ಪುಟಗಳು

ಬುಧವಾರ, ಡಿಸೆಂಬರ್ 17, 2014

ಆಚಾರ್ಯ ಬೋಧಿಸೇನ

ಲಭ್ಯ ದಾಖಲೆಗಳ ಪ್ರಕಾರ ಜಪಾನಿಗೆ ಭೇಟಿ ನೀಡಿದ ಮೊದಲ ಭಾರತೀಯ ಗುರು ಆಚಾರ್ಯ ಬೋಧಿಸೇನ(ಅದರ ಮೊದಲು ಹಲವರು ಭೇಟಿ ನೀಡಿದ್ದಿರಬಹುದು...ಆದರೆ ಸೂಕ್ತ ದಾಖಲೆಗಳು ಸಿಕ್ಕಿಲ್ಲ). ಇದು ನಡೆದದ್ದು ಕ್ರಿ.ಶ 736ರ ಮೇ 18 ರಂದು. ಚೀನಾದವರೆಗೆ ನಡೆದುಕೊಂಡು ಹೋದ ಆತನ ಯಾತ್ರೆ ಒಂದು ಅದ್ಭುತ ಸಾಹಸ. ಆತನಿಗೆ ದಾರಿಯಲ್ಲಿ ಸಂಸ್ಕೃತವನ್ನು ನಿತ್ಯ ಭಾಷೆಯಾಗಿ ಮಾತಾಡುವ ಹಲವು ಜನವಸತಿಗಳೇ ಸಿಕ್ಕಿದವು. ಇಂತಹ ದೇಶಗಳಲ್ಲಿ ಸಂಸ್ಕೃತವೇ ಆಡಳಿತ ಭಾಷೆಯಾಗಿದ್ದುದಕ್ಕೆ ಆ ಕಾಲದ ರಾಜರ ಮುದ್ರೆಯಿರುವ ನಾಣ್ಯಗಳೇ ಆಧಾರವಾಗಿ ಸಿಕ್ಕಿವೆ. ಚೀನಾದ ರಾಜನಿಂದ ಗೌರವಾದರಗಳನ್ನು ಸ್ವೀಕರಿಸಿ ತನ್ನನ್ನು ಕರೆದೊಯ್ಯಲು ಅಲ್ಲಿಗೆ ಬಂದಿದ್ದ ಜಪಾನಿನ ರಾಜದೂತರೊಡನೆ ಜಪಾನಿಗೆ ಸಮುದ್ರ ಮಾರ್ಗದ ಮೂಲಕ ತೆರಳುವಾಗ ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಜಪಾನೀ ಮೂಲಗಳು ಹೇಳುವಂತೆ, ಜೊತೆಗಿದ್ದ ರಾಜದೂತರು ಸಮುದ್ರ ಪಾಲಾದರು. ಆಚಾರ್ಯ ಧ್ಯಾನಕ್ಕೆ ಕೂತ...ಕ್ರಮೇಣ ಸಮುದ್ರ ಶಾಂತವಾಯಿತು, ರಾಜದೂತರೂ ಮರಳಿ ಹಡಗು ಸೇರುವಂತಾಯಿತು. ಜಪಾನೀ ಪರಂಪರೆಯ ಪ್ರಕಾರ ಅಲ್ಲಿನ ಚಕ್ರವರ್ತಿ ಯಾರಿಗೂ ತಲೆಬಾಗಬಾರದು. ಆತ ಸೂರ್ಯಪುತ್ರ ಎನ್ನುವುದು ಇದಕ್ಕೆ ಕಾರಣ. ಆದರೆ ಆಚಾರ್ಯನನ್ನು ಸ್ವಾಗತಿಸಲು ಸ್ವತಃ ಚಕ್ರವರ್ತಿಯೇ ಕಡಲ ತಡಿಗೆ ಬಂದಿದ್ದ. ವಿಜಯೋತ್ಸವದಂತೆ ಆಚರಿಸಲ್ಪಟ್ಟ ಈ ಸಂದರ್ಭದ ಸ್ಮರಣೆಗಾಗಿ ಕೆತ್ತಿರುವ ಶಾಸನಗಳಿವೆ.
ಅಂದ ಹಾಗೆ ಭಾರದ್ವಾಜ ಗೋತ್ರೋದ್ಭವನಾದ ಈ ಬ್ರಾಹ್ಮಣನನ್ನು ಬೌದ್ಧಮತೀಯರಾಗಿದ್ದ ಜಪಾನೀಯರು ಕರೆಸಿಕೊಂಡದ್ದು ಯಾಕೆ ಗೊತ್ತೇ? ಜಪಾನಿನ ವಾರಾಣಸಿ "ನಾರಾ" ಪಟ್ಟಣದಲ್ಲಿರುವ ವಿರಾಟ್ ಬುದ್ಧನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು!

ವಿರಾಟ್ ಬುದ್ಧನ ವಿಗ್ರಹ ಪ್ರತಿಷ್ಠೆಗಾಗಿ ಜಪಾನಿನ ವಾರಾಣಸಿ "ನಾರಾ" ಕ್ಕೆ ತೆರಳಿದ ಆಚಾರ್ಯ ಬೋಧಿಸೇನಾ ತನ್ನೊಂದಿಗೆ ಭಾರತೀಯ ಸಂಗೀತ ಹಾಗೂ ನೃತ್ಯವನ್ನೂ ಒಯ್ದ. ಈಗಲೂ ಜಪಾನಿನ ಕೆಲವು ದೇವಾಲಯಗಳಲ್ಲಿ ನೃತ್ಯ ಪೂಜೆ ನಡೆಯುತ್ತದೆ. ಜಪಾನಿನ ಹೆಚ್ಚಿನ ಎಲ್ಲಾ ದೇವಾಲಯಗಳಲ್ಲಿ ಶುದ್ಧ ತುಪ್ಪವನ್ನು ಆಜ್ಯವಾಗಿ ಉಪಯೋಗಿಸಿ ಸೂರ್ಯೋದಯಕ್ಕೆ ಮುಂಚೆಯೇ ಹೋಮ ಮಾಡಲಾಗುತ್ತದೆ. ಹೋಮಕುಂಡ ತ್ರಿಕೋನಾಕಾರದ್ದು. ಮಂತ್ರ-ಮುದ್ರೆ-ಕ್ರಿಯೆ ಎಲ್ಲವೂ ನಮ್ಮಂತೆಯೇ.
‪#‎ಧನ್ಯಯೇಭಾರತಭೂಮಿಭಾಗೇ‬


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ