ಪುಟಗಳು

ಬುಧವಾರ, ಮೇ 27, 2015

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೨

ದಾನವನನ್ನು ಮಾನವನೆಂದು ಕೊಂಡಾಡಿರುವ ಪರಿ "ದಿ ಗ್ರೇಟ್"! ಭಾಗ- ೨


                  ಇಪ್ಪತ್ತೊಂದನೆಯ ಶತಮಾನದಲ್ಲಿ ಹಲವು ಪದಗಳ ವ್ಯಾಖ್ಯೆ ಬದಲಾಗಿದೆ. ಯಾರು ಭಯೋತ್ಪಾದಕನನ್ನು ಅಮಾಯಕನೆಂದು ಕರೆದು ಪಾಪದ ಹಿಂದೂವನ್ನು ತುಳಿದು ತನ್ನ ಅನ್ನ ಗಳಿಸಿಕೊಳ್ಳುತ್ತಾನೋ ಅವನು ಸೆಕ್ಯುಲರ್! ಯಾರು ತನ್ನನ್ನು ತಾನು ಮಹಾಮಾನವತಾವಾದಿಯೆಂದು ಕರೆಯಿಸಿಕೊಳ್ಳುತ್ತಾನೋ ಅವನು ದಾನವ ಪ್ರೇಮಿ! ಅಬುಲ್ ಫಜಲನಿಗಾದರೂ ಅಕ್ಬರನನ್ನು ಹೊಗಳಲು ಅನ್ನದ ಋಣವಿತ್ತು. ಸ್ವಾಮಿನಿಷ್ಠೆಯ ಪರಾಕಾಷ್ಟತೆಯಿತ್ತು! ಆದರೆ ಚಪಲ ಚೆನ್ನಿಗ ರಾಯ ನೆಹರೂವಿಗೇನಿತ್ತು? ICHR ಎಂಬ ಸಂಸ್ಥೆಯಲ್ಲಿ ದಶಕಗಳ ಪರ್ಯಂತ ರಾಜ್ಯಭಾರ ನಡೆಸಿ ದೇಶದ ಸಂಪತ್ತನ್ನು ತಿಂದು ತೇಗಿದ ಮಹಾನ್ ಇತಿಹಾಸಕಾರರಿಗೆ ಇತಿಹಾಸವನ್ನು ತಿರುಚುವ ಅಗತ್ಯವೇನಿತ್ತು? ಗತವನ್ನು ಮರೆತ ದೇಶಕ್ಕೆ ಭವಿಷ್ಯವೂ ತಮವೇ ಅನ್ನುವುದು ಕಳೆದ ಅರವತ್ತೈದು ವರ್ಷಗಳಲ್ಲಿ ಭಾರತದ ಮಟ್ಟಿಗಂತೂ ಸತ್ಯವಾಗಿಬಿಟ್ಟಿದೆ. ಇಲ್ಲದಿದ್ದಲ್ಲಿ ಮಹಾಕ್ರೂರಿಯೊಬ್ಬನನ್ನು ದಯಾಪರ ಎಂದು ಹೊಗಳಿದುದನ್ನೇ ಕಣ್ಣುಮುಚ್ಚಿ ಉರುಹೊಡೆದ ಈ ದೇಶೀಯರ ಸತ್ವ ಎಲ್ಲಿ ಅಡಗಿಹೋಗಿತ್ತು. ಅದನ್ನು ಉದ್ದೀಪಿಸಲು ಶಿವಾಜಿ-ಸಾವರ್ಕರರೇ ಮತ್ತೊಮ್ಮೆ ಧರೆಗಿಳಿಯಬೇಕೇನೋ?

                    ಅಧಂ ಖಾನ್. ಅಕ್ಬರನನ್ನು ಸ್ವಂತಮಗನಂತೆ ಸಾಕಿದ ಮಹಮಾನಗಾಳ ಮಗ. ಅನೇಕ ಯುದ್ಧಗಳಲ್ಲಿ ಬಲಗೈ ಬಂಟನಂತೆ ಅಕ್ಬರನಿಗೆ ಸಹಾಯ ಮಾಡಿದ ವೀರ. ಒಂದು ಅಕ್ಬರ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಏನೋ ಗದ್ದಲ ಕೇಳಿತು. ಏನೆಂದು ವಿಚಾರಿಸಿದಾಗ ವಜೀರ ಅದಗಾ ಖಾನನನ್ನು ಕೊಂದು ಅಧಂಖಾನ್ ಅರಸನನ್ನು ಕೊಲ್ಲಲು ಬರುತ್ತಿರುವನೆಂದು ಯಾರೋ ಕಿವಿಯೂದಿದರು. ಸೇವಕನ ಕೈಯಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ ಅಕ್ಬರ್ ಅಧಂಖಾನನ ಮೇಲೇರಿ ಹೋದ. ಅಧಂಖಾನ್ ನಡೆದುದನ್ನು ವಿಶದೀಕರಿಸುತ್ತೇನೆಂದು ಪರಿಪರಿಯಾಗಿ ಕೋರಿದರೂ ಕೇಳದೆ ಅವನ ಮುಖದ ಮೇಲೆ ಗುದ್ದಿದ. ಜ್ಞಾನ ತಪ್ಪಿ ಬಿದ್ದ ಆತನನ್ನು ಹಗ್ಗಗಳಿಂದ ಕಟ್ಟಿ ಅರಮನೆಯ ಮೇಲಿಂದ ಕೆಳಗೆಸೆಯಿರೆಂದು ಆಜ್ಞೆ ಮಾಡಿದ. ಸೇವಕರು ಆತನನ್ನು ಕೊಲ್ಲಲು ಇಷ್ಟವಿಲ್ಲದೆ ಕೆಳಕ್ಕೆ ಜಾರಿಬಿಟ್ಟರು. ಆದರೆ ಈ ದಯಾಪರ ಬಿಡಬೇಕೇ! ಸತ್ತನೋ ಇಲ್ಲವೋ ನೋಡಿರಂದು ಆಜ್ಞೆ ಮಾಡಿದ. ಅರೆಜೀವವಾಗಿದ್ದಾನೆಂದು ತಿಳಿದೊಡನೆ ಅವನ ಜುಟ್ಟು ಹಿಡಿದು ಮೇಲಕ್ಕೆಳೆದು ತಲೆ ಹೋಳಾಗುವಂತೆ ಕೆಳಕ್ಕೆ ಬಿಸಾಕಲು ಆಜ್ಞಾಪಿಸಿದ. ಅದು ಅಕ್ಬರ್ ತನ್ನ ಸಹವರ್ತಿಯೊಬ್ಬನಿಗೆ ಪರಿಪಾಲಿಸಿದ ಸಮುಚಿತ ನ್ಯಾಯ!

                    ಆ ದಿನ ದೀಪ ಹಚ್ಚುವ ನೌಕರನಿಗೇ ದೀಪ ಹಚ್ಚಬೇಕಾಯಿತು. ಕಾರಣವಿಷ್ಟೇ, ಅರಸ ನಿದ್ದೆಯಿಂದ ಬೇಗ ಎಚ್ಚರಗೊಂಡುದುದು! ಅರಸ ಎದ್ದಾಗ ಸೇವಕರ್ಯಾರೂ ಕಾಣಲಿಲ್ಲ. ದೀಪ ಹಚ್ಚುವ ಸೇವಕನೊಬ್ಬ ಮೂಲೆಯಲ್ಲಿ ಮುದುಡಿ ಮಲಗಿದ್ದ. ಸಿಡಿಮಿಡಿಗೊಂಡ ಅರಸ ಆತನನ್ನು ರಾಜಗೋಪುರದಿಂದ ಕೆಳಕ್ಕೆ ಎಸೆಯುವಂತೆ ಆಜ್ಞಾಪಿಸಿದ. ಇತಿಹಾಸದಲ್ಲಿ ದೀಪ ಹಚ್ಚುವ ಸೇವಕನೊಬ್ಬನನ್ನು ನಿದ್ದೆ ಮಾಡುವ ಹೊತ್ತಿನಲ್ಲಿ ನಿದ್ದೆ ಮಾಡಿದ ತಪ್ಪಿಗೆ ಗೋಪುರದ ಕೆಳಕ್ಕೆಸೆದು ಸಾಯಿಸಿದ ಮಹಾಮಾನವತಾವಾದಿ ಧರ್ಮಪ್ರಭು ಅಕ್ಬರನೊಬ್ಬನೆ! 1565ರಲ್ಲಿ ತನ್ನ ಚಿಕ್ಕಪ್ಪನ ಮಗನನ್ನು ಕೊಂದ ಅಕ್ಬರನನ್ನು ದಯಾಪರ ಎಂದು ಕರೆದ ನೆಹರೂವೇ ಧನ್ಯ!

                        ಉಪಕಾರ ಮಾಡಿದವರಿಗೆ ಕೇಡನ್ನುಂಟುಮಾಡುವುದು ಅಕ್ಬರನಿಗೆ ವಂಶಪಾರಂಗತವಾಗಿ ಬಂದ ವಿದ್ಯೆ. ಅಕ್ಬರನ ತಂದೆ ಹುಮಾಯೂನ್ ತನ್ನ ಸ್ವಂತ ತಮ್ಮನ ಕಣ್ಣುಗಳನ್ನೇ ಶೂಲದಿಂದ ಕೀಳಿಸಿ ಉಪ್ಪು, ನಿಂಬೆರಸಗಳನ್ನು ತುಂಬಿಸಿದ್ದ. ಚಿಕ್ಕವಯಸ್ಸಿನಲ್ಲಿ ತಂದೆ ಸತ್ತಾಗ ದಿಕ್ಕುಕಾಣದ ಅಕ್ಬರನನ್ನು ತನ್ನ ಭುಜಗಳ ಮೇಲೆ ಕೂರಿಸಿಕೊಂಡು ವ್ಯೂಹ ರಚಿಸಿ ಗೆದ್ದು ಅಕ್ಬರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದವ ಭೈರಾಂಖಾನ್. ಆದರೆ ಅಧಿಕಾರ ಸೂತ್ರಗಳ ಮೇಲೆ ಸ್ವಲ್ಪ ಹಿಡಿತ ಸಿಗುತ್ತಿದ್ದಂತೆ ಭೈರಾಂಖಾನನಿಗೇ ಗುಂಡಿ ತೋಡಿದ ಅಕ್ಬರ್! ಸಿಕಂದರ್ ಅಪ್ಘನ್ನನನ್ನು ಸೋಲಿಸಿ ಲಾಹೋರಿನಿಂದ ದಿಲ್ಲಿಗೆ ಹಿಂದಿರುಗಿ ಬರುತ್ತಿದ್ದಾಗ ಮಾನ್ ಕೋಟ್ ಎಂಬಲ್ಲಿ ಸೇನೆ ಬೀಡು ಬಿಟ್ಟಿದ್ದಾಗ ಭೈರಾಂಖಾನ್ ಮೈಮೇಲೆಲ್ಲಾ ಗುಳ್ಳೆಗಳಾಗಿ ಡೇರೆಯಲ್ಲಿ ಮಲಗಿದ್ದ. ಆ ಡೇರೆಯ ಮೇಲೆ ಅರಸನಿಗೆ ಸೇರಿದ ಆನೆಗಳೆರಡು ದಾಳಿ ಮಾಡಹೊರಟವು. ಭೈರಾಂಖಾನ್ ಆ ಸಮಯದಲ್ಲಿ ಬದುಕುಳಿದನಾದರೂ ಆತನ ಪರಿಸ್ಥಿತಿ ನೆಟ್ಟಗಿರಲಿಲ್ಲ. ಆತ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆಂದು ಕೇಳಲು ಅರಸನಲ್ಲಿಗೆ ಕಳುಹಿಸಿದ ದೂತನಿಗೆ ಯಾವ ಪ್ರತ್ಯುತ್ತರವೂ ಸಿಗಲಿಲ್ಲ. ಈ ಘಟನೆಯಿಂದ ಬೇಸರಗೊಂಡು ಭೈರಾಂಖಾನ್ ಮೆಕ್ಕಾಗೆ ಹೊರಟಾಗ ಗುಜರಾತಿನ ಸಹರ್ವಾಲದಲ್ಲಿ ಅಕ್ಬರನ ಕಟುಕರು ಭೈರಾಂಖಾನನ ರುಂಡ ಚೆಂಡಾಡಿದರು. ಇದಕ್ಕೆ ಕಾರಣ ಏನೆಂದು ಹುಡುಕುತ್ತಾ ಹೋದಾಗ ಅದು ಹೋಗಿ ನಿಲ್ಲುವುದು ಸಲೀಮಾ ಸುಲ್ತಾನ ಬೇಗಂಳ ಬಳಿ! ಆಕೆ ಮತ್ಯಾರಲ್ಲ, ಭೈರಾಂಖಾನನ ಹೆಂಡತಿ, ಅಕ್ಬರನಿಗೆ ಗುರುಪತ್ನಿಯ ಸಮಾನಳು! ಆದರೇನು ಭೈರಾಂಖಾನನ ಗೋರಿಯ ಮೇಲೆ ಹುಲ್ಲುಸಹಾ ಬೆಳೆಯುವ ಮೊದಲೇ ಅಕ್ಬರ ಅವಳನ್ನು ಮದುವೆ ಮಾಡಿಕೊಂಡ!

                    ಅಕ್ಬರ್ ಒಬ್ಬ ಸ್ತ್ರೀಲೋಲುಪ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. "ನಿನ್ನ ಹೆಂಡತಿ ನನಗಿಷ್ಟವಾಗಿದ್ದಾಳೆ, ಅವಳನ್ನು ನನ್ನ ಅಂತಃಪುರಕ್ಕೆ ಕಳುಹಿಸು ಎಂದು ಆದೇಶ ನೀಡುತ್ತಿದ್ದ ಧರ್ಮಪ್ರಭು ಅವನು. ನಿರಾಕರಿಸಿದಾತನ ರುಂಡ ಮುಂಡ ಬೇರೆಬೇರೆಯಾಗುತ್ತಿದ್ದುದು ದಿಟ! ಬಹಳಷ್ಟು ಜನ ತಮಗಾದ ಅವಮಾನವನ್ನು ನುಂಗಿಕೊಂಡು ತಮ್ಮ ದುರ್ವಿಧಿಗೆ ತಲೆಬಾಗುತ್ತಿದ್ದರು. ಅಕ್ಬರನ ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ದಿಲ್ಲಿಯ ಜನಸಾಮಾನ್ಯರ ಮನೆಯ ಮಂಚದವರೆಗೂ! ಕೆಲಕಾಲ ಸುಮ್ಮನಿದ್ದ ಜನತೆ ತಿರುಗಿಬಿದ್ದಿತು. 1564ರಲ್ಲಿ ದಿಲ್ಲಿಯ ಷೇಕ್ ಒಬ್ಬನನ್ನು ನಿನ್ನ ಹೆಂಡತಿಗೆ ವಿಚ್ಛೇದನ ಕೊಡು; ನನಗವಳು ಬೇಕು ಎಂದು ಅಕ್ಬರ್ ಒತ್ತಾಯಿಸಿದ. ಕೆಲವೇ ದಿನಗಳಲ್ಲಿ ಅಕ್ಬರ್ ರಾಜಬೀದಿಯಲ್ಲಿ ಸುತ್ತುತ್ತಿದ್ದಾಗ ಉಲಾದ್ ಎಂಬ ಗುಲಾಮನೊಬ್ಬ ಮನೆಯ ಮಾಳಿಗೆಯಂದರಿಂದ ಅಕ್ಬರನ ಮೇಲೆ ಬಾಣ ಬಿಟ್ಟ. ಅದು ಅಕ್ಬರನ ಭುಜಕ್ಕೆ ತಗುಲಿ ಗಾಯವಾಯಿತು. ರಾಜಭಟರು ಆತನನ್ನು ಅಲ್ಲಿಯೇ ತುಂಡರಿಸಿ ಎಸೆದರು. ಈ ಹತ್ಯಾಪ್ರಯತ್ನದ ನಂತರ ಅಕ್ಬರನ ಮರ್ಯಾದೆಗೆಟ್ಟ ಹುನ್ನಾರಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಕ್ಬರನ ದೃಷ್ಟಿಯಲ್ಲಿ ಹೆಣ್ಣೆಂದರೆ ಸಂತೆಯ ಮಾಲು. ಅದಕ್ಕಾಗಿಯೇ ತನ್ನ ರಾಜ್ಯದಲ್ಲಿ ಮೀನಾ ಬಜಾರ್" ವ್ಯವಸ್ಥೆಯನ್ನು ಪೋಷಿಸಿದ. ಹೊಸವರ್ಷವನ್ನು ಸ್ವಾಗತಿಸುವ ನೆಪದಲ್ಲಿ ಅಲ್ಲಿ ನಡೆಯುತ್ತಿದ್ದ ನೌರೋಜ್ ಉತ್ಸವದಲ್ಲಿ ಹಿಂದೂ ಸಾಮಂತ ರಾಜರೆಲ್ಲಾ ಒಂದೊಂದು ಅಂಗಡಿ ತೆರೆದು ತಮ್ಮ ರಾಜ್ಯದಲ್ಲಿನ ರೂಪವತಿಯರನ್ನೆಲ್ಲಾ ಪ್ರದರ್ಶನಕ್ಕಿಡಬೇಕಾಗಿತ್ತು. ಮಹಾರಾಜ ಪ್ರತಿಯೊಂದು ಅಂಗಡಿ ವೀಕ್ಷಿಸಿ ತನಗೆ ಬೇಕಾದವರನ್ನು ಜನಾನಕ್ಕೆ ಅಟ್ಟುತ್ತಿದ್ದ!

                 ತನಗೆ ಇಷ್ಟವೆನಿಸಿದ ರಾಜಪ್ರಮುಖರ ಪತ್ನಿಯರನ್ನು, ಇತರ ಸ್ತ್ರೀಯರನ್ನು ಅಜೀರ್ಣವೆನಿಸುವ ತನಕ ಮನಸೋ ಇಚ್ಛೆ ಅನುಭವಿಸುತ್ತಿದ್ದ ಎಂದು ಸ್ವತಃ ಅಕ್ಬರನ ಸ್ವಾಮಿನಿಷ್ಠ ಸೇವಕ ಅಬುಲ್ ಫಜಲ್ ಬರೆದಿದ್ದಾನೆ. ಮೀನಾ ಬಜಾರಿನಿಂದ ವರ್ಷ ವರ್ಷ ಹಿಂದೂ ಸ್ತ್ರೀಯರನ್ನು ಸಾಗಿಸಿಕೊಂಡು ಬರುತ್ತಿದ್ದ ಕಾರಣ, ತಾನು ಸೋಲಿಸಿದ ರಜಪೂತರಿಂದ ಕನಿಷ್ಟ ಸಂಖ್ಯೆಯ ಹೆಣ್ಣುಗಳನ್ನು ತನ್ನ ಅಂತಃಪುರಕ್ಕೆ ಕಳುಹಿಸಿಕೊಡಬೇಕೆಂಬ ಕರಾರು ಮಾಡಿಕೊಳ್ಳುತ್ತಿದ್ದರ ಫಲವಾಗಿ, ಹಾಗೂ ಕಂಡ ಕಂಡವರ ಹೆಂಡಿರ ಮೇಲೆ ಕಣ್ಣು ಹಾಕುತ್ತಿದ್ದರಿಂದ ಈ ಸ್ತ್ರೀಲಂಪಟನ ರಾಣಿವಾಸವೆಂಬುದು ಎಮ್ಮೆದೊಡ್ಡಿಯಂತಾಗಿತ್ತು. ಅಲ್ಲದೆ ಚಕ್ರವರ್ತಿಗೆ ದಯೆ ಬಂದರೆ ಯಾವುದೇ ವಿಭಾಗಗಳ ಯಾವುದೇ ಪ್ರಮುಖ ಯಾವ ಅಂತಃಪುರ ಸ್ತ್ರೀಯರನ್ನಾದರೂ ಇಷ್ಟಾನುಸಾರ ಭೋಗಿಸಬಹುದಾಗಿತ್ತು ಎಂದಿದ್ದಾನೆ ಫಜಲ್! ಇದನ್ನು ವಿನ್ಸೆಂಟ್ ಸ್ಮಿತ್ ಕೂಡಾ ಸ್ಪಷ್ಟಪಡಿಸುತ್ತಾ ಅಕ್ಬರನ ದಾಖಲೆಗಳನ್ನು ನೋಡಿದರೆ ಅವನು ಒಬ್ಬಳು ಪತ್ನಿಗೆ ಸೀಮಿತಗೊಂಡ ಅಸಾಮಿಯಲ್ಲ ಎಂದಿದ್ದಾನೆ. ಇನ್ನು ರಜಪೂತರ ಒಲವನ್ನು ಗಳಿಸುವ ಹುನ್ನಾರದಿಂದ ಅವರ ಕನ್ಯೆಯರನ್ನು ತನ್ನ ರಾಜಪ್ರಮುಖರಿಗೋ, ಸರದಾರರಿಗೋ ಮದುವೆ ಮಾಡಿಸುತ್ತಿದ್ದನಷ್ಟೇ. ಆ ಹುಡುಗಿಯರ ಸ್ಥಿತಿ ಏನಾಗುತ್ತಿತ್ತು ಎನ್ನುವುದು ಆ ಕಾಲದಲ್ಲಿ ಎಲ್ಲರಿಗೂ ತಿಳಿದ ವಿಷಯವೇ ಆಗಿತ್ತು. ಅವಳು ಅರಸನ ಕಾಮದೃಷ್ಟಿಗೆ ಬಿದ್ದರೆ ಮುಗಿಯಿತು; ಇಲ್ಲವಾದಲ್ಲಿ  ಕಟ್ಟಿಕೊಂಡವನು ಯಾರ ಕೈಗೆ ಒಪ್ಪಿಸಿದರೆ ಅವನೊಂದಿಗೆ ಎಷ್ಟುಕಾಲ ಒಪ್ಪಿಸೆಂದರೆ ಅಷ್ಟು ಕಾಲ ವ್ಯಭಿಚಾರ ಮಾಡುವುದೇ ಆ ಸ್ತ್ರೀಯರು ಅನುಭವಿಸಿದ ರಾಣೀವಾಸ! ಹಾಗಂತ ಎಲ್ಲಾ ರಜಪೂತ ಅರಸರು ಅಧಿಕಾರ, ಲಾಭದಾಸೆಗೆ ಬಲಿಬಿದ್ದು ತಮ್ಮವರ ಮಾನ ಕಳೆದುಕೊಳ್ಳಲು ಬಿಡಲಿಲ್ಲ; ಮೇವಾಡದ ಸ್ತ್ರೀಯರು ಮಾನವೇ ಪ್ರಾಣಕ್ಕಿಂತಲೂ ಶ್ರೇಷ್ಠವೆಂದು ಸಾಮೂಹಿಕವಾಗಿ ಚಿತೆಗೆ ಹಾರಿ "ಜೋಹರ್" ಮಾಡಿಕೊಂಡರು. ಸತೀಸಹಗಮನ ಪದ್ದತಿ ಆರಂಭವಾದದ್ದೇ ಕಾಮುಕ ಮೊಘಲರ ಅಟ್ಟಹಾಸದಿಂದ ಮಾನ ಉಳಿಸಿಕೊಳ್ಳಲು.

                    ಹಿಂದೂ ಸ್ತ್ರೀಯರನ್ನು ವಿವಾಹವಾಗುವುದು ಅಕ್ಬರನ ಸೆಕ್ಯುಲರ್ ನೀತಿಯೆಂದು, ಹಿಂದೂ ಮುಸ್ಲಿಮ್ ಐಕ್ಯತೆಗೆ ದಾರಿದೀಪವೆಂದು ಬೊಂಬಡಾ ಬಜಾಯಿಸುವ "ಮಹಾನ್ ಇತಿಹಾಸಕಾರರು" 1568ರಲ್ಲಿ ವಂಚನೆಯಿಂದ ರಣಥಂಬೋರ್ ಕೋಟೆಯನ್ನು ಅಕ್ಬರ್ ವಶಪಡಿಸಿಕೊಂಡಾಗ ಉಂಟಾದ ಒಡಂಬಡಿಕೆಯನ್ನು ಗಮನಿಸುವುದೊಳಿತು. ಅಕ್ಬರನಿಗೂ ಸರ್ಜನರಾಯನಿಗೂ ನಡೆದ ಸಂಧಿಯ ಒಪ್ಪಂದದಲ್ಲಿ ಅರಸನ ಅಂತಃಪುರಕ್ಕೆ ವಧುಗಳನ್ನು ಕಳುಹಿಸುವ ಪದ್ದತಿಯಿಂದ ಬುಂದಿ ರಾಜ್ಯಪಾಲಕರಿಗೆ ವಿನಾಯಿತಿ ಇರುತ್ತದೆಂದೂ, ಮೀನಾಬಜಾರಿನ ಅಂಗಡಿಗಳಲ್ಲಿ ತಮ್ಮ ವಧುಗಳನ್ನು ಕಳುಹಿಸುವ ಕಾರ್ಯದಿಂದ ವಿನಾಯಿತಿ ಇರುತ್ತದೆಂಬುದೇ ಮುಖ್ಯ ಷರತ್ತುಗಳಾಗಿದ್ದವು. ಅಲ್ಲದೆ ಹಿಂದೂ ಮುಸ್ಲಿಮ್ ಐಕ್ಯತೆಗೆ ಶ್ರಮಿಸಿದ್ದನೆನ್ನುವ ಅಕ್ಬರ್ ಎಷ್ಟು ಮೊಘಲ ಸ್ತ್ರೀಯರನ್ನು ಹಿಂದೂಗಳಿಗೆ ಮದುವೆ ಮಾಡಿಸಿದ್ದ?

-ಮುಂದುವರಿಯುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ