ಪುಟಗಳು

ಬುಧವಾರ, ಫೆಬ್ರವರಿ 22, 2017

ಅಣುವಿನೊಳಗೆ ದೊಡ್ಡಣ್ಣನ ಮರಣದ ಬಲೆ; ವಂಶವೊಂದರ ಜೋಳಿಗೆ ತುಂಬಿದ ಕಲೆ

ಅಣುವಿನೊಳಗೆ ದೊಡ್ಡಣ್ಣನ ಮರಣದ ಬಲೆ; ವಂಶವೊಂದರ ಜೋಳಿಗೆ ತುಂಬಿದ ಕಲೆ


                       ಜೂನ್ 8, 2009. ನಲವತ್ತೇಳು ವರ್ಷ ಪ್ರಾಯದ ಕೈಗಾ ಅಣು ವಿದ್ಯುತ್ ಸ್ಥಾವರದ ಹಿರಿಯ ವೈಜ್ಞಾನಿಕ ಅಧಿಕಾರಿ ಲೋಕನಾಥನ್ ಮಹಾಲಿಂಗಮ್ ಕಾಣೆಯಾಗಿರುವ ಸುದ್ದಿ ದೇಶದಾದ್ಯಂತ ಸಂಚಲನ ಸೃಷ್ಟಿಸಿತು. ಸೀಬರ್ಡ್ ನೌಕಾ ನೆಲೆಯ ಸಮೀಪದ ಈ ವಿದ್ಯುತ್ ಸ್ಥಾವರದಲ್ಲಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮಹಾಲಿಂಗಮ್ ಬೆಳಿಗ್ಗೆ ವಾಯುಸೇವನೆಗೆ ತೆರಳಿದವರು ಮರಳಲೇ ಇಲ್ಲ. ಅವರು ತಮ್ಮ ಜೊತೆ ಮೊಬೈಲ್ ಅಥವಾ ಹಣ ಒಯ್ದಿಲ್ಲವೆಂದು ಕುಟುಂಬ ತಲ್ಲಣಗೊಂಡರೆ, ಮಹಾಲಿಂಗಮ್ ಮನೆ ಬಿಟ್ಟು ತೆರಳಿದ್ದನ್ನು ನಾವು ನೋಡಲೇ ಇಲ್ಲ ಎಂದು ಬಿಟ್ಟರು ಭದ್ರತಾ ಸಿಬ್ಬಂದಿ! ಕೈಗಾ ಸ್ಥಾವರದ ಸುತ್ತಲಿನ ಒಂದುಸಾವಿರ ಎಕರೆ ವಿಸ್ತಾರದ ಪಶ್ಚಿಮ ಘಟ್ಟದ ದಟ್ಟವಾದ ಅರಣ್ಯದಲ್ಲಿ ಗುಪ್ತಚರ ಅಧಿಕಾರಿಗಳು ಸಿ.ಐ.ಎಸ್.ಎಫ್, ಜಿಲ್ಲಾ ಪೊಲೀಸ್ ಪಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ನಡೆಸಿದ ಹುಡುಕಾಟ ಫಲ ನೀಡಲಿಲ್ಲ. ಸೀಬರ್ಡ್ ನೌಕಾನೆಲೆಯ ಡೈವರ್ಸ್ ನೆರವು ಪಡೆದು ನಡೆಸಿದ ಹುಡುಕಾಟಕ್ಕೂ ಮಹಾಲಿಂಗಮ್ ಗೋಚರಿಸಲಿಲ್ಲ. ಪೊಲೀಸರು ಯಾರದ್ದೋ ಒತ್ತಡಕ್ಕೆ ಸಿಲುಕಿದವರಂತೆ ತನಿಖೆ ನಡೆಸಿದರೂ, ಅಣುಸ್ಥಾವರದ ಮಾಹಿತಿ ಕದಿಯುವ ಪ್ರಯತ್ನ ನಡೆಸುತ್ತಿರುವ ಗುಂಪಿನಿಂದ ಮಹಾಲಿಂಗಮ್ ಅಪಹರಣ ಆಗಿರಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ.

              ಆರನೇ ದಿವಸ ಡೈವರ್ಸ್ಗಳಿಗೆ ಕಾಳಿನದಿಯಲ್ಲಿ, ಕೈಗಾ ಅಣೆಕಟ್ಟಿನ ಬಳಿ ಮಹಾಲಿಂಗಮ್ ಶವ ಸಿಕ್ಕಿತು. ಮಹಾಲಿಂಗಮ್ ಶವದ ಪೋಸ್ಟ್ ಮಾರ್ಟಮ್ ನಡೆಯಿತು. ಅದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆ ಷರಾ ಬರೆದು ಬಿಟ್ಟಿತು. ಅಲ್ಲಿಗೇ ಕೊನೆ, ಅದೇನು ಟಿ.ಆರ್.ಪಿ ಗಿಟ್ಟಿಸುವ ಸರಕಲ್ಲದ ಕಾರಣ ಮಾಧ್ಯಮಗಳು ಮುಗುಮ್ಮಾದವು. ಆದರೆ ಮಹಾಲಿಂಗಮ್ ಕುಟುಂಬ ಅದೊಂದು ವ್ಯವಸ್ಥಿತ ಕೊಲೆಯೆಂದೇ ಇಂದಿಗೂ ನಂಬಿದೆ. ಅಲ್ಲಾ, ಇದರ ಹಿನ್ನೆಲೆ ತಿಳಿದ ಯಾರಿಗಾದರೂ ಅದು ಕೊಲೆಯೆಂದು ಮನದೊಳಗೆ ಧ್ವನಿಸಲೇಬೇಕು. ಯಾಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣ ಮಹಾಲಿಂಗಮ್ ಅವರಿಗಿರಲಿಲ್ಲ. ಹಾಂ ಅದು ವೈಯುಕ್ತಿಕ ದ್ವೇಷಕ್ಕಾಗಿನ ಕೊಲೆಯಾಗಿರಲೂ ಸಾಧ್ಯವಿಲ್ಲ. ಯಾಕೆಂದರೆ ಅಂತರ್ಮುಖಿಯಾದ ಮಹಾಲಿಂಗಮ್'ಗೆ ಯಾವುದೇ ಶತ್ರುಗಳಿರಲಿಲ್ಲ. ಹಾಗಾದರೆ ಈ ಕೊಲೆಯ ಹಿಂದೆ ಯಾರಿರಬಹುದು?

                ಮಹಾಲಿಂಗಮ್ ಶವ ಸಿಕ್ಕಿದ ಸ್ಥಳದಲ್ಲೇ ಐದು ವರ್ಷಗಳ ಹಿಂದೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಗುಂಪೊಂದು ಭಾರತದ ಅಣುವಿದ್ಯುತ್ ಸಮಿತಿಯ(NPC) ಅಧಿಕಾರಿಯೊಬ್ಬರನ್ನು ಅಡ್ಡಗಟ್ಟಿತ್ತು. ಆತ ಸುದೈವವಶಾತ್ ತಪ್ಪಿಸಿಕೊಂಡಿದ್ದರು. ಹತ್ತು ವರ್ಷಗಳ ಹಿಂದೆ ಕಲ್ಪಕಮ್ ಅಣುಸ್ಥಾವರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೂ ಮಹಾಲಿಂಗಮ್ ಇದೇ ರೀತಿ ನಾಪತ್ತೆಯಾಗಿದ್ದರು. ಹಾಗೆ ಹೋದವರು ಮರಳಿದ್ದು ಐದು ದಿವಸಗಳ ಬಳಿಕ! ಇಲ್ಲಿ ಮೂರು ಮುಖ್ಯ ಅಂಶಗಳನ್ನು ಗಮನಿಸಬೇಕು. ೧) ಕೈಗಾದ ಎಂಟರಲ್ಲಿ ನಾಲ್ಕು ಅಣು ರಿಯಾಕ್ಟರುಗಳು ಹಾಗೂ ಕಲ್ಪಕಮ್'ನ ಎರಡು ಅಣು ರಿಯಾಕ್ಟರುಗಳು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯ ನಿಯಮಗಳಿಂದ ಹೊರತಾದ, ರಕ್ಷಣೋಪಾಯಗಳಿಗಾಗಿಯೇ ಇರುವಂತಹ ಸ್ಟ್ರೇಟಜಿಕ್ ಅಣು ರಿಯಾಕ್ಟರುಗಳು. ೨) ಕೈಗಾದ ಅಣುಸ್ಥಾವರ ಭಾರತದ ಮುಖ್ಯ ನೌಕಾ ನೆಲೆ ಐ.ಎನ್.ಎಸ್ ಕದಂಬದ ಸಮೀಪದಲ್ಲಿದೆ. ೩) ಹಿರಿಯ ಅಧಿಕಾರಿಯಾಗಿದ್ದ, ಕೈಗಾ ಅಣುಸ್ಥಾವರದಲ್ಲಿ ಅದು ಆರಂಭವಾದಂದಿನಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದ ಮಹಾಲಿಂಗಮ್'ಗೆ ದೇಶದ ಕೆಲವು ಸೂಕ್ಷ್ಮ ಪರಮಾಣು ಮಾಹಿತಿ ತಿಳಿದಿರುವುದು ಅಸಂಭವವೂ ಅಲ್ಲ, ಅಪರಾಧ ಅಥವಾ ಅನಪೇಕ್ಷಿತವೂ ಅಲ್ಲ. ಈ ಮೂರು ಚುಕ್ಕೆಗಳನ್ನು ಜೋಡಿಸಿದರೆ ಇದರ ಹಿಂದಿನ ಸೂತ್ರಧಾರರನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಅಂದರೆ ಇದರ ಹಿಂದೆ ಅಂತರಾಷ್ಟ್ರೀಯ ಮಟ್ಟದ ಕಾಣದ ಕೈಯೊಂದು ಗೋಚರಿಸಲೇ ಬೇಕಲ್ಲವೇ? ಆದರೆ ಇದರ ತನಿಖೆಯನ್ನು ಆರಂಭಿಸಿದ ಸರಕಾರ ಮಹಾಲಿಂಗಮ್ ಶವ ಪತ್ತೆಯಾದೊಡನೆ ಯಾಕೆ ಸುಮ್ಮನಾಗಿಬಿಟ್ಟಿತು? ಪೊಲೀಸರನ್ನು ಸುಮ್ಮನಾಗಿಸಿದ ಆ ಕಾಣದ "ಕೈ" ಯಾವುದು? ಐದು ವರ್ಷಗಳ ಹಿಂದೆ ಅಧಿಕಾರಿಯೊಬ್ಬರ ಮೇಲಾದ ದಾಳಿಯ ತನಿಖೆ ಯಾಕೆ ಸತ್ತು ಹೋಯಿತು? ಹತ್ತು ವರ್ಷಗಳ ಹಿಂದೆ ಮಹಾಲಿಂಗಮ್ ನಾಪತ್ತೆಯಾದುದರ ತನಿಖೆ ಏನಾಯಿತು? ಇವೆಲ್ಲವೂ ಇಂದಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

                ಮಹಾಲಿಂಗಮ್ ಮರಣದೊಡನೆ ಈ ನಿಗೂಢ ಕಥೆಯ ಅಂತ್ಯವಾಗಲಿಲ್ಲ. ಬದಲಾಗಿ ಅದು ಮತ್ತಷ್ಟು ಬೆಳೆದು ಆ ಕಥೆಯೇ ನಿಗೂಢವಾಯಿತು. 2009-13ರ ನಡುವೆ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿ(DAE)ಯ ಹತ್ತು ವಿಜ್ಞಾನಿಗಳು ಕೊಲೆ, ನಿಗೂಢ ಅಗ್ನಿ ದುರಂತಗಳಿಗೆ ಬಲಿಯಾಗಿ ಹೋದರು. 2011ರಲ್ಲಿ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ 63 ವರ್ಷದ ಉಮಾ ರಾವ್' ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದರೆಂದು ಪೊಲೀಸರು ವರದಿ ಬರೆದು ತಮ್ಮ ಕೆಲಸವನ್ನು ಸುಲಭ ಮಾಡಿಕೊಂಡರು. ಅಂತಹ ತುಂಬು ಪ್ರಾಯಕ್ಕೆ ಖಿನ್ನತೆಗೊಳಗಾಗಲು ಅವರಿಗೇನು ಕಾರಣವಿತ್ತೋ? ಅದು ಆತ್ಮಹತ್ಯೆಯಲ್ಲ ಎಂದ ಕುಟುಂಬಿಕರ ಅಳಲು ಅರಣ್ಯರೋದನವಾಯಿತು. ರಾಷ್ಟ್ರೀಯ ಅಣುವಿದ್ಯುತ್ ಸಂಸ್ಥೆ(NPC)ಯ ಉದ್ಯೋಗಿ ರವಿ ಮುಲಿಯವರನ್ನು ಅಪಹರಿಸಿ ಕೊಲೆಗೈದ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾದಾಗ ರವಿಯ ಸೋದರನೇ ಸ್ವತಂತ್ರ ತನಿಖೆಯನ್ನಾರಂಭಿಸಿದರು.

             2010ರ ಫೆಬ್ರವರಿ 23ರ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ ವಿಜ್ಞಾನಿ ಎಂ.ಅಯ್ಯರ್ ಮನೆಯಲ್ಲೇ ಸಾವನ್ನಪ್ಪಿರುವ ವರದಿಯಾಯಿತು. ಯಾವಾಗ ಮೇಲುನೋಟಕ್ಕೆ ಆತ್ಮಹತ್ಯೆಯಲ್ಲ ಎಂದು ಖಚಿತವಾಗಿ ಸಾಮಾನ್ಯರಿಗೂ ತಿಳಿದು ಕೊಲೆಯ ಶಂಕೆ ಮೂಡುತ್ತದೋ, ಆ ಕೊಲೆಯ ಹಿಂದೆ ಯಾರೋ ಪ್ರಭಾವಿಯ ಹಸ್ತವಿರುತ್ತದೋ, ಅಂತಹ ಸಾವನ್ನೆಲ್ಲಾ "ವಿವರಿಸಲಾಗದ" ಎಂದು ಬರೆದು ಪ್ರಕರಣವನ್ನು ಮುಚ್ಚಿಡುವ ಪರಿಪಾಠ ನಮ್ಮ ತನಿಖಾ ಸಮಿತಿಗಳಲ್ಲಿದೆ. ಅಯ್ಯರ್ ಸಾವೂ ಅಂತಹ ವಿವರಿಸಲಾಗದ ಪಟ್ಟಿಗೆ ಸೇರಿಬಿಟ್ಟಿತು. ಕೊಲೆಗಾರ ನಕಲಿ ಕೀ ಬಳಸಿ ಅಯ್ಯರ್ ಮನೆಯೊಳಗೆ ಪ್ರವೇಶಿಸಿದ್ದ. ನಿದ್ರೆಯಲ್ಲಿರುವಂತೆಯೇ ಅವರನ್ನು ಕತ್ತು ಹಿಸುಕಿ ಸಾಯಿಸಿದ್ದ. ಅವರ ದೇಹದ ಆಂತರಿಕ ಭಾಗಗಳಿಗೆ ಗಾಯಗಳಾಗಿದ್ದವು. ಆದರೂ ಫೊರೆನ್ಸಿಕ್ ತಜ್ಞರಿಗೆ ಬೆರಳಚ್ಚು, ಪೊಲೀಸರಿಂದ ಸಿಗಬಹುದಾದ ಉಳಿದ ಮೂಲಭೂತ ಸುಳಿವುಗಳೂ ಸಿಗಲಿಲ್ಲ. ಇರಾನಿಯನ್ ಅಣು ವಿಜ್ಞಾನಿಗಳನ್ನು ಕೊಲ್ಲುವಾಗ ಪ್ರದರ್ಶಿಸಿದ ವೃತ್ತಿಪರತೆಯೇ ಭಾರತೀಯ ಅಣುವಿಜ್ಞಾನಿಗಳ ಕೊಲೆಯಲ್ಲೂ ಪ್ರತಿಬಿಂಬಿತವಾಗುತ್ತಿತ್ತು. ತನಿಖೆಯನ್ನು ಬೇಗ ಮುಗಿಸಿ ಆತ್ಮಹತ್ಯೆಯೆಂದು ವರದಿ ಮಾಡುವಂತೆ ಕೆಲ ಮೇಲಿನ ಅಧಿಕಾರಿಗಳಿಂದ ಒತ್ತಡವೂ ಬಂದಿತ್ತು. ಈ ಎಲ್ಲಾ ಒತ್ತಡಗಳ ನಡುವೆಯೂ ಮುಂಬಯಿ ಪೊಲೀಸರು ಅದನ್ನು ಕೊಲೆಯೆಂದೇ ದಾಖಲಿಸಿದರು.

                INS ಅರಿಹಂತ್'ನ ಇಂಜಿನಿಯರುಗಳಾದ ಕೆ.ಕೆ ಜೋಷಿ ಹಾಗೂ ಅಭೀಷ್ ಶಿವಂರ ಮೃತದೇಹಗಳು ವಿಶಾಖ ಪಟ್ಟಣದ ರೈಲ್ವೇ ಹಳಿಗಳ ಮೇಲೆ ಸಿಕ್ಕಿದರೆ, ಉಮಾಂಗ್ ಸಿಂಗ್ ಹಾಗೂ ಪಾರ್ಥ ಪ್ರತಿಮ್ ಬಾಗ್ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನ ರೇಡಿಯೇಷನ್ & ಫೋಟೋಕೆಮಿಸ್ಟ್ರಿ ಡಿಪಾರ್ಟ್ ಮೆಂಟಿನ ಲ್ಯಾಬಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಯಾವುದೇ ವಸ್ತುಗಳು ಇರದಿದ್ದಾಗ್ಯೂ ನಿಗೂಢವಾಗಿ ಸುಟ್ಟುರಿದು ಹೋದರು. ಮಹಮ್ಮದ್ ಮುಸ್ತಾಫ, ತಿತಸ್ ಪಟೇಲ್, ದಲಿಯಾ ನಾಯಕರ ಸಾವನ್ನು ಆತ್ಮಹತ್ಯೆಯ ಪಟ್ಟಿಗೆ ಸೇರ್ಪಡಿಸಲಾಯಿತು. 2011ರಲ್ಲಿ ನಂದಿ ಹಿಲ್'ನಲ್ಲಿ ಎಚ್.ಎ.ಎಲ್.ನ ಮುಖ್ಯ ಪರೀಕ್ಷಕ ಪೈಲಟ್ ಸ್ಕ್ವಾಡ್ರನ್ ಲೀಡರ್(ನಿವೃತ್ತ) ಬಲದೇವ್ ಸಿಂಗ್ ದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಯಿತು. 1990ರಿಂದ ಎಲ್.ಸಿ.ಎ ಪ್ರೋಗ್ರಾಂನಲ್ಲಿ ತೊಡಗಿಸಿಕೊಂಡಿದ್ದ, ಈ ಉದ್ದೇಶಕ್ಕಾಗಿಯೇ ವೈಮಾನಿಕ ಅಭಿವೃದ್ಧಿ ಇಲಾಖೆಗೆ ಸೇರಿಕೊಂಡಿದ್ದ ಆತ ಲಘು ವಿಮಾನಗಳ ಅಭಿವೃದ್ಧಿ ಹಾಗೂ ಹಾರಾಟ ಪರೀಕ್ಷೆ ಹಾಗೂ ನಿಯಮಗಳನ್ನು ರೂಪಿಸುವಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದ ಅನುಭವಿಯೂ ನಿಷ್ಣಾತರೂ ಆಗಿದ್ದರು. ಭಾರತಕ್ಕೆ ಬರುವ ಯುದ್ಧ ವಿಮಾನಗಳ ಮೌಲ್ಯಮಾಪನ ನಡೆಸುತ್ತಿದ್ದವರು ಅವರೇ. ಅಂತಹ ವ್ಯಕ್ತಿ ಆತ್ಮಹತ್ಯೆ ಯಾಕೆ ಮಾಡಿಕೊಂಡಾರು ಎನ್ನುವ ಸಣ್ಣ ಸಂಶಯವೂ ಪೊಲೀಸರಲ್ಲಿ ಮೊಳೆಯಲಿಲ್ಲ. ಅಥವಾ ಮೊಳಕೆಯಲ್ಲೇ ಚಿವುಟಲ್ಪಟ್ಟಿತು. ಇದಾಗಿ ಎರಡು ತಿಂಗಳೊಳಗಾಗಿ ರಾಫೇಲ್ (ಯುದ್ಧ ವಿಮಾನ) ಒಪ್ಪಂದಕ್ಕೆ ಸಹಿ ಬಿತ್ತು! ವರ್ಷಗಳು ಕಳೆದರೂ ರಾಫೇಲ್ ಬರಲೇ ಇಲ್ಲ. ಆದರೆ ಕುಟುಂಬವೊಂದರ ಜೋಳಿಗೆ ತುಂಬುತ್ತಲೇ ಇತ್ತು! ಭಾಭಾ ಅಟಾಮಿಕ್ ರೀಸರ್ಚ್ ಸೆಂಟರಿನಲ್ಲಿ ಅವಧೇಶ್ ಚಂದ್ರ, ಅಶುತೋಷ್ ಶರ್ಮ, ಸೌಮಿಕ್ ಚೌಧರಿ, ಅಕ್ಷಯ್ ಚೌಹಾಣ್, ಕುಮಾರ್ ವೇಲು, ಸುಭಾಷ್ ಸೋನವಾನೆ, ಜಸ್ವಂತ್ ರಾವ್, ಹಾಗೂ ತಿರುಮಲ ಪ್ರಸಾದ್ ಕೂಡಾ ಆತ್ಮಹತ್ಯೆ ಮಾಡಿಕೊಂಡರಂತೆ!

                  ಭಾಭಾ ಅಟಾಮಿಕ್ ಸೆಂಟರಿನ ಉದ್ಯೋಗಿಗಳೇ ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳೇ ಆತ್ಮಹತ್ಯೆಗೆ ಶರಣಾಗಬೇಕಾದರೆ ಆ ಆತ್ಮಹತ್ಯೆಗಳು ಏಕಾಗುತ್ತಿವೆಯೆಂದಾದರೂ ಸರಕಾರ ಕನಿಷ್ಟ ವಿಚಾರಣೆ ಯಾಕೆ ನಡೆಸಲಿಲ್ಲ? ಇವುಗಳೆಲ್ಲಾ ಆತ್ಮಹತ್ಯೆಗಳಲ್ಲ, ಕೊಲೆಗಳೇ ಎಂದು ಸಾಮಾನ್ಯನಿಗೂ ಬರುವ ಸಂಶಯ ಸರಕಾರಕ್ಕೆ ಯಾಕೆ ಹುಟ್ಟಲಿಲ್ಲ? ಸರಕಾರ ಕೊಲೆ ಪಾತಕಿಗಳ ಪ್ರಭಾವಕ್ಕೆ ಬಿದ್ದು ನರಳುತ್ತಿತ್ತೇ? ಅಥವಾ ತನ್ನ ಕುಟುಂಬದ ಬೊಕ್ಕಸಕ್ಕೆ ದೇಣಿಗೆ ಪಡೆಯುತ್ತಿತ್ತೇ? ಇರಲಿ, ಸರಕಾರವನ್ನು ಭೃಷ್ಟರ ಸಂತೆ ಎಂದು ಪಕ್ಕಕ್ಕಿರಿಸಿದರೂ ಅಣು ವಿಜ್ಞಾನಿಗಳನ್ನೇ ಗುರಿಯಾಗಿರಿಸಿದ ಆ ಕೊಲೆಪಾತಕಿಗಳ ತಂಡ ಯಾವುದು? ಪರಮಾಣು ಒಪ್ಪಂದದ ಚರ್ಚೆ ಜಾರಿಯಲ್ಲಿರುವಾಗ, ಅದಕ್ಕೆ ಸಹಿ ಹಾಕಬೇಕೆಂದು ಆಡಳಿತ ಪಕ್ಷ ಎಲ್ಲರನ್ನೂ, ಎಲ್ಲವನ್ನೂ ಓಲೈಸುತ್ತಿದ್ದಾಗ, ಪ್ರತಿಪಕ್ಷಗಳು ಅದನ್ನು ವಿರೋಧಿಸುತ್ತಿದ್ದಾಗಲೇ ಈ ಕೊಲೆಗಳೆಲ್ಲಾ ಯಾಕೆ ನಡೆದವು? ಆಗಿನ ಸರಕಾರ ಪರಮಾಣು ಒಪ್ಪಂದವನ್ನು ಮಾಡಿಯೇ ತೀರಬೇಕೆಂಬ ಹಠಕ್ಕೆ ಬಿದ್ದದ್ದೇಕೆ?

              ಪ್ರಶ್ನೆಗಳು ಹಲವಿವೆ. ಉತ್ತರ ಹುಡುಕ ಹೊರಟರೆ ಅದು ಹೋಮಿ ಜಹಾಂಗೀರ್ ಭಾಭಾರ ಅಕಾಲಿಕ ಮರಣಕ್ಕೇ ಹೋಗಿ ನಿಲ್ಲುತ್ತದೆ. ಅವರ ಮರಣದ ರಹಸ್ಯ ಕೆದಕಬೇಕಾದರೆ ಅವರದೇ ಸಾಲಿನಲ್ಲಿ ನಿಲ್ಲುವ ಯೋಗ್ಯತಾಸಂಪನ್ನ ವಿಜ್ಞಾನಿಯೊಬ್ಬನ ಅಳಲನ್ನು ಕೇಳಲೇಬೇಕು. ಅವರ ಕಥೆಯ ಹಿಂದಿನ ಕಾರಣವೇ ಈ ಮೇಲಿನ ಎಲ್ಲಾ ಕೊಲೆಗಳ ರಹಸ್ಯವನ್ನು ಬಿಡಿಸಲೂ ಬಲ್ಲದು. ಇದೊಂಥರಾ ಕ್ರೌಂಚದ ಕೂಗೇ! ಅನಾವಶ್ಯಕ ನೆಪವೊಡ್ಡಿ ವಿಜ್ಞಾನಿಯೊಬ್ಬನನ್ನು ಅವನ ನಿತ್ಯ ಜೊತೆಗಾರ ವಿಜ್ಞಾನದಿಂದ ಬೇರ್ಪಡಿಸಿದಾಗ ಎದ್ದ ಕೂಗು!

                "1994ರ ನವೆಂಬರ್ 30. ಮನೆಯ ಹೊಸ್ತಿಲ ಬಳಿ ಪೊಲೀಸರ ಬೂಟುಗಾಲಿನ ಶಬ್ಧ ಕೇಳಿಸಿತು. ಒಳ ನುಗ್ಗಿದವರೇ ಮಾತಿಗೂ ಅವಕಾಶ ಕೊಡದೇ ಕೋಳ ತೊಡಿಸಿದರು. ಮಾಲ್ಡೀವ್ಸ್ ನ ಇಬ್ಬರು ಗೂಢಚರರಾದ  ರಶೀದಾ ಹಾಗೂ ಫೌಝಿಯಾ ಹಸನ್ರಿಗೆ ಕ್ರಯೋಜನಿಕ್ ಎಂಜಿನ್ಗಳ ರಹಸ್ಯವನ್ನು ಕೋಟ್ಯಂತರ ರೂಪಾಯಿಗೆ ಮಾರಿದ್ದೇನೆಂಬುದು ನನ್ನ ಮೇಲಿನ ಆರೋಪವಾಗಿತ್ತು. ನಿಜವಾಗಿ ರಶೀದಳನ್ನು ನಾನು ನೋಡಿದ್ದೇ ವಿಚಾರಣೆಯ ಸಂದರ್ಭದಲ್ಲಿ. ಪೊಲೀಸರಿಗಾದರೂ ಕ್ರಯೋಜನಿಕ್ನ ಬಗ್ಗೆ ಹೇಗೆ ಗೊತ್ತಿರಲು ಸಾಧ್ಯ? 3 ದಿನಗಳ ಕಾಲ ಅನ್ನಾಹಾರಗಳಿಲ್ಲದೆ ಪೊಲೀಸರ ನಿಂದನೆ, ಹೊಡೆತಗಳನ್ನು ತಿಂದು ದೇಹ, ಮನಸ್ಸು ಜರ್ಝರಿತವಾಗಿತ್ತು. ದಾಹದಿಂದ ಜೀವ ಸಾಯುತ್ತಿತ್ತು. ನೀರು ಕೇಳಿದೆ. ದೇಶದ್ರೋಹಿಗೇಕೆ ನೀರು ಎಂದು ಸಿಟ್ಟಾಗಿ ಪೊಲೀಸನೊಬ್ಬ ಬೂಟುಗಾಲಿನಿಂದ ನನ್ನನ್ನು ತುಳಿದ. ನೆಲಕ್ಕುರುಳಿದೆ. ಯಾವ ಕೈಗಳಿಂದ ಸಾಲು ಸಾಲು ರಾಕೆಟ್ಗಳನ್ನು ನಭಕ್ಕೆ ಹಾರಿಸಿದ್ದೆನೋ ಅವುಗಳನ್ನೂರಿ ಏಳಲು ಮತ್ತೆ ಮತ್ತೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೋರ್ಟು ನನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರೂ ನಾನು ಪೊಲೀಸ್ ಕಸ್ಟಡಿಯಲ್ಲಿ ಇರಲೇ ಇಲ್ಲ. ವಿಚಾರಣೆಯ ನೆಪದಲ್ಲಿ ಯಾರ್ ಯಾರೋ ನನ್ನನ್ನು ಎಲ್ಲೆಲ್ಲಿಗೋ ಕೊಂಡೊಯ್ದು, ಕತ್ತಲ ಕೂಪದಲ್ಲೆಲ್ಲಾ ವಿಚಾರಣೆ, ದೌರ್ಜನ್ಯ ನಡೆಸಿದರು. ಐವತ್ತು ದಿನಗಳ ಕಾಲ ವೆಯ್ಯೂರು ಜೈಲಿನಲ್ಲಿರುವಾಗ ನನ್ನ ವ್ಯಕ್ತಿತ್ವವೇ ಕುಸಿದು ಹೋದಂತೆ ಸ್ಥಂಭೀಭೂತನಾಗಿದ್ದೆ. ಪರಿವಾರಕ್ಕೆ ಸಮಯವನ್ನೇ ಮೀಸಲಿಡದೆ 28 ವರ್ಷಗಳ ಕಾಲ ಇಸ್ರೋದಲ್ಲಿ ದಣಿವರಿಯದೇ ದುಡಿದ ನನ್ನನ್ನೇ ದೇಶದ್ರೋಹಿ ಅಂದದ್ದು ನನ್ನನ್ನು ಆ ಪರಿಯಾಗಿ ಘಾತಿಸಿತ್ತು. ದುಡ್ಡಿಗಾಗಿ ದೇಶವನ್ನೇ ಮಾರಿದ ದೇಶದ್ರೋಹಿ, ವಂಚಕ, ರಕ್ಷಣಾ ರಹಸ್ಯಗಳನ್ನು ಸೋರಿಕೆ ಮಾಡಿದ ಕಳ್ಳ.. ಎಂದೆಲ್ಲಾ ಮಾಧ್ಯಮಗಳು ವರ್ಣರಂಜಿತವಾಗಿ ಬರೆದಾಗ ಇಸ್ರೋದಲ್ಲಿ 28 ವರ್ಷಗಳಿಂದ ನಿಯತ್ತಿನಿಂದ ಕೆಲಸ ಮಾಡಿದ, ಎ.ಪಿ.ಜೆ. ಕಲಾಮ್ರ ಜೊತೆ ದುಡಿದಿರುವ ಆವರೆಗೆ ಒಂದೇ ಒಂದು ಆರೋಪವೂ ಇರದ ನನಗೆ ಹೇಗಾಗಿರಬೇಡ? ಅಮೇರಿಕದ ಪ್ರಿನ್ಸ್ ಟನ್ ವಿಶ್ವವಿದ್ಯಾಲಯದ 25 ವಿದ್ಯಾರ್ಥಿಗಳಲ್ಲಿ ಮೊದಲಿಗನಾಗಿ ನಾನು ತೇರ್ಗಡೆಗೊಂಡಾಗ ಅಮೇರಿಕವೇ ಪ್ರಭಾವಿತಗೊಂಡಿತ್ತು. ನಾಸಾದಲ್ಲಿ ಉದ್ಯೋಗದ ಭರವಸೆ ನೀಡಿತ್ತಲ್ಲದೆ, ಅಮೇರಿಕನ್ ಪೌರತ್ವದ ಆಮಿಷವನ್ನೂ ಒಡ್ಡಿತ್ತು. ಅವೆಲ್ಲವನ್ನೂ ತಿರಸ್ಕರಿಸಿ ಇಸ್ರೋದಲ್ಲೇ ಮುಂದುವರಿಯಲು ತೀರ್ಮಾನಿಸಿದ ನಾನು ದೇಶದ್ರೋಹಿಯಾದೇನೇ? ದುಡ್ಡಿಗಾಗಿ ದೇಶದ ರಹಸ್ಯಗಳನ್ನು ಮಾರಲು ಮುಂದಾದೇನೇ?" ಹೀಗೆ ನಂಬಿ ನಾರಾಯಣನ್ ಹೇಳುತ್ತಿದ್ದರೆ ನಮ್ಮ ದರಿದ್ರ ವ್ಯವಸ್ಥೆಯನ್ನು ಸುಟ್ಟು ಬಿಡಬೇಕೆನ್ನುವಷ್ಟು ಸಿಟ್ಟು ಒತ್ತರಿಸಿ ಬರುತ್ತದೆ.

                    ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಅದುವರೆಗೆ ಅವಲಂಬಿಸಿದ್ದು ಪಿಎಸ್ಎಲ್ವಿ ರಾಕೆಟ್ಗಳನ್ನು. ಆದರೆ ಇದರಿಂದ ಅತಿ ಹೆಚ್ಚು ತೂಕದ ಉಪಗ್ರಹಗಳನ್ನು ರವಾನಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಉಡಾವಣೆಗೆ ಭಾರತ ಅಪಾರ ಹಣವನ್ನು ತೆರುವುದರ ಜೊತೆಗೆ ವಿದೇಶಿ ರಾಕೆಟ್ಗಳ ನೆರವು ಪಡೆಯಬೇಕಾಗಿತ್ತು. ಆದರೆ ಕ್ರಯೋಜೆನಿಕ್ ತಂತ್ರಜ್ಞಾನ ಪಡೆದುಕೊಂಡಲ್ಲಿ ಈ ಕೊರತೆಯನ್ನು ನೀಗಿಸಬಹುದಾಗಿತ್ತು .ಅಲ್ಲದೆ ಇದರಿಂದ ವಿದೇಶಿ ವಿನಿಮಯ ಹಣವೂ ಉಳಿತಾಯವಾಗುವುದರ ಜೊತೆಗೆ ಇತರ ದೇಶಗಳ ಉಪಗ್ರಹಗಳನ್ನು ಉಡ್ಡಯನ ನಡೆಸಿ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಪಾರಮ್ಯವನ್ನೂ, ಸಾಕಷ್ಟು ಆದಾಯವನ್ನು ಗಳಿಸಬಹುದಾಗಿತ್ತು. ಇದೇ ಕಾರಣಕ್ಕೆ ಕ್ರಯೋಜನಿಕ್ ಎಂಜಿನ್ ತಂತ್ರಜ್ಞಾನದ ಪಡೆಯಲು 1992ರಲ್ಲಿ ರಷ್ಯಾದೊಂದಿಗೆ ಭಾರತ ಒಪ್ಪಂದವೊಂದಕ್ಕೆ ಬಂದಿತ್ತು. 235 ಕೋಟಿ ರೂಪಾಯಿಯ ಈ ಬೃಹತ್ ಒಪ್ಪಂದ ಸಹಜವಾಗಿಯೇ ಅಮೇರಿಕದ ಕಣ್ಣು ಕುಕ್ಕಿತು. ಅಮೇರಿಕವು ಅದಾಗಲೇ ಇದೇ ಮಾದರಿಯ ಒಪ್ಪಂದಕ್ಕೆ 950 ಕೋಟಿ ರೂಪಾಯಿಯ ಬೇಡಿಕೆಯಿಟ್ಟಿತ್ತು. ಫ್ರ್ರಾನ್ಸ್ 650 ಕೋಟಿ ರೂಪಾಯಿ ಷರತ್ತು ವಿಧಿಸಿತ್ತು. ರಷ್ಯಾದ ಅಧ್ಯಕ್ಷರಾಗಿದ್ದ ಬೋರಿಸ್ ಯೇಲ್ಸಿನ್ ಮೇಲೆ ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಶ್ ಒಪ್ಪಂದ ರದ್ದುಗೊಳಿಸುವಂತೆ ಒತ್ತಡ ಹೇರಿದರು. ಈ ಒಪ್ಪಂದ ಜಾರಿಯಾದದ್ದೇ ಆದಲ್ಲಿ ರಷ್ಯಾವನ್ನು ಕಪ್ಪು ಪಟ್ಟಿಯಲ್ಲಿ  ಸೇರಿಸುವುದಾಗಿ ಬೆದರಿಕೆಯೊಡ್ಡಿದರು. ಬೆದರಿದ ಯೇಲ್ಸಿನ್ ಒಪ್ಪಂದವನ್ನು ರದ್ದುಗೊಳಿಸಿದರು. ಬಳಿಕ ಆದ ಹೊಸ ಒಪ್ಪಂದದಂತೆ ತಂತ್ರಜ್ಞಾನಗಳನ್ನು ವರ್ಗಾಯಿಸದೇ 4 ಕ್ರಯೋಜನಿಕ್ ಎಂಜಿನ್ಗಳನ್ನು ಸ್ವಯಂ ತಯಾರಿಸಿಕೊಡುವುದಕ್ಕೆ ರಷ್ಯಾ ಒಪ್ಪಿಕೊಂಡಿತು. ಆ ಸಂದರ್ಭದಲ್ಲಿ ಇಸ್ರೋದಲ್ಲಿ ಕ್ರಯೋಜನಿಕ್ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದದ್ದು ಇದೇ ನಂಬಿ ನಾರಾಯಣನ್.  ದ್ರವ ಇಂಧನ ಚಾಲಿತ ರಾಕೆಟನ್ನು ಭಾರತಕ್ಕೆ ಮೊತ್ತಮೊದಲು ಪರಿಚಯಿಸಿದ್ದೂ ವಿಕ್ರಂ ಸಾರಾಭಾಯ್, ಸತೀಶ್ ಧವನ್ ಹಾಗೂ ಯು.ಆರ್.ರಾವ್ ಅವರಂಥ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಹುದಾದ ಇದೇ ನಂಬಿ ನಾರಾಯಣನ್.

                  ತಂತ್ರಜ್ಞಾನ ದೊರಕದಿದ್ದರೂ ನಂಬಿ ನಾರಾಯಣನ್ ನೇತೃತ್ವದಲ್ಲಿ ಇಸ್ರೋ ಶೂನ್ಯದಿಂದ ಸ್ವದೇಶಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾಯಿತು. ಇನ್ನೇನು ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಸಿದ್ಧವಾಗುತ್ತದೆನ್ನುವಷ್ಟರಲ್ಲಿ ಅವಘಡವೊಂದು ನಡೆದು ಹೋಯಿತು. ಕ್ರಯೋಜೆನಿಕ್ ತಂತ್ರಜ್ಞಾನವನ್ನು ಶತ್ರು ದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿ ನಂಬಿ ನಾರಾಯಣನ್ ಹಾಗೂ ಇನ್ನೊಬ್ಬ ವಿಜ್ಞಾನಿ ಶಶಿ ಕುಮಾರರನ್ನು ಬಂಧಿಸಲಾಯಿತು. ಇಸ್ರೊ ವಿಜ್ಞಾನಿಗಳ ನೈತಿಕ ಸ್ಥೈರ್ಯವೇ ಉಡುಗಿ ಹೋಯಿತು. ಕ್ರಯೋಜೆನಿಕ್ ಯೋಜನೆ ಹಳ್ಳ ಹಿಡಿಯಿತು. ಜೊತೆಗೆ ಜಿಎಸ್ಎಲ್ವಿ, ಪಿಎಸ್ಎಲ್ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ ಹತ್ತಾರು ಯೋಜನೆಗಳೂ ನಿಂತ ನೀರಾದವು. ನಂಬಿಯವರ ಬಾಯಿ ಬಿಡಿಸಲು ಅವರಿಗೆ ಚಿತ್ರ ಹಿಂಸೆ ನೀಡಲಾಯಿತು. ಇಸ್ರೊಗೆ ಆಗಾಗ ಭೇಟಿ ನೀಡುತ್ತಿದ್ದ ಹಾಗೂ ವೀಸಾ ಅವಧಿ ಮುಗಿದ ಮೇಲೂ ಭಾರತದಲ್ಲೇ ಇದ್ದ ಮಾಲ್ಡೀವ್ಸ್ನ ಮರಿಯಂ ರಷೀದಾ ಮತ್ತು ಫೌಜಿಯಾ ಹಸನ್ ಅವರನ್ನು ಬಂಧಿಸಿದಾಗ ಅವರ ಬಳಿ ಇದ್ದ ಡೈರಿಯಲ್ಲಿ ನಂಬಿಯವರ ದೂರವಾಣಿ ಸಂಖ್ಯೆ ನಮೂದಾಗಿತ್ತು ಎನ್ನುವ ನೆಪವೇ ನಂಬಿಯವರನ್ನು ಬಂಧಿಸಲು ಸಾಕಾಗಿತ್ತು. ಬಂಧಿತ ರಷೀದಾ ಮತ್ತು ಫೌಜಿಯಾ ಬಳಿ ಕೇವಲ ನಂಬಿಯವರ ದೂರವಾಣಿ ಸಂಖ್ಯೆ ಇತ್ತು ಎಂಬ ಏಕೈಕ ಕಾರಣಕ್ಕೆ ಇಸ್ರೊಗೆ ಸಂಬಂಧಿಸಿದ ಕೆಲವು ರಹಸ್ಯ ಮಾಹಿತಿಗಳೂ ಅವರ ಬಳಿ ಇದ್ದವು, ಕ್ರಯೋಜೆನಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿವೆ ಎಂದೆಲ್ಲ ಪೊಲೀಸರು ಆರೋಪಿಸಿದರು. ಯಾವಾಗ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತೋ ಆಗ ಸತ್ಯ ನಿಧಾನವಾಗಿ ಹೊರಬರಲಾರಂಭಿಸಿತು. ಇಡೀ ಪ್ರಕರಣವನ್ನು ಪಿತೂರಿ ಎಂದು ಹೇಳಿದ  ಸಿಬಿಐ, ಈ ಪಿತೂರಿಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವ ವರದಿಯನ್ನು 1996ರಲ್ಲಿ ದೇಶದ ಮುಂದಿಟ್ಟಿತು. ಬಳಿಕ, 1998ರಲ್ಲಿ ನಂಬಿ ನಾರಾಯಣನ್ರನ್ನು ನಿರ್ದೋಷಿ ಎಂದು ಸುಪ್ರೀಮ್ ಕೋರ್ಟ್ ಹೇಳಿತಲ್ಲದೇ, ಇಡೀ ಪ್ರಕರಣವನ್ನೇ ವಜಾಗೊಳಿಸಿತು. ಅಲ್ಲದೇ ನಂಬಿ ನಾರಾಯಣನ್ರಿಗೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2001ರಲ್ಲಿ ಕೇರಳ ಸರಕಾರಕ್ಕೆ ನಿರ್ದೇಶನ ನೀಡಿತು.

              ಆದರೆ ಈ ಪಿತೂರಿ ನಡೆಸಿದವರಾರು? ನಾರಾಯಣನ್ ಮೇಲಿದ್ದದ್ದು ಕೋಟ್ಯಂತರ ರೂಪಾಯಿಯನ್ನು ಪಡಕೊಂಡ ಆರೋಪ. ಹಾಗಿದ್ದರೆ, ತನಿಖಾಧಿಕಾರಿಗಳು ಅವರ ಮನೆಯ ಮೇಲೆ ದಾಳಿ ಮಾಡಬೇಕಿತ್ತಲ್ಲವೇ? ದಾಖಲೆಗಳನ್ನು ವಶಪಡಿಸಿಕೊಳ್ಳ ಬೇಕಿತ್ತಲ್ಲವೇ? ಅವರ ಬ್ಯಾಂಕ್ ಖಾತೆಯ ತಪಾಸಣೆ ನಡೆಸಬೇಕಿತ್ತಲ್ಲವೇ? ಇವಾವುದನ್ನೂ ಮಾಡದೇ ಕೇವಲ ದೇಶದ್ರೋಹಿ ಎನ್ನುತ್ತಾ ತಿರುಗಿದ್ದುದರ ಹಿಂದಿನ ಗುಟ್ಟೇನು? ವಿಚಾರಣೆಯ ಹೆಸರಲ್ಲಿ ಮಾಧ್ಯಮಗಳಲ್ಲಿ ದಿನಂಪ್ರತಿ ಬರುತ್ತಿದ್ದ ಸುದ್ದಿಗಳ ಹಿಂದೆ ಯಾರಿದ್ದರು? ಅವರ ಉದ್ದೇಶ ಏನಿತ್ತು? ಇಸ್ರೋದ ವರ್ಚಸ್ಸನ್ನು ಕೆಡಿಸಲು, ಬಾಹ್ಯಾಕಾಶ ವಿಭಾಗದಲ್ಲಿ ಇಸ್ರೋದ ಸಾಧನೆಗೆ ಅಡ್ಡಿಪಡಿಸಲು ಯಾವುದೋ ಶಕ್ತಿ ಈ ಎಲ್ಲ ಪಿತೂರಿಗಳನ್ನು ನಡೆಸಿರಬಾರದೇಕೆ? ನಂಬಿ ನಾರಾಯಣನ್  ಮೇಲೆ ಸುಳ್ಳು ಕೇಸು ಹಾಕಿದ, ದೇಶದ್ರೋಹಿ ಎಂದು ಜನಸಾಮಾನ್ಯರು ನಂಬುವಂಥ ವಾತಾವರಣವನ್ನು ಸೃಷ್ಟಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಿಬಿಐ ಹೇಳಿತ್ತಲ್ಲವೇ? ಆದರೆ ಆ ಫೈಲು ಕಾಣೆಯಾಯಿತೇಕೆ? ಇದಕ್ಕೆಲ್ಲಾ ಉತ್ತರವನ್ನು ಬ್ರಿಯಾನ್ ಹಾರ್ವೆ ಅವರ "ರಶ್ಯ ಇನ್ ಸ್ಪೇಸ್: ದಿ ಫೇಲ್ಡ್ ಫ್ರಂಟಿಯರ್" (Russia in Space: The Failed Frontier; 2001)  ಪುಸ್ತಕ ನೀಡುತ್ತದೆ. ನಂಬಿ ನಾರಾಯಣನ್ ಪ್ರಕರಣವು ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ ಹೆಣೆದ ನಾಟಕವಾಗಿತ್ತೆಂದು ಅವರು ಹೇಳುತ್ತಾರೆ.

               ಆಗಿನ ಕೇಂದ್ರ ಕಾಂಗ್ರೆಸ್ ಸರ್ಕಾರ ಹಾಗೂ ಕೇರಳದ ಯುಡಿಎಫ್ ಸರ್ಕಾರ ನಂಬಿ ನಾರಾಯಣನ್ ವಿರುದ್ಧ ಅನ್ಯಾಯವಾಗಿ ಹೇರಲಾದ ಆರೋಪಗಳ ಕುರಿತು ತುಟಿ ಪಿಟಕ್ಕೆನ್ನಲಿಲ್ಲ. ನಂಬಿ ನಾರಾಯಣನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು ಐಬಿಯ ಮುಖ್ಯಸ್ಥರಾಗಿದ್ದ ಆರ್.ಬಿ.ಶ್ರೀಕುಮಾರ್ ಹಾಗೂ ಐಬಿಯ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್. ಮೊದಲು ಗುಜರಾತಿನಲ್ಲಿ ಡಿಜಿಪಿಯಾಗಿದ್ದ ಶ್ರೀಕುಮಾರ್ ಗೋಧ್ರೋತ್ತರ ಗಲಭೆಯಲ್ಲಿ ನರೇಂದ್ರ ಮೋದಿಯವರ ಪಾತ್ರ ಇತ್ತೆಂದು ಆರೋಪಿಸಿ ಸೆಕ್ಯುಲರುಗಳ ಪ್ರಿಯತಮನಾಗಿದ್ದ ವ್ಯಕ್ತಿ. ರಾಷ್ಟ್ರೀಯ ಮಾನವಹಕ್ಕು ಆಯೋಗಕ್ಕೆ 1999ರಲ್ಲಿ ಸಲ್ಲಿಸಿದ ಪರಿಹಾರ ಕುರಿತ ಅರ್ಜಿಯಲ್ಲಿ ನಂಬಿ ನಾರಾಯಣನ್ ಇವರಿಬ್ಬರ ಹೆಸರನ್ನೂ ಉಲ್ಲೇಖಿಸಿದ್ದರೂ, ಸಿಬಿಐ ಇವರೀರ್ವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರೂ ಕೇಂದ್ರ ಸರ್ಕಾರ ಮಾತ್ರ ಅವರ ಕೂದಲೂ ಕೊಂಕಿಸಲಿಲ್ಲ. ಬೇಹುಗಾರಿಕಾ ಪ್ರಕರಣದಲ್ಲಿ ಅಮೆರಿಕದ ಸಂಶಯಾಸ್ಪದ ಪಾತ್ರವಿದೆ ಎಂಬುದನ್ನು ತನ್ನನ್ನು ಭೇಟಿಯಾದ ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ನಂಬಿ. ‘ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳಿದ ಮೊದಲ ಮುಖ್ಯಮಂತ್ರಿಯೆಂದರೆ ನರೇಂದ್ರ ಮೋದಿ. ಪ್ರಕರಣದ ಸಂದರ್ಭದಲ್ಲಿ ಆಗಿಹೋದ ಕೇರಳದ ಯಾವೊಬ್ಬ ಮುಖ್ಯಮಂತ್ರಿಯೂ ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳುವ ಸೌಜನ್ಯವನ್ನೂ ತೋರಲಿಲ್ಲ’ ಎನ್ನುತ್ತಾರೆ ನಾರಾಯಣನ್. ಇಸ್ರೊ ಪ್ರಕರಣದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳ ಶಾಮೀಲು ಇದ್ದೇ ಇದೆ ಎನ್ನುವುದು ಕಣ್ಣಿಗೆ ರಾಚುವ ಸತ್ಯ.

              “ಆರೋಗ್ಯವಂತರಾಗಿದ್ದ, 52 ವರ್ಷದ ವಿಕ್ರಮ್ ಸಾರಾಭಾಯಿ 1971ರಲ್ಲಿ ಕೋವಲಮ್ ಹೋಟಲೊಂದರಲ್ಲಿ ಗಾಢ ನಿದ್ದೆಯಲ್ಲೇ ಮರಣವನ್ನಪ್ಪಿದಾಗ ದೇಹದ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಲಿಲ್ಲ ಎನ್ನುವುದು ಇಂದಿಗೂ ಬಿಡಿಸಲಾಗದ ಒಗಟು.  ವಿಕಾಸ್ ಎಂಜಿನ್'ಗೆ ನಾನು ಆ ಹೆಸರನ್ನಿಟ್ಟದ್ದು ವಿಕ್ರಮ್ ಸಾರಾಭಾಯ್ ನೆನಪಿಗೇ ಹೊರತು ಎಲ್ಲರೂ ಅಂದುಕೊಂಡಂತೆ ಅಭಿವೃದ್ಧಿ ಅರ್ಥದಲ್ಲಲ್ಲ. ಅದಕ್ಕೂ ಐದು ವರ್ಷಗಳ ಹಿಂದೆ ಹೋಮಿ ಜೆ. ಭಾಭಾ ವಿಮಾನ ಅಪಘಾತದಲ್ಲಿ ಮಡಿದಾಗ ಅವರ ಶವವೂ ಸಿಕ್ಕಲಿಲ್ಲ, ಬ್ಲಾಕ್ ಬಾಕ್ಸ್ ಕೂಡಾ ಸಿಕ್ಕಲಿಲ್ಲ ಏಕೆ?” ಎಂದು ತಮ್ಮ ಆತ್ಮಕಥನದಲ್ಲಿ ಸಿಐಎಯತ್ತ ಬೊಟ್ಟು ಮಾಡುತ್ತಾರೆ ನಂಬಿ. ಇಸ್ರೊ ಬೇಹುಗಾರಿಕಾ ಪ್ರಕರಣ ಹೇಗೆ ಮತ್ತು ಏಕೆ ನಡೆಯಿತು? ನಡೆಸಿದವರು ಯಾರು? ಎನ್ನುವುದನ್ನು ನಂಬಿಯವರ ಪುಸ್ತಕ ಹೇಳುತ್ತದೆ. ಭಾರತ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸಬಾರದು ಎನ್ನುವ ಕಾರಣಕ್ಕಾಗಿ ಈ ಪ್ರಕರಣವನ್ನು ಅಮೇರಿಕಾದ ನಿರ್ದೇಶನದಂತೆ ಹುಟ್ಟು ಹಾಕಲಾಯಿತು. ಇದರಿಂದಾಗಿ ಕ್ರಯೋಜೆನಿಕ್ ಇಂಜಿನ್ ಉಪಯೋಗಿಸಿ ಉಡ್ಡಯನ ನಡೆಸುವಲ್ಲಿ ಭಾರತ ಹದಿಮೂರು ವರ್ಷಗಳಷ್ಟು ಕಾಲ ನಿಧಾನಿಸಬೇಕಾಯಿತು. ಅಮೇರಿಕಾಕ್ಕೆ ಬೇಕಾದುದು ಅದೇ. ಆದರೆ ಭಾರತಕ್ಕೆ ತಂತ್ರಜ್ಞಾನವನ್ನು ಕೊಡಲೊಪ್ಪದ, ಅನ್ಯರು ಕೊಡಲು ತಯಾರಾಗಿದ್ದಾಗ ಅಡ್ಡ ಬಂದ, ಸ್ವತಂತ್ರವಾಗಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಿ ಯಶಸ್ವಿಯಾದಾಗ ಇಂತಹ ಪ್ರಕರಣ ಹುಟ್ಟು ಹಾಕಿ ಭಾರತದ ಅಂತಃಸತ್ತ್ವವನ್ನೇ ಉಡುಗಿಸಲು ಪ್ರಯತ್ನಿಸಿದ ಅಮೇರಿಕಾದ 96 ಉಪಗ್ರಹಗಳನ್ನು ಮೊನ್ನೆ ಮೊನ್ನೆ ಏಕಕಾಲಕ್ಕೆ ಉಡಾಯಿಸಲು ಭಾರತದ ಕ್ರಯೋಜೆನಿಕ್ ಎಂಜಿನ್ನೇ ಬೇಕಾಯಿತು ಎನ್ನುವುದು ಮಾತ್ರ ಚೋದ್ಯ. ಭಾರತದ ಅಣು ವಿಜ್ಞಾನಿಗಳ, ಇಂಜಿನಿಯರುಗಳ ಹತ್ಯೆಯ ಹಿಂದೆ ಇದ್ದುದೂ ಅಮೇರಿಕಾದ ಸಿಐಎ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ!

               ಅಮೇರೀಕಾವೇನೋ ತನ್ನ ಸಾರ್ವಭೌಮತ್ವಕ್ಕೆ ಯಾರೂ ಅಡ್ಡ ಇರಬಾರದೆಂಬ ಲೆಕ್ಕಾಚಾರ ಹೂಡಿ ಇದನ್ನೆಲ್ಲಾ ಮಾಡಿತು ಎಂದು ಸುಲಭವಾಗಿ ಆರೋಪಿಸಿಬಿಡಬಹುದು. ಆದರೆ ನಮ್ಮ ಸರಕಾರ, ನಮ್ಮ ಗುಪ್ತಚರ ಇಲಾಖೆಗಳೇನು ಮಕಾಡೆ ಮಲಗಿದ್ದವೆ? ಇವರ ಸಹಕಾರವಿಲ್ಲದೆ ಇಂತಹುದು ಆಗುವುದಾದರೂ ಹೇಗೆ ಸಾಧ್ಯ? ದೇಶದ ರಕ್ಷಣೆ, ಪರಮಾಧಿಕಾರದ ವಿಷಯದಲ್ಲೂ ಸ್ಥಿರವಾಗಿ ನಿಲ್ಲದೆ ಯಾರೋ ಎಸೆಯುವ ಎಂಜಲ ಕಾಸಿಗೆ ಬಾಯೊಡ್ಡುವ ಇಂತಹ ಹೀನ ಜೀವಿಗಳನ್ನು ಈ ದೇಶ ಆಯಕಟ್ಟಿನ ಸ್ಥಾನದಲ್ಲಿ ಕಾಣುವಂತಾದ್ದು ದೇಶದ ದೌರ್ಭಾಗ್ಯವಲ್ಲದೆ ಇನ್ನೇನು? ಮಾತೆತ್ತಿದರೆ ಸಮಾನತೆ, ತಳಸ್ಪರ್ಷಿ ಪ್ರಜ್ಞೆ ಎಂದೆಲ್ಲಾ ಬುರುಡೆ ಬಿಡುವ ಕಮ್ಯೂನಿಸ್ಟರಿಗೆ ವಿಜ್ಞಾನಿಗೂ ಸಮಾನತೆ, ನ್ಯಾಯ ಸಿಗಬೇಕು ಎಂದನ್ನಿಸಲಿಲ್ಲವೇ? ಸದಾ ಅಮೇರಿಕಾವನ್ನು ಬಹಿರಂಗವಾಗಿ ದ್ವೇಷಿಸುವ ಕಮ್ಯೂನಿಷ್ಟರು ಅದೇ ಅಮೇರಿಕಾ ಉಂಡೆಸೆದ ಎಲೆಯನ್ನು ನಕ್ಕಿದ್ದು ಅಧಿಕಾರ ದಾಹದಿಂದಲೇ ಅಲ್ಲವೇ? ದೇಶಕ್ಕಿಂತಲೂ ಪರಿವಾರವೊಂದರ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವ ಕಾಂಗ್ರೆಸ್ಸಿಗರಿಗೆ ಈ ಘಟನೆಗಳಿಂದ, ಪರಮಾಣು ಒಪ್ಪಂದದಿಂದ ಎಷ್ಟು ಹಣ ಸಂದಾಯವಾಗಿರಬಹುದು? ಹಲವಾರು ವರ್ಷಗಳು ಸರಿದು ಹೋದರೂ ದಡ ಕಾಣದೇ ಉಳಿದ ಕಾವೇರಿ ಇಂಜಿನ್ ಕಾಂಗ್ರೆಸ್ಸಿಗರಿಗೆ ಬಸಿದು ಕೊಟ್ಟ ಬಳುವಳಿಯಾದರೂ ಏನು? ದಶಕಗಳ ಪರ್ಯಂತ ಕಾರ್ಯನಿರ್ವಹಿಸಿದರೂ ಸ್ವಂತ ವಿಮಾನ ತಯಾರಿಸಲಾಗದ ಎಚ್.ಎ.ಎಲ್.ನಲ್ಲಿ ಕಾಣದ "ಕೈ"ಗಳು ಆಡಿದ ಆಟಗಳು ಎಂದು ಬಿತ್ತರಗೊಂಡಾವು? ಆ ಆಟದಲ್ಲಿ ಪಡೆದ ಬಲಿಗಳೆಷ್ಟು? ಪುಣ್ಯವಶಾತ್ ದೇಶ ಸದ್ಯ ಸಮರ್ಥನೊಬ್ಬನ ಆಡಳಿತಕ್ಕೊಳಪಟ್ಟಿದೆ. ಇಲ್ಲದಿದ್ದಲ್ಲಿ ಆ "ವಂಶ"ದ ಹೊಟ್ಟೆಪಾಡಿಗಾಗಿ ಎಷ್ಟು ವಿಜ್ಞಾನಿಗಳ "ಆತ್ಮಹತ್ಯೆ"ಯಾಗುತ್ತಿತ್ತೋ?

ಸೋಮವಾರ, ಫೆಬ್ರವರಿ 6, 2017

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ

ಮೂವತ್ತೆಂಟಲ್ಲ ಸಾವಿರದೆಂಟಾದರೂ ಬದಲಾಗದ ಕಮ್ಯೂನಿಸ್ಟ್ ಮಾನಸಿಕತೆ


          ಕಮ್ಯೂನಿಸ್ಟರ ಗೂಂಡಾಗಿರಿಗೆ ಕೊನೆ ಮೊದಲಿಲ್ಲ. ಜನವರಿ 31ರಂದು ಕೇರಳದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು  ವಿ.ಮುರಳೀಧರನ್ ನೇತೃತ್ವದಲ್ಲಿ ನಡೆಯುತಿದ್ದ ನಿರಾಹಾರ ಸತ್ಯಾಗ್ರಹಕ್ಕೆ ಪೊಲೀಸರನ್ನು ಛೂ ಬಿಟ್ಟು ಮಾರಣಾಂತಿಕ ಹಲ್ಲೆ ನಡೆಸಿದೆ ಕಮ್ಯೂನಿಸ್ಟ್ ಸರಕಾರ. ಕೆ.ಸುರೇಂದ್ರನ್ ಸೇರಿದಂತೆ ಹಲವಾರು ಕಾರ್ಯಕರ್ತರು ಗಂಭೀರ ಗಾಯಕ್ಕೊಳಗಾಗಿದ್ದರೆ, ಕೇರಳ ಬಿಜೆಪಿ ಉಪಾಧ್ಯಕ್ಷ ಡಾ. ಪಿ.ಪಿ ವಾವಾರ ಎಡಕಣ್ಣಿನ ದೃಷ್ಟಿಯೇ ಹೋಗಿದೆ. ಇದೇನೂ ಹೊಸದಾದ ವಿಷಯವಲ್ಲ. ಅಧಿಕಾರದಲ್ಲಿ ಇದ್ದಾಗಲೂ ಇಲ್ಲದಿದ್ದಾಗಲೂ ಕಮ್ಯೂನಿಸ್ಟರ ಕ್ರೌರ್ಯಕ್ಕೆ ಮಿತಿಯೇ ಇಲ್ಲ. ಕಮ್ಯೂನಿಸ್ಟ್ ಎಂದಾಗ ನೆನಪಾಗುವುದು ಸಮಾನತೆ, ಸಮಾಜವಾದಗಳಲ್ಲ; ಗೂಂಡಾಗಿರಿ, ಹಲ್ಲೆ, ಕೊಲೆ! ಜನವರಿ 31 ಎಂದಾಗ ಕಮ್ಯೂನಿಸ್ಟರು ಇತಿಹಾಸದ ಗರ್ಭದಲ್ಲೇ ಹೂತು ಹಾಕಿದ ಮೂವತ್ತೆಂಟು ವರ್ಷಗಳ ಹಿಂದಿನ ಭಯಾನಕ ಘಟನೆಯೊಂದು ನೆನಪಿಗೆ ಬರುತ್ತಿದೆ.


              1979ರ ಜನವರಿ 31. ಮತಾಂಧ ಮುಸ್ಲಿಮರಿಂದ ಅತ್ಯಾಚಾರ-ಕೊಲೆಗೊಳಗಾಗುವುದರಿಂದ ತಪ್ಪಿಸಿಕೊಂಡು ನೆಮ್ಮದಿಯ ನೆಲೆ ಕಂಡುಕೊಳ್ಳುವುದಕ್ಕಾಗಿ ಸಾವಿರಾರು ಹಿಂದೂಗಳು ಭಾರತವನ್ನು ಹಿಂದೂರಾಷ್ಟ್ರವೆಂದೂ, ಅಲ್ಲಿ ತಮಗೆ ರಕ್ಷಣೆ ದೊರೆಯುವುದೆಂದು ಭ್ರಮಿಸಿ ಭಾರತದೊಳಕ್ಕೆ ಪ್ರವೇಶಿಸಿದ್ದರು. ಅದರಲ್ಲೊಂದು ಗುಂಪು ಬಂಗಾಳದೊಳಕ್ಕೆ ಬಂದಿತ್ತು. ಪಾಪ ಅವರಿಗೇನು ಗೊತ್ತಿತ್ತು ಅಲ್ಲಿರುವುದು, ಆಳುತ್ತಿರುವುದು ಹಿಂದೂ ಹೆಸರಿನ ರಾಕ್ಷಸರೆಂದು? ಬರೋಬ್ಬರಿ 1700 ಹಿಂದೂಗಳನ್ನು ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿಬಸುವಿನ ಆಜ್ಞೆಯಂತೆ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹುರಿದು ಮುಕ್ಕಿ ತಿಂದವು! ನೂರಕ್ಕೂ ಹೆಚ್ಚು ಮಹಿಳೆಯರನ್ನು ಸರಣಿ ಅತ್ಯಾಚಾರ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಮರುದಿವಸ ಸರಸ್ವತಿ ಪೂಜೆಗೆ ತಮ್ಮ ಗುಡಿಸಲಿನಲ್ಲಿ ಕುಳಿತು ತಯಾರಿ ನಡೆಸುತ್ತಿದ್ದ 15 ಮಕ್ಕಳು ಕಮ್ಯೂನಿಸ್ಟ್ ಗೂಂಡಾಗಳು ಹಾಗೂ ಪೊಲೀಸರಿಗೆ ಬಲಿಯಾದರು. ಅವರ ರಾಕ್ಷಸ ಕೃತ್ಯಕ್ಕೆ ಸರಸ್ವತಿಯ ವಿಗ್ರಹ ಪುಡಿಪುಡಿಯಾಗಿ ಬಿತ್ತು. 4128 ಹಿಂದೂ ಪರಿವಾರಗಳು ನೆಲೆ ಹುಡುಕಿ ಹೋಗುವ ಭರದಲ್ಲಿ ಹಸಿವು, ಬಾಯಾರಿಕೆ, ಬಳಲಿಕೆ ಅದಕ್ಕಿಂತಲೂ ಹೆಚ್ಚಾಗಿ ಕಮ್ಯೂನಿಸ್ಟ್ ರಾಕ್ಷಸರ ಬೆಂಕಿಯ ಬಲೆಗೆ ಬಿದ್ದು ಕರಟಿ ಹೋದವು. ಕಾಶಿಪುರ, ಕುಮಿರ್ ಮರಿ, ಮರೀಚ್ ಝಾಪಿಗಳಲ್ಲಿ ಪೊಲೀಸ್ ಹಾಗೂ ಕಮ್ಯೂನಿಸ್ಟ್ ಪಡೆಗಳು ಹಿಂದೂಗಳನ್ನು ಹುರಿದು ಮುಕ್ಕಿ ತಿಂದು ಆನಂದದ ಕೇಕೆ ಹಾಕಿದವು. ಕಮ್ಯೂನಿಸ್ಟ್ ಪಕ್ಷದಿಂದ ಸಂಭ್ರಮಾಚರಣೆಯೂ ನಡೆಯಿತು. ಜ್ಯೋತಿಬಸು ಸರಕಾರ ಸುದ್ಧಿ ಮಾಧ್ಯಮಗಳು, ವಿರೋಧ ಪಕ್ಷಗಳು, ಸಂಘಟನೆಗಳನ್ನು ಹತ್ಯಾಕಾಂಡ ನಡೆದ ಜಾಗಗಳಿಗೆ ಹೋಗದಂತೆ ನಿರ್ಬಂಧಿಸಿತು. ಪ್ರಪಂಚದ ಎಲ್ಲಾ ನಿರಾಶ್ರಿತರಿಗೆ ಅನ್ನಾಶ್ರಯ ಕೊಟ್ಟ ಹಿಂದೂಸ್ಥಾನದಲ್ಲಿ ಹಿಂದೂಗಳಿಗೆ ಆಶ್ರಯ ಸಿಗಲಿಲ್ಲ. ಕಮ್ಯೂನಿಸ್ಟರ ಕರಾಳಹಸ್ತಕ್ಕೆ ಸಿಲುಕಿ ಅವರು ನಲುಗಿ ಹೋದರು. ಸಮಾನತೆ, ಮಾನವತಾವಾದದ ಬೊಗಳೆ ಬಿಡುವ ಕಮ್ಯೂನಿಸ್ಟರ ಹೃದಯದೊಳಗೆ ಮಾನವತೆಯೇ ಮರೆಯಾಗಿತ್ತು. ಅಲ್ಲಾ, ಮಾನವತೆ ಅವರಲ್ಲಿ ಇದ್ದದ್ದಾದರೂ ಎಂದು?

                 1947-48ರಲ್ಲಿ ಇತಿಹಾಸದ ಅತಿ ದೊಡ್ಡ ವಲಸೆಯನ್ನು ಬರಮಾಡಿಕೊಂಡಿದ್ದ ಭಾರತ 1970-71ರಲ್ಲಿ ಅಂತಹುದೇ ಮತ್ತೊಂದು ಕರುಣಾಜನಕ ದೃಶ್ಯವನ್ನು ಕಾಣಬೇಕಾಯಿತು. ಪೂರ್ವ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನೀಯರು ಹಾಗೂ ಅಧಿಕಾರಿ ವರ್ಗ ಬಂಗಾಳಿ ಮಾತಾಡುವ ಜನರನ್ನು ಗುರಿಯಾಗಿರಿಸಿಕೊಂಡು ದಾಳಿಗೆ ಆರಂಭಿಸಿದ್ದರು. ಬಾಂಗ್ಲಾವನ್ನು ಸ್ವತಂತ್ರಗೊಳಿಸಿ ಇಂದಿರಾ ಗಾಂಧಿಯೇನೋ ದುರ್ಗೆಯಾದರು. ಆದರೆ ಬಾಂಗ್ಲಾದಲ್ಲಿದ್ದ ಹಿಂದೂಗಳಿಗೆ ಆ ದುರ್ಗೆ ಒಲಿಯಲೇ ಇಲ್ಲ. ಅವರು ಇತ್ತ ಭಾರತಕ್ಕೆ ಅಶ್ರಯ ಬೇಡಿ ಬಂದಾಗಲೂ ಆ ದುರ್ಗೆಯ ಕೃಪಾಕಟಾಕ್ಷಕ್ಕೆ ಅವರು ಒಳಗಾಗಲಿಲ್ಲ. ಮುಸ್ಲಿಮರ ಮತಾಂಧತೆಗೆ ಬೆದರಿ ಮಾನ, ಪ್ರಾಣ ಉಳಿಸಿಕೊಳ್ಳಲು ಬಾಂಗ್ಲಾದಿಂದ ಭಾರತಕ್ಕೆ ಓಡಿ ಬಂದಿದ್ದ ಹಿಂದೂಗಳು ಗಡಿರಾಜ್ಯಗಳಾದ ಅಸ್ಸಾಂ, ಬಂಗಾಳ ಹಾಗೂ ಒರಿಸ್ಸಾಗಳಲ್ಲಿ ನೆಲೆಕಂಡುಕೊಳ್ಳಲು ಯತ್ನಿಸಿದ್ದರು. ನಿರಾಶ್ರಿತರ ಸಂಖ್ಯೆ ವಿಪರೀತವಾದಾಗ ಒರಿಸ್ಸಾ ಹಾಗೂ ಈಗಿನ ಛತ್ತೀಸ್ ಗಢದಲ್ಲಿರುವ ಅರಣ್ಯ ಪ್ರದೇಶ ದಂಡಕಾರಣ್ಯದಲ್ಲಿ ಆಶ್ರಯ ಕಲ್ಪಿಸಲು ಕೇಂದ್ರ ಸರಕಾರ ಯತ್ನಿಸಿತು. ಅವರ ಕುಂದುಕೊರತೆಗಳ ನಿವಾರಣೆಗೆಂದೇ ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿಯನ್ನು ಸ್ಥಾಪಿಸಿತು. ದಂಡಕಾರಣ್ಯ ಡೆವಲಪ್ ಮೆಂಟ್ ಅಥಾರಿಟಿ ನಿರಾಶ್ರಿತರಿಗೆ ಕೃಷಿ ಭೂಮಿ ಒದಗಿಸುವ ಭರವಸೆಯನ್ನೇನೋ ನೀಡಿತು. ಕೆಲವರು ಪಡೆದರೂ ಕೂಡಾ. ಆದರೆ ಫಲವತ್ತಾದ ಗಂಗಾ ತಟದಲ್ಲಿ ಕೃಷಿ ಮಾಡಿಯಷ್ಟೇ ಗೊತ್ತಿದ್ದವರನ್ನು ಏಕಾಏಕಿ ಅರಣ್ಯಕ್ಕೆ ತಂದು ಬಿಟ್ಟು ಕೃಷಿ ಮಾಡಿ ಎಂದರೆ ಏನಾದೀತು? ಅಲ್ಲಿನ ವಿಪರೀತ ಹವಾಗುಣ ಹಾಗೂ ದುರಂತ ಪರಿಸ್ಥಿತಿಗಳು ಅವರನ್ನು ಬಂಗಾಳಕ್ಕೇ ಮರಳುವಂತೆ ಮಾಡಿದವು. ಅಲ್ಲಿಂದ ಕೆಲ ನಿರಾಶ್ರಿತರು ವಾಪಸ್ ಬಂಗಾಳಕ್ಕೇ ಮರಳಿ ಸುಂದರ್ ಬನ್, ಮರೀಚ್ ಝಾಪಿಗಳಲ್ಲಿ ನೆಲೆಕಂಡುಕೊಂಡರು. ನಿರಾಶ್ರಿತರ ದಂಡಕಾರಣ್ಯದಿಂದ ಬಂಗಾಳದೆಡೆಗಿನ ಈ ವಲಸೆಯನ್ನು ಆಗಷ್ಟೇ ಬಂಗಾಳದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಮ್ಯೂನಿಸ್ಟರೇ ಬಹಿರಂಗವಾಗಿ ಬೆಂಬಲಿಸಿದರು. ತನ್ನ ಕಾಮ್ರೇಡುಗಳನ್ನು ದಂಡಕಾರಣ್ಯಕ್ಕೆ ಕಳುಹಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸುಂದರ್ ಬನ್ ಸೇರಿದಂತೆ ಉಳಿದ ದ್ವೀಪಗಳಲ್ಲಿ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ನಂಬಿಸಿ ನಿರಾಶ್ರಿತರ ಓಟು ಗಿಟ್ಟಿಸಿ ಅಧಿಕಾರಕ್ಕೂ ಬಂದರು. ಹೀಗೆ 1978ರ ಸುಮಾರಿಗೆ ಕಮ್ಯೂನಿಸ್ಟರ ಮಾತನ್ನು ನಂಬಿ ದಂಡಕಾರಣ್ಯ ಹಾಗೂ ಇತರ ಭಾಗಗಳಿಂದ ಬಂಗಾಳಕ್ಕೆ ಬಂದಿಳಿದ ನಿರಾಶ್ರಿತರ ಸಂಖ್ಯೆ ಸುಮಾರು ಒಂದೂವರೆ ಲಕ್ಷ!

                  ತಮಗೆ ಸಿಕ್ಕ ಖಾಸಗಿ ಹಾಗೂ ಸರಕಾರಿ ಜಾಗಗಳಲ್ಲಿ ಕೊಳಕು ನಾರುವ ಪ್ರದೇಶಗಳಲ್ಲಿ ಬದುಕು ಕಟ್ಟಿಕೊಳ್ಳತೊಡಗಿದ ಈ ಮುಗ್ಧರು ವರ್ಷಗಳ ಪರ್ಯಂತ ಕಾದರೂ ಮುಖ್ಯಮಂತ್ರಿ ಜ್ಯೋತಿಬಸು ಖುದ್ದಾಗಿ ಭರವಸೆ ನೀಡಿದ್ದ ಉದ್ಯೋಗ, ಭೂಮಿ, ಶಿಕ್ಷಣಾದಿ ವ್ಯವಸ್ಥೆಗಳು ಅವರ ಪಾಲಿಗೆ ಮರೀಚಿಕೆಯಾಗಿಯೇ ಉಳಿದವು. 1978ರ ಆದಿಯಲ್ಲಿ ಕೆಲ ನಿರಾಶ್ರಿತರು ಮರೀಚ್ ಝಾಪಿಗೆ ತೆರಳಿ ಅಲ್ಲಿದ್ದ ಕಾಡು ಕಡಿದು, ಹೆದ್ದೆರೆಗಳಿಂದ ದ್ವೀಪದ ರಕ್ಷಣೆಗಾಗಿ ತಡೆಗೋಡೆಗಳನ್ನೂ, ಮಳೆ ನೀರು ಶೇಖರಿಸುವ ಹಾಗೂ ಮೀನುಗಾರಿಕೆಯ ಸಲುವಾಗಿ ಕೆರೆಗಳನ್ನೂ, ಕೃಷಿ ಭೂಮಿ ಹಾಗೂ ಮನೆಗಳನ್ನು ನಿರ್ಮಿಸಿಕೊಂಡರು. ಇವರನ್ನೇ ಅನುಸರಿಸಿ ಇನ್ನಷ್ಟು ನಿರಾಶ್ರಿತರು ಅದೇ ಸ್ಥಳಕ್ಕೆ ಬಂದು ವಾಸಿಸತೊಡಗಿದರು. ಹೀಗೆ 1978ರ ಜೂನ್ ವರೆಗೆ ಮರೀಚ್ ಝಾಪಿನಲ್ಲಿ ಬಂದಿಳಿದ ನಿರಾಶ್ರಿತರ ಸಂಖ್ಯೆ 30ಸಾವಿರ! ಅಲ್ಲಿ 250 ಕಿಮೀ ಉದ್ದದ ದ್ವೀಪ ತೀರ ನಿರ್ಮಿಸಲ್ಪಟ್ಟು ಬೀಡಿ, ಕಾಲ್ಚೀಲ, ಮರ ಉದ್ಯಮಗಳೂ, ಮೀನುಗಾರಿಕೆ, ಸಹಕಾರಿ ಕೃಷಿಯೂ ಆರಂಭವಾಯಿತು. ಪುರುಷರು ಮೀನು ಹಾಗೂ ಉತ್ಪನ್ನಗಳನ್ನು, ಮಹಿಳೆಯರು ತಾವು ನೇಯ್ದ ಉಡುಪುಗಳನ್ನು ಹತ್ತಿರದ ಕುಮಿರ್ಮರಿ ದ್ವೀಪಗಳಲ್ಲಿ ಮಾರಲಾರಂಭಿಸಿದರು. ಆ ದ್ವೀಪದ ಉತ್ಪನ್ನಗಳು ಸನಿಹದ ಪ್ರದೇಶಗಳಲ್ಲಿ ಮನೆ ಮಾತಾದವು. ಕೆಲವರು ಸ್ವಯಂಪ್ರೇರಿತರಾಗಿ ಅಧ್ಯಾಪನಕ್ಕೂ ತೊಡಗಿಸಿಕೊಂಡರು. ಅಲ್ಲೊಂದು ಮಾಧ್ಯಮಿಕ ಶಾಲೆಯೂ ಆರಂಭವಾಯಿತು. ರಸ್ತೆಗಳು, ಡಿಸ್ಯಾಲಿನೇಷನ್ ಪ್ಲಾಂಟುಗಳು ನಿರ್ಮಾಣವಾದವು. ಇವೆಲ್ಲವೂ ಯಾವುದೇ ಸರಕಾರ ಅಥವಾ ಹೊರಗಿನವರ ಹಂಗಿಲ್ಲದೆ ಆ ನಿರಾಶ್ರಿತರಿಂದಲೇ ಆದ ಸಾಧನೆಗಳು. ಅಲ್ಲೊಂದು ಸ್ವಾವಲಂಬಿ ಬದುಕೇ ನಿರ್ಮಾಣಗೊಂಡಿತ್ತು.

                ಇತ್ತ ಚುನಾವಣೆ ಗೆಲ್ಲಲು ನಿರಾಶ್ರಿತರನ್ನು ಬಳಸಿಕೊಂಡಿದ್ದ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದ ಕೆಲವೇ ಸಮಯದಲ್ಲಿ ಕೇಜ್ರಿವಾಲ್ ಟರ್ನ್ ತೆಗೆದುಕೊಂಡು ಬಿಟ್ಟರು. ಬಂಗಾಳದಲ್ಲಿ ಇನ್ನು ಮುಂದೆ ನಿರಾಶ್ರಿತರಿಗೆ ಜಾಗವಿಲ್ಲವೆಂದೂ, ಯಾವುದೇ ನಿರಾಶ್ರಿತರನ್ನು ಇರಗೊಡುವುದಿಲ್ಲವೆಂದೂ, ದಂಡಕಾರಣ್ಯದಿಂದ ಬಂದವರೆಲ್ಲಾ ಮರಳಿ ಅಲ್ಲಿಗೇ ತೆರಳಬೇಕೆಂದು ಕಮ್ಯೂನಿಸ್ಟ್ ಸರಕಾರ ಘೋಷಿಸಿತು. ಇದಕ್ಕಾಗಿ ಪೊಲೀಸ್ ಪಡೆಯನ್ನೂ ಸುವ್ಯವಸ್ಥಿತವಾಗಿ ಬಳಸಿಕೊಂಡಿತು ಕಮ್ಯೂನಿಸ್ಟ್ ಪಡೆ. ನಿರಾಶ್ರಿತರನ್ನು ಪಟ್ಟಿ ಮಾಡಿ ಬಲವಂತವಾಗಿ ಅವರನ್ನು ರೈಲುಗಳಲ್ಲಿ ತುರುಕಿ ಉಳಿದ ರಾಜ್ಯಗಳಿಗೆ ರವಾನಿಸಲಾಯಿತು. ಅವರಲ್ಲಿದ್ದ ಅತ್ಯಲ್ಪ ಸಂಪನ್ಮೂಲಗಳನ್ನು ಲೂಟಿ ಮಾಡಿ, ಅವರ ದಾಖಲೆಪತ್ರಗಳನ್ನು ನಾಶಮಾಡಿ ಹೊಡೆದು ಬಡಿದು ಹತ್ತಾರು ಸಾವಿರ ನಿರಾಶ್ರಿತರನ್ನು ಬಂಗಾಳದಿಂದ ಹೊರದಬ್ಬಲಾಯಿತು. ವಿಭಜನೆಯ ಹೊಸ್ತಿಲಲ್ಲಿ ಮುಸ್ಲಿಮರು ಹಿಂದೂಗಳ ಧನ-ಮಾನ-ಪ್ರಾಣಗಳನ್ನು ಲೂಟಿ ಮಾಡಿ ಪಾಕಿಸ್ತಾನದಿಂದ ಭಾರತಕ್ಕೆ ಓಡಿಸಿದ್ದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಮ್ಯೂನಿಸ್ಟರು ಮಾನ-ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಅತ್ತು ಕರೆದು ದೋಚಿ ಓಡಿಸಿಬಿಟ್ಟರು! ಯಾರನ್ನು ಆಶ್ರಯ ಕೊಡುತ್ತೇವೆ, ಬನ್ನಿ, ನಮಗೇ ಮತ ನೀಡಿ ಎಂದು ಆಸೆ ಹುಟ್ಟಿಸಿ ಕರೆಸಿಕೊಂಡಿದ್ದರೋ ಅಂತಹವರನ್ನು ತಮ್ಮ ಕಾರ್ಯ ಸಾಧನೆಯಾದ ಕೂಡಲೇ ಅಟ್ಟಾಡಿಸಿ ಓಡಿಸಿಬಿಟ್ಟರು.

                  ಬಂಗಾಳ ಬಿಟ್ಟು ತೆರಳಬೇಕೆಂದು ದಬಾಯಿಸಿದ ಕಮ್ಯೂನಿಸ್ಟ್ ಗೂಂಡಾಗಳನ್ನು ಮರೀಚ್ ಝಾಪಿಯ ಜನ ಓಡಿಸಿಬಿಟ್ಟರು. ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾದಾಗ ನೀಚತನದ ಪ್ರಯೋಗಕ್ಕೆ ಇಳಿದರು ಕಮ್ಯೂನಿಸ್ಟರು.ಮರೀಚ್ ಝಾಪಿಯ ಜನರ ಯಾವುದೇ ಉತ್ಪನ್ನಗಳನ್ನು ಕೊಳ್ಳದಂತೆ  ಉಳಿದ ಪ್ರದೇಶಗಳ ಜನರನ್ನು ಬೆದರಿಸಿದರು. ಅವರೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ನಿರ್ಬಂಧಿಸಿದರು. ಮಾತ್ರವಲ್ಲ ಮರೀಚ್ ಝಾಪಿ ಜನರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡತೊಡಗಿದರು. ಅವರು ಹಿಂದೂ ಮೂಲಭೂತವಾದಿಗಳೆಂದು, ಮುಸಲ್ಮಾನರನ್ನೂ ಓಡಿಸುವುದೇ ಅವರ ಉದ್ದೇಶವೆಂದು ಕಥೆ ಕಟ್ಟಿದರು. ಹೊರಗಿನಿಂದ ಅವರಿಗೆ ಧನಸಹಾಯವಾಗುತ್ತಿದೆಯೆಂದೂ, ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದಾರೆಂದೂ, ಭಾರತದ ವಿರುದ್ಧ ದಂಗೆ ಏಳಲು ಅವರು ಸನ್ನದ್ಧರಾಗುತ್ತಿದ್ದಾರೆಂದು ಪುಂಖಾನುಪುಂಖವಾಗಿ ಲೇಖನಗಳನ್ನೂ ಬರೆದರು. ಮರೀಚ್ ಝಾಪಿಯ ನಿರಾಶ್ರಿತ ಹಿಂದೂಗಳ ಮೇಲಿನ ಇಂತಹ ಆಧಾರರಹಿತ ಆಪಾದನೆಗಳು ಇಂದಿಗೂ ಕಮ್ಯೂನಿಸ್ಟರ ಲೇಖನಗಳಲ್ಲಿ ಕಾಣಸಿಗುತ್ತವೆ. ಒಟ್ಟಾರೆ ಕಪೋಲಕಲ್ಪಿತ ಕಥೆಗಳನ್ನು ಹಬ್ಬಿಸಿ ಜನರನ್ನು ದಂಗೆಯೆಬ್ಬಿಸಿ ಆ ನಿರಾಶ್ರಿತರನ್ನು ಅಲ್ಲಿಂದ ಓಡಿಸುವುದೇ ಅವರ ಉದ್ದೇಶವಾಗಿತ್ತು. ಆದರೆ ಇಂತಹ ಯಾವುದೇ ಬೆದರಿಕೆಗೆ ಮರೀಚ್ ಝಾಪಿಯ ಜನ ಹೆದರಲಿಲ್ಲ. ಇದು ಕಮ್ಯೂನಿಸ್ಟರನ್ನು ಮತ್ತಷ್ಟು ಕೆರಳಿಸಿತು. ಆಗ ಅವರು ನೇರ ಕಾರ್ಯಾಚರಣೆಗಿಳಿದರು. ಆ ನಿರಾಶ್ರಿತರ ಉತ್ಪನ್ನಗಳನ್ನು ಬಲವಂತವಾಗಿ ಕಸಿದುಕೊಂಡರು. ರಾತ್ರೋರಾತ್ರಿ ಆ ದ್ವೀಪದಲ್ಲಿ ಬಂದಿಳಿದು ಅವರ ದೋಣಿಗಳು, ಸಾಕುಪ್ರಾಣಿಗಳ ಕೊಟ್ಟಿಗೆಗಳು, ವಾಹನಗಳು, ಉದ್ಯಮಗಳನ್ನು ನಾಶಪಡಿಸಿದರು. ಅದಕ್ಕೂ ಬಗ್ಗದಿದ್ದಾಗ ಆರ್ಥಿಕ ದಿಗ್ಬಂಧನವನ್ನು ಹೇರಿದರು. ಪೊಲೀಸರನ್ನು ನಿಲ್ಲಿಸಿ ಆ ನಿರಾಶ್ರಿತ ಜನರು ಉಳಿದ ಪ್ರದೇಶಗಳಿಗೆ ಹೋಗದಂತೆ ನಿರ್ಬಂಧಿಸಿಬಿಟ್ಟರು. ಕೆಲವೇ ದಿವಸಗಳಲ್ಲಿ ಸಂಗ್ರಹಿಸಿಟ್ಟಿದ್ದ ನೀರು, ಆಹಾರಗಳು ಮುಗಿದಾಗ ಜನವರಿ 29ರ ರಾತ್ರಿ ಇಪ್ಪತ್ತು ಜನ ನಿರಾಶ್ರಿತರು ಪೊಲೀಸರ ಕಣ್ಣು ತಪ್ಪಿಸಿ ಕುಮಿರ್ಮರಿಗೆ ತೆರಳಿ ಆಹಾರವನ್ನು ಸಂಗ್ರಹಿಸಿಕೊಂಡರು. ಆವತ್ತೇನೋ ಆ ಪ್ರಯತ್ನ ಯಶಸ್ವಿಯಾಯಿತು. ಮರುದಿವಸ ಅದೇ ಪ್ರಯತ್ನದಲ್ಲಿದ್ದಾಗ ಸಿಕ್ಕಿಬಿದ್ದರು. ಕಮ್ಯೂನಿಸ್ಟ್ ಪ್ರೇರಿತ ಪೊಲೀಸರು ಅವರಲ್ಲಿದ್ದ ಹಣ, ಆಹಾರಸಾಮಗ್ರಿಗಳನ್ನು ಕಿತ್ತುಕೊಂಡು, ಪ್ರತಿಭಟಿಸಿದಾಗ ಗುಂಡುಹಾರಿಸಿ ಕೊಂದು ಶವಗಳನ್ನು ಮರೀಚ್ ಝಾಪಿ ಹಾಗೂ ಕುಮಿರ್ಮರಿ ನಡುವೆ ಇದ್ದ ಕೋರಂಕಾಳಿ ನದಿಗೆ ಎಸೆದುಬಿಟ್ಟರು.

                ಮಧ್ಯಾಹ್ನದ ಹೊತ್ತಿಗೆ ವಿಷಯ ತಿಳಿದ ಮರೀಚ್ ಝಾಪಿ ಜನತೆ ಬೆಚ್ಚಿಬಿತ್ತು. ಪರಿಸ್ಥಿತಿಯ ಗಂಭೀರತೆ ಅರಿತು ಎಲ್ಲರನ್ನೂ ಒಟ್ಟು ಸೇರಿಸಿ ಅಲ್ಲಿಂದ ಸುರಕ್ಷಿತವಾಗಿ ಪಾರಾಗುವುದರ ಕುರಿತು ಚರ್ಚಿಸಿತು. ಪೊಲೀಸರು ಸ್ತ್ರೀಯರಿಗೆ ಯಾವುದೇ ಹಾನಿ ಮಾಡಲಾರರು ಎಂದು ಊಹಿಸಿ ಮೊದಲು ಸ್ತ್ರೀಯರನ್ನು ಅಲ್ಲಿಂದ ರವಾನಿಸುವುದೆಂದು ಅವರು ತೀರ್ಮಾನಿಸಿದರು. ಆದರೆ ಅವರ ಊಹೆ ತಪ್ಪಾಗಿತ್ತು. ಕಮ್ಯೂನಿಸ್ಟರ ಕೈಕೆಳಗಿನ ಪೊಲೀಸರ ಬುದ್ಧಿಯೂ ಕಮ್ಯೂನಿಸ್ಟರಂತೆಯೇ ಬದಲಾಗಿತ್ತು ಎನ್ನುವುದನ್ನು ಅವರು ತಿಳಿಯುವುದಾದರೂ ಹೇಗೆ? ಹದಿನಾರು ಜನ ಮಹಿಳೆಯರಿದ್ದ ಮೊದಲ ತಂಡದ ದೋಣಿಯನ್ನು ಅಡ್ಡಗಟ್ಟಿ, ನೀರಿಗೆ ಬಿದ್ದು ಪಾರಾಗಲೂ ಯತ್ನಿಸಿದ ಮಹಿಳೆಯನ್ನು ಗುಂಡು ಹಾರಿಸಿ ಕೊಂದಿತು ಪೊಲೀಸ್ ಪಡೆ. ಉಳಿದ ಮಹಿಳೆಯರ ಮೃತದೇಹ ಮರುದಿವಸ ಪಕ್ಕದ ಕಾಡಲ್ಲಿ ಸಿಕ್ಕಿತು. ಆ ಹತಭಾಗ್ಯೆಯರು ಪೊಲೀಸ್ ಹಾಗೂ ಕಮ್ಯೂನಿಸ್ಟ್ ಗೂಂಡಾಗಳಿಂದ ಭೀಕರ ಸರಣಿ ಅತ್ಯಾಚಾರಕ್ಕೊಳಗಾಗಿದ್ದರು.

                ಜನವರಿ 31ರ ರಾತ್ರಿ ಬಂಗಾಳದ ಪೊಲೀಸರಿಗೆ ಅಲ್ಲಿದ್ದವರನ್ನು ತೆರವುಗೊಳಿಸಿ ಎನ್ನುವ ಆದೇಶ ಬಂತು. ಪೊಲೀಸರೊಂದಿಗೆ ಸೇರಿದ ಕಮ್ಯೂನಿಸ್ಟ್ ಗೂಂಡಾ ಪಡೆ ಹಿಂದೂಗಳ ಮೇಲೆ ಮುಗಿ ಬಿತ್ತು. ಬಹುತೇಕರು ಗುಂಡಿಗೆ ಬಲಿಯಾದರು. ಜೀವ ಉಳಿಸಿಕೊಳ್ಳಲು ನದಿಗೆ ಹಾರಿದವರನ್ನು ಮೋಟಾರು ದೋಣಿಗಳಲ್ಲಿ ಅಟ್ಟಿಸಿಕೊಂಡು ಹೋಗಿ ಕೊಲ್ಲಲಾಯಿತು. ಗುಂಡಿನ ಭೋರ್ಗರೆತಕ್ಕೆ ಹೆದರಿ ಜೋಪಡಿಗಳಲ್ಲಿ ಅವಿತು ಅಳುತ್ತಾ ಕೂತಿದ್ದ ಮಕ್ಕಳನ್ನು ಹೊರಗೆಳೆದು ಕತ್ತರಿಸಲಾಯಿತು. ವಿರೋಧಿಯನ್ನು ಜೀವಂತ ಹೂತು ಹಾಕುತ್ತಿದ್ದ ತಮ್ಮ ಎಂದಿನ ವೈಖರಿಯಂತೆ ಕಮ್ಯೂನಿಸ್ಟರು ಈ ಹೃದಯವಿದ್ರಾವಕ ಘಟನೆಯನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಿದರು. ತಮ್ಮ "ದ ಹಂಗ್ರಿ ಟೈಡ್" ನಲ್ಲಿ ಕಮ್ಯೂನಿಸ್ಟರು ಹೂತು ಹಾಕಿದ ಈ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಅಮಿತಾಬ್ ಘೋಷ್.ಈ ಘಟನೆಯ ತನಿಖೆಯೂ ಆಗಲಿಲ್ಲ. ತನಿಖೆಗೊಳಪಡಿಸುತ್ತೇನೆ ಎಂದು ಆಶ್ವಾಸನೆಯಿತ್ತು ಅಧಿಕಾರಕ್ಕೇರಿದ ಮಮತಾ ದೀದಿ ಕಮ್ಯೂನಿಸ್ಟರನ್ನೂ ನಾಚಿಸುವಂತೆ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಮರೀಚ್ ಝಾಪಿ ಹತ್ಯಾಕಾಂಡದಲ್ಲಿ ಅದೃಷ್ಟವಶಾತ್(ಅಥವಾ ದುರದೃಷ್ಟವಶಾತ್) ಬದುಕುಳಿದವರು, ಬದುಕಿದ್ದೂ ಸತ್ತಂತಿರುವ ಈ ರಾಜಕಾರಣಿಗಳನ್ನು ನೋಡಿ ಬೇಸತ್ತು ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ಮಂಗಳವಾರ, ಜನವರಿ 24, 2017

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

ಮತಾಂತರಿಗಳಿಗೆ ಚಾದರ ಅರ್ಪಿಸುವ ಹಿಂದೂವಿನ ಭೋಳೇತನ

                     ಸೂಫಿಗಳ ಬಗೆಗೆ ಭಾರತೀಯ ಸಮಾಜದಲ್ಲಿ ವಿಶೇಷ ಭಕ್ತಿ ಭಾವನೆಗಳಿವೆ. ಜಾತ್ಯಾತೀತ ಬುದ್ಧಿಜೀವಿಗಳಿಗೆ ಈ ಸೂಫಿಗಳಂತೂ ಕ್ರೌರ್ಯವೇ ಮೈವೆತ್ತ ಮುಸ್ಲಿಮ್ ಸಮಾಜದ ಸಮರ್ಥನೆಗೆ ದೊರಕುವ ಬೀಜರೂಪಗಳು. ಮುಸ್ಲಿಮರು ಭಯೋತ್ಪಾದಕರ ಸಮರ್ಥನೆಗೆ ಗುಂಪುಗುಂಪಾಗಿ ನಿಂತಾಗ, ಬೀದಿ ಬೀದಿಗಳಲ್ಲಿ ಪುಂಡಾಟ ನಡೆಸುತ್ತಾ ಹಿಂದೂಗಳ ಕಗ್ಗೊಲೆ ನಡೆಸಿದಾಗ ಸೆಕ್ಯುಲರುಗಳು ಆ ಕೃತ್ಯಗಳನ್ನು ಮರೆಮಾಚಲು ಸೂಫಿಗಳನ್ನು ಮುಂದೆ ತಂದು ನಿಲ್ಲಿಸುತ್ತಾರೆ. ಸೂಫಿಗಳನ್ನು ದೇವರಂತೆ ಕಂಡು ಪೂಜಿಸುವ, ಭಜಿಸುವ,  ಅವರನ್ನೇ ಗುರುಗಳಂತೆ ಗೌರವಿಸುವ ಹಲವಾರು ಹಿಂದೂ ಪರಿವಾರಗಳು ಭಾರತದಲ್ಲಿವೆ. ಮುಸ್ಲಿಮ್ ಸಮಾಜವನ್ನು ಸಹಜವಾಗಿ ಸಂಶಯದ ಕಣ್ಣುಗಳಿಂದ ನೋಡುವವರಿಗೂ ಸೂಫಿಗಳೆಂದರೆ ಆದರ ಭಾವನೆಗಳಿವೆ. ಆದರೆ ನಿಜವಾಗಿಯೂ ಸೂಫಿಗಳು ಅಂತಹ ಗೌರವಕ್ಕೆ ಪಾತ್ರರಾಗಬೇಕಾದವರೇ ಎಂದರೆ "ಇಲ್ಲ" ಎನ್ನುವ ಉತ್ತರವನ್ನು ಇತಿಹಾಸವೇ ಸಾರಿ ಹೇಳುತ್ತದೆ. ಅದರಲ್ಲೂ ಭಾರತದ ಸೂಫಿಗಳಂತೂ ಭಾರತವನ್ನು ಸೂರೆಗೈಯಲು, ಸರ್ವನಾಶಗೈಯಲು ಮುಸ್ಲಿಮ್ ಮತಾಂಧ ಅರಸರಿಗೆ ಪ್ರೇರಕ ಶಕ್ತಿಯಾಗಿದ್ದರೆಂದೇ ಇತಿಹಾಸ ಬೊಟ್ಟು ಮಾಡಿ ಹೇಳುತ್ತದೆ. ಆದರೆ ಇತಿಹಾಸಕಾರರು ಇಲ್ಲೂ ತಮ್ಮ ಎಂದಿನ ದ್ರೋಹ ಕಾರ್ಯವನ್ನೆಸಗಿ ಪರದೆಯೊಂದನ್ನು ಎಳೆದುಬಿಟ್ಟಿದ್ದಾರೆ. ಇತಿಹಾಸವನ್ನು ಆವರಿಸಿರುವ ಈ ಸುಳ್ಳು ಪರದೆಯನ್ನು ಸರಿಸಿ ನೋಡಿದರೆ ಹಿಂದೂಗಳ ಭೋಳೆ ಸ್ವಭಾವವನ್ನು ಕ್ರೈಸ್ತರಂತೆ ಅನಾಯಾಸವಾಗಿ ಬಳಸಿಕೊಂಡು ಮುಸ್ಲಿಮ್ ಸಮುದಾಯದ ಸಂಖ್ಯೆ ಹೆಚ್ಚಿಸಿದ ಸೂಫಿಗಳ ಘಾತಕ ಕಾರ್ಯ ಸ್ಪಷ್ಟವಾಗಿ ಕಾಣುತ್ತದೆ.

               ಸೂಫಿಗಳಲ್ಲಿ ಚಿಸ್ತಿಯಾ, ನಶ್ಕ್ ಬಂದಿಯಾ, ಸುಹಾರ್ ವಾರ್ಡಿ ಮತ್ತು ಖ್ವಾದ್ರಿಯ ಮುಂತಾದ ಹಲವು ಗುಂಪುಗಳಿವೆ. ಆದರೆ ಭಾರತದಲ್ಲಿ ಬಲವಾಗಿ ಬೇರುಬಿಟ್ಟವರು ಚಿಸ್ತಿಯಾ ಗುಂಪಿನ ಸೂಫಿಗಳು. ಇರಾನ್, ಇರಾಕಿನಲ್ಲಿದ್ದ ಸೂಫಿಗಳು ಹಿಂಸೆಯನ್ನು ಪ್ರಚೋದಿಸದ ನೈಜ ಶಾಂತಿದೂತರು ಎನ್ನುತ್ತಾರಾದರೂ ಭಾರತಕ್ಕೆ ಎಲ್ಲೆಡೆಯಿಂದ ಬಂದ ಸೂಫಿಗಳು ಜಿಹಾದ್ ಎಂದು ಬೊಬ್ಬಿರಿಯುತ್ತಲೇ ಬಂದರು. ಭಾರತದ ಭಕ್ತಿ ಪರಂಪರೆಯನ್ನು ತಮ್ಮ ಮತಾಂತರ  ಕಾರ್ಯಕ್ಕೆ ಉಪಯೋಗವಾಗುವಂತೆ ಅಳವಡಿಸಿಕೊಂಡು ದೇವರು ಎಂದರೆ ಕಣ್ಣು ಮುಚ್ಚಿ ನಂಬುವ ಹಿಂದೂಗಳ ಸ್ವಭಾವವನ್ನು ಎಗ್ಗಿಲ್ಲದೆ ಬಳಸಿಕೊಂಡು ಹಿಂದೂ ಸಮಾಜದ ಸರ್ವನಾಶಕ್ಕೆ ಈ ಸೂಫಿಗಳು ಕಾರಣರಾದರು. ಅದರಲ್ಲೂ ಕಾಶ್ಮೀರ, ದೆಹಲಿ, ಗುಜರಾತ್, ಬಿಜಾಪುರಗಳು ಈ ಸೂಫಿಗಳ ಮತಾಂಧತೆಗೆ ಗಬ್ಬೆದ್ದು ಹೋದವು. ಎಂಟನೆಯ ಶತಮಾನದಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಬಂದ ಹಲವು ಸೂಫಿಗಳು ಕ್ರೈಸ್ತ ಮಿಷನರಿಗಳಂತೆ ಮತಪ್ರಚಾರ ಮಾಡಿ, ಪ್ರಾರ್ಥನಾ ಮಂದಿರ ಕಟ್ಟಿ, ಸ್ಥಳೀಯ ಜನರನ್ನು ಮತಾಂತರಗೊಳಿಸಿದರು. ಖಾಯೀಮ್ ಶಾ ಎಂಬ ಸೂಫಿ ಫಕೀರ ತಿರುಚಿರಾಪಳ್ಳಿಯಲ್ಲಿ 12 ದೇವಾಲಯಗಳನ್ನು ನಾಶಪಡಿಸಿದ. ಹೀಗೆ ದೇಶದೆಲ್ಲೆಡೆ ಸೂಫಿಗಳ ಘಾತಕ ಕಾರ್ಯ ಕಾಣಸಿಗುತ್ತದೆ. ಪ್ರಸ್ತುತ ಲೇಖನದಲ್ಲಿ ಮದ್ದು ಕೊಂಡು ಹೋಗಲು ಬಂದು ರಣ ಹದ್ದಿನಂತೆ ಹಿಂದೂಗಳ ಮೇಲೆರಗಿದ ಸೂಫಿಯೊಬ್ಬನ ಘಾತಕ ಕಾರ್ಯದಿಂದ ದೇವ ದುರ್ಲಭ ಭೂಮಿ ದುರ್ಬಲವಾದ ಬಗೆಯನ್ನು ವಿಸ್ತರಿಸಲಾಗಿದೆ.

             ಶಂಸುದ್ದೀನ್ ಅರಾಖಿ. ಇತಿಹಾಸಕಾರರಿಂದ ಶಾಂತಿದೂತ ಎಂದು ಕರೆಸಿಕೊಂಡ ಕಾಶ್ಮೀರದ ಸೂಫಿ. ಕಾಶ್ಮೀರ, ಲಢಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಗಳಲ್ಲಿ ಹಿಂದೂ ಹಾಗೂ ಬೌದ್ಧ ದೇವಾಲಯಗಳನ್ನು ನಾಶಪಡಿಸಲು ಮೂಲ ಕಾರಣನಾದ ಮಹಾನ್ ಶಾಂತಿದೂತ. ಕಾಶ್ಮೀರದ ಬಹುತೇಕ ಹಿಂದೂಗಳನ್ನು ಮುಸ್ಲಿಮ್ ಮತಾವಲಂಬಿಗಳನ್ನಾಗಿ ಪರಿವರ್ತಿಸಿದ ಕೀರ್ತಿಯೂ ಅವನದ್ದೇ. ಉತ್ತರ ಇರಾನಿನ ಸೋಲ್ಘನ್ನಿನಲ್ಲಿ 1424ರಲ್ಲಿ ಜನಿಸಿದ ಅರಾಖಿ, ಹೆರಾತ್ ಅನ್ನು ಆಳುತ್ತಿದ್ದ ಮಿರ್ಜಾ ಬಯಕ್ವಾರನ ಆಸ್ಥಾನದಲ್ಲಿದ್ದ. ಅರಸ ಖಾಯಿಲೆ ಬಿದ್ದು ರೋಗ ಉಲ್ಬಣವಾದಾಗ ಅರಾಖಿಯನ್ನು ಔಷಧ ತರಲೆಂದು ಕಾಶ್ಮೀರಕ್ಕೆ ಕಳುಹಿದ. ಕಾಶ್ಮೀರವನ್ನು ತಲುಪಿದ ಅರಾಖಿಗೆ ಎಲ್ಲೆಲ್ಲೂ ಕಾಣಿಸಿದ್ದು ವಿಗ್ರಹಾರಾಧಕ ಹಿಂದೂಗಳು. ನೂರ್-ಬಕ್ಷಿಯಾ ಸೂಫಿ ಶಾಖೆಯವನಾಗಿದ್ದ ಅರಾಖಿ ಕಾಶ್ಮೀರದಲ್ಲಿ ಆಗಲೇ ಬೀಡುಬಿಟ್ಟಿದ್ದ ಹಮದನಿ ಶಾಖೆಯವ ತಾನೆಂದು ಘೋಷಿಸಿಕೊಂಡು ಇಸ್ಲಾಮ್ ಪ್ರಚಾರಕ್ಕೆ ತೊಡಗಿದ. ತನ್ನ ಬೋಧನೆಗಳ ನಡುವೆಯೇ ಕಾಶ್ಮೀರದ ಹಿಂದೂಗಳ ಮೇಲೆ ಜಿಹಾದನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶ ಮಾಡುವ ಪ್ರಚೋದನೆಯನ್ನೂ ನೀಡಿದ. ನೂರ್ ಬಕ್ಷಿಯಾ ಶಾಖೆಯವನೆಂದು ಬಿಂಬಿಸಿಕೊಳ್ಳುತ್ತಲೇ ಶ್ರೀನಗರದಿಂದ ಸ್ಕರ್ಡುವಿನವರೆಗೆ ಸಂಚರಿಸಿ ತನ್ನ ಮತ ಪ್ರಚಾರವನ್ನು ಬಿರುಸಿನಿಂದ ನಡೆಸಿದ. ಕಾಶ್ಮೀರ ಕಣಿವೆ, ಕಾರಕೋರಂ ಪರ್ವತಶ್ರೇಣಿಯ ತಪ್ಪಲು, ಗಿಲ್ಗಿಟ್-ಬಾಲ್ಟಿಸ್ಥಾನಗಳಲ್ಲಿ ಅಪಾರ ಹಿಂಬಾಲಕರನ್ನು ಪಡೆದುಕೊಂಡ. ಅರಾಖಿಯ ಜೊತೆಯಿದ್ದು ಅವನ ಜೀವನದ ಅನೇಕ ಘಟನೆಗಳಿಗೆ ಸಾಕ್ಷಿಯಾದ ಆತನ ಶಿಷ್ಯ ಮಹಮ್ಮದ್ ಅಲಿ ಕಾಶ್ಮೀರಿ ಬರೆದ ಅರಾಖಿಯ ಜೀವನಚರಿತ್ರೆ "ತೋಹಫುತ್-ಉಲ್-ಹಬಾಬ್", ಪರ್ಶಿಯನ್ ಗ್ರಂಥ "ಬಹರಿಸ್ತಾನ್-ಇಲ್- ಶಾಹಿ" ಹಾಗೂ "ತಾರಿಖ್-ಇಲ್-ಕಾಶ್ಮೀರ್" ಹಾಗೂ ಶ್ರೀವರನಿಂದ ರಚಿತವಾದ ರಾಜತರಂಗಿಣಿ ಬೆಚ್ಚಿ ಬೀಳಿಸುವ ಅರಾಖಿಯ ಘಾತಕ ಕಾರ್ಯಗಳನ್ನು ಬಿಚ್ಚಿಡುತ್ತವೆ. "ಇಸ್ಲಾಮಿನ ಅತ್ಯುನ್ನತ ಧರ್ಮಗುರುಗಳಲ್ಲಾಗಲೀ, ಸೂಫಿ ಸಂತರಲ್ಲಾಗಲೀ ಶಂಸುದ್ದೀನ್ ಅರಾಖಿಯಂತೆ ವಿಗ್ರಹಗಳನ್ನು ನಾಶಪಡಿಸಿದ, ಇಸ್ಲಾಮನ್ನು ಪ್ರಚುರಪಡಿಸಿದ, ಸಂಖ್ಯಾ ದೃಷ್ಟಿಯಿಂದ ಇಸ್ಲಾಮನ್ನು ಬಲಪಡಿಸಿದವರು ಇನ್ನೊಬ್ಬರಿಲ್ಲ. ವಿಗ್ರಹಾರಾಧಕರನ್ನು ಆವರಿಸಿದ್ದ ಕತ್ತಲನ್ನು ದೂರೀಕರಿಸಲು ಅಡ್ಡಿಯಾದ ಬೃಹದಾಕಾರದ ಸಮಸ್ಯೆಗಳನ್ನು ದೂರೀಕರಿಸಿ ಅವರನ್ನು ಇಸ್ಲಾಮಿನ ತೆಕ್ಕೆಯೊಳಕ್ಕೆ ತರಲು ಅಲ್ಲಾನ ಕೃಪೆಗೆ ಪಾತ್ರರಾದವರು ಅವನಂತೆ ಮತ್ತೊಬ್ಬರಿಲ್ಲ. ಯಾವ ಸುಲ್ತಾನ, ಪಂಡಿತ, ಅಧಿಕಾರಿ, ಸರದಾರರಿಂದ ಮಾಡಲಾಗದಂತಹ ಅತ್ಯುನ್ನತ ಕಾರ್ಯವನ್ನು ಎಸಗಿದ ಶ್ರೇಯ ಆತನೊಬ್ಬನದ್ದೇ!" ಎಂದು “ತೋಹಫುತ್-ಉಲ್-ಹಬಾಬ್” ದಲ್ಲಿ ಕೊಂಡಾಡಿದ್ದಾನೆ ಮಹಮ್ಮದ್ ಅಲಿ ಕಾಶ್ಮೀರಿ.

                ಹರಿ ಪರ್ಬತ್(ಪ್ರದ್ಯುಮ್ನ) ಶಿಖರಾಗ್ರದಲ್ಲಿ ಶಾರಿಕಾ ದೇವಿಯ ದೇವಾಲಯವನ್ನು ಕಾಶ್ಮೀರದ ಅರಸ ರಣಾದಿತ್ಯ ನಿರ್ಮಿಸಿದ್ದ. ರಾಜತರಂಗಿಣಿ ಈ ದೇವಾಲಯಗಳಲ್ಲಿದ್ದ ದೇವತೆಗಳನ್ನು ರಣರಂಭಾದೇವ, ರಣರಂಭಾಸ್ವಾಮಿನ್ ಎಂದು ಹೆಸರಿಸಿದೆ. ಅಲ್ಲದೆ ಪ್ರದ್ಯುಮ್ನ ಪರ್ವತಾಗ್ರದಲ್ಲೇ ಪಾಶುಪತ ಮಠವನ್ನೂ ರಣಾದಿತ್ಯ ಕಟ್ಟಿಸಿದ್ದ ಎಂದು ರಾಜತರಂಗಿಣಿ ಉಲ್ಲೇಖಿಸಿದೆ. ತನ್ನರಸನ ವ್ರಣವನ್ನು ಗುಣಪಡಿಸಲು ಔಷಧ ಕೊಂಡು ಹೋಗಲೆಂದು ಬಂದಿದ್ದ ಅರಾಖಿ ಕಾಶ್ಮೀರದ ಹಿಂದೂ ದೇವಾಲಯಗಳಿಗೆ ವ್ರಣವಾಗಿ ಕಾಡಿದ. ಮೊದಲಿಗೆ ಹಮದನಿ ಸೂಫಿಯಂತೆ ಜನರನ್ನು ನಂಬಿಸಿ ಒಂದಷ್ಟು ಹಿಂಬಾಲಕರನ್ನು ಸಂಪಾದಿಸಿದ ಅರಾಖಿ ಬಳಿಕ ಹಿಂದೂ ದೇವಾಲಯಗಳನ್ನು ನಾಶಪಡಿಸುವ ತನ್ನ ಉದ್ದೇಶವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾರಂಭಿಸಿದ. ತಾನು ಕಾಶ್ಮೀರಕ್ಕೆ ಬಂದುದುದೇ ಹಿಂದೂ ಸಂಪ್ರದಾಯ, ಆಚರಣೆಗಳನ್ನು ಕೊನೆಗೊಳಿಸಲು ಎಂದು ತನ್ನ ಅನುಯಾಯಿಗಳನ್ನು ಹುರಿದುಂಬಿಸಿದ. ಎಲ್ಲಾ ಸೂಫಿ ಪಂಗಡಗಳನ್ನು ಹಾಗವುಗಳ ಅನುಯಾಯಿಗಳಿಗೆ ತನ್ನೊಂದಿಗೆ ಬರಬೇಕೆಂದು ಆಜ್ಞಾಪಿಸಿದ ಅರಾಖಿ ಅವರನ್ನು ಜತೆಗೂಡಿಸಿಕೊಂಡು ನೇರವಾಗಿ ಪ್ರದ್ಯುಮ್ನ ಪರ್ವತವನ್ನು ಏರಲಾರಂಭಿಸಿದ. "ಆ ದೇವಾಲಯದಲ್ಲಿದ್ದ ಪೂಜಾರಿಗಳನ್ನು ಭಕ್ತರನ್ನು ಓಡಿಸಲಾಯಿತು. ನೃತ್ಯ, ಸಂಗೀತ ಹಾಗೂ ವಾದ್ಯಗಾರರನ್ನು ಬಡಿದಟ್ಟಲಾಯಿತು. ಪ್ರಾರ್ಥನಾ ಮಂದಿರವನ್ನು ನಾಶಪಡಿಸಲಾಯಿತು. ಗರ್ಭಗುಡಿಗೆ ಬೆಂಕಿ ಹಚ್ಚಲಾಯಿತು. ಹಿಂದೆ ಪ್ರವಾದಿ ಮಹಮ್ಮದ್ ಮಾಡಿದಂತೆಯೇ ಹರಿ ಪರ್ಬತ್ ಶಿಖರದ ಮೇಲಿದ್ದ ಸಣ್ಣ ಸಣ್ಣಗುಡಿಗಳನ್ನೂ ಬಿಡದೆ ನಾಶಪಡಿಸಲಾಯಿತು. ಮಂದಿರದ ಅವಶೇಷಗಳನ್ನು ಬಳಸಿಕೊಂಡು ಮಸೀದಿ(ಬೈಟ್-ಉಲ್ಲಾ)ಯನ್ನು ನಿರ್ಮಿಸಲು ಅರಾಖಿ ಆಜ್ಞಾಪಿಸಿದ"(ತೋಹಫುತ್-ಉಲ್-ಹಬಾಬ್:ಮಹಮ್ಮದ್ ಅಲಿ ಕಾಶ್ಮೀರಿ).

               "ಮುಕದ್ದಮ್ ಸಾಹಿಬ್ ಹಾಗೂ ಅಕುಂಡ್ ಮುಲ್ಲಾ ಶಾಹ್ ಮಸೀದಿಗಳ ಕೆಳಗೆ ಪುರಾತನ ಬೃಹತ್ ಹಿಂದೂ ದೇವಾಲಯವೊಂದರ ಅವಶೇಷಗಳಿವೆ" ಎಂದು ಆರ್ಕಿಯಾಲಜಿಸ್ಟ್ ಔರೆಲ್ ಸ್ಟೈನ್ ಸ್ಪಷ್ಟಪಡಿಸಿದ್ದಾನೆ. ಮುಂದುವರಿದು ಸ್ಟೈನ್ ಹೇಳುತ್ತಾನೆ, "ಭೀಮಸ್ವಾಮಿನ್ ಬಂಡೆಯ ಆಗ್ನೇಯ ದಿಕ್ಕಿನಲ್ಲಿರುವ ಬಹಾವುದೀನ್ ಸಾಹಿಬ್ ನಿಸ್ಸಂಶಯವಾಗಿ ದೇವಾಲಯದ ಭಗ್ನ ಅವಶೇಷವೊಂದರ ಮೇಲೆಯೇ ನಿರ್ಮಿಸಲ್ಪಟ್ಟಿದೆ. ಹಳೆಯ ಹಿಂದೂ ದೇವಾಲಯದ ಅಳಿದುಳಿದ ಗೋಡೆಗಳನ್ನು ಈ ಝಿಯಾರತ್ತಿನ ಒಳಗೆ ಇನ್ನೂ ಕಾಣಬಹುದು. ನೈರುತ್ಯ ದಿಕ್ಕಿನಲ್ಲಿ ನಾಶಗೊಳಿಸಲ್ಪಟ್ಟ ಕಲ್ಲಿನಿಂದ ನಿರ್ಮಿಸಲ್ಪಟ್ಟ ದೇವಾಲಯವೊಂದರ ಪ್ರವೇಶ ದ್ವಾರ ಕಾಶ್ಮೀರ ಪಂಡಿತರಿಂದ ಪೂಜಿಸಲ್ಪಡುತ್ತಿದ್ದ, ಪ್ರವರಸೇನ ತನ್ನ ಹೊಸ ರಾಜಧಾನಿಯಲ್ಲಿ ಕಟ್ಟಿಸಿದ್ದ ಪ್ರವೇಶ್ವರನ ದೇವಾಲಯದ್ದು ಎಂದು ನಿಖರವಾಗಿ ಹೇಳಬಹುದು. ಹಾಗೆಯೇ ಚಾಮುಂಡಿ ದೇವಳದ ಕಲ್ಲಿನಿಂದ ಕಟ್ಟಲ್ಪಟ್ಟ ಆರು ಯಾರ್ಡುಗಳಿಗೂ ಹೆಚ್ಚು ಎತ್ತರದ ಗೋಡೆಗಳು ಇತಿಹಾಸದ ಸಾಕ್ಷಿಯಾಗಿ ನಿಂತಿವೆ. ಒಳಗಿನ ಅಡಿಪಾಯ ಹಾಗೂ ಗೋಡೆಗಳ ಮೇಲೆ ಮಸೀದಿಯೊಂದು ನಿರ್ಮಿಸಲ್ಪಟ್ಟಿದೆ."

                 ಜಡಿಬಾಲ್'ನಲ್ಲಿ ಮಸೀದಿಯೊಂದರ ನಿರ್ಮಾಣಕ್ಕಾಗಿ ಮರದ ಅವಶ್ಯಕತೆ ಬಿದ್ದಾಗ ಅರಾಖಿ ನೇರವಾಗಿ ಕಾಮರಾಜ್'ನಲ್ಲಿದ್ದ ಮಹಾಸೇನ(ಮಾಮಲೇಶ್ವರ) ದೇವಾಲಯಕ್ಕೆ ತೆರಳಿದ. ಮಹಾಸೇನ ದೇವಾಲಯ ದೇವದಾರು ವೃಕ್ಷಗಳಿಂದ ಆವೃತವಾಗಿತ್ತು. ಅಲ್ಲಿನ ದೇವದಾರು ವೃಕ್ಷಗಳನ್ನು ಕಡಿಯುವಂತಿರಲಿಲ್ಲ. ಅರಾಖಿ ಮೊದಲು ವಿಗ್ರಹವನ್ನು ಭಂಜಿಸಿ ಬಳಿಕ ದೇವದಾರು ವೃಕ್ಷಗಳನ್ನು ಕಡಿದು ಹಾಕಿದ. ದೇವಾಲಯಕ್ಕೆ ಬೆಂಕಿ ಹಚ್ಚಿ ಅದರ ಅವಶೇಷಗಳನ್ನು ಬಳಸಿಕೊಂಡು ಜಾಮಿಯಾ ಮಸೀದಿಯನ್ನು ನಿರ್ಮಿಸಿದ. ಬಾರಾಮುಲ್ಲಾದಲ್ಲಿ ಕಾಮರಾಜ್ ಪರಗಣ ಎನ್ನುವ ಅಗ್ರಹಾರವೊಂದಿತ್ತು. ಕಾಶ್ಮೀರದ ರಾಜ ಜಲುಕಾ ಕಟ್ಟಿಸಿದ್ದ ಈ ಅಗ್ರಹಾರವನ್ನು ವರಬಲ ಎಂದೇ ಕರೆಯಲಾಗುತ್ತಿತ್ತು. ಕನಕವಾಹಿನಿಯ ಬಲದಂಡೆಯಲ್ಲಿದ್ದ ಈ ಅಗ್ರಹಾರಕ್ಕೆ ನುಗ್ಗಿದ ಅರಾಖಿ ಅಲ್ಲಿನ ದೇವಾಲಯಗಳೆಲ್ಲವನ್ನೂ ನಾಶಗೈದ. ಅಲ್ಲೊಂದು ಮಸೀದಿಯನ್ನು ನಿರ್ಮಿಸಿ ಇಮಾಮ್ ಹಾಗೂ ಮುಜ್ಜೀಯನ್ನು ನೇಮಿಸಿದ. ಸ್ಟೈನ್, ಕನಕವಾಹಿನಿಯ ಈ ಬಲದಂಡೆಯಿಂದ(ಹರ್ ಮುಖ್) ಎರಡು ಮೈಲು ದೂರದ ವಸಿಷ್ಠಾಶ್ರಮದವರೆಗೆ ಸುಮಾರು ಹದಿನೇಳು ದೇವಾಲಯಗಳ ಭಗ್ನಾವಶೇಷಗಳನ್ನು ಪಟ್ಟಿ ಮಾಡಿದ್ದಾನೆ. ಅಲ್ಲೇ ಪಕ್ಕದಲ್ಲಿದ್ದ ನಂದಕೇಶ್ವರ ಅಥವಾ ನಂದರಾಜ ದೇವಾಲಯವೂ ಜಾಮಿಯಾ ಮಸೀದಿಯಾಗಿ ಬದಲಾಯಿತು.

               ಶ್ರೀಭಟ್ ಎನ್ನುವ ಹಿಂದೂವೊಬ್ಬನನ್ನು ಮುಸ್ಲಿಮನನ್ನಾಗಿ ಬದಲಾಯಿಸಿದ ಅರಾಖಿ ಬೋಮರ್'ನ ದೇವಾಲಯವನ್ನು ನಾಶಪಡಿಸಲು ಆತನನ್ನು ಮುಂದಾಳುವಾಗಿ ಕಳುಹಿದ. ಸುಮಾರು ಎರಡು ದಿವಸಗಳ ಕಾಲ ಬೋಮರಿನ ಜನ ತಮ್ಮ ದೇವಾಲಯದ ರಕ್ಷಣೆಗೆ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದರು. ಆದರೆ ಕಪಟ ಕದನದಿಂದ ಗೆದ್ದ ಅರಾಖಿ ದೇವಾಲಯವನ್ನು ನಾಶಮಾಡಿ ಅಲ್ಲಿನ ಮರಗಳನ್ನೆಲ್ಲಾ ಕಡಿದು ಮಸೀದಿಯೊಂದನ್ನು ಕಟ್ಟಿಸಿದ. ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಮಸೀದಿಯ ದ್ವಾರದ ಬಳಿ, ಜನ ತುಳಿದುಕೊಂಡು ಬರಬೇಕೆನ್ನುವ ಉದ್ದೇಶದಿಂದಲೇ ಮೆಟ್ಟಿಲನ್ನಾಗಿ ಹಾಕಲಾಯಿತು. ಇದೇ ಶ್ರೀಭಟ್ಟ ಕಾಮರಾಜ್, ಉತ್ತರಾಶೇರ್, ಬಡಾಕೋಟ್, ಕುಬಿಶೇರ್, ಶಿರಾಜ್, ಕುಪ್ವಾರಾ, ದ್ರಾಂಗ್, ಸೋಪೋರ್, ಬಾರಾಮುಲ್ಲಾಗಳಲ್ಲಿ ದೇವಾಲಯಗಳನ್ನು ನಾಶಮಾಡಿ ಮಸೀದಿಗಳನ್ನು ನಿರ್ಮಿಸಲು ಅರಾಖಿಯ ಬಲಗೈಬಂಟನಂತೆ ಕೆಲಸ ಮಾಡಿದ. ಬಾರಾಮುಲ್ಲಾದ ಬನಿಯಾರಿನಲ್ಲಿದ್ದ ವಿಷ್ಣು ದೇವಾಲಯವನ್ನು ಧ್ವಂಸಗೈದ ಬಳಿಕ ಇಡೀ ಶ್ರೀನಗರ ಪಟ್ಟಣವನ್ನೇ ಕೊಳ್ಳೆಹೊಡೆಯಲಾಯಿತು. ಕಾಮರಾಜ್'ನಲ್ಲಿದ್ದ ರೇಣು, ಕಾಂಡಿರೇಣು, ಬಚ್ಚಿ ರೇಣು ಹಾಗೂ ಸೋಪೋರಿನ ಸತ್ವಾಲ್ ದೇವಾಲಯಗಳನ್ನು ಲೂಟಿ ಮಾಡಿ, ನಾಶ ಮಾಡಿ ಮಸೀದಿಗಳನ್ನಾಗಿ ಪರಿವರ್ತಿಸಿದ್ದು ಶ್ರೀಭಟ್ಟನೇ. ಹಿಂದೂವೊಬ್ಬ ಮತಾಂತರಗೊಂಡರೆ ಶತ್ರುವೊಬ್ಬ ಹೆಚ್ಚಾದಂತೆ ಎಂದ ಸ್ವಾಮಿ ವಿವೇಕಾನಂದರ ಮಾತು ಎಷ್ಟು ನಿಜ!

               ದೋಡಾ(ಉದ್ರಾನ್)ದ ಬಾಖಿ ರೇಣು ದೇವಾಲಯವನ್ನು ಅರಾಖಿಯ ಗುಂಪು ಮುತ್ತಿಗೆ ಹಾಕಿದಾಗ ಸುತ್ತಮುತ್ತಲ ಪ್ರದೇಶದ ಜನ ಕೈಗೆ ಸಿಕ್ಕ ಆಯುಧ ಹಿಡಿದು ಈ ಸೂಫಿಯ ತಂಡವನ್ನು ಎದುರಿಸಿದರು. ಹಲವು ದಿನಗಳ ಘನಘೋರ ಕದನದ ಬಳಿಕ ಸೋತು ಸುಣ್ಣವಾದ ಮತಾಂಧ ಪಡೆ ಅರಾಖಿಯನ್ನು ರಕ್ಷಿಸಿಕೊಳ್ಳಲು ಆತನನ್ನೆತ್ತಿಕೊಂಡು ಜಲ್ದ್ ಗರ್'ನಲ್ಲಿದ್ದ ರಾಜಪ್ರತಿನಿಧಿಯೊಬ್ಬನ(ಮೂಸಾ ರೈನಾ) ಮಗಳ ಮನೆಗೆ ಪರಾರಿಯಾಯಿತು. ಅಲ್ಲಿದ್ದ ಹಿಂದೂ ಕೆಲಸಗಾರರು ಹಾಗೂ ಸುತ್ತಣ ಹಿಂದೂಗಳು ಈ ಮತಾಂಧ ಪಡೆಯ ಮೇಲೆ ಕೊಳಚೆಯನ್ನೆಸೆದು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿತು. ಮೂಸಾ ರೈನಾ ಅರಾಖಿಯನ್ನು ರಕ್ಷಿಸಿದ್ದು ಮಾತ್ರವಲ್ಲ, ಆತನ ಕಾರ್ಯದಲ್ಲೂ ಸಹಾಯಕನಾದ. ಆತ ಪ್ರತಿರೋಧ ತೋರಿದ್ದ ಹಿಂದೂಗಳ ಬಲಾಢ್ಯನಾಯಕರನ್ನು ಪಿತೂರಿ ನಡೆಸಿ ಸೆರೆಮನೆಗೆ ತಳ್ಳಿದ. ಬಹುತೇಕ ಜನರನ್ನು ಕಾಶ್ಮೀರದ ಕಣಿವೆಯೊಳಗೆ ಪ್ರವೇಶಿಸದಂತೆ ರಾಜ್ಯಭೃಷ್ಟತೆಗೆ ಒಳಪಡಿಸಿದ. ಸ್ವಲ್ಪವೂ ಕುರುಹು  ಉಳಿಯದಂತೆ ದೇವಾಲಯವನ್ನು ಸರ್ವನಾಶಗೈಯಲಾಯಿತು. ಮರದ ವಿಗ್ರಹವನ್ನು ಸುಡಲಾಯಿತು. ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧವನ್ನು ಎದುರಿಸಿದ ಅರಾಖಿ ತನ್ನ ಕಾರ್ಯವನ್ನು ಧರ್ಮಯುದ್ಧ ಎಂದು ಬಣ್ಣಿಸಿ ಆ ಜಾಗದ ಹೆಸರನ್ನು ಇಸ್ಲಾಮ್ ಪುರ ಎಂದು ಬದಲಾಯಿಸಿದ. ಇದೇ ರೀತಿ ಮಂಕೇಹ್ ರೇಣು ಹಾಗೂ ಜನಕ್ ರೇಣು ದೇವಾಲಯಗಳನ್ನೂ ನಾಶಮಾಡಿ ನಮಾಜ್ ಮಾಡಲು ಅಣಿಗೊಳಿಸಲಾಯಿತು. ಜೋಗಿಗಳ ಯಾತ್ರಾಸ್ಥಳ ರೈನಾವಾರಿಯ ವೇತಾಳನ್ ದೇವಾಲಯ, ತಶ್ವಾನ್, ಉದೇರ್ ನಾಥ್, ಸದಾಸ್ ಮೋಲೋ, ಗಂಗಾಬಲ್ ದೇವಾಲಯಗಳೂ ಅರಾಖಿಯ ನೇತೃತ್ವದಲ್ಲಿ ಧ್ವಂಸಗೊಂಡವು.

                ಕಾಶ್ಮೀರಕ್ಕೆ ಬರುವ ಯಾತ್ರಿಗಳು, ಜೋಗಿಗಳಿಗೆ ದಾಲ್ ಸರೋವರದ ಸಮೀಪವಿದ್ದ ಜೋಗಿ ಲಂಗರ್ ಎನ್ನುವ ಧರ್ಮಶಾಲೆಯೇ ಆಶ್ರಯತಾಣವಾಗಿತ್ತು. ಅದನ್ನು ಕೆಡವಲು ಅರಾಖಿ ಸುಲ್ತಾನ ಫತ್ ಶಾಹನ ಅನುಮತಿ ಕೋರಿದ. ಆದರೆ ತನ್ನಜ್ಜ ಬುದ್ ಶಾಹನಿಂದ ನಿರ್ಮಿತವಾದ ಆ ಧರ್ಮಶಾಲೆಯನ್ನು ಕೆಡವಲು ಆತ ಅನುಮತಿ ನಿರಾಕರಿಸಿದ. ಕುಪಿತನಾದ ಅರಾಖಿ ನ್ಯಾಯ ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಮೆಗ್ರೇಯಿಂದ ಧರ್ಮಶಾಲೆಯನ್ನು ಕೆಡಹಲು ಆಜ್ಞಾಪತ್ರ ತರಿಸಿಕೊಂಡ. ಸುದ್ದಿ ತಿಳಿದ ಹಿಂದೂಗಳು ಒಟ್ಟಾಗಿ ಹೋರಾಡಿದರೂ ಧರ್ಮಶಾಲೆಯ ಜಾಗದಲ್ಲಿ ಭಯೋತ್ಪಾದಕ ಶಾಲೆ ಮೇಲೆದ್ದು ನಿಂತಿತು! ಅಷ್ಟರಲ್ಲಿ ಸಿಕಂದರನಿಂದ ನಾಶವಾಗಿ ಜೈನುಲ್-ಅಬಿದಿನ್'ನಿಂದ ಪುನರ್ನಿರ್ಮಾಣಗೊಂಡಿದ್ದ ಪಂಡ್ರೆದೆನ್ ಎನ್ನುವ ಮಹಾಲಯದ ಮೇಲೆ ಅರಾಖಿಯ ಕಣ್ಣು ಬಿತ್ತು. ಆ ದೇವಾಲಯವನ್ನು ಸುಟ್ಟು ನಾಶ ಮಾಡಿದರೂ ಅಲ್ಲಿನ ವಿಗ್ರಹವನ್ನು ಕಿಂಚಿತ್ತು ಕೊಂಕಿಸಲೂ ಮತಾಂಧ ಪಡೆ ವಿಫಲವಾಯಿತು. ಕಲ್ಲಿನಿಂದ ಜಜ್ಜಿದರೂ, ಕಬ್ಬಿಣದ ಬಡಿಗೆಯಿಂದ ಬಡಿದರೂ ಅದು ಛಿದ್ರವಾಗಲಿಲ್ಲ. ಕೊನೆಗೆ ಅಲ್ಲೇ ಗುಂಡಿ ತೋಡಿ ಆ ವಿಗ್ರಹವನ್ನು ಮುಚ್ಚಲಾಯಿತು. ಅದರ ಮೇಲೆ ಎರಡು ಮಳಿಗೆಯ ಬೃಹತ್ ಕಟ್ಟಡವೊಂದು ಮೇಲೆದ್ದಿತು. ಬಳಿಕ ಮೇತ್ನಾ ಸ್ಪ್ರಿಂಗ್, ಜ್ವಾಲಾಮುಖಿ, ಖರ್ಬೋಶ್ತಾಜ್, ಖೋದ್ರೇಣು, ಪರ್ಝ್ ದಾನ್, ತ್ಸಾರೇನ್ ಮಲ್, ಜಾಚೋಲ್ದಾರ್, ಕಾಲೇಹ್ ಬೋದ್, ನರ್ವೋರಾ, ವೇಜ್ ನಾಥ್, ಪರ್ಜೆಹ್ಯಾರ್, ಕುದೇರ್, ಅಚ್ಚಾಬಲ್, ಸಾಗಮ್, ಲೋಕೇಹ್, ವೆರಿನಾಗ್ ಮುಂತಾದ ದೇವಾಲಯಗಳು ಅರಾಖಿಯ ಕೈಯಲ್ಲಿ ಬೆಂಕಿಗೆ ಆಹುತಿಯಾದವು.

                 ಕೇವಲ ದೇಗುಲಗಳ ನಾಶ, ಮತಾಂತರ ಮಾತ್ರ ಅರಾಖಿಯ ಕೆಲಸವಾಗಿರಲಿಲ್ಲ. ಹಿಂದೂಗಳು ಮುಸಲ್ಮಾನರ ಮುಂದೆ ಬಾಗಬೇಕಿತ್ತು. ಮುಸಲ್ಮಾನರಿಗೆ ನಮಸ್ಕರಿಸದ ಹಿಂದೂವಿಗೆ ಏಟು ಬೀಳುತ್ತಿತ್ತು. ಹಿಂದೂಗಳು ಒಳ್ಳೆಯ ದಿರಿಸು ಧರಿಸುವಂತಿರಲಿಲ್ಲ. ಮುಸಲ್ಮಾನರು ಧರಿಸುವ ರೀತಿಯ ಬಟ್ಟೆಗಳನ್ನು ತೊಡುವಂತಿರಲಿಲ್ಲ. ಮುಖದಲ್ಲಿ ಸದಾ ದುಃಖ, ಅನಾಥ ಭಾವವನ್ನೇ ಸೂಸುತ್ತಿರಬೇಕಾಗಿತ್ತು. ಒಂದು ಬಾರಿ ಮುಸ್ಲಿಮರಂತೆ ಬಟ್ಟೆ ತೊಟ್ಟಿದ್ದ ಕುದುರೆ ಸವಾರನೊಬ್ಬ ಅರಾಖಿಯ ಮುಂದೆಯೇ ಆತನಿಗೆ ತಲೆ ಬಾಗದೆ ಮುಂದೆ ಸಾಗಿದ. ಆತ ಹಿಂದೂ ಎಂದು ಸ್ಥಳೀಯ ಸೂಫಿಗಳಿಂದ ತಿಳಿದ ಅರಾಖಿ "ಕಾಫಿರನಾದ ಆತ ಯಾಕೆ ಕುದುರೆ ಸವಾರಿ ಮಾಡುತ್ತಿದ್ದಾನೆ? ನಮ್ಮಂತೆ ಒಳ್ಳೆಯ ಬಟ್ಟೆಯನ್ನೇಕೆ ತೊಟ್ಟುಕೊಂಡಿದ್ದಾನೆ? ಆತನನ್ನು ಹಿಡಿದು ತನ್ನಿ" ಎಂದು ಆಜ್ಞಾಪಿಸಿದ. ಕ್ಷಣ ಮಾತ್ರದಲ್ಲಿ ಆತನನ್ನು ಬಂಧಿಸಿ ಕರೆತರಲಾಯಿತು. ಅರಾಖಿಯ ಆದೇಶದಂತೆ ಆತನನ್ನು ಕುದುರೆಯಿಂದ ಕೆಳಗೆಳೆದು ಪ್ರಾಣ ಹೋಗುವಂತೆ ಬಡಿದು ಬೆಟ್ಟದ ಕೆಳಗೆ ತಳ್ಳಲಾಯಿತು. ಇದು ಭಾರತೀಯರು ಆರಾಧಿಸುತ್ತಿರುವ ಸೂಫಿಯೊಬ್ಬನ ದಿನಚರಿ! ಇಂತಹ ಬಹಳಷ್ಟು ಘಟನೆಗಳು ಅರಾಖಿಯ ಜೀವನ ಚರಿತ್ರೆ "ತೋಹಫುತ್-ಉಲ್-ಹಬಾಬ್"ನಲ್ಲಿ ಕಾಣಸಿಗುತ್ತವೆ.

              ಇದು ಅರಾಖಿಯ ಕಥೆಯಾದರೆ ಭಾರತದ ಇತಿಹಾಸವನ್ನೇ ಬದಲಾಯಿಸಿದ ತರೈನ್ ಯುದ್ಧಕ್ಕೆ ಕಾರಣನಾದ ಮೊಯಿನುದ್ದೀನ್ ಚಿಸ್ತಿ ಎಂಬ ಸೂಫಿಯದ್ದು ಇನ್ನೊಂದು ಕಥೆ! ಮಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಮಾಡಿದಾಗ ಅವನ ಸಹಾಯಕನಾಗಿ ಬಂದವ ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ. ಕ್ರಿ.ಶ 1178ರಲ್ಲಿ ಘೋರಿ ಗುಜರಾತಿನ ಚಾಲುಕ್ಯ ದೊರೆಯ ವಿಧವೆ ರಾಣಿಯ ಸೇನೆಗೆ ಸೋತು ಪಲಾಯನ ಮಾಡಿದ. ಕ್ರಿ.ಶ. 1191ರಲ್ಲಿ ಮತ್ತೆ ಬಂದ ಆತ ಪೃಥ್ವೀರಾಜ ಚೌಹಾನನಿಂದ ಪ್ರಾಣಭಿಕ್ಷೆ ಪಡೆದ. ಈ ಎರಡೂ ಬಲಿಷ್ಟ ಸಾಮ್ರಾಜ್ಯಗಳು ಘೋರಿಯ ಬೆನ್ನಟ್ಟಿ ಕಾಬಾದ ಮಸೀದಿಯನ್ನು ಧ್ವಂಸ ಮಾಡಿ "ಅದು ಕೂಡಾ ಕಲ್ಲು, ಇಟ್ಟಿಗೆಗಳಿಂದ ನಿರ್ಮಿಸಿದ್ದು, ಅವರ ದೇವರೂ ಕೂಡಾ ಬರಿಯ ಕರಿಯ ಕಲ್ಲು" ಎಂದು ತೋರಿಸಿಕೊಡುತ್ತಿದ್ದರೆ ಈ ದೇಶ ಮುಂದೆ ಘೋರ ಅಧಪತನವನ್ನು ಕಾಣಬೇಕಿರಲಿಲ್ಲ. ಘೋರಿಯೇನೋ ಎರಡೂ ಬಾರಿ ಪಲಾಯನ ಮಾಡಿದ. ಆದರೆ ಈ ಚಿಸ್ತಿ ಹೇಗೋ ನುಸುಳಿ ಅಜ್ಮೀರಿನಲ್ಲಿ ನೆಲೆವೂರಿದ. ಮುಂದೆ ಪೃಥ್ವೀರಾಜನನ್ನು ವಂಚನೆಯ ಮೂಲಕ ಗೆಲ್ಲೆಂದು ಘೋರಿಗೆ ಉಪಾಯ ಹೇಳಿಕೊಟ್ಟಾತ ಇದೇ ಚಿಸ್ತಿ. ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಅದಕ್ಕೆ ಈ ಚಿಸ್ತಿಯ ಪ್ರೇರಣೆಯಿತ್ತು. ಇಂದು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಚಾದರ ಅರ್ಪಿಸಿ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು. ಎಂತಹಾ ವಿಚಿತ್ರ ನಮ್ಮವರ ಧಾರ್ಮಿಕ ಭಾವನೆ, ತಮ್ಮನ್ನು ಆಕ್ರಮಿಸಿದವರನ್ನೇ ಸಂತ ಎಂದು ಆರಾಧಿಸುವುದು! ನೈಜ ಇತಿಹಾಸ ತಿಳಿದಿಲ್ಲವಾದರೆ ಆಗುವ ಅನಾಹುತ ಇಂತಹುದ್ದೇ! ಸೂಫಿಗಳೆಂದರೆ ದೇವ ಮಾನವರೆಂಬ ಭಾವನೆ ಹಿಂದೂ ಸಮುದಾಯದಲ್ಲಿ ಬೀಡು ಬಿಟ್ಟಿದೆ. ಅದಕ್ಕಾಗಿಯೇ ಸಿಕ್ಕ ಸಿಕ್ಕ ದರ್ಗಾಗಳಿಗೆ ಚಾದರ ಅರ್ಪಿಸುವ ವೈಚಾರಿಕ ಮತಾಂತರಕ್ಕೆ ಹಿಂದೂಗಳು ಸದ್ದಿಲ್ಲದೆ ಗುರಿಯಾಗುತ್ತಿದ್ದಾರೆ. ದಾಡಿ ಬಿಟ್ಟ ಮುಲ್ಲಾಗಳು ಮುಸಿಮುಸಿ ನಗುವ ದೃಶ್ಯ ಮೀಸೆಯಿಲ್ಲದ ಮುಖದಲ್ಲಿ ಎದ್ದು ಕಾಣುತ್ತಿದೆ.

ಬುಧವಾರ, ಜನವರಿ 18, 2017

ಗ್ರಸ್ತ - ಜ್ಞಾನಿಯ ಏಕತ್ವದ ಗಾನ

ಗ್ರಸ್ತ - ಜ್ಞಾನಿಯ ಏಕತ್ವದ ಗಾನ

     
   ಶ್ರೀ ಎಸ್.ಎಲ್.ಭೈರಪ್ಪರ ಬಳಿಕ ನಾ ಮೆಚ್ಚಿದ ಕಾದಂಬರಿಕಾರ ಕರಣಂ ಪವನ್ ಪ್ರಸಾದ್. ಭೈರಪ್ಪರಂತೆಯೇ ಎತ್ತಿಕೊಂಡ ತಕ್ಷಣ ಸಮಯದ ಪರಿವೆಯೇ ಇಲ್ಲದಂತೆ ಓದಿಸಿಕೊಂಡು ಹೋಗುವ ಸಾಹಿತ್ಯ ಕರಣಂರದ್ದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಅವರ ಗ್ರಸ್ತ ಕಾದಂಬರಿಯೂ ಎಂದಿನ ಅವರ ಸಹಜ ಶೈಲಿಯಲ್ಲಿ ಸೊಗಸಾಗಿ ಮೂಡಿ ಬಂದಿದೆ. 143 ಪುಟಗಳ ಚಿಕ್ಕ, ಚೊಕ್ಕ ರಚನೆ. ವಿಜ್ಞಾನದ ಸಾಮಾನ್ಯ ಅರಿವು, ಭಾರತೀಯ ದರ್ಶನಗಳ ಸಾಮಾನ್ಯ ಪರಿಚಯವಿದ್ದಲ್ಲಿ ಗ್ರಸ್ತದ ಓದಿಗೊಂದು ಓಘವೂ, ನ್ಯಾಯವೂ ಸಿಕ್ಕೀತು. ಜಿಜ್ಞಾಸುಗಳಿಗೆ ಒಂದು ಹೊಸ ಹೊಳಹನ್ನು ಗ್ರಸ್ತ ಕೊಟ್ಟೀತು. ಬರಿಯ ಕಥೆ ಓದುವವರಿಗೆ ಇನ್ನೊಂದು ರೋಮಾಂಚಕ, ಸಸ್ಪೆನ್ಸ್ ಕಥೆಯೆಂದನಿಸೀತು. ಒಟ್ಟಿನಲ್ಲಿ ಆಯಾ ಓದುಗರ ಬುದ್ಧಿಮಟ್ಟಕ್ಕೆ ತಕ್ಕಂತೆ "output" ಒದಗಿಸುವ ಸಾಹಿತ್ಯ ಗ್ರಸ್ತ ಎಂದರೆ ಅದರ ಹಿರಿಮೆ ಕಡಿಮೆಯಾಗಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.

             ಬಡತನ, ಬಡತನದಲ್ಲೂ ಸ್ವಾಭಿಮಾನ ಉಳಿಸಿಕೊಂಡು ಬದುಕಲು ಹೋರಾಡುವ ಜೀವ, ಜಗತ್ತನ್ನು ಸರಿಯಾಗಿ ಅರಿಯುವ ಮುನ್ನವೇ ಪ್ರಾಯದ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿ ಆಗುವ ಅಂತರ್ಜಾತೀಯ ವಿವಾಹ, ಆದ ಮೇಲೆ ತಿಳಿಯುವ ನೈಜತೆ, ಅದರಲ್ಲೂ ಗೌರವದ ಬದುಕು ಕಟ್ಟಿಕೊಳ್ಳುವ ಕಲೆ, ಬಿಡುತ್ತೇನೆಂದು ಬಿಟ್ಟು ಬಂದರೂ ಬಿಡದ ಜಾತಿ, ಶ್ರೀಮಂತಿಕೆಯ ಹಿಂದಿನ ಬಡತನ, ಉದಾರತೆ(ಲಿಬರಲ್)ಯೊಳಗಿನ ಸಂಕುಚಿತತೆ, ಎಲ್ಲವನ್ನೂ ತಮ್ಮ ಅಗತ್ಯಕ್ಕೆ, ತಮ್ಮ ಸುಭದ್ರತೆಗೆ ತಕ್ಕಂತೆ ಬದಲಾಯಿಸಿಕೊಳ್ಳುವ ರೀತಿ-ನೀತಿ ಹೀಗೆ ಸಂಸಾರದ ಹಲವು ಮುಖಗಳನ್ನು ನಮ್ಮ ಸುತ್ತಮುತ್ತ ನಡೆಯುವ ರೀತಿಯಲ್ಲೇ ಕಟ್ಟಿಕೊಡುವ ರೀತಿ ಅನನ್ಯ. ಹರೆಯದ ಕಾಮನೆ-ಭಾವನೆ, ಸಂಸಾರದ ಬಂಧನ,  ತಾವು ಅದೇ ತಪ್ಪನ್ನು ಎಸಗಿದ್ದರೂ ಅದು ತಪ್ಪಲ್ಲವೆಂಬ ಭಾವ, ಇನ್ನೊಬ್ಬರು ಅದೇ ತಪ್ಪು ಮಾಡಿದಾಗ ಮಹಾಪರಾಧ ಎನ್ನುವಂತೆ ಬಿಂಬಿಸುವ ಮಾನವ ಸಹಜ ಸ್ವಭಾವ, ಶೀಲ ಎಂಬ ಪದಕ್ಕೆ ಅರ್ಥವೇ ತಿಳಿಯದ-ಉಳಿಯದ ಪೀಳಿಗೆಯ ಮಾನಸಿಕತೆ ಮತ್ತು ಈ ಎಲ್ಲವುಗಳನ್ನೂ ಆಯಾ ಪಾತ್ರಗಳಿಗೆ ತಕ್ಕಂತೆ ಅವುಗಳಿಂದಲೇ ವಿಮರ್ಶೆಗೊಳಪಡಿಸುವ, ಹಾಗೆ ಮಾಡಿಕೊಂಡು ಯಾವುದೋ ಒಂದು ಎಳೆಯನ್ನು ಹಿಡಿದು ತನ್ನ ಕಾರ್ಯ ಸರಿಯಾದುದು ಎಂದು ಸಮಾಧಾನಪಡಿಸಿಕೊಳ್ಳುವ ಮನುಜ ಸ್ವಭಾವ ಇವೆಲ್ಲವೂ ಅವರ ಎಂದಿನ ಸಾಹಿತ್ಯದ ಶೈಲಿಯಂತೆ ಅನಿಸುತ್ತದೆ.

           ಅದಕ್ಕಿಂತಲೂ ಸ್ವಲ್ಪ ಹೆಚ್ಚಾಗಿ ಎದ್ದು ಕಾಣುವುದು ವಿಜ್ಞಾನ-ವೇದಾಂತದ ನಡುವಿನ ಸಂವಾದ, ಚರ್ಚೆ. ವಿಜ್ಞಾನಿಯೊಬ್ಬನ ತಹತಹಿಕೆ, ಉಳಿದ ಜಗತ್ತು ಅವನನ್ನು ನೋಡುವ-ಕಾಡುವ-ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ರೀತಿ, ನ್ಯಾಯನ್ಯಾಯಗಳನ್ನು ಮೀರಿದ ಕಾರ್ಪೋರೇಟ್ ಜಗತ್ತಿನ ಯಥಾವತ್ ಚಿತ್ರಣ, ನ್ಯಾಯ ವ್ಯವಸ್ಥೆಯ ಲೋಪ ಇವೆಲ್ಲವೂ ಕಾದಂಬರಿಕಾರನೊಬ್ಬ ಕಾಲದೊಡನೆ ಹೇಗೆ ಆಧುನೀಕರಿಸಿಕೊಳ್ಳುತ್ತಾ(ಅಪ್ ಡೇಟ್) ಸಾಗಬೇಕು, ಅವನು ಪ್ರಸಕ್ತ ಕಾಲದಲ್ಲಿಯೇ ಇರಬೇಕು, ನೈಜತೆಗೆ ಹತ್ತಿರವಾಗಿರಬೇಕು ಎನ್ನುವುದರ ದ್ಯೋತಕವಾಗಿ ಕಾಣ ಸಿಗುತ್ತವೆ. ಆಗ ಮಾತ್ರ ಅದು ಗಂಭೀರ ಓದುಗರನ್ನು ಸೆಳೆಯುವುದಲ್ಲವೇ?

             ಇವೆಲ್ಲವೂ ಅವರ ಹಿಂದಿನ ಕಾದಂಬರಿಗಳಲ್ಲಿ ನಾವು ಗುರುತಿಸಿದ್ದೇ. ಆದರೆ ಇದಕ್ಕಿಂತ ಹೊರತಾಗಿ ಇಲ್ಲಿ ಎತ್ತರದಲ್ಲಿ ಕಾಣಸಿಗುವುದು ಕಾದಂಬರಿಯ ಕಥಾವಸ್ತು. ಅದು ಎತ್ತರದಲ್ಲೇ ಇರಬೇಕು ಅನ್ನಿ. ಆದರೆ ಇಲ್ಲೊಂದು ವಿಶೇಷವಿದೆ. ಬಡತನದ ಬೇಗೆಯಲ್ಲಿ ಹುಟ್ಟಿ, ಅದರ ಬವಣೆಗಳನ್ನು ನೋಡುತ್ತಲೇ ಅಂತರ್ಮುಖಿಯಾಗಿ ಜೀವನದ ಪಾಠಗಳನ್ನು ಕಲಿಯುತ್ತಾ ಪ್ರತಿಯೊಂದು ಬಂಧನಕ್ಕೂ ಸಿಕ್ಕಿ ಹಾಕಿಕೊಂಡು ಮತ್ತೆ ಅದನ್ನೇ ಪ್ರಯತ್ನಪೂರ್ವಕವಾಗಿ, ನಿರ್ದಾಕ್ಷಿಣ್ಯವಾಗಿ ಕಳಚುತ್ತಾ ಎತ್ತರೆತ್ತರಕ್ಕೆ ಏರುವ ಕಥಾನಾಯಕನ ವ್ಯಕ್ತಿತ್ವ. ಕಾದಂಬರಿ ಆರಂಭವಾಗುವುದೇ "ಇರುವುದು ಒಂದೇ ಆತ್ಮ; ಒಂದು ದೇಹದಿಂದ ಆತ್ಮದಲ್ಲಿ ಉತ್ಪತ್ತಿಯಾದ ಸ್ಮೃತಿಯನ್ನು ಇನ್ನೊಂದು ದೇಹ ಗಳಿಸಬಹುದು" ಎನ್ನುವ ಸಂವಾದವೇ ಕಾದಂಬರಿಯ ವಸ್ತು ಇದೇ ಎನ್ನುವ ನಿರೀಕ್ಷೆಯನ್ನು ಮೂಡಿಸುತ್ತದೆ. ಬಾಲ್ಯದಲ್ಲಿಯೇ ಸ್ಮೃತಿಯಲ್ಲಿದ್ದುದನ್ನು ನಿದ್ದೆಗಣ್ಣಿನಲ್ಲೇ ಒರೆಯುವ ರೀತಿ ಮುಂದಿನ ವ್ಯಕ್ತಿತ್ವದ ಚಿತ್ರಣವನ್ನು ಕೊಡುತ್ತದೆ. ಜನ್ಮದಾತರ ಬಂಧನ, ಸಂಪರ್ಕಕ್ಕೆ ಬಂದವರ ಬಂಧನ ಇವೆಲ್ಲವೂ ಆತನನ್ನು ಕಾಡುತ್ತದೆ. ಎಲ್ಲವನ್ನೂ ಕಳಚಿ ಎಲ್ಲದರೊಳಗೊಂದಾದ ಬುದ್ಧನಂತೆ ಕಥಾನಾಯಕನ ಪಯಣವಾದರೂ ಅನಿರೀಕ್ಷಿತವಾದ, ಅನಗತ್ಯವಾದ ಬಂಧನಕ್ಕೆ ಸಿಲುಕಿ ಅವುಗಳನ್ನು ಕಳಚಿಕೊಳ್ಳುತ್ತಾ ಆತ ಸಾಗುತ್ತಾನೆ. ಬ್ರಹ್ಮವನ್ನು ವಿದ್ಯುತ್ತಿಗೆ ಸಮೀಕರಿಸುತ್ತಾ ಜೀವನದ ಸತ್ಯದ ಹುಡುಕಾಟದಲ್ಲಿ ಸಾಗುವಾಗ ಶಂಕರರು, ಉಪನಿಷತ್ತುಗಳು ಸಹಾಯಕವಾಗುತ್ತದೆ. ದ್ವೈತ ಮರೆಯಾಗುತ್ತದೆ. ತನ್ನೊಡನೆ ಆಪ್ತರು ಎಂದೆಣಿಸುವವರೂ ತಮ್ಮ ಸ್ವಾರ್ಥಕ್ಕಾಗಿ ಅಥವಾ ಬದುಕುವ ಅಗತ್ಯ(ದೇಹ ಭಾವ)ಕ್ಕಾಗಿ ಹೇಳುವ ಸುಳ್ಳು, ಆಡುವ ಕಾಪಟ್ಯವನ್ನು ಆ ಬಂಧನವನ್ನು ಕಳಚಿಕೊಳ್ಳುವ ಸಮಯದಲ್ಲಿ ನಿಷ್ಠುರವಾಗಿ ಹೇಳಿ ಮಾಯೆಯ ಅಥವಾ ಅವಿದ್ಯೆಯ ಪೊರೆಯನ್ನು ಕಳಚಿ ಒಗೆದು ಗಮ್ಯ ಸೇರುವ(ಇದ್ದುದೇ ಅಲ್ಲೇ ಅಲ್ಲವೇ, ಇನ್ನು ಗಮ್ಯವೇನು ಬಂತು) ಅಂದರೆ ತನ್ನನ್ನು ತಾನು ಅರಿತುಕೊಳ್ಳುವ ಪ್ರಕ್ರಿಯೆ ನಿಜವಾಗಿಯೂ ಅದ್ಭುತ.

             "ಗೀತೆಯನ್ನು ಯಾರು ಬರೆದರು ಎನ್ನುವುದು ಮುಖ್ಯವಲ್ಲ. ಅದು ಮನುಷ್ಯನ ಒಟ್ಟು ಸ್ಮೃತಿ. ಒಬ್ಬನಿಗೆ ಅದು ಹೊಳೆದಿದೆ ಎಂದರೆ ಈ ವಿಶ್ವಾತ್ಮದಲ್ಲಿ ಸ್ಥಿತವಾಗಿದೆ ಎಂದರ್ಥ. ನಮ್ಮೆಲ್ಲರ ಆಲೋಚನೆ, ಸಂಶೋಧನೆ, ಆತ್ಮಶೋಧನೆಗೆ ಈ ಎಲ್ಲರ ಒಟ್ಟು ಸ್ಮೃತಿಯೇ ಕಾರಣವಾಗಿರುತ್ತದೆ. ಹೀಗೆ ಎತ್ತರದ ತರಂಗದಲ್ಲಿ ಉಂಟಾದ ಮಾತನ್ನು ನನ್ನ ಒಳಸ್ಮೃತಿ ಗ್ರಹಿಸಿ ಇಟ್ಟುಕೊಂಡಿದೆ. ಯಾವುದೋ ಒಂದು ತಂತು ಮಿಡಿದಾಗ ಅಪ್ರಯತ್ನವಾಗಿ ಅದು ಹೊರಬರುತ್ತದೆ. ನಮ್ಮೆಲ್ಲರ ಸ್ಮೃತಿಯೂ ಒಂದೇ. ಆದರೆ ಅದನ್ನು ಗ್ರಹಿಸುವ ಸಾಮರ್ಥ್ಯ ಕೆಲವು ದೇಹಕ್ಕೆ ಮಾತ್ರ ಇರುತ್ತದೆ" ಎಂದು ತನ್ನ ಬಾಲ್ಯದ ಬಡಬಡಿಸುವಿಕೆಗೆ ಕೊಡುವ ಕಾರಣ; "ವಿದ್ಯುತ್ ವಿದ್ಯುತ್ತಿನಲ್ಲಿ ಲೀನವಾಗುತ್ತದೆ. ಸ್ವರೂಪ ಬದಲಾಯಿಸುತ್ತದೆ, ವಿವಿಧ ರೂಪ ತಾಳುತ್ತದೆ, ಲೋಕೋಪಯೋಗಿಯಾಗುತ್ತದೆ. ಆದರೆ ವಿದ್ಯುತ್ ಎರಡಲ್ಲ; ಬ್ರಹ್ಮವೂ! ಆತ್ಮವೂ!" ಎನ್ನುವ ವಿಚಾರ; "...ನಾನು ಋತಕ್ಕೆ ಮೊದಲು ಹುಟ್ಟಿದವ, ದೇವತೆಗಳಿಗಿಂತ ಮೊದಲಿನವನು...ಅಹಮನ್ನಮಹಮನ್ನಮಹಮನ್ನಮ್...ಯೋ ಮಾ ದದಾತಿ ಸ ಇದೇವ ಮಾವಾಃ ಅಹಮನ್ನಮದಂತ ಮಾದ್ಮಿ...ಅಹಂ ವಿಶ್ವ ಭುವನಮಭ್ಯಭವಾಮ್...ಸುವರ್ಣ ಜ್ಯೋತಿಃ" ಎನ್ನುವ ಜ್ಞಾನಗಾನ; ಸ್ಮೃತಿಯೊಂದಿಗಿನ ಸಂವಹನ.....ವ್ಹಾಹ್ "ಯಾನ"ದ ನಂತರ ಕಾಯುತ್ತಿದ್ದ "ಓದು" ಇದು.

             "ನಾನು ಯಾರು?" ಎನ್ನುವ ಹುಡುಕಾಟವನ್ನು ಕೊನೆಗೆ ಅದರ ಉತ್ತರವನ್ನು ಆತ್ಮಕ್ಕೆ ಅನ್ವರ್ಥವಾದ "ಅವಿನಾಶ" ಎನ್ನುವ ಹೆಸರಿನಲ್ಲಿ-ಪಾತ್ರದಲ್ಲಿ ಕಟ್ಟಿಕೊಟ್ಟು ಲೇಖಕರು ಗೆಲ್ಲುತ್ತಾರೆ. "ಯಾನ"ದಲ್ಲಿ ಶ್ರೀ ಎಸ್.ಎಲ್.ಭೈರಪ್ಪರು ಕಂಡುಕೊಂಡ ಸತ್ಯಕ್ಕೆ "ಗ್ರಸ್ತ"ದಲ್ಲಿ ಕರಣಂರು ಪ್ರಾಯೋಗಿಕ ಅಂತ್ಯ ಕೊಟ್ಟಂತೆ ಅನಿಸಿತು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರೇ ಕಾದಂಬರಿಯಲ್ಲಿ ಒಂದು ಸನ್ನಿವೇಶದಲ್ಲಿ ಕಥಾನಾಯಕನಿಂದ ಹೇಳಿಸಿದಂತೆ "ಇದು ಜ್ಞಾನಿಯ ಏಕತ್ವದ ಗಾನ!".

ಗುರುವಾರ, ಜನವರಿ 12, 2017

ತೇಜಃ ಪುಂಜ

ತೇಜಃ ಪುಂಜ


                  ತಮಿಳುನಾಡಿನ ಒಂದು ಹಳ್ಳಿ.. ಮರವೊಂದರ ಕೆಳಗೆ ಕುಳಿತು ಸಂತನೊಬ್ಬ ತನ್ನ ಶಿಷ್ಯರಿಗೆ ಹೇಳುತ್ತಿದ್ದಾನೆ...
             "ಹಿಂದೂಸ್ಥಾನ ಮತಾಂಧರ ದಾಸ್ಯಕ್ಕೆ ಸಿಲುಕಿ ತನ್ನ ಕ್ಷಾತ್ರತ್ವ, ಸ್ವಾಭಿಮಾನ, ಅಸ್ಮಿತೆಯನ್ನು ಮರೆತು ನಿದಿರೆ, ಮದಿರೆ, ನಪುಂಸಕತ್ವದ ವಶವಾಗಿದ್ದಾಗ ದೇಶದ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದನಾತ. ಮತಾಂಧ ಮೊಘಲ್, ಆದಿಲ್, ನಿಜಾಮ್, ಬರೀದ್, ಕುತುಬ್, ಇಮಾಮ್ ಶಾಹಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹಿಂದೂಗಳ ಮಾನ, ಪ್ರಾಣ ರಕ್ಷಣೆ ಮಾಡಿದ. ತೋರಣ, ಚಾಕಣ, ಪನ್ನಾಳ, ಪುರಂದರ...ಹೀಗೆ ಕೋಟೆಗಳ ಮೇಲೆ ಕೋಟೆ ಗೆದ್ದು...ಛತ್ರಪತಿಯಾಗಿ ಹಿಂದೂಸಾಮ್ರಾಜ್ಯದ ಶೌರ್ಯ, ಸ್ಥೈರ್ಯ, ಸಾಹಸವನ್ನು ಜಗತ್ತಿಗೆ ಪ್ರಚುರಪಡಿಸಿದ...."

ಶಿಷ್ಯರಿಗೋ ಆಶ್ಚರ್ಯ. ತಮ್ಮ ಗುರುಗಳ್ಯಾಕೆ ಆ ದರೋಡೆಕೋರ ಶಿವಾಜಿಯ ಬಗ್ಗೆ ಹೇಳುತ್ತಿದ್ದಾರೆ?
ಆ ಗುರು ಮತ್ಯಾರು ಅಲ್ಲ. ಮುಂದೊಂದು ದಿನ ಐದೇ ಐದು ನಿಮಿಷಗಳ ಭಾಷಣದಲ್ಲಿ ಜಗತ್ತಿನ ಎದುರು ತನ್ನ ದೇಶ ಜಗತ್ತಿನ ಗುರು, ತನ್ನ ಸಂಸ್ಕೃತಿ ಉತ್ಕೃಷ್ಟವಾದ ಸನಾತನ ಸಂಸ್ಕೃತಿ, ತನ್ನ ನಾಗರೀಕತೆ ಇಂದಿಗೂ ಅಳಿದಿಲ್ಲ ಎಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ, ಗರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟನೋ, ನನ್ನ ಭಾರತಕ್ಕೆ ಶಿವಾಜಿಯಂತಹ ೧೦೦ ಮಂದಿ ತರುಣರು ಸಾಕೆಂದು ಯುವ ಜನತೆಯನ್ನು ಬಡಿದೆಬ್ಬಿಸಿದನೋ ಅಂತಹ ಸಿಡಿಲ ಸಂತ ಸ್ವಾಮಿ ವಿವೇಕಾನಂದ.

                        ಹೌದು. ಭಾರತದ ಕ್ಷಾತ್ರ ತೇಜ ಬ್ರಿಟಿಷರ ಎದುರು ಮಕಾಡೆ ಮಲಗಿತ್ತು. ವಿದ್ಯಾವಂತರೆನಿಸಿಕೊಂಡವರು ಗುಲಾಮೀ ಮಾನಸೀಕತೆಯ ಆಳಾಗಿ ಆಂಗ್ಲ ಇತಿಹಾಸಕಾರರು ಬರೆದುದೇ, ಹೇಳಿದ್ದೇ ಸತ್ಯ ಅಂತ ನಂಬಿದ್ದ ಕಾಲವದು. ಅವರ ದೃಷ್ಟಿಯಲ್ಲಿ ಶಿವಾಜಿ, ರಾಣಪ್ರತಾಪ, ತಾತ್ಯಾಟೋಪೆ, ಫಡಕೆ, ಕೂಕಾ... ದರೋಡೆಕೋರರಾಗಿದ್ದರು! ಸ್ವಾತಂತ್ರ್ಯ ಸಂಗ್ರಾಮ ದಂಗೆಯೆನಿಸಿಕೊಂಡಿತ್ತು.( ಅದನ್ನು ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ ಅಂತ ಮೊಟ್ಟಮೊದಲು ನಿರೂಪಿಸಿದವರು ಸಾವರ್ಕರ್). ಅಂತಹ ಸಂದರ್ಭದಲ್ಲಿ ಭಗವಂತನ ಅವತಾರ ಎಂದೆನಿಸಿಕೊಂಡಿದ್ದ ರಾಮಕೃಷ್ಣ ಪರಮಹಂಸರ ಅಮೃತ ಹಸ್ತದಿಂದ ರಾಷ್ಟ್ರ ನಿರ್ಮಾಣಕ್ಕಾಗಿ ಕಡೆಯಲ್ಪಟ್ಟ ಶಿಲ್ಪ ಅದು. ಅದು ಇಡೀ ದೇಶದಲ್ಲಿ ಬಿರುಗಾಳಿಯಂತೆ ಸಂಚರಿಸಿ ಧರ್ಮ, ಸಂಸ್ಕೃತಿ, ಕ್ಷಾತ್ರವನ್ನು ಬಡಿದೆಬ್ಬಿಸಿತು.

                      ಭಾರತೀಯರ ಸರಳತೆಯನ್ನು, ವ್ಯಕ್ತಿಯನ್ನು ಜಗತ್ತಿನೊಂದಿಗೆ ಸಮರಸಗೊಳಿಸಬಲ್ಲ ಇಲ್ಲಿಯ ಸಂಸ್ಕಾರವನ್ನು ಜಗತ್ತಿನಾದ್ಯಂತ ಸಾಧ್ಯಂತವಾಗಿ ವಿವರಿಸಿದರು. ವಿಶ್ವವಿರಾಟವನ್ನು ವ್ಯಾಪಿಸಬಲ್ಲ ಹಿಂದೂಗಳ ಮುಗ್ಧ ಪ್ರೀತಿಯನ್ನು ಮೆಚ್ಚಿದರು. ಬೆಂಕಿಯನ್ನು ಕೆಣಕಿದೊಡನೆ ಭಗ್ಗನೆ ಉರಿಯುವ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಬೆರಗಾಗುವಂತೆ ನೆನಪಿಸಿದರು. ನೋವಿಗೆ ಮರುಗುವ ಕಣ್ಣ ನೀರ ದೃಷ್ಟಿಯನ್ನು ಶುಭ್ರಗೊಳಿಸಿ, ಮನುಷ್ಯ ಮರಕಲ್ಲುಗಳನ್ನು ಕಾಣುವ ನೋಟದ ದ್ವೈತ ಭಾವವನ್ನು ಮರೆಸುವ ಪಾರಮಾರ್ಥದ ಸಿದ್ಧಿಯನ್ನು ಪ್ರಪಂಚದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ ವೇದಾಂತಿ ಅವರು.

                           "Who dares misery love and hugs the form of death, to him the mother comes" ಎಂಬ ಅವರ ಆವಾಹನ ಮಂತ್ರಕ್ಕೆ ಸಾವಿರಾರು ಯುವಕರು ಓಗೊಟ್ಟರು. ವಿನಂತಿ ಸರಣಿಗಳಿಂದಾಗಲಿ ಅಹಿಂಸಾದಿ ಮಾರ್ಗಗಳಿಂದಾಗಲಿ ಸ್ವಾತಂತ್ರ್ಯ ಸಾಧನೆ ಆಗದೆಂದು ಅವರು ಅಸಂದಿಗ್ಧವಾಗಿ ಸಾರಿದ್ದರು.
" ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು" ಎಂದು ಜನರಿಗೆ ಕರೆ ಕೊಟ್ಟಿದ್ದರು.

                   ಭಾರತದ ರಾಷ್ಟ್ರೀಯತೆಗೆ ಸಕ್ರಿಯತೆ ತುಂಬಿ ಭಾರತೀಯರಲ್ಲಿ ರಾಜ್ಯಕ್ಕೆ ಅಧಿಸ್ಠಾನವಾಗಿ ಸಾಮುದಾಯಿಕ ಭಾವನೆಯನ್ನು ಉಂಟು ಮಾಡಿದ ಅವರು ಕಾಂಗ್ರೆಸ್ಸಿನ ಮನವಿ ರಾಶಿಗಳಿಂದ ಪ್ರಯೋಜನವಾಗದೆಂದು ಬಲವಾಗಿ ನಂಬಿದ್ದರು. ಮದ್ರಾಸಿನಲ್ಲಿ ಮಾಡಿದ ಭಾಷಣದಲ್ಲಿ  "Heaven is nearer through football than through Gita. We want men of strong biceps " ಎಂದು ಕಂಠೋಕ್ತವಾಗಿ ಸಾರಿದ್ದರು.

                  ಸ್ವಯಂ ವಿವೇಕಾನಂದರೇ ಹೇಮಚಂದ್ರ ಘೋಷ್ ಮತ್ತು ಸಂಗಡಿಗರ ಮೂಲಕ ೧೯೦೨ರಲ್ಲಿ ಕ್ರಾಂತಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಮುಂದೆ ಬ್ರಹ್ಮಬಾಂಧವ ಉಪಧ್ಯಾಯ ಅದಕ್ಕೆ ಮುಕ್ತಿಸಂಘ ಎಂದು ಹೆಸರಿಟ್ಟು ಮುನ್ನಡೆಸಿದರು.
ವಿವೇಕಾನಂದರ ಕುರಿತು ಫ್ರಾನ್ಸಿನ ಅಗ್ರಮಾನ್ಯ ಚಿಂತಕ ರೋಮಾರೋಲಾ "The neo-Vedantism of swami vivekananda put new life in themoribund Indian nationalism" ಎಂದು ವಿವೇಕಾನಂದರಿಂದ ದೊರೆತ ಚೇತರಿಕೆಯನ್ನು ಬಣ್ಣಿಸಿದ್ದಾನೆ.

                   ಅವರ ದೃಷ್ಟಿಯಲ್ಲಿ ಭಾರತೀಯ ಹೇಗಿರಬೇಕು?
" ನಾನು ಹಲವು ವರ್ಷಗಳಿಂದ ಪಶ್ಚಿಮ ದೇಶಗಳಲ್ಲಿ ಇದ್ದುದರಿಂದ ನನಗೆ ಗೊತ್ತು. ಅಲ್ಲಿಯ ದೃಷ್ಟಿ ಬೇರೆ. ನಡೆಯುವ ದಾರಿ ಬೇರೆ. ಅದನ್ನು ಕುರುಡರಂತೆ ಅನುಸರಿಸಿದರೆ ನಮ್ಮ ದಾರಿಯು ತಪ್ಪುತ್ತದೆ. ನಾವು ಆದರ್ಶರೆನ್ನುವ ಸೀತೆ, ಸಾವಿತ್ರಿ, ದಮಯಂತಿಯರು ತ್ಯಾಗದ ಮೂರ್ತಿಗಳು. ನಾವು ಪೂಜಿಸುವ ದೇವರು ಕೂಡಾ ತ್ಯಾಗದ ಸಂಕೇತಗಳೇ. ಸಂನ್ಯಾಸಿಯಂತಿದ್ದ ಶಂಕರನೇ ನಮ್ಮ ಆರಾಧ್ಯದೈವ" ಇದು ಇಂದಿನ ಪಾಶ್ಚಾತ್ಯ ಮಾನಸಿಕತಾವಾದಿಗಳು ತಿಳಿಯಬೇಕಾದ ಅಪ್ಪಟ ಸತ್ಯವಲ್ಲವೇ?

                       ಮುಸ್ಲಿಂ ಮಾನಸಿಕತೆಯ ಒಳಹೊರಗುಗಳ ಬಗ್ಗೆ ಸ್ಪಷ್ಟ ವೈಚಾರಿಕ ವ್ಯಗ್ರತೆಯು ಅವರ ಮಾತುಗಳಲ್ಲಿ ಕಂಡುಬರುತ್ತಿತ್ತು. "ಮುಸಲ್ಮಾನರು ಯೆಹೂದಿಗಳನ್ನು ಮತ್ತು ಕ್ರೈಸ್ತರನ್ನು ದ್ವೇಷಿಸುವುದು ಯಾಕೆಂದರೆ ಅವರು ತಮಗಿಂತಲೂ ಕ್ಷುಲ್ಲಕವಾದ ನಂಬಿಕೆಗಳನ್ನು ಹೊಂದಿರುವ ಜನರೆಂದು. ಆದರೆ ಹಿಂದೂಗಳ ಬಗೆಗೆ ಅವರದ್ದು ತೀವ್ರವಾದ ದ್ವೇಷ ಭಾವನೆ. ಹಿಂದುಗಳು ವಿಗ್ರಹಗಳನ್ನು ಪೂಜಿಸುವುದರಿಂದ ಅವರು ಕಾಫಿರ ಜನರು. ಅಂತಹವರು ಬದುಕಲು ಯೋಗ್ಯರಲ್ಲ. ಅವರನ್ನು ನಿರ್ನಾಮ ಮಾಡುವುದೇ ನಮ್ಮ ಗುರಿ-ಇದು ಮುಸ್ಲಿಮರ ಮನಸ್ಸು" ಎಂಬುದು ಅವರ ವಿಶ್ಲೇಷಣೆ.


"ದೇವದೂತ ಗ್ರೇಬ್ರಿಯಲ್ ಒಂದು ದಿನ ಗುಹೆಯಲ್ಲಿ ತನ್ನ ಬಳಿ ಬಂದುದಾಗಿಯೂ, ದಿವ್ಯಾಶ್ವವಾದ ಹರಾಕ್ ಮೇಲೆ ತನ್ನನ್ನು ಕರೆದೊಯ್ದಿದ್ದಾಗಿಯೂ, ತಾನು ಸ್ವರ್ಗಕ್ಕೆ ಭೇಟಿ ನೀಡಿದ್ದಾಗಿಯೂ ಮಹಮ್ಮದ್ ತಿಳಿಸಿದ್ದಾರೆ.ನೀವು ಕುರಾನ್ ಓದಿದರೆ ಅಚ್ಚರಿಯ ಸತ್ಯಗಳು ಅಂಧವಿಶ್ವಾಸದೊಂದಿಗೆ ಮಿಶ್ರಣವಾದುದನ್ನ ಕಾಣುವಿರಿ. ನೀವದನ್ನು ಹೇಗೆ ವಿವರಿಸುತ್ತೀರಿ? ಅವರು ಪ್ರೇರಣೆ ಪಡೆದಿದ್ದಲ್ಲ. ಆಕಸ್ಮಿಕವಾಗಿ ಸಿಕ್ಕಿದ್ದು, ಅವರು ತರಬೇತಿ ಪಡೆದ ಯೋಗಿಯಲ್ಲ.ತಾವು ಮಾಡುತ್ತಿರುವ ಬಗ್ಗೆ ಅವರಿಗೆ ವಿವರಣೆ ತಿಳಿದಿರಲಿಲ್ಲ. ಮಹಮ್ಮದ್ ರಿಂದ ಜಗತ್ತಿಗೆ ಆದ ಒಳ್ಳೆಯದು ಮತ್ತು ಮತಾಂಧತೆಯಿಂದ ಆದ ಮಹಾ ಕೆಡುಕುಗಳ ಬಗ್ಗೆ ಚಿಂತಿಸಿ. ಅವರ ಭೋದನೆಗಳಿಂದ ಲಕ್ಷಾಂತರ ಜನರು ಸಾಮೂಹಿಕ ಕಗ್ಗೊಲೆಯಾದುದರ ಬಗ್ಗೆ ಮಕ್ಕಳಿಂದ ವಿಯೋಗ ಹೊಂದಿದ ತಾಯಂದಿರು, ಅನಾಥರಾದ ಮಕ್ಕಳು,ಅತ್ಯಾಚಾರಕ್ಕೊಳಗಾದ ಮಾನಿನಿಯರು, ಇಡೀ ದೇಶಗಳು ನಾಶವಾದ ಬಗ್ಗೆ ಯೋಚಿಸಿ. ಎಲ್ಲ ಕಾಲ ಮತ್ತು ದೇಶಗಳಲ್ಲಿ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳು ಒಬ್ಬರಿಗಿಂತ ಒಬ್ಬರು ಭಿನ್ನರಲ್ಲ. ನೈಜ ಧರ್ಮವಿರುವಲ್ಲಿ ದೈವಿಕ ಜ್ಯೋತಿ ವಿಶಾಲ ಮನಸ್ಸನ್ನು ಕಾಣುತ್ತೇವೆ. ಇದರಿಂದ ಎಲ್ಲೆಡೆ ಬೆಳಕು ಕಾಣಲು ಸಾಧ್ಯವಾಗುತ್ತದೆ. ಈ ವಿಷಯದಲ್ಲಿ ಮುಸ್ಲಿಮರು ಅಪಕ್ವರು ಮತ್ತು ಭಿನ್ನ ವರ್ಗದವರು. ಒಬ್ಬನೇ ದೇವರು ಅದಕ್ಕಿಂತ ಮೀರಿದ್ದು ಕೆಟ್ಟದ್ದು ಮತ್ತದನ್ನು ನಂಬುವವರನ್ನು ನಾಶ ಮಾಡಬೇಕು ಬೇರೆಯವರ ಧರ್ಮಗ್ರಂಥಗಳನ್ನು ಸುಡಬೇಕು. ಫೆಸಿಫಿಕ್ ನಿಂದ ಅಟ್ಲಾಂಟದವರೆಗೆ 500 ವರ್ಷಗಳ ಕಾಲ ರಕ್ತದ ಕೋಡಿಯೇ ಹರಿಯಿತು ಅದು ಮಹಮ್ಮದೀಯರ ಧರ್ಮ!" ಎಂದಿದ್ದಾರೆ ಅವರು.

                     ಕೊಲಂಬೋದಿಂದ ಅಲ್ಮೋರಾದವರೆಗೆ ಉಪನ್ಯಾಸ ಮಾಲೆಯಲ್ಲಿ ವಿವೇಕಾನಂದರು ಯಾವ ಶಕ್ತಿಪಂಥದ ಪ್ರತಿಪಾದನೆ ಮಾಡಿದ್ದರೋ ಅದು ೧೯೦೫ರ ಸ್ವದೇಶೀ ಆಂದೋಲನದಲ್ಲಿ ಮೂರ್ತರೂಪದಲ್ಲಿ ಪ್ರಕಟಗೊಂಡಿತು. ಶಿಷ್ಯೆ ಭಗಿನಿ ನಿವೇದಿತಾರನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು. "ಭಗವತಿ ಬೇಡುತ್ತಿರುವುದು ರಾಷ್ಟ್ರೀಯತೆಯ ನೈವೇದ್ಯವನ್ನೇ ಹೊರತು ಸೌಮ್ಯ ವಿಧೇಯತೆಯನ್ನಲ್ಲ. ನನಗೆ ಧೃಢಕಾಯರಾದ, ಸಿಂಹದ ಗುಂಡಿಗೆಯುಳ್ಳ, ಮಿಂಚಿನೋಪಾದಿಯಲ್ಲಿ ಸಂಚರಿಸಬಲ್ಲ, ತನು ಮತ್ತು ಮನದಿಂದ ತರುಣರಾದ ೧೦೦ ಮಂದಿ ಯುವಕರನ್ನು ಕೊಡಿ. ಬಲಿಷ್ಠ ಭಾರತವನ್ನು ನಿರ್ಮಿಸಬಲ್ಲೆ. ಏಳಿ ಎದ್ದೇಳಿ" ಎಂದು ಭಾರತೀಯರ ಅಂತಃಸತ್ವವನ್ನು ಬಡಿದೆಬ್ಬಿಸಿದ ಆ ಸೂರ್ಯ ೩೯ರ ಎಳೇ ಪ್ರಾಯದಲ್ಲಿಯೇ ಅಸ್ತಮಿಸಿದ್ದು ಭಾರತದ ದೌರ್ಭಾಗ್ಯವಲ್ಲವೇ?

               ಆವರ ಕನಸು ನನಸು ಮಾಡುವಲ್ಲಿ ನಾವು ಪ್ರಯತ್ನ ಮಾಡಲೇ ಇಲ್ಲ... ೧೫೦ ಅಲ್ಲ ಸಾವಿರವಾದರೂ ಇದೇ ಮನಸ್ಥಿತಿ ಇದ್ದರೆ ಭಾರತದ ಸ್ಥಿತಿ ಅಧೋಗತಿ...ಎದ್ದೇಳು ಅರ್ಜುನ!