ಪುಟಗಳು

ಗುರುವಾರ, ಜನವರಿ 10, 2019

ಗುಬ್ಬಚ್ಚಿಗಳು ಗಿಡುಗಗಳಾಗಿದ್ದವು; ಗಿಡುಗಗಳೀಗ ಗುಲಾಮರಾಗುತ್ತಿವೆ!

ಗುಬ್ಬಚ್ಚಿಗಳು ಗಿಡುಗಗಳಾಗಿದ್ದವು; ಗಿಡುಗಗಳೀಗ ಗುಲಾಮರಾಗುತ್ತಿವೆ!


            ಕೊನೆಗೂ ಖಲಿಸ್ತಾನ್ ಲಿಬರೇಷನ್ ಪೋರ್ಸ್(ಕೆ.ಎಲ್.ಎಫ್) ಎಂಬ ಭಯೋತ್ಪಾದಕ ಸಂಘಟನೆಯ ಮೇಲೆ ನಿಷೇಧ ಹೇರಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ(ಯುಎಪಿಎ)ಯಡಿಯಲ್ಲಿ ನಿಷೇಧವಾಗಿರುವ ನಲವತ್ತನೇ ಸಂಸ್ಥೆ ಇದು. ಹಾಗೆಯೇ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್, ಖಲಿಸ್ತಾನ್ ಕಮಾಂಡೋ ಫೋರ್ಸ್, ಖಲೀಸ್ತಾನ್ ಜಿಂದಾಬಾದ್ ಫೋರ್ಸ್ ಮತ್ತು ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಷನ್ ಎಂಬ ನಾಲ್ಕು ನಿಷೇಧಿತ ಸಿಖ್ ಭಯೋತ್ಪಾದಕ ಸಂಘಟನೆಗಳಂತೆ ತಾನೂ ಕೂಡಾ ದೇಶದ್ರೋಹಿ ಎಂದು ಬಹಿರಂಗವಾಗಿ ಸಾರಿಕೊಂಡಿತ್ತದು. ಅಸಲಿಗೆ ಅದನ್ನು ಎಂದೋ ನಿಷೇಧಿಸಬೇಕಿತ್ತು. 1986ರಲ್ಲಿ ಅದು ಹುಟ್ಟಿಕೊಂಡಿದ್ದೇ ಸಶಸ್ತ್ರ ಕ್ರಾಂತಿಯ ಮೂಲಕ ಸ್ವತಂತ್ರ ರಾಜ್ಯವಾದ ಖಲಿಸ್ತಾನವನ್ನು ಸ್ಥಾಪಿಸುವ ಉದ್ದೇಶದೊಂದಿಗೆ. 1994ರವರೆಗೆ ಖಲಿಸ್ತಾನೀ ಸ್ವಾತಂತ್ರ್ಯ ಚಟುವಟಿಕೆಗಳನ್ನು ಉತ್ತೇಜಿಸುತ್ತಾ ಬೆಂಗಾವಲಾಗಿ ನಿಂತಿದ್ದ ಅರೂರ್ ಸಿಂಗನಿಂದ ಸ್ಥಾಪಿಸಲ್ಪಟ್ಟಿದ್ದ ಈ ಸಂಘಟನೆ ಬಳಿಕ ಕಳೆದ ಏಪ್ರಿಲ್ನಲ್ಲಿ ಪಟಿಯಾಲಾ ಕೇಂದ್ರೀಯ ಜೈಲಿನಲ್ಲಿ ಹೃದಯ ಸ್ತಂಭನದಿಂದ ಮೃತಪಟ್ಟ ಹರ್ಮೀಂದರ್ ಸಿಂಗ್ ಮಿಂಟೂನ ನೇತೃತ್ವದಲ್ಲಿ ಬಲಗೊಂಡಿತ್ತು. ಐಎಸ್ಐ ಮತ್ತು ಹಲವು ಉಗ್ರಗಾಮಿ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹರಮಿಂದರ್ ಸಿಂಗ್ ಮಿಂಟೂ ಥಾಯ್ಲೆಂಡ್ನಲ್ಲಿ ನೆಲೆಸಿ ಖಲಿಸ್ತಾನ ಚಳವಳಿಗೆ ದೇಣಿಗೆ ಸಂಗ್ರಹಿಸುತ್ತಿದ್ದ. ನಕಲಿ ಪಾಸ್ಪೋರ್ಟ್ ಮತ್ತು ವೀಸಾ ಬಳಸಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಯೂರೋಪ್ನ ಹಲವು ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದ್ದ. 2014ರ ನವೆಂಬರ್ನಲ್ಲಿ ಥಾಯ್ಲೆಂಡ್ನಿಂದ ಹಿಂತಿರುಗಿದಾಗ ಆತನನ್ನು ಬಂಧಿಸಲಾಗಿತ್ತು. ಬಹುಷಃ ಈಗಿರುವವರು “ಆಕಸ್ಮಿಕ ಪ್ರಧಾನಿ” ಅಲ್ಲ ಎನ್ನುವುದರ ಅರಿವಿರಲಿಲ್ಲವೇನೋ! 10ಕ್ಕೂ ಹೆಚ್ಚು ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಪಂಜಾಬ್ನ ನಾಭಾ ಸೆರೆಮನೆಯಲ್ಲಿ ಬಂಧಿಯಾಗಿದ್ದ ಮಿಂಟೂ ಹಾಗೂ ಇತರ ಐವರನ್ನು 12 ಜನ ಬಂದೂಕುಧಾರಿ ಯುವಕರ ಗುಂಪೊಂದು ಪೊಲೀಸ್ ಸಮವಸ್ತ್ರದಲ್ಲಿ ಬಂದು ಬಿಡಿಸಿಕೊಂಡು ಹೋಗಿತ್ತು. ಮರುದಿನವೇ ಆತನನ್ನು ಸೆರೆ ಹಿಡಿಯಲಾಗಿತ್ತು. ಅದು ಮೋದಿ ಸರ್ಕಾರದ ತಾಕತ್ತು!

                ಅದು ಬರಿಯ ಪ್ರತ್ಯೇಕ ಸಿಖ್ ರಾಷ್ಟ್ರದ ಉದ್ದೇಶಕ್ಕಾಗಿನ ಹೋರಾಟವಲ್ಲ. ಅಲ್ಲಿ ತೆರೆಯ ಹಿಂದೆ ಭಾರತವನ್ನು ಕಂಡರಾಗದ ಪಾಕಿಸ್ತಾನವೆಂಬ ಮತ್ಸರಿಯೊಂದಿದೆ. ಭಾರತವನ್ನು ನೇರವಾಗಿ ಎದುರಿಸುವ ತಾಕತ್ತು ಇಲ್ಲದ, ಭಾರತವನ್ನು ಛಿದ್ರಗೊಳಿಸುವ ತನ್ನ ಉದ್ದೇಶ ಸಾಫಲ್ಯಗೊಳ್ಳದೇ ಇದ್ದಾಗ ಅದು ಇಳಿದದ್ದು ಇಂತಹಾ ಕಾರ್ಯಕ್ಕೆ. ಎಲ್ಲಿ ಅಸಮಧಾನ ಇದೆಯೋ ಅದನ್ನು ಮತ್ತಷ್ಟು ಉಬ್ಬಿಸಿ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ, ಸಮಾಜವನ್ನು ಪ್ರಕ್ಷುಬ್ಧಗೊಳಿಸುವ ಯೋಜನೆ ಅದರದ್ದು. 1970 ಹಾಗೂ 80ರ ದಶಕದಲ್ಲಿ ಖಲಿಸ್ತಾನೀ ಭಯೋತ್ಪಾದನೆಗೆ ನೀರೆರೆದ ಪಾಕಿಸ್ತಾನ ಇಂದಿಗೂ ತನ್ನ ಚಾಳಿ ನಿಲ್ಲಿಸಿಲ್ಲ. ಹಾಗಾಗಿಯೇ ಭಾರತ ನಭದ ಗ್ರಹಗಳಿಗೆ ಇಳಿವ ವಿಧಾನ ಹುಡುಕುತ್ತಿದ್ದರೆ ಪಾಕಿಸ್ತಾನ ಇನ್ನೂ ಭಾರತದೊಳಕ್ಕೆ ನುಸುಳುವುದರಲ್ಲೇ ಕೈ ಸುಟ್ಟುಕೊಳ್ಳುತ್ತಿದೆ! ಹಿರಿಯ ಗೂಢಚಾರ ಬಿ.ರಾಮನ್'ರ "ದಿ ಕೌಬಾಯ್ಸ್ ಆಫ್ ರಾ" ರಿಚರ್ಡ್ ನಿಕ್ಸನ್ , ಯಾಹ್ಯಾಖಾನ್ ಸರಕಾರದ ಜೊತೆ ಸೇರಿ 1971ರಲ್ಲಿ ಪ್ರತ್ಯೇಕತಾವಾದಿ ಚಳವಳಿ ಹುಟ್ಟುಹಾಕಲು ನಡೆಸಿದ ರಹಸ್ಯ ಯೋಜನೆಯನ್ನು ಎಳೆ ಎಳೆಯಾಗಿ ವಿವರಿಸುತ್ತದೆ.

                ದೇಶ ವಿಭಜನೆ ಸಂದರ್ಭದಲ್ಲಿ ಹಿಂದೂಗಳಿಗೆ ಹಿಂದೂಸ್ತಾನ ಮತ್ತು ಮುಸ್ಲಿಮರಿಗಾಗಿ ಪಾಕಿಸ್ತಾನ ರಚನೆಯಾಗುವಂತೆ ತಮಗಾಗಿ ಪಂಜಾಬ್, ಲಾಹೋರ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ರಾಜಸ್ತಾನದ ಕೆಲ ಪ್ರದೇಶಗಳನ್ನು ಒಳಗೊಂಡ ಪ್ರತ್ಯೇಕ ಖಲಿಸ್ತಾನ ರಚನೆಯಾಗಬೇಕೆಂಬುದು ಕೆಲ ಸಿಖ್ಖರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಆದಾಗ್ಯೂ ಪ್ರತ್ಯೇಕತಾವಾದಿ ಹೋರಾಟ ನಿಲ್ಲಲಿಲ್ಲ. 1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗ ತಾವು ಪ್ರತ್ಯೇಕಗೊಳ್ಳಬೇಕೆಂದು ಸಿಖ್ ಗುಂಪೊಂದು ದಂಗೆಯೆದ್ದಿತ್ತು. ಭಾಷಾವಾರು ರಾಜ್ಯ ಪುನರ್ ವಿಂಗಡನೆಯಾದಾಗ ಪ್ರತ್ಯೇಕ ಪಂಜಾಬ್ ರಾಜ್ಯ ಅಸ್ತಿತ್ವಕ್ಕೆ ಬಂದರೂ ಈ ಪ್ರತ್ಯೇಕವಾದಿ ಗುಂಪು ಸಮಾಧಾನಗೊಳ್ಳಲಿಲ್ಲ. ಈ ನಡುವೆ ಪ್ರತ್ಯೇಕ ಪಂಜಾಬ್ ರಾಜ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಅಕಾಲಿ ದಳ ಪ್ರತ್ಯೇಕ ಸಿಖ್ ರಾಷ್ಟ್ರದ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. 1971ರಲ್ಲಿ ಜಗ್ಜಿತ್ ಸಿಂಗ್ ಚೌಹಾಣ್ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರತ್ಯೇಕ ಖಲಿಸ್ತಾನ ರಚಿಸುವ ಬಗ್ಗೆ, ಅದಕ್ಕಾಗಿ ಅನಿವಾಸಿ ಸಿಖ್ಖರು ಧನಸಹಾಯ ಮಾಡಬೇಕು ಎಂದು ಜಾಹೀರಾತು ನೀಡಿದ್ದ. ಇಂದಿರಾ ಸರಕಾರದ ಜೊತೆಗಿನ ಮಾತುಕತೆಯಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಾಗ ಜಗ್ಜಿತ್ ಸಿಂಗ್ ‘ನ್ಯಾಷನಲ್ ಕೌನ್ಸಿಲ್ ಆಫ್ ಖಲಿಸ್ತಾನ್’  ರಚಿಸಿದ. ಇತ್ತ ಅಮೃತ್ಸರದಲ್ಲಿ ಬಲ್ಬೀರ್ ಸಿಂಗ್ ಸಂಧು ಖಲಿಸ್ತಾನದ ಪ್ರತ್ಯೇಕ ಸ್ಟಾಂಪ್ ಹಾಗೂ ಕರೆನ್ಸಿಯನ್ನು ಬಿಡುಗಡೆ ಮಾಡಿದ! ಇಂದಿರಾ ಗಾಂಧಿಯೇ ಬೆಳೆಸಿದ್ದ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ತಿರುಗಿಬಿದ್ದು ಖಲಿಸ್ತಾನಿಗಳ ಜೊತೆ ಸೇರಿಕೊಂಡದ್ದು, ಅಪಾರ ಶಸ್ತ್ರಾಸ್ತ್ರಗಳ ಸಹಿತ ಸ್ವರ್ಣಮಂದಿರವನ್ನು ತೆಕ್ಕೆಗೆ ತೆಗೆದುಕೊಂಡು ಭಕ್ತರನ್ನು ಒತ್ತೆಯಾಳಾಗಿ ಇಟ್ಟುಕೊಂಡದ್ದು, ಮುಂದೆ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಭಿಂದ್ರನ್ ವಾಲೆ ಸಹಿತ ಐನೂರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿ, ಹಲವಾರು ಸಾವಿರ ಜನ ಗಾಯಗೊಂಡದ್ದು ಸಿಖ್ಖರ ಕೋಪವನ್ನು ಕಾಂಗ್ರೆಸ್ಸಿನತ್ತ ತಿರುಗಿಸಿತು. ಪ್ರತೀಕಾರವಾಗಿ ನಡೆದ ಇಂದಿರಾ ಹತ್ಯೆ, ಹಾಗೂ ಕಾಂಗ್ರೆಸ್ ಪ್ರೇರಿತ ಸಿಖ್ ಹತ್ಯಾಕಾಂಡ ಈಗ ಇತಿಹಾಸ! ಸ್ವರ್ಣ ಮಂದಿರದ ಮೇಲಿನ ದಾಳಿಗೆ ಪ್ರತೀಕಾರವಾಗಿ 1985ರಲ್ಲಿ ಏರ್ ಇಂಡಿಯಾ-184 ವಿಮಾನವನ್ನು ಸ್ಫೋಟಿಸಲಾಗಿ 329 ಮಂದಿ ಮೃತಪಟ್ಟಿದ್ದರು. ಮುಂದೆ ಆಪರೇಷನ್ ಬ್ಲಾಕ್ ಥಂಡರ್ ಎಂಬ ಸರಣಿ ಕಾರ್ಯಾಚರಣೆ ಖಲಿಸ್ತಾನ್ ಭಯೋತ್ಪಾದನೆಯನ್ನು ಅಕ್ಷರಶಃ ತಣ್ಣಗಾಗಿಸಿಬಿಟ್ಟಿತ್ತು.

                 ಅಲ್ಲಿಂದಾಚೆಗೆ ಪಂಜಾಬ್ ಶ್ರೀಮಂತ ಕೃಷಿ, ಉದ್ಯಮ ಹಾಗೂ ಹಣದ ಹರಿವಿನಿಂದ ಶಾಂತಿ ಹಾಗೂ ಸಂಪದ್ಭರಿತ ರಾಜ್ಯಗಳಲ್ಲೊಂದಾಗಿಬಿಟ್ಟಿತ್ತು. ಆದರೆ ಖಲಿಸ್ತಾನದ ಬೇಡಿಕೆ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಆಗಲೂ ಇತ್ತು. ಅಮೇರಿಕಾ, ಯೂರೋಪ್, ಕೆನಡಾಗಳ ರಾಜಕಾರಣ ಈ ದೇಶಗಳಲ್ಲಿರುವ ಸಿಖ್ಖರಲ್ಲಿ ಪ್ರತ್ಯೇಕತಾ ಭಾವನೆಯನ್ನು ಪೋಷಿಸಿಕೊಂಡು ಬರುವಲ್ಲಿ ಸಹಾಯಕವಾಗಿತ್ತು. ಅದರಲ್ಲೂ ದಲ್ ಖಲ್ಸಾ ಮತ್ತು ದುಮ್ದಾಮಿ ತಕ್ಸಲ್ ಮೊದಲಾದ ಸಿಖ್ ಸಂಘಟನೆಗಳು ಕೆಲವು ರಾಜಕೀಯ ಪಕ್ಷಗಳ ರಹಸ್ಯ ಪೋಷಣೆಯೊಂದಿಗೆ ಖಾಲಿಸ್ತಾನ್ ಸಮಸ್ಯೆಯನ್ನು ಜೀವಂತವಾಗಿರಿಸಿಕೊಂಡಿದ್ದವು. ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಹತರಾದ ಭಿಂದ್ರನ್ ವಾಲೆ ಹಾಗೂ ಸಂಗಡಿಗರಿಗೆ ಸ್ಮಾರಕವನ್ನೂ ನಿರ್ಮಿಸಲು ಇವು ಯಶಸ್ವಿಯಾಗಿದ್ದವು. ಖಲಿಸ್ತಾನಿ ಉಗ್ರರು ಯುಎಇನಲ್ಲಿ ಇತ್ತೀಚೆಗಷ್ಟೇ ಕೇಂದ್ರೀಯ ನೆಲೆಯೊಂದನ್ನು ಸ್ಥಾಪಿಸಿದ್ದರು. ಭಾರತದ ಬಗ್ಗೆ ಜಾಗತಿಕವಾಗಿ ಕೆಟ್ಟ ಭಾವನೆ ಬಿತ್ತುವುದರ ಜೊತೆಗೆ ಪಂಜಾಬ್ನಲ್ಲಿ ಭಯೋತ್ಪಾದನೆಗೆ ಕಾಯಕಲ್ಪ ನೀಡಿ, ಹಿಂಸಾಚಾರ ಭುಗಿಲೇಳುವಂತೆ ಮಾಡಲು ಯುಎಇಯ ಪ್ರತಿಷ್ಠಿತ ಶೂಟಿಂಗ್ ಕ್ಲಬ್ನಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಪಂಜಾಬ್ನ ಕುಖ್ಯಾತ ಅಪರಾಧಿಗಳನ್ನು ಸಂರ್ಪಸಿ ಅವರಿಗೆ ಹಣ ನೀಡಿ ಹಿಂದೂ ಮುಖಂಡರ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆಗೈಯುವ ಮೂಲಕ ಪಂಜಾಬ್ನಲ್ಲಿ ಕೋಮುಗಲಭೆ ಸೃಷ್ಟಿಸುವುದು ಉಗ್ರರ ಹುನ್ನಾರವಾಗಿತ್ತು. ಅಪರೇಷನ್ ಬ್ಲೂಸ್ಟಾರ್ ನೇತೃತ್ವ ವಹಿಸಿದ್ದ ನಿವೃತ ಲೆ.ಜ. ಕುಲದೀಪ್ ಸಿಂಗ್ ಬ್ರಾರ್ ಮೇಲೆ 2013ರಲ್ಲಿ ಲಂಡನ್ನಿನಲ್ಲಾದ ದಾಳಿ, ಸೆರೆಮನೆಗೆ ದಾಳಿ ಮಾಡಿ ಮಿಂಟೂ ಸಹಿತ ಐವರನ್ನು ಬಿಡಿಸಿಕೊಂಡ ಘಟನೆ, ಇತ್ತೀಚೆಗಷ್ಟೇ ಕಾರಿನಲ್ಲಿ ಭಾರಿ ಸ್ಫೋಟಕಗಳನ್ನಿರಿಸಿಕೊಂಡು ದೆಹಲಿಯ ಮೇಲೆ ದಾಳಿಗೆ ಬಂದು ಸಿಕ್ಕಿಬಿದ್ದ ಪ್ರಕರಣ, ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆಯ ದಿನ ಸ್ವರ್ಣಮಂದಿರದ ಎದುರು ಖಡ್ಗ ಹಿಡಿದು ಖಲಿಸ್ತಾನ್ ಪರ ಘೋಷಣೆ ಕೂಗಿದ್ದು, ನಿರಂಕಾರಿ ಭವನದ ಮೇಲಾದ ದಾಳಿ ಇವೆಲ್ಲಾ ಇದರ ಭಾಗಗಳೇ. ಅವರ ನೆಲೆಗಳೀಗ ಇಟಲಿ, ಆಸ್ಟ್ರೇಲಿಯಾ, ಜರ್ಮನಿ, ಬ್ರಿಟನ್, ಕೆನಡಾ, ಯುಎಇ ಸಹಿತ ಹಲವು ದೇಶಗಳಲ್ಲಿವೆ. ಕೆನಡಾದಲ್ಲಂತೂ ಜನಸಂಖ್ಯೆ, ಉದ್ಯಮ ಹಾಗೂ ರಾಜಕೀಯದಲ್ಲಿ ಪ್ರಭಾವಿಗಳಾಗಿರುವ ಸಿಖ್ಖರು ಕೆನಡಾ ಸರಕಾರ ಸಿಖ್ ಪ್ರತ್ಯೇಕತಾವಾದಿಗಳ ಬಗ್ಗೆ ಮೃಧು ಧೋರಣೆ ತಳೆಯುವಂತೆ ಮಾಡಲು ಸಫಲರಾಗಿದ್ದಾರೆ.

                   ಮೋದಿಯವರು ಪ್ರಧಾನಿಯಾದ ಬಳಿಕ ಕಾಶ್ಮೀರ ಗಡಿಯಲ್ಲಿ ಸತತ ಮುಖಭಂಗಕ್ಕೊಳಗಾದ ಪಾಕಿಸ್ತಾನ ಮತ್ತೆ ಸಿಖ್ ಪ್ರತ್ಯೇಕತಾವಾದಿಗಳನ್ನು ಬಲಪಡಿಸುವ ಕಾರ್ಯದಲ್ಲಿ ತೊಡಗಿತು. ಪ್ರತ್ಯೇಕತಾವಾದಿಗಳಿಗೆ ಶಸ್ತ್ರಾಸ್ತ್ರ ಹಾಗೂ ಧನ ಸಹಾಯವನ್ನು ಒದಗಿಸಿತು. ಸಿಖ್ಖರ ಪವಿತ್ರ ಗ್ರಂಥವನ್ನು ಅಪಚಾರ ಗೈದು ಪರಾರಿಯಾಗುವ ಛದ್ಮವೇಶಧಾರಿಗಳನ್ನೂ ಅದು ನೇಮಿಸಿತು. ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಸಿಖ್ ಯುವಕರನ್ನು ಕೆರಳಿಸಿತು. ಹಿಂದುತ್ವದ ವಿರುದ್ಧದ ನಿರೂಪಣೆಯನ್ನು ಸಿಖ್ ಹಿಂಸಾಚಾರದ ನಿರೂಪಣೆಗೆ ಸರಿ ಹೊಂದುವಂತೆ ರಾಷ್ಟ್ರಮಟ್ಟದಲ್ಲಿ ಕಥೆ ಸೃಷ್ಟಿಸುವ ಬರಹಗಾರರನ್ನು ಬಿಸ್ಕತ್ ಹಾಕಿ ಬಳಸಿತು. ಜಗದೀಶ್ ಕುಮಾರ್ ಕೊಲೆ ಪ್ರಕರಣ ತನಿಖೆ ವೇಳೆ ರಾ.ಸ್ವ.ಸಂ., ಶಿವಸೇನೆ, ಹಿಂದೂ ತಖ್ತ್ ಸಂಘಟನೆಗಳ ಮುಖಂಡರ (ಒಟ್ಟು 6) ಕೊಲೆಗಳಲ್ಲಿ ಐಎಸ್ಐ ಕೈವಾಡ ಬೆಳಕಿಗೆ ಬಂತು. ಖಲಿಸ್ತಾನ್ ಬೆಂಬಲಿಗರಿಂದ ರಾ.ಸ್ವ.ಸಂ.ದ ಕಾರ್ಯಕರ್ತರ, ಹಿಂದೂ ಮುಖಂಡರ ಹತ್ಯೆ ಮಾಡಿಸಿ ಕೋಮುದಳ್ಳುರಿ ಸೃಷ್ಟಿಸುವುದು ಐಎಸ್ಐ ಉದ್ದೇಶವಾಗಿತ್ತು.  ಪಾಕಿಸ್ತಾನದ ಸೈನ್ಯದಲ್ಲಿ ಚೌಧರಿ ಸಾಹಿಬ್ ಎಂದೇ ಪ್ರಸಿದ್ಧನಾದ ಲೆ. ಕ. ಶಾಹಿದ್ ಮಹಮೂದ್ ಮಾಲ್ಹಿ ನೇತೃತ್ವದಲ್ಲಿ "ರೆಫರೆಂಡಮ್ 2020" ಸಿದ್ಧಗೊಳಿಸಿ ಸಿಖ್ ಪ್ರತ್ಯೇಕವಾದಿಗಳಿಗೆ ಹಂಚಿತು. ಪಂಜಾಬನ್ನು 2020ರೊಳಗೆ ಸ್ವತಂತ್ರಗೊಳಿಸುವ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸಬೇಕಾದ ಕಾರ್ಯಾಚರಣೆಗಳ ಬಗ್ಗೆ ಹಾಗೂ ವಿಶ್ವಸಂಸ್ಥೆಯ ಮಧ್ಯಪ್ರದೇಶದೊಂದಿಗೆ ಪಂಜಾಬಿನಲ್ಲಿ ಜನಮತ ಸಂಗ್ರಹಣೆ ಮಾಡುವ ಬಗ್ಗೆ ಈ ದಸ್ತಾವೇಜಿನಲ್ಲಿ ವಿವರಿಸಲಾಗಿದೆ. ಭಾರತ ಸರಕಾರದ ವಿರೋಧದ ನಡುವೆಯೂ ರೆಫರೆಂಡಮ್ 2020ಯನ್ನು ಉದ್ಘೋಷಿಸುವ ಲಂಡನ್ ಘೋಷಣೆ ಕಾರ್ಯಕ್ರಮಕ್ಕೆ ಬ್ರಿಟನ್ ಸರಕಾರ ಅನುಮತಿ ಕೊಟ್ಟಿತ್ತು. ಜೊತೆಗೆ ವಿವಿಧ ಸಂದರ್ಭಗಳಲ್ಲಿ ಅಮೇರಿಕಾ ಹಾಗೂ ಕೆನಡಾಗಳಲ್ಲಿ ಭಾರತೀಯ ರಾಜತಾಂತ್ರಿಕ ವರ್ಗಕ್ಕೆ ಗುರುದ್ವಾರ ಪ್ರವೇಶವನ್ನು ನಿರಾಕರಿಸಲಾಗಿತ್ತು. 2015ರ ಬಳಿಕದ ಮೂರು ವರ್ಷಗಳಲ್ಲಿ ಐವತ್ತರಷ್ಟು ಖಲಿಸ್ತಾನೀ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಐಎಸ್ಐ, ಸಿಖ್ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ, ಕಾಶ್ಮೀರದ ಗಡಿಯಲ್ಲಿ ಕಾರ್ಯಾಚರಿಸುವ ಭಯೋತ್ಪಾದಕ ಸಂಘಟನೆಗಳೊಂದಿಗೆ ಬೆಸೆಯಲು ಯತ್ನಿಸುತ್ತಿದೆ. ಭಯೋತ್ಪಾದಕ ಝಾಕೀರ್ ಮೂಸಾ ಇದರ ರೂವಾರಿ. ಕಾಶ್ಮೀರದ ವಿದ್ಯಾರ್ಥಿಗಳು ಕೆಲವರು ಉದ್ದೇಶಪೂರ್ವಕವಾಗಿ ಪಂಜಾಬಿನ ವಿದ್ಯಾಲಯಗಳಲ್ಲಿ ನೇಮಕಾತಿ ಪಡೆದು ಈ ಎರಡೂ ಭಯೋತ್ಪಾದಕ ಗುಂಪುಗಳ ನಡುವೆ ಕೊಂಡಿಯಾಗಿ ಕಾರ್ಯವೆಸಗುತ್ತಿದ್ದಾರೆ! ಇದರ ಜೊತೆಗೆ ಹಿಂದೂ ರಾಷ್ಟ್ರವಾದಿಗಳು ಹಾಗೂ ಭಾರತ ಸರಕಾರ ಸಿಖ್ಖರನ್ನು ತುಳಿಯುತ್ತಿದ್ದಾರೆ ಎನ್ನುವ ಭಾವನೆಯನ್ನು ಸಿಖ್ ಯುವಕರ ತಲೆಯಲ್ಲಿ ಇಂದಿಗೂ ತುಂಬಿಸಲಾಗುತ್ತಿದೆ. ಭಾರತದ ಸಂಸ್ಕೃತಿ, ಮತ ಸಾಮರಸ್ಯ ಹಾಗೂ ವೈವಿಧ್ಯತೆಗಳ ಅರಿವಿಲ್ಲದ ನವ ಸಿಖ್ ಪೀಳಿಗೆ ಸುಲಭವಾಗಿ ಈ ಮತಾಂಧರ ಕೈವಶವಾಗುತ್ತಿದೆ.

                ಇದಲ್ಲದೆ ಪಾಕಿಸ್ತಾನ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಹಾಗೂ ನಕಲಿ ನೋಟುಗಳನ್ನು ಫಿರೋಜ್ಪುರ್, ಪಠಾನ್ಕೋಟ್, ತಾರಾಂತರಣ್, ಮತ್ತು ಗುರುದಾಸ್ಪುರದ ಗಡಿ ಜಿಲ್ಲೆಗಳ ಮೂಲಕ ಪಂಜಾಬಿಗೆ ಕಳ್ಳಸಾಗಾಟ ಮಾಡಿದೆ. ಸುಮಾರು ಎಂಟೂವರೆ ಲಕ್ಷ ಪಂಜಾಬೀ ಯುವಕರು ಮಾದಕ ದ್ರವ್ಯಗಳ ದಾಸರಾಗಿದ್ದಾರೆ. ಇಂತಹಾ ಯುವಕರಿಗೆ ಉಗ್ರಗಾಮೀ ಚಟುವಟಿಕೆಗಳ ಬಗ್ಗೆ ಬೋಧಿಸಲಾಗುತ್ತಿದೆ. ಇದಲ್ಲದೆ ಖಲಿಸ್ತಾನಿ ಉಗ್ರರಿಗೆ ತನ್ನ ಸ್ನೇಹಿತ ಟರ್ಕಿಯ ಸಹಾಯ ಸಿಗುವಂತೆಯೂ ಮಾಡಿದೆ. ಹಲವಾರು ಖಲೀಸ್ಥಾನಿ ಉಗ್ರಗಾಮಿಗಳಿಗೆ ಪಾಕ್ ಆಶ್ರಯತಾಣ. ಐಎಸ್ಐ ಜನರಲ್ಗಳಂತೂ ಬಹಿರಂಗವಾಗಿ ಖಲಿಸ್ತಾನ್ ಉಗ್ರವಾದವನ್ನು ಬೆಂಬಲಿಸುತ್ತಾರೆ. ಇತ್ತೀಚೆಗೆ ಪಾಕ್ ಸರಕಾರ ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಹತರಾದ ಸಿಖ್ಖರ ನೆನಪಿಗಾಗಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತು. ಬಳಿಕ ಹೆಲ್ಮೆಟ್ ಧರಿಸುವುದರಿಂದ ಸಿಖ್ಖರಿಗೆ ವಿನಾಯಿತಿ ನೀಡಿತು. ಕರ್ತಾರ್ಪುರ ಧಾರ್ಮಿಕ ಕಾರಿಡಾರ್ ತೆರೆಯಿತು. ಇವೆಲ್ಲದರ ಹಿಂದೆ ಏನೋ ದುರುದ್ದೇಶವಂತೂ ಖಂಡಿತಾ ಇದೆ. ಅಲ್ಲಿ ಭೇಟಿ ನೀಡುವ ಯಾತ್ರಿಕರನ್ನು ಉಗ್ರಗಾಮಿಗಳಾಗಿ ಪರಿವರ್ತಿಸುವ ಹವಣಿಕೆ ಪಾಕಿನದ್ದಾಗಿರಬಹುದು. ಕರ್ತಾರ್ಪುರ  ಕಾರಿಡಾರಿಗೆ ಅಡಿಗಲ್ಲು ಹಾಕಿದ ಸಮಾರಂಭದಲ್ಲಿ ಹಫೀಜ್ ಸಯೀದ್ ಜೊತೆ ವೇದಿಕೆ ಹಂಚಿಕೊಂಡಿದ್ದ ಖಲಿಸ್ತಾನೀ ಉಗ್ರ ಗೋಪಾಲ್ ಸಿಂಗ್ ಚಾವ್ಲಾನ ಜೊತೆ ಸಿಧು ಎಂಬ ಟ್ರಾಜಿಡಿಯನ್ ಫೋಟೋ ತೆಗೆಸಿಕೊಂಡದ್ದು, ಬಳಿಕ ಸಿಧು ತಾನು ರಾಹುಲ್ ಗಾಂಧಿಯ ನಿರ್ದೇಶನದಂತೆ ಅಲ್ಲಿ ಹೋಗಿದ್ದೆ ಎಂದದ್ದು ನೆನಪಿರಬಹುದು. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ ದೇಶದ್ರೋಹಿಗಳೊಡನೆ ಕೈ ಜೋಡಿಸಿದೆಯೇ?

               ಬಾಬಾ ಬೂತಾ ಸಿಂಗನಿಂದ ಆರಂಭಗೊಂಡ ನಿರಾಂಕರಿ ಮಿಷನ್ " ದೇವರು ಒಬ್ಬನೇ. ಆತ ಎಲ್ಲಾ ಕಡೆಯಲ್ಲೂ ಇದ್ದಾನೆ. ಆದರೆ ಆತನನ್ನು ಅರಿಯಲು ಗುರುವೊಬ್ಬನ ಅವಶ್ಯಕತೆ ಇದೆ" ಎನ್ನುತ್ತದೆ. ಆದರೆ ಗುರುಗ್ರಂಥ ಸಾಹಿಬ್ ಕಡೆಗೆ ಮಾತ್ರ ನಿಷ್ಠೆಯಿರಬೇಕು ಎನ್ನುವ ಸಿಖ್ ಮೂಲಭೂತವಾದಕ್ಕೆ ಈ ಗುಂಪು ಪಾಷಂಡಿಗಳಂತೆ ಕಂಡಿತು. ಖಲಿಸ್ತಾನೀ ಉಗ್ರರ ಮೊದಲ ಗುರಿ ಇವರೇ. 1978ರಲ್ಲಿ 13 ನಿರಾಂಕರಿಗಳನ್ನು ಕೊಂದ ಖಲಿಸ್ತಾನೀ ಉಗ್ರರು 1980ರಲ್ಲಿ ನಿರಾಂಕರಿಗಳ ಗುರು ಬಾಬಾ ಗುರುಬಚನ್ ಸಿಂಗರನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಪ್ರೇರಿತ ಖಲಿಸ್ತಾನೀ ಭಯೋತ್ಪಾದನೆಯ ಜೊತೆಜೊತೆಗೆ ಕುರಾನ್ ಮಾತ್ರ ಸತ್ಯ ಎನ್ನುವ ಇಸ್ಲಾಂ ಮತಾಂಧತೆ ಖಲಿಸ್ತಾನೀ ಉಗ್ರರಲ್ಲೂ ತುಂಬಿತು. ಕಾಶ್ಮೀರದ ಹಿಂದೂಗಳನ್ನು ಔರಂಗಜೇಬನೆಂಬ ಮತಾಂಧ ಮುಸ್ಲಿಂ ರಾಜನಿಂದ ರಕ್ಷಿಸಲು ಸಿಖ್ಖರ ಗುರು ತೇಗ್ ಬಹಾದ್ದೂರ್ ಬಲಿದಾನವನ್ನೇ ಮಾಡಿದ್ದರು. ಗುರು ಗೋವಿಂದ್ ಸಿಂಗ್ ಮುಸ್ಲಿಂ ಮತಾಂಧತೆಯ ವಿರುದ್ಧ ಹೋರಾಡಲು ಗುಬ್ಬಚ್ಚಿಗಳಂತಿದ್ದ ಸಿಖ್ಖರನ್ನು ಗಿಡುಗಗಳನ್ನಾಗಿಸಿದ್ದರು. ಅಸಂಖ್ಯ ಸಿಖ್ಖರು ದೇಶದ ಸ್ವಾತಂತ್ರ್ಯಕ್ಕಾಗಿ ಮನೆಮಠ ತೊರೆದು ಕ್ರಾಂತಿವೀರರಾಗಿ ಹುತಾತ್ಮರಾದರು. ಭಗತ್ ಸಿಂಗನ ತಾತ ಅರ್ಜುನ ಸಿಂಹ ಹಿಂದೂ ಗ್ರಂಥಗಳು ಮತ್ತು ಗುರುಗ್ರಂಥ ಸಾಹಿಬ್ ನಲ್ಲಿದ್ದ ಸುಮಾರು ಏಳುನೂರು ಶ್ಲೋಕಗಳನ್ನು ಹೇಳಿ ಅವುಗಳು ಒಂದೇ ರೀತಿ ಇದ್ದುದನ್ನು ಎತ್ತಿ ತೋರಿಸಿ ಸಿಖ್ಖರೂ ಹಿಂದೂಗಳೇ ಎಂದು ಪ್ರಮಾಣಿಸಿ ತೋರಿಸಿದ. ಆದರೆ ಕೆಲವೇ ಕೆಲವು ಸಿಖ್ಖರು ಪಾಕಿಗಳಿಂದ ಪ್ರಚೋದನೆಕ್ಕೊಳಗಾಗಿ ಹಿಂದೂಗಳನ್ನು ದ್ವೇಷಿಸುತ್ತಿದ್ದಾರೆ. 1984ರಲ್ಲಿ ಹಿಂದೂಗಳು ಸಿಖ್ಖರನ್ನು ಕೊಂದರೆಂದು ಕೆಲವರು ಹೇಳುವುದಿದೆ. ಆದರೆ ಅದು ಕಾಂಗ್ರೆಸ್ ಪ್ರೇರಿತ ಹತ್ಯಾಕಾಂಡ. ವಂಶವೊಂದರ ಗುಲಾಮರು ಮಾಡಿದ ಮಾರಣಹೋಮ. ಸಿಖ್ಖರು ಕೋಪ ತಾಳುವುದಿದ್ದರೆ ಆ ವಂಶದ ವಿರುದ್ಧ, ಆ ಪಕ್ಷದ ವಿರುದ್ಧ ತಾಳಬೇಕಿತ್ತು. ವಿಪರ್ಯಾಸವೆಂದರೆ ಸಿಖ್ಖರಲ್ಲೇ ಹಲವರು ಅವರ ಗುಲಾಮಗಿರಿಯಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ