ಪುಟಗಳು

ಶನಿವಾರ, ಸೆಪ್ಟೆಂಬರ್ 15, 2018

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"

ಎಡಪಂಥೀಯರಿಗೆ ಭೂರಿ ಭೋಜನ ಒದಗಿಸುತ್ತಿರುವ "ಸಾವಿರದ ಸುಳ್ಳು"


              "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ"! ಇದೇನೂ ಹೊಸದಲ್ಲ. ದ್ರಾವಿಡ ದೇಶ ಅಂತ ಹಿಂದೆ ಬೊಬ್ಬಿರಿಯುತ್ತಿದ್ದುದಕ್ಕೆ ಹೊಸ ಆಂಗ್ಲ ಹೆಸರು ಅಷ್ಟೇ. ಹೊಸ ಬಾಟಲಿಯಲ್ಲಿ ಹಳೇ ಹೆಂಡ. ಈ ಹೊಸ ಕಿರಿಕ್ ಶುರುವಾಗಿದ್ದು 2016ರಲ್ಲಿ. "ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದಲ್ಲಿ ದಕ್ಷಿಣದ ರಾಜ್ಯಗಳ ಎಲ್ಲಾ ಮಾನವ ಅಭಿವೃದ್ಧಿ ಸೂಚಕಗಳು ಉತ್ತಮವಾಗಿವೆ. ದಕ್ಷಿಣದ ರಾಜ್ಯಗಳು ವಿವಿಧ ತೆರಿಗೆಗಳ ಮೂಲಕ ರಾಷ್ಟ್ರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ ಕೇಂದ್ರದಿಂದ ಸಿಗುವ ಅನುದಾನದಲ್ಲಿ ಅನವರತ ಅನ್ಯಾಯ, ಅಸಮಾನತೆ ಇದೆ. ಈ ಅನ್ಯಾಯವನ್ನು ಖಂಡಿಸಿ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ತಮ್ಮ ನ್ಯಾಯೋಚಿತ ಪಾಲನ್ನು ಪಡೆದುಕೊಳ್ಳಲು ದಕ್ಷಿಣದ ರಾಜ್ಯಗಳು "ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ" ಎಂಬ ಹೆಸರಿನಡಿಯಲ್ಲಿ ಒಟ್ಟಾಗಬೇಕು" ಎನ್ನುವ ಹೊಸ ವಾದವೊಂದು 2016ರಿಂದೀಚೆಗೆ ಕೇಳಿ ಬರುತ್ತಿದೆ. ಅದಕ್ಕಾಗಿ ಅಂಕಿ ಅಂಶಗಳನ್ನೆಲ್ಲಾ ತಿರುಚಿ ಸಾಲು ಸಾಲು ಲೇಖನಗಳೂ ವಾಮಪಂಥೀಯರಿಂದ ಹೊರಬಂದವು.

               ಆದರೆ ಈ ಎಡ ಬುದ್ಧಿಜೀವಿಗಳ ಮಾತಿನಲ್ಲಿ ಹುರುಳಿದೆಯೇ? ಮೊದಲನೆಯದಾಗಿ ರಾಜ್ಯಗಳಿಗೆ ಈ ರೀತಿಯ ಅನುದಾನದ ಅಸಮಾನ ಹಂಚಿಕೆ ಕೇವಲ ಭಾರತದಲ್ಲಿ ಮಾತ್ರವಲ್ಲ; ಅಮೇರಿಕಾ, ಸ್ವಿಜರ್ ಲೆಂಡ್, ಜರ್ಮನಿ ಹಾಗೂ ಇಂಗ್ಲೆಂಡುಗಳಲ್ಲೂ ಇದೆ. ಇದನ್ನು ಅಸಮಾನ ಹಂಚಿಕೆ ಎನ್ನುವುದೇ ತಪ್ಪು. ಮೂಲಭೂತ ಸೌಕರ್ಯಗಳು ಕಡಿಮೆ ಇರುವ ರಾಜ್ಯಗಳನ್ನು ಶ್ರೀಮಂತ ರಾಜ್ಯಗಳ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡದಿದ್ದರೆ ಈ ಎರಡೂ ರಾಜ್ಯಗಳ ಆರ್ಥಿಕ ಅಭಿವೃದ್ಧಿ ಅಂತರ ಹೆಚ್ಚಾಗುತ್ತಲೇ ಹೋಗುತ್ತದೆ. ವಿಶ್ವ ಆರ್ಥಿಕ ಅಭಿವೃದ್ಧಿಯ ಮಾನದಂಡಗಳು ಭಾರತವನ್ನು ಒಂದು ರಾಷ್ಟ್ರವಾಗಿ ನೋಡುತ್ತವೆಯೇ ಹೊರತು ಭಾರತದ ಯಾವ ರಾಜ್ಯ ಹೆಚ್ಚು ಶ್ರೀಮಂತ ಎನ್ನುವುದನ್ನಲ್ಲ. ಅದಕ್ಕಿಂತಲೂ ಗಂಭೀರ ವಿಚಾರವೆಂದರೆ ಈ ಸಮಸ್ಯೆ ಬೃಹದಾಕಾರವಾಗಿ ಬೆಳೆದು ಆರ್ಥಿಕ ಉತ್ಪಾತ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಬಹುದು. ಬರೇ ಬೆಂಗಳೂರು ಒಂದನ್ನೇ ಕೇಂದ್ರವಾಗಿಟ್ಟುಕೊಂಡು ಆಡಳಿತ/ಅಭಿವೃದ್ಧಿ ಮಾಡಿದ ಕಾರಣದಿಂದ ಕರ್ನಾಟಕದ ಉಳಿದ ಭಾಗಗಳಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದು, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಕೇಳುತ್ತಿರುವುದು ಇದಕ್ಕೆ ಉತ್ತಮ ನಿದರ್ಶನ. ಉಳ್ಳವರಿಂದ ಕಿತ್ತುಕೊಂಡು ಇಲ್ಲದವರಿಗೆ ಕೊಡುವ ಎಡಪಂಥೀಯ ತತ್ತ್ವಗಳಲ್ಲಿ ನಂಬಿಕೆಯುಳ್ಳ ಬುದ್ಧಿಜೀವಿಗಳು ಅವರದೇ ಮಾರ್ಗಕ್ಕೆ ತುಸುವಾದರೂ ಹತ್ತಿರವುಳ್ಳ ಅವರೇ ಹೇಳುವಂತೆ ಬಂಡವಾಳಶಾಹೀ ಸರಕಾರದ ಈ ಕ್ರಮವನ್ನು ವಿರೋಧಿಸುವುದು ಅವರು ಎಂದಿಗೂ ತಮ್ಮ ತತ್ತ್ವಕ್ಕೆ ಬದ್ಧರಾಗಿರುವುದಿಲ್ಲ ಎನ್ನುವುದಕ್ಕೆ ಇನ್ನೊಂದು ನಿದರ್ಶನ ಅಷ್ಟೇ! ಎರಡನೆಯದಾಗಿ ಇವರ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಾಗುಳ್ಳ ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಿಗೆ ವಿಶೇಷ ವರ್ಗದ ರಾಜ್ಯಗಳನ್ನಾಗಿಸಿ ಹೆಚ್ಚಿನ ಅನುದಾನ ಘೋಷಿಸಲಾಗಿದೆ. ಅದು ಸಾಕಾಗುವುದಿಲ್ಲವೆಂಬ ನೆಪವೊಡ್ಡಿ ತೆಲುಗುದೇಶಂ ಕೆಂದ್ರ ಸರ್ಕಾರದ ತನ್ನ ಪಾಲುದಾರಿಕೆಯನ್ನು ಕಳಚಿಕೊಂಡು ಹೊರನಡೆದಿದೆ. ಎಡ ಬುದ್ಧಿಜೀವಿಗಳ ಪ್ರಕಾರ ಇವೆರಡೂ ಶ್ರೀಮಂತ ರಾಜ್ಯಗಳಾಗಿದ್ದರೆ ಇವಕ್ಕೆ ವಿಶೇಷ ಅನುದಾನ ಯಾಕೆ ಬೇಕು? ವಿಚಿತ್ರವೆಂದರೆ ಇವರು ಶ್ರೀಮಂತ ಎನ್ನುವ ಕರ್ನಾಟಕ, ತಮಿಳುನಾಡು, ಆಂಧ್ರಗಳಲ್ಲಿ ಪ್ರತಿ ವರ್ಷ ಅತೀ ಹೆಚ್ಚು ರೈತರು ಸಾಯುತ್ತಿದ್ದಾರೆ! ದಕ್ಷಿಣದ ರಾಜ್ಯಗಳು ಶ್ರೀಮಂತ ಎನ್ನುವ ಇವರುಗಳು ಮರೆತ ಮುಖ್ಯ ಅಂಶವೊಂದಿದೆ. ದಕ್ಷಿಣದ ರಾಜ್ಯಗಳ ಬೆಂಗಳೂರು, ಚೆನ್ನೈಯಂತಹ ನಗರಗಳು ಅತೀ ಹೆಚ್ಚು ತೆರಿಗೆ ಪಾವತಿಸುತ್ತವೆಯೇ ಹೊರತು ಈ ರಾಜ್ಯಗಳ ಉಳಿದ ನಗರಗಳಲ್ಲ. ಹಾಗೆಯೇ ದೇಶದ 40% ತೆರಿಗೆ ಮಹಾರಾಷ್ಟ್ರದಿಂದ ಸಂಗ್ರಹಿಸಲ್ಪಡುತ್ತದೆ(ಇದು ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಭಾಗವಲ್ಲ!). ಅದರಲ್ಲೂ ಮುಂಬೈ ಒಂದರ ಪಾಲೇ 30%. ಚೆನ್ನೈ, ಬೆಂಗಳೂರಿಗರು ನಾವೇ ಹೆಚ್ಚು ತೆರಿಗೆ ಪಾವತಿಸುತ್ತೇವೆ. ನಮಗೆ ಹೆಚ್ಚು ಅನುದಾನ ಕೊಡಬೇಕು ಎಂದು ಧರಣಿ ಕೂತರೆ ಈ ನಗರಗಳನ್ನೂ ಪ್ರತ್ಯೇಕ ದೇಶವನ್ನಾಗಿ ಮಾಡಲು ಸಾಧ್ಯವಿದೆಯೇ? (ಕಮ್ಯೂನಿಷ್ಟರು ಇದಕ್ಕೂ ಸಿದ್ಧರಾಗಿರಬಹುದು; ಒಡೆಯುವುದು ಅವರ ಜನ್ಮಸಿದ್ಧ ಹಕ್ಕು}. ತಮಿಳುನಾಡು, ಕರ್ನಾಟಕದಲ್ಲಿ ರೈತರಿಂದ ಬರುವ ತೆರಿಗೆ ಪ್ರಮಾಣ ಕೂಡಾ ಕಡಿಮೆ. ಹಾಗಾಗಿ ತಮಿಳು ರೈತರು ಉತ್ತರಪ್ರದೇಶದ ರೈತರಿಗೆ ಸಬ್ಸಿಡಿ ಕೊಡುವಂತಾಗಿದೆ ಎಂದು ವರ್ಷದ ಕೆಳಗೆ ಧರಣಿ ನಡೆಸುತ್ತಿದ್ದ ರೈತರಲ್ಲದ ತಮಿಳು ಎಡಪಂಥೀಯರ ವಾದದಲ್ಲಿ ಯಾವುದೇ ಹುರುಳಿಲ್ಲ. ಸ್ವಾತಂತ್ರ್ಯಾನಂತರ ಬಹುಕಾಲ ಆಳಿದ ರಾಜಕೀಯ ಪಕ್ಷವೊಂದರ ದುರಾಡಳಿತದ ಕಾರಣದಿಂದ ಕೆಲವು ರಾಜ್ಯಗಳು ಶ್ರೀಮಂತವಾಗಿ ಕೆಲವು ರಾಜ್ಯಗಳು ಬಡವಾಗಿಯೇ ವಿನಾ ಅಲ್ಲಿರುವ ಸಂಪನ್ಮೂಲದ ಕೊರತೆಯಿಂದಲ್ಲ. ಇವತ್ತು ಶ್ರೀಮಂತ ಎನ್ನಿಸಿಕೊಂಡ ರಾಜ್ಯ/ನಗರಗಳು ಭವಿಷ್ಯದಲ್ಲಿ ಜನಸಂಖ್ಯಾ ಸ್ಫೋಟವೋ ಅಥವಾ ಯಾವುದೋ ಪ್ರಾಕೃತಿಕ ವಿಕೋಪದ ಕಾರಣದಿಂದ ವಿನಾಶದತ್ತ ಸಾಗಿದರೆ ಈ ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾದ ಉಳಿದ ಪಾಲುದಾರ ರಾಜ್ಯಗಳು ತಮ್ಮದೇ ಪ್ರತ್ಯೇಕ ದೇಶವೆಂದು ಬೆನ್ನಿಗೆ ಇರಿದಾವೆಯೇ ಹೊರತು ಬೆನ್ನಿಗೆ ನಿಂತು ಸಹಾಯ ಮಾಡಲಿಕ್ಕಿಲ್ಲ. ನಾವು ಹೆಚ್ಚು ಕೊಡುತ್ತೇವೆ; ನಮಗೆ ಹೆಚ್ಚು ಸಿಗಬೇಕು; ಇಲ್ಲದಿದ್ದರೆ ಪ್ರತ್ಯೇಕವಾಗುತ್ತೇವೆ ಎನ್ನುವುದರ ದೂರಗಾಮೀ ಪರಿಣಾಮ ಅದೇ. ತಮಿಳು ಅಸ್ಮಿತೆಯನ್ನೇ ಬೊಬ್ಬಿರಿವ ಭಾಷಾಂಧತೆ, ಕಷ್ಟ ಕಾಲದಲ್ಲಿ ಯಾರಿಗೂ ಸಹಾಯ ಮಾಡದ ಮಲಯಾಳೀ ರಾಜಕಾರಣವನ್ನು ಅರಿತ ಎಂತಹಾ ಸಾಮಾನ್ಯನಿಗೂ ಸ್ಪಷ್ಟವಾಗಿ ತಿಳಿದಿರುವ ಸಂಗತಿ ಇದು.

            ಹಾಗಾದರೆ ಇವರ ಮೂಲ ಉದ್ದೇಶವೇನು?  ಆರ್ಯ ದ್ರಾವಿಡ ಜನಾಂಗವೆಂಬ ಎಂಬ ಕಪೋಲ ಕಲ್ಪಿತ ವಾದದ ಜೊತೆಜೊತೆಗೆ ಅಭಿವೃದ್ಧಿಯ ವಿಚಾರವನ್ನು ಬಳಸಿ ದಕ್ಷಿಣ ಭಾರತೀಯರಲ್ಲಿ ಮೌಢ್ಯದ ಬೀಜ ಬಿತ್ತುವುದು; ಹೇಗೆ ಮೋದಿ ಅಭಿವೃದ್ಧಿ ಎಂಬ ಅಸ್ತ್ರವನ್ನು ಪ್ರಯೋಗಿಸಿ ಭಾರತೀಯರನ್ನು ಗೆದ್ದರೋ, ಅದೇ ಅಭಿವೃದ್ಧಿ ಎಂಬ ಅಸ್ತ್ರವನ್ನು ಅಸಂಬದ್ಧವಾಗಿ ಪ್ರಯೋಗಿಸಿ ಭಾಜಪಾವನ್ನು ಅಧಿಕಾರದಿಂದ ದೂರ ಇಡುವುದು; ಇದು ಮೊದಲ ಹೆಜ್ಜೆ; ಉತ್ತರ ದಕ್ಷಿಣ ವಿಭಜನೆಗೆ ಮೊದಲ ಮೆಟ್ಟಿಲು. ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾದ ಮುಂದುವರಿದ ಭಾಗವೇ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಲುದ್ದೇಶಿಸಿರುವ 'ದ್ರಾವಿಡ ವಿಚಾರ ಕಲಾ ಮೇಳ' ಎಂಬ ಸಮ್ಮೇಳನ! ದ್ರಾವಿಡ ಭಾಷೆಗಳನ್ನು ಒಂದೇ ವೇದಿಕೆಗೆ ತಂದು ಸೌಹಾರ್ದ ಬೆಸೆಯುವುದರ ಹಿಂದೆ ದಕ್ಷಿಣ ಭಾರತದಲ್ಲಿ ದ್ರಾವಿಡ ಚಳವಳಿಗೆ ಮತ್ತೆ ಕಾವು ಕೊಟ್ಟು ಈಗಿರುವ ಕೇಂದ್ರ ಸರಕಾರ ಹಿಂದೀ ಸರಕಾರ, ಅದು ದಕ್ಷಿಣ ಭಾರತೀಯರ ಅಳಲುಗಳಿಗೆ ಕಿವಿಗೊಡುತ್ತಿಲ್ಲ ಎಂದು ಬೊಬ್ಬಿರಿದು ಮುಂದಿನ ಲೋಕಸಭಾ ಚುನಾವಣೆಗೆ ತನ್ನ ಅನ್ನದಾತರಿಗೆ ಸಹಾಯ ಮಾಡುವ ಉದ್ದೇಶವಿದೆ. ಆದರೆ ಇದರ ದೂರಗಾಮೀ ಪರಿಣಾಮ ಮಾತ್ರ ಉತ್ತರ ದಕ್ಷಿಣವಾಗಿ ಭಾರತದ ವಿಭಜನೆ.

         ಆಫ್ರಿಕಾ, ರಷ್ಯಾ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಸ್ಥಳೀಯ ಕರಿಯ ಜನರ ಮೇಲೆ ಅಧಿಕಾರ ಚಲಾಯಿಸಿದಂತೆ ಭಾರತದಲ್ಲಿ ಸುಲಭವಾಗಿ ಅಧಿಕಾರ ಚಲಾಯಿಸಲು ಅದಕ್ಕಿಂತಲೂ ಮುಖ್ಯವಾಗಿ ಮತಾಂತರಿಸಲು ಬ್ರಿಟಿಷರಿಗೆ ಸಾಧ್ಯವಾಗಲಿಲ್ಲ. ಅದಕ್ಕಾಗಿಯೇ ಇಂಡೋ ಯೂರೋಪಿಯನ್ ಸಂತತಿಗೆ ಸೇರಿದ ಆರ್ಯರು ಕ್ರಿ.ಪೂ 1500ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿನ ಅನಾಗರಿಕ ದ್ರಾವಿಡ ಜನಾಂಗಕ್ಕೆ ನಾಗರಿಕತೆಯನ್ನು ಕಲಿಸಿ ಇಲ್ಲಿಯೇ ನೆಲೆಸಿದರೆಂದು ಇತಿಹಾಸದ ಪುಸ್ತಕಗಳಲ್ಲೆಲ್ಲಾ ಬರೆಯಿಸಿದರು. ಇದರಿಂದ ಹಲವು ಬಗೆಯ ಲಾಭಗಳು ಅವರಿಗಾಗುತ್ತಿದ್ದವು. ಭಾರತೀಯರಲ್ಲೇ ಮೂಲ ಮತ್ತು ಆಕ್ರಮಣಕಾರರೆಂಬ ಜಗಳ ಉಂಟಾಗಿ ಉತ್ತರ ದಕ್ಷಿಣಗಳು ದೂರದೂರವಾಗುವ ಸಾಧ್ಯತೆ ಒಂದು. ಬ್ರಿಟಿಷರ ಈ ಇತಿಹಾಸವನ್ನೇ ನಂಬಿ ತಾವು ಶ್ರೇಷ್ಠರೆಂಬ ಭಾವನೆಯಿಂದ ದಕ್ಷಿಣದವರ ಮೇಲೆ ದ್ವೇಷ ಕಾರುತ್ತಾ ಬ್ರಿಟಿಷರಂತೆ ತಾವು ಎಂದು ಮನಸಲ್ಲೇ ಮಂಡಿಗೆ ತಿನ್ನುತ್ತಾ ಅವರ ಸಂಸ್ಕಾರವನ್ನು ಅನುಕರಿಸುತ್ತಾ ಸ್ವಧರ್ಮವನ್ನು ಮರೆಯುವ ಉತ್ತರ ಭಾರತೀಯರು, ಇದರಿಂದ ಕೀಳರಿಮೆಗೊಳಗಾಗಿ ಅವರನ್ನು ವಿರೋಧಿಸುವ ಅಥವಾ ಅವರಂತೆ ತಾವಾಗಲು ಬಯಸಿ ಬ್ರಿಟಿಷರ ಅನುಕರಣೆ ಮಾಡತೊಡಗುವ ಅಥವಾ ಇಂದಿನ ತಮ್ಮ ಸಂಸ್ಕೃತಿಯನ್ನೇ ತೊರೆದು ರಾಕ್ಷಸ ಕುಲವೇ ತಮ್ಮ ಮೂಲವೆಂಬಂತೆ ಅನಾಗರಿಕರಾಗುವ ದಕ್ಷಿಣಾತ್ಯರು. ಈ ಪರಿಸ್ಥಿತಿ ಭಾರತವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬ್ರಿಟಿಷರಿಗೆ ಅನುಕೂಲಕರವಾಗಿ ಪರಿಣಮಿಸುತ್ತಿತ್ತು. ಆದರೆ ಯಾವಾಗ ಹರಪ್ಪಾ, ಮೊಹಂಜೋದಾರೋಗಳಲ್ಲಿ ಉತ್ಖನನಗಳು ನಡೆದವೋ ಬಿಳಿಯರ ಬುದ್ಧಿಗೆ ಮಂಕು ಬಡಿಯತೊಡಗಿತು. ಆಂಗ್ಲರು ಕಲ್ಪಿಸಿಕೊಂಡ ಆರ್ಯರು ಭಾರತ ತಲುಪುವ ಸಾವಿರ ವರ್ಷಗಳ ಮೊದಲೇ ಇಲ್ಲಿ ವೈದಿಕ ಸಂಸ್ಕೃತಿಯೊಂದು ಅದ್ಭುತವಾದ ನಾಗರಿಕತೆಯೊಂದು ಅಭಿವೃದ್ಧಿಗೊಂಡಿತ್ತು ಎನ್ನುವ ಸಾಲು ಸಾಲು ದಾಖಲೆಗಳು ಈ ಉತ್ಖನನದಲ್ಲಿ ಲಭ್ಯವಾದವು. ತಮ್ಮದು ಕಟ್ಟುಕಥೆಯೆಂದು ಜಗತ್ತಿಗೆ ಅರಿವಾಯಿತೆಂದು ಗೊತ್ತಾದೊಡನೆ ಉತ್ಖನನದಲ್ಲಿ ಗೊತ್ತಾದ ನಾಗರಿಕತೆ ವೇದ ಸಂಸ್ಕೃತಿಯದ್ದಲ್ಲವೆಂದೂ, ಅನಾರ್ಯರಾದ ದ್ರಾವಿಡರದ್ದೆಂದೂ, ಅವರನ್ನು ಆಕ್ರಮಿಸಿದ ಆರ್ಯರು ಆ ನಾಗರಿಕತೆಯನ್ನು ಧ್ವಂಸ ಮಾಡಿ ಬಳಿಕ ವೇದಗಳನ್ನು ರಚಿಸಿದರೆಂದೂ ಚರಿತ್ರೆಯ ಪುಟಗಳಲ್ಲಿ ಬರೆಯಿಸಿಬಿಟ್ಟರು. ಹರಪ್ಪಾ ಉತ್ಖನನದಲ್ಲಿ ಭಾಗಿಯಾಗಿದ್ದ ವ್ಹೀಲರ್ ಅವಶೇಷಗಳನ್ನು ಆಕ್ರಮಣ ಮಾಡಿದವರದ್ದು ಈ ವಸ್ತುಗಳು, ಆಕ್ರಮಣಕ್ಕೊಳಗಾದವರದ್ದು ಉಳಿದವುಗಳೆಂದು ಘಂಟಾಘೋಷವಾಗಿ ನಿರ್ಣಯಿಸಿಬಿಟ್ಟ. ಚರಿತ್ರಕಾರರು ಕುರಿಗಳಂತೆ ಆತನ ವಾದವನ್ನು ಹಿಂಬಾಲಿಸಿದರು. ಅಲೆಮಾರಿಗಳು, ಕ್ರೂರಿಗಳು, ಆಕ್ರಮಣಕಾರಿಗಳು ಎಂದು ಇವರಿಂದ ಬಿಂಬಿಸಲ್ಪಡುವ ಹೊರಗಿನಿಂದ ಬಂದ ಆರ್ಯರಿಗೆ ಆಧುನಿಕ ಭಾಷೆಗಳಿಗಿಂತಲೂ ಸುಂದರ, ಸಶಕ್ತ , ಪರಿಶುದ್ಧ ಭಾಷೆಯನ್ನು ಸೃಜಿಸಲು ಸಾಧ್ಯವಾದದ್ದು ಹೇಗೆ? ಆರ್ಯ ಭಾಷೆ ಸಂಸ್ಕೃತಕ್ಕೂ ದ್ರಾವಿಡ ಭಾಷೆಗಳಿಗೂ ಬಹು ಹತ್ತಿರದ ಸಂಬಂಧವಿರುವುದು ಹೇಗೆ ಎಂಬ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಸಾಹಿತ್ಯ ಹೊಂದಿರುವ ಜನಾಂಗಕ್ಕೆ ಸಂಸ್ಕೃತಿ ಇರುವುದು ಅಥವಾ ಸಂಸ್ಕೃತಿ ಇರುವ ಜನಾಂಗ ಸಾಹಿತ್ಯ ಸೃಷ್ಟಿ ಮಾಡಿರುವುದು ಇತಿಹಾಸ ಕಂಡ ಸತ್ಯ. "ಆಕ್ರಮಣಕಾರರು ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡಿದರು, ಆದರೆ ಅವರಿಗೆ  ನಾಗರಿಕತೆಯಿರಲಿಲ್ಲ. ಆಕ್ರಮಣಕ್ಕೊಳಗಾದವರು ಅದ್ಭುತ ನಾಗರಿಕತೆಯನ್ನು ಬಿಟ್ಟು ಓಡಿದರು. ಅವರಿಗೆ ಅವರದ್ದೆನ್ನಲಾದ ಸಾಹಿತ್ಯವೇ ಇರಲಿಲ್ಲ!" ಎನ್ನುವ ಇವರ ಮೂರ್ಖ ವಾದ ನಿಷ್ಪಕ್ಷಪಾತಿಯಾಗಿರುವ, ನಿಜವಾದ ಇತಿಹಾಸಕಾರರಿಂದ ನಗೆಪಾಟಲಿಗೀಡಾಯಿತು.

               ಯಾರನ್ನು ಆರ್ಯರನ್ನಾಗಿಸುವುದು, ದ್ರಾವಿಡರ ಪಟ್ಟಿಗೆ ಯಾರನ್ನು ಸೇರಿಸುವುದು ಎನ್ನುವುದರ ಬಗ್ಗೆ ಈ ಆರ್ಯ ಆಕ್ರಮಣ ವಾದಿಗಳ ಬಳಿಯೇ ಸ್ಪಷ್ಟತೆಯಿಲ್ಲ. ಬ್ರಾಹ್ಮಣರನ್ನಷ್ಟೇ ಆರ್ಯ ಪಟ್ಟಿಗೆ ಸೇರಿಸೋಣವೆಂದರೆ ಬ್ರಾಹ್ಮಣ ರಾವಣನನ್ನು ಅವರೀಗಾಗಲೇ ದ್ರಾವಿಡನನ್ನಾಗಿಸಿಯಾಗಿದೆ; ದಕ್ಷಿಣಾತ್ಯರೂ ದೇವರೆಂದು ಆರಾಧಿಸುವ ಕ್ಷತ್ರಿಯ ರಾಮನನ್ನು ಆರ್ಯ ಪಟ್ಟಿಗೆ ಸೇರಿಸಿಯಾಗಿದೆ! ದಕ್ಷಿಣದವರು ಆರಾಧಿಸುವ ವಿಂಧ್ಯವನ್ನು ದಾಟಿ ದಕ್ಷಿಣಕ್ಕೆ ಬಂದ ಅಗಸ್ತ್ಯ ಋಷಿ ವೈದಿಕ ಸೂತ್ರಕಾರರಾದ ದಕ್ಷಿಣ ಭಾರತೀಯರಾದ ಬೋಧಾಯನ, ಆಪಸ್ತಂಭರನ್ನು; ವೇದಗಳಲ್ಲಿ ಬರುವ ಕೃಷ್ಣವರ್ಣದವರಾಗಿದ್ದ ಕಣ್ವ, ಆಂಗೀರಸ, ಕೃಷ್ಣ, ವ್ಯಾಸ  ಇವರನ್ನು ಯಾವ ಪಟ್ಟಿಯಲ್ಲಿ ಸೇರಿಸುವುದು? ಆರ್ಯ ಆಕ್ರಮಣ ಸಿದ್ಧಾಂತಿಗಳು ಹೇಳುವಂತೆ ಆರ್ಯರು ಬೆಳ್ಳಗಿದ್ದರೆಂದು ವೇದದಲ್ಲಿ ಎಲ್ಲೂ ಹೇಳಿಲ್ಲ. ಹಾಗೆಯೇ ಅವರನ್ನುವ ದ್ರಾವಿಡರ ದೇವತೆ ಶಿವನನ್ನು ಶುದ್ಧ ಸ್ಪಟಿಕ ಸಂಕಾಶ ಎಂದಿದೆ ವೇದ. ಇಡೀ ವೇದ ವಾಘ್ಮಯದಲ್ಲಿ ವಿಷ್ಣು ಪರ ಸೂಕ್ತಗಳಿಗಿಂತಲೂ ಹೆಚ್ಚು ರುದ್ರ ಪರ ಸೂಕ್ತಗಳಿವೆ. ದಕ್ಷಿಣ ಭಾರತಕ್ಕಿಂತಲೂ ಉತ್ತರಭಾರತದಲ್ಲೇ ಶೈವಾರಾಧನೆ ಹೆಚ್ಚು. ಶಿವನ ನೆಲೆ ಇರುವುದೂ ಅಪ್ಪಟ ಆರ್ಯ ಸ್ಥಾನದಲ್ಲಿ. ಕೊಂಬುಗಳಿದ್ದ ಪಶುಪತಿಯನ್ನು ಕ್ರೈಸ್ತರ ಕಾಲಕ್ಕೆ ಮೊದಲೇ ಯೂರೋಪಿನಲ್ಲಿಯೂ ಆರಾಧಿಸುತ್ತಿದ್ದರು. ಆ ಚಿತ್ರವನ್ನು ಚಿತ್ರಿಸಲಾಗಿದ್ದ ದೊಡ್ಡ ಬೆಳ್ಳಿಯ ಬಟ್ಟಲು ಜರ್ಮನಿಯಲ್ಲಿ ಕಂಡು ಬಂತು. ಸುರ-ಅಸುರರಿಬ್ಬರು ಅಕ್ಕ ತಂಗಿಯರ(ದಿತಿ-ಅದಿತಿ) ಮಕ್ಕಳು ಎನ್ನುವ ಅಂಶವೇ ಅಸುರರು ದ್ರಾವಿಡರು ಹಾಗೂ ದೇವತೆಗಳು ಆರ್ಯರು ಎನ್ನುವ ಅವರ ಮೊಂಡು ವಾದವನ್ನು ಒಂದೇ ಏಟಿಗೆ ಬದಿಗೆ ಸರಿಸುತ್ತದೆ. ಅಣ್ಣ ತಮ್ಮಂದಿರ ಜಗಳವನ್ನು ಎರಡು ಪ್ರತ್ಯೇಕ ಜನಾಂಗಗಳ ನಡುವಿನ ಜಗಳದಂತೆ ಬಿಂಬಿಸಿದವರ ಮೂರ್ಖತನಕ್ಕೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ದೇವಾಸುರ ಕದನದಲ್ಲಿ ಸೋಲುಂಡ ಬಳಿಕ ದಾನವರು ಆರ್ಯಾವರ್ತವನ್ನು ಬಿಟ್ಟು ಬೇರೆ ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಹೋದರು ಎಂದು ವೇದಗಳಲ್ಲೇ ಇದೆ. ಅಂದರೆ ವಲಸೆ ಇಲ್ಲಿಂದಲೇ ಆಗಿರಬೇಕು.  ಹಾಗೆ ನೋಡಿದರೆ ಭಾರತದಲ್ಲಿ ಸರ್ವಕಾಲಕ್ಕೂ ದಲಿತರ ಅಥವಾ ಕೆಳವರ್ಗದವರ ಸಂಖ್ಯೆಯೇ ಮೇಲ್ವರ್ಗಕ್ಕಿಂತ ಹೆಚ್ಚು ಇದ್ದಿದ್ದು, ಬ್ರಾಹ್ಮಣರಂದರೆ ಆರ್ಯರು, ಅಹಿಂದರೆಂದರೆ ದ್ರಾವಿಡರು ಎನ್ನುವ ಬುಡವಿಲ್ಲದ ವಾದವೂ ಅರ್ಥ ಹೀನವೆನಿಸುತ್ತದೆ. ಕೆಲವೇ ಕೆಲವು ಪ್ರತಿಶತ ಸಂಖ್ಯೆಯ ಆರ್ಯರು ಅಗಾಧ ಸಂಖ್ಯೆಯ ದ್ರಾವಿಡರನ್ನು ಸೋಲಿಸಿದ್ದು ಹೇಗೆ?  ಹರಪ್ಪ ಉತ್ಖನನದಲ್ಲಿ ವೇದಗಳಲ್ಲಿ ಹೇಳಲಾದ, ಶುಲ್ಬಸೂತ್ರಗಳಲ್ಲಿ ಉಲ್ಲೇಖಿಸಿದಂತೆಯೇ ರಚಿತವಾದ ಯಜ್ಞಶಾಲೆಗಳು ಕಂಡುಬಂದವು. ಯಜ್ಞಕುಂಡಗಳ ಜೊತೆಗೆ ಯಜ್ಞಕುಂಡದಲ್ಲಿ ಹವಿಸ್ಸು, ಬಲಿ ನೀಡಲಾದ ಪ್ರಾಣಿಗಳ ಅಸ್ಥಿಯೂ ಸಿಕ್ಕಿದವು. ಇಲ್ಲಿನ ಮೂಲ ಸಂಸ್ಕೃತಿಗೆ ವೈದಿಕತೆಯ ಗಂಧಗಾಳಿ ಇಲ್ಲದಿದ್ದರೆ ಯಜ್ಞಶಾಲೆಗಳು ನಿರ್ಮಿತವಾದದ್ದೇಕೆ? ಆರ್ಯ ಆಕ್ರಮಣವಾದಿಗಳು ಹೇಳುವಂತೆ ಅದು ದ್ರಾವಿಡರದ್ದಾಗಿದ್ದಾರೆ ಯಜ್ಞಶಾಲೆ, ಯಜ್ಞಕುಂಡದ ಆಕಾರ, ಯಜ್ಞವಿಧಾನದಲ್ಲೂ ವೈದಿಕ ಸಂಸ್ಕೃತಿಯ ಕುರುಹು ಕಂಡುಬಂದದ್ದಾದರೂ ಹೇಗೆ? ಧರ್ಮ-ಸಂಸ್ಕೃತಿ, ಮತ-ತತ್ವ, ನ್ಯಾಯ-ನೀತಿ, ಸಾಮಾಜಿಕ-ಕೌಟುಂಬಿಕ ಪದ್ದತಿಗಳಲ್ಲಿ ಉತ್ತರ-ದಕ್ಷಿಣವಾಸಿಗಳಲ್ಲಿ ಚಾರಿತ್ರಿಕ ವೈರುಧ್ಯವೇ ಕಾಣದಿರುವಾಗ ಈ ಆರ್ಯ ಆಕ್ರಮಣವಾದ ಹಸಿ ಹಸಿ ಸುಳ್ಳೆಂದು ಮೇಲ್ನೋಟಕ್ಕೇ ಅನಿಸುವುದಿಲ್ಲವೇ?

               ಹರಪ್ಪಾದಲ್ಲಿ ನಡೆದ ವ್ಹೀಲರನ ಉತ್ಖನನಗಳ ಸ್ಟ್ರಾಟಿಗ್ರಫಿಯ ಪುನರ್ ಪರಿಶೀಲನೆ, ಆತ ಹೆಸರಿಸಿದ ಎರಡು ಸಂಸ್ಕೃತಿಗಳು ಒಂದೇ ಕಾಲದ್ದಲ್ಲವೆಂದು ನಿರೂಪಿಸಿತು. ಮೊದಲ ಗುಂಪಿನವರನ್ನು ಆಕ್ರಮಣಕಾರರನ್ನಾಗಿಯೂ ಎರಡನೆಯವರನ್ನು ಆಕ್ರಮಣಕ್ಕೊಳಗಾದವರಂತೆ ವ್ಹೀಲರ್ ಪರಿಗಣಿಸಿದ್ದ. ಆದರೆ ಆಕ್ರಮಣಕಾರರು ಬರುವ ಸಮಯಕ್ಕೆ ಆಕ್ರಮಣಕ್ಕೊಳಗಾದವರು ಅಲ್ಲಿ ಇರಲೇ ಇಲ್ಲ ಎಂದು ಸ್ಟ್ರಾಟಿಗ್ರಫಿ ನಿಚ್ಚಳವಾಗಿ ಸಾರಿತು. ಇಬ್ಬರು ಬೇರೆ ಬೇರೆ ಕಾಲದವರಾಗಿದ್ದರೆ ನರಸಂಹಾರ ಹೇಗೆ ಸಾಧ್ಯ? ಹೀಗಾಗಿ ಆರ್ಯರು ದ್ರಾವಿಡರ ಸಂಹಾರ ಮಾಡಿದರು ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ನಿಚ್ಚಳವಾಯಿತು. ಮೊಹಂಜೋದಾರೋದಲ್ಲಿ ಜಿ.ಎಫ್.ಡೇಲ್ಸ್ ಹೊಸದಾಗಿ ಜರುಗಿಸಿದ ಉತ್ಖನನ ಹಾಗೂ ಕಲಾವಸ್ತುಗಳ ಪರೀಕ್ಷೆ; ರಂಗಪುರ್, ಲೋಥಾಲ್ ಗಳಲ್ಲಿ ಡಾ. ಎಸ್. ಆರ್. ರಾವ್ ನಡೆಸಿದ ಉತ್ಖನನಗಳಲ್ಲಿ, ಕಾಲಿಬಂಗನ್, ಸುರ್ಕೋದಾಗಳಲ್ಲಿ ಜೆ.ಪಿ.ಜೋಷಿ ನಡೆಸಿದ ಉತ್ಖನನಗಳಲ್ಲೂ ಸಿಕ್ಕಿದ ಕುದುರೆಯ ಮೂಳೆಗಳು ಹಾಗೂ ಅಕ್ಕಿ ಆ ನಾಗರೀಕತೆ ಆರ್ಯರದ್ದೇ ಎನ್ನುವುದನ್ನು ಸ್ಪಷ್ಟಪಡಿಸಿತು. ಹರಪ್ಪಾದಲ್ಲಿ ಕಂಡುಬಂದ ನಾಗರಿಕತೆ ದ್ರಾವಿಡರದ್ದು ಎಂದು ನಖಶಿಖಾಂತ ವಾದಿಸಿದವರಿಗೆ ಎಷ್ಟೇ ಪ್ರಯತ್ನಿಸಿದರೂ ಹರಪ್ಪಾ ಲಿಪಿಯ ಜಾಡೇ ಸಿಗಲಿಲ್ಲ. ಅದು ಆರ್ಯರದ್ದೆಂದು, ಹಾಗಾಗಿ ಲಿಪಿಯೂ ಆರ್ಯ ಸಂಸ್ಕೃತಿಯದ್ದಿರಬಹುದೆಂದು ಭಾವಿಸಿದವರಿಗೆ ಉತ್ಖನನದಲ್ಲಿ ಸಿಕ್ಕ ಮೊಹರು, ಕಲಾಕೃತಿಗಳಲ್ಲಿದ್ದ ಲಿಪಿಯ ಗೂಢತೆಯೂ ಅರ್ಥವಾಯಿತು. ಭುಜ್, ಕ್ಯಾಂಬೆಗಳಲ್ಲಿ ಇತ್ತೀಚಿಗೆ ನಡೆದ ಸಂಶೋಧನೆಗಳು ವೇದಗಳ ರಚನೆಯ ಕಾಲವನ್ನು ಕ್ರಿ.ಪೂ 6000ಕ್ಕೂ ಹಿಂದಕ್ಕೆ ದೂಡುತ್ತವೆ. ಪಾಕಿಸ್ತಾನದ ಮೆಹರ್ ಗಢ್ ನಲ್ಲಿ (ಕ್ರಿ.ಪೂ. 6500) ನಡೆದ ಉತ್ಖನನ ಹರಪ್ಪ ನಾಗರಿಕತೆಗೂ ನಾಲ್ಕು ಸಾವಿರ ವರ್ಷಗಳ ಹಿಂದೆ ಅಂದರೆ ಇಂದಿಗೂ 9ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಸರಸ್ವತಿ ನಾಗರೀಕತೆ ಅವಿಚ್ಛಿನ್ನವಾಗಿ ಅಖಂಡವಾಗಿ ವಿಕಾಸಗೊಂಡಿತ್ತೆಂದು ದೃಢೀಕರಿಸಿತು. ಅಲ್ಲಿನ ಜನ ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದು ಇತಿಹಾಸ ತಿರುಚಿದವರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಸಂಗತಿ. ಸರಸ್ವತಿ ನದಿಯ ಬಗ್ಗೆ ನಡೆದ ಅಪಾರ ಸಂಶೋಧನೆಗಳು ಈ ವೇದ ಕಾಲೀನ ನಾಗರಿಕತೆಯನ್ನು ಹತ್ತು ಸಾವಿರ ವರ್ಷಗಳಿಗೂ ಹಿಂದಕ್ಕೊಯ್ದಿವೆ. ಬಿರ್ಹಾನದಲ್ಲಿ ದೊರಕಿದ ವಸ್ತುಗಳನ್ನು ಕಾರ್ಬನ್ ಡೇಟಿಂಗ್ ಮಾಡಿದಾಗ ಕ್ರಿ.ಪೂ 7400 ಕಾಲಕ್ಕೆ ಹೋಗಿ ಮುಟ್ಟಿದವು. ಲುಂಕಾರಂಸಾರ್ನಲ್ಲಿ ದೊರೆತ ಕುರುಹುಗಳು ಕ್ರಿ.ಪೂ. 9,400ರಕ್ಕೆ ಕೊಂಡೊಯ್ದವು. ಸರಸ್ವತಿ ಈ ಹಿಂದೆ ಸುಮಾರು 15000-8000 ವರ್ಷಗಳ ನಡುವೆ ಗುಪ್ತಗಾಮಿನಿಯಾದಳು ಎಂದು ರಾಖಿಗರ್ಹಿಯಲ್ಲಿ ನಡೆದ ಉತ್ಖನನಗಳಿಂದ ರುಜುವಾತಾಗಿದೆ. ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ಭಾರತದ ಹತ್ತಿ ಸಿಕ್ಕಿದೆ. ಅದೇ ಹತ್ತಿಯ ಬೀಜಗಳು ಸಿಂಧೂ-ಸರಸ್ವತಿ ಉತ್ಖನನದಲ್ಲೂ ಸಿಕ್ಕಿವೆ.  ಇನ್ನು ಕುದುರೆಗಳ ವಿಷಯಕ್ಕೆ ಬಂದರೆ ಯೂರೋಪಿನಲ್ಲಿ ಸಿಗುತ್ತಿದ್ದ ಕುದುರೆಗಳಿಗಿದ್ದ ಪಕ್ಕೆಲುಬುಗಳು 36.  ಅದೇ ಋಗ್ವೇದದ ಮೊದಲ ಮಂಡಲದ ಅಶ್ವಸೂಕ್ತದಲ್ಲಿ ಉಲ್ಲೇಖವಾದ ಕುದುರೆಗಳ ಪಕ್ಕೆಲಬುಗಳ ಸಂಖ್ಯೆ 34. ಅವು ಹಿಮಾಲಯದಲ್ಲೇ ಇದ್ದ ಶಿವಾಲಿಕ್ ಜಾತಿಯ ಕುದುರೆಗಳು. ಮೂವತ್ತು ಸಾವಿರ ವರ್ಷಗಳಿಗೂ ಹಿಂದಿನ ರಚನೆಗಳಿರುವ ಭೀಮ್ ಬೆಡ್ಕಾ ಗುಹೆಗಳಲ್ಲಿ ನಟರಾಜನ, ಕುದುರೆಗಳ, ಅಶ್ವಮೇಧದ ಕೆತ್ತನೆಗಳಿವೆ.

                ‘ಆರ್ಯ' ಎಂದರೆ ‘ಸುಸಂಸ್ಕೃತ', ‘ಶ್ರೇಷ್ಠ', ‘ಆದರಣೀಯ' ಎಂದರ್ಥ. ಇದು ಜನಾಂಗವಾಚಕವಲ್ಲ, ಗುಣವಾಚಕ! ಆರ್ಯ ಶಬ್ಧ "ಅರಿಯ" ಶಬ್ಧದಿಂದ ಬಂತು. ಭತ್ತವನ್ನು ಸಂಸ್ಕರಿಸಿ ಪಡೆದ ಅಕ್ಕಿಯನ್ನು ತುಳುವಿನಲ್ಲಿ "ಅರಿ" ಎನ್ನುತ್ತೇವೆ. ಅಂದರೆ ಆರ್ಯ ಎಂದರೆ ಸಂಸ್ಕಾರವಂತ ಎಂದರ್ಥವೇ ಹೊರತು  ಜನಾಂಗದ ಹೆಸರಲ್ಲ. ದ್ರವಿಡ ಎಂದರೆ ಮರಗಳಿಂದ ಸಮೃದ್ಧವಾದುದು ಎಂದರ್ಥ. ಅದು ಪ್ರದೇಶ ಸೂಚಕ ಪದ. ಸೇಡನ್ ಬರ್ಗ್ ಎಂಬ ಪ್ರಖ್ಯಾತ ಗಣಿತಶಾಸ್ತ್ರಜ್ಞ ಅರಗಳಿರುವ ಚಕ್ರದ ಅಭಿವೃದ್ಧಿ ಹಾಗೂ ಅಂಕೆಗಳ(ನಂಬರ್ ಸಿಸ್ಟಮ್) ವಲಸೆಯನ್ನು ಅಧ್ಯಯನ ಮಾಡಿದರು. ಚೌಕದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ವೃತ್ತವನ್ನು ಹಾಗೆಯೇ ವೃತ್ತದಿಂದ ಅದರ ಸಮನಾದ ಕ್ಷೇತ್ರಫಲವುಳ್ಳ ಚೌಕವನ್ನು ತಯಾರಿಸುವ ಮೂಲ ಎಲ್ಲಿಂದ ಬಂತು ಎಂದು ಅವರು ಸಂಶೋಧನೆಗಿಳಿದಾಗ ಅದು ಶುಲ್ಬ ಸೂತ್ರದತ್ತ ಬೆರಳು ಮಾಡಿತು. ಸ್ಮಶಾನಚಿತ್ ಎನ್ನುವ ಯಜ್ಞವೇದಿಕೆ ಈಜಿಪ್ಟಿನ ಪಿರಮಿಡ್ಡುಗಳಿಗೆ ಸ್ಪೂರ್ತಿಯಾದುದನ್ನೂ ಅವರು ಕಂಡುಕೊಂಡರು. ಹೀಗೆ ವಿಜ್ಞಾನದ ಹಾಗೂ ಖಗೋಳದ ವಲಸೆಯೂ ಸಿಂಧೂ-ಸರಸ್ವತಿ ತೀರದಿಂದ ಉಳಿದ ಕಡೆಗೆ ಪ್ರಸರಣವಾದ ಪ್ರಕರಣವೂ ಜನಾಂಗ ವಲಸೆ ಹೊರಗಿನಿಂದ ಇಲ್ಲಿಗಲ್ಲ, ಇಲ್ಲಿಂದಲೇ ಹೊರಗೆ ಎನ್ನುವುದನ್ನು ಮತ್ತಷ್ಟು ಸ್ಪಷ್ಟಪಡಿಸಿತು.  ಈಚೆಗೆ ನಡೆದ ಪಾಪ್ಯುಲೇಶನ್ ಜೆನೆಟಿಕ್ಸ್ ಪ್ರಕಾರ ನಮ್ಮ ದೇಶಕ್ಕೆ ಸುಮಾರು ನಲವತ್ತು ಸಾವಿರ ವರ್ಷದಿಂದ ಯಾವುದೇ ದೊಡ್ಡ ಪ್ರಮಾಣದ ಜನಾಂಗೀಯ ವಲಸೆ ಆಗಿಯೇ ಇಲ್ಲ ಎಂದು ಮಾಲಿಕ್ಯುಲರ್ ಜೆನೆಟಿಕ್ಸ್ ಮೂಲಕ ತಿಳಿದು ಬರುತ್ತದೆ. ಅಲ್ಲದೆ ಎಲ್ಲಾ ಭಾರತೀಯ ಜಾತಿಗಳ ತಲೆಬುರುಡೆ, ಇನ್ನಿತರ ದೇಹರಚನೆಯನ್ನು ತಳಿಶಾಸ್ತ್ರದ ಪ್ರಕಾರ ಸಂಶೋಧನೆಗೊಳಪಡಿಸಿದಾಗ ಅವು ಒಂದೇ ರೀತಿಯಾಗಿರುವುದು ಕಂಡುಬರುತ್ತದೆ. ಇವೆಲ್ಲವೂ ಆರ್ಯ ಆಕ್ರಮಣವನ್ನು, ಅವರ ಹೊರಗಿನಿಂದ ವಲಸೆಯನ್ನು ಒಂದೇ ಏಟಿಗೆ ಕತ್ತರಿಸಿ ಹಾಕುತ್ತವೆ. ಸ್ವಾರಸ್ಯವೆಂದರೆ ಮೊದಲ ಇಪ್ಪತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಜನಾಂಗವೆಂದು ಸಾಧಿಸಿದ, ಆರ್ಯ ಆಕ್ರಮಣವಾದವನ್ನು ಮುನ್ನೆಲೆಗೆ ತರಲು ಕಾರಣನಾದ ಮುಲ್ಲರ್ ಮುಂದಿನ ಮೂವತ್ತು ವರ್ಷಗಳ ಕಾಲ ಆರ್ಯರದ್ದು ಪ್ರತ್ಯೇಕ ಭಾಷಾ ಕುಟುಂಬವೇ ಹೊರತು ಪ್ರತ್ಯೇಕ ಜನಾಂಗವಲ್ಲವೆಂದು ಹೇಳ ತೊಡಗಿದ್ದ.

                 ಬುಡವೇ ಇಲ್ಲದ ಆರ್ಯ ದ್ರಾವಿಡ ಜನಾಂಗೀಯ ಪರಿಕಲ್ಪನೆ ಇವತ್ತಿಗೂ ಭಾರತವನ್ನು ಅಲ್ಲಾಡಿಸುತ್ತಿದೆ. ಅಸಲಿಗೆ ಆರ್ಕಿಯಾಲಜಿ, ಆಂತ್ರೊಪಾಲಜಿ, ಜಿಯಾಲಜಿ, ಆಸ್ಟ್ರಾನಮಿ ಮೊದಲಾದ ಆಧುನಿಕ ಶಾಸ್ತ್ರಗಳಿಂದಲೂ ಸುಳ್ಳೆಂದು ನಿರೂಪಿತವಾದ ಆರ್ಯ ಆಕ್ರಮಣ ವಾದ ಇಂದಿಗೂ ಎಡಪಂಥೀಯ ಬುದ್ಧಿಜೀವಿಗಳ ಬಾಯಲ್ಲಿ ನಲಿದಾಡುವ ಕಾರಣ ಅದೊಂದು ಅವರಿಗೆ ಅನುಕೂಲಕರ ವಾದ ಎಂಬ ಕಾರಣದಿಂದ ಅಷ್ಟೇ!  ಎಲ್ಲವನ್ನೂ ರಷ್ಯಾ, ಚೀನಾಗಳಿಂದ ಎರವಲು ಪಡೆದುಕೊಂಡ ಸ್ವಂತ ವಿಚಾರಗಳೇ ಇಲ್ಲದ ಭಾರತೀಯ ಎಡಪಂಥೀಯರಿಗೆ ಇವತ್ತಿಗೂ ಭೂರಿ ಭೋಜನ ನೀಡುವ "ಸಾವಿರದ ಸುಳ್ಳು" ಬಹುಷಃ ಇದೇ! ಒಂದೇ ಸುಳ್ಳನ್ನು ಸಾವಿರ ಸಲ ಹೇಳುವಷ್ಟರಲ್ಲಿ ಅದು ಸತ್ಯವಾಗಿಬಿಡುವ ಅಪಾಯವಿದೆ ಎನ್ನುವುದಕ್ಕೆ ಕಣ್ಣೆದುರಿನ ನಿದರ್ಶನ ಈ ಆರ್ಯ ಆಕ್ರಮಣ ವಾದ. ನೆಹರೂ ಪಾರುಪತ್ಯದಲ್ಲಿ ಶೈಕ್ಷಣಿಕ ವಲಯವನ್ನು ಹೊಕ್ಕ ಅದು ಇಂದಿಗೂ ಭಾರತೀಯ ಪೀಳಿಗೆಗಳ ತಲೆಯೊಳಗೆ ಇಳಿದು ವಶೀಕರಿಸಿ ಭಾರತೀಯ ಮಾನಸಿಕತೆಯನ್ನು ಭಾರತವಿರೋಧಿ ಮನಃಸ್ಥಿತಿಯಾಗಿ ಮತಾಂತರಿಸುತ್ತಿದೆ. ಯಾವ ಆರ್ಯ ಆಕ್ರಮಣ ಎಂಬ ಪೊಳ್ಳು ವಾದ ಭಾರತವನ್ನು ಒಡೆಯಲು ತಮಗೆ ಅನುಕೂಲ ಎಂದು ಬ್ರಿಟಿಷರು ಭಾವಿಸಿ ಈ ನೆಲದಲ್ಲಿ ಹರಿಯಬಿಟ್ಟರೋ ಅದೇ ಕಾರ್ಯವನ್ನು ಭಾರತದ ಎಡಪಂಥೀಯರು ಇಂದು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಭಾರತವನ್ನು ದೇಶವಾಗಿ ಪರಿಗಣಿಸದ ಅವರನ್ನು ಭಾರತದ ಎಡಪಂಥೀಯ ಎಂದು ಕರೆಯುವುದೇ ಬಹು ದೊಡ್ದ ಪ್ರಮಾದ. ಅವರ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಹಲವು ಚಳವಳಿಗಳನ್ನು ಹೂಡಿ, ಹೊಡೆದು, ಬಡಿದು; ಜಾತಿ-ಜಾತಿಗಳ ನಡುವೆ ಕಲಹ ತಂದಿಕ್ಕಿ; ಹಲವು ಪಕ್ಷಗಳನ್ನು ಕಟ್ಟಿ, ಒಡೆದು; ಜನರ ಮನಸ್ಸನ್ನು ಭ್ರಮಾಧೀನವನ್ನಾಗಿಸಿ ಹಲ ಕಾಲ ದೇಶವನ್ನು ದುರ್ದೆಶೆಗೆ ತಳ್ಳಿ; ಈಗ ದೇಶ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿ ಪಥದತ್ತ ಸಾಗಿರುವಾಗ, ಅದೇ ಅಭಿವೃದ್ಧಿಯ ವಿಚಾರವನ್ನು ಬಳಸಿಕೊಂಡು ದೇಶವನ್ನು ಉತ್ತರ-ದಕ್ಷಿಣವಾಗಿ ಒಡೆಯುವ ಮಟ್ಟಕ್ಕೆ ಮುಟ್ಟಿಸಿದೆ.

ಗುರುವಾರ, ಜುಲೈ 26, 2018

ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ

ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ

                     "ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ....."
ಶತಶತಮಾನಗಳು ಉರುಳಿದವು. ನಗರಗಳು ಕಾಡುಗಳಾದವು, ಅರಣ್ಯ ಬಟಾ ಬಯಲಾಯಿತು, ಪಟ್ಟಣಗಳೇ ಸ್ಮಶಾನವಾದವು; ನದಿಗಳು ತಮ್ಮ ಪಾತ್ರವನ್ನೇ ಬದಲಿಸಿದವು. ರಾಜವಂಶಗಳು ಅನೇಕ ಅಳಿದವು. ಕಟ್ಟಿದವರು ಅಳಿದರು, ಕೆಡವಿದವರೂ ಅಳಿದರು. ರಕ್ಷಕನೂ ಇತಿಹಾಸದ ಪುಟದಲ್ಲಿ ಸೇರಿ ಹೋದ. ಆಕ್ರಮಿಸಿದವನೂ ಮಣ್ಣಾಗಿ ಹೋದ. ನಾವು ಬೇರೆ ಎಂದವರೂ ಸೇರಬೇಕಾಯ್ತು. ನಮ್ಮನ್ನು ಸೇರಿದಿರಾದರೆ ಪುಣ್ಯ ಎಂದವರಿಗೂ ಇದೇ ಸ್ವರ್ಗವಾಯಿತು. ತಮ್ಮ ಗುಂಪಿಗೆ ಸೇರಿಕೊಳ್ಳ ಬಯಸಿದವರ ಖಡ್ಗವೂ ಮೊನಚು ಕಳೆದುಕೊಂಡಿತು. ವಿಶ್ವದ ಎಲ್ಲೆಡೆಯಿಂದ ಜನ ಇಲ್ಲಿ ಬಂದರು. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ಬಂದದ್ದೆಲ್ಲವೂ ಒಂದೋ ಸೇರಿ ಹೋಯಿತು ಅಥವಾ ಸೋತು ಸುಣ್ಣವಾಯಿತು. ಆದರೆ ಈ ವೇದ ಘೋಷ ಇನ್ನೂ ಅನುದಿನವೂ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಸೂರ್ಯನ ಅಂತರಂಗದಲ್ಲಿ ನಿರಂತರ ಮೊಳಗುತ್ತಿರುವ ಓಂಕಾರದಂತೆ ಮೊಳಗುತ್ತಲೇ ಇದೆ.

ಎಂತೆಂತಹಾ ನಾಗರಿಕತೆಗಳೆಲ್ಲಾ ಅಳಿದು ಹೋದವು. ಕ್ಷಿಪ್ರವಾಗಿ ಬೆಳೆದು ಜಗತ್ತಿನ ಕಣ್ಣುಕೋರೈಸಿ ತಾರೆಯೆಂದು ಹೊಗಳಿಸಿಕೊಂಡ ಗ್ರೀಕರು ಉಲ್ಕೆಯಂತೆ ಉರಿದು ನಾಶವಾದರು. ಐಗುಪ್ತ, ಚಾಂಡಿಯನ್ನುಗಳೆಲ್ಲಾ ಹೇಳ ಹೆಸರಿಲ್ಲದಂತೆ ಮಾಯವಾದವು. ಆದರೆ ಈ ಪ್ರಾಚೀನ ಸಂಸ್ಕೃತಿ ಅಗಾಧ ಆಕ್ರಮಣ, ನೈಸರ್ಗಿಕ ವೈಪರೀತ್ಯ, ಬದುಕು-ಬವಣೆಗಳ ನಡುವೆಯೂ ನಿತ್ಯನೂತನವಾಗಿ ಸೂರ್ಯನಂತೆ ಬೆಳಗುತ್ತಾ ನಿಂತಿದೆ. ಏನು ಕಾರಣ? ಹಾಗೆ ಬೆಳಗುತ್ತಲೇ ಇರಬೇಕಾದರೆ ಶೃದ್ಧೆ ಇರಬೇಕು. ಆ ಶೃದ್ಧೆಯನ್ನಿರಿಸಬೇಕಾದ ಕೇಂದ್ರವೂ ಬೇಕು. ಅಂತಹಾ ಕೇಂದ್ರ ಯಾವುದಿತ್ತು? ಅದು ಕರ್ಮಕಾಂಡವನ್ನು ಪ್ರಶ್ನಿಸಿ ಎದ್ದಿದ್ದ ಬುದ್ಧನನ್ನು, ಇನ್ನೇನು ಸಂಪೂರ್ಣ ಹಿಂದೂಧರ್ಮವನ್ನೇ ಆಪೋಷಣ ತೆಗೆದುಕೊಳ್ಳುತ್ತೇನೆ ಎಂದು ಹೊರಟಿದ್ದ ಬೌದ್ಧ ಮತವನ್ನೂ ತನ್ನೊಳಗೆ ಅರಗಿಸಿಕೊಂಡುಬಿಟ್ಟಿತು. ಜೈನ, ಅಜೀವಿಕ, ಚಾರ್ವಾಕಗಳೂ ಅದರಲ್ಲಿ ಸೇರಿ ಹೋದವು. ಇಲ್ಲಿನವರ ನಿಷ್ಠೆ ಇಲ್ಲಿನ ಮಣ್ಣಿಗಿದೆ. ಬೆವರು ಹರಿಸಿದ ಈ ಮಣ್ಣಿನಲ್ಲಿ ನಮ್ಮ ಜೀವನ ಬೆರೆತು ಹೋಗಿದೆ. ಹಾಗಾಗಿಯೇ ಇಲ್ಲಿ ಹುಟ್ಟಿ ಬೆಳೆದು ಇಲ್ಲಿಗೇ ನಿಷ್ಠವಾಗಿದ್ದವೆಲ್ಲಾ ಇಲ್ಲೇ ಕಲೆತು ಹೋದವು. ಇನ್ನೇನು ಹಾನಿ ಮಾಡುತ್ತದೋ ಎನ್ನುವಂತಿದ್ದವುಗಳನ್ನು ಸರಿ ದಾರಿಗೆ ತರಲು ಕಾಲಕಾಲಕ್ಕೆ ಮಹಾಪುರುಷರೇ ಅವತರಿಸಿ ಬಂದರು. ಶುಭ ಕರೋತಿ ಇತಿ ಶಂಕರಃ ಎಂಬಂತೆ ಚತುರ್ ದಿಕ್ಕುಗಳಲ್ಲಿ ಪ್ರಹರಿಗಳಂತೆ ಚತುರಾಮ್ನಾಯ ಪೀಠಗಳು ಎದ್ದು ನಿಂತವು. ನಿರಂತರ ಹರಿದು ಬಂದಿರುವ ಆ ಅವಿಚ್ಛಿನ್ನ ಪರಂಪರೆ ದೇಶವನ್ನು ಈ ದೇಶ, ಇದರ ಸಂಸ್ಕೃತಿಯನ್ನು ಮೌನವಾಗಿಯೇ, ಯಾವುದೇ ಪ್ರಚಾರವಿಲ್ಲದೆ ಕಾಪಾಡಿತು.

ಕಾಲಕಾಲಕ್ಕೆ ಸನಾತನ ಧರ್ಮದ ಸ್ವರೂಪ ಬದಲಾಗಿರಬಹುದು. ಆದರೆ ಅದರ ಆತ್ಮ ಬದಲಾಗಲಿಲ್ಲ. ಪ್ರಾಚೀನ ಆದರ್ಶ ಹಾಗೂ ಜೀವನ ದೃಷ್ಟಿಯೂ ಬದಲಾಗಲಿಲ್ಲ. ಅದರ ಸಾಧನಗಳಷ್ಟೇ ಬದಲಾದವು. ಗಾರ್ಹ್ಯಸೂತ್ರದ ಸ್ಥಾನವನ್ನು ಸ್ಮೃತಿಗಳು ತೆಗೆದುಕೊಂಡರೆ, ಯಜ್ಞಯಾಗಾದಿಗಳ ಸ್ಥಾನವನ್ನು ಮಂದಿರಗಳು, ಪೂಜೆ ಅರ್ಚನೆಗಳು ತುಂಬಿದವು. ಈ ಕಾಲಘಟ್ಟದಲ್ಲಿ ಸ್ಥಾಪಿಸಲ್ಪಟ್ಟ ತೀರ್ಥಕ್ಷೇತ್ರಗಳು ಆಸೇತುಹಿಮಾಚಲಾದ್ಯಂತ ಭಾರತವಿಡೀ ನಮ್ಮದೇ, ಇಲ್ಲಿನವರೆಲ್ಲಾ ನನ್ನವರೇ ಎಂಬಾ ಭಾವನೆಯನ್ನು ಮತ್ತೆ ಮೂಡಿಸಿದವು. ದೇಶದ ಕಣಕಣದ ಪವಿತ್ರತೆಯ ಗುಣಗಾನ ಭಾರತ-ಪುರಾಣಗಳಲ್ಲೂ ಮೂಡಿಬಂತು. ಈ ದಾರದ ಎಲ್ಲಾ ಎಳೆಗಳನ್ನು ಪೋಣಿಸಿದ ಆಚಾರ್ಯ ಶಂಕರರು ನಾಲ್ಕು ದಿಕ್ಕುಗಳಲ್ಲಿ ಎಲ್ಲಾ ಸಂಪ್ರದಾಯದವರೂ ಅನುಸರಿಸುವ ತೀರ್ಥಕ್ಷೇತ್ರಗಳಲ್ಲಿ ಕೇಂದ್ರ ಸ್ಥಾನವನ್ನು ಸ್ಥಾಪಿಸಿದರು.  ಆ ಶೃದ್ಧಾಕೇಂದ್ರವಾದರೂ ಜನರಿಗೆ ಹತ್ತಿರವಾದದ್ದೇಕೆ? ಜೀವನ ನಶ್ವರವೆಂದು ಅರಿತು ಹೊರಟವನನ್ನು ಅದ್ವೈತ ಆಕರ್ಷಿಸುವುದು ಸರಿ. ಆದರೆ ಜೀವನದ ಜಂಜಾಟದಿಂದ ಹೊರಬರಲಾಗದೆ ಹೊರಳಾಡುವವನು ಮರುಳಾದ ಪರಿ ಎಂತು? ಶಂಕರರು ಯಾವ ದೇವರನ್ನೂ ಖಂಡಿಸಲಿಲ್ಲ. ಜನರ ಶ್ರದ್ಧೆಯನ್ನು ನಾಶಪಡಿಸಲಿಲ್ಲ.  ಅದರ ಕೇಂದ್ರವನ್ನಷ್ಟೇ ಬದಲಾಯಿಸಿದರು. ಯಾವ ದೇವರನ್ನು ಪೂಜಿಸಿದರೂ ಅದು ಅನಂತ ಜ್ಞಾನಸ್ವರೂಪಿಯ ಪೂಜೆಯೇ. ಚೇತನ-ಅಚೇತನಗಳಲ್ಲಿ ವ್ಯಾಪಿಸಿರುವುದು ಅದೇ. ಈ ಎಲ್ಲಾ ಉಪಾಸನಾ ವಿಧಾನಗಳ ಹಿಂದಿರುವುದು ಹಿಂದೂ ಹೃದಯದ ಪ್ರೇರಣೆಯೇ! ಎಲ್ಲಾ ಪೂಜಾಪದ್ದತಿಗಳ ಹಿಂದೆ ಪರಮಾತ್ಮನ ಬಗೆಗಿರುವುದು ಒಂದೇ ವಿಧವಾದ ಕೃತಜ್ಞತಾ ಭಾವನೆ. ನಮ್ಮ ಸನಾತನ ವೈದಿಕ ಪರಂಪರೆಯನ್ನು ರಕ್ಷಿಸುವ ಅಭಿಲಾಷೆ ನಮ್ಮ ರಾಷ್ಟ್ರೀಯ ಜೀವನವನ್ನು ಸ್ವಾಧೀನದಲ್ಲಿಟ್ಟುಕೊಂಡು, ಅಭಿವೃದ್ಧಿಯ ಅತ್ಯುನ್ನತ ಸ್ಥಿತಿ ದೊರೆಯುವಂತೆ ಮಾಡುವ ಮಹತ್ವಾಕಾಂಕ್ಷೆ ಒಂದೆಡೆ ಸೂರ್ಯೋಪಾಸನೆಯ ರೂಪ ಪಡೆದರೆ ಇನ್ನೊಂದೆಡೆ ಗಣಪತಿಯ ಮೃತ್ತಿಕಾ ಮೂರ್ತಿಯನ್ನು ಪೂಜಿಸಿತು. ದೇಶವನ್ನು ಸುತ್ತುವರಿವಂತೆ ಐವತ್ತೊಂದು ಶಕ್ತಿ ಪೀಠಗಳನ್ನು ನಿರ್ಮಿಸಿದಂತೆಯೇ ದ್ವಾದಶ ಜ್ಯೋತಿರ್ಲಿಂಗಗಳೊಂದಿಗೆ ಆರ್ಯಾವರ್ತಕ್ಕೆ ಪ್ರದಕ್ಷಿಣೆ ಹಾಕಿತು. ವಾಲ್ಮೀಕಿಯ ಆದಿಕಾವ್ಯ ಆದರ್ಶಪುರುಷನೊಬ್ಬನನ್ನು ದೇವನಾಗಿಸಿದರೆ ಭಾರತ-ಭಾಗವತಗಳ ನೀತಿ ಪ್ರತಿಯೊಂದು ಪೀಳಿಗೆಗೆ ಕೃಷ್ಣನಂತಹ ವ್ಯಕ್ತಿಯ ಅವಶ್ಯಕತೆಯನ್ನು ಸಾರಿ ಹೇಳಿತು. ಒಂದು ಕಡೆ ಯೋಗದ ಭಂಗಿಯೇ ದರ್ಶನವಿತ್ತರೆ ಮಗದೊಂದೆಡೆ ಕ್ರೂರತೆಯನ್ನೇ ಶಿರಚ್ಛೇದಿಸಿದ ಕಾಪಾಲಿಕರನ್ನು ಕೃತಕೃತ್ಯಗೊಳಿಸಿತು. ಸರಸ್ವತಿಯ ಸೇವೆಗೈವ ಶಾಸ್ತ್ರಕೋವಿದರನ್ನು ಸೃಷ್ಟಿಸಿದ ಉಪಾಸನೆಯೇ ಶಸ್ತ್ರ ಹಿಡಿದು ಶತ್ರುಗಳನ್ನು ಸದೆಬಡಿವ ಯೋಧರಿಗೆ ಜನ್ಮಕೊಟ್ಟಿತು. ಈ ಎಲ್ಲಾ ಆರಾಧನೆಯ ಹಿಂದಿರುವುದು ಅದೇ ಸಹಸ್ರಾನನ, ಸಹಸ್ರಾಕ್ಷ, ಸಹಸ್ರಪಾದಗಳಿರುವ ರಾಷ್ಟ್ರಪುರುಷನೇ! ತಮ್ಮದಾದ ಯಾವುದೊಂದನ್ನೂ ತ್ಯಜಿಸದೆ ಶ್ರೇಷ್ಠವಸ್ತುವೊಂದು ಜನರಿಗೆ ಸಿಕ್ಕಂತಾಯ್ತು; ತಮ್ಮ ಆರಾಧನೆಯ ಹಿಂದಿನ ಶ್ರೇಷ್ಠ ತತ್ತ್ವವೊಂದರ ಅರಿವಾಯಿತು. ಜೀವನದ ಅಗಾಧತೆ, ಧ್ಯೇಯದ ಶ್ರೇಷ್ಠತೆಯೊಂದಿಗೆ ಆಚರಣೆ ಹಾಗೂ ದೇಶದ ಗರಿಮೆಯೊಂದಿಗೆ ಅವರ ಸಂಬಂಧವನ್ನು ಬೆಸೆಯಿತು. ಹೀಗಾಗಿಯೇ ತಮ್ಮ ದೇವ-ದೇವಿಯರೇ, ಪೂಜಾಕ್ರಮಗಳೇ ಶ್ರೇಷ್ಠ ಎಂದೇ ಪರಿಗಣಿಸುತ್ತಿದ್ದವರೆಲ್ಲಾ ಶಂಕರರನ್ನು ಭೇಟಿಯಾದ ಮಾತ್ರಕ್ಕೆ ತಮ್ಮ ಸಂಕುಚಿತತೆಯ ಪರಿಧಿಯನ್ನು ಕಿತ್ತೆಸೆದು ಬಿಟ್ಟರು. ವಿರೋಧ ಭಾವನೆಗಳನ್ನು ಹೊತ್ತು ಬಂದವರೆಲ್ಲಾ ಶಂಕರರ ಅನುಯಾಯಿಗಳಾಗಿ ಬದಲಾದರು. ಶಂಕರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸಿದವರೆಲ್ಲಾ ಅವರ ಉದಾತ್ತತೆಯನ್ನು ಕಂಡು ನಾಚಿ ಮರಳಿದರು. ಹೀಗೆ ಶಂಕರರು ಕೆಳಗಿನ ಸೋಪಾನದಲ್ಲೇ ಕೊಳೆಯುತ್ತಿದ್ದ ಇಡೀ ಸಮುದಾಯವನ್ನು ಮೇಲಕ್ಕೆತ್ತಿದರು. ಸಂಕುಚಿತ ಧ್ಯೇಯದೊಂದಿಗೆ ನೀರ ಹೊಂಡದಲ್ಲಿ ಕೊಳೆಯುತ್ತಿದ್ದ ಪ್ರವಾಸಿಗನನ್ನು ವಿಶಾಲ ರಾಷ್ಟ್ರಗಂಗೆಯಲ್ಲಿ ಮಿಂದೇಳುವ ಯಾತ್ರಿಕನನ್ನಾಗಿಸಿದರು! ದೇವ-ದೇವಿಯರೆಂಬ ಚಿಕ್ಕಪಾತ್ರೆಗಳಲ್ಲಿ ತುಂಬಲಾಗದೆ ಉಕ್ಕಿ ಇತರರ ಬಗ್ಗೆ ಟೀಕೆಯಲ್ಲೇ ಕಾಲವ್ಯರ್ಥ ಮಾಡುತ್ತಿದ್ದ ಹಿಂದೂ ಹೃದಯದ ಅಗಾಧ ಶ್ರದ್ಧೆ ವಿಶಾಲವಾದ ಏಕತ್ವದ ಅದ್ವೈತ ಸಾಗರದಲ್ಲಿ ಸ್ಥಾನ ಪಡೆಯಿತು.

ಹೌದು. ಇವತ್ತಿಗೂ ಭಾರತವನ್ನು ಏಕಸೂತ್ರದಲ್ಲಿ ಬೆಸೆದಿರುವುದು ಇಂತಹ ಶೃದ್ಧಾ ಕೇಂದ್ರಗಳೇ. ಹಿಮಾಲಯದ ಗಿರಿಶಿಖರದಲ್ಲಿ ಮೊಳಗುವ ವೇದ ಘೋಷವೇ ರಾಮೇಶ್ವರದ ದೇಗುಲದೊಳಗೂ ಮೊಳಗುತ್ತದೆ. ಅಲ್ಲಿನ ಶಿವಲಿಂಗಕ್ಕೂ ಇಲ್ಲಿನದಕ್ಕೂ ಒಂದೇ ತೆರನಾದ ಅಭಿಷೇಕ! ಇಲ್ಲಿನ ಕಲೆ ಶಿಲ್ಪಗಳಲ್ಲೂ ಏಕಾತ್ಮತೆಯ ಸೂತ್ರವಿದೆ. ಆಸೇತು ಹಿಮಾಚಲದವರೆಗೂ ಎಲ್ಲಾ ದೇವರ ಮೂರ್ತಿಗಳೂ ಒಂದೇ ಸಂಸ್ಥೆಯಿಂದ ಮಾಡಿದ ರೀತಿ ಪಡಿಮೂಡಿವೆ. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ! ನಾಲ್ದೆಸೆಗಳಲ್ಲಿರುವ ಶಂಕರಪೀಠಗಳು ದೇಶದ ನಾಲ್ಕೂ ಮೂಲೆಗಳಿಗೆ ಕರೆದೊಯ್ದರೆ, ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿದ್ದಾನೆ. ಹಿಂಗುಲಾತದಿಂದ ಕಾಮಾಕ್ಷಿಯವರೆಗೆ, ಜ್ವಾಲಾಮುಖಿಯಿಂದ ಕುಮಾರಿ ಕ್ಷೇತ್ರದವರೆಗೆ ಹರಡಿರುವ 51 ಶಕ್ತಿಪೀಠಗಳು, ದ್ವಾದಶ ಗಾಣಪತ್ಯ ಕ್ಷೇತ್ರಗಳು, ಅಸಂಖ್ಯ ವೈಷ್ಣವ ಕ್ಷೇತ್ರಗಳು ರಾಷ್ಟ್ರಶಕ್ತಿಯನ್ನು ಉದ್ದೀಪಿಸುತ್ತಾ ನಿಂತಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ದೇಶೀಯರನ್ನು ಬೆಸೆದು ಇಟ್ಟಿರುವುದು ಇಂತಹಾ ಶೃದ್ಧಾ ಕೇಂದ್ರಗಳೇ ಹೊರತು ಯಾವ ರಾಜಕೀಯ ಆಟಾಟೋಪವೂ ಅಲ್ಲ, ಸೆಕ್ಯುಲರ್ ಬುದ್ಧಿಯೂ ಅಲ್ಲ. ಉದಾಹರಣೆಗೆ ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ. ಕೋಟ್ಯಾಂತರ ಜನ ಅಲ್ಲಿ ಸೇರುತ್ತಾರೆ. ಯಾವ ರಾಜಕೀಯ ಪಕ್ಷವೂ ಅವರನ್ನು ಹಣ ಕೊಟ್ಟು ಕರೆತರುವುದಿಲ್ಲ. ಯಾವ ರಾಜಕೀಯ ಪಕ್ಷದ ರ್ಯಾಲಿಗೂ ಅವರು ಹೋಗುವುದಲ್ಲ. ಯಾವ ಸಿನಿಮಾ ನಟನನ್ನು ನೋಡಲೂ ಅವರು ಹೋಗುವುದಲ್ಲ. ಅದೊಂದು ರೀತಿ ಅರಿವಿನ ಕರೆ. ಅದೊಂದು ರೀತಿ ರಾಷ್ಟ್ರೀಯ ಸಮ್ಮೇಳನವೇ ಸರಿ.

ಹಿಂದೂ ಶ್ರದ್ಧಾ ಬಿಂದುವಿನ ಮೇಲೆ ಬಿದ್ದಿದೆ "ಕಾಕ" ದೃಷ್ಟಿ

ಹಿಂದೂ ಶ್ರದ್ಧಾ ಬಿಂದುವಿನ ಮೇಲೆ ಬಿದ್ದಿದೆ "ಕಾಕ" ದೃಷ್ಟಿ


            ನೇರ ಆಕ್ರಮಣವಾದಾಗ ಸೆಟೆದು ನಿಂತು ಗೆಲ್ಲಬಹುದು. ಆಗ ಶತ್ರು ಯಾರು ಎನ್ನುವುದರ ಅರಿವಿರುತ್ತದೆ. ಆದರೆ ಛದ್ಮ ಆಕ್ರಮಣವಾದಾಗ ಗೆಲ್ಲುವುದು ಪಕ್ಕಕ್ಕಿರಲಿ, ಎದುರಿಸುವುದು ಹೇಗೆ? ಹಿಂದೂಗಳ ಇಂದಿನ ಸಮಸ್ಯೆ ಇದು. ಹಿಂದೂಗಳನ್ನೇ ಬಳಸಿಕೊಂಡು, ಈ ನೆಲದ, ಜಾತ್ಯಾತೀತ ಎಂಬಂತೆ ಮೆರುಗು ನೀಡಲ್ಪಟ್ಟ ಕಾನೂನುಗಳನ್ನು, ಹಿಂದೂವಿನ ವಿಶ್ವಭ್ರಾತೃತ್ವದ ಭಾವನೆಯನ್ನು ಬಳಸಿಕೊಂಡು ಆಕ್ರಮಣ! ತನ್ನ ಮೇಲೆಯೇ ಆಕ್ರಮಣವಾಗುತ್ತಿದೆ ಎಂದು ಹಿಂದೂವಿನ ಅರಿವಿಗೆ ಬಾರದ ರೀತಿಯಲ್ಲಿ, ಬಂದರೂ ಅಸಹಾಯಕನಾಗಿ ಎದುರಿಸಲಾಗದೇ ಒದ್ದಾಡುವ ರೀತಿಯಲ್ಲಿ ನಡೆಯುತ್ತಿದೆ ಈ ಛದ್ಮ ಯುದ್ಧ. ತನ್ನ ನಂಬಿಕೆಯನ್ನು ಹತ್ತಿಕ್ಕಲಾಗುತ್ತಿದೆ, ಭಾವನೆಯನ್ನು ಅವಹೇಳನಗೈಯಲಾಗುತ್ತಿದೆ, ತನ್ನ ಸಂಸ್ಕೃತಿಯನ್ನು ನಾಶಗೈಯಲು ಸಾಲಾಸಾಲಾಗಿ ಟೊಂಕಕಟ್ಟಿ ನಿಂತಿದ್ದಾರೆ ಎಂಬ ಅರಿವು ಇದ್ದರೂ ತನ್ನ ಅಸ್ಮಿತೆಯನ್ನು ತಾನು ಉಳಿಸಿಕೊಳ್ಳಲಾಗದೆ ಒದ್ದಾಡುವ ಹಿಂದೂವಿನ ಪರಿಸ್ಥಿತಿ ಶತ್ರುವಿಗೂ ಬರಬಾರದು!


              ಸದ್ಯಕ್ಕೆ ಅಂತಹ ದಾಳಿಗೆ ತುತ್ತಾಗಿರುವುದು ಹಿಂದೂವಿನ ಶ್ರದ್ಧಾಕೇಂದ್ರ ಪುರಿ ಜಗನ್ನಾಥ. ಮರಕತದಿಂದ ಮೈವೆತ್ತ ತನ್ನ ಆರಾಧ್ಯ ದೈವ ನೀಲಮಾಧವನನ್ನು ವಿಶ್ವವಸುವಿನಿಂದ ವಶಪಡಿಸಿಕೊಂಡು ತನ್ನವನನ್ನಾಗಿಸಿಕೊಳ್ಳಲು ಹವಣಿಸಿದ ಅವಂತಿಯರಸ ಇಂದ್ರದ್ಯುಮ್ನ ವಿಫಲನಾದಾಗ ಅಶರೀರವಾಣಿಯಂತೆ ಇಂದ್ರದ್ಯುಮ್ನನಿಂದ ನಿರ್ಮಿಸಲ್ಪಟ್ಟ ದೇವಾಲಯ. ಇಂದ್ರದ್ಯುಮ್ನನ ಕನಸಿನಲ್ಲಿ ಕಾಣಿಸಿದಂತೆ ಸಮುದ್ರದಲ್ಲಿ ತೇಲಿಬಂದ ಮರದ ದಿಮ್ಮಿಯಿಂದ ವಿಶ್ವಕರ್ಮನಿಂದಲೇ ಕೆತ್ತಲ್ಪಟ್ಟ ಅಪೂರ್ಣ-ಅಪೂರ್ವ ದಾರುಶಿಲ್ಪ ಇಲ್ಲಿಗೆ ಶಿಖರಪ್ರಾಯ. ಶಂಕರ ಪೀಠವಾಗಿ, ಕಲಿಯುಗದ ವೈಕುಂಠವಾಗಿ ಜಾತಿಭೇದವಿಲ್ಲದ ತಾಣವಾಗಿ, ಆಧುನಿಕ ವಿಜ್ಞಾನಕ್ಕೆ ಸವಾಲಾಗಿ ಹತ್ತು ಹಲವು ವಿಸ್ಮಯಗಳೊಂದಿಗೆ ಕಂಗೊಳಿಸುತ್ತಾ ಇರುವ ಪುರಿಯ ಮೇಲೆ "ಕಾಕ" ದೃಷ್ಟಿ ಬಿದ್ದಿದೆ. ಹತ್ತಾರು ವರ್ಷಗಳ ಹಿಂದಿನ ಪ್ರಕರಣಗಳನ್ನೇ ಮುಗಿಸಲಾಗದೇ ಒದ್ದಾಡುವ ನ್ಯಾಯಾಲಯಗಳು ಒಂದು ದೇವಸ್ಥಾನಕ್ಕೆ ಯಾರು ಹೋಗಬೇಕು/ಬಾರದು ಎನ್ನುವ ಅರ್ಜಿಯ ವಿಚಾರಣೆ ನಡೆಸಲು ಬೇಗನೆದ್ದು ಕಚ್ಚೆ ಕಟ್ಟಿ ನಿಲ್ಲುತ್ತವೆಯೆಂದರೆ ಇದರ ಹಿಂದೆ ಛದ್ಮವೇಶಧಾರಿಗಳಾರೋ ಇರಲೇ ಬೇಕು.


               ಅಷ್ಟಕ್ಕೂ ಹಿಂದೂವೇತರನೊಬ್ಬ ಪುರಿಯ ಒಳಗೆ ಅಡಿಯಿಟ್ಟರೆ ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಹಾರಾಡುವ ದೇವಾಲಯದ ಗೋಪುರದ ಬಾವುಟದ ಹಾರಾಟದ ದಿಕ್ಕೇನೂ ಬದಲಾಗಲಿಕ್ಕಿಲ್ಲ. ಯಾವ ದಿಕ್ಕಿನಂದ ನೋಡಿದರೂ ನಮ್ಮೆಡೆಗೇ ಮುಖ ಮಾಡಿದಂತೆ ಕಾಣುವ ಗೋಪುರದ ಮೇಲಿನ 20 ಅಡಿ ಎತ್ತರದ ಸುದರ್ಶನ ಚಕ್ರದ ಭಂಗಿಯೂ ಬದಲಾಗಲಿಕ್ಕಿಲ್ಲ. ಮಂದಿರದ ಮೇಲೆ ಖಗಗಳೇನೂ ತಪ್ಪಿ ಹಾರಲು ಶುರು ಮಾಡಲಿಕ್ಕಿಲ್ಲ. ಇಷ್ಟರವರೆಗೆ ಬೀಳದ ಗೋಪುರದ ನೆರಳು ದೇವಾಲಯದ ಆವರಣದಲ್ಲಿ ಬೀಳುವಂತೆ ಗೋಪುರದ ವಿನ್ಯಾಸವೂ ಬದಲಾಗಲಿಕ್ಕಿಲ್ಲ. ಬೆಳಗ್ಗೆ ಭೂಮಿಯಿಂದ ಸಮುದ್ರದೆಡೆಗೆ ಮತ್ತು ಸಂಜೆ ಸಮುದ್ರದಿಂದ ಭೂಮಿಯೆಡೆಗೆ ಬೀಸುವ ಗಾಳಿಯ ದಿಕ್ಕೂ ಬದಲಾಗಲಿಕ್ಕಿಲ್ಲ. ಸಿಂಗದ್ವಾರವನ್ನು ಪ್ರವೇಶಿಸುವಾಗ ಸಮುದ್ರದ ಭೋರ್ಗರೆತವೂ ಕೇಳಲಿಕ್ಕಿಲ್ಲ. ಆದರೆ ಇಂತಹುದರ ಮೇಲೆ ನಂಬಿಕೆಯೇ ಇಲ್ಲದವರಿಗೆಲ್ಲಾ, ತಮ್ಮ ಏಕದೇವನೇ ಸರ್ವಶಕ್ತನೆಂದು ನಂಬಿ ಉಳಿದ ಎಲ್ಲವನ್ನೂ ನಿಕೃಷ್ಟವಾಗಿ ಕಾಣುವವರಿಗೆ ಪ್ರವೇಶ ಯಾಕೆ ಕೊಡಬೇಕು? ಹಿಂದೂಗಳಲ್ಲದವರು ಅಂದರೆ ವೇದಗಳನ್ನು ಒಪ್ಪದವರು, ಹಿಂದೂ ಸಂಪ್ರದಾಯ, ಸಂಸ್ಕೃತಿ, ದೇವರನ್ನು ಒಪ್ಪದವರಿಗೆ ಜಗನ್ನಾಥನಲ್ಲೇನು ಕೆಲಸ?
ಜಗನ್ನಾಥನ ಅರ್ಚಕರು ಪ್ರತಿ ದಿನವೂ 1000 ಅಡಿ ಎತ್ತರದ ಗೋಪುರವನ್ನು ಹತ್ತಿ ಬಾವುಟ ಬದಲಾಯಿಸಬೇಕು. ಅಕಸ್ಮಾತ್ ಒಂದು ದಿನ ತಪ್ಪಿದರೆ, 18 ವರ್ಷಗಳ ಕಾಲ ದೇವಾಲಯದ ಬಾಗಿಲು ತೆರೆಯುವಂತಿಲ್ಲ. ಭಕ್ತರು ಎಷ್ಟೇ ಸಂಖ್ಯೆಯಲ್ಲಿ ಬರಲಿ ಮಾಡುವ ಪ್ರಸಾದದ ಪ್ರಮಾಣದಲ್ಲಿ ವ್ಯತ್ಯಯವಾಗುವುದಿಲ್ಲ. ಅಲ್ಲದೆ ಪ್ರಸಾದ ಕಡಮೆಯೂ ಆಗುವುದಿಲ್ಲ; ವ್ಯರ್ಥವೂ ಆಗುವುದಿಲ್ಲ. ಜಗನ್ನಾಥನಿಗೆ ಪ್ರತೀ ಜೇಷ್ಠ ಪೌರ್ಣಮಿಯಂದು 35 ಚಿನ್ನದ ಕುಡಿಕೆಗಳಲ್ಲಿ ಮಜ್ಜನ ಮಾಡಿಸಿ ಸ್ವರ್ಣ ಸಿಂಹಾಸನದ ಮೇಲೆ ಪೀಠಾರೋಹಣ ಮಾಡಿಸಿ ಮಾವಿನ ಹಣ್ಣಿನ ರಸದಿಂದ ಅಭಿಷೇಕಗೈಯಲಾಗುತ್ತದೆ. ಈ ದೀರ್ಘ ಸ್ನಾನ ಮತ್ತು ಮಾವಿನ ಹಣ್ಣಿನ ರಸ ಸೇವನೆಯಿಂದಾಗಿ ದೇವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎನ್ನುವ ನಂಬಿಕೆಯಿಂದ 15 ದಿನಗಳ ಕಾಲ ಗಿಡಮೂಲಿಕೆಗಳ ಔಷಧಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವ ಭಕ್ತರಿಗೂ ದೇವರ ದರ್ಶನವಿಲ್ಲ. ಇದೆಲ್ಲವೂ ಅನೂಚಾನಾಗಿ ಇಂದಿನವರೆಗೆ ನಡೆದುಕೊಂಡು ಬಂದಿದೆ. ಶ್ರದ್ಧೆ ಅಂದರೆ ಇದು. ಹೇಗೆ ಭಕ್ತನ ಮನಸ್ಸು ಜಗನ್ನಾಥನಲ್ಲಿರುತ್ತದೋ, ಹಾಗೆಯೇ ನಿತ್ಯ ಸೇವೆಗೈವ ಪರಿಕರ್ಮಿಯ ಶ್ರದ್ಧೆಯೂ ಬದಲಾಗುವುದಿಲ್ಲ. ಈ ಶ್ರದ್ಧೆಗೆ ಸಹಕಾರಿಯಾಗಿ ಯಾತ್ರಿಕನಿಗೆ ಬೇಕಾದ ವ್ಯವಸ್ಥೆಯನ್ನು ಆ ಪರಿಸರದಲ್ಲಿ ಮಾಡುವುದನ್ನು ಬಿಟ್ಟು ಸೆಕ್ಯುಲರ್ ಗಾಳಿ ಸೋಂಕು ತಗುಲಿಸಿಕೊಳ್ಳುವ ನ್ಯಾಯಾಲಯಗಳಿಗೆ ಏನನ್ನಬೇಕು? ಇಂತಹ ಶ್ರದ್ಧೆ ಅನ್ಯಮತೀಯನಲ್ಲಿ ಇರಲು ಸಾಧ್ಯವೇ? ಇವತ್ತು ದೇವಾಲಯದೊಳಗೆ ನುಗ್ಗುವ ಹಿಂದೂ ಪೂಜಾ ಪದ್ದತಿ, ಆಚರಣೆಗಳ ಮೇಲೆ ನಂಬಿಕೆಯಿಲ್ಲದ ಅನ್ಯಮತೀಯ ನಾಳೆ ಆ ಹದಿನೈದು ದಿವಸಗಳಲ್ಲೂ ತನಗೆ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು, ಮೇಲಿನ ಆಚರಣೆಗಳ ಮೇಲೆ ತನಗೆ ನಂಬಿಕೆ ಇಲ್ಲದಿರುವುದರಿಂದ ಅದನ್ನೆಲ್ಲಾ ನಿಲ್ಲಿಸಬೇಕು ಎಂದು ಕೇಳದಿರುವನೇ? ಅನ್ಯಮತೀಯರಿಗೆ ನಿರ್ಬಂಧವಿರುವುದು ಬರೇ ಪುರಿಯ ಜಗನ್ನಾಥನಲ್ಲಿ ಮಾತ್ರವಲ್ಲ. ನೇಪಾಳದ ಪಶುಪತಿನಾಥನಿಂದ ಹಿಡಿದು ಭಾರತದ ಹಲವು ದೇವಾಲಯಗಳಲ್ಲಿ ಈ ನಿಯಮವಿದೆ. ಒಂದು ಧಾರ್ಮಿಕ ಸ್ಥಳವೆಂದ ಮೇಲೆ ಅಲ್ಲಿ ಪೂರ್ವದಿಂದ ಆಚರಿಸಿಕೊಂಡು ಬಂದಂತಹ ಹಲವು ಕಟ್ಟಳೆಗಳಿರುತ್ತವೆ. ಸೆಕ್ಯುಲರ್ ಎಂದು ತೋರಿಸಿಕೊಳ್ಳುವ ಭರದಲ್ಲಿ ಅಂತಹ ಕಟ್ಟಳೆಗಳನ್ನು ಯಾಕೆ ಮುರಿಯಬೇಕು? ಕಾಬಾದಲ್ಲಿ ಇಸ್ಲಾಮೇತರರನ್ನು ಬಿಡುವರೇ? ಎಲ್ಲರನ್ನು ಒಳಬಿಡಲು ದೇವಾಲಯವೆಂದರೆ ಜಾತ್ರೆಗದ್ದೆಯೇ ಅಥವಾ ಸಂತೆಯೇ?

              ಹಿಂದೂ ಧರ್ಮ ಸನಾತನವಾದದ್ದು. ಅದು ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಪ್ರಾಣಿಗಳೂ ಜೀವಿಗಳೂ ಅವು ಒಪ್ಪಲಿಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುತ್ತದೆ ಎಂಬುದು ಸತ್ಯ. ಅದು ತನ್ನ ಪ್ರಮಾಣಕ್ಕೆ ಯಾವುದನ್ನೂ ಅವಲಂಬಿಸಿಲ್ಲ. ನಾವು ಒಪ್ಪಿದರೂ ಒಪ್ಪದೇ ಇದ್ದರೂ ಅಗ್ನಿಯ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಅದಕ್ಕೆ ಕುಂದೂ ಬರುವುದಿಲ್ಲ. ಆದರೆ ಈ ಅರಿವು ಆಗದ ಹೊರತು ಸೆಮೆಟಿಕ್ ಮತೀಯನೊಬ್ಬ ಹಿಂದೂವಾಗಲು ಸಾಧ್ಯವೇ ಇಲ್ಲ. ಈ ಅರಿವೇ ಆಗದೆ ಹಿಂದೂ ದೇವರ ಬಗ್ಗೆ ನಂಬಿಕೆ, ಶ್ರದ್ಧೆ ಹೇಗೆ ಬಂದೀತು?

               ದೇವಾಲಯಗಳೆಂದರೆ ಬರೇ ಕಲ್ಲು, ಮಣ್ಣಿನ ಕಟ್ಟಡಗಳಲ್ಲ. ಬುದ್ಧಿಜೀವಿಗಳು ಗಳಹುವಂತೆ ಹಣ ಮಾಡುವ ಕೇಂದ್ರಗಳೂ ಅಲ್ಲ. ಅದು ಹಿಂದೂವಿನ ಶ್ರದ್ಧಾ ಕೇಂದ್ರಗಳು. ದೇವಾಲಯದ ಹುಂಡಿಗೋ, ಆರತಿ ತಟ್ಟೆಗೋ ಹಣ ಹಾಕುವಾಗ ಆ ಹಣ ಎಲ್ಲಿ ಹೋಗುತ್ತದೆ ಎನ್ನುವ ವಿಚಾರ ಹಿಂದೂವೊಬ್ಬನ ಮನಸ್ಸಿನಲ್ಲಿ ಏಳುವುದೇ ಇಲ್ಲ. ಅದರ ಅಗತ್ಯವೂ ಅವನಿಗಿಲ್ಲ. ಅದೇನಿದ್ದರೂ ಅರ್ಪಣೆ ಅಷ್ಟೇ. ಮನಃಪೂರ್ವಕವಾಗಿ ತನಗೆ ಸಾಧ್ಯವಾಗಿರುವುದರ ಅರ್ಪಣೆ. ದೇವಾಲಯದೊಳಗಿನ ಹೊರಗಿನ ರಾಜಕೀಯ ಎಷ್ಟಿದ್ದರೂ ಅವನು ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಇಂದಿಗೂ ದೇವಾಲಯಗಳು ಶ್ರದ್ಧಾಕೇಂದ್ರಗಳಾಗಿ ಉಳಿದಿರುವುದು. ಇದೇ ಭಾವನೆ ಸೆಮೆಟಿಕ್ ಮತೀಯನೊಬ್ಬನಲ್ಲಿ ಬಂದರೆ ಅವನು ತನ್ನ ಮಾತೃಧರ್ಮಕ್ಕೆ ಸ್ವ ಇಚ್ಛೆಯಿಂದ ಮರಳುತ್ತಾನೆ. ಆದರೆ ಮಾತೃಧರ್ಮಕ್ಕೆ ಮರಳದೆ ತನಗೆ ದೇವಾಲಯದೊಳಗೆ ಪ್ರವೇಶ ಬೇಕು ಎನ್ನುವುದು ತನ್ನ ಆಸೆ ಪೂರೈಸಿಕೊಳ್ಳಲು ಇರುವ ಸವಲತ್ತನ್ನು ಈ ನೆಲದ ದುರ್ಬಲ ಕಾನೂನನ್ನು ಬಳಸಿಕೊಂಡು ಪೂರೈಸಿಕೊಳ್ಳುವ ರೀತಿಯಂತೆ ಕಾಣುತ್ತದೆ. ತನ್ನ ಯಾವುದೋ ಸಂಕಟವನ್ನು ಪರಿಹರಿಸಿಕೊಳ್ಳಲು, ತನ್ನ ಯಾವುದೋ ಆಸೆಯನ್ನು ಪೂರೈಸಿಕೊಳ್ಳಲು ಹಿಂದೂ ದೇವರು ಬೇಕು; ಉಳಿದಂತೆ ಮಾತೃಧರ್ಮವೂ ಬೇಡ, ಹಿಂದೂ ದೇವರು ಬೇಡ ಎಂದರೆ ಮುಖ್ಯವಾಗಿ ಇರಬೇಕಾದ ಶ್ರದ್ಧೆಯೇ ಅಲ್ಲಿ ಇಲ್ಲ ಎಂದಾಯಿತು. ಅವರ ಸರ್ವಶಕ್ತ ಏಕದೇವನಿಗೆ ಅವರ ಸಮಸ್ಯೆ ಪರಿಹರಿಸುವ, ಬಯಕೆ ಪೂರೈಸುವ ತಾಕತ್ತು ಇಲ್ಲವೇ ಎನ್ನುವ ಪ್ರಶ್ನೆಯೂ ಆಗ ಏಳುತ್ತದೆ.


                   ದೇವಾಲಯಗಳನ್ನು ಅಧಿಕಾರಶಾಹಿ ತನ್ನ ವಶವಾಗಿಸಿಕೊಳ್ಳಲು ಹವಣಿಸುವ ಸಂಗತಿ ಇಂದು ನಿನ್ನೆಯದಲ್ಲ. ರಾಜಪ್ರಭುತ್ವವಿದ್ದ ಕಾಲದಲ್ಲಿ ರಾಜನೇ ಮುಂದೆ ನಿಂತು ದೇವಾಲಯದ ಬೇಕು ಬೇಡಗಳನ್ನು ಪೂರೈಸಿದರೆ, ಬ್ರಿಟಿಷ್ ಪ್ರಭುತ್ವ ದೇವಾಲಯಗಳಿಗಿದ್ದ ಉಂಬಳಿಯನ್ನು ಕಿತ್ತುಕೊಂಡಿತು. ಸ್ವಾತಂತ್ರ್ಯದ ಬಳಿಕ ಬಂದ ಸೆಕ್ಯುಲರ್ ಸರಕಾರಗಳು ಬ್ರಿಟಿಷರ ಈ ನೀತಿಯನ್ನು ಇನ್ನಷ್ಟು ಬಿಗಿಯಾಗಿಯೇ ಅನುಸರಿಸಿದವು. ಇದಕ್ಕೆ ಪುರಿಯೂ ಹೊರತಲ್ಲ. ಇನ್ನೂರು ವರ್ಷಗಳ ಹಿಂದೆ ಪೈಕಾ ಕ್ರಾಂತಿಯಿಂದಾಗಿ ಬ್ರಿಟಿಷರಿಂದ ನಾಶವಾಗದೇ ಉಳಿದಿದ್ದ ಪುರಿಯ ಜಗನ್ನಾಥ ಮಂದಿರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬ್ರಿಟಿಷರು ಆರಂಭಿಸಿದಾಗ ಗಜಪತಿ(ರಾಜಾ ಮುಕುಂದ ದೇವ) ವಂಶದ ರಾಣಿ ಸೂರ್ಯಮಣಿ ಮುಂಚೂಣಿಯಲ್ಲಿ ನಿಂತು ಎದುರಿಸಿದಳು. ದುರ್ಭೀಕ್ಷ್ಯದಿಂದಾಗಿ ಒರಿಸ್ಸಾ ತನ್ನ ಮೂರನೇ ಒಂದು ಭಾಗದಷ್ಟು ಜನಸಂಖ್ಯೆಯನ್ನು ಕಳಕೊಂಡ ವರ್ಷವದು(1866). ಆಡಳಿತದಲ್ಲಿ ಅನುಭವವೇ ಇಲ್ಲದ ಕಿರಿ ವಯಸ್ಸಿನ ರಾಣಿ ತನ್ನ ಪತಿಯ ಮರಣದ ದುಃಖದ ಸನ್ನಿವೇಶವನ್ನೂ ತಾಳಿಕೊಂಡು ದತ್ತುಪುತ್ರನೊಬ್ಬನನ್ನು ಪಡೆದು, ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡು, ದೇವಾಲಯದಿಂದಲೇ ಅನ್ನಛತ್ರವನ್ನು ತೆರೆದು ಒರಿಸ್ಸಾದ ಪ್ರಜೆಗಳನ್ನು ಬದುಕಿಸಿದಳು. ದತ್ತುಪುತ್ರನನ್ನು ಬ್ರಿಟಿಷರು ಅಂಡಮಾನಿಗೆ ತಳ್ಳಿ ದೇವಾಲಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದಾಗ ಹಸುಳೆ ಮೊಮ್ಮಗನಿಗೆ ಪಟ್ಟಕಟ್ಟಿ ತಾನೇ ಮತ್ತೊಮ್ಮೆ ಅಧಿಕಾರ ಸೂತ್ರವನ್ನು ಕೈಗೆ ತೆಗೆದುಕೊಂಡು ದೇವಾಲಯವನ್ನು ಅನ್ಯಮತೀಯರ ತೆಕ್ಕೆಗೆ ಜಾರದಂತೆ ಕಾಪಾಡಿದಳು ಆ ಮಾತೆ. ದೇವಾಲಯದ ಆಡಳಿತ ಸಮಿತಿ ಸರಿಯಿಲ್ಲವೆಂದು ಬ್ರಿಟಿಷರು ಮತ್ತೆ ದೇವಾಲಯವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿದಾಗ ಕೋಲ್ಕತ್ತಾ ನ್ಯಾಯಾಲಯದಲ್ಲಿ ದಾವೆ ಹೂಡಿದಳಾಕೆ. ಇವತ್ತಿನಂತೆ ಹಿಂದೂಗಳು ಮುಗುಮ್ಮಾಗಿ ಉಳಿಯದೆ ಸಾಧು, ಸಂತ, ಮಹಾಂತ, ಸಾಮಾನ್ಯ ಜನರು ಒರಿಸ್ಸಾದ ಬೀದಿ ಬೀದಿಗಿಳಿದು ಪ್ರತಿಭಟಿಸಿದರು. ದೇವಾಲಯವೊಂದು ಹಿಂದೂಗಳನ್ನು ಯಾವುದೇ ಭೇದವಿಲ್ಲದೆ ಹೇಗೆ ಏಕತ್ರಗೊಳಿಸುತ್ತದೆ ಎನ್ನುವುದಕ್ಕೆ ನಿದರ್ಶನವಿದು. ಅಂತಹ ಏಕತೆಯನ್ನು ಮುರಿಯಬೇಕಾದರೆ ಹೇಗಾದರೂ ಮಾಡಿ ಶೃದ್ಧಾಕೇಂದ್ರದ ಮೇಲಿನ ಶ್ರದ್ಧೆಯನ್ನು ಮುರಿಯಬೇಕು. ಅದರ ಮೊದಲ ಹಂತವೇ ಇಂತಹ ಅಪಸವ್ಯಗಳು ಎನ್ನುವ ಗುಮಾನಿ ಹಿಂದೂಗಳಿಗೆ ಬರದಿದ್ದರೆ ಹಿಂದೂ ಅಸ್ಮಿತೆಯ ಈ ಪುಣ್ಯನೆಲ ಉಳಿಯದು.


                    ಭಾರತವನ್ನು ಏಕಸೂತ್ರದಲ್ಲಿ ಬೆಸೆದಿರುವುದು ಶೃದ್ಧಾ ಕೇಂದ್ರಗಳೇ. ಹಿಮಾಲಯದ ಗಿರಿಶಿಖರದಲ್ಲಿ ಮೊಳಗುವ ವೇದ ಘೋಷವೇ ರಾಮೇಶ್ವರದ ದೇಗುಲದೊಳಗೂ ಮೊಳಗುತ್ತದೆ. ಅಲ್ಲಿನ ಶಿವಲಿಂಗಕ್ಕೂ ಇಲ್ಲಿನದಕ್ಕೂ ಒಂದೇ ತೆರನಾದ ಅಭಿಷೇಕ! ಇಲ್ಲಿನ ಕಲೆ ಶಿಲ್ಪಗಳಲ್ಲೂ ಏಕಾತ್ಮತೆಯ ಸೂತ್ರವಿದೆ. ಆಸೇತು ಹಿಮಾಚಲದವರೆಗೂ ಎಲ್ಲಾ ದೇವರ ಮೂರ್ತಿಗಳೂ ಒಂದೇ ಸಂಸ್ಥೆಯಿಂದ ಮಾಡಿದ ರೀತಿ ಪಡಿಮೂಡಿವೆ. ಕಮಲ, ಕಲಷ, ಸ್ವಸ್ತಿಕ, ಧರ್ಮಚಕ್ರ, ಕಲ್ಪವೃಕ್ಷ, ಅಷ್ಟದಳ ಮುಂತಾದ ಸಂಕೇತಗಳು ಒಂದೇ ರೀತಿ ಇವೆ! ನಾಲ್ದೆಸೆಗಳಲ್ಲಿರುವ ಶಂಕರಪೀಠಗಳು ದೇಶದ ನಾಲ್ಕೂ ಮೂಲೆಗಳಿಗೆ ಕರೆದೊಯ್ದರೆ, ರಾಮೇಶ್ವರದಿಂದ ಕೈಲಾಸದವರೆಗೆ ಶಿವನೇ ರಾಷ್ಟ್ರವ್ಯಾಪಿಯಾಗಿ ನಿಂತಿದ್ದಾನೆ. ಹಿಂಗುಲಾತದಿಂದ ಕಾಮಾಕ್ಷಿಯವರೆಗೆ, ಜ್ವಾಲಾಮುಖಿಯಿಂದ ಕುಮಾರಿ ಕ್ಷೇತ್ರದವರೆಗೆ ಹರಡಿರುವ 51 ಶಕ್ತಿಪೀಠಗಳು, ದ್ವಾದಶ ಗಾಣಪತ್ಯ ಕ್ಷೇತ್ರಗಳು, ಅಸಂಖ್ಯ ವೈಷ್ಣವ ಕ್ಷೇತ್ರಗಳು ರಾಷ್ಟ್ರಶಕ್ತಿಯನ್ನು ಉದ್ದೀಪಿಸುತ್ತಾ ನಿಂತಿವೆ. ಈ ತೀರ್ಥ ಕ್ಷೇತ್ರಗಳೇ ಸಂಸ್ಕೃತಿ ಪ್ರಸಾರದ ಕೇಂದ್ರಗಳಾದುವು. ಈ ಕ್ಷೇತ್ರಗಳಿಂದ ಈ ಭೂಮಿಗೆ ದೈವತ್ವ ಪ್ರಾಪ್ತವಾಯಿತು. ನಮ್ಮ ದೇಶೀಯರನ್ನು ಬೆಸೆದು ಇಟ್ಟಿರುವುದು ಇಂತಹಾ ಶೃದ್ಧಾ ಕೇಂದ್ರಗಳೇ ಹೊರತು ಯಾವ ರಾಜಕೀಯ ಆಟಾಟೋಪವೂ ಅಲ್ಲ, ಸೆಕ್ಯುಲರ್ ಬುದ್ಧಿಯೂ ಅಲ್ಲ. ಉದಾಹರಣೆಗೆ ಭಾರತದ ನಾಲ್ಕು ಪ್ರಮುಖ ಕ್ಷೇತ್ರಗಳಾದ ಹರಿದ್ವಾರ, ಪ್ರಯಾಗ, ಉಜ್ಜಯಿನಿ ಮತ್ತು ನಾಸಿಕ್ನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು-ಸನ್ಯಾಸಿಗಳು ಅಲ್ಲಿಗೆ ಬರುತ್ತಾರೆ. ಕೋಟ್ಯಾಂತರ ಜನ ಅಲ್ಲಿ ಸೇರುತ್ತಾರೆ. ಯಾವ ರಾಜಕೀಯ ಪಕ್ಷವೂ ಅವರನ್ನು ಹಣ ಕೊಟ್ಟು ಕರೆತರುವುದಿಲ್ಲ. ಯಾವ ರಾಜಕೀಯ ಪಕ್ಷದ ರ್ಯಾಲಿಗೂ ಅವರು ಹೋಗುವುದಲ್ಲ. ಯಾವ ಸಿನಿಮಾ ನಟನನ್ನು ನೋಡಲೂ ಅವರು ಹೋಗುವುದಲ್ಲ. ಅದೊಂದು ರೀತಿ ಅರಿವಿನ ಕರೆ. ಅದೊಂದು ರೀತಿ ರಾಷ್ಟ್ರೀಯ ಸಮ್ಮೇಳನವೇ. ಈಗ ಇಂತಹ ಶ್ರದ್ಧಾಕೇಂದ್ರಗಳಿಗೆ ಅನ್ಯ ಮತೀಯರನ್ನು ನುಗ್ಗಿಸಿ ಅಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿ ಹಿಂದೂಗಳನ್ನು ಬೆಸೆದು ಇಟ್ಟಿರುವ ಏಕಸೂತ್ರವನ್ನು ತುಂಡರಿಸುವುದೇ ಛದ್ಮವೇಶಧಾರಿಗಳ ಉದ್ದೇಶವೇ?
(ವಿಕ್ರಮದಲ್ಲಿ ಪ್ರಕಟಿತ)


ಸೋಮವಾರ, ಮೇ 7, 2018

ಯುಗದ್ರಷ್ಟ - ಕ್ರಾಂತಿಪಥದ ಸತ್ಯ-ಸತ್ವ ದರ್ಶನ

ಯುಗದ್ರಷ್ಟ - ಕ್ರಾಂತಿಪಥದ ಸತ್ಯ-ಸತ್ವ ದರ್ಶನ

ಭಾರತದ ಚಿಂತನಶೀಲ ಬೌದ್ಧಿಕ ವರ್ಗವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದೇ ತಮ್ಮನ್ನು ಅಡಿಗಡಿಗೆ ನಡುಗಿಸಿದ 1857ರಂತಹ ಸಂಗ್ರಾಮ ಮರುಕಳಿಸದಂತೆ ಮಾಡಲು ಇರುವ ಏಕೈಕ ಉಪಾಯ ಎಂದರಿತ ಬ್ರಿಟಿಷರು 1885ರಲ್ಲಿ ತಮ್ಮವನೇ ಆದ ಎ.ಓ.ಹ್ಯೂಮ್ ನ ಮುಂದಾಳತ್ವದಲ್ಲಿ ಕಾಂಗ್ರೆಸಿನ ಸ್ಥಾಪನೆ ಮಾಡಿದರು. ಅದೇ ಸಮಯದಲ್ಲಿ ತಾಯಿ ಭಾರತಿಯ ರತ್ನಗರ್ಭದಿಂದ ಜನಿಸಿದ ಮಹರ್ಷಿ ದಯಾನಂದರು ಭಾರತೀಯರ ಜಡತೆಯನ್ನು ತೊಲಗಿಸಲು ಆರ್ಯಸಮಾಜವೆಂಬ ದೀಪವನ್ನು ಹಚ್ಚಿದರು. ಆ ದೀವಿಗೆಯ ಒಂದೊಂದು ಕಿಡಿಯೂ ಕ್ರಾಂತಿಯ ಕಿಡಿ! ಬ್ರಿಟಿಷ್ ಸರಕಾರದ ಆಶೀರ್ವಾದ ಪಡೆದು ಅವರ ಮಾತುಗಳಿಗೆ ಅನುಕೂಲಕರವಾಗಿ ನಡೆಯಬಲ್ಲ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಖಾನೆ ಕಾಂಗ್ರೆಸ್ಸಿನದ್ದು ರಾಜಕೀಯ ಪಥವಾದರೆ ಭಾರತದ ವೇದಕಾಲೀನ ಮೌಲ್ಯಗಳನ್ನಾಧರಿಸಿ ಭಾರತದ ಪುನರ್ನಿರ್ಮಾಣ ಮಾಡಲು ಹೊರಟಿದ್ದ ಆರ್ಯ ಸಮಾಜದ್ದು ಭವ್ಯ ದೇಶಭಕ್ತ ಪಥ. ಈ ಎರಡೂ ಪಥಗಳಲ್ಲಿ ಒಂದೇ ಕುಟುಂಬದ ಬೇರೆ ಬೇರೆ ಕವಲುಗಳು ಇದ್ದಂತಹ ಉದಾಹರಣೆಗಳು ಅದೆಷ್ಟೋ? ಖೇಮ ಸಿಂಹನ ಅಗ್ರ ಪುತ್ರ ಸುರ್ಜನ ಸಿಂಹ ಬ್ರಿಟಿಷರ ಪಾದಸೇವೆ ಮಾಡುವುದರೊಂದಿಗೆ ಆ ಧಾರೆಯೇ ಭಾರತಕ್ಕೆ ವಿಷಧಾರೆಯಾದರೆ ಮಧ್ಯಮ ಅರ್ಜುನ ಸಿಂಹನ ಕ್ಷಾತ್ರ-ಬ್ರಹ್ಮತೇಜ ಕ್ರಾಂತಿಧಾರೆಯಾಗಿ ಅವನ ಪೀಳಿಗೆಯೇ ತಾಯಿ ಭಾರತಿಯ ಪಾಲಿಗೆ ಅಮೃತಧಾರೆಯಾಗಿ ಹರಿಯಿತು. ಅಂತಹ ಅಮೃತಧಾರೆಯ ಒಂದು ಬಿಂದುವೇ ಸರದಾರ ಭಗತ್ ಸಿಂಗ್!

ಆತ್ಮವಿಸ್ಮೃತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಕೂಡಿರುವ ಆತ್ಮಜಾಗೃತ ಸಮಾಜವನ್ನು ಯಾರಿಗೂ ಗುಲಾಮಗಿರಿಯಲ್ಲಿಡಲು ಸಾಧ್ಯವಿಲ್ಲವೆಂಬ ಆರ್ಯ ಸಮಾಜದ ಚಿಂತನೆಯ ಅರಿವು, ಋಷಿ ದಯಾನಂದರ ದರ್ಶನದ ಜೊತೆಜೊತೆಗೆ ಆಗುವುದರೊಂದಿಗೆ ಅರ್ಜುನ ಸಿಂಹನ ವ್ಯಕ್ತಿತ್ವವೇ ಬದಲಾಯಿತು. ದೇವಸ್ಥಾನಗಳೇ ಆರ್ಯ ಸಮಾಜದಿಂದ ದೂರವಿದ್ದ ಕಾಲದಲ್ಲಿ ಬಹುದೂರದ ಗುರುದ್ವಾರದಿಂದ ಆತ ಆರ್ಯ ಸಮಾಜದ ಭವನವನ್ನು ಪ್ರವೇಶಿಸಿದಾಗಲೇ ಕ್ರಾಂತಿಯ ಬೀಜ ಆ ಪರಿವಾರದಲ್ಲಿ ಬಿತ್ತಲ್ಪಟ್ಟಿತು! ತನ್ನ ಮೂವರು ಪುತ್ರರಿಗೂ ಬುದ್ಧಿ ಪೂರ್ವಕ ಕ್ರಾಂತಿದೀಕ್ಷೆ ನೀಡಿದ ಆತ. ದೇಶಕ್ಕಾಗಿ ನಡೆದ ಯಾವುದೇ ಕ್ರಾಂತಿಯಾದರೂ ಭಾಗವಹಿಸುತ್ತಿದ್ದ ಅರ್ಜುನನ ಅಗ್ರ ಪುತ್ರ ಕಿಶನ್ ಸಿಂಹ ತುಂಬು ಯೌವನದಲ್ಲಿ ಅಮರನಾದ! ದ್ವಿತೀಯ ಅಜಿತ್ ಸಿಂಹ ಭಾರತ ಮಾತಾ ಸೊಸೈಟಿಯ ಮುಖೇನ ಚಾಪೇಕರ್ ಸಹೋದರರು ಹಾರಿಸಿದ್ದ ಕಿಡಿಯನ್ನು ವಿದೇಶಗಳಿಗೂ ಹಬ್ಬಿಸಿ, ತಾನೂ ಗಡೀಪಾರಾಗಿ ಹೋದ! ಮೂರನೆಯವ ಸ್ವರ್ಣ ಸಿಂಹ ಕೈಕೋಳ-ಬೇಡಿಗಳ ಚದುರಂಗದಾಟದಲ್ಲಿ ಜೀವನ ಪೂರ್ತಿ ಕಳೆದ! ಅರ್ಜುನ ಸಿಂಹ ತನ್ನ ಹಿರಿಯ ಮೊಮ್ಮಕ್ಕಳಾದ ಜಗತ್-ಭಗತ್ ರನ್ನು ಅವರ ಬ್ರಹ್ಮೋಪದೇಶದ ಸಮಯದಲ್ಲಿ ಯಜ್ಞವೇದಿಕೆಯ ಮೇಲೆ ನಿಲ್ಲಿಸಿಕೊಂಡು ದೇಶದ ಬಲಿ ವೇದಿಕೆಗೆ ದಾನ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ. ಅವರಿಬ್ಬರಿಗೂ ರಾಷ್ಟ್ರೀಯ ವಿಚಾರ-ಕ್ರಾಂತಿಯ ಸಂಸ್ಕಾರ ನೀಡಿದ. ಯಜ್ಞ ಕುಂಡದಲ್ಲಿ ಅಗ್ನಿಗೆ ಆಜ್ಯವೊದಗಿತ್ತು. ಪೂರ್ಣಾಹುತಿ ಬಾಕಿ ಇತ್ತು!

             ಸರದಾರ ಅರ್ಜುನ ಸಿಂಹ ಅತ್ಯಂತ ಸಾಹಸದಿಂದ ಅಂಧವಿಶ್ವಾಸ ಮತ್ತು ಪರಂಪರಾವಾದಗಳ ಜಡತೆಯಿಂದ ಮುಚ್ಚಿಹೋಗಿದ್ದ ತನ್ನ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದ. ಅಡ್ಡಾದಿಡ್ಡಿಯಾಗಿದ್ದ ಮಾರ್ಗವನ್ನು ಶುಚಿಗೊಳಿಸಿ ತನ್ನ ಮನೆಯಂಗಳದಲ್ಲಿ ಯಜ್ಞವೇದಿಕೆಗಳನ್ನು ಅಣಿ ಮಾಡಿದ. ಸರದಾರ್ ಕಿಶನ್ ಸಿಂಹ ಆ ಮನೆಯ ಅಂಗಳವನ್ನು ತೊಳೆದು ಸಾರಿಸಿ ಯಜ್ಞವೇದಿಕೆಯ ಮೇಲೆ ವಿಶಾಲವಾದ ಯಜ್ಞಕುಂಡವೊಂದನ್ನು ಸ್ಥಾಪಿಸಿದ. ಸರ್ದಾರ್ ಅಜಿತಸಿಂಹ್ ಆ ಯಜ್ಞಕುಂಡದಲ್ಲಿ ಸಮಿತ್ತುಗಳನ್ನು ಜೋಡಿಸಿ ಅದರಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿದ. ಸ್ವರ್ಣ ಸಿಂಹ ಅದನ್ನೂದಿ ಉರಿಯನ್ನೆಬ್ಬಿಸಿದ. ಅಜಿತ್ ಸಿಂಗ್ ಇಂಧನವನ್ನು ಹುಡುಕುತ್ತಾ ಹೋದಾಗ ಕಿಶನ್ ಸಿಂಹ ಅದರ ರಕ್ಷಣೆ ಮಾಡುತ್ತಿದ್ದ. 1964ನೇ ವಿಕ್ರಮ ಸಂವತ್ಸರದ ಆಶ್ವಯುಜ ಶುಕ್ಲ ತ್ರಯೋದಶಿ ಶನಿವಾರ ಬೆಳಿಗ್ಗೆ ಸೂರ್ಯ ತೇಜಸ್ಸೊಂದು ಭೂಮಿಗೆ ಬಿದ್ದಿತು! ಅದೇ ದಿನ ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಎಲ್ಲರೂ ಮಗುವನ್ನು "ಭಾಗ್ಯವಂತ" ಎಂದು ಕರೆದರು. ಅಂತಹ ಪರಿವಾರದ ಭಾಗ್ಯವಂತ ಭಗತ್ ಅಲ್ಲಿ ಇಲ್ಲಿ ಎಂದು ಇಂಧನವನ್ನು ಹುಡುಕದೆ ತನ್ನ ಜೀವನವನ್ನೇ ಇಂಧನವಾಗಿ ಮಾಡಿ ಆ ಯಜ್ಞಕುಂಡಕ್ಕೆ ಧುಮುಕಿದ. ಅದರ ಜ್ವಾಲೆ ದೇಶದಾದ್ಯಂತ ಹರಡಿತು. ಒಂದಿಡೀ ಪರಿವಾರ ತಾನು ಇತಿಶ್ರೀಯಾಗುವ ಮೊದಲು ಇತಿಹಾಸವನ್ನೇ ಸೃಷ್ಟಿಸಿತು. ಇದು ಭಾರತದ ಕ್ರಾಂತಿ ಪರಿವಾರವೊಂದು ಯುಗದೃಷ್ಟವಾದ ಬಗೆ. ಅದನ್ನು ವಿಸ್ತಾರವಾಗಿ ಬರೆಯಲು ಅದೇ ಪರಿವಾರದ ವೀರೇಂದ್ರ ಸಿಂಧು ಹುಟ್ಟಿ ಬರಬೇಕಾಯಿತು. ಅದನ್ನು ಕನ್ನಡಕ್ಕೆ ಅನುವಾದಿಸಲು ಬಾಬುಕೃಷ್ಣಮೂರ್ತಿಯವರಂತಹ ಸಮರ್ಥರೇ ಇಳಿದರು. ಅದು "ಯುಗದೃಷ್ಟ ಭಗತ್ ಸಿಂಗ್" ಆಗಿ ಕ್ರಾಂತಿಪಥದ ಸತ್ಯ-ಸತ್ವ ದರ್ಶನವನ್ನು ಕನ್ನಡಿಗರಿಗೀಯುತ್ತಿದೆ.

ಸನಾತನಕ್ಕೆ ರಮಣರಿಗಿಂತ ಸಮಾನ ಪದ ಇನ್ಯಾವುದಿದ್ದೀತು?

ಸನಾತನಕ್ಕೆ ರಮಣರಿಗಿಂತ ಸಮಾನ ಪದ ಇನ್ಯಾವುದಿದ್ದೀತು?

           ಅಭಿವ್ಯಕ್ತಿ ಸ್ವಾತಂತ್ರ್ಯ. ಇಂದಿನ ದಿನಗಳಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ವಿಷಯ. ಅತೀ ಹೆಚ್ಚು ದುರ್ಬಳಕೆಯೂ ಆಗುತ್ತಿರುವ ಪದಗಳಿವು. ಮನಸ್ಸಿಗೆ ತೋಚಿದ್ದನ್ನು ಸತ್ಯಾಸತ್ಯ ಪರಾಮರ್ಶಿಸದೆ ಸಾರ್ವಜನಿಕವಾಗಿ ಗಳಹುವವರು ಒಂದೊಡೆಯಾದರೆ, ಮಾತಾಡಿದವನ ಮಾತಿನ ಮರ್ಮ, ಸತ್ಯವನ್ನು ಪರಿಗಣಿಸದೆ ತಾವೆಣಿಸಿದ್ದೇ, ತಮ್ಮದ್ದೇ ಸತ್ಯ ಎಂದು ಬೊಬ್ಬಿರಿಯುವವರು ಇನ್ನೊಂದೆಡೆ. ಎರಡೂ ಕಡೆಗಳಲ್ಲಿ ಅಸತ್ಯವೇ ತಾಂಡವವಾಡುತ್ತಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಸತ್ಯ ಹಾಸಿಗೆ ಬಿಟ್ಟು ಆಕಳಿಸುತ್ತಿರುವಾಗ ಸುಳ್ಳು ಜಾತ್ರೆಗದ್ದೆಯಲ್ಲಿ ನಲಿಯುತ್ತಿರುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿರುವುದು ಅದೇ ಕಾರಣಕ್ಕಲ್ಲವೇ! ಆದರೆ ಇಂತಹಾ ಸುಳ್ಳುಗಳ ಸಾಮ್ರಾಜ್ಯಗಳನ್ನು ಕಟ್ಟಿಯೇ ಭಾರತೀಯತೆಯನ್ನು ಸಾಯಿಸುವ, ಸನಾತನ ಧರ್ಮವನ್ನು ಮರೆಯಾಗಿಸುವ ಯತ್ನದಲ್ಲಿರುವವರನ್ನು ಕಟ್ಟಿಹಾಕುವುದೇ ಈ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿರುವುಂತೂ ಸತ್ಯ. ಈ ಸುಳ್ಳುಗಳೆಲ್ಲಾ ಸುಳ್ಳು ಎಂದು ಜನಮಾನಸಕ್ಕೆ ಅರಿವಾಗುವ ಹೊತ್ತಿಗೆ ಸುಳ್ಳುಕೋರ ಪ್ರಭೃತಿಗಳು ಬಯಸಿದ ಹಾನಿ ಆಗಿರುತ್ತದೆ. ಸಂವಿಧಾನದ ಲೋಪದೋಷಗಳನ್ನಂತೂ ಅವರು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ.

              ಈ ಸುಳ್ಳುಕೋರರ ದಾಳಿಗೆ ಈ ಸಲ ಬಲಿಯಾದದ್ದು ತನ್ನ ಪಾಡಿಗೆ ತಾನು ಹಾಡಿಕೊಂಡಿದ್ದ ಒಂದು ಕೋಗಿಲೆ. ಇಳಯರಾಜ; ಯಾವುದೇ ವಿವಾದಕ್ಕೊಳಗಾಗದೆ ಹಾಡುವ ಕಾಯಕದಲ್ಲಿ ತೊಡಗಿದ್ದ ಗಾನಗಂಧರ್ವ. ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿಗಳ ಬಗೆಗೆ ಹಾಡುಗಳ ಗುಚ್ಛವೊಂದನ್ನು ಮಾಡಿ ಗುರು ಕಾಣಿಕೆ ಸಲ್ಲಿಸಿದ್ದ ಇಳಯರಾಜ ಸಂದರ್ಶನವೊಂದರಲ್ಲಿ ರಮಣ ಮಹರ್ಷಿಗಳ ಬಗೆಗೆ ಮಾತಾಡುವಾಗ ಅವರ ಜೊತೆ ಯೇಸುವನ್ನು ತುಲನೆ ಮಾಡಿದ್ದರು. ಇಳಯರಾಜರನ್ನು ಇಕ್ಕಟ್ಟಿಗೆ ಸಿಕ್ಕಿಸಿಲು ಕಾಯುತ್ತಿದ್ದ ಮಿಷನರಿಗಳು ಹಾಗೂ ಅವುಗಳ ಬೆಂಬಲಿಗರಿಗೆ ಅಷ್ಟೇ ಸಾಕಿತ್ತು. ಅವು ಇಳಯರಾಜರ ಗೌರವವನ್ನು ಇಳೆಗಿಳಿಸಲು ವಾಮಮಾರ್ಗಕ್ಕಿಳಿದವು. ಅಷ್ಟಕ್ಕೂ ಇಳಯರಾಜ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಗೂಗಲ್'ನ ಮುಖ್ಯ ಕಛೇರಿಯಲ್ಲಿ ತಮ್ಮ ಸಂಗೀತದ ಬದುಕಿನ ಎಳೆಗಳನ್ನು ಬಿಚ್ಚಿಡುವಾಗ ಅವರ ಮಾತು ರಮಣರತ್ತ ಹೊರಳಿತು. ತಾವು ರಮಣರ ಬಗೆಗೆ ಮಾಡಿರುವ ಸಂಗೀತ ಸಂಕಲನದ ಬಗೆಗೆ ಹೇಳುತ್ತಾ ರಮಣರ ಜೊತೆ ಯೇಸು ಮಾಡಿದ್ದೆನ್ನಲಾದ ಪವಾಡಗಳನ್ನು ಹೋಲಿಸಿದರು. ಇಳಯರಾಜ ಹೇಳಿದ್ದಿಷ್ಟೇ - "ಯೇಸು ಕ್ರಿಸ್ತ ಪುನರ್ಜನ್ಮ ಪಡೆದು ಸಾವಿನ ಬಳಿಕ ಮತ್ತೆ ಬಂದ ಎನ್ನುತ್ತಾರೆ. ನಾನು ಸಮಯವಿದ್ದಾಗ ಯು-ಟ್ಯೂಬಿನಲ್ಲಿ ಡಾಕ್ಯುಮೆಂಟರಿಗಳನ್ನು ನೋಡುತ್ತೇನೆ. ಪುನರ್ಜನ್ಮವನ್ನು ನಿರಾಕರಿಸುವಂತಹ ಅನೇಕ ಡಾಕ್ಯುಮೆಂಟರಿಗಳು ಅಲ್ಲಿವೆ. ಅವು ಪುನರ್ಜನ್ಮದ ವಿರುದ್ಧವಾಗಿ ಅನೇಕ ಪೂರಕ ವಾದ, ದಾಖಲೆ ಹಾಗೂ ಮಾಹಿತಿಗಳನ್ನು ಕೊಡುತ್ತವೆ. ಕಳೆದ ಎರಡು ಸಾವಿರ ವರ್ಷಗಳಿಂದ ಕ್ರೈಸ್ತ ಮತ ಉಳಿದು ಬೆಳೆದದ್ದೇ ಯೇಸು ಪುನರ್ಜನ್ಮ ತಳೆದು ಬರುತ್ತಾನೆ ಎನ್ನುವ ನಂಬಿಕೆಯ ಮೇಲೆಯೇ! ಆದರೆ ಆತನ ಪುನರ್ಜನ್ಮವನ್ನು ನಿರಾಕರಿಸುವಂತಹ ಪೂರಕ ದಾಖಲೆ ಸಹಿತ ಡಾಕ್ಯುಮೆಂಟರಿಗಳನೇಕ ಸಿಗುತ್ತವೆ. ಯೇಸುವಿಗೆ ಪುನರ್ಜನ್ಮ ಇತ್ತೋ ಇಲ್ಲವೋ, ಆದರೆ ನಿಜವಾದ ಪುನರ್ಜನ್ಮ ರಮಣ ಮಹರ್ಷಿಗಳಿಗೆ ಮಾತ್ರ ಆಗಿತ್ತು. ಅದೂ ಅವರ ಹದಿನಾರನೆಯ ವಯಸ್ಸಿನಲ್ಲಿ ಉಂಟಾದ ಸಾವಿನ ಬಗೆಗಿನ ಭಯ, ನಿಜವಾಗಿ ಸಾವೆಂದರೆ ಏನು ಎನ್ನುವುದನ್ನು ತಿಳಿದುಕೊಳ್ಳುವ, ಸಾವನ್ನು ಅನುಭವಕ್ಕೆ ತಂದುಕೊಳ್ಳುವ ನಿರ್ಧಾರಕ್ಕೆ ತಂದಿರಿಸಿತು. ಆತ ಮಲಗಿಕೊಂಡು, ಉಸಿರಾಟ ಹಾಗೂ ದೇಹದ ಎಲ್ಲಾ ಕ್ರಿಯೆಗಳನ್ನು ನಿಲ್ಲಿಸಿ ತಾನು ಸಾವಿನತ್ತ ಸಾಗುತ್ತಿರುವುದನ್ನು ಸ್ವತಃ ವೀಕ್ಷಿಸಿದರು. ಅದರ ಪ್ರತಿಯೊಂದು ಹಂತದಲ್ಲೂ ಆತ ಸಾಯುತ್ತಿರುವುದು ಯಾರು ಎನ್ನುವ ಪ್ರಶ್ನೆಯನ್ನು ಹಾಕುತ್ತಾ ಕೊನೆಗೆ ಉತ್ತರ ಕಂಡುಕೊಂಡರು. ಮತ್ತೆ ಯಥಾ ಸ್ಥಿತಿಗೆ ಮರಳಿದರು. ಇದು ರಮಣರಿಗಾದ ಪುನರ್ಜನ್ಮ!"

              ಈ ಹೇಳಿಕೆಯಿಂದ ಗರಂ ಆದ ಮಿಷನರಿಗಳು ಇಳಯರಾಜ ವಿರುದ್ಧ ಕಿಡಿಕಾರಲಾರಂಬಿಸಿದವು. ಕೆಲವು ಗುಂಪುಗಳು ಇಳಯರಾಜ ಮನೆಯೆದುರು ಪ್ರತಿಭಟನೆಯನ್ನೂ ಕೈಗೊಂಡವು. ಕೆಲವರು ಅವರ ಮೇಲೆ ದಾಳಿ ಮಾಡಲೂ ಅನುವಾದರು. ಅಂತಹವರನ್ನು ಪೊಲೀಸರು ಬಂಧಿಸಿದರು. ಪುಣ್ಯಕ್ಕೆ ಅಷ್ಟರಮಟ್ಟಿಗೆ ಈ ದೇಶದಲ್ಲಿ ಕಾನೂನು ಸುವ್ಯವಸ್ಥೆ ಉಳಿದುಕೊಂಡಿದೆ! ಇಳಯರಾಜರಿಗೆ ನಗರ ಪೊಲೀಸ್ ಕಮೀಷನರ್ ಶಿಕ್ಷೆ ವಿಧಿಸಬೇಕೆಂದು ಸಹಿ ಸಂಗ್ರಹ ಅಭಿಯಾನವೂ ನಡೆಯಿತು. ಆದರೆ ಇಷ್ಟೆಲ್ಲಾ ನಡೆದರೂ ಸುಳ್ಳು ಸುಳ್ಳೇ ಹೇಳುವವರನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಮರ್ಥಿಸುತ್ತಿದ್ದ ವರ್ಗವೊಂದು ಇಳಯರಾಜರ ಬೆಂಬಲಕ್ಕೆ ನಿಲ್ಲದೆ ಮುಗುಮ್ಮಾಗಿ ಉಳಿಯಿತು! ಅಷ್ಟಕ್ಕೂ ಆ ವರ್ಗದ ಬೆಂಬಲ ಇಳಯರಾಜರಿಗೆ ಸಿಗುವ ಸಂಭವ ನೂರು ಪ್ರತಿಶತವೂ ಇಲ್ಲ. ಸನಾತನ ಧರ್ಮದ ಪ್ರತಿಯೊಂದನ್ನೂ ತುಚ್ಛವಾಗಿ ಕಾಣುವ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂದಾಳುಗಳು ಸನಾತನ ಪರಂಪರೆಯನ್ನು ಗೌರವಿಸುವ, ಸತ್ಯವನ್ನು ಹೇಳುವಾತನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ನಿರೀಕ್ಷೆಯನ್ನಾದರೂ ಇಟ್ಟುಕೊಳ್ಳಬಹುದೇ?

                ಭಾರತದಲ್ಲಿ ಅವ್ಯಾಹತವಾಗಿ ಕ್ರೈಸ್ತೀಕರಣಗೊಳ್ಳುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ತಮಿಳುನಾಡು. ಅಲ್ಲಿ ಕ್ರೈಸ್ತರ ಸಂಖ್ಯೆಯ ಏರಿಕೆ ರಾಷ್ಟ್ರೀಯ ಜನಸಂಖ್ಯಾ ಏರಿಕೆಗಿಂತ ಜಾಸ್ತಿ! ಮಧುರೈ, ಕನ್ಯಾಕುಮಾರಿ, ರಾಮೇಶ್ವರಂನಂತಹ ತೀರ್ಥಕ್ಷೇತ್ರಗಳಲ್ಲೇ ಮತಾಂತರಕ್ಕೆ ಪೂರಕವಾದ ಗೋಡೆಬರಹಗಳು, ಫಲಕಗಳು ಸಾರ್ವಜನಿಕವಾಗಿಯೇ ಕಾಣಸಿಗುತ್ತವೆ. "ಯೇಸುವೊಬ್ಬನೇ ನಿಜವಾದ ದೇವರು" ಎನ್ನುವ ಫಲಕಗಳು ತಮಿಳುನಾಡಿನಾದ್ಯಂತ ರಾರಾಜಿಸುತ್ತಿವೆ. ಹಾಗಾದರೆ ಉಳಿದೆಲ್ಲಾ ದೇವರುಗಳು ಸುಳ್ಳು ಎಂದೇ? ಸಾರ್ವಜನಿಕವಾಗಿ ಅವರು ಹೇಳಿಕೊಳ್ಳುವ ನಿಜವಾದ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಹಕ್ಕು ಈ ನೆಲದ ಜನರಿಗೆ ಇದೆಯಲ್ಲವೇ? ಹೇಳಿ ಕೇಳಿ ಪ್ರತಿಯೊಂದನ್ನೂ ಓರೆಗೆ ಹಚ್ಚಿ, ಅರಿತು ಅದು ಸತ್ಯವೆಂದು ಕಂಡಾಗ ಅದನ್ನೊಪ್ಪಿ ನಡೆದ ದೇಶ ಇದು. ಹಾಗಾಗಿಯೇ ಇಲ್ಲಿ ಸತ್ಯದ ಭದ್ರ ತಳಪಾಯವಿದ್ದ ವಿಚಾರಗಳು ಮಾತ್ರ ನಿಂತವು. ದೇಶ ದೇಶಗಳನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡ ಹೊರಗಿನಿಂದ ಬಂದ ಸೆಮೆಟಿಕ್ ಮತಗಳು ಹಲವು ಶತಮಾನಗಳ ಕಾಲ ಬಗೆಬಗೆಯ ಉಪಾಯಗಳನ್ನು ಪ್ರಯೋಗಿಸಿದರೂ ಇಲ್ಲಿನವರನ್ನು ಸಂಪೂರ್ಣವಾಗಿ ಮತಾಂತರಿಸಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಇಲ್ಲಿನವರ ಪ್ರಶ್ನಿಸುವ ಗುಣ, ಮತಕ್ಕಿಂತಲೂ ಧರ್ಮಕ್ಕೆ ಪ್ರಾಶಸ್ತ್ಯ ಕೊಡುವ ಸನಾತನ ಪ್ರವೃತ್ತಿ. ಮಿಷನರಿಗಳು ಸುಮ್ಮನೆ ಹೇಳಿಕೊಂಡರೆ ನಮಗೇನು, ನಮ್ಮದ್ದನ್ನು ನಾವು ನೋಡಿಕೊಂಡರಾಯಿತು, ಇಳಯರಾಜರು ಸುಮ್ಮನೆ ಕೆದಕಿದರು ಅನ್ನುವವರಿರಬಹುದು. ಆದರೆ ಮಿಷನರಿಗಳು ಹೇಳುವಂತೆ ಕ್ರಿಸ್ತ ಪುನರ್ಜನ್ಮ ತಾಳಿದ್ದ ಎನ್ನುವುದು ಐತಿಹಾಸಿಕ ಸತ್ಯ ಎಂದಾದರೆ ಅದು ಐತಿಹಾಸಿಕ ಮಾನದಂಡಗಳುಳ್ಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕಲ್ಲವೇ? ಇಳಯರಾಜ ಮಾಡಿದ್ದೂ ಅದನ್ನೇ! ಅವರ ಪ್ರಶ್ನೆಯೂ ಇತಿಹಾಸದ ಮಾನದಂಡಗಳನ್ನು ಅನುಸರಿಸಿಯೇ ಇತ್ತು. ಅವರ ನಿರ್ಣಯಾತ್ಮಕ ಉತ್ತರವೂ! ಯಾವ ಮತ ಪ್ರಶ್ನಿಸಿದಾಗ ಉತ್ತರ ಹೇಳಲು ಸೋಲುತ್ತದೋ ಅದು ಸತ್ಯ ಆಗುವುದಾದರೂ ಹೇಗೆ? ಅದರ ದೇವರು ಸತ್ಯದೇವನಾಗಿ ಉಳಿಯುವುದಾದರೂ ಹೇಗೆ? ಸ್ಥಾನ, ಧನ, ಪ್ರಾಣಗಳ ಲೋಭವೊಡ್ಡಿ ಒಂದು ಮತ ಎಷ್ಟು ಜನರನ್ನು ಮತಾಂತರಿಸಬಹುದು? ಎಷ್ಟು ವರ್ಷಗಳ ಕಾಲ?

                 ವಾಸ್ತವದಲ್ಲಿ ಯೇಸುವಿನ ಪುನರ್ಜನ್ಮದ ಕಲ್ಪನೆ ಹುಟ್ಟಿದ್ದು ಸುಮೇರಿಯನ್ನರ ಪುರಾಣ ಕಥೆಯನ್ನಾಧರಿಸಿ. ಸುಮೇರಿಯನ್ ಮತದಲ್ಲಿ ಅವರ ದೇವತೆ ಸತ್ತು ಮೂರು ರಾತ್ರಿ ಹಾಗೂ ಮೂರು ಹಗಲುಗಳ ಬಳಿಕ ಹುಟ್ಟಿ ಬರುವ ಕಥೆಯಿದೆ. ಅದನ್ನೇ ಆ ಬಳಿಕ ಬಂದ ಕ್ರೈಸ್ತ ಮತ ತನ್ನದಾಗಿಸಿಕೊಂಡಿತು. ನಿಜವಾಗಿಯೂ ಏಸು ಎಂಬ ವ್ಯಕ್ತಿ ಇದ್ದನೇ ಎನ್ನುವ ಸಂಶಯ ಹಲವು ಸಂಶೋಧಕರಲ್ಲಿದೆ. ಇದ್ದಿದ್ದರೂ ಹೊಸ ಒಡಂಬಡಿಕೆಯಲ್ಲಿ ಚಿತ್ರಿಸಿರುವ ರೀತಿಯಲ್ಲೇ ಇದ್ದನೇ ಎನ್ನುವ ಇನ್ನೊಂದು ಅನುಮಾನವೂ ಇದೆ. "ಡೆಡ್ ಸೀ ಸ್ಕ್ರಾಲ್ಸ್" ಸಂಶೋಧನೆಯ ಬಳಿಕ ಈ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಕ್ರೈಸ್ತ ಮತಕ್ಕೆ ಈಗಿರುವ ಸ್ವರೂಪ ಸಿಕ್ಕಿದ್ದು ಮೊದಲ ಚರ್ಚಿನ ಸ್ಥಾಪಕನಾದ ಪಾಲ್'ನಿಂದ. ಇಂದು ಅನೇಕ ಇತಿಹಾಸಕಾರರು, ವಿಚಾರವಾದಿಗಳು ಗೋಸ್ಪೆಲ್ಸ್ ನಲ್ಲಿ ವರ್ಣಿಸಿದ್ದೆಲ್ಲಾ ಕಟ್ಟುಕತೆಯಲ್ಲದೆ ಇನ್ನೇನೂ ಅಲ್ಲ ಎಂದು ಸಾಕ್ಷ್ಯ ಸಮೇತ ರುಜುವಾತುಪಡಿಸಿದ್ದಾರೆ. ಅದರಲ್ಲೂ "ಜೇಸಸ್ ಸೆಮಿನಾರ್" ಎನ್ನುವ ಕ್ರೈಸ್ತ ಮತದ ಆರಂಭದ ದಿನಗಳ ಬಗ್ಗೆ ಅಧ್ಯಯನದ ಸಲುವಾಗಿ ಹುಟ್ಟಿಕೊಂಡ ಕ್ರೈಸ್ತ ಇತಿಹಾಸಕಾರ ಹಾಗೂ ವಿಚಾರವಾದಿಗಳ ಸಂಸ್ಥೆ "ಫೈವ್ ಗಾಸ್ಪೆಲ್ಸ್"ನಲ್ಲಿ ಐತಿಹಾಸಿಕವಾದ ಯೇಸು ಗೋಸ್ಪೆಲ್ಸ್'ನಲ್ಲಿರುವ ಯಾವುದನ್ನೂ ಹೇಳಲಿಲ್ಲ. ಅದರಲ್ಲೂ "ಲಾರ್ಡ್ಸ್ ಪ್ರೇಯರ್"ನಲ್ಲಿ ಅವನು ಹೇಳಿರಬಹುದಾದ ಸಾಧ್ಯತೆ ಇರುವ ಪದ "ಅವರ್ ಲಾರ್ಡ್" ಮಾತ್ರ ಎನ್ನುವ ಐತಿಹಾಸಿಕ ಸತ್ಯವನ್ನು ಸಂಶೋಧಿಸಿದೆ! ಹೀಗೆ ಸುಳ್ಳಿನ ತಳಪಾಯದ ಮೇಲೆ ಸೌಧ ಕಟ್ಟುತ್ತಿರುವ ಮಿಷನರಿಗಳು ಸಾಧಿಸುವುದಾದರೂ ಏನನ್ನು? ವಿಗ್ರಹ ಪೂಜೆ, ವೇದ, ಯಾಗಗಳಂಥ ಧಾರ್ಮಿಕ ಆಚರಣೆಗಳಿಂದ ಹಿಡಿದು ಹೂ ಮುಡಿಯುವುದು, ಬಳೆ ತೊಡುವುದು, ತಿಲಕ ಧರಿಸುವಂತಹ ರೀತಿ-ರಿವಾಜು-ಸಂಪ್ರದಾಯಗಳೆಲ್ಲವೂ ಮೌಡ್ಯವೆನ್ನುವ ಮಿಷನರಿಗಳು ತಮ್ಮ ಹುಟ್ಟಿನಲ್ಲೇ ಮೌಢ್ಯವೊಂದು, ಸುಳ್ಳೊಂದು ಅಡಗಿರುವುದನ್ನು ಎಷ್ಟು ನಾಜೂಕಾಗಿ ಮರೆಯಾಗಿರಿಸುತ್ತಾರೆ! ಹೀಗೆ ಸ್ವಂತ ದೇವರಿಲ್ಲದ, ಸ್ವಂತದ್ದಾದ ಮತ ಗ್ರಂಥ-ವಿಚಾರಗಳಿಲ್ಲದ ಮತವೊಂದು ಆಮಿಷಗಳನ್ನೊಡ್ಡದೇ ಬದುಕುವುದಾದರೂ ಹೇಗೆ? ಯೇಸು ದೇವರ ಮಗ, ಜಗತ್ತಿನ ಜನರ ಪಾಪಗಳನ್ನು ಕಳೆಯುವುದಕ್ಕಾಗಿ ಸತ್ತು ಮತ್ತೆ ಜನ್ಮವೆತ್ತಿದ ಎನ್ನುವಂತಹ ತಥಾಕಥಿತ ಹೇಳಿಕೆಯನ್ನಿಟ್ಟುಕೊಂಡು ಜಗತ್ತನ್ನೇ ಆಳಲು ಶುರುವಿಟ್ಟುಕೊಂಡರು. ದೇಶ ದೇಶಗಳನ್ನೇ ಲೂಟಿ ಹೊಡೆದು ತಮ್ಮ ಖಜಾನೆ ತುಂಬಿಸಿಕೊಂಡರು. ವಸಾಹತುಗಳನ್ನೇ ನಿರ್ಮಿಸಿದರು, ಜಗದ ಇನ್ನುಳಿದ ನಂಬಿಕೆಯ ಜನರನ್ನು ಮತಾಂತರಿಸಿ ಗುಲಾಮರನ್ನಾಗಿಸಿದರು. ಹಲವು ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿ ರಾಜಕೀಯವಾಗಿ ಬಲಿಷ್ಟಗೊಂಡರು. ಮತಾಂತರಿತರಿಂದ ಹಣ ಲೂಟಿ ಹೊಡೆದು ತಮ್ಮ ಭಂಡಾರ ಹೆಚ್ಚಿಸಿಕೊಂಡರು. ಅದರ ಒಂದಷ್ಟು ಪಾಲನ್ನು ಮತ್ತೆ ಮತಾಂತರಕ್ಕೆ ಬಳಸಿಕೊಂಡರು. ಮೂವತ್ತಮೂರು ಕೋಟಿ ದೇವತೆಗಳನ್ನು ಒಪ್ಪಿಕೊಂಡ ನಮಗೆ ಯೇಸುವೊಬ್ಬ ಹೆಚ್ಚಾಗುತ್ತಾನೆಯೇ ಎಂದು ಭಾಷಣ ಕುಟ್ಟುವವರೆಲ್ಲಾ ತಮ್ಮ ಚಿಂತನೆಯನ್ನು ಬದಲಿಸಿಕೊಳ್ಳಬೇಕಾದ ವಿಚಾರವಿದು. ಇಳಯರಾಜರು ತಮಗರಿವಿಲ್ಲದಂತೆಯೇ ಸತ್ಯವೊಂದನ್ನು ಹೇಳಿ ಸಮಾಜವನ್ನು ಚಿಂತನೆಗೆ ಹಚ್ಚಿದರು. ಈ ವಿಚಾರ ಮಾಧ್ಯಮಗಳಲ್ಲಿ ಚರ್ಚಿತವಾಗದೇ ಇರಬಹುದು, ಆದರೆ ಸಮಾಜದ ಕೆಲವೊಂದು ಭಾಗಕ್ಕಾದರೂ ತಲುಪಬಹುದು.

                "ನೀವು ಪಾಪಿಗಳು. ದೇವರು ಮುಲಾಜಿಲ್ಲದೆ ನಿಮ್ಮನ್ನು ಶಿಕ್ಷಿಸುತ್ತಾನೆ. ಪ್ರವಾದಿಯಾದ ನನ್ನ ಬೋಧನೆಯಂತೆ ನಡೆದರೆ ಮಾತ್ರ ನಿಮಗೆ ಸ್ವರ್ಗ ಸಿಗುವುದು. ಇದನ್ನು ನೀನು ನಂಬಬೇಕು; ಬಲಪ್ರಯೋಗ ಮಾಡಿಯಾದರೂ ಇತರರನ್ನು ನಂಬಿಸಬೇಕು" ಇದು ಸೆಮೆಟಿಕ್ ಮತಗಳ ಮುಖ್ಯ ಬೋಧನೆ. ಬೈಬಲನ್ನು ನಂಬದಿದ್ದರೆ ನರಕವೇ ಗತಿ ಎನ್ನುವುದು ಕ್ರೈಸ್ತ ಮತದಲ್ಲಿರುವ ಮುಖ್ಯ ವಿಚಾರ. ಯೇಸುವನ್ನು ಶಿಲುಬೆಗೇರಿಸಿದವರು ಯೆಹೂದಿಗಳು ಎನ್ನುವ ತಪ್ಪು ಗ್ರಹಿಕೆಯಿಂದ ಅದೆಷ್ಟು ಯೆಹೂದ್ಯರನ್ನು ಕ್ರೈಸ್ತರು ಕೊಲ್ಲಲಿಲ್ಲ, ಮತಾಂತರಗೊಳಿಸಲಿಲ್ಲ. ಕ್ರೈಸ್ತನಾಗಿದ್ದ ಹಿಟ್ಲರ್ ಅರವತ್ತು ಲಕ್ಷ ಯೆಹೂದ್ಯರನ್ನು ಗ್ಯಾಸ್ ಚೇಂಬರಿಗೆ ತಳ್ಳಿ ಕೊಲ್ಲುವ ವಿಚಾರ ತಿಳಿದಿದ್ದೂ ಆಗಿನ ಪೋಪ್ ಮುಗುಮ್ಮಾಗಿ ಉಳಿದದ್ದು ಇತಿಹಾಸ ಮರೆತಿಲ್ಲ. ಗೋವಾದ ಸಮಾಜ, ಜನಜೀವನ ಹಾಗೂ  ಭವಿಷ್ಯವನ್ನೇ ಬದಲಿಸಿದ ಗೋವಾ ಇನ್ಕ್ವಿಷನ್, ಆಶ್ರಯ ಕೊಟ್ಟವರಿಗೇ ಬೆನ್ನಿಗೆ ಚೂರಿ ಹಾಕಿದ ಸಿರಿಯನ್ ಕ್ರೈಸ್ತರ ವಿಶ್ವಾಸದ್ರೋಹ, ಆಫ್ರಿಕಾದ ರೂಪುರೇಶೆಯನ್ನೇ ಬದಲಿಸಿದ ಮತಾಂತರ ಇವೆಲ್ಲಕ್ಕೂ ಕಾರಣ ಅದೇ - ಕ್ರೈಸ್ತ ಇತಿಹಾಸದ ಮೊದಲ ಹಸಿ ಸುಳ್ಳು!

                 ಟಿವಿ ಚಾನಲ್ಲುಗಳಲ್ಲಿ "ಈ ಸಂಖ್ಯೆಗೆ ಕರೆ ಮಾಡಿ. ನಿಮ್ಮ ಪರವಾಗಿ ಯೇಸುವಿನಲ್ಲಿ ಪ್ರಾರ್ಥಿಸಿ ನಿಮ್ಮ ಸಮಸ್ಯೆಯನ್ನು ನಿವಾರಿಸುತ್ತೇವೆಂಬ" ಎನ್ನುವಂತಹಾ ಮತಾಂತರದ ಗಿಮಿಕ್ಕುಗಳೂ ಅದೆಷ್ಟಿವೆ. 2014ರ ಕೊನೆಯ ಭಾಗದಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್ ನಗರಗಳಲ್ಲಿ "ಬದುಕು ಬದಲಾಯಿಸುವ ಪುಸ್ತಕ ಓದಲು ಈ ಸಂಖ್ಯೆಗೆ ಕರೆ ಮಾಡಿ" ಎಂದು ಲಕ್ಷಾಂತರ ಮಂದಿಯನ್ನು ಮತಾಂತರ ಮಾಡಿ ಕತ್ತಲ ಕೂಪಕ್ಕೆ ದೂಡಿದ ಕೃತ್ಯವೇನು ಕಡಮೆಯದೇ? ಹಿಡಿಯಷ್ಟಿದ್ದ ಈ ಮತೀಯರಿಂದ ಹಿಂದೂ ಸಮಾಜ ಸದಾ ದೌರ್ಜನ್ಯಕ್ಕೆ ಗುರಿಯಾಗುತ್ತಲೇ ಬಂದಿದೆ. ವೇಗವಾಗಿ ವರ್ಧಿಸುತ್ತಿರುವ ಅವರ ಸಂಖ್ಯೆಯಿಂದಾಗಿ ಕೆಲ ದಶಕಗಳಲ್ಲಿ ಹಿಂದೂಗಳು ಸರ್ವನಾಶವಾಗುವ ಭೀಕರ ಪರಿಸ್ಥಿತಿ ತಲೆದೋರುತ್ತಿದೆ. ಇಲ್ಲಿನ ಸೆಕ್ಯುಲರ್ ಪಕ್ಷಗಳು ಮುಲ್ಲಾ ಹಾಗೂ ಮಿಷನರಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಲವು ಸವಲತ್ತುಗಳನ್ನು ನೀಡಲು ದೇಶದ ಸಂವಿಧಾನದಲ್ಲಿ ಒಪ್ಪಿಕೊಂಡಿವೆ. ಈ ಮತಗಳವರಿಗೆ ಸಾಧ್ಯವಾದಷ್ಟು ಪಂಥಗಳನ್ನು ಸೃಷ್ಟಿಸಿಕೊಳ್ಳಲು ಹಾಗೂ ವಿಸ್ತರಿಸಲು ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದರಿಂದ ಅವರಿಗೆ ತಮ್ಮ ಕಬಂಧ ಬಾಹುಗಳನ್ನು ಚಾಚಲು ಅವಕಾಶ ಮಾಡಿಕೊಟ್ಟಂತಾಗಿದೆ. ವಿದೇಶಗಳಿಂದ ಬರುವ ಅಪಾರ ಪ್ರಮಾಣದ ನೆರವಿನ ಜೊತೆ ಸರಕಾರಗಳಿಂದ ಸಿಗುವ ಬಗೆಬಗೆಯ ಸವಲತ್ತುಗಳು ತಮ್ಮ ಸಂಖ್ಯಾಬಲ ವಿಸ್ತರಣೆಗೆ ಈ ಮತಗಳಿಗೆ ನೆರವಾಗಿವೆ. ರಾಜಕೀಯವಾಗಿ ನೆಲೆಗೊಳ್ಳಲು ಪಕ್ಷಗಳನ್ನು ಸ್ಥಾಪಿಸಿಕೊಂಡ ಈ ಮತಗಳು ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಅಥವಾ ತಮಗೆ ಸಹಕರಿಸುವ ರಾಷ್ಟ್ರೀಯ ಪಕ್ಷದೊಡನೆ ಸೇರಿ ಕೆಲಸ ಮಾಡುತ್ತವೆ. ಇದರ ಹಿಂದೆ ಅಧಿಕಾರ ಪಡೆಯುವುದು, ತನ್ಮೂಲಕ ತಮ್ಮ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದು, ತಮ್ಮ ಆಟಾಟೋಪಕ್ಕೆ ರಾಜಕೀಯ ರಕ್ಷಣೆಯನ್ನು ಪಡೆಯುವ ಸ್ಪಷ್ಟ ಉದ್ದೇಶವಿರುತ್ತದೆ. ಯಾವ ಉದ್ದೇಶ ಶತಶತಮಾನಗಳ ಪರ್ಯಂತ ಸಾಧ್ಯವಾಗಲಿಲ್ಲವೋ ಅವೆಲ್ಲವೂ ಅರೆಬೆಂದ ರಾಜಕಾರಣಿಗಳ ಅಧಿಕಾರದ ಹಪಹಪಿಯ ಕಾರಣ ಕೆಲವೇ ದಶಕಗಳಲ್ಲಿ ಸಾಧ್ಯವಾಗುವ ಲಕ್ಷಣಗಳು ಗೋಚರಿಸುತ್ತವೆ.

                  ಹಿಂದೂ ಧರ್ಮ ನಿರ್ದಿಷ್ಟ ಕಾಲದಲ್ಲಿ ಯಾವ ಮತಸ್ಥಾಪಕನಿಂದಲೂ ಸ್ಥಾಪಿತವಾದದ್ದಲ್ಲ. ಸಾರ್ವತ್ರಿಕವಾದ ಅದು ಯಾವುದೋ ಒಂದು ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಸೆಮೆಟಿಕ್ ಮತಗಳೆಲ್ಲಾ ತಾವು ಹೇಳಿದ್ದೇ ಸತ್ಯ ಎಂದರೆ ಭಾರತದಲ್ಲಿ ಹುಟ್ಟಿದ ಮತಗಳೆಲ್ಲಾ ತರ್ಕವನ್ನು ಒಪ್ಪಿಕೊಂಡವು. ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂದಿತು ವೇದ. ಪ್ರವಾದಿಗಳೆಲ್ಲಾ ತಮ್ಮ ಬಗೆಗೇ ಕೊಚ್ಚಿಕೊಂಡರೆ ಋಷಿಗಳೆಲ್ಲಾ ವಿಶ್ವಾತ್ಮಕ ಸತ್ಯದ ಬಗ್ಗೆ ಮಾತ್ರ ಹೇಳಿದರು. ಪ್ರವಾದಿಗಳೆಲ್ಲಾ ತಮಗೆ ಮಾತ್ರ ಸೃಷ್ಟಿಕರ್ತನ ಜೊತೆ ವಿಶೇಷ ಸಂಬಂಧವಿದೆಯೆಂದು ಹೇಳಿಕೊಂಡರೆ ಋಷಿಗಳಾದರೋ ಪ್ರಪಂಚದ ಪ್ರತಿಯೊಂದು ಜೀವಿಯೂ ಸಾಧನೆ ಮಾಡಿ ಆತ್ಮೋನ್ನತಿಯನ್ನು ಹೊಂದಬಹುದು ಎಂದರು. ಇಲ್ಲಿ ಅವಧೂತ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ಮಾತು ಉಲ್ಲೇಖಾರ್ಹ - "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಾವು ಹಾಗೆ ಮಾಡಬೇಕಾಗುತ್ತದೆ. ಅದೇ ರೀತಿ ಈ ಅವಕಾಶವನ್ನು ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ನಿರಾಕರಿಸಬೇಕಾಗುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ?  ಇಲ್ಲವಾದಲ್ಲಿ ಮುಕ್ತಿಸಾಧನವನ್ನು ರೂಪಿಸುವಲ್ಲಿ ಅವನು ಎಚ್ಚರವಹಿಸಿದನೇ? ಹಾಗೆ ಎಚ್ಚರವಹಿಸಿದ್ದಲ್ಲಿ ಆತನ ಮುಕ್ತಿಸಾಧನವು ಮುಂದೆ ಜನಿಸುವ ಕ್ರಿಸ್ತನಲ್ಲಿನ ನಂಬಿಕೆಯು ಅದಕ್ಕೆ ಕಡ್ಡಾಯ ಎಂಬ ನಿಯಮವನ್ನು ಒಳಗೊಂಡಿರಲು ಸಾಧ್ಯವಿಲ್ಲ ಎನ್ನಬೇಕಾಗುತ್ತದೆ. ಆದ್ದರಿಂದ ಭಗವಂತನು ಜಗತ್ತಿನ ಮೊಟ್ಟಮೊದಲ ವ್ಯಕ್ತಿಯನ್ನು ಸೃಷ್ಟಿಸಿದಾಗಲೇ, ಅಂತಹ ಸೃಷ್ಟಿಯ ಆದಿಕಾಲವೊಂದಿತ್ತು ಎಂದು ನಂಬುವುದಾದಲ್ಲಿ, ಭಗವಂತನು ಆ ಮೊಟ್ಟಮೊದಲ ವ್ಯಕ್ತಿಗೂ ಮುಕ್ತಿಯ ಅವಕಾಶವನ್ನು ಕಲ್ಪಿಸಿರಲೇಬೇಕು. ಇದೇ ವೈಚಾರಿಕ ಉಪಕಲ್ಪನೆ. ಏಕೆಂದರೆ ಆ ಮೊಟ್ಟಮೊದಲ ಮಾನವನಿಗೂ ಮುಕ್ತಿಯ ಅಗತ್ಯವಿರುತ್ತದೆ. ಆದ್ದರಿಂದಲೇ ನಾವು ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ “ವ್ಯಕ್ತಗೊಂಡವು” ಅಥವಾ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ."

                 ಇಳಯರಾಜರು ಎತ್ತಿದ ಪ್ರಶ್ನೆ ಸಂಕ್ಷಿಪ್ತ ರೂಪದಲ್ಲಿರಬಹುದು. ಆದರೆ ಅವರು ಎತ್ತಿದ ಪ್ರಶ್ನೆ ಕ್ರೈಸ್ತ ಮೂಲವನ್ನೇ ಮತ್ತೊಮ್ಮೆ ನಡುಗುವಂತೆ ಮಾಡಿದ್ದು ಸತ್ಯ. ಇತಿಹಾಸದ ಒಂದು ಸುಳ್ಳು ಹೇಗೆ ಜಗತ್ತನ್ನು ಗುಲಾಮಗಿರಿಗೆ ತಳ್ಳುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಇಳಯರಾಜರು ಎತ್ತಿದ ಪ್ರಶ್ನೆಯಲ್ಲಿದೆ. ಗುಲಾಮಗಿರಿ ದೈಹಿಕವೇ ಆಗಬೇಕೆಂದಿಲ್ಲ, ಮಾನಸಿಕ ರೂಪದಲ್ಲೂ ಇರಬಹುದು. ಆದರೆ ಇಂದಂತೂ ಅದು ಎಲ್ಲಾ ಕ್ಷೇತ್ರಗಳಲ್ಲೂ ಗೆದ್ದಲಿನಂತೆ ಹೊಕ್ಕಿಬಿಟ್ಟಿದೆ. ಯೇಸುವಿನ ಪುನರ್ಜನ್ಮದ ಕಥೆಯನ್ನು ಕ್ರೈಸ್ತ ಮತ ತನ್ನ ಸಂಖ್ಯಾವೃದ್ಧಿಗೆ, ಪ್ರತಿಷ್ಠೆಗೆ ಬಳಸಿಕೊಂಡಂತೆ ರಮಣರು ತಮ್ಮ ಪುನರ್ಜನ್ಮದ ನೈಜ ಘಟನೆಯನ್ನು ತನ್ನ ಪ್ರಸಿದ್ಧಿಗೆ ಬಳಸಲಿಲ್ಲ. ಅವರದನ್ನು ಆತ್ಮಸಾಧನೆಯ ಮಾರ್ಗಕ್ಕಾಗಿ ಬಳಸಿಕೊಂಡರು. ಬ್ರಹ್ಮವೊಂದೇ ಸತ್ಯ ಎನ್ನುವುದನ್ನು ಕಂಡುಕೊಂಡರು. ತಮ್ಮಂತೆಯೇ ಹುಡುಕಾಟದ ಆಸಕ್ತಿಯಿಂದ ಹತ್ತಿರ ಬಂದವರಿಗೆ ದಾರಿದೀಪವಾದರು. ಜಗದ ಮೂಲೆ ಮೂಲೆಯ ಜನರನ್ನು ಮೌನವಾಗಿ ಪ್ರೇರೇಪಿಸಿದರು. ಬಳಲಿ ಬಂದವರಿಗೆ ಆಸರೆಯಾದರು. ಮನುಷ್ಯ-ಮನುಷ್ಯೇತರ, ಹಿಂದೂ-ಹಿಂದೂವೇತರ, ಜೀವಿ-ನಿರ್ಜೀವಿ ಎಂಬ ಭೇದಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಮೌನವಾಗಿಯೇ ಪ್ರಭಾವಿಸಿದರು. ಆತ ತಾನು ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಅವರಿಂದ ಜರಗಿದವು. ಅವನ್ನೇನು ತನ್ನದೆಂದು ಅವರು ಹೇಳಲಿಲ್ಲ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ವಿವಿಧ ಮತ-ಪಂಥಗಳ ಜನರು ಬಂದರೂ ಅವರಿಗೆ ಜ್ಞಾನದ ಸವಿಯನ್ನುಣಬಡಿಸಿದರು. ಅವರ್ಯಾರನ್ನೂ ಮತಾಂತರಿಸಲಿಲ್ಲ, ಯಾವುದೇ ಮಿಷನರಿ ಕಟ್ಟಲಿಲ್ಲ, ಯಾರಿಂದಲೂ ದೇಣಿಗೆ ಸ್ವೀಕರಿಸಲಿಲ್ಲ, ತನ್ನ ವಿಚಾರವನ್ನು ಯಾರ ಮೇಲೂ ಹೇರಲಿಲ್ಲ. ಜ್ಞಾನಾಕಾಂಕ್ಷಿಗಳಾಗಿ ಬಂದವರಿಗೆ ನೀನು ಯಾರು ಎನ್ನುವುದನ್ನು ನಿನ್ನಲ್ಲೇ ಕೇಳಿಕೋ, ಅರಿತುಕೋ ಎನ್ನುತ್ತಿದ್ದರು.  ಅವರ ಬಳಿ ಹೋದವರೂ ತಮ್ಮ ಮತವನ್ನೇನು ಬದಲಾಯಿಸಲಿಲ್ಲ. ಆ ರೀತಿ ಮತಾಂತರ ಮಾಡುತ್ತಿದ್ದರೆ ಇಂದು ಜಗತ್ತಿನಲ್ಲಿ ಹಿಂದೂಗಳೇ ತುಂಬಿಕೊಂಡಿರುತ್ತಿದ್ದರೇನೋ! ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದರು. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದರು. ಮೌನವಾಗಿಯೇ ಜಗವನ್ನಾಳಿದರು. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದರು. ಮೌನವಾಗಿ ಹಲವರ ಅಹಂ ಮುರಿದು, ಕರುಣೆದೋರಿ, ಜ್ಞಾನ ನೀಡಿ ಮೌನದಿಂದಲೇ ಜಗತ್ತನ್ನು ಗೆದ್ದು ಬೆಳಗಿದ ಅರುಣಾಚಲದ ಆತ್ಮ ಜ್ಯೋತಿ ಅದು. ದಕ್ಷಿಣಾಮೂರ್ತಿಯ ಅಪರಾವತಾರ. ಇದೇ ಸನಾತನ ಧರ್ಮಕ್ಕೂ ಸೆಮೆಟಿಕ್ ಮತವೊಂದಕ್ಕೂ ಇರುವ ವ್ಯತ್ಯಾಸ! ಸನಾತನ ಧರ್ಮಕ್ಕೆ ರಮಣ ಎನ್ನುವ ಪದಕ್ಕಿಂತ ಸಮಾನ ಪದ ಬೇರಾವುದಿದ್ದೀತು?