ಪುಟಗಳು

ಶನಿವಾರ, ಜೂನ್ 7, 2014

ಸುರನದಿ

ತನ್ನ ಹಿರಿಯರಾದ ಸಗರ ಪುತ್ರರ ಸದ್ಗತಿಗೆ ಸನ್ಮತಿಯೊಳು ಮಾಡಿದ ತಪಕ್ಕೊಲಿದು ಸುರಲೋಕದಿಂದ ಧರೆಗಿಳಿದಳು. ಶಿವನನ್ನೇ ಧರಾಶಾಯಿ ಮಾಡಹೊರಟವಳು ಹರನ ಮುಡಿಯಲ್ಲೇ ಅಡಗಬೇಕಾಯಿತು. ಭಕ್ತನ ಕೋರಿಕೆಗೆ ಮನ್ನಿಸಿದ ಶಿವ ಆಕೆಯನ್ನು ನಿಧಾನವಾಗಿ ಹರಿಯಬಿಟ್ಟ! ಜಹ್ನುವಿನ ಆಶ್ರಮವನ್ನು ತನ್ನೊಡಲೊಳಗೆ ಮುಳುಗಿಸಿದ ತಪ್ಪಿಗೆ ಅವನ ಕಿವಿಯೊಳಗೆ ಬಂಧಿತಳಾದಳು. ಮತ್ತದೇ ಪ್ರಾರ್ಥನೆ ಫಲಿಸಿ ಜಾಹ್ನವಿಯಾದಳು. ಅದು ಭಗೀರಥ ಪ್ರಯತ್ನ! ಶಂತನುವಿನ ಕೋರಿಕೆಗೆ ಮನ್ನಿಸಿ ಭೀಷ್ಮನಂಥ ವೀರ "ಪಿತಾಮಹನನ್ನು" ಸೂರ್ಯವಂಶಕ್ಕರ್ಪಿಸಿದಳು. ಭರತ ಖಂಡದ ಪಾಲಿಗೆ ಸಂಜೀವಿನಿಯಾದಳು.
ಅವಳ ಉಪಕಾರಕ್ಕೆ ನಾವು ಮಾಡಿದ್ದು ಬರಿಯ ಅಪಕಾರವೇ!  ಶಿವ(ಹಿಮ)ನಾಲಯದ ಔಷಧೀಯ ಗುಣಗಳನ್ನು ತನ್ನೊಡಲೊಳಗಿಟ್ಟು ಪ್ರವಹಿಸಿದ ಜೀವದಾಯಿನಿಗೆ ನಾವು ಅರ್ಪಿಸಿದ್ದು ವಿಷವನ್ನೇ! ಕಾರ್ಖಾನೆಗಳ ವಿಷತ್ಯಾಜ್ಯ, ಶವಗಳು, ಅದಕ್ಕಿಂತಲೂ ಮುಖ್ಯವಾಗಿ ಗೋಮಾತೆಯ ಕಣ್ಣೀರು ಜೊತೆಯಾದ ನೆತ್ತರು! ಅಷ್ಟು ಸುಲಭವಲ್ಲ ಆಕೆಯನ್ನು "ನಿರ್ಮಲ"ಗೊಳಿಸುವುದು!
ಧರೆಗಿಳಿದ ಸುರನದಿ ನಮೋ ವಾಗ್ಝರಿಯಲ್ಲೂ ಪ್ರವಹಿಸಿದಳು. ಭಾಜಪಾದ ಚುನಾವಣಾ ಪ್ರಣಾಳಿಕೆಯಲ್ಲೂ. ಕೊಟ್ಟ ಮಾತಿಗೆ ಕಟಿಬದ್ಧವಾಗಿ "ನರೇಂದ್ರ" "ಉಮೆ"ಗೆ ಜವಾಬ್ದಾರಿ ವಹಿಸಿದ್ದಾನೆ. ಕೇವಲ ಒಬ್ಬಳು ಉಮೆಯ ಕೆಲಸವಲ್ಲವಿದು...ಎಲ್ಲಾ "ಉಮೆಯರು" ಹಾಗೂ ಆಕೆಯ ಮಕ್ಕಳು ಮಾಡಬೇಕಾದ-ಮಾಡುತ್ತಲೇ ಇರಬೇಕಾದ ಜವಾಬ್ದಾರಿ! ಒಂದು ಗಂಗೆಯಲ್ಲ...ನಮ್ಮ ಪಾಲಿಗೆ ಜೀವದಾಯಿನಿಯಾಗಿದ್ದ-ಆಗಿರುವ-ಆಗಬಹುದಾದ ಎಲ್ಲ ಗಂಗೆಯರು ನಿರ್ಮಲವಾಗಿ ಹರಿಯಲೇಬೇಕು.
ಗಂಗೆಯನ್ನು ಭುವಿಗಿಳಿಸಿದ ಭಗೀರಥನ ವಂಶಜರಿಗೆ ಗಂಗಾ ಶುದ್ಧೀಕರಣ ಅಸಾಧ್ಯವೇನಲ್ಲ! ದೇವನದಿ ಸರಸ್ವತಿಯನ್ನೇ ಪುನ:ಚೇತನಗೊಳಿಸಿದವನಿಗೆ ಗಂಗೆಯೊಡಲನ್ನು ಪಾವನ ಮಾಡುವುದು ಕಷ್ಟವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ