ಪುಟಗಳು

ಸೋಮವಾರ, ಮಾರ್ಚ್ 21, 2016

ವಿವಿಗಳ ಸುತ್ತ ಬೆಳೆಯುತಿದೆ ಪ್ರತ್ಯೇಕತೆಯ ಹುತ್ತ

ವಿವಿಗಳ ಸುತ್ತ ಬೆಳೆಯುತಿದೆ ಪ್ರತ್ಯೇಕತೆಯ ಹುತ್ತ


                ಮತ್ತೊಮ್ಮೆ ಪ್ರತ್ಯೇಕತಾವಾದದ ಪರ ಕೂಗೆದ್ದಿದೆ. ಅಷ್ಟೇ ಬಲವಾಗಿ ದೇಶದ ಏಕತೆಯನ್ನೂ ಸಮಗ್ರತೆಯನ್ನೂ ಸಾಮಾನ್ಯ ಭಾರತೀಯ ಎತ್ತಿ ತೋರಿದ್ದಾನೆ. ಈ ಪ್ರತ್ಯೇಕತಾವಾದಕ್ಕೆ ಕಾರಣವೇನು ಎನ್ನುವುದನ್ನು ಹುಡುಕ ಹೊರಟರೆ ಗೋಚರವಾಗುವುದು ಇವ್ಯಾಂಜೆಲಿಸಮ್, ಕಮ್ಯೂನಿಸಮ್ ಹಾಗೂ ಇಸ್ಲಾಮಿಸಮ್! ಪಶ್ಚಿಮದ ಹಣವನ್ನು ಭಾರತದೊಳಗೆ ಸುರಿದು ಮತಾಂತರದ ಮೂಲಕ ಭಾರತ ವಿರೋಧಿ ಶಕ್ತಿಯನ್ನು ರೂಪಿಸುತ್ತಿರುವ ಕ್ರಿಶ್ಚಿಯನ್ ಮತಾಂತರಿಗಳು ಒಂದೆಡೆಯಾದರೆ ಚೀನಾದಿಂದ ಶಸ್ತ್ರಾಸ್ತ್ರಗಳನ್ನು ತಂದು ಉಗ್ರರನ್ನು ಪೋಷಿಸಿ ಭಾರತವನ್ನು ಅಸ್ಥಿರ ಗೊಳಿಸುತ್ತಿರುವ ಮಾವೋವಾದಿಗಳು ಇನ್ನೊಂದೆಡೆ. ಇವರಿಬ್ಬರನ್ನೂ ಮೀರಿಸುವಂತೆ ತಮ್ಮ ಮೂಲವೇ ಅರಬ್ ಎಂದು ಬೊಬ್ಬಿರಿಯುತ್ತಾ ಸದಾ ದಾಂಧಲೆ ಸೃಷ್ಟಿಸುವ ಇಸ್ಲಾಮೀ ಜಿಹಾದಿಗಳದ್ದು ಭಯಂಕರ ಭೀಬತ್ಸತೆ! ವಿಪರ್ಯಾಸವೆಂದರೆ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಪರಸ್ಪರ ಶತ್ರುಗಳಾಗಿರುವ ಈ ಮೂವರು ಭಾರತದಲ್ಲಿ ಮಿತ್ರರು! ಪ್ರತ್ಯೇಕವಾದದ ಮೂಲಬೇರು ಇವುಗಳೇ!


              ಪ್ರತ್ಯೇಕತಾವಾದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಪ್ರತ್ಯೇಕತಾವಾದದ ಮನೋಭಾವದಿಂದಾಗಿಯೇ ಹುಟ್ಟಿ ಪ್ರತ್ಯೇಕತೆಯನ್ನು ಒಡಲಲ್ಲಿಟ್ಟುಕೊಂಡೇ ಬೆಳೆದು ಅಖಂಡ ಭಾರತವನ್ನು ತ್ರಿಖಂಡವನ್ನಾಗಿಸಿದ ಖ್ಯಾತಿ ಅಲಿಗಢ ಮುಸ್ಲಿಂ ವಿವಿಯದ್ದು. ಸ್ವಯಂ ಇತಿಹಾಸಕಾರರು ಎಂದು ಕರೆದುಕೊಂಡವರಿಂದ ಉದಾರವಾದಿ ಎಂದು ಹೊಗಳಲ್ಪಟ್ಟ ಅಲಿಗಢದ ಸ್ಥಾಪಕ ಸರ್ ಸೈಯ್ಯದ್ ಮೊಹಮದ್ ಖಾನನಿಗೆ 1885ರಲ್ಲಿ ಸ್ಥಾಪಿಸಲ್ಪಟ್ಟ "ಸೆಕ್ಯುಲರ್ ಕಾಂಗ್ರೆಸ್" ಹಿಂದೂ ಸಂಘಟನೆಯಾಗಿ ಕಂಡಿತು. 1898ರಲ್ಲಿ ಸಾಯುವ ಮೊದಲು ಮುಸ್ಲಿಂ ಲೀಗಿನ ಸ್ಥಾಪನೆಗೆ ಬುನಾದಿ ಹಾಕಿದ್ದನಾತ. "ವಂಗ ಭಂಗ"ವನ್ನು ಬೆಂಬಲಿಸಿತು ಮುಸ್ಲಿಂ ಲೀಗ್. ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿತು. ಪ್ರತ್ಯೇಕ ಇಸ್ಲಾಂ ರಾಷ್ಟ್ರ ರಚನೆಗೆ ಬಲತಂದುಕೊಟ್ಟಿತು. ಆಧುನಿಕ ಶಿಕ್ಷಣದ ಮುಖವಾಡ ಹೊತ್ತಿದ್ದ ವಿಶ್ವವಿದ್ಯಾಲಯ ಮೂಲಭೂತವಾದಿಗಳ ಅರಮನೆಯಾಯಿತು. ಬೇಸತ್ತ ಕೆಲ ಸೌಮ್ಯ ಹಾಗೂ ಸುಧಾರಣಾವಾದಿ ಮುಸ್ಲಿಮರು ಇದರಿಂದ ಹೊರಬಂದು ಜಾಮಿಯಾ ಮಿಲಿಯಾ ಎಂಬ ವಿವಿಯೊಂದನ್ನು ಹುಟ್ಟುಹಾಕಿದರೆಂದರೆ ಅಲಿಘಢ ವಿವಿಯ ಭಾರತ ವಿರೋಧಿ ಚಟುವಟಿಕೆ ಯಾವ ಪರಿಯದ್ದಿರಬಹುದು?


                 ಮುಸ್ಲಿಂ ಲೀಗ್ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮತಭ್ರಾಂತ ಸಹೋದರರಾದ ಮಹಮ್ಮದ್ ಹಾಗೂ ಶೌಕತ್ ಓದಿದ್ದು ಅಲಿಗಢದಲ್ಲಿಯೇ! ಖಲೀಫನ ಅಧಿಕಾರ ನಿರಾತಂಕವಾಗಿ ಮುಂದುವರಿಯಬೇಕೆಂದು ಆಗ್ರಹಿಸಲು ಶುರುವಾದ ಖಿಲಾಫತ್ ಚಳುವಳಿಯನ್ನು ಅಲಿ ಸಹೋದರರು ಭಾರತದಲ್ಲೂ ಹುಟ್ಟುಹಾಕಿದರು. ಖಿಲಾಫತ್ತಿನ ವ್ಯಸನದಿಂದಾಗಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳು ಭೀಕರ ಅತ್ಯಾಚಾರಕ್ಕೊಳಗಾದರು. ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ&ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ವಿದ್ಯಾರ್ಥಿ ಶಕ್ತಿಯನ್ನು ಭಾರತ ವಿರೋಧಿ ಕಾರ್ಯಕ್ಕೆ ಬಳಸಿಕೊಂಡ ಜಿನ್ನಾ ಕರಾಳ ದಿನದ ಆಚರಣೆಗೆ ಕರೆ ನೀಡಿದ. 1946ರ ಆಗಸ್ಟ್ 16ರಂದು ನಡೆದ ನೇರ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಸ್ವತಂತ್ರ ಪಾಕಿಸ್ತಾನದ ಬ್ರೈನ್ ವಾಶ್ ಮಾಡಿಸಿಕೊಂಡ ವಿದ್ಯಾರ್ಥಿಗಳೇ. ಅವರು ದೂರದ ವಾಯವ್ಯ ಪ್ರಾಂತ್ಯಗಳಲ್ಲಿ ನಡೆದ ಹಿಂದು-ಸಿಕ್ಖರ ಮಾರಣಹೋಮದಲ್ಲೂ ಭಾಗವಹಿಸಿದ್ದರು. ಇವರಲ್ಲಿ ಅಂದಿನ ಅಲಿಗಢ ವಿವಿಯ ವಿದ್ಯಾರ್ಥಿಗಳದ್ದೇ ಸಿಂಹಪಾಲು. ಹೀಗೆ ಪಾಕಿಸ್ತಾನ ನಿರ್ಮಾಣ ಚಳವಳಿಯ ಬೌದ್ಧಿಕ ಕೇಂದ್ರವಾಗಿ ಅಲಿಗಢ ವಿವಿ ಕೆಲಸ ಮಾಡಿತು. ವಿಪರ್ಯಾಸವೆಂದರೆ ದೇಶವಿಭಜನೆಗೆ ಕಾರಣನಾದ ಮಹಮ್ಮದ್ ಇಕ್ಬಾಲ್ ಹೆಸರಲ್ಲಿ ಇಂದಿಗೂ ಪ್ರತಿವರ್ಷ ಉರ್ದು ಕವಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ!


                80 ಹಾಗೂ 90ರ ದಶಕದಲ್ಲಿ ಭಾರತದಲ್ಲಿ ಕೋಮುಗಲಭೆಗೆ ಕಾರಣವಾದ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ "ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ಸ್ ಆಫ್ ಇಂಡಿಯಾ"(ಸಿಮಿ) ಎಂಬ ದೇಶದ್ರೋಹಿ ಸಂಘಟನೆ ಅಲಿಗಢದ್ದೇ ಪಿಂಡ! 2008ರ ಮುಂಬಯಿ ಮೇಲಿನ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯ್ಯದನ ಚಿಕ್ಕಪ್ಪ ಓದಿದ್ದು ಈ ವಿವಿಯಲ್ಲೇ. ಮೊದಲೇ ಮತಾಂಧವಾಗಿದ್ದ ಆತನ ಕುಟುಂಬ ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು. ವಿಭಜನೆಯಾದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೂ ಈ ಕುಟುಂಬದ ಭಾರತ ದ್ವೇಷ ಆರಿರಲಿಲ್ಲ. ಅದು ಹಫೀಜ್ ರೂಪದಲ್ಲಿ ಭಾರತದ ಮೇಲೆರಗಿತು. ಕಳೆದ ಶತಮಾನದ ಆದಿ ಭಾಗದಲ್ಲಿ ಅಲಿಗಢ ವಿವಿಯಲ್ಲಿ ತನ್ನ ಶಿಕ್ಷಣವನ್ನು ಪೂರೈಸಿದ್ದ ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಮುಂದೆ ಮೂರು ಎಕರೆಗಿಂತಲೂ ಹೆಚ್ಚು ಜಾಗವನ್ನು ದೇಣಿಗೆಯಾಗಿ ನೀಡಿದ್ದ. ಆದರೆ ಕಳೆದ ವರ್ಷ ಆತನ ಜನ್ಮದಿನಾಚರಣೆಯನ್ನು ಆಚರಿಸಲೇ ಈ ವಿದ್ಯಾಲಯ ನಿರಾಕರಿಸಿತು. ತಮ್ಮಲ್ಲೇ ವಿದ್ಯಾಭ್ಯಾಸ ಮಾಡಿದ್ದ, ವಿದ್ಯಾಲಯಕ್ಕೆ ದೇಣಿಗೆ ನೀಡಿದ್ದ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನದೆಲ್ಲವನ್ನೂ ಸಮರ್ಪಿಸಿದ್ದವನ ಜನ್ಮದಿನವನ್ನು ಆಚರಿಸಲು ಯಾವುದೇ ವಿದ್ಯಾಲಯವಾದರೂ ಹೆಮ್ಮೆ ಪಡಬೇಕು. ಅಂತಹ ದೇಶಭಕ್ತನಿಗೆ ಆತ "ಹಿಂದೂ" ಎನ್ನುವ ಒಂದೇ ಕಾರಣಕ್ಕೆ ಅವಮಾನ ಮಾಡುವ ಇಂತಹ ವಿದ್ಯಾಲಯಗಳು ಸಮಾಜಕ್ಕೆ ಎಂತಹ ವಿದ್ಯಾರ್ಥಿಗಳನ್ನು ರೂಪಿಸಿಕೊಡಬಹುದು? ಉಪನ್ಯಾಸಕರ ಮೇಲೆ ಹಲ್ಲೆ, ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಕುಲಪತಿಗಳಿಗೆ ಘೇರಾವ್, ಉಪನ್ಯಾಸಕರ ನಡುವೆ ಘರ್ಷಣೆ, ಹಣದ ದುರುಪಯೋಗ, ಕುಲಪತಿಗಳ ಬದಲಾವಣೆ, ಕೊಲೆ, ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ಇವೆಲ್ಲಾ ಅಲಿಗಢ ವಿವಿಯ ದಿನಚರಿಯ ಭಾಗಗಳು! ಜೆ.ಎನ್.ಯು, ಜಾಧವಪುರ ವಿವಿಗಳು ಇದರ ಕೂಸುಗಳು ಅಷ್ಟೇ!


             "ಜಂಗ್ ರಹೇಗಿ ಜಂಗ್ ರಹೇಗಿ, ಭಾರತ್ ಕಿ ಬರ್ಬಾದಿ ತಕ್'. 'ಜಂಗ್ ರಹೇಗಿ ಜಂಗ್ ರಹೇಗಿ ಕಾಶ್ಮೀರ್ ಕಿ ಆಜಾದಿ ತಕ್', 'ಪಾಕಿಸ್ತಾನ್ ಜಿಂದಾಬಾದ್', 'ಗೋ ಬ್ಯಾಕ್ ಇಂಡಿಯಾ', 'ಭಾರತ್ ತೇರೇ ತುಕಡೇ ತುಕಡೇ ಕರ್ ದೇಂಗೆ', 'ಅಫ್ಜಲ್ ಹಮೆ ಶರ್ಮಿಂದಾ ಹೈ, ತೇರೇ ಕಾತಿಲ್ ಜಿಂದಾ ಹೈ' " ಎನ್ನುವ ಘೋಷಣೆ ಕೇವಲ ಜೆ.ಎನ್.ಯುನಲ್ಲಿ ಮಾತ್ರ ಮೊಳಗಿದ್ದಲ್ಲ. ರಾಷ್ಟ್ರದ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಯಾಕುಬ್ ಮೆಮನ್, ಅಫ್ಜಲ್ಗುರು ಮುಂತಾದ ದೇಶದ್ರೋಹಿಗಳನ್ನು ಗಲ್ಲಿಗೇರಿಸಿದ ದಿನದ ವಾರ್ಷಿಕ ಆಚರಣೆ ಮಾಡಿ ಅವರಿಗೆ ಸಂತಾಪ ವ್ಯಕ್ತಪಡಿಸಲಾಗುತ್ತದೆ. ಜೆ.ಎನ್.ಯುನಲ್ಲಿ ಒಬ್ಬ ವಿದ್ಯಾರ್ಥಿಯ ಬೋಧನಾ ಶುಲ್ಕ ರೂ.217, ವೈದ್ಯಕೀಯ ಶುಲ್ಕ ರೂ.9, ಕ್ರೀಡಾಶುಲ್ಕ ರೂ.16, ಲೈಬ್ರರಿ ಶುಲ್ಕ ರೂ.16, ತಿಂಗಳ ಹಾಸ್ಟೆಲ್ ಶುಲ್ಕ ರೂ.20 ಮಾತ್ರ! ಹೀಗೆ ಒಟ್ಟು ಎಲ್ಲಾ ಶುಲ್ಕಗಳು ಸೇರಿ ವರ್ಷಕ್ಕೆ 400 ರೂ. ಕೂಡಾ ದಾಟುವುದಿಲ್ಲ. ಪಿಹೆಚ್ ಡಿ, ಎಂಫಿಲ್ ಮತ್ತು ಪ್ರೀ ಪಿಹೆಚ್ ಡಿ ವಿದ್ಯಾರ್ಥಿಗಳ ಭೋದನಾ ಶುಲ್ಕ ವಾರ್ಷಿಕ 240 ರೂಗಳು, ಅವರ ಕ್ರೀಡಾ ಶುಲ್ಕ 14 ರೂ, ಲಿಟರರಿ ಮತ್ತು ಕಲ್ಚರಲ್ ಶುಲ್ಕ 16 ರೂ. ಎಲ್ಲಾ ಶುಲ್ಕಗಳನ್ನು ಒಟ್ಟು ಸೇರಿಸಿದರೂ ವಾರ್ಷಿಕವಾಗಿ 500 ರೂ. ದಾಟುವುದಿಲ್ಲ. ಅಲ್ಲದೆ ಪ್ರತಿ ವಿದ್ಯಾರ್ಥಿಗೆ ರೂ. 3.00 ಲಕ್ಷ ರೂ. ಗಳನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರ ಭರಿಸುತ್ತಿದೆ. ಅಂದರೆ ಸುಮಾರು 255 ಕೋಟಿ ರೂ.ಗಳು ಈ ರೂಪದಲ್ಲಿ ವ್ಯರ್ಥವಾಗುತ್ತಿದೆ. ಈ ಸಬ್ಸಿಡಿ, ಈ ಅನುದಾನ ಎಲ್ಲಾ ನಮ್ಮ ನಿಮ್ಮೆಲ್ಲರ ತೆರಿಗೆ ಹಣ. ಇಷ್ಟೆಲ್ಲವನ್ನೂ ಪಡೆದುಕೊಳ್ಳುವ ಜೆ ಎನ್ ಯು ನ ಕೆಲವು ವಿದ್ಯಾರ್ಥಿಗಳು ದೇಶಕ್ಕೆ ಮರಳಿ ನೀಡುತ್ತಿರುವುದು ಇಂಡಿಯಾ ಗೋ ಬ್ಯಾಕ್ ಘೋಷಣೆ! ಇದು ಇತ್ತೀಚಿನ ಬೆಳವಣಿಗೆಯಲ್ಲ, ವಿದ್ಯಾಲಯದ ಹುಟ್ಟಿನಿಂದಲೇ ಬಂದ ಜಾಡ್ಯವಾಗಿದೆ. ಏಪ್ರಿಲ್, 2000ದಲ್ಲಿ ಇದೇ ವಿವಿ ಅಹಮದ್ ಫರಾಜ್ ಮತ್ತು ಫಾಮಿದಾ ರಿಯಾಜ್ ಎಂಬ ಇಬ್ಬರು ಪಾಕಿಸ್ತಾನದ ಕವಿಗಳನ್ನು  ಆಹ್ವಾನಿಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಇಬ್ಬರು ಸೇನಾಧಿಕಾರಿಗಳೂ ಭಾಗವಹಿಸಿದ್ದರು. ಕಾರ್ಗಿಲ್ ಯುದ್ಧದ ಬಿಸಿ ಆರುತ್ತಿದ್ದ ದಿನಗಳವು. ಕಾರ್ಯಕ್ರಮದಲ್ಲಿ ಭಾರತವಿರೋಧಿ ಕಲಾಪಗಳಿದ್ದುದನ್ನು ಗಮನಿಸಿದ ಸೇನಾಧಿಕಾರಿಗಳು ಭಾರತವಿರೋಧಿ ಅಂಶಗಳ ಬಗ್ಗೆ ಪ್ರತಿಭಟಿಸಿದರು. ಪ್ರತಿಭಟಿಸಿದ್ದಕ್ಕಾಗಿ ಅವರುಗಳ ಮೇಲೆ ಹಲ್ಲೆ ನಡೆಯಿತು. ಒಬ್ಬ ಸೇನಾಧಿಕಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದಾಗಿ ಅವರಿಬ್ಬರು ಅಲ್ಲಿಂದ ಬಚಾವಾಗಿ ಬಂದರು. 2010ರಲ್ಲಿ ಛತ್ತೀಸಘಡ ರಾಜ್ಯದ ದಾಂತೆವಾಡ ಜಿಲ್ಲೆಯ ಚಿಂತಲ್ನಾರ್ ಗ್ರಾಮದ ಬಳಿ 300 ಜನ ನಕ್ಸಲರ ತಂಡ ನೆಲಬಾಂಬು ಉಡಾಯಿಸಿ 76 ಪೋಲಿಸರ ಹತ್ಯೆಗೈದಿದ್ದರು. ಆಗ ಇದೇ ವಿವಿಯಲ್ಲಿ 'ಜೆ.ಎನ್.ಯು. ಫೋರಮ್ ಅಗೆನೆಸ್ಟ್ ವಾರ್ ಆನ್ ಪೀಪಲ್' ಹೆಸರಿನಲ್ಲಿ ಒಂದು ಸಭೆ ಏರ್ಪಡಿಸಿ ಸಿ.ಆರ್.ಪಿ.ಎಫ್. ಜವಾನರ ಹತ್ಯೆಯನ್ನು ಸಿಹಿ ಹಂಚಿ ಸಂಭ್ರಮಿಸಿದ್ದರು. ಆಗ ಅವರುಗಳು ಕೂಗಿದ್ದ ಘೋಷಣೆಗಳು - 'ಇಂಡಿಯ ಮುರ್ದಾಬಾದ್', 'ಮಾವೋವಾದ್ ಜಿಂದಾಬಾದ್'!


              ಗುಪ್ತಚರ ವರದಿಯ ಪ್ರಕಾರ ಭಾರತದಲ್ಲಿ 15 ಸಾವಿರಕ್ಕೂ ಹೆಚ್ಚು ಬಂದೂಕುಧಾರಿ ಮಾವೋವಾದಿಗಳಿದ್ದಾರೆ. 16 ರಾಜ್ಯಗಳ 170 ಜಿಲ್ಲೆಗಳಲ್ಲಿ ಅವರು ಕ್ರಿಯಾಶೀಲರಾಗಿದ್ದಾರೆ. ನೇಪಾಳದಿಂದ ಕೇರಳದವರೆಗೆ ರೆಡ್ ಕಾರಿಡಾರಿಗೆ ಬೇಕಾದ ರಾಜಮಾರ್ಗವನ್ನು  ಅವರು ಮಾಡಿಕೊಂಡಿದ್ದಾರೆ. ಹಾಂ.. ಮೊನ್ನೆ ಜೆ.ಎನ್.ಯುನಲ್ಲಿ ದೇಶ ತುಂಡರಿಸುವ ವಾಗ್ಝರಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು ಡೆಮೊಕ್ರ್ಯಾಟಿಕ್ ಸ್ಟುಡೆಂಟ್ಸ್ ಯುನಿಯನ್ ಎಂಬ ಮಾವೋವಾದಿ ಸಂಘಟನೆ! ಈ ರೆಡ್ ಕಾರಿಡಾರಿನಲ್ಲಿ ಬರುವ ಎಲ್ಲಾ ರಾಜ್ಯಗಳು ಕ್ರಿಶ್ಚಿಯನ್ ಇವ್ಯಾಂಜಲಿಸಂನ ಬಹುಮುಖ್ಯ ಕೇಂದ್ರಗಳೇ! ಈ ಭಾಗದಲ್ಲೆಲ್ಲಾ ನಕ್ಸಲರ ದರ್ಪ ಹೇಗಿದೆಯೆಂದರೆ ಸ್ವತಃ ಪೊಲೀಸರೂ ಅನೇಕ ಕಡೆಗಳಲ್ಲಿ ಹಳ್ಳಿಗಳಿಗೆ ಹೋಗಲು ಹೆದರುತ್ತಾರೆ. ಅಲ್ಲೆಲ್ಲಾ ಸಶಸ್ತ್ರ ನಕ್ಸಲ್ ಪಡೆ ಮತಾಂತರಿಗಳನ್ನು ತಮ್ಮೊಂದಿಗೆ ಒಯ್ದು ಜನರ ತಲೆ ತಿರುಗಿಸುತ್ತಾರೆ. ಈ ಎರಡು ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಮತ್ತೊಂದು ಬಳಗ ಜಿಹಾದಿಗಳದ್ದು. ಅಂತರರಾಷ್ಟ್ರೀಯ ಗುಪ್ತಚರ ವರದಿಯ ನಕ್ಸಲರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದು ಪಾಕ್ ಬೆಂಬಲಿತ ಭಯೋತ್ಪಾದಕ ಸಂಘಟನೆಗಳೇ! ತಮ್ಮ ಕ್ರೌರ್ಯಕ್ಕೆ ಬೌದ್ಧಿಕ ಭದ್ರತೆಯನ್ನು ಒದಗಿಸಿಕೊಳ್ಳುವುದಕ್ಕಾಗಿ ಮಾವೋವಾದಿಗಳು, ಜಿಹಾದಿಗಳು, ಮಿಷನರಿಗಳು ಕಂಡುಕೊಂಡ ದಾರಿಯೇ ಭಾರತದ ಶಿಕ್ಷಣ ಕ್ಷೇತ್ರ. ಸ್ವಾತಂತ್ರ್ಯದ ಕಾಲದಿಂದಲೂ ಈ ದೇಶದ ಶಿಕ್ಷಣ ಎಡಪಂಥಿಯರ ಕೈಯಲ್ಲೇ ಇತ್ತು. ಸ್ವತಃ ನೆಹರೂ ಈ ಪಂಥದ ಆರಾಧಕರಾಗಿದ್ದರಿಂದ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಕ್ಷೇತ್ರಗಳಲ್ಲೆಲ್ಲಾ ಅವರುಗಳೇ ತುಂಬಿಕೊಂಡರು. ಮೆಕಾಲೆ ಪ್ರಣೀತ ಶಿಕ್ಷಣವನ್ನೇ ಮತ್ತೊಮ್ಮೆ ಉರು ಹೊಡಿಸಲು ಇವರು ಸಿದ್ಧರಾಗಿ ನಿಂತರು. ನಾವು ಕಟ್ಟಿದ ತೆರಿಗೆಯಿಂದ ಬೆಳೆದು ನಮ್ಮ ಮೇಲೇ ಎರಗುವ ಗೋಮುಖವ್ಯಾಘ್ರಗಳನ್ನು ಬೆಳೆಸಿದರು. ಜೆ.ಎನ್.ಯು ಬಂದು ಸೇರಿಕೊಂಡ, ಈಗಲೂ ಪ್ರೊಫೆಸರ್ ಎಮೆರಿಟಾ ಗೌರವ ಪಡೆದು ಇಲ್ಲಿಯೇ ತಳವೂರಿರುವ ರೋಮಿಲಾ ಥಾಪರ್ ಎಡಚರ ಪಾಲಿಗೆ ಶ್ರೇಷ್ಠ ಇತಿಹಾಸ ಲೇಖಕಿ. ಆಕೆಯ ಇತಿಹಾಸ ಕೃತಿಗಳಲ್ಲಿರುವುದು ಭಾರತ ವಿರೋಧಿ ಧೋರಣೆ, ಮಾರ್ಕ್ಸ್ ಚಿಂತನೆಯೇ! ಆಕೆಯ ಇತಿಹಾಸ ಪುಸ್ತಕಗಳನ್ನು ಆಧರಿಸಿ ಇವತ್ತಿಗೂ ಪಠ್ಯಪುಸ್ತಕಗಳನ್ನು ರಚಿಸಲಾಗುತ್ತದೆ, ತರಗತಿಗಳಲ್ಲಿ ಬೋಧಿಸಲಾಗುತ್ತದೆ. ಅದರಿಂದಾಗಿಯೇ ಜಗತ್ತೆಲ್ಲಾ ಧಿಕ್ಕರಿಸಿದ ಮೇಲೂ ಆರ್ಯ ಆಕ್ರಮಣವೆಂಬ ಪೊಳ್ಳುವಾದ ಭಾರತದಲ್ಲಿ ಮೆರೆದಾಡುತ್ತಿದೆ. ಈಕೆಯಂಥವರು ತುಂಬಿದ ನಂಜನ್ನುಂಡು ಬೆಳೆಯುವ ವಿದ್ಯಾರ್ಥಿಗಳು ವ್ಯವಸ್ಥೆಯ ಭಾಗವಾದಾಗ ವಿಷ ಎಲ್ಲೆಡೆ ಹರಡಿಕೊಳ್ಳುತ್ತದೆ. ಪತ್ರಿಕೆ-ಸಿನಿಮಾ-ಸಾಹಿತ್ಯ-ದೃಶ್ಯ ಮಾಧ್ಯಮಗಳಲ್ಲಿ ಇವರದ್ದೇ ಕಾರುಬಾರು.


               ದೇಶ ವಿರೋಧಿ ಕೃತ್ಯಗಳನ್ನು ಎಸಗಿದಾಗ ಅದರ ಪರವಾಗಿ ವಾದಿಸಲು ಎಡಪಂಥದ ಚಿಂತಕರ ಪಟಾಲಂ ಸಿದ್ಧವಾಗಿಯೇ ಇರುತ್ತದೆ. ಅವರ ನಾಜೂಕಿನ ಆಂಗ್ಲಭಾಷೆಯ ಮಾತಿನ ಚಾತುರ್ಯವನ್ನು ಅಂತಹುದೇ ಶಿಕ್ಷಣ ಪಡೆದ ನಮ್ಮ ಸಾಮಾನ್ಯ ದೇಶವಾಸಿಗಳು ಕೇಳಿದೊಡನೆ ಮರುಳಾಗಿ ಸತ್ಯವೆಂದೇ ನಂಬಿ ಬಿಡುತ್ತಾರೆ. ವೈಚಾರಿಕ ಮತಾಂತರವೆಂದರೆ ಇದೇ. ಈಗ ಜೆ.ಎನ್.ಯು, ಜಾಧವಪುರಗಳಲ್ಲಿ ಆಗುತ್ತಿರುವುದು ಅದೇ! ಸ್ವತಂತ್ರ ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಉಗ್ರ ಅಫ್ಜಲ್ ಕುರಿತು ಸಹಾನುಭೂತಿ ಹಾಗೂ ಅವನ ಭಾರತವಿರೋಧಿ ನಿಲುವನ್ನು ಸಮರ್ಥಿಸುವ ವಿದ್ಯಾರ್ಥಿಗಳು ಈ ವಿವಿಗಳಲ್ಲಿದ್ದಾರೆ. ಹಾಗೆಯೇ ಅವರ ವರ್ತನೆಯನ್ನು ಗಂಭೀರವಾಗಿ ಸ್ವೀಕರಿಸಿ ಅದೊಂದು ರೀತಿಯಲ್ಲಿ ಪ್ರಜಾಪ್ರಭುತ್ವದೊಳಗೇ ಇರುವ 'ಬಂಡಾಯ' ಎಂದು ವ್ಯಾಖ್ಯಾನಿಸುವ ಅಧ್ಯಾಪಕರೂ ಅಲ್ಲೇ ಇದ್ದಾರೆ.  ಎಲ್ಲೆಲ್ಲಾ ಮುಸಲ್ಮಾನರು ಜಾಸ್ತಿ ಇದ್ದಾರೋ ಅಲ್ಲೆಲ್ಲಾ ಪಾಕಿಸ್ತಾನಗಳು ಜನ್ಮ ತಳೆಯಬೇಕೆಂಬ ಜಿನ್ನಾ ಕನಸು ಪೂರ್ಣವಾಗಿ ಕೊನೆ ಉಸಿರು ಎಳೆದಿಲ್ಲ ಎನ್ನುವುದಕ್ಕೆ ಹೈದರಾಬಾದ್ ಕೇಂದ್ರೀಯ ವಿವಿ, ಜೆಎನ್ಯು, ಜಾಧವಪುರ ವಿವಿಯೊಳಗೆ ಭಾರತದ ಅಖಂಡತೆ , ಸಾರ್ವಭೌಮತೆಯ ವಿರುದ್ಧ ಬೇಯುತ್ತಿರುವ ಅಡುಗೆಯೇ ಸಾಕ್ಷಿ!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ