ಪುಟಗಳು

ಗುರುವಾರ, ನವೆಂಬರ್ 17, 2016

ಯಾರು ಮಹಾತ್ಮ? ಭಾಗ- ೨೪

ಯಾರು ಮಹಾತ್ಮ?
ಭಾಗ- ೨೪


          1947 ಕಾಂಗ್ರೆಸ್ 12ರಂದು ಕಾಂಗ್ರೆಸ್ ಧುರೀಣರು ಹರಿದ್ವಾರಕ್ಕೆ ಭೇಟಿ ನೀಡಿದಾಗ ಹಿಂದೂ ನಿರಾಶ್ರಿತರ ದೊಡ್ಡ ಗುಂಪೊಂದು ಎದುರಾಯಿತು. ಮುಸ್ಲಿಮ್ ಲೀಗಿನ ನೇರ ಕಾರ್ಯಾಚರಣೆಯಿಂದ ಮನೆ, ಆಸ್ತಿ, ಪ್ರೀತಿಪಾತ್ರರನ್ನು ಕಳೆದುಕೊಂಡ ಅವರಿಗೆ ಸಹಜವಾಗಿಯೇ ಗಾಂಧಿಯ ಮೇಲೆ ಸಿಟ್ಟಿತ್ತು. ಗಾಂಧಿಯನ್ನು ಕಂಡಕೂಡಲೇ ಅವರಿಂದ "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆ ಅವರಿಂದ ಹೊರಹೊಮ್ಮಿತು. ಇದೇ ಪರಿಸ್ಥಿತಿ ಗಾಂಧಿ ಪಂಜಾಬ್-ಸಿಂಧ್ ಪ್ರವಾಸದಲ್ಲಿರುವಾಗಲೂ ಎದುರಾಯಿತು. ಅಲ್ಲಿ ಜನರ ಆಕ್ರೋಶಕ್ಕೆ ಗುರಿಯಾಗಿ ಯಾವುದೇ ಭಾಷಣ ಮಾಡದೆ ಗಾಂಧಿ ದೆಹಲಿಗೆ ವಾಪಸಾಗಬೇಕಾಯಿತು.


             ಆಚಾರ್ಯ ಕೃಪಲಾನಿ 1947ರ ಜೂನ್ 14ರಂದು ನಡೆದ ಎಐಸಿಸಿ ಅಧಿವೇಶನದಲ್ಲಿ ವಿಭಜನೆಯ ಬಗೆಗಿನ ಗಾಂಧಿ ದೃಷ್ಟಿಕೋನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. "ದೇಶ ವಿಭಜನೆ ಕುರಿತ ಗಾಂಧಿ ನಿಲುವು ಅಪ್ರಾಯೋಗಿಕ. ಕಳೆದ ಮೂವತ್ತು ವರ್ಷಗಳಿಂದ ಗಾಂಧಿಯ ಮೇಲೆ ರಾಜಕೀಯ ನಿಷ್ಠೆ ಹೊಂದಿದ್ದರೂ ಇಂದು ನಾನು ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ. ಸಮಸ್ಯೆಗಳನ್ನು ಸಾಮೂಹಿಕ ಆಧಾರದ ಮೇಲೆ ಬಗೆಹರಿಸುವ ದಾರಿ ಗಾಂಧಿಗೆ ತಿಳಿದಿಲ್ಲ. ಅವರು ನಮಗೆ ತೋರಿದ ಅಹಿಂಸೆ, ಅಸಹಕಾರಗಳನ್ನು ಯಾಂತ್ರಿಕವಾಗಿಯಾದರೂ ಅನುಸರಿಸುತ್ತಿದ್ದರು. ಇಂದು ಅವರೇ ಸ್ವತಃ ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಪಂಜಾಬಿನ ಹಿಂಸೆಯನ್ನು ಶಮನಗೊಳಿಸಲು ಅವರ ಅಹಿಂಸೆ-ಅಸಹಕಾರಗಳಿಗೆ ಸಾಧ್ಯವಾಗಲಿಲ್ಲ. ಇಡೀ ಭಾರತದಲ್ಲಿ ಹಿಂದೂ ಮುಸ್ಲಿಮ್ ಐಕ್ಯತೆಯನ್ನು ಸಾಧಿಸುವ ಸಲುವಾಗಿ ತಾವು ಬಿಹಾರದಲ್ಲಿ ಪ್ರಯತ್ನಿಸುವುದಾಗಿ ಗಾಂಧಿ ಹೇಳುತ್ತಾರೆ. ಇದು ಹೇಗೆ ಸಾಧ್ಯ? ಸಾಮಾನ್ಯನಿಗೂ ಗೊತ್ತು ಇದು ಅಪ್ರಾಯೋಗಿಕ ಎಂದು. ಉದ್ದೇಶಿತ ಗುರಿ ಸಾಧಿಸಲು ಗಾಂಧಿಯಲ್ಲಿ ಖಚಿತ ಹೆಜ್ಜೆಗಳೇ ಇಲ್ಲ. ಅವರು ನೀತಿಗಳನ್ನು ರೂಪಿಸುತ್ತಾರೆ. ಆದರೆ ಅವು ಬೇರೆಯವರಿಂದ ಜಾರಿಯಾಗಬೇಕೆಂದು ಬಯಸುತ್ತಾರೆ." "ಹೃದಯದ ಏಕತೆ ಸಾಧಿಸುವ ಮೂಲಕ ವಿಭಜನೆಯ ಪರಿಣಾಮಗಳನ್ನು ತಟಸ್ಥಗೊಳಿಸಿ. ಕೆಲಸಕಾರ್ಯಗಳ ಮುಖಾಂತರ ಎರಡು ದೇಶ ಸಿದ್ಧಾಂತವನ್ನು ಖಂಡಿಸಿ" ಎಂದು ಬಿಟ್ಟಿ ಸಲಹೆ ನೀಡಿದಾಗ ವಿಭಜನೆಯ ಪ್ರಸ್ತಾಪ ವಿರೋಧಿಸಿದ ಜನ ತಿರುಗಿ ಬೀಳದೆ ಇರುತ್ತಾರೆಯೇ? ಮೇಲಿಂದ ಮೇಲೆ ವಿರೋಧ ಎದುರಿಸಿದಾಗ ತಮ್ಮ ದಾರಿ ಸರಿಯಾಗಿಯೇ ಇದೆ ಎಂದು ಗಾಂಧಿ ಭಾವಿಸಿದರು. ಮತ್ತೆ ತಮ್ಮ ದಾರಿಯಲ್ಲೇ ಸಾಗಿದರು(ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                 ವಿಭಜನೆಯ ನಿರ್ಣಯವನ್ನು ಕೊನೆಗಾಣಿಸುವವರೆಗೆ ಗಾಂಧಿಯ ಮನೆಯ ಎದುರು ಉಪವಾಸ ಕೂರಲು ಯುವ ಜೋಡಿಯೊಂದು ನಿರ್ಧರಿಸಿತು. ಆಗ ಗಾಂಧಿ "ಇದು ಸರಿಯಾದ ವಿಧಾನವಲ್ಲ. ಭೌತಿಕ ವಿಭಜನೆ ಯಾವ ಪರಿಣಾಮವನ್ನೂ ಉಂಟು ಮಾಡುವುದಿಲ್ಲ. ಪಾಕಿಸ್ತಾನ ರಚನೆಯಾಗದಂತೆ ತಡೆಯುವ ಏಕೈಕ ಮಾರ್ಗವೆಂದರೆ ಹಿಂದೂಗಳು ಮುಸ್ಲಿಮ್ ಸಹೋದರರಿಂದ ಬೇರೆಯಾಗದೇ ಇರುವುದು. ಹಿಂದೂಗಳ ಹೃದಯ ಗಟ್ಟಿಯಾಗಿ ಇದ್ದರೆ ಭೌತಿಕ ವಿಭಜನೆ ಯಾವುದೇ ಪರಿಣಾಮವನ್ನೂ ಉಂಟುಮಾಡುವುದಿಲ್ಲ." ಎಂದು ಸಮಾಧಾನಿಸಲು ಯತ್ನಿಸಿದರು ಗಾಂಧಿ. ಇಲ್ಲಿ ಗಾಂಧಿಯ ಕಪಟತ್ವ ಬೆಳಕಿಗೆ ಬರುತ್ತಿದೆ. ವಿಭಜನೆಯಾದರೆ ನನ್ನ ದೇಹದ ಮೇಲೆ ಎಂದಾತ ಈಗ ಅದು ಕೇವಲ ಭೌತಿಕ ವಿಭಜನೆಯಷ್ಟೇ ಎಮ್ದು ತಿಪ್ಪೆ ಸಾರಿಸುತ್ತಿದ್ದಾರೆ. ಅಲ್ಲದೆ ಆ ವಿಭಜನೆಯಿಂದ ಭಾರತಕ್ಕೇನೂ ಹಾನಿಯಿಲ್ಲ ಎನ್ನುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರೇನೇ ಹಾನಿ ಮಾಡಿದರೂ ಹಿಂದೂಗಳು ಮುಸ್ಲಿಮರ ಜೊತೆಯಾಗಿ ಇರಬೇಕಂತೆ! ಗಾಂಧಿಗೆ ದೇಶಕ್ಕಿಂತ ಹಿಂದೂ-ಮುಸ್ಲಿಮ್ ಏಕತೆಯ ಹುಚ್ಚೇ ತೀವ್ರವಾಗಿತ್ತು ಎನ್ನುವುದರ ದ್ಯೋತಕ ಇದು. ರಾಜತಾಂತ್ರಿಕವಾಗಿ ಕಾರ್ಯ ನಿರ್ವಹಿಸಬೇಕಾದ ಹೊತ್ತಿನಲ್ಲಿ ಎಲ್ಲಾ ಬಿಟ್ಟವರಂತೆ ಮಾತನಾಡುತ್ತಿದ್ದಾರೆ ಗಾಂಧಿ. ಕ್ಷಾತ್ರವನ್ನು ಪ್ರದರ್ಶಿಸಬೇಕಾದ ಸಮಯದಲ್ಲಿ ವೇದಾಂತ ಹೇಳುತ್ತಿದ್ದಾರೆ. ಇದು ಗಾಂಧಿಯ ನಾಯಕತ್ವದ ವೈಫಲ್ಯದ ಲಕ್ಷಣ. ಆ ಯುವ ಜೋಡಿ ತಾವು ತಮ್ಮ ಆತ್ಮಸಾಕ್ಷಿ ಹೇಳಿದಂತೆ ನಡೆಯುತ್ತಿದ್ದೇವೆ ಎಂದು ಗಾಂಧಿಯ ಮಂತ್ರವನ್ನೇ ತಿರುಗಿ ಉಪಯೋಗಿಸಿದಾಗ ಗಾಂಧಿಯ ಮುಖ ಪೆಚ್ಚಾಗದೇ ಇದ್ದೀತೇ? (ಮಹಾತ್ಮ ಗಾಂಧಿ ದಿ ಲಾಸ್ಟ್ ಫೇಸ್-ಪ್ಯಾರೇಲಾಲ್)


                ದೇಶ ವಿಭಜನೆಯ ವಿರುದ್ಧವಾಗಿ ಹೇಳಿಕೆ ನೀಡಿದ್ದ ಗಾಂಧಿ ವಿಭಜನೆಯನ್ನು ಒಪ್ಪುವ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಅಂಗೀಕರಿಸುವಂತೆ ಜನರನ್ನು ಒತ್ತಾಯಪಡಿಸಿದರು. ವಿಭಜನೆಯ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಮರುಮಾತಿಲ್ಲದೆ ಒಪ್ಪಿದ ಗಾಂಧಿ ದೇಶದ ಜನರ ಮತಭೇದವಿಲ್ಲದ ನಿರ್ಧಾರವನ್ನು ಪರಿಗಣಿಸಿ ಧ್ವಜ ಸಮಿತಿ ಶಿಫಾರಸ್ಸು ಮಾಡಿದ ಕೇಸರಿ ಬಣ್ಣದ ಧ್ವಜವನ್ನು ಯಾಕೆ ಒಪ್ಪಲಿಲ್ಲ? ಅಲ್ಲದೆ ಅದನ್ನು ಅಂಗೀಕರಿಸದಂತೆ ಕಾಂಗ್ರೆಸ್ ಮೇಲೆ ಒತ್ತಡ ಹೇರಿದ್ದೇಕೆ? ಆ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು, ಸಮಿತಿಯ ನಿರ್ಣಯವನ್ನು ತಿರಸ್ಕರಿಸಿದ ಗಾಂಧಿಗೆ ಈಗೇಕೆ ಸಾಧ್ಯವಾಗಲಿಲ್ಲ? ಗಾಂಧಿಗೆ ಕಾಂಗ್ರೆಸ್ಸಿನ ಮೇಲಿನ ಹಿಡಿತ ತಪ್ಪಿತ್ತು ಎಂದು ಕೆಲವರು ವಾದಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಐವತ್ತೈದು ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತು ತಮ್ಮ ನಿರ್ಧಾರವನ್ನು ಸಾಧಿಸಿಕೊಂಡ ಛಲಗಾರನಿಗೆ ದೇಶ ವಿಭಜನೆಯಂತಹ ಜೀವನ್ಮರಣದ ಪ್ರಶ್ನೆಯ ವಿಚಾರ ಬಂದ ತಕ್ಷಣ ಹಿಡಿತ ತಪ್ಪಿ ಹೋಯಿತೇ? ವಿಭಜನೆಯಾದ ಕೂಡಲೆ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ನಡೆಸಿತ್ತು. ಎಲ್ಲಿಯವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೆ ಬಾಕಿ ಹಣ ಕೊಡುವುದಿಲ್ಲ ಎಂದು ಭಾರತ ಸರಕಾರ ದೃಢ ನಿರ್ಧಾರ ತಾಳಿತ್ತು. ಅಂತಹ ಸಮಯದಲ್ಲಿ ಬಾಕಿ 55 ಕೋಟಿ ರೂಪಾಯಿ ಕೊಡಬೇಕೆಂದು ಉಪವಾಸ ಕೂತರು ಗಾಂಧಿ. ಗಾಂಧಿಯ ಹಠಮಾರಿ ಧೋರಣೆಗೆ ತಲೆಬಾಗಿತು ಸರಕಾರ! ಪಾಕಿಸ್ತಾನಕ್ಕೆ ಸಹಾಯಕವಾಗುವುದಾದರೆ ಮಾತ್ರ ಉಪವಾಸದ ಅಸ್ತ್ರ , ಹಿಂದೂಗಳಿಗೆ, ಹಿಂದೂಸ್ಥಾನದ ಭವಿಷ್ಯಕ್ಕಾಗುವಾಗ ಉಪವಾಸ, ಅಸಹಕಾರದ ಅಸ್ತ್ರಗಳು ಇಲ್ಲ ಎಂದರೆ ಏನರ್ಥ? ಅನುಯಾಯಿಗಳು ನೆನಪಿಸಿದರೂ ಅದನ್ನು ಕೈಗೆತ್ತಿಕೊಳ್ಳಲಿಲ್ಲವೇಕೆ? ಕಾಂಗ್ರೆಸ್ ಮೇಲೆ ಹಿಡಿತವಿಲ್ಲವೆಂದಾದರೆ ಜನರನ್ನೇಕೆ ವಿಭಜನೆಗೆ ಒಪ್ಪುವಂತೆ ಒತ್ತಾಯಪಡಿಸಬೇಕಿತ್ತು? ದೇಶದ ಜನತೆ ತಮ್ಮ ಬೆಂಬಲಕ್ಕೆ ನಿಲ್ಲುತ್ತೇವೆಂದು, ಕಾರ್ಯಕರ್ತರನ್ನು ಒದಗಿಸುತ್ತೇವೆಂದು, ಧನ ಸಹಾಯವನ್ನೂ ಮಾಡುತ್ತೇವೆಂದು ಬಗೆಬಗೆಯಲ್ಲಿ ಧೈರ್ಯ ತುಂಬಿದರೂ ಗಾಂಧಿ ನಿಷ್ಕ್ರಿಯರಾದದ್ದೇಕೆ?


                    ಗಾಂಧಿ ಕೇವಲ ನಿಷ್ಕ್ರಿಯರಾದದ್ದು ಮಾತ್ರವಲ್ಲ ಜನರಲ್ಲಿ ಪಾಕಿಸ್ತಾನದ ರಚನೆಯ ಕುರಿತು ಪ್ರಚಾರ ಕಾರ್ಯವನ್ನೂ ಕೈಗೊಂಡರು. ತನಗಿಷ್ಟವಿಲ್ಲದಿದ್ದಾಗ, ತನ್ನಿಂದ ವಿಭಜನೆಯನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದಾಗ ಸುಮ್ಮನೆ ಉಳಿಯಬೇಕಿತ್ತು. ಅದು ಬಿಟ್ಟು ವಿಭಜನೆಯನ್ನು ಒಪ್ಪಿಕೊಳ್ಳಿ ಎಂದು ಜನರಿಗೆ ದುಂಬಾಲು ಬಿದ್ದರು ಗಾಂಧಿ. ಅವರ ಈ ನಿಲುವು ಆಶ್ಚರ್ಯ ತರುವಂತಹದ್ದೇನಲ್ಲ. ಅಡಿಗಡಿಗೆ ಮತಾಂಧ ಮುಸ್ಲಿಮರ ಸಹಾಯಕ್ಕೆ ನಿಂತು ಹಿಂದೂಗಳನ್ನೂ, ರಾಷ್ಟ್ರೀಯವಾದಿ ಮುಸಲ್ಮಾನರನ್ನು ಕಡೆಗಣಿಸಿದ ವ್ಯಕ್ತಿಯ ಈ ನಿಲುವು ಅಸಹಜವೂ ಅಲ್ಲ. ಇಡೀ ಭಾರತ ಬೇಕಾದರೆ ಪಾಕಿಸ್ತಾನವಾಗಲಿ ಎಂದು ಹೇಳಿದ್ದ, ಭಾರತದ ಆಳ್ವಿಕೆಯನ್ನು ಹಿಂದೂಗಳಿಗೆ ಮಾರಣಾಂತಕವಾದ ಮುಸ್ಲಿಮ್ ಲೀಗಿಗೆ ವಹಿಸಿ ಜಿನ್ನಾನನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸುವಂತೆ ವೈಸ್ ರಾಯ್ ಮೌಂಟ್ ಬ್ಯಾಟನ್'ಗೆ ಸಲಹೆ ಮಾಡಿದ್ದ ಗಾಂಧಿಗೆ ದೇಶವಿಭಜನೆಯೆಂದರೆ ಮಕ್ಕಳಾಟದಂತೆ ಕಂಡಿದ್ದಿರಬಹುದು. ಹಿಂದೂಗಳನ್ನು ಸಲಾಮ್ ಮಾಡಿ, ಅಲ್ಲಾ ಹೋ ಅಕ್ಬರ್ ಎಂದು ಹೇಳಿ, ಉರ್ದು ಕಲಿಯಿರಿ, ವಂದೇ ಮಾತರಂ, ಶಿವಬಾವನಿ ಹಾಡಬೇಡಿ, ವಿಭಜನೆಯ ಮೂಲ ಬೀಜ ಇಕ್ಬಾಲನ ಕವಿತೆ ಹಾಡಿ ಎಂದ ಗಾಂಧಿಗೆ ಪಾಕಿಸ್ತಾನವೇ ಪ್ರಿಯವಾಗಿದ್ದಿರಬಹುದು. ಖಿಲಾಫತ್ ಚಳುವಳಿಯನ್ನು ಹಿಂದೂಗಳ ಮೇಲೆ ಹೇರಿ, ಕೊಲೆಗಾರ ಮೋಪ್ಲಾಗಳನ್ನು ಸೋದರರೆಂದು ಕರೆದ ವ್ಯಕ್ತಿಗೆ ಮುಸ್ಲಿಂ ಲೀಗ್ ಆಪ್ಯಾಯಮಾನವಾಗಿ ಕಂಡಿದ್ದರಲ್ಲಿ ಏನಾಶ್ಚರ್ಯವಿದೆ? ಕಲ್ಕತ್ತಾದಲ್ಲಿ ಹಿಂದೂಗಳ ನರಮೇಧಕ್ಕೆ ಕಾರಣನಾದ ಸುಹ್ರಾವರ್ದಿಯನ್ನು ತನ್ನ ಪ್ರೀತಿಯ ಸೈನಿಕ ಎಂದ, ಶೃದ್ಧಾನಂದರ ಕೊಲೆಗಾರ ರಶೀದನನ್ನು ಸಹೋದರ ಎಂದ, ಶೌಕತ್, ಮಹಮ್ಮದ್ ಅಲಿಗೆ ಶರಣು ಬಂದ ಗಾಂಧಿಗೆ ಕೋಮುವಾದಿಯಾಗಿ ಬದಲಾದ ಜಿನ್ನಾ ಪ್ರಿಯನಾಗದೆ ಇದ್ದಾನೇ? ಬ್ರಿಟಿಷರ ಒಡೆದು ಆಳುವ ನೀತಿಗೆ ಗಾಂಧಿಯ ದಾರಿ ಸಹಾಯಕವಾಯಿತು. ವಿಚಿತ್ರವೆಂದರೆ ತನ್ನ ಪುಕ್ಕಲುತನ, ತಿಕ್ಕಲುತನ, ಅಸಹಾಯಕತನ, ಗೊಂದಲಗಳಿಂದಾಗಿ ಸಾಲು ಸಾಲು ವೈಫಲ್ಯ ಕಂಡು ಕೊನೆಗೆ ವಿಭಜನೆಯ ಶಿಲ್ಪಿಯಂತೆ ಕೆಲಸ ಮಾಡಿ ಪರೋಕ್ಷವಾಗಿ ಪಾಕಿಸ್ತಾನದ ಜನಕನಾದ ವ್ಯಕ್ತಿಯನ್ನು ರಾಷ್ಟ್ರಪಿತ ಎಂದು ಸತ್ಕರಿಸಿದ ಈ ದೇಶದ ಬೌದ್ಧಿಕ ದಾರಿದ್ರ್ಯಕ್ಕೆ ಏನೆನ್ನಬೇಕು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ