ಪುಟಗಳು

ಬುಧವಾರ, ಡಿಸೆಂಬರ್ 21, 2016

ಆನಂದ ಕರುಣಿಸಿದ ತಾಂಡವ

ಆನಂದ ಕರುಣಿಸಿದ ತಾಂಡವ


       ಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ ಕಾಲ. ಆರ್ಯ ಆಕ್ರಮಣವಾದವನ್ನೇ ತಲೆಯಲ್ಲಿ ತುಂಬಿಕೊಂಡು ನಮ್ಮ ಅಸ್ಮಿತೆಗೆ, ಉತ್ಕರ್ಷಕ್ಕೆ, ಜಗದ್ಗುರು ಪಟ್ಟಕ್ಕೆ ಕಾರಣವಾದ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿಗಳನ್ನು ತುಚ್ಛವಾಗಿ ಕಾಣುವ ಪೀಳಿಗೆಯೇ ಸೃಷ್ಟಿಯಾಗಿದ್ದ ಕಾಲ. ಆದರೂ ಒಂದು ಕಡೆ ರಾಜಕೀಯ ದಾಸ್ಯವನ್ನು ಹೊಡೆದೋಡಿಸಲು ಹೋರಾಟ ನಡೆದಿತ್ತು. ಅದರ ನಡುವಲ್ಲೇ ನಮ್ಮ ಇತಿಹಾಸವನ್ನು ಶುದ್ಧೀಕರಿಸುವ ಪ್ರಕ್ರಿಯೆಯೂ ನಡೆದಿತ್ತು. ಭಾರತೀಯ ಕಲೆಯನ್ನು ಪೌರ್ವಾತ್ಯ, ಪಾಶ್ಚಿಮಾತ್ಯರಿಬ್ಬರೂ ತುಚ್ಛವಾಗಿ ನೋಡುತ್ತಿದ್ದ ಸಂದರ್ಭದಲ್ಲಿ ಅವುಗಳ ಮಹತ್ವವನ್ನು ಪಾಶ್ಚಿಮಾತ್ಯರದ್ದೇ ಪರಿಭಾಷೆಯಲ್ಲಿ ಕಟ್ಟಿಕೊಟ್ಟ ಮಹಾನುಭಾವ ಪಶ್ಚಿಮ ಮೂಲದ-ಪೂರ್ವದ ಮೇಲಿನ ಆದರ ಭಾವದ ಆನಂದ ಕುಮಾರ ಸ್ವಾಮಿ. ಭಾರತೀಯ ಕಲೆಯನ್ನು ಯೂರೋಪಿನ ಮಾನದಂಡಗಳಿಂದ ನೋಡದೆ ಭಾರತೀಯರು ಅದನ್ನು ಕಂಡುಕೊಂಡ ರೀತಿ, ಅವರ ಸಂಪ್ರದಾಯಗಳ ಮೂಲಕವೇ ಅರ್ಥೈಸಿಕೊಳ್ಳಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದ ವ್ಯಕ್ತಿ ಆತ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು ಕೂಡಾ. ಪಶ್ಚಿಮದ ಪರಿಕಲ್ಪನೆಗಳ ಪರಿಭಾಷೆಯಲ್ಲೇ ಪೂರ್ವದ ಮಹತ್ವವನ್ನು ಎತ್ತಿ ಹಿಡಿದು ಪಶ್ಚಿಮದ ದುರಹಂಕಾರವನ್ನು ಮುರಿದದ್ದೇ, ಸತ್ಯವನ್ನೊಪ್ಪಲು ಹೆದರುವ ಕೆಲ ಪಾಶ್ಚಿಮಾತ್ಯ-ಪೌರ್ವಾತ್ಯರು ಅವರನ್ನು ವಿರೋಧಿಸಲು ಕಾರಣವಾಗಿರಬಹುದು. ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಪ್ರತಿನಿಧಿಯಾಗಿದ್ದ ಋಷಿ ಸದೃಶ ಕಲಾ ತಪಸ್ವಿ ಆತ ಎಂದು ಕುಮಾರಸ್ವಾಮಿಯವರನ್ನು ವಿಶ್ವದ ಅತಿರಥ ಮಹಾರಥ ವಿದ್ವಾಂಸರೇ ಕೊಂಡಾಡಿದ್ದು ಅವರು ಏರಿದ್ದ ಎತ್ತರಕ್ಕೆ ಸಾಕ್ಷಿ. ಒಬ್ಬ ವ್ಯಕ್ತಿ ತನ್ನ ಜೀವಮಾನವಿಡೀ ಓದಿ ಮುಗಿಸಲಾಗದಷ್ಟು ಬರೆದ ಮಹಾನ್ ವ್ಯಕ್ತಿ ಆನಂದ ಕುಮಾರ ಸ್ವಾಮಿ.

           "ಶಂ ಕರೋತಿ ಇತಿ ಶಂಕರಃ"
                    ಶಂ ಎಂದರೆ ಶುಭ ಅಥವಾ ಕಲ್ಯಾಣ. ಯಾರು ಕಲ್ಯಾಣಕಾರಕನೋ ಅವನೇ ಶಂಕರ. ಶಿವ ಅಂದರೆ ಸ್ವಯಂ ಪ್ರಕಾಶ ಎಂದರ್ಥ. ಪರಿಪೂರ್ಣ ಪಾವಿತ್ರ್ಯ, ಪರಿಪೂರ್ಣ ಜ್ಞಾನ, ಪರಿಪೂರ್ಣ ಸಾಧನೆಗಳು ಯಾರಲ್ಲಿರುತ್ತವೆಯೋ ಅವನೇ "ಮಹಾದೇವ"! ಅವನು ಕಾಲಪುರುಷ. ಭಾಲಚಂದ್ರನಿಗೆ ಪಿಂಗಲಾಕ್ಷ ಎನ್ನುವ ಹೆಸರೂ ಇದೆ. ಪಿಂಗಲಾ ಎಂದರೆ ಗೂಬೆಯ ಒಂದು ಜಾತಿ. ಈ ಪಕ್ಷಿಗೆ ಭೂತ, ವರ್ತಮಾನ, ಭವಿಷ್ಯದ ಬಗ್ಗೆ ತಿಳಿಯುತ್ತದೆ. ಚಿಂತೆಯಿಲ್ಲದಿರುವ ಅವನು ಅಘೋರ. ಸಹಜ ಭಾವದಲ್ಲಿ ಅಹಂ ರಹಿತ ಅವಸ್ಥೆಯಲ್ಲಿರುವ ಜೀವಕ್ಕೆ ಭೋಲಾ ಎಂದು ಹೆಸರು. ಯೋಗ ಶಾಸ್ತ್ರಕ್ಕನುಸಾರ ಮೂರನೇ ಕಣ್ಣೆಂದರೆ ಸುಷುಮ್ನಾ ನಾಡಿ. ಶಿವನು ಜಿತೇಂದ್ರಿಯ. ಸಮುದ್ರಮಥನದಿಂದ ಉದ್ಭವವಾದ ಹಾಲಾಹಾಲವನ್ನು ಕುಡಿದ ಈ ಮಹಾವೈರಾಗಿ. ವಿಷ ಉದರ ಸೇರದಿರಲೆಂದು ಶಿವನ ಕುತ್ತಿಗೆಯನ್ನು ಒತ್ತಿ ಹಿಡಿದಳು ಪಾರ್ವತಿ. ಶಿವ ನೀಲಕಂಠನೆನಿಸಿಕೊಂಡ. ನೆನೆದಾಕ್ಷಣ ಸುಪ್ರೀತನಾಗಿ ಅನುಗ್ರಹಿಸುವ ಕಾರಣ ಶಿವನು ಅಶುತೋಷ! ದಕ್ಷಿಣಾ ಎಂಬ ಶಬ್ಧ ಬುದ್ಧಿವಾಚಕ, ದಕ್ಷಿಣಾಮೂರ್ತಿಯು ಅದ್ವೈತದ ಸಾರ. ವೀಣಾಧರ, ಯೋಗ, ಜ್ಞಾನ ಹಾಗೂ ವ್ಯಾಖ್ಯಾನ ಇವು ದಕ್ಷಿಣಾ ಮೂರ್ತಿಯ ನಾಲ್ಕು ರೂಪಗಳು.

              ನಟರಾಜನ ನಾಟ್ಯವನ್ನು ವಿಶ್ಲೇಷಿಸಿದ ಅದ್ಭುತ ಲೇಖನ ಆನಂದ ಕುಮಾರ ಸ್ವಾಮಿಯವರ "ಡಾನ್ಸ್ ಆಫ್ ಶಿವ". ಶಿವನು ನಾಟ್ಯದ ಗುರು. ಆದಿ ಗುರು. ನಟ ಸಾರ್ವ ಭೌಮ ಅವನು. ವಿಶ್ವವೆಂಬ ಪರದೆಯ ಮೇಲೆ ಅವನು ನೀಡುವ ಪ್ರದರ್ಶನಗಳಲ್ಲಿ ಅದೆಷ್ಟು ವಿಧಗಳು. ಆ ಪ್ರದರ್ಶನಗಳಲ್ಲಿ  ನಟನೂ ಅವನೇ ನೋಟಕನೂ! ಅವನು ತನ್ನ ಡಮರುಗವನ್ನು ಬಾರಿಸಲು ಆರಂಭಿಸಿದನೆಂದರೆ ವಿಶ್ವ ವ್ಯಾಪಾರವೆಲ್ಲಾ ಆರಂಭವಾಗಲೇಬೇಕು. ಅವನ ಈ ನೃತ್ಯ ಮುಗಿದ ಮೇಲೆ ಉಳಿಯುವವ ಅವನೊಬ್ಬನೇ. ಹೀಗೆ ನಾಟ್ಯದ ಮೂಲವೇ ಶಿವ ಎಂದು ಅವರು ಕಟ್ಟಿ ಕೊಡುವಾಗ ಪ್ರಜ್ಞೆ ಯಾ ಅಪ್ರಜ್ಞಾಪೂರ್ವಕವಾಗಿ ವಿಶ್ವದ ಉಗಮದ ರಹಸ್ಯವನ್ನೇ ಅವರು ಪ್ರತಿಪಾದಿಸಿದಂತಾಯಿತು. ತನ್ನ ತಾಂಡವದ ವೀಕ್ಷಕನೂ, ಕೊನೆಗೆ ಉಳಿಯುವವನೂ ಅವನೊಬ್ಬನೇ ಎನ್ನುವಾಗಲೇ ಬ್ರಹ್ಮವೊಂದೇ ಸತ್ಯ ಎನ್ನುವ ಭಾವ ಸ್ಫುರಿಸಿತು. “ಶಕ್ತಿಯೆಲ್ಲವೂ ಬ್ರಹ್ಮದಲ್ಲಿದೆ. ಆ ಶಕ್ತಿಯಿಂದ ಜಗತ್ತಿನ ಎಲ್ಲಾ ಕಾರ್ಯಚಟುವಟಿಕೆಗಳು ನಡೆಯುತ್ತವೆ. ಬ್ರಹ್ಮವೇ ಪರಮೇಶ್ವರ. ಶಕ್ತಿಯೇ ಅಂಬಾಳ್. ಈ ಶಕ್ತಿಯಿಂದಲೇ ವಿಷ್ಣು ವಿಶ್ವವನ್ನು ಕಾಪಾಡುತ್ತಾನೆ. ಬ್ರಹ್ಮ, ಅದರ ಶಕ್ತಿ, ಅದು ಮಾಡುವ ಕಾರ್ಯ ಒಂದಕ್ಕೊಂದು ಬೇರೆಯಲ್ಲ. ಎಲ್ಲವೂ ಬ್ರಹ್ಮವೇ! ಅನವರತವೂ ಪರಮಾತ್ಮ ಸ್ವರೂಪದಲ್ಲಿರುವವರು ಈ ಮೂವರೇ” ಎನ್ನುವುದು ಅಪ್ಪಯ್ಯ ದೀಕ್ಷಿತರ ಉಕ್ತಿ. ಎರಡು ಸಭೆಗಳು. ಒಂದರಲ್ಲಿ ಎಲ್ಲವನ್ನೂ ಅಡಗಿಸುವವನು ತಾಂಡವಕ್ಕೆ ತೊಡಗಿದ್ದಾನೆ(ಚಿದಂಬರಂ). ಅವನಿಂದಲೇ ವಿಶ್ವ ವ್ಯಾಪಾರ ನಡೆಯುತ್ತಿದೆ. ಇನ್ನೊಂದರಲ್ಲಿ ಎಲ್ಲರನ್ನೂ ಕುಣಿಸಬೇಕಾದವ ನಿದ್ರಿಸುತ್ತಿದ್ದಾನೆ(ಶ್ರೀರಂಗಂ). ಯೋಗನಿದ್ರೆ! ಎರಡೂ ಸಭೆಗಳಲ್ಲಿರುವವನು ಒಬ್ಬನೇ! ಅದೇ ಬ್ರಹ್ಮ. ಅವನು ದಕ್ಷಿಣಾಮೂರ್ತಿ. ಅವನು ಜ್ಞಾನದ ಅಧಿದೇವತೆ. ಅವನು ರಮಣನಾಗಿ ಮೌನದಿಂದಲೇ ಜಗವ ಬೆಳಗಿದ. ಅವನು ಅರುಣಾಚಲ. ಅದನ್ನು ಅಪ್ರಜ್ಞೆ ಎನ್ನಲಾಗದು. ಆನಂದ ಕುಮಾರ ಸ್ವಾಮಿಯವರು ಇದನ್ನು ನಂಬುತ್ತಾರೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ ಅವರು ಶೈವ ಸಿದ್ಧಾಂತದ ಈ ಭಾಗವನ್ನು ಎತ್ತಿಕೊಂಡು ಬಿತ್ತರಿಸುವಾಗ ಆ ಸ್ವರೂಪವನ್ನು, ಜ್ಞಾನವನ್ನು ಎತ್ತಿ ಹಿಡಿದಿದ್ದಾರೆ ಎನ್ನುವುದು ಸ್ಪಷ್ಟ.


           "ಶಿವನ ಎಷ್ಟು ಬಗೆಯ ನೃತ್ಯವನ್ನು ಅವನ ಭಕ್ತರು ತಿಳಿದಿದ್ದಾರೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ಈ ಎಲ್ಲಾ ನಾಟ್ಯದ ಹಿಂದೆ ಇರುವುದು ಮೂಲಶಕ್ತಿ ಎನ್ನುವುದು ಸುಸ್ಪಷ್ಟ." ಎನ್ನುತ್ತಾರೆ ಆನಂದ ಕುಮಾರಸ್ವಾಮಿ. ನಾಟ್ಯವೇ ಮೊದಲ ಸೃಷ್ಟಿಶೀಲ ಚಟುವಟಿಕೆಯೇ? ನಾಟ್ಯಕ್ಕೂ ಕಾಮಕ್ಕೂ(Eros) ಬಿಡಿಸಲಾಗದ ನಂಟಿದೆಯೇ? ಪ್ರಕೃತಿಯ ನಡೆಯಲ್ಲಿರುವ "ಲಯ"ದ ಸಂವೇದನೆ ನಾಗರೀಕತೆಯ ಪೂರ್ವದ ನಮ್ಮ ಪೂರ್ವಜರ ನಾಟ್ಯದಲ್ಲಿ ಅಡಗಿತ್ತೇ? ಮುಂತಾದ ತಮ್ಮ ಚಿಂತನೆಯನ್ನು ಆನಂದ ಕುಮಾರಸ್ವಾಮಿ ಹೇಳುತ್ತಾ ಹೋಗುತ್ತಾರೆಯೇ ಹೊರತು ಅದನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುವುದಿಲ್ಲ. ಇಲ್ಲಿ ಕಾಮ ಎನ್ನುವುದು ಇಚ್ಛೆ ಅಥವಾ ಸಂಕಲ್ಪ. ಅದು ಶಿವನಿಚ್ಛೆ...ಆದುದರಿಂದಲೇ ನರ್ತನ. ಅದೇ ವಿಶ್ವ ಪರದೆಯ ಮೇಲೆ ಮೂಡಿ ಬರುವ ಚಿತ್ರಣ. ಬಾಹ್ಯ ದೃಷ್ಟಿಗೆ ತೋರಿ ಬರುತ್ತಿರುವುದೆಲ್ಲಾ ಟಿವಿಯ ಪರದೆಯ ಮೇಲೆ ಮೂಡಿ ಬರುತ್ತಿರುವ ಚಿತ್ರಗಳಂತೆ. ಅವುಗಳನ್ನು ನಿರಾಕರಿಸಿ ನಿನ್ನನ್ನು ನೀನು ಹುಡುಕು ಎನ್ನುತ್ತಾರೆ ರಮಣ ಮಹರ್ಷಿಗಳು. ಆಗ ಶಿವನ ಲಯಬದ್ಧ ತಾಂಡವ ಕಂಡೀತು. ಆದರೆ ಇಲ್ಲಿ ಆನಂದ ಕುಮಾರಸ್ವಾಮಿ ಈ ನಾಟ್ಯವನ್ನು ಕೇವಲ ಕಲೆಯ ಕಾಣ್ಕೆಯ ದೃಷ್ಟಿಯಿಂದಷ್ಟೇ ನೋಡಿದಂತೆ ಭಾಸವಾಗುತ್ತದೆ. "ಮತ ಧರ್ಮ-ಕಲೆಗಳ ಇತಿಹಾಸದಲ್ಲಿ ಕಂಡುಬರುವ ಯಾವುದೇ ದೊಡ್ಡ ಸಂಕೇತಗಳು ಎಲ್ಲರಿಗೂ ಎಲ್ಲಾ ರೀತಿಯಲ್ಲಿ ಕಂಡುಬಂದಿವೆ. ಕಾಲ ಕಾಲಕ್ಕೆ ಅವು ತಮ್ಮ ಎದೆಯಾಳದಲ್ಲೇ ಅಂತಹ ಸಂಪತ್ತನ್ನು ಮನುಷ್ಯರು ಕಂಡುಕೊಳ್ಳುವಂತೆ ತಮ್ಮನ್ನು ಅವರಿಗೆ ಕೊಟ್ಟುಕೊಂಡಿವೆ" ಎನ್ನುತ್ತಾರೆ ಅವರು. ಶಿವನ ನೃತ್ಯದ ಮೂಲ ಏನೇ ಇರಲಿ, ಅದು ಆ ಸಮಯಕ್ಕೆ ಯಾವುದೇ ಕಲೆ ಅಥವಾ ಪಂಥ ಗರ್ವ ಪಡುವಂತೆ ಭಗವಂತನ ಕಾರ್ಯವಾಗಿ ಸ್ಪಷ್ಟವಾಗಿ ಗೋಚರಿಸಿದೆ. ಇದು ಅವರವರ ಭಾವಕ್ಕೆ ಅವರವರ ಭಕುತಿಗೆ ಶಿವನ ತಾಂಡವ ಕಾಣುವ ರೀತಿ. ತಮ್ಮಲ್ಲಿರುವುದನ್ನೇ ತಾವು ಕಂಡುಕೊಳ್ಳುವುದು. ಕಲೆಯ ದೃಷ್ಟಿಯಿಂದ ಅದು ಹೊಸತನ. ನವೀನತೆಯೇ ಕಲೆಯ ಬದುಕಿನ ಜೀವಾಳವಲ್ಲವೇ? ಕಲಾತತ್ತ್ವದ ಜೊತೆಗೆ ತತ್ತ್ವಜ್ಞಾನವೂ ಮೇಳೈಸಿದ್ದು ಕುಮಾರ ಸ್ವಾಮಿಯವರ ವೈಶಿಷ್ಟ್ಯ.

               ಶಿವನ ಹಲವು ನೃತ್ಯಗಳಲ್ಲಿ ಮೂರು ನೃತ್ಯಗಳ ಬಗೆಗಷ್ಟೇ ಆನಂದ ಕುಮಾರಸ್ವಾಮಿ ಹೇಳತೊಡಗುತ್ತಾರೆ. ಒಂದು "ಶಿವ ಪ್ರದೋಶ ಸ್ತೋತ್ರ"ದಲ್ಲಿ ವರ್ಣಿಸಲ್ಪಟ್ಟಿರುವ ಕೈಲಾಸ ಶಿಖರದ ಮೇಲಿನ ಸಾಯಂಕಾಲದ ನೃತ್ಯ. ಶೂಲಪಾಣಿಯಾಗಿ ಅವನು ನೃತ್ಯಗೈಯಲು ಸರಸ್ವತಿ ವೀಣೆಯನ್ನು, ಇಂದ್ರ ಕೊಳಲನ್ನು, ವಿಷ್ಣು ಡಮರುವನ್ನು ನುಡಿಸುತ್ತಿದ್ದರೆ ಲಕ್ಷಿ ಹಾಡುತ್ತಾಳೆ. ದೇವತೆಗಳು, ಯಕ್ಷ, ಕಿನ್ನರ, ಕಿಂಪುರುಷ, ಸಿದ್ಧ, ಸಾಧ್ಯ, ನಾಗ, ಅಪ್ಸರೆಯರೆಲ್ಲಾ ಶಿವನ ಸುತ್ತ ನಿಂತು ಆ ನಾಟ್ಯಕ್ಕೆ ಸಾಕ್ಷಿಯಾಗುತ್ತಾರೆ. ಎರಡನೆಯದ್ದು ತಾಂಡವ. ಶಿವನ ತಾಮಸಿಕ ರೂಪವಾದ ಭೈರವ ಅಥವಾ ವೀರಭದ್ರನಿಗೆ ಸಂಬಂಧಿಸಿದ್ದು. ರುದ್ರಭೂಮಿಗಳಲ್ಲಿ ದಶ ಕರಗಳೊಂದಿಗೆ ದೇವಿಯನ್ನೂ ಜೊತೆ ಸೇರಿಸಿಕೊಂಡು ಶಿವ ನರ್ತಿಸುತ್ತಾನೆ. ಎಲ್ಲೋರಾ, ಎಲಿಫೆಂಟಾ, ಭುವನೇಶ್ವರಗಳಲ್ಲಿ ಈ ನಾಟ್ಯದ ಭಂಗಿಗಳನ್ನು ಕಾಣಬಹುದು. ಮೂರನೆಯದ್ದು ನಟರಾಜನ ನಾದಾಂತ ನೃತ್ಯ. ತಾರಗ್ರಮ್ ಕಾನನದಲ್ಲಿ ಕರ್ಮನಿಷ್ಠ-ತರ್ಕನಿಷ್ಠ ಮೀಮಾಂಸಕರಿದ್ದರು. ಅವರನ್ನು ಭೇಟಿಯಾಗಲೆಂದು ಶಿವ ಸ್ತ್ರೀ ರೂಪ ಧರಿಸಿದ ವಿಷ್ಣು ಹಾಗೂ ಆದಿಶೇಷನ ಜೊತೆ ಹೊರಟ. ಇವರನ್ನು ನೋಡಿ ಋಷಿ ಮಂಡಲದಲ್ಲಿ ತೀವ್ರ ಜಿಜ್ಞಾಸೆ ಉಂಟಾಯಿತು. ಆ ಜಿಜ್ಞಾಸೆ ಕೋಪಕ್ಕೆ ತಿರುಗಿತು. ಋಷಿಗಳು ಹೆಬ್ಬುಲಿಯೊಂದನ್ನು ಸೃಷ್ಟಿಸಿ ಶಿವನ ವಿರುದ್ಧ ಪ್ರಯೋಗಿಸಿದರು. ಶಿವ ನಗುತ್ತಾ ಕಿರು ಬೆರಳ ಉಗುರ ಮೊನೆಯಿಂದ ಹುಲಿಯ ಚರ್ಮವನ್ನು ಸುಲಿದು ತನ್ನ ಸೊಂಟದ ಸುತ್ತಾ ಸುತ್ತಿಕೊಂಡ. ಅವರು ಭಯಾನಕ ಸರ್ಪವೊಂದನ್ನು ಸೃಷ್ಟಿಸಿದರೆ, ಶಿವ ಆ ಹಾವನ್ನೇ ಹೂವಿನ ಮಾಲೆಯಂತೆ ಕೊರಳಿಗೆ ಹಾಕಿಕೊಂಡ. ಅಲ್ಲದೇ ನರ್ತನಕ್ಕೆ ತೊಡಗಿದ. ಕೊನೆಯ ಪ್ರಯತ್ನವೆಂಬಂತೆ ಆ ಮುನಿಗಳು ವಿಕಾರ ರೂಪದ ಮಯಲಕ ಎನ್ನುವ ಕುಬ್ಜನೊಬ್ಬನನ್ನು ಸೃಷ್ಟಿಸಿ ಕಳುಹಿದರು. ಕಾಲಿಗೆ ತೊಡಕಾಗಿ ಬಂದ ಆ ಕುಬ್ಜನ ಮೇಲೆಯೇ ಶಿವ ತನ್ನ ಹೆಬ್ಬೆರಳನ್ನೂರಿದ. ಕುಬ್ಜನ ಬೆನ್ನೆಲುಬು ಮುರಿಯಿತು. ಅವನ ಆ ಸ್ಥಿತಿಯೇ ಶಿವನಿಗೆ ಪ್ರಣಾಮವಾಗಿಬಿಟ್ಟಿತು. ಹೀಗೆ ಈ ಪುರಾಣದ ಅನುಭವದ ಮೇಲೆಯೇ ಕಲೆ ಅರಳಿತು. ಮೈಯನ್ನು ತಿನ್ನಲು ಬರುವ ಹುಲಿಯೇ ಮೈಮುಚ್ಚುವ ಬಟ್ಟೆಯಾದದ್ದು, ಹಾವೇ ಹೂ ಮಾಲೆಯಂತೆ ಕೊರಳ ಬಳಸುವುದು...ಇದು ಕಲೆಯ ವಿಶೇಷ. ಆಗ ಆದಿಶೇಷ ಶಿವನನ್ನು ಅರ್ಚಿಸಿ ಪುನಃ ನಾಟ್ಯವನ್ನು ನೋಡುವ ಸೌಭಾಗ್ಯವನ್ನು ಕರುಣಿಸು ಎಂದು ಶಿವನನ್ನು ಪ್ರಾರ್ಥಿಸಿದಾಗ ಅವನು ವಿಶ್ವದ ಕೇಂದ್ರವಾದ ಚಿದಂಬರಂನಲ್ಲಿ ಮತ್ತೆ ನಾಟ್ಯ ಮಾಡುತ್ತೇನೆಂದು ಮಾತು ಕೊಡುತ್ತಾನೆ. ಇದು ಆನಂದ ಕುಮಾರಸ್ವಾಮಿಯವರು ತಮಿಳಿನ ಕೊಯಿಲ್ ಪುರಾಣದ ಘಟನೆಯನ್ನು ಕಟ್ಟಿಕೊಡುವ ರೀತಿ. ಅಚ್ಚರಿಯೆಂದರೆ ಶ್ರೀಹರಿಯ ಮಿಡಿತಕ್ಕೆ ಅಚ್ಚರಿಗೊಂಡು ಅದರ ಹಿಂದಿನ ಕಾರಣ ಶಿವ ತಾಂಡವವೆಂದು ತಿಳಿದ ಆದಿಶೇಷ ಶಿವನ ತಾಂಡವವನ್ನು ವೀಕ್ಷಿಸಲೋಸುಗ ತಪಗೈಯ್ಯುತ್ತಿರುವಾಗ ನಂದಿಯೊಡನೆ ವಾಗ್ವಾದವಾಗಿ ಕೊಂಬು ಕೋಡುಗಳಿಲ್ಲದ ಅಕ್ಷರ ರಚಿಸುವೆನೆಂದು ಪ್ರತಿಜ್ಞೆ ಮಾಡಿ, ಯೋಗಿಭೂಷಣನ ಕೃಪೆಯಿಂದ ವೀಕ್ಷಿಸಿದ ತಾಂಡವವು ಯೋಗವಿದ್ಯೆಯಾಗಿ "ದರ್ಶನ"ವಾಗಿ ಪತಂಜಲಿಯಿಂದ ಹೊರಹೊಮ್ಮಿತಷ್ಟೇ. ಎರಡು ಬಾರಿಯೂ ತಾಂಡವದ ವೀಕ್ಷಣೆಯ ಆಸೆಯಿಂದ ಹೋದವ ಶೇಷನೇ. ನಾಗನಿಗೂ ನಾಟ್ಯಕ್ಕೂ ಏನು ಲಯಬಂಧ!

           "ಚಿದಂಬರ ಮುಮ್ಮನಿ ಕೊವೈ" ವ್ಯಾಖ್ಯಾನದಂತೆ "ಡಮರುವನ್ನು ಹಿಡಿದ ಕೈ ಭೂ-ಸ್ವರ್ಗ ಮತ್ತಿತರ ಲೋಕಗಳನ್ನು, ಅಸಂಖ್ಯಾತ ಜೀವಿಗಳನ್ನೂ ಸೃಷ್ಟಿಸಿದೆ. ಅಭಯ ಹಸ್ತ ಅವೆಲ್ಲವನ್ನೂ ಪೊರೆಯುತ್ತದೆ. ಇವೆಲ್ಲವೂ ರೂಪ ಪಡೆದದ್ದು ಶಿವನ ಇನ್ನೊಂದು ಕೈಯಲ್ಲಿರುವ ಬೆಂಕಿಯಿಂದಲೇ. ಅಜ್ಞಾನದಿಂದ ನರಳಾಡುತ್ತಿರುವ ಜೀವಿಗೆ ನೆಲದಲ್ಲಿರಿಸಿರುವ ಶಿವನ ಪಾದವೇ ಗತಿ. ಮೇಲಕ್ಕೆತ್ತಿದ ಪಾದ ಮೋಹ ತ್ಯಜಿಸಿ ತನ್ನೆಡೆಗೆ ಬರುತ್ತಿರುವವರಿಗೆ ಅನುಗ್ರಹಕ್ಕಾಗಿ ಪುಟಿದೆದ್ದು ನಿಂತಿದೆ" ಎಂದು ನಟರಾಜನ ಸೃಷ್ಟಿ, ಸ್ಥಿತಿ, ಲಯ, ತಿರೋಭಾವ, ಅನುಗ್ರಹಗಳೆಂಬ ಪಂಚಕೃತ್ಯಗಳನ್ನು ವಿವರಿಸುತ್ತಾರೆ ಆನಂದ ಕುಮಾರ ಸ್ವಾಮಿ. "ತಿರುಕುಟ್ಟು ದರ್ಶನ"ದ ಸಾಲುಗಳನ್ನು ಉಲ್ಲೇಖಿಸುತ್ತಾ "ಅವನು ಎಲ್ಲೆಡೆಯೂ ಇದ್ದಾನೆ. ಎಲ್ಲಾ ಕಡೆಯೂ ಅವನ ನಾಟ್ಯವಿದೆ. ಎಲ್ಲವೂ ಅವನೇ ಹಾಗೂ ಅವನೊಬ್ಬನೇ ಇರುವವನು. ಅವನು ಕಾಲಾತೀತ. ಅವನ ನಾಟ್ಯವೂ! ಪಂಚಕೃತ್ಯಗಳನ್ನು ಮಾಡುವ, ಪೃಥ್ವಿ-ಜಲ-ಅಗ್ನಿ-ಗಾಳಿ-ಆಕಾಶಗಳಲ್ಲೂ ಕಾಣುವ ಅವನ ನೃತ್ಯ ಎಲ್ಲಾ ಕಡೆಯಲ್ಲೂ ಎಲ್ಲಾ ಕಾಲದಲ್ಲೂ ಇರುವ ಪರಮಸತ್ಯ." ಮಾಯೆಯ ಪೊರೆಯನ್ನು ಕಳಚಿಕೊಂಡವರಿಗೆ ಅದು ಕಾಣುತ್ತದೆ ಎಂದು ವಿಸ್ತರಿಸುತ್ತಾರೆ.

          ವಾಸ್ತವವಾಗಿ ಆನಂದ ಕುಮಾರಸ್ವಾಮಿಯವರು ಹೇಳಿದ್ದು ಅನಂದ ತಾಂಡವದ ಒಂದು ಭಂಗಿಯ ಬಗೆಗೆ ಮಾತ್ರ. ತಾಂಡವದಲ್ಲೇ ಆನಂದ, ಸಂಧ್ಯಾ, ಕಾಳಿಕಾ, ತ್ರಿಪುರ, ಗೌರೀ, ಸಂಹಾರ, ಉಮಾ ತಾಂಡವಗಳೆಂಬ ಏಳು ಪ್ರಕಾರಗಳಿವೆ. ತಾಂಡವದ ಪ್ರತಿಯೊಂದು ಮುದ್ರೆಗೂ ವ್ಯಾಪಕ ಅರ್ಥವಿರುತ್ತದೆ. ಸಾಮಾನ್ಯವಾಗಿ ಕಾಣಸಿಗುವ ಶಿವನ ಆನಂದ ತಾಂಡವದ ಒಂದು ಮುದ್ರೆಯನ್ನು ನೋಡೋಣ. ಅಲ್ಲಿ ಕಿವಿಗಳಲ್ಲಿನ ವಿಭಿನ್ನ ಕುಂಡಲಗಳು ಅರ್ಧನಾರೀಶ್ವರನನ್ನು, ಹಿಂದಿನ ಬಲಗೈಯಲ್ಲಿನ ಡಮರುಗ ನಾದ ಹಾಗೂ ಶಬ್ಧ ಬ್ರಹ್ಮದ ಉತ್ಪತ್ತಿಯನ್ನು, ಹಿಂದಿನ ಎಡಗೈಯಲ್ಲಿನ ಅಗ್ನಿ ಚರಾಚರದ ಶುದ್ಧಿಯನ್ನು, ಮುಂದಿನ ಬಲಗೈ ಅಭಯವನ್ನು, ಮುಂದಿನ ಎಡಗೈ ಜೀವಗಳ ಮುಕ್ತಿಗಾಗಿ ಮೇಲೆ ಎತ್ತಿರುವ ಕಾಲಿನ ಕಡೆಗೆ ಸಂಕೇತವನ್ನು, ಬಲಗಾಲ ಕೆಳಗೆ ಬಿದ್ದಿರುವ ಅಪಸ್ಮಾರ ಅಥವಾ ಮಯಲಕ ಹೆಸರಿನ ದೈತ್ಯ ಅವಿದ್ಯೆ ಮತ್ತು ಅಜ್ಞಾನದ ನಾಶವನ್ನು, ಸುತ್ತಲಿನ ಚಕ್ರ ಮಾಯಾಚಕ್ರವನ್ನು, ಚಕ್ರಕ್ಕೆ ತಗಲಿಸಿರುವ ಕೈಕಾಲು ಮಾಯೆಯನ್ನು ಪವಿತ್ರಗೊಳಿಸುವುದನ್ನು, ಚಕ್ರದಿಂದ ಹೊರಡುವ ಜ್ವಾಲೆಗಳಿಂದ ಹೊರಹೊಮ್ಮುವ ಐದು ಸ್ಪುಲ್ಲಿಂಗಗಳು ಸೂಕ್ಷ್ಮ ಪಂಚತತ್ವಗಳನ್ನು ಪ್ರತಿಪಾಡಿಸುತ್ತವೆ. ಆನಂದ ತಾಂಡವದ ಒಂದು ಭಂಗಿಯೇ ಇಷ್ಟಾದರೆ ಸಂಪೂರ್ಣ ತಾಂಡವದ ಅದರಲ್ಲೂ ಅದರ ಎಲ್ಲಾ ಏಳು ಪ್ರಕಾರಗಳ ಗೂಢತೆ ಎಷ್ಟಿರಬಹುದು?

          ಅವನ ನಾಟ್ಯ ನಮ್ಮೊಳಗೇ ಇರುವಂತಹದ್ದು. ಅದನ್ನು ದರ್ಶಿಸುವವನಿಗೆ ಮಾಯೆಯೆ ಮೋಹ ಮುಸುಕದು. "ಮೇರು ಪ್ರಜ್ಞೆ"ಯನ್ನು ತಲುಪಿ ಆತ್ಮಾನಂದವನ್ನು ಅನುಭವಿಸುತ್ತಿರುವ ಮೌನಿ ಯೋಗಿಗಳು, ಕಟ್ಟಿರುವ ಈ ಮೂರು ಬಂಧಗಳನ್ನು ಬಿಚ್ಚಿ ವೇದಾಂತದ ತುತ್ತ ತುದಿ ತಲುಪಿದ, ಶಿವನ ಕೃಪೆಗೆ ಪಾತ್ರರಾದ ನಿಶ್ಚಲರು. ಶಿವ ಸ್ಮಶಾನದಲ್ಲಿ ನೃತ್ಯ ಮಾಡುತ್ತಾ ಜಗತ್ತನ್ನು ನಾಶಮಾಡುವುದಲ್ಲ. ಅವನು ನಮ್ಮ ಆತ್ಮದಲ್ಲಿ ನರ್ತಿಸುತ್ತಾ ಅಹಂ-ಮೋಹ-ಮಾಯೆಗಳನ್ನು ನಾಶ ಮಾಡುತ್ತಾನೆ. ಅಹಂನ ಕಾರಣದಿಂದ ಮಾಯಾ ಜಗತ್ತಿಗೆ ಬರುವುದು, ಮಾಯೆಯ ಮೋಹಕ್ಕೆ ಸಿಲುಕಿ ಮತ್ತೆ ಅಹಂಗೊಳಗಾಗುವುದು, ಮತ್ತೆ ಮಾಯಾ ಜಗತ್ತಿಗೆ ಬರುವುದು. ಪುನರಪಿ ಜನನಂ ಪುನರಪಿ ಮರಣಂ. ಅಹಂ ಪೊರೆ ಕಳಚಿದಾಗ ಶಿವನಾಗುವುದು. ಯಾವಾಗ "ನಾನು" ಅಳಿಯುವುದೋ ಆಗ "ನಾನು" ಯಾರೆಂದು ತಿಳಿಯುವುದು, ಶಿವನಾಗುವುದು ಎಂದರೆ ಇದೇ ಅಲ್ಲವೇ? ಎಷ್ಟು ಲಯವಿದೆ ಇಲ್ಲಿ! ನಮ್ಮೊಳಗೆ ನಡೆವ ನಾಟ್ಯ ಪಾಪವನ್ನು ಕಳೆಯಲು ಇರುವಂತಹದ್ದು. ಶಿವ ನಮ್ಮನ್ನು ಆವರಿಸಿರುವ ಮಾಯೆಯ ಪೊರೆಯನ್ನು ದೂರ ಮಾಡುತ್ತಾನೆ. ಕರ್ಮ ಬಂಧನವನ್ನು ಕಳಚುತ್ತಾನೆ. ಅವಿದ್ಯೆಯನ್ನು ದೂರ ಮಾಡಿ ಶಾಶ್ವತ ಆನಂದವನ್ನು, ಜ್ಞಾನವನ್ನು ಕರುಣಿಸುತ್ತಾನೆ. ಈ ಶಾಶ್ವತ ನಾಟ್ಯವನ್ನು ಯಾರು ತಮ್ಮೊಳಗೇ ಕಂಡುಕೊಳ್ಳುತ್ತಾರೋ ಅವರು ಮತ್ತೆ ಮತ್ತೆ ಹುಟ್ಟುವುದರಿಂದ ತಪ್ಪಿಸಿಕೊಳ್ಳುತ್ತಾರೆ.

         ಶಿವನ ಲೀಲೆಯನ್ನು ವರ್ಣಿಸುವ "ಉನೈವಿಳಕ್ಕಮ್"ಗೆ ಸಂವಾದಿಯಾಗಿ ಕುಮಾರ ಸ್ವಾಮಿಯವರು Skryabin ಕವಿಯ "Poem of Ecstasy" ಯ ಕೆಲವು ಸಾಲುಗಳನ್ನು ಉದ್ಧರಿಸುತ್ತಾರೆ. ಹಾಗೆ ಉದ್ಧರಿಸುವಾಗ ಪುರುಷ, ಯೋಗ-ಮಾಯಾ, ಆನಂದ, ಪ್ರಕೃತಿ. ಸ್ವಭಾವ, ಲೀಲೆ, "ನೇತಿ-ನೇತಿ" ಇತ್ಯಾದಿ ಭಾವಗಳನ್ನು ಆರೋಪಿಸುತ್ತಾರೆ. "ಪುರುಷ ನರ್ತಿಸುತ್ತಿದ್ದಾನೆ, ಯೋಗಮಾಯೆ ಪುರುಷನ ಜೊತೆಗೂಡಿ ಎಲ್ಲವನ್ನೂ ಸೃಷ್ಟಿಸುತ್ತಿದ್ದಾಳೆ..." ಹೀಗೆ ಸಾಗುತ್ತದೆ ಕವನ. ಕೊನೆಗೆ "ನಾನು ಎಲ್ಲವನ್ನೂ ನಿರಾಕರಿಸುತ್ತೇನೆ. ಹಾಗೆ ನಿರಾಕರಿಸುತ್ತಾ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಆನಂದವನ್ನು ಪಡೆಯುತ್ತೇನೆ. ಯಾವುದು ಕೆಡುಕೆಂದು ಕಂಡಿದ್ದೆನೋ ಅದೀಗ ಜೀವನೋತ್ಸಾಹವಾಗಿಬಿಟ್ಟಿದೆ." ಶಿವನ ನಾಟ್ಯ ನಿರಂತರ, ಸ್ವಭಾವಗತ, ಅನುದ್ದೇಶಿತ, ಮೋಕ್ಷದಾಯಕ ಎನ್ನುವಾಗಲೇ ಭಾರತೀಯ ಕಲೆಗೆ ಅಧ್ಯಾತ್ಮವೇ ಮೂಲ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ ಆನಂದ ಕುಮಾರಸ್ವಾಮಿ. ಅಲ್ಲದೆ ಕಲೆಗೆ ನೇರ ಸಂಬಂಧವಿರುವ ಅಧ್ಯಾತ್ಮದಿಂದ ಅವರು ಪ್ರಭಾವಿತರಾಗುತ್ತಾರೆ. ಕಲೆಯ ವೈಶಿಷ್ಟ್ಯವೇ ಅದು. ಯಾರು ಒಳಹೊಕ್ಕು ನೋಡುತ್ತಾನೋ, ಅವನನ್ನು ಅದು ಅಪ್ಪಿ ಹಿಡಿಯುತ್ತದೆ.

               ಪಂಚಾಕ್ಷರಿಯನ್ನು, ಅದರ ಮಹತ್ವವನ್ನು, ಯಾವುದರಿಂದ ಶಿವತಾಂಡವವು ಬೇರ್ಪಡುವುದಿಲ್ಲವೋ ಅಂತಹ ಓಂಕಾರವನ್ನು ಸ್ವಾಮಿ ಪಿಳ್ಳೈಯವರ ವಿವರಣೆಯೊಂದಿಗೆ ದಾಖಲಿಸುತ್ತಾರೆ ಕುಮಾರಸ್ವಾಮಿ. "ಮೊದಲ ನಾಟ್ಯ ಶಕ್ತಿಯದ್ದು - ಅದು ಓಂಕಾರ, ಕಾಳಿಯ ನೃತ್ಯ. ಎರಡನೆಯದ್ದು ಶಿವನದ್ದು, ಓಂಕಾರದಿಂದ ಬೇರ್ಪಡಿಸಲಾಗದ್ದು(ಅರ್ಧಮಾತ್ರಾ ಹಾಗೂ ತುರೀಯಮ್). ಶಿವನಿಚ್ಛೆಯಿಲ್ಲದೆ ಮೊದಲ ನಾಟ್ಯವು ನಡೆಯದು. ಪ್ರಕೃತಿ-ಪುರುಷರ(ಶಿ-ವ & ನ-ಮ) ಈ ನಾಟ್ಯದ ನಡುವೆ ಇರುವವು ಜೀವಾತ್ಮಗಳು(ಯ). ಶಿವ ತಾಂಡವವೆಂದರೆ ಅದು ವಿಶ್ವದ ಸ್ಥಿತಿಯ ಮೂಲ. ಜೀವಿಗಳ ಭವಬಂಧನವನ್ನು ಬಿಡಿಸುವುದೇ ಅದರ ಉದ್ದೇಶ. ಚಿದಂಬರಂ(ಆಧ್ಯಾತ್ಮಿಕ ಹೃದಯ)ವೇ ಅದರ ಕೇಂದ್ರ.

       ಮೊಟ್ಟ ಮೊದಲು ಶಿವನ ನಾಟ್ಯದ ಬಗೆಗೆ ಋಷಿಮುನಿಗಳಿಗೆ ಆದ "ದರ್ಶನ", ಅವರ ಚಿಂತನ-ಮಂಥನ, ಅವರು ಆಗ ಅನುಭವಿಸಿದ ಮಹದಾನಂದ, ಜೀವನದ ಸತ್ಯವನ್ನು ಅವರು ಕಂಡುಕೊಂಡ ರೀತಿ, ಶತಶತಮಾನಗಳು ಕಳೆದರೂ ಆ ಸತ್ಯ ಜಗತ್ತೇ ಒಪ್ಪುವಂತೆ ಸ್ಥಿರವಾಗಿರುವ ಬಗ್ಗೆ ಕುಮಾರಸ್ವಾಮಿಯವರು ರೋಮಾಂಚನಗೊಳ್ಳುತ್ತಾರೆ. ಬ್ರಹ್ಮನ ರಾತ್ರಿಕಾಲದಲ್ಲಿ ನಿಶ್ಚಲವಾಗಿದ್ದ ಪ್ರಕೃತಿ ಶಿವನು ಬಯಸುವ ತನಕ ನಾಟ್ಯದಲ್ಲಿ ತೊಡಗದು. ಶಿವನು ಆನಂದದ ಉನ್ಮಾದದಿಂದ ಎದ್ದಾಗ ಅವನ ತಾಂಡವದಿಂದ ಉಂಟಾಗುವ ಸ್ಪಂದನ ತರಂಗಗಳಿಂದ ಎಚ್ಚೆತ್ತು ಅವನ ಸುತ್ತಲೂ ವೈಭವಯುತವಾಗಿ ನರ್ತಿಸಲಾರಂಭಿಸುತ್ತದೆ. ನರ್ತಿಸುತ್ತಲೇ ಪ್ರಕೃತಿಯ ಅಸಂಖ್ಯ ಪ್ರಕಟರೂಪಗಳನ್ನು ಧಾರಣೆ ಮಾಡುವ ಶಿವ ಕಾಲದ ಆದ್ಯಂತ ನರ್ತಿಸುತ್ತಲೇ ನಾಮರೂಪಗಳನ್ನೆಲ್ಲಾ ಸಂಹರಿಸಿ ಹೊಸತೊಂದು ವಿಶ್ರಾಂತಿಯ ಅವಸ್ಥೆಗೆ ಕಳುಹುತ್ತಾನೆ. ಈ ನರ್ತನ ಕಾವ್ಯವೂ ಹೌದು, ವಿಜ್ಞಾನವೂ ಹೌದು. ಅದು ಪುರುಷ-ಪ್ರಕೃತಿಗಳ ಸತ್ತ್ವ ಚಲನೆಯ, ಕ್ರಿಯೆಯ ವಿಕಾಸದ ಒಂದು ಅಭಿವ್ಯಕ್ತಿ. ಯುಗಯುಗಗಳಿಂದ ದಾಟಿ ಬಂದಿರುವ ಒಂದು ನೈಜವಾದ ಸೃಜನ ಶಕ್ತಿ. ಆಧ್ಯಾತ್ಮಿಕ ಕಾವ್ಯವನ್ನು ರೂಪಿಸುವ ನಾದ ಮತ್ತು ಲಯಗಳ ಮೂರ್ತ ರೂಪ. ಸತ್ತೆಯ ಏಕತೆಯನ್ನರುಹುವ ಶಿವನ ತಾಂಡವದ ವೈಶ್ವಿಕ ಲಯವು ಪ್ರಾಣಗರ್ಭಿತ ವಸ್ತುದ್ರವ್ಯವನ್ನು ಸೆಳೆದು ಅನಂತ ಸೌಂದರ್ಯೋಪೇತ ವೈವಿಧ್ಯವನ್ನು ಪ್ರಕಟೀಕರಿಸುತ್ತದೆ. ಶಿವನ ಈ ನೃತ್ಯ ರೂಪಕವು  ಆಧ್ಯಾತ್ಮಿಕ, ಕಲಾತ್ಮಕ, ತಾತ್ವಿಕ, ವೈಜ್ಞಾನಿಕ ವಲಯಗಳೆಲ್ಲವನ್ನೂ ಸಂಯುಕ್ತಗೊಳಿಸುವ ಶಕ್ತಿಯಿದ್ದ ಕಾರಣದಿಂದಲೇ ಇವೆಲ್ಲವನ್ನೂ ಪ್ರಭಾವಿಸಿತು. ಧಾರ್ಮಿಕರಿಗೆ ಆರಾಧನೆಯ ವಿಧಾನವಾಗಿ ಗೋಚರಿಸಿದರೆ, ಕಲಾವಿದರಿಗೆ ಕಲೆಯ ಮೂಲವಾಗಿ ಗೋಚರಿಸಿತು. ತತ್ವಶಾಸ್ತ್ರಜ್ಞರಿಗೆ ಸೃಷ್ಟಿಯ ಉಗಮದ ರಹಸ್ಯವನ್ನು ಉಣಿಸಿತು. ಭೌತ ಶಾಸ್ತ್ರಜ್ಞ ಫ್ರಿಟ್ಜೊಪ್ ಕಾಪ್ರಾನಂತಹವರಿಗೆ ದ್ರವ್ಯರಾಶಿಯ ಸೂಕ್ಷ್ಮಾಣುಕಣಗಳ ನರ್ತನವಾಗಿ ಹೊಸದೃಷ್ಟಿ ನೀಡಿದರೆ ಕಾರ್ಲಸಗನ್ ಶಿವನ ರೂಪದಲ್ಲಿ ಆಧುನಿಕ ಖ-ಭೌತೀಯ ಕಲ್ಪನೆಗಳ ಪೂರ್ವಸೂಚನೆಯನ್ನು ಕಂಡ. ಆನಂದ ಕುಮಾರಸ್ವಾಮಿಯವರಿಗೆ ಭಾರತೀಯ ಕಲೆಯ ಮೂಲವಾಗಿ ಅದು "ದರ್ಶನ" ಕೊಟ್ಟಿತು.



ಗುರುವಾರ, ಡಿಸೆಂಬರ್ 8, 2016

ಯಾರು ಮಹಾತ್ಮ? ಭಾಗ-೩೦

ಯಾರು ಮಹಾತ್ಮ?
ಭಾಗ-೩೦


              ತಾವು ಎರಡನೇ ಮಹಾಯುದ್ಧದಲ್ಲಿ ನೋಡಿದ್ದುದಕ್ಕಿಂತಲೂ ಎಷ್ಟೋ ಪಟ್ಟು ಭೀಕರತೆ ವಿಭಜನೆ ಸಂದರ್ಭದಲ್ಲಿ ನಡೆಯಿತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳು. ಮತಾಂಧತೆಯ ಬರ್ಬರತೆಯನ್ನು ಪ್ರತ್ಯಕ್ಷವಾಗಿ ಕಂಡ ತನ್ನ ಪ್ರತಿನಿಧಿಗಳ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ "ಭಾರತದಲ್ಲಿ ಮಳೆಯ ನೀರಿನಂತೆ ರಕ್ತದ ಕೋಡಿಯೇ ಹರಿಯುತ್ತಿದೆ" ಎಂದು ದಾಖಲಿಸಿತು. ಪಾಕಿಸ್ತಾನದಿಂದ ಇರುವೆ ಸಾಲಿನಂತೆ ಬರುತ್ತಿತ್ತು ನಿರಾಶ್ರಿತರ ದಂಡು. ಇಂತಹ ಒಂದು ನಿರಾಶ್ರಿತರ ಸಮೂಹದಲ್ಲಿ ಎಂಟು ಲಕ್ಷ ಜನರಿದ್ದರು! ಇದು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಜನಸಂಖ್ಯಾ ವಿನಿಮಯ. ಬೆಳಗಿನಿಂದ ಸಂಜೆಯವರೆಗೆ ಪರಿಶೋಧನೆ ನಡೆಸಿ ನಿರಾಶ್ರಿತರ ಸಾಲಿನ ಗಾತ್ರ, ಅದರ ಪ್ರಗತಿಯ ವಿವರಗಳನ್ನು ಗಂಟೆಗೊಮ್ಮೆ ನೀಡಲು ವಾಯುಸೇನೆಯ ವಿಮಾನಗಳು ನಿಯೋಜನೆಗೊಂಡಿದ್ದವು. ವಿಮಾನ ವೀಕ್ಷಣೆ ಸಮಯದಲ್ಲಿ ಇರುವೆ ಸಾಲುಗಳಂತೆ ಬರುವ ಜನ ಒಂದು ಕಡೆಯಾದರೆ ಹೊತ್ತಿ ಉರಿಯುತ್ತಿರುವ ಹಳ್ಳಿಗಳು ಇನ್ನೊಂದೆಡೆ ಗೋಚರಿಸುತ್ತಿದ್ದವು. ಗಂಟೆಗೆ ಇನ್ನೂರು ಕಿಮೀ ವೇಗದಲ್ಲಿ ಹದಿನೈದು ನಿಮಿಷ ಹೋದರೂ ನಿರಾಶ್ರಿತರ ಸಾಲು ಕೊನೆಯಾಗಲಿಲ್ಲ ಎಂದು ಓರ್ವ ಪೈಲಟ್ ಉಲ್ಲೇಖಿಸಿದ್ದಾನೆ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)

            ನಿಶ್ಯಕ್ತರಾದ ತಾಯಿ, ಪತ್ನಿ, ಮಕ್ಕಳು, ವೃದ್ಧರನ್ನು ತಲೆಯ ಮೇಲೆ ಹೆಗಲ ಮೇಲೆ ಹೊತ್ತು ಪುರುಷರು ಸಾಗುತ್ತಿದ್ದರು. ಕಣ್ಣು, ಕೈ ಕಾಲು ಕಳೆದುಕೊಂಡವರ ಸಂಖ್ಯೆಯೇ ದಿಗಿಲು ಹುಟ್ಟುವಷ್ಟಿತ್ತು. ಗರ್ಭಿಣಿ ಸ್ತ್ರೀಯರು ಗಂಡಂದಿರ ಆಸರೆ ಪಡೆದಿದ್ದರು. ಮಾರ್ಗ ಮಧ್ಯೆಯೇ ಅನೇಕ ಹೆರಿಗೆಯೂ ಆಗುತ್ತಿತ್ತು. ಬಾಣಂತನವಿಲ್ಲದೆ ಆಶ್ರಯದ ಆಶೆಯಿಂದ ಆ ಪರಿವಾರಗಳು ನಿರಂತರವಾಗಿ ಮುಂದುವರಿಯುತ್ತಲೇ ಇದ್ದವು. ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಬಿಸಿಲ ಝಳಕ್ಕೆ ಸತ್ತವರೆಷ್ಟೋ? ಔಷಧ, ಶುಶ್ರೂಷೆಯಿಲ್ಲದೆ ಸತ್ತ ರೋಗಿಗಳೆಷ್ಟೋ? ರೋಗ ಬಂದು ಸತ್ತವರೆಷ್ಟೋ? ಮತಾಂಧ ಪುಂಡರಿಗೆ ಬಲಿಯಾದವರೆಷ್ಟೋ? ಮಲಿನವಾದ-ಹರಿದ ಅಂಗಿ, ಧೋತಿ, ಸೀರೆ, ಹರಿದ ಚಪ್ಪಲಿಗಳು, ಹಲವರಲ್ಲಿ ಅದೂ ಇಲ್ಲ, ಆಹಾರ ಸಿಗುವ ಸಂಭವವೂ ಇಲ್ಲ...ಎಂತಹಾ ದುರವಸ್ಥೆ! ಅವರಲ್ಲಿದ್ದುದು ಕೆಲವೇ ಕೆಲವು ಸಾಮಾನುಗಳು ಜೊತೆಗೇ ಶಿವನದ್ದೋ, ಗುರುನಾನಕರದ್ದೋ ಒಂದು ಪಟ ಅಷ್ಟೇ! ವಿಚಿತ್ರವೆಂದರೆ ಮನುಷ್ಯರ ಜೊತೆ ಸಾಕು ಪ್ರಾಣಿಗಳೂ ತಮ್ಮ ಒಡೆಯರ ದುಃಖದಲ್ಲಿ ಸಹಭಾಗಿಗಳಾಗಿದ್ದವು. ಕೆಲ ನಿರಾಶ್ರಿತ ರೈತರು ತಮ್ಮ ಮನೆ-ಕೃಷಿ ಸಾಮಗ್ರಿಗಳನ್ನು ತಮ್ಮ ಎತ್ತುಗಳು, ಕೋಣಗಳ ಮೇಲೆ ಹೇರಿದ್ದರು. ಅದು ಹಿಂದಿರುಗಿ ಬರಲಾಗದ ಪ್ರಯಾಣ! ಬದುಕಿನ ಅಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡೇ ಈ ಪ್ರಯಾಣ! ನಡುನಡುವೆ ಕಾಡುವ ಮತಾಂಧರ ದಾಳಿಗಳನ್ನೂ, ಹಸಿವು-ನೀರಡಿಕೆ, ಕಾಲರಾಗಳನ್ನು ಲೆಕ್ಕಿಸದ ಪ್ರಯಾಣ! ಅದು "ಹಸಿವು-ದುಃಖ-ಅನ್ಯಾಯ-ಅಸುರಕ್ಷತೆ-ಅಭಯ-ಹಾದಿಗಳ ಅಂತ್ಯವಿಲ್ಲದ" ಪ್ರಯಾಣ! ಅವರಿಗಿದ್ದ ಅಂತಿಮ ಆಶಾಕಿರಣ ಒಂದೇ...ಅದು ಭಾರತ! ಹಿಂದೂಸ್ಥಾನ! ಅಬ್ಬಾ ಅದೆಷ್ಟು ಜನರಿಗೆ ಈ ನಾಡು ಮಾತೃ ಪ್ರೇಮದ ಸಿಂಚನವನ್ನುಣಿಸಿದೆ? ಅದೆಷ್ಟು ಜನರಿಗೆ ಈ ನಾಡು ಭಯಮುಕ್ತವಾಗಿ, ಸುರಕ್ಷತೆಯ ತಾಣವಾಗಿ, ಅಂತಿಮ ಆಶಾವಾದವಾಗಿ ಕಂಡಿದೆ? ಜಗತ್ತಿಗೆ ಧರ್ಮವನ್ನೂ, ಮೌಲ್ಯವನ್ನೂ, ನೀತಿಯನ್ನೂ, ಜೀವನಪದ್ದತಿಯನ್ನೂ ಬೋಧಿಸಿದ ಹಿಂದೂಧರ್ಮವಲ್ಲದೆ ಇನ್ನಾರು ಜಗತ್ತಿನ ಅಸಹಾಯಕರಿಗೆ ರಕ್ಷಣೆ ಕೊಟ್ಟಾರು?

         ದಿನದಲ್ಲಿ ಕೆಲಬಾರಿ ವಿಮಾನದಿಂದ ಆಹಾರ ಪೊಟ್ಟಣಗಳನ್ನು ಕೆಳಗುದುರಿಸಲಾಗುತ್ತಿತ್ತು. ಅದೇ ಆ ನಿರಾಶ್ರಿತರಿಗಿದ್ದ ಆಶಾವಾದ. ಅದೂ ಸಿಕ್ಕಿದವರಿಗೆ ಸಿಕ್ಕಿತು. ಅಸಹಾಯಕರಿಗೆ ಅದೂ ದುರ್ಲಭವೇ. ನಾಯಿಯೊಂದು ಚಪಾತಿಯೊಂದನ್ನು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಸಿದುಕೊಳ್ಳಲು ಕೆಲ ನಿರಾಶ್ರಿತರು ನಾಯಿಯ ಬೆನ್ನಟ್ಟಿ ಹೋಗುತ್ತಿದ್ದರು. ಅದನ್ನು ನೋಡಿದ ಕ್ಯಾಪ್ಟನ್ ಅಟ್ಕಿನ್'ನ ಕರುಳು ಚುರುಕ್ಕೆಂದಿತು. ಕೆಲವರು ಮಕ್ಕಳನ್ನು ಕರೆದೊಯ್ಯಲಾಗದೇ ವಿಧಿಯ ಕೈಗೆ ಒಪ್ಪಿಸಿ ಮುಂದೆ ಸಾಗುತ್ತಿದ್ದ ದೃಶ್ಯವಂತೂ ಕರುಣಾಜನಕವಾಗಿತ್ತು. ರಸ್ತೆಯ ಬದಿಯಲ್ಲೊಂದು ಮಗು ತನ್ನ ಪುಟಾಣಿ ಮೃದು ಹಸ್ತಗಳಿಂದ ತಾಯಿಯ ಕೈಯನ್ನು ಹಿಡಿದೆಳೆಯುತ್ತಿತ್ತು. ಅದಕ್ಕೇನು ಗೊತ್ತು ತನ್ನ ತಾಯಿ ತನ್ನನ್ನು ಬಿಗಿದಪ್ಪಿಕೊಳ್ಳಲಾಗದ ಲೋಕಕ್ಕೆ ಹೋಗಿದ್ದಾಳೆಂದು! ಲಾಹೋರದಿಂದ ಅಮೃತಸರದವರೆಗಿನ ನಲವತ್ತೈದು ಮೈಲುಗಳ ಹಾದಿ ಅಕ್ಷರಶಃ ಸ್ಮಶಾನವೇ ಆಗಿತ್ತು. ಅಡಿಗಡಿಗೂ ಶವ ಸಿಗುತ್ತಿತ್ತು. ಹಲವರನ್ನು ಕೊಲ್ಲಲಾಗಿತ್ತು. ಕೆಲವರು ಅನ್ನಾಹಾರವಿಲ್ಲದೆ ಸಾವನ್ನಪ್ಪಿದ್ದರು, ಕೆಲವರು ಕಾಲರಾದಿಂದ, ಕೆಲವರು ಅಶಕ್ತತೆಯಿಂದ, ಇನ್ನು ಕೆಲವರು ಆಘಾತದಿಂದ!

         ಇವೆಲ್ಲದರ ನಡುವೆ ಇನ್ನೊಂದು ಆಘಾತ ಕಾದಿತ್ತು. ಆಗಸ್ಟ್ ಹಾಗೂ ಸೆಪ್ಟೆಂಬರುಗಳಲ್ಲಿ ಬಿರು ಬಿಸಿಲಿನಿಂದ ಬಳಲಿದ್ದ ನಿರಾಶ್ರಿತರ ಪ್ರಾರ್ಥನೆ ಎಂಬಂತೆ ಮಳೆ ಪ್ರಾರಂಭವಾಯಿತು. ಅದು ಎಂತಹ ಮಳೆ? ಕಳೆದೈವತ್ತು ವರ್ಷಗಳಲ್ಲಿ ದೇಶ ಕಂಡು ಕೇಳರಿಯದ ಧಾರಾಕಾರ ಮಳೆ. ಪಂಜಾಬದ ಐದೂ ನದಿಗಳೂ ಉಕ್ಕೇರಿ ಹರಿದವು ನಿರಾಶ್ರಿತರ ಕಣ್ಣೀರ ಧಾರೆಯೊಡನೆ! ರಾತ್ರೋರಾತ್ರಿಯ ಈ ಜಲಪ್ರಳಯದಲ್ಲಿ ನದಿಯ ಇಕ್ಕೆಲಗಳಲ್ಲಿ ಮಲಗಿ ನಿದ್ರಿಸುತ್ತಿದ್ದ ನಿರಾಶ್ರಿತರನ್ನು ನೀರು ತನ್ನ ತೆಕ್ಕೆಗೆ ಎಳೆದುಕೊಂಡಿತು. ಮನುಷ್ಯ, ಪ್ರಾಣಿ, ಸಜೀವ, ನಿರ್ಜೀವ ಎನ್ನದೇ ಎಲ್ಲವನ್ನೂ ನದಿಗಳು ತಮ್ಮೊಡಲಿಗೆ ಎಳೆದುಕೊಂಡವು. ಪ್ರವಾಹ ಕಡಿಮೆಯಾದ ಬಳಿಕ ನೋಡಿದರೆ ಹಲವಾರು ಶವಗಳು ನದಿಗಳ ಪಕ್ಕದ ಮರಗಳಲ್ಲಿ ನೇತಾಡುತ್ತಿದ್ದವು! ಸೆಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ಪೂರ್ವ ಪಂಜಾಬಿನಿಂದ ಹಿಂದೂ ನಿರಾಶ್ರಿತರ ದಂಡು ಪ್ರಯಾಣ ಆರಂಭಿಸಿತು. ಪ್ರತೀ ದಂಡಿನಲ್ಲಿ ನಲವತ್ತು ಸಾವಿರದಷ್ಟು ಜನವಿದ್ದರು. ಸೆಪ್ಟೆಂಬರ್ 18 - ಅಕ್ಟೋಬರ್ 20ರ ನಡುವೆ ಇಂತಹ 24 ದಂಡುಗಳು - ಸುಮಾರು 8,49,000 ಜನರು ಭಾರತದ ಗಡಿ ದಾಟಿದರು. ಲಿಯಾಲ್ ಪುರದಿಂದ ಎರಡು ಲಕ್ಷ ಜನರು ಪ್ರಯಾಣ ಆರಂಭಿಸಿದರು. ನಿರಾಶ್ರಿತರ ಸಾಲಿನ ಉದ್ದ ಐವತ್ತೇಳು ಮೈಲಿಗಳಷ್ಟಿತ್ತು. ಅವರಲ್ಲಿ ಹಲವರು ಮತಾಂಧರಿಗೆ ಬಲಿಯಾದರು. ಕೆಲವರು ಕಾಲರಾ ಹಾಗೂ ಉಳಿದವರು ಪ್ರವಾಹಕ್ಕೆ ಬಲಿಯಾದರು. ಮತಾಂಧರ ಪೈಶಾಚಿಕತೆ ಎಷ್ಟಿತ್ತೆಂದರೆ ನಿರಾಶ್ರಿತರ ಆಸ್ಪತ್ರೆಗಳಲ್ಲಿ ಮಹಿಳೆಯರ ಸ್ತನಗಳಿಂದ ಗುಂಡುಗಳನ್ನು ಹೊರತೆಗೆಯಲಾಗುತ್ತಿತ್ತು. ಸೆಪ್ಟೆಂಬರ್ ಹದಿನಾಲ್ಕರಂದು ದೆಹಲಿಯಲ್ಲಿ ಸುರಿದ ಮಳೆಗೆ ನಿರಾಶ್ರಿತ ಶಿಬಿರಗಳಲ್ಲಿದ್ದವರು ಮೊಣಕಾಲೆತ್ತರದ ನೀರಿನಲ್ಲಿ ರಾತ್ರಿ ಕಳೆಯಬೇಕಾಯಿತು. (ಮಹಾತ್ಮ ಗಾಂದಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್).

           ಲಾಹೋರ್-ಕರಾಚಿ ಹೆದ್ದಾರಿಯಲ್ಲಿ ಉಕ್ರಾನಾ ಎನ್ನುವ ಮುಸ್ಲಿಮ್ ಬಾಹುಳ್ಯದ ನಗರವೊಂದಿತ್ತು. ಭಾರತೀಯ ನೌಕಾದಳದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಹಿಂದೂ ತರುಣನೊಬ್ಬ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದಿದ್ದ. ಸ್ವಾತಂತ್ರ್ಯ ಬಂದಾಗ ಉಳಿದ ಕಡೆಯಲ್ಲಿದ್ದಂತೆ ಆ ನಗರದಲ್ಲೂ ಮುಸಲ್ಮಾನರು ಉನ್ಮತ್ತರಂತೆ ಕುಣಿಯತೊಡಗಿದ್ದರು. "ಹಸ್ ಕೇ ಲಿಯಾ ಪಾಕಿಸ್ತಾನ್, ಲಡ್ ಕೇ ಲೇಂಗೇ ಹಿಂದೂಸ್ಥಾನ್" ಎನ್ನುವ ಘೋಷಣೆ ಪ್ರತಿಧ್ವನಿಸುತ್ತಿತ್ತು. ಆತ ತನ್ನ ಚಿಕ್ಕಪ್ಪ-ಚಿಕ್ಕಮ್ಮರೊಂದಿಗೆ ಬಸ್ಸಿನಲ್ಲಿ ಭಾರತದತ್ತ ಹೊರಟೇ ಬಿಟ್ಟ. ಆತನ ತಂದೆ ಜ್ಯೋತಿಷಿ ಹೇಳಿದ ಹೊರಡುವ ಶುಭಗಳಿಗೆಗಾಗಿ ಕಾಯುತ್ತಾ ಹಿಂದೆಯೇ ಉಳಿದ. ಕ್ಷಣ ಹೊತ್ತಲ್ಲೇ ಪಾಕ್ ಸೈನಿಕರು ಬಸ್ಸನ್ನು ತಡೆದು ಸರ್ವಸ್ವವನ್ನೂ ಲೂಟಿ ಮಾಡಿ ಬಸ್ಸನ್ನು ಹೋಗಗೊಟ್ಟರು. ಹೀಗೆ ಆತ ಉಟ್ಟಬಟ್ಟೆಯಲ್ಲಿ ಭಾರತದ ನೆಲ ಪ್ರವೇಶಿಸಿದಾಗ ತನ್ನ ತಂದೆ ರೈಲು ಸ್ಫೋಟದಲ್ಲಿ ಗಾಯಗೊಂಡ ಸುದ್ದಿ ತಿಳಿಯಿತು. ಗಾಯಾಳುಗಳಿಂದ ಕಿಕ್ಕಿರಿದು ತುಂಬಿದ್ದ ಆ ವಾರ್ಡು ಆತನಿಗೆ ಪರಿಸ್ಥಿತಿಯ ಭಯಾನಕ ಚಿತ್ರಣವನ್ನು ಕಟ್ಟಿಕೊಟ್ಟಿತ್ತು! ಮೈ ತುಂಬಾ ಬ್ಯಾಂಡ್-ಏಡ್ ಹಾಕಿಕೊಂಡ ಆತನ ತಂದೆ ಕಂಪಿಸುತ್ತಿದ್ದ. ಆಸ್ಪತ್ರೆಯಿಂದ ಹೊರಬಂದಾಗಲೂ ಆತನಿಗೆ ತನ್ನ ಅಂಗಹೀನ ತಂದೆಯ ಚಿತ್ರವೂ, ಅಸಂಖ್ಯಾತ ಹಿಂದೂಗಳ ಅಸಹಾಯಕ ಚಿತ್ರವೇ ಕಾಣುತ್ತಿತ್ತು, ಕಾಡುತ್ತಿತ್ತು! ಅವನಾಗಲೇ "ಸೇಡು ತೀರಿಸದೇ ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ. ಅವನು ಮದನ್ ಲಾಲ್ ಪಹವಾ! (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್)













ಬುಧವಾರ, ಡಿಸೆಂಬರ್ 7, 2016

ಯಾರು ಮಹಾತ್ಮ? ಭಾಗ-೨೯

ಯಾರು ಮಹಾತ್ಮ?
ಭಾಗ-೨೯


               ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು ಒಂದು ಹಾಲು ಕರೆವ ದನ ಅಷ್ಟೇ. ಆ ಹಳ್ಳಿಯಲ್ಲಿ 600 ಮುಸ್ಲಿಮರಿದ್ದರೆ. ಹಿಂದೂಗಳ ಸಂಖ್ಯೆ ಕೇವಲ ಐವತ್ತು! ವಿಭಜನೆಯ ಹೊತ್ತಲ್ಲಿ ಒಂದು ದಿನ ಇವರ ಮನೆಯನ್ನು ಸುತ್ತುವರಿದ ಗುಂಪು "ಪಾಕಿಸ್ತಾನ ತ್ಯಜಿಸಿ, ಇಲ್ಲವಾದರೆ ಕೊಲ್ಲುತ್ತೇವೆ" ಎಂದು ಘೋಷಣೆ ಕೂಗಿತು. ಆ ಕುಟುಂಬ ತಕ್ಷಣ ಗ್ರಾಮದ ಸಿಖ್ ಪ್ರಮುಖನ ಮನೆಗೆ ಓಡಿತು. ಆ ಗುಂಪು ಇವರ ಮನೆಗೆ ಬೆಂಕಿ ಹಚ್ಚಿ ಅಟ್ಟಿಸಿಕೊಂಡು ಬಂದಿತು. ನೋಡಿದರೆ ಅಲ್ಲಿದ್ದ ಎಲ್ಲಾ ಸಿಖ್ ಮನೆಗಳು ಆಗಲೇ ಹೊತ್ತಿ ಉರಿಯುತ್ತಿತ್ತು. ಒಬ್ಬ ಸಿಖ್ಖನ ಗಡ್ಡಕ್ಕೆ ಬೆಂಕಿ ಕೊಟ್ಟರು. ಅಂತಹ ಸ್ಥಿತಿಯಲ್ಲೂ ಆತ ಇಟ್ಟಿಗೆಯೊಂದನ್ನು ಬೆಂಕಿ ಹಚ್ಚಿದವನ ತಲೆಗೆ ಗುರಿಯಿಟ್ಟು ಹೊಡೆದು ಕೊಂದು ಗುರುನಾನಕರ ನಾಮಸ್ಮರಣೆ ಮಾಡುತ್ತಾ ಕುಸಿದು ಬಿದ್ದು ಸತ್ತ. ಕುಲದೀಪ್ ಆ ಮನೆಯ ಛಾವಣಿ ಏರಿದ. ಅಲ್ಲಿ ಅಂಗಳದಲ್ಲಿ ಸಿಖ್ ಪುರುಷರನ್ನು ತಲವಾರಿನಿಂದ ಕತ್ತರಿಸುತ್ತಿದ್ದರು. ಅದನ್ನು ಮನೆಯ ಛಾವಣಿ ಮೇಲೆ ನಿಂತು ನೋಡುತ್ತಿದ್ದ ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಕ್ಕಿಂತ ಸಾಯುವುದು ಲೇಸು ಎಂದರಿತ ಆ ಮಹಿಳೆಯರ ಗುಂಪು ದೊಡ್ಡ ಬೆಂಕಿಯೊಂದನ್ನು ಹತ್ತಿಸಿ ಮಕ್ಕಳೊಂದಿಗೆ ಅಗ್ನಿಪ್ರವೇಶ ಮಾಡಿದರು. ಆ ಗುಂಪು ಇಬ್ಬರು ಹುಡುಗಿಯರನ್ನು ಎತ್ತಿಕೊಂಡು ಹೋಗುತ್ತಿದ್ದುದನ್ನು ಕುಲದೀಪ್ ನೋಡಿದ. ಕತ್ತಲೆಯಾಗುತ್ತಿದ್ದಂತೆ ಆತ ಮೆಲ್ಲನೆ ಛಾವಣಿಯಿಂದಿಳಿದು ಮರವೊಂದನ್ನೇರಿ ಆರು ತಾಸು ಕುಳಿತ. ಎಲ್ಲರೂ ಹೋದ ಮೇಲೆ ತಡರಾತ್ರಿ ಮರದಿಂದ ಇಳಿದ ಆತ ಮನೆಯೊಳಗೆ ಬಿದ್ದಿದ್ದ ರಕ್ತಸಿಕ್ತ ಚಾಕುವಿನಿಂದ ತಲೆಗೂದಲನ್ನು ಮುಸ್ಲಿಮರಂತೆ ಕತ್ತರಿಸಿ ಅಲ್ಲಿಂದ ತಪ್ಪಿಸಿಕೊಂಡ. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್).

               ವಿಭಜನೆಯ ಸಂದರ್ಭದಲ್ಲಿ ಲೆಖ್ಖವಿಲ್ಲದಷ್ಟು ಅತ್ಯಾಚಾರಗಳು ನಡೆದವು. ಹಿಂದೂಗಳ ಮನೆಗಳು, ನಿರಾಶ್ರಿತರ ಶಿಬಿರಗಳು, ರೈಲುಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹೊತ್ತೊಯ್ಯಲಾಯಿತು. ಹಿಂದೂ ಮಹಿಳೆಯರ ಸ್ತನಗಳನ್ನು ಕತ್ತರಿಸಿ ಅವರನ್ನು ಕೊಲೆಗೈಯ್ಯಲು ಕರೆದೊಯ್ಯುತ್ತಿದ್ದ ಮತಾಂಧ ಗುಂಪೊಂದನ್ನು ಪಂಜಾಬ್ ಗಡಿ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಯೊಬ್ಬ ಕಣ್ಣಾರೆಕಮ್ಡು ಬೆಚ್ಚಿಬಿದ್ದ. ಮಹಿಳೆಯರನ್ನು ಅಪಹರಿಸಿದ ಬಳಿಕ ಅಪಹರಣಕಾರನ ಮನೆಯಲ್ಲಿ ಉಳಿಸಿಕೊಳ್ಳಲು ಅವರನ್ನು ಬಲವಂತವಾಗಿ ಮತಾಂತರಿಸಲಾಗುತ್ತಿತ್ತು. ಗೋಮಾಂಸ ತಿನ್ನಿಸಿ, ಕುರಾನ್ ಹೇಳಿಸಿ ಕೇಕೆ ಹಾಕಿ ಕುಣಿಯಲಾಗುತ್ತಿತ್ತು. ಅವಳ ಹೆಸರು ಬದಲಾಯಿಸಿ ಮುಸ್ಲಿಮ್ ಹೆಸರು ಇಡಲಾಗುತ್ತಿತ್ತು. ಮತ್ತೆ ಸಾಲು ಸಾಲು ಅತ್ಯಾಚಾರ! ಕೆಲವರನ್ನು ಹರಾಜು ಹಾಕಲಾಗುತ್ತಿತ್ತು. ಮಿಯಾನ್ ವಾಲಿಯ ವಕೀಲನ ಮಗಳು ಹದಿನಾರು ವರ್ಷದ ನಂದಲಾಲಳನ್ನು ಅಪಹರಿಸಿ ಆ ಗ್ರಾಮದ ಮುಸ್ಲಿಮ್ ಪ್ರಮುಖನ ಮನೆಗೆ ಒಯ್ಯಲಾಯಿತು. ಆಕೆಗೆ ಹೊಡೆದು ಬಲವಂತವಾಗಿ ಗೋಮಾಂಸ ತಿನ್ನಿಸಲಾಯಿತು. ಕುರಾನ್ ಸಾಲುಗಳನ್ನು ಹೇಳಿ ಪುನರಾವರ್ತಿಸುವಂತೆ ಒತ್ತಾಯಿಸಲಾಯಿತು. ಆಕೆಯ ಹೆಸರು ಬದಲಾಯಿಸಿ "ಅಲ್ಲಾ ರಕಿಯಾ"(ದೇವರಿಂದ ರಕ್ಷಿಸಲ್ಪಟ್ತವಳು) ಎಂಬ ಹೆಸರಿಡಲಾಯಿತು. ಆಕೆಯನ್ನು ಹರಾಜು ಹಾಕಿದಾಗ ಮರಕೆಲಸದವನೊಬ್ಬ ಆಕೆಯನ್ನು ಖರೀದಿಸಿದ. ಪೂರ್ವ ಮತ್ತು ಪಶ್ಚಿಮ ಪಂಜಾಬಿನ ಹಳ್ಳಿಹಳ್ಳಿಗಳನ್ನೇ ದೋಚಲಾಯಿತು. ದೋಚಿದ ವಸ್ತುಗಳನ್ನು ಮುಸ್ಲಿಮರೊಳಗೆ ಹಂಚಲಾಗುತ್ತಿತ್ತು. ಶಿಶುಗಳನ್ನು ಅಪ್ಪಿಕೊಂಡಿದ್ದಂತೆಯೇ ಪುರುಷ ಸ್ತ್ರೀಯರನ್ನು ಹತ್ಯೆಗೈಯಲಾಯಿತು. ಹಳ್ಳಿಗಳೆಲ್ಲಾ ಹೊತ್ತಿ ಉರಿಯುತ್ತಿದ್ದವು. (ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್ ; ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ).

          ಇದೇ ರೀತಿಯ ಹತ್ಯೆ, ಅತ್ಯಾಚಾರಗಳು ಪೂರ್ವ ಬಂಗಾಲದಲ್ಲೂ ನಡೆದವು. ಝೇಲಂನಲ್ಲಿ ಪುರುಷರನ್ನು ಬೇರ್ಪಡಿಸಿ ಗರಗಸದಿಂದ ಕೊಯ್ಯಲಾಯಿತು. ಒಂದು ವರದಿಯ ಪ್ರಕಾರ ಗುಜರಾತ್ ಪ್ರದೇಶದಲ್ಲೇ ಅಪಹರಣಕ್ಕೊಳಗಾದ ಹುಡುಗಿಯರ ಸಂಖ್ಯೆ 4000. ಅವರನ್ನು ಹರಾಜು ಹಾಕಲಾಯಿತು. ವರದಿಯಾಗದಿದ್ದುದೆಷ್ಟೋ? ಭಾರತದ ಸೀಮೆಯೊಳಗಿದ್ದ ಗುಜರಾತಿನಲ್ಲೇ ಈ ಪರಿಸ್ಥಿತಿಯಾದರೆ ಪಾಕಿಸ್ತಾನಕ್ಕೆ ಸೇರಿದ್ದ ಪ್ರಾಂತ್ಯಗಳಲ್ಲಿ ಹಿಂದೂಗಳ ಬದುಕು ಅದೆಷ್ಟು ಶೋಚನೀಯವಾಗಿರಲಿಕ್ಕಿಲ್ಲ? (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್ ಬಾಲಿ)

         ಪಶ್ಚಿಮ ಪಾಕಿಸ್ತಾನದ ಹಳ್ಳಿಯೊಂದರಲ್ಲಿ ತಮ್ಮ ಮೇಲೆ ದಾಳಿ ಮಾಡಿದ ಮತಾಂಧ ಗುಂಪುಗಳ ವಿರುದ್ಧ ಸರ್ದಾರ್ ಪ್ರತಾಪ ಸಿಂಗ್ ಬಳಗ ತಿರುಗಿ ಬಿತ್ತು. ಮೂರು ದಿನಗಳವರೆಗೆ ಹೋರಾಡಿದ ಅವರು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿದ್ದಂತೆ ಶರಣಾಗಬೇಕಾಯಿತು. ಕೂಡಲೆ ಅವರಿಗೆ ಮತಾಂತರವಾಗುವಂತೆ ಸೂಚಿಸಲಾಯಿತು. ಬೇಡಿಕೊಂಡಾಗ ಮರುದಿನದವರೆಗೆ ಅವಕಾಶ ನೀಡಲಾಯಿತು. ಮರುದಿನ ಬೆಳ್ಳಂಬೆಳಗ್ಗೆ ಆ ಗುಂಪು ಇವರನ್ನು ಮತಾಂತರಿಸಲು ಕತ್ತರಿ, ಚಾಕುಗಳೊಂದಿಗೆ ಸಿದ್ಧವಾಗಿ ನಿಂತಿತ್ತು. ಯಾವ ಮಹಿಳೆಯನ್ನು ಯಾರು ಪಡೆಯಬೇಕು ಎನ್ನುವುದರ ಬಗ್ಗೆ ಆ ಮತಾಂಧರು ತಮ್ಮೊಳಗೇ ಜೋರಾಗಿ ಚರ್ಚಿಸುತ್ತಿದ್ದರು. ಇದನ್ನು ಕೇಳಿಸಿಕೊಂಡ ಮಹಿಳೆಯರು ಮತಾಂತರವಾಗುವ ಮುನ್ನ ತಾವು ಕೊನೆಯ ಬಾರಿಗೆ ಪ್ರಾರ್ಥನೆ ಸಲ್ಲಿಸುವುದಾಗಿಯೂ, ಇತ್ತೀಚೆಗೆ ನೂತನವಾಗಿ ನಿರ್ಮಿಸಿದ ಬಾವಿಯ ನೀರು ಕುಡಿಯಲು ಅನುಮತಿ ನೀಡಬೇಕಂದು ಪ್ರಾರ್ಥಿಸಿದರು. ಅದಕ್ಕೆ ಒಪ್ಪಿದ ಗುಂಪು ಕೆಲವೊಂದು ಜನರ ಕಾವಲಿನಲ್ಲಿ ಆ 74 ಮಹಿಳೆಯರನ್ನು ಬಾವಿಯ ಬಳಿ ಕಳುಹಿಸಿಕೊಟ್ಟಿತು. ಸ್ನಾನ ಮಾಡಿ ಪ್ರಾರ್ಥನೆ ಆರಂಭಿಸಿದ ಆ ಮಹಿಳೆಯರು ಜೋರಾಗಿ "ಧೈರ್ಯವಿದ್ದರೆ ಮುಂದೆ ಬನ್ನಿ, ನೀವು ನಮ್ಮ ಮೈ ಮುಟ್ಟಲೂ ಸಾಧ್ಯವಿಲ್ಲ" ಎಂದು ಘರ್ಜಿಸುತ್ತಾ ಬಾವಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡರು. ಆ ಬಲಿದಾವನ್ನು ಕಂಡ ಅಂತಹ ಮತಾಂಧ ಪಡೆಯೂ ಬೆಚ್ಚಿಬಿತ್ತು. ಅದು ಮತಾಂತರಗೊಳಿಸಲು ಉದ್ದೇಶಿಸಿದ್ದ ಪುರುಷರನ್ನು ಅಲ್ಲೇ ಬಿಟ್ಟು ಪರಾರಿಯಾಯಿತು. ಗಾಂಧಿಯ ಕಾರ್ಯದರ್ಶಿ ಪ್ಯಾರೇಲಾಲ್ ಈ ಘಟನೆಯನ್ನು ಗಾಂಧಿಗೆ ತಿಳಿಸಿದಾಗ ಆತ "ಅಹಿಂಸಾತ್ಮಕ ಧೈರ್ಯ ಎಂದೂ ವಿಫಲವಾಗುವುದಿಲ್ಲ. ಪರಿಸ್ಥಿತಿ ತೀರಾ ಪ್ರತಿಕೂಲವಾಗಿದ್ದಾಗ ದೇವರೇ ನೆರವಿಗೆ ಬರುತ್ತಾನೆ" ಎಂದು ಪ್ರತಿಕ್ರಿಯಿಸಿದರು. (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್ - ಪ್ಯಾರೇಲಾಲ್ ). ಕಚ್ಛೆಹರುಕ ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವಾದುದೇನಲ್ಲ. ನಾಗರಿಕತೆಯ ಲವಲೇಶವೂ ಇಲ್ಲದ ವ್ಯಕ್ತಿಯಾದರೂ ಈ ಘಟನೆಗೆ ಬೆಚ್ಚಿಬಿದ್ದು ಕನಿಷ್ಟ ಸಹಾನುಭೂತಿಯನ್ನಾದರೂ ಪ್ರಕಟಿಸುತ್ತಿದ್ದ. ಆದರೆ ಮಾನವುಳಿಸಿಕೊಳ್ಳಲು ಆ ಹೆಂಗಸರು ಮಾಡಿದ ಬಲಿದಾನವೂ ಅಹಿಂಸೆಯ ದ್ಯೋತಕವಾಗಿ ಕಂಡಿತು. ಸಹಾನುಭೂತಿಯ ಕನಿಷ್ಟ ಒಂದು ಉದ್ಗಾರವೂ ಅವರಿಂದ ಹೊರಬರಲಿಲ್ಲ. ಮುಸ್ಲಿಮರಿಂದ ತೊಂದರೆಗೀಡಾಗುವುದೇ ಅವರ ಅಹಿಂಸೆಯೇ? ಆ ಲೆಖ್ಖದಲ್ಲಿ ಅದೆಷ್ಟು ಅಹಿಂಸಾತ್ಮಕ ಧೈರ್ಯ ವಿಫಲವಾಗಿಲ್ಲ? ಅದೆಷ್ಟು ಮಹಿಳೆಯರ ಅತ್ಯಾಚಾರವಾಗಿಲ್ಲ? ಈ ಅಹಿಂಸಾತ್ಮಕ ಧೈರ್ಯಗಳೆಲ್ಲಾ ವಿಫಲವಾದುದೇಕೆ ಎನ್ನುವ ಪ್ರಶ್ನೆಗೆ ಗಾಂಧಿಯ ಬಳಿ ಉತ್ತರವಿದೆಯೇ? ಈ ಸಂದರ್ಭಗಳಲ್ಲೆಲ್ಲಾ ಗಾಂಧಿ ಹೇಳುವ ದೇವರು ಯಾಕೆ ಕಾಪಾಡಲಿಲ್ಲ? ವಿಭಜನೆಯನ್ನು ತಪ್ಪಿಸುವ ಅವಕಾಶವಿದ್ದಾಗ್ಯೂ ಅದನ್ನು ಮಾಡದೆ ಕೈಕಟ್ಟಿ ಕುಳಿತ ವ್ಯಕ್ತಿ ಸಾಲುಸಾಲು ಅತ್ಯಾಚಾರಗಳು, ಕೊಲೆಗಳು, ಅಪಹರಣ, ದರೋಡೆಗಳಾಗುತ್ತಿದ್ದಾಗ ತನ್ನದೇ ತಥಾಕಥಿತ ಅಹಿಂಸೆಯನ್ನು ವೈಭವೀಕರಿಸುತ್ತಾನೆ ಎಂದಾದರೆ ಅತನಿಗೆ ಅರಳುಮರಳು ಎನ್ನದಿರಲಾದೀತೇ? ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!






ಮಂಗಳವಾರ, ಡಿಸೆಂಬರ್ 6, 2016

ಯಾರು ಮಹಾತ್ಮ? ಭಾಗ-೨೮

ಯಾರು ಮಹಾತ್ಮ?
ಭಾಗ-೨೮

          ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು. ಸ್ಟೇಷನ್ ಮಾಸ್ಟರ್ ಚಾನಿ ಸಿಂಗ್ ಎಂದಿನಂತೆ ಆಗಸ್ಟ್ ಹದಿನೈದರ(1947) ಮಧ್ಯಾಹ್ನ 10 ಡೌನ್ ಎಕ್ಸ್ ಪ್ರೆಸ್ ಬರುತ್ತಿದೆ ಎಂದು ಬಾವುಟ ಹಾರಿಸುತ್ತಾ ಸೂಚನೆ ನೀಡಿದ. ರೈಲು ಬಂತು. ಎಲ್ಲಾ ಬೋಗಿಗಳ ಕಿಟಕಿ ಬಾಗಿಲುಗಳು ತೆರೆದೇ ಇದ್ದವು. ಯಾರೊಬ್ಬರೂ ಇಳಿದು ಬರಲಿಲ್ಲ. ಯಾರೊಬ್ಬರೂ ಕಾಣಲಿಲ್ಲ. ಚಾನಿ ಸಿಂಗ್ ಮೊದಲನೇ ಬೋಗಿ ಹತ್ತಿದವನೇ ಭೂತ ಬಡಿದವನಂತೆ ನಿಂತುಬಿಟ್ಟ. ಚೆಂಡಾಡಿದ್ದ ರುಂಡಗಳು, ಕೊಚ್ಚಿ ಹಾಕಿದ್ದ ಕೈಕಾಲುಗಳು, ಚೆಲ್ಲಾಡಿದ್ದ ಮಾನವ ಶರೀರಗಳು! ಅದರ ನಡುವೆ ಕ್ಷೀಣ ದನಿಯೊಂದು ಕೇಳಿತು. ಎಲ್ಲೋ ಯಾರೋ ಬದುಕಿದ್ದಾರೆ ಎಂದು ತಿಳಿದ ಆತ "ನೀವೀಗ ಅಮೃತಸರದಲ್ಲಿದ್ದೀರಿ. ಇಲ್ಲಿ ನಾವು ಹಿಂದೂಗಳು ಹಾಗೂ ಸಿಖ್ಖರೇ ಇದ್ದೇವೆ. ಪೊಲೀಸರೂ ಇದ್ದಾರೆ. ಭಯಪಡಬೇಡಿ" ಎಂದು ಕೂಗಿದ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಮುಂದುವರಿದು ಹೋದ ಚಾನಿ ಸ್ತಂಭೀಭೂತನಾಗಿ ನಿಂತುಬಿಟ್ಟ. ಆತ ಆ ದೃಶ್ಯವನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಮುಂಡದಿಂದ ಬೇರ್ಪಡಿಸಿದ ತನ್ನ ಗಂಡನ ರುಂಡವನ್ನು ಕರಾಗ್ರದಲ್ಲಿ ಹಿಡಿದು ಕಂಪಿಸುತ್ತಿದ್ದಳು. ಕೊಲೆಗೀಡಾದ ತಾಯಂದಿರ ಶವವನ್ನು ಅಪ್ಪಿಕೊಂಡು ಮಕ್ಕಳು ರೋದಿಸುತ್ತಿದ್ದವು. ಶವಗಳ ರಾಶಿಯಿಂದ ಯಾರೋ ಮಗುವೊಂದನ್ನು ಹೊರಗೆಳೆದರು. ಆದರೆ ಸಿಕ್ಕಿದ್ದು ಮುಂಡ ಮಾತ್ರ! ಸ್ಟೇಷನ್ ಮಾಸ್ಟರ್ ನಂಬ್ ಬೋಗಿಯಿಂದ ಬೋಗಿಗೆ ಸಾಗಿದವ ಪ್ರತೀ ಬೋಗಿಯಲ್ಲೂ ಆ ಭೀಷಣತೆ ಕಂಡು ಬವಳಿ ಬೀಳುವಂತಾದ. ಆತ ರೈಲಿನಿಂದ ಹೊರಬಂದವನೇ ಏನೋ ಅನ್ನಿಸಿ ರೈಲಿನತ್ತ ನೋಡುತ್ತಾನೆ - ಕೊನೇ ಬೋಗಿಯ ಮೇಲೆ ಬಿಳಿಯ ಕಾಗದದಲ್ಲಿ "ನೆಹರೂ ಮತ್ತು ಪಟೇಲ್'ಗೆ ಈ ರೈಲು ನಮ್ಮ ಸ್ವಾತಂತ್ರ್ಯದ ಕಾಣಿಕೆ" ಎಂಬ ಒಕ್ಕಣೆಯಿತ್ತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        1947 ಆಗಸ್ಟ್ 11. ಲಾಹೋರಿನಲ್ಲಿದ್ದ ಹಿಂದೂಗಳು ಸುರಕ್ಷಿತ ಪ್ರದೇಶಗಳಿಗೆ ವಲಸೆ ಹೋಗಲಾರಂಭಿಸಿದ್ದರು. ಹಿಂದೂಗಳನ್ನು ತುಂಬಿಕೊಂಡು ರಾವಲ್ಪಿಂಡಿಯಿಂದ ಬರುತ್ತಿದ್ದ ಸಿಂಧ್ ಎಕ್ಸ್ ಪ್ರೆಸ್ ರೈಲನ್ನು ಅದರ ಮುಸ್ಲಿಮ್ ಚಾಲಕ ಉದ್ದೇಶಪೂರ್ವಕವಾಗಿ ಬಾದಾಮಿ ಬಾಗ್ ಮತ್ತು ಲಾಹೋರದ ನಿಲ್ದಾಣಗಳಲ್ಲಿ ನಿಲ್ಲಿಸಿದ. ಕೈಗೆ ಸಿಕ್ಕಿದ್ದನ್ನು ಹಿಡಿದು ಉನ್ಮತ್ತರಂತೆ ಅನೇಕ ಮುಸ್ಲಿಮರ ಗುಂಪುಗಳು ರೈಲನ್ನು ನಾಲ್ದೆಸೆಗಳಂದ ಸುತ್ತುವರಿದವು. ರೈಲಿನಲ್ಲಿದ್ದ ಹಿಂದೂಗಳೆಲ್ಲರನ್ನೂ ಕೊಚ್ಚಿ ಹಾಕಲಾಯಿತು. ಅವರು ಜೊತೆಗೆ ಒಯ್ಯುತ್ತಿದ್ದ ಸ್ವತ್ತುಗಳೆಲ್ಲ ಆ ಲೂಟಿಕೋರರ ಕೈ ಸೇರಿತು. ಬೆಹ್ರಾ, ಪಿಂಡ್-ದಡಾನ್, ಮಿಯಾನಿಯ ಹಿಂದೂಗಳು ತಮ್ಮ ಸ್ವತ್ತುಗಳೊಂದಿಗೆ ಪಾಕಿಸ್ತಾನಿ ಸೇನೆಯ ರಕ್ಷಣೆಯೊಂದಿಗೆ ಅಮೃತಸರಕ್ಕೆ ತೆರಳುತ್ತಿದ್ದರು. ಕಾಮೋಕೆ ರೈಲು ನಿಲ್ದಾಣ ದಾಟಿದ ಕೂಡಲೆ ರೈಲನ್ನು ನಿಲ್ಲಿಸಲಾಯಿತು. ಜೊತೆಗಿದ್ದ ಸೈನಿಕರು ಕ್ಷಣಾರ್ಧದಲ್ಲಿ ಅದೃಶ್ಯರಾದರು. ಎಲ್ಲರನ್ನೂ ಕೊಚ್ಚಿ ಕೊಲ್ಲಲಾಯಿತು. ಸಂಪತ್ತನ್ನೆಲ್ಲಾ ದೋಚಲಾಯಿತು. ರೈಲು ಅಮೃತಸರ ತಲುಪಿದಾಗ ಶವಗಳಿಂದ ತುಂಬಿತ್ತು. ರೈಲ್ವೇ ಬೋಗಿಗಳಲ್ಲಿ ಅರ್ಧ ಇಂಚಿನಷ್ಟು ರಕ್ತ ಚೆಲ್ಲಾಡಿಹೋಗಿತ್ತು. 1947ರ ಆಗಸ್ಟ್ 14 ಭಾರತದ ಬೇರೆ ಭಾಗಗಳಿಗೆ ಸಂತಸದ ದಿನವಾಗಿದ್ದರೆ ಲಾಹೋರ್ ಮತ್ತು ಪಶ್ಚಿಮ ಪಂಜಾಬಿನ ಹಿಂದೂಗಳಿಗೆ ಸರ್ವನಾಶದ ದಿನವಾಗಿತ್ತು. (ನೌ ಇಟ್ ಕ್ಯಾನ್ ಬಿ ಟೋಲ್ಡ್ - ಪ್ರೊ. ಎ.ಎನ್. ಬಾಲಿ; ದಿ ಪಾರ್ಟಿಷನ್ ಆಫ್ ಇಂಡಿಯಾ - ಜಿ. ಬಿ. ಸುಬ್ಬರಾವ್).

          ಕತ್ತಲೆ ಗವಿಯಂತಿದ್ದ ಲಾಹೋರ್ ರೈಲ್ವೇ ನಿಲ್ದಾಣದಲ್ಲಿ ಬಾಂಬೆ ಎಕ್ಸ್ ಪ್ರೆಸ್ ರೈಲಿನಲ್ಲಿ ಪಯಣಿಸಲು ಕೆಲ ಆಂಗ್ಲರು ಬರುತ್ತಿದ್ದರು. ಅಲ್ಲಿ ಕೆಲ ಸಿಬ್ಬಂದಿ ಪ್ಲಾಟ್ ಫಾರ್ಮನ್ನು ನೀರು ಹಾಯಿಸಿ ಸ್ವಚ್ಛಗೊಳಿಸುತ್ತಿದ್ದರು. ಕೆಲವೇ ಗಂಟೆಗಳ ಹಿಂದೆ ಭಾರತಕ್ಕೆ ತೆರಳುತ್ತಿದ್ದ ಹಿಂದೂಗಳನ್ನು ಅಟ್ಟಾಡಿಸಿ ಕೊಲ್ಲಲಾಗಿತ್ತು. ಕೆಲವೇ ಗಂಟೆಗಳ ಹಿಂದೆ ಲಾಹೋರ್ ಪೊಲೀಸ್ ಜವಾಬ್ದಾರಿಯನ್ನು ಹಸ್ತಾಂತರಿಸಿ ರೈಲು ಹತ್ತಲು ಬರುತ್ತಿದ್ದ ಬಿಲ್ ರಿಚ್'ನಿಗೆ ಕಾದಿದ್ದು ಇಂತಹ ಸ್ವಾಗತ! ಆತನ ಎದುರೇ ಪೋರ್ಟರುಗಳು ಲಗೇಜ್ ಗಾಡಿಗಳಲ್ಲಿ ಶವಗಳನ್ನು ಹೇರಿಕೊಂಡು ಹೋಗಿ ವ್ಯಾನಿಗೆ ತುಂಬುತ್ತಿದ್ದರು. ಆತ ಶವವೊಂದನ್ನು ದಾಟಿಕೊಂಡೇ ಮೆಟ್ಟಿಲು ಹತ್ತಬೇಕಾಯಿತು! (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).

        ಗೂರ್ಖಾ ಪಡೆಯೊಂದಿಗೆ ಕ್ಯಾಪ್ಟನ್ ರಾಬರ್ಟ್ ಅಟ್ಕಿನ್ಸನ್ ಲಾಹೋರ್ ನಗರಕ್ಕೆ ಬಂದಾಗ ಮತಾಂಧತೆಯ ಆಟಾಟೋಪಕ್ಕೆ ಹೆದರಿ ಕಂಗಾಲಾಗಿದ್ದ ಹಿಂದೂ ಜನತೆ ಎದೆಗೆ ಮಕ್ಕಳನ್ನು ಅವುಚಿಕೊಂಡು, ಕಂಕುಳಲ್ಲಿ ತಮ್ಮ ಸೀಮಿತ ವಸ್ತುಗಳನ್ನು ಹಿಡಿದುಕೊಂಡು ಸುತ್ತುವರಿಯಿತು. ತಮಗೆ ರಕ್ಷಣೆ ನೀಡುವಂತೆ ಅವರು ಅಟ್ಕಿನ್ಸನಿಗೆ ಅಂಗಲಾಚಿದರು. ಹಳೇ ಲಾಹೋರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಲಕ್ಷಕ್ಕೂ ಮಿಗಿಲಾದ ಸಂಖ್ಯೆಯ ಹಿಂದೂಗಳು ಸುತ್ತ ಬೆಂಕಿ ಜ್ವಾಲೆ, ಅನ್ನ-ನೀರುಗಳಿಲ್ಲದೆ ತಮ್ಮ ಮೊಹಲ್ಲಾದ ಒಳಗೆ ಕುಳಿತುಕೊಳ್ಳುವ ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದರು. ಸುತ್ತುವರಿದಿದ್ದ ಬೆಂಕಿಯ ಕೆನ್ನಾಲಿಗೆಗಿಂತಲೂ ಹೆಚ್ಚಾಗಿ ಹೊರಗಡೆ ಸುಳಿದಾಡುತ್ತಿದ್ದ ಮುಸ್ಲಿಮ್ ಗುಂಪುಗಳೇ ಘಾತಕವಾಗಿದ್ದವು. ಯಾರಾದರೂ ಹೊರಬಂದಾಕ್ಷಣ ಎರಗಲು ಆ ಗುಂಪುಗಳು ಸಿದ್ಧವಾಗಿದ್ದವು. ಷಾ ಅಲಿಮಿ ಗೇಟ್ ಪಕ್ಕದಲ್ಲಿದ್ದ ಗುರುದ್ವಾರಕ್ಕೆ ಮತಾಂಧ ಮುಸ್ಲಿಮರ ಗುಂಪು ಬಂದು ಬೆಂಕಿ ಇಟ್ಟಿತು. ಒಳಗಿದ್ದ ನೂರಾರು ಸಿಖ್ಖರು ಜೀವಂತ ಸುಟ್ಟು ಹೋದರು. ಅವರ ಆಕ್ರಂದನ ಕೇಳಿ ಹೊರಗಿದ್ದ ಗುಂಪು ಕೇಕೆ ಹಾಕಿ ಕುಣಿಯುತ್ತಿತ್ತು.(ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್)

                ಲಾಹೋರಿನ ಕಾಲುವೆಗಳು ರಕ್ತದಿಂದ ಕೆಂಪಾಗಿದ್ದವು. ಹಿಂದೂಗಳ ವಾಸದ ಓಣಿಗಳಲ್ಲಿ ಮುಗಿಲು ಮುಟ್ಟುತ್ತಿದ್ದ ಬೆಂಕಿಯ ಕೆನ್ನಾಲಿಗೆಗಳನ್ನು ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಮುಸ್ಲಿಂ ಲೀಗ್ ನಾಯಕರ ಮಾತುಗಳಿಂದ ಉತ್ತೇಜಿತಗೊಂಡಿದ್ದ ಮತಾಂಧರು "ಪಾಕಿಸ್ತಾನ ನಮ್ಮದೂ ಎಂದಾದರೆ ಹಿಂದೂಗಳ ಜಮೀನು, ಮನೆ, ಅಂಗಡಿ ಎಲ್ಲವೂ ನಮ್ಮದೇ" ಎಂದು ಭಾವಿಸಿದರು. ಪಾಕಿಸ್ತಾನದಲ್ಲಿ ಕಾಫಿರರಿಗೆ ಜಾಗವಿಲ್ಲ ಎಂದು ಜಿಹಾದ್ ಘೋಷಿಸಿಯೇ ಬಿಟ್ಟಿದ್ದರು. ಲೈಲಾಪುರದ ಜವಳಿ ಕಾರ್ಖಾನೆಯೊಂದರಲ್ಲಿ ಮುಸ್ಲಿಮ್ ಕೆಲಸಗಾರರು ತಮ್ಮ ಜೊತೆಯಲ್ಲಿದ್ದ ಹಿಂದೂ ಕೆಲಸಗಾರರನ್ನು ಕೊಚ್ಚಿ ಕೊಂದರು. ಅಲ್ಲಿನ ನೀರಾವರಿ ಕಾಲುವೆಯೊಂದು ಹಿಂದೂಗಳ ಶವ ಹಾಗೂ ರಕ್ತದಿಂದ ಕೆಂಪಾಗಿ ತುಂಬಿದ್ದನ್ನು ಕಣ್ಣಾರೆ ಕಂಡರೂ ನಂಬದಾದ ಕ್ಯಾಪ್ಟನ್ ಅಟ್ಕಿನ್ ಸನ್. ಶೇಖ್ ಪುರದ ಶಾಂತಿ ಸಮಿತಿ ಸದಸ್ಯನೂ, ಮುನ್ಸಿಪಲ್ ಕಮೀಷನರೂ ಆಗಿದ್ದ ಸ್ವಾಮಿ ನಂದ ಸಿಂಗನ ತಲೆಯನ್ನು ಮುಸ್ಲಿಂ ಲೀಗ್ ಸದಸ್ಯನೊಬ್ಬ ತನ್ನ ಖಡ್ಗದಿಂದ ಕತ್ತರಿಸಿ ಮುಸ್ಲಿಂ ಲೀಗ್ ಧ್ವಜಕ್ಕೆ ಅಂತಿಸಿಕೊಂಡು "ಮುಸ್ಲಿಂ ಲೀಗ್ ಜಿಂದಾಬಾದ್" ಎಂದು ಘೋಷಣೆ ಕೂಗಿದ. ಅದೇ ಸ್ಥಿತಿಯಲ್ಲಿ ಬೀದಿಬೀದಿಗಳಲ್ಲಿ ಮೆರವಣಿಗೆಯನ್ನೂ ಗೈಯಲಾಯಿತು. (ಫ್ರೀಡಮ್ ಅಟ್ ಮಿಡ್ ನೈಟ್ - ಲ್ಯಾಪಿಯೆರ್ & ಕಾಲಿನ್ಸ್).





ಸೋಮವಾರ, ಡಿಸೆಂಬರ್ 5, 2016

ಯಾರು ಮಹಾತ್ಮ? ಭಾಗ-೨೭

ಯಾರು ಮಹಾತ್ಮ?
ಭಾಗ-೨೭


            ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ "ಸಾಮೂಹಿಕ ಹತ್ಯೆ, ಭೀಕರ ಅತ್ಯಾಚಾರ, ಅಪಹರಣ, ಮತಾಂತರ, ಲೂಟಿ-ದರೋಡೆ, ಬಲಾತ್ಕಾರಗಳ" ಭಯಾನಕ ಊಹಿಸಲಾಸಾಧ್ಯವಾದ ಘಟನೆಗಳ ಕಪ್ಪು ಚುಕ್ಕೆಗಳಿವೆ. ವಾಸ್ತವದಲ್ಲಿ ಆ ಕಪ್ಪು ಚುಕ್ಕೆಗಳು ತಮ್ಮ ಸಂಖ್ಯಾ ಬಲದಿಂದ ಸ್ವಾತಂತ್ರ್ಯವೆಂಬ ಬಿಳಿ ಹಾಳೆಯನ್ನು ಮುಚ್ಚಿ ಬಿಟ್ಟಿವೆ. ಆದರೆ ಪ್ರಸಿದ್ಧಿಯ ಹುಚ್ಚು, ಅಹಿಂಸೆಯಿಂದಲೇ ಸ್ವಾತಂತ್ರ್ಯ ಬಂದಿತು ಎಂಬ ಮುಗಿಲುಮುಟ್ಟುವ ಘೋಷಣೆ, ಅಧಿಕಾರ ದಾಹಗಳ ಮಾಯೆ ಈ ಕಪ್ಪು ಬಣ್ಣವನ್ನು ಮರೆಮಾಚಿ ಬಿಳಿಯ ಬಣ್ಣವನ್ನು ಕಾಣಿಸುವ ಪ್ರಯತ್ನ ನಡೆಸಿದೆ. ಆದರೆ ಅವಿದ್ಯೆ ಎನ್ನುವುದು ಎಷ್ಟು ಕಾಲ ಉಳಿದೀತು? ಜ್ಞಾನವನ್ನು ಪಡೆದ ಆತ್ಮದಲ್ಲಿ ಮಾಯೆಯ ಛಾಯೆಯೂ ಉಳಿಯದಂತೆ ಈ ಮಾಯೆ ನಿಧಾನವಾಗಿ ಕರಗಿ ಇತಿಹಾಸದ ನೈಜತ್ವ ಅನವರತ ಅನಾವರಣವಾಗುತ್ತಲೇ ಇದೆ. ವಿಭಜನೆಯ ಭೂತಕ್ಕೆ ಮತಾಂಧತೆಯ ಲೇಪ ಸಿಕ್ಕಿದಾಗ ಕಾರುವ ರಕ್ತದಂತೆ ಭಾರತಾದ್ಯಂತ ನೆತ್ತರ ಕಾಲುವೆ ಹರಿದದ್ದು ಈಗ ನಿಧಾನವಾಗಿ ಕಣ್ಣ ಪೊರೆಯನ್ನೊಗೆದು ಕಾಣುತ್ತಿದೆ. ಹೌದು 1947ರ ಆಗಸ್ಟ್ 15ರಂದು ದೇಶದ ಒಂದು ಗುಂಪು ರಾಷ್ಟ್ರಧ್ವಜ ಹಾರಿಸುತ್ತಾ ಆನಂದ ಭಾಷ್ಫ ಸುರಿಸುತ್ತಿದ್ದರೆ ಇನ್ನೊಂದು ಬೃಹತ್ ಗುಂಪು ತಮ್ಮ ಪತ್ನಿ-ಪುತ್ರ-ಪುತ್ರಿ-ಸಂಬಂಧಿಕರನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿತ್ತು. ಒಂದೇ ದೇಶದಲ್ಲಿ, ಏಕ ಉದ್ದೇಶವಿದ್ದ, ಏಕ ಭಾವವಿದ್ದ, ಏಕ ರೀತಿಯ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದವರಲ್ಲಿ ಉದ್ದೇಶ ಈಡೇರಿಕೆಯ ಸಂದರ್ಭದಲ್ಲಿ ಕಂಡುಬಂದ ಈ ವೈರುಧ್ಯ ಬೇರಾವ ದೇಶದಲ್ಲೂ ಕಂಡುಬರಲಿಕ್ಕಿಲ್ಲ, ಬರಲೂ ಬಾರದು!


            ಇದಕ್ಕೂ ಗಾಂಧಿಗೂ ಏನು ಸಂಬಂಧ ಅನ್ನಬಹುದು. ವಿಭಜನೆಯನ್ನು ಒಪ್ಪಲಾರೆ, ಮಾಡಿದರೆ ಎನ್ನ ದೇಹದ ಮೇಲೆ ಎಂದು ಸೋಗು ಹಾಕಿ, ಕೊನೆಗೆ ವಿಭಜನೆಗೆ ಒಪ್ಪಿ, ಜನರನ್ನು ಒಪ್ಪಿಸಲು ಯತ್ನಿಸಿ; ಜನ, ವಿಭಜನೆಯ ವಿರುದ್ಧ ಹೋರಾಡಿ, ನಾವಿದ್ದೇವೆ ನಿಮ್ಮ ಬೆನ್ನ ಹಿಂದೆ ಎಂದಾಗ ಮುಗುಮ್ಮಾಗಿ ಉಳಿದು, ಮತಾಂಧ ಮುಸ್ಲಿಮರನ್ನು ಇನ್ನೇನು ಹಿಂದೂಗಳು ಶಿಕ್ಷಿಸುತ್ತಾರೆ ಎಂದಾಗ ಉಪವಾಸ ಕೂತು; ವಿಭಜನೆಗೆ ಪರೋಕ್ಷ ಕಾರಣನೂ ಆದ ವ್ಯಕ್ತಿ ಈ ರಕ್ತದೋಕುಳಿಗೆ ಕಾರಣನೂ ಆಗುತ್ತಾನಲ್ಲ. ಒಬ್ಬ ನಾಯಕ ಎಚ್ಚರತಪ್ಪಿ ನಡೆದರೆ ಏನಾಗಬಹುದು ಎನ್ನುವುದಕ್ಕೆ ನಿದರ್ಶನ ಗಾಂಧಿ. ಆದರೆ ಇಂತಹ ರಕ್ತಪಾತಕ್ಕೆ ಗಾಂಧಿ ಯಾವ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲಿಲ್ಲ. ಹಿಂದೂಗಳಿಗೆ ಸಾಂತ್ವನವನ್ನೂ ಹೇಳಲಿಲ್ಲ. ಬದಲಾಗಿ ಯಾರು ಹಿಂದೂಗಳ ಅತ್ಯಾಚಾರ-ಕೊಲೆ-ಮತಾಂತರಕ್ಕೆ ಕಾರಣರಾದರೋ ಅವರ ಸಲುವಾಗಿ ಉಪವಾಸ ಕೂತರು. ಅಂತಹ ವ್ಯಕ್ತಿಯ ಆಚರಣೆಯೇ "ಜಾತ್ಯಾತೀತತೆ" ಎಂಬ ಪದದೊಳಗೆ ನುಸುಳಿ ಆ ಪದವೇ ಅಪಭೃಂಶಗೊಂಡಿತು. ಅವರ ಅನುಯಾಯಿಗಳು ಇದನ್ನೇ ಗಾಂಧಿವಾದ ಎಂದು ಹೆಸರಿಟ್ಟು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಪೂಜೆ ಮಾಡಿದರು. ಮಾಡುತ್ತಲೇ ಇದ್ದಾರೆ!


ವಿಭಜನೆಯ ದುರಂತ ಕಥೆಗಳು:
                   ಭಾರತ ವಿಭಜನೆಯೆಂದರೆ ಕೇವಲ ಎರಡು ಭೂಭಾಗಳ ನಡುವೆ ಬೇಲಿ ಕಟ್ಟಿಕೊಂಡುದುದಲ್ಲ. ಅಲ್ಲಿನ ಹಿಂದೂಗಳು ಇಲ್ಲಿಗೂ, ಇಲ್ಲಿನ ಮುಸ್ಲಿಮರೂ ಅಲ್ಲಿಗೂ ಎನ್ನುವ ಪಲ್ಲಟನವೂ ಜೊತೆಗಿತ್ತು. ಅದರ ಜೊತೆಗೆ ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಸಾವಿರಾರು ಮಹಿಳೆಯರ ಅಪಹರಣ-ಮತಾಂತರ-ಭೀಕರ ಅತ್ಯಾಚಾರದ ಭೀಷಣತೆಯೂ ಸೇರಿಕೊಂಡಿತು. ಮೊದಲನೆಯದ್ದು ಭಾರತೀಯರಿಗೆ ಬ್ರಿಟಿಷರ ಕೊಡುಗೆ! ಎರಡನೆಯದ್ದು ಬ್ರಿಟಿಷ್-ಮುಸ್ಲಿಂ ಲೀಗ್-ಕಾಂಗ್ರೆಸ್ ಈ ಮೂವರ ಕೊಡುಗೆ!! ಹಾಗೂ ಮೂರನೆಯದ್ದು ಮತಾಂಧ ಮುಸ್ಲಿಮರ ಹಾಗೂ ಕಾಂಗ್ರೆಸ್ಸಿನ ಕೊಡುಗೆ!!! ಈ ವಿಭಜನೆಯಿಂದಾಗಿ ತಲೆತಲಾಂತರದಿಂದ ನೆರೆಹೊರೆಯಲ್ಲಿ ಬಾಳುತ್ತಿದ್ದ ಕುಟುಂಬಗಳೆರಡು ಒಂದೇ ದಿನದಲ್ಲಿ ಪರಸ್ಪರ ಬದ್ಧದ್ವೇಷಿಗಳಾಗಿಬಿಟ್ಟವು. ಲಾಹೋರ್, ಕರಾಚಿ, ಪೇಷಾವರ್, ರಾವಲ್ಪಿಂಡಿ, ದೆಹಲಿ, ಅಮೃತಸರ, ಬಿಹಾರ, ಬಂಗಾಳಗಳ ವ್ಯಾಪಾರ ಕೇಂದ್ರಗಳು, ಹಳ್ಳಿಗಳು, ಕೃಷಿ ಜಮೀನುಗಳು, ಅಂಗಡಿ-ಮುಂಗಟ್ಟು, ಗುಡಿಸಲು-ಮಹಲುಗಳ ಗೋಡೆಗಳಲ್ಲಿ ಹಸಿರು ಬಣ್ಣ ಬಳಿಯಲ್ಪಟ್ಟಿತು-ನೆಲದಲ್ಲಿ ರಕ್ತದ ಕೋಡಿಯೇ ಹರಿಯಿತು! ಇದು ಲೂಟಿ-ದರೋಡೆಯೂ ಅಲ್ಲ, ಆಂತರಿಕ ಸಮರವೂ ಅಲ್ಲ; ಜಿಹಾದ್ (ಧರ್ಮ ಯುದ್ಧ) ಎನ್ನುವ ಕೂಗು ಮುಗಿಲು ಮುಟ್ಟಿತು. ಆ ಗದಗುಟ್ಟಿಸುವ ಅಟ್ಟಹಾಸದ ಮಧ್ಯೆ ಮುಗಿಲು ಮುಟ್ಟುವ ಹಿಂದೂಗಳ ಆಕ್ರಂದನವೂ ಕೇಳದಾಯಿತು. ರಸ್ತೆಗಳ ಇಕ್ಕೆಲಗಳಲ್ಲಿ ಹಿಂದೂಗಳ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗರ್ಭ ಸೀಳಿ ಹೊರಬರುತ್ತಿರುವ ಮಗುವಿನ ರುಂಡವನ್ನು ಕತ್ತರಿಸಿದ ಸ್ಥಿತಿಯಲ್ಲಿ ರುಂಡ ಹೀನ ತಾಯಿಯ ಶವವೂ ದ್ವೇಷದ ವಿಕಾರತೆಯನ್ನು ಸಾರಿ ಹೇಳುತ್ತಿತ್ತು. ಆಗ ತಾನೆ ಬಿರಿದ ಕುಸುಮಗಳ ಪಕಳೆಗಳು ಛಿದ್ರವಾಗಿ ಬಿದ್ದಿದ್ದವು. ಮೊಗ್ಗನ್ನು ಅರ್ಧದಲ್ಲೇ ಚಿವುಟಲಾಗಿತ್ತು. ಅರಳಿದ ಹೂಗಳ ಬಿಳಿಚಿದ ಮುಖದ ಶವಗಳು ಭೀಷಣತೆಯ ಸಾಕ್ಷಿಗಳಾಗಿದ್ದವು.

          ರಾವಲ್ಪಿಂಡಿ ನಂತರ ಲಾಹೋರ್ ನಗರದಲ್ಲಿ ಹಿಂದೂಗಳ ಭಯಾನಕ ಸಾಮೂಹಿಕ ಹತ್ಯೆ ನಡೆಯಿತು. ಹತ್ಯೆಗೀಡಾದ ಸಾವಿರಾರು ಜನರ ಶವಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅನಾರ್ಕಲಿ ಮಾರುಕಟ್ಟೆಯಂತಹ ವ್ಯವಹಾರ ಸ್ಥಳಗಳು ಬೆಂಕಿಗೆ ಆಹುತಿಯಾಗಿದ್ದವು. ಹಿಂದೂಗಳು ವಾಸಿಸುತ್ತಿದ್ದ ಸ್ಥಳಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಪಾರಾಗಲು ಯತ್ನಿಸಿದ ಹಿಂದೂಗಳು ಸೇನೆ ಮತ್ತು ಪೊಲೀಸರ ಗುಂಡಿಗೆ ಬಲಿಯಾದರು. ಸಾವಿರಾರು ಹಿಂದೂಗಳನ್ನು ಸಜೀವ ದಹಿಸಲಾಯಿತು. ಅಳಿದುಳಿದ ಹಿಂದೂಗಳು ಅನ್ನ-ನೀರುಗಳಿಲ್ಲದೆ ಬಳಲಿ ಬಸವಳಿದು ಜೀವವುಳಿಸಿಕೊಳ್ಳಲು ಭಾರತದತ್ತ ಓಡಿ ಬರುತ್ತಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್ : ಪ್ಯಾರೇಲಾಲ್)


              ಅದು ಹಿಂದೆಂದೂ ಕಾಣದ ಕ್ರೌರ್ಯದ ಪರಮಾವಧಿ. ಮಧ್ಯಯುಗದಲ್ಲಿ ಅಪ್ಪಳಿಸಿದ ಪ್ಲೇಗಿನಂತೆ ಆರು ವಾರಗಳ ಕಾಲ ಇಡೀ ಉತ್ತರ ಭಾರತಾದ್ಯಂತ ಕೊಲೆಯ ಸನ್ನಿ ಆವರಿಸಿಕೊಂಡಿತ್ತು. ಆ ಮರಣ ಶಾಸನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಯಾವ ಕೋನವೂ ಈ ವೈರಸ್ಸಿನಿಂದ ಮುಕ್ತವಾಗಿರಲಿಲ್ಲ. ಎರಡನೆ ಮಹಾಯುದ್ಧದಲ್ಲಿ ನಾಲ್ಕು ವರ್ಷಗಳಲ್ಲಿ ಅಮೇರಿಕನ್ನರು ಕಳೆದುಕೊಂಡ ಪ್ರಮಾಣದ ಅರ್ಧದಷ್ಟು ಜೀವಗಳನ್ನು ಭಾರತ ಕೇವಲ ಕೆಲವೇ ವಾರಗಳಲ್ಲಿ ಕಳೆದುಕೊಂಡಿತು. ಲಾಹೋರಿನ ಹಳೆಯ ನಗರದಲ್ಲಿ ಹಿಂದೂ ವಾಸದ ಪ್ರದೇಶಗಳಲ್ಲಿ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆ ತೀವ್ರ ಬೇಸಗೆಯ ದಿನಗಳಲ್ಲಿ ನೀರಿಲ್ಲದೆ ಹಿಂದೂಗಳು ಹಿಂಡಿ ಹಿಪ್ಪೆಯಾಗಿ ಹೋಗಿದ್ದರು. ನೀರು ಕೇಳಲು ಹೊರ ಬಂದ ಮಹಿಳೆಯರು ಮಕ್ಕಳನ್ನು ಮುಸ್ಲಿಂ ಗುಂಪುಗಳು ವಧಿಸಿದವು. ನಗರದ ಹೆಚ್ಚಿನ ಪ್ರದೇಶಗಳಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲ ಚುಂಬಿಸ ಹೊರಟಿತ್ತು. (ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)


         ಭಾರತದಲ್ಲಿ ಸಹಿಷ್ಣುತೆಯಿಂದ ಬದುಕಿ ಈಗ ಪಾಕಿಸ್ತಾನಕ್ಕೆ ಸ್ಥಾನಾಂತರಗೊಂಡಿದ್ದ ಮುಸ್ಲಿಮರನ್ನೂ ಈ ಮತಾಂಧ ಮುಸ್ಲಿಮರು ಬಿಡಲಿಲ್ಲ. ಅವರು ಬದುಕಿಕೊಳ್ಳಲು ತಮ್ಮ ಮನೆಗಳ ಬಾಗಿಲ ಮೇಲೆ ಹಸಿರು ಬಣ್ಣ ಹಚ್ಚಬೇಕಾಯಿತು. ಲಾರೆನ್ಸ್ ರಸ್ತೆಯಲ್ಲಿದ್ದ ಪಾರ್ಸಿ ಜನಾಂಗದ ವ್ಯಕ್ತಿಯೊಬ್ಬ ಮತಾಂಧ ಮುಸ್ಲಿಮರಿಂದ ಬಚಾವಾಗಲು ತನ್ನ ಮನೆಯ ಬಾಗಿಲ ಮೇಲೆ " ಮುಸ್ಲಿಮರು, ಹಿಂದೂಗಳು, ಸಿಖ್ಖರೆಲ್ಲಾ ಸಹೋದರರು. ಆದರೆ ಓ ನನ್ನ ಸೋದರರೇ, ಈ ಮನೆ ಪಾರ್ಸಿಯವನೊಬ್ಬನಿಗೆ ಸೇರಿದ್ದು" ಎಂಬ ಸಂದೇಶ ಬರೆದಿದ್ದ. ಅದು ವಿಭಜನೆಯ ನೆಪದಲ್ಲಿ ಕಳೆದು ಹೋದುದನ್ನು ನೆನಪಿಸುವಂತಿತ್ತು! ಶೇಖ್ ಪುರದ ಬ್ಯಾಂಕಿನಲ್ಲಿ ಸಾಲ ಸಂಬಂಧ ವಶ ಪಡಿಸಿಕೊಂಡ ಧಾನ್ಯಗಳನ್ನು ಉಗ್ರಾಣದಲ್ಲಿ ಪೇರಿಸಿಡಲಾಗಿತ್ತು. ಆ ಪ್ರದೇಶದ ಎಲ್ಲಾ ಹಿಂದೂಗಳು ಅದೇ ಉಗ್ರಾಣದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿಗೆ ಬಂದ ಮುಸ್ಲಿಮ್ ಪೊಲೀಸರು ಹಾಗೂ ಸೈನಿಕರು ಅಸಹಾಯಕ ಹಿಂದೂಗಳ ಮೇಲೆ ಗುಂಡಿನ ಮಳೆಗರೆದರು. ಉಗ್ರಾಣ ಸಮೇತ ಹಿಂದೂಗಳೆಲ್ಲಾ ಸುಟ್ಟು ಹೋದರು.(ಫ್ರೀಡಮ್ ಅಟ್ ಮಿಡ್ ನೈಟ್ : ಲಾರಿ ಕಾಲಿನ್ಸ್ & ಡೊಮಿನಿಕ್ ಲ್ಯಾಪಿಯೆರ್)