ಪುಟಗಳು

ಸೋಮವಾರ, ನವೆಂಬರ್ 5, 2018

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!

ಕ್ರೌಂಚದ ಕೂಗು ಕೇಳಿ ವಲ್ಮೀಕದಿಂದೆದ್ದ ಕೋಗಿಲೆ!


              ತಮವೆಲ್ಲ ಕರಗಿದಂತೆ ಸ್ಪಟಿಕ ಶುಭ್ರ ಜಲದಿ ಕಲರವಗೈಯುತ್ತಾ ಹರಿವ ತಮಸಾ ನದಿ. ಅದರಂತೆಯೇ ತಿಳಿಯಾದ ನಿರ್ಮಲ ಮನಸ್ಸಿನ ಋಷಿಗಳ ದಂಡು. ರಮ್ಯ ಮನೋಹರವಾದ ಆ ಪರಿಸರಕ್ಕೆ ಸರಸವಾಡುತ್ತಿರುವ ಕ್ರೌಂಚ ಜೋಡಿಯ ಶೋಭೆ. ಮಾಯೆಯೊಳಗೆ ಕಾಲ ಸ್ತಬ್ಧವಲ್ಲವಲ್ಲ. ಮನೋಹರವೇ ಹರೋಹರವಾಗುವಂತೆ ಘಟನೆ ನಡೆಯಿತು. ಬೇಡನ ಶರದುರಿಗೆ ಸಿಲುಕಿ ಗಂಡು ಕ್ರೌಂಚ ನೆಲಕ್ಕುರುಳಿತು. ಹೆಣ್ಣು ಕ್ರೌಂಚದ ದುಃಖವನ್ನು ಹೇಳ ತೀರದು. ಅದು ಗಂಡು ಪಕ್ಷಿಯ ಮೇಲೆ ಬಿದ್ದು ಹೊರಳಾಡುತ್ತ ವಿಲಾಪಿಸುತ್ತಿರುವ ದೃಶ್ಯ ಅತ್ಯಂತ ಹೃದಯವಿದ್ರಾವಕವಾಗಿತ್ತು. ಆ ದೃಶ್ಯವನ್ನು ಕಂಡ ಮುನಿಯ ಸಂಕಟ ಕೋಪಕ್ಕೆ ತಿರುಗಿತು. ಕೋಪದ ಭರದಲ್ಲಿ ಶಾಪದ ಧ್ವನಿ ಹೊರಟಿತು.
“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”
“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಶಪಿಸಿದ ತುಸು ಸಮಯದಲ್ಲೇ ಜಿತಕ್ರೋಧನಾಗಿರಬೇಕಾದ ತನ್ನಿಂದ ಶಾಪ ಹೊರಹೊಮ್ಮಿತಲ್ಲ ಎನ್ನುವ ದುಃಖದಲ್ಲಿ ಮುನಿಗೆ ಮತ್ತೆ ಮತ್ತೆ ಆ ಶಾಪ ವಾಕ್ಯ ಜಪವಾಗುತ್ತಿದ್ದಂತೆ ತಿಳುವಳಿಕೆಯೊಂದು ಸ್ಫುಟವಾಯಿತು. ಶಾಪದ ವಾಕ್ಯದಲ್ಲಿ ಅನುಗ್ರಹದ ಅರ್ಥ ಕಾಣಿಸಿತು. ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಕಾಣಿಸಿ ಋಷಿಗೇ ಅಚ್ಚರಿ ಮೂಡಿಸಿತು. ಕ್ರೌಂಚದ ಶೋಕವೇ ಶ್ಲೋಕವಾಯಿತು. 24000 ಶ್ಲೋಕಗಳುಳ್ಳ ರಾಮ ಎನ್ನುವ ಪರಬ್ರಹ್ಮದ ಜೀವನದ ಕಥೆಯಾಯಿತು!

               ವಾಲ್ಮೀಕಿ...ಅಲ್ಲಲ್ಲಾ ಮಹರ್ಷಿ, ಕವಿ ವಾಲ್ಮೀಕಿ! ಸಮಾಜಕ್ಕೆ ಬೇಡದ(ರ)ವನಾಗಿ ದಾರಿಹೋಕರ ರತ್ನಗಳನ್ನು ದೋಚುತ್ತಿದ್ದ ರತ್ನಾಕರ. ಕಾಡಿನಲ್ಲಿ ಮರ ಮರ ನೋಡುತ್ತಾ, ಜನರನ್ನು ದೋಚುತ್ತಾ, ಹೆಂಡತಿ ಮಕ್ಕಳೇ ಸರ್ವಸ್ವವೆಂದುಕೊಂಡಿದ್ದವನಿಗೆ ನಾರದರ ಕೃಪೆಯಿಂದಲೋ, ಸಪ್ತರ್ಷಿಗಳ ಸಂಕಲ್ಪದಿಂದಲೋ ಹೆಂಡತಿ-ಮಕ್ಕಳು ಹೆಚ್ಚೆಂದರೆ ಮಸಣದವರೆಗೆ ಮಾತ್ರ ಬರಬಲ್ಲರೆಂಬ ತಿಳಿವು ಮೂಡಿ ರಾಮ ರಾಮ ಎನುವ ಜಪವು ಜೀವನವಾಯಿತು. ಆ ಮರ ಈ ಮರ ಎಂದು ಧ್ಯಾನಿಸುತ್ತಿದ್ದವ ರಾಮನಾಮದ ಜಪಕ್ಕೆ ತೊಡಗಿದ. ತನ್ನ ವಂಶದ ಮಹತ್ತಿನ, ಸಂಸ್ಕಾರದ, ಅದು ಉದ್ದೇಶಿಸಿದ್ದ ಜೀವನದ ಗುರಿಯ ಅರಿವಾಯಿತು. ಸುತ್ತ ಹುತ್ತ ಬೆಳೆಯಿತು. ಜ್ಞಾನೋದಯವಾಗಿ ವಲ್ಮೀಕದಿಂದ ಹೊರಬಂದವನನ್ನು ಜಗತ್ತು ವಾಲ್ಮೀಕಿಯೆಂದು ಕರೆದು ಗುರುತಿಸಿತು. ಬೇಡದವನೊಬ್ಬ ಉತ್ತಮರ ಸಂಸರ್ಗ, ಸಂಸ್ಕಾರ, ಅಲೌಕಿಕ ಜ್ಞಾನದಿಂದ ಈಗ ಜಗತ್ತಿಗೆ ಬೇಕಾದವನಾಗಿದ್ದ. ಹಾಗಾಗಿಯೇ ಕ್ರೌಂಚದ ಅಳಲು ಅವನನ್ನು ಅಲ್ಲಾಡಿಸಿ ಕವಿಯನ್ನಾಗಿಸಿತು. ಅದು ಬಹುಷಃ ಸಪ್ತರ್ಷಿಗಳ ಸಂಕಲ್ಪವಿರಬೇಕು! ಹೀಗೆ ಭಾರ್ಗವ ವಂಶಜ ಪ್ರಚೇತಸನ ಮಗನಾಗಿ, ಸಮಾಜಕ್ಕೆ ಬೇಡದ(ರ)ವನಾಗಿ, ರಾಮ ನಾಮದ ಬಲದಿಂದ ವಲ್ಮೀಕದಿಂದೆದ್ದು ಕವಿ ವಾಲ್ಮೀಕಿಯಾಗಿ ಇಂದಿಗೂ ಜಗತ್ತಿಗೆ ಬೇಕಾದವನಾದದ್ದೂ ಒಂದು ವಿಶೇಷವೇ!

               ಶಾಪ ಶ್ಲೋಕವಾದದ್ದು ಹೇಗೆ? “ಮಾ” ಎಂದರೆ ಲಕ್ಷ್ಮಿ. ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು(ರಾವಣ) ಕೊಂದೆಯಾದ್ದರಿಂದ ನೀನು(ಶ್ರೀರಾಮ) “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು ಧ್ವನಿತವಾದದ್ದು ಈ ಶ್ಲೋಕದ ಇನ್ನೊಂದು ಅರ್ಥ. “ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” - “ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು, ಅವು ರಹಸ್ಯವೇ ಆದರೂ ನಿನಗೆ ವೇದ್ಯವಾಗಲೀ" ಎಂದು ಬ್ರಹ್ಮ ದೇವನೇ ಅನುಗ್ರಹಿಸಿರಬೇಕು ವಾಲ್ಮೀಕಿಯನ್ನು! ಅದಕ್ಕಾಗಿಯೇ ಪಾತ್ರಗಳ ನಡುವಿನ ಎಲ್ಲಾ ಅಂತರಂಗಿಕ-ಬಹಿರಂಗದ ಸೂಕ್ಷ್ಮವಿಚಾರಗಳೂ ಗೋಚರಿಸಲ್ಪಟ್ಟು ರಾಮಾಯಣ ಮನೆಮನೆಯಲ್ಲಿಯೂ, ಮನಮನದಲ್ಲಿಯೂ ಪ್ರಿಯವಾಯಿತು. ಪ್ರತಿಯೊಂದು ಪಾತ್ರದ ನಗು-ಅಳು, ಸುಖ-ದುಃಖ, ಕೋಪ-ತಾಪ, ಪ್ರೀತಿ-ಸ್ನೇಹ, ದ್ವೇಷ, ಮತ್ಸರ, ಜಗಳ,ತಂಟೆ, ಹುಟ್ಟು-ಸಾವು, ಸಂಕುಚಿತತೆ, ದುರ್ಬೋಧನೆ, ತ್ಯಾಗ - ಬಲಿದಾನ, ಹಿಂಸೆ-ಕ್ರೌರ್ಯ, ಮೋಸ - ವಂಚನೆ, ಶೌರ್ಯ, ಅಧಿಕಾರ-ಅಂತಸ್ತು, ಯುದ್ಧ ಮತ್ತು ಶಾಂತಿ ಹೀಗೆ ಎಲ್ಲವೂ ಪೂರ್ಣರೂಪದಲ್ಲಿ ಮೂಡಿಬಂದಿತು. ಅಲ್ಲಿ ಬರುವ ಪಾತ್ರಗಳ ಉಡುಗೆ -ತೊಡುಗೆ, ನಡೆ-ನುಡಿ, ಘಟನಾವಳಿಗಳೆಲ್ಲವೂ ದಿವ್ಯದೃಷ್ಟಿಗೆ ಹೊಳೆದು ಯಥಾ ರೀತಿಯಲ್ಲಿ ಮೂಡಿಬಂದವು. ಅಲ್ಲದೇ ಇಡೀ ದೇಶದಲ್ಲಿ 'ರಾಮರಾಜ್ಯ' ಎಂಬ ಖ್ಯಾತಿಗೆ ಪಾತ್ರವಾದ ಆಡಳಿತವನ್ನು ಸ್ಥಾಪಿಸಿ ಅಯೋಧ್ಯೆಯನ್ನು ಆಳುತ್ತಿದ್ದ ಶ್ರೀರಾಮನ ಚರಿತ್ರೆಯನ್ನೂ ಪಡಿಮೂಡಿಸಿತು. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡಗಳಿಂದ ಒಡಮೂಡಿದ 24 ಸಾವಿರ ಶ್ಲೋಕಗಳ ಆದಿಕಾವ್ಯವಾಯಿತು. ಮುಂದಿನವರಿಗೆ ಉತ್ತರಕಾಂಡ ಎಂಬ ಏಳನೆ ಕಾಂಡದ ರಚನೆಗೂ ಪ್ರೇರಣೆಯಾಗಿ ಜಗತ್ಪ್ರಸಿದ್ಧವಾಯಿತು. ಇದು ನವರಸಗಳಿಂದ ಕೂಡಿದ ರಮ್ಯ ಮನೋಹರವಾದ, ಮಾನವೀಯತೆಯನ್ನು ಮಿಡಿಯುವ ಮತ್ತು ನೈತಿಕಮೌಲ್ಯಗಳನ್ನು ಪ್ರತಿಷ್ಠಾಪಿಸುವ ಷಜ್ಜ ,ಋಷಭ, ಗಾಂಧಾರ, ಮದ್ಯಮ,ಪಂಚಮ,ಧೈವತ,ನಿಷಾಧಗಳಲ್ಲಿ ಹಾಡಬಹುದಾದ ಮನೋಜ್ಞ ಕಾವ್ಯ. ವಾಗ್ದೇವಿಯೇ ಅವನಲ್ಲಿ ಆವಿರ್ಭವಿಸಿರಬೇಕು! ನಾರದರಿಂದ ಕೇಳಿದ್ದ ರಾಮನ ಕಥೆಯನ್ನು ಕಾವ್ಯವಾಗಿ ಬರೆಯಲು ಕ್ರೌಂಚದ ಅಳಲು ಬೆಳಕಾಯಿತಷ್ಟೇ. ಹಾಗಾಗಿಯೇ ರಾಮಾಯಣವಿಡೀ ಕೇಳಿದ್ದು ಕ್ರೌಂಚದ ದುಃಖವೇ! ರಾಮನ ಯುವರಾಜ್ಯಾಭಿಷೇಕಕ್ಕೆ ಶೃಂಗರಿಸಲ್ಪಟ್ಟ ಅಯೋಧ್ಯೆಯಲ್ಲಿ ತಮಸೆಯ ತಟದ ಮನೋಹರತೆಯಿತ್ತು. ಮಂಥರೆಯೆಂಬ 'ಬೇಡ'ಳ ಕೈಕೆಯೆಂಬ 'ಶರ'ದ ವರದ 'ಉರಿ'ಗೆ ದಶರಥ(ಕ್ರೌಂಚ) ಪುತ್ರವಿಯೋಗದ ದುಃಖಕ್ಕೆ ಈಡಾಗಬೇಕಾಯ್ತು. ದಶರಥನೇನು, ಕೌಸಲ್ಯ-ಸುಮಿತ್ರೆ-ಭರತರಾದಿಯಾಗಿ ಅಯೋಧ್ಯೆಯೇ ಹೆಣ್ಣು ಕ್ರೌಂಚದಂತೆ ರಾಮನಿಂದ ದೂರಾಗಬೇಕಾದ ಸನ್ನಿವೇಶದಲ್ಲಿ ದುಃಖಿಸಿತು. ಲಕ್ಷ್ಮಣನ ಅಗ್ರಜನೆಡೆಗಿನ ಪ್ರೀತಿ, ಕರ್ತವ್ಯ ನಿಷ್ಠೆ ಅವನ ಪತ್ನಿಯಿಂದ ಅವನನ್ನು ದೂರಾಗಿಸಿತು. ರಾವಣನ ಮಾಯಾ ಜಿಂಕೆಯ ಮೋಸ ರಾಮ-ಸೀತೆಯೆಂಬ ಕ್ರೌಂಚ ದಂಪತಿಗಳನ್ನು ದೂರವಾಗಿಸಿತು.

                   ತನ್ನ ಪತ್ನಿಯ ಚಾರಿತ್ರ್ಯಕ್ಕಿಂತಲೂ ಸಿಂಹಾಸನದ ಗೌರವ ಮುಖ್ಯವಾಗಿ ರಾಜಧರ್ಮದ ಪಾಲನೆಗಾಗಿ ಪ್ರಿಯ ಪತ್ನಿಯ ವಿಯೋಗ ಎನ್ನುವ ದುಃಖವನ್ನೂ ಹತ್ತಿಕ್ಕಿ ಪರಿತ್ಯಾಗ ಮಾಡಿದ ರಾಜಾರಾಮ. ರಾಮನ ಆಜ್ಞೆಯಂತೆ ಲಕ್ಷಣನು ತುಂಬು ಗರ್ಭಿಣಿ ಸೀತೆಯನ್ನು ಕಾಡಿನಲ್ಲಿ ವಾಲ್ಮೀಕಿ ಮುನಿಗಳ ಆಶ್ರಮದ ಬಳಿ ಬಿಟ್ಟು ಹೋಗುತ್ತಾನೆ. ಅಶೋಕ ವನವೂ ಅವಳ ಶೋಕವನ್ನು ಶಮನ ಮಾಡಲಿಲ್ಲ; ರಾಮರಾಜ್ಯವೂ! ಆದರೂ ಆಕೆ "ಕರುಣಾಳು ರಾಘವನೊಳು ತಪ್ಪಿಲ್ಲ" ಎಂದು ದುಃಖ ನುಂಗಿಕೊಂಡು ಮಹಾತ್ಮೆಯಾದಳು. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಕ್ರೌಂಚದ ಕಣ್ಣೀರಿನ ಕಥೆ ಬರೆದವನಿಗೆ ತನ್ನ ನಾಯಕಿಯ ಕಣ್ಣೀರ ಕಥೆ ಬರೆಯುವಾಗ ಕೈಕಟ್ಟಿರಬೇಕು! ಶೋಕವನ್ನೇ ಶ್ಲೋಕವನ್ನಾಗಿಸಿದವನಿಗೆ ಶೋಕತಪ್ತಳಾದ ತನ್ನ ಕಥಾ ನಾಯಕಿಯನ್ನು ಪ್ರತ್ಯಕ್ಷವಾಗಿ ಕಾಣುವಾಗ ಎದೆ ಬಿರಿಯದಿದ್ದೀತೇ? ಮಹರ್ಷಿಗಳ ಆಶ್ರಮದಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ಅವರು ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ಶ್ರೀರಾಮನ ಅಶ್ವಮೇಧ ಯಾಗಕ್ಕೆ ಆಮಂತ್ರಿತರಾದ ವಾಲ್ಮೀಕಿ ಮಹರ್ಷಿಗಳು ಲವ-ಕುಶರನ್ನು ಕರೆದುಕೊಂಡು ಯಾಗ ಮಂಟಪದಲ್ಲಿ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ಆ ಗಾನದ ಮಾಧುರ್ಯಕ್ಕೆ ಸೋತ ಶ್ರೀರಾಮ ಸಿಂಹಾಸನದಿಂದೆದ್ದು ಮೆಲ್ಲನೆ ಬಂದು ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಕುಳಿತನಂತೆ. ವಸಿಷ್ಠರು “ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆಯಾ” ಎಂದು ಕೇಳಲು, ಶ್ರೀರಾಮ “ನನ್ನ ಕಥೆ ಎಂದಲ್ಲ, ಇದು  ಸೀತೆಯ ಕಥೆ ಎನ್ನುವ ಕಾರಣಕ್ಕೆ ನಾನು ಮೆಚ್ಚುಗೆಯಿಂದ ಕೇಳುತ್ತಿರುವುದು” ಎಂದುತ್ತರಿಸುತ್ತಾನೆ. ಕ್ರೌಂಚದ ಅಳಲು ರಾಮನನ್ನೂ ಸಂಕಟದಲ್ಲಿ ನೂಕದೇ ಬಿಡಲಿಲ್ಲ! ಅದು ವಾಲ್ಮೀಕಿಯ ಪ್ರತಿಭೆಗೆ ಸಿಕ್ಕ ಪ್ರಶಸ್ತಿ!

                    ದುಃಖ...ಒಂದು ಸನ್ನಿವೇಶದಲ್ಲಿ ನೀವು ಭಾಗಿಯಾದಾಗಲೇ ಬರಬೇಕೆಂದೇನಿಲ್ಲ. ಆಪ್ತರೊಬ್ಬರಿಗೆ ಅನಾನುಕೂಲ ಪರಿಸ್ಥಿತಿ ತಲೆದೋರಿದಾಗ ಉಂಟಾಗಬೇಕೆಂದೂ ಇಲ್ಲ. ಸನ್ನಿವೇಶ ಯಾವುದೇ ಆಗಿರಲಿ, ಯಾವ ಕಾಲದ್ದೇ ಆಗಿರಲಿ, ಅದರ ಒಳಹೊಕ್ಕಾಗ ಭಾವ ಮೀಟಿ ತಂತಾನೆ ಅದು ಹೊರ ಹೊಮ್ಮುವುದು. ಅದು ರಾಮನ ವನ ಗಮನದ ಸನ್ನಿವೇಶವಾದ ಪಿತೃವಿಯೋಗ ಇರಬಹುದು, ಸೀತಾ ಪರಿತ್ಯಾಗ ಅಥವಾ ಪತ್ನಿವಿಯೋಗ ಇರಬಹುದು. ನಿರ್ಯಾಣದ ಸಮಯದಲ್ಲಿ ಅನುಜ ಲಕ್ಷ್ಮಣಗೆ ನೀಡುವ ಆದೇಶದಿಂದಾಗುವ ಭ್ರಾತೃ ವಿಯೋಗವೇ ಇರಬಹುದು! ರಾಮನ ಕಾಲದಲ್ಲಿ, ಅವನ ಪ್ರಜೆಯಾಗಿಯಲ್ಲ, ರಾಮನನ್ನು ಆದರ್ಶವಾಗಿ ಕಾಣುವಾಗಲೇ ಅಥವಾ ಅದಕ್ಕಿಂತಲೂ ರಾಮನನ್ನು ಒಂದು ಕಥಾ ಪಾತ್ರವಾಗಿ ಈ ಮೇಲಿನ ಸನ್ನಿವೇಶಗಳಲ್ಲಿ ಕಾಣುವಾಗ ಉಂಟಾಗುವ ದುಃಖವಿದೆಯಲ್ಲ ಅದೇನು ಸಾಮಾನ್ಯದ್ದೇ! ಈ ಘಟನೆಗೆ ಕಾವ್ಯರೂಪ ಕೊಡುವಾಗ ವಾಲ್ಮೀಕಿ ಅನುಭವಿಸಿದ ದುಃಖದ ಪರಿ ಎಂತಿರಬಹುದು! ಅದನ್ನು ವಾಲ್ಮೀಕಿ ಕ್ರೌಂಚದ ಕೂಗಿನಲ್ಲೇ ಕಂಡ! ಈ ಎಲ್ಲಾ ಸಂದರ್ಭಗಳಲ್ಲಿ ರಾಮ ಅನುಭವಿಸುವ ದುಃಖ ... ಹೇಳಲಸದಳ! ಸೀತೆಯ ದುಃಖವನ್ನು ಬರೆದವರಿದ್ದಾರೆ. ಊರ್ಮಿಳೆಯ ಬವಣೆಯನ್ನು ವಿವರಿಸಿದವರಿದ್ದಾರೆ. ಅಹಲ್ಯೆಯ ಪರವಾಗಿ ಕಣ್ಣೀರು ಸುರಿಸಿದವರಿದ್ದಾರೆ! ಆದರೆ ರಾಮನ ದುಃಖವನ್ನು ಕಂಡವರಾರು? ಆ ಎಲ್ಲಾ ಕಾಲದಲ್ಲೂ ಆತ ದುಃಖವನ್ನು ನುಂಗಿ ಸ್ಥಿತಪ್ರಜ್ಞನಾಗಿಯೇ ಉಳಿದುಬಿಟ್ಟ! ಕೊನೆಗೆ ಕಾಲನೇ ಬಂದು ಕರೆದಾಗಲೂ! ಹೌದು, ರಾಮ ದೇವರಾದುದು ಸುಮ್ಮನೆ ಅಲ್ಲ! ಅವನನ್ನು ದೇವರಾಗಿಸಿದ್ದು, ಮರ್ಯಾದಾ ಪುರುಷೋತ್ತಮನಾಗಿಸಿದ್ದು ವಾಲ್ಮೀಕಿಯಲ್ಲಿ ಸ್ಫುರಿಸಿದ ಆದಿ ಕಾವ್ಯವೇ!

                    ವಾಲ್ಮೀಕಿ ರಾಮಾಯಣ ಜಗದ ಜನರ ಜೀವನವನ್ನು ಬದಲಿಸಿದ ಮಹಾ ಕಾವ್ಯವಾಗಿದೆ. ರಾಮಾಯಣದಲ್ಲಿ ಬರುವ ಒಂದೊಂದು ಸನ್ನಿವೇಶಗಳೂ ಓದುಗರ ವಿವೇಕ, ಬುದ್ಧಿ, ಮನಸ್ಸು, ಕ್ರಿಯೆ, ಕರ್ಮಗಳನ್ನು ಸೂಕ್ತ ರೀತಿಯಲ್ಲಿ ನಡೆಸಲು ದಾರಿ ತೋರಿಸುತ್ತವೆ. ಬ್ರಹ್ಮನೆಂದಂತೆ ಅದರ ಕೀರ್ತಿ ದಶದಿಕ್ಕುಗಳಿಗೂ ಹಬ್ಬಿತು. ಅನೇಕ ಕವಿಗಳಿಗೆ ಸ್ಪೂರ್ತಿಯಾಯಿತು. ಅನೇಕ ದೇಶ-ಭಾಷೆಗಳಲ್ಲಿ ಅದು ರಚಿತವಾಯಿತು. ರಾಮಾಯಣದ ಭಾರಕ್ಕೆ ಫಣಿರಾಯನೇ ಬಳಲಿದನಂತೆ! ಭಾರತದ ಮೂಲೆಮೂಲೆ ಇಂದಿಗೂ ರಾಮರಾಮ ಎಂದು ಜಪಿಸುತ್ತಿದ್ದರೆ, ಥಾಯ್ಲೆಂಡಿನ ಅರಸರಿಂದಿಗೂ ರಾಮ ಎಂದೇ ಕರೆಯಲ್ಪಡುತ್ತಿದ್ದರೆ, ಮಲೇಷ್ಯಾದ ರಾಷ್ಟ್ರಾಧ್ಯಕ್ಷರು ಶ್ರೀರಾಮನ ಪಾದುಕೆಯ ಧೂಳಿನ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವಿಕರಿಸುತ್ತಿದ್ದರೆ, ದೇಶದೇಶಗಳಲ್ಲಿ ರಾಮಾಯಣ ಪ್ರತಿಧ್ವನಿಸುತ್ತಿದ್ದರೆ ಅದಕ್ಕೆ ವಾಲ್ಮೀಕಿ ರಚಿಸಿದ ಧರ್ಮ ಮಾರ್ಗದಲ್ಲಿ ನಡೆವ, ಸಾಮಾಜೀಕ ಸದ್ಗುಣಗಳನ್ನು ಪ್ರತಿಪಾದಿಸುವ ಜ್ಞಾನ ಜ್ಯೋತಿ ರಾಮಾಯಣ ಮಹಾಕಾವ್ಯವೇ ಕಾರಣ. ಇಂತಹ ಮನೋಹರವಾದ, ಪವಿತ್ರವಾದ ಹಾಗೂ ಶ್ರೇಷ್ಠವಾದ ಮಹಾ ಕಾವ್ಯವನ್ನು ರಚಿಸಿದ ವಾಲ್ಮೀಕಿ ಎಂಬ ಕೋಗಿಲೆಗೆ ವಂದಿಸುವುದು ಜಗದ ಜೀವಿಗಳ ಕರ್ತವ್ಯ.
ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||

ಸೋಮವಾರ, ಅಕ್ಟೋಬರ್ 8, 2018

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ

               ಸಿರಿ ಸಂಪತ್ತಿನ ಶ್ರೀಮಂತಿಕೆಯ ಸಮುದ್ರಕ್ಕೆ ದ್ವಾರವಾಗಿ ಜಗತ್ತಿನ ಕಣ್ಣುಕುಕ್ಕುತ್ತಿತ್ತು ದ್ವಾರಸಮುದ್ರ. ಹುಲಿಯನ್ನು ಬರಿಗೈಯಲ್ಲಿ ಕೊಂದವನಿಂದ "ಸುದತ್ತ" ಆಶೀರ್ವಾದದೊಂದಿಗೆ ಕಟ್ಟಲ್ಪಟ್ಟ ಕರ್ಮ ಕ್ಷಾತ್ರ ತೇಜಸ್ಸಿನ ಮೂಲದಿಂದ ಎದ್ದು ಬಂದ ಹೊಯ್ಸಳರ ರಾಜಧಾನಿ. ಇಂತಹ ಭವ್ಯ ಸಾಮ್ರಾಜ್ಯದ ಮೇಲೆ ಅಲ್ಲಾವುದ್ದೀನ್ ಖಿಲ್ಜಿಯ ತೀಟೆಗೋಸ್ಕರ ಮತಾಂತರನಾಗಿದ್ದ ಒಂದು ಕಾಲದ ಬ್ರಾಹ್ಮಣ ಮಲ್ಲಿಕಾಫರನ ಕಣ್ಣು ಬಿತ್ತು. ಹಿಂದೂ ಧರ್ಮದ ಅಂತಃಸತ್ವ ಇರುವುದೆಲ್ಲಿ ಎನ್ನುವುದನ್ನು ಒಂದು ಕಾಲದ ಹಿಂದೂವಾಗಿದ್ದ ಖಿಲ್ಜಿಯ ಆ ಪ್ರಿಯಕರನಿಗೆ ಹೇಳಿಕೊಡಬೇಕಾಗಿರಲಿಲ್ಲ. ಪಾಂಡ್ಯ್ರರ ನಡುವಿನ ತಿಕ್ಕಾಟಕ್ಕೆ ತಾರ್ಕಿಕ ಅಂತ್ಯ ಹಾಡಲು ಹೊಯ್ಸಳ ನರೇಶ ವೀರ ಬಲ್ಲಾಳ ತೆರಳಿದ್ದ ಸಮಯವನ್ನೇ ಉಪಯೋಗಿಸಿಕೊಂಡ ಈ ಹಿಂದೂ ದ್ವೇಷಿ ದ್ವಾರಸಮುದ್ರದ ಮೇಲೆ ದಂಡೆತ್ತಿ ಬಂದ . ಹಗಲಿಡೀ ಉಪವಾಸವಿದ್ದು ರಾತ್ರಿ ಮುಕ್ಕುವ ಪವಿತ್ರ ರಂಜಾನಿನ ಆ ತಿಂಗಳು ಖಿಲ್ಜಿಯ ಸೇನೆಯ ಮುಸಲರಿಗೆ ಗಾಜಿ ಪಟ್ಟದ ಸ್ಪರ್ದೆಯ ಕಣವಾಯಿತು. ವಿಗ್ರಹಗಳು ಮುರಿದು ಬಿದ್ದವು; ರುಂಡಗಳು ಉರುಳಿದವು; ಮಾನಿಯರ ಶೀಲ ಹರಣವಾಯಿತು; ಸಂಪತ್ತು ಸೂರೆಗೊಂಡಿತು; ರಾಜನಿಲ್ಲದ ಸಾಮ್ರಾಜ್ಯ ಸರ್ವನಾಶಗೊಂಡು ಹಳೆಯ ಬೀಡಾಯಿತು! ಮುಮ್ಮಡಿ ಬಲ್ಲಾಳ ರಾಜಧಾನಿಗೆ ದೌಢಾಯಿಸಿದಾಗ ಕಾಲ ಮಿಂಚಿತ್ತು. ಮತಾಂತರಕ್ಕೆ ಒಪ್ಪದ ಆತ  ಅನಿವಾರ್ಯವಾಗಿ ತನ್ನ ಸೇನೆಯನ್ನು ಮಲ್ಲಿಕಾಫರನಿಗೆ ಪಾಂಡ್ಯರನ್ನು ಗೆಲ್ಲುವ ಸಲುವಾಗಿ ಕಳುಹಿಸಿಕೊಡಬೇಕಾದ, ಮುಸಲ್ಮಾನ ಸೈನ್ಯವನ್ನು ತನ್ನ ರಾಜ್ಯದಲ್ಲಿರಿಸಿ ಪೋಷಿಸಬೇಕಾದ ಷರತ್ತಿಗೆ ಒಪ್ಪಬೇಕಾಯಿತು. ಆ ಸೈನ್ಯದ ಬಲದಿಂದ ಮಲ್ಲಿಕಾಫರ ಪಾಂಡ್ಯರನ್ನು ಗೆದ್ದು ಲೂಟಿಗೈದು ಅಪಾರ ಸಂಪತ್ತಿನೊಂದಿಗೆ ದೆಹಲಿಗೆ ತೆರಳಿದ.

                 ಇತ್ತ ಬಲ್ಲಾಳನ ಮನಸ್ಸು ಮುರಿದಿತ್ತು. ಯಾವ ಪಾಂಡ್ಯ ರಾಜ್ಯದಲ್ಲಿ ಸ್ಥಿರತೆಯನ್ನು ತರಲು ಸಹಾಯಕ್ಕಾಗಿ ಆತ ತೆರಳಿದ್ದನೋ ಅಂತಹ ಪಾಂಡ್ಯಸೇನೆಯನ್ನು ತರಿಯಲು ತನ್ನದೇ ಸೇನೆ ಸಹಾಯ ಮಾಡಬೇಕಾದ ಕಾಲದ ಚೋದ್ಯವನ್ನು ಕಂಡು ಅವನ ಎದೆ ಬಿರಿದಿತ್ತು. ಅವನಿಗೀಗ ತನ್ನ ಸಾಮ್ರಾಜ್ಯ ಬೀಜಾರೋಪವಾಗಿದ್ದುದರ ಉದ್ದೇಶ ನೆನಪಾಯಿತು. ಅದರ ಉದ್ದೇಶಕ್ಕಾಗಿ ಅಕ್ಕಪಕ್ಕದ ಹಿಂದೂರಾಜರುಗಳನ್ನು ಒಗ್ಗೂಡಿಸಲಾರಂಭಿಸಿದ. ಬಗ್ಗದವರನ್ನು ಬಡಿದು ತನ್ನ ಪಾಳಯಕ್ಕೆ ಸೇರಿಸಿಕೊಂಡ. ಪಾಂಡ್ಯರನ್ನು, ಕಾಕತೀಯರನ್ನು ಬಗ್ಗು ಬಡಿದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ತನ್ನ ರಾಜ್ಯದಲ್ಲಿದ್ದ ಮುಸಲ್ಮಾನ ಸೇನೆಯನ್ನು ಒದ್ದು ಹೊರಹಾಕಿದ. ಮಧುರೈಯಲ್ಲಿ ಬೀಡುಬಿಟ್ಟು ನಿತ್ಯ ಕೊಳ್ಳೆಹೊಡೆಯುತ್ತಿದ್ದ, ಹಿಂದೂಗಳ ನರಮೇಧಗೈಯುತ್ತಿದ್ದ ಸುಲ್ತಾನರ ಪಾರುಪತ್ಯವನ್ನು ಕೊನೆಗಾಣಿಸಲು ಸೈನ್ಯ ಸಂಘಟಿಸಿ, ರಾಜ್ಯದ ಮೂರು ಮೂಲೆಗಳಲ್ಲಿ ರಾಜಧಾನಿಯನ್ನು ನಿರ್ಮಿಸಿದ. ಅದರಲ್ಲೊಂದೇ ತಿರುವಣ್ಣಾಮಲೈ. ಭೂಮಂಡಲದಲ್ಲೇ ಅತ್ಯಂತ ಪ್ರಶಾಂತವಾದ ಈ ಜಾಗ ಪದೇ ಪದೇ ಖಿಲ್ಜಿಯ ಸೈನ್ಯದಿಂದ ದಾಳಿಗೊಳಗಾಗುತ್ತಿದ್ದ ಹೊಯ್ಸಳ ನರೇಶನಿಗೆ ತನ್ನ ರಾಜಧಾನಿಯಾಗಲು ಪ್ರಶಸ್ತವೆನಿಸುದುದರಲ್ಲಿ ಆಶ್ಚರ್ಯವೇನಿಲ್ಲ. ಇದೇ ಜಾಗ ಈಗ ಮಧುರೈ ಸುಲ್ತಾನರಿಗೆ ತಡೆಗೋಡೆಯಾಯಿತು. ಹಕ್ಕಬುಕ್ಕರನ್ನು ಆನೆಗೊಂದಿಯ ದಳಪತಿಗಳನ್ನಾಗಿಸಲು ವೇದಿಕೆಯಾಯಿತು. ತಮಿಳುನಾಡಿನಲ್ಲಿ ಬೃಹತ್ ಸೈನ್ಯ ಕಟ್ಟಲು ಬಲ್ಲಾಳನಿಗೆ ಸ್ಪೂರ್ತಿತಾಣವಾಯಿತು. ಮಧುರೈ ಸುಲ್ತಾನರನ್ನು ಬಗ್ಗು ಬಡಿಯಲು ನೆರವಾಯಿತು. ಹಿಂದೂ ಸಹಜ ಭೋಳೆ ಸ್ವಭಾವಕ್ಕೆ ತುತ್ತಾಗಿ, ಸೋತ ಸುಲ್ತಾನನಿಗೆ ಕ್ಷಮೆಕೊಟ್ಟು ಅವನ ಮೋಸದ ಹೂಟಕ್ಕೆ ಬಲಿಯಾದರೂ ಜಗತ್ತಿನ ಭವ್ಯ, ಬಲಿಷ್ಟ ಸಾಮ್ರಾಜ್ಯ ವಿಜಯನಗರಕ್ಕೆ ಸ್ಪೂರ್ತಿಯಾದ ವೀರ ಬಲ್ಲಾಳ. ಅವನ ಶಕ್ತಿಯನ್ನು, ಪ್ರತಿಭೆಯನ್ನು, ಮುತ್ಸದ್ಧಿತನವನ್ನು ಎತ್ತರಕ್ಕೇರಿಸಿದ ತಾಣ ತಿರುವಣ್ಣಾಮಲೈ.

                       ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಹಲವು ನಗರಗಳನ್ನು ಜೋಡಿಸುವ ಸಂಧಿಸ್ಥಳ. ಹಾಗಾಗಿ ಜಾನುವಾರು ಜಾತ್ರೆಗೆ ಹಾಗೂ ವ್ಯಾಪಾರದ ಕೇಂದ್ರವಾಗಿಯೂ ಇದು ಪ್ರಸಿದ್ಧ. ಹಲವು ಬೆಟ್ಟಗಳಿಂದ ಆವೃತವಾದ ಇದು 18ನೆಯ ಶತಮಾನದಲ್ಲಿ ಒಂದು ಪ್ರಮುಖ ಸೈನಿಕ ನೆಲೆಯಾಗಿತ್ತು. ಇಲ್ಲಿಯ ಬೆಟ್ಟಗಳು ಕರ್ಣಾಟಕ ಯುದ್ಧಗಳಲ್ಲಿ ಪ್ರಧಾನಪಾತ್ರ ನಿರ್ವಹಿಸಿದವು. 1753-1790ರ ಅವಧಿಯಲ್ಲಿ ಈ ನಗರ ಅನೇಕ ಮುತ್ತಿಗೆಗಳಿಗೆ ಗುರಿಯಾಗಿತ್ತು. ತಿರುವಣ್ಣಾಮಲೈಗೆ ಆ ಹೆಸರು ಬರಲು, ಪ್ರಸಿದ್ಧವಾಗಲು ಕಾರಣ ಅಲ್ಲಿನ 2,671 ಅಡಿ ಎತ್ತರದ ಅಣ್ಣಾಮಲೈ ಅಥವಾ ಅರುಣಾಚಲ ಬೆಟ್ಟ. ಬ್ರಹ್ಮ ಮತ್ತು ವಿಷ್ಣು ಆತ್ಮವಿಸ್ಮೃತಿಗೊಳಗಾಗಿ "ನಾನು ಹೆಚ್ಚು, ತಾನು ಹೆಚ್ಚು" ಎಂಬ ಕಲಹಕ್ಕೆ ತೊಡಗಿದಾಗ ಅದನ್ನು ಕೊನೆಗಾಣಿಸುವ ಸಲುವಾಗಿ ಆದಿ ಅಂತ್ಯಗಳಿಲ್ಲದ ಜ್ಯೋತಿಸ್ಥಂಭದ ರೂಪದಲ್ಲಿ ಶಿವ ಪ್ರಕಟನಾದ. ಇದರ ಆದಿ ಅಥವಾ ಅಂತ್ಯಗಳನ್ನು ಯಾರು ಕಂಡುಬರಬಲ್ಲರೋ ಅವರೇ ಹೆಚ್ಚಿನವರು ಎಂಬ ಗಂಭೀರ ವಾಣಿಯೊಂದು ಕೇಳಿಸಿತು. ಎಷ್ಟು ಪ್ರಯತ್ನಿಸಿದರೂ ತುದಿಬುಡ ತಿಳಿಯದ ಅವರಿಬ್ಬರೂ ಶಿವನ ಶರಣು ಹೊಕ್ಕು ಎಲ್ಲರೂ ಕಾಣಲು ಸಾಧ್ಯವಾಗುವ ಲೋಕಾನುಗ್ರಹ ಕಾರಕವಾದ ಲಿಂಗರೂಪದಲ್ಲಿ ಅರುಣಾಚಲನೆಂದು ಪ್ರಕಟವಾಗಬೇಕೆಂದು ಬೇಡಿದರು. ಹೀಗೆ ಆದಿ ಅಂತ್ಯಗಳಿಲ್ಲದೆ ವಾದಿಸುತ್ತಿದ್ದವರ ಮುಂದೆ ಆದಿ ಅಂತ್ಯಗಳಿಲ್ಲದೆ ಅಚಲವಾಗಿ ನಿಂತು ಅವರ ಅಹಂ ಅನ್ನು ಮುರಿದ ಅಗ್ನಿಸ್ಥಂಭ ಲೋಕವನ್ನು ತಪ್ತಗೊಳಿಸಿದ ತನ್ನ ಶಾಖವನ್ನು ಶಮನಮಾಡಿ ಶಾಂತವಾಗಿ ಅರುಣಾಚಲವಾಗಿ ಭೂಮಂಡಲದಲ್ಲಿ ಎದ್ದು ನಿಂತಿತು. ಅದು ಅಗ್ನಿಯ ಬೆಟ್ಟ; ಋಗ್ವೇದ ಯಜುರ್ವೇದಗಳೆರಡರಲ್ಲೂ ಅಗ್ನಿಯನ್ನು ರುದ್ರನೆಂದೇ ಸಮೀಕರಿಸಲಾಗಿದೆ. ಪಂಚಭೂತ ಕ್ಷೇತ್ರಗಳಲ್ಲಿ ಒಂದಾದ ಇದು "ಅಗ್ನಿ"ಲಿಂಗ ಕ್ಷೇತ್ರ. ಅಗ್ನಿಯು ಊರ್ಧ್ವಮುಖಿ. ಹಾಗಾಗಿ ಅದು ಧರ್ಮದ ಪ್ರತೀಕ; ಆತ್ಮದ ಪ್ರತೀಕ. ಅದು "ಅಹಂ" ಇರುವವರು ತಲುಪಲಾಗದ ಬೆಟ್ಟ. "ಅಹಂ ಎಂದರೆ ಯಾರು?" ಎಂದು ಅರಿಯಲು ಹೊರಡುವವರಿಗೆ ಗುರುವಾಗಿರುವ ಬೆಟ್ಟ! ಸ್ಕಂದಪುರಾಣದ ಮಾಹೇಶ್ವರ ಕಾಂಡ ಸುಮಾರು ಎರಡುಸಾವಿರ ಶ್ಲೋಕಗಳಲ್ಲಿ ಅರುಣಾಚಲದ ಮಹಾತ್ಮೆಯನ್ನು ವರ್ಣಿಸಿದೆ.
ದರ್ಶನಾತ್ ಅಪ್ರಸಾಧಸಿ ಜನನಾತ್ ಕಮಲಾಲಯೇ |
ಕಾಶ್ಯಾಮ್  ಮರಣಾನ್  ಮುಕ್ತಿ: ಸ್ಮರಣಾತ್ ಅರುಣಾಚಲೇ ||
ಚಿದಂಬರದ ನಟರಾಜನ ದರ್ಶನಮಾತ್ರದಿಂದ, ತಿರುವಾರೂರಿನಲ್ಲಿ ಜನ್ಮಮಾತ್ರದಿಂದ, ಕಾಶಿಯಲ್ಲಿ ದೇಹತ್ಯಾಗಮಾತ್ರದಿಂದ, ಅರುಣಾಚಲನ ಸ್ಮರಣೆ ಮಾತ್ರದಿಂದ ಮುಕ್ತಿ ಸಿಗುತ್ತದೆ. ಮಾರ್ಕಂಡೇಯ ಮುನಿಗಳು ನಂದಿಕೇಶ್ವರನಲ್ಲಿ ಕೇವಲ ಸ್ಮರಣೆ ಮಾತ್ರದಿಂದ ಮೋಕ್ಷ ನೀಡುವ ಪರಮ ಶಿವ ಕ್ಷೇತ್ರ ಯಾವುದೆಂದು ಪ್ರಶ್ನಿಸಿದಾಗ ಆತ ಅರುಣಾಚಲನನ್ನು ನೆನೆದು ಭಾವಪರವಶನಾಗಿ "ಅಂಥಾ ಕ್ಷೇತ್ರ ಅರುಣಾಚಲ. ಮೇರು ಹಾಗೂ ಕೈಲಾಸಗಳು ಶಿವನ ಆವಾಸ ಸ್ಥಾನಗಳು. ಆದರೆ ಅರುಣಾಚಲ ಪ್ರತ್ಯಕ್ಷ ಶಿವನೇ ಆಗಿದೆ" ಎಂದು ಉತ್ತರಿಸುತ್ತಾನೆ.

              ಎಲ್ಲಾ ಜನಗಳೂ ಸಾಂಪ್ರದಾಯಿಕ ರೀತಿಯಲ್ಲಿ ಪೂಜಿಸಲು ಸಾಧ್ಯವಾಗುವಂತೆಯೂ ಪ್ರಕಟವಾಗಬೇಕೆಂದು ಬ್ರಹ್ಮ ಮತ್ತು ವಿಷ್ಣು ಕೇಳಿಕೊಂಡಾಗ ಶಿವ ಅರುಣಾಚಲದ ಪೂರ್ವ ಭಾಗದಲ್ಲಿ ಸ್ವಯಂಭೂ ಆದ ಒಂದು ತೇಜಸ ಲಿಂಗವಾಗಿ ಪ್ರಕಟವಾದ. ಇವತ್ತಿಗೂ ಅರುಣಾಚಲೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುತ್ತಿರುವ ಶಿವಲಿಂಗ ಇದೇ. ಮೂರನೆಯ ತಮಿಳು ಸಾಹಿತ್ಯದ ಕಾಲದಲ್ಲಿದ್ದ ನಕ್ಕಿಯಾರ್ ಕವಿಯ ಕೃತಿಗಳಲ್ಲಿ ಇದರ ಪ್ರಸ್ತಾಪವಿದೆ. ಈ ದೇವಾಲಯದ ಕಾಲ ಕನಿಷ್ಟ ಎರಡು ಸಾವಿರ ವರ್ಷಗಳಷ್ಟು ಹಿಂದಿನದ್ದು. ತೇಜೋ ಲಿಂಗದ ಜೊತೆಗೆ ಪಾರ್ವತಿ ದೇವಿಯನ್ನು ಇಲ್ಲಿ ಉನ್ನಮುಲ್ಯಮ್ಮ ಎಂದು ಕರೆದು ಪೂಜಿಸಲಾಗುತ್ತದೆ. ಸಂತ ನಾಯನ್ಮಾರರ ಪದ್ಯಗಳಲ್ಲಿ ದೇವಾಲಯ ಉಲ್ಲೇಖಗೊಂಡಿದೆ. ದೇವಾಲಯದಲ್ಲಿ ನಂದಿ ಮತ್ತು ಸೂರ್ಯರ ಮೂರ್ತಿಗಳು, ಗರ್ಭಗುಡಿಯ ಹಿಂದಿನ ಗೋಡೆಯಮೇಲೆ ವೇಣುಗೋಪಾಲ ಸ್ವಾಮಿಯ ಚಿತ್ತಾರ, ಗರ್ಭಗೃಹದ ಗೋಡೆಯ ಆವರಣದ ಮೇಲೆ ಸೋಮಸ್ಕಂದ, ದುರ್ಗಾ, ಚಂಡಿಕೇಶ್ವರ, ಗಜಲಕ್ಷ್ಮಿ, ಆರುಮುಗಸ್ವಾಮಿ, ದಕ್ಷಿಣಾಮೂರ್ತಿ, ಸ್ವರ್ಣಭೈರವರ್,  ನಟರಾಜ ಮತ್ತು  ‘ಲಿಂಗೋದ್ಭವರ್’ ಗಳ ಕೆತ್ತನೆಗಳಿವೆ. ದೀಪದರ್ಶನ ಮಂಟಪ, ಸಾವಿರ ಸ್ಥಂಭಗಳ ಮಂಟಪ, ಕಲ್ಯಾಣ ಮಂಟಪ, ಮತ್ತು ವಸಂತ ಮಂಟಪಗಳೆಂಬ ಸುಂದರ ಪ್ರಾಂಗಣಗಳು ಇದರ ಭವ್ಯತೆಯನ್ನು ಹೆಚ್ಚಿಸಿವೆ. ಒಟ್ಟು ಒಂಬತ್ತು ಗೋಪುರ ಹಾಗೂ ಐದು ಪ್ರಾಕಾರಗಳನ್ನು ಹೊಂದಿರುವ ಈ ದೇವಾಲಯ ಇಪ್ಪತ್ತೈದು ಎಕರೆಯಲ್ಲಿ ಹಬ್ಬಿದ್ದು ಅತ್ಯಂತ ಪ್ರಾಚೀನ ವಿಶಾಲ ದೇವಾಲಯ. ದೇವಾಲಯಕ್ಕೆ ಸಂಬಂಧಿಸಿದ ಮೊದಲ ಶಾಸನ ಕ್ರಿ.ಶ ಒಂಬತ್ತನೆಯ ಶತಮಾನದ್ದು, ಚೋಳರ ಕಾಲದ್ದು. ಅತ್ಯಂತ ಒಳಗಿನ ಗೋಪುರವನ್ನು 11ನೆಯ ಶತಮಾನದಲ್ಲಿ ಚೋಳರ ಶೈಲಿಯಲ್ಲಿ ಕಟ್ಟಲಾಗಿದ್ದು ಇದಕ್ಕೆ ಗಿಣಿ ಗೋಪುರವೆಂದು ಹೆಸರು. ಉನ್ನತ ಗೋಪುರಗಳಿಂದಲೂ ಸಾವಿರ ಕಂಬಗಳ ಮಂಟಪದಿಂದಲೂ ಸುಂದರವಾದ ತಟಾಕ ಮತ್ತು ತೋಟಗಳಿಂದಲೂ ಅಲಂಕೃತವಾದ ದೇವಾಲಯ ಪೂರ್ವಾಭಿಮುಖವಾಗಿದ್ದು ಚೋಳ ಮತ್ತು ಹೊಯ್ಸಳರ ಶಿಲ್ಪಕಲೆಯಿಂದ ಶ್ರೀಮಂತವಾಗಿದೆ. ಪೂರ್ವಕ್ಕೆ ನಡುಪ್ರಾಕಾರದಲ್ಲಿ ಇರುವ, ಮೊದಲನೆಯದಕ್ಕಿಂತ ಪ್ರಾಚೀನವಾದ, ವಲ್ಲಾಲ ನಾಮಾಂಕಿತ ಗೋಪುರವನ್ನು ಹೊಯ್ಸಳ ನರೇಶ ವೀರ ಬಲ್ಲಾಳ ಕಟ್ಟಿಸಿದ. ಆ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ತಾನು ರಾಜಗೋಪುರವನ್ನು ಕಟ್ಟಿದ ಬಗೆಗಿನ ಗರ್ವವು ಬಲ್ಲಾಳನ ಮನಸ್ಸಿನಲ್ಲಿತ್ತು. ಅರುಣಾಚಲನ ಉತ್ಸವದ ಸಮಯದಲ್ಲಿ ಉತ್ಸವ ಮೂರ್ತಿ ಈ ದ್ವಾರದ ಮೂಲಕ ಹೋಗಲು ಒಪ್ಪದೆ ತಟಸ್ಥವಾಯಿತು. ತನ್ನ ತಪ್ಪಿನ ಅರಿವಾದ ಬಲ್ಲಾಳ ಕ್ಷಮೆ ಕೇಳಿದ ಬಳಿಕವಷ್ಟೇ ಉತ್ಸವಮೂರ್ತಿ ಬಲ್ಲಾಳ ಕಟ್ಟಿಸಿದ ರಾಜಗೋಪುರದ ದ್ವಾರದ ಮೂಲಕ ಮುನ್ನಡೆಯಿತು. ತಿರುವಣ್ಣಾಮಲೈ ನಗರವನ್ನು ನಿರ್ಮಿಸಿದ, ಗಿರಿಪ್ರದಕ್ಷಿಣೆ ಹಾಗೂ ಅರುಣಾಚಲ ದೇವಾಲಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ ವೀರ ಬಲ್ಲಾಳನ ಕೊಡುಗೆಯನ್ನು ಎಲ್ಲಪ್ಪ ನಾಯನಾರ್ ತನ್ನ ಅರುಣಾಚಲ ಪುರಾಣಮ್ ಕೃತಿಯಲ್ಲಿ ವರ್ಣಿಸಿದ್ದಾನೆ. ಒಂದು ಐತಿಹ್ಯದ ಪ್ರಕಾರ ಅರುಣಾಚಲನೇ ತನ್ನ ಭಕ್ತ ಬಲ್ಲಾಳನ ಭಕ್ತಿಗೆ ಮೆಚ್ಚಿ ಮಗನಾಗಿ ಅವನ ತಿರುವಣ್ಣಾಮಲೈನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಜನಿಸಿದ. ಆದರೆ ಶೀಘ್ರವಾಗಿ ಆ ಮಗು ಕಣ್ಮರೆಯಾಯಿತು. ದುಃಖಿತನಾದ ರಾಜನಿಗೆ ಶಿವ ತಾನು ರಾಜನ ಅವಸಾನದ ಸಮಯದಲ್ಲಿ ಚಿತೆಗೆ ಬೆಂಕಿ ಇಡುವ ವೇಳೆಯಲ್ಲಿ ಹಾಜರಿರುವುದಾಗಿ ಅಭಯ ನೀಡಿದ. ಇಂದಿಗೂ ಬಲ್ಲಾಳನ ವಾರ್ಷಿಕ ಶ್ರಾದ್ಧದ ದಿನ ಪಳ್ಳಿಕೊಂಡಪಟ್ಟು ಅರಮನೆಯಲ್ಲಿ ಶಿವ ಆತನ ಮಗನಾಗಿ ಬರುವ "ಮಾಸಿ ಮಗಮ್ ತೀರ್ಥಾವರಿ ಉರ್ಚವಮ್" ಹಬ್ಬವನ್ನು ಆಚರಿಸಲಾಗುತ್ತಿದೆ. ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ದೇವಸ್ಥಾನದ ರಥ, ವಸಂತೋತ್ಸವಕ್ಕೆ ಉಪಯೋಗಿಸುವ ಬೃಹತ್ ಅಗ್ನಿ ಕುಂಡ ,ಸಾವಿರ ಕಂಬಗಳ ಮಂಟಪ, ದೇವಸ್ಥಾನದ ಹತ್ತಿರವಿರುವ ಪುಷ್ಕರಿಣಿ ಮುಂತಾದವನ್ನು ಕಟ್ಟಿಸಿದ. ದೇವಳದ ಪ್ರಧಾನದ್ವಾರದ ರಾಜಗೋಪುರ 217 ಅಡಿ ಎತ್ತರ, 98 ಅಡಿ ಅಗಲವಿದ್ದು ಕ್ರಿ.ಶ. 1516ರಲ್ಲಿ ಕೃಷ್ಣದೇವರಾಯನಿಂದ ನಿರ್ಮಿತವಾಯಿತು. ಚೋಳ, ಹೊಯ್ಸಳ, ವಿಜಯನಗರದ ಅರಸರ ಶಾಸನಗಳಲ್ಲದೆ ಕಾದವರು, ಚೇದಿಗಳು, ನಾಯಕರು ಹಾಗೂ ಆರ್ಕಾಟ್ ನವಾಬರ ಶಾಸನಗಳೂ ಈ ದೇವಾಲಯದಲ್ಲಿವೆ.

                 ಶಿವನಾಜ್ಞೆಯಂತೆ ದುಷ್ಟ ಸಂಹಾರಕ್ಕಾಗಿ ಅರುಣಾಚಲದಲ್ಲಿ ತಪಃಗೈದ ಪಾರ್ವತಿ, ತಪಸ್ಸು ಮುಗಿದ ಬಳಿಕ ಅರುಣಾಚಲಕ್ಕೆ ಪ್ರದಕ್ಷಿಣೆ ಬಂದಳು. ಪ್ರತ್ಯಕ್ಷನಾದ ಶಿವ ಅವಳಿಂದ ವರಣಮಾಲೆಯನ್ನು ಸ್ವೀಕರಿಸಿ ತನ್ನಲ್ಲೇ ಅವಳಿಗೆ ಸ್ಥಾನವನ್ನು ನೀಡಿ ಅರ್ಧನಾರೀಶ್ವರನಾದ. ಪಾರ್ವತಿಯ ಪ್ರಾರ್ಥನೆಯಂತೆ ಆ ದಿನವನ್ನು ಪ್ರತೀ ವರ್ಷ ಉತ್ಸವದ ದಿನವಾಗಿ ಆಚರಿಸಲಾಗುತ್ತದೆ. ಅಹಮಿಕೆಗೊಳಗಾಗಿ ವಾದ ಹೂಡಿ ಶಿವನ ಮಹಿಮೆಯನ್ನು ಹರಿ-ವಿರಂಚಿಗಳೀರ್ವರು ಅರಿತು ಶಿವನ ಕೃಪೆಗೆ ಪಾತ್ರರಾದ ಕಾರ್ತಿಕಪೂರ್ಣಿಮೆಯ ದಿನವೂ ಇದು ಹೌದು. ಹನ್ನೆರಡು ದಿನ ಅರುಣಾಚಲೇಶ್ವರನಿಗೆ ವಿಜೃಂಭಣೆಯ ಪೂಜೆ, ಉತ್ಸವ ನಡೆಯುತ್ತದೆ. ಹತ್ತನೆಯ ದಿನ ದೇವಾಲಯದಲ್ಲಿ ಹಚ್ಚಿದ ಪವಿತ್ರ ಜ್ಯೋತಿಯಿಂದ ದೀಪವನ್ನು ಕೊಂಡೊಯ್ದು ಅರುಣಾಚಲದ ಶಿಖರದಲ್ಲಿ ಜ್ಯೋತಿಯನ್ನು ಬೆಳಗಲಾಗುತ್ತದೆ. ಸುತ್ತ ಹತ್ತಾರು ಮೈಲುಗಳಿಗೆ ಕಾಣುವ ಈ ಜ್ಯೋತಿಯನ್ನು ಕಂಡೊಡನೆ ಅರುಣಾಚಲೇಶ್ವರ ದೇವಾಲಯ ಹಾಗೂ ರಮಣಾಶ್ರಮದಲ್ಲಿ ಅರುಣಾಚಲ ಶಿವ ಘೋಷಣೆ ಮುಗಿಲು ಮುಟ್ಟುತ್ತದೆ. ಹನ್ನೆರಡನೇ ದಿವಸ ಅರುಣಾಚಲೇಶ್ವರ ಮತ್ತು ಪಾರ್ವತಿಯ ಉತ್ಸವ ಮೂರ್ತಿಗಳನ್ನು ವಸ್ತ್ರಾಭರಣ, ಪುಷ್ಪಮಾಲೆಗಳಿಂದ ಅಲಂಕರಿಸಿ ಪಲ್ಲಕ್ಕಿಯಲ್ಲಿ ಅರುಣಾಚಲ ಬೆಟ್ಟದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ಪಾರ್ವತಿ ತಪಸ್ಸು ಮಾಡಿದ್ದು ಮುನಿ ಗೌತಮರ ಆಶ್ರಮದ ಬಳಿಯಲ್ಲಿ. ಅಲ್ಲಿ ಈಗ ಪಾರ್ವತಿಯು "ಹಸಿರು ವರ್ಣದ ತಾಯಿ" ಎಂದು ಪೂಜಿಸಲ್ಪಡುವ, 1000 ವರ್ಷಗಳಿಗೂ ಹಳೆಯದಾದ ಪಚ್ಚೈ ಅಮ್ಮಾಳ್ ದೇವಾಲಯವಿದೆ.

              ತಿರುವಣ್ಣಾಮಲೈನಲ್ಲಿಯ ಅತ್ಯಂತ ಹಳೆಯ ದೇವಸ್ಥಾನ ಆದಿ ಅಣ್ಣಾಮಲೈ. ಸುಮಾರು ಅರ್ಧ ಎಕರೆ ಜಾಗದಲ್ಲಿ ವ್ಯಾಪಿಸಿರುವ ಮೊದಲು ಮರಗಳಿಂದ ನಿರ್ಮಿತವಾಗಿದ್ದ ಈ ದೇವಾಲಯವನ್ನು 1200 ವರ್ಷಗಳ ಕೆಳಗೆ ಕಲ್ಲುಗಳಿಂದ ಕಟ್ಟಲಾಯಿತು. ಇಲ್ಲಿ ಪೂಜಿಸಲ್ಪಡುವ ಲಿಂಗವನ್ನು ಸ್ವತಃ ಬ್ರಹ್ಮನೇ ಕೆತ್ತಿದನೆಂಬ ಪ್ರತೀತಿ. ಅರುಣಾಚಲ ಬೆಟ್ಟದ ತಳದಲ್ಲಿ ಅಷ್ಟದಿಕ್ಕುಗಳಲ್ಲಿ ಅಷ್ಟಲಿಂಗಗಳು ಸ್ಥಾಪಿಸಲ್ಪಟ್ಟಿವೆ. ಇವುಗಳಿಗೆ ಕಿರು ಮಂದಿರವನ್ನೂ ನಿರ್ಮಿಸಲಾಗಿದೆ. ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ಯಮ ಲಿಂಗ, ನಿಋತಿ ಲಿಂಗ, ವರುಣಲಿಂಗ, ವಾಯುಲಿಂಗ, ಕುಬೇರಲಿಂಗ ಹಾಗೂ ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಅರುಣಾಚಲದ ಸುತ್ತ 14 ಕಿಮೀ ವ್ಯಾಪ್ತಿಯಲ್ಲಿ ಈ ಅಷ್ಟಲಿಂಗ ಮಂದಿರಗಳಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ. ಶಕ್ತಿ ಸ್ಥಳಗಳಲ್ಲೊಂದಾದ ಪಡವೇಡು ರೇಣುಕಾಂಬ ದೇವಸ್ಥಾನ ತಿರುವಣ್ಣಾಮಲೈನಲ್ಲಿದೆ. ಜಮದಗ್ನಿಯ ಪತ್ನಿ ರೇಣುಕೆಯನ್ನು ಇಲ್ಲಿ ಆರಾಧಿಸಲಾಗುತ್ತದೆ. ಸೋಮನಾಥಲಿಂಗವು ಇಲ್ಲಿದೆ.

             ಪಾಲ್ ಬ್ರಂಟನ್, ಬ್ರಿಟಿಷ್ ಪತ್ರಕರ್ತ. ಆಧ್ಯಾತ್ಮ ಜೀವನದ ವಿಪರೀತ ಕುತೂಹಲ ಅವನ ಎದೆಯಲ್ಲೊಂದು ಬೆಂಕಿಯನ್ನೆಬ್ಬಿಸಿಬಿಟ್ಟಿತ್ತು. ಆ ಕುತೂಹಲ ಅವನನ್ನು ನಿಗೂಢ ಭಾರತದಲ್ಲಿ ಹುಡುಕಾಟ ನಡೆಸಲು ಪ್ರೇರೇಪಿಸಿತು. ಹಾಗೆ ಬಂದವ ಭಾರತದಲ್ಲಿ ಅನೇಕ ಕಡೆ ಸುತ್ತಾಡಿ ಅನೇಕ ಸಾಧು, ಸಂತರ ದರ್ಶನಗೈದ. ಕೆಲವರಿಂದ ಪ್ರೇರಣೆ ಪಡೆದ, ಕೆಲವರ ಪೊಳ್ಳುತನದಿಂದ ಜಿಗುಪ್ಸೆಗೊಂಡು ದೂರ ಸರಿದ. ಕಂಚಿ ಪರಮಾಚಾರ್ಯರಿಂದ ಪ್ರಭಾವಿತನಾದ ಅವನಿಗೆ ಕಂಚಿ ಶ್ರೀಗಳು ಅರುಣಾಚಲದ ದಾರಿ ತೋರಿದರು. ಹಿಂದೆ ತನಗೆ ಮಾರ್ಗದರ್ಶನ ಮಾಡಿದ್ದ ಯುವ ಯೋಗಿ ಸುಬ್ರಹ್ಮಣ್ಯನ ಸಹಾಯದಿಂದ ಇದೇ ಅರುಣಾಚಲ ಬೆಟ್ಟದ ತಪ್ಪಲಲ್ಲಿ ಬಂದು ನಿಂತ ಪಾಲ್ ಬ್ರಂಟನ್. ಬೆಟ್ಟದಲ್ಲೊಂದು ಆಶ್ರಮ. ಅಲ್ಲೊಬ್ಬ ಬರಿಯ ಕೌಪೀನಧಾರಿ. ಅವನ ಸುತ್ತ ಕುಳಿತ ಹದಿನೈದಿಪ್ಪತ್ತು ಜನ ಧ್ಯಾನದಲ್ಲಿ ಮುಳುಗಿದ್ದಾರೆ. ಅಗ್ಗಿಷ್ಟಿಕೆಯ ಸುಗಂಧ ಅಲ್ಲಿ ಹರಡಿತ್ತು. ಅದಕ್ಕೆ ಮಿಗಿಲಾದ ಪ್ರಶಾಂತತೆ ಮಹದಾನಂದ ಅಲ್ಲಿ ಮೆರೆದಿತ್ತು. ಆ ಕೌಪೀನಧಾರಿಯ ದೃಷ್ಟಿ ದೂರದಾಗಸದೆಲ್ಲೋ ದೃಢವಾಗಿ ನಿಂತಿತ್ತು. ಪಾಲ್ ಬ್ರಂಟನ್ನನ್ನಾಗಲೀ, ಅವನು ತಂದ ಫಲವನ್ನಾಗಲೀ, ಅವನ ಜೊತೆ ಅಥವಾ ಬಳಿಕ ಬಂದವರನ್ನು ಆತ ಲಕ್ಷಿಸಲೇ ಇಲ್ಲ. ಕೆಲವೇ ಹೊತ್ತು. ಬ್ರಂಟನ್ನಿಗೆ ಅವರತ್ತ ನೋಡುತ್ತಿದ್ದ ತನ್ನ ದೃಷ್ಟಿಯನ್ನು ಬದಿಗೆ ಸರಿಸಲಾಗಲಿಲ್ಲ. ಅವನ ಮನದಲ್ಲಿದ್ದ ಅಪನಂಬಿಕೆ, ಸಂದೇಹಗಳೆಲ್ಲಾ ಹೇಳ ಹೆಸರಿಲ್ಲದಂತೆ ಕರಗಿ ಹೋದವು. ಅಸಂಖ್ಯ ಪ್ರಶ್ನೆಗಳನ್ನವನು ಹೊತ್ತು ತಂದಿದ್ದ. ಆದರೆ ಅವನಲ್ಲಿದ್ದ "ನಾನು" ಕರಗಿ ಹೋಗಿತ್ತು. ಇನ್ನು ಪ್ರಶ್ನೆಗಳೇನು ಮಹಾ? ಅವನು ಕಾಲದ ಪರಿವೆಯೇ ಇಲ್ಲದೆ ಆನಂದದ ಹರಿವಿನಲ್ಲಿ ಕರಗಿ ಹೋಗಿದ್ದ. ಆಗ ಕೌಪೀನಧಾರಿಯ ದೃಷ್ಟಿ ಪಾಲ್ ಬ್ರಂಟನ್ ಮೇಲೆ ಬಿತ್ತು. ತಾನು ಬಂದ ಉದ್ದೇಶವನ್ನು ಪಾಲ್ ವಿವರಿಸಿದಾಗ ಆ ಕೌಪೀನಧಾರಿ "ನೀವು ಪದೇ ಪದೇ ನಾನು, ನಾನು ಎನ್ನುತ್ತೀರಿ. ಆ ನಾನು ಯಾರು?" ಎಂದು ನೇರ ಪ್ರಶ್ನೆ ಹಾಕಿದ. ಪಾ.ಬ್ರ: "ನಾನು ಪಾಲ್ ಬ್ರಂಟನ್". ಕೌ:"ಅದು ನಿಮ್ಮ ಹೆಸರಾಯಿತು, ನೀವಾರು?" ಪಾ.ಬ್ರ: "ನನ್ನ ಜೀವನ ಪೂರ್ತಿ ಅವನನ್ನು ಬಲ್ಲೆ." ಕೌ:"ಅದು ನಿಮ್ಮ ದೇಹ; ನೀವು ಯಾರು?" ಪಾಲ್ ಬ್ರಂಟನ್ನನಿಗೆ ತಲೆಕೆಟ್ಟುಹೋಯಿತು. ಆ ಕೌಪೀನಧಾರಿಯ ಮಾರ್ಗದರ್ಶನ ಪಡೆದು "ನಾನು ಯಾರು?" ಎನ್ನುವ ಹುಡುಕಾಟಕ್ಕಾಗಿ ಅಲ್ಲೇ ಗುಡಿಸಲು ಕಟ್ಟಿಕೊಂಡು ಕುಳಿತ. ಕೆಲವೇ ಸಮಯದಲ್ಲಿ ತಿರುವಣ್ಣಾಮಲೈ ಬಿಟ್ಟು ಮತ್ತೆಲ್ಲೂ ತೆರಳದ ಆ ಕೌಪೀನಧಾರಿಯ ಕಾಲ ಕೆಳಗೆ ಸಮಸ್ತ ವಿಶ್ವವೇ ಬಂದು ಬಿತ್ತು.

                 ಆತ ರಮಣ ಮಹರ್ಷಿ. ಕರ್ಮಬಂಧನಗಳಿಂದ ಕಳಚಿಕೊಳ್ಳಬೇಕೆಂಬ, ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕೆಂಬ ಯಾವ ಅಭಿಲಾಶೆಯೂ ಇಲ್ಲದ ಜೀವನದ ಬಗ್ಗೆ ಅರಿತುಕೊಳ್ಳುವ ಚಿಕ್ಕ ಪ್ರಾಯದಲ್ಲಿ "ನಾನು ಯಾರು?" ಎಂಬ ಅರಿವು ಅವರಲ್ಲಿ ಝಗ್ಗನೆದ್ದು ಪ್ರಕಾಶಿಸಿತು. ಲೌಕಿಕ ಜೀವನದ ನಿರರ್ಥಕತೆ ಅರ್ಥವಾದೊಡನೆ ಹಿಂದೊಮ್ಮೆ ಕೇಳಿದ್ದ ಅರುಣಾಚಲವೆಂಬ ಹೆಸರು ಕೂಗಿ ಕರೆಯಿತು. ಹಾಗೆ ಬಂದವರು ಎಲ್ಲವನ್ನೂ ಕಿತ್ತೆಸೆದು ಗಾಢ ಸಮಾಧಿಯಲ್ಲಿ ಮುಳುಗಿ ಜೀವನದ ಔನ್ನತ್ಯವನ್ನು ಮುಟ್ಟಿಬಿಟ್ಟರು. ಜನ ಅವರನ್ನು ದೇವರೆಂದರು. ಜನರೇ ಆತನಿಗೆ ಆಶ್ರಮ ಕಟ್ಟಿದರು. ಶುಕ ಮಾರ್ಗದಿ ಆತ್ಮ ಸಾಕ್ಷಾತ್ಕರಿಸಿಕೊಂಡ ಈ ಪ್ರಖರ ಸೂರ್ಯನ ಕಿರಣ ಭೂಮಂಡಲದ ಇಂಚು ಇಂಚಿಗೂ ಮುಟ್ಟಿತು. ಅದಕ್ಕೆ ಪಾಲ್ ಬ್ರಂಟನ್ ನೆಪವಾದ. ಜಗತ್ತಿನ ಎಲ್ಲಾ ಭಾಗಗಳಿಂದ ಜಾತಿ, ಮತ, ಪಂಥ, ಲಿಂಗ, ಪ್ರಾಯ, ಬಡವ ಬಲ್ಲಿದ ಮನುಷ್ಯ-ಪ್ರಾಣಿ ಎಂಬ ಭೇದಗಳಿಲ್ಲದೆ ಸಹಸ್ರಾರು ಜನರು ಆ ಕಿರಣದ ಜಾಡು ಹುಡುಕುತ್ತಾ ಬಂದು ಸನ್ನಿಧಿಯಲ್ಲಿ ಶಾಂತಿ, ನೆಮ್ಮದಿಯನ್ನು ಅನುಭವಿಸಿದರು, ಆತ್ಮಜ್ಞಾನ ಗಳಿಸುವತ್ತ ಹೊರಳಿದರು, ಜ್ಞಾನದ ಸ್ವರ್ಣಫಲಗಳನ್ನೇ ಪಡೆದುಕೊಂಡರು. ಆತನನ್ನು ಭಗವಾನನೆಂದೂ, ಮಹರ್ಷಿಯೆಂದೂ ಆರಾಧಿಸಿದರು. ಹಾಗಂತ ಆತನೇನು ಮಠ ಕಟ್ಟಿಕೊಳ್ಳಲಿಲ್ಲ. ಪೀಠಾಧಿಪತಿಯೆಂದು ಘೋಷಿಸಿಕೊಳ್ಳಲಿಲ್ಲ. ಭಗವಂತನೆಂದು ಸ್ವಯಂಘೋಷ ಮಾಡಲಿಲ್ಲ. ಅನೇಕ ಪವಾಡಗಳು ಆತನಿಂದ ಜರಗಿದವು. ಅವನ್ನೇನು ತನ್ನದೆಂದು ಹೇಳಲಿಲ್ಲ. ಸಹಜ ಪ್ರಾಕೃತಿಕ ಕ್ರಿಯೆಯೆಂಬಂತೆ ಬದಿಗೆ ಸರಿಸಿದ. ಆತ ಶಿಷ್ಯರೆಂದು ಯಾರನ್ನೂ ಬಹಿರಂಗವಾಗಿ ಘೋಷಿಸಲಿಲ್ಲ. ಆದರೆ ಬಳಿ ಬಂದವರೆಲ್ಲರಿಗೂ ಜ್ಞಾನವನ್ನು ಮೌನವಾಗಿ ಪಸರಿಸಿದರು. ಪಶುಪಕ್ಷಿಗಳಿಗೂ ಆತ್ಮಭೋಧೆ ಉಂಟುಮಾಡಿದ. ಅವುಗಳಿಗೂ ಆತ್ಮವಿದೆ ಎಂದ ಪ್ರಾಚೀನ ಭಾರತದ ಋಷಿವರ್ಯರ ಜೀವನವನ್ನು ಸ್ವತಃ ಬದುಕಿ ಜಗತ್ತಿಗೆ ನೆನಪು ಮಾಡಿಸಿದ. ಮೌನವಾಗಿಯೇ ಜಗವನ್ನಾಳಿದ. ಬಳಿ ಬಂದವರ ಅಹಂ ಅನ್ನು ಮೌನವಾಗಿಯೇ ಮುರಿದ. ದಕ್ಷಿಣಾಮೂರ್ತಿಯ ಅಪರಾವತಾರವೆನಿಸಿದ. ಈಗಲೂ ದೇಶವಿದೇಶಗಳಿಂದ ರಮಣಾಶ್ರಮ-ಅರುಣಾಚಲ ಜನರನ್ನು ಸೆಳೆಯುತ್ತಲೇ ಇದೆ. ಇಂದಿಗೂ ರಮಣಾಶ್ರಮದಲ್ಲಿ, ಅರುಣಾಚಲದ ತುತ್ತತುದಿಗೆ ಎಲ್ಲಿಂದಲೋ ಬಂದ ಪ್ರಾಣಿಗಳು ಹೋಗಿ ಧ್ಯಾನಿಸುತ್ತವೆ. ಸ್ವಘೋಷಿತ ಆಧ್ಯಾತ್ಮ ಜೀವಿಗಳೆಲ್ಲಾ ರಮಣರ ಎದುರು ಬರಲು ಹೆದರುತ್ತಿದ್ದರೆಂದರೆ ಅವರ ಮಹಾನತೆ ಅರಿಯಬಹುದು. ಅರಿತವರಿಗೆ ಆತ ಜ್ಞಾನಿ, ಮೂಢರಿಗೆ ಬರಿಯ ಕೌಪೀನಧಾರಿ! ಆತ ಭಾರತದ ಅಂತಃಸತ್ವವನ್ನು ಬೆಳಗಿ ಜಗಕೆ ಪಸರಿಸಿದ ಆತ್ಮಜ್ಯೋತಿ! ಅರುಣಾಚಲ ಬೇರೆಯಲ್ಲ, ರಮಣ ಬೇರೆಯಲ್ಲ, ಶಿವ ಬೇರೆಯಲ್ಲ; ರಮಣರ ಸಾನ್ನಿಧ್ಯ ತಿರುವಣ್ಣಾಮಲೈಯ ಮಣ್ಣನ್ನು ಸಾರ್ಥಕಗೊಳಿಸಿತು. ಭಾರತದ ಮಣ್ಣನ್ನೂ!

                 ಅನೇಕ ಋಷಿಗಳು ಅರುಣಾಚಲದಿಂದ ಆಕರ್ಷಿತರಾಗಿ ಅಲ್ಲಿ ತಪಸ್ಸನ್ನಾಚರಿಸಿದ್ದಾರೆ. ಆಧುನಿಕ ಕಾಲದಲ್ಲಿಯೂ ಅರುಣಾಚಲದಿಂದ ಸೆಳೆಯಲ್ಪಟ್ಟವರು ಅನೇಕ. ಅವರಲ್ಲಿ ಮಾಣಿಕವಾಚಿಕರ್, ಅಪ್ಪಾರ್, ಸಂಬಂದಾರ್, ಸುಂದರಾರ್, ಗುಹಾ ನಮಶ್ಶಿವಾಯ, ಗುರು ನಮಶ್ಶಿವಾಯ, ವಿರೂಪಾಕ್ಷ ದೇವ, ಈಶಾನ್ಯ ದೇಶಿಕರ್, ಅರುಣಗಿರಿನಾಥರ್, ಮಹಾರ್ ಶೇಷಾದ್ರಿ ಸ್ವಾಮಿ ಮತ್ತು ಭಗವಾನ್ ರಮಣ ಮಹರ್ಷಿ ಪ್ರಮುಖರು. ವರ್ಷದ 365 ದಿನವೂ ಭಕ್ತರೂ ಅರುಣಾಚಲ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಒಟ್ಟು 14ಕೀಮೀ.ನಷ್ಟಾಗುವ ಇದಕ್ಕೆ ಗಿರಿವಲಂ ಎಂದು ಹೆಸರು. ಹುಣ್ಣಿಮೆ ದಿನವಂತೂ ಬೆಳಗಿನಿಂದ ರಾತ್ರಿವರೆಗೆ ಪ್ರದಕ್ಷಿಣೆ ನಡೆಯುತ್ತಿರುತ್ತದೆ. ತಮಿಳು ಕಾರ್ತಿಕ ಮಾಸದ ಪೌರ್ಣಿಮೆ ಗಿರಿ ಪ್ರದಕ್ಷಿಣೆಗೆ ಶ್ರೇಷ್ಠ ದಿನ. ಆ ದಿನ ಶಿವನನ್ನು ಭಜಿಸುತ್ತಾ, ನೆನೆಯುತ್ತಾ, ನರ್ತಿಸುತ್ತಾ ಜನಸಮೂಹವೇ ಹಗಲು-ರಾತ್ರಿಯಿಡೀ ಪ್ರದಕ್ಷಿಣೆ ಬರುತ್ತದೆ. ಪ್ರದಕ್ಷಿಣೆಯ ಸಮಯದಲ್ಲಿ ಜನರ ಜೊತೆಗೆ ದೇವತೆಗಳು, ಸಿದ್ಧರೂ ಸಾಗುತ್ತಾರೆ ಎನ್ನುವ ಪ್ರತೀತಿ ಇದೆ. ಪ್ರದಕ್ಷಿಣೆಗೆ ವಾಹನ ಬಳಸಬಾರದು, ನಡೆದೇ ಹೋಗಬೇಕು ಎನ್ನುವ ಅಲಿಖಿತ ನಿಯಮ ಅಲ್ಲಿದೆ. ಗಿರಿಪ್ರದಕ್ಷಿಣೆ ಭಕ್ತನ ಪಾಪವನ್ನು ನಿವಾರಿಸಿ, ಪುನರ್ಜನ್ಮವನ್ನು ತಡೆದು ಜ್ಞಾನವನ್ನು ದಯಪಾಲಿಸಿ ಲೋಕದಿಂದ ಬಿಡುಗಡೆಗೊಳಿಸುತ್ತದೆ ಎಂದು ರಮಣರು ಗಿರಿಪ್ರದಕ್ಷಿಣೆಯ ಮಹತ್ವವನ್ನು ವಿವರಿಸಿದ್ದಾರೆ. ಅರುಣಾಚಲವನ್ನು ಹತ್ತುವುದು(ಬರಿಗಾಲಲ್ಲಿ) ಕೂಡಾ ಗಿರಿಪ್ರದಕ್ಷಿಣೆಯ ಭಾಗವೇ. ಅರುಣಾಚಲ ದೇವಾಲಯದ ಉತ್ತರ ಗೋಪುರದ ಬಳಿ ಇರುವ ಪೂರ್ವದ ಬದಿಯಿಂದ ಗಿರಿಯನ್ನು ಹತ್ತಬೇಕು. ಮೊದಲು ಹದಿಮೂರನೇ ಶತಮಾನದಲ್ಲಿ ಜೀವಿಸಿದ್ದ ಸಂತ ಶಿವಭಕ್ತ ಗುಹಾ ನಮಶ್ಶಿವಾಯರ ವಾಸಸ್ಥಳ ಸಿಗುತ್ತದೆ. ಗುಹೆಯೊಳಗೆ ಸಮಾಧಿಲಿಂಗ ಹಾಗೂ ದಕ್ಷಿಣಾಮೂರ್ತಿಯ ಪ್ರತಿಮೆಯಿದೆ. ಮುಂದೆ ಸಿಗುವುದೇ ವಿರೂಪಾಕ್ಷ ಗುಹೆ. ಹದಿಮೂರನೇ ಶತಮಾನದಲ್ಲಿದ್ದ ಸಂತ ವಿರೂಪಾಕ್ಷ ಓಂಕಾರದ ಆಕೃತಿಯಲ್ಲಿರುವ ಈ ಗುಹೆಯಲ್ಲಿ ತಪಸ್ಸನ್ನಾಚರಿಸಿದ. ಭಗವಾನ್ ರಮಣ ಮಹರ್ಷಿಗಳು 1899ರಿಂದ 1916ರವರೆಗೆ ಹದಿನೇಳು ವರ್ಷಗಳ ಕಾಲ ಇಲ್ಲಿ ತಪಸ್ಸನ್ನಾಚರಿಸಿದರು. ತಮ್ಮ ಮೊದಲ ಭಕ್ತರಾದ ಗಂಭೀರಂ ಶೇಷಯ್ಯರ್ ಹಾಗೂ ಶಿವಪ್ರಕಾಶಂ ಪಿಳ್ಳೈಯವರಿಗೆ ಜ್ಞಾನಮಾರ್ಗವನ್ನು ಅವರು ಬೋಧಿಸಿದ್ದು ಇಲ್ಲೇ. ಅವರ ಮೊದಲ ಆಂಗ್ಲಭಕ್ತ ಕೃತಾರ್ಥನಾದದ್ದೂ ಇಲ್ಲೇ. ಕಾವ್ಯಕಂಠ ಗಣಪತಿ ಮುನಿಗಳು ರಮಣಾನುಗ್ರಹಕ್ಕೆ ಪಾತ್ರರಾಗಿ, ರಮಣರನ್ನು ಮಹರ್ಷಿ ಎಂದು ಹೆಸರಿಸಿದ್ದು ಇಲ್ಲೇ. ಮುಂದೆ ರಮಣರ ಶಿಷ್ಯ ಕಂದಸ್ವಾಮಿ ಕಟ್ಟಿದ ಸುಂದರ ಸ್ಕಂದಾಶ್ರಮ ಸಿಗುತ್ತದೆ. ಇಲ್ಲಿಂದ ಅರುಣಾಚಲೇಶ್ವರ ದೇಗುಲ ರಮ್ಯ ಮನೋಹರವಾಗಿ ಕಂಗೊಳಿಸುವುದನ್ನು ಕಾಣಬಹುದು. ರಮಣರ ತಾಯಿ ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿದ್ದು ಇಲ್ಲೇ. ಇನ್ನಷ್ಟು ಮೇಲಕ್ಕೆ ತೆರಳಿದಾಗ ರಮಣರು ಆಗಾಗ ಭೇಟಿ ನೀಡುತ್ತಿದ್ದ ಏಳು ಚಿಲುಮೆಗಳಿರುವ ಸ್ಥಳ ಸಿಗುತ್ತದೆ. ಕಡಿದಾದ ದಾರಿಯಲ್ಲಿ ಹತ್ತಿ ಸಾಗಿದಾಗ ಅದು ಅರುಣಾಚಲದ ನೆತ್ತಿಯನ್ನು ಮುಟ್ಟುತ್ತದೆ. ಅಲ್ಲಿ ಎರಡು ಹೆಜ್ಜೆ ಗುರುತಿರುವ ಚಪ್ಪಟೆಯಾಕಾರದ ಕಲ್ಲು ಇದೆ. ಪಕ್ಕದಲ್ಲೇ ಕಾರ್ತಿಕ ದೀಪವನ್ನು ಉರಿಸುವ ಕಡಾಯಿಯಿದೆ. ಅಲ್ಲೇ ಹಲವಾರು ವರ್ಷಗಳಿಂದ ಸಾಧುವೊಬ್ಬ ವಾಸವಾಗಿದ್ದಾನೆ! ತಿರುವಣ್ಣಾಮಲೈಯಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಜನಿಸಿದ್ದ ಸುಬ್ರಹ್ಮಣ್ಯ ಭಕ್ತನಾಗಿದ್ದ ಅರುಣಗಿರಿನಾಥರ್ ಮುರುಗನನ್ನು ಕುರಿತಿ ತಿರುಪುಳಲ್ ಎಂಬ ಅಮೋಘ ಸ್ತೋತ್ರ ರಚಿಸಿದ್ದಾರೆ. ಅದು ಸ್ಕಂದ ಭಕ್ತರಿಗೆ ನಿತ್ಯಪಾರಾಯಣದ ಗ್ರಂಥ.

                 ಭಕ್ತರನ್ನು ಅಂತರ್ಮುಖಿಗಳನ್ನಾಗಿ ಮಾಡಿ ಅವರ ಹೃದಯದತ್ತ ಹೊರಳಿಸುತ್ತದೆ ಎನ್ನುವ ಕಾರಣಕ್ಕೆ ಅರುಣಾಚಲಕ್ಕೆ ಗುರುಸ್ಥಾನ ಪ್ರಾಪ್ತಿಯಾಗಿದೆ. ಹದಿಮೂರನೇ ಶತಮಾನದಲ್ಲಿದ್ದ ಗುಹಾನಮಶ್ಶಿವಾಯ ತಮ್ಮ ಸ್ತೋತ್ರಗಳಲ್ಲಿ ಬಹು ಸೊಗಸಾಗಿ ಇದನ್ನು ವರ್ಣಿಸಿದ್ದಾರೆ. ಭಗವಾನ್ ರಮಣರಿಂದ ಒಮ್ಮೆ ಇದನ್ನು ಕುರಿತು ಅದ್ಭುತವಾದ ಐದು ಸ್ತೋತ್ರಗಳು ಹೊರಹೊಮ್ಮಿದವು. ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಅದ್ಭುತ ಆಧ್ಯಾತ್ಮಿಕ ಸಾಧನೆ ಮಾಡಿದ ವ್ಯಕ್ತಿಗಳು ಇರುವುದು ಅಪರೂಪ. ಆದರೆ ತಿರುವಣ್ಣಾಮಲೈಗೆ ಅದೇನೂ ವಿಶೇಷವಲ್ಲ. ರಮಣ ಮಹರ್ಷಿಗಳು ಇದ್ದ ಸಮಯದಲ್ಲೇ ಅರುಣಾಚಲದಲ್ಲಿ ಶೇಷಾದ್ರಿ ಸ್ವಾಮಿಗಳೆಂಬ ಭಕ್ತಿಮಾರ್ಗದ ಸಂತರಿದ್ದರು. ತಮಗಿಂತ ಸಾಧನೆಯಲ್ಲಿ ಎತ್ತರಕ್ಕೇರಿದ್ದ ರಮಣರನ್ನು ಬಹು ಗೌರವದಿಂದ ನೋಡುತ್ತಿದ್ದರು. ವಯಸ್ಸಿನಲ್ಲಿ ಚಿಕ್ಕವರಾದ ಅವರನ್ನು ತಮ್ಮನೆಂದು ಕರೆಯುತ್ತಿದ್ದರು. ತಮ್ಮ ಬಳಿಗೆ ಬಂದವರಿಗೆ "ಬೆಟ್ಟದ ಮೇಲಿರುವ ನನ್ನ ತಮ್ಮ ಹತ್ತುಸಾವಿರ ಸಂಪಾದಿಸುತ್ತಾನೆ. ನಾನಾದರೋ ಸಾವಿರ ರೂಪಾಯಿ ಸಂಪಾದಿಸುತ್ತೇನೆ. ನೀವು ಕನಿಷ್ಟ ನೂರು ರೂಪಾಯಿ ಸಂಪಾದಿಸಲಾಗದೇ?" ಎಂದು ಆಧ್ಯಾತ್ಮಿಕ ಸಿದ್ಧಿಯನ್ನು ಗಳಿಸಲು ಒತ್ತಾಯಿಸುತ್ತಿದ್ದರು. ದೀಕ್ಷೆಯನ್ನು ಬೇಡಿ ಬಂದವರಿಗೆ ಸೂಕ್ತ ಮಂತ್ರವನ್ನು ಬೋಧಿಸುತ್ತಿದ್ದರು. ರಮಣಸ್ವಾಮಿಯಲ್ಲಿ ನಿಷ್ಠೆಯನ್ನಿಟ್ಟುಕೊಂಡವರು ಅವರನ್ನೇ ಅನುಸರಿಸಬೇಕೆಂದು ಹೇಳುತ್ತಿದ್ದರು. ತಾವು ತಿನ್ನುವ ಮೊದಲು ಆಹಾರವನ್ನು ಸುತ್ತ ಜೀವಜಂತು,ಪಂಚಭೂತ, ಯಕ್ಷಾದಿಗಳಿಗೆಂದು ಚೆಲ್ಲಿ ಉಳಿದುದನ್ನು ತಿನ್ನುತ್ತಿದ್ದರು. ತಿರುವಣ್ಣಾಮಲೈಯಲ್ಲಿ ಮೂರು ಲಿಂಗಗಳಿವೆ; ಒಂದು ಅರುಣಾಚಲ, ಇನ್ನೊಂದು ರಮಣಸ್ವಾಮಿ, ಮಗದೊಂದು ಶೇಷಾದ್ರಿ ಎನ್ನುತ್ತಿದ್ದರು. ತಾವು ಬೇರೆಯಲ್ಲ, ರಮಣರು ಬೇರೆಯಲ್ಲ ಎಂದು ಹಲವಾರು ಘಟನೆಗಳ ಮೂಲಕ ನಿರೂಪಿಸಿದ್ದರು. ರಮಣ ಆಶ್ರಮಕ್ಕೆ ಸಮೀಪದಲ್ಲಿಯೇ ಇದೆ ಬಂಗಾರದ ಕೈಯ ಸಂತನೆಂದೇ ಪ್ರಸಿದ್ದಿ ಪಡೆದ ಶೇಷಾದ್ರಿ ಸ್ವಾಮಿಗಳ ಆಶ್ರಮ. ಅಲ್ಲಿ ಬೇರೆ ನಗರಗಳಿಂದ ಬರುವ ಭಕ್ತರಿಗೆ ಅತ್ಯಂತ ಕಡಿಮೆ ಖರ್ಚಿನ ವಸತಿ ವ್ಯವಸ್ಥೆಯಿದೆ. ಕೆಲವೊಮ್ಮೆ ಹಣ ನೀಡಲಾಗದ ಭಕ್ತರಿಗೆ ರಮಣಾಶ್ರಮದಲ್ಲಿ ಇರುವಂತೆ ಉಚಿತ ವಸತಿ ಸೌಲಭ್ಯವೂ ಇದೆ.

               ಹೌದು ಆಧ್ಯಾತ್ಮದ ಜ್ಯೋತಿ ಅಲ್ಲಿ ನಿರಂತರ ಬೆಳಗುತ್ತಿದೆ. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡುವ ಚೈತನ್ಯ ಅಲ್ಲಿದೆ. ಅಂತಹ ಅದ್ಭುತ ಶಾಂತಿಯ ತಾಣ ಆ ಅಗ್ನಿಪರ್ವತದ ನೆಲೆ. ಹಿಮಾಲಯವಲ್ಲವಾದರೂ, ಹಿಮಾಲಯದೆತ್ತರಕ್ಕೆ ನಿಂತ ಜ್ಞಾನ ಜ್ಯೋತಿ ಅಲ್ಲಿ ಸದಾ ಉರಿಯುತ್ತಿದೆ. ನಿರಂತರ ಅಂತರ್ಗಂಗೆಯಂತೆ ಅದರ ಪ್ರಭಾವ ದಶದಿಕ್ಕುಗಳಿಗೂ ಹರಡುತ್ತಲೇ ಇದೆ.  ಅಪಾರ ವಿದ್ವತ್ತಿನ ಅನುಪಮ ಸತ್ವ ಅಲ್ಲಿದೆ. ಅದು ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ. ಅದು ಭವ್ಯ ಭಾರತದ ಮುಕುಟಮಣಿ!




ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

ಶೃಂಗಗಿರಿಯಲಿ ಮೂಡಿದ ಪೂರ್ಣ ಚಂದಿರ ಜಗಕೆ ಗುರುವಾದ

              "ಹಿಂದೂ ಧರ್ಮ ಯಾವುದೇ ನಿರ್ದಿಷ್ಟ ಕಾಲದಲ್ಲಿ ಸ್ಥಾಪಿತವಾದದ್ದಲ್ಲ. ಯಾವ ಮತಸ್ಥಾಪಕನಿಂದಲೂ ಸ್ಥಾಪನೆಗೊಂಡಿಲ್ಲ. ಅದು ಯಾವುದೇ ಭೌಗೋಳಿಕ ಗಡಿಗೆ ಸೀಮಿತವಾದದ್ದಲ್ಲ. ಅದು ಸನಾತನ, ಸಾರ್ವತ್ರಿಕ. ಈಗ ಜಗತ್ತಿನಲ್ಲಿ ಜನಿಸಿರುವ, ಮುಂದೆ ಜನಿಸಲಿರುವ ಎಲ್ಲ ಜೀವಿಗಳೂ ಅವು ಒಪ್ಪಲಿ ಬಿಡಲಿ ಈ ಧರ್ಮಕ್ಕೇ ಸೇರಿವೆ. ಈ ನಿಯಮಕ್ಕೆ ಅಪವಾದ ಇಲ್ಲ. ಅಗ್ನಿ ಸುಡುವುದಕ್ಕೆ ಯಾವುದಾದರೂ ಪ್ರಮಾಣವನ್ನು ಅವಲಂಬಿಸಿದೆಯೇ? ನಾವು ಒಪ್ಪಿದರೂ, ಒಪ್ಪದೇ ಇದ್ದರೂ ಅದರ ಗುಣ-ಸ್ವಭಾವಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಸನಾತನ ಧರ್ಮ ಈ ರೀತಿಯಾದದ್ದು. ನಾವು ಅರಿತು ಒಪ್ಪಿದರೆ ನಮಗೆ ಒಳಿತು. ಒಪ್ಪದಿದ್ದರೆ ಕೆಡುಕು ನಮಗೇ. ಯಾವುದೆಲ್ಲಾ ಉತ್ಕೃಷ್ಟ ಬೋಧನೆಗಳಿವೆಯೋ ಅವೆಲ್ಲಾ ಸನಾತನ ಧರ್ಮದ ಸಾಮಾನ್ಯ ನಿಯಮಗಳ ಒಂದು ಭಾಗವೇ ಆಗಿವೆ." ಅವಿನಾಶಿಯಾದ ವರೇಣ್ಯ ಬ್ರಹ್ಮಸ್ವರೂಪದಲ್ಲಿ ನೆಲೆಗೊಂಡು ಪಾಪವೇ ಮೊದಲಾದ ಕಟ್ಟುಗಳನ್ನೆಲ್ಲಾ ದೂರಕ್ಕೆಸೆದು ತತ್ತ್ವಮಸಿ ಮೊದಲಾದ ವಾಕ್ಯಗಳಿಗೆ ನಿದರ್ಶನವಾಗಿರುವವನೇ ಅವಧೂತ. ಶಾಸ್ತ್ರ-ಸಂಪ್ರದಾಯ-ಮತಗಳ ಕಟ್ಟುಕಟ್ಟಳೆಗಳನ್ನೆಲ್ಲಾ ಬದಿಗೊತ್ತಿ, ದೇಹಧರ್ಮವನ್ನೂ ಕಡೆಗಣಿಸಿ, ಲೌಕಿಕ ವ್ಯವಹಾರವನ್ನೇ ದೂರ ಸರಿಸಿ ಬದುಕುವ ಅವಧೂತರ ಮುಖದಿಂದ ಹೊರಡುವ ಮಾತುಗಳೆಲ್ಲಾ ಮಂತ್ರಗಳು. ಅಂತಹಾ ಅವಧೂತರಲ್ಲೊಬ್ಬರಾದ ಶೃಂಗೇರಿಯನ್ನು ಬೆಳಗಿದ ಚಂದ್ರಶೇಖರ ಭಾರತಿ ಸ್ವಾಮಿಗಳು ಹಿಂದೂ ಧರ್ಮಕ್ಕೆ ಕೊಡುವ ವಿಶ್ಲೇಷಣೆ ಇದು.

             ಎಂತಹಾ ಅದ್ಭುತ ವಿಶ್ಲೇಷಣೆ! ಹಿಂದೂ ಧರ್ಮ ಎಂದರೆ ಶ್ರೇಷ್ಠ. ಜನ್ಮ ತಳೆದಾಗಿನ, ಕಪಟವರಿಯದ, ಅನ್ಯರಿಗೆ ಕೇಡು ಬಯಸದ ಮನಸ್ಸು ಹಿಂದೂ. ಆದರೆ ಪ್ರಪಂಚದ ವೈಚಿತ್ರ್ಯ ಏನು ಗೊತ್ತೇ? ಕಪಟವರಿಯದ ಮನಸ್ಸು ಬುದ್ಧಿ ಬೆಳೆದಂತೆ ಯಾರದ್ದೋ "ಮತ"ಕ್ಕೆ ಜೋತು ಬೀಳುತ್ತದೆ. ಹಾಗಾದರೆ ಬೆಳೆದಿದ್ದು ಬುದ್ಧಿ ಎನ್ನುವುದು ಹೇಗೆ? ತನ್ನದಾದ ಮತವೂ ಇಲ್ಲದೆ, ಯಾರೋ ಯಾವ ಕಾಲದಲ್ಲಿ ಮಾಡಿಟ್ಟ ಅಭಿಪ್ರಾಯ, ಕಟ್ಟುಪಾಡುಗಳಿಗೆ ಜೋತು ಬೀಳುವ ಮನಸ್ಸು ವಿವೇಚನೆಯ ಶಕ್ತಿಯನ್ನೂ ಕಳೆದುಕೊಂಡು ಜಗತ್ತಿನ ಇತರರೂ ತಾನು ನಂಬಿದ್ದನ್ನೇ ನಂಬಬೇಕೆಂದೂ ಆಗ್ರಹಿಸುವ ಕುರುಡುತನಕ್ಕೆ ಇಳಿಯುತ್ತದೆ. ಒಪ್ಪದವರನ್ನು ಬಲವಂತವಾಗಿಯೋ, ಕುತಂತ್ರದಿಂದಲೋ ಎಳೆಯುತ್ತದೆ. ತನ್ನ ಮತವನ್ನು ಒಪ್ಪುವವರ ಸಂಖ್ಯೆಯನ್ನು ಹೆಚ್ಚು ಮಾಡಲೆಳಸುತ್ತದೆ. ಜೀವನದ ಪರಮಗುರಿ ತನ್ನ ಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಮೌಢ್ಯದಲ್ಲಿ ಸಿಲುಕುವುದೋ, ಜಗತ್ತಿನ ಸತ್ಯವನ್ನು ಅರ್ಥೈಸುವ ಜ್ಞಾನದ ನಿಧಿಯ ಹುಡುಕಾಟವೋ? ಹಾಗೆ ನೋಡಿದರೆ ಪ್ರಸಕ್ತ ಕಾಲದಲ್ಲಿ ಮನುಷ್ಯೇತರ ಜೀವಿಗಳ ಜೀವನವೇ ಲೇಸು. ತೃಷೆ ನೀಗುವಷ್ಟರವರೆಗೆ ಮಾತ್ರ ಅವುಗಳದ್ದು ಹೋರಾಟ. ಆಮೇಲೆ ನಿರ್ಲಿಪ್ತತೆ. ಮನುಷ್ಯನದ್ದು ಹಾಗಲ್ಲ; ಅವನು ಜನ್ಮ ನೀಡಿದ ದೇಶಕ್ಕೂ ಕೃತಜ್ಞನಾಗಿಲ್ಲ;ಭೂಮಿಗೂ! ಹಿಂದೂ ಧರ್ಮವನ್ನು ಮತವಾಗಿ ಕಾಣುವ, ತುಚ್ಛವಾಗಿ ಕಾಣುವವರೆಲ್ಲಾ ಚಂದ್ರಶೇಖರ ಭಾರತಿ ಸ್ವಾಮಿಗಳ ಈ ಮಾತುಗಳ ಮಥಿತಾರ್ಥವನ್ನು ಅರಿಯಲು ಯತ್ನಿಸಬೇಕು. ಯಾರಿಗೆ ಈ ಮಾತುಗಳ ಅರಿವಾಗುತ್ತದೋ ಅವನು ತನ್ನ "ಮತ"ವನ್ನು ಇನ್ನೊಬ್ಬನ ಮೇಲೆ ಹೇರಲಾರ. ಹೆಚ್ಚೇಕೆ ಮೌಢ್ಯ ತುಂಬಿದ ತನ್ನ ಮತವನ್ನು ತೊರೆದು ಜ್ಞಾನದ ಹುಡುಕಾಟದಲ್ಲಿ ತೊಡಗುವುದು ಶತಃಸಿದ್ಧ.

              "ಮುಕ್ತಿಗೆ ಕ್ರಿಸ್ತನ ಮೇಲಿನ ನಂಬಿಕೆಯೇ ಅವಶ್ಯಕ ನಿಯಮ ಎಂದಾದಲ್ಲಿ ಕ್ರಿಸ್ತನಿಗಿಂತ ಮುಂಚೆ ಹುಟ್ಟಿ ಸತ್ತು ಹೋದವರೆಲ್ಲರಿಗೂ ಮುಕ್ತಿಯ ಅವಕಾಶವನ್ನು ನಿರಾಕರಿಸಬೇಕಾಗುತ್ತದೆ. ಅದೂ ಅವರುಗಳು ಯಾವ ತಪ್ಪನ್ನೂ ಮಾಡದೇ ಇದ್ದರೂ ಅವರು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದ್ದರು ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕಾಗಿ! ಕ್ರಿಸ್ತನ ಬಗ್ಗೆ ಕೇಳದೇ ಇದ್ದ, ಅವನ ಬಗ್ಗೆ ತಿಳಿಯದೇ ಇದ್ದ ಆತನ ಸಮಕಾಲೀನರಿಗೂ, ಹಾಗೂ ಕ್ರಿಸ್ತನ ಬಗ್ಗೆ ಗೊತ್ತಿಲ್ಲದೇ ಇವತ್ತಿನ ಯುಗದಲ್ಲಿಯೂ ಬದುಕುತ್ತಿರುವ ಕೋಟ್ಯಂತರ ಜನರಿಗೂ ಮುಕ್ತಿಯ ಅವಕಾಶವಿದೆ ಎಂಬುದನ್ನೇ ಈ ವಾದ ನಿರಾಕರಿಸುತ್ತದೆ. ಯಾವುದೋ ಒಂದು ದಿನ ಅಚಾನಕ್ಕಾಗಿ ಜ್ಞಾನೋದಯ ಪಡೆದು ಎಚ್ಚರಗೊಂಡು ಮನುಕುಲಕ್ಕೆಲ್ಲ ಮುಕ್ತಿಸಾಧನವಾದ ಧರ್ಮವನ್ನು ವಿಧಿಸುವುದು ಭಗವಂತನ ಲಕ್ಷಣವಲ್ಲವಲ್ಲ. ಆ ಭಗವಂತನು ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ಹುಟ್ಟಿದವರಿಗೂ ಕೂಡ ಆತ್ಮವಿತ್ತು, ಆ ಜೀವಿಗಳಿಗೂ ಮುಕ್ತಿಯ ಅಗತ್ಯ ಇತ್ತು ಎಂಬುದನ್ನು ಮರೆತನೇ? ಹಾಗಾಗಿಯೇ ವೇದ ಹಾಗೂ ಮೊಟ್ಟಮೊದಲ ಮಾನವ(ಹಿರಣ್ಯಗರ್ಭ)ರಿಬ್ಬರೂ ಪ್ರಾರಂಭದಿಂದಲೇ ಒಟ್ಟಿಗೇ ಇದ್ದರೆಂದು ನಾವು ನಂಬುವುದು. ಇಲ್ಲಿ ಒಟ್ಟಿಗೇ ಇದ್ದರು ಎಂಬುದರ ಅರ್ಥ ಒಟ್ಟಿಗೇ “ಸೃಷ್ಟಿಸಲ್ಪಟ್ಟರು” ಅಂತ ಅಲ್ಲ. ಸೃಷ್ಟಿಗೆ ಆರಂಭವೇ ಇಲ್ಲ. ಎಲ್ಲವೂ ಅನಾದಿ. ಇವು ಒಟ್ಟಿಗೇ ಇದ್ದವು ಎಂದರೆ ಭಗವಂತನಿಂದ ಅವೆರಡೂ ಏಕಕಾಲಕ್ಕೆ ಅಭಿವ್ಯಕ್ತವಾದವು ಅಂತ ಅರ್ಥ. ಒಟ್ಟಿನಲ್ಲಿ ಸೃಷ್ಟಿಯ ನಂತರ "ಭಗವಂತನಲ್ಲದ" ಯಾವುದೋ ಒಬ್ಬ ಬೋಧಕನಿಂದ ತನ್ನ ಪ್ರಾರಂಭವನ್ನು ಪಡೆದುಕೊಳ್ಳುವ ಯಾವುದೇ ಧರ್ಮವು ದೋಷಪೂರಿತ ಹಾಗೂ ಅಶಾಶ್ವತ" ಎನ್ನುವ ಅವರ ಮಾತುಗಳು ಮತಗಳ ಮೇಲಾಟದಲ್ಲಿ ಮುಳುಗೇಳುತ್ತಿರುವವರ ಕಣ್ಣು ತೆರೆಸಬೇಕು.

                ಜಗದ್ಗುರು ಪೀಠಾಧಿಪತ್ಯ ಬಿಡಿ ಸಂನ್ಯಾಸವನ್ನೂ ಕೂಡಾ ಅವರು ಬಯಸಿ ಪಡೆದುದಲ್ಲ. ಅವಧೂತರಾಗಿ ಎದ್ದು ಹೋದ ಅವರ ಅಜ್ಜನ ಪುಣ್ಯಫಲ; ಅವರ ಸ್ವಭಾವ, ಚರ್ಯೆಯಲ್ಲಿದ್ದ ವಿರಕ್ತಿ, ವ್ಯಾಸಂಗತತ್ಪರತೆ, ಲೌಕಿಕ ವ್ಯವಹಾರಕ್ಕೆ ಅಂಟಿಕೊಳ್ಳದ ಮುಗ್ಧತೆ, ವೇದಾಂತ ಬರೇ ಪ್ರಚಾರಕ್ಕಲ್ಲ, ಆಚಾರಕ್ಕೆನ್ನುವ ನಿಷ್ಠೆ, ಸಂನ್ಯಾಸಿಗೆ ಇರಬೇಕಾದ ಸಹನೆ, ಸಮತ್ವ, ಪರಮಾರ್ಥಶೃದ್ಧೆ, ಏಕಾಂತ ಪ್ರೀತಿ ಆಗಿನ ಜಗದ್ಗುರು ನೃಸಿಂಹ ಭಾರತೀ ಸ್ವಾಮಿಗಳ ಮನಸೂರೆಗೊಂಡು ಅವರು ಮಾಡಿದ ದೃಢನಿಶ್ಚಯ ಹಾಗೂ ಆಜ್ಞೆ ಮತ್ತು ಶೃಂಗೇರಿಯ ಅವಿಚ್ಛಿನ್ನ ಐತಿಹಾಸಿಕ ಶಿಷ್ಯಪರಿಗ್ರಹ ಪರಂಪರೆ ಈ ಬಡ, ಬಡಕಲು ಹುಡುಗನನ್ನು ಎತ್ತರದ ಜಗದ್ಗುರು ಪೀಠದಲ್ಲಿ ಕುಳ್ಳಿರಿಸಿತು. ಶ್ಲೋಕಗಳನ್ನು ರಸವತ್ತಾಗಿ ಹಾಡುತ್ತಿದ್ದ, ಸಂಗೀತದಲ್ಲಿ ಅಭಿರುಚಿಯಿದ್ದ ಕವಿಹೃದಯಿಗೆ ವಿರಕ್ತಿ ಸಹಜವಾಗಿ ಹೇಗೆ ಬಂದೀತು? ಹಾಗಂತ ಅದು ದುಃಖದರ್ಶನದಿಂದಲೂ ಬಂದುದಲ್ಲ. ವಿರೂಪಾಕ್ಷ ಶಾಸ್ತ್ರಿಗಳು ಒದಗಿಸಿದ ಶ್ರವಣದ ಮುಖೇನ ಸಂಸಾರವು ನಿಃಸಾರವೆಂಬುದನ್ನು, ಬ್ರಹ್ಮವೇ ಪರಮಾರ್ಥವೆಂಬುದನ್ನು ದೃಢವಾಗಿ ನಿಶ್ಚಯಿಸಿದ ಅವರಿಗೆ ತಮ್ಮ ಗುರುಗಳು ಹಿಂದೆ ಸೂಚಿಸಿದ್ದ ಆತ್ಮತತ್ತ್ವದ ಅನುಸಂಧಾನವೇ ಗುರಿಯಾಯಿತು. ಆತ್ಮವಿದ್ಯಾವಿಲಾಸವಂತೂ ತಾವು ಬಿಡಿಸಂನ್ಯಾಸಿಗಳಲ್ಲ, ಮಠಾಧಿಪತಿಗಳೆಂಬುದನ್ನೇ ಮರೆಯಿಸಿತು. ಮಠಾಧಿಪತಿಗಳಾಗಿ ಮಾಡಲೇಬೇಕಾದ ಕಾರ್ಯಗಳೆಲ್ಲಾ ಯಾಂತ್ರಿಕವಾಗಿಯೇ ನಡೆಯುತ್ತಿತ್ತು. ಸ್ನಾನಕ್ಕೆಂದು ನೀರಿಗಿಳಿದವರು ಪದ್ಮಾಸನ ಹಾಕಿ ಗಂಟೆಗಟ್ಟಲೇ ಪರಿವೆಯೇ ಇಲ್ಲದೆ ಕುಳಿತುಬಿಡುವರು; ಪೂಜೆ ಮಾಡಲು ತೊಡಗಿದರೆ ನಡುವೆ ದೀಪವನ್ನು ನೋಡುತ್ತಲೋ, ಹೂವಿನ ಎಸಳನ್ನು ಹಾಕುತ್ತಲೋ ಮೈಮರೆವರು. ಪಾಠ ಹೇಳಲು ತೊಡಗಿದವರು ಇದ್ದಕ್ಕಿದ್ದಂತೆಯೇ ಎದ್ದು ಹೊರಡುವರು. ಮತ್ತೆ ನಿದ್ದೆಯಿಲ್ಲ, ಊಟವಿಲ್ಲ; ನಿಂತಲ್ಲಿ ನಿಲ್ಲುವುದಿಲ್ಲ! ಇವೆಲ್ಲದರ ಪುನರಾವರ್ತನೆ. ಈ ನಡುವೆ ಅಧಿಕಾರಿಗಳ ಒತ್ತಾಯದಿಂದ ದೇಶ ಸಂಚಾರ ಹೊರಟವರು ಮೈಸೂರಿನಲ್ಲಿ ನೂತನ ಶಂಕರಾಲಯದ ಕುಂಭಾಭಿಷೇಕ ನೆರವೇರಿಸಿದರು. ತಮಿಳು ಭಾಷೆ ತಿಳಿಯದ ಅವರು ತಮಿಳುನಾಡಿನಲ್ಲಿ ತಮಿಳಿನಲ್ಲಿಯೇ ಉಪನ್ಯಾಸ ಮಾಡಿದರು! ಮಧುರೈ ಮೀನಾಕ್ಷಿಯ ಎದುರು ನಿಂತಾಗ ಭಾವಪರವಶರಾದ ಅವರಿಂದ ಮೀನಾಕ್ಷಿ ಸ್ತೋತ್ರವೇ ಹೊರಹೊಮ್ಮಿತು. ಕನ್ಯಾಕುಮಾರಿ, ಕಾಲಡಿಯಲ್ಲಿ ವೇದಾಂತ ಪಾಠಶಾಲೆ, ನಂಜನಗೂಡಿನಲ್ಲಿ ಶಂಕರಮಠ, ವೇದಪಾಠಶಾಲೆಯನ್ನು ನಿರ್ಮಿಸಿದರು. ಆದರೆ ಈ ತಿರುಗಾಟದಲ್ಲಿ "ರಾಜಕೀಯ ಉಡುಪಿನ" ಮೇಲಾಟ, ಜನಸಂದಣಿ-ಜಂಜಾಟಗಳಿಂದ ಅವರು ಬೇಸತ್ತಿದ್ದರು. ಹಿಂದಿರುಗಿದ ಬಳಿಕ ಕೆಲ ಕಾಲ ಮಠದ ಪೂಜೆಯನ್ನು ನೆರವೇರಿಸಿದರಾದರೂ ಅವರ ಮನಸ್ಸು ಅದರಲ್ಲಿರಲಿಲ್ಲ. ಮುಂದೆ ಪೂಜೆ, ಪಾಠ, ಊಟ, ಮಾತು ಎಲ್ಲವನ್ನೂ ಬಿಟ್ಟರು. ನರಸಿಂಹ ವನದಲ್ಲಿ ಆತ್ಮವಿದ್ಯಾ ವಿಲಾಸವನ್ನು ಗುನುಗುನಿಸಿಕೊಳ್ಳುತ್ತಾ ಅಂತರ್ಮುಖರಾಗಿ ಅಲೆದಾಡುತ್ತಿದ್ದರು. ಆಗ ಅವರ ಮುಖದಲ್ಲಿ ಯಾವುದೇ ಉದ್ವೇಗವಿಲ್ಲದೆ ಮಂದಹಾಸ ಮಿನುಗುತ್ತಿತ್ತು. ಯಾವುದೋ ಅಲೌಕಿಕ ಪ್ರಭೆ ಎದ್ದು ಕಾಣುತ್ತಿತ್ತು.

             ‘ಉತ್ತಮ ಚಾರಿತ್ರ್ಯವಿದ್ದು ಒಳ್ಳೆಯ ಅಭ್ಯಾಸವಿರುವವರಿಗೆ ನಮ್ಮ ಅಗತ್ಯವೇ ಇಲ್ಲ, ಅಂತಹವರು ಧರ್ಮಮಾರ್ಗದಲ್ಲಿಯೇ ನಡೆಯುತ್ತಿರುತ್ತಾರೆ. ಯಾರಿಗೆ ಉತ್ತಮ ಚಾರಿತ್ರ್ಯವಿಲ್ಲವೋ, ದುರಭ್ಯಾಸಗಳಿಗೆ ದಾಸರಾಗಿರುತ್ತಾರೋ, ಅಂತಹವರಿಗೆ ನಮ್ಮ ಮಾರ್ಗದರ್ಶನದ ಆವಶ್ಯಕತೆ ಇದೆ" ಎನ್ನುತ್ತಿದ್ದ ಅವರು ಅಂತಹವರನ್ನು ತಿದ್ದುತ್ತಿದ್ದರು. ಮನುಷ್ಯ-ಪಶುಗಳೆನ್ನದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಿದ್ದರು. ಎಲ್ಲಿ ರಾಮನಿರುತ್ತಾನೋ, ಅಲ್ಲಿ ಹನುಮನಿರುತ್ತಾನೆ ಎನ್ನುತ್ತಿದ್ದ ಅವರು ರಾಮಾಯಣವನ್ನು ಪಾರಾಯಣ ಮಾಡುವಾಗ ಯಾವಾಗಲೂ ಅವರ ಮುಂದೆ ಒಂದು ಮಣೆ ಇಟ್ಟುಕೊಂಡಿರುತ್ತಿದ್ದರು, ಹನುಮಂತನಿಗಾಗಿ!

              1954ರ ಭಾದ್ರಪದ ಬಹುಳ ಅಮವಾಸ್ಯೆಯ(ನವರಾತ್ರಿಯ ಹಿಂದಿನ) ದಿನ ಬೆಳಕು ಹರಿಯುವ ಮುನ್ನವೇ ಕೊರೆಯುವ ಚಳಿಯಲ್ಲಿ ತುಂಗೆಯಲ್ಲಿ ಸ್ನಾನಕ್ಕೆಂದು ಇಳಿದ ಅವರು ನೀರಿನಲ್ಲಿ ಮುಳುಗು ಹಾಕಿ ಪ್ರಾಣಾಯಾಮ ಮಾಡಲು ಪದ್ಮಾಸನ ಹಾಕಿ ಕೂತವರು ಪದ್ಮಾಸನದಲ್ಲಿಯೇ ನೀರಿನಲ್ಲಿ ತೇಲಿ ಹೋದರು. ಜೊತೆಗಿದ್ದವರು ಸ್ವಾಮಿಗಳನ್ನು ದಡಕ್ಕೆ ತಂದರಾದರೂ ಅಷ್ಟು ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಶರೀರದೊಳಗೆ ಕಿಂಚಿತ್ತೂ ನೀರು ಹೋಗಿರಲಿಲ್ಲ. ಪ್ರಾಣವನ್ನು ಬಂಧನ ಮಾಡಿಕೊಂಡು ಆತ್ಮಾರ್ಪಣೆ ಮಾಡಿಕೊಂಡಿದ್ದರು. ವಿಶೇಷವೆಂದರೆ ಅವರ ಜನನ, ಉಪನಯನ, ಸಂನ್ಯಾಸ ಸ್ವೀಕಾರ, ಆತ್ಮಾರ್ಪಣೆ, ಅವರ ಸಮಾಧಿಯ ಮೇಲಿನ ಲಿಂಗ ಪ್ರತಿಷ್ಠೆ ಎಲ್ಲವೂ ನಡೆದದ್ದು ಭಾನುವಾರವೇ! ಸಾಧನೆಯಿಂದ ಪಡೆದುಕೊಂಡ ಸಿದ್ಧಿಗಳನ್ನು ಮೆರೆಯಿಸದೆ ಅಂತರ್ಮುಖರಾಗಿ ಉಳಿದ ಮಹಾ ಸಾಧಕ ಅವರು. ಅವರ "ಬುದ್ಧಿವಿಕಲ್ಪ"ದ ಜಾಡನ್ನು ವೈದ್ಯರಿಗೇ ಹಿಡಿಯಲಾಗಲಿಲ್ಲ. ಅವರ ಬಳಿ ಇದ್ದೋ, ಮಾತನಾಡಿಯೋ, ಕಿರುನಗೆ ನೋಡಿಯೋ, ದೂರದಿಂದಲೇ ಆರಾಧಿಸಿಯೋ ಆಳವಾದ ಮನಃಶಾಂತಿಯನ್ನು ಅನುಭವಿಸಿದವರು ಹಲವರು. ಅವರು ದಕ್ಷಿಣಾಮೂರ್ತಿಯಂತೆ, ಸದಾಶಿವ ಬ್ರಹ್ಮೇಂದ್ರರಂತೆ ಮೌನವಾಗಿಯೇ ಶೃದ್ಧೆಯುಳ್ಳ ಹಲವರಿಗೆ ಉಪದೇಶಿಸಿದರು. ಅದು ಶೃಂಗ ಗಿರಿಯಲ್ಲಿ ಪಡಿಮೂಡಿದ ಪೂರ್ಣ ಚಂದಿರ. ತುಂಗೆಯ ತಟದಲ್ಲಿ ಅವಳಂತೆ ಗಂಭೀರವಾಗಿ, ಮೌನವಾಗಿ, ಶಾಂತವಾಗಿ ಹರಿದ ಜ್ಞಾನ ಸರಸಿರೆ. ವೀಣಾವಾದಿನಿ, ಜ್ಞಾನ ನಿನಾದಿನಿ ಶಾರದೆಯೇ ಧರೆಗಿಳಿದ ಪರಿ.

ಶನಿವಾರ, ಸೆಪ್ಟೆಂಬರ್ 15, 2018

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ

ಭಾರತಿಯ ನೆಲದಲ್ಲಿ ಮತ್ತೆ ಪ್ರವಹಿಸಲಿದ್ದಾಳೆ ಸರಸ್ವತಿ


              "ಇಂದ್ರೋ ನೇದಿಷ್ಠ ಮವಸಾಗಮಿಷ್ಠಃ ಸರಸ್ವತೀ ಸಿಂಧುಭಿಃ ಪಿನ್ವಮಾನಾ"
 ಋಗ್ವೇದದ ಈ ಋಕ್ ನಿಜಾರ್ಥದಲ್ಲಿ ನೆರವೇರುವ ಕಾಲ ಸನ್ನಿಹಿತವಾಗಿದೆ. ಹೌದು ಇಂದ್ರನೂ ನಮ್ಮ ರಕ್ಷಣೆಗೆ ನರೇಂದ್ರನಾಗಿ ಬಂದಿದ್ದಾನೆ. ಅದೇ ನರೇಂದ್ರನ ನೇತೃತ್ವದಲ್ಲಿ ನೇಪಥ್ಯಕ್ಕೆ ಸರಿದಿದ್ದ ಪುಣ್ಯಗರ್ಭೆ ಸರಸ್ವತಿ ಜನರ ಮನಸ್ಸನ್ನು ಮತ್ತೆ ಮುಟ್ಟಲಿದ್ದಾಳೆ, ತಟ್ಟಲಿದ್ದಾಳೆ, ಪ್ರವಹಿಸಲಿದ್ದಾಳೆ. ಋಗ್ವೇದದಿಂದ ಅಥರ್ವದ ತನಕವೂ ವ್ಯಾಪಿಸಿಕೊಂಡು, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಸ್ತುತಿಸಲ್ಪಟ್ಟು ಭಾರತೀಯರ ನಿತ್ಯ ಸ್ತೋತ್ರದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡು ಸ್ಮರಿಸಲ್ಪಡುತ್ತಿದ್ದ ಸರಸ್ವತಿ ಈಗ ಮತ್ತೊಮ್ಮೆ ಭಾರತೀಯರ ಮನೆಮನಗಳಲ್ಲಿ ಪ್ರವಹಿಸಲಿದ್ದಾಳೆ. "ಹರ್ ಕಿ ಧುನ್"ನಲ್ಲಿ ಜನಿಸಿ ಭೃಗುಕುಚ್ಛದ ಬಳಿ ರತ್ನಾಕರನನ್ನು ಸೇರುವವರೆಗೆ, ಕೆಲವೆಡೆ ಹದಿನಾಲ್ಕು ಕಿ.ಮೀ.ಗೂ ಅಧಿಕ ಅಗಲವಾಗಿ, 1300 ಕಿಮೀಗೂ ಹೆಚ್ಚು ದೂರ ಹರಿಯುತ್ತಿದ್ದ ಈ ಸಪ್ತ ಸಿಂಧು ಮತ್ತೊಮ್ಮೆ ಭಾರತವಿಡೀ ಸಂಚರಿಸಲಿದ್ದಾಳೆ. ಆದರೆ ನೇರವಾಗಿ ಅಲ್ಲ, ಮತ್ತೆ ಗುಪ್ತಗಾಮಿನಿಯಾಗಿಯೇ.

           ದಕ್ಷಬ್ರಹ್ಮನ ಆಹ್ವಾನದಂತೆ ಯಜ್ಞಸ್ಥಳಕ್ಕೆ ಬಂದ ಸರಸ್ವತಿ "ಸುರೇಣು" ಎನ್ನುವ ಹೆಸರಿನಿಂದ ವಿಖ್ಯಾತಳಾದಳು. ವಸಿಷ್ಠರ ಮೇಲಿನ ಪ್ರೀತಿಯಿಂದ ಅವರ ಆಹ್ವಾನವನ್ನು ಮನ್ನಿಸಿ ಕುರುಕ್ಷೇತ್ರದಲ್ಲಿ ಅವರು ಮಾಡುತ್ತಿದ್ದ ಯಜ್ಞಶಾಲೆಗೆ ಆಗಮಿಸಿದಾಗ ಅಲ್ಲಿನ ದ್ವಿಜಶ್ರೇಷ್ಠರು ಅವಳನ್ನು "ಓಘವತೀ" ಎಂದು ಕರೆದರು. ಹಿಮವತ್ಪರ್ವತದಲ್ಲಿ ಯಜ್ಞಮಾಡುತ್ತಿದ್ದ ಬ್ರಹ್ಮ ಸರಸ್ವತಿಯನ್ನು ಆಹ್ವಾನಿಸಿದಾಗ ಅಲ್ಲಿಗೆ ಆಗಮಿಸಿದ ಸರಸ್ವತಿಯನ್ನು ಯಜ್ಞವೇದಿಯಲ್ಲಿದ್ದವರು "ವಿಮಲೋದಾ" ಎಂದು ಕರೆದರು.  ಸಪ್ತಸರಸ್ವತಿಯರು ಏಕೀಭೂತರಾದ ಆ ಸ್ಥಳ "ಸಪ್ತಸಾರಸ್ವತ ತೀರ್ಥ"ವೆಂದೇ ಪ್ರಸಿದ್ಧಿಯನ್ನು ಹೊಂದಿತು. ಇಂತಹ ಸರಸ್ವತಿಯನ್ನು ಎಪ್ಪತ್ತೈದಕ್ಕೂ ಹೆಚ್ಚು ಬಾರಿ ಸ್ಮರಿಸಿದೆ ಋಗ್ವೇದ. ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ 75 ಮಂತ್ರಗಳು ಅವಳ ವೈಭವವನ್ನು ಸಾರುತ್ತವೆ. ಋಗ್ವೇದದಿಂದ ಈಚೀನದಾದ "ಪಂಚವಿಂಶ ಬ್ರಾಹ್ಮಣ" ಸರಸ್ವತಿ ನದಿಯು ಭಾಗಶಃ ಒಣಗಿದ್ದುದನ್ನು ಹೇಳಿದೆ. ಸರಸ್ವತೀ ನದಿಯು ಹಿಮಾಲಯ ಶ್ರೇಣಿಯ "ಪ್ಲಕ್ಷ ಪ್ರಸ್ರವಣ" ಎಂಬಲ್ಲಿ ಉಗಮಗೊಂಡು ಅಲ್ಲಿಂದ ಅಶ್ವಾರೋಹಿಯೊಬ್ಬ ನಲವತ್ತನಾಲ್ಕು ದಿವಸಗಳಲ್ಲಿ ಕ್ರಮಿಸಬಹುದಾದಷ್ಟು ದೂರದಲ್ಲಿದ್ದ ಮರುಭೂಮಿಯೊಂದರಲ್ಲಿ ಅದೃಶ್ಯವಾಗುತ್ತದೆ ಎಂದು ವರ್ಣಿಸಿದೆ ಪಂಚವಿಂಶ ಬ್ರಾಹ್ಮಣ. ಪ್ಲಕ್ಷಪ್ರಸ್ರವಣದಿಂದ ನದಿಯ ಉತ್ತರದಲ್ಲಿದ್ದ ಹಲವು ತೀರ್ಥಕ್ಷೇತ್ರಗಳನ್ನು ಮಹಾಭಾರತ ಉಲ್ಲೇಖಿಸಿದೆ. ಪಾಂಡವರು ವನವಾಸದಲ್ಲಿ ದ್ವೈತವನಕ್ಕೆ ಬಂದಾಗ ಕಾಣಸಿಗುವ ಸರಸ್ವತಿಯನ್ನು ಮಹಾಭಾರತ ಬಹು ಅಂದವಾಗಿ ವರ್ಣಿಸಿದೆ. ಹೀಗೆ ಸಮೃದ್ಧವಾಗಿ ಹರಿಯುತ್ತಿದ್ದ ನದಿಯ ವಿವರಗಳನ್ನು, ಅದು ಕೆಲ ದೂರ ಹರಿದು ಅದೃಶ್ಯವಾಗುತ್ತಿದ್ದುದನ್ನು ಉಲ್ಲೇಖಿಸಿದ್ದನ್ನು ಇತಿಹಾಸ ಎಂದು ಪರಿಗಣಿಸದೇ ಬದಿಗೆ ತಳ್ಳಿದ್ದು ನಮ್ಮ ಮೌಢ್ಯವಲ್ಲದೆ ಇನ್ನೇನು? ಮಹಾಭಾರತ ಯುದ್ಧಕಾಲಕ್ಕೆ ಬಲರಾಮನನ್ನು ಯುದ್ಧದಿಂದ ವಿಮುಖನನ್ನಾಗಿ ಮಾಡಲು ಗೋಪ್ರಕರಣವನ್ನು ಹೂಡಿ ಶ್ರೀಕೃಷ್ಣ ಆತನನ್ನು ಪಾಪ ಪ್ರಾಯಶ್ಚಿತ್ತಾರ್ಥ ತೀರ್ಥಯಾತ್ರೆಗೆ ಕಳುಹಿಸುತ್ತಾನಷ್ಟೇ. ಬಲರಾಮನು ಮಹಾಭಾರತ ಯುದ್ಧದಲ್ಲಿ ಭಾಗವಹಿಸದೆ 42ದವಸಗಳ ಕಾಲ ತೀರ ಕ್ಷೀಣವಾಗಿ ಹರಿಯುತ್ತಿದ್ದ,ಅಲ್ಲಲ್ಲಿ ಬತ್ತಿ ಹೋಗಿದ್ದ ಸರಸ್ವತಿ ನದೀತೀರದಲ್ಲಿದ್ದ ತೀರ್ಥಕ್ಷೇತ್ರ ಗಳನ್ನು ದರ್ಶಿಸಿದ್ದ. ಒಂದು ಕಡೆ ಸರಸ್ವತಿಯು ಹರಿವನ್ನು ಬದಲಿಸಿದ್ದನ್ನು ಕಂಡು ಆಶ್ಚರ್ಯ ಪಟ್ಟಿದ್ದ. ಆಗ ರಾಜಸ್ಥಾನದ ವಿನಾಶನ(ಉಪಮಜ್ಜನಾ)ದಲ್ಲಿ ಸರಸ್ವತಿ ಕಣ್ಮರೆಯಾಗಿದ್ದುದನ್ನು ಮಹಾಭಾರತ ದಾಖಲಿಸಿದೆ. ಮಹಾಭಾರತ ಆಕೆಯನ್ನು ವೇದಸ್ಮೃತಿ, ಅಂದರೆ ಆಕೆಯದ್ದು ನಿರಂತರ ಹರಿವಾಗಿರದೆ ಅಲ್ಲಲ್ಲಿ ವೇದಸ್ಮೃತಿಯಂತೆ ಇದ್ದಾಳೆ ಎನ್ನುವ ಅರ್ಥದಲ್ಲಿ ವರ್ಣಿಸಿದೆ. ಮಹಾಭಾರತದ ಕಾಲಕ್ಕೆ ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿದ್ದಳು ಆಕೆ. ಸರಸ್ವತಿಯನ್ನು ಸರೋವರಗಳ ಮಾಲೆಯೆಂದು ಕರೆದಿದೆ ಮಹಾಭಾರತ. ಸರಸ್ವತಿ ನದಿಯು ಹೀಗೆ ಲುಪ್ತವಾಗುತ್ತ ಆದ ಸಣ್ಣಸಣ್ಣ ನೀರಿನ ಮೂಲಗಳು ಮುಂದೆ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಬದಲಾದವು. ಇದನ್ನು ಭಾಗವತ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳು ವರ್ಣಿಸಿವೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ಕಣ್ಮರೆಯಾಗುವುದನ್ನು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

            ಗುಜರಾತಿನ ಪಟಣ್. ಪ್ರಸಿದ್ಧ ಪಟೋಲಾ ಸೀರೆಗಳ ತವರು. ಚಾವ್ಡಾ ವಂಶಜ ವನರಾಜನಿಂದ ಸ್ಥಾಪಿಸಲ್ಪಟ್ಟ "ಅನಾಹಿಲಪಟಕ". ಮುಂದೆ ಚಾಲುಕ್ಯರ ರಾಜಧಾನಿಯಾಗಿ ಶೋಭಿಸಿ ಬಳಿಕ ಅಲ್ಲಾವುದ್ದೀನ್ ಖಿಲ್ಜಿಯೆಂಬ ರಕ್ಕಸನ ಮತಾಂಧತೆಗೆ ಎರವಾಗಿ ಸುಟ್ಟುರಿದು ಹೋದ ಪ್ರಸಿದ್ಧ ಪುರಾತನ ನಗರಿ. ಅಂತಹ ನಗರಕ್ಕೆ ಭವ್ಯ ಇತಿಹಾಸವಿದೆ. ಅಲ್ಲಿ ಅಮರ ಪ್ರೇಮದ ಕುರುಹು ಇದೆ. ವಿಶೇಷವೆಂದರೆ ಆ ಕುರುಹು ಯಾರಿಗೂ ಉಪಯೋಗವಾಗದ ಕಲ್ಲುಮಣ್ಣಿನ ಕಟ್ಟಡವಲ್ಲ. ಅದ್ಭುತ ವಿನ್ಯಾಸದ, ಸರ್ವರಿಗೂ ಉಪಯೋಗಕ್ಕೆ ಯೋಗ್ಯವಾದ ಸಿಹಿನೀರ ಬಾವಿ. ಅದರಲ್ಲೂ ಆ ಬಾವಿಯಲ್ಲಿ ಈ ನೆಲದ ಪುರಾತನ ತಾಯಿನದಿ ಸರಸ್ವತಿಯ ಅಮೃತ ಬಿಂದುಗಳಿವೆ. ಅದು ತನ್ನಿನಿಯ ಅರಸನ ನೆನಪಿಗಾಗಿ ರಾಣಿಯೊಬ್ಬಳು ನಿರ್ಮಿಸಿದ ಬಾವಿ. ಹಾಗಾಗಿ ಅದು "ರಾಣಿ ಕೀ ವಾವ್" ಎಂದೇ ಕರೆಸಿಕೊಂಡಿದೆ. ಹನ್ನೊಂದನೇ ಶತಮಾನದ ಉತ್ತರಾರ್ಧದಲ್ಲಿ  ಸೋಲಂಕಿ ಮನೆತನದ ರಾಣಿ ಉದಯಮತಿ ರಾಜ ಭೀಮದೇವನ ಸವಿ ನೆನಪಿಗಾಗಿ ಕಟ್ಟಿಸಿದ ಅದ್ಭುತ ಮೆಟ್ಟಿಲು ಬಾವಿ ಅದು. 64 ಮೀಟರ್ ಉದ್ದ, 20 ಮೀಟರ್ ಅಗಲ, ಹಾಗೂ 27 ಮೀಟರ್ ಗಳಷ್ಟು ಆಳವಿರುವ ಈ ಅದ್ಭುತ ಕಲಾಕೃತಿ ರಚನೆಯಾದದ್ದು ನದಿ ಸರಸ್ವತಿಯ ದಡದಲ್ಲೇ.

              ತಲೆ ಕೆಳಗಾಗಿ ಕಾಣುವತೆ ರಚನೆಯಾದ ದೇಗುಲದ ಪಕ್ಕದಲ್ಲೇ ನಿರ್ಮಾಣವಾಗಿದೆ ಈ ಮೆಟ್ಟಿಲು ಬಾವಿ. ಸರಸ್ವತಿ ಬಿಂದುಗಳನ್ನು ಶೇಖರಿಸಿಡಲು ರಾಜಾ ಭೀಮದೇವನ ನೆನಪಿಗಾಗಿ ಆತನ ಸತಿ ಉದಯಮತಿ, ಮಗ ಕರ್ಣನ ನೆರವಿನಿಂದ ಕಟ್ಟಿಸಿದ ಅದ್ಭುತ ಕಲಾಪ್ರಕಾರ ಇದು. ಅಲ್ಲಿ ವಿಷ್ಣುವಿನ ದಶಾವತಾರಗಳ, ಭಾಗವತ, ಪುರಾಣಗಳ ಚಿತ್ರಣದ ಕೆತ್ತನೆಯಿದೆ. ಮರು - ಗುರ್ಜರ ಶೈಲಿಯ ಎಂಟುನೂರಕ್ಕೂ ಹೆಚ್ಚು ಕಲಾಕೃತಿಗಳ ಸೊಬಗು ರಾಣಿ ಕೀ ವಾವ್'ನ ಸೌಂದರ್ಯವನ್ನು ವರ್ಧಿಸಿ ನಿರಂತರ ಪ್ರವಾಸಿಗರನ್ನು ಸೆಳೆಯುತ್ತಿದೆ. ರಾಣಿ ಕೀ ವಾವ್ ಮೆಟ್ಟಿಲು ಬಾವಿ ನಿರ್ಮಿಸುವ ಕುಶಲಕರ್ಮಿ ಕಲೆಗಾರನ ಅನುಪಮ, ನ ಭೂತೋ ನ ಭವಿಷ್ಯತಿ ಎನ್ನುವಂತಹ ಉತ್ತುಂಗದ ನಿರ್ಮಿತಿ. ಅದರ ಸೌಂದರ್ಯ, ಸಂಕೀರ್ಣತೆಗೆ ಅದೇ ಸಾಟಿ. ತಲೆಕೆಳಗಾಗಿ ನಿರ್ಮಿತವಾದ ದೇವಾಲಯ ಬಾವಿಯ ನೀರಿನ ಪಾವಿತ್ರ್ಯವನ್ನು ಸೂಚಿಸುತ್ತದೆ. ಇಲ್ಲಿ ಕಲೆಯ ಔನ್ನತ್ಯವನ್ನು ಸೂಸುವ ಶಿಲ್ಪಗಳು ಏಳು ಅಂತಸ್ತಿನಲ್ಲಿ ಅಡಕವಾಗಿವೆ. ಐನೂರಕ್ಕೂ ಹೆಚ್ಚಿನ ತತ್ತ್ವ ಶಿಲ್ಪಗಳು, ಸಾವಿರಕ್ಕಿಂತಲೂ ಹೆಚ್ಚಿನ ಪೌರಾಣಿಕ ಚಿತ್ರಗಳು ಈ ಏಳು ಅಂತಸ್ತಿನಲ್ಲಿ ನಿರ್ಮಾಣವಾಗಿವೆ. ಹೆಚ್ಚು ಆಳವಿರುವ(23 ಮೀ) ನಾಲ್ಕನೇ ಹಂತ ಆಯತಾಕಾರದಲ್ಲಿದೆ(9.4 ಮೀ X 9.5 ಮೀ). ಒಟ್ಟಾರೆ ಸ್ಥಳದ ಪಶ್ಚಿಮ ಭಾಗದಲ್ಲಿರುವ ಬಾವಿಯಲ್ಲಿ 10 ಮೀ ವ್ಯಾಸ ಮತ್ತು 30 ಮೀ ಆಳದ ಬಾಣದಂತಹ ರಚನೆ ಅದರ ಸೌಂದರ್ಯಕ್ಕೊಂದು ಮೆರುಗು ನೀಡಿದೆ. ಮೆಟ್ಟಿಲು ಬಾವಿ ರಚನೆಯ ಎಲ್ಲಾ ಮೂಲತತ್ತ್ವಗಳನ್ನು ಸಂಯೋಜಿಸಿ ರಚಿಸಿದಂತೆ ದೃಗ್ಗೋಚರಿಸುವ ಬಾವಿಯಲ್ಲಿ ನೆಲದ ಮಟ್ಟದಿಂದ ಆರಂಭವಾಗುವ ಮೆಟ್ಟಿಲುಗಳ ಕಾರಿಡಾರ್, ಒಂದಕ್ಕಿಂತ ಹೆಚ್ಚು ಅಂತಸ್ತುಗಳುಳ್ಳ ನಾಲ್ಕು ಸರಣಿ ಮಂಟಪಗಳು, ಬಾಣಾದಾಕಾರದ ಸುರಂಗದಂತಹ ರಚನೆಯ ಬಾವಿಯನ್ನು ಹೊಂದಿರುವ ಈ ಅದ್ಭುತ ಮೆಟ್ಟಿಲು ಬಾವಿ ಯುನೆಸ್ಕೋ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದುದರಲ್ಲಿ ಆಶ್ಚರ್ಯವೇನಿಲ್ಲ.

                ಕೇವಲ ಸಿಹಿ ನೀರ ಸ್ತ್ರೋತವಾಗಿ, ಸ್ಥಿರ ರಚನೆಯಾಗಿ, ಅದ್ಭುತ ವಾಸ್ತುಶಿಲ್ಪವಾಗಿ ಮಾತ್ರವೇ ರಾಣಿ ಕೀ ವಾವ್ ನಮ್ಮ ಗಮನ ಸೆಳೆಯುವುದಿಲ್ಲ; ಅಲ್ಲಿ ಶಿಲ್ಪಗಳ ಅಲಂಕರಣವಿದೆ; ಪಾಂಡಿತ್ಯಪೂರ್ಣ ಕಲಾತ್ಮಕತೆಯಿದೆ. ಅದರ ಸಾಂಕೇತಿಕ ಲಕ್ಷಣಗಳು ಹಾಗೂ ಕೆತ್ತಿರುವ ಶಿಲ್ಪಗಳು ಮತ್ತು ತುಂಬಿರುವ ಹಾಗೂ ಖಾಲಿ ಜಾಗಗಳ ಪ್ರಮಾಣಗಳು ಬಾವಿಯ ಒಳಭಾಗಕ್ಕೆ ತನ್ನದೇ ಆದ ವಿಶಿಷ್ಟ ಸೌಂದರ್ಯವನ್ನು ಕೊಡಮಾಡಿ ಒಂದು ಸಮತಟ್ಟಾದ ಜಾಗದಿಂದ ಹಠಾತ್ತನೆ ಇಳಿಯುವ ಗ್ರಹಿಕೆಯುಂಟಾಗುಂತೆ ಮಾಡುತ್ತದೆ. ಗುಜರಾತಿನ 120 ಮೆಟ್ಟಿಲು ಬಾವಿಗಳಲ್ಲಿ ಅತ್ಯಂತ ಹಳೆಯ ಹಾಗೂ ಆಳವಿರುವ ಬಾವಿ ಈ "ರಾಣಿ ಕೀ ವಾವ್". ಬಾವಿಯ ಕೊನೆಯ ಮಹಡಿ ಕಲ್ಲು ಮಣ್ಣುಗಳಿಂದ ಮುಚ್ಚಿ ಹೋಗಿದ್ದು, 30 ಕಿಮೀ ಉದ್ದದ ಸುರಂಗಮಾರ್ಗ ಇದನ್ನು ಹತ್ತಿರದ ಸಿಧ್ಪುರ್ ನಗರದೊಂದಿಗೆ ಸಂಪರ್ಕಿಸುತ್ತದೆ. ಸರಸ್ವತಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಈ ಬಾವಿಯು ಹೂಳಿನಿಂದ ಮುಚ್ಚಿಹೋಗಿತ್ತು. ಅಂತಹ ಪ್ರವಾಹ ಸಂಭವಿಸಿದ್ದಾಗ್ಯೂ ಇಲ್ಲಿನ ಕಲಾಕೃತಿಗಳಿಗೆ ಕಿಂಚಿತ್ತೂ ಹಾನಿ ಸಂಭವಿಸದ್ದನ್ನು ನೋಡಿ ಪುರಾತತ್ತ್ವ ಇಲಾಖೆ ಇಲ್ಲಿ ವ್ಯಾಪಕ ಉತ್ಖನನ ನಡೆಸಿತ್ತು. ಆಗ ಪತ್ತೆಯಾಯಿತು ಈ ಅದ್ಭುತ ವಿನ್ಯಾಸದ ಬಾವಿ. ಐವತ್ತು ವರ್ಷಗಳ ಹಿಂದೆ ಈ ಬಾವಿಯ ಸುತ್ತ ಅನೇಕ ಔಷಧೀಯ ಗಿಡಗಳಿದ್ದವು. ಆ ಕಾರಣದಿಂದ ಬಾವಿಯ ನೀರು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿತ್ತು. ಇಂತಹ ಹತ್ತು ಹಲವು ವಿಶೇಷತೆಗಳಿಂದಾಗಿ ಈ ಬಾವಿ 2014ರಲ್ಲಿ ಜಾಗತಿಕ ಪರ೦ಪರೆಯ ತಾಣವಾಗಿ ಯುನೆಸ್ಕೋದಿಂದ ಗುರುತಿಸಿಕೊಂಡಿತ್ತು. ಹದಿಮೂರನೇ ಶತಮಾನದಲ್ಲಿ ಭೂಫಲಕಗಳ ಬದಲಾವಣೆಯಿಂದ ಈ ಭಾಗದಲ್ಲಿ ಹರಿಯುತ್ತಿದ್ದ ಸರಸ್ವತಿ ನದೀ ಪಾತ್ರದಲ್ಲಿ ವ್ಯತ್ಯಯವಾದರೂ ರಾಣಿ ಕೀ ವಾವ್'ನಲ್ಲೇನೂ ಬದಲಾವಣೆಯಾಗಲಿಲ್ಲ. ಹಿಂದಿನಂತೆ ಕಾರ್ಯ ನಿರ್ವಹಿಸಲು ಆ ಬಳಿಕ ಸರಸ್ವತಿಯಲ್ಲುಂಟಾದ ಪ್ರವಾಹವೇ ಕಾರಣವಾಯಿತಾದರೂ ಈ ಪ್ರವಾಹದಿಂದ ಬಾವಿಯಲ್ಲಿನ ಕಲಾಕೃತಿಗಳಿಗಾಗಲೀ ಬಾವಿಯ ಮೂಲ ವಿನ್ಯಾಸಕ್ಕಾಗಲೀ ಯಾವುದೇ ಹಾನಿಯಾಗಲಿಲ್ಲ. ಪ್ರಾಕೃತಿಕ ವಿಕೋಪಗಳಾವುವು ಈ ಬಾವಿಗೆ ತೊಡಕಾಗಲಿಕ್ಕಿಲ್ಲ. ಆದರೆ ಅತಿಯಾದ ನಗರೀಕರಣದಂತಹ ಮನುಷ್ಯಕೃತ ಪ್ರಮಾದಗಳಿಂದ ಈ ಬಾವಿ ಇತಿಹಾಸವಾದರೆ ಅಚ್ಚರಿಯಿಲ್ಲ. ಈಗ ಈ ರಾಣಿ ಕೀ ವಾವ್ ರಿಸರ್ವ್ ಬ್ಯಾಂಕ್ ಮುದ್ರಿಸುತ್ತಿರುವ ಹೊಸ, ನೀಲಿ ಬಣ್ಣದ ನೂರರ ನೋಟಿನಲ್ಲಿ ಕಾಣಿಸಿಕೊಳ್ಳಲಿದೆ. ಹಾಂ, ಸರಸ್ವತಿಯ ಬಿಂದುಗಳು ಭಾರತೀಯರ ಮನೆಮನಗಳಲ್ಲಿ ಮತ್ತೊಮ್ಮೆ ಪ್ರವಹಿಸಲಿವೆ.

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ

ಅಂಗರಾಗದಿ ಜೀವತಳೆದ ಅನುರಾಗದ ಮೂರ್ತಿ


             ಜಾನಪದ ಕವಿಗಳಿಂದ ಜ್ಞಾತ ಕವಿಗಳವರೆಗೂ, ಬೀಸುಕಲ್ಲಿನೆದುರು ಕೂತ ಗೃಹಿಣಿಯಿಂದ ಕೀಬೋರ್ಡ್ ಕುಟ್ಟುವ ತರುಣಿಯವರೆಗೂ, ಶಾಲಾಬಾಲನಿಂದ ಜ್ಞಾನವೃದ್ಧರವರೆಗೆ ಜಾತಿ-ಮತ-ವರ್ಗ-ಲಿಂಗ, ಬಡವ-ಬಲ್ಲಿದ ತಾರತಮ್ಯಗಳಿಲ್ಲದೆ ಅಬಾಲವೃದ್ಧರಾದಿಯಾಗಿ ಪೂಜಿಸಲ್ಪಡುವ ದೇವತೆ ಗಣೇಶ. ಸಮಯ-ಅಸಮಯಗಳೆನ್ನುವ ನಿಯಮಗಳಿಲ್ಲದೆ ಸರ್ವತ್ರ ಪೂಜಿಸಲ್ಪಡುವ ದೇವರಾತ. ನಿರಾಕಾರವಾಗಿಯೂ ಆಕಾರವಾಗಿಯೂ; ಸಣ್ಣ ಅಡಿಕೆಯಲ್ಲಿಯೂ ಧಾನ್ಯದ ರಾಶಿಯಲ್ಲಿಯೂ; ಮಂಡಲದಲ್ಲಿಯೂ ಚಿತ್ರ ಪಟದಲ್ಲೂ; ಯಜ್ಞಕುಂಡವ ಬೆಳಗುವ ಅಗ್ನಿಯಾಗಿಯೂ ಮಣ್ಣಿನ ವಿಗ್ರಹವಾಗಿಯೂ ಅವನನ್ನು ಕಂಡು ಪಾವನವಾಗುತ್ತದೆ ಜನತೆ. ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಸಂಕಷ್ಟಹರ ಗಣೇಶ. ದುರ್ಜನರಿಗೆ ಅಡಿಗಡಿಗೆ ವಿಘ್ನ ಒಡ್ಡುವ ವಿಘ್ನರಾಜ. ಹೀಗಾಗಿಯೇ  ಯಾವುದೇ ಮಂಗಳಕಾರ್ಯದ ಮುನ್ನ ಅವನಿಗೆ ಪೂಜೆ; ಅಗ್ರಪೂಜೆ! ಪಿಳ್ಳಾರತಿಯಿಂದ ಪರಮಾಣುತನಕ ಅವನದ್ದು ಅಗಣಿತ, ಅಸಂಖ್ಯಾತ ಅವತಾರಗಳು. ಅವನು ಶೇಷಶಾಯಿಯೂ ಹೌದು, ವೃಷಭವಾಹನನೂ ಹೌದು; ಕಮಲಾಸನನೂ ಹೌದು.ಈ ಎಲ್ಲಾ ಅವತಾರಗಳನ್ನು ಕೊಟ್ಟವರೂ ನಾವೇ. ಕಾರಣ ಅವ ನಮ್ಮ ಹೃನ್ಮನದ ದೈವ. ನಮ್ಮೆಲ್ಲರೊಡನಾಡುವ ದೈವ. ಮಣ್ಣಿನ ಮಗ! ಯಕ್ಷವೇಶಧಾರಿಯಾಗಿ, ಸಂಘದ ಸ್ವಯಂಸೇವಕನಾಗಿ, ಕ್ರಿಕೆಟ್ ಬ್ಯಾಟು ಹಿಡಿದ ದಾಂಡಿಗನಾಗಿ, ಸುಖ ಶಯನದಲ್ಲಿ, ನೃತ್ಯಗಾರನಾಗಿ, ಗಿಟಾರ್, ಕೊಳಲು ಹಿಡಿದುಕೊಂಡು, ಟೋಪಿ ಧರಿಸಿ, ಮೊಂಡು ಹಟ ಮಾಡುವ ಬಾಲನಾಗಿ, ಕನ್ನಡಕ ಧಾರಿಯಾಗಿ, ಬಾಲ-ತರುಣ-ತರುಣಿ-ಪ್ರೌಢನಾಗಿ, ಕವಿ, ಕಲಾಕಾರನಾಗಿ ಎಷ್ಟೆಲ್ಲಾ ಬಗೆಯಲ್ಲಿ ಅವನನ್ನು ನಾವು ಚಿತ್ರಿಸಿದ್ದೇವೆ!

                ಅಕ್ಕಿ ಹರಡಿದ ಹರಿವಾಣದಲ್ಲಿ ಮುದ್ದು ಗಣಪನನ್ನು ತರುವಾಗಲೇ ಅದು ಉತ್ಸವ ರೂಪ ತಳೆದಿರುತ್ತದೆ. ಒಂದು ಕುಟುಂಬವನ್ನು, ಒಂದಿಡೀ ಸಮಾಜವನ್ನು ಒಗ್ಗೂಡಿಸುತ್ತಾನೆ ಗಣೇಶ. ಪೂಜೆಯ ಜೊತೆಗೆ ಲಂಬೋದರನಿಗೆ ಪ್ರಿಯವಾದ ಕಬ್ಬು, ಕಡಲೆ, ಕಡುಬು, ಚಕ್ಕುಲಿ, ಉಂಡೆಗಳ ನೈವೇದ್ಯ! ಅನಂತ ಚತುರ್ದಶಿಯ ಶುಭಪರ್ವದಂದು ಈ ಉತ್ಸವದ ಉತ್ಸಾಹ ಮೇರೆ ಮುಟ್ಟುತ್ತದೆ. ನದಿಯಲ್ಲೋ, ಕೆರೆಯಲ್ಲೋ, ಬಾವಿಯಲ್ಲೋ ವಿಸರ್ಜಿಸುವ ವೇಳೆಗೆ ಏನೋ ಅಮೂಲ್ಯ ವಸ್ತುವನ್ನು ಕಳೆದುಕೊಂಡ ಭಾವ! ಅರೇ, ತಾವೇ ಶೃದ್ಧಾ ಭಕ್ತಿಗಳಿಂದ ತಂದು ಮನೆಯ ಮಗುವಂತೆ ಪೂಜಿಸಿದ ದೇವರ ಚಂದ ಪುತ್ಥಳಿಯನ್ನು ವಿಗ್ರಹಾರಾಧಕ ಹಿಂದೂಗಳೇ ನೀರಿಗೆ ಹಾಕುವುದೆಂದರೆ!ಅಲ್ಲಿದೆ ಗುಟ್ಟು! ಮಣ್ಣಿನ ಮೂಲಕ ಮೂರ್ತಿಯನ್ನು ರೂಪಿಸಿ ಪೂಜಿಸುವಾಗ ಪ್ರಕೃತಿಯಲ್ಲಿ ಅಡಗಿರುವ ಸುಪ್ತ ಚೇತನವನ್ನು ತನ್ನಲ್ಲಿ ಆವಾಹಿಸಿಕೊಳ್ಳುತ್ತಾನೆ ಹಿಂದೂ. ಮೂಲಾಧಾರವೇ ಗಣೇಶನ ಸ್ಥಾನ. ಗಣೇಶನ ಪೂಜೆಯಲ್ಲಿನ ಒಂದೊಂದು ಮಂತ್ರವೂ ಒಂದೊಂದು ತಂತ್ರ. ಕುಂಡಲಿನಿ ಮೇಲೇರುವುದು ಈ ಮೂಲಾಧಾರದಿಂದಲೇ. ಅದಕ್ಕಾಗಿಯೇ ಈ ಮೂಲಾಧಾರಸ್ಥಿತನಿಗೆ ಅಗ್ರ ಪೂಜೆ. ದೇವಾಲಯಗಳಲ್ಲಿ ಭಕ್ತರಿಗೆ ಮೊದಲು ದರ್ಶನವೀವ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ತಂತ್ರಶಾಸ್ತ್ರದ ಮುಂದುವರಿದ ಭಾಗವೇ. ಸುಪ್ತಾವಸ್ಥೆಯಲ್ಲಿರುವ ಶಿವನನ್ನು ಎಚ್ಚರಿಸಿ ಬ್ರಹ್ಮಾಂಡದ ಸೃಷ್ಟಿಗೆ ಕಾರಣಕರ್ತಳಾಗುವ ಕುಂಡಲಿನಿ ಶಕ್ತಿಯನ್ನು ಸಂಕೇತಿಸುವ ಪಾರ್ವತಿ ತನ್ನ ಶಕ್ತಿಸ್ರೋತದ ದ್ವಾರದಲ್ಲಿ ವೇದಮಂತ್ರಗಳ ಅಧಿಪತಿಯಾಗಿರುವ ಗಣಪತಿಯನ್ನು ಸೃಷ್ಟಿಸಿ ನೆಲೆಗೊಳಿಸಿದಳು. ತನ್ನ ಮೈಯ ಅಂಗರಾಗದ ಆಕೃತಿಗೆ ಜೀವಕೊಟ್ಟು ಅದು ಅನುರಾಗದ ಸುತನಾದುದರ ಅರ್ಥ ಇದು. "ಚಿಕ್ಕೆರೆಲಿ ಬಿದ್ದು ದೊಡ್ಕೆರೇಲಿ ಏಳುವುದೆಂದರೆ" ಮತ್ತೊಂದು ಕೆರೆಯ ಮಣ್ಣಿನಲಿ ಮತ್ತೆ ರೂಪುಗೊಳ್ಳುತ್ತಾನೆ. ಕಾಲ ಸರಿದಂತೆ ಕಾಯ ಎನ್ನುವುದು ಬಿದ್ದು ಹೋಗುತ್ತದೆ; ಮಣ್ಣಾಗಿ ಹೋಗುತ್ತದೆ; ಆದರೆ ಆತ್ಮ ಮಾತ್ರ ಕಾಲಾತೀತ; ಕರ್ಮಫಲಕ್ಕೆ ಅನುಸಾರವಾಗಿ ಪುನರಪಿ ಜನನಂ ಪುನರಪಿ ಮರಣಂ. ಕಲ್ಲು ಮಣ್ಣುಗಳ ವಿಗ್ರಹಗಳನ್ನು ಹಿಂದೂಗಳು ಪೂಜಿಸುವುದರ ಹಿಂದಿನ ಅರ್ಥವನ್ನು, ಸೃಷ್ಟಿಯಲ್ಲಿನ ಜೀವನ ಪ್ರಕ್ರಿಯೆಯನ್ನು ಅದ್ಭುತವಾಗಿ ಕಟ್ಟಿಕೊಡುವ ಮಹಾಕಾವ್ಯ ಈ ಗಣಪನ ಹಬ್ಬ!

                 ವಿಘ್ನಕರ್ತನಾಗಿದ್ದ ಗಣಪತಿ ವಿಘ್ನಹರ್ತನಾಗಿ ಅಗ್ರಪೂಜೆಗೆ ಸಿದ್ಧನಾದದ್ದು ಕ್ರಿ.ಶ ಏಳನೆಯ ಶತಮಾನದಲ್ಲಿ. ಕಾವ್ಯಾರಂಭದಲ್ಲಿ ಗಣಪತಿಯ ಸ್ತುತಿಯನ್ನು ಮೊದಲು ಮಾಡಿದ್ದು ಭವಭೂತಿ. ಗಣೇಶನ ಸ್ತುತಿಯು ಮೊದಲು ಕಾಣಿಸಿಕೊಳ್ಳುವುದು ಮಾಲತೀ-ಮಾಧವ ಮತ್ತು ಉತ್ತರರಾಮಚರಿತದಲ್ಲಿ. ಕ್ರಿ.ಶ. 7-8ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನೆಲೆಯೂರಿದ್ದ ಶೈವ ಪಂಥಾನುಯಾಯಿಗಳಾದ ಲಕುಲೀಶ, ಕಾಳಾಮುಖ, ಪಾಶುಪತರು ಅನೇಕ ಶಿವಾಲಯಗಳನ್ನು ನಿರ್ವಿುಸಿ, ಗಣೇಶನನ್ನು ಪ್ರತಿಷ್ಠಾಪಿಸಿದರು. ಜ್ಞಾನೇಶ್ವರಾದಿಯಾಗಿ ಸಂತರಿಂದ ಸ್ತುತಿಸಲ್ಪಟ್ಟ ಗಣಪತಿ ಹವನಗಳಲ್ಲೂ ಪ್ರಾಮುಖ್ಯತೆ ಪಡೆದು ವೇದಗಳ ಬ್ರಹ್ಮಣಸ್ಪತಿಯ ಸ್ಥಾನವನ್ನು ತನ್ನದಾಗಿಸಿಕೊಂಡ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಮೂಲಪುರುಷ ಕರ್ಹಾಡ ಮೂಲದ ಮೋರೋಪಂತ. 17ನೇ ಶತಮಾನದಲ್ಲಿ ಈತ ಪುಣೆಯ ಹತ್ತಿರ ಗಣೇಶನ ವಿಗ್ರಹ ಸ್ಥಾಪಿಸಿ ಚತುರ್ಥಿಯಿಂದ ಅನಂತಚತುರ್ದಶಿಯವರೆಗೆ ಪೂಜಿಸಿ ವಿಸರ್ಜಿಸುವ ಸಂಪ್ರದಾಯ ಹುಟ್ಟುಹಾಕಿದ. ಅಂದಿನಿಂದ ಆ ಊರು "ಮೋರೆಗಾಮ್' ಆಯಿತು. ಗಣೇಶ ವಿಸರ್ಜನೆಯ ಹಿಂದಿನ ಪ್ರಸಿದ್ಧ ಘೋಷಣೆ ("ಗಣಪತಿ ಬಾಪ್ಪಾ ಮೋರಯಾ | ಪುಡಚಾ ವರ್ಷಾ ಲೌಕರ್ ಯಾ |")ಯ ಮೂಲ ಇದು. ಪೇಶ್ವೆಗಳ ಮನೆದೇವತೆಯಾಗಿ, ಬಾದಾಮಿಯ ಚಾಲುಕ್ಯರಿಗೆ ವಾತಾಪಿ ಗಣಪತಿಯಾಗಿ ವಿಜಯನಗರಕ್ಕೂ ಬಂದು ಪ್ರತಿಷ್ಠಾಪನೆಗೊಂಡ ಗಣಪತಿ. ಇಂದು ಗಣೇಶ ಸೃಷ್ಟಿ , ಸ್ಥಿತಿ, ಲಯಗಳಿಗೆ ಕಾರಣೀ ಭೂತನಾದ ಸರ್ವಸ್ಥಿತ, ಸರ್ವಗತ, ಸರ್ವವ್ಯಾಪ್ತನಾದ ಬ್ರಹ್ಮಾಂಡರೂಪಿಯೇ ಆಗಿ, ವೇದಕಾಲದ ಬ್ರಹ್ಮಣಸ್ಪತಿಯಾಗಿ, ವಿದ್ಯಾಧಿಪತಿಯೂ ವಿಘ್ನನಿವಾರಕನೂ ಆಗಿ ಜಾತಿಭೇದ ಪಂಥಭೇದವಿಲ್ಲದೆ ಪೂಜೆಗೊಳ್ಳುವ ದೇವಾಧಿದೇವ. ಭಾರತದಲ್ಲಷ್ಟೇ ಅಲ್ಲದೆ, ಭಾರತದ ಸುತ್ತಮುತ್ತಲ ದೇಶಗಳಲ್ಲಿ ಆರಾಧಿಸಲ್ಪಡುವ ಗಣಪನ ದೇಗುಲಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಲಂಕಾ ಹಾಗೂ ನೇಪಾಳದಲ್ಲಿ ಕಾಣಸಿಗುತ್ತವೆ. ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿರುವ ದೇವಾಲಯಗಳಲ್ಲಿಯೂ ಗಣೇಶನಿಗೆ ಅಗ್ರಸ್ಥಾನ. ಶಿವನು ಬ್ರಾಹ್ಮಣರ ದೇವತೆ, ಮಾಧವ ಕ್ಷತ್ರಿಯರದ್ದು. ಬ್ರಹ್ಮ ವೈಶ್ಯರದ್ದು. ಗಣನಾಯಕ ಶೂದ್ರರದ್ದು ಎಂಬ ಮಾತೊಂದು ತಮಿಳುನಾಡಿನಲ್ಲಿದೆ. ಗಣಪತಿಯು ಶೂದ್ರರಲ್ಲಿ ಪ್ರಿಯನಾದರೂ ಬ್ರಾಹ್ಮಣರೂಪದಲ್ಲೇ ಬಿಂಬಿತನಾಗಿರುವುದು ವಿಶೇಷ!

                  ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪಾರ್ವತಿ ಸೌಭಾಗ್ಯ ದೇವತೆ. ತವರಿನ ಹಂಬಲದಿಂದ ಪ್ರತಿವರುಷವೂ ಮನೆಗೆ ಬರುವ ಮಗಳು ಅವಳು. ಗಣಪತಿ ತಾಯಿಯೊಡನೆ ಬರುವ ಮುದ್ದು ಕುವರ ಎನ್ನುವ ಅರ್ಥದಲ್ಲಿ ಮಣ್ಣಿನ ಅಥವಾ ಲೋಹದ ಮೂರ್ತಿ, ಅರಿಶಿನದಿಂದ ಮಾಡಿದ ಗೌರಿ, ಸಗಣಿಯಿಂದ ಮಾಡಿದ ಅವಳ ಮಗ ಗಣಪನನ್ನು ಪೂಜಿಸುವ ಪದ್ದತಿ ಇಲ್ಲಿ ಬೆಳೆದು ಬಂದಿದೆ. ಹೀಗೆ ನಮ್ಮ ಪರಂಪರೆಯಲ್ಲಿ ಗಣೇಶನು ಎಲ್ಲೋ ಇರುವ ದೇವನಾಗಲ್ಲದೆ, ವರುಷ ವರುಷವೂ ಮನೆ-ಮನೆಗೆ ಬರುತ್ತಿರುವ ಆತ್ಮೀಯ ಅತಿಥಿಯಾಗಿ ಸರ್ವಜನಪ್ರಿಯನಾಗಿದ್ದಾನೆ. ಗಣೇಶನನ್ನು ರಾಷ್ಟ್ರೀಯ ಐಕ್ಯತೆಯ ಕೊಂಡಿಯಾಗಿ ಕಂಡ ಶಂಕರರು ಗಣೇಶ ಪಂಚರತ್ನವನ್ನು ರಚಿಸಿದರಲ್ಲದೆ ಪಂಚಾಯತನದಲ್ಲಿ ಸ್ಥಾನವನ್ನು ನೀಡಿದರು. ಎಲ್ಲರನ್ನೂ ಸಂಮೋಹನಗೊಳಿಸಿದ ಅವನ ವ್ಯಕ್ತಿತ್ವವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ತಿಲಕರು ಅವನನ್ನು ಭಾರತೀಯರನ್ನು ಒಟ್ಟುಗೂಡಿಸುವ ರಾಷ್ಟ್ರೀಯ ಐಕ್ಯತೆಯ ವಿಗ್ರಹವಾಗಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿಬಿಟ್ಟರು. ಆ ಪ್ರವಾಹ ಇಂದಿಗೂ ಅವಿಚ್ಛಿನ್ನವಾಗಿ ಮುಂದುವರಿದಿದೆ.