ಪುಟಗಳು

ಮಂಗಳವಾರ, ಏಪ್ರಿಲ್ 9, 2013

ಪತಂಜಲಿ ಚರಿತೆ



ಪತಂಜಲಿ ಚರಿತೆ:
             ಒಂದು ದಿನ ಶ್ರೀ ಹರಿ ಹರ್ಷಚಿತ್ತನಾಗಿ ಮೈಮರೆತು ನಲಿಯುವುದಕ್ಕಾರಂಭಿಸಿದ. ಅವನ ದೇಹದ ಮಿಡುಕ, ನಡುಕದಿಂದ ಭಾರ ತಾಳಲಾರದೆ ಆದಿಶೇಷ ಚಿಂತಿತನಾಗಿ ನಾರಾಯಣನಲ್ಲಿ ತನ್ನ ಚಿಂತೆಯನ್ನು ಬಿನ್ನವಿಸಿಕೊಳ್ಳುತ್ತಾನೆ. ಎಷ್ಟು ಭಾರವನ್ನಾದರೂ ಹೊರಬಲ್ಲ ಅನಂತನಾದ ನನ್ನ ಹೆಸರನ್ನೇ ಸುಳ್ಳು ಮಾಡುತ್ತೀಯ ಭಗವಂತ ಎಂದು ಅಲವತ್ತುಕೊಳ್ಳಲು ಚಿದಾನಂದನು ನಟರಾಜನ ತಾಂಡವ ನೃತ್ಯವನ್ನು ನೋಡಿ ಬಂದ ನಾನು ಅದನ್ನೇ ಚಿತ್ತದೊಳು ಮತ್ತೆ ಮತ್ತೆ ನೆನಪಿಸಿಕೊಳ್ಳಲು ದೇಹ ಪುಳಕಗೊಂಡು ಮಿಡಿಯುತ್ತಿದೆ. ಅದಕ್ಕೆ ನಿನಗೆ ಭಾರವೆನಿಸುತ್ತಿದೆ ಎಂದು ಸಮಧಾನಿಸುತ್ತಾನೆ. ಇದ ಕೇಳಿದ ಶೇಷ ನವರಸಗಳ ಅಧಿಪತಿಗೇ ಆನಂದ, ಪುಳಕ ಉಂಟುಮಾಡಿದ ಕೌಶಲಕ್ಕೆ ಕಾರಣವಾದ  ಕೃತ್ತಿವಾಸನ ವಿಭವ ನಾಟ್ಯವನ್ನು ನೋಡಬೇಕೆಂದು ಹಾತೊರೆಯುತ್ತಾನೆ. ಆಗ ಮಹಾವಿಷ್ಣು ಮಗೂ ಅದು ಶಿವನು ಪ್ರಸನ್ನಗೊಂಡಾಗ ಪ್ರಕಟಗೊಳ್ಳುವ ಪ್ರಕ್ರಿಯೆ. ಅದನ್ನು ಸಾಮಾನ್ಯರಿಗೆ ಸುಲಭಸಾಧ್ಯವಲ್ಲ. ತಾಂಡವ ಶಿವನ ಪ್ರಸನ್ನತೆಯ ಪ್ರತೀಕ. ಆದ್ದರಿಂದ ಅದನ್ನು ನೋಡಬೇಕಾದರೆ ನೀಲಕಂಠನನ್ನು ಪ್ರಸನ್ನಗೊಳಿಸಬೇಕು. ಅದಕ್ಕಾಗಿ ನೀನು ಸಾಧನಾ ಕ್ಷೇತ್ರವೆನಿಸಿದ ಭುವಿಯಲ್ಲಿ ತಪಃಗೈಯಬೇಕು. ತನ್ಮೂಲಕ ಶಿವನನ್ನು ಒಲಿಸಿಕೊಳ್ಳಬೇಕು ಎನ್ನಲು ಶೇಷ ಸ್ವಾಮಿ ಆನಂದದ ಅನುಭೂತಿಯನ್ನು ಪಡೆಯಲು ಯಾರಾದರೂ ಆಶಿಸಿದರೆ ಅದು ತಪ್ಪಲ್ಲ ತಾನೇ. ಸಚ್ಚಿದಾನಂದನಾದ ನಿನಗೆ ಅನಿರ್ವಚನೀಯ ಆನಂದವನ್ನು ಉಂಟು ಮಾಡಿದ ಮೃಢನ ತಾಂಡವವನ್ನು ನಾನು ನೋಡಿ ಅನುಭವಿಸಬೇಕು. ಅಂತಹ ಶಿವನ ಪ್ರಸನ್ನತೆಯ ಪ್ರಸಾದವನ್ನು ಪಡೆಯಲು ನಿನ್ನ ತೊರೆದು ಇಳೆಗೆ ತೆರಳಿ ತಪವಗೈಯ್ಯಲು ಅಪ್ಪಣೆ ಕೊಡು ಎಂದು ಅಂಗಲಾಚುತ್ತಾನೆ. ಆಗ ಹರಿಯು ಯೋಗಾರೂಢನ ತಾಂಡವದ ಮಹಿಮೆಯನ್ನು ನೀನು ಮಾತ್ರ ಕಲಿಯುವುದಲ್ಲ. ಲೋಕಕ್ಕೆಲ್ಲಾ ಅದನ್ನು ಪ್ರಚುರಪಡಿಸು. ಯೋಗ ಶಾಸ್ತ್ರವನ್ನು ಲೋಕಮುಖಕ್ಕೆ ಅಭಿವ್ಯಕ್ತಿಸಲು  ಯೋಗ್ಯ ಯೋನಿಯಲ್ಲಿ ಜನಿಸು ಎಂದು ಆಶೀರ್ವದಿಸಿ ಕಳುಹಿಸುತ್ತಾನೆ.

                ಹಡೆವವಳಾದ್ದರಿಂದಲೇ ಅವಳು ಹೆಣ್ಣು ಅಂತ ಕರೆಯಲ್ಪಡುವವಳು. ಋಷಿಪತ್ನಿ ಗೋನಿಕಾಳಿಗೆ ತಾನು ಬಂಜೆಯಾಗೇ ಸಾಯುತ್ತೇನೆಯೇ ಎಂಬ ವೇದನೆ. ಪ್ರತಿನಿತ್ಯ ಸೂರ್ಯನಾರಾಯಣನನ್ನು ಭಜಿಸುತ್ತಾ ಮಗುವೊಂದನ್ನು ಕರುಣಿಸೆಂದು ಗೋಗರೆಯುತ್ತಾ ಶಿವನ ತಪದಲ್ಲಿ ನಿರತಳು. ಅಂದು ಭಗವಾನ್ ಭಾಸ್ಕರನಿಗೆ ಅರ್ಘ್ಯವನ್ನೀಯಲು ಅನುವಾಗಿಹಳು. ಕಣ್ಣುಗಳನ್ನು ಮುಚ್ಚಿಕೊಂಡು ಹಸ್ತಗಳಲ್ಲಿ ಅಘನಾಶಿನಿಯನ್ನು ತುಂಬಿಕೊಂಡು ಇನ್ನೇನು ಕಣ್ಣು ತೆರೆದು ಅರ್ಘ್ಯವನ್ನರ್ಪಿಸಲು ನೋಡುತ್ತಾಳೆ ಕಿರುನಾಗವೊಂದಿದೆ ಜಲದಲ್ಲಿ. ಬೆದರಿ ಚೆಲ್ಲಿದಳು ಲಲನೆ. ಆಗ ನಾಗವು ಶೇಷನಾಗಿ ಬೆದರಿದರು ತಾಯೆ. ಅರ್ಘ್ಯಜಲದಲ್ಲಿ ಕಾಣಿಸಿಕೊಂಡ ನನ್ನನ್ನು ಅರ್ಥೈಸಿಕೊಳ್ಳುವುದಕ್ಕೆ ಅಸಮರ್ಥಳಾಗಿ ನೀನು ಎಸೆದೆ. ಕಂದನಿಗಾಗಿ ಹಪಹಪಿಸುತ್ತಿರುವ ನಿನ್ನಂತಹ ಪುಣ್ಯವಂತೆಯ ಗರ್ಭದಲ್ಲಿ ಜನಿಸಲು ನನಗೆ ಅವಕಾಶ ಕೊಡು ತಾಯೇ. ನನ್ನನ್ನು ನಿನ್ನ ಮಗನೆಂದು ಒಪ್ಪಿಕೊಳ್ಳುವೆಯಾ? ಎಂದು ಧೈರ್ಯ ತುಂಬಿ ಧೈನ್ಯನಾಗಿ ಕೇಳುತ್ತಾನೆ ಶೇಷ.

ಆಗ ಸಂತೋಷಗೊಂಡ ಮಹಾತಾಯಿ ಅರ್ಕನಿಗೆ ಅರ್ಘ್ಯವನೀಯುವ ವೇಳೆಯಲ್ಲಿ ನನ್ನ ಅಂಜಲಿಯಿಂದ ಪತನಗೊಂಡ ನೀನು ನನ್ನ ಮಗನಾಗಿ "ಪತಂಜಲಿ" ಎಂಬ ಹೆಸರಿನಿಂದ ಲೋಕವಿಖ್ಯಾತನಾಗು ಎಂದು ಬರಸೆಳೆದು ಅಪ್ಪಿಕೊಳ್ಳುತ್ತಾಳೆ.

               ಹೀಗೆ ಗೋನಿಕಾಳ ಮಗನಾಗಿ ಸಂಜನಿಸಿದ ಪತಂಜಲಿ ಶುಕ್ಲ ಪಕ್ಷದ ಚಂದ್ರನಂತೆ ಬೆಳೆಯುತ್ತಿರಲು ತನ್ನ ಕಾರ್ಯದ ನೆನಪಾಗಿ ಅಮ್ಮಾ ನಾನು ಭೂತಳಕ್ಕೆ ಬಂದದ್ದು ಭೂತನಾಥನ ಮೆಚ್ಚಿಸಲು. ಹಾಗಾಗಿ ನನ್ನನ್ನು ಆಶೀರ್ವದಿಸಿ ಕಳುಹಿಸು ಎನ್ನಲು ತಾಯಿ ಸಾಧನೆಯನ್ನು ಮಾಡಿ ಜಗದ್ವಂದ್ಯನಾಗು ಎಂದು ಹಾರೈಸಿ ಕಳುಹಿಸುತ್ತಾಳೆ.

ಪತಂಜಲಿ ಚಿದಂಬರ ವನದಲ್ಲಿ ಬಂದು ನಿಂದು ಇಂದುಧರನ ಧ್ಯಾನಿಸಿ ಪಂಚಾಗ್ನಿ ಮಧ್ಯದಲ್ಲಿ ತನ್ನ ಅಷ್ಟ ಚಕ್ರಗಳನ್ನು ಸ್ವಾಧೀನಪಡಿಸಿಕೊಂಡು ತಾಂಡವ ರಾಜ ಚಿದಂಬರನ ಧ್ಯಾನದಲ್ಲಿ ತೊಡಗುತ್ತಾನೆ.
"ಶಂಭು ಶಂಕರ ಪಾಹಿ ಗೌರೀಶ|
ಕೈಲಾಸವಾಸ ಕಂಬು ಕಂಧರ ಪಾಹಿ ಭೂತೇಶ ||
ಅಂಬುಜಾಸನ ಮುಖ್ಯವಂದ್ಯ ಶುಂಭ ಮರ್ಧಿನಿ ವರನೇ ಕರುಣಾಲಂಬ|
ದೌರ್ಜಟೀ ಭಕ್ತವತ್ಸಲ ಅಂಬುಧೀ ಪ್ರಿಯ ಮುಕುಟ ಭೂಷಣ||
           ಇತ್ತ ಪತಂಜಲಿಯ ತಪದಿಂದಾಗಿ ವಾತಾವರಣದ ತಾಪ ಹೆಚ್ಚಲು ಚಿದಂಬರ ವನದಲ್ಲಿ ಸ್ವೇಚ್ಛೆಯಿಂದ ಸಂಚರಿಸುತ್ತಿದ್ದ ನಂದಿಕೇಶ ತಾಪ ತಾಳದೇ ಕಾರಣ ತಿಳಿದು ಪತಂಜಲಿಯ ಮೇಲೆ ಕ್ರೋಧಗೊಂಡು ಎರಗಲು ಬಂದ. ಆಗ ಪತಂಜಲಿಯು ನಾನು ರುದ್ರನ ಅಂದರೆ " ರುದಸ್ಯ ರೋದನಂ ದ್ರಾವತೀ"-ಅಳುವವರ ಅಳಲನ್ನು ಹೊಡೆದೋಡಿಸುವವನ ತಪದಲ್ಲಿ ನಿರತನಾಗಿದ್ದೇನೆ. ನನಗೇಕೆ ಹಿಂಸೆ ನೀಡಲು ಮುಂದಾಗುತ್ತೀ ಎಂದು ಪ್ರಶ್ಣಿಸುತ್ತಾನೆ. ಆಗ ನಂದೀಶ ಅಪಹಾಸ್ಯ ಮಾಡುತ್ತಾ ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಪ್ರತಿ ಆಕ್ರಮಣ ಮಾಡಲು ನಿನ್ನಲ್ಲಿ ಆಯುಧಗಳಾಗಲೀ, ನನ್ನಂತೆ ಕೊಂಬಾಗಲೀ, ಅಥವಾ ಉಗುರು, ಹಲ್ಲು ಇಂತಹ ಆಕ್ರಮಣಕಾರಿ ಅಂಗಗಳಾಗಲೀ ಇಲ್ಲ. ನೀನು ಪಾಪದ ಪ್ರಾಣಿಗಳಂತೆ ಪಲಾಯನವೂ ಮಾಡಲಾರೆ. ಯಾಕೆಂದರೆ ಕಾಲಿಲ್ಲ. ಮನುಷ್ಯನ ಹಾಗೆ ಪಳಗಿಸಿ ಇಟ್ಟುಕೊಳ್ಳಲಾರೆ. ಯಾಕೆಂದರೆ ನೀನು ತೆವಳುವವ ಎನ್ನುತ್ತಾನೆ. ಅಂತಹ ನೀನು ಶಿವನೊಲುಮೆ ಪಡೆಯುವುದಾದರೂ ಹೇಗೆ ಎಂದು ಹೀಯಾಳಿಸಿದಾಗ ಪತಂಜಲಿ ಅಯ್ಯಾ ನಂದೀಶ! ಮಾತಾನಾಡುವುದಕ್ಕೆ ಸಹಾಯ ಮಾಡುತ್ತವೆ ಮುಖದ ೫೨ ಸ್ನಾಯುಗಳು ಜೊತೆಯಲ್ಲೇ ಓಷ್ಟ, ತಾಲು, ಜಿಹ್ವ, ದಂತಗಳು ಹಾಗೂ ಕಂಠ ಇವೆಲ್ಲಾ ಇರುವುದರಿಂದ ಮನುಷ್ಯನಿಗೆ ಮಾತಾನಾಡಲು ಸಾಧ್ಯವಾಗಿರುವುದು. ಇತರ ಪ್ರಾಣಿಗಳಿಗೆ ಅದು ಸಾಧ್ಯವಿಲ್ಲ. ಒಂದು ಲಿಪಿ ಸಿದ್ಧ ಆಗಬೇಕಾದರೆ ಕೊಂಬು, ಕಾಲು, ಬಾಲ ಇವೆಲ್ಲವೂ ಬೇಕು. ಹಾಗಾದಾಗಲೇ ಒಂದು ಭಾಷೆಯ ರಚನೆ ಸಾಧ್ಯ. ಮಹಾಶೇಷನಾದ ನನಗೆ ಕೊಂಬಿಲ್ಲ, ಕಾಲಿಲ್ಲ. ನಾನು ಪನ್ನಗನು. ತಲೆಯಿಂದ ಬಾಲದವರೆಗೆ ಹಬ್ಬಿರುವ ನನ್ನ ಪಕ್ಕೆಲುಬುಗಳಿಂದಲೇ ತೆವಳುತ್ತಾ ಸಂಚಾರ ಮಾಡುವವ ನಾನು. ನೀನು ನೋಡುತ್ತಿರು, ಈಗ ಪತಂಜಲಿ ಎಂಬ ಹೆಸರಿನಿಂದ ಧರೆಗಿಳಿದ ನಾನು ಕೊಂಬು ಕಾಲು ಎರಡೂ ಇಲ್ಲದ ಅಕ್ಷರಗಳನ್ನೇ ಬಳಸಿ ಶ್ಲೋಕ ರಚಿಸಿ ಆ ಶಶಿಚೂಡನನ್ನು ಮೆಚ್ಚಿಸಿ ಒಲಿಸಿಕೊಳ್ಳುತ್ತೇನೆ. ಒಂದು ವೇಳೆ ಇದಕ್ಕೆ ತಪ್ಪಿದರೆ ನಾನು ಅನಂತನಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ ಪತಂಜಲಿ.

ಸನ್ನುತಾಂಗ ಪತಂಜಲಿಯು ಕೋಡು ಚರಣಗಳಿಲ್ಲದ ಶ್ಲೋಕ ರಚಿಸಿ ಚಿನ್ಮಯನ ಧ್ಯಾನದಲ್ಲಿ ತೊಡಗಿರಲೇಕೋಭಾವದಲಿ
"ಪರಮ ದಯಾಕರ ಮೃಗಧರ ವರ ಗಂಗಾಧರ ಹರನೆ|
ಉರಭೂಷಣ ಫಾಲನೇತ್ರ ವರ ಹೃದಯನೇ ವಾಸಾ||
ಸುರವೃಂದ ಕಿರೀಟಮನೀ ವರ ನೀರಾ|
ಜಿತಮಾರ ಪರ್ವತವಾಸಾ||
ಸುಂದರೇಶ ಗಿರೀಶ ಪರಾತ್ಪರ ಭವಹರ|
ಶಂಭೋ ಮಹಾದೇವಾ ಶಂಭೋ ಮಹಾದೇವಾ||
ಶಂಕರ ಗಿರಿಜಾರಮಣ ಅಂಬೋರುಹ ಲೋಚನ|
ಪಾದಾಂಬುಜ ದರ್ಶನಂ ದೇಹಿ||"

ಮೊರೆ ಕೈಲಾಸದ ದೊರೆಯ ಕರಣಗಳಿಗೆ ತಲುಪಲು ಉರಗಭೂಷಣ ಭಕ್ತವತ್ಸಲ ಕರುಣಾಸಾಗರ ಉರಗರೊಡೆಯನಿಗೆ ಪ್ರತ್ಯಕ್ಷನಾಗಿ ಅವನ ಮನದಭೀಷ್ಠವನ್ನು ಪೂರೈಸಲು ತೆರಳುತ್ತಾನೆ. ಮಾರ್ಗ ಮಧ್ಯೆ ಕಾಳಿಕೆ ನನ್ನ ಆಳ್ವಿಕೆಗೊಳಪಟ್ಟ ಪ್ರದೇಶವನ್ನು ನೀನು ಅನುಮತಿ ಇಲ್ಲದೇ ಪ್ರವೇಶಿಸಿದ್ದೇಯೆ. ಅದಕ್ಕಾಗಿ ನಟಶೇಖರನಾದ ನೀನು ನಾಟ್ಯದಲ್ಲಿ ನನ್ನನ್ನು ಸೋಲಿಸಿದರೆ ಆಗ ನಿನಗೆ ಮಾರ್ಗವಾಗಿ ತೆರಳಲು ಅನುಮತಿ ನೀಡುತ್ತೇನೆ. ಎಂದು ಪಂಥಾಹ್ವಾನ ಮಾಡುತ್ತಾಳೆ. ನಾಟ್ಯದಲ್ಲಿ ಕಾಳಿಕೆಯನ್ನು ಸೋಲಿಸಿದ್ದು ಮಾತ್ರವಲ್ಲದೇ ಹೆಣ್ಣಿನ ಇತಿಮಿತಿಗಳನ್ನು, ಸ್ವರೂಪಜ್ಞಾನವನ್ನು ಮನವರಿಕೆ ಮಾಡಿಕೊಡುತ್ತಾನೆ ಸ್ವಯಂಭೂ.ಪ್ರತ್ಯಕ್ಷನಾಗಿ ಬಂದು ನಿಂದ ತಂದೆಯನ್ನು ಕಂಡ ಪತಂಜಲಿ ತನಗೆ ತಾಂಡವದ ಮಹಾದರ್ಶನವನ್ನು ನೀಡಬೇಕೆಂದು ಮೊರೆಯಿಡುತ್ತಾನೆ. ಸಂತೋಷದಿಂದ ಕರುಣಾಕರ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ.

ಯೋಗಿ ಭೂಷಣ ಶಿವನ ತಾಂಡವದ ಒಂದೊಂದು ಭಂಗಿಯೂ ಪತಂಜಲಿಗೆ ಯೋಗದ ಒಂದೊಂದು ಆಸನವಾಗಿ ಗೋಚರಿಸುತ್ತದೆ.
ಭುವಿಯ ಪ್ರಾಕೃತ ಭಾಷೆ ಡಮರಿನ ರವದಿ ಸಂಸ್ಕೃತವಾದ ಪರಿಯಂತೆ ಶಿವನ ತನುವಿನ್ಯಾಸ ಅರುಜೆ(ಪತಂಜಲಿ)ಗೆ ಯೋಗ ಕಲ್ಪಿಸಿತು. ಶಿವನ ತನು ವಿನ್ಯಾಸ, ಉಸಿರಿನ ನಿಯಂತ್ರಣ, ಅಂಗಾಂಗಗಳ ಭಂಗಿ, ಶರೀರದ ಸಮತೋಲನ ಇವೆಲ್ಲವೂ ಯೋಗಿಗೆ ಯೋಗವಾಗಿ ಗೋಚರಿಸಿತು. ಅಧಿ ಆತ್ಮಿಕ ತಾಪದಿಂದ ಬಳಲುತ್ತಿರುವ ಲೋಕದ ಜನರ ತಾಪವನ್ನು ಶಮನ ಮಾಡಲು ಶಿವನ ತಾಂಡವದ ರಹಸ್ಯ ಶಿವನ ಆಜ್ಞೆಯಂತೆ "ಪತಂಜಲಿ ದರ್ಶನ" ವಾಗಿ ಯೋಗಾಸನಗಳಾಗಿ ಯೋಗಿ ಪತಂಜಲಿಯಿಂದ ಹೊರಹೊಮ್ಮಿತು. ಶೇಷ ಮಾಡಿದ ವಿಶೇಷ ಕಾರ್ಯ ಅದು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ