ಪುಟಗಳು

ಶನಿವಾರ, ಡಿಸೆಂಬರ್ 28, 2019

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!

ಕ್ರೌಂಚದ ಶೋಕವು ಕೊನೆಗೊಂಡಿತು...... ಅಸ್ಮಿತೆಯ ಕುರುಹು ಮೇಲೆದ್ದಿತು!


             ಅರ್ಧ ಸಹಸ್ರಮಾನದ ಹೋರಾಟಕ್ಕೆ ಫಲ ದೊರಕಿದೆ. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನಿಗೆ ಇತಿಹಾಸ ವಿಧಿಸಿದ್ದ ವನವಾಸ ಮುಗಿದಿದೆ! ಭಾರತದ ಅಸ್ಮಿತೆಯ ಕುರುಹು ಮೇಲೇಳಲು ಕ್ಷಣಗಣನೆ ಶುರುವಾಗಿದೆ. ಪ್ರತಿಯೊಬ್ಬ ಭಾರತೀಯನೂ ಭಾವುಕನಾಗುವ, ಧನ್ಯನಾಗುವ ಕ್ಷಣವಿದು. ಸನಾತನ ಧರ್ಮದ ಸನಾತನ ಆದರ್ಶ ಪುರುಷನನ್ನು ಮರುಪ್ರತಿಷ್ಠಾಪಿಸಲು ನಡೆದ ಬರೋಬ್ಬರಿ 76 ಯುದ್ಧಗಳು ಇಂದು ಸಾರ್ಥಕವಾದವು. ಬಾಬರನ ಆಳ್ವಿಕೆಯಲ್ಲಿ 4 ಯುದ್ಧಗಳು, ಹುಮಾಯೂನನ ಕಾಲದಲ್ಲಿ 10 ಯುದ್ಧಗಳು, ಅಕ್ಬರನ ಕಾಲದಲ್ಲಿ 20 ಯುದ್ಧಗಳು, ಔರಂಗಜೇಬನ ಕಾಲದಲ್ಲಿ 30 ಯುದ್ಧಗಳು, ಸಾದತ್ ಆಲಿಯ ಕಾಲದಲ್ಲಿ 5, ನಾಸಿರುದ್ದೀನ್ ಹೈದರನ ಕಾಲದಲ್ಲಿ 3, ವಾಜಿದ್ ಆಲಿಯ ಕಾಲದಲ್ಲಿ 2, ಬ್ರಿಟಿಷ್ ಆಳ್ವಿಕೆಯಲ್ಲಿ ಎರಡು ಯುದ್ಧಗಳು ಬಳಿಕ ನಡೆದ ಕರಸೇವಕರ ಬಲಿದಾನ, 134 ವರ್ಷಗಳ ಕಾನೂನು ಯುದ್ಧ ಎಲ್ಲದಕ್ಕೂ ಧನ್ಯತೆಯನ್ನು ಒದಗಿಸುವ ಸುಸಂಧಿ ಪ್ರಾಪ್ತವಾಯಿತು. ರಾಮೋ ವಿಗ್ರಹವಾನ್ ಧರ್ಮಃ ಎಂಬ ತಮ್ಮ ದೇವರ ಧರ್ಮದ ನಡೆಯನ್ನೇ ಉಸಿರಾಗಿಸಿಕೊಂಡ ಅವನ ಭಕ್ತರು ತನ್ನೆಲ್ಲಾ ಕ್ರಿಯೆಗಳಲ್ಲಿ ಧರ್ಮವನ್ನು ಎತ್ತಿಹಿಡಿದವನ ಮೂರ್ತಿಯನ್ನು ಮತ್ತೆ ಸ್ಥಾಪಿಸಲು ಜೀವದ ಹಂಗು ತೊರೆದು ನಡೆಸಿದ ಹೋರಾಟಕ್ಕೆ ಪೂರ್ಣಫಲ ದೊರಕಿತು. ಇದು ಕೋಟ್ಯಾಂತರ ಶ್ರೀರಾಮಭಕ್ತರು ಪಾವನಗೊಂಡ ಪರ್ವಕಾಲ. ಬಾಬರನಿಗಾಗಿ ಮರ್ಯಾದಾ ಪುರುಷೋತ್ತಮನ ಇತಿಹಾಸವನ್ನೇ ಸಂಶಯಿಸಿ ಈ ನೆಲದ ನಂಬಿಕೆಯನ್ನೇ ಅಲ್ಲಗೆಳೆದವರ ಸುಳ್ಳುಗಳನ್ನು ಕಿತ್ತೆಸೆದ ಕಾಲ.

               ಸ್ವಯಂ ಮನುವೇ ನಿರ್ಮಿಸಿದ ನಗರ, ಗೋ ಸೇವೆಯ ಮಹತ್ವವನ್ನು ಜಗತ್ತಿಗೆ ಸಾರಿದ ಚಕ್ರವರ್ತಿ ದಿಲೀಪ "ವಿಶ್ವಜಿತ್" ಯಾಗ ಮಾಡಿದ ತಾಣ, ಇಕ್ಷ್ವಾಕು ವಂಶವನ್ನೇ ತನ್ನ ಹೆಸರಿನಿಂದ ಕರೆವಂತಹ ಆಡಳಿತ ನೀಡಿದ ಶ್ರೇಷ್ಠ, ರಾಜಾ ರಘುವಿನ ರಾಜಧಾನಿ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಹರಿಶ್ಚಂದ್ರನಾಳಿದ ಭೂಮಿ, ಬ್ರಹ್ಮರ್ಷಿ ವಸಿಷ್ಠರೇ ನೆಲೆ ನಿಂತ ಪುಣ್ಯ ಭೂಮಿ. ದಶರಥನಿಂದ ಋಷ್ಯಶೃಂಗನ ನೇತೃತ್ವದಲ್ಲಿ ಪುತ್ರಕಾಮೇಷ್ಠಿ ನಡೆಸಲ್ಪಟ್ಟ, ಹಿಮವತ್ಪರ್ವತದ ಮಾನಸ ಪುತ್ರಿ ಸರಯೂ ಬಳಸಿ ಹರಿಯುತ್ತಿರುವ ಯುದ್ಧದ ಕಲ್ಪನೆಯನ್ನೂ ಮಾಡದ ಶಾಂತಿಪ್ರಿಯ ನಾಡು, ಸಪ್ತ ಮೋಕ್ಷದಾಯಕ ನಗರ ಅಯೋಧ್ಯೆ. ಸಾಲು ಸಾಲು ರಾಜರ್ಷಿಗಳು, ರಾಜ-ಮಹಾರಾಜರುಗಳ ಈ ಮಾಲಿಕೆಯ ಅರವತ್ತೈದನೆಯ ಪ್ರಭು ಶ್ರೀರಾಮಚಂದ್ರ. ಅವನೆಂದರೆ ಅಯೋಧ್ಯೆ, ಅಯೋಧ್ಯೆಯೆಂದರೆ ಅವನು. ಅಷ್ಟೇಕೆ ಅವನೇ ಭಾರತ. ರಾಮ ವೇದದ ವಿಸ್ತೃತ ರೂಪ. ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿದ ಪುರುಷೋತ್ತಮತ್ವ. ಮನುಷ್ಯ ಭೂಮಿಯಲ್ಲಿ ಮನುಷ್ಯನಾಗಿ ಹೇಗೆ ಬದುಕಬೇಕು ಎಂದು ನಡೆದು ತೋರಿದ ಪರಾಕಾಷ್ಠೆ! ಅವನು ಆದಿಕವಿಯ ಅನಾದಿ ನಾಯಕ. ರಾಮನ ಪ್ರತಿಯೊಂದು ನಡೆಗೂ ಧರ್ಮವೇ ಆಧಾರ. ಅವನು ಪರಬ್ರಹ್ಮ ಸ್ವರೂಪವಾಗಿ ಕಂಡದ್ದು ಎಷ್ಟೊಂದು ಜನರಿಗೆ!ಹೊನ್ನ ಮುಕುಟವ ಧರಿಸುವ ಕಾಲಕ್ಕೆ ಕೆಲದಿನಗಳ ಹಿಂದಷ್ಟೇ ಕೈ ಹಿಡಿದ ಮನದನ್ನೆಯ ಜೊತೆ ವನಗಮನ ಮಾಡಬೇಕಾಗಿ ಬಂದಾಗಲೂ ಸ್ಥಿತಪ್ರಜ್ಞನಾಗುಳಿದವ ಅವ. ರಾಜ್ಯಕ್ಕೆ ರಾಜ್ಯವೇ ತನ್ನನ್ನು ಸಿಂಹಾಸನಕ್ಕೇರಿಸಲು ಹಾತೊರೆಯುತ್ತಿದ್ದಾಗ, ಎಲ್ಲರೂ ತನ್ನ ಪರವಾಗಿದ್ದಾಗ ತಾನೊಬ್ಬನೇ ಚಿಕ್ಕವ್ವೆ ಕೈಕೆಯ ಪರವಾಗಿ ನಿಂತ ಪಿತೃವಾಕ್ಯಪರಿಪಾಲಕ ಆತ. ವನಗಮನದ ವೇಳೆಯ ಪಿತೃವಿಯೋಗವಿರಬಹುದು, ರಾಜಾರಾಮನಾಗಿ ಸೀತಾ ಪರಿತ್ಯಾಗದ ಪತ್ನಿವಿಯೋಗವಿರಬಹುದು, ನಿರ್ಯಾಣದಂಚಿನಲ್ಲಿ ಪ್ರಿಯ ಅನುಜನಿಗೆ ಶಿಕ್ಷೆ ವಿಧಿಸಬೇಕಾಗಿ ಬಂದಾಗಿನ ಭ್ರಾತೃವಿಯೋಗವಿರಬಹುದು...ಈ ಎಲ್ಲಾ ಸನ್ನಿವೇಶಗಳಲ್ಲಿ ಒಡಲ ದುಃಖವನ್ನು ಹೊರಗೆಡಹದೆ ಆಯಾ ಧರ್ಮವನ್ನು ಎತ್ತಿಹಿಡಿದ. ಅಹಲ್ಯೋದ್ಧರಣ, ಶಬರಿ-ಗುಹಾದಿಗಳ ಮೇಲಿನ ಕರುಣ, ಸುಗ್ರೀವಾದಿಗಳ ಗೆಳೆತನ, ಲೋಕಕಂಟಕರ ದಹನ...ಮುಂದೆ ರಾಮರಾಜ್ಯದ ಹವನ! ಎಲ್ಲದರಲ್ಲೂ ಅವನದ್ದು ಪಥದರ್ಶಕ ನಡೆ! ಧರ್ಮವೇ ಅವನನ್ನು ಹಿಂಬಾಲಿಸಿತು ಎಂದರೆ ಅತಿಶಯೋಕ್ತಿವಲ್ಲ. ಅದಕ್ಕಾಗಿಯೇ ಅವನು ದೇವನಾದುದು. ಈ ದೇಶದ ಆದರ್ಶಪುರುಷನಾದುದು. ಅವನ ಜನ್ಮಸ್ಥಾನ ಈ ದೇಶದ ಅಸ್ಮಿತೆಯ ಕುರುಹಾದುದು.

                     ರಾಜಾ ವಿಕ್ರಮಾದಿತ್ಯ ಅಯೋಧ್ಯೆಯ ಶ್ರೀರಾಮ ಮಂದಿರದ ಜೀರ್ಣೋದ್ಧಾರ ಮಾಡಿದ್ದ. ಪುಣ್ಯಭೂಮಿ ಅಯೋಧ್ಯೆಯ ದೌರ್ಭಾಗ್ಯದ ದಿನಗಳು ಆರಂಭವಾದ್ದು 1193ರಲ್ಲಿ ಶಹಾಬುದ್ದೀನ್ ಘೋರಿ ನಡೆಸಿದ ದಾಳಿಯೊಂದಿಗೆ. 1528ರಲ್ಲಿ ಬಾಬರ ಆಕ್ರಮಣ ಮಾಡಿದಾಗ ಅಯೋಧ್ಯೆಯ ರಾಮಮಂದಿರವನ್ನು ಕೆಡವಲು ಮೀರ್ ಬಾಕಿ ತಾಷ್ಕಂದಿಯನ್ನು ನಿಯೋಜಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದನಲ್ಲಾ; ಅದರ ಹಿಂದಿದ್ದದ್ದು ಫಜಲ್ ಅಕ್ಬಲ್ ಕಲಂದರ್ ಎನ್ನುವ ಫಕೀರನ ಬರ್ಬರ ಆಸೆ! ಸೂಫಿಗಳನ್ನು ಸಾಮರಸ್ಯದ ದ್ಯೋತಕವಾಗಿ ಲಲ್ಲೆಗರೆವ ಪ್ರಭೃತಿಗಳು ಅವರ ಈ ಸಮಯಸಾಧಕತನವನ್ನು ಗಮನಿಸಬೇಕು! ರಾಮಲಲ್ಲಾನ ಮಂದಿರವನ್ನು ಉಳಿಸಿಕೊಳ್ಳಲು ಮೀರ್ ಬಾಕಿಯ ತೋಪಿಗೆದುರಾಗಿ ಹಿಂದೂಗಳು ಹದಿನೈದು ದಿವಸ ಘನಘೋರವಾಗಿ ಕಾದಿದರು. ಅಯೋಧ್ಯೆ ಬಾಬರನ ವಶವಾದದ್ದು ತೀರ್ಥಯಾತ್ರೆಗಂದು ಬಂದಿದ್ದ ಭಿತಿ ಸಂಸ್ಥಾನದ ಮೆಹತಾವ್ ಸಿಂಹ್, ಹನ್ಸವಾರ್ ಸಂಸ್ಥಾನದ ರಣವಿಜಯ್ ಸಿಂಗ್, ಮಕ್ರಾಹಿ ಸಂಸ್ಥಾನದ ರಾಜಾ ಸಂಗ್ರಾಮ್ ಸಿಂಗ್ ಮುಂತಾದ ವೀರ ರಾಜರ ಸಹಿತ ಒಂದು ಲಕ್ಷ ಎಪ್ಪತ್ತು ಸಾವಿರ ಯೋಧರು ಶವವಾದ ಬಳಿಕವೇ. ನಾಲ್ಕು ಲಕ್ಷ ಮೊಘಲ್ ಸೈನಿಕರಲ್ಲಿ ಯುದ್ಧದ ನಂತರ ಬದುಕುಳಿದವರು ಕೇವಲ ಮೂರು ಸಾವಿರದ ನೂರ ನಲವತ್ತೈದು ಮಂದಿ. ದೇವಾಲಯವನ್ನು ಕೆಡವಿದ ಮೇಲೆ ಅದೇ ಸ್ಥಳದಲ್ಲಿ ಅದೇ ಸಾಮಗ್ರಿಗಳಿಂದ ಮಸೀದಿಯ ಅಡಿಪಾಯ ಹಾಕಲಾಯಿತು. ಕನ್ನಿಂಹ್ ಹ್ಯಾಮ್ ಲಖ್ನೋ ಗೆಜೆಟಿಯರ್'ನಲ್ಲಿ ಇದನ್ನು ದಾಖಲಿಸಿದ್ದಾನೆ. ಇತಿಹಾಸಕಾರ ಹೆನ್ಸಿಲಿಯನ್ ಬಾರಾಬಂಕಿಗೆಜೆಟಿಯರ್'ನಲ್ಲಿ "ಜಲಾಲ್ ಷಾ ನೀರಿಗೆ ಬದಲಾಗಿ ಹಿಂದೂಗಳ ರಕ್ತ ಬಳಸಿ ಗಾರೆ ತಯಾರಿಸಿ ರಾಮಜನ್ಮಭೂಮಿಯಲ್ಲಿ ಮಸೀದಿಯ ಅಡಿಪಾಯ ನಿರ್ಮಿಸಿದ" ಎಂದು ಬರೆದಿದ್ದಾನೆ.

                ರಾಮಜನ್ಮಭೂಮಿಯ ಜಾಗದಲ್ಲಿ ವ್ಯಾಪಕ ಉತ್ಖನನ ನಡೆಸಿದ ಪುರಾತತ್ವ ಇಲಾಖೆ ಅಲ್ಲಿ ಬೃಹತ್ತಾದ ಮಂದಿರವಿತ್ತೆಂದು, ಕ್ರಿ.ಪೂ ಏಳನೇ ಶತಮಾನಕ್ಕಿಂತಲೂ ಮೊದಲಿನಿಂದಲೂ ಅಲ್ಲಿ ದೇವಾಲಯವಿತ್ತೆಂದು ಖಚಿತಪಡಿಸಿದೆ. ಇರದೇ ಇನ್ನೇನು? ರಾಜಾ ವಿಕ್ರಮಾದಿತ್ಯನೇ ಜೀರ್ಣೋದ್ಧಾರ ಮಾಡಿದ್ದ ದೇವಾಲಯವದು. ಗುಪ್ತರ ಕಾಲದಲ್ಲಿ ಅಯೋಧ್ಯೆ ರಾಜಧಾನಿಯಾಗಿದ್ದು ರಾಮಮಂದಿರ ಅವರ ನಿತ್ಯಪೂಜಾ ಸ್ಥಳವಾಗಿತ್ತು. ಅಬುಲ್ ಫಜಲ್ "ಐನೆ ಅಕ್ಬರಿ”ಯಲ್ಲಿ ಅಯೋಧ್ಯೆಯು ಶ್ರೀರಾಮರ ಜನ್ಮಭೂಮಿಯಾಗಿದ್ದು ಹಿಂದೂಗಳಿಗೆ ಪವಿತ್ರ ಸ್ಥಳವಾಗಿತ್ತು ಎಂದು ಬರೆದಿದ್ದಾನೆ. ಅಕ್ಬರನು ನೀಡಿದ ಆರು ಭಿಗಾ ಭೂಮಿಯ ಅನುದಾನವನ್ನು 1723ರಲ್ಲಿ ನವೀಕರಿಸಿದಾಗ ಬರೆದ ಅನುದಾನ ಪತ್ರದಲ್ಲಿ "ಈ ಅನುದಾನವನ್ನು ಅಕ್ಬರನ ಆದೇಶದ ಮೇರೆಗೆ ಶ್ರೀರಾಮ ಜನ್ಮಭೂಮಿಯಿಂದ ಬರೆಯುತ್ತಿರುವುದಾಗಿ” ಉಲ್ಲೇಖವಿದೆ.  ಅಯೋಧ್ಯೆ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ಮೇಲೆ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿ ಫೈಜಾಬಾದಿನ ಜಿಲ್ಲಾ ನ್ಯಾಯಾಲಯದಲ್ಲಿ ಇರಿಸಲ್ಪಟ್ಟ ದಾಖಲೆಗಳೆಲ್ಲಾ ಇಂದಿಗೂ ಲಭ್ಯ. ಬಾಬರಿ ಮಸೀದಿಯ ಮುತ್ತಾವಲಿಯು 1850ರಲ್ಲಿ ಬ್ರಿಟಿಷರಿಗೆ ಸಲ್ಲಿಸಿದ ಎರಡು ದೂರುಪತ್ರಗಳಲ್ಲಿ ತನ್ನ ಸ್ಥಾನವನ್ನು ’ಮಸ್ಜಿದ್-ಇ-ಜನ್ಮಸ್ಥಾನ್’ಎಂದೇ ದಾಖಲಿಸಿದ್ದಾನೆ.  1858ರಲ್ಲಿ ಇಪ್ಪತ್ತೈದು ಜನ ಸಿಖ್ಖರು ವಿವಾದಿತ ಕಟ್ಟಡದೊಳಗೆ ಪ್ರವೇಶಿಸಿ ಹೋಮ ಹಾಗೂ ಪೂಜೆಗಳನ್ನು ಮಾಡಿದ ಬಗೆಗೆ ಕಟ್ಟಡದ ಮೇಲ್ವಿಚಾರಕನಿಂದ ದಾಖಲಾದ ದೂರಿನನ್ವಯ, ಅಯೋಧ್ಯೆಯ ಠಾಣೆದಾರನು ಅದರ ಪ್ರಾಥಮಿಕ ವಿಚಾರಣೆ ನಡೆಸಿ ಅಲ್ಲಿ ಈ ಹಿಂದೆ ಶ್ರೀರಾಮನ ದೇಗುಲವಿದ್ದು, ಅದು ರಾಮಜನ್ಮಭೂಮಿಯಾಗಿದ್ದು ಹಿಂದೂಗಳ ನಿಯಂತ್ರಣದಲ್ಲಿ ಇತ್ತೆಂದು ದಾಖಲಿಸಿದ್ದಾನೆ. ಮೊಹಮದ್ ಶೋಯಬರಿಗೆ ಬಾಬರಿ ಮಸೀದಿಯಲ್ಲಿ ದೊರೆತ ಶಿಲಾಶಾಸನದಲ್ಲಿ 'ಈ ಮಸೀದಿಯನ್ನು ಶ್ರೀರಾಮರ ದೇವಸ್ಥಾನದ ಸ್ಥಳದಲ್ಲಿ ಕಟ್ಟಲಾಗಿದೆ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗೆ ಸಿಗುವ ಅಸಂಖ್ಯ ದಾಖಲೆಗಳಲ್ಲಾಗಲೀ, ಭಾರತೀಯರ, ಮುಸ್ಲಿಮರ, ಪಾಶ್ಚಾತ್ಯರ ಕೃತಿಗಳಲ್ಲಾಗಲೀ ಬಾಬರ್ ಮಸೀದಿ ರಾಮದೇಗುಲವನ್ನು ಕೆಡಹಿಯೇ ನಿರ್ಮಾಣವಾಗಿದೆ ಎನ್ನುವ ಸಾಲುಸಾಲು ಸಾಕ್ಷ್ಯಗಳೇ ತುಂಬಿವೆ. 1940ರ ಹಿಂದೆ, ಈ ಮಸೀದಿಯನ್ನು “ಮಸ್ಜೀದ್-ಇ-ಜನ್ಮಸ್ಥಾನ್” ಎಂದೂ ಕರೆಯಲಾಗುತ್ತಿತ್ತು! ಇಲ್ಲಿನ ಮಣ್ಣಿನಲ್ಲಿ ಸಿಕ್ಕಿರುವ ಕೆಲವು ದಾಖಲೆಗಳು ಇಲ್ಲಿ ಕ್ರಿಸ್ತಪೂರ್ವ 17ನೇ ಶತಮಾನದಲ್ಲಿಯೂ ಮಾನವ ವಸತಿ ಇತ್ತು ಎಂದು ಹೇಳುತ್ತಿದೆ! 1986ರ ಎನ್ಸೈಕ್ಲೋಪೀಡಿಯ ಬ್ರಿಟಾನಿಕದಲ್ಲಿ “ರಾಮನ  ಜನ್ಮ ಸ್ಥಳವನ್ನು ಇದೀಗ ಮಸೀದಿಯೊಂದು ಆಕ್ರಮಿಸಿಕೊಂಡಿದೆ. ರಾಮನ  ಜನ್ಮಸ್ಥಳದಲ್ಲಿ ನಿಂತಿದ್ದ ಭವ್ಯವಾದ ದೇವಸ್ಥಾನವನ್ನು ಕ್ರಿ.ಶ. 1528ರಲ್ಲಿ ಕೆಡವಿ ಬಾಬರ್ ಎಂಬ ರಾಜ ಮಸೀದಿ ಕಟ್ಟಿಸಿದ” ಎಂದು ಬರೆಯಲಾಗಿದೆ.

               1885ರಲ್ಲಿ ಮಸೀದಿಯ ಹೊರ ಆವರಣದಲ್ಲಿ ರಾಮನ ಹೆಸರಿನಲ್ಲಿ ಒಂದು ಸಣ್ಣ ಕಟ್ಟೆಯೊಂದನ್ನು ಕಟ್ಟಿಕೊಂಡ ಹಿಂದೂಗಳು ಅಲ್ಲಿ ಪೂಜೆಯನ್ನು ಮಾಡಲಾರಂಭಿಸಿದರು. ಮಹಂತ ರಘುವರ ದಾಸರು ಅಲ್ಲಿ ದೇವಸ್ಥಾನ ಕಟ್ಟುವ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟಾಗ ಅವರಿಗೆ ಅನುಮತಿ ದೊರಕಲಿಲ್ಲ. 1934ರಲ್ಲಿ ಅಯೋಧ್ಯೆಯಲ್ಲಾದ ಹೋರಾಟದಲ್ಲಿ ಹಿಂದೂಗಳು ಬಾಬರಿ ಮಸೀದಿಯಿದ್ದ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಬ್ರಿಟೀಷ್ ಸರ್ಕಾರ ಅದನ್ನು ಬಲವಂತವಾಗಿ ಹಿಂಪಡೆದುಕೊಂಡು ಗುಮ್ಮಟಗಳ ದುರಸ್ತಿಗಾಗಿ ಹಿಂದೂಗಳಿಂದಲೇ ದಂಡವನ್ನೂ ಕಟ್ಟಿಸಿಕೊಂಡಿತು. ಈ ಪಾವನ ಕ್ಷೇತ್ರದಲ್ಲಿ 1940ರಲ್ಲಿ ಸಹಸ್ರಾರು ಭಕ್ತರು ಶೃದ್ಧೆಯಿಂದ ರಾಮಚರಿತ ಮಾನಸ ಪಠಿಸಲು ಆರಂಭಿಸಿದರು. 22 ಡಿಸೆಂಬರ್ 1949ರಂದು ಬ್ರಾಹ್ಮೀ ಮಹೂರ್ತದಲ್ಲಿ ಆಶ್ಚರ್ಯಕರವೆಂಬಂತೆ ದಿವ್ಯಪ್ರಭೆಯೊಂದಿಗೆ ಶ್ರೀರಾಮ, ಲಕ್ಷ್ಮಣ ಮೂರ್ತಿಗಳು ಅಲ್ಲಿ ಕಾಣಿಸಿಕೊಂಡವು. ಆದರೆ ನ್ಯಾಯಾಲಯದ ಆದೇಶದಂತೆ 1986ರವರೆಗೆ ರಾಮ ತನ್ನ ಜನ್ಮಭೂಮಿಯಲ್ಲೇ ಬಂಧನದಲ್ಲಿರಬೇಕಾಯಿತು. ಅಂದರೆ ರಾಮನ ಪ್ರತಿಮೆಗೆ ಬೀಗ ಜಡಿಯಲಾಗಿತ್ತು. 1980ರಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ "ಧರ್ಮಸ್ಥಾನ ಮುಕ್ತಿಯಜ್ಞ" ಸಮಿತಿ ರಚಿತವಾಗಿ 1986ರಲ್ಲಿ ನ್ಯಾಯಾಲಯದ ಆದೇಶದಂತೆ ಮಂದಿರಕ್ಕೆ ಹಾಕಿದ್ದ ಬೀಗ ತೆರೆಯಲ್ಪಟ್ಟಿತು. 1989ರ ನವೆಂಬರ್ 10ರಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಶಿಲಾನ್ಯಾಸ ಹರಿಜನ ಸಮುದಾಯಕ್ಕೆ ಸೇರಿದ ಬಿಹಾರದ ಶ್ರೀ ಕಾಮೇಶ್ವರ ಚೌಪಾಲರಿಂದ ನೆರವೇರಿತು. ಶ್ರೀರಾಮ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಎನ್ನುವುದಕ್ಕೆ ನಿದರ್ಶನವಿದು. ಅನಂತರ ಶಿಲಾಪೂಜನಾ, ರಾಮಪಾದುಕಾ, ಸಂತಯಾತ್ರೆಗಳು ಹಾಗೂ ಕರಸೇವೆಗಳು ನಡೆದವು. 1990ರ ಅಕ್ಟೋಬರ್ 30ರಂದು ರಾಮಜನ್ಮಭೂಮಿಯಲ್ಲಿ ಶಾಂತಿಯುತ ಕರಸೇವೆಯನ್ನು ನಡೆಸುತ್ತಿದ್ದ ಸ್ವಯಂಸೇವಕರ ಮೇಲೆ  ಗುಂಡುಹಾರಿಸುವ ಆಜ್ಞೆಯನ್ನು ಅರೆಸೇನಾಪಡೆಗಳಿಗೆ ಮಾಡಿದ ಮುಲಾಯಮ್ ಸಿಂಗ್ ಯಾದವ್ ಸತ್ತವರ ಲೆಕ್ಕ ಸಿಗಬಾರದೆಂಬ ದುರುದ್ದೇಶದಿಂದ ಹೆಣಗಳಿಗೆ ಉಸುಕಿನ ಚೀಲಗಳನ್ನು ಕಟ್ಟಿ ಸರಯೂ ನದಿಯಲ್ಲಿ ಮುಳುಗಿಸಿದರು. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನೆರೆದಿದ್ದ ಲಕ್ಷಾಂತರ ಕರಸೇವಕರು ಕಲಂಕಿತ ಕಟ್ಟಡವನ್ನು ನೆಲಸಮ ಮಾಡಿದರು. ನಾಲ್ಕೂವರೆ ಶತಮಾನಗಳ ಅಪಮಾನದ ಪರಿಮಾರ್ಜನೆಯಾಯಿತು.

                 ಸದಾ ಹಿಂದೂ ನಂಬಿಕೆಯನ್ನು ಪ್ರಶ್ನಿಸುವ ವರ್ಗ ಹಾಗೂ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಅಯೋಧ್ಯೆಯಲ್ಲಿ ಮಂದಿರವೇ ಇರಲಿಲ್ಲ ಎನ್ನುವ ಸಮರ್ಥನೆಗೆ ತೊಡಗಿದರು. ಆಗ ವಿವಾದಿತ ಜಾಗದಲ್ಲಿ ಉತ್ಖನನ ನಡೆಸುವ ನಿರ್ಧಾರಕ್ಕೆ ಬರಲಾಯಿತು. ಇದಕ್ಕಿಂತ ಮೊದಲು ಬ್ರಿಟಿಷರ ಕಾಲದಲ್ಲೇ ಎರಡು ಬಾರಿ ಉತ್ಖನನಗಳು ನಡೆದಿದ್ದವು. 1976-77ರಲ್ಲಿ ಬಿಬಿ ಲಾಲ್ ನೇತೃತ್ವದಲ್ಲಿ ಉತ್ಖನನಗಳು ನಡೆದಾಗ ದೇಗುಲಗಳಲ್ಲಿ ಕಂಡುಬರುವ ಪೂರ್ಣಕಲಶದ ಕೆತ್ತನೆಗಳನ್ನು ಹೊಂದಿದ್ದ ಕಪ್ಪು ಅಗ್ನಿಶಿಲೆಯನ್ನು ಬಳಸಿ ರಚಿಸಿದ 14 ಸ್ತಂಭಗಳು ದೊರೆತವು. ಸ್ತಂಭಗಳ ಮೇಲೆ ಹಿಂದೂ ದೇವಾನುದೇವತೆಗಳ ಚಿತ್ರಗಳಿದ್ದವು. ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿದ್ದ ಎಸ್. ಗೋಪಾಲ್, ರೋಮಿಲಾ ಥಾಪರ್, ಬಿಪಿನ್ ಚಂದ್ರ ಮುಂತಾದ ಎಡಪಂಥೀಯರು ಅದು ಬಾಬರ ಖಾಲಿ ಜಾಗದಲ್ಲಿ ಕಟ್ಟಿದ ಮಸೀದಿ; ಆತ ಯಾವುದೇ ಹಿಂದೂ ಶ್ರದ್ಧಾಕೇಂದ್ರವನ್ನು ಧ್ವಂಸ ಮಾಡಿಲ್ಲ; ಬಾಬರ್ ಹಾಗೆ ಮಾಡಿದನೆಂಬುದಕ್ಕೆ 19ನೇ ಶತಮಾನದಲ್ಲಿ ಯಾವೊಂದು ಉಲ್ಲೇಖವೂ ಇಲ್ಲ; ಅಯೋಧ್ಯೆ ಮೂಲತಃ ಬೌದ್ಧ ಮತ್ತು ಜೈನರ ದೇಗುಲಗಳಿರಬಹುದು ಎಂಬ ಕಪೋಲಕಲ್ಪಿತ ಸಿದ್ಧಾಂತವನ್ನು ವಿವಿಧ ವೇದಿಕೆಗಳಲ್ಲಿ ಮಂಡಿಸತೊಡಗಿದರು. ಪ್ರೊ. ಆರ್. ಎಸ್. ಶರ್ಮಾ, ಅಕ್ತರ್ ಅಲಿ, ಡಿ.ಎಸ್. ಝಾ, ಸೂರಜ್ ಭಾನ್ "ಬಾಬರಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಕಟ್ಟಡಗಳ ಅವಶೇಷಗಳೂ ಇಲ್ಲ. ಅದೆಲ್ಲವೂ ಅಲ್ಲಿ ರಾಮಮಂದಿರ ಕಟ್ಟಬೇಕೆಂದು ಹವಣಿಸುತ್ತಿರುವವರ ಕಟ್ಟುಕತೆಗಳು" ಎಂದು ಅಲಹಾಬಾದ್ನ ಉಚ್ಚನ್ಯಾಯಾಲಯಕ್ಕೆ ವರದಿ ಕೊಟ್ಟರು. ನ್ಯಾಯಾಲಯವು "ಪುರಾತತ್ತ್ವ ಇಲಾಖೆಯ ಉತ್ಖನನದ ಫಲಿತಾಂಶಗಳನ್ನು ನೀವು ಗಮನಿಸಿದ್ದೀರಾ?" ಎಂದು ಕೇಳಿದಾಗ ಈ ಸ್ವಘೋಷಿತ ವಿದ್ವಾಂಸರು "ಕ್ಷಮಿಸಿ, ನಮಗೆ ವರದಿ ಕೊಡಲು ಕೊಟ್ಟ ಅವಧಿ ಅತಿ ಕಡಿಮೆ. ಅಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚು ಸಂಶೋಧನೆ ಮಾಡಲು ಸಮಯ ಇರಲಿಲ್ಲ. ಆದ್ದರಿಂದ ನಾವು ನಮ್ಮ ಅಭಿಪ್ರಾಯ ತಿಳಿಸಿದೆವು ಅಷ್ಟೆ" ಎಂದು ತಪ್ಪೊಪ್ಪಿಕೊಂಡರು! ಅಂದರೆ ತಮ್ಮ ಅಭಿಪ್ರಾಯವನ್ನು ಇತಿಹಾಸ ಎಂಬಂತೆ ಬಿಂಬಿಸಿ ಈ ಎಡಪಂಥೀಯ ಖೊಟ್ಟಿ ವಿದ್ವಾಂಸರು ಸಮಾಜವನ್ನು ಒಡೆಯಲು ಉಪಯೋಗಿಸಿದ್ದರು! ಆದರೆ ಈ ದಾಳಿ ಅಷ್ಟಕ್ಕೇ ನಿಲ್ಲಲಿಲ್ಲ! ಹಿಂದೂ ನಂಬಿಕೆಗಳನ್ನು ಘಾಸಿಗೊಳಿಸಬೇಕು ಎನ್ನುವುದನ್ನೇ ಉದ್ಯೋಗವನ್ನಾಗಿಸಿಕೊಂಡಿರುವ ಎಡಪಂಥೀಯರು ಮಸೀದಿಯ ಅಡಿಯಲ್ಲಿ ಸಿಕ್ಕಿರುವ ಕಂಬಗಳು ಮಸೀದಿಯದ್ದೇ ಯಾಕಾಗಿರಬಾರದು ಎಂದು ಹುಯಿಲೆಬ್ಬಿಸತೊಡಗಿದರು. ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಬಗ್ಗೆ ತಮ್ಮ ಮೂಗಿನ ನೇರಕ್ಕೆ ಬರೆಯಲಾರಂಭಿಸಿದರು. ಇವರಾರೂ ಪ್ರಾಚ್ಯವಸ್ತು ಸಂಶೋಧಕರಲ್ಲವಾದರೂ ಇವರು ಹೇಳಿದ ಸುಳ್ಳು ಜಗತ್ತಿನೆಲ್ಲೆಡೆ ನರ್ತಿಸತೊಡಗಿತು. ಆಗ ಅಲಹಾಬಾದ್ ಹೈಕೋರ್ಟ್ ಇನ್ನೊಮ್ಮೆ ಪೂರ್ಣ ಪ್ರಮಾಣದಲ್ಲಿ ಉತ್ಖನನ ನಡೆಸುವಂತೆ ಆದೇಶಿಸಿತು. ಆಗ ಐವತ್ತು ಕಂಬಗಳ ಅಡಿಪಾಯವೇ ವಿವಾದಿತ ನೆಲದೊಳಗೆ ಪತ್ತೆಯಾಯಿತು. ಮಾತ್ರವಲ್ಲ ಕ್ರಿ.ಪೂ. 1200 ವರ್ಷಕ್ಕೂ ಹಳೆಯದಾದ ಅವಶೇಷಗಳು ದೊರೆತವು. ಹಲವು ಮಣ್ಣಿನ ಮೂರ್ತಿಗಳೂ ದೊರೆತವು. ದೇವಾಲಯಗಳಲ್ಲಿರುವ ದೇವರ ಅಭಿಷೇಕದ ನೀರು ಹರಿದು ಹೋಗುವ ಮಕರ ಪ್ರಣಾಳಿಯೂ ದೊರಕಿತು. ಅಲ್ಲದೆ ವಿಷ್ಣು ದೇವರಿಗೆ ಈ ದೇವಾಲಯ ಅರ್ಪಿತವಾಗಿದೆ ಎನ್ನುವ ಶಿಲಾಫಲಕವೂ ದೊರಕಿತು.

             ಈಗ ಈ ದೇಶದ ಸರ್ವೋಚ್ಛ ನ್ಯಾಯಾಲಯ ಈ ಎಲ್ಲಾ ದಾಖಲೆಗಳ ಜೊತೆಗೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನಗಳ ಮಾಹಿತಿಯನ್ನೂ ಗಮನದಲ್ಲಿಟ್ಟುಕೊಂಡು ರಾಮಜನ್ಮಭೂಮಿಯನ್ನು ಹಿಂದೂಗಳ ಸುಪರ್ದಿಗೆ ಒಪ್ಪಿಸಿ, ರಾಮಜನ್ಮಸ್ಥಾನದಲ್ಲೇ ಮಂದಿರವನ್ನು ನಿರ್ಮಾಣ ಮಾಡುವಂತೆ ಆದೇಶ ಹೊರಡಿಸಿದೆ. ಈ ರೀತಿ ಆದೇಶ ನೀಡುವ ಮೂಲಕ ಭಾರತದ ನ್ಯಾಯಾಂಗ ತನಗಿನ್ನೂ ಸಂಪೂರ್ಣವಾಗಿ ಸೆಕ್ಯುಲರ್ ರೋಗ ಬಡಿದಿಲ್ಲ; ತಾನು ನಿಷ್ಪಕ್ಷಪಾತವಾಗಿ ತೀರ್ಪು ನೀಡಬಲ್ಲೆ ಎಂದು ನಿರೂಪಿಸಿದೆ. ಅದೇನೇ ಇರಲಿ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನಕ್ಕೆ ಇಂದು ಸಾರ್ಥಕತೆ ಒದಗಿದೆ. ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಾಮರಥ ಯಾತ್ರೆ ನಿಜಾರ್ಥದಲ್ಲಿ ಇಂದು ಸಮಾಪನಗೊಂಡಿದೆ. ಆದರೆ ಇದು ಅಂತ್ಯವಲ್ಲ; ಉರುಳಿದ ಅಸಂಖ್ಯ ದೇಗುಲಗಳು ಮತ್ತೆ ಎದ್ದು ನಿಲ್ಲಲು ರಾಮಮಂದಿರ ಪ್ರೇರಣೆಯಾಗಲಿ. ಭವ್ಯ ರಾಮಮಂದಿರದಿಂದ ಹೊರಟ ಶಂಖನಾದ ಕಾಶಿ, ಮಥುರೆಗಳ ಮೂಲಕವೂ ಹಾದು ಕಾಶ್ಮೀರದ ಶಾರದಾ ಪೀಠದಲ್ಲಿ ಅನುರಣಿಸಲಿ. ಹೌದು...ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...!

            ರಾಮನ ಜೀವನದ ಪ್ರತಿಯೊಂದು ಘಟನೆಯ ಅಂತಿಮ ಘಟ್ಟದಲ್ಲಿ ಸಿಕ್ಕಿದ್ದು ದುಃಖವೇ. ಪಟ್ಟಾಭಿಷೇಕದ ಸಮಯದಲ್ಲಿ ವನಗಮನದ ದುಃಖ; ಮುಂದೆ ಭರತನ ಭೇಟಿಯ ಸಮಯದಲ್ಲಿ ಪಿತೃವಿಯೋಗದ ದಾರುಣ ವಾರ್ತೆ; ಎಲ್ಲವೂ ಸರಿಯಾಯಿತು ಎನ್ನುತ್ತಿರುವಾಗಲೇ ಸೀತಾಪಹಾರ, ರಾವಣಾಖ್ಯರ ವಧೆಯ ಬಳಿಕ ರಾಮರಾಜ್ಯವಾಗಿ ಸುಭೀಕ್ಷೆಯಲ್ಲಿದ್ದಾಗ ಅಗಸನೊಬ್ಬನ ಆಡಬಾರದ ಮಾತು, ತನ್ಮೂಲಕ ಸೀತಾ ಪರಿತ್ಯಾಗ; ಯಾಗದ ಪೂರ್ಣಾಹುತಿಗೆ ಸಮೀಪಿಸುತ್ತಿರುವಾಗ ಪ್ರಿಯೆ ಸೀತೆಯ ಅಗಲಿಕೆ; ಕಾಲನೇ ಬಂದು ಕರೆದಾಗ ಭ್ರಾತೃತ್ವದ ಶೇಷ ಉಳಿಸಿ ಹೊರಟು ಹೋದ ಪ್ರಾಣಪ್ರಿಯ ಸಹೋದರ; ಈ ಎಲ್ಲಾ ದುಃಖದ ಸನ್ನಿವೇಶಗಳಲ್ಲಿ ಅವನು ಸ್ಥಿತಪ್ರಜ್ಞನಾಗಿಯೇ ಉಳಿದಿದ್ದ. ಆದರೆ ಅವನ ಭಕ್ತರಾದ ನಮಗೆ ಹಾಗಾಗಲಿಲ್ಲ. 491 ವರ್ಷಗಳ ಹೋರಾಟದ ಬಳಿಕ ನಮಗಿದ್ದ ದುಃಖ ನಿವಾರಣೆಯಾಯಿತು. ಭವ್ಯವಾದ ಅವನ ಮಂದಿರ ಅವನ ಜನ್ಮಸ್ಥಾನದಲ್ಲೇ ಮರುನಿರ್ಮಾಣವಾಗುವ ಸಂತೋಷ ದೊರಕಿತು. ಅಷ್ಟೂ ವರ್ಷವೂ ರಾಮನಂತೆಯೇ ಧರ್ಮಮಾರ್ಗದಲ್ಲಿ ನಡೆದ ಅವನ ಭಕ್ತರು ನೆಲದ ಕಾನೂನಿಗೆ ಗೌರವ ಕೊಟ್ಟರು. ರಾಮನಂತೆಯೇ ರಾಮಮಂತ್ರವೂ ದೊಡ್ಡದು ಎನ್ನುವ ಸತ್ಯ ಮತ್ತೆ ನಿರೂಪಿತವಾಯಿತು. ರಾಮಾಯಣದುದ್ದಕ್ಕೂ ಕೇಳಿದ್ದು ಕ್ರೌಂಚದ ಶೋಕ. ಅಂತಹಾ ದುಃಖದ ನಡುವೆಯೂ ಸ್ಥಿತಪ್ರಜ್ಞನಾಗಿ ಉಳಿದು, ತಾನಿಡುವ ಒಂದೊಂದು ಹೆಜ್ಜೆಯೂ ನಿರ್ದುಷ್ಟವಾಗಿರಬೇಕು ಎಂದು ಇಡೀ ಲೋಕಕ್ಕೆ ನಡೆದು ತೋರಿ, ಧರ್ಮವನ್ನೇ ಎತ್ತಿ ಹಿಡಿದು ಪುರುಷೋತ್ತಮ ಎನಿಸಿಕೊಂಡ. ಅಂತಹಾ ಕ್ರೌಂಚದ ಶೋಕವೂ ಇಂದು ಧರ್ಮದ ದಾರಿಯಲ್ಲೇ ಕೊನೆಗೊಂಡು ರಾಮನೆನುವ ಪರಪ್ರಹ್ಮ ತತ್ತ್ವ ತನ್ನ  ಜನ್ಮಸ್ಥಾನದ ಭವ್ಯಮಂದಿರದೊಳಗೆ ವಿಗ್ರಹರೂಪಿಯಾಗಿ ಪ್ರತಿಷ್ಠೆಗೊಳ್ಳುವ ಸುಸಂಧಿ ಒದಗಿತು.

              ದೇಶದೆಲ್ಲೆಡೆ ಸಾವಿರಾರು ರಾಮಮಂದಿರಗಳಿರಬಹುದು. ಆದರೆ ಅವಾವುವೂ ರಾಮಮಂದಿರಕ್ಕೆ ಸಮವಲ್ಲ. ಈ ದೇಶದ ನದಿ, ಸರೋವರಗಳಿಗೆ ಸರಯೂ ಎನಿಸಿಕೊಳ್ಳುವ ಹಪಹಪಿ ಇದೆ. ಕಲ್ಲು ಕಲ್ಲುಗಳಿಗೂ ಅಹಲ್ಯೆಯಂತೆ ಉದ್ಧಾರವಾಗುವ ಮಹದಿಚ್ಛೆಯಿದೆ. ಪ್ರತಿಯೊಂದು ಕಾನನಕ್ಕೂ ಪಂಚವಟಿಯೆನ್ನಿಸಿಕೊಳ್ಳುವ ವಾಂಛೆ ಇದೆ. ಹಾಗೆಯೇ ಪ್ರತಿಯೊಂದು ಮಂದಿರಕ್ಕೂ ರಾಮನಿಗೆ ಗುಡಿಯಾಗುವ ಮಹೋದ್ದೇಶವಿದೆ. 491 ವರ್ಷಗಳಲ್ಲಿ ಬಹುತೇಕ ಮೊಘಲರ ಆಳ್ವಿಕೆ, ಬ್ರಿಟಿಷರ ಆಳ್ವಿಕೆಯಲ್ಲೇ ಕಳೆದಿತ್ತು ದೇಶ. ಆದರೆ ಸ್ವತಂತ್ರಗೊಂಡ ಬಳಿಕವೂ 75% ಹಿಂದೂಗಳಿಂದಲೇ ತುಂಬಿರುವ ದೇಶಕ್ಕೆ ರಾಮ ಮಂದಿರವನ್ನು ನಿರ್ಮಿಸುವ ಅನುಮತಿ ದೊರಕಿಸಿಕೊಳ್ಳಲು 72 ವರ್ಷಗಳೇ ಬೇಕಾಯಿತು ಎಂದರೆ ನಾವು ರೂಪಿಸಿಕೊಂಡ ವ್ಯವಸ್ಥೆಯಲ್ಲೇ ಲೋಪವಿದೆ ಎಂದರ್ಥ. ಅಂತಹಾ ವ್ಯವಸ್ಥೆಯನ್ನು ಸರಿಪಡಿಸಿ ರಾಮರಾಜ್ಯವನ್ನಾಗಿಸಿಕೊಳ್ಳುವುದೇ ಇವೆಲ್ಲಾ ಸಮಸ್ಯೆ, ಅಪಸವ್ಯಗಳಿಗೆ ರಾಮಬಾಣ. ಹಾಗಾಗಬೇಕಿದ್ದರೆ ಪ್ರತಿಯೊಬ್ಬನೂ ರಾಮ ನಡೆದ ಹಾದಿಯಲ್ಲಿ ನಡೆಯಬೇಕು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ