ಪುಟಗಳು

ಗುರುವಾರ, ನವೆಂಬರ್ 28, 2013

ನಮೋ ಭಾರತ

                 ಅನ್ಯ ಭಾಗಗಳಲ್ಲಿ ಜನವಸತಿಯೇ ಇಲ್ಲದಿದ್ದ ಕಾಲದಲ್ಲಿ ನಾವು ನಾಗರೀಕತೆಯ ತುತ್ತ ತುದಿಗೇರಿದ್ದೆವು. ಉಳಿದೆಡೆ ಹುಟ್ಟು ಸಾವುಗಳ ಬಗ್ಗೆ ಜಿಜ್ಞಾಸೆಯೇ ಇಲ್ಲದಿದ್ದ ಸಮಯದಲ್ಲೇ ನಮ್ಮಲ್ಲಿ ಸಾವಿನಾಚೆಗಿನ ಬದುಕಿನ ಅವಿಷ್ಕಾರಗಳು ನಡೆದಿತ್ತು. ಜ್ಞಾನ-ವಿಜ್ಞಾನಗಳ ಅವಿಷ್ಕಾರಗಳು, ಆಧ್ಯಾತ್ಮಿಕ ಹುಡುಕಾಟವೂ, ತತ್ವ, ಭೌತ, ಮನಖಗೋಳಾದಿಯಾಗಿ ಶಾಸ್ತ್ರಗಳ ಅಧ್ಯಯನ, ಆಧ್ಯಾಪನ, ಸಂಶೋಧನೆಗಳು, ಧರ್ಮ-ಸಂಸ್ಕೃತಿ-ದೇಶಗಳ ಬಗೆಗಿನ ಚಿಂತನ-ಮಂಥನ-ವ್ಯವಸ್ಥಾಪನಗಳು...ಇವೇ ಮುಂತಾದುವುಗಳು ನಡೆಯುತ್ತಿದ್ದು ಒಂದು ಸುಸಂಸ್ಕೃತ ಸಮಾಜ ವ್ಯವಸ್ಥೆ ರೂಪುಗೊಂಡಿತ್ತು. ವಿಚಾರಗಳು ನಿಂತ ನೀರಿನಂತಿರದೆ ಕಾಲಕಾಲಕ್ಕೆ ಪಕ್ವಗೊಳ್ಳುತ್ತಾ ನಾಗರೀಕತೆಯನ್ನು ಉತ್ತುಂಗಕ್ಕೇರಿಸುತ್ತಿದ್ದವು. ಅಂದರೆ ಚರಿತ್ರೆ ಅರಳುವ ಮುನ್ನ ನಾವು ಒಂದು ರಾಷ್ಟ್ರವಾಗಿ ಅರಳಿ ನಿಂತಿದ್ದೆವು!

             ಇಂತಹ ಸುಸಂಸ್ಕೃತ ಬೀಡಿಗೆ ಅದೆಷ್ಟು ವಿದೇಶೀ ಶಕ್ತಿಗಳು ಬಂದೆರಗಿದವು! ದೋಚಲು ಬಂದವರಿಗೂ ಮೃಷ್ಟಾನ್ನ ಭೋಜನವನ್ನುಣಿಸಿತು ನಾಡು! ಕಳೆದ ಎರಡೂವರೆ ಸಾವಿರ ವರ್ಷಗಳಲ್ಲಿ ಅದೆಷ್ಟು ಆಕ್ರಮಣಗಳನ್ನು ನಾವು ಎದುರಿಸಬೇಕಾಯಿತು? ಗ್ರೀಕರು, ಹೂಣರು, ಕುಶಾನರು, ಶಕರು, ಮಂಗೋಲರು, ಮೊಘಲರು, ಪಠಾಣರು, ಹಪ್ಶಿಗಳು, ತುರ್ಕಿಗಳು, ಇರಾನಿಗಳು, ಅಪ್ಘಾನಿಗಳು,ಪ್ರೆಂಚ್, ಡಚ್, ಪೋರ್ಚುಗೀಸರು, ಆಂಗ್ಲರು! ಅಷ್ಟೇ ಅಲ್ಲ ಸ್ವಾತಂತ್ರ್ಯಾನಂತರ 2ಸಲ ಚೀನಾ 4ಸಲ ಪಾಕಿಸ್ಥಾನ. ಅಂದರೆ ಅಲೆಗ್ಸಾಂಡರ್ನಿಂದ ಹಿಡಿದು ಫರ್ವೇಜ್ ಮುಷರಫ್ ವರೆಗೆ ಅದೆಷ್ಟು ಸೈನಿಕ ಆಕ್ರಮಣ. ಅಂತೆಯೇ ಚಾರ್ವಾಕನಿಂದ ಹಿಡಿದು ತಥಾಕಥಿತ ಎಡ ಬುದ್ಧಿಜೀವಿಗಳವರೆಗೆ ಅದೆಂಥಾ ಕ್ರೂರ ವೈಚಾರಿಕ ಆಕ್ರಮಣ! ಮೇಲಿಂದ ಮೇಲೆ ಆಕ್ರಮಣಗಳಾದದ್ದು ನಿಜ. ಕೆಲವು ಸಲ ಸೋತಿದ್ದೂ ನಿಜ, ಆದರೆ ಸತ್ತಿಲ್ಲ! ಕೆಲವು ಆಕ್ರಮಕರು ನಮ್ಮನ್ನಾಳಿರಬಹುದು, ಆದರೆ ಮಾತೃಭೂಮಿಯ ಮೇಲೆ ಅವರ ಸಾರ್ವಭೌಮತ್ವಕ್ಕೆ ನಾವು ಮಾನ್ಯತೆ ಕೊಟ್ಟಿಲ್ಲ! ದೇಶದ ಯಾವುದಾದರೊಂದು ಮೂಲೆಯಲ್ಲಿ ನಾಡ ಮುಕ್ತಿಗಾಗಿ ಕಿಡಿ ಸಿಡೀತಾನೇ ಇತ್ತು. ಪುರೂರವನಿಂದ ಹಿಡಿದು ಸಾವರ್ಕರ್, ನೇತಾಜಿಯವರೆಗೆ ಪ್ರತೀ ಶತಮಾನದಲ್ಲಿ ಹಲವು ಸೇನಾನಿಗಳ ನೇತೃತ್ವದಲ್ಲಿ ಸಂಘರ್ಷ ಮಾಡಿದ್ದೀವಿ. ಅದರ ಫಲವೇ ಸ್ವಾತಂತ್ರ್ಯ! ಅಂದರೆ ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸ! ಗೆಲುವಿನ ಇತಿಹಾಸ! ದಾಸ್ಯ ಇದ್ದಾಗ ಸಂಘರ್ಷಕ್ಕೆ ಮತ್ತು ಶಾಂತಿ ಇದ್ದಾಗ ವಿಕಾಸಕ್ಕೆ ನಮಗೆ ಪ್ರೇರಣೆ ದೊರೆತಿದ್ದು ನಮ್ಮ ಸಂಸ್ಕೃತಿಯಿಂದ, ನಮ್ಮ ಸಂಸ್ಕಾರದಿಂದ, ಮತ್ತು ನೆಲದಲ್ಲಿ ಹಿರಿಯರು ಕಂಡ ಮಾತೃಸ್ವರೂಪದಿಂದ!
            ಇಲ್ಲಿಗೆ ವಿಶ್ವದ ಎಲ್ಲೆಡೆಯಿಂದ ಜನ ಬಂದರು. ಕೆಲವರು ಪ್ರವಾಸಿಗಳಾಗಿ,ಕೆಲವರು ದುರಾಸೆಯಿಂದ. ದಾಳಿ ಇಟ್ಟರು, ನುಗ್ಗಿದರು, ನುಂಗಿದರು, ಹಿಗ್ಗಿದರು, ಕುಗ್ಗಿದರು,ಕಲಿತರು, ಕಲಿಸಿದರು, ಬೆರೆತರು, ಬೇರೆಯಾದರು. ನಮ್ಮವರು ಬೇರೆ ಕಡೆ ಹೋದರು, ಬೆಳಕು ಚೆಲ್ಲಿದರು, ಕೂಡಿ ಬಾಳಿದರು. ನಾಗರೀಕತೆಯ ಉದಯಕಾಲವೆಂದು ಹೇಳಲಾಗುವ ಕಾಲದಲ್ಲೂ ಭಾರತ ಮುಂಚೂಣಿಯಲ್ಲಿತ್ತು. ನಾಗರೀಕತೆಯ ಅಸ್ತಮದ ಕಾಲದಲ್ಲೂ ಭಾರತ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿದೆ.ಅದು ಸನಾತನವೂ ಹೌದು, ನೂತನವು ಹೌದು.
ಆದರೆ.......
            ಸ್ವಾತಂತ್ರ್ಯಾನಂತರದ ಭಾರತ ತನ್ನ ಹಿಂದಿನ ಭೂರಮೆಯ ಸಿರಿಯನ್ನು, ಶ್ರೀರಮೆಯ ಕೃಪಾಕಟಾಕ್ಷವನ್ನು ಮರಳಿ ಪಡೆದಿದೆಯೇ? ನಮ್ಮ ಮೇಲೆ ದಾಳಿ ಮಾಡಿ ದೋಚಿದವರೂ ನಾಚುವಂತೆ ನಮ್ಮನ್ನಾಳಿದವರು, ಈಗ ಆಳುತ್ತಿರುವವರು ದೋಚುತ್ತಿದ್ದಾರಲ್ಲಾ?  ನಮ್ಮ ಮೇಲೆ ನಮಗೆ ಜಿಗುಪ್ಸೆ ಬರುವ ರೀತಿಯಲ್ಲಿ ನಮ್ಮ ದೇಶವನ್ನು ಅಧಪತನಕ್ಕಿಳಿಸಿದ ನಮ್ಮನ್ನಾಳುತ್ತಿರುವವರ ಒಳ ಹೂರಣವೇನು? ಸ್ವಾತಂತ್ರ್ಯನಂತರದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಿದ್ದ ಭರತ ಖಂಡದಲ್ಲಿ ದಿನ ದಿನವೂ ರೈತನ ಆತ್ಮಹತ್ಯೆ, ಕೃಷಿಯ ಹಿಮ್ಮುಖ ಬೆಳವಣಿಗೆ, ಮುಚ್ಚಿ ಮಸಣ ಸೇರುತ್ತಿರುವ ಕೈಗಾರಿಕೆಗಳು, ನೈತಿಕತೆಯ ಅಧಪತನ, ಒಟ್ಟಾರೆ ಯಾವ ನಾಗರೀಕತೆ, ಯಾವ ಸಂಸ್ಕೃತಿ ಸನಾತನ ಎಂದು ಕರೆಯಲ್ಪಡುತ್ತದೋ ಅಂತಹ ಸಂಸ್ಕೃತಿ ಜೀವಚ್ಛವವಾಗುವಂತೆ ಮಾಡುತ್ತಿರುವ ಶಕ್ತಿಗಳು ಯಾವುವು? ಸ್ವಾತಂತ್ರ್ಯಾನಂತರ ಹಣದ ಹರಿವು ಹೆಚ್ಚಾಯಿತು, ಆದರೆ ಅದು ಸೇರಿದ್ದೆಲ್ಲಿಗೆ? ಮುಂದೆಯೂ ಇಂತಹ ಭೃಷ್ಟ ವ್ಯವಸ್ಥೆಯನ್ನೇ ಚುನಾಯಿಸಿದರೆ ಒಂದು ಕಾಲದಲ್ಲಿ ಸಾರ್ವಭೌಮನಾಗಿ ಮೆರೆದ ದೇಶ ಉಳಿಯಬಹುದೆ? ಆಗ ನಮ್ಮೆಲ್ಲರ ಪಾಡೇನು? ಭಾಜಪಾದಿಂದ ಪ್ರಧಾನಿ ಅಭ್ಯರ್ಥಿಯಾಗಿ ನೇಮಕಗೊಂಡು ದೇಶದ ಕತ್ತಲನ್ನು ಕಳೆಯುವ ಸೂರ್ಯನಿವ, ಈತನೇ ನಮ್ಮ ಪ್ರಧಾನಿಯಾಗಬೇಕು ಎಂದು ದೇಶಕ್ಕೆ ದೇಶವೇ ಪಿಸುನುಡಿಯುತ್ತಿರುವ ಶ್ರೀ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದ ಪರಿಸ್ಥಿತಿ ಯಾವ ರೀತಿ ಬದಲಾಗಿ ದೇಶವನ್ನಾವರಿಸಿರುವ ಅಂಧಕಾರ ಕೊನೆಯಾಗಬಹುದು
ದೇಶ ಸೇವೆಯೇ ಈಶ ಸೇವೆ...!
ದೇಶಕ್ಕಾಗಿ ಮೋದಿ...ಮೋದಿಗಾಗಿ ನಾವು...!
ನಾವು ಏಳದಿದ್ದರೆ ದೇಶ ಹೇಗೆ ಎದ್ದು ನಿಂತೀತು? ಮಲಗಿದ್ದು ಸಾಕು. ಇನ್ನು ಏಳೋಣ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ