ಪುಟಗಳು

ಮಂಗಳವಾರ, ಜೂನ್ 24, 2014

ಅಮರ ಪ್ರೇಮಿಯಲ್ಲ...ವಿಕೃತ ಕಾಮಿ ಆತ!

ಅಮರ ಪ್ರೇಮಿಯಲ್ಲ...ವಿಕೃತ ಕಾಮಿ ಆತ!

           
ಸುಳ್ಳನ್ನು ಸಾವಿರ ಸಲ ಹೇಳಿದಾಗ ಅದು ನಿಜವಾಗಿ ಬಿಡುವ ಅಪಾಯವಿರುತ್ತದೆ ಎಂಬುದು ಭಾರತದ ಇತಿಹಾಸದ ಮಟ್ಟಿಗೆ ಎಷ್ಟು ಸತ್ಯ! ಸುಳ್ಳು ಸಾವಿರ ಮೈಲುಗಟ್ಟಲೇ ಓಡಿದಾಗಲೂ ಸತ್ಯ ತಾನಿದ್ದಲ್ಲೇ ತೆವಳುತ್ತಿರುತ್ತದೆ. ಅದಕ್ಕೆ ನಮ್ಮಂತಹ ಗತ ಮರೆತ ಕೃತಘ್ನರೂ ಕಾರಣ!

ತಾಜ್ ಮಹಲ್! ಅಲ್ಲಲ್ಲಾ ಅದು ತೇಜೋಮಹಾಲಯ...
                    ನಾನಿಲ್ಲಿ ಷಹಜಾಹಾನ್ ಹುಟ್ಟುವ ಮೊದಲೇ ಕಟ್ಟಲ್ಪಟ್ಟಿದ್ದ ರಾಜಾ ಮಾನ್ ಸಿಂಗನ ರಾಜಮಹಲ್ ತೇಜೋಮಹಾಲಯವೇ ತಾಜ್ ಮಹಲ್ ಆಗಿ ತೇಬಾಜಿಯ ವಿಗ್ರಹ ಧ್ವಂಸವಾಗಿ ಕೆಳಗಿನ ಅಂತಸ್ತಿನ ಕೋಣೆಗಳೆಲ್ಲಾ ಶಾಶ್ವತವಾಗಿ ಮುಚ್ಚಲ್ಪಟ್ಟ ಬಗ್ಗೆ ಹೇಳ ಹೊರಟಿಲ್ಲ. ಹೆಚ್ಚಿನವರಿಗೆ ಅದು ತಿಳಿದದ್ದೇ ಆದರೂ ತಿಳಿದವರೂ ಅದನ್ನು ತಾಜ್ ಮಹಲ್ ಎಂದೇ ಕರೆಯುತ್ತಿರುವುದು ವಿಪರ್ಯಾಸ. ಅದರ ಬದಲು ವಸ್ತುನಿಷ್ಟ ಇತಿಹಾಸಕಾರ ಗ್ರಂಥಗಳನ್ನು ಆಕರವಾಗಿರಿಸಿ ಇನ್ನೊಂದು ಮಗ್ಗುಲಿಂದ ಷಹಜಾಹಾನನ ವ್ಯಕ್ತಿತ್ವದ ಬಗ್ಗೆ ಹೇಳಹೊರಟಿದ್ದೇನೆ. ನಮ್ಮ ಇತಿಹಾಸಕಾರರು(?) ಎನ್ನುವ ಪಟ್ಟ ಹೊತ್ತವರು ಹೇಳಿದ ಹಾಗೆ, ನಮ್ಮ ಪಠ್ಯಪುಸ್ತಕಗಳಲ್ಲಿ ಇರುವ ರೀತಿಯಲ್ಲಿ ಷಹಜಾಹಾನ್ ಎಂಬ ಮೊಘಲ್ ದೊರೆ ಅಮರಪ್ರೇಮಿಯೇ? ಆತ ಮುಮ್ತಾಜಳನ್ನು ಅತಿಯಾಗಿ ಪ್ರೀತಿಸುತ್ತಿದ್ದುದು ಹೌದೇ? ಆ ರೀತಿಯಾಗಿದ್ದಲ್ಲಿ ಆತ ಯಾಕೆ ಎಲ್ಲಾ ಸ್ತ್ರೀಯರನ್ನೂ ಭೋಗದ ವಸ್ತುವಾಗಿ ಕಂಡ?ಸ್ವಂತ ಮಗಳನ್ನೇ ಕಾಮದಾಸೆಗೆ ಬಳಸಿಕೊಂಡವ ಅಮರ ಪ್ರೇಮಿಯಾಗಲು ಹೇಗೆ ಸಾಧ್ಯ? ಅಂತಹ ಕಾಮಾಂಧ ತನ್ನ ಹೆರಿಗೆಯಂತ್ರಕ್ಕೊಂದು ಪ್ರೇಮಮಹಲ್ ಕಟ್ಟಿಯಾನೇ?

           ಬೇಗಂ ಸಾಹಿಬಾ ಜಹನಾರಾ! ಷಹಜಾಹಾನನ ಹಿರಿಯ ಮಗಳು. ಅಪ್ರತಿಮ ಸುಂದರಿ. ಆದರೆ ಅವಳ ಸೌಂದರ್ಯವೇ ಅವಳಿಗೆ ಶಾಪವಾಗಿ ಕಾಡಿತು. ತನ್ನ ಸುಂದರಾಂಗಿ ಮಗಳನ್ನು ಅಪ್ಪ ಅತಿಯಾಗಿ ಪ್ರೀತಿಸುತ್ತಿದ್ದ. ಅವರಿಬ್ಬರ ಸಂಬಂಧ ನಂಬಲಸಾಧ್ಯವಾಗಿ ಬೆಳೆದಿತ್ತು."ಸ್ವಯಂ ತಾನೇ ನೆಟ್ಟ ಮರದಿಂದ ಹಣ್ಣುಗಳನ್ನು ಆರಿಸಿಕೊಳ್ಳುವ ಹಕ್ಕನ್ನು ರಾಜನಿಗೆ ನಿರಾಕರಿಸುವುದು ಅನ್ಯಾಯ" ಎಂಬ ಅವರ ನ್ಯಾಯಶಾಸ್ತ್ರದಲ್ಲಿ ತಜ್ಞರಾಗಿದ್ದ ಮತೀಯ ಮುಂದಾಳುಗಳ ನಿರ್ಣಯವನ್ನು ಇದಕ್ಕೆ ಸಮರ್ಥನೆಯಾಗಿ ಕೊಡುತ್ತಿದ್ದ. ಇದನ್ನು ಹೇಳಿದ್ದು ಯಾರೋ ಎಲ್ಲೋ ಕೂತು ಯಾವುದೋ ಪುಸ್ತಕವನ್ನು ಓದಿ ಬರೆದವನಲ್ಲ.
ಷಾಜಹಾನನ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಫ್ರಾನ್ಸಿನ ಫ್ರಾನ್ಸ್ ವಾ ಬೆರ್ನಿಯರ್ ತನ್ನ "ಟ್ರಾವೆಲ್ಸ್ ಇನ್ ದ ಮೊಘಲ್ ಎಂಪಾಯರ್" ಗ್ರಂಥದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾನೆ. ತನ್ನ ಹದಿನೇಳನೆಯ ವಯಸ್ಸಿನಲ್ಲಿ ತಾಯಿ ತೀರಿಕೊಂಡಾಗಿನಿಂದ ಮೂವತ್ತೈದು ವರ್ಷಗಳ ಕಾಲ ತಂದೆಯ ಜೊತೆ ಜೊತೆಯಲ್ಲೇ ಇದ್ದು ಅವನ ಯೋಗಕ್ಷೇಮವನ್ನು, ಬೇಕು ಬೇಡಗಳನ್ನೆಲ್ಲಾ ನೋಡಿಕೊಂಡು, ಕೊನೆಗೆ ಸೆರೆಯಲ್ಲಿ ಸಹಿತ ಅವನನ್ನು ಬಿಡದೆ ಅವನ ಸಾವಿನ ಕ್ಷಣದವರೆಗೆ ಜಹನಾರಾ ತಂದೆಯ ಸೇವೆ ಮಾಡಿದಳು. ಹೆಂಡತಿ ಸತ್ತ ಮೇಲೆ ಕೋಟಿ ರೂಪಾಯಿ ಬೆಲೆ ಬಾಳುವ ಅವಳ ಆಸ್ತಿಯಲ್ಲಿ ಅರ್ಧ ಭಾಗವನ್ನು ಜಹನಾರಾಳೊಬ್ಬಳಿಗೇ ನೀಡಿ ಉಳಿದ ಅರ್ಧವನ್ನು ಮಿಕ್ಕ ಆರು ಮಂದಿ ಮಕ್ಕಳಿಗೆ ಹಂಚಿದ!ಜಹನಾರಾಳ ವಾರ್ಷಿಕ ಭತ್ತೆಯನ್ನು ಆರು ಲಕ್ಷಗಳಿಂದ ಒಮ್ಮೆಲೇ ಹತ್ತು ಲಕ್ಷಗಳಿಗೆ ಏರಿಸಿದ್ದಲ್ಲದೆ ಅಲ್ಲಿಯವರೆಗೆ ಹೆಂಡತಿಯ ಹತ್ತಿರ ಭದ್ರವಾಗಿರಿಸಿದ್ದ ರಾಜಮುದ್ರೆಯನ್ನೂ ಅವಳಿಗೆ ಒಪ್ಪಿಸಿದ. ಒಂದು ಸಲ ಅಕಸ್ಮಾತ್ ಅವಳ ಮೈ ಬೆಂಕಿಯಲ್ಲಿ ತೀವ್ರವಾಗಿ ಸುಟ್ಟಾಗ ಎಲ್ಲೆಲ್ಲಿಂದಲೋ ವೈದ್ಯರನ್ನು ಕರೆಸಿ ಲಕ್ಷಗಟ್ಟಲೆ ಖರ್ಚು ಮಾಡಿ ಚಿಕಿತ್ಸೆ ಮಾಡಿಸಿ ಸನಿಹವೇ ಇದ್ದು ಶುಶ್ರೂಷೆ ಮಾಡಿ ಮತ್ತೆ ಅವಳು ಮೊದಲಿನ ರೂಪಕ್ಕೆ ಬರುವಂತೆ ಮಾಡಿದ. ಆದರೆ ಇವೆಲ್ಲವೂ ತಂದೆ ಮಗಳ ನಡುವಿನ ಅನುಬಂಧವಾಗಿರದೇ ಕೀಳು ಅಕ್ರಮ ಸಂಬಂಧವಾಗಿ ಬೆಳೆದಿತ್ತು ಎಂದು ಬೆರ್ನಿಯರ್ ತನ್ನ ಗ್ರಂಥದಲ್ಲಿ ಹೇಳಿದ್ದಾನೆ. ದಶಕಕ್ಕೂ ಮೀರಿ ರಾಜವೈದ್ಯನಾಗಿದ್ದು ಆಸ್ಥಾನದ ಆಗುಹೋಗುಗಳನ್ನು ಹತ್ತಿರದಿಂದ ವೀಕ್ಷಿಸಿದವನ ಮಾತನ್ನು ತಳ್ಳಿಹಾಕುವುದು ಹೇಗೆ? ಕೇವಲ ಬೆರ್ನಿಯರ್ ಮಾತ್ರವಲ್ಲ, 1762ರಲ್ಲಿ ಪ್ರಕಟಗೊಂಡ "ಬೆಶ್ರಿವಿಂಗ್...ವಾಂಡಿ ಲೆವೆನ್ಸ್ ದೆರ್ ಗ್ರೂಟ್ ಮೊಘಲ್ಸ್" ಎಂಬ ತನ್ನ ಗ್ರಂಥದಲ್ಲಿ ವ್ಯಾಲೆಂಟೀನ್ ಕೂಡಾ ಇದೇ ವಿಷಯವನ್ನು ತಿಳಿಸಿದ್ದಾನೆ. ಅಲ್ಲದೆ ವಿನ್ಸೆಂಟ್ ಸ್ಮಿಥ್ ಕೂಡಾ ಇದನ್ನು ಉಲ್ಲೇಖಿಸಿದ್ದಾನೆ. ಕ್ಯಾತ್ರೋ ಕೂಡಾ ತನ್ನ ಗ್ರಂಥದಲ್ಲಿ ಇದನ್ನೇ ದೃಢೀಕರಿಸಿದ್ದಾನೆ.

             ಹಾಗಾದರೆ ಮುಮ್ತಾಜಳ ಜೊತೆ ಸಂಸಾರ ಮಾಡಲಿಲ್ಲವೇ? ಮಾಡಿದ್ದ! 1612 ರಲ್ಲಿ ಅವಳನ್ನು ಮದುವೆಯಾದಾಗ ಷಹಜಾಹಾನನಿಗೆ ಇಪ್ಪತ್ತು ವರ್ಷ. ಹದಿನೆಂಟರ ಹರೆಯದ ಮುಮ್ತಾಜಳ ನಿಜವಾದ ಹೆಸರು ಅರ್ಜುಮಂದ್ ಜಾನ್ ಬೇಗಂ ಎಂದಾಗಿತ್ತು. ಹತ್ತೊಂಬತ್ತು ವರ್ಷಗಳ ಸಂಸಾರ ಜೀವನದಲ್ಲಿ ಹದಿನಾಲ್ಕು ಮಕ್ಕಳನ್ನು ಹೆತ್ತ ಆಕೆ ಹದಿನಾಲ್ಕನೆಯ ಮಗುವನ್ನು ಹಡೆದ ಕೂಡಲೇ ಒಂದೂವರೆ ದಿವಸ ವಿಲವಿಲ ಒದ್ದಾಡಿ ಹೆರಿಗೆ ಕೋಣೆಯಲ್ಲೇ ಕೊನೆಯುಸಿರೆಳೆದ ಆಕೆಯನ್ನು ಈ ಕಾಮಾಂಧ ಹೆರಿಗೆ ಯಂತ್ರವಾಗಿಯೇ ಪರಿಗಣಿಸಿದ್ದ ಎಂಬುದು ಸುಸ್ಪಷ್ಟ. ಮುಮ್ತಾಜಳಿಗಿಂತ ಮೊದಲೇ ಪರ್ಷಿಯನ್ ರಾಜಕುಮಾರಿಯನ್ನೂ ಮುಮ್ತಾಜಳ ನಂತರ ರಜಪೂತ ಸ್ತ್ರೀಯರನ್ನು ಮದುವೆ ಆದವನದ್ದು ಅಮರ ಪ್ರೇಮವೆಂದರೆ ಯಾರು ನಂಬಿಯಾರು?
ನೌರೋಜ್ ಉತ್ಸವ ನಡೆದಾಗ ಪ್ರತಿವರ್ಷ ಮೀನಾಬಜಾರ್ ಎಂಬ ಮಹಿಳೆಯರ ಉತ್ಸವ ನಡೆಯುತ್ತಿತ್ತು. ಅಲ್ಲಿ ಗಂಡು ಮಕ್ಕಳು ಹೋಗುವಂತಿರಲಿಲ್ಲ. ಆದರೆ ಅಕ್ಬರ್ ತನ್ನ ಕಾಲದಲ್ಲಿ ಸ್ತ್ರೀವೇಷ ಧರಿಸಿ ಮನ ತೃಪ್ತಿಯಾಗುವವರೆಗೆ ತಿರುಗಾಡಿ ಇಷ್ಟಬಂದ ಹುಡುಗಿಯರನ್ನು ಆನಂತರ ತನ್ನ ಅಂತಃಪುರಕ್ಕೆ ಕರೆಸಿಕೊಳ್ಳುತ್ತಿದ್ದ. ಮೊಮ್ಮಗ ಅಮರಪ್ರೇಮಿ ನೇರವಾಗಿಯೇ ಮೆರವಣಿಗೆಯಲ್ಲಿ ಈ ಮೀನಾಬಜಾರಿಗೆ ಹೋಗುತ್ತಿದ್ದ.ಕೆಲವು ಮಹಿಳೆಯರು ಆತ ಕುಳಿತ ಸಿಂಹಾಸನವನ್ನು ಹೊತ್ತರೆ ವೇಶ್ಯೆಯರು ಬಂಗಾರದ ಹಿಡಿಯ ಕೋಲುಗಳನ್ನು ಹಿಡಿದು ಹಿಂದೆ ಮತ್ತು ಮುಂದೆ ಬಳುಕುತ್ತಾ ಹೆಜ್ಜೆ ಹಾಕಿದರೆ ಖೋಜಾಗಳ ಕೋಲಾಹಲ, ಸಂಗೀತಗಾರರ ವಾದ್ಯಗಳ ನಡುವೆ ಮಹಾ ವಿಜೃಂಬಣೆಯಿಂದ ಮೀನಾ ಬಜಾರಿಗೆ ಷಹಜಾಹಾನನ ಆಗಮನವಾಗುತ್ತಿತ್ತು.
ಅಲ್ಲಿ ಅಂಗಡಿಗಳಲ್ಲಿ ಕೂರುತ್ತಿದ್ದವರು ಅಂತಿಂಥ ಹೆಂಗಸರಲ್ಲ.ಆಸ್ಥಾನ ಪ್ರಮುಖರ ಪತ್ನಿಯರು ಅವರ ಸಮೀಪ ಬಂಧುಗಳು!ಯಾರ ಮೇಲಾದರೂ ಮನಸ್ಸಾದಲ್ಲಿ ಆ ಅಂಗಡಿಯಲ್ಲಿ ಯಾವುದಾದರೊಂದು ವಸ್ತುವನ್ನು ಕೊಂಡು ಮುಂದೆ ಸಾಗುವಾಗ ತನ್ನ ಸೇವಕರಿಗೆ ಕಣ್ಸನ್ನೆ ಮಾಡುತ್ತಿದ್ದ. ಉಳಿದ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಪೂರೈಸುತ್ತಿದ್ದರು! ಸಾಯಂಕಾಲದ ಹೊತ್ತಿಗೆ ಆ ಹೆಣ್ಣುಮಗಳು ಇಷ್ಟವಿಲ್ಲದಿದ್ದರೂ ಜನಾನಾದಲ್ಲಿ ಹಾಜರಿರಬೇಕಾಗಿತ್ತು. ತಪ್ಪಿದಲ್ಲಿ ಅವಳದ್ದು ನರಕಯಾತನೆಯೇ ಸರಿ! ಮಹಾರಾಜ ತೃಪ್ತಿಪಡುವಷ್ಟು ಸುಖ ನೀಡಿ ಕೊಟ್ಟ ಕಾಣಿಕೆಯನ್ನು ಪಡೆದು ಮರಳಬೇಕಾಗಿತ್ತು. ಕೆಲವರಂತೂ ಶಾಶ್ವತವಾಗಿ ಅಲ್ಲೇ  ಉಳಿಯಬೇಕಾಗಿತ್ತು!
                       ಮಾತ್ರವಲ್ಲದೆ ಹಾಡುಗಾರ್ತಿಯರನ್ನು, ನೃತ್ಯಗಾರ್ತಿಯರನ್ನೂ ಅಂತಃಪುರಕ್ಕೆ ಕರೆಸಿಕೊಂಡು ಚಿತ್ರವಿಚಿತ್ರ ಮನ್ಮಥ ಲೀಲೆ ನಡೆಸಿ ಅವರನ್ನು ಸಾಗಹಾಕುತ್ತಿದ್ದ. ಎಲ್ಲಾ ಸ್ತ್ರೀಯರನ್ನು ಭೋಗದ ವಸ್ತುವಿನಂತೆ ನೋಡುವ ಅರಸನ ಆಟಾಟೋಪವನ್ನು ಕಂಡು ಆಸ್ಥಾನಿಕರು ಅಸಹ್ಯಪಟ್ಟುಕೊಳ್ಳುತ್ತಿದ್ದರಂತೆ. ಕೀಳು ದರ್ಜೆಯ ಹೆಣ್ಣುಗಳೊಂದಿಗೂ ಕೂಡಾ ಅಸಭ್ಯವಾಗಿ ಏಕೆ ಭೋಗಿಸುತ್ತೀರಿ ಎಂದು ಕೇಳಿದರೆ "ಯಾವ ಅಂಗಡಿಯಿಂದ ಬಂದರೂ ಮಿಠಾಯಿಗಳು ಚೆನ್ನಾಗಿಯೇ ಇರುತ್ತವೆ" ಎಂದು ಹೇಳಿದನೆಂದು ಆ ಕಾಲದಲ್ಲಿದ್ದ ವಿದೇಶೀ ಪ್ರವಾಸಿ ಮಾನುಸ್ಸಿ(Manucci) ಬರೆದಿದ್ದಾನೆ. ಬಾದಶಹಾನೊಂದಿಗೆ ಮದನ ಕ್ರೀಡೆಗಳಲ್ಲಿ ಪಾಲ್ಗೊಂಡ ಹೆಂಗಸರು ಬೀದಿಯಲ್ಲಿ ಹೋಗುತ್ತಿದ್ದರೆ "ಏಯ್ ಷಹಜಾಹಾನ್ ಭೋಜನವೇ, ಚೆನ್ನಾಗಿದ್ದೀಯಾ?" ಎಂದು ಪೋಲಿಪುಂಡರು ಗೇಲಿ ಮಾಡುತ್ತಿದ್ದರಂತೆ!

            ಮೀನಾಬಜಾರಿನ ಸುರಸುಂದರಿಯರು ಮಾತ್ರವಲ್ಲದೇ ತನ್ನ ಸಮೀಪವರ್ತಿಗಳಾದ ಪ್ರಮುಖ ವ್ಯಕ್ತಿಗಳ ಮನೆಗಳಲ್ಲಿದ್ದ ರೂಪರಾಶಿಗಳ ಮೇಲೂ ಬಾದಶಹಾನ ದೃಷ್ಟಿ ಹರಿಯುತ್ತಿತ್ತು.  ಈ ರಾಸಲೀಲೆಗಳ ವ್ಯವಸ್ಥೆಯಲ್ಲಿ ಜಹನಾರಾ ಎಲ್ಲ ರೀತಿಯಿಂದಲೂ ಸಹಕರಿಸುತ್ತಿದ್ದಳು. ಮಾತ್ರವಲ್ಲ ಒಂದು ಸಲವಂತೂ ತನ್ನ ಸೋದರ ಮಾವನ ಸರಿಸಮಾನನಾದ ಷಯಿಸ್ತೆಖಾನನ ಹೆಂಡತಿಯನ್ನು ತಂದೆಗೆ ವ್ಯವಸ್ಥೆ ಮಾಡಿಕೊಟ್ಟಳಂತೆ. ಮಾನುಸ್ಸಿ(Manucci) ಹೇಳುವಂತೆ ತಂದೆಯ ಸೂಚನೆಯಂತೆ ಜಹನಾರಾ ಆಕೆಯನ್ನು ಔತಣ ಕೂಟಕ್ಕೆ ಆಹ್ವಾನಿಸಿದಳು. ಔತಣದ ನಂತರ ಷಹಜಾಹಾನ್ ಆಕೆಯನ್ನು ಮಾನಭಂಗ ಮಾಡಿದ. ಷಹಜಾಹಾನನ ಕಾಮೋದ್ರೇಕ ಎಷ್ಟಿತ್ತೆಂದರೆ ಎಪ್ಪತ್ತನೇ ವಯಸ್ಸಿನಲ್ಲಿ ಆಗ್ರಾ ಕೋಟೆಯಲ್ಲಿ ಖೈದಿಯಾಗಿದ್ದಾಗ ತಂದೆಯ ಶಯನ ಸುಖದ ಸಲುವಾಗಿ ಔರಂಗಜೇಬ ಅಗತ್ಯವಾದ ದಾಸಿ ಜನರನ್ನು ಕಳುಹಿಸಿಕೊಟ್ಟ!

                          ದಿನನಿತ್ಯ ತನ್ನ ಸೇವೆ ಮಾಡಿದ ಮಗಳು ಜಹನಾರಾಳಿಗೆ ಮದುವೆಯನ್ನೂ ಮಾಡಲಿಲ್ಲ ಆ ಪಾಪಿ! ಎಷ್ಟಾದರೂ ಅವಳದು ಉಪ್ಪು ಖಾರ ತಿಂದ ದೇಹ. ಅದರಲ್ಲೂ ಅವಳ ಒಡನಾಟ ಕಾಮುಕ ಷಹಜಾಹಾನನ ಸ್ವಚ್ಛಂದ ಶೃಂಗಾರ ಲೋಕದಲ್ಲಿ. ಗಿಡ ನೆಟ್ಟವ ಹಣ್ಣುಗಳಿಗೆ ಹಕ್ಕುದಾರ ಎಂಬಂತೆ ಷಹಾಜಹಾನ್ ತನಗೆ ಬೇಕಾದಂತೆ ಅವಳನ್ನು ಉಪಯೋಗಿಸಿಕೊಳ್ಳುತ್ತಿದ್ದ. ಮಗಳೇನಾದರೂ ಅತ್ತಿತ್ತ ಸರಿದರೆ ಸಿಡಿಮಿಡಿಗೊಳ್ಳುತ್ತಿದ್ದ. ಒಮ್ಮೆ ಜಹನಾರಾ ತನ್ನ ಮಹಲಿನಲ್ಲಿ ಮಧ್ಯರಾತ್ರಿ ವೇಳೆ ಸುಖಿಸುತ್ತಿದ್ದಾಗ ವಿಷಯ ಅರಿತ ಮಹಾರಾಜ ಅಲ್ಲಿಗೆ ಬಂದ. ಬೆದರಿದ ಜಹನಾರಾ ಸ್ನಾನಕ್ಕೆ ಬಳಸುವ ಹಂಡೆಯಲ್ಲಿ ಅಡಗಿಕೊಳ್ಳುವಂತೆ ಪ್ರಿಯಕರನಿಗೆ ಸೂಚಿಸಿದಳು. ಅದನ್ನು ಗಮನಿಸಿದ ತಂದೆ ಏನೂ ಅರಿಯದವನಂತೆ ಪ್ರೀತಿ ಸಲ್ಲಾಪದಲ್ಲಿ ತೊಡಗಿ ನಿನ್ನ ಮುಖವೇಕೆ ಬಾಡಿದೆ. ಸ್ನಾನ ಮಾಡಿಲ್ಲವೇನೂ? ಎಂದು ಮುದ್ದು ಮಾಡುತ್ತಾ ಸೇವಕರನ್ನು ಕರೆಸಿ ಹಂಡೆಯನ್ನು ಒಲೆಯ ಮೇಲಿರಿಸಿ ನೀರು ಕಾಯಿಸುವಂತೆ ಹೇಳಿದ. ಒಳಗಿದ್ದವ ಸತ್ತನೆಂದು ಖಚಿತವಾದ ನಂತರ ಅಟ್ಟಹಾಸ ಮಾಡುತ್ತಾ ಅಲ್ಲಿಂದ ಹೊರಟು ಹೋದ. ಇನ್ನೊಮ್ಮೆ ರಾಜಕುಮಾರನೊಬ್ಬನಿಗೆ ಮಗಳು ಮಾರುಹೋದಳೆಂದು ಅರಿತು ಅವನನ್ನು ದರ್ಬಾರಿಗೆ ಕರೆಸಿ ಉಪಚಾರ ಮಾಡಿ ವಿಷಪೂರಿತ ತಾಂಬೂಲವನ್ನು ಸ್ವಯಂ ತಿನ್ನಿಸಿ ಕಳುಹಿಸಿಕೊಟ್ಟ. ತನಗೆ ಸರಿಕಾಣದವರನ್ನು, ತನಗಾಗದವರನ್ನು ವಿಷಪೂರಿತ ಹಾವುಗಳಿಂದ ಕಚ್ಚಿಸಿ ಸಾಯಿಸುತ್ತಿದ್ದ ಈತನನ್ನು ಮಹಾಮಾನವತಾವಾದಿ ಅಮರಪ್ರೇಮಿ ಎಂದೆಲ್ಲಾ ಚಿತ್ರಿಸಿದ ಇತಿಹಾಸಕಾರರನ್ನು ಇತಿಹಾಸ ದ್ರೋಹಿಗಳೆನ್ನಬೇಕಲ್ಲವೇ?


              ಇತಿಹಾಸ ಎಂದರೆ ಸತ್ಯಘಟನೆಗಳೇ ಹೊರತು ತಮಗೆ ಬೇಕಾದವರನ್ನು ದೇವರಾಗಿಸುವ ಕಪೋಲ ಕಲ್ಪಿತ ಕಥೆಗಳಲ್ಲ ಎಂದು ನಮ್ಮ ಇತಿಹಾಸಕಾರರಿಗೆ ಅರ್ಥವಾಗುವುದು ಎಂದು? ನಮ್ಮ ಮುಂದಿನ ಪೀಳಿಗೆಗೆ ನೈಜ ಇತಿಹಾಸ ತಿಳಿಸದೇ ಇದ್ದರೆ ತೇಬಾಜಿಯ ಮೂರ್ತಿಧ್ವಂಸವಾಗುತ್ತಲೇ ಇರುತ್ತದೆ. ಕಾಮಾಂಧರು ಅಮರಪ್ರೇಮಿಗಳಾಗಿಯೇ ಗುರುತಿಸಲ್ಪಡುತ್ತಾರೆ. ಹಿಂದುತ್ವದ "ತೇಜ" ಕಡಿಮೆಯಾಗುತ್ತಲೇ ಇರುತ್ತದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ