ಪುಟಗಳು

ಸೋಮವಾರ, ಅಕ್ಟೋಬರ್ 22, 2012

ಭಾರತ ದರ್ಶನ-೧೨

ಭಾರತ ದರ್ಶನ-೧೨:

ಮಾತೃಭೂಮಿಯ ಅಖಂಡತೆಯಲ್ಲಿ ಭಕ್ತಿ ಮತ್ತು ನಂಬಿಕೆ ವೈದಿಕ ಯುಗದಿಂದಲೂ ನಮ್ಮ ಹೃದಯದಲ್ಲಿ ಹರಿಯುತ್ತಿದೆ. ಪಶ್ಚಿಮದ ಆರ್ಯನ್(ಇರಾನ್) ಮತ್ತು ಪೂರ್ವದ ಶೃಂಗಪುರಗಳೊಂದಿಗೆ ಎರಡೂ ಸಮುದ್ರಗಳಲ್ಲಿ ತನ್ನೆರಡು ಬಾಹುಗಳನ್ನದ್ದುತ್ತಾ ತನ್ನ ಪವಿತ್ರ ಚರಣಗಳಲ್ಲಿ ದಕ್ಷಿಣ ಸಮುದ್ರ ಅರ್ಪಿಸಿದ ಪದ್ಮದಳದಂತಹ ಲಂಕೆಯನ್ನು ಒಳಗೊಂಡ ಮಾತೃಭೂಮಿಯ ದಿವ್ಯ ಸ್ವರೂಪವೇ ಸಾವಿರಾರು ವರ್ಷಗಳಿಂದ ನಮ್ಮ ಸಮಾಜದ ಕಣ್ಮುಂದೆ ಬೆಳಗುತ್ತಿದೆ!

ನಮ್ಮ ಜನತೆಯ ಶೀಲ ಮತ್ತು ಸಂಸ್ಕೃತಿಗಳ ಮೇಲೆ ಅಚ್ಚಳಿಯದ ನಿಚ್ಚಳ ಮುದ್ರೆಯನ್ನೊತ್ತಿದವ ರಾಷ್ಟ್ರಪುರುಷ ಪ್ರಭು ಶ್ರೀರಾಮಚಂದ್ರ. "ಸಮುದ್ರ ಇವ ಗಾಂಭೀರ್ಯೇ,ಸ್ಥೈರ್ಯೇಣ ಹಿಮವಾನ್ ಇವ" ಅಂದರೆ ಗಾಂಭೀರ್ಯದಲ್ಲಿ ಸಮುದ್ರದಂತೆ, ಧೈರ್ಯದಲ್ಲಿ ಹಿಮಾಲಯದಂತೆ ಎಂದು ವಾಲ್ಮೀಕಿ ಮಹರ್ಷಿಗಳು ಹಾಡಿ ಹೊಗಳಿದ ಮರ್ಯಾದಾ ಪುರುಷೋತ್ತಮ ಆತ.

ಪ್ರಾಚೀನ ಕಾಲದಿಂದಲೂ ನಮ್ಮ ಶಿಕ್ಷಣ ಪದ್ದತಿಯಲ್ಲಿ ಏಕಸೂತ್ರತೆ ಕಂಡುಬರುತ್ತದೆ. ವೇದಶಾಸ್ತ್ರಗಳ ಅಧ್ಯಯನ-ಅಧ್ಯಾಪನದಲ್ಲಿ ಗುರು ಶಿಷ್ಯ ಪರಂಪರೆ ಇಡೀ ದೇಶದಲ್ಲಿ ಒಂದೇ ರೀತಿಯಲ್ಲಿತ್ತು. ಒಂದೇ ರೀತಿಯ ಪಠ್ಯಕ್ರಮ ರಾಷ್ಟ್ರದಾದ್ಯಂತ ಜಾರಿಯಲ್ಲಿತ್ತು. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಕರಣದ ಮುಖ್ಯ ಗ್ರಂಥಗಳಾಗಿದ್ದವು. ಪಂಚಮಹಾಕಾವ್ಯಗಳು ಮತ್ತು ಪಂಚತಂತ್ರ ಮೊದಲಾದುವು ಎಲ್ಲೆಡೇ ಕಲಿಸಲ್ಪಡುತ್ತಿದ್ದವು. ಕಾಶಿ, ತಕ್ಷಶಿಲೆ, ಮಥುರಾ, ನವದ್ವೀಪ, ಕಂಚಿ, ಉಜ್ಜಯಿನಿ, ನಲಂದಾ, ಉದಂತಪುರಿ, ವಿಕ್ರಮಶೀಲ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ದೇಶದ ನಾನಾ ಭಾಗಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಈ ವಿದ್ಯಾರ್ಥಿಗಳು ಅಧ್ಯಯನದ ಬಳಿಕ ಜ್ಞಾನ, ಸಂಸ್ಕೃತಿಯ ಪ್ರವಾಹವನ್ನು ತಮ್ಮ ತಮ್ಮ ಪ್ರದೇಶಗಳಿಗೆ ಒಯ್ಯುತ್ತಿದ್ದರು.

ಏಕಾತ್ಮತೆಯ ಈ ಸೂತ್ರ ಕಲೆ ಮತ್ತು ಶಿಲ್ಪಗಳಲ್ಲೂ ಗೋಚರವಾಯಿತು. ಮೂರ್ತಿ ನಿರ್ಮಾಣದಲ್ಲಿ ಎಲ್ಲ ಪ್ರಮುಖ ದೇವತೆಗಳ ಆಕಾರ ಇಡೀ ದೇಶದಲ್ಲಿ ಒಂದೇ ರೀತಿ ಮೂಡಿತು. ಶಿವ, ದುರ್ಗಾ, ವಿಷ್ಣು, ಸೂರ್ಯ, ತೀರ್ಥಂಕರ, ಬುದ್ಥ, ಕಾರ್ತಿಕೇಯ, ಗಣಪತಿ,... ಮೊದಲಾದ ಪ್ರತಿಮೆಗಳನ್ನು ಕಂಡಾಗ ಯಾವುದೋ ಅಖಿಲ ಭಾರತ ಸಂಸ್ಥೆಯೇ ಈ ಶಿಲ್ಪಗಳ ವ್ಯವಸ್ಥೆ ಮಾಡಿದೆಯೇನೋ ಎಂದು ಅನಿಸದಿರದು. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ!

ವಂದೇ ಮಾತರಂ
-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ