ಪುಟಗಳು

ಶನಿವಾರ, ಡಿಸೆಂಬರ್ 29, 2018

ಜಗವ ಕೋರೈಸಿದ ಕೋಲ್ಮಿಂಚು

ಜಗವ ಕೋರೈಸಿದ ಕೋಲ್ಮಿಂಚು


                  ಭಾರತವೆಂಬ ನಾಡು ಬಗೆದಷ್ಟು ಮೊಗೆದು ಕೊಡುವ ಬೀಡು. ಯಾವುದನ್ನು ಅರಸಿ ಯಾರೇ ಬಂದರೂ ಅವರಿಗೆ ಬೇಕಾದುದನ್ನು ದಯಪಾಲಿಸಿದ ಸಂಪದ್ಭರಿತ ರಾಷ್ಟ್ರ ಇದು. ಆಧ್ಯಾತ್ಮಿಕತೆಯನ್ನು ಅರಸಿ ಬಂದವರಿಗೆ ಇದು ಗುರುವಾಯಿತು; ವಿವಿಧ ಶ್ರೇಣಿಗಳಿದ್ದೂ, ಎಷ್ಟೇ ಕುಟಿಲ ತಂತ್ರಗಳನ್ನು ಉಪಯೋಗಿಸಿದರೂ ಒಡೆಯದ ಇಲ್ಲಿನ ಸಾಮಾಜಿಕ ವ್ಯವಸ್ಥೆ ಹಲವರಿಗೆ ಅಧ್ಯಯನದ ವಸ್ತುವಾಯಿತು; ಸಂಪತ್ತನ್ನೇ ಲೂಟಿ ಮಾಡಲು ಬಂದವರಿಗೂ ಇದು ತನ್ನ ಎದೆಯನ್ನೇ ಬಗೆದಿಟ್ಟಿತು! ದಾಸ್ಯದ ಅವಧಿಯ ದುಸ್ತರ ಸನ್ನಿವೇಶದಲ್ಲೂ ಇಲ್ಲಿ ಕ್ಷಾತ್ರ ಮೆರೆಯಿತು; ಆಧ್ಯಾತ್ಮಿಕತೆಯ ಔನ್ನತ್ಯ ತಲುಪಿದ ಯೋಗಿಗಳ ಮುಂದೆ ಹಲವರು ನತಮಸ್ತಕರಾದರು; ಕೊಳ್ಳೆ ಹೊಡೆದಷ್ಟು ಮುಗಿಯದ ಸಂಪನ್ಮೂಲ ಕಾಣಿಸಿಕೊಂಡಿತು! ಅಂತಹಾ ಒಂದು ಕೋಲ್ಮಿಂಚೇ ಕೋಲಾರದ ಚಿನ್ನದ ಗಣಿ!

                     ಮತಾಂಧ, ರಕ್ಕಸ ಪ್ರವೃತ್ತಿಯ ಟಿಪ್ಪುವೆಂಬ ಇಲಿಯನ್ನು ಬೇಟೆಯಾಡಿದ ಬಳಿಕ ಈಸ್ಟ್ ಇಂಡಿಯಾ ಕಂಪನಿ ಆಗಿನ ಮೈಸೂರು ರಾಜ್ಯದ ಗಡಿಯನ್ನು ಗುರುತಿಸಲು ಎಚ್.ಎಂ. 33ನೇ ರೆಜಿಮೆಂಟಿನ ಲೆಫ್ಟಿನೆಂಟ್ ಜಾನ್ ವಾರೆನ್ ನನ್ನು 1802ರಲ್ಲಿ ನೇಮಿಸಿತು. ಆ ಸಮಯದಲ್ಲೇ ಎರ್ರಕೊಂಡ ಗುಡ್ಡದ (ಕೆ.ಜಿ.ಎಫ್. ನಿಂದ 15 ಕಿ.ಮೀ.) ಬಳಿ ಬಂಗಾರ ಸಿಗುತ್ತದೆ, ಕೆಲವು ಸ್ಥಳೀಯರು ಅಲ್ಲಿ ಚಿನ್ನವನ್ನು ಅಗೆದು ತೆಗೆಯುತ್ತಿದ್ದಾರೆ ಎಂಬ ವದಂತಿ ಅವನ ಕಿವಿಗೆ ಬಿತ್ತು. ಅದರ ವಿವರಗಳನ್ನು ಸಂಗ್ರಹಿಸಲೆಂದು ಕೋಲಾರಕ್ಕೆ ತೆರಳಿದ ಆತ ಅಲ್ಲಿನ ಚಿನ್ನವನ್ನು ತೋರಿಸಿದವರಿಗೆ ಪಾರಿತೋಷಕ ಕೊಡುವ ಬಗ್ಗೆ ಡಂಗುರ ಸಾರಿದ. ತುಸು ಸಮಯದಲ್ಲಿ ಹಳ್ಳಿಗನೊಬ್ಬ ಎತ್ತಿನ ಗಾಡಿಯಲ್ಲಿ ಕಲ್ಲುಮಣ್ಣನ್ನು ಹೇರಿಕೊಂಡು ಬಂದು ವಾರೆನ್ ಎದುರೇ ಅದನ್ನು ತೊಳೆದು ತೋರಿಸಿದಾಗ ಅದು ಫಳಫಳ ಹೊಳೆದು ಅವನ ಕಣ್ಣು ಕೋರೈಸಿತ್ತು; ಬ್ರಿಟಿಷ್ ಸಾಮ್ರಾಜ್ಯದ್ದೂ! ಆತ ಮರುಕ್ಷಣವೇ 1804ರ ಏಷಿಯಾಟಿಕ್ ಜರ್ನಲ್ನಲ್ಲಿ ಇದರ ಕುರಿತು ವರದಿಯೊಂದನ್ನು ಪ್ರಕಟಿಸಿದ. ವರದಿ ಮಾಡಿ ಆತ ಸುಮ್ಮನೆ ಕೂರಲಿಲ್ಲ. ಮಾರಿಕುಪ್ಪಂ ಮತ್ತು ಉರಿಗಾಂನಲ್ಲಿ ಚಿನ್ನ ಸಿಕ್ಕಿದೆಯೆಂಬ ವದಂತಿಯನ್ನು ಕೇಳಿ ಆತ ಆ ಪ್ರದೇಶದಲ್ಲಿ ಅನ್ವೇಷಣೆ ನಡೆಸಿದ. ಅವನ ಗಮನಕ್ಕೆ ಬಂದ ವಿಚಾರವೆಂದರೆ ಪರಿಯ ಎನ್ನುವ ಜನಾಂಗ ಅಲ್ಲಿ ಗಣಿಗಾರಿಕೆ ನಡೆಸುವಲ್ಲಿ ಪರಿಣತಿ ಪಡೆದಿತ್ತು. ಕೂಲಿಯಾಳುಗಳು 30 ಅಡಿ ಆಳದವರೆಗೆ ಇಳಿಯುತ್ತಿದ್ದರು. ಸಿಕ್ಕಿದ ಅದುರನ್ನು ಹೆಂಗಸರು ಅರೆದು ಜಾಲಿಸುತ್ತಿದ್ದರು. ಹನ್ನೆರಡು ಮಂದಿ ಕೆಲಸ ಮಾಡಿದರೆ ಒಂದು ದಿನದಲ್ಲಿ ಒಂದು ಗುಂಡಿ ತೆಗೆಯಬಹುದಾಗಿತ್ತು. ಆದರೆ ಅವರು ಬೇಸಗೆಯಲ್ಲಿ ಮಾತ್ರ ಗಣಿಗಾರಿಕೆ ನಡೆಸಬೇಕಾಗಿ ಬರುತ್ತಿತ್ತು. ಆಗ ಕೋಲಾರಕ್ಕೆ ಗಣಿಗಾರಿಕೆ ಮಾಡಲು ಬೇಕಾಗಿದ್ದ ಹಗ್ಗ, ಬುಟ್ಟಿ, ಕಂದೀಲು, ಕಟ್ಟಿ ಇವುಗಳ ಬೆಲೆ ದುಬಾರಿಯಾಗಿದ್ದರಿಂದ(ಇದು ಟಿಪ್ಪುವಿನ ಕೊಡುಗೆ) ಬೇರಾರಿಗೂ ಇದು ಆಕರ್ಷಕ ಉದ್ದಿಮೆಯಾಗಿ ಕಂಡಿರಲಿಲ್ಲ. ವಾರೆನ್ ಹತ್ತೆನ್ನರಡು ಕೂಲಿಕಾರರೊಡನೆ ಮಾರಿಕುಪ್ಪಮ್ಗೆ ತೆರಳಿ ಹಳೆಯಗಣಿಯಿಂದ ಅದುರನ್ನು ತೆಗೆದು ಅರೆದು ಪುಡಿ ಮಾಡಿಸಿದ. ಅದನ್ನು ಜಾಲಿಸಿ ಮೂವತ್ತು ಪಗೋಡ ತೂಕದಷ್ಟು ಚಿನ್ನವನ್ನು ಸಂಗ್ರಹಿಸಿದ ವಾರೆನ್, ಅದರ ಪರಿಶುದ್ಧತೆಯನ್ನು ತಿಳಿಯಲು ಮದ್ರಾಸಿನ ಟಂಕಸಾಲೆಗೆ ಕಳಿಸಿದ. ಅಲ್ಲಿಂದ ಇದು ಉತ್ತಮ ಗುಣಮಟ್ಟದ ಚಿನ್ನವೆಂದು ವರದಿ ಬಂತು. ಹಳ್ಳಿಗರ ಚಿನ್ನವನ್ನು ತೆಗೆಯಲು ಬಳಸಿದ ವಿಧಾನದಿಂದ, 56ಕೆಜಿಯಷ್ಟು ನಿಕ್ಷೇಪದಿಂದ ಸುಮಾರು ಒಂದು ಗ್ರೈನ್ ನಷ್ಟು ಚಿನ್ನವನ್ನು ಅಲ್ಲಿ ತೆಗೆಯಬಹುದು;  ಸರ್ಕಾರ ಈ ಪರಿಶೋಧನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕೆಂದು ಆತ ಶಿಫಾರಸು ಮಾಡಿದ. ಆದರೆ ಸರ್ಕಾರ ಆಗ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

                   ಆದರೆ ಅಷ್ಟು ಹೊತ್ತಿಗೆ ಜಗದಾದ್ಯಂತ ಇದರ ಸುದ್ದಿ ಹಬ್ಬಿ ಹಲವರ ಬಾಯಲ್ಲಿ ನೀರೂರಿತ್ತು. ಹಲವು ದರೋಡೆಕೋರರು ದಾಳಿಯಿಟ್ಟು ವಿಫಲರಾದರು. ಕೆಲವರು ತಮ್ಮದೇ ಗುಂಪುಕಟ್ಟಿಕೊಂಡು ಬಂದು ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಬೇಕಾಯಿತು. 1860ರವರೆಗೆ ಹಲವಾರು ರೀತಿಯ ಅಧ್ಯಯನ ಕೈಗೊಂಡು, ಗಣಿಗಾರಿಕೆ ನಡೆಸುವ ವಿಧಾನಗಳನ್ನು ಬ್ರಿಟಿಷರು ಪ್ರಯೋಗಿಸಿದರಾದರೂ ಅದು ಫಲ ಕಾಣಲಿಲ್ಲ. ಬ್ರಿಟಿಷ್ ಸೇನೆಯಲ್ಲಿದ್ದ ಮೈಕೇಲ್ ಫಿಟ್ಜ್ ಗೆರಾಲ್ಡ್ ಲಾವೆಲ್ ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದ ಐರಿಷ್ ಯೋಧ. ಆತ ಆಗಷ್ಟೇ ನ್ಯೂಝಿಲ್ಯಾಂಡಿನಲ್ಲಿ ಮಾವೋರಿ ಯುದ್ಧ ಮುಗಿಸಿ ಬಂದಿದ್ದ. ವಿಪರೀತ ಓದುವ ಹುಚ್ಚಿದ್ದ ಆತನಿಗೆ ವಾರೆನ್ ವರದಿ ಕಣ್ಣಿಗೆ ಬಿತ್ತು. ಮಾವೋರಿ ಯುದ್ಧದಲ್ಲಿ ಭಾಗವಹಿಸಿದ್ದಾಗ ನಡೆಸಿದ್ದ ಚಿನ್ನದ ಗಣಿಗಾರಿಕೆಯ ಅನುಭವ ಆತನಲ್ಲಿ ಸಾಹಸವೊಂದಕ್ಕೆ ಅಣಿಯಾಗಲು ಪ್ರೇರೇಪಿಸಿತು. 1871ರಲ್ಲಿ ಎತ್ತಿನ ಬಂಡಿಯಲ್ಲಿ ಕೋಲಾರಕ್ಕೆ ಬಂದಿಳಿದ ಆತ ಹಲವು ಸಂಭಾವ್ಯ ಗಣಿಗಳನ್ನು ಗುರುತಿಸಿಕೊಂಡ. ಚಿನ್ನದ ನಿಕ್ಷೇಪದ ಕುರುಹುಗಳೂ ಅವನಿಗೆ ಸಿಕ್ಕವು. ಎರಡು ವರ್ಷಗಳ ಸತತ ಅಧ್ಯಯನದ ಬಳಿಕ 1873ರಲ್ಲಿ ಗಣಿಗಾರಿಕೆಗೆ ಅನುಮತಿ ಬೇಡಿ ಆತ ಮೈಸೂರು ಮಹಾರಾಜರಿಗೆ ಪತ್ರ ಬರೆದ. ಆದರೆ ಚಿನ್ನದ ಗಣಿಗಾರಿಕೆಗೆ ಕಾರ್ಯಸಾಧುವಲ್ಲ ಎಂದು ನಂಬಿದ್ದ ಅಧಿಕಾರಿಗಳು ಕಲ್ಲಿದ್ದಲು ತೆಗೆಯಲಷ್ಟೇ ಆತನಿಗೆ ಅನುಮತಿ ಕೊಟ್ಟರು. "ನನ್ನ ಹುಡುಕಾಟದಲ್ಲಿ ನಾನು ಯಶಸ್ವಿಯಾದೆನೆಂದರೆ ಸರಕಾರಕ್ಕೂ ಅದೊಂದು ಘನತೆಯ ವಿಚಾರವಾಗಿರುತ್ತದೆ. ಒಂದು ವೇಳೆ ನಾನು ಯಶಸ್ವಿಯಾಗದಿದ್ದರೂ ಸರಕಾರಕ್ಕೆ ಅದರಿಂದ ನಷ್ಟವೇನೂ ಇಲ್ಲ" ಎಂದು ಸರಣಿ ಪತ್ರಗಳ ಮೂಲಕ ಮನವಿ/ಮನವರಿಕೆ ಮಾಡಿದ ಆತ 1875ರಲ್ಲಿ ಚಿನ್ನದ ಗಣಿಗಾರಿಕೆಗೆ ಅನುಮತಿ ಗಿಟ್ಟಿಸಲು ಯಶಸ್ವಿಯಾದ. ಅವನು ಆರಿಸಿದ ಒಂದು ಕ್ಲಿಪ್ತ ಪ್ರದೇಶದಲ್ಲಿ ಚಿನ್ನ ತೆಗೆಯಲು ಇಪ್ಪತ್ತು ವರ್ಷಗಳ ಗುತ್ತಿಗೆ ನೀಡಲು ಸರ್ಕಾರ ಒಪ್ಪಿತು. ಅವನು ಉರಿಗಾಂ ಬಳಿ ತೋಡುದಾರಿ ತೆಗೆಸಿದ. ಲಾವೆಲ್ಗೆ ಗಣಿಗಾರಿಕೆಯಲ್ಲಿ ಅಲ್ಪಸ್ವಲ್ಪ ಅನುಭವವಿತ್ತೇ ಹೊರತು ತಜ್ಞತೆಯಿರಲಿಲ್ಲ; ಹಣವೂ ಇರಲಿಲ್ಲ. ಹಾಗಾಗಿ ಅವನ ಸಾಹಸ ನಿಕ್ಷೇಪದ ಅನ್ವೇಷಣೆಗಷ್ಟೇ ಸೀಮಿತವಾಯಿತು. ಆದರೆ ಅವನ ಅನ್ವೇಷಣಾ ದೃಷ್ಟಿ ಹಾಗೂ ಗಣಿಗಾರಿಕೆಯೆಂಬ ಅಪಾಯಕಾರಿ ಸಾಹಸ ಎಫ್. ಇ. ಪೆನ್ನಿಯ "ಲಿವಿಂಗ್ ಡೇಂಜರಸ್ಲಿ" ಎಂಬ ಕಾದಂಬರಿಗೆ ಮೂಲಸ್ತ್ರೋತವಾಗಿ ಆತನನ್ನು ಜನಪ್ರಿಯಗೊಳಿಸಿತು. ಆದರೆ ಬಂಡವಾಳದ ಕೊರತೆಯಿಂದ ತನ್ನ ಉದ್ಯಮವನ್ನು ಹೆಚ್ಚು ಮುಂದುವರೆಸಲಾರದೆ ಆತ 1877ರಲ್ಲಿ ಮದ್ರಾಸಿನ ಮೇಜರ್ ಜನರಲ್ ಡಿ ಲಾ ಪೋರ್ ಬಿಯರ್ಸ್ಫರ್ಡ್, ಮೆಕೆಂಜಿ, ಸರ್ ವಿಲಿಯಂ ಮತ್ತು ಕೋಲ್ ವಿಲಿಯಂ ಆರ್ಬುತ್ನಾಟರಿಗೆ ತನ್ನ ಹಕ್ಕನ್ನು ಮಾರಿದ. ಅವರು ಅನಂತರ ಕೋಲಾರ ಕನ್ಸೆಸಷನರೀಸ್ ಕಂಪೆನಿ ಲಿಮಿಟೆಡ್ ಎಂಬ ಸಂಸ್ಥೆ ರಚಿಸಿಕೊಂಡು ಕೆಲಸ ಮುಂದುವರಿಸಿದರು.

                ಈ ಕಂಪೆನಿ ಐದು ಸಾವಿರ ಪೌಂಡ್ ಬಂಡವಾಳ ಹೂಡಿತು. ಆಸ್ಟ್ರೇಲಿಯದಿಂದ ಇಬ್ಬರು ಗಣಿ ತಜ್ಞರನ್ನು ಕರೆಸಿಕೊಂಡು ಗಣಿ ಕೆಲಸ ಪ್ರಾರಂಭಿಸಿತು. ಸ್ವಲ್ಪಕಾಲದ ಅನಂತರ ಅವರ ಪ್ರಯತ್ನಕ್ಕೆ ಫಲ ದೊರಕಿತು. ಮದ್ರಾಸಿನ ಉರಿಗಾಂ ಕಂಪನಿ ಲಿ. ಸ್ಥಾಪಿತವಾಗಿ ಕೆಲಸ ಮಾಡತೊಡಗಿದ ಮೇಲೆ ಇನ್ನೂ ಹಲವಾರು ಕಂಪನಿಗಳು ಆರಂಭವಾದುವು. ವೈನಾಡಿನಲ್ಲಿ ಚಿನ್ನದ ಉದ್ಯಮದಲ್ಲಿ ಕೈಸುಟ್ಟುಕೊಂಡ ಅನೇಕ ಮಂದಿ ಇಲ್ಲಿಗೆ ದೌಡಾಯಿಸಿದರು. 1881ರ ವೇಳೆಗೆ ಅಲ್ಲಿ 11 ಕಂಪನಿಗಳಿದ್ದುವು. ಇವುಗಳಲ್ಲಿ ತೊಡಗಿಸಿದ್ದ ಬಂಡವಾಳ 13,00,000 ಫೌಂ. ಮುಂದೆ ಹೂಡಿಕೆದಾರರ ಒತ್ತಡದಿಂದಾಗಿ ಜಾನ್ ಟೈಲರನ ಕಂಪೆನಿಗೆ ಗಣಿಗಾರಿಕೆಯ ಅವಕಾಶ ಸಿಕ್ಕಿತು. ಗಣಿಗಾರಿಕಾ ತಂತ್ರಜ್ಞರನ್ನು ತನ್ನ ಜೊತೆಗೆ ಕರೆದುಕೊಂಡು ಬಂದ ಈ ಕಂಪೆನಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಅಪಾರ ಪ್ರಮಾಣದ ಚಿನ್ನವನ್ನು ತೆಗೆಯಿತು. ಮೈಸೂರು ಗಣಿಯನ್ನು ಮರುಪರಿಶೀಲಿಸಿದ ಕ್ಯಾಪ್ಟನ್ ಪ್ಲಮರ್ ಎಂಬ ತಜ್ಞ, ಪುರಾತನರು ಹಾಗೆಯೇ ಉಳಿಸಿದ್ದ ಭಾಗದಲ್ಲಿ ಗಣಿ ಮಾಡಿದಾಗ ಒಂದು ಟನ್ ಅದುರಿನಲ್ಲಿ ನಾಲ್ಕು ಔನ್ಸ್ ಚಿನ್ನ ಸಿಕ್ಕಿತು. ಅಲ್ಲಿಂದೀಚೆಗೇ ಈ ಉದ್ಯಮ ಲಾಭಪ್ರದವಾದ್ದು. 1894-95ರ ವೇಳೆಗೆ ಅಲ್ಲಿ ಒಟ್ಟು 13 ಕಂಪನಿಗಳು 35,00,000 ಪೌಂಡ್ಸ್ ಬಂಡವಾಳ ತೊಡಗಿಸಿದ್ದುವು. 1886-87ರ ಚಿನ್ನದ ಉತ್ಪನ್ನ ರೂ.8,88,606 ಮೌಲ್ಯದ 16,325 ಔನ್ಸ್ಗಳು!

             ಮುಂದಿನ ಮುಕ್ಕಾಲು ಶತಮಾನ ನಡೆದದ್ದು ಅಗಾಧ ಪ್ರಮಾಣದ ಲೂಟಿ! ಭಾರತ ಸ್ವಾತಂತ್ರ್ಯಗೊಂಡಾಗ ಈ ಸಂಸ್ಥೆಗಳು ತಮ್ಮ ಆಡಳಿತ ಕೇಂದ್ರವನ್ನು ಲಂಡನ್ನಿನಿಂದ ಭಾರತಕ್ಕೆ ವರ್ಗಾಯಿಸಿದವು. ಮೈಸೂರು ಸರ್ಕಾರ ಈ ಕೈಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಿದ್ದು 1956ರಲ್ಲಿ. ಇದಕ್ಕಾಗಿ ವಿದೇಶೀ ಕಂಪನಿಗಳಿಗೆ ನೀಡಲಾದ ಹಣ ರೂ.1,64,00,000. ಆ ಹೊತ್ತಿಗೆ ಅಪಾರ ಪ್ರಮಾಣದ ಚಿನ್ನ ಹೊರಹೋಗಿತ್ತು. 1962ರಲ್ಲಿ ಕೇಂದ್ರ ಸರ್ಕಾರ ಇದನ್ನು ತನ್ನ ವಶಕ್ಕೆ ತೆಗೆದುಕೊಂಡಿತು.  ಚಿನ್ನದಗಣಿ ಬೆಳೆದಂತೆಲ್ಲಾ ಮಾರಿಕುಪ್ಪಮ್ ಮೈಸೂರು ಮೈನ್ಸ್, ನಂದಿದುರ್ಗಮ್ ಮೈನ್ಸ್, ಉರಿಗಾಂ ಮೈನ್ಸ್, ಪಾಲಕ್ಕಾಡು ಮೈನ್ಸ್ ಮತ್ತು ಚಾಂಪಿಯನ್ ರೀಫ್ ಮೈನ್ಸ್ ಮುಂತಾದುವುಗಳಲ್ಲಿ ಗಣಿ ಕೆಲಸಗಳು ನಡೆದವು. 2000ಕ್ಕಾಗುವಾಗ ಊರಿಗಾಂ ಮೈನ್ಸ್ 13,000 ಅಡಿಗಳಷ್ಟು ಆಳಕ್ಕೆ ಹೋಗಿ ಪ್ರಪಂಚದಲ್ಲೇ 2ನೆಯ ಅತೀ ಆಳದ ಗಣಿಗಾರಿಕೆಯ ಸ್ಥಾನ ಪಡೆದುಕೊಂಡಿತು. ಮುಂದೆ ಚಿನ್ನ ತೆಗೆಯುವ ಖರ್ಚು ಸಿಗುವ ಚಿನ್ನದ ಮೌಲ್ಯಕ್ಕಿಂತ ಹೆಚ್ಚಾಗುತ್ತಾ ಸಾಗುತ್ತಿದ್ದಂತೆ 2001ರಲ್ಲಿ ಅನಿವಾರ್ಯವಾಗಿ ಗಣಿಗಾರಿಕೆಯನ್ನು ಸ್ಥಗಿಸಗೊಳಿಸಬೇಕಾಯಿತು.

ಕೋಲಾರದ ಚಿನ್ನದ ಗಣಿಯಲ್ಲಿ ಎಂದಿನಿಂದ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ನಿಖರ ಇತಿಹಾಸ ದೊರಕುವುದಿಲ್ಲ. ಸಿಂಧೂ ನಾಗರಿಕತೆಯ ಸಮಯದಿಂದಲೂ ಇಲ್ಲಿಂದ ಚಿನ್ನ ರಫ್ತಾಗುತ್ತಿದೆ ಎಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಗುಪ್ತರು ಇಲ್ಲಿನ ಚಾಂಪಿಯನ್ ರೀಫಿನಲ್ಲಿ ಐವತ್ತು ಮೀಟರ್ ಆಳದವರೆಗೆ ಗಣಿಗಾರಿಕೆ ನಡೆಸಿದ್ದರು; ಚೋಳರೂ ಇಲ್ಲಿಂದ ಚಿನ್ನ ತೆಗೆದಿದ್ದರು; ವಿಜಯನಗರದವರೂ ತೆಗೆದಿದ್ದರು ಎನ್ನುವ ಅಂತೆಕಂತೆಗಳಿವೆ. ಇದ್ದರೂ ಇರಬಹುದು. ಆದರೆ ಆಧಾರಗಳು ಸಿಗುವುದಿಲ್ಲ.

               ಸಂಪದ್ಭರಿತ ಭಾರತಕ್ಕೆ ಕೀರ್ತಿ ಎಂಬ ಬಂಗಾರದ ತಿಲಕವನ್ನಿಟ್ಟಿದ್ದು ಕೋಲಾರ ಚಿನ್ನದ ಗಣಿ. ಬರೋಬ್ಬರಿ 150 ವರ್ಷಗಳ ಕಾಲ ಬಗೆ ಬಗೆದು ಚಿನ್ನವನ್ನು ಇಡೀ ವಿಶ್ವಕ್ಕೆ ಕೊಟ್ಟಿತದು. ಆದರೆ ಬ್ರಿಟಿಷರು ಅಲ್ಲಿ ಕಟ್ಟಿದ್ದು ಹೊಸತೊಂದು ವಸಾಹತನ್ನೇ! ಜಾನ್ ಟೈಲರ್ ಈ ನೂತನ ವಸಾಹತುಶಾಹಿ ಗಣಿಗಾರಿಕೆಗೆ ಮೂಲ ಕಾರಣನಾದ. ತಮಿಳುನಾಡಿನ ಧರ್ಮಪುರಿ, ಸೇಲಂ, ಈರೋಡಿನಿಂದ ಕಾರ್ಮಿಕರನ್ನು ಇಲ್ಲಿಗೆ ಕರೆದುಕೊಂಡು ಬಂದ ಬ್ರಿಟಿಷರು ಅವರನ್ನು ಜೀತದಾಳುಗಳಂತೆ ಶೋಷಿಸಿದರು. ಯಾವುದೇ ರಕ್ಷಣಾ ಕವಚಗಳಿಲ್ಲದೆ, ಸರಿಯಾದ ಸವಲತ್ತುಗಳಿಲ್ಲದೆ ಅವರನ್ನು ಗಣಿಹೊಂಡಗಳೊಳಕ್ಕೆ ಇಳಿಸಿದರು. ಅಲ್ಲೊಂದು ನಗರವೇ ನಿರ್ಮಾಣವಾಯಿತು. ಆದರೆ ಸೌಲಭ್ಯಗಳೆಲ್ಲಾ ಸಿಕ್ಕಿದ್ದು ಬ್ರಿಟಿಷರಿಗೆ. ಕಾರ್ಮಿಕರಿಗೆ ದಕ್ಕಿದ್ದು ಸುಡುಬಿಸಿಲು, ಗಣಿಹೊಂಡದೊಳಗಿನ ಬಿಸಿ ಅಷ್ಟೇ! ಚಿನ್ನದ ಗಣಿಗಾರಿಕೆಯ ಜೊತೆ ಜೊತೆಗೆ ಪೂರ್ವ-ಪಶ್ಚಿಮದ ಬೆರಕೆ ಸಂಸ್ಕೃತಿಯೊಂದು ಅಲ್ಲಿ ಶುರುವಾಗಿ ಮಿನಿ ಇಂಗ್ಲೆಂಡ್ ಎಂದೇ ಕರೆಯಲ್ಪಟ್ಟಿತು. ಬ್ರಿಟಿಷರಿಗೆ ಬಂಗಲೆಗಳು, ಕಾರ್ಮಿಕರಿಗೆ ಶೆಡ್ಡುಗಳು! ಒಂದೊಂದು ಶೆಡ್ಡಿನಲ್ಲೂ ಒಂದಕ್ಕಿಂತ ಹೆಚ್ಚು ಪರಿವಾರಗಳು ಬಾಳಬೇಕಾದ ಅನಿವಾರ್ಯ ಪರಿಸ್ಥಿತಿ. ಅದರ ಮೇಲೆ ನಿತ್ಯ ಇಲಿಗಳ ದಾಳಿ. ಅಲ್ಲಿನ ಕಾರ್ಮಿಕರು ವರ್ಷವೊಂದಕ್ಕೆ ಕನಿಷ್ಟ 50ಸಾವಿರ ಇಲಿಗಳನ್ನು ಕೊಲ್ಲುತ್ತಿದ್ದರಂತೆ! 55 ಡಿಗ್ರೀ ಸೆಲ್ಷಿಯಸ್ ಗಿಂತಲೂ ಹೆಚ್ಚು  ತಾಪಮಾನದಲ್ಲಿ ನಿತ್ಯ ಕೆಲಸ! 1893ರಲ್ಲಿ ಕೋಲಾರ ಚಿನ್ನದ ಗಣಿಗೆ ರೈಲುಮಾರ್ಗವೂ ನಿರ್ಮಾಣವಾಯಿತು. ಬ್ರಿಟಿಷರು ಬಂದು ರೈಲು ಮಾರ್ಗ ನಿರ್ಮಿಸಿದರು ಎಂದು ಹೊಗಳುವವರು ಬ್ರಿಟಿಷರು ಯಾಕೆ ನಿರ್ಮಿಸಿದರು ಎಂದು ತಮ್ಮನ್ನೇ ತಾವು ಪ್ರಶ್ನೆ ಕೇಳಿಕೊಂಡರೆ ರೈಲು ಮಾರ್ಗಗಳನ್ನು ನಿರ್ಮಿಸಿದ ಔಚಿತ್ಯ ತಿಳಿಯುತ್ತದೆ. ಶಿವನ ಸಮುದ್ರ ಜಲವಿದ್ಯುತ್ ಸ್ಥಾವರದಿಂದ ಉತ್ಪನ್ನವಾದ ವಿದ್ಯುತ್ ಮೊದಲು ಬೆಳಗಿದ್ದು ಕೋಲಾರದ ಚಿನ್ನದ ಗಣಿಯನ್ನು. ಮುಂದುವರೆದ ದೇಶಗಳು ಈ ಕ್ಷೇತ್ರದಲ್ಲಿ ಶೈಶವಾವಸ್ಥೆಯಲ್ಲಿದ್ದಾಗಲೇ ಪ್ರಪಂಚದಲ್ಲೇ ಅತ್ಯಂತ ಉದ್ದದ ಹೈ ವೋಲ್ಟೇಜ್ ಮಾರ್ಗವನ್ನು ಶಿವನಸಮುದ್ರದಿಂದ ಕೋಲಾರ ಚಿನ್ನದ ಗಣಿಯವರೆಗೆ ನಿರ್ಮಿಸಲಾಗಿತ್ತು! 1930ರಲ್ಲಿ ಕಾರ್ಮಿಕರಿಗೆ ಗುರುತಿನ ಸಂಖ್ಯೆ ನೀಡಿ, ತಾಮ್ರದ ತಗಡಿನಲ್ಲಿ ಗುರುತಿನ ಪಟ್ಟಿಯನ್ನು ಸಿದ್ಧಪಡಿಸಿ ಕಬ್ಬಿಣದ ಬಳೆಯಲ್ಲಿ ಒಂದು ಕೈಗೆ ಬೇಡಿಯಂತೆ ತೊಡಿಸಲಾಗುತ್ತಿತ್ತು. ಇವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತಿತ್ತು. ಜೀತದಾಳುಗಳಂತೆ ಕೈಗಳಿಗೆ ಹಾಕಿರುವ ಪಟ್ಟಿಗಳನ್ನು ತೆಗೆಯಬೇಕೆಂದು ಹಾಗೂ ತೀವ್ರವಾದ ಚಳಿಯಿಂದ ತಪ್ಪಿಸಿಕೊಳ್ಳಲು ಜಾಗಬೇಕೆಂದೂ ಒತ್ತಾಯಿಸಿ ಬೇಡಿಕೆಯನ್ನು ಮುಂದಿಟ್ಟು ಕೆ. ಆರ್. ಷಣ್ಮುಗಂ ಚೆಟ್ಟಿಯಾರ್ ನೇತೃತ್ವದಲ್ಲಿ 24 ದಿನಗಳ ಕಾಲ ಹೋರಾಟ ನಡೆಯಿತು. ಗೋಲಿಬಾರು ನಡೆದು 44 ಜನರಿಗೆ ತೀವ್ರ ಗಾಯಗಳಾದವು. ಈ ಭಾರಿ ಹೋರಾಟದ ನಂತರ ಕೈಗಳಿಗೆ ಹಾಕಿದ್ದ ಬೇಡಿಯಂತಹ ಪಟ್ಟಿಗಳನ್ನು ತೆಗೆಯಲಾಯಿತು. ಬಳಿಕವೂ ಹಲವು ಹೋರಾಟಗಳು ನಡೆದವಾದರೂ ಫಲಪ್ರದವಾಗಲಿಲ್ಲ. ಗಣಿಗಾರಿಕೆಯ ಸ್ಥಳದಲ್ಲಿನ ಧೂಳಿನಿಂದ ಸಿಲಿಕಾಸಿಸ್ ಎಂಬ ಖಾಯಿಲೆಗೆ ಬಲಿಯಾದ, ಗಣಿಯೊಳಗಿನ ಸ್ಫೋಟ, ಅಪಘಾತಗಳಿಗೆ ಸಿಕ್ಕಿ ಸತ್ತವರ, ಜೀವಚ್ಛವವಾದ ಕಾರ್ಮಿಕರ ಸಂಖ್ಯೆಗೆ ಲೆಖ್ಖವೇ ಇಲ್ಲ. ಶ್ವಾಸಕೋಶವನ್ನು ಧೂಳು ಹೊಕ್ಕು ಉಸಿರಾಟದ ತೊಂದರೆಯ ಸಹಿತ ಕಂಡು ಕೇಳರಿಯದ ಕಾಯಿಲೆಗೆ ತುತ್ತಾದವರಿಗೆ ಕನಿಷ್ಟ ವೈದ್ಯಕೀಯ ಸೌಲಭ್ಯವೂ ಕಂಪೆನಿಗಳಿಂದ ಸಿಗುತ್ತಿರಲಿಲ್ಲ. ಆಳಕ್ಕೆ ಇಳಿದರೆ ಹೆಣ, ಮೇಲೆ ಬಂದರೆ ಹಣ; ಇದು ಕೆಜಿಎಫ್ ಕಾರ್ಮಿಕ ವಲಯದಲ್ಲಿ ಜನಜನಿತವಾಗಿದ್ದ ಮಾತು! ನಾಯಿಗಳಿಗೂ, ಸ್ಥಳೀಯರಿಗೂ ಪ್ರವೇಶವಿಲ್ಲ ಎಂಬ ಫಲಕಗಳು ಬ್ರಿಟಿಷ್ ಬಂಗಲೆಗಳ ಮುಂದೆ ತೂಗುತ್ತಿದ್ದವು!

                 ಅಲ್ಲಿ ಗಣಿಗಾರಿಕೆ ನಡೆದು ಹೊರಹಾಕಿದ ಟೈಲಿಂಗ್ ಡಂಪ್ ಎಂದು ಕರೆಯುವ ಸೈನೈಡ್ ರಾಶಿಗಳನ್ನು ಯುಪಿಎ ಸರಕಾರ 2013ರಲ್ಲಿ ಆಸ್ಟ್ರೇಲಿಯಾದ ಕಂಪೆನಿಯೊಂದಕ್ಕೆ ಧಾರೆ ಎರೆಯಲು ಹವಣಿಸಿತ್ತು. ಇಲ್ಲಿ ಇಂತಹ 38 ಮಿಲಿಯನ್ ಟನ್ ಸೈನೈಡ್ ಗುಡ್ಡಗಳು ಇವೆ. ಒಂದು ಟನ್ ಸೈನೈಡ್ ಗುಡ್ಡೆದಿಂದ 0.7 ಗ್ರಾಂ ಚಿನ್ನ ತೆಗೆಯಬಹುದು. ಇದಕ್ಕಾಗಿ ಗಣಿ ಅಗೆಯಬೇಕಾಗಿಲ್ಲ. ಅದನ್ನು ಅರೆದು ಸೋಸಿದರೆ ಸಾಕು ಲಾಭವೋ ಲಾಭ!

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

ಪರಕೀಯ ದಾಳಿಯಿಂದ ದೇಶವನ್ನು ಮುಕ್ತಗೊಳಿಸಿ ಪ್ರಜ್ವಲಿಸಿದ ಮಾರ್ತಾಂಡ

            ಸಮಗ್ರ ಭಾರತವನ್ನು ಒಂದು ಚೌಕಟ್ಟಿನಲ್ಲಿ ಕಟ್ಟಿದ ಅದ್ಭುತ ರಚನೆ ಏಕಾತ್ಮತಾ ಸ್ತೋತ್ರ. ಅಲ್ಲಿ ಭಾರತದ ಔನ್ನತ್ಯ ಸಾರುವ ಇತಿಹಾಸದ ಬಿಂದುಗಳಿವೆ. ನದಿ-ಕಂದರ-ಗಿರಿ-ಸಾಗರಗಳ ಚಿತ್ರವಿದೆ. ಋಷಿಮುನಿಗಳ, ಅರಸ-ಯೋಧರುಗಳ, ಕರ್ತೃ-ಕರ್ಮಿಗಳ, ಚಿಂತಕ-ಹೋರಾಟಗಾರರ ಚಿತ್ರಣವಿದೆ. ಅದರ ಓದು, ಹುಟ್ಟಿನಿಂದ ಇಂದಿನವರೆಗಿನ ಸಮಗ್ರ ಭಾರತವನ್ನು ಒಮ್ಮೆ ಸುತ್ತಿಬಂದ ಆವರ್ಣನೀಯ ಆನಂದವನ್ನು ಕೊಡುತ್ತದೆ. ಅಲ್ಲೊಂದು ಶ್ಲೋಕ ಈ ರೀತಿ ಇದೆ;
ಲಾಚಿದ್ ಭಾಸ್ಕರವರ್ಮಾ ಚ ಯಶೋಧರ್ಮಾ ಚ ಹೂಣಜಿತ್ |
ಶ್ರೀಕೃಷ್ಣದೇವರಾಯಶ್ಚ ಲಲಿತಾದಿತ್ಯ ಉದ್ಭಲಃ ||೨೪||
ಈ ಶ್ಲೋಕದಲ್ಲಿರುವ ಲಲಿತಾದಿತ್ಯ ಎನ್ನುವ ಹೆಸರು ನನ್ನ ಗಮನ ಸೆಳೆಯಿತು. ನಮ್ಮ ಪಠ್ಯಪುಸ್ತಕಗಳಲ್ಲಾಗಲೀ, ಇತಿಹಾಸದ ಪುಸ್ತಕಗಳಲ್ಲಾಗಲೀ ಕಾಣದ ಹೆಸರದು. ಆದರೆ ಆತ ನಾವು ಕಾಣುವುದಕ್ಕೆ ಕಾರಣನಾದ ಸೂರ್ಯನಿಗೊಂದು ದೇವಾಲಯವನ್ನೇ ನಿರ್ಮಿಸಿದ್ದ. ತನ್ನ ಕಾಲ ಬಂದಾಗ ಸಮರ್ಥವಾಗಿ ರಾಜ್ಯವಾಳಿದ. ತಾನು ಅಧಿಕಾರದಲ್ಲಿದ್ದಷ್ಟು ಕಾಲ ಭಾರತವನ್ನು ಪರಕೀಯ ದಾಳಿಯಿಂದ ರಕ್ಷಿಸಿದ. ಇನ್ನು ಸಾಕು ಎಂದು ಅರಿವಾದಾಗ ಹಿಮಾಲಯಕ್ಕೆದ್ದು ಹೊರಟ! ಹೌದು ಈ ಬಾರಿ ಅವನ ಕಥೆಯೇ!

        ಕಾಶ್ಮೀರದಲ್ಲಿ ಗೋನಂದ ಎನ್ನುವ ವಂಶದ ದೊರೆಗಳ ಆಡಳಿತ ಕ್ರಿ.ಶ. 627ರವರೆಗೆ ನಡೆದಿತ್ತು. ಈ ವಂಶದ ಕೊನೆಯ ದೊರೆ ಬಾಲಾದಿತ್ಯ. ಆತನಿಗೆ ಗಂಡು ಸಂತಾನವಿರಲಿಲ್ಲ. ಹೀಗಾಗಿ ಆತನ ಮಗಳನ್ನು ವಿವಾಹವಾದ, ಕಾಶ್ಮೀರದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಕೋಟ ವಂಶದ ದುರ್ಲಭವರ್ಧನನಿಗೆ ಕಾಶ್ಮೀರದ ಪಟ್ಟ ಒಲಿದು ಬಂತು. ಅಪಾರ ಧೈರ್ಯ-ಶೌರ್ಯಕ್ಕೆ ಹೆಸರಾಗಿದ್ದ ಕಾರ್ಕೋಟ ವಂಶಜರಿಗೆ ಸಖಸೇನ ಎಂಬ ಬಿರುದನ್ನೇ ಕಾಶ್ಮೀರದ ರಾಜರುಗಳು ದಯಪಾಲಿಸಿದ್ದರು. ದುರ್ಲಭವರ್ಧನ 36 ವರ್ಷಗಳ ಕಾಲ ರಾಜ್ಯಭಾರ ಮಾಡಿದ. ಇವನ ಮರಣಾನಂತರ ಮಗ ದುರ್ಲಭಕ 50 ವರ್ಷ ಕಾಲ ರಾಜ್ಯವಾಳಿದರೂ ಆತನ ವಿಷಯವಾಗಿ ಚಾರಿತ್ರಿಕ ವಿವರಗಳಾವುವೂ ಲಭ್ಯವಿಲ್ಲ. ದುರ್ಲಭಕನ ಮಕ್ಕಳೇ ಚಂದ್ರಾಪೀಡ (ವಜ್ರಾದಿತ್ಯ), ತಾರಾಪೀಡ (ಉದಯಾದಿತ್ಯ) ಮತ್ತು ಮುಕ್ತಾಪೀಡ (ಲಲಿತಾದಿತ್ಯ). ದುರ್ಲಭಕನ ಬಳಿಕ ಪಟ್ಟವನ್ನೇರಿದವ ಹಿರಿಯನಾದ ಚಂದ್ರಾಪೀಡ (ಕ್ರಿ.ಶ. 713). ಅರಬ್ಬರ ಆಕ್ರಮಣವನ್ನು ನಿವಾರಿಸಲು ಈತ ಚೀನಾದ ಅರಸನ ನೆರವು ಕೇಳಿದ. ಆದರೆ ಚೀನಾದಿಂದ ಇಂದಿನ ಹಾಗೆ ಅಂದೂ ಪುಡಿಗಾಸಿನ ನೆರವೂ ಸಿಗಲಿಲ್ಲ. ಆದರೂ ತನ್ನ ಸಾಮರ್ಥ್ಯದಿಂದಲೇ ದೇಶವನ್ನು ಅರಬ್ಬರ ಬರ್ಬರತೆಯಿಂದ ರಕ್ಷಿಸಿಕೊಂಡಿದ್ದ ಚಂದ್ರಾಪೀಡ. ಇವನ ಸಾಹಸವನ್ನು ಕಂಡು ಚೀನಾದ ಚಕ್ರವರ್ತಿ ಕ್ರಿ.ಶ 720ರಲ್ಲಿ ರಾಜನೆಂದು ಗೌರವಿಸಿದ್ದನ್ನು ಚೀನಾದ ಇತಿಹಾಸದ ಪುಟಗಳು ಸಾರುತ್ತವೆ. ಉತ್ತಮ, ನ್ಯಾಯಪರ ಆಡಳಿತಕ್ಕೆ ಹೆಸರಾಗಿದ್ದ ಚಂದ್ರಾಪೀಡನ ಬಗೆಗಿನ ಕಥೆಯೊಂದು ಇಂದಿಗೂ ಪ್ರಚಲಿತದಲ್ಲಿದೆ. ಒಮ್ಮೆ ಚಂದ್ರಾಪೀಡನ ಅಧಿಕಾರಿಗಳು ದೇವಸ್ಥಾನವೊಂದನ್ನು ಕಟ್ಟಲು ಒಬ್ಬ ಚಮ್ಮಾರನ ಮನೆ ಇದ್ದ ಸ್ಥಳವನ್ನು ಆರಿಸಿದರು. ಚಮ್ಮಾರ ರಾಜನ ಬಳಿ ತನ್ನ ವಿಪತ್ತಿನ ಬಗ್ಗೆ ದೂರು ಕೊಟ್ಟ. ವಿಚಾರಣೆ ನಡೆಸಿದ ರಾಜ ತನ್ನ ಅಧಿಕಾರಿಗಳ ತಪ್ಪನ್ನರಿತು ಅವರಿಗೆ ಶಿಕ್ಷೆ ವಿಧಿಸಿದ. ಚಮ್ಮಾರ ರಾಜನ ನ್ಯಾಯವನ್ನು ಮೆಚ್ಚಿ ಸ್ವತಃ ಆ ಸ್ಥಳವನ್ನು ದೇವಸ್ಥಾನಕ್ಕಾಗಿ ಬಿಟ್ಟು ಕೊಟ್ಟ. ರಾಜ ಸೂಕ್ತ ಮೌಲ್ಯ ನೀಡಿಯೇ ಆ ಜಾಗವನ್ನು ಚಮ್ಮಾರನಿಂದ ಪಡೆದುಕೊಂಡ. ಇಂತಹ ಉತ್ತಮ ಆಡಳಿತಗಾರ ಸ್ವಂತ ತಮ್ಮ ತಾರಾಪೀಡನ ಕುತಂತ್ರಕ್ಕೆ ಕೊಲೆಯಾಗಿ ಹೋದ(ಕ್ರಿ.ಶ 722). ಕ್ರೂರಿಯೂ, ಕೊಲೆಗಡುಕನೂ, ನಿರ್ದಯಿಯೂ ಆಗಿದ್ದ, ಆಡಳಿತ ಕೌಶಲ್ಯವಿಲ್ಲದ ತಾರಾಪೀಡ ಪಟ್ಟಕ್ಕೆ ಬಂದ ಮೇಲೆ ಅವನ ಕಾಟ ತಾಳಲಾರದೆ ಅನೇಕರು ದೇಶಬಿಟ್ಟು ಹೋದರು. ಕ್ರಿ.ಶ. 724ರಲ್ಲಿ ಈತ ಪಾರ್ಶ್ವವಾಯು ಪೀಡಿತನಾಗಿ ಸಾವನ್ನಪ್ಪಿದ ಬಳಿಕ ಪಟ್ಟಕ್ಕೆ ಬಂದವನೇ ಲಲಿತಾದಿತ್ಯ. ಇವನ ಆಡಳಿತದಲ್ಲಿ ಕಾಶ್ಮೀರದ ನಕ್ಷೆ, ಚಿತ್ರಣ ಎಲ್ಲವೂ ಬದಲಾದವು.

            ಲಲಿತಾದಿತ್ಯ ಸಿಂಹಾಸನವನ್ನೇರಿದಾಗ ಕಾಶ್ಮೀರದ ಸ್ಥಿತಿ ಹದಗೆಟ್ಟಿತ್ತು. ಅವನ ಅಣ್ಣನ ಕ್ರೌರ್ಯಕ್ಕೆ ಸ್ವಾಭಿಮಾನಿಗಳೆಲ್ಲಾ ಊರು ಬಿಟ್ಟು ತೆರಳಿದ್ದರು. ನಡುವೆಯೇ ರಾಜ್ಯವನ್ನು ವಶಪಡಿಸಿಕೊಳ್ಳಲು ಶತ್ರುಗಳ ಕಾಟ. ಇದರಿಂದಾಗಿ ಅವನ  ಸಂಪೂರ್ಣ ಆಡಳಿತ ಕಾಲದಲ್ಲಿ ಸದಾ ಯುದ್ಧನಿರತನಾಗಬೇಕಾದ ಅನಿವಾರ್ಯತೆ ಉಂಟಾಯಿತು. ಅದರಿಂದ ರಾಜ್ಯಕ್ಕೇ, ಆಡಳಿತಕ್ಕೇನೂ ಹಾನಿಯಾಗಲಿಲ್ಲ. ಬದಲಾಗಿ ಕಾಶ್ಮೀರ ತನ್ನ ಸುವರ್ಣಯುಗವನ್ನೇ ಕಂಡಿತು. ತನ್ನ ಶತ್ರುಗಳನ್ನು ಬಡಿಯಲು ಹೊರಟವ ಇಡೀ ಭಾರತವನ್ನು ತನ್ನ ಚಕ್ರಾಧಿಪತ್ಯಕ್ಕೆ ಒಳಪಡಿಸಿಕೊಳ್ಳುವ ದಿಗ್ವಿಜಯಕ್ಕೂ ಅಣಿಯಾದ. ಪರ್ವತವಾಸಿಗಳಾದ ದರ್ದ, ಕಾಂಬೋಜ ಮತ್ತು ತುರುಷ್ಕರನ್ನೂ ಸದೆಬಡಿದ ಬಳಿಕ ಆತ ಪಂಜಾಬ್ ಪ್ರಾಂತ್ಯವನ್ನು ವಶಪಡಿಸಿಕೊಂಡು ಕನೌಜಿನ ಯಶೋವರ್ಮನ ಮೇಲೆ ಜಯ ಗಳಿಸಿದ. ಯಶೋವರ್ಮನನ್ನು ಸೋಲಿಸಿದ ಬಳಿಕ ಆತನ ಸಖ್ಯವನ್ನು ಬಯಸಿದ. ಇದು ಹಿಂದೂ ಅರಸರಿಗೂ ತುರ್ಕರಿಗೂ ನಡುವಣ ಇರುವ ವ್ಯತ್ಯಾಸ. ಶತ್ರುವನ್ನು ಕ್ಷಮಿಸಿ ತನ್ನವರಲ್ಲೊಂದಾಗಿಸಿದ ರಾಜಧರ್ಮ ನೀತಿ. ಅವನ ಈ ಧರ್ಮ ಮಾರ್ಗವೇ  ಮುಂದೆ ಆತನಿಗೆ ಅರಬ್ಬರೊಂದಿಗೆ ಕಾದಾಡುವಾಗ, ಟಿಬೆಟನ್ನರನ್ನು ಮಣಿಸುವಾಗ ಸಹಾಯಕ್ಕೊದಗಿತು. ತರುವಾಯ ಆತ ಬಿಹಾರ, ಬಂಗಾಳ, ಕಾಮರೂಪ, ಒರಿಸ್ಸಾಗಳನ್ನೂ ಗೆದ್ದು ಪೂರ್ವ ಸಮುದ್ರದವರೆಗೆ ತನ್ನ ಅಧಿಪತ್ಯವನ್ನು ವಿಸ್ತರಿಸಿದ. ದಕ್ಷಿಣ ಭಾರತದಲ್ಲಿ ಪ್ರಬಲರಾಗಿದ್ದ ರಾಷ್ತ್ರಕೂಟರನ್ನು ಸೋಲಿಸಿ ಕಾಶ್ಮೀರಕ್ಕೆ ಹಿಂತಿರುಗುವಾಗ ಗುಜರಾತ್, ಕಾಠಿಯಾವಾಡ, ಮಾಳ್ವ ಮತ್ತು ಮಾರ್ವಾಡಗಳ ಮೂಲಕ ಹಾದು ಹೋಗಿ ವಲ್ಲಭಿಯ ಮೈತ್ರಕ ಮತ್ತು ಚಿತ್ತೂರಿನ ರಾಜ್ಯಗಳನ್ನು ಗೆದ್ದು ಕಾಶ್ಮೀರಕ್ಕೆ ಹಿಂತಿರುಗಿದ. ದಕ್ಷಿಣ ದಿಗ್ವಿಜಯದ ಅನಂತರ ತನ್ನ ರಾಜ್ಯದ ಉತ್ತರ ಭಾಗದಲ್ಲಿ ಅನೇಕ ಯುದ್ಧಗಳನ್ನು ಕೈಕೊಂಡ.

            ಆಗ ಬಲಾಢ್ಯವಾಗಿದ್ದ ಟಿಬೆಟಿಯನ್ನರು ಲಲಿತಾದಿತ್ಯನಿಗೆ ಸವಾಲಾಗಿದ್ದರು. ಒಂದು ಕಡೆ ಟಿಬೆಟಿಯನ್ನರ ಉಪಟಳ, ಇನ್ನೊಂದೆಡೆ ಸ್ವಾತ್, ಮುಲ್ತಾನ್, ಸಿಂಧ್ ಪ್ರಾಂತ್ಯಗಳನ್ನು ಗೆದ್ದು ಹಿಂದೂಗಳನ್ನು ತರಿಯುತ್ತಾ, ಮತಾಂತರಿಸುತ್ತಾ ಮುಂದೊತ್ತಿ ಬಂದು ಕಾಶ್ಮೀರದ ಬಾಗಿಲು ತಟ್ಟುತ್ತಿದ್ದ ಅರಬ್ಬರು. ಇಬ್ಬರಿಗೂ ಪಾಠ ಕಲಿಸಬೇಕಾದರೆ ಬೃಹತ್ ಸೈನ್ಯದ ಸಂಚಯನದ ಅಗತ್ಯತೆಯ ಮನಗಂಡ ಮುಕ್ತಾಪೀಡ ಚೀನಾದ ಸಹಾಯ ಕೋರಿದ. ಆಗ ಚೀನಾದಲ್ಲಿ ತಾಂಗ್ ವಂಶ ಉತ್ತುಂಗದಲ್ಲಿದ್ದ ಕಾಲ. ಜೊತೆಗೇ ಕೇಂದ್ರ ಚೀನಾದ ಕೆಲ ಭಾಗಗಳನ್ನು ಟಿಬೆಟಿಯನ್ನರಿಗೆ ಕಳೆದುಕೊಂಡು ಟಿಬೆಟಿಯನ್ನರ ಭೀತಿಯಲ್ಲಿದ್ದ ಕಾಲ. ಚೀನಾದ ದೊರೆ ತಾನು ಲಲಿತಾದಿತ್ಯನನ್ನು ಕಾಶ್ಮೀರದ ರಾಜ ಹಾಗೂ ಗೆಳೆಯನೆಂದು ಗೌರವಿಸುತ್ತೇನೆಯೇ ಹೊರತು ಸೈನ್ಯದ ನೆರವು ನೀಡಲು ಸಾಧ್ಯವಿಲ್ಲವೆಂದ. ಉರಿದೆದ್ದ ಲಲಿತಾದಿತ್ಯ ಚೀನಾದ ಮೇಲೆ ದಂಡೆತ್ತಿ ತನ್ನ ಸಾಮಂತ ರಾಜ್ಯವನ್ನಾಗಿಸಿದ. ಇದರಿಂದ ಚೀನಾದ ಪದಾತಿದಳದ ಜೊತೆ, ಸಸಾನಿಡ್-ಚೀನೀ ಅಶ್ವಸೈನ್ಯ ಲಲಿತಾದಿತ್ಯನ ಸಹಾಯಕ್ಕೆ ಒದಗಿತು. ಈ ಸಸಾನಿಡ್ ಪರ್ಷಿಯಾವನ್ನು ಆಳುತ್ತಿದ್ದ ರಾಜವಂಶ. ಅರಬ್ಬರು ಪರ್ಷಿಯಾವನ್ನು ಆಕ್ರಮಿಸಿದಾಗ ಸಸಾನಿಡ್ ವಂಶದ ಕೊನೆಯ ದೊರೆಯ ಮಗ ಚೀನಾದ ತಾಂಗ್ ರಾಜವಂಶದ ಆಸರೆ ಪಡೆದ. ಬಹುಷಃ ಅವನಿಂದಲೇ ಸಸಾನಿಡ್ ಅಶ್ವ ಸೈನ್ಯ ಚೀನಿಯರಿಗೆ ಸಿಕ್ಕಿರುವ ಸಾಧ್ಯತೆಗಳಿವೆ. ಹೀಗೆ ಚೀನಾದ ಸೈನ್ಯ ಹಾಗೂ ಯಶೋವರ್ಮನ ಸಹಾಯದೊಂದಿಗೆ ಲಲಿತಾದಿತ್ಯ ಟಿಬೆಟಿಯನ್ನರ ಮೇಲೆ ದಂಡೆತ್ತಿ ಹೋಗಿ ತುಖಾರಿ ಸ್ಥಾನ, ಲಡಕ್ ಪ್ರಾಂತ್ಯಗಳನ್ನಲ್ಲದೆ ಸಂಪೂರ್ಣ ಟಿಬೆಟನ್ನು ವಶಪಡಿಸಿಕೊಂಡ.

           ಈಗ ಮುಕ್ತಾಪೀಡ ಅರಬ್ಬರನ್ನು ಭಾರತದಿಂದ ಕೊತ್ತೊಗೆಯಲು ಸಿದ್ಧನಾದ. ಸ್ವಾತ್, ಸಿಂಧ್, ಮುಲ್ತಾನ್ಗಳಿಂದ ಅರಬ್ಬರನ್ನು ಓಡಿಸಿದ ಲಲಿತಾದಿತ್ಯನಿಗೆ ಅಫ್ಘನ್ನಿನಲ್ಲಿ ಹಿಂದೂಗಳನ್ನು ಗೋಳುಹೊಯ್ದುಗೊಳ್ಳುತ್ತಿರುವ ವಿಚಾರ ಕಿವಿಗೆ ಬಿತ್ತು. ತಕ್ಷಣ ಅಫ್ಘನ್ನರ ಮೇಲೆ ದಾಳಿ ಮಾಡಿ ಆತ ಕಾಬೂಲನ್ನು ಗೆದ್ದ. ಇರಾನಿನ ಕೆಲ ಭಾಗಗಳನ್ನೂ ತನ್ನ ವಶವಾಗಿಸಿಕೊಂಡ. ಕಾಬೂಲಿನ ಮುಖಾಂತರ   ಅಫ್ಘನ್ನಿನ ಈಶಾನ್ಯ ಭಾಗಗಳನ್ನು, ತುರ್ಕಿಸ್ತಾನ, ಟ್ರಾನ್ಸೊಕ್ಸಿಯಾನಾ(ಆಧುನಿಕ ಉಜ್ಬೇಕಿಸ್ತಾನ್, ತಜಕಿಸ್ತಾನ್, ದಕ್ಷಿಣ ಕಿರ್ಗಿಸ್ತಾನ್ ಮತ್ತು ನೈಋತ್ಯ ಕಝಕಿಸ್ತಾನಗಳೊಂದಿಗೆ ಕೂಡಿದ ಮಧ್ಯ ಏಷ್ಯದ ಭಾಗ)ಗಳಲ್ಲಿದ್ದ ಮುಸಲರ ಸೊಕ್ಕು ಮುರಿದ. ಬುಖಾರ್ ಪ್ರಾಂತ್ಯದ ಆಡಳಿತಗಾರ ಮುಮಿನ್ ನಾಲ್ಕು ನಾಲ್ಕು ಬಾರಿ ಲಲಿತಾದಿತ್ಯನ ಕೈಯಲ್ಲಿ ಏಟು ತಿಂದ. ಬುಖಾರ ಸಂಸ್ಕೃತದ ವಿಹಾರ ಪದದಿಂದ ಬಂದಿದೆ. ಈಗಿನ ಉಜ್ಬೆಕಿಸ್ತಾನಿನಲ್ಲಿ ಈ ಪ್ರಾಂತವಿದೆ. "ತನಗೆ ಸೋತು ಶರಣಾಗತರಾದುದರ ಕುರುಹಾಗಿ ತುರುಷ್ಕರ ಅರ್ಧ ತಲೆ ಬೋಳಿಸುವಂತೆ ಲಲಿತಾದಿತ್ಯ ಆದೇಶಿಸಿದ್ದ. ಹಿಂದೆ ಆಕ್ರಮಿಸಿಕೊಂಡು ಮುಂದುವರಿದಿದ್ದ ಭಾಗಗಳಿಂದ ಮುಸ್ಲಿಮರು ಹಿಂದೆ ಹಿಂದೆ ಸರಿಯಬೇಕಾಯಿತು. ವಾಯುವ್ಯ ಭಾರತದ ಅನೇಕ ಭಾಗಗಳಿಂದಲೂ ಕಾಲು ಕೀಳಬೇಕಾಯಿತು. ಕಸಬಾವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಭಾಗಗಳ ಜನರು ಮತ್ತೆ ವಿಗ್ರಹಾರಾಧನೆಯಲ್ಲಿ ತೊಡಗಿದರು. ಸೋತು ಓಡಿದ ಮುಸ್ಲಿಮರಿಗೆ ಎಲ್ಲಿ ಹೋಗುವುದು ಎಂಬುದೇ ಗೊಂದಲವಾದಾಗ, ಅರಬ್ಬರ ಸಾಮಂತನೊಬ್ಬ ಸರೋವರದಾಚೆಯ ಆಲ್-ಹಿಂದ್ ಬಳಿ ಅವರೆಲ್ಲಾ ಇರಲು ವ್ಯವಸ್ಥೆ ಮಾಡಿದ. ಅದನ್ನು ಅತ್ ಮೆಹಫುಜಾ(ರಕ್ಷಿತ) ಎಂದು ಹೆಸರಿಟ್ಟು ಕರೆಯಲಾಯಿತು" ಎಂದು ಮುಸ್ಲಿಂ ಇತಿಹಾಸಕಾರ ಬಿಲಾದುರಿ ಬರೆದಿದ್ದಾನೆ.(ಇಂಡಿಯನ್ ರೆಸಿಸ್ಟೆನ್ಸ್ ಟು ಅರ್ಲಿ ಮುಸ್ಲಿಂ ಇನ್ವೇಡರ್ಸ್ ಅಪ್ ಟು 1206 ಎ.ಡಿ. - ಡಾ|| ರಾಮಗೋಪಾಲ್ ಮಿಶ್ರಾ). ಮಸೂದಿ ಎಂಬ ಅರಬ್ ಇತಿಹಾಸಕಾರ "ಹಜ್ಜಾಜನು ಅರಬ್ ಸೇನಾಧಿಕಾರಿ ಅಬ್ದುಲ್ ರಹಮಾನನ ಅಧಿಕಾರವನ್ನು ವಜಾಗೊಳಿಸಿ ಬೇರೊಬ್ಬನನ್ನು ನೇಮಿಸುವುದಾಗಿ ಬೆದರಿಕೆ ಹಾಕಿದಾಗ ಅಬ್ದುಲ್ ರಹಮಾನನು ದಂಗೆಯೆದ್ದು ಹಿಂದೂರಾಜನೊಬ್ಬನ ಜೊತೆ ಹೊಂದಾಣಿಕೆ ಮಾಡಿಕೊಂಡು ಹಜ್ಜಾಜನ ವಿರುದ್ಧವೇ ಯುದ್ಧಕ್ಕೆ ಸಿದ್ಧನಾದ. ಈ ಒಪ್ಪಂದ ಕಾರ್ಯರೂಪಕ್ಕೆ ಬರದ ಕಾರಣ ಅಬ್ದುಲ್ ರಹಮಾನ್ ಆತ್ಮಹತ್ಯೆ ಮಾಡಿಕೊಂಡ. ಆದರೆ ಆ ಹಿಂದೂ ರಾಜ ಯುದ್ಧ ಮುಂದುವರೆಸಿದ. ಆತ ಪೂರ್ವ ಪರ್ಷಿಯಾವನ್ನು ವಶಪಡಿಸಿಕೊಂಡು ಟೈಗ್ರಿಸ್ ಮತ್ತು ಯುಫ್ರೆಟಿಸ್ ನಡಿಗಳ ದಡದವರೆಗೆ ಮುಂದುವರೆದಿದ್ದ. ಹಜ್ಜಾಜ ಶಾಂತಿ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದರೂ ಆತ ಖಲೀಫನಿಗೆ ಬಗ್ಗಲಿಲ್ಲ" ಎಂದು ಬರೆದಿದ್ದಾನೆ. ಆ ಸಮಯದಲ್ಲಿ ಅಂತಹಾ ಬಲಾಢ್ಯ ಹಿಂದೂ ಅರಸನಿದ್ದದ್ದು ಲಲಿತಾದಿತ್ಯನೇ. ಕಲ್ಹಣನ ರಾಜತರಂಗಿಣಿ ಒದಗಿಸಿದ ಮಾಹಿತಿಯೂ ಇದರೊಡನೆ ತಾಳೆಯಾಗುತ್ತದೆ.

         ಪೂರ್ವ ಸಮುದ್ರ ಮಹೋದಧಿಯಿಂದ ಪಶ್ಚಿಮದ ಯುಫ್ರೆಟಿಸ್ & ಟೈಗ್ರಿಸ್ ನದಿಗಳವರೆಗೆ, ಕಜಕಿಸ್ತಾನದಿಂದ ಒರಿಸ್ಸಾ ಹಾಗೂ ರಾಷ್ಟ್ರಕೂಟರು ಆಳುತ್ತಿದ್ದ ದಕ್ಷಿಣದ ಭಾಗಗಳವರೆಗೆ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿ ಕಾಶ್ಮೀರವನ್ನು ಕೇಂದ್ರವನ್ನಾಗಿಸಿಕೊಂಡು ಮೂವತ್ತಾರು ವರ್ಷಗಳ ಕಾಲ ಏಕಚಕ್ರಾಧಿಪತಿಯಾಗಿ ಮೆರೆದ ಲಲಿತಾದಿತ್ಯ. ಅವನ ಅವಧಿಯಲ್ಲಿ ಕಾಶ್ಮೀರ ಸರ್ವಾಂಗೀಣ ಪ್ರಗತಿ ಕಂಡಿತು. ಸ್ವತಃ ಸೈನ್ಯವನ್ನು ನಡೆಸಿ ಮಾಡಿದಷ್ಟೂ ಯುದ್ಧಗಳನ್ನು ಗೆದ್ದ ಅವನು ಅಲೆಗ್ಸಾಂಡರನೊಡನೆ ಹೋಲಿಸಬೇಕಾದ ಜಗದೇಕವೀರ. ಈತನ ಕಾಲದಲ್ಲಿ ಕಾಶ್ಮೀರ ನಾನಾ ಮುಖವಾಗಿ ಪ್ರಗತಿಹೊಂದಿ ಸಂಪದ್ಭರಿತ ನಾಡಾಯಿತು. ಲಲಿತಾದಿತ್ಯ ತನ್ನ ದಂಡಯಾತ್ರೆಗಳಿಂದ ಗಳಿಸಿದ ಅಪಾರ ಐಶ್ವರ್ಯದಿಂದ ಭವನಗಳನ್ನೂ, ದೇವಾಲಯಗಳನ್ನೂ, ಸರೋವರ, ಕಾಲುವೆಗಳನ್ನೂ ನಿರ್ಮಿಸಿದ. ಮಾರ್ತಾಂಡ ಸೂರ್ಯ ದೇವಾಲಯ ಒಂದು ಸಾಕು ಅವನ ಹಿರಿಮೆಯನ್ನು ಸಾರಲು. ಯಶೋವರ್ಮನನ್ನು ಸೋಲಿಸಿದ ಬಳಿಕ ಕನೌಜನಿಂದ ಭವಭೂತಿ ಮತ್ತು ವಾಕ್ಪತಿರಾಜ ಎಂಬ ಸುಪ್ರಸಿದ್ಧ ಕವಿಗಳನ್ನು ಕಾಶ್ಮೀರಕ್ಕೆ ಆಹ್ವಾನಿಸಿ ತನ್ನ ರಾಜ್ಯದಲ್ಲೇ ನೆಲೆಸುವಂತೆ ಮಾಡಿದ. ಮಹಾಪದ್ಮವೆಂಬ ಬೃಹತ್ ಸರೋವರಕ್ಕೆ ಅನೇಕ ಕಾಲುವೆಗಳನ್ನು ಕಡಿಸಿ ಕಾಶ್ಮೀರದ ಬಹುಭಾಗವನ್ನು ನದೀ ಮಾತೃಕವನ್ನಾಗಿಸಿ ಸಸ್ಯ ಸಂಪನ್ನವಾಗಿ ಮಾಡಿದ. ಅಲ್ಲಿನ ವಿವಿಧ ರೀತಿಯ ಕಾಲುವೆಗಳ ರಚನಾಕೌಶಲ್ಯವನ್ನು ಇಂದಿಗೂ ಶಿಲ್ಪಿಗಳನ್ನು ನಿಬ್ಬೆರಗಾಗಿಸುತ್ತವೆ. ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನದಲ್ಲಿ ಶಾರದಿ ಗ್ರಾಮದಲ್ಲಿರುವ ಶಾರದಾಪೀಠಕ್ಕೆ ಲಲಿತಾದಿತ್ಯ ಭೇಟಿಕೊಡುತ್ತಿದ್ದ ಉಲ್ಲೇಖ ರಾಜತರಂಗಿಣಿಯಲ್ಲಿ ದಾಖಲಾಗಿದೆ.

         ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಕ್ರಿ.ಶ. 711-12ರಲ್ಲಿ ಸಿಂಧ್ ಮೇಲೆ ದಾಳಿಯೆಸಗಿ ಆಕ್ರಮಿಸಿಕೊಂಡದ್ದು ಭಾರತದ ಇತಿಹಾಸದ ಅತಿಮುಖ್ಯ ಘಟನೆಗಳಲ್ಲಿ ಒಂದೆಂದು ದಾಖಲಾಗಿದೆ. ಆದರೆ ಮುಂದಿನ 2 ದಶಕಗಳಲ್ಲಿ ಭಾರತದ ಮೇಲೆ ಅರಬ್ಬರು 3 ಸಲ ದಂಡೆತ್ತಿ ಬಂದಾಗ ಮೂರು ಸಲವೂ ಅವರನ್ನು ಲಲಿತಾದಿತ್ಯ ಮುಕ್ತಾಪೀಡ ಸೋಲಿಸಿ ಓಡಿಸಿದ್ದು ಇತಿಹಾಸ ಪಠ್ಯಪುಸ್ತಕಗಳಲ್ಲಿ ದಾಖಲಾಗಲೇ ಇಲ್ಲ. ಅಶೋಕ, ಅಕ್ಬರ್, ಔರಂಗಜೇಬ, ಕೊನೆಯಲ್ಲಿ ಬ್ರಿಟಿಷ್ ಭಾರತೀಯ ಸಾಮ್ರಾಜ್ಯ ಭಾರತ ಕಂಡ ಅತಿದೊಡ್ಡ ಸಾಮ್ರಾಜ್ಯಗಳು ಎಂದು ಬ್ರಿಟಿಷರು ರಚಿಸಿದ, ಇಂದೂ ಅದೇ ಜಾಡಿನಲ್ಲಿರುವ ನಮ್ಮ ಪಠ್ಯಪುಸ್ತಕಗಳು ಹೇಳುತ್ತವೆ. ಆದರೆ ಭಾರತದ ಇತಿಹಾಸದಲ್ಲೇ ಅತ್ಯಂತ ಬೃಹತ್ತಾದ ಸಾಮ್ರಾಜ್ಯವನ್ನು ಸ್ಥಾಪಿಸಿದ ಲಲಿತಾದಿತ್ಯ ಮುಕ್ತಾಪೀಡನ ಹೆಸರೇ ಇಲ್ಲಿನ ಪಠ್ಯಪುಸ್ತಕಗಳಲ್ಲಿಲ್ಲ. ಆತ ಅರಬ್ಬರನ್ನು ಮಾತ್ರ ಸೋಲಿಸಲಿಲ್ಲ. ಚೀನಿಯರನ್ನು, ಟಿಬೆಟಿಯನ್ನರನ್ನು, ಬಲಿಷ್ಟ ಯಶೋವರ್ಮ, ರಾಷ್ಟ್ರಕೂಟ, ವಂಗ ದೇಶಾಧಿಪರನ್ನು ಜಯಿಸಿದ. ಅವನ ಸಾಮ್ರಾಜ್ಯ ಕ್ಯಾಸ್ಪಿಯನ್ ಸಮುದ್ರದಿಂದ ಮಹೋದಧಿವರೆಗೆ, ಕಜಕ್ನಿಂದ ಕರ್ಣಾಣದವರೆಗೆ ಹರಡಿತ್ತು. ಅಕ್ಬರನ ಸಾಮ್ರಾಜ್ಯ ಲಲಿತಾದಿತ್ಯನ ಸಾಮ್ರಾಜ್ಯದ ಅರ್ಧದಷ್ಟೂ ಇರಲಿಲ್ಲ. ಇಂತಹ ಬೃಹತ್ ಸಾಮ್ರಾಜ್ಯವನ್ನು ಲಲಿತಾದಿತ್ಯ ಕಟ್ಟಿದ್ದು ಮುಂದೊತ್ತಿ ಬರುತ್ತಿದ್ದ ಅರಬ್ಬರ ವಿರೋಧದ ನಡುವೆ ಎಂಬುದು ಗಮನಾರ್ಹ ಅಂಶ. ಅಂದಿನ ದಿನಗಳಲ್ಲಿ ತಾವು ಆಕ್ರಮಿಸಿಕೊಂಡ ನಾಡಲ್ಲೆಲ್ಲಾ ತಮ್ಮ ಮತವನ್ನು ಬಲವಂತವಾಗಿ ಹೇರಲು ಯತ್ನಿಸಿದ ಮುಸಲರು, ಕ್ರೈಸ್ತರಂತೆ ಲಲಿತಾದಿತ್ಯ ತನ್ನ ಆಡಳಿತದಲ್ಲಿದ್ದ ನಾಡುಗಳಲ್ಲಿ ಒಮ್ಮೆಯೂ ಮಾಡಲಿಲ್ಲ. ಲಲಿತಾದಿತ್ಯ ತನ್ನ ಜೀವಮಾನದಲ್ಲಿ ಒಮ್ಮೆಯೂ ಸೋಲು ಅನುಭವಿಸಲಿಲ್ಲ. ಅಲಿಗ್ಸಾಂಡರನನ್ನು ಬಿಟ್ಟರೆ ಇಂತಹಾ ದಾಖಲೆ ಇರುವ ಐತಿಹಾಸಿಕ ವ್ಯಕ್ತಿ ಮತ್ತೊಬ್ಬನಿಲ್ಲ. ತನ್ನ ಪಾಲಿನ ಕೆಲಸ ಇನ್ನು ಮುಗಿಯಿತು ಎಂದು ಅರಿವಾದೊಡನೆ ಲಲಿತಾದಿತ್ಯ ಮುಕ್ತಾಪೀಡ ತನ್ನ 60ನೆಯ ವಯಸ್ಸಿನಲ್ಲಿ ಭಾರತೀಯ ಜೀವನಧರ್ಮದಂತೆ ಜೀವನ್ಮುಕ್ತನಾಗುವ ದೃಷ್ಟಿಯಂತೆ ಸಿಂಹಾಸನ ತ್ಯಜಿಸಿ ಸಂನ್ಯಾಸ ಸ್ವೀಕರಿಸಿ ಹಿಮಾಲಯಕ್ಕೆ ಹೊರಟುಹೋದ. ಇಂತಹ ಮಹಾನ್ ಅರಸನ ಬಗ್ಗೆ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ!


ಶನಿವಾರ, ಡಿಸೆಂಬರ್ 15, 2018

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!

ಕ್ಷಮಿಸಬೇಕು, ದೇಶದ್ರೋಹಿಗಳನ್ನಲ್ಲ!


             ಒಂದು ಕಡೆ ಮೊಘಲರು, ಇನ್ನೊಂದು ಕಡೆ ಆಂಗ್ಲರು, ಮತ್ತೊಂದು ಕಡೆ ಪೋರ್ಚುಗೀಸರು, ಮಗದೊಂದು ಕಡೆ ಜಂಜೀರಾದ ಸಿದ್ದಿಗಳು. ಏಕಕಾಲದಲ್ಲಿ ಈ ನಾಲ್ವರೊಡನೆ ಹೋರಾಡುತ್ತಲೇ ಒಂಬತ್ತು ವರ್ಷ ರಾಜ್ಯವಾಳಿ ಶಿವಾಜಿಯಿಂದ ಸ್ಥಾಪಿಸಲ್ಪಟ್ಟಿದ್ದ ಸಾಟಿಯಿಲ್ಲದ ಹಿಂದೂ ಮಹಾ ಸಾಮ್ರಾಜ್ಯವನ್ನು ಪೋಷಿಸಿದ್ದ ಸಂಭಾಜಿ. ಆ ಸಮಯಕ್ಕೆ ಸಂಭಾಜಿಯ ಭಾವ ಗಜೋಜಿ ಶಿರ್ಕೆ ಮೊಗಲ್ ಸರದಾರ್ ಮುಕರಾಬ್ ಖಾನನಿಗೆ ಸಂಭಾಜಿ ತಂಗಿದ್ದ ಸಂಗಮೇಶ್ವರವೆಂಬ ದುರ್ಭೇದ್ಯ ಕೋಟೆಗೆ ಸ್ವಯಂ ತಾನೇ ದಾರಿ ತೋರಿಸುತ್ತಾ ಕರೆದುಕೊಂಡು ಹೋದ. ಲಕ್ಷಾಂತರ ಸೈನಿಕರನ್ನು ಹೊಂದಿದ್ದೂ ಒಬ್ಬ ಮೊಘಲ್ ಸಾಮ್ರಾಟ ಔರಂಗಜೇಬ ಸಾಧಿಸಲಾಗದ ಕಾರ್ಯ ನಂಬಿಕೆ ದ್ರೋಹಿ, ದೇಶದ್ರೋಹಿಯೊಬ್ಬನಿಂದ ಸುಲಲಿತವಾಗಿ ನಡೆದು ಹೋಯಿತು. ಮುಂದೆ ಸಂಭಾಜಿಯ ಕಣ್ಣುಗಳನ್ನು ಕಿತ್ತು, ನಾಲಿಗೆಯನ್ನು ತುಂಡರಿಸಿ, ದೇಹದ ಒಂದೊಂದೇ ತುಂಡನ್ನು ಕಡಿದು ಅವನೆದುರೇ ನಾಯಿಗಳಿಗೆಸೆದು ಚಿತ್ರಹಿಂಸೆ ಕೊಟ್ಟು ಕೊಂದ ಔರಂಗಜೇಬನಂತಹ ಪರಮ ಕ್ರೂರಿಯ ಹೆಸರನ್ನೂ ಈ ದೇಶದ ರಸ್ತೆಗಳಿಗಿಟ್ಟದ್ದು ಇತಿಹಾಸ. ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದು ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಮುಂದೆ ಚಿಸ್ತಿಗೊಂದು ಗೋರಿ ಕಟ್ಟಲಾಯಿತು. ಇವತ್ತಲ್ಲಿ ಅನ್ನ ನೀರು ಕೊಟ್ಟ ದೇಶಕ್ಕೆ ದ್ರೋಹ ಬಗೆದ ವಿಶ್ವಾಸಘಾತುಕನಿಗೆ ಹಿಂದೂಗಳೂ ಚಾದರ ಅರ್ಪಿಸುತ್ತಿದ್ದಾರೆ!

                ಇತಿಹಾಸದಿಂದ ಈ ದೇಶೀಯರು ಪಾಠ ಕಲಿತಿಲ್ಲ. ದ್ರೋಹಿಗಳೂ ಹುಟ್ಟುತ್ತಿದ್ದಾರೆ, ಕ್ಷಮಿಸುವವರೂ, ಗೋರಿ ಕಟ್ಟಿ ಪೂಜಿಸುವವರೂ! ಮಣಿಶಂಕರ ಅಯ್ಯರ್ ಎಂಬ ಕೊಳಕು ಮನುಷ್ಯನ ನೆನಪಿರಬೇಕಲ್ಲ. "ಕೊಳಕು ಮನುಷ್ಯ" ಎಂಬ ಪದ ಪ್ರಯೋಗ ಸುಮ್ಮನೆ ಮಾಡಿದ್ದಲ್ಲ. ಆತ ಮಾಡಿರೋ ಘನ ಕಾರ್ಯಗಳಿಗೆ ಹೋಲಿಸಿದರೆ ಈ ಹೆಸರು ಏನೇನೂ ಅಲ್ಲ! ಸ್ವಾತಂತ್ರ್ಯ ವೀರ ಎಂದು ಜಗತ್ತೇ ಕೊಂಡಾಡಿದ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರ್. ಶತ್ರು ಪಾಳಯಕ್ಕೆ ನುಗ್ಗಿ ಶತ್ರುವಿನೊಡನೆ ಯುದ್ಧ, ಸಾಗರ ಈಜಿದ ಸಾಹಸ, ಅಂಡಮಾನಿನ ಕರಿ ನೀರ ಶಿಕ್ಷೆ, ಅಸಂಖ್ಯ ಯೋಧರಿಗೆ ಸ್ಪೂರ್ತಿ, ಅದ್ಭುತ ಸಾಹಿತ್ಯ, ಇತಿಹಾಸ ರಚನೆ, ಸಮಾಜ ಸುಧಾರಣೆ ಹೀಗೆ ಪಟ್ಟಿ ಮಾಡಿದಷ್ಟು ಬೆಳೆಯುವ ಸಾಧನೆಗಳ ಪಾರಿತೋಷಕ ಹೊತ್ತ ವೀರ ಸಾವರ್ಕರರ ಧ್ಯೇಯವಾದವನ್ನು ಉದ್ಘೋಷಿಸುವ ಅಂಡಮಾನಿನ ಸ್ಮೃತಿಸ್ತಂಭದ ಮೇಲಿದ್ದ ಅಜರಾಮರ ಕವಿತೆಯ ಸಾಲನ್ನು ಕಿತ್ತು ಹಾಕಿದ ದೇಶದ್ರೋಹಿ ಈ ಮಣಿಶಂಕರ ಅಯ್ಯರ್. ಅಂಡಮಾನಿನ ಕರಿನೀರ ರೌರವದಿಂದಲೂ ಕೊಂಕದ ಸಾವರ್ಕರರ ದೇಶಭಕ್ತಿಗೆ ಗುಲಾಮನೊಬ್ಬನ ಹೀನ ಕಾರ್ಯದಿಂದ ಅವಮಾನವಾಯಿತು.

                 2010ರಲ್ಲಿ ಭಾರತ ಆತಿಥ್ಯ ವಹಿಸಿದ್ದ ಕಾಮನ್ವೆಲ್ತ್ ಕ್ರೀಡಾಕೂಟ ಹಾಳಾದ್ರೇ ಒಳ್ಳೇದು ಎಂದಿದ್ದ ಈ ಮನುಷ್ಯ. ಮುಂಬಯಿ ಸ್ಫೋಟದ ರೂವಾರಿ ಯಾಕೂಬ್ ಮೆನನ್ನಿಗೆ ಗಲ್ಲುಶಿಕ್ಷೆ ಕೊಡಬಾರದೆಂದು ಮನವಿ ಸಲ್ಲಿಸಿದ ದಾನವ ಹಕ್ಕು ಹೋರಾಟಗಾರರ ಪಟ್ಟಿಯಲ್ಲಿ ಇವನ ಹೆಸರೂ ಇತ್ತು. ಭಾರತಕ್ಕೆ ಯೋಜನೆಯಿಂದಲೂ, ಪ್ರಕರಣದಿಂದಲೂ ಭಾರೀ ನಷ್ಟವನ್ನುಂಟುಮಾಡಿದ್ದ ಅಮೆರಿಕಾದ ಬೃಹತ್ ವಿದ್ಯುತ್ ಉತ್ಪಾದನಾ ಕಂಪೆನಿ ಎನ್ರಾನ್ ವಿರುದ್ಧದ ಪ್ರಕರಣದಲ್ಲಿ ವಾದಿಸುತ್ತಿದ್ದ ವಕೀಲ ಹರೀಶ್ ಸಾಳ್ವೆಯನ್ನು ಬದಲಿಸಿ ಪಾಕಿಸ್ತಾನದ ವಕೀಲ ಖವಾರ್ ಖುರೇಷಿಯನ್ನು ನೇಮಿಸಲಾಗಿತ್ತು. ಇದರ ಹಿಂದೆ ಇದ್ದವರು ಆಗಿನ ಸಚಿವರುಗಳಾದ ಸಲ್ಮಾನ್ ಖುರೇಷಿ, ಚಿದಂಬರಂ, ಮಣಿಶಂಕರ್ ಐಯ್ಯರ್ ಮತ್ತು ಶರದ್ ಪವಾರ್! ಮಯನ್ಮಾರ್ ಗಡಿಯಲ್ಲೊಂದು ಸರ್ಜಿಕಲ್ ಸ್ಟ್ರೈಕ್ ನಡೆದಾಗ "ಮಯನ್ಮಾರಿನ ಗಡಿಯೊಳಗೆ ನುಗ್ಗಲು ಪೌರುಷದ ಆವಶ್ಯಕತೆಯೇ ಇಲ್ಲ. ಹಸುಗೂಸೇ ಸಾಕಾಗುತ್ತದೆ. ಇದು ಭಾರತ-ಪಾಕ್ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುತ್ತದೆ. ಪಾಕಿಸ್ಥಾನದ ಬಳಿಯೂ ಅಣ್ವಸ್ತ್ರಗಳಿವೆ ಎಂಬುದನ್ನು ಮರೆಯಬಾರದು" ಎಂದು ತನ್ನ ಲೇಖನದಲ್ಲಿ ಪ್ರಧಾನಿ ಮೋದಿಯವರನ್ನು, ದೇಶದ ಸೈನಿಕರನ್ನು ಲೇವಡಿ ಮಾಡಿದ್ದ ಅಯ್ಯರ್.  ಕಳೆದ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಅಹ್ಮದ್ ಪಟೇಲನನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಲು ಪಾಕಿಸ್ತಾನದ ಸಹಾಯ ಪಡೆಯುವ ಸಂಚು ಹೂಡಲಾಗಿತ್ತು. ಆ ಸಮಾಲೋಚನೆ ನಡೆದುದು ಮಣಿಶಂಕರ್ ಅಯ್ಯರ್ ಮನೆಯಲ್ಲೇ! ಪಾಕಿಸ್ತಾನದ ಮಾಜಿ ರಾಯಭಾರಿ ಖುರ್ಷಿದ್ ಮಹಮದ್ ಖಸೂರಿಯೊಡನೆ ನಡೆದ ಈ ಸಮಾಲೋಚನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಮಾಜಿ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಕೂಡಾ ಭಾಗಿಯಾಗಿದ್ದರು. ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಕೆಳಗಿಳಿಸಲು ಕಾಂಗ್ರೆಸ್ಸಿನ ಗೆಲುವಿಗೆ ಸಹಾಯ ಯಾಚನೆ ಮಾಡಿದ್ದ ತುಚ್ಛ ರಾಜಕಾರಣಿ ಮಣಿಶಂಕರ ಅಯ್ಯರ್. ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರಮಾಣದಲ್ಲಿ ಪಾಕಿಸ್ತಾನವನ್ನೂ ಪ್ರೀತಿಸುತ್ತೇನೆ ಎನ್ನುವ ಮಣಿಶಂಕರ ಅಯ್ಯರ್ ಈ ನಡೆ ಹೊಸದೇನೂ ಅಲ್ಲ. ಆದರೆ ಈ ದೇಶದ ಅನ್ನ ತಿಂದು ತನ್ನ ವೈಯುಕ್ತಿಕ ಲಾಭಕ್ಕೋಸ್ಕರ ಶತ್ರು ದೇಶದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಯಾವ ಗಜೋಜಿ ಶಿರ್ಕೆಯ ದೇಶದ್ರೋಹಕ್ಕಿಂತಲೂ ಕಡಿಮೆಯದೇನಲ್ಲ.

                    ನವಜೋತ್ ಸಿಂಗ್ ಸಿಧು. ಕ್ರಿಕೆಟ್ ಆಟಗಾರನಾಗಿ ಪಡೆದಿದ್ದ ಮಾನವನ್ನು ರಾಜಕೀಯ ಆಟದಲ್ಲಿ ಹರಾಜು ಹಾಕುತ್ತಿರುವ ವಿಫಲ ವ್ಯಕ್ತಿ. ಅಷ್ಟೇ ಆಗಿದ್ದರೆ ಕ್ಷಮಿಸಿಬಿಡಬಹುದಿತ್ತು. ಭಾರತದಿಂದ ಯಾರೂ ಹೋಗದಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನನ ಪ್ರಧಾನಿ ಪದಗ್ರಹಣ ಕಾರ್ಯಕ್ರಮಕ್ಕೆ ಹೋದ ಭಂಡ ಈತ. ಅಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಾಜ್ವಾನನ್ನು ತಬ್ಬಿಕೊಂಡ. ಪಾಕಿಸ್ಥಾನದ ಸೇನಾ ಮುಖ್ಯಸ್ಥರು ತನ್ನ ಕಿವಿಯಲ್ಲಿ ಶಾಂತಿ ಮಂತ್ರವನ್ನು ಜಪಿಸಿದರು ಎನ್ನುವ ಹೇಳಿಕೆಯಂತೂ ಸಿಧುವಿನ ನಗುವಿನಷ್ಟೇ ಹಾಸ್ಯಾಸ್ಪದ. ಇತ್ತೀಚೆಗೆ ಮತ್ತೊಮ್ಮೆ ಪಾಕಿಗೆ ತೆರಳಿ ಕರ್ತಾರ್ ಪುರ ಕಾರಿಡಾರ್ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಧು, ಅಲ್ಲಿ ಅಮೃತಸರ ಸಮೀಪ ನಿರಂಕಾರಿ ಭವನದ ಮೇಲೆ ನಡೆದ ಗ್ರೆನೇಡ್ ದಾಳಿಯ ರೂವಾರಿ, ಖಲಿಸ್ತಾನೀ ಉಗ್ರ, ಲಷ್ಕರೆ ತೊಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಜತೆಗೆ ಸಂಪರ್ಕವುಳ್ಳ ಗೋಪಾಲ್ ಸಿಂಗ್ ಚಾವ್ಲಾ ಜತೆ ಫೋಟೊ ತೆಗೆಸಿಕೊಂಡ. ಸಿಧುವಿಗೆ ರಾಜಕೀಯದಲ್ಲಿ ಅನ್ನ ಕೊಟ್ಟಿದ್ದು ಬಿಜೆಪಿ. ಆತ ಅನ್ನ ಕೊಟ್ಟವರಿಗೆ ಮಾತ್ರ ವಿಶ್ವಾಸಘಾತ ಮಾಡಿದ್ದಲ್ಲ. ಇಡೀ ದೇಶಕ್ಕೆ ನಂಬಿಕೆ ದ್ರೋಹ ಬಗೆದಿದ್ದಾನೆ; ಈ ದ್ರೋಹ ಚಿಸ್ತಿಯ ಘಾತುಕತನಕ್ಕಿಂತ ಕಡಿಮೆಯದೇನಲ್ಲ.

                   ರಾಹುಲ್ ಗಾಂಧಿ ಹೇಳಿದ್ದಕ್ಕೆ ತಾನು ಹೋದೆ ಎನ್ನುವ ಸಿಧುವಿನ ಹೇಳಿಕೆ ಸಂಪೂರ್ಣ ಕಾಂಗ್ರೆಸ್ಸನ್ನೇ ಅಪರಾಧೀ ಸ್ಥಾನದಲ್ಲಿ ನಿಲ್ಲಿಸುತ್ತದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ; ಅದರ ಬೆಂಬಲಿಗ ಮಾಧ್ಯಮಗಳು ಮಾಡುತ್ತಿರುವುದೂ ಅದನ್ನೇ. ಸಾಗರದಲ್ಲಿ ಪಾಕಿಸ್ಥಾನದ ಅಕ್ರಮ ದೋಣಿಯೊಂದನ್ನು ಭಾರತೀಯ ನೌಕಾಪಡೆ ಹೊಡೆದುರುಳಿದ್ದನ್ನು ಅಪರಾಧ ಎಂದು ಈ ಗುಲಾಮರು ಬಡಬಡಿಸಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ಘೋಷಿಸಿದರು. ಭಾರತೀಯ ಸೈನ್ಯ ಮಯನ್ಮಾರ್ ಗಡಿಯಲ್ಲಿ ಬಂಡುಕೋರರನ್ನು ಬಗ್ಗುಬಡಿದ ಸುದ್ದಿಗೆ ದೇಶಕ್ಕೆ ದೇಶವೇ ಹೆಮ್ಮೆ ಪಡುತ್ತಿದ್ದರೆ ಸಿಎನ್ಎನ್-ಐಬಿಎನ್ ಎಂಬ ಮತಿಗೆಟ್ಟ ಚಾನಲ್ ಪಾಕಿಸ್ಥಾನದ ಮಾಜಿ ಸರ್ವಾಕಾರಿ ಮುಷರಫ್ನನ್ನು ಕರೆದು ಕೂರಿಸಿ ಅಭಿಪ್ರಾಯವನ್ನು ಕೇಳುತ್ತಿತ್ತು. ಮೋದಿ ಪ್ರಧಾನಿಯಾದ ಬಳಿಕ ಶತಾಯಗತಾಯ ಮೋದಿಯನ್ನು ಹಣಿಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಟಾಲಂ ಮೋದಿ ಧರಿಸಿದ ಬಟ್ಟೆ, ಹೋದ ಮಾರ್ಗ, ಆಡಿದ ಮಾತುಗಳೆಲ್ಲವನ್ನೂ ಟೀಕಿಸುತ್ತಾ ಕೊನೆಗೆ ಮೋದಿ ಆಳುವ ದೇಶವನ್ನೂ ಟೀಕಿಸುತ್ತಾ ಬಹಿರಂಗವಾಗಿಯೇ ದೇಶದ ಶತ್ರುಗಳ ಜೊತೆ ಸೇರಿ ಮೋದಿಯನ್ನು ಮಣಿಸಲು ನೋಡುತ್ತಿದೆ. ಕ್ರಾಂತಿಕಾರಿಗಳನ್ನು ಬ್ರಿಟೀಷರಿಗೆ ಹಿಡಿದುಕೊಟ್ಟು ಅಧಿಕಾರ ಹೊಡೆದುಕೊಂಡವರ ಬುದ್ಧಿ ಇನ್ನೂ ಬದಲಾಗಿಲ್ಲ.

                    ಈ ದೇಶದ ನ್ಯಾಯಾಂಗ ವ್ಯವಸ್ಥೆ ಹೇಗಿದೆಯೆಂದರೆ ಇಲ್ಲಿ ದೇಶದ್ರೋಹಿಯನ್ನು, ಅವನ ಕಾರ್ಯವನ್ನು ಖಂಡಿಸುವವನ ಮೇಲೆ ಕೇಸು ದಾಖಲಾಗುತ್ತದೆ. ದೇಶದ್ರೋಹಿ, ವೇದಿಕೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಷಣ ಕುಟ್ಟುತ್ತಾ, ಮಾಧ್ಯಮಗಳಲ್ಲಿ ಜನರನ್ನು ರಂಜಿಸುತ್ತಾ, ಉಗ್ರರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಾ ರಾಜಾರೋಷವಾಗಿ ಓಡಾಡುತ್ತಿರುತ್ತಾನೆ. ಕ್ಷಣ ಕಾಲದಲ್ಲಿ ಇತಿಹಾಸ ಮರೆಯುವ ಹಿಂದೂ ಇಂತಹವರಿಗೆ ಗೋರಿ ಕಟ್ಟಿದರೆ ಚಾದರ ತಲೆಯ ಮೇಲೆ ಹೊತ್ತು ಅರ್ಪಿಸಲು ಸಿದ್ಧನಾಗಿರುತ್ತಾನೆ! ನಟರನ್ನೇ ನಿಜವಾದ ಹೀರೋಗಳೆಂದು ಭ್ರಮಿಸಿ ಪ್ರತಿಮೆ ಕಟ್ಟುವ ಜನಕ್ಕೆ ದೇಶಪ್ರೇಮ ಬರಿಯ ಆಗಸ್ಟ್ ಹದಿನೈದಕ್ಕಷ್ಟೇ ಸೀಮಿತವಾಗಿಬಿಡುತ್ತದೆ!

ಹುಸಿ ಜಾತ್ಯಾತೀತವಾದ ಇತಿಹಾಸವನ್ನು ಕೊಂದಿತು! ಹಿಂದೂವಿನ ಶೌರ್ಯದ ತೇಜ ಕುಂದಿತು!

ಹುಸಿ ಜಾತ್ಯಾತೀತವಾದ ಇತಿಹಾಸವನ್ನು ಕೊಂದಿತು! ಹಿಂದೂವಿನ ಶೌರ್ಯದ ತೇಜ ಕುಂದಿತು!

                "ಗುರುವಾರ ನಾನು ಆಗ್ರಾವನ್ನು ಪ್ರವೇಶಿಸಿ ಸುಲ್ತಾನ್ ಇಬ್ರಾಹಿಂ ಅರಮನೆಯನ್ನು ನನ್ನದಾಗಿಸಿಕೊಂಡೆ. ಈದ್ ನ ಕೆಲ ದಿನಗಳ ಬಳಿಕ ಗುಮ್ಮಟದ ಕೆಳಗೆ ಕಲ್ಲುಕಂಬಗಳ ಶ್ರೇಣಿಯಿರುವ ರಮ್ಯವಾದ ವಿಶಾಲವಾದ ಹಜಾರವೊಂದರಲ್ಲಿ ಭಾರಿ ಔತಣವೊಂದನ್ನು ನೆರವೇರಿಸಿದೆ..." ಬಾಬರ್ ತನ್ನ ಆತ್ಮಚರಿತ್ರೆ "ಮೆಮರೀಸ್ ಆರ್ ಜೆಹಿರ್-ಉದ್-ದಿನ್-ಬಾಬರ್"ನಲ್ಲಿ ಬರೆದುಕೊಂಡ ಸಾಲುಗಳಿವು. ಆಗ್ರಾದಲ್ಲಿ ಕಲ್ಲಿನ ಗುಮ್ಮಟ, ಸಾಲು ಕಲ್ಲುಕಂಬಗಳಿರುವ ಅರಮನೆ ಯಾವುದು ಎಂದು ಹುಡುಕಹೊರಟರೆ ಅದು ತಾಜ್ ಮಹಲ್ ಒಂದರತ್ತಲೇ ಬೊಟ್ಟು ಮಾಡುತ್ತದೆ. ಆಗ್ರಾದಲ್ಲಿನ ತೋಟದ ಅರಮನೆಯಲ್ಲಿ ಬಾಬರ್ ಸತ್ತನೆಂದು ವಿನ್ಸೆಂಟ್ ಸ್ಮಿತ್ ಉಲ್ಲೇಖಿಸಿದ್ದಾನೆ. ಆಗ್ರಾದಲ್ಲಿ ಉದ್ಯಾನದ ನಡುವಿರುವ ಅರಮನೆ ತಾಜ್ ಮಹಲ್ ಒಂದೇ! ಅರೇ, ಷಾಜಹಾನ್ ತನ್ನ ಪ್ರೀತಿಯ ಮಡದಿಗಾಗಿ ಕಟ್ಟಿಸಿದ್ದ ಎನ್ನಲಾದ ಮಹಲಿನಲ್ಲಿ ಅವನಿಗಿಂತ ನೂರು ವರ್ಷ ಮೊದಲೇ ಅವನ ಅಜ್ಜನ ಅಜ್ಜ ಔತಣ ಮಾಡಿದ್ದು ಹೇಗೆ?  ಭಾರತದ ಇತಿಹಾಸವನ್ನು ಬರೆದಿಟ್ಟ ಬಗೆ ಹೀಗೆ; ಸತ್ಯವನ್ನೆಲ್ಲಾ ಮುಚ್ಚಿಟ್ಟು ಸುಳ್ಳುಗಳನ್ನು ಬರೆದಿಟ್ಟು ಆಕ್ರಮಕರನ್ನು ಸಜ್ಜನರು, ಅಮರ ಪ್ರೇಮಿಗಳೆಂಬಂತೆ ವಿಜೃಂಭಿಸಿ ಭಾರತೀಯ ಮಸ್ತಿಷ್ಕವನ್ನು ಮತಾಂತರ ಮಾಡಿರುವ ಪ್ರಕ್ರಿಯೆ! ಅದಕ್ಕೆ ಅಲ್ಲಲ್ಲಿ ಗೋಜಲುಗಳು; ಸತ್ಯಬಿಡಿಸ ಹೊರಟವರೆಲ್ಲಾ ಕೋಮುವಾದಿಗಳು, ಇತಿಹಾಸವನ್ನು ಕೇಸರೀಕರಣಗೊಳಿಸುವವರು!

                 ಈಗೊಂದು ಸ್ವರ ಪಶ್ಚಿಮದಿಂದ ಎದ್ದಿದೆ. ಪ್ರಾಮಾಣಿಕ ಆಧುನಿಕ ವೈಜ್ಞಾನಿಕ ವಿಶ್ವಕೋಶವೆಂದು ಹೆಸರಾದ ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲೂ ಮುಮ್ತಾಜಳ ಮೇಲಿನ ಪ್ರೀತಿಗಾಗಿ ಕಟ್ಟಿದ ಸೌಧವೆಂದೇ ದಾಖಲಾಗಿರುವಾಗಲೂ ಈ ದನಿ ಎದ್ದಿರುವುದು ವಿಶೇಷ. ಹಾಗಂತ ಈ ಸ್ವರ ಇತ್ತೀಚೆಗಷ್ಟೇ ಎದ್ದದ್ದಲ್ಲ. ನ್ಯೂಯಾರ್ಕಿನ ಪ್ರಾಟ್ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ಉಪನ್ಯಾಸಕ ಮಾರ್ವಿನ್ ಎಚ್. ಮಿಲ್ಸ್ ಮೂರು ದಶಕಗಳಿಗೂ ಹಿಂದೆಯೇ ಬರೆದಿದ್ದ ಪತ್ರವೊಂದರ ತುಣುಕು ಇತ್ತೀಚೆಗೆ "ದಿ ನ್ಯೂಯಾರ್ಕ್ ಟೈಮ್ಸ್" ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಹಿಂದೆ ಎದ್ದಿದ್ದ ದನಿಗೊಂದು ಬಲ ನೀಡಿದೆ. ಮಾರ್ವಿನ್ ಎಚ್. ಮಿಲ್ಸ್ ಯಮುನಾ ನದಿಯ ಕಡೆಗಿರುವ ತಾಜ್ ಮಹಲಿನ ದ್ವಾರದಿಂದ ಸ್ಯಾಂಪಲ್ ಸಂಗ್ರಹಿಸಿ ಕಾರ್ಬನ್ ಡೇಟಿಂಗ್(ಕಾರ್ಬನ್-೧೪) ಪರೀಕ್ಷೆಗೆ ಒಳಪಡಿಸಿದಾಗ ಆ ಬಾಗಿಲು ಷಾಜಹಾನ್ ಗಿಂತಲೂ ಮುನ್ನೂರು ವರ್ಷ ಹಳೆಯದೆಂದು ಸಾರಿತು! ಇದರ ಜೊತೆಗೆ ಮಾರ್ವಿನ್ ಹಲವಾರು ಪ್ರಶ್ನೆಗಳನ್ನೂ ಎತ್ತಿದ್ದರು. ಭವನದ ಎಡ ಭಾಗ ಮಸೀದಿಯಾಗಿದೆ. ಒಂದು ವೇಳೆ ಶೂನ್ಯದಿಂದ ಭವನವನ್ನು ಕಟ್ಟಲ್ಪಟ್ಟಿದ್ದರೆ ಮಸೀದಿ ಪಶ್ಚಿಮದತ್ತ ಮುಖ ಮಾಡುವ ಬದಲು ಮೆಕ್ಕಾಕ್ಕೆ ಮುಖ ಮಾಡಿ ಪ್ರಾರ್ಥಿಸುವಂತೆ ಇರಬೇಕಿತ್ತು. ಸಮಾಧಿಯ ನಾಲ್ಕು ಮಿನಾರತ್ತುಗಳು ಅವ್ಯವಸ್ಥಿತವಾಗಿದ್ದು, ನಿಜವಾಗಿ ಮಸೀದಿಯ ಮುಂಭಾಗದಲ್ಲಿರಬೇಕಿತ್ತು. ಯಾಕೆಂದರೆ ಅವು ಪ್ರಾರ್ಥನೆಗೆ ಮುಸ್ಲಿಮರನ್ನು ಕರೆಯುವ ಮಸೀದಿಯ ಎತ್ತರದ ಭಾಗಗಳು. ತಾಜ್ ಮಹಲಿನ ಮುಖ್ಯ ಭವನದ ಅಕ್ಕಪಕ್ಕದಲ್ಲಿರುವ ಸಮರೂಪಿ ಭವನಗಳು ಒಂದು ಮಸೀದಿಗಾಗಿ, ಇನ್ನೊಂದು ಅತಿಥಿ ಗೃಹಕ್ಕೆಂದು ನಿರ್ಮಾಣಗೊಂಡಿದ್ದರೆ ಅವುಗಳ ಕಾರ್ಯಕ್ಕನುಗುಣವಾದ ವಿನ್ಯಾಸದಲ್ಲಿ ಕಟ್ಟಲ್ಪಡಬೇಕಿತ್ತು. ಮೊಘಲರು ಭಾರತದ ಮೇಲೆ ದಾಳಿ ಮಾಡಿದಾಗ ಫಿರಂಗಿಗಳು ಬಳಕೆಯಲ್ಲಿದ್ದವು. ಹಾಗಿದ್ದೂ ತಾಜ್ ಮಹಲ್ ಗೋಡೆಯ ಪರಿಧಿ ಯಾಕೆ ಫಿರಂಗಿಯ ಪೂರ್ವಕಾಲದ ರಕ್ಷಣಾ ಪಾತ್ರದಂತೆ ನಿರ್ಮಿಸಲಾಗಿದೆ? ಅಲ್ಲದೆ ಅದು ಸಮಾಧಿಯಾಗಿದ್ದರೆ ಅದಕ್ಕೆ ಅರಮನೆಗಿರುವಂತೆ ರಕ್ಷಣಾ ಗೋಡೆಯ ಅವಶ್ಯಕತೆ ಏನಿತ್ತು? ತಾರಸಿಯ ಕೆಳಗಿನ ತಾಜ್ ಮಹಲ್ಲಿನ ಉತ್ತರದ ಇಪ್ಪತ್ತು ಕೋಣೆಗಳು ಯಮುನಾ ನದಿಗೇಕೆ ಮುಖ ಮಾಡಿವೆ? ಅರಮನೆಗಾದರೆ ಈ ಕೋಣೆಗಳ ಅವಶ್ಯಕತೆ ಇರುತ್ತದೆ. ಸಮಾಧಿಗೆ ಇವುಗಳೇಕೆ ಬೇಕು? ದಕ್ಷಿಣ ಭಾಗದ ವಿಶಾಲ ಹಜಾರಕ್ಕೆ ಅಭಿಮುಖವಾಗಿರುವ ಇಪ್ಪತ್ತು ಕೋಣೆಗಳೇಕೆ ಮುಚ್ಚಲ್ಪಟ್ಟಿವೆ? ಅವುಗಳ ದ್ವಾರಕ್ಕೆ ಕಲ್ಲುಗಳನ್ನಿಟ್ಟವರಾರು? ಆ ಕೋಣೆಗಳಿಗೆ ಇತಿಹಾಸಕಾರರು, ಅಧ್ಯಯನಕಾರರಿಗೆ ಪ್ರವೇಶವಿಲ್ಲವೇಕೆ? ಭಾರತೀಯ ಪುರಾತತ್ತ್ವ ಇಲಾಖೆ ತಾಜ್ ಮಹಲ್ಲಿನ ಕಾರ್ಬನ್ ಡೇಟಿಂಗ್ ಹಾಗೂ ಥರ್ಮೊ ಲ್ಯೂಮಿನಿಸ್ನಿಸ್ ಪರೀಕ್ಷೆ ಮಾಡದಂತೆ ತಡೆಯುತ್ತಿರುವುದೇಕೆ? ಇವೆಲ್ಲಾ ಪ್ರಶ್ನೆಗಳು ಸುಮ್ಮನೆ ಎದ್ದದ್ದಲ್ಲ. ತಾಜ್ ಮಹಲ್ ಕಟ್ಟುವಾಗಿನ ಮೊಘಲ್ ಸಾಮ್ರಾಜ್ಯದ ಆಜ್ಞೆ/ನಿರ್ದೇಶನಗಳು, ಓಲೆಗಳು, ಯೋಜನೆ, ನಕ್ಷೆಗಳು, ಇತಿಹಾಸಕಾರರ ವಿವರಣೆಗಳು, ತಾಜ್ ಮಹಲ್ಲಿನ ವಿವಿಧ ಚಿತ್ರಗಳ ವಿಶ್ಲೇಷಣೆ ಜೊತೆಗೆ ಕಾರ್ಬನ್ ಡೇಟಿಂಗ್ ಪರೀಕ್ಷೆಯ ಫಲಿತಾಂಶ ಇವೆಲ್ಲಾ ಪ್ರಶ್ನೆಗಳೇಳುವಂತೆ ಮಾಡಿತು.

                ಷಾಜಹಾನಿಗೆ ಸುಸಜ್ಜಿತ ಅರಮನೆಯೊಂದು ಬೇಕಾಗಿತ್ತು. ಅಪಾರ ಪ್ರಮಾಣದ ಸಂಪತ್ತನ್ನು ಕೊಟ್ಟು ರಾಜಾ ಜಯಸಿಂಗನ ವಶದಲ್ಲಿದ್ದ ಅರಮನೆಯನ್ನು ಅದರೊಳಗಿದ್ದ ಅಪಾರ ಪ್ರಮಾಣದ ಚಿನ್ನದ ಕಟಾಂಜನಗಳನ್ನು ತನ್ನದಾಗಿಸಿಕೊಂಡ ಷಾಜಹಾನ್. ಹಿಂದೂಗಳು ಮತ್ತೆ ಕೇಳಬಾರದೆಂಬ ಕಾರಣಕ್ಕೆ ಅದನ್ನು ಮುಸ್ಲಿಮ್ ಸಮಾಧಿಯಾಗಿ ಬದಲಾಯಿಸಿದ. ಮುಖ್ಯ ಭವನದ ಪಶ್ಚಿಮ ಭಾಗದಲ್ಲಿದ್ದ ವಸತಿಗೃಹಗಳ ಒಳಭಾಗವನ್ನಷ್ಟೇ ಮಾರ್ಪಡಿಸಿ ಮೆಕ್ಕಾದ ದಿಕ್ಕನ್ನು ತೋರಿಸುವ ಗೂಡನ್ನು(mihrab) ನಿರ್ಮಿಸಿ ಮಸೀದಿಯನ್ನಾಗಿ ಪರಿವರ್ತಿಸಿದ. ಇಸ್ಲಾಮಿಕ್ ಬರಹಗಳುಳ್ಳ ದ್ವಾರ, ಬಾಗಿಲುಗಳಲ್ಲೆಲ್ಲಾ ಕೆತ್ತಿಸಿ ಅದು ಮುಸ್ಲಿಮರದ್ದೇ ಎಂಬ ನಂಬಿಕೆ ಶಾಶ್ವತವಾಗಿ ಉಳಿಯುವಂತೆ ಮಾಡಿದ. ಹೀಗೆಂದು ತಮ್ಮ ಎಲ್ಲಾ ಪರೀಕ್ಷೆ, ಚಿಂತನ-ಮಂಥನಗಳಿಂದ ತಾಜ್ ಮಹಲ್ ಷಾಜಹಾನನಿಂದ ಕಟ್ಟಲ್ಪಟ್ಟದ್ದಲ್ಲ, ಅದು ಸಮಾಧಿಯಾಗಿ ಬದಲಾಯಿಸಲ್ಪಟ್ಟ ಹಿಂದೂ ಅರಮನೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ ಮಾರ್ವಿನ್.

                 ಬಾದಷಹಾನಾಮಾ. ಷಾಜಹಾನನೇ ತನ್ನ ಆಡಳಿತದ ವಿಶೇಷಗಳನ್ನು ಕೀರ್ತಿಸಲು ಪಾಟ್ನಾದಿಂದ ಅಬ್ದುಲ್ ಹಮೀದ್ ಲಾಹೋರಿ ಎಂಬವನನ್ನು ಕರೆಯಿಸಿ ಬರೆಯಿಸಿದ ಷಾಜಹಾನ್ ಆಡಳಿತದ ಮೊದಲ ಇಪ್ಪತ್ತು ವರ್ಷಗಳ ಚರಿತ್ರೆ. ಭಾರತ ಸರಕಾರದ ನ್ಯಾಷನಲ್ ಆರ್ಕೈವ್ಸ್ ನಲ್ಲಿ ಸಂರಕ್ಷಿಸಿಡಲಾದ ಈ ಗ್ರಂಥದ ಕೆಲ ಕುತೂಹಲಕಾರಿ ಅಂಶಗಳನ್ನು ಆಂಗ್ಲಾನುವಾದ ಮಾಡಿದ್ದಾರೆ ಪ್ರೊ. ಪಿ.ಎನ್.ಓಕ್. ಅಸಲಿಗೆ ಇಪ್ಪತ್ತನೇ ಶತಮಾನದಲ್ಲಿ ತಾಜ್ ಮಹಲಿನ ಇತಿಹಾಸವನ್ನು ಕೆದಕಲು ತೊಡಗಿ ಅದೊಂದು ಹಿಂದೂ ಅರಮನೆ ಎಂದು ಮೊದಲು ಸಾರಿದವರೇ ಪಿ.ಎನ್.ಓಕ್. ಅವರು ಅನುವಾದಿಸಿದ ಕೆಲವು ಸಾಲುಗಳು ಇಂತಿವೆ - "ಆ ಮಹಾನ್ ನಗರದ ದಕ್ಷಿಣದಲ್ಲಿ ಭವ್ಯವಾದ ರಮಣೀಯವಾದ ಹುಲುಸಾಗಿ ಬೆಳೆದಿರುವ ಉದ್ಯಾನದಿಂದ ಆವರಿಸಲ್ಪಟ್ಟ ಪ್ರದೇಶದ ನಡುವೆ ಭವನವೊಂದಿದೆ. ಅದನ್ನು ರಾಜಾ ಮಾನ್ ಸಿಂಗ್ ಮಹಲ್ ಎನ್ನುತ್ತಾರೆ. ಪ್ರಸ್ತುತ ಮಾನ್ ಸಿಂಗನ ಮೊಮ್ಮಗ ರಾಜಾ ಜಯಸಿಂಗ್ ಅದರ ಯಜಮಾನ. ಸ್ವರ್ಗಸ್ಥಳಾದ ರಾಣಿಯನ್ನು ಹೂಳುವ ಸಲುವಾಗಿ ಆಯ್ಕೆ ಮಾಡಿದರು. ಅತ್ಯಮೂಲ್ಯವಾದ ಅದು ತನ್ನ ಮನೆತನದ ಪಾರಂಪರಿಕ ಆಸ್ತಿಯಾಗಿದ್ದರೂ ಜಯಸಿಂಗನು ಷಾಜಹಾನಿಗೆ ಅದನ್ನು ಉಚಿತವಾಗಿ ಬಿಟ್ಟುಕೊಡಲು ತಯಾರಾಗಿದ್ದ. ವಿಯೋಗ ಹಾಗೂ ಮತಪರವಾದ ಪಾವಿತ್ರ್ಯತೆಗೆ ಸಂಬಂಧಿಸಿದ ವಿಷಯಗಳಲ್ಲಿರಬೇಕಾದ ಧರ್ಮಭೀರು ದೃಷ್ಟಿಯ ಕಾರಣ ನಿಷ್ಠೆಯಿಂದ ಷರೀಫಾಬಾದ್ ಅನ್ನು ರಾಜಾ ಜಯಸಿಂಗನಿಗೆ ಪ್ರತಿಫಲವಾಗಿ ಕೊಡಲಾಯಿತು. ಮಾರನೇ ವರ್ಷ ಸ್ವರ್ಗವಾಸಿಯಾದ ಪ್ರಖ್ಯಾತ ಮಹಾರಾಣಿಯ ಶರೀರವನ್ನು ಸಮಾಧಿ ಮಾಡಲಾಯಿತು." ಷಾಜಹಾನನೇ ಹೇಳಿ ಬರೆಸಿದ ಅವನ ಚರಿತ್ರೆಯಲ್ಲಿ "ಷಾಜಹಾನಿಗೂ ಪೂರ್ವದಲ್ಲೇ ಸುಂದರ ಉದ್ಯಾನದಿಂದ ಕಂಗೊಳಿಸುತ್ತಿದ್ದ ಹಿಂದೂ ಅರಮನೆಯೊಂದು ಇತ್ತು. ಅದನ್ನು ಪಡೆದ ಷಾಜಹಾನ್ ಅಲ್ಲಿ ತನ್ನ ಪತ್ನಿಯ ಮೃತದೇಹವನ್ನು ಹೂತು ಅದನ್ನು ತಾಜ್ ಮಹಲ್ಲಾಗಿ ಪರಿವರ್ತಿಸಿದ" ಎಂದು ಉಲ್ಲೇಖವಾಗಿರುವಾಗ ಉಳಿದ ಇತಿಹಾಸಕಾರರೆಲ್ಲಾ ದಾರಿ ತಪ್ಪಿದ್ದು ಅಥವಾ ಜಗತ್ತಿನ ದಾರಿ ತಪ್ಪಿಸಿದ್ದು ಏಕೆ? ಅಲ್ಲದೆ ಆತ ಆ ಭವನವನ್ನು ನೆಲಸಮವೂ ಮಾಡಲಿಲ್ಲ. ಅದನ್ನೇ ತನ್ನ ಮತಕ್ಕೆ ಸರಿಯಾಗುವಂತೆ ಮಾರ್ಪಾಟುಗೊಳಿಸಿದ. ಭವ್ಯವಾದ ಹಿಂದೂ ಅರಮನೆಯ ಒಂದು ಭಾಗ ಮಸೀದಿಯಾಯಿತು. ಒಂದು ಕಡೆ ಹೆಣವನ್ನು ಹೂಳಲಾಯಿತು. ಅಲ್ಲಲ್ಲಿ ಇಸ್ಲಾಮಿನ ಬರಹಗಳನ್ನು ಕೆತ್ತಿಸಿ ವಿರೂಪಗೊಳಿಸಲಾಯಿತು. ಇಷ್ಟೇ ಷಾಜಹಾನ್ ಮಾಡಿದ್ದು! ಪ್ರೇಮ ಸೌಧವನ್ನೂ ಕಟ್ಟಲಿಲ್ಲ; ಅಸಲಿಗೆ ಅವನೇನು ಅಮರ ಪ್ರೇಮಿಯೂ ಆಗಿರಲಿಲ್ಲ.

                ಗಂಡ ಅನುಮಾನಾಸ್ಪದವಾಗಿ ಕೊಲೆಯಾದ ಬಳಿಕ ಜಹಾಂಗೀರನ ಮಲತಾಯಿಯ ಆಶ್ರಯದಲ್ಲಿದ್ದ ನೂರ್ ಜಹಾನಳನ್ನು ರಾಣಿಯಾಗಿ ಸ್ವೀಕರಿಸಿದ ಮೇಲೆ ತನ್ನ ಅಧಿಕಾರವನ್ನು ಹೆಂಡತಿಯ ಕೈಗಿತ್ತಿದ್ದ ಜಹಾಂಗೀರ್. ಆಕೆಯ ಸೋದರ ಸೊಸೆಯೇ ಮುಮ್ತಾಜ್. ತನ್ನ ರಾಜಕೀಯ ತಂತ್ರದ ಭಾಗವಾಗಿ ಆಕೆಯನ್ನು ತಂದು ಯುವರಾಜ ಖುರ್ರಂ(ಷಾಜಹಾನ್)ಗೆ ಗಂಟುಹಾಕಿದವಳು ನೂರ್ ಜಹಾನೇ. ನಿಶ್ಚಿತಾರ್ಥವಾಗಿ ಐದು ವರ್ಷ ಕಳೆದರೂ ಆತ ಅವಳನ್ನು ವಿವಾಹವಾಗಲಿಲ್ಲ. ಆ ನಡುವೆ ಪಾರ್ಸಿ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿದ್ದೂ ಆಯಿತು. ಸತತ ಹದಿನಾಲ್ಕು ಮಕ್ಕಳನ್ನು ಹಡೆದ ಅವಳನ್ನು ಹೆರಿಗೆಯಂತ್ರವಾಗಿ ಉಪಯೋಗಿಸಿದ್ದು ಬಿಟ್ಟರೆ ಅವಳ ಮೇಲೆ ಯಾವುದೇ ಪ್ರೇಮವೂ ಷಾಜಹಾನಿಗಿರಲಿಲ್ಲ. ಒಂದು ವೇಳೆ ಅಂತಹ ಅತಿಶಯ ಪ್ರೇಮವಿದ್ದಿದ್ದರೆ ಅವನೇ ನೇಮಿಸಿದ್ದ ಅವನ ಚರಿತ್ರಕಾರರು ಅದನ್ನು ರಮ್ಯವಾಗಿ ಬರೆಯದೇ ಇರುತ್ತಾರೆಯೇ? ಅಂತಹಾ ಯಾವುದೇ ಉಲ್ಲೇಖಗಳು ಕಾಣುವುದಿಲ್ಲ. ತನ್ನ ಹದಿನಾಲ್ಕನೆಯ ಹೆರಿಗೆಯ ಸಂದರ್ಭದಲ್ಲಿ ಮುಮ್ತಾಜ್ ಸತ್ತಾಗ ಅವಳಿದ್ದ ಬುರ್ಹಾನ್ ಪುರದಲ್ಲಿಯೇ ಅವಳನ್ನು ಹೂಳಲಾಯಿತು. ಜಯಸಿಂಗನಿಂದ ಮಾನ್ ಸಿಂಗ್ ಅರಮನೆಯನ್ನು ಪಡೆದ ಬಳಿಕ ಬುರ್ಹಾನ್ ಪುರದಲ್ಲಿನ ಗೋರಿಯನ್ನು ಅಗೆದು ಶವವನ್ನು 600 ಮೈಲು ದೂರದಲ್ಲಿದ್ದ ಈಗ ತಾಜ್ ಮಹಲ್ ಎಂದು ಹೇಳಲಾಗುವ ಹಿಂದೂ ಅರಮನೆಯಲ್ಲಿ ಸಮಾಧಿ ಮಾಡಲಾಯಿತು. ಅಲ್ಲಿ ಕೇವಲ ಮುಮ್ತಾಜ್ ಒಬ್ಬಳದ್ದೇ ಅಲ್ಲ, ಅವನ ಇನ್ನೊಬ್ಬ ಪತ್ನಿ ಸಿರ್ಹಿಂದ್ ಬೇಗಂ, ಮುಮ್ತಾಜಳ ಪ್ರಿಯ ಪರಿಚಾರಿಕೆ ಸತೀಉನ್ನೀಸಾಗೂ ಗೋರಿ ಕಟ್ಟಲಾಯಿತು. ಹೀಗೆ ಷಾಜಹಾನಿಗೆ ಆ ಅರಮನೆಯನ್ನು ಸ್ಮಶಾನವಾಗಿ ಪರಿವರ್ತಿಸುವ ಉದ್ದೇಶವಿತ್ತೇ ವಿನಾ ತನ್ನ ಹೆಂಡತಿಗೆ ಪ್ರೀತಿಯ ಸೌಧವಾಗಲ್ಲ! ರಾಣಿಗೂ ಆಕೆಯ ಪರಿಚಾರಿಕೆಗೂ ಒಂದೇ ಭವನದಲ್ಲಿ, ಏಕತೆರನಾದ ಗೋರಿ ಕಟ್ಟಿಸಿದಾತನ ದೃಷ್ಟಿಯಲ್ಲಿ ರಾಣಿಗೆ ಇದ್ದ ಸ್ಥಾನಮಾನ ಎಷ್ಟೆಂದೂ ಸಾಮಾನ್ಯನೂ ಊಹಿಸಬಹುದು! ತನ್ನ ಸ್ವಂತ ಮಗಳು ಜಹನಾರಾಳನ್ನೇ ಜೀವನ ಪರ್ಯಂತ ತನ್ನ ಕಾಮದಾಟಕ್ಕೆ ಬಳಸಿಕೊಂಡ ವ್ಯಕ್ತಿ ತನ್ನ ಹೆರಿಗೆ ಯಂತ್ರ ಮುಮ್ತಾಜಳಿಗೆ ಪ್ರೇಮ ಸೌಧ ಸ್ಥಾಪಿಸಿದನೆಂದರೆ ಅದು ಬಹು ದೊಡ್ಡ ಅಚ್ಚರಿಯೇ ಸರಿ!

                   ಷಾಜಹಾನನ ಹೆಂಡತಿಯ ಹೆಸರು ಮುಮ್ತಾಜ್ ಮಹಲ್ ಅಲ್ಲ. ಮುಮ್ತಾಜ್ ಉಲ್ ಜಾಮಾನಿ ಅಥವಾ ಅಂಜುಮಾನ್ ಬಾನು ಬೇಗಂ. ಇಸ್ಲಾಮಿಕ್ ಸಂಪ್ರದಾಯದಂತೆ ಮುಮ್ತಾಜ್ ಹೆಸರಿನಲ್ಲಿನ ತಾಜ್ ಅನ್ನು ತೆಗೆದು ಅದಕ್ಕೆ ಮಹಲ್ ಎಂದು ಜೋಡಿಸುವುದಿಲ್ಲ. ಅಲ್ಲದೆ ಯಾವುದೇ ಸಮಾಧಿಯನ್ನು ಮಹಲ್ ಎಂದು ಕರೆದಿರುವುದು ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿಲ್ಲ. ತಾಜ್ ಮಹಲನ್ನು ಷಾಜಹಾನ್ ಕಟ್ಟಿಸಿದ್ದಾನೆ ಎನ್ನುವುದಕ್ಕೆ ಯಾವುದೇ ಶಾಸನ, ಶಿಲಾಫಲಕಗಳಿಲ್ಲ. ಅಷ್ಟು ದೊಡ್ಡ ನಿರ್ಮಾಣದ ಖರ್ಚು-ಲೆಕ್ಕಗಳಾಗಲೀ, ರಚನೆಯ ಮಾದರಿ ಚಿತ್ರವಾಗಲೀ, ಉಪಯೋಗವಾದ ಸಾಮಗ್ರಿ, ಕೆಲಸಗಾರರ ವಿವರಗಳಾವುವೂ ಇಲ್ಲ! ತನ್ನ ಚರಿತ್ರೆ ಬರೆಯಲೆಂದೇ ಜನರನ್ನು ನೇಮಿಸಿಕೊಂಡಿದ್ದ ಆತ. ಅಂತಹುದರಲ್ಲಿ ತಾಜ್ ಮಹಲನ್ನು ಆತ ಕಟ್ಟಿಸಿದ್ದೆಂದು ಅವುಗಳಲ್ಲೆಲ್ಲಾ ಯಾಕೆ ಉಲ್ಲೇಖವಾಗಲಿಲ್ಲ? ತನ್ನ ಪ್ರತಿಯೊಂದು ಕಾರ್ಯವನ್ನು ಬರೆಯಲು ತಾನೇ ನೇಮಿಸಿದ ಬರಹಗಾರರು ಬರೆದುದನ್ನು ಖುದ್ದು ತಾನೇ ತನಿಖೆ ಮಾಡುತ್ತಿದ್ದವ  ಅಂತಹಾ ದೊಡ್ಡ ಮಹಲನ್ನು ತಾನು ಕಟ್ಟಿಸಿದುದರ ಬಗೆಗೆ ಒಂದಕ್ಷರವನ್ನು ಬರೆಸಲಿಲ್ಲವೆಂದರೆ ಏನರ್ಥ? ಅಷ್ಟು ದೊಡ್ಡ ಭವನವನ್ನು ಕಟ್ಟಿಸಿದ್ದ ಸಣ್ಣ ದಾಖಲೆಯೂ ಇಲ್ಲದಿದ್ದಾಗ ಅದು ನೇರಾನೇರ ಷಾಜಹಾನನೇ ಕಟ್ಟಿಸಿದ್ದೆಂದು ಹೇಳಿದವರನ್ನು ಇತಿಹಾಸಕಾರರೆಂದು ಹೇಗೆ ಮನ್ನಿಸೋಣ? ತಾಜ್ ನಿರ್ಮಾಣಕ್ಕೆ 22 ವರ್ಷ ಹಿಡಿಯಿತಂತೆ! 1632-1654ರವರೆಗೆ. 1652ರಲ್ಲಿ ಔರಂಗಜೇಬ್ ತನ್ನ ತಂದೆಗೆ ಬರೆದ ಪತ್ರದಲ್ಲಿ ತನ್ನ ತಾಯಿಯನ್ನು ಸಮಾಧಿ ಮಾಡಿದ ಏಳಂತಸ್ತುಗಳ ಭವನ ಪುರಾತನವಾಗಿದೆಯೆಂದೂ, ಅಲ್ಲಲ್ಲಿ ನೀರು ಸೋರುತ್ತಿದೆಯೆಂದೂ, ಉತ್ತರ ದಿಕ್ಕಿನಲ್ಲಿರುವ ಗುಮ್ಮಟ ಬಿರುಕು ಬಿಟ್ಟಿದೆಯೆಂದು ತುರ್ತಾದ ದುರಸ್ಥಿ ಕಾರ್ಯಗಳನ್ನು ತಾನು ಮಾಡುವುದಾಗಿಯೂ, ಹೆಚ್ಚಿನ ದುರಸ್ಥಿಯನ್ನು ಚಕ್ರವರ್ತಿಗಳು ಮಾಡಿಸಬಹುದೆಂದು ತಿಳಿಸಿದ್ದ(ಆದಾಬ್-ಇ-ಅಲಾಮ್ಗಿರಿ, ಯದ್ಗರ್ನಾಮಾ, ಮುರುಕ್ಖಾ ಇ ಅಕ್ಬರಾದಿ). 1654ರವರೆಗೆ ನಿರ್ಮಾಣವೇ ಮುಗಿದಿರಲಿಲ್ಲವಾದರೆ 1652ರಲ್ಲಿ ದುರಸ್ಥಿಯೇಕೆ ಮಾಡಿಸಬೇಕು?

                ಸಮಾಧಿಗಳ ಹಿಂದೆ ನೆಲಮನೆಯಲ್ಲಿ 14 ಕೊಠಡಿಗಳಿವೆ. ಅವುಗಳ ದ್ವಾರವನ್ನು ಕಲ್ಲುಚಪ್ಪಡಿಗಳಿಂದ ಮುಚ್ಚಲಾಗಿದೆ. ಮೂರನೇ ಅಂತಸ್ತಿನಲ್ಲಿ ನಾಲ್ಕು ಕೊಠಡಿಗಳ ಸಮುಚ್ಚಯಗಳಿವೆ. ಇದೇ ಅಂತಸ್ತಿನ ಮೂಲೆಗಳಲ್ಲಿ ಅಷ್ಟಭುಜಾಕಾರದ ಕೊಠಡಿಗಳಿವೆ. ಒಂದೊಂದಕ್ಕೆ ನಾಲ್ಕು ಬಾಗಿಲುಗಳು; ನಾಲ್ಕು ಸೋಪಾನ ಮಾರ್ಗಗಳು. ಅಲ್ಲಿಂದ ಮೂವತ್ನಾಲ್ಕು ಮೆಟ್ಟಲು ಹತ್ತಿ ಹೋದರೆ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಕಾಣ ಸಿಗುತ್ತವೆ. ಒಂದೊಂದಕ್ಕೂ ಎಂಟು ಬಾಗಿಲುಗಳು. ನಾಲ್ಕೂ ಗೋಪುರದ ಮೇಲೂ ಹಿತ್ತಾಳೆಯ ಕಲಶಗಳು! ಮುಖ್ಯದ್ವಾರ ಎಂಟು ಲೋಹಗಳ ಮಿಶ್ರಣದಿಂದ ಮಾಡಲಾಗಿದ್ದು ಹಿತ್ತಾಳೆಯ ತಗಡಿನ ಲೇಪನವಿದೆ. ಭವನದ ಹೊರ ಪ್ರಾಕಾರದ ಒಳ ಭಾಗದಲ್ಲಿ ಹಲವು ಅಂತಸ್ತುಗಳುಳ್ಳ ಬಾವಿಯೊಂದಿತ್ತು. ಅದು ಪ್ರತಿ ಅಂತಸ್ತಿನ ಒಂದು ಕೊಠಡಿಗಳ ಸಮುಚ್ಚಯಕ್ಕೆ ಹೊಂದಿಕೊಂಡಿತ್ತು. ಯಮುನೆಯ ನೀರು ಅದಕ್ಕೆ ಸರಬರಾಜಾಗುತ್ತಿತ್ತು. ಒಂದು ಸಮಾಧಿಗೆ ಇವೆಲ್ಲಾ ಅಲ್ಲದೆ ಕುದುರೆ ಲಾಯಗಳು, ಹಿತ್ತಲ ಮನೆಗಳು, ಉಪಭವನಗಳೆಲ್ಲಾ ಯಾಕಿವೆ ಎಂದು "ದಿ ತಾಜ್ ಆಂಡ್ ಇಟ್ಸ್ ಎನ್ವಿರಾನ್ಮೆಂಟ್ಸ್" ಗ್ರಂಥ ಬರೆದ ಮೌಲ್ವಿ ಮೊಯಿನುದ್ದೀನ್ ಅಹ್ಮದಿಗೆ ಕಾಡಿತ್ತು! ಎರಡು ನೆಲ ಮಾಳಿಗೆಗಳು, ಏಳು ಅಂತಸ್ತುಗಳು, ಅತಿಥಿ ಗೃಹ, ರಕ್ಷಕರ ಕೊಠಡಿಗಳು ಸೇರಿದಂತೆ ಮುನ್ನೂರೈವತ್ತು ಕೊಠಡಿಗಳು, ಭೂಗರ್ಭ ಮಾರ್ಗಗಳು, ಕುದುರೆಲಾಯ, ಗೋಶಾಲೆ, ವಾದ್ಯಶಾಲೆ, ಅಷ್ಟಭುಜ ಮಂದಿರಗಳು, ಗೋಪುರ-ಕಲಶಗಳು, ಪ್ರತಿ ಅಂತಸ್ತಿನಲ್ಲೂ ಬಾವಿಗಳು ಅದೊಂದು ಹಿಂದೂ ಅರಮನೆ ಎಂದು ಇಂದಿಗೂ ಸಾರುತ್ತಿದೆ..

                 ಇತ್ತೀಚೆಗೆ ತಾಜ್ ಮಹಲ್ ಆವರಣದಲ್ಲಿ ಶುಕ್ರವಾರ ಹೊರತುಪಡಿಸಿ ಉಳಿದ ದಿನ ನಮಾಜ್ ಮಾಡುವಂತಿಲ್ಲ ಎಂದು ಎಎಸ್ಐ ನೀಡಿದ ಆದೇಶವನ್ನು ಉಲ್ಲಂಘಿಸಿ, ಸ್ಥಳೀಯ ಮುಸಲ್ಮಾನರು ಹಾಗೂ ತಾಜ್ ಮಹಲ್ ಮಸೀದಿ ಇಂತೆಝಾಮಿಯಾ ಕಮಿಟಿಯ ಸದಸ್ಯರು ತಾಜ್ ಮಹಲ್ ನಲ್ಲಿ ನಮಾಜ್ ಮಾಡಿದ್ದರು. ಇದನ್ನು ಖಂಡಿಸಿ ಅದು ಮೂಲತಃ ಶಿವ ಮಂದಿರವಾಗಿದ್ದು, ತೇಜೋಮಹಾಲಯ ಎಂದು ಕರೆಯಲ್ಪಡುತ್ತಿತ್ತು ಎಂದಿರುವ ಹಿಂದೂ ಕಾರ್ಯಕರ್ತೆಯರು ನೇರ ತಾಜ್ ಮಹಲ್ಲಿನ ಒಳಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತಾಜ್ ಮಹಲ್ಲಿನ ನಿಜವಾದ ಇತಿಹಾಸ ಹೊರ ಬೀಳುವ ದಿನ ದೂರವಿಲ್ಲ ಅನಿಸುತ್ತಿದೆ.

ಸೋಮವಾರ, ನವೆಂಬರ್ 5, 2018

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!


              ತಮವೆಲ್ಲ ಕರಗಿದಂತೆ ಸ್ಪಟಿಕ ಶುಭ್ರ ಜಲದಿ ಕಲರವಗೈಯುತ್ತಾ ಹರಿವ ತಮಸಾ ನದಿ. ಅದರಂತೆಯೇ ತಿಳಿಯಾದ ನಿರ್ಮಲ ಮನಸ್ಸಿನ ಋಷಿಗಳ ದಂಡು. ರಮ್ಯ ಮನೋಹರವಾದ ಆ ಪರಿಸರಕ್ಕೆ ಸರಸವಾಡುತ್ತಿರುವ ಕ್ರೌಂಚ ಜೋಡಿಯ ಶೋಭೆ. ಮಾಯೆಯೊಳಗೆ ಕಾಲ ಸ್ತಬ್ಧವಲ್ಲವಲ್ಲ. ಮನೋಹರವೇ ಹರೋಹರವಾಗುವಂತೆ ಘಟನೆ ನಡೆಯಿತು. ಬೇಡನ ಶರದುರಿಗೆ ಸಿಲುಕಿ ಗಂಡು ಕ್ರೌಂಚ ನೆಲಕ್ಕುರುಳಿತು. ಹೆಣ್ಣು ಕ್ರೌಂಚದ ದುಃಖವನ್ನು ಹೇಳ ತೀರದು. ಅದು ಗಂಡು ಪಕ್ಷಿಯ ಮೇಲೆ ಬಿದ್ದು ಹೊರಳಾಡುತ್ತ ವಿಲಾಪಿಸುತ್ತಿರುವ ದೃಶ್ಯ ಅತ್ಯಂತ ಹೃದಯವಿದ್ರಾವಕವಾಗಿತ್ತು. ಆ ದೃಶ್ಯವನ್ನು ಕಂಡ ಮುನಿಯ ಸಂಕಟ ಕೋಪಕ್ಕೆ ತಿರುಗಿತು. ಕೋಪದ ಭರದಲ್ಲಿ ಶಾಪದ ಧ್ವನಿ ಹೊರಟಿತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”
“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಶಪಿಸಿದ ತುಸು ಸಮಯದಲ್ಲೇ ಜಿತಕ್ರೋಧನಾಗಿರಬೇಕಾದ ತನ್ನಿಂದ ಶಾಪ ಹೊರಹೊಮ್ಮಿತಲ್ಲ ಎನ್ನುವ ದುಃಖದಲ್ಲಿ ಮುನಿಗೆ ಮತ್ತೆ ಮತ್ತೆ ಆ ಶಾಪ ವಾಕ್ಯ ಜಪವಾಗುತ್ತಿದ್ದಂತೆ ತಿಳುವಳಿಕೆಯೊಂದು ಸ್ಫುಟವಾಯಿತು. ಶಾಪದ ವಾಕ್ಯದಲ್ಲಿ ಅನುಗ್ರಹದ ಅರ್ಥ ಕಾಣಿಸಿತು. ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಕಾಣಿಸಿ ಋಷಿಗೇ ಅಚ್ಚರಿ ಮೂಡಿಸಿತು. ಕ್ರೌಂಚದ ಶೋಕವೇ ಶ್ಲೋಕವಾಯಿತು. 24000 ಶ್ಲೋಕಗಳುಳ್ಳ ರಾಮ ಎನ್ನುವ ಪರಬ್ರಹ್ಮದ ಜೀವನದ ಕಥೆಯಾಯಿತು!

               ವಾಲ್ಮೀಕಿ...ಅಲ್ಲಲ್ಲಾ ಮಹರ್ಷಿ, ಕವಿ ವಾಲ್ಮೀಕಿ! ಸಮಾಜಕ್ಕೆ ಬೇಡದ(ರ)ವನಾಗಿ ದಾರಿಹೋಕರ ರತ್ನಗಳನ್ನು ದೋಚುತ್ತಿದ್ದ ರತ್ನಾಕರ. ಕಾಡಿನಲ್ಲಿ ಮರ ಮರ ನೋಡುತ್ತಾ, ಜನರನ್ನು ದೋಚುತ್ತಾ, ಹೆಂಡತಿ ಮಕ್ಕಳೇ ಸರ್ವಸ್ವವೆಂದುಕೊಂಡಿದ್ದವನಿಗೆ ನಾರದರ ಕೃಪೆಯಿಂದಲೋ, ಸಪ್ತರ್ಷಿಗಳ ಸಂಕಲ್ಪದಿಂದಲೋ ಹೆಂಡತಿ-ಮಕ್ಕಳು ಹೆಚ್ಚೆಂದರೆ ಮಸಣದವರೆಗೆ ಮಾತ್ರ ಬರಬಲ್ಲರೆಂಬ ತಿಳಿವು ಮೂಡಿ ರಾಮ ರಾಮ ಎನುವ ಜಪವು ಜೀವನವಾಯಿತು. ಆ ಮರ ಈ ಮರ ಎಂದು ಧ್ಯಾನಿಸುತ್ತಿದ್ದವ ರಾಮನಾಮದ ಜಪಕ್ಕೆ ತೊಡಗಿದ. ತನ್ನ ವಂಶದ ಮಹತ್ತಿನ, ಸಂಸ್ಕಾರದ, ಅದು ಉದ್ದೇಶಿಸಿದ್ದ ಜೀವನದ ಗುರಿಯ ಅರಿವಾಯಿತು. ಸುತ್ತ ಹುತ್ತ ಬೆಳೆಯಿತು. ಜ್ಞಾನೋದಯವಾಗಿ ವಲ್ಮೀಕದಿಂದ ಹೊರಬಂದವನನ್ನು ಜಗತ್ತು ವಾಲ್ಮೀಕಿಯೆಂದು ಕರೆದು ಗುರುತಿಸಿತು. ಬೇಡದವನೊಬ್ಬ ಉತ್ತಮರ ಸಂಸರ್ಗ, ಸಂಸ್ಕಾರ, ಅಲೌಕಿಕ ಜ್ಞಾನದಿಂದ ಈಗ ಜಗತ್ತಿಗೆ ಬೇಕಾದವನಾಗಿದ್ದ. ಹಾಗಾಗಿಯೇ ಕ್ರೌಂಚದ ಅಳಲು ಅವನನ್ನು ಅಲ್ಲಾಡಿಸಿ ಕವಿಯನ್ನಾಗಿಸಿತು. ಅದು ಬಹುಷಃ ಸಪ್ತರ್ಷಿಗಳ ಸಂಕಲ್ಪವಿರಬೇಕು! ಹೀಗೆ ಭಾರ್ಗವ ವಂಶಜ ಪ್ರಚೇತಸನ ಮಗನಾಗಿ, ಸಮಾಜಕ್ಕೆ ಬೇಡದ(ರ)ವನಾಗಿ, ರಾಮ ನಾಮದ ಬಲದಿಂದ ವಲ್ಮೀಕದಿಂದೆದ್ದು ಕವಿ ವಾಲ್ಮೀಕಿಯಾಗಿ ಇಂದಿಗೂ ಜಗತ್ತಿಗೆ ಬೇಕಾದವನಾದದ್ದೂ ಒಂದು ವಿಶೇಷವೇ!

               ಶಾಪ ಶ್ಲೋಕವಾದದ್ದು ಹೇಗೆ? “ಮಾ” ಎಂದರೆ ಲಕ್ಷ್ಮಿ. ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು(ರಾವಣ) ಕೊಂದೆಯಾದ್ದರಿಂದ ನೀನು(ಶ್ರೀರಾಮ) “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು ಧ್ವನಿತವಾದದ್ದು ಈ ಶ್ಲೋಕದ ಇನ್ನೊಂದು ಅರ್ಥ. “ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” - “ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು, ಅವು ರಹಸ್ಯವೇ ಆದರೂ ನಿನಗೆ ವೇದ್ಯವಾಗಲೀ" ಎಂದು ಬ್ರಹ್ಮ ದೇವನೇ ಅನುಗ್ರಹಿಸಿರಬೇಕು ವಾಲ್ಮೀಕಿಯನ್ನು! ಅದಕ್ಕಾಗಿಯೇ ಪಾತ್ರಗಳ ನಡುವಿನ ಎಲ್ಲಾ ಅಂತರಂಗಿಕ-ಬಹಿರಂಗದ ಸೂಕ್ಷ್ಮವಿಚಾರಗಳೂ ಗೋಚರಿಸಲ್ಪಟ್ಟು ರಾಮಾಯಣ ಮನೆಮನೆಯಲ್ಲಿಯೂ, ಮನಮನದಲ್ಲಿಯೂ ಪ್ರಿಯವಾಯಿತು. ಪ್ರತಿಯೊಂದು ಪಾತ್ರದ ನಗು-ಅಳು, ಸುಖ-ದುಃಖ, ಕೋಪ-ತಾಪ, ಪ್ರೀತಿ-ಸ್ನೇಹ, ದ್ವೇಷ, ಮತ್ಸರ, ಜಗಳ,ತಂಟೆ, ಹುಟ್ಟು-ಸಾವು, ಸಂಕುಚಿತತೆ, ದುರ್ಬೋಧನೆ, ತ್ಯಾಗ - ಬಲಿದಾನ, ಹಿಂಸೆ-ಕ್ರೌರ್ಯ, ಮೋಸ - ವಂಚನೆ, ಶೌರ್ಯ, ಅಧಿಕಾರ-ಅಂತಸ್ತು, ಯುದ್ಧ ಮತ್ತು ಶಾಂತಿ ಹೀಗೆ ಎಲ್ಲವೂ ಪೂರ್ಣರೂಪದಲ್ಲಿ ಮೂಡಿಬಂದಿತು. ಅಲ್ಲಿ ಬರುವ ಪಾತ್ರಗಳ ಉಡುಗೆ -ತೊಡುಗೆ, ನಡೆ-ನುಡಿ, ಘಟನಾವಳಿಗಳೆಲ್ಲವೂ ದಿವ್ಯದೃಷ್ಟಿಗೆ ಹೊಳೆದು ಯಥಾ ರೀತಿಯಲ್ಲಿ ಮೂಡಿಬಂದವು. ಅಲ್ಲದೇ ಇಡೀ ದೇಶದಲ್ಲಿ 'ರಾಮರಾಜ್ಯ' ಎಂಬ ಖ್ಯಾತಿಗೆ ಪಾತ್ರವಾದ ಆಡಳಿತವನ್ನು ಸ್ಥಾಪಿಸಿ ಅಯೋಧ್ಯೆಯನ್ನು ಆಳುತ್ತಿದ್ದ ಶ್ರೀರಾಮನ ಚರಿತ್ರೆಯನ್ನೂ ಪಡಿಮೂಡಿಸಿತು. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡಗಳಿಂದ ಒಡಮೂಡಿದ 24 ಸಾವಿರ ಶ್ಲೋಕಗಳ ಆದಿಕಾವ್ಯವಾಯಿತು. ಮುಂದಿನವರಿಗೆ ಉತ್ತರಕಾಂಡ ಎಂಬ ಏಳನೆ ಕಾಂಡದ ರಚನೆಗೂ ಪ್ರೇರಣೆಯಾಗಿ ಜಗತ್ಪ್ರಸಿದ್ಧವಾಯಿತು. ಇದು ನವರಸಗಳಿಂದ ಕೂಡಿದ ರಮ್ಯ ಮನೋಹರವಾದ, ಮಾನವೀಯತೆಯನ್ನು ಮಿಡಿಯುವ ಮತ್ತು ನೈತಿಕಮೌಲ್ಯಗಳನ್ನು ಪ್ರತಿಷ್ಠಾಪಿಸುವ ಷಜ್ಜ ,ಋಷಭ, ಗಾಂಧಾರ, ಮದ್ಯಮ,ಪಂಚಮ,ಧೈವತ,ನಿಷಾಧಗಳಲ್ಲಿ ಹಾಡಬಹುದಾದ ಮನೋಜ್ಞ ಕಾವ್ಯ. ವಾಗ್ದೇವಿಯೇ ಅವನಲ್ಲಿ ಆವಿರ್ಭವಿಸಿರಬೇಕು! ನಾರದರಿಂದ ಕೇಳಿದ್ದ ರಾಮನ ಕಥೆಯನ್ನು ಕಾವ್ಯವಾಗಿ ಬರೆಯಲು ಕ್ರೌಂಚದ ಅಳಲು ಬೆಳಕಾಯಿತಷ್ಟೇ. ಹಾಗಾಗಿಯೇ ರಾಮಾಯಣವಿಡೀ ಕೇಳಿದ್ದು ಕ್ರೌಂಚದ ದುಃಖವೇ! ರಾಮನ ಯುವರಾಜ್ಯಾಭಿಷೇಕಕ್ಕೆ ಶೃಂಗರಿಸಲ್ಪಟ್ಟ ಅಯೋಧ್ಯೆಯಲ್ಲಿ ತಮಸೆಯ ತಟದ ಮನೋಹರತೆಯಿತ್ತು. ಮಂಥರೆಯೆಂಬ 'ಬೇಡ'ಳ ಕೈಕೆಯೆಂಬ 'ಶರ'ದ ವರದ 'ಉರಿ'ಗೆ ದಶರಥ(ಕ್ರೌಂಚ) ಪುತ್ರವಿಯೋಗದ ದುಃಖಕ್ಕೆ ಈಡಾಗಬೇಕಾಯ್ತು. ದಶರಥನೇನು, ಕೌಸಲ್ಯ-ಸುಮಿತ್ರೆ-ಭರತರಾದಿಯಾಗಿ ಅಯೋಧ್ಯೆಯೇ ಹೆಣ್ಣು ಕ್ರೌಂಚದಂತೆ ರಾಮನಿಂದ ದೂರಾಗಬೇಕಾದ ಸನ್ನಿವೇಶದಲ್ಲಿ ದುಃಖಿಸಿತು. ಲಕ್ಷ್ಮಣನ ಅಗ್ರಜನೆಡೆಗಿನ ಪ್ರೀತಿ, ಕರ್ತವ್ಯ ನಿಷ್ಠೆ ಅವನ ಪತ್ನಿಯಿಂದ ಅವನನ್ನು ದೂರಾಗಿಸಿತು. ರಾವಣನ ಮಾಯಾ ಜಿಂಕೆಯ ಮೋಸ ರಾಮ-ಸೀತೆಯೆಂಬ ಕ್ರೌಂಚ ದಂಪತಿಗಳನ್ನು ದೂರವಾಗಿಸಿತು.

                   ತನ್ನ ಪತ್ನಿಯ ಚಾರಿತ್ರ್ಯಕ್ಕಿಂತಲೂ ಸಿಂಹಾಸನದ ಗೌರವ ಮುಖ್ಯವಾಗಿ ರಾಜಧರ್ಮದ ಪಾಲನೆಗಾಗಿ ಪ್ರಿಯ ಪತ್ನಿಯ ವಿಯೋಗ ಎನ್ನುವ ದುಃಖವನ್ನೂ ಹತ್ತಿಕ್ಕಿ ಪರಿತ್ಯಾಗ ಮಾಡಿದ ರಾಜಾರಾಮ. ರಾಮನ ಆಜ್ಞೆಯಂತೆ ಲಕ್ಷಣನು ತುಂಬು ಗರ್ಭಿಣಿ ಸೀತೆಯನ್ನು ಕಾಡಿನಲ್ಲಿ ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಿಟ್ಟು ಹೋಗುತ್ತಾನೆ. ಅಶೋಕ ವನವೂ ಅವಳ ಶೋಕವನ್ನು ಶಮನ ಮಾಡಲಿಲ್ಲ; ರಾಮರಾಜ್ಯವೂ! ಆದರೂ ಆಕೆ "ಕರುಣಾಳು ರಾಘವನೊಳು ತಪ್ಪಿಲ್ಲ" ಎಂದು ದುಃಖ ನುಂಗಿಕೊಂಡು ಮಹಾತ್ಮೆಯಾದಳು. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಕ್ರೌಂಚದ ಕಣ್ಣೀರಿನ ಕಥೆ ಬರೆದವನಿಗೆ ತನ್ನ ನಾಯಕಿಯ ಕಣ್ಣೀರ ಕಥೆ ಬರೆಯುವಾಗ ಕೈಕಟ್ಟಿರಬೇಕು! ಶೋಕವನ್ನೇ ಶ್ಲೋಕವನ್ನಾಗಿಸಿದವನಿಗೆ ಶೋಕತಪ್ತಳಾದ ತನ್ನ ಕಥಾ ನಾಯಕಿಯನ್ನು ಪ್ರತ್ಯಕ್ಷವಾಗಿ ಕಾಣುವಾಗ ಎದೆ ಬಿರಿಯದಿದ್ದೀತೇ? ಮಹರ್ಷಿಗಳ ಆಶ್ರಮದಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ಅವರು ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ಶ್ರೀರಾಮನ ಅಶ್ವಮೇಧ ಯಾಗಕ್ಕೆ ಆಮಂತ್ರಿತರಾದ ವಾಲ್ಮೀಕಿ ಮಹರ್ಷಿಗಳು ಲವ-ಕುಶರನ್ನು ಕರೆದುಕೊಂಡು ಯಾಗ ಮಂಟಪದಲ್ಲಿ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ಆ ಗಾನದ ಮಾಧುರ್ಯಕ್ಕೆ ಸೋತ ಶ್ರೀರಾಮ ಸಿಂಹಾಸನದಿಂದೆದ್ದು ಮೆಲ್ಲನೆ ಬಂದು ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಕುಳಿತನಂತೆ. ವಸಿಷ್ಠರು “ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆಯಾ” ಎಂದು ಕೇಳಲು, ಶ್ರೀರಾಮ “ನನ್ನ ಕಥೆ ಎಂದಲ್ಲ, ಇದು  ಸೀತೆಯ ಕಥೆ ಎನ್ನುವ ಕಾರಣಕ್ಕೆ ನಾನು ಮೆಚ್ಚುಗೆಯಿಂದ ಕೇಳುತ್ತಿರುವುದು” ಎಂದುತ್ತರಿಸುತ್ತಾನೆ. ಕ್ರೌಂಚದ ಅಳಲು ರಾಮನನ್ನೂ ಸಂಕಟದಲ್ಲಿ ನೂಕದೇ ಬಿಡಲಿಲ್ಲ! ಅದು ವಾಲ್ಮೀಕಿಯ ಪ್ರತಿಭೆಗೆ ಸಿಕ್ಕ ಪ್ರಶಸ್ತಿ!

                    ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಸೀತೆಯ ದುಃಖವನ್ನು ಬರೆದವರಿದ್ದಾರೆ. ಊರ್ಮಿಳೆಯ ಬವಣೆಯನ್ನು ವಿವರಿಸಿದವರಿದ್ದಾರೆ. ಅಹಲ್ಯೆಯ ಪರವಾಗಿ ಕಣ್ಣೀರು ಸುರಿಸಿದವರಿದ್ದಾರೆ! ಆದರೆ ರಾಮನ ದುಃಖವನ್ನು ಕಂಡವರಾರು? ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ! ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ! ಅವನನ್ನು ದೇವರಾಗಿಸಿದ್ದು, ಮರ್ಯಾದಾ ಪುರುಷೋತ್ತಮನಾಗಿಸಿದ್ದು ವಾಲ್ಮೀಕಿಯಲ್ಲಿ ಸ್ಫುರಿಸಿದ ಆದಿ ಕಾವ್ಯವೇ!

                    ವಾಲ್ಮೀಕಿ ರಾಮಾಯಣ ಜಗದ ಜನರ ಜೀವನವನ್ನು ಬದಲಿಸಿದ ಮಹಾ ಕಾವ್ಯವಾಗಿದೆ. ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳೂ ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ, ಕರ್ಮಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ದಾರಿ ತೋರಿಸುತ್ತವೆ. ಬ್ರಹ್ಮನೆಂದಂತೆ ಅದರ ಕೀರ್ತಿ ದಶದಿಕ್ಕುಗಳಿಗೂ ಹಬ್ಬಿತು. ಅನೇಕ ಕವಿಗಳಿಗೆ ಸ್ಪೂರ್ತಿಯಾಯಿತು. ಅನೇಕ ದೇಶ-ಭಾಷೆಗಳಲ್ಲಿ ಅದು ರಚಿತವಾಯಿತು. ರಾಮಾಯಣದ ಭಾರಕ್ಕೆ ಫಣಿರಾಯನೇ ಬಳಲಿದನಂತೆ! ಭಾರತದ ಮೂಲೆಮೂಲೆ ಇಂದಿಗೂ ರಾಮರಾಮ ಎಂದು ಜಪಿಸುತ್ತಿದ್ದರೆ, ಥಾಯ್ಲೆಂಡಿನ ಅರಸರಿಂದಿಗೂ ರಾಮ ಎಂದೇ ಕರೆಯಲ್ಪಡುತ್ತಿದ್ದರೆ, ಮಲೇಷ್ಯಾದ ರಾಷ್ಟ್ರಾಧ್ಯಕ್ಷರು ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವಿಕರಿಸುತ್ತಿದ್ದರೆ, ದೇಶದೇಶಗಳಲ್ಲಿ ರಾಮಾಯಣ ಪ್ರತಿಧ್ವನಿಸುತ್ತಿದ್ದರೆ ಅದಕ್ಕೆ ವಾಲ್ಮೀಕಿ ರಚಿಸಿದ ಧರ್ಮ ಮಾರ್ಗದಲ್ಲಿ ನಡೆವ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ಜ್ಞಾನ ಜ್ಯೋತಿ ರಾಮಾಯಣ ಮಹಾಕಾವ್ಯವೇ ಕಾರಣ. ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಎಂಬ ಕೋಗಿಲೆಗೆ ವಂದಿಸುವುದು ಜಗದ ಜೀವಿಗಳ ಕರ್ತವ್ಯ.
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||

ಸೋಮವಾರ, ಅಕ್ಟೋಬರ್ 8, 2018

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

               ಸಿರಿ ಸಂಪತ್ತಿನ ಶ್ರೀಮಂತಿಕೆಯ ಸಮುದ್ರಕ್ಕೆ ದ್ವಾರವಾಗಿ ಜಗತ್ತಿನ ಕಣ್ಣುಕುಕ್ಕುತ್ತಿತ್ತು ದ್ವಾರಸಮುದ್ರ. ಹುಲಿಯನ್ನು ಬರಿಗೈಯಲ್ಲಿ ಕೊಂದವನಿಂದ "ಸುದತ್ತ" ಆಶೀರ್ವಾದದೊಂದಿಗೆ ಕಟ್ಟಲ್ಪಟ್ಟ ಕರ್ಮ ಕ್ಷಾತ್ರ ತೇಜಸ್ಸಿನ ಮೂಲದಿಂದ ಎದ್ದು ಬಂದ ಹೊಯ್ಸಳರ ರಾಜಧಾನಿ. ಇಂತಹ ಭವ್ಯ ಸಾಮ್ರಾಜ್ಯದ ಮೇಲೆ ಅಲ್ಲಾವುದ್ದೀನ್ ಖಿಲ್ಜಿಯ ತೀಟೆಗೋಸ್ಕರ ಮತಾಂತರನಾಗಿದ್ದ ಒಂದು ಕಾಲದ ಬ್ರಾಹ್ಮಣ ಮಲ್ಲಿಕಾಫರನ ಕಣ್ಣು ಬಿತ್ತು. ಹಿಂದೂ ಧರ್ಮದ ಅಂತಃಸತ್ವ ಇರುವುದೆಲ್ಲಿ ಎನ್ನುವುದನ್ನು ಒಂದು ಕಾಲದ ಹಿಂದೂವಾಗಿದ್ದ ಖಿಲ್ಜಿಯ ಆ ಪ್ರಿಯಕರನಿಗೆ ಹೇಳಿಕೊಡಬೇಕಾಗಿರಲಿಲ್ಲ. ಪಾಂಡ್ಯ್ರರ ನಡುವಿನ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ಹೊಯ್ಸಳ ನರೇಶ ವೀರ ಬಲ್ಲಾಳ ತೆರಳಿದ್ದ ಸಮಯವನ್ನೇ ಉಪಯೋಗಿಸಿಕೊಂಡ ಈ ಹಿಂದೂ ದ್ವೇಷಿ ದ್ವಾರಸಮುದ್ರದ ಮೇಲೆ ದಂಡೆತ್ತಿ ಬಂದ . ಹಗಲಿಡೀ ಉಪವಾಸವಿದ್ದು ರಾತ್ರಿ ಮುಕ್ಕುವ ಪವಿತ್ರ ರಂಜಾನಿನ ಆ ತಿಂಗಳು ಖಿಲ್ಜಿಯ ಸೇನೆಯ ಮುಸಲರಿಗೆ ಗಾಜಿ ಪಟ್ಟದ ಸ್ಪರ್ದೆಯ ಕಣವಾಯಿತು. ವಿಗ್ರಹಗಳು ಮುರಿದು ಬಿದ್ದವು; ರುಂಡಗಳು ಉರುಳಿದವು; ಮಾನಿಯರ ಶೀಲ ಹರಣವಾಯಿತು; ಸಂಪತ್ತು ಸೂರೆಗೊಂಡಿತು; ರಾಜನಿಲ್ಲದ ಸಾಮ್ರಾಜ್ಯ ಸರ್ವನಾಶಗೊಂಡು ಹಳೆಯ ಬೀಡಾಯಿತು! ಮುಮ್ಮಡಿ ಬಲ್ಲಾಳ ರಾಜಧಾನಿಗೆ ದೌಢಾಯಿಸಿದಾಗ ಕಾಲ ಮಿಂಚಿತ್ತು. ಮತಾಂತರಕ್ಕೆ ಒಪ್ಪದ ಆತ  ಅನಿವಾರ್ಯವಾಗಿ ತನ್ನ ಸೇನೆಯನ್ನು ಮಲ್ಲಿಕಾಫರನಿಗೆ ಪಾಂಡ್ಯರನ್ನು ಗೆಲ್ಲುವ ಸಲುವಾಗಿ ಕಳುಹಿಸಿಕೊಡಬೇಕಾದ, ಮುಸಲ್ಮಾನ ಸೈನ್ಯವನ್ನು ತನ್ನ ರಾಜ್ಯದಲ್ಲಿರಿಸಿ ಪೋಷಿಸಬೇಕಾದ ಷರತ್ತಿಗೆ ಒಪ್ಪಬೇಕಾಯಿತು. ಆ ಸೈನ್ಯದ ಬಲದಿಂದ ಮಲ್ಲಿಕಾಫರ ಪಾಂಡ್ಯರನ್ನು ಗೆದ್ದು ಲೂಟಿಗೈದು ಅಪಾರ ಸಂಪತ್ತಿನೊಂದಿಗೆ ದೆಹಲಿಗೆ ತೆರಳಿದ.

                 ಇತ್ತ ಬಲ್ಲಾಳನ ಮನಸ್ಸು ಮುರಿದಿತ್ತು. ಯಾವ ಪಾಂಡ್ಯ ರಾಜ್ಯದಲ್ಲಿ ಸ್ಥಿರತೆಯನ್ನು ತರಲು ಸಹಾಯಕ್ಕಾಗಿ ಆತ ತೆರಳಿದ್ದನೋ ಅಂತಹ ಪಾಂಡ್ಯಸೇನೆಯನ್ನು ತರಿಯಲು ತನ್ನದೇ ಸೇನೆ ಸಹಾಯ ಮಾಡಬೇಕಾದ ಕಾಲದ ಚೋದ್ಯವನ್ನು ಕಂಡು ಅವನ ಎದೆ ಬಿರಿದಿತ್ತು. ಅವನಿಗೀಗ ತನ್ನ ಸಾಮ್ರಾಜ್ಯ ಬೀಜಾರೋಪವಾಗಿದ್ದುದರ ಉದ್ದೇಶ ನೆನಪಾಯಿತು. ಅದರ ಉದ್ದೇಶಕ್ಕಾಗಿ ಅಕ್ಕಪಕ್ಕದ ಹಿಂದೂರಾಜರುಗಳನ್ನು ಒಗ್ಗೂಡಿಸಲಾರಂಭಿಸಿದ. ಬಗ್ಗದವರನ್ನು ಬಡಿದು ತನ್ನ ಪಾಳಯಕ್ಕೆ ಸೇರಿಸಿಕೊಂಡ. ಪಾಂಡ್ಯರನ್ನು, ಕಾಕತೀಯರನ್ನು ಬಗ್ಗು ಬಡಿದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ತನ್ನ ರಾಜ್ಯದಲ್ಲಿದ್ದ ಮುಸಲ್ಮಾನ ಸೇನೆಯನ್ನು ಒದ್ದು ಹೊರಹಾಕಿದ. ಮಧುರೈಯಲ್ಲಿ ಬೀಡುಬಿಟ್ಟು ನಿತ್ಯ ಕೊಳ್ಳೆಹೊಡೆಯುತ್ತಿದ್ದ, ಹಿಂದೂಗಳ ನರಮೇಧಗೈಯುತ್ತಿದ್ದ ಸುಲ್ತಾನರ ಪಾರುಪತ್ಯವನ್ನು ಕೊನೆಗಾಣಿಸಲು ಸೈನ್ಯ ಸಂಘಟಿಸಿ, ರಾಜ್ಯದ ಮೂರು ಮೂಲೆಗಳಲ್ಲಿ ರಾಜಧಾನಿಯನ್ನು ನಿರ್ಮಿಸಿದ. ಅದರಲ್ಲೊಂದೇ ತಿರುವಣ್ಣಾಮಲೈ. ಭೂಮಂಡಲದಲ್ಲೇ ಅತ್ಯಂತ ಪ್ರಶಾಂತವಾದ ಈ ಜಾಗ ಪದೇ ಪದೇ ಖಿಲ್ಜಿಯ ಸೈನ್ಯದಿಂದ ದಾಳಿಗೊಳಗಾಗುತ್ತಿದ್ದ ಹೊಯ್ಸಳ ನರೇಶನಿಗೆ ತನ್ನ ರಾಜಧಾನಿಯಾಗಲು ಪ್ರಶಸ್ತವೆನಿಸುದುದರಲ್ಲಿ ಆಶ್ಚರ್ಯವೇನಿಲ್ಲ. ಇದೇ ಜಾಗ ಈಗ ಮಧುರೈ ಸುಲ್ತಾನರಿಗೆ ತಡೆಗೋಡೆಯಾಯಿತು. ಹಕ್ಕಬುಕ್ಕರನ್ನು ಆನೆಗೊಂದಿಯ ದಳಪತಿಗಳನ್ನಾಗಿಸಲು ವೇದಿಕೆಯಾಯಿತು. ತಮಿಳುನಾಡಿನಲ್ಲಿ ಬೃಹತ್ ಸೈನ್ಯ ಕಟ್ಟಲು ಬಲ್ಲಾಳನಿಗೆ ಸ್ಪೂರ್ತಿತಾಣವಾಯಿತು. ಮಧುರೈ ಸುಲ್ತಾನರನ್ನು ಬಗ್ಗು ಬಡಿಯಲು ನೆರವಾಯಿತು. ಹಿಂದೂ ಸಹಜ ಭೋಳೆ ಸ್ವಭಾವಕ್ಕೆ ತುತ್ತಾಗಿ, ಸೋತ ಸುಲ್ತಾನನಿಗೆ ಕ್ಷಮೆಕೊಟ್ಟು ಅವನ ಮೋಸದ ಹೂಟಕ್ಕೆ ಬಲಿಯಾದರೂ ಜಗತ್ತಿನ ಭವ್ಯ, ಬಲಿಷ್ಟ ಸಾಮ್ರಾಜ್ಯ ವಿಜಯನಗರಕ್ಕೆ ಸ್ಪೂರ್ತಿಯಾದ ವೀರ ಬಲ್ಲಾಳ. ಅವನ ಶಕ್ತಿಯನ್ನು, ಪ್ರತಿಭೆಯನ್ನು, ಮುತ್ಸದ್ಧಿತನವನ್ನು ಎತ್ತರಕ್ಕೇರಿಸಿದ ತಾಣ ತಿರುವಣ್ಣಾಮಲೈ.

                       ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಹಲವು ನಗರಗಳನ್ನು ಜೋಡಿಸುವ ಸಂಧಿಸ್ಥಳ. ಹಾಗಾಗಿ ಜಾನುವಾರು ಜಾತ್ರೆಗೆ ಹಾಗೂ ವ್ಯಾಪಾರದ ಕೇಂದ್ರವಾಗಿಯೂ ಇದು ಪ್ರಸಿದ್ಧ. ಹಲವು ಬೆಟ್ಟಗಳಿಂದ ಆವೃತವಾದ ಇದು 18ನೆಯ ಶತಮಾನದಲ್ಲಿ ಒಂದು ಪ್ರಮುಖ ಸೈನಿಕ ನೆಲೆಯಾಗಿತ್ತು. ಇಲ್ಲಿಯ ಬೆಟ್ಟಗಳು ಕರ್ಣಾಟಕ ಯುದ್ಧಗಳಲ್ಲಿ ಪ್ರಧಾನಪಾತ್ರ ನಿರ್ವಹಿಸಿದವು. 1753-1790ರ ಅವಧಿಯಲ್ಲಿ ಈ ನಗರ ಅನೇಕ ಮುತ್ತಿಗೆಗಳಿಗೆ ಗುರಿಯಾಗಿತ್ತು. ತಿರುವಣ್ಣಾಮಲೈಗೆ ಆ ಹೆಸರು ಬರಲು, ಪ್ರಸಿದ್ಧವಾಗಲು ಕಾರಣ ಅಲ್ಲಿನ 2,671 ಅಡಿ ಎತ್ತರದ ಅಣ್ಣಾಮಲೈ ಅಥವಾ ಅರುಣಾಚಲ ಬೆಟ್ಟ. ಬ್ರಹ್ಮ ಮತ್ತು ವಿಷ್ಣು ಆತ್ಮವಿಸ್ಮೃತಿಗೊಳಗಾಗಿ "ನಾನು ಹೆಚ್ಚು, ತಾನು ಹೆಚ್ಚು" ಎಂಬ ಕಲಹಕ್ಕೆ ತೊಡಗಿದಾಗ ಅದನ್ನು ಕೊನೆಗಾಣಿಸುವ ಸಲುವಾಗಿ ಆದಿ ಅಂತ್ಯಗಳಿಲ್ಲದ ಜ್ಯೋತಿಸ್ಥಂಭದ ರೂಪದಲ್ಲಿ ಶಿವ ಪ್ರಕಟನಾದ. ಇದರ ಆದಿ ಅಥವಾ ಅಂತ್ಯಗಳನ್ನು ಯಾರು ಕಂಡುಬರಬಲ್ಲರೋ ಅವರೇ ಹೆಚ್ಚಿನವರು ಎಂಬ ಗಂಭೀರ ವಾಣಿಯೊಂದು ಕೇಳಿಸಿತು. ಎಷ್ಟು ಪ್ರಯತ್ನಿಸಿದರೂ ತುದಿಬುಡ ತಿಳಿಯದ ಅವರಿಬ್ಬರೂ ಶಿವನ ಶರಣು ಹೊಕ್ಕು ಎಲ್ಲರೂ ಕಾಣಲು ಸಾಧ್ಯವಾಗುವ ಲೋಕಾನುಗ್ರಹ ಕಾರಕವಾದ ಲಿಂಗರೂಪದಲ್ಲಿ ಅರುಣಾಚಲನೆಂದು ಪ್ರಕಟವಾಗಬೇಕೆಂದು ಬೇಡಿದರು. ಹೀಗೆ ಆದಿ ಅಂತ್ಯಗಳಿಲ್ಲದೆ ವಾದಿಸುತ್ತಿದ್ದವರ ಮುಂದೆ ಆದಿ ಅಂತ್ಯಗಳಿಲ್ಲದೆ ಅಚಲವಾಗಿ ನಿಂತು ಅವರ ಅಹಂ ಅನ್ನು ಮುರಿದ ಅಗ್ನಿಸ್ಥಂಭ ಲೋಕವನ್ನು ತಪ್ತಗೊಳಿಸಿದ ತನ್ನ ಶಾಖವನ್ನು ಶಮನಮಾಡಿ ಶಾಂತವಾಗಿ ಅರುಣಾಚಲವಾಗಿ ಭೂಮಂಡಲದಲ್ಲಿ ಎದ್ದು ನಿಂತಿತು. ಅದು ಅಗ್ನಿಯ ಬೆಟ್ಟ; ಋಗ್ವೇದ ಯಜುರ್ವೇದಗಳೆರಡರಲ್ಲೂ ಅಗ್ನಿಯನ್ನು ರುದ್ರನೆಂದೇ ಸಮೀಕರಿಸಲಾಗಿದೆ. ಪಂಚಭೂತ ಕ್ಷೇತ್ರಗಳಲ್ಲಿ ಒಂದಾದ ಇದು "ಅಗ್ನಿ"ಲಿಂಗ ಕ್ಷೇತ್ರ. ಅಗ್ನಿಯು ಊರ್ಧ್ವಮುಖಿ. ಹಾಗಾಗಿ ಅದು ಧರ್ಮದ ಪ್ರತೀಕ; ಆತ್ಮದ ಪ್ರತೀಕ. ಅದು "ಅಹಂ" ಇರುವವರು ತಲುಪಲಾಗದ ಬೆಟ್ಟ. "ಅಹಂ ಎಂದರೆ ಯಾರು?" ಎಂದು ಅರಿಯಲು ಹೊರಡುವವರಿಗೆ ಗುರುವಾಗಿರುವ ಬೆಟ್ಟ! ಸ್ಕಂದಪುರಾಣದ ಮಾಹೇಶ್ವರ ಕಾಂಡ ಸುಮಾರು ಎರಡುಸಾವಿರ ಶ್ಲೋಕಗಳಲ್ಲಿ ಅರುಣಾಚಲದ ಮಹಾತ್ಮೆಯನ್ನು ವರ್ಣಿಸಿದೆ.
ದರ್ಶನಾತ್ ಅಪ್ರಸಾಧಸಿ ಜನನಾತ್ ಕಮಲಾಲಯೇ |
ಕಾಶ್ಯಾಮ್  ಮರಣಾನ್  ಮುಕ್ತಿ: ಸ್ಮರಣಾತ್ ಅರುಣಾಚಲೇ ||
ಚಿದಂಬರದ ನಟರಾಜನ ದರ್ಶನಮಾತ್ರದಿಂದ, ತಿರುವಾರೂರಿನಲ್ಲಿ ಜನ್ಮಮಾತ್ರದಿಂದ, ಕಾಶಿಯಲ್ಲಿ ದೇಹತ್ಯಾಗಮಾತ್ರದಿಂದ, ಅರುಣಾಚಲನ ಸ್ಮರಣೆ ಮಾತ್ರದಿಂದ ಮುಕ್ತಿ ಸಿಗುತ್ತದೆ. ಮಾರ್ಕಂಡೇಯ ಮುನಿಗಳು ನಂದಿಕೇಶ್ವರನಲ್ಲಿ ಕೇವಲ ಸ್ಮರಣೆ ಮಾತ್ರದಿಂದ ಮೋಕ್ಷ ನೀಡುವ ಪರಮ ಶಿವ ಕ್ಷೇತ್ರ ಯಾವುದೆಂದು ಪ್ರಶ್ನಿಸಿದಾಗ ಆತ ಅರುಣಾಚಲನನ್ನು ನೆನೆದು ಭಾವಪರವಶನಾಗಿ "ಅಂಥಾ ಕ್ಷೇತ್ರ ಅರುಣಾಚಲ. ಮೇರು ಹಾಗೂ ಕೈಲಾಸಗಳು ಶಿವನ ಆವಾಸ ಸ್ಥಾನಗಳು. ಆದರೆ ಅರುಣಾಚಲ ಪ್ರತ್ಯಕ್ಷ ಶಿವನೇ ಆಗಿದೆ" ಎಂದು ಉತ್ತರಿಸುತ್ತಾನೆ.

              ಎಲ್ಲಾ ಜನಗಳೂ ಸಾಂಪ್ರದಾಯಿಕ ರೀತಿಯಲ್ಲಿ ಪೂಜಿಸಲು ಸಾಧ್ಯವಾಗುವಂತೆಯೂ ಪ್ರಕಟವಾಗಬೇಕೆಂದು ಬ್ರಹ್ಮ ಮತ್ತು ವಿಷ್ಣು ಕೇಳಿಕೊಂಡಾಗ ಶಿವ ಅರುಣಾಚಲದ ಪೂರ್ವ ಭಾಗದಲ್ಲಿ ಸ್ವಯಂಭೂ ಆದ ಒಂದು ತೇಜಸ ಲಿಂಗವಾಗಿ ಪ್ರಕಟವಾದ. ಇವತ್ತಿಗೂ ಅರುಣಾಚಲೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುತ್ತಿರುವ ಶಿವಲಿಂಗ ಇದೇ. ಮೂರನೆಯ ತಮಿಳು ಸಾಹಿತ್ಯದ ಕಾಲದಲ್ಲಿದ್ದ ನಕ್ಕಿಯಾರ್ ಕವಿಯ ಕೃತಿಗಳಲ್ಲಿ ಇದರ ಪ್ರಸ್ತಾಪವಿದೆ. ಈ ದೇವಾಲಯದ ಕಾಲ ಕನಿಷ್ಟ ಎರಡು ಸಾವಿರ ವರ್ಷಗಳಷ್ಟು ಹಿಂದಿನದ್ದು. ತೇಜೋ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಕರೆದು ಪೂಜಿಸಲಾಗುತ್ತದೆ. ಸಂತ ನಾಯನ್ಮಾರರ ಪದ್ಯಗಳಲ್ಲಿ ದೇವಾಲಯ ಉಲ್ಲೇಖಗೊಂಡಿದೆ. ದೇವಾಲಯದಲ್ಲಿ ನಂದಿ ಮತ್ತು ಸೂರ್ಯರ ಮೂರ್ತಿಗಳು, ಗರ್ಭಗುಡಿಯ ಹಿಂದಿನ ಗೋಡೆಯಮೇಲೆ ವೇಣುಗೋಪಾಲ ಸ್ವಾಮಿಯ ಚಿತ್ತಾರ, ಗರ್ಭಗೃಹದ ಗೋಡೆಯ ಆವರಣದ ಮೇಲೆ ಸೋಮಸ್ಕಂದ, ದುರ್ಗಾ, ಚಂಡಿಕೇಶ್ವರ, ಗಜಲಕ್ಷ್ಮಿ, ಆರುಮುಗಸ್ವಾಮಿ, ದಕ್ಷಿಣಾಮೂರ್ತಿ, ಸ್ವರ್ಣಭೈರವರ್,  ನಟರಾಜ ಮತ್ತು  ‘ಲಿಂಗೋದ್ಭವರ್’ ಗಳ ಕೆತ್ತನೆಗಳಿವೆ. ದೀಪದರ್ಶನ ಮಂಟಪ, ಸಾವಿರ ಸ್ಥಂಭಗಳ ಮಂಟಪ, ಕಲ್ಯಾಣ ಮಂಟಪ, ಮತ್ತು ವಸಂತ ಮಂಟಪಗಳೆಂಬ ಸುಂದರ ಪ್ರಾಂಗಣಗಳು ಇದರ ಭವ್ಯತೆಯನ್ನು ಹೆಚ್ಚಿಸಿವೆ. ಒಟ್ಟು ಒಂಬತ್ತು ಗೋಪುರ ಹಾಗೂ ಐದು ಪ್ರಾಕಾರಗಳನ್ನು ಹೊಂದಿರುವ ಈ ದೇವಾಲಯ ಇಪ್ಪತ್ತೈದು ಎಕರೆಯಲ್ಲಿ ಹಬ್ಬಿದ್ದು ಅತ್ಯಂತ ಪ್ರಾಚೀನ ವಿಶಾಲ ದೇವಾಲಯ. ದೇವಾಲಯಕ್ಕೆ ಸಂಬಂಧಿಸಿದ ಮೊದಲ ಶಾಸನ ಕ್ರಿ.ಶ ಒಂಬತ್ತನೆಯ ಶತಮಾನದ್ದು, ಚೋಳರ ಕಾಲದ್ದು. ಅತ್ಯಂತ ಒಳಗಿನ ಗೋಪುರವನ್ನು 11ನೆಯ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ಕಟ್ಟಲಾಗಿದ್ದು ಇದಕ್ಕೆ ಗಿಣಿ ಗೋಪುರವೆಂದು ಹೆಸರು. ಉನ್ನತ ಗೋಪುರಗಳಿಂದಲೂ ಸಾವಿರ ಕಂಬಗಳ ಮಂಟಪದಿಂದಲೂ ಸುಂದರವಾದ ತಟಾಕ ಮತ್ತು ತೋಟಗಳಿಂದಲೂ ಅಲಂಕೃತವಾದ ದೇವಾಲಯ ಪೂರ್ವಾಭಿಮುಖವಾಗಿದ್ದು ಚೋಳ ಮತ್ತು ಹೊಯ್ಸಳರ ಶಿಲ್ಪಕಲೆಯಿಂದ ಶ್ರೀಮಂತವಾಗಿದೆ. ಪೂರ್ವಕ್ಕೆ ನಡುಪ್ರಾಕಾರದಲ್ಲಿ ಇರುವ, ಮೊದಲನೆಯದಕ್ಕಿಂತ ಪ್ರಾಚೀನವಾದ, ವಲ್ಲಾಲ ನಾಮಾಂಕಿತ ಗೋಪುರವನ್ನು ಹೊಯ್ಸಳ ನರೇಶ ವೀರ ಬಲ್ಲಾಳ ಕಟ್ಟಿಸಿದ. ಆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ತಾನು ರಾಜಗೋಪುರವನ್ನು ಕಟ್ಟಿದ ಬಗೆಗಿನ ಗರ್ವವು ಬಲ್ಲಾಳನ ಮನಸ್ಸಿನಲ್ಲಿತ್ತು. ಅರುಣಾಚಲನ ಉತ್ಸವದ ಸಮಯದಲ್ಲಿ ಉತ್ಸವ ಮೂರ್ತಿ ಈ ದ್ವಾರದ ಮೂಲಕ ಹೋಗಲು ಒಪ್ಪದೆ ತಟಸ್ಥವಾಯಿತು. ತನ್ನ ತಪ್ಪಿನ ಅರಿವಾದ ಬಲ್ಲಾಳ ಕ್ಷಮೆ ಕೇಳಿದ ಬಳಿಕವಷ್ಟೇ ಉತ್ಸವಮೂರ್ತಿ ಬಲ್ಲಾಳ ಕಟ್ಟಿಸಿದ ರಾಜಗೋಪುರದ ದ್ವಾರದ ಮೂಲಕ ಮುನ್ನಡೆಯಿತು. ತಿರುವಣ್ಣಾಮಲೈ ನಗರವನ್ನು ನಿರ್ಮಿಸಿದ, ಗಿರಿಪ್ರದಕ್ಷಿಣೆ ಹಾಗೂ ಅರುಣಾಚಲ ದೇವಾಲಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ವೀರ ಬಲ್ಲಾಳನ ಕೊಡುಗೆಯನ್ನು ಎಲ್ಲಪ್ಪ ನಾಯನಾರ್ ತನ್ನ ಅರುಣಾಚಲ ಪುರಾಣಮ್ ಕೃತಿಯಲ್ಲಿ ವರ್ಣಿಸಿದ್ದಾನೆ. ಒಂದು ಐತಿಹ್ಯದ ಪ್ರಕಾರ ಅರುಣಾಚಲನೇ ತನ್ನ ಭಕ್ತ ಬಲ್ಲಾಳನ ಭಕ್ತಿಗೆ ಮೆಚ್ಚಿ ಮಗನಾಗಿ ಅವನ ತಿರುವಣ್ಣಾಮಲೈನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಜನಿಸಿದ. ಆದರೆ ಶೀಘ್ರವಾಗಿ ಆ ಮಗು ಕಣ್ಮರೆಯಾಯಿತು. ದುಃಖಿತನಾದ ರಾಜನಿಗೆ ಶಿವ ತಾನು ರಾಜನ ಅವಸಾನದ ಸಮಯದಲ್ಲಿ ಚಿತೆಗೆ ಬೆಂಕಿ ಇಡುವ ವೇಳೆಯಲ್ಲಿ ಹಾಜರಿರುವುದಾಗಿ ಅಭಯ ನೀಡಿದ. ಇಂದಿಗೂ ಬಲ್ಲಾಳನ ವಾರ್ಷಿಕ ಶ್ರಾದ್ಧದ ದಿನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಶಿವ ಆತನ ಮಗನಾಗಿ ಬರುವ "ಮಾಸಿ ಮಗಮ್ ತೀರ್ಥಾವರಿ ಉರ್ಚವಮ್" ಹಬ್ಬವನ್ನು ಆಚರಿಸಲಾಗುತ್ತಿದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ದೇವಸ್ಥಾನದ ರಥ, ವಸಂತೋತ್ಸವಕ್ಕೆ ಉಪಯೋಗಿಸುವ ಬೃಹತ್ ಅಗ್ನಿ ಕುಂಡ ,ಸಾವಿರ ಕಂಬಗಳ ಮಂಟಪ, ದೇವಸ್ಥಾನದ ಹತ್ತಿರವಿರುವ ಪುಷ್ಕರಿಣಿ ಮುಂತಾದವನ್ನು ಕಟ್ಟಿಸಿದ. ದೇವಳದ ಪ್ರಧಾನದ್ವಾರದ ರಾಜಗೋಪುರ 217 ಅಡಿ ಎತ್ತರ, 98 ಅಡಿ ಅಗಲವಿದ್ದು ಕ್ರಿ.ಶ. 1516ರಲ್ಲಿ ಕೃಷ್ಣದೇವರಾಯನಿಂದ ನಿರ್ಮಿತವಾಯಿತು. ಚೋಳ, ಹೊಯ್ಸಳ, ವಿಜಯನಗರದ ಅರಸರ ಶಾಸನಗಳಲ್ಲದೆ ಕಾದವರು, ಚೇದಿಗಳು, ನಾಯಕರು ಹಾಗೂ ಆರ್ಕಾಟ್ ನವಾಬರ ಶಾಸನಗಳೂ ಈ ದೇವಾಲಯದಲ್ಲಿವೆ.

                 ಶಿವನಾಜ್ಞೆಯಂತೆ ದುಷ್ಟ ಸಂಹಾರಕ್ಕಾಗಿ ಅರುಣಾಚಲದಲ್ಲಿ ತಪಃಗೈದ ಪಾರ್ವತಿ, ತಪಸ್ಸು ಮುಗಿದ ಬಳಿಕ ಅರುಣಾಚಲಕ್ಕೆ ಪ್ರದಕ್ಷಿಣೆ ಬಂದಳು. ಪ್ರತ್ಯಕ್ಷನಾದ ಶಿವ ಅವಳಿಂದ ವರಣಮಾಲೆಯನ್ನು ಸ್ವೀಕರಿಸಿ ತನ್ನಲ್ಲೇ ಅವಳಿಗೆ ಸ್ಥಾನವನ್ನು ನೀಡಿ ಅರ್ಧನಾರೀಶ್ವರನಾದ. ಪಾರ್ವತಿಯ ಪ್ರಾರ್ಥನೆಯಂತೆ ಆ ದಿನವನ್ನು ಪ್ರತೀ ವರ್ಷ ಉತ್ಸವದ ದಿನವಾಗಿ ಆಚರಿಸಲಾಗುತ್ತದೆ. ಅಹಮಿಕೆಗೊಳಗಾಗಿ ವಾದ ಹೂಡಿ ಶಿವನ ಮಹಿಮೆಯನ್ನು ಹರಿ-ವಿರಂಚಿಗಳೀರ್ವರು ಅರಿತು ಶಿವನ ಕೃಪೆಗೆ ಪಾತ್ರರಾದ ಕಾರ್ತಿಕಪೂರ್ಣಿಮೆಯ ದಿನವೂ ಇದು ಹೌದು. ಹನ್ನೆರಡು ದಿನ ಅರುಣಾಚಲೇಶ್ವರನಿಗೆ ವಿಜೃಂಭಣೆಯ ಪೂಜೆ, ಉತ್ಸವ ನಡೆಯುತ್ತದೆ. ಹತ್ತನೆಯ ದಿನ ದೇವಾಲಯದಲ್ಲಿ ಹಚ್ಚಿದ ಪವಿತ್ರ ಜ್ಯೋತಿಯಿಂದ ದೀಪವನ್ನು ಕೊಂಡೊಯ್ದು ಅರುಣಾಚಲದ ಶಿಖರದಲ್ಲಿ ಜ್ಯೋತಿಯನ್ನು ಬೆಳಗಲಾಗುತ್ತದೆ. ಸುತ್ತ ಹತ್ತಾರು ಮೈಲುಗಳಿಗೆ ಕಾಣುವ ಈ ಜ್ಯೋತಿಯನ್ನು ಕಂಡೊಡನೆ ಅರುಣಾಚಲೇಶ್ವರ ದೇವಾಲಯ ಹಾಗೂ ರಮಣಾಶ್ರಮದಲ್ಲಿ ಅರುಣಾಚಲ ಶಿವ ಘೋಷಣೆ ಮುಗಿಲು ಮುಟ್ಟುತ್ತದೆ. ಹನ್ನೆರಡನೇ ದಿವಸ ಅರುಣಾಚಲೇಶ್ವರ ಮತ್ತು ಪಾರ್ವತಿಯ ಉತ್ಸವ ಮೂರ್ತಿಗಳನ್ನು ವಸ್ತ್ರಾಭರಣ, ಪುಷ್ಪಮಾಲೆಗಳಿಂದ ಅಲಂಕರಿಸಿ ಪಲ್ಲಕ್ಕಿಯಲ್ಲಿ ಅರುಣಾಚಲ ಬೆಟ್ಟದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಪಾರ್ವತಿ ತಪಸ್ಸು ಮಾಡಿದ್ದು ಮುನಿ ಗೌತಮರ ಆಶ್ರಮದ ಬಳಿಯಲ್ಲಿ. ಅಲ್ಲಿ ಈಗ ಪಾರ್ವತಿಯು "ಹಸಿರು ವರ್ಣದ ತಾಯಿ" ಎಂದು ಪೂಜಿಸಲ್ಪಡುವ, 1000 ವರ್ಷಗಳಿಗೂ ಹಳೆಯದಾದ ಪಚ್ಚೈ ಅಮ್ಮಾಳ್ ದೇವಾಲಯವಿದೆ.

              ತಿರುವಣ್ಣಾಮಲೈನಲ್ಲಿಯ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಸುಮಾರು ಅರ್ಧ ಎಕರೆ ಜಾಗದಲ್ಲಿ ವ್ಯಾಪಿಸಿರುವ ಮೊದಲು ಮರಗಳಿಂದ ನಿರ್ಮಿತವಾಗಿದ್ದ ಈ ದೇವಾಲಯವನ್ನು 1200 ವರ್ಷಗಳ ಕೆಳಗೆ ಕಲ್ಲುಗಳಿಂದ ಕಟ್ಟಲಾಯಿತು. ಇಲ್ಲಿ ಪೂಜಿಸಲ್ಪಡುವ ಲಿಂಗವನ್ನು ಸ್ವತಃ ಬ್ರಹ್ಮನೇ ಕೆತ್ತಿದನೆಂಬ ಪ್ರತೀತಿ. ಅರುಣಾಚಲ ಬೆಟ್ಟದ ತಳದಲ್ಲಿ ಅಷ್ಟದಿಕ್ಕುಗಳಲ್ಲಿ ಅಷ್ಟಲಿಂಗಗಳು ಸ್ಥಾಪಿಸಲ್ಪಟ್ಟಿವೆ. ಇವುಗಳಿಗೆ ಕಿರು ಮಂದಿರವನ್ನೂ ನಿರ್ಮಿಸಲಾಗಿದೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ಯಮ ಲಿಂಗ, ನಿಋತಿ ಲಿಂಗ, ವರುಣಲಿಂಗ, ವಾಯುಲಿಂಗ, ಕುಬೇರಲಿಂಗ ಹಾಗೂ ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಅರುಣಾಚಲದ ಸುತ್ತ 14 ಕಿಮೀ ವ್ಯಾಪ್ತಿಯಲ್ಲಿ ಈ ಅಷ್ಟಲಿಂಗ ಮಂದಿರಗಳಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ. ಶಕ್ತಿ ಸ್ಥಳಗಳಲ್ಲೊಂದಾದ ಪಡವೇಡು ರೇಣುಕಾಂಬ ದೇವಸ್ಥಾನ ತಿರುವಣ್ಣಾಮಲೈನಲ್ಲಿದೆ. ಜಮದಗ್ನಿಯ ಪತ್ನಿ ರೇಣುಕೆಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಸೋಮನಾಥಲಿಂಗವು ಇಲ್ಲಿದೆ.

             ಪಾಲ್ ಬ್ರಂಟನ್, ಬ್ರಿಟಿಷ್ ಪತ್ರಕರ್ತ. ಆಧ್ಯಾತ್ಮ ಜೀವನದ ವಿಪರೀತ ಕುತೂಹಲ ಅವನ ಎದೆಯಲ್ಲೊಂದು ಬೆಂಕಿಯನ್ನೆಬ್ಬಿಸಿಬಿಟ್ಟಿತ್ತು. ಆ ಕುತೂಹಲ ಅವನನ್ನು ನಿಗೂಢ ಭಾರತದಲ್ಲಿ ಹುಡುಕಾಟ ನಡೆಸಲು ಪ್ರೇರೇಪಿಸಿತು. ಹಾಗೆ ಬಂದವ ಭಾರತದಲ್ಲಿ ಅನೇಕ ಕಡೆ ಸುತ್ತಾಡಿ ಅನೇಕ ಸಾಧು, ಸಂತರ ದರ್ಶನಗೈದ. ಕೆಲವರಿಂದ ಪ್ರೇರಣೆ ಪಡೆದ, ಕೆಲವರ ಪೊಳ್ಳುತನದಿಂದ ಜಿಗುಪ್ಸೆಗೊಂಡು ದೂರ ಸರಿದ. ಕಂಚಿ ಪರಮಾಚಾರ್ಯರಿಂದ ಪ್ರಭಾವಿತನಾದ ಅವನಿಗೆ ಕಂಚಿ ಶ್ರೀಗಳು ಅರುಣಾಚಲದ ದಾರಿ ತೋರಿದರು. ಹಿಂದೆ ತನಗೆ ಮಾರ್ಗದರ್ಶನ ಮಾಡಿದ್ದ ಯುವ ಯೋಗಿ ಸುಬ್ರಹ್ಮಣ್ಯನ ಸಹಾಯದಿಂದ ಇದೇ ಅರುಣಾಚಲ ಬೆಟ್ಟದ ತಪ್ಪಲಲ್ಲಿ ಬಂದು ನಿಂತ ಪಾಲ್ ಬ್ರಂಟನ್. ಬೆಟ್ಟದಲ್ಲೊಂದು ಆಶ್ರಮ. ಅಲ್ಲೊಬ್ಬ ಬರಿಯ ಕೌಪೀನಧಾರಿ. ಅವನ ಸುತ್ತ ಕುಳಿತ ಹದಿನೈದಿಪ್ಪತ್ತು ಜನ ಧ್ಯಾನದಲ್ಲಿ ಮುಳುಗಿದ್ದಾರೆ. ಅಗ್ಗಿಷ್ಟಿಕೆಯ ಸುಗಂಧ ಅಲ್ಲಿ ಹರಡಿತ್ತು. ಅದಕ್ಕೆ ಮಿಗಿಲಾದ ಪ್ರಶಾಂತತೆ ಮಹದಾನಂದ ಅಲ್ಲಿ ಮೆರೆದಿತ್ತು. ಆ ಕೌಪೀನಧಾರಿಯ ದೃಷ್ಟಿ ದೂರದಾಗಸದೆಲ್ಲೋ ದೃಢವಾಗಿ ನಿಂತಿತ್ತು. ಪಾಲ್ ಬ್ರಂಟನ್ನನ್ನಾಗಲೀ, ಅವನು ತಂದ ಫಲವನ್ನಾಗಲೀ, ಅವನ ಜೊತೆ ಅಥವಾ ಬಳಿಕ ಬಂದವರನ್ನು ಆತ ಲಕ್ಷಿಸಲೇ ಇಲ್ಲ. ಕೆಲವೇ ಹೊತ್ತು. ಬ್ರಂಟನ್ನಿಗೆ ಅವರತ್ತ ನೋಡುತ್ತಿದ್ದ ತನ್ನ ದೃಷ್ಟಿಯನ್ನು ಬದಿಗೆ ಸರಿಸಲಾಗಲಿಲ್ಲ. ಅವನ ಮನದಲ್ಲಿದ್ದ ಅಪನಂಬಿಕೆ, ಸಂದೇಹಗಳೆಲ್ಲಾ ಹೇಳ ಹೆಸರಿಲ್ಲದಂತೆ ಕರಗಿ ಹೋದವು. ಅಸಂಖ್ಯ ಪ್ರಶ್ನೆಗಳನ್ನವನು ಹೊತ್ತು ತಂದಿದ್ದ. ಆದರೆ ಅವನಲ್ಲಿದ್ದ "ನಾನು" ಕರಗಿ ಹೋಗಿತ್ತು. ಇನ್ನು ಪ್ರಶ್ನೆಗಳೇನು ಮಹಾ? ಅವನು ಕಾಲದ ಪರಿವೆಯೇ ಇಲ್ಲದೆ ಆನಂದದ ಹರಿವಿನಲ್ಲಿ ಕರಗಿ ಹೋಗಿದ್ದ. ಆಗ ಕೌಪೀನಧಾರಿಯ ದೃಷ್ಟಿ ಪಾಲ್ ಬ್ರಂಟನ್ ಮೇಲೆ ಬಿತ್ತು. ತಾನು ಬಂದ ಉದ್ದೇಶವನ್ನು ಪಾಲ್ ವಿವರಿಸಿದಾಗ ಆ ಕೌಪೀನಧಾರಿ "ನೀವು ಪದೇ ಪದೇ ನಾನು, ನಾನು ಎನ್ನುತ್ತೀರಿ. ಆ ನಾನು ಯಾರು?" ಎಂದು ನೇರ ಪ್ರಶ್ನೆ ಹಾಕಿದ. ಪಾ.ಬ್ರ: "ನಾನು ಪಾಲ್ ಬ್ರಂಟನ್". ಕೌ:"ಅದು ನಿಮ್ಮ ಹೆಸರಾಯಿತು, ನೀವಾರು?" ಪಾ.ಬ್ರ: "ನನ್ನ ಜೀವನ ಪೂರ್ತಿ ಅವನನ್ನು ಬಲ್ಲೆ." ಕೌ:"ಅದು ನಿಮ್ಮ ದೇಹ; ನೀವು ಯಾರು?" ಪಾಲ್ ಬ್ರಂಟನ್ನನಿಗೆ ತಲೆಕೆಟ್ಟುಹೋಯಿತು. ಆ ಕೌಪೀನಧಾರಿಯ ಮಾರ್ಗದರ್ಶನ ಪಡೆದು "ನಾನು ಯಾರು?" ಎನ್ನುವ ಹುಡುಕಾಟಕ್ಕಾಗಿ ಅಲ್ಲೇ ಗುಡಿಸಲು ಕಟ್ಟಿಕೊಂಡು ಕುಳಿತ. ಕೆಲವೇ ಸಮಯದಲ್ಲಿ ತಿರುವಣ್ಣಾಮಲೈ ಬಿಟ್ಟು ಮತ್ತೆಲ್ಲೂ ತೆರಳದ ಆ ಕೌಪೀನಧಾರಿಯ ಕಾಲ ಕೆಳಗೆ ಸಮಸ್ತ ವಿಶ್ವವೇ ಬಂದು ಬಿತ್ತು.

                 ಆತ ರಮಣ ಮಹರ್ಷಿ. ಕರ್ಮಬಂಧನಗಳಿಂದ ಕಳಚಿಕೊಳ್ಳಬೇಕೆಂಬ, ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಯಾವ ಅಭಿಲಾಶೆಯೂ ಇಲ್ಲದ ಜೀವನದ ಬಗ್ಗೆ ಅರಿತುಕೊಳ್ಳುವ ಚಿಕ್ಕ ಪ್ರಾಯದಲ್ಲಿ "ನಾನು ಯಾರು?" ಎಂಬ ಅರಿವು ಅವರಲ್ಲಿ ಝಗ್ಗನೆದ್ದು ಪ್ರಕಾಶಿಸಿತು. ಲೌಕಿಕ ಜೀವನದ ನಿರರ್ಥಕತೆ ಅರ್ಥವಾದೊಡನೆ ಹಿಂದೊಮ್ಮೆ ಕೇಳಿದ್ದ ಅರುಣಾಚಲವೆಂಬ ಹೆಸರು ಕೂಗಿ ಕರೆಯಿತು. ಹಾಗೆ ಬಂದವರು ಎಲ್ಲವನ್ನೂ ಕಿತ್ತೆಸೆದು ಗಾಢ ಸಮಾಧಿಯಲ್ಲಿ ಮುಳುಗಿ ಜೀವನದ ಔನ್ನತ್ಯವನ್ನು ಮುಟ್ಟಿಬಿಟ್ಟರು. ಜನ ಅವರನ್ನು ದೇವರೆಂದರು. ಜನರೇ ಆತನಿಗೆ ಆಶ್ರಮ ಕಟ್ಟಿದರು. ಶುಕ ಮಾರ್ಗದಿ ಆತ್ಮ ಸಾಕ್ಷಾತ್ಕರಿಸಿಕೊಂಡ ಈ ಪ್ರಖರ ಸೂರ್ಯನ ಕಿರಣ ಭೂಮಂಡಲದ ಇಂಚು ಇಂಚಿಗೂ ಮುಟ್ಟಿತು. ಅದಕ್ಕೆ ಪಾಲ್ ಬ್ರಂಟನ್ ನೆಪವಾದ. ಜಗತ್ತಿನ ಎಲ್ಲಾ ಭಾಗಗಳಿಂದ ಜಾತಿ, ಮತ, ಪಂಥ, ಲಿಂಗ, ಪ್ರಾಯ, ಬಡವ ಬಲ್ಲಿದ ಮನುಷ್ಯ-ಪ್ರಾಣಿ ಎಂಬ ಭೇದಗಳಿಲ್ಲದೆ ಸಹಸ್ರಾರು ಜನರು ಆ ಕಿರಣದ ಜಾಡು ಹುಡುಕುತ್ತಾ ಬಂದು ಸನ್ನಿಧಿಯಲ್ಲಿ ಶಾಂತಿ, ನೆಮ್ಮದಿಯನ್ನು ಅನುಭವಿಸಿದರು, ಆತ್ಮಜ್ಞಾನ ಗಳಿಸುವತ್ತ ಹೊರಳಿದರು, ಜ್ಞಾನದ ಸ್ವರ್ಣಫಲಗಳನ್ನೇ ಪಡೆದುಕೊಂಡರು. ಆತನನ್ನು ಭಗವಾನನೆಂದೂ, ಮಹರ್ಷಿಯೆಂದೂ ಆರಾಧಿಸಿದರು. ಹಾಗಂತ ಆತನೇನು ಮಠ ಕಟ್ಟಿಕೊಳ್ಳಲಿಲ್ಲ. ಪೀಠಾಧಿಪತಿಯೆಂದು ಘೋಷಿಸಿಕೊಳ್ಳಲಿಲ್ಲ. ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಆತನಿಂದ ಜರಗಿದವು. ಅವನ್ನೇನು ತನ್ನದೆಂದು ಹೇಳಲಿಲ್ಲ. ಸಹಜ ಪ್ರಾಕೃತಿಕ ಕ್ರಿಯೆಯೆಂಬಂತೆ ಬದಿಗೆ ಸರಿಸಿದ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದ. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದ. ಮೌನವಾಗಿಯೇ ಜಗವನ್ನಾಳಿದ. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದ. ದಕ್ಷಿಣಾಮೂರ್ತಿಯ ಅಪರಾವತಾರವೆನಿಸಿದ. ಈಗಲೂ ದೇಶವಿದೇಶಗಳಿಂದ ರಮಣಾಶ್ರಮ-ಅರುಣಾಚಲ ಜನರನ್ನು ಸೆಳೆಯುತ್ತಲೇ ಇದೆ. ಇಂದಿಗೂ ರಮಣಾಶ್ರಮದಲ್ಲಿ, ಅರುಣಾಚಲದ ತುತ್ತತುದಿಗೆ ಎಲ್ಲಿಂದಲೋ ಬಂದ ಪ್ರಾಣಿಗಳು ಹೋಗಿ ಧ್ಯಾನಿಸುತ್ತವೆ. ಸ್ವಘೋಷಿತ ಆಧ್ಯಾತ್ಮ ಜೀವಿಗಳೆಲ್ಲಾ ರಮಣರ ಎದುರು ಬರಲು ಹೆದರುತ್ತಿದ್ದರೆಂದರೆ ಅವರ ಮಹಾನತೆ ಅರಿಯಬಹುದು. ಅರಿತವರಿಗೆ ಆತ ಜ್ಞಾನಿ, ಮೂಢರಿಗೆ ಬರಿಯ ಕೌಪೀನಧಾರಿ! ಆತ ಭಾರತದ ಅಂತಃಸತ್ವವನ್ನು ಬೆಳಗಿ ಜಗಕೆ ಪಸರಿಸಿದ ಆತ್ಮಜ್ಯೋತಿ! ಅರುಣಾಚಲ ಬೇರೆಯಲ್ಲ, ರಮಣ ಬೇರೆಯಲ್ಲ, ಶಿವ ಬೇರೆಯಲ್ಲ; ರಮಣರ ಸಾನ್ನಿಧ್ಯ ತಿರುವಣ್ಣಾಮಲೈಯ ಮಣ್ಣನ್ನು ಸಾರ್ಥಕಗೊಳಿಸಿತು. ಭಾರತದ ಮಣ್ಣನ್ನೂ!

                 ಅನೇಕ ಋಷಿಗಳು ಅರುಣಾಚಲದಿಂದ ಆಕರ್ಷಿತರಾಗಿ ಅಲ್ಲಿ ತಪಸ್ಸನ್ನಾಚರಿಸಿದ್ದಾರೆ. ಆಧುನಿಕ ಕಾಲದಲ್ಲಿಯೂ ಅರುಣಾಚಲದಿಂದ ಸೆಳೆಯಲ್ಪಟ್ಟವರು ಅನೇಕ. ಅವರಲ್ಲಿ ಮಾಣಿಕವಾಚಿಕರ್, ಅಪ್ಪಾರ್, ಸಂಬಂದಾರ್, ಸುಂದರಾರ್, ಗುಹಾ ನಮಶ್ಶಿವಾಯ, ಗುರು ನಮಶ್ಶಿವಾಯ, ವಿರೂಪಾಕ್ಷ ದೇವ, ಈಶಾನ್ಯ ದೇಶಿಕರ್, ಅರುಣಗಿರಿನಾಥರ್, ಮಹಾರ್ ಶೇಷಾದ್ರಿ ಸ್ವಾಮಿ ಮತ್ತು ಭಗವಾನ್ ರಮಣ ಮಹರ್ಷಿ ಪ್ರಮುಖರು. ವರ್ಷದ 365 ದಿನವೂ ಭಕ್ತರೂ ಅರುಣಾಚಲ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಒಟ್ಟು 14ಕೀಮೀ.ನಷ್ಟಾಗುವ ಇದಕ್ಕೆ ಗಿರಿವಲಂ ಎಂದು ಹೆಸರು. ಹುಣ್ಣಿಮೆ ದಿನವಂತೂ ಬೆಳಗಿನಿಂದ ರಾತ್ರಿವರೆಗೆ ಪ್ರದಕ್ಷಿಣೆ ನಡೆಯುತ್ತಿರುತ್ತದೆ. ತಮಿಳು ಕಾರ್ತಿಕ ಮಾಸದ ಪೌರ್ಣಿಮೆ ಗಿರಿ ಪ್ರದಕ್ಷಿಣೆಗೆ ಶ್ರೇಷ್ಠ ದಿನ. ಆ ದಿನ ಶಿವನನ್ನು ಭಜಿಸುತ್ತಾ, ನೆನೆಯುತ್ತಾ, ನರ್ತಿಸುತ್ತಾ ಜನಸಮೂಹವೇ ಹಗಲು-ರಾತ್ರಿಯಿಡೀ ಪ್ರದಕ್ಷಿಣೆ ಬರುತ್ತದೆ. ಪ್ರದಕ್ಷಿಣೆಯ ಸಮಯದಲ್ಲಿ ಜನರ ಜೊತೆಗೆ ದೇವತೆಗಳು, ಸಿದ್ಧರೂ ಸಾಗುತ್ತಾರೆ ಎನ್ನುವ ಪ್ರತೀತಿ ಇದೆ. ಪ್ರದಕ್ಷಿಣೆಗೆ ವಾಹನ ಬಳಸಬಾರದು, ನಡೆದೇ ಹೋಗಬೇಕು ಎನ್ನುವ ಅಲಿಖಿತ ನಿಯಮ ಅಲ್ಲಿದೆ. ಗಿರಿಪ್ರದಕ್ಷಿಣೆ ಭಕ್ತನ ಪಾಪವನ್ನು ನಿವಾರಿಸಿ, ಪುನರ್ಜನ್ಮವನ್ನು ತಡೆದು ಜ್ಞಾನವನ್ನು ದಯಪಾಲಿಸಿ ಲೋಕದಿಂದ ಬಿಡುಗಡೆಗೊಳಿಸುತ್ತದೆ ಎಂದು ರಮಣರು ಗಿರಿಪ್ರದಕ್ಷಿಣೆಯ ಮಹತ್ವವನ್ನು ವಿವರಿಸಿದ್ದಾರೆ. ಅರುಣಾಚಲವನ್ನು ಹತ್ತುವುದು(ಬರಿಗಾಲಲ್ಲಿ) ಕೂಡಾ ಗಿರಿಪ್ರದಕ್ಷಿಣೆಯ ಭಾಗವೇ. ಅರುಣಾಚಲ ದೇವಾಲಯದ ಉತ್ತರ ಗೋಪುರದ ಬಳಿ ಇರುವ ಪೂರ್ವದ ಬದಿಯಿಂದ ಗಿರಿಯನ್ನು ಹತ್ತಬೇಕು. ಮೊದಲು ಹದಿಮೂರನೇ ಶತಮಾನದಲ್ಲಿ ಜೀವಿಸಿದ್ದ ಸಂತ ಶಿವಭಕ್ತ ಗುಹಾ ನಮಶ್ಶಿವಾಯರ ವಾಸಸ್ಥಳ ಸಿಗುತ್ತದೆ. ಗುಹೆಯೊಳಗೆ ಸಮಾಧಿಲಿಂಗ ಹಾಗೂ ದಕ್ಷಿಣಾಮೂರ್ತಿಯ ಪ್ರತಿಮೆಯಿದೆ. ಮುಂದೆ ಸಿಗುವುದೇ ವಿರೂಪಾಕ್ಷ ಗುಹೆ. ಹದಿಮೂರನೇ ಶತಮಾನದಲ್ಲಿದ್ದ ಸಂತ ವಿರೂಪಾಕ್ಷ ಓಂಕಾರದ ಆಕೃತಿಯಲ್ಲಿರುವ ಈ ಗುಹೆಯಲ್ಲಿ ತಪಸ್ಸನ್ನಾಚರಿಸಿದ. ಭಗವಾನ್ ರಮಣ ಮಹರ್ಷಿಗಳು 1899ರಿಂದ 1916ರವರೆಗೆ ಹದಿನೇಳು ವರ್ಷಗಳ ಕಾಲ ಇಲ್ಲಿ ತಪಸ್ಸನ್ನಾಚರಿಸಿದರು. ತಮ್ಮ ಮೊದಲ ಭಕ್ತರಾದ ಗಂಭೀರಂ ಶೇಷಯ್ಯರ್ ಹಾಗೂ ಶಿವಪ್ರಕಾಶಂ ಪಿಳ್ಳೈಯವರಿಗೆ ಜ್ಞಾನಮಾರ್ಗವನ್ನು ಅವರು ಬೋಧಿಸಿದ್ದು ಇಲ್ಲೇ. ಅವರ ಮೊದಲ ಆಂಗ್ಲಭಕ್ತ ಕೃತಾರ್ಥನಾದದ್ದೂ ಇಲ್ಲೇ. ಕಾವ್ಯಕಂಠ ಗಣಪತಿ ಮುನಿಗಳು ರಮಣಾನುಗ್ರಹಕ್ಕೆ ಪಾತ್ರರಾಗಿ, ರಮಣರನ್ನು ಮಹರ್ಷಿ ಎಂದು ಹೆಸರಿಸಿದ್ದು ಇಲ್ಲೇ. ಮುಂದೆ ರಮಣರ ಶಿಷ್ಯ ಕಂದಸ್ವಾಮಿ ಕಟ್ಟಿದ ಸುಂದರ ಸ್ಕಂದಾಶ್ರಮ ಸಿಗುತ್ತದೆ. ಇಲ್ಲಿಂದ ಅರುಣಾಚಲೇಶ್ವರ ದೇಗುಲ ರಮ್ಯ ಮನೋಹರವಾಗಿ ಕಂಗೊಳಿಸುವುದನ್ನು ಕಾಣಬಹುದು. ರಮಣರ ತಾಯಿ ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿದ್ದು ಇಲ್ಲೇ. ಇನ್ನಷ್ಟು ಮೇಲಕ್ಕೆ ತೆರಳಿದಾಗ ರಮಣರು ಆಗಾಗ ಭೇಟಿ ನೀಡುತ್ತಿದ್ದ ಏಳು ಚಿಲುಮೆಗಳಿರುವ ಸ್ಥಳ ಸಿಗುತ್ತದೆ. ಕಡಿದಾದ ದಾರಿಯಲ್ಲಿ ಹತ್ತಿ ಸಾಗಿದಾಗ ಅದು ಅರುಣಾಚಲದ ನೆತ್ತಿಯನ್ನು ಮುಟ್ಟುತ್ತದೆ. ಅಲ್ಲಿ ಎರಡು ಹೆಜ್ಜೆ ಗುರುತಿರುವ ಚಪ್ಪಟೆಯಾಕಾರದ ಕಲ್ಲು ಇದೆ. ಪಕ್ಕದಲ್ಲೇ ಕಾರ್ತಿಕ ದೀಪವನ್ನು ಉರಿಸುವ ಕಡಾಯಿಯಿದೆ. ಅಲ್ಲೇ ಹಲವಾರು ವರ್ಷಗಳಿಂದ ಸಾಧುವೊಬ್ಬ ವಾಸವಾಗಿದ್ದಾನೆ! ತಿರುವಣ್ಣಾಮಲೈಯಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಜನಿಸಿದ್ದ ಸುಬ್ರಹ್ಮಣ್ಯ ಭಕ್ತನಾಗಿದ್ದ ಅರುಣಗಿರಿನಾಥರ್ ಮುರುಗನನ್ನು ಕುರಿತಿ ತಿರುಪುಳಲ್ ಎಂಬ ಅಮೋಘ ಸ್ತೋತ್ರ ರಚಿಸಿದ್ದಾರೆ. ಅದು ಸ್ಕಂದ ಭಕ್ತರಿಗೆ ನಿತ್ಯಪಾರಾಯಣದ ಗ್ರಂಥ.

                 ಭಕ್ತರನ್ನು ಅಂತರ್ಮುಖಿಗಳನ್ನಾಗಿ ಮಾಡಿ ಅವರ ಹೃದಯದತ್ತ ಹೊರಳಿಸುತ್ತದೆ ಎನ್ನುವ ಕಾರಣಕ್ಕೆ ಅರುಣಾಚಲಕ್ಕೆ ಗುರುಸ್ಥಾನ ಪ್ರಾಪ್ತಿಯಾಗಿದೆ. ಹದಿಮೂರನೇ ಶತಮಾನದಲ್ಲಿದ್ದ ಗುಹಾನಮಶ್ಶಿವಾಯ ತಮ್ಮ ಸ್ತೋತ್ರಗಳಲ್ಲಿ ಬಹು ಸೊಗಸಾಗಿ ಇದನ್ನು ವರ್ಣಿಸಿದ್ದಾರೆ. ಭಗವಾನ್ ರಮಣರಿಂದ ಒಮ್ಮೆ ಇದನ್ನು ಕುರಿತು ಅದ್ಭುತವಾದ ಐದು ಸ್ತೋತ್ರಗಳು ಹೊರಹೊಮ್ಮಿದವು. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಅದ್ಭುತ ಆಧ್ಯಾತ್ಮಿಕ ಸಾಧನೆ ಮಾಡಿದ ವ್ಯಕ್ತಿಗಳು ಇರುವುದು ಅಪರೂಪ. ಆದರೆ ತಿರುವಣ್ಣಾಮಲೈಗೆ ಅದೇನೂ ವಿಶೇಷವಲ್ಲ. ರಮಣ ಮಹರ್ಷಿಗಳು ಇದ್ದ ಸಮಯದಲ್ಲೇ ಅರುಣಾಚಲದಲ್ಲಿ ಶೇಷಾದ್ರಿ ಸ್ವಾಮಿಗಳೆಂಬ ಭಕ್ತಿಮಾರ್ಗದ ಸಂತರಿದ್ದರು. ತಮಗಿಂತ ಸಾಧನೆಯಲ್ಲಿ ಎತ್ತರಕ್ಕೇರಿದ್ದ ರಮಣರನ್ನು ಬಹು ಗೌರವದಿಂದ ನೋಡುತ್ತಿದ್ದರು. ವಯಸ್ಸಿನಲ್ಲಿ ಚಿಕ್ಕವರಾದ ಅವರನ್ನು ತಮ್ಮನೆಂದು ಕರೆಯುತ್ತಿದ್ದರು. ತಮ್ಮ ಬಳಿಗೆ ಬಂದವರಿಗೆ "ಬೆಟ್ಟದ ಮೇಲಿರುವ ನನ್ನ ತಮ್ಮ ಹತ್ತುಸಾವಿರ ಸಂಪಾದಿಸುತ್ತಾನೆ. ನಾನಾದರೋ ಸಾವಿರ ರೂಪಾಯಿ ಸಂಪಾದಿಸುತ್ತೇನೆ. ನೀವು ಕನಿಷ್ಟ ನೂರು ರೂಪಾಯಿ ಸಂಪಾದಿಸಲಾಗದೇ?" ಎಂದು ಆಧ್ಯಾತ್ಮಿಕ ಸಿದ್ಧಿಯನ್ನು ಗಳಿಸಲು ಒತ್ತಾಯಿಸುತ್ತಿದ್ದರು. ದೀಕ್ಷೆಯನ್ನು ಬೇಡಿ ಬಂದವರಿಗೆ ಸೂಕ್ತ ಮಂತ್ರವನ್ನು ಬೋಧಿಸುತ್ತಿದ್ದರು. ರಮಣಸ್ವಾಮಿಯಲ್ಲಿ ನಿಷ್ಠೆಯನ್ನಿಟ್ಟುಕೊಂಡವರು ಅವರನ್ನೇ ಅನುಸರಿಸಬೇಕೆಂದು ಹೇಳುತ್ತಿದ್ದರು. ತಾವು ತಿನ್ನುವ ಮೊದಲು ಆಹಾರವನ್ನು ಸುತ್ತ ಜೀವಜಂತು,ಪಂಚಭೂತ, ಯಕ್ಷಾದಿಗಳಿಗೆಂದು ಚೆಲ್ಲಿ ಉಳಿದುದನ್ನು ತಿನ್ನುತ್ತಿದ್ದರು. ತಿರುವಣ್ಣಾಮಲೈಯಲ್ಲಿ ಮೂರು ಲಿಂಗಗಳಿವೆ; ಒಂದು ಅರುಣಾಚಲ, ಇನ್ನೊಂದು ರಮಣಸ್ವಾಮಿ, ಮಗದೊಂದು ಶೇಷಾದ್ರಿ ಎನ್ನುತ್ತಿದ್ದರು. ತಾವು ಬೇರೆಯಲ್ಲ, ರಮಣರು ಬೇರೆಯಲ್ಲ ಎಂದು ಹಲವಾರು ಘಟನೆಗಳ ಮೂಲಕ ನಿರೂಪಿಸಿದ್ದರು. ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದ ಶೇಷಾದ್ರಿ ಸ್ವಾಮಿಗಳ ಆಶ್ರಮ. ಅಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ಅತ್ಯಂತ ಕಡಿಮೆ ಖರ್ಚಿನ ವಸತಿ ವ್ಯವಸ್ಥೆಯಿದೆ. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ರಮಣಾಶ್ರಮದಲ್ಲಿ ಇರುವಂತೆ ಉಚಿತ ವಸತಿ ಸೌಲಭ್ಯವೂ ಇದೆ.

               ಹೌದು ಆಧ್ಯಾತ್ಮದ ಜ್ಯೋತಿ ಅಲ್ಲಿ ನಿರಂತರ ಬೆಳಗುತ್ತಿದೆ. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡುವ ಚೈತನ್ಯ ಅಲ್ಲಿದೆ. ಅಂತಹ ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ. ಹಿಮಾಲಯವಲ್ಲವಾದರೂ, ಹಿಮಾಲಯದೆತ್ತರಕ್ಕೆ ನಿಂತ ಜ್ಞಾನ ಜ್ಯೋತಿ ಅಲ್ಲಿ ಸದಾ ಉರಿಯುತ್ತಿದೆ. ನಿರಂತರ ಅಂತರ್ಗಂಗೆಯಂತೆ ಅದರ ಪ್ರಭಾವ ದಶದಿಕ್ಕುಗಳಿಗೂ ಹರಡುತ್ತಲೇ ಇದೆ.  ಅಪಾರ ವಿದ್ವತ್ತಿನ ಅನುಪಮ ಸತ್ವ ಅಲ್ಲಿದೆ. ಅದು ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ಭವ್ಯ ಭಾರತದ ಮುಕುಟಮಣಿ!




ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

              "ಹಿಂದೂ ಧರ್ಮ ಯಾವುದೇ ನಿರ್ದಿಷ್ಟ ಕಾಲದಲ್ಲಿ ಸ್ಥಾಪಿತವಾದದ್ದಲ್ಲ. ಯಾವ ಮತಸ್ಥಾಪಕನಿಂದಲೂ ಸ್ಥಾಪನೆಗೊಂಡಿಲ್ಲ. ಅದು ಯಾವುದೇ ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಅದು ಸನಾತನ, ಸಾರ್ವತ್ರಿಕ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಜೀವಿಗಳೂ ಅವು ಒಪ್ಪಲಿ ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುವುದಕ್ಕೆ ಯಾವುದಾದರೂ ಪ್ರಮಾಣವನ್ನು ಅವಲಂಬಿಸಿದೆಯೇ? ನಾವು ಒಪ್ಪಿದರೂ, ಒಪ್ಪದೇ ಇದ್ದರೂ ಅದರ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಸನಾತನ ಧರ್ಮ ಈ ರೀತಿಯಾದದ್ದು. ನಾವು ಅರಿತು ಒಪ್ಪಿದರೆ ನಮಗೆ ಒಳಿತು. ಒಪ್ಪದಿದ್ದರೆ ಕೆಡುಕು ನಮಗೇ. ಯಾವುದೆಲ್ಲಾ ಉತ್ಕೃಷ್ಟ ಬೋಧನೆಗಳಿವೆಯೋ ಅವೆಲ್ಲಾ ಸನಾತನ ಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ." ಅವಿನಾಶಿಯಾದ ವರೇಣ್ಯ ಬ್ರಹ್ಮಸ್ವರೂಪದಲ್ಲಿ ನೆಲೆಗೊಂಡು ಪಾಪವೇ ಮೊದಲಾದ ಕಟ್ಟುಗಳನ್ನೆಲ್ಲಾ ದೂರಕ್ಕೆಸೆದು ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿರುವವನೇ ಅವಧೂತ. ಶಾಸ್ತ್ರ-ಸಂಪ್ರದಾಯ-ಮತಗಳ ಕಟ್ಟುಕಟ್ಟಳೆಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೂ ಕಡೆಗಣಿಸಿ, ಲೌಕಿಕ ವ್ಯವಹಾರವನ್ನೇ ದೂರ ಸರಿಸಿ ಬದುಕುವ ಅವಧೂತರ ಮುಖದಿಂದ ಹೊರಡುವ ಮಾತುಗಳೆಲ್ಲಾ ಮಂತ್ರಗಳು. ಅಂತಹಾ ಅವಧೂತರಲ್ಲೊಬ್ಬರಾದ ಶೃಂಗೇರಿಯನ್ನು ಬೆಳಗಿದ ಚಂದ್ರಶೇಖರ ಭಾರತಿ ಸ್ವಾಮಿಗಳು ಹಿಂದೂ ಧರ್ಮಕ್ಕೆ ಕೊಡುವ ವಿಶ್ಲೇಷಣೆ ಇದು.

             ಎಂತಹಾ ಅದ್ಭುತ ವಿಶ್ಲೇಷಣೆ! ಹಿಂದೂ ಧರ್ಮ ಎಂದರೆ ಶ್ರೇಷ್ಠ. ಜನ್ಮ ತಳೆದಾಗಿನ, ಕಪಟವರಿಯದ, ಅನ್ಯರಿಗೆ ಕೇಡು ಬಯಸದ ಮನಸ್ಸು ಹಿಂದೂ. ಆದರೆ ಪ್ರಪಂಚದ ವೈಚಿತ್ರ್ಯ ಏನು ಗೊತ್ತೇ? ಕಪಟವರಿಯದ ಮನಸ್ಸು ಬುದ್ಧಿ ಬೆಳೆದಂತೆ ಯಾರದ್ದೋ "ಮತ"ಕ್ಕೆ ಜೋತು ಬೀಳುತ್ತದೆ. ಹಾಗಾದರೆ ಬೆಳೆದಿದ್ದು ಬುದ್ಧಿ ಎನ್ನುವುದು ಹೇಗೆ? ತನ್ನದಾದ ಮತವೂ ಇಲ್ಲದೆ, ಯಾರೋ ಯಾವ ಕಾಲದಲ್ಲಿ ಮಾಡಿಟ್ಟ ಅಭಿಪ್ರಾಯ, ಕಟ್ಟುಪಾಡುಗಳಿಗೆ ಜೋತು ಬೀಳುವ ಮನಸ್ಸು ವಿವೇಚನೆಯ ಶಕ್ತಿಯನ್ನೂ ಕಳೆದುಕೊಂಡು ಜಗತ್ತಿನ ಇತರರೂ ತಾನು ನಂಬಿದ್ದನ್ನೇ ನಂಬಬೇಕೆಂದೂ ಆಗ್ರಹಿಸುವ ಕುರುಡುತನಕ್ಕೆ ಇಳಿಯುತ್ತದೆ. ಒಪ್ಪದವರನ್ನು ಬಲವಂತವಾಗಿಯೋ, ಕುತಂತ್ರದಿಂದಲೋ ಎಳೆಯುತ್ತದೆ. ತನ್ನ ಮತವನ್ನು ಒಪ್ಪುವವರ ಸಂಖ್ಯೆಯನ್ನು ಹೆಚ್ಚು ಮಾಡಲೆಳಸುತ್ತದೆ. ಜೀವನದ ಪರಮಗುರಿ ತನ್ನ ಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಮೌಢ್ಯದಲ್ಲಿ ಸಿಲುಕುವುದೋ, ಜಗತ್ತಿನ ಸತ್ಯವನ್ನು ಅರ್ಥೈಸುವ ಜ್ಞಾನದ ನಿಧಿಯ ಹುಡುಕಾಟವೋ? ಹಾಗೆ ನೋಡಿದರೆ ಪ್ರಸಕ್ತ ಕಾಲದಲ್ಲಿ ಮನುಷ್ಯೇತರ ಜೀವಿಗಳ ಜೀವನವೇ ಲೇಸು. ತೃಷೆ ನೀಗುವಷ್ಟರವರೆಗೆ ಮಾತ್ರ ಅವುಗಳದ್ದು ಹೋರಾಟ. ಆಮೇಲೆ ನಿರ್ಲಿಪ್ತತೆ. ಮನುಷ್ಯನದ್ದು ಹಾಗಲ್ಲ; ಅವನು ಜನ್ಮ ನೀಡಿದ ದೇಶಕ್ಕೂ ಕೃತಜ್ಞನಾಗಿಲ್ಲ;ಭೂಮಿಗೂ! ಹಿಂದೂ ಧರ್ಮವನ್ನು ಮತವಾಗಿ ಕಾಣುವ, ತುಚ್ಛವಾಗಿ ಕಾಣುವವರೆಲ್ಲಾ ಚಂದ್ರಶೇಖರ ಭಾರತಿ ಸ್ವಾಮಿಗಳ ಈ ಮಾತುಗಳ ಮಥಿತಾರ್ಥವನ್ನು ಅರಿಯಲು ಯತ್ನಿಸಬೇಕು. ಯಾರಿಗೆ ಈ ಮಾತುಗಳ ಅರಿವಾಗುತ್ತದೋ ಅವನು ತನ್ನ "ಮತ"ವನ್ನು ಇನ್ನೊಬ್ಬನ ಮೇಲೆ ಹೇರಲಾರ. ಹೆಚ್ಚೇಕೆ ಮೌಢ್ಯ ತುಂಬಿದ ತನ್ನ ಮತವನ್ನು ತೊರೆದು ಜ್ಞಾನದ ಹುಡುಕಾಟದಲ್ಲಿ ತೊಡಗುವುದು ಶತಃಸಿದ್ಧ.

              "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅದೂ ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ! ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ಈ ವಾದ ನಿರಾಕರಿಸುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ? ಹಾಗಾಗಿಯೇ ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಾವು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ" ಎನ್ನುವ ಅವರ ಮಾತುಗಳು ಮತಗಳ ಮೇಲಾಟದಲ್ಲಿ ಮುಳುಗೇಳುತ್ತಿರುವವರ ಕಣ್ಣು ತೆರೆಸಬೇಕು.

                ಜಗದ್ಗುರು ಪೀಠಾಧಿಪತ್ಯ ಬಿಡಿ ಸಂನ್ಯಾಸವನ್ನೂ ಕೂಡಾ ಅವರು ಬಯಸಿ ಪಡೆದುದಲ್ಲ. ಅವಧೂತರಾಗಿ ಎದ್ದು ಹೋದ ಅವರ ಅಜ್ಜನ ಪುಣ್ಯಫಲ; ಅವರ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಆಗಿನ ಜಗದ್ಗುರು ನೃಸಿಂಹ ಭಾರತೀ ಸ್ವಾಮಿಗಳ ಮನಸೂರೆಗೊಂಡು ಅವರು ಮಾಡಿದ ದೃಢನಿಶ್ಚಯ ಹಾಗೂ ಆಜ್ಞೆ ಮತ್ತು ಶೃಂಗೇರಿಯ ಅವಿಚ್ಛಿನ್ನ ಐತಿಹಾಸಿಕ ಶಿಷ್ಯಪರಿಗ್ರಹ ಪರಂಪರೆ ಈ ಬಡ, ಬಡಕಲು ಹುಡುಗನನ್ನು ಎತ್ತರದ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಿತು. ಶ್ಲೋಕಗಳನ್ನು ರಸವತ್ತಾಗಿ ಹಾಡುತ್ತಿದ್ದ, ಸಂಗೀತದಲ್ಲಿ ಅಭಿರುಚಿಯಿದ್ದ ಕವಿಹೃದಯಿಗೆ ವಿರಕ್ತಿ ಸಹಜವಾಗಿ ಹೇಗೆ ಬಂದೀತು? ಹಾಗಂತ ಅದು ದುಃಖದರ್ಶನದಿಂದಲೂ ಬಂದುದಲ್ಲ. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಆತ್ಮತತ್ತ್ವದ ಅನುಸಂಧಾನವೇ ಗುರಿಯಾಯಿತು. ಆತ್ಮವಿದ್ಯಾವಿಲಾಸವಂತೂ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆಯಿಸಿತು. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು. ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಇವೆಲ್ಲದರ ಪುನರಾವರ್ತನೆ. ಈ ನಡುವೆ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟವರು ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಉಪನ್ಯಾಸ ಮಾಡಿದರು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆ, ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

             ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ" ಎನ್ನುತ್ತಿದ್ದ ಅವರು ಅಂತಹವರನ್ನು ತಿದ್ದುತ್ತಿದ್ದರು. ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎನ್ನುತ್ತಿದ್ದ ಅವರು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರು, ಹನುಮಂತನಿಗಾಗಿ!

              1954ರ ಭಾದ್ರಪದ ಬಹುಳ ಅಮವಾಸ್ಯೆಯ(ನವರಾತ್ರಿಯ ಹಿಂದಿನ) ದಿನ ಬೆಳಕು ಹರಿಯುವ ಮುನ್ನವೇ ಕೊರೆಯುವ ಚಳಿಯಲ್ಲಿ ತುಂಗೆಯಲ್ಲಿ ಸ್ನಾನಕ್ಕೆಂದು ಇಳಿದ ಅವರು ನೀರಿನಲ್ಲಿ ಮುಳುಗು ಹಾಕಿ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತವರು ಪದ್ಮಾಸನದಲ್ಲಿಯೇ ನೀರಿನಲ್ಲಿ ತೇಲಿ ಹೋದರು. ಜೊತೆಗಿದ್ದವರು ಸ್ವಾಮಿಗಳನ್ನು ದಡಕ್ಕೆ ತಂದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ! ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ.

ಶನಿವಾರ, ಸೆಪ್ಟೆಂಬರ್ 15, 2018

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ


              "ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರಸ್ವತೀ ಸಿಂಧುಭಿಃ ಪಿನ್ವಮಾನಾ"
 ಋಗ್ವೇದದ ಈ ಋಕ್ ನಿಜಾರ್ಥದಲ್ಲಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಹೌದು ಇಂದ್ರನೂ ನಮ್ಮ ರಕ್ಷಣೆಗೆ ನರೇಂದ್ರನಾಗಿ ಬಂದಿದ್ದಾನೆ. ಅದೇ ನರೇಂದ್ರನ ನೇತೃತ್ವದಲ್ಲಿ ನೇಪಥ್ಯಕ್ಕೆ ಸರಿದಿದ್ದ ಪುಣ್ಯಗರ್ಭೆ ಸರಸ್ವತಿ ಜನರ ಮನಸ್ಸನ್ನು ಮತ್ತೆ ಮುಟ್ಟಲಿದ್ದಾಳೆ, ತಟ್ಟಲಿದ್ದಾಳೆ, ಪ್ರವಹಿಸಲಿದ್ದಾಳೆ. ಋಗ್ವೇದದಿಂದ ಅಥರ್ವದ ತನಕವೂ ವ್ಯಾಪಿಸಿಕೊಂಡು, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಸ್ತುತಿಸಲ್ಪಟ್ಟು ಭಾರತೀಯರ ನಿತ್ಯ ಸ್ತೋತ್ರದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡು ಸ್ಮರಿಸಲ್ಪಡುತ್ತಿದ್ದ ಸರಸ್ವತಿ ಈಗ ಮತ್ತೊಮ್ಮೆ ಭಾರತೀಯರ ಮನೆಮನಗಳಲ್ಲಿ ಪ್ರವಹಿಸಲಿದ್ದಾಳೆ. "ಹರ್ ಕಿ ಧುನ್"ನಲ್ಲಿ ಜನಿಸಿ ಭೃಗುಕುಚ್ಛದ ಬಳಿ ರತ್ನಾಕರನನ್ನು ಸೇರುವವರೆಗೆ, ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಾಗಿ, 1300 ಕಿಮೀಗೂ ಹೆಚ್ಚು ದೂರ ಹರಿಯುತ್ತಿದ್ದ ಈ ಸಪ್ತ ಸಿಂಧು ಮತ್ತೊಮ್ಮೆ ಭಾರತವಿಡೀ ಸಂಚರಿಸಲಿದ್ದಾಳೆ. ಆದರೆ ನೇರವಾಗಿ ಅಲ್ಲ, ಮತ್ತೆ ಗುಪ್ತಗಾಮಿನಿಯಾಗಿಯೇ.

           ದಕ್ಷಬ್ರಹ್ಮನ ಆಹ್ವಾನದಂತೆ ಯಜ್ಞಸ್ಥಳಕ್ಕೆ ಬಂದ ಸರಸ್ವತಿ "ಸುರೇಣು" ಎನ್ನುವ ಹೆಸರಿನಿಂದ ವಿಖ್ಯಾತಳಾದಳು. ವಸಿಷ್ಠರ ಮೇಲಿನ ಪ್ರೀತಿಯಿಂದ ಅವರ ಆಹ್ವಾನವನ್ನು ಮನ್ನಿಸಿ ಕುರುಕ್ಷೇತ್ರದಲ್ಲಿ ಅವರು ಮಾಡುತ್ತಿದ್ದ ಯಜ್ಞಶಾಲೆಗೆ ಆಗಮಿಸಿದಾಗ ಅಲ್ಲಿನ ದ್ವಿಜಶ್ರೇಷ್ಠರು ಅವಳನ್ನು "ಓಘವತೀ" ಎಂದು ಕರೆದರು. ಹಿಮವತ್ಪರ್ವತದಲ್ಲಿ ಯಜ್ಞಮಾಡುತ್ತಿದ್ದ ಬ್ರಹ್ಮ ಸರಸ್ವತಿಯನ್ನು ಆಹ್ವಾನಿಸಿದಾಗ ಅಲ್ಲಿಗೆ ಆಗಮಿಸಿದ ಸರಸ್ವತಿಯನ್ನು ಯಜ್ಞವೇದಿಯಲ್ಲಿದ್ದವರು "ವಿಮಲೋದಾ" ಎಂದು ಕರೆದರು.  ಸಪ್ತಸರಸ್ವತಿಯರು ಏಕೀಭೂತರಾದ ಆ ಸ್ಥಳ "ಸಪ್ತಸಾರಸ್ವತ ತೀರ್ಥ"ವೆಂದೇ ಪ್ರಸಿದ್ಧಿಯನ್ನು ಹೊಂದಿತು. ಇಂತಹ ಸರಸ್ವತಿಯನ್ನು ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಸ್ಮರಿಸಿದೆ ಋಗ್ವೇದ. ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಋಗ್ವೇದದಿಂದ ಈಚೀನದಾದ "ಪಂಚವಿಂಶ ಬ್ರಾಹ್ಮಣ" ಸರಸ್ವತಿ ನದಿಯು ಭಾಗಶಃ ಒಣಗಿದ್ದುದನ್ನು ಹೇಳಿದೆ. ಸರಸ್ವತೀ ನದಿಯು ಹಿಮಾಲಯ ಶ್ರೇಣಿಯ "ಪ್ಲಕ್ಷ ಪ್ರಸ್ರವಣ" ಎಂಬಲ್ಲಿ ಉಗಮಗೊಂಡು ಅಲ್ಲಿಂದ ಅಶ್ವಾರೋಹಿಯೊಬ್ಬ ನಲವತ್ತನಾಲ್ಕು ದಿವಸಗಳಲ್ಲಿ ಕ್ರಮಿಸಬಹುದಾದಷ್ಟು ದೂರದಲ್ಲಿದ್ದ ಮರುಭೂಮಿಯೊಂದರಲ್ಲಿ ಅದೃಶ್ಯವಾಗುತ್ತದೆ ಎಂದು ವರ್ಣಿಸಿದೆ ಪಂಚವಿಂಶ ಬ್ರಾಹ್ಮಣ. ಪ್ಲಕ್ಷಪ್ರಸ್ರವಣದಿಂದ ನದಿಯ ಉತ್ತರದಲ್ಲಿದ್ದ ಹಲವು ತೀರ್ಥಕ್ಷೇತ್ರಗಳನ್ನು ಮಹಾಭಾರತ ಉಲ್ಲೇಖಿಸಿದೆ. ಪಾಂಡವರು ವನವಾಸದಲ್ಲಿ ದ್ವೈತವನಕ್ಕೆ ಬಂದಾಗ ಕಾಣಸಿಗುವ ಸರಸ್ವತಿಯನ್ನು ಮಹಾಭಾರತ ಬಹು ಅಂದವಾಗಿ ವರ್ಣಿಸಿದೆ. ಹೀಗೆ ಸಮೃದ್ಧವಾಗಿ ಹರಿಯುತ್ತಿದ್ದ ನದಿಯ ವಿವರಗಳನ್ನು, ಅದು ಕೆಲ ದೂರ ಹರಿದು ಅದೃಶ್ಯವಾಗುತ್ತಿದ್ದುದನ್ನು ಉಲ್ಲೇಖಿಸಿದ್ದನ್ನು ಇತಿಹಾಸ ಎಂದು ಪರಿಗಣಿಸದೇ ಬದಿಗೆ ತಳ್ಳಿದ್ದು ನಮ್ಮ ಮೌಢ್ಯವಲ್ಲದೆ ಇನ್ನೇನು? ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಬಲರಾಮನು ಮಹಾಭಾರತ ಯುದ್ಧದಲ್ಲಿ ಭಾಗವಹಿಸದೆ 42ದವಸಗಳ ಕಾಲ ತೀರ ಕ್ಷೀಣವಾಗಿ ಹರಿಯುತ್ತಿದ್ದ,ಅಲ್ಲಲ್ಲಿ ಬತ್ತಿ ಹೋಗಿದ್ದ ಸರಸ್ವತಿ ನದೀತೀರದಲ್ಲಿದ್ದ ತೀರ್ಥಕ್ಷೇತ್ರ ಗಳನ್ನು ದರ್ಶಿಸಿದ್ದ. ಒಂದು ಕಡೆ ಸರಸ್ವತಿಯು ಹರಿವನ್ನು ಬದಲಿಸಿದ್ದನ್ನು ಕಂಡು ಆಶ್ಚರ್ಯ ಪಟ್ಟಿದ್ದ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ಅಂದರೆ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಾಳೆ ಎನ್ನುವ ಅರ್ಥದಲ್ಲಿ ವರ್ಣಿಸಿದೆ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

            ಗುಜರಾತಿನ ಪಟಣ್. ಪ್ರಸಿದ್ಧ ಪಟೋಲಾ ಸೀರೆಗಳ ತವರು. ಚಾವ್ಡಾ ವಂಶಜ ವನರಾಜನಿಂದ ಸ್ಥಾಪಿಸಲ್ಪಟ್ಟ "ಅನಾಹಿಲಪಟಕ". ಮುಂದೆ ಚಾಲುಕ್ಯರ ರಾಜಧಾನಿಯಾಗಿ ಶೋಭಿಸಿ ಬಳಿಕ ಅಲ್ಲಾವುದ್ದೀನ್ ಖಿಲ್ಜಿಯೆಂಬ ರಕ್ಕಸನ ಮತಾಂಧತೆಗೆ ಎರವಾಗಿ ಸುಟ್ಟುರಿದು ಹೋದ ಪ್ರಸಿದ್ಧ ಪುರಾತನ ನಗರಿ. ಅಂತಹ ನಗರಕ್ಕೆ ಭವ್ಯ ಇತಿಹಾಸವಿದೆ. ಅಲ್ಲಿ ಅಮರ ಪ್ರೇಮದ ಕುರುಹು ಇದೆ. ವಿಶೇಷವೆಂದರೆ ಆ ಕುರುಹು ಯಾರಿಗೂ ಉಪಯೋಗವಾಗದ ಕಲ್ಲುಮಣ್ಣಿನ ಕಟ್ಟಡವಲ್ಲ. ಅದ್ಭುತ ವಿನ್ಯಾಸದ, ಸರ್ವರಿಗೂ ಉಪಯೋಗಕ್ಕೆ ಯೋಗ್ಯವಾದ ಸಿಹಿನೀರ ಬಾವಿ. ಅದರಲ್ಲೂ ಆ ಬಾವಿಯಲ್ಲಿ ಈ ನೆಲದ ಪುರಾತನ ತಾಯಿನದಿ ಸರಸ್ವತಿಯ ಅಮೃತ ಬಿಂದುಗಳಿವೆ. ಅದು ತನ್ನಿನಿಯ ಅರಸನ ನೆನಪಿಗಾಗಿ ರಾಣಿಯೊಬ್ಬಳು ನಿರ್ಮಿಸಿದ ಬಾವಿ. ಹಾಗಾಗಿ ಅದು "ರಾಣಿ ಕೀ ವಾವ್" ಎಂದೇ ಕರೆಸಿಕೊಂಡಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ  ಸೋಲಂಕಿ ಮನೆತನದ ರಾಣಿ ಉದಯಮತಿ ರಾಜ ಭೀಮದೇವನ ಸವಿ ನೆನಪಿಗಾಗಿ ಕಟ್ಟಿಸಿದ ಅದ್ಭುತ ಮೆಟ್ಟಿಲು ಬಾವಿ ಅದು. 64 ಮೀಟರ್ ಉದ್ದ, 20 ಮೀಟರ್ ಅಗಲ, ಹಾಗೂ 27 ಮೀಟರ್ ಗಳಷ್ಟು ಆಳವಿರುವ ಈ ಅದ್ಭುತ ಕಲಾಕೃತಿ ರಚನೆಯಾದದ್ದು ನದಿ ಸರಸ್ವತಿಯ ದಡದಲ್ಲೇ.

              ತಲೆ ಕೆಳಗಾಗಿ ಕಾಣುವತೆ ರಚನೆಯಾದ ದೇಗುಲದ ಪಕ್ಕದಲ್ಲೇ ನಿರ್ಮಾಣವಾಗಿದೆ ಈ ಮೆಟ್ಟಿಲು ಬಾವಿ. ಸರಸ್ವತಿ ಬಿಂದುಗಳನ್ನು ಶೇಖರಿಸಿಡಲು ರಾಜಾ ಭೀಮದೇವನ ನೆನಪಿಗಾಗಿ ಆತನ ಸತಿ ಉದಯಮತಿ, ಮಗ ಕರ್ಣನ ನೆರವಿನಿಂದ ಕಟ್ಟಿಸಿದ ಅದ್ಭುತ ಕಲಾಪ್ರಕಾರ ಇದು. ಅಲ್ಲಿ ವಿಷ್ಣುವಿನ ದಶಾವತಾರಗಳ, ಭಾಗವತ, ಪುರಾಣಗಳ ಚಿತ್ರಣದ ಕೆತ್ತನೆಯಿದೆ. ಮರು - ಗುರ್ಜರ ಶೈಲಿಯ ಎಂಟುನೂರಕ್ಕೂ ಹೆಚ್ಚು ಕಲಾಕೃತಿಗಳ ಸೊಬಗು ರಾಣಿ ಕೀ ವಾವ್'ನ ಸೌಂದರ್ಯವನ್ನು ವರ್ಧಿಸಿ ನಿರಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಣಿ ಕೀ ವಾವ್ ಮೆಟ್ಟಿಲು ಬಾವಿ ನಿರ್ಮಿಸುವ ಕುಶಲಕರ್ಮಿ ಕಲೆಗಾರನ ಅನುಪಮ, ನ ಭೂತೋ ನ ಭವಿಷ್ಯತಿ ಎನ್ನುವಂತಹ ಉತ್ತುಂಗದ ನಿರ್ಮಿತಿ. ಅದರ ಸೌಂದರ್ಯ, ಸಂಕೀರ್ಣತೆಗೆ ಅದೇ ಸಾಟಿ. ತಲೆಕೆಳಗಾಗಿ ನಿರ್ಮಿತವಾದ ದೇವಾಲಯ ಬಾವಿಯ ನೀರಿನ ಪಾವಿತ್ರ್ಯವನ್ನು ಸೂಚಿಸುತ್ತದೆ. ಇಲ್ಲಿ ಕಲೆಯ ಔನ್ನತ್ಯವನ್ನು ಸೂಸುವ ಶಿಲ್ಪಗಳು ಏಳು ಅಂತಸ್ತಿನಲ್ಲಿ ಅಡಕವಾಗಿವೆ. ಐನೂರಕ್ಕೂ ಹೆಚ್ಚಿನ ತತ್ತ್ವ ಶಿಲ್ಪಗಳು, ಸಾವಿರಕ್ಕಿಂತಲೂ ಹೆಚ್ಚಿನ ಪೌರಾಣಿಕ ಚಿತ್ರಗಳು ಈ ಏಳು ಅಂತಸ್ತಿನಲ್ಲಿ ನಿರ್ಮಾಣವಾಗಿವೆ. ಹೆಚ್ಚು ಆಳವಿರುವ(23 ಮೀ) ನಾಲ್ಕನೇ ಹಂತ ಆಯತಾಕಾರದಲ್ಲಿದೆ(9.4 ಮೀ X 9.5 ಮೀ). ಒಟ್ಟಾರೆ ಸ್ಥಳದ ಪಶ್ಚಿಮ ಭಾಗದಲ್ಲಿರುವ ಬಾವಿಯಲ್ಲಿ 10 ಮೀ ವ್ಯಾಸ ಮತ್ತು 30 ಮೀ ಆಳದ ಬಾಣದಂತಹ ರಚನೆ ಅದರ ಸೌಂದರ್ಯಕ್ಕೊಂದು ಮೆರುಗು ನೀಡಿದೆ. ಮೆಟ್ಟಿಲು ಬಾವಿ ರಚನೆಯ ಎಲ್ಲಾ ಮೂಲತತ್ತ್ವಗಳನ್ನು ಸಂಯೋಜಿಸಿ ರಚಿಸಿದಂತೆ ದೃಗ್ಗೋಚರಿಸುವ ಬಾವಿಯಲ್ಲಿ ನೆಲದ ಮಟ್ಟದಿಂದ ಆರಂಭವಾಗುವ ಮೆಟ್ಟಿಲುಗಳ ಕಾರಿಡಾರ್, ಒಂದಕ್ಕಿಂತ ಹೆಚ್ಚು ಅಂತಸ್ತುಗಳುಳ್ಳ ನಾಲ್ಕು ಸರಣಿ ಮಂಟಪಗಳು, ಬಾಣಾದಾಕಾರದ ಸುರಂಗದಂತಹ ರಚನೆಯ ಬಾವಿಯನ್ನು ಹೊಂದಿರುವ ಈ ಅದ್ಭುತ ಮೆಟ್ಟಿಲು ಬಾವಿ ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದುದರಲ್ಲಿ ಆಶ್ಚರ್ಯವೇನಿಲ್ಲ.

                ಕೇವಲ ಸಿಹಿ ನೀರ ಸ್ತ್ರೋತವಾಗಿ, ಸ್ಥಿರ ರಚನೆಯಾಗಿ, ಅದ್ಭುತ ವಾಸ್ತುಶಿಲ್ಪವಾಗಿ ಮಾತ್ರವೇ ರಾಣಿ ಕೀ ವಾವ್ ನಮ್ಮ ಗಮನ ಸೆಳೆಯುವುದಿಲ್ಲ; ಅಲ್ಲಿ ಶಿಲ್ಪಗಳ ಅಲಂಕರಣವಿದೆ; ಪಾಂಡಿತ್ಯಪೂರ್ಣ ಕಲಾತ್ಮಕತೆಯಿದೆ. ಅದರ ಸಾಂಕೇತಿಕ ಲಕ್ಷಣಗಳು ಹಾಗೂ ಕೆತ್ತಿರುವ ಶಿಲ್ಪಗಳು ಮತ್ತು ತುಂಬಿರುವ ಹಾಗೂ ಖಾಲಿ ಜಾಗಗಳ ಪ್ರಮಾಣಗಳು ಬಾವಿಯ ಒಳಭಾಗಕ್ಕೆ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಕೊಡಮಾಡಿ ಒಂದು ಸಮತಟ್ಟಾದ ಜಾಗದಿಂದ ಹಠಾತ್ತನೆ ಇಳಿಯುವ ಗ್ರಹಿಕೆಯುಂಟಾಗುಂತೆ ಮಾಡುತ್ತದೆ. ಗುಜರಾತಿನ 120 ಮೆಟ್ಟಿಲು ಬಾವಿಗಳಲ್ಲಿ ಅತ್ಯಂತ ಹಳೆಯ ಹಾಗೂ ಆಳವಿರುವ ಬಾವಿ ಈ "ರಾಣಿ ಕೀ ವಾವ್". ಬಾವಿಯ ಕೊನೆಯ ಮಹಡಿ ಕಲ್ಲು ಮಣ್ಣುಗಳಿಂದ ಮುಚ್ಚಿ ಹೋಗಿದ್ದು, 30 ಕಿಮೀ ಉದ್ದದ ಸುರಂಗಮಾರ್ಗ ಇದನ್ನು ಹತ್ತಿರದ ಸಿಧ್ಪುರ್ ನಗರದೊಂದಿಗೆ ಸಂಪರ್ಕಿಸುತ್ತದೆ. ಸರಸ್ವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಈ ಬಾವಿಯು ಹೂಳಿನಿಂದ ಮುಚ್ಚಿಹೋಗಿತ್ತು. ಅಂತಹ ಪ್ರವಾಹ ಸಂಭವಿಸಿದ್ದಾಗ್ಯೂ ಇಲ್ಲಿನ ಕಲಾಕೃತಿಗಳಿಗೆ ಕಿಂಚಿತ್ತೂ ಹಾನಿ ಸಂಭವಿಸದ್ದನ್ನು ನೋಡಿ ಪುರಾತತ್ತ್ವ ಇಲಾಖೆ ಇಲ್ಲಿ ವ್ಯಾಪಕ ಉತ್ಖನನ ನಡೆಸಿತ್ತು. ಆಗ ಪತ್ತೆಯಾಯಿತು ಈ ಅದ್ಭುತ ವಿನ್ಯಾಸದ ಬಾವಿ. ಐವತ್ತು ವರ್ಷಗಳ ಹಿಂದೆ ಈ ಬಾವಿಯ ಸುತ್ತ ಅನೇಕ ಔಷಧೀಯ ಗಿಡಗಳಿದ್ದವು. ಆ ಕಾರಣದಿಂದ ಬಾವಿಯ ನೀರು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿತ್ತು. ಇಂತಹ ಹತ್ತು ಹಲವು ವಿಶೇಷತೆಗಳಿಂದಾಗಿ ಈ ಬಾವಿ 2014ರಲ್ಲಿ ಜಾಗತಿಕ ಪರ೦ಪರೆಯ ತಾಣವಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿತ್ತು. ಹದಿಮೂರನೇ ಶತಮಾನದಲ್ಲಿ ಭೂಫಲಕಗಳ ಬದಲಾವಣೆಯಿಂದ ಈ ಭಾಗದಲ್ಲಿ ಹರಿಯುತ್ತಿದ್ದ ಸರಸ್ವತಿ ನದೀ ಪಾತ್ರದಲ್ಲಿ ವ್ಯತ್ಯಯವಾದರೂ ರಾಣಿ ಕೀ ವಾವ್'ನಲ್ಲೇನೂ ಬದಲಾವಣೆಯಾಗಲಿಲ್ಲ. ಹಿಂದಿನಂತೆ ಕಾರ್ಯ ನಿರ್ವಹಿಸಲು ಆ ಬಳಿಕ ಸರಸ್ವತಿಯಲ್ಲುಂಟಾದ ಪ್ರವಾಹವೇ ಕಾರಣವಾಯಿತಾದರೂ ಈ ಪ್ರವಾಹದಿಂದ ಬಾವಿಯಲ್ಲಿನ ಕಲಾಕೃತಿಗಳಿಗಾಗಲೀ ಬಾವಿಯ ಮೂಲ ವಿನ್ಯಾಸಕ್ಕಾಗಲೀ ಯಾವುದೇ ಹಾನಿಯಾಗಲಿಲ್ಲ. ಪ್ರಾಕೃತಿಕ ವಿಕೋಪಗಳಾವುವು ಈ ಬಾವಿಗೆ ತೊಡಕಾಗಲಿಕ್ಕಿಲ್ಲ. ಆದರೆ ಅತಿಯಾದ ನಗರೀಕರಣದಂತಹ ಮನುಷ್ಯಕೃತ ಪ್ರಮಾದಗಳಿಂದ ಈ ಬಾವಿ ಇತಿಹಾಸವಾದರೆ ಅಚ್ಚರಿಯಿಲ್ಲ. ಈಗ ಈ ರಾಣಿ ಕೀ ವಾವ್ ರಿಸರ್ವ್ ಬ್ಯಾಂಕ್ ಮುದ್ರಿಸುತ್ತಿರುವ ಹೊಸ, ನೀಲಿ ಬಣ್ಣದ ನೂರರ ನೋಟಿನಲ್ಲಿ ಕಾಣಿಸಿಕೊಳ್ಳಲಿದೆ. ಹಾಂ, ಸರಸ್ವತಿಯ ಬಿಂದುಗಳು ಭಾರತೀಯರ ಮನೆಮನಗಳಲ್ಲಿ ಮತ್ತೊಮ್ಮೆ ಪ್ರವಹಿಸಲಿವೆ.

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ


             ಜಾನಪದ ಕವಿಗಳಿಂದ ಜ್ಞಾತ ಕವಿಗಳವರೆಗೂ, ಬೀಸುಕಲ್ಲಿನೆದುರು ಕೂತ ಗೃಹಿಣಿಯಿಂದ ಕೀಬೋರ್ಡ್ ಕುಟ್ಟುವ ತರುಣಿಯವರೆಗೂ, ಶಾಲಾಬಾಲನಿಂದ ಜ್ಞಾನವೃದ್ಧರವರೆಗೆ ಜಾತಿ-ಮತ-ವರ್ಗ-ಲಿಂಗ, ಬಡವ-ಬಲ್ಲಿದ ತಾರತಮ್ಯಗಳಿಲ್ಲದೆ ಅಬಾಲವೃದ್ಧರಾದಿಯಾಗಿ ಪೂಜಿಸಲ್ಪಡುವ ದೇವತೆ ಗಣೇಶ. ಸಮಯ-ಅಸಮಯಗಳೆನ್ನುವ ನಿಯಮಗಳಿಲ್ಲದೆ ಸರ್ವತ್ರ ಪೂಜಿಸಲ್ಪಡುವ ದೇವರಾತ. ನಿರಾಕಾರವಾಗಿಯೂ ಆಕಾರವಾಗಿಯೂ; ಸಣ್ಣ ಅಡಿಕೆಯಲ್ಲಿಯೂ ಧಾನ್ಯದ ರಾಶಿಯಲ್ಲಿಯೂ; ಮಂಡಲದಲ್ಲಿಯೂ ಚಿತ್ರ ಪಟದಲ್ಲೂ; ಯಜ್ಞಕುಂಡವ ಬೆಳಗುವ ಅಗ್ನಿಯಾಗಿಯೂ ಮಣ್ಣಿನ ವಿಗ್ರಹವಾಗಿಯೂ ಅವನನ್ನು ಕಂಡು ಪಾವನವಾಗುತ್ತದೆ ಜನತೆ. ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಸಂಕಷ್ಟಹರ ಗಣೇಶ. ದುರ್ಜನರಿಗೆ ಅಡಿಗಡಿಗೆ ವಿಘ್ನ ಒಡ್ಡುವ ವಿಘ್ನರಾಜ. ಹೀಗಾಗಿಯೇ  ಯಾವುದೇ ಮಂಗಳಕಾರ್ಯದ ಮುನ್ನ ಅವನಿಗೆ ಪೂಜೆ; ಅಗ್ರಪೂಜೆ! ಪಿಳ್ಳಾರತಿಯಿಂದ ಪರಮಾಣುತನಕ ಅವನದ್ದು ಅಗಣಿತ, ಅಸಂಖ್ಯಾತ ಅವತಾರಗಳು. ಅವನು ಶೇಷಶಾಯಿಯೂ ಹೌದು, ವೃಷಭವಾಹನನೂ ಹೌದು; ಕಮಲಾಸನನೂ ಹೌದು.ಈ ಎಲ್ಲಾ ಅವತಾರಗಳನ್ನು ಕೊಟ್ಟವರೂ ನಾವೇ. ಕಾರಣ ಅವ ನಮ್ಮ ಹೃನ್ಮನದ ದೈವ. ನಮ್ಮೆಲ್ಲರೊಡನಾಡುವ ದೈವ. ಮಣ್ಣಿನ ಮಗ! ಯಕ್ಷವೇಶಧಾರಿಯಾಗಿ, ಸಂಘದ ಸ್ವಯಂಸೇವಕನಾಗಿ, ಕ್ರಿಕೆಟ್ ಬ್ಯಾಟು ಹಿಡಿದ ದಾಂಡಿಗನಾಗಿ, ಸುಖ ಶಯನದಲ್ಲಿ, ನೃತ್ಯಗಾರನಾಗಿ, ಗಿಟಾರ್, ಕೊಳಲು ಹಿಡಿದುಕೊಂಡು, ಟೋಪಿ ಧರಿಸಿ, ಮೊಂಡು ಹಟ ಮಾಡುವ ಬಾಲನಾಗಿ, ಕನ್ನಡಕ ಧಾರಿಯಾಗಿ, ಬಾಲ-ತರುಣ-ತರುಣಿ-ಪ್ರೌಢನಾಗಿ, ಕವಿ, ಕಲಾಕಾರನಾಗಿ ಎಷ್ಟೆಲ್ಲಾ ಬಗೆಯಲ್ಲಿ ಅವನನ್ನು ನಾವು ಚಿತ್ರಿಸಿದ್ದೇವೆ!

                ಅಕ್ಕಿ ಹರಡಿದ ಹರಿವಾಣದಲ್ಲಿ ಮುದ್ದು ಗಣಪನನ್ನು ತರುವಾಗಲೇ ಅದು ಉತ್ಸವ ರೂಪ ತಳೆದಿರುತ್ತದೆ. ಒಂದು ಕುಟುಂಬವನ್ನು, ಒಂದಿಡೀ ಸಮಾಜವನ್ನು ಒಗ್ಗೂಡಿಸುತ್ತಾನೆ ಗಣೇಶ. ಪೂಜೆಯ ಜೊತೆಗೆ ಲಂಬೋದರನಿಗೆ ಪ್ರಿಯವಾದ ಕಬ್ಬು, ಕಡಲೆ, ಕಡುಬು, ಚಕ್ಕುಲಿ, ಉಂಡೆಗಳ ನೈವೇದ್ಯ! ಅನಂತ ಚತುರ್ದಶಿಯ ಶುಭಪರ್ವದಂದು ಈ ಉತ್ಸವದ ಉತ್ಸಾಹ ಮೇರೆ ಮುಟ್ಟುತ್ತದೆ. ನದಿಯಲ್ಲೋ, ಕೆರೆಯಲ್ಲೋ, ಬಾವಿಯಲ್ಲೋ ವಿಸರ್ಜಿಸುವ ವೇಳೆಗೆ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಭಾವ! ಅರೇ, ತಾವೇ ಶೃದ್ಧಾ ಭಕ್ತಿಗಳಿಂದ ತಂದು ಮನೆಯ ಮಗುವಂತೆ ಪೂಜಿಸಿದ ದೇವರ ಚಂದ ಪುತ್ಥಳಿಯನ್ನು ವಿಗ್ರಹಾರಾಧಕ ಹಿಂದೂಗಳೇ ನೀರಿಗೆ ಹಾಕುವುದೆಂದರೆ!ಅಲ್ಲಿದೆ ಗುಟ್ಟು! ಮಣ್ಣಿನ ಮೂಲಕ ಮೂರ್ತಿಯನ್ನು ರೂಪಿಸಿ ಪೂಜಿಸುವಾಗ ಪ್ರಕೃತಿಯಲ್ಲಿ ಅಡಗಿರುವ ಸುಪ್ತ ಚೇತನವನ್ನು ತನ್ನಲ್ಲಿ ಆವಾಹಿಸಿಕೊಳ್ಳುತ್ತಾನೆ ಹಿಂದೂ. ಮೂಲಾಧಾರವೇ ಗಣೇಶನ ಸ್ಥಾನ. ಗಣೇಶನ ಪೂಜೆಯಲ್ಲಿನ ಒಂದೊಂದು ಮಂತ್ರವೂ ಒಂದೊಂದು ತಂತ್ರ. ಕುಂಡಲಿನಿ ಮೇಲೇರುವುದು ಈ ಮೂಲಾಧಾರದಿಂದಲೇ. ಅದಕ್ಕಾಗಿಯೇ ಈ ಮೂಲಾಧಾರಸ್ಥಿತನಿಗೆ ಅಗ್ರ ಪೂಜೆ. ದೇವಾಲಯಗಳಲ್ಲಿ ಭಕ್ತರಿಗೆ ಮೊದಲು ದರ್ಶನವೀವ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ತಂತ್ರಶಾಸ್ತ್ರದ ಮುಂದುವರಿದ ಭಾಗವೇ. ಸುಪ್ತಾವಸ್ಥೆಯಲ್ಲಿರುವ ಶಿವನನ್ನು ಎಚ್ಚರಿಸಿ ಬ್ರಹ್ಮಾಂಡದ ಸೃಷ್ಟಿಗೆ ಕಾರಣಕರ್ತಳಾಗುವ ಕುಂಡಲಿನಿ ಶಕ್ತಿಯನ್ನು ಸಂಕೇತಿಸುವ ಪಾರ್ವತಿ ತನ್ನ ಶಕ್ತಿಸ್ರೋತದ ದ್ವಾರದಲ್ಲಿ ವೇದಮಂತ್ರಗಳ ಅಧಿಪತಿಯಾಗಿರುವ ಗಣಪತಿಯನ್ನು ಸೃಷ್ಟಿಸಿ ನೆಲೆಗೊಳಿಸಿದಳು. ತನ್ನ ಮೈಯ ಅಂಗರಾಗದ ಆಕೃತಿಗೆ ಜೀವಕೊಟ್ಟು ಅದು ಅನುರಾಗದ ಸುತನಾದುದರ ಅರ್ಥ ಇದು. "ಚಿಕ್ಕೆರೆಲಿ ಬಿದ್ದು ದೊಡ್ಕೆರೇಲಿ ಏಳುವುದೆಂದರೆ" ಮತ್ತೊಂದು ಕೆರೆಯ ಮಣ್ಣಿನಲಿ ಮತ್ತೆ ರೂಪುಗೊಳ್ಳುತ್ತಾನೆ. ಕಾಲ ಸರಿದಂತೆ ಕಾಯ ಎನ್ನುವುದು ಬಿದ್ದು ಹೋಗುತ್ತದೆ; ಮಣ್ಣಾಗಿ ಹೋಗುತ್ತದೆ; ಆದರೆ ಆತ್ಮ ಮಾತ್ರ ಕಾಲಾತೀತ; ಕರ್ಮಫಲಕ್ಕೆ ಅನುಸಾರವಾಗಿ ಪುನರಪಿ ಜನನಂ ಪುನರಪಿ ಮರಣಂ. ಕಲ್ಲು ಮಣ್ಣುಗಳ ವಿಗ್ರಹಗಳನ್ನು ಹಿಂದೂಗಳು ಪೂಜಿಸುವುದರ ಹಿಂದಿನ ಅರ್ಥವನ್ನು, ಸೃಷ್ಟಿಯಲ್ಲಿನ ಜೀವನ ಪ್ರಕ್ರಿಯೆಯನ್ನು ಅದ್ಭುತವಾಗಿ ಕಟ್ಟಿಕೊಡುವ ಮಹಾಕಾವ್ಯ ಈ ಗಣಪನ ಹಬ್ಬ!

                 ವಿಘ್ನಕರ್ತನಾಗಿದ್ದ ಗಣಪತಿ ವಿಘ್ನಹರ್ತನಾಗಿ ಅಗ್ರಪೂಜೆಗೆ ಸಿದ್ಧನಾದದ್ದು ಕ್ರಿ.ಶ ಏಳನೆಯ ಶತಮಾನದಲ್ಲಿ. ಕಾವ್ಯಾರಂಭದಲ್ಲಿ ಗಣಪತಿಯ ಸ್ತುತಿಯನ್ನು ಮೊದಲು ಮಾಡಿದ್ದು ಭವಭೂತಿ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಮಾಲತೀ-ಮಾಧವ ಮತ್ತು ಉತ್ತರರಾಮಚರಿತದಲ್ಲಿ. ಕ್ರಿ.ಶ. 7-8ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನೆಲೆಯೂರಿದ್ದ ಶೈವ ಪಂಥಾನುಯಾಯಿಗಳಾದ ಲಕುಲೀಶ, ಕಾಳಾಮುಖ, ಪಾಶುಪತರು ಅನೇಕ ಶಿವಾಲಯಗಳನ್ನು ನಿರ್ವಿುಸಿ, ಗಣೇಶನನ್ನು ಪ್ರತಿಷ್ಠಾಪಿಸಿದರು. ಜ್ಞಾನೇಶ್ವರಾದಿಯಾಗಿ ಸಂತರಿಂದ ಸ್ತುತಿಸಲ್ಪಟ್ಟ ಗಣಪತಿ ಹವನಗಳಲ್ಲೂ ಪ್ರಾಮುಖ್ಯತೆ ಪಡೆದು ವೇದಗಳ ಬ್ರಹ್ಮಣಸ್ಪತಿಯ ಸ್ಥಾನವನ್ನು ತನ್ನದಾಗಿಸಿಕೊಂಡ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದ. ಅಂದಿನಿಂದ ಆ ಊರು "ಮೋರೆಗಾಮ್' ಆಯಿತು. ಗಣೇಶ ವಿಸರ್ಜನೆಯ ಹಿಂದಿನ ಪ್ರಸಿದ್ಧ ಘೋಷಣೆ ("ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್ ಯಾ |")ಯ ಮೂಲ ಇದು. ಪೇಶ್ವೆಗಳ ಮನೆದೇವತೆಯಾಗಿ, ಬಾದಾಮಿಯ ಚಾಲುಕ್ಯರಿಗೆ ವಾತಾಪಿ ಗಣಪತಿಯಾಗಿ ವಿಜಯನಗರಕ್ಕೂ ಬಂದು ಪ್ರತಿಷ್ಠಾಪನೆಗೊಂಡ ಗಣಪತಿ. ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ವೇದಕಾಲದ ಬ್ರಹ್ಮಣಸ್ಪತಿಯಾಗಿ, ವಿದ್ಯಾಧಿಪತಿಯೂ ವಿಘ್ನನಿವಾರಕನೂ ಆಗಿ ಜಾತಿಭೇದ ಪಂಥಭೇದವಿಲ್ಲದೆ ಪೂಜೆಗೊಳ್ಳುವ ದೇವಾಧಿದೇವ. ಭಾರತದಲ್ಲಷ್ಟೇ ಅಲ್ಲದೆ, ಭಾರತದ ಸುತ್ತಮುತ್ತಲ ದೇಶಗಳಲ್ಲಿ ಆರಾಧಿಸಲ್ಪಡುವ ಗಣಪನ ದೇಗುಲಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಲಂಕಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತವೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿರುವ ದೇವಾಲಯಗಳಲ್ಲಿಯೂ ಗಣೇಶನಿಗೆ ಅಗ್ರಸ್ಥಾನ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು ಎಂಬ ಮಾತೊಂದು ತಮಿಳುನಾಡಿನಲ್ಲಿದೆ. ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿರುವುದು ವಿಶೇಷ!

                  ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪಾರ್ವತಿ ಸೌಭಾಗ್ಯ ದೇವತೆ. ತವರಿನ ಹಂಬಲದಿಂದ ಪ್ರತಿವರುಷವೂ ಮನೆಗೆ ಬರುವ ಮಗಳು ಅವಳು. ಗಣಪತಿ ತಾಯಿಯೊಡನೆ ಬರುವ ಮುದ್ದು ಕುವರ ಎನ್ನುವ ಅರ್ಥದಲ್ಲಿ ಮಣ್ಣಿನ ಅಥವಾ ಲೋಹದ ಮೂರ್ತಿ, ಅರಿಶಿನದಿಂದ ಮಾಡಿದ ಗೌರಿ, ಸಗಣಿಯಿಂದ ಮಾಡಿದ ಅವಳ ಮಗ ಗಣಪನನ್ನು ಪೂಜಿಸುವ ಪದ್ದತಿ ಇಲ್ಲಿ ಬೆಳೆದು ಬಂದಿದೆ. ಹೀಗೆ ನಮ್ಮ ಪರಂಪರೆಯಲ್ಲಿ ಗಣೇಶನು ಎಲ್ಲೋ ಇರುವ ದೇವನಾಗಲ್ಲದೆ, ವರುಷ ವರುಷವೂ ಮನೆ-ಮನೆಗೆ ಬರುತ್ತಿರುವ ಆತ್ಮೀಯ ಅತಿಥಿಯಾಗಿ ಸರ್ವಜನಪ್ರಿಯನಾಗಿದ್ದಾನೆ. ಗಣೇಶನನ್ನು ರಾಷ್ಟ್ರೀಯ ಐಕ್ಯತೆಯ ಕೊಂಡಿಯಾಗಿ ಕಂಡ ಶಂಕರರು ಗಣೇಶ ಪಂಚರತ್ನವನ್ನು ರಚಿಸಿದರಲ್ಲದೆ ಪಂಚಾಯತನದಲ್ಲಿ ಸ್ಥಾನವನ್ನು ನೀಡಿದರು. ಎಲ್ಲರನ್ನೂ ಸಂಮೋಹನಗೊಳಿಸಿದ ಅವನ ವ್ಯಕ್ತಿತ್ವವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ತಿಲಕರು ಅವನನ್ನು ಭಾರತೀಯರನ್ನು ಒಟ್ಟುಗೂಡಿಸುವ ರಾಷ್ಟ್ರೀಯ ಐಕ್ಯತೆಯ ವಿಗ್ರಹವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿಬಿಟ್ಟರು. ಆ ಪ್ರವಾಹ ಇಂದಿಗೂ ಅವಿಚ್ಛಿನ್ನವಾಗಿ ಮುಂದುವರಿದಿದೆ.

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"


              "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ"! ಇದೇನೂ ಹೊಸದಲ್ಲ. ದ್ರಾವಿಡ ದೇಶ ಅಂತ ಹಿಂದೆ ಬೊಬ್ಬಿರಿಯುತ್ತಿದ್ದುದಕ್ಕೆ ಹೊಸ ಆಂಗ್ಲ ಹೆಸರು ಅಷ್ಟೇ. ಹೊಸ ಬಾಟಲಿಯಲ್ಲಿ ಹಳೇ ಹೆಂಡ. ಈ ಹೊಸ ಕಿರಿಕ್ ಶುರುವಾಗಿದ್ದು 2016ರಲ್ಲಿ. "ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದಲ್ಲಿ ದಕ್ಷಿಣದ ರಾಜ್ಯಗಳ ಎಲ್ಲಾ ಮಾನವ ಅಭಿವೃದ್ಧಿ ಸೂಚಕಗಳು ಉತ್ತಮವಾಗಿವೆ. ದಕ್ಷಿಣದ ರಾಜ್ಯಗಳು ವಿವಿಧ ತೆರಿಗೆಗಳ ಮೂಲಕ ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ ಕೇಂದ್ರದಿಂದ ಸಿಗುವ ಅನುದಾನದಲ್ಲಿ ಅನವರತ ಅನ್ಯಾಯ, ಅಸಮಾನತೆ ಇದೆ. ಈ ಅನ್ಯಾಯವನ್ನು ಖಂಡಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಮ್ಮ ನ್ಯಾಯೋಚಿತ ಪಾಲನ್ನು ಪಡೆದುಕೊಳ್ಳಲು ದಕ್ಷಿಣದ ರಾಜ್ಯಗಳು "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ" ಎಂಬ ಹೆಸರಿನಡಿಯಲ್ಲಿ ಒಟ್ಟಾಗಬೇಕು" ಎನ್ನುವ ಹೊಸ ವಾದವೊಂದು 2016ರಿಂದೀಚೆಗೆ ಕೇಳಿ ಬರುತ್ತಿದೆ. ಅದಕ್ಕಾಗಿ ಅಂಕಿ ಅಂಶಗಳನ್ನೆಲ್ಲಾ ತಿರುಚಿ ಸಾಲು ಸಾಲು ಲೇಖನಗಳೂ ವಾಮಪಂಥೀಯರಿಂದ ಹೊರಬಂದವು.

               ಆದರೆ ಈ ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ? ಮೊದಲನೆಯದಾಗಿ ರಾಜ್ಯಗಳಿಗೆ ಈ ರೀತಿಯ ಅನುದಾನದ ಅಸಮಾನ ಹಂಚಿಕೆ ಕೇವಲ ಭಾರತದಲ್ಲಿ ಮಾತ್ರವಲ್ಲ; ಅಮೇರಿಕಾ, ಸ್ವಿಜರ್ ಲೆಂಡ್, ಜರ್ಮನಿ ಹಾಗೂ ಇಂಗ್ಲೆಂಡುಗಳಲ್ಲೂ ಇದೆ. ಇದನ್ನು ಅಸಮಾನ ಹಂಚಿಕೆ ಎನ್ನುವುದೇ ತಪ್ಪು. ಮೂಲಭೂತ ಸೌಕರ್ಯಗಳು ಕಡಿಮೆ ಇರುವ ರಾಜ್ಯಗಳನ್ನು ಶ್ರೀಮಂತ ರಾಜ್ಯಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡದಿದ್ದರೆ ಈ ಎರಡೂ ರಾಜ್ಯಗಳ ಆರ್ಥಿಕ ಅಭಿವೃದ್ಧಿ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ. ವಿಶ್ವ ಆರ್ಥಿಕ ಅಭಿವೃದ್ಧಿಯ ಮಾನದಂಡಗಳು ಭಾರತವನ್ನು ಒಂದು ರಾಷ್ಟ್ರವಾಗಿ ನೋಡುತ್ತವೆಯೇ ಹೊರತು ಭಾರತದ ಯಾವ ರಾಜ್ಯ ಹೆಚ್ಚು ಶ್ರೀಮಂತ ಎನ್ನುವುದನ್ನಲ್ಲ. ಅದಕ್ಕಿಂತಲೂ ಗಂಭೀರ ವಿಚಾರವೆಂದರೆ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಆರ್ಥಿಕ ಉತ್ಪಾತ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು. ಬರೇ ಬೆಂಗಳೂರು ಒಂದನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ/ಅಭಿವೃದ್ಧಿ ಮಾಡಿದ ಕಾರಣದಿಂದ ಕರ್ನಾಟಕದ ಉಳಿದ ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ. ಉಳ್ಳವರಿಂದ ಕಿತ್ತುಕೊಂಡು ಇಲ್ಲದವರಿಗೆ ಕೊಡುವ ಎಡಪಂಥೀಯ ತತ್ತ್ವಗಳಲ್ಲಿ ನಂಬಿಕೆಯುಳ್ಳ ಬುದ್ಧಿಜೀವಿಗಳು ಅವರದೇ ಮಾರ್ಗಕ್ಕೆ ತುಸುವಾದರೂ ಹತ್ತಿರವುಳ್ಳ ಅವರೇ ಹೇಳುವಂತೆ ಬಂಡವಾಳಶಾಹೀ ಸರಕಾರದ ಈ ಕ್ರಮವನ್ನು ವಿರೋಧಿಸುವುದು ಅವರು ಎಂದಿಗೂ ತಮ್ಮ ತತ್ತ್ವಕ್ಕೆ ಬದ್ಧರಾಗಿರುವುದಿಲ್ಲ ಎನ್ನುವುದಕ್ಕೆ ಇನ್ನೊಂದು ನಿದರ್ಶನ ಅಷ್ಟೇ! ಎರಡನೆಯದಾಗಿ ಇವರ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಾಗುಳ್ಳ ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ವಿಶೇಷ ವರ್ಗದ ರಾಜ್ಯಗಳನ್ನಾಗಿಸಿ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ಅದು ಸಾಕಾಗುವುದಿಲ್ಲವೆಂಬ ನೆಪವೊಡ್ಡಿ ತೆಲುಗುದೇಶಂ ಕೆಂದ್ರ ಸರ್ಕಾರದ ತನ್ನ ಪಾಲುದಾರಿಕೆಯನ್ನು ಕಳಚಿಕೊಂಡು ಹೊರನಡೆದಿದೆ. ಎಡ ಬುದ್ಧಿಜೀವಿಗಳ ಪ್ರಕಾರ ಇವೆರಡೂ ಶ್ರೀಮಂತ ರಾಜ್ಯಗಳಾಗಿದ್ದರೆ ಇವಕ್ಕೆ ವಿಶೇಷ ಅನುದಾನ ಯಾಕೆ ಬೇಕು? ವಿಚಿತ್ರವೆಂದರೆ ಇವರು ಶ್ರೀಮಂತ ಎನ್ನುವ ಕರ್ನಾಟಕ, ತಮಿಳುನಾಡು, ಆಂಧ್ರಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ರೈತರು ಸಾಯುತ್ತಿದ್ದಾರೆ! ದಕ್ಷಿಣದ ರಾಜ್ಯಗಳು ಶ್ರೀಮಂತ ಎನ್ನುವ ಇವರುಗಳು ಮರೆತ ಮುಖ್ಯ ಅಂಶವೊಂದಿದೆ. ದಕ್ಷಿಣದ ರಾಜ್ಯಗಳ ಬೆಂಗಳೂರು, ಚೆನ್ನೈಯಂತಹ ನಗರಗಳು ಅತೀ ಹೆಚ್ಚು ತೆರಿಗೆ ಪಾವತಿಸುತ್ತವೆಯೇ ಹೊರತು ಈ ರಾಜ್ಯಗಳ ಉಳಿದ ನಗರಗಳಲ್ಲ. ಹಾಗೆಯೇ ದೇಶದ 40% ತೆರಿಗೆ ಮಹಾರಾಷ್ಟ್ರದಿಂದ ಸಂಗ್ರಹಿಸಲ್ಪಡುತ್ತದೆ(ಇದು ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಲ್ಲ!). ಅದರಲ್ಲೂ ಮುಂಬೈ ಒಂದರ ಪಾಲೇ 30%. ಚೆನ್ನೈ, ಬೆಂಗಳೂರಿಗರು ನಾವೇ ಹೆಚ್ಚು ತೆರಿಗೆ ಪಾವತಿಸುತ್ತೇವೆ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಧರಣಿ ಕೂತರೆ ಈ ನಗರಗಳನ್ನೂ ಪ್ರತ್ಯೇಕ ದೇಶವನ್ನಾಗಿ ಮಾಡಲು ಸಾಧ್ಯವಿದೆಯೇ? (ಕಮ್ಯೂನಿಷ್ಟರು ಇದಕ್ಕೂ ಸಿದ್ಧರಾಗಿರಬಹುದು; ಒಡೆಯುವುದು ಅವರ ಜನ್ಮಸಿದ್ಧ ಹಕ್ಕು}. ತಮಿಳುನಾಡು, ಕರ್ನಾಟಕದಲ್ಲಿ ರೈತರಿಂದ ಬರುವ ತೆರಿಗೆ ಪ್ರಮಾಣ ಕೂಡಾ ಕಡಿಮೆ. ಹಾಗಾಗಿ ತಮಿಳು ರೈತರು ಉತ್ತರಪ್ರದೇಶದ ರೈತರಿಗೆ ಸಬ್ಸಿಡಿ ಕೊಡುವಂತಾಗಿದೆ ಎಂದು ವರ್ಷದ ಕೆಳಗೆ ಧರಣಿ ನಡೆಸುತ್ತಿದ್ದ ರೈತರಲ್ಲದ ತಮಿಳು ಎಡಪಂಥೀಯರ ವಾದದಲ್ಲಿ ಯಾವುದೇ ಹುರುಳಿಲ್ಲ. ಸ್ವಾತಂತ್ರ್ಯಾನಂತರ ಬಹುಕಾಲ ಆಳಿದ ರಾಜಕೀಯ ಪಕ್ಷವೊಂದರ ದುರಾಡಳಿತದ ಕಾರಣದಿಂದ ಕೆಲವು ರಾಜ್ಯಗಳು ಶ್ರೀಮಂತವಾಗಿ ಕೆಲವು ರಾಜ್ಯಗಳು ಬಡವಾಗಿಯೇ ವಿನಾ ಅಲ್ಲಿರುವ ಸಂಪನ್ಮೂಲದ ಕೊರತೆಯಿಂದಲ್ಲ. ಇವತ್ತು ಶ್ರೀಮಂತ ಎನ್ನಿಸಿಕೊಂಡ ರಾಜ್ಯ/ನಗರಗಳು ಭವಿಷ್ಯದಲ್ಲಿ ಜನಸಂಖ್ಯಾ ಸ್ಫೋಟವೋ ಅಥವಾ ಯಾವುದೋ ಪ್ರಾಕೃತಿಕ ವಿಕೋಪದ ಕಾರಣದಿಂದ ವಿನಾಶದತ್ತ ಸಾಗಿದರೆ ಈ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಉಳಿದ ಪಾಲುದಾರ ರಾಜ್ಯಗಳು ತಮ್ಮದೇ ಪ್ರತ್ಯೇಕ ದೇಶವೆಂದು ಬೆನ್ನಿಗೆ ಇರಿದಾವೆಯೇ ಹೊರತು ಬೆನ್ನಿಗೆ ನಿಂತು ಸಹಾಯ ಮಾಡಲಿಕ್ಕಿಲ್ಲ. ನಾವು ಹೆಚ್ಚು ಕೊಡುತ್ತೇವೆ; ನಮಗೆ ಹೆಚ್ಚು ಸಿಗಬೇಕು; ಇಲ್ಲದಿದ್ದರೆ ಪ್ರತ್ಯೇಕವಾಗುತ್ತೇವೆ ಎನ್ನುವುದರ ದೂರಗಾಮೀ ಪರಿಣಾಮ ಅದೇ. ತಮಿಳು ಅಸ್ಮಿತೆಯನ್ನೇ ಬೊಬ್ಬಿರಿವ ಭಾಷಾಂಧತೆ, ಕಷ್ಟ ಕಾಲದಲ್ಲಿ ಯಾರಿಗೂ ಸಹಾಯ ಮಾಡದ ಮಲಯಾಳೀ ರಾಜಕಾರಣವನ್ನು ಅರಿತ ಎಂತಹಾ ಸಾಮಾನ್ಯನಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿ ಇದು.

            ಹಾಗಾದರೆ ಇವರ ಮೂಲ ಉದ್ದೇಶವೇನು?  ಆರ್ಯ ದ್ರಾವಿಡ ಜನಾಂಗವೆಂಬ ಎಂಬ ಕಪೋಲ ಕಲ್ಪಿತ ವಾದದ ಜೊತೆಜೊತೆಗೆ ಅಭಿವೃದ್ಧಿಯ ವಿಚಾರವನ್ನು ಬಳಸಿ ದಕ್ಷಿಣ ಭಾರತೀಯರಲ್ಲಿ ಮೌಢ್ಯದ ಬೀಜ ಬಿತ್ತುವುದು; ಹೇಗೆ ಮೋದಿ ಅಭಿವೃದ್ಧಿ ಎಂಬ ಅಸ್ತ್ರವನ್ನು ಪ್ರಯೋಗಿಸಿ ಭಾರತೀಯರನ್ನು ಗೆದ್ದರೋ, ಅದೇ ಅಭಿವೃದ್ಧಿ ಎಂಬ ಅಸ್ತ್ರವನ್ನು ಅಸಂಬದ್ಧವಾಗಿ ಪ್ರಯೋಗಿಸಿ ಭಾಜಪಾವನ್ನು ಅಧಿಕಾರದಿಂದ ದೂರ ಇಡುವುದು; ಇದು ಮೊದಲ ಹೆಜ್ಜೆ; ಉತ್ತರ ದಕ್ಷಿಣ ವಿಭಜನೆಗೆ ಮೊದಲ ಮೆಟ್ಟಿಲು. ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾದ ಮುಂದುವರಿದ ಭಾಗವೇ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಲುದ್ದೇಶಿಸಿರುವ 'ದ್ರಾವಿಡ ವಿಚಾರ ಕಲಾ ಮೇಳ' ಎಂಬ ಸಮ್ಮೇಳನ! ದ್ರಾವಿಡ ಭಾಷೆಗಳನ್ನು ಒಂದೇ ವೇದಿಕೆಗೆ ತಂದು ಸೌಹಾರ್ದ ಬೆಸೆಯುವುದರ ಹಿಂದೆ ದಕ್ಷಿಣ ಭಾರತದಲ್ಲಿ ದ್ರಾವಿಡ ಚಳವಳಿಗೆ ಮತ್ತೆ ಕಾವು ಕೊಟ್ಟು ಈಗಿರುವ ಕೇಂದ್ರ ಸರಕಾರ ಹಿಂದೀ ಸರಕಾರ, ಅದು ದಕ್ಷಿಣ ಭಾರತೀಯರ ಅಳಲುಗಳಿಗೆ ಕಿವಿಗೊಡುತ್ತಿಲ್ಲ ಎಂದು ಬೊಬ್ಬಿರಿದು ಮುಂದಿನ ಲೋಕಸಭಾ ಚುನಾವಣೆಗೆ ತನ್ನ ಅನ್ನದಾತರಿಗೆ ಸಹಾಯ ಮಾಡುವ ಉದ್ದೇಶವಿದೆ. ಆದರೆ ಇದರ ದೂರಗಾಮೀ ಪರಿಣಾಮ ಮಾತ್ರ ಉತ್ತರ ದಕ್ಷಿಣವಾಗಿ ಭಾರತದ ವಿಭಜನೆ.

         ಆಫ್ರಿಕಾ, ರಷ್ಯಾ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸ್ಥಳೀಯ ಕರಿಯ ಜನರ ಮೇಲೆ ಅಧಿಕಾರ ಚಲಾಯಿಸಿದಂತೆ ಭಾರತದಲ್ಲಿ ಸುಲಭವಾಗಿ ಅಧಿಕಾರ ಚಲಾಯಿಸಲು ಅದಕ್ಕಿಂತಲೂ ಮುಖ್ಯವಾಗಿ ಮತಾಂತರಿಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಇದರಿಂದ ಹಲವು ಬಗೆಯ ಲಾಭಗಳು ಅವರಿಗಾಗುತ್ತಿದ್ದವು. ಭಾರತೀಯರಲ್ಲೇ ಮೂಲ ಮತ್ತು ಆಕ್ರಮಣಕಾರರೆಂಬ ಜಗಳ ಉಂಟಾಗಿ ಉತ್ತರ ದಕ್ಷಿಣಗಳು ದೂರದೂರವಾಗುವ ಸಾಧ್ಯತೆ ಒಂದು. ಬ್ರಿಟಿಷರ ಈ ಇತಿಹಾಸವನ್ನೇ ನಂಬಿ ತಾವು ಶ್ರೇಷ್ಠರೆಂಬ ಭಾವನೆಯಿಂದ ದಕ್ಷಿಣದವರ ಮೇಲೆ ದ್ವೇಷ ಕಾರುತ್ತಾ ಬ್ರಿಟಿಷರಂತೆ ತಾವು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಅವರ ಸಂಸ್ಕಾರವನ್ನು ಅನುಕರಿಸುತ್ತಾ ಸ್ವಧರ್ಮವನ್ನು ಮರೆಯುವ ಉತ್ತರ ಭಾರತೀಯರು, ಇದರಿಂದ ಕೀಳರಿಮೆಗೊಳಗಾಗಿ ಅವರನ್ನು ವಿರೋಧಿಸುವ ಅಥವಾ ಅವರಂತೆ ತಾವಾಗಲು ಬಯಸಿ ಬ್ರಿಟಿಷರ ಅನುಕರಣೆ ಮಾಡತೊಡಗುವ ಅಥವಾ ಇಂದಿನ ತಮ್ಮ ಸಂಸ್ಕೃತಿಯನ್ನೇ ತೊರೆದು ರಾಕ್ಷಸ ಕುಲವೇ ತಮ್ಮ ಮೂಲವೆಂಬಂತೆ ಅನಾಗರಿಕರಾಗುವ ದಕ್ಷಿಣಾತ್ಯರು. ಈ ಪರಿಸ್ಥಿತಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಆದರೆ ಯಾವಾಗ ಹರಪ್ಪಾ, ಮೊಹಂಜೋದಾರೋಗಳಲ್ಲಿ ಉತ್ಖನನಗಳು ನಡೆದವೋ ಬಿಳಿಯರ ಬುದ್ಧಿಗೆ ಮಂಕು ಬಡಿಯತೊಡಗಿತು. ಆಂಗ್ಲರು ಕಲ್ಪಿಸಿಕೊಂಡ ಆರ್ಯರು ಭಾರತ ತಲುಪುವ ಸಾವಿರ ವರ್ಷಗಳ ಮೊದಲೇ ಇಲ್ಲಿ ವೈದಿಕ ಸಂಸ್ಕೃತಿಯೊಂದು ಅದ್ಭುತವಾದ ನಾಗರಿಕತೆಯೊಂದು ಅಭಿವೃದ್ಧಿಗೊಂಡಿತ್ತು ಎನ್ನುವ ಸಾಲು ಸಾಲು ದಾಖಲೆಗಳು ಈ ಉತ್ಖನನದಲ್ಲಿ ಲಭ್ಯವಾದವು. ತಮ್ಮದು ಕಟ್ಟುಕಥೆಯೆಂದು ಜಗತ್ತಿಗೆ ಅರಿವಾಯಿತೆಂದು ಗೊತ್ತಾದೊಡನೆ ಉತ್ಖನನದಲ್ಲಿ ಗೊತ್ತಾದ ನಾಗರಿಕತೆ ವೇದ ಸಂಸ್ಕೃತಿಯದ್ದಲ್ಲವೆಂದೂ, ಅನಾರ್ಯರಾದ ದ್ರಾವಿಡರದ್ದೆಂದೂ, ಅವರನ್ನು ಆಕ್ರಮಿಸಿದ ಆರ್ಯರು ಆ ನಾಗರಿಕತೆಯನ್ನು ಧ್ವಂಸ ಮಾಡಿ ಬಳಿಕ ವೇದಗಳನ್ನು ರಚಿಸಿದರೆಂದೂ ಚರಿತ್ರೆಯ ಪುಟಗಳಲ್ಲಿ ಬರೆಯಿಸಿಬಿಟ್ಟರು. ಹರಪ್ಪಾ ಉತ್ಖನನದಲ್ಲಿ ಭಾಗಿಯಾಗಿದ್ದ ವ್ಹೀಲರ್ ಅವಶೇಷಗಳನ್ನು ಆಕ್ರಮಣ ಮಾಡಿದವರದ್ದು ಈ ವಸ್ತುಗಳು, ಆಕ್ರಮಣಕ್ಕೊಳಗಾದವರದ್ದು ಉಳಿದವುಗಳೆಂದು ಘಂಟಾಘೋಷವಾಗಿ ನಿರ್ಣಯಿಸಿಬಿಟ್ಟ. ಚರಿತ್ರಕಾರರು ಕುರಿಗಳಂತೆ ಆತನ ವಾದವನ್ನು ಹಿಂಬಾಲಿಸಿದರು. ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇವರಿಂದ ಬಿಂಬಿಸಲ್ಪಡುವ ಹೊರಗಿನಿಂದ ಬಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಸುಂದರ, ಸಶಕ್ತ , ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಬಹು ಹತ್ತಿರದ ಸಂಬಂಧವಿರುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಸಾಹಿತ್ಯ ಹೊಂದಿರುವ ಜನಾಂಗಕ್ಕೆ ಸಂಸ್ಕೃತಿ ಇರುವುದು ಅಥವಾ ಸಂಸ್ಕೃತಿ ಇರುವ ಜನಾಂಗ ಸಾಹಿತ್ಯ ಸೃಷ್ಟಿ ಮಾಡಿರುವುದು ಇತಿಹಾಸ ಕಂಡ ಸತ್ಯ. "ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು, ಆದರೆ ಅವರಿಗೆ  ನಾಗರಿಕತೆಯಿರಲಿಲ್ಲ. ಆಕ್ರಮಣಕ್ಕೊಳಗಾದವರು ಅದ್ಭುತ ನಾಗರಿಕತೆಯನ್ನು ಬಿಟ್ಟು ಓಡಿದರು. ಅವರಿಗೆ ಅವರದ್ದೆನ್ನಲಾದ ಸಾಹಿತ್ಯವೇ ಇರಲಿಲ್ಲ!" ಎನ್ನುವ ಇವರ ಮೂರ್ಖ ವಾದ ನಿಷ್ಪಕ್ಷಪಾತಿಯಾಗಿರುವ, ನಿಜವಾದ ಇತಿಹಾಸಕಾರರಿಂದ ನಗೆಪಾಟಲಿಗೀಡಾಯಿತು.

               ಯಾರನ್ನು ಆರ್ಯರನ್ನಾಗಿಸುವುದು, ದ್ರಾವಿಡರ ಪಟ್ಟಿಗೆ ಯಾರನ್ನು ಸೇರಿಸುವುದು ಎನ್ನುವುದರ ಬಗ್ಗೆ ಈ ಆರ್ಯ ಆಕ್ರಮಣ ವಾದಿಗಳ ಬಳಿಯೇ ಸ್ಪಷ್ಟತೆಯಿಲ್ಲ. ಬ್ರಾಹ್ಮಣರನ್ನಷ್ಟೇ ಆರ್ಯ ಪಟ್ಟಿಗೆ ಸೇರಿಸೋಣವೆಂದರೆ ಬ್ರಾಹ್ಮಣ ರಾವಣನನ್ನು ಅವರೀಗಾಗಲೇ ದ್ರಾವಿಡನನ್ನಾಗಿಸಿಯಾಗಿದೆ; ದಕ್ಷಿಣಾತ್ಯರೂ ದೇವರೆಂದು ಆರಾಧಿಸುವ ಕ್ಷತ್ರಿಯ ರಾಮನನ್ನು ಆರ್ಯ ಪಟ್ಟಿಗೆ ಸೇರಿಸಿಯಾಗಿದೆ! ದಕ್ಷಿಣದವರು ಆರಾಧಿಸುವ ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿ ವೈದಿಕ ಸೂತ್ರಕಾರರಾದ ದಕ್ಷಿಣ ಭಾರತೀಯರಾದ ಬೋಧಾಯನ, ಆಪಸ್ತಂಭರನ್ನು; ವೇದಗಳಲ್ಲಿ ಬರುವ ಕೃಷ್ಣವರ್ಣದವರಾಗಿದ್ದ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ  ಇವರನ್ನು ಯಾವ ಪಟ್ಟಿಯಲ್ಲಿ ಸೇರಿಸುವುದು? ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ ಎಂದಿದೆ ವೇದ. ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ. ಕೊಂಬುಗಳಿದ್ದ ಪಶುಪತಿಯನ್ನು ಕ್ರೈಸ್ತರ ಕಾಲಕ್ಕೆ ಮೊದಲೇ ಯೂರೋಪಿನಲ್ಲಿಯೂ ಆರಾಧಿಸುತ್ತಿದ್ದರು. ಆ ಚಿತ್ರವನ್ನು ಚಿತ್ರಿಸಲಾಗಿದ್ದ ದೊಡ್ಡ ಬೆಳ್ಳಿಯ ಬಟ್ಟಲು ಜರ್ಮನಿಯಲ್ಲಿ ಕಂಡು ಬಂತು. ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ದೇವಾಸುರ ಕದನದಲ್ಲಿ ಸೋಲುಂಡ ಬಳಿಕ ದಾನವರು ಆರ್ಯಾವರ್ತವನ್ನು ಬಿಟ್ಟು ಬೇರೆ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಹೋದರು ಎಂದು ವೇದಗಳಲ್ಲೇ ಇದೆ. ಅಂದರೆ ವಲಸೆ ಇಲ್ಲಿಂದಲೇ ಆಗಿರಬೇಕು.  ಹಾಗೆ ನೋಡಿದರೆ ಭಾರತದಲ್ಲಿ ಸರ್ವಕಾಲಕ್ಕೂ ದಲಿತರ ಅಥವಾ ಕೆಳವರ್ಗದವರ ಸಂಖ್ಯೆಯೇ ಮೇಲ್ವರ್ಗಕ್ಕಿಂತ ಹೆಚ್ಚು ಇದ್ದಿದ್ದು, ಬ್ರಾಹ್ಮಣರಂದರೆ ಆರ್ಯರು, ಅಹಿಂದರೆಂದರೆ ದ್ರಾವಿಡರು ಎನ್ನುವ ಬುಡವಿಲ್ಲದ ವಾದವೂ ಅರ್ಥ ಹೀನವೆನಿಸುತ್ತದೆ. ಕೆಲವೇ ಕೆಲವು ಪ್ರತಿಶತ ಸಂಖ್ಯೆಯ ಆರ್ಯರು ಅಗಾಧ ಸಂಖ್ಯೆಯ ದ್ರಾವಿಡರನ್ನು ಸೋಲಿಸಿದ್ದು ಹೇಗೆ?  ಹರಪ್ಪ ಉತ್ಖನನದಲ್ಲಿ ವೇದಗಳಲ್ಲಿ ಹೇಳಲಾದ, ಶುಲ್ಬಸೂತ್ರಗಳಲ್ಲಿ ಉಲ್ಲೇಖಿಸಿದಂತೆಯೇ ರಚಿತವಾದ ಯಜ್ಞಶಾಲೆಗಳು ಕಂಡುಬಂದವು. ಯಜ್ಞಕುಂಡಗಳ ಜೊತೆಗೆ ಯಜ್ಞಕುಂಡದಲ್ಲಿ ಹವಿಸ್ಸು, ಬಲಿ ನೀಡಲಾದ ಪ್ರಾಣಿಗಳ ಅಸ್ಥಿಯೂ ಸಿಕ್ಕಿದವು. ಇಲ್ಲಿನ ಮೂಲ ಸಂಸ್ಕೃತಿಗೆ ವೈದಿಕತೆಯ ಗಂಧಗಾಳಿ ಇಲ್ಲದಿದ್ದರೆ ಯಜ್ಞಶಾಲೆಗಳು ನಿರ್ಮಿತವಾದದ್ದೇಕೆ? ಆರ್ಯ ಆಕ್ರಮಣವಾದಿಗಳು ಹೇಳುವಂತೆ ಅದು ದ್ರಾವಿಡರದ್ದಾಗಿದ್ದಾರೆ ಯಜ್ಞಶಾಲೆ, ಯಜ್ಞಕುಂಡದ ಆಕಾರ, ಯಜ್ಞವಿಧಾನದಲ್ಲೂ ವೈದಿಕ ಸಂಸ್ಕೃತಿಯ ಕುರುಹು ಕಂಡುಬಂದದ್ದಾದರೂ ಹೇಗೆ? ಧರ್ಮ-ಸಂಸ್ಕೃತಿ, ಮತ-ತತ್ವ, ನ್ಯಾಯ-ನೀತಿ, ಸಾಮಾಜಿಕ-ಕೌಟುಂಬಿಕ ಪದ್ದತಿಗಳಲ್ಲಿ ಉತ್ತರ-ದಕ್ಷಿಣವಾಸಿಗಳಲ್ಲಿ ಚಾರಿತ್ರಿಕ ವೈರುಧ್ಯವೇ ಕಾಣದಿರುವಾಗ ಈ ಆರ್ಯ ಆಕ್ರಮಣವಾದ ಹಸಿ ಹಸಿ ಸುಳ್ಳೆಂದು ಮೇಲ್ನೋಟಕ್ಕೇ ಅನಿಸುವುದಿಲ್ಲವೇ?

               ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ, ಆತ ಹೆಸರಿಸಿದ ಎರಡು ಸಂಸ್ಕೃತಿಗಳು ಒಂದೇ ಕಾಲದ್ದಲ್ಲವೆಂದು ನಿರೂಪಿಸಿತು. ಮೊದಲ ಗುಂಪಿನವರನ್ನು ಆಕ್ರಮಣಕಾರರನ್ನಾಗಿಯೂ ಎರಡನೆಯವರನ್ನು ಆಕ್ರಮಣಕ್ಕೊಳಗಾದವರಂತೆ ವ್ಹೀಲರ್ ಪರಿಗಣಿಸಿದ್ದ. ಆದರೆ ಆಕ್ರಮಣಕಾರರು ಬರುವ ಸಮಯಕ್ಕೆ ಆಕ್ರಮಣಕ್ಕೊಳಗಾದವರು ಅಲ್ಲಿ ಇರಲೇ ಇಲ್ಲ ಎಂದು ಸ್ಟ್ರಾಟಿಗ್ರಫಿ ನಿಚ್ಚಳವಾಗಿ ಸಾರಿತು. ಇಬ್ಬರು ಬೇರೆ ಬೇರೆ ಕಾಲದವರಾಗಿದ್ದರೆ ನರಸಂಹಾರ ಹೇಗೆ ಸಾಧ್ಯ? ಹೀಗಾಗಿ ಆರ್ಯರು ದ್ರಾವಿಡರ ಸಂಹಾರ ಮಾಡಿದರು ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ನಿಚ್ಚಳವಾಯಿತು. ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆ; ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲಿ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಸಿಕ್ಕಿದ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಆ ನಾಗರೀಕತೆ ಆರ್ಯರದ್ದೇ ಎನ್ನುವುದನ್ನು ಸ್ಪಷ್ಟಪಡಿಸಿತು. ಹರಪ್ಪಾದಲ್ಲಿ ಕಂಡುಬಂದ ನಾಗರಿಕತೆ ದ್ರಾವಿಡರದ್ದು ಎಂದು ನಖಶಿಖಾಂತ ವಾದಿಸಿದವರಿಗೆ ಎಷ್ಟೇ ಪ್ರಯತ್ನಿಸಿದರೂ ಹರಪ್ಪಾ ಲಿಪಿಯ ಜಾಡೇ ಸಿಗಲಿಲ್ಲ. ಅದು ಆರ್ಯರದ್ದೆಂದು, ಹಾಗಾಗಿ ಲಿಪಿಯೂ ಆರ್ಯ ಸಂಸ್ಕೃತಿಯದ್ದಿರಬಹುದೆಂದು ಭಾವಿಸಿದವರಿಗೆ ಉತ್ಖನನದಲ್ಲಿ ಸಿಕ್ಕ ಮೊಹರು, ಕಲಾಕೃತಿಗಳಲ್ಲಿದ್ದ ಲಿಪಿಯ ಗೂಢತೆಯೂ ಅರ್ಥವಾಯಿತು. ಭುಜ್, ಕ್ಯಾಂಬೆಗಳಲ್ಲಿ ಇತ್ತೀಚಿಗೆ ನಡೆದ ಸಂಶೋಧನೆಗಳು ವೇದಗಳ ರಚನೆಯ ಕಾಲವನ್ನು ಕ್ರಿ.ಪೂ 6000ಕ್ಕೂ ಹಿಂದಕ್ಕೆ ದೂಡುತ್ತವೆ. ಪಾಕಿಸ್ತಾನದ ಮೆಹರ್ ಗಢ್ ನಲ್ಲಿ (ಕ್ರಿ.ಪೂ. 6500) ನಡೆದ ಉತ್ಖನನ ಹರಪ್ಪ ನಾಗರಿಕತೆಗೂ ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ದೃಢೀಕರಿಸಿತು. ಅಲ್ಲಿನ ಜನ ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದು ಇತಿಹಾಸ ತಿರುಚಿದವರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಸಂಗತಿ. ಸರಸ್ವತಿ ನದಿಯ ಬಗ್ಗೆ ನಡೆದ ಅಪಾರ ಸಂಶೋಧನೆಗಳು ಈ ವೇದ ಕಾಲೀನ ನಾಗರಿಕತೆಯನ್ನು ಹತ್ತು ಸಾವಿರ ವರ್ಷಗಳಿಗೂ ಹಿಂದಕ್ಕೊಯ್ದಿವೆ. ಬಿರ್ಹಾನದಲ್ಲಿ ದೊರಕಿದ ವಸ್ತುಗಳನ್ನು ಕಾರ್ಬನ್ ಡೇಟಿಂಗ್ ಮಾಡಿದಾಗ ಕ್ರಿ.ಪೂ 7400 ಕಾಲಕ್ಕೆ ಹೋಗಿ ಮುಟ್ಟಿದವು. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು. ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು ಎಂದು ರಾಖಿಗರ್ಹಿಯಲ್ಲಿ ನಡೆದ ಉತ್ಖನನಗಳಿಂದ ರುಜುವಾತಾಗಿದೆ. ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಭಾರತದ ಹತ್ತಿ ಸಿಕ್ಕಿದೆ. ಅದೇ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ.  ಇನ್ನು ಕುದುರೆಗಳ ವಿಷಯಕ್ಕೆ ಬಂದರೆ ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36.  ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ.

                ‘ಆರ್ಯ' ಎಂದರೆ ‘ಸುಸಂಸ್ಕೃತ', ‘ಶ್ರೇಷ್ಠ', ‘ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಆರ್ಯ ಶಬ್ಧ "ಅರಿಯ" ಶಬ್ಧದಿಂದ ಬಂತು. ಭತ್ತವನ್ನು ಸಂಸ್ಕರಿಸಿ ಪಡೆದ ಅಕ್ಕಿಯನ್ನು ತುಳುವಿನಲ್ಲಿ "ಅರಿ" ಎನ್ನುತ್ತೇವೆ. ಅಂದರೆ ಆರ್ಯ ಎಂದರೆ ಸಂಸ್ಕಾರವಂತ ಎಂದರ್ಥವೇ ಹೊರತು  ಜನಾಂಗದ ಹೆಸರಲ್ಲ. ದ್ರವಿಡ ಎಂದರೆ ಮರಗಳಿಂದ ಸಮೃದ್ಧವಾದುದು ಎಂದರ್ಥ. ಅದು ಪ್ರದೇಶ ಸೂಚಕ ಪದ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ(ನಂಬರ್ ಸಿಸ್ಟಮ್) ವಲಸೆಯನ್ನು ಅಧ್ಯಯನ ಮಾಡಿದರು. ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು.  ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗೀಯ ವಲಸೆ ಆಗಿಯೇ ಇಲ್ಲ ಎಂದು ಮಾಲಿಕ್ಯುಲರ್ ಜೆನೆಟಿಕ್ಸ್ ಮೂಲಕ ತಿಳಿದು ಬರುತ್ತದೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ. ಸ್ವಾರಸ್ಯವೆಂದರೆ ಮೊದಲ ಇಪ್ಪತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಜನಾಂಗವೆಂದು ಸಾಧಿಸಿದ, ಆರ್ಯ ಆಕ್ರಮಣವಾದವನ್ನು ಮುನ್ನೆಲೆಗೆ ತರಲು ಕಾರಣನಾದ ಮುಲ್ಲರ್ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಭಾಷಾ ಕುಟುಂಬವೇ ಹೊರತು ಪ್ರತ್ಯೇಕ ಜನಾಂಗವಲ್ಲವೆಂದು ಹೇಳ ತೊಡಗಿದ್ದ.

                 ಬುಡವೇ ಇಲ್ಲದ ಆರ್ಯ ದ್ರಾವಿಡ ಜನಾಂಗೀಯ ಪರಿಕಲ್ಪನೆ ಇವತ್ತಿಗೂ ಭಾರತವನ್ನು ಅಲ್ಲಾಡಿಸುತ್ತಿದೆ. ಅಸಲಿಗೆ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳಿಂದಲೂ ಸುಳ್ಳೆಂದು ನಿರೂಪಿತವಾದ ಆರ್ಯ ಆಕ್ರಮಣ ವಾದ ಇಂದಿಗೂ ಎಡಪಂಥೀಯ ಬುದ್ಧಿಜೀವಿಗಳ ಬಾಯಲ್ಲಿ ನಲಿದಾಡುವ ಕಾರಣ ಅದೊಂದು ಅವರಿಗೆ ಅನುಕೂಲಕರ ವಾದ ಎಂಬ ಕಾರಣದಿಂದ ಅಷ್ಟೇ!  ಎಲ್ಲವನ್ನೂ ರಷ್ಯಾ, ಚೀನಾಗಳಿಂದ ಎರವಲು ಪಡೆದುಕೊಂಡ ಸ್ವಂತ ವಿಚಾರಗಳೇ ಇಲ್ಲದ ಭಾರತೀಯ ಎಡಪಂಥೀಯರಿಗೆ ಇವತ್ತಿಗೂ ಭೂರಿ ಭೋಜನ ನೀಡುವ "ಸಾವಿರದ ಸುಳ್ಳು" ಬಹುಷಃ ಇದೇ! ಒಂದೇ ಸುಳ್ಳನ್ನು ಸಾವಿರ ಸಲ ಹೇಳುವಷ್ಟರಲ್ಲಿ ಅದು ಸತ್ಯವಾಗಿಬಿಡುವ ಅಪಾಯವಿದೆ ಎನ್ನುವುದಕ್ಕೆ ಕಣ್ಣೆದುರಿನ ನಿದರ್ಶನ ಈ ಆರ್ಯ ಆಕ್ರಮಣ ವಾದ. ನೆಹರೂ ಪಾರುಪತ್ಯದಲ್ಲಿ ಶೈಕ್ಷಣಿಕ ವಲಯವನ್ನು ಹೊಕ್ಕ ಅದು ಇಂದಿಗೂ ಭಾರತೀಯ ಪೀಳಿಗೆಗಳ ತಲೆಯೊಳಗೆ ಇಳಿದು ವಶೀಕರಿಸಿ ಭಾರತೀಯ ಮಾನಸಿಕತೆಯನ್ನು ಭಾರತವಿರೋಧಿ ಮನಃಸ್ಥಿತಿಯಾಗಿ ಮತಾಂತರಿಸುತ್ತಿದೆ. ಯಾವ ಆರ್ಯ ಆಕ್ರಮಣ ಎಂಬ ಪೊಳ್ಳು ವಾದ ಭಾರತವನ್ನು ಒಡೆಯಲು ತಮಗೆ ಅನುಕೂಲ ಎಂದು ಬ್ರಿಟಿಷರು ಭಾವಿಸಿ ಈ ನೆಲದಲ್ಲಿ ಹರಿಯಬಿಟ್ಟರೋ ಅದೇ ಕಾರ್ಯವನ್ನು ಭಾರತದ ಎಡಪಂಥೀಯರು ಇಂದು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಭಾರತವನ್ನು ದೇಶವಾಗಿ ಪರಿಗಣಿಸದ ಅವರನ್ನು ಭಾರತದ ಎಡಪಂಥೀಯ ಎಂದು ಕರೆಯುವುದೇ ಬಹು ದೊಡ್ದ ಪ್ರಮಾದ. ಅವರ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಹಲವು ಚಳವಳಿಗಳನ್ನು ಹೂಡಿ, ಹೊಡೆದು, ಬಡಿದು; ಜಾತಿ-ಜಾತಿಗಳ ನಡುವೆ ಕಲಹ ತಂದಿಕ್ಕಿ; ಹಲವು ಪಕ್ಷಗಳನ್ನು ಕಟ್ಟಿ, ಒಡೆದು; ಜನರ ಮನಸ್ಸನ್ನು ಭ್ರಮಾಧೀನವನ್ನಾಗಿಸಿ ಹಲ ಕಾಲ ದೇಶವನ್ನು ದುರ್ದೆಶೆಗೆ ತಳ್ಳಿ; ಈಗ ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗಿರುವಾಗ, ಅದೇ ಅಭಿವೃದ್ಧಿಯ ವಿಚಾರವನ್ನು ಬಳಸಿಕೊಂಡು ದೇಶವನ್ನು ಉತ್ತರ-ದಕ್ಷಿಣವಾಗಿ ಒಡೆಯುವ ಮಟ್ಟಕ್ಕೆ ಮುಟ್ಟಿಸಿದೆ.