ಪುಟಗಳು

ಗುರುವಾರ, ಮೇ 5, 2016

ಜಗತ್ತನ್ನೇ ಕಾಡುತ್ತಿದೆ "ಇಸ್ಲಾಂ ಪಾಪ" ಎನ್ನುವ ಸೆಕ್ಯುಲರ್ ಭೂತ

ಜಗತ್ತನ್ನೇ ಕಾಡುತ್ತಿದೆ "ಇಸ್ಲಾಂ ಪಾಪ" ಎನ್ನುವ ಸೆಕ್ಯುಲರ್ ಭೂತ

                  ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂದರೆ ಅದು ಸರ್ವನಾಶಕ್ಕೆ ಹೇತು. ಅಂತಹ ನಾಶಕ್ಕೆ ಜಗತ್ತು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ. ಭಯ, ದುರಾಸೆ, (ಕು)ಪ್ರಸಿದ್ಧಿಯ ಹುಚ್ಚು, ಎಲ್ಲರಿಗೂ ಸಲ್ಲಬೇಕೆಂಬ ಭಾವ ಎಲ್ಲವೂ ಈ ಓಲೈಕೆಗೆ ಕಾರಣ.  ಕ್ಷಣಿಕ ಲಾಭಕ್ಕಾಗಿ ಓಲೈಕೆಯ ಒಂದು ಇಟ್ಟಿಗೆ ಇಡುವ ವ್ಯಕ್ತಿ ತನ್ನ ಮಹತ್ವಾಕಾಂಕ್ಷೆಯ ಪೂರೈಕೆಗಾಗಿ ಓಲೈಕೆಯ ಮಹಲನ್ನೇ ಕಟ್ಟುತ್ತಾನೆ. ಆದರೆ ತತ್ವ, ಆದರ್ಶಗಳೆಂಬ ಸ್ವಂತ ಮನೆ ಮುರುಕಲಾಗಿ ಬಿದ್ದಿರುತ್ತದೆ. ಸೆಕ್ಯುಲರ್ ಪದದ ಅರ್ಥ ಎಂದೋ ಬದಲಾಗಿದೆ! ಭಾರತದಲ್ಲಿ ಮತಕ್ಕೋಸ್ಕರ ರಾಜಕಾರಣಿಯೊಬ್ಬ ಓಲೈಕೆಯ ಯಾವ ಹಂತವನ್ನಾದರೂ ತಲುಪಬಲ್ಲ. ಈ ಓಲೈಕೆಯಿಂದಾಗಿಯೇ ಇಲ್ಲಿನ ಇತಿಹಾಸವೇ ತಿರುಚಿ, ವರ್ತಮಾನವೇ ಅಡಗಿ ಭವಿಷ್ಯ ಕತ್ತಲಾಗಿದೆ. ಇದಕ್ಕೆ ಉಳಿದ ಜಗತ್ತೇನೂ ಹೊರತಲ್ಲ.

     ಈಗ ಅಮೇರಿಕಾದಂತಹ ದೊಡ್ಡಣ್ಣನಿಗೂ ಇದೇ ಪರಿಸ್ಥಿತಿ ಎದುರಾಗಿದೆ. ತನ್ನ ಶತ್ರುಗಳನ್ನು ಮಣಿಸಲು, ತನ್ನ ಸಾರ್ವಭೌಮತ್ವವನ್ನು ಉಳಿಸಲು ಭಯೋತ್ಪಾದಕ ಸಂಘಟನೆಗಳನ್ನು ಜಗತ್ತಿನ ಕಣ್ಣಿಗೆ ಮಣ್ಣೆರಚಿ ಕಟ್ಟಿ ಬೆಳೆಸಿದ ಅಮೇರಿಕಾಕ್ಕೆ ಈಗ ಅದೇ ಸರ್ಪದಂತೆ ಕೊರಳು ಬಿಗಿಯುತ್ತಿದೆ. ಸೌದಿಯ ಸ್ನೇಹ ಬೆಳೆಸಿ ಹಣ, ಶಸ್ತ್ರಾಸ್ತ್ರಗಳನ್ನು ಪೂರೈಸಿ ಒಂದು ಕಡೆ ತೈಲ ಸಾಮ್ರಾಜ್ಯವನ್ನೂ ತನ್ನ ಶಸ್ತ್ರಾಸ್ತ್ರ ಮಾರುಕಟ್ಟೆಯನ್ನೂ ವಿಸ್ತರಿಸಿದ್ದ ಅಮೇರಿಕಾದ ತಲೆಯ ಮೇಲೆ ಕುಳಿತು ಅದೇ ಸೌದಿ ಕುಟುಕುತ್ತಿದೆ. ಅಮೇರಿಕಾದ ಕಾಂಗ್ರೆಸ್ ಸೆಪ್ಟೆಂಬರ್ 11, 2001ರ ಪೆಂಟಗಾನ್ ದಾಳಿಯ ಹಿಂದೆ ಸೌದಿಯಿದೆ ಎನ್ನುವುದನ್ನು ಘೋಷಿಸುವ 9/11 ಮಸೂದೆಯ ಬಗ್ಗೆ ಮಾತಾಡಲಾರಂಭಿಸಿದ್ದೇ ತಡ ವಾಷಿಂಗ್ಟನ್ನಿಗೆ ಭೇಟಿ ಕೊಟ್ಟ ಸೌದಿಯ ವಿದೇಶಾಂಗ ಸಚಿವ ಮಸೂದೆಯೇನಾದರೂ ಅಂಗೀಕಾರವಾದಲ್ಲಿ ತಮ್ಮಲ್ಲಿರುವ 750 ಬಿಲಿಯನ್ ಡಾಲರ್ ಮೊತ್ತದ ಅಮೇರಿಕಾದ ಭದ್ರತಾ ಠೇವಣಿಯನ್ನು ಮಾರುವುದಾಗಿ ಬಾಂಬ್ ಹಾಕಿದ್ದಾರೆ. ಸೌದಿಯ ಈ ಸಂದೇಶ ಜಗತ್ತಿನಾದ್ಯಂತ ಕುತೂಹಲ ಮೂಡಿಸಿ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಇಂತಹುದ್ದೇನಾದರೂ ಸಂಭವಿಸಿದರೆ ಆಗ ಅಮೇರಿಕಾದ ಆರ್ಥಿಕತೆ ಬುಡ ಮೇಲಾಗುವುದರ ಜೊತೆಗೆ ರಾಜತಾಂತ್ರಿಕ ಅಲ್ಲೋಲಕಲ್ಲೋಗಳಾಗುವುದೂ ಸುಸ್ಪಷ್ಟ. ದುರಾಸೆಯಿಂದ ಜಗತ್ತನ್ನು ತನ್ನ ಮುಷ್ಠಿಯಲ್ಲಿರಿಸಿಕೊಳ್ಳಲು ಹೋಗಿ ರಕ್ಕಸರನ್ನು ಬೆಳೆಸಿದ ಅಮೇರಿಕಾ ಈಗ ಅದೇ ರಕ್ಕಸರ ಮಾತಿಗೆ ಕುಣಿಯಬೇಕಾಗಿರುವುದು ಮಾತ್ರ ವಿಪರ್ಯಾಸ.

 9/11 ಮಸೂದೆ ಅಂಗೀಕಾರವಾದರೆ ಅದು ಸೌದಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದರ ಜೊತೆಗೆ ಅಮೇರಿಕಾದ ನ್ಯಾಯಾಲಯಗಳ ವಿಚಾರಣೆ ಎದುರಿಸಬೇಕಾಗುತ್ತದೆ. ಈ ಮಸೂದೆ ಅಮೇರಿಕಾ ನೆಲದಲ್ಲಿ ಅಮೇರಿಕಾ ಪ್ರಜೆಯೊಬ್ಬನ ಮೇಲೆ ವಿದೇಶೀಯೊಬ್ಬ ದಾಳಿ ಎಸಗಿದರೆ ಆ ದೇಶ ವಿಚಾರಣೆಯಿಂದ ಪಾರಾಗುವುದನ್ನು ತಪ್ಪಿಸುತ್ತದೆ. ಇಂತಹುದೊಂದು ಮಸೂದೆಯ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಬುಸುಗುಟ್ಟಿದ ಸೌದಿಯ ನಡೆ ಪ್ರಕರಣದಲ್ಲಿ ಅದರ ನೇರ ಪಾತ್ರವಿರುವುದರ ಕಡೆ ಬೊಟ್ಟು ಮಾಡುತ್ತಿರುವುದು ಸಹಜ. ಆದರೆ ಈ ಬುಸುಗುಟ್ಟುವಿಕೆಗೆ ಅಮೇರಿಕಾ ಎಷ್ಟು ಬೆದರಿದೆಯೆಂದರೆ ಸ್ವತಃ ಅಧ್ಯಕ್ಷ ಒಬಾಮಾ ಮಸೂದೆ ಜಾರಿಯಾಗದಂತೆ ತಡೆಯಲು ಅಮೇರಿಕಾದ ಕಾಂಗ್ರೆಸ್ ಜೊತೆ ಲಾಬಿ ನಡೆಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಪೆಂಟಗಾನ್, ಶ್ವೇತಭವನದ ಅಧಿಕಾರಿಗಳು, ಸಂಸದರ ನಡುವೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವುದು, ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ 9/11 ವರದಿಯ ಸೌದಿ ಅರೇಬಿಯಾ ಬಗೆಗಿನ "28 ರಹಸ್ಯ ಪುಟಗಳು" ರಹಸ್ಯವಾಗಿಯೇ ಉಳಿಯಬೇಕೆಂದು ಸಲಹೆ ಮಾಡಿರುವುದು, ಆರ್ಥಿಕ ತಜ್ಞರು ಅಮೇರಿಕಾದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆಂದು ಚರ್ಚಿಸಿಯೂ "ಅಷ್ಟು ದೊಡ್ಡ ಮೊತ್ತವನ್ನು ಮಾರುವುದು ಸುಲಭವಲ್ಲ, ಅದರಿಂದ ಸೌದಿಗೇನೂ ಲಾಭವಾಗುವುದಿಲ್ಲ, ಸೌದಿಯ ಆರ್ಥಿಕತೆಗೇ ಕುತ್ತು ಬರಬಹುದೆಂದು" ಕ್ಷೀಣ, ಅಸಹಾಯಕ ದನಿಯಲ್ಲಿ ಬೆದರಿಸಿರುವುದು, ಅಮೇರಿಕಾದ ಬುದ್ಧಿಜೀವಿಗಳು "ಮಸೂದೆ ಜಾರಿಯಾಗುವುದರಿಂದ ಸೌದಿಗೇನೂ ಹಾನಿಯಿಲ್ಲ, ಅದೇನೂ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾಗಿಲ್ಲ, ದಾಳಿಯಲ್ಲಿ ಭಾಗಿಯಾಗಿದ್ದ ಅಲ್ಲಿನ ಹದಿನೈದು ಪ್ರಜೆಗಳ ಮೇಲೆ ಮಾತ್ರ ಅದು ಪರಿಣಾಮ ಬೀರುತ್ತದೆ" ಎಂದು ಬೆಣ್ಣೆ ಹಚ್ಚತೊಡಗಿರುವುದು ಸೌದಿಯ ಬೆದರಿಕೆಗೆ ಅಮೇರಿಕಾ ಭಯಭೀತಗೊಂಡಿರುವುದಕ್ಕೆ ಸಾಕ್ಷಿ.

ಇದನ್ನು ಹಲವಾರು ರೀತಿಯಲ್ಲಿ ವಿಶ್ಲೇಷಿಸಬಹುದಾದರೂ ದಾಳಿಯಲಿ ಸೌದಿ ತನ್ನ ಪಾತ್ರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ ಎನ್ನುವುದು ಕಣ್ಣಿಗೆ ರಾಚುವ ಸತ್ಯ. ಜೊತೆಗೆ ಅಧೋಗತಿಯತ್ತ ಸಾಗುತ್ತಿರುವ ತನ್ನ ಆರ್ಥಿಕತೆಯಿಂದ ತತ್ತರಿಸಿರುವ ಅಮೇರಿಕಾ ಸೌದಿಯ ಬೆದರಿಕೆಗೆ ಹೆದರಿರುವುದೂ ಅಷ್ಟೇ ಸತ್ಯ. 9/11 ವರದಿಯ ಆ "28 ರಹಸ್ಯ ಪುಟಗಳು" ರಹಸ್ಯವಾಗೇ ಉಳಿಯಬೇಕೆಂದು ಪ್ರತಿಪಾದಿಸಿದ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಮರುಕ್ಷಣದಲ್ಲೇ ದಾಳಿಯ ಹಿಂದೆ ಸೌದಿಯ ಕೈವಾಡವನ್ನಾಗಲಿ ಅದು ಹಣಸಹಾಯ ಮಾಡಿದೆ ಎನ್ನುವ ಆರೋಪವನ್ನು ಖಚಿತಪಡಿಸುವಂತಹ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎನ್ನುತ್ತಾರೆ. ಸಾಕ್ಷ್ಯಾಧಾರಗಳಿಲ್ಲ ಎಂದ ಮೇಲೆ ಆ ರಹಸ್ಯ ಪುಟಗಳನ್ನು ಬಹಿರಂಗಪಡಿಸಲೇನಡ್ಡಿ? 19ರಲ್ಲಿ ಹದಿನೈದು ಜನ ಅಪಹರಣಕಾರರು ಸೌದಿಯವರಾಗಿದ್ದೂ ಅಮೇರಿಕಾ ಸೌದಿಯ ಜೊತೆ "ಅತ್ಯುತ್ತಮ ಬಾಂಧವ್ಯ" ಹೊಂದಿದೆ ಎನ್ನುವ ಬ್ರೆನ್ನನ್ ಮಾತಲ್ಲಿ ಅಮೇರಿಕಾ ಸೌದಿಯ ಕಾಲಿಗೆ ಬೀಳಬಹುದಾದ ಎಲ್ಲಾ ಲಕ್ಷಣಗಳು ಬಿಂಬಿತವಾಗುತ್ತವೆ. ಸೂಕ್ಷ್ಮ ವಿಚಾರವಾದುದರಿಂದ ಇದನ್ನು ಸಾರ್ವಜನಿಕಗೊಳಿಸದಿರುವುದೇ ಉತ್ತಮ ಎನ್ನುವ ಅವರ ನಿಲುಮೆ ವರದಿ ಬಹಿರಂಗಗೊಳಿಸುವುದರಿಂದ ತನ್ನ ದೇಶೀಯರಿಂದ ಎದುರಾಗಬಹುದಾದ ಒತ್ತಡದ ಜೊತೆಜೊತೆಗೆ ಇಸ್ಲಾಂ ಬರ್ಬರತೆಯನ್ನು ಊಹಿಸಿಕೊಂಡೇ ಬೆವರಿರುವ ಸ್ಪಷ್ಟ ಮುನ್ಸೂಚನೆ. ಅದೇ ಸಮಯಕ್ಕೆ 9/11 ದಾಳಿಯ ಹಿಂದಿನ ಇಸ್ರೇಲಿನ ಪಾತ್ರದ ಬಗ್ಗೆ ಅಮೇರಿಕನ್ನರು ತಿಳಿದರೆ "ಟೆಲ್ ಅವಿವ್" ಪ್ರಭುತ್ವಕ್ಕೆ ಕುತ್ತು ಬರಬಹುದೆನ್ನುವ ಅವರ ವಾದ ಇಸ್ರೇಲನ್ನು ತೆಗಳುವ ಮೂಲಕ ಸೌದಿಗೆ ಮತ್ತಷ್ಟು ಹತ್ತಿರವಾಗುವ, ಅಮೇರಿಕನ್ನರ ಗಮನವನ್ನು ಬೇರೆಡೆಗೆ ಸೆಳೆಯುವ ಚರ್ಚೆ ಅಷ್ಟೇ!

ಸೌದಿ ದೊರೆಗಳು ಅಮೇರಿಕಾದಲ್ಲಿ ಹೂಡಿಕೆ ಮಾಡಿರುವುದು ಕಡಿಮೆ ಏನಲ್ಲ. ರಿಯಲ್ ಎಸ್ಟೇಟ್, ವ್ಯಾಪಾರ, ಆಸ್ಪತ್ರೆಗಳು ಹೀಗೆ ಹಲವು ಕ್ಷೇತ್ರಗಳಲ್ಲಿ ಸೌದಿಯ ಹೂಡಿಕೆ ಇದೆ. ಹಲವು ಸಾಮಾಜಿಕ ತಾಣಗಳ ಸೌದಿಯ ದೊರೆಗಳು ಬಹುಪಾಲು ಹೊಂದಿರುವುದರ ಜೊತೆಗೆ ತಮಗೆ ಬೇಕಾದಂತೆ ಅಭಿಪ್ರಾಯ ರೂಪಿಸುವಲ್ಲೂ ನಿಷ್ಣಾತರು. ಕೆಲ ದಿನಗಳ ಹಿಂದಷ್ಟೇ ಟ್ವಿಟರಿನಲ್ಲಿ ಕೆಲವೇ ಗಂಟೆಗಳಲ್ಲಿ ತಮಗೆ ವಿರುದ್ಧವಾಗಿದ್ದ ಟ್ರೆಂಡನ್ನೇ ಕಿತ್ತು ಹಾಕಿದ್ದು ನೆನಪಿರಬಹುದು. ಇದೆಲ್ಲವೂ ಹಿಂದೆ ಮಾಡಿದ ಓಲೈಕೆಯ ಫಲಗಳೇ. ಆದರೆ ಇಸ್ರೇಲ್ ಹೊರತುಪಡಿಸಿ ಪಾಶ್ಚಿಮಾತ್ಯ ಜಗತ್ತು ಎಚ್ಚೆತ್ತುಕೊಳ್ಳುತ್ತಿಲ್ಲ. ಹಣ ಮತ್ತು ಅಧಿಕಾರದ ಅಮಲಿನಲ್ಲಿ ಮುಳುಗುತ್ತಿರುವ ಅಮೇರಿಕಾದ ರಾಜಕಾರಣಿಗಳು ವೇಗವಾಗಿ ಕುಸಿಯುತ್ತಿರುವ ಅಮೇರಿಕಾದ ಆರ್ಥಿಕತೆಯನ್ನು ಮೇಲೆತ್ತುವ ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರಿಂದ ಕ್ರೋಧಗೊಂಡಿರುವ ತಮ್ಮ ದೇಶೀಯರ ಗಮನವನ್ನು ಬೇರೆಡೆಗೆ ಸೆಳೆಯಲು ಭಯೋತ್ಪಾದಕ ಸಂಘಟನೆಗಳ ಮೇಲೆ ದಾಳಿಯಂತಹ ನಾಟಕಗಳನ್ನು ಆಗಾಗ ಆಡುತ್ತಿರುತ್ತಾರೆ. ಹಲವಾರು ವರ್ಷಗಳಿಂದ ಸೆಣಸಿದರೂ ಭಯೋತ್ಪಾದನೆಯನ್ನು ತಹಬಂದಿಗೆ ತರುವುದು ಒತ್ತಟ್ಟಿಗಿರಲಿ, ಕನಿಷ್ಟ ಭಯೋತ್ಪಾದಕರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗದ ಅಮೇರಿಕಾದ ಬಲಹೀನತೆಗೆ ಏನೆನ್ನಬೇಕು?

              ತೀರಾ ಇತ್ತೀಚೆಗೆ ಮತ್ತೊಮ್ಮೆ ಇದೇ ಬೆದರಿಕೆ ಒಡ್ಡಿದ ಸೌದಿ ಹೇಳಿದ್ದೇನು ಗೊತ್ತೇ? "ಈ ಮಸೂದೆಯೇನಾದರೂ ಅಂಗೀಕಾರವಾದಲ್ಲಿ ಅಮೇರಿಕಾದ ಮೇಲೆ ಹೂಡಿಕೆದಾರರಿಗಿರುವ ನಂಬಿಕೆ ಹೊರಟು ಹೋಗುತ್ತೆ" ಎಂದು. ಈವರೆಗಿನ ಹೂಡಿಕೆಯಿಂದ ಪೆಂಟಗಾನ್ ಸೊಂಟ ಮುರಿದು ಹೋಗಿದ್ದು ಇನ್ನೂ ಹಸಿರಾಗಿರುವಾಗಲೇ ಅಮೇರಿಕಾ ಮತ್ತೆ ಸೌದಿಗೆ ಸಲಾಮ್ ಹಾಕುತ್ತದೆ ಎಂದಾದರೆ ಭವಿಷ್ಯದಲ್ಲಿ ಅಮೇರಿಕಾ ಜಗತ್ತಿನ ದೊಡ್ದ ಭಯೋತ್ಪಾದಕ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಶ್ವಸಂಸ್ಥೆಯಿರಲಿ, ಜಗತ್ತಿನ ಯಾವುದೇ ಪ್ರಮುಖ ಚಲನೆಯಿರಲಿ(ಕೆಲವು ದೇಶಗಳನ್ನು ಹೊರತುಪಡಿಸಿ) ಅದರ ಹಿಂದೆ ಅಮೇರಿಕಾದ ಧ್ವನಿ ಇರುತ್ತದೆ ಎನ್ನುವುದೂ ಯಾರೂ ಅಲ್ಲಗೆಳೆಯಲಾಗದ ಸತ್ಯ. ಮುಂದೆ ಋಣ ತೀರಿಸಲು ಸೌದಿಯ ನಿರ್ಧಾರವೇ ಅಮೇರಿಕಾದ ಮುಖದಿಂದ ಹೊರಹೊಮ್ಮಿದರೂ ಅಚ್ಚರಿಯಿಲ್ಲ. ಇದರಿಂದ ವಿಶ್ವದ ಆಗುಹೋಗುಗಳು ಪರೋಕ್ಷವಾಗಿ ಸೌದಿಯಿಂದ ನಿಯಂತ್ರಿಸಲ್ಪಡುತ್ತವೆ. ಆಗ ಭಯೋತ್ಪಾದನೆಯ ವಿರುದ್ಧ ಹೋರಾಟವೆಂಬುದು ಮತ್ತೊಂದು ಹಾಸ್ಯಾಸ್ಪದ ಸಂಗತಿಯಾಗುತ್ತದೆಯಷ್ಟೇ!

             ನಮ್ಮಲ್ಲಿ ದೇಶದೊಳಗೆ ಓಲೈಕೆ ನಡೆದರೆ ಇಲ್ಲಿ ದೇಶಗಳ ನಡುವೆ ಓಲೈಕೆ. ಇದನ್ನು ರಾಜಕಾರಣ ಅಥವಾ ದೇಶಗಳ ನಡುವಿನ ರಾಜತಾಂತ್ರಿಕ ವಿಚಾರ ಎಂದು ತಳ್ಳಿ ಹಾಕುವುದು ಕೂಡಾ ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿರ್ಲಕ್ಷ್ಯಿಸಿದಂತೆ. ಇಸ್ಲಾಂ ಬೆಳೆದದ್ದೇ ಹಾಗೆ. ಎದುರಾಳಿಯ ಬಲಹೀನತೆಯನ್ನು ಕರಾರುವಕ್ಕಾಗಿ ಬಳಸಿಕೊಂಡೇ ಅದು ತನ್ನ ಪ್ರಭುತ್ವ ಸ್ಥಾಪಿಸಿದ್ದು. ಸಂಖ್ಯೆ ಕ್ಷೀಣವಾಗಿದ್ದಾಗ ಡೊಗ್ಗು ಸಲಾಮು ಹಾಕಿ ಮಾತು, ಕೃತಿಗಳಿಂದ ಹತ್ತಿರವಾಗಿ, ಸೌಲಭ್ಯ-ಸವಲತ್ತುಗಳನ್ನು ಪಡೆದುಕೊಂಡು ತಕ್ಕಮಟ್ಟಿಗೆ ಸಂಖ್ಯೆ ಏರಿದಾಗ ಅನ್ನ ಕೊಟ್ಟವನ ಮೇಲೆಯೇ ಏರಿ ಹೋದ ಮತವದು. ಇದರಿಂದ ಸೌದಿಗಷ್ಟೇ ಲಾಭ, ಮುಸ್ಲಿಮರಿಗೇನು ಎಂದು ಸೆಕ್ಯುಲರುಗಳ ಚಿಂತನೆಯಿಂದ ಪ್ರಭಾವಿತರಾದವರು ಆಲೋಚಿಸಬಹುದು. ಆದರೆ ಇಂದಿಗೂ ಜಗತ್ತಿನ ಸಾಬಿಗಳು ದೇವರೆಂದು ಪೂಜಿಸುವುದು ಸೌದಿಯ ದೊರೆಗಳನ್ನೇ. ಅಂದು ತುರ್ಕಿಯಲ್ಲಿ ಖಲೀಫನಿಗೆ ಮತ್ತೆ ಪಟ್ಟ ಕಟ್ಟಬೇಕೆಂದು ಅಲ್ಲಿಗೆ ಸಂಬಂಧವೇ ಇಲ್ಲದ ಮುಸ್ಲಿಮರು ತಾವಿರುವಲ್ಲಿನ ಇತರ ಮತೀಯರ ಪ್ರಾಣ ಹಿಂಡಲಿಲ್ಲವೇ? ಅದೇ ರೀತಿ ಅವರಲ್ಲೆಂದೂ ಮತಕ್ಕಿರುವ ಪ್ರಾಶಸ್ತ್ಯ ಜನ್ಮ-ಅನ್ನ ಕೊಟ್ಟ ನಾಡಿಗಿರದು.

             ಶರವೇಗದಲ್ಲಿ ಏರುತ್ತಿರುವ ಮುಸ್ಲಿಂ ಜನಸಂಖ್ಯೆ ಕೆಲವೇ ವರ್ಷಗಳಲ್ಲಿ ಕ್ರೈಸ್ತರನ್ನೂ ಹಿಂದಿಕ್ಕಲಿದೆ ಎನ್ನುವುದನ್ನು ವರದಿಗಳನೇಕ ಹೇಳಿದರೂ ಜಗತ್ತಿಗೆ ಬುದ್ಧಿ ಬಂದಿಲ್ಲ. ಯೂರೋಪಿನಲ್ಲಿ ಇಸ್ಲಾಂ ಬಹು ವೇಗವಾಗಿ ಹಬ್ಬುತ್ತಿದೆ. ಯೂರೋಪಿನ ಕೆಲವು ದೇಶಗಳಲ್ಲಂತೂ ಅವರದ್ದೇ ಸಾಮ್ರಾಜ್ಯ. ತೀರಾ ಇತ್ತೀಚೆಗೂ ನಿರಾಶ್ರಿತರೆಂಬ ಮಾನವೀಯತೆಯಿಂದ ಸಾಬಿಗಳನ್ನು ಒಳ ಬಿಟ್ಟುಕೊಂಡ ದೇಶಗಳು ದಿನನಿತ್ಯ ಅವರ ಅಟ್ಟಹಾಸದಿಂದ ತಲೆಗೆಟ್ಟು ಹೋಗಿವೆ. ಅವರ ಭಯೋತ್ಪಾದಕ ಕೃತ್ಯಗಳಿಗೆಲ್ಲಾ ಹಣ ಪೂರೈಸುವುದು ಈ ಸೌದಿಯೇ. ಅದರ ನಡುವೆ ಭಾರತದಲ್ಲಿರುವ ಹಾಗೆ ಸೆಕ್ಯುಲರುಗಳು ಅಲ್ಲೂ ತುಂಬಿ ತುಳುಕಾಡುತ್ತಿದ್ದು ದೇಶರಕ್ಷಣೆಯ ಮಾತಾಡುವವರಿಗೆಲ್ಲಾ ಇಸ್ಲಾಂ ವಿರೋಧಿ, ಪ್ರಗತಿ ವಿರೋಧಿ, ಕೋಮುವಾದಿ ಎಂಬೆಲ್ಲಾ ಪಟ್ಟ ಕಟ್ಟಿ ಸುಮ್ಮನಾಗಿಸುತ್ತಿದ್ದಾರೆ. ಇತ್ತೀಚೆಗೆ ಡಚ್ ರಾಜಕಾರಣಿ ಅಯಾನ್ ಹಿರ್ಸಿ ಅಲಿ ಎನ್ನುವ ಸೋಮಾಲಿಯ ಸಂಜಾತೆ ಇಸ್ಲಾಮಿನಲ್ಲಿ ಮಹಿಳೆಯರ ದೌರ್ಜನ್ಯದ ಬಗ್ಗೆ ಕಟುವಾಗಿ ಮಾತಾಡಿದಾಗ ಪಶ್ಚಿಮದ ಪ್ರಗತಿಪರರು ಒಟ್ಟು ಸೇರಿ ಆಕೆಯ ಮೇಲೆ ಮುಗಿಬಿದ್ದದ್ದು ನೆನಪಿರಬಹುದು. ಇಸ್ಲಾಂನಿಂದಾಗಿ ಯುರೋಪ್ ಸರ್ವನಾಶವಾಗುತ್ತಿದೆ. ಅಮೆರಿಕವನ್ನು ಹಾಗಾಗಲು ಬಿಡುವುದಿಲ್ಲ ಎನ್ನುತ್ತಿರುವ ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಂದು ವೇಳೆ ವಿಜಯಿಯಾದರೆ ತನ್ನ ಮಾತನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಯಾವ ನಂಬಿಕೆಯೂ ಇಲ್ಲ. ಒಣಮಾತಿನ ಮಲ್ಲರನ್ನು ಈ ಜಗತ್ತು ಬಹಳಷ್ಟು ಕಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ