ಪುಟಗಳು

ಬುಧವಾರ, ಆಗಸ್ಟ್ 20, 2014

ಕೇಸರಿ ನಾಡನ್ನುಳಿಸಲು ಕೇಸರಿ ಕ್ರಾಂತಿಯೇ ಸರಿ

              ಕೇಸರಿ ನಾಡನ್ನುಳಿಸಲು ಕೇಸರಿ ಕ್ರಾಂತಿಯೇ ಸರಿ
               ಕೆಲವು ಘಟನೆಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದೇ ಇಲ್ಲ. ಅದರಲ್ಲೂ ಜಮ್ಮು ಕಾಶ್ಮೀರದಲ್ಲಿನ ವಿದ್ಯಮಾನಗಳು ಇಂದಿಗೂ ಕತ್ತಲೆಯ ಗರ್ಭದಲ್ಲೇ ಅಡಗಿರುತ್ತವೆ. ಪ್ರಕಟವಾದರೂ ಮಿಣುಕುಹುಳುಗಳಂತೆ ಚಿಕ್ಕದಾಗಿ ಎಲ್ಲೋ ಒಂದು ಬದಿಯಲ್ಲಿ ಮಿಂಚಿ ಮರೆಯಾಗುತ್ತವೆ. ಅಲ್ಲಿ ರಾಷ್ಟ್ರಧ್ವಜವನ್ನು ಸುಡಲಾಗುತ್ತದೆ, ಅಮರನಾಥ ಯಾತ್ರಿಗಳಿಗೆಂದು ನೀಡಲಾದ ತಾತ್ಕಾಲಿಕ ಜಮೀನನ್ನು ಕಿತ್ತುಕೊಳ್ಳಲಾಗುತ್ತದೆ, ಯಾತ್ರಿಕರ ಮೇಲೆ ಹಲ್ಲೆ ನಡೆಸಲಾಗುತ್ತದೆ, ದೇವಾಲಯಗಳು ಧರೆಗುರುಳುತ್ತವೆ, ಮೂರ್ತಿಗಳು ಭಗ್ನಗೊಳ್ಳುತ್ತವೆ, ಭಾರತದ ವಿರುದ್ದ-ಪಾಕಿಸ್ತಾನ ಪರ ಘೋಷಣೆಗಳನ್ನು ಅಡಿಗಡಿಗೆ ಕೂಗಲಾಗುತ್ತದೆ. ಪ್ರತ್ಯೇಕ ಧ್ವಜ, ಪ್ರತ್ಯೇಕ ಲಾಂಛನ, ಪ್ರತ್ಯೇಕ ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ದೇಶದ ಏಕೈಕ ರಾಜ್ಯವೊಂದರಲ್ಲಿ ಪ್ರತ್ಯೇಕತಾವಾದಿಗಳು ಮಾಡುತ್ತಿರುವ ಬಾನಗಡಿ ಮೀರಿದ ವ್ಯವಹಾರಗಳು ಮಾನವ ಹಕ್ಕುಗಳ ಮುಖವಾಡ ತೊಟ್ಟು ಮರೆಯಾಗುತ್ತವೆ. ಇದಕ್ಕೆ ಇತ್ತೀಚಿಗಿನ ಉದಾಹರಣೆಯೆಂದರೆ ರದ್ದುಗೊಂಡ ಕೌನ್ಸರ್ ನಾಗ್ ಯಾತ್ರೆ!
                    ಕಾಶ್ಮೀರ ಕಣಿವೆಯ ಕುಲ್ ಗಾವ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ 3840 ಮೀ ಎತ್ತರದಲ್ಲಿ ಪರ್ವತಗಳ ನಡುವೆ ದೋಣಿಯಾಕಾರದಲ್ಲಿರುವ ನಯನ ಮನೋಹರ ಸರೋವರ ಕೌಸರ್ ನಾಗ್ ಅಥವಾ ಕೌನ್ಸರ್ ನಾಗ್. ಅಹರ್ ಬಾಲ್ ಪ್ರವಾಸಿ ತಾಣದಿಂದ 30 ಕಿ. ಮೀ ದೂರದಲ್ಲಿ  ಪಿರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಈ ಅತ್ಯಂತ ಸುಂದರ ಸರೋವರವಿದೆ. ಇದು ಅತೀ ಎತ್ತರದ ಹಾಗೂ ಬೃಹತ್ತಾದ ನೀರ ಬುಗ್ಗೆಗಳುಳ್ಳ ಪುರಾತನ ಸರೋವರ. ಪುರಾಣ ಪ್ರತೀತಿಯಂತೆ ಹರ ಜಗತ್ತನ್ನು ಲಯಗೊಳಿಸುವ ಸಂದರ್ಭದಲ್ಲಿ ಜಗತ್ತಿನ ಪುನರ್ ಸೃಷ್ಟಿಗಾಗಿ ತನ್ನ ಸತಿಯನ್ನು ದೋಣಿಯಾಕಾರ ತಳೆಯಲು ಹೇಳಿ ಎಲ್ಲಾ ಮರಗಳ ಬೀಜಗಳನ್ನು ಅದರಲ್ಲಿ ತುಂಬಿಸಿದ. ಹರಿ ಪ್ರಳಯದಲ್ಲಿ ಅದು ಕೊಚ್ಚಿಕೊಂಡು ಹೋಗದಂತೆ ಪರ್ವತದ ತುದಿಗೆ ಅದನ್ನು ಕಟ್ಟಿದ. ಅದೇ ಕೌನ್ಸರ್ ನಾಗ್ ಸರೋವರ.  ಅಲ್ಲದೇ ವಿಷ್ಣುಪಾದವಿರುವ ಜಾಗವೆಂಬ ಪ್ರತೀತಿಯಿಂದಾಗಿ ಕ್ರಮಸರಸ್ ಎಂದೂ, ನಾಗ ಕೌಂಡಿನ್ಯನ ನಿವಾಸ ಸ್ಥಾನವಾಗಿದ್ದುದರಿಂದ ಕೌಂಡಿನ್ಯಾಸರ ಎಂದೂ ಕರೆಯಲ್ಪಡುತ್ತಿದ್ದ ಈ ಪವಿತ್ರ ಸರೋವರ ಮುಂದೆ ಕೌಂಸರ್ ನಾಗ್ ಆಗಿ ಬದಲಾಯಿತು. ಬಹಳ ಹಿಂದಿನಿಂದಲೂ ಹಿಂದೂಗಳು ಈ ಗಮ್ಯ ಸ್ಥಾನಕ್ಕೆ ತೀರ್ಥಯಾತ್ರೆ ಮಾಡುತ್ತಿದ್ದಿದ್ದು ಈಗ ಇತಿಹಾಸ. ಜುಲೈ 29ರಿಂದ ಪ್ರಾರಂಭವಾಗಲಿದ್ದ ಈ ಯಾತ್ರೆಗೆ ಪ್ರತ್ಯೇಕವಾದಿಗಳ ಉಪಟಳ ಶುರುವಾದದ್ದು ವಿಪರ್ಯಾಸ. ಜುಲೈ 30ರ ಗುರುವಾರ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸ್ಥಳೀಯರು ಮತ್ತು ಪ್ರತ್ಯೇಕತಾವಾದಿಗಳ ಕೂಗಾಟದಿಂದ ದಕ್ಷಿಣ ಕಾಶ್ಮೀರದಲ್ಲಿ ಕೌನ್ಸರ್ ನಾಗ್ ಯಾತ್ರೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿತು.
               1989ರ ನಂತರ ಕಾಶ್ಮೀರಿ ಪಂಡಿತರ ಪಾಲಿಗೆ ಗಗನ ಕುಸುಮವಾಗಿದ್ದ ಯಾತ್ರೆ ಕೇಂದ್ರದಲ್ಲಿ ಕಮಲವರಳಿದಾಗ ಯಾತ್ರೆಯ ಸಾಧ್ಯತೆಯೂ ಗರಿಗೆದರಿತ್ತು. ನವದೆಹಲಿಯಲ್ಲಿರುವ ಕಾಶ್ಮೀರಿ ಪಂಡಿತರ ಸಂಘಟನೆ APMCC ಜುಲೈ 31 ರಿಂದ ಯಾತ್ರೆಯ ಆರಂಭಿಸುವುದಾಗಿ ಘೋಷಿಸಿತು. ನಾಲ್ಕು ವರ್ಷಗಳ ಹಿಂದೆ ಪುನರಾರಂಭಗೊಂಡ ಯಾತ್ರೆಗೆ ಜಮ್ಮುವಿನ ರೀಸಿ ಜಿಲ್ಲೆಯ ಮುಖಾಂತರ ಹೋಗಬೇಕಾಗಿತ್ತು. ಅದು ಪರಂಪರಾಗತವಾಗಿ ಯಾತ್ರೆ ನಡೆಯುತ್ತಿದ್ದ ದಾರಿ. ಆದರೆ ಈ ದಾರಿಯಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಪ್ರಯಾಣಕ್ಕೆ ಎರಡು ದಿನ ತಗಲುತ್ತಿತ್ತು. ಇನ್ನೊಂದು ದಾರಿ ಅಹರ್ ಬಾಲ್ ಮುಖೇನವೂ ಯಾತ್ರೆಗೆ ಎರಡು ದಿನ ತಗುಲುತ್ತದೆ. ಆದರೆ ಕುಲ್ಗಾಂವಿನ ಡೆಪ್ಯುಟಿ ಕಮೀಷನರ್ ನಿಸಾರ್ ಅಹಮದ್ ವಾನಿ ಕೇವಲ ಪ್ರವಾಸಿಗರಿಗಷ್ಟೇ ರೀಸಿ ಜಿಲ್ಲೆಯ ದಾರಿ ತೆರೆದಿರುತ್ತೆ. ಯಾತ್ರಾರ್ಥಿಗಳಿಗಲ್ಲ ಎಂಬ ಆದೇಶ ಹೊರಡಿಸಿದರು. ಇವೆಲ್ಲವೂ ಪ್ರತ್ಯೇಕವಾದಿಗಳ ಒತ್ತಡದಿಂದಾದ ಆದೇಶಗಳು!
                  ಕುಲ್ ಗಾವ್ ಜಿಲ್ಲೆಯ ನಲವತ್ತು ಜನ ಕಾಶ್ಮೀರಿ ಪಂಡಿತರು ಇತರ ಹಿಂದೂಗಳೊಡನೆ ಕೌನ್ಸರ್ ನಾಗ್ ಯಾತ್ರೆಗೆ ಹೋಗಲು ಅಗತ್ಯ ಅನುಮತಿ ತೆಗೆದುಕೊಂಡಿದ್ದರು. ಆದರೆ ಕಾಶ್ಮೀರದ ಆಂಗ್ಲ ಪತ್ರಿಕೆಯೊಂದು ಕೇವಲ ನಲವತ್ತು ಜನವಲ್ಲ, ದೇಶದ ವಿವಿಧ ಭಾಗಗಳಿಂದ ನಾಲ್ಕು ಸಾವಿರ ಕಾಶ್ಮೀರಿ ಪಂಡಿತರು ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬರೆಯಿತು. ಅದಕ್ಕಾಗಿಯೇ ರಣಹದ್ದುಗಳಂತೆ ಕಾದುಕುಳಿತಿದ್ದ ಕೆಲವರು ಪರಿಸರ ಹಾನಿ ಎಂಬ ನೆಪವೊಡ್ಡಿ ಪ್ರತಿಭಟನೆ ಆರಂಭಿಸಿಬಿಟ್ಟರು. ಅವರೇನು ಪರಿಸರವಾದಿಗಳಲ್ಲ. ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ತುದಿಗಾಲಲ್ಲಿ ನಿಂತಿರುವ ಅದಕ್ಕಾಗಿ ಕಾಶ್ಮೀರಿ ಪಂಡಿತರನ್ನು ಕಾಡಿಸಿ-ಪೀಡಿಸಿ-ಓಡಿಸಿದ ಪ್ರತ್ಯೇಕತಾವಾದಿಗಳು! ಪ್ರತ್ಯೇಕವಾದಿಗಳು "ಸೇವ್ ಕೌಸರ್ ನಾಗ್ ಪ್ರಂಟ್" ಎನ್ನುವ ಸಂಘಟನೆಯನ್ನೂ ರಚಿಸಿಕೊಂಡು ಪ್ರತಿಭಟನೆಗೆ ಇಳಿದಿರುವುದು, ಹುರಿಯತ್ ಅಧ್ಯಕ್ಷ ಗೀಲಾನಿ ಆಗಷ್ಟ್ 2 ರಂದು ಹರತಾಳಕ್ಕೆ ಕರೆ ನೀಡಿದ್ದು ಇದಕ್ಕೆ ಪುಷ್ಟಿ ನೀಡುತ್ತವೆ. SKNF ಯಾತ್ರಿಗಳು ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ತಗಾದೆ ತೆಗೆದರೆ ಗೀಲಾನಿ ಕೋಮುವಾದಿ ಕೇಂದ್ರ ಸರಕಾರ ಕಾಶ್ಮೀರಿ ಮುಸ್ಲಿಮರ ಅಲ್ಪಸಂಖ್ಯಾತ ಗುರುತನ್ನು ತೆಗೆದು ಹಾಕುವ ಪ್ರಯತ್ನ ಮಾಡುತ್ತಿದೆ ಎನ್ನುವ ಹಾಸ್ಯಾಸ್ಪದ ಆರೋಪ ಮಾಡುತ್ತಿದ್ದಾರೆ. "ಕೌನ್ಸರ್ ನಾಗ್ ಯಾತ್ರೆ ಎನ್ನುವುದು ಒಂದು ಸಾಂಸ್ಕೃತಿಕ ಆಕ್ರಮಣ. ಇದು ರಾಜ್ಯದ ಪರಿಸರವನ್ನು ಹಾಳುಮಾಡುವ ಹುನ್ನಾರ. ಯಾತ್ರಿಕರು ಇಲ್ಲಿನ ಪರಿಸರವನ್ನು ಮಲಿನಗೊಳಿಸುತ್ತಾರೆ. ಮಾತ್ರವಲ್ಲ ಈಗಾಗಲೇ ಬಹುತೇಕ ಭೂಮಿಯನ್ನು ಭಾರತೀಯ ಸೇನಾ ಸಿಬ್ಬಂದಿಗೆ ನೀಡಿದ ಕಾಶ್ಮೀರದ ಭೂಮಿಯನ್ನು ಮತ್ತಷ್ಟು ಕಬಳಿಸುವ ಯೋಜನೆ. ಹಾಗಾಗಿ ಯಾತ್ರೆಗೆ ಜಮ್ಮು ಕಾಶ್ಮೀರ ಸರಕಾರ ಅನುಮತಿ ನೀಡಬಾರದು" ಎನ್ನುವುದು ಪ್ರತ್ಯೇಕವಾದಿಗಳ ಅರಚಾಟ. ಪ್ರತ್ಯೇಕವಾದಿಗಳ ಬೆದರಿಕೆಗೆ ಜಗ್ಗಿ ಕುಲ್ ಗಾಂವಿನ ಜಿಲ್ಲಾಧಿಕಾರಿ ತಾನು ಅಂತಹ ಅನುಮತಿ ಕಾಶ್ಮೀರಿ ಪಂಡಿತರಿಗೆ ನೀಡಿಯೇ ಇಲ್ಲವೆಂದು ತನ್ನ ದ್ವಿಮುಖ ನೀತಿಯನ್ನು ಪ್ರದರ್ಶಿಸಿದ್ದು ವಿಪರ್ಯಾಸ!
                ಕಾಶ್ಮೀರದಲ್ಲಿ ಮುಘಲ್ ರಸ್ತೆ ನಿರ್ಮಿಸಲು ಸುಮಾರು 10000 ಮರಗಳನ್ನು ಕಡಿಯಲಾಗಿತ್ತು. ಇದರಿಂದ ಮೂವತ್ತು ಸಾವಿರಕ್ಕಿಂತಲೂ ಅಧಿಕ ವನ್ಯಜೀವಿಗಳ ಅವಸಾನವಾಗಿತ್ತು. ಈಗ ಪರಿಸರ ನಾಶದ ನೆಪವೊಡ್ಡಿ ಯಾತ್ರೆಗೆ ಅಡ್ಡಿಪಡಿಸುತ್ತಿರುವ ಮೊಘಲ್ ಪಳಿಯುಳಿಕೆಗಳು ಮುಘಲ್ ರಸ್ತೆಯ ನಿರ್ಮಾಣದಿಂದ ಪರಿಸರ ನಾಶವಾದಾಗ ಬಗ್ಗೆ ಯಾಕೆ ಪ್ರತಿಭಟಿಸಲಿಲ್ಲ? ಕಾರಣವಿಲ್ಲದೇ ಇಲ್ಲ, ಆ ರಸ್ತೆ ಬಹುಸಂಖ್ಯಾತ ಮುಸ್ಲಿಮರು ವಾಸಿಸುವ ಕಡೆಗಳಲ್ಲಿ ಹಾದುಹೋಗುತ್ತದೆ! ದಾಲ್, ನಾಗಿನ್, ವುಲ್ಲರ್, ಮಾನಸಬಲ್ ಸರೋವರಗಳು ಮತ್ತು ನಿರ್ನಾಮವಾಗಿರುವ ಅಂಚಾರ್ ಸರೋವರದ ಮೇಲಿನ ಮಾನವ ಆಕ್ರಮಣದ ಬಗ್ಗೆ ಯಾಕೆ ತುಟಿಪಿಟಿಕ್ಕೆನ್ನುವುದಿಲ್ಲ? ಅಲ್ಲದೆ ಗುಲ್ಮಾರ್ಗ್, ತಂಗ್ಮಾರ್ಗ್ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡುವ ಪ್ರವಾಸಿಗರಿಂದಾಗುವ ಹಾನಿಯ ಬಗ್ಗೆ ಮೌನವಾಗುಳಿಯಲು ಕಾರಣವೇನು? ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬದುಕು ನಿಂತಿರುವುದೇ ಪ್ರವಾಸೋದ್ಯಮದ ಮೇಲೆ. ಒಂದು ವೇಳೆ ಇವೆಲ್ಲವನ್ನು ವಿರೋಧಿಸಿದರೆ ಮುಂದೆ ಮುಷ್ಟಿ ಅನ್ನಕ್ಕೂ ಪರದಾಡಬೇಕಾದೀತು ಎನ್ನುವ ಭಯ!
              ಪ್ರವಾಸಿಗರು ಹೋದಾಗ ಹಾಳಾಗದ ಪರಿಸರ ಕಾಶ್ಮೀರಿ ಪಂಡಿತರು ಹಾಗೂ ಇತರ ಹಿಂದೂಗಳು ಹೋದಾಗ ಹೇಗೆ ಹಾಳಾಗುತ್ತದೆ ಎಂದು ಪ್ರಶ್ನಿಸುತ್ತಾರೆ APMCC ನೇತಾರ ಅಮಿತ್ ರೈನಾ. ಕೌಸರ್‌ ನಾಗ್‌ ಯಾತ್ರೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂದಕ್ಕೆ ಪಡೆದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ನಿರ್ಧಾರದ ಬಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸಾಗರೋತ್ತರ ಕಾಶ್ಮೀರಿ ಅಸೋಸಿಯೇಶನ್‌ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ವ್ಯವಹಾರಗಳ ಖಾತೆಯ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರವೊಂದನ್ನು ಬರೆದು ಪ್ರತೀವರ್ಷ ಶಾಂತಿಯುತವಾಗಿ ನಡೆಯುತ್ತಾ ಬಂದಿರುವ ಕೌಸರ್‌ ನಾಗ್‌ ಯಾತ್ರೆಗೆ ಅನುಮತಿಯನ್ನು ನೀಡುವಂತೆ ಮನವಿ ಮಾಡಿಕೊಂಡಿದೆ. ಕಾಶ್ಮೀರಿ ಕಣಿವೆಯ ಪರಿಸರವನ್ನು ಕಾಶ್ಮೀರಿ ಪಂಡಿತರು ಸಂರಕ್ಷಿಸಿಕೊಂಡು ಬಂದಿದ್ದು ಇಲ್ಲಿನ ನದಿ, ಪರ್ವತಗಳನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ಕೆಲ ದಶಕಗಳಲ್ಲಿ ಕಣಿವೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಿವೆ. ಕಾಶ್ಮೀರಿ ಪಂಡಿತರ ಪುನವರ್ಸತಿಗೆ ಅಗತ್ಯ ಕ್ರಮ ಕೈಗೊಳ್ಳುವ ಕೇಂದ್ರ ಸರಕಾರದ ಭರವಸೆಯ ಬಳಿಕ ಇದೀಗ ಮೂರನೇ ಬಾರಿಗೆ ಕಾಶ್ಮೀರಿ ಪಂಡಿತರ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
              ಮೊನ್ನೆ ಮೊನ್ನೆ ಕಟ್ರಾ ರೈಲು ಉದ್ಘಾಟನೆಗೊಂಡ ದಿವಸ ಅದನ್ನು ಸ್ವಾಗತಿಸುವ ಬದಲು ಜಮ್ಮು ಕಾಶ್ಮೀರದ ಬಾಂಧವರು ಪ್ರತಿಭಟನೆ ನಡೆಸಿದರು. ಅಮರನಾಥ ಯಾತ್ರಿಕರೊಂದಿಗೆ ಜಗಳವಾಡಿ ನೂರಾರು ಭಂಡಾರಗಳನ್ನು ಸುಟ್ಟು ನೂರಾರು ಜನರನ್ನು ಗಾಯಗೊಳಿಸಿ ವಾಗ್ಯುದ್ದ ಶಮನಗೊಳಿಸಲು ಬಂದ ಯೋಧರಿಗೆ ಮಾರಣಾಂತಿಕ ಗಾಯಗಳಾಗುವಂತೆ ಬಡಿದರು. ಹಂತಹಂತವಾಗಿ ಕಾಶ್ಮೀರಿ ಪಂಡಿತರಿಗೆ ಕಣಿವೆಯಲ್ಲಿ ಪುನರ್ವಸತಿ ಕಲ್ಪಿಸುವುದಾಗಿ ಭಾರತ ಸರಕಾರ ಘೋಷಿಸಿದಾಗ ತಮ್ಮನ್ನು ಕಾಶ್ಮೀರದಿಂದ ಹೊರಗಟ್ಟುವ ಷಡ್ಯಂತ್ರ ನಡೆದಿದೆ ಎಂದು ಬೊಬ್ಬಿರಿದರು.  ಈದ್‌ನ ನಮಾಜಿನ ನಂತರ ಕಾಶ್ಮೀರ ಕಣಿವೆಯಲ್ಲಿ ಮತಾಂಧ ರಿಂದ ಇಸ್ರೇಲ್ ವಿರುದ್ಧ ಮತ್ತು ಪ್ಯಾಲೆಸ್ಟೇನ್‌ನ ಬೆಂಬಲಿಸಿ ಜುಲೈ ೨೯ ರಂದು ಹಿಂಸಾತ್ಮಕ ಮೆರವಣಿಗೆಯೂ ನಡೆಯಿತು. ಮತಾಂಧರು ನಮಾಜು ಮುಗಿದ ತಕ್ಷಣ ಹೈದರಪೋರಾ ಮತ್ತು ಮೌಲಾನಾ ಆಝಾದನ ರಸ್ತೆಗೆ ಬಂದು ತೀವ್ರ ಕಲ್ಲು ತೂರಾಟ ಮಾಡಿ ಭಾರತದ ವಿರುದ್ಧ ಘೋಷಣೆ ಕೂಗಿದರು. ಐ.ಎಸ್.ಐ.ಎಸ್.ನ  ಧ್ವಜವನ್ನೂ ಹಾರಿಸಿದರು.

             ದಶಕಗಳ ಪರ್ಯಂತ ಕಶ್ಯಪ ಭೂಮಿಯ ಮೇಲಾದ ಅನ್ಯಾಯ ಆಕ್ರಮಣಗಳಿಗೆ ಅಂತ್ಯಗೀತೆ ಹಾಡುವ ಅವಶ್ಯಕತೆ ಇದೆ. ಅದಕ್ಕಾಗಿ 370ನೇ ವಿಧಿಯನ್ನು ರದ್ದು ಮಾಡಲೇ ಬೇಕು. ತಮ್ಮ ಪಾಂಡಿತ್ಯದಿಂದ ಭಾರತದ ಶ್ರೇಷ್ಠತೆಯನ್ನು ಎತ್ತಿಹಿಡಿದ ಜನಾಂಗವನ್ನು ಅವರದೇ ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಿದಾಗಲೇ ಆ ಹೆಸರಿಗೂ ಅರ್ಥ ಬರುವುದು. ಆಗಲೇ ಹಿಮಾಲಯದ ಅದರ ಮಡಿಲಲ್ಲಿರುವ ಹಿಮನದಿಗಳ, ಸರೋವರಗಳ, ಮಠ-ಮಂದಿರಗಳ ರಕ್ಷಣೆಯೂ ಸಾಧ್ಯ. ಕೇಸರಿ ನಾಡಿನಲ್ಲಿ ಕೇಸರಿ ಪಡೆ ಕೇಸರಿ ಕ್ರಾಂತಿಗೆ ಮುನ್ನುಡಿ ಬರೆದೀತೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ