ಪುಟಗಳು

ಮುಸ್ಲಿಮ್ ಲೀಗ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮುಸ್ಲಿಮ್ ಲೀಗ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಡಿಸೆಂಬರ್ 8, 2016

ಯಾರು ಮಹಾತ್ಮ? ಭಾಗ-೩೦

ಯಾರು ಮಹಾತ್ಮ?
ಭಾಗ-೩೦


              ತಾವು ಎರಡನೇ ಮಹಾಯುದ್ಧದಲ್ಲಿ ನೋಡಿದ್ದುದಕ್ಕಿಂತಲೂ ಎಷ್ಟೋ ಪಟ್ಟು ಭೀಕರತೆ ವಿಭಜನೆ ಸಂದರ್ಭದಲ್ಲಿ ನಡೆಯಿತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳು. ಮತಾಂಧತೆಯ ಬರ್ಬರತೆಯನ್ನು ಪ್ರತ್ಯಕ್ಷವಾಗಿ ಕಂಡ ತನ್ನ ಪ್ರತಿನಿಧಿಗಳ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ "ಭಾರತದಲ್ಲಿ ಮಳೆಯ ನೀರಿನಂತೆ ರಕ್ತದ ಕೋಡಿಯೇ ಹರಿಯುತ್ತಿದೆ" ಎಂದು ದಾಖಲಿಸಿತು. ಪಾಕಿಸ್ತಾನದಿಂದ ಇರುವೆ ಸಾಲಿನಂತೆ ಬರುತ್ತಿತ್ತು ನಿರಾಶ್ರಿತರ ದಂಡು. ಇಂತಹ ಒಂದು ನಿರಾಶ್ರಿತರ ಸಮೂಹದಲ್ಲಿ ಎಂಟು ಲಕ್ಷ ಜನರಿದ್ದರು! ಇದು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಜನಸಂಖ್ಯಾ ವಿನಿಮಯ. ಬೆಳಗಿನಿಂದ ಸಂಜೆಯವರೆಗೆ ಪರಿಶೋಧನೆ ನಡೆಸಿ ನಿರಾಶ್ರಿತರ ಸಾಲಿನ ಗಾತ್ರ, ಅದರ ಪ್ರಗತಿಯ ವಿವರಗಳನ್ನು ಗಂಟೆಗೊಮ್ಮೆ ನೀಡಲು ವಾಯುಸೇನೆಯ ವಿಮಾನಗಳು ನಿಯೋಜನೆಗೊಂಡಿದ್ದವು. ವಿಮಾನ ವೀಕ್ಷಣೆ ಸಮಯದಲ್ಲಿ ಇರುವೆ ಸಾಲುಗಳಂತೆ ಬರುವ ಜನ ಒಂದು ಕಡೆಯಾದರೆ ಹೊತ್ತಿ ಉರಿಯುತ್ತಿರುವ ಹಳ್ಳಿಗಳು ಇನ್ನೊಂದೆಡೆ ಗೋಚರಿಸುತ್ತಿದ್ದವು. ಗಂಟೆಗೆ ಇನ್ನೂರು ಕಿಮೀ ವೇಗದಲ್ಲಿ ಹದಿನೈದು ನಿಮಿಷ ಹೋದರೂ ನಿರಾಶ್ರಿತರ ಸಾಲು ಕೊನೆಯಾಗಲಿಲ್ಲ ಎಂದು ಓರ್ವ ಪೈಲಟ್ ಉಲ್ಲೇಖಿಸಿದ್ದಾನೆ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)

            ನಿಶ್ಯಕ್ತರಾದ ತಾಯಿ, ಪತ್ನಿ, ಮಕ್ಕಳು, ವೃದ್ಧರನ್ನು ತಲೆಯ ಮೇಲೆ ಹೆಗಲ ಮೇಲೆ ಹೊತ್ತು ಪುರುಷರು ಸಾಗುತ್ತಿದ್ದರು. ಕಣ್ಣು, ಕೈ ಕಾಲು ಕಳೆದುಕೊಂಡವರ ಸಂಖ್ಯೆಯೇ ದಿಗಿಲು ಹುಟ್ಟುವಷ್ಟಿತ್ತು. ಗರ್ಭಿಣಿ ಸ್ತ್ರೀಯರು ಗಂಡಂದಿರ ಆಸರೆ ಪಡೆದಿದ್ದರು. ಮಾರ್ಗ ಮಧ್ಯೆಯೇ ಅನೇಕ ಹೆರಿಗೆಯೂ ಆಗುತ್ತಿತ್ತು. ಬಾಣಂತನವಿಲ್ಲದೆ ಆಶ್ರಯದ ಆಶೆಯಿಂದ ಆ ಪರಿವಾರಗಳು ನಿರಂತರವಾಗಿ ಮುಂದುವರಿಯುತ್ತಲೇ ಇದ್ದವು. ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಬಿಸಿಲ ಝಳಕ್ಕೆ ಸತ್ತವರೆಷ್ಟೋ? ಔಷಧ, ಶುಶ್ರೂಷೆಯಿಲ್ಲದೆ ಸತ್ತ ರೋಗಿಗಳೆಷ್ಟೋ? ರೋಗ ಬಂದು ಸತ್ತವರೆಷ್ಟೋ? ಮತಾಂಧ ಪುಂಡರಿಗೆ ಬಲಿಯಾದವರೆಷ್ಟೋ? ಮಲಿನವಾದ-ಹರಿದ ಅಂಗಿ, ಧೋತಿ, ಸೀರೆ, ಹರಿದ ಚಪ್ಪಲಿಗಳು, ಹಲವರಲ್ಲಿ ಅದೂ ಇಲ್ಲ, ಆಹಾರ ಸಿಗುವ ಸಂಭವವೂ ಇಲ್ಲ...ಎಂತಹಾ ದುರವಸ್ಥೆ! ಅವರಲ್ಲಿದ್ದುದು ಕೆಲವೇ ಕೆಲವು ಸಾಮಾನುಗಳು ಜೊತೆಗೇ ಶಿವನದ್ದೋ, ಗುರುನಾನಕರದ್ದೋ ಒಂದು ಪಟ ಅಷ್ಟೇ! ವಿಚಿತ್ರವೆಂದರೆ ಮನುಷ್ಯರ ಜೊತೆ ಸಾಕು ಪ್ರಾಣಿಗಳೂ ತಮ್ಮ ಒಡೆಯರ ದುಃಖದಲ್ಲಿ ಸಹಭಾಗಿಗಳಾಗಿದ್ದವು. ಕೆಲ ನಿರಾಶ್ರಿತ ರೈತರು ತಮ್ಮ ಮನೆ-ಕೃಷಿ ಸಾಮಗ್ರಿಗಳನ್ನು ತಮ್ಮ ಎತ್ತುಗಳು, ಕೋಣಗಳ ಮೇಲೆ ಹೇರಿದ್ದರು. ಅದು ಹಿಂದಿರುಗಿ ಬರಲಾಗದ ಪ್ರಯಾಣ! ಬದುಕಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಪ್ರಯಾಣ! ನಡುನಡುವೆ ಕಾಡುವ ಮತಾಂಧರ ದಾಳಿಗಳನ್ನೂ, ಹಸಿವು-ನೀರಡಿಕೆ, ಕಾಲರಾಗಳನ್ನು ಲೆಕ್ಕಿಸದ ಪ್ರಯಾಣ! ಅದು "ಹಸಿವು-ದುಃಖ-ಅನ್ಯಾಯ-ಅಸುರಕ್ಷತೆ-ಅಭಯ-ಹಾದಿಗಳ ಅಂತ್ಯವಿಲ್ಲದ" ಪ್ರಯಾಣ! ಅವರಿಗಿದ್ದ ಅಂತಿಮ ಆಶಾಕಿರಣ ಒಂದೇ...ಅದು ಭಾರತ! ಹಿಂದೂಸ್ಥಾನ! ಅಬ್ಬಾ ಅದೆಷ್ಟು ಜನರಿಗೆ ಈ ನಾಡು ಮಾತೃ ಪ್ರೇಮದ ಸಿಂಚನವನ್ನುಣಿಸಿದೆ? ಅದೆಷ್ಟು ಜನರಿಗೆ ಈ ನಾಡು ಭಯಮುಕ್ತವಾಗಿ, ಸುರಕ್ಷತೆಯ ತಾಣವಾಗಿ, ಅಂತಿಮ ಆಶಾವಾದವಾಗಿ ಕಂಡಿದೆ? ಜಗತ್ತಿಗೆ ಧರ್ಮವನ್ನೂ, ಮೌಲ್ಯವನ್ನೂ, ನೀತಿಯನ್ನೂ, ಜೀವನಪದ್ದತಿಯನ್ನೂ ಬೋಧಿಸಿದ ಹಿಂದೂಧರ್ಮವಲ್ಲದೆ ಇನ್ನಾರು ಜಗತ್ತಿನ ಅಸಹಾಯಕರಿಗೆ ರಕ್ಷಣೆ ಕೊಟ್ಟಾರು?

         ದಿನದಲ್ಲಿ ಕೆಲಬಾರಿ ವಿಮಾನದಿಂದ ಆಹಾರ ಪೊಟ್ಟಣಗಳನ್ನು ಕೆಳಗುದುರಿಸಲಾಗುತ್ತಿತ್ತು. ಅದೇ ಆ ನಿರಾಶ್ರಿತರಿಗಿದ್ದ ಆಶಾವಾದ. ಅದೂ ಸಿಕ್ಕಿದವರಿಗೆ ಸಿಕ್ಕಿತು. ಅಸಹಾಯಕರಿಗೆ ಅದೂ ದುರ್ಲಭವೇ. ನಾಯಿಯೊಂದು ಚಪಾತಿಯೊಂದನ್ನು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಸಿದುಕೊಳ್ಳಲು ಕೆಲ ನಿರಾಶ್ರಿತರು ನಾಯಿಯ ಬೆನ್ನಟ್ಟಿ ಹೋಗುತ್ತಿದ್ದರು. ಅದನ್ನು ನೋಡಿದ ಕ್ಯಾಪ್ಟನ್ ಅಟ್ಕಿನ್'ನ ಕರುಳು ಚುರುಕ್ಕೆಂದಿತು. ಕೆಲವರು ಮಕ್ಕಳನ್ನು ಕರೆದೊಯ್ಯಲಾಗದೇ ವಿಧಿಯ ಕೈಗೆ ಒಪ್ಪಿಸಿ ಮುಂದೆ ಸಾಗುತ್ತಿದ್ದ ದೃಶ್ಯವಂತೂ ಕರುಣಾಜನಕವಾಗಿತ್ತು. ರಸ್ತೆಯ ಬದಿಯಲ್ಲೊಂದು ಮಗು ತನ್ನ ಪುಟಾಣಿ ಮೃದು ಹಸ್ತಗಳಿಂದ ತಾಯಿಯ ಕೈಯನ್ನು ಹಿಡಿದೆಳೆಯುತ್ತಿತ್ತು. ಅದಕ್ಕೇನು ಗೊತ್ತು ತನ್ನ ತಾಯಿ ತನ್ನನ್ನು ಬಿಗಿದಪ್ಪಿಕೊಳ್ಳಲಾಗದ ಲೋಕಕ್ಕೆ ಹೋಗಿದ್ದಾಳೆಂದು! ಲಾಹೋರದಿಂದ ಅಮೃತಸರದವರೆಗಿನ ನಲವತ್ತೈದು ಮೈಲುಗಳ ಹಾದಿ ಅಕ್ಷರಶಃ ಸ್ಮಶಾನವೇ ಆಗಿತ್ತು. ಅಡಿಗಡಿಗೂ ಶವ ಸಿಗುತ್ತಿತ್ತು. ಹಲವರನ್ನು ಕೊಲ್ಲಲಾಗಿತ್ತು. ಕೆಲವರು ಅನ್ನಾಹಾರವಿಲ್ಲದೆ ಸಾವನ್ನಪ್ಪಿದ್ದರು, ಕೆಲವರು ಕಾಲರಾದಿಂದ, ಕೆಲವರು ಅಶಕ್ತತೆಯಿಂದ, ಇನ್ನು ಕೆಲವರು ಆಘಾತದಿಂದ!

         ಇವೆಲ್ಲದರ ನಡುವೆ ಇನ್ನೊಂದು ಆಘಾತ ಕಾದಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರುಗಳಲ್ಲಿ ಬಿರು ಬಿಸಿಲಿನಿಂದ ಬಳಲಿದ್ದ ನಿರಾಶ್ರಿತರ ಪ್ರಾರ್ಥನೆ ಎಂಬಂತೆ ಮಳೆ ಪ್ರಾರಂಭವಾಯಿತು. ಅದು ಎಂತಹ ಮಳೆ? ಕಳೆದೈವತ್ತು ವರ್ಷಗಳಲ್ಲಿ ದೇಶ ಕಂಡು ಕೇಳರಿಯದ ಧಾರಾಕಾರ ಮಳೆ. ಪಂಜಾಬದ ಐದೂ ನದಿಗಳೂ ಉಕ್ಕೇರಿ ಹರಿದವು ನಿರಾಶ್ರಿತರ ಕಣ್ಣೀರ ಧಾರೆಯೊಡನೆ! ರಾತ್ರೋರಾತ್ರಿಯ ಈ ಜಲಪ್ರಳಯದಲ್ಲಿ ನದಿಯ ಇಕ್ಕೆಲಗಳಲ್ಲಿ ಮಲಗಿ ನಿದ್ರಿಸುತ್ತಿದ್ದ ನಿರಾಶ್ರಿತರನ್ನು ನೀರು ತನ್ನ ತೆಕ್ಕೆಗೆ ಎಳೆದುಕೊಂಡಿತು. ಮನುಷ್ಯ, ಪ್ರಾಣಿ, ಸಜೀವ, ನಿರ್ಜೀವ ಎನ್ನದೇ ಎಲ್ಲವನ್ನೂ ನದಿಗಳು ತಮ್ಮೊಡಲಿಗೆ ಎಳೆದುಕೊಂಡವು. ಪ್ರವಾಹ ಕಡಿಮೆಯಾದ ಬಳಿಕ ನೋಡಿದರೆ ಹಲವಾರು ಶವಗಳು ನದಿಗಳ ಪಕ್ಕದ ಮರಗಳಲ್ಲಿ ನೇತಾಡುತ್ತಿದ್ದವು! ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಪೂರ್ವ ಪಂಜಾಬಿನಿಂದ ಹಿಂದೂ ನಿರಾಶ್ರಿತರ ದಂಡು ಪ್ರಯಾಣ ಆರಂಭಿಸಿತು. ಪ್ರತೀ ದಂಡಿನಲ್ಲಿ ನಲವತ್ತು ಸಾವಿರದಷ್ಟು ಜನವಿದ್ದರು. ಸೆಪ್ಟೆಂಬರ್ 18 - ಅಕ್ಟೋಬರ್ 20ರ ನಡುವೆ ಇಂತಹ 24 ದಂಡುಗಳು - ಸುಮಾರು 8,49,000 ಜನರು ಭಾರತದ ಗಡಿ ದಾಟಿದರು. ಲಿಯಾಲ್ ಪುರದಿಂದ ಎರಡು ಲಕ್ಷ ಜನರು ಪ್ರಯಾಣ ಆರಂಭಿಸಿದರು. ನಿರಾಶ್ರಿತರ ಸಾಲಿನ ಉದ್ದ ಐವತ್ತೇಳು ಮೈಲಿಗಳಷ್ಟಿತ್ತು. ಅವರಲ್ಲಿ ಹಲವರು ಮತಾಂಧರಿಗೆ ಬಲಿಯಾದರು. ಕೆಲವರು ಕಾಲರಾ ಹಾಗೂ ಉಳಿದವರು ಪ್ರವಾಹಕ್ಕೆ ಬಲಿಯಾದರು. ಮತಾಂಧರ ಪೈಶಾಚಿಕತೆ ಎಷ್ಟಿತ್ತೆಂದರೆ ನಿರಾಶ್ರಿತರ ಆಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಗಳಿಂದ ಗುಂಡುಗಳನ್ನು ಹೊರತೆಗೆಯಲಾಗುತ್ತಿತ್ತು. ಸೆಪ್ಟೆಂಬರ್ ಹದಿನಾಲ್ಕರಂದು ದೆಹಲಿಯಲ್ಲಿ ಸುರಿದ ಮಳೆಗೆ ನಿರಾಶ್ರಿತ ಶಿಬಿರಗಳಲ್ಲಿದ್ದವರು ಮೊಣಕಾಲೆತ್ತರದ ನೀರಿನಲ್ಲಿ ರಾತ್ರಿ ಕಳೆಯಬೇಕಾಯಿತು. (ಮಹಾತ್ಮ ಗಾಂದಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್).

           ಲಾಹೋರ್-ಕರಾಚಿ ಹೆದ್ದಾರಿಯಲ್ಲಿ ಉಕ್ರಾನಾ ಎನ್ನುವ ಮುಸ್ಲಿಮ್ ಬಾಹುಳ್ಯದ ನಗರವೊಂದಿತ್ತು. ಭಾರತೀಯ ನೌಕಾದಳದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹಿಂದೂ ತರುಣನೊಬ್ಬ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ. ಸ್ವಾತಂತ್ರ್ಯ ಬಂದಾಗ ಉಳಿದ ಕಡೆಯಲ್ಲಿದ್ದಂತೆ ಆ ನಗರದಲ್ಲೂ ಮುಸಲ್ಮಾನರು ಉನ್ಮತ್ತರಂತೆ ಕುಣಿಯತೊಡಗಿದ್ದರು. "ಹಸ್ ಕೇ ಲಿಯಾ ಪಾಕಿಸ್ತಾನ್, ಲಡ್ ಕೇ ಲೇಂಗೇ ಹಿಂದೂಸ್ಥಾನ್" ಎನ್ನುವ ಘೋಷಣೆ ಪ್ರತಿಧ್ವನಿಸುತ್ತಿತ್ತು. ಆತ ತನ್ನ ಚಿಕ್ಕಪ್ಪ-ಚಿಕ್ಕಮ್ಮರೊಂದಿಗೆ ಬಸ್ಸಿನಲ್ಲಿ ಭಾರತದತ್ತ ಹೊರಟೇ ಬಿಟ್ಟ. ಆತನ ತಂದೆ ಜ್ಯೋತಿಷಿ ಹೇಳಿದ ಹೊರಡುವ ಶುಭಗಳಿಗೆಗಾಗಿ ಕಾಯುತ್ತಾ ಹಿಂದೆಯೇ ಉಳಿದ. ಕ್ಷಣ ಹೊತ್ತಲ್ಲೇ ಪಾಕ್ ಸೈನಿಕರು ಬಸ್ಸನ್ನು ತಡೆದು ಸರ್ವಸ್ವವನ್ನೂ ಲೂಟಿ ಮಾಡಿ ಬಸ್ಸನ್ನು ಹೋಗಗೊಟ್ಟರು. ಹೀಗೆ ಆತ ಉಟ್ಟಬಟ್ಟೆಯಲ್ಲಿ ಭಾರತದ ನೆಲ ಪ್ರವೇಶಿಸಿದಾಗ ತನ್ನ ತಂದೆ ರೈಲು ಸ್ಫೋಟದಲ್ಲಿ ಗಾಯಗೊಂಡ ಸುದ್ದಿ ತಿಳಿಯಿತು. ಗಾಯಾಳುಗಳಿಂದ ಕಿಕ್ಕಿರಿದು ತುಂಬಿದ್ದ ಆ ವಾರ್ಡು ಆತನಿಗೆ ಪರಿಸ್ಥಿತಿಯ ಭಯಾನಕ ಚಿತ್ರಣವನ್ನು ಕಟ್ಟಿಕೊಟ್ಟಿತ್ತು! ಮೈ ತುಂಬಾ ಬ್ಯಾಂಡ್-ಏಡ್ ಹಾಕಿಕೊಂಡ ಆತನ ತಂದೆ ಕಂಪಿಸುತ್ತಿದ್ದ. ಆಸ್ಪತ್ರೆಯಿಂದ ಹೊರಬಂದಾಗಲೂ ಆತನಿಗೆ ತನ್ನ ಅಂಗಹೀನ ತಂದೆಯ ಚಿತ್ರವೂ, ಅಸಂಖ್ಯಾತ ಹಿಂದೂಗಳ ಅಸಹಾಯಕ ಚಿತ್ರವೇ ಕಾಣುತ್ತಿತ್ತು, ಕಾಡುತ್ತಿತ್ತು! ಅವನಾಗಲೇ "ಸೇಡು ತೀರಿಸದೇ ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ. ಅವನು ಮದನ್ ಲಾಲ್ ಪಹವಾ! (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)













ಬುಧವಾರ, ಡಿಸೆಂಬರ್ 7, 2016

ಯಾರು ಮಹಾತ್ಮ? ಭಾಗ-೨೯

ಯಾರು ಮಹಾತ್ಮ?
ಭಾಗ-೨೯


               ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು ಒಂದು ಹಾಲು ಕರೆವ ದನ ಅಷ್ಟೇ. ಆ ಹಳ್ಳಿಯಲ್ಲಿ 600 ಮುಸ್ಲಿಮರಿದ್ದರೆ. ಹಿಂದೂಗಳ ಸಂಖ್ಯೆ ಕೇವಲ ಐವತ್ತು! ವಿಭಜನೆಯ ಹೊತ್ತಲ್ಲಿ ಒಂದು ದಿನ ಇವರ ಮನೆಯನ್ನು ಸುತ್ತುವರಿದ ಗುಂಪು "ಪಾಕಿಸ್ತಾನ ತ್ಯಜಿಸಿ, ಇಲ್ಲವಾದರೆ ಕೊಲ್ಲುತ್ತೇವೆ" ಎಂದು ಘೋಷಣೆ ಕೂಗಿತು. ಆ ಕುಟುಂಬ ತಕ್ಷಣ ಗ್ರಾಮದ ಸಿಖ್ ಪ್ರಮುಖನ ಮನೆಗೆ ಓಡಿತು. ಆ ಗುಂಪು ಇವರ ಮನೆಗೆ ಬೆಂಕಿ ಹಚ್ಚಿ ಅಟ್ಟಿಸಿಕೊಂಡು ಬಂದಿತು. ನೋಡಿದರೆ ಅಲ್ಲಿದ್ದ ಎಲ್ಲಾ ಸಿಖ್ ಮನೆಗಳು ಆಗಲೇ ಹೊತ್ತಿ ಉರಿಯುತ್ತಿತ್ತು. ಒಬ್ಬ ಸಿಖ್ಖನ ಗಡ್ಡಕ್ಕೆ ಬೆಂಕಿ ಕೊಟ್ಟರು. ಅಂತಹ ಸ್ಥಿತಿಯಲ್ಲೂ ಆತ ಇಟ್ಟಿಗೆಯೊಂದನ್ನು ಬೆಂಕಿ ಹಚ್ಚಿದವನ ತಲೆಗೆ ಗುರಿಯಿಟ್ಟು ಹೊಡೆದು ಕೊಂದು ಗುರುನಾನಕರ ನಾಮಸ್ಮರಣೆ ಮಾಡುತ್ತಾ ಕುಸಿದು ಬಿದ್ದು ಸತ್ತ. ಕುಲದೀಪ್ ಆ ಮನೆಯ ಛಾವಣಿ ಏರಿದ. ಅಲ್ಲಿ ಅಂಗಳದಲ್ಲಿ ಸಿಖ್ ಪುರುಷರನ್ನು ತಲವಾರಿನಿಂದ ಕತ್ತರಿಸುತ್ತಿದ್ದರು. ಅದನ್ನು ಮನೆಯ ಛಾವಣಿ ಮೇಲೆ ನಿಂತು ನೋಡುತ್ತಿದ್ದ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಕ್ಕಿಂತ ಸಾಯುವುದು ಲೇಸು ಎಂದರಿತ ಆ ಮಹಿಳೆಯರ ಗುಂಪು ದೊಡ್ಡ ಬೆಂಕಿಯೊಂದನ್ನು ಹತ್ತಿಸಿ ಮಕ್ಕಳೊಂದಿಗೆ ಅಗ್ನಿಪ್ರವೇಶ ಮಾಡಿದರು. ಆ ಗುಂಪು ಇಬ್ಬರು ಹುಡುಗಿಯರನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕುಲದೀಪ್ ನೋಡಿದ. ಕತ್ತಲೆಯಾಗುತ್ತಿದ್ದಂತೆ ಆತ ಮೆಲ್ಲನೆ ಛಾವಣಿಯಿಂದಿಳಿದು ಮರವೊಂದನ್ನೇರಿ ಆರು ತಾಸು ಕುಳಿತ. ಎಲ್ಲರೂ ಹೋದ ಮೇಲೆ ತಡರಾತ್ರಿ ಮರದಿಂದ ಇಳಿದ ಆತ ಮನೆಯೊಳಗೆ ಬಿದ್ದಿದ್ದ ರಕ್ತಸಿಕ್ತ ಚಾಕುವಿನಿಂದ ತಲೆಗೂದಲನ್ನು ಮುಸ್ಲಿಮರಂತೆ ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್).

               ವಿಭಜನೆಯ ಸಂದರ್ಭದಲ್ಲಿ ಲೆಖ್ಖವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಹಿಂದೂಗಳ ಮನೆಗಳು, ನಿರಾಶ್ರಿತರ ಶಿಬಿರಗಳು, ರೈಲುಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹೊತ್ತೊಯ್ಯಲಾಯಿತು. ಹಿಂದೂ ಮಹಿಳೆಯರ ಸ್ತನಗಳನ್ನು ಕತ್ತರಿಸಿ ಅವರನ್ನು ಕೊಲೆಗೈಯ್ಯಲು ಕರೆದೊಯ್ಯುತ್ತಿದ್ದ ಮತಾಂಧ ಗುಂಪೊಂದನ್ನು ಪಂಜಾಬ್ ಗಡಿ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಯೊಬ್ಬ ಕಣ್ಣಾರೆಕಮ್ಡು ಬೆಚ್ಚಿಬಿದ್ದ. ಮಹಿಳೆಯರನ್ನು ಅಪಹರಿಸಿದ ಬಳಿಕ ಅಪಹರಣಕಾರನ ಮನೆಯಲ್ಲಿ ಉಳಿಸಿಕೊಳ್ಳಲು ಅವರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿತ್ತು. ಗೋಮಾಂಸ ತಿನ್ನಿಸಿ, ಕುರಾನ್ ಹೇಳಿಸಿ ಕೇಕೆ ಹಾಕಿ ಕುಣಿಯಲಾಗುತ್ತಿತ್ತು. ಅವಳ ಹೆಸರು ಬದಲಾಯಿಸಿ ಮುಸ್ಲಿಮ್ ಹೆಸರು ಇಡಲಾಗುತ್ತಿತ್ತು. ಮತ್ತೆ ಸಾಲು ಸಾಲು ಅತ್ಯಾಚಾರ! ಕೆಲವರನ್ನು ಹರಾಜು ಹಾಕಲಾಗುತ್ತಿತ್ತು. ಮಿಯಾನ್ ವಾಲಿಯ ವಕೀಲನ ಮಗಳು ಹದಿನಾರು ವರ್ಷದ ನಂದಲಾಲಳನ್ನು ಅಪಹರಿಸಿ ಆ ಗ್ರಾಮದ ಮುಸ್ಲಿಮ್ ಪ್ರಮುಖನ ಮನೆಗೆ ಒಯ್ಯಲಾಯಿತು. ಆಕೆಗೆ ಹೊಡೆದು ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಕುರಾನ್ ಸಾಲುಗಳನ್ನು ಹೇಳಿ ಪುನರಾವರ್ತಿಸುವಂತೆ ಒತ್ತಾಯಿಸಲಾಯಿತು. ಆಕೆಯ ಹೆಸರು ಬದಲಾಯಿಸಿ "ಅಲ್ಲಾ ರಕಿಯಾ"(ದೇವರಿಂದ ರಕ್ಷಿಸಲ್ಪಟ್ತವಳು) ಎಂಬ ಹೆಸರಿಡಲಾಯಿತು. ಆಕೆಯನ್ನು ಹರಾಜು ಹಾಕಿದಾಗ ಮರಕೆಲಸದವನೊಬ್ಬ ಆಕೆಯನ್ನು ಖರೀದಿಸಿದ. ಪೂರ್ವ ಮತ್ತು ಪಶ್ಚಿಮ ಪಂಜಾಬಿನ ಹಳ್ಳಿಹಳ್ಳಿಗಳನ್ನೇ ದೋಚಲಾಯಿತು. ದೋಚಿದ ವಸ್ತುಗಳನ್ನು ಮುಸ್ಲಿಮರೊಳಗೆ ಹಂಚಲಾಗುತ್ತಿತ್ತು. ಶಿಶುಗಳನ್ನು ಅಪ್ಪಿಕೊಂಡಿದ್ದಂತೆಯೇ ಪುರುಷ ಸ್ತ್ರೀಯರನ್ನು ಹತ್ಯೆಗೈಯಲಾಯಿತು. ಹಳ್ಳಿಗಳೆಲ್ಲಾ ಹೊತ್ತಿ ಉರಿಯುತ್ತಿದ್ದವು. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್ ; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ).

          ಇದೇ ರೀತಿಯ ಹತ್ಯೆ, ಅತ್ಯಾಚಾರಗಳು ಪೂರ್ವ ಬಂಗಾಲದಲ್ಲೂ ನಡೆದವು. ಝೇಲಂನಲ್ಲಿ ಪುರುಷರನ್ನು ಬೇರ್ಪಡಿಸಿ ಗರಗಸದಿಂದ ಕೊಯ್ಯಲಾಯಿತು. ಒಂದು ವರದಿಯ ಪ್ರಕಾರ ಗುಜರಾತ್ ಪ್ರದೇಶದಲ್ಲೇ ಅಪಹರಣಕ್ಕೊಳಗಾದ ಹುಡುಗಿಯರ ಸಂಖ್ಯೆ 4000. ಅವರನ್ನು ಹರಾಜು ಹಾಕಲಾಯಿತು. ವರದಿಯಾಗದಿದ್ದುದೆಷ್ಟೋ? ಭಾರತದ ಸೀಮೆಯೊಳಗಿದ್ದ ಗುಜರಾತಿನಲ್ಲೇ ಈ ಪರಿಸ್ಥಿತಿಯಾದರೆ ಪಾಕಿಸ್ತಾನಕ್ಕೆ ಸೇರಿದ್ದ ಪ್ರಾಂತ್ಯಗಳಲ್ಲಿ ಹಿಂದೂಗಳ ಬದುಕು ಅದೆಷ್ಟು ಶೋಚನೀಯವಾಗಿರಲಿಕ್ಕಿಲ್ಲ? (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್ ಬಾಲಿ)

         ಪಶ್ಚಿಮ ಪಾಕಿಸ್ತಾನದ ಹಳ್ಳಿಯೊಂದರಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಮತಾಂಧ ಗುಂಪುಗಳ ವಿರುದ್ಧ ಸರ್ದಾರ್ ಪ್ರತಾಪ ಸಿಂಗ್ ಬಳಗ ತಿರುಗಿ ಬಿತ್ತು. ಮೂರು ದಿನಗಳವರೆಗೆ ಹೋರಾಡಿದ ಅವರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದ್ದಂತೆ ಶರಣಾಗಬೇಕಾಯಿತು. ಕೂಡಲೆ ಅವರಿಗೆ ಮತಾಂತರವಾಗುವಂತೆ ಸೂಚಿಸಲಾಯಿತು. ಬೇಡಿಕೊಂಡಾಗ ಮರುದಿನದವರೆಗೆ ಅವಕಾಶ ನೀಡಲಾಯಿತು. ಮರುದಿನ ಬೆಳ್ಳಂಬೆಳಗ್ಗೆ ಆ ಗುಂಪು ಇವರನ್ನು ಮತಾಂತರಿಸಲು ಕತ್ತರಿ, ಚಾಕುಗಳೊಂದಿಗೆ ಸಿದ್ಧವಾಗಿ ನಿಂತಿತ್ತು. ಯಾವ ಮಹಿಳೆಯನ್ನು ಯಾರು ಪಡೆಯಬೇಕು ಎನ್ನುವುದರ ಬಗ್ಗೆ ಆ ಮತಾಂಧರು ತಮ್ಮೊಳಗೇ ಜೋರಾಗಿ ಚರ್ಚಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ಮಹಿಳೆಯರು ಮತಾಂತರವಾಗುವ ಮುನ್ನ ತಾವು ಕೊನೆಯ ಬಾರಿಗೆ ಪ್ರಾರ್ಥನೆ ಸಲ್ಲಿಸುವುದಾಗಿಯೂ, ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಬಾವಿಯ ನೀರು ಕುಡಿಯಲು ಅನುಮತಿ ನೀಡಬೇಕಂದು ಪ್ರಾರ್ಥಿಸಿದರು. ಅದಕ್ಕೆ ಒಪ್ಪಿದ ಗುಂಪು ಕೆಲವೊಂದು ಜನರ ಕಾವಲಿನಲ್ಲಿ ಆ 74 ಮಹಿಳೆಯರನ್ನು ಬಾವಿಯ ಬಳಿ ಕಳುಹಿಸಿಕೊಟ್ಟಿತು. ಸ್ನಾನ ಮಾಡಿ ಪ್ರಾರ್ಥನೆ ಆರಂಭಿಸಿದ ಆ ಮಹಿಳೆಯರು ಜೋರಾಗಿ "ಧೈರ್ಯವಿದ್ದರೆ ಮುಂದೆ ಬನ್ನಿ, ನೀವು ನಮ್ಮ ಮೈ ಮುಟ್ಟಲೂ ಸಾಧ್ಯವಿಲ್ಲ" ಎಂದು ಘರ್ಜಿಸುತ್ತಾ ಬಾವಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡರು. ಆ ಬಲಿದಾವನ್ನು ಕಂಡ ಅಂತಹ ಮತಾಂಧ ಪಡೆಯೂ ಬೆಚ್ಚಿಬಿತ್ತು. ಅದು ಮತಾಂತರಗೊಳಿಸಲು ಉದ್ದೇಶಿಸಿದ್ದ ಪುರುಷರನ್ನು ಅಲ್ಲೇ ಬಿಟ್ಟು ಪರಾರಿಯಾಯಿತು. ಗಾಂಧಿಯ ಕಾರ್ಯದರ್ಶಿ ಪ್ಯಾರೇಲಾಲ್ ಈ ಘಟನೆಯನ್ನು ಗಾಂಧಿಗೆ ತಿಳಿಸಿದಾಗ ಆತ "ಅಹಿಂಸಾತ್ಮಕ ಧೈರ್ಯ ಎಂದೂ ವಿಫಲವಾಗುವುದಿಲ್ಲ. ಪರಿಸ್ಥಿತಿ ತೀರಾ ಪ್ರತಿಕೂಲವಾಗಿದ್ದಾಗ ದೇವರೇ ನೆರವಿಗೆ ಬರುತ್ತಾನೆ" ಎಂದು ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ). ಕಚ್ಛೆಹರುಕ ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವಾದುದೇನಲ್ಲ. ನಾಗರಿಕತೆಯ ಲವಲೇಶವೂ ಇಲ್ಲದ ವ್ಯಕ್ತಿಯಾದರೂ ಈ ಘಟನೆಗೆ ಬೆಚ್ಚಿಬಿದ್ದು ಕನಿಷ್ಟ ಸಹಾನುಭೂತಿಯನ್ನಾದರೂ ಪ್ರಕಟಿಸುತ್ತಿದ್ದ. ಆದರೆ ಮಾನವುಳಿಸಿಕೊಳ್ಳಲು ಆ ಹೆಂಗಸರು ಮಾಡಿದ ಬಲಿದಾನವೂ ಅಹಿಂಸೆಯ ದ್ಯೋತಕವಾಗಿ ಕಂಡಿತು. ಸಹಾನುಭೂತಿಯ ಕನಿಷ್ಟ ಒಂದು ಉದ್ಗಾರವೂ ಅವರಿಂದ ಹೊರಬರಲಿಲ್ಲ. ಮುಸ್ಲಿಮರಿಂದ ತೊಂದರೆಗೀಡಾಗುವುದೇ ಅವರ ಅಹಿಂಸೆಯೇ? ಆ ಲೆಖ್ಖದಲ್ಲಿ ಅದೆಷ್ಟು ಅಹಿಂಸಾತ್ಮಕ ಧೈರ್ಯ ವಿಫಲವಾಗಿಲ್ಲ? ಅದೆಷ್ಟು ಮಹಿಳೆಯರ ಅತ್ಯಾಚಾರವಾಗಿಲ್ಲ? ಈ ಅಹಿಂಸಾತ್ಮಕ ಧೈರ್ಯಗಳೆಲ್ಲಾ ವಿಫಲವಾದುದೇಕೆ ಎನ್ನುವ ಪ್ರಶ್ನೆಗೆ ಗಾಂಧಿಯ ಬಳಿ ಉತ್ತರವಿದೆಯೇ? ಈ ಸಂದರ್ಭಗಳಲ್ಲೆಲ್ಲಾ ಗಾಂಧಿ ಹೇಳುವ ದೇವರು ಯಾಕೆ ಕಾಪಾಡಲಿಲ್ಲ? ವಿಭಜನೆಯನ್ನು ತಪ್ಪಿಸುವ ಅವಕಾಶವಿದ್ದಾಗ್ಯೂ ಅದನ್ನು ಮಾಡದೆ ಕೈಕಟ್ಟಿ ಕುಳಿತ ವ್ಯಕ್ತಿ ಸಾಲುಸಾಲು ಅತ್ಯಾಚಾರಗಳು, ಕೊಲೆಗಳು, ಅಪಹರಣ, ದರೋಡೆಗಳಾಗುತ್ತಿದ್ದಾಗ ತನ್ನದೇ ತಥಾಕಥಿತ ಅಹಿಂಸೆಯನ್ನು ವೈಭವೀಕರಿಸುತ್ತಾನೆ ಎಂದಾದರೆ ಅತನಿಗೆ ಅರಳುಮರಳು ಎನ್ನದಿರಲಾದೀತೇ? ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!






ಮಂಗಳವಾರ, ಡಿಸೆಂಬರ್ 6, 2016

ಯಾರು ಮಹಾತ್ಮ? ಭಾಗ-೨೮

ಯಾರು ಮಹಾತ್ಮ?
ಭಾಗ-೨೮

          ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು. ಸ್ಟೇಷನ್ ಮಾಸ್ಟರ್ ಚಾನಿ ಸಿಂಗ್ ಎಂದಿನಂತೆ ಆಗಸ್ಟ್ ಹದಿನೈದರ(1947) ಮಧ್ಯಾಹ್ನ 10 ಡೌನ್ ಎಕ್ಸ್ ಪ್ರೆಸ್ ಬರುತ್ತಿದೆ ಎಂದು ಬಾವುಟ ಹಾರಿಸುತ್ತಾ ಸೂಚನೆ ನೀಡಿದ. ರೈಲು ಬಂತು. ಎಲ್ಲಾ ಬೋಗಿಗಳ ಕಿಟಕಿ ಬಾಗಿಲುಗಳು ತೆರೆದೇ ಇದ್ದವು. ಯಾರೊಬ್ಬರೂ ಇಳಿದು ಬರಲಿಲ್ಲ. ಯಾರೊಬ್ಬರೂ ಕಾಣಲಿಲ್ಲ. ಚಾನಿ ಸಿಂಗ್ ಮೊದಲನೇ ಬೋಗಿ ಹತ್ತಿದವನೇ ಭೂತ ಬಡಿದವನಂತೆ ನಿಂತುಬಿಟ್ಟ. ಚೆಂಡಾಡಿದ್ದ ರುಂಡಗಳು, ಕೊಚ್ಚಿ ಹಾಕಿದ್ದ ಕೈಕಾಲುಗಳು, ಚೆಲ್ಲಾಡಿದ್ದ ಮಾನವ ಶರೀರಗಳು! ಅದರ ನಡುವೆ ಕ್ಷೀಣ ದನಿಯೊಂದು ಕೇಳಿತು. ಎಲ್ಲೋ ಯಾರೋ ಬದುಕಿದ್ದಾರೆ ಎಂದು ತಿಳಿದ ಆತ "ನೀವೀಗ ಅಮೃತಸರದಲ್ಲಿದ್ದೀರಿ. ಇಲ್ಲಿ ನಾವು ಹಿಂದೂಗಳು ಹಾಗೂ ಸಿಖ್ಖರೇ ಇದ್ದೇವೆ. ಪೊಲೀಸರೂ ಇದ್ದಾರೆ. ಭಯಪಡಬೇಡಿ" ಎಂದು ಕೂಗಿದ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಮುಂದುವರಿದು ಹೋದ ಚಾನಿ ಸ್ತಂಭೀಭೂತನಾಗಿ ನಿಂತುಬಿಟ್ಟ. ಆತ ಆ ದೃಶ್ಯವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಮುಂಡದಿಂದ ಬೇರ್ಪಡಿಸಿದ ತನ್ನ ಗಂಡನ ರುಂಡವನ್ನು ಕರಾಗ್ರದಲ್ಲಿ ಹಿಡಿದು ಕಂಪಿಸುತ್ತಿದ್ದಳು. ಕೊಲೆಗೀಡಾದ ತಾಯಂದಿರ ಶವವನ್ನು ಅಪ್ಪಿಕೊಂಡು ಮಕ್ಕಳು ರೋದಿಸುತ್ತಿದ್ದವು. ಶವಗಳ ರಾಶಿಯಿಂದ ಯಾರೋ ಮಗುವೊಂದನ್ನು ಹೊರಗೆಳೆದರು. ಆದರೆ ಸಿಕ್ಕಿದ್ದು ಮುಂಡ ಮಾತ್ರ! ಸ್ಟೇಷನ್ ಮಾಸ್ಟರ್ ನಂಬ್ ಬೋಗಿಯಿಂದ ಬೋಗಿಗೆ ಸಾಗಿದವ ಪ್ರತೀ ಬೋಗಿಯಲ್ಲೂ ಆ ಭೀಷಣತೆ ಕಂಡು ಬವಳಿ ಬೀಳುವಂತಾದ. ಆತ ರೈಲಿನಿಂದ ಹೊರಬಂದವನೇ ಏನೋ ಅನ್ನಿಸಿ ರೈಲಿನತ್ತ ನೋಡುತ್ತಾನೆ - ಕೊನೇ ಬೋಗಿಯ ಮೇಲೆ ಬಿಳಿಯ ಕಾಗದದಲ್ಲಿ "ನೆಹರೂ ಮತ್ತು ಪಟೇಲ್'ಗೆ ಈ ರೈಲು ನಮ್ಮ ಸ್ವಾತಂತ್ರ್ಯದ ಕಾಣಿಕೆ" ಎಂಬ ಒಕ್ಕಣೆಯಿತ್ತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        1947 ಆಗಸ್ಟ್ 11. ಲಾಹೋರಿನಲ್ಲಿದ್ದ ಹಿಂದೂಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಲಾರಂಭಿಸಿದ್ದರು. ಹಿಂದೂಗಳನ್ನು ತುಂಬಿಕೊಂಡು ರಾವಲ್ಪಿಂಡಿಯಿಂದ ಬರುತ್ತಿದ್ದ ಸಿಂಧ್ ಎಕ್ಸ್ ಪ್ರೆಸ್ ರೈಲನ್ನು ಅದರ ಮುಸ್ಲಿಮ್ ಚಾಲಕ ಉದ್ದೇಶಪೂರ್ವಕವಾಗಿ ಬಾದಾಮಿ ಬಾಗ್ ಮತ್ತು ಲಾಹೋರದ ನಿಲ್ದಾಣಗಳಲ್ಲಿ ನಿಲ್ಲಿಸಿದ. ಕೈಗೆ ಸಿಕ್ಕಿದ್ದನ್ನು ಹಿಡಿದು ಉನ್ಮತ್ತರಂತೆ ಅನೇಕ ಮುಸ್ಲಿಮರ ಗುಂಪುಗಳು ರೈಲನ್ನು ನಾಲ್ದೆಸೆಗಳಂದ ಸುತ್ತುವರಿದವು. ರೈಲಿನಲ್ಲಿದ್ದ ಹಿಂದೂಗಳೆಲ್ಲರನ್ನೂ ಕೊಚ್ಚಿ ಹಾಕಲಾಯಿತು. ಅವರು ಜೊತೆಗೆ ಒಯ್ಯುತ್ತಿದ್ದ ಸ್ವತ್ತುಗಳೆಲ್ಲ ಆ ಲೂಟಿಕೋರರ ಕೈ ಸೇರಿತು. ಬೆಹ್ರಾ, ಪಿಂಡ್-ದಡಾನ್, ಮಿಯಾನಿಯ ಹಿಂದೂಗಳು ತಮ್ಮ ಸ್ವತ್ತುಗಳೊಂದಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆಯೊಂದಿಗೆ ಅಮೃತಸರಕ್ಕೆ ತೆರಳುತ್ತಿದ್ದರು. ಕಾಮೋಕೆ ರೈಲು ನಿಲ್ದಾಣ ದಾಟಿದ ಕೂಡಲೆ ರೈಲನ್ನು ನಿಲ್ಲಿಸಲಾಯಿತು. ಜೊತೆಗಿದ್ದ ಸೈನಿಕರು ಕ್ಷಣಾರ್ಧದಲ್ಲಿ ಅದೃಶ್ಯರಾದರು. ಎಲ್ಲರನ್ನೂ ಕೊಚ್ಚಿ ಕೊಲ್ಲಲಾಯಿತು. ಸಂಪತ್ತನ್ನೆಲ್ಲಾ ದೋಚಲಾಯಿತು. ರೈಲು ಅಮೃತಸರ ತಲುಪಿದಾಗ ಶವಗಳಿಂದ ತುಂಬಿತ್ತು. ರೈಲ್ವೇ ಬೋಗಿಗಳಲ್ಲಿ ಅರ್ಧ ಇಂಚಿನಷ್ಟು ರಕ್ತ ಚೆಲ್ಲಾಡಿಹೋಗಿತ್ತು. 1947ರ ಆಗಸ್ಟ್ 14 ಭಾರತದ ಬೇರೆ ಭಾಗಗಳಿಗೆ ಸಂತಸದ ದಿನವಾಗಿದ್ದರೆ ಲಾಹೋರ್ ಮತ್ತು ಪಶ್ಚಿಮ ಪಂಜಾಬಿನ ಹಿಂದೂಗಳಿಗೆ ಸರ್ವನಾಶದ ದಿನವಾಗಿತ್ತು. (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್. ಬಾಲಿ; ದಿ ಪಾರ್ಟಿಷನ್ ಆಫ್ ಇಂಡಿಯಾ - ಜಿ. ಬಿ. ಸುಬ್ಬರಾವ್).

          ಕತ್ತಲೆ ಗವಿಯಂತಿದ್ದ ಲಾಹೋರ್ ರೈಲ್ವೇ ನಿಲ್ದಾಣದಲ್ಲಿ ಬಾಂಬೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣಿಸಲು ಕೆಲ ಆಂಗ್ಲರು ಬರುತ್ತಿದ್ದರು. ಅಲ್ಲಿ ಕೆಲ ಸಿಬ್ಬಂದಿ ಪ್ಲಾಟ್ ಫಾರ್ಮನ್ನು ನೀರು ಹಾಯಿಸಿ ಸ್ವಚ್ಛಗೊಳಿಸುತ್ತಿದ್ದರು. ಕೆಲವೇ ಗಂಟೆಗಳ ಹಿಂದೆ ಭಾರತಕ್ಕೆ ತೆರಳುತ್ತಿದ್ದ ಹಿಂದೂಗಳನ್ನು ಅಟ್ಟಾಡಿಸಿ ಕೊಲ್ಲಲಾಗಿತ್ತು. ಕೆಲವೇ ಗಂಟೆಗಳ ಹಿಂದೆ ಲಾಹೋರ್ ಪೊಲೀಸ್ ಜವಾಬ್ದಾರಿಯನ್ನು ಹಸ್ತಾಂತರಿಸಿ ರೈಲು ಹತ್ತಲು ಬರುತ್ತಿದ್ದ ಬಿಲ್ ರಿಚ್'ನಿಗೆ ಕಾದಿದ್ದು ಇಂತಹ ಸ್ವಾಗತ! ಆತನ ಎದುರೇ ಪೋರ್ಟರುಗಳು ಲಗೇಜ್ ಗಾಡಿಗಳಲ್ಲಿ ಶವಗಳನ್ನು ಹೇರಿಕೊಂಡು ಹೋಗಿ ವ್ಯಾನಿಗೆ ತುಂಬುತ್ತಿದ್ದರು. ಆತ ಶವವೊಂದನ್ನು ದಾಟಿಕೊಂಡೇ ಮೆಟ್ಟಿಲು ಹತ್ತಬೇಕಾಯಿತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        ಗೂರ್ಖಾ ಪಡೆಯೊಂದಿಗೆ ಕ್ಯಾಪ್ಟನ್ ರಾಬರ್ಟ್ ಅಟ್ಕಿನ್ಸನ್ ಲಾಹೋರ್ ನಗರಕ್ಕೆ ಬಂದಾಗ ಮತಾಂಧತೆಯ ಆಟಾಟೋಪಕ್ಕೆ ಹೆದರಿ ಕಂಗಾಲಾಗಿದ್ದ ಹಿಂದೂ ಜನತೆ ಎದೆಗೆ ಮಕ್ಕಳನ್ನು ಅವುಚಿಕೊಂಡು, ಕಂಕುಳಲ್ಲಿ ತಮ್ಮ ಸೀಮಿತ ವಸ್ತುಗಳನ್ನು ಹಿಡಿದುಕೊಂಡು ಸುತ್ತುವರಿಯಿತು. ತಮಗೆ ರಕ್ಷಣೆ ನೀಡುವಂತೆ ಅವರು ಅಟ್ಕಿನ್ಸನಿಗೆ ಅಂಗಲಾಚಿದರು. ಹಳೇ ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಕ್ಕೂ ಮಿಗಿಲಾದ ಸಂಖ್ಯೆಯ ಹಿಂದೂಗಳು ಸುತ್ತ ಬೆಂಕಿ ಜ್ವಾಲೆ, ಅನ್ನ-ನೀರುಗಳಿಲ್ಲದೆ ತಮ್ಮ ಮೊಹಲ್ಲಾದ ಒಳಗೆ ಕುಳಿತುಕೊಳ್ಳುವ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದರು. ಸುತ್ತುವರಿದಿದ್ದ ಬೆಂಕಿಯ ಕೆನ್ನಾಲಿಗೆಗಿಂತಲೂ ಹೆಚ್ಚಾಗಿ ಹೊರಗಡೆ ಸುಳಿದಾಡುತ್ತಿದ್ದ ಮುಸ್ಲಿಮ್ ಗುಂಪುಗಳೇ ಘಾತಕವಾಗಿದ್ದವು. ಯಾರಾದರೂ ಹೊರಬಂದಾಕ್ಷಣ ಎರಗಲು ಆ ಗುಂಪುಗಳು ಸಿದ್ಧವಾಗಿದ್ದವು. ಷಾ ಅಲಿಮಿ ಗೇಟ್ ಪಕ್ಕದಲ್ಲಿದ್ದ ಗುರುದ್ವಾರಕ್ಕೆ ಮತಾಂಧ ಮುಸ್ಲಿಮರ ಗುಂಪು ಬಂದು ಬೆಂಕಿ ಇಟ್ಟಿತು. ಒಳಗಿದ್ದ ನೂರಾರು ಸಿಖ್ಖರು ಜೀವಂತ ಸುಟ್ಟು ಹೋದರು. ಅವರ ಆಕ್ರಂದನ ಕೇಳಿ ಹೊರಗಿದ್ದ ಗುಂಪು ಕೇಕೆ ಹಾಕಿ ಕುಣಿಯುತ್ತಿತ್ತು.(ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್)

                ಲಾಹೋರಿನ ಕಾಲುವೆಗಳು ರಕ್ತದಿಂದ ಕೆಂಪಾಗಿದ್ದವು. ಹಿಂದೂಗಳ ವಾಸದ ಓಣಿಗಳಲ್ಲಿ ಮುಗಿಲು ಮುಟ್ಟುತ್ತಿದ್ದ ಬೆಂಕಿಯ ಕೆನ್ನಾಲಿಗೆಗಳನ್ನು ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಮುಸ್ಲಿಂ ಲೀಗ್ ನಾಯಕರ ಮಾತುಗಳಿಂದ ಉತ್ತೇಜಿತಗೊಂಡಿದ್ದ ಮತಾಂಧರು "ಪಾಕಿಸ್ತಾನ ನಮ್ಮದೂ ಎಂದಾದರೆ ಹಿಂದೂಗಳ ಜಮೀನು, ಮನೆ, ಅಂಗಡಿ ಎಲ್ಲವೂ ನಮ್ಮದೇ" ಎಂದು ಭಾವಿಸಿದರು. ಪಾಕಿಸ್ತಾನದಲ್ಲಿ ಕಾಫಿರರಿಗೆ ಜಾಗವಿಲ್ಲ ಎಂದು ಜಿಹಾದ್ ಘೋಷಿಸಿಯೇ ಬಿಟ್ಟಿದ್ದರು. ಲೈಲಾಪುರದ ಜವಳಿ ಕಾರ್ಖಾನೆಯೊಂದರಲ್ಲಿ ಮುಸ್ಲಿಮ್ ಕೆಲಸಗಾರರು ತಮ್ಮ ಜೊತೆಯಲ್ಲಿದ್ದ ಹಿಂದೂ ಕೆಲಸಗಾರರನ್ನು ಕೊಚ್ಚಿ ಕೊಂದರು. ಅಲ್ಲಿನ ನೀರಾವರಿ ಕಾಲುವೆಯೊಂದು ಹಿಂದೂಗಳ ಶವ ಹಾಗೂ ರಕ್ತದಿಂದ ಕೆಂಪಾಗಿ ತುಂಬಿದ್ದನ್ನು ಕಣ್ಣಾರೆ ಕಂಡರೂ ನಂಬದಾದ ಕ್ಯಾಪ್ಟನ್ ಅಟ್ಕಿನ್ ಸನ್. ಶೇಖ್ ಪುರದ ಶಾಂತಿ ಸಮಿತಿ ಸದಸ್ಯನೂ, ಮುನ್ಸಿಪಲ್ ಕಮೀಷನರೂ ಆಗಿದ್ದ ಸ್ವಾಮಿ ನಂದ ಸಿಂಗನ ತಲೆಯನ್ನು ಮುಸ್ಲಿಂ ಲೀಗ್ ಸದಸ್ಯನೊಬ್ಬ ತನ್ನ ಖಡ್ಗದಿಂದ ಕತ್ತರಿಸಿ ಮುಸ್ಲಿಂ ಲೀಗ್ ಧ್ವಜಕ್ಕೆ ಅಂತಿಸಿಕೊಂಡು "ಮುಸ್ಲಿಂ ಲೀಗ್ ಜಿಂದಾಬಾದ್" ಎಂದು ಘೋಷಣೆ ಕೂಗಿದ. ಅದೇ ಸ್ಥಿತಿಯಲ್ಲಿ ಬೀದಿಬೀದಿಗಳಲ್ಲಿ ಮೆರವಣಿಗೆಯನ್ನೂ ಗೈಯಲಾಯಿತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).





ಸೋಮವಾರ, ಡಿಸೆಂಬರ್ 5, 2016

ಯಾರು ಮಹಾತ್ಮ? ಭಾಗ-೨೭

ಯಾರು ಮಹಾತ್ಮ?
ಭಾಗ-೨೭


            ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ "ಸಾಮೂಹಿಕ ಹತ್ಯೆ, ಭೀಕರ ಅತ್ಯಾಚಾರ, ಅಪಹರಣ, ಮತಾಂತರ, ಲೂಟಿ-ದರೋಡೆ, ಬಲಾತ್ಕಾರಗಳ" ಭಯಾನಕ ಊಹಿಸಲಾಸಾಧ್ಯವಾದ ಘಟನೆಗಳ ಕಪ್ಪು ಚುಕ್ಕೆಗಳಿವೆ. ವಾಸ್ತವದಲ್ಲಿ ಆ ಕಪ್ಪು ಚುಕ್ಕೆಗಳು ತಮ್ಮ ಸಂಖ್ಯಾ ಬಲದಿಂದ ಸ್ವಾತಂತ್ರ್ಯವೆಂಬ ಬಿಳಿ ಹಾಳೆಯನ್ನು ಮುಚ್ಚಿ ಬಿಟ್ಟಿವೆ. ಆದರೆ ಪ್ರಸಿದ್ಧಿಯ ಹುಚ್ಚು, ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂದಿತು ಎಂಬ ಮುಗಿಲುಮುಟ್ಟುವ ಘೋಷಣೆ, ಅಧಿಕಾರ ದಾಹಗಳ ಮಾಯೆ ಈ ಕಪ್ಪು ಬಣ್ಣವನ್ನು ಮರೆಮಾಚಿ ಬಿಳಿಯ ಬಣ್ಣವನ್ನು ಕಾಣಿಸುವ ಪ್ರಯತ್ನ ನಡೆಸಿದೆ. ಆದರೆ ಅವಿದ್ಯೆ ಎನ್ನುವುದು ಎಷ್ಟು ಕಾಲ ಉಳಿದೀತು? ಜ್ಞಾನವನ್ನು ಪಡೆದ ಆತ್ಮದಲ್ಲಿ ಮಾಯೆಯ ಛಾಯೆಯೂ ಉಳಿಯದಂತೆ ಈ ಮಾಯೆ ನಿಧಾನವಾಗಿ ಕರಗಿ ಇತಿಹಾಸದ ನೈಜತ್ವ ಅನವರತ ಅನಾವರಣವಾಗುತ್ತಲೇ ಇದೆ. ವಿಭಜನೆಯ ಭೂತಕ್ಕೆ ಮತಾಂಧತೆಯ ಲೇಪ ಸಿಕ್ಕಿದಾಗ ಕಾರುವ ರಕ್ತದಂತೆ ಭಾರತಾದ್ಯಂತ ನೆತ್ತರ ಕಾಲುವೆ ಹರಿದದ್ದು ಈಗ ನಿಧಾನವಾಗಿ ಕಣ್ಣ ಪೊರೆಯನ್ನೊಗೆದು ಕಾಣುತ್ತಿದೆ. ಹೌದು 1947ರ ಆಗಸ್ಟ್ 15ರಂದು ದೇಶದ ಒಂದು ಗುಂಪು ರಾಷ್ಟ್ರಧ್ವಜ ಹಾರಿಸುತ್ತಾ ಆನಂದ ಭಾಷ್ಫ ಸುರಿಸುತ್ತಿದ್ದರೆ ಇನ್ನೊಂದು ಬೃಹತ್ ಗುಂಪು ತಮ್ಮ ಪತ್ನಿ-ಪುತ್ರ-ಪುತ್ರಿ-ಸಂಬಂಧಿಕರನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿತ್ತು. ಒಂದೇ ದೇಶದಲ್ಲಿ, ಏಕ ಉದ್ದೇಶವಿದ್ದ, ಏಕ ಭಾವವಿದ್ದ, ಏಕ ರೀತಿಯ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರಲ್ಲಿ ಉದ್ದೇಶ ಈಡೇರಿಕೆಯ ಸಂದರ್ಭದಲ್ಲಿ ಕಂಡುಬಂದ ಈ ವೈರುಧ್ಯ ಬೇರಾವ ದೇಶದಲ್ಲೂ ಕಂಡುಬರಲಿಕ್ಕಿಲ್ಲ, ಬರಲೂ ಬಾರದು!


            ಇದಕ್ಕೂ ಗಾಂಧಿಗೂ ಏನು ಸಂಬಂಧ ಅನ್ನಬಹುದು. ವಿಭಜನೆಯನ್ನು ಒಪ್ಪಲಾರೆ, ಮಾಡಿದರೆ ಎನ್ನ ದೇಹದ ಮೇಲೆ ಎಂದು ಸೋಗು ಹಾಕಿ, ಕೊನೆಗೆ ವಿಭಜನೆಗೆ ಒಪ್ಪಿ, ಜನರನ್ನು ಒಪ್ಪಿಸಲು ಯತ್ನಿಸಿ; ಜನ, ವಿಭಜನೆಯ ವಿರುದ್ಧ ಹೋರಾಡಿ, ನಾವಿದ್ದೇವೆ ನಿಮ್ಮ ಬೆನ್ನ ಹಿಂದೆ ಎಂದಾಗ ಮುಗುಮ್ಮಾಗಿ ಉಳಿದು, ಮತಾಂಧ ಮುಸ್ಲಿಮರನ್ನು ಇನ್ನೇನು ಹಿಂದೂಗಳು ಶಿಕ್ಷಿಸುತ್ತಾರೆ ಎಂದಾಗ ಉಪವಾಸ ಕೂತು; ವಿಭಜನೆಗೆ ಪರೋಕ್ಷ ಕಾರಣನೂ ಆದ ವ್ಯಕ್ತಿ ಈ ರಕ್ತದೋಕುಳಿಗೆ ಕಾರಣನೂ ಆಗುತ್ತಾನಲ್ಲ. ಒಬ್ಬ ನಾಯಕ ಎಚ್ಚರತಪ್ಪಿ ನಡೆದರೆ ಏನಾಗಬಹುದು ಎನ್ನುವುದಕ್ಕೆ ನಿದರ್ಶನ ಗಾಂಧಿ. ಆದರೆ ಇಂತಹ ರಕ್ತಪಾತಕ್ಕೆ ಗಾಂಧಿ ಯಾವ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ. ಹಿಂದೂಗಳಿಗೆ ಸಾಂತ್ವನವನ್ನೂ ಹೇಳಲಿಲ್ಲ. ಬದಲಾಗಿ ಯಾರು ಹಿಂದೂಗಳ ಅತ್ಯಾಚಾರ-ಕೊಲೆ-ಮತಾಂತರಕ್ಕೆ ಕಾರಣರಾದರೋ ಅವರ ಸಲುವಾಗಿ ಉಪವಾಸ ಕೂತರು. ಅಂತಹ ವ್ಯಕ್ತಿಯ ಆಚರಣೆಯೇ "ಜಾತ್ಯಾತೀತತೆ" ಎಂಬ ಪದದೊಳಗೆ ನುಸುಳಿ ಆ ಪದವೇ ಅಪಭೃಂಶಗೊಂಡಿತು. ಅವರ ಅನುಯಾಯಿಗಳು ಇದನ್ನೇ ಗಾಂಧಿವಾದ ಎಂದು ಹೆಸರಿಟ್ಟು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ಮಾಡುತ್ತಲೇ ಇದ್ದಾರೆ!


ವಿಭಜನೆಯ ದುರಂತ ಕಥೆಗಳು:
                   ಭಾರತ ವಿಭಜನೆಯೆಂದರೆ ಕೇವಲ ಎರಡು ಭೂಭಾಗಳ ನಡುವೆ ಬೇಲಿ ಕಟ್ಟಿಕೊಂಡುದುದಲ್ಲ. ಅಲ್ಲಿನ ಹಿಂದೂಗಳು ಇಲ್ಲಿಗೂ, ಇಲ್ಲಿನ ಮುಸ್ಲಿಮರೂ ಅಲ್ಲಿಗೂ ಎನ್ನುವ ಪಲ್ಲಟನವೂ ಜೊತೆಗಿತ್ತು. ಅದರ ಜೊತೆಗೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಸಾವಿರಾರು ಮಹಿಳೆಯರ ಅಪಹರಣ-ಮತಾಂತರ-ಭೀಕರ ಅತ್ಯಾಚಾರದ ಭೀಷಣತೆಯೂ ಸೇರಿಕೊಂಡಿತು. ಮೊದಲನೆಯದ್ದು ಭಾರತೀಯರಿಗೆ ಬ್ರಿಟಿಷರ ಕೊಡುಗೆ! ಎರಡನೆಯದ್ದು ಬ್ರಿಟಿಷ್-ಮುಸ್ಲಿಂ ಲೀಗ್-ಕಾಂಗ್ರೆಸ್ ಈ ಮೂವರ ಕೊಡುಗೆ!! ಹಾಗೂ ಮೂರನೆಯದ್ದು ಮತಾಂಧ ಮುಸ್ಲಿಮರ ಹಾಗೂ ಕಾಂಗ್ರೆಸ್ಸಿನ ಕೊಡುಗೆ!!! ಈ ವಿಭಜನೆಯಿಂದಾಗಿ ತಲೆತಲಾಂತರದಿಂದ ನೆರೆಹೊರೆಯಲ್ಲಿ ಬಾಳುತ್ತಿದ್ದ ಕುಟುಂಬಗಳೆರಡು ಒಂದೇ ದಿನದಲ್ಲಿ ಪರಸ್ಪರ ಬದ್ಧದ್ವೇಷಿಗಳಾಗಿಬಿಟ್ಟವು. ಲಾಹೋರ್, ಕರಾಚಿ, ಪೇಷಾವರ್, ರಾವಲ್ಪಿಂಡಿ, ದೆಹಲಿ, ಅಮೃತಸರ, ಬಿಹಾರ, ಬಂಗಾಳಗಳ ವ್ಯಾಪಾರ ಕೇಂದ್ರಗಳು, ಹಳ್ಳಿಗಳು, ಕೃಷಿ ಜಮೀನುಗಳು, ಅಂಗಡಿ-ಮುಂಗಟ್ಟು, ಗುಡಿಸಲು-ಮಹಲುಗಳ ಗೋಡೆಗಳಲ್ಲಿ ಹಸಿರು ಬಣ್ಣ ಬಳಿಯಲ್ಪಟ್ಟಿತು-ನೆಲದಲ್ಲಿ ರಕ್ತದ ಕೋಡಿಯೇ ಹರಿಯಿತು! ಇದು ಲೂಟಿ-ದರೋಡೆಯೂ ಅಲ್ಲ, ಆಂತರಿಕ ಸಮರವೂ ಅಲ್ಲ; ಜಿಹಾದ್ (ಧರ್ಮ ಯುದ್ಧ) ಎನ್ನುವ ಕೂಗು ಮುಗಿಲು ಮುಟ್ಟಿತು. ಆ ಗದಗುಟ್ಟಿಸುವ ಅಟ್ಟಹಾಸದ ಮಧ್ಯೆ ಮುಗಿಲು ಮುಟ್ಟುವ ಹಿಂದೂಗಳ ಆಕ್ರಂದನವೂ ಕೇಳದಾಯಿತು. ರಸ್ತೆಗಳ ಇಕ್ಕೆಲಗಳಲ್ಲಿ ಹಿಂದೂಗಳ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗರ್ಭ ಸೀಳಿ ಹೊರಬರುತ್ತಿರುವ ಮಗುವಿನ ರುಂಡವನ್ನು ಕತ್ತರಿಸಿದ ಸ್ಥಿತಿಯಲ್ಲಿ ರುಂಡ ಹೀನ ತಾಯಿಯ ಶವವೂ ದ್ವೇಷದ ವಿಕಾರತೆಯನ್ನು ಸಾರಿ ಹೇಳುತ್ತಿತ್ತು. ಆಗ ತಾನೆ ಬಿರಿದ ಕುಸುಮಗಳ ಪಕಳೆಗಳು ಛಿದ್ರವಾಗಿ ಬಿದ್ದಿದ್ದವು. ಮೊಗ್ಗನ್ನು ಅರ್ಧದಲ್ಲೇ ಚಿವುಟಲಾಗಿತ್ತು. ಅರಳಿದ ಹೂಗಳ ಬಿಳಿಚಿದ ಮುಖದ ಶವಗಳು ಭೀಷಣತೆಯ ಸಾಕ್ಷಿಗಳಾಗಿದ್ದವು.

          ರಾವಲ್ಪಿಂಡಿ ನಂತರ ಲಾಹೋರ್ ನಗರದಲ್ಲಿ ಹಿಂದೂಗಳ ಭಯಾನಕ ಸಾಮೂಹಿಕ ಹತ್ಯೆ ನಡೆಯಿತು. ಹತ್ಯೆಗೀಡಾದ ಸಾವಿರಾರು ಜನರ ಶವಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅನಾರ್ಕಲಿ ಮಾರುಕಟ್ಟೆಯಂತಹ ವ್ಯವಹಾರ ಸ್ಥಳಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂಗಳು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಪಾರಾಗಲು ಯತ್ನಿಸಿದ ಹಿಂದೂಗಳು ಸೇನೆ ಮತ್ತು ಪೊಲೀಸರ ಗುಂಡಿಗೆ ಬಲಿಯಾದರು. ಸಾವಿರಾರು ಹಿಂದೂಗಳನ್ನು ಸಜೀವ ದಹಿಸಲಾಯಿತು. ಅಳಿದುಳಿದ ಹಿಂದೂಗಳು ಅನ್ನ-ನೀರುಗಳಿಲ್ಲದೆ ಬಳಲಿ ಬಸವಳಿದು ಜೀವವುಳಿಸಿಕೊಳ್ಳಲು ಭಾರತದತ್ತ ಓಡಿ ಬರುತ್ತಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್)


              ಅದು ಹಿಂದೆಂದೂ ಕಾಣದ ಕ್ರೌರ್ಯದ ಪರಮಾವಧಿ. ಮಧ್ಯಯುಗದಲ್ಲಿ ಅಪ್ಪಳಿಸಿದ ಪ್ಲೇಗಿನಂತೆ ಆರು ವಾರಗಳ ಕಾಲ ಇಡೀ ಉತ್ತರ ಭಾರತಾದ್ಯಂತ ಕೊಲೆಯ ಸನ್ನಿ ಆವರಿಸಿಕೊಂಡಿತ್ತು. ಆ ಮರಣ ಶಾಸನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಯಾವ ಕೋನವೂ ಈ ವೈರಸ್ಸಿನಿಂದ ಮುಕ್ತವಾಗಿರಲಿಲ್ಲ. ಎರಡನೆ ಮಹಾಯುದ್ಧದಲ್ಲಿ ನಾಲ್ಕು ವರ್ಷಗಳಲ್ಲಿ ಅಮೇರಿಕನ್ನರು ಕಳೆದುಕೊಂಡ ಪ್ರಮಾಣದ ಅರ್ಧದಷ್ಟು ಜೀವಗಳನ್ನು ಭಾರತ ಕೇವಲ ಕೆಲವೇ ವಾರಗಳಲ್ಲಿ ಕಳೆದುಕೊಂಡಿತು. ಲಾಹೋರಿನ ಹಳೆಯ ನಗರದಲ್ಲಿ ಹಿಂದೂ ವಾಸದ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ತೀವ್ರ ಬೇಸಗೆಯ ದಿನಗಳಲ್ಲಿ ನೀರಿಲ್ಲದೆ ಹಿಂದೂಗಳು ಹಿಂಡಿ ಹಿಪ್ಪೆಯಾಗಿ ಹೋಗಿದ್ದರು. ನೀರು ಕೇಳಲು ಹೊರ ಬಂದ ಮಹಿಳೆಯರು ಮಕ್ಕಳನ್ನು ಮುಸ್ಲಿಂ ಗುಂಪುಗಳು ವಧಿಸಿದವು. ನಗರದ ಹೆಚ್ಚಿನ ಪ್ರದೇಶಗಳಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲ ಚುಂಬಿಸ ಹೊರಟಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)


         ಭಾರತದಲ್ಲಿ ಸಹಿಷ್ಣುತೆಯಿಂದ ಬದುಕಿ ಈಗ ಪಾಕಿಸ್ತಾನಕ್ಕೆ ಸ್ಥಾನಾಂತರಗೊಂಡಿದ್ದ ಮುಸ್ಲಿಮರನ್ನೂ ಈ ಮತಾಂಧ ಮುಸ್ಲಿಮರು ಬಿಡಲಿಲ್ಲ. ಅವರು ಬದುಕಿಕೊಳ್ಳಲು ತಮ್ಮ ಮನೆಗಳ ಬಾಗಿಲ ಮೇಲೆ ಹಸಿರು ಬಣ್ಣ ಹಚ್ಚಬೇಕಾಯಿತು. ಲಾರೆನ್ಸ್ ರಸ್ತೆಯಲ್ಲಿದ್ದ ಪಾರ್ಸಿ ಜನಾಂಗದ ವ್ಯಕ್ತಿಯೊಬ್ಬ ಮತಾಂಧ ಮುಸ್ಲಿಮರಿಂದ ಬಚಾವಾಗಲು ತನ್ನ ಮನೆಯ ಬಾಗಿಲ ಮೇಲೆ " ಮುಸ್ಲಿಮರು, ಹಿಂದೂಗಳು, ಸಿಖ್ಖರೆಲ್ಲಾ ಸಹೋದರರು. ಆದರೆ ಓ ನನ್ನ ಸೋದರರೇ, ಈ ಮನೆ ಪಾರ್ಸಿಯವನೊಬ್ಬನಿಗೆ ಸೇರಿದ್ದು" ಎಂಬ ಸಂದೇಶ ಬರೆದಿದ್ದ. ಅದು ವಿಭಜನೆಯ ನೆಪದಲ್ಲಿ ಕಳೆದು ಹೋದುದನ್ನು ನೆನಪಿಸುವಂತಿತ್ತು! ಶೇಖ್ ಪುರದ ಬ್ಯಾಂಕಿನಲ್ಲಿ ಸಾಲ ಸಂಬಂಧ ವಶ ಪಡಿಸಿಕೊಂಡ ಧಾನ್ಯಗಳನ್ನು ಉಗ್ರಾಣದಲ್ಲಿ ಪೇರಿಸಿಡಲಾಗಿತ್ತು. ಆ ಪ್ರದೇಶದ ಎಲ್ಲಾ ಹಿಂದೂಗಳು ಅದೇ ಉಗ್ರಾಣದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿಗೆ ಬಂದ ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ಅಸಹಾಯಕ ಹಿಂದೂಗಳ ಮೇಲೆ ಗುಂಡಿನ ಮಳೆಗರೆದರು. ಉಗ್ರಾಣ ಸಮೇತ ಹಿಂದೂಗಳೆಲ್ಲಾ ಸುಟ್ಟು ಹೋದರು.(ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)





ಗುರುವಾರ, ನವೆಂಬರ್ 10, 2016

ಯಾರು ಮಹಾತ್ಮ? ಭಾಗ- ೨೩

ಯಾರು ಮಹಾತ್ಮ?
ಭಾಗ- ೨೩


          ವಿಭಜನೆಯ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸುವ ಹೊತ್ತಲ್ಲೇ ವಿಭಜನೆ ವಿರುದ್ಧ ಹೋರಾಟ ಆರಂಭಿಸುವಂತೆ ಆಗ್ರಹಿಸುವಂತಹ ಅನೇಕ ಪತ್ರಗಳು ಗಾಂಧಿಗೆ ಬರತೊಡಗಿದವು. ಬ್ರಿಟಿಷರು ತಾವು ಭಾರತವನ್ನು ವಶಕ್ಕೆ ತೆಗೆದುಕೊಳ್ಳುವಾಗ ಸೃಷ್ಟಿಸಿದ್ದ ಸ್ಥಿತಿಯನ್ನೇ ಈಗ ಮರುಸೃಷ್ಟಿಸಿದ್ದಾರೆ. ಒಂದು ಪಕ್ಷದವರು ಇನ್ನೊಂದು ಪಕ್ಷದವರೊಂದಿಗೆ ಜಗಳ ನಡೆಸುವಂತೆ ಮಾಡಿ ತಾವು ತೆರಳುತ್ತಿದ್ದಾರೆ. ನೀವು ವಿಭಜನೆ ವಿರುದ್ಧ ಹೋರಾಟವನ್ನು ಪ್ರಾರಂಭಿಸುವುದಾದಲ್ಲಿ ನಾನು ಗೌರವಯುತವಾಗಿ ಒಂದು ಲಕ್ಷ ಶಿಸ್ತುಬದ್ಧ ಕಾರ್ಯಕರ್ತರನ್ನು ಒದಗಿಸಬಲ್ಲೆ. ಅವರು ಅಹಿಂಸೆಯ ದೀಕ್ಷೆ ತೊಟ್ಟವರಲ್ಲದಿದ್ದರೂ ನಿಮ್ಮ ಸೂಚನೆಗಳನ್ನು ತಮ್ಮದೇ ನೀತಿ ಸಂಹಿತೆಯಂತೆ ವಿಶ್ವಾಸದಿಂದ ಪಾಲಿಸುತ್ತಾರೆ ಎನ್ನುವುದು ಒಂದು ಪತ್ರದ ಒಕ್ಕಣೆಯಾಗಿತ್ತು. ಆದರೆ ಇಅದಕ್ಕೆ ಗಾಂಧಿ "ವಿಭಜನೆಯಂದ ನನ್ನಷ್ಟು ದುಃಖಕ್ಕೀಡಾಗುವವರು ಬೇರೆ ಯಾರೂ ಇಲ್ಲ. ಆದರೆ ಇದರ ವಿರುದ್ಧ ಹೋರಾಟ ನಡೆಸುವ ಯಾವುದೇ ಇರಾದೆ ನನಗಿಲ್ಲ. ಕಾಂಗ್ರೆಸ್ ಯಾವಾಗ ವಿಭಜನೆಯನ್ನು ತನಗಿಷ್ಟವಿಲ್ಲದಿದ್ದರೂ ಕಾಂಗ್ರೆಸ್ ಅಂಗೀಕರಿಸಿತೋ ಅಂತಹ ಕಾಂಗ್ರೆಸ್ ವಿರುದ್ಧವೂ ನಾನ್ಯಾವುದೇ ಪ್ರತಿಭಟನೆ ನಡೆಸುವುದಿಲ್ಲ. ಅಂತಹ ಹೆಜ್ಜೆಯೂ ಕಲ್ಪನಾತೀತ. ಬ್ರಿಟಿಷರು ವಿಭಜನೆಯನ್ನು ಪ್ರೋತ್ಸಾಹಿಸಿಲ್ಲ. ಹಾಗಾಗಿ ಅವರ ವಿರುದ್ಧ ನಿಮ್ಮ ದಾಳಿಯನ್ನೂ ನಾನು ಒಪ್ಪುವುದಿಲ್ಲ" ಎಂದು ಪ್ರತಿಕ್ರಿಯಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಹಾಗಾದರೆ ಗಾಂಧಿಯ ಪ್ರಕಾರ ದೇಶ ವಿಭಜನೆಗೆ ಜವಾಬ್ದಾರರು ಯಾರು? ಇದು ನುಣುಚಿಕೊಳ್ಳುವ ಕುತಂತ್ರ ಬುದ್ಧಿಯಲ್ಲವೇ? ಅತ್ತ ಕಾಂಗ್ರೆಸ್ ಕಾರ್ಯಕಾರಿಣಿಯ ತೀರ್ಮಾನದ ವಿರುದ್ಧವೂ ಹೋರಾಟ ಮಾಡುವುದಿಲ್ಲ. ಇತ್ತ ಬ್ರಿಟಿಷರ ವಿರುದ್ಧವೂ! ಕಾಂಗ್ರೆಸ್ ವಿರುದ್ಧ ಹೋರಾಟ ಕಲ್ಪನಾತೀತ. ಲಕ್ಷಾಂತರ ಜನರ ಬೆಂಬಲವಿದ್ದು, ಅಸಂಖ್ಯ ಪತ್ರಗಳು ಹೋರಾಟ ಕೈಗೊಳ್ಳುವಂತೆ ಗೋಗರೆದಾಗಲೂ ಗಾಂಧಿಗೆ ವಿಭಜನೆ ವಿರುದ್ಧ ಹೋರಾಡುವ ಮನಸ್ಸಿಲ್ಲವೆಂದಾದರೆ ಗಾಂಧಿಗೆ ವಿಭಜನೆಗೆ ಪೂರ್ಣಸಹಮತವಿತ್ತು ಎಂದೇ ಅರ್ಥವಲ್ಲವೇ? ಜನ ಪಾಕಿಸ್ತಾನ ರಚನೆ ವಿರುದ್ಧ ಹೋರಾಡಬೇಕೆಂದು ನೇರವಾಗಿ ಹೇಳಿದ್ದರು. ಗಮನಿಸಿ, ಬಹುಷಃ ಇದೇ ಕಾರಣಕ್ಕಾಗಿ ಗಾಂಧಿ ಮುಸ್ಲಿಮ್ ಲೀಗ್ ಹೆಸರನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಉಲ್ಲೇಖಿಸಲಿಲ್ಲ.

        "ಕಾರ್ಯಕಾರಿ ಸಮಿತಿಯ ದೇಶ ವಿಭಜನೆಯ ನಿರ್ಣಯವನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಕೆಡುಕಿನ ಸಲಹೆ ಬರಬಹುದು. ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ಇದನ್ನು ಮಾಡುವ ಅಧಿಕಾರವಿದೆ. ಆದರೆ ಅವರ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯು ನಿರ್ಣಯ ಕೈಗೊಂಡಿದೆ ಮತ್ತು ಆ ನಿರ್ಣಯದ ಪರವಾಗಿ ನಿಲ್ಲುವದು ತಮ್ಮ ಕರ್ತವ್ಯ ಎಂಬುದನ್ನು ಸದಸ್ಯರು ತಿಳಿದುಕೊಳ್ಳಬೇಕು" "ನಿರ್ಣಯಕ್ಕೆ ಸಂಬಂಧಿಸಿ ಕಾರ್ಯಕಾರಿ ಸಮಿತಿ ಹೊರತುಪಡಿಸಿ ಇನ್ನೆರಡು ಪಕ್ಷಗಳಿವೆ - ಬ್ರಿಟಿಷ್ ಸರಕಾರ ಮತ್ತು ಮುಸ್ಲಿಮ್ ಲೀಗ್. ಆ ಹಂತದಲ್ಲಿ ಎಐಸಿಸಿ ನಿರ್ಣಯವನ್ನು ವಿರೋಧಿಸಿದರೆ ಜಗತ್ತು ಏನೆಂದು ತಿಳಿದುಕೊಳ್ಳುತ್ತದೆ? ಎಲ್ಲಾ ಪಕ್ಷಗಳು ವಿಭಜನೆಯ ಯೋಜನೆಯನ್ನು ಒಪ್ಪಿಕೊಂಡಿವೆ. ಕಾಂಗ್ರೆಸ್ ತನ್ನ ಮಾತಿನಿಂದ ಹಿಂದೆ ಸರಿಯುವುದು ಸೂಕ್ತವಾಗಲಾರದು."(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಮುಸ್ಲಿಮ್ ಲೀಗ್ ಹಾಗೂ ಬ್ರಿಟಿಷರು ಒಪ್ಪಿಕೊಂಡ ಮಾತ್ರಕ್ಕೆ ಕಾಂಗ್ರೆಸ್ ಹಾಗೂ ದೇಶದ ಜನತೆ ವಿಭಜನೆಯನ್ನು ಒಪ್ಪಿಕೊಳ್ಳಬೇಕೇ? ಜಗತ್ತಿನಲ್ಲಿ ಕಾಂಗ್ರೆಸ್ ಬಗ್ಗೆ ಕೆಟ್ಟ ಅಭಿಪ್ರಾಯ ಬರುತ್ತದೆ ಎನ್ನುವ ಉದ್ದೇಶಕ್ಕಾಗಿ ಭಾರತವನ್ನು ಹಾಳುಗೆಡವಬೇಕೇ? ಗಾಂಧಿಯನ್ನು ಮಹಾತ್ಮ ಎಂದು ಪೂಜಿಸುವ ಯಾರೂ ಗಾಂಧಿಯ ಇಂತಹ ಕುಟಿಲ ನೀತಿಗಳನ್ನು ತಿಳಿದಿರುವುದಿಲ್ಲ. ತಿಳಿದಿದ್ದರೂ ಹೇಳುವುದಿಲ್ಲ. ಸಾರ್ವಜನಿಕವಾಗಿ ಒಪ್ಪುವುದೂ ಇಲ್ಲ. ಅವಕಾಶವಾದ!

          "ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಕಾಂಗ್ರೆಸ್ ತಿರಸ್ಕರಿಸಿದರೆ ಆಗ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಮೇಲೆ ಅವಿಶ್ವಾಸ ಸೂಚಿಸುತ್ತದೆ. ಇದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ. ಹಾಗೂ ಹೊಸನಾಯಕರನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಹೊಸ ನಾಯಕ ಸರ್ಕಾರದ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಣಯವನ್ನು ವಿರೋಧಿಸುವವರು ಅಂಥ ನಾಯಕಗಣವನ್ನು ಹುಡುಕಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಮತ್ತು ಬಹುಮತ ಸದಸ್ಯರು ಇದೇ ದೃಷ್ಟಿಕೋನ ಹೊಂದಿದ್ದರೆ ಎಐಸಿಸಿ ನಿರ್ಣಯವನ್ನು ತಿರಸ್ಕರಿಸಬಹುದು"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಅಂದರೆ ಗಾಂಧಿಯ ದೃಷ್ಟಿಯಲ್ಲಿ ಈಗಿರುವ ಕಾಂಗ್ರೆಸ್ಸಿಗರನ್ನು ಬಿಟ್ಟು ಬೇರೆ ನಾಯಕರೇ ಇಲ್ಲವೇ? ಅಪ್ರತಿಮ ಕ್ಷತ್ರಿಯರನ್ನು ಕಂಡ ಈ ನಾಡಿನಲ್ಲಿ ನಾಯಕರಿಗೆ ಬರಗಾಲವೇ? ಇದು ಜನರನ್ನು ವಿಭಜನೆಗೆ ಒಪ್ಪಿಸುವ ಕುಟಿಲತೆಯಷ್ಟೇ! ಇಲ್ಲೇ ಒಂದು ಒಳಸುಳಿಯಿದೆ! ಪರೋಕ್ಷವಾಗಿ ತಮ್ಮ ಶಿಷ್ಯ ನೆಹರೂವಿಗಿಂತ ಉತ್ತಮ ನಾಯಕರಿಲ್ಲ ಅಥವಾ ನೆಹರೂಗಲ್ಲದೆ ಬೇರ್ಯಾರಿಗೂ ಅಧಿಕಾರ ಸಿಗಬಾರದು ಎನ್ನುವ ಭಾವವನ್ನು ಗಾಂಧಿ ಪ್ರಕಟಿಸುತ್ತಿದ್ದಾರೆಯೇ? ಮುಂದೆ ನಡೆದ ಎಲ್ಲಾ ಘಟನೆಗಳು ಇದನ್ನು ಪುಷ್ಟೀಕರಿಸುತ್ತವೆ.

        "ಭಾರತ ವಿಭಜನೆಯನ್ನು ಅದಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು  ಐರ್ಲೆಂಡಿನಲ್ಲಿರುವ ಭಾರತೀಯರು ಬಲವಾಗಿ ವಿರೋಧಿಸುತ್ತಾರೆ. ಬ್ರಿಟಿಷರು ಐರ್ಲೆಂಡನ್ನು ತ್ಯಜಿಸುವಾಗ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಇದರ ಪರಿಣಾಮವಾಗಿ ಈಗ ಉತ್ತರ ಹಾಗೂ ದಕ್ಷಿಣ ಐರ್ಲೆಂಡಿನ ಜನರು ದೇವಾಲೆರಾ ನೇತೃತ್ವದಲ್ಲಿ ವಿಭಜನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದಾರೆ. ವಿಭಜನೆಗೆ ಒಪ್ಪಿಕೊಂಡರೆ ಭಾರತಕ್ಕೂ ಇದೇ ಗತಿ. ನಿಮ್ಮ ಸಮರ್ಥ ನಾಯಕತ್ವ ಹಾಗೂ ಮಾರ್ಗದರ್ಶನ ಪಡೆದಿರುವ ಭಾರತ ವಿಭಜನೆಯನ್ನು ಅಂಗೀಕರಿಸುವ ಮೂಲಕ ರಾಜಕೀಯ ಆತ್ಮಹತ್ಯೆಗೆಳಸುವುದಿಲ್ಲ ಎಂದು ಇಲ್ಲಿನ ಎಲ್ಲಾ ಹಿಂದೂಗಳು ಹಾಗೂ ಮುಸ್ಲಿಮರು ನಂಬಿದ್ದೇವೆ" ಎನ್ನುವ ವಿಚಾರವುಳ್ಳ ಪತ್ರವೊಂದನ್ನು ಡಬ್ಲಿನ್ನಿನ ಗಾಂಧಿಯ ಸ್ನೇಹಿತರೊಬ್ಬರು ಬರೆದರು. ಪ್ರತಿಕ್ರಿಯೆಯಾಗಿ ಗಾಂಧಿ "ನನ್ನಲ್ಲಿ ಅಸಹಾಯಕ ಭಾವವುಂಟಾಗುತ್ತಿದೆ. ಭಾರತ ಮತ್ತು ಐರ್ಲೆಂಡ್ ಮಧ್ಯೆ ಸಮಾನಾಂತರ ರೇಖೆ ಎಳೆಯಬಹುದೇ ಎಂದು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಒಪ್ಪಂದಕ್ಕೆ ಬಂದಿವೆ. ನೈಜ ಸ್ಥಿತಿ ಹೀಗಿರುವಾಗ ಅದನ್ನೇ ಸಾಧ್ಯವಿದ್ದಷ್ಟು ಉತ್ತಮ ರೀತಿಯಲ್ಲಿ ಮಾಡಲು ನಾನು ಪ್ರಯತ್ನಿಸುತ್ತೇನೆ" ಎಂದು ಉತ್ತರಿಸಿದರು.(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ಗಾಂಧಿ ಮಾತು ಮತ್ತು ಕೃತಿಗೆ ಎಷ್ಟು ಅಜಗಜಾಂತರ. ಅವರ ಬೋಧನೆಗಳಲ್ಲಿ ಬಂದ ಉನ್ನತಾದರ್ಶಗಳ್ಯಾವುವೂ ಕ್ರಿಯೆಯಲ್ಲಿ ಕಾಣಲೇ ಇಲ್ಲ.

         ಗಾಂಧಿ ತಮ್ಮ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಹಾಗಾಗಿ ಕಾರ್ಯಕಾರಿ ಸಮಿತಿಯ ನಿರ್ಣಯದ ವಿರುದ್ಧ ದನಿಯೆತ್ತಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಪೂರಕವಾಗಿ ಗಾಂಧಿ ಪ್ರಾರ್ಥನಾ ಸಭೆಯಲ್ಲಿ ತಾವು ಸಮಿತಿಯ ನಿರ್ಣಯದ ಬಗ್ಗೆ ಅಭಿಪ್ರಾಯಭೇದ ಹೊಂದಬಹುದು ಎಂದೂ ಹೇಳಿದರು. ಆದರೆ ಮುಂದಿನ ಎಐಸಿಸಿ ಸಭೆಯಲ್ಲೇ ವಿಭಜನೆಯ ಪರವಾಗಿ ನಿಂತರು.  "ಕೆಲವೊಮ್ಮೆ ಮನಸ್ಸಿಗೆ ಹಿಡಿಸದಿದ್ದರೂ ಕೆಲವು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆ ಹಂತದಲ್ಲಿ ದೇಶದ ಶಾಂತಿ ಮುಖ್ಯ ಎನ್ನುವುದನ್ನು ಸದಸ್ಯರು ಮರೆಯಬಾರದು. ದೇಶದಲ್ಲಿ ಕ್ಷಿಪ್ರ ಕ್ರಾಂತಿ ಅಥವಾ ಉತ್ಕ್ರಾಂತಿಯ ಮಾತಾಡುವವರು ಈ ನಿರ್ಣಯವನ್ನು ಆಚೆಗೆಸೆಯುವ ಮೂಲಕ ಇದನ್ನು ಸ್ಥಾಪಿಸಲು ಶಕ್ತರಿರಬಹುದು. ಆದರೆ ಅವರಿಗೆ ದೇಶದ ಹಾಗೂ ಕಾಂಗ್ರೆಸ್ಸಿನ ಅಧಿಕಾರ ಕೈಗೆ ತೆಗೆದುಕೊಳ್ಳುವ ಶಕ್ತಿ ಸಾಮರ್ಥ್ಯ ಇದೆ ಎನ್ನುವುದು ಸಂಶಯ. ನನಗೇನಾದರೂ ಶಕ್ತಿಯಿದ್ದಲ್ಲಿ ಏಕಾಕಿಯಾಗಿ ಬಂಡಾಯ ಘೋಷಿಸುತ್ತಿದ್ದೆ. ನಾನು ಕಾರ್ಯಕಾರಿ ಸಮಿತಿಯ ಪರವಾಗಿ ಬೇಡುತ್ತಿಲ್ಲ. ಎಐಸಿಸಿಯು ನಿರ್ಣಯದ ಸಾಧಕಬಾಧಕಗಳನ್ನು ಅಳೆದುನೋಡಬೇಕು. ನಿರ್ಣಯದ ಲಾಭದ ಮನವರಿಕೆಯಾಗದಿದ್ದರೆ ಅದನ್ನು ಒಪ್ಪಬಾರದು. ಇಂತಹ ನಿರ್ಣಯ ದೇಶದಲ್ಲಿ ಗಲಭೆಗೆ ಕಾರಣವಾಗುತ್ತದೆಂದಾದರೆ ಅದನ್ನು ತಿರಸ್ಕರಿಸಬಹುದು. ಆದರೆ ಕಾರ್ಯಕಾರಿ ಸಮಿತಿಯ ಸದಸ್ಯರು 'ಹೆಮ್ಮೆಯ ದಾಖಲೆ ಹೊಂದಿದ, ದೇಶದ ಹಳೆಯ ಮತ್ತು ಅನುಭವಿ ಸೇವಕರು, ಕಾಂಗ್ರೆಸ್ಸಿನ ಬೆನ್ನುಲುಬಾಗಿದ್ದವರು' ಎಂದೂ ಮರೆಯಬಾರದು. ಈ ಹಂತದಲ್ಲಿ ಅವರ ಬದಲು ಬೇರೆಯವರನ್ನು ತರುವುದು ಸಾಧ್ಯವಾಗದಿದ್ದಲ್ಲಿ ಅದು ಅತಿ ಅವಿವೇಕದ ಕೆಲಸವಾಗುತ್ತದೆ. ಯಾವುದನ್ನು ಅಂಗೀಕರಿಸಲಾಗಿದೆಯೋ ಅದು ಉತ್ತಮವೇನಲ್ಲ. ಆದರೆ ಮುಂದೆ ಅದರಿಂದ ಒಳ್ಳೆಯದಾಗಬಹುದು. ಕೆಲವೊಮ್ಮೆ ತಪ್ಪಿನಿಂದಲೂ ಒಳ್ಳೆಯದಾಗುತ್ತದೆ. ತಂದೆಯ ತಪ್ಪಿನಿಂದಾಗಿ ರಾಮ ವನವಾಸಕ್ಕೆ ಹೋದರೂ ರಾವಣನ ಅಂತ್ಯಕ್ಕೆ ಅದು ಕಾರಣವಾಯಿತಲ್ಲವೇ. ಹಾಗೆಯೇ ದೋಷಪೂರಿತ ಯೋಜನೆಯಿಂದ ಒಳ್ಲೆಯದನ್ನು ಹೊರತೆಗೆಯಲು ಎಐಸಿಸಿ ಸಮರ್ಥವಾಗಿದೆ. ಬಂಗಾರವನ್ನು ಕೂಡಾ ಹೊಲಸಿನಿಂದಲೇ ಆಯ್ದು ತೆಗೆಯಲಾಗುತ್ತದೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್: ಪ್ಯಾರೇಲಾಲ್). ವ್ಹಾವ್...ಗಾಂಧಿ ವಿಭಜನೆಯನ್ನು ರಾಮಾಯಣಕ್ಕೆ ಹೋಲಿಸುತ್ತಿದ್ದಾರೆ! ಎಐಸಿಸಿಯನ್ನು ರಾಮನಿಗೆ! ರಾಮ ದೇವಾಂಶ ಸಂಭೂತ. ವಿಭಜನೆಯ ಪರಿಣಾಮವನ್ನು ಒಳ್ಳೆಯ ಕ್ರಿಯೆಯಾಗಿಸಲು ಕಾಂಗ್ರೆಸ್ ಅಥವಾ ಗಾಂಧಿಯೇನು ದೇವರೇ? ಕಾರ್ಯಕಾರಿ ಸಮಿತಿಯ ಸದಸ್ಯರು ಕಾಂಗ್ರೆಸ್ಸಿನ ಬೆನ್ನುಲುಬಾದ ಮಾತ್ರಕ್ಕೆ ಅವರು ಶ್ರೇಷ್ಠರೇ? ಅವರು ಹೇಳಿದ್ದು ವೇದವಾಕ್ಯವೇ? ಅನುಭವಿ ಸೇವಕರಿಂದೇನು ತಪ್ಪು ಘಟಿಸದೇ? ಉತ್ಕ್ರಾಂತಿಯ ಮಾತಾಡುವವರ ಸಾಮರ್ಥ್ಯವನ್ನು ಪ್ರಶ್ನಿಸುವ ಗಾಂಧಿಗೆ ತನ್ನ ಅನುಭವಿ ಸೇವಕರ ಮೇಲೆ ಅಗಾಧ ವಿಶ್ವಾಸ! ವಿಭಜನೆಯನ್ನು ವಿರೋಧಿಸುತ್ತಲೇ ಅದನ್ನು ಸಮರ್ಥಿಸುತ್ತಾ ಜನರ ಮೇಲೆ ಹೇರುವ ಈ ವೃದ್ಧನಿಗೆ ಇಂದಿನ ರಾಜಕಾರಣಿಗಳು ಕಾಲಿಗಡ್ಡಬಿದ್ದರೆ ಆಶ್ಚರ್ಯವೇನಿಲ್ಲ

ಬುಧವಾರ, ನವೆಂಬರ್ 9, 2016

ಯಾರು ಮಹಾತ್ಮ? ಭಾಗ- ೨೨

ಯಾರು ಮಹಾತ್ಮ?

ಭಾಗ- ೨೨

        ಮುಸ್ಲಿಂ ಲೀಗಿನ ವಿಭಜನೆಯ ಬೇಡಿಕೆಗೆ ಗಾಂಧಿ ವಿರೋಧ ವ್ಯಕ್ತಪಡಿಸುತ್ತಾ ತೀವ್ರವಾಗಿ ಪ್ರತಿಕ್ರಿಯಿಸಿದರು. "ಐತಿಹಾಸಿಕವಾಗಿ ವಿಭಜನೆ ಎನ್ನುವುದು ಸುಳ್ಳು ಹಾಗೂ ಸೈದ್ಧಾಂತಿಕವಾಗಿಯೂ ವಿಕಾರವಾದದ್ದು. ದೇವರು ಒಂದಾಗಿ ಸೃಷ್ಟಿಸಿದ ಈ ದೇಶವನ್ನು ವಿಭಜಿಸುವುದು ಮಾನವರಿಂದ ಸಾಧ್ಯವಿಲ್ಲ." "ಒಂದು ವೇಳೆ ಮುಸ್ಲಿಮರು ವಿಭಜನೆಯ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಖಡ್ಗದ ಮೊನೆಯಿಂದ ಬೆದರಿಸಿದರೂ ನಾನು ವಿಭಜನೆಗೆ ಒಪ್ಪಲಾರೆ. ದೇಶವನ್ನು ತುಂಡು ಮಾಡುವ ಮುನ್ನ ಅವರು ನನ್ನ ದೇಹವನ್ನು ತುಂಡುಮಾಡಬೇಕಾಗುತ್ತದೆ. ನಾವೆಲ್ಲರೂ ಇದೇ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ." "ವಿಭಜನೆ ಎನ್ನುವುದು ಮಿಥ್ಯೆ. ನನ್ನ ಇಡೀ ಆತ್ಮ ಈ ಕಲ್ಪನೆ ವಿರುದ್ಧ ಸಿಡಿದೇಳುತ್ತದೆ. ವಿಭಜನೆಗೆ ಒಪ್ಪುವುದೆಂದರೆ ನಾನು ದೇವರನ್ನೇ ನಿರಾಕರಿಸಿದಂತೆ. ಇದನ್ನು ತಡೆಯಲು ಅಹಿಂಸೆಯ ಎಲ್ಲಾ ಮಾರ್ಗಗಳನ್ನೂ ನಾನು ಉಪಯೋಗಿಸುತ್ತೇನೆ. ಹಿಂದೂಗಳು ಮತ್ತು ಮುಸ್ಲಿಮರು ಒಂದು ದೇಶವಾಗಿ ಬಾಳಲು ಶತಮಾನಗಳ ಕಾಲ ಮಾಡಿದ ಕಾರ್ಯವನ್ನು ನಾಶಗೊಳಿಸಿದಂತೆಯೇ" "ಭಾರತವನ್ನು ಎರಡಾಗಿಸುವುದು ಅರಾಜಕ ಸ್ಥಿತಿಗಿಂತ ಹೇಯವಾದುದು. ಭಾರತವನ್ನು ಎರಡು ಶತಮಾನಗಳಿಗಿಂತಲೂ ಅಧಿಕ ಕಾಲವಾಳಿದ ಮೊಘಲರೂ ಸಹ ಮಾಡದ್ದನ್ನು ನೀವು ಮಾಡಲಾಗದು." "ಇದರಲ್ಲಿ ಕಚ್ಚಾಟದ ಮತ್ತಷ್ಟು ಸಾಧ್ಯತೆ ವಿನಾ ಮತ್ತೇನೂ ನನಗೆ ಕಾಣಿಸುತ್ತಿಲ್ಲ." "ಬೇಕಾದರೆ ಇಡೀ ದೇಶ ಹೊತ್ತಿ ಉರಿಯಲಿ ಒಂದಿಂಚು ಪಾಕಿಸ್ತಾನಕ್ಕೂ ನಾವು ಒಪ್ಪುವುದಿಲ್ಲ" ಹೀಗೆಲ್ಲಾ ಅಣಿಮುತ್ತು ಉದುರಿಸಿ ಭಾರತದ ವಿಭಜನೆಯನ್ನು ಸ್ಪಷ್ಟ, ಕಟು ಶಬ್ಧಗಳಲ್ಲಿ ವಿರೋಧಿಸಿದ್ದ ಗಾಂಧಿ ಕೆಲವೇ ದಿನಗಳಲ್ಲಿ ತಮ್ಮ ಅಭಿಪ್ರಾಯ ಬದಲಿಸಿಕೊಂಡದ್ದು ಮಾತ್ರ ವಿಪರ್ಯಾಸ.('ಹರಿಜನ'ದ ವಿವಿಧ ಸಂಚಿಕೆಗಳು; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್)

          ದೇಶವಿಭಜನೆಯನ್ನು ಖಂಡತುಂಡವಾಗಿ ವಿರೋಧಿಸಿದ್ದ ಗಾಂಧಿ ಸ್ವಾತಂತ್ರ್ಯದ ಹೊಸ್ತಿಲಲ್ಲಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದರು. "ದೇಶ ವಿಭಜನೆ ಕುರಿತು ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯವನ್ನು ಅಂಗೀಕರಿಸಲು ನಾನು ಶಿಫಾರಸು ಮಾಡುತ್ತೇನೆ. ಸಂವಿಧಾನದ ಪ್ರಕಾರ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಯು ಕಾರ್ಯಕಾರಿ ಸಮಿತಿಗೆ ಅಧಿಕಾರ ನೀಡಿದೆ. ಕಾರ್ಯಕಾರಿ ಸಮಿತಿ ಎಐಸಿಸಿ ಪರವಾಗಿ ಪ್ರಾಮಿಸರಿ ನೋಟಿನ ಮೇಲೆ ಸಹಿ ಮಾಡಿದರೂ ಎಐಸಿಸಿ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಳ್ಳಲೇಬೇಕಾಗುತ್ತದೆ. ಕಾರ್ಯಕಾರಿ ಸಮಿತಿ ಈಗಾಗಲೇ ತೆಗೆದುಕೊಂಡ ನಿರ್ಧಾರವನ್ನು ಎಐಸಿಸಿ ಬದಲಾಯಿಸಲು ಸಾಧ್ಯವಿಲ್ಲ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಅರೇ ಕಾಂಗ್ರೆಸ್ ಏನು ಇಡೀ ಭಾರತವೇ? ಸಂವಿಧಾನವಿದ್ದರೆ ಅದು ಕಾಂಗ್ರೆಸ್ಸಿಗಾಯಿತು. ಆ ಸಂವಿಧಾನವನ್ನು ಇಡೀ ಭಾರತಕ್ಕೇಕೆ ಅನ್ವಯಿಸಬೇಕು? ಕಾರ್ಯಕಾರಿ ಸಮಿತಿ ನೇಮಿಸುವ ಮುನ್ನ ಕಾಂಗ್ರೆಸ್ಸ್ ದೇಶೀಯರ ಅನುಮತಿ ಪಡೆದುಕೊಂಡಿದೆಯೇ? ಕೆಲವೇ ಕೆಲವು ಸಾವಿರ ಸದಸ್ಯರನ್ನೊಳಗೊಂಡ ಪಕ್ಷವೊಂದು ಮೂವತ್ತಮೂರು ಕೋಟಿ ಜನತೆಯ ಭವಿಷ್ಯವನ್ನು ನಿರ್ಧರಿಸಬೇಕೆ? ಅಷ್ಟು ಜನರ ಮಾನ, ಪ್ರಾಣ, ಧನಗಳನ್ನು ಕಾಂಗ್ರೆಸ್ ಮರಳಿಸುತ್ತದೆಯೇ? ಅಷ್ಟು ಜನರ ಭಾವನೆಗೂ ಬೆಲೆ ಕೊಡದ ಪಕ್ಷ ಹೇಳಿದ ಮಾತಿಗೆ ಹೂಂಗುಟ್ಟಿದ ಈ ದೇಶದ ಕ್ಷಾತ್ರವಿಹೀನತೆಯ ಪರಮಾವಧಿಯೇ!

          "ನಾನು ಅಸಹಾಯಕ. ನಾನು ಮುಸ್ಲಿಮ್ ಲೀಗ್ ಅಧ್ಯಕ್ಷನಾಗಿದ್ದರೆ ಪಾಕಿಸ್ತಾನವನ್ನು ಪರದೆ ಮೇಲೆ ಮೂಡಿಸಿ ಅದರ ಸರಿಹೋಲಿಕೆಯಿಲ್ಲದ ಸೌಂದರ್ಯವನ್ನು ಆಕರ್ಷಕಗೊಳಿಸಿ ವರ್ಣಿಸುತ್ತಿದ್ದೆ. ಈವರೆಗಿನ ಬೆಳವಣಿಗೆಯಂತೆ ಭಾರತದ ವಿಭಜನೆ ನಿಶ್ಚಿತ. ಜನರು ಇದರ ಬಗ್ಗೆ ದುಃಖಿಸುವುದು ಬೇಡ. ಪಾಕಿಸ್ತಾನ ರಚನೆಗೆ ಕಾಂಗ್ರೆಸ್ಸಿನ ವಿರೋಧವಿತ್ತು. ನನ್ನದೂ. ಹೀಗಿದ್ದರೂ ವಿಭಜನೆಯ ನಿರ್ಣಯವನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಲು ನಿಮ್ಮ ಮುಂದೆ ನಿಂತಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಆಶ್ವಾಸನೆ ಕೊಟ್ಟು ಏನನ್ನೂ ಮಾಡದೆ ಆಮೇಲೆ ಅದು ಹಾಗೆಯೇ ಆಗಬೇಕು ಬೇರೆ ದಾರಿ ಇಲ್ಲ ಎನ್ನುವ ಇಂದಿನ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಗಾಂಧಿಯದ್ದೇ ಅಂತ ಅನ್ನಿಸುವುದಿಲ್ಲವೇ? ತನ್ನಿಂದಾಗದಿದ್ದ ಮೇಲೆ ಮೊದಲು ಹೇಳಿಕೆ ಯಾಕೆ ಕೊಡಬೇಕಿತ್ತು? ಆಡಿಯೂ ಮಾಡದವ...! ಅದರಲ್ಲೂ ಸಮಜಾಯಿಷಿ ಕೊಡುವಾಗ ಪಾಕಿಸ್ತಾನವನ್ನು ಹೊಗಳುವ ಪರಿ ಕೇಳಿ ಅದರಿಂದಾಗಿಯೇ ಪ್ರಾಣ-ಮಾನ ಕಳಕೊಂಡ ಹಿಂದೂವಿಗೆ ಉರಿಯದಿರುತ್ತದೆಯೇ?

           ಹೇಗೂ ಭಾರತದ ವಿಭಜನೆಯ ವಿರುದ್ಧ ನೀವಿದ್ದೀರಿ. ಹಾಗಾಗಿ ವಿಭಜನೆ ತಪ್ಪಿಸಲು ನೀವೇಕೆ ಆಮರಣಾಂತ ಉಪವಾಸ ಕೂರಬಾರದು ಎನ್ನುವ ಒಕ್ಕಣೆಯುಳ್ಳ ಟೆಲಿಗ್ರಾಂಗಳು, ಪತ್ರಗಳು ಗಾಂಧಿಗೆ ಬರತೊಡಗಿದವು. ಆಗ ಗಾಂಧಿ "ಇಂತಹ ವಿಷಯಗಳನ್ನು ಹಗುರವಾಗಿ ಅಥವಾ ಯಾರದೋ ಸೂಚನೆಯಂತೆ ಅಥವಾ ದುಡುಕಿನ ಅಲ್ಲದೆ ಕೋಪದಿಂದ ತೆಗೆದುಕೊಳ್ಳಬಾರದು. ಕಾಂಗ್ರೆಸ್ ನನ್ನ ದೃಷ್ಟಿಕೋನದ ಜೊತೆ ಭಿನ್ನಾಭಿಪ್ರಾಯ ಹೊಂದಿತ್ತು ಎನ್ನುವ ಕಾರಣಕ್ಕೆ ಉಪವಾಸ ಮಾಡಬೇಕೇ?" ಎಂದು ಪ್ರಶ್ನಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್).  ಭಳಿರೇ ಮುದುಕ! ಅಂದರೆ ಗಾಂಧಿ ಹಗುರವಾದ ವಿಚಾರಗಳಿಗಷ್ಟೇ ಉಪವಾಸ ಕೂರುವವರೇ? ಮುಸ್ಲಿಮರ ಸಣ್ಣ ತೊಂದರೆಯಾದರೂ ಉಪವಾಸ ಕೂರುತ್ತಿದ್ದಾತನಿಗೆ ವಿಭಜನೆಯನ್ನು ವಿರೋಧಿಸಿ ಉಪವಾಸ ಕೂರಬೇಕು ಅನ್ನಿಸಲಿಲ್ಲ. ಜನರು ಹೇಳಿದಾಗಲೂ ಆ ಬಯಕೆ ಮೂಡಲಿಲ್ಲ. ಅಂದರೆ ಹಿಂದೂಗಳಿಗೆ ಅನ್ಯಾಯವಾಗುವ ವಿಚಾರವನ್ನು ವಿರೋಧಿಸಿ ಉಪವಾಸ ಕೂರಲು ಗಾಂಧಿಗೆ ಮನಸ್ಸಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಎಂತಹ ಬೂಟಾಟಿಕೆ! ಅಂದು ಸುಭಾಷರು ತನ್ನ ಅಭ್ಯರ್ಥಿ ಪಟ್ಟಾಭಿಯೆದುರು ಬಹುಮತದಿಂದ ಗೆದ್ದಾಗ ತನಗಿಷ್ಟವಾಗದೆ ಅದು ತನ್ನ ಸೋಲು ಎಂದು ಬಹಿರಂಗವಾಗಿ ಹೇಳಿ ತನ್ನ ಅಭಿಪ್ರಾಯ-ವ್ಯಕ್ತಿ-ಕ್ರಿಯೆಯನ್ನು ಹೇರಹೊರಟ ಗಾಂಧಿಗೆ ಇಂದು ದೇಶ ಇಬ್ಬಾಗವಾಗಲು ಕಾಂಗ್ರೆಸ್ ಕೊಟ್ಟ ಒಪ್ಪಿಗೆ ತನ್ನ ಸೋಲು ಅಂತ ಅನ್ನಿಸಲಿಲ್ಲ. ಈವತ್ತು ಆತ ಕಾಂಗ್ರೆಸ್ ಮೇಲೆ ತನ್ನ ಅಭಿಪ್ರಾಯ ಹೇರಲು ಅನುವಾಗಲಿಲ್ಲ. ಎಂತಹ ಸ್ವಾರ್ಥ! ಗಾಂಧಿಯ ಈ ಇಬ್ಬಂದಿತನವೇ ವಿಭಜನೆಗೆ ಅವರ ಒಪ್ಪಿಗೆಯಿತ್ತು, ಅದಕ್ಕಾಗಿ ಶತಾಯಗತಾಯ ಪ್ರಯತ್ನಿಸಿದರು ಎನ್ನುವ ಅನುಮಾನ ಬರಲು ಕಾರಣ!

           "ಆತುರದಿಂದ ನಾನು ಉಪವಾಸ ಮಾಡುವುದಾದರೆ ಅದಕ್ಕೆ ಕಾರಣಗಳು ಬೇಕಾಗುತ್ತವೆ. ಆಮರಣಾಂತ ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕಾಗುತ್ತದೆ. ಆದರೆ ನನ್ನ ಸುತ್ತಲೂ ಬೆಂಕಿಯ ಧಗೆ ಇರುವುದರಿಂದ ತಾಳ್ಮೆ ಹಾಗೂ ದೃಢಚಿತ್ತದಿಂದ ಇದ್ದು ಸತ್ಯದ ಆತ್ಯಂತಿಕ ಗೆಲುವಿನ ಬಗ್ಗೆ ನನಗಿರುವ ಅಚಲ ನಂಬಿಕೆಯನ್ನು ಸಾಬೀತು ಮಾಡಬೇಕೆಂದು ಮನಗಂಡಿದ್ದೇನೆ"(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್). ಹಾಗಾದರೆ ಉಪವಾಸ ಮಾಡಲು ದೇಶವಿಭಜನೆ ಕಾರಣ ಆಗುವುದಿಲ್ಲವೆ? ಉಪವಾಸವನ್ನು ಸಮರ್ಥಿಸಿಕೊಳ್ಳಲು ಇತರರನ್ನೂ ಪರಿಗಣಿಸಬೇಕು ಎಂದರೆ ಯಾರನ್ನು ತನ್ನ ಶಿಷ್ಯ ನೆಹರೂವನ್ನೋ? ಅಥವಾ ಪ್ರತ್ಯೇಕ ದೇಶ ಕೇಳಿದ ಮುಸ್ಲಿಮರನ್ನೋ? ವಿಭಜನೆಯೆಂಬ ಬೆಂಕಿಯ ಧಗೆ, ಹಿಂದೂಗಳ ಚಿತೆಯ ಉರಿ ಇನ್ನೂ ಇರುವಾಗ ಮಾತ್ರ ಗಾಂಧಿ ತಾಳ್ಮೆ ಮತ್ತು ದೃಢಚಿತ್ತದಿಂದ ಇರಬಲ್ಲರು! ಈ ಸತ್ಯ ಯಾವುದು? ಮುಸ್ಲಿಮರಿಗೆ ಹಾಗೂ ನೆಹರೂವಿಗೆ ಅಧಿಕಾರ ಹಸ್ತಾಂತರಿಸುವುದೇ? ಅದರ ಗೆಲುವೆಂದರೆ ವಿಭಜನೆ ಆಗಬೇಕೆಂಬುದೇ? ಈಗಿನ ಎಡಪಂಥೀಯರ ರೀತಿಯ ಯಾರಿಗೂ(ಅವರಿಗೂ) ಅರ್ಥವಾಗದ ಮಾತುಗಳನ್ನಾಡಿ ಗಾಂಧಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ!

           ದೇಶವನ್ನು ತುಂಡರಿಸುವ ಮೊದಲು ನನ್ನ ದೇಹ ತುಂಡರಿಸಿ ಎನ್ನುವ ಮಾತನ್ನು ನೀವು ಈ ಮೊದಲು ಹೇಳಿದ್ದೀರಲ್ಲವೆ ಎಂದೊಬ್ಬ ಪತ್ರಿಕಾ ಪ್ರತಿನಿಧಿ ನೆನಪಿಸಿದಾಗ "ಈ ಆರೋಪವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಹೇಳಿಕೆ ನೀಡುವಾಗ ಸಾರ್ವಜನಿಕ ಅಭಿಪ್ರಾಯವನ್ನೇ ಧ್ವನಿಸುತ್ತಿದ್ದೇನೆ ಎಂದು ನಂಬಿದ್ದೆ. ಆದರೆ ಸಾರ್ವಜನಿಕ ಅಭಿಪ್ರಾಯವೇ ನನ್ನ ವಿರುದ್ಧವಾಗಿರುವಾಗ ನಾನದನ್ನು ನಿರ್ಬಂಧಿಸಬೇಕೆ?" ಎಂದು ಕೀಟಲೆಯ ಧ್ವನಿಯಲ್ಲಿ ಹೇಳಿದರು. ಅರೇ ಗಾಂಧಿಯ ಸ್ವಂತ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾದದ್ದು ಹೇಗೆ? ಕೋಟ್ಯಾಂತರ ದೇಶೀಯರ ಅಭಿಪ್ರಾಯ ವಿಭಜನೆ ಆಗಬಾರದೆಂದಿರುವಾಗ ಸಾರ್ವಜನಿಕ ಅಭಿಪ್ರಾಯ ಗಾಂಧಿಗೆ ವಿರುದ್ಧವಾಗಿರುವುದು ಹೇಗೆ? ಅಂದರೆ ಗಾಂಧಿಯ ಅಭಿಪ್ರಾಯ ಹಿಂದೆಯೂ ವಿಭಜನೆ ಆಗಬೇಕೆಂಬುದೇ ಆಗಿತ್ತೇ? ಅಲ್ಲಾ ಗಾಂಧಿಯ ದೃಷ್ಟಿಯಲ್ಲಿ ಸಾರ್ವಜನಿಕರೆಂದರೆ ಕಾಂಗ್ರೆಸ್ಸೇ? ಅಥವಾ ಕಾಂಗ್ರೆಸ್ ನೇಮಿಸಿದ ಕಾರ್ಯಕಾರಿ ಸಮಿತಿಯೇ? ಅಥವಾ ಪ್ರತ್ಯೇಕತೆಯ ಬೀಜ ಬಿತ್ತಿದ ಮುಸ್ಲಿಂ ಲೀಗೇ? ಆಗ ವಿಭಜನೆಗೆ ಒಪ್ಪಿದ್ದವರು ಅಧಿಕಾರದಾಹಿ ಕಾಂಗ್ರೆಸ್ಸಿಗರು ಹಾಗೂ ಪ್ರತ್ಯೇಕತವಾದಿ ಮುಸ್ಲಿಮರು ಹಾಗೂ ಗಾಂಧಿ ಮಾತ್ರ! ಹೀಗೆ ಗಾಂಧಿಯ ಈ ಹೇಳಿಕೆಯನ್ನು ಆ ಕಾಲದ ಸನ್ನಿವೇಶದೊಂದಿಗೆ ಸಮೀಕರಿಸಿ ನೋಡಿದಾಗ ಬಹುಸಂಖ್ಯೆಯ ಜನರ ಅಭಿಪ್ರಾಯವನ್ನು ಬದಿಗೆ ತಳ್ಳಿ ತಮ್ಮ ತಮ್ಮ ಸ್ವಾರ್ಥಸಾಧನೆಗೆ ದೇಶವನ್ನು ಛಿದ್ರಗೊಳಿಸಲು ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತನ್ನ ಅನುಯಾಯಿಗಳೊಂದಿಗೆ ತಯಾರಾಗಿದ್ದ ಎಂದೇ ಭಾಸವಾಗುತ್ತದೆ.