ಪುಟಗಳು

ಭಾನುವಾರ, ಜುಲೈ 20, 2014

ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!

ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!
            ಭಾರತೀಯರು ತಮ್ಮಲ್ಲೇ ಹಿಮಾಲಯವಿದ್ದರೂ ಏರುವ ಸಾಹಸ ಪ್ರವೃತ್ತಿ ತೋರುವುದಿಲ್ಲ ಎಂಬ ಟೀಕೆಯೊಂದಿದೆ. ಆದರೆ  ವಿದೇಶಿಯರು ತಮ್ಮ ಸಾಹಸವನ್ನು ಜಗತ್ತಿಗೆ ತೋರ್ಪಡಿಸಲು "ಮೌಂಟ್ ಎವರೆಸ್ಟ್" ಏರಿದರೆ ಭಾರತೀಯರು ಭಕ್ತಿಯ ಗೌರೀಶಂಕರಕ್ಕೆ ಏರುತ್ತಾ ಅಮರನಾಥ-ಕೇದಾರ-ಬದರಿ-ಮಾನಸ-ಕೈಲಾಸವನ್ನೇ ಸಂದರ್ಶಿಸುತ್ತಾರೆ. ಹೌದು ಅಧ್ಯಾತ್ಮ ಭಾರತೀಯರಿಗೆ ಎಂತಹ ಸಾಹಸ ಪ್ರವೃತ್ತಿಯನ್ನಾದರೂ ತೋರಲು ಕಾರಣವಾಗುತ್ತದೆ.


ಅಮರನಾಥ!
              ಶಿವ ತನ್ನ ಶಿರದಲ್ಲಿದ್ದ ಚಂದ್ರನನ್ನು ಹಿಂಡಿ ಅಮೃತವನ್ನು ತೆಗೆದು ದೇವತೆಗಳಿಗೆ ಕೊಟ್ಟು ಅಮರರನ್ನಾಗಿಸಿದ ಸ್ಥಳ. ಆದ್ದರಿಂದಲೇ ಆತ ಅಮರನಾಥನೆನಿಸಿದ. ಶ್ರೀನಗರದಿಂದ 101 ಕಿ.ಮೀ. ಈಶಾನ್ಯಕ್ಕೆ ಸಮುದ್ರಮಟ್ಟದಿಂದ ಹದಿಮೂರು ಸಾವಿರ ಅಡಿಗಳಿಗೂ ಅಧಿಕ ಎತ್ತರದಲ್ಲಿರುವ ಪ್ರಕೃತಿ ನಿರ್ಮಿತ ಗುಹೆ ಅಮರನಾಥ. 50ಅಡಿ ಅಗಲ 55 ಅಡಿ ಉದ್ದ 45 ಅಡಿ ಎತ್ತರದ ಈ ಗುಹೆಯ ಉತ್ತರ ದಿಕ್ಕಿನ ಬಂಡೆಯಲ್ಲಿರುವ ರಂಧ್ರದಿಂದ ಜಿನುಗುವ ನೀರು ಶೈತ್ಯಾಧಿಕ್ಯದಿಂದ ಹೆಪ್ಪುಗಟ್ಟಿ ಶಿವಲಿಂಗದ ಆಕಾರ ಪಡೆಯುತ್ತದೆ. ಸುತ್ತಲೂ ಬೇಸಿಗೆಯಲ್ಲೂ ಹಿಮಚ್ಛಾದಿತವಾಗಿರುವ 5ಸಾವಿರ ಅಡಿಗಳಿಗೂ ಅಧಿಕ ಎತ್ತರದ ಶಿಖರಗಳು. ಶುಕ್ಲ ಪ್ರತಿಪದೆಯಿಂದ ಬೆಳೆಯತೊಡಗುವ ಹಿಮಲಿಂಗ ಪೌರ್ಣಿಮೆಯಂದು ಪೂರ್ಣವಾಗಿ ನಂತರ ಚಿಕ್ಕದಾಗತೊಡಗಿ ಅಮವಾಸ್ಯೆಯಂದು ಅದೃಶ್ಯವಾಗುತ್ತದೆ. ಶಿವಲಿಂಗದ ಎಡಪಕ್ಕದಲ್ಲಿ ಹೆಪ್ಪುಗಟ್ಟುವ ಇನ್ನೊಂದು ಸಣ್ಣ ಲಿಂಗವನ್ನು ಗಣೇಶಲಿಂಗವೆಂದೂ ಬಲಪಕ್ಕದಲ್ಲಿರುವ ಲಿಂಗಗಳನ್ನು ಪಾರ್ವತಿ ಹಾಗೂ ಭೈರವ ಎಂದೂ ಕರೆಯುತ್ತಾರೆ. ಗುಹೆಯ ಪಕ್ಕದಲ್ಲಿ ಅಮರಗಂಗೆಯೊಂದು ಹರಿದು ಬರುತ್ತದೆ. ಪಾರ್ವತಿಗೆ ರಾಮನಾಮ ಉಪದೇಶಿಸುವ ಸಲುವಾಗಿ ಪಹಲ್ ಗಾಂವ್ ದಾರಿಯಲ್ಲಿ ತನ್ನ ಗಣಗಳನ್ನು ಒಬ್ಬೊಬ್ಬರನ್ನಾಗಿ ತೊರೆದು ಕೊನೆಗೆ ಅಮರನಾಥ ಗುಹೆಯಲ್ಲಿ ಶ್ರಾವಣ ಪೌರ್ಣಿಮೆಯಂದು ರಾಮನಾಮ ಉಪದೇಶಿಸುತ್ತಾನೆ. ಆ ಸಂದರ್ಭದಲ್ಲಿ ಅಲ್ಲಿ ಪಾರಿವಾಳಗಳೆರಡು ಉಪಸ್ಥಿತವಿದ್ದವು. ಅಚ್ಚರಿಯೆಂದರೆ ಈಗಲೂ ಅಲ್ಲಿ ಎರಡು ಪಾರಿವಾಳಗಳು ಹಾಗೂ ಗೂಡೂ ಇದೆ.
             ಅಮರನಾಥನ ದರ್ಶನ ಮಾಡಲು ಎರಡು ಮಾರ್ಗಗಳಿವೆ. ಒಂದು ಅನುಪಮ ಪ್ರಕೃತಿ ಸೌಂದರ್ಯದ, ಸುಲಭವಾಗಿ ಸಂಚರಿಸಬಹುದಾದ ಪಹಲ್ ಗಾಂವ್ ದಾರಿ. ಅದು ಶಿವ ತನ್ನ ಗಣಗಳೊಡನೆ ಸಾಗಿದ ದಾರಿಯೂ ಹೌದು. ಶಿವ ನಂದಿಯನ್ನು ಬಿಟ್ಟ ಜಾಗ ಪಹಲ್ ಗಾಂವ್ ಅಥವಾ ಬೈಲ್ ಗಾಂವ್. ಪಹಲ್ ಗಾಂವ್ ನಿಂದ ಚಂದನವಾಡಿಗೆ ವಾಹನ ಸೌಕರ್ಯವಿದೆ. ಚಂದನವಾಡಿಯಿಂದ ಅಮರನಾಥ ಗುಹೆಗೆ ಇರುವ ದೂರ 34 ಕಿ.ಮೀ. ಅಡಿಗಡಿಗೆ ನದಿ, ಸರೋವರ, ಪರ್ವತ ಶಿಖರಗಳು ಸಿಗುವ ಈ ದಾರಿಯಲ್ಲಿ  ಪ್ರತಿಯೊಂದು ಪ್ರದೇಶವೂ ಐತಿಹಾಸಿಕ ಹಾಗೂ ಪ್ರೇಕ್ಷಣೀಯ. ದೇವ-ದಾನವರ ನಡುವಿನ ಕದನಕ್ಕೆ ಸಾಕ್ಷಿಯಾದ ಪಿಸ್ಸು ಘಾಟ್; ಶಿವ ತನ್ನ ಜೊತೆಯಿದ್ದ ನಾಗಗಳನ್ನು ಬಿಟ್ಟ ಸ್ಥಳ ನಾಗಕೋಟಿ; ಹೆಡೆಯೆತ್ತಿದ ಶೇಷನ ಆಕಾರದಲ್ಲಿರುವ ಪರ್ವತ ಹಾಗೂ ಶಿವ ತನ್ನ ಕೊರಳ ಬಳಸಿದ್ದ ಶೇಷನನ್ನು ತೊರೆದ ಎನ್ನಲಾಗುವ ಸುಂದರ ಸರೋವರವುಳ್ಳ ಶೇಷ ನಾಗ್; ಜೊತೆಯಾಗಿ ನಿಂತ ತ್ರಿಮೂರ್ತಿಗಳ ಪ್ರತಿರೂಪದ ಪರ್ವತಗಳು; ಅಮರನಾಥದ ದಾರಿಯಲ್ಲಿ ಸಿಗುವ ಅತೀ ಎತ್ತರದ(14500 ಅಡಿ) ಮಹಾಗುನುಸ್ ಅಥವಾ ಗಣೇಶ ಘಾಟ್; ಭೈರವಿ ಪರ್ವತದ ಅಡಿಯಲ್ಲಿರುವ, ಶಿವನ ಜಟೆಯಿಂದ ಹರಿದು ಬಂದವು ಎನ್ನಲಾದ ಪಂಚನದಿಗಳಿರುವ ಪಂಚತರಣಿ; ವಿಷಾದವೆಂದರೆ ಈ ಬಾರಿ ಹಿಮಪಾತದಿಂದಾಗಿ 5 ರಿಂದ 7 ಅಡಿ ಹಿಮಶೇಖರಣೆಯಾದುದರಿಂದ ಈ ದಾರಿಯಲ್ಲಿ ಯಾತ್ರೆಗೆ ಅವಕಾಶ ನೀಡಲಿಲ್ಲ. ಇನ್ನುಳಿದದ್ದು ಹದಿನಾರು ಕಿ.ಮೀ ನಡೆಯಬೇಕಾದ ಆದರೆ ಕ್ಲಿಷ್ಟಕರವಾದ ಬಾಲ್ತಾಲ್ ದಾರಿ. ಈ ಎರಡು ದಾರಿಗಳು ಒಂದಾಗುವ ಸ್ಥಳ ಸಂಗಮ. ಅಮರಗಂಗೆ ಹಾಗೂ ಪಂಚತರಣಿಗಳ ಸಂಗಮ ಸ್ಥಳವಿದು. ಇಲ್ಲಿಂದ ಅಮರನಾಥ ಗುಹೆಗೆ ಇರುವ ದೂರ ಮೂರು ಕಿ.ಮೀ. ಈ ಬಾರಿ ಕೊನೆಯ ಎರಡು ಕಿ.ಮೀ ದಾರಿ ಸಂಪೂರ್ಣ ಹಿಮಾವೃತವಾಗಿತ್ತು.
               ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಭೂಸ್ವರ್ಗ ಕಾಶ್ಮೀರದ ಮುಕುಟಮಣಿ ಅಮರನಾಥಕ್ಕೆ ಯೋಧಗಡಣದ ಕಾವಲಿನಲ್ಲೇ ಹೋಗಬೇಕೆಂದರೆ ಆಶ್ಚರ್ಯವಲ್ಲವೇ. ಭಯೋತ್ಪಾದಕರ ದಾಳಿಯ ಭಯ ಒಂದು ಕಡೆಯಾದರೆ ಕಡಿದಾದ ದಾರಿಯಲ್ಲಿ ಸಾಗುವಾಗಿನ ಕಾಲ್ತುಳಿತ-ಹವಾಮಾನ ವೈಪರೀತ್ಯ-ಭೂಕುಸಿತ-ಹಿಮಪಾತಗಳ ಭಯ. ಇವೆಲ್ಲವುಗಳಿಂದ ರಕ್ಷಣೆ ನೀಡುವವರು ನಮ್ಮ ಸೈನಿಕರೇ. ಕಡಿದಾದ ದಾರಿಯಲ್ಲಿ ಸಾಗುವಾಗ ಎಚ್ಚರತಪ್ಪಿದರೆ ಪ್ರಪಾತಕ್ಕೆ ಉರುಳುವುದು ಖಂಡಿತ. ಅದರಲ್ಲೂ ಪಾದಚಾರಿ ಯಾತ್ರಿಕರನ್ನು ತಳ್ಳಿಕೊಂಡೇ ಬರುವ ಪಲ್ಲಕಿ ಹೊರುವ ಹಾಗೂ ಕುದುರೆ ಸವಾರ ಕಾಶ್ಮೀರಿ ಮುಸ್ಲಿಮರು ಭಯ ಹುಟ್ಟಿಸಿಬಿಡುತ್ತಾರೆ. ಏಕಕಾಲಕ್ಕೆ ಮೂರು ಜನ ಸಾಗಬೇಕಾದ ದಾರಿಯಲ್ಲಿ ಆರು ಸಾಲುಗಳಲ್ಲಿ(ಕುದುರೆ, ಪಲ್ಲಕಿ, ಪಾದಚಾರಿಗಳು: ಆಗಮನ & ನಿರ್ಗಮನ) ಬಂದರೆ ಹೇಗಾದೀತು. ಕೆಲವು ಕಡೆ ಒಬ್ಬರೆ ಸಾಗಬೇಕಾಗುವ ಕಡಿದಾದ ದಾರಿ. ಸಮಧಾನದ ವಿಷಯವೆಂದರೆ CRPF ಯೋಧರು ಅಡಿಗಡಿಗೆ ನಿಂತಿದ್ದು ಯಾತ್ರಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾರೆ. ಅಲ್ಲದೆ ಭಂಡಾರಗಳು ಇಲ್ಲದ ಕಡೆಯಲ್ಲಿ ನೀರು-ಆಹಾರಗಳನ್ನೂ ನೀಡುತ್ತಾರೆ. ಮುಂದೆ ಸಾಗಲಾರದೇ ಕುಸಿದು ಕುಳಿತವರನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ತಲುಪಿಸುತ್ತಾರೆ. ನಮ್ಮ ಯೋಧರಲ್ಲದಿದ್ದರೆ ಈ ಯಾತ್ರೆಯಲ್ಲಿ ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕಾಗಿ ಬರುತ್ತಿತ್ತೇನೋ? ಅಂತಹ ದಾರಿಯಲ್ಲಿ ಸಾಗುವಾಗ ಅಪ್ರತಿಮ ಭಾರತ ಭಕ್ತ ದಿವಂಗತ ವಿದ್ಯಾನಂದ ಶೆಣೈಯವರ ಮಾತುಗಳು ಪ್ರತಿಧ್ವನಿಸುತ್ತವೆ... "ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!"
               2008ರಲ್ಲಿ ಭಾರತ ಸರಕಾರ 99 ಎಕರೆ ಭೂಮಿಯನ್ನು ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಚಳಿ-ಮಳೆಯಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಯಾತ್ರಿಕರಿಗೆ ಕಲ್ಪಿಸಲು ಅಮರನಾಥ ದೇಗುಲ ಮಂಡಳಿಗೆ ಹಸ್ತಾಂತರಿಸಲು ನಿರ್ಧರಿಸಿತು. ಪ್ರತ್ಯೇಕತಾವಾದಿಗಳೆಲ್ಲಾ ಒಟ್ಟಾಗಿ ಪ್ರತಿಭಟಿಸಿದರು. ಕಾಶ್ಮೀರದ ಇತಿಹಾಸದಲ್ಲೇ ದೊಡ್ಡ ಸಂಖ್ಯೆಯಲ್ಲಿ ಸುಮಾರು ಐದು ಲಕ್ಷದಷ್ಟು ಜನ ಇದರಲ್ಲಿ ಪಾಲ್ಗೊಂಡಿದ್ದಾರೆಂದರೆ ಕಾಶ್ಮೀರವನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಪರಿಗಣಿಸಿದ್ದಾರೆಂಬುದೇ ಅರ್ಥವಲ್ಲವೇ? "ಹಿಂದೂಗಳಿಗೆ ಜಾಗ ಕೊಟ್ಟರೆ ನಾವು ಅಲ್ಪಸಂಖ್ಯಾತರಾಗಿ ಹೋಗುತ್ತೇವೆ. ಅದು ಅರಣ್ಯಭೂಮಿ, ಹಿಂದೂಗಳು ಪರಿಸರವನ್ನು ಹಾಳು ಮಾಡುತ್ತಾರೆ. ಮುಸ್ಲಿಮರನ್ನು ಹತ್ತಿಕ್ಕಲು ಭಾರತೀಯರು ಹೂಡಿದ ಸಂಚು ಇದು. 370ನೇ ವಿಧಿಯ ಪ್ರಕಾರ ಜಮ್ಮು ಕಾಶ್ಮೀರದವರಲ್ಲದ ಭಾರತೀಯರು ಇಲ್ಲಿ ಭೂಮಿ ಕೊಳ್ಳುವಂತಿಲ್ಲ" ಎಂದೆಲ್ಲಾ ಅಲ್ಲಿನ ರಾಜಕಾರಣಿಗಳು ಅಬ್ಬರಿಸಿದರು. ಒಂದೂ ಮರ ಬೆಳೆಯದ ಗುಡ್ಡವೊಂದರಲ್ಲಿ ಅರಣ್ಯ ನಾಶವಾಗುತ್ತದೆಯೆಂದರೆ ಹಾಸ್ಯಾಸ್ಪದವಲ್ಲವೇ? ರಾಜ್ಯಪಾಲರಾಗಿ ಬಂದ ಎನ್.ಎನ್.ವೋಹ್ರಾ ಮಾಡಿದ ಮೊದಲ ಕೆಲಸವೆಂದರೆ ಅಮರನಾಥ ದೇಗುಲ ಮಂಡಳಿಗೆ ಜಮೀನು ನೀಡುವ ಪ್ರಸ್ತಾಪವನ್ನು ಹಿಂತೆಗೆದುಕೊಂಡಿದ್ದು. ತಮ್ಮ ಮತವಿರುವುದೇ ಶಾಂತಿ ಸಹಬಾಳ್ವೆಗಳಿಗೆ ಎಂದವರು, ಹಿಂದೂಗಳು ಸುರಿವ ಮಂಜಿನಿಂದ ರಕ್ಷಣೆ ಪಡೆಯಲು ಎರಡು ತಿಂಗಳುಗಳ ಮಟ್ಟಿಗೆ ತುಂಡು ಭೂಮಿ ಕೇಳಿದರೆ ಬೀದಿರಂಪ ನಡೆಸಿ ತುಂಡು ಭೂಮಿಯೂ ದೊರಕದಂತೆ ನೋಡಿಕೊಂಡರು. ಈ ರೀತಿ ಮಾಡಲು ಇನ್ನೊಂದು ಕಾರಣವಿದೆ. ಅಮರನಾಥ ಯಾತ್ರೆಯೆಂಬುದು ಕಾಶ್ಮೀರಿಗಳಿಗೆ ಹಣಗಳಿಸುವ ದೊಡ್ಡ ಬ್ಯುಸಿನೆಸ್. ಭೂಮಿ ನೀಡಿದರೆ ತಾವು ಲಂಗರುಗಳನ್ನು ಹಾಕಿ ಯಾತ್ರಿಕರಿಂದ ದೋಚಲು ಸಾಧ್ಯವಾಗುವುದಿಲ್ಲ. ಅಮರನಾಥನ ದರ್ಶನ ಮಾಡಲು ಕುದುರೆ-ಪಲ್ಲಕಿಗಳ ವ್ಯವಸ್ಥೆಯೂ ಇದೆ. ಸ್ಥಳೀಯ ಕಾಶ್ಮೀರಿ ಮುಸ್ಲಿಮರು ಈ ಸೌಕರ್ಯಗಳನ್ನು ಒದಗಿಸುತ್ತಾರೆ. ಉಚಿತವೆಂದುಕೊಂಡಿರೇನು? ಕುದುರೆಯ ಮೇಲೆ ಸಂಚರಿಸಲು 2500-5000 ರೂಪಾಯಿಗಳಾದರೆ ಪಲ್ಲಕಿಗೆ 18000ರೂಪಾಯಿಗಳವರೆಗೂ ಏರುತ್ತದೆ. ಜೊತೆಗೆ ಅವರ ಊಟತಿಂಡಿಯ ಖರ್ಚು ಬೇರೆ! ಕೆಲವು ಸಲ ಮುಂಗಡ ಹಣತೆಗೆದುಕೊಂಡು ನಾಪತ್ತೆಯಾಗುವುದೂ ಇದೆ. ಆಗ ನಿಮಗೆ ಮೋಸ ಮಾಡಿದಾತನನ್ನು ಗುರುತಿಸುವುದೂ ಕಷ್ಟವೇ. ಎಲ್ಲರ ಮುಖಚರ್ಯೆ ಸರಿಸುಮಾರು ಒಂದೇ ರೀತಿ ಇರುತ್ತದೆ. ಅದರೊಂದಿಗೆ ದಾಡಿ ಬೇರೆ ಕೇಡು! ನೀರು,ಇಂಧನ ಎಲ್ಲವೂ ಉಚಿತವಾಗಿ ಸಿಗುವಾಗ ಐದಾರು ಲೀ ಬಿಸಿನೀರಿಗೆ ಐವತ್ತು ರೂಪಾಯಿಗಳಷ್ಟು ದರ ವಿಧಿಸುತ್ತಾರೆಂದರೆ ದೋಚುವ ಪರಿ ಯಾವ ರೀತಿ ಇರಬಹುದು. ಹೀಗೆ ಅಮರನಾಥ ಯಾತ್ರೆಯೆಂಬುದು ಯಾತ್ರಿಕರನ್ನು ದೋಚಲು ಇರುವ ದೊಡ್ಡ ಹಬ್ಬವಾಗಿಬಿಟ್ಟಿದೆ ಅಲ್ಲಿನ ಬಾಂಧವರಿಗೆ. ಈ ಮೊದಲು ಆಹಾರ ವಸ್ತುಗಳಿಗೂ ಮನಸ್ಸಿಗೆ ತೋಚಿದ ದರ ಹಾಕಲಾಗುತ್ತಿತ್ತು. ಇದನ್ನು ನಿವಾರಿಸಲು ವಿಹಿಂಪ ಮತ್ತಿತರ ಹಿಂದೂ ಸಂಘಟನೆಗಳು ಸೇರಿ ಯಾತ್ರಿಕರಿಗೆ ಉಚಿತ ಭೋಜನ ನೀಡುವ ಭಂಡಾರಗಳನ್ನು ಆರಂಭಿಸಿದವು. ಈಗ ಕೆಲವು ಸಂಘ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸಿವೆ. ಹೀಗಾಗಿ ಯಾತ್ರಿಕರು ಕೊಂಚ ನಿರಾಳರಾಗುವಂತಾಗಿದೆ. ಅಷ್ಟೂ ಯಾತ್ರಿಕರಿಗೆ ಅಲ್ಲಲ್ಲಿ ಭಂಡಾರಗಳನ್ನು ಸ್ಥಾಪಿಸಿ ವಿವಿಧ ತಿನಿಸುಗಳನ್ನೂ, ಸಂಜೆಯ ಹೊತ್ತಿಗೆ ವಿವಿಧ ಕಾರ್ಯಕ್ರಮಗಳನ್ನು ನೀಡುವ ಇವರ ಕಾರ್ಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅಂದು ಯಾತ್ರಿಗಳ ಸೌಕರ್ಯಕ್ಕಾಗಿ ಅಮರನಾಥ ದೇಗುಲ ಮಂಡಳಿಗೆ ಜಮೀನು ನೀಡುವ ಪ್ರಸ್ತಾಪ ಬಂದಾಗ ಶರಂಪರ ಕಿತ್ತಾಡಿ ವಿರೋಧಿಸಿದ "ಬಾಂಧವರು" ಬಂದು ತಿನ್ನುವುದು ಧರ್ಮಾರ್ಥ ಆಹಾರ ಒದಗಿಸುವ ಭಂಡಾರಗಳಲ್ಲೇ!
               ಇಡೀ ಭಾರತ "ನಮೋ" ಎಂದಾಗಲೂ ಕಾಶ್ಮೀರಿ ಮುಸ್ಲಿಮರೇನಾದರೂ ಬದಲಾಗಿದ್ದಾರಾ ಎಂದರೆ ಇಲ್ಲ ಎಂಬುದೇ ಉತ್ತರ.. ಈ ಬಾರಿ ಜುಲೈ 18 ರ ಶುಕ್ರವಾರ ಯಾತ್ರಿಗಳ ಮೇಲೆ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಒಬ್ಬ ಯಾತ್ರಿಯೊಡನೆ ಕುದುರೆ ಮಾಲಿಕನೊಬ್ಬ ಅಸಭ್ಯವಾಗಿ ವರ್ತಿಸಿದಾಗ ಯಾತ್ರಿಗಳಿಗೆ ಧರ್ಮಾರ್ಥ ಭೋಜನ ಕೊಡುವ ಭಂಡಾರವೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಸೇವಾರ್ಥಿಯೊಬ್ಬರು ಅದನ್ನು ಆಕ್ಷೇಪಿಸಿದರು. ಮಾತಿಗೆ ಮಾತು ಬೆಳೆದಾಗ ಎಲ್ಲ ಮುಸ್ಲಿಮರು ಒಟ್ಟಾಗಿ ಭಂಡಾರಕ್ಕೆ ಬೆಂಕಿಯಿಟ್ಟರು. ಸುಮಾರು ಹತ್ತು ಭಂಡಾರಗಳನ್ನು "ಬಾಂಧವರು" ಸುಟ್ಟ ಪರಿಣಾಮ ಬೆಂಕಿ ವ್ಯಾಪಿಸಿ ಸುಮಾರು 150 ಭಂಡಾರಗಳು, ಲಂಗರುಗಳು ಸುಟ್ಟು ಹೋದವು. 60-70 ಗ್ಯಾಸ್ ಸಿಲಿಂಡರುಗಳು ಸ್ಫೋಟಗೊಂಡು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡರು. ಲಂಗರುವಾಲಾಗಳು ಮತ್ತು ಕುದುರೆ ಮಾಲೀಕರ ನಡುವಿನ ವಾಗ್ಯುದ್ದ ಪರಿಹರಿಸಲು ಬಂದ CRPF ಯೋಧರ ಮೇಲೆ ಆಕ್ರಮಣಕ್ಕೆ ಮುಂದಾದ ದುರುಳರು ಹತ್ತು ಜನ ಯೋಧರನ್ನೂ ಮಾರಣಾಂತಿಕ ಗಾಯಕ್ಕೊಳಪಡಿಸಿದರು. ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತವಾಯಿತು.
           ಕಾಶ್ಮೀರದ ನೆಲದಲ್ಲಿರುವ ಪ್ರತಿಯೊಂದು ಸ್ಥಳದ ಹಿಂದೆ ಮನಸೂರೆಗೊಳ್ಳುವ ಐತಿಹಾಸಿಕ ಘಟನೆಗಳೆಷ್ಟಿದೆಯೋ ಅಷ್ಟೇ ಕರಾಳ ಅಧ್ಯಾಯಗಳೂ ಇವೆ. ಕಾಶ್ಮೀರದ ಚರಿತ್ರೆಯನ್ನು ಎಷ್ಟು ಬದಲಾಯಿಸಲಾಗಿದೆಯೆಂದರೆ ಅದು ಭರತಖಂಡದ ಭಾಗವಾಗಿತ್ತೋ ಇಲ್ಲವೋ ಎಂದು ಇಂದಿನ ಪೀಳಿಗೆ ಸಂಶಯಪಡುವಂತಾಗಿದೆ. ಕಾಶ್ಮೀರ ಎಂಬ ಹೆಸರು ಬಂದದ್ದೇ ಕಶ್ಯಪ ಋಷಿವರ್ಯರಿಂದ. ಆದರೆ ಆ ಇತಿಹಾಸ ಎಲ್ಲಿಯೂ ಪ್ರಸ್ತಾಪವಾಗದಂತೆ ನೋಡಿಕೊಳ್ಳಲಾಗಿದೆ. ಕಾಶ್ಮೀರದ ಜನಪ್ರಿಯ ದೊರೆ ಲಲಿತಾದಿತ್ಯನ ಹೆಸರನ್ನು ಜನಮಾನಸದಿಂದಲೇ ಅಳಿಸಲಾಗಿದೆ. ಮತೀಯತೆ ಎಷ್ಟಿದೆಯೆಂದರೆ ಇಲ್ಲಿನ ಅಧಿಕೃತ ಭಾಷೆ ಕಶ್ಮೀರಿಯಲ್ಲ. ಉರ್ದು! ಕಾಶ್ಮೀರದ ಭೂಸ್ವರ್ಗವಾಗಿಯೇ ಉಳಿಯಬೇಕೆಂದರೆ 370ನೇ ವಿಧಿಯನ್ನು ತೆಗೆದುಹಾಕಲೇಬೇಕು. ಇಲ್ಲದಿದ್ದಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯಂತವರ ಕೊಲೆಯಾಗುತ್ತಲೇ ಇರುತ್ತದೆ. ಅಳಿದುಳಿದ ಹಿಂದೂಗಳನ್ನೂ ಓಡಿಸುತ್ತಾರೆ. ರಘುನಾಥನ ಮೇಲೆ, ಅಮರನಾಥನ ಭಕ್ತರ ಮೇಲೆ ದಾಳಿಯಾಗುತ್ತಲೇ ಇರುತ್ತದೆ. ದಿವಂಗತ ವಿದ್ಯಾನಂದರ ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇದೆ...ಎಚ್ಚರವಹಿಸಿದರೆ ಅಮರನಾಥ...ತಪ್ಪಿದರೆ ಕೈಲಾಸ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ