ ಸುಖವನ್ನು ಬಲಿಕೊಡಲು ಸಿದ್ಧನಾದ. ಬಹುಷಃ ಸಿಂಹಾಸನವೇರಬೇಕೆಂದು ಒತ್ತಾಯಿಸುತ್ತಿದ್ದ ಪ್ರಜೆಗಳಿಂದ ಪಾರಾಗುವುದನ್ನು ಚಿಂತಿಸುತ್ತಿದ್ದ ಏಕಮಾತ್ರ ರಾಜಕುಮಾರನಿರಬೇಕು ಶ್ರೀರಾಮಚಂದ್ರ!

               ವನಗಮನವೇನೂ ರಾಮನಿಗೆ ಹೊಸದಲ್ಲ. ಯಜ್ಞ ಸಂರಕ್ಷಣೆಯ ನೆಪದಲ್ಲಿ ರಾಮ ಲಕ್ಷ್ಮಣರನ್ನು ತನ್ನೊಡನೆ ಕರೆದೊಯ್ದು ಸೂಕ್ತ ಶಿಕ್ಷಣವನ್ನೇ ನೀಡಿದ್ದ ವಿಶ್ವಾಮಿತ್ರ. ಸ್ವತಃ ರಾಕ್ಷಸರುಗಳನ್ನು ಸಂಹಾರ ಮಾಡುವ ಸಾಮರ್ಥ್ಯವಿದ್ದಾಗ್ಯೂ ಆ ಬ್ರಹ್ಮರ್ಷಿ ರಾಮನನ್ನು ಮಾಧ್ಯಮವಾಗಿ ಬಳಸಿ ಧರ್ಮದ ಒಳಸೂಕ್ಷ್ಮತೆಯ ಅರಿವನ್ನೂ ಮೂಡಿಸಿದ. ಈ ಜಗದಲ್ಲಿ ಧರ್ಮದ-ಸಂಸ್ಕೃತಿಯ ರಕ್ಷಣೆಗೆ ತಾನೊಂದು ಮಾಧ್ಯಮ ಎನ್ನುವುದನ್ನು ಬಾಲರಾಮ ಅರ್ಥ ಮಾಡಿಕೊಂಡಿದ್ದ. ಮಾಧ್ಯಮಕ್ಕೆ ವೈಯುಕ್ತಿಕತೆ ಇರುವುದಿಲ್ಲ. ಅದಕ್ಕೆ ತನ್ನ ಪರಂಪರೆಯ ಬಗೆಗೆ ಪೂಜ್ಯ ಭಾವನೆ ಇರುತ್ತದೆ. ಸಂಸ್ಕೃತಿಯ ಉಳಿವಿಗೆ ಅದು ಹಾತೊರೆಯುತ್ತದೆ. ಧರ್ಮಪಥ ದರ್ಶಕವದು. ಹೇಗಿರಬೇಕೆಂದು ಆಚರಿಸಿ ತೋರಿಸುವುದಷ್ಟೇ ಅದರ ಕರ್ತವ್ಯ.

               ರಾಮ ಕುಟುಂಬದ ಸಂಕೇತ; ಆದರೆ ಅವನದ್ದು ಸಂಕುಚಿತವಲ್ಲದ, ರಾಷ್ಟ್ರೀಯತೆಗೆ ಧಕ್ಕೆ ತರದ ಕುಟುಂಬ ಪ್ರಜ್ಞೆ. ಸೀತಾ ಪರಿಣಯದ ಸಂದರ್ಭದಲ್ಲೂ "ತಂದೆಗೆ ತುಂಬಾ ಒಪ್ಪಿಗೆಯಾದ ಹುಡುಗಿ" ಎನ್ನುವುದು ಅವನಿಗೆ ಇನ್ನಷ್ಟು ಖುಷಿ ಕೊಡುತ್ತದೆ. ಕುಟುಂಬ ಇನ್ನೇನು ವಿಘಟಿತವಾಗುತ್ತದೆ ಎನ್ನುವಾಗ ಅದನ್ನು ಬೆಸೆಯಲು ತ್ಯಾಗಕ್ಕೆ ಮುಂದಾದವ ಆತ. ಆದರೆ ಹಾಗೆ ಮಾಡುವಾಗ ಆತ ರಾಷ್ಟ್ರೀಯತೆಯನ್ನೇನು ಬಲಿ ಕೊಡಲಿಲ್ಲ. ತಂದೆ ವಚನಭೃಷ್ಟನಾಗಬಾರದು ಎನ್ನುವುದು ಅವನ ಉದ್ದೇಶವಾಗಿತ್ತು. ರಾಜ ತಪ್ಪಿ ನಡೆದರೆ ಪ್ರಜೆಗಳಿಗೆ ರಾಜ್ಯಾಂಗದಲ್ಲಿ ವಿಶ್ವಾಸವಿರುವುದಿಲ್ಲ. ಹಾಗಾಗಿ ತಂದೆಯ ಮಾತನ್ನು ನಡೆಸಲು ಆತ ಮುಂದಾದ. ಹಾಗೆ ಮಾಡುವಾಗ ಪ್ರಜೆಗಳಿಗೆ ರಾಮನಂಥ ರಾಜ ಸಿಗದೇ ಅನ್ಯಾಯವಾಗುವುದಿಲ್ಲವೇ? ಇಲ್ಲ, ತನ್ನಷ್ಟೇ ಸಮರ್ಥವಾಗಿ ಭರತ ರಾಜ್ಯವಾಳಬಲ್ಲ ಎನ್ನುವುದು ಅವನಿಗೆ ತಿಳಿದಿತ್ತು. ಹಾಗಾಗಿ ಅಷ್ಟೂ ಜನರೂ ಅವನ ಪರವಾಗಿ ನಿಂತರೂ ಅವನು ಧರ್ಮದ ಪರ ವಹಿಸಿದ. ತನ್ನನ್ನು ಹಿಂದಕ್ಕೆ ಕರೆದೊಯ್ಯಲು ಬಂದ ಭರತನ ಒತ್ತಾಸೆಗೂ ಮಣಿಯದೆ ತಾಯಿಯದ್ದು ತಪ್ಪೆಂದು ಹೀಯಾಳಿಸದೆ ಆಕೆಯನ್ನು ಗೌರವದಿಂದ ಕಾಣು ಎಂದ. ಹೀಗೆ ತಂದೆ-ತಾಯಿ ಸ್ವಾರ್ಥಕ್ಕೆ ಎರವಾಗಿ ಮಾಡಿದ ತಪ್ಪನ್ನು ಅವರನ್ನು ಬೈದಾಡದೆ ನವಿರಾಗಿ, ಸಮಾಧಾನ ಚಿತ್ತದಿಂದ ತಿದ್ದಿ ಕುಟುಂಬವನ್ನುಳಿಸಿದ. ಕುಟುಂಬವನ್ನು ಉಳಿಸಲು ವ್ಯಕ್ತಿಯ ಇಷ್ಟಾನಿಷ್ಟಗಳನ್ನು ಮೀರಬೇಕಾಗುತ್ತದೆ ಎನ್ನುವ ಪಾಠವನ್ನು ಜಗತ್ತಿಗೆ ಕೊಟ್ಟ. ಹೇಗಿತ್ತು ರಾಮರಾಜ್ಯ? ಪ್ರಜೆಗಳು ಜಗಳವಾಡುತ್ತಿರಲಿಲ್ಲ; ವೈಷಮ್ಯ ಉಂಟಾದಾಗಲೂ, "ನೋಡು ರಾಮನ ಮುಖ ನೋಡಿ ನಿನ್ನನ್ನು ಬಿಡುತ್ತಿದ್ದೇನೆ" ಎನ್ನುವಂತಹ ನೈತಿಕ ಭಯ ಪ್ರಜೆಗಳಲ್ಲಿತ್ತು. ರಾಮ ಕುಟುಂಬ ಪ್ರಜ್ಞೆಯನ್ನು ಅಷ್ಟು ವಿಸ್ತರಿಸಿದ್ದ, ಎಲ್ಲರಿಗೂ ಹಿರಿಯಣ್ಣನಂತೆ!

                 ಪ್ರತಿಜ್ಞಾ ಪರಿಪಾಲನೆಯ ವಿಷಯದಲ್ಲಿ ತನ್ನ ಕಾಂತೆಗೆ ಸ್ವಯಂ ಶ್ರೀರಾಮನೇ ಹೀಗೆ ಹೇಳುತ್ತಾನೆ..
"ಅಪ್ಯಹಂ ಜೀವಿತಂ ಜಹ್ಯಾಂ ತ್ವಾಂ ವಾ ಸೀತೇ ಸಲಕ್ಷ್ಮಣಾಮ್ |
ನ ತು ಪ್ರತಿಜ್ಞಾಂ ಸಂಶ್ರುತ್ಯ  ಬ್ರಾಹ್ಮಣೇಭ್ಯೋ ವಿಶೇಷತಃ ||”
ಹೇ.. ಸೀತೇ, ಸಮಸ್ತ ಜೀವಿಗಳಿಗೂ ಅತ್ಯಂತ ಪ್ರಿಯವಾದ ಪ್ರಾಣವನ್ನಾದರೂ ಬಿಟ್ಟೇನು! ಪ್ರಾಣಕ್ಕಿಂತ ಪ್ರಿಯಳಾದ ನಿನ್ನನ್ನಾದರೂ ಬಿಟ್ಟೇನು! ನಿನಗಿಂತ ಪ್ರಿಯನಾದ ಲಕ್ಷ್ಮಣನನ್ನಾದರೂ ಬಿಟ್ಟೇನು! ಆದರೆ ಒಮ್ಮೆ ಕೈಗೊಂಡ ಪ್ರತಿಜ್ಞೆಯನ್ನೆಂದಿಗೂ ಬಿಡಲಾರೆ!!

               "ರಾಮ, ಗುಣಶ್ಲಾಘ್ಯನೂ, ತನ್ನನ್ನು ಬಿಟ್ಟು ಇನ್ನೊಬ್ಬಾಕೆಯನ್ನು ತಿರುಗಿಯೂ ನೋಡದಂತಹ ಸಂಯಮಿಯೂ, ಜಿತೇಂದ್ರಿಯನೂ, ಕಾರುಣ್ಯಮೂರ್ತಿಯೂ, ಧರ್ಮಾತ್ಮನೂ, ಗಾಢ ಪ್ರೀತಿ ತೋರಿಸುವನೂ, ತಂದೆತಾಯಿಗಳ ಸ್ಥಾನವನ್ನು ತುಂಬಿಕೊಡುವಂತಹವನೂ ಆಗಿದ್ದಾನೆ" ಎಂದು ರಾಮನ ಬಗೆಗೆ ಅನುಸೂಯದಳಲ್ಲಿ ಹೆಮ್ಮೆಯಿಂದ ಹೇಳುತ್ತಾಳೆ ಸೀತೆ. ಹೌದು ರಾಮನ ಪ್ರೀತಿ ಅಂತಹುದ್ದು. ಸ್ವತಃ ಸೀತೆಗೆ ಹೆರಳು ಹಾಕುತ್ತಿದ್ದ, ತಾನೇ ಬೇಟೆಯಾಡಿ ಬೇಯಿಸಿ ಸೀತೆಗೆ ತಿನ್ನಲು ಕೊಡುತ್ತಿದ್ದ, ಅವಳ ಕಣ್ಣಂಚಿನ ನೋಟದಿಂದಲೇ ಅವಳ ಬಯಕೆಯನ್ನು ಅರಿತು ಪೂರೈಸುತ್ತಿದ್ದ ಅವನು. ಅದಕ್ಕೇ ದಂಪತಿಗಳೆಂದರೆ ಸೀತಾರಾಮರಂತಿರಬೇಕು ಎನ್ನುವ ಬಯಕೆ ಈ ಸಮಾಜದಲ್ಲಿರೋದು.

                 ಆ ಕಾಲದಲ್ಲಿ ಸಮಾಜದ ಕೆಳ ವರ್ಗಕ್ಕೆ ಸೇರಿದವನಾದ ಗುಹನನ್ನು ಅಪ್ಪಿ ಆಲಂಗಿಸಿದ. ತನಗಾಗಿ ಕಾಯುತ್ತಿದ್ದ ಶಬರಿಯ ಆತಿಥ್ಯವನ್ನು ಎಂಜಲೆಂದು ಬಗೆಯದೇ ತಾಯಿ ಮಗುವಿಗೆ ಕೊಡುವ ಆಹಾರದಂತೆ ಸ್ವೀಕರಿಸಿದ. ದುಃಖದಲ್ಲಿ ಮನಸ್ಸನ್ನು ಒಳಗೆಳೆದುಕೊಂಡು ಕಲ್ಲಾಗಿದ್ದ ಪತಿತೆ ಅಹಲ್ಯೆಯನ್ನು ಉದ್ಧರಿಸಿ ಗೌತಮನಿಗೆ ಒಪ್ಪಿಸಿದ. ಋಷಿಮುನಿಗಳ ಸೇವೆಗೈದು, ಅವರಿಗಿದ್ದ ರಕ್ಕಸರ ಉಪಟಳವನ್ನು ಕೊನೆಗಾಣಿಸಿ ಅವರ ಪ್ರೀತಿಗೆ ಪಾತ್ರನಾದ. ರಾಮನ ಸ್ವಭಾವವೇ ಅವನನ್ನು ಎಲ್ಲರಿಗೂ ಹತ್ತಿರವಾಗಿಸಿತು. ಹಾಗಾಗಿಯೇ ವಾನರರೂ ಅವನ ಜೊತೆಯಾದರು. ರಾಕ್ಷಸರೂ ಅವನ ಬಗ್ಗೆ ಗೌರವ ತಾಳಿದರು.

                ವಾಲಿವಧೆ ಪ್ರಸಂಗವನ್ನು ಕುರಿತು ರಾಮನನ್ನು ದೂಷಿಸುವವರಿದ್ದಾರೆ. "ನನ್ನ ಸೊತ್ತೆಲ್ಲವೂ ನಿನ್ನವು. ನಿನ್ನದೆಲ್ಲವೂ ನನ್ನವೂ; ಪತ್ನಿಯರನ್ನೂ ಸೇರಿಸಿ!" ಎನ್ನುವ ಅಸಹ್ಯ ಒಪ್ಪಂದ ವಾಲಿ-ರಾವಣರ ನಡುವೆ ಆಗಿತ್ತು! ತಮ್ಮನ ಪತ್ನಿ ಮಗಳ ಸಮಾನ. ಅಂತಹ ತಮ್ಮನ ಪತ್ನಿಯನ್ನೇ ತನ್ನ ವಶ ಮಾಡಿಕೊಂಡು ತಮ್ಮನನ್ನು ಓಡಿಸಿದಂತಹ ವ್ಯಕ್ತಿಯನ್ನು ಯುಕ್ತಿಯಿಂದಲ್ಲದೆ ನೇರ ಗೆಲ್ಲಲಾಗುತ್ತದೆಯೇ? ಒಂದು ವೇಳೆ ರಾಮನದ್ದು ತಪ್ಪು ಎಂದಾಗಿದ್ದರೆ ತಾರೆ ವಾಲಿವಧೆಯ ಬಳಿಕ ಸುಗ್ರೀವನ ಕೈ ಹಿಡಿಯುತ್ತಿರಲಿಲ್ಲ. ಅಂಗದ ರಾಮದೂತನಾಗಿ ರಾವಣನ ಬಳಿ ಸಂಧಾನಕ್ಕೆ ಹೋಗುತ್ತಿರಲಿಲ್ಲ. ವಾಲಿಯ ಸಂಸಾರಕ್ಕೇ ಕಾಣದ ಮೋಸ, ಕೆಲವು ಪ್ರಭೃತಿಗಳಿಗೆ ಕಂಡಿತು!

                   ನಾಲ್ಕು ದಿಕ್ಕುಗಳಿಗೂ ತನ್ನ ವಾನರ ಸೇನೆಯನ್ನು ವಿಭಜಿಸಿ ಸೀತಾನ್ವೇಷಣೆಗೆ ಕಳುಹಿಸಿಕೊಟ್ಟ ಸುಗ್ರೀವ. ಆದರೆ ರಾಮ ಮುದ್ರೆಯುಂಗುರ ಕೊಟ್ಟದ್ದು ಹನುಮನಿಗೆ ಮಾತ್ರ. ಹನುಮ ದಕ್ಷಿಣ ದಿಕ್ಕಿಗೆ ಅಂಗದನ ನೇತೃತ್ವದಲ್ಲಿ ಹೊರಟವ. ಅಂತಹ ನಾಯಕ ಅಂಗದನಿಗೂ ಉಂಗುರ ಕೊಡಲಿಲ್ಲ. ಅಂದರೆ ರಾಮನಿಗೆ ವಿಶ್ವಾಸವಿದ್ದದ್ದು ಹನುಮನಲ್ಲಿ ಮಾತ್ರ. ಅದನ್ನು ಬಾಯಿ ಬಿಟ್ಟು ಹೇಳಲಿಲ್ಲ. ಉಳಿದವರು ತಮ್ಮ ಸಾಮರ್ಥ್ಯವನ್ನು ಕಡೆಗಣಿಸಿಬಿಟ್ಟನಲ್ಲಾ ಎನ್ನುವ ಅಸಮಾಧಾನ ಹೊಂದದ ರೀತಿ, ತಮ್ಮ ಸಾಮರ್ಥ್ಯ ಕಡಿಮೆ ಎಂದು ಕುಗ್ಗದ ರೀತಿ ಎಲ್ಲರೆದುರೇ ಹನುಮನಿಗೆ ಉಂಗುರ ಕೊಟ್ಟ. ಇದು ರಾಮನಲ್ಲಿದ್ದ ವ್ಯಕ್ತಿಯಲ್ಲಿದ್ದ ಸಾಮರ್ಥ್ಯವನ್ನು, ಯೋಗ್ಯತೆಯನ್ನು ಗುರುತಿಸುವ, ಹಾಗೆ ಮಾಡುವಾಗ ಉಳಿದವರೂ ಒಪ್ಪುವಂತೆ ಗುರುತಿಸುವ ಗುಣವನ್ನು ಎದ್ದು ತೋರಿಸುತ್ತದೆ. ಹನುಮನೂ ಹಾಗೆ, ನೋಡಿ ಬಾ ಎಂದರೆ ಶತ್ರುಪಾಳಯವನ್ನು ಸುಟ್ಟು ಬಂದವನವನು! ಒಂದೇ ದಿನದಲ್ಲಿ ಯೋಜನಗಟ್ಟಲೆಯ ಸಾಗರ ಹಾರಿ, ಅಶೋಕವನದಲ್ಲಿ ಶೋಕತಪ್ತಳಾದ ಸೀತೆಯನ್ನು ಕಂಡು, ಮುದ್ರೆಯುಂಗುರವಿತ್ತು, ಲಂಕೆಯನ್ನು ಸುಟ್ಟು, ರಾವಣನ ಎದೆಯಲ್ಲಿ ಭೀತಿ ಹುಟ್ಟಿಸಿ, ಚೂಡಾಮಣಿಯನ್ನು ತಂದು ರಾಮನ ಕೈಗಿತ್ತ ಕಾರ್ಯಶೀಲ ಹನುಮ. ಸ್ವಾಮಿ ನಿಷ್ಠೆಗೆ, ಭಕ್ತಿಗೆ ಮತ್ತೊಂದು ಹೆಸರು ಈ ಪವಮಾನ ಸುತ.

                ರಾವಣಾದಿಗಳನ್ನು ಸಂಹರಿಸಿ ಪುಷ್ಪಕವಿಮಾನದಲ್ಲಿ ಹಿಂದಕ್ಕೆ ಬರುವಾಗ ಭರದ್ವಾಜರ ಆಶ್ರಮದಲ್ಲಿ ಉಳಿದುಕೊಂಡು ತನ್ನ ಆಗಮನದ ವಿಚಾರವನ್ನು ಅರುಹಿ ಭರತನ ಮುಖದಲ್ಲಿ ಆಗುವ ಬದಲಾವಣೆಗಳನ್ನು ನನಗೆ ತಿಳಿಸು ಎಂದು ಹನುಮಂತನನ್ನು ಕಳುಹಿಸುತ್ತಾನೆ. ಹದಿನಾಲ್ಕು ವರ್ಷ ರಾಜ್ಯವಾಳಿ ಭರತನಲ್ಲೇನಾದರೂ ರಾಜ್ಯಸೂತ್ರಗಳನ್ನು ತಾನೇ ಉಳಿಸಿಕೊಳ್ಳುವ ಇಚ್ಛೆಯಿದ್ದರೆ ಅವನಿಂದ ಅದನ್ನು ಕಿತ್ತುಕೊಳ್ಳಲು ನಾನು ಇಷ್ಟಪಡುವುದಿಲ್ಲ; ಹೀಗೇ ಎಲ್ಲಾದರೂ ಹೊರಟು ಹೋಗುತ್ತೇನೆ ಎನ್ನುವುದು ಅವನ ಅಭಿಮತವಾಗಿತ್ತು.

               ಕುಡಿದ ಮತ್ತಿನಲ್ಲಿ ಆಡಿದ ಮಾತಾಗಿರಬಹುದು. ಆದರೆ ಅವನು ರಾಮರಾಜ್ಯದ ಪ್ರಜೆ. ದಂಡಿಸಬಹುದು; ಆದರೆ ಕಳಂಕ ಹೋದೀತೇ? ಆಡುವವರ ಬಾಯಿ ನಿಂತೀತೇ? ತನ್ನ ಪತ್ನಿಯ ಚಾರಿತ್ರ್ಯಕ್ಕಿಂತಲೂ ಸಿಂಹಾಸನದ ಗೌರವ ಮುಖ್ಯವಾಗುತ್ತದೆ. ರಾಜಧರ್ಮ; ಜೊತೆಗೆ ಪತ್ನಿಯ ವನಗಮನದ ಬಯಕೆ ನೆನಪಾಯಿತು. ಪ್ರಿಯ ಪತ್ನಿಯ ವಿಯೋಗ ಎನ್ನುವ ದುಃಖವನ್ನೂ ಹತ್ತಿಕ್ಕಿ ರಾಜಾರಾಮನಾದ. ಅಶೋಕ ವನವೂ ಅವಳ ಶೋಕವನ್ನು ಶಮನ ಮಾಡಲಿಲ್ಲ; ರಾಮರಾಜ್ಯವೂ! ಆದರೂ ಆಕೆ "ಕರುಣಾಳು ರಾಘವನೊಳು ತಪ್ಪಿಲ್ಲ" ಎಂದು ದುಃಖ ನುಂಗಿಕೊಂಡು ಮಹಾತ್ಮೆಯಾದಳು. ಕ್ರೌಂಚದ ಕಣ್ಣೀರಿನ ಕಥೆ ಬರೆದವನಿಗೆ ತನ್ನ ನಾಯಕಿಯ ಕಣ್ಣೀರ ಕಥೆ ಬರೆಯುವಾಗ ಕೈಕಟ್ಟಿರಬೇಕು! ಶೋಕವನ್ನೇ ಶ್ಲೋಕವನ್ನಾಗಿಸಿದವನಿಗೆ ಶೋಕತಪ್ತಳಾದ ತನ್ನ ಕಥಾ ನಾಯಕಿಯನ್ನು ಪ್ರತ್ಯಕ್ಷವಾಗಿ ಕಾಣುವಾಗ ಎದೆ ಬಿರಿಯದಿದ್ದೀತೇ?

                     ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಸೀತೆಯ ದುಃಖವನ್ನು ಬರೆದವರಿದ್ದಾರೆ. ಊರ್ಮಿಳೆಯ ಬವಣೆಯನ್ನು ವಿವರಿಸಿದವರಿದ್ದಾರೆ. ಅಹಲ್ಯೆಯ ಪರವಾಗಿ ಕಣ್ಣೀರು ಸುರಿಸಿದವರಿದ್ದಾರೆ! ಆದರೆ ರಾಮನ ದುಃಖವನ್ನು ಕಂಡವರಾರು? ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ! ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ!

ಮತಾಂತರಕ್ಕಿಂತ ಮರಣ ಲೇಸೆಂದ ಧರ್ಮವೀರ

ಮತಾಂತರಕ್ಕಿಂತ ಮರಣ ಲೇಸೆಂದ ಧರ್ಮವೀರ

        ಆ ಧೀರನಿಗೂ ಅವನ ಮಂತ್ರಿಗೂ ಕೋಡಂಗಿಯ ವೇಷ ಹಾಕಿಸಿ, ಟೋಪಿಗೆ ಗಂಟೆ ಕಟ್ಟಿ, ಅವಾಚ್ಯ ಶಬ್ಧಗಳಿಂದ ಕಿಚಾಯಿಸುತ್ತಾ, ಒಂಟೆಗಳ ಮೇಲೆ ಮೆರವಣಿಗೆ ಮಾಡಿಸಿ ಬಾದಷಹನ ಬಳಿ ಕರೆದೊಯ್ಯಲಾಯಿತು. ಬಾದಷಹ ನಿಧಿ-ನಿಕ್ಷೇಪಗಳನ್ನು ಎಲ್ಲಿ ಇಟ್ಟಿದ್ದೀಯಾ ಎಂದು ನಾನಾ ತಂತ್ರಗಳನ್ನು ಉಪಯೋಗಿಸಿ ಕೇಳಿದರೂ ಆತ ತುಟಿಪಿಟಿಕ್ಕೆನ್ನಲಿಲ್ಲ. ಪ್ರಾಣ ಉಳಿಯಬೇಕಿದ್ದರೆ ಇಸ್ಲಾಂ ಸ್ವೀಕರಿಸಬೇಕು ಎಂದು ಷರತ್ತು ಹಾಕಿದರೂ ಮಿಸುಕಾಡಲಿಲ್ಲ. ದಿನಾ ಬಗೆಬಗೆಯ ಚಿತ್ರಹಿಂಸೆ ಕೊಟ್ಟರೂ ಆತ ಆಸ್ಥಾನದಲ್ಲೇ ಬಾದಷಹಾನ ತಪ್ಪುಗಳನ್ನೆಲ್ಲಾ ಪಟ್ಟಿ ಮಾಡಿ ಗಟ್ಟಿ ಸ್ವರದಲ್ಲಿ ಹೇಳಿದನೇ ಹೊರತು ತಾನು ಬದಲಾಗಲಿಲ್ಲ. ಎರಡು ಸಾಲಲ್ಲಿ ಸೈನಿಕರನ್ನು ನಿಲ್ಲಿಸಿ ಅವರ ನಡುವೆ ಅವನನ್ನು ಎಳೆಸಿ ಅವರಿಂದ ಸಾಯ ಬಡಿದು ರಕ್ತ ಸೋರುತ್ತಿದ್ದರೂ ಅವನು ಬದಲಾಗಲಿಲ್ಲ. ಮಾತನಾಡಲು ಸಾಧ್ಯವಾಗದೇ ಹೋದಾಗ ಬರೆಯುವ ಸಾಮಗ್ರಿ ತರಿಸಿಕೊಂಡು ಬಾದಷಹಾ ನನಗೆ ತನ್ನ ಮಗಳನ್ನೇ ಲಂಚವಾಗಿ ಕೊಟ್ಟರೂ ಮತಾಂತರವಾಗಲಾರೆ ಎಂದು ಬರೆದ ಆ ಧೀರ. ಆ ರಾತ್ರಿ ಅವನ ಕಣ್ಣುಗಳನ್ನು ತಿವಿಯಲಾಯಿತು. ಮರುದಿನ ನಾಲಗೆ ಕತ್ತರಿಸಲಾಯಿತು. ಮುಸ್ಲಿಮರನ್ನು ಕೊಂದು, ಬಂಧಿಸಿ, ಮುಸ್ಲಿಮರ ನಗರಗಳನ್ನು ಕೊಳ್ಳೆ ಹೊಡೆದಿಕ್ಕಾಗಿ ಅವನನ್ನು ಕೊಲ್ಲಬೇಕೆಂದು ಖಾಜಿಗಳು ತೀರ್ಪು ನೀಡಿದರು. ಮಾರ್ಚ್ 11ರಂದು ಅವನ ಒಂದೊಂದೇ ಅಂಗಗಳನ್ನು ಕತ್ತರಿಸಿ ಆ ಮಾಂಸವನ್ನು ಅವನ ಎದುರೇ ನಾಯಿಗಳಿಗೆ ಹಾಕಿ ಕ್ರೂರವಾಗಿ ಹಿಂಸಿಸಿ ಕೊಲ್ಲಲಾಯಿತು. ಕತ್ತರಿಸಿದ್ದ ಅವರಿಬ್ಬರ ರುಂಡಗಳಲ್ಲಿ ಹುಲ್ಲು ತುಂಬಿ ಡೋಲು ಬಾರಿಸುತ್ತಾ, ಕಹಳೆಗಳನ್ನೂದುತ್ತಾ ದಖ್ಖನ್ನಿನ ಮುಖ್ಯ ನಗರಗಳಲ್ಲಿ ಪ್ರದರ್ಶಿಸಲಾಯಿತು. ಅಂತಹ ಹೇಯ ಚಿತ್ರಹಿಂಸೆಯನ್ನು ಅನುಭವಿಸಿದರೂ ಮತಾಂತರಕ್ಕಿಂತ ಮರಣವೇ ಮಹಾನವಮಿ ಎಂದ ಆ ಧೀರ ಮತ್ಯಾರಲ್ಲಾ ಹೈಂದವೀ ಸಾಮ್ರಾಜ್ಯದ ಜನಕ ಛತ್ರಪತಿ ಶಿವಾಜಿಯ ಧೀರ ಪುತ್ರ ಸಂಭಾಜಿ! ಸಿಂಹದ ಹೊಟ್ಟೆಯಲ್ಲಿ ನರಿ ಹುಟ್ಟಲು ಸಾಧ್ಯವೇ?

          ದುರಭ್ಯಾಸಗಳೇ ಮೈವೆತ್ತಂತೆ ವಿಲಾಸಿಯಾಗಿ ತಂದೆಯ ಮಾತಿಗೂ ಬಗ್ಗದ ಕಾರಣ ತಂದೆಯ ಆಕ್ರೋಶಕ್ಕೆ ಗುರಿಯಾಗಿ ನಿರ್ಬಂಧದಲ್ಲಿದ್ದ ಹುಡುಗಾಟಿಕೆಯ ಸಂಭಾಜಿ ಬದಲಾದದ್ದು ಕೂಡಾ ಒಂದು ಪವಾಡ! 1980ರಲ್ಲಿ ಚೈತ್ರ ಪೌರ್ಣಮಿಯ ಮಧ್ಯಾಹ್ನ ಅಳುತ್ತಿದ್ದ ತನ್ನ ಬಂಧು-ಬಳಗಕ್ಕೆ ತಾನೇ ಧೈರ್ಯ-ಸಮಾಧಾನ ಹೇಳಿ ಎಲ್ಲರನ್ನೂ ಹೊರಕ್ಕೆ ಕಳುಹಿಸಿ ಧ್ಯಾನಸ್ಥನಾಗಿ ಯೋಗಿಯಂತೆ  ಛತ್ರಪತಿ ಶಿವಾಜಿ ಇಹಯಾತ್ರೆಯನ್ನು ಮುಗಿಸಿದಾಗ ಅವನು ಕಷ್ಟಪಟ್ಟು ಮರುಸೃಷ್ಟಿಸಿದ್ದ ಹೈಂದವೀ ಸ್ವರಾಜ್ಯದಲ್ಲಿ ಕಂಡದ್ದು ಶೂನ್ಯತೆಯೇ. ಮಕ್ಕಳೇನೋ ಇಬ್ಬರಿದ್ದರು. ಒಬ್ಬನಂತೂ ದುರಭ್ಯಾಸಗಳ ದಾಸ, ದುರ್ಗುಣಿ. ಸಂಭಾಜಿ! ಅಪ್ಪನಿಗೇ ತಿರುಗಿ ಬಿದ್ದು ಶತ್ರುವಿನೊಂದಿಗೆ ಸೇರಿ ಸಮಸ್ಯೆಯೊಡ್ಡಿದವ. ಕೊನೆಗೇ ಶಿವಾಜಿಯ ಬುದ್ಧಿವಾದಕ್ಕೆ ಮಣಿದು ತಂದೆಯ ಬಳಿಗೆ ಬಂದಿದ್ದ. ಆದರೆ ಮರಳಿದ ಬಳಿಕವೂ ಬದಲಾಗದ ಕಾರಣ ಶಿವಾಜಿಯಿಂದಲೇ ಪನ್ಹಾಳಗಢದಲ್ಲಿ ನಿರ್ಬಂಧಿಸಲ್ಪಟ್ಟಿದ್ದ. ಅಂತಹವನನ್ನು ರಾಜಪಟ್ಟದಲ್ಲಿ ಕೂರಿಸಲು ಬುದ್ಧಿಯಿದ್ದ ಯಾವ ಮಂತ್ರಿ ಒಪ್ಪಿಯಾನು? ಇನ್ನೊಬ್ಬ ಮಗ ರಾಜಾರಾಮ ಹತ್ತರ ಎಳೆ ಹುಡುಗ. ಅವನು ಸ್ವತಂತ್ರನಾಗಿ ರಾಜ್ಯಭಾರ ಮಾಡುವುದಾದರೂ ಹೇಗೆ?  ಸೊಯಿರಾಬಾಯಿ ದಿಢೀರನೇ ಮುಂಚೂಣಿಗೆ ಬಂದು ಮಂತ್ರಿಗಳೀರ್ವರ ಸಹಾಯದಿಂದ ತನ್ನ ಮಗ ರಾಜಾರಾಮನನ್ನು ಪಟ್ಟಕ್ಕೇರಿಸಿದಳು. ಉಳಿದ ಮಂತ್ರಿಗಳಿಗೂ, ಸೈನ್ಯಾಧಿಕಾರಿಗಳಿಗೂ ಅದು ಇಷ್ಟವಾಗಲಿಲ್ಲ. ಇನ್ನೇನು ರಾಜ್ಯ ಅಂತಃಕಲಹಗಳಲ್ಲಿ ಮುಳುಗಿ ಸುಲಭವಾಗಿ ಶತ್ರುಗಳ ವಶವಾಗುತ್ತದೆ ಎನ್ನುವಾಗ ಅಚ್ಚರಿಯೊಂದು ಘಟಿಸಿತು. ಮಾತ್ರವಲ್ಲ, ಮಾತೃಭೂಮಿಯ ಮೇಲಿನ ಅತೀವ ಪ್ರೇಮ, ಕುಸಿಯುತ್ತಿದ್ದ ಧರ್ಮದ ಧಾರಣ, ಚಿತ್ತಶುದ್ಧಿ-ದೀಕ್ಷಾಬದ್ಧನಾಗಿ ಹಿಂದುತ್ವದ ತೋರಣ ಕಟ್ಟಿದ ಶಿವಾಜಿಯ ಬಲಿಷ್ಟ ಸಾಮ್ರಾಜ್ಯ ಇನ್ನೇನು ಔರಂಗಜೇಬನೆಂಬ ಮತಾಂಧನಿಗೆ ಸುಲಭ ತುತ್ತಾಗಬಹುದು ಎಂದೆಣಿಸಿದವರೆಲ್ಲಾ ಕತ್ತು ಮೇಲೆತ್ತಿ ಸದಾ ನೋಡುವಂತೆ ಮಾಡಿತು. ಆಂತರಿಕ ಬಿಕ್ಕಟ್ಟುಗಳನ್ನೆಲ್ಲಾ ನಿವಾಳಿಸಿಕೊಂಡು, ಮಗದೊಮ್ಮೆ ಪುಟಿದೆದ್ದ ಶಿವಶಕ್ತಿ, ಇನ್ನೇನು ಮರಾಠರ ಆಟವನ್ನು ನಿಲ್ಲಿಸಬಹುದೆಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಮೊಘಲ್ ಸಾಮ್ರಾಜ್ಯದ ಮುಗಿಲು ಮುಚ್ಚಿ ಹೆಗಲು ಸೆಟೆಸಿ ವಿಜೃಂಭಿಸಿತು. ಶಿವಾಜಿ ಉರಿಸಿದ ದೀಪ ಒಬ್ಬನ ಹಿಂದೆ ಒಬ್ಬ ನಾಯಕರಂತೆ ಪ್ರತಿಯೊಬ್ಬರೂ ಕಾಲಕಾಲಕ್ಕೆ ಜವಾಬ್ದಾರಿ ವಹಿಸಿಕೊಂಡು ಮುಂದೆ ಸ್ವಾತಂತ್ರ್ಯ ಸಂಗ್ರಾಮದವರೆಗೂ, ಆ ಮೇಲೂ ಪ್ರತಿಯೊಬ್ಬ ಪ್ರಜೆಯಲ್ಲೂ ಆವಾಹಿಸಿ ನಿರಂತರ ಪ್ರವಹಿಸಿ ಹಲಕೆಲವು ಕಾಲ ಶತ್ರುಗಳ ಜಂಘಾಬಲವನ್ನೇ ಉಡುಗಿಸಿ ಮಹಾರಾಷ್ಟ್ರದ ಕಥನವನ್ನು ಸುವರ್ಣಾಕ್ಷರಗಳಲ್ಲಿ ಬರೆಸಿತು.

               ಹೌದು, ಯಾವ ಸಂಭಾಜಿ ಶಿವಾಜಿಯಂತಹ ಕರ್ಮಯೋಗಿಗೇ ಸಮಸ್ಯೆಯಾಗಿ ಕಾಡಿದ್ದನೋ, ಅಂತಹ ವಿಲಾಸಿ ತಂದೆಯ ಮರಣದ ಸುದ್ದಿ ಕೇಳಿದೊಡನೆ ಬದಲಾದ. ಸ್ವತಃ ಶಿವಾಜಿಯೇ ಅವನಲ್ಲಿ ಆವಾಹನೆಯಾದನೋ ಎನ್ನುವಂತೆ ಅಪ್ರತಿಮ ರಾಜಕೀಯ ಚಾಣಾಕ್ಷತೆ ಮೆರೆದ. ರಾಜಪ್ರಮುಖರ ಜೊತೆ ರಾಯಭಾರ ನಡೆಸಿ, ಎಲ್ಲರನ್ನೂ ತನ್ನ ಕಡೆಗೆ ಒಲಿಸಿಕೊಂಡು ಪನ್ಹಾಳವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಮರಾಠ ಹಾಗೂ ಕೊಂಕಣಗಳ ದಕ್ಷಿಣ ಸೀಮೆಯನ್ನು ವಶಪಡಿಸಿಕೊಂಡು ಐದು ಸಾವಿರ ಸೈನಿಕರೊಡನೆ ಹೊರಟ ಆತ ರಾಯಗಢ ಸೇರಿದಾಗ ಸೈನಿಕರ ಸಂಖ್ಯೆ ಇಪ್ಪತ್ತು ಸಾವಿರಕ್ಕೆ ಮುಟ್ಟಿತ್ತು. ಯಾವುದೇ ಪ್ರತಿರೋಧವಿಲ್ಲದೆ ಸಿಂಹಾಸನಾರೂಢನಾದ ಆತ ಎಲ್ಲ ಒಳಪಿತೂರಿಗಳನ್ನು ಸುಲಭವಾಗಿ ಹತ್ತಿಕ್ಕಿದ. ಸುಖಲೋಲುಪನಾಗಿ ಮದಿರೆ-ಮಾನಿನಿಯರ ದಾಸನಾಗಿದ್ದರೂ, ಅನುಮಾನ ಬಂದವರನ್ನೆಲ್ಲಾ ಕ್ರೂರವಾಗಿ ಶಿಕ್ಷಿಸಿದರೂ, ಕವಿಕುಲೇಶನೊಬ್ಬನನ್ನೇ ಆಪ್ತ ಸಚಿವನನ್ನಾಗಿಸಿ ಮಿಕ್ಕವರನ್ನೆಲ್ಲಾ ದೂರವಿಟ್ಟರೂ ಸಮರ್ಥವಾಗಿ ರಾಜ್ಯಭಾರ ಮಾಡಿದ. ತನ್ನ ವಿರುದ್ಧವೇ ದಂಗೆಯೆದ್ದಿದ್ದ ಮಗ ಅಕ್ಬರನಿಗೆ ಆಶ್ರಯ ನೀಡಿದನೆನ್ನುವ ನೆಪ ಹಿಡಿದು ಸ್ವಯಂ ತಾನೇ ಸರ್ವಶಕ್ತಿಗಳೊಂದಿಗೆ ಯುದ್ಧಕ್ಕೆ ಬಂದರೂ ಔರಂಗಜೇಬನಿಗೆ ಸಂಭಾಜಿಯನ್ನು ಗೆಲ್ಲಲಾಗಲಿಲ್ಲ. "ದುಷ್ಟ ತಂದೆಗೆ ಹುಟ್ಟಿದ ದುರುಳ ಮಗ" ಸಂಭಾಜಿಯ ಸೊಕ್ಕು ಮುರಿಯುತ್ತೇನೆಂದು 1681ರಲ್ಲಿ ಹೊರಟು ಬಂದ ಔರಂಗಜೇಬ ಕಾಲು ಶತಮಾನಕ್ಕೂ ಹೆಚ್ಚು ಕಾಲ ಗೆಲ್ಲಲಾರದ ಯುದ್ಧದಲ್ಲಿ ಕಳೆದು ರಾಜಧಾನಿ ಸೇರದೆ ಹತಾಷೆ, ನಿರಾಶೆಗಳಿಂದ ಅಲ್ಲಿಯೇ ಅಸುನೀಗಬೇಕಾಗಿ ಬಂತೆಂದರೆ ಸಂಭಾಜಿಯ ಪರಾಕ್ರಮವನ್ನು ಊಹಿಸಬಹುದು.

           ಹಿಂದೊಮ್ಮೆ ತನ್ನ ತಂದೆಯ ಯೋಗ್ಯತೆ, ಧ್ಯೇಯ, ದೂರದೃಷ್ಟಿಗಳನ್ನರಿಯದೆ ಮೊಘಲರ ಪಕ್ಷವನ್ನಾಂತು ಸನಾತನ ಧರ್ಮವನ್ನೇ ಮರೆತಿದ್ದ ಸಂಭಾಜಿ ಛತ್ರಪತಿಯಾಗುತ್ತಿದ್ದಂತೆ ಯುದ್ಧ ನಿರ್ವಹಣೆಯಲ್ಲಿ ತನ್ನ ತಂದೆಯನ್ನೇ ಆವಾಹಿಸಿಕೊಂಡ. ಶತ್ರುವಿನ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳುವುದರಲ್ಲಿ ಅಪ್ರತಿಮನಾದ ಔರಂಗಜೇಬನಂತಹವನೇ ಸಂಭಾಜಿಯನ್ನು ಗೆಲ್ಲಲಾರದಾದ. ನಾಲ್ಕು ವರ್ಷ ನಾನಾ ವಿಧವಾಗಿ ಪ್ರಯತ್ನಿಸಿದರೂ ಸಂಭಾಜಿಯನ್ನು ಗೆಲ್ಲಲು ಅಸಾಧ್ಯವಾದಾಗ ತನ್ನ ಕೊನೆಯ ತಂತ್ರ ಹೂಡಲು ಮುಂದಾದ ಮೊಘಲ್ ದೊರೆ. ಔರಂಗಜೇಬನ ಭೀತಿಯಿಂದ ತಮ್ಮನ್ನು ಉಳಿಸಿಕೊಳ್ಳಲೋಸುಗ ಮರಾಠರಿಂದ ರಕ್ಷಣೆ ಪಡೆಯುತ್ತಾ ಅವರಿಗೆ ಭಾರೀ ಕಪ್ಪವನ್ನು ಸಲ್ಲಿಸುತ್ತಿದ್ದ ಗೋಲ್ಕೊಂಡಾ ಹಾಗೂ ಬಿಜಾಪುರಗಳನ್ನು ವಶಪಡಿಸಿಕೊಂಡರೆ ಸಂಭಾಜಿಯನ್ನು ಆರ್ಥಿಕವಾಗಿ ಕುಗ್ಗಿಸಬಹುದು ಎಂದು ಅವನ ಹಂಚಿಕೆಯಾಗಿತ್ತು. ಆ ಎರಡೂ ರಾಜ್ಯಗಳು ಔರಂಗಜೇಬನಿಗೆ ಸುಲಭವಾಗಿ ವಶವಾದವು. ಆದರೆ ಔರಂಗಜೇಬನ ಈ ಉಪಾಯ ಅವನಿಗೇ ತಿರುವು ಮುರುವಾಯಿತು. ಆ ಎರಡೂ ರಾಜ್ಯಗಳ ಸೈನಿಕರು ಜೀವನೋಪಾಯಕ್ಕಾಗಿ ಮರಾಠರ ತೆಕ್ಕೆಗೇ ಬಂದರು. ಇದರಿಂದ ಸಂಭಾಜಿಯ ಸೈನ್ಯ ವೃದ್ಧಿಯಾಗಿ ಔರಂಗಜೇಬ ಜೀವನಪರ್ಯಂತ ಪರಿತಪಿಸುವಂತಾಯಿತು.

            ಶಿವಾಜಿಯಂತೆ ತಾನಾಳಿದ ಒಂಬತ್ತು ವರ್ಷಗಳ ಪರ್ಯಂತ ಸಂಭಾಜಿಗೆ ಅಕ್ಷರಶಃ ರಣಭೂಮಿಯೇ ಮನೆಯಾಗಿತ್ತು. ಮೊಘಲರು ಒಂದು ಕಡೆಯಾದರೆ ಇನ್ನೊಂದೆಡೆ ಜಂಜೀರಾದ ಸಿದ್ದಿಗಳು; ಆಂಗ್ಲರು ಹಾಗೂ ಪೋರ್ಚುಗೀಸರು ಇನ್ನುಳಿದ ಕಡೆ; ಹೀಗೆ ಸಂಭಾಜಿಯನ್ನು ಕಾಡುತ್ತಲೇ ಇದ್ದರು. ಇವರನ್ನೆಲ್ಲಾ ತನ್ನ ಪ್ರತಾಪದಿಂದಲೇ ನಿವಾರಿಸಿಕೊಂಡರೂ ತನ್ನೊಳಗಿನ ಶತ್ರುಗಳನ್ನು ನಿಗ್ರಹಿಸಲು ಕೊನೆಗೂ ಸಂಭಾಜಿಗೆ ಸಾಧ್ಯವಾಗಲೇ ಇಲ್ಲ. ಐದು ಲಕ್ಷ ಯೋಧರ ಬೃಹತ್ ಸೈನ್ಯವನ್ನು ಸಂಘಟಿಸಿ ಸ್ವತಃ ತಾನೇ ಸಾರಥ್ಯ ವಹಿಸಿ ಒಂಬತ್ತು ವರ್ಷ ಹೋರಾಡಿದರೂ ಔರಂಗಜೇಬನೇ ಸಾಧಿಸಲಾಗದ ಕಾರ್ಯವೊಂದು ವಿಶ್ವಾಸಘಾತಕರಿಂದ ಒಂದೇ ಕ್ಷಣದಲ್ಲಿ ಆಗಿ ಹೋಯಿತು. ಸಂಭಾಜಿಯ ಭಾವ ಗಜೋಜಿ ಷಿರ್ಕೆ ಮೊಗಲ್ ಸರ್ದಾರ್ ಮುಕರಾಬ್ ಖಾನಿಗೆ ಸ್ವಯಂ ದಾರಿ ತೋರಿಸಿ ದುರ್ಭೇದ್ಯವಾಗಿದ್ದ ಸಂಗಮೇಶ್ವರಕ್ಕೆ ಕರೆದುಕೊಂಡು ಬಂದು ಸಂಭಾಜಿಯ ಅಂತ್ಯಕ್ಕೆ ಕಾರಣನಾದ. ಹೀಗೆ ಸಂಭಾಜಿ 1689ರಲ್ಲಿ ಸಂಗಮೇಶ್ವರವೆಂಬ ದುರ್ಭೇದ್ಯ ತಾಣದಲ್ಲಿ ಮೊಘಲರ ಕೈಗೆ ಸಿಕ್ಕಿಬಿದ್ದದ್ದು ಭಾರತ ವಿರೋಧಿ ಚರಿತ್ರೆಕಾರರು ಆರೋಪಿಸಿರುವಂತೆ ಸಂಗಮೇಶ್ವರದಲ್ಲಿ ಕುಡಿದು, ಕುಣಿದು ವಿಲಾಸದಲ್ಲಿ ಮೈಮರೆತಿದ್ದಾಗಲಲ್ಲ; ಸ್ವಂತದವರ ವಿಶ್ವಾಸದ್ರೋಹದಿಂದಾಗಿ!

         ಆ ನಂತರ ನಡೆದದ್ದು ಪೈಶಾಚಿಕ ಕೃತ್ಯ. ವಿಧವಿಧವಾದ ಚಿತ್ರಹಿಂಸೆ ಕೊಟ್ಟಾಗಲೂ ಮತಾಂತರವಾಗಲು ಒಪ್ಪದ ಸಂಭಾಜಿಯನ್ನು ಅಮಾನುಷವಾಗಿ ಅಂಗಾಂಗಗಳನ್ನು ಕತ್ತರಿಸಿ ನರಿನಾಯಿಗಳಿಗೆ ಹಾಕಿ ಕೊಲ್ಲಲಾಯಿತು. ಸಂಭಾಜಿಯ ಆತ್ಮಾರ್ಪಣೆಯ ವಿಚಾರ ತಿಳಿಯುತ್ತಲೇ ಮರಾಠರ ಎದೆಯಲ್ಲಿ ಸೇಡಿನ ಜ್ವಾಲೆ ಧಗಧಗನೇ ಉರಿಯಲಾರಂಭಿಸಿತು. ಸಿಂಹಾಸನಕ್ಕಾಗಿ ಯಾರೂ ಜಗಳವಾಡಲಿಲ್ಲ. ಸಂಭಾಜಿಯನ್ನು ಕೊಂದು ರಾಯಗಢದ ಮೇಲೆ ಆಕ್ರಮಣ ಮಾಡಲು ಔರಂಗಜೇಬ ಬರುತ್ತಿದ್ದಾನೆ ಎಂದು ತಿಳಿದ ಕೂಡಲೇ ಸಂಭಾಜಿಯ ಧರ್ಮಪತ್ನಿ ಏಸೂಬಾಯಿ ಏಳು ವರ್ಷದ ತನ್ನ ಮಗು ಸಾಹುವಿಗೆ ಪಟ್ಟಕಟ್ಟುವುದನ್ನು ಬಿಟ್ಟು ಸ್ವಇಚ್ಛೆಯಿಂದ ಮೈದುನ ರಾಜಾರಾಮನಿಗೆ ಪಟ್ಟ ಕಟ್ಟಿದಳು. ಒಂದು ವೇಳೆ ಮೊಘಲರ ಸೈನ್ಯದೆದುರು ಮರಾಠಾ ಸೇನೆ ಸೋತರೆ ರಾಜನಿಲ್ಲದೆ ರಾಜ್ಯ ಅನಾಥವಾಗುತ್ತದೆಯೆಂದು ತಿಳಿದು ಮಿತ ಪರಿವಾರದೊಂದಿಗೆ ರಾಜಾರಾಮನನ್ನು ಜಿಂಜೀ ಕೋಟೆಗೆ ಕಳುಹಿಸಿದಳು. ರಾಜ ಪ್ರಮುಖರನ್ನೆಲ್ಲಾ ವಿಂಗಡಿಸಿ ಒಬ್ಬೊಬ್ಬರು ಒಂದೊಂದು ಕೋಟೆಯಲ್ಲಿ ತಂಗುವಂತೆ ಮಾಡಿದಳು. ಸ್ವತಃ ತಾನೇ ತನ್ನ ಮಗ ಹಾಗೂ ಅಂತಃಪುರಸ್ತ್ರೀಯರೊಂದಿಗೆ ಮೊಘಲರು ದಾಳಿ ಮಾಡಿದಾಗ ಬಂಧಿಯಾಗಿಹೋದಳು. ಇನ್ನೇನು ಮರಾಠರ ಕಥೆ ಮುಗಿಯಿತೆಂದು ಕನಸಿನ ಗೋಪುರ ಕಟ್ಟುತ್ತಿದ್ದ ಔರಂಗಜೇಬನಿಗೆ ಕೊನೆಗೂ ದೆಹಲಿಗೆ ಹಿಂತಿರುಗಲಾಗಲೇ ಇಲ್ಲ. ಎಂಟು ವರ್ಷಗಳ ಸುದೀರ್ಘ ಹೋರಾಟದ ಬಳಿಕ ಜಿಂಜೀಯನ್ನು ವಶಪಡಿಸಿಕೊಂಡನಾದರೂ ರಾಜಾರಾಮನನ್ನು ಬಂಧಿಸಲಾಗಲಿಲ್ಲ. ಅವನು ಸತಾರಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮೊಘಲರನ್ನು ಕಾಡಿದ. ಉಳಿದ ಕಡೆ ಶಿವಾಜಿ ಕಟ್ಟಿದ್ದ ಸಮರ್ಥ ಸರ್ದಾರ ಪಡೆ ಮೊಗಲರನ್ನು ಅಟಕಾಯಿಸಿ ಬಡಿಯಿತು. ಬದುಕಿದ್ದಾಗಿಗಿಂತಲೂ ಹೆಚ್ಚಾಗಿ ಮರಣಿಸಿದ ಮೇಲೆಯೇ ಸಂಭಾಜಿ ಮರಾಠರನ್ನು ಸಾವಿರ ಪಟ್ಟು ಹೆಚ್ಚು ಪ್ರೇರೇಪಿಸಿದ. ಒಂದೊಂದು ಮರಾಠಮನೆಯೂ ಒಂದೊಂದು ಕೋಟೆಯಾಯಿತು. ಪ್ರತಿಯೊಬ್ಬ ಮರಾಠನೂ ಓರ್ವ ಸೈನಿಕನಾದ. ಶಿವಾಜಿಯಿಂದ ತರಬೇತಿ ಹೊಂದಿ, ಸಂಭಾಜಿಯ ಬಲಗೈ ಬಂಟನಾಗಿದ್ದ ಸಂತಾಜಿ ಘೋರ್ಪಡೆ, ಧನಾಜಿ ಯಾದವನ ಜೊತೆ ಸೇರಿಕೊಂಡು ಸೇನಾಧಿಪತಿಯಾಗಿ ಮೊಘಲ್ ಸೇನೆಗಳನ್ನು ಮೃತ್ಯುವಿನಂತೆ ಬೆನ್ನು ಹತ್ತಿದ. ಗೆರಿಲ್ಲಾ ಯುದ್ಧದಲ್ಲಿ ಪರಿಣತನಾಗಿದ್ದ ಸಂತಾಜಿಯ ಹೆಸರು ಕೇಳಿದೊಡನೆ ಮೊಘಲ್ ಸೈನಿಕರು ಬಿಡಿ ಸರದಾರರುಗಳೇ ಗಡಗಡ ನಡುಗುತ್ತಿದ್ದರು. "ಸಂತಾಜಿಯನ್ನು ಎದುರಿಸಿದ ಪ್ರತಿಯೊಬ್ಬ ಸಾವಿಗೀಡಾಗುತ್ತಿದ್ದ ಅಥವಾ ಸೆರೆಯಾಗುತ್ತಿದ್ದ. ಒಂದೊಮ್ಮೆ ತಪ್ಪಿಸಿಕೊಂಡರೂ ಅದು ಎಲ್ಲವನ್ನೂ ಕಳೆದುಕೊಂಡು ಮಾತ್ರ. ಆ ನೀಚ ನಾಯಿಯನ್ನು ಎದುರಿಸಲು ಚಕ್ರವರ್ತಿಯ ಸೈನ್ಯದ ಯಾವನಿಗೂ ಧೈರ್ಯವಿರಲಿಲ್ಲ" ಎಂದು ಔರಂಗಜೇಬನ ಸಮಕಾಲೀನ ಪರ್ಷಿಯನ್ ಚರಿತ್ರಕಾರ ಖಾಫಿಖಾನ್ ಬರೆದಿದ್ದಾನೆ. ಕುದುರೆಗಳು ನೀರು ಕುಡಿಯಲಿಲ್ಲವೆಂದರೆ ಅವಕ್ಕೆ ನೀರಿನಲ್ಲಿ ಸಂತಾಜಿ, ಧನಾಜಿಯರ ಪ್ರತಿಬಿಂಬಗಳು ಕಂಡವೇನೋ ಎಂದು ಭಯಪಡುತ್ತಿದ್ದರಂತೆ. ಸಂತಾ ತನ್ನಿಂದ ಹದಿನೆಂಟು ಮೈಲು ದೂರದಲ್ಲಿದ್ದಾನೆ ಎಂಬ ಸುದ್ದಿ ಕೇಳಿದ ತಕ್ಷಣ ಬೆದರಿದ ಔರಂಗಜೇಬನ ಮುಖ್ಯ ಸೇನಾಧಿಪತಿ ಫಿರುಜ್ ಜಂಗ್ ಅವನನ್ನು ಎದುರಿಸಲು ಹೋಗುವುದಾಗಿ ಸುಳ್ಳು ಘೋಷಣೆ ಹಾಕಿ ಬಿಜಾಪುರ ದಾರಿ ಹಿಡಿಯುತ್ತಿದ್ದನಂತೆ. ಔರಂಗಜೇಬನ ಸೇನೆಯೇನಾದರೂ ತಪ್ಪಿ ಯಾವುದಾದರೂ ಕೋಟೆಯನ್ನು ವಶಪಡಿಸಿಕೊಂಡರೆ ಮೂರೇ ದಿನಗಳಲ್ಲಿ ಮೊಘಲರ ಎಲ್ಲಾ ಸಂಪತ್ತನ್ನು ವಶಪಡಿಸಿಕೊಂಡು ಕೋಟೆಗಳನ್ನು ಮರಾಠ ಸೇನೆ ವಶಪಡಿಸಿಕೊಳ್ಳುತ್ತಿತ್ತು. ಹೀಗೆ ಒಂದು ಹಂತದಲ್ಲಂತೂ ಔರಂಗಜೇಬನ ಸೈನ್ಯವನ್ನು ಧೂಳೀಪಟ ಮಾಡಿ ಅವನ ಮಗಳನ್ನೇ ಬಂಧಿಸಿಬಿಟ್ಟಿತ್ತು ಮರಾಠ ಸೇನೆ.

             ಮುಂದೆ ರಾಜಾರಾಮನ ಪತ್ನಿ ತಾರಾಬಾಯಿಯ ಆಡಳಿತಾವಧಿಯಲ್ಲಂತೂ ದಕ್ಷಿಣ ಮಾತ್ರವಲ್ಲದೆ ಉತ್ತರದ ಹಲವು ಪ್ರಾಂತ್ಯಗಳಲ್ಲಿ ಮರಾಠರದ್ದೇ ಮೇಲುಗೈಯಾಯಿತು. ಈಗ ಅವರು ಕಣ್ಣುಮುಚ್ಚಾಲೆಯ ಗೆರಿಲ್ಲಾ ಯುದ್ಧ ತಂತ್ರವನ್ನು ತ್ಯಜಿಸಿ ಮೊಘಲರೊಡನೆ ನೇರ ಯುದ್ಧಕ್ಕಿಳಿದಿದ್ದರು. ಮೊಘಲರ ಆಡಳಿತ ಪ್ರದೇಶಗಳಲ್ಲಿ ಅವರಿದಲೇ ತೆರಿಗೆ ವಸೂಲಿ ಮಾಡತೊಡಗಿದರು. ಮೊಘಲರ ಸಾಮಗ್ರಿ ಸಾಗಿಸುವ ವಾಹನಗಳನ್ನೇ ನೇರಾನೇರ ದಾಳಿಗಿಳಿದು ವಶಪಡಿಸಿಕೊಳ್ಳುತ್ತಿದ್ದರು. ಔರಂಗಜೇಬನ ಸ್ವಂತ ಪಾಳಯಕ್ಕೇ ನುಗ್ಗಿ ಧಾನ್ಯದ ಮಾರುಕಟ್ಟೆಯನ್ನೇ ಕೊಳ್ಳೆ ಹೊಡೆಯುತ್ತಿದ್ದರು. ಚತುರಂಗ ಬಲದೊಂದಿಗೆ ಮೊಘಲರನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ತಾವೇ ಚಕ್ರವರ್ತಿಗಳೆಂಬಂತೆ ದಮ್ಡೆತ್ತಿ ಹೋಗುತ್ತಿದ್ದರು ಎಂದಿದ್ದಾನೆ ವಿದೇಶೀ ಯಾತ್ರಿಕ ಮನುಸ್ಸೀ. ಮರಾಠ ಬೆಟ್ಟದ ಇಲಿಗಳನ್ನು ನಿರಾಯಾಸವಾಗಿ ಬಡಿದಟ್ಟಿ ಕೊಲ್ಲುವೆನೆಂದು 1681ರಲ್ಲಿ ಲಕ್ಷಗಟ್ಟಲೆ ಸೈನ್ಯದೊಂದಿಗೆ ಸಂಭಾಜಿಯನ್ನೆದುರಿಸಲು ಬಂದ ಔರಂಗಜೇಬನಿಗೆ ಇಪ್ಪತ್ತೈದು ವರ್ಷಗಳಾದರೂ ಗೆಲುವು ಮರೀಚಿಕೆಯಾಯಿತು. ಒಬ್ಬ ಸಂಭಾಜಿಯನ್ನು ಕೊಂದೊಡನೆ ಮತ್ತೊಬ್ಬ ಸಂಭಾಜಿ ಅವತರಿಸಿದ. ಅವನು ಹೋದೊಡೆ ಮಗದೊಬ್ಬ...ಕೊನೆಕೊನೆಗೆ ಇಡೀ ಮಹಾರಾಷ್ಟ್ರದಲ್ಲಿ ಅವನಿಗೆ ಸಂಭಾಜೀಯೇ ಕಾಣುವಂತಾಯಿತು. ಕಂಸನಿಗೇ ಕೊನೆಗಾಲದಲ್ಲಿ ಎಲ್ಲೆಲ್ಲೂ ಕೃಷ್ಣರೇ ಕಂಡ ಹಾಗೆ. ಮರಾಠರ ಪ್ರಜಾಯುದ್ಧವಂತೂ ಅವನಿಗೆ ಹುಚ್ಚು ಹಿಡಿಸಿದಂತಾಯ್ತು. ಕೊನೆಕೊನೆಗೇ ತನ್ನ ಖಜಾನೆಯನ್ನೂ ಖಾಲಿ ಮಾಡಿಕೊಂಡು, ಸೈನಿಕರಿಗೆ ವೇತನ ಕೊಡಲೂ ಹಣವಿಲ್ಲದೆ, ಹತಾಷೆ, ನಿರಾಶೆಗಳಿಂದ ಜರ್ಝರಿತನಾಗಿ ತನ್ನ ಮತಾಂಧತೆಯ ಜೀವನವನ್ನು ಕೊನೆಗೊಳಿಸಿದ. ಸುದೀರ್ಘ ಜೀವನದಲ್ಲಿ ಅಸಂಖ್ಯಾತ ಸೇನೆಯೊಂದಿಗೆ ಹಲವರೊಂದಿಗೆ ಯುದ್ಧ ಮಾಡಿ ಗೆದ್ದಿದ್ದರೂ ಅವನಿಗೆ ಮರಾಠರನ್ನು ಗೆಲ್ಲಲಾಗಲೇ ಇಲ್ಲ. ಹಿಂದೂಗಳ ಮೇಲೆ ಜಿಹಾದ್ ಘೋಷಿಸಿದ್ದು ಅವನಿಗೇ ಮುಳುವಾಯಿತು.  ಹಿಂದೂಗಳು ಶಿವಾಜಿಯ ನೇತೃತ್ವದಲ್ಲಿ ಧರ್ಮಶ್ರದ್ಧೆ, ಸ್ವಾತಂತ್ರ್ಯಾಪೇಕ್ಷೆಯನ್ನು ಉದ್ದೀಪಿಸಿಕೊಂಡು ಅವನನ್ನು ನಿದ್ದೆ ಇಲ್ಲದಂತೆ ಮಾಡಿದರು. ಸಂಭಾಜಿಯಂತೂ ಜೀವಂತವಿದ್ದಾಗ ಮಾತ್ರವಲ್ಲದೆ, ಮರಣಿಸಿದ ಬಳಿಕವೂ ಮರಾಠರನ್ನೆಲ್ಲಾ ಆವರಿಸಿಕೊಂಡು ಅವನನ್ನು ಅಟಕಾಯಿಸಿ ಬಡಿದ. ಇದು ಚರಿತ್ರೆಕಾರರು ಜನರ ಮನಸ್ಸಿನಿಂದ ಮರೆಯಿಸಲು ಯತ್ನಿಸಿದ ಧರ್ಮವೀರನೊಬ್ಬನ ನೈಜ ಕಥೆ!

ಬುಧವಾರ, ಮಾರ್ಚ್ 7, 2018

ಪುನರ್ ಪಲ್ಲವಿಸಿದೆ ಸರ್ವ ಜ್ಞಾನ ಸಿರಿಯ ಅಂತಃಸತ್ವದ ಶೋಧ

ಪುನರ್ ಪಲ್ಲವಿಸಿದೆ ಸರ್ವ ಜ್ಞಾನ ಸಿರಿಯ ಅಂತಃಸತ್ವದ ಶೋಧ


              ನಿತ್ಯ ಜೀವನದಲ್ಲಿ ಅದೆಷ್ಟು ಮಾಹಿತಿಯನ್ನು ಪಡೆಯುತ್ತೇವೆ. ಈಗಂತೂ ಅಂಗೈಯಗಲದ ವಸ್ತು ಇಡೀ ಜಗತ್ತನ್ನೇ ಬೆಸೆದು ದಶ ದಿಕ್ಕುಗಳಿಂದಲೂ ಮಾಹಿತಿಯ ಪ್ರವಾಹವನ್ನೇ ಹರಿಸುತ್ತದೆ. ದಿನದಿಂದ ದಿನಕ್ಕೆ ಮಾಹಿತಿಯ ಪ್ರಮಾಣ ಬೆಳೆಯುತ್ತಲೇ ಸಾಗುತ್ತಿದೆ. ಈ ಅಪಾರ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಲು ಬೇಕಾದ ಕಣಜವಾದರೂ ಎಷ್ಟು ದೊಡ್ಡದಿರಬೇಕು? ಅದರಲ್ಲೂ ವೈಯುಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸಿಕೊಳ್ಳಲು, ತಂತ್ರಜ್ಞಾನವನ್ನು ವಿನಾಶಕ್ಕೇ ಬಳಸಿಕೊಳ್ಳುವ ಮನಃಸ್ಥಿತಿಯವರಿಂದ ಆ ಮಾಹಿತಿಯನ್ನು ಗೂಢವಾಗಿರಿಸಲು ಎಷ್ಟು ಪರದಾಡುತ್ತೇವೆ! ಸದ್ಯಕ್ಕಂತೂ ಈ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ಇರಿಸಬಲ್ಲಂತಹ ಸಂಗ್ರಹಾಗಾರವನ್ನು ನಿರ್ಮಿಸುವುದು, ಅದನ್ನು ಕಾಪಾಡಿಕೊಳ್ಳುವುದು ದುಃಸಾಧ್ಯವೇ ಸರಿ. ಆದರೆ ಈ ಎಲ್ಲ ಮಾಹಿತಿಯೂ ಒಂದೇ ಕಡೆ ಒಂದು ಪುಟ್ಟ ಕೋಷ್ಟಕದಲ್ಲಿ "ಗುಪ್ತವಾಗಿ ಸಂಕೇತ ರೂಪದಲ್ಲಿ ಬಂಧಿಯಾದರೆ"(ಎನ್ ಕ್ರಿಪ್ಟ್) ಅದೆಷ್ಟು ಅದ್ಭುತ. ಆದರೆ ಇಂದಿನ ಕಾಲಮಾನದಲ್ಲಿ, ಕಣ್ಣಿಗೆ ಕಂಡದ್ದಷ್ಟೇ ಸತ್ಯ, ಅತೀಂದ್ರಿಯವೆನ್ನುವುದೆಲ್ಲಾ ಮೌಢ್ಯ ಎನ್ನುವ ಯುಗದಲ್ಲಿ, ಕೆಲವರಷ್ಟೇ ಕೆಲವದರಲ್ಲಿ ಪರಿಣಿತರಾಗಿರುವ ಕಾಲಘಟ್ಟದಲ್ಲಿ ಇಂತಹ ಅಪರೂಪದ ಜ್ಞಾನಸಿರಿಯನ್ನು ನಿರ್ಮಿಸಲಾದರೂ ಸಾಧ್ಯವೇ? ಆದರೆ ಅಂತಹುದೊಂದು ಹಿಂದೆ ಇತ್ತು ಎಂದೇನಾದರೂ ಹೇಳಿದರೆ ಅಪಹಾಸ್ಯ ಮಾಡುವವರೇ ಹೆಚ್ಚಾಗಿರುವ ಈ ಸಮಾಜದಲ್ಲಿ ಅದು ಇರುವುದರ ಬಗ್ಗೆಯಾದರೂ ಸಂಶೋಧನೆಯಾಗುವುದು ಸಾಧ್ಯವಿದೆಯೇ? ಆದರೆ ಅಂತಹುದೊಂದು ಇತ್ತು. ಅದರ ಬಗ್ಗೆ ಕೆಲವರಾದರೂ ಸಂಶೋಧನೆಗೆ ಪ್ರಯತ್ನಿಸಿದ್ದಾರೆ, ಪ್ರಯತ್ನಿಸುತ್ತಲೇ ಇದ್ದಾರೆ. ಅದು ಮಾತ್ರ ಮೊಗೆದಷ್ಟು ಮಾಹಿತಿಯನ್ನು ಕೊಡುತ್ತಲೇ ಇದೆ. ವಿಚಿತ್ರವೆಂದರೆ ಯಾವುದರಲ್ಲಿ ಜ್ಞಾನದ ಬೃಹತ್ ಕಣಜವನ್ನೇ ತುಂಬಲಾಗಿದೆಯೋ ಅದರಿಂದ ಜ್ಞಾನವನ್ನೇ ಶೋಧಿಸಬೇಕಾಗಿದೆ; ಅದರ ಮೂಲವನ್ನೂ! ಅದನ್ನೂ! ಅದು ಸಿರಿಭೂವಲಯ. ನಿಜಕ್ಕೂ ಭೂಮಿಯ ಮಾತ್ರವಲ್ಲ ಬ್ರಹ್ಮಾಂಡದ ಜ್ಞಾನ ಸಿರಿಯೇ!

                 ಕ್ರಿ.ಶ. 850ರಲ್ಲಿ ಅಮೋಘವರ್ಷ ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗವೇ ಕನ್ನಡದ ಅತ್ಯಂತ ಪ್ರಾಚೀನ ಕೃತಿ ಎಂದು ಕನ್ನಡಿಗರು ಇಂದಿಗೂ ಭಾವಿಸಿದ್ದಾರೆ. ಆದರೆ ಇದಕ್ಕೂ ಮೊದಲು ಕ್ರಿ.ಶ. 800ರಲ್ಲಿ ರಚನೆಯಾಗಿರುವ ಅಂಕಕಾವ್ಯವೇ ಸಿರಿಭೂವಲಯ. ಅಮೋಘವರ್ಷನಿಗೇ ಗುರುವಾಗಿದ್ದ ಕುಮುದೇಂದು ಎಂಬ ಜೈನ ಮುನಿ ರಚಿಸಿದ ಅತ್ಯದ್ಭುತ ಕಾವ್ಯವದು. ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನಲ್ಲಿನ ಯಲವಳ್ಳಿಯಲ್ಲಿ ಯೋಗ ಹಾಗೂ ಭೋಗವನ್ನು ಸಮನ್ವಯಗೊಳಿಸಿಕೊಂಡಿದ್ದ ಯಾಪನೀಯವೆಂಬ ಜೈನಮತ ಪಂಗಡಕ್ಕೆ ಸೇರಿದ, ಅವನೇ ಹೇಳುವಂತೆ "ಸೇನ ಗುಣ ಸದ್ದರ್ಮ ಗೋತ್ರದ ದ್ರವ್ಯಾ೦ಗ ಶಾಖೆ-ಜ್ಞಾತ ವ೦ಶ-ವೃಷಭ ಸೂತ್ರ- ಇಕ್ಷೃರು ವ೦ಶಕ್ಕೆ ಸೇರಿದ ಜೈನ ಬ್ರಾಹ್ಮಣ” ಮನೆತನದಲ್ಲಿ ಆತ ಜನ್ಮ ತಳೆದ. ಜೈನಸಂಪ್ರದಾಯದ ಪ್ರಮುಖ ಗ್ರಂಥಗಳಾದ ಷಟ್ಖಂಡಾಗಮಗಳಿಗೆ ಧವಳಟೀಕೆಯನ್ನು ರೂಪಿಸಿದ ಜೈನ ಸಂಪ್ರದಾಯದ ಅತ್ಯದ್ಭುತ ಸಾಹಿತ್ಯವೆಂದೇ ಕೀರ್ತಿ ಗಳಿಸಿದ "ಪಂಚಧವಳ"ದ ಕರ್ತೃ, ಗಣಿತಜ್ಞನೂ ಸುಪ್ರಸಿದ್ಧ ವ್ಯಾಖ್ಯಾನಕಾರನೂ ಆಗಿದ್ದ ವೀರಸೇನಾಚಾರ್ಯ ಹಾಗೂ ಆತನ ಶಿಷ್ಯ ಜಿನಸೇನಾಚಾರ್ಯರು ಕುಮುದೇಂದು ಮುನಿಯ ಗುರುಗಳಾಗಿದ್ದರು. ಅಂತಹ ಪ್ರತಿಭಾಶಾಲಿ ಗುರುಗಳನ್ನೇ ಮೀರಿಸುವ ಸಾಧನೆ ಮಾಡಿದವನೀತ. 24ನೇ ತೀರ್ಥಂಕರ ಮಹಾವೀರನು ಕನ್ನಡಭಾಷೆಯಲ್ಲಿ ನೀಡಿರುವ ಪರಂಪರಾಗತ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕುಮುದೇಂದುಮುನಿಯು ಸ್ಪಷ್ಟವಾಗಿ ಸೂಚಿಸಿದ್ದಾನೆ. ಅಂದರೆ ಕನ್ನಡದ ಇತಿಹಾಸವು ನಾಲ್ಕುಸಾವಿರ ವರ್ಷಗಳ ಹಿಂದಕ್ಕೆ ಸರಿಯಿತು. ಕನ್ನಡ ಅಕ್ಷರಗಳು ಹಾಗೂ ಅಂಕಿಗಳು "ಕರುನಾಡತಣ್ಪಿನ ನೆಲದೊಳ್ ಹುಟ್ಟಿದ ಕುರು; ಹರಿ; ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚುಜ್ಯೋತಿ ಇದರಿಯಾ" ಎಂದು ಶ್ರೀಕೃಷ್ಣನು ಅರ್ಜುನನಿಗೆ ವಿವರಿಸಿದ್ದನ್ನು ಈ ಗ್ರಂಥ ಹೇಳುತ್ತದೆ. ಆದಿ ತೀರ್ಥಂಕರ ಋಷಭದೇವನು ಕನ್ನಡ ಅಕ್ಷರಗಳ ಹಾಗೂ ಅಂಕಿಗಳ ಉಗಮವನ್ನು ಕುರಿತು ತನ್ನ ಪುತ್ರಿಯರಿಗೆ ತಿಳಿಸಿ ಕೊಟ್ಟದ್ದನ್ನೂ; ಅದೇ ಬ್ರಾಹ್ಮಿ ಹಾಗೂ ಸೌಂದರಿ ಲಿಪಿಗಳೆಂದು ಪ್ರಚಾರಕ್ಕೆ ಬಂದುದನ್ನೂ ಸಿರಿಭೂವಲಯವು ಖಚಿತವಾಗಿ ನಿರೂಪಿಸಿದೆ. ಅಂದರೆ ಸಿರಿಭೂವಲಯವು ಕನ್ನಡಭಾಷೆಯ ಪ್ರಾಚೀನತೆ, ಪ್ರಬುದ್ಧತೆ ಹಾಗೂ ಅಮೋಘತೆಯನ್ನು ಪ್ರತಿಪಾದಿಸುತ್ತಿರುವ ಜೀವಂತ ದಾಖಲೆ!

                    ವೇದಗಳ ಕಾಲದಿ೦ದಲೂ ಭರತ ಭೂಮಿಯಲ್ಲಿ ಗುಪ್ತ ಭಾಷೆಗಳಿದ್ದವು. ಸಿರಿ ಭೂವಲಯ ಅ೦ತಹ ಒ೦ದು ಗುಪ್ತಭಾಷೆಯೇ. ಈ ಗ್ರಂಥ ಭಾಷೆಯ ಲಿಪಿ ಕ್ರಮವು ಕಠಿಣವಾಗಿದ್ದು, ಹಳೆಯದ್ದನ್ನು ಬದಿಗೆ ಸರಿಸಿ ಈಗಿನ ಸರಳ ಭಾಷೆಯೊಡನೆಯೇ ಸರಸವಾಡುವ ವಿದ್ವಾಂಸರಿಗೆ ಕಠಿಣವಾದ ಕಾವ್ಯವೆನಿಸಿದ ಸಿರಿಭೂವಲಯ ಬ್ರಹ್ಮಾಂಡದ ಜ್ಞಾನ ಭಂಡಾರ. ಕನ್ನಡ ಮೂಲಭಾಷೆಯಾಗಿರುವ ಸಿರಿ ಭೂವಲಯವನ್ನು 718 ಭಾಷೆಗಳಲ್ಲಿ ಓದಬಹುದು! ಆದರೆ ಅದರಲ್ಲಿ ಅಕ್ಷರಗಳೇ ಇಲ್ಲ! ಕನ್ನಡ ವರ್ಣಮಾಲೆಯ 64 ಅಕ್ಷರಗಳಿಗೆ ಅನ್ವಯವಾಗುವಂತೆ 1 ರಿಂದ 64 ಅಂಕಿಗಳನ್ನು 27 ಉದ್ದ ಹಾಗೂ ಅಡ್ಡಸಾಲುಗಳ ಒಟ್ಟು 729 ಚೌಕಗಳಲ್ಲಿ ಸೂತ್ರಬದ್ಧವಾಗಿ ತುಂಬಿಸಿ ರಚಿಸಲಾಗಿರುವ ಚಚ್ಚೌಕವನ್ನು ಒಂದು ಚಕ್ರ ಎನ್ನಲಾಗುತ್ತದೆ. ಇ೦ತಹ 1270 ಚಕ್ರಗಳೇ ಈ ಗ್ರ೦ಥವೆನಿಸಿದೆ. ಕಾವ್ಯದಲ್ಲಿ ಹಲವು ಅಧ್ಯಾಯಗಳನ್ನು ಹೊಂದಿರುವ 9 ಖಂಡಗಳಿವೆ. ಪ್ರಥಮಖಂಡವಾದ ಮಂಗಳಪ್ರಾಭೃತದಲ್ಲಿ  59 ಅಧ್ಯಾಯಗಳಿವೆ. ನಮಗೆ ಲಭ್ಯವಿರುವುದು ಪ್ರಥಮಖಂಡ ಮಾತ್ರ. 6000 ಸೂತ್ರಗಳನ್ನು ಬಳಸಿ ರಚಿಸಲಾದ ಈ ಅಂಕಕಾವ್ಯವನ್ನು ಓದಲು ಸುಮಾರು 40 ಬಂಧಗಳಿವೆ. 14 ಲಕ್ಷ ಅಕ್ಷರಗಳೂ, ಆರು ಲಕ್ಷದಷ್ಟು ಮೂಲ ಕನ್ನಡ ಪದ್ಯಗಳನ್ನು ಹೊಂದಿರುವ ಈ ಕಾವ್ಯ ಸುಮಾರು ‘ನೂರುಸಾವಿರ ಲಕ್ಷಕೋಟಿ’ ಶ್ಲೋಕಗಳ ವ್ಯಾಪ್ತಿಯಲ್ಲಿರುವ,  1200 ವರ್ಷಗಳ ಹಿಂದಿನ ಜಾಗತಿಕ ಪರಿಸರದಲ್ಲಿ ಪ್ರಚಲಿತವಿದ್ದ 718 ಭಾಷೆಗಳ ಸಾಹಿತ್ಯ ಸಾಗರವನ್ನು ಒಳಗೊಂಡಿದೆ. ಇದರ ಅಪೂರ್ವ ವಿಷಯ ವ್ಯಾಪ್ತಿಯಲ್ಲಿ ವೈದ್ಯ, ಜ್ಯೋತಿಷ್ಯ, ಭೌತ ರಸಾಯನಾದಿ ಮೂಲವಿಜ್ಞಾನ, ಇತಿಹಾಸ-ಸಂಸ್ಕೃತಿ, ಗಣಿತ, ಅಣುಶಾಸ್ತ್ರ, ಜಲ-ಲೋಹಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಜೈನಸಿದ್ಧಾಂತ, ಧರ್ಮದರ್ಶನ ಶಾಸ್ತ್ರ, ವೇದ, ರಾಮಾಯಣ-ಭಗವದ್ಗೀತೆ, ಲಿಪಿ-ಭಾಷೆ ಎಲ್ಲವೂ ಸೇರಿವೆ. ಹನ್ನೆರಡು ವರ್ಷದಲ್ಲಿ ಕಲಿಯುವ ವಿದ್ಯೆಯನ್ನು ಒಂದು ಅಂತರ್ಮುಹೂರ್ತದಲ್ಲಿ(ಸುಮಾರು 48 ನಿಮಿಷಗಳ ಅವಧಿ) ಕಲಿಸುತ್ತೇನೆ ಎಂದು ಘೋಷಿಸಿದ್ದಾನೆ ಈ ಕವಿ!

                ಕುಮುದೇಂದು ಮುನಿಯ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ಕ್ಕೆ ಮೂಲ ಆಕರಗಳು ಭೂತಬಲಿಯ "ಭೂವಲಯ" ಹಾಗೂ "ಕುಮುಲಬ್ಬೆ"ಯ ಸಿರಿಭೂವಲಯ. ಇದನ್ನು ಸ್ವತಃ ಈ ಕಾವ್ಯವೇ ಸ್ಪಷ್ಟಶಬ್ಧಗಳಲ್ಲಿ ಹೇಳುತ್ತದೆ. ಪ್ರಾಕೃತ, ಕನ್ನಡ ಹಾಗೂ ಸಂಸ್ಕೃತ ಭಾಷಾ ಮಿಶ್ರಣದ "ಪದ್ದತಿ ಗ್ರಂಥ"ವಾಗಿದ್ದ ಸಿರಿಭೂವಲಯದ ಮಹತ್ತರ ಮಾಹಿತಿಗಳೊಂದಿಗೆ ಅಂದಿನ ಕಾಲದಲ್ಲಿದ್ದ ಜಗತ್ತಿನ ಎಲ್ಲಾ ಭಾಷೆ, ವಿಚಾರ, ಕೃತಿ, ವಿಭಾಗಗಳ ಮಾಹಿತಿಯನ್ನು ಮುಂದಿನವರಿಂದ ಪ್ರಕ್ಷಿಪ್ತವಾಗದಂತೆ ತನ್ನದೇ ಆದ ನವಮಾಂಕ ಪದ್ಧತಿಯ ಕನ್ನಡ ಅಂಕಿಗಳಲ್ಲಿ 16000 ಚಕ್ರಗಳ ಸಂಕೇತ ರೂಪದಲ್ಲಿ ಕುಮುದೇಂದು ಮುನಿ ಜೋಡಿಸಿದ. ಅದರ ಮೂಲಪ್ರತಿ ಇಂದು ಲಭ್ಯವಿಲ್ಲ. ಮಲ್ಲಿಕಬ್ಬೆ ಎಂಬ ಸಾಧ್ವಿ ಇದನ್ನು ಕೋರಿಕಾಗದದಲ್ಲಿ ಪ್ರತಿ ಮಾಡಿಸಿ ತನ್ನ ಗುರು ಮಾಘಣನಂದಿಗೆ ದಾನ ಮಾಡಿದ್ದಳೆಂಬ ಮಾಹಿತಿಯಿದೆ. ಹಾಗಿದ್ದರೂ ಸುವಿಶಾಲಪತ್ರದಕ್ಷರಭೂವಲಯ ಹಾಗೂ ಕುಮುದೇಂದು ರೂಪಿಸಿದ ಅಂಕಭೂವಲಯದಲ್ಲಿ ಒಂದಷ್ಟು ವ್ಯತ್ಯಾಸಗಳಿವೆ.

               ಈ ಮಾಯಾಚೌಕದ ಅ೦ಕಿಗಳು ಹೊರಹೊಮ್ಮಿಸುವ ಧ್ವನಿಗಳಿ೦ದ ಸಾಹಿತ್ಯ ಹೊರಹೊಮ್ಮುತ್ತದೆ. ಗ್ರ೦ಥದಲ್ಲಿ ಹೇಳಿರುವ೦ತೆ ಒ೦ದು ರೀತಿಯಿ೦ದ ಓದಿದರೆ ಕನ್ನಡ ಸಾ೦ಗತ್ಯ ಛ೦ದಸ್ಸಿನಲ್ಲಿ ಸಾಹಿತ್ಯವಾಗುತ್ತದೆ. ಪ್ರತಿಯೊಂದು ಸಂಖ್ಯೆಯನ್ನು ಒಂದೊಂದು ಕನ್ನಡ ಅಕ್ಷರದಿಂದ ಬದಲಿಸಿ ಸಿದ್ಧಪಡಿಸಿದ ಪುಟವನ್ನು ವಿವಿಧ ಬಂಧಗಳ ಹಾದಿಯಲ್ಲಿ ವಾಚಿಸಿದರೆ ಅಸಂಖ್ಯಾತ ಸಾಹಿತ್ಯವು ಗ್ರಂಥದಿಂದ ದೊರಕುತ್ತದೆ. ಚಕ್ರದ ಅ೦ಕಿಗಳನ್ನು ಅಕ್ಷರಗಳನ್ನಾಗಿ ಪರಿವರ್ತಿಸಿ ಬ೦ದ ಕನ್ನಡ ಸಾ೦ಗತ್ಯ ಪದ್ಯದಲ್ಲಿ, ಪ್ರತಿ ಪದ್ಯದ ಮೊದಲ ಅಕ್ಷರ ಓದುತ್ತಾ ಹೋದರೆ "ಪ್ರಾಕೃತ ಭಾಷಾ" ಸಾಹಿತ್ಯ ರಚಿತವಾಗುತ್ತದೆ. ಪ್ರತಿ ಪದ್ಯದ ನಡುವಿನ ಅಕ್ಷರ ಓದುತ್ತಾ ಹೋದರೆ "ಸ೦ಸ್ಕೃತ ಭಾಷಾ" ಸಾಹಿತ್ಯವಾಗುತ್ತದೆ. ಹೀಗೆ ಅನೇಕ ರೀತಿಯ ಅಕ್ಷರ ಸ೦ಯೋಜನೆಯಿ೦ದ ತಮಿಳು, ತೆಲುಗು, ಮರಾಠಿ ಇತ್ಯಾದಿ ಹಲವು ಭಾಷಾ ಸಾಹಿತ್ಯ ರಚನೆಯಾಗುತ್ತದೆ. ಪಂಪನಿಗಿಂತಲೂ ಪ್ರಾಚೀನನಾದ ಈ ಮಹಾನ್ ಕವಿಯು ತನ್ನ ಈ ಅಚ್ಚರಿಯ ಕಾವ್ಯದಲ್ಲಿ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿ ಬಳಕೆಯಾಗುವ ಕನ್ನಡಭಾಷೆಯನ್ನು ಬಳಸುವ ಮೂಲಕ ಓದುಗರಿಗೆ ವಿಸ್ಮಯವನ್ನುಂಟುಮಾಡಿದ್ದಾನೆ! ಇನ್ನೊ೦ದು ವಿಶೇಷವೆ೦ದರೆ ಈ ಗ್ರ೦ಥದ ಯಾವುದೇ ಭಾಗ ನಾಶವಾದರೂ ಬೇರೆ ಅಧ್ಯಾಯಗಳ ಚಕ್ರಗಳ ಸಹಾಯದಿ೦ದ ನಾಶವಾದ ಭಾಗ ಪುನಃ ರಚಿಸಲು ಅವಕಾಶವಿದೆ. ಒ೦ದು ಚಕ್ರದಿ೦ದ ಅದರ ಹಿ೦ದಿನ ಚಕ್ರವನ್ನು ಪಡೆಯಬಹುದಾದ ಗಣಿತ ಸೂತ್ರವನ್ನು ಗ್ರ೦ಥ ಒಳಗೊ೦ಡಿದೆ. 363 ಮತಧರ್ಮಗಳ ವಿವರಗಳು ಇದರಲ್ಲಿವೆ. "ಅಣುವು ನೀರೊಳಗೆಷ್ಟು|ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು|" ಎಂದು ವಿವರಿಸಿರುವ ಅಣು ವಿಜ್ಞಾನ; ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯದಲ್ಲಿನ ಬಾಹ್ಯಾಕಾಶ ತಂತ್ರಜ್ಞಾನ; "ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ"  ಎನ್ನುತ್ತಾ ವಿವರಿಸಿರುವ ಇಂದಿನ ಅತ್ಯಾಧುನಿಕವಾದ ಗಣಕಯಂತ್ರ ಹಾಗೂ ಮೊಬೈಲ್ ತಂತ್ರಜ್ಞಾನ; ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನ(ಸರ್ವೆ); ಲಿಂಗಛೇಧನವಿಜ್ಞಾನ (ಇಂದಿನ ವ್ಯಾಸೆಕ್ಟಮಿ ಟ್ಯೂಬೆಕ್ಟಮಿ); ಗಣಿತಶಾಸ್ತ್ರ, ಜೀವವಿಜ್ಞಾನ, ಶಿಲ್ಪಶಾಸ್ತ್ರ, ಧರ್ಮಶಾಸ್ತ್ರ, ಪುರಾಣ, ಇತಿಹಾಸ, ಸಂಗೀತ, ನೃತ್ಯ, ಗಣಕಯಂತ್ರಕ್ರಮ, ಆಕಾಶ ವಿಜ್ಞಾನ, ಲೋಹವಿಜ್ಞಾನ, ಪರಮಾಣುವಿಜ್ಞಾನ, ರಸವಿದ್ಯೆ, ಪ್ರಾಣವಾಯು ಪೂರ್ವ ಎ೦ಬ ವೈದ್ಯ ವಿಜ್ಞಾನ ಹೀಗೆ ಸಕಲ ಶಾಸ್ತ್ರಗಳನ್ನು ಗ್ರ೦ಥ ಅಡಗಿಸಿಟ್ಟುಕೊ೦ಡಿದೆ. ಹೀಗೆ ಇದು ಸರ್ವಭಾಷಾಮಯೀ, ಸರ್ವಶಾಸ್ತ್ರಮಯೀ, ಸರ್ವಕಾವ್ಯಮಯೀ ಗ್ರ೦ಥವೇ ಸರಿ.

                  ಜೈನಸಂಪ್ರದಾಯದ ಸಿರಿಭೂವಲಯದಲ್ಲಿ ನಾಟ್ಯಶಾಸ್ತ್ರದ ಭಾಗದಲ್ಲಿ ಕುಮುದೇಂದು ಸ್ತುತಿಸಿರುವುದು ಮೊದಲಿಗೆ ವಾಸುದೇವನನ್ನು, ಕೊನೆಗೆ ಶ್ರೀಲಕ್ಷ್ಮಿಯನ್ನು! ಸಿರಿಭೂವಲಯದಲ್ಲಿ ಋಗ್ವೇದದ ಕುರಿತು ಕುಮುದೇಂದು ಮುನಿ,
"ಅನಾದಿ ನಿಧನಾಂ ವಾಕ್ ದಿವ್ಯ ಈಶ್ವರೀಯಂ ವಚಃ |
ಋಗ್ವೇದೋಹಿ ಭೂವಲಯಃ ಸರ್ವಜ್ಞಾನಮಯೋ ಹಿ ಆಃ || "
ಎನ್ನುತ್ತಾ ವೇದಗಳ ಅಪೌರುಷೇಯತೆಯನ್ನೂ, ಮಾನವಕುಲದ ಜೀವನಪ್ರವಾಹದಲ್ಲಿ ಋಗ್ವೇದವು ಅತ್ಯಂತ ಪ್ರಾಚೀನವಾದ ಜ್ಞಾನಮೂಲವೆಂಬ ಸಂಗತಿಯನ್ನೂ ಸಂಶಯಾತೀತವಾಗಿ ನಿರೂಪಿಸುತ್ತಾನೆ. ಋಗ್ವೇದ ಗಾಯತ್ರೀ ಮ೦ತ್ರದಿ೦ದ ಆರ೦ಭವಾಗುತ್ತದೆ೦ದು ಮುನಿ ಇದರಲ್ಲಿ ಹೇಳುತ್ತಾನೆ. ಶಾಕಲ ಶಾಖೆಯ ಋಗ್ವೇದ, "ಅಗ್ನಿಮೀಳೇ ಪುರೋಹಿತಂ" ಎ೦ಬ ಗಾಯತ್ರೀ ಛ೦ದಸ್ಸಿನ ಮ೦ತ್ರದಿ೦ದ ಆರ೦ಭವಾಗುತ್ತದೆ. ವ್ಯಾಸರ ಜಯಾಖ್ಯಾನ(ಮಹಾಭಾರತ)ದ ಭಗವದ್ಗೀತೆಯನ್ನೂ ಸಿರಿಭೂವಲಯ ಒಳಗೊಂಡಿದೆ. ಜೈನ ಮುನಿಯೊಬ್ಬ ತನ್ನ ಗ್ರಂಥದಲ್ಲಿ "ವೇದಗಳೇ ಸಿರಿ ಭೂವಲಯದ ಬೃಹದ್ರೂಪ. ವೇದ, ಮಾತೆಯಿದ್ದ ಹಾಗೆ. ಅದನ್ನಿಲ್ಲಿ ಉದಾಹರಿಸುತ್ತೇನೆ" ಎ೦ದಿರುವುದು ಜೈನರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲು ನೋಡುವವರಿಗೆ ಮುಖಕ್ಕೆ ಹೊಡೆದಂತಾಗುವ ಸಂಗತಿ. ಜೈನಸಂಪ್ರದಾಯವು ಎಷ್ಟೇ ಕೋಟ್ಯಾಂತರ ವರ್ಷಗಳ ಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಈ ಸಂಪ್ರದಾಯದ ಮೂಲ ಬೇರಿರುವುದು ವೇದೋಪನಿಷತ್ತುಗಳಲ್ಲಿಯೇ. ಈ ವೇದೋಪನಿಷತ್ತುಗಳೆಲ್ಲವೂ ಪಾವನ ತೀರ್ಥಗಳೆಂದೇ ಕುಮುದೆಂದು ಮುನಿಯು ಖಚಿತವಾಗಿ ನಿರೂಪಿಸಿರುವುದನ್ನು ಕಾಣಬಹುದು. ಸಿರಿಭೂವಲಯದ ಪ್ರಥಮಕಾಂಡದಲ್ಲಿ ಋಗ್ವೇದಕ್ಕೆ ಸಂಬಂಧಿಸಿದಂತೆ ಋಗ್ವೇದ, ಋಗ್ಭೂವಲಯ ಋಗ್, ಮುಂತಾದ ಶಬ್ದಗಳು ಸಾವಿರಾರುಸಲ ಪ್ರಯೋಗವಾಗಿವೆ. ಸಿರಿಭೂವಲಯದ ಪ್ರಾಚೀನ ಹೆಸರನ್ನು ಋಗ್ಮಹಾಬಂಧ ಎಂದು ವಿವರಿಸುವ ಮೂಲಕ ಜೈನ ಸಂಪ್ರದಾಯದ ಸಕಲ ಶಾಸ್ತ್ರ ಗ್ರಂಥಗಳಿಗೂ ಋಗ್ವೇದವೇ ಮೂಲ ಆಕರ ಎಂಬ ಮೂಲ ಸತ್ಯವನ್ನು ಸಿದ್ಧಪಡಿಸಿದ್ದಾನೆ ಮುನಿ. ಹೀಗೆ ಜಗತ್ತಿನ ಮೊದಲ ಗಣಕಯಂತ್ರವೂ, ಜಗತ್ತಿನ ಪ್ರಥಮ ವಿಶ್ವಕೋಶವೂ, ಪ್ರಥಮ ಹಾಗೂ ಏಕೈಕ ಕನ್ನಡ ಅಂಕಕಾವ್ಯವೂ ಆದ ಸರ್ವಭಾಷಾಮಯೀಭಾಷಾ ಸಿರಿಭೂವಲಯವು ಸೃಷ್ಟಿ-ಸ್ಥಿತಿ-ಲಯಗಳ ರಹಸ್ಯವನ್ನು ವಿವರಿಸಿರುವ, ಜಗತ್ತಿನ ಸಕಲ ಜ್ಞಾನ-ಶಾಸ್ತ್ರಗಳ ಆಗರವಾದ, ಆದಿ ತೀರ್ಥಂಕರನಿಗಿಂತಲೂ ಪ್ರಾಚೀನವಾದ ಅಪೌರುಷೇಯವಾದ ವೇದಗಳನ್ನು ಸಮರ್ಥಿಸಿರುವುದೇ ಅದು ಮೂಲೆಗುಂಪಾಗಲು ಕಾರಣವಾಯಿತೇ?

                ನಂದಿಬೆಟ್ಟಕ್ಕೆ ಹೊಂದಿಕೊಂಡಿದ್ದ ಯಲವಳ್ಳಿಯ ಮೂಲ ಹೆಸರು ಯಲವ ಯಲವಳಾ. ಅದರ ಪಕ್ಕದಲ್ಲೇ ನಂದಗಿರಿಪುರ ಎಂಬ ಹೆಸರಿನ ನಗರವಿದ್ದದ್ದು ಈಗ ಇತಿಹಾಸ. ಕುಮುದೇಂದು ತನ್ನ 1500 ಶಿಷ್ಯ ಸಮೂಹದೊಂದಿಗೆ ಈ ವಿಸ್ತಾರವಾದ ನಗರದಲ್ಲಿದ್ದಿರಬಹುದೇ? ಮಂದರತೀರ್ಥ ಚೈತ್ಯಾಲಯದಲ್ಲಿ ಋಷಭದೇವನಾದಿಯಾಗಿ ಕೃಷ್ಣನಪರ್ಯಂತ ತೀರ್ಥಂಕರರು ಹರಿಪೀಠಸ್ಥಿತರಾಗಿದ್ದರು. ಶಕರಾಯನೃಪಪಾಲಿತ ಪ್ರದೇಶ ಅದಾಗಿತ್ತು. ಯಲವಳ್ಳಿಯ ಸಮೀಪದಲ್ಲಿ ಕುಮುದೇಂದುವಿನಬಾವಿ ಎಂಬ ಪ್ರಾಚೀನವಾದ ಬಾವಿಯೊಂದು ಕೆಲದಿನಗಳ ಹಿಂದಿನ ವರೆವಿಗೂ ಅಸ್ಥಿತ್ವದಲ್ಲಿತ್ತು. ಸಮರ್ಪಕ ಉತ್ಖನನವಿಲ್ಲಿ ನಡೆದರೆ ಕನ್ನಡದ ಆದಿ ಕವಿವರ್ಯನ ಬಗೆಗಿನ ಬಹುತೇಕ ಚಾರಿತ್ರಿಕ ಅಂಶಗಳು ಸಿಗುವ ಸಾಧ್ಯತೆಯಿದೆ.

                   ಈ ಕಾವ್ಯ ಆಸ್ಥಾನ ವಿದ್ವಾಂಸರೂ, ವೈದ್ಯ-ಜ್ಯೋತಿಶಾಸ್ತ್ರಗಳಲ್ಲಿ ವಿಶಾರದರಾಗಿದ್ದ  ಧರಣೇಂದ್ರ ಪಂಡಿತರೆಂಬ ಶತಾವಧಾನಿಗಳಿಂದ ವಂಶಪಾರಂಪರ್ಯವಾಗಿ ರಕ್ಷಿಸಲ್ಪಟ್ಟಿತ್ತು. ಆಧುನಿಕ ಕಾಲದಲ್ಲಿ ಸಿರಿಭೂವಲಯದ ಬಗ್ಗೆ ಅದ್ಭುತ ಸಂಶೋಧನೆ ಮಾಡಿದವರು ಕರ್ಲಮಂಗಲಂ ಶ್ರೀಕಂಠಯ್ಯನವರು. ಮೂಲಗ್ರಂಥವೆಂದು ಹೆಚ್ಚಿನವರು ಅಂದುಕೊಂಡಿದ್ದ ಗ್ರಂಥಕ್ಕೆ ವಾರಸುದಾರರಾಗಿದ್ದ ಪಂಡಿತ ಯಲ್ಲಪ್ಪಶಾಸ್ತ್ರಿ ಹಾಗೂ ಗ್ರಂಥದ ಅಂತರಂಗ ಶೋಧನೆಯಲ್ಲಿ ತೊಡಗಿದ್ದ ಕನ್ನಡ ಬೆರಳಚ್ಚುಯಂತ್ರಶಿಲ್ಪಿ ಕೆ. ಅನಂತಸುಬ್ಬರಾಯರು ಈ ಮಹಾನ್ ಗ್ರಂಥದ ಪ್ರಚಾರಕಾರ್ಯದಲ್ಲಿ ತೊಡಗಿದ್ದವರು. 1953ರಲ್ಲಿ ಕನ್ನಡದ ಅಂಕಿಗಳಿಗೆ ಅನ್ವಯವಾಗುವ ಪ್ರಾಚೀನ ಲಿಪಿಕ್ರಮವನ್ನು ರೂಪಿಸಿಕೊಂಡು ಈ ಗ್ರಂಥದ ಸ್ವಲ್ಪಾಂಶವನ್ನು ಸಂಶೋಧಿಸಿ, ಅಕ್ಷರರೂಪದಲ್ಲಿ ಶ್ರೀಕಂಠಯ್ಯನವರು ಪ್ರಕಟಿಸಿದ್ದರು. ಶ್ರೀಕಂಠಯ್ಯನವರಿಂದ ಬೆಳಕು ಕಂಡ ಸಿರಿಭೂವಲಯಕ್ಕೆ ಸಂಬಂಧಿಸಿದ ಮೂಲಸಾಹಿತ್ಯವನ್ನು ಭಾರತದ ಅಂದಿನ ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರು ಅವುಗಳನ್ನು ಕೇಂದ್ರ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸುವ ಕಾರ್ಯ ನೆರವೇರಿಸಿದರು. ಕನ್ನಡ ಅಂಕಲಿಪಿಯಲ್ಲಿ ರಚನೆಯಾಗಿರುವುದೆಂದು ಪ್ರಚಾರವಾಗಿದ್ದ ಈ ಗ್ರಂಥದ ವಿಚಾರಗಳು ಸಾಕಷ್ಟು ನಿಗೂಢವೆನಿಸಿಕೊಂಡು ಹೆಚ್ಚಿನವರಿಗೆ ಅರ್ಥವಾಗಿರಲಿಲ್ಲ. ಈ ಕಾರಣದಿಂದ ಇದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. 2003ರಲ್ಲಿ ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನ ಡಾ|| ವೆಂಕಟಾಚಲಶಾಸ್ತ್ರಿಗಳ ನೇತೃತ್ವದಲ್ಲಿ ಇದನ್ನು ಪರಿಷ್ಕರಿಸಿ ಮರುಮುದ್ರಣ ಮಾಡಿತು. ಆದರೆ ಇವೆಲ್ಲಕ್ಕೂ ಮೂಲವಾಗಿದ್ದು ಸುವಿಶಾಲಪತ್ರದಕ್ಷರಭೂವಲಯವೇ ಹೊರತು ಕುಮುದೇಂದು ಮುನಿಯ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ವಲ್ಲ. ಎರಡಕ್ಕೂ ವ್ಯತ್ಯಾಸ ಇರುವುದನ್ನು ಈ ಮುಂಚೆಯೇ ಸೂಚಿಸಿದೆ. 2010ರಿಂದೀಚೆಗೆ ಹಾಸನದ ಸುಧಾರ್ಥಿಯವರು ಸಿರಿಭೂವಲಯಸಾರ, ಸಿರಿಭೂವಲಯದ ಸಾಂಗತ್ಯಪದ್ಯಗಳ ಸಂಗ್ರಹ, ಸಿರಿಭೂವಲಯ ಒಂದು ಮಿಂಚುನೋಟ,  ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ, ಸಿರಿಭೂವಲಯಕೀ ಏಕ್ ಝಾಂಕಿ, ಸಿರಿಭೂವಲಯದ ಒಳನೋಟ ಹೀಗೆ "ಸರ್ವಭಾಷಾಮಯೀಭಾಷಾ ಸಿರಿಭೂವಲಯ"ದ ಕುರಿತು ಹನ್ನೊಂದು ಕೃತಿಗಳನ್ನು ಯಾವುದೇ, ಯಾರದೇ ನೆರವಿಲ್ಲದೆ, ಏಕಾಂಗಿಯಾಗಿ ತಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಸತತ ಪರಿಶ್ರಮದಿಂದ, ಅತ್ಯಂತ ಕಡಿಮೆ ಸಮಯದಲ್ಲಿ ಪ್ರಕಟಿಸುವ ಮೂಲಕ, ಅನೇಕರಿಗೆ ಈ ಸಂಕೇತ ಭಾಷೆಯನ್ನು ಕಲಿಸುವ ಮೂಲಕ ನಿಜಾರ್ಥದಲ್ಲಿ ಸಿರಿಭೂವಲಯ ಸುಧಾರ್ಥಿ ಎನಿಸಿಕೊಂಡಿದ್ದಾರೆ. ಈ ಲೇಖನದ ಬಹ್ವಂಶ ಅವರ ಗ್ರಂಥಗಳಿಂದಲೇ ಆರಿಸಿ ತೆಗೆದಿರುವಂತಹದ್ದು. ಆಸಕ್ತರು ಹೆಚ್ಚಿನ ವಿವರಗಳಿಗೆ ಅವರ ಗ್ರಂಥಗಳನ್ನೇ ಪರೀಕ್ಷಿಸಬಹುದು. ಅಧ್ಯಯನದ ಅಪೇಕ್ಷೆ ಉಳ್ಳವರು ಅವರನ್ನೇ(e-mail: sudharthyhassan@gmail.com) ಸಂಪರ್ಕಿಸಬಹುದು.

 ಕರ್ನಾಟಕದಲ್ಲಿ ಪ್ರತೀ ವರ್ಷ ಸಾಹಿತ್ಯ ಸಮ್ಮೇಳನ ನಡೆಯುತ್ತದೆ. ವಿಶ್ವಮಟ್ಟ, ರಾಷ್ಟ್ರಮಟ್ಟ, ಜಿಲ್ಲೆ, ತಾಲೂಕು ಅಲ್ಲದೇ ಹಲವು ಗ್ರಾಮಗಳಲ್ಲೂ ಸಾಹಿತ್ಯ ಸಮ್ಮೇಳನಗಳು, ವಿವಿಧ ಸಾಹಿತ್ಯ ಉತ್ಸವಗಳೂ ನಡೆಯುತ್ತವೆ. ಆದರೆ ಇಷ್ಟರವರೆಗೆ ಈ ವಿಶ್ವಕಾವ್ಯದ ಬಗೆಗೆ ಅದು ಅಮೋಘವಾದ ಸಾಹಿತ್ಯ ಎನ್ನುವ ಉಧ್ಘಾರವನ್ನು ಹೊರತುಪಡಿಸಿ ಯಾವುದೇ ಚರ್ಚೆಗಳಾಗಲೀ ನಡೆದದ್ದನ್ನು ನಾವು ಕಾಣೆವು. ಕುಮುದೇಂದು ಮುನಿ ವಿಶ್ವಕ್ಕೇ ಸೇರಿದವ. ಆದರೂ ತಮ್ಮ ಮತದವನೆಂಬ ಕಾರಣಕ್ಕೆ ಜೈನರಾದರೂ ಇದರ ಬಗ್ಗೆ ವಿಸ್ತೃತ ಚರ್ಚೆಗಳನ್ನು ಆಯೋಜಿಸಬೇಕಿತ್ತು. ಮಸ್ತಕಾಭಿಷೇಕಗಳು ಹಲವು ನಡೆದರೂ ಈ ಜ್ಞಾನಸಿರಿ ಪುಸ್ತಕಾಭಿಷೇಕ ಆಗಲೇ ಇಲ್ಲ. ಭಾಗ್ಯಗಳ ಮೇಲೆ ಭಾಗ್ಯಗಳನ್ನು ಸುರಿಸುವ ಕರ್ನಾಟಕದ ದೌರ್ಭಾಗ್ಯಾಧಿಪತಿಯಂದ ಇಂತಹ ಸಂಶೋಧನೆಗೆ ಅವಕಾಶ ಸಿಗುವ ಭಾಗ್ಯ ಅಸಂಭವವೇ ಸರಿ. ಹಗರಣ, ವೈಯುಕ್ತಿಕ ಪ್ರತಿಷ್ಠೆ, ಗುಂಪುಗಾರಿಕೆಯ ಗೂಡಾಗಿರುವ ವಿಶ್ವವಿದ್ಯಾಲಯಗಳಿಗೆ ಈ ಕಾವ್ಯವಿದೆಯೆಂಬ ನೆನಪಾದರೂ ಇದೆಯೇ? ಕೇಂದ್ರ ಪತ್ರಾಗಾರದಲ್ಲಿರುವ ಮಾಹಿತಿ ಸಾಮಾನ್ಯರಿಗೆ ಸುಲಭವಾಗಿ ಎಟುಕಲಾರದು. ಅದಕ್ಕಾಗಿ ರಾಜ್ಯದಲ್ಲೇ ಶಾಸ್ತ್ರೀಯಭಾಷೆಯ ಸ್ಥಾನಮಾನದ ಸಮಸ್ಯೆಗೆ ಸುಲಭ ಪರಿಹಾರವಾಗಬಲ್ಲ ಈ ವಿಶ್ವಕಾವ್ಯದ ಮಾಹಿತಿ ಸಿಗುವ ವ್ಯವಸ್ಥೆ ಮಾಡುವಂತಹ ಇಚ್ಛಾಶಕ್ತಿಯಂತೂ ನಮ್ಮ ಸರಕಾರಗಳಿಗಿಲ್ಲ. ಕೆಲವೇ ಕೆಲವರು ವೈಯುಕ್ತಿಕ ಆಸಕ್ತಿಯಿಂದ ನಡೆಸುವ ಸಂಶೋಧನಾ ಕಾರ್ಯಕ್ಕೂ  ಸೆಕ್ಯುಲರ್ ಸರಕಾರ ಸಹಾಯ ಮಾಡಲು ಸಾಧ್ಯವೇ? ಅದು ಕೂಡಾ ಪ್ರಾಚೀನ ಜ್ಞಾನವನ್ನು, ಸನಾತನ ಧರ್ಮವನ್ನು ಕೊಂಡಾಡುವ ಕಾವ್ಯ ಸಂಶೋಧನೆಗೆ? ತಮ್ಮದೇ ಪ್ರಾಚೀನ ಕಾವ್ಯದ ಬಗೆಗೆ ಕನ್ನಡಿಗರು ಅಸಡ್ಡೆ ತಾಳಲು ಅದು ವೇದವನ್ನು ಕೊಂಡಾಡಿದ್ದೇ ಕಾರಣವೇ?

ಗದ್ದಾರ್'ಗಳಿಗೂ ಚಾದರ ಅರ್ಪಿಸುವ ಭೋಳೇತನ

ಗದ್ದಾರ್'ಗಳಿಗೂ ಚಾದರ ಅರ್ಪಿಸುವ ಭೋಳೇತನ


              2010ರ ನವೆಂಬರಿನಲ್ಲಿ ಇಂಗ್ಲೆಂಡಿನ ಹೃದಯ ಭಾಗದ ದಕ್ಷಿಣ ಯಾರ್ಕ್ ಶೈರ್'ನ ರೋದೆರ್ ಹ್ಯಾಮ್ನಲ್ಲಿ ಅಪ್ರಾಪ್ತ ಹುಡುಗಿಯರ ಮೇಲಿನ ಲೈಂಗಿಕ ಶೋಷಣೆಯ ಪ್ರಕರಣ ದಾಖಲಿಸಿ ಐದು ಜನರನ್ನು ಕಾರಾಗೃಹಕ್ಕಟ್ಟಲಾಯಿತು. ತಮ್ಮಲ್ಲಿನ ಅಪಸವ್ಯಗಳನ್ನು ಜಗತ್ತಿನ ಮುಂದೆ ಮುಚ್ಚಿಡಲು ಯತ್ನಿಸುವ ಪಾಶ್ಚಾತ್ಯರ ಧೋರಣೆಯಿಂದಾಗಿ ಅದೇನು ದೊಡ್ಡ ಸುದ್ದಿಯಾಗಲೇ ಇಲ್ಲ. ಅದರೆ ಎರಡು ವರ್ಷದ ಬಳಿಕ 2012ರ ಸೆಪ್ಟೆಂಬರಿನಲ್ಲಿ ಆಂಡ್ರ್ಯೂ ನೋರ್ಫೋಕ್ ಎಂಬ ಟೈಮ್ಸ್ ಪತ್ರಕರ್ತ ಪೊಲೀಸರ ಗುಪ್ತ ವರದಿಯನ್ನಾಧರಿಸಿ ಜಗತ್ತನ್ನೇ ಬೆಚ್ಚಿ ಬೀಳಿಸಿದ ಪ್ರಕರಣವೊಂದನ್ನು ಬಯಲಿಗೆಳೆದ. ವಿಚಿತ್ರವೆಂದರೆ ಅಷ್ಟು ಹೊತ್ತಿಗೆ ಕಳೆದ ಹದಿನಾರು ವರ್ಷದಲ್ಲಿ 1400 ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಆ ನಗರದಲ್ಲಿ ದಾಖಲಾಗಿದ್ದವು. ಗಮನಿಸಿ ಅವು ದಾಖಲಾದ ಪ್ರಕರಣಗಳು! ಮುಚ್ಚಿ ಹೋದವು ಇನ್ನೆಷ್ಟೋ? ಮಾಧ್ಯಮಗಳಲ್ಲಿ ವರದಿಯಾಗಿ ಜನ ಇನ್ನೇನು ಮೈಮೇಲೆ ಉಗುಳುವುದೊಂದು ಬಾಕಿ ಎನ್ನುವ ಸಮಯದಲ್ಲಿ ಬುಡಕ್ಕೆ ಬೆಂಕಿ ಬಿದ್ದವರಂತೆ ಕಾರ್ಯಾಚರಣೆಗೈದ ಪೊಲೀಸರು ಕೆಲವರನ್ನು ಬಂಧಿಸಿ, ಜನ ಹಾಗೂ ಮಾಧ್ಯಮಗಳನ್ನು ತೆಪ್ಪಗಾಗಿಸಲು ಪ್ರಯತ್ನಿಸಿದರು. ಹಾಗಾದರೆ ಅಷ್ಟು ವರ್ಷ ಆ ಪ್ರಕರಣಗಳೆಲ್ಲಾ ಮುಚ್ಚಿ ಹೋದದ್ದು ಯಾಕೆ? ಜಗತ್ತಿನ ಮೂಲೆ ಮೂಲೆಯ ಕ್ಷುಲ್ಲಕ ಸುದ್ದಿಯನ್ನೂ ನಾಚಿಕೆಯಿಲ್ಲದೆ ದೊಡ್ಡದು ಮಾಡಿ ಪ್ರಕಟಿಸುವ ಬಿಬಿಸಿಗೆ ಇಷ್ಟೊಂದು ದೊಡ್ಡ ಪ್ರಕರಣ ಅರಿವಾಗದೇ ಹೋಯಿತೇ? ಮಂಗಳೂರಿನ ಪಬ್ಬಿನಲ್ಲಿ ಪಾರ್ಟಿ ಮಾಡುತ್ತಿದ್ದ ಹುಡುಗಿಗೆ ದಾರಿ ತಪ್ಪಬೇಡ ಎಂದು ಒಂದೇಟು ಬಿಗಿದದ್ದನ್ನೇ ಭಯಂಕರ ಅಪರಾಧ ಎನ್ನುತ್ತಾ ದೊಡ್ಡ ಗಂಟಲಲ್ಲಿ ಅರಚಿದ್ದ ವಿದೇಶೀ ಮಾಧ್ಯಮಗಳಿಗೆ ಸಾಲು ಸಾಲು ಅತ್ಯಾಚಾರದಂತಹ ಈ ಭಯಾನಕ ಪ್ರಕರಣದ ಬಗ್ಗೆ ಮಾತಾಡಲು ನಾಲಿಗೆ ತಿರುಗಲಿಲ್ಲವೇಕೆ? ಇಂಗ್ಲೆಂಡ್ ಸೂರ್ಯ ಮುಳುಗದ ಸಾಮ್ರಾಜ್ಯ ಎನ್ನುವ ಭಯವೇ? ಹಾಗೇನೂ ಇಲ್ಲ; ಅಲ್ಲಿ 1945ರ ವೇಳೆಗೆ ಸೂರ್ಯ ಅಸ್ತಂಗತನಾಗಿ ಬೆಳಗಿನ ಚಹಾಕ್ಕೂ ತತ್ವಾರವಾಗಿತ್ತು. ಮತ್ತೇನು? ಒಂದೇ. ಇಸ್ಲಾಮೋಫೋಬಿಯಾ!

                 ಈ ಎಲ್ಲಾ ಪ್ರಕರಣದ ಹಿಂದೆ ಇದ್ದವರು ಮುಸ್ಲಿಮರು. ಅದಕ್ಕಾಗಿಯೇ ತಾನು ಬದುಕಿಗೊಳ್ಳಲು ಎಂದಿನ ತನ್ನ ಸೆಕ್ಯುಲರ್ ಬಳ್ಳಿಗೆ ಜೋತು ಬಿದ್ದಿತ್ತು ಬಿಬಿಸಿ. ಉಳಿದ ವಿದೇಶೀ ಮಾಧ್ಯಮಗಳು ಕೂಡಾ. ಇದು ಒಂದು ಜನಾಂಗವನ್ನೇ ಅಳಿಸುವ ಪ್ರಯತ್ನ, ಮುಸ್ಲಿಂ ಮತಾಂಧತೆಯ ಅತಿರೇಕ ಎನ್ನುವುದನ್ನು ಪೊಲೀಸರು ಅಥವಾ ಬಿಬಿಸಿಯಂತಹಾ ಮಾಧ್ಯಮಗಳು ಅಲ್ಲಗೆಳೆಯಬಹುದು. ಆದರೆ ಅದೇ ಸತ್ಯ. ಈ ಎಲ್ಲಾ ಪ್ರಕರಣಗಳ ಹಿಂದಿರುವವರು ಪಾಕಿಸ್ತಾನೀ ಮೂಲದವರು ಎನ್ನುವುದೂ ಪೊಲೀಸರಿಗೆ ತಿಳಿದಿದೆ. ಈ ಎಲ್ಲಾ ಅಪಸವ್ಯಗಳನ್ನು ತಡೆಯಲೆಂದು ಯಾವ ಸಮಿತಿಯನ್ನು ಪೊಲೀಸ್ ಇಲಾಖೆ ಸ್ಥಾಪಿಸಿತ್ತೋ ಅದಕ್ಕೊಬ್ಬ ಇಸ್ಲಾಂ ಮತೀಯನನ್ನೇ ಮುಖ್ಯಸ್ಥನಾಗಿ ನೇಮಿಸಿತ್ತು. ಅಲ್ಲಿಗೆ ಪ್ರಕರಣ ಹಳ್ಳ ಹಿಡಿಯುವುದು ನಿಶ್ಚಿತವಾಗಿತ್ತು. 2013ರಲ್ಲಿ ಆತ ಆರೋಪಿಗಳೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇಲೆ ಜನರ ಆಕ್ರೋಶಕ್ಕೆ ಗುರಿಯಾಗಿ ಕೆಳಗಿಳಿದ ಬಳಿಕವೇ ಘಟನೆಯ ಗಂಭೀರತೆ ಬೆಳಕಿಗೆ ಬಂದದ್ದು. ಇತ್ತೀಚಿನ ವರದಿ ಪ್ರಕಾರ ದಾಖಲಾದ ಪ್ರಕರಣಗಳ ಸಂಖ್ಯೆ 1500 ದಾಟಿದೆ. ಭಾರತದಲ್ಲಿ ಹೇಗೆ ‘ಲವ್ ಜಿಹಾದ್’ ಹೆಸರಲ್ಲಿ ಹಿಂದೂ ರಕ್ತವನ್ನು ಅಪವಿತ್ರಗೊಳಿಸಲಾಗುತ್ತದೆಯೋ ಅದೇ ರೀತಿ ಇಂಗ್ಲೆಂಡಿನಲ್ಲಿ ಮತಾಂಧ ರಕ್ಕಸಪಡೆ ಆಡಿದ‘ಗ್ರೂಮಿಂಗ್ ರಿಂಗ್’ಎಂಬ ಆಟ ಇದು. ಪ್ರಕರಣ ಬೆಳಕಿಗೆ ಬಂದ ನಂತರವೂ ಬಿಬಿಸಿ ಮುಸ್ಲಿಮರನ್ನು ಹೆಸರಿಸಿಲ್ಲ. ಅದು ಇಂದಿಗೂ ಹೇಳುವುದು ಏಷ್ಯನ್ನರೆಂದೇ!

                 ಅದು ಇಂಗ್ಲೆಂಡಿನ ಕಥೆ. ಹಿಂದೊಮ್ಮೆ ಜಗತ್ತಿನ ಬಹುತೇಕ ರಾಷ್ತ್ರಗಳನ್ನು ಮೋಸದಿಂದಲೇ ವಶಪಡಿಸಿಕೊಂಡು ಆಳಿ ದೊಡ್ಡಣ್ಣನಾಗಿ ಮೆರೆದ ಗ್ರೇಟ್ ಬ್ರಿಟನ್ನಿನಂತಹ ಬ್ರಿಟನ್ನಿಗೂ ಮತಾಂಧತೆಯೊಳಗಿನ ಕುಟಿಲತೆ ಅರಿವಾಗಲಿಲ್ಲ. ಹಾಗೆಂದೇ ಅವರನ್ನು ಒಳಗೆ ಬಿಟ್ಟುಕೊಂಡು ತನ್ನನ್ನು ತಾನು ಸುಟ್ಟುಕೊಳ್ಳುತ್ತಾ ಸಾಗಿದೆ ಇಂಗ್ಲೆಂಡ್. ಆದರೆ ಮುಸ್ಲಿಂ ಮತಾಂಧತೆಯ ಈ ಕ್ರೌರ್ಯವೇನು ಹೊಸದೇ? ಅವರೆಂದಾದರೂ ಸಭ್ಯ ಸಮಾಜದ ಭಾಗವಾಗಿದ್ಡಾರೆಯೇ? ಇತಿಹಾಸ ಇಲ್ಲವೆಂದೇ ಉತ್ತರಿಸುತ್ತದೆ. ಸೆಕ್ಯುಲರ್ ಮುಖವಾಡಕ್ಕೆ ಮಾತ್ರ ಅವರಲ್ಲಿ ಶಾಂತಿ ಕಾಣುತ್ತದೆ; ಅಮಾಯಕರು ಕಾಣಿಸುತ್ತಾರೆ; ಸಮಾಜ ಸರ್ವಸ್ವವನ್ನು ಧಾರೆಯೆರೆದಿದ್ದರೂ ಏನೂ ಸಿಗದ ನತದೃಷ್ಟರೇ ಕಾಣಿಸುತ್ತಾರೆ. ಹೇಗೆ ಇಂಗ್ಲೆಂಡಿನಲ್ಲಿ ಜನಾಂಗವನ್ನೇ ಅಶುದ್ಧಗೊಳಿಸಿ ನಾಶಮಾಡುವ ಹುನ್ನಾರ ನಡೆದಿತ್ತೋ ಅಂತಹುದು ಭಾರತದಲ್ಲಿ ಎಷ್ಟೊಂದು ನಡೆದಿತ್ತು! ಮೊಘಲರ ಕಾಲದಲ್ಲಿ, ಬ್ರಿಟಿಷರ ಸೆರಗಿನ ರಕ್ಷಣೆಯಲ್ಲಿ, ಮುಂದೆ ಸ್ವತಂತ್ರ ಭಾರತದಲ್ಲಿ ಪರಿವಾರವೊಂದರ ಕೃಪಾಕಟಾಕ್ಷದಲ್ಲಿ!

             ಅದೆಲ್ಲಾ ಹಳೆಯ ಕಥೆ; ಈಗ ಹಾಗಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ರೋದೆರ್ ಹ್ಯಾಮಿನಲ್ಲಿ ನಡೆದ ಸರಣಿ ಪ್ರಕರಣಗಳಿಗಿಂತ ಐದು ವರ್ಷ ಮುಂಚೆ ಭಾರತದ ಅಜ್ಮೀರ್'ನಲ್ಲೂ ಅಂತಹುದೇ ಪ್ರಕರಣಗಳು ನಡೆದಿದ್ದವು. ಯಥಾಪ್ರಕಾರ ಪೊಲೀಸ್ ಇಲಾಖೆ ಪ್ರಕರಣದ ದೂರು ಪತ್ರಗಳನ್ನು ಕಾಲ ಕೆಳಗೆ ಹಾಕಿ ಕೂತಿತ್ತು. ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಂಡಿದ್ದವು. ಕೆಲವು ಕಾಲೇಜು ಯುವತಿಯರು, ಹಲವು ಶಾಲಾ ಬಾಲಕಿಯರ ಸಹಿತ 500ಕ್ಕೂ ಹೆಚ್ಚು ಹುಡುಗಿಯರು ದೌರ್ಜನ್ಯಕ್ಕೆ ಒಳಗಾದರು. ಬಾಲಕಿಯರನ್ನು ಲೈಂಗಿಕವಾಗಿ ಶೋಷಣೆಗೊಳಿಸಿ ಆ ಫೋಟೋಗಳನ್ನು ಬಳಸಿ ಬ್ಲ್ಯಾಕ್ ಮೈಲ್ ಮಾಡಿ ಅತ್ಯಾಚಾರವೆಸಗಲಾಗುತ್ತಿತ್ತು. ಇದನ್ನು ತಡೆಯುವ ಬದಲು ಸ್ಥಳೀಯ ಮಾಧ್ಯಮಗಳು ಆ ಚಿತ್ರಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಂತ್ರಸ್ಥೆಯರನ್ನು ಮತ್ತಷ್ಟು ಕುಗ್ಗಿಸುವ ನೀಚ ಕಾರ್ಯ ಕೈಗೊಂಡವು. ಇದರ ಬೆನ್ನು ಹತ್ತಿ ಹೋದ ಓರ್ವ ಪತ್ರಕರ್ತ ಹಾಗೂ ಪೊಲೀಸ್ ಇಲಾಖೆ ಸ್ವಲ್ಪವೇ ಸಮಯದಲ್ಲಿ ತಮ್ಮ ಕಾರ್ಯವನ್ನು ನಿಲ್ಲಿಸಿಬಿಟ್ಟರು. ಸ್ಥಳೀಯ ರಾಜಕಾರಣಿಗಳು ತನಿಖೆ ಮುನ್ನಡೆಯದಂತೆ ತಡೆಯೊಡ್ಡಿದರು. ಕಾರಣ ಅಪರಾಧಿಗಳು ಆ ಒಂದು ಕುಟುಂಬದವರಾಗಿದ್ದರು...ಅದು ಖಾದಿಮ್ಸ್'ಗಳ ಪರಿವಾರ; ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಮೊದಲ ಶಿಷ್ಯರು ಎಂದು ಇತಿಹಾಸದಲ್ಲಿ ದಾಖಲಾದ ಅಜ್ಮೀರ್ ದರ್ಗಾದ ಉಸ್ತುವಾರಿ ನೋಡಿಕೊಳ್ಳುವ ಖಾದಿಮ್ ಪರಿವಾರ!

                 ಅತ್ಯಾಚಾರಿಗಳೆಲ್ಲಾ ಈ ಪರಿವಾರಕ್ಕೆ ಸೇರಿದವರು ಹಾಗೂ ಮುಸ್ಲಿಮರು ಎಂದು ಗೊತ್ತಾದುದೇ ತಡ ಪ್ರಕರಣ ಹಳ್ಳ ಹಿಡಿಯಿತು. ಮರಣ ಭೀತಿಯಿಂದ ಸಾಕ್ಷಿಗಳು ಮುಗುಮ್ಮಾಗುಳಿದರು. ಅಂತೂ ಇಂತೂ ಹೇಗೋ ಸಾಗಿದ ತನಿಖೆಯಿಂದಾಗಿ 1998ರಲ್ಲಿ ರಾಜಸ್ಥಾನದ ಉಚ್ಛ ನ್ಯಾಯಾಲಯ ಎಂಟು ಜನಕ್ಕೆ ಜೀವಾವಧಿ ಶಿಕ್ಷೆ ವಿಧಿಸಿತು. ಸರ್ವೋಚ್ಛ ನ್ಯಾಯಾಲಯ ಈ ಶಿಕ್ಷೆಯನ್ನು ಹತ್ತು ವರ್ಷಕ್ಕೆ ಇಳಿಸಿತು. ಇದು ನಮ್ಮ ನ್ಯಾಯದಾನದ ಪರಿ! ಇದರ ನಡುವೆ ಈ ಪ್ರಕರಣದ ಮುಖ್ಯ ಅರೋಪಿ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಫಾರೂಕ್ ಚಿಸ್ತಿ ಮಾನಸಿಕ ಅಸ್ವಸ್ಥನೆಂದು ನಾಟಕವಾಡಿ ಬಚಾವಾಗಲು ಯತ್ನಿಸಿದ. 2007ರಲ್ಲಿ ಅವನ ಮೇಲಿನ ಶಿಕ್ಷೆಯನ್ನು ರಾಜಸ್ಥಾನದ ಉಚ್ಛ ನ್ಯಾಯಾಲಯ ಮತ್ತೆ ಎತ್ತಿ ಹಿಡಿಯಿತು. ಮೊನ್ನೆ ಫೆಬ್ರವರಿ 15ಕ್ಕೆ ಹದಿನೆಂಟನೆಯ ಆರೋಪಿ ಸುಹೈಲ್ ಚಿಸ್ತಿ  ಶರಣಾಗುವುದರೊಂದಿಗೆ ಇಪ್ಪತ್ತಾರು ವರ್ಷಗಳ ಬಳಿಕವಾದರೂ ಸಂತ್ರಸ್ಥರಿಗೆ ನ್ಯಾಯ ಒದಗಿಸಿದ ನಮ್ಮ ನ್ಯಾಯ ವ್ಯವಸ್ಥೆಗೊಮ್ಮೆ ಉಘೇ ಉಘೇ ಎನ್ನಬೇಕು! ಅಷ್ಟು ತ್ವರಿತವಾಗಿದೆ ನಮ್ಮ ನ್ಯಾಯದಾನ! ನಮ್ಮ ಕಾನೂನು ಎಷ್ಟು ಪ್ರಬಲವಾಗಿದೆಯೆಂದರೆ ಸುಹೈಲ್ ಹಾಗೂ ಸಲೀಮ್ ಚಿಸ್ತಿಯನ್ನು ಬಿಟ್ಟು ಉಳಿದವರೆಲ್ಲರೂ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಅಜ್ಮೀರ್ ದರ್ಗಾದಲ್ಲಿ ಮೆರೆಯುತ್ತಿದ್ದಾರೆ! ಹಿಂದೂಗಳು ಮತ್ತೆ ಅಲ್ಲೇ ಚಾದರ ಅರ್ಪಿಸುತ್ತಲೇ ಇದ್ದಾರೆ!

                  ಹಾಂ ಈ ಕುಟುಂಬದ ಗುರುವಿನ ಬಗೆಗೂ ಹೇಳಬೇಕು. ಮೊಯಿನುದ್ದೀನ್ ಚಿಸ್ತಿ. ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದ ಸೂಫಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಘೋರಿಗೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲಲು ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಅದಕ್ಕೆ ಈ ಚಿಸ್ತಿಯ ಪ್ರೇರಣೆಯಿತ್ತು. ಇಂದು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಚಾದರ ಅರ್ಪಿಸಿ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು. ಗುರುವೇ ಅಂತಹವನು! ಇರಲು ಅಶನ, ವಸನ, ವಸತಿ ಕೊಟ್ಟ ಭಾರತದ ವರ ಪುತ್ರನ ಬೆನ್ನಿಗೆ ಇರಿದವನು! ಇನ್ನು ಆ ಮನೋಭಾವನೆ ಆ ಪರಿವಾರಕ್ಕೆ ಬಾರದೇ ಇದ್ದೀತೇ?

                   ಅಜ್ಮೀರ್ ಪ್ರಕರಣದಲ್ಲಿ ಬಂಧಿಸಲ್ಪಟ್ಟವರು ಹದಿನೆಂಟು ಜನ ಮಾತ್ರ. ಉಳಿದವರು ತಪ್ಪಿಸಿಕೊಂಡುಬಿಟ್ಟರು. ರೋದೆರ್ ಹ್ಯಾಮಿನಲ್ಲಾದಂತೆ ಇದೊಂದು ಪೂರ್ವಯೋಜಿತ ಕೃತ್ಯವೇ ಆಗಿತ್ತು. ಹಿಂದೂಗಳನ್ನು ಅಕ್ಷರಶಃ ನಾಶ ಮಾಡುವುದೇ ಇದರ ಉದ್ದೇಶವಾಗಿತ್ತು. ಇಂತಹ ಕೃತ್ಯ ಇಂದು ಲವ್ ಜಿಹಾದ್ ಸ್ವರೂಪ ಪಡೆದು ಹಲವು ಕಡೆ ಹಬ್ಬಿದೆ. ಇದನ್ನು ಸಮರ್ಥಿಸಿಕೊಳ್ಳುವ ಸೆಕ್ಯುಲರು ದಂಡೇ ಇದೆ. ನಮ್ಮ ನ್ಯಾಯಾಧೀಶರುಗಳು ಲವ್ ಜಿಹಾದಿನ ಅರಿವಿದ್ದೂ ಬೆಪ್ಪರಂತೆ ತಮ್ಮ ಪುಸ್ತಕದ ಬದನೆಕಾಯಿಯ ನ್ಯಾಯವನ್ನೇ ಕೊಡುತ್ತಾ ಲವ್ ಜಿಹಾದ್ ಸಂತ್ರಸ್ಥೆಯರನ್ನು ಜಿಹಾದಿಗಳ ಜೊತೆಯೇ ಕಳುಹುತ್ತಿದ್ದಾರೆ. ಚಾಣಕ್ಯನಂತಹ ಸಮರ್ಥ ರಾಜ್ಯ-ಅರ್ಥ-ನ್ಯಾಯ ಶಾಸ್ತ್ರಜ್ಞನಿದ್ದ ದೇಶದ ದುರವಸ್ಥೆ ಇದು.