ಪುಟಗಳು

ಭಾನುವಾರ, ಆಗಸ್ಟ್ 24, 2014

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ

ವೇದಕಾಲದಲ್ಲಿ ಮಹಿಳೆಯರ ಸ್ಥಿತಿಗತಿ!
             ವೇದದಲ್ಲಿ ಸುಮಾರು 25000 ಮಂತ್ರಗಳನ್ನು ಹಲವಾರು ಋಷಿಗಳ ಹೆಸರಿನಿಂದ ಜೋಡಿಸಲಾಗಿದೆ. ಈ ಮಂತ್ರದೃಷ್ಟಾರ ಋಷಿಗಳಿಗೆ ತಮ್ಮ ದೀರ್ಘಕಾಲದ ತಪಸ್ಸಿನ ಸಿದ್ಧಿಕಾಲದಲ್ಲಿ ಉಂಟಾದ  ಸತ್ಯತತ್ವಗಳ ದರ್ಶನಗಳೇ ಈ ವೇದ ಮಂತ್ರಗಳು. ಒಂದು ಸದ್ವಿಷಯದ ಮೇಲಿನ ತೀವ್ರಾಸಕ್ತಿಯಿಂದ ಮನಸ್ಸು ಸಂಪೂರ್ಣ ಕೇಂದ್ರೀಕೃತವಾಗುವುದೇ ತಪಸ್ಸು. ತಾವು ಬೆಳೆಸಿಕೊಂಡ ತಪಃಶಕ್ತಿಯ ಪ್ರಭಾವದಿಂದ ಈ ವಿಶ್ವದಲ್ಲಡಗಿರುವ ಶಕ್ತಿಯನ್ನು ಮತ್ತು ತನ್ನ ಒಳಗೂ ಹೊರಗೂ ಇರುವ ಅದರ ಪ್ರಭಾವದ ಅರಿವನ್ನು ತೆರೆದು ತೋರಿಸುವುದೇ ಈ ದರ್ಶನ. ವಿಶ್ವಾಮಿತ್ರ, ಪರಾಶರ, ವಸಿಷ್ಠ, ವಾಮದೇವ ಮುಂತಾದ ನೂರಾರು ಋಷಿಗಳೊಂದಿಗೆ ಅದಿತಿ ದಾಕ್ಷಾಯಿಣಿ, ಅಪಾಲಾ ಆತ್ರೇಯಿ, ವಾಗಂಭೃಣೀ ಮೊದಲಾದ ಋಷಿಕೆಯರು ಇಂಥ ದೃಷ್ಟಾರರೇ. ಅಂದರೆ ಮಹಿಳೆಯರಿಗೂ ಪುರುಷರಷ್ಟೇ ಉನ್ನತವಾದ ಸ್ಥಾನಗಳು ವೇದಕಾಲೀನ ಪರಂಪರೆಯಲ್ಲಿ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ ತಾನೆ.

            ಅಂದು ಪುರುಷರಂತೆ ಮಹಿಳೆಯರೂ ವೇದಾಧ್ಯಯನದಲ್ಲಿ ನಿರತರಾಗಿದ್ದರು ಎಂಬುದನ್ನು ಹಲವು ಮಂತ್ರಗಳಲ್ಲಿ ಕಾಣಬಹುದು. ತಮ್ಮ ವಿದ್ಯಾಭ್ಯಾಸದ ನಂತರ ವಿವಾಹವಾಗಿ ಕೌಟುಂಬಿಕ ಜೀವನವನ್ನು ಪ್ರವೇಶಿಸುತ್ತಿದ್ದ ಮಹಿಳೆಯರನ್ನು ಸದ್ಯೋವಧುಗಳೆಂದೂ, ಅಧ್ಯಾಪನ - ತಪಶ್ಚರ್ಯೆಗಳಲ್ಲಿಯೇ ನಿರತರಾದವರನ್ನು ಋಷಿಕೆ - ಬ್ರಹ್ಮವಾದಿನಿಯರೆಂದೂ ಕರೆಯುತ್ತಿದ್ದರು. ಋಗ್ವೇದದಲ್ಲಿ ಇಂತಹ 32 ಬ್ರಹ್ಮವಾದಿನಿಯರು ಮಂತ್ರದೃಷ್ಟಾರೆಯರಾಗಿರುವುದು ಕಂಡು ಬರುತ್ತದೆ. ಹದಿನಾರು ವರ್ಷಗಳ ಕಾಲ ಗುರುಕುಲದಲ್ಲಿದ್ದು ತನ್ನ ವಿದ್ಯಾಭ್ಯಾಸವನ್ನು ಪೂರೈಸಿದ ಮೇಲೆ ತನಗೆ ಸರಿಹೊಂದುವ ಪತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಆಕೆ ಹೊಂದಿರುತ್ತಿದ್ದಳು. ಅಂದರೆ ಬಾಲ್ಯವಿವಾಹ ಆ ಕಾಲದಲ್ಲಿ ಇರಲೇ ಇಲ್ಲವೆಂದಾಯಿತು. ಬಾಲ್ಯವಿವಾಹ ಬಹುಷ ಮುಸ್ಲಿಮರ ಆಕ್ರಮಣದ ನಂತರ ಮಗಳ ಶೀಲ ಉಳಿಸಲು ಆರಂಭಿಸಿದ ಉಪಾಯವಿರಬಹುದು. ಸ್ವಯಂವರವಂತೂ ವೇದಕಾಲದಲ್ಲಿ ಪ್ರತಿಯೊಬ್ಬ ಯುವತಿಯ ಹಕ್ಕಾಗಿತ್ತು. ಅದನ್ನು ಋಗ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ.
"ತಮಸ್ಮೇರಾ ಯುವತಯೋ ಯುವಾನಂ
ಮರ್ಮಜ್ಯಮಾನಾ ಪಾರೇಯಂತ್ಯಾಪಃ|
ಸ ಶುಕ್ರೇಭಿಃ ಶಿಕ್ವಭಿಃ ಸ್ವೇದಸ್ಮೇ ದೀನಾಯಾನಿಧ್ಮೋ ಘೃತನಿರ್ಣಿಗತ್ಸು||" ಋ:೨.೩೫.೪
"ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ , ಆಪ್ಯಾಯಮಾನವಾಗಿ ಸಿಂಗರಿಸಿಕೊಂಡು ಯುವತಿಯರು ಯುವಕನಾದ, ಅರ್ಹನಾದ ಪತಿಯನ್ನು ಆಯ್ದುಕೊಳ್ಳುತ್ತಾರೆ."

ಕ್ರಿಯತಿ ಯೋಷಾ ಮರ್ಯತೋ ವಧೂಯೋಃ
ಪರಿಪ್ರೀತಾ ಪನ್ಯಸಾ ವಾರ್ಯೇಣಾ|
ಭದ್ರಾ ವಧೂರ್ಭವತಿ ಯತ್ಸುಪೇಶಾಃ ಸ್ವಯಂ
ಸಾ ಮಿತ್ರಂ ವನುತೇ ಜನೇ ಚಿತ್|| ಋ: ೧೦.೨೭.೧೨

"ಯಾವ ಕನ್ಯೆಯು ತಾನಾಗಿಯೇ ಸ್ನೇಹದಿಂದ ಪತಿಯನ್ನು ವರಿಸುತ್ತಾಳೋ ಅವಳೇ ಕಲ್ಯಾಣಕಾರಿಣಿಯಾಗಿ ಪತಿಧರ್ಮವನ್ನು ನಿಭಾಯಿಸಬಲ್ಲವಳಾಗುತ್ತಾಳೆ."

ಪತಿಗೃಹಕ್ಕೆ ಹೊರಡುತ್ತಿರುವ ನವವಧುವಿಗೆ
"ಬ್ರಹ್ಮಾಪರಂ ಯುಜ್ಯತಾಂ ಬ್ರಹ್ಮಪೂರ್ವಂ ಬ್ರಹ್ಮಾಂತತೋ ಮಧ್ಯತೋ ಬ್ರಹ್ಮಸರ್ವತಃ
ಅನಾವ್ಯಾಧಾಂ ದೇವಪುರಾಂ ಪ್ರಪದ್ಯ ಶಿವಸ್ಯೋನಾ ಪತಿಲೋಕೇ ವಿರಾಜ|| " ಅ:೧೪.೧.೬೪
"ಎಲೈ ವಧುವೇ, ನಿನ್ನ ಮುಂದೆ, ಹಿಂದೆ, ಮಧ್ಯೆ ಹಾಗೂ ಅಂತ್ಯದಲ್ಲಿ - ಎಲ್ಲೆಲ್ಲಿಯೂ ವೇದ ವಿಷಯಕ ಜ್ಞಾನವಿರಲಿ. ಆರೋಗ್ಯವಂತಳಾಗಿ ಸುಖ- ಸೌಖ್ಯದಿಂದೊಡಗೂಡಿ ಪತಿಯ ಮನೆಯಲ್ಲಿ ವಿರಾಜಮಾನಳಾಗಿರು"

ಅತ್ತೆಯ ಮನೆಯಲ್ಲಿ ಸಿಗುತ್ತಿದ್ದ ಸ್ವಾಗತ ನೋಡಿ;
"ಸಮ್ರಾಜ್ಞೇ ಶ್ವಶುರೋ ಭವ ಸಮ್ರಾಜ್ಞೀ
ಶ್ವಶ್ರ್ವಾಂ ಭವ/ ನನಾಂದರಿ ಸಮ್ರಾಜ್ಞೇ ಭವ ಸಮ್ರಾಜ್ಞೀ ಅಧಿ ದೇವೃಷು|| ಋ:೧೦.೮೫.೪೬
"ಅತ್ತೆ ಮಾವಂದಿರಿಗೆ, ನಾದಿನಿ ಮೈದುನರಿಗೆ ಸಾಮ್ರಾಜ್ಞಿಯಾಗಿರು"
ಆದರೆ ಈ ಭವ್ಯ ಚಿತ್ರಣ ಮರೆಯಾಗಿ ಹೆಣ್ಣನ್ನು ಭೋಗದ ವಸ್ತುವಾಗಿ ಕಾಣಲು ಆರಂಭವಾದದ್ದು ಹೇಗೆ?
ಕ್ರೈಸ್ತ-ಇಸ್ಲಾಂಗಳ ಪ್ರಭಾವವೋ?

ವಿಧವಾ ವಿವಾಹಕ್ಕೆ ಇದ್ದ ಮಾನ್ಯತೆ ನೋಡಿ;
"ಉದೀರ್ಷ್ವ ನಾರ್ಯಭಿ ಜೀವಲೋಕಂ
ಗತಾ ಸುಮೇತಾ ಮುಪಶೇಷ ಏಹಿ|
ಹಸ್ತಗ್ರಾಭಸ್ಯ ದಿಧಿಶೋಸ್ತ ವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ|| " ಋ:೧೦.೧೮.೮
"ಎಲೈ ನಾರಿ ಎದ್ದೇಳು, ನಿನ್ನ ಕೈ ಹಿಡಿದಿರುವ ಈ ಪತಿಯೊಂದಿಗೆ ಬಾಳಲು, ನಿನ್ನ ಗತಿಸಿದ ಪತಿಯನ್ನು ಬಿಟ್ಟು ಜೀವಲೋಕದೆಡೆಗೆ ಬಾ"

               ವೇದಕಾಲದ ಉನ್ನತ ಪರಂಪರೆ ಉಪನಿಷತ್ಕಾಲದಲ್ಲೂ ಮುಂದುವರಿಯಿತು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ- ಮೈತ್ರೇಯೀ ಮತ್ತು ವಾಚಕ್ನವೀ ಗಾರ್ಗೀ - ಯಾಜ್ಞವಲ್ಕರ ನಡುವಿನ ಸಂವಾದಗಳು ಅಂದು ಋಷಿಕೆಯರೂ ಗುರುಕುಲಗಳನ್ನು ನಡೆಸುತ್ತಾ ಕುಲಪತಿ ಹುದ್ದೆಯನ್ನು ನಿರ್ವಹಿಸುತ್ತಿದ್ದರು ಎನ್ನುವುದಕ್ಕೆ ಜ್ವಲಂತ ನಿದರ್ಶನಗಳು.
             ಇದೇ ಪರಂಪರೆ ಮಹಾಭಾರತ ಕಾಲದಲ್ಲೂ ಇತ್ತು. ಭರದ್ವಾಜನ ಮಗಳು ಶೃತಾವತೀ, ಶಾಂಡಿಲ್ಯನ ಮಗಳು ಶ್ರೀಮತೀ ಬ್ರಹ್ಮಚಾರಿಣಿಯರೂ, ಋಷಿಕೆಯರೂ ಆಗಿದ್ದರು. ರಾಮಾಯಣದಲ್ಲಿ ಸೀತೆ ಸಂಧ್ಯಾವಂದನೆ ಮಾಡುತ್ತಿದ್ದ ಬಗ್ಗೆ, ಕೌಸಲ್ಯೆ ವೇದಮಂತ್ರ ಸಹಿತ ಹೋಮ ಮಾಡುತ್ತಿದ್ದ ಬಗ್ಗೆ, ಶಬರಿ - ಅಹಲ್ಯೆಯರು ಮಾಡುತ್ತಿದ್ದ ತಪಸ್ಸಿನ ಬಗ್ಗೆ ಉಲ್ಲೇಖಗಳನ್ನು ಕಾಣಬಹುದು.

"ವಿವಾಹರಹಿತಾನಾಮಪಿ ಬ್ರಹ್ಮವಾದಿನೀಂ ಉಪನಯನಾದಿಭಿರುತ್ತಮಲೋಕ ಸಂಭವಾತ್||"
"ವಿವಾಹವಿಲ್ಲದಿದ್ದರೂ ಬ್ರಹ್ಮವಾದಿನಿಯರಿಗೆ ಉಪನಯನ-ಅಧ್ಯಯನಾದಿಗಳಿಂದ ಉತ್ತಮ ಲೋಕ ಲಭಿಸುವುದು ಎಂದು ಪರಾಶರ ಮಾಧವೀಯದಲ್ಲಿ ಹೇಳಲಾಗಿದೆ. ಏಳನೆಯ ಶತಮಾನದಲ್ಲಿ ಬಾಣಭಟ್ಟನಿಂದ ರಚಿತವಾದ "ಕಾದಂಬರಿ"ಯಲ್ಲಿ ಮಹಾಶ್ವೇತೆಯನ್ನು ಕುರಿತು ಯಜ್ಞೋಪವೀತದಿಂದ ಅಲಂಕೃತಳಾದವಳು ಎಂಬ ವರ್ಣನೆಯಿದೆ.
          ಸಮಾಜವನ್ನು ಸುಸ್ಥಿತಿಯಲ್ಲಿಡುತ್ತಿದ್ದ, "ಸರ್ವರಿಗೂ ಸಮಪಾಲು-ಸಮಬಾಳು" ಎಂದು ನುಡಿದು ನಡೆಯುತ್ತಿದ್ದ ಇಂತಹ ಅನರ್ಘ್ಯ ರತ್ನಗಳನ್ನು ಕಲಿಯದೆ, ಯಾರೋ ಪರಕೀಯ ಮಾಡಿದ ಅನುವಾದವನ್ನು ಓದಿ ಇದಮಿಥ್ಹಂ ಎನ್ನುವ-ತನ್ಮೂಲಕ ವೇದಗಳನ್ನು ದೂರುವ ಕೀಳು ಮನಸ್ಥಿತಿ ಏಕೆ?

ಜಯಂತಿ ಮನೋಹರ್ ಅವರ "ಮಲ್ಹಾರ"ದಲ್ಲಿನ ಲೇಖನದ ಅಂಶಗಳನ್ನು ಆಯ್ದು ನನ್ನದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ