ಪುಟಗಳು

ಶನಿವಾರ, ಏಪ್ರಿಲ್ 26, 2014

ಒಂದು ಗೋಧ್ರಾ... ಇನ್ನೊಂದು ವಾಧ್ರಾ

ಭಾರತದಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣ ಎರಡು.
ಒಂದು ಗೋಧ್ರಾ... ಇನ್ನೊಂದು ವಾಧ್ರಾ!
ಹಿಂದೂಗಳ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಗೋಧ್ರಾದಂತಹ ಹತ್ಯಾಕಾಂಡ ನಡೆಸುವ ಬಾಬರನ ವಂಶಜರು!
ಹಿಂದೂಗಳ ಭೋಳೇತನವನ್ನು ಉಪಯೋಗಿಸಿ ದೇಶದ ಸಂಪತ್ತನ್ನೇ ದೋಚುವ ವಾಧ್ರಾ-ನೆಹರೂ ವಂಶಜರು!

ನಮೋವಾರಣಾಸಿ‬

ಶಿವನ ಪದತಳದಲಿ ಅರಳುತಿದೆ ಪುಷ್ಪ
ಜನರ ಕಂಗಳಲಿ ಆನಂದ ಭಾಷ್ಪ
ಎನ್ನ ಗೃಹದೊಳಗೆನ್ನ ಕುಳ್ಳಿರಿಸೆನ್ನುತಿಹನು ಶ್ರೀರಾಮ
ತಾಯಿ ಭಾರತಿ ಸಂತಸದಿ ತಾನಿನ್ನು ಆರಾಮ
‪#‎ನಮೋವಾರಣಾಸಿ‬

ಬುಧವಾರ, ಏಪ್ರಿಲ್ 23, 2014

ಶ್ರೀಚಕ್ರ

ಶ್ರೀಚಕ್ರ:

ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ. ಶ್ರೀಚಕ್ರದ ಮೇಲೆ ಇಟ್ಟ ದೃಷ್ಟಿ ನರಮಂಡಲದಲ್ಲಿ ಉಂಟಾಗುವ ಕಂಪನ ಇಇಜಿಯಲ್ಲಿ(ಎಲೆಕ್ಟ್ರೋ ಎನ್ ಕೆಫಲೋಗ್ರಾಫ್) ಆಲ್ಫಾ ಅಲೆ ಹೊರಡಿಸುತ್ತದೆ. ಧ್ಯಾನ ಸ್ಥಿತಿಯಲ್ಲೂ ಈ ಅಲೆ ನಿಧಾನಗತಿಯಲ್ಲಿ ಹೊರಹೊಮ್ಮುತ್ತದೆ. ಯಾವುದೇ ಇತರ ಚಕ್ರ ವೀಕ್ಷಿಸಿದಾಗ ಇಇಜಿ ಅಲೆಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ. ಶಕ್ತಿಯುತ ಅಣು-ಕ್ಷಣಗಳಿಂದಾದ ಅಲೆ ವಿದ್ಯುತ್ ಅಯಸ್ಕಾಂತ ಬಲಕಾರಕ-ಶಕ್ತಿ ಸಮಾಗಮಕ್ಕೆ ನಾಂದಿ. ಶ್ರೀಚಕ್ರದ ಮೂಲಕ ದಿವ್ಯ ಮಂತ್ರೋಚ್ಚಾರಗಳಿಂದಾದ ಶಬ್ಧ ಬ್ರಹ್ಮ ಶಕ್ತಿ ಇದನ್ನು ಸಾಧಿಸುತ್ತದೆಂದು ಭಾವಿಸಬಹುದು. ಒಂದು ದೃಷ್ಟಿಯಲ್ಲಿ ಆದಿ ಶಂಕರಾಚಾರ್ಯರನ್ನು "ಕಣ ಭೌತ ಶಾಸ್ತ್ರದ ಪಿತಾಮಹ" ಎನ್ನಬಹುದು. ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನೇ ನಿಗ್ರಹಿಸಿದರು. ಶ್ರೀ ಸೌಂದರ್ಯ ಲಹರಿಯ ಕಮಲ ಶಕ್ತಿ ತುಂಬಿಸಿ ಕಣ ಭೌತ ಶಾಸ್ತ್ರಕ್ಕೆ ಸವಾಲು ನೀಡಿದ್ದಾರೆ. ಆಧುನಿಕ ವಿಜ್ಞಾನದ ದೇವಕಣ(god particle)ದ ಮೂಲ ಶ್ರೀ ಚಕ್ರದಲ್ಲೋ ಸೌಂದರ್ಯ ಲಹರಿಯ ಕಮಲದಲ್ಲೋ ಇರಬಹುದೇನೋ ಎನ್ನುವ ಗ್ರಹಿಕೆಗೆ ಇಂಬು ಕೊಟ್ಟಿದ್ದಾರೆ.

ಶ್ರೀಚಕ್ರ ನರ ಚಟುವಟಿಕೆಯ  ವೈಜ್ಞಾನಿಕ ವಿವರಣೆಗೂ ಪ್ರೇರಕ ಸೂತ್ರ. ಈ ಚಕ್ರದ ಚೌಕಟ್ಟು, ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ಇದೆ. ಬಲ ಮಿದುಳು, ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆಯ ವಿಸ್ತಾರ ಜ್ಞಾನ ಪಡೆದಿದ್ದುದರಲ್ಲಿ ಆಶ್ಚರ್ಯವಿಲ್ಲ. ಜೊತೆಗೆ ಅವರು ಅದ್ವಿತೀಯ ಮನೋಗೋಚರ ಶಕ್ತಿ ಹೊಂಡಿದ್ದರು. ಈಜಿಪ್ಟ್ ದೇಶದ ಪಿರಮಿಡ್ ರಚನಾ ಶಾಸ್ತ್ರಕ್ಕೂ ಶ್ರೀಚಕ್ರದ ರೇಖಾಗಣಿತ ರಹಸ್ಯದ ಕೊಡುಗೆ ಇದೆ ಎನ್ನುವ ಅಭಿಪ್ರಾಯವೂ ಇದೆ. ಶ್ರೀಚಕ್ರದ ರಹಸ್ಯ ಭೇದಿಸಲು ರಷ್ಯಾದ ಮನಃಶರೀರಶಾಸ್ತ್ರದ ವಿಜ್ಞಾನಿಗಳು ಮಾಸ್ಕೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ವೇದಶಾಸ್ತ್ರ ವಿಜ್ಞಾನ ಹಾಗೂ ವೈದ್ಯವಿಜ್ಞಾನದ ಸಂಶೋಧನೆಗಳು ಸಂಯೋಜಿತ ರೀತಿಯಲ್ಲಿ ಸಾಗಬೇಕಾಗಿದೆ. ಇತ್ತೀಚಿನ ವರದಿಯೊಂದು ಶ್ರೀಚಕ್ರದ ಆರಾಧನೆ ಜೀವಕೋಶದಲ್ಲಿರುವ ಡಿ.ಎನ್.ಎಯನ್ನು ಕಾರ್ಯಚಟುವಟಿಕೆಯ ಪರಿಧಿಗೆ ಬರುವಂತೆ ಪ್ರಚೋದಿಸುತ್ತದೆ ಎಂದು ಹೇಳಿದೆ.
(ಡಾ. ಕಿರುಗಾವಲು ರಮೇಶ್ ಅವರ ಮಲ್ಹಾರದಲ್ಲಿನ ಲೇಖನದ ಆಯ್ದ ಭಾಗ)

ಮಂಗಳವಾರ, ಏಪ್ರಿಲ್ 15, 2014

ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ ನೀವು ಭಾರತೀಯರೇ?

 ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ ನೀವು ಭಾರತೀಯರೇ?
               ಯಾವ ಘಟನೆ ಸಹನೆಯ ಕಟ್ಟೆಯೊಡೆದು ಸ್ವಾಭಿಮಾನ ಸಿಡಿದೆದ್ದು ನಡೆದಿತ್ತೋ ಆ ಘಟನೆ ಆತನನ್ನು ಜಗತ್ತಿಗೇ ಪರಿಚಯಿಸಿತು. ಜಗತ್ತಿಗೆ ಜಗತ್ತೇ ಆತನನ್ನು ಖಳನಾಯಕನನ್ನಾಗಿ, ರಾಕ್ಷಸನನ್ನಾಗಿ ಕಂಡು ದೂಷಿಸಿತು. ಜೊತೆಯಲ್ಲಿದ್ದವರೂ ದೂರವಾದರು. ಮಾಧ್ಯಮಗಳಿಂದ ನಿತ್ಯ ದೂಷಣೆಗಳ ಸಹಸ್ರನಾಮ. ರಾಷ್ಟ್ರವಿರೋಧಿ ಶಕ್ತಿಗಳಂತೂ ಹಬ್ಬದೂಟವೆಂಬಂತೆ ಈ ಸನ್ನಿವೇಶವನ್ನು ತಮಗೆ ತಕ್ಕಂತೆ ಮಾರ್ಪಡಿಸಿಕೊಂಡು ಕಣ್ಣಿಗೆ ರಾಚುವ ಸತ್ಯವನ್ನು ಕಾಲಗರ್ಭದಲ್ಲಿ ಅಡಗುವಂತೆ ಮಾಡಿದರು. ಮಾಧ್ಯಮಗಳು ಮುಚ್ಚಿಟ್ಟ ಕಾರಣ ಸಾಮಾನ್ಯ ಜನರಿಗೂ ಸತ್ಯ ತಿಳಿಯದೆ ಅವರೂ ದ್ವೇಷಿಸತೊಡಗಿದರು. ಅವನದೆಲ್ಲವನ್ನೂ ಮೌನವಾಗಿ ಸಹಿಸಿದ. ಮೌನವಾಗಿಯೇ ಕೆಲಸವನ್ನು ಮಾಡುತ್ತಾ ತನ್ನ ಜವಾಬ್ದಾರಿಯನ್ನು ಚ್ಯುತಿಯಿಲ್ಲದಂತೆ ಪೂರೈಸಿದ. ಯಾಕೆಂದರೆ ಅವನಲ್ಲೊಬ್ಬ ನಾಯಕನಿದ್ದ, ಸಂಘಟನಕಾರನಿದ್ದ, ಸಂಘದ ಶಿಸ್ತು, ಸಂಯಮ, ಸೇವಾಗುಣದ ಮೂರ್ತರೂಪವಿತ್ತು!
                   ಅದು 2013ರ ಜೂನ್ ತಿಂಗಳು. ಶಾಂತವಾಗಿದ್ದ ಗಂಗೆ ಉಕ್ಕಿ ಹರಿದಿದ್ದಳು. ಉತ್ತರ ಭಾರತ ಜಲ ಪ್ರಳಯದಿಂದ ತತ್ತರಿಸಿತ್ತು. ಚಾರ್ ಧಾಮಗಳಲ್ಲಿ ಯಾತ್ರಿಕರು ನಾಲ್ಕೂ ಕಡೆ ದಿಕ್ಕಾಪಾಲಾಗಿದ್ದರು. ಉತ್ತರಾಖಂಡದ ಜನರ ಬವಣೆಗೆ ಉತ್ತರ ಹೇಳುವವರಿರಲಿಲ್ಲ. ಕೇಂದ್ರ, ರಾಜ್ಯ ಸರಕಾರಗಳೆರಡೂ ನಿಷ್ಕ್ರಿಯವಾಗಿದ್ದ ಅಂತಹ ಕ್ಲಿಷ್ಟಕರ ಸಮಯದಲ್ಲಿ ಸಹಾಯಕ್ಕಾಗಿ ಪರಿತಪಿಸುತ್ತಿದ್ದ ಸಾವಿರಾರು ಸಂತ್ರಸ್ಥರಲ್ಲಿ ಸುಮಾರು 15,000 ಮಂದಿ ಸಂತ್ರಸ್ಥರನ್ನು ಹುಡುಕಾಡಿ ಅವರ ನೆರವಿಗೆ ಧಾವಿಸಿದ ಆತನ ಪಡೆ, ಸುಮಾರು 80 ಟೊಯೊಟಾ ಇನ್ನೋವಾ ಕಾರುಗಳಲ್ಲಿ ಅವರನ್ನು ಡೆಹ್ರಾಡೂನಿನ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಲ್ಲದೆ, ಅಲ್ಲಿಂದ 25 ಐಷಾರಾಮಿ ಬಸ್ಸುಗಳ ಸಹಾಯದಿಂದ ನವದೆಹಲಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಿದರು. ಇದು ಒಬ್ಬ ನಾಯಕನಾದವ ಮಾಡುವ ಕಾರ್ಯ.  ಪಾಕಿಸ್ತಾನದ ಪ್ರಧಾನಿ ನಮ್ಮ ದೇಶದ ಪ್ರಧಾನಿಯನ್ನು ಹಳ್ಳಿ ಹೆಂಗಸು ಎಂದು ಜರೆದಾಗ ಬೇರೆ ನಾಯಕರಿರಲಿ ಪ್ರಧಾನಿಯ ಪಕ್ಷದ ನಾಯಕರೇ ತುಟಿಪಿಟಿಕ್ಕೆನ್ನದಿದ್ದಾಗ ನಮ್ಮ ದೇಶದ ಪ್ರಧಾನಿಯನ್ನು ಹೀಯಾಳಿಸುವ ಅಧಿಕಾರ ತಮಗಿಲ್ಲವೆಂದು ಹೇಳುವ ಮೂಲಕ ಯುಧಿಷ್ಟಿರನ "ಮೂರನೆಯವ ಎದುರಾದಾಗ ನಾವು ನೂರೈವರು" ಎಂಬ ಮಾತನ್ನು ಅಕ್ಷರಷಃ ಪಾಲಿಸಿದ ನಾಯಕ ಪ್ರಸಕ್ತ ಸನ್ನಿವೇಶದಲ್ಲಿ ಆತನೊಬ್ಬನೇ! ಮುನ್ನುಗ್ಗುತ್ತಿದ್ದ ವಿಸ್ತರಣಾ ಮನೋಭಾವದ ಚೀನಾಕ್ಕೆ ಖಡಕ್ಕಾಗಿ ಉತ್ತರ ನೀಡಿದ ನಾಯಕ ಆತನಲ್ಲದೆ ಮತ್ಯಾರು? ವೀಸಾಕ್ಕಾಗಿ ಅಂಗಲಾಚದೇ ಅಮೇರಿಕಾದವರನ್ನೇ ಭಾರತದ ವೀಸಾಕ್ಕಾಗಿ ಸರತಿಯಲ್ಲಿ ನಿಲ್ಲುವಂತೆ ಮಾಡುತ್ತೇನೆಂದು ಘೋಷಿಸುವ ಧೈರ್ಯ ಮತ್ಯಾರಿಗಿದೆ? ಹೌದು, ಯಾವ ದೊಣ್ಣೆನಾಯಕನ ಅಪ್ಪಣೆಗೆ ಕಾಯದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಸ್ವಯಂ ಖಚಿತ ನಿರ್ಧಾರದೊಂದಿಗೆ ಮುನ್ನುಗ್ಗುವುದು ಮಾತ್ರವಲ್ಲ ಅದನ್ನು ಯಶಸ್ವಿಯಾಗಿ ಪೂರೈಸುವುದನ್ನು ಹಾಗೂ ದೇಶದ ಘನತೆ, ಸ್ವಾಭಿಮಾನ, ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಧೈರ್ಯ-ಸ್ಥೈರ್ಯ ಪ್ರದರ್ಶಿಸುವುದನ್ನು ಸರ್ದಾರ ಪಟೇಲ್ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ನಂತರದ ರಾಜಕೀಯ ನಾಯಕರಲ್ಲಿ ನೋಡಬಹುದಾದ ಏಕೈಕ ವ್ಯಕ್ತಿ ನರೇಂದ್ರ ಮೋದಿ!
              2012ರಲ್ಲಿ ಇಡೀ ದೇಶ ವಿದ್ಯುತ್ ಇಲ್ಲದೆ 48 ಘಂಟೆಗಳ ಕಾಲ ಕತ್ತಲಲ್ಲಿ ಮುಳುಗಿತ್ತು. ಆದರೆ ಗುಜರಾತ್ ಮಾತ್ರ ಝಗಮಗಿಸುತ್ತಾ ನಿಂತಿತ್ತು. ಕಾರಣ "ಜ್ಯೋತಿಗ್ರಾಮ" ಎನ್ನುವ ಯೋಜನೆ! ಇದನ್ನು ರೂಪುಗೊಳಿಸಿದ ಮೋದಿ ಇಡೀ ಗುಜರಾತಿಗೆ ದಿನದ 24 ಘಂಟೆಗಳ ಕಾಲವೂ ವಿದ್ಯುತ್ ಪೂರೈಸುತ್ತಿದ್ದಾರೆ. 2002ರ ಮೊದಲು ಅಲ್ಲಿನ ಜನ ವಿದ್ಯುತ್ ಅಭಾವದಿಂದ ಪರಿತಪಿಸುತ್ತಿದ್ದರು.  ಇದೀಗ ಗುಜರಾತಿನ ಪ್ರತಿ 18,065 ಹಳ್ಳಿಹಳ್ಳಿಗೂ ವರ್ಷದ 365 ದಿನವೂ 3 ಫೇಸ್ ವಿದ್ಯುತ್ ದೊರೆಯುತ್ತಿದೆ. ಇದರ ಅನುಷ್ಠಾನಕ್ಕೆ ಮೋದಿ ಮಾಡಿದ ಮೋಡಿಯಾದರೂ ಏನು? ವಿದ್ಯುತ್ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯ ಬಗ್ಗೆ ಸಮಗ್ರವಾಗಿ ಚರ್ಚಿಸಿದರು. ವಿದ್ಯುತ್ ಕಳ್ಳತನ ಮಾಡುವವರನ್ನು ಒದ್ದು ಜೈಲಿಗೆ ಕಳಿಸಲಾಯಿತು, ಸರಕಾರಿ ಲೆಕ್ಕದ ವಿದ್ಯುತ್ತಿನ ಪಾಲನ್ನು ನಿಖರವಾಗಿ ಲೆಕ್ಕಹಾಕುವ ವ್ಯವಸ್ಥೆಮಾಡಲಾಯಿತು ಮತ್ತು ಗ್ರಹಪಯೋಗಿ ಹಾಗು ಕೃಷಿಸಂಬಂಧಿ ವಿದ್ಯುತ್ ಸರಬರಾಜು ಲೈನ್ ಗಳನ್ನು ಬೇರ್ಪಡಿಸಲಾಯಿತು. 16 ಲಕ್ಷ ಹೊಸ ವಿದ್ಯುತ್ ಕಂಬಗಳು, 15,500 ಹೊಸ ಟ್ರಾನ್ಸಫಾರ್ಮರ್ಗಳು ಮತ್ತು 75,000 KM ಉದ್ದದ ಕೇಬಲ್ ಗಳನ್ನು ಹೊಸದಾಗಿ ಹಾಕಲಾಯಿತು. ಈ ಯೋಜನೆಗೆ ಒಟ್ಟು ಖರ್ಚಾದ ಮೊತ್ತ ಬರೇ 1100 ಕೋಟಿ ಮಾತ್ರ. ಇದು ಹೇಳಲು ಸುಲಭ. ಆದರೆ ಬಿಟ್ಟಿ ಸಿಕ್ಕಿದ್ದನ್ನು ಎಲ್ಲಾ ಕಡೆಯಿಂದ ಬಾಚುವ ಜನರಿರುವ, ಲಂಚವನ್ನೇ ವ್ಯವಸ್ಥೆಯನ್ನಾಗಿಸಿದ ಅಧಿಕಾರ-ರಾಜಕೀಯ ವರ್ಗವಿರುವ ವ್ಯವಸ್ಥೆಯೊಂದನ್ನು ಬದಲಾಯಿಸಿದ್ದು ಸಾಮಾನ್ಯವೇನು? ನಮ್ಮಲ್ಲೂ ಗ್ರಾಮ ಪಂಚಾಯತ್ ಚುನಾವಣೆಗಳಾಗುತ್ತವೆ. ಪಕ್ಷ, ಪಕ್ಷಗಳ ನಡುವೆ ಹೊಡೆದಾಟ,ಮಾತಿನ ಚಕಮಕಿ, ಕೋಲಾಹಲ... ಕೊನೆಗೆ ಅಭಿವೃದ್ಧಿ ಶೂನ್ಯ. ಜನತೆಗೆ ಹಾಲಾಹಲ! ಅದೇ ಗುಜರಾತಿನಲ್ಲಿ ನೋಡಿ.... ಗ್ರಾಮಸಭಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಗ್ರಾಮಕ್ಕೆ ನರೇಂದ್ರ ಮೋದಿ ಸರಕಾರ "ಸಮರಸ" ಗ್ರಾಮವೆಂದು ಹೆಸರಿಸಿ ಪ್ರೋತ್ಸಾಹ ಧನ ನೀಡುತ್ತಿದೆ. 45 ಪ್ರತಿಶತ ಗ್ರಾಮಸಭೆಗಳು ಈ ಯೋಜನೆಯಲ್ಲಿ ಪ್ರಯೋಜನ ಪಡೆಯುತ್ತಿವೆ. ಗ್ರಾಮಸಭಾ ಚುನಾವಣೆಯಲ್ಲಿ ನಡೆಯುವ ದ್ವೇಷ ಸಾಧನೆಗೆ, ರಾಜಕೀಯ ಕಲಹಕ್ಕೆ ಪೂರ್ಣ ವಿರಾಮ. ಗ್ರಾಮಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಪಕ್ಷವನ್ನು ಬೆಳೆಸುವ ಅವಕಾಶವಿರುವ ಸಂದರ್ಭದಲ್ಲಿ ಚುನಾವಣೆಯೇ ನೆಡೆಯದಂತೆ ಮಾಡಿ ಗ್ರಾಮೀಣ ಸಾಮರಸ್ಯವನ್ನು ಮೂಡಿಸುವ ಇಂತಹ ಯೋಜನೆಗಳನ್ನು ನಿಜವಾದ ದೇಶ ಭಕ್ತ ಮಾತ್ರ ಘೋಷಿಸುವ ತಾಕತ್ತು ತೋರಿಸಬಲ್ಲ!  ಗುಜರಾತ್ ರಾಜ್ಯಕ್ಕೆ ಕೌಶಲ್ಯವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿದೆ. ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಐಟಿಐ ಗಳನ್ನು ತೆರೆದು ಆ ಪ್ರದೇಶದ ಉದ್ದಿಮೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಉದ್ಯಮಕ್ಕೆ ಸಂಬಂಧಪಟ್ಟ ಕೋರ್ಸುಗಳನ್ನು ಕಲಿಸಲಾಗುತ್ತಿದೆ. ಇದು ಸ್ಥಳಿಯರಿಗೆ ಉದ್ಯೋಗ, ಉದ್ದಿಮೆದಾರರಿಗೆ ಕೌಶಲ್ಯಯುತ ಉದ್ಯೋಗಿಗಳನ್ನು ಸರಿಯಾದ ಸಮಯಕ್ಕೆ ಪೂರೈಸಿ, ಉತ್ಪಾದನೆಯನ್ನು ಹೆಚ್ಚಿಸಿ, ಆ ಭಾಗದ ಆರ್ಥಿಕತೆ ಪುನಶ್ಚೇತನಗೊಳ್ಳುತ್ತದೆ. ಅಂದರೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಯುವಜನರಿಗೆ ಕೋರ್ಸುಗಳನ್ನು ಆಯ್ಕೆ ಮಾಡಿ, ತಮಗಿಷ್ಟಬಂದ ಉದ್ಯೋಗ ಪಡೆಯುವ ಸದವಕಾಶ. ಸಣ್ಣ ಬದಲಾವಣೆಯಾದರೂ ಎಂತಹ ಸುಂದರ ಪರಿಕಲ್ಪನೆ.
             ವಿದ್ಯುತ್ ಕೊರತೆ ನೀಗಿಸಿದ ಏಷ್ಯಾದಲ್ಲೇ ಅತೀ ದೊಡ್ಡ ಸೋಲಾರ್ ಪ್ರೊಜೆಕ್ಟ್ ಚರಂಕಾ, ಥೇಮ್ಸ್ ನದಿಯಂತೆ ಹೊಳೆಯುತ್ತಿರುವ ಸರ್ದಾರ್ ಸರೋವರ, ತುಂಬಿ ಹರಿಯುತ್ತಿರುವ ನರ್ಮದಾ, ಸಬರ್ಮತಿ ಹಾಗೂ ಒಂದು ಕಾಲದಲ್ಲಿ ಬತ್ತಿ ಹೋಗಿದ್ದ ಸರಸ್ವತಿ, ಅತ್ಯಧಿಕ ಹಾಲಿನ ಉತ್ಪಾದನೆ ಹಾಗೂ ಅದರ ಉತ್ಪನ್ನಗಳ ರಫ್ತು, ವಿಶ್ವದ ಮೊದಲ ಗೋ ಉದ್ಯಾನ, ಕೃಷಿ ಹಾಗೂ ಕೃಷಿ ಭೂಮಿಯಲ್ಲಾಗಿರುವ ಬೆಳವಣಿಗೆ, ಸಾಕ್ಷರತೆ-ಉದ್ಯೋಗವಕಾಶ-ಉದ್ಯೋಗ ನೇಮಕಾತಿಗಳಲ್ಲಾಗಿರುವ ಅಭೂತಪೂರ್ವ ಏರಿಕೆ, ಮೂಲಭೂತ ಸೌಕರ್ಯ-ಪ್ರವಾಸೋದ್ಯಮಗಳಲ್ಲಾದ ಕ್ಷಿಪ್ರ ಬೆಳವಣಿಗೆ, ವಜ್ರ ಮತ್ತು ಹತ್ತಿಯ ಮಾರಾಟದಲ್ಲಾಗಿರುವ ಉತ್ಕರ್ಷ, ಸುಭದ್ರ ರಕ್ಷಣಾ ವ್ಯವಸ್ಥೆ, ಲಂಚವನ್ನೇ ನಿರ್ಮೂಲನಗೊಳಿಸಿದ, ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ವಿಭಾಗದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ, ಜವಾಬ್ದಾರಿ ಮತ್ತು ಸಮಾಜ ಸುಧಾರಣೆಯ ಅಡಿಯಲ್ಲಿ ಪ್ರಶಸ್ತಿ ಸಿಕ್ಕಿರುವ ನಾಗರಿಕರ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತಿರುವ "ಸ್ವಾಗತ್", ಸ್ವತಃ ನರೇಂದ್ರ ಮೋದಿಯೇ ಭಾಗವಹಿಸಿ ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸುವ "ಕನ್ಯಾ ಕಲಾವಣಿ", ಮೀನುಗಾರಿಕೆ ಇಲ್ಲದ ಸಮಯದಲ್ಲಿ ಬೆಸ್ತರನ್ನು ಆರ್ಥಿಕವಾಗಿ ಬಲಪಡಿಸಿದ ಸರಕಾರವೇ ಮುಂದೆ ನಿಂತು ಅಭಿವೃದ್ಧಿಪಡಿಸಿದ ಔಷಧ, ರಸಗೊಬ್ಬರವಾಗಿ ಉಪಯೋಗವಾಗುವ ಸಮುದ್ರಕಳೆ ಎಂಬ ಬೆಳೆ,  "ಬೇಟಿ ಬಚಾವೋ" ಆಂದೋಲನ, "ಬಾಲ ಸಖಾ", ಚಿರಂಜೀವಿ ಯೋಜನಾ, ಬಾಲ ಭೋಗ್ ಯೋಜನಾ, ಖಿಖಿಲಾತ್ ಯೋಜನಾ, ನಾರಿ ಗೌರವ್ ನಿಧಿ, ಮಿಷನ್ ಮಂಗಳಮ್, ಸವಚೇಟಿ ಮಾಜ್ ಸುರಕ್ಷಾ ಮುಂತಾದ ಹಲವಾರು ಯೋಜನೆಗಳ ಮೂಲಕ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಗೆ ನೀಡಿರುವ ಮಹತ್ವ ಮೋದಿಯವರ ಸರ್ವರೊಂದಿಗೆ ಸಮಗ್ರ ವಿಕಾಸವನ್ನು ಸಮರ್ಥವಾಗಿ ಬಿಂಬಿಸುತ್ತವೆ.
       ನಮ್ಮಲ್ಲಿ ಎಲ್ಲೆಲ್ಲೂ ನೋಡಿದರೂ ನೀರಿನ ಅಭಾವ. ಇದ್ದ ಕೆರೆಗಳನ್ನು ಭಾರೀ ಕುಳಗಳು ನುಂಗುತ್ತಿವೆ. ಇತ್ತೀಚೆಗಂತೂ ಅಗಾಧ ಮಳೆ ಸುರಿವ ಮಲೆನಾಡಿನಲ್ಲಿಯೂ ಇದೇ ದುಃಸ್ಥಿತಿ. ಮಹಾರಾಷ್ಟ್ರದ ಒಬ್ಬ ಕಾಂಗ್ರೆಸ್ ಮಂತ್ರಿಯಂತೂ ಕೆರೆಯಲ್ಲಿ ನೀರಿಲ್ಲದೆ ಇದ್ದರೆ ನಾನೇನೂ ಮೂತ್ರಿಸಿ ಅದನ್ನು ತುಂಬಿಸಲೇ ಎಂದು ನೀರಿಲ್ಲದೆ ಪರಿತಪಿಸುತ್ತಿದ್ದ ಜನರನ್ನು ಅಪಹಾಸ್ಯ ಮಾಡಿದರು. ಅದೇ ಗುಜರಾತಿನಲ್ಲಿ ಸಮುದ್ರ ಪಾಲಾಗುತ್ತಿದ್ದ ನರ್ಮದಾ ಅಣೆಕಟ್ಟಿನ ಹೆಚ್ಚುವರಿ ನೀರನ್ನು ಸದಾ ನೀರಿನ ಅಭಾವವಿರುವ ಸೌರಾಷ್ಟ್ರ ಪ್ರದೇಶದ ಏಳು ಜಿಲ್ಲೆಗಳಲ್ಲಿ 115 ಚಿಕ್ಕ ಅಣೆಕಟ್ಟುಗಳನ್ನು ಕಟ್ಟಿ 1115 ಕಿ.ಮೀ ಉದ್ದದ ಕಾಲುವೆಯಿಂದ ನೀರನ್ನು ತುಂಬಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯಿಂದ ಹರಿಯುವ ಈ ನೀರಿನಿಂದ 10 ಲಕ್ಷ ಎಕರೆ ಪ್ರದೇಶದಲ್ಲಿ ಒಂದು ಅಡಿಯಷ್ಟು ನೀರು ನಿಲ್ಲಲಿರುವ ಈ ಯೋಜನೆ 2017 ರಲ್ಲಿ ಪೂರ್ಣಗೊಂಡಾಗ ಬರೇ 10,000 ಕೋಟಿ ಖರ್ಚಾಗಲಿದೆ. ಸುಮಾರು 986 ಎಕ್ರೆಯಲ್ಲಿ ನಿರ್ಮಾಣವಾಗುತ್ತಿರುವ ನರೇಂದ್ರಮೋದಿಯವರ ಕನಸಿನ GIFT [Gujarat International Finance Tech-City] ಎಂಬ ಹೆಸರಿನ  ಈ ವಾಣಿಜ್ಯನಗರವು 2020 ರ ಹೊತ್ತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾರತದಲ್ಲಿ ಸುಮಾರು 1 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತದೆ. ವಿಶ್ವದ ಗಮನ ಸೆಳೆಯಲಿರುವ ಈ ನಗರದಲ್ಲಿ ಶ್ರೇಷ್ಠ ರಸ್ತೆಯಲ್ಲದೆ, ಭೂಗತ ಪೈಪ್ ಲೈನಿನ ಮೂಲಕ ತ್ಯಾಜ್ಯವಿಲೇವಾರಿ ವ್ಯವಸ್ಥೆ, ಮೆಟ್ರೋ ರೈಲು, 8 ಪಥಗಳ ರಸ್ತೆ, 50,000 ಕಾರ್ ಪಾರ್ಕಿಂಗ್ ವ್ಯವಸ್ಥೆ, ಭೂಮಿಯಡಿಯಲ್ಲಿ ಏರ್ ಕಂಡೀಶನ್ ಯಂತ್ರ ವ್ಯವಸ್ಥೆಯ, ಕೇಂದ್ರೀಕ್ರತ ನೆಟ್ ವರ್ಕ್ ಕೇಬಲಿಂಗ್ ವ್ಯವಸ್ಥೆ, ಸುಸಜ್ಜಿತ ಆಸ್ಪತ್ರೆ, ಶಾಲೆ, ವಸತಿ, ನಳ್ಳಿಯಲ್ಲೇ ಸಿಗುವ ಶುದ್ಧ ಕುಡಿಯುವ ನೀರು ಇವೇ ಮುಂತಾದ ಸುಸಜ್ಜಿತ ಸೌಲಭ್ಯಗಳಿರಲಿವೆ. SIR-ಧೊಲೆರಾ ಎಂಬ ಜಗತ್ತಿನ ಅತ್ಯಂತ ಯೋಚಿತ, ಯೋಜಿತ, ವ್ಯವಸ್ಥಿತ ನಗರ, ಜಗತ್ತಿನ ಅತ್ಯಂತ ದೊಡ್ಡ ಮಾನವ ನಿರ್ಮಿತ ಸಿಹಿನೀರಿನ ಸರೋವರ, ಜಗತ್ತಿನ ಹದಿನೆಂಟು ವಿಶ್ವವಿದ್ಯಾಲಯಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಒದಗಿಸುವ "ನ್ಯಾನೋ ಸಿಟಿ" ನಿರ್ಮಾಣ ಹಂತದಲ್ಲಿರುವ ನರೇಂದ್ರ ಮೋದಿಯವರ ದೂರದೃಷ್ಟಿಯ ಸೃಷ್ಟಿಗಳು!ಒಂದರಲ್ಲೇ ಬಹುಮುಖಿ ಫಲ ನೀಡುವ ಯೋಜನೆಗಳು ಮೋದಿ ರಾಜ್ಯದಲ್ಲಿ ಕಾಣಸಿಗುವ ಪ್ರತಿಯೊಬ್ಬ ಭಾರತೀಯ ಬಯಸುವ ಅಂಶಗಳು. ಬೇರೆ ರಾಜಕಾರಣಿಗಳಾದರೆ ಇಂತಹ ಯೊಜನೆಗಳನ್ನು ಮಾಡಿದರೂ ಪ್ರತ್ಯೇಕವಾಗಿ ಮಾಡುತ್ತಿದ್ದರು. ಯಾಕೆಂದರೆ ಜೇಬಿಗೆ ಬರಬೇಕಾದ್ದು ಪ್ರತಿಯೊಂದರಿಂದಲೂ ಪ್ರತ್ಯೇಕವಾಗಿ ಬರುತ್ತದಲ್ಲ!
               ವಿಶ್ವದಲ್ಲೇ ಮೊತ್ತಮೊದಲ ಫೊರೆನ್ಸಿಕ್ ವಿಶ್ವವಿದ್ಯಾಲಯ, ಪೊಲೀಸ್ ಪಡೆಗೆ ವಿಶೇಷ ತರಬೇತಿ ನೀಡುವ 'ರಕ್ಷಕ್ ವಿಶ್ವ ವಿದ್ಯಾಲಯ", ದೇಶದ ನಲವತ್ತು ಪ್ರತಿಶತ ಫಾರ್ಮಸೆಟಿಕಲ್ ಕಾರ್ಖಾನೆಗಳು ಗುಜರಾತಿನಲ್ಲಿರಲು ಕಾರಣವಾದ ಫಾರ್ಮಸಿ ವಿಶ್ವವಿದ್ಯಾಲಯ ಗುಜರಾತಿನ ಶಿಕ್ಷಣ ಸಮೃದ್ಧಿಯ ಪ್ರತೀಕಗಳು. "2/3 ಭಾಗ ಸಮುದ್ರದಿಂದಾವೃತವಾದ ಈ ದೇಶದಲ್ಲಿ ಮರೈನ್ ಇಂಜಿನಿಯರಿಂಗ್, ಪೋರ್ಟ್ ಮ್ಯಾನೇಜ್ ಮೆಂಟ್ ಶಿಕ್ಷಣವೇ ಇಲ್ಲ. ಅಮೇರಿಕಾ ತನ್ನ ಜನತೆ ಮಾಡಿದ ಪಿ ಎಚ್ ಡಿ ಯನ್ನು ದೇಶ ನಿರ್ಮಾಣಕ್ಕೆ ಬಳಸುತ್ತದೆ. ಆದರೆ ನಮ್ಮಲ್ಲಿ ಅದರ ಸಂಗ್ರಹವನ್ನೇ ಮಾಡೋದಿಲ್ಲ. ಗುಣಾತ್ಮಕ ಸಂಶೋಧನೆಗೆ ಪ್ರಾಮುಖ್ಯತೆ ಕೊಡಬೇಕು. ಶಿಕ್ಷಣ ಎನ್ನುವುದು ಮನಿ ಮೇಕಿಂಗ್ ಮೆಶಿನ್ ಆಗದೇ ಮ್ಯಾನ್ ಮೇಕಿಂಗ್ ಮೆಶಿನ್ ಆಗಬೇಕು. ನಮ್ಮ ಶಿಕ್ಷಣ ಪದ್ದತಿಯ ಆಧುನೀಕರಣವಾಗಬೇಕು, ಪಾಶ್ಚಾತ್ಯೀಕರಣವಲ್ಲ. ವಿಶ್ವಕ್ಕೆ ಇಂದು ಅಗತ್ಯವಿರುವುದು ಶಿಕ್ಷಕರು ಹಾಗೂ ನರ್ಸ್ ಗಳು. ಶಿಕ್ಷಕರನ್ನು ರಫ್ತು ಮಾಡಿದರೆ ನಮ್ಮ ದೇಶದ ಸಂಸ್ಕೃತಿಯೂ ಅಲ್ಲಿಗೆ ಹರಿಯುತ್ತೆ." ಎಂದು ಚಿಂತನಾ ಸರಣಿ ಹರಿಬಿಡುವ ನರೇಂದ್ರ ಮೋದಿ ದೇಶದ ಇತರ ರಾಜಕಾರಣಿಗಳು ಯೋಚಿಸಿಯೇ ಇಲ್ಲದಿದ್ದಾಗ್ಯೂ ಹೇಗೆ ಕಾಲದ ಬದಲಾವಣೆಯೊಂದಿಗೆ ಭಾರತದ ಔನ್ನತ್ಯವನ್ನು ಸಾಧಿಸಲು ಹೆಜ್ಜೆ ಹಾಕುತ್ತಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ. ಅಗಾಧ ನೆನಪಿನ ಶಕ್ತಿ, ದೂರದೃಷ್ಟಿ, ತತ್ವಕ್ಕೆ ಬದ್ಧತೆ ಹೀಗೆ ಒಬ್ಬ ನಾಯಕನಿರಬೇಕಾದ ಎಲ್ಲ ಗುಣಗಳು ಮೋದಿಯಲ್ಲಿದೆ. ದೂರದೃಷ್ಟಿಯ ಯೋಜನೆಗಳು ಹಾಗೂ ಅವುಗಳ ಸಮರ್ಪಕ ಅನುಷ್ಟಾನ, ಕಾರ್ಯಕ್ಷೇತ್ರದಲ್ಲಿನ ಕ್ಷಿಪ್ರತೆ, ಸರ್ವರೊಂದಿಗೆ ಸಮಗ್ರ ವಿಕಾಸ ಎಂಬ ಧೋರಣೆ, ಕಾಲದ ಬದಲಾವಣೆಗೆ ಹೊಂದಿಕೊಂಡು ಸಾಮಾನ್ಯ ಜನರೊಂದಿಗೆ ಒಡನಾಡುತ್ತಾ ಸಾಮಾನ್ಯನಂತೆ ಸರ್ವರಿಗೂ ಸರ್ವ ಕಾಲಕ್ಕೂ ಒದಗಬಲ್ಲ ವ್ಯಕ್ತಿತ್ವ, ನಿರ್ಧಾರದಲ್ಲಿನ ಧೃಡತೆ, ಅನುಷ್ಟಾನದಲ್ಲಿನ ಕಟ್ಟುನಿಟ್ಟು, ಮನಸ್ಸಿನೊಳಗಿನ ಮುಗ್ಧತೆ, ಶುದ್ಧ ಹಸ್ತ, ತನ್ನ ದೇಶದ ಗತವೈಭವದ ಬಗೆಗಿನ ಜ್ಞಾನ, ದೇಶಕ್ಕಾಗಿ ಕೆಲಸ ಮಾಡಬೇಕೆಂಬ ತುಡಿತ ಇವೇ ನರೇಂದ್ರ ಮೋದಿಯವರನ್ನು ಇತರೆಲ್ಲಾ ರಾಜಕಾರಣಿಗಳಿಗಿಂತ ಭಿನ್ನವಾಗಿ ಗುರುತಿಸುವಂತೆ ಮಾಡಿದ್ದು. ಪ್ರತ್ಯಕ್ಷ ಕಂಡು ಪರಾಂಬರಿಸಿ ನೋಡಿದ ಮೇಲೂ ನಮೋ ಎನ್ನದಿದ್ದರೆ ನೀವು ಭಾರತೀಯರೇ?

ಶನಿವಾರ, ಮಾರ್ಚ್ 22, 2014

ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ

                 ಸಿಂಧುರಕ್ಷಕ್ ಮುಳುಗಿತೆಂದರೆ ಹಿಂದೂಸ್ಥಾನವೂ ಮುಳುಗಿದಂತೆ!
                ಭಾರತೀಯ ನೌಕೋದ್ಯಮಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಋಗ್ವೇದದಲ್ಲಿ ನೌಕೆಗಳ ಉಲ್ಲೇಖವಿದೆ. ವೇದಕಾಲದಲ್ಲಿ ನೌಕೆಗಳ ಬಗ್ಗೆ, ಅವುಗಳನ್ನು ತಯಾರಿಸುವ, ಬಳಸುವ ಬಗ್ಗೆ ಜನತೆಗೆ ಅರಿವು ಇತ್ತು. ಅಂದರೆ ಸಾಗರ ಗರ್ಭದೊಳಗಡಗಿರುವ ಅಪಾರ ಸಂಪನ್ಮೂಲಗಳ ಬಗ್ಗೆ ಜನ ತಿಳಿದಿದ್ದರು. ಆಧುನಿಕ ವಿಜ್ಞಾನದ ಅರಿವಿಗೆ ದೊರಕಿದ ಮಾಹಿತಿಯನ್ನು ಆಧರಿಸಿದರೂ ಭಾರತವೇ ನೌಕೋದ್ಯಮದ ತವರು. ಕ್ರಿ.ಪೂ 2300ರ ಸುಮಾರಿಗೆ ಗುಜರಾತಿನ ಲೋಥಲ್ ಎಂಬ ಪ್ರದೇಶದಲ್ಲಿರುವ ಮಾಂಗ್ರೋಲ್ ಬಂದರಿನ ಬಳಿ ಸಿಂಧೂ ನಾಗರೀಕತೆಯ ಸಮಯದಲ್ಲಿ ಮೊದಲ ಉಬ್ಬರವಿಳಿತದ ಹಡಗು ನಿರ್ಮಾಣವಾಯಿತು. ಮೌರ್ಯರ ಆಳ್ವಿಕೆಯ ಸಮಯದಲ್ಲಿ ಜಲಮಾರ್ಗದ ಸಮಸ್ತ ಆಗು ಹೋಗುಗಳು ನವಾಧ್ಯಕ್ಷನ ನಿಯಂತ್ರಣದಲ್ಲಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ನೌಕೆಗಳ ಬಗೆಗಿನ ಅಗಾಧ ಮಾಹಿತಿಯಿದೆ. ಮೌರ್ಯರಲ್ಲದೆ ಚೋಳ, ಶಾತವಾಹನ, ಗುಪ್ತ, ಪಾಲ, ಪಾಂಡ್ಯ, ವಿಜಯನಗರ, ಕಳಿಂಗ, ಮರಾಠರ ಆಳ್ವಿಕೆಯ ಕಾಲದಲ್ಲೂ ನೌಕೋದ್ಯಮ ಪ್ರಸಿದ್ದಿ ಪಡೆದಿತ್ತು. ಪಾಶ್ಚಿಮಾತ್ಯ ದೇಶಗಳೊಡನೆ ವ್ಯಾಪಾರ ವಹಿವಾಟು ಬಹು ಹಿಂದಿನಿಂದಲೂ ಸಾಗರ ಮಾರ್ಗವಾಗಿಯೇ ನಡೆದಿತ್ತು. ಮರಾಠ ನೌಕಾ ಪಡೆಯಂತೂ ಮೂರು ಶತಮಾನಗಳ ಕಾಲ ತನ್ನ ಪಾರುಪತ್ಯ ಸ್ಥಾಪಿಸಿತ್ತು. ಯೂರೋಪಿನ ನೌಕಾಪಡೆಗಳು ಅನೇಕ ಸಲ ಮರಾಠರ ನೌಕಾಪಡೆಗಳೆದುರು ನಿಲ್ಲಲಾರದೆ ಓಡಿ ಹೋಗಿದ್ದವು. ಕನ್ಹೋಜಿ ಆಂಗ್ರೇಯಂತಹ ಸಾಗರ ವೀರ ಎಂದೆಂದಿಗೂ ಅಮರ.
               ಭಾರತೀಯ ನೌಕಾಪಡೆ ಜಗತ್ತಿನ ಐದನೇಯ ಅತಿ ದೊಡ್ಡ ನೌಕಾಪಾಡೆಯಾಗಿದ್ದು, ಇದರಲ್ಲಿ ಸುಮಾರು 55,000 ಜನರು ಕಾರ್ಯನಿರತರಾಗಿದ್ದಾರೆ. ಇವರಲ್ಲಿ ಸುಮಾರು 5,000 ಜನ ನೌಕಾ ವಾಯುಪಡೆಗೆ ಸೇರಿದ್ದು ಮತ್ತು ಸುಮಾರು 2೦೦೦ ಜನ ನೌಕಾ ಕಮಾಂಡೋಗಳಾಗಿದ್ದಾರೆ. ಭಾರತೀಯ ನೌಕಾಪಡೆ 155 ನೌಕೆಗಳನ್ನು ಹೊಂದಿದ್ದು, ಐ.ಎನ್.ಎಸ್.ವಿರಾಟ್ ಎಂಬ ವಾಯು ಯುದ್ಧ ನೌಕೆಯನ್ನು ಹೊದಿದೆ. ಸಂಪೂರ್ಣ ಏಷ್ಯಾ ಖಂಡದಲ್ಲಿರುವ ಎರಡು ವಾಯು ಯುದ್ಧ ನೌಕೆಗಳಲ್ಲಿ ಇದು ಒಂದು. ಸ್ವತಂತ್ರ ಭಾರತದ ನೌಕಾಪಡೆ ಇತಿಹಾಸದಲ್ಲಿ ಹಡಗಿನೊಂದಿಗೇ ಜಲಸಮಾಧಿಯಾದ ಹಾಗೂ ಸಾಯುವ ಮೊದಲು 67 ಜನರ ಜೀವ ರಕ್ಷಣೆ ಮಾಡಿದ್ದ ಮೊದಲ ಹಾಗೂ ಏಕೈಕ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲಾರಂತಹ ವೀರರನ್ನು ಹೊಂದಿದ್ದ ನೌಕಾಪಡೆ ನಮ್ಮದ್ದು.  1961ರಲ್ಲಿ ಗೋವಾ ವಿಮೋಚನಾ ಸಂದರ್ಭದಲ್ಲಿ ನೌಕಾಪಡೆಯನ್ನು ಬಳಸಲಾಯಿತಾದರೂ ಅದು ನೊಣ ಹೊಡೆಯಲು ಸುತ್ತಿಗೆ ಬಳಸಿದಂತಾಗಿತ್ತು. 1962ರ ಚೀನಿ ಆಕ್ರಮಣದ ಸಮಯದಲ್ಲಿ ನೌಕಾಪಡೆ ಮೂಕ ಪ್ರೇಕ್ಷಕರಾಗುಳಿಯಬೇಕಾಯಿತು. 1965ರ ಪಾಕ್ ಯುದ್ಧದಲ್ಲಿ ಕೂಡಾ ನೌಕಾ ಪಡೆ ಪಾತ್ರ ಸೀಮಿತವಾಗಿತ್ತು. ಆದರೆ 1971ರ ಯುದ್ಧದಲ್ಲಿ ನೌಕಾಪಡೆ ನಿರ್ಣಾಯಕ ಪಾತ್ರ ವಹಿಸಿತ್ತು. 1971ರ ಯುದ್ಧದಲ್ಲಿ ಪಶ್ಚಿಮ ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ಆಕ್ರಮಣ ಮಾಡಲು ಪೂರ್ವ ಹಾಗೂ ಪಶ್ಚಿಮ ಪಾಕಿಸ್ತಾನಗಳಿಗೆ ಹೊರಗಿನಿಂದ ನೆರವು ದೊರೆದಂತೆ ನೌಕಾ ದಿಗ್ಬಂಧನ ಮಾಡಲು ನಿರ್ಧರಿಸಲಾಯಿತು. ಅದಕ್ಕಾಗಿ ಕೇವಲ 300ರಿಂದ 400 ಕಿ.ಮೀ. ಮಾತ್ರ ಸಾಗಬಲ್ಲ ಕ್ಷಿಪಣಿ ನಾವೆಗಳನ್ನು ಹಡಗುಗಳಿಂದ ಎಳೆದುಕೊಂಡು ಹೋಗಿ ಕರಾಚಿ ಬಂದರು ಹತ್ತಿರ ಬಿಡಲಾಯಿತು. ಕರಾಚಿ ಬಂದರು, ಹಡಗು ಹಾಗೂ ತೈಲಭಂಡಾರ ಭುಗಿಲೆದ್ದು ಉರಿದವು. ಪಾಕ್ ನೌಕಾಪಡೆ ಹೇಳ ಹೆಸರಿಲ್ಲದಂತಾಯಿತು. ಈ ನೌಕಾ ವಿಜಯದ ದಿನವನ್ನು ಭಾರತೀಯ ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತಿದೆ.
                   ಜಗತ್ತಿನ ಐದನೇ ಅತಿ ದೊಡ್ಡ ನೌಕಾ ಪಡೆ ಹೊಂದಿದ್ದರೂ ಭಾರತದ ಸರಕಾರಗಳಿಗೆ ಅದರ ಮೌಲ್ಯದ ಅರಿವೇ ಇಲ್ಲ. ಬೇರೆ ದೇಶಗಳು ಉಪಯೋಗಿಸಿ ಸಾಕೆಂದು ಹರಾಜಿಗಿಟ್ಟ ನೌಕೆಗಳನ್ನು ನಮ್ಮ ಮಾನಗೆಟ್ಟ ಸರಕಾರಗಳು ಜಿದ್ದಿಗೆ ಬಿದ್ದು ಖರೀದಿ ಮಾಡಿದವು. ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ರಷ್ಯಾದಿಂದಲೂ, ಐಎನ್‌ಎಸ್‌ ವಿಕ್ರಾಂತ್‌ ಹಾಗೂ ಎಚ್‌ಎಮ್‌ಎಸ್‌ ಹರ್ಮಸ್‌(ಐಎನ್‌ಎಸ್‌ ವಿರಾಟ್‌) ಅನ್ನು ಬ್ರಿಟನ್‌ ನೌಕಾಪಡೆಯಿಂದಲೂ ಖರೀದಿಸಲಾಗಿತ್ತು. 2004ರಲ್ಲಿ ರಷ್ಯಾದ ಅಡ್ಮಿರಲ್‌ ಗೋರ್ಷಕೋವ್‌(ಐಎನ್‌ಎಸ್‌ ವಿಕ್ರಮಾದಿತ್ಯ)ವನ್ನು ಖರೀದಿಸಲಾಗಿತ್ತು. 1978ರಲ್ಲಿ ಉಕ್ರೇನ್‌ನ ನಿಕೊಲೇವ್‌ ಹಡಗು ಕಟ್ಟೆಯಲ್ಲಿ ನಿರ್ಮಾಣಗೊಂಡ ಈ ಹಡಗನ್ನು, 1982ರಲ್ಲಿ ರಷ್ಯಾ ನೌಕಾ ಪಡೆಗೆ ಸೇರ್ಪಡೆಗೊಳಿಸಲಾಗಿತ್ತು. 1996ರಲ್ಲಿ ನೌಕೆಯನ್ನು ಸೇವೆಯಿಂದ ಮುಕ್ತಗೊಳಿಸಿ ಹರಾಜಿಗಿಡಲಾಗಿತ್ತು. ಬಳಿಕ 2004ರಲ್ಲಿ ಈ ನೌಕೆಯನ್ನು ಭಾರತ ಖರೀದಿಸಿದ್ದು, ಆಧುನೀಕರಣಕ್ಕೆ ರಷ್ಯಾಕ್ಕೇ ನೀಡಿತ್ತು! ನೌಕೆಯನ್ನು 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಕ್ಕೆ ಭಾರತ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಅಂದರೆ ಹೊಸ ನೌಕೆ ನಿರ್ಮಾಣಕ್ಕಿಂತಲೂ ಹೆಚ್ಚಿಗೆ ಆಧುನೀಕರಣಕ್ಕೆ ಬಳಸಲಾಗಿತ್ತು. ಅಲ್ಲದೆ ಆಧುನೀಕರಣ ವಿಳಂಬವಾದ್ದರಿಂದ ವೆಚ್ಚಗಳು ಹೆಚ್ಚಾಗಿ, ಭಾರತ ಹೆಚ್ಚುವರಿ ಪಾವತಿ ಮಾಡಬೇಕು ಎಂದು ರಷ್ಯಾ ಹಟ ಹಿಡಿದಿತ್ತು!
                ಕಳೆದ ಡಿಸೆಂಬರಿನಿಂದ ಪ್ರತಿವಾರ ನೌಕಾಪಡೆಯಲ್ಲಿ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇದೆ. ಕಳೆದ ಮೂರು ತಿಂಗಳಲ್ಲಿ ಎಂಟು ದುರಂತಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಬಂದವು. ನೌಕಾಪಡೆಯ ಮುಖ್ಯಸ್ಥ ಡಿ.ಕೆ ಜೋಶಿ ಕಣ್ಣೆದುರು ಸಂಭವಿಸುತ್ತಲೇ ಇರುವ ಅಪಘಾತಗಳನ್ನು ನೋಡಲಾರದೇ ರಾಜೀನಾಮೆ ಕೊಟ್ಟುಬಿಟ್ಟರು. ಆದರೆ ಇದ್ದಷ್ಟೂ ದಿನ ತಿಂದು ತೇಗಿಯೇ ಸಾಯೋದು ಎಂದು ಸದಾ ದೇಶವನ್ನು ಹಾಳು ಮಾಡುವತ್ತಲೇ ಯೋಚಿಸುವ ತನ್ನನ್ನು ತಾನು ದುರಸ್ಥಿ ಮಾಡಿಕೊಳ್ಳಲಾಗದ ಆಳುವ ಸರಕಾರಕ್ಕೆ ನೌಕಾಪಡೆಯನ್ನು ದುರಸ್ಥಿ ಮಾಡುವ ಮನ ಎಲ್ಲಿಂದ ಬರಬೇಕು? ಕಳೆದ ಆಗಸ್ಟ್ ನಿಂದ ಎಂಟು ತಿಂಗಳಲ್ಲಿ ಸರದಿಯಂತೆ ಸಂಭವಿಸಿದ ಹನ್ನೊಂದು ದುರಂತಗಳು ಆಳುವ ಸರಕಾರದ ಶಿಥಿಲಗೊಂಡ ಆಡಳಿತ ವ್ಯವಸ್ಥೆಯ ಫಲ. 2013ರ ಆಗಸ್ಟ್ ತಿಂಗಳಲ್ಲಿ ಮುಂಬಯಿ ನೌಕಾ ನೆಲೆಯಲ್ಲಿ ಐ ಎನ್ ಎಸ್ ಸಿಂಧುರಕ್ಷಕ್ ನಲ್ಲಿ ಉಂಟಾದ ಅಗ್ನಿದುರಂತದಲ್ಲಿ ಹದಿನೆಂಟು ಜನರು ಮೃತರಾದರು. ಅಲ್ಲಿಂದ ಮುಂದೆ ಸೆಪ್ಟೆಂಬರಿನಲ್ಲಿ ವಿರಾಟ್, ಡಿಸೆಂಬರಿನಲ್ಲಿ ತರ್ಕಷ್ ಮತ್ತು ತಲ್ವಾರ್, ಜನವರಿಯಲ್ಲಿ ಕೊಂಕಣ್, ಸಿಂಧುಘೋಷ್, ವಿಪುರ್ ಹಾಗೂ ಬೆತ್ವಾ, ಫೆಬ್ರವರಿಯಲ್ಲಿ ಐರಾವತ ಮತ್ತು ಸಿಂಧುರತ್ನ ಮತ್ತೀಗ ಮಾರ್ಚ್ ನಲ್ಲಿ ಐ ಎನ್ ಎಸ್ ಕೋಲ್ಕತ್ತಾ ಹೀಗೆ ಒಂದರ ಹಿಂದೆ ಒಂದರಂತೆ ಆದ ದುರಂತಗಳು ನೌಕಾಪಡೆಯನ್ನು ತನ್ನದೇ ಸ್ಥಿತಿಗೆ ತಂದಿಟ್ಟ ಕಾಂಗ್ರೆಸ್ ಸರಕಾರ ದೇಶದ ಜನತೆಗೆ ಕೊಟ್ಟ 'ಸಾವಿನ' ಭಾಗ್ಯವೇ ಸರಿ! ಸೇನೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೇ ಒದಗಿಸದ ರಾಷ್ಟ್ರದ್ರೋಹಿಗಳಿಂದ ದೇಶರಕ್ಷಣೆಯನ್ನು ನಿರೀಕ್ಷಿಸಲಾದೀತೇ?
                    ಆರ್ಭಟಿಸುತ್ತಿರುವ ಚೀನಾ ಅಮೇರಿಕಾಗಳನ್ನು ನಿಯಂತ್ರಿಸಲು ಮಾತ್ರವಲ್ಲ ಭವಿಷ್ಯದಲ್ಲಿ ತನ್ನದೇ ರಕ್ಷಣೆಗಾಗಿಯೂ ಭಾರತ ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪಗಳನ್ನು ಸಮರ್ಥವಾಗಿ ನೌಕಾ ಉದ್ದೇಶಗಳಿಗಾಗಿ ಸಜ್ಜುಗೊಳಿಸಬೇಕಾಗಿತ್ತು. ಭಾಜಪಾ ಸರಕಾರದ ಅವಧಿಯಲ್ಲಿ ಕಾರ್ಗಿಲ್ ಯುದ್ಧದ ವಿಜಯಾನಂತರ ಅಂಡಮಾನ್-ನಿಕೋಬಾರ್ ಕಮಾಂಡ್ ಅನ್ನು ಸ್ಥಾಪಿಸಿತ್ತು. ಆದರೆ ಆ ಬಳಿಕ ಬಂದ ಕಾಂಗ್ರೆಸ್ ಹತ್ತು ವರ್ಷಗಳ ಅವಧಿಯಲ್ಲಿ ಅಂಡಮಾನ್-ನಿಕೋಬಾರಿನಲ್ಲಿ ನೌಕಾ ನೆಲೆಯ ಅಭಿವೃದ್ಧಿ ಒತ್ತಟ್ಟಿಗಿರಲಿ ಕನಿಷ್ಟ ಈ ಪಡೆಯ ಅವಶ್ಯಕತೆಗಳನ್ನೇ ಪೂರೈಸಲಿಲ್ಲ. ಲಕ್ಷದ್ವೀಪಗಳಲ್ಲಿ ಕವರಟ್ಟಿಯಲ್ಲಿ ನೌಕಾನೆಲೆ ಸ್ಥಾಪಿಸಿದ್ದು ಬಿಟ್ಟರೆ ಮತ್ತೇನೂ ಮಾಡಲೇ ಇಲ್ಲ. ಆದರೆ ಅತ್ತ ಚೀನಾ ಭಾರತವನ್ನು ಸುತ್ತುವರಿದಿರುವ ಮೂರೂ ಸಮುದ್ರಗಳ ಮೇಲೆ ಹಸ್ತಕ್ಷೇಪ ಮಾಡಲಾರಂಭಿಸಿದೆ. 21ನೇ ಶತಮಾನದಲ್ಲಿ ಭಾರತದ ಪ್ರಮುಖ ಶತ್ರು ರಾಷ್ಟ್ರ ಚೀನಾವೆಂಬುದು ಜಗತ್ತಿಗೇ ಗೊತ್ತಿರುವ ಸತ್ಯ! ಇತ್ತ ಭಾರತದ ಸರಕಾರಗಳ ಸ್ವಹಿತ, ಮೂರ್ಖ, ಅದೂರದರ್ಶಿ ಹಾಗೂ ದೇಶದ್ರೋಹಿ ಆಡಳಿತ ನೀತಿಯ ಫಲವಾಗಿ ಭಾರತದ ನೌಕಾಪಡೆಯ ಬಲ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದರೆ ಅತ್ತ ಸಾಮ್ರಾಜ್ಯಶಾಹೀ ಮನೋಭಾವದ ಚೀನಾದ ನೌಕಾಪಡೆಯ ಕಾರ್ಯ ಚಟುವಟಿಕೆ ಹಿಗ್ಗುತ್ತಲೇ ಇದೆ! ಭಾರತದ ಸನಿಹ ಯಾವುದೇ ಸಾಗರ ತೀರ ಹೊಂದಿಲ್ಲದ ಚೀನಾ, ಈ ಶತಮಾನದ ಅಗ್ರಣಿಯಾಗಿ ಮೆರೆಯಬೇಕಾದರೆ ಸಾಗರದ ಮೇಲೆ ಹತೋಟಿ ಸಾಧಿಸುವುದು ಮುಖ್ಯವೆಂದು ಅರಿತಿದೆ. ಅದಕ್ಕಾಗಿಯೇ ಭಾರತದ ನೆರೆಯರಾಷ್ಟ್ರಗಳೆಲ್ಲವನ್ನೂ ಹಣದ ಆಮಿಷವೊಡ್ಡಿ ತನ್ನ ಬಲೆಗೆ ಬೀಳಿಸಿ ಅಲ್ಲಿ ತನ್ನ ನೌಕಾನೆಲೆಗಳನ್ನು ಸ್ಥಾಪಿಸುತ್ತಿದೆ. ಈಗಾಗಲೇ ಪಾಕಿಸ್ಥಾನದ ಗ್ವಾಡಾರ್ನಲ್ಲಿ ಚೀನಾ ನೌಕಾನೆಲೆಯೊಂದನ್ನು ನಿರ್ಮಿಸಿದೆ. ಬ್ರಹ್ಮ ದೇಶ(ಮಯನ್ಮಾರ್)ದ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸಿದೆ. ಬರ್ಮಾದ ಕೋಕೋ ದ್ವೀಪಗಳಲ್ಲಿ ಚೀನಾ ನೌಕಾನೆಲೆಯೊಂದನ್ನು ಸ್ಥಾಪಿಸಿದೆ. ಶ್ರೀಲಂಕಾದ ಹಂಬನ್ ತೋಟದಲ್ಲಿ ಬಂದರೊಂದನ್ನು ನಿರ್ಮಿಸುತ್ತಿದೆ ಚೀನಾ! ಚೀನಾವನ್ನು ರತ್ನಾಕರ(ಅರಬ್ಬಿ ಸಮುದ್ರ)ದೊಂದಿಗೆ ಹಾಗೂ ಬ್ರಹ್ಮ ದೇಶದ ಮೂಲಕ ಮಹೋದಧಿ(ಬಂಗಾಳ ಕೊಲ್ಲಿ)ಯೊಂದಿಗೆ ಜೋಡಿಸಲು ರೈಲು ಮಾರ್ಗ ನಿರ್ಮಿಸತೊಡಗಿದೆ. ಇದರಿಂದ ಸಿಟ್ವೇ ಬಂದರು ಹಾಗೂ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗಳಿಗೆ ಸಮರ ಸಾಮಗ್ರಿಗಳನ್ನು ಹಾಗೂ ಸೈನಿಕರನ್ನು ಸಾಗಿಸಲು ಸುಲಭವಾಗುತ್ತದೆ. ಇದರ ಜೊತೆಗೆ ಹೈನಾನ್ ಹಾಗೂ ಪರಾಸೆಲ್ ದ್ವೀಪಗಳಲ್ಲಿ ಚೀನಾದ ನೌಕಾನೆಲೆ ಸದಾ ಸಮರೋತ್ಸಾಹಿಯಾಗಿ ಸಿದ್ಧವಿರುತ್ತದೆ.
                     ಆದರೆ ಎದುರಾಳಿ ಮುನ್ನುಗ್ಗುತ್ತಾ ಬರುತ್ತಿರುವಾಗಲೂ ಭಾಯಿ ಭಾಯಿ ಎಂದೆನ್ನುತ್ತಾ ತಮ್ಮ ಖಜಾನೆ ತುಂಬುತ್ತಾ ಕುಳಿತಿರುವ ನಾಯಕರಿಂದ ದೇಶ ಉಳಿದೀತೇ? ಭಾರತದ 2020 ಕನಸು ನನಸಾಗಬೇಕಾದರೆ ಸಾಗರ ತೀರಗಳನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವುದು, ಅದಕ್ಕಾಗಿ ನೌಕಾಪಡೆಯನ್ನು ಬಲಿಷ್ಟಗೊಳಿಸುವುದು, ನೌಕಾನೆಲೆಗಳನ್ನು ಉನ್ನತೀಕರಣಗೊಳಿಸುವುದು ಅತ್ಯಗತ್ಯ. ಇದನ್ನು ಕಾರ್ಯಗತಗೊಳಿಸಬೇಕಾದರೆ ಸಮರ್ಥ ನಾಯಕನ ಅಗತ್ಯವಿದೆ. ಡ್ರ್ಯಾಗನ್ ಬಾಲವನ್ನು ಮೆಟ್ಟಬಲ್ಲ, ದೊಡ್ಡಣ್ಣನನ್ನೇ ತನ್ನ ಕಾಲಿಗೆ ಬೀಳಿಸಿದ ದೂರದರ್ಶಿ-ದೇಶಭಕ್ತಿ-ಸಾಮರ್ಥ್ಯವುಳ್ಳ ನಾಯಕನೊಬ್ಬ ಸಿದ್ಧವಾಗಿ ನಿಂತಿದ್ದಾನೆ. ಈಗ ನಮೋ ಎನ್ನದಿದ್ದರೆ ಮುಂದೆಂದೂ ನಮೋ ಎನ್ನದ ಪರಿಸ್ಥಿತಿ ಬಂದೀತು! ಜೋಕೆ!