ಪುಟಗಳು

ಗುರುವಾರ, ಮೇ 18, 2023

ಖಲಿಸ್ತಾನ ಕಲಿಗಳದ್ದಲ್ಲ; ಬುದ್ಧಿಗೇಡಿಗಳದ್ದು

 ಖಲಿಸ್ತಾನ ಕಲಿಗಳದ್ದಲ್ಲ; ಬುದ್ಧಿಗೇಡಿಗಳದ್ದು



ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.


ಅಲ್ಲಿಂದಾಚೆಗೆ ಪಂಜಾಬ್ ಶ್ರೀಮಂತ ಕೃಷಿ, ಉದ್ಯಮ ಹಾಗೂ ಹಣದ ಹರಿವಿನಿಂದ ಶಾಂತಿ ಹಾಗೂ ಸಂಪದ್ಭರಿತ ರಾಜ್ಯಗಳಲ್ಲೊಂದಾಗಿಬಿಟ್ಟಿತ್ತು. ಆದರೆ ಖಲಿಸ್ತಾನದ ಬೇಡಿಕೆ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಆಗಲೂ ಇತ್ತು. ಅಮೇರಿಕಾ, ಯೂರೋಪ್, ಕೆನಡಾಗಳ ರಾಜಕಾರಣ ಈ ದೇಶಗಳಲ್ಲಿರುವ ಸಿಖ್ಖರಲ್ಲಿ ಪ್ರತ್ಯೇಕತಾ ಭಾವನೆಯನ್ನು ಪೋಷಿಸಿಕೊಂಡು ಬರುವಲ್ಲಿ ಸಹಾಯಕವಾಗಿತ್ತು. ಅದರಲ್ಲೂ ದಲ್ ಖಲ್ಸಾ ಮತ್ತು ದುಮ್ದಾಮಿ ತಕ್ಸಲ್ ಮೊದಲಾದ ಸಿಖ್ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ರಹಸ್ಯ ಪೋಷಣೆಯೊಂದಿಗೆ ಖಾಲಿಸ್ತಾನ್ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡಿದ್ದವು. ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ ಭಿಂದ್ರನ್ ವಾಲೆ ಹಾಗೂ ಸಂಗಡಿಗರಿಗೆ ಸ್ಮಾರಕವನ್ನೂ ನಿರ್ಮಿಸಲು ಇವು ಯಶಸ್ವಿಯಾಗಿದ್ದವು. ಖಲಿಸ್ತಾನಿ ಉಗ್ರರು ಯುಎಇನಲ್ಲಿ ಇತ್ತೀಚೆಗಷ್ಟೇ ಕೇಂದ್ರೀಯ ನೆಲೆಯೊಂದನ್ನು ಸ್ಥಾಪಿಸಿದ್ದರು. ಭಾರತದ ಬಗ್ಗೆ ಜಾಗತಿಕವಾಗಿ ಕೆಟ್ಟ ಭಾವನೆ ಬಿತ್ತುವುದರ ಜೊತೆಗೆ ಪಂಜಾಬ್ನಲ್ಲಿ ಭಯೋತ್ಪಾದನೆಗೆ ಕಾಯಕಲ್ಪ ನೀಡಿ, ಹಿಂಸಾಚಾರ ಭುಗಿಲೇಳುವಂತೆ ಮಾಡಲು ಯುಎಇಯ ಪ್ರತಿಷ್ಠಿತ ಶೂಟಿಂಗ್ ಕ್ಲಬ್ನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಪಂಜಾಬ್ನ ಕುಖ್ಯಾತ ಅಪರಾಧಿಗಳನ್ನು ಸಂರ್ಪಸಿ ಅವರಿಗೆ ಹಣ ನೀಡಿ ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆಗೈಯುವ ಮೂಲಕ ಪಂಜಾಬ್ನಲ್ಲಿ ಕೋಮುಗಲಭೆ ಸೃಷ್ಟಿಸುವುದು ಉಗ್ರರ ಹುನ್ನಾರವಾಗಿತ್ತು. ಅಪರೇಷನ್ ಬ್ಲೂಸ್ಟಾರ್ ನೇತೃತ್ವ ವಹಿಸಿದ್ದ ನಿವೃತ ಲೆ.ಜ. ಕುಲದೀಪ್ ಸಿಂಗ್ ಬ್ರಾರ್ ಮೇಲೆ 2013ರಲ್ಲಿ ಲಂಡನ್ನಿನಲ್ಲಾದ ದಾಳಿ, ಸೆರೆಮನೆಗೆ ದಾಳಿ ಮಾಡಿ ಮಿಂಟೂ ಸಹಿತ ಐವರನ್ನು ಬಿಡಿಸಿಕೊಂಡ ಘಟನೆ, ಕಾರಿನಲ್ಲಿ ಭಾರಿ ಸ್ಫೋಟಕಗಳನ್ನಿರಿಸಿಕೊಂಡು ದೆಹಲಿಯ ಮೇಲೆ ದಾಳಿಗೆ ಬಂದು ಸಿಕ್ಕಿಬಿದ್ದ ಪ್ರಕರಣ, ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ದಿನ ಸ್ವರ್ಣಮಂದಿರದ ಎದುರು ಖಡ್ಗ ಹಿಡಿದು ಖಲಿಸ್ತಾನ್ ಪರ ಘೋಷಣೆ ಕೂಗಿದ್ದು, ನಿರಂಕಾರಿ ಭವನದ ಮೇಲಾದ ದಾಳಿ ಇವೆಲ್ಲಾ ಇದರ ಭಾಗಗಳೇ. ಅವರ ನೆಲೆಗಳೀಗ ಇಟಲಿ, ಆಸ್ಟ್ರೇಲಿಯಾ, ಜರ್ಮನಿ, ಬ್ರಿಟನ್, ಕೆನಡಾ, ಯುಎಇ ಸಹಿತ ಹಲವು ದೇಶಗಳಲ್ಲಿವೆ. ಕೆನಡಾದಲ್ಲಂತೂ ಜನಸಂಖ್ಯೆ, ಉದ್ಯಮ ಹಾಗೂ ರಾಜಕೀಯದಲ್ಲಿ ಪ್ರಭಾವಿಗಳಾಗಿರುವ ಸಿಖ್ಖರು ಕೆನಡಾ ಸರಕಾರ ಸಿಖ್ ಪ್ರತ್ಯೇಕತಾವಾದಿಗಳ ಬಗ್ಗೆ ಮೃಧು ಧೋರಣೆ ತಳೆಯುವಂತೆ ಮಾಡಲು ಸಫಲರಾಗಿದ್ದಾರೆ.


ಮೋದಿಯವರು ಪ್ರಧಾನಿಯಾದ ಬಳಿಕ ಕಾಶ್ಮೀರ ಗಡಿಯಲ್ಲಿ ಸತತ ಮುಖಭಂಗಕ್ಕೊಳಗಾದ ಪಾಕಿಸ್ತಾನ ಮತ್ತೆ ಸಿಖ್ ಪ್ರತ್ಯೇಕತಾವಾದಿಗಳನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿತು. ಪ್ರತ್ಯೇಕತಾವಾದಿಗಳಿಗೆ ಶಸ್ತ್ರಾಸ್ತ್ರ ಹಾಗೂ ಧನ ಸಹಾಯವನ್ನು ಒದಗಿಸಿತು. ಸಿಖ್ಖರ ಪವಿತ್ರ ಗ್ರಂಥವನ್ನು ಅಪಚಾರ ಗೈದು ಪರಾರಿಯಾಗುವ ಛದ್ಮವೇಶಧಾರಿಗಳನ್ನೂ ಅದು ನೇಮಿಸಿತು. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಿಖ್ ಯುವಕರನ್ನು ಕೆರಳಿಸಿತು. ಹಿಂದುತ್ವದ ವಿರುದ್ಧದ ನಿರೂಪಣೆಯನ್ನು ಸಿಖ್ ಹಿಂಸಾಚಾರದ ನಿರೂಪಣೆಗೆ ಸರಿ ಹೊಂದುವಂತೆ ರಾಷ್ಟ್ರಮಟ್ಟದಲ್ಲಿ ಕಥೆ ಸೃಷ್ಟಿಸುವ ಬರಹಗಾರರನ್ನು ಬಿಸ್ಕತ್ ಹಾಕಿ ಬಳಸಿತು. ಜಗದೀಶ್ ಕುಮಾರ್ ಕೊಲೆ ಪ್ರಕರಣ ತನಿಖೆ ವೇಳೆ ರಾ.ಸ್ವ.ಸಂ., ಶಿವಸೇನೆ, ಹಿಂದೂ ತಖ್ತ್ ಸಂಘಟನೆಗಳ ಮುಖಂಡರ (ಒಟ್ಟು 6) ಕೊಲೆಗಳಲ್ಲಿ ಐಎಸ್ಐ ಕೈವಾಡ ಬೆಳಕಿಗೆ ಬಂತು. ಖಲಿಸ್ತಾನ್ ಬೆಂಬಲಿಗರಿಂದ ರಾ.ಸ್ವ.ಸಂ.ದ ಕಾರ್ಯಕರ್ತರ, ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಐಎಸ್ಐ ಉದ್ದೇಶವಾಗಿತ್ತು.  ಪಾಕಿಸ್ತಾನದ ಸೈನ್ಯದಲ್ಲಿ ಚೌಧರಿ ಸಾಹಿಬ್ ಎಂದೇ ಪ್ರಸಿದ್ಧನಾದ ಲೆ. ಕ. ಶಾಹಿದ್ ಮಹಮೂದ್ ಮಾಲ್ಹಿ ನೇತೃತ್ವದಲ್ಲಿ "ರೆಫರೆಂಡಮ್ 2020" ಸಿದ್ಧಗೊಳಿಸಿ ಸಿಖ್ ಪ್ರತ್ಯೇಕವಾದಿಗಳಿಗೆ ಹಂಚಿತು. ಪಂಜಾಬನ್ನು 2020ರೊಳಗೆ ಸ್ವತಂತ್ರಗೊಳಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಹಾಗೂ ವಿಶ್ವಸಂಸ್ಥೆಯ ಮಧ್ಯಪ್ರದೇಶದೊಂದಿಗೆ ಪಂಜಾಬಿನಲ್ಲಿ ಜನಮತ ಸಂಗ್ರಹಣೆ ಮಾಡುವ ಬಗ್ಗೆ ಈ ದಸ್ತಾವೇಜಿನಲ್ಲಿ ವಿವರಿಸಲಾಗಿತ್ತು. ಭಾರತ ಸರಕಾರದ ವಿರೋಧದ ನಡುವೆಯೂ ರೆಫರೆಂಡಮ್ 2020ಯನ್ನು ಉದ್ಘೋಷಿಸುವ ಲಂಡನ್ ಘೋಷಣೆ ಕಾರ್ಯಕ್ರಮಕ್ಕೆ ಬ್ರಿಟನ್ ಸರಕಾರ ಅನುಮತಿ ಕೊಟ್ಟಿತ್ತು. ಜೊತೆಗೆ ವಿವಿಧ ಸಂದರ್ಭಗಳಲ್ಲಿ ಅಮೇರಿಕಾ ಹಾಗೂ ಕೆನಡಾಗಳಲ್ಲಿ ಭಾರತೀಯ ರಾಜತಾಂತ್ರಿಕ ವರ್ಗಕ್ಕೆ ಗುರುದ್ವಾರ ಪ್ರವೇಶವನ್ನು ನಿರಾಕರಿಸಲಾಗಿತ್ತು. ಐಎಸ್ಐ, ಸಿಖ್ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ, ಕಾಶ್ಮೀರದ ಗಡಿಯಲ್ಲಿ ಕಾರ್ಯಾಚರಿಸುವ ಭಯೋತ್ಪಾದಕ ಸಂಘಟನೆಗಳೊಂದಿಗೆ ಬೆಸೆಯಲು ಯತ್ನಿಸುತ್ತಿದೆ. ಭಯೋತ್ಪಾದಕ ಝಾಕೀರ್ ಮೂಸಾ ಇದರ ರೂವಾರಿಯಾಗಿದ್ದ. ಭಯೋತ್ಪಾದಕ ಬುರ್ಹಾನ್ ವಾನಿಯ ಆಪ್ತನಾಗಿದ್ದ ಆತನನ್ನು ನಮ್ಮ ದೇವದುರ್ಲಭ ಯೋಧ ಪಡೆ ಬುರ್ಹಾನ್ ವಾನಿಯನ್ನು ಕಳಿಸಿದ ಜಾಗಕ್ಕೇ ಅಟ್ಟಿತು.  ಕಾಶ್ಮೀರದ ವಿದ್ಯಾರ್ಥಿಗಳು ಕೆಲವರು ಉದ್ದೇಶಪೂರ್ವಕವಾಗಿ ಪಂಜಾಬಿನ ವಿದ್ಯಾಲಯಗಳಲ್ಲಿ ನೇಮಕಾತಿ ಪಡೆದು ಈ ಎರಡೂ ಭಯೋತ್ಪಾದಕ ಗುಂಪುಗಳ ನಡುವೆ ಕೊಂಡಿಯಾಗಿ ಕಾರ್ಯವೆಸಗುತ್ತಿದ್ದಾರೆ! ಇದರ ಜೊತೆಗೆ ಹಿಂದೂ ರಾಷ್ಟ್ರವಾದಿಗಳು ಹಾಗೂ ಭಾರತ ಸರಕಾರ ಸಿಖ್ಖರನ್ನು ತುಳಿಯುತ್ತಿದ್ದಾರೆ ಎನ್ನುವ ಭಾವನೆಯನ್ನು ಸಿಖ್ ಯುವಕರ ತಲೆಯಲ್ಲಿ ಇಂದಿಗೂ ತುಂಬಿಸಲಾಗುತ್ತಿದೆ. ಭಾರತದ ಸಂಸ್ಕೃತಿ, ಮತ ಸಾಮರಸ್ಯ ಹಾಗೂ ವೈವಿಧ್ಯತೆಗಳ ಅರಿವಿಲ್ಲದ ನವ ಸಿಖ್ ಪೀಳಿಗೆ ಸುಲಭವಾಗಿ ಈ ಮತಾಂಧರ ಕೈವಶವಾಗುತ್ತಿದೆ.


ಖಲಿಸ್ತಾನೀಗಳ ಗುರಿ ಯಾವತ್ತಿಗೂ ಹಿಂದೂಗಳೇ.1989ರ ಯುವೋತ್ಸವದಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಿ ದಾಳಿ ಮಾಡಿದ್ದರು. ಆಗ 19 ಹಿಂದೂ ವಿದ್ಯಾರ್ಥಿಗಳು ಜೀವಕಳೆದುಕೊಂಡಿದ್ದರೆ ಹಲವರು ಗಾಯಗೊಂಡಿದ್ದರು. ಆಗ ಬಳಕೆಯಾದ ಎಕೆ-47 ಚೀನಾದಲ್ಲಿ ತಯಾರಾದದ್ದು! ಅದೇ ವರ್ಷ ಜೂನ್ ನಲ್ಲಿ ಸಂಘದ ಸ್ವಯಂಸೇವಕರ ಮೇಲೆ ದಾಳಿ ಮಾಡಿ 25 ಸ್ವಯಂಸೇವಕರನ್ನು ಕೊಂದು 35ಕ್ಕೂ ಹೆಚ್ಚು ಸ್ವಯಂಸೇವಕರಿಗೆ ಮಾರಣಾಂತಿಕ ಗಾಯಗಳನ್ನುಂಟು ಮಾಡಿದ್ದರು. ಅದು ಮೋಗಾ ಹತ್ಯಾಕಾಂಡವೆಂದೇ ಪ್ರಸಿದ್ಧ. 45 ಜನರನ್ನು ಬಲಿತೆಗೆದುಕೊಂಡ ಮಾರ್ಚ್ 1990ರ ಅಬೋಹರ್ ಹತ್ಯಾಕಾಂಡವಂತೂ ಘನಘೋರ. ಈವರೆಗೆ ಸುಮಾರು 35,000 ಹಿಂದೂಗಳು ಖಲಿಸ್ತಾನೀ ಉಗ್ರರಿಗೆ ಬಲಿಯಾಗಿದ್ದಾರೆ. ಈಗ ಖಲಿಸ್ತಾನಿಗಳು ವಿಶ್ವಾದ್ಯಂತ ಇರುವ ಹಿಂದೂಗಳನ್ನು, ಹಿಂದೂ ದೇವಾಲಯಗಳನ್ನು ಗುರಿಯಾಗಿಸಿಕೊಂಡು ಕೂಡಾ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವಕ್ಕೆಲ್ಲಾ ಆಯಾ ಸ್ಥಳೀಯ ಭಾರತ ದ್ವೇಷಿ ಆಡಳಿತ ವರ್ಗಗಳ ಪರೋಕ್ಷ ಬೆಂಬಲವಿದೆ. 


ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಅಮೆರಿಕಾ ಇಲ್ಲೆಲ್ಲಾ ಖಲಿಸ್ತಾನೀ ಉಗ್ರರು ಬೀಡುಬಿಟ್ಟಿದ್ದು ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಿಖ್ ತರುಣರಲ್ಲಿ ಮೂಲಭೂತವಾದವನ್ನು ಬಿತ್ತಿ ಪೋಷಿಸುತ್ತಿವೆ. ಅವಕ್ಕೆ ಸ್ಥಳೀಯ ರಾಜಕಾರಣಿ, ಪಕ್ಷ, ಅಧಿಕಾರೀ ವರ್ಗಗಳ ಬೆಂಬಲವೂ ಇದೆ. ಇಲ್ಲೆಲ್ಲಾ ತಾವೇ ಶ್ರೇಷ್ಠರೆಂಬ ಬಿಳೀ ಜಿರಳೆಗಳಾದ ಮೂಲಭೂತವಾದೀ ಕ್ರೈಸ್ತರು, ಖಲಿಸ್ತಾನೀ ಮತಾಂಧರು ಹಾಗೂ ಮುಸ್ಲಿಂ ಮತೀಯವಾದಿಗಳ ನಡುವೆ ಭಾರತೀಯರು ಹೈರಾಣಾಗುತ್ತಿದ್ದಾರೆ. ಕೆನಡಾ ಸರಕಾರ 2021ರಲ್ಲಿ ಹೊರಡಿಸಿದ ಅಂಕಿಅಂಶಗಳ ಪ್ರಕಾರವೇ 2019-21ರ ನಡುವೆ ಹಿಂದೂಗಳ ಮೇಲಿನ ದಾಳಿ 72 ಪ್ರತಿಶತ ಹೆಚ್ಚಾಗಿದೆ. ಖಲಿಸ್ತಾನೀ ಪ್ರತ್ಯೇಕವಾದಿಗಳಿಂದ ಇತ್ತೀಚೆಗೆ ಟೊರೊಂಟೋದ ಸ್ವಾಮಿ ನಾರಾಯಣ ಮಂದಿರದ ಮೇಲೆ ನಡೆದ ದಾಳಿ, ನ್ಯೂಯಾರ್ಕಿನ ಹಿಂದೂ ದೇವಾಲಯದ ಮೇಲಿನ ದಾಳಿ, ಬ್ರಿಟನ್ನಿನ ಲೀಸೆಸ್ಟರ್ನಲ್ಲಾದ ಗಲಭೆಗಳ ಹಿಂದಿನ ಮೂಲ ಉದ್ದೇಶ ಹಿಂದೂ ವಿರೋಧಿ ಭಾವನೆಗಳಿಗೆ ಉತ್ತೇಜನ ಕೊಡುವುದೇ ಆಗಿತ್ತು. ಈ ಎಲ್ಲಾ ಖಲಿಸ್ತಾನೀ ಉಗ್ರ ಗುಂಪುಗಳು ಮುಸ್ಲಿಂ ಉಗ್ರರ ಜೊತೆಗೂಡಿ ಹಿಂಸಾತ್ಮಕ ಕಾರ್ಯವೆಸಗುತ್ತಾ ಹಿಂದೂಗಳಿಗೆ ಸದಾ ಬೆದರಿಕೆಯೊಡ್ಡುತ್ತವೆ. ಹಿಂದೂ ಉತ್ಸವಗಳಲ್ಲಿ, ಸ್ವಾತಂತ್ರ್ಯ ಅಥವಾ ಗಣರಾಜ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿ ಹಿಂದೂಗಳನ್ನು ಬೆದರಿಸುವುದು ಅವರ ವಾಡಿಕೆಯೇ ಆಗಿದೆ. ಕಳೆದ ಆಗಸ್ಟ್ ಹದಿನೈದರಂದು ಹಿಂದೂಗಳನ್ನು ಉಗ್ರವಾಗಿ ವಿರೋಧಿಸಿ ಅವರನ್ನು ಬ್ರಿಟನ್ನಿನ ಸ್ಲೋ ನಗರದಿಂದ ಹೊರದಬ್ಬಿದ ಬಗ್ಗೆ ಖಲಿಸ್ತಾನೀ ಉಗ್ರ ಗುಂಪು ಹೆಮ್ಮೆಯಿಂದ ಹೇಳಿಕೊಂಡಿತ್ತು. ಐಸಿಸ್ ಮತ್ತಿತರ ಜಿಹಾದೀ ಗುಂಪುಗಳಿಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುವ ನೆಲವಾಗಿರುವ ಜೊತೆಜೊತೆಗೆ ಬ್ರಿಟನ್ ಯಶಸ್ವೀ ಹಿಂದೂ ಜನಾಂಗದ ಮೇಲೆ ಗುರಿಯಿಟ್ಟು ದಾಳಿ ಮಾಡುವ ಖಲೀಸ್ತಾನೀ, ಇಸ್ಲಾಮೀ, ಮೂಲಭೂತವಾದೀ ಕ್ರೈಸ್ತರ ಪ್ರಮುಖ ಅಡ್ಡೆಯಾಗಿದೆ. ಬಹುಸಂಸ್ಕೃತಿ, ತುಷ್ಟೀಕರಣದ ಹೆಸರಲ್ಲಿ ಇಲ್ಲಿನ ರಾಜಕೀಯ ವ್ಯವಸ್ಥೆಯೇ ಈ ಕ್ರೌರ್ಯಕ್ಕೆ ಪೂರಕವಾಗಿದೆ. ಇಲ್ಲಿ 2017-18ರಲ್ಲಿ 58 ಪ್ರತಿಶತ ಏರಿಕೆಯಾಗಿದ್ದ ಹಿಂದೂಗಳ ಮೇಲಿನ ದಾಳಿ 2020-21ರಲ್ಲಿ 166 ಪ್ರತಿಶತ ಏರಿಕೆಯಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ 200 ಪ್ರತಿಶತ ಏರಿಕೆಯಾಗಿದೆ! ಇಲ್ಲಿ ಹಿಂದೂಗಳ ಆಸ್ತಿ-ಪಾಸ್ತಿಗಳ ಮೇಲೆ, ಹಿಂದೂ ದೇವಾಲಯಗಳ ಮೇಲಿನ ದಾಳಿ ಮಾಮೂಲು ಎಂಬಂತಾಗಿದೆ. ಸಿಎಎ ಹಾಗೂ ಕೃಷಿಸುಧಾರಣಾ ಕಾಯಿದೆಗಳ ಬಳಿಕವಂತೂ ಹಿಂದೂಗಳ ಮೇಲಿನ ದಾಳಿ ಮತ್ತಷ್ಟು ಹೆಚ್ಚಿದೆ. ಆಸ್ಟ್ರೇಲಿಯಾದಲ್ಲಿ ದಿನನಿತ್ಯದ ಜನಾಂಗೀಯ ದಾಳಿಗಳ ಜೊತೆಜೊತೆಗೆ ಖಲಿಸ್ತಾನೀ ಪ್ರೇರಿತ ದಾಳಿಗಳನ್ನೂ ಹಿಂದೂಗಳು ಸಹಿಸಬೇಕಾಗಿದೆ. ಇತ್ತೀಚೆಗೆ ಶಿವವಿಷ್ಣು ಮಂದಿರ, ಸ್ವಾಮೀನಾರಾಯಣ ಮಂದಿರಗಳ ಮೇಲೆ ನಡೆದ ದಾಳಿಗಳು, ಭಾರತ ವಿರೋಧೀ ಪ್ರತಿಭಟನೆಗಳು, ಅವುಗಳ ನೆಪದಲ್ಲಿ ಹಿಂದೂಗಳ ಮೇಲೆ ಮತ್ತೆ ದಾಳಿ ಇವೆಲ್ಲವಕ್ಕೂ ನಿಷ್ಕ್ರಿಯರಾಗಿರುವ ಆಸ್ಟ್ರೇಲಿಯಾ ಅಧಿಕಾರೀ ವರ್ಗವೇ ಅನುವು ಮಾಡಿಕೊಟ್ಟಂತಾಗಿದೆ. ಈ ಖಲಿಸ್ತಾನೀ ಹಾಗೂ ಇಸ್ಲಾಮೀ ಮತಾಂಧರ ಜೊತೆ ಪಶ್ಚಿಮದ ಪ್ರಗತಿಪರ(?)ರೂ ಕೈಜೋಡಿಸಿದ್ದಾರೆ. ಹಿಂದೂಗಳೇ ದಾಳಿಗಳಿಗೆ ಒಳಗಾಗುತ್ತಿದ್ದರೂ ಹಿಂದೂಫೋಬಿಯಾವನ್ನೇ ಸದಾ ಬೊಬ್ಬಿರಿವ ಈ ಮತಿಹೀನ ವರ್ಗ ಹಿಂದೂಗಳನ್ನೇ ಆಕ್ರಮಣಕಾರಿಗಳಂತೆ ಬಿಂಬಿಸಿ, ಅದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ, ಭಾಜಪಾ ಸರಕಾರವನ್ನೂ, ರಾ.ಸ್ವ.ಸಂ.ವನ್ನೂ ತಳುಕು ಹಾಕಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಲೇಖನಗಳನ್ನು ಬರೆದು ಆ ಮತಾಂಧರ ಕೃತ್ಯಗಳನ್ನು ಮುಚ್ಚಿಹಾಕಲು ಯತ್ನಿಸುತ್ತವೆ.


ಇತ್ತೀಚೆಗೆ ಕೃಷಿಸುಧಾರಣಾ ಕಾಯ್ದೆಯ ವಿರುದ್ಧ ಪಂಜಾಬಿನಲ್ಲಿ ನಡೆದ ರೈತ ಚಳವಳಿಯ ಸೂತ್ರಧಾರರು ಖಲಿಸ್ಥಾನಿಗಳೇ. ಪಾಪದ ಸಾಮಾನ್ಯ ಸಿಖ್ ರೈತರನ್ನು ಬಳಸಿಕೊಂಡು ಇಡೀ ದೇಶಕ್ಕೆ ಈ ಭಯೋತ್ಪಾದಕರು ಬೆಂಕಿ ಹಚ್ಚಲು ನೋಡಿದಾಗ ಭಾಜಪಾ ವಿರೋಧೀ ಪಕ್ಷಗಳು, ದೇಶವಿರೋಧೀ ಎಡಪಂಥೀಯ, ನಡುಪಂಥೀಯರೆಲ್ಲಾ ಅವರಿಗೆ ಬೆಂಬಲ ಕೊಟ್ಟರು. ಆ ಭಯೋತ್ಪಾದಕರು ಟ್ರಾಫಿಕ್ ಜಾಮ್ ಮಾಡಿ ಪ್ರಧಾನಿಯವರನ್ನು ನಡುರಸ್ತೆಯಲ್ಲಿ ನಿಲ್ಲಿಸುವಂತೆ ಮಾಡಿದಾಗ ಇವರೆಲ್ಲಾ ಪ್ರಧಾನಿಗಳ ಕುರಿತು ಕುಹಕವಾಡಿದರೇ ಹೊರತು ದೇಶದ ಭದ್ರತೆಯ ಬಗ್ಗೆ ಯೋಚಿಸಲಿಲ್ಲ. ಇದನ್ನೇ ಉಪಯೋಗಿಸಿ, ಖಲಿಸ್ಥಾನೀಗಳ ಬೆಂಬಲ ಪಡೆದು ಆಪ್ ಪಕ್ಷ ಪಂಜಾಬ್ ಚುನಾವಣೆಯನ್ನೂ ಜಯಿಸಿತು. ಆದರೇನು ಬಗಲಲ್ಲಿ ಕೆಂಡವನ್ನಿಟ್ಟುಕೊಂಡು ಎಷ್ಟು ದಿನ ಜೀವಿಸಬಹುದು? ಭಿಂದ್ರನ್ ವಾಲೆಯಂತೆಯೇ ವೇಷಭೂಷಣ ಧರಿಸಿಕೊಂಡು ದೀಪ್ ಸಿಧುವಿನ ಬಳಿಕ "ವಾರಿಸ್ ಪಂಜಾಬ್ ದೇ" ಎಂಬ ಖಲಿಸ್ಥಾನೀ ಪ್ರತ್ಯೇಕವಾದಿ ಸಂಘಟನೆಯ ನೇತೃತ್ವ ವಹಿಸಿಕೊಂಡು ಈಗ ಪೊಲೀಸರ ಕಣ್ತಪ್ಪಿಸಿ ಓಡುತ್ತಿರುವ ಅಮೃತ್ ಪಾಲ್ ಸಿಂಗ್ ಕೇಂದ್ರ ಗೃಹ ಸಚಿವರಿಗೆ, ಪಂಜಾಬ್ ಮುಖ್ಯಮಂತ್ರಿಗೆ "ಇಂದಿರಾ ಗಾಂಧಿಗಾದ ಗತಿಯೇ ಬರಲಿದೆ" ಎಂದು ಬೆದರಿಕೆಯೊಡ್ಡಿದ್ದ. ಆತನ ಆಪ್ತ ಸಹಾಯಕನನ್ನು ಬಂಧಿಸಿ ಇರಿಸಿದ್ದ ಅಜ್ನಾಲಾ ಪೊಲೀಸ್ ಠಾಣೆಯ ಮೇಲೆ ಖಡ್ಗ, ಬಂದೂಕು ಹಿಡಿದು ನುಗ್ಗಿದ ಸಿಂಗ್ ಮತ್ತು ಆತನ ಬೆಂಬಲಿಗರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ದೇಶದಾದ್ಯಂತ ಗಲಭೆ ಸೃಷ್ಟಿಸಲು ಯತ್ನಿಸಿದ್ದರು. ಈ ವಿಷಯ ಪತ್ತೆ ಹಚ್ಚಿದ ಗುಪ್ತಚರ ಇಲಾಖೆ ಪಂಜಾಬ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಪ್ರಯತ್ನವನ್ನು ನಿಷ್ಫಲಗೊಳಿಸಿತು. ಪೊಲೀಸರು ಸಿಂಗ್ ಹಾಗೂ ಅವನ ಸಹಚರರನ್ನು ಬಂಧಿಸಿದರಾದರೂ ಅಮೃತ್ ಪಾಲ್ ತಪ್ಪಿಸಿಕೊಂಡುಬಿಟ್ಟ. ಈ ಅಮೃತ್ ಪಾಲ್ ಸಿಂಗನಿಗೆ ಐ.ಎಸ್.ಐ ಸಹಾಯ ಮಾಡುತ್ತಿದೆ. ಐ.ಎಸ್.ಐ.ಯೇ ಆತನಿಗೆ ಜಾರ್ಜಿಯಾದಲ್ಲಿ ತರಬೇತಿ ಕೊಟ್ಟಿದೆ. ಅಸ್ಸಾಂ ಮುಖ್ಯಮಂತ್ರಿ ಬಿಯಾಂತ್ ಸಿಂಗರನ್ನು ಕೊಲೆ ಮಾಡಿದ್ದ ಭಯೋತ್ಪಾದಕ ಜಗತಾರ್ ಸಿಂಗ್, ಶಸ್ತ್ರಾಸ್ತ್ರ ಹಾಗೂ ಮಾದಕದ್ರವ್ಯಸಾಗಣೆ ಯಲ್ಲಿ ಭಾರತದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಂಡು ಓಡಿರುವ ಅಂತಾರಾಷ್ಟ್ರೀಯ ಸಿಖ್ ಯೂತ್ ಫೆಡರೇಷನ್ ಅಧ್ಯಕ್ಷ ಲಕ್ಭೀರ್ ಸಿಂಗ್, ಬ್ರಿಟನ್ನಿನಲ್ಲಿರುವ ಖಲಿಸ್ಥಾನೀ ಉಗ್ರ ಅವತಾರ್ ಸಿಂಗ್ ಮುಂತಾದವರಿಗೆಲ್ಲಾ ಅತ್ಯಾಪ್ತನೀತ. ನಮ್ಮೊಳಗಿನವರೇ ಮತಾಂಧರಾಗಿ, ನಾವು ಕುರುಡಾಗಿ ಕೂತರೇ ಏನಾಗಬಹುದೋ ಅದೇ ಖಲಿಸ್ಥಾನೀಗಳಿಂದ ಆಗುತ್ತಿದೆ. ಪ್ರಧಾನಿ ಮೋದಿಯವರ ತಂತ್ರಗಳಿಂದ ಹಲ್ಲು ಕಿತ್ತ ಹಾವಿನಂತೆ ಆಗಿರುವ ಪಾಪಿ ಪಾಕಿಸ್ತಾನಕ್ಕೆ ಕೊನೆಯ ಅಸ್ತ್ರ ಸಿಕ್ಕಿದ್ದು ಇದು ಮಾತ್ರ. ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ 6.2% ಸಿಖ್ಖರಿದ್ದರು. ಈಗ ಉಳಿದಿರುವುದು 0.01% ಮಾತ್ರ. ಐ.ಎಸ್.ಐನಿಂದ ಬೆಂಬಲ ಪಡೆಯುವ ಖಲೀಸ್ಥಾನೀ ಪ್ರತ್ಯೇಕವಾದಿಗಳು ಇದನ್ನು ಯೋಚಿಸಬೇಕಲ್ಲವೇ?



ಇತ್ತೀಚೆಗೆ ಪಂಜಾಬಿನ ನಿಹಾಂಗ್(ನೀಲಿ ನಿಲುವಂಗಿಯ, ಖಡ್ಗ, ಈಟಿ ಹಿಡಿದ, ಪೇಟ ಧರಿಸಿದ ಸಿಖ್ ಪಡೆ)ಗಳು ಸಿಂಧಿ ಟಿಕಾನೋ, ಮನೆಗಳಿಗೆ ನುಗ್ಗಿ ಸಿಖ್ಖರ "ರಿಹತ್ ಮರ್ಯಾದಾ"(ಸಿಖ್‍ ಜೀವನಪದ್ದತಿಯ ನಿಯಮ & ಸಂಪ್ರದಾಯಗಳು)ಕ್ಕೆ ವಿರುದ್ಧವಾಗಿ "ಗುರುಗ್ರಂಥ ಸಾಹಿಬ್" ಅನ್ನು ಇಡುವುದರ ಕುರಿತು ಗದ್ದಲವೆಬ್ಬಿಸಿದರು. ಈ ಘಟನೆಯಿಂದ ನೊಂದ ಸಿಂಧಿಗಳು ಸಂತ ಸಮಾಜದ ನಿರ್ದೇಶನದೊಂದಿಗೆ "ಗುರುಗ್ರಂಥ ಸಾಹಿಬ್"ನ ಎಲ್ಲಾ ಭೌತಿಕಪ್ರತಿಗಳನ್ನು ತ್ಯಜಿಸಲು ತಮ್ಮೊಳಗೇ ನಿರ್ಧರಿಸಿದರು. ಜೊತೆಗೆ ಶ್ರೀಮದ್ಭಗವದ್ಗೀತೆ ಹಾಗೂ ರಾಮಾಯಣದ ಪ್ರತಿಗಳನ್ನು ತಮ್ಮ ಮಂದಿರಗಳಲ್ಲಿ ಇಡಬೇಕೆಂದು ನಿರ್ಧರಿಸಿದರು. ಸಿಂಧಿಗಳ ಈ ನಿರ್ಧಾರ ಕೇವಲ ಒಂದು ವಾರದಿಂದ ನಿಹಾಂಗ್'ಗಳು ಎಬ್ಬಿಸಿದ ಗದ್ದಲದಿಂದ ಉಂಟಾದುದಲ್ಲ. ಕೆಲವು ಸಿಖ್ ಮತಾಂಧರು ನಿಯಮಿತವಾಗಿ ಸಿಂಧಿ ದೇವಾಲಯಗಳಿಗೆ ಪ್ರವೇಶಿಸಿ ಅವರ ಸಂಪ್ರದಾಯಗಳನ್ನು ನಿಂದಿಸುತ್ತಾ, ಕತ್ತಿಗಳನ್ನು ಝಳಪಿಸುತ್ತಾ ಅವರನ್ನು 'ಪಾಖಂಡಿ'ಗಳೆಂದು ಕರೆಯುತ್ತಿದ್ದುದನ್ನು ಕಂಡು ಸಿಂಧಿ ಸಮುದಾಯ ರೋಸಿ ಹೋಗಿತ್ತು. ಅದರಲ್ಲೂ ಕಿರುಕುಳ ನೀಡಿದ, ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ನಿಹಾಂಗ್'ಗಳ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮಕೈಗೊಳ್ಳಲಿಲ್ಲ. ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಈಗ ಎಸ್.ಜಿ.ಪಿ.ಸಿಯಂತಹಾ ಸಂಸ್ಥೆಗಳಿಂದಾಗಿ ಸಾಮಾನ್ಯ ಸಿಖ್ಖರಲ್ಲೂ ಈ ಮತಾಂಧತೆ ಬೆಳೆಯುವಂತಾಗಿದೆ.



ಹೇಗೆ ಬ್ರಿಟಿಷರು ಹಿಂದೂಗಳನ್ನು ಒಡೆದಾಳಿದರೋ ಅದೇ ಕೆಲಸವನ್ನು ಇಂದಿನ ರಾಜಕಾರಣಿಗಳು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಮಾಡುತ್ತಿದ್ದಾರೆ. ಆದರೆ ಅದರಿಂದ ಉಂಟಾಗುವ ದೀರ್ಘಕಾಲೀನ ಸಮಸ್ಯೆಯಾದ ರಾಷ್ಟ್ರ ವಿಭಜನೆ ಅವರ ಗಮನಕ್ಕೆ ಬರುತ್ತಿಲ್ಲ. 1984ರ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡವನ್ನು ಹಿಂದೂಗಳು ತಮ್ಮ ಮೇಲೆ ನಡೆಸಿದ ಅನ್ಯಾಯ ಎಂಬಂತೆ ಖಲಿಸ್ತಾನಿಗಳಿಂದ ತಿರುಚಲ್ಪಟ್ಟಿದೆ. ಆದರೆ ಅದು ಪಕ್ಷವೊಂದರ ಗುಲಾಮರು ನಡೆಸಿದ ದಾಂಧಲೆ ಹೊರತು ಹಿಂದೂಗಳ ಪ್ರತೀಕಾರವಲ್ಲ ಎನ್ನುವುದನ್ನು ಸಿಖ್ಖರು ನೆನಪಿಡಬೇಕಾಗಿದೆ. ಸಿಖ್ ಮತವು ಹಿಂದೂಗಳಲ್ಲಿ ಕ್ಷಯವಾಗುತ್ತಿದ್ದ ಶೌರ್ಯವನ್ನು ಮತ್ತೆ ಎಬ್ಬಿಸಲು ಶುರುವಾದ ಒಂದು ಧಾರೆ. ಸಿಖ್ ಸಮುದಾಯವು ಹಿಂದೂಗಳಿಂದ ಬೇರೆಯಾದುದೆಂದು ಹಿಂದೂಗಳಿಗೆ ಇಷ್ಟರವರೆಗೆ ಅನಿಸಿಲ್ಲ. ಹಾಗಾಗಿಯೇ ಉದಾಸಿಗಳು, ಸಿಂಧಿಗಳ ಸಹಿತ ಅನೇಕರು ಗುರುಗ್ರಂಥಸಾಹಿಬವನ್ನು ತಮ್ಮ ಮನೆಗಳಲ್ಲಿ, ದೇಗುಲಗಳಲ್ಲಿರಿಸಿ ಪೂಜಿಸಿದ್ದು. ಔರಂಗಜೇಬ ಆರು ವರ್ಷ ಪ್ರಾಯದ ಸಿಖ್ ಗುರು ಹರ್ ಕಿಶನ್'ಗೆ ಕಿರುಕುಳ ಕೊಟ್ಟಾಗ ಹಿಂದೂ ರಾಜ ಜಯ್ ಸಿಂಗ್ ತನ್ನ ಬಾಂಗ್ಲಾ(ಅರಮನೆ)ದಲ್ಲಿ ಆತನನ್ನು ಇರಿಸಿ ರಕ್ಷಿಸಿದ. ಬಳಿಕ ಆರಮನೆಯನ್ನು ಗುರುವಿಗೇ ದಾನ ಕೊಟ್ಟ. ಇವತ್ತು ದೆಹಲಿಯಲ್ಲಿರುವ ಬಾಂಗ್ಲಾ ಸಾಹಿಬ್ ಗುರುದ್ವಾರ ಅದೇ ಅರಮನೆ. ಗುರು ಹರಗೋವಿಂದರ ಮೇಲೆ ಮೊಘಲರು ದಾಳಿ ಮಾಡಿದಾಗ ರಾಜಾ ತಾರಾಚಂದ್ ಅವರಿಗೆ ರಕ್ಷಣೆ ಕೊಟ್ಟಿದ್ದ. ಆತ ದಾನ ಮಾಡಿದ ಭೂಮಿಯಲ್ಲೇ ಕಿರಾತ್ಪುರ ಗುರುದ್ವಾರ ಕಟ್ಟಲ್ಪಟ್ಟಿತು. ಗುರು ತೇಗಬಹದ್ದೂರರನ್ನು ಹಿಂದೂ ರಾಜಾ ರಾಮ್ ಸಿಂಗ್ ಔರಂಗಜೇಬನ ಕತ್ತಿಯಿಂದ ರಕ್ಷಿಸಿದ್ದ. ಭಾಯಿ ಸಿಂಘ ಪುರೋಹಿತ್ ಎಂಬ ಬ್ರಾಹ್ಮಣ ಗುರು ಹರಗೋವಿಂದರ ಮಗಳು ಬೀಬಿ ವೀರೋಳನ್ನು ತನ್ನ ಪ್ರಾಣತ್ಯಾಗ ಮಾಡಿ ಮೊಘಲರಿಂದ ರಕ್ಷಿಸಿದ್ದ. ಹಿಂದೂಗಳು ಔರಂಗಜೇಬನ ಉಪಟಳದಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಂಡಾಗ ಔರಂಗಜೇಬನಿಂದ ಬಗೆಬಗೆಯ ಚಿತ್ರಹಿಂಸೆಗೊಳಗಾಗಿ ಹಿಂದೂಗಳಿಗೋಸ್ಕರ ಬಲಿದಾನ ನೀಡಿದ ಗುರು ತೇಜ್ ಬಹಾದ್ದೂರರನ್ನು, ಅವರ ಶಿಷ್ಯರಾದ ಭಾಯಿ ಮತಿದಾಸ, ಭಾಯಿ ದಯಾಳರನ್ನು ಯಾವ ಹಿಂದೂ ಮರೆತಾನು? ಬ್ರಿಟಿಷರು ಆರ್ಯಸಮಾಜವನ್ನು ಬಗ್ಗು ಬಡಿಯಲು "ಆರ್ಯ ಸಮಾಜಿಗಳು ಗುರು ಗ್ರಂಥ ಸಾಹಿಬ್ ಗೆ ಅವಮಾನ ಮಾಡುತ್ತಿದ್ದಾರೆಂದು" ಸಾಂಪ್ರದಾಯವಾದಿಗಳ ಮುಖೇನ ಮೊಕದ್ದಮೆ ಹೂಡಿದಾಗ ಭಗತ್ ಸಿಂಗನ ಅಜ್ಜ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ್ದ. ಸಿಖ್ ಪಂಥದಿಂದ ಹಿಂದೂ ಅಂಶಗಳನ್ನು ಎತ್ತಿ ಒಗೆದಾಗ ಅಲ್ಲೊಂದು ಇಸ್ಲಾಮ್ ಅಥವಾ ಕ್ರೈಸ್ತದ ಪಡಿಯಚ್ಚು ಉಳಿಯಬಹುದಷ್ಟೇ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ