ಪುಟಗಳು

ಸೋಮವಾರ, ಏಪ್ರಿಲ್ 25, 2016

ಬಾಜೀ ರಾವತ್ ಎಂಬ ಕ್ರಾಂತಿಯ ಕಿಡಿ

ಬಾಜೀ ರಾವತ್ (1925 -1938 )

        ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ  ಕುಡಿ ಬಾಜಿ ರಾವತ್. ಶಾಲೆಗೆ  ಕಳಿಸುವಷ್ಟು ಆರ್ಥಿಕ ಚೈತನ್ಯ ಈತನ ಹೆತ್ತವರಿಗಿರಲಿಲ್ಲ. ನೀಲಕ೦ಠಪುರದಲ್ಲಿ ಪ್ರಜಾಮಂಡಲ ಪಕ್ಷ ಎ೦ಬ ಸ೦ಘಟನೆಯೊ೦ದಿತ್ತು . ಈ ಬಾಲಕ ಆ ಸ೦ಘಟನೆಯ ಸಭೆ ನಡೆಯುವಲ್ಲಿಗೆ ಹೋಗಿ ಸುಮ್ಮನೆ ನಿಂತು ಜನರಾಡುತ್ತಿದ್ದ  ಮಾತುಗಳನ್ನು ಆಲಿಸುತ್ತಿದ್ದ.   ಬ್ರಿಟಿಷರು ನಮ್ಮ ದೇಶವನ್ನು ಆಕ್ರಮಿಸಿ, ನಮ್ಮ ಅಮೂಲ್ಯ ಸಂಪತ್ತನ್ನು ಹುರಿದು ಮುಕ್ಕುತ್ತಿರುವ ಬಗ್ಗೆ, ಇಲ್ಲಿನ ಜನರನ್ನು ಹಿಂಸಿಸಿ ತಮ್ಮ ಪಾರಮ್ಯ ಮೆರೆಯುತ್ತಿರುವ ಬಗ್ಗೆ ಅವನಲ್ಲಿ ಅರಿವು ಮೂಡಿತ್ತು. ಬ್ರಿಟಿಷರ ವಿರುದ್ಧ ದ್ವೇಷ ಮೊಳೆದಿತ್ತು. ಊರಿನಲ್ಲಿದ್ದ ಸ್ವಾತ೦ತ್ರ್ಯ ಹೋರಾಟಗಾರರ ನಿಕಟ ಸ೦ಪರ್ಕ ಈತನಿಗಿತ್ತು. ಹತ್ತನೇ ವಯಸ್ಸಿನಿ೦ದಲೇ ನೀಲಕ೦ಠಪುರದಲ್ಲಿ ಹರಿಯುತ್ತಿರುವ ಬ್ರಾಹ್ಮಣೀ ನದಿಯನ್ನು ದೋಣಿಯ ಮೂಲಕ ದಾಟಿ ಅತ್ತ ಕಡೆಯ ಭುವನೇಶ್ವರಕ್ಕೆ ಹೋಗಲು ಜನರಿಗೆ ಸಹಾಯ ಮಾಡುವುದರೊಂದಿಗೆ ತನ್ನ ಕುಟುಂಬದ ಜೀವನ ನಿರ್ವಹಣೆಗೆ ನೆರವಾಗುತ್ತಿದ್ದ.

      1938ರ ಕರಾಳ ರಾತ್ರಿಯ ಕತ್ತಲ ದಿನವದು. ಬ್ರಿಟಿಶ್ ಅಧಿಕಾರಿಗಳು ಮತ್ತು ಪೋಲೀಸರ ದ೦ಡೊ೦ದು ಬ್ರಾಹ್ಮಣೀ ನದಿಯ ತಟಕ್ಕೆ ಬಂದಿತ್ತು.  ನೀಲಕ೦ಠಪುರದ ಪ್ರಜಾಮ೦ಡಲ ಪಕ್ಷದ ಕಾರ್ಯಕರ್ತರನ್ನು ಬ೦ಧಿಸಿ ಕರೆದೊಯ್ಯುವ ಉದ್ದೇಶ ಅವರದಾಗಿತ್ತು. ನದೀ ತಟಾಕದಲ್ಲಿ  ನಿ೦ತಿದ್ದ ಈ ಹುಡುಗನನ್ನು ಕರೆದು ದೋಣಿಯಲ್ಲಿ ನದಿ ದಾಟಿಸುವ೦ತೆ ಅಬ್ಬರಿಸಿ ಆಗ್ರಹಿಸುತ್ತಾರೆ. ಅವರ ದಿರಿಸು ಮತ್ತು ಮಾತಿನ ಬಿರುಸು ಕ೦ಡು ಅವರು ಬ್ರಿಟಿಷರೆ೦ಬುದು ಈ ಹುಡುಗನ ಗಮನಕ್ಕೆ ಬರುತ್ತದೆ. ಅಲ್ಲದೆ ಅವರು ಊರಿನ ಕೆಲವರನ್ನು ದಸ್ತಗಿರಿ ಮಾಡಲು ಬ೦ದಿರುವುದು ಕೂಡ ಅವರ ಮಾತುಗಳಿ೦ದ  ವ್ಯಕ್ತವಾಗುತ್ತದೆ.


        ದೋಣಿಯಲ್ಲಿ ತಮ್ಮನ್ನು ನದಿ ದಾಟಿಸುವ೦ತೆ ಬ್ರಿಟಿಷ್ ಅಧಿಕಾರಿಗಳು ಮಾಡಿದ ಆಗ್ರಹಕ್ಕೆ ಮಣಿಯದ ಈ ಪುಟ್ಟಬಾಲಕ ರಾವತ್, ನೀವು ನಮ್ಮ ಗ್ರಾಮಸ್ಥರ ವೈರಿಗಳು, ದ್ರೋಹಿಗಳು, ನಿಮ್ಮನ್ನು ನನ್ನ ದೋಣಿಯಲ್ಲಿ ಕೂರಲು ಅವಕಾಶ ಮಾಡಿ ಕೊಡುವುದಿಲ್ಲ ಎ೦ದು ಅಬ್ಬರಿಸುತ್ತಾನೆ. ಬ್ರಾಹ್ಮಣೀ ನದಿ ತು೦ಬಿ ಹರಿಯುತ್ತಿತ್ತು. ದೋಣಿಯಿಲ್ಲದೆ ದಾಟುವುದು ಸಾಧ್ಯವೇ ಇರಲಿಲ್ಲ. ಮಾತಿನ ಚಕಮಕಿಯೇ ನಡೆಯುತ್ತದೆ. ನಿನ್ನನ್ನು ಎಳೆದು ಹೊರಹಾಕಿ ನಾವೇ ದೋಣಿ ನಡೆಸಿ ಊರು ತಲುಪುತ್ತೇವೆ. ಜೀವ ಉಳಿಸಿಕೊಳ್ಳಬೇಕೆ೦ದಿದ್ದಲ್ಲಿ  ದೋಣಿ ನಡೆಸು ಎ೦ದು ಬೆದರಿಕೆ ಹಾಕುತ್ತಾರೆ. ತನ್ನನ್ನಿವರು ಬದುಕಲು ಬಿಡುವುದಿಲ್ಲ, ಆದ್ದರಿ೦ದ ಇವರು ಊರಿಗೆ ಹೋಗುವುದನ್ನು ಹೇಗಾದರೂ ತಡೆಯಲೇಬೇಕೆ೦ಬ ದೃಢ ಮನಸ್ಥಿತಿಯಲ್ಲಿ ಈತ ಕೈಯ್ಯಲ್ಲಿದ ಕತ್ತಿಯಿ೦ದ ದೋಣಿಯ ತಳದ ಹಲಗೆಯನ್ನು ತು೦ಡರಿಸುತ್ತಾನೆ. ದೋಣಿಗೆ ತೂತು ಬೀಳುತ್ತದೆ. ಅದರಲ್ಲಿ ಸ೦ಚರಿಸುವುದು ಸಾಧ್ಯವಿಲ್ಲದ೦ತಾಗುತ್ತದೆ. ಕುಪಿತರಾದ ಬ್ರಿಟಿಷರು ಈತನತ್ತ ಗುರಿಯಿಟ್ಟು ಗು೦ಡು ಹಾರಿಸುತ್ತಾರೆ. ಈತನ ತಲೆಗೆ ಏಟು ಬೀಳುತ್ತದೆ.  ಆದರೂ ಎದೆಗು೦ದದೇ ನದಿಗೆ ಹಾರಿ ಈಜಿ ಆಚೆ ದಡ  ಸೇರಿದ ರಾವತ್ ಅಲ್ಲಿದ್ದವರನ್ನು ಕೂಗಿ ಕರೆದು ಬ್ರಿಟಿಷರು ಬರುತ್ತಿರುವ ಬಗ್ಗೆ ಮಾಹಿತಿ ಕೊಟ್ಟು ತಪ್ಪಿಸಿಕೊಳ್ಳುವ೦ತೆ  ಎಚ್ಚರಿಸುತ್ತಾನೆ.  

      ಸ್ವಾತಂತ್ರ್ಯದ ಬೆಲೆ ಗೊತ್ತಾಗಲೂ ಶಿಕ್ಷಿತನೇ ಆಗಬೇಕೆಂದೇನೂ ಇಲ್ಲ. ಯಾವ ಸಮಯದಲ್ಲಿ ಹಿಂಸೆ, ಯಾವಾಗ ಅಹಿಂಸೆಯನ್ನು ಪಾಲಿಸಬೇಕು ಎಂಬ ಧರ್ಮವನ್ನರಿಯಲು ಕ್ರಿಸ್ತನ ಉಪದೇಶ ಬೇಕಾಗಿಲ್ಲ. ತನ್ನ ದೇಶದ ರಕ್ಷಣೆಗಾಗಿ ಖಿಲಾಫತ್ ಬೆಂಬಲಿಸಿ ಮುಸಲ್ಮಾನರ ಎದುರು ಮಂಡಿಯೂರಬೇಕೆಂದಿಲ್ಲ. ಪುಟ್ಟ ಹುಡುಗನಿಗಾದ ಅರಿವು ಗಾಂಧಿ ಹಾಗೂ ಆತನ ಬೆಂಬಲಿಗರಿಗೆ ಅರ್ಥವಾಗಿ, ಆಚರಿಸಿದ್ದಿದ್ದರೆ ಅಖಂಡ ಭಾರತ ತ್ರಿಖಂಡವಾಗುತ್ತಿರಲಿಲ್ಲ!

   ಆದರೇನು ಆತ ಬದುಕುಳಿಯುವುದಿಲ್ಲ. ತಲೆಗೆ ಬಿದ್ದಿದ್ದ ಗು೦ಡಿನಿ೦ದ ತೀವ್ರ ರಕ್ತ ಸ್ರಾವವಾಗಿ ಅಲ್ಲಿಯೇ ಕುಸಿದು ಸಾಯುತ್ತಾನೆ.  ಆಗ ಅವನ ವಯಸ್ಸು ಕೇವಲ ಹದಿಮೂರು.  ಎ೦ತಹ ಧೀರ ತರುಣ ಈ ಬಾಜಿ ರಾವತ್. ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಅವನ ಕೊಡುಗೆ ಸಣ್ಣದೇನಲ್ಲ. ಆದರೆ ಈ ಎಳೇ ವಯಸ್ಸಿನ ಬಾಲಕನ ಶೌರ್ಯ ಮತ್ತು ದೇಶಪ್ರೇಮ ಎಲ್ಲಿಯೂ ದಾಖಲಾಗುವುದಿಲ್ಲ. ಕಮ್ಮಿನಿಷ್ಟರ ಐಡಿಯಾಲಜಿಯ ಪರಿಧಿಯೊಳಗೆ ಬರದ ಕಾರಣ ಇತಿಹಾಸದ ಪುಟಗಳಡಿ ಹೂತು ಹೋದ ಅನಾಮಿಕರ ಪೈಕಿ ಇವನೂ ಒಬ್ಬ!

#ವಂದೇಮಾತರಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ