ಪುಟಗಳು

ಬುಧವಾರ, ಆಗಸ್ಟ್ 27, 2014

ಅಗ್ನಿಮೀಳೇ.....

"ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಂ ಋತ್ವಿಜಮ್|
ಹೋತಾರಂ ರತ್ನಧಾತಮಮ್||"

ಅಪಾರವಾದ ಆನಂದವೆಂಬ ರತ್ನವನ್ನು ಧರಿಸಿದವನಾದ, ಯಜ್ಞದ ಪುರೋಹಿತ, ಹೋತಾರ, ಋತ್ವಿಜ ಹಾಗೂ ದೇವನಾದ ಅಗ್ನಿಯನ್ನು ನಾನು ಪ್ರಾರ್ಥಿಸುತ್ತೇನೆ.

ಇಲ್ಲೊಂದು ವಿಶೇಷವಿದೆ: ಇಲ್ಲಿ ಯಜ್ಞವನ್ನು ನಡೆಸುವ ಋತ್ವಿಜನೂ ಅಗ್ನಿಯೇ, ಯಜ್ಞಕ್ಕೆ ಇತರ ದೇವತೆಗಳನ್ನು ಆಹ್ವಾನಿಸುವವ ಹೋತಾರನೂ ಅಗ್ನಿಯೇ, ನಡೆಸುವ ಯಜ್ಞದ ಅಧಿದೇವತೆಯೂ ಅಗ್ನಿಯೇ!
ಅಂದರೆ ಸಾಧಕನ ಹೃದಯದಲ್ಲಿ ಈ ಅಂತರ್ಯಜ್ಞ ನಡೆಯುತ್ತಿದೆ.

ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ
"ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್
ಮಂತ್ರೋಹಮಹಮೇವಾಜ್ಯಮಹಮಗ್ನಿರಹಂ ಹುತಮ್"

"ಯಜ್ಞವು ನಾನೇ - ಮಂತ್ರವೂ ನಾನೇ - ಆಜ್ಯವೂ ನಾನೇ - ಆಹುತಿಯನ್ನೊಯ್ಯುವ ಅಗ್ನಿಯೂ" ನಾನೇ ಎಂದಿದ್ದಾನೆ.

ಮಂಗಳವಾರ, ಆಗಸ್ಟ್ 26, 2014

ಓಂಕಾರ

ಓಂ : 'ಅ' + 'ಉ' + 'ಮ' ಗಳಿಂದಾಗಿದೆ.
ಇವು ಕ್ರಮವಾಗಿ ಭೌತಿಕ ಸೆಲೆ, ಮಾನಸಿಕ ಸೆಲೆ, ಜಾಗೃತ ಸೆಲೆಗಳನ್ನು ಪ್ರತಿಧ್ವನಿಸುತ್ತದೆ.

ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು:
*ಹತ್ತು ಸಾರಿ ಓಂಕಾರವನ್ನು ಕ್ರಮಬದ್ಧವಾಗಿ ಜಪಿಸಿದರೆ ಪ್ರಜ್ಞೆ ಅರಳುತ್ತದೆ. ರಕ್ತದ ಒತ್ತಡ ಮತ್ತು ಹೃದಯ ಬಡಿತ ಕೆಳಗೆ ಬರುತ್ತದೆ.
*ನಿದ್ರಾಭಂಗ ನಿವಾರಣೆಯಾಗುತ್ತದೆ.
*ಗಮನಾರ್ಹ ರೀತಿಯಲ್ಲಿ ಶರೀರದಲ್ಲಿನ ಶರ್ಕರಾಂಶ ಬಳಕೆ ಹೆಚ್ಚುತ್ತದೆ.
*ದೇಹದಲ್ಲಿನ ಆಮ್ಲಜನಕ ಸಂಚಾರ ಉನ್ನತ ಮಟ್ಟದಲ್ಲಿರುತ್ತದೆ.
*ಮನೋಖಿನ್ನತೆ, ನಕರಾತ್ಮಕ ಧೋರಣೆ, ಕುತೂಹಲದ ಉಪಟಳ ಇರುವುದಿಲ್ಲ. ನಿರಾಶೆ ಕುಗ್ಗುತ್ತದೆ.
*ಮನೋಲ್ಲಾಸ, ಪ್ರಫುಲ್ಲತೆ, ಮನೋಶಾಂತಿ ವೃದ್ಧಿಸುತ್ತದೆ.
*ಮನೋದುಗುಡ, ಉದ್ರೇಕ, ಕಳವಳ ಶಮನಕಾರಿ.
*ಶರೀರದ ಅಂಗಕ್ರಿಯೆಗಳು ವೃದ್ಧಿಸುತ್ತವೆ.
*ಏಕಾಗ್ರತೆ ಹೆಚ್ಚುತ್ತದೆ. ಗ್ರಹಣಶಕ್ತಿ ಹೆಚ್ಚುತ್ತದೆ.
*ಬೇಸರ ಹತ್ತಿರ ಸುಳಿಯುವುದಿಲ್ಲ.
*ಜನಾನುರಾಗ ಗುಣ ಉದ್ದೀಪನಗೊಳ್ಳುತ್ತದೆ.
*ವೃತ್ತಿ ತತ್ಪರತೆ - ಕಾರ್ಯ ಕೌಶಲ್ಯ ಶ್ರೇಷ್ಠ ಮಟ್ಟದಲ್ಲಿರುತ್ತದೆ.
*ನೋವಿನಿಂದ ನಿರಾಳತೆ ಲಭಿಸುತ್ತದೆ.
*ನೆನಪಿನ ಶಕ್ತಿ ವೃದ್ಧಿಸುತ್ತದೆ.
*ವೈದ್ಯ ವಿಜ್ಞಾನದ ಪ್ರಕಾರ ಓಂಕಾರ ಮಾನವನ ಸೃಷ್ಟ್ಯಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರೇರಕ ಶಕ್ತಿಯ ಸಂಚಾರ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದರಿಂದ ಸ್ಮೃತಿ ವರ್ಧಿಸುತ್ತದೆ.

ಭಾನುವಾರ, ಆಗಸ್ಟ್ 24, 2014

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ!
             ವೇದದಲ್ಲಿ ಸುಮಾರು 25000 ಮಂತ್ರಗಳನ್ನು ಹಲವಾರು ಋಷಿಗಳ ಹೆಸರಿನಿಂದ ಜೋಡಿಸಲಾಗಿದೆ. ಈ ಮಂತ್ರದೃಷ್ಟಾರ ಋಷಿಗಳಿಗೆ ತಮ್ಮ ದೀರ್ಘಕಾಲದ ತಪಸ್ಸಿನ ಸಿದ್ಧಿಕಾಲದಲ್ಲಿ ಉಂಟಾದ  ಸತ್ಯತತ್ವಗಳ ದರ್ಶನಗಳೇ ಈ ವೇದ ಮಂತ್ರಗಳು. ಒಂದು ಸದ್ವಿಷಯದ ಮೇಲಿನ ತೀವ್ರಾಸಕ್ತಿಯಿಂದ ಮನಸ್ಸು ಸಂಪೂರ್ಣ ಕೇಂದ್ರೀಕೃತವಾಗುವುದೇ ತಪಸ್ಸು. ತಾವು ಬೆಳೆಸಿಕೊಂಡ ತಪಃಶಕ್ತಿಯ ಪ್ರಭಾವದಿಂದ ಈ ವಿಶ್ವದಲ್ಲಡಗಿರುವ ಶಕ್ತಿಯನ್ನು ಮತ್ತು ತನ್ನ ಒಳಗೂ ಹೊರಗೂ ಇರುವ ಅದರ ಪ್ರಭಾವದ ಅರಿವನ್ನು ತೆರೆದು ತೋರಿಸುವುದೇ ಈ ದರ್ಶನ. ವಿಶ್ವಾಮಿತ್ರ, ಪರಾಶರ, ವಸಿಷ್ಠ, ವಾಮದೇವ ಮುಂತಾದ ನೂರಾರು ಋಷಿಗಳೊಂದಿಗೆ ಅದಿತಿ ದಾಕ್ಷಾಯಿಣಿ, ಅಪಾಲಾ ಆತ್ರೇಯಿ, ವಾಗಂಭೃಣೀ ಮೊದಲಾದ ಋಷಿಕೆಯರು ಇಂಥ ದೃಷ್ಟಾರರೇ. ಅಂದರೆ ಮಹಿಳೆಯರಿಗೂ ಪುರುಷರಷ್ಟೇ ಉನ್ನತವಾದ ಸ್ಥಾನಗಳು ವೇದಕಾಲೀನ ಪರಂಪರೆಯಲ್ಲಿ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ತಾನೆ.

            ಅಂದು ಪುರುಷರಂತೆ ಮಹಿಳೆಯರೂ ವೇದಾಧ್ಯಯನದಲ್ಲಿ ನಿರತರಾಗಿದ್ದರು ಎಂಬುದನ್ನು ಹಲವು ಮಂತ್ರಗಳಲ್ಲಿ ಕಾಣಬಹುದು. ತಮ್ಮ ವಿದ್ಯಾಭ್ಯಾಸದ ನಂತರ ವಿವಾಹವಾಗಿ ಕೌಟುಂಬಿಕ ಜೀವನವನ್ನು ಪ್ರವೇಶಿಸುತ್ತಿದ್ದ ಮಹಿಳೆಯರನ್ನು ಸದ್ಯೋವಧುಗಳೆಂದೂ, ಅಧ್ಯಾಪನ - ತಪಶ್ಚರ್ಯೆಗಳಲ್ಲಿಯೇ ನಿರತರಾದವರನ್ನು ಋಷಿಕೆ - ಬ್ರಹ್ಮವಾದಿನಿಯರೆಂದೂ ಕರೆಯುತ್ತಿದ್ದರು. ಋಗ್ವೇದದಲ್ಲಿ ಇಂತಹ 32 ಬ್ರಹ್ಮವಾದಿನಿಯರು ಮಂತ್ರದೃಷ್ಟಾರೆಯರಾಗಿರುವುದು ಕಂಡು ಬರುತ್ತದೆ. ಹದಿನಾರು ವರ್ಷಗಳ ಕಾಲ ಗುರುಕುಲದಲ್ಲಿದ್ದು ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ ಮೇಲೆ ತನಗೆ ಸರಿಹೊಂದುವ ಪತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಆಕೆ ಹೊಂದಿರುತ್ತಿದ್ದಳು. ಅಂದರೆ ಬಾಲ್ಯವಿವಾಹ ಆ ಕಾಲದಲ್ಲಿ ಇರಲೇ ಇಲ್ಲವೆಂದಾಯಿತು. ಬಾಲ್ಯವಿವಾಹ ಬಹುಷ ಮುಸ್ಲಿಮರ ಆಕ್ರಮಣದ ನಂತರ ಮಗಳ ಶೀಲ ಉಳಿಸಲು ಆರಂಭಿಸಿದ ಉಪಾಯವಿರಬಹುದು. ಸ್ವಯಂವರವಂತೂ ವೇದಕಾಲದಲ್ಲಿ ಪ್ರತಿಯೊಬ್ಬ ಯುವತಿಯ ಹಕ್ಕಾಗಿತ್ತು. ಅದನ್ನು ಋಗ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ.
"ತಮಸ್ಮೇರಾ ಯುವತಯೋ ಯುವಾನಂ
ಮರ್ಮಜ್ಯಮಾನಾ ಪಾರೇಯಂತ್ಯಾಪಃ|
ಸ ಶುಕ್ರೇಭಿಃ ಶಿಕ್ವಭಿಃ ಸ್ವೇದಸ್ಮೇ ದೀನಾಯಾನಿಧ್ಮೋ ಘೃತನಿರ್ಣಿಗತ್ಸು||" ಋ:೨.೩೫.೪
"ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ , ಆಪ್ಯಾಯಮಾನವಾಗಿ ಸಿಂಗರಿಸಿಕೊಂಡು ಯುವತಿಯರು ಯುವಕನಾದ, ಅರ್ಹನಾದ ಪತಿಯನ್ನು ಆಯ್ದುಕೊಳ್ಳುತ್ತಾರೆ."

ಕ್ರಿಯತಿ ಯೋಷಾ ಮರ್ಯತೋ ವಧೂಯೋಃ
ಪರಿಪ್ರೀತಾ ಪನ್ಯಸಾ ವಾರ್ಯೇಣಾ|
ಭದ್ರಾ ವಧೂರ್ಭವತಿ ಯತ್ಸುಪೇಶಾಃ ಸ್ವಯಂ
ಸಾ ಮಿತ್ರಂ ವನುತೇ ಜನೇ ಚಿತ್|| ಋ: ೧೦.೨೭.೧೨

"ಯಾವ ಕನ್ಯೆಯು ತಾನಾಗಿಯೇ ಸ್ನೇಹದಿಂದ ಪತಿಯನ್ನು ವರಿಸುತ್ತಾಳೋ ಅವಳೇ ಕಲ್ಯಾಣಕಾರಿಣಿಯಾಗಿ ಪತಿಧರ್ಮವನ್ನು ನಿಭಾಯಿಸಬಲ್ಲವಳಾಗುತ್ತಾಳೆ."

ಪತಿಗೃಹಕ್ಕೆ ಹೊರಡುತ್ತಿರುವ ನವವಧುವಿಗೆ
"ಬ್ರಹ್ಮಾಪರಂ ಯುಜ್ಯತಾಂ ಬ್ರಹ್ಮಪೂರ್ವಂ ಬ್ರಹ್ಮಾಂತತೋ ಮಧ್ಯತೋ ಬ್ರಹ್ಮಸರ್ವತಃ
ಅನಾವ್ಯಾಧಾಂ ದೇವಪುರಾಂ ಪ್ರಪದ್ಯ ಶಿವಸ್ಯೋನಾ ಪತಿಲೋಕೇ ವಿರಾಜ|| " ಅ:೧೪.೧.೬೪
"ಎಲೈ ವಧುವೇ, ನಿನ್ನ ಮುಂದೆ, ಹಿಂದೆ, ಮಧ್ಯೆ ಹಾಗೂ ಅಂತ್ಯದಲ್ಲಿ - ಎಲ್ಲೆಲ್ಲಿಯೂ ವೇದ ವಿಷಯಕ ಜ್ಞಾನವಿರಲಿ. ಆರೋಗ್ಯವಂತಳಾಗಿ ಸುಖ- ಸೌಖ್ಯದಿಂದೊಡಗೂಡಿ ಪತಿಯ ಮನೆಯಲ್ಲಿ ವಿರಾಜಮಾನಳಾಗಿರು"

ಅತ್ತೆಯ ಮನೆಯಲ್ಲಿ ಸಿಗುತ್ತಿದ್ದ ಸ್ವಾಗತ ನೋಡಿ;
"ಸಮ್ರಾಜ್ಞೇ ಶ್ವಶುರೋ ಭವ ಸಮ್ರಾಜ್ಞೀ
ಶ್ವಶ್ರ್ವಾಂ ಭವ/ ನನಾಂದರಿ ಸಮ್ರಾಜ್ಞೇ ಭವ ಸಮ್ರಾಜ್ಞೀ ಅಧಿ ದೇವೃಷು|| ಋ:೧೦.೮೫.೪೬
"ಅತ್ತೆ ಮಾವಂದಿರಿಗೆ, ನಾದಿನಿ ಮೈದುನರಿಗೆ ಸಾಮ್ರಾಜ್ಞಿಯಾಗಿರು"
ಆದರೆ ಈ ಭವ್ಯ ಚಿತ್ರಣ ಮರೆಯಾಗಿ ಹೆಣ್ಣನ್ನು ಭೋಗದ ವಸ್ತುವಾಗಿ ಕಾಣಲು ಆರಂಭವಾದದ್ದು ಹೇಗೆ?
ಕ್ರೈಸ್ತ-ಇಸ್ಲಾಂಗಳ ಪ್ರಭಾವವೋ?

ವಿಧವಾ ವಿವಾಹಕ್ಕೆ ಇದ್ದ ಮಾನ್ಯತೆ ನೋಡಿ;
"ಉದೀರ್ಷ್ವ ನಾರ್ಯಭಿ ಜೀವಲೋಕಂ
ಗತಾ ಸುಮೇತಾ ಮುಪಶೇಷ ಏಹಿ|
ಹಸ್ತಗ್ರಾಭಸ್ಯ ದಿಧಿಶೋಸ್ತ ವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ|| " ಋ:೧೦.೧೮.೮
"ಎಲೈ ನಾರಿ ಎದ್ದೇಳು, ನಿನ್ನ ಕೈ ಹಿಡಿದಿರುವ ಈ ಪತಿಯೊಂದಿಗೆ ಬಾಳಲು, ನಿನ್ನ ಗತಿಸಿದ ಪತಿಯನ್ನು ಬಿಟ್ಟು ಜೀವಲೋಕದೆಡೆಗೆ ಬಾ"

               ವೇದಕಾಲದ ಉನ್ನತ ಪರಂಪರೆ ಉಪನಿಷತ್ಕಾಲದಲ್ಲೂ ಮುಂದುವರಿಯಿತು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ- ಮೈತ್ರೇಯೀ ಮತ್ತು ವಾಚಕ್ನವೀ ಗಾರ್ಗೀ - ಯಾಜ್ಞವಲ್ಕರ ನಡುವಿನ ಸಂವಾದಗಳು ಅಂದು ಋಷಿಕೆಯರೂ ಗುರುಕುಲಗಳನ್ನು ನಡೆಸುತ್ತಾ ಕುಲಪತಿ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಎನ್ನುವುದಕ್ಕೆ ಜ್ವಲಂತ ನಿದರ್ಶನಗಳು.
             ಇದೇ ಪರಂಪರೆ ಮಹಾಭಾರತ ಕಾಲದಲ್ಲೂ ಇತ್ತು. ಭರದ್ವಾಜನ ಮಗಳು ಶೃತಾವತೀ, ಶಾಂಡಿಲ್ಯನ ಮಗಳು ಶ್ರೀಮತೀ ಬ್ರಹ್ಮಚಾರಿಣಿಯರೂ, ಋಷಿಕೆಯರೂ ಆಗಿದ್ದರು. ರಾಮಾಯಣದಲ್ಲಿ ಸೀತೆ ಸಂಧ್ಯಾವಂದನೆ ಮಾಡುತ್ತಿದ್ದ ಬಗ್ಗೆ, ಕೌಸಲ್ಯೆ ವೇದಮಂತ್ರ ಸಹಿತ ಹೋಮ ಮಾಡುತ್ತಿದ್ದ ಬಗ್ಗೆ, ಶಬರಿ - ಅಹಲ್ಯೆಯರು ಮಾಡುತ್ತಿದ್ದ ತಪಸ್ಸಿನ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು.

"ವಿವಾಹರಹಿತಾನಾಮಪಿ ಬ್ರಹ್ಮವಾದಿನೀಂ ಉಪನಯನಾದಿಭಿರುತ್ತಮಲೋಕ ಸಂಭವಾತ್||"
"ವಿವಾಹವಿಲ್ಲದಿದ್ದರೂ ಬ್ರಹ್ಮವಾದಿನಿಯರಿಗೆ ಉಪನಯನ-ಅಧ್ಯಯನಾದಿಗಳಿಂದ ಉತ್ತಮ ಲೋಕ ಲಭಿಸುವುದು ಎಂದು ಪರಾಶರ ಮಾಧವೀಯದಲ್ಲಿ ಹೇಳಲಾಗಿದೆ. ಏಳನೆಯ ಶತಮಾನದಲ್ಲಿ ಬಾಣಭಟ್ಟನಿಂದ ರಚಿತವಾದ "ಕಾದಂಬರಿ"ಯಲ್ಲಿ ಮಹಾಶ್ವೇತೆಯನ್ನು ಕುರಿತು ಯಜ್ಞೋಪವೀತದಿಂದ ಅಲಂಕೃತಳಾದವಳು ಎಂಬ ವರ್ಣನೆಯಿದೆ.
          ಸಮಾಜವನ್ನು ಸುಸ್ಥಿತಿಯಲ್ಲಿಡುತ್ತಿದ್ದ, "ಸರ್ವರಿಗೂ ಸಮಪಾಲು-ಸಮಬಾಳು" ಎಂದು ನುಡಿದು ನಡೆಯುತ್ತಿದ್ದ ಇಂತಹ ಅನರ್ಘ್ಯ ರತ್ನಗಳನ್ನು ಕಲಿಯದೆ, ಯಾರೋ ಪರಕೀಯ ಮಾಡಿದ ಅನುವಾದವನ್ನು ಓದಿ ಇದಮಿಥ್ಹಂ ಎನ್ನುವ-ತನ್ಮೂಲಕ ವೇದಗಳನ್ನು ದೂರುವ ಕೀಳು ಮನಸ್ಥಿತಿ ಏಕೆ?

ಜಯಂತಿ ಮನೋಹರ್ ಅವರ "ಮಲ್ಹಾರ"ದಲ್ಲಿನ ಲೇಖನದ ಅಂಶಗಳನ್ನು ಆಯ್ದು ನನ್ನದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ.

ಶುಕ್ರವಾರ, ಆಗಸ್ಟ್ 22, 2014

ವೀರ ಸಾವರ್ಕರ್ ಬರೆದ "1857ರ ಸ್ವಾತಂತ್ರ್ಯ ಸಂಗ್ರಾಮ"

"ನಿಮ್ಮಿಂದ ಒಂದು ಕೆಲಸ ಆಗಬೇಕು"
"ಅಪ್ಪಣೆ ಮಹಾಸ್ವಾಮಿ"
"ನೀವು ಸ್ವಾತಂತ್ರ್ಯ ವೀರ ಸಾವರ್ಕರರ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪುಸ್ತಕ ಓದಿದ್ದೀರಾ?"
"ಓದಿದ್ದೀನಿ ಚಿಕ್ಕಂದಿನಲ್ಲಿ"
"ಅದರ ಕನ್ನಡ ಅನುವಾದದ ಕೆಲಸ ನಿಮ್ಮಿಂದ ಆಗಬೇಕು"
ಮೈಯಲ್ಲಿ ಮಿಂಚಿನ ಸಂಚಾರವಾದಂತಾಯಿತು. ಮೈ ರೋಮಾಂಚನಗೊಂಡಿತು.
"ಹಿಂದಿಯಲ್ಲಿ ನಾವು ಅದನ್ನು ಓದಿದ್ದೇವೆ. ಅದು ಬಹಳ ಒಳ್ಳೆಯ ಪುಸ್ತಕ. ನಮ್ಮ ತರುಣರೆಲ್ಲರೂ ಓದಬೇಕಾದ ಪುಸ್ತಕ."
"ಹೌದು ಮಹಾಸ್ವಾಮಿ. ಮೊದಲು ಸಾವರ್ಕರ್ ಅದನ್ನು ಇಂಗ್ಲೀಷಿನಲ್ಲಿ ರಚಿಸಿದರು."
"ಇಲ್ಲ ಇಲ್ಲ. ಮೊದಲು ಅದನ್ನು ಅವರು ಬರೆದಿದ್ದು ಮರಾಠಿಯಲ್ಲಿ. ಅನಂತರ ಇಂಗ್ಲೀಷ್ ಅವತರಣಿಕೆ ಸಿದ್ಧವಾಯಿತು." ಅವರು ನನ್ನನ್ನು ತಿದ್ದಿದರು.
"ಖಂಡಿತಾ ನಿಮ್ಮ ಆಶಯ ನೆರವೇರಿಸುತ್ತೀನಿ ಮಹಾಸ್ವಾಮಿ."
ಇದು ಶೃಂಗೇರಿ ದಕ್ಷಿಣಾಮ್ನಾಯ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ಬಾಬುಕೃಷ್ಣಮೂರ್ತಿಯವರ ನಡುವೆ 2005 ಮಾರ್ಚಿನಲ್ಲಿ ನಡೆದ ಸಂಭಾಷಣೆ!
ಮುಂದೆ 2007ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೂರಾ ಐವತ್ತನೇ ವರ್ಷಕ್ಕೆ ಸರಿಯಾಗಿ ಪುಸ್ತಕ ಮುದ್ರಣಗೊಂಡಿತು.
ಇದು ಅಂತಿಂಥ ಗ್ರಂಥವೆಂದುಕೊಂಡಿರೇನು?
ಪ್ರಕಟಣೆಗೆ ಮುನ್ನವೇ ಬ್ರಿಟಿಷ್ ಸರ್ಕಾರ ಬಹಿಷ್ಕರಿಸಿದ ಭಯಂಕರ ಪುಸ್ತಕ!
ಸಹಸ್ರಾರು ಕ್ರಾಂತಿ ವೀರರಿಗೆ ಭಗವದ್ಗೀತೆಯಾಗಿ ಕೆಚ್ಚನ್ನು ತುಂಬಿದ ಪ್ರೇರಕ ಪುಸ್ತಕ!
ಭಗತ್ ಸಿಂಗರಿಂದ ಮೂರನೇ ಬಾರಿ ಪ್ರಕಟವಾದ ಕ್ರಾಂತಿ ಸ್ಪೂರ್ತಿ ಸ್ರೋತ!
ನೇತಾಜಿ ಸುಭಾಷರ "ಆಜಾದ್ ಹಿಂದ್ ಫೌಜ್" ಯೋಧರ ಪವಿತ್ರ ಪಠ್ಯ ಪುಸ್ತಕ!
ಈ ಚರಿತ್ರೆಯ ಪುಸ್ತಕದ ಚರಿತ್ರೆಯೆ ಒಂದು ರೋಮಾಂಚಕಾರಿ ಕಥೆ!
ಪ್ರತಿಯೊಬ್ಬ ಭಾರತೀಯ ತರುಣ ಓದಲೇಬೇಕಾದ ಪುಸ್ತಕ!

ಇಂತಹ ನೈಜ ಭಾರತೀಯ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಗೊಳಿಸಲು ಹೇಳಿದ ಜಗದ್ಗುರುಗಳಿಗೆ, ಅನುವಾದಿಸಿದ ಬಾಬು ಕೃಷ್ಣಮೂರ್ತಿಯವರಿಗೆ ಎಷ್ಟು ಕೃತಜ್ಞರಾದರೂ ಕಡಿಮೆಯೇ ಅಲ್ಲವೇ?

ಕಿರಣೋತ್ಸವ

ಕೊಲ್ಹಾಪುರದ ಮಹಾಲಕ್ಷ್ಮಿಯ ವಿಗ್ರಹ ಪಶ್ಚಿಮಾಭಿಮುಖವಾಗಿದ್ದು ಸುಮಾರು 6000 ವರ್ಷಗಳಷ್ಟು ಹಳೆಯದು. ದೇವಿಯ ಕಿರೀಟದಲ್ಲಿ ಸರ್ಪಲಾಂಛನ ಹಾಗೂ ಶಿವಲಿಂಗವಿದೆ. ಆದಿಶಂಕರಾಚಾರ್ಯರು ರಚಿಸಿರುವ ಅಷ್ಟಾದಶ ಶಕ್ತಿಪೀಠಗಳನ್ನು ಕುರಿತ ಸ್ತ್ರೋತ್ರದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿಯ ಉಲ್ಲೇಖವಿದೆ. ಸತೀದೇವಿ ತನ್ನ ಯೋಗಾಗ್ನಿಯಿಂದ ಆತ್ಮಾರ್ಪಣೆ ಮಾಡಿಕೊಂಡಾಗ, ದಕ್ಷಸಂಹಾರದ ಬಳಿಕ ಪತ್ನಿಯ ದೇಹ ಹೊತ್ತು ರುದ್ರನರ್ತನ ಮಾಡತೊಡಗಿದ ಶಿವನ ಕೋಪವನ್ನು ತಣಿಸಲು ಹರಿ ಸತೀದೇವಿಯ ಶರೀರವನ್ನು ತುಂಡರಿಸಿ ಹದಿನೆಂಟು ದಿಕ್ಕುಗಳಲ್ಲಿ ಚೆಲ್ಲುತ್ತಾನೆ. ಆ ಹದಿನೆಂಟು ಸ್ಥಳಗಳು ಶಕ್ತಿಪೀಠಗಳೆಂದು ಪ್ರಸಿದ್ಧಿ ಹೊಂದುತ್ತವೆ. ಈ ಪುರಾಣ ಕಥೆಗೂ ವಿಗ್ರಹದ ಕಿರೀಟದಲ್ಲಿರುವ ಶಿವಲಿಂಗಕ್ಕೆ ಏನಾದರೂ ಸಂಬಂಧವಿರಬಹುದೇ? ಸಂಶೋಧನೆಯ ಅಗತ್ಯವಿದೆ!
ಅಲ್ಲದೆ ಈ ದೇವಾಲಯ ನಿರ್ಮಿಸಿದ ಶಿಲ್ಪಿಯ ಚಾತುರ್ಯ ಈ ಕಾಲದ ಯಾವ ಆರ್ಕಿಟೆಕ್ಟಿಗೂ ಸವಾಲೇ ಸರಿ! ರಥ ಸಪ್ತಮಿಯ ಸಮಯದಲ್ಲಿ ಮೂರು ದಿನಗಳ ಕಾಲ ಸೂರ್ಯ ರಶ್ಮಿಯು ಮೊದಲದಿನ ದೇವಿಯ ಪಾದಕ್ಕೂ, ಎರಡನೆಯ ದಿನ ವಿಗ್ರಹದ ಮಧ್ಯಭಾಗಕ್ಕೂ, ಮೂರನೇ ದಿನ ದೇವಿಯ ಪವಿತ್ರ ವದನದ ಮೇಲೆ ಬೀಳುತ್ತದೆ! ಆ ರೀತಿ ಬೀಳುವಂತೆ ಗರ್ಭಗುಡಿಯ ಪಶ್ಚಿಮ ಭಾಗದಲ್ಲಿ ಒಂದು ಕಿಂದಿಯೊಂದನ್ನು ರಚಿಸಲಾಗಿದೆ. ಆ ಕಾಲವನ್ನು ಕಿರಣೋತ್ಸವವೆಂದು ಆಚರಿಸಲಾಗುತ್ತದೆ.