ಗುರುವಾರ, ಮಾರ್ಚ್ 17, 2022
ಹಿಂದುತ್ವವನ್ನು ಹಿಂದೂಗಳಿಂದ ಬೇರ್ಪಡಿಸುವ ಕುತ್ಸಿತ ರಾಜಕಾರಣ
ಶುಕ್ರವಾರ, ನವೆಂಬರ್ 26, 2021
ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ
ಇತಿಹಾಸದಿಂದ ಮರೆಯಾದ ಹಿಂದೂ ಮಹಾಕ್ರಾಂತಿ
ಇದ್ದಕ್ಕಿದ್ದಂತೆ ಸುಲ್ತಾನ ತಾನು "ಹಿಂದೂ" ಎಂದು ಉದ್ಘೋಷಿಸಿಕೊಂಡ. ತನ್ನ ಶ್ರದ್ಧೆ ಇನ್ನು ಹಿಂದೂ ಧರ್ಮದಲ್ಲಿ ಎಂದು ಘೋಷಿಸಿ ಅದನ್ನು ಕಾರ್ಯಗತಗೊಳಿಸಿದ. ಹಿಂದೂಗಳ ಮುಖಕ್ಕೆ ಉಗುಳುತ್ತಿದ್ದ ಮುಸಲರು ಬಗ್ಗಿ ನಮಸ್ಕಾರ ಮಾಡಲು ಆರಂಭಿಸಿದರು. ಅರಮನೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡವು. ವೇದ ಮಂತ್ರ ಘೋಷ ಉಚ್ಚಕಂಠದಲ್ಲಿ ಮೊಳಗಿತು. ಭಾಂಗಿನ ಬದಲು ಘಂಟಾನಾದ, ಶಂಖಾನಾದ ಕೇಳಲಾರಂಭಿಸಿತು. ಮಹೋನ್ನತ ಆರತಿಗಳ ದಿವ್ಯ ಬೆಳಕಿನಲ್ಲಿ ದೇವತೆಗಳ ವಿಗ್ರಹಗಳ ಭವ್ಯ ಸ್ವರೂಪ ಕಣ್ಣುಕೋರೈಸಲಾರಂಭಿಸಿತು. ಕುರಾನಿನ ಅಯಾತ್'ಗಳ ಜಾಗದಲ್ಲಿ ಪೂಜೆ, ಭಜನೆಗಳು ನಡೆಯತೊಡಗಿದವು. ಜಿಜಿಯಾ ತಲೆಗಂದಾಯದ ಹೊರೆ ಇಳಿಯಿತು. ತೀರ್ಥಸ್ನಾನಗಳ ನಿಷೇಧವೂ ಅಳಿಯಿತು. ಹಲವು ವರ್ಷಗಳ ಬಳಿಕ ಸ್ವಾತಂತ್ರ್ಯದ, ಸಮಾನತೆಯ ಸವಿಯನ್ನುಂಡ ಹಿಂದೂಗಳ ಸಂಭ್ರಮ ಮೇರೆ ಮೀರಿತು.
ಇದೇನು ಮುಸಲ್ಮಾನ ರಾಜನೊಬ್ಬ ಸ್ವ ಇಚ್ಛೆಯಿಂದ ಹಿಂದೂವಾಗುವುದು? ಸಾಧ್ಯವೇ ಇಲ್ಲ; ಕಾಗಕ್ಕ-ಗುಬ್ಬಕ್ಕ ಕಥೆ ಇರಬೇಕು ಎಂದುಕೊಂಡಿರಾ? ನಿಮ್ಮ ಊಹೆ ತಪ್ಪು. ಭಾರತದ ಇತಿಹಾಸದಲ್ಲಿ ಇಂತಹಾ ಒಂದು ಘಟನೆ ಮುಸಲರು ಪ್ರಬಲರಾಗಿದ್ದ ಕಾಲದಲ್ಲೇ ನಡೆದಿತ್ತು. ಆದರೆ ಹಿಂದೂ ಪ್ರಜ್ಞೆ ಉದ್ದೀಪನಗೊಂಡು ಪ್ರಜ್ವಲಿಸಿದ್ದನ್ನು ನಮ್ಮ ಇತಿಹಾಸಕಾರರು ಎಂದಾದರೂ ಬರೆದದ್ದಿದೆಯೇ? ಅಲ್ಲಾವುದ್ದೀನ್ ಖಿಲ್ಜಿ 1298ರಲ್ಲಿ ಗುಜರಾತಿಗೆ ದಾಳಿ ಮಾಡಿದಾಗ ಸೆರೆ ಸಿಕ್ಕಿದ ಓರ್ವ ಸುಂದರ ಬಾಲಕನನ್ನು ತನ್ನ ಸೇವಕನನ್ನಾಗಿಸಿಕೊಂಡ. ಮಲಿಕ್-ಕಾಫರನ ವೃತ್ತಾಂತದಂತೆಯೇ ಈತನ ಕಥೆಯೂ ಇದೆ. ಮಲಿಕ್-ಕಾಫರ್ ಹಿಂದೂಧರ್ಮಕ್ಕೆ ಕಂಟಕನಾಗಿ ಬಳಿಕ ಖಿಲ್ಜಿಯನ್ನೇ ಕೊಂದು ಸಿಂಹಾಸನವೇರಿ ಒಂದೇ ತಿಂಗಳಲ್ಲಿ ಕೊಲೆಯಾಗಿ ಹೋದರೆ ಈ ಚಾಣಾಕ್ಷ ಸಮಯ ಕಾದು ಕೆಲಸ ಸಾಧಿಸಿ ಹಿಂದುತ್ವವನ್ನು ಎತ್ತಿ ಹಿಡಿದ. ಈ ಹುಡುಗನನ್ನು ಮತಾಂತರಿಸಿ ಹಸನ್ ಎಂದು ಹೆಸರಿಟ್ಟು ಸುಲ್ತಾನ ಹಾಗೂ ಅವನ ಆಸ್ಥಾನಿಕರು ತಮ್ಮ ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳಲಾರಂಭಿಸಿದರು. ಶೀಘ್ರದಲ್ಲೇ ಯುದ್ಧ ವಿದ್ಯೆ ಕಲಿತ, ಅಪಾರ ಚಾಣಾಕ್ಷಮತಿಯೂ ಆಗಿದ್ದ ಇವನ ಹೆಸರನ್ನು ಖುಸ್ರುಖಾನ್ ಎಂದು ಬದಲಾಯಿಸಿ ಸೇನಾನಾಯಕನನ್ನಾಗಿಸಿ ಯುದ್ಧಕ್ಕೆ ಕಳುಹಿಸಲಾರಂಭಿಸಿದ ಅಲ್ಲಾವುದ್ದೀನ. ಮಲಿಕ್-ಕಾಫರನ ಬಳಿಕ ಅಲ್ಲಾವುದ್ದೀನನ ಮಗ ಮುಬಾರಿಕ್'ಗೆ ದೆಹಲಿಯ ಪಟ್ಟ ಸಿಕ್ಕಿತು. ಮುಬಾರಿಕ್ ನೊಡನೆ ವಿಶೇಷ ಸ್ನೇಹದಿಂದ ಇದ್ದ ಖುಸ್ರುಖಾನ್ ಮುಬಾರಿಕ್ ಪಟ್ಟ ಏರಲು ವಿಶೇಷ ಸಹಾಯವನ್ನೂ ಮಾಡಿದ. ಮಾತ್ರವಲ್ಲ ಆಡಳಿತ ಸೂತ್ರಗಳೆಲ್ಲವೂ ಬುದ್ಧಿವಂತನಾದ ಈತನ ಕೈಗೇ ಬಂತು. ಜೊತೆಗೆ ಮುಬಾರಿಕ್ನ ಅಂತಃಪುರದ ಲೈಂಗಿಕ ವ್ಯವಹಾರಗಳ ಮೇಲ್ವಿಚಾರಣೆಯೂ! ಅಲ್ಲಿ...ಅಲ್ಲಿ ಅವನಿಗೆ ಆಕೆಯ ಪರಿಚಯವಾಯಿತು.
ದೇವಲ ದೇವಿ. ಆಕೆಯದ್ದು ಆ ಕಾಲದ ಬಹುತೇಕ ಹಿಂದೂ ರಾಣಿಯರಂತೆ ದುರಂತ ಅಧ್ಯಾಯ. ಅಲ್ಲಾವುದ್ದೀನ್ ಗುಜರಾತನ್ನು ಆಕ್ರಮಿಸಿ ಅಲ್ಲಿನ ರಾಜನನ್ನು ಸೋಲಿಸಿ ಆತನ ರಾಣಿ ಕಮಲಾದೇವಿಯನ್ನು ಹೊತ್ತು ತಂದ. ತನ್ನ ಮಗಳು ದೇವಲದೇವಿಯೊಂದಿಗೆ ಮುಸಲ್ಮಾನ ರಕ್ಕಸರ ಕಣ್ಣುತಪ್ಪಿಸಿ ಕಾಡುಮೇಡು ಅಲೆದ ರಾಜ. ರಕ್ಷಣೆಗಾಗಿ ದೇವಗಿರಿಯ ಶಂಕರದೇವನೊಂದಿಗೆ ಆಕೆಯ ವಿವಾಹವೇನೋ ಆಯಿತು. ಆದರೆ ಅಲ್ಲಾವುದ್ದೀನ್ ಎಂಬ ರಕ್ಕಸನ ಜನಾನಾ ಸೇರಿದ್ದ ಆಕೆಯ ತಾಯಿ ಕಮಲಾದೇವಿ ಮಗಳನ್ನು ಹುಡುಕಿಸಿ ತಂದು ಇಸ್ಲಾಮಿಗೆ ಸೇರಿಸಬೇಕೆಂಬ ಆಸೆ ವ್ಯಕ್ತಪಡಿಸಿದಳಂತೆ! ಆ ಸಮಯದಲ್ಲೇ ದೇವಗಿರಿಯನ್ನು ಮತ್ತೆ ಮುತ್ತಿದ ಮಲಿಕ್-ಕಾಫರ್ ದೇವಲ ದೇವಿಯನ್ನು ಸೆರೆ ಹಿಡಿದು ದೆಹಲಿಗೆ ರವಾನಿಸಿದ. ಅಲ್ಲಿ ಅಲ್ಲಾವುದ್ದೀನನ ಹಿರಿ ಮಗ ಖಿಜ್ರಾಖಾನ್ ಜೊತೆ ಆಕೆಗೆ ಮದುವೆ ಮಾಡಿಸಲಾಯಿತು. ಅಲ್ಲಾವುದ್ದೀನ ಸತ್ತಾಗ ಖಿಜ್ರಾಖಾನನನ್ನು ಬಂಧಿಸಿ ಆತನ ಕಣ್ಣುಕಿತ್ತು ಸಾಯಿಸಿದ ಮುಬಾರಿಕ್ ದೇವಲ ದೇವಿಯನ್ನು ತಾನು ವಿವಾಹವಾದ. ಹೀಗೆ ನರಕಮಯವಾದ ಜೀವನವನ್ನು ಆಕೆ ಸವೆಯುವಂತಾದರೂ ಆಕೆ ಹಿಂದೂವಾಗಿಯೇ ಉಳಿದಿದ್ದಳು. ಅಲ್ಲಿಯವರೆಗೆ ಮಡುಗಟ್ಟಿದ್ದ ಆಕ್ರೋಶಕ್ಕೆ ತಂಪೆರೆಯುವಂತೆ ತನ್ನಂತೆಯೇ ದೌರ್ಜನ್ಯಕ್ಕೆ ಗುರಿಯಾಗಿ ಎದೆಯಲ್ಲಿ ಅಪಾರ ಸೇಡು-ವಿದ್ವೇಷಗಳನ್ನು ಹೊತ್ತಿದ್ದ ಖುಸ್ರುಖಾನ್'ನ ಸಂಪರ್ಕವಾಯಿತು. ಆ ಕ್ಷೀಣ ಅವಕಾಶದ ಬೆಳಕೇ ಸತತ ಅತ್ಯಾಚಾರಕ್ಕೀಡಾಗುತ್ತಿದ್ದರೂ ಆಕೆಯ ಮನಸ್ಸನ್ನು ಪ್ರಫುಲ್ಲಗೊಳಿಸಿ ರಾಣಿಯಾಗಿ ತನ್ನ ಅಧಿಕಾರವನ್ನು ಚಲಾಯಿಸುವ ಹುಮ್ಮಸ್ಸನ್ನೂ ಆಕೆಯಲ್ಲಿ ಹುಟ್ಟಿಸಿತು.
ಮುಬಾರಿಕ್ ಲಂಪಟನಾಗಿದ್ದ. ಹೆಂಗಸರಂತೆ ವೇಶ ಹಾಕಿ ತನ್ನ ಹುಡುಗಿಯರ ದಂಡಿನೊಡನೆ ಕುಣಿಯುತ್ತಿದ್ದ. ಆಡಳಿತದಲ್ಲಂತೂ ತನ್ನ ಗುಲಾಮ ಖುಸ್ರುಖಾನನ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದ. ಆ ಸಮಯದಲ್ಲಿ ಖುಸ್ರುಖಾನನಿಗೆ ತನ್ನ ಪೂರ್ವದ ಅಸ್ಮಿತೆಯ ಅರಿವು ತಾನಾಗಿ ಮೇಲೆದ್ದಿತು. ದೇವಲದೇವಿಯ ಸಂಪರ್ಕ ಸಿಕ್ಕಿದ ನಂತರವಂತೂ ಈ ಇಬ್ಬರೂ ಗುಜರಾತಿಗರೂ ಒಂದಾಗಿ ಕತ್ತಿ ಮಸೆಯಲು ಶುರುವಿಟ್ಟರು. ಹಿಂದೂಗಳ ಗೌರವವನ್ನು ಪುನರ್ ಸ್ಥಾಪಿಸಲು ಈರ್ವರೂ ಜೊತೆಯಾಗಿ ತಂತ್ರಗಳನ್ನು ಹೆಣೆಯತೊಡಗಿದರು. ಖುಸ್ರು ತನ್ನ ಅಣ್ಣನನ್ನು ಗುಜರಾತಿನ ರಾಜ್ಯವ್ಯಾಪಾರಿಯನ್ನಾಗಿಸಿದ. ತನ್ನ ಅಂಗರಕ್ಷಕರನ್ನಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಸೇನಾವೀರರನ್ನು ನಿಯುಕ್ತಿಗೊಳಿಸಿದ. ಅವನೇ ಸೇನಾಧಿಪತಿಯೂ ರಾಜನ ಆಪ್ತನಾಗಿ ರಾಜ್ಯವ್ಯವಹಾರಗಳನ್ನು ನೋಡಿಕೊಳ್ಳುವವನೂ ಆಗಿದ್ದ ಕಾರಣ ಪ್ರಶ್ನಿಸಲು ಯಾರಿಗೂ ಹಕ್ಕಿರಲಿಲ್ಲ. ತನ್ನ ನಡೆಗಳನ್ನು ಕಂಡು ರಾಜನಿಗೆ ದೂರು ನೀಡುತ್ತಿದ್ದ ಸುಲ್ತಾನನ ಒಡ್ಡೊಲಗದ ಹಿರಿತಲೆಗಳನ್ನು ಮುಗುಮ್ಮಾಗುಳಿಸಲು ಅರಸನನ್ನೇ ಪ್ರೇರೇಪಿಸಿ ಅವನನ್ನೇ ಮುಂದಿಟ್ಟುಕೊಂಡು ದಕ್ಷಿಣದ ಕಡೆ ದಂಡಯಾತ್ರೆ ನಡೆಸಿ ಹಿಂದೂರಾಜರನ್ನು ಸೋಲಿಸಿ ಖಜಾನೆಯನ್ನು ತುಂಬಿಸಿದ. ಸ್ವಲ್ಪಕಾಲದ ಬಳಿಕ ತಾನೊಬ್ಬನೇ ದಕ್ಷಿಣಕ್ಕೆ ದಂಡಯಾತ್ರೆ ನಡೆಸಿ ಮಲಬಾರಿನ ರಾಜನನ್ನು ಸೋಲಿಸಿದ. ಆದರೆ ಈ ಅವಧಿಯಲ್ಲಿ ದಕ್ಷಿಣದಲ್ಲಿ ಅಲ್ಲಲ್ಲಿ ಹಿಂದೂ ರಾಜರು ಸುಲ್ತಾನನ ವಿರುದ್ಧ ದಂಗೆಯೆದ್ದರು. ಇದರ ಸೂತ್ರಧಾರ ಖುಸ್ರುಖಾನ್ ಎಂದು ಅವನ ಶತ್ರುಗಳು ಸುಲ್ತಾನನಿಗೆ ದೂರುಕೊಟ್ಟರು. ದೆಹಲಿಯಲ್ಲಂತೂ "ಹಿಂದೂ ಅರಸರು, ಸರದಾರರು, ಸೇನೆಗಳು ಸುಲ್ತಾನನ ಮೇಲೆ ಯೋಜಿಸುತ್ತಿರುವ ಕ್ರಾಂತಿಗೆ ರೂಪುರೇಷೆ ಹಾಕಿದವ ಖುಸ್ರುಖಾನನೇ. ಗುಜರಾತಲ್ಲಿ ಖುಸ್ರುಖಾನನ ಸೋದರನೇ ಆಡಳಿತ ಸೂತ್ರ ಹಿಡಿದು, ರಜಪೂತರೆಲ್ಲಾ ರಾಣಾ ಹಮ್ಮೀರನ ನೇತೃತ್ವದಲ್ಲಿ ದೆಹಲಿಯಿಂದ ಮುಸಲರನ್ನು ಕಿತ್ತೆಸೆಯುತ್ತಾರೆ. ರಾಣಿ ದೇವಲದೇವಿಯ ಆದೇಶದ ಮೇರೆಗೆ ಖುಸ್ರುಖಾನ್ ಕಾರ್ಯಾಚರಿಸುತ್ತಿದ್ದಾನೆ" ಎಂದು ಮುಂತಾದ ಗುಲ್ಲೆಬ್ಬಿತು. ಆದರೆ ಸುಲ್ತಾನನಿಗೆ ಯಾವುದೇ ಗುಮಾನಿ ಬರದಂತೆ ಯುದ್ಧದಲ್ಲಿ ಗೆದ್ದ ಸಂಪತ್ತನ್ನೆಲ್ಲಾ ಅವನ ಪದತಲಕ್ಕೆ ಅರ್ಪಿಸಿ ಖುಸ್ರುಖಾನನೂ, ತನ್ನ ಹೃದಯದ ಭಾವನೆ ಹೊರಗೆ ಬಾರದಂತೆ ವರ್ತಿಸುತ್ತಿದ್ದ ದೇವಲದೇವಿಯೂ ತಮ್ಮಂಥ ಇಸ್ಲಾಮ್ ನಿಷ್ಠರು ಇನ್ನೊಬ್ಬರಿಲ್ಲ ಎಂಬ ಭಾವನೆ ಬಿತ್ತುತ್ತಿದ್ದುದರಿಂದ ಹಿಂದೂ ವಿರೋಧಿಗಳಿಗೆ ಕೈಕೈ ಹಿಸುಕಿಕೊಳ್ಳುವುದಲ್ಲದೆ ಬೇರೆ ದಾರಿಯಿರಲಿಲ್ಲ. ಖುಸ್ರುಖಾನ್ ತಂದ ಸಂಪತ್ತಿನ ರಾಶಿಯನ್ನು ಕಂಡು ಮುಬಾರಿಕ್ ಆತನನ್ನು ಬಂಧಿಸುವ ಬದಲು ಉಳಿದೆಲ್ಲಾ ಆಡಳಿತ ವಲಯಗಳನ್ನೂ ಅವನ ಸುಪರ್ದಿಗೆ ಒಪ್ಪಿಸಿಬಿಟ್ಟ!
ಆಡಳಿತಾಧಿಕಾರಿಯಾದದ್ದೇ ತಡ, ಖುಸ್ರು ಖಾನ್ ಹಿಂದಕ್ಕೆ ಅಲ್ಲಾವುದ್ದೀನ ಹಿಂದೂಗಳ ಮೇಲೆ ವಿಧಿಸಿದ್ದ ಅತಿಯಾದ ನಿಷೇಧಗಳನ್ನೆಲ್ಲಾ ಒಂದೊಂದಾಗಿ ತೆರವುಗೊಳಿಸುತ್ತಾ ಬಂದ. ಹಿಂದೂಗಳಿಗೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಇದ್ದ ನಿರ್ಬಂಧಗಳನ್ನು ತೆಗೆದುಹಾಕಿದ. ಮುಸಲ್ಮಾನರ ಉಗ್ರದಂಡನೆಗಳಿಂದ ಹೈರಾಣಾಗಿದ್ದ ಹಿಂದೂಗಳಲ್ಲಿ ಸಂತೋಷ ಸಮಾಧಾನಗಳು ತುಂಬಿ ಖುಸ್ರುಖಾನ ತಮ್ಮ ರಕ್ಷಕನೆಂದೇ ಅವರು ಭಾವಿಸತೊಡಗಿದರು. ಹಿಂದೂಗಳು ಮಾತ್ರವಲ್ಲದೆ ಮುಸಲ್ಮಾನ ರೈತರ ಮೇಲೆ ಹಾಕಿದ ಕರಭಾರವನ್ನು ಇಳಿಸಿದ. ರಣರಂಗದಲ್ಲಿ ಅವನ ಶೌರ್ಯ, ಸಮಾನ ದೃಷ್ಟಿ, ಆಡಳಿತ ನೈಪುಣ್ಯ ಹಾಗೂ ಕಟ್ಟುನಿಟ್ಟನ್ನು ಕಂಡ ಪ್ರತಿಷ್ಠಿತ ಮುಸಲ್ಮಾನರಲ್ಲಿ ಹಲವರು ದುರ್ನಡತೆಯ ಮುಬಾರಕನಿಗಿಂತ ಇವನೇ ಉತ್ತಮ ಎಂಬ ಭಾವನೆ ಉದಿಸಿ ಅವನ ಪರ ವಾಲಿದರು. ಇಂತಹಾ ಪೂರಕ ವಾತಾವರಣವನ್ನು ಸೃಷ್ಟಿಸಿದ ಬಳಿಕ ಖುಸ್ರುಖಾನ ಹಾಗೂ ದೇವಲದೇವಿ ಜೋಡಿ ತಮ್ಮ ಮಹತ್ವಾಕಾಂಕ್ಷೆಯ ಕ್ರಾಂತಿಯನ್ನು ಉದ್ಘೋಷಿಸಲು ಕಾಲ ಪಕ್ವವಾಗಿದೆಯೆಂದು ತಿಳಿದು ಅದಕ್ಕೆ ಸನ್ನದ್ಧರಾದರು.
ಒಂದು ದಿನ ಸುಲ್ತಾನ ಮುಬಾರಿಕ್ ಬಳಿ ಖುಸ್ರು "ನನ್ನ ಮಾತಿಗೆ ಓಗೊಟ್ಟು ಸಾವಿರಾರು ಮಂದಿ ಹಿಂದೂಗಳು ಇಸ್ಲಾಂ ಸ್ವೀಕರಿಸಲು ಸಿದ್ಧರಾಗಿದ್ದಾರೆ. ಆದರೆ ಸರ್ವರ ಸಮ್ಮುಖದಲ್ಲಿ ಮತಾಂತರಗೊಳ್ಲಲು ಅವರಿಗೆ ಸಂಕೋಚವಿದೆ. ಅದಕ್ಕಾಗಿ ನಾನು ಕೆಲವು ಆಯ್ದ ಪ್ರಮುಖರನ್ನು ಅರಮನೆಗೆ ಕರೆತರುತ್ತೇನೆ. ಅವರಿಗೆ ಇಸ್ಲಾಂ ದೀಕ್ಷೆ ನೀಡಬೇಕು" ಎಂದು ಭಿನ್ನವಿಸಿಕೊಂಡ. ಅರಸನ ಒಪ್ಪಿಗೆಯನ್ನು ಗಿಟ್ಟಿಸಿಕೊಂಡು ಈ ನೆಪದಲ್ಲಿ ತನ್ನ ನಂಬುಗೆಯವರನ್ನು ಅರಮನೆಯೊಳಗೆ ಕರೆಸಿಕೊಂಡು ಆಯಕಟ್ಟಿನ ಸ್ಥಾನಗಳಲ್ಲಿ ನೇಮಿಸಿದ. ಆತನ ಸೋದರ ಗುಜರಾತಿನಲ್ಲಿ ಮುಸ್ಲಿಮರ ಆಳ್ವಿಕೆಯನ್ನು ಕೊನೆಗಾಣಿಸಲು ದಂಗೆಯನ್ನು ಆರಂಭಿಸಿ 25ಸಾವಿರ ಹಿಂದೂ ಸೈನಿಕರನ್ನು ಖುಸ್ರುಖಾನನ ಸಹಾಯಕ್ಕೆ ಕಳುಹಿಸಿದ. ಕೆಲವೇ ದಿನಗಳಲ್ಲಿ ರಾತ್ರೋರಾತ್ರಿ ಸುಲ್ತಾನ್ ಮುಬಾರಿಕ್ ನ ಕೊಲೆಯಾಗಿ ಹೋಯಿತು. ಮುಸ್ಲಿಮರ ಆಳ್ವಿಕೆಯಲ್ಲಿ ದೆಹಲಿಯ ಅರಮನೆಗಳಲ್ಲಿ ಸುಲ್ತಾನನ ಕೊಲೆ, ರಕ್ತಪಾತಗಳೇನು ಹೊಸವಿಷಯಗಳಲ್ಲ. ಅಲ್ಲಾವುದ್ದೀನನನ್ನು ಮಲಿಕ್-ಕಾಫರ್ ಕೊಂದಿದ್ದ; ಆತನನ್ನು ಮುಬಾರಿಕ್ ಕೊಂದಿದ್ದ. ಇದಾದ ಕೆಲವೇ ದಿನಗಳಲ್ಲಿ ಖುಸ್ರುಖಾನನ ಕಡೆಯವರೇ ಮುಬಾರಿಕನನ್ನು ಮಸಣಕ್ಕಟ್ಟಿದರೆಂದೂ ಸುದ್ದಿಯೂ, ಖುಸ್ರುಖಾನನೇ ಇನ್ನು ಮುಂದೆ ಸುಲ್ತಾನನೆಂದು ರಾಜಾದೇಶವೂ ಒಟ್ಟೊಟ್ಟಿಗೆ ಜನರ ಕಿವಿಗೆ ಬಿದ್ದು ಮುಸ್ಲಿಮರ ಜಂಘಾಬಲವೇ ಉಡುಗಿ ಹೋಯಿತು. ಜೊತೆಗೆ ಖುಸ್ರುಖಾನ್ ದೇವಲದೇವಿಯನ್ನು ವಿವಾಹವೂ ಆದ. ಇದಿಷ್ಟೇ ಆಗಿದ್ದರೆ ಬರೇ ಎಂದಿನ ರಾಜಕೀಯ ಕ್ರಾಂತಿಯೆಂದು ಜನ ಸುಮ್ಮನಾಗುತ್ತಿದ್ದರು. ಖುಸ್ರುಖಾನ ದೇವಲದೇವಿಯರು ಜೊತೆಗೂಡಿ ಮಾಡಿದ ಘೋಷಣೆಯೊಂದು ಮುಸ್ಲಿಮರ ಪಾದದಡಿಯ ಭೂಮಿ ಕಂಪಿಸುವಂತೆ ಮಾಡಿತು. ಅವರಿಬ್ಬರೂ ಜೊತೆಗೂಡಿ ಧಾರ್ಮಿಕ ಕ್ರಾಂತಿಗೂ ನಾಂದಿ ಹಾಡಿದ್ದರು. 1320ರ ಏಪ್ರಿಲ್ 15ರಂದು "ಹಿಂದೂವಾಗಿದ್ದ ನನ್ನನ್ನು ಇಸ್ಲಾಂಗೆ ಪರಿವರ್ತಿಸಿ ನನ್ನ ಜೀವನವನ್ನು ನರಕಮಯಗೊಳಿಸಲಾಗಿತ್ತು. ಇವತ್ತು ಈ ಹೇಯ ಮುಸಲ ಬದುಕನ್ನು ಕೊನೆಗೊಳಿಸಿ ಮತ್ತೆ ಹಿಂದೂಧರ್ಮವನ್ನು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ನರನಾಡಿಗಳಲ್ಲಿ ಹಿಂದೂ ರಕ್ತವೇ ಹರಿಯುತ್ತಿದೆ. ಹಿಂದೂಧರ್ಮವೇ ನನ್ನ ಜೀವಾಳ. ನಾನೊಬ್ಬ ಹಿಂದೂ ಎಂದು ಘಂಟಾಘೋಷವಾಗಿ ಸಾರುತ್ತಿದ್ದೇನೆ. ನಾನೀಗ ಅಖಂಡ ಭಾರತದ ಹಿಂದೂ ಚಕ್ರವರ್ತಿ. ಅಸಹಾಯಕಳಾಗಿ ಇಷ್ಟವಿಲ್ಲದ ಮದುವೆಗಳಿಂದ ಬೇಸತ್ತು ಇಸ್ಲಾಂನಡಿ ಬದುಕಿ ಈಗ ನನ್ನ ಧರ್ಮಪತ್ನಿಯಾಗಿರುವ ದೇವಲದೇವಿಯೂ ಇಸ್ಲಾಂನ್ನು ಧಿಕ್ಕರಿಸಿ ಹಿಂದೂ ಸಾಮ್ರಾಜ್ಞಿಯಾಗಿ ಬದುಕುತ್ತಾಳೆ. ಇಸ್ಲಾಂ ಮತೀಯರಾಗಿದ್ದರಿಂದ ತಟ್ಟಿದ್ದ ಪಾಪವನ್ನು ನಮ್ಮ ಈ ಪವಿತ್ರ ಪ್ರಜ್ಞೆ ತೊಡೆದು ಹಾಕಲಿ" ಎಂದು ಖುಸ್ರುಖಾನ್ ಘೋಷಣೆ ಮಾಡಿದ.
ವಿಚಿತ್ರವೆಂದರೆ ಹಿಂದೂವಾದರೂ ಅರಸ ತನ್ನ ಹೆಸರನ್ನು ನಾಸಿರ್-ಉದ್-ದೀನ್ ಎಂದು ಇಟ್ಟುಕೊಂಡ. ಅಪಾರವಾದ ಇಸ್ಲಾಂನ ಹಿಂಸೆಯನ್ನುಂಡು ಅವನ ಮೂಲ ಹೆಸರೇ ಅವನಿಗೆ ಮರೆತು ಹೋಗಿರಬೇಕು. ಆದರೆ ಅವನ ಮುಂದಿನ ಕಾರ್ಯದಲ್ಲಿ ಮಾತ್ರ ಹಿಂದೂ ಶ್ರದ್ಧೆಯೇ ಅಡಗಿತ್ತು. ಅಸಲಿಗೆ ನಾಸಿರ್-ಉದ್-ದೀನ್ ಎನ್ನುವುದರ ಅರ್ಥ ಧರ್ಮಶ್ರದ್ಧೆಯನ್ನು ಉಳಿಸಿಕೊಳ್ಳುವಾತ ಎಂದೇ. ತನ್ನ ಶ್ರದ್ಧೆ ಇನ್ನು ಮುಂದೆ ಹಿಂದೂ ಧರ್ಮದಲ್ಲಿ ಎಂದು ಅವನ ಉದ್ಘೋಷ ಸ್ಪಷ್ಟಪಡಿಸಿತ್ತು. ಹೀಗೆ ಘೋಷಣೆಯಾದ ಮರುಕ್ಷಣವೇ ಹಿಂದೂರಾಜ್ಯಗಳನ್ನು ಲೂಟಿಗೈದು ಸಂಗ್ರಹಿಸಿದ್ದ ಅಪಾರ ಸಂಪತ್ತನ್ನು ಹಿಂದೂ ಸೇನಾನಿ, ಸಾಮಾನ್ಯ ಹಿಂದೂ ಸೈನಿಕರಿಗೆಲ್ಲಾ ಹಂಚಿದ. ಸೈನಿಕರ ವೇತನಗಳೂ ಹೆಚ್ಚಳಗೊಂಡವು. ರೈತಾಪಿ ವರ್ಗದ ಮೇಲಿನ ತೆರಿಗೆಗಳೂ ಕಡಿತಗೊಂಡವು. ಧರ್ಮದ ಕಾರಣಕ್ಕಾಗಿ ಸೆರೆಯಲ್ಲಿದ್ದ ಹಿಂದೂಗಳನ್ನು, ಸುಲ್ತಾನನಿಗೆ ವಿರೋಧ ವ್ಯಕ್ತಪಡಿಸಿದ ಸಣ್ಣಪುಟ್ಟ ಕಾರಣಗಳಿಗೆ ಸೆರೆಯಾಗಿದ್ದ ಮುಸ್ಲಿಮರನ್ನೂ ಬಂಧನದಿಂದ ಮುಕ್ತಗೊಳಿಸಿದ. ಆಡಳಿತದಲ್ಲಿ ಸಮಾನದೃಷ್ಟಿಯನ್ನು ಇಟ್ಟುಕೊಂಡ ಕಾರಣ ಅವನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.
ಹಿಂದೂಗಳನ್ನು ಬಸವಳಿಯುವಂತೆ ಮಾಡಿದ್ದ ಜಿಜಿಯಾ ತಲೆಗಂದಾಯವನ್ನು ತೆಗೆದು ಹಾಕಿ ಹಿಂದೂಗಳ ನೆಮ್ಮದಿಗೆ ಕಾರಣನಾದ. ತೀರ್ಥಯಾತ್ರೆ, ತೀರ್ಥಸ್ನಾನಗಳ ಮೇಲಿದ್ದ ನಿಷೇಧವನ್ನು ತೊಡೆದುಹಾಕಿದ. ಹಿಂದೂಗಳನ್ನು ನಿಕೃಷ್ಟವಾಗಿ ನೋಡುತ್ತಿದ್ದ ಮುಸ್ಲಿಮರೂ, ಮುಸ್ಲಿಮ್ ಸೈನಿಕ, ಸೇನಾನಿಗಳೂ ಈಗ ಬಗ್ಗಿ ನಮಸ್ಕರಿಸಲು ಆರಂಭಿಸಿದರು. ಅರಮನೆಗಳಲ್ಲಿ ಈಗ ಹಿಂದೂ ದೇವರುಗಳ ವಿಗ್ರಹಗಳು ಪ್ರತಿಷ್ಠಾಪನೆಗೊಂಡು ನಿತ್ಯಪೂಜೆ ನಡೆಯುವಂತಾಯಿತು. ಕುರಾನ್ ಅಯಾತ್ ಗಳ ಬದಲು ವೇದಘೋಷ ಅನುರಣನಿಸಿತು. ಬಾಂಗ್ ಕೇಳುವ ಜಾಗದಲ್ಲಿ ಘಂಟಾನಾದ, ಶಂಖನಾದ ಮೊಳಗಿತು. ಉಗುಳಿಕೊಡುವ ಹೀನ ಆಹಾರದ ಜಾಗದಲ್ಲಿ ಪ್ರಸಾದ ವಿತರಣೆ ಆರಂಭವಾಯಿತು. ಅರಸನೂ ಅರಮನೆಯಲ್ಲಿ ಬೀಡುಬಿಟ್ಟ ಹಿಂದೂಗಳು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಬಹು ಶ್ರದ್ಧೆ, ಆಸ್ಥೆಗಳಿಂದ ನಡೆಸಿದರು. ಹಿಂದೂ ಪ್ರಜೆಗಳ, ಹಿಂದೂ ಸೈನಿಕರ ಸಂತೋಷ, ಉತ್ಸಾಹ, ಸಂಭ್ರಮಾಚರಣೆಗಳು ಮೇರೆ ಮೀರಿದವು. ಮುಸ್ಲಿಮರು ಗೆದ್ದಾಗ ಹಿಂದೂ ದೇವಾಲಯಗಳನ್ನು ಕೆಡವಿ ಮೂರ್ತಿಗಳನ್ನು ಭಗ್ನಗೊಳಿಸಿ ಮಸೀದಿಯನ್ನಾಗಿ ಪರಿವರ್ತಿಸುತ್ತಿದ್ದರು. ಈಗ ಹಿಂದೂಗಳು ದೇವಾಲಯಗಳನ್ನು ಕೆಡವಿ ಕಟ್ಟಿದ್ದ ಮಸೀದಿಗಳನ್ನು ಉರುಳಿಸಿ ದೇವಾಲಯಗಳನ್ನು ಮರು ಸ್ಥಾಪಿಸಿ ಅಲ್ಲಿ ಹಿಂದೂ ಧಾರ್ಮಿಕ ದೀಪ ಬೆಳಗುವಂತೆ, ವೇದಘೋಷ ಮೊಳಗುವಂತೆ ಮಾಡಿದರು. ಅಷ್ಟಕ್ಕೇ ಸುಮ್ಮನಾಗದ ಹಿಂದೂ ಚಕ್ರವರ್ತಿ ಬಲಾತ್ಕಾರವಾಗಿ ಜನಾನಾಕ್ಕೆ ದೂಡಲ್ಪಟ್ಟವರನ್ನು ಅವರಿಚ್ಛೆಯಂತೆ ಮತ್ತೆ ಹಿಂದೂಗಳನ್ನಾಗಿಸಿ ಹಿಂದೂ ಸೈನಿಕರಿಗೆ, ಹಿಂದೂ ಅಧಿಕಾರಿಗಳಿಗೆ ಮದುವೆ ಮಾಡಿಸಿದ. ವ್ಯಾವಹಾರಿಕವಾಗಿಯೂ ಅರಸ ಜಾಣ್ಮೆಯಿಂದ ವರ್ತಿಸಿದ. ದೆಹಲಿಯಲ್ಲಿ ಒಮ್ಮೆಗೇ ಎಲ್ಲವನ್ನೂ ಬದಲಾಯಿಸಿದರೆ ಬಹು ಅಪಾಯವಾಗುವ ಸಾಧ್ಯೆತೆ ಹೆಚ್ಚಿತ್ತು. ಅದಕ್ಕಾಗಿ ಯಾವೆಲ್ಲಾ ಮುಸಲ್ಮಾನ ಅದಿಕಾರಿಗಳು, ಮುಲ್ಲಾ-ಮೌಲ್ವಿಗಳು ಹಿಂದೂ ಸಾಮ್ರಾಜ್ಯ ಉರುಳಿಸಲು ಪಿತೂರಿ ಮಾಡಬಹುದೆಂಬ ಗುಮಾನಿಯಿತ್ತೋ ಅಂಥವರ ಬಳಿ ನಯನಾಜೂಕಿನಿಂದ ಮಾತಾಡಿ, ಉಪಾಹಾರ - ಉಡುಗೊರೆಗಳನ್ನು ಕೊಟ್ಟು ತನ್ನ ದಾಕ್ಷಿಣ್ಯಕ್ಕೆ ಕಟ್ಟುಬೀಳುವಂತೆ ಮಾಡಿದ. ಮುಸ್ಲಿಂ ರೈತರಿಗೂ, ಮುಸ್ಲಿಂ ಯೋಧರಿಗೂ ಹಿಂದೂಗಳಿಗೆ ಸಮಾನವಾದ ನಾಗರಿಕ ಹಕ್ಕನ್ನು ನೀಡಿ ತೆರಿಗೆಯಿಂದ ವಿನಾಯಿತಿ ನೀಡಿದ್ದ. ತನ್ನ ಬಲ ಸೇನೆಯಲ್ಲಿ ಎಂದು ನಂಬಿದ್ದ ಆತ ಆಯಕಟ್ಟಿನ ಜಾಗದಲ್ಲಿ ತನ್ನ ನಂಬಿಕಸ್ಥರಾದ ಹಿಂದೂಗಳನ್ನೇ ನೇಮಿಸಿದ್ದ. ಅವನ ಸುವ್ಯವಸ್ಥಿತ ಆಳ್ವಿಕೆಯ ಫಲವಾಗಿ ತೆರಿಗೆ, ಕಪ್ಪಗಳೆಲ್ಲವೂ ಸರಿಯಾದ ಕಾಲಕ್ಕೆ ಸಂಗ್ರಹವಾಗಿ ಖಜಾನೆಯೂ ತುಂಬಿ ತುಳುಕಿತು; ದೇಶದಲ್ಲಿ ಸಮೃದ್ಧತೆ-ಸಮಾಧಾನವೂ ತುಂಬಿತು. ದೆಹಲಿಗೆ ಕಪ್ಪವನ್ನೊಪ್ಪಿಸುತ್ತಿದ್ದ ಹಿಂದೂ ರಾಜರನ್ನು ಸ್ವತಂತ್ರರಾಗಲೂ ಆತ ಅವಕಾಶ ಕೊಟ್ಟ.
ಇಂತಹಾ ಮಹಾ ಹಿಂದೂ ಕ್ರಾಂತಿಯಾಗಿ ಒಂದು ವರ್ಷ ತುಂಬುವಷ್ಟರಲ್ಲಿ ಕೆಲವು ಮುಸಲ್ಮಾನ್ ಅಧಿಕಾರಿಗಳು ಹಿಂದೂ ರಾಜನನ್ನು ಪದಚ್ಯುತಗೊಳಿಸಲು ಪಿತೂರಿ ನಡೆಸಿದರು. ಪಂಜಾಬ್ ಪ್ರಾಂತ್ಯದ ಆಡಳಿತಗಾರ ಘಿಯಾಸುದ್ದೀನ್ ಇದರ ನೇತೃತ್ವ ವಹಿಸಿ ಅರಸನ ಕೈಕೆಳಗಿನ ಮುಸ್ಲಿಂ ಅಧಿಕಾರಿಗಳಿಗೆಲ್ಲಾ ಪತ್ರ ರವಾನಿಸಿದ. ಅವರು ಇದನ್ನೆಲ್ಲಾ ಅರಸನ ಕೈಗೇ ಇತ್ತರು. ಕೂಡಲೇ ಕಾರ್ಯ ಪ್ರವೃತ್ತನಾದ ರಾಜ ಎಳವೆಯಲ್ಲೇ ಈ ಪಿತೂರಿಯನ್ನು ಮುರುಟಿಸಬೇಕೆಂದು ತಾನೇ ಯುದ್ಧಕ್ಕೆ ಮುಂದಾಗಿ ಘಿಯಾಸುದ್ದೀನನ ಮೇಲೆ ಏರಿ ಹೋದ. ಮೊದಲ ದಿನ ಜಯ ಲಭಿಸಿತು. ಅಷ್ಟರಲ್ಲಿ ಹಿಂದೂ ಸೇನೆಯಲ್ಲಿದ್ದ ಮುಸ್ಲಿಂ ಸೇನಾಧಿಕಾರಿಗಳು ಸೈನಿಕರು ಗುಟ್ಟಾಗಿ ಘಿಯಾಸುದ್ದೀನನಿಗೆ ಬೆಂಬಲ ಕೊಡುವ ಪ್ರಸ್ತಾಪವೊಡ್ಡಿ ಹಿಂದೂ ಸೇನೆ ಸೋಲುವಂತೆ ಮಾಡಿದರು. ಯಥಾಪ್ರಕಾರ ಹಿಂದೂ ಅರಸನ ಕತ್ತು ಕೊಯ್ಯಲಾಯಿತು. ವಿಪರ್ಯಾಸವೆಂದರೆ ಯಾವೆಲ್ಲಾ ಹಿಂದೂ ಅರಸರಿಗೆ ಈ ಹಿಂದೂ ಚಕ್ರವರ್ತಿ ಬೆಂಬಲ ಕೊಟ್ಟು ಅವರನ್ನು ಸ್ವತಂತ್ರಗೊಳಿಸಿದ್ದನೋ ಅವರೆಲ್ಲಾ ನಿರ್ಣಾಯಕವಾಗಿ ಕೇಂದ್ರದಲ್ಲಿ ಹಿಂದೂ ಅಧಿಕಾರ ಸ್ಥಾಪನೆಗೆ ಸಹಕಾರವನ್ನೇ ಕೊಡಲಿಲ್ಲ. ಹಾಗಾಗಿ ಮತ್ತೆ ಎದ್ದಿದ್ದ ಹಿಂದೂ ವೀರ ಅಸ್ಮಿತೆಯ ಪ್ರಜ್ಞೆಗೆ ಕೆಂದ್ರದ ಅಧಿಕಾರ ಒಂದೇ ವರ್ಷಕ್ಕೆ ಸೀಮಿತವಾಯಿತು. ಆದರೂ ಧೀರ ಪೃಥ್ವೀರಾಜನ ಬಳಿಕ ದೆಹಲಿಯ ಗದ್ದುಗೆಯನ್ನೇರಿದ ಚಕ್ರವರ್ತಿಯೆಂದು ಆ ಹಿಂದೂ ವೀರನ ಕೀರ್ತಿ ಚಿರಸ್ಥಾಯಿಯಾಯಿತು. ಈ ವೀರನ ಜೊತೆ ನಿಂತ ಅವನ ಸೋದರ ಹಾಗೂ ದೇವಲದೇವಿಗೂ ಹಿಂದೂಗಳಿಂದ ಗೌರವಾರ್ಪಣೆಯಾಗಬೇಕು. ನತದೃಷ್ಟ ಹಿಂದೂಗಳು ಅಪಾರವಾದ ಮುಸ್ಲಿಂ ದೌರ್ಜನ್ಯದ ನಡುವೆ ಕೆಲ ಸಮಯಕ್ಕಾದರೂ ಹಿಂದೂ ಚಕ್ರವರ್ತಿಯೊಬ್ಬನ ಸುಂದರ ಸಮಾನ ದೃಷ್ಟಿಯ ಆಳ್ವಿಕೆಯಿಂದ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಅದಕ್ಕಿಂತಲೂ ಮುಖ್ಯವಾದುದು ಇನ್ನೊಂದು; ಕೆಳವರ್ಗದಲ್ಲಿ ಜನಿಸಿ ಮುಸಲ್ಮಾನನಾಗಿ, ಮುಸ್ಲಿಮರ ಲೈಂಗಿಕ ದಾಹಕ್ಕೆ ಆಹಾರವಾಗಿ ತನ್ನ ಕಾರ್ಯದಕ್ಷತೆ, ರಣಚಾತುರ್ಯ, ರಾಜಕೀಯ ತಂತ್ರಜ್ಞತೆ, ಧೈರ್ಯ-ಚಾಣಾಕ್ಷತೆಯಿಂದ ಬೆಳೆದು ತನ್ನ ಧ್ಯೇಯವನ್ನು ಸಮಯ ಬಂದಾಗ ಸಾಧಿಸಿ ಮತ್ತೆ ಹಿಂದೂವಾಗಿ, ಹಿಂದೂ ಚಕ್ರವರ್ತಿಯಾಗಿ ಕೆಲಕಾಲವಾದರೂ ಹಿಂದೂಗಳಿಗೊಂದು ನೆಮ್ಮದಿಯ ಬಾಳುಕೊಟ್ಟದ್ದು ಕಡಿಮೆ ಸಾಧನೆಯೇನಲ್ಲ; ಅದೂ ಮತಾಂಧ ಮುಸ್ಲಿಮರ ನಡುವೆ!
ವಂಗ ಭಂಗ; ಹಿಂದೂವಿನ ಮರಣಮೃದಂಗ
ವಂಗ ಭಂಗ; ಹಿಂದೂವಿನ ಮರಣಮೃದಂಗ
ಬುಧವಾರ, ಅಕ್ಟೋಬರ್ 20, 2021
ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ
ಬುಂದೇಲವನ್ನು ಒಂದಾಗಿಸಿ ಆಳಿದ ಛತ್ರಸಾಲ
ಸಿಂಹದ ಮರಿಯೊಂದಕ್ಕೆ ತನ್ನ ಶೌರ್ಯಕ್ಕೆ ಪ್ರತಿಫಲ ಸಿಗದೇ ಅಪಮಾನ ಆದಾಗ ವಸ್ತುಸ್ಥಿತಿಯ ಅರಿವಾಗಿತ್ತು. ತನ್ನ ಸಹೋದರರ ಒತ್ತಡಕ್ಕೊಳಗಾಗಿ ತಾನು ಮಾಡುತ್ತಿರುವುದು ತನ್ನ ಮನಸ್ಸಿಗೆ ಒಪ್ಪುವ ಕಾರ್ಯವಲ್ಲ ಎಂದು ಮನದಟ್ಟಾಗಿತ್ತು. ತಾನು ದಾಸ್ಯಕ್ಕೆ ಒಳಗಾದುದರ ಅರಿವಾಗಿ ಸ್ವಾಭಿಮಾನ ಭುಗಿಲೆದ್ದಿತ್ತು. ಸಹ್ಯಾದ್ರಿಯ ಘನಘೋರ ಕಾನನಗಳಲ್ಲಿ ಮೊರೆಯುತ್ತಿರುವ ಮಹಾ ಕೇಸರಿಯ ಘರ್ಜನೆ ಈ ಮರಿಸಿಂಹಕ್ಕೆ ಆ ಹೊತ್ತಿಗಾಗಲೇ ಕೇಳತೊಡಗಿತ್ತು. ಅದು ತನ್ನ ಮುಂದಿನ ದಾರಿಯನ್ನು ನಿಶ್ಚಯಮಾಡಿಕೊಂಡಿತು. ಆಪ್ತ ಪರಿವಾರದೊಡನೆ ಕಾಡಿನ ದಾರಿಯಲ್ಲೇ ಸಾಗಿ ಭೋರ್ಗರೆಯುತ್ತಿದ್ದ ಭಯಂಕರ ಭೀಮೆಯನ್ನು ತೆಪ್ಪದಲ್ಲಿ ದಾಟಿ ಮಹಾಕೇಸರಿಯ ಮುಂದೆ ಬಂದು ನಿಂತು ತಲೆಬಾಗಿತು. ಛತ್ರಪತಿಯೆಂಬ ಮಹಾಕೇಸರಿಯನ್ನು ಛತ್ರಸಾಲನೆಂಬ ಸ್ವಾಭಿಮಾನಿ ಮಹಾವೀರ ಭೇಟಿ ಆದುದು ಹೀಗೆ. ಈ ಭೇಟಿಗಿದ್ದ ಅಡತಡೆಗಳನ್ನು, ಈ ಸಂಗಮಕ್ಕಿದ್ದ ಮಹತ್ವವನ್ನು, ಈ ಸಂಗಮದಿಂದಾದ ಫಲಶ್ರುತಿಯನ್ನು ಕೇವಲ ಈ ಕಥೆಯಿಂದ ಕಟ್ಟಿಕೊಡಲಾಗದು.
ಯಮುನಾ ನದಿಯಿಂದ ನರ್ಮದೆವರೆಗೆ ಹಾಗೂ ಚಂಬಲ್ ನದಿಯಿಂದ ಟೋಂಸ್ ನದಿಯವರೆಗೆ ಬಹುವಿಸ್ತಾರವಾದ, ಮಹಾಭಾರತದ ಸಮಯದಲ್ಲಿ ಶಿಶುಪಾಲನು ಆಳುತ್ತಿದ್ದ ಚೇದಿ ಎಂದು ಕರೆಯಲ್ಪಡುತ್ತಿದ್ದ ಭೂಮಿ ಬುಂದೇಲ್ ಖಂಡ. ಶಕಪುರುಷ ರಾಜಾವಿಕ್ರಮನು ಇದನ್ನು ಮಧ್ಯ ಭಾರತದ ಕೇಂದ್ರವಾಗಿ ಮಾಡಿದ್ದ. ಅಲ್ಲಿಯ ರಾಜ ವೀರಭದ್ರ ತನ್ನ ಪಂಚಮ ಪುತ್ರ ಪಂಚಮನಿಗೆ ತನ್ನೆಲ್ಲಾ ರಾಜ್ಯವನ್ನು ಕೊಟ್ಟಾಗ, ಆತನ ಸಹೋದರರು ದಾಳಿ ಮಾಡಿ ಆತನಿಂದ ಎಲ್ಲವನ್ನೂ ಕಿತ್ತುಕೊಂಡರು. ತಂದೆ ತೀರಿಕೊಂಡ ದುಃಖ, ಅಣ್ಣಂದಿರೆಲ್ಲ ಶತ್ರುವಾದರೆಂಬ ದುಃಖ, ರಾಜ್ಯವನ್ನು ಕಳಕೊಂಡ ದುಃಖ ಈ ಎಲ್ಲವೂ ಪಂಚಮನನ್ನು ಘಾಸಿಗೊಳಿಸಿತು. ಆಗ ಪಂಚಮ ಗಂಗಾತೀರದ ವಿಂಧ್ಯವಾಸಿನೀ ದೇವಿಯೆದುರು ಪ್ರಾಣಾರ್ಪಣೆಗೆ ಮುಂದಾದ. ಪ್ರತ್ಯಕ್ಷಳಾಗಿ ದೇವಿ ತಡೆದಾಗ ಕೈಗೆ ಖಡ್ಗ ತಗುಲಿ ರಕ್ತದ ಬಿಂದುಗಳು ಇಳೆಗೆ ಬಿತ್ತು. ಹೀಗೆ ಬೂಂದ್-ಇಲ ಮುಂದೆ ಬುಂದೇಲವಾಯಿತು ಎನ್ನುವ ಪ್ರತೀತಿ. ನಾಗವಂಶ, ಕಛವಾಹವಂಶ, ಪರಿಹಾರವಂಶ, ಗಹರವಾರವಂಶ ಹೀಗೆ ಅನೇಕ ವಂಶದವರು ಇಲ್ಲಿ ರಾಜ್ಯವಾಳಿದ್ದರು. ಪಂಚಮನು ಗಹರವಾರ ವಂಶದವನು.
ಬುಂದೇಲರ ರಾಜಾ ಪ್ರತಾಪರುದ್ರ ಹೆಸರಿಗೆ ಅನ್ವರ್ಥವಾಗುವಂತೆ ಮಹಾ ಪ್ರತಾಪಿ. ಬಂದೇಲ ಸಾಮ್ರಾಜ್ಯವನ್ನು ಬಹುವಾಗಿ ವಿಸ್ತರಿಸದವನೀತ. ಇಬ್ರಾಹಿಂ ಲೋದಿಯನ್ನು ಹೆಡೆಮುರಿಗಟ್ಟಿದ ಈತ ಬಾಬರನನ್ನು ಹೊಡೆದೋಡಿಸಿದ್ದ. ಓರ್ಛಾ ಮಹಾನಗರಕ್ಕೆ ಅಡಿಪಾಯ ಹಾಕಿದ ಈತ ಹುಲಿಯ ಬಾಯಿಯಿಂದ ದನವನ್ನು ರಕ್ಷಿಸಿದ ಸಂದರ್ಭದಲ್ಲಿ ಉಂಟಾದ ಗಂಭೀರ ಗಾಯಗಳಿಂದಾಗಿ ಮೃತನಾದ. ಆತನ ಮಗ ಭಾರತೀಚಂದ್ರ ಪಟ್ಟವೇರಿದ ತಕ್ಷಣ ಷೇರಶಾಹನೆಂಬ ಸರದಾರನ ನೇತೃತ್ವದಲ್ಲಿ ದಾಳಿ ಮಾಡಿದ ಮೊಘಲರು ಸೋತು ಓಡಿ ಹೋದರು. ಇಂತಹಾ ಮಹಾನ್ ಸಾಮ್ರಾಜ್ಯಕ್ಕೆ ಜಝಾರಸಿಂಹನ ಕಾಲದಲ್ಲಿ ವಿಪತ್ತು ಬಂದೆರಗಿತು. ಜಝಾರಸಿಂಹನು ಮಹಾವೀರನಾಗಿದ್ದರೂ ಮಹಾಸಂಶಯಿಯೂ ಆಗಿದ್ದ. ಮಲ್ಲಯುದ್ಧ ಪ್ರವೀಣನೂ, ಖಡ್ಗ ಯುದ್ಧ ಚತುರನೂ ಆಗಿದ್ದ ತಮ್ಮ ಹರದೇವನ ಮೇಲೆಯೇ ಸಂಶಯಪಟ್ಟು ವಿಷ ಕೊಟ್ಟು ಸಾಯಿಸಿದ. ಇದೇ ಸುಸಮಯ ಎಂದು ತಿಳಿದ ಷಾಜಹಾನ್ ತನ್ನ ಬಹುದೊಡ್ಡ ಸೈನ್ಯವನ್ನು ಬುಂದೇಲ್ ಖಂಡವನ್ನು ಆಕ್ರಮಿಸಲು ಅಟ್ಟಿದ. ಆಗ ಮಹೇವಾದಲ್ಲಿದ್ದ ವೀರ ಚಂಪತರಾಯ ತನ್ನ ದಾಯಾದಿಯ ಸಹಾಯಕ್ಕೆ ಧಾವಿಸಿದ. ಮೊಘಲರು ಮತ್ತೆ ಸೋತು ಓಡಬೇಕಾಯಿತು. ಆದರೆ ಮತ್ತೊಮ್ಮೆ ಹಠಾತ್ತನೆ ದಾಳಿ ಮಾಡಿದ ಮೊಘಲರು ಚಂಪಕರಾಯನ ಸಹಾಯಬರುವುದಕ್ಕಿಂತ ಮೊದಲೇ ಜಝಾರಸಿಂಹನನ್ನು ಅವನ ಮಕ್ಕಳಸಹಿತ ಕೊಂದರು. ಸುದ್ದಿ ತಿಳಿದು ರಕ್ತ ಕುದ್ದು ಚಂಪಕರಾಯ ಬಂದವನೇ ಮೊಘಲರನ್ನು ಸಂಹರಿಸತೊಡಗಿದ. ಷಾಜಹಾನ್ ಕಳುಹಿದ ಬಾಕಿಖಾನನ ಸೈನ್ಯವೂ ಚಂಪಕರಾಯನ ಖಡ್ಗಕ್ಕೆ ಆಹುತಿಯಾಯಿತು. ಆಗ ಬಾಕಿಖಾನನಿಗೆ ಚಂಪತರಾಯನ ಮಗ ಸಾರವಾಹನನು ಸಹವರ್ತಿಗಳೊಂದಿಗೆ ನದಿಯಲ್ಲಿ ಈಜುತ್ತಿರುವುದು ತಿಳಿದು ಆ ಬಾಲಕನನ್ನು ಕೊಲ್ಲಲು ತನ್ನ ಸೈನ್ಯವನ್ನು ಕಳುಹಿದ. ಆದರೆ ಆ ಸೈನ್ಯವನ್ನು ಆ ಚಿಣ್ಣರು ಪೊದೆ, ಮರಗಳ ಮರೆಯಲ್ಲಿ ನಿಂತು ತಮ್ಮ ಬಾಣಗಳಿಂದ ಸಂಹರಿಸಿಬಿಟ್ಟರು. ಕ್ರುದ್ಧನಾದ ಬಾಕಿಖಾನ ದೊಡ್ಡ ಸೈನ್ಯವನ್ನು ಕಳುಹಿಸಿದ. ಬಾಲಕನೇನೋ ವೀರ ಅಭಿಮನ್ಯುವಿನಂತೆ ಹೋರಾಡಿದ. ಅಷ್ಟು ಹೊತ್ತಿಗೆ ಚಂಪತರಾಯನ ಸೈನಿಕರೂ ಅಲ್ಲಿಗೆ ತಲುಪಿ ಮೊಘಲರನ್ನು ಬಡಿದಟ್ಟಿದರು. ಮೈತುಂಬಾ ಗಾಯಗೊಂಡಿದ್ದ ಬಾಲಕ ವೀರಮರಣವನ್ನಪ್ಪಿದ. ಮುಂದಿನ ವರ್ಷವೇ ಅವನಿಗೆ ಮತ್ತೊಂದು ಪುತ್ರರತ್ನ ಉದಿಸಿತು. ಅದೇ ಬುಂದೇಲಖಂಡವನ್ನು ಸೂರ್ಯನಂತೆ ಬೆಳಗಿದ ಛತ್ರಸಾಲ.
ಮುಂದೆ ಚಂಪತರಾಯನನ್ನು ಮೊಘಲರು ಎಡೆಬಿಡದೆ ಕಾಡಿದರು. ಮೊಘಲರ ಆಮಿಶಕ್ಕೆ ಒಳಗಾಗಿ ಚಂಪತರಾಯನ ನೆಂಟ ಪಹಾಡಸಿಂಹನೇ ಚಂಪತರಾಯನಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ. ಸ್ವಾಮಿನಿಷ್ಠ ಭೀಮಸಿಂಹ ಅನುಮಾನಗೊಂಡು ಸ್ವತಃ ತಿಂದು ಸ್ವಾಮಿಯನ್ನುಳಿಸಿದ. ಮತ್ತೊಮ್ಮೆ ಕಳುಹಿಸಿದ ಕಟುಕನನ್ನು ಸ್ವತಃ ಚಂಪತರಾಯನೇ ಕೊಂದ. ಷಹಜಹಾನ್ ತನ್ನ ಮಗನನ್ನೆ ದಂಡನಾಯಕನನ್ನಾಗಿ ಮಾಡಿ ಭಾರಿ ಸೈನ್ಯವನ್ನು ಕಳುಹಿಸಿದರೂ ಚಂಪತರಾಯನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಮೊಘಲ್ ಸಿಂಹಾಸನಕ್ಕೆ ಸಹೋದರರಲ್ಲಿ ಜಗಳವಾದಾಗ ಔರಂಗಜೇಬ್, ಚಂಪತರಾಯನ ಸಹಾಯವನ್ನು ಬೇಡಿದ. ತಾನು ಔರಂಗಜೇಬನಿಗೆ ನೆರವಾಗಿ ಅವನು ಚಕ್ರವರ್ತಿಯಾದರೆ ಮೊಘಲರ ಜೊತೆಗೆ ತನ್ನ ನಿರಂತರ ಯುದ್ಧ ನಿಲ್ಲುತ್ತದೆ, ತನ್ನ ನೆರವನ್ನು ಪಡೆದ ಔರಂಗಜೇಬ ಹಿಂದೂಗಳಿಗೆ ಅನ್ಯಾಯ ಮಾಡಲಾರ ಎಂದು ಯೋಚಿಸಿದ ಚಂಪತರಾಯ ಹಿಂದೂ ರಾಜರ ಎಂದಿನ ಭೋಳೇ ಸ್ವಭಾವಕ್ಕೆ ತುತ್ತಾದ. ಔರಂಜೇಬ ತನ್ನ ಮುಸ್ಲಿಮ್ ಬುದ್ಧಿಯನ್ನೇ ತೋರಿಸಿದ. ಚಕ್ರವರ್ತಿಯಾದನಂತರ ಚಂಪತರಾಯನಿಗೆ ಅಪಮಾನ ಮಾಡಿದ. ಚಂಪತರಾಯ ಅವನಿಂದ ದೂರವಾದ. ಔರಂಗಜೇಬನ ಉಪಟಳದಿಂದ ಊರಿಂದೂರು ಅಲೆಯಬೇಕಾಯಿತು. ನಂಬಿದ ಭಟರೇ ಮೋಸಮಾಡಿದಾಗ ಚಂಪತರಾಯನೂ ಆತನ ಪತ್ನಿಯೂ ಭರ್ಜಿಯಿಂದ ತಮ್ಮನ್ನೇ ತಾವು ತಿವಿದುಕೊಂಡು ಆತ್ಮಹತ್ಯೆಗೈದರು. ಮರಿಕೇಸರಿಯು ಅನಾಥವಾಯ್ತು. ಆಗ ಛತ್ರಸಾಲನಿಗೆ ಹದಿನಾಲ್ಕು ವರ್ಷ ವಯಸ್ಸು. ಔರಂಗಜೇಬನ ಭೀತಿಯಿಂದ ಅವನಿಗೆ ಆಶ್ರಯ ಕೊಡುವವರೇ ಇರಲಿಲ್ಲ. ಹೇಗೋ ತಪ್ಪಿಸಿಕೊಂಡು ದೇವಗಢದಲ್ಲಿದ್ದ ಅಣ್ಣ ಅಂಗದರಾಯನನ್ನು ಸೇರಿಕೊಂಡ.
ಔರಂಗಜೇಬನು ದಕ್ಷಿಣದ ರಾಜ್ಯಗಳ ಮೇಲೆ ಯುದ್ಧಕ್ಕಾಗಿ ಜಯಸಿಂಹನಿಗೆ ನೇತೃತ್ವ ವಹಿಸಿದಾಗ ತನ್ನ ಅಣ್ಣ ಅಂಗದರಾಯನ ಜೊತೆ ಅವನ ಒತ್ತಾಯದಿಂದಾಗಿ ಛತ್ರಸಾಲ, ಜಯಸಿಂಹನ ಸೈನ್ಯವನ್ನು ಸೇರಿಕೊಂಡ. ದೇವಗಢವನ್ನು ಜಯಿಸಲು ಜಯಸಿಂಹನಿಗೆ ಸಹಾಯಕನಾಗಿ ಬಹಾದುರ ಖಾನನನ್ನು ದೊಡ್ಡ ಸೈನ್ಯದೊಡನೆ ಔರಂಗಜೇಬ ಕಳುಹಿಸಿದಾಗ ತನ್ನ ಸಾಹಸವನ್ನು ತೋರಿಸಲು ಸರಿಯಾದ ಸಮಯವೆಂದು ಛತ್ರಸಾಲನು ಮುನ್ನುಗ್ಗಿ ಹೋರಾಡಿದ. ದೇವಗಢ ವಶವಾಯಿತು. ಆದರೆ ಆ ಸಾಹಸಕ್ಕೆ ತಕ್ಕ ಪ್ರತಿಫಲ ಛತ್ರಸಾಲನಿಗೆ ಸಿಗಲಿಲ್ಲ. ಜೊತೆಗೆ ಮುಸ್ಲಿಮರು ಹಿಂದೂಗಳನ್ನು ತುಚ್ಛವಾಗಿ ನೋಡುತ್ತಿದ್ದುದನ್ನು, ಅವರ ಪಕ್ಷಪಾತ ಧೋರಣೆಗಳನ್ನು ನೋಡಿ ಅವನ ಸ್ವಾಭಿಮಾನ ಸಿಡಿದೆದ್ದಿತು. ಒಂದು ರಾಜ್ಯವನ್ನು ಆಳಬಲ್ಲ ತಾನು ಜಯಸಿಂಹನ ಬಳಿಯಲ್ಲಿ ಸಂಬಳಕ್ಕಾಗಿ ಔರಂಗಜೇಬನ ದಾಸ್ಯದಲ್ಲಿ ಬದುಕಲು ಅವನ ಮನವು ಒಡಂಬಡಲಿಲ್ಲ. ಆ ವೇಳೆಗಾಗಲೇ ಶಿವಾಜಿ ಆಗ್ರಾದ ಸೆರೆಮನೆಯಿಂದ ತಪ್ಪಿಸಿಕೊಂಡು ರಾಯಘಡಕ್ಕೆ ಪರಾರಿಯಾದ ಅಪ್ರತಿಮ ಸಾಹಸ ಅವನ ಕಿವಿಗೆ ಬಿದ್ದಿತು. ಅದರಿಂದ ಸ್ಫೂರ್ತಿಗೊಂಡ ಛತ್ರಸಾಲ, ಶಿವಛತ್ರಪತಿಯನ್ನು ಕೂಡಿಕೊಳ್ಳುವುದಕ್ಕಾಗಿ ಹವಣಿಸಿದ.
"ಪಿತಾ ಹಮಾರೆ ಸೂಬಾ ಡಾಂಡೆ| ತುರಕನ ಪರ ಅಜಮಾಯೇ ಖಾಂಡೆ||
ತಿನ ಚಂಪತಿ ಕೆ ನಂದ ಹಮ್| ಸಸಿ ನವಾವೈ ಕಾಹಿ||
ಹಮ್ ಭೂಲೆ ಸೇಯೌ ವೃಥಾ| ಹಿತು ಜಾನಿ ಕೈ ವಾಹಿ||
ಏಡ ಏಕ ಸಿವರಾಜ ನಿಬಾಹಿ| ಕರೌ ಅಪನೆ ಚಿತಕಿ ಚಾಹಿ||
ಆಠ ಪಾತಶಾಹಿ ಝುಕ ಝೋರೆ| ಸುಬನಿ ಬಾಂಧೀ ಡಾಡ ಲೈ ಛೌರೇ||
ಐಸೇ ಗುಣ ಶಿವರಾಜ ಕೇ| ಬಸೇ ಚಿತ್ರ ಮೇ ಆಯಿ||
ಮಿಲಿವೋಯಿ ಮನ ಮೇ ಧನ್ಯೋ| ಮನಸಿ ಮತ ಜ್ಯೋ ಬನಾಯಿ||
"ನನ್ನ ತಂದೆ ತನ್ನ ತಾಯ್ನಾಡಿಗಾಗಿ ಮೊಘಲರ ವಿರುದ್ಧ ಕರದಲ್ಲಿ ಖಡುಗ ಹಿರಿದು ಹೋರಾಡಿದ. ಅಂಥವನ ಮಗನಾದ ನಾನು ಇಂದು ಅದೇ ಮೊಘಲರ ಮುಂದೆ ತಲೆತಗ್ಗಿಸಿ ಅವರ ಸೇವೆ ಮಾಡುತ್ತಿದ್ದೇನೆ. ಅದೇ ಶಿವರಾಜನನ್ನು ನೋಡಿ. ಆ ಮಹಾತ್ಮ ಮೊಘಲ ದೊರೆಯ ವಿರುದ್ಧ ಅಂತಹಾ ಕ್ಲಿಷ್ಟ ಪರಿಸ್ಥಿತಿಯಲ್ಲೂ ಹೋರಾಡುತ್ತಿದ್ದಾನೆ. ಎಂಟು ಸುಲ್ತಾನರು ಅವನ ಕೈಯಲ್ಲಿ ಪೆಟ್ಟು ತಿಂದು ಓಡಿದರು. ನನಗೆ ಅಂತಹ ಮಹಾನ್ ದೊರೆಯ ದರ್ಶನ ಭಾಗ್ಯ ಲಭಿಸಿದರೆ ನಾನು ಧನ್ಯ". ಮೊಘಲರ ಬಿಗು ಪಹರೆ, ಗೂಢಚಾರರಿಂದ ತಪ್ಪಿಸಿಕೊಳ್ಳಲು ಬೇಡರ ಗುಂಪಿನ ಜೊತೆ ಅವರಂತೆ ವೇಶ ಧರಿಸಿ ಕಾಡುಮೇಡುಗಳಲ್ಲಿ ಅಲೆದು, ಭಯಂಕರ ಭೀಮೆಯನ್ನು ತೆಪ್ಪಗಳಲ್ಲಿ ದಾಟಿ ಶಿವಾಜಿಯ ಆಸ್ಥಾನಕ್ಕೆ ಪ್ರವೇಶಿಸಿದ. ಒಬ್ಬ ಸಮರ್ಥ ನಾಯಕನ ಹಿರಿತನ-ಗುರುತನಗಳನ್ನು ಇನ್ನೊಬ್ಬ ನಾಯಕನೇ ಗುರುತಿಸಬಲ್ಲನೆಂದರೆ ಶಿವಾಜಿಯ ಸಾಮರ್ಥ್ಯವನ್ನು ಊಹಿಸಬೇಕು.
ಛತ್ರಸಾಲನನ್ನು ಕಂಡು ಶಿವಾಜಿಯ ಸಂತೋಷಕ್ಕೂ, ಆಶ್ಚರ್ಯಕ್ಕೂ ಪಾರವೇ ಇರಲಿಲ್ಲ. ಶಿವಾಜಿ "ಏನು ಬೇಕು?" ಎಂದು ಕೇಳಿದಾಗ "ನಿನ್ನ ಪರಿವಾರದೊಡನೆ ಸೇರಿ ಮುಘಲರ ವಿರುದ್ಧ ಯುದ್ಧ ಮಾಡಬೇಕು" ಎನ್ನುವುದು ಛತ್ರಸಾಲನ ಉತ್ತರವಾಗಿತ್ತು. ಆಗ ಶಿವಾಜಿಯು "ನಿನ್ನಂತಹಾ ವೀರಾಗ್ರೇಸರ ನನ್ನ ಸೇನೆಯಲ್ಲಿರುವುದರ ಬದಲು ಸ್ವತಂತ್ರವಾಗಿ ಹೋರಾಡಬೇಕು. ನಾನು ದಕ್ಷಿಣದಲ್ಲಿದ್ದೇನೆ. ನೀನು ಉತ್ತರದಲ್ಲಿ. ನೀನು ನಿನ್ನ ನೆಲದಲ್ಲಿ ಸ್ವತಂತ್ರನಾಗಿ, ಹತ್ತಿರದ ಹಿಂದೂಗಳನ್ನು ಒಟ್ಟು ಸೇರಿಸಿ ಅತ್ತಲಿಂದ ಮುಘಲರನ್ನು ಅಟಕಾಯಿಸು. ಸಂಘಶಕ್ತಿಯಲ್ಲಿ ಬಲವಿದೆ, ಗೆಲುವಿದೆ" ಎಂದು ಹುರಿದುಂಬಿಸಿದ. ಶಿವಾಜಿಯ ದೂರದೃಷ್ಟಿಯನ್ನು ಛತ್ರಸಾಲನೂ ಒಪ್ಪಿದ. ಶಿವಾಜಿ ವಿಶೇಷವಾದ ಖಡ್ಗವೊಂದನ್ನು ಛತ್ರಸಾಲನ ಸೊಂಟಕ್ಕೆ ಕಟ್ಟಿದ. ಈ ಸಂಗಮ ವಿಶೇಷವಾದದ್ದು. ಇಲ್ಲಿ ಶಿವಾಜಿಯ ದೂರದೃಷ್ಟಿ, ಸಮಗ್ರ ಹಿಂದೂಸ್ಥಾನದ ದೃಷ್ಟಿ, ಹಿಂದೂಗಳನ್ನು ಸಂಘಟಿಸುವ ಶಕ್ತಿ, ರಾಜಕೀಯ ಚಾಣಾಕ್ಷತೆಯ ಜೊತೆಗೆ ಶಿವಾಜಿಯ ನಾಯಕತ್ವದ ಆ ಅಸಾಮಾನ್ಯ ಸಾಮರ್ಥ್ಯವನ್ನು ಗುರುತಿಸಿದ ಛತ್ರಸಾಲನ ಯೋಗ್ಯತೆಯ ಅರಿವಾಗುತ್ತದೆ.
ಛತ್ರಸಾಲನು ಬುಂದೇಲಖಂಡಕ್ಕೆ ಹಿಂದಿರುಗಿದ. ಔರಂಗಜೇಬನಿಂದ ಮಾಸಿಕ ವೇತನ ಕೊಡಿಸುವ ಸೂಬಾ ಶುಭಕರಣನ ಆಮಿಶವನ್ನು ತಿರಸ್ಕರಿಸಿದ. ತನ್ನ ತಂದೆಯೊಂದಿಗೆ ಹಗೆತನ ಸಾಧಿಸಿ, ಅಡಿಗಡಿಗೆ ಅಡ್ಡಿಯುಂಟುಮಾಡಿದ್ದವನ ವಂಶದೊಟ್ಟಿಗೆ ದ್ವೇಷವನ್ನು ಮರೆತು ಆ ವಂಶದ ಕುಡಿ ಸುಜಾನಸಿಂಹನನ್ನು ತನ್ನ ಪರವಾಗಿ ಸೆಳೆದುಕೊಂಡ. ಹತ್ತಿರದ ರಾಜರನ್ನು ಒಟ್ಟು ಸೇರಿಸಿದ. ಔರಂಗಾಬಾದಿನ ವೀರ ಬಲದೇವನನ್ನೂ ಸಂಧಿಸಿ ಯುದ್ಧಕ್ಕೆ ಹುರಿದುಂಬಿಸಿದ. ಸೈನ್ಯವನ್ನು ಕಟ್ಟಲು ದೇಶದ ತಾಯಂದಿರು ತಮ್ಮ ಬಂಗಾರದ ಒಡವೆಗಳನ್ನು ಕೊಟ್ಟರು. ಮುನ್ನೂರು ಬುಂದೇಲ ಸೈನಿಕರು ಒಟ್ಟು ಸೇರಿದರು. ಛತ್ರಸಾಲ ದಂಭೇರವನ್ನು ಗೆದ್ದ. ರತ್ನಾಗರ, ಸಿರೋಜ್ ಗಿಲ್ ನಗರ, ಗೌನಾ, ಪಿರಾಹಟ್, ಘೋರಾಸಾಗರ, ಹನೂಟಕ್, ಲಕ್ಕೋರಿ, ಬಡಿಹಾರಗಳನ್ನು ಜಯಸಿ ರಾಜ್ಯವನ್ನು ವಿಸ್ತರಿಸಿದ. ಔರಂಗಜೇಬನ ಪರಮನೀಚವಾದ ಕಾನೂನುಗಳನ್ನೆಲ್ಲಾ ಧಿಕ್ಕರಿಸಿದ. ಛತ್ರಸಾಲನು ಐವರು ಸಂಘಡಿಗರೊಡನೆ ಬೇಟೆಗಾಗಿ ಅರಣ್ಯಕ್ಕೆ ಹೋಗಿದ್ದಾಗ ಔರಂಗಜೇಬನ ಸೇನಾಧಿಪತಿ ಸೈಯದ್ಬಹಾದೂರನು ಸೈನ್ಯದೊಂದಿಗೆ ಅರಣ್ಯದೊಳಗೇ ನುಗ್ಗಿದ. ಕೆರಳಿದ ಛತ್ರಸಾಲನು ಮೊಗಲರನ್ನು ಕತ್ತರಿಸಿ ಚೆಲ್ಲಿದ. ಆ ಆರೇ ಜನರು ಬಹಾದ್ದೂರನ ಸೇನೆಯನ್ನು ಹಣ್ಣುಗಾಯಿ-ನೀರುಗಾಯಿ ಮಾಡಿಹಾಕಿದರು. ಬಳಿಕ ವರಾವಾ, ಘೂಮಘಾಟ್, ಗೋಪಾಚಲ, ಸೈದಮನೋವರ್, ಗ್ವಾಲಿಯರುಗಳನ್ನು ಗೆದ್ದ. ಗೆದ್ದಲ್ಲೆಲ್ಲಾ ಕಂದಾಯ ವಸೂಲಿಗೆ ಆರಂಭಿಸಿದ. ಛತ್ರಸಾಲನ ಕೀರ್ತಿ ದಶದಿಕ್ಕುಗಳಲ್ಲಿ ಹಬ್ಬಿತು. ಹಿಂದೊಮ್ಮೆ ವಿರೋಧಿಸಿದ್ದ ರತ್ನಷಾಹ ಮತ್ತು ಇಂದ್ರಮಣಿ ಮುಂತಾದ ನಾಯಕರುಗಳೂ ಛತ್ರಸಾಲನ ಬೆನ್ನಿಗೆ ನಿಂತರು. ಛತ್ರಸಾಲನ ರಾಜಛತ್ರದಡಿಯಲ್ಲಿ ಮಠಮಂದಿರಗಳಲ್ಲಿ ಘಂಟೆ, ಶಂಖಗಳು ಧ್ವನಿಸಿದವು. ಅಲ್ಲೆಲ್ಲಾ ಭಗವಾಧ್ವಜ ನಿರ್ಭಯದಿಂದ ಹಾರಾಡತೊಡಗಿತು. ಹಿಂದೂಗಳ ಮಾನ, ಸಮ್ಮಾನಗಳು ಮರಳಿ ಬಂದವು.
ಛತ್ರಸಾಲನನ್ನು ಮಣಿಸಲು ಔರಂಗಜೇಬ ರಣದುಲ್ಲಾಖಾನನನ್ನು ಮೂವತ್ತು ಸಾವಿರ ಸೈನ್ಯದೊಂದಿಗೆ ಕಳುಹಿಸಿದ. ಘನಘೋರ ಯುದ್ಧದಲ್ಲಿ ರಣಭಯಂಕರ ಛತ್ರಸಾಲನೊಡನೆ ಕೈಸಾಗದೆ ರಣದುಲ್ಲಾ ಸೋತು ಸುಣ್ಣವಾಗಿ ಓಡಿಹೋದ. ಬಳಿಕ ಹಲವು ನೂರು ಗಾಡಿಗಳಲ್ಲಿ ದಿಲ್ಲಿಗೆ ಸಾಗುತ್ತಿದ್ದ ಹೇರಳ ದ್ರವ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡ ಛತ್ರಸಾಲ ಕಾರ್ಯದ ಸುದ್ದಿ ಕೇಳಿ ರೊಚ್ಚಿಗೆದ್ದ ಔರಂಗಜೇಬ ರೂಮಿ ಎಂಬ ಸೇನಾಧಿಪತಿಯನ್ನು ಭಾರೀ ಸೈನ್ಯದೊಂದಿಗೆ ಕಳುಹಿಸಿದನು. ಈ ರೂಮಿ ಸಹಿತ ಬಳಿಕ ಬಂದ ದಲೈರ್ ಖಾನ್, ಅಬ್ದುಲ್ ಸಮದ್, ಬಹಲೋರ್ ಖಾನ್, ಸುತರ್ ದೀನ್, ತಹವರ ಖಾನ್, ಸೈಯದ್ ಲತೀಫ್ ಮುಂತಾದ ಹತ್ತಾರು ಸರದಾರರಿಗೆ ಛತ್ರಸಾಲನ ಪೆಟ್ಟುಗಳನ್ನು ತಾಳಿಕೊಳ್ಳಲಾಗಲಿಲ್ಲ. ಒಂದು ಕಡೆ ಶಿವಾಜಿ, ಇನ್ನೊಂದೆಡೆ ಛತ್ರಸಾಲರ ಪಟ್ಟುಗಳನ್ನೂ, ಪೆಟ್ಟುಗಳನ್ನೂ ತಾಳಿಕೊಳ್ಳಲಾಗದೆ ಔರಂಗಜೇಬ ಕಂಗೆಟ್ಟ. ಆತ ಕೊನೆಗೆ ಸುತರದೀನ ಈರಾನಿ ಎಂಬ ಮಹಾದುಷ್ಟನೂ, ಕ್ರೂರಿಯೂ ಆದ ಸೇನಾನಿಯೊಬ್ಬನನ್ನು ಛತ್ರಸಾಲನನ್ನು ಕೊಲ್ಲಲು ಕಳುಹಿಸಿದ. ಆತ ಛತ್ರಸಾಲನಿಗೆ ಸುಮ್ಮನೇ ಪ್ರಾಣಹಾನಿಮಾಡಿಕೊಳ್ಳದೆ ಸಂಧಿ ಮಾಡಿಕೊಳ್ಳುವಂತೆ ಕರೆಕಳುಹಿಸಿದ. "ನಾವು ಕ್ಷತ್ರಿಯರು; ಯುದ್ಧಕ್ಕೆ ಹೆದರುವವರಲ್ಲ. ಸುತರದೀನನಿಗೆ ನಿಜವಾಗಿಯೂ ಸಂಧಿ ಮಾಡಿಕೊಳ್ಳಬೇಕೆಂದಿದ್ದರೆ ಕಂದಾಯವನ್ನು ತಂದು ನಮಗೇ ಒಪ್ಪಿಸಲಿ” ಎಂಬ ಕ್ಷತ್ರಿಯೋಚಿತ ಉತ್ತರ ಛತ್ರಸಾಲನಿಂದ ಬಂತು. ಬುಂದೇಲರ ಖಡ್ಗಗಳಾಘಾತಕ್ಕೆ ಮೊಘಲರ ಸೈನ್ಯ ತತ್ತರಿಸಿ ರಕ್ತದ ಕೋಡಿಯೇ ಹರಿಯಿತು. ವಿಂಧ್ಯವಾಸಿನಿಯ ಪಡೆ ಜಗದ್ವಂದ್ಯವಾಯಿತು.
ಅನ್ಯ ಹಿಂದೂ ರಾಜರಂತೆ ಯುದ್ಧರಂಗದಲ್ಲಿ ಹೋರಾಡಿ ವೀರಸ್ವರ್ಗ ಪಡೆಯುವುದು ಛತ್ರಸಾಲನ ಉದ್ದೇಶವಾಗಿರಲಿಲ್ಲ. ಅವನಲ್ಲಿ ದೂರದೃಷ್ಟಿಯಿತ್ತು. ಮೊಘಲರ ಅಟ್ಟಹಾಸವನ್ನು ಕೊನೆಗಾಣಿಸುವ ಸಿಟ್ಟಿತ್ತು. ಶಕ್ತಿಯ ಜೊತೆ ಯುಕ್ತಿಯೂ ಬೆರೆತಿತ್ತು. ತಮ್ಮವರ ಸಂಖ್ಯೆ ಕಡಿಮೆ ಇದ್ದಾಗ, ವ್ಯರ್ಥವಾಗಿ ಯಾರನ್ನೂ ಕಳೆದುಕೊಳ್ಳದೆ, ಸೈನ್ಯ ಸಮೇತ ಅವನು ಯುದ್ಧರಂಗದಿಂದಲೇ ಮರೆಯಾಗುತ್ತಿದ್ದನು. ಎದುರಾಳಿ ಸೈನ್ಯ ವಿಜಯೋನ್ಮಾದದಲ್ಲಿ ಮೈಮರೆತಿದ್ದಾಗ ಮಿಂಚಿನ ದಾಳಿ ನಡೆಸುತ್ತಿದ್ದ. ವಿಜಯಿಯಾದ ಮೇಲೂ ಆತನೆಂದೂ ಮೈಮರೆಯುತ್ತಿರಲಿಲ್ಲ. ತಹವರಖಾನನು ದಂಡೆತ್ತಿ ಬಂದಾಗ ಛತ್ರಸಾಲನ ವಿವಾಹ ನಡೆಯುತ್ತಿತ್ತು. ಕ್ಷಣಮಾತ್ರವೂ ತಡಮಾಡದೇ ರಣರಂಗಕ್ಕಿಳಿದು ತಹವರಖಾನನ ಸೊಕ್ಕಡಗಿಸಿದನು. ಪರಸ್ಪರ ಕಾದಾಡುತ್ತಿದ್ದ ಹಿಂದೂ ರಾಜರಿಗೆ ಬುದ್ಧಿವಾದ ಹೇಳಿ ಅವರನ್ನೆಲ್ಲ ಸಂಘಟಿಸಿ ತನ್ನ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದ. ಯಾರು ಸಾಮಕ್ಕೆ ಬಗ್ಗುತ್ತಿರಲಿಲ್ಲವೋ ಅವರಲ್ಲಿ ಅವನ ಖಡ್ಗ ಮಾತಾಡುತ್ತಿತ್ತು. ಅವನೆಂದೂ ಭೋಗಲಾಲಸೆಗೆ ಎಳೆಸಲಿಲ್ಲ. ಪ್ರಾಣನಾಥರ ಆಶೀರ್ವಾದದಿಂದ ಧರ್ಮದ ಹಾದಿಯಲ್ಲಿ ಅವನ ಅಧಿಕಾರ ಎಂದೆಂದಿಗೂ ಚಲಿಸುತ್ತಿತ್ತು. ಅವನ ಆಡಳಿತ ಕ್ರಮದಿಂದ ರಾಜ್ಯದಲ್ಲಿ ಶಾಂತಿ, ಸಮೃದ್ಧಿಗಳು ನೆಲೆಸಿದ್ದವು.
ಔರಂಗಜೇಬನ ಬಳಿಕ ದಿಲ್ಲಿಯ ಸಿಂಹಾಸನ ಏರಿದ ದುರ್ಬಲ ಬಹಾದ್ದೂರ್ ಷಾಹ ಛತ್ರಸಾಲನನ್ನು ಆಸ್ಥಾನಕ್ಕೆ ಆಹ್ವಾನಿಸಿದ್ದ. ಆದರೆ ಅದು ಮಿತೃತ್ವವೂ ಅಲ್ಲದೇ, ಸಮಾನ ಗೌರವವೂ ಅಲ್ಲದೆ ಸಂಬಳಕ್ಕಾಗಿ ಕೆಲಸ ಮಾಡುವ ಆಹ್ವಾನ ಎಂಬುದನ್ನು ಅರಿತ ಕೂಡಲೇ ಅದನ್ನು ತಿರಸ್ಕರಿಸಿದ. ಬಹಾದೂರ್ ಶಾಹನು ಮಹಮದ್ ಖಾನ್ ಎಂಬ ಸೇನಾಧಿಪತಿಯನ್ನು ಎಂಬತ್ತು ಸಾವಿರ ಯೋಧರ ಸೈನ್ಯದೊಂದಿಗೆ ಛತ್ರಸಾಲನೊಡನೆ ಯುದ್ಧಕ್ಕೆ ಕಳುಹಿಸಿದ. ಛತ್ರಸಾಲನು ಬಾಜೀರಾವ್ ಪೇಶ್ವೆಯ ಸಹಾಯ ಪಡೆದು ಆ ಸೈನ್ಯವನ್ನು ಧೂಳೀಪಟ ಮಾಡಿದ. ಮಹಮ್ಮದ್ ಖಾನ್ ಜೈಪುರದ ಕೋಟೆಗೆ ಓಡಿ ಹೋಗಿ ಅವಿತುಕೊಂಡಾಗ ಅದಕ್ಕೂ ಮುತ್ತಿಗೆ ಹಾಕಿದ. ಆರು ತಿಂಗಳ ಬಳಿಕ ಮೊಹಮ್ಮದನ ಪುತ್ರ ಶರಣಾದ ಬಳಿಕ ಅವನಿಗೆ ಜೀವದಾನ ಸಿಕ್ಕಿತು.
ಎಂಬತ್ನಾಲ್ಕು ವರ್ಷದ ತುಂಬು ಜೀವನ ನಡೆಸಿ ಪುತ್ರಪೌತ್ರಾದಿಗಳನ್ನು ಹೊಂದಿ ನೆಮ್ಮದಿಯಲ್ಲಿ ಪ್ರಾಣ ತೊರೆದ ಛತ್ರಸಾಲ, ಔರಂಗಜೇಬನಂತಹಾ ದುಷ್ಟ ಮತಾಂಧನಿಗೆ ಮಣಿಯದೆ ಅವನ ಅವಸಾನವನ್ನೂ ನೋಡಿದ ಪುಣ್ಯಪುರುಷ. ಬದುಕಿದ ಎಂಬತ್ನಾಲ್ಕು ವರ್ಷಗಳಲ್ಲಿ ಮೊದಲ ಹದಿನಾಲ್ಕು ವರ್ಷಗಳನ್ನು ಬಿಟ್ಟು ಉಳಿದ ಎಪ್ಪತ್ತು ವರ್ಷಗಳನ್ನು ಯುದ್ಧದಲ್ಲಿಯೇ ಕಳೆದ ವೀರ ಅವನು. ಚಿಕ್ಕಪ್ರಾಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥನಾಗಿ, ದಾಯಾದಿಗಳ ಆಶ್ರಯದಲ್ಲಿ ಬೆಳೆದು, ದುಷ್ಟ ಔರಂಗಜೇಬನಿಗೆ ಎಲ್ಲರೂ ಹೆದರುತ್ತಿದ್ದ ಕಾಲದಲ್ಲಿ, ಔರಂಗಜೇಬನ ದಾಸ್ಯದಿಂದ ಹೇಸಿ, ಆತ್ಮಾಭಿಮಾನ ಜಾಗೃತವಾಗಿ, ಶಿವಾಜಿಯಿಂದ ಸ್ಫೂರ್ತಿ ಪಡೆದು ಏಕಛತ್ರನಾಗಿ ಬುಂದೇಲವನ್ನು ಒಂದಾಗಿಸಿ ಆಳಿ, ಸನಾತನ ಸಂಸ್ಕೃತಿಯನ್ನು ರಕ್ಷಿಸಿದ ಛತ್ರಸಾಲನ ಬದುಕು ಎಂದೆಂದಿಗೂ ಸ್ಫೂರ್ತಿಯುತವಾದದ್ದು. ತನ್ನ ರಾಜ್ಯವನ್ನು ಇಬ್ಬರು ಮಕ್ಕಳಿಗೂ, ಪೇಶ್ವೆಗೂ ಹಂಚಿಕೊಟ್ಟ, ದೇಶದ ಭವಿಷ್ಯದ ಬಗೆಗಿನ ಅವನ ದೂರದೃಷ್ಟಿ ಅಂತ್ಯಕಾಲದಲ್ಲೂ ಸ್ಥಿರವಾಗಿತ್ತು.
ಬುಧವಾರ, ಸೆಪ್ಟೆಂಬರ್ 29, 2021
ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ
ಧರೆಗಿಳಿದು ಶಕಪುರುಷನೆನಿಸಿದ ಶಿವದೃಷ್ಟಿ
ಭವಿಷ್ಯತ್ಪುರಾಣದ ಶ್ಲೋಕವೊಂದು ಇಂತೆನ್ನುತ್ತದೆ:-
ವಿಂಶದ್ಭಿಃ ಕರ್ಮಯೋಗಂ ಚ ಸಮಾರಾಧ್ಯ ಶಿವೋsಭವತ್
ಪೂರ್ಣೇ ತ್ರಿಂಶಚ್ಛತೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ
ಶಕಾನಾಂಚ ವಿನಾಶಾರ್ಥಮ್ ಆರ್ಯಧರ್ಮ ವಿವೃದ್ಧಯೇ
ಜಾತಶ್ಶಿವಾಜ್ಞಯಾಸೋsಪಿ ಕೈಲಾಸಾತ್ ಗುಹ್ಯಕಾಲಯಾತ್
ಹಿಂದಿನ ಕಾಲದಲ್ಲಿ ಶಿವದೃಷ್ಟಿಯೆಂಬೊಬ್ಬ ಬ್ರಾಹ್ಮಣನು ತನ್ನ ಅನೇಕ ಶಿಷ್ಯರೊಂದಿಗೆ ವನಕ್ಕೆ ತೆರಳಿದನು. ಅಲ್ಲಿ ಇಪ್ಪತ್ತು ವರ್ಷಗಳ ಕಾಲ ಕರ್ಮಯೋಗಮಾರ್ಗದಿಂದ ಶಿವನನ್ನು ಆರಾಧಿಸಿ ಶಿವನೇ ಆಗಿ ಹೋದನು. ಮೂರುಸಾವಿರ ವರ್ಷಗಳ ತರುವಾಯ ಭಯಂಕರ ಕಲಿಯುಗವು ಪ್ರಾಪ್ತವಾಯಿತು. ಆಗ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಉಜ್ಜೀವನಗೊಳಿಸಲು ಶಿವನ ಆಜ್ಞೆಯಂತೆ ಶಿವದೃಷ್ಟಿಯು ಕೈಲಾಸದಿಂದ ಇಳಿದು ಧರೆಯಲ್ಲಿ ಅವತರಿಸಿದನು. ಪ್ರಮರ ರಾಜನ ವಂಶದಲ್ಲಿ ಜನಿಸಿದ ಇವನಿಗೆ ತಂದೆಯಾದ ಗಂಧರ್ವಸೇನನು ವಿಕ್ರಮಾದಿತ್ಯನೆಂಬ ಹೆಸರನ್ನಿರಿಸಿದ. ಮಹಾಬುದ್ಧಿಶಾಲಿಯಾದ ವಿಕ್ರಮನು ಐದು ವರ್ಷ ತುಂಬುತ್ತಿದ್ದಂತೆ ವನಕ್ಕೆ ತೆರಳಿ ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ಸಫಲಮನೋರಥನಾಗಿ ಸಂಪತ್ತಿನಿಂದ ಕೂಡಿ, ದಿವ್ಯವಾಗಿ ಶೋಭಿಸುತ್ತಿದ್ದ ಅಂಬಾವತೀ ನಗರಕ್ಕೆ ಬಂದು ಅಲ್ಲಿ ಪರಮೇಶ್ವರನು ತನಗಾಗಿ ಕಳುಹಿಸಿದ ಮೂವತ್ತೆರಡು ಪುತ್ಥಳಿಯುಕ್ತವಾದ ದೇವಲೋಕದ ಸಿಂಹಾಸನವನ್ನು ಏರಿ ರಾಜ್ಯಪಾಲನೆಯನ್ನು ಮಾಡುತ್ತಿದ್ದ. ಅವನ ಮೈಗಾವಲಿಗಾಗಿ ಪಾರ್ವತೀ ದೇವಿಯು ಬೇತಾಳನನ್ನು ಕಳುಹಿಸಿದಳು. ಆ ಮಹಾರಾಜನು ಮಹಾಕಾಲೇಶ್ವರನ ಸನ್ನಿಧಿಗೆ ತೆರಳಿ ಪರಶಿವನನ್ನು ಆರಾಧಿಸುತ್ತಿದ್ದನು. ಒಂದು ವ್ಯೂಹ ವಿಸ್ತಾರವುಳ್ಳ, ನಾನಾವರ್ಣದ ಧಾತುಗಳ ಸ್ತಂಭಗಳಿಂದ ಕೂಡಿ, ನಾನಾ ಮಣಿರತ್ನಗಳಿಂದ ಅಲಂಕೃತವು, ನಾನಾ ವೃಕ್ಷಲತೆಗಳಿಂದ ಕೂಡಿದ ಸಭಾಭವನವನ್ನು ನಿರ್ಮಿಸಿ ಅಲ್ಲಿ ಸಿಂಹಾಸನದಲ್ಲಿ ವಿರಾಜಿತನಾದನು. ವೇದ ವೇದಾಂಗ ಪಾರಂಗತರನ್ನೂ ಯಥೋಚಿತವಾಗಿ ಶಾಸ್ತ್ರೋಕ್ತ ವಿಧಾನದಿಂದ ಸತ್ಕರಿಸಿ ಧರ್ಮಶ್ರವಣ ಮಾಡಿದನು ಎಂದು ಮುಂತಾಗಿ ಅಲ್ಲದೆ ಈಶ್ವರಾಜ್ಞೆಯಂತೆ ಬಂದ ಬೇತಾಳನು ಕಥೆಗಳನ್ನು ಹೇಳಿ, ತೊಡಕಾದ ಪ್ರಶ್ನೆಗಳನ್ನು ಕೇಳಿ ವಿಕ್ರಮಾರ್ಕನನ್ನು ಪರೀಕ್ಷಿಸುವ ಕಥೆಯನ್ನು ಭವಿಷ್ಯತ್ಪುರಾಣದ ಮುಂದಿನ ಶ್ಲೋಕಗಳು ಹೇಳುತ್ತವೆ.
ವಿಕ್ರಮಾದಿತ್ಯ ಮತ್ತು ಬೇತಾಳ ಕಥೆಗಳು ಭಾರತೀಯ ಜನಮಾನಸಕ್ಕೆ ಚಿರಪರಿಚಿತ. ವಿಕ್ರಮ ಶಕೆ, ವೇತಾಲ ಪಂಚವಿಂಶತಿ ಕಥಾ, ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನನ್ನು ಭಾರತದಲ್ಲಿ ಜೀವಂತವಾಗಿಟ್ಟವು. ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಗ ಇಂದಿಗೂ ವಿಕ್ರಮ ಶಕೆಯನ್ನೇ ಅವಲಂಬಿಸಿದೆ. ಪುರಾಣಗಳು ರಾಜರನ್ನು ದೈವತ್ವಕ್ಕೇರಿಸಿ ಆಧುನಿಕ ಶಿಕ್ಷಣವನ್ನು ಪಡೆದ ಮನಸ್ಸು ನಂಬಲು ಕಷ್ಟವಾಗುವಂತೆ ಭಾರತದ ಇತಿಹಾಸವನ್ನು ವಿವರಿಸಿದ ಮಾತ್ರಕ್ಕೆ ಪುರಾಣಗಳೆಲ್ಲಾ ಕಪೋಲಕಲ್ಪಿತಗಳೆಂದು ಅಲ್ಲಗೆಳೆಯುವುದು ನಿಜೇತಿಹಾಸವನ್ನು ಹುಡುಕುವವರಿಗೆ ಭೂಷಣವಲ್ಲ. ಅದು ಇತಿಹಾಸವನ್ನು ಸಾಮಾನ್ಯ ಜನಮನಕ್ಕೆ ತಲುಪಿಸುವ ಅಂದಿನ ರೀತಿ. ಪುರಾಣಗಳ ಕಥೆಗಳೊಳಗಿಂದ ನಮ್ಮ ಇತಿಹಾಸವನ್ನು ನಾವೇ ಹೊರತೆಗೆದು ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಕಟ್ಟಿಕೊಡಬೇಕಾಗಿದೆ. ಇಲ್ಲದಿದ್ದಲ್ಲಿ ಬ್ರಿಟಿಷರು ಬರೆದ ಪೊಳ್ಳು ಇತಿಹಾಸವನ್ನು ನಂಬಿ ಯಾಮಾರಿದ ಹಾಗೆ ಮುಂದಿನ ಪೀಳಿಗೆಯೂ ಬೆಳೆದು ನಿಜ ಇತಿಹಾಸವೇ ಮರೆಯಾಗಿ ಬಿಡುವ ಅಪಾಯವಿದೆ. ಭವಿಷ್ಯತ್ ಪುರಾಣದ ಈ ಶ್ಲೋಕಗಳಿಂದ ದೈವತ್ವಕ್ಕೇರಿಸಿದ ವಿಚಾರವನ್ನು ಬದಿಗಿಟ್ಟು ವಾಸ್ತವಿಕ ದೃಷ್ಟಿಯಿಂದ ಅಥವಾ ಇಂದಿನ ಕಾಲಕ್ಕೆ ಹೋಲಿಸಿ ಘಟನೆಯನ್ನು ಹೆಕ್ಕಿ ತೆಗೆದರೂ ಪ್ರಮರ ವಂಶದ ಗಂಧರ್ವಸೇನನಿಗೆ ವಿಕ್ರಮಾದಿತ್ಯನೆಂಬ ಅಪೂರ್ವ ಶಿಶುವು ಶಿವಕೃಪೆಯಿಂದ ಜನಿಸಿತು. ಬುದ್ಧಿವಂತನಾದ ವಿಕ್ರಮಾದಿತ್ಯ ಐದನೇ ವರ್ಷಕ್ಕೆ ಅಧ್ಯಯನ, ತಪಸ್ಸು, ಸಾಧನೆಯಿಂದ ಅಪಾರ ಸಂಪತ್ತನ್ನು ಗಳಿಸಿ ಚಕ್ರವರ್ತಿಯಾಗಿ ಸ್ವರ್ಣಸಿಂಹಾಸನವನ್ನೇರಿ ವಿದ್ವಜನರನ್ನು ಪೋಷಿಸಿ, ಜನರನ್ನು ಪಾಲಿಸಿ, ಸನಾತನ ಧರ್ಮವನ್ನು ಉಜ್ಜೀವಿಸಿ ಓರ್ವ ಶಕಕರ್ತನಾಗಿ ಮೆರೆದ ಎನ್ನುವುದನ್ನು ಒಪ್ಪಬಹುದಷ್ಟೇ. ಒಪ್ಪಲೇಬೇಕಾಗುತ್ತದೆ; ಇಲ್ಲದಿದ್ದರೆ ಆತನ ಹೆಸರಿನ ಶಕೆಯೊಂದು ಇಲ್ಲಿಯವರೆಗೆ ಉಳಿದು ಬೆಳೆದು ಬರುತ್ತಿತ್ತೇ? ಅವನಿಲ್ಲ ಎಂದಾಗಿದ್ದರೆ ಇಂದಿಗೂ ನಮ್ಮ ಸಂಸ್ಕೃತಿಯ ಮಾತ್ರವಲ್ಲ ಜಗತ್ತಿನ ಮಹಾಕಾವ್ಯ, ಮಹಾಗ್ರಂಥಗಳಾಗಿ ಮನ್ನಣೆ ಪಡೆದ ಕೃತಿಗಳನ್ನು ರಚಿಸಿದ ಮಹಾನ್ ವಿದ್ವಾಂಸರುಗಳಾದ ಆ ನವರತ್ನಗಳನ್ನು ಪೋಷಿಸಿದವರಾದರೂ ಯಾರು? ಮಾತ್ರವಲ್ಲ ವಿಕ್ರಮಾದಿತ್ಯನೆಂಬ ಚಕ್ರವರ್ತಿ ಕಾಲ್ಪನಿಕ ಎಂದಾಗಿದ್ದರೆ ಇವತ್ತು ಕುತುಬುದ್ದೀನ್ ಐಬಕ್'ನಿಂದ ನಿರ್ಮಿತವಾದದ್ದು ಎಂದು ನಾವು ನೀವೆಲ್ಲ ತಪ್ಪು ತಿಳಿದಿರುವ ಕುತುಬ್ ಮಿನಾರ್ ಕೂಡಾ ಕಾಲ್ಪನಿಕವೇ ಆಗಿರಬೇಕಿತ್ತು!
ಸಾಮಾನ್ಯ ಯುಗಕ್ಕಿಂದ ಮೊದಲಿನ 3138ಕ್ಕೆ ಮಹಾಭಾರತ ಯುದ್ಧ ಮುಗಿಯಿತು. ಮುಂದಿನ ಮೂವತ್ತಾರನೇ ವರ್ಷಕ್ಕೆ ಭಗವಾನ್ ಶ್ರೀಕೃಷ್ಣನ ನಿರ್ವಾಣದ ಜೊತೆಗೆ ಕಲಿಯ ಪ್ರವೇಶವೂ ಆಯಿತು. ಕಲಿಯುಗದ 3000ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಯಿತು. ಅಂದರೆ ಸಾಮಾನ್ಯ ಯುಗಕ್ಕಿಂತ 101ವರ್ಷ ಮೊದಲು. ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ ವಿಕ್ರಮಾದಿತ್ಯ ಎನ್ನುವುದು ತಂದೆ ಗಂಧರ್ವಸೇನ ಹುಟ್ಟಿದಾಗ ಇಟ್ಟ ಹೆಸರೇ ಹೊರತು ಬಿರುದಲ್ಲ. ಸಾಮಾನ್ಯ ಯುಗಕ್ಕಿಂತ ಮೊದಲಿನ 82ರಲ್ಲಿ ಆತ ಪಟ್ಟವೇರಿದ. ಪ್ರಮರ ವಂಶದ ಮೂವತ್ತೆರಡು ರಾಜರ ಉಲ್ಲೇಖ ಸಿಗುತ್ತದೆ. ಈ ರಾಜವಂಶದ ಎಂಟನೇ ರಾಜನೇ ವಿಕ್ರಮಾದಿತ್ಯ. ಐದನೇ ವರ್ಷಕ್ಕೆ ತಪಸ್ಸಿಗೆ ತೆರಳಿದ ಬಾಲಕ ವಿಕ್ರಮ ಹನ್ನೆರಡು ವರ್ಷಗಳ ಸಾಧನೆಯ ಬಳಿಕ ಅಂಬಾವತಿ(ಉಜ್ಜೈನಿ)ಗೆ ಮರಳಿ ತನ್ನ ಇಪ್ಪತ್ತನೇ ವರ್ಷದಲ್ಲಿ 32 ಪುತ್ಥಳಿಗಳಿದ್ದ ಸ್ವರ್ಣಸಿಂಹಾಸನವನ್ನೇರಿದ. ಮುಂದಿನ ಇಪ್ಪತ್ತನಾಲ್ಕು ವರ್ಷಗಳ ದಂಡಯಾತ್ರೆಯಲ್ಲಿ ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ, ಅಖಂಡ ಭಾರತ ಭೂಮಂಡಲವನ್ನು ಗೆದ್ದು ಸಾಮಾನ್ಯ ಯುಗ ಪೂರ್ವದ 57ರಲ್ಲಿ ವಿಕ್ರಮಶಕೆಯನ್ನು ಸ್ಥಾಪಿಸಿ ದಕ್ಷಿಣದ ಸಾಗರದಿಂದ ಹಿಮಾಲಯದವರೆಗೂ ಆಳ್ವಿಕೆ ನಡೆಸಿ ಚಕ್ರವರ್ತಿಯಾಗಿ ಮೆರೆದ. ಮುಂದಿನ ಎಪ್ಪತ್ತು ವರ್ಷಗಳ ಕಾಲ ಉಜ್ಜೈಯಿನಿಯಲ್ಲಿ ವಿದ್ವಾಂಸರ ಮಧ್ಯೆ ಕಳೆದು ಸನಾತನ ಧರ್ಮವನ್ನು ಪುನರುತ್ಥಾನಗೊಳಿಸಿದ. ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಸಾಮಾನ್ಯ ಯುಗ 14ರಲ್ಲಿ ತೀರಿಕೊಂಡಾಗ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಬೆದರಿ ಕಾಶ್ಮೀರ ರಾಜ ಪ್ರಮುಖರು ವಿಕ್ರಮನಲ್ಲಿ ಮೊರೆಯಿಟ್ಟರು. ಆಗ ತನ್ನ ಮಂತ್ರಿ ಮಾತೃಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಗತಿಸಿದನೆಂದು ಕಲ್ಹಣನ ರಾಜತರಂಗಿಣಿಯಲ್ಲಿಯೂ ಸಹ ಉಲ್ಲೇಖವಿದೆ.
ವಿಕ್ರಮಾದಿತ್ಯನ ಐತಿಹಾಸಿಕತೆಗೆ ಮತ್ತಷ್ಟು ಮಹತ್ವದ ಸಾಕ್ಷಿ ಒದಗಿಸಿರುವುದು ಅವನ ಆಸ್ಥಾನದಲ್ಲಿದ್ದ ನವರತ್ನಗಳಲ್ಲೊಬ್ಬನಾಗಿದ್ದ ಕವಿಕುಲಗುರು ಕಾಳಿದಾಸ. ಕಾಳಿದಾಸ ತನ್ನ ಕೃತಿಯಾದ "ಜ್ಯೋತಿರ್ವಿದಾಭರಣ"ದಲ್ಲಿ ಕಲಿಯುಗದ ಶಕೆಗಳು ಹಾಗೂ ಶಕಕರ್ತರ ಬಗ್ಗೆ ಹೀಗೆ ಬರೆದಿದ್ದಾನೆ.
ಯುಧಿಷ್ಟಿರೋ ವಿಕ್ರಮಶಾಲಿವಾಹನೌ
ನರಾಧಿನಾಥೋ ವಿಜಯಾಭಿನಂದನಃ |
ಇಮೇನ ನಾಗಾರ್ಜುನಮೇದಿನೀವಿಭು
ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||
ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ |
ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||
ಶಾಲೇಯಧಾರಾಭೃತಿ ಶಾಲಿವಾಹನಃ |
ಸುಚಿತ್ರಕೂಟೇ ವಿಜಯಾಭಿನಂದನಃ ||
ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ |
ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||
ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ ಈ ಆರು ಜನ ಕಲಿಯುಗದ ಶಕಕಕರ್ತರುಗಳು. ಸಾಮಾನ್ಯ ಯುಗ ಪೂರ್ವದ 3138ರಲ್ಲಿ ಆರಂಭವಾದ ಯುಧಿಷ್ಟಿರ ಶಕೆಯ ಒಟ್ಟು ಅವಧಿ 3080 ವರ್ಷಗಳು. ಸಾಮಾನ್ಯ ಯುಗ ಪೂರ್ವದ 57ರಿಂದ ಸಾಮಾನ್ಯ ಯುಗದ 78ರವರೆಗೆ 135 ವರ್ಷಗಳು ವಿಕ್ರಮಶಕೆಯ ಕಾಲ. ಮುಂದಿನ ಹದಿನೆಂಟು ಸಾವಿರ ವರ್ಷಗಳು ಶಾಲಿವಾಹನ ಶಕೆ, ಹತ್ತು ಸಾವಿರ ವರ್ಷ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಸೇರಿ ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತವೆ. ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ವಿಕ್ರಮನ ರಾಜಧಾನಿ ಉಜ್ಜಯಿನಿ, ಶಾಲಿವಾಹನನ ರಾಜಧಾನಿ ಧಾರಾನಗರ, ಚಿತ್ರಕೂಟ ವಿಜಯಾಭಿನಂದನನದ್ದು, ನಾಗಾರ್ಜುನನ ಆಳ್ವಿಕೆ ರೋಹಿತಕದಿಂದ, ಬಲಿಯದ್ದು ಭೃಗುಕಚ್ಛದಿಂದ.
ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |
ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು ||
ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |
ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |
ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||
ಕವಿಗಳ ಪ್ರತಿಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಹದಿನಾಲ್ಕು ಶಾಸನಗಳು ಕವಿಗಳಿಗೆ ಬಹುಮಾನವಾಗಿ ಸಿಗುತ್ತಿದ್ದವು. ನಾಲ್ಕು ಶ್ಲೋಕಗಳನ್ನು ಹಿಡಿದುಕೊಂಡು ವಿಕ್ರಮನ ಆಸ್ಥಾನಕ್ಕೆ ಹೋದವರ್ಯಾರೂ ಬರಿಗೈಯಲ್ಲಿ ಬಂದವರಿಲ್ಲ. ಅಂತಹಾ ವಿದ್ಯಾಪೋಷಕ, ವಿದ್ವಜ್ಜನ ಪೋಷಕ ವಿಕ್ರಮಾದಿತ್ಯ. "ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕರಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಆದರೆ ಅದು ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದೆಂದಿಗೂ ಸಿಗಲಾರದು" ಎಂದು ವಿಕ್ರಮಾದಿತ್ಯನನ್ನು ಕಾಳಿದಾಸ ಹೊಗಳಿದ್ದಾನೆ.
ಇದೇ ಶ್ಲೋಕಗಳು ಭೋಜಪ್ರಬಂಧದಲ್ಲಿಯೂ ಇವೆ. ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರನ್ನೆಲ್ಲಾ ಭೋಜನ ಆಸ್ಥಾನದಲ್ಲಿದ್ದರು ಎಂಬಂತೆ ಇದರಲ್ಲಿ ವರ್ಣಿಸಲಾಗಿದೆ. ಭೋಜರಾಜ ಏಳನೇ ಶತಮಾನದಲ್ಲಿದ್ದವ. ಭೋಜ ಪ್ರಬಂಧ ಹದಿನೈದನೇ ಶತಮಾನದ್ದು! ಅದರಲ್ಲೂ ಭೋಜಪ್ರಬಂಧದ ಬಹುತೇಕ ಕಥೆ ಹದಿಮೂರನೇ ಶತಮಾನದ ಸಿಂಹಳದ "ಪೂಜಾವಳಿ" ಎಂಬ ಕುಮಾರದಾಸನನ್ನು ವರ್ಣಿಸಿದ ಕೃತಿಯಿಂದ ಆಯ್ದುಕೊಂಡದ್ದು. ಕಾಳಿದಾಸನನ್ನು ಕುರಿಕಾಯುವ ಪೆದ್ದನನ್ನಾಗಿಸಿದ್ದು ಇದೇ ಕೃತಿ! ಇದರಿಂದಲೇ ಭೋಜಪ್ರಬಂಧದ ಕಾಲ್ಪನಿಕತೆಯನ್ನು ಊಹಿಸಬಹುದು. ವಿಕ್ರಮಾದಿತ್ಯನನ್ನು ಚರಿತ್ರೆಯಿಂದ ಬದಿಗೆ ಸರಿಸುವ ಸಲುವಾಗಿ ಇದೇ ಕಥೆಯನ್ನು ಆಧರಿಸಿ ಕಾಳಿದಾಸನನ್ನು ಸಾಮಾನ್ಯ ಯುಗಕ್ಕೆ, ಭೋಜರಾಜನ ಆಸ್ಥಾನಕ್ಕೆ ತಂದು ನಿಲ್ಲಿಸಿದ ಭಾರತ ವಿರೋಧೀ ಇತಿಹಾಸಕಾರರಿದ್ದಾರೆ!
ಸಾಲು ಸಾಲು ದಾಖಲೆಗಳಿದ್ದರೂ ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯ ಎಂದರೆ ಹೆಚ್ಚಿನವರಿಗೆ ಗುಪ್ತರ ಎರಡನೇ ಚಂದ್ರಗುಪ್ತನೇ ವಿಕ್ರಮಾದಿತ್ಯ. ಮತ್ತುಳಿದವರಿಗೆ ಆತನೊಬ್ಬ ಕಾಲ್ಪನಿಕ ವ್ಯಕ್ತಿ. ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿನ್ಸೆಂಟ್ ಸ್ಮಿತ್ ಕೂಡಾ "ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯನ ಕಾಲವೇ ಸ್ಪಷ್ಟವಿಲ್ಲ. ಆ ಹೆಸರಿನ ವ್ಯಕ್ತಿಯಿದ್ದದ್ದೇ ಸಂಶಯ. ಉಜ್ಜೈನಿಯ ಕೆಲ ಜ್ಯೋತಿಷಿಗಳು ಈ ಶಕೆಯನ್ನು ಆರಂಭಿಸಿರಬಹುದು. ವಿಕ್ರಮಾದಿತ್ಯನೆಂಬ ಯಾವುದೋ ಒಬ್ಬ ರಾಜ ಮಾಳವ ಶಕೆಗೇ ತನ್ನ ಹೆಸರಿಟ್ಟುಕೊಂಡಿರಬಹುದು. ಆ ವಿಕ್ರಮಾದಿತ್ಯ ಬಹುಷಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನು ಆಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು" ಎಂದು ಬರೆದಿದ್ದಾನೆಂದರೆ ಈ ಇತಿಹಾಸಕಾರರು ಸ್ಪಷ್ಟವಾಗಿ ಗೋಚರವಿದ್ದ ಸತ್ಯವನ್ನು ಸುಳ್ಳಾಗಿಸಲು ಎಷ್ಟು ಹೆಣಗಾಡಿದ್ದರು ಎನ್ನುವುದರ ಅರಿವಾಗುತ್ತದೆ. ಸಾಮಾನ್ಯ ಯುಗ ಪೂರ್ವದ 4004ಕ್ಕೆ ಭೂಮಿಯ ಮೇಲೆ ಮೊದಲ ಸೃಷ್ಟಿಯಾಯಿತೆಂದು ಬೈಬಲ್ ಹೇಳಿದ್ದನ್ನು ಯಥಾವತ್ತಾಗಿ ನಂಬಿರುವ ಇದೇ ಇತಿಹಾಸಕಾರರಿಗಲ್ಲವೆ ಆ ಸಮಯದಲ್ಲಿ ಭಾರತದಲ್ಲಿ ಅತ್ಯುಚ್ಛ ನಾಗರೀಕತೆಯೊಂದು ಬೆಳೆದು ಉಚ್ಛ್ರಾಯ ಸ್ಥಿತಿ ತಲುಪಿ ತನ್ನ ಪ್ರಕಾಶವನ್ನು ಸರ್ವತ್ರ ಬೀಸಿತ್ತು ಎನ್ನುವ ತಥ್ಯವನ್ನು ಒಪ್ಪಲಿಕ್ಕಾಗದೇ ಒಡಲು ಉರಿದದ್ದು. ಸರಸ್ವತೀ ನಾಗರೀಕತೆಯನ್ನು ಸಾಮಾನ್ಯ ಯುಗ ಪೂರ್ವದ 2000ಕ್ಕೂ ಈಚೆಗೆ ಅವರು ಎಳೆದು ತಂದದ್ದು ಇದೇ ಕಾರಣಕ್ಕಾಗಿಯಲ್ಲವೇ. ಚಂದ್ರಗುಪ್ತ ಮೌರ್ಯನನ್ನು ಅಲೆಗ್ಸಾಂಡರನ ಕಾಲದ ಜೊತೆ ತಳುಕು ಹಾಕಲು ಹೋಗಿ ಅಗ್ನಿವಂಶವನ್ನೇ ಅಗ್ನಿಗೆ ಅರ್ಪಿಸಿದ್ದು ಈ ಬೈಬಲ್ ಇತಿಹಾಸಕಾರರೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ ಆಳುವಂತೆ ಮಾಡಿ ಅಲ್ಲೋಲಕಲ್ಲೋಲಗೊಳಿಸಿದವರೂ ಅವರೇ! ಹೀಗೆ ಈ ಇತಿಹಾಸಕಾರರಿಂದ ಕಣ್ವ ವಂಶ, ಪ್ರಮರ ವಂಶಗಳು ಸಮಾಧಿಗೆ ಸೇರಿಸಲ್ಪಟ್ಟವು. ವಿಕ್ರಮಾದಿತ್ಯ ಹಾಗೂ ಶಾಲಿವಾಹನರನ್ನು ಅವರು ಕಾಲ್ಪನಿಕ ವ್ಯಕ್ತಿಗಳನ್ನಾಗಿಸಿದರು.
ಪುರಾಣಗಳಲ್ಲಿ ಪ್ರಮರ ವಂಶದ 32 ರಾಜರುಗಳ ಉಲ್ಲೇಖವಿದೆ. ಇದರಲ್ಲಿ ಎಂಟನೆಯವನೇ ವಿಕ್ರಮಾದಿತ್ಯ. ವಿಕ್ರಮನ ಆಸ್ಥಾನ ಜ್ಯೋತಿಷಿಯಾಗಿದ್ದ ಶ್ರೀಕೃಷ್ಣಮಿಶ್ರ ತನ್ನ "ಜ್ಯೋತಿಷ್ಯಫಲರತ್ನಮಾಲಾ"ದಲ್ಲಿ,
ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||
ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||
- ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸಿದ್ದಾನೆ. "ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದ" ಎಂದು ಕಲ್ಹಣ ಹೊಗಳಿದ್ದಾನೆ. ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.
ಮಾಂತ್ರಿಕನೊಬ್ಬ ಸಾಧುವಿನ ಸೋಗು ಹಾಕಿ ರಾಜಾ ವಿಕ್ರಮನ ಬಳಿ ಬಂದು ಮರದಲ್ಲಿ ನೇತಾಡುತ್ತಿದ್ದ ಪಿಶಾಚಿಯನ್ನು ಮೌನವಾಗಿ ತನ್ನ ಬಳಿಗೆ ಕರೆತರಲು ಬಿನ್ನವಿಸುತ್ತಾನೆ. ತುಟಿಬಿಚ್ಚಿದಲ್ಲಿ ಪಿಶಾಚಿಯು ಹಾರಿ ಹೋಗುತ್ತದೆ. ಅದರಂತೆ ವಿಕ್ರಮಾದಿತ್ಯ ಪಿಶಾಚಿಯನ್ನು ಕರೆತರಲು ಬೆನ್ನ ಮೇಲೆ ಏರಿಸಿಕೊಂಡಾಗ ಅದು ದಾರಿಯ ಬೇಸರ ಕಳೆಯಲು ತಾನು ಕಥೆ ಹೇಳುವೆನೆಂದು, ಕೊನೆಗೆ ಕೇಳುವ ಪ್ರಶ್ನೆಗೆ ರಾಜ ಉತ್ತರ ಹೇಳಬೇಕೆಂದು, ಉತ್ತರ ಗೊತ್ತಿಲ್ಲದಿದ್ದರೆ ಸುಮ್ಮನಿರಬೇಕೆಂದು, ಗೊತ್ತಿದ್ದೂ ಉತ್ತರ ಹೇಳದಿದ್ದರೆ ರಾಜನ ತಲೆ ಸಾವಿರ ಹೋಳಾಗುತ್ತದೆಂದು ಒಪ್ಪಂದ ಮಾಡಿಕೊಳ್ಳುತ್ತದೆ. ವಿಕ್ರಮನಿಗೆ ಪ್ರತಿಯೊಂದು ಪ್ರಶ್ನೆಗೆ ಉತ್ತರ ಗೊತ್ತಿರುತ್ತದೆ, ಮತ್ತು ಮೌನವನ್ನು ಭೇದಿಸಿದ ಕಾರಣ ಬೇತಾಳ ಮತ್ತೆ ಮರದ ಕೊಂಬೆಯನ್ನು ಸೇರಿಕೊಳ್ಳುತ್ತಾನೆ. ಹೀಗೆ ಇಪ್ಪತ್ನಾಲ್ಕು ಬಾರಿ ನಡೆದು ಪಿಶಾಚಿಯನ್ನು ಕರೆತರುವ ವಿಕ್ರಮನ ಪ್ರಯತ್ನ ವಿಫಲವಾಗುತ್ತದೆ. ಇಪ್ಪತ್ತೈದನೆಯ ಕಥೆಯ ಪ್ರಶ್ನೆಗೆ ಮಾತ್ರ ರಾಜನಿಗೆ ಉತ್ತರ ತಿಳಿಯದಾಯಿತು. ಈ ಇಪ್ಪತ್ತೈದು ಕಥೆಗಳೇ "ವೇತಾಲ ಪಂಚವಿಂಶತಿ"ಯಾದದ್ದು. ಇದರ ಕರ್ತೃ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಒಬ್ಬನಾಗಿದ್ದ, "ನೀತಿ ಪ್ರದೀಪ"ವನ್ನು ರಚಿಸಿದ ವೇತಾಲಭಟ್ಟನೆಯೋ ತಿಳಿಯದು.
ಇಪ್ಪತ್ತೈದನೆಯ ಕಥೆ ಹೀಗಿದೆ. ಆಗತಾನೆ ಯುದ್ಧ ಮುಗಿದಿತ್ತು. ರಣಭೂಮಿಗೆ ಓರ್ವ ವಯಸ್ಕನೂ ಅವನ ಮಗನೂ ಬಂದಾಗ ಆ ರಾಜ್ಯದ ರಾಣಿಯೂ ಆಕೆಯ ಮಗಳೂ ಜೀವದಿಂದಿರುತ್ತಾರೆ. ತಮ್ಮೊಳಗೇ ಮಾತನಾಡಿಕೊಂಡು ಅಪ್ಪ ರಾಜಕುಮಾರಿಯನ್ನೂ ಮತ್ತು ಮಗ ರಾಣಿಯನ್ನೂ ಕೈಹಿಡಿದು ತಮ್ಮ ಮನೆಗೆ ಕರೆತಂದು ಮದುವೆಯಾಗುತ್ತಾರೆ. ಮಗ-ರಾಣಿಯರ ದಾಂಪತ್ಯದಿಂದ ರಾಣಿ ಗಂಡುಮಗುವೊಂದನ್ನು ಹಡೆದರೆ, ಅಪ್ಪ-ರಾಜಕುಮಾರಿಯರ ದಾಂಪತ್ಯದಿಂದ ಮಗಳು ಜನಿಸುತ್ತಾಳೆ. ನವಜಾತ ಶಿಶುಗಳ ನಡುವಿನ ಸಂಬಂಧವೇನು ಎಂದು ಬೇತಾಳ ಪ್ರಶ್ನೆ ಕೇಳುತ್ತಾನೆ. ವಿಕ್ರಮನಿಗೆ ಉತ್ತರ ತಿಳಿಯದೆ ಮೌನವಾಂತು ನಡೆದ. ಬೇತಾಳ ಅವನ ಹೆಗಲೇರಿ ಬಂತು. ತನ್ನ ಜನ್ಮವೃತ್ತಾಂತವನ್ನೂ ಮಾಂತ್ರಿಕನ ಮೋಸವನ್ನೂ ಅದರಿಂದ ಪಾರಾಗುವ ಉಪಾಯವನ್ನೂ ಅದು ವಿಕ್ರಮನಿಗೆ ಅರುಹಿತು. ಬೇತಾಳನ ಪಾಲಕರಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನ ಆಶೀರ್ವಾದದಿಂದ ಪಡೆದ ಮಕ್ಕಳಲ್ಲಿ ಓರ್ವನೇ ಬೇತಾಳ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತನ್ನಲ್ಲೇ ಬಿಡುವಂತೆ ಮಾಂತ್ರಿಕ ತಾಕೀತು ಮಾಡಿದ. ಬೇತಾಳನಿಗೆ ತನಗೆ ಗೊತ್ತಿದ್ದ ವಿದ್ಯೆಗಳನ್ನೆಲ್ಲಾ ಧಾರೆಯೆರೆದ ಮಾಂತ್ರಿಕ, ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ. ಬೇತಾಳನ ಸಹೋದರನಿಗೆ ಕಡಿಮೆ ವಿದ್ಯೆಗಳನ್ನು ಕಲಿಸಿಕೊಟ್ಟು ಆತನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಸಹೋದರನನ್ನು ಪಾಲಕರಿಗೆ ಮರಳಿಸಿ,ಬೇತಾಳನನ್ನು ಕಾಳಿಗೆ ಬಲಿಕೊಡಬೇಕೆಂದು ಮಾಂತ್ರಿಕ ಉಪಾಯ ಹೂಡಿದ್ದ. "ರಾಜನ್, ಮಾಂತ್ರಿಕನ ಕುಟೀರದೊಳಕ್ಕೆ ಹೋದಾಗ ನಿನ್ನ ತಲೆಯನ್ನು ತಗ್ಗಿಸುವಂತೆ ಆತ ಹೇಳುತ್ತಾನೆ. ತಲೆಬಗ್ಗಿಸಿದ ಕೂಡಲೇ ನಿನ್ನನ್ನು ಬಲಿಹಾಕುತ್ತಾನೆ. ನೀನು ಅದಕ್ಕಾಗಿ ಹೇಗೆ ತಲೆತಗ್ಗಿಸಬೇಕೆಂದು ತೋರಿಸಲು ಹೇಳು. ಹಾಗೆ ಆತ ತಲೆ ಬಗ್ಗಿಸಿದಾಗ ಅವನ ತಲೆಯನ್ನು ತರಿದು ಕಾಳಿಗೆ ಅರ್ಪಿಸು " ಎಂದು ಬೇತಾಳವು ಮಾಂತ್ರಿಕನಿಂದ ರಕ್ಷಿಸಿಕೊಳ್ಳಲು ರಾಜನಿಗೆ ಉಪಾಯವನ್ನು ಸೂಚಿಸುತ್ತದೆ. ಬೇತಾಳದ ಆದೇಶದಂತೆ ನಡೆದುಕೊಂಡ ವಿಕ್ರಮ ಮಾಂತ್ರಿಕನ ಶಿರವನ್ನು ತರಿದು ಕಾಳಿಗೆ ಅರ್ಪಿಸಿದ. ಕಾಳಿ ಪ್ರತ್ಯಕ್ಷಳಾಗಿ ಆಶೀರ್ವದಿಸುತ್ತಾಳೆ. ಖುಷಿಗೊಂಡ ಬೇತಾಳ ವರವನ್ನು ಕೇಳು ಎಂದಾಗ ಮಾಂತ್ರಿಕನ ಮನಸ್ಸನ್ನು ಶುದ್ಧೀಕರಿಸಿ ಆತನಿಗೆ ಜೀವದಾನ ನೀಡುವಂತೆ ಕೇಳಿಕೊಳ್ಳುತ್ತಾನೆ ವಿಕ್ರಮಾದಿತ್ಯ. ರಾಜನ ದಯಾಪರತೆಯನ್ನು ಮೆಚ್ಚಿದ ಬೇತಾಳ ನೆನೆದಾಗ ಬಂದು ಸಹಾಯ ಮಾಡುವೆ ಎಂದು ರಾಜನಿಗೆ ವಾಗ್ದಾನ ಮಾಡಿ ಮಾಂತ್ರಿಕನಿಗೆ ಮರು ಜೀವ ನೀಡುತ್ತದೆ. ಇದು ವೇತಾಲ ಪಂಚವಿಂಶತಿಯ ಕಥೆಯಾದರೂ ಭವಿಷ್ಯತ್ಪುರಾಣದಲ್ಲಿ ವಿಕ್ರಮನ ಕಾವಲಿಗಾಗಿ ಬೇತಾಳನನ್ನು ಪಾರ್ವತಿ ಕಳುಹಿದ ಉಲ್ಲೇಖವನ್ನು ನೋಡುವಾಗ ಇದು ಕಾಲ್ಪನಿಕವಲ್ಲ ಎಂದೇ ಅನ್ನಿಸುತ್ತದೆ. ಭವಿಷ್ಯತ್ಪುರಾಣದಲ್ಲಿ ಬೇತಾಳನು ಬ್ರಾಹ್ಮಣ ರೂಪಿನಿಂದ ಬಂದು "ಇತಿಹಾಸ ಸಮುಚ್ಚಯ"ವೆಂಬ ಕಥೆಯನ್ನು ಹೇಳುವ, ಪ್ರತಿಯೊಂದು ಕಥೆಯ ಬಳಿಕ ಪ್ರಶ್ನೆಯನ್ನು ಕೇಳಿ ವಿಕ್ರಮನಿಂದ ಉತ್ತರವನ್ನು ಹೊರಡಿಸುವ ಪ್ರಸಂಗವಿದೆ. ವಿಕ್ರಮಾದಿತ್ಯನಿಂದ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ಪಡೆದು ಹರ್ಷಿತವಾದ ಬೇತಾಳನು ದುರ್ಗೆಯನ್ನು ಪೂಜಿಸುವಂತೆ ವಿಕ್ರಮಾದಿತ್ಯನಿಗೆ ಸೂಚಿಸಿ, ತಾನು ಈಶ್ವರಾಜ್ಞೆಯಂತೆ ನಿನ್ನ ಸಹಾಯಕ್ಕೆ ಬಂದಿದ್ದು, ನಿನ್ನ ಭುಜದಲ್ಲಿ ನೆಲೆಸುತ್ತೇನೆ. ನೀನು ಶತ್ರುಗಳನ್ನೆಲ್ಲಾ ಧ್ವಂಸ ಮಾಡಿ ಆರ್ಯಧರ್ಮವನ್ನು ನೆಲೆಗೊಳಿಸು ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಬಹುಷಃ ವಿಕ್ರಮನ ಮಿತ್ರನಾಗಿ, ರಕ್ಷಕನಾಗಿ ಬೇತಾಳ ಸದಾ ಇದ್ದಿರಬೇಕು. ಅದು ವೇತಾಲಭಟ್ಟನೋ ಅಥವಾ ಇನ್ನೋರ್ವನೋ ಎಂಬುದನ್ನು ಇತಿಹಾಸಕಾರರು ನಿರ್ಧರಿಸಬೇಕು. ವಿಕ್ರಮಾದಿತ್ಯನ ಜೊತೆ ಅವನ ಮಲತಮ್ಮನಾದ ಭಟ್ಟಿಯೂ ಇರುತ್ತಿದ್ದ ಎಂಬ ವಿವರ ಬಹಳ ಸಿಗುತ್ತವೆ. ಇವನೇ ಬೇತಾಳನೋ, ಅಥವಾ ಇವನೇ ವೇತಾಳಭಟ್ಟನೋ ಎನ್ನುವುದು ಕೂಡಾ ಇತಿಹಾಸಕಾರರ ವಿವೇಚನೆಗೆ ಬಿಟ್ಟದ್ದು.
ಧನ್ವಂತರೀ ಕ್ಷಪಣಕೋಮರಸಿಂಹ ಶಂಕು ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
ಖ್ಯಾತೋ ವರಾಹ ಮಿಹಿರೋ ನೃಪತೇ ಸ್ಸಭಾಯಾಂ ರತ್ನಾನಿ ವೈ ವರರುಚಿ ರ್ನವ ವಿಕ್ರಮಸ್ಯ||
- ಮಹಾಕವಿಗಳಾದ ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರರುಚಿ ಮತ್ತು ವರಾಹಮಿಹಿರ ಎಂಬ "ನವರತ್ನಗಳು" ವಿಕ್ರಮನ ಆಸ್ಥಾನ ಕವಿಗಳಾಗಿದ್ದರು. ವಿಕ್ರಮಾದಿತ್ಯನಿಗೆ ಪುತ್ರೋತ್ಸವವಾದಾಗ, ಬಾಲಕನ ಜನ್ಮಕುಂಡಲಿಯನ್ನು ನೋಡಿ ಹದಿನೆಂಟನೆಯ ವಯಸ್ಸಿನಲ್ಲಿ ಇಂತಹದೇ ದಿನ, ಇದೇ ಸಮಯದಲ್ಲಿ ಹುಡುಗನಿಗೆ ಕಾಡುಹಂದಿಯಿಂದ ಮೃತ್ಯು ಬರುವುದು, ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ವರಾಹಮಿಹಿರ ಹೇಳುತ್ತಾನೆ. ಮಗನನ್ನು ಉಳಿಸುವ ಸಲುವಾಗಿ ತನ್ನ ಮಂತ್ರಿಮಹೋದಯರಲ್ಲಿ ಸಮಾಲೋಚಿಸಿದ ವಿಕ್ರಮಾದಿತ್ಯ 80 ಅಡಿ ಎತ್ತರದ ರಾಜ ಮಂದಿರವನ್ನು ಕಟ್ಟಿಸಿ, ಅದರಲ್ಲಿಯೇ ಸಕಲ ಸೌಕರ್ಯಗಳನ್ನು ಏರ್ಪಡಿಸಿ, ಅಲ್ಲಿ ಮಗನನ್ನು ದಾಸದಾಸಿಯರೊಂದಿಗೆ ಇರಿಸಿ ಭದ್ರ ಕಾವಲನ್ನು ಏರ್ಪಡಿಸುತ್ತಾನೆ. ಆದರೆ ರಾಜಕುಮಾರ ಧ್ವಜದಲ್ಲಿದ್ದ ಹಂದಿಯ ಪ್ರತಿಮೆ ತಲೆಗೆ ಬಿದ್ದು ಮರಣವನ್ನಪ್ಪುತ್ತಾನೆ. ಅದಕ್ಕಿಂತ ಮುಖ್ಯವಾದ ವಿಚಾರವೊಂದಿದೆ. ಗೋಪುರಾಕಾರದ ಆ ರಾಜಮಂದಿರದಲ್ಲಿ ಏಳು ಗ್ರಹಗಳ ಆಧಾರದ ಮೇಲೆ ಏಳು ಅಂತಸ್ತುಗಳೂ, ಹನ್ನೆರಡು ರಾಶಿಗಳಿಗೆ ಅನುಗುಣವಾಗಿ ಹನ್ನೆರಡು ಮುಖಗಳೂ, ಇಪ್ಪತ್ತೇಳು ನಕ್ಷತ್ರಗಳಿಗೆ ತಕ್ಕಂತೆ ಇಪ್ಪತ್ತೇಳು ದಳಗಳೂ ಇದ್ದವು. ಕುತುಪ(ದಿನದ ಎಂಟನೇ ಮುಹೂರ್ತ) ಮಂದಿರವೆಂದು ಕರೆಯಲಾದ ಈ ಮನಾರನ್ನು ಕಟ್ಟಿದ್ದು ಗ್ರಹ, ನಕ್ಷತ್ರ, ಮುಹೂರ್ತಾದಿ ಖಗೋಳದ ತನ್ಮೂಲಕ ಜ್ಯೋತಿಷ್ಯದ ಅಧ್ಯಯನಕ್ಕೇ ಆಗಿತ್ತು. ಅದೇ ಈಗ ಕುತುಬ್ ಮಿನಾರ್ ಎಂದು ಅಪಭೃಂಶವಾಗಿ ಕರೆಯಲ್ಪಡುತ್ತಿರುವ ಮನಾರ್! ವರಾಹಮಿಹಿರ ಅಲ್ಲೇ ವಾಸಿಸುತ್ತಿದ್ದರಿಂದ ಆ ಊರಿನ ಹೆಸರು ಮಿಹಿರೋಲಿ ಅಪಭೃಂಶವಾಗಿ ಮೆಹರೋಲಿ ಎಂದು ಇಂದಿಗೂ ಕರೆಯಲ್ಪಡುತ್ತಿದೆ. ಆಸಕ್ತರು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸದ್ಯೋಜಾತಭಟ್ಟರ "ಮಿಹಿರಕುಲಿ"ಯನ್ನು ಓದಬಹುದು.
ರಾಜಾ ವಿಕ್ರಮಾದಿತ್ಯನೇ ಸೋಮನಾಥ ದೇವಾಲಯವನ್ನು ನಿರ್ಮಿಸಿದ ಎನ್ನುವ ವಾದವಿದೆ. ಪಿ. ಎನ್ ಓಕ್ ಅವರು ತಮ್ಮ ಗ್ರಂಥದಲ್ಲಿ ಕಾಬಾ ಕೂಡ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುತ್ತಾರೆ. ಇದಕ್ಕೆ ಪೂರಕವಾಗಿ ಭವಿಷ್ಯತ್ಪುರಾಣದಲ್ಲಿ ರಾಜಾಭೋಜನು ಮ್ಲೇಚ್ಛರಿಂದ ಆವರಿಸಲ್ಪಟ್ಟ ಮರುಭೂಮಿಯಲ್ಲಿ ನೆಲೆಸಿರುವ ಮಹಾದೇವನನ್ನು ಪೂಜಿಸಿದ ಪ್ರಸಂಗವಿದೆ. ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು ವಿಕ್ರಮಾದಿತ್ಯನ ಸಿಂಹಾಸನಕ್ಕೆ ಸಂಬಂಧಪಟ್ಟವು. ಶಕಪುರುಷ ವಿಕ್ರಮಾದಿತ್ಯನ ಕಳೆದು ಹೋಗಿದ್ದ ಸಿಂಹಾಸನವನ್ನು ಧಾರಾನಗರದ ರಾಜಾ ಭೋಜನು ಪತ್ತೆಹಚ್ಚಿದನಂತೆ. ಅವನು ಈ ಸಿಂಹಾಸನವನ್ನೇರಲು ಪ್ರಯತ್ನಿಸಿದಾಗ ಅದರಲ್ಲಿದ್ದ 32 ಹೆಣ್ಣು ಪುತ್ಥಳಿಗಳು ಮಾತಾಡಲು ಆರಂಭಿಸಿ, ತಾವು ಹೇಳುವ ಕಥೆಗಳಲ್ಲಿ ಬರುವ ರಾಜಾ ವಿಕ್ರಮಾದಿತ್ಯನಷ್ಟು ಉದಾತ್ತನಾದವನು ನೀನಾಗಿದ್ದರೆ ಮಾತ್ರ ಸಿಂಹಾಸನವೇರಬಹುದೆಂದು ಸವಾಲನ್ನು ಒಡ್ದುತ್ತವೆ. 32 ಬಾರಿಯೂ ಭೋಜ ತನ್ನ ನಿಕೃಷ್ಟತೆಯನ್ನು ಒಪ್ಪಿಕೊಳ್ಳುತ್ತಾನೆ. ಅಂತಿಮವಾಗಿ ರಾಜಾ ಭೋಜನ ವಿನಯತೆಯಿಂದ ಸಂತಸಗೊಂಡ ಪುತ್ಥಳಿಗಳು ಅವನಿಗೆ ಸಿಂಹಾಸನವನ್ನೇರಲು ಅವಕಾಶ ಕೊಡುತ್ತವೆ.
ವಿಕ್ರಮನು ಕಾಲವಾದ ಬಳಿಕ ಭಾರತವು ಹದಿನೆಂಟು ಭಾಗಗಳಾಗಿ ಒಡೆದು ಹೋಯಿತು. ಸನಾತನ ಧರ್ಮವು ಹ್ರಾಸವಾಗುತ್ತಾ ಬಂದಿತು. ಇದೇ ಸುಸಂದರ್ಭವೆಂದು ಶಕರು, ಹೂಣರು ಮತ್ತೊಮ್ಮೆ ದಂಡೆತ್ತಿ ಬಂದು ಆರ್ಯ ರಾಜರನ್ನು ಬಡಿದಟ್ಟಿ, ರಾಜ್ಯಗಳನ್ನು ಸೂರೆಗೈದು ಮಾನಿನಿಯರ ಮೇಲೆ ಅತ್ಯಾಚರಗೈದರು. ಆ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನು ದೇಶದಿಂದಾಚೆಗೆ ಓಡಿಸಿದವನೇ ವಿಕ್ರಮನ ಮರಿಮೊಮ್ಮಗ ಶಾಲಿವಾಹನ. ಅವನು ಪ್ರಮರ ವಂಶದ 11ನೇ ದೊರೆ. ಅಜ್ಜನನ್ನೇ ಇಲ್ಲವಾಗಿಸಿದವರಿಗೆ ಮೊಮ್ಮಗನನ್ನು ಇಲ್ಲವಾಗಿಸುವುದು ಕಷ್ಟದ ಕೆಲಸವಲ್ಲ. "ವಾಹನ" ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು "ಶಾತವಾಹನ"ನನ್ನಾಗಿಸಿ ಅವನಿಗಿಂತ ನಾಲ್ಕ್ನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಕೇವಲ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಶಾಲಿವಾಹನನು ವಿಕ್ರಮನ ಮರಣಾನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ಪ್ರತಿನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಸಾ.ಯು. 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದಿಗೂ ನಮ್ಮ ರಾಷ್ಟ್ರೀಯ ಶಕೆಯಾಗಿದೆ.
ಶಾಲಿವಾಹನನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಅದರ ಪ್ರಕಾರ ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು. ರಾಜ್ಯಭ್ರಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಅಂದರೆ ಶಾಲಿವಾಹನನ ಸೈನ್ಯ ಅಷ್ಟು ಸಮೃದ್ಧವಾಗಿತ್ತು ಎಂದರ್ಥ. ಪುರಾಣಗಳಲ್ಲೂ, ಜಾನಪದರ ಕಣ್ಣಲ್ಲೂ ನಾಯಕರಾಗಿ ಶಕಪುರುಷರಾಗಿ ಜನಮಾನಸದಲ್ಲಿ ಇಂದಿನವರೆಗೂ ಇರುವ ಈ ನೆಲದ ಸ್ವಾತಂತ್ರ್ಯ ವೀರರನ್ನೇ ಇತಿಹಾಸದ ಪುಸ್ತಕಗಳಿಂದ ಅಳಿಸಿದ ಮಾತ್ರಕ್ಕೆ ಅವರ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಆರ್ಯರ ಚಿತ್ತಭಿತ್ತಿಯಿಂದಿಳಿಸಲೂ ಸಾಧ್ಯವಿಲ್ಲ. ಅವರನ್ನು ಅಳಿಸಲು ಪ್ರಯತ್ನ ಮಾಡಿದಷ್ಟು ಸಲ ಶಾಲಿವಾಹನನ ಮಣ್ಣಗೊಂಬೆಗಳಂತೆ ಅವರು ಮತ್ತೆ ಜೀವತಳೆದು ಎದ್ದು ನಿಲ್ಲುತ್ತಾರೆ. ಇದು ವೀರಭೋಗ್ಯಾ ವಸುಂಧರಾ.