ಪುಟಗಳು

ಬುಧವಾರ, ನವೆಂಬರ್ 2, 2016

ಯಾರು ಮಹಾತ್ಮ? ಭಾಗ- ೧೮

ಯಾರು ಮಹಾತ್ಮ?
ಭಾಗ- ೧೮

    ದೇಶವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಹಿಂದೂಗಳು ಹತ್ಯೆಗೀಡಾದರು. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವಾಹದಂತೆ ಹಿಂದೂಗಳು ಆಶ್ರಯ ಬಯಸಿ ಬಂದರು. ತಮ್ಮವರ ಭಯಾನಕ ಕಥೆಗಳನ್ನು ಕೇಳಿದ ಹಿಂದೂಗಳು ಸಹಜವಾಗಿಯೇ ಆಕ್ರೋಶಗೊಂಡು ಪ್ರತೀಕಾರಕ್ಕೆ ಮುಂದಾದರು. ಮುಸ್ಲಿಮರನ್ನು ರಕ್ಷಿಸುವ ಸಲುವಾಗಿ ಗಾಂಧಿ ಆಮರಣಾಂತ ಉಪವಾಸ ಕೂತರು. ಲಕ್ಷಾಂತರ ಹಿಂದೂಗಳ ಕಗ್ಗೊಲೆ, ಅತ್ಯಾಚಾರಗಳಾಗುತ್ತಿದ್ದಾಗ ನೆನಪಾಗದ ಉಪವಾಸ ಗಾಂಧಿಗೆ ಹಿಂದೂಗಳು ಮುಸ್ಲಿಮರ ವಿರುದ್ಧ ತಿರುಗಿಬಿದ್ದಾಗ ನೆನಪಾಯಿತು! ಒಂದು ದಿನ ರಾವಲ್ಪಿಂಡಿಯಿಂದ ಹೊರಟ ಒಂದು ಸಾವಿರ ಜನರಲ್ಲಿ ಅದು ಹೇಗೋ ಜೀವ ಉಳಿಸಿಕೊಳ್ಳಲು ಯಶಸ್ವಿಯಾದ ಕೇವಲ ಹದಿನಾರು ಜನರ ಗುಂಪೊಂದು ಬಂತು. ಅ ಗುಂಪು ಗಾಂಧಿಯವರಿಗೆ " ಪಂಜಾಬಿನಲ್ಲಿ ಹಿಂದೂಗಳನ್ನು ಕಂಡಕಂದಲ್ಲಿ ಮುಸ್ಲಿಮರು ಕೊಲ್ಲುತ್ತಿದ್ದಾರೆ. ನೀವೋ ಶಸ್ತ್ರ ತ್ಯಜಿಸಿ ಎಂದು ಕರೆಕೊಡುತ್ತಿದ್ದೀರಿ. ನಾವು ಕುರಿಗಳಂತೆ ವಧಿಸಲ್ಪಡಬೇಕೆಂದು ನಿಮ್ಮ ಇಚ್ಛೆಯೇ?" ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಗೈದರು.
ಗಾಂಧಿಯ ಪ್ರತಿಕ್ರಿಯೆ ವಿಲಕ್ಷಣ ಹಾಗೂ ವಿಚಿತ್ರವಾಗಿತ್ತು. "ಪಂಜಾಬಿನಲ್ಲಿ ಎಲ್ಲರೂ ಕೊಲೆಗೀಡಾಗಿ ಒಬ್ಬನೇ ಒಬ್ಬ ಉಳಿದರೂ ಪಂಜಾಬ್ ಅಮರವಾಗುತ್ತದೆ. ಆದರೆ ನೀವು ಆಯುಧ ಕೈಗೆತ್ತಿಕೊಂಡಿರಿ ಮತ್ತು ಪರಿಸ್ಥಿತಿ ಹದಗೆಟ್ಟಾಗ ನನ್ನ ಬಳಿ ಬಂದಿರಿ. ಇಲ್ಲಿಂದ ಬೇಕಾದರೂ ನಾನು ಪಂಜಾಬಿನಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲೆ. ಒಂದು ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ನಿಜ. ಆದರೆ ವೀರರಂತಲ್ಲ. ಅಹಿಂಸೆಯ ಮಾರ್ಗದಿಂದ, ಬಲಿದಾನದ ಸಂಕಲ್ಪದಿಂದ ಅವರು ಎದುರಿಸುತ್ತಿದ್ದರೆ ಎಂಥ ಬದಲಾವಣೆ ಆಗುತ್ತಿತ್ತು. ಅಹಿಂಸೆ ಮೂಲಕ ಪ್ರತಿಭಟಿಸಿ" ಎಂದರು ಗಾಂಧಿ. (ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್; ಫ್ರೀಡಮ್ ಅಟ್ ಮಿಡ್ ನೈಟ್-ಕಾಲಿನ್ಸ್ & ಲ್ಯಾಪಿಯೆರ್). ಅಂದರೆ ಹಿಂದೂಗಳೆಲ್ಲಾ ಸುಮ್ಮನೆ ಸಾಯಬೇಕು ಎನ್ನುವುದು ಗಾಂಧಿಯ ಉದ್ದೇಶವಾಗಿತ್ತೇ? ಹಿಂದೂಗಳು ತಮ್ಮ ರಕ್ಷಣೆಗೆ ಆಯುಧಪಾಣಿಗಳಾದ ಕಾರಣ ಗಾಂಧಿ ಹಿಂದೂಗಳಿಗೆ ಸಹಾಯ ಮಾಡುತ್ತಿಲ್ಲ ಎನ್ನುವುದು ಅವರ ಮಾತಿನರ್ಥವೇ? ದೆಹಲಿಯಲ್ಲಿದ್ದುಕೊಂಡೇ ಪಂಜಾಬಿನಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲೆ ಎಂದು ಬಡಾಯಿಕೊಚ್ಚಿಕೊಳ್ಳುವ ಗಾಂಧಿ ಅದನ್ನೇಕೆ ಪ್ರಯತ್ನಿಸಲಿಲ್ಲ. ಸತ್ತರೆ ಸಾಯಲಿ, ಹಿಂದೂಗಳಲ್ಲವೇ ಎನ್ನುವುದು ಅವರ ಅಭಿಪ್ರಾಯವೇ? ಹಿಂದೂಗಳಿಗಾದರೆ ಅಹಿಂಸೆ, ಮುಸ್ಲಿಮರು ಏನು ಮಾಡಿದರೂ ಸರಿ ಎನ್ನುವ ಭಾವ! ಒಟ್ಟಾರೆ ಇಂದಿನ ದಗಲ್ಬಾಜಿ ರಾಜಕಾರಣಕ್ಕೆ ಎಲ್ಲಾ ರೀತಿಯಿಂದಲೂ ಗಾಂಧಿಯೇ ಪಿತಾಮಹ ಎನ್ನುವುದು ಅವರ ಪ್ರತಿಯೊಂದು ನಡೆ, ಮಾತಿನಲ್ಲಿಯೂ ಬಿಂಬಿತವಾಗುತ್ತದೆ.

        ಗಾಂಧಿ ಕೇವಲ ಮುಸ್ಲಿಮರ ಬಗ್ಗೆ ಮಾತ್ರ ಸಹಾನುಭೂತಿ ಹೊಂದಿದ್ದಾರೆ, ಅದಕ್ಕಾಗಿಯೇ ಮುಸ್ಲಿಮರ ಪರವಾಗಿ ಅವರು ಉಪವಾಸ ಕೈಗೊಂಡಿದ್ದಾರೆ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದಾಗ ಗಾಂಧಿ, "ನನ್ನ ಇಡೀ ಬದುಕಿನಲ್ಲಿ ಪ್ರತಿಯೊಬ್ಬರೂ ಮಾಡುವಂತೆ ಅಲ್ಪಸಂಖ್ಯಾತರ ಅಥವಾ ಯಾರಿಗೆ ಅಗತ್ಯವಿದೆಯೋ ಅವರ ಪರವಾಗಿ ನಿಂತಿದ್ದೇನೆ. ಹೌದು ನನ್ನ ಉಪವಾಸ ಮುಸ್ಲಿಮರ ಪರವಾಗಿಯೇ ಕೈಗೊಂಡಿದ್ದು. ಆದಕಾರಣ ಈ ಉಪವಾಸ ಹಿಂದೂಗಳು ಹಾಗೂ ಸಿಖ್ಖರ ವಿರುದ್ಧ ಆಗಬೇಕಾದ್ದು ಅನಿವಾರ್ಯ" ಎಂದುತ್ತರಿಸಿದರು.(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಗಾಂಧಿಯ ಈ ಒಂದು ಮಾತು-ನಡೆ ಸಾಕು, ಅವರ ಹಿಂದೂ ವಿರೋಧಿ ಮನಸ್ಥಿತಿ ಯಾವ ಮಟ್ಟದಲ್ಲಿತ್ತು ಎಂದು ತಿಳಿಯಲು. ಒಂದು ಸಮುದಾಯ ಅದು ಅನ್ಯಾಯ ಮಾಡುತ್ತಿದ್ದರೂ, ಅದರ ಪರವಾಗಿ ನಿಲ್ಲುವ ಇಂತಹ ವ್ಯಕ್ತಿಯನ್ನು ಮಹಾತ್ಮ ಎಂದು ಈ ಜಗತ್ತು ಪೂಜಿಸುತ್ತಿದೆಯಲ್ಲ! ವಿಪರ್ಯಾಸ!

     ಇತ್ತ ಗಾಂಧಿ ಮುಸ್ಲಿಮರ ಪರವಾಗಿ ಉಪವಾಸ ಕೂತ ಹಿಂದಿನ ದಿನವೇ(1948 ಜನವರಿ 13) ಪಂಜಾಬಿನಿಂದ ಬರುತ್ತಿದ್ದ ರೈಲಿನಲ್ಲಿದ್ದ ಬಹುಸಂಖ್ಯೆಯ ಹಿಂದೂ ನಿರಾಶ್ರಿತರನ್ನು ಮುಸ್ಲಿಮರು ಸಾಮೂಹಿಕ ಹತ್ಯೆಗೈದರು. ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಗೈಯ್ಯಲಾಯಿತು. ಗಾಂಧಿಯವರ ಆಪ್ತ, ಕಾರ್ಯದರ್ಶಿ ಪ್ಯಾರೇಲಾಲ್ ಈ ಭಯಾನಕ ಘಟನೆಯನ್ನು ಗಾಂಧಿಯ ಗಮನಕ್ಕೆ  ತಂದಾಗ ಯಾವುದೇ ಪ್ರತಿಭಟನೆಯಿಲ್ಲದೆ ಹಿಂದೂಗಳು ಮುಸ್ಲಿಮರ ಕೈಯಿಂದ ಹತರಾದುದನ್ನು ಕೇಳಿ ಗಾಂಧಿ ಸಂತೋಷ ವ್ಯಕ್ತಪಡಿಸುತ್ತಾ ಹೇಳಿದ್ದೇನು ಗೊತ್ತೇ? "ಅಹಿಂಸೆಯನ್ನು ಆಚರಿಸುವವರು ವೀರ ಯೋಧರು ಎಂದು ನಾನು ಯಾವಾಗಲೂ ಹೇಳುತ್ತಿರಲಿಲ್ಲವೇ?" ಎಂದು.(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಯಾವುದು ಅಹಿಂಸೆ? ವೃದ್ದಾಪ್ಯದ ಅರಳು-ಮರಳಿನ ಪ್ರತೀಕವಿದಲ್ಲದೆ ಮತ್ತಿನ್ನೇನು? ಅಷ್ಟು ಸಂಖ್ಯೆಯ ಜನ ಸಾಮೂಹಿಕವಾಗಿ ಹತ್ಯೆಗೀಡಾದಾಗ ಗಾಂಧಿಗೇಕೆ ಖುಷಿಯಾಗಬೇಕು? ಬಲಿಪಶುಗಳನ್ನು ಅಹಿಂಸೆಯ ಯೋಧರು ಎಂದು ಕರೆಯುವಷ್ಟು ನಿರ್ದಯಿಯೇ ಗಾಂಧಿ? ಅಹಿಂಸೆಯ ಹೆಸರಲ್ಲಿ ಹಿಂದೂಗಳನ್ನು ಬಲಿಪಶುಗಳನ್ನಾಗಿಸುವ ಆಷಾಢಭೂತಿತನವಿದಲ್ಲವೇ? ಜಿನ್ನಾ ಹಾಗಾತನ ಮುಸ್ಲಿಂ ಲೀಗಿಗೆ ಸರ್ಕಾರ ರಚಿಸುವಂತೆ ಹೇಳಿ, ಆ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವಂತೆ ಕಾಂಗ್ರೆಸ್ಸಿಗೆ ಆದೇಶ ನೀಡಿ ತನ್ಮೂಲಕ ಮೂವತ್ತು ಕೋಟಿ ಹಿಂದೂಗಳನ್ನು ಮತಾಂಧರ ಕೈಕೆಳಗೆ ನರಳಿಸುವ ಹುನ್ನಾರ ನಡೆಸಿದ(ಫ್ರೀಡಮ್ ಅಟ್ ಮಿಡ್ ನೈಟ್-ಪುಟ-93) ಮಹಾತ್ಮನಿಂದ ಇಂತಹ ಪ್ರತಿಕ್ರಿಯೆ ಅನಿರೀಕ್ಷಿತವೇನಲ್ಲ ಬಿಡಿ!

       ಆರಂಭದಲ್ಲಿ ಪಾಕಿಸ್ತಾನ ರಚನೆಗೆ ವಿರೋಧ ವ್ಯಕ್ತಪಡಿಸಿದ್ದ ಗಾಂಧಿ ಆ ಬಳಿಕ ತಮ್ಮ ನಿಲುವು ಬದಲಾಯಿಸಿಕೊಂಡರು. ಒಂದು ಹಂತದಲ್ಲಂತೂ ವಿಚಿತ್ರ ಸಲಹೆಯೊಂದು ಗಾಂಧಿಯಿಂದ ಬಂತು. "ಇಡೀ ಭಾರತ ಪಾಕಿಸ್ತಾನವಾಗಲಿ. ಪಾಕಿಸ್ತಾನ ಹೆಸರೇ ಹೇಳುವಂತೆ ಅದು ಪರಿಶುದ್ಧತೆಯ ಸ್ಥಾನವಾಗುವುದಾದಲ್ಲಿ" (ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಪಾಕಿಸ್ತಾನ ಎನ್ನುವ ಹೆಸರು ಹೇಗೆ ಮತ್ತು ಯಾಕೆ ರೂಪುಗೊಂಡಿತು ಎನ್ನುವ ಮೂಲಭೂತ ತಿಳುವಳಿಕೆಯೂ ಗಾಂಧಿಗೆ ಇರಲಿಲ್ಲ ಎನ್ನುವುದು ಇನ್ನೊಂದು ಸೋಜಿಗ. ಒಂದು ಹೋರಾಟದ ನಾಯಕನಾದವ ಆ ಹೋರಾಟಕ್ಕೆ ವಿರೋಧಿಗಳಾಗಿ ತಮ್ಮಲ್ಲೇ ಇರುವವರನ್ನು ಅರಿಯದಾದದ್ದು ಕೂಡಾ ನಾಯಕನ ವೈಫಲ್ಯವೇ. ತೆರೆಯ ಹಿಂದಿನ ಅವರ ಚಟುವಟಿಕೆ ಗಾಂಧಿಯ ಅರಿವಿಗೇ ಬರಲಿಲ್ಲ ಎನ್ನುವುದೂ ವಿಚಿತ್ರವೇ. ಅಥವಾ ಅರಿವಿಗೆ ಬಂದಿದ್ದರೂ ಸುಮ್ಮನಾಗುಳಿದಿದ್ದರೆ ಅದಕ್ಕಿಂತ ದೊಡ್ದ ದೇಶದ್ರೋಹಿತನ ಮತ್ತೊಂದಿಲ್ಲ. ಹಾಗೆಯೇ ಅಂತಹ ವಿರೋಧಿಗಳನ್ನೇ ಓಲೈಸಿದ್ದು ಇನ್ನೊಂದು ಪ್ರಮಾದ! ಬಾದಶಾ ಖಾನ್ ಜೊತೆ "ಪಾಕಿಸ್ತಾನ ಅಸ್ತಿತ್ವಕ್ಕೆ ಬರುವುದೇ ಆದರೆ ನನ್ನ ಜಾಗ ಪಾಕಿಸ್ತಾನದಲ್ಲಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಗಡಿಪ್ರದೇಶಕ್ಕೆ ಹೋಗಬೇಕೆನ್ನುವುದು ನನ್ನ ಉದ್ದೇಶ. ನಾನು ಪಾಸ್ ಪೋರ್ಟ್ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ವಿಭಜನೆಯಲ್ಲಿ ನನಗೆ ನಂಬಿಕೆಯಿಲ್ಲ." ಎಂದರು ಗಾಂಧಿ(ಮಹಾತ್ಮ ಗಾಂಧಿ ಲಾಸ್ಟ್ ಫೇಸ್-ಪ್ಯಾರೇಲಾಲ್). ಅಬ್ಬಾ ಈ ಮುದುಕನ ಕಿಲಾಡಿತನವೇ! ದೇಶವಿಭಜನೆ ಆಗುವುದಿದ್ದರೆ ನನ್ನ ದೇಹವನ್ನು ವಿಭಜಿಸಬೇಕಾಗುತ್ತದೆ ಎಂದಿದ್ದ ಈ ಮಹಾತ್ಮ ಈಗ ಪಾಕಿಸ್ತಾನಕ್ಕೆ ಹೋಗಲೂ ತಯಾರಾಗಿದ್ದಾರೆ! ಪಾಸ್ ಪೋರ್ಟ್ ಎಂಬ ಶಬ್ಧದಲ್ಲೆ ವಿಭಜನೆಗೆ ಒಪ್ಪಿಗೆ ಎನ್ನುವ ಧ್ವನಿಯೂ ಇದ್ದಂತೆ ಅಲ್ಲವೇ. ಪಾಸ್ ಪೋರ್ಟ್ ಇದೆಯಂತೆ. ಆದರೆ ಅದು ಗಾಂಧಿಗೆ ಬೇಡ. ಯಾಕೆಂದರೆ ಅವರಿಗೆ ವಿಭಜನೆಯಲ್ಲಿ ನಂಬಿಕೆಯಿಲ್ಲವಂತೆ. ಅಂದರೆ ವಿಭಜನೆಗೆ ಗಾಂಧಿ ಸಿದ್ಧರಿದ್ದಾರೆ, ವಿಭಜಿತ ಪ್ರದೇಶಕ್ಕೆ ಹೋಗಲೂ ತುದಿಗಾಲಲ್ಲಿ ನಿಂತಿದ್ದಾರೆ, ಆದರೆ ವಿಭಜನೆಯಲ್ಲಿ ನಂಬಿಕೆಯಿಲ್ಲ! ಎಂತಹಾ ಇಬ್ಬಂದಿತನ, ದ್ವಂದ್ವಾರ್ಥದ, ಬೇಜವಾಬ್ದಾರಿತನದ ಹೇಳಿಕೆ!

      "ಒಂದೇ ಒಂದು ಮಾತು ಎದುರಾಡದೆ ಮುಸ್ಲಿಮರ ಆಕಾಂಕ್ಷೆ ಮತ್ತು ಭಾವನೆಗಳಿಗೆ ಸಮ್ಮತಿಸುತ್ತೇನೆ ಎಂದು ವಿನೀತನಾಗಿ ಒಪ್ಪಿಕೊಳ್ಳುತ್ತೇನೆ. ಅಸಮರ್ಥನೀಯ ಹಾಗೂ ಅಸಮಂಜಸವಾಗಿದ್ದರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ(ಗಾಂಧೀಜಿ ಇನ್ ಆಂಧ್ರಪ್ರದೇಶ, ತೆಲುಗು ಅಕಾಡೆಮಿ). ಸ್ವಾತಂತ್ರ್ಯಗಳಿಸುವುದಕ್ಕಿಂತಲೂ ಮುಸ್ಲಿಮರ ಓಲೈಕೆಯೇ ಮುಖ್ಯವಾಯಿತು ಗಾಂಧಿಗೆ!

 ದೇಶದ ಹಲವು ಭಾಗಗಳಲ್ಲಿ ಮುಸ್ಲಿಂ ಲೀಗಿನಿಂದ ನೇರ ಕಾರ್ಯಾಚರಣೆ ಆರಂಭವಾಗಿತ್ತು. ಕಲ್ಕತ್ತಾದಲ್ಲಂತೂ ಮೂರು ದಿನ ಹಿಂದೂಗಳ ಸಾಮೂಹಿಕ ಹತ್ಯೆ ಅಬಾಧಿತವಾಗಿ ನಡೆಯಿತು. ಬಂಗಾಳದಲ್ಲಿದ್ದ ಸುಹ್ರಾವರ್ದಿ ಸರಕಾರದ ಸುಪರ್ದಿಯಲ್ಲೇ ಈ ನರಮೇಧ ನಡೆಯಿತು. ಅಸಂಖ್ಯ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಯಿತು. ಲೆಖ್ಖವಿಲ್ಲದಷ್ಟು ಮತಾಂತರ ನಡೆಯಿತು. ಕಲ್ಕತ್ತಾ ಪೊಲೀಸರು ಕೈಕಟ್ಟಿ ಕುಳಿತುಕೊಂಡಿದ್ದರು. ಕಾನೂನು ಪಾಲನೆ ಹೊಣೆಹೊತ್ತವರ ಕಣ್ಣೆದುರಲ್ಲೇ ಈ ಭೀಭತ್ಸ ಘಟನೆಗಳು ನಡೆದವು. ಎರಡು ತಿಂಗಳಲ್ಲಿ ಮೂವತ್ತು ಸಾವಿರ ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಲಾಯಿತು. ಮೂರು ಲಕ್ಷಕ್ಕೂ ಹಿಂದೂಗಳ ಕಗ್ಗೊಲೆಯಾಯಿತು. ಕೋಟ್ಯಾಂತರ ಆಸ್ತಿಪಾಸ್ತಿ ನಾಶವಾಯಿತು. ಇದೆಲ್ಲಾ ಸುಹ್ರಾವರ್ದಿಯ ನೆರವಿನಿಂದಲೇ ನಡೆಯಿತು. ಇಂತಹ ಕುಕೃತ್ಯಕ್ಕೆ ಬಹಿರಂಗವಾಗಿಯೇ ಬೆಂಬಲ ಕೊಟ್ಟ ಸುಹ್ರಾವರ್ದಿಯನ್ನು ಗಾಂಧಿ "ಹುತಾತ್ಮ" ಎಂದು ಬಣ್ಣಿಸಿದರು. ಗಾಂಧಿ ನವಖಾಲಿ ಜಿಲ್ಲೆಯ ಪ್ರವಾಸ ಕೈಗೊಂಡಾಗ ಅವರಿಗೆ ರಕ್ಷಣೆ ನೀಡಿದ್ದು ಈ ಸುಹ್ರಾವರ್ದಿಯೇ. ಉಪ್ಪಿನ ಋಣವಿರಬೇಕು! ಗಾಂಧಿಗೆ ಅಹಿಂಸೆ ನೆನಪಾಗಲಿಲ್ಲ! ಹಿಂದೂಗಳ ರಕ್ತ ಕಣ್ಣೀರು ಮನಕರಗಿಸಲಿಲ್ಲ. ಲಕ್ಷಾಂತರ ಮಾನಿನಿಯರ ಮೇಲೆ ಅತ್ಯಾಚಾರವಾಗುತ್ತಿದ್ದಾಗ ಗಾಂಧಿ ಮಹಾತ್ಮ ಕೊಲೆಗಡುಗ ಸುಹ್ರಾವರ್ದಿಯ ತೊಡೆ ನೇವರಿಸುತ್ತಾ ಕುಳಿತಿದ್ದರು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ